Tuesday, August 18, 2026

ಅಷ್ಟಾಕ್ಷರೀ 112 ದೇವತಾತ್ಮಾ ಹಿಮಾಲಯಃ (Astakshara 112)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png


 ತಪೋ-ಜ್ಞಾನಗಳ ತಾಣ: ತುಂಗ-ಶೃಂಗದ ತುಹಿನ-ಗಿರಿ 

ಸಮುದ್ರಸ್ತರದಿಂದ ಅಳೆದರೆ, ಜಗತ್ತಿನಲ್ಲೆಲ್ಲಾ ಅತ್ಯಂತ ಉಚ್ಚವೆನಿಸುವ ಪರ್ವತವೇ ಹಿಮಾಲಯ. ಇದು ತುಂಗತಮ-ಗಿರಿಶ್ರೇಣಿಯಾಗಿರುವುದು ಮಾತ್ರವಲ್ಲ, ಈಗಲೂ ವರ್ಧಿಸುತ್ತಿರುವ ವರಪರ್ವತ! ಈಗೊಂದೈದಾರು ವರ್ಷಗಳ ಹಿಂದೆ ಅಳೆದಾಗ ಇದರ ಎತ್ತರ ೮೮೪೮ ಮೀಟರುಗಳು; ಹಾಗೆಂದರೆ ೨೦೦೦೦ ಅಡಿಗಳಿಗಿಂತಲೂ ಹೆಚ್ಚು! ಅಂಬರ-ಚುಂಬಕವೀ ಹಿಮಾಚಲ!

ಭಾರತದ ಔನ್ನತ್ಯವನ್ನೂ ಭಾರತೀಯ-ಸಂಸ್ಕೃತಿಯ ಉತ್ತುಂಗತೆಯನ್ನೂ ಸೂಚಿಸಲು ಪ್ರಾಯಶಃ ಇದೊಂದೇ ಸಾಕೇನೋ! ಭಾರತವು ಸಹಜವಾಗಿಯೇ ವಿಶ್ವ-ಗುರುವೆಂಬುದನ್ನು ಇದುವೇ ಮೌನವಾಗಿ ಹೇಳುತ್ತಿರುವಂತಿದೆ: ಕೀಳರಿಮೆಯಿಂದ ತಲೆತಗ್ಗಿಸದೆ, ಹಿಮಗಿರಿಯ ತುಂಗ-ಶೃಂಗದತ್ತ ಧೃತಿಯಿಂದ ಒಮ್ಮೆ ನೋಟಬೀರುವಂತಹವರಿಗೆ, ನಿಜವಾದ ಊರ್ಧ್ವ-ದೃಷ್ಟಿಯುಳ್ಳವರಿಗೆ, ತೋರಿಬರುವ ನಿತ್ಯ-ಸತ್ಯವಿದು!

ಅಲ್ಲಿಂದ ಹರಿದು ಬರುವ ಗಂಗೆಯಾದರೂ ಸಣ್ಣನದಿಯೇನಲ್ಲ. ಗಂಗೆ-ಹಿಮಾದ್ರಿಗಳು ಬಹು ಪ್ರಾಚೀನವೂ ಹೌದು: ಐದು ಕೋಟಿ ವರ್ಷಗಳಿಂದಲಾದರೂ ಹಿಮಾಲಯವು ಅಸ್ತಿತ್ವದಲ್ಲಿದೆ; ಗಂಗೆಯೂ ಏನಿಲ್ಲವೆಂದರೂ ಎರಡು ಕೋಟಿ ವರ್ಷಗಳಿಂದ ಹರಿಯುತ್ತಿದೆಯೆನ್ನುತ್ತಾರೆ, ವಿಜ್ಞಾನಿಗಳು.

ಎತ್ತರ ಮಾತ್ರವಲ್ಲ, ವ್ಯಾಪ್ತಿಯೂ ಕಡಿಮೆಯೇನಲ್ಲ. ಹಿಮವಂತನ ಹರಹು: ೨೫೦೦ ಕಿಲೋ ಮೀಟರ್! ಆಶ್ಚರ್ಯವೇನು?: ಗಂಗೆಯ ಹರಿವು ಸಹ ಅಂತೆಯೇ!

ಹಿಮವತ್ಪರ್ವತದಿಂದ ಹರಿಯುವ ಗಂಗೆಯು ನೀರು ಹೌದೇ: ಆದರದು ಕೇವಲ-ಜಲವಲ್ಲ, ಪವಿತ್ರವಾದ ನದಿಯೆಂಬುದನ್ನು ಸಹಸ್ರಾರು ವರ್ಷಗಳಿಂದಲೂ ನಮ್ಮ ಪರಂಪರೆ ಕಂಡುಕೊಂಡಿದೆ. ಅತ್ಯಪೂರ್ವವಾದ ಔಷಧೀಯ-ಗುಣಗಳನ್ನು ಆಧುನಿಕ-ವಿಜ್ಞಾನಿಗಳು ಅದರಲ್ಲಿ ಕಂಡುಕೊಂಡಿರುವುದೂ ಉಂಟು.

ಅಷ್ಟೇ ಅಲ್ಲ. ಇಲ್ಲಿ ಹರಿಯುವುದು ಜ್ಞಾನಗಂಗೆಯೇ ಸರಿ: ಗಂಗಾತಟದಲ್ಲಿಯ ಕಾಶಿಯು ಜ್ಞಾನ-ನಗರಿಯೆಂದೇ ಪ್ರಸಿದ್ಧ – ವೇದಕಾಲದಿಂದಲೂ! ವೇದವೆಂಬ ಪದದ ಅರ್ಥವಾದರೂ ಜ್ಞಾನವೆಂದೇ ತಾನೆ? ಜ್ಞಾನ-ದಾತನನ್ನೇ ಗುರುವೆನ್ನುವುದಾದರೆ, ಭಾರತವನ್ನು  ವಿಶ್ವಗುರುವೆನ್ನಲು ಅಳುಕೇ ಅಂಜಿಕೆಯೇ?

ಈ ತುಹಿನಗಿರಿ-ತುಂಗತರಂಗೆಗಳ ಗರಿಮೆ-ಹಿರಿಮೆಗಳನ್ನು ಕೃಷ್ಣನೂ ಕೊಂಡಾಡಿರುವನೇ: "ಸ್ಥಾವರಗಳಲ್ಲಿ ನಾನು ಹಿಮಾಲಯ, ಸ್ರೋತಸ್ಸುಗಳಲ್ಲಿ ಜಾಹ್ನವಿ” (ಗೀತೆ). ಯಾವುದು ಸ್ಥಾಯಿಯಾಗಿರುವುದೋ ಅದುವೇ ಸ್ಥಾವರ. ಹೀಗಾಗಿ ಚಿರಕಾಲ ಉಳಿಯುವ ಪರ್ವತವೇ ಅದು. ಹಿಮವಂತನೆಂತೋ ಭಾರತೀಯ-ಸಂಸ್ಕೃತಿಯೂ ಅಂತೆಯೇ: ಚಿರಸ್ಥಾಯಿಯೇ.

ಎಂದೇ ಈ ಸಂಸ್ಕೃತಿಯ ಸಹಜ-ಭವ್ಯತೆಯನ್ನು ಬಿಂಬಿಸಹೊರಟ ಕಾಳಿದಾಸನು ತನ್ನ ಕುಮಾರಸಂಭವ-ಕಾವ್ಯವನ್ನು ಆರಂಭಿಸಿರುವುದು ವರಗಿರಿಯ ವರ್ಣನೆಯಿಂದಲೇ. ಏಕೆ? ಈ ತುಷಾರಾದ್ರಿಯ ತುಂಗತ್ವವು ಬರೀ ಭೌತಿಕವಾದುದಲ್ಲ. ಎಂದೇ, ಅಲ್ಲಿಯ ಪ್ರಥಮಶ್ಲೋಕದಲ್ಲೇ, ಅದನ್ನು ದೇವತಾತ್ಮಾ ಎಂದಿರುವುದು.

ಪರ್ವತವೆಂದರೆ ಶಿಲಾರಾಶಿ ಎಂದುಕೊಂಡು, ಇದೊಂದು ಜಡವಸ್ತುವಷ್ಟೆ - ಎಂದು ಮೂಗುಮುರಿದೀರಿ – ಎಂದೆಚ್ಚರಿಸಲೆಂದೇ ಮೊದಲೇ “ದೇವತಾತ್ಮಾ” ಎಂದು ಕವಿಯು ವಿಶೇಷಿಸಿರುವುದು! ಚೈತನ್ಯ-ಶಕ್ತಿಯಲ್ಲಿ ಸಸ್ಯಗಳಿಗಿಂತ ಪ್ರಾಣಿಗಳೂ, ಪ್ರಾಣಿಗಳಿಗಿಂತ ಮನುಷ್ಯರೂ, ಮನುಷ್ಯರಿಗಿಂತ ದೇವತೆಗಳೂ ಮಿಗಿಲಲ್ಲವೇ? ಹೀಗಾಗಿ, ಹಿಮಾಲಯವೆಂದರೆ ಚೇತನತಮವೆನಿಸುವ ದೇವತಾತ್ಮನೇ! ಜೊತೆಗೇ, ನಾನಾ-ದೇವತೆಗಳ ಬೀಡೂ ಆಗಿರುವ ದೇವಭೂಮಿಯೇ ಹಿಮಾಲಯ.

ಸ್ಥಾವರವಾದುದೆಂದರೆ ಸ್ಥಿರವಾದುದು. ಸ್ಥಿರವಾದುದರಲ್ಲಿ ಸ್ಥೈರ್ಯವಿರುತ್ತದೆ. ಧೈರ್ಯ-ಸ್ಥೈರ್ಯಗಳಲ್ಲಿ ಭಾವದ ನಂಟುಂಟು. ಎಂದೇ ರಾಮಾಯಣದಲ್ಲಿ "ಧೈರ್ಯದಲ್ಲಿ ಹಿಮವಂತನಂತೆ!" ಎಂದು ರಾಮನನ್ನು ಚಿತ್ರಿಸಿರುವುದು. ಕಂಗೆಡಿಸುವ ಪ್ರಸಂಗಗಳಲ್ಲೂ ನಿರ್ವಿಕಾರನಾಗಿರುವವನೇ ಧೀರ – ಎಂದಿದ್ದಾನೆ, ಕಾಳಿದಾಸನೇ.

ಹಿಮವತ್-ಪರ್ವತದ ಈಚಿನ ಭಾಗವನ್ನೇ ಭಾರತದ ಸೀಮೆಯೆಂದು ಭಾವಿಸುವವರುಂಟು – ಪುರಾಣಗಳ ಮಾತನ್ನೋ ಕೌಟಲ್ಯನ ಮಾತನ್ನೋ ತಪ್ಪಾಗಿ ಅರ್ಥೈಸಿಕೊಂಡು. ಭಾರತದ ವ್ಯಾಪ್ತಿಯು ಹಿಮಾಲಯದಾಚೆಗೂ ಇತ್ತು – ಎಂಬುದನ್ನು ಗುರೂಜಿ ಗೋಳ್ವಲ್ಕರರು ಎಚ್ಚರಿಸಿರುವುದು ಅತ್ಯಂತ-ಯುಕ್ತವೇ ಆಗಿದೆ: ಉದಾಹರಣೆಗೆ ಇಂದು ಚೀನದೇಶದೊಳಗೆ ಸೇರಿಹೋಗಿರುವ ಮಾನಸ-ಸರೋವರಕ್ಕೆ ಹೆಸರು ಬಂದಿರುವುದು ಭಾರತದಿಂದಲೇ ಅಲ್ಲವೇ? ಋಷಿಗಳಿತ್ತ ಹೆಸರಲ್ಲವೇ ಅದು?

ಹಿಮಕ್ಕೆ ಆಲಯವೆನಿಸುವ ಹಿಮಾಲಯವು ತಂಪಿನ ತಾಣವೇ.  ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು "ಹಿಮಾಲಯವೆಲ್ಲಾ ನನ್ನ ತಪೋಭೂಮಿಯಪ್ಪಾ!" ಎಂದು ಆದರಾತಿಶಯದಿಂದಲೂ ಪ್ರೀತ್ಯತಿಶಯದಿಂದಲೂ ಉದ್ಗರಿಸಿರುವುದುಂಟು: ತಪಸ್ಸಾಧನೆಗೆಂದೇ ಸೃಷ್ಟವಾದ ಭೂಮಿಯದು! ಗೌರಿಯೂ ಶಂಕರನೂ ಅನೇಕ-ಮಹಾಮುನಿಗಳೂ ಅಲ್ಲಲ್ಲವೇ ತಪಸ್ಸನ್ನಾಚರಿಸಿದುದು? ಮನಸ್ಸು ಸಹಜವಾಗಿಯೇ ಶಾಂತವಾಗಿ ಒಳಮುಖವಾಗಬಲ್ಲ ಎಡೆಯೇ ಅದು. ಅಲ್ಲದೆ, ಅಲ್ಲಿಯ ಶೀತಲತೆಯೂ ಶುಭ್ರತೆಯೂ ತಾಪವನ್ನೂ ತಮಸ್ಸನ್ನೂ ಕಳೆಯುವುದರ ಸೂಚಕಗಳೇ ಸರಿ.

ಆಧುನಿಕ ವಿಜ್ಞಾನ-ನಾಗರಿಕತೆಗಳು ನಾನಾವಿಧವಾದ ಸೌಕರ್ಯಗಳನ್ನು ಒದಗಿಸಿಕೊಡುತ್ತಿರಬಹುದು. ಆದರೆ ಒಳಗೂ ಹೊರಗೂ ತಾಪ-ಕ್ಷೋಭೆಗಳೇ ತುಂಬಿರುವ ಇಂದು, ನೆಮ್ಮದಿಯ ಜೀವನಕ್ಕೆ ಉಪಕಾರಿಯಾದುದೆಂದರೆ ಒಳ ಅರಿವು-ತಂಪುಗಳೇ ಸರಿ.

ಎತ್ತರ-ಬಿತ್ತರಗಳಲ್ಲಿ ಅಸಾಧಾರಣವೆಂದೇ, ಹಿಮಾಲಯವೆಂದರೆ ಭೂಮಿಗೇ ಅಳತೆಗೋಲಿನಂತೆ – ಎಂದು ಕಾಳಿದಾಸನೆಂದಿರುವುದು. ಅದರ ಅರ್ಥವು ಭೌತಿಕಕ್ಕೆ ಸೀಮಿತವಲ್ಲ: ಚಿರ-ಪುರಾತನವಾದರೂ ನಿತ್ಯ-ನೂತನವಾದ ಭಾರತೀಯ-ಸಂಸ್ಕೃತಿಯೇ ಭೂಮಿಯ ಮೇಲಿನೆಲ್ಲ ಸಂಸ್ಕೃತಿಗಳಿಗೆ ಅಳತೆಗೋಲು - ಎಂಬುದನ್ನು ಸೂಚ್ಯವಾಗಿ ಹೇಳಿದ್ದಾನೆ, ವರಕವಿ!

ನೀಲ-ಸಿಂಧು-ಜಲ-ಧೌತ-ಚರಣ-ತಲಳೂ ಹಿಮಾಲಯ-ಕಿರೀಟಿನಿಯೂ ಆದ ಭಾರತಾಂಬೆಗೆ ಜಯವೆನ್ನಿ! ವಂದೇ ಮಾತರಂ!

ಸೂಚನೆ: 15/08//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.