ಲೇಖಕರು : ಡಾ. ಹಚ್.ಆರ್. ಮೀರಾ(ಪ್ರತಿಕ್ರಿಯಿಸಿರಿ lekhana@ayvm.in)
ಹಲವು ಭಾರತೀಯ ಹಬ್ಬಗಳಿಗೆ ರಾಮಾಯಣದ ನಂಟುಂಟು. ದೀಪಾವಳಿಯು ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿದ ದಿನವಾದರೆ, ಯುಗಾದಿಯು ಶ್ರೀರಾಮನು ವನವಾಸದಿಂದ ಹಿಂದಿರುಗಿದ ದಿನ. ಶ್ರೀರಾಮನ ಪ್ರಜೆಗಳು ಅಂದು ರಾವಣಸಂಹಾರವನ್ನು ಸ್ತುತಿಸುತ್ತಾ, ಪ್ರಭುವಿನ ಹಿಂದಿರುಗುವಿಕೆಯನ್ನು ಉತ್ಸವವಾಗಿ ಆಚರಿಸಲು ಪ್ರಾರಂಭಿಸಿದ ದಿನ. ವಸಂತನವರಾತ್ರದ ಶುಭಾರಂಭ. ಅಲ್ಲದೆ, ಹಿಂದೆ ವೇದಾಪಹಾರವಾದಾಗ, ಭಗವಂತನು ಮತ್ಸ್ಯಾವತಾರ ಮಾಡಿ ವೇದಗಳನ್ನು ಕಾಪಾಡಿದ ದಿನವೇ ಇದು. ಮೇಲಾಗಿ ಈ ಜಗತ್ತಿನ ಸೃಷ್ಟಿಯೇ ಆದ ದಿನವಿಂದು.
ಹೊಸತನದ ಹಬ್ಬ
ಹೊಸತನವೆಂದರೆ ಯಾರಿಗೆ ಸಂತೋಷವಾಗದು? ಪ್ರತಿದಿನವೂ ಹೊಸ ಪ್ರಾರಂಭವನ್ನಾಗಿ ನೋಡುವುದು ಬಹಳ ಶ್ಲಾಘನೀಯವೇ. Today is the first day of the rest of my life ಎಂಬೊಂದು ಆಂಗ್ಲೋಕ್ತಿಯಿದೆ. ಅದರರ್ಥ "ಇಂದು ಎಂಬುದು ನನ್ನ ಮಿಕ್ಕ ಜೀವನದ ಮೊದಲ ದಿನ". ಈ ಮನೋಭಾವ ಮೆಚ್ಚುವಂಥದ್ದಾದರೂ ಪ್ರಕೃತಿಯೇ ಒಂದು ನವನಾವೀನ್ಯವನ್ನು ತಂದುಕೊಡುತ್ತಿರುವಾಗ, ಅಂದಿನ ದಿನ ಮತ್ತೂ ಸುಭಗವೇ.
ಪ್ರಕೃತಿಯೇ ಸಹಜವಾಗಿ ಕೆಲವು ವಿಶೇಷ ಕಾಲಘಟ್ಟಗಳನ್ನು ತಂದೊದಗಿಸುತ್ತದೆ. ಅಂತಹ ರಸವತ್ತಾದ ಘಟ್ಟಗಳನ್ನು ಗುರುತಿಸಬೇಕು; ಅವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು; ಅದುವೇ ವಿವೇಕ. ಇಂತಹ ದಿನಗಳನ್ನು ಉತ್ಸವ/ಪರ್ವಗಳನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿಯ ಒಂದು ಹಿರಿಮೆ.
ವರ್ಷದ ಆರಂಭವೇ ಅಂತಹ ಒಂದು ಘಟ್ಟ – ಸಂವತ್ಸರದ ಪೀಠಿಕೆಯ ರೂಪದ ಮಹಾಪರ್ವ. ಚಾಂದ್ರಮಾನ ಯುಗಾದಿಯನ್ನು ಚೈತ್ರಶುದ್ಧಪ್ರತಿಪತ್ತಿನಂದು ಆಚರಿಸುತ್ತೇವೆ. ಕರ್ನಾಟಕದಲ್ಲಿ ಚಾಂದ್ರಮಾನದ ಆಚರಣೆಯೇ ಹೆಚ್ಚು. ಸೌರಮಾನಪದ್ಧತಿಯಲ್ಲಿ ಮೇಷಸಂಕ್ರಮಣ ದಿನದಂದು ಯುಗಾದಿಯ ಆಚರಣೆ.
ಈ ಹಬ್ಬವಾದರೂ ಯಾವುದರ ದ್ಯೋತಕ? – ಎಂಬುದನ್ನು ನೋಡಬೇಡವೇ?
ಯುಗಾದಿ ಹಾಗೂ ಸೃಷ್ಟಿ
ಸಂಸ್ಕೃತದಲ್ಲಿ "ಯುಗ"ವೆಂಬುದಕ್ಕೆ ಹಲವರ್ಥಗಳಿವೆ. ಪ್ರಕೃತ ಕಾಲವಿಶೇಷ ಎಂಬ ಅರ್ಥ. ಯುಗದ ಆದಿಯೇ ಈ ಯುಗಾದಿ. ಯಾವ ಯುಗ? ತಾತ್ತ್ವಿಕವಾಗಿ ನೋಡಿದರೆ ಇದು ಸತ್ಯಯುಗದ ಆದಿಯೇ. ಇದರ ಅನ್ವಯ ನಮಗೆ ಹೇಗೆ? ಸತ್ಯಾನುಗುಣವಾಗಿ ಧರ್ಮಮಯ ಜೀವನ ನಡೆಸಲು ಪುನರಾರಂಭಕ್ಕೆ ಯೋಗ್ಯವಾದ ದಿನ.
