Tuesday, August 11, 2026

ದಾನಿಯ ಆದರ್ಶ ಮನೋಧರ್ಮ (Daniya Adarsha Manodharma)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)

Screenshot 2026-08-11 080825.png

ವೈದಿಕಕಾಲದ ಕಥೆ.  ಜಾನಶ್ರುತಿ ಎಂಬ ರಾಜನು ಮಹಾದಾನಿಯಾಗಿದ್ದನು. ತನ್ನ ರಾಜ್ಯದಲ್ಲಿ ಎಲ್ಲರಿಗೂ ಆಹಾರವನ್ನು ತಯಾರಿಸಿ ಉಚಿತವಾಗಿ ನೀಡುತ್ತಿದ್ದ ಕಾರಣ , ತಾನು ತನ್ನಂತಹ ಮಹಾದಾನಿ ಯಾರೂ ಇಲ್ಲವೆಂದು ನಂಬಿದ್ದನು. ಹಾಗೂ ಇದರಂದ ಬಂದ ಕೀರ್ತಿಯಷ್ಟೇ ಜೀವನದ ಧ್ಯೇಯವೆಂದು ದೃಢವಾಗಿ ನಂಬಿದ್ದನು.  ಅವನು ಪಕ್ಷಿಗಳ ಮತ್ತು ಪ್ರಾಣಿಗಳ ಭಾಷೆಯನ್ನೂ ಅರಿತಿದ್ದನು.    ಒಂದು ಸಂಜೆ ಅವನು ಪ್ರಕೃತಿಯ ಸೊಗಸಾದ ದೃಶ್ಯವನ್ನು ತನ್ನ ಅರಮನೆಯ ಮೇಲುಮನೆಯಿಂದ ಆಸ್ವಾದಿಸುತ್ತಿದ್ದನು. ಆಗ ಎರಡು ಹಾರುತ್ತಿರುವ ಹಂಸಗಳು ಪರಸ್ಪರ ಮಾತನಾಡುತ್ತಿರುವದನ್ನು ಕಂಡನು. ಅವುಗಳಲ್ಲಿ ಒಂದು ಹಂಸವು ಹೇಳಿತು, “ನೀನು ರಾಜ ಜಾನಶ್ರುತಿಯ ಕೀರ್ತಿಯ ಬೆಳಕಿನ ತೀವ್ರತೆಯನ್ನು ದಾಟುವಾಗ ಜಾಗರೂಕನಾಗಿರು , ಇಲ್ಲವಾದರೆ ಅದರ ಕೀರ್ತಿಯ ಬೆಳಕಿನಿಂದ  ನೀನು ಸುಟ್ಟುಹೋಗುತ್ತೀಯೆ. ಇಂದು ಅವನಂತ ಮಹಾನುಭಾವನು ಯಾರೂ ಇಲ್ಲ, ಅವನು ದಾನಿಗಳಲ್ಲಿ ಶ್ರೇಷ್ಠ.”  ಇದಕ್ಕೆ ಉತ್ತರವಾಗಿ ಮತ್ತೊಂದು ಹಂಸವು ಹೇಳಿತು, “ಓ ಮಿತ್ರ, ರಾಜ ಜಾನಶ್ರುತಿ, ರೈಕ್ವ ಎಂಬ ಆತ್ಮಜ್ಞಾನಿ ಹಾಗೂ ರಥಚಲಿಸುವವನಿಗಿಂತ ದೊಡ್ಡವನಾ? ರಾಜನಿಗೆ ಕೇವಲ ಹೆಸರು ಮತ್ತು ಕೀರ್ತಿ ಮಾತ್ರ  ಜೀವನದ ಪರಮಧ್ಯೇಯ ಹಾಗೂ ಅದಕ್ಕಾಗಿ ತೀವ್ರವಾಗಿ ಹಂಬಲಿಸುತ್ತಾನೆ.  ಮೊದಲ ಹಂಸವು ಆಶ್ಚರ್ಯದಿಂದ ಕೇಳಿತು, “ಈ ರೈಕ್ವ ಯಾರು? ಅವನು ಕೇವಲ ರಥಚಲಿಸುವವ ಆತ್ಮಜ್ಞಾನಿಯಾದರೂ ಹೇಗೆ ಜಾನಶ್ರುತಿಗೆ  ಹೋಲಿಸಿದರೆ ದೊಡ್ಡವನಾಗಿದ್ದಾನೆ?” ಹೀಗೆ ಹೇಳುತ್ತಾ ಆ ಹಂಸಗಳು ಹಾರಿಹೋದವು.   

ಈ ಸಂಭಾಷಣೆಯನ್ನು ಕೇಳಿದ ರಾಜನು ರೈಕ್ವನನ್ನು ಕಂಡು ನಿಜವಾದ ಶಾಂತಿಯನ್ನು ಅನುಭವಿಸಲು ಸಂಕಲ್ಪಿಸಿ,  ತನ್ನ ಸೇವಕನಿಂದ ರೈಕ್ವನನ್ನು ಹುಡಿಕಿಸಿ, ಆತನಿರುವ ಎಡೆಯನ್ನು ತಿಳಿದುಕೊಂಡನು.    ಜಾನಶ್ರುತಿ  ದೊಡ್ಡ ಸಿದ್ಧತೆಯನ್ನು ಮಾಡಿಕೊಂಡು ರೈಕ್ವನ ಬಳಿ ಬಂದು ಆರು ನೂರು ಹಸುಗಳು, ಚಿನ್ನದ ಸರ, ಮತ್ತು ಹೇಸರುಗತ್ತೆ ಎಳೆಯುವ ಗಾಡಿಯನ್ನು ರೈಕ್ವನ ಪಾದಗಳಿಗೆ ಅರ್ಪಿಸಿ,ಆಧ್ಯಾತ್ಮಿಕ ಜ್ಞಾನವನ್ನು ದಯಪಾಲಿಸೆಂದು ಪ್ರಾರ್ಥಿಸಿದನು. ರೈಕ್ವಾ ನಕ್ಕು ಹೇಳಿದನು, “ ಇವೆಲ್ಲವನ್ನೂ ಹಿಂತೆಗೆದುಕೊಳ್ಳಿ! ಆತ್ಮಜ್ಞಾನವು ಮಾರಾಟಕ್ಕಿಲ್ಲ !” ಜಾನಶ್ರುತಿ ಹಿಂತಿರುಗಿ, ಮತ್ತೊಂದು ಸಮಯದಲ್ಲಿ ಸಾವಿರ ಹಸುಗಳು, ಚಿನ್ನದ ಸರ, ಹೇಸರುಗತ್ತೆ ಎಳೆಯುವ ಗಾಡಿ ಮತ್ತು ಅವನ ಸ್ವಂತ ಪುತ್ರಿಯನ್ನು ರೈಕ್ವನಿಗೆ ಪತ್ನಿಯಾಗಿ ನೀಡಲು ಬಂದನು. ಅವನು ಇವುಗಳನ್ನು ಅರ್ಪಿಸಿ, ಆತ್ಮಜ್ಞಾನದ ಗಹನವಾದ ಸತ್ಯಗಳನ್ನು ದಯಪಾಲಿಸಲು ಮತ್ತೇ ಪ್ರಾರ್ಥಿಸಿದನು. ರೈಕ್ವಾ ಈ ದಾನಗಳಿಗೆ ಹಾತೊರೆಯಲಿಲ್ಲ. ಆದರೆ ಜಾನಶ್ರುತಿಯ ಛಲ, ಪ್ರಾಮಾಣಿಕತೆ ಹಾಗೂ ಗುರುವಿನಲ್ಲಿದ್ದ  ಅಚಲವಾದ ಶ್ರದ್ಧೆಯನ್ನು ನೋಡಿ ಈತ ಶಿಷ್ಯನಾಗಲು ಅರ್ಹನೆಂದು  ರೈಕ್ವನು ಆತ್ಮಜ್ಞಾನವನ್ನು ಸಂವರ್ಗವಿದ್ಯೆಯ ಮೂಲಕ ಉಪದೇಶಮಾಡಲು ಉದ್ಯುಕ್ತನಾದನು. ಗೀತಾಚಾರ್ಯನ ವಾಣಿಯಂತೆ (೪.೩೪)ಜ್ಞಾನವನ್ನು, ಗುರುಗಳ ಸೇವೆಯಿಂದ, ಆತ್ಮಸಮರ್ಪಣೆಯ ಭಾವದಿಂದ ಪಡೆಯಬೇಕು.

ಆರ್ಷಸಾಹಿತ್ಯದಲ್ಲಿ ಸಂಪತ್ತನ್ನು ಮತ್ತು ಕೀರ್ತಿಗಳಿಸುವುದು ಅನಾದರ್ಶವೆಂದು ಪರಿಗಣಿಸುವುದಿಲ್ಲ.  ಇವೆರಡನ್ನು ಅರ್ಥ ಹಾಗೂ ಕಾಮವೆಂದು ಪರಿಗಣಿಸುತ್ತಾ,. ಧರ್ಮ ಮತ್ತು ಮೋಕ್ಷಕ್ಕೆ ಪೋಷಕವಾಗಿ ಹಾಗೂ ವಿರೋಧವಿಲ್ಲದ ರೀತಿಯಲ್ಲಿ ಇವೆರಡನ್ನೂ ಗಳಿಸಬೇಕೆಂಬುದೇ ಋಷಿಮುನಿಗಳ ಆಶಯ ಹಾಗಿಲ್ಲದಿದ್ದಾಗ ತ್ಯಾಜ್ಯ   "ಮರಕಡಿದು ಫಲ ಕೇಳಿದರೆ ಸಿಕ್ಕುವುದಿಲ್ಲ. ಧರ್ಮವಿದ್ದರೆ ಉಳಿದದ್ದು . ಜೀವವಿದೆಯೇ ಮೊದಲು ನೋಡು. ಅದಿದ್ದರೆ ಉಡಿಗೆ-ತೊಡಿಗೆಗಳು." ಎಂಬ ಶ್ರೀರಂಗ ಮಹಾಗುರುಗಳ ವಾಣೀ ಇಲ್ಲಿ ಮನನೀಯ.


ಕೇವಲ  ಭೌತಿಕ ಸಂಪತ್ತನ್ನು  ಉಪಯೋಗಿಸಿ ಜನಸಹಾಯ ಮಾಡಿದರೆ  ಜ್ಞಾನವು ಸಿಗುವುದಿಲ್ಲ. ಇದನ್ನೇ ಆಚಾರ್ಯ ಶಂಕರರ  "ಕುರುತೇ ಗಂಗಾಸಾಗರಗಮನಂ,ವ್ರತ-ಪರಿಪಾಲನಮಥವಾ ದಾನಮ್ । ಜ್ಞಾನವಿಹೀನಃ ಸರ್ವಮತೇನ, ಭಜತಿ ನ ಮುಕ್ತಿಂ ಜನ್ಮಶತೇನ ॥  “ ಸ್ತೋತ್ರ ಸ್ಮರಣೀಯ. ನಾನು ಕೇವಲ  " ದೇವರ ಕೈಯಲ್ಲಿರುವ ಸಾಧನ" ಎಂಬ ಮನೋಧರ್ಮವು ಹರಿದಾಗ  ದಾನ ಧರ್ಮಗಳು ಅರ್ಥಪೂರ್ಣವಾಗುತ್ತದೆ.   ಜಾನಶ್ರುತಿರಾಜನ ಮೊದಲಿನ ಮನಸ್ಥಿತಿ ದಾನಧರ್ಮಗಳಿಂದ ಬರುವ ಕೀರ್ತಿಯೇ ಜೀವನದ ಧ್ಯೇಯವೆನ್ನುವುದು ತಪ್ಪಾಗಿತ್ತು. ಆದರೆ ಪ್ರಾಮಾಣಿಕನಾಗಿ,ರೈಕ್ವರೆಂಬ ಗುರುಗಳ ಉಪದೇಶಕ್ಕೆ ಮನಸಾರಿ ಒಪ್ಪಿ ನಡೆದುಕೊಂಡಿದ್ದು ರಾಜನ ಪರಿವರ್ತನೆಗೆ ಕಾರಣವಾಯಿತು. ದೇವನೊಬ್ಬನಿಗೇ ಶರಣಾಗಿ ಅವನ ಪ್ರಸಾದರೂಪವಾದ ಪುರುಷಾರ್ಥಗಳನ್ನು ಸ್ವೀಕರಿಸಿ ಅವನೊಡನೆ ಬಾಳುವ ಸದ್ಬುದ್ಧಿಯು ವೃದ್ಧಿಸಲಿ ಎಂದು ಆಶಿಸೋಣ.


ಸೂಚನೆ : 08/08/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.