Monday, April 20, 2026

ಪ್ರಶ್ನೋತ್ತರ ರತ್ನಮಾಲಿಕೆ 62 (Prasnottara Ratnamalike 62)

  

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೬೨ - ಕುಲರೂಪವಾದ ಕಮಲಕ್ಕೆ ಸೂರ್ಯನಂತೆ ಅರಳಿಸುವ ಸಾಧನ ಯಾವುದು?

ಉತ್ತರ - ವಿದ್ಯಾ, ದಯಾ ಮೊದಲಾದ ದೈವೀಗುಣಗಳಿದ್ದರೂ ನಮ್ರನಾಗಿರುವುದು.

ಈ ಪ್ರಶ್ನೋತ್ತರದಲ್ಲಿ ‘ವಿನಯ’ ಎಂಬ ಗುಣ ಎಷ್ಟು ಶ್ರೇಷ್ಠವಾದದ್ದು? ಎಂಬ ಬಗ್ಗೆ ಕಾವ್ಯಮಯವಾಗಿ ವಿವರಿಸಲಾಗಿದೆ. ಒಬ್ಬ ವ್ಯಕ್ತಿ ಒಂದು ಉತ್ತಮಕುಲದಲ್ಲಿ ಹುಟ್ಟಿದ್ದಾನೆ; ಆತನ ಕುಲವು ಅತ್ಯಂತ ಶ್ರೇಷ್ಠವಾದದ್ದು; ಅಷ್ಟೇ ಅಲ್ಲ, ಅವನಿಗೆ ವಿದ್ಯೆ, ದಯೆ ಮೊದಲಾದ ಅನೇಕ ಉತ್ತಮ ಗುಣಗಳಿವೆ. ಅಷ್ಟೇ ಅಲ್ಲ ಇನ್ನೂ ಅನೇಕ ದೈವದತ್ತ ಶ್ರೇಷ್ಠ ಗುಣಗಳೂ ಕೂಡ ಇವೆ. ಹೀಗಿದ್ದು ಅವನಲ್ಲಿ ಈ ವಿನಯ ಎಂಬ ಗುಣ ಇಲ್ಲದಿದ್ದರೆ ಅವನಿಗೆ ಯಾವುದೇ ರೀತಿಯ ಗೌರವ - ಮನ್ನಣೆ ಸಿಗುವುದಿಲ್ಲ ಎಂಬುದಾಗಿ ಇಲ್ಲಿ ಕಾವ್ಯಮಯವಾಗಿ ವಿವರಣೆ ಇಲ್ಲಿ ಸಿಗುತ್ತದೆ.

ಕುಲ ಎಂಬುದು ಒಂದು ಕಮಲವಿದ್ದಂತೆ. ಕಮಲವು ಅರಳಬೇಕಾದರೆ ಸೂರ್ಯನ ಕಿರಣ ಅತ್ಯಂತ ಅವಶ್ಯಕ. ಇಲ್ಲಿ ನಾವು ತಿಳಿಯಬೇಕಾದ ವಿಷಯ ಬಹಳ ಇದೆ. ಏಕೆಂದರೆ ಕುಲ, ಕಮಲ ಮತ್ತು ಸೂರ್ಯನ ಕಿರಣ ಇವೆಲ್ಲವೂ ಇವೆ. ಆದರೆ ಇವಕ್ಕೊಂದು ಕಿರೀಟ ಪ್ರಾಯವಾದ ಒಂದು ಬೆಳಗಿಸುವ ಸಾಧನ ಇದ್ದಾಗ ಮಾತ್ರ ಇವೆಲ್ಲಕ್ಕೂ ಸಾರ್ಥಕತೆ ಬರುತ್ತದೆ ಎಂದು. ದಯೆ, ವಿದ್ಯೆ, ಸಂಸ್ಕಾರ ಇವೆಲ್ಲವೂ ಅತ್ಯಂತ ಶ್ರೇಷ್ಠವಾದ ಗುಣಗಳೇ. ಇವು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರಬೇಕಾದವುಗಳೇ. ಆದರೆ ಈ ನಮ್ರತೆ ಅಥವಾ ವಿನಯ ಎಂಬ ಗುಣ ಇಲ್ಲದಿದ್ದರೆ ಈ ಹಿಂದೆ ಹೇಳಿದ ಯಾವ ಗುಣಗಳು ಇದ್ದರೂ ಪ್ರಯೋಜನವಿಲ್ಲ. ಹಾಗಾಗಿ ಇದಕ್ಕೆ ಅಷ್ಟೊಂದು ಬೆಲೆಯನ್ನು ಕೊಡಲಾಗಿದೆ. ಹಾಗಾದರೆ ಇದಕ್ಕೆ ಅಷ್ಟು ಬೆಲೆ ಬರಲು ಕಾರಣ ಏನು? ವಿನಯ ಎಂದರೇನು?

ವಿದ್ಯೆ, ಸಂಸ್ಕಾರ, ದಯಾ ಮೊದಲಾದ ಗುಣಗಳಿಂದ ವ್ಯಕ್ತಿ ಮೇಲಕ್ಕೆ ಏರುತ್ತಾನೆ. ಎಷ್ಟೇ ಮೇಲಕ್ಕೆ ಏರಿದರೂ, ವ್ಯಕ್ತಿತ್ವ ಎಷ್ಟೇ ಬೆಳೆದಿದ್ದರೂ, ವ್ಯಕ್ತಿಶಃ ಚಿಕ್ಕವನು ಎಂಬ ಒಂದು ಅರಿವಿದ್ದಾಗ ಮಾತ್ರ ಈ ಎಲ್ಲಕ್ಕೂ ಬೆಲೆ ಬರುತ್ತದೆ. ಹೀಗೆ ಒಬ್ಬ ಕವಿ ಹೇಳುತ್ತಾನೆ - “ಏರಿದವನು ಚಿಕ್ಕವನಿರಬೇಕಲೇ ಎಂಬ ಮಾತನು ಸಾರುವನು” ಎಂದು. ಎಷ್ಟೇ ಮೇಲೆ ಏರಿದರೂ ಅದು ಶಾಶ್ವತವಲ್ಲ, ಒಂದಲ್ಲ ಒಂದು ಕಾಲದಲ್ಲಿ ಮತ್ತೆ ಕೆಳಗಿಳಿಯಬೇಕಾಗುತ್ತದೆ ಎಂಬ ಯಾವ ಅರಿವಿದೆಯೋ ಅದನ್ನೇ ವಿನಯ ಎಂಬುದಾಗಿ ಕರೆಯಬೇಕು. ವಿನಯ ಎಂದರೆ ಬಾಗುವುದು. ದೊಡ್ಡದಕ್ಕೆ ಗೌರವವನ್ನು ಕೊಡುವುದು. ಅದು ನಮಗೆ ಅರಿವಿಗೆ ಬಾರದಿರುವಾಗ ದಂಭಭಾವ, ಅಹಂಕಾರ ಮೊದಲಾದ ದುಷ್ಟಗುಣಗಳು ಆವಿರ್ಭಾವಗೊಳ್ಳುತ್ತವೆ. ಇವುಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತವೆ. ಕೆಲವರು ವಿದ್ಯಾವಂತರಾಗಿರುತ್ತಾರೆ, ಆದರೆ ಅವರಲ್ಲಿ ವಿನಯವೆಂಬುದು ಇರುವುದಿಲ್ಲ. ಇನ್ನು ಕೆಲವರು ಅನೇಕ ದೈವದತ್ತ ಗುಣಗಳಿಂದ ಕೂಡಿರುತ್ತಾರೆ. ಆದರೆ ಅದು ಅವರಿಗೆ ತಲೆಗೆ ಹತ್ತಿ ಕೊನೆಗೆ ಈ ಪ್ರಪಂಚವೇ ಕಾಣದಿರುವಷ್ಟು ಅಂಧತೆ ಆವರಿಸುತ್ತದೆ. ಹಾಗಾಗಿ ಈ ವಿನಯ ಎಂಬ ಗುಣವು ಈ ಮೌಢ್ಯವನ್ನು ಅಹಂಕಾರದ ಅಂಧತ್ವವನ್ನು ತೊಲಗಿಸುವ ಒಂದು ದೀಪದಂತೆ ಎಂಬುದಾಗಿ ಇಲ್ಲಿ ವಿವರಿಸಲಾಗಿದೆ. ಕಮಲವು ಶ್ರೇಷ್ಠವಾದದ್ದು, ಹಾಗೇ ಇದ್ದರೆ ಅದು ಅರಳದು. ಅದಕ್ಕೆ ಸೂರ್ಯಕಿರಣ ಬೇಕಷ್ಟೇ. ಒಳ್ಳೆಯ ಹಸು, ಆದರೆ ಹಾಲೇ ಕೊಡದಿದ್ದರೆ ಹೇಗೇ! ಎಂಬಂತೆ ವಿದ್ಯೆ ಮೊದಲಾದ ಗುಣಗಳು ಅತ್ಯಂತ ಶ್ರೇಷ್ಠವಾದವುಗಳೇ ಆದರೂ ಅವುಗಳು ಪ್ರಕಾಶಕ್ಕೆ ಬರಬೇಕಾದರೆ ದೀಪದಂತಿರುವ ವಿನಯ ಎಂಬುದು ಅತ್ಯಂತ ಮುಖ್ಯ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 19/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.