ಈ ದಿನದ ಕಾಲಸನ್ನಿವೇಶವಾದರೂ ಹೇಗಿದೆ? ಆಗ ತಾನೇ ಬಿಟ್ಟುಹೋಗಿರುವ ಛಳಿ, ಇನ್ನೂ ಪೂರ್ಣ ಬಂದಿರದ ಬಿಸಿಲು, ಇಂತಹ ಶೀತೋಷ್ಣಗಳ ಸಾಮ್ಯವಿರುವ ಕಾಲ. ಇದು ಮೈ-ಮನಗಳಿಗೆ ಹಿತ ಕೊಡುವಂತಹುದು. ಷಡೃತುಗಳಲ್ಲಿ ಮೊದಲ ಮೂರು ಔಷ್ಣ್ಯಪ್ರಧಾನ. ಹಾಗೆಂದರೆ ಬಿಸಿಲ ತಾಪ ಕ್ರಮೇಣ ಹೆಚ್ಚುವಂತಹವು. ಹಾಗಾಗಿ ಅವು ಅಗ್ನಿಯ/ಶಿವನ ಪ್ರತೀಕ. ನಂತರದ ಮೂರು ಋತುಗಳು ಶೈತ್ಯಪ್ರಧಾನ ಹಾಗೂ ಸೋಮ/ಶಕ್ತಿಯ ಪ್ರತೀಕ. ಈ ಶಿವ-ಶಕ್ತಿಯರ ಯೋಗ ಅಥವಾ ಅಗ್ನೀಷೋಮ(ಎಂದರೆ ಅಗ್ನಿ-ಸೋಮಗಳ ಜೋಡಿ)ದಿಂದಲೇ ಜಗತ್ಸೃಷ್ಟಿ. ಬಹಳ ಸುಂದರವಾಗಿ ಇದನ್ನು ವಿವರಿಸಿರುವ ಶ್ರೀಶ್ರೀರಂಗಪ್ರಿಯಸ್ವಾಮಿಗಳು ಹೀಗೆ ಹೇಳುತ್ತಾರೆ: "ಈ ಶಿವಶಕ್ತಿಗಳು ಹೊರಮುಖವಾಗಿ ಸೇರಿದರೆ ಸೃಷ್ಟಿ, ಒಳಮುಖವಾಗಿ ಸೇರಿದರೆ ಸಮಾಧಿ." ಸೃಷ್ಟಿಯ ದ್ಯೋತಕವೇ ಈ ಹಬ್ಬ.
ಹಬ್ಬದ ಆಚರಣೆಯ ಅಂಗಗಳು
ಯುಗಾದಿಯಂದು ಏನೇನು ಮಾಡಬೇಕು? ಆಚರಣೆ ಹೇಗಿರಬೇಕು? - ಈ ವಿಷಯವನ್ನು ಸಂಗ್ರಹವಾಗಿ ಈ ಶ್ಲೋಕವು ಹೇಳಿಬಿಡುತ್ತದೆ:
ಹೊಸವರ್ಷವು ಬಂದಾಗ, ಮನೆಮನೆಗಳಲ್ಲೂ ಧ್ವಜಾರೋಪಣವನ್ನು ಮಾಡಬೇಕು. ಮಂಗಲಸ್ನಾನವನ್ನು ಮಾಡಿ ದ್ವಿಜರೊಂದಿಗೆ ದೇವರಿಗೆ ಪೂಜೆಯನ್ನು ಸಲ್ಲಿಸಬೇಕು. ಉತ್ಸವವನ್ನು ಆಚರಿಸಬೇಕು. ದೇವತೆಗಳು, ಗುರುಗಳು, ಸ್ತ್ರೀಯರು ಮತ್ತು ಮಕ್ಕಳನ್ನು ವಸ್ತ್ರಾಲಂಕಾರಗಳಿಂದ ಗೌರವಪೂರ್ವಕವಾಗಿ ಸತ್ಕರಿಸಬೇಕು. ನಂತರ ಹೊಸ ವರ್ಷದ ಫಲವನ್ನು ಕೇಳಬೇಕು. ಆ ಫಲವನ್ನು ಕೇಳುವುದು ಲಾಭಪ್ರದ.
