Monday, March 29, 2021

ಪುರಾಣ ಕೇವಲ ಕಥೆಯಲ್ಲ, ಜೀವನಗಾಥೆ (Purana Kevala katheyalla, Jivanagate)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ

(ಪ್ರತಿಕ್ರಿಯಿಸಿರಿ lekhana@ayvm.in)


ಜನಸಾಮಾನ್ಯರಲ್ಲಿ ಪುರಾಣದ ಬಗ್ಗೆ ನಂಬಿಕೆ, ಗೌರವ, ಪ್ರೀತಿ ಎಲ್ಲವೂ ಇವೆ. ಇನ್ನು ಕೆಲವರಲ್ಲಿ, ಇದೊಂದು ಅಂತೆ-ಕಂತೆಗಳ ಆಗರ, ಕೇವಲ ಕಥೆಗಳ ಪುಂಜ, ಅಥವಾ ಯಾವುದೋ ಕಾಲದ, ನಂಬಲು ಅಸಾಧ್ಯವಾದ ದೇಶ, ಕಾಲ,ರಾಜ್ಯ, ರಾಜರ ಬಗೆಗಿನ ಒಂದಿಷ್ಟು ಮಾಹಿತಿ.  ಅಷ್ಟೇ ಅಲ್ಲ, ಒಂದೊಂದೂ ಕೆಲಸಕ್ಕೆ ಬಾರದ, ಕೆಲಸವಿಲ್ಲದವರುಬರೆದಿಟ್ಟ ಒಂದಿಷ್ಟು ಸಾಹಿತ್ಯರಾಶಿ ಎಂದೆಲ್ಲಾ ಅಂದುಕೊಂಡಿದ್ದಾರೆ. ಹಾಗಾದರೆ ಇವುಗಳಲ್ಲಿ ಯಾವ ಅಭಿಪ್ರಾಯವನ್ನು ನಾವುಪುರಸ್ಕರಿಸಬೇಕು? ಯಾವುದನ್ನು ತಿರಸ್ಕರಿಸಬೇಕು? ಪುರಾಣದ ಬಗ್ಗೆ ನಿಜ ಏನೆಂಬುದನ್ನು ತಿಳಿಯುವಪ್ರಯತ್ನ ಮಾಡೋಣ.


'ಇತಿಹಾಸ-ಪುರಾಣಗಳಿಂದ ವೇದವು ವಿವರಿಸಲ್ಪಟ್ಟಿದೆ' ಎಂಬ ಮಾತಿದೆ. ಮತ್ತು "ಅಸ್ಯ  ಮಹತೋ ಭೂತಸ್ಯನಿಃಶ್ವಸಿತಮೇತದ್ ಯದ್ ಋಗ್ವೇದೋ ಯಜುರ್ವೇದಃ ಸಾಮವೇದೋ ಅಥರ್ವಾಂಗಿರಸಃ ಇತಿಹಾಸಃ ಪುರಾಣಮ್" ಎಂಬ ವಾಜಸನೇಯಿಬ್ರಾಹ್ಮಣೋಪನಿಷತ್ತಿನ ಒಂದು ಮಾತಿದೆ. ನಾಲ್ಕು ವೇದಗಳು,ಇತಿಹಾಸ ಮತ್ತು ಪುರಾಣ ಇವುಗಳು ಭಗವಂತನ ಶ್ವಾಸರೂಪವಾಗಿ ಹೊರಬಂದ ಶಬ್ದರೂಪದ ವಿಸ್ತಾರ ಎಂದು ಈ ಮಾತಿನ ಅಭಿಪ್ರಾಯ.ಅಲ್ಲದೇ ಪುರಾಣವನ್ನು ಮಿತ್ರಸಮ್ಮಿತಾ ಎಂಬುದಾಗಿ ಕರೆದು, ದುಷ್ಟಮಾರ್ಗದಲ್ಲಿ ನಿರತನಾದ ವ್ಯಕ್ತಿಯನ್ನುಸನ್ಮಾರ್ಗಕ್ಕೆ ಕರೆತರಲು ಇರುವ ಉತ್ಕೃಷ್ಟ ಸಾಧನ ಎಂದೂ ಕರೆಯಲಾಗಿದೆ. ಇದರಲ್ಲಿ ಭಾರತದ ಸಂಸ್ಕೃತಿ-ನಾಗರಿಕತೆಯ ನೈಜ ಚಿತ್ರಣವಿದೆ. ತಾತ್ತ್ವಿಕವಾದ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಯಪಡಿಸುವ ಒಂದುಉಪಾಯವೂ ಇವುಗಳಲ್ಲಿ ಅಡಗಿದೆ. ಸನಾತನ ವಿದ್ಯಾಪರಂಪರೆಯ ವೈಭವದ ಕಥನವಿದೆ. ಭಾರತದಲ್ಲಿ ಇರುವಭೌತಿಕ-ದೈವಿಕ-ಆಧ್ಯಾತ್ಮಿಕ ಉತ್ಕರ್ಷದ ಪರಾಕಾಷ್ಠೆಯನ್ನು ನೋಡಬಹುದಾಗಿದೆ. ಇಲ್ಲೊಂದು ಜೀವನಾದರ್ಶವಿದೆ.ಪ್ರತಿಯೊಬ್ಬ ಮಾನವನ ಜೀವನದ ಲಕ್ಷ್ಯ ಯಾವುದು? ಹೇಗೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದುಎಂಬುದನ್ನು ಅನೇಕ ಕಥೆಗಳ ಮೂಲಕ ಮನಸ್ಸಿಗೆ ತರಿಸುವ ಪ್ರಯತ್ನವಿದೆ. ನಮ್ಮ ಜೀವನದಲ್ಲಿ ಬರುವ ಕಷ್ಟ-ಸಂಕಟಗಳನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಆದರ್ಶಪುರುಷರ ಜೀವನಗಾಥೆಗಳು ಇದರಲ್ಲಿವೆ.ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಅನುಭವಿಸದ ಒಳಸತ್ಯದ ಅನುಭವ ಏನೆಂಬುದನ್ನು ತಿಳಿಸುವ, ಭೌತಿಕ-ಆಧ್ಯಾತ್ಮಿಕ ಎರಡೂ ಸೇರಿರುವ ಕಥೆಗಳನ್ನು ಉಪಾಯವಾಗಿ ಹೆಣೆದಿದ್ದಾರೆ. ಜನರು ಪುರಾಣದಲ್ಲಿ ಕಾಣುವ ಭೌತಿಕವಾದವಿಷಯಗಳಿಂದ ಆಕರ್ಷಿತರಾಗಿ ಇದರತ್ತ ಬಂದು ಆಧ್ಯಾತ್ಮಿಕ ಸ್ತರಕ್ಕೆ ಏರುವಂತೆ ಮಾಡಿದ್ದಾರೆ.  ಹೀಗೆ ಇಷ್ಟೆಲ್ಲವಿಶೇಷತೆಗಳಿಂದ ಕೂಡಿದ ಪುರಾಣವನ್ನು ಅಂತೆ-ಕಂತೆಗಳ ಸಂತೆ ಎನ್ನೋಣವೇ? ತಿಳಿಯದಿರುವವರು ಗೀಚಿದಅಕ್ಷರಗಳ ಸಮೂಹವೆನ್ನೋಣವೇ? ಮಹರ್ಷಿಗಳ ಮನೋಭೂಮಿಕೆಯಲ್ಲಿ ಅವರ ಸಾಹಿತ್ಯವನ್ನು ನೋಡಿದಾಗಅವುಗಳ ತಾತ್ತ್ವಿಕವಾದ ಹಿನ್ನೆಲೆ ನಮಗೆ ಅರ್ಥವಾಗಬಹುದು. ಇಲ್ಲದಿದ್ದರೆ ಅವುಗಳ ಸಾರವನ್ನು ಗ್ರಹಿಸಲುಬಾರದೇ ನಿಸ್ಸಾರವಾದ ವೃಕ್ಷದಂತೆ ಮೇಲಿನ ಆಪಾದನೆಗಳನ್ನು ಮಾಡುತ್ತಾ ಕಾಲಹರಣ ಮಾಡುವುದಾಗುತ್ತದೆ..ಶ್ರೀರಂಗಮಹಾಗುರುಗಳು ಕೊಡುತ್ತಿದ್ದ ಈ ಉದಾಹರಣೆಯನ್ನು ಗಮನಿಸಿದರೆ ಈ ವಿಷಯಕ್ಕೊಂದು ಪುಷ್ಟಿಸಿಗುತ್ತದೆ. "ಒಬ್ಬ ರೋಗಿಯು ಹೊಟ್ಟೆನೋವನ್ನು ಅಹಹಹ ಎಂಬ ಧ್ವನಿಯಿಂದ ಅಥವಾ ನರಳಿಕೆಯ ಮೂಲಕಹೊರತಂದಂತೆ ಋಷಿಗಳು ತಮಗಾದ ಸಂತೋಷವನ್ನು ಸಾಹಿತ್ಯದ ಮೂಲಕ ಹೊರಪಡಿಸಿದರು" ಎಂದು.ಇದುವೇ ಋಷಿಸಾಹಿತ್ಯ. ಅವರ ಹೆಜ್ಜೆಯನ್ನು ಅನುಸರಿಸಿ ನಡೆದಾಗ ನಮಗೂ ಆ ಸಂತೋಷದಅನುಭವವಾದೀತು.

ಸೂಚನೆ: 25/3/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.

ಆರ್ಯಸಂಸ್ಕೃತಿ ದರ್ಶನ - 36 (Arya Samskruti Darshana - 36)

 " ಸನಾತನ "  ಎಂದರೇನು?
ಲೇಖಕರು: ವಿದ್ವಾನ್||ಶ್ರೀ ಛಾಯಾಪತಿ



ಸನಾತನಧರ್ಮ, ಸನಾತನಸಂಪ್ರದಾಯ, ಸನಾತನಿ ಮೊದಲಾದ ಎಡೆಗಳಲ್ಲಿ ಸನಾತನ ಎಂಬ ಪದವನ್ನು ನಾವು ಬಳಸುತ್ತೇವೆ. ಹಾಗೆ ಬಳಸುವಾಗ ಸನಾತನ ಎಂಬ ಪದವು ಹಳೆಯದು, ಹಿಂದಿನ ಕಾಲದ್ದು ಎಂಬರ್ಥವನ್ನು ಒಳಗೊಂಡಿದೆಯೆಂಬುದೇ ನಮ್ಮ ಭಾವನೆ. ಆಧುನಿಕ ವಿಚಾರವಾದಿಗಳಂತೂ ಸನಾತನ ಎಂದರೆ ಜಡ್ಡುಹಿಡಿದ ಹಳೆಯಕಾಲ, ಮತ್ತು ಅದಕ್ಕೆ ಸಂಬಂಧಿಸಿದ ವ್ಯವಹಾರ ಎಂಬುದಾಗಿಯೇ ಅರ್ಥ ಮಾಡುವುದು ಕಂಡುಬರುತ್ತದೆ. ಹಳೆಯದು, ಹಿಂದಿನದು ಎಂಬುದು ಸನಾತನ ಪದದ ಅರ್ಥವಲ್ಲ. ಅಮರಕೋಶಕಾರನೂ  "ಸದಾತನ ಸನಾತನಾಃ" ಎಂಬುದಾಗಿ ಹೇಳಿ ಎಂದೆಂದಿಗೂ ಇರು
ವುದು ಎಂಬ ಅರ್ಥವನ್ನು ಹೇಳುತ್ತಾನೆ. ಆದ್ದರಿಂದ "ಸನಾತನ" ಎಂದರೆ ಎಂದೆಂದಿಗೂ ಇರುವುದು, ಚಿರಪುರಾತನವಾದರೂ ನಿತ್ಯನೂತನವಾದುದು - ಎಂಬ ಅರ್ಥವಿದೆಯೇ ಹೊರತು ಕೇವಲ ಹಳೆಯದು ಎಂಬ ಅರ್ಥವಲ್ಲ ಎಂಬುದು ಗಮನಾರ್ಹವಾಗಿದೆ. ಸನಾತನ ಎಂಬ ಪದವು ನಿತ್ಯವಾದುದು, ಶಾಶ್ವತವಾದದ್ದು. ಎಂಬ ಅರ್ಥವನ್ನೇ ಹೇಳುತ್ತದೆ. ಮೇಲಿನ ಪದಗಳು ನಿತ್ಯಶಾಶ್ವತವಾದ ಬಣ್ಣಿಸಲಾಗದ ಧರ್ಮ, (ಸನಾತನ ಧರ್ಮ) ನಿತ್ಯಶಾಶ್ವತವಾಗಿ ಬೆಳೆಸಿದ ಸಂಪ್ರದಾಯ.( ಸನಾತನ ಸಂಪ್ರದಾಯ) ನಿತ್ಯಶಾಶ್ವತವಾದ ಬದುಕಿನ ವಿಧಾನವನ್ನನುಸರಿಸಿದವನು(ಸನಾತನಿ), ಎಂಬರ್ಥವನ್ನು ಒಳಗೊಂಡಿವೆಯೇ  ಹೊರತು ಹಿಂದಿನದು ಎಂದಲ್ಲ.

ಕಾಲದ ಪ್ರಭಾವವು ವಿಶ್ವದ ರೂಪವೆಲ್ಲವನ್ನೂ ಕೊಚ್ಚಿಹಾಕಿ ಬದಲಿಸುತ್ತಿರುವಾಗ ನಿತ್ಯ ಶಾಶ್ವತ ಎಂಬುದುಂಟೇ? ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಬದಲಾಗದ ವ್ಯವಸ್ಥೆ  ಎಂಬುದೊಂದುಂಟೀ-ಎಂಬಂಶವೂ ವಿಚಾರಣೀಯವಾಗಿದೆ. ಮಾನವನ ಆಗಮದಿಂದ ಇಂದಿನವರೆಗೆ ಆಲೋಚಿಸುವುದು ಬುದ್ಧಿ, ನೋಡುವುದು ಕಣ್ಣು, ಎಂಬ ವ್ಯವಸ್ಥೆಗಳಲ್ಲಿ ಬದಲಾವಣೆಯಿಲ್ಲ. ಕಾಲಬದಲಾದಂತೆ ಬದಲಾಗುವ ವ್ಯವಸ್ಥೆಯಿರುವಂತೆ ಬದಲಾಗದ ವ್ಯವಸ್ಥೆಗಳೂ ಇರುತ್ತವೆ. ಮಾನವನ ಉಗಮವೇ ಕಾಲಕ್ಕೆ ಒಳಪಟ್ಟುದಲ್ಲವೇ ಎಂದರೆ, ಹೌದು. ಕಾಲಕ್ಕೂ ಅದರ ಪರಿಣಾಮಕ್ಕೂ ಒಳಪಡದ ಎಡೆಯೊಂದಿದ್ದು, ಅದನ್ನು ಅರಿಯುವುದೂ, ಸಾಧ್ಯವಾಗಿ, ಅದನ್ನರಿತು ಅದರ ಮೇಲೆ ತಂದುಕೊಂಡ ವ್ಯವಸ್ಥೆಯು ನಿತ್ಯ-ಶಾಶ್ವತ ವ್ಯವಸ್ಥೆಯಾಗಬಹುದು'.

ಅಂತಹ ಬದಲಾಗದ ನಿತ್ಯ ಶಾಶ್ವತವಾದ ಬದುಕಾವುದು?  ಅದನ್ನು ಯಾರು ಹೇಗೆ ಕಂಡುಕೊಂಡರು?  ಅದನ್ನು ಸನಾತನ ಎಂದು ಕರೆದವರಾರು?  ಎಂಬೆಲ್ಲ ಪ್ರಶ್ನೆಗಳಿಗೂ ಉತ್ತರವಾಗುವ ಉಲ್ಲೇಖವೊಂದನ್ನು ಇಲ್ಲಿ ಗಮನಿಸಬಹುದು.
ಸ ಹಿ ಲೋಕಯೋನಿರಮೃತಸ್ಯ ಪದಮ್
ಸೂಕ್ಷ್ಮಂ ಪರಾಯಣಮಚಲಂ ಹಿ ಪದಮ್
ತತ್ಸಾಂಖ್ಯಯೋಗಿಭಿರುದಾಹೃತಂ ತಂ
ಬುದ್ಧ್ಯಾಯತಾತ್ಮಭಿರಿದಂ ಸನಾತನಮ್

ಅದು ಲೋಕಯೋನಿ, ವಿಶ್ವವು ವಿಕಾಸವಾಗುವ ಎಡೆ., ವಿಶ್ವವಿಸ್ತಾರಕ್ಕೆ ಮೂಲಕಾರಣವಾದ ಬದುಕು. ಅಮೃತದ ಸ್ಥಾನ. ಮೃತ್ಯುವು ಯಾವ ಎಡೆಯನ್ನು ಸೋಕಲಾರದೋ, ಯಾವ ಎಡೆಯನ್ನು ಮುಟ್ಟಿದಾಗ ವಿಶ್ವವನ್ನು ಯಾವಶಕ್ತಿ ತುಂಬಿಕೊಡಿದೆ ಎನ್ನುವ ಅರಿವು ಉಂಟಾಗುತ್ತದೆಯೋ ಅಂತಹ ಅಮೃತದ ನೆಲೆ. ಮೃತ್ಯುವಿನಿಂದ ಅಮೃತದೆಡೆಗೆ ನನ್ನನ್ನುಹೊಂದಿಸು ಎಂಬ ಭಾರತೀಯರ ಪ್ರಾರ್ಥನೆಯುಂಟೋ, ಯಾವ ಜಾಗವನ್ನು ಮುಟ್ಟಿದ ಜೀವಿಗೆ ಹುಟ್ಟು ಮತ್ತು ಸಾವುಗಳಿಗೆ ಸಿಕ್ಕದ ಮೂಲನೆಲೆಯು ದೊರಕುವುದೆಂಬ ಅನುಭವಪೂರ್ಣವಾದ ಜ್ಞಾನಿಗಳ ಮಾತಿದೆಯೋ, ಅಂತಹ ಅಮೃತದ ನೆಲೆ. ಆ ಅಮೃತದ ಎಡೆಯೂ ಲೋಕಯೋನಿಯೂ ಆದ ಬದುಕು ಸನಾತನ. ಅದು ಸೂಕ್ಷ್ಮ- ಸ್ಥೂಲ ದೃಷ್ಟಿಗೋಚರವಲ್ಲದ ಅತಿ ಸೂಕ್ಷ್ಮತಮವಾದ ಬದುಕು. ಅದು ಪರಾಯು- ಶ್ರೇಷ್ಠವಾದ ಗತಿ. ಶ್ರೇಷ್ಠವಾದ ಆಲಂಬನ. ಪರಮವಾದ ಗತಿ. "ಅಚಲಂ ಹಿ ಪದಮ್" ಚಲನೆಯಿಲ್ಲದ, ಬದಲಿಲ್ಲದ, ಸ್ಥಿರವಾದ ಬದುಕು. ವಿಶ್ವವೆಲ್ಲ ಚಲಿಸಿದರೂ, ಆ ವಿಶ್ವಕ್ಕೆಲ್ಲ ಚಾಲಕ ಶಕ್ತಿಯಾದರೂ ಚಲಿಸದೆಯಿರುವ ಎಡೆಯದು. ಚಲಿಸದ ಅಚಲವಾದ ಬದಕು ಅದು.

ಇಂತಹ ಬದುಕನ್ನು ಗುರುತಿಸಿ "ಸನಾತನ "ಎಂದು ಕರೆದವರಾದರೂ ಯಾರು? ಯತಾತ್ಮರಾದ ಸಾಂಖ್ಯಯೋಗಿಗಳು, ತತ್ತ್ವಸಂಖ್ಯಾನದ ಮರ್ಮವರಿತು,ತತ್ತ್ವ ನಿರ್ಣಯವನ್ನು ಗುರುತಿಸಬಲ್ಲ ಜ್ಞಾನಿಗಳೇ ಸಾಂಖ್ಯರು. ಬುದ್ಧಿ ಮನಸ್ಸುಗಳನ್ನು ಮುಂದಕ್ಕೆ ಮಾತ್ರವೇ ಹರಿಸದೇ ಹಿಂಬದಿಗೆ ಹರಿಸುತ್ತಾ, ಆವೃತ್ತಚಕ್ಷು (ತಿರುಗಿದ ಕಣ್ಣು)ಗಳಾಗಿ, ಪರಮ ಸೂಕ್ಷ್ಮವಾಗಿರುವಲ್ಲಿ ನೆಲೆಯ "ತನ್ಮನೋ ವಿಲಯಂ ಯಾತಿ ತದ್ವಿಷ್ಣೋಃ ಪರಮಂ ಪದಮ್" ಎಂಬುದಾಗಿ ಮನಸ್ಸನ್ನು ವಿಲೀನಗೊಳಿಸಿದಾಗ ಮುಟ್ಟುವ ಯಾವ ವಿಷ್ಣುಪದವುಂಟೋ ಅಲ್ಲಿಯವರೆಗೂ ಮನಸ್ಸನ್ನು ನಿರೋಧ ಮಾಡಿ ಸಾಂಖ್ಯಯೋಗಿಗಳಾದ ಜನರು, ಅವರು ಹೇಳಿದುದು ಹೇಗೆ?  ಯತಾತ್ಮರಾಗಿ ತಮ್ಮ ಆತ್ಮಸಂಯಮ ಮಾಡಿಕೊಂಡು, ಪ್ರಾಣ-ಮನಸ್ಸುಗಳೆಲ್ಲವನ್ನೂ ಕಟ್ಟಿ, ಕಟ್ಟಿ ಹಿಂಬದಿಗೆ ಹೋದಾಗ, ಪರಮಶ್ರೇಷ್ಠವಾದ ನೆಲೆಯಲ್ಲಿ ನಿಂತರೋ, ಆ ದರ್ಶನಗೋಚರವಾದ ವಿಷಯವನ್ನು ಆ ದರ್ಶನ ಭಾವದಿಂದಲೇ ಬುದ್ಧಿಗೂ ಇಳಿದಾಗ, ಆ ದರ್ಶನದಿಂದ ಅರಳಿದ ಬುದ್ಧಿಯ ಸಹಾಯದಿಂದ "ಸನಾತನಂ" ಎಂಬುದಾಗಿ ಕರೆದರು. ಬರಿಯ ಇಂದ್ರಿಯ ಸಹಕೃತವಾದ ಬುದ್ಧಿಯಿಂದ ಮಾತ್ರ ಸನಾತನವನ್ನು ಗುರುತಿಸುವುದು ಸಾಧ್ಯವಿಲ್ಲ. ಯೋಗದ ಹಾದಿ ತತ್ತ್ವಸಂಖ್ಯಾನದ ಹಾದಿಗಳನ್ನು ತುಳಿದು, ಜ್ಞಾನಿಗಳು ಯಾವುದನ್ನು ಸನಾತನ ಎಂದು ಕಂಡು ಹೇಳಿದರೋ ಆ ಹಾದಿಯಲ್ಲಿ ತಾವೂ ನಡೆದು ಕಂಡರೆ ಮಾತ್ರ "ಸನಾತನ" ಎಂಬ ಪದಕ್ಕೆ ವಿಷಯವಾದ ಬದುಕು ನಮಗೆ ಗೋಚರವಾಗುವುದು. ಅದು ಚಿರ ಪುರಾತನವೂ ಹೌದು, ನಿತ್ಯನೂತನವೂ ಹೌದು, ಎಂಬಂಶ ಅರಿವಿಗೆ ನಿಲುಕುವುದು. ಶ್ರೀರಂಗ ಮಹಾಗುರುವು ಈ ಸಂದರ್ಭದಲ್ಲಿ ನೀಡುತ್ತಿದ್ದ ಸುಂದರ ಉದಾಹರಣೆಯನ್ನು ಉಲ್ಲೇಖಿಸ ಬಯಸುತ್ತೇವೆ. ಇತರೆಡೆಗಳಲ್ಲಿ ಚಳಿಯನ್ನು ಅನುಭವಿಸಿದ ಜನಗಳನ್ನು ಹಿಮವತ್ಪರ್ವತದ ಗೌರೀಶಂಕರ ಶಿಖರದಲ್ಲೆಷ್ಟು ಚಳಿಯೆಂದರೆ, ತಾವು ಅನುಭವಿಸದಷ್ಟು ತೀವ್ರ ಚಳಿಯನ್ನು ಮಾತ್ರ ಹೇಳುವರು. ಆದರೆ ಆ ಮಟ್ಟದಲ್ಲಿ ಮೈಮರಗಟ್ಟಿ, ನಾಲಿಗೆ ಅಲುಗಿಸಿ ಮಾತನಾಡಲಾರದಷ್ಟು ಚಳಿಯಾಗುವುದೆಂಬುದನ್ನು ,ಆ  ಚಳಿಯ ಇತರ ಅನುಭವಗಳನ್ನು ಅನುಭವ ರಸಿಕನೇ ಬಲ್ಲನು . ಅಂತೆಯೇ ಯತಾತ್ಮರಾದ ಸಾಂಖ್ಯಯೋಗಿಗಳು ಅನುಭವದಿಂದ ಗುರುತಿಸಿದ "ಸನಾತನ" ಪದಾರ್ಥವನ್ನು ಅನುಭವಿಸಿಯೇ ಗುರುತಿಸಬಲ್ಲನು. ಆದ್ದರಿಂದ "ಸನಾತನ" ಎಂಬುದು ಜ್ಞಾನಿಗಳ ಅನುಭವಗೋಚರವಾದ ಸತ್ಯ. ಅದನ್ನು ಕಂಡು ಆ ಅರಿವು ಮರೆಯಾಗದಂತೆ ರೂಪಿಸಿದ ಧರ್ಮ, ಸಂಪ್ರದಾಯಗಳು ಸನಾತನವೆನ್ನಿಸಿಕೊಳ್ಳುವವೇ ಹೊರತು ಉಳಿದುವಲ್ಲ.

"ಸನಾತನ"ವಾದ ಬದುಕನ್ನರಿತು, ಸನಾತನ ಧರ್ಮದ ಉಸಿರನ್ನು ಗುರುತಿಸಿದ ಸಾಂಖ್ಯಯೋಗಿಯಾದ ಶ್ರೀಶ್ರೀರಂಗಮಹಾಗುರುವಿಗೆ ವಂದಿಸಿ, ಸನಾತನ ಪದಾರ್ಥ ವಿವರಣೆಯನ್ನು ಸನಾತನವಾದ ಬದುಕಿಗೆ ಅರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ : 08 ಸಂಪುಟ: 03, 1981ಜೂನ್ ತಿಂಗಳಲ್ಲಿ ಪ್ರಕಟವಾಗಿದೆ. 

Saturday, March 27, 2021

ಯೋಗತಾರಾವಳಿ – ಪೀಠಿಕೆ (Yogataravali – Pithike)

ಯೋಗದ ಹಿರಿಮೆ  
ಲೇಖಕರು: ಡಾ|| ಕೆ. ಎಸ್. ಕಣ್ಣನ್
 (BSc, MA (Sanskrit), MPhil, PhD, ವಿದ್ವತ್) 
(ಪ್ರತಿಕ್ರಿಯಿಸಿರಿ lekhana@ayvm.in)



"ದಾಸನ ಮಾಡಿಕೋ ಎನ್ನ, ಸಾಸಿರನಾಮದ ವೆಂಕಟರಮಣ" ಎಂದು ಹಾಡಿದ್ದಾರೆ ದಾಸರು. ಸಾಸಿರನಾಮವೆಂದರೆ ಸಾವಿರನಾಮಗಳು. ವಿಷ್ಣುಸಹಸ್ರನಾಮವನ್ನು ಕುರಿತಾದ ಉಲ್ಲೇಖವಿದು. ಈ ಸಹಸ್ರನಾಮದಲ್ಲಿ ಬರುವ ಎರಡು ನಾಮಗಳನ್ನು ಗಮನಿಸಬಹುದು :"ಯೋಗೋ, ಯೋಗವಿದಾಂ ನೇತಾ". ಯೋಗವೆನ್ನುವುದೇ ಭಗವಂತನ ಹೆಸರುಗಳಲ್ಲಿ ಒಂದು! ಎರಡನೆಯದು "ಯೋಗವನ್ನು ಬಲ್ಲವರ ನಾಯಕ" - ಎಂಬುದು. ಕೃಷ್ಣನು ಯೋಗೇಶ್ವರನೆಂದು ಪ್ರಸಿದ್ಧ. ಗೀತೆಯ ಕೊನೆಯ ಶ್ಲೋಕದಲ್ಲಿ ಹಾಗೆಂದೇ ಹೇಳಿದೆಯಲ್ಲವೇ? ಇಡೀ ಗೀತೆಯೇ ಒಂದು ಯೋಗ-ಶಾಸ್ತ್ರ! ಇನ್ನು ಶಿವನಂತೂ ಯೋಗೀಶ್ವರನೇ ಸರಿ.

ಶರ-ಶಯ್ಯೆಯಲ್ಲಿದ್ದಾಗ ಭೀಷ್ಮರು ಹೇಳಿದುದು ವಿಷ್ಣುಸಹಸ್ರನಾಮ. ಇಚ್ಛಾ-ಮರಣಿಗಳಾಗಿದ್ದ ಭೀಷ್ಮರೂ ಯೋಗಿಗಳೇ. ಮಹಾಭಾರತ-ಯುದ್ಧಾವಸಾನದ ಸಮಯದಲ್ಲಿ ಅವರು ಅದನ್ನು ಹೇಳಿದರೆಂಬುದು ಸರ್ವ-ವಿದಿತ. ಮಹಾಭಾರತ-ಯುದ್ಧವು ನಡೆದು ಅದೆಷ್ಟು ಸಹಸ್ರಮಾನಗಳು ಕಳೆದವೋ!

ಇಂದಿನ ಸಹಸ್ರಮಾನದಲ್ಲಿ ಈಚೆಗೆ ಬಹಳವೇ ಪ್ರಚುರವಾಗಿರುವ ಒಂದು ಪದವೆಂದರೆ 'ಯೋಗ'ವೇ ಸರಿ. ಅಲ್ಲಿಗೆ, ನಮ್ಮ ಇತಿಹಾಸದ ಅಂದಿನ ಸಹಸ್ರನಾಮದ ಒಂದು ಪದ ಇಂದಿನ ಸಹಸ್ರಮಾನಕ್ಕೆ ಸಹ ಅತ್ಯಂತವಾಗಿ ಅವಶ್ಯವಾಗಿದೆ ಎನ್ನಬಹುದಲ್ಲವೆ?

ಅಮೆರಿಕಾ-ದೇಶದಲ್ಲಿರುವ ಯಾವುದೇ ಪ್ರಸಿದ್ಧ ವ್ಯಕ್ತಿಯನ್ನು ಕೇಳಿ ನೋಡಿ - ಅವರು "ಯೋಗಾಭ್ಯಾಸಿ"ಗಳಾಗಿರುತ್ತಾರೆ. ಅದರಲ್ಲೂ ಮೈಕಟ್ಟು ಚೆನ್ನಾಗಿಟ್ಟುಕೊಂಡು ಸುರೂಪರಾಗಿ ಕಾಣಬೇಕೆಂದು ಬಯಸುವ ನಟ-ನಟಿಯರೆಲ್ಲರೂ ಯೋಗಕ್ಕೆ ಬೆಲೆಗೊಡುವವರೇ ಸರಿ. ಬರೀ ಅವರು ಮಾತ್ರವಲ್ಲ. ಅಮೆರಿಕದಲ್ಲಿ ಔಷಧವೆಂದರೆ, ವೈದ್ಯರೆಂದರೆ ಎಲ್ಲರಿಗೂ ಭಯವೇ. ಅಲ್ಲಿ ಅವು ಅಷ್ಟು ದುಬಾರಿ! ಎಂದೇ ಅಲ್ಲಿಯ ಜನ-ಸಾಮಾನ್ಯಕ್ಕೂ ರೋಗ-ನಿರೋಧಕವಾದ ಯೋಗವು ಬೇಕೆನಿಸುವುದೇ. ದೇಹ-ದಾರ್ಢ್ಯಕ್ಕಾಗಿ ಯೋಗ. ಒತ್ತಡಗಳಿಂದ ಬಿಡುಗಡೆಗಾಗಿ ಯೋಗ. ಮನಸ್ಸಿನ ನೆಮ್ಮದಿಗಾಗಿ ಯೋಗ. ಇಷ್ಟು ಮಾತ್ರವಲ್ಲ, ಯೋಗದ ಉಪಯೋಗಗಳು. ಆಧ್ಯಾತ್ಮಿಕ-ಪ್ರಗತಿಗಾಗಿಯೂ ಯೋಗವು ಅತ್ಯಂತ ಉಪಯೋಗಿಯೇ. ಇಹ-ಪರಗಳೆರಡರ ಕೂಡಿಬಾಳಾಟವೆಂಬುದೇ ಯೋಗ.

ಯೋಗಕ್ಕೆ ಈಚೆಗೆ ಬಂದ ವಿಶ್ವ-ಪ್ರಾಚುರ್ಯಕ್ಕೆ ಕಾರಣೀಭೂತರಾದವರೆಂದರೆ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿಯವರೇ. ಅಂತಾರಾಷ್ಟ್ರಿಯ-ಯೋಗ-ದಿನಾಚರಣೆಯ ಪ್ರಾರಂಭವಾದುದೇ ಇವರಿಂದ. ಯೋಗಕ್ಕೆ ಹೀಗೆ ವಿಶ್ವ-ಮಾನ್ಯತೆಯ ಸುಯೋಗ ಒದಗಿಬಂದಿದೆ. ಸಕಲ ದೇಶಗಳೂ ಜೂನ್ ೨೧ರಂದು ಯೋಗವನ್ನು ಮೆರೆಸುತ್ತವೆ. ಎಚ್ಚರದ ಮಾತೊಂದನ್ನು ಇಂತಹೊಂದು ಸಂದರ್ಭದಲ್ಲಿ ಮೋದಿಯವರು ಕೊಟ್ಟದ್ದು ಕೆಲವರಿಗಾದರೂ ನೆನಪಿರಬಹುದೇನೋ? ಅದೆಂದರೆ ಭಾರತವು 'ಯೋಗ'ದ ಕಾಪಿರೈಟನ್ನು ಇನ್ನೂ ಕೇಳಹೊರಟಿಲ್ಲ - ಎಂಬುದು. ಇಂಟಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್ (ಬೌದ್ಧಿಕ ಸೊತ್ತಿನ ಹಕ್ಕು) - ಎಂಬುದು ಇಂದು ಬಹಳ ಸದ್ದು ಮಾಡುತ್ತಿದೆ. ವಿಶೇಷವಾಗಿ ವಿಜ್ಞಾನ-ತಂತ್ರಜ್ಞಾನ-ಕ್ಷೇತ್ರಗಳಲ್ಲಿ ಈ ಹಕ್ಕನ್ನು ಚಲಾಯಿಸದವರು ಎಲ್ಲೋ ಅಲ್ಲೊಂದು ಇಲ್ಲೊಂದು ಮಂದಿ ಇದ್ದಾರು, ಅಷ್ಟೆ. ಯೋಗವು ಭಾರತದ್ದೇ ಸೊತ್ತು.

ಪಾಶ್ಚಾತ್ತ್ಯ-ಧೀಮಂತರು ಇದನ್ನೂ ಉಲ್ಟಾ ಮಾಡಲು ಹೊರಟಿದ್ದಾರೆ, ನಿಮಗೆ ಗೊತ್ತೆ? ಯೋಗವು ಮೂಲತಃ ಭಾರತೀಯರದೇ ಅಲ್ಲ - ಎಂಬೊಂದು ವಾದ. ಯೋಗಕ್ಕೂ ಭಾರತೀಯ-ಸಂಸ್ಕೃತಿಗೂ ಸಂಬಂಧವಿಲ್ಲವೆನ್ನುವುದು ಮತ್ತೊಂದು. ಯೋಗವನ್ನು ಬೆಳೆಸಿದವರು ಪಾಶ್ಚಾತ್ತ್ಯರೇ ಎಂಬುದು ಮತ್ತೊಂದು. ಇವಕ್ಕೆಲ್ಲ ಬೌದ್ಧಿಕವಾಗಿ ಉತ್ತರಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕೆ ಮೊದಲು ಯೋಗದ ಸತ್ಯ-ಸ್ವರೂಪವೇನೆಂಬುದನ್ನು ತಿಳಿಯಬೇಕಿದೆ.
ಅದಕ್ಕಾಗಿ ಯೋಗತಾರಾವಲಿಯೆಂಬ ಕೃತಿಯನ್ನು ಈ ಲೇಖನಮಾಲೆ ಪರಿಚಯ ಮಾಡಿಕೊಡುತ್ತದೆ. ಯೋಗವಿದ್ಯೆಯ ಅಂತರಂಗ-ಬಹಿರಂಗಗಳನ್ನು ಅರಿತಿದ್ದ ಶ್ರೀರಂಗಮಹಾಗುರುಗಳು ಇಲ್ಲಿಯ ಕೆಲವು ಶ್ಲೋಕಗಳನ್ನು ವಿಶೇಷವಾಗಿ ಉಲ್ಲೇಖಿಸಿ ವಿವರಿಸಿದ್ದುಂಟು. ಅದರ ಬೆಳಕಿನಲ್ಲಿ ಇಲ್ಲಿಯ ಕೆಲವು ವಿವರಣೆಗಳು ಬರಲಿವೆ. ತಾರಾವಲಿಯೆಂದರೆ ನಕ್ಷತ್ರ-ಮಾಲೆ. ನಕ್ಷತ್ರಗಳು ೨೮. ಅಷ್ಟು (ಮತ್ತು ಒಂದೆರಡು) ಶ್ಲೋಕಗಳು ಇಲ್ಲಿವೆ. ಯೋಗದ ಅತ್ಯುನ್ನತ-ವಿಚಾರಗಳನ್ನು ಸರಳವೂ ಕಾವ್ಯಮಯವೂ ಆದ ಶೈಲಿಯಲ್ಲಿ ವಿವರಿಸುವ ಪುಟ್ಟ ಕೃತಿ ಈ ಯೋಗತಾರಾವಳಿ.

ಸೂಚನೆ : 27/3/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.   

Wednesday, March 24, 2021

ಸುಶಿಕ್ಷಿತವಾದ ಮನಸ್ಸಿನ ಮಹತ್ತ್ವ (Susiksitavada Manassina Mahattva)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)

ದೇವರ್ಷಿ ನಾರದರಿಂದ ಶ್ರೀರಾಮಚಂದ್ರನ ಅನಂತ ಕಲ್ಯಾಣ ಗುಣಗಾನವನ್ನು ಕೇಳಿ ಹೃಷ್ಟಮಾನಸರಾದಂತಹ ಶ್ರೀಮದ್ವಾಲ್ಮೀಕಿ ಮಹರ್ಷಿಗಳು ಬ್ರಾಹ್ಮೀಮುಹೂರ್ತದಲ್ಲಿ ಸಂಧ್ಯಾಕಾರ್ಯವನ್ನು ನೆರವೇರಿಸುವ ಸಲುವಾಗಿ ತಮ್ಮ ಶಿಷ್ಯರಾದಂತಹ ಭಾರದ್ವಾಜರೊಂದಿಗೆ ಆಶ್ರಮದ ಸಮೀಪದಲ್ಲಿ ಹರಿಯುತ್ತಿರುವ ತಮಸಾನದಿಯ ತೀರಕ್ಕೆ ತೆರಳಿದ ಸಂದರ್ಭದಲ್ಲಿ ನಿರ್ಮಲವಾಗಿ ಹರಿಯುತ್ತಿರುವ ತಮಸಾನದಿಯ ನೀರನ್ನು ನೋಡಿ ಶಿಷ್ಯನನ್ನು ಕುರಿತು ವತ್ಸ ಭಾರದ್ವಾಜ, ಸತ್ಪುರುಷರ ಮನಸ್ಸಿನಂತೆ ನಿರ್ಮಲವೂ ಪ್ರಸನ್ನವೂ ಆದ ಈ ತಮಸಾ ನದಿಯ ಜಲವನ್ನು ನೋಡು ಎಂದು ತಮಸೆಯ ನೀರನ್ನು ಸತ್ಪುರುಷರ ಮನಸ್ಸಿಗೆ ಹೋಲಿಸುತ್ತಾರೆ.

ಸತ್ಪುರುಷರ ಮನಸ್ಸು ಸದ್ವಿಚಾರಗಳ ಶ್ರವಣ ಮನನಾದಿಗಳಿಂದ, ಸತ್ಸಹವಾಸದಿಂದ ಸದ್ಗುರುವಿನ ಮಾರ್ಗದರ್ಶನದಿಂದ ಸಂಸ್ಕಾರಗೊಂಡು ಪ್ರಸನ್ನವಾಗಿಯೂ, ನಿರ್ಮಲವಾಗಿಯೂ ಇರುತ್ತದೆ. "ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ:" ಎಂಬ ಶಾಸ್ತ್ರ ವಾಕ್ಯದಂತೆ ಮನಸ್ಸೇ ಸಂಸಾರ ಬಂಧನಕ್ಕೂ ಹಾಗೂ ಮೋಕ್ಷಕ್ಕೂ ಕಾರಣವಾಗುತ್ತದೆ. ಸುಶಿಕ್ಷಿತವಾದ, ಉತ್ತಮ ಸಂಸ್ಕಾರದಿಂದ ಕೂಡಿದ ಮನಸ್ಸು ಮೋಕ್ಷಕ್ಕೆ ಕಾರಣವಾದರೆ ಅಶಿಕ್ಷಿತವಾದ, ಮಾಲಿನ್ಯದಿಂದ ಕೂಡಿರುವ ಮನಸ್ಸು ಬಂಧನಕ್ಕೆ ಕಾರಣವಾಗುತ್ತದೆ. ಒಂದು ತಿಳಿಯಾದ ನೀರಿನ ಪಾತ್ರೆಯ ತಳಭಾಗದಲ್ಲಿರುವ ನಾಣ್ಯವು ಸ್ಪಷ್ಟವಾಗಿ ಗೋಚರವಾಗುವಂತೆ, ಜ್ಞಾನಿಗಳಿಗೆ ಅವರ ತಿಳಿಯಾದ ನಿರ್ಮಲವಾದ ಮನಸ್ಸಿನಿಂದ ಹೃದಯಗುಹೆಯಲ್ಲಿ ಸ್ಥಿತನಾಗಿರುವ ಭಗವಂತನು ಗೋಚರನಾಗುತ್ತಾನೆ ಎಂಬ ಮಾತನ್ನು ಜ್ಞಾನ-ವಿಜ್ಞಾನ ತೃಪ್ತಾತ್ಮರಾದಂತಹ ಶ್ರೀರಂಗ ಮಹಾಗುರುಗಳು ಹೇಳಿದ್ದಾರೆ. ಮನಸ್ಸನ್ನು ಇಂದ್ರಿಯಗಳ ರಾಜ ಎಂಬುದಾಗಿ ಕರೆದಿದ್ದಾರೆ.  ಒಂದು ಮನೆಯಲ್ಲಿ ಯಜಮಾನನ ಆಜ್ಞೆಯಂತೆ ಮನೆಯ ಸದಸ್ಯರು, ಕೆಲಸದಾಳುಗಳು ಕಾರ್ಯನಿರ್ವಹಿಸಿದಾಗ ಅಂತಹ ಮನೆಯು ಹೇಗೆ ಆದರ್ಶಗೃಹವೆನಿಸಿಕೊಳ್ಳುತ್ತದೆಯೋ ಅಂತೆಯೇ ಇಂದ್ರಿಯಗಳು ಸುಸಂಸ್ಕೃತವಾದ ಮನಸ್ಸಿನ ಅಧೀನದಲ್ಲಿ ಕಾರ್ಯನಿರ್ವಹಿಸಿದಾಗ ಉತ್ತಮವಾದ ಆದರ್ಶ ಜೀವನವೆನಿಸುತ್ತದೆ. ಸನಾತನಾರ್ಯ ಭಾರತೀಯ ಮಹರ್ಷಿಗಳಿಂದ ಬಂದಂತಹ ವಿದ್ಯೆಗಳೆಲ್ಲದರ ಪ್ರಧಾನವಾದ ಉದ್ದೇಶ ಮನಸ್ಸನ್ನು ಸುಶಿಕ್ಷಿತವನ್ನಾಗಿಯೂ ಸುಸಂಸ್ಕೃತವನ್ನಾಗಿಯೂ ಮಾಡುವುದೇ ಆಗಿದೆ. ತನ್ಮೂಲಕ ಉತ್ತಮವಾದ ಜೀವನವನ್ನು ನಡೆಸಲು ಸಹಾಯಕವಾಗುವುದಲ್ಲದೇ, ಆತ್ಮಸಾಕ್ಷಾತ್ಕಾರದಂತಹ ಪ್ರಧಾನವಾದ ಗುರಿಯನ್ನು ತಲುಪುವುದಕ್ಕೂ ಮನಸ್ಸೇ ವಾಹಕವಾಗಬಲ್ಲದು. ಆದ್ದರಿಂದ ಮನಸ್ಸಿನ ಸುಶಿಕ್ಷಣದ ಕಡೆಗೆ ಎಲ್ಲರೂ ಗಮನ ಹರಿಸಿದಾಗ ಸತ್ಪ್ರಜೆಗಳಾಗಿ ಉತ್ತಮ ಜೀವನ ನಡೆಸಲು ಸಾಧ್ಯ ಎಂಬುದು ಮಹಾತ್ಮರ ಅಭಿಪ್ರಾಯವಾಗಿದೆ.

ಸೂಚನೆ: 24/03/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Monday, March 22, 2021

ಆರ್ಯಸಂಸ್ಕೃತಿ ದರ್ಶನ - 35 (Arya Samskruti Darshana - 35)

ಆತ್ಮಜ್ಞಾನಕ್ಕೆ ಅಧಿಕಾರಿ ಯಾರು ?

ಲೇಖಕರು: ಡಾ|| ಶ್ರೀ ಎಸ್.ವಿ. ಚಾಮು



ಕಠೋಪನಿಷತ್ತು ಬಹಳ ಜನಪ್ರಿಯವಾದ ಉಪನಿಷತ್ತು ಎಂದು ಕೇಳುತ್ತೇವೆ. ಆ ರೀತಿ ಜನರ ಮನಸ್ಸನ್ನು ಆಕರ್ಷಿಸಲು ಅದು ಬೆಳಕಿಗೆ ತರುವ ಆಧ್ಯಾತ್ಮಿಕ ರಹಸ್ಯಗಳು ಒಂದು ಕಾರಣ. ಅದು ಮನ ಮುಟ್ಟುವಂತೆ ಚಿತ್ರಿಸುವ ನಚಿಕೇತನ ಕಥೆಯು ಅದಕ್ಕೆ ಮತ್ತೊಂದು ಕಾರಣವೆಂದು ನಮಗೆ ತೋರುತ್ತದೆ. ಉಪನಿಷತ್ತುಗಳಲ್ಲಿ ನಾವು ಅನೇಕ ಪೂಜನೀಯರೂ, ಮೇಧಾವಿಗಳೂ ಆದ ಜ್ಞಾನ ಪುರುಷರನ್ನು ಭೇಟಿ ಮಾಡುತ್ತೇವೆ. ಅವರುಗಳ ಪೈಕಿ ಬ್ರಹ್ಮನಿಗೆ ಉಚಿತವಾದ ಮನಃಪಕ್ವತೆ ಇರುವವರು ಯಾರು ಎಂಬುದನ್ನು ಕುರಿತು ಯೋಚಿಸಿದಾಗ, ಈ ಋಷಿಬಾಲಕನು ಎಲ್ಲರಿಗಿಂತಲೂ ಮುಂದೆ ಬಂದು ನಿಲ್ಲುತ್ತಾನೆ. ವೀತರಾಗನೂ, ತಿಳಿಮನಸ್ಕನೂ, ಮೇಧಾವಿಯೂ, ಕುತೂಹಲಪರನೂ, ಅಂತ್ಯಂತ ಉನ್ನತ ಮಟ್ಟದ ಜಿಜ್ಞಾಸುವೂ, ಸ್ಥಿರಪ್ರಜ್ಞನೂ, ವಿವೇಚನಾ ಸಮರ್ಥನೂ ಆದ ಈ ಎಳೆಯನು ತನ್ನ ಗುಣಗಳಿಂದ ನಮ್ಮ ಮನಸ್ಸನ್ನು ಅಪಹರಿಸಿಬಿಡುತ್ತಾನೆ. ಅವನು ತೋರುವ ಮನಃಪಕ್ವತೆಯು ಬೇರಾವ ಉಪನಿಷದೃಷ್ಟಿಯಲ್ಲಿಯೂ ಕಂಡು ಬರುವುದಿಲ್ಲ. ಜ್ಞಾನದಲ್ಲಿ ಆಸಕ್ತಿ ಇರುವವರು ಲೋಕದಲ್ಲಿ ಅನೇಕರಿರುತ್ತಾರೆ. ಅವರೇನಾದರೂ ತಮ್ಮ ವ್ಯಕ್ತಿತ್ವವನ್ನು ಜ್ಞಾನಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಬೇಕೆಂದು ಬಯಸಿದರೆ, ಅವರಿಗೆ ನಚಿಕೇತನಿಗಿಂತ ಉತ್ತಮವಾದ ಆದರ್ಶ ( ಕನ್ನಡಿ) ಬೇರೊಬ್ಬನಿಲ್ಲ. ತಾವು ಆ ಮಟ್ಟಕ್ಕೆ ಬಂದಿರುತ್ತಾರೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಲು ಅವನಿಗಿಂತ ಸಮರ್ಪಕವಾದ ಒರೆಗಲ್ಲು ಬೇರೊಂದಿಲ್ಲ,

ನಚಿಕೇತನ ತಂದೆಯ ಹೆಸರು ವಾಜಶ್ರವ. ಆವನು ಉದ್ದಾಲಕ ಆರುಣಿಯೆಂಬ ಖುಷಿಯ ಮಗ. ಯಜ್ಞಯಾಗಾದಿಗಳಲ್ಲಿ ತುಂಬ ಆಸಕ್ತನಾದ ಕರ್ಮಠ. ಯಜ್ಞ ಯಾಗಾದಿಗಳನ್ನು ಮಾಡಿದುದರಿಂದ ದೊರಕುತ್ತದೆಂದು ಹೇಳುವ ಪುಣ್ಯ ಫಲಗಳಲ್ಲಿ ಅವನ ಮನಸ್ಸು ಆಳವಾಗಿ ನೆಟ್ಟಿರುತ್ತದೆ. ನಾನಾ ವಿಧವಾದ ಕಾಮನೆಗಳು ಅವನ ಮನಸ್ಸನ್ನು ತುಂಬಿ ಕೊಂಡು ಇರುವುದರಿಂದ ಅವನ ಮನಸ್ಸಿಗೆ ಶಾಂತಿಯಾಗಲಿ ನೆಮ್ಮದಿಯಾಗಲಿ ಸ್ವಲ್ಪವೂ ಇಲ್ಲ. ಜೊತೆಗೆ ಅವನು ಮುಂಗೋಪಿ ಬೇರೆ.

ಒಮ್ಮೆ ಅವನು ದೊಡ್ಡ ಸ್ವರ್ಗ ಫಲವನ್ನು ಅಪೇಕ್ಷಿಸಿ ತನ್ನ ಸಂಪತ್ತೆಲ್ಲವನ್ನೂ, ದಾನಮಾಡುತ್ತಾನೆ. ಆ ರೀತಿ ಅವನು ದಾನ ಮಾಡಿದ ವಸ್ತುಗಳಲ್ಲಿ ಅವನಲ್ಲಿದ್ದ ಮುದಿ ಗೋವುಗಳೂ ಸೇರಿರುತ್ತವೆ. ದಾತೃಗಳಿಗೆ ತಲಪಿಸಲು ಆ ಹಸುಗಳನ್ನು ಹೊಡೆದುಕೊಂಡು ಹೋಗುತ್ತಿರುವಾಗ ಅವನ ಮಗ ಬಾಲನಾದ ನಚಿಕೇತನಲ್ಲಿ ಶ್ರದ್ದಾಭಾವವು ಅಂಕುಶವಾಗಿ ಅವನು ತುಂಬ ಉತ್ಕಂಠಿತನಾಗುತ್ತಾನೆ, "ನೀರು ಕುಡಿಯಲಾರದ, ಹುಲ್ಲು ತಿನ್ನಲಾರದ, ಹಾಲುಕೊಡದ, ಇಂದ್ರಿಯಗಳು ನಷ್ಟವಾಗಿರುವ ಇಂತಹ ಹಸುಗಳನ್ನು ದಾನ ಮಾಡುವವನು ಅವಶ್ಯವಾಗಿ ದುಃಖಮಯವಾದ ಲೋಕಗಳಿಗೆ ಹೋಗುತ್ತಾನೆ" ಎಂಬ ಯೋಚನೆ ಬಂದು ತಂದೆಯ ವಿಷಯದಲ್ಲಿ ಅವನು ಚಿಂತಾಕುಲನಾಗುತ್ತಾನೆ. ತನ್ನನ್ನಾದರೂ ದಾನಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂಬ ಅಭಿಪ್ರಾಯದಿಂದಿರಬೇಕು, "ಅಪ್ಪ, ನೀನು ನನ್ನ ಯಾರಿಗೆ ಕೊಡುವೆ?"  ಎಂದು ಕೇಳುತ್ತಾನೆ. ತಂದೆಯು ಮೌನವಾಗಿರಲು, ಅವನು ಎರಡು ಮೂರು ಬಾರಿ ಆ ಪ್ರಶ್ನಯನ್ನೇ ಪುನರುಕ್ತಿಸುತ್ತಾನೆ.

ಆಗ ಸಿಟ್ಟಿಗೆ ವಶನಾಗಿ ವಾಜಶ್ರವನು "ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ" ಎಂದು ನುಡಿದು ಬಿಡುತ್ತಾನೆ. ಆ ಮಾತನ್ನು ಕೇಳಿ ಮೃತ್ಯುವಿನ ಭಯವೆಂದರೇನು ಎನ್ನುವುದನ್ನು ಅರಿಯದ ಅವನ ಮನಸ್ಸಿನಲ್ಲಿ ಹೆದರಿಕೆಯ ಬದಲು ಕುತೂಹಲವೇ ಉಂಟಾಗುತ್ತದೆ. ಅವನು "ಬಹುಜನರ ಮೊದಲಿಗನಾಗಿ ನಾನು ಯಮನಲ್ಲಿಗೆ ಹೋಗುತ್ತೇನೆ. ಬಹುಜನರ ಮಧ್ಯಮನಾಗಿ ನಾನು ಯಮನಲ್ಲಿಗೆ ಹೋಗುತ್ತೇನೆ. ಯಮನಿಗೆ ನನ್ನಿಂದ ಮಾಡುವುದೇನಿದೆ? ಅವನು ನನ್ನಿಂದೇನು ಮಾಡುತ್ತಾನೆ?" ಎಂದು  
ಯೋಚಿಸತೊಡಗುತ್ತಾನೆ.

ತಾನು ದುಡುಕಿ ಆಡಿದ ಮಾತಿಗೆ ವಾಜಶ್ರವನು ತುಂಬ ಪರಿತಪಿಸುತ್ತಾನೆ. ತನ್ನ ಮಾತು ಸುಳ್ಳಾಗದು ಎಂಬುವುದು ಅವನಿಗೆ ಗೊತ್ತು. ಬಾಲನಾದರೂ ಪರಿಣತವಾದ ಮನಸ್ಸನ್ನು ತೋರಿಸುತ್ತಾ ನಚಿಕೇತನು "ನಮ್ಮ ಪೂರ್ವೀಕರೆಲ್ಲರೂ ಸತ್ತು ಹೋದುದನ್ನು ಕುರಿತು ಯೋಚಿಸು. ಹಾಗೆಯೇ ನಮ್ಮ ಮುಂದೆ ಬರವವರೂ ಸಹ ಸಾಯುತ್ತಾರೆಂಬುದನ್ನು ನೆನೆ. ಮನುಷ್ಯನು ಸಸ್ಯದಂತೆ ಪಕ್ವವಾಗಿ ನಾಶವಾಗುತ್ತಾನೆ. ಸಸ್ಯದಂತೆ ಅವನೂ ಪುನಃ ಹುಟ್ಟುತ್ತಾನೆ" ಎಂದು ತಂದೆಯನ್ನು ಸಮಾಧಾನ ಮಾಡುತ್ತಾನೆ.

ತಂದೆಯ ಮಾತಿನ ಬಲದಿಂದ ನಚಿಕೇತನು ಯಮನ ಮನೆಯನ್ನು ಸೇರುತ್ತಾನೆ. ಆ ಸಮಯದಲ್ಲಿ ಯಮನು ಮನೆಯಲ್ಲಿರುವುದಿಲ್ಲ. ನಚಿಕೇತನು ಯಮನ ಸೇವಕರು ತನಗೆ ಕೊಟ್ಟ, ಅನ್ನನೀರುಗಳನ್ನು ಸೇವಿಸದೆ ಮೂರು ರಾತ್ರಿಗಳ ಕಾಲ ಯಮನ ಪ್ರತೀಕ್ಷೆಯಲ್ಲಿರುತ್ತಾನೆ. ಪ್ರವಾಸದಿಂದ ಹಿಂದಿರುಗಿದ ಯಮನಿಗೆ ಸೇವಕರು "ಮನೆಗೆ ಬಂದ ಬ್ರಾಹ್ಮಣ ಅತಿಥಿಯು ಅಗ್ನಿಯಂತೆ. ಅವನಿಗೆ ನೀರನ್ನು ಕೊಟ್ಟು ಅವನನ್ನು ಶಾಂತವಾಗಿಸು. ಯಾವನ ಮನೆಯಲ್ಲಿ ಬ್ರಾಹ್ಮಣನು ತಿನ್ನದೆ ಮತ್ತು ಕುಡಿಯದೆ ಇರುತ್ತಾನೆಯೋ, ಆ ಅಲ್ಪಬುದ್ಧಿಯುಳ್ಳವನ ಆಸೆ, ನಿರೀಕ್ಷಣೆ, ಬಂಧುಮಿತ್ರ, ಸಂಯೋಗ, ಸಂತೋಷ, ಯಜ್ಞ, ಪುಣ್ಯಕರ್ಮಗಳು, ಪುತ್ರರು, ಪಶುಗಳು ಇವೆಲ್ಲವನ್ನೂ ಅವನು ನಾಶಮಾಡಿಬಿಡುತ್ತಾನೆ" ಎಂದು ನುಡಿಯುತ್ತಾರೆ. ಅವರ ಮಾತಿನಂತೆ ಯಮನು ನಚಿಕೇತನ ಬಳಿಗೆ ಬಂದು " ನೀನು ಪೂಜ್ಯನಾದ ಅತಿಥಿ. ನೀನು ತಿನ್ನದೆ ಮೂರು ರಾತ್ರಿಗಳ ಕಾಲ ನನ್ನ ಮನೆಯಲ್ಲಿ ವಾಸಮಾಡಿರುವೆ. ನನಗೆ ಮಂಗಳವಾಗಲಿ. ಅದಕ್ಕೆ ಪ್ರತಿಯಾಗಿ ನೀನು ಮೂರು ವರಗಳನ್ನು ಕೇಳು" ಎಂದು ನುಡಿಯುತ್ತಾನೆ.

"ನನ್ನ ತಂದೆಯು ಶಾಂತಸ್ವಭಾವದವನೂ, ಸುಮನನೂ ಆಗಲಿ. ಅವನ ಕೋಪವು ಹೋಗಲಿ. ಇಲ್ಲಿಂದ ಹೋದ ಮೇಲೆ ಅವನು ಸುಮುಖನಾಗಿ ನನ್ನೊಡನೆ ಮಾತನಾಡಲಿ. ಅವನು ಮೊದಲಿನಂತೆಯೇ ನನ್ನ ಬಗ್ಗೆ ಪ್ರೀತಿಯುಳ್ಳವನಾಗಿರಲಿ. ಕಳೆದ ಕೋಪಸ್ವಭಾವವುಳ್ಳವನಾಗಿ ರಾತ್ರಿಯ ಹೊತ್ತು ಅವನು ಸುಖವಾಗಿ ನಿದ್ರಿಸಲಿ. ಮೃತ್ಯುವಿನಿಂದ ವಿಮುಕ್ತನಾದ ಅವನು ಪುನಃ ನನ್ನನ್ನು ನೋಡಲಿ" ಎಂದು ಅವನು ಮೊದಲನೆಯ ವರವನ್ನು ಕೇಳುತ್ತಾನೆ. ತನ್ಮೂಲಕ ಪುನಃ ಭೂಮಿಗೆ ಬರುವಂತೆ ಅವನು ತನ್ನ ಜೀವದ ರಕ್ಷಣೆಯನ್ನು ಮಾಡಿಕೊಳ್ಳುತ್ತಾನೆ.
            
ಬಗ್ಗೆ ಯಮನು ಕೊಡುವ ಉತ್ತರದ ವಿವರ ಇಲ್ಲಿ ಅನಗತ್ಯ. ಯಮನು ಆ ಅಗ್ನಿಪೂಜಾ ಕಲ್ಪದ ವಿಷಯದಲ್ಲಿ ವಿಸ್ತಾರವಾದ ವರ್ಣನೆ ಮಾಡುತ್ತಾನೆ. ಮೇಧಾವಿಯಾದ ನಚಿಕೇತನು ಅವುಗಳೆಲ್ಲವನ್ನೂ ನೆನಪಿನಲ್ಲಿಟ್ಟು ಕೊಂಡು ಹಾಗೆಯೇ ಯಮನಿಗೆ ಪಾಠ ಒಪ್ಪಿಸುತ್ತಾನೆ. ಅದರಿಂದ ಸುಪ್ರೀತನಾದ ಯಮನು ಆ ಅಗ್ನಿಗೆ ಅಲ್ಲಿಂದ ಮುಂದೆ ನಚಿಕೇತಾಗ್ನಿ ಎಂಬ ಹೆಸರುಂಟಾಗಲಿ ಎಂದು ಮತ್ತೊಂದುವರವನ್ನು ಕೊಡುತ್ತಾನೆ.

ನಂತರ ನಚಿಕೇತನು ತನ್ನ ಮೂರನೆಯ ವರವನ್ನು ಬೇಡುತ್ತಾನೆ. ಅವನು ವರದ ಜಾಗದಲ್ಲಿ ಒಂದು ಗಹನವಾದ ಪ್ರಶ್ನೆಯನ್ನೇ ಕೇಳುತ್ತಾನೆ. ಅವನು ಕೇಳುವ ಪ್ರಶ್ನೆಯು ಅವನೆಂತಹ ಕುತೂಹಲ ಪರ ಎಂಬುದನ್ನು ಹೇಳುತ್ತದೆ. ಮೃತನಾದವನಿಗೆ ಏನಾಗುತ್ತದೆ, ಅವನು ಎಲ್ಲಿಗೆ ಹೋಗುತ್ತಾನೆ, ಉಸಿರು ಶರೀರವನ್ನು ಬಿಟ್ಟ ನಂತರ ಅವನು ಇರುತ್ತಾನೆಯೇ ಅಥವಾ ಅವನು ಸದಾಕಾಲಕ್ಕೂ ನಷ್ಟವಾಗಿಬಿಡುತ್ತಾನೆಯೇ ಮುಂತಾದ ಪ್ರಶ್ನೆಗಳು, ಅನಾದಿಕಾಲದಿಂದ ಮನುಷ್ಯರನ್ನು ಕಾಡಿರುತ್ತವೆ. ಆದರೆ ಆ ಪ್ರಶ್ನೆಗಳಿಗೆ ನಿಶ್ಚಯಾತ್ಮಕವಾದ ಉತ್ತರವನ್ನು ಯಾರೂ ಕಂಡಿಲ್ಲ. ಅದರ ಬಗ್ಗೆ ಕೇಳಿಬರುವ ಉತ್ತರಗಳು ನಿಜವೇ ಎಂಬುದನ್ನು ಪರೀಕ್ಷಿಸಿನೋಡಲು ಯಾವ ದಾರಿಯೂ ಇರುವುದಿಲ್ಲ, ಆದರೂ ಸಹ ಅದು ಎಡೆ ಬಿಡದೆ ವಿಚಾರಣೆಗೆ ವಿಷಯವಾಗಿಯೇ ಇರುತ್ತದೆ. ನಚಿಕೇತನೂ ಸಹ ತನ್ನ ಸುತ್ತಮುತ್ತಲೂ ಹಿರಿಯರು ಆ ಬಗ್ಗೆ ಮಾಡುತ್ತಿದ್ದ ಚರ್ಚೆಗಳನ್ನು ಕೇಳಿರಬೇಕು. ಅದರ ಬಗ್ಗೆ ಅವರು ಯಾವನಿರ್ಣಯಕ್ಕೂ ಬರಲು ಸಮರ್ಥರಾಗದಿರುವುದನ್ನೂ ಅವನು ಗಮನಿಸಿರಬೇಕು. ಈಗ ಸಾಕ್ಷಾತ್ ಯಮನೇ ಮುಂದಿರುವಾಗ ಆ ಪ್ರಶ್ನೆಗೆ ಒಂದು ನಿಶ್ಚಯಾತ್ಮಕವಾದ ಉತ್ತರವನ್ನು ತಿಳಿದುಕೊಳ್ಳಲು ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೆ ಸಿಗುವುದಿಲ್ಲವೆಂದು ಯೋಚಿಸಿ ಅವನು ಯಮುನನ್ನು ಆ ಬಗ್ಗೆ ಯೇ ಪ್ರಶ್ನಿಸುತ್ತಾನೆ. ಸಂಪತ್ತು, ಅಧಿಕಾರ ಇತ್ಯಾದಿಗಳನ್ನು ಕೇಳದೆ ತನ್ನ ಮನಸ್ಸಿನಲ್ಲಿ ಆಡುತ್ತಿದ್ದ ಒಂದು ಗಹನವಾದ ಪ್ರಶ್ನೆಗೆ ಉತ್ತರನ್ನು ಬಯಸುವುದು ಅವನೆಂತಹ ಪ್ರಬುದ್ಧಾತ್ಮ ಎಂಬುವುದನ್ನು ನಮಗೆ ತಿಳಿಸಿಕೊಡುತ್ತದೆ.

ಯಮನು ತುಂಬ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾನೆ. ಅವನು ನಚಿಕೇತನಿಗೆ "ಹಿಂದೆ ದೇವತೆಗಳೂ ಇದರ ಬಗ್ಗೆ ಚರ್ಚೆ ಮಾಡಿದರು. (ಅವರೂ ಸಹ ಈ ಬಗ್ಗೆ ನಿಶ್ಚಯಾತ್ಮಕವಾದ ತಿಳಿವಳಿಕೆಯನ್ನು ಪಡೆಯಲು ಸಮರ್ಥರಾಗಲಿಲ್ಲ ) ಈ ವಿಷಯವು ಬಹಳ ಸೂಕ್ಷ್ಮವಾದುದು. ಇದನ್ನು ಸುಲಭವಾಗಿ ತಿಳಿಯಲಾಗುವುದಿಲ್ಲ. ನನ್ನನ್ನು ನಿರ್ಬಂದಿಸಬೇಡ. ನನ್ನನ್ನು ಬಿಡು" ಎಂದು  ಹೇಳುತ್ತಾನೆ.

ಅದಕ್ಕೆ ನಚಿಕೇತನು ಆಡುವ ಪ್ರತಿ ಮಾತು ಕುತೂಹಲಕಾರಿಯಾಗಿರುತ್ತದೆ. "ದೇವತೆಗಳೂ ಈ ವಿಷಯದಲ್ಲಿ ಚರ್ಚೆಮಾಡಿದರೆಂದು ನೀನು ಹೇಳುತ್ತಿರುವೆ. ಸ್ವಯಂ ಮೃತ್ಯುವಾದ ನೀನೇ ಇದನ್ನು ಸುಲಭವಾದ ವಿಷಯವಲ್ಲವೆಂದು ಹೆಳುತ್ತಿರುವೆ. ಆ ಬಗ್ಗೆ ಹೇಳಲು ನಿನ್ನಂತಹವನು ಪುನಃ ದೊರಕುವುದು ಕಷ್ಟ. ಇದಲ್ಲದೆ ನನಗೆ ಬೇರೆ ವರ ಬೇಡ " ಎಂದು ಅವನು ನುಡಿಯುತ್ತಾನೆ.

ಅವನ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ಯಮನು ಅವನಿಗೆ ಬೇಕು ಬೇಕಾದ ಇಷ್ಟಾರ್ಥಗಳೆಲ್ಲವನ್ನೂ ಕೊಡುವುದಾಗಿ ಹೇಳುತ್ತಾನೆ.  "ನೀನು ನೂರು ವರ್ಷ ಬದುಕುವ ಪುತ್ರ ಪೌತ್ರರನ್ನು ಕೇಳು. ಬಹಳ ಪಶು, ಆನೆ, ಚಿನ್ನ ಮತ್ತು ಅಶ್ವಗಳನ್ನು ಕೇಳು. ವಿಸ್ತಾರವಾದ ಭೂಮಿಯನ್ನು ಪ್ರಾರ್ಥಿಸು. ಸ್ವಯಂ ನೀನು ಎಷ್ಟು ಶರದೃತುಗಳಕಾಲ ಬೇಕೋ ಅಷ್ಟು ಕಾಲ ಜೀವಿಸು. ಈ ವರಕ್ಕೆ ಸಮಾನವಾದುವೆಂದು ತಿಳಿದರೆ, ವಿತ್ತವನ್ನೂ ಚಿರಂಜೀವಿಕೆಯನ್ನೂ ಬೇಡು. ಈ ವಿಸ್ತಾರವಾದ ಭೂಮಿಯಲ್ಲಿ ನೀನು ಏಳಿಗೆ ಹೊಂದಿ ಜೀವಿಸು. ನಿನ್ನ ಕಾಮನೆಗಳೆಲ್ಲವನ್ನೂ ನಾನು ಪೂರ್ತಿಮಾಡುತ್ತೇನೆ. ಈ ಮರ್ತ್ಯಲೋಕದಲ್ಲಿ ಯಾವ ಯಾವ ಕಾಮಗಳು ದುರ್ಲಭವೋ, ಆ ಕಾಮಗಳೆಲ್ಲವನ್ನೂ ನೀನು ಇಷ್ಟ ಬಂದಂತೆ ಕೇಳು. ಇದೋ ಈ ಸುಂದರಿಯರನ್ನು ನೋಡು. ತೂರ್ಯಗಳಿಂದ ಕೂಡಿದ ಈ ರಥಗಳನ್ನು ನೋಡು. ಇಂತಹವುಗಳನ್ನು ಮನುಷ್ಯರು ಪಡೆಯುಲಾರರು. ನಾನು ಕೊಟ್ಟ ಇವುಗಳಲ್ಲಿ ಕುಳಿತು ನೀನು ಎಲ್ಲೆಲ್ಲೂ ಸಂಚರಿಸು. ಆದರೆ ನೀನು ಮರಣವನ್ನು ಕುರಿತು ಮಾತ್ರ ಕೇಳಬೇಡ"   ಎಂದು ಅವನು ನುಡಿಯುತ್ತಾನೆ.

ನಾವು ಯಮನ ಮಾತುಗಳನ್ನು ಪ್ರಲೋಭನೆ ಎಂದು ಕರೆಯಬಹುದು. ಅಥವಾ ಅವನು ನಚಿಕೇತನನ್ನು ಈಡುಮಾಡುವ ತೀವ್ರವಾದ ಪರೀಕ್ಷೆ ಎಂದು ಬೇಕಾದರೂ ಭಾವಿಸಬಹುದು. ಮುಂದೆ ಯುಮನು, ಸತ್ತಮೇಲೆ ಮನುಷ್ಯನಿಗೆ ಏನಾಗುತ್ತದೆ ಎಂಬುದನ್ನು ನಾವು ನಿರೀಕ್ಷಿಸಬಹುದಾದ ರೀತಿಯಲ್ಲಿ ವಿವರಿಸುವುದಿಲ್ಲ. ಅವನ ಉತ್ತರವು ಪರೋಕ್ಷವಾಗಿಯೇ ಇರುತ್ತದೆ. ಅವನು ವಾಸ್ತವದಲ್ಲಿ ನಚಿಕೇತನಿಗೆ ಅಧ್ಯಾತ್ಮದ ಸ್ವರೂಪವನ್ನೇ ಕುರಿತು ಕೇಳುತ್ತಾನೆ. ಜೊತೆಗೆ ಉಪನಿಷತ್ತು ಕೊನೆಯಲ್ಲಿ ಹೇಳುವಂತೆ ಅವನು ಆತ್ಮನ ಸ್ವರೂಪವನ್ನು ತಿಳಿದುಕೊಳ್ಳಲು ಬೇಕಾದ ಯೋಗವಿಧಿಯನ್ನೂ ಸಹ ಅವನಿಗೆ ಹೇಳಿ ಕೊಡುತ್ತಾನೆ. ಅದರಿಂದ ಸಾಧನೆಮಾಡಿ ನಚಿಕೇತನು ತಾನು ಕೇಳಿದ ಪ್ರಶ್ನೆಗೆ ತನ್ನಲ್ಲಿಯೇ ಉತ್ತರವನ್ನು ಹುಡುಕಿ ತಿಳಿಯಲು ಸಮರ್ಥನಾದನೆಂದು ಊಹಿಸಬಹುದು. ಆದರೆ ಆರಂಭದಲ್ಲಿ ಅವನು ಆ ರೀತಿ ಮಾಡಲು ಸಮರ್ಥನೇ, ಅದನ್ನು ಸಾಧಿಸಲು ಬೇಕಾದ ಮಾನಸಿಕ ಪಕ್ವತೆ ಅವನಲ್ಲಿರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವಿಲ್ಲ. ಒಂದು ವೇಳೆ ಅವನು ಯಮನು ಕೊಡುವ ಸುಖಸಂಪತ್ತುಗಳಿಗೆ ಮಾರುಹೋಗಿದ್ದರೆ , ಅದರಿಂದಲೇ ತಾನು ಉನ್ನತವಾದ ಜ್ಞಾನಕ್ಕೆ ಅಧಿಕಾರಿಯಲ್ಲ ಎಂಬುದನ್ನು ವ್ಯಕ್ತಪಡಿಸುತ್ತಿದ್ದನು. ಏಕೆಂದರೆ ಜ್ಞಾನವು ಬೇರೆ, ಧನ, ಇಂದ್ರಿಯ ಸುಖ, ಲೋಕದಲ್ಲಿ ಸಂತೋಷವಾಗಿ ಬಾಳಾಟ ಮಾಡುವುದು ಇತ್ಯಾದಿಗಳೇ ಬೇರೆ. ಅವುಗಳಲ್ಲಿ ಒಂದನ್ನು ಅಪೇಕ್ಷಿಸಿದರೆ ಮತ್ತೊಂದನ್ನು ಬಿಡಬೇಕಾಗುತ್ತದೆ. ಅಪಕ್ವಮತಿಗಳು ಎರಡನ್ನೂ ಸೇರಿಸಿಕೊಂಡು ಜೀವನ ಮಾಡಬಹುದು ಎಂದು ಭಾವಿಸುತ್ತಾರೆ. ಆದರೆ ಅವೆರಡೂ ಕೂಡುವುದಿಲ್ಲ ಎಂಬುದನ್ನು ತಿಳಿಯುವುದೇ ಪಕ್ವಮತಿಯ ಲಕ್ಷಣ.

ನಚಿಕೇತನ ಮನಸ್ಸು ಎಷ್ಟು ಪಕ್ವವಾಗಿದೆ ಎಂಬುದಕ್ಕೆ ಅವನು ಯಮನು ತನ್ನ ಮುಂದಿಡುವ ಪ್ರಲೋಭನೆಗಳಿಗೆ ತರುವ ಪ್ರತಿಕ್ರಿಯೆಯೇ ಸಾಕ್ಷಿ. ಅವನು ಯಮನಿಗೆ "ಇವೆಲ್ಲವೂ ನಾಳೆ ಇದ್ದು ಹೋಗುವವು. ಇವು ಎಲ್ಲ ಇಂದ್ರಿಯಗಳ ತೇಜಸ್ಸನ್ನೂ ಜೀರ್ಣಮಾಡಿಬಿಡುತ್ತವೆ. ಎಷ್ಟು ಕಾಲವಿದ್ದರೂ ಈ ಜೀವನವು ಸ್ವಲ್ಪವೇ ಸರಿ.  ನಿನ್ನ ನರ್ತನ, ಗಾನ ಇವೆಲ್ಲವನ್ನೂ ನೀನೇ ಇಟ್ಟುಕೊ. ವಿತ್ತದಿಂದ ಮನುಷ್ಯನು ತೃಪ್ತಿಯನ್ನು ಪಡೆಯಲಾರ. (ಒಂದು ವೇಳೆ ವಿತ್ತವನ್ನು ಬಯಸಿದುದಾದರೆ) ನಿನ್ನಂತಹ ದೇವನನ್ನು ನೋಡಿದ ಮಾತ್ರದಿಂದಲೇ ನಾವು ಸಂಪತ್ತನ್ನು ಪಡೆಯುತ್ತೇವೆ. ನೀನು ಎಷ್ಟು ಕಾಲ ಇಚ್ಚಿಸುತ್ತೀಯೋ ಅಷ್ಟು ಕಾಲ ನಾವು ಜೀವಿಸುವೆವು. (ದೀರ್ಘಾಯಸ್ಸಿನಿಂದ ನಾವು ಪಡೆಯಬೇಕಾದುದು ಏನೂ ಇಲ್ಲ.) ನೀನು ನಾನು ಕೇಳಿದ ವರವನ್ನೇ ಕೊಡು. ಜರೆಯಿಲ್ಲದ ಅಮೃತರಾದ ನಿನ್ನಂತಹ ದೇವತೆಗಳನ್ನು ಹೊಂದಿದಮೇಲೆಯೂ ಸಹ ಜರೆಗೆ ತುತ್ತಾದ, ಈ ಭೂಮಿ
ಯಲ್ಲಿ ವಾಸಮಾಡುವ ಬುದ್ಧಿವಂತನಾದ ಯಾವ ಮನುಷ್ಯನು ತಾನೆ ಆಕರ್ಷಕವಾದ ವರ್ಣ (ರೂಪ), ರತಿ (ಸ್ತ್ರೀ ಸುಖ), ಪ್ರಮೋದ ಇತ್ಯಾದಿಗಳನ್ನು ಮನಸ್ಸಿನಲ್ಲಿ ಚಿಂತಿಸುತ್ತಾ ಅತಿ ದೀರ್ಘವಾದ ಜೀವನದಲ್ಲಿ ರಮಿಸಬಲ್ಲನು ಎಂಬುದನ್ನು ಹೇಳು. ಎಲೆ ಮೃತ್ಯುವೇ, ಯಾವ ವಿಷಯದಲ್ಲಿ ಎಲ್ಲರೂ ನಿಶ್ಚಯವಿಲ್ಲದಿರುವರೋ, ಯಾವುದು ಮುಂದೆ ಮಹತ್ತಾದ ಅರ್ಥವನ್ನು ಹೊಂದಿದೆಯೋ ಅದನ್ನೇ ನನಗೆ ಹೇಳು" ಎಂದು ನುಡಿಯುತ್ತಾನೆ.

ನಚಿಕೇತನ ಮಾತುಗಳಲ್ಲಿ ಪಕ್ವವಾದ ಮನಸ್ಸಿನ ಜೊತೆಗೆ ದೀರ್ಘವಾದ ದೃಷ್ಟಿ ಯ ಇರುತ್ತದೆ. ಸಮೀಪದೃಷ್ಟಿಯುಳ್ಳವರು ತಾತ್ಕಾಲಿಕವಾದ ಸೌಖ್ಯಗಳಿಗೆ ಮಾರುಹೋಗುತ್ತಾರೆ. ಧನ, ರೂಪ, ಇಂದ್ರಿಯಸೌಖ್ಯ, ಪ್ರಮೋದಗಳನ್ನು ಅರಸುತ್ತಾ ಅವುಗಳ ಹಿಂದೆ ಓಡುತ್ತಾರೆ. ಅವುಗಳನ್ನು ಅನುಭವಿಸುತ್ತಿದ್ದಂತೆ ತಮ್ಮ ಶರೀರ ಮತ್ತು ಇಂದ್ರಿಯಗಳು ಜೀರ್ಣವಾಗುವುದನ್ನು ಅವರು ಗಮನಿಸುವುದಿಲ್ಲ. ಆರಂಭದಲ್ಲಿ ಯಾವುದನ್ನು ಪರಮ ಸುಖ ಎಂದು ಭಾವಿಸುತ್ತಾರೆಯೋ ಅದರ ಬಗ್ಗೆ ಬರಬರುತ್ತಾ ಅವರಲ್ಲಿ ಜಿಹಾಸೆ ಮತ್ತು ಜಿಗುಪ್ಸೆಗಳುಂಟಾಗುತ್ತವೆ. ಧನದಿಂದ ಬಹಳ ಸುಖ ಸಿಗುತ್ತದೆಂದು ಭಾವಿಸುವವರೂ ಸಹ  ಬರಬರುತ್ತಾ ಅದರಲ್ಲಿ  ತೃಪ್ತಿ ಇಲ್ಲವೆಂಬುದನ್ನು ಮನಗಾಣುತ್ತಾರೆ. ಯಮನೇನೋ ನಚಿಕೇತನಿಗೆ ಚಿರಂಜೀವಿತ್ವವನ್ನೂ ಮತ್ತು ಇಂದ್ರಿಯ ಸುಖಗಳಿಗೆ ಬೇಕಾದ ಧನ, ಸ್ತ್ರೀಯರು ಮುಂತಾದುವುಗಳನ್ನೂ ಕೊಡುವುದಾಗಿ ವಾಗ್ದಾನಮಾಡುತ್ತಾನೆ. ಆದರೆ ಅನಂತ ಕಾಲದವರೆಗೆ ಅವುಗಳನ್ನು ಅನುಭವಿಸುತ್ತಾ ರಮಿಸುವುದಕ್ಕಾಗುತ್ತದೆಯೇ ಎಂಬ ಪ್ರಶ್ನೆ ನಚಿಕೇತನಲ್ಲಿ ಏಳುತ್ತದೆ. ಮನುಷ್ಯನು "ಸಾಂಪರಾಯ" ಅಥವಾ ಮುಂದೆ ಬರುವುದರ ಬಗ್ಗೆ ಯೋಚಿಸಬೇಕು. - ತಾನು ಹೇಗೆ ಮುಂದೆ ಉತ್ಕೃಷ್ಟವಾದ ಸ್ಥಿತಿ ಯನ್ನು ಸಂಪಾದಿಸಬಹುದು ಎಂಬುದನ್ನು ಕುರಿತು ಚಿಂತಿಸಬೇಕು, ಆದುದರಿಂದ ನಚಿಕೇತನು ಯಮನು ಕೊಡುವುದಾಗಿ ಹೇಳುವ ಸೌಖ್ಯ ಇತ್ಯಾದಿಗಳನ್ನು ತಿರಸ್ಕರಿಸುತ್ತಾನೆ. ಅವುಗಳ ಸ್ವಭಾವದ ಬಗ್ಗೆ ಯೋಚಿಸಿ ಅವು ನಿಸ್ಸಾರವೆಂಬುದನ್ನು ಮನಗಂಡು ಅವನು ಅವುಗಳನ್ನು ತ್ಯಾಗಮಾಡುತ್ತಾನೆ. ಜೊತೆಗೆ ಅವನ ಅಂತಃಕರಣವು ಜ್ಞಾನದಲ್ಲಿ ಮಾತ್ರ ಶಾಶ್ವತವಾದ ಅವಲಂಬನೆ ಇರುತ್ತದೆ ಎಂಬುದನ್ನು ಅವನಿಗೆ ನುಡಿಯುತ್ತಿರುತ್ತದೆ.

ಲೋಕದಲ್ಲಿ ಇಂದ್ರಿಯಾದಿಗಳ ಸೌಖ್ಯವು ನಿಸ್ಸಾರವೆಂಬುದು ಅದನ್ನು ಬಹುಕಾಲ ಅನುಭವಿಸಿದ ನಂತರ ಮನದಟ್ಟಾಗುತ್ತದೆ. ಜೀವನವನ್ನು ಆರಂಭಿಸಿರುವ ಬಾಲಕನಲ್ಲಿ ಅಂತಹ ಮನಃಪಕ್ವತೆಯು ಬಹಳ ವಿರಳ. ನಚಿಕೇತನಲ್ಲಿ ಅಂತಹ ವೈರಾಗ್ಯ [ರಾಗವಿಲ್ಲದಿರುವಿಕೆಯು]ವು ಅತಿಶಯವಾದ ರೀತಿಯಲ್ಲಿ ಪ್ರಕಟವಾಗುವುದನ್ನು ನೋಡುತ್ತೇವೆ. ಆದುದರಿಂದ ಅವನು ಜ್ಞಾನದ ಜಾಗದಲ್ಲಿ ಬೇರೇನನ್ನೂ ತೆಗೆದುಕೊಳ್ಳಲು ಒಪ್ಪುವುದಿಲ್ಲ.

ನಚಿಕೇತನೇನೋ ದೊಡ್ಡ ಪ್ರಶ್ನೆಯನ್ನು ಕೇಳಿಬಿಡುತ್ತಾನೆ. ಆದರೆ ಅದಕ್ಕೆ ಉತ್ತರ ಕೊಟ್ಟರೆ ಅದನ್ನು ತೆಗೆದುಕೊಳ್ಳಲು ಅವನ ಬುದ್ಧಿಯು ಸರಿಯಾದ ಪಾಕವಾಗಿದೆಯೇ ಎಂಬುದು ಯಮನ ಸಮಸ್ಯೆ. ಆದುದರಿಂದ ಪ್ರಲೋಭನೆಗಿಂತ ಅಧಿಕವಾಗಿ ಅವನು ನಚಿಕೇತನ ಮನಸ್ಸು ಪಕ್ವವಾಗಿದೆಯೋ ಅಥವಾ ಅಪರಿಪಕ್ವವಾಗಿದೆಯೇ, ಅದರಲ್ಲಿ ಗಹನವಾದ ಸತ್ಯವನ್ನು ಅರ್ಥ ಮಾಡಿಕೊಳ್ಳುವ ಧರ್ಮವಿದೆಯೇ ಎಂಬುದನ್ನು ಪರೀಕ್ಷಿಸಲು ಲೋಕಸಾಮಾನ್ಯರ ಮನಸ್ಸನ್ನು ಸೂರೆಮಾಡುವ ಧನ, ಭೂಮಿ, ನೃತ್ಯ, ಗೀತ, ಸ್ತ್ರೀಯರು ಮುಂತಾದುವುಗಳನ್ನು ಅವನಿಗೆ ಕೊಡುವುದಾಗಿ ಹೇಳುತ್ತಾನೆ.

ನಚಿಕೇತನಾಡುವ ಮಾತುಗಳಿಂದ ಅವನಿಗೆ ಅವನು ಬ್ರಹ್ಮವಿದ್ಯೆಗೆ ಯೋಗ್ಯನಾದ ಅಧಿಕಾರಿ ಎಂಬುದು ಖಚಿತವಾಗುತ್ತದೆ. ಅವುಗಳಿಂದ ಅವನು ತುಂಬ ತುಷ್ಟನಾಗುತ್ತಾನೆ. "ನೀನು ಪ್ರಿಯವಾದ ವಸ್ತುಗಳನ್ನು ಮತ್ತು ಪ್ರಿಯವಾದ ಕಾಮಗಳನ್ನು ಸರಿಯಾಗಿ ಯೋಚಿಸಿ ನಿರಾಕರಿಸಿದೆ. ಯಾವುದರಲ್ಲಿ ಬಹಳ ಜನರು ಮುಳುಗಿ ಹೋಗುತ್ತಾರೆಯೋ ಅಂತಹ ಐಶ್ವರ್ಯ ರೂಪವಾದ ಮಾಲೆಯನ್ನು ನೀನು ಬೇಡವೆಂದೆ. ಬುದ್ಧಿ ಬೆಳೆಯದ ಬಾಲನಿಗೆ, ತಪ್ಪುದಾರಿ ಹಿಡಿದವನಿಗೆ, ಹಣದ ಮೋಹದಿಂದ ಬುದ್ಧಿ ಕೆಟ್ಟವನಿಗೆ ಮುಂದೆಬರುವುದು (ಸಾಂಪರಾಯ) ತಿಳಿಯುವುದಿಲ್ಲ. ಈ ಲೋಕವೇ ಎಲ್ಲವೂ, ಬೇರೆ ಲೋಕವಿಲ್ಲ ಎಂದು ತಿಳಿಯುವನು ಪುನಃ ಪುನಃ ನನ್ನ ವಶಕ್ಕೆ ಬರುತ್ತಾನೆ. ನೀನು ಧೀರ, ಧೃತಿವಂತ, ನಿನ್ನನ್ನು ಕಾಮಗಳು ಪ್ರಲೋಭನೆ ಮಾಡಲು ಸಮರ್ಥವಾಗಲಿಲ್ಲ. ನೀನು ತಾನೆ ವಿದ್ಯೆಗೆ ನಿಜವಾಗಿಯೂ ಅರ್ಹ ಎಂದು ನಾನು ತಿಳಿಯುತ್ತೇನೆ" ಮುಂತಾದಾಗಿ ಅವನು ಅವನನ್ನು ಹೊಗಳಿ ಅವನಿಗೆ ಆತ್ಮನ ಸ್ವರೂಪವನ್ನು ಮತ್ತು ಆ ಆತ್ಮಜ್ಞಾನವನ್ನು ಹೇಗೆ ಸಾಧಿಸುವುದು ಎಂಬ ಉಪಾಯವನ್ನು ಹೇಳಿಕೊಡುತ್ತಾನೆ.

ಯಮನು ಬ್ರಹ್ಮ ವಿದ್ಯೆಯ ವಿಷಯದಲ್ಲಿ ಬರಿ ಮಾತು (ಥಿಯರಿ]ಗಳನ್ನೇ ಹೇಳಿ ಮುಗಿಸುವವನಾಗಿದ್ದ ಪಕ್ಷದಲ್ಲಿ, ಅವನು ಮಾಡುವ ಪರೀಕ್ಷೆ ಮತ್ತು ತೋರಿಸುವ ಪ್ರಲೋಭನೆಗಳು ಅವಶ್ಯಕವಿರುತ್ತಿರಲಿಲ್ಲ. ಬ್ರಹ್ಮವಿದ್ಯೆಯು ಮಾತಿನ ವಿಷಯವಲ್ಲ. ಮಾತಿನವಿಷಯವೇ ಆಗಿದ್ದರೆ ಯಾರು ಬೇಕಾದರೂ ಅದನ್ನು ಕಲಿತು, ನಾವೂ ಬ್ರಹ್ಮವಿದರು ಎಂದು ಹೇಳಬಹುದು. ಆದರೆ ಅದು ಪರಿಪಕ್ವಮತಿಗಳಾದವರಿಗೆ ಮಾತ್ರ ತಿಳಿಯುವ ವಿಷಯ. ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳು ನಿಜವಾಗಿಯೂ
ತಿಳಿಯಾಗಿ ಆತ್ಮಜ್ಞಾನದ, ಹಿರಿಮೆಯಿಂದ ಯಾರು ಅಭಿಭೂತರಾಗಿ ಬಿಡುತ್ತಾರೆಯೋ ಅವರು ತಾನೆ ಅದಕ್ಕೆ ಅಧಿಕಾರಿಗಳು. ಮುಂಡಕೋಪನಿಷತ್ತಿನಲ್ಲಿ

ಕಾಮಾನ್ಯಃ ಕಾಮಯತೇ ಮನ್ಯಮಾನಃ ಸಕಾಮಭಿರ್ಜಾಯತೇ ತತ್ರ ತತ್ರ|
ಪರ್ಯಾಪ್ತಕಾಮಸ್ಯ ಕೃತಾತ್ಮನಸ್ತು ಇಹೈವ ಸರ್ವೇ ಪ್ರವಿಲೀಯಂತಿಕಾಮಾಃ||

(ಯಾವನು ಕಾಮಗಳೇ ಎಲ್ಲವೂ ಎಂದು ಭಾವಿಸಿ ಅವುಗಳನ್ನು ಬಯಸುತ್ತಾನೆಯೋ, ಅವನು ಕಾಮಗಳಿಂದ ತನ್ನ ಮನಸ್ಸಿನಲ್ಲಿರುವ ಕಾಮಗಳಿಗೆ ಅನುಸಾರವಾಗಿ ಅಲ್ಲಿ ಅಲ್ಲಿ ಹುಟ್ಟುತ್ತಾನೆ. ಯಾವನು ಪೂರ್ಣ ಕಾಮನೂ ಮತ್ತು ಕೃತಾತ್ಮನೂ ಆಗಿರುವನೋ ಅವನ ಕಾಮಗಳೆಲ್ಲವೂ ಇಲ್ಲಿರುವಾಗಲೇ ಪ್ರಲಯಹೊಂದಿಬಿಡುತ್ತವೆ) ಎಂಬ ಮಾತನ್ನು ಓದುತ್ತೇವೆ. ನಚಿಕೇತನಲ್ಲಿ ಅಂತಹ ಸ್ಥಿತಿಯು ಜನ್ಮತಃ ಸಿದ್ಧಿಸಿರುವುದನ್ನು ನೋಡುತ್ತೇವೆ. ಯಮನು ಅವನನ್ನು ಪ್ರಲೋಭನೆ ಮಾಡುವ ಕಾಮಗಳಾವುವೂ ಅವನ ಮನಸ್ಸಿನ ಮೇಲೆ ಯಾವ ಪ್ರಭಾವವನ್ನು ಬೀರುವುದಿಲ್ಲ.ಅವನು ಆತ್ಮಕಾಮನಾಗಿಯೇ ಉಳಿಯುತ್ತಾನೆ.

ಅಧಿಕಾರಿಯೇ ಎಂಬುದನ್ನು ನೋಡಿ ವಿದ್ಯೆ, ಕಲೆ ಮುಂತಾದವುಗಳನ್ನು ಹೇಳಿಕೊಡಬೇಕು ಎಂಬ ಪರಂಪರೆಯು ನಮ್ಮ ದೇಶದಲ್ಲಿ ಬಹಳ ಹಿಂದಿನಿಂದ ಬಂದಿರುತ್ತದೆ. ಇಂದು ಆ ಪದವು ಎಲ್ಲೆಲ್ಲಿಯೂ ತೀವ್ರವಾಗಿ ವಿರೋಧಿಸಲ್ಪಡುತ್ತದೆ. ಎಲ್ಲರೂ ಎಲ್ಲಕ್ಕೂ ಅಧಿಕಾರಿಗಳು ಎಂಬುದು ಆಧುನಿಕ ಕಾಲದ ವಾದ. ಅಲ್ಲಿಯೂ ತುಂಬ ತಾರತಮ್ಯಗಳಿದ್ದರೂ ಲೌಕಿಕವಾದ ಶಿಕ್ಷಣಗಳಿಗೆ ಅದನ್ನು ಸ್ವಲ್ಪ ಮಟ್ಟಿಗೆ ಅನ್ವಯಿಸಬಹುದು. ಎಲ್ಲರಿಗೂ ಅನ್ವಯಿಸುವಂತೆ ಶಿಕ್ಷಣದ ಮಟ್ಟವನ್ನು ಕೆಳಗಿಳಿಸಿ, ನೋಡಿ ನಾವು ಹೇಳಲಿಲ್ಲವೇ, ಎಲ್ಲರೂ ಎಲ್ಲಕ್ಕೂ ಅಧಿಕಾರಿಗಳು ಎಂದು ನುಡಿಯಬಹುದು. ಅದು ಬೇರೆ ವಿಷಯ. ಆದರೆ ವಿದ್ಯೆಗೆ ಒಂದು ಗಾಂಭೀರ್ಯವಿರುತ್ತದೆ. ಅದರದೇ ಆದ ಔನ್ನತ್ಯವಿರುತ್ತದೆ. ಅದನ್ನು ಪೂರ್ಣವಾಗಿ ಸಾಧಿಸಿದಾಗ ತಾನೆ ವಿದ್ಯೆಯಿಂದ ಪೂರ್ಣವಾದ ಪ್ರಯೋಜನವುಂಟಾಗುತ್ತದೆ. ಅನಧಿಕಾರಿಗಳಿಗೆ ಅಲ್ಲಿ "ಪ್ರವೇಶವಿಲ್ಲ". ಪ್ರಪಂಚವೆಲ್ಲವೂ ಒಟ್ಟಿಗೆ ಸೇರಿದರೂ ಅನಧಿಕಾರಿಗಳಿಗೆ ಅಲ್ಲಿ ಪ್ರವೇಶವುಂಟುಮಾಡಿಸಲಾಗುವುದಿಲ್ಲ. ಬ್ರಹ್ಮವಿದ್ಯೆಯ ವಿಷಯದಲ್ಲಂತೂ ಅದಕ್ಕೆ ಅಪವಾದವೇ ಇರುವುದಿಲ್ಲ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ :09 ಸಂಪುಟ:10, 1988 ಜುಲೈ ತಿಂಗಳಲ್ಲಿ ಪ್ರಕಟವಾಗಿದೆ. 

Saturday, March 20, 2021

ಕಾಂತಾಸಮ್ಮಿತೆಯಾಗಿ ಕಾವ್ಯಗಳು (Kantasam Miteyagi kavyagalu)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)


ಮಾನವನ ಜೀವನವು ಅಮೂಲ್ಯವಾದುದು. ಭಗವತ್ಸಾಕ್ಷಾತ್ಕಾರವೇ ಮಾನವಜೀವನದ ಗುರಿಯಾಗಿದೆ.  ಈ ಜಗತ್ತಿನಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮಾನವನು ತನ್ನ ಏಳಿಗೆಯನ್ನು ಸಾಧಿಸಬೇಕು. ಜಗತ್ತಿನಲ್ಲಿ ಮಾನವನಿಗೆ ಹಿತವನ್ನುಂಟುಮಾಡುವ ಮತ್ತು ಪ್ರಿಯವನ್ನುಂಟುಮಾಡುವ ವಸ್ತುಗಳಿವೆ. ಪ್ರಿಯವನ್ನುಂಟುಮಾಡುವ ವಸ್ತುಗಳಿಂದ ತಾತ್ಕಾಲಿಕವಾದ ಇಂದ್ರಿಯತೃಪ್ತಿಯು ಉಂಟಾಗಬಹುದು.  ಆದರೆ, ಹಿತವನ್ನುಂಟುಮಾಡುವ ವಸ್ತುಗಳಿಂದ ಮೊದಮೊದಲು ಕಷ್ಟವಾದರೂ, ಆನಂತರ ಶಾಶ್ವತವಾದ ಸುಖವೂ ಮತ್ತು ಪಾರಮಾರ್ಥಿಕವಾದ ಆತ್ಮದರ್ಶನದ ಲಾಭವೂ ಉಂಟಾಗುವುದೆಂಬುದು ಜ್ಞಾನಿಗಳ ಅನುಭವದ ಮಾತಾಗಿದೆ. ಆದ್ದರಿಂದ, ತನಗೆ ಅತ್ಯಂತಪ್ರಿಯವಾದರೂ ಹಿತವನ್ನುಂಟುಮಾಡುವುದನ್ನು ಆರಿಸಿಕೊಂಡು ಜೀವನದಲ್ಲಿ ಸಫಲತೆಯನ್ನು ಪಡೆಯುವುದು ಬುದ್ಧಿವಂತನ ಲಕ್ಷಣ.


ಹಾಗೆಯೇ ವಾಙ್ಮಯಪ್ರಪಂಚದಲ್ಲಿಯೂ ಕೂಡ 'ಹಿತಂ ಮನೋಹಾರಿ ಚ ದುರ್ಲಭಂ ವಚಃ' ಎಂಬ ಮಹಾಕವಿ ಭಾರವಿಯ ಮಾತಿನಂತೆ,  ಪ್ರಿಯವೂ ಮತ್ತು ಹಿತವೂ ಆದ ಮಾತುಗಳು ಸಿಗುವುದು ದುರ್ಲಭವೇ ಸರಿ. ಪ್ರಿಯವಾದದ್ದೆಲ್ಲವೂ ಹಿತವಲ್ಲ.  ಹಾಗೆಯೇ ಹಿತವಾದದ್ದೆಲ್ಲವೂ ಪ್ರಿಯವಾಗಿರಬೇಕೆಂಬ ನಿಯಮವೂ ಇಲ್ಲ. ಪ್ರಿಯವಾದ ಮಾತಿಗೆ ತಾತ್ಕಾಲಿಕವಾದ ಇಂದ್ರಿಯಸುಖವನ್ನು ಉಂಟುಮಾಡುವುದರಲ್ಲಷ್ಟೇ ತಾತ್ಪರ್ಯ. ಆದರೆ, ಹಿತವಾದ ಮಾತೆಂಬುದು ಶ್ರವಣೇಂದ್ರಿಯಕ್ಕೆ ಪ್ರಿಯವಾಗುವುದಿಲ್ಲವಾದರೂ, ಶಾಶ್ವತವಾದ  ಆತ್ಮಹಿತವನ್ನು ಸಾಧಿಸುತ್ತದೆ ಮತ್ತು ಪರಮಾತ್ಮನ ದರ್ಶನವನ್ನು ಉಂಟುಮಾಡುವುದೆಂಬುದು ತಿಳಿದಿರುವ ವಿಷಯವೇ.  ಆದ್ದರಿಂದ 'ಭಗವತ್ಸಾಕ್ಷಾತ್ಕಾರ' ಅಥವಾ 'ಪರಮಾತ್ಮಸಾಧನೆ'ಯೇ 'ಹಿತ'ವೆಂಬುದರ ಪರಮಾರ್ಥ.  ಇದನ್ನೇ ಉಪನಿಷತ್ತು 'ಶ್ರೇಯಸ್' ಎಂಬ ಪದದಿಂದ ವ್ಯವಹರಿಸುತ್ತದೆ. ಹಾಗಾಗಿ, ಯಾವ ವಾಙ್ಮಯವು ಈ ರೀತಿಯಾದ ಪರಮಾತ್ಮಸಾಧಕವಾದ 'ಹಿತ'ದಿಂದ ಕೂಡಿರುತ್ತದೆಯೋ ಅದೇ 'ಸಾಹಿತ್ಯ'ವೆನಿಸುತ್ತದೆ.  ಆದ್ದರಿಂದಲೇ 'ಸಹಿತಸ್ಯ ಭಾವಃ ಸಾಹಿತ್ಯಮ್' ಎಂದು  'ಸಾಹಿತ್ಯ' ಪದವನ್ನು ಶ್ರೀರಂಗಮಹಾಗುರುಗಳು ಈ ಮೇಲಿನ ಪೀಠಿಕೆಯನ್ನು ಕೊಟ್ಟು ವಿವರಿಸುತ್ತಿದ್ದರು ಎಂಬ ಮಾತನ್ನು ಹೃತ್ಪೂರ್ವಕವಾದ ಕೃತಜ್ಞತಾಭಾವದಿಂದ ಸ್ಮರಿಸಿಕೊಳ್ಳುತ್ತೇನೆ.  


ಈ ರೀತಿಯಾದ ಸಾಹಿತ್ಯವು 'ವೈದಿಕಸಾಹಿತ್ಯ' ಮತ್ತು 'ಲೌಕಿಕಸಾಹಿತ್ಯ'ವೆಂದು ಎರಡು ಬಗೆ. ಹಾಗಲ್ಲದೆ, ಸಾಹಿತ್ಯವನ್ನು ಪ್ರಭುಸಮ್ಮಿತ, ಮಿತ್ರಸಮ್ಮಿತ ಮತ್ತು ಕಾಂತಾಸಮ್ಮಿತವೆಂದು ಮೂರು ಬಗೆಯಾಗಿಯೂ ವಿಂಗಡಿಸಿರುವುದನ್ನು ಕಾಣುತ್ತೇವೆ. 'ಸಮ್ಮಿತ' ವೆಂಬ ಪದವು 'ಸಮ್' ಎಂಬ ಉಪಸರ್ಗವನ್ನು ಹೊಂದಿರುವ 'ಮಾಙ್- ಮಾನೇ' ಎಂಬ ಧಾತುವು 'ಕ್ತ' ಎಂಬ ಪ್ರತ್ಯಯದಿಂದ ಕೂಡಿರುವ ಪದವಾಗಿ, 'ಚೆನ್ನಾಗಿ ಅಳತೆ ಮಾಡಿದ್ದು' ಎಂಬ ಅರ್ಥವನ್ನು ಹೊಂದಿರುತ್ತದೆ. ಶ್ರೀರಂಗಮಹಾಗುರುವು 'ಸಮ್ಮಿತ' ಎಂಬ  ಪದವನ್ನು ವಿವರಿಸುವಾಗ 'ಸಕ್ಕರೆ ಪೊಂಗಲ್' ಅಥವಾ 'ಪುಳಿಯೋಗರೆ'ಯನ್ನು ತಯಾರಿಸುವ ಉದಾಹರಣೆಯನ್ನು ಕೊಡುತ್ತಿದ್ದರು.  ಪಾಚಕನು ಸಕ್ಕರೆ ಪೊಂಗಲ್ಗೆ ಬೇಕಾಗುವ ಅಕ್ಕಿ, ಹಾಲು, ಸಕ್ಕರೆ, ಗೋಡಂಬಿ, ದ್ರಾಕ್ಷಿ, ಪಚ್ಚಕರ್ಪೂರ, ಏಲಕ್ಕಿ, ಲವಂಗ, ಕೇಸರಿ ಮುಂತಾದ ಪದಾರ್ಥಗಳನ್ನು 'ಎಷ್ಟು ಬೇಕೋ ಅಷ್ಟು' 'ಸಮ'ವಾಗಿ ಎಂದರೆ, proportionate ಆಗಿ, 'ಸರಿಯಾದ ಅಳತೆಯಲ್ಲಿ' ಎಂಬ ಅರ್ಥದಲ್ಲಿ ಬಳಸಿದರೆ ಒಳ್ಳೆಯ ಸಕ್ಕರೆ ಪೊಂಗಲ್ ಆಗುತ್ತದೆ.  ಹಾಗೆಯೇ, ಪುಳಿಯೋಗರೆ ಮಾಡುವವರು ಅದಕ್ಕೆ ಬೇಕಾದ ಅಕ್ಕಿ, ಬೇಳೆ, ಎಣ್ಣೆ, ಕಡ್ಲೆಕಾಯಿ, ಮೆಣಸಿನಕಾಯಿ ಮುಂತಾದ ಪದಾರ್ಥಗಳನ್ನು proportionate ಆಗಿ ಬಳಸಿ ಮಾಡಿದಾಗ, ರುಚಿಕರವಾದ ಪುಳಿಯೋಗರೆ ತಯಾರಾಗುತ್ತದೆ.  ಈ ರೀತಿಯಾದ ಆಹಾರವು ಇಂದ್ರಿಯಗಳ ತೃಪ್ತಿಯನ್ನಷ್ಟೇ ಅಲ್ಲದೆ, ಮನಸ್ಸಂತೋಷವನ್ನೂ, ಆತ್ಮತೃಪ್ತಿಯನ್ನೂ ಉಂಟುಮಾಡುತ್ತದೆ.

ಈ ನಿಟ್ಟಿನಲ್ಲಿ ವಿಚಾರಿಸುವುದಾದರೆ, ವೇದಗಳೆಲ್ಲವೂ ಮಹಾರಾಜನ ಶಾಸನದಂತೆ, ಸುಗ್ರೀವಾಜ್ಞೆಯಂತೆ, ಅತ್ಯಂತ ಬಿಗಿಯಾದ ವಾಗರ್ಥಗಳಿಂದ ಕೂಡಿರುವುದಾಗಿವೆ. ಹೇಗೆ ಮಹಾರಾಜನ ಆಜ್ಞೆಯನ್ನು ಮರುಮಾತಿಲ್ಲದೆ ಪರಿಪಾಲಿಸಲಾಗುವುದೋ, ಹಾಗಿಲ್ಲದಿದ್ದರೆ 'ತಲೆದಂಡ' ತೆರಬೇಕಾಗುವುದೋ, ಹಾಗೆಯೇ ವೇದಗಳಲ್ಲಿರುವ ಉಪದೇಶಗಳನ್ನು, ಅನುಶಾಸನಗಳನ್ನು ಕಟ್ಟುನಿಟ್ಟಿನಿಂದ ಪರಿಪಾಲಿಸಬೇಕಾಗಿರುವುದರಿಂದ ವೇದಗಳನ್ನು 'ಪ್ರಭುಸಮ್ಮಿತ'ಗಳೆಂದು ಕರೆದಿದ್ದಾರೆ.


ಪ್ರಭುವಿನ ಶಾಸನವು ಎಷ್ಟೇ ಹಿತದಿಂದ ಕೂಡಿದ್ದರೂ ಅದನ್ನನುಸರಿಸಿ, ಅದರಂತೆ ಮನಃಪೂರ್ವಕವಾಗಿ ವ್ಯವಹರಿಸುವುದು ಎಲ್ಲ ಸಂದರ್ಭಗಳಲ್ಲೂ ಎಲ್ಲರಿಗೂ ಹಿಡಿಸಲಾರದಷ್ಟೆ. ಅದರಲ್ಲಿಯೂ ಹದಿಹರೆಯದಲ್ಲಿರುವವರಿಗೆ ಪ್ರಭುಸಮ್ಮಿತೆಯಂತಿರುವ  ತಂದೆತಾಯಿಯರ ಮಾತಿಗಿಂತ ಮಿತ್ರರ ಮಾತಿನಲ್ಲಿ ಅಪಾರ ನಂಬಿಕೆ. ಇದನ್ನು 'peer pressure' ಎಂಬುದಾಗಿಯೂ ಹೇಳಬಹುದು. ಅಂತಹ ಸಮಯದಲ್ಲಿ ಒಳ್ಳೆಯ ಮಿತ್ರನು ತನ್ನ ಮಾತುಗಳಿಂದ ತನ್ನ ಸ್ನೇಹಿತನನ್ನು ರಕ್ಷಿಸುತ್ತಾನೆ.  ಭರ್ತೃಹರಿಯು ತನ್ನ ನೀತಿಶತಕದಲ್ಲಿ 'ಯಾವನು ಪಾಪಗಳಿಂದ ನಿವಾರಿಸುತ್ತಾನೋ, ಹಿತವಾದುದರೊಡನೆ ಕೂಡಿಸುತ್ತಾನೋ, ರಹಸ್ಯವನ್ನು ಕಾಪಿಡುತ್ತಾನೋ, ಸದ್ಗುಣಗಳನ್ನು ಪ್ರಚಾರಪಡಿಸುತ್ತಾನೋ ಮತ್ತು ಆಪತ್ಕಾಲದಲ್ಲಿ ಬಿಡದೇ ಸಂರಕ್ಷಿಸುತ್ತಾನೋ, ಅವನೇ 'ಸನ್ಮಿತ್ರ'ನೆಂದು ಸನ್ಮಿತ್ರನ ಲಕ್ಷಣಗಳನ್ನು ತಿಳಿಸಿದ್ದಾನೆ. ಅದರಂತೆ, ಬಹುಜಾಣ್ಮೆಯಿಂದ, ಸಮಯವರಿತು, ಒಳ್ಳೆಯ ಮಾತುಗಳನ್ನಾಡಿ, ಸ್ನೇಹಿತನನ್ನು ಸನ್ಮಾರ್ಗಕ್ಕೆ ತರುವ, ಹಿತದೊಡನೆ ಕೂಡಿಸುವ ಕೆಲಸವನ್ನು ಸಾಧಿಸುವವನು ಸನ್ಮಿತ್ರ.  ಈ ದಿಸೆಯಲ್ಲಿ ಪುರಾಣಾದಿಗಳು 'ಮಿತ್ರ'ನಂತೆ ನಿದರ್ಶನಗಳ ಮೂಲಕ, ಕಥೆಗಳ ಮೂಲಕ ಮತ್ತು ಉಪದೇಶಗಳ ಮೂಲಕ ವಾಚಕರನ್ನು ಸನ್ಮಾರ್ಗದಲ್ಲಿ ನಡೆಸುತ್ತಾ ಬರುತ್ತಿವೆ.  ಆದ್ದರಿಂದಲೇ ಪುರಾಣಗಳನ್ನು 'ಮಿತ್ರಸಮ್ಮಿತ' ಎಂದು ಕರೆಯುತ್ತಾರೆ.


ಅಂತೆಯೇ, ಕಾವ್ಯಗಳನ್ನು 'ಕಾಂತಾಸಮ್ಮಿತ'ವೆಂದು ಕರೆಯುತ್ತಾರೆ. 'ಕಾಲಪ್ರಯುಕ್ತಾ ಖಲು ಕಾಲವಿದ್ಭಿಃ ವಿಜ್ಞಾಪನಾ ಭರ್ತೃಷು ಸಿದ್ದಿಮೇತಿ', ಎಂದರೆ, 'ಸಕಾಲದಲ್ಲಿ ಸಮಯವರಿತು ಪತಿಯರಲ್ಲಿ ಪ್ರಯೋಗಿಸಲ್ಪಟ್ಟ ವಿಜ್ಞಾಪನೆಗಳು ಸಿದ್ಧಿಯನ್ನು ಹೊಂದುತ್ತವೆ', ಎಂಬ ಮಾತಿನಂತೆ, ಪತಿಯ ಮನವನ್ನು ಅರಿತಿರುವ ಉತ್ತಮಳಾದ ಸತಿಯು ಹೇಗೆ ಉಪಾಯವಾಗಿ ಸಮಯವನ್ನು ನೋಡಿಕೊಂಡು, ತನ್ನ ಹಾವಭಾವಗಳಿಂದ, ಶೃಂಗಾರಾದಿ ರಸಗಳನ್ನು ಸಕಾಲದಲ್ಲಿ ಬಳಸುತ್ತಾ, ಪತಿಯ ಮನಸ್ಸನ್ನು ಒಲಿಸಿಕೊಂಡು ತನ್ನ ಕಾರ್ಯವನ್ನು ಸಾಧಿಸಿಕೊಂಡು ತನ್ನ ಕುಟುಂಬದ ಏಳಿಗೆಗೆ ಕಾರಣಳಾಗುತ್ತಾಳೆ ಎಂಬುದು ಸರ್ವವಿದಿತವಾಗಿರುವ  ವಿಷಯವಾಗಿದೆ. ಹಾಗೆಯೇ, ಸಕಲಜನತೆಯ ಶ್ರೇಯಸ್ಸನ್ನು ಬಯಸುವ ಕಾವ್ಯಗಳೂ ಕೂಡ ಸಮಯೋಚಿತವಾಗಿ ಉಪಮಾದಿ-ಅಲಂಕಾರಗಳನ್ನೂ, ಶೃಂಗಾರಾದಿ ರಸಗಳನ್ನೂ, ಅನುಷ್ಟುಬಾದಿ ಛಂದಸ್ಸುಗಳನ್ನೂ, ಕೆಲವು ವೇಳೆ ದೀರ್ಘವಾದ ಸಮಾಸಯುಕ್ತಪದಗಳನ್ನೂ, ಕೆಲವು ವೇಳೆ ಚಿಕ್ಕದಾದ ವಾಕ್ಯಗಳನ್ನೂ, ಬಳಸಿಕೊಂಡು ಕಾಂತೆಯಂತೆ ವಿವಿಧರಸಗಳಲ್ಲಿ ಸಹೃದಯನನ್ನು ಮುಳುಗಿಸುತ್ತಾ ಇಂದ್ರಿಯತೃಪ್ತಿಯನ್ನು ಉಂಟುಮಾಡುವುದಲ್ಲದೇ, ವಾಚಕನನ್ನು ಸನ್ಮಾರ್ಗದಲ್ಲಿ ನಡೆಸುತ್ತಾ,  ಮನಸ್ಸಂತೋಷವನ್ನೂ, ಆತ್ಮಕ್ಕೆ ಆನಂದವನ್ನೂ ಉಂಟುಮಾಡುತ್ತವೆ.  ವಾಲ್ಮೀಕಿ ಮಹರ್ಷಿಗಳ ಆದಿಕಾವ್ಯ ರಾಮಾಯಣದಲ್ಲಿಯೂ, ವ್ಯಾಸ ಮಹರ್ಷಿಗಳ ಮಹಾಭಾರತದಲ್ಲಿಯೂ, ಕಾಳಿದಾಸಾದಿಮಹಾಕವಿಗಳ ರಘುವಂಶ, ಕುಮಾರಸಂಭವ, ಅಭಿಜ್ಞಾನಶಾಕುಂತಲವೇ ಮುಂತಾದ ಕಾವ್ಯಗಳಲ್ಲಿ ಇದು ಹಾಸುಹೊಕ್ಕಾಗಿರುವುದನ್ನು ಕಾಣಬಹುದಾಗಿದೆ.

ಸೂಚನೆ : 20/3/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಉಪಸಂಹಾರ (Upasanhara)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ಅಷ್ಟಾಂಗ ಯೋಗದ ಅಂಗೋಪಾಂಗಗಳೆಲ್ಲವೂ ಪರಮಲಕ್ಷ್ಯವಾದ ಅಸಂಪ್ರಜ್ಞಾತ ಸಮಾಧಿಯನ್ನು ತಲಪುವುದಕ್ಕೆ ಮೆಟ್ಟಿಲಾಗಿರುವುದಷ್ಟೇ ಅಲ್ಲದೇ ಯೋಗಸಾಧಕರಲ್ಲದವರಿಗೂ ಉತ್ತಮ ಲೌಕಿಕ ಜೀವನ ನಡೆಸುವುದಕ್ಕೆ ಸಾಧನವಾಗಿರುತ್ತದೆ. ಲೇಖನಮಾಲೆಯುದ್ದಕ್ಕೂ ನಿತ್ಯಜೀವನದಲ್ಲಿ ಯೋಗಾಂಗಗಳು ಅಂತರ್ಗತವಾಗಿರುವುದನ್ನು ಗಮನಿಸಿಕೊಂಡೇ ಬಂದಿದ್ದೇವೆ. ಅಹಿಂಸೆ, ಸತ್ಯ, ಶೌಚ, ಸಂತೋಷಾದಿ ಯಮ, ನಿಯಮಗಳು ಸಾಮಾಜಿಕ ಚಿಂತನೆಯಲ್ಲಿ ಎದ್ದು ಕಾಣುವ ಮೌಲ್ಯಗಳಾದರೆ ಉಳಿದ ಯಮ, ನಿಯಮಗಳೂ ಸಹ ಸಂಸ್ಕೃತಿಯಲ್ಲಿ ವ್ಯಾಪಿಸಿರುವುದನ್ನು ಸ್ವಲ್ಪ ಒಳಹೊಕ್ಕು ನೋಡಿದರೆ ಗಮನಿಸಬಹುದು.

ಆಸನವು ಶರೀರಕ್ಕೆ ಒಂದೇ ವಿನ್ಯಾಸದಲ್ಲಿರುವ ಸಾಮರ್ಥ್ಯವನ್ನು ತಂದುಕೊಟ್ಟು ಸಮಾಧಿ ಸ್ಥಿತಿಗೆ ಪೋಷಕವಾಗಿದ್ದು, ಅಭ್ಯಾಸಿಗಳಿಗೆ ಉತ್ತಮ ಆರೋಗ್ಯವನ್ನೂ ತಂದುಕೊಡುತ್ತದೆ. ಸಮಾಧಿ ಸ್ಥಿತಿಯಲ್ಲಿ ಉಸಿರಾಟವು ಸ್ಥಗಿತಗೊಂಡು, ಕುಂಭಕವೆನ್ನುವ ಸ್ಥಿತಿಯುಂಟಾಗಿರುತ್ತದೆ. ಪ್ರಾಣಾಯಾಮವು ಉಸಿರಾಟದ ನಿಯಂತ್ರಣದ ಮೂಲಕ ಈ ಕುಂಭಕ ಸ್ಥಿತಿಯನ್ನು ತಲುಪಲು ಪೋಷಕವಾಗಿದ್ದು, ದೈಹಿಕ, ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಪ್ರತ್ಯಾಹಾರವು ಅಂತರಂಗದ ಬಾಗಿಲನ್ನು ತೆರೆಸಿ ಸಾಧಕನು ಒಳಮುಖವಾಗಿ ಸಾಗಿ, ಆತ್ಮಮೂಲವನ್ನು ಮುಟ್ಟಲು ಸಹಕಾರಿಯಾಗಿರುತ್ತದೆ. ಮತ್ತು ಶರೀರ-ಮನಸ್ಸುಗಳಿಗೆ ವಿಶ್ರಾಂತಿಯನ್ನು (relaxation) ತಂದುಕೊಟ್ಟು, ಪುನಶ್ಚೇತನಗೊಳಿಸುತ್ತದೆ. ಧಾರಣೆಯು ಧ್ಯೇಯವಸ್ತುವಿನಲ್ಲಿ ಮನಸ್ಸನ್ನು ನಿಲ್ಲಿಸಿ ಧ್ಯಾನಕ್ಕೆ ಸೋಪಾನವಾಗುತ್ತದೆ. ಧ್ಯೇಯವಸ್ತುವಿನ ಸ್ಮರಣೆಯೊಂದೇ ನಿರಂತರವಾಗಿರುವ ಸ್ಥಿತಿಯು ಧ್ಯಾನವಾದರೆ, ಮುಂದಿನ ಹಂತವಾದ ಸಮಾಧಿ ಸ್ಥಿತಿಯಲ್ಲಿ ಧ್ಯೇಯವಸ್ತುವೂ ಮರೆಯಾಗಿ ಸೃಷ್ಟಿಯಲ್ಲಿ ನಿತ್ಯವಾಗಿ ಬೆಳಗುವ ತತ್ತ್ವಗಳು ಗೋಚರವಾಗುತ್ತವೆ. ಸಮಾಧಿಸ್ಥಿತಿಯ ಹಂತಗಳಲ್ಲಿ ಮೊದಲನೆಯದಾದ ಸಂಪ್ರಜ್ಞಾತ ಸಮಾಧಿಯಲ್ಲಿ ಆತ್ಮ ಜ್ಯೋತಿಯು ನಿವಾತ ದೀಪದಂತೆ ಗೋಚರವಾಗಿ 64 ಕಲೆಗಳ ವಿಕಾಸಕ್ಕೆ ಕಾರಣವಾಗುತ್ತದೆ. ಈ ನೇರದಲ್ಲಿಯೇ ಶ್ರೀರಂಗ ಮಹಾಗುರುಗಳು ಯೋಗವು ಭಾರತೀಯ ಸಂಸ್ಕೃತಿಗೆ ಬೆನ್ನೆಲುಬಾಗಿದೆಯೆನ್ನುವುದನ್ನು ಅನೇಕ ನಿದರ್ಶನಗಳಿಂದ ತೋರಿಸಿಕೊಟ್ಟಿದ್ದಾರೆ.

ಮುಂದಿನ ಹಂತವಾದ ಅಸಂಪ್ರಜ್ಞಾತ ಸಮಾಧಿಯೇ ಯೋಗದ ಅಂತಿಮ ಘಟ್ಟ. ಈ ಸ್ಥಿತಿಯಲ್ಲಿಯೇ ಯೋಗಿಗೆ ಪರಮಾತ್ಮನ ಅಖಂಡ ಜ್ಯೋತೀರೂಪದ ದರ್ಶನವಾಗುತ್ತದೆ ಮತ್ತು ಅವನು ಆ ಜ್ಯೋತಿಯಲ್ಲಿಯೇ ಒಂದಾಗಿ ರಮಿಸಿ ಆನಂದಾತಿರೇಕವನ್ನು ಅನುಭವಿಸುತ್ತಾನೆ.ಭಾರತೀಯ ಸಂಸ್ಕೃತಿಯ ಕೇಂದ್ರಬಿಂದುವೂ, ಪರಮಲಕ್ಷ್ಯವೂ ಆಗಿರುವ ಅಸಂಪ್ರಜ್ಞಾತ ಸಮಾಧಿಯನ್ನು ಹೊಂದಿದಾಗ ಜೀವನವು ಪರಿಪೂರ್ಣವಾಗುತ್ತದೆ. ಯೋಗಕ್ಕೆಪ್ರಭುವಾದ, ಯೋಗೇಶ್ವರನಾದ ಶ್ರೀಕೃಷ್ಣಪರಮಾತ್ಮನ ಅಡಿದಾವರೆಗಳಿಗೆ ಈ ಲೇಖನಮಾಲೆಯನ್ನು ಸಮರ್ಪಿಸುತ್ತೇವೆ.

ಸೂಚನೆ : 20/3/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Friday, March 19, 2021

Forbearance - Characteristic of the Soul

Kannada Article by: Vid. Narasimha Bhat

English Rendering by: M R Bhashyam

Respond to (lekhana@ayvm.in)




Every day as we get up in the morning, we pray to Mother Earth with the sloka “Samudra Vasanê Dêvi …” begging her to forgive us for treading on Her with our feet. The capacity of Mother Earth to pardon is so great.  In a similar way we pray to the Lord after our worship – Sarvāparādhān Kshamasva- kindly forgive all our sins. The Lord can forgive all our sins. We hear the story from MahāBhārata that Lord Krishna forgives one hundred sins of that personification of evil, Sisupāla. The mistakes made by children are tolerated by parents and elders. So, a question arises, what is meant by Kshaanti – Tolerance?

The word Kshānti in Sanskrit has several meanings – pardon, tolerance, counsel, capability, ability etc.  The ability to tolerate the mistakes and offence of others is generally understood as Kshānti.  One has to be punished for the mistakes he/she commits or he should be counselled not to commit it again. Instead of that, would not mere tolerance become foolishness? However, pardoning others mistakes is in reality not foolishness but it shows the large heartedness of the person. Waiting patiently for an appropriate opportunity to counsel the individual without getting agitated is a virtue. Everyone errs. If there is someone who has the fortitude to forgive and if the person who errs can correct his mistakes because of that influence, that individual will elevate himself quickly.  If someone pardons us, then it is an opportunity given to us to correct ourselves. The pardon is only for someone who errs unknowingly or out of compulsion but not for the ones who keep repeating the same intentionally. Punishing such people is itself tolerance.  Further, if one restrains himself even while possessing the potential to punish, then that can be called tolerance. In MahāBhārata, the tolerance of Shri Krishna can be termed as forbearance and is laudable.

When others trouble us, not troubling them in return is patience. Sometimes when others hurt us, our anger rises against them.  If the anger swells, then it may result in our picking up a stick in the hand.  If one is strong enough, then he may physically avenge the hurt. If one is incapable, he may be unable to do anything as the saying goes (in Kannada): “Kailaagadavanu mai ellaa Parachikonda (the incapable ones scratch their bodies-”. But not retorting due to  incompetence is not patience. Once revered Śri Śri Rangapriya Swamiji asked ŚriRanga Mahāguru: “We at times become angry against someone. Sometimes that anger may result in our wanting to beat that person. Even though we may not physically hurt that person, still in our minds we would have. Will that result in sin – Pāpa? Will the effect of the sin be same as physical beating?” Mahāguru had replied “Mental beating alone will not result in as much sin as physical execution. However, if that results in physical action, then the sin will be high.  Hence even though one may be agitated internally, it should not be exhibited externally. The best however, is not to lose one’s balance even internally”. The ability to control the internal agitation and maintain equanimity can be termed as  forbearance – Kshamā.

Note: The Kannada version of this article can be viewed at AYVM blogs.  

Thursday, March 18, 2021

கற்பித்தலின் மூன்று வகைகள்(Karpittalin munru vagaigal)

மூலம்: டா.மோஹன் ராகவன்
தமிழாக்கம்: வனஜா
மின்னஞ்சல் : (lekhana@ayvm.in)


தமிழாக்கம்: வனஜா ராமதாஸ் ச்ரேஷ்டி என்பவருக்கு  மூன்று மகன்கள் இருந்தனர். அவர்கள் அறிவாளிகளாயினும்  கற்றறிந்தவர்களாயினும்  பொறுப்பற்று நண்பர்களுடன் வெளியில் சுற்றி காலம் கழித்தனர். பெற்றவர்களுக்கு வயது கூடியது. பண்ணை, வயல்கள், தொழில் முதலியவற்றை நிர்வகிப்பது மென்மேலும் கடினமாயிற்று. கவலையுடன் எவ்வாறாயினும் மகன்களை நல்வழிப்படுத்த எண்ணினர்.  

ச்ரேஷ்டி ஒருமுறை தன் மகன்களை அழைத்து அரசரிடம் சென்று  கருவூலத்திற்கு செலுத்த வேண்டிய பங்கையும்  வரியையும்  அளித்து வருமாறு கூறினான். அரசனும் கப்பத்தை(காணிக்கை) பெற்றுக்கொண்டு அவர்களின் தந்தையின் நலனை குறித்து வினவி அவர்கள் செய்யும் தொழில்  குறித்தும் வினவினான். அவர்களை குடும்ப விவகாரங்களில் ஈடுபடும்படி அறிவுறுத்தி "முதுமை பருவத்தில் பெற்றோர்களை பேணுவதே உங்கள் தலையாய கடமை. அதுவே இந்நாட்டின் நீதியும் ஆகும். உடனடியாக குடும்ப   விவகாரங்களில் ஈடுபடுங்கள்" என அறிவுறை வழங்கினான்.

மூத்த மகன் அரசனின் வழிகாட்டுதலின்படி குடும்ப பொறுப்பை ஏற்க துவங்கினான். ஆயின் அவனது சகோதரர்கள் பழையபடியே வாழ்ந்தனர். ஒருமுறை மூத்தவன் அவர்களை அழைத்து கூறினான்  "உங்களுக்கு ஒன்றை வெளிபடுத்த வேண்டும். வியாபாரத்தில் ஈடுபடுவது  சலிப்பூட்டும் என எண்ணியிருந்தேன். ஆனால் இப்போது அதனை கவர்ச்சிகரமாக உணர்கிறேன். நன்மதிப்பை பெறுகிறேன். நீங்கள் நல்லதொரு வாய்ப்பை இழக்கிறீர்கள்  இதை உங்களுக்கு மூத்தவனாக மட்டுமே அன்றி உடன் சுற்றி திரிந்த நண்பனாக கூறுகிறேன்." ஒரு சகோதரன் மறுதினமே கடையில் சுறுசுறுப்புடன் பணியாற்றினான். இளையவன் தன்னை திருத்திக்கொள்ளாமல் குடியிலும், சூதிலும் மூழ்கினான்.

இதனிடையில் பெற்றோர் இளையவனை மணக்க தக்க வரனை தேடினர். வரன் அமைந்ததும் பெண்ணை அவனுக்கு காட்டினர். அவள் அழகால் பிரமித்து மணக்க இணங்கினான். அவள் மென்மையும், அமைதியும், புத்திகூர்மையும் உள்ள பெண். எளிதாக அவனை தன்வயப்படுத்திக்கொண்டாள். அவள் அறிவுறையை தவிர்க்க இயலாமல் படிப்படியாக நல்வழிக்கு திரும்பினான். பெற்றோர் மாலை நேரங்களை மகிழ்ச்சியுடனும், அமைதியுடனும் இறையுணர்விலும் தியானத்திலும் கழித்தனர்.

மேற்கூறிய கதை நம் பாரதத்தின் கல்வி, பள்ளிகளின் அணுகுமுறை குறித்தது. நம் பண்டைய முனிவர்கள் தவத்தின் செல்வத்தை குறித்து நன்கறிந்திருந்தனர். தங்கள் உள்ளத்துள்ளே பரந்த தங்க சுரங்கத்தையே கண்டறிந்தனர். மேலும் இயற்கை அளிக்கும் மகிழ்ச்சியை அனுபவிப்பதுடன்  விருப்பங்களை நிறைவேற்றவும் பாதை வகுத்தனர். அவர்களின் மந்திரமாவது உள் தர்மத்தால் கிடைக்கும் இன்பத்தையும் வெளியில் கிடைக்கும் செல்வத்தையும், இன்பத்தையும் சமநிலையில் ஏற்பது.

அத்தகு வாழ்வை  சுற்றுபுரத்திலும், நாட்டிலும், சமூகத்திலும் நடைமுறைப்படுத்தி வாழ்ந்தனர். பண்டைய பாரதத்தில் இதுவே வாழ்வின் சாரமாக விளங்கியது. இத்தகைய நடைமுறையை நாடு முழுதும் செயல்படுத்த தகுந்த முறைகளும், பயிற்சியும் தேவை. அநேக விதமான எண்ணங்களும், விருப்பங்களும், தகுதிகளும் உள்ள மக்கள் மாற வேண்டும்.  உயர்ந்த ஆத்ம மார்கத்தில் வழி நடத்தப்பட வேண்டும்.

மக்களை ச்ரேஷ்டியின் மூன்று மகன்களுடன் ஒப்பிடலாம். வேதங்களையும், உபநிஷதங்களையும் பயிற்றுவித்து தர்ம மார்கத்தில் வழி நடத்துவது ஒரு வகை. வேதங்களும், உபநிஷதங்களும் அரசரின் கட்டளையைப்போல் உள்தவத்தையும் தியானத்தையும் வலியுறுத்துகின்றன. "உண்மையே பேசு; அறத்தின் வழி நட;  (நல்வழி) சுய ஆய்விலிருந்து பிறழாதே" (ஸத்யம் வத, தர்மம் சர), கற்பிக்கையில் வழிநடத்தும் சொற்களும் உண்டு. "ஏஷ ஆதேஶ: ஏஷ உபதேஶ:" அவை அரசனின் புனிதமான கட்டளை போல் எதிரொலிக்கும். மக்களின் மனதில் அமைதியை ஏற்படுத்தி உள்மூழ்க செய்யும். எனவேதான் வேதம், உபநிஷதம், சாஸ்திரங்கள் 'ப்ரபு ஸம்மிதை'(அரசனின் கட்டளை போன்றது) என்றழைக்கப்படும். சிலர் இதனை ச்ரேஷ்டியின் மூத்த மகனை போல் பின்பற்றுகின்றனர்.

ஆனால் அனேகர் இவ்வணுகு முறையை இளைய சகோதரரகளை போல்  விரும்புவதில்லை. கிளர்ச்சி செய்கின்றனர். அத்தகையோருக்கு  நேரிடையாக கற்பித்தலை காட்டிலும் கதைகள், உவமைகள் மூலம் அறிவூட்டி நல்வழி படுத்தலாம். தவறான பாதையின் தீமைகளை உணர்த்த வேண்டும். புராணங்களும், இதிஹாஸங்களும் நண்பனைப் போல் செயல்படுவதால் அவை 'மித்ர ஸம்மிதை' (ஒரு நண்பன் நடத்தும் பாதை) எனப்படுகிறது. ஹிரண்யகசிபுவின் அதர்மம்-ப்ரஹ்லாதனின் பக்தி, கௌரவர்களின் ஆடம்பரம்_பாண்டவர்களின் நல்வழிக்கு பக்தி, நஹுஷனின் அழிவு, அஜாமிளனின் உயர்வு போன்ற அநேக சான்றுகளை காணலாம். உயர்ந்த ஆன்மீக தத்துவங்கள் இவற்றில் பின்னி பிணைந்துள்ளன. ஐந்தே வயதில் த்ருவன் ஸ்ரீமந் நாராயணனை தியானித்து அவனருளை பெற்றான். அவன் தாய் சுநீதி. தந்தை மாற்றாந்தாய் சுருசி மீது அதிக அன்பு கொண்டிருந்தான். எனவே சுநீதியின் மகனான த்ருவனுக்கு  உரிமை கிட்டவில்லை. அநியாயத்தை பொறுக்க இயலாமல் அவன் வீட்டை துறந்து நாரதர் வழிகாட்டலின்படி நாராயணனை தியானித்து அருள் பெற்றான். ஸ்ரீ ரங்கமஹாகுரு இவ்வுதாரணத்தை முனிவர்கள் அருளிய கதைகளில் மறைமுகமாக  பொதிந்துள்ள  ஆன்மீக தத்துவங்களை முன்னிலைபடுத்த பயன்படுத்தினார். நாம் நெறிமுறைகள், நல்வழிகளை காட்டிலும் புலனின்பங்களையே விரும்புகிறோம். ஒரு சர்க்கரை நோயாளி எது நன்மை தருமோ(சுநீதி) அதற்கும் மேலாக நல்ல சுவையை(சுருசி) மட்டுமே விரும்பினால் முடிவு அழிவுதான். நல்வழி புறக்கணிக்கப்படும்போது(சுநீதி) நம் உடல் அழிய தொடங்கும். மனம் ஒருநிலை  படுகையில் (த்ருவா) அமைதி கிட்டும். சரியான நெறியை(சுநீதியை) கடைபிடிக்கையில் (த்ருதி) மனஉறுதி  அடையலாம். மன தத்துவத்தை உணர்த்தும் நாரதரே வழிகாட்டி . மனமானது உறுதியாக பரமாத்மாவிடம் நிலைத்தால்  நாராயணனையும் எப்போதும் அவன் அருகாமையையும் உணரலாம். இதை சரியாக புரிந்து கொண்டு அடைய குருவின் துணையுடன் 'மித்ரஸம்மிதை'களை  கற்றல் அவசியம்.

மூன்றாவது மகன் இவைகளுக்கு கட்டுபடவில்லை. அவன் பேராசை, கர்வம் கொண்டிருந்தான். ஒரு மதம் கொண்ட யானையை அடக்க, பழகிய யானை தேவை என ஸ்ரீரங்கமஹாகுரு கூறுவார். அத்தகைய மனிதனை அடக்க  ஒரு பெண் தன் கணவனை அடக்குவது போன்ற  உறுதி தேவை. இது குறித்து கூறும் காவியங்கள் 'காந்தா ஸம்மிதா' எனப்படும். அவை  மக்களின் மனதை அன்பு, துயரம் போன்ற உணர்ச்சிகளின் மூலம் கவர்ந்து  பின் அமைதியில் நிலை நிறத்துகின்றன. கதாபாததிரங்களின் எண்ணங்கள் நம்முள் பதியும். பழமை வாய்ந்த ஆதிகாவியமான ராமாயணம்  முன்னோடியாக கருதப்படுகிறது. ஏனெனில் அது பல வகையான உணர்வுகளை படிப்பவர் மனதில் ஏற்படத்துகிறது. ராமன்-சிதை இடையிலான அன்பு(ச்ருங்காரம்), ராமனின் வலிமை(வீரம்), கருணை யுத்தத்தின் விளைவான கோபம்(ரௌத்ரம்), பயம், அருவருப்பு முதலிய உணர்ச்சிகள் இருப்பினும் ராமனின் கம்பீரமும், அமைதியான முக தோற்றமும்(சாந்தம்), பாட்டின் பல்லவியை போல் காவியம் முழுவதிலும் பரவி உள்ளது. ராமனின் கம்பீரமும், அனைத்து உயிர்களிடமும் அவர் காட்டும் கருணையும், தர்மத்தின் விதையை நாம் அறியாமலே நம்முள் விதைக்கும். நாரதர், வால்மீகி போன்ற முனிவர்களின் தவம், சுய ஆய்வுடன் தொடங்கும் கதை அமைதியான சாந்தரஸத்தில் முடிகிறது.

முனிவர்களின் நாடான பாரதத்தில் தர்மம், அர்த்தம், காமம், மோக்ஷம் எனும் நான்கு வகை புருஷார்த்தங்களே  வாழ்வின் இலக்காக(லட்சியங்களாக) இருந்தன. நம்மை அவற்றிற்கு அழைத்து செல்லும் சாலைகளே மூன்று ஸம்மிதைகள். அவை முறையே ப்ரபு-மித்ர-காந்தா ஸம்மிதைகள் எனப்படும். இவற்றை பயன்படுத்தி நம் வாழ்வில் ஒளி ஏற்றி நம் நாட்டை வளப்படுத்துவோம்.

குறிப்பு: இக்கட்டுரை யின் கன்னட மூலம் AYVM blogs ல் காணலாம்.

Tuesday, March 16, 2021

ಮಂಗಲ (Mangala)

   ಲೇಖಕರು  - ವಿದ್ವಾನ್ ನರಸಿಂಹ ಭಟ್ ಬಡಗು
(ಪ್ರತಿಕ್ರಿಯಿಸಿರಿ lekhana@ayvm.in)

ಯಾವುದು ಪ್ರಶಸ್ತ, ಶ್ರೇಷ್ಠ, ಶುಭ ಎಂದು ತಿಳಿದವರು ಹೇಳಿದ್ದಾರೋ ಅದನ್ನು ಆಚರಿಸುವುದು 'ಮಂಗಲ',   ಅಶುಭವಾದುದನ್ನು ಮಾಡುವುದು ಅಮಂಗಲ ಎಂದು ಕರೆಯುತ್ತಾರೆ. ಮಂಗಲವಾದುದನ್ನು ಆಚರಣೆ ಮಾಡಿದಾಗ ಆಗುವ ಪರಿಣಾಮ ಸುಖ, ಸಂತೋಷ. ಅಶುಭವಾದುದನ್ನು ಮಾಡಿದಾಗ ಆಗುವ ಪರಿಣಾಮ ದುಃಖ, ದುಮ್ಮಾನ. ಯಾವುದು ಆತ್ಮಲಾಭವನ್ನುಂಟುಮಾಡಿಕೊಡುವುದೋ ಅದನ್ನು ಆತ್ಮಗುಣ ಎನ್ನಲಾಗುವುದು. ಆದುದರಿಂದ ಮಂಗಲವೆಂಬ ಆಚರಣೆಯಿಂದ ಆತ್ಮಲಾಭವಾಗುವುದರಿಂದ ಇದನ್ನು ಆತ್ಮಗುಣ ಎಂದು ಕರೆದಿದ್ದಾರೆ.

ಪ್ರಶಸ್ತವಾದುದನ್ನು ಮಾಡುತ್ತಾ, ಅಪ್ರಶಸ್ತವಾದುದನ್ನು ಮಾಡದೇ ಇರುವುದು ಮಂಗಲ ಎಂದು ಋಷಿಗಳು ಗುರುತಿಸಿದ್ದಾರೆ. ಯೋಗಿಗಳಾದ ಶ್ರೀರಂಗಮಹಾಗುರುಗಳು ಮಂಗಲ-ಅಮಂಗಲ ಎಂಬುವುದಕ್ಕೆ ಮಾನದಂಡ ಯಾವುದು? ಎಂಬುವುದನ್ನು ಸುಂದರವಾಗಿ ವಿವರಿಸಿದ್ದಾರೆ. "ಆತ್ಮಕ್ಷೇತ್ರಕ್ಕೆ ಅಂದರೆ ಆತ್ಮಸಾಕ್ಷಾತ್ಕಾರಕ್ಕೆ ಯಾವ ದ್ರವ್ಯಗಳು ಅಥವಾ ಯಾವ ವಾತಾವರಣವು ಅನುಕೂಲವನ್ನುಂಟುಮಾಡಿ ಪೋಷಕವಾಗಿರುತ್ತವೋ ಅಂತಹ ದ್ರವ್ಯಗಳು ಅಥವಾ ಅಂತಹ ವಾತಾವರಣ ಶುದ್ಧ ಅಥವಾ ಪವಿತ್ರ ಎನಿಸಿಕೊಳ್ಳುತ್ತವೆ. ಅಂತಹ ದ್ರವ್ಯಗಳ ಸಾನ್ನಿಧ್ಯ ಅಥವಾ ಸ್ಪರ್ಶದಿಂದ ನಮ್ಮ ನಾಡಿಗಳಲ್ಲಿ ಕಂಡುಬರುವ ವ್ಯತ್ಯಾಸವೇನೆಂಬುದನ್ನು ಗಮನಿಸಿ ಯಾವುದು ಮಂಗಲ ಮತ್ತು ಯಾವುದು ಅಮಂಗಲ ಎಂಬ ವಿಷಯದ ಬಗ್ಗೆ ನಾವು ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ" ಎಂದು.  


ಸೃಷ್ಟಿಯಲ್ಲಿ ಎಲ್ಲೆಲ್ಲೂ ಭಗವಂತನ ಅಸ್ತಿತ್ವ

"ಈಶಾವಾಸ್ಯಂ ಇದಂ ಸರ್ವಮ್" ಎಂಬಂತೆ ಅಣುರೇಣುತೃಣಕಾಷ್ಠವೂ ಭಗವಂತನ ಸಾನ್ನಿಧ್ಯದಿಂದ ಕೂಡಿರುವುದೇ ಆಗಿರುವಾಗ ಅಮಂಗಲ ಎಂಬುವುದುಂಟೇ? ಎಲ್ಲವೂ ಮಂಗಲವೇ ಆಗಿರುವಾಗ ಶುಭ ಅಶುಭದ ಮಾತೆಲ್ಲಿ? ಹೌದು. ಎಲ್ಲೆಲ್ಲೂ ಭಗವಂತನೇ ವಾಸಮಾಡಿದರೂ ಭಗವಂತನ ಅಭಿವ್ಯಕ್ತಿ ಅತಿಶಯವಾಗಿ ಎಲ್ಲಿ ಆಗುವುದೋ ಅದನ್ನು ಸುವಸ್ತು ಎಂದು ಕರೆಯುತ್ತಾರೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತನ್ನ ಧರ್ಮವು ಅತಿಶಯವಾಗಿ ಅಭಿವ್ಯಕ್ತವಾಗುವ ವಿಷಯ ತನ್ನ 'ವಿಭೂತಿ'ಯೆಂದು ವಿವರಿಸಿದ್ದಾನೆ. ಭಗವಂತನು ಎಲ್ಲಿ ಅತಿಶಯವಾಗಿ ವ್ಯಕ್ತವಾಗುತ್ತಾನೋ ಅಥವಾ ಯಾವುದರಿಂದ ಭಗವಂತನನ್ನು ಕಾಣಬಹುದೋ ಅದು ಮಂಗಲ. ಅರಿಶಿನ, ಕುಂಕುಮ, ಸುವರ್ಣ, ಹಸು, ಹಸುವಿನ ಉತ್ಪನ್ನಗಳು ಸಾಲಿಗ್ರಾಮ ಇವೆಲ್ಲವೂ ಮಂಗಲದ್ರವ್ಯಗಳು.

ಅಮಂಗಲ ಯಾವುದು?

ವಾಸ್ತವಿಕವಾಗಿ ಈ ಪ್ರಪಂಚದಲ್ಲಿ ಅಮಂಗಲವೆಂಬುದಿಲ್ಲ ಎಂಬ ವಿಚಾರವನ್ನು ಮನಸ್ಸಿನಲ್ಲಿ ಗಟ್ಟಿಯಾಗಿ ಧರಿಸಿದಾಗ ಎಲ್ಲವೂ ಅರ್ಥವಾಗುವುದು. ಸಮಯ ಸನ್ನಿವೇಶಕ್ಕೆ ತಕ್ಕಂತೆ ವಸ್ತುವನ್ನು ತ್ಯಾಜ್ಯ;  ಪೂಜ್ಯ ಎನ್ನುತ್ತೇವೆ. "ಅಮಂತ್ರಂಅಕ್ಷರಂ ನಾಸ್ತಿ ನಾಸ್ತಿ ಮೂಲಂ ಅನೌಷಧಮ್ | ಅಯೋಗ್ಯಃ ಪುರುಷೋ ನಾಸ್ತಿ ಯೋಜಕಃ ತತ್ರ ದುರ್ಲಭಃ" ಎಂಬ ಮಾತಿದೆ.  ಮಂತ್ರಕ್ಕೆ ಬಾರದ ಅಕ್ಷರವಿಲ್ಲ; ಔಷಧಕ್ಕೆ ಬಾರದ ಗಿಡಮೂಲಿಕೆಗಳಿಲ್ಲ. ಅಯೋಗ್ಯನಾದ ಪುರುಷನೆಂಬುವನಿಲ್ಲ. ಅಕ್ಷರವನ್ನು (ಮನನ ಮಾಡಿದವನನ್ನು ತಾರಣ ಮಾಡುವ) ಮಂತ್ರರೂಪವಾಗಿ ಬಳಸಬಲ್ಲ, ಗಿಡದ ಮೂಲಿಕೆಯನ್ನು ಔಷಧವಾಗಿ ಉಪಯೋಗಿಸಬಲ್ಲ ಹಾಗೂ ಒಬ್ಬ ಪುರುಷನನ್ನು ಯೋಗ್ಯನನ್ನಾಗಿ ಮಾಡಬಲ್ಲ ಯೋಜಕನು ದುರ್ಲಭನಷ್ಟೆ.  ಹಾಗೆಯೇ ಈ ಪ್ರಪಂಚದಲ್ಲಿರುವ ಪ್ರತಿಯೊಂದು ಪದಾರ್ಥದ ಗುಣಧರ್ಮವನ್ನು ಅರಿತ ಸೃಷ್ಟಿವಿಜ್ಞಾನಿಗಳು ಒಂದು ವ್ಯವಸ್ಥೆಯನ್ನು ತಂದಿದ್ದಾರೆ. ಯಾವ ಪದಾರ್ಥವನ್ನು ಹೇಗೆ ಬಳಸಬೇಕು,  ಯಾವ ಕಾಲದಲ್ಲಿ ಬಳಸಬೇಕು,  ಯಾರು ಬಳಸಬೇಕು ಎಂಬುವುದನ್ನು, ಅವರು ಕೊಟ್ಟ ವಿಜ್ಞಾನವನ್ನು ತಿಳಿದುಕೊಂಡು ಆಚರಿಸುವುದು ಮಂಗಳ. ಹಾಗೆಯೇ ಆ ಕಾಲಕ್ಕೆ ಅದು ವ್ಯತಿರಿಕ್ತವಾದ ಪರಿಣಾಮವನ್ನು ಕೊಡುತ್ತದೆ ಎಂದಾದರೆ ಅದನ್ನು ಸರ್ವಥಾ ಅನುಷ್ಠಾನಗೊಳಿಸಬಾರದು. ಇದನ್ನೇ ಋಷಿಗಳು 'ಮಂಗಳ' ಎಂದರು. ಇದು ಆತ್ಮಗುಣವಾಗಿ ಭಗವಂತನ ಸಾಕ್ಷಾತ್ಕಾರಕ್ಕೆ ಅನುಕೂಲಿಸುವುದು.

ಸೂಚನೆ: 25/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ. 

ಕರ್ಮಯೋಗಿ ಪೂಜ್ಯ ಶ್ರೀಶಂಕ್ರಣ್ಣಯ್ಯ (ಜಿ.ಕೆ.ಶಂಕರರಾವ್) Karmayogi Pujya SrIsankrannayya (G.K.Sankararao)

  ಸಂಗ್ರಹ: ಶ್ರೀ ಎ. ಕೃಷ್ಣಮೂರ್ತಿ

ಪೂಜ್ಯ ಶ್ರೀಶಂಕ್ರಣ್ಣಯ್ಯ

(ಉಪಕಾರ್ಯದರ್ಶಿಗಳು, ಅ.ಯೋ.ವಿ.ಮಂ, ಬಸರೀಕಟ್ಟೆಶಾಖೆ - 1962 - 78)

(ಧನ್ಯಜೀವಿತಕಾಲ: 1934 – 1978)

ಪೂಜ್ಯ ಶ್ರೀ ಜಿ.ಕೆ. ಶಂಕರರಾಯರು ಬಹುಮುಖ ಪ್ರತಿಭೆಯ ಉತ್ಸಾಹಿ ಯುವಕರಾಗಿದ್ದವರು. ಅಚ್ಚುಕಟ್ಟಿಗೆ ಇನ್ನೊಂದು ಹೆಸರೇ ಶಂಕರರಾವ್. ಅವರು ಉತ್ತಮ ಅಧ್ಯಾಪಕರು; ಕಲಾವಂತರು; ನಿಷ್ಠಾವಂತ ಸೇವಾರ್ಥಿಗಳು; ಶಾಲೆಯ ಮಕ್ಕಳ ಕಣ್ಮಣಿ; ಕೊಳಲುವಾದಕರು; ಅಧ್ಯಾತ್ಮಜೀವಿಗಳು. ತಮ್ಮ ಅಧ್ಯಾತ್ಮ ಗುರುವಿಗೆ ನೆಚ್ಚಿನ ಶಿಷ್ಯರು. ಹಾಗೆಯೇ ವಿರಕ್ತರು ಮತ್ತು ತ್ಯಾಗಿಗಳು. ಅವರೊಬ್ಬರು ಜೊತೆಯಲ್ಲಿ ಇದ್ದರೆ ಹತ್ತು ಜನ ಇದ್ದಂತೆ. ಅವರು ಒಳ್ಳೆಯ ಕಾರ್ಯಪಟುಗಳು ಹಾಗೂ ಶ್ರೇಷ್ಠ ಸಂಘಟಕರು. ವಿನೋದಪ್ರಿಯರೂ ಹೌದು. ಸದಾ ಹಸನ್ಮುಖಿಗಳು, ಉತ್ಸಾಹಿಗಳು. ಸಂಸ್ಕೃತಿ ಪ್ರಿಯರಾದ ಆದರ್ಶ ನಾಯಕರು. ಸದ್ಗೃಹಸ್ಥರು. ಪರೋಪಕಾರ ಎನ್ನುವುದು ಅವರ ಹುಟ್ಟುಗುಣ. ತಮಗೆ ಎಷ್ಟೇ ಕಷ್ಟವಾದರೂ ಕೂಡ, ಬೇರೆಯವರ ಕಷ್ಟದಲ್ಲಿ ನೆರವಾಗುತ್ತಿದ್ದವರು. ಅವರು ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಕಷ್ಟಸಹಿಷ್ಣುಗಳಾಗಿದ್ದರು. ಅವರ ಉಪಕಾರ ಸ್ಮರಣೆಮಾಡಿದರೆ ಅವರದ್ದೊಂದೇ ಮಾತು- "ನಿಮಗೆ ಸಾಧ್ಯವಾದಾಗ ನೀವೂ ಬೇರೆಯವರಿಗೆ ಸಹಾಯಮಾಡಿ"

ಶ್ರೀಯುತರು ಪೂಜ್ಯರಾದ ಗುಡ್ಡೇತೋಟದ ಶ್ರೀ ಕೃಷ್ಣರಾಯರು ಮತ್ತು ಶ್ರೀಮತಿ ಸುಬ್ಬಲಕ್ಷ್ಮಿ ಇವರ ಎರಡನೆಯ ಪುತ್ರರು. ಅವರುಹುಟ್ಟಿದ್ದು, 8-1-1934 ರಲ್ಲಿ. ಕೃಷ್ಣರಾಯರದು 9 ಮಕ್ಕಳಿದ್ದ ತುಂಬು ಕುಟುಂಬ. ಅವರೆಲ್ಲರಿಗೂ ಶಂಕರರಾಯರು ಅಚ್ಚುಮೆಚ್ಚಿನವರು.

ಶಂಕರರಾಯರ ತಂಗಿ ಶ್ರೀಮತಿ ಶಾರದಾರವರು,- 'ಶಾಲೆಯು ಶ್ರೀಲಕ್ಷ್ಮೀಕಾಂತಜನಾರ್ದನಸ್ವಾಮಿ ದೇವಸ್ಥಾನದ ಆವರಣದಲ್ಲಿ ಇತ್ತು. ಬಸರೀಕಟ್ಟೆಯ ಸುತ್ತಮುತ್ತಲಿದ್ದ ಪುಟ್ಟ ಹಳ್ಳಿಯ ಮನೆಗಳವರ ಮದುವೆ ಸಮಾರಂಭ ಬಸರೀಕಟ್ಟೆಯ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿತ್ತು. ಆಗ ಶಂಕರರಾಯರು ಮಂಟಪದ ಅಲಂಕಾರದಿಂದ ಆರಂಭಿಸಿ ಮದುವೆ ಮುಗಿಯುವವರೆಗೂ ಆ ಮನೆಯವರಿಗೆ ಸಹಾಯ ಮಾಡುತ್ತಿದ್ದರು. ಹೀಗೆ, ಊರಿಗೆ, ಶಾಲೆಗೆ ದಣಿವರಿಯದೇ ದುಡಿಯುತ್ತಿದ್ದ ಅವರನ್ನು ಶಾಲೆಯ ವಿದ್ಯಾರ್ಥಿಗಳೇ ಅಲ್ಲದೇ ಊರಿನವರೂ 'ಶಂಕ್ರಣ್ಣಯ್ಯ' ಎಂದೇ ಕರೆಯುತ್ತಿದ್ದರು. ಅವರಿಗೆ ಯಾರೇ ಪರಿಚಿತರಾಗಲಿ ಅವರ ಸ್ವಭಾವಕ್ಕೆ ಹೊಂದಿಕೊಳ್ಳುತ್ತಿದ್ದರು ಮತ್ತು ಅವರ ಸಂಕೋಚವನ್ನು ಹೋಗಲಾಡಿಸುತ್ತಿದ್ದರು. ಸುತ್ತಮುತ್ತಲಿನ ಆಯಾಯಾ ಊರಿನವರು ಪ್ರೀತಿಯಿಂದ ಅವರ ಮನೆಗೆ ಬಂದು ಹೋಗುತ್ತಿದ್ದರು. ಬಂದವರು ತಮ್ಮ ಕಷ್ಟಸುಖಗಳನ್ನು ವಿಜ್ಞಾಪನೆ ಮಾಡಿಕೊಳ್ಳುತ್ತಿದ್ದರು. ಶಂಕರರಾಯರು ಅವರೆಲ್ಲರ ಕಷ್ಟ ಸುಖಗಳನ್ನು ಆಲಿಸಿ ಅವರಿಗೆ ಸಮಾಧಾನಕರವಾದ ಮಾತುಗಳನ್ನು ಆಡುತ್ತಿದ್ದರು ಮತ್ತು ಅವಶ್ಯಕತೆ ಇರುವವರಿಗೆ ಕೈಲಾದ ಸಹಾಯವನ್ನೂ ಮಾಡುತ್ತಿದ್ದರು. ಅವರೆಂದರೆ ವಿದ್ಯಾಶಾಲೆಯ ಸಂಸ್ಥಾಪಕರಾದ ಗುರುದಾಸ ದಂಪತಿಗಳಿಗೆ ತುಂಬಾ ಅಚ್ಚುಮೆಚ್ಚು.' ಎಂದು ನೆನೆಪಿಸಿಕೊಳ್ಳುತ್ತಾರೆ.      

ಶ್ರೀಮತಿ ಕಾತ್ಯಾಯನಿದತ್ತರವರು- 'ನನಗೆ ನನ್ನ ಚಿಕ್ಕಂದಿನಿಂದಲೂ ಪೂಜ್ಯ ಶ್ರೀಶಂಕರರಾಯರು ಪರಿಚಯ. ನಾನು ಅವರನ್ನು ಪ್ರೀತಿಯಿಂದಲೂ ಗೌರವದಿಂದಲೂ ಶಂಕ್ರಣ್ಣಯ್ಯನವರು ಎಂಬುದಾಗಿ ಕರೆಯುತ್ತಿದ್ದೆ. ಭಗವಂತನ ಗುಣಗಳಲ್ಲಿ ಒಂದಾದ ಪ್ರೀತಿ ಎಂಬುದು ಅವರಲ್ಲಿ ತುಂಬಾ ವ್ಯಕ್ತವಾಗುತ್ತಿತ್ತು. ಅವರು ಎಲ್ಲರನ್ನೂ ಒಂದೇ ಭಾವದಿಂದ ನೋಡುತ್ತಿದ್ದರು. ಆದುದರಿಂದ ನಾವು ಅವರನ್ನು ಆತ್ಮೀಯತೆಯಿಂದ 'ಅಣ್ಣನವರು' ಎಂದೇ ಕರೆಯುತ್ತಿದ್ದೆವು. ಅವರು ಅಸಾಮಾನ್ಯ ವ್ಯಕ್ತಿಗಳಾಗಿದ್ದರು. ಮಾತಿನಲ್ಲಿ ನಿಪುಣತೆ, ಮಾಡುವ ಕೆಲಸದಲ್ಲಿ ನಿಪುಣತೆ, ಕೆಲಸ ಮಾಡಿಸುವುದರಲ್ಲಿ ನಿಪುಣತೆ, ಹೀಗೆ ಎಲ್ಲದರಲ್ಲಿಯೂ ನಿಪುಣತೆಯುಳ್ಳ ಆದರ್ಶ ವ್ಯಕ್ತಿಗಳಾಗಿದ್ದರು. ಮತ್ತು ಈ ನಿಪುಣತೆಗಳನ್ನು ಭಗವತ್ಕಾರ್ಯಕ್ಕಾಗಿ ವಿನಿಯೋಗಿಸಿದ ಮಹಾನುಭಾವರಾಗಿದ್ದರು. ಅವರಲ್ಲಿದ್ದ ಗುಣಗಳಲ್ಲಿ ಒಂದನ್ನಾದರೂ ಅಳವಡಿಸಿಕೊಂಡರೆ ಜೀವನದಲ್ಲಿ ನಾವು ಸಫಲತೆಯನ್ನು ಪಡೆಯಬಹುದು ಎಂದೆನಿಸುತ್ತದೆ.'ಎನ್ನುತ್ತಾರೆ.  

ತಂಗಿ ಶಾರದಾರವರು- 'ನಮ್ಮ ಅಣ್ಣ ಶಂಕ್ರಣ್ಣಯ್ಯನವರದು ಚಿಕ್ಕಂದಿನಿಂದಲೇ ಸುಟಿಯಾದ ಪ್ರಕೃತಿ. ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ಒಂದು ಸಭೆಯಲ್ಲಿ, ಹರಿಕಥೆ ಮಾಡಿದ್ದರೆಂದು ನಮ್ಮ ತಾಯಿಯವರು ಹೇಳುತ್ತಿದ್ದರು. ಅವರ ಮೊದಲ ವಿದ್ಯಾಭ್ಯಾಸ ಅವರ ಅಣ್ಣಂದಿರೊಡನೆ ಬೆಂಗಳೂರಿನ ಕೆಂಗೇರಿ ಆಶ್ರಮದಲ್ಲಾಯಿತು. ನಂತರ ಶಿವಮೊಗ್ಗದಲ್ಲಿ ಎಸ್. ಎಸ್.ಎಲ್.ಸಿ ಓದಿ,ನಂತರ, ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ 1954ನೇ ಇಸವಿಯಲ್ಲಿ ಬಿ.ಎಸ್. ಸಿ ಡಿಗ್ರಿ ಪದವಿಯಲ್ಲಿ ಮೊದಲನೇ ಸ್ಥಾನ ಪಡೆದರು. ನಂತರ, ನಮ್ಮ ತಂದೆಯವರ ಅಪೇಕ್ಷೆಯಂತೆ ಬ್ಯಾಂಕಿನಲ್ಲಿ ಉದ್ಯೋಗವೂ ಸಿಕ್ಕಿತು. ಅಷ್ಟರಲ್ಲಾಗಲೇ ಅವರಿಗೆ ಶ್ರೀ ರಾಮಕೃಷ್ಣ ಗುರುದಾಸರ ಪರಿಚಯವೂ ಆಗಿತ್ತು. ಪೂಜ್ಯ ಗುರುದಾಸರು ಋಷಿಮುನಿಗಳು ಸಾರಿದ 'ಆತ್ಮ ಸಾಕ್ಷಾತ್ಕಾರವೇ ಜೀವನದ ಪರಮಗುರಿ' ಎಂಬುದನ್ನು ಮನಗಂಡು ಅದನ್ನೇ ಶ್ರೀಸದ್ಗುರು ವಿದ್ಯಾಶಾಲೆಯ ಶಿಕ್ಷಣದಲ್ಲಿ ಅಳವಡಿಸಿದ್ದರು. ಈ ಶಾಲೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅವಕಾಶವಿತ್ತು. 5ನೇ ತರಗತಿಯಿಂದ 10ನೇ ತರಗತಿಯವರೆಗೆ ಇಲಾಖಾ ನಿಯಮದ ಪಠ್ಯಕ್ರಮದ ಜೊತೆಗೆ ಸಂಗೀತ, ಸಂಸ್ಕೃತ, ಭಜನೆ, ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದ, ಉಪನಿಷತ್ ಇತ್ಯಾದಿ ವಿಷಯಗಳನ್ನು ಅಳವಡಿಸಿದ್ದರು. ಇದರಿಂದ ಆಕರ್ಷಿತರಾದ ಶಂಕರರಾಯರು ಮನೆಯಲ್ಲಿ ಪ್ರತಿರೋಧವಿದ್ದರೂ ಒಪ್ಪಿಸಿ, ಬ್ಯಾಂಕ್  ಕೆಲಸ ಬಿಟ್ಟು ಶ್ರೀ ಸದ್ಗುರು ವಿದ್ಯಾಶಾಲೆಯಲ್ಲಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ನಮ್ಮ ತಂದೆಯವರ ವಿರೋಧದ ನಡುವೆಯೂ ಅಧ್ಯಾಪಕರಾಗಿ ಸೇವಾ ವೃತ್ತಿ ಕೈಗೊಂಡರು. ಬಸ್ಸಿನ ಸೌಕರ್ಯವಿಲ್ಲದಿದ್ದಾಗ ಗುಡ್ಡೇತೋಟದಿಂದ ಬಸರೀಕಟ್ಟೆಗೆ ಎಂಟು ಮೈಲಿ ದೂರವನ್ನು ಯಾತಾಯಾತ ಕಾಲ್ನಡಿಗೆಯಿಂದಲೇ ಕ್ರಮಿಸುತ್ತಿದ್ದರು.'ಎಂದು ಅವರನ್ನು ನೆನೆಪಿಸಿಕೊಳ್ಳುತ್ತಾರೆ. 

ಪೂಜ್ಯ ಗುರುದಾಸರ ಮಗಳು ಶ್ರೀಮತಿ ವಿಜಯವಲ್ಲೀ,- 'ಬಸರೀಕಟ್ಟೆಯ ಶ್ರೀಸದ್ಗುರು ವಿದ್ಯಾಶಾಲೆಯು ಶ್ರೀ ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀರಂಗಮಹಾಗುರುಗಳ ಸತ್ಸಂಕಲ್ಪದಂತೆ 1952 ರಿಂದ ನಡೆಯುತ್ತಿದ್ದುದೆಲ್ಲವೂ ಗತಕಾಲದವೈಭವ.

ನನ್ನ ಬಾಲ್ಯವನ್ನು ನೆನೆಸಿಕೊಂಡರೆ ನನಗೆ ಬುದ್ಧಿ ತಿಳಿದಾಗಿನಿಂದಲೂ ತಂದೆತಾಯಿಯರ ಜೊತೆ ಶಂಕ್ರಣ್ಣಯ್ಯನವರನ್ನು ನೋಡಿದ ನೆನೆಪಿದೆ, ಕಾರಣ ದೇವಸ್ಥಾನದ ಎದುರಿನ ಕಟ್ಟಡವೇ ಅವರ ಮನೆಯಾಗಿತ್ತು. ಅದನ್ನು 'ಮೇಷ್ಟ್ರಮನೆ' ಎಂದೇ ಕರೆಯುವ ರೂಢಿ ಇವತ್ತಿಗೂ ಇದೆ.  

ಶಂಕ್ರಣ್ಣಯ್ಯನವರ ಹುಟ