Sunday, August 28, 2022

ಯಕ್ಷ ಪ್ರಶ್ನೆ?– 1 ಪೀಠಿಕೆ(Yaksha Prashne - 1 Pithike)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)


ಪೀಠಿಕೆ

ಯಕ್ಷನು ಕೇಳುವ ಪ್ರಶ್ನೆ 'ಯಕ್ಷಪ್ರಶ್ನೆ'. ಲೋಕದಲ್ಲಿ ಯಕ್ಷಪ್ರಶ್ನೆಯು 'ಅದೊಂದು ಯಕ್ಷಪ್ರಶ್ನೆಯಾಗಿದೆ' ಎಂದು ಯಾವ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯುವುದು ಕಷ್ಟವೋ ಅಥವಾ ಅಸಾಧ್ಯವೋ ಅಂತಹ ಸಮಯದಲ್ಲಿ ಈ ಸಾಮಾನ್ಯ ಮಾತನ್ನು ಕೇಳುತ್ತೇವೆ. ಪ್ರಶ್ನೆಯನ್ನು ಎರಡು ಸಂದರ್ಭಗಳಲ್ಲಿ ಕೇಳುವುದುಂಟು. ಗೊತ್ತಿಲ್ಲದ ವಿಷಯವನ್ನು ತಿಳಿಯಲು ಗೊತ್ತಿರುವವನಲ್ಲಿ ಪ್ರಶ್ನೆಯನ್ನು ಕೇಳುವುದು ಒಂದು ಬಗೆಯಾದರೆ; ಗೊತ್ತಿರುವವನು ಮತ್ತೊಬ್ಬನಲ್ಲಿರುವ ಜ್ಞಾನವನ್ನು ಪರೀಕ್ಷಿಸಲು ಪ್ರಶ್ನೆಯನ್ನು ಕೇಳುವುದು ಮತ್ತೊಂದು. ಪ್ರಕೃತ ಯಕ್ಷಪ್ರಶ್ನೆಯಲ್ಲಿ ಎರಡನೆಯ ರೀತಿಯಾಗಿದೆ. ಯಕ್ಷನು ಯಮಧರ್ಮರಾಜನ ರೂಪದಲ್ಲಿ ಬಂದವನು. ತನ್ನ ಮಗನ ಜ್ಞಾನವನ್ನು ಲೋಕಕ್ಕೆ ಪ್ರಚುರಪಡಿಸಲು ಇಲ್ಲೊಂದು ನೆಪವಷ್ಟೇ. ಯಕ್ಷನಿಗೆ ಗೊತ್ತಿಲ್ಲ ಎಂಬುದಿಲ್ಲ. ಆದ್ದರಿಂದ ಇದಕ್ಕೆ 'ಯಕ್ಷಪ್ರಶ್ನೆ' ಎಂಬುದಾಗಿ ಪ್ರಚಲಿತವಾಗಿದೆ. ಮಹಾಭಾರತದಲ್ಲಿ ಬರುವ ಒಂದು ಘಟನೆ. ಪಾಂಡವರು ಅರಣ್ಯದಲ್ಲಿ ಸಂಚರಿಸುತ್ತಿರುವಾಗ ಬಾಯಾರಿಕೆಯಿಂದ ಬಳಲಿರುತ್ತಾರೆ. ವಿಶೇಷವಾಗಿ ಪತ್ನಿಯಾದ ದ್ರೌಪದಿಯು ನೀರನ್ನು ತಂದುಕೊಡಲು ಪತಿದೇವರನ್ನು ಕೇಳಿಕೊಳ್ಳುತ್ತಾಳೆ. ಆಗ ಧರ್ಮರಾಜನು ತನ್ನ ಕೊನೆಯ ತಮ್ಮನಾದ ಸಹದೇವನನ್ನು ನೀರು ತರಲು ಕಳುಹಿಸುತ್ತಾನೆ. ಸಹದೇವನು ಅಲ್ಲೇ ಸಮೀಪದಲ್ಲಿರುವ ಒಂದು ಕೊಳಕ್ಕೆ ಹೋಗುತ್ತಾನೆ. ನೀರನ್ನು ಕಂಡು ಅದನ್ನು ಸ್ವೀಕರಿಸಲೆಂದು ಪ್ರಯತ್ನಿಸಿದಾಗ ಅಲ್ಲೊಂದು ಅಶರೀರವಾಣಿಯು ಕೇಳಿಸುತ್ತದೆ. " ಈ ನೀರನ್ನು ತೆಗೆದುಕೊಳ್ಳುವ ಮೊದಲು ನನ್ನ ಪ್ರಶ್ನೆಗೆ ಉತ್ತರಿಸಬೇಕು" ಎಂದು. ಆ ವಾಣಿಯನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಲಿಲ್ಲ ಸಹದೇವ. ಅದರ ಪರಿಣಾಮವಾಗಿ ನೀರನ್ನು ಕುಡಿಯು ತ್ತಿದ್ದಂತೆ ಅಲ್ಲೇ ಶವವಾಗಿ ಬಿದ್ದ. ಬಹಳ ಸಮಯದಿಂದಲ್ಲೂ ಬಾರದಿರುವ ಸಹದೇವನನ್ನು ವಿಚಾರಿಸಲೆಂದು ನಕುಲನನ್ನು ಕಳುಹಿಸಿದ ಧರ್ಮರಾಜ. ನಕುಲನಿಗೂ ಇದೆ ಪರಿಸ್ಥಿತಿ ಬಂದೊದಗಿತು. ಮುಂದೆ ಅರ್ಜುನ ಮತ್ತು ಭೀಮನ ಸರದಿ ಬಂದಾಗ ಅವರಿಬ್ಬರಿಗೂ ನಕುಲ ಸಹದೇವರ ಸ್ಥಿತಿಯೇ ಬಂದಿತು. ಎಷ್ಟು ಹೊತ್ತು ಕಳೆದರೂ ಯಾವ ತಮ್ಮನೂ ಹೋದವನು ಬಾರದಿರುವುದನ್ನು ಕಂಡು ಸ್ವತಃ ತಾನೇ ಅತ್ತ ತೆರಳಿದನು. ಉಳಿದವರಂತೆ ಧರ್ಮರಾಜನಿಗೂ ಇದೆ ರೀತಿಯಲ್ಲಿ ಆ ಶರೀರವಾಣಿ ಕೇಳಿಸಿತು. ಆದರೆ ಧರ್ಮಜನು ಆ ವಾಣಿಯನ್ನು ತಿರಸ್ಕರಿಸಲಿಲ್ಲ. ಆ ವಾಣಿಗೆ ಪ್ರತಿಸ್ಪಂದಿಸಿದ. ಯಕ್ಷನ ವಾಣಿಯು ಅದಾಗಿತ್ತು. ನೀರನ್ನು ಸ್ವೀಕರಿಸುವಕ್ಕಿಂತ ಮೊದಲು ಅವನ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ. ಈ ಸಂದರ್ಭವೇ 'ಯಕ್ಷಪ್ರಶ್ನೆ' ಎಂದು ಪ್ರಸಿದ್ಧಿಯನ್ನು ಪಡೆಯಿತು. ಇಲ್ಲಿ ೧೨೬ ಪ್ರಶ್ನೆಗಳನ್ನು ಯಕ್ಷ ಕೇಳಿದ. ಆ ಎಲ್ಲ ಪ್ರಶ್ನೆಗಳಿಗೂ ಯುಧಿಷ್ಠಿರನು ಬಹಳ ಸಮರ್ಪಕವಾಗಿ ಉತ್ತರಿಸಿದನು. ಇದರಿಂದ ಸಂತುಷ್ಟನಾದ ಯಕ್ಷನು ಯುಧಿಷ್ಠಿರನ ಎಲ್ಲ ಸಹೋದರರನ್ನು ಪುನಃ ಮರಳಿಸಿದನು. ಅಲ್ಲೂ ಒಂದು ನ್ಯಾಯವನ್ನೇ ತೋರಿಸಿದ ಧರ್ಮಜನ ಧರ್ಮಪ್ರಜ್ಞೆ ಲೋಕಕ್ಕೆ ಮಾದರಿಯಾಯಿತು. ಅಲ್ಲದೆ ಧರ್ಮರಾಜನು ಯಾವ ರೀತಿಯಾಗಿ ಧರ್ಮದ ಎಲ್ಲಾ ಮರ್ಮಗಳನ್ನು ಬಲ್ಲವನಾಗಿದ್ದ ಎಂಬುದು ಈ ಪ್ರಕರಣದಿಂದ ತಿಳಿಯುತ್ತದೆ. ಯಕ್ಷನು ಕೇಳಿದ ಆ ಎಲ್ಲ ಪ್ರಶ್ನೆಗಳಿಗೆ ಒಂದೊಂದು ಪದದಲ್ಲಿ ಉತ್ತರಿಸಿದ. ಅದನ್ನು ನಾನಿಲ್ಲಿ ವಿವರಿಸುವ ಪ್ರಯತ್ನವನ್ನು ಮಾಡುತ್ತೇನೆ. ನನ್ನ ಸೀಮಿತವಾದ ಬುದ್ಧಿಯಿಂದ ಈ ಮಹಾಪ್ರಯತ್ನಕ್ಕೆ ಮುಂದಡಿಯಿಡುತ್ತಿದ್ದೇನೆ. ಅದಕ್ಕೆ ಗುರು-ದೇವರ ಅನುಗ್ರಹವನ್ನು ಬೇಡುತ್ತೇನೆ.

ಸೂಚನೆ :28/08/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ -1 ಪೀಠಿಕೆ (Vyaasa Vikhita -1 Pithike)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ |

ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ||

ಪೀಠಿಕೆ

ನಾರಾಯಣನಿಗೆ ನಮಸ್ಕಾರ. ಶ್ರೇಷ್ಠನೆನಿಸುವ ನರನಿಗೂ ನಮಸ್ಕಾರ. ಸರಸ್ವತೀದೇವಿಗೆ ನಮಸ್ಕಾರ. ವ್ಯಾಸರಿಗೂ ನಮಸ್ಕಾರವನ್ನು ಹೇಳಿಯೇ 'ಜಯ'ವನ್ನು ಹೇಳುವುದು.

ಮಹಾಭಾರತವು ಬಂದು ಅದ್ಭುತವಾದ ಗ್ರಂಥ. ಮಹತ್ತಾದ ಗ್ರಂಥ. ಸಾರವತ್ತಾದ ಗ್ರಂಥವೂ ಹೌದು. ಸಾವಿರಾರು ಸದ್ವಿಷಯಗಳಿಗೆ ಆಕರವಾದ ಈ ಕೃತಿಯ ಆಕಾರವೂ ಅದ್ಭುತವೇ. ಎಷ್ಟು ದೊಡ್ಡದಿದು? – ಎಂಬ ಪ್ರಶ್ನೆಗೆ ಚಿಕ್ಕದಾದರೂ ಚೊಕ್ಕದಾದ ಉತ್ತರವೊಂದಿದೆ. ಗಣಿತದ ಸೂತ್ರದ ಹಾಗಿರುವ ಉತ್ತರ. ಗಣಿತವನ್ನು ವಿಶೇಷವಾಗಿ ಓದಿಲ್ಲದವರೊಬ್ಬರು ಮಾಡಿಟ್ಟ ಸೂತ್ರ. ನನಗದರ ಬೋಧನೆಯಾದುದು ನಾನಿನ್ನೂ ಪಿ. ಯು. ಓದುತ್ತಿದ್ದಾಗ.

ಪೂಜ್ಯ ರಂಗಪ್ರಿಯ ಸ್ವಾಮಿಗಳೆಂದು ಮುಂದೆ ಪ್ರಸಿದ್ಧರಾದ ಶ್ರೀ ಎಚ್. ಎಸ್. ವರದದೇಶಿಕಾಚಾರ್ಯರು (ಅಂದಿನ ಎಚ್ಚೆಸ್ವಿ) ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ-ಬೋಧಕರಾಗಿದ್ದರು. ಈಗಲಾದರೂ ಹಿಂದೂಗಳು ಸ್ವಲ್ಪ ಕಣ್ಣುಬಿಡುತ್ತಿದ್ದಾರೆ. ಆಗಂತೂ ಪಾಶ್ಚಾತ್ತ್ಯರೆಂಬ ಶಂಖದಿಂದ ಬಂದದ್ದೇ ತೀರ್ಥವಾಗಿತ್ತು. ಆ ಭ್ರಮೆಯನ್ನು ಧ್ವಂಸಮಾಡುವ ಆ ಸೂತ್ರವನ್ನು ನಿರ್ಮಿಸಿದವರೇ ಎಚ್ಚೆಸ್ವಿ. ಏನದು ಸೂತ್ರ? M = 8 (I + O). ಎಂಬುದಾಗಿ. ಏನದರರ್ಥ? "I" ಎಂದರೆ ಇಲಿಯಡ್ (Iliad) ಎಂಬ ಗ್ರೀಕ್ ಕಾವ್ಯ, ಹೋಮರ್ ಎಂಬುವನು ಬರೆದದ್ದು. "O" ಎಂದರೆ ಒಡಿಸ್ಸೀ (Odyssey). ಅದೂ ಅವನ ಕೃತಿಯೇ. ಇವೆರಡೇ ಪ್ರಪಂಚದ ಅತಿ ಬೃಹತ್ಕೃತಿಗಳೆಂದು ಪಾಶ್ಚಾತ್ತ್ಯರು ಬಗೆದಿದ್ದರು. ಭಾರತಕ್ಕೆ ಬಂದ ಮೇಲೇ ಅವರ ಕಣ್ತೆರೆದದ್ದು, ಗರ್ವಭಂಗವಾದದ್ದು. ಅವೆರಡನ್ನೂ ಕೂಡಿಸಿದರೆ ಎಷ್ಟಾಗುವುದೋ ಅದಕ್ಕೆ ಎಂಟರಷ್ಟಿರುವುದು "M" ಎಂಬ ಮಹಾಭಾರತವೆಂಬುದು. ಹೀಗೆ ಪಾಶ್ಚಾತ್ತ್ಯರ ಎರಡು ಬೃಹತ್ತಮಗ್ರಂಥಗಳ ಮೊತ್ತಕ್ಕೆ ಎಂಟರಷ್ಟಿದೆ ಮಹಾಭಾರತ!

ಮಹಾಭಾರತವೊಂದು ದೊಡ್ಡ ಕಥೆ. ಕಥೆಯೊಳಗಣ ಕಥೆಗಳನ್ನು ಹೊಂದಿರುವ ಕಥೆ. ಹತ್ತಾರು ಉಪಾಖ್ಯಾನಗಳಿಂದ ಕೂಡಿರುವಂಥದ್ದು. ಸೌತಿಪೌರಾಣಿಕನು ನೈಮಿಷಾರಣ್ಯಕ್ಕೆ ಬಂದಾಗ ಅಲ್ಲೊಂದು ಹನ್ನೆರಡು ವರ್ಷಗಳ ಕಾಲದ ಸತ್ರ (=ಯಜ್ಞವು) ನಡೆಯುತ್ತಿತ್ತು. ಅಲ್ಲಿ ಬ್ರಹ್ಮರ್ಷಿಗಳು ಸುಖಾಸೀನರಾಗಿದ್ದರು. ಆಶ್ರಮಕ್ಕೆ ಬಂದ ಈತನ ಸುತ್ತುವರಿದರು ತಪಸ್ವಿಗಳು. ಏತಕ್ಕಾಗಿ? "ಚಿತ್ರಾಃ ಶ್ರೋತುಂ ಕಥಾಸ್ತತ್ರ ಪರಿವವ್ರುಸ್ತಪಸ್ವಿನಃ" ಅವರು ಸುತ್ತುವರೆದದ್ದು "ಚಿತ್ರವಾದ ಕಥೆ"ಗಳನ್ನು ಕೇಳಲು. "ಚಿತ್ರ"ವೆಂದರೆ ಆಶ್ಚರ್ಯಕರವಾದದ್ದು. "ಚಿತ್ರ"ವೆಂದರೆ ಬಗೆಬಗೆಯಾದದ್ದೂ ಹೌದು. ಎಲ್ಲರೂ ಕುಳಿತುಕೊಳ್ಳಲು ಕಥೆಯನ್ನು ಹೇಳಲು ಆತನು ಆರಂಭಿಸಿದನು.

ಕಥೆಗಳು ಯಾರಿಗೆ ಬೇಡ? ಋಷಿ-ಮುನಿಗಳಿಗೂ ಕೊನೆಗೆ ಬ್ರಹ್ಮರ್ಷಿಗಳಿಗೂ ಕಥೆಗಳೆಂದರೆ ಆದರವೇ. ಕಥೆಗಳೆಂದರೆ ಬರೀ ಕಾಲಯಾಪನ (time-pass, pastime)ವಲ್ಲ – ಸರಿಯಾದ ಕಥೆಗಳಾಗಿದ್ದರೆ. ಹಾಗಿದ್ದರೆ ಎಂತಹ ಕಥೆಗಳನ್ನು ಸೌತಿಯು ಹೇಳಿದುದು?

ವ್ಯಾಸರು ಹೇಳಿದಂತಹ "ಸುಪುಣ್ಯಾಃ ವಿವಿಧಾಃ ಕಥಾಃ": ಪುಣ್ಯಪ್ರದವಾದ ಕಥೆಗಳು, ಬೇರೆಬೇರೆ ತೆರನಾದ ಕಥೆಗಳು. ಏನನ್ನು ಕುರಿತಾದವು? ಧರ್ಮ-ಅರ್ಥಗಳನ್ನು ("ಧರ್ಮಾರ್ಥ-ಸಂಶ್ರಿತಾಃ"). ಯಾರನ್ನು ಕುರಿತಾದವು? ರಾಜಶ್ರೇಷ್ಥರನ್ನು, ಮಹಾತ್ಮರಾದ ಋಷಿಗಳನ್ನು.