ಅಭ್ಯಂಗಸ್ನಾನ
ಈ ಪರ್ವದ ಆಚರಣೆ ಪ್ರಾರಂಭವಾಗುವುದು ಅಭ್ಯಂಗಸ್ನಾನದಿಂದ. ಅಭ್ಯಂಗಕ್ಕೆ ಎಳ್ಳೆಣ್ಣೆ ಪ್ರಶಸ್ತ. ಆಯುರ್ವೇದೀಯವಾಗಿ ಅಭ್ಯಂಗವು ಆರೋಗ್ಯಕ್ಕೆ ಒಳ್ಳೆಯದೆಂಬುದು ಭೌತಿಕವಾದ ಕಾರಣ. ಅದರೊಂದಿಗೆ ಎಣ್ಣೆಸ್ನಾನದಿಂದ ಉಂಟಾಗುವ ಧಾತುಸಾಮ್ಯವು ಆಧ್ಯಾತ್ಮಿಕವಾದ ಔನ್ನತ್ಯವನ್ನು ತಲುಪಲು ಸಹಾಯಮಾಡುವುದು. ಹಾಗಾಗಿ ಅಭ್ಯಂಗವೆಂಬುದು ಭೋಗಕ್ಕೆ ಮಾತ್ರವಲ್ಲ, ಯೋಗಕ್ಕೂ ಸಹಕಾರಿ.
ಮನೆಯ ಸ್ವಚ್ಛತೆ ಮತ್ತು ಅಲಂಕಾರ
ಹಬ್ಬದ ಅಂಗವಾಗಿ ಮನೆಯನ್ನು ತಳಿರುತೋರಣಗಳಿಂದ ರಂಗೋಲೆಗಳಿಂದಲೂ ಅಲಂಕರಿಸುವುದು ಪದ್ಧತಿ. ಮನೆಯನ್ನೆಲ್ಲ ಗುಡಿಸಿ, ಸಾರಿಸಿ, ಸ್ವಚ್ಛ ಮಾಡಿ, ಮಾವಿನ ಎಲೆಗಳ ತೋರಣಗಳನ್ನು ಬಾಗಿಲುಗಳಿಗೆ ಕಟ್ಟುತ್ತೇವೆ. ಅದರೊಂದಿಗೇ ಬೇವಿನ ಎಲೆಗಳ ಗೊಂಚಲುಗಳನ್ನೂ ಕಟ್ಟಿ ಅಲಂಕರಿಸುತ್ತೇವೆ. ಈ ಅಲಂಕಾರದಿಂದ ಕಣ್ಣಿಗೆ ಮಾತ್ರವೇ ಹಬ್ಬವಲ್ಲ, ಶ್ರೀರಂಗಮಹಾಗುರುಗಳು ಹೇಳುವಂತೆ: "ಈ ಸಿಂಗಾರವು ಕೇವಲ ಕಣ್ಣುಗಳ ಚೆಲುವು ಚೆಂದಗಳಲ್ಲಿ ಪರ್ಯವಸಾನವಾಗಬಾರದು. ಆತ್ಮದ ಆಹ್ಲಾದವನ್ನು ಉಂಟುಮಾಡುವ ದಿವ್ಯಭಾವಕ್ಕೆ ಒಯ್ಯುವ ಪದಾರ್ಥಗಳ ಮತ್ತು ಕಲಾಕೃತಿಯ ಸೌಂದರ್ಯದಿಂದಲೂ ಶೋಭಿಸಬೇಕು."
ಪತಾಕೆಯನ್ನು, ಎಂದರೆ ಧ್ವಜವನ್ನು, ಎತ್ತರದಲ್ಲಿ ಕಟ್ಟುವುದನ್ನೂ ಹೇಳಲಾಗಿದೆ. ಇದು ಧರ್ಮಪತಾಕೆಯಾಗಿದ್ದು ಪರಮಾತ್ಮನ ಮಹಾಕಾರ್ಯಗಳನ್ನು ನೆನಪಿಸುವಂತಿರಬೇಕು. ಇಲ್ಲೊಂದು ಎಚ್ಚರ ಬೇಕು. ಹೊರಗೆ ಮಾತ್ರ ಧರ್ಮಧ್ವಜವನ್ನು ಕಟ್ಟುವುದಲ್ಲ, ಆ ಧರ್ಮವು ನಮ್ಮ ವ್ಯವಹಾರದಲ್ಲೂ ಕಾಣುವಂತಿರಬೇಕು.
ಸಂಕಲ್ಪ ಮತ್ತು ಪೂಜೆ
ಆ ದಿನ, "ಹರಿಃ ಓಂ ತತ್ಸತ್" ಎಂದು ಪ್ರಾರಂಭಿಸಿ, ಯುಗಾದಿಯ ವ್ರತವನ್ನು ಆಚರಿಸುವ ಸಂಕಲ್ಪವನ್ನು ಮಾಡಲಾಗುತ್ತದೆ. ದೇಶಕಾಲಗಳ ಪರಿಮಿತಿಗೆ ಒಳಪಡದವನು ಪರಮಾತ್ಮ. ಆದರೆ ಆತನನ್ನು ಸ್ಮರಿಸಿ, ಆತನ ಶರೀರವೇ ಆಗಿರುವ ದೇಶಕಾಲಗಳ ವಿಶೇಷವನ್ನು ಮನಸ್ಸಿಗೆ ತಂದುಕೊಳ್ಳುವುದಾಗುತ್ತದೆ. ಸಂಕಲ್ಪವನ್ನೂ, ಅದರ ಹಿಂದಿರುವ ನಿರ್ವಿಕಲ್ಪನನ್ನೂ ನೆನೆದು ಮಾಡಿದ ಕಾರ್ಯವೇ ಪ್ರಬಲವಾಗಿ ಫಲಕಾರಿಯಾಗುವುದು. ಆದ್ದರಿಂದ ಹೀಗೆ ಮಾಡಿಯೇ ದೇವರ ಪೂಜೆಯನ್ನು ಮಾಡಬೇಕು. ನಿತ್ಯಕರ್ಮವಾಗಿ ಮಾಡುವ ದೇವತಾರಾಧನೆಯೊಂದಿಗೆ ಬ್ರಹ್ಮ ಹಾಗೂ ಕಾಲಪುರುಷನ ಪೂಜೆಯನ್ನೂ ಮಾಡುವುದು ವಿಧಿಯಾಗಿದೆ. ಈ ಹಿಂದೆ ನೋಡಿದಂತೆ ಸೃಷ್ಟಿಕರ್ತನು ಜಗತ್ತನ್ನು ಸೃಷ್ಟಿಸಲು ಆರಂಭಿಸಿದ ದಿನವಾದ್ದರಿಂದ ಇಂದಿನ ದಿನ ಅವನ ಪೂಜೆಯು ಯುಕ್ತವೇ ಆಗಿದೆ. ಹಾಗೂ ಆ ಸೃಷ್ಟಿಕರ್ತನ ವಿಸ್ತಾರವೂ ರೂಪಾಂತರವೂ ಆದ ಕಾಲಪುರುಷನು ಪೂಜ್ಯನೇ.
