Monday, May 11, 2026

ಅಷ್ಟಾಕ್ಷರೀ 104 ನ ಶಕ್ಯಃ ಚಕ್ಷುಷಾ ದ್ರಷ್ಟುಂ (Astakshara 104)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png

ಬರಿಗಣ್ಣಿನಿಂದ ನೋಡಲಾಗದು

ಜೀವನದಲ್ಲಿ ಏನನ್ನು ನಂಬಬಹುದು, ಏನನ್ನು ನಂಬಬಾರದು? - ಎನ್ನುವುದೇ ದೊಡ್ಡ ಪ್ರಶ್ನೆಯಾಗಿಬಿಡುತ್ತದೆ. 

ಯಾರಾದರೂ ಬೇರೆಯವರ ಬಗ್ಗೆ ಏನನ್ನಾದರೂ ಕೆಟ್ಟದ್ದನ್ನು ಹೇಳಿದರೆ, ನಂಬಲು ಮನಸ್ಸು ಬರದಿದ್ದರೂ, “ಬೆಂಕಿಯಿಲ್ಲದೆ ಹೊಗೆ ಬಂದೀತೇ?” - ಎಂಬ ಒಂದೇ ಲೆಕ್ಕವನ್ನು ಹಿಡಿದುಕೊಂಡು, "ಯಾರಿಗೆ ಗೊತ್ತು? ಇದ್ದರೂ ಇರಬಹುದು" ಎಂದುಬಿಡುತ್ತದೆ, ಲೋಕ. 

ಹೀಗಾಗಿಯೇ ಅಲ್ಲವೇ, ಸೀತಾಮಾತೆಯ ವಿಷಯಕ್ಕೂ ಜನಗಳು ಸಲ್ಲದ ಮಾತುಗಳನ್ನಾಡಿದುದು? ಅಗ್ನಿಪರೀಕ್ಷೆಯೇ ನಡೆದು ಅದರಲ್ಲಿ ಅಗ್ನಿದೇವನೇ ಪ್ರತ್ಯಕ್ಷನಾಗಿ ಬಂದು, ಸೀತೆಯು ಪರಮಶುದ್ಧಳು ಎಂಬುದನ್ನು ಹೇಳಿದಮೇಲೂ ಅಪವಾದ ತಪ್ಪಿತೇ? ಸಂಶಯಪಡುವವರ ಮುಂದೆಲ್ಲಾ ಮತ್ತೆ ಮತ್ತೆ ಅಗ್ನಿಪರೀಕ್ಷೆಯಾಗುತ್ತಿರುವುದಾದರೂ ಶಕ್ಯವೇ?

ಅದಕ್ಕೇ, “ಕಂಡದ್ದನ್ನು ಮಾತ್ರವೇ ನಂಬತಕ್ಕದ್ದು, ಕೇಳಿದ್ದನ್ನೆಲ್ಲಾ ಅಲ್ಲ” - ಎನ್ನುವವರಿದ್ದಾರೆ. ಪ್ರತ್ಯಕ್ಷವೇ ಪ್ರಮಾಣ: ಸಾಕ್ಷಾತ್ತಾಗಿ ನೋಡಿದ್ದನ್ನಷ್ಟೇ ನಂಬಬಹುದು; ಕಣ್ಣಾರ ಕಂಡದ್ದನ್ನೊಪ್ಪಬಹುದು – ಎಂಬುದು ಅವರ ತರ್ಕ. 

ಅಲ್ಲೂ ಕಷ್ಟವಿದೆ. ಕಂಡದ್ದೆಲ್ಲಾ ಸತ್ಯವೇ? “ಕಂಡದ್ದೆಲ್ಲಾ ಸತ್ಯವಾಗಿರಬೇಕಾಗಿಲ್ಲ” - ಎಂದು ಹೇಳಲು ಬಂದಿರುವುದೇ ವಿಜ್ಞಾನ! ಭೂಮಿಯು ಗೋಳಾಕಾರವಾಗಿದೆ - ಎಂಬುದನ್ನು ಕಂಡ ಮೇಲೇ ನಂಬುವುದು ಎನ್ನಲಾದೀತೇ? ಭೂಮಿಯು ತಿರುಗುತ್ತಿದೆ - ಎಂಬುದನ್ನು ಮೊದಲು ತೋರಿಸಿಕೊಡಿ, ಅಲ್ಲಿಯ ತನಕ ಒಪ್ಪೆ - ಎಂದರೆ, “ಹೋಗು ಬೆಪ್ಪೇ!” ಎನ್ನುತ್ತಾರೆ! 

ಬದಲಾಗಿ, ಕಣ್ಣಿಗೆ ಕಂಡದ್ದು ಸುಳ್ಳಾಗುವುದೂ ಉಂಟು. ಸೂರ್ಯ-ಚಂದ್ರರೂ, ನಕ್ಷತ್ರಗಳೂ ಭೂಮಿಯ ಸುತ್ತ ತಿರುಗುವಂತೆ ತೋರುತ್ತದೆ. ಕಣ್ಣಾರ ಕಂಡಿದ್ದೇವೆ - ಎಂದುಕೊಂಡರೂ ಅದೇನು ತಥ್ಯವೇ? ಅಷ್ಟು ದೂರದ ವಿಷಯವೇಕೆ? ನೀರಿನಲ್ಲಿ ಕಡ್ಡಿಯನ್ನು ಅದ್ದಿದಾಗ ಕಡ್ಡಿಯು ಮುರಿದಿರುವಂತೆ ತೋರುತ್ತದೆ. ಬೆಂಕಿಯ ಕೊಳ್ಳಿಗೆ ಅಲಾತವೆನ್ನುತ್ತಾರೆ; ಅಲಾತವನ್ನು ವೇಗವಾಗಿ ಚಕ್ರಾಕಾರವಾಗಿ ತಿರುಗಿಸಿದರೆ, ಬೆಂಕಿಯೇ ವೃತ್ತಾಕಾರವಾಗಿರುವಂತೆ ತೋರುತ್ತದೆ! ಹಾಗೆಯೇ, ಮರಳುಗಾಡಿನಲ್ಲಿ ದೂರದಲ್ಲಿ ನೀರಿರುವಂತೆ ತೋರುತ್ತದೆ: ಮರೀಚಿಕೆಯಲ್ಲಿ ನೀರಿರುವುದುಂಟೇ? 

ಹೀಗಾಗಿ ಕಂಡದ್ದು ಸತ್ಯವಲ್ಲ, ಸತ್ಯವು ಕಾಣಲಾಗದ್ದು – ಎಂದೆನಿಸಿಬಿಡುವುದೂ ಉಂಟು! ಎಂದೇ, “ಪ್ರತ್ಯಕ್ಷವನ್ನೂ ಪ್ರಮಾಣಿಸಿ ನೋಡು” ಎಂಬ ಗಾದೆಯನ್ನು ಶ್ರೀರಂಗಮಹಾಗುರುಗಳು ಆಗಾಗ್ಗೆ ಉಲ್ಲೇಖಿಸುತ್ತಿದ್ದರು. ಹೋಗಲಿ,  ಇರುವುದನ್ನು ಇರುವಂತೆಯೇ ತೋರಿಸುವುದಲ್ಲವೇ, ಕನ್ನಡಿ? “ಚೆನ್ನಾಗಿ ದರ್ಶನ ಮಾಡಿಸುತ್ತದೆ” - ಎಂಬ ಕಾರಣಕ್ಕೇ ಅದನ್ನು ಆ-ದರ್ಶವೆನ್ನುವುದು, ಅಲ್ಲವೇ? ಆದರೆ ಅದಕ್ಕೂ, "ನೋಡಪ್ಪಾ, ನಾವು ಉಪವೀತವನ್ನು ಧರಿಸಿದ್ದರೆ ಕನ್ನಡಿಯು ಪ್ರಾಚೀನಾವೀತವೆಂಬಂತೆ ತೋರಿಸುತ್ತದೆ!” ಎಂದು ಅವರು ಆ ಬಗ್ಗೆ ತಮಾಷೆಯಾಗಿ ಎಚ್ಚರಿಸಿದ್ದಾರೆ! ಉಪವೀತವೆಂದರೆ ಜನಿವಾರವು ಎಡಭುಜದ ಮೇಲೆ ಬಂದಿರುವುದು; ಪ್ರಾಚೀನಾವೀತವೆಂದರೆ ಬಲಭುಜದ ಮೇಲೆ. ಮೊದಲನೆಯದು ದೇವಕಾರ್ಯಕ್ಕೆ; ಎರಡನೆಯದು ಪಿತೃಕಾರ್ಯಕ್ಕೆ! 

ಒಂದು ಮನೆಯನ್ನು ನೋಡಿದರೆ ಅದರ ಅಡಿಪಾಯ ನಮಗೆ ತೋರದು. ಒಂದು ಮರವನ್ನು ನೋಡಿದಾಗ ಅದರ ವ್ಯಕ್ತ-ಭಾಗವಾದ ಕಾಂಡ-ಕೊಂಬೆ-ಎಲೆ-ಹಣ್ಣುಗಳೆಲ್ಲ ಕಂಡರೂ, ಅವ್ಯಕ್ತವಾದ ಅದರ ಬೇರು ಮಾತ್ರ, ಗುಪ್ತವಾಗಿ ಆಳವಾಗಿ ವ್ಯಾಪಿಸಿದ್ದರೂ ಗೋಚರವಾಗದು! ಆದರೆ ಅವ್ಯಕ್ತವಾದ ಆ ಬೇರೇ ವ್ಯಕ್ತವಾದ ವೃಕ್ಷಕ್ಕೆ ಧಾರಕವಾದದ್ದು!

ಹಾಗೆಯೇ ನಮ್ಮ ಜೀವನದ ಬೇರೂ. ನಮ್ಮ ಕೈ-ಕಾಲುಗಳು ಕೊಂಬೆಗಳ ಹಾಗೆ; ಇವನ್ನುಳಿದ ಶರೀರಭಾಗವು ಕಾಂಡದಂತೆ. ಜೀವನದ ಬೇರು ಅವ್ಯಕ್ತ. ಇಲ್ಲೂ ಅಷ್ಟೆ: ಅವ್ಯಕ್ತವಾದದ್ದೇ ಹೆಚ್ಚು ಮುಖ್ಯ. ಶರೀರವನ್ನೇ ಅಧ್ಯಯನ ಮಾಡುವ ಆಯುರ್ವೇದವು ಸಹ ಈ ಸತ್ಯವನ್ನು ಚೆನ್ನಾಗಿ ಮನಗಂಡಿದೆ. ಎಂದೇ, ಸುಶ್ರುತ-ಸಂಹಿತೆಯು ಹೇಳುವ ಮಾತು: “(ಬರಿ)ಕಣ್ಣಿನಿಂದ ಕಾಣಲಾಗದು (ನ ಶಕ್ಯಃ ಚಕ್ಷುಷಾ ದ್ರಷ್ಟುಂ), ಸೂಕ್ಷ್ಮತಮನೆನಿಸುವ ಆ ವಿಭುವನ್ನು”, ಎಂದರೆ ಪರಮಾತ್ಮನನ್ನು - ಎಂದು.

ವಿಜ್ಞಾನವು ತೋರಿಸುವ ಬ್ಯಾಕ್ಟೀರಿಯಾಗಳ ವಿಷಯವೂ ಹಾಗೆಯೇ ಅಲ್ಲವೇ? ಬರಿಗಣ್ಣಿನಿಂದ ಒಂದು ದೊಡ್ಡ ಮಡುವಿನಲ್ಲೂ ಒಂದೇಒಂದನ್ನು ಸಹ ಕಾಣೆವು; ಆದರೆ ಬರೀ ಬೊಗಸೆನೀರಿನಲ್ಲಿ ಅವು ಲಕ್ಷಗಟ್ಟಲೆ ಇರುವುದು ಮೈಕ್ರೋಸ್ಕೋಪಿನ ಮೂಲಕ ಗೋಚರವಾಗುತ್ತದೆ! ಹೊರಗಣ್ಣಿಗೆ ಕಾಣದ ಮೈಯೊಳಗಣ ಮೂಳೆಗಳನ್ನು ಎಕ್ಸ್-ರೇ-ಗಳು ನಿಚ್ಚಳವಾಗಿಸುವ ಉದಾಹರಣೆಯನ್ನೂ ಸಹ ಶ್ರೀರಂಗಮಹಾಗುರುಗಳೇ ಇತ್ತಿರುವರು. ಕೇವಲಭೌತಿಕವಸ್ತುಗಳಲ್ಲೇ ಇಷ್ಟೆಲ್ಲ!

ಹಾಗಾದರೆ ಪರಮಾತ್ಮನಿರುವುದು ಯಾರಿಗಾದರೂ ಕಂಡೀತೇ? - ಎಂದು ಕೇಳಿದರೆ, ಅದೇ ಸುಶ್ರುತ-ಸಂಹಿತೆಯ ಉತ್ತರವಿಂತಿದೆ: ಜ್ಞಾನ-ಚಕ್ಷುಸ್ಸು, ತಪಶ್ಚಕ್ಷುಸ್ಸುಗಳನ್ನುಳ್ಳವರಿಗೆ ಅದು ಗೋಚರವಾಗುವುದು - ಎಂದು. ಚಕ್ಷುಸ್ಸೆಂದರೆ ಕಣ್ಣು. ಅರ್ಜುನನಿಗೆ ಕೃಷ್ಣನಾದರೂ ಹೇಳಿದ್ದೇನು? ದಿವ್ಯ -ಚಕ್ಷುಸ್ಸನ್ನು ನಿನಗೆ ಕೊಡುತ್ತೇನೆ, ಇಲ್ಲವೋ ನೋಡಲಾರೆ – ಎಂದು. ಇದು ತಪಸ್ಸಿನಿಂದ ಸಂಪಾದ್ಯ. ತಪಸ್ಸು ಒಳಗಣ್ಣನ್ನು ತೆರೆಸುತ್ತದೆ. 

ಇದರ ಸತ್ಯತೆಯನ್ನು ಸ್ವಾನುಭವದಿಂದಲೇ ಕಂಡುದಲ್ಲದೆ, ತಮ್ಮ ಹಲವು ಶಿಷ್ಯರಿಗೂ ಅನುಭವ-ವೇದ್ಯವನ್ನಾಗಿಸಿದ್ದರು, ಶ್ರೀರಂಗಮಹಾಗುರುಗಳು.

ಸೂಚನೆ: 26/4//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.