ಇಂತಹ ರೋಚಕವಾದ ಕಥೆಗಳು ಯಾರಿಗೆ ಬೇಡ? ಮಹಾರಾಜರನ್ನೂ ಮಹರ್ಷಿಗಳನ್ನೂ ಕಾಣದ ಇಂದಂತೂ ಈ ಕಥೆಗಳು ಮತ್ತೂ ಕುತೂಹಲಮಯವೇ ಸರಿ! ಮುಂದೆ ನೋಡೋಣ.

ಸೂಚನೆ :28/08/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ​ - 18 ಸಂಶಯಾತ್ಮಾ ವಿನಶ್ಯತಿ (Astakshara Darshana 18 Samshayatma Vinashyati)


ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

                                    (ಸಾಂದರ್ಭಿಕ ಚಿತ್ರ)

ಒಂದರ್ಥದಲ್ಲಿ ಜೀವನವೇ ಸಂಶಯಮಯ. ನನ್ನೀ ಪ್ರಯತ್ನ ಸಫಲವಾಗುವುದೋ ಇಲ್ಲವೋ? - ಎಂಬ ಸಂದೇಹ ಯಾರಿಗೆ ಒಮ್ಮೆಯೂ ಬಂದಿಲ್ಲ? ಈತನನ್ನು (ಅಥವಾ ಈಕೆಯನ್ನು) ನಂಬಲೋ ಬೇಡವೋ? ಈ ಔಷಧದಿಂದ ನನ್ನ ಖಾಯಿಲೆಯು ವಾಸಿಯಾಗುವುದೋ ಇಲ್ಲವೋ? ಕೊನೆಗೆ, ದೇವನಿರುವನೋ ಇಲ್ಲವೋ? : ಎಲ್ಲವೂ ಸಂದೇಹಕ್ಕೆ ಒಳಪಡುವುದೇ!

ನಂಬಿಕೆಯಿದ್ದಾಗಲೇ ಅಲ್ಲವೇ ನೆಮ್ಮದಿ? ಆದರೂ ಹಾಗೆಂದು ಎಲ್ಲರನ್ನೂ ನಂಬಿಬಿಡುವುದೇ? ನಂಬಿದರೂ ಒಮ್ಮೊಮ್ಮೆ ಸಂದೇಹವೇ: "ಅಷ್ಟೊಂದು ನಂಬಬಾರದಿತ್ತೇನೋ?"; ನಂಬಲಾಗದಿದ್ದಾಗಲಂತೂ ಸಂತತ ಚಿಂತೆಯೇ. ಯಾರನ್ನು ನಂಬುವುದು, ಎಷ್ಟು ನಂಬುವುದು? ಹೇಗೆ ನಂಬುವುದು? - ಎಂದೆಲ್ಲ ಪ್ರಶ್ನೆಗಳೇ.

ಇಷ್ಟು ಸಾಲದೆಂಬಂತೆ, ಇದರ ಜೊತೆಗೆ, "ಪ್ರಶ್ನಿಸದೆ ನಂಬಬೇಡಿ" ಎಂದು ಸುಲಭವಾಗಿ ಉಪದೇಶ ಮಾಡುವ ಭೂಪರೂ ಇಲ್ಲದಿಲ್ಲ. ವಿಜ್ಞಾನದ ಪಾಠದಷ್ಟಕ್ಕೆ ಅದನ್ನು ಸೀಮಿತಗೊಳಿಸಿಕೊಂಡರೆ ಸ್ವಲ್ಪ ಪರವಾಯಿಲ್ಲವೇನೋ? ವಾಸ್ತವವಾಗಿ, ಅಲ್ಲೂ ಎಲ್ಲವನ್ನೂ ಸುಲಭವಾಗಿ ಒಪ್ಪಿ(ಸಿ)ಬಿಡುವುದೂ ಕಷ್ಟವೇ. "ಭೂಮಿ ಸುತ್ತುತ್ತಿದೆ, ಸೂರ್ಯನಲ್ಲ" – ಎಂದು ಶಾಲೆಯಲ್ಲಿ ಅಧ್ಯಾಪಕರೇನೋ ಹೇಳುತ್ತಾರೆ; ಅದಕ್ಕೊಂದಿಷ್ಟು ತರ್ಕವನ್ನೂ ಹೇಳಿರಬಹುದು; ಆದರೆ, ಎಷ್ಟು ಮಂದಿಗದು ಸ್ಪಷ್ಟವಾಗಿಬಿಡುತ್ತದೆ? ಕೊನೆಗೆ ಉಪಾಧ್ಯಾಯರಿಗೇ ಅಲ್ಲೊಂದಿಷ್ಟು ಅಸ್ಪಷ್ಟತೆಯು ಉಳಿದುಕೊಂಡಿದ್ದರೂ ಆಶ್ಚರ್ಯವಿಲ್ಲ! ಹೆಚ್ಚು ಪ್ರಶ್ನಿಸಿದರೆ, ನುಣುಚಿಕೊಳ್ಳುವ ರಾಜಮಾರ್ಗವಂತೂ ಇದ್ದೇ ಇರುತ್ತದೆ: "ಅದೆಲ್ಲಾ ಮುಂದೆ ಗೊತ್ತಾಗುವುದು"!    

ಎಲ್ಲವನ್ನೂ/ಎಲ್ಲರನ್ನೂ ನಂಬಿದರೂ ಕಷ್ಟವೇ, ನಂಬದಿದ್ದರೂ ಕಷ್ಟವೇ. ಎಲ್ಲವನ್ನೂ ಶಂಕಿಸುತ್ತಾ ಪ್ರಶ್ನಿಸುತ್ತಾ ಕುಳಿತರೆ ಜೀವನ ನಡೆದೀತೇ? "ಅಮ್ಮನು ಬಡಿಸಿದ ಊಟದಲ್ಲಿ ವಿಷವಿಲ್ಲವೆಂದು ಏನು ಖಾತ್ರಿ?" – ಎಂಬ ಸಂಶಯ ಬರಬಾರದೆ? ಏಕೆ? ಇತಿಹಾಸದಲ್ಲಿ ಎಂದೂ ಯಾವ ತಾಯಿಯೂ ಹೆತ್ತ ಮಕ್ಕಳಿಗೆ ವಿಷವಿಕ್ಕಿಯೇ ಇಲ್ಲವೇ?; ಇಕ್ಕಲು ಸಾಧ್ಯವೇ ಇಲ್ಲವೇ? - ಹೀಗೆಲ್ಲಾ "ತರ್ಕಬದ್ಧ"ವಾಗಿ ಪ್ರಶ್ನೆಗಳೂ ಸಂಶಯಗಳೂ ಏಳುತ್ತಿರುವುದಾದರೆ, ಜೀವಕ್ಕೆ ನೆಲೆಯೆಲ್ಲಿ, ನೆಮ್ಮದಿಯೆಲ್ಲಿ? ಜೀವನಿರ್ವಹಣೆಯೆಲ್ಲಿ? ಹಾಗೆಂದು ಯಾವೊಂದನ್ನೂ ಪ್ರಶ್ನಿಸದೆ ಕೂರಬೇಕೆ? ಹಾಗಾದರೆ ಇಲ್ಲಿ ವಿಭಾಗವೆಲ್ಲಿ? ಗೆರೆಯೆಳೆಯುವುದೆಲ್ಲಿ? ಮತ್ತು ಹೇಗೆ? - ಹೇಳುವವರಾರು? (ಹೇಳುವವರೂ ನಂಬಲರ್ಹರೆಂಬ ನಂಬಿಕೆಯಿದೆಯೇ?) ಈ ಪರಿಗೆ ಕೊನೆಯೆಂಬುದೇ ಇರದು: ಕೊನೆಯೇ ಕಾಣದಾಗದ ತಾರ್ಕಿಕಪರಿಸ್ಥಿತಿಯನ್ನು"ಅನವಸ್ಥಾ-ದೋಷ"ವೆನ್ನುತ್ತಾರೆ.

ಪ್ರಶ್ನೆಗಳ ಸುರಿಮಳೆಯೇ ಆಯಿತು. ಇನ್ನು ಉತ್ತರದತ್ತ ಸ್ವಲ್ಪ ಪ್ರಯತ್ನಮಾಡುವಾ. ಗೀತೆಯಲ್ಲಿಯ ಒಂದು ಮಾತು ಈ ಪ್ರಶ್ನಪರಂಪರೆಗೆ ಉತ್ತರ ಕೊಡಬಹುದೇನೋ? ಗೀತೆಯು ಹೇಳುವುದು "ಸಂಶಯಾತ್ಮಾ ವಿನಶ್ಯತಿ" – ಎಂಬುದಾಗಿ: "ಸಂಶಯಪರನಾದವನು ಹಾಳಾಗುವನು."

ಎಲ್ಲಾ ಸಂಶಯಾತ್ಮರೂ ಹಾಳಾಗುವರು – ಎಂದು ಇಲ್ಲಿ ಹೇಳಿಲ್ಲ. ಎರಡು ವಿಶೇಷಣಗಳನ್ನು ಹೇಳಿದೆ: "ಅಜ್ಞನೂ ಅಶ್ರದ್ದಧಾನನೂ ಆಗಿರುವ" ಸಂದೇಹಿಯು ಹಾಳಾಗುವನು - ಎಂದಿದೆ. ಹಾಗೆಂದರೇನು? ಹಾಗೆಂದರೇನೆಂಬುದನ್ನು ತಿಳಿಯಲು, ಚಿಕ್ಕಂದಿನಲ್ಲಿ ನಮ್ಮನ್ನು ಅಪ್ಪ-ಅಮ್ಮಂದಿರು ಬೈಯುತ್ತಿದ್ದುದನ್ನು ಸ್ಮರಿಸಿಕೊಂಡರೆ ಸಾಕು. ಏನದು ಬೈಗಳ? "ಇಲ್ಲವೋ ಸ್ವಂತಬುದ್ಧಿಯಿರಬೇಕು; ಇಲ್ಲವೋ ಹಿರಿಯರು ಹೇಳಿದ ಮಾತನ್ನು ಕೇಳಬೇಕು; ಎರಡೂ ಇಲ್ಲದ ನೀನು ಉದ್ಧಾರವಾಗುವೆಯಾ?" – ಎಂಬ (ಪ್ರೀತಿಯ) ಮಾತನ್ನು ಯಾರು ಎಷ್ಟು ಬಾರಿ ಕೇಳಿಲ್ಲ? ಅಂತೆಯೇ ಕೃಷ್ಣನಿಲ್ಲಿ ಹೇಳುತ್ತಿರುವುದೂ.

ಇಲ್ಲವೇ "ಜ್ಞ"ನಾಗಿರಬೇಕು (ಎಂದರೆ ತಾನೇ ಚೆನ್ನಾಗಿ ತಿಳಿದವನಾಗಿರಬೇಕು); ಅಥವಾ (ಬಲ್ಲ ಹಿರಿಯರ ಮಾತಿನಲ್ಲಿ) ಶ್ರದ್ಧೆಯಾದರೂ ಇರಬೇಕು: ಇವೆರಡೇ ಮಾರ್ಗಗಳಿರುವುದು. "ಎರಡೂ ಇಲ್ಲ; ಜೊತೆಗೆ ಸಂಶಯಗಳ "ಗಂಟು"ಗಳಂತೂ (ಎರಡೂ ಅರ್ಥದಲ್ಲಿ) ಭೂರಿಭೂರಿಯಾಗಿಯೇ ಉಂಟು" - ಎಂದಾಗಿಬಿಟ್ಟರೆ ಹೇಗೆ? 

ಶ್ರದ್ಧೆಯೆಂದರೇನು? ಬಲ್ಲ ಗುರುವಿನ ಮೇಲೆ, ಬಲ್ಲಿದರು ರೂಪಿಸಿದ ಶಾಸ್ತ್ರದ ಮೇಲೆ – ಇಡುವ ನಂಬಿಕೆಯೇ ಶ್ರದ್ಧೆ. ಶಾಸ್ತ್ರವೆಂದರೇನು? ಜೀವನದ ಲಕ್ಷ್ಯವೇನು, ಅದಕ್ಕೆ ಬೇಕಾದ ಮಾರ್ಗವೇನು? - ಎಂಬೀ ಗಹನಪ್ರಶ್ನೆಗಳಿಗೆ ಉತ್ತರವನ್ನು ಕೊಡತಕ್ಕವೇ ಶಾಸ್ತ್ರಗಳು: ಗೀತೆ-ಉಪನಿಷತ್ತು-ಸ್ಮೃತಿಗಳು - ಮೊದಲಾದವು. ಗುರುವಾರು? ಶಾಸ್ತ್ರಗಳು ಬೋಧಿಸುವ ಸಾರಭೂತವಾದ ವಿಷಯವನ್ನೇ, ಮತ್ತೂ ಸಾರವತ್ತಾಗಿ ಮತ್ತು ಸಾನ್ವಯವಾಗಿ ಸಾಕಷ್ಟು ವಿವರಿಸಿ ನಿರೂಪಿಸಬಲ್ಲವನೇ ನಿಜವಾದ ಗುರು.

ಆದರೆ ಸ್ವತಃ ಅಜ್ಞ, ಪ್ರಾಜ್ಞರನ್ನೂ ಪ್ರಶ್ನಿಸ; ಮನಸ್ಸು ಮಾತ್ರ ಸಂಶಯಮಯ! – ಎಂದಾಗಿಬಿಟ್ಟವನಿಗೆ ಎಲ್ಲವೂ ಅಯೋಮಯವೇ! ಹಾಗೆ ಮತಿಗೆಟ್ಟವನು ಗತಿಗೆಡುವುದರಲ್ಲಿ ಸಂಶಯವೇನು? ಆಶ್ಚರ್ಯವೇನು?

ಸಂಶಯಪಡಬಾರದೆಂದರೇನು?: ಪ್ರಶ್ನೆಗಳೇ ಹುಟ್ಟಿಕೊಳ್ಳಬಾರದೆಂದಲ್ಲ; ಹುಟ್ಟಿದ ಪ್ರಶ್ನೆಗೆ ಸಮಾಧಾನವನ್ನರಸಬಾರದೆಂದಂತೂ ಅಲ್ಲವೇ ಅಲ್ಲ. ಪ್ರಶ್ನೆಗಳು ತಾವಾಗಿ ಹುಟ್ಟಿಕೊಳ್ಳುತ್ತಿರುತ್ತವೆಯಲ್ಲವೇ? ಅವನ್ನು ತಡೆಯುವುದದೆಂತು? ಎದುರಿಗೆ ಗುರುವಿದ್ದರೆ, ಪ್ರಶ್ನೆಗಳಿಗೆ ನೇರವಾಗಿಯೋ ಜಾಣ್ಮೆಯ ಪ್ರಯೋಗದಿಂದಲೋ ಅರ್ಹತಾನುಸಾರ ಉತ್ತರವಿತ್ತಾನು.

ನಚಿಕೇತನಿಗೆ ಯಮನೂ, ಅರ್ಜುನನಿಗೆ ಕೃಷ್ಣನೂ ಲೋಕೋತ್ತರಗುರುಗಳಾಗಿ ಲಬ್ಧರಾದರು. ಅರ್ಜುನನೂ ನಚಿಕೇತನೂ ಬೇಕಾದಷ್ಟೇ ಪ್ರಶ್ನೆಗಳನ್ನು ಎತ್ತಲಿಲ್ಲವೇ? ಆದರೂ, "ಆಹಾ! ನಿನ್ನಂತೆ ಪ್ರಶ್ನೆಕೇಳುವವರು ನಮಗೆ ದೊರೆಯಲಿ!" - ಎಂದು ನಚಿಕೇತನ ಬಗ್ಗೆ ಯಮನೇ ಆಶೆಪಟ್ಟ! "ಆಹಾ! ನಿನ್ನ ಹಾಗೆ ಈ ಸಂಶಯವನ್ನು ಛೇದಿಸುವವರು ದೊರೆಯರೇ ಸರಿ!" ಎಂದು ಧನ್ಯಂಮನ್ಯನಾಗಿ (ತಾನೇ ಧನ್ಯನೆಂಬ ಭಾವನೆಯಿಂದ) ಕೃಷ್ಣನ ಬಗ್ಗೆ ಅರ್ಜುನನೇ ಹೇಳಿಕೊಂಡ! ಶ್ರೀಕೃಷ್ಣನಾದರೂ ಪರಿಪ್ರಶ್ನವನ್ನು - ಎಂದರೆ ನಾನಾಮುಖಗಳಿಂದ ಪ್ರಶ್ನೆಗಳನ್ನು ಕೇಳುವುದನ್ನು - ಅರಿವು ಮೂಡುವುದಕ್ಕೆ ಒಂದು ಮುಖ್ಯಮಾರ್ಗವೆಂಬುದಾಗಿಯೇ ತಿಳಿಸಿದ: "ಅರುಹುವರು ತತ್ತ್ವಜ್ಞರು" - ಎಂದ. ತತ್ತ್ವಜ್ಞನೇ ಗುರು!

