Wednesday, July 22, 2020

'ಮಾತೃದೇವೋ ಭವ’ - ತಾಯಿಯ ಹಿರಿಮೆ ('Matrdevo Bhava’ - Tayiya Hirime)

ಲೇಖಕರು: ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಹಿಂದೊಮ್ಮೆ ದಡ್ಡನೆಂದೆನಿಸಿದ ಬಾಲಕನೊಬ್ಬನು ಶಾಲೆಗೆ ಬರುವುದು ವ್ಯರ್ಥವೆಂದುಕೊಂಡ ಅಧ್ಯಾಪಕರು ಆತನ ತಾಯಿಗೆ ಪತ್ರಬರೆದು ಕಳಿಸಿದರು- "ನಿಮ್ಮ ಮಗನಿಗೆ ಪಾಠ ಹೇಳಿಕೊಡಲಾಗುವುದಿಲ್ಲ. ನಾಳೆಯಿಂದ ಆತನನ್ನು ಶಾಲೆಗೆ ಕಳಿಸಬೇಡಿ". ಅದನ್ನೋದಿದ ತಾಯಿ ಎದೆಗುಂದಿದಳಾದರೂ ಧೈರ್ಯದಿಂದ ಮಗನಿಗೆ ಹೇಳಿದಳು "ನೀನು ಅತ್ಯಂತ ಬುದ್ಧಿವಂತನಾದ್ದರಿಂದ ನಿನಗೆ ಹೇಳಿಕೊಡುವುದು ಅಧ್ಯಾಪಕರಿಗೆ ಸಾಧ್ಯವಿಲ್ಲವಂತೆ. ನಾನೇ ನಿನಗೆ ಕಲಿಸುತ್ತೇನೆ." ತಾನು ಅತ್ಯಂತ ಬುದ್ಧಿವಂತನೆಂದು ಭಾವಿಸಿ  ಶಿಕ್ಷಣಪಡೆದ ಆತ  ವಿಶ್ವವಿಖ್ಯಾತ ವಿಜ್ಞಾನಿಯಾದ! ತಾಯಿಯ ನಿಧನದನಂತರ ಅಧ್ಯಾಪಕರ ಕಾಗದವು ಆತನಕೈಗೆಸಿಕ್ಕಿತು. ಅದನ್ನೋದಿದವನು ಆಶ್ಚರ್ಯಚಕಿತನಾದ! ದಡ್ಡನನ್ನು ಪ್ರೋತ್ಸಾಹಿಸಿ ತನ್ನ ಭವಿಷ್ಯವನ್ನು ಉಜ್ವಲಗೊಳಿಸಿದ ತಾಯಿಯ ಜಾಣ್ಮೆಯನ್ನು ನೆನೆದು ಆನಂದಬಾಷ್ಪ ಸುರಿಸಿದ.