ಪಂಚಾಂಗಶ್ರವಣ
ಯುಗಾದಿಯ ಪೂಜಾವಿಧಿಯ ಒಂದು ಮುಖ್ಯ ಭಾಗವೆಂದರೆ ಪಂಚಾಂಗಶ್ರವಣ. ಏನು ಪಂಚಾಂಗವೆಂದರೆ? ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣಗಳು. ಈ ಐದನ್ನೂ ತಿಳಿಯದೇ ಯಾವುದೇ ಕರ್ಮಾಚರಣೆಯನ್ನು ವಿಧಿಪೂರ್ವಕವಾಗಿ ಮಾಡುವುದು ಸಾಧ್ಯವಿಲ್ಲ. ಹೀಗಿರುವುದರಿಂದ, ಸಂವತ್ಸರದ ಆದಿಯಲ್ಲಿ ಆದಿಮಂಗಲವಾಗಿ ಅದರ ಪಠನ-ಶ್ರವಣಗಳು ಉಚಿತವೇ. ವಾಸ್ತವವಾಗಿ ಪಂಚಾಂಗಶ್ರವಣವನ್ನು ನಿತ್ಯವೂ ಮಾಡಬೇಕು. ಯುಗಾದಿಯಂದಂತೂ ಮಾಡಲೇಬೇಕಾದದ್ದು. ಪಂಚಾಂಗಪಠನದಲ್ಲಿ ಸಂವತ್ಸರದ ಹೆಸರು, ಗ್ರಹಸ್ಥಿತಿಗಳು, ರಾಜಫಲ, ಪ್ರಜಾಫಲ, ಧಾನ್ಯಫಲ,ವೃಷ್ಟಿಫಲ, ಆರ್ಥಿಕ ಸ್ಥಿತಿ, ರೋಗಭೀತಿ ಇವೇ ಮುಂತಾದುವನ್ನು ತಿಳಿಸುವುದಾಗುತ್ತದೆ.
ನೈವೇದ್ಯ
ದೇವರ ಪೂಜೆ ಮಾಡಿ, ನೈವೇದ್ಯವನ್ನು ಅರ್ಪಿಸುವುದು ತಿಳಿದೇ ಇದೆ. ಈ ದಿನದ ನೈವೇದ್ಯದಲ್ಲಿ ವಿಶೇಷವಿದೆ. ಬೇವಿನ ಚಿಗುರು ಹಾಗೂ ಹೂವನ್ನು ಬೆಲ್ಲದೊಂದಿಗೆ ಸೇರಿಸಿ ಕುಟ್ಟಿ ಅದನ್ನು ಅರ್ಪಿಸುವುದು ಪ್ರಸಿದ್ಧವಾಗಿದ್ದರೂ, ಕೇವಲ ಬೇವಿನ ಚಿಗುರು-ಹೂಗಳನ್ನು ಅರ್ಪಿಸುವುದೂ ಉಂಟು. ಏನಿದು, ಹೊಸವರ್ಷವನ್ನು ಪ್ರಾರಂಭಿಸಲು ಕಹಿಯಾದ ನೈವೇದ್ಯವೇ? ಷಡ್ರಸಗಳಲ್ಲಿ ಅದು ಒಂದಾದರೂ, ಸಾಮಾನ್ಯವಾಗಿ ನೈವೇದ್ಯಕ್ಕೆ ಮಧುರರಸವೇ ಸೂಕ್ತವಾದದ್ದು ಅಲ್ಲವೇ? ಅಧಿಭೂತ-ಅಧಿದೈವ-ಅಧ್ಯಾತ್ಮ ಈ ಮೂರೂ ಕ್ಷೇತ್ರಗಳಲ್ಲೂ ಈ ಅದ್ಭುತವಾದ ಸಸ್ಯದ ಪ್ರಯೋಜನಗಳುಂಟು. ಈ ನೈವೇದ್ಯವನ್ನು ಪ್ರಸಾದವಾಗಿ ಸ್ವೀಕರಿಸುವಾಗ ಈ ಪ್ರಾರ್ಥನೆಯೊಂದಿಗೆ ಸೇವಿಸಿದರೆ ಮತ್ತೂ ಫಲಕಾರಿ.
ಇದರ ಅರ್ಥ: ನೂರ್ಕಾಲದ ಆಯುಸ್ಸಿಗೂ, ವಜ್ರದಂತೆ ಬಲಶಾಲಿಯಾದ ದೇಹಕ್ಕಾಗಿಯೂ, ಎಲ್ಲ ಸಂಪತ್ತಿನ ಪ್ರಾಪ್ತಿಗೂ ಹಾಗೂ ಎಲ್ಲ ಅನಿಷ್ಟಗಳ ನಾಶಕ್ಕಾಗಿಯೂ ಬೇವಿನ ಚಿಗುರನ್ನು (ನಿಂಬ-ಕಂದಲ) ಸೇವಿಸತಕ್ಕದ್ದು.
ಬೇವು-ಬೆಲ್ಲದ ಮಹತ್ತ್ವ
ಬೇವೆಂಬುದು ಕಹಿಯಾದರೂ ಆಯುರ್ವೇದದ ದೃಷ್ಟಿಯಿಂದ ಅದು ಮಹೌಷಧ. ಅದರೊಂದಿಗೆ ಬೆಲ್ಲವನ್ನು ಸೇರಿಸಿದಾಗ ಬೇವಿನಲ್ಲಿರುವ ವಾತದೋಷವು ಹೋಗುತ್ತದೆ. ಹಾಗೆಂದು ಚರಕಸಂಹಿತೆಯಲ್ಲಿ ಹೇಳಿದೆ. ಮಾತ್ರವಲ್ಲದೆ, ಬೆಲ್ಲದ ಸವಿ ಬೇವಿನ ಕಹಿಯನ್ನು ಸಹ್ಯವನ್ನಾಗಿಸುತ್ತದೆ. ಇದು ಆಧಿಭೌತಿಕವಾದ ವಿಷಯವಾಯಿತು. ಇನ್ನು ಆಧಿದೈವಿಕವಾಗಿ, ಈ ಬೇವು ಕಾಲಪುರುಷನ ಪ್ರಿಯವಾದ ವಸ್ತುವಾಗಿದೆ. ಹಾಗಾಗಿ ಅಂತರಂಗದಲ್ಲಿ ಆ ದೇವತೆಗೆ ಸಂಬಂಧಸಿದ ಕೇಂದ್ರಗಳು ತೆರೆದುಕೊಳ್ಳಲು ಅನುವಾಗುತ್ತದೆ. ಇಷ್ಟಲ್ಲದೆ ಅದು ಆಧ್ಯಾತ್ಮಿಕಪ್ರಗತಿಗೂ ಸಹಾಯಕವಾಗುತ್ತದೆ.
ಇದಕ್ಕಿಂತ ಹೆಚ್ಚು ಪ್ರಸಿದ್ಧವಾಗಿ, ಯುಗಾದಿಯ ಬೇವು-ಬೆಲ್ಲಗಳು ನಮಗೆ ಜೀವನವನ್ನು ಹೇಗೆ ಸಾಗಿಸಬೇಕೆಂಬುದರ ಬಗ್ಗೆ ಒಂದು ದೊಡ್ಡ ಪಾಠವನ್ನು ಕೊಡುತ್ತವೆ. ಗೀತಾಚಾರ್ಯನು ಹೇಳಿರುವ ಸ್ಥಿತಪ್ರಜ್ಞನ ಲಕ್ಷಣಗಳನ್ನು ಒಮ್ಮೆ ನೆನಪಿಗೆ ಅವು ತರುತ್ತವೆ: ಸುಖ-ದುಃಖಗಳೆರಡನ್ನೂ ಸಮವಾಗಿ ತೆಗೆದುಕೊಳ್ಳಬಲ್ಲ ಸಾಮರ್ಥ್ಯವನ್ನು ನಾವು ವರ್ಷವಿಡೀ ಇಟ್ಟುಕೊಳ್ಳತಕ್ಕದ್ದು - ಎಂಬ ಸ್ಮೃತಿಯನ್ನು ಯುಗಾದಿಯ ದಿನ ಸೇವಿಸುವ ಬೇವು-ಬೆಲ್ಲ ಕೊಡುತ್ತದೆ.
ಪ್ರಕೃತಿ ಮೆರೆಸುವ ಒಂದು ನಾವೀನ್ಯ
ಒಂದು ವರ್ಷದ ಕಾಲಾವಧಿಯಾದರೋ ಪ್ರಕೃತಿಯಲ್ಲಿ ಜೀವನದ ಒಂದು ಆವರ್ತನವನ್ನು ತೋರಿಸುವಂಥದ್ದು. ಶಿಶಿರ ಋತುವಿನಲ್ಲಿ ಪೂರ್ಣವಾಗಿ ಜರ್ಜರಿತವಾದ ಮರಗಳು ವಸಂತರ್ತುವಿನಲ್ಲಿ ಹೊಸ ಚಿಗುರುಗಳನ್ನು ತೋರಿ ಬಾಲ್ಯಕ್ಕೆ ಮತ್ತೆ ಮರುಳುವಂತಿರುತ್ತದೆ. ಪಾಶ್ಚಾತ್ತ್ಯರು ಆಚರಿಸುವ "New Year"ಗೂ ನಾವು ಆಚರಿಸುವ ಯುಗಾದಿಗೂ ಇರುವ ವ್ಯತ್ಯಾಸಗಳು ಹಲವೇ. ಮುಖ್ಯವಾದ ಒಂದೆಂದರೆ ಪ್ರಕೃತಿಯ ನಡೆಯೊಂದಿಗೆ ಹೊಂದಿಕೊಂಡಂತಹ ಆಚರಣೆ.
ಮರಗಳಲ್ಲಿ ನಳನಳಿಸುವ ಹೊಸ ಚಿಗುರುಗಳು, ಕೋಗಿಲೆಗಳ ಹಾಗೂ ಇತರ ಪಕ್ಷಿಗಳ ಗಾನ – ಇವೆಲ್ಲ ವಸಂತದಲ್ಲಿ ಪ್ರಕೃತಿಯು ಪುನರುಜ್ಜೀವಗೊಂಡಿರುವ ಗುರುತುಗಳು. ಕಾಳಿದಾಸನು ತನ್ನ ಕುಮಾರಸಂಭವ ಮಹಾಕಾವ್ಯದಲ್ಲಿ ವರ್ಣಿಸಿರುವ ವಸಂತದ ಆಗಮನ ನಮ್ಮ ಕಣ್ಣ ಮುಂದೆ ಅತಿಮೋಹಕವಾದ ಚಿತ್ರವನ್ನೇ ಬಿಡಿಸುತ್ತದೆ. ಕವಿಗಳ ವರ್ಣನೆಗೆ ಬೇಕಾದಷ್ಟು ಗ್ರಾಸವನ್ನು ಕೊಡುವ ವಸಂತ, ಕಣ್ಣಿಗೆ ಬಹಿರಂಗದಲ್ಲಿ ಮಾತ್ರವಷ್ಟೆ ಸೊಬಗುಣಿಸುವುದಿಲ್ಲ; ಆಂತರಂಗಿಕವಾಗಿಯೂ ಈ ಕಾಲಘಟ್ಟವು ವಿಶಿಷ್ಟವಾದದ್ದು.
ಪಂಚಾಂಗಶ್ರವಣದ ಅಂಗವಾಗಿ ಹೊಸವರ್ಷದಲ್ಲಿ ಮಳೆ ಎಷ್ಟಾಗುವ ಸಾಧ್ಯತೆಯಿದೆ, ಬಿಸಿಲು-ಛಳಿಗಳೆಷ್ಟು, ಧರ್ಮಕಾರ್ಯಗಳಿಗೆ ಅನುಕೂಲಕರವಾದ ಕಾಲಗಳಾವುವು - ಇತ್ಯಾದಿಗಳನ್ನು ತಿಳಿಸುವುದಾಗುತ್ತದೆ. ಹಿಂದಿನ ಕಾಲದಲ್ಲಿ, ಕೃಷಿಕಾರ್ಯಗಳ ವರ್ಷಾವಧಿ ಯೋಜನೆ ಹಾಕಿಕೊಳ್ಳಲು ಸಹಾಯವಾಗುತ್ತಿತ್ತು. ಈಗಲೂ ಕೃಷಿಚಟುವಟಿಗೆಗಳು ವಸಂತದಲ್ಲಿ ಪ್ರಾರಂಭವಾಗಿ ಬಿತ್ತನೆಗೆ ಭೂಮಿಯನ್ನು ಸಿದ್ಧಪಡಿಸುವುದಾಗುತ್ತದೆ.
ಭಾರತದೆಲ್ಲೆಡೆಯೂ ಆಚರಣೆ
ಸೌರಮಾನ-ಚಾಂದ್ರಮಾನ ಎಂಬೆರಡು ಕಾಲಗಣನಾಪದ್ಧತಿಗಳು ನಮ್ಮಲ್ಲಿ ಚಾಲ್ತಿಯಲ್ಲಿದೆ. "ಮಾನ"ವೆಂದರೆ "ಅಳತೆ". ಸೂರ್ಯನ ಚಲನೆಯನ್ನಾಧರಿಸಿ ಕಾಲವನ್ನು ಅಳೆದಾಗ ಅದು ಸೌರಮಾನ. ಅದೇ ರೀತಿ ಚಂದ್ರನ ಆಧಾರದ ಮೇಲೆ ಕಾಲದ ಅಳತೆಯಾದರೆ ಅದು ಚಾಂದ್ರಮಾನ. ಪಾಶ್ಚಾತ್ತ್ಯರು ಮಾಡುವಂತೆ ಯಾವನೋ ಒಬ್ಬ ಮನುಷ್ಯನ ಜೀವಿತವನ್ನೇ ಮಧ್ಯದಲ್ಲಿಟ್ಟು ಅದರ ಸುತ್ತ ಹೆಣೆದಿರುವ ವರ್ಷವಲ್ಲ ನಮ್ಮದು. ಪ್ರಕೃತಿಯಲ್ಲೇ ಹಾಸುಹೊಕ್ಕಾಗಿರುವ ಅಳತೆಯಿದು.
ಭಾರತದ ಉದ್ದಗಲಕ್ಕೂ ಈ ಹೊಸವರ್ಷವನ್ನು ಬೇರೆ ಬೇರೆ ಹೆಸರುಗಳಿಂದ ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಚಿತ್ರವಿಷುವೆಂದಾದರೆ (ಸೌರಮಾನ ಸಂವತ್ಸರದ ಚೈತ್ರಮಾಸದ ವಿಷುವತ್ ಸಂಕ್ರಮಣದಂದು), ಕರ್ನಾಟಕ-ಆಂಧ್ರಗಳಲ್ಲಿ ಯುಗಾದಿ/ಉಗಾದಿಯೆಂದೂ, ಉತ್ತರಭಾರತದಲ್ಲಿ ನವವರ್ಷಪ್ರತಿಪದಾ ಎಂದೂ, ವಸಂತನವರಾತ್ರಾರಂಭವೆಂದೂ ಆಚರಿಸಲ್ಪಡುತ್ತದೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಎಂದೂ, ಕಾಶ್ಮೀರದ ಹಿಂದೂಗಳು ನವ್ರೇಹ್ ಎಂದೂ ಈ ಹಬ್ಬವನ್ನು ಆಚರಿಸುತ್ತಾರೆ.
ಹಬ್ಬದ ಸಂಭ್ರಮ
ಈ ದಿನದ ಸಂಭ್ರಮವು ಮನೆ-ಮಂದಿಯಲ್ಲೆಲ್ಲ ಪ್ರತಿಫಲಿಸುವುದು ಹೊಸಬಟ್ಟೆ ಹಾಗೂ ಹಬ್ಬದ ಊಟದಲ್ಲಿ. ಮನೆಮಂದಿಯೆಲ್ಲ ನವವಸ್ತ್ರಧಾರಣೆ ಮಾಡಿ, ಅಲಂಕಾರ ಮಾಡಿಕೊಂಡು ನಲಿಯುವ ದಿನವಿದು. ಹೊಸ ಬಟ್ಟೆಗಳು ನಮ್ಮ ಸುತ್ತಲಿನ ಹೊಸತನವನ್ನು ಪ್ರತಿನಿಧಿಸುತ್ತದೆ ಹಾಗೂ ಅವು ಮಂಗಳದ ಪ್ರತೀಕ.
ಷಡ್ರಸಗಳನ್ನೂ ಕೂಡಿದ ಭಕ್ಷ್ಯ-ಭೋಜ್ಯ-ಲೇಹ್ಯ-ಚೋಷ್ಯ-ಪೇಯಗಳನ್ನು ಪ್ರಸಾದವಾಗಿ ಇಂದು ಸ್ವೀಕರಿಸುವುದಾಗುತ್ತದೆ. ಯುಗಾದಿಯಂದು ಕರ್ನಾಟಕದಲ್ಲಿ ವಿಶೇಷವಾಗಿ ಒಬ್ಬಟ್ಟು ಹಾಗೂ ಮಾವಿನಕಾಯನ್ನು ಬಳಸಿ ಚಿತ್ರಾನ್ನ - ಇವು ಹಬ್ಬದೂಟದ ಒಂದು ನಿಯತವಾದ ಅಂಗವಾಗಿದೆ. ಹೀಗಾಗಿ ಇಂದ್ರಿಯಗಳಿಗೂ, ಮನಸ್ಸಿಗೂ, ಆತ್ಮನಿಗೂ ಮುದ ನೀಡುವ ಹಬ್ಬವಿದಾಗಿದೆ.
ಇಂದು ಸಮಾಜದಲ್ಲಿ ಆಗುವ ಆಚರಣೆ
ಕೌಟುಂಬಿಕವಾಗಿ ವ್ರತಾನುಷ್ಠಾನ-ಸಂಭ್ರಮಸಡಗರಗಳಲ್ಲದೆ ಸಮಾಜದಲ್ಲಿಂದು ಯುಗಾದಿ ಹಬ್ಬದ ದಿನ ಕವಿಸಮ್ಮೇಳನ, ಪುರಸ್ಕಾರ ಸಮಾರಂಭಗಳು, ಸಂಗೀತಗೋಷ್ಠಿ - ಎಲ್ಲವನ್ನೂ ಹಮ್ಮಿಕೊಳ್ಳುವುದನ್ನು ನಾವು ನೋಡುತ್ತೇವೆ. ಜನರೆಲ್ಲರೂ ಒಗ್ಗೂಡಿ, ಶುಭದಿನದಂದು ಒಳ್ಳೆಯ ಆಶಂಸೆಗಳೊಂದಿಗೆ ಒಳ್ಳೆಯ ಕಾರ್ಯಗಳಲ್ಲಿ ತೊಡಗುವುದು ಬಹಳ ಶ್ಲಾಘ್ಯವೇ.
ಆದರೆ ಅದ್ದೂರಿಯಾಗಿ ಪೂಜೆ ಮಾಡಿ, ಹೊಸಬಟ್ಟೆಗಳನ್ನು ಧರಿಸಿ, ಉಡುಗೊರೆಗಳನ್ನು ಕೊಟ್ಟು, ಪಟ್ಟಾಗಿ ಹಬ್ಬದ ಊಟಕ್ಕೆ ನಾಲಗೆ ಚಪ್ಪರಿಸಿ, ಹೊರಗೆ ಆಗುವ ಕೆಲ ಸಂಭ್ರಮದ ಗೋಷ್ಠಿ-ಸಮ್ಮೇಳನಗಳಲ್ಲಿ ನಲಿಯುವುದು - ಯುಗಾದಿ ಹಬ್ಬದ ಆಚರಣೆ ಇಷ್ಟಕ್ಕೇ ಮುಗಿದುಬಿಡುತ್ತಿದೆಯೇ? ಈ ಪ್ರಶ್ನೆಯನ್ನು ಇಂದು ನಾವು ನಮಗೇ ಹಾಕಿಕೊಳ್ಳಬೇಕಿದೆ. ಬೇರೆಯವರ ವಿವೇಚನೆಗೆ ನಿಲುಕದ ವಿಷಯ ಇದಾಗಿದ್ದು, ನಾವು ಆತ್ಮಾವಲೋಕನ ಮಾಡಿಕೊಂಡೇ ತಿಳಿಯಬೇಕಿದೆ.
ಕುಟುಂಬದವರೊಂದಿಗೆ, ಬಂಧು-ಮಿತ್ರರೊಂದಿಗೆ ಸಂತೋಷವಾಗಿ ಹಬ್ಬವನ್ನು ಆಚರಿಸುವುದು ಸಹಜವೇ. ಸಮಾಜದಲ್ಲೂ ಒಗ್ಗಟ್ಟಿನಿಂದ ಈ ಸಂಭ್ರಮವನ್ನು ಹಂಚಿಕೊಳ್ಳುವುದೂ ಅಷ್ಟೇ ಅಗತ್ಯ. ಈ ಮೇಲೆ ಹೇಳಿದ ಎಲ್ಲವೂ ಮುಖ್ಯವೇ; ಯಾವುದನ್ನೂ ತಪ್ಪಿಸಬೇಕಿಲ್ಲ. ಆದರೆ ಆ ಆಚರಣೆಯು ಅಲ್ಲಿಗೇ ನಿಂತುಬಿಡಬಾರದು. ಅವೆಲ್ಲದರ ಹಿಂದಿರುವ ತತ್ತ್ವವನ್ನು ಅರಿತು ಮಾಡಿದಾಗಲೇ ಅದರ ಪೂರ್ಣಫಲ ಎಲ್ಲ ರೀತಿಗಳಲ್ಲೂ ದೊರೆಯುವಂತಾಗುವುದು - ಕೇವಲ ಭೌತಿಕಕ್ಷೇತ್ರದಲ್ಲಿ ಮಾತ್ರವಲ್ಲ.
ನಮ್ಮ ಆಚರಣೆ ಹೀಗಿರಲಿ
ಯುಗಾದಿಯೊಂದು ಉತ್ಸವ. ಕಾಳಿದಾಸನೇ ಹೇಳಿದಂತೆ, ಮನುಷ್ಯರು ಉತ್ಸವಪ್ರಿಯರು - ಉತ್ಸವಪ್ರಿಯಾಃ ಖಲು ಮನುಷ್ಯಾಃ. "ಹಲವು ಜನರು ಸೇರಿ ಸಂಭ್ರಮದಿಂದ ಆಚರಿಸುವಂತಹುದು ಉತ್ಸವ" ಎಂದಾಗಿದೆ ಆ ಪದದ ಪ್ರಚಲಿತವಾದ ಅರ್ಥ. ಆದರೆ ಆ ಪದದ ಒಳಹೊಕ್ಕು ನೋಡಿದರೆ ನಮಗೆ ಅದರ ಮರ್ಮ ಸಿಗುತ್ತದೆ – ಉತ್ ಎಂದರೆ ಮೇಲ್ಮುಖವಾದ, ಸವನ ಎಂದರೆ ಯಜ್ಞ. ಶ್ರೀರಂಗಮಹಾಗುರುಗಳ ವಿವರಣೆಯಂತೆ "ಜೀವನಕ್ಕೆ ಊರ್ಧ್ವಮುಖವಾದ ಗತಿಯನ್ನು ಕೊಡುವ ಒಂದು ಸವನವೇ ಉತ್ಸವ".
ಯುಗಾದಿಯು ರೂಢಿಯಂತೆ ಉತ್ಸವವಾಗುವುದರೊಂದಿಗೆ, ನಮ್ಮ ಜೀವನದ ಅತಿಮುಖ್ಯಧ್ಯೇಯದ ಎಡೆಗೆ ನಮ್ಮನ್ನು ಕರೆದೊಯ್ಯುವಂತೆ ಆಗಬೇಕು. ಈ ಬಾಳಾಟವು ಸಮಚಿತ್ತದಿಂದ ಆಗುವಂತೆ ಆ ಕಾಲಪುರುಷನನ್ನು ಪರಮಪುರುಷನನ್ನು ನೆನಪಿಸುವಂತಾಗಬೇಕು, ಅಲ್ಲವೇ?
ಎಲ್ಲರಿಗೂ ಯುಗಾದಿಯ ಶುಭಾಶಯಗಳು!!
ಸೂಚನೆ : 19/03/2026 ರಂದು ಈ ಲೇಖನವು ವಿಜಯ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.