ಅರ್ಜುನನಾದರೂ ಕೃಷ್ಣನನ್ನು ಸ್ವಲ್ಪಕ್ಕೇ ಬಿಡಲಿಲ್ಲವಲ್ಲ?: "ಈ ಘೋರಕರ್ಮದಲ್ಲೇಕೆ ನನ್ನನ್ನು ತೊಡಗಿಸುವೆ?"; "ವ್ಯಾಮಿಶ್ರವಾಗಿರುವ (ಎಂದರೆ ಸಂಕೀರ್ಣವಾಗಿರುವ) ಮಾತುಗಳಿಂದ ನನ್ನ ಬುದ್ಧಿಗೆ ಮೋಹವನ್ನು (ಎಂದರೆ ಭ್ರಮೆಯನ್ನು) ನೀನುಂಟುಮಾಡುತ್ತಿರುವಂತಿದೆಯೆಲ್ಲಾ!" ಎಂದೆಲ್ಲಾ ಆಕ್ಷೇಪಿಸಲಿಲ್ಲವೆ, ಮೊದಮೊದಲು? ಕಳಕಳಿಯ ಈ ಪ್ರಶ್ನೋಪಪ್ರಶ್ನೆಗಳಿಗೆ ಕೃಷ್ಣನು ಇನಿತಾದರೂ ಕಿರಿಕಿರಿಗೊಂಡನೇನು? ಅಂತಿಮವಾಗಿ ಅರ್ಜುನನೇ ಅಂದದ್ದೇನು? "ನನ್ನ ಮೋಹವಿದೋ ಹರಿಯಿತು, ಸಂದೇಹಗಳೆಲ್ಲ ಕಳೆದವು - ಎಲ್ಲವೂ ನಿನ್ನ ಪ್ರಸಾದದಿಂದ! ಇದೋ ಇನ್ನು ನಿನ್ನ ಮಾತಿನಂತೆ(ಯೇ) ಮಾಡುವೆ."

ಮೊದಲನೆಯ ಅಧ್ಯಾಯವನ್ನು "ವಿಷಾದಯೋಗ"ವೆಂದು ಪಾರಂಪರಿಕವಾಗಿ ಕರೆದಿದೆಯಷ್ಟೆ? ಉಳಿದೆಲ್ಲ ಅಧ್ಯಾಯಗಳನ್ನು ಶ್ರೀರಂಗಮಹಾಗುರುಗಳು ಸುಭಗವಾಗಿ "ಪ್ರಸಾದಯೋಗ"ವೆಂದು ನಿರ್ದೇಶಿಸಿದ್ದರು. ಹೌದಲ್ಲವೇ?: ಅರ್ಜುನನ ಸಂಶಯ ಸರಿಯಿತು, ನಿಶ್ಚಯ ಮೂಡಿತು; ದಾರಿಯು ತೋರಿತು: ಗುರಿಯೇ ದೊರೆಯಿತು!

ಇತ್ತ ತಾನೂ ಅರಿಯ(ಲೆಳಸ)ದೆ, ಅತ್ತ ಅರಿತವರತ್ತಲೂ ಸಾಗದೆ, ಸಂಶಯಗಳನ್ನೇ ಗುಡ್ಡೆಹಾಕಿಕೊಂಡು ಮೈಪರಚಿಕೊಳ್ಳುತ್ತ ಕುಳಿತುಕೊಂಡ ಪೆದ್ದಗುಂಡನಿಗೆ ಪರವಿರಲಿ, ಇಹವೂ ಸಾಧಿಸದು! – ಎಂಬರ್ಥದ ಶ್ರೀಕೃಷ್ಣನ ಯುಕ್ತಿಯುಕ್ತವಾದ ಉಕ್ತಿಯಲ್ಲಿ ಯಾರಿಗೆ ರಕ್ತಿ(=ಪ್ರೀತಿ)ಯಾಗದು?

ಸೂಚನೆ: 28/08/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

Saturday, August 27, 2022

ಮಹರ್ಷಿ ಭಾರತ ಭಾಗ-10 ಮಹರ್ಷಿ ಭಾರತಕ್ಕೆ ನಮಸ್ಕಾರ (Maharsi Bharata Bhaga -10 Maharashi Bharatakke Namaskara)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)

 

ಕಡೆಯಲ್ಲಿ ಈ ಮಹರ್ಷಿ ಭಾರತದ ಬಗೆಗಿನ ಶ್ರೀರಂಗಮಹಾಗುರುಗಳ ಈ ಅಮೃತವಾಣಿಗಳೆರಡನ್ನು ಸ್ಮರಿಸೋಣ-"ಯಾವ ಮಹರ್ಷಿಗಳು ತಮ್ಮ ಮನೀಷೆಯಿಂದ ಜ್ಞಾನ-ವಿಜ್ಞಾನತೃಪ್ತಾತ್ಮರಾಗಿ ಸತ್ಯಮೂಲವಾದ ಜೀವನದ ಆರಂಭ, ಅದರ ವಿಕಾಸ ಮತ್ತು ಅದರ ವಿಲಯಗಳ ವಿಷಯವಾಗಿ ಅನ್ವೇಷಣೆ, ಅಧ್ಯಯನಗಳನ್ನು ನಡೆಸಿ, ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕಗಳಲ್ಲಿರುವ ಸ್ಥೂಲ,ಸೂಕ್ಷ್ಮ, ಪರ- ಭೇದಗಳನ್ನು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಅಳೆದು, ಜೀವನದ ಹುಟ್ಟು, ಸ್ಥಿತಿ,ಬೆಳವಣಿಗೆ,ವಿಕಾರ, ಕ್ಷಯ,ನಾಶಗಳೆಂಬ ಆರು ಬಗೆಯ ಸ್ಥಿತಿಭೇದಗಳನ್ನು ಅರಿತು ತಮ್ಮ ಇಂದ್ರಿಯ-ಆತ್ಮಗಳ ಕಲ್ಯಾಣವನ್ನು ಮಾಡಿಕೊಂಡು ,ಪ್ರಜೆಗಳೆಲ್ಲರನ್ನೂ ಪರಮವ್ಯೋಮದಲ್ಲಿಡುವ ಸಾಹಿತ್ಯವನ್ನು ಲೋಕಕ್ಕೆ ಕೊಟ್ಟು ಸತ್ಯಾತ್ಮಪ್ರಾಣಾರಾಮರಾಗಿ ಜೀವನದ ಬೆಳಕನ್ನು ಕಂಡು, ಅಜರಾಮರರಾಗಿ ಪ್ರಕಾಶದಲ್ಲಿ ಆಸಕ್ತರಾಗಿದ್ದರೋ, ಅಂತಹ ಸನಾತನ ಆರ್ಯಮಹರ್ಷಿಗಳ ಭಾರತವು ಇದಾಗಿರುವುದು".

"ಯಾವ ದೇಶವು ಪರಮ ಪ್ರಕಾಶದಲ್ಲಿ ಆಸಕ್ತವಾಗಿ ತನ್ನ ಜೀವನದ ಮಬ್ಬನ್ನು ಹರಿಸಿಕೊಂಡಿತೋ, ಯಾವ ದೇಶವು ತನ್ನ ಉತ್ತರಾಯಣದಲ್ಲಿ ಉಚ್ಚಕುಲಾಚಲವನ್ನಿಟ್ಟುಕೊಂಡು ತನ್ನ ಉತ್ತುಂಗ ಶಿಖರಕ್ಕೆ ಏರಿಬರುವ ಸಾಂಖ್ಯಯೋಗಿಗಳ ಮನೋವೃತ್ತಿಗಳನ್ನು ತಡೆದು ನಿಲ್ಲಿಸಿ ಅಪ್ರಾಕೃತವಾದ ದಿವ್ಯ ದೃಷ್ಟಿಯನ್ನಿತ್ತು ಪ್ರಕೃತಿ-ಪುರುಷರನ್ನು ಒಂದಾಗಿಸಿ ಶಿಖಾಸ್ಥಾನದಲ್ಲಿರುವಂತೆ ಮಾಡಿ, ಆಚಲರನ್ನಾಗಿ ಮಾಡಿಸಿ, ದಿವಿಯನ್ನು ಚುಂಬಿಸುವ ಗೌರೀಶಂಕರವನ್ನು ಹೊಂದಿ ಆ ಉನ್ನತ ಸ್ಥಾನದ ಮೂಲಕ "ಸ್ವದೇಶೋ ಭುವನತ್ರಯಂ" ಎಂದು ಸಾರುತ್ತಾ ತನ್ನ ಮೇರೆಯಲ್ಲಿ ಸುತ್ತಲೂ ಸಮುದ್ರರಾಜನು ಘೋಷಿಸುವಂತೆ ಮಾಡುತ್ತಿದೆಯೋ, ಅಂತಹ ಭಾರತ ಮಾತೃಭೂಮಿಗೆ ಪ್ರಾಣ ಪ್ರಣಾಮಗಳು"

 

ಉಪಸಂಹಾರ

 

ಹೀಗೆ ನಮ್ಮ ಭಾರತ ದೇಶವನ್ನು ಇತರರು ತಮ್ಮ ನೆಲವನ್ನು ಭಾವುಕವಾಗಿ ಪ್ರೀತಿಸುವಂತೆ ಮಾತ್ರವೇ ಪ್ರೀತಿಸಬೇಕಾಗಿಲ್ಲ. ವಿಚಾರಪೂರ್ವಕವಾಗಿ ನೋಡಿದರೂ ಈ ದೇಶದಂತಹ ಪ್ರಬುದ್ಧ ಸಂಸ್ಕೃತಿಯ ದೇಶ, ಅನ್ಯಾದೃಶ ಪೂರ್ವಜರನ್ನೊಳಗೊಂಡ ದೇಶ, ಸಹಜ ಪಾವಿತ್ರ್ಯದಿಂದ ಸಂಸ್ಕಾರಿಗಳನ್ನು ಜೀವನದ ಪರಮೋನ್ನತ ಸ್ಥಿತಿಗೆ ಕೊಂಡೊಯ್ಯುವ ದೇಶ ಜಗತ್ತಿನ ಇನ್ನಾವ ಭಾಗದಲ್ಲೂ ಕಾಣಸಿಗದು. ಉಪನಿಷತ್ತು ಅಪ್ಪಣೆ ಕೊಡಿಸುವಂತೆ- ಸುವರ್ಣ ನಿಕ್ಷೇಪ ಇರುವ ನೆಲದ ಮೆಲೆಯೇ ನಿತ್ಯವೂ ಸಂಚರಿಸುತ್ತಿದ್ದರೂ ಅದರೊಳಗಿನ ಸುವರ್ಣದ ಅರಿವು ಕ್ಷೇತ್ರಜ್ಞನಲ್ಲದವನಿಗೆ ಗೊತ್ತಾಗದು. ಹಾಗೆಯೇ ಈ ದೇಶದಲ್ಲೇ ಹುಟ್ಟಿದಾರಭ್ಯ ಓಡಾಡಿಕೊಂಡು ಇದ್ದರೂ ನಮ್ಮ ಶರೀರವೆಂಬ ಕ್ಷೇತ್ರದ  ಹಾಗೂ ಈ ಭೂಮಿಯೆಂಬ ಕ್ಷೇತ್ರದ ಪರಿಚಯ ನಮಗಿಲ್ಲದಿರುವುದೇ ಈ ದೇಶದ ಬಗೆಗಿನ ನಮ್ಮ ಉದಾಸೀನತೆಗೆ ಕಾರಣ. ಈ ದೇಶವನ್ನು ನಮ್ಮ ಮಹರ್ಷಿಗಳ, ರಾಜರ್ಷಿಗಳ ದೃಷ್ಟಿಯಿಂದ ನೋಡುವಂತಾದಾಗ ಶ್ರೀ ರಾಮನು ಹೇಳುವಂತೆ- "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಎಂದು ಅರ್ಥಪೂರ್ಣವಾಗಿ ನಾವೂ ಹೇಳುವಂತಾದೀತು. ಈ ದೇಶದ ವೈಭವವನ್ನು ಇಷ್ಟು ಚಿಕ್ಕ ಲೇಖನಮಾಲೆಯಲ್ಲಿ ಹಿಡಿದಿಡುವುದಂತೂ ಅಸಾಧ್ಯದ ಮಾತು. ಕೇವಲ ದಿಗ್ದರ್ಶನಮಾತ್ರವಾಗಿ ಕೆಲವೇ ವೈಶಿಷ್ಟ್ಯಗಳನ್ನು ಜ್ಞಾಪಿಸಿಕೊಂಡದ್ದಾಗಿದೆ. ನಮ್ಮ ಹೆಮ್ಮೆಯ ಭಾರತವನ್ನು ನಮ್ಮ ದೇಶದ ಜ್ಞಾನೀ ಜನರಂತೆ ನಾವೂ ಅರಿತು ಪ್ರೀತಿಸುವಂತಾದರೆ ಅದೊಂದು ಅಹೋಭಾಗ್ಯ. ನಾವೆಲ್ಲಾ ಸತ್ಯಾರ್ಥದಲ್ಲಿ ಭಾರತೀಯರಾದರೆ ನಮ್ಮೀ ಪವಿತ್ರದೇಶ ವಿಶ್ವಗುರುವಾಗಿ ಮತ್ತೆ ಮೆರೆದು ತನ್ನ ಜ್ಞಾನವೈಭವದಿಂದ ಲೋಕವನ್ನೆಲ್ಲಾ ಬೆಳಗುವುದರಲ್ಲಿ ಯಾವ ಸಂಶಯವೂ ಇರದು. ನಮ್ಮ ಪೂರ್ವಜರ ಮನದಾಳದ ಘೋಷಣೆ- "ಕೃಣ್ವಂತೋ ವಿಶ್ವಮಾರ್ಯಂ" (ಜಗತ್ತನ್ನು ಆರ್ಯವನ್ನಾಗಿ ಮಾಡೋಣ)  ಎಂದು ಪ್ರಾರ್ಥಿಸೋಣ. 

ಸೂಚನೆ : 27/08/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಕಾಳಿದಾಸನ ಜೀವನದರ್ಶನ - 25 ಮಹಾರಾಜನ ಕಾರ್ಯವೈಖರಿ (Kalidasana Jivanadarshana - 25 Maharajana Karyavaikhari)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾಜನೊಬ್ಬನ ನಿತ್ಯಜೀವನವು ಹೇಗಿರಬೇಕೆಂಬುದನ್ನು ಕಾಳಿದಾಸನ ಕೃತಿಗಳಿಂದ ಅರಿತುಕೊಳ್ಳಬಹುದು.  ತನ್ನ ಧರ್ಮಾಸನಕ್ಕೆ ಬೆಳಿಗ್ಗೆ ಬೇಗನೆ ಬಂದು ಕುಳಿತುಕೊಳ್ಳುತ್ತಾನೆ, ಮಹಾರಾಜ. ಆ ಕೆಲಸವೇ ಮಧ್ಯಾಹ್ನದವರೆವಿಗೂ ಸಾಗುತ್ತದೆ. ಧರ್ಮಾಸನದಲ್ಲಿ ಕುಳಿತಿದ್ದು ಧರ್ಮಾಧರ್ಮನಿರ್ಣಯವನ್ನು ಮಾಡುವುದು ಸುಲಭವಾದ ಕೆಲಸವೇ? ರಘುವಂಶದಲ್ಲಿ ಹೇಳುವಂತೆ, ರಾಜವೃತ್ತವೆಂಬುದು ರಾಜರಿಗೆ ಸುಖಕ್ಕೆ ಪ್ರತಿಬಂಧಕವೇ ಸರಿ.  ಎಷ್ಟರ ಮಟ್ಟಿಗೆಂದರೆ, ಆತನ ಕಾರ್ಯಸ್ಥಾನವು ಆತನ ಮಟ್ಟಿಗೆ ಒಂದು ಕಾರಾಸ್ಥಾನವೇ ಸರಿ! - ಎಂಬ ಭಾವ ಅಲ್ಲಿದೆ.


ರಾಜನಾಗುವ ತನಕ ಕುತುಕ, ತವಕ, ಹಂಬಲಗಳಿರುವುವು. ರಾಜನಾದ ಬಳಿಕ ಅಲ್ಲಿಯ ಜವಾಬ್ದಾರಿಯ ಕ್ಲೇಶದ ಅನುಭವವಾಗುತ್ತಿದ್ದಂತೆ ಅವೆಲ್ಲವೂ ಮಾಯವಾಗಲಾರಂಭಿಸುವುವು! ರಾಜತ್ವದಲ್ಲಿ ಸುಖವುಂಟು, ಇಲ್ಲವೆಂದಲ್ಲ; ಜೊತೆಗೇ ಅಪಾರಶ್ರಮವೂ ಉಂಟು. ಇದಕ್ಕೆ ಕಾಳಿದಾಸನು ಒಂದು ಕೊಡೆಯ ಉದಾಹರಣೆಯನ್ನು ಕೊಡುತ್ತಾನೆ: ಕೊಡೆಯನ್ನು ಹಿಡಿದುಕೊಂಡರೆ ನೆರಳೆಂಬ ಸುಖವೇನೋ ಇರುವುದೇ; ಆದರೆ ಕ್ರಮೇಣ ಕೈಗೆ ನೋವು ಬರುವುದೇ. ರಾಜಪದವಿಯು ದೊರಕುವ ಮುಂಚಿನ ಉತ್ಸುಕತೆ, ಪಡೆದಾಗಾಗುವ ಸಂತೋಷ - ಇವು ನೋವನುಭವವನ್ನು ಕೊಂಚ ಹೊತ್ತು ಮೆಟ್ಟಿರುತ್ತವೆ. ಛತ್ರದಂಡವನ್ನು ಹಿಡಿದು ಕೆಲಕಾಲವಾಗುತ್ತಲೇ ಕೈನೋವು ತೋರಿಬರುತ್ತಿದ್ದು, ಕೊನೆಗೆ ಛತ್ರ-ಧಾರಣದಿಂದಾಗಿ ಉಂಟಾದ ಛಾಯಾಸುಖಕ್ಕಿಂತಲೂ ಏರ್ಪಟ್ಟ ದುಃಖವೇ ಹೆಚ್ಚಾಯಿತೆನಿಸಿಬಿಡುತ್ತದೆ! ಹೀಗೆ ಸ್ವಹಸ್ತದಿಂದಲೇ ಹಿಡಿದುಕೊಂಡ ಕೊಡೆಯ ದಂಡದಂತಿರುವುದು, ರಾಜ್ಯವೆಂಬುದು - ಎಂಬ ಉದ್ಗಾರವು ಬಂದಿದೆ, ದುಷ್ಯಂತನ ಬಾಯಲ್ಲಿ (ಶಾಕುಂತಲನಾಟಕದಲ್ಲಿ). ಕಾರ್ಯಮುಗಿಸಿ ಆಯಾಸಪಟ್ಟು ಎದ್ದು ಹೊರಡುತ್ತಿರುವ ರಾಜನ ನುಡಿಗಳಿವು.