ತಾಯಂದಿರ ಪ್ರೋತ್ಸಾಹವು ಎಂತಹ ಪವಾಡವನ್ನೆಸಗಬಹುದೆಂದು ಸಾರುವ ಅದ್ಭುತಪ್ರಸಂಗವಿದು! ಪ್ರತಿಯೊಬ್ಬರ ಲೌಕಿಕಜೀವನದ ಏಳಿಗೆಯಲ್ಲೂ ತಾಯಂದಿರ ಪಾತ್ರವು ಅತಿಪ್ರಮುಖವಾದದ್ದೆಂಬುದು ಎಲ್ಲರೂ ಒಪ್ಪುವ ಸತ್ಯ. ಆದರೆ ಭಾರತೀಯಮಹರ್ಷಿಗಳ ದೃಷ್ಟಿಯಲ್ಲಿ ತಾಯಿಯ ಪಾತ್ರ ಬಾಹ್ಯ(ಇಂದ್ರಿಯ)ಜೀವನಕ್ಕಷ್ಟೇ ಸೀಮಿತವಾದದ್ದಲ್ಲ, ಇಂದ್ರಿಯಾತೀತವಾಗಿ ಬೆಳಗುವ ಅಂತರಂಗದ ಕಡೆಗೂ ಸಂತತಿಯನ್ನು ನಡೆಸಬೇಕಾದ ಹೊಣೆಗಾರಿಕೆಯಿದೆ. 'ಮಾತೃದೇವೋ ಭವ' ಎಂದು ಆಕೆಯನ್ನು ಗೌರವಿಸಿರುವುದು ಇದಕ್ಕಾಗಿಯೇ.ಸೃಷ್ಟಿಮೂಲದಲ್ಲಿ ಬೆಳಗುವ ಭಗವಂತನ ಆಶಯಕ್ಕನುಸಾರವಾಗಿ ಪ್ರಪಂಚವನ್ನು ಸೃಷ್ಟಿಸಿದ ಜಗನ್ಮಾತೆಯ ಪ್ರತಿನಿಧಿಯಾಗಿರುವವಳು ಹೊತ್ತು-ಹೆತ್ತು-ಬೆಳೆಸುವ ತಾಯಿ. ಆದ್ದರಿಂದ ತಾಯಿಯಾದವಳು ಜಗನ್ಮಾತೆಯಂತೆಯೇ ತನ್ನ ಮಗುವನ್ನು ಭಗವದಾಶಯದಂತೆ ದೇವನ ಬಳಿಸಾಗಲನುಗುಣವಾಗಿ ಶರೀರವನ್ನು ತಂದುಕೊಟ್ಟು ಭಗವನ್ಮಾರ್ಗದಲ್ಲಿ ನಡೆಸುವವಳೂ ಆಗಬೇಕು. ಆದ್ದರಿಂದಲೇ ಆಕೆಗೆ ದೇವಭಾವಸೂಚಕವಾದ ಗೌರವಸ್ಥಾನವೇ ಹೊರತು ಪ್ರೀತಿ-ವಾತ್ಸಲ್ಯ-ತ್ಯಾಗಗಳ ಮೂರ್ತಿ ಎಂದು ಭಾವನಾತ್ಮಕವಾದದ್ದಷ್ಟೇ ಅಲ್ಲ ಎಂದು ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದ್ದರು. ಗರ್ಭದಲ್ಲಿ ಶಿಶುವನ್ನು ಧರಿಸುವಾಗಿನಿಂದಲೇ ತನ್ನ ಆಹಾರ-ವಿಹಾರಗಳಲ್ಲಿ ಅದರ ಶರೀರ ಬೆಳವಣಿಗೆಯ ಜೊತೆಗೆ ಮಾನಸಿಕ ಬೆಳವಣಿಗೆಯ ಕಡೆಯೂ ನಿಗವಿಡಬೇಕು. ಹುಟ್ಟಿದ ಮಗುವಿಗೆ ನೀಡುವ ಸ್ತನ್ಯವು ಚೈತನ್ಯ(ಜ್ಞಾನ)ಸ್ತನ್ಯವಾಗಿರಬೇಕು, ಹಾಡುವ ಜೋಗುಳವು ತನ್ನಲ್ಲಾಡುವ ಭಗವದ್ಭಾವವನ್ನು ಮಗುವಿನಲ್ಲೂ ಸಂಕ್ರಮಣಮಾಡುವಂತಾಗಬೇಕು. ಬೆಳವಣಿಗೆಯ ಪ್ರತಿ ಹಂತದಲ್ಲೂ ಮಗುವಿನ ಮನಸ್ಸು ದೇವನ ಕಡೆ ಒಲಿಯುವಂತೆ ಮಾಡುವುದರಲ್ಲಿ ತಾಯಿಯದೇ ಪ್ರಥಮ ಹಾಗೂ ಹೆಚ್ಚಿನ ಪಾತ್ರ.

ಋಷಿವಾಣಿಯಂತೆ ಜ್ಞಾನ(ದೇವ)ಭಾವವನ್ನು ನಮ್ಮಲ್ಲಿ ತುಂಬಿಕೊಂಡು ನಮ್ಮ ಸಂತತಿಯಲ್ಲಿ ಲೌಕಿಕ ಮುನ್ನಡೆಯ ಜೊತೆಜೊತೆಗೆ ಜ್ಞಾನಭಾವವನ್ನೂ ಹರಿಸೋಣ

ಸೂಚನೆ: 22/07/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.