ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಅರ್ಜುನನ ಉತ್ತರದಿಗ್-ವಿಜಯ-ಸಮಾಪ್ತಿ; ಭೀಮನ ಪೂರ್ವದಿಗ್-ವಿಜಯಾರಂಭ
ಆಮೇಲೆ ಉತ್ತರಕುರು-ವರ್ಷದೇಶವನ್ನು ಕಂಡವನೇ ಅದನ್ನು ಜಯಿಸಬೇಕೆಂದುಕೊಂಡನು, ಅರ್ಜುನ. ಅಲ್ಲಿದ್ದ ದ್ವಾರಪಾಲಕರು ಮಹಾಕಾಯರು, ಮಹಾಬಲರು. ಆದರೂ ಮಹಾವೀರ್ಯನಾದ ಆ ಅರ್ಜುನನನ್ನು ಕಂಡು ಹರ್ಷದಿಂದ ಹೀಗೆ ಹೇಳಿದರು:
"ಅಯ್ಯಾ ಪಾರ್ಥನೇ, ಈ ಪುರವನ್ನು ನೀನು ಜಯಿಸಲಾರೆ. ಭದ್ರನೇ, ನೀನಿಲ್ಲಿಯವರೆಗೆ ಬಂದೆಯಲ್ಲಾ, ಅಷ್ಟೇ ಸಾಕು. ಈ ನಗರಕ್ಕೆ ಯಾವನು ಪ್ರವೇಶಮಾಡುವನೋ ಆತನು ನರನಾಗಿ ಉಳಿಯನು. ನೀನು ಸಾಕಷ್ಟು ವಿಜಯವನ್ನು ಸಾಧಿಸಿದ್ದೀಯೇ. ನಿನ್ನ ವಿಷಯದಲ್ಲಿ ನಾವು ಸಂತುಷ್ಟರಾಗಿದ್ದೇವೆ. ಇಲ್ಲಿ ನಿನಗೆ ಜಯಿಸಲು ಏನೂ ಇಲ್ಲ. ಇಲ್ಲಿ ಒಳಗೆ ಪ್ರವೇಶಿಸಿದರೂ ನೀನು ಏನನ್ನೂ ಕಾಣಲಾರೆ ಕೂಡ. ಮನುಷ್ಯ-ಶರೀರವುಳ್ಳವರಿಗೆ ಇಲ್ಲಿ ಏನನ್ನೂ ಕಾಣಲೂ ಆಗದು. ಬದಲಾಗಿ, ನೀನಿಲ್ಲೇನನ್ನಾದರೂ ಮಾಡಬೇಕೆಂದು ಇಷ್ಟಪಟ್ಟಿದ್ದರೆ, ಅದನ್ನು ನಮಗೆ ತಿಳಿಸು. ನೀನು ಹೇಳಿದ ಮಾತ್ರಕ್ಕೇ ನಾವದನ್ನು ಮಾಡಿಮುಗಿಸುವೆವು" ಎಂದರು.
ಅವರು ಹೇಳಿದುದಕ್ಕೆ ನಗುತ್ತಾ ಅರ್ಜುನನು ಹೀಗೆ ಹೇಳಿದನು: ನನ್ನ ಸೋದರನಾದ ಧರ್ಮರಾಜನು ಸಮ್ರಾಟ್ ಆಗಬೇಕು - ಎಂಬುದನ್ನು ಬಯಸುವವನು ನಾನು. ಇಲ್ಲಿ ಮನುಷ್ಯರಿಗೆ ಅಸ್ಪದವಿಲ್ಲವೆನ್ನುವುದಾದರೆ ನಾನು ಪ್ರವೇಶ ಮಾಡುವುದಿಲ್ಲ. ಯುಧಿಷ್ಠಿರನಿಗಾಗಿ ನೀವು ಒಂದಿಷ್ಟು ಕರವನ್ನು ಕೊಡಬೇಕಲ್ಲಾ? ಅಷ್ಟಾದರಾಯಿತು" ಎಂದನು.
ದಿವ್ಯ-ವಸ್ತ್ರಗಳು, ದಿವ್ಯಾಭರಣಗಳು, ರೇಷ್ಮೆ-ವಸ್ತ್ರಗಳು, ಹಾಗೂ ಮೃಗ-ಚರ್ಮ – ಇವುಗಳನ್ನು ಆಗ ಅವರು ಕರರೂಪವಾಗಿ ಇತ್ತರು.
ಅಂತೂ ಈ ಎಲ್ಲ ಪ್ರಕಾರಗಳಿಂದ ಅರ್ಜುನನು ಉತ್ತರ ದಿಕ್ಕನ್ನು ಗೆದ್ದವನಾದನು. ಅದಕ್ಕಾಗಿ ಅನೇಕ ಕ್ಷತ್ರಿಯರೊಂದಿಗೂ ದಸ್ಯುಗಳೊಂದಿಗೂ ಹಲವಾರು ಸಂಗ್ರಾಮಗಳನ್ನು ನಡೆಸಬೇಕಾಯಿತು.