ಆ ಸಮಯದಲ್ಲೇ ಬರುವ ಇನ್ನೆರಡು ಮಾತುಗಳೂ ನಮಗೆ ಪ್ರಕೃತ : ರಾಜನ ಮಾತಿಗೆ ಮೊದಲು ಕಾಂಚುಕೀಯನಾಡುವ ಮಾತು; ರಾಜನ ಮಾತಾದ ಮೇಲೆ ವೈತಾಳಿಕರಾಡುವ ಮಾತು. ಎರಡರಲ್ಲೂ ಹಲವು ಉಪಮೆಗಳೊಂದಿಗೆ ರಾಜವೃತ್ತದ ಚಿತ್ರಣವು ದೊರೆಯುತ್ತದೆ: ಸೂರ್ಯ-ವಾಯು-ಶೇಷ-ಗಜ-ವೃಕ್ಷ - ಎಂಬ ಐದು ಉಪಮೆಗಳು.

ಸೂರ್ಯನು ಎಂದಿನಿಂದ ಕೆಲಸ ಮಾಡುತ್ತಿದ್ದಾನೆ? - ಎಂದು ಹೇಳುವವರಾರು? ಆತನ ರಥಕ್ಕೆ ಒಮ್ಮೆಯಷ್ಟೇ ಕುದುರೆಗಳನ್ನು ಜೋಡಿಸಿದ್ದು; ಆಗ ಆರಂಭಿಸಿದ್ದು ಆಮೇಲೆ ನಿಂತಿಲ್ಲ, ನಿಲ್ಲುವಂತೆಯೇ ಇಲ್ಲ! ರಾಜನ ನಡೆಯೂ ಹೀಗೆಯೇ: ಎಡೆಬಿಡದ ನಡೆ. ಬೀಸುವ ವಾಯುವೂ ಅಂತೆಯೇ. ಗಾಳಿಗೇನು ಹಗಲೇ ಇರುಳೇ? ಬೀಸುತ್ತಿರುವುದೇ ವಾಯುಧರ್ಮವಲ್ಲವೇ? ಭೂಮಿಯನ್ನು ಹೊತ್ತಿರುವ ಆದಿಶೇಷನ ಕಥೆಯೂ ಅದುವೇ. ಭೂಭಾರವೆಲ್ಲವೂ ಆತನ ಮೇಲೇ ನಿಂತಿರುವುದೆಂದರೆ ಆತನಿಗೆ ತುರಿಸಿಕೊಳ್ಳಲಾದರೂ ಪುರುಸೊತ್ತಿದೆಯೆಂದೇ?


ಈ ಮೂರೂ ಹೋಲಿಕೆಗಳಲ್ಲಿಯ ಸಾಮ್ಯವೆಂದರೆ ಎಡೆಬಿಡದೆ ದುಡಿಯುವುದು. ಮತ್ತು ಈ ದುಡಿತವಾದರೂ ಸ್ವಸುಖಕ್ಕಾಗಿ ಅಲ್ಲ, ಅಥವಾ ಸ್ವಕೀಯರ ಸುಖಕ್ಕಾಗಿಯೂ ಅಲ್ಲ ("ತನ್ನವರು" - ಎಂಬ ಪದವನ್ನು ತನ್ನ ಬಂಧುಗಳು ತನ್ನ ಮಿತ್ರರು ಎಂಬಷ್ಟೇ ಅರ್ಥಕ್ಕೆ ಸೀಮಿತಗೊಳಿಸಿದಲ್ಲಿ). ಇಡೀ ರಾಜ್ಯವೇ ತನ್ನದು, ರಾಜ್ಯದಲ್ಲಿರುವವರೆಲ್ಲಾ ತನ್ನವರೇ - ಎಂಬ ಭಾವನೆ ಬಂದಾಗ ರಾಜನಿಂದಾಗುವ ಕಾರ್ಯದ ಪರಿಯೇ ಬೇರೆ. ಸೃಷ್ಟಿ-ಸ್ಥಿತಿ-ಲಯಗಳಲ್ಲಿ ಸ್ಥಿತಿ-ಕಾರ್ಯವು ವಿಷ್ಣುವಿನದು. ರಾಜನೂ ಲೋಕದ ಸ್ಥಿತಿಗಾಗಿಯೇ ಶ್ರಮಿಸುವವನಾದ್ದರಿಂದಲೇ ರಾಜನನ್ನು ವಿಷ್ಣುವೆಂದಿರುವುದು: ಇದು ತತ್ತ್ವದರ್ಶಿಗಳಾದ ಶ್ರೀರಂಗಮಹಾಗುರುಗಳಿತ್ತ ನೋಟ. "ಆದಿತ್ಯಾನಾಮಹಂ ವಿಷ್ಣುಃ" ಎಂಬುದು ಗೀತೆಯ ಮಾತೇ; ಆದಿಶೇಷನು ವಿಷ್ಣುವಿನ ಶಯ್ಯೆಯೇ; ಇನ್ನು ವಾಯುಸಂಚಾರವೇ ಇಲ್ಲದಿದ್ದಲ್ಲಿ ಉಸಿರಾಟವೇ ಇಲ್ಲದಂತಾಗುವುದು. ಹೀಗೆ ಸೂರ್ಯ-ವಾಯು-ಶೇಷರು ಜಗತ್ತಿನ ಸ್ಥಿತಿಗಾಗಿಯೇ ಶ್ರಮಿಸತಕ್ಕವರು. ಅವರೇ ಮಾದರಿ, ರಾಜನಿಗೆ.


ಸಲಗದ ಪರಿಯೇನು? ತನ್ನ ಮಂದಿಯನ್ನೆಲ್ಲಾ ಪಾಲಿಸಬೇಕು. ಜಲವೋ ಆಹಾರವೋ ದೊರೆಯುವಲ್ಲಿಗೆ, ಬಳಿಕ ನೆರಳಲ್ಲಿಗೆ, ತನ್ನ ಹಿಂಡನ್ನೆಲ್ಲಾ ನಡೆಯಿಸಿಕೊಂಡುಹೋಗಬೇಕು. ಹೀಗೆ ರಾಜನಾದರೂ ಪ್ರಜೆಗಳನ್ನು ತನ್ನ ಪ್ರಜೆಗಳಂತೆಯೇ - ಎಂದರೆ ತನ್ನ ಮಕ್ಕಳಂತೆಯೇ - ಪಾಲಿಸತಕ್ಕದ್ದು. ಇಲ್ಲೂ ಹಾಗೆಯೇ. ಬರೀ ತನ್ನ ಪಾಡನ್ನು ತಾನು ನೋಡಿಕೊಂಡರಾಯಿತೆಂದಲ್ಲ; ಮೇಲೆ ಹೇಳಿದಂತೆ, ಪ್ರಜೆಗಳೆಲ್ಲರ ಯೋಗಕ್ಷೇಮಗಳು ರಾಜನ ಕಾರ್ಯವೇ ಸರಿ. "ತಾಪ ನನಗೆ, ತಂಪು ನಿಮಗೆ" – ಎಂಬುದು ಮರದ ಕಾರ್ಯವೈಖರಿ. ಮರದ 'ತಲೆ'ಯ ಮೇಲೆ ತೀವ್ರೋಷ್ಣ, ಮಹಾಬಿಸಿಲು; ಆ ಬೇಗೆಯೆಲ್ಲಾ ತನಗೆ. ನೆರಳಿಗಾಗಿ ತನ್ನನ್ನಾಶ್ರಯಿಸಿ ಬಂದವರೆಲ್ಲರಿಗೂ (ಬೇರೆ ಜಾತಿಯ ಪ್ರಾಣಿಗಳಿಗೂ) ತಾಪಕಳೆದು ತಂಪನ್ನಷ್ಟೇ ಕೊಡುತ್ತವೆ, ಮರಗಳು.


ರಾಜನು ಸ್ವಸುಖದ ಬಗ್ಗೆ ಹೆಚ್ಚು ಆಸೆಗಳನ್ನಿಟ್ಟುಕೊಳ್ಳುವಂತಿಲ್ಲ. ಲೋಕಹಿತಕ್ಕಾಗಿಯೇ ಆತನ ಶ್ರಮವೆಂಬುದು. ತಾನು ತಲೆಕಾಯಿಸಿಕೊಂಡೂ ಲೋಕಹಿತವನ್ನು ಸಾಧಿಸಬೇಕು. ಒಂದೆರಡೇ ದಿನಗಳೆಂದರೆ ಯಾರು ಬೇಕಾದರೂ ಕಷ್ಟಪಟ್ಟು ಹಾಗಿದ್ದು ತೋರಿಸಬಹುದು; ಆದರೆ ಪ್ರತಿದಿನವೂ ಅದನ್ನು ಮಾಡುವುದು ಸುಲಭವೇ? ಮರಗಳೆಂದೂ ಅದನ್ನು ತಪ್ಪಿಸವು. ಹಾಗೆಯೇ ರಾಜನೂ.

ಸರ್ವರಿಗೂ ವಿದಿತವಾಗಿರುವ ಸಣ್ಣಸಣ್ಣ ಉಪಮೆ-ಉದಾಹರಣೆಗಳಿಂದ ಜೀವನಕ್ಕೆ ದೊಡ್ಡದೊಡ್ಡ ಪಾಠಗಳು!


ಸೂಚನೆ : 27/08/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Sunday, August 21, 2022

ಕಾಳಿದಾಸನ ಜೀವನದರ್ಶನ - 24 ಯೋಗದಿಂದ ದೇಹತ್ಯಾಗ! (Kalidasana Jivanadarshana - 24 Yogadinda Dehatyaga!)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಜೀವನದ ಕೊನೆಯ ವರ್ಷಗಳನ್ನು ಕಳೆಯುವ ಬಗೆಯೇನು? – ಎಂಬ ಪ್ರಶ್ನೆಯು ಅನೇಕರಿಗೆ ಆಗಾಗ್ಗೆ ಬರುವುದುಂಟು. ವಯಸ್ಸು ಹೆಚ್ಚಾದವರಿಗೆ ಈ ಪ್ರಶ್ನೆ ಹೆಚ್ಚಾಗಿ ಬರಬಹುದು. ಅಥವಾ ಯಾರಾದರೂ ಉದ್ಯೋಗದಿಂದ ನಿವೃತ್ತರಾದಾಗಲೋ, ಅಥವಾ ಈ ಲೋಕದಿಂದಲೇ ನಿವೃತ್ತರಾದಾಗಲೋ (ಅಂದರೆ ಸತ್ತಾಗ), ಈ ಪ್ರಶ್ನೆ ಬರುವುದು ಅನಿರೀಕ್ಷಿತವೇನಲ್ಲ.


ಆದರೆ ಇದಕ್ಕಿಂತಲೂ ಮುಖ್ಯವೆನಿಸುವ ಪ್ರಶ್ನೆಯೊಂದಿದೆ. ಅದು ಕೊನೆಗೆ ಜೀವನವನ್ನೇ ಮುಗಿಸುವ ಕ್ಷಣದ್ದು. ಅದೇಕೆ ಮುಖ್ಯ? ಏಕೆಂದರೆ ಆ ಬಗ್ಗೆ ಕೃಷ್ಣನೇ ಎರಡು ಮಾತುಗಳನ್ನು ಹೇಳಿದ್ದಾನೆ, ಗೀತೆಯಲ್ಲಿ. ಏನೆಂದು? "ಕೊನೆಗಾಲದಲ್ಲಿ ನನ್ನನ್ನೇ ಸ್ಮರಿಸುತ್ತಾ ಯಾವನು ಶರೀರತ್ಯಾಗಮಾಡುವನೋ ಆತನು ನನ್ನ ಭಾವವನ್ನೇ ಹೊಂದುವನು; ಈ ಬಗ್ಗೆ ಸಂಶಯವಿಲ್ಲ" – ಎಂಬುದೊಂದು; "ಯಾವ ಯಾವ ಭಾವವನ್ನು ಸ್ಮರಿಸುತ್ತಾ ಶರೀರವನ್ನು ತೊರೆಯುವನೋ ಅದದನ್ನೇ ಆತನು ಹೊಂದುವನು" – ಎಂಬುದು ಮತ್ತೊಂದು. ಹೀಗಾಗಿ ನಮಗೆ ನಮ್ಮ ಜೀವಿತದ ಅಂತಿಮಕ್ಷಣವೆಂಬುದು ಬಹಳ ಗಣ್ಯವೇ ಆದದ್ದು!


ಸಾಯುವುದೆಂದರೆ ಪ್ರಾಣವು ಹೋಗುವುದು. ಇದನ್ನೇ ಪ್ರಾಣಪ್ರಯಾಣವೆನ್ನುತ್ತಾರೆ. ಪ್ರಾಣಪ್ರಯಾಣಸಮಯವೆಂಬುದು ಹೇಗಿರುವುದು? - ಎಂಬುದನ್ನು ಮುಕುಂದಮಾಲೆಯೆಂಬ ಸ್ತೋತ್ರವೊಂದು ಚಿತ್ರಿಸುತ್ತದೆ: ಆಗ ದೇಹದಲ್ಲಿ ಕಫ-ವಾತ-ಪಿತ್ತಗಳು ಕೆರಳಿ, ಕಂಠಾವರೋಧನವನ್ನು ಮಾಡಿಬಿಡುವುವು; ಎಂದರೆ ಗಂಟಲೇ ಬಿಗಿದುಬಂದುಬಿಡುವುದು. ಅಲ್ಲದೆ, ಪ್ರಾಣವು ಕಿತ್ತುಕೊಂಡುಹೋಗುವಾಗ ದಾಹವೋ ಬೇರೆ ಹಿಂಸೆಗಳೋ ಮಿತಿಮೀರಿ ಕಾಡುವುವು. ಆ ನೋವುಗಳ ನಡುವಿನಲ್ಲಿ ಭಗವಂತನನ್ನು ಸ್ಮರಿಸಿಕೊಳ್ಳಬೇಕೆಂದರೆ ಅದು ಸಾಧ್ಯವೇ, ಸುಲಭವೇ?


ಆದರೆ ಯಾರು ಯೋಗಸಾಧನೆಯನ್ನು ಸರಿಯಾಗಿ ಮಾಡಿರುವರೋ ಅವರಿಗೆ ಅದು ಅಶಕ್ಯವಲ್ಲ. ಕೊನೆಗಾಲದಲ್ಲಿ ಮಾಡಬೇಕಾದುದರ ಬಗೆಗೆ ಅವರಿಗರಿವಿರುತ್ತದೆ; ಅಂತಕಾಲದಲ್ಲದು ಗೋಚರಿಸುತ್ತದೆ ಕೂಡ. ಸಾಧಾರಣರಿಗಿದು ಎಟುಕುವ ವಿಷಯವೇ ಅಲ್ಲ!


ಆದರೆ ಯೋಗಿಗಳಿಗೆ ಹಾಗಾಗದು. ದೇಹ-ಪ್ರಾಣ-ಮನಸ್ಸುಗಳು ಅವರ ಹಿಡಿತದಲ್ಲಿರುವುವು. ಯೋಗಾಭ್ಯಾಸವನ್ನೇ ಚೆನ್ನಾಗಿ ಮಾಡಿರುವವರಿಗೆ ಇದು ಬಹುಕ್ಲೇಶಕರವಲ್ಲವೆಂದು ಒಪ್ಪಬಹುದೇನೋ? ಆದರೆ ಇತರರಿಗೆ?


ಇತರರಿಗೇನು? ಒಬ್ಬ ಮಹಾರಾಜನಿಗೇ ಹಾಗಾಗಬಹುದೆಂಬುದನ್ನು ಕಾಳಿದಾಸನು ಚಿತ್ರಿಸುತ್ತಾನೆ, ತನ್ನ ರಘುವಂಶಮಹಾಕಾವ್ಯದಲ್ಲಿ. ಯಾವನ ಹೆಸರು ಆ ವಂಶಕ್ಕೇ ಸಂದಿತೋ ಅಂತಹ ರಘುಮಹಾರಾಜನದ್ದೇ ಜೀವನದಲ್ಲಿ ಹಾಗಾಯಿತು.


ಆತನು ತನ್ನ ಕೊನೆದಿನಗಳನ್ನು ಹೇಗೆ ಕಳೆದನು? ಅವನ ಅಂತಕಾಲವು ಹೇಗಿತ್ತು? ತನ್ನ ಮಗನಾದ ಅಜನು ಪ್ರಜೆಗಳ ಮನಸ್ಸಿನಲ್ಲಿ ಪ್ರತಿಷ್ಠಿತನಾಗಿದ್ದನ್ನು ರಘುವು ಕಂಡುಕೊಂಡನು: ತನ್ನ ಕರ್ತವ್ಯಗಳು ಮುಗಿದುದು ಮನಸ್ಸಿಗೆ ಬಂದಿತು; ತೃಪ್ತಿಯಾಯಿತು; ಮನಸ್ಸು ಸುಖಗಳಿಂದ ಹಿಂದಿರುಗಿತು; ದೇವಲೋಕದ ಭೋಗಗಳು ಸಹ ಆತನಿಗೆ ಬೇಡವಾದವು!


ಗುಣಶಾಲಿಯಾದ ಪುತ್ರನಲ್ಲಿ ತಮ್ಮ ರಾಜ್ಯಶ್ರೀಯನ್ನು ನೆಲೆಗೊಳಿಸಿ, ಜೀವನಯಾತ್ರೆಯ ಅಂತಿಮಭಾಗದಲ್ಲಿ ದಿಲೀಪವಂಶದ ರಾಜರು ಯತಿಗಳ ಹಾಗೆ ಸರಳಜೀವನವನ್ನು ನಡೆಸುವವರು. ವಲ್ಕಲಗಳೇ, ಎಂದರೆ ನಾರುಮಡೆಯೇ, ಅವರ ವಸ್ತ್ರ. ಎಂದೇ, ಕಾಡಿನಲ್ಲಿದ್ದುಕೊಂಡು ತಪಸ್ಸು ಮಾಡುವ ಬಯಕೆ ರಘುವಿನದು; ಬೇಡವೆಂದು ಪುತ್ರನಾದ ಅಜ ಅಂಗಲಾಚುತ್ತಾನೆ; ಮಗನ ಮಾತಿಗೆ ಕಟ್ಟುಬಿದ್ದ ರಘುವು ಅಲ್ಲೇ ಉಳಿದುಕೊಂಡನಾದರೂ ಮತ್ತೆ ರಾಜ್ಯಭೋಗವನ್ನು ಸ್ಪರ್ಶಿಸಲಿಲ್ಲ. "ಕಳಚಿದ ಪೊರೆಯನ್ನು ಹಾವೇನು ಮತ್ತೆ ತೊಟ್ಟೀತೇ?" - ಎಂದು ಕೇಳುತ್ತಾನೆ, ಕವಿ!


ಈ ಘಟ್ಟದಲ್ಲಿ, ಅಜನು ಪ್ರವೃತ್ತಿಧರ್ಮವನ್ನು ಪ್ರತೀಕಿಸಿದರೆ, ರಘುವು ನಿವೃತ್ತಿಧರ್ಮವನ್ನು ಪ್ರತೀಕಿಸಿದನು. ರಘುವಿನ ವಾಸ ಊರಿನಾಚೆ - ಆಪ್ತರಾದ ಯೋಗಿಗಳ ಸಂಗದಲ್ಲಿ – ಎನ್ನುತ್ತಾನೆ, ಕಾಳಿದಾಸ. ಯಾರು ಆಪ್ತರೆಂದರೆ? "ಸತ್ಯವನ್ನು ಕಂಡುಕೊಂಡವರು; ಸತ್ಯವನ್ನು ಅಂತೆಯೇ ಹೇಳಬಲ್ಲವರು" - ಎನ್ನುತ್ತಾನೆ, ಮಲ್ಲಿನಾಥ. ("ಯಥಾರ್ಥದರ್ಶಿನೋ ಯಥಾರ್ಥವಾದಿನಶ್ಚ"). ಆದರೆ ಶ್ರೀರಂಗಮಹಾಗುರುಗಳು ಆ ಪದದ ವ್ಯುತ್ಪತ್ತಿಯಿಂದಲೇ ನಿಷ್ಪನ್ನವಾಗುವ ಅದ್ಭುತವಾದ ಒಂದು ವಿವರಣೆಯನ್ನು ಕೊಟ್ಟಿದ್ದರು: " 'ಆಪ್' - ಎಂಬ ಧಾತುವಿನಿಂದ ಬಂದ ಪದವದಲ್ಲವೇ? ಆ ಧಾತುವಿನ ಅರ್ಥವಾದರೂ 'ಪಡೆದುಕೊಳ್ಳುವುದು' – ಎಂಬುದಾಗಿ. ಜೀವನದ ಪರಮಾರ್ಥವನ್ನೇ ಯಾರು ಪಡೆದುಕೊಂಡಿರುವರೋ ಅವರೇ ಆಪ್ತರು!" ಅದರ ಆಳವಾದ ಈ ಅರ್ಥದ ಅರಿವಿಲ್ಲದ ನಾವು "ಆಪ್ತರು-ಇಷ್ಟರು" – ಎಂದು ಸಾಧಾರಣಾರ್ಥಗಳಲ್ಲಷ್ಟೆ ಬಳಸುತ್ತೇವೆ.


ಏಕಾಂತದಲ್ಲಿ ದರ್ಭಾಸನದಲ್ಲಿ ಕುಳಿತು ರಘುವು ಧಾರಣೆಯಲ್ಲಿ ಪಳಗಲೆಳಸಿದನು. ಧಾರಣೆಯೆಂದರೆ ಮನಸ್ಸು ಆತ್ಮನಲ್ಲಿ ನೆಲೆಗೊಳ್ಳುವುದೇ. ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನವೆಂಬ ಪಂಚಪ್ರಾಣಗಳು ಶರೀರದಲ್ಲಿರುವುವು; ಅವುಗಳನ್ನು ರಘುವು ವಶಪಡಿಸಿಕೊಂಡನು. ಜ್ಞಾನಮಯವಾದ ಅಗ್ನಿಯಿಂದ ತನ್ನ ಕರ್ಮಗಳನ್ನೆಲ್ಲ ಸುಟ್ಟುಕೊಂಡನು. "ಮಣ್ಣಿನ ಹೆಂಟೆಯೂ ಒಂದೇ, ಚಿನ್ನವೂ ಒಂದೇ" – ಎನಿಸುವಂತಹ ಉದಾತ್ತಸಮಸ್ಥಿತಿಗೆ ಬಂದಿದ್ದ ರಘುರಾಜನು, ಪ್ರಕೃತಿಯಲ್ಲಿರುವ (ಸತ್ತ್ವ-ರಜಸ್-ತಮಸ್ ಎಂಬ) ಮೂರೂ ಗುಣಗಳನ್ನೂ ಮೀರಿದನು. ಪರಮಾತ್ಮದರ್ಶನಪರ್ಯಂತವೂ ತನ್ನ ಯೋಗವಿಧಿಯನ್ನು ಬಿಡಲಿಲ್ಲ. ಉಚ್ಛೃಂಖಲವಾದ ಇಂದ್ರಿಯಗಳು ಶತ್ರುಗಳಂತೆಯೆ ಸರಿ; ಅವುಗಳನ್ನು ಹಿಡಿತದಲ್ಲಿಟ್ಟುಕೊಂಡು ಅಪವರ್ಗಸಿದ್ಧಿಯನ್ನು ಪಡೆದನು: ತಮಸ್ಸಿನಾಚೆಯ ಪುರುಷನನ್ನು ಯೋಗಸಮಾಧಿಯಿಂದ ಪಡೆದುಕೊಂಡನು! ಬಾಳನ್ನು ಪೂರ್ಣವಾಗಿಸಿದನು.


ಹೀಗೆ ಹೋದವನ ದೇಹಕ್ಕೆ ಅಗ್ನಿಸಂಸ್ಕಾರ-ಪಿಂಡಪ್ರದಾನಗಳೇ ಅನವಶ್ಯ! ಇಂತಹ ಧನ್ಯತೆಯ ಅವಸಾನ ರಘುವಂಶದವರದ್ದು ಎಂದು ಉದ್ಗರಿಸುತ್ತಾನೆ, ಕಾಳಿದಾಸ.


ಸೂಚನೆ : 13/08/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Thursday, August 18, 2022

ஶ்ரீகுருவின் கண்ணோட்டம் – 21 கொல்வது கருணையா ?(Kolvadu karunaiya?)

மூலம்: திரு. வரததேசிகாசார்யர்

தமிழாக்கம்: திருமதி வனஜா

மின்னஞ்சல் : (lekhana@ayvm.in)



இறைவனுக்கு யாரிடத்தும் பேதமில்லை, எப்போதும் நடுநிலை வகிப்பவன், கருணைக்கடல் என்பது குறித்து குருபாதராயணரிடமிருந்து ஜைமினி முனிவர் அநேக விவரங்களை கேட்டறிந்தார். குரு அருளிய அமுதினை ஒத்த சாஸ்திர சம்மதமானசொற்கள் அவர் அறிவு-,மனம்-இதயத்தில் ஒளியூட்டின. ஆயினும்புதிதாக தோன்றிய சில ஐயங்களை குருவிடம்விண்ணப்பித்துக்கொண்டார்.                     

      

"குருவே! இந்த படைப்பின் துவக்கத்திலும், காக்கும்நிலையில்  எல்லா உயிரினங்களையும்  காப்பாற்றுவதிலும் அவன்கருணையை  காண்கிறோம். துயரங்களையும் களைந்து நிலையானமெய்யறிவு இன்பம், இறையனுபவம் முதலியவற்றை அருளுவதுஅவனது கருணையின் உச்சமேயாகும். ஆனால் அவனது அழிக்கும்தொழில் எவ்வாறு கருணையாகிறது? இன்னும் உயிர்வாழவேண்டுமென்பதே எல்லா உயிரினங்களின் வேட்கையாகும்.துன்புறுத்தாமையே உயரிய அறம். அவ்வாறிருக்கையில்அனைத்தையும் அழிக்கும், துன்புறுத்தும் ருத்ரன் எவ்வாறுகருணையுள்ளவனாகிறான்?

 

பாதராயணர்: இறைவனின் திருவடிகளை அடைந்த புண்ணியஜீவன்களுக்கு என்றும் அழிவில்லை அல்லவா?

         

ஜைமினி: அத்தகையவர்களின் எண்ணிக்கை மிகவும் குறைவு.படைத்தல் காத்தலுக்குப்பின் அழித்தலுக்கு உட்படுபவரே எண்ணில் அடங்காதவரல்லவே? அவர்களை இறைவன் ஏன் அழிக்கவேண்டும்? 

          

குரு: இறைவன் தூக்கத்தை அளித்திருப்பது  நன்மையா, தீமையா?அதனை அளித்தவன் இரக்கமுள்ளவனா? கொடியவனா?

 

ஜைமினி: அதனை அளித்தவன் மிகவும் கருணையுடையவன்.அவ்வாறு இல்லாவிடின் அமைதியே இருந்திராது.

 

குரு: உறக்கத்தில் உணவு இசை, பானம் முதலிய எந்த நன்மையும்கிட்டுவதில்லையன்றோ! எல்லா புலன்களும் ஒடுங்கி மரணத்தைப்போன்று சலனமற்றிருக்கும் அந்நிலையை ஏன் விரும்புகிறாய்?

ஜைமினி: அந்நிலையில்  அனைத்து புலன்களும்ஓய்வடைகின்றன. விழித்திருக்கையில் உழைத்து களைத்தஉறுப்புகளனைத்துக்கும் ஓய்வு கிட்டுகிறது. விழித்தெழும்போதுமுன்பைவிடவும் அதிகமாக உழைக்க இயலும். அது இறைவன்அளித்துள்ள வரமாகும். அவனின் கருணையின் பெரிய அடையாளம்.

 

குரு: உலகத்தை அழித்தலும் அவ்வாறேயப்பா. காலம்காலமாகவினைபயனை அனுபவித்து வரும் உயிரினங்கள் மிகவும்களைத்திருக்கும். ப்ரளயத்தால்  அழியும்போது அவற்றிற்கு  நிரந்தரஓய்வு கிடைக்கும். மீண்டும் படைப்பு தொடங்கும் போது தங்களின் மீதமுள்ள வினைப்பயனை அனுபவிக்கும்வலிமை  அவற்றிற்கு கிட்டும். இதற்கு காரணமான அழித்தல் தொழில் புரியும் இறைவனும் கருணை உள்ளவனல்லவா?.

Sunday, August 14, 2022

ಕಾಳಿದಾಸನ ಜೀವನದರ್ಶನ – 23 ರಘುರಾಜರ ಯೌವನ-ವಾರ್ಧಕ್ಯಗಳು (Kalidasana Jivanadarshana - 23 Raghurajara Yauvana-Vardhakyagalu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಯೌವನವು ಮೂಡುತ್ತಲೇ, ಕಾಮೋಪಭೋಗವೇ ಸುಖವೆಂಬ ಗ್ರಹಿಕೆಯು ಲೋಕಸಾಧಾರಣವಾದದ್ದು. ಆದರೆ ಗೀತೆಯು ಈ ಭೋಗಾಭಿಲಾಷೆಯ ಇನ್ನೊಂದು ಮುಖವನ್ನೂ ತೆರೆದಿಡುವುದು. ಅದು ಹೇಳುವಂತೆ, ಕಾಮವು ಆತ್ಮನಾಶಕ್ಕೊಯ್ಯುವ ನರಕದ್ವಾರವಾಗಬಹುದು; ಮಹಾಪಾಪಿಯಾದ ಶತ್ರುವೇ ಆಗಬಹುದು.

ಯಾವ ಮಿತಿಗಳನ್ನು ಇತ್ತ ಆಯುರ್ವೇದಗ್ರಂಥಗಳೂ ಅತ್ತ ಧರ್ಮಶಾಸ್ತ್ರಗಳೂ ಸೂಚಿಸುವುವೋ ಆ ಮಿತಿಗಳೊಳಗೇ ಇದ್ದಲ್ಲಿ ಕಾಮವು ಧರ್ಮಾವಿರುದ್ಧವಾಗಿದ್ದು ಸ್ವಾಗತಾರ್ಹವೆನಿಸುವುದು; ಅದನ್ನು ಉಲ್ಲಂಘಿಸಿ ವರ್ಜ್ಯಾವರ್ಜ್ಯಗಳನ್ನು ಲೆಕ್ಕಿಸದೆ, ಸೊಕ್ಕಿನ ಮಾತಂಗದಂತಾದಲ್ಲಿ ಅಧೋಗತಿಯತ್ತ ಅದು ಎಳೆಯುವುದು.  ಅಂತಹ ಅವನತಿಗೆ ಇನಿತೂ ಆಸ್ಪದವಿಲ್ಲದಂತೆ ರಘುರಾಜರು ವರ್ತಿಸುತ್ತಿದ್ದರು.

ಹೀಗೆ ರಘುರಾಜರು ತಮ್ಮ ಧನ-ವಾಣಿ-ಜಯಶೀಲತೆ-ಕಾಮಗಳೆಂಬ ನಾಲ್ಕು ಸಾಧನಗಳನ್ನು ತ್ಯಾಗ-ಸತ್ಯ-ಯಶಸ್-ಪ್ರಜೆಗಳೆಂಬ ಶ್ಲಾಘನೀಯ ಲಕ್ಷ್ಯಗಳಿಗಾಗಿಯೇ ಬಳಸಿಕೊಳ್ಳುತ್ತಿದ್ದುದನ್ನು ಇಲ್ಲಿ ಹೇಳಿದೆ.

ಇವಿಷ್ಟಲ್ಲದೆ, ಕೊನೆಯದಾದ ನಾಲ್ಕನೆಯ ಶ್ಲೋಕದಲ್ಲಿ, ತಮ್ಮ ಯಾವ ಯಾವ ವಯೋಮಾನದಲ್ಲಿ ಯಾವ ಯಾವ ಪ್ರವೃತ್ತಿ/ಸಾಧನೆಗಳನ್ನು ರಘುರಾಜರು ಹೊಂದಿದ್ದರೆಂಬುದನ್ನೂ ಕವಿಯು ನಿರೂಪಿಸಿದ್ದಾನೆ. ಚಿಕ್ಕಂದಿನಲ್ಲಿ ವಿದ್ಯಾಭ್ಯಾಸ; ಯೌವನದಲ್ಲಿ ವಿಷಯಾಸ್ವಾದ; ವಾರ್ದ್ಧಕದಲ್ಲಿ ಮುನಿವೃತ್ತಿ; ಜೀವನಾವಸಾನದಲ್ಲಿ ಯೋಗದಿಂದ ದೇಹತ್ಯಾಗ.

'ಬಾಲ್ಯದಲ್ಲಿ ವಿದ್ಯಾಭ್ಯಾಸ'ವೆಂಬುದು ಇಂದೂ ಎಲ್ಲೆಡೆಯೂ ಪ್ರಚುರವೇ ಆದ ನಡೆಯಾದುದರಿಂದ, ಪ್ರಾಚೀನಶಿಕ್ಷಣಪದ್ಧತಿಯ ಬಾಲ್ಯವಿದ್ಯಾಭ್ಯಾಸಕ್ಕೂ ಇಂದು ನಡೆಯುವ ವಿದ್ಯಾಭ್ಯಾಸಕ್ಕೂ ಭೇದವೇನೆಂಬುದು ಸುಲಭಕ್ಕೆ ಗೋಚರವಾಗದಿರಬಹುದು. ಅದನ್ನು ತಿಳಿಯುವ ಮಾರ್ಗವೊಂದಿದೆ. ಮುಂದಿನ ಘಟ್ಟಗಳಲ್ಲಿ, ಎಂದರೆ ವಯೋಽವಸ್ಥೆಗಳಲ್ಲಿ ಅವರ ನಡೆಗಳು ಏನಾಗುವುವೆಂಬುದನ್ನು ಗಮನಿಸಿಕೊಂಡಾಗ, ಅವಕ್ಕೆ ಇದು ಯಾವ ಹಿನ್ನೆಲೆಯನ್ನು ಒದಗಿಸಿಕೊಡುವುದೆಂಬುದನ್ನು ಅರಿಯಬಹುದು. ಆದ್ದರಿಂದ ಅವುಗಳನ್ನೇ ಮೊದಲೊಮ್ಮೆ ಗಮನಿಸಿ, ಆಮೇಲೆ ಆ ವಿದ್ಯಾಭ್ಯಾಸದ ಬಗ್ಗೆ ಒಂದು ಪುನರವಲೋಕನವನ್ನು ಮಾಡಬಹುದು. (ಪುನರಾವಲೋಕನವೆಂಬ ಪದವು ಸರಿಯಲ್ಲ).

ಯೌವನದಲ್ಲಿ "ವಿಷಯ"ಗಳನ್ನು ಅವರು ಅನುಭವಿಸುತ್ತಿದ್ದರೆಂಬ ಮಾತಿದೆ. ವಿಷಯಗಳೆಂದರೆ ಇಂದ್ರಿಯವಿಷಯಗಳು; ಅವು ಐದು: "ರೂಪಂ ಶಬ್ದೋ ಗಂಧ-ರಸ-ಸ್ಪರ್ಶಾಶ್ಚ ವಿಷಯಾ ಅಮೀ" ಎಂದು ಅಮರಕೋಶವು ಪಟ್ಟಿಮಾಡಿ ಹೇಳುವಂತೆ, ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳು. ಹೀಗೆ ಕಣ್ಣು-ಕಿವಿ-ಮೂಗು-ನಾಲಿಗೆ-ಚರ್ಮಗಳಿಗೆ ಸುಖವನ್ನು (ಮಿತಿಯನ್ನು ಮೀರಿದರೆ ದುಃಖವನ್ನೂ) ಕೊಡಬಲ್ಲ ವಸ್ತುಗಳು ವಿಷಯಗಳು. ಸುಖಪಡುವ ಪ್ರವೃತ್ತಿಯೂ ಅಪೇಕ್ಷೆಯೂ ಸಾಮರ್ಥ್ಯವೂ ತಾರುಣ್ಯದಲ್ಲಿ ಕೂಡಿಬರುವುವಷ್ಟೆ.

ತಾರುಣ್ಯಾವಸ್ಥೆಯ ಮುಂದಿನ ಘಟ್ಟವೇ ವೃದ್ಧಾವಸ್ಥೆ. ಆ ಅವಸ್ಥೆಯಲ್ಲಿ ರಘುಕುಲದ ಪುರುಷರು ಮುನಿವೃತ್ತಿಯನ್ನು ಅವಲಂಬಿಸುತ್ತಿದ್ದರು. ಮುನಿವೃತ್ತಿಯೆಂಬುದು ಜಪ-ಧ್ಯಾನ ಮುಂತಾದುವುಗಳಲ್ಲೇ ಹೆಚ್ಚು ಕಾಲಕಳೆಯುವ ಪರಿ.

ಈ ಮೂರು ಘಟ್ಟಗಳು ಮೂರು ಆಶ್ರಮಗಳನ್ನು ಹೇಳುವುದನ್ನೂ ಗಮನಿಸಿಕೊಳ್ಳಬಹುದು. ಬ್ರಹ್ಮಚರ್ಯಾಶ್ರಮ-ಗೃಹಸ್ಥಾಶ್ರಮ- ವಾನಪ್ರಸ್ಥಾಶ್ರಮಗಳನ್ನುಇವು ಹೇಳುತ್ತವೆ. ಇವಲ್ಲಿ ಗೃಹಸ್ಥಾಶ್ರಮವು ಪ್ರವೃತ್ತಿಧರ್ಮವನ್ನೂ, ವಾನಪ್ರಸ್ಥಾಶ್ರಮವು ನಿವೃತ್ತಿಧರ್ಮವನ್ನೂ ಹೇಳುತ್ತವೆ.

ಧರ್ಮವು ಎರಡು ಬಗೆಯಾದದ್ದು: ಪ್ರವೃತ್ತಿಧರ್ಮ ಹಾಗೂ ನಿವೃತ್ತಿಧರ್ಮ ಎಂಬುದಾಗಿ. ಎಲ್ಲಿ ಇಂದ್ರಿಯಗಳು ಬಹಿರ್ಮುಖವಾಗಿ (ಎಂದರೆ ನಮಗೆಲ್ಲರಿಗೂ ಸಾಧಾರಣವಾಗಿ ಕೆಲಸಮಾಡುವಂತೆ) ಕೆಲಸಮಾಡುತ್ತವೆಯೋ ಅದು ಪ್ರವೃತ್ತಿಮಾರ್ಗ. ಎಲ್ಲಿ ಅವು ಅಂತರ್ಮುಖವಾಗಿಯೇ ಹೆಚ್ಚಾಗಿ ಕಾರ್ಯಮಾಡುತ್ತವೆಯೋ ಅದು ನಿವೃತ್ತಿಮಾರ್ಗ.

ಒಂದರ್ಥದಲ್ಲಿ ವೃದ್ಧಾವಸ್ಥೆಯು ಬರುವ ಹೊತ್ತಿಗೆ ಇಂದ್ರಿಯಗಳು ತಮ್ಮ ಪಾಟವವನ್ನು ಕಳೆದುಕೊಳ್ಳುವುದರ ಆರಂಭವಾಗಿರುತ್ತದೆ; ಜೀವನದಲ್ಲಿ ಸಾಕಷ್ಟು ಸುಖದುಃಖಗಳನ್ನು ಕಂಡುಂಡ ಬಳಿಕ ಒಂದು ವಿಧವಾದ ಪಕ್ವತೆಯು ಮೂಡುವುದು ಸಹಜವೂ ಆಗಿರುತ್ತದೆ. ಆಗ ಬಾಹ್ಯವಿಷಯಗಳನ್ನು ಕುರಿತಾದ ಪರಮಾಭಿಲಾಷ-ಉತ್ಕಟಕುತೂಹಲಗಳೂ ಕ್ಷೀಣಿಸುತ್ತಾ ಮರೆಯಾಗುತ್ತಾ ಬಂದಿರುತ್ತವೆ.

ವಿದ್ಯಾಭ್ಯಾಸವೆಂದರೆ ಚತುರ್ಭದ್ರವನ್ನು ಪಡೆಯಲು ಬೇಕಾದ ಸಾಧನ - ಎಂಬುದಾಗಿ ಶ್ರೀರಂಗಮಹಾಗುರುಗಳು ಗುರುತಿಸಿದ್ದಾರೆ. ಅರ್ಥಾತ್, ಶೈಶವ-ಗಾರ್ಹಸ್ಥ್ಯ-ವಾನಪ್ರಸ್ಥ-ತುರ್ಯಾಶ್ರಮಗಳಲ್ಲಿ ಕ್ರಮವಾಗಿ ಧರ್ಮ-ಅರ್ಥ-ಕಾಮ-ಮೋಕ್ಷಗಳ ಸಾಧನೆಯಾಗಲು ವಿದ್ಯಾಭ್ಯಾಸವು ಮಾರ್ಗದರ್ಶಕವಾಗಬೇಕು.

ಗಾರ್ಹಸ್ಥ್ಯವನ್ನು ಅವಲಂಬಿಸಿದಾಗ ಅಲ್ಲಿಯ ಕರ್ತವ್ಯಗಳನ್ನೂ, ಸುಖಾಭಿಲಾಷೆಯ ಗಡಿಗಳನ್ನೂ, ಲಬ್ಧವಾದ ವಿದ್ಯಾಭ್ಯಾಸದಿಂದಾಗಿ ಸಹಜವಾಗಿ ಭಾವಿಸುವಂತಿರಬೇಕು. ಅಂತೆಯೇ, ವಾನಪ್ರಸ್ಥವನ್ನು ಅವಲಂಬಿಸಿದಾಗ (ಮತ್ತೆ ಬಾಲ್ಯ-ಯೌವನಗಳ ಅಪಕ್ವತೆ-ಚಾಪಲ್ಯಗಳನ್ನು ಬಿಡಲಾರದಂತಾಗದೆ,) ಅಂತರ್ಮುಖತೆಯತ್ತ ಮನಸ್ಸನ್ನು ಹಚ್ಚಿ, ಧ್ಯಾನಾದಿಗಳ ಕಡೆಗೆ ಮನಸ್ಸು ಹರಿದು, ಅದರ ಸುಖವನ್ನು ಆಸ್ವಾದಿಸಲು ಸಜ್ಜುಮಾಡಿಕೊಡಬೇಕು. (ಆ ವಯಸ್ಸಿನಲ್ಲಿ ಕಾಲಕಳೆಯುವ ಬಗೆ ಹೇಗೆಂಬುದರ ಬಗ್ಗೆ ದಿಕ್ಕೇ ತೋಚದ ಇಂದಿನ ಅನೇಕಮಂದಿಯಂತಾಗಿ ಒದ್ದಾಡುವಂತಾಗಬಾರದು). ಎರಡಕ್ಕೂ ಬೇಕಾದ ಅಡಿಪಾಯವನ್ನು ವಿದ್ಯಾಭ್ಯಾಸವು ಹಾಕಿಕೊಟ್ಟಿರಬೇಕು.

ಯುಕ್ತವಾದ ಸಂಗಸುಖವನ್ನುಯೌವನದಲ್ಲೂ, ಹಾಗೆಯೇ ಯುಕ್ತವಾದ ಅಸಂಗದ ಸವಿಯನ್ನು ವಾರ್ಧಕದಲ್ಲೂ, ಆಸ್ವಾದಿಸುವ ಒಂದು ನೋಟವೂ, ಅವಕ್ಕೆ ಬೇಕಾದ ಕ್ರಮಗಳೂ, ಬಾಲ್ಯದಲ್ಲೇ ಬೋಧಿತವಾಗಿದ್ದರೆ ಮಾತ್ರವೇ ಇದು ಸಾಧ್ಯವಾಗುವುದು.

ಹೀಗೆ ವಯಸ್ಸಹಜವಾದ ಒಲುಮೆಗಳೇನು, ಆಗ ನಡೆಸಬೇಕಾದ ಜೀವನಕ್ರಮದ ಪರಿಪಾಟಿಯೇನು, ಅದಕ್ಕೆ ಬೇಕಾದ ಸಿದ್ಧತೆ-ಅನುಕೂಲತೆಗಳೇನು, ಅಲ್ಲಿ ಸಾಧಿಸಬೇಕಾದ ಲಕ್ಷ್ಯಗಳೇನು - ಎಂಬೆಲ್ಲದರ ಒಂದು ನೋಟವು - ಅರ್ಥಾತ್ ಜೀವನದ ಸಮಗ್ರವಾದ ನೋಟವು - ಬಾಲ್ಯದಲ್ಲೇ ದೊರೆಯುವ ಶಿಕ್ಷಣಕ್ರಮವದು. (ವಯೋಸಹಜವೆಂಬ ಪದವು ಸರಿಯಲ್ಲ).

ಇಂತಹ ನೋಟಗಳೇನೂ ಇಂದಿನ ಶಿಕ್ಷಣದಲ್ಲಿ ದೊರೆಯವಲ್ಲವೇ?: ಇಂದಿನ ರಾಜಕೀಯದಲ್ಲಿ, ಧನಾಶೆ-ಭೋಗಾಶೆ-ಅಧಿಕಾರಲಾಲಸೆ ಮುಂತಾದವನ್ನು ಬಿಡ(ಲಾಗ)ದಿರುವ ವೃದ್ಧರೇ ಹೆಚ್ಚು!

ಅಂತಿಮದಿನಗಳನ್ನು ರಘುರಾಜರು ಕಳೆಯುತ್ತಿದ್ದ ಬಗೆಯೇ ಅತಿವಿಶಿಷ್ಟವಾದುದು.

ಸೂಚನೆ : 13/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಶ್ರೀ ರಾಮನ ಗುಣಗಳು - 67 ಸರ್ವಗುಣಸಂಪನ್ನ - ಶ್ರೀರಾಮ (Sriramana Anandamaya - 67 Sarvagunasampanna - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಸಕಲಗುಣ ಪರಿಪೂರ್ಣನಾಗಿದ್ದಾನೆ. ಅವನಲ್ಲಿ ಇಲ್ಲದ ಗುಣಗಳಿಲ್ಲ. ಶ್ರೀರಾಮನು ಸಾಕ್ಷಾತ್ ಭಗವಂತನೇ ಭೂಮಿಗೆ ಇಳಿದ ಅವತಾರ. ಅವನಲ್ಲಿ ಇರುವುದೆಲ್ಲವೂ ಗುಣಗಳೇ ಹೊರತು, ಅವಗುಣಗಳಲ್ಲ. ಅವನಲ್ಲಿ ಎಲ್ಲಾ ಗುಣಗಳೂ ಇರುವುದರಿಂದ,   ಅವನನ್ನು 'ಸಗುಣೀ' ಎಂದೂ, ಪರಮಾರ್ಥದಲ್ಲಿ ಎಲ್ಲಾ ಗುಣಗಳನ್ನೂ ಮೀರಿ ಅವುಗಳ ಹಿಂಬದಿಯಲ್ಲಿ ಬೆಳಗುವ ಪರಮಾತ್ಮನೂ ಅವನಾಗಿರುವುದರಿಂದ,  'ನಿರ್ಗುಣೀ' ಎಂದೂ ಹೇಳುತ್ತೇವೆ. ಹಾಗಾಗಿ ಭಗವಂತನನ್ನು ಸಗುಣ - ನಿರ್ಗುಣ, ಸಾಕಾರ - ನಿರಾಕಾರ ಎಂದೆಲ್ಲಾ ಹೇಳುವ ರೂಢಿ ಬಂದಿದೆ. 


ಉದಾಹರಣೆಗೆ ಬೀಜದಲ್ಲಿ ಚಿಗುರು ಕಾಂಡ, ಶಾಖೆ, ಉಪಶಾಖೆ, ಹೂವು, ಕಾಯಿ, ಹಣ್ಣು ಮುಂತಾದ ವೃಕ್ಷದ ಎಲ್ಲಾ ಅಂಗಗಳು ಇರುವುದುಂಟು. ಇಲ್ಲದಿರುವ ಅಂಗಗಳು ಬರಲು ಹೇಗೆ ಸಾಧ್ಯ! ಬೀಜದಲ್ಲಿ ಅವು ಸೂಕ್ಷ್ಮವಾಗಿ ಇದ್ದವು ಎಂಬುದು ತಾತ್ಪರ್ಯ. ಅವಕಾಶ ಬಂದಾಗ ಬೀಜದಲ್ಲಿರುವ ಎಲ್ಲಾ ಅಂಶಗಳೂ ಗೋಚರಿಸುವುವು. ಅವುಗಳಿಗೆ ಬೇರೆ ಬೇರೆ ಹೆಸರುಗಳು ಬರುತ್ತವೆ. ಅಂತೆಯೇ ಭಗವಂತನು ಈ ಜಗತ್ತಿಗೆ ಮೂಲ. ಅವನಲ್ಲಿ ಎಲ್ಲವೂ ಅಡಕಗೊಂಡಿವೆ. ಸಕಾಲದಲ್ಲಿ ಬೇಕಾದ ಅಂಶಗಳು ವಿಕಾಸವಾಗುತ್ತವೆ. ಈ ವಿಕಾಸಕ್ಕೆ ಬೇರೆ ಬೇರೆ ಹೆಸರುಗಳು ಬಂದಿವೆ. ಅವುಗಳನ್ನೇ ಅವನ ಗುಣಗಳು ಎನ್ನಬಹುದು. ಭಗವಂತನ ಗುಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅವು ಅಸಂಖ್ಯ.. ಅವುಗಳೆಲ್ಲವನ್ನೂ ಹೇಳಲು ನಾನೂ ಅಸಮರ್ಥನೇ. ಕೆಲವೊಂದನ್ನು ಮಾತ್ರವೇ ಕಾಲ ಮತ್ತು ಸಂದರ್ಭಕ್ಕೆ ಬದ್ಧನಾಗಿ ವಿವರಿಸುವ ಪ್ರಯತ್ನ ಮಾಡಿದ್ದೇನೆ. ಭಗವಂತನ ಗುಣಗಳನ್ನು ಹೇಳಲು ಯಾವ ಸಾಧನವೂ ಪರಿಪೂರ್ಣವಲ್ಲ. ಭಾಷೆಯಿಂದ ಅವುಗಳನ್ನು ಕೀರ್ತನೆ ಮಾಡುವುದು ಎಂಬುದೂ ಅಪರಿಪೂರ್ಣವೇ ಸರಿ. ಭಾಷೆಗೂ  ಒಂದು ಮಿತಿ ಉಂಟು. ಎಂತಹ ಜ್ಞಾನಿಯೇ ಆದರೂ ಇದರಲ್ಲಿ ಅಸಹಾಯಕನೇ. ಮತ್ತೆ ನನ್ನಂತಹ ಪಾಮರನ ಪಾಡೇನು!? ಈ ನನ್ನ ಮನಸ್ಸು ಬುದ್ಧಿ ಇಂದ್ರಿಯಗಳು ಈ ನೆಪದಲ್ಲಾದರೂ ಭಗವಂತನ ಸ್ಮರಣೆ ಮಾಡಿದಂತಾಗಲಿ ಅಥವಾ ಇವುಗಳಿಗೆ ಸಾರ್ಥಕತೆ ಬರಲಿ ಎಂಬ ಉದ್ದೇಶದಿಂದ ಆರಂಭ ಮಾಡಿದ್ದೆ ಅಷ್ಟೇ. ಅವನ ಅನುಗ್ರಹದಿಂದ ಪ್ರೇರಿತವಾದ ಬುದ್ಧಿಯಿಂದ ಅಷ್ಟಿಷ್ಟು ಶಬ್ದಗಳ ಜೋಡಣೆ ಮಾಡಿ ಕೆಲವು ಗುಣಗಳನ್ನು ಕೀರ್ತನೆ ಮಾಡಲು ಪ್ರಯತ್ನಿಸಿದ್ದೇನೆ. 


ಶ್ರೀರಾಮನನ್ನು ಭಾವಿಸಲು ಈ ಎಲ್ಲಾ ಆದರ್ಶಗುಣಗಳು ಸಹಾಯಕವಾಗಲಿ ಎಂಬುದು ಬಿನ್ನಹ. ಓದುಗರಿಗೆ ಚೈತನ್ಯದಾಯಕವಾಗುವುದು, ನನಗೆ ರಾಮನನ್ನು ಭಾವಿಸಲು ಹೆಚ್ಚು ಅನುಕೂಲವಾಯಿತು ಎಂಬುದೇ ಸತ್ಯವಾದ ವಿಷಯ. ಹಾಗೇನಾದರೂ ಸಹೃದಯರಿಗೆ ಸ್ಫೂರ್ತಿಯಾದಲ್ಲಿ ಅದು ನನ್ನ ಶ್ರೀರಂಗ ಮಹಾಗುರುವಿನ ಅನುಗ್ರಹ ಎಂದು ಭಾವಿಸುತ್ತಾ ಈ ಲೇಖನಮಾಲೆಯನ್ನು ಭಗವದರ್ಪಣ ಮಾಡುತ್ತೇನೆ.


ಸೂಚನೆ :07/07/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

Thursday, August 11, 2022

ஶ்ரீகுருவின் கண்ணோட்டம் – 20 கல்லையும் மண்ணையும் பூஜிக்கலாமா? (Kallaiyum mannaiyum poojikkalaama?)

மூலம்:  திரு. வரததேசிகாசார்யார் 
தமிழாக்கம் : திருமதி ஜானகி
மின்னஞ்சல் : (lekhana@ayvm.in)

 

 "நம் நாட்டில் மிக பழமையான தர்மம், கலாச்சாரம், நல்வழக்கங்களின் பரம்பரையை காண்கிறோம். இது மிகவும் மேன்மையான ஓர் விஷயமே ஆயினும் இங்கு கல்லையும் மண்ணையும்  பூஜிக்கும் வழக்கமும் வளர்ந்து வருகிறது. இது ஒன்று மட்டுமே தலை குனிவை ஏற்படுத்துவதாக உள்ளது."


         "கல்லையும் மண்ணையும் இங்கு யார் பூஜிக்கிறார்கள்?"


          "இவ்வாறான பழக்கம் உள்ளவர்களே அதிகமாக காணப்படுகிறார்கள். அறிவாளிகளும்,  விவேகிகளும்  கூட அவற்றை கை கூப்பி வணங்குகின்றனர். பழம் பூ முதலியவற்றை அதன் முன்னிட்டு பூஜிக்கின்றனர்.


       "அப்பூஜை நிறைவுற்றதும் 'கல், மண்ணுக்கு  பூஜை ஆயிற்று. அவை நம்மை காக்க வேண்டு'மென்று கூறுகிறார்களா?"


             "இல்லை, 'இறைவனின் பூஜை ஆயிற்று, அவர் நம்மை காத்தருள வேண்டும்' என கூறுகின்றனர்."

               "அவ்வாறாயின் அது இறைவனின் பூஜையே அன்றி கல் அல்லது மண்ணின் பூஜையன்று. அவர்களும் அவ்வாறு உரைப்பதில்லை. இவ்வாறிருக்க  நீ ஏன் அவர்களை  இவ்வண்ணம் குற்றம் கூறுகிறாய்?"

                "என் கண்களுக்கு அது நன்றாக புலப்படுவதால் கூறுகிறேன்"


                  "அவர்கள் ஏதோ ஓர் கல்லிற்கும் மண்ணிற்கும் மனம் போனவாறு பூஜிப்பதில்லை.  விசேஷ பொருட்களில் தெய்வசக்தியை பூரணமாக  நிறைத்து  ப்ராண ப்ரதிஷ்டையும், சக்தியையும் உண்டாக்கிய பிறகே பூஜிக்கிறார்கள். அவ்வுணர்வு அற்றவர்களுக்கு அது கல் மற்றும் மண்ணாக காணப்படுகிறது. ஆனால் விதிப்படி பூஜிப்பவரை நிந்திப்பதும் முறையன்று. கொஞ்சினால் குழந்தை, பூஜித்தால் இறைவன் என்ற ஆன்றோர்  வாக்கை அறியவில்லையா?"


               தேசிய கொடிக்கு அனைவரும் வணக்கம் செலுத்துகிறார்கள். அது ஓர் சாதாரண துணி தானே? துணிக்கு வணங்குவது மூடத்தனமல்லவா என்றால் அங்கே துணிக்கு மரியாதை அல்ல. அதன் பிண்ணனியில்   உள்ள தேசப்பற்றிற்கு  தான்  எனும் உதாரணத்தை ஶ்ரீரங்க மஹாகுருவானவர் இந்த சந்தர்ப்பத்தில் தெளிவு படுத்தினார்.


 

Monday, August 8, 2022

ಶ್ರೀ ರಾಮನ ಗುಣಗಳು - 66 ಸೀತಾಪತಿ - ಶ್ರೀರಾಮ (Sriramana Anandamaya - 65 Seethapathi - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀರಾಮನಲ್ಲಿ 'ಸೀತಾಪತಿತ್ವ' ಎಂಬುದು ಒಂದು   ಶ್ರೀರಾಮನ ಆದರ್ಶ ಗುಣ ಹೇಗಾದೀತು? ಒಬ್ಬ ಗಂಡನಿಗೆ ಒಬ್ಬಳು ಸತಿ ಇರುವುದು ಸಹಜ. ಅವಳೇ ಸೀತಾದೇವಿ. ಇದರಲ್ಲಿ ಇರುವ ವಿಶೇಷ ಏನು ? ಎಂಬುದು ಸಾಮಾನ್ಯ ಪ್ರಶ್ನೆಯಾಗಿದೆ. 


'ಋಣಾನುಬಂಧ-ರೂಪೇಣ ಪಶುಪತ್ನಿ-ಸುತ-ಆಲಯಾ:' ಎಂಬಂತೆ ಮನುಷ್ಯನ ಜೀವಿತಕಾಲಕ್ಕೆ ಪಶು , ಪತ್ನಿ, ಮಕ್ಕಳು, ಮನೆ ಎಲ್ಲವೂ ಅವನವನ ಋಣಕ್ಕೆ ತಕ್ಕಂತೆ ಪಡೆಯುತ್ತಾನೆ ಎಂದು. ಮನುಷ್ಯನ ಜನ್ಮವೇ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಫಲವನ್ನು ಅನುಭವಿಸುವುದಕ್ಕಾಗಿಯೇ. ಅದಕ್ಕೆ ಅನುಗುಣವಾಗಿ ಉಳಿದ ಎಲ್ಲಾ ಪರಿಕರಗಳು ಕೂಡಿ ಬರುತ್ತವೆ. ಇವುಗಳಲ್ಲಿ ಪತ್ನಿಯೂ  ಹೊರತಲ್ಲ. ಆದರೆ ಶ್ರೀರಾಮನ ವಿಷಯದಲ್ಲಿ ಸೀತಾಮಾತೆಯನ್ನು ಪಡೆದದ್ದು ಶ್ರೀರಾಮನ ಯಾವುದೋ ಕರ್ಮಫಲವಾಗಿ ಅಲ್ಲ. ಏಕೆಂದರೆ ಶ್ರೀರಾಮನದ್ದು ಜನ್ಮ ಅಲ್ಲ; ಅವತಾರ. ಅವನಿಗೆ ಅವಳನ್ನು ಭಾರ್ಯೆಯಾಗಿ ಪಡೆದದ್ದು ಕೂಡ ತನ್ನ ಅವತಾರಸಂಲ್ಪವನ್ನು ನೆರವೇರಿಸಿ ಶುಭಪರ್ಯವಸಾನ ಮಾಡುವ ಉದ್ದೇಶದಿಂದ ಅಷ್ಟೇ. ಅದನ್ನು ಸಾಧಿಸಲು ಪರಾ ಪ್ರಕೃತಿ ಸ್ವರೂಪಳಾದ ಸೀತೆಯನ್ನೇ ವಿವಾಹವಾಗಬೇಕು. ರಾಮನಂತಹ ಪರಮಪುರುಷನಲ್ಲದೆ ಇನ್ನಾರೂ ಅವಳನ್ನು ವರಿಸುವಂತಿಲ್ಲ. ಅದಕ್ಕೇ ಬೇಕಾದ ವಿಶೇಷ ಗುಣ ಶ್ರೀ ರಾಮನದು. ವಿವಾಹ ಆಗಿದ್ದು, ಅನಂತರ ಕಾಡಿಗೆ ಹೋಗಿದ್ದು, ಅರಣ್ಯದಲ್ಲಿ ಸೀತೆಯನ್ನು ಕಳೆದುಕೊಂಡಿದ್ದು, ಅವಳ ಅನ್ವೇಷಣೆ ಮಾಡಿದ್ದು, ಲಂಕೆಯಲ್ಲಿರುವುದಾಗಿ ತಿಳಿದಿದ್ದು, ಅವಳನ್ನು ಪಡೆಯಲು ರಾವಣನ ಜೊತೆ ಯುದ್ಧ ಮಾಡಿದ್ದು, ಅವಳ ಜೊತೆಗೂಡಿ ಪಟ್ಟಾಭಿಷಿಕ್ತನಾಗಿ ರಾಜ್ಯಭಾರ ಮಾಡಿದ್ದು, ಕೆಲವ ಸಮಯ ಅಂತರದಲ್ಲಿ ಅವಳನ್ನು ವಾಲ್ಮೀಕಿ ಆಶ್ರಮದ ಬಳಿ ಬಿಟ್ಟಿದ್ದು, ಕೊನೆಯಲ್ಲಿ ಅವಳು ಭೂಮಿಯಲ್ಲಿ ಅಸ್ತವಾಗಿದ್ದು ಹೀಗೆ ಎಲ್ಲವನ್ನು ಗಮನಿಸಿದರೆ ಕಾಣುವುದು; ಅವತಾರ ಮಂಗಳದ ಉದ್ದೇಶವಷ್ಟೇ. ಶ್ರೀರಾಮನದ್ದು ಮಾನವನ ಅವತಾರ. ದೇವತೆಗಳಿಗೆ ಮಹಾವಿಷ್ಣುವು ಅಭಯ ಕೊಟ್ಟಂತೆ "ತಾನು ದಾಶರಥಿಯಾಗಿ ಬಂದು ರಾವಣನನ್ನು ವಧಿಸುತ್ತೇನೆ" ಎಂಬುದು. ಇವೆಲ್ಲವೂ ಈ ಪ್ರಪಂಚದಲ್ಲಿ ಅಧರ್ಮವನ್ನು ದಮನ ಮಾಡುವ ವಿಧಾನ. ಅದಕ್ಕಾಗಿ ಇಷ್ಟೆಲ್ಲಾ ವ್ಯಾಜಗಳು (ನಿಮಿತ್ತಗಳು )ಎಂಬುದು ಇದರ ಅಂತರಾರ್ಥ. ಈ ನೇರದಲ್ಲಿ ಸೀತಾಮಾತೆಯು ಪ್ರಕೃತಿಮಾತೆಯ ಸ್ವರೂಪ. ಶ್ರೀರಾಮನದ್ದು ಪರಮಪುರುಷನ ಸ್ವರೂಪ. ಇವೆರಡರ ಸಾಮರಸ್ಯವೇ ಈ ಪ್ರಪಂಚ. ಅದರ ಪ್ರತೀಕವೇ ರಾಮನ ಅಯನ-ರಾಮಾಯಣ. ಅಲ್ಲಿ ಸೀತಾಪತಿ ಎಂಬುದಕ್ಕೆ ಈ ತಾತ್ತ್ವಿಕವಾದ ವಿಷಯ ಮನಗಂಡಾಗ ಮಾತ್ರ ರಾಮನ ನೈಜ ಪರಿಚಯವಾದೀತು. ಸೀತಾಮಾತೆಯ ಜೊತೆ ಕಂಡದ್ದು ಪ್ರಕೃತಿಮಾತೆಯ ಸಹಕಾರಿತ್ವ, ಮಾಯೆಯಿಂದ ದೂರವಾಗಿದ್ದುದು  ಪರಮಪುರುಷನ ವಿರಹ.  ಈ ಎರಡು ಅಂಶಗಳನ್ನು ರಾಮಾಯಣದ ಉದ್ದಕ್ಕೂ ಕಾಣಲು ಸಾಧ್ಯ. ಒಮ್ಮೆ ಸೀತಾರಾಮ ಸಹಬಾಳ್ವೆ, ಇನ್ನೊಮ್ಮೆ ಅವರಿಬ್ಬರ ವಿರಹ. ಮತ್ತೆ ಕೊನೆಯಲ್ಲಿ ಅವರವರ ಮೂಲಕ್ಕೆ ಸೇರಿಕೊಳ್ಳುವಿಕೆ. ಶ್ರೀರಾಮನು ತನ್ನ ಮೂಲವಾದ ವೈಕುಂಠಕ್ಕೆ ತೆರಳಿದ. ಸೀತಾಮಾತೆಯು ಭೂಗರ್ಭಕ್ಕೆ ಸೇರಿದಳು.  ಇದೆ ಅವರಿಬ್ಬರ ದಾಂಪತ್ಯಜೀವನ ರಹಸ್ಯ.


ಸೂಚನೆ :07/07/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

ಮಹರ್ಷಿ ಭಾರತ ಭಾಗ-9 ಸಂಸ್ಕಾರಿಯಾದ ಮಗನಂತೆ ತಾಯಿಯನ್ನು ನೋಡಿಕೊಳ್ಳಬೇಕು (Maharsi Bharata Bhaga -9 Sanskariyada Maganante Tayiyannu Nodikollabeku)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


 


ಒಬ್ಬ ಸಂಸ್ಕಾರಿಯಾದ ಮಗ ರೋಗಗ್ರಸ್ತೆಯಾದ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ನಾವು ನಮ್ಮೀ  ಪವಿತ್ರ ಭೂಮಿಯನ್ನು ನೋಡಿಕೊಳ್ಳಬೇಕಾಗಿದೆ. ಆ ತಾಯಿಯ ಪ್ರೀತಿಯ ಸವಿಯನ್ನುಂಡ ತಂಪಾದ ನೆನಪಿನಿಂದ ಅವನು ಅವಳ ಸೇವೆಯನ್ನು ಮಾಡುವುದಿಲ್ಲವೆ? ಹಾಗೆಯೇ ನಾವು ಇಷ್ಟೊಂದು ಅದ್ಭುತವಾದ ಗುಣ ವಿಶೇಷಗಳಿಂದ ಕೂಡಿದ ,ಜೀವನ ಲಕ್ಷ್ಯವನ್ನು ನಮಗೆ ತೋರಿಸಿಕೊಟ್ಟ, ಸಂಸ್ಕೃತಿಯಿಂದ ಸಮೃದ್ಧವಾದ ನಮ್ಮೀ ಮಾತೃಭೂಮಿಯನ್ನು ಪ್ರೀತಿಸಬೇಕಾದುದು ಅತ್ಯಂತ ಸಹಜವಾಗಿದೆ. ಈ ನಮ್ಮ ಮಾತೃಭೂಮಿಯ ಹಿರಿಮೆಯನ್ನು ಅರಿಯದ ರೋಗಕ್ಕೆ ನಮ್ಮ ಮನಸ್ಸುಗಳು ತುತ್ತಾಗಿವೆ. ಈ ಸಂಸ್ಕೃತಿಯ ಮಹಿಮೆಯನ್ನು ಅರಿಯದ ನಮ್ಮ ರೋಗಗ್ರಸ್ತ ಮನಸ್ಸುಗಳನ್ನು ಈ ದೇಶದ ಮಹರ್ಷಿಗಳ ಉದಾತ್ತ ಜೀವನದೃಷ್ಟಿಯೆಡೆಗೆ ಹೊರಳಿಸಬೇಕಾಗಿದೆ. ನಾವು ಈ ದೇಶದ ನಮ್ಮ ಮಹರ್ಷಿಗಳ ವಾರಸುದಾರರು- ಎಂದ ಮೇಲೆ ಅವರು ಇಲ್ಲಿ ಕಂಡುಕೊಂಡ ಸತ್ಯವನ್ನು, ಅದಕ್ಕಾಗಿ ಅವರು ಆಚರಿಸಿದ ತಪಸ್ಸನ್ನು, ನಾವು ನಮ್ಮದಾಗಿಸಿಕೊಳ್ಳಬೇಕಲ್ಲವೇ? ನಮ್ಮೆಲ್ಲ ಹೃದಯ ದೌರ್ಬಲ್ಯವನ್ನೂ ಆತ್ಮವಿಸ್ಮೃತಿಯನ್ನೂ ತೊಡೆದುಹಾಕಿ ಮತ್ತೊಮ್ಮೆ ಈ ದೇಶದ ವೈಭವವನ್ನು ಜಗತ್ತಿನಲ್ಲಿ ಮೆರೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು  ಅಂಧಾಭಿಮಾನವಲ್ಲ. ಲೋಕಹಿತದ ದೃಷ್ಟಿಯಿಂದಲೂ ಭಾರತೀಯ ಮೌಲ್ಯಗಳು ಮತ್ತೆ ಅರಳಬೇಕಾಗಿದೆ. ವಿಶ್ವಕ್ಕೆ ಶಾಂತಿ, ನೆಮ್ಮದಿಗಳ ಸಂತರ್ಪಣೆಯನ್ನು ಮಾಡಿಸಬೇಕಾಗಿದೆ.

 

ಈ ದೇಶದ ಹಿರಿಮೆ ಅದ್ವಿತೀಯ

ಕವಿಯೊಬ್ಬರು ಈ ದೇಶದ ಹಿರಿಮೆಯನ್ನು ಹೀಗೆ ಕೊಂಡಾಡಿದ್ದಾರೆ-"ಚಂದನ ಹೈ ಇಸ ದೇಶ್ ಕೀ ಮಾಟಿ, ತಪೋ ಭೂಮಿ ಹರ್ ಗ್ರಾಮ ಹೈ, ಹರ್ ಬಾಲಾ ದೇವೀ ಕೀ ಪ್ರತಿಮಾ ಬಚ್ಚಾ ಬಚ್ಚಾ ರಾಮ ಹೈ.." (ಈ ದೇಶದ ಮಣ್ಣು ಚಂದನ, ಎಲ್ಲಾ ಗ್ರಾಮಗಳೂ ತಪೋ ಭೂಮಿಯೇ, ಇಲ್ಲಿನ ಬಾಲೆಯರೆಲ್ಲರೂ ದೇವಿಯರೇ, ಒಂದೊಂದು ಮಗುವೂ ರಾಮನೇ.) ಪ್ರಾಚೀನ ಭಾರತದ ವಿಷಯದಲ್ಲಿ ಈ ಕೊಂಡಾಟ ನಿಜಕ್ಕೂ ಅತ್ಯುಕ್ತಿಯಲ್ಲ.  ಜೀವನದ ಪರಮಾದರ್ಶವನ್ನು ಬೆಳಗಿದ ಶ್ರೀರಾಮ ಜಾನಕಿಯರ ಪಾವನ ಪಾದಗಳು ನಡೆದಾಡಿದ ನಾಡು ಇದು. ಶ್ರೀ ಕೃಷ್ಣನ ಅವತಾರದಿಂದ ಪುನೀತವಾದ ಧರ್ಮಕ್ಷೇತ್ರ, ಕರ್ಮಕ್ಷೇತ್ರ. ಜಗತ್ತಿನ ಇನ್ನಿತರ ಜನಾಂಗದ ಊಹೆಗೂ ನಿಲುಕದ ಪ್ರಬುದ್ಧರ, ಜ್ಞಾನಿಗಳ ತಪೋಭೂಮಿ ನಮ್ಮ ಭಾರತ. ಅವರೆಲ್ಲ ಭಾವಿಸಿದಂತೆ ಈ ದೇಶದ ಹಿರಿಮೆಯನ್ನು ಭಾವಿಸಲು ನಾವೂ ನಮ್ಮನ್ನು ಕೊಟ್ಟುಕೊಳ್ಳಬೇಕಾಗಿದೆ. ಉತ್ತಿಷ್ಠತ! ಜಾಗ್ರತ! ಅಗ್ನಿಮಿಚ್ಛಧ್ವಂ ಭಾರತಾ:! ಎಂಬ ಉಪನಿಷತ್ತಿನ ಮಹಾ ಮಂಗಳ ಘೋಷಕ್ಕೆ ನಮ್ಮ ಮೈ ಮನಸ್ಸುಗಳನ್ನು ಒಡ್ಡಿಕೊಳ್ಳಬೇಕಾಗಿದೆ. ನಮ್ಮ ಪೂರ್ವಜರು ಕಂಡು ಆನಂದಿಸಿದ ಆ ಪರಮಾತ್ಮಾಗ್ನಿಯನ್ನು ಬಯಸಿ ಮುನ್ನಡೆಯುವ ಪ್ರೇರಣೆ ನಮಗೆ ಉಂಟಾಗಲಿ ಎಂದು ಪ್ರಾರ್ಥಿಸೋಣ.


ಸೂಚನೆ : 6/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಕಾಳಿದಾಸನ ಜೀವನದರ್ಶನ – 22 ರಘುರಾಜರ ಸತ್ಯಪ್ರೀತಿ-ಯಶಃಪ್ರೀತಿಗಳು (Kalidasana Jivanadarshana - 22 Raghurajara Satyapriti-Yashahpritigalu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಸಮಯಕ್ಕೆ ಸಲ್ಲುವ ಮಾತನ್ನಷ್ಟೆ ಆಡಿ, ದೊಡ್ಡಸ್ಥಾನದಲ್ಲಿರುವವರು ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕು. ಹೆಚ್ಚಿನ ಮಾತೆಂಬುದು  ಅಪಭಾಷಿತಕ್ಕೆ ಆಸ್ಪದ. ಮಾತಿನಲ್ಲಿ ಅಪಶಬ್ದಪ್ರಯೋಗವಾಗಲಿ, ಸ್ವಾಭಿಪ್ರಾಯಕ್ಕೆ ಹೊಂದದ ನುಡಿಯಾಗಲಿ ಇರಬಾರದು. "ಬಹುವಾಗಿ ಮಾತನಾಡಿಯೂ ಕಿಂಚಿತ್ತೂ ಅಪಶಬ್ದವನ್ನು ನುಡಿಯಲಿಲ್ಲವಲ್ಲಾ!"- ಎಂಬುದಾಗಿ ಹನುಮಂತನ ಬಗ್ಗೆ ಮೆಚ್ಚುಗೆಯನ್ನು ರಾಮನು ವ್ಯಕ್ತಪಡಿಸಿದನೆಂದು ರಾಮಾಯಣವು ಹೇಳುತ್ತದೆ.

ಮಾತಿನಲ್ಲಿ ಗಾಂಭೀರ್ಯವೆಂಬುದು ಎಲ್ಲರಿಗೂ ಬೇಕಾದದ್ದೇ ಆದರೂ ಅರಸರಿಗದು ವಿಶೇಷವಾಗಿ ಬೇಕಾಗುವಂತಹುದು. ಯಾರ ಅಧಿಕಾರವು ಅಧಿಕವೋ, ಅಂಥವರಲ್ಲಿ ವಾಕ್ಸಂಯಮವೂ ಅಧಿಕವಾಗಿಯೇ ಅಪೇಕ್ಷಿತವಾಗುವುದು. ಏಕೆ? ಹಿರಿದಾದ ಸ್ಥಾನದಲ್ಲಿರುವವರು ಲೀಲಾಜಾಲವಾಗಿ ಆಡಿದ್ದೂ ಆಪ್ಪಣೆಯಂತಾಗಿಬಿಡಬಹುದು.

ಎಂದೇ ವ್ಯರ್ಥವಾದ ಮಾತನ್ನೇ ಆಡದ ಎಚ್ಚರವಿರಬೇಕು. ಆಡುವುದು ಸತ್ಯವನ್ನೇ, ಸತ್ಯವನ್ನು ಹೊರತಾಗಿ ಮತ್ತೇನಿಲ್ಲ ಎಂಬುದು ವ್ರತವಾಗಬೇಕು. ಸತ್ಯವಾದ ನುಡಿಯೂ ತನ್ನ ದೇಶ-ಕಾಲ-ವ್ಯಕ್ತಿ-ವಸ್ತು-ಸಂನಿವೇಶಗಳನ್ನು ಮೀರಿದಲ್ಲಿ ಧರ್ಮಕ್ಕೆ ಧಕ್ಕೆ ತಂದೀತು - ಎಂಬ ಎಚ್ಚರವೂ ಬೇಕಾಗುತ್ತದೆ. ಹೀಗಾಗಿ, ಅತ್ತ ಮಾತಿನಲ್ಲಿ ಗಾಂಭೀರ್ಯವೂ ಪರಿಷ್ಕಾರವೂ ಇದ್ದು, ಯುಕ್ತಮಿತಿಯೆಂಬುದೂ ಇದ್ದಾಗ ಮಾತಿಗೆ ಬೆಲೆ ಬರುತ್ತದೆ; ಅದು ಸತ್ಯಕ್ಕೆ ಸಾಧಕವಾಗುತ್ತದೆ. ಎಂದೇ "ಸತ್ಯಾಯ ಮಿತಭಾಷಿಣಾಮ್" ಎಂದಿರುವುದು.

ಸತ್ಯಪ್ರೀತಿಯಿರುವಲ್ಲಿ, ಸತ್ಯಕ್ಕೆಲ್ಲಿ ಅಪಚಾರವಾದೀತೋ ಎಂಬ ಭಯವೊಂದು ಮಾತನಾಡುವಾಗಲೆಲ್ಲ ಜಾಗರಗೊಂಡಿರುವುದೇ."ವಾಕ್ಕಿನ ಪುಷ್ಪವೂ ಫಲವೂ ಸತ್ಯವೇ ಸರಿ" ಎಂಬುದಾಗಿ ಐತರೇಯಶ್ರುತಿಯಿದೆ. "ಸತ್ಯವು (ಎಂದಿಗೂ) ನಿನ್ನ ಜೊತೆಯಾಗಿರಲಿ" – ಎಂಬ ಧರ್ಮ್ಯವಾದ ಮಾತನ್ನು ಶಕುಂತಲೆಯು ದುಷ್ಯಂತನಿಗೆ ಹೇಳುವಳು. "ಸತ್ಯಕ್ಕೆ ಕ್ಷತಿಯಿಲ್ಲದಂತೆ ಆಳುವವನೇ ಕ್ಷತ್ರಿಯ"ನೆಂಬುದಾಗಿ ಸತ್ಯದ ಮೌಲಿಕಾರ್ಥವನ್ನು ಹಿಡಿದು ಶ್ರೀರಂಗಮಹಾಗುರುಗಳು ನುಡಿದಿರುವರು.

ಮಾತು ಸತ್ಯಕ್ಕಾಗಿ – ಎಂದು ಹೇಳಿದಂತೆ, ರಘುವಂಶದ ಅರಸರ ಮತ್ತೊಂದು ಹೆಗ್ಗಳಿಕೆಯನ್ನು ಕವಿ ತೋರಿಸಿದ್ದಾನೆ. ಅದು, ಅವರು ವಿಜಿಗೀಷುಗಳಾಗಿದ್ದುದಾದರೂ ಯಶಸ್ಸಿಗಾಗಿ [ಅಷ್ಟೆ] - ಎಂಬುದು. ಹಾಗೆಂದರೇನು?

ಜಿಗೀಷುವೆಂದರೆ ಜಯಕ್ಕಾಗಿ ಹಂಬಲಿಸುವವ. ವಿಶೇಷವಾದ ಆ ಹೆಬ್ಬಯಕೆಯುಳ್ಳವನು ವಿಜಿಗೀಷು. ಆ ಬಗೆಯ ಮಹಾಕಾಂಕ್ಷೆಯುಳ್ಳವರು ಎಷ್ಟೋ ವೇಳೆ ದೌಷ್ಟ್ಯದಿಂದಲೂ ಕ್ರೌರ್ಯದಿಂದಲೂ ವರ್ತಿಸುವುದುಂಟು. ರಾಜ್ಯವಿಸ್ತಾರ ಎಂಬುದು ಪರಾಕ್ರಮದ ಲಕ್ಷಣವು ಹೌದಾದರೂ, ಅದು ದೌರ್ಜನ್ಯಪ್ರೇರಿತವಾಗಬಾರದು: ಸೋತವರನ್ನು ಹಂಗಿಸಿ ಭಂಗಿಸಿ ಮೆಟ್ಟಿ ಅಣಕವಾಡಿ ಕೆಡವಿ ಕೆರಳಿಸಿ ಕೊರಗಿಸುವ ಪ್ರವೃತ್ತಿಯದಾಗಬಾರದು.

ಸೋತವನು ಸಾಮಂತನಂತಾದರೆ ಸಾಕು; ಅವನಿಗೆ ಅತಿಯಾದ ಸೊಕ್ಕಿದ್ದಲ್ಲಿ ಅದನ್ನು ಹತ್ತಿಕ್ಕಬಹುದೇ ವಿನಾ, ಅವನಿಗೆ ಅವಮಾನಮಾಡುವುದರಲ್ಲಿಯೇ ಸಂತೋಷ ಕಾಣುವ ರುಚಿಯಿರಬಾರದು. ಯಶಸ್ಸಿಗೆ ಸೀಮಿತವಾಗಿರಬೇಕು, ತನ್ನ ಜಿಗೀಷುತೆ. ಈ ಬಗೆಯ ನಡೆಯಿಂದ ಶತ್ರುಗಳನ್ನೂ ಮಿತ್ರರನ್ನಾಗಿಸಿಕೊಳ್ಳಬಹುದು. ರಾಜನಿಗೆ ಅದರ ಅರಿವು ಅವಶ್ಯ.

ಅಂತೆಯೇ ಲೂಟಿಮಾಡುವ ಅಥವಾ ಲಂಪಟತನದ ಪ್ರವೃತ್ತಿಯೂ ಅದಾಗಬಾರದು. ಮುಘಲ್ ದೊರೆಗಳೆಲ್ಲ ಮಾಡಿದುದಿದನ್ನೇ; ಕ್ರೌರ್ಯದಿಂದ ಅವರು ಸಾಧಿಸಿದುದನ್ನೇ, ವಕ್ರಮಾರ್ಗದಿಂದ ಸಾಧಿಸಿದವರು ಕ್ರೈ ಸ್ತದೊರೆಗಳು -ಎಂಬುದನ್ನು ನಮ್ಮ ದೇಶದಲ್ಲೂ ಇತರ ದೇಶಗಳಲ್ಲೂ ಅವರುಗಳು ನಡೆದುಕೊಂಡ ಬಗೆಯನ್ನು ಚಿತ್ರಿಸುವ ಇತಿಹಾಸಗ್ರಂಥಗಳು ಸಾರುವುವು.

ಧರ್ಮಮಾರ್ಗದಿಂದ ಸಂಪಾದಿಸುವ ಕೀರ್ತಿಯು ಯಶಸ್ಸೆನಿಸುವುದು. ಅಧರ್ಮದಿಂದಾದುದು ಅ(ಪ)ಯಶಸ್ಸು. ಎಂದೇ ರಘುವಂಶದ ಅರಸರು ಯಶಸೇ ವಿಜಿಗೀಷೂಣಾಂ ಆಗಿದ್ದವರು.

ರಘುರಾಜರ ವಾಕ್ಪ್ರವೃತ್ತಿ-ಶೌರ್ಯವೃತ್ತಿಗಳನ್ನು ಚಿತ್ರಿಸಿದ ಕವಿಯು, ಮತ್ತೂ ಸೂಕ್ಷ್ಮವೂ, ಮತ್ತೂ ಪ್ರಭಾವಶಾಲಿಯೂ ಆದ ಅವರ ಕಾಮದ ಸೀಮೆಯನ್ನೂ ನಮ್ಮ ಮುಂದಿರಿಸುತ್ತಾನೆ. "ಪ್ರಜಾರ್ಥವಾಗಿಯಷ್ಟೆ ಅವರು ಗಾರ್ಹಸ್ಥ್ಯವನ್ನು ಸ್ವೀಕರಿಸಿದುದು" – ಎನ್ನುತ್ತಾನೆ.

'ಪ್ರಜಾ' ಎನ್ನುವ ಪದಕ್ಕೆ ಸಂತಾನವೆಂದೇ ಅರ್ಥ. (ಈ ಲೆಕ್ಕದಲ್ಲಿ'ಇಂದಿನ ಮಕ್ಕಳು ನಾಳೆಯ ಪ್ರಜೆಗಳು' ಎಂಬ ಪ್ರಯೋಗದ ಸಾಧುತ್ವವು ಚಿಂತ್ಯವೇ ಆಗಬಹುದು).

ಅರ್ಥದ ವಿಷಯದಲ್ಲಿ ಹೇಗೆ ರಘುರಾಜರ ವರ್ತನೆಯು ಜವಾಬ್ದಾರಿಯಿಂದ ಕೂಡಿರುವುದಾಗಿತ್ತೋ, ಅದೇ ರೀತಿಯಲ್ಲೇ ಕಾಮದ ವಿಷಯದಲ್ಲೂ. ಒಂದೇ ಶ್ಲೋಕದ ಪ್ರಥಮಪಾದ-ಚರಮಪಾದಗಳಲ್ಲಿ ಆ ಅರಸರ ಅರ್ಥ-ಕಾಮಗಳ ಬಗೆಗಿನ ಮನಃಪ್ರವೃತ್ತಿಯನ್ನು ಕವಿಯು ತೋರಿಸಿದ್ದಾನೆ. ಹಾಗೆಂದರೇನೆಂಬುದನ್ನು ಸ್ವಲ್ಪ ಬಿಡಿಸಿ ನೋಡಬಹುದು.

ಯೌವನದಲ್ಲಿ ಕಾಮಾಭಿಲಾಷೆಯು ಯಾರಿಗುದಿಸದು? ಇನ್ನು ಯೌವನ, ಧನರಾಶಿ, ಪ್ರಭುತ್ವ - ಇವುಗಳೆಲ್ಲ ಒಬ್ಬನಲ್ಲಿ ಸೇರಿಕೊಂಡಾಗ ಭೋಗಾಭಿಲಾಷೆಯು ತೀವ್ರವಾಗುವಲ್ಲಿ ಆಶ್ಚರ್ಯವಿಲ್ಲ. ಕಾಮವೆಂಬುದು ಯೋಗವೂ ಆಗಬಹುದು, ರೋಗವೂ ಆಗಬಹುದು. ಅದೊಂದು ಅದಮ್ಯಪ್ರವೃತ್ತಿಯಾಗಿಹೋದಾಗ ಲಂಪಟತನಕ್ಕೆ ದಾರಿಯಾಗುವುದು. ಎಷ್ಟಾದರೂ, ಇಷ್ಟು ಸಿಕ್ಕರೆ ಮತ್ತಷ್ಟನ್ನು ಬಯಸುವುದಕ್ಕೆ ಇಂಬುಕೊಡುವಂತಹುದು, ಕಾಮವೆಂಬುದು. ಭೋಗಶಕ್ತಿ-ಭೋಗ್ಯಸಾಮಗ್ರಿಗಳ ಭಾಗ್ಯಕ್ಕೆ ಭಾಜನನಾಗಿರುವವರಿಗೆ ಭೋಗಪ್ರವೃತ್ತಿಯಾದರೂ ಭೋರ್ಗರೆಯುವಂತಹುದೇ ಸರಿ!

ರಘುರಾಜರಿಗೆ ಅವೆಲ್ಲವೂ ಇದ್ದರೂ ಅದು ಹಾಗಿರಲಿಲ್ಲ; ಸಂತಾನಾರ್ಥವಾಗಿ ಅವರು ಗೃಹಮೇಧಿಗಳಾದರು. ಗೃಹಮೇಧಿಯೆಂದರೆ ಗೃಹಸ್ಥ. ಗೃಹಶಬ್ದವು ಪತ್ನೀವಾಚಕ; ಮೇಧಿಯೆಂಬುದು ಸಂಗಮವನ್ನು ಸೂಚಿಸುವುದು. ಹೀಗಾಗಿ ದಂಪತಿಗಳು ಸೇರುತ್ತಿದ್ದುದು ಸಂತಾನಾರ್ಥವಾಗಿ – ಎಂಬುದು ಕವಿಯ ಆಶಯ.

ಸೂಚನೆ : 06/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.