ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಗಿತ್ತೆಂದರೆ, ಆತನ ಧನ-ಸಂಪಾದನವೆಲ್ಲವೂ ಧರ್ಮ-ಮಾರ್ಗದಿಂದಲೇ ಆಗುತ್ತಿತ್ತು. ಎಂದೇ ಅದು ಮಹತ್ತಾಗಿಯೇ ಬೆಳೆಯಿತು. ನೂರಾರು ವರ್ಷಗಳಾದರೂ ಬೊಕ್ಕಸವು ಖಾಲಿಯಾಗುವಂತಿರಲಿಲ್ಲ.
ಅನ್ನವಸ್ತ್ರಾದಿಗಳ ಸಂಗ್ರಹ ಹಾಗೂ ತನ್ನ ಕೋಶ(ಖಜಾನೆ) - ಇವುಗಳ ಪರಿಮಾಣವನ್ನು ಅರಿತುಕೊಂಡ ಯುಧಿಷ್ಠಿರನು ಯಜ್ಞವನ್ನು ಮಾಡುವುದೆಂದೇ ನಿಶ್ಚಯ ಮಾಡಿದನು. ಆ ಸಮಯಕ್ಕೇ ಸರಿಯಾಗಿ ಆತನ ಮಿತ್ರರು ಒಬ್ಬೊಬ್ಬರಾಗಿ ಬಂದೂ, ಒಟ್ಟಿಗೇ ಬಂದೂ ಆತನಿಗೆ ಹೇಳಿದರು - "ರಾಜನೇ ಯಜ್ಞವನ್ನು ಮಾಡಲು ಸರಿಯಾದ ಸಮಯವು ಒದಗಿಬಂದಿದೆ. ಎಂದೇ ಅದನ್ನೀಗ ಮಾಡುವುದಾಗಲಿ". ಅವರೆಲ್ಲರೂ ಹೀಗೆ ಮಾತನಾಡುತ್ತಿರುವಾಗಲೇ ಅಲ್ಲಿಗೆ ಶ್ರೀಕೃಷ್ಣನು ಆಗಮಿಸಿದನು.
ಆತನಾದರೂ ಪುರಾಣಪುರುಷ, ನಾರಾಯಣ-ಋಷಿ, ವೇದಾತ್ಮ ಹಾಗೂ ವಿಶೇಷಜ್ಞಾನಸಂಪನ್ನರಿಗೂ ಅವೇದ್ಯನಾದಂತಹವನು; ಚರಾಚರಗಳಲ್ಲಿ ಆತನೇ ಶ್ರೇಷ್ಠನಾದವನು; ಎಲ್ಲಕ್ಕೂ ಜನ್ಮಹೇತುವೂ ಲಯಹೇತುವೂ ಆದವನು; ಕೇಶಿಯೆಂಬ ದೈತ್ಯನನ್ನು ಸಂಹರಿಸಿದ ಕೇಶವನೇ ಅವನು!
ವೃಷ್ಣಿವಂಶದವರೆಲ್ಲರಿಗೂ ಆತನು ಕೋಟೆಯಿದ್ದಂತೆ, ಎಂದರೆ ಅವರ ರಕ್ಷಕ. ಆಪತ್ತುಗಳಲ್ಲಿ ಅಭಯವನ್ನು ಕೊಡತಕ್ಕವನು. ಶತ್ರುಗಳನ್ನು ಸಂಹರಿಸತಕ್ಕವನು.
ತನ್ನ ತಂದೆಯಾದ ಆನಕದುಂದುಭಿಯನ್ನು, ಎಂದರೆ ವಸುದೇವನನ್ನು, ಸೈನ್ಯಾಧಿಕಾರದಲ್ಲಿ ನಿಲ್ಲಿಸಿ, ಧರ್ಮರಾಜನಿಗಾಗಿ ಅಪಾರವಾದ ಸಂಪತ್ತನ್ನು ತಂದು, ಮಹಾಸೈನ್ಯ-ಸಮೇತನಾಗಿ ಅಲ್ಲಿಗೆ ಬಂದನು. ಅಮಿತವಾದ ಧನ-ರತ್ನಗಳ ಅಕ್ಷಯಸಾಗರವನ್ನೇ ತಂದ ಕೃಷ್ಣನು ರಥ-ಘೋಷದೊಂದಿಗೆ ಆ ಶ್ರೇಷ್ಠ-ನಗರವನ್ನು ಪ್ರವೇಶಿಸಿದನು.
ಪಾಂಡವರ ಭಂಡಾರವೋ, ಮೊದಲೇ ತುಂಬಿತ್ತು. ಈಗ ಅದಕ್ಕೆ ತನ್ನ ಧನಸಂಪತ್ತಿಯನ್ನು ಮತ್ತೂ ತುಂಬಿದನು, ಶ್ರೀಕೃಷ್ಣ. ಪಾಂಡವರ ಶತ್ರುಗಳಿಗಂತೂ ಇದು ಶೋಕವನ್ನೇ ಹರಿಸಿತು. ಸೂರ್ಯನಿಲ್ಲದೆಡೆಗೆ ಸೂರ್ಯನು ಬಂದರೆ ಹೇಗೋ ಹಾಗೆ, ವಾಯುವಿಲ್ಲದೆಡೆಗೆ ವಾಯುವು ಬಂದರೆ ಹೇಗೋ ಹಾಗೆ, ಕೃಷ್ಣನ ಆಗಮನದಿಂದಾಗಿ ಆ ಭಾರತ-ಪುರವು, ಎಂದರೆ ಇಂದ್ರಪ್ರಸ್ಥವು, ಹರ್ಷಿಸಿತು.
ಆತನನ್ನು ಯುಧಿಷ್ಠಿರನು ಸಂತೋಷದಿಂದ ಎದುರ್ಗೊಂಡನು. ವಿಧ್ಯನುಸಾರ ಸತ್ಕರಿಸಿದನು. ಕುಶಲಪ್ರಶ್ನೆಯನ್ನು ಮಾಡಿದನು. ಸುಖಾಸನದಲ್ಲಿ ಕುಳ್ಳಿರಿಸಿದನು. ಧೌಮ್ಯ, ದ್ವೈಪಾಯನ ಮೊದಲಾದ ಋತ್ವಿಕ್ಕುಗಳು ಹಾಗೂ ಭೀಮ, ಅರ್ಜುನ, ನಕುಲ, ಸಹದೇವ - ಇವರೆಲ್ಲರೊಂದಿಗೆ ಬಂದು ಕೃಷ್ಣನ್ನು ಮಾತನಾಡಿಸುತ್ತಾ ಹೀಗೆ ಹೇಳಿದನು:
"ಕೃಷ್ಣಾ! ನನ್ನ ಬಳಿಯಿರುವ ಈ ಪೃಥ್ವಿಯೆಲ್ಲವೂ ನಿನಗಾಗಿಯೇ ಇರುವುದು. ಬಹುಧನ-ಸಂಪಾದನೆಯು ಸಹ ನಿನ್ನ ಪ್ರಸಾದದಿಂದಲೇ ಘಟಿಸಿದೆ. ದೇವಕೀಪುತ್ರ, ಅದೆಲ್ಲವನ್ನೂ ನಾನು ವಿಧಿ-ಪೂರ್ವಕವಾಗಿ ಬ್ರಾಹ್ಮಣ-ಶ್ರೇಷ್ಠರಿಗಾಗಿಯೂ ಹವ್ಯ-ವಾಹನಾದ ಅಗ್ನಿಗಾಗಿಯೂ ವಿನಿಯೋಗಿಸಬಯಸುತ್ತೇನೆ. ಅದುದರಿಂದ ನಾನು ನಿನ್ನೊಂದಿಗೂ ತಮ್ಮಂದಿರೊಂದಿಗೂ ಯಜ್ಞವನ್ನು ಮಾಡಲು ಇಷ್ಟಪಡುತ್ತೇನೆ. ಅದಕ್ಕೆ ನೀನು ಅನುಮತಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಮತ್ತು ಅದಕ್ಕಾಗಿ, ಗೋವಿಂದನೇ, ನೀನೇ ಯಜ್ಞದೀಕ್ಷೆಯನ್ನು ಕೈಗೊಳ್ಳಬೇಕೆಂದು ಕೋರುತ್ತೇನೆ. ನೀನು ಯಜ್ಞವನ್ನು ಮಾಡುವುದಾದಲ್ಲಿ ನಾನು ಪಾಪರಹಿತನಾದೇನು. ಅಥವಾ, ನಾನೇ ತಮ್ಮಂದಿರೊಂದಿಗೆ ಯಜ್ಞವನ್ನು ನೆರವೇರಿಸಲು ಅನುಮತಿ ಕೊಡು. ನಿನ್ನಿಂದ ಅನುಜ್ಞೆಯನ್ನು ಪಡೆದು ಯಜ್ಞವನ್ನು ಆಚರಿಸಿದೆನಾದರೆ ನಾನು ಉತ್ತಮಯಾಗವನ್ನು, ಎಂದರೆ ಯಾಗಫಲವನ್ನು, ಸಂಪಾದಿಸಿಯೇನು!" ಎಂದನು.
ಆಗ ಶ್ರೀಕೃಷ್ಣನು ರಾಜಸೂಯಯಾಗದ ಗುಣಗಳನ್ನು ಬಹುವಾಗಿ ವಿವರಿಸಿ, ಹೀಗೆ ಉತ್ತರವಿತ್ತನು.
"ರಾಜಸಿಂಹನಾದ ಯುಧಿಷ್ಠಿರನೇ, ಸಮ್ರಾಟ್ ಎನ್ನಿಸಿಕೊಳ್ಳಲು ನೀನೇ ಅರ್ಹನು. ಹಾಗಾಗಿ ನೀನೇ ಮಹಾಯಜ್ಞ-ದೀಕ್ಷೆಯನ್ನು ಹೊಂದು. ನೀನದನ್ನು ಮಾಡಿದೆಯಾದರೆ ನಾವುಗಳೆಲ್ಲರೂ ಕೃತಕೃತ್ಯರಾಗುತ್ತೇವೆ, ಎಂದರೆ ಧನ್ಯರಾಗುತ್ತೇವೆ.
ನಿನಗಿಷ್ಟವೆನಿಸಿದ ಈ ಯಜ್ಞವನ್ನು ನೀನೇ ನೆರವೇರಿಸು. ನಿನಗೆ ಮಂಗಳವಾಗುವಂತೆ ನಾನು ಸದಾ ಉದ್ಯುಕ್ತನಾಗಿರುತ್ತೇನೆ. ಯುಕ್ತವೆನಿಸುವ ಕೆಲಸಗಳಲ್ಲಿ ನನ್ನನ್ನು ತೊಡಗಿಸು. ನಿನ್ನ ಮಾತುಗಳನ್ನೆಲ್ಲ ನಾ ನಡೆಸುವೆ" ಎಂದನು.
ಸೂಚನೆ : 12/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.