Tuesday, June 9, 2026

ವ್ಯಾಸ ವೀಕ್ಷಿತ 191 ನಗರಗಳನ್ನು ಜಯಿಸಿ ತುರಗ-ರತ್ನಗಳನ್ನೂ ತಂದ ರಣಧೀರ(Vyaasa Vikshita191)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png



ಆಗ ತನ್ನ ಚತುರಂಗಬಲದೊಂದಿಗೆ ತ್ವರಿತವಾಗಿ ತನ್ನ ನಗರದಿಂದಾಚೆ ಬಂದ ಬೃಹಂತನು ಫಾಲ್ಗುನನನ್ನು, ಎಂದರೆ ಅರ್ಜುನನನ್ನು, ಕಾಳಗದಲ್ಲಿ ಎದುರಿಸಿದನು.

ಹೀಗಾಗಿ ಧನಂಜಯ-ಬೃಹಂತರ ನಡುವೆ ಮಹತ್ತಾದ ಸಂಗರ(ಯುದ್ಧ)ವೇ ಆಯಿತು. ಈ ಪಾಂಡವನ ವಿಕ್ರಮವನ್ನು ಆ ಬೃಹಂತನಾದರೂ ಅದೆಂತು ತಡೆದಾನು?

ಅರ್ಜುನನನ್ನು ಸೋಲಿಸಲಾಗದೆಂಬುದನ್ನು ಮನಗಂಡವನೇ, ಆ ವೀರನಾದ ಪರ್ವತ-ರಾಜನಾದ ಬೃಹಂತನು ಯುದ್ಧವನ್ನು ತೊರೆದು ರತ್ನಗಳೊಂದಿಗೆ ಆಗಮಿಸಿದನು.

ಇತ್ತ ಅರ್ಜುನನೂ ಆ ರಾಜ್ಯವನ್ನು ಆತನಿಗೇ ಒಪ್ಪಿಸಿ, ಮತ್ತೆ ಉಲೂಕ-ರಾಜನನ್ನು ಜೊತೆಮಾಡಿಕೊಂಡು  ಸೇನಾಬಿಂದು ಎಂಬ ರಾಜನ ಮೇಲೆ ದಂಡೆತ್ತಿ ಹೋದನು. ಆತನನ್ನು ರಾಜ್ಯದಿಂದ ಚ್ಯುತಿಗೊಳಿಸಲು ಅರ್ಜುನನಿಗೆ ಹೆಚ್ಚು ಸಮಯವು ಬೇಕಾಗಲಿಲ್ಲ. ಆಮೇಲೆ ಮೋದಾಪುರ ಮೊದಲಾದ ಹಲವು ರಾಜ್ಯಗಳನ್ನು ಗೆದ್ದನು.

ಬಳಿಕ ಸೇನಾಬಿಂದುವಿನ ರಾಜಧಾನಿಗೇ ಬಂದು, ಚತುರಂಗಬಲವನ್ನು ಮತ್ತೆ ಜೋಡಿಸಿಕೊಂಡು, ಪೌರವ-ರಾಜನಾದ ವಿಷ್ವಗಶ್ವನ ಮೇಲೆ ದಂಡೆತ್ತಿದನು. ಅಲ್ಲಿನ ಪರ್ವತಪ್ರದೇಶದ ರಾಜರುಗಳನ್ನು ಸೋಲಿಸಿ ಅವರನ್ನು ವಶಪಡಿಸಿಕೊಂಡನು.

ಆ ಪರ್ವತ-ಪ್ರಾಂತಗಳಲ್ಲಿ ಉತ್ಸವ-ಸಂಕೇತ ಎಂಬ ಹೆಸರಿನ ಏಳು ದಸ್ಯುಗಳು, ಎಂದರೆ ಧರ್ಮದ್ವೇಷಿಗಳಾದ ಚೋರರು, ಇದ್ದರು. ಅವರನ್ನು ಜಯಿಸಿದ್ದೂ ಆಯಿತು. ಆಮೇಲೆ ಕಾಶ್ಮೀರದಲ್ಲಿ ಹತ್ತು ಮಂಡಲಗಳನ್ನು ಮಾಡಿಕೊಂಡಿದ್ದ ಕ್ಷತ್ರಿಯ-ವೀರರನ್ನೂ ಲೋಹಿತ-ರಾಜನನ್ನೂ ಅರ್ಜುನನು ಜಯಿಸಿದನು.

ಆಮೇಲೆ ತ್ರಿಗರ್ತರು, ದಾರ್ವರು, ಕೋಕನದರು ಮುಂತಾದ ಅನೇಕ ಕ್ಷತ್ರಿಯರು ಎಲ್ಲೆಡೆಯಿಂದಲೂ ಬಂದು ತಾವೇ ಶರಣಾದರು.

ರಮ್ಯವಾದ ಅಭಿಸಾರಿಯೆಂಬ ಪುರಿಯನ್ನು ಅರ್ಜುನನು ಗೆದ್ದನು. ಉರಗವೆಂಬ ರಾಜ್ಯದ ಒಡೆಯನಾದ ರೋಚಮಾನ ಎಂಬಾತನನ್ನು ಅರ್ಜುನನು ಜಯಿಸಿದನು. ಚಿತ್ರಾಯುಧನೆಂಬ ರಾಜನಿಂದ ರಕ್ಷಿತವಾಗಿದ ಸಿಂಹಪುರವನ್ನು ಸೈನ್ಯಬಲದಿಂದ ಯುದ್ಧದಲ್ಲಿ ಮೆಟ್ಟಿದನು. ಆಮೇಲೆ ಸುಹ್ಮದೇಶ-ಚೋಲದೇಶಗಳನ್ನು ಸೈನ್ಯಸಹಿತನಾಗಿ ಅರ್ಜುನನು ಮಥನ ಮಾಡಿಬಿಟ್ಟನು. ಹಾಗೆಯೇ ಬಾಹ್ಲೀಕ-ದರದ-ಕಾಂಭೋಜಗಳ ರಾಜರನ್ನು ಸೋಲಿಸಿದನು. ಈಶಾನ್ಯದಲ್ಲಿ ಕೆಲವು ಪಾಳೆಯಗಾರರಿದ್ದರು; ಅವರನ್ನೂ ಗೆದ್ದನು. ಆಮೇಲೆ ಲೋಹರು-ಪರಮಕಾಂಬೋಜರು-ಉತ್ತರ ಋಷಿಕರು - ಇವರುಗಳನ್ನೆಲ್ಲ ಸೋಲಿಸಿದನು.

ಇವುಗಳಲ್ಲಿ ಬಹಳ ಭಯಂಕರವಾಗಿದ್ದದ್ದೆಂದರೆ ಋಷಿಕರೊಂದಿಗಿನ ಯುದ್ಧ. ಅವರನ್ನು ಅಡಗಿಸಿ, ಗಿಳಿಗಳ ಹೊಟ್ಟೆಯ ಬಣ್ಣವನ್ನು ಹೊಂದಿದ್ದ ಎಂಟು ಕುದುರೆಗಳನ್ನು ಅಲ್ಲಿಂದ ತಂದನು. ಹಾಗೆಯೇ ಕರಕ್ಕೋಸ್ಕರವಾಗಿ ಅನೇಕ ವೇಗಶಾಲಿ ಕುದುರೆಗಳನ್ನು ಪಡೆದನು. ಅವು ನವಿಲಿನ ಬಣ್ಣವನ್ನು ಹೊಂದಿದ್ದವು, ಉತ್ತಮವಾದವು.

ಆಮೇಲೆ ಹಿಮವಂತ-ನಿಷ್ಕುಟಗಳ ರಾಜರುಗಳನ್ನು ಗೆದ್ದನು. ಬಳಿಕ ಶ್ವೇತ-ಪರ್ವತಕ್ಕೆ ಹೋಗಿ ಬಿಡಾರ ಹೂಡಿದನು. ಶ್ವೇತ-ಪರ್ವತವನ್ನು ಜಯಿಸಿದ ಬಳಿಕ, ದ್ರುಮಪುತ್ರನೆಂಬ ರಾಜನ ದೇಶವಾದ ಕಿಂಪುರುಷವನ್ನು ಜಯಿಸಿದನು. ಅಲ್ಲಾದ ಯುದ್ಧವು ಘೋರವೇ ಆಗಿತ್ತು. ಕರ ತೆರಬೇಕೆಂಬ ನಿಬಂಧನೆಯ ಮೇಲೆ ಆ ರಾಜ್ಯವನ್ನು ಅವನಿಗೇ ಬಿಟ್ಟುಕೊಟ್ಟನು.

ಆಮೇಲೆ ಗುಹ್ಯಕರಿಂದ ರಕ್ಷಿತವಾಗಿದ್ದ ಹಾಟಕ-ದೇಶವನ್ನು ಗೆದ್ದನು. ಅಲ್ಲಿ ಯುದ್ಧವು ಬೇಕಾಗಿರಲಿಲ್ಲ. ಸಾಮ-ಮಾರ್ಗದಲ್ಲಿಯೇ ಅವರನ್ನು ವಶಪಡಿಸಿಕೊಂಡನು.

ಅಲ್ಲಿಂದ ಮುಂದಕ್ಕೆ ಹೋದಾಗ ಸಿಕ್ಕದ್ದು ಶ್ರೇಷ್ಠವಾದ ಮಾನಸ-ಸರೋವರ. ಅದಲ್ಲದೆ, ಅಲ್ಲಿ ಅನೇಕ ಋಷಿ-ಕುಲ್ಯೆಗಳೂ ಇದ್ದವು. ಎಂದರೆ ಋಷಿಗಳ ಹೆಸರುಗಳಿಂದ ಪ್ರಸಿದ್ಧವಾದ ನಾಲೆಗಳು. ಅಲ್ಲೂ ಗಂಧರ್ವರಕ್ಷಿತ-ಪ್ರದೇಶಗಳನ್ನು ಗೆದ್ದು, ಅವರಿಂದ ತಿತ್ತಿರ, ಕಲ್ಮಾಷ, ಹಾಗೂ ಮಂಡೂಕ ಎಂಬ ಹೆಸರಿನ ಶ್ರೇಷ್ಠವಾದ ಕುದುರೆಗಳನ್ನು ಕರರೂಪದಲ್ಲಿ ಪಡೆದನು.


ಸೂಚನೆ : 7/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.