ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೮೩. ಈ ಲೋಕದಲ್ಲಿ ಕಲ್ಪಲತೆ ಯಾವುದು?
ಉತ್ತರ- ಒಳ್ಳೆಯ ಶಿಷ್ಯನಿಗೆ ಕೊಟ್ಟ ವಿದ್ಯೆ.
ಕಲ್ಪಲತೆ, ಕಾಮಧೇನು ಇವೆಲ್ಲವೂ ಕಲ್ಪಿಸಿದ್ದನ್ನು ಕೊಡುವಂತವುಗಳು. ಕಲ್ಪಲತೆಯು ಒಂದು ಬಗೆಯ ಬಳ್ಳಿ. ಆದರೆ ಇವು ಇರುವುದು ಸ್ವರ್ಗದಲ್ಲಿ. ಹಾಗಾದರೆ ಭೂಲೋಕದಲ್ಲಿ ನಮಗೆ ಇಷ್ಟವಾದದ್ದನ್ನು ಕೊಡುವಂತಹ ಕಲ್ಪಲತೆಯಂತಹ ಪದಾರ್ಥ ಯಾವುದಾದರೂ ಇದೆಯೇ? ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಬಹಳ ಸುಂದರವಾಗಿದೆ. ಸತ್ಪಾತ್ರನಾದ ಶಿಷ್ಯನಿಗೆ ಕೊಟ್ಟ ವಿದ್ಯೆ ಎಂಬುದಾಗಿ. ಸತ್ಪಾತ್ರ ಒಳ್ಳೆಯ ಪಾತ್ರ - ಕೊಟ್ಟಿದ್ದನ್ನು ಬೀಳದಂತೆ ರಕ್ಷಿಸಿಕೊಳ್ಳುವ ವಸ್ತು. ಗುರು ಕೊಟ್ಟ ವಿದ್ಯೆಯನ್ನು ಹಾಳಾಗದಂತೆ ಪೋಲಾಗದಂತೆ ತನ್ನಲ್ಲಿ ಧರಿಸಿ ಅವಿಕಾರವಾಗಿ ಮುಂದಕ್ಕೆ ಕೊಡುವ ಸಾಮರ್ಥ್ಯವುಳ್ಳ ಅಧಿಕಾರಿಯೇ ಸತ್ಪಾತ್ರ - ಸಚ್ಛಿಷ್ಯ ಎಂದು ಕರೆಸಿಕೊಳ್ಳುತ್ತಾನೆ. ಈ ಬಗೆಯ ಕೊಟ್ಟ ವಿದ್ಯೆಯು ಬೇಡಿದ್ದನ್ನು ಕೊಡುವಲ್ಲಿ ಸಮರ್ಥವಾದುದು ಎಂಬುದು ತಾತ್ಪರ್ಯ. ಹಾಗಾದರೆ ವಿದ್ಯೆಗೆ ಬೇಡಿದ್ದನ್ನು ಕೊಡುವ ಸಾಮರ್ಥ್ಯ ಹೇಗೆ ಬರುತ್ತದೆ? ಎಂಬುದು ಇಲ್ಲಿ ಚಿಂತಿಸಬೇಕಾಗಿದೆ.
ಯಾವುದೇ ವಸ್ತುವೂ ಕೂಡ ಸರಿಯಾದ ವ್ಯಕ್ತಿಯ ಕೈಯಲ್ಲಿ ಇದ್ದಾಗ ಆ ವಸ್ತುವಿಗೆ ಸಾರ್ಥಕತೆ ಬರುತ್ತದೆ. ಆ ವಸ್ತು ಯಾವ ಉದ್ದೇಶದಿಂದ ಬಂದಿದೆಯೋ ಆ ಉದ್ದೇಶವನ್ನು ಈಡೇರಿಸುವಂತೆ ಇದ್ದಾಗ ಮಾತ್ರ ಆ ವಸ್ತು ಉಪಯುಕ್ತ ಎಂಬುದಾಗಿ ಹೇಳಲಾತ್ತದೆ. ಈ ವಿದ್ಯೆ ಎಂಬುದು ಅತ್ಯಂತ ಉತ್ಕೃಷ್ಟವಾದ ವಿಷಯ. ಇಂದು ಈ ವಿದ್ಯೆ ಎಂದು ಹೇಳಲಾಗುತ್ತಿದ್ದ ಯಾವ ಶಿಕ್ಷಣವಿದೆಯೋ ಅದು ಕೇವಲ ಭೌತಿಕಜೀವನವನ್ನು ಮಾತ್ರ ಭರಿಸಲು ಶಕ್ತವಾಗಿದೆ ಎಂಬುದಾಗಿ ಹೇಳಬಹುದು. ಆದರೆ ವಿದ್ಯೆಗೆ ಎಷ್ಟು ವ್ಯಾಪ್ತಿ ಇದೆ? ಎಂಬುದನ್ನು ಉಪನಿಷತ್ತು ಹೀಗೆ ಹೇಳುತ್ತದೆ ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂಬುದಾಗಿ. ಸಂಸಾರದಿಂದ ಚಕ್ರದಲ್ಲಿ ಸಿಲುಕಿ ಒದ್ದಾಡುತ್ತಿರುವ ಜೀವವು ತನ್ನ ಮೂಲ ನೆಲೆಯಾದ ಭಗವಂತನ ಕಡೆಗೆ ಸಾಗುವದನ್ನೇ ಮುಕ್ತಿ ಎಂಬುದಾಗಿ ಕರೆಯಲಾಗಿದೆ. ಇದನ್ನು ಪಡೆಯಲು ವಿದ್ಯೆ ಬೇಕು. ಯಾವುದು ಸಿಕ್ಕಿದರೆ ಎಲ್ಲವೂ ಸಿಕ್ಕಂತಾಗುತ್ತದೆಯೋ ಅದೇ ನಿಜವಾದ ತೃಪ್ತಿ. ಎಂದರೆ ಮುಕ್ತಿ ಸಿಕ್ಕಿದರೆ ಇನ್ನು ಸಿಗುವಂತದ್ದು ಯಾವುದೂ ಇಲ್ಲ. ಅಂತಹ ಮುಕ್ತಿಯನ್ನೇ ಕೊಡಿಸುವ ವಿದ್ಯೆಯು ಕಲ್ಪಲತೆಯಲ್ಲದೇ ಇನ್ನೇನು! ಆದರೆ ಇಲ್ಲಿ ಒಂದು ಜವಾಬ್ದಾರಿಯನ್ನು ಹೇಳಿ ಎಚ್ಚರಿಸಲಾಗಿದೆ. ವಿದ್ಯಾಧಿದೇವತೆಯಾದ ಶಾರದೆಯು ಬ್ರಾಹ್ಮಣನಲ್ಲಿ ಬಂದು ಕೇಳಿಕೊಳ್ಳುವ ಒಂದು ಮಾತನ್ನು ಶ್ರೀರಂಗ ಮಹಾಗುರುಗಳು ಯಾವಾಗಲೂ ಹೇಳುತ್ತಿದ್ದರು - ಅಸೂಯೆ ಉಳ್ಳವನಿಗೆ, ಮೋಸಗಾರನಿಗೆ, ಆಲಸ್ಯ ಉಳ್ಳವನಿಗೆ ಕೊಡದೆ ನನ್ನನ್ನು ರಕ್ಷಿಸು “ಗೋಪಾಯ ಮಾಂ ಶೇವಧಿಷ್ಟೇಹಮಸ್ಮಿ, ಅಸೂಯಕಾಯ, ಅನೃಜವೇ, ಅಯತಾಯ ನ ಮಾ ಬ್ರೂಯಾಃ ವೀರ್ಯವತೀ ಯಥಾ ಸ್ಯಾಮ್” ಎಂಬುದಾಗಿ. ಅಂದರೆ ಒಬ್ಬ ಸತ್ಪಾತ್ರನಿಗೆ ಕೊಟ್ಟ ವಿದ್ಯೆಯು ಮಾತ್ರ ಸಾರ್ಥಕವಾಗಿ ಮುಕ್ತಿಗೆ ಸಾಧನವಾಗುತ್ತದೆ. ಒಂದು ಚಾಕುವನ್ನು ಸರಿಯಾದ ವ್ಯಕ್ತಿಗೆ ಕೊಟ್ಟರೆ ತರಕಾರಿಯನ್ನೋ ಅಥವಾ ಇನ್ನಾವುದೋ ನಮಗೆ ಬೇಕಾದ ವಸ್ತುವನ್ನು ಕತ್ತರಿಸಲು ಬಳಕೆಯಾಗಬಹುದು. ಅದೇ ಚಾಕುವನ್ನು ಡಕಾಯಿತನಿಗೆ ಕೊಟ್ಟರೆ ಅದು ಯಾರದ್ದೋ ಪ್ರಾಣವನ್ನು ತೆಗೆಯಲು ಸಾಧನವಾದೀತು. ಆದ್ದರಿಂದ ವಿದ್ಯೆಯು ಸತ್ಪಾತ್ರನಾದ ಶಿಷ್ಯನಿಗೆ ಕೊಟ್ಟಾಗ ಅದು ಮುಕ್ತಿಯಂತಹ ಅಲಭ್ಯ ಲಾಭವನ್ನು ಕೊಡುವ ಈ ಲೋಕದ ಕಲ್ಪಲತೆ ಎಂಬುದಾಗಿ ತಿಳಿಯಬಹುದು.
ಸೂಚನೆ : 14/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಸೂಚನೆ : 14/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.