ಆ ರಾಜರನ್ನು ಜಯಿಸಿದವನೇ ಅವರಿಂದ ಕರವನ್ನೂ ಧನವನ್ನೂ ವಸೂಲಿಮಾಡಿದನು. ನಾನಾವಿಧವಾದ ರತ್ನಗಳನ್ನು ಪಡೆದುದಲ್ಲದೆ, ವರ್ಣಗಳ ಕುದುರೆಗಳನ್ನೂ ಪಡೆದನು. ಅವೆಲ್ಲವೂ ವಾಯುವೇಗವುಳ್ಳವುಗಳೇ ಸರಿ. ಮಹತ್ತಾದ ಚತುರಂಗ-ಸೇನೆಯೊಂದಿಗೆ ವೀರನಾದ ಅರ್ಜುನನು ಮತ್ತೆ ಇಂದ್ರಪ್ರಸ್ಥವೆಂಬ ತನ್ನ ಶ್ರೇಷ್ಠನಗರಿಗೆ ಹಿಂದಿರುಗಿದನು.
ಇಂದ್ರಪ್ರಸ್ಥಕ್ಕೆ ಬಂದವನೇ, ಆ ಸಮಸ್ತ ಐಶ್ವರ್ಯವನ್ನೂ ವಾಹನ-ಸಮೇತವಾಗಿ ಧರ್ಮರಾಜನಿಗೆ ಒಪ್ಪಿಸಿದನು. ಹಾಗೂ ಆತನ ಅನುಮತಿಯನ್ನು ಪಡೆದು, ತನ್ನ ಆವಾಸಕ್ಕೆ ತೆರಳಿದನು.
ಇತ್ತ ಪರಾಕ್ರಮಿಯಾದ ಭೀಮಸೇನನೂ ಧರ್ಮರಾಜನಿಂದ ಅನುಮತಿಯನ್ನು ಪಡೆದು ಪೂರ್ವದಿಕ್ಕಿಗೆ ಹೊರಟಿದ್ದನು. ಶತ್ರು-ರಾಷ್ಟ್ರಗಳನ್ನು ಮರ್ದಿಸುವ ಸೈನ್ಯ-ಸಮೂಹವು ಆತನೊಂದಿಗಿತ್ತು. ಹಸ್ತಿ (ಎಂದರೆ ಆನೆ), ಹಾಗೂ ಅಶ್ವ ಮತ್ತು ರಥ - ಇವುಗಳೊಂದಿಗೆ ಸುಸಜ್ಜಿತನಾಗಿದ್ದ ಆತನು, ಶತ್ರುಗಳಿಗೆ ಶೋಕವನ್ನು ಹೆಚ್ಚಿಸುವವನೇ ಆಗಿದ್ದನು; ಅಂತಹ ಭರತವಂಶದ ಶ್ರೇಷ್ಠ-ಕ್ಷತ್ರಿಯನೇ ಆಗಿದ್ದನು.
ಭೀಮನು ಮೊಟ್ಟಮೊದಲು ಹೋದದ್ದು ಪಂಚಾಲ-ದೇಶಕ್ಕೆ. ಅಲ್ಲಿ ಯುದ್ಧವನ್ನು ಪ್ರಸ್ತಾವಿಸುವುದರ ಬದಲು ಬಗೆಬಗೆಯಾದ ಸಾಂತ್ವನದ ಮಾತುಗಳನ್ನಾಡಿದನು, ಹಾಗೂ ಅವರು ತನ್ನ ಕಡೆಯವರಾಗುವಂತೆ ಮಾಡಿಕೊಂಡನು. ಆಮೇಲೆ ಗಂಡಕ-ದೇಶ, ವಿದೇಹ-ರಾಜ್ಯಗಳನ್ನು ಸ್ವಲ್ಪವೇ ಕಾಲದಲ್ಲಿ ಜಯಿಸಿದನು. ಆದರೆ ದರ್ಶಾರ್ಣ-ದೇಶದ ಅಧಿಪತಿಯಾದ ಸುಧರ್ಮನೊಂದಿಗೆ ಘೋರಯುದ್ಧವೇ ಆಯಿತು. ಸುಧರ್ಮನ ಪರಾಕ್ರಮವನ್ನು ಕಂಡು ಸಂತೋಷಗೊಂಡ ಭೀಮನು ಆತನನ್ನು ತನ್ನ ಅಧಿಸೇನಾಪತಿಯನ್ನಾಗಿ ಮಾಡಿಕೊಂಡನು.
ಮತ್ತು ಪೂರ್ವದತ್ತ ಸಾಗಿ ಅಶ್ವಮೇಧ-ದೇಶದ ರಾಜನಾದ ರೋಚಮಾನನನ್ನು ಸೋಲಿಸಿದನು. ಹೀಗೆ ಪೂರ್ವದೇಶದ ಮೇಲೆ ವಿಜಯವನ್ನು ಸಾಧಿಸಿ, ಅದರ ದಕ್ಷಿಣದ ಪುಲಿಂದ-ರಾಜ್ಯವನ್ನು ಮುತ್ತಿ, ಅಲ್ಲಿಯ ಸುಕುಮಾರ ಹಾಗೂ ಸುಮಿತ್ರರೆಂಬ ರಾಜರನ್ನು ತನ್ನ ವಶಕ್ಕೆ ತಂದುಕೊಂಡನು, ಭೀಮ.
ಸೂಚನೆ : 14/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.