Sunday, July 19, 2026

ಅಷ್ಟಾಕ್ಷರೀ 110 ಭಗವಂತನು ಬಯಸುವುದು ದೃಢ-ಭಕ್ತಿಯೊಂದನ್ನೇ (Astakshara 110)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png

ಭಗವಂತನು ಬಯಸುವುದು ದೃಢ-ಭಕ್ತಿಯೊಂದನ್ನೇ

ಭಕ್ತನು ಭಗವಂತನಿಂದ ಬೇಕಾದಷ್ಟನ್ನು ಬೇಡಬಹುದು, ಆದರೆ ಭಕ್ತನಿಂದ ಭಗವಂತ ಕೇಳುವುದೇನನ್ನು? ಏಳು ನಿದರ್ಶನಗಳ ಮೂಲಕ ಈ ವಿಷಯವನ್ನು ಮನಮುಟ್ಟುವಂತೆ ಶ್ಲೋಕವೊಂದು ತಿಳಿಸಿಕೊಡುತ್ತದೆ. ಆ ನಿದರ್ಶನಗಳನ್ನಿಲ್ಲಿ ನೋಡುವಾ.

ಮೊದಲನೆಯದಾಗಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ದೃಷ್ಟಾಂತ. ಬೇಡರ ಕುಲದಲ್ಲಿ ಹುಟ್ಟಿದ್ದ ಅವನು ಕುಲಧರ್ಮವನ್ನು ನಿಷ್ಠೆಯಿಂದ ಆಚರಿಸುತ್ತಿದ್ದ. ಧರ್ಮದ ಬಗ್ಗೆ ತಿಳಿಯಬಂದ ಬ್ರಾಹ್ಮಣನಿಗೆ ಆತನಿತ್ತ ಪಾಠ ಮನನೀಯ: ವೃತ್ತಿಯ ಹೊರರೂಪವೇ ಶೀಲವನ್ನು ನಿರ್ಣಯಿಸಿಬಿಡದು; ಶ್ರುತದೊಂದಿಗೆ ಸದಾಚಾರವಿದ್ದರೇ ಶೋಭೆ - ಎಂದು.

ಇದಲ್ಲದೆ, ತಾನು ದೇವರೆಂದೇ ಕಾಣುವ ತನ್ನ ತಂದೆತಾಯಿಯರನ್ನು ಆ ಬ್ರಾಹ್ಮಣನಿಗೆ ತೋರಿಸಿದ. ವ್ಯಾಧಯೋನಿಯಲ್ಲಿ ಹುಟ್ಟಿದ್ದರೂ ಭಕ್ತಿಯ ಮೂಲಕ, ಧರ್ಮಸೂಕ್ಷ್ಮಜ್ಞತೆಯ ಮೂಲಕ ಭಗವಂತನಿಗೆ ಪ್ರಿಯನಾದವನು ಅವನು.

ಎರಡನೆಯದು ಧ್ರುವನ ಕಥೆ. ಬಾಲಕನಾದರೂ ಬಾಲಕನಲ್ಲದವನ ಕಥೆ.  ಐದು ವರ್ಷದ ಆ ಮಗುವಿಗೆ ತಂದೆಯ ತೊಡೆಯ ಮೇಲೆ ಕೂರಬೇಕೆಂಬ ಆಸೆಯಾಯಿತು. ಮಲತಾಯಿಯು ಚುಚ್ಚುಮಾತನಾಡಿದಾಗ ಅವಮಾನದಿಂದ ದುಃಖಿತನಾದ, ಆ ಪುಟ್ಟ ಬಾಲಕ. ನಾರದಮುನಿಗಳ ಮಾರ್ಗದರ್ಶನದಲ್ಲಿ ಅಚಲ ತಪಸ್ಸನ್ನೇ ಮಾಡಿದ. ಅವನ ದೃಢನಿಶ್ಚಯ ಮತ್ತು ಏಕಾಗ್ರಭಕ್ತಿಗೆ ಮೆಚ್ಚಿದ ವಿಷ್ಣುವು ಧ್ರುವಪದವನ್ನೇ ಅವನಿಗೆ ಅನುಗ್ರಹಿಸಿದನು. ಭಕ್ತಿಗೆ ಮುಖ್ಯವಾದದ್ದು ವಯಸ್ಸಲ್ಲ, ಮನಸ್ಸಿನ ಸ್ಥೈರ್ಯ.

ಮೂರನೆಯ ಕಥೆ ಗಜೇಂದ್ರನದು. ಆ ಗಜರಾಜನು ತನ್ನ ದೊಡ್ಡ ಗುಂಪಿನೊಂದಿಗೆ ನಿಶ್ಚಿಂತನಾಗಿ ವಿಹರಿಸುತ್ತಿದ್ದ. ಜಲವಿಹಾರದ ವೇಳೆ ಮೈಮರೆತ  ಆನಂದದಲ್ಲಿದ್ದಾಗಲೇ ಮೊಸಳೆಯ ಹಿಡಿತಕ್ಕೆ ಸಿಲುಕಿದ. ಹಲವು ಕಾಲ ಹಗಲು-ರಾತ್ರಿ ಸೆಣೆಸಾಟ ನಡೆದರೂ, ಮೊಸಳೆ ಜಗ್ಗಲಿಲ್ಲ. ಗಜೇಂದ್ರನ ಶಕ್ತಿ ಕ್ಷೀಣಿಸುತ್ತಾ ಬರಲು,  ಪರಮಾತ್ಮನನ್ನು "ಆದಿಮೂಲಾ!" ಎಂದು ಆರ್ತನಾಗಿ ಕರೆದ. ಅಲ್ಲಿದ್ದದ್ದು ಸಂಪೂರ್ಣ ಶರಣಾಗತಿ ಮಾತ್ರವೇ, ಶಾಸ್ತ್ರಜ್ಞಾನವಲ್ಲ. ತತ್-ಕ್ಷಣವೇ ವಿಷ್ಣುವು ಬಂದು ಗಜೇಂದ್ರನ ಉದ್ಧಾರ ಮಾಡಿದ.

ನಾಲ್ಕನೆಯದು, ಹಸ್ತಿನಾವತಿಯ ಸಿಂಹಾಸನದ ಪಕ್ಕದಲ್ಲೇ ಇದ್ದು ಧರ್ಮಸೂಕ್ಷ್ಮಗಳನ್ನು ಹೆಜ್ಜೆಹೆಜ್ಜೆಗೂ ಅರುಹುತ್ತಿದ್ದ ವಿದುರನ ಕಥೆ. ಆತನಾದರೋ ದಾಸೀಪುತ್ರ. ಕ್ಷತ್ರಿಯರಿಗಿಂತ ಕೆಳಜಾತಿಯೆಂದಾದರೂ ವಿದುರನಿಗಿದ್ದ ಧರ್ಮಜ್ಞಾನ, ವಿವೇಕ ಮತ್ತು ಭಕ್ತಿ - ಇವನ್ನು ಧರ್ಮಜ್ಞರು ಗುರುತಿಸುವಂತಾಯಿತು. ಕೃಷ್ಣಸಂಧಾನದ ಸಂದರ್ಭದಲ್ಲಿ ರಾಜಮರ್ಯಾದೆಯ ಭೋಜನವನ್ನು ಬಿಟ್ಟು ಕೃಷ್ಣನು ವಿದುರನ ಸರಳ ಆತಿಥ್ಯವನ್ನು ಸ್ವೀಕರಿಸಿದನು. ಉಚ್ಚಕುಲಜನ್ಮಕ್ಕಿಂತಲೂ ಮಿಗಿಲಾದುದೆಂದರೆ ನಿರ್ಮಲವಾದ ಪ್ರೀತಿ ಮತ್ತು ಧರ್ಮನಿಷ್ಠೆ. ಭಗವಂತನಿಗೆ ಅದೇ ಪ್ರಿಯವೆಂದು ಸಾರಿದ ಪ್ರಸಂಗವಿದು.

ಐದನೆಯದು, ಉಗ್ರಸೇನನ ಕಥೆ. ಸ್ವಂತ ಮಗನಾದ ಕಂಸನಿಂದಾಗಿ ರಾಜ್ಯಚ್ಯುತನಾಗಿ ಬಂಧನಕ್ಕೊಳಗಾದವನು, ಅವನು. ಅವನಿಗೆ ಕಂಸನನ್ನು ಸೋಲಿಸುವ ಪರಾಕ್ರಮವಿರಲಿಲ್ಲ. ಕೃಷ್ಣನೇ ಕಂಸನನ್ನು ಸಂಹರಿಸಿ ಉಗ್ರಸೇನನಿಗೆ ಮತ್ತೆ ರಾಜ್ಯವನ್ನು ಒಪ್ಪಿಸಿದನು. ಕ್ರೂರಕಂಸನನ್ನು ಪರಾಭವಗೊಳಿಸುವ ಪೌರುಷ ಉಗ್ರಸೇನನಿಗಿರಲಿಲ್ಲವಾದರೂ ಕೃಷ್ಣನ ಕೃಪೆಯಿಂದ ಅವನಿಗೆ ಆ ಸ್ಥಾನಮಾನಗಳು ದೊರೆತವು.

ಆರನೆಯ ಕಥೆ ಕುಬ್ಜೆಯದು. ಕಂಸವಧೆಯನ್ನು ಮಾಡಲು ಕೃಷ್ಣನು ಮಥುರೆಗೆ ಹೋದಾಗ ಸಿಕ್ಕವಳೇ ಕುಬ್ಜೆ: ವಕ್ರವಾದ ದೇಹ; ಕಳೆದುಹೋಗಿದ್ದ ಯೌವನ; ಸೌಂದರ್ಯವಿಲ್ಲದ ಆಕಾರ. ಆದರೆ ಅವಳು ಕೃಷ್ಣನಿಗೆ ಸುಗಂಧದ್ರವ್ಯವನ್ನು ಬಹುಪ್ರೀತಿಯಿಂದ ಅರ್ಪಿಸಿದಳು. ಅವಳ ಭಕ್ತಿಭಾವಕ್ಕೆ ಮೆಚ್ಚಿದ ಕೃಷ್ಣನು ಅವಳ ದೇಹದ ವಕ್ರತೆಯನ್ನು ಹೋಗಲಾಡಿಸಿದನು. ಭಗವಂತನು ಅಲ್ಲಿ ಕಂಡದ್ದು ಬಾಹ್ಯಸೌಂದರ್ಯವನ್ನಲ್ಲ, ಭಕ್ತಿಯಿಂದ ಅರಳಿದ ಅಂತರಂಗವನ್ನು.

ಏಳನೆಯ ಕಥೆ ಸುದಾಮನದು. ಕೃಷ್ಣನ ಪ್ರಿಯ ಸ್ನೇಹಿತನಾದ ಆತ, ತೀವ್ರ ಬಡತನದಲ್ಲಿದ್ದ. ಅವನು ಕೃಷ್ಣನನ್ನು ಕಾಣಲು ಕೊಂಚ ಅವಲಕ್ಕಿಯಷ್ಟನ್ನು ಮಾತ್ರ ತಂದನು. ಏನನ್ನೂ ಬೇಡದೆ, ಸ್ನೇಹಭಕ್ತಿಯಿಂದ ಬಂದ ಅವನನ್ನು ಕೃಷ್ಣನು ಅಪಾರ ಗೌರವದಿಂದ ಸ್ವಾಗತಿಸಿದನು. ಸುದಾಮನು ತಂದಿದ್ದ ಕಾಣಿಕೆಯ ಹಿಂದಿರುವ ನಿರ್ಮಲ ಪ್ರೀತಿಯನ್ನೇ ಭಗವಂತನು ಗುರುತಿಸಿದ್ದು.

ಮೇಲೆ ಹೇಳಿದ ಏಳೂ ಮಂದಿಯ  ವಯಸ್ಸು-ಲಿಂಗಗಳು ಬೇರೆ, ಹಿನ್ನೆಲೆಗಳು ಬೇರೆ. ಆದರೆ ಇವರೆಲ್ಲರಲ್ಲಿ ಸಮಾನವಾಗಿರುವುದೆಂದರೆ ನಿಷ್ಕಪಟವಾದ ಭಕ್ತಿಯೊಂದೇ. ಸುರೂಪವನ್ನೋ ಐಶ್ವರ್ಯವನ್ನೋ ದೊಡ್ಡಗುಣಗಳೆಂದು ಭಾವಿಸುವವರಿರಬಹುದು. ಆದರೆ ಮಾಧವನು ಪ್ರಧಾನವಾಗಿ ಭಕ್ತಿಪ್ರಿಯನೆಂಬುದನ್ನು ಅರಿಯಬೇಕು.

ಶ್ರೀರಂಗಮಹಾಗುರುಗಳು ಹೇಳುವಂತೆ: ಭಕ್ತಿಯೆಂದರೆ ಭಗವಂತನೊಡನೆ ಸರ್ವಾಂಶದಿಂದಲೂ ಸರ್ವಭಾವದಿಂದಲೂ ಒಂದಾಗಿ ಬೆರೆತುಬಿಡುವುದು. ಅಲ್ಲಿ ವಿಭಕ್ತಿಯಿರಬಾರದು. ವಿಭಕ್ತಿಯೆಂದರೆ ಬೇರಾಗಿರುವುದು.

ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು; ಮತ್ತೂ ಉತ್ಕಟವಾಗಿ ನಿಷ್ಕಪಟ-ಭಕ್ತಿಯನ್ನು ತುಂಬಿಸಿಕೊಳ್ಳಬೇಕು. ಭಕ್ತರ ಗುಣ-ಸಂಪತ್ತು ದೃಢವಾಗುವುದು, ಬೆಳೆಯುವುದು ಕೂಡ.

ಗುಣಗಳೆಲ್ಲವುಗಳಿಂದ ಸಾಧಿಸಬೇಕಾದುದು ಸರ್ವ-ಸದ್ಗುಣಗಳ ಸ್ರೋತಸ್ಸಾದ ಸರ್ವೇಶನನ್ನೇ ಅಲ್ಲವೇ?

ಸೂಚನೆ: 18/07//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.