Sunday, July 5, 2026

ವ್ಯಾಸ ವೀಕ್ಷಿತ 195 ನಕುಲನ ದಿಗ್ವಿಜಯ; ಧರ್ಮರಾಜನ ಧರ್ಮರಾಜ್ಯ (Vyaasa Vikshita195)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png

ಅತ್ತ ನಕುಲನು ಉತ್ಸಾಹಿಗಳಾದ ಯೋಧರೊಂದಿಗೆ ಪಶ್ಚಿಮದಿಕ್ಕಿಗೆ ಹೊರಟನು. ಆತನು ಮೊಟ್ಟಮೊದಲು ರೋಹೀತಕ-ಪರ್ವತದತ್ತ ಹೆಜ್ಜೆಯಿಟ್ಟನು. ಬಳಿಕ ಮರು-ಭೂಮಿ (ಎಂದರೆ ಮಾರವಾಡ) ಮತ್ತು ಸುತ್ತಮುತ್ತಲಿನ ಅರಸರನ್ನು ವಶಪಡಿಸಿಕೊಂಡನು.

ಧನಧಾನ್ಯಗಳಿಂದ ತುಂಬಿದ್ದ ಶೈರೀಷಕವೆಂಬ ರಾಜ್ಯವನ್ನು ವಶಪಡಿಸಿಕೊಂಡನು. ಮಹೋತ್ಥವೆಂಬ ದೇಶದ ಅರಸನಾದ ಆಕ್ರೋಶನನ್ನೂ ಗೆದ್ದನು. ಇದಕ್ಕಾಗಿ ಭಾರೀ ಯುದ್ಧವೇ ನಡೆಯಬೇಕಾಯಿತು.

ಆಮೇಲೆ ನಕುಲನು ಶಿಬಿ-ತ್ರಿಗರ್ತ-ಅಂಬಷ್ಠ-ಮಾಳವ ದೇಶಗಳನ್ನು ಜಯಿಸಿದನು. ಬಳಿಕ ಪುಷ್ಕರಾರಣ್ಯವೆಂಬ ಭೂಮಿಯಲ್ಲಿ ವಾಸವಿದ್ದ ಉತ್ಸವಸಂಕೇತ ಎಂಬ ಜನಸ್ತೋಮವನ್ನು ಗೆದ್ದನು. ಸಮುದ್ರದಡದಲ್ಲಿದ ಗ್ರಾಮಣೀಯರೆಂಬ ಕ್ಷತ್ರಿಯರೂ, ಸರಸ್ವತೀನದಿಯನ್ನು ಆಶ್ರಯಿಸಿದ್ದ ಶೂದ್ರ ಆಭೀರಗಣಗಳೂ, ಪರ್ವತವಾಸಿಗಳೂ ಮತ್ಸ್ಯಜೀವಿಗಳೂ ಆದ ಜನಗಣಗಳು - ಇವರೆಲ್ಲರನ್ನೂ ಸೋಲಿಸಿದನು.

ಅಲ್ಲದೆ ರಾಮಠ, ಹಾರ, ಹೂಣ ಮುಂತಾದ ಪಶ್ಚಿಮದ ರಾಜರು - ಇವರುಗಳನ್ನು ತನ್ನ ಆಜ್ಞಾಮಾತ್ರದಿಂದಲೇ ವಶಪಡಿಸಿಕೊಂಡನು. ಅಲ್ಲದೆ, ಅಲ್ಲಿದ್ದುಕೊಂಡೇ ದೂತನೊಬ್ಬನನ್ನು ಶ್ರೀಕೃಷ್ಣನಲ್ಲಿಗೆ ಕಳುಹಿಸಿಕೊಟ್ಟನು. ಕೃಷ್ಣನಾದರೂ ಪ್ರೀತಿಯಿಂದಲೇ ನಕುಲನ ಶಾಸನವನ್ನು ಒಪ್ಪಿಕೊಂಡನು. ಆಮೇಲೆ ಶಾಕಲದೇಶವನ್ನು ಗೆದ್ದು, ಮದ್ರದೇಶದ ಅರಸನನ್ನು - ಎಂದರೆ ತನ್ನ ಸೋದರಮಾವನನ್ನು - ಪ್ರೀತಿಯಿಂದಲೇ ವಶಪಡಿಸಿಕೊಂಡನು.

ಮದ್ರರಾಜನಾದ ಶಲ್ಯನಂತೂ ಆತನನ್ನು ಸಂತೋಷದಿಂದ ಸ್ವೀಕರಿಸಿ ಸತ್ಕರಿಸಿದನು. ಭೂರಿರತ್ನಗಳನ್ನೂ ಕೊಟ್ಟನು. ಆ ಬಳಿಕ ಅತ್ಯಂತ ಭಯಂಕರರೆನಿಸುವ ಮ್ಲೇಚ್ಛರನ್ನು ನಕುಲನು ಸದೆಬಡಿದನು. ಸಾಗರದ ಬಳಿಯಿದ್ದ ಪಹ್ಲವ, ಬರ್ಬರ, ಕಿರಾತ, ಯವನ, ಶಕ - ಇವರುಗಳೆಲ್ಲರನ್ನೂ ಸೋಲಿಸಿದನ; ಅವರಲ್ಲಿದ್ದ ರತ್ನಗಳನ್ನೆಲ್ಲಾ ತನ್ನ ವಶಕ್ಕೆ ಪಡೆದುಕೊಂಡನು.

ಹೀಗೆ ನಾನೋಪಾಯ-ಸಮರ್ಥನಾದ ನಕುಲನು ಕೊನೆಗೆ ತನ್ನ ಸ್ಥಾನವಾದ ಇಂದ್ರಪ್ರಸ್ಥದೆಡೆಗೆ ಸಾಗಿದನು. ನಕುಲನು ಸಂಪಾದಿಸಿದ ಮಹಾಧನವನ್ನು ಹಲವು ಸಾವಿರ ಆನೆಗಳು ಬಹುಶ್ರಮದಿಂದಲೇ ಹೊತ್ತು ಸಾಗಿಸುವದಾಯಿತು.

ಇಂದ್ರಪ್ರಸ್ಥದಲ್ಲಿದ್ದ ವೀರರಾಜನಾದ ಯುಧಿಷ್ಠಿರನಲ್ಲಿಗೆ ಹೋಗಿ, ಧನವನ್ನೆಲ್ಲವನ್ನೂ ಆತನಿಗೇ ಸಮರ್ಪಿಸಿದನು, ನಕುಲ. ಅಂತೂ

 ಹೀಗೆ ವರುಣನ ದಿಕ್ಕಾದ ಪಶ್ಚಿಮವನ್ನು ನಕುಲನು ಗೆದ್ದು ಬಂದನು.

ಈ ರೀತಿಯಲ್ಲಿ ನಾಲ್ಕೂ ದಿಕ್ಕುಗಳ ಜಯವನ್ನು ಸಾಧಿಸಿದ ಮೇಲೆ, ತನ್ನ ಭ್ರಾತೃಗಳೊಂದಿಗೆ ರಾಜನಾದ ಯುಧಿಷ್ಠಿರನು ಭೂಮಿಯನ್ನು ಧರ್ಮದಿಂದ ಆಳಿದನು. ಪ್ರಜೆಗಳು ಅವನ ವಿಷಯದಲ್ಲಿ ಅತ್ಯಂತ ಅನುರಕ್ತರಾದರು. ಮಕ್ಕಳು ತಂದೆಯ ಬಗ್ಗೆ ಯಾವ ಪ್ರೀತಿಯುಳ್ಳವರಾಗುತ್ತಾರೋ ಅಂತಹ ಪ್ರೀತಿಯನ್ನು ಹೊಂದಿದರು. ಆತನನ್ನು ದ್ವೇಷಿಸುವವರೇ ಇಲ್ಲದಾದರು. ಈ ಕಾರಣಕ್ಕಾಗಿಯೇ ಆತನಿಗೆ ಅಜಾತಶತ್ರುವೆಂಬ ಬಿರುದು ಬಂದುದು.

ಧರ್ಮರಾಜನು ರಕ್ಷಣೆಕೊಡುತ್ತಿದ್ದನೆಂಬ ಕಾರಣದಿಂದಲೂ, ಸತ್ಯವನ್ನು ಪರಿಪಾಲಿಸುತ್ತಿದ್ದನೆಂಬ ಕಾರಣದಿಂದಲೂ, ಶತ್ರುಗಳನ್ನು ಧ್ವಂಸಮಾಡುತ್ತಿದ್ದುದರಿಂದಲೂ ಪ್ರಜೆಗಳು ಸ್ವಕರ್ಮ-ನಿರತರಾಗಿಯೇ ಇರುತ್ತಿದ್ದರು. ಸಮೀಚೀನವಾದ ಬಗೆಯಲ್ಲಿ ಯುಧಿಷ್ಠಿರನು ಕರವನ್ನು ತೆಗೆದುಕೊಳ್ಳುತ್ತಿದ್ದುದರಿಂದಲೂ, ಜತಗೆ ಧರ್ಮಾನುಸಾರವಾಗಿಯೇ ಅನುಶಾಸನಮಾಡುತ್ತಿದ್ದುದರಿಂದಲೂ ಯಥೇಚ್ಛವಾಗಿ ಮಳೆಯಾಗುತ್ತಿತ್ತು. ಜನತೆಯೂ ಸಮೃದ್ಧಿಯನ್ನು ಕಂಡಿತು.

ಗೋರಕ್ಷೆಯಾಗಲಿ, ಉಳುಮೆಯಾಗಲಿ ವಾಣಿಜ್ಯವಾಗಲಿ - ಎಲ್ಲಾ ಉದ್ಯಮಗಳೂ ಸರಿಯಾದ ರೀತಿಯಲ್ಲಿ ನಡೆಯುತ್ತಿದ್ದವು. ರಾಜನು ಮಾಡಿದ ಸುವ್ಯವಸ್ಥೆಯಿಂದಾಗಿ ಈ ಕಾರ್ಯಗಳೆಲ್ಲವೂ ಚೆನ್ನಾಗಿ ನೆರವೇರುತ್ತಿದ್ದು್ವು. ಕಳ್ಳರು, ವಂಚಕರು ಮಾತ್ರವಲ್ಲ; ರಾಜವಲ್ಲಭರು (ಎಂದರೆ ರಾಜನಿಗೆ ಪ್ರಿಯರಾಗಿದ್ದವರು) - ಇವರಾರ ಬಾಯಲ್ಲೂ ಸುಳ್ಳು ಮಾತುಗಳು ಬರುತ್ತಿರಲಿಲ್ಲ. ಅತಿವೃಷ್ಟಿ-ಅನಾವೃಷ್ಟಿಗಳಾಗುತ್ತಿರಲಿಲ್ಲ. ವ್ಯಾಧಿಗಳಿಂದ ಬೆಂಕಿಯ ಅವಘಡಗಳು ಸಂಭವಿಸುತ್ತಿರಲಿಲ್ಲ. ಅನ್ಯರಾಜರು ಯುಧಿಷ್ಠಿರನ ಬಳಿ ಬಂದರೆಂದರೆ, ಅದು ಆತನಿಗೆ ಏನೋ ಪ್ರಿಯವನ್ನು ಉಂಟುಮಾಡಲೆಂದು, ಅಥವಾ ತಮ್ಮ ಕಾಣಿಕೆಗಳನ್ನು ಒಪ್ಪಿಸಲೆಂದು; ಅಷ್ಟೇ ವಿನಾ ಯುದ್ಧಮಾಡಲೆಂದಲ್ಲ. 

ಸೂಚನೆ : 5/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.