Monday, May 31, 2021

ಸೃಷ್ಟಿ-ದೃಷ್ಟಿ (Srushti - Drushti)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)




ನಾವಿಂದು ಸಮಾನತೆ ಎಂಬ ಶಬ್ದವನ್ನು ಪ್ರತಿನಿತ್ಯ ಕೇಳುತ್ತಿದ್ದೇವೆ. ಈ ಶಬ್ದವನ್ನೇ ಬಂಡವಾಳವಾಗಿ ಇಟ್ಟುಕೊಂಡು ತಮ್ಮ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವವರನ್ನು ಕಾಣುತ್ತಿದ್ದೇವೆ. ಸಮಾನತೆ ಎಂಬ ಶಬ್ದದ ವಿರುದ್ಧಾರ್ಥಕಪದವೇ ಅಸಮಾನತೆ. ಇದನ್ನು ಇಟ್ಟುಕೊಂಡು ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದೆಲ್ಲೆಲ್ಲೆಡೆ ಪರಸ್ಪರ ಘರ್ಷಣೆಯೂ ನಡೆದ ಇತಿಹಾಸವಿದೆ. ಹಾಗಾದರೆ ಇಂದು ಈ ವಿಷಯ ಎಷ್ಟು ಪ್ರಸ್ತುತ? ಮತ್ತು ನಮ್ಮ ಸನಾತನ ಸಮಾನತೆಯನ್ನು ತಿಳಿದಾಗ ಉಂಟಾಗುವ ಮಾನಸಿಕ ತಿಳಿ ಏನು? ಸಮಾನತೆಯು  ಸೃಷ್ಟಿಸಹಜವೇ? ಅಥವಾ ಮನುಷ್ಯಕಲ್ಪಿತವೇ? ಎಂಬುದರ ಬಗ್ಗೆ ಗಮನಿಸೋಣ. 

ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನೊಮ್ಮೆ ಗಮನಿಸೋಣ. ಕಲ್ಲು-ಬಂಡೆ, ನದಿ-ಝರಿ, ಅಜ-ಗಜ, ಅಪ್ಪ-ಮಕ್ಕಳು, ಗುರು-ಶಿಷ್ಯರು, ಹುಲಿ-ಹಸುಗಳು, ಹುಲ್ಲು-ಪೊದೆಗಳು ಇವೆಲ್ಲವೂ ಇವೆ. ಇವೆಲ್ಲವನ್ನು ಸಮಾನವಾಗಿ ಕಾಣಬೇಕೇ? ಅಥವಾ ವೈವಿಧ್ಯವಿದೆಯೇ? ಕಲ್ಲು-ಬಂಡೆಗಳ ಮೂಲ ಮಣ್ಣೆ. ನದಿ-ಝರಿಗಳ ಮೂಲ ನೀರಲ್ಲವೇ. ಅಜ-ಗಜಗಳು ಪ್ರಾಣಿಗಳಲ್ಲವೇ! ಅಪ್ಪ-ಮಕ್ಕಳು ಒಂದೇ ಕುಟುಂಬದವರಲ್ಲವೇ! ಗುರು-ಶಿಷ್ಯರು ಮನುಷ್ಯರಲ್ಲವೇ! ಇವರಲ್ಲಿ ಒಬ್ಬರು ದೊಡ್ದವರು ಇನ್ನೊಬ್ಬರು ಚಿಕ್ಕವರು, ಒಬ್ಬರಿಗೆ ಗೌರವ, ಇನ್ನೊಬ್ಬರಿಗೆ ಇಲ್ಲ. ಒಂದಕ್ಕೆ ರಾಜಮರ್ಯಾದೆ, ಇನ್ನೊಂದಕ್ಕೆ ಕತ್ತಿಭಾಗ್ಯ. ಒಂದು ದೃಷ್ಟಿಯಿಂದ ನೋಡಿದಾಗ ವೈರುಧ್ಯ. ಇನ್ನೊಂದು ದೃಷ್ಟಿಯಿಂದ ನೋಡಿದಾಗ ಸಾಮ್ಯ. ಹಾಗಾಗಿ ಸೃಷ್ಟಿಯಲ್ಲಿ ಇರುವ ವಸ್ತುಗಳು ಒಂದಕ್ಕೊಂದು ಪರಸ್ಪರ ವಿರೋಧವೆಂದು ಹೇಳೋಣವೇ ಅಥವಾ ಅವೆಲ್ಲವೂ ಒಂದೇ ಎಂದು ಹೇಳೋಣವೇ? ಇಲ್ಲಿ ಒಂದು ವಿಷಯವಂತೂ ಸ್ಪಷ್ಟ. ಎರಡಕ್ಕೂ ವಿಷಯವಿದೆ ಎಂಬುದು. ಆದರೆ ನೋಡುವ ನೋಟದಲ್ಲಿ ವ್ಯತ್ಯಾಸವಾದರೆ ವಿರೋಧವೂ ಸಮವಾಗಬಹುದು. ಅಥವಾ ಸಮವೂ ವಿರೋಧವಾದಂತೆ ಕಂಡುಬರುವುದು. 

ಹಾಗಾಗಿ ನೋಟವೇ ಸಮಾನತೆ ಮತ್ತು ಅಸಮಾನತೆಗೆ ಕಾರಣ ಎಂಬುದು ನಿರ್ಣಯ. ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನಮ್ಮ ನೋಟ ಹೇಗಿರಬೇಕೆಂಬುದನ್ನು ಹೇಳುತ್ತಾನೆ. "ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ | ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ||" ಎಂದು. ಅಂದರೆ ಪಂಡಿತರಾದವರು ವಿದ್ಯಾ ಮತ್ತು ವಿನಯಸಂಪನ್ನನಾದ ಬ್ರಾಹ್ಮಣನಲ್ಲಿ, ಗೋವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ, ನಾಯಿಯನ್ನು ತಿನ್ನುವವನಲ್ಲಿ, 'ಸಮ'ವನ್ನೇ ಕಾಣುವರು. ಶ್ರೀರಂಗಮಹಾಗುರುವು ಹೇಳುವ ಮಾತು ನೆನಪಾಗುತ್ತದೆ- "ಸ್ವರೂಪ ಅರಿತರೆ ಬಾಳಾಟ, ಅರಿಯದಿದ್ದರೆ ಗೋಳಾಟ" ಎಂದು. ಬಾಹ್ಯವಾಗಿ ಇವೆಲ್ಲದರಲ್ಲೂ ವೈವಿಧ್ಯವಿದೆ. ಆದರೆ ಈ ವಿವಿಧತೆಯನ್ನು ಪರಿಗಣಿಸದೆ ಜ್ಞಾನಿಯಾದವನು ಅಲ್ಲಿ ಪರಬ್ರಹ್ಮವನ್ನೇ ಕಾಣುತ್ತಾನೆ. ಅವನ ಭಾವ ಅಂತಹದ್ದು. ಅವನು ತನ್ನ ನೋಟವನ್ನು ಸಂಸ್ಕರಿಸಿಕೊಂಡಿದ್ದಾನೆ. ಅಲ್ಲಿ ಅವನಿಗೆ ಕಾಣುವುದು ಸಮವಾದ ಪರಮಾತ್ಮ ಮಾತ್ರ. ಹಾಗಾಗಿ ಈ ದೃಷ್ಟಿಯಿದ್ದರೆ ಅಸಮಾನತೆಗೆ ಎಲ್ಲಿಯ ಅವಕಾಶ!. ನಾವಿಂದು ಯಾವ ಅಸಮಾನತೆಯ ಬೆಂಕಿಯಲ್ಲಿ ಬೇಯುತ್ತಿದ್ದೇವೋ ಅವೆಲ್ಲಕ್ಕೂ ಇದೇ ಪರಿಹಾರ. ಹೊರಗಡೆಯ ವಿವಿಧತೆಯನ್ನು ನಮ್ಮ ತಾತ್ಕಾಲಿಕ ವ್ಯವಹಾರಕ್ಕಾಗಿ ಬಳಸಿಕೊಂಡು, ಪಾರಮಾರ್ಥಿಕವಾಗಿ ಅವುಗಳಲ್ಲಿ ವಿವಿಧತೆಯನ್ನು ಕಾಣದಿರುವುದರಿಂದ ನಾವು ನೆಮ್ಮದಿಯ ಜೀವನವನ್ನು ನಡೆಸಬಹುದು.

ಸೂಚನೆ: 18/5/2021 ರಂದು ಈ ಲೇಖನ
ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.

ಉಪದೇಶ ಮತ್ತು ಸತ್ಪಾತ್ರತೆ (Upadesha Mattu Satpatrate)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)


ಬ್ರಹ್ಮದೇವರ ಆದೇಶ ಹಾಗೂ ಅನುಗ್ರಹದೊಂದಿಗೆ, ದೇವರ್ಷಿ ನಾರದರ ಪ್ರೇರಣೆಯೂ ಸೇರಿ, ಶ್ರೀಮದ್ವಾಲ್ಮೀಕಿ ಮಹರ್ಷಿಗಳು ಲೋಕಕಲ್ಯಾಣಾರ್ಥವಾಗಿ ಶ್ರೀರಾಮಚಂದ್ರನ ಚರಿತೆಯನ್ನು ರಚಿಸಲು ಸಂಕಲ್ಪಿಸಿ ಧ್ಯಾನಸ್ಥರಾದಾಗ ಅವರಿಗೆ ಅಂಗೈಯಲ್ಲಿನ ಆಮಲಕದಂತೆ (ನೆಲ್ಲಿಕಾಯಿ) ಶ್ರೀರಾಮಚಂದ್ರನ ಒಳ ಹೊರ ಜೀವನ ಸತ್ಯಗಳನ್ನೊಳಗೊಂಡ ಸಮಗ್ರವಾದ ರಾಮಾಯಣ ಕಥಾಮೃತವು ಗೋಚರಿಸಿತು, ಅದನ್ನು ಆನಂದದಿಂದ ಆಸ್ವಾದಿಸಿ ಅಂತೆಯೇ ಹೃದಯದಲ್ಲಿ ಧರಿಸಿ ಪರಮ ಪವಿತ್ರವಾದ ರಾಮಾಯಣವನ್ನು ರಚಿಸಿದರು.

ಅನಂತರ ವೇದಾರ್ಥಸಹಿತವಾದ ರಾಮಾಯಣ ಕಥಾಮೃತವನ್ನು ಯಾರಿಗೆ ಉಪದೇಶಿಸಲಿ ಅದನ್ನು ಪಡೆಯಲು ಯಾರುಸತ್ಪಾತ್ರರು ಎಂಬ ಚಿಂತನೆಯಲ್ಲಿದ್ದಾಗ, ಅವರ ಸಾನ್ನಿಧ್ಯದಲ್ಲಿಯೇ ಬೆಳೆಯುತ್ತಿರುವ ಶ್ರೀರಾಮಚಂದ್ರ ಹಾಗೂ ಸೀತಾಮಾತೆಯರ ಸುಪುತ್ರರಾದ, ವಿದ್ಯಾ ವಿನಯ ಸಂಪನ್ನರಾದ, ಶ್ರೀರಾಮನ ಪ್ರತಿಬಿಂಬದಂತಿರುವ ಕುಶ- ಲವರನ್ನು ಕಂಡು ಅತ್ಯಂತಸಂತೋಷಗೊಂಡು ಇವರೇ ಉಪದೇಶಕ್ಕೆ ಅರ್ಹರೆಂದು ಮನಗಂಡು ಅವರಿಬ್ಬರನ್ನು ಬಳಿಗೆ ಕರೆದು ಇಪ್ಪತ್ನಾಲ್ಕು ಸಾವಿರಶ್ಲೋಕಗಳಿಂದ ಕೂಡಿದ ಪುಣ್ಯತಮವಾದ ಶ್ರೀ ರಾಮಾಯಣ ಗೀತಾಮೃತವನ್ನು ಉಪದೇಶಿಸುತ್ತಾರೆ. ಕುಶ-ಲವರು ಹಾಗೆಯೇಅದನ್ನು ಧರಿಸಿ ಲೋಕದ ಮುಂದೆ ಹಾಗೂ ಸಾಕ್ಷಾತ್ ಶ್ರೀರಾಮನ ಸನ್ನಿಧಾನದಲ್ಲಿ ಅದರ ಗಾನಸುಧೆಯನ್ನು ಹರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಾರೆ.ಯಾವುದೇ ವಿದ್ಯೆ ಅಥವಾ ಕಲೆಯನ್ನು ಸತ್ಪಾತ್ರರಿಗೆ ಉಪದೇಶಿಸುವುದು ನಮ್ಮ ಭಾರತೀಯ ಪರಂಪರೆಯಲ್ಲಿ ಬಂದಿದೆ.ಒಂದು ವೇಳೆ ಸತ್ಪಾತ್ರನಾಗಿಲ್ಲದಿದ್ದರೂ ಅವನ ಕೈಗೆಉಪದೇಶವನ್ನು ಕೊಡುವವನು ಮೊದಲು ಶಿಷ್ಯನನ್ನು ಸತ್ಪಾತ್ರನನ್ನಾಗಿಸಿ ನಂತರ ಉಪದೇಶಿಸುವುದು ನಮ್ಮ ಗುರುಕುಲ ಪರಂಪರೆಯಲ್ಲಿ ಬಂದಿರುವುದನ್ನು ನಾವು ಉಪನಿಷತ್ಕಥೆಗಳಲ್ಲಿ ಕಾಣುತ್ತೆವೆ. ಶಸ್ತ್ರವನ್ನಾಗಲೀ ಶಾಸ್ತ್ರವನ್ನಾಗಲೀ ಅನಧಿಕಾರಿಗಳ ಕೈಗೆ ಕೊಡಬಾರದು ಎಂಬ ಮಾತೂ ಇದೆ. ಹೇಗೆ ಶುದ್ಧವಾದ ಹಾಲನ್ನುಕಿಲುಬುಗಟ್ಟಿರುವ ಪಾತ್ರೆಗೆ ಹಾಕಿದಾಗ ಅದು ತನ್ನ ಸ್ವರೂಪವನ್ನು ಕಳೆದುಕೊಳ್ಳುವುದೋ ಅಂತೆಯೇ ಉತ್ತಮವಾದ ವಿದ್ಯೆಯನ್ನುಅಪಾತ್ರರಿಗೆ ಉಪದೇಶಿಸಿದಾಗ ಅದರ ಸ್ವರೂಪಕ್ಕೆ ಧಕ್ಕೆ ಉಂಟಾಗಿ ಮುಂದೆ ಅದು ಲೋಕದಲ್ಲಿ ರಸಹೀನವಾಗಿಯೂ ವಿನಾಶಕಾರಿಯಾಗಿಯೂ ಬೆಳೆಯುವುದಕ್ಕೆಅವಕಾಶವಿದೆ.


ಇಂದು ಭಾರತೀಯವಾದ ಅನೇಕ ವಿದ್ಯೆ ಹಾಗೂ ಕಲೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಸಾರರಹಿತವಾಗಿರುವುದಕ್ಕೆ ಇದೂ ಒಂದು ಕಾರಣವಾಗಿದೆ. ಭಾರತೀಯವಾದ ವಿದ್ಯೆ ಹಾಗೂ ಕಲೆಗಳೆಲ್ಲವೂ ವೇದಮೂಲವಾಗಿಯೇ ಹರಿದು ಬಂದಿವೆ, ಅವುಗಳ ಉಪದೇಶವನ್ನು ಸರಿಯಾಗಿ ಪಡೆದು ಅನುಸಂಧಾನ ಮಾಡಿದಾಗ ವೇದವೇದ್ಯನಾದ ಪರಮಾತ್ಮನವರೆಗೂ ತಲುಪಿಸುವಸಾಮರ್ಥ್ಯವನ್ನು ಹೊಂದಿವೆ ಎಂಬುದು ಅನುಭವಿಗಳ ಮಾತು. ಯಾವುದೇ ವಿಷಯವನ್ನಾಗಲೀ "ನಮ್ಮ ಬುದ್ಧಿಯ ಮಟ್ಟಕ್ಕೇ ನಾವು ತೆಗೆದುಕೊಳ್ಳುತ್ತೇವೆ, ಹಾಗಲ್ಲದೇ ಅದನ್ನು ರಚಿಸಿದ ಋಷಿಯ ಮನಸ್ಸಿನ ಮಟ್ಟಕ್ಕೇ ತೆಗೆದುಕೊಳ್ಳಬೇಕಾದರೂ ಅದರಲ್ಲಿರುವ ವಿಶೇಷಾರ್ಥಗಳನ್ನು ತೆಗೆದುಕೊಳ್ಳಬೇಕಾದರೂ ಉಪದೇಶವೊಂದು ಬೇಕೇ ಬೇಕಪ್ಪ, ಯಾವ ವಸ್ತುವೂ ದೂರದಲ್ಲಿದ್ದಾಗಕಾಣೋಲ್ಲ, ಅದೇ ವಸ್ತುವನ್ನೇ ನಮ್ಮ ಮನಸ್ಸು ಬುದ್ಧಿ ದೃಷ್ಟಿಗಳಿಗೆ ಗೋಚರವಾಗುವಂತೆ "ಉಪ "ಸಮೀಪವಾದ ದೇಶಕ್ಕೆ - ಸ್ಥಳಕ್ಕೆಕರೆದೊಯ್ಯುವ ಸಂವಿಧಾನ ಏನುಂಟೋ ಅದೇಪ್ಪ ಉಪದೇಶ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಸ್ಮರಣೀಯವಾಗಿದೆ.

ಸೂಚನೆ: 31/5/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

ಆರ್ಯಸಂಸ್ಕೃತಿ ದರ್ಶನ - 45 - ಸತ್ಯ (Arya Samskruti Darshana - 45 - satya)

ಲೇಖಕರು: ವಿದ್ವಾನ್ ಛಾಯಾಪತಿಗಳು 


ಸತ್ಯಾಸತ್ಯಗಳ ವಿವೇಚನೆಯನ್ನು ನಮ್ಮ ಪೂರ್ವಜರು ತುಂಬ ಮನಸ್ಸಿಗೆ ಹಚ್ಚಿಕೊಂಡಿದ್ದರೆಂಬುದು ಅವರಿಂದ ನಮಗೆ ಬಂದಿರುವ ಸಾಹಿತ್ಯಗಳಿಂದ ನಿಸ್ಸಂದೇಹವಾದ ರೀತಿಯಲ್ಲಿ ಹೊರಪಡುತ್ತದೆ. ವೇದ ಮತ್ತು ಉಪನಿಷತ್ತುಗಳು ಸತ್ಯದ ವಿಷಯದಲ್ಲಿ ಅನೇಕ ಸ್ಮರಣೀಯವಾದ ವಾರ್ತೆಗಳನ್ನು ಒಳಗೊಂಡಿರುತ್ತವೆ. ವಿದ್ಯಾಭ್ಯಾಸವನ್ನು ಮುಗಿಸಿ ವಿದ್ಯಾರ್ಥಿಯು ಮನೆಗೆ ಹಿಂದಿರುಗುವಾಗ ಗುರುವು ಅವನಿಗೆ ಮಾಡುತ್ತಿದ್ದ ಪ್ರಪ್ರಥಮೋಪದೇಶವು "ಸತ್ಯಂ ವದ" (ಸತ್ಯವನ್ನು ಹೇಳು) ಎಂಬುದೇ ಆಗಿದ್ದಿತು. ರಾಮಾಯಣ ಮಹಾಭಾರತಗಳು ಎಂತಹ ಪರಿಸ್ಥಿತಿಯಲ್ಲಿಯೂ ಸತ್ಯವನ್ನು ಮೀರದ ನಿಷ್ಠಾವಂತರ ಜೀವನವನ್ನು ಹೃದಯಂಗಮವಾಗಿ ನಿರೂಪಿಸುವ ಬೃಹತ್ಕಾವ್ಯಗಳಾಗಿರುತ್ತವೆ. ಸತ್ಯದ ವಿಷಯದಲ್ಲಿ ನಮ್ಮ ಪ್ರಾಚೀನರಿಗಿದ್ದ ನಿಷ್ಠೆಯನ್ನು ಸುಂದರವಾಗಿ ವ್ಯಕ್ತಪಡಿಸುವ ಒಂದು ಸುಭಾಷಿತವು ಈ ರೀತಿ ಇರುತ್ತದೆ -

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ
ಪ್ರಿಯಂಚ ನಾನೃತಂ ಬ್ರೂಯಾತ್ ಏಷ ಧರ್ಮಃ ಸನಾತನಃ

ಒಂದು ಕಡೆ ಶ್ಲೋಕವು ಸತ್ಯವನ್ನು ಹೇಳಬೇಕು ಎಂದು ನುಡಿದರೂ ಮತ್ತೊಂದು ಕಡೆ ಅದು ಬಹಳ ಜವಾಬ್ದಾರಿಯಾದ ಕೆಲಸ, ಯುಕ್ತಾಯುಕ್ತ ವಿವೇಚನಯಿoದ ಕೂಡಿ ಮಾಡುವ ಕಲಸ ಎಂಬುದನ್ನು ಒತ್ತಿ ಹೇಳುತ್ತದೆ. ಅದಕ್ಕೆ ಕಾರಣವನ್ನು ಹುಡುಕಲು ಬಹಳ ದೂರ ಹೋಗಬೇಕಾಗಿಲ್ಲ. - ಲೋಕದಲ್ಲಿ ಸತ್ಯವನ್ನು ಎದುರಿಸ ಬಲ್ಲವರು ತುಂಬ ವಿರಳ. ಆದುದರಿಂದಲೇ ಕೇಳುವವರ ಮನಸ್ಸಿನಲ್ಲಿ ನೋವು, ಉದ್ರೇಕ, ದ್ವೇಷ, ಆಸೂಯೆ ಇತ್ಯಾದಿಗಳುಂಟಾಗದಿರುವಂತೆ ಸತ್ಯವನ್ನು ಅಸತ್ಯ, ಅರ್ಧಸತ್ಯ, ಮೌನ ಇತ್ಯಾದಿಗಳಿಂದ ಮರೆಮಾಡಿ ನುಡಿಯಬೇಕಾದ ಸoದರ್ಭಗಳು ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಉಂಟಾಗುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಒಳ್ಳೆಯದನ್ನು ಸಾಧಿಸುವುದಕ್ಕೋಸ್ಕರ ಅಸತ್ಯವನ್ನು ಸಹ ಹೇಳಬೇಕಾದ ಪ್ರಮೇಯಗಳು ಸಹ ಉಂಟಾಗುತ್ತವೆ.

ಅಂತಹ ಸಂದರ್ಭಗಳನ್ನು ತೆಗೆದುಕೊಂಡು ಮಹಾಭಾರತವು ನಮ್ಮ ಯೋಚನೆಯನ್ನು ಉದ್ಬೋಧಗೊಳಿಸುವಂತೆ ಅನೇಕ ಭಾಗಗಳಲ್ಲಿ ಪರಿಶೀಲಿಸುವುದನ್ನು ನೋಡುತ್ತೇವೆ. ಅವುಗಳಲ್ಲಿ ಒಂದನ್ನು ಇಲ್ಲಿ ವಾಚಕರ ಅವಗಾಹನೆಗೆ ತರುತ್ತೇವೆ. ದ್ರೋಣನಿಂದ ಶಸ್ತ್ರಸನ್ಯಾಸ ಮಾಡಿಸುವುದಕ್ಕೋಸ್ಕರ ಧರ್ಮರಾಜನು "ಅಶ್ವತ್ಥಾಮೋ ಹತಃ" ಎಂದು ಉಚ್ಚಧ್ವನಿಯಲ್ಲಿಯೂ "ಕುಂಜರಃ" ಎಂಬುದನ್ನು ಮೆಲು ಧ್ವನಿಯಲ್ಲಿಯೂ ಹೇಳುತ್ತಾನೆ. ಆ ರೀತಿ ಸುಳ್ಳನ್ನು ಹೇಳಿದುದಕ್ಕೋಸ್ಕರ ಅವನಿಗೂ ಮತ್ತು ಹೇಳಲು ಪ್ರೇರಣೆಮಾಡಿದುದಕ್ಕೋಸ್ಕರ ಕೃಷ್ಣನಿಗೂ ತುಂಬ ಅಪಖ್ಯಾತಿಯು ವಿಮರ್ಶಕರ ಕಡೆಯಿಂದ ಬಂದೊದಗಿರುತ್ತದೆ. ಎಂತಹ ಸಂದರ್ಭದಲ್ಲಿಯೂ ಸತ್ಯವನ್ನು ನುಡಿಯಬೇಕು. ಅದಕ್ಕೆ ವಿಕಲ್ಪವಿಲ್ಲ ಎಂದು ಯೋಚಿಸುವ ಮಹನೀಯರು ಅವರಿಬ್ಬರನ್ನೂ ಕಪ್ಪುಬಣ್ಣದಲ್ಲಿ ಚಿತ್ರಿಸಿರುವುದು ಸಹಜವೇ ಆಗಿದೆ. ಅದೂ ಸ್ವಕಾರ್ಯ ಸಾಧನೆಗೋಸ್ಕರ ಆ ರೀತಿ ಮಾಡುವುದು ಅವರ ದೃಷ್ಟಿಯಲ್ಲಿ ಅಕ್ಷಮಣೀಯ. ಆದರೂ ಸಹ ಸಂದರ್ಭವನ್ನು ತಿಳಿಯಾದ ಮನಸ್ಸಿನಿಂದ ಪರಿಶೀಲಿಸಿದಾಗ, ಸಹೃದಯರು ಆ ರೀತಿ ಸುಳ್ಳು ಹೇಳಿದುದರಲ್ಲಿ ಕ್ಷಮಾರ್ಹತೆಯನ್ನು ಕಾಣುವರೆಂದು ನಮ್ಮ ಮನಸ್ಸು ಹೇಳುತ್ತವೆ. ಸನ್ನಿವೇಶ ಹೀಗಿದೆ ಪಾಂಚಾಲ ಮತ್ತು ಸೃಜಯ ಸೈನಿಕರು ದ್ರೋಣನ ಪೂರ್ವವೈರಿಗಳು. ತನ್ನ ಕಡೆಯ ಸಂಗ್ರಾಮದಲ್ಲಿ ಪರಮಾಸ್ತ್ರವಿತ್ತಾದ ಅವನು ದಾನವಾವಿಷ್ಟನಂತೆ( ನಾಗಿ) ಅವರನ್ನು ದೊಡ್ಡ ಸಂಖ್ಯೆಯಲ್ಲಿ ವಧಿಸುತ್ತಾನೆ. ಅವನ ಅಸ್ತ್ರಶಕ್ತಿಯನ್ನು ನೋಡಿ ಪಾoಡವರನ್ನು ಭಯವು ತುಂಬಿಕೊಳ್ಳುತ್ತದೆ. ಬೇಸಿಗೆಯಲ್ಲಿ ಹುಲ್ಲು ಮೆದೆಯನ್ನು ಸುಟ್ಟುಹಾಕುವ ಅಗ್ನಿಯಂತೆ ಅವನೆಲ್ಲಿ ತಮ್ಮೆಲ್ಲರನ್ನೂ ನಿಶ್ಶೇಷ ಮಾಡುತ್ತಾನೆಯೋ ಎಂಬ ಭೀತಿಯು ಅವರನ್ನು ಕಾಡುತ್ತದೆ. ಅರ್ಜುನನು ಅವನೆದುರು ನಿಲ್ಲಲು ಇಚ್ಛಿಸುವುದಿಲ್ಲ. ಪಾಂಡವರ ಅವಸ್ಥೆಯನ್ನು ನೋಡಿ ಕೃಷ್ಣನು, "ಎಲ್ಲಿಯವರೆಗೆ ಇವನ ಕೈಯಲ್ಲಿ ಧನುಸ್ಸಿರುತ್ತದೆಯೋ ಅಲ್ಲಿಯವರೆಗೆ ಇವನನ್ನು ಜಯಿಸಲಾಗುವುದಿಲ್ಲ. ಆದುದರಿಂದ ಧರ್ಮವನ್ನು ಬಿಟ್ಟು ಇವನನ್ನು ಜಯಿಸಲು ಒಂದು ಉಪಾಯವನ್ನು ಆಶ್ರಯಿಸಿರಿ. ನನ್ನ ಅಭಿಪ್ರಾಯದಲ್ಲಿ ಅಶ್ವತ್ಥಾಮನು ಸತ್ತರೆ ಇವನು ಯುದ್ಧ ಮಾಡನು. ಆದುದರಿಂದ ನಿಮ್ಮಲ್ಲಿ ಯಾರಾದರೂ ಅಶ್ವತ್ಥಾಮನು ಸತ್ತನೆಂದು ಇವನಿಗೆ ಹೇಳಿರಿ" ಎಂದು ಹೇಳುತ್ತಾನೆ. ಅರ್ಜುನನು ಅದನ್ನು ಅನುಮೋದಿಸುವುದಿಲ್ಲ. ಇತರರು ಅನುಮೋದಿಸುತ್ತಾರೆ. ತನ್ನ ಸೈನ್ಯಗಳ ರಕ್ಷಣೆಗೆ ಜವಾಬ್ದಾರನಾಗಿದ್ದೆ ಧರ್ಮರಾಜನು ಕಷ್ಟದಿಂದ ಅನುಮೋದಿಸುತ್ತಾನೆ. ಸುಳ್ಳನ್ನು ಹೇಳುವುದು ಪಾಂಡವರಿಗೆ ಸುಲಭವಲ್ಲ. ಭೀಮನು ಮಾಳವ ದೇಶದ ಇಂದ್ರವರ್ಮನ ಅಶ್ವತ್ಥಾಮನೆಂಬ ಹೆಸರಿನ ಆನೆಯನ್ನು ಕೊಂದು ದ್ರೋಣನ ಬಳಿ ಸಾರಿ ಲಜ್ಜೆಯಿಂದ "ಅಶ್ವತ್ಥಾಮನು ಹತನಾದನು" ಎಂದು ಉಚ್ಚ ಧ್ವನಿಯಲ್ಲಿ ಹೇಳುತ್ತಾನೆ. ಆ ಮಾತು ದ್ರೋಣನನ್ನು ನಡುಗಿಸಿಬಿಡುತ್ತದೆ. ಆದರೂ ಅವನು ತನ್ನ ಮಗನ ವೀರ್ಯವನ್ನು ನೆನೆದು ಅವನು ಸತ್ತಿರಲಿಕ್ಕಿಲ್ಲವೆಂದು ಯೋಚಿಸಿ ಯುದ್ಧವನ್ನು ಮುಂದುವರಿಸುತ್ತಾನೆ. ತನ್ನನ್ನು ಮುತ್ತಿದ್ದ ಇಪ್ಪತ್ತು ಸಾವಿರ ಜನ ಪಾಂಚಾಲರನ್ನು ಬ್ರಹ್ಮಾಸ್ತ್ರದಿಂದ ಅವರ ಗಜವಾಜಿಗಳ ಸಹಿತವಾಗಿ ನಾಶಮಾಡುತ್ತಾನೆ. ಅನೇಕ ಸಾವಿರ ಸಂಖ್ಯೆಯಲ್ಲಿ ತನ್ನ ಪೂರ್ವ ಶತ್ರುಗಳಾದ ಸೃಂಜಯರನ್ನು ಕೊಂದು ಕೆಡುವುತ್ತಾನೆ. ಅವನಲ್ಲಿ ಅಭಿವ್ಯಕ್ತವಾಗುವ ಕ್ರೌರ್ಯವನ್ನು ನೋಡಿ ಸರ್ವದರ್ಶಿಗಳಾದ ಋಷಿಗಳ ಹೃದಯವು ತಲ್ಲಣಿಸುತ್ತದೆ. ಅವರು ಅವನ ಮುಂದೆ ಬಂದು, "ನೀನು ಅಧರ್ಮದಿಂದ ಯುದ್ಧ ಮಾಡುತ್ತಿರುವೆ. ಆಯುಧವನ್ನು ಕೆಳಗಿರಿಸಿ ನಮ್ಮತ್ತ ನೋಡು. ಇಂತಹ ಕ್ರೂರ ಕಾರ್ಯವನ್ನು ಮಾಡುವುದು ನಿನಗೆ ತಕ್ಕುದಲ್ಲ. ಅನಸ್ತ್ರಜ್ಞರನ್ನು ನೀನು ಬ್ರಹ್ಮಾಸ್ತ್ರದಿಂದ ಸುಟ್ಟಿರುತ್ತೀಯೆ. ಇದು ಸರಿಯಲ್ಲ. ಅಂತಹ ಪಾಪಿಷ್ಠವಾದ ಕರ್ಮವನ್ನು ಪುನಃ ಮಾಡಬೇಡ" ಎಂದು ನುಡಿಯುತ್ತಾರೆ. ಅವರು ಅವನಿಂದ ಶಸ್ತ್ರ ಸನ್ಯಾಸವನ್ನು ಬಯಸುತ್ತಾರೆ. ಅವರ ಆಶಯವೂ ಕೃಷ್ಣನ ಆಶಯವೇ ಆಗಿರುತ್ತದೆ.

ಅವರ ಮಾತನ್ನು ಕೇಳಿ ಪುನಃ ಅಧೀರನಾಗಿ ಅವನು ಧರ್ಮರಾಜನನ್ನು "ನನ್ನ ಮಗನು ಇದಾನೆಯೋ, ಹೋದನೋ ?" ಎಂದು ಕೇಳುತ್ತಾನೆ. ಬಾಲ್ಯದಿಂದ ಅನೇಕ ಜನ ಶಿಷ್ಯರ ಪೈಕಿ ಧರ್ಮರಾಜನಲ್ಲಿ ಮಾತ್ರ ಅವನಿಗೆ ಸತ್ಯಾಶೆ; ಅವನು ಸತ್ಯವನ್ನೇ ಹೇಳುತ್ತಾನೆಂಬ ಭರವಸೆ. ಅವನ ಪ್ರಶ್ನೆಗೆ ಉತ್ತರವಾಗಿ ಅಸತ್ಯವನ್ನು ಹೇಳಲು ಧರ್ಮರಾಜನು ಹಿಂದು ಮುಂದು ನೋಡುತ್ತಾನೆ. ಅವನು ಹಿಂಜರಿಯುವುದನ್ನು ನೋಡಿ ಕೃಷ್ಣನು, "ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ. ಇವನು ಹೀಗೆಯೇ ಇನ್ನರ್ಧ ದಿವಸ ಯುದ್ಧ ಮಾಡಿದರೆ ನಿನ್ನ ಸೈನ್ಯವೆಲ್ಲವೂ ನಾಶವಾಗುತ್ತದೆ. ಸತ್ಯಕ್ಕಿಂತ ಅನೃತ ವಚನವೇ ದೊಡ್ಡದು. "ಸತ್ಯಾಜ್ಜ್ಯಾಯೋಽನೃತಂ ವಚಃ !" ದ್ರೋಣನಿಂದ ನಮ್ಮನ್ನು ಕಾಪಾಡು. ಜೀವರಕ್ಷಣೆಗೋಸ್ಕರ ಅನೃತವನ್ನು ಹೇಳಿದರೆ ಸುಳ್ಳು ಹೇಳಿದುದರ ಪಾಪವು ಮುಟ್ಟುವುದಿಲ್ಲ ಎಂದು ಅವನಿಗೆ ಹೇಳುತ್ತಾನೆ. ಭೀಮನು ತಾನು ಈ ಮೊದಲು ಮಾಡಿದ ಕೆಲಸವನ್ನು ಉಕ್ತಿಸಿ, ಸುಳ್ಳನ್ನು ಹೇಳಲು ಅಣ್ಣನಿಗೆ ಬಲವಂತ ಮಾಡುತ್ತಾನೆ. ಧರ್ಮರಾಜನಿಗೆ ಒಂದು ಕಡೆ ಸುಳ್ಳಿನ ಭಯ ಮತ್ತೊಂದು ಕಡೆ ಜಯಾಸಕ್ತಿ. ಕಡೆಗೆ "ಅಶ್ವತ್ಥಾಮನು ಸತ್ತನು" ಎಂದು ಹೇಳಿ ಅವ್ಯಕ್ತವಾದ ಧ್ವನಿಯಲ್ಲಿ "ಕುಂಜರಃ" ಎಂಬ ಶಬ್ದವನ್ನು ಉಚ್ಚರಿಸುತ್ತಾನೆ. ಸುಳ್ಳನ್ನು ಹೇಳಿದ ಮಾತ್ರಕ್ಕೆ ಭೂಮಿಯಿಂದ ನಾಲ್ಕಂಗುಲ ಮೇಲೆ ಸಂಚರಿಸುತ್ತಿದ್ದ ಅವನ ರಥವು ಭೂಮಿಗೆ ಇಳಿಯುತ್ತದೆ. ದ್ರೋಣನು ಶಸ್ತ್ರ ಸನ್ಯಾಸ ಮಾಡಿ ರಥದಲ್ಲಿ ಕುಳಿತು ಯೋಗದಿಂದ ಶರೀರತ್ಯಾಗ ಮಾಡಿ ಜ್ಯೋತೀ ಭೂತನಾಗಿ ಬ್ರಹ್ಮ ವಸ್ತುವಿನಲ್ಲಿ ಐಕ್ಯ ಪಡೆಯುತ್ತಾನೆ. ಧೃಷ್ಟದ್ಯುಮ್ಮನು ನಿರ್ಜೀವವಾದ ಶರೀರದಿಂದ ತಲೆಯನ್ನು ಕತ್ತರಿಸಿ ಕೆಡಹುತ್ತಾನೆ. ಆದರೆ ಸುಳ್ಳು ಹೇಳುವುದರ ಉದ್ದೇಶ ಇದಾಗಿರಲಿಲ್ಲವೆಂಬುದನ್ನು ಹೇಳಬೇಕಾಗಿಲ್ಲ. ದ್ರೋಣನಿಂದ ಶಸ್ತ್ರಸನ್ಯಾಸ ಮಾಡಿಸುವುದು ಮಾತ್ರ ಅವರ ಗುರಿಯಾಗಿದ್ದಿತು. ಸುಳ್ಳನ್ನು ಹೇಳದೆ ಕ್ರೂರಕರ್ಮನಾದ ದ್ರೋಣನಿಂದ ಪಾಂಡವರೆಲ್ಲರೂ ಮಡಿದಿದ್ದರೆ ಸತ್ಯಪ್ರಿಯರಾದ ವಿದ್ವಾಂಸರು ತಮ್ಮ ಉತ್ತರೀಯಗಳನ್ನು ಹಾರಿಸಿ ಧರ್ಮರಾಜನನ್ನು ಪ್ರಶಂಸಿಸುತ್ತಿದ್ದರೋ ಏನೋ ! ಆದರೆ ದ್ರೋಣನು ಎಸಗಿದ ಕಗ್ಗೊಲೆಯನ್ನು ಕಣ್ಣಿನಿಂದ ನೋಡಿದ ಕೃಷ್ಣನಿಗೆ ಏನಾದರೂ ಸರಿ, ಸತ್ಯವನ್ನೇ ಅನುಸರಿಸಬೇಕೆಂಬ ಧರ್ಮವು ತಪ್ಪಾಗಿ ಕಂಡಿರಬೇಕು. ಧರ್ಮಕ್ಕೋಸ್ಕರ ಸತ್ಯ, ಅದನ್ನು ಉಳಿಸಲು ಅಗತ್ಯವಿದ್ದರೆ ಅಸತ್ಯ ಹೇಳಿದರೆ ತಪ್ಪಿಲ್ಲ-ಇದು ಭಗವಂತನ ದೃಷ್ಟಿ.

ಬಹಳ ವಿಶೇಷವಾದ ಸಂದರ್ಭಗಳಲ್ಲಿ ಪ್ರಾಣ ರಕ್ಷಣೆ ಇತ್ಯಾದಿಗಳಿಗೋಸ್ಕರ ಸುಳ್ಳನ್ನು ಹೇಳುವುದರಿಂದ ಪಾಪವುಂಟಾಗುವುದಿಲ್ಲ ಎಂದು ಹೇಳುವುದು ಕೃಷ್ಣನ ಅಭಿಪ್ರಾಯವೇ ವಿನಹ ಸ್ವಭಾವವಾಗಿಯೇ ಅಸತ್ಯವನ್ನು ಹೇಳಬಹುದು ಎಂಬುದಲ್ಲ. ಸತ್ಯವೇ ಎಲ್ಲವೂ, ಸತ್ಯವನ್ನೇ ಹೇಳಬೇಕು, ಸತ್ಯದಿಂದ ಮನುಷ್ಯನ ವ್ಯಕ್ತಿತ್ವಕ್ಕೆ ಅನುಪಮವಾದ ಹೊಳಪು ದೊರಕುತ್ತದೆ, ಅದರಿಂದ ಅವನ ವ್ಯಕ್ತಿತ್ವವು ಉನ್ನತವಾಗಿ ಬೆಳೆಯುತ್ತದೆ, ಸತ್ಯದಿಂದ ಅವನು ಸ್ವರ್ಗವನ್ನು ಸಾಧಿಸುತ್ತಾನೆ, ಅಸತ್ಯದಿಂದ ನರಕಕ್ಕೆ ಹೋಗುತ್ತಾನೆ ಎನ್ನುವುದು ಸಕಲಶಾಸ್ತ್ರಗಳ ಸಾರವಾಗಿರುತ್ತದೆ : 

ಸತ್ಯಂ ಸ್ವರ್ಗಸ್ಯ ಸೋಪಾನಂ ಪಾರಾವಾರಸ್ಯ ನೌರಿವ ॥ (ಸಮುದ್ರಕ್ಕೆ ನೌಕೆಯು ಹೇಗೋ ಹಾಗೆ ಸತ್ಯವು ಸ್ವರ್ಗಕ್ಕೆ ಸೋಪಾನ) 
ಸತ್ಯಮೇಕ ಪದಂ ಬ್ರಹ್ಮ ಸತ್ಯೇ ಸರ್ವಂ ಪ್ರತಿಷ್ಠಿತಂ ॥ (ಸತ್ಯವು ಬ್ರಹ್ಮಕ್ಕೆ ಒಂದು ಹೆಜ್ಜೆ ಮಾತ್ರ; ಸತ್ಯದಲ್ಲಿ ಎಲ್ಲವೂ ನೆಲೆಗೊಂಡಿರುತ್ತದೆ.) 
ಸತ್ಯಮೇವ ಜಯತೇ ನಾನೃತಂ ಸತ್ಯೇನ ಪಂಥಾವಿತತೋ ದೇವಯಾನಃ ॥ ( ಸತ್ಯವೇ ಜಯಿಸುತ್ತದೆ. ಅನೃತವಲ್ಲ; ಸತ್ಯದಿಂದ ಸ್ವರ್ಗದ ದಾರಿಯು ಅಗಲವಾಗುತ್ತದೆ).

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: 5 ಸಂಚಿಕೆ:3, ಆಗಸ್ಟ್ 1988 ತಿಂಗಳಲ್ಲಿ  ಪ್ರಕಟವಾಗಿದೆ.  

Sunday, May 30, 2021

ಶ್ರೀರಾಮನ ಗುಣಗಳು -7 ಬುದ್ಧಿಮಾನ್ – ಶ್ರೀರಾಮ (Sriramana Gunagalu -7 Buddhiman – Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ಬುದ್ಧಿ ಉಳ್ಳವನು ಶ್ರೀರಾಮನು ಎಂದರೆ ಇದೂ ಒಂದು ಶ್ರೀರಾಮನ ಗುಣವಾಗುತ್ತದೆಯೋ? ಎಂಬ ಪ್ರಶ್ನೆ ಬರುತ್ತದೆ. 'ಬುದ್ಧಿ'ಎಂಬುದು ಎಲ್ಲರಲ್ಲೂ ಇರುವ ಸಾಮಾನ್ಯಗುಣ. ಇದು ಶ್ರೀರಾಮನಲ್ಲೂ ಇತ್ತು ಅಷ್ಟೆ! ಅದೇನು ಅವನಲ್ಲಿರುವುದಕ್ಕೆ ಅಂತಹವಿಶೇಷತೆ!. ಈ ಬುದ್ಧಿ ಎಂದರೆ ಯಾವುದು? ಮಹಾಭಾರತದಲ್ಲಿ- ಶುಶ್ರೂಷಾ, ಶ್ರವಣ, ಗ್ರಹಣ, ಧಾರಣ, ಊಹಾಪೋಹ,ಅರ್ಥವಿಜ್ಞಾನ, ತತ್ತ್ವಜ್ಞಾನ ಎಂಬುದಾಗಿ ಏಳು ಬುದ್ಧಿಯ ಗುಣಗಳು ಎನ್ನಲಾಗಿದೆ. ಹೀಗೆ ಯಾವುದೇ ರೀತಿಯಲ್ಲಿ ಬುದ್ಧಿಯವೈವಿಧ್ಯವನ್ನು ನೋಡಿದರೂ ಆ ಎಲ್ಲಾ ವಿವಿಧತೆಗಳೂ ಶ್ರೀರಾಮನಲ್ಲಿ ಏಕೀಭಾವವನ್ನು ಹೊಂದಿದ್ದವು. ಕೆಲವರಲ್ಲಿ ಕೆಲವುಗುಣಗಳನ್ನು ನೋಡಬಹುದು. ಆದರೆ ಶ್ರೀರಾಮನಲ್ಲಿ ಈ ಎಲ್ಲಾ ಗುಣಗಳನ್ನೂ ನೋಡಲು ಸಾಧ್ಯ. ಆದ್ದರಿಂದ 'ಬುದ್ಧಿಮಾನ್'ಎಂಬ ಗುಣ ಶ್ರೀರಾಮನಿಗೆ ಮಾತ್ರ ಸಲ್ಲುವಂತಹದ್ದು ಎಂದರೆ ತಪ್ಪಲ್ಲ.

ಶುಶ್ರೂಷಾ ಎಂದರೆ ಹಿರಿಯರ-ವೃದ್ಧರ ಸೇವೆ ಮಾಡುವುದು. ಇದರಿಂದ ಆಯುಷ್ಯ, ವಿದ್ಯೆ, ಯಶಸ್ಸು ಮತ್ತು ಬಲಗಳೆಂಬಶಕ್ತಿಯನ್ನು ಪಡೆಯಬಹುದು ಎಂದು ಸುಭಾಷಿತದ ಮಾತು. ಇದಕ್ಕೆ ಸಾಕ್ಷಾತ್ ಅನ್ವಯವಾಗುವಂತೆ ಶ್ರೀರಾಮನಿದ್ದ. ಶ್ರವಣಎಂದರೆ ಕೇಳುವುದು. ಹಿರಿಯರು, ತಿಳಿದವರು ಹೇಳುವುದನ್ನು ಸಾವಧಾನವಾಗಿ ಕೇಳಿಸಿಕೊಳ್ಳುವ ಗುಣ ಬಹಳ ಮುಖ್ಯ. ಅದನ್ನುಪೂರ್ತಿಯಾಗಿ ಕೇಳಿಸಿಕೊಂಡು ಆಮೇಲೆ ತನ್ನದೇ ಆದ ನಿರ್ಣಯವನ್ನು ತೆಗೆದುಕೊಳ್ಳುವುದು ಬುದ್ಧಿಯ ಅಸಾಧಾರಣತೆ. ಎಲ್ಲೂಹಿರಿಯರು ಹೇಳುವ ಮಾತನ್ನು ತಿರಸ್ಕಾರ ಬುದ್ಧಿಯಿಂದ ಕಾಣುತ್ತಿರಲಿಲ್ಲ ಎಂಬುದು ಇದರ ತಾತ್ಪರ್ಯ. ಗ್ರಹಣವೆಂದರೆಸ್ವೀಕರಿಸುವ ಮನೋಭಾವನೆ. ದುರಂಹಕಾರಿಗಳಿಗೆ ಬೇರೆಯವರ ಮಾತನ್ನು ಸ್ವೀಕರಿಸುವ ಮನಸ್ಸು ಇರುವುದಿಲ್ಲ.ಯುಕ್ತಾಯುಕ್ತವಾದ ಮಾತಾದರೆ ಅದು ಬಾಲನಿರಲಿ ಗಿಳಿಯೇ ಇರಲಿ, ಅದನ್ನು ಸ್ವೀಕರಿಸಬೇಕು. ದೊಡ್ದವರ ಜೊತೆ ದೊಡ್ದವನಾಗಿಮಕ್ಕಳ ಜೊತೆ ಮಗುವಾಗಿ ಇರುವಂತಹ ಮನೋವೈಶಾಲ್ಯ ಶ್ರೀರಾಮನದ್ದಾಗಿತ್ತು. ಧಾರಣವೆಂಬುದು ಬಹಳಕಾಲದವೆರೆಗೆಪಡೆದದ್ದನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ. ಈ ಗುಣದಿಂದಲೇ ಮಹರ್ಷಿ ವಿಶ್ವಾಮಿತ್ರರಿಂದ ಬಲ ಅತಿಬಲ ಎಂಬಮಹದಸ್ತ್ರವನ್ನು ಶ್ರೀರಾಮನು ಧರಿಸಲು ಸಾಧ್ಯವಾಯಿತು. ಧಾರಣಾಸಾಮರ್ಥ್ಯವಿರುವುದರಿಂದಲೇ ಯುದ್ಧಕ್ಕೆ ಬೇಕಾದ ಎಲ್ಲಾಅಸ್ತ್ರ-ಶಸ್ತ್ರಗಳನ್ನು ಪಡೆಯುತ್ತಾನೆ. ಊಹಾಪೋಹ ಎಂದರೆ ಮುಂದೆ ಆಗುವಂತಹ ಸಾಧಕ ಮತ್ತು ಬಾಧಕಗಳನ್ನು ತಿಳಿದು ಒಂದುನಿರ್ಣಯಕ್ಕೆ ಬರುವ ಯೋಗ್ಯತೆ. ಅರ್ಥವಿಜ್ಞಾನವು ಒಂದು ವಸ್ತುವಿನ ಬಾಹ್ಯವಾದ ಅರಿವು. ಇಂದ್ರಿಯಪಾಟವದಿಂದ ಮಾತ್ರಬಾಹ್ಯಜ್ಞಾನವು ಅರ್ಥದಿಂದ ಕೂಡಿಬರುತ್ತದೆ, ಮನಸ್ಸಿನಿಂದ ಬರುವ ಅರಿವೇ ಸೂಕ್ಷ್ಮ. ಮನಸ್ಸನ್ನು ಪಳಗಿಸಿದಾಗ ಮೂಡುವಅರಿವೇ ಅದಾಗಿದೆ. ಇವೆರಡನ್ನು ಸೇರಿಸಿ ಅರ್ಥಜ್ಞಾನ ಎನ್ನುವುದಾದರೆ, ತಾತ್ತ್ವಿಕವಾದ ಅಥವಾ ಮನಸ್ಸಿಗೂ ಮೀರಿದ ಅರಿವನ್ನೇತತ್ತ್ವಜ್ಞಾನ ಎಂದು ಕರೆಯಲಾಗುತ್ತದೆ. ಸೃಷ್ಟಿಯ ಎಲ್ಲಾ ಪದಾರ್ಥಗಳೂ ಒಂದೇ ತತ್ತ್ವದಿಂದ ಉಂಟಾಗಿದೆ ಎಂಬುದು ಜ್ಞಾನ. ಹೀಗೆಸ್ಥೂಲ ಸೂಕ್ಷ್ಮ ಮತ್ತು ಪರಾ ಎಂಬುದಾಗಿ ಮೂರು ಹಂತದ ಅರಿವಿರುವವನು ರಾಮ. ರಾಜಾಧಿರಾಜನಾದ ಶ್ರೀರಾಮನಲ್ಲಿ ಮಾತ್ರಇಂತಹ ಗುಣಗಳು ಇರಲು ಸಾಧ್ಯವಷ್ಟೇ!. ಹಾಗಾಗಿ ಶ್ರೀರಾಮನು 'ಬುದ್ಧಿಮಾನ್'.

ಸೂಚನೆ : 30/5/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.


Ananda Tandava Of Nataraja- 7

 

Dr. K S Kannan,
SRSJM Chair Professor,
IIT-Madras, Chennai.
Respond to (lekhana@ayvm.in)

Reinforcement by Dharmaśāstra

 The texts of Dharmaśāstra too laid emphasis on the pursuit of the various arts. To cite one : "One who knows the essential principle (tattva) of playing on the lute (vīṇā) attains salvation," asserts Sage Yājñavalkya (3rd Century CE?). Yājñavalkyasmṛti 3.4.115:

vīṇāvādana-tattvajñaḥ śruti-jāti-viśāradaḥ |

tālajñaścā'prayāsena mokṣa-mārgaṁ niyacchati ||

वीणावादन-तत्त्वज्ञः श्रुति-जाति-विशारदः |

तालज्ञश्चाऽप्रयासेन मोक्ष-मार्गं नियच्छति ||

 The commentator, Vijñāneśvara (12th Century CE), gives the logic behind this understanding in his Mitākṣarā pithily thus: the mind is then centred in the Self.  Mitākṣarā on 3.4.115: tad-anuviddha-brahmopāsanatayātālādi-bhaṅga-bhayāc-citta-vṛtter ātmaikāgratāyāḥ sukaratvād alpāyāsenaiva mukti-pathaṁ niyacchati ||

तद्-अनुविद्ध-ब्रह्मोपासनतयातालादि-भङ्ग-भयाच्-चित्त-वृत्तेर् आत्मैकाग्रतायाः सुकरत्वाद् अल्पायासेनैव मुक्ति-पथं नियच्छति ||

In the previous verse it was stated that singing liberates.

Yājñavalkyasmṛti 3.4.114: geyam etat tad-abhyāsa-karaṇān-mokṣa-saṁjñitam

गेयम् एतत् तद्-अभ्यास-करणान्-मोक्ष-संज्ञितम्|

The commentary Mitākṣarā says that the means for salvation has also been referred to, by an extension of sense, by the word salvation – representing, that is, the means and the end by the same word. (This process is technically called upacāra wherein two unequal but related things get to have the same appellation.) The sage goes on to aver that if salvation itself does not accrue from the above means (possibly owing to any shortcomings), the singer would not stand to lose, but on the other hand, be conferred the status (no small one, verily) of becoming an attendant upon the very Lord Śiva! – the next best thing, as it were. Read Yājñavalkyasmṛti 3.4.116:

gītajño yadi yogena nā''pnoti paramaṁ padam |

rudrasyā'nucaro bhūtvā tenaiva saha modate ||  

गीतज्ञो यदि योगेन नाऽऽप्नोति परमं पदम् |

रुद्रस्याऽनुचरो भूत्वा तेनैव सह मोदते ||

It may be recalled that Kālidāsa calls the art of the stage a veritable "delectable Ocular Sacrifice"  (Mālavikāgnimitra 1.4: kāntaṁ kratuṁ cākṣuṣam |) – as against the regular sacrifices which demand multiple actions involving complex procedures, all to be done meticulously, and there being nothing quite enjoyable therein apparently. Dance and music – as conceived in India, that is – confer the supreme benefit not only upon the performer but also the connoisseur audience. This is the reason behind addressing the art of the stage as ocular (cākṣuṣa), which can only pertain to the audience.

Saturday, May 29, 2021

ಷೋಡಶೋಪಚಾರ- 2 (Shodashopachara - 2)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



"ಯಾವ ಹೃದಯದಲ್ಲಿ ಭಗವಂತ ವಾಸಮಾಡುತ್ತಾನೋ ಆ ರಸಯುಕ್ತ ಹೃದಯದ ರಸದಿಂದ ನಮ್ಮಜೀವನ ಬೆಳೆಯಬೇಕು. ಆತ್ಮರಸದಿಂದ ಇಂದ್ರಿಯಗಳು ಬೆಳೆಯಬೇಕು. ಹೂವಿಗೆ ನೀರೆರೆದರೆ ಗಿಡಬೆಳೆಯೋಲ್ಲ. ಗಿಡ ಬೆಳೆಯಬೇಕಾದರೆ ಪಾತಿಗೆ ನೀರು ಹಾಕಬೇಕು. ಹಾಗೆಯೇ ಹೃದಯದ ಪಾತಿಯಲ್ಲಿರುವಭಗವಂತನಿಗೆ ನೀರೆರೆದರೆ ಎಲ್ಲಾ ಶಾಖೆಗಳಿಗೂ ತಲಪುತ್ತದೆ." ಎಂಬ ಶ್ರೀರಂಗಮಹಾಗುರುವಿನ ಈಮಾತು ನಾನು ಮುಂದೆ ಹೇಳಲಿರುವ ವಿಷಯಕ್ಕೆ ಪೀಠವಿದ್ದಂತೆ.ಷೋಡಶೋಪಚಾರ ಎಂಬ ವಿಷಯವನ್ನು ಯಾವ ಉದ್ದೇಶಕ್ಕೆ ತಿಳಿದುಕೊಳ್ಳಬೇಕು? ಇದಕ್ಕಿರುವಅರ್ಥವೇನು? ಇವುಗಳನ್ನು ನಾವು ಯಾವ ಫಲದ ಅಪೇಕ್ಷೆಯಿಂದ ಮಾಡಬೇಕು? ಎಂಬಿತ್ಯಾದಿವಿಚಾರಗಳನ್ನು ಒಂದೊಂದಾಗಿ ನೋಡೋಣ.ನಮ್ಮೆಲ್ಲರ ಮೂಲ ಭಗವಂತ. ನಾವೆಲ್ಲರೂ ಆ ಮೂಲಕ್ಕೇ ಸೇರಬೇಕಾದವರು. ಯಾವುದೋಕಾರಣಕ್ಕಾಗಿ ಅಲ್ಲಿಂದ ಬೇರೆಯಾಗಿ ಮೂಲವನ್ನು ಮರೆತಿದ್ದೇವೆ. ಆದರೂ ನೆನಪಿಸಿಕೊಂಡು ಮತ್ತೆಭಗವಂತನ ನೆಲೆಯಲ್ಲೇ ಲೀನವಾಗಬೇಕಾಗಿದೆ. ಆದರೆ ಇದಕ್ಕೆ ಇಂದು ಮೂರ್ತಸ್ವರೂಪದ ಅವಲಂಬನಬೇಕಾಗಿದೆ. ಭಗವಂತನನ್ನು ನಿರ್ಗುಣ, ನಿರಾಕಾರ ಎಂದೆಲ್ಲಾ ಹೇಳುತ್ತೇವೆ. ಅವನುಗುಣಾತೀತನಾಗಿದ್ದರೂ ಗುಣಗಳ ಸಹಾಯದಿಂದಲೇ ಕೆಳಗೆ ಇಳಿದು, ಜೀವಿಗಳನ್ನುಗುಣಾತೀತರನ್ನಾಗಿಸಲು ಅವನು ಅನೇಕ ರೂಪವನ್ನು ತಾಳಿ ಬಂದಿರುತ್ತಾನೆ. ಇವುಗಳನ್ನೇ ಮೂರ್ತಿಎಂದು ಕರೆಯುತ್ತೇವೆ. ಅವ್ಯಕ್ತವಾದ ಭಗವಂತನನ್ನು ಆರಾಧಿಸಲು ವ್ಯಕ್ತರೂಪದ ಮೂರ್ತಿಯನ್ನುಪೂಜಿಸುವ ವಿಧಾನವನ್ನೇ ಉಪಚಾರ, ಆರಾಧನೆ ಎನ್ನುತ್ತೇವೆ.ಭಗವಂತನು ಈ ಭೂಮಿಗೆ ಬರಲು ಅನೇಕ ರೂಪಗಳನ್ನು ತಾಳುತ್ತಾನೆ. ಅದು ದೇವತಾರೂಪವಾಗಿರಬಹುದು, ಮಾನವರೂಪದಲ್ಲಿರಬಹುದು ಅಥವಾ ಇನ್ನಾವುದೋ ಆಕಾರದಲ್ಲಿರಬಹುದು.


ಭಗವಂತನು ಈ ಪ್ರಪಂಚದಲ್ಲಿ ಅಣುರೇಣುತೃಣಕಾಷ್ಠಗಳಲ್ಲಿಯೂನೆಲೆಸಿರುತ್ತಾನೆ. ಅಂತಹ ಅವ್ಯಕ್ತವಾದ ವಿಷಯವನ್ನು ನಾವು ಯಾವ ರೂಪದಲ್ಲಿ ಆರಾಧಿಸಿದರೂ ಅದುಭಗವಂತನನ್ನೇ ತಲಪುತ್ತದೆ. ಆದರೆ ಭಗವಂತನ ವಿಶೇಷ ಸಾನ್ನಿಧ್ಯವಿರುವ ಪದಾರ್ಥ ಎಂದು ನಮ್ಮಪರಂಪರೆ ಯಾವುದನ್ನು ಗುರುತಿಸಿದೆಯೋ ಅವುಗಳನ್ನು ಪೂಜಿಸಬೇಕು. ಅವೆಲ್ಲವೂ ಅಲ್ಲಿಗೆತಲುಪಿಸುವ ಯಾನಗಳು. ಇವುಗಳಿಂದ ಕೊನೆಯಲ್ಲಿ ನಾವು ಅವನ ನೆಲೆಯನ್ನು ಸೇರುವಂತಾಗುತ್ತದೆ."ಬಾಹ್ಯೇ ತ್ವಾಂ ಸಮ್ಯಗರ್ಚಯೇ" ಎಂಬಂತೆ ಭಗವಂತನನ್ನು ಭಕ್ತರು ಅವರವರ ಭಾವಕ್ಕೆಅನುಗುಣವಾಗಿ ಪೂಜಿಸುತ್ತಾರೆ. ವಿಪ್ರರು ಅಗ್ನಿಯಲ್ಲಿ, ಯೋಗಿಗಳು ಹೃದಯದಲ್ಲಿ, ಪಾಮರರುಪ್ರತಿಮೆಯಲ್ಲಿ, ಜ್ಞಾನಿಗಳು ಎಲ್ಲೆಡೆ ಭಗವಂತನನ್ನು ಉಪಚರಿಸುತ್ತಾರೆ. ಅದರಲ್ಲೂ ಈ ಉಪಚಾರವಿಧಾನವು ಪಾಮರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಶಾಸ್ತ್ರದಲ್ಲಿ ವಿಸ್ತಾರವಾಗಿ ಹೇಳಲ್ಪಟ್ಟಿದೆ.ಅವುಗಳನ್ನು ಒಂದೊಂದಾಗಿ ಅರ್ಥಮಾಡಿಕೊಳ್ಳೋಣ.

ಸೂಚನೆ : 29/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಯೋಗತಾರಾವಳಿ -8 ಅಗ್ನಿ-ವಾಯು-ಚಂದ್ರ (Yogataravali-8 Agni-Vayu-Chandra)

ಲೇಖಕರು: ಡಾ|| ಕೆ. ಎಸ್. ಕಣ್ಣನ್
 (BSc, MA (Sanskrit), MPhil, PhD, ವಿದ್ವತ್) 
(ಪ್ರತಿಕ್ರಿಯಿಸಿರಿ lekhana@ayvm.in)


ಉತ್ಥಾಪಿತಾಧಾರ..

ಯಾವ ಅಗ್ನಿ? 

ಮೂಲಾಧಾರದ ಸ್ಥಾನದಲ್ಲೊಂದು 'ಅಗ್ನಿ'ಯುಂಟು. ಅದರ 'ಜ್ವಾಲೆ'ಗಳಿಂದಲೂ, ಜೊತೆಗೆ ಅಪಾನವಾಯುವಿನ ಆಕುಂಚನವನ್ನು ಮತ್ತೆ ಮತ್ತೆ ಮಾಡುವುದರಿಂದಲೂ 'ಚಂದ್ರ'ನು ತಾಪಗೊಳ್ಳುವನು. ಆ ಚಂದ್ರನಿಂದ 'ಅಮೃತಧಾರೆ'ಯು ಸ್ರವಿಸುವುದು. ಅದನ್ನು ಪಾನಮಾಡುವವನೇ ಧನ್ಯ. ಹೀಗೆನ್ನುತ್ತದೆ ಈ ಪದ್ಯ. ಏನಿದರರ್ಥ? 

ಇಲ್ಲಿ ಹೇಳುವ ಅಗ್ನಿಯಾಗಲಿ ಜ್ವಾಲೆಯಾಗಲಿ ಭೌತಿಕವಾದವುಗಳಲ್ಲವಷ್ಟೆ. ಲೋಕವ್ಯವಹಾರದಲ್ಲೂ "ಜಠರಾಗ್ನಿ" ಎಂದಾಗಲೋ "ಕ್ರೋಧಾಗ್ನಿ" ಎಂದಾಗಲೋ, ಅಲ್ಲೇನೋ "ಇಷ್ಟು ಡಿಗ್ರಿ ಸೆಂಟಿಗ್ರೇಡ್‍ನ ಬೆಂಕಿಯಿದೆ"ಯೆಂದಲ್ಲವಲ್ಲವೆ? 'ಹೊಟ್ಟೆಯುರಿ' ಎಂದೋ, 'ಹೊಟ್ಟೆಗೆ ಬೆಂಕಿ ಬಿದ್ದಂತಾಯಿತು ಗಾಂಧಾರಿಗೆ' - ಎಂದೋ ಹೇಳಿದಾಗಲೂ ಅಲ್ಲೇನೂ ಇದ್ದಿಲು-ಸೀಮೆಎಣ್ಣೆ-ಪೆಟ್ರೋಲುಗಳ, ಬೆಂಕಿಪೊಟ್ಟಣದ, ಸಮಾಚಾರವೇನಿಲ್ಲವಷ್ಟೆ. 

ಹಾಗೆಯೇ ಯೋಗಶಾಸ್ತ್ರ-ತಂತ್ರಶಾಸ್ತ್ರಗಳಲ್ಲಿ ಸೂರ್ಯ-ಚಂದ್ರ-ಅಗ್ನಿ-ಸರ್ಪ-ಚಕ್ರ-ಗಳೆಂದೆಲ್ಲ ಹೇಳಿದಾಗ ಆ ಮಾತಿನ ಆಶಯವೇನೆಂದು ತಿಳಿದುಕೊಳ್ಳದಿದ್ದಲ್ಲಿ ಅಪಾರ್ಥವೇ ಸರಿ. ಅಥವಾ ಇದಕ್ಕೆಲ್ಲ ಅರ್ಥವೇ ಇಲ್ಲವೆಂದು ಸಹ ತೋರಬಹುದು. ಪ್ರಕೃತ ಶ್ಲೋಕದಲ್ಲಂತೂ ಶಾಸ್ತ್ರಸಿದ್ಧಪರಿಭಾಷೆಯೂ ಕಾವ್ಯಶೈಲಿಯೂ ಮೇಳೈಸಿರುವುದಷ್ಟೇ ಅಲ್ಲದೆ, ಜೊತೆಗೇ ತಾತ್ತ್ವಿಕಾಂಶಗಳನ್ನೂ ನಿರೂಪಿಸಲಾಗುತ್ತಿದೆಯೆಂಬುದನ್ನು ಗಮನಿಸಿಕೊಳ್ಳಬೇಕು.

 ಪ್ರಾಣಾಯಾಮ ಮಾಡುವಾಗ ಮೈಯಲ್ಲಿ ತಾಪವು ಹೆಚ್ಚುವುದು, ಕೆಲವೊಮ್ಮೆ ಬೆವರುವುದು - ಇವುಗಳು ಸಹ ಆಗುವುದುಂಟು. ಹಾಗೆಯೇ ದೇಹದ ಅಧೋಭಾಗದಲ್ಲಿ ತಾಪವು ತೋರುವುದನ್ನೂ, ಜೊತೆಗೆ ಶರೀರಲ್ಲಾಗುವ ಮತ್ತೆ ಕೆಲವು ಪರಿಣಾಮಗಳನ್ನೂ, ಲಕ್ಷಿಸಿ ಇಲ್ಲಿ ಹೀಗೆ ಹೇಳಲಾಗಿದೆ.

ಅನಲ-ಅನಿಲ 

ಅಪಾನವಾಯುವೆಂಬುದು ಅಧೋಗಾಮಿ, ಕೆಳಕ್ಕೆ ಸೆಳೆಯುವಂತಹದು. ಅದರ ಆಕುಂಚನ ಅಥವಾ ಮೇಲ್ಮುಖವಾದ ಸೆಳೆತವನ್ನು ಮತ್ತೆ ಮತ್ತೆ ಮಾಡುತ್ತಿದ್ದಲ್ಲಿ ಅದು ತಿದಿಯೊತ್ತುವ ಹಾಗಾಗುತ್ತದೆ. ಅಗ್ನಿಯು "ವಾಯು-ಸಖ". ಎಂದರೆ ವಾಯುವನ್ನೇ "ಸ್ನೇಹಿತ"ನನ್ನಾಗಿ ಹೊಂದಿರುವಂತಹುದು. ಅನಲಕ್ಕೆ(=ಅಗ್ನಿಗೆ) ಅನಿಲವು(=ವಾಯುವು) ಪೋಷಕ, ಸಹಾಯಕ. ಸಖನೆಂದರೆ ಜೊತೆಗಾರನೇ: ಗಾಳಿಯು ಹೆಚ್ಚಾಗಿ ಬೀಸಿದಂತೆ ಬೆಂಕಿಯು ಉರಿಯುವುದೂ ಹೆಚ್ಚಲ್ಲವೇ? 

(ಅತಿಯಾಗಿ ಬೀಸಿದಾಗ ದೀಪಜ್ವಾಲೆಯು ಆರಿಹೋಗುವುದು ನಿಜವೇ ಆದರೂ) ಅನಲಕ್ಕೆ ಅನುಗುಣವಾದ ಅನಿಲವು ಆಡಿದಲ್ಲಿ ಅಗ್ನಿಯ ತಾಪವು ಹೆಚ್ಚುವುದಲ್ಲವೆ? ಹೀಗಾಗಿ ಮೂಲಾಧಾರ-ಸ್ಥಾನದಲ್ಲಿ ಉಂಟಾಗಿರುವ ಅಗ್ನಿಗೆ ಅಪಾನವಾಯುವಿನ ಸಹಕಾರವೇರ್ಪಟ್ಟಾಗ ಅಲ್ಲಿ ತಾಪವು ಹೆಚ್ಚುವುದು. 

ತಂಪಾಗಿಯೂ ಗಟ್ಟಿಯಾಗಿಯೂ ಇರುವ ಪದಾರ್ಥಗಳಿಗೆ ತಾಪವು ತಟ್ಟುತ್ತಲೇ ಅವು ದ್ರವಿಸುವುದುಂಟು: ನೀರಿನ ರಾಶಿಯು ಹೆಪ್ಪುಗಟ್ಟಿ ಮಂಜಿನ ಗಡ್ಡೆಯಂತೆ ಮೊದಲಿದ್ದದ್ದು, ತಾಪವು ತಗಲುತ್ತಲೇ ಕರಗಲು ಅಣಿಯಾಗುತ್ತದೆ. ತಾಪವು ಹೆಚ್ಚುತ್ತಿದ್ದಂತೆ ಕರಗಿ ಕೆಳಮುಖವಾಗಿ ಹರಿಯುವುದು. 

ಹಾಗೆಯೇ ತಾಲು-ಮೂಲವನ್ನು ಚಂದ್ರ-ಸ್ಥಾನವೆನ್ನುವುದು ಯೋಗದ ಪರಿಭಾಷೆ. ತಾಲು-ಮೂಲವೆಂದರೆ ದವಡೆ: ನಾಲಿಗೆಯ ಮೂಲ-ಸ್ಥಾನ. ಮೇಲೆ ಸೂಚಿಸಿದ ಯೋಗ-ಕ್ರಿಯೆಯಿಂದಾಗಿ ಅಲ್ಲಿಂದೊಂದು ರಸವು ಒಳಗೇ ಹರಿಯುವುದು. ಆ ರಸವು ಅಮೃತದ ಧಾರೆಯ ಹಾಗೆ ಆಸ್ವಾದ್ಯವಾಗಿರುವುದು. ಇದರ ಪಾನವು ಒಂದು ವಿಶಿಷ್ಟವಾದ ಆನಂದವನ್ನು ಉಂಟುಮಾಡುವುದು. ಹೀಗೆ ರಸಾಸ್ವಾದ-ಆನಂದಾನುಭವಗಳು ಇಲ್ಲಿ ಉಂಟಾಗುವುವು.ಈ ಚಂದ್ರಾಮೃತಾಸ್ವಾದದಿಂದ ಒದಗಿ ಬರುವ ತೃಪ್ತಿಯೂ ವಿಶಿಷ್ಟವಾದದ್ದು. 

ಯಾರು ಧನ್ಯರು?

ಹಸಿವು-ನೀರಡಿಕೆಗಳ ಬಾಧೆಯು ಎಲ್ಲರಿಗೂ ಹಿಂಸೆಯೇ: ಯಾವುದೇ ಕ್ಷೇತ್ತ್ರದಲ್ಲಿಯ ಸಾಧನೆಯನ್ನು ಮಾಡುವವರಿಗೂ ಈ ಹಸಿವು-ಬಾಯಾರಿಕೆಗಳ ಹಿಂಸೆಯಿರಬಾರದಷ್ಟೆ.ದೊಡ್ಡ ಸಾಧನೆಯನ್ನು ಮಾಡಹೊರಡುವ ಮಂದಿ ಉಪಾಯವಾಗಿ ಮಿತಾಹಾರಿಗಳಾಗುವರು. ಮಿತಿಮೀರಿದ ಆಹಾರಸೇವನೆಯು ಉದರಭಾರ-ಮೈಭಾರಗಳ ಭಾವನೆಯನ್ನು ಕೊಡುವುದು; ಹೃದಯವು ಹೆಚ್ಚಾಗಿ ಹೊಡೆದುಕೊಳ್ಳುವುದು; ಮಂಪರು-ತೂಕಡಿಕೆ-ಆಲಸ್ಯಗಳ ಕಾಟವು ಆರಂಭವಾಗುವುದು; ಮನಸ್ಸನ್ನು ಏಕತ್ರ ಕೇಂದ್ರೀಕರಿಸಲಾಗದಂತಹ ಪರಿಸ್ಥಿತಿಯೇರ್ಪಡುವುದು. ಯೋಗದ ಸಾರವೇ ಏಕಾಗ್ರತೆ. ಅದಕ್ಕೇ ಧಕ್ಕೆಯಾಗುವುದಾದಲ್ಲಿ ಯೋಗ-ಪ್ರಗತಿಯ ಮಾತೆಲ್ಲಿ? 

ಈ ಚಂದ್ರ-ಸುಧಾ-ಪಾನದಿಂದ ಹಸಿವು-ನೀರಡಿಕೆಗಳು ಹತೋಟಿಗೆ ಬರುವುವು. ಸುಭೋಜನದಿಂದಾಗುವ ತೃಪ್ತಿಯನ್ನು ಮೀರಿಸುವ ತೃಪ್ತಿಯು ಉಂಟಾಗುವುದು.ಅದು ಯಾರಿಗೆ ಲಬ್ಧವಾಯಿತೋ ಅಂತಹವರನ್ನು ಧನ್ಯರೆಂದು ಇಲ್ಲಿ ಕರೆದಿದೆ.(ಹಸಿವು-ಬಾಯಾರಿಕೆಗಳ ಹಿಂಸೆಯಾಗುತ್ತಿರಬಾರದೆಂದೇ ಬಲಾ-ಅತಿಬಲಾ - ಎಂಬ ವಿದ್ಯೆಗಳನ್ನು ರಾಮ-ಲಕ್ಷ್ಮಣರಿಗೆ ವಿಶ್ವಾಮಿತ್ರರು ಉಪದೇಶಿಸಿದುದೂ.)

 

ಉತ್ಥಾಪಿತಾಧಾರ-ಹುತಾಶನೋಲ್ಕೈಃ

       ಆಕುಂಚನೈಃ ಶಶ್ವದ್ ಅಪಾನವಾಯೋಃ |

ಸಂತಾಪಿತಾತ್ ಚಂದ್ರಮಸಃ ಪತಂತೀಂ

      ಪೀಯೂಷ-ಧಾರಾಂ ಪಿಬತೀಹ ಧನ್ಯಃ ||೭||

ಸೂಚನೆ : 29/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಜೀವಕ್ಕೊಂದು ವಿಮೆ ಇರಲಿ (Jivakkondu Vime Irali)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್
(ಪ್ರತಿಕ್ರಿಯಿಸಿರಿ lekhana@ayvm.in)


ಕೃಷಿಕನೊಬ್ಬನಿದ್ದ. ಅವನ ವ್ಯವಸಾಯದ ಕಾರ್ಯದಲ್ಲಿ ಅವನ ಮಕ್ಕಳಿಗೇನೂ ಆಸಕ್ತಿ ಇರಲಿಲ್ಲ. ಆತ ಅಕಾಲಮೃತ್ಯುವಿಗೀಡಾದ. ಅವನ ಮಕ್ಕಳು ಮನೆಯಲ್ಲಿ ವಿವಿಧ ಬಗೆಯ ಬೀಜಗಳ ಪೊಟ್ಟಣಗಳನ್ನು ಗಮನಿಸಿದರು. ಆ ಬೀಜದ ಪೊಟ್ಟಣಗಳನ್ನು ಮನೆಯ ನಿವೇಶನದಲ್ಲಿ ಅಲ್ಲಲ್ಲಿ ಸುರಿದರು. ತಮಗೆ ತಿಳಿದಷ್ಟು ಅವುಗಳ ಆರೈಕೆ ಮಾಡಿದರು. ಕೆಲವು ಬೀಜಗಳು ಬೆಳೆದವು. ಒಮ್ಮೆ ನಸುಕಿನಲ್ಲಿ ಉತ್ಸಾಹದಿಂದ ಹಣ್ಣುಗಳೇನಾದರೂ ಸಿಗಬಹುದೆಂದು ಗಿಡಗಳ ಮೇಲೆ ಕೈಯಾಡಿಸಿದರು. ಅದೊಂದು ಮುಳ್ಳುಗಿಡ ! ಕೈಗೆ ಮುಳ್ಳುಗಳು ತಗುಲಿ, ನೋವಾಯಿತು. ಈ ಗಿಡಗಳನ್ನು ನಾವು ಆರೈಕೆ ಮಾಡಿದ್ದಕ್ಕೆ ಇಂತಹ ಪ್ರತಿಫಲ ಸಿಗುವುದೇ! ಎಂದು ಕೋಪದಿಂದ ಕೂಗಾಡಿದರು. ಪಕ್ಕದ ಮನೆಯಾತ ನೋಡುತ್ತಿದ್ದ. ಏನಾಯಿತೆಂದು ವಿಚಾರಿಸಿದ. "ನಾವು ಹಣ್ಣಿನ ಗಿಡ ಹಾಕಿದ್ದಕ್ಕೆ ನಮಗೆ ಸಿಕ್ಕಿದ್ದು ಮುಳ್ಳುಗಳು! ಕೈಗೂ ಮನಸ್ಸಿಗೂ ನೋವಾಯಿತು" ಎಂದರು, ಮಕ್ಕಳು. ಅದಕ್ಕೆ ಆತ ಹೀಗೆಂದ-"ನಿಮ್ಮ ತಂದೆ ಬೇಲಿಗಾಗಿ ಇಟ್ಟಿದ್ದ ಮುಳ್ಳಿನ ಬೀಜಗಳವು. ನೀವು ಹಣ್ಣಿನ ಬೀಜಗಳನ್ನು ಹಾಕಿದ್ದರಿಂದ ಮುಳ್ಳಿನ ಗಿಡಗಳು ಬಂದಿಲ್ಲ. ಸ್ವಲ್ಪ ಹಾಗೇ ಕಣ್ಣು ಹಾಯಿಸಿ; ಅಲ್ಲಲ್ಲಿ ಹಣ್ಣಿನ ಗಿಡಗಳೂ ತಲೆಯೆತ್ತಿವೆ; ಕೆಲವು ಈಗಲೇ ಹಣ್ಣನ್ನು ಬಿಡಲಾರಂಭಿಸಿವೆ. ಇನ್ನು ಕೆಲವು ಹಣ್ಣಾಗಲು ವರ್ಷಗಳೇ ಕಾಯಬೇಕು."

ಹೀಗೆಯೇ ನಮ್ಮ ಜನ್ಮ ಜನ್ಮಾಂತರದ ಒಳ್ಳೆಯ ಹಾಗೂ ದುಷ್ಟ ಕರ್ಮಗಳೂ ಅವುಗಳ ಕಾಲ ಬಂದಾಗ ಫಲವನ್ನು ಕೊಟ್ಟೇ ಕೊಡುತ್ತವೆ. ಕೆಲವು ಬೇಗನೆ; ಕೆಲವು ನಿಧಾನವಾಗಿ. ತಿಳಿದೋ ತಿಳಿಯದೆಯೋ ನಾವೇ ಹಾಕಿದ್ದ ಮುಳ್ಳುಗಿಡಗಳೂ ಒಂದಲ್ಲ ಒಂದು ದಿನ ಬೆಳೆದು ನಮ್ಮನ್ನು ನೋಯಿಸುವಂತೆ ನಾವೇ ಹಿಂದೆ ಮಾಡಿದ್ದ ದುಷ್ಕರ್ಮಗಳೂ ಆಗಾಗ ಫಲ ಕೊಡುತ್ತವೆ. ಗಾಳಿಯೇ ಎಲ್ಲಿಂದಲೋ ನಮ್ಮ ನಿವೇಶನಕ್ಕೆ ಹೊತ್ತು ತಂದ ಮುಳ್ಳು ಬೀಜಗಳೂ ಫಲ ಕೊಡಬಹುದು. ಯಾರದೋ ತಪ್ಪಿಗೆ ನಾವು ಶಿಕ್ಷೆಯನ್ನು ಅನುಭವಿಸಿದಂತೆ ತೋರುವ ಪ್ರಸಂಗಗಳಿವು. ನಮ್ಮ ಕೆಲಸವಿಷ್ಟೆ- ನಮಗೆ ತಿಳಿದಷ್ಟು ಎಚ್ಚರಿಕೆಯಿಂದ ಇರಬಹುದು. ಪಾದರಕ್ಷೆ ಧರಿಸಿ ಓಡಾಡಬಹುದು; ಕೈಗವಸು ಹಾಕಿಕೊಂಡು ಕಳೆ, ಮುಳ್ಳುಗಳನ್ನು ಕಿತ್ತುಹಾಕಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ಬರುವ ನೋವುಗಳು ಅನಿವಾರ್ಯ. 


ಅನಂತಕಾಲದವರೆಗೆ ಗಿಡಗಳು ಫಲ ಕೊಡಲಾರವು. ಹಾಗೆಯೇ ನಮ್ಮ ಕಷ್ಟವಾಗಲಿ, ಸುಖವಾಗಲಿ ಶಾಶ್ವತವಾಗಿ ಇರುವುದಿಲ್ಲ. ಹಲಸಿನ ಹಣ್ಣಿನಲ್ಲಿ, ಅದರೊಳಗಿನ ಅಂಟು, ಅದರ ಮೇಲಿನ ಮುಳ್ಳು - ಎಲ್ಲವೂ ಅದರ ಅವಿಭಾಜ್ಯ ಅಂಗಗಳೇ. ಅವುಗಳನ್ನು ಸೈರಿಸಿಕೊಂಡರಷ್ಟೇ ಸ್ವಾದಿಷ್ಠವಾದ ಹಲಸಿನ ಹಣ್ಣನ್ನು ಆಸ್ವಾದಿಸಬಹುದು. ಹಾಗೆಯೇ ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟಗಳ ಮಧ್ಯೆಯೇ ಸುಖವನ್ನರಸಬೇಕು. ಅನಾರೋಗ್ಯ/ಅಕಾಲಮೃತ್ಯು ಮುಂತಾದ ಕಷ್ಟಕಾಲವು ಎಂದಾದರೂ ಬರಬಹುದೆಂಬ ನಿರೀಕ್ಷೆಯಿಂದಲೇ ನಾವು ಜೀವವಿಮೆ ಮಾಡಿಸುತ್ತೇವೆ. ಅಂತೆಯೇ, ನಿಮ್ಮ ಜೀವಕ್ಕೆ ಭಗವಂತನ ಆಶ್ರಯವೇ ಜೀವದೊಡನೆ ಎಂದೆಂದೂ ಬರುವ ವಿಮೆ; ಅದನ್ನು ಪಡೆದುಕೊಳ್ಳಿ ಎಂಬರ್ಥದಲ್ಲಿ ಶ್ರೀರಂಗಮಹಾಗುರುಗಳು ನುಡಿದ ಮಾತುಗಳು ಸರ್ವದಾ ಸ್ಮರಣೀಯ.


ಕಷ್ಟಗಳು ಬಂದಾಗಲೂ ಮನಸ್ಸು ಕುಗ್ಗದಿದ್ದರೆ ಅವನು ಸುಖಿಯೇ. ಸುಖಗಳಿದ್ದಾಗಲೂ, ತನಗೆ ಮತ್ತಷ್ಟು ಸುಖಗಳಿಲ್ಲವಲ್ಲ ಎಂದು ಕೊರಗುವವನು ದುಃಖಿಯೇ. ಜೀವವಿಮೆಯನ್ನು ಮಾಡಿಸಿಕೊಂಡವನು ಧೈರ್ಯವಾಗಿ ಕಷ್ಟಕಾಲವನ್ನು ಎದುರಿಸುವಂತೆ, ಭಗವಂತನನ್ನು ನಂಬಿಕೊಂಡೇ ಜೀವನದ ಕಷ್ಟಕಾಲಗಳನ್ನು ಎದುರಿಸೋಣ. ಕಷ್ಟಪರಿಹಾರಕ್ಕೆ ಕೈಲಾದಷ್ಟು ಯತ್ನಿಸೋಣ.


ಸೂಚನೆ: 29/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

Thursday, May 27, 2021

ನಮ್ಮ ದೇಶದ ತಾಯಿ-ತಂದೆಯರೇ ನಮಗೆ ಆದರ್ಶ (Namma Desada Tayi-Tandeyare Namage Adarsa)

ಡಾ. ರಾಮಮೂರ್ತಿ ಟಿ.ವಿ

(ಪ್ರತಿಕ್ರಿಯಿಸಿರಿ lekhana@ayvm.in)


ಲೋಕದಲ್ಲಿ ಸಂತಾನಪಾಲನೆ ಎಲ್ಲಾ ಪ್ರಾಣಿಗಳಲ್ಲಿಯೂ ಇರುವಾಗ, ಭಾರತೀಯರು ತಾಯಿತಂದೆಯರನ್ನುಮಾತೃದೇವೋ ಭವ, ಪಿತೃದೇವೋಭವ (ತೈತ್ತಿರೀಯ ಉಪನಿಷದ್ವಾಣಿ) ಹೀಗೆಲ್ಲಾ ಹೇಳುವುದು ಅತಿಶಯೋಕ್ತಿಯಲ್ಲವೆ? ಎನ್ನಿಸುವುದುಂಟು. ಈ ಋಷಿವಾಣಿಯು ವಿವೇಚನಾರ್ಹ.ಪ್ರಾಣಿಗಳಲ್ಲಿ ದುರ್ಲಭವಾದ ಮತ್ತು ಆತ್ಮಸಾಧನೆಗೆ ಬೇಕಾದಶರೀರವನ್ನು ಕೊಟ್ಟ ಮತ್ತು ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ, ಮಕ್ಕಳನ್ನು ಬೆಳೆಸುವ ತಾಯಿತಂದೆಯರು ಪೂಜನೀಯರಾಗುತ್ತಾರೆ ಎಂಬುದು ಭಾರತೀಯರಚಿಂತನೆ. ತಾಯಿಯಾದವಳು ಗರ್ಭಸ್ಥ ಶಿಶುವಿನ ದೆಸೆಯಿಂದ ಪಡುವ ಕಷ್ಟವನ್ನು ಶಂಕರಭಗವತ್ಪಾದರು 'ಮಾತೃಪಂಚಕ"ದಲ್ಲಿ ಸ್ತೋತ್ರಮಾಡುತ್ತಾರೆ. ಶ್ರೀರಂಗಮಹಾಗುರುಗಳ ಮಾತಿನಂತೆ-"ಭಗವಂತ-ಭಗವತಿಯರಿಂದ ಜೀವದ ಕಡೆಗೆಏನು ಹರಿದು ಬರುತ್ತದೆಯೋ ಅದನ್ನರಿತು ತರುವವನೇ ತಂದೆ. ತಂದೆ, ಏನು ತಂದೆ? ಎಂದರೆ, ಜ್ಞಾನವನ್ನು ತಂದೆ-ಎನ್ನುವವನೇ ತಂದೆ. ಅವನ ಜ್ಞಾನವು ತಾನಾಗಿಯೇ ಬೆಳೆದು ವಿಸ್ತಾರಗೊಳ್ಳಲು ಬಯಸಿದಾಗ ಅದನ್ನು ಹೊತ್ತುಬೆಳೆಸುವವಳೇ ತಾಯಿ". ಜ್ಞಾನಬೀಜವನ್ನೇ ಮುಂದೆ ನೀಡುವ ತಂದೆಯಾಗಬೇಕು ಎಂಬುದೇ ಸಹಜವಾದ ಅಪೇಕ್ಷೆ.ತಾಯಿಯು ಅಂತಹ ಬೀಜವನ್ನು ತನ್ನ ಗರ್ಭದಲ್ಲಿ ಪೋಷಿಸಿ ಸತ್ಸಂತಾನವನ್ನು ಬೆಳೆಸುವ ಪರಾ ಪ್ರಕೃತಿಯಪ್ರತಿನಿಧಿಯಾಗಬೇಕು. ತಾಯಿ-ತಂದೆಯರು ಅಜ್ಞಾನವೆಂಬ ಕತ್ತಲೆಯನ್ನು ನಿವಾರಿಸುವಂತಹ ಹರಿಸದೃಶ ಗುರುವನ್ನುತೋರಿಸುವಂತಹವರಾಗಬೇಕು. ಅದಕ್ಕೇ ಮಾತೃದೇವೋ ಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬಸಂಸ್ಕಾರ ಗುರುಕುಲದಲ್ಲೇ ಆಗುತ್ತಿತ್ತು.

ಇಂತಹ ತಾಯಿತಂದೆಯರನ್ನು ಪೂಜ್ಯಭಾವದಿಂದ ಆದರಿಸುವುದನ್ನು  ನಮ್ಮ ಸನಾತನ ಸಂಸ್ಕೃತಿಯಲ್ಲಿ ಯಜ್ಞವೆಂದೇಪರಿಗಣಿಸುತ್ತಾರೆ. ಕುಟುಂಬದ ಯಾವುದೇ ಶುಭ ಸಮಾರಂಭವಾಗಲೀ ತಂದೆತಾಯಿಯರ ಪಾದಪೂಜೆ ಮಾಡಿಅನುಮತಿ ಪಡೆದು ಪ್ರಾರಂಭಿಸುವುದು ಸತ್ಸಂಪ್ರದಾಯ. ಮಾತಾಪಿತೃಗಳ ಮತ್ತು ಆಚಾರ್ಯನ ಸೇವೆಯೇ ಪರಮತಪಸ್ಸು ಮತ್ತು ಅವರ ಅನುಮತಿಯಿಲ್ಲದೇ ಬೇರೆ ಯಾವ ಧರ್ಮವನ್ನೂ ಆಚರಿಸಲಾಗದು. ಮಾತಾಪಿತೃಗಳು ಮತ್ತುಅಚಾರ್ಯನು ಮೂರುಲೋಕಗಳನ್ನು ಪಡೆಯಲು ಕಾರಣಭೂತರಾದವರು.ಪುರಾಣಪ್ರಸಿದ್ಧವಾದ ಕಥೆಯೊಂದರಲ್ಲಿ ಗಣೇಶನು ಜನನೀ-ಜನಕರನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿದಾಗ,ಉಮಾಮಹೇಶ್ವರರು ಇದು ತ್ರಿಲೋಕ ಪ್ರದಕ್ಷಿಣೆಗೆ ಸಮ ಎಂಬ ತೀರ್ಮಾನಕ್ಕೆ ಬಂದು ಗಣೇಶನಿಗೆ ಬಹುಮಾನಕೊಡುತ್ತಾರೆ. ಪಂಡರೀನಾಥನು ಪುಂಡರೀಕನ ಮಾತಾಪಿತೃಗಳ ಸೇವೆಯನ್ನು ಮೆಚ್ಚಿ ಇಟ್ಟಿಗೆಯ ಮೇಲೆ ತನ್ನಭಕ್ತನಿಗಾಗಿ ಕಾದಿರುವ ಕಥೆ ಲೋಕಪ್ರಸಿದ್ಧವಲ್ಲವೇ! ಹೀಗಾಗಿ ಪುಂಡರೀಕನು ಭಾಗವತೋತ್ತಮರಲ್ಲಿ ಒಬ್ಬನಾಗಿದ್ದಾನೆ.ಪಿತೃವಾಕ್ಯಪರಿಪಾಲಕ ಶ್ರೀರಾಮ, ತನ್ನ ತಂದೆಯ ಮಾತನ್ನುಳಿಸಲಿಕ್ಕಾಗಿ ೧೪ ವರ್ಷ ವನವಾಸ ಮಾಡುತ್ತಾನೆ.ಮಹಾಭಾರತದ ಪ್ರಖ್ಯಾತ ಪ್ರಸಂಗವಾದ ಯಕ್ಷನ ಪ್ರಶ್ನೆಯೊಂದಕ್ಕೆ ಯುಧಿಷ್ಠಿರನುಕೊಟ್ಟ ಉತ್ತರ- "ತಾಯಿಯು ಭೂಮಿಗಿಂತಲೂ ಭಾರ. ತಂದೆಯು ಆಕಾಶಕ್ಕಿಂತಲೂ ಎತ್ತರ".  ಜ್ಞಾನಕ್ಕೆ ಮಿಗಿಲಾದದ್ದುಮತ್ತು ಜ್ಙಾನಕ್ಕೆ ಸಮಾನ ಹಾಗೂ ಪವಿತ್ರವಾದದ್ದು ಇಲ್ಲ, ತಂದೆಯಾದವನು ಇಂತಹ ಜ್ಞಾನವನ್ನು ಪಡೆಯುವುದಕ್ಕೆದಿಗ್ದರ್ಶನ ಮಾಡುವವನಾದ್ದರಿಂದ ಅವನು ಆಕಾಶಕ್ಕಿಂತಲೂ ಎತ್ತರ. ತಾಯಿಯ ಬಗ್ಗೆ  ಕೃತಜ್ಞತಾಭಾವ ತುಂಬಿದಾಗ  ಅದುಇಳಿಸಲಾರದ ಭಾರವಾಗುತ್ತದೆ. ತಾಯಿಯ ಕೃತಜ್ಞತೆಯನ್ನು ತೀರಿಸುವುದು ಅಸಾಧ್ಯವಾದ್ದರಿಂದ ಅವಳು ಭೂಮಿಗಿಂತ ಭಾರವಾಗುತ್ತಾಳೆ. ಇಂತಹ ಜ್ಞಾನದ ಮಾರ್ಗವನ್ನು ತೋರಿಸುವ ನಮ್ಮ ದೇಶದ ತಾಯಿ-ತಂದೆಯರು ಆದರ್ಶ. ತಾಯಿ-ತಂದೆಯರಲ್ಲಿ ಪೂಜ್ಯ ಭಾವ ಕಾಣಬೇಕಾದುದು ಮಕ್ಕಳ ಆದರ್ಶ. ಭಾರತೀಯರಾಗಿ ಈ ಆದರ್ಶಗಳನ್ನು ಪಾಲಿಸೋಣ.

ಸೂಚನೆ: 27/5/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.


Tuesday, May 25, 2021

ನರಸಿಂಹಾವತಾರ : ಕಥೆಯ ಮರ್ಮ (Narasinhavatara : Katheya Marma)

ಲೇಖಕರು: ಡಾ|| ಕೆ. ಎಸ್. ಕಣ್ಣನ್
(BSc, MA (Sanskrit), MPhil, PhD, ವಿದ್ವತ್)
(ಪ್ರತಿಕ್ರಿಯಿಸಿರಿ lekhana@ayvm.in)


ಸಾಲು ಸಾಲು ಹಬ್ಬಗಳು
ಜನಸಾಮಾನ್ಯರು ಚಿಂತಿಸುವ ಬಗೆಗೂ ಕನ್ನಡಿ ಹಿಡಿಯುವ ಸಾಮರ್ಥ್ಯವು ಮಹಾಕವಿಗಳಿಗೆ ಇರುತ್ತದಷ್ಟೆ. ಇದಕೊಂದು ಸಾಕ್ಷಿ ಕಾಳಿದಾಸನ ಈ ಕಿರುನುಡಿ: "ಉತ್ಸವಪ್ರಿಯಾಃ ಖಲು ಮನುಷ್ಯಾಃ" : ಮನುಜರು ಉತ್ಸವಪ್ರಿಯರು. ಪಿಳ್ಳೆನೆವವನ್ನಾದರೂ ಮಾಡಿಕೊಂಡು ಸಂಭ್ರಮಪಡುವಾಸೆ ಯಾರಿಗಿರದು? ಜನಸಾಮಾನ್ಯರ ಎನ್ಸೈಕ್ಲೋಪೀಡಿಯಾ (ವಿಶ್ವಕೋಶ) ಎಂದೇ ಕರೆಸಿಕೊಳ್ಳುವ ಪುರಾಣಗಳಲ್ಲಿ ನಿರೂಪಿಸಲಾದ ಹಬ್ಬಗಳು ಅದೆಷ್ಟು! ಅವುಗಳ ವೈವಿಧ್ಯ-ವೈಶಿಷ್ಟ್ಯಗಳಿಗಾಗಲಿ ಆ ಸಂದರ್ಭಗಳ ಅಡುಗೆ-ಆಚರಣೆಗಳಿಗಾಗಲಿ ಬೇರಾವ ದೇಶದಲ್ಲಿ ಎಣೆ ಕಾಣುವೆವು? ಹಬ್ಬಗಳೆಲ್ಲ ಭಗವಂತನ ಅವತಾರಗಳನ್ನು ಕುರಿತಾದವೇ. ಅವತಾರಗಳ ಉದ್ದೇಶವೊಂದೇ ಆದರೂ ಅವುಗಳ ಬಗೆ ಹಲವು.

ಧರ್ಮಗ್ಲಾನಿ
ಭಗವಂತನ ಅವತಾರವಾಗುವುದು "ಧರ್ಮಗ್ಲಾನಿ"ಯಾದಾಗ. ಗ್ಲಾನಿಯೆಂದರೆ ಬಾಡುವುದು. ಯಾವುದಾದರೂ ಬಾಡುವುದು ಅಲ್ಲಿಯ ರಸ ಬತ್ತಿದಾಗ. ಧರ್ಮದ ಹೊರತೋರಿಕೆ ಮಾತ್ರವಿದ್ದು, ಒಳಗೆ ರಸವಿಲ್ಲವಾದಾಗ ಧರ್ಮಗ್ಲಾನಿ. ಇದಾದಲ್ಲಿ ಅಸುರರ ಪ್ರಾಬಲ್ಯ ಹೆಚ್ಚಾಗಿದೆಯೆಂದೇ. ಹಿರಣ್ಯಾಕ್ಷ-ಹಿರಣ್ಯಕಶಿಪುಗಳಿಂದಾಗಿ ಹಾಗಾಯಿತು: ಭಗವದವತಾರವಾಗಬೇಕಾಯಿತು. ನರಸಿಂಹಾವತಾರದಲ್ಲಾದುದು ಹಿರಣ್ಯಕಶಿಪುವಿನ ಸಂಹಾರ. ಹಿರಣ್ಯಕಶಿಪು ಮಾಡಿದ ಉಗ್ರವಾದ ತಪಸ್ಸಿಗೆ ಬ್ರಹ್ಮನೇ ಮೆಚ್ಚಿ, "ಹಿಂದಿನ ಋಷಿಗಳೂ ಹೀಗೆ ಮಾಡಿದ್ದಿಲ್ಲ" ಎಂದ! ಅಸುರರು ಬಲು "ಜಾಣತನದ ವರ"ಗಳನ್ನು ಕೇಳಿಕೊಳ್ಳುವರೇ. "ಬ್ರಹ್ಮನೇ, ನೀನು ಸೃಷ್ಟಿಸಿದ ಜೀವಿಗಳಿಂದ ನನಗೆ ಸಾವು ಬರಬಾರದು; ಒಳಗಾಗಲಿ ಹೊರಗಾಗಲಿ (ನಾಂತರ್ ಬಹಿಃ), ಹಗಲಾಗಲಿ ಇರುಳಾಗಲಿ (ದಿವಾ ನಕ್ತಂ), ನೆಲದ ಮೇಲಾಗಲಿ ಆಕಾಶದಲ್ಲಾಗಲಿ (ನ ಭೂಮೌ ನಾಂಬರೇ), ಮನುಷ್ಯರಿಂದಾಗಲಿ ಪ್ರಾಣಿಗಳಿಂದಾಗಲಿ (ನ ನರೈಃ ನ ಮೃಗೈಃ), ಯಾವುದೇ ಆಯುಧದಿಂದಾಗಲಿ - ನನಗೆ ಸಾವು ಬರಬಾರದು" ಎಂದ. ಸುರಾರಿ ಚಾಪೆಯಡಿಯಲ್ಲಿ ತೂರಿದರೆ ಮುರಾರಿ ರಂಗೋಲೆಯಡಿಯಲ್ಲಿಯೇ ತೂರಿಬರುವನು, ತೋರಿಬರುವನು! ವರಬಲದಿಂದ ಚಿನ್ನದ ಮೈ ಬಂದಿತು (ಹೇಮಮಯಂ ವಪುಃ) ಹಿರಣ್ಯನಿಗೆ! ಸಾವಿನ ಭಯವಿಲ್ಲ: ಬಹುಬೇಗನೆ ಲೋಕಕಂಟಕನೇ ಆದ: ಉಪಟಳ ಉಲ್ಬಣವಾಯಿತು. ಕಂಗೆಟ್ಟು ದೇವತೆಗಳು ಲೋಕರಕ್ಷಕನತ್ತ ಧಾವಿಸಿದರು. "ಪುತ್ರ ಪ್ರಹ್ಲಾದನಿಗೆ ಆತ ತೊಂದರೆ ಕೊಡುತ್ತಾನಲ್ಲಾ, ಆಗಾಗುವುದು ಶಾಸ್ತಿ!" ಎಂದು ಧೈರ್ಯವಿತ್ತ, ವಿಷ್ಣು. "ಭಾಗವತರಲ್ಲಿ ಮೊದಲನೆಯ ರ್‍ಯಾಂಕ್ ಎಂದರೆ ಪ್ರಹ್ಲಾದನಿಗೇ" ಎಂದು ಪೂಜ್ಯರಂಗಪ್ರಿಯ ಸ್ವಾಮಿಗಳು ಉದ್ಗರಿಸಿದ್ದಾರೆ. "ಪ್ರಹ್ಲಾದೋ ಜನ್ಮವೈಷ್ಣವಃ"! "ನನ್ನ ಮಗನೇ ಆಗಿದ್ದೂ ನನ್ನ ವೈರಿಯಾದ ವಿಷ್ಣುವನ್ನು ಅರ್ಚಿಸುವುದೇ !" ಎಂದು ಕೆಂಡವಾದ ಹಿರಣ್ಯಕಶಿಪು ಪುಟ್ಟ ಪ್ರಹ್ಲಾದನಿಗೆ ಕೊಡದ ಕಿರುಕುಳವಿಲ್ಲ. ಭಗವದ್ಭಕ್ತಿಯ ಪರವಶತೆಯಲ್ಲಿ ಪ್ರಹ್ಲಾದನು ಮಾಡಿದ ವಿಷ್ಣುಸ್ತುತಿಯಿಂದ ಕೆರಳಿದ ಹಿರಣ್ಯಕಶಿಪು. "ಎಲ್ಲೆಡೆ ಇರುವ ನಿನ್ನ ವಿಷ್ಣುಈ ಕಂಭದಲ್ಲಿರುವನೋ?" ಎಂದು ಮೂದಲಿಸಿ ಆ ಸ್ತಂಭಕ್ಕೊಂದು ಮುಷ್ಟಿಪ್ರಹಾರ ಮಾಡಿದ. ತತ್-ಕ್ಷಣವೇ ಅಲ್ಲೇ ಆವಿರ್ಭವಿಸಿದವನೇ ನರಸಿಂಹ: "ನ ಮೃಗಂ ನ ಮಾನುಷಂ"! ಸ್ವನಖದಿಂದಲೇ ಹಿರಣ್ಯಕಶಿಪುವನ್ನು ಸಂಹರಿಸಿದ! ಲೋಕಕಂಟಕ ಧ್ವಂಸವಾಯಿತು! ಇಂತಹ ಅಲೌಕಿಕ ಘಟನೆಯ ನೆನೆಪಿಗಾಗಿ ಈ ಉತ್ಸವ.

ನರಸಿಂಹಾವತಾರದ ತತ್ತ್ವ-ರಹಸ್ಯ
ಈ ಅವತಾರದ ತತ್ತ್ವವೇನು? – ಎಂಬುದರ ಎರಡು-ಮೂರು ಅಂಶಗಳನ್ನು ಇಲ್ಲಿ ಗಮನಿಸಬಹುದು. ಮೊದಲನೆಯದಾಗಿ, ತ್ರಿಮೂರ್ತಿಗಳ ಸಂಗಮ ನರಸಿಂಹ: ನಾಭಿಪರ್ಯಂತವಾಗಿ ಬ್ರಹ್ಮ; ಅಲ್ಲಿಂದ ಕಂಠಪರ್ಯಂತವಾಗಿ ವಿಷ್ಣು; ಅಲ್ಲಿಂದ ಶಿರಸ್ಸಿನವರೆಗೆ ರುದ್ರ; ಅದಕ್ಕೂ ಮೇಲೆ ಪರಬ್ರಹ್ಮವೇ ಆದವನು. ನಾವು ಹೇಳಿಕೊಳ್ಳುವ "ಗುರುರ್ಬ್ರಹ್ಮಾ ಗುರುರ್ವಿಷ್ಣುಃ…" ಎಂಬ ಶ್ಲೋಕದ ಮೂರ್ತರೂಪವಾದ ವ್ಯಾಖ್ಯಾನವೇ ಈ ಶ್ರೀಗುರು-ನರಸಿಂಹ! ಎರಡನೆಯದಾಗಿ ಇಲ್ಲಿಯ ಸಂಧ್ಯಾಕಾಲವೂ ನಮ್ಮೊಳಗಿನ ಸಂಧ್ಯೆಯ ಪ್ರತೀಕವೇ. ಲಯ-ವಿಕ್ಷೇಪಗಳ ಸಂಧಿಕಾಲವೇ ಯೋಗಸಾಧನೆಯಲ್ಲಿ ಸಮುನ್ನತಿಗೆ ಸುಸಮಯ. ಮೂರನೆಯದಾಗಿ, ನರಸಿಂಹನು ಆವಿರ್ಭವಿಸಿದ ಸ್ತಂಭವಾವುದು? ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿರುವಂತೆ ಅದು ನಮ್ಮ ಬೆನ್ನುಮೂಳೆಯೇ. ಅದಕ್ಕೇ ಮೇರುಸ್ತಂಭವೆಂದು ಹೆಸರು, ಯೋಗಶಾಸ್ತ್ರದಲ್ಲಿ. ಸುಷುಮ್ನೆಯಲ್ಲಿ ಗೊಚರಿಸುವ ಅಂತರ್ಜ್ಯೋತಿ- ಅಂತರ್ನಾದಗಳ ಒಂದು ಯೋಗವಿಶೇಷವೇ ಯೋಗಮೂರ್ತಿ ನರಸಿಂಹ. ಈ ಸು-ಯೋಗಪ್ರಾಪ್ತಿಯೇ ಧರ್ಮಸಾರ, ಧರ್ಮರಸ.

ಏಕಲಕ್ಷ್ಯ
ದೊಡ್ಡ ತಪಸ್ಸು ಮಾಡಿದ ದೊಡ್ಡ ಬಲದಿಂದ ಸ್ವಹಿತ-ಪರಹಿತಗಳನ್ನು ಸಾಧಿಸಬಹುದಿತ್ತು; ಬದಲಾಗಿ ಸ್ವಹಾನಿ-ಪರಹಾನಿಗಳನ್ನು ತಂದುಕೊಂಡ ಹಿರಣ್ಯಕಶಿಪು. ಬಲದ ದುರುಪಯೋಗವೆಂದರೆ ಧರ್ಮಗ್ಲಾನಿ ಸಿದ್ಧವೇ. ರೋಗದ ಉಗ್ರತೆಗೆ ಸರಿಸಮನಾಗಿ ಯೋಗದ ಮೂರ್ತಿಯಾಗಿ ಅವತರಿಸಿ ಧರ್ಮಸಂಸ್ಥಾಪನೆಯನ್ನು ಮಾಡಿದ ನರಸಿಂಹನೇ ನಮ್ಮ ಬುದ್ಧಿಯನ್ನು ಪ್ರಚೋದಿಸಲಿ: ತನ್ನೋ ನಾರಸಿಂಹಃ ಪ್ರಚೋದಯಾತ್ !.

ಸೂಚನೆ: 25/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.


नरसिंहावतार-कथा-तत्त्वम् (Narasimhavatara - Katha - Tattvam)

डा. के एस् कण्णन्  DLitt.
SRSJM Chair Professor,
IIT-Madras, Chennai.  
(प्रतिक्रियां दातुं शक्यते :  lekhana@ayvm.in)



"उत्सवप्रियाः खलु मनुष्याः" - इत्यभिदधता कालिदासेन मानवसामान्यान्तरङ्गमेव परामृष्टमिति सुवचम् । व्याजं कमपि विनिर्मायाप्युत्सवेषु व्याप्रियमाणा दरीदृश्यन्ते जनाः ।

साधारणजनानेव मनसिकृत्य सरलभाषयैव गहनान् विषयान् प्रतिपादयन्ति पुराणान्यपि पर्वकालसम्बद्धान्बहूनुत्सवान् निरूपयन्ति । ईदृक्षपर्वकालाऽऽचर्यमाणोत्सवानां सङ्ख्या यथाऽपरिमिता वर्तते, तद्वदेव तत्तत्प्रसङ्गनिर्वर्त्यमाना आचारविशेषाः पाकप्रकाराश्च परिपाठेन निदर्शयितुं न शक्यन्ते । पर्वाणि च तानि भगवदवतारानेवाभिलक्षयन्ति । अनन्तास्सन्तोऽप्यवतारास्समानलक्ष्यकास्सन्तोऽपि प्रकारान्नैकानाविष्कुर्वन्ति ।

धर्मग्लानिः
यदा यदा हि धर्मस्येति प्रसिद्धगीताभणित्यनुसारमेव धर्मग्लानिप्रतिविधानं कर्तुकामो भगवांस्तदा तदाऽवतरति । का नाम धर्मग्लानिः? ग्लानि-म्लानी समानार्थिके । नैरस्यापन्नानि कुसुमानि नाम म्लायन्ति यद्वत्तद्वदेव धर्मोऽपि ग्लायति। दम्भशालिषु तावज्जृम्भमाणैर्बाह्याचरणैस्सम्यक्त्वप्रतीतिकारिता विराजते ; परन्तु सारभागो धर्मो रिक्तीभूत एव । यथा यथाऽसुराः प्रबलास्सञ्जायन्ते, तथा तथा धर्मग्लानिरवश्यम्भाविनी । हिरण्याक्ष-हिरण्यकशिप्वोर्हेतोस्सञ्जातं धर्मपराभवमभिभावयितुं भगवदवतारापेक्षा समजनि | प्रकृते च हिरण्यकशिपोस्संहारार्थकं नरसिंहावतारं किञ्चिदिव समीक्षितुं समीहामहे ।

हिरण्यकशिपुना विहितस्य तपस औग्र्यमभिनन्दन्ब्रह्मा साश्चर्यं स्वयमुज्जगार "नैतत्पूर्वर्षयश्चक्रुः!" इति ! वृणीष्व काङ्क्षितं वरमिति च । स्वस्य सशरीरस्यामर्त्यतां सिषाधयिषुर्हिरण्यकशिपुः "नान्तर्बहिर्दिवा नक्तमन्यस्मादपि चायुधैः । न भूमौ नाम्बरे मृत्युर्न नरैर्न मृगैरपि" इत्यप्राक्षीद्वरम् ।

लब्धवरो दैत्योऽयं हेममयं वपुर्बिभ्राणो निरस्तमृत्युभीतिस्सन्नचिराल्लोककण्टक एव समजायत । मर्माणि विध्यन्तं तमसहमाना देवास्स्थितिकारकं विष्णुं भृशं प्रार्थयामासुः । "अचिरादसौ स्वपुत्रं प्रह्लादमेव व्यथयिष्यति मद्भक्तं, यदेव निमित्तीकृत्य भङ्क्ष्यामि तमसुरमिति वीतचिन्ता भवत" - इत्याश्वास्य विससर्ज तान् विष्णुर्भगवान् ।

"भागवतेषु स्थानं प्राथमिकं खलु भजत्येष प्रह्लादः" - इति पूज्याः श्रीरङ्गप्रियस्वामिनः युक्तमेवोचुः । यतो हि "प्रह्लादो जन्मवैष्णवः" इति किल गीयते । "मदीयः पुत्रस्सन् मामकीनं वैरिणमेव विष्णुमसावभिपूजयति" इत्यतिमात्रं क्रुध्यन् हिरण्यकशिपुर्विधाभिर्विविधाभिः क्रूराभिः प्रह्लादमर्दयामास । "क्वासौ यदि स सर्वत्र कस्मात् स्तम्भे न दृश्यते?" इति दुरुक्तीरभिभाषमाण एव हिरण्ये, "अदृश्यतात्यद्भुतरूपमुद्वहन् स्तम्भे सभायां न मृगं न मानुषम्" ! एवमाविर्भूयासुरमिमं लीलया नखैर्ददार व्यापादयामास च । घटनाया अमुष्याः स्मारणर्थकोऽयमुत्सव आचर्यते ।

अवतार-तत्त्वम्
रहस्यभूतान् द्वित्रानंशानत्रानुसन्दध्मः । प्रथमोंऽशोऽयं यत्त्रिमूर्तिसङ्गमस्थानभूतोऽसौ भगवान्नरसिंहः । यथाऽहुः प्राञ्चः -
"आनाभेर्ब्रह्मणो रूपमागलाद् वैष्णवं वपुः । आशीर्षाद्रुद्रमीशानं तदग्रे सर्वतः शिवम्॥" इति ।

द्वितीयोंऽशस्सन्ध्याकालसम्बद्धः । आन्तरिक्यास्सन्ध्यायाः प्रतीकभूतोऽयं योगशास्त्रोपलक्षितं लयविक्षेपसन्धिभूतं प्रशस्तं समयमेव संसूचयति ।

तृतीयश्चायमंशः - को नामाऽयं स्तम्भः यत्राऽत्मानमाविर्भावयाम्बभूव भगवान्नरसिंहः? योगिपुङ्गवैश्श्रीरङ्गमहागुरुभिःप्रतीचीनदर्शनैस्समीचीनतया यथा प्रत्यपादि, तथाऽस्मदीयपृष्ठवंश एवासौ, य एव मेरुस्तम्भ इत्यप्यभिधां धत्ते । सुषुम्नायां गोचरीभवन्नन्तर्ज्योतिरन्तर्नादयोर्योग एवासौ योगमूर्तिर्नृसिंहः । सुयोगस्यास्य संप्राप्तिरेव धर्मसारो धर्मरसश्च सर्वग्लानिपरिहारकः ।

ऐकलक्ष्यम्
महता तपसा महद्बलं सम्पाद्य स्वहित-परहितसंसाधने सर्वथा समर्थस्सन्नपि हिरण्यकशिपुस्स्वहानिपरहानी एव समासादितवान् । यत्र यत्र बलं स्वं स्थानं वा दुष्ठूपयुङ्क्ते कश्चित्तत्र तत्र धर्मग्लानिःकृतपदैवेति मन्तव्यम्। औग्र्यं रोगस्य प्रतिकर्तुमनुरूपां योगमयीं मूर्तिं बिभ्रदसौ नरसिंहः प्रेरयेन्नस्सर्वान्साध्व्यां सरण्याम् - "तन्नो नारसिंहः प्रचोदयात्" ! - इति शम् ।

Monday, May 24, 2021

ಆರ್ಯಸಂಸ್ಕೃತಿ ದರ್ಶನ - 44 (Arya Samskruti Darshana - 44)



ಭೂಮಿಯನ್ನು ಹಿಡಿದಿರುವ ಶಕ್ತಿಗಳಾವುವು ?

ಲೇಖಕರು: ವಿದ್ವಾನ್ ಛಾಯಾಪತಿಗಳು 

 

ಇದೆಂತಹ ಪ್ರಶ್ನೆ?  ಭೂಮಿ ಒಂದು ಆಕಾಶಕಾಯ. ಸೌರವ್ಯೂಹದಲ್ಲಿ ಬರುತ್ತದೆ ಅದು, ಆದ್ದರಿಂದ ಸೌರಾಕರ್ಷಣಬಲದ ಮೇಲೆ ನಿಂತಿದೆ. ಖಗೋಳ ಶಾಸ್ತ್ರದ ಪ್ರಥಮ ಪಾಠವನ್ನು ಬಲ್ಲವನಿಗೂ ಈ ವಿಷಯ ಗೊತ್ತು, ಹೀಗಿರುವಾಗ ಈ ಪ್ರಶ್ನೆಗೆ ಅರ್ಥವೇನು?

 

 ಮಹರ್ಷಿಗಳ ಭೂಸೂಕ್ತದಲ್ಲಿ  ಒಂದು ಮಾತಿದೆ

 "ಸತ್ಯಂ ಬೃಹದೃತಂ ಉಗ್ರಂ ದೀಕ್ಷಾ ತಪೋ ಬ್ರಹ್ಮ ಯಜ್ಞಃ  ಪೃಥಿವೀಂ ಧಾರಯಂತಿ"

 "ಸತ್ಯ, ಬೃಹತ್ತಾದ ಋತ ಉಗ್ರವಾದ ದೀಕ್ಷೆ, ತಪಸ್ಸು, ಬ್ರಹ್ಮ, ಯಜ್ಞ ಇವುಗಳು ಭೂಮಿಯನ್ನು ಧರಿಸಿವೆ." 

 

ಈ ಮಾತನ್ನು ಕೇಳಿದರೆ ಇಂದಿನ ನಮಗೆ ನಗು ಬರುವಂತಿದೆ, ವೈಜ್ಞಾನಿಕವಾದ ಅರಿವಿಲ್ಲದ ಕಲ್ಪನೆಯಿದು, ಸತ್ಯ-ಋತ-ದೀಕ್ಷೆ-ತಪಸ್ಸುಗಳು ಭೂಮಿಯನ್ನು ಹಿಡಿದುಕೊಂಡಿರುವ ಶಕ್ತಿಗಳು ಎಂದರೇನರ್ಥ ? ಅವುಗಳು ಹೇಗೆ ಹಿಡಿದುಕೊಂಡಿವೆ?  ಅದನ್ನು ಅರಿತದ್ದು ಹೇಗೆ ? ಅರಿಯುವುದು ಹೇಗೆ ?

 

 ಸೌರಾಕರ್ಷಣಶಕ್ತಿ ಭೂಮಿಯನ್ನು ಧರಿಸಿದೆ ಎಂದರೆ ಏನರ್ಥ? ನೇರವಾಗಿ ಆ ಶಕ್ತಿ ಕಣ್ಣಿಗೆ ಕಾಣುವುದಿಲ್ಲ, ಅವುಗಳ ಕಕ್ಷೆ,ಚಲನಗಳ ಆಧಾರದ ಮೇಲೆ ಪತ್ತೆ ಹಿಡಿದ ವಿಷಯ ಆದು. ಭೂಗೋಲವನ್ನು ಧರಿಸಿರುವ ಶಕ್ತಿ ಅದು ಎಂಬುವುದನ್ನು ಅದನ್ನೂ ಪರಿಸರವನ್ನೂ ಅಳೆದುಬಂದ ಅರಿವಿನ ಆಧಾರದ ಮೇಲೆ ನಿರ್ಣಯಿಸಿರುತ್ತಾರೆ.

 

ಮಹರ್ಷಿಗಳು ಯಾವ ಆಧಾರದ ಮೇಲೆ ಮೇಲಿನ ಶಕ್ತಿಗಳು ಪೃಥಿವಿಯನ್ನು ಹಿಡಿದಿವೆ ಎಂದು ನಿರ್ಣಯಿಸಿದರು? ಆ ನಿರ್ಣಯ ಸಮಂಜಸವೇ? ಎಂಬುದೂ ವಿಚಾರಮಾಡಬೇಕಾದ ಅಂಶವಾಗಿದೆ. 

 

ಒಂದು ದೇಶ ಎಂದಾಗ ಬರೀ ಭೂಮಿಯನ್ನಷ್ಟೇ ಅಲ್ಲದೇ ಆಲ್ಲಿರುವ ಜೀವಿಗಳನ್ನೂ ನಾವು ಗಣಿಸುತ್ತೇವೆ. ಹಾಗೆಯೇ ಇಲ್ಲಿ ಪೃಥಿವೀ ಎಂದರೆ ಕೇವಲ ಭೂಮಂಡಲ ಎಂದು ಮಾತ್ರ ಅರ್ಥವಲ್ಲ; ಭೂಮಿಯನ್ನಾಶ್ರಯಿಸಿ ಬಾಳುತ್ತಿರುವ ಜೀವಲೋಕ ಎಂದು ಅರ್ಥ.

 

ಪೃಥಿವೀಂ ಧಾರಯಂತಿ -ಎಂದರೆ ಕೇವಲ ಭೂಗೋಲವನ್ನು ಹಿಡಿದಿರುವ ಶಕ್ತಿಗಳು ಎಂದಷ್ಟೇ ಅಲ್ಲ, ಅಲ್ಲಿರುವ ಜೀವಲೋಕವನ್ನು ಧರಿಸಿರುವ ಶಕ್ತಿಗಳಾವುವು ? ಎಂಬ ಅರ್ಥದಲ್ಲಿ ತೆಗೆದುಕೊಂಡಾಗ ಪೃಥ್ವಿಯನ್ನೂ, ಮತ್ತು, ಜೀವಲೋಕವನ್ನೂ ಧರಿಸಿರುವ ಶಕ್ತಿಗಳಾವುವು ಎಂಬುದನ್ನು ವಿಚಾರಮಾಡಬೇಕಾಗುತ್ತದೆ.

 

 ಮೊಟ್ಟ ಮೂದಲನೆಯದಾಗಿ ಸತ್ಯಂ ಎಂಬುದು ಆ ಶಕ್ತಿ. ಸತ್ಯ ಎಂದರೆ ಕೇವಲ ಇದ್ದದ್ದನ್ನು ಇದ್ದ ಹಾಗೆ ಹೇಳುವುದು ಎಂದಷ್ಟೇ ಅಲ್ಲ, ಅದು ಸತ್ಯದ ಮಾತಿನ ರೂಪ ಅಷ್ಟೇ. ಮಾತು ಎನ್ನುವುದಕ್ಕಿಂತಲೂ ವಿಸ್ತಾರವಾದುದು ಸತ್ಯ ಎನ್ನುವುದು. ಸತ್ ಎಂದರೆ ಇರುವುದು ಎಂದರ್ಥ. ಯಾವುದಿರುವುದರಿಂದ ವಿಶಾಲವಾದ ವಿಶ್ವವಿರುವುದೋ ಆ ವಿಶಾಲ ವಿಶ್ವದ ಇರುವಿಕೆಗೆ ಕಾರಣವಾದ ಶಕ್ತಿ ಸತ್ಯ. ಪೃಥಿವಿ ಎಂಬ ಆಕಾಶಕಾಯವನ್ನು  ಸೌರಾಕರ್ಷಣ ಶಕ್ತಿ ಹಿಡಿದಿದೆ ಎಂಬುದೂ ವಿಜ್ಞಾನದ ಅಳತೆಗೆ ನಿಲುಕಿದ ಸತ್ಯದ ಒಂದು ಅಂಶ ಅಷ್ಟೇ. ಈ ಭೂಮಿಯನ್ನು ಮಾತ್ರವೇ ಅಲ್ಲ, ವಿಶಾಲವಾದ ವಿಶ್ವವನ್ನೇ ಹಿಡಿದಿರುವುದು ಅವುಗಳಿಗೆ ಇರವನ್ನು ಕೊಟ್ಟಿರುವುದು ಸತ್ಯವೇ. ವಿಶಾಲವಾದ ವಿಶ್ವದ ಜೊತೆಗೆ, ಅಲ್ಲಿ ಬಾಳುವ ಜೀವಲೋಕಕ್ಕೂ  ಇರುವಿಕೆಯನ್ನು ಕೊಟ್ಟಿರುವ ಶಕ್ತಿ ಯಾವುದುಂಟೋ ಅದು ಸತ್ಯ. ತಾನು ಇರುವುದರ ಮೂಲಕ ಜೀವಿಗಳ ಇರುವಿಕೆಗೆ ಕಾರಣವಾದ ಜೀವಲೋಕವೆಲಾ ಅಳಿದರೂ, ಉಳಿದರೂ, ಇರುವ, ಇರುವಿಕೆಯೊಂದನ್ನೇ ಸ್ವಭಾವವಾಗಿ ಉಳ್ಳ ಮಹಾಶಕ್ತಿಯನ್ನೇ "ಸತ್ಯ"ಎಂದು ಆಳವಾದ ತಪಸ್ಯೆಯಿಂದ ಋಷಿಗಳು ಅರ್ಥ ಮಾಡಿಕೊಂಡರು. ಇಂದೂ ಇದೆ ಹಿಂದೆಯೂ ಇತ್ತು ಮುಂದೆಯೂ ಇರುತ್ತದೆ-ಎಂದು ತ್ರಿಕಾಲಗಳಲ್ಲೂ ಯಾವುದರ ಇರುವಿಕೆಗೆ ತಡೆಯೇ ಇಲ್ಲವೋ ಅಂತಹ ವಸ್ತುವನ್ನೇ ಅವರು ಸತ್ಯ ಎಂಬ ಪದದಿಂದ ಕರೆದರು. ಆದ್ದರಿಂದ ಜೀವಲೋಕಕ್ಕೂ, ಆದಕ್ಕೆ ಆಶ್ರಯವಾದ ಭೂಮಿಗೂ ಎರಡಕ್ಕೂ ಆಶ್ರಯ ನೀಡಿರುವ, ಎರಡರ ಇರುವಿಕೆಗೂ ಆಧಾರವಾಗಿರುವ ಶಕ್ತಿಯೇ ಸತ್ಯ. ಆದ್ದರಿಂದ, ವೈಜ್ಞಾನಿಕವಾದ ನೋಟವು ಬರೀ ಭೌತಿಕವಾದ ಭೂಮಂಡಲದ ಇರುವಿಕೆಗೆ ಕಾರಣವಾದ ವಿಜ್ಞಾನದ ಅಳತೆಗಳಿಗೆ ಸಿಕ್ಕುವ ಸೌರಾಕರ್ಷಣಶಕ್ತಿ ಹಿಡಿದಿದೆ ಎಂದರೆ, ಆ ಶಕ್ತಿಯು ಇರುವಿಕೆಗೂ  ಕಾರಣವಾದ "ಸತ್ಯ"-ಭೂಮಿಯನ್ನೂ ಜೀವಲೋಕವನ್ನೂ ಹಿಡಿದಿದೆ ಎಂಬ ಆಳವಾದ ನೋಟ ಮಹರ್ಷಿಗಳದ್ದು. 

 

ಆ ಸತ್ಯವನ್ನು ವಿಸ್ತಾರಗೊಳಿಸಿದ, ಯಾವುದು ಇಟ್ಟ ನಿಯಮದಿಂದ ವಿಶ್ವವೆಲ್ಲವೂ ನಡೆಯುತ್ತಿದೆಯೋ ಅಂತಹ ಬೃಹತ್ತಾದ ಶಕ್ತಿಯೇ ಋತ. ಸತ್ಯರೂಪವಾಗಿ  ವಿಶ್ವವನ್ನು ವಿಸ್ತಾರಗೊಳಿಸಿ ಹಿಡಿದಿರುವ ಮಹಾಶಕ್ತಿ ಅದು. 

ಋತ- ಸತ್ಯಗಳು ವಿಶ್ವವನ್ನು ಹಾಗು ಭೂಮಿಯನ್ನು ಧರಿಸಿವೆ ಎಂಬುದರ ಅರಿವು ಮೂಡಲು, ಆ ಅರಿವನ್ನು ಪಡೆಯಲು ವಿಶ್ವಮೂಲವೂ ಮತ್ತು ಜೀವಲೋಕದ ಮೂಲವೂ ಆಗಿರುವ ಆ ವಸ್ತುವನ್ನು ಅರಿಯಲು ಉಗ್ರವಾದ ದೀಕ್ಷೆ ಬೇಕು. ಆ ದೀಕ್ಷೆ ಮತ್ತು ಅದಕ್ಕನುಗುಣವಾದ  ತಪಸ್ಸು ಎರಡೂ ಇದ್ದಾಗ- ವಿಶ್ವವು ಯಾವುದನ್ನವಲಂಬಿಸಿ ನಿಂತಿದೆ ಎಂಬ ಅರಿವು ಮೂಡುತ್ತದೆ. ಆದ್ದರಿಂದ ತಪಸ್ಸು ಮತ್ತು  ದೀಕ್ಷೆಗಳೂ ಪೃಥಿವಿಯನ್ನು ಧರಿಸಿರುವ ಶಕ್ತಿಗ ಳೇ. 

 

ಬ್ರಹ್ಮ ಎಂದರೆ ಈ ಬೃಹತ್ತಾದ ವಿಶ್ವವಿಸ್ತಾರಕ್ಕೆ ಕಾರಣವಾದ ಶಕ್ತಿ. ಬೀಜವು  ಅದರಿಂದ ವಿಸ್ತಾರಗೊಂಡ ಮರವನ್ನು ಧರಿಸಿದೆ ಎಂಬಂತೆ, ಬ್ರಹ್ಮವು ತನ್ನಿಂದ ವಿಸ್ತಾರಗೊಂಡ ಪೃಥಿವಿಯನ್ನು ಧರಿಸಿದೆ. 

 

ಯಜ್ಞವು ಪೃಥಿವಿಯನ್ನು ಧರಿಸಿರುವ ಶಕ್ತಿ. ಯಜ್ಞವೆಂದೊಡನೆಯೇ ನಮ್ಮ ಮನಸ್ಸು ಅದೊಂದು ಹಿಂಸಾರೂಪವಾದ ಕರ್ಮ, ಪಶುಬಲಿ ನೀಡುವ ಕರ್ಮ, ಎಂದು ಪರಿಮಿತವಾದ ಅರ್ಥದಲ್ಲಿ ತೆಗೆದುಕೊಳ್ಳುತ್ತದೆ. ಮೊದಲು ಯಜ್ಞ ಯಾಗಾದಿಗಳು ಬಹಳವಾಗಿ ಪ್ರಚಾರದಲ್ಲಿದ್ದವು.  ಬುದ್ಧನ ಅಹಿಂಸಾ ತತ್ತ್ವ ಪ್ರಚಾರವಾದ ನಂತರ ಅವುಗಳೆಲ್ಲವೂ ನಿಂತುಹೋದವುಎಂಬ ಅಭಿಪ್ರಾಯವೂ ಪ್ರಚಾರದಲ್ಲಿದೆ. ಅಂತೆಯೇ ಹಲವು ಸಾಹಿತ್ಯಗಳಲ್ಲಿ ಮಕ್ಕಳ ಓದಿಗಾಗಿ ಇರುವ  ಗ್ರಂಥಗಳಲ್ಲಿ ಸಾವಿರಾರು ಕುರಿಗಳನ್ನು ಯಜ್ಞಶಾಲೆಗೆ ಒಯ್ಯುವ ವೃತ್ತಾಂತವನ್ನು ನಾವು ನೋಡುತ್ತೇವೆ. ನಾಟಕವೊಂದರಲ್ಲಿ ಬಿಂಬಸಾರನ ಯಜ್ಞಶಾಲೆಗೆ ಮೂರು ಸಾವಿರ ಕುರಿಗಳನ್ನು ಅಟ್ಟಿಕೊಂಡು ಹೋಗುತ್ತಿದ್ದರೆಂದೂ ಬುದ್ಧನು ಅವನ ಯಾಗಶಾಲೆಯನ್ನು ಪ್ರವೇಶಿಸಿ ಆ ಪ್ರಾಣಿವಧೆಯನ್ನು ತಡೆಗಟ್ಟಿದನೆಂದೂ ಬರುವ ವರ್ಣನೆಯನ್ನು ಕಾಣುತ್ತೇವೆ. 

 

ಯಜ್ಞದ ಬಗೆಗೆ ಅರಿವನ್ನು ಮೂಡಿಸುವುದಕ್ಕಿಂತ ಈ ಚಿತ್ರಗಳು ಅಜ್ಞಾನವನ್ನು ಹರಡುತ್ತದೆ. ಮೊದಲನೆಯದಾಗಿ ಯಜ್ಞ ಎಂದರೆ ದೇವಪ್ರೀತಿಕರವಾದ ಕರ್ಮ, ಪೂಜೆ ಎಂದರ್ಥ. ಯಜ್ಞಪದದ ಮೂಲಧಾತು "ಯಜ" ಎಂಬುದು. ಅದರ ಅರ್ಥ ದೇವಪೂಜೆ ಎಂಬುದು. "ಬಲಿ" ಎಂದರೆ ಕತ್ತರಿಸುವುದು ಎಂದರ್ಥವಲ್ಲ. ಬಲಿ ಎಂದರೆ-ನಿವೇದನೆ- ದೇವರಿಗಾಗಿ ಸಮರ್ಪಣೆ ಎಂಬರ್ಥವಿದೆ.  ಮೇಲಾಗಿ ಯಜ್ಞವನ್ನು ಹೇಳುವ ಯಾವ ಶಾಸ್ತ್ರಗಳಲ್ಲಿಯೂ ಕುರಿಯನ್ನು ಯಜ್ಞಾಂಗವಾಗಿ ಬಳಸುವ ಪ್ರಶ್ನೆಯೇ ಇಲ್ಲ, ವಿಶಿಷ್ಟ ಲಕ್ಷಣಯುಕ್ತವಾದ ಭಾಗ (ಅಂದರೆ ಆಡನ್ನು ) ಬಲಿಯಾಗಿ ಬಳಸಿ ಅದರ ವಪೆಯನ್ನು ಹೋವು ಮಾಡುವ ಒಂದು ಉಲ್ಲೇಖವಿದೆ. ಸಾವಿರಾರು ಕುರಿಗಳನ್ನು ಯಜ್ಞದಲ್ಲಿ ಬಳಸುವ ಸನ್ನಿವೇಶ ಇಲ್ಲವೇ ಇಲ್ಲ. ಅದು ಕೇವಲ ಕಲ್ಪನಾಜಾಲ. ಅಂತಹ ಭಾಗವೊಂದನ್ನು ಪಶುವಾಗಿ ಬಳಸಬೇಕು. ಪಿಷ್ಟಪಶು ಎಂದರೆ ಹಿಟ್ಟಿನಿಂದ ಪಶುವನ್ನು ಮಾಡಿ ಹೋಮ ಮಾಡಿದರೆ ಸಾಕು ಎಂಬಂಶವೂ ಇದ್ದು, ಬಹುವಾಗಿ ಪಿಷ್ಟಪಶು ಯಾಗವು ಶಾಸ್ತ್ರೀಯವೆಂದು ಅಂಗೀಕೃತವಾಗಿದೆ. ಪ್ರತ್ಯಕ್ಷ ಭಾಗವನ್ನೇ"ಯಜ್ಞ"ಕಾಗಿ ಬಳಸುವ ಸನ್ನಿವೇಶದಲ್ಲಿಯೂ, ಅಲ್ಲಿ ನಡೆಯುವ ಕ್ರಿಯೆಗಳು ವೈಜ್ಞಾನಿಕವಾಗಿ, ಅರ್ಥಪೂರ್ಣವಾಗಿ ನಡೆದರೆ ಅದು ಹಿಂಸಾರೂಪವಲ್ಲದೆ, ಅಹಿಂಸಾರೂಪದಲ್ಲಿಯೇ ಪರ್ಯವಸಾನವಾಗುವುದೆಂಬುದನ್ನು ಮನಗಾಣಲು ಸಾಕಷ್ಟು ಅಂಶಗಳಿವೆ. ಆ ಎಲ್ಲವನ್ನೂ ಈ ಸಂಕ್ಷಿಪ್ತ ಬರಹದಲ್ಲಿ ವಿವರ ನೀಡುವುದಕ್ಕಿಂತ ಅದಕ್ಕಾಗಿಯೇ ಮತ್ತೊಂದು ಬರಹವನ್ನು ನೀಡಬಹುದು. 

 

ಪ್ರಕೃತ, ಯಜ್ಞ ಎನ್ನುವುದು ಕೇವಲ ಹಿಂಸಾರೂಪವಾದ ಕರ್ಮವಲ್ಲ. ಯಜ್ಞವೇದಿಕೆಯೊಂದರ ನಿರ್ಮಾಣವಾಡಿ, ದೃವ್ಯಗಳನ್ನು ಬಳಸಿ, ನಡೆಸುವ ಯಾವ ಕ್ರಿಯೆಯನ್ನು ನಾವು ಯಜ್ಞವೆಂದು ಕರೆಯುತ್ತೇವೆಯೋ ಅದು ಯಜ್ಞದ ಒಂದು ರೂಪವಷ್ಟೇ. ಆದೇ ಅದರ ಸಾರಸರಸ್ವವಲ್ಲ.   ಯಜ್ಞದ ಮರ್ಮವನ್ನು ಬಲ್ಲ ಜ್ಞಾನಿಗಳ ದೃಷ್ಟಿಯಲ್ಲಿ ಇಡೀ ಜೀವ ಲೋಕವೆಲ್ಲವೂ ಯಜ್ಞಕ್ಕಾಗಿಯೇ ಸೃಷ್ಟವಾದುವು. ಜೀವನ ಮಾಡುವ ವಿಧಾನವೆಲ್ಲವೂ ಯಜ್ಞಮಯ. ಈ ಯಜ್ಞವು ಒಂದು ಕಾಲದಲ್ಲಿದ್ದು ಮರೆಯಾಗುವ ಬದುಕಲ್ಲ. ಅದು ಬುದ್ಧನ ಹಿಂದೆಯೂ ಇತ್ತು. ಮುಂದೆಯೂ ಇತ್ತು. ಇಂದೂ ಇವೆ. ಮುಂದೆಯೂ ಇರುತ್ತದೆ. ಅದರ ಮರ್ಮವರಿತು ಬಾಳಿದರೆ ಬದುಕು ಹಸನಾಗುತ್ತದೆ. 

 

 ಶಾಸ್ತ್ರೀಯವಾಗಿಯೇ ತೆಗೆದುಕೊಂಡರೂ ಮನುಷ್ಯನು ಪ್ರತಿದಿವಸವೂ ಐದು ಬಗೆಯ ಯಜ್ಞಗಳನ್ನು ಮಾಡಬೇಕು ಎಂದು ನಿಯಮವಿದೆ. ದೇವ-ಪಿತೃ ಋಷಿ-ಭೂತ-ಮನುಷ್ಯ ಯಜ್ಞಗಳೇ ಅವು, ದೇವಪೂಜೆಯೇ ದೇವಯಜ್ಞ. ಪಿತೃಗಳಿಗೆ ಕವ್ಯರೂಪವಾಗಿ ತೃಪ್ತಿಪಡಿಸುವುದು ಪಿತೃಯಜ್ಞ. ಋಷಿಗಳು ಕೊಟ್ಟ ಜ್ಞಾನ ಸಂಪತ್ತನ್ನೂ ವಿದ್ಯಾಸಂಪತ್ತನ್ನೂ ಅರಿತು ಅದರ ಅರಿವನ್ನು ಬೆಳೆಸುವುದು ಋಷಿಯಜ್ಞ. ಅತಿಥಿಗಳಿಗೆ ಅನ್ನವೀಯುವುದು ಮನುಷ್ಯಯಜ್ಞ. ಸಮಸ್ತಭೂತಗಳಿಗೂ ತೃಪ್ತಿಯುಂಟಾಗುವಂತೆ ನಡೆಯುವುದು ಭೂತಯಜ್ಞ. ಅಂದರೆ, ಭೂತ ಕೋಟಿಗಳಿಗೆ ಆಹಾರ ನೀಡುವುದು ಭೂತಯಜ್ಞವಾಗುತ್ತದೆ. ಇಲ್ಲಿ ಯಾವ ಬಲಿಯ ಪ್ರಸಂಗವೂ ಇಲ್ಲ.

 

ಸೃಷ್ಟಿಯೇ ಒಂದು ಯಜ್ಞರೂಪವಾದುದೆಂದು ಪುರುಷಸೂಕ್ತವು ಹೇಳುತ್ತದೆ. ವಿಶ್ವಮೂಲವಾದ ಶಕ್ತಿಯಿಂದ ಅರಳಿಬಂದ ಜೀವಿಗಳು ನಾವು. ಅಂತೆಯೇ, ನಮ್ಮ ಜೀವನೋಪಕರಣಗಳಾದ ವಸ್ತುಗಳೂ ಆ ಶಕ್ತಿಯಿಂದಲೇ ಅರಳಿ ಬಂದವುಗಳು. ಬೀಜದಿಂದ ಅರಳಿಬಂದ ವೃಕ್ಷವು ಮತ್ತೆ ಬೀಜದಲ್ಲೇ ನಿಂತಾಗ ಹೇಗೆ ಸಫಲವಾಗುವುದೋ ಹಾಗೆ ವಿಶ್ವಮೂಲವಾದ ಮಹಾಶಕ್ತಿಯಿಂದ ಆರಳಿಬಂದ ವಸ್ತುಗಳು ಮತ್ತೆ ಅಲ್ಲಿ ನಿಂತಾಗಲೇ ಅವುಗಳ ಜೀವನವು ಸಾರ್ಥಕವಾಗುತ್ತವೆ. ಆದ್ದರಿಂದ ಪ್ರತಿಜೀವಿಯು ತನ್ನ ಕೈಗೆ ದೊರಕುವ ವಸ್ತುವನ್ನು "ಸೃಷ್ಟಿಮೂಲವಾದ ಶಕ್ತಿಯ ಕಡೆಗೆ, ಅದು ಮುಟ್ಟಲು ಅನುಗುಣವಾದ ವಿಧಾನದಿಂದ ಬಳಸಿಕೊಳ್ಳುವ ಕಲೆಯೇ ಯಜ್ಞ. ನಮ್ಮ ಉಸಿರಾಟವು ಉಸಿರಿನ ಮೂಲವನ್ನು  ಮುಟ್ಟುವಂತೆ ಆದಾಗ ಜ್ಞಾನಿಗಳ ದೃಷ್ಟಿಯಿಂದ ಯಜ್ಞ. ಆಹಾರಸ್ವೀಕಾರವು ಯಜ್ಞ. "ಸೃಷ್ಟಿಯಲ್ಲಿ ವಿಸ್ತಾರಹೊಂದಿಬಂದ ವಸ್ತುವನ್ನು ವಿಕಾರಗೊಳಿಸದೆ ಅದನ್ನು ಸೃಷ್ಟಿಗೆ ಕಾರಣವಾದ ಮೂಲಜ್ಯೋತಿಯ ಕಡೆಗೆ ತಲುಪುವಂತೆ ಬಳಸಬಲ್ಲವನೇ ಯಜ್ಞಮರ್ಮಜ್ಞ." 

 

ನಮ್ಮ ಜೀವನವನ್ನು, ಜೀವನೋಪಕರಣಗಳನ್ನು, ಜೀವನಮೂಲವಾದ ವಿಶ್ವಮೂಲವಾದ ಜ್ಯೋತಿಯ ಕಡೆಗೆ ಅರ್ಪಿಸಿಕೊಳ್ಳುವ ಯಾವ ಕ್ರಿಯೆಯುಂಟೋ ಆ ಎಲ್ಲವೂ ಯಜ್ಞವೇ. ಆದ್ದರಿಂದಲೇ ಶ್ರೀಕೃಷ್ಣನು ಗೀತೆಯಲ್ಲಿ 'ಶ್ರೇರ್ಯಾ ದ್ರವ್ಯಮಯಾದ್ಯಜ್ಞಾದ್ ಜ್ಞಾನಯಜ್ಞಃ ಪರಂತಪ.' ದ್ರವ್ಯದ  ಮೂಲಕ ಯಜ್ಞೇಶನನ್ನು ಆರಾಧಿಸುವುದಕ್ಕಿಂತಲೂ, ಆ ದ್ರವ್ಯಗಳೆಲ್ಲವೂ ಯಾವ ಜ್ಞಾನಮೂಲಕ್ಕೆ ಮುಟ್ಟಬೇಕೋ ಆ ಜ್ಞಾನವನ್ನು ಪಡೆದು ಅವನನ್ನು ಆರಾಧಿಸುವುದು ಶ್ರೇಯಸ್ಕರ ಎಂದು ಸಾರುತ್ತಾನೆ.

 

ಜ್ಞಾನಿಗಳ ನೋಟದಲ್ಲಿ, ಜೀವನವು ಅರಳಿಬಂದಿರುವ ವಿಧಾನವೇ ಯಜ್ಞ ಮತ್ತು ವಿಸ್ತಾರಗೊಳಿಸಿದ ಮಹಾಶಕ್ತಿಯತ್ತ  ಹರಿಯುವಂತೆ ನಡೆಯುವ ಜೀವಲೋಕದ ಕ್ರಿಯಾಕಲಾಪಗಳೆಲ್ಲವೂ ಯಜ್ಞವೇ. ಆದ್ದರಿಂದಲೇ 'ಯಜ್ಞಾರ್ಥಾತ್ ಕರ್ಮಣೋsನ್ಯತ್ರ, ಲೋಕೋsಯಂ ಕರ್ಮಬಂಧನಃ '

 

 ಯಜ್ಞರೂಪವಾದ ಕ್ರಿಯೆಯೊಂದನ್ನು ಬಿಟ್ಟು ಮಾಡುವ ಕ್ರಿಯೆಗಳೆಲ್ಲವೂ ಬಂಧಕವಾದದ್ದು. ಈಶ್ವರನಿಂದ ಬಂದದ್ದನ್ನು ಮತ್ತೆ ಅವನಿಗೇ ತಲುಪುವ ವಿಧಾನದಲ್ಲಿ ಬಳಸಿದಾಗ ಅದು ನಮ್ಮನ್ನು ಕಟ್ಟಿಹಾಕುವುದಿಲ್ಲ ಎಂದು ಶ್ರೀ ಕೃಷ್ಣನು ಸಾರುತ್ತಾನೆ. ಈ ಅರ್ಥದಲ್ಲಿ, ಯಜ್ಞವು ಜೀವಲೋಕವನ್ನು ಧರಿಸಿರುವ ಶಕ್ತಿ. ಅದು ಕೇವಲ ಒಂದು ಕ್ರಿಯಾರೂಪವಷ್ಟೇ ಅಲ್ಲ.

 

ಮೇಲೆ ಹೇಳಿದ ಎಲ್ಲಾ ಶಕ್ತಿಗಳೂ ಜೀವಲೋಕವನ್ನು ಧರಿಸಿವೆ. ಎಲ್ಲದರ ಇರುವಿಕೆಗೆ ಕಾರಣವಾದ ಸತ್ಯದ ಹಿಡಿತ ತಪ್ಪಿದರೆ ಜೀವಲೋಕ ಉಳಿಯುವಂತಿಲ್ಲ,. ಅದರ ಹಿಂಬದಿಯಲ್ಲಿ ಬೆಳಗುವ ಋತವನ್ನು ಬಿಟ್ಟರೂ ಉಳಿಯುವಂತಿಲ್ಲ.ಅದನ್ನರಿಯುವ ನಿಯಮ ಮತ್ತು ತಪಸ್ಯೆಗಳನ್ನು ಬಿಟ್ಟರೆ ಅರಿವೇ ಇಲ್ಲದೆ ನರಳುತ್ತೇವೆ. ಅಂತೆಯೇ ಜೀವಲೋಕವನ್ನು ವಿಸ್ತಾರಗೊಳಿಸಿದ ಶಕ್ತಿ, ಮತ್ತು ಜೀವಲೋಕವನ್ನು ನೆಮ್ಮದಿಯ ನೆಲೆಯತ್ತ ನಡೆಸುವ ಯಜ್ಞರೂಪವಾದ ಕ್ರಿಯಾಕಲಾಪ, ಈ ಎಲ್ಲವೂ ಜೀವಲೋಕವನ್ನು ಹಿಡಿದಿರುವ ಶಕ್ತಿಗಳೇ ಎಂಬುದು ಕೇವಲ ಭೌತಿಕವಷ್ಟೇ ಅಲ್ಲ; ಅದರ ಹಿಂಬದಿಯ ದೈವಿಕ, ಆಧ್ಯಾತ್ಮಿಕವಾದ ನೋಟದಿಂದ ಬಯಲಿಗೆ ಬಂದಿರುವ ಸತ್ಯಗಳು ಎಂಬುದು ಗಮನಾರ್ಹ.

 

ಆದ್ದರಿಂದಲೇ ಅವರು ಭೂಮಿಗೆ ಹೆಸರು ನೀಡುವಾಗ ಕೇವಲ ಮಣ್ಣು, ಗೋಲ,ಎದಷ್ಟೇ ಕರೆಯದೇ, ಭೂಮಿ (ಬಹುವಾಗಿ ವಿಸ್ತಾರಗೊಂಡದ್ದು) ಸತ್ಯಾ, (ಸತ್ಯರೂಪವಾದ ಶಕ್ತಿಯಿಂದ ವಿಕಾಸಗೊಂಡದ್ದು), ಅಮೃತಾ (ಅದರ ನೆಲೆಯತ್ತ ಗಮನವಿಟ್ಟಾಗ ಪ್ರಕೃತಿಯ ಕ್ಷೇತ್ರದಿಂದ ಅಮರತ್ವದ ಕಡೆಗೆ  ಕೈದೋರಬಲ್ಲದ್ದು ಎಂಬ ಹೆಸರುಗಳನ್ನೂ ನೀಡಿದ್ದಾರೆ. ಭೌತಿಕ ಭಾಗವನ್ನೂ ಮರೆಯದೇ, ಜೀವನದ ವ್ಯಾಪ್ತಿಯನ್ನು ತುಂಬಿಕೊಂಡು ನೆಲೆಯಿಂದ ಹರಿದ, ನೆಲೆಯತ್ತ ಹರಿದ ನೋಟವವರದು ಎಂಬುದು ಗಮನಾರ್ಹ. 

 

ಸತ್ಯ, ಋತ, ಉಗ್ರವಾದ ದೀಕ್ಷೆ, ತಪಸ್ಸು, ಬ್ರಹ್ಮ, ಯಜ್ಞ ಇವುಗಳು ವಹರ್ಷಿಗಳ ಕಲ್ಪನೆಯಿಂದ ಮೂಡಿಬಂದ ಹೇಳಿಕೆಗಳ್ಅಲ್ಲ. ತಪೋಮಯವಾದ ಅವರ ಅನ್ವೇಷಣೆಗೆ ಗೋಚರವಾದ ಸತ್ಯಗಳು. ಸೌರಾಕರ್ಷಣೆಯಿಂದ ಭೂಮಿ ಇಂತಿದೆ-ಎಂಬುದು ಹೇಗೆ ಹೊರಗಣ್ಣಿಗೆ ಕಾಣದಿದ್ದರೂ ವೈಜ್ಞಾನಿಕ ಆನ್ವೇಷಣೆಯಿಂದ ಸಿದ್ಧಗೊಂಡ ಸತ್ಯವೋ, ಮೇಲ್ಕಂಡ ಶಕ್ತಿಗಳು ಭೂಮಿ ಮತ್ತು ಜೀವಲೋಕವನ್ನು ಧರಿಸಿವೆ ಎಂಬುದೂ ಅಷ್ಟೇ ಅಥವಾ ಅದಕ್ಕಿಂತಲೂ ಆಳವಾದ ಅನ್ವೇಷಣೆಯಿಂದ ಮೂಡಿಬಂದ ಸತ್ಯ.

 

 ಆ ಅನ್ವೇಷಣೆಯ ಪಥದಲ್ಲಿ ಸಾಗಿ ಅದರ ಒಳಸತ್ಯವನ್ನು ಗುರುತಿಸಿದರೆ ಗುರುತಿಸಿದ ಜೀವಿಯನ್ನು ಆ ಸತ್ಯದಲ್ಲಿ ನಿಲ್ಲಿಸಿ ಶಾಂತಿ ಸಮದ್ಧವಾದ ಅಮೃತವನ್ನು ಆ ಜೀವಿಗೆ ಉಣಿಸುವಂತಹ ಸತ್ಯವದು. ಆ ಸತ್ಯಪಥದತ್ತ ನನ್ನ ಲಕ್ಷ್ಯಸೆಳೆದು, ನನ್ನ ಬುದ್ಧಿ ಭೂಮಿಕೆಗೆ ಆ ಅರಿವನ್ನು ತುಂಬಿದ ಶ್ರೀರಂಗ ಮಹಾಗುರುವಿಗೆ ಈ ಬರಹ ಅರ್ಪಿತವಾಗಲಿ.


ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: 5 ಸಂಚಿಕೆ: 10, ಆಗಸ್ಟ್ 1988 ತಿಂಗಳಲ್ಲಿ  ಪ್ರಕಟವಾಗಿದೆ.