ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಯುಗಾದಿಯು ಬಂತೆಂದರೆ ರಾಮನವಮಿಯೂ ಬಂದಂತೆಯೇ ಸರಿ. ನವಮಿಯೆಂದರೆ ಒಂಭತ್ತನೆಯ ತಿಥಿ. ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದೇ ರಾಮನವಮಿ.
ಇಡೀ ಭಾರತದಲ್ಲಿ ಸಡಗರದಿಂದ ನೆರವೇರುವ ಅತಿಮುಖ್ಯ ಹಬ್ಬಗಳಲ್ಲಿ ರಾಮನವಮಿಯೂ ಒಂದು. ದೇಶವಿದೇಶಗಳಿಂದ ಕೋಟ್ಯಂತರ ಜನರು ಅಯೋಧ್ಯೆಯ ರಾಮಮಂದಿರದಲ್ಲಿ ತಮ್ಮ ಹಾರ್ದ ಪ್ರಣಾಮಗಳನ್ನು ಸಲ್ಲಿಸುತ್ತಿದ್ದಾರೆ. ಈ ಹೆಗ್ಗಳಿಕೆ ಇಡೀ ಪ್ರಪಂಚದ ಇನ್ನಾವ ಪವಿತ್ರಸ್ಥಾನಕ್ಕಿದೆ?
ರಾಮನ ಹಬ್ಬವೆಂದರೆ ರಾಮಪಟ್ಟಾಭಿಷೇಕವೆಂಬುದು ಸ್ಮರಣೆಗೆ ಬರದೇ?
ಅದು ವಾಸ್ತವವಾಗಿ ಹೇಗೆ ನಡೆಯಿತು? ಪಟ್ಟಾಭಿಷೇಕವೆಂದರೆ ರಾಜನಾಗುವುದಲ್ಲವೇ? ರಾಜನೆಂದು ಗುರುತಿಸುವುದು ಕಿರೀಟ ಧರಿಸಿದಾಗ. ಅಲ್ಲಿಗೆ ಪಟ್ಟಾಭಿಷೇಕವೆಂದರೆ ಕಿರೀಟಧಾರಣೆಯೇ ತಾನೆ?
ಬಹುಮಂದಿಯ ಮನಸ್ಸಿನಲ್ಲಿರುವುದು ಹಾಗೆಯೇ. ವಾಸ್ತವವಾಗಿ ಕಿರೀಟಧಾರಣೆಯೆಂಬುದಾಗುವುದು ಪಟ್ಟಾಭಿಷೇಕವಾದಮೇಲೆಯೇ. ಅಲ್ಲಿಗೆ ಎರಡೂ ಬೇರೆಬೇರೆಯೆಂದಾಯಿತು.
ರಾಮಾಯಣದಲ್ಲೇ ಹಲವು ಅಭಿಷೇಕಗಳುಂಟಲ್ಲವೇ? ಭರತನು ಮಾಡುವ ರಾಮಪಾದುಕಾಪಟ್ಟಾಭಿಷೇಕ. ಬಳಿಕ ಸುಗ್ರೀವಪಟ್ಟಾಭಿಷೇಕ. ಅನಂತರ ವಿಭೀಷಣನದು. ರಾವಣಸಂಹಾರವಾದ ಮೇಲೆ ಸೀತಾಸಮೇತನಾಗಿ ರಾಮನು ಅಯೋಧ್ಯೆಗೆ ಹಿಂದಿರುಗಿದ ಮೇಲೆ ರಾಮಪಟ್ಟಾಭಿಷೇಕ - ಯುದ್ಧಕಾಂಡದ ಕೊನೆಯ ಸರ್ಗದಲ್ಲಿ.
ವಾಸ್ತವವಾಗಿ ಅಭಿಷೇಕವೆಂದರೇನು? ಇದಾದ ಬಳಿಕವೇ ಏಕೆ ಕಿರೀಟಧಾರಣೆ? ಸಂಸ್ಕೃತದಲ್ಲಿ ಸೇಕವೆಂದರೆ ಸುರಿಯುವುದು. ಸಸ್ಯಗಳಿಗೆ ಜಲಸೇಕವೆಂದರೆ ಗಿಡಗಳಿಗೆ ನೀರು ಹಾಕುವುದು. ಅಭಿಷೇಕವೆಂದರೆ ತಲೆಯ ಮೇಲೆ ನೀರನ್ನು ಸುರಿಯುವುದು. ಸ್ನಾನ ಮಾಡುವಾಗ ತಲೆಯ ಮೇಲೆ ನೀರು ಹುಯ್ದುಕೊಳ್ಳುವುದಿದ್ದೇ ಇದೆಯಲ್ಲವೇ? ಇಲ್ಲೇನು ವಿಶೇಷ?
ವಿಶೇಷವಿದೆ. ಯಾವ ನೀರು, ನೀರು ಹುಯ್ದವರಾರು? - ಎಂಬಲ್ಲೇ ವಿಶೇಷಗಳಿವೆ. ರಾಮನೊಡನೆ ಬಂದಿದ್ದವರಿಗೆಲ್ಲ ತಂಗಲು ವ್ಯವಸ್ಥೆಯಾದ ಬಳಿಕ ಭರತನು ಸುಗ್ರೀವನಿಗೆ ಮಂಗಲಜಲವನ್ನು ತರಲು ನಿನ್ನ ದೂತರಿಗೆ ಆಜ್ಞಾಪಿಸೆನ್ನುತ್ತಾನೆ. ಆಗ ಸುಗ್ರೀವನು ನಾಲ್ಕು ಮಂದಿಗೆ ನಾಲ್ಕು ಸುವರ್ಣಕಲಶಗಳನ್ನಿತ್ತು ಸಮುದ್ರಗಳಿಂದಲೂ ವಿವಿಧ ಪುಣ್ಯತೀರ್ಥಗಳಿಂದಲೂ ಜಲವನ್ನು ತರಬೇಕು – ಅದೂ ಬೆಳಗಾಗುವಷ್ಟರಲ್ಲಿ! – ಎಂದು ಅಪ್ಪಣೆಕೊಡುತ್ತಾನೆ. ಐನೂರು ಪುಣ್ಯನದಿಗಳಿಂದಲೂ ನಾಲ್ಕು ಸಮುದ್ರಗಳಿಂದಲೂ ಪುಣ್ಯಜಲವನ್ನು ತರಲಾಗುತ್ತದೆ.
ಆಗ ಶತ್ರುಘ್ನನು ಅಭಿಷೇಕವನ್ನು ನೆರವೇರಿಸಿಕೊಡಬೇಕೆಂದು ವಸಿಷ್ಠರನ್ನು ಕೇಳಿಕೊಳ್ಳುತ್ತಾನೆ. ರತ್ನಮಯಪೀಠದಲ್ಲಿ ಸೀತಾಸಮೇತನಾದ ರಾಮನನ್ನು ಕುಳ್ಳಿರಿಸಿ, ವಸಿಷ್ಠ-ವಾಮದೇವಾದಿ ಅಷ್ಟಮಹರ್ಷಿಗಳು, "ನರವ್ಯಾಘ್ರನಾದ ರಾಮನಿಗೆ ಪ್ರಸನ್ನವೂ ಸುಗಂಧಿಯೂ ಆದ ಸಲಿಲದಿಂದ ಅಭಿಷೇಕ ಮಾಡುತ್ತಾರೆ (ಅಭ್ಯಷಿಂಚನ್ ನರವ್ಯಾಘ್ರಂ). ಇದು ಹೇಗಿತ್ತೆಂದರೆ ವಸುಗಳು ವಾಸವನಿಗೆ, ಎಂದರೆ ಇಂದ್ರನಿಗೆ, ಹೇಗೆ ಅಭಿಷೇಕವನ್ನು ಮಾಡಿದರೋ ಹಾಗೆ" – ಎನ್ನುತ್ತದೆ, ರಾಮಾಯಣ. ನರವ್ಯಾಘ್ರನೆಂದರೆ ನರಶ್ರೇಷ್ಠ.
ಆ ಬಳಿಕ ಋತ್ವಿಕ್ಕುಗಳು, ಕನ್ಯೆಯರು, ಮಂತ್ರಿಗಳು, ಯೋಧರು, ವಣಿಗ್ಜನರು, ಅಭಿಷೇಕ ಮಾಡುತ್ತಾರೆ. ಆಕಾಶದಲ್ಲಿದ್ದ ದೇವತೆಗಳು ಸರ್ವ ಔಷಧಿರಸಗಳಿಂದ ಅಭಿಷೇಕ ಮಾಡುತ್ತಾರೆ. ಇಷ್ಟಾದ ಬಳಿಕವೇ ರಾಮನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ವಸಿಷ್ಠರು ಕಿರೀಟಧಾರಣವನ್ನು ರಾಮನಿಗೆ ಮಾಡಿಸುವುದು.
ಈ ಸಂದರ್ಭದಲ್ಲಿ ರಾಜನಿಗೇಕೆ ಮೂರ್ಧಾಭಿಷೇಕ? ಹಾಗೂ ಇಲ್ಲಿ ವಾಲ್ಮೀಕಿಗಳು ಕೊಟ್ಟಿರುವ ಉಪಮೆಯ ಔಚಿತ್ಯವೇನು? - ಎಂಬ ಪ್ರಶ್ನೆಗಳಿಗೆ ಉತ್ತರವು ಅವಶ್ಯವಾಗುತ್ತವೆ.
ಇದನ್ನು ಶ್ರೀರಂಗಮಹಾಗುರುಗಳು ಹೀಗೆ ವಿವರಿಸುವರು. "ಕೈಗೆ, ಕಾಲಿಗೆ ಮಾತ್ರ ಅಭಿಷೇಕವಲ್ಲ. ಎಲ್ಲವೂ ಹೋಗಿ ಸೇರುವ ಭಾಗವೂ ನೆಲೆಯೂ ಆದ ಶಿರಸ್ಸಿನಲ್ಲಿ ಅಭಿಷೇಕ. ಅಲ್ಲದೆ, ಇಂದ್ರನಿಗೆ ವಸುಗಳು ಮಾಡಿದ ಅಭಿಷೇಕವು ಭುವಿಯನ್ನು ದಿವಿಯೊಡನೆ ಸೇರಿಸುವ ಕ್ರಮವಾಗಿದೆ."
ಶಿರಸ್ಸೆಂಬುದು ಎಲ್ಲ ಅಂಗಗಳೂ ಸೇರುವ ಎಡೆ. ಆಧುನಿಕವಿಜ್ಞಾನವೂ ಇದನ್ನೇ ಹೇಳುತ್ತದಲ್ಲವೇ? ಎಲ್ಲ ಅಂಗಗಳನ್ನೂ ಆಳುವ ಉತ್ತಮಾಂಗವೇ ಶಿರಸ್ಸು. ಶೀರ್ಷವು ತಂಪಾಗಿದ್ದರೆ ಎಲ್ಲವೂ ತಂಪಾದಂತೆ. ಗಿಡದ ರೆಂಬೆಗಳಿಗೋ ಎಲೆಗಳಿಗೋ ನೀರು ಸುರಿಯುವುದಲ್ಲ. ಮೂಲಕ್ಕೆ ಹಾಕಿದರೆ ಎಲ್ಲ ಅಂಗಗಳಿಗೂ ಹಾಕಿದಂತೆಯೇ. ಶಿರಸ್ಸೇ ನಮ್ಮ ಮೂಲ. ಶಿರಸ್ಸು ತಂಪಾಗಿದ್ದವನ ಚಿತ್ತವೂ ತಂಪಾಗಿರುವುದು. ರಾಜನು ಯಾವ ಸಮಾಧಾನದಿಂದ ರಾಜ್ಯವನ್ನಾಳಬೇಕೋ ಅದು ಸಿದ್ಧಿಸುವುದು ಪುಣ್ಯಜಲ, ದಿವ್ಯೌಷಧರಸ – ಇವುಗಳ ಪ್ರಭಾವದಿಂದಾಗಿ.
ಜೊತೆಗೆ ಭೂಮಿಯ ಮೇಲೆ ಜರುಗುವ ಘಟನೆಗೆ ದೇವಲೋಕದ ಘಟನೆಯೇ ಮಾದರಿ. ರಾಮನೂ ಭೂಮಿಯ ಮಗಳನ್ನು ಮದುವೆಯಾಗಿ ಕೊನೆಗೆ ತನ್ನ ಪ್ರಜೆಗಳನ್ನು ದಿವ್ಯಧಾಮದತ್ತ ಒಯ್ಯುವುದೇ ರಾಮಾಯಣದ ಕಥೆಯಲ್ಲವೇ? ಹೀಗೆ ದಿವ್ಯಾದರ್ಶಗಳನ್ನು ನಮ್ಮ ಮುಂದಿರಿಸುವ ಕಥೆಯೇ ರಾಮಾಯಣ. ರಾಜನು ತನ್ನ ತಲೆಯನ್ನು ತಂಪಾಗಿಟ್ಟುಕೊಂಡು ಜನತೆಗೂ ತಂಪನ್ನೀಯುವುದೇ ಅಭಿಷೇಕತತ್ತ್ವ.
ಹೀಗೆ ಈ ಘಟನೆಗಳನ್ನೂ, ಶಾಸ್ತ್ರವಿಧಿಗಳನ್ನೂ ತಾತ್ತ್ವಿಕನೆಲೆಗಟ್ಟಿನಲ್ಲಿ ನೋಡುವ ಅರಿವೇ ತಾರಕವಾದುದು.
ಸೂಚನೆ: 28/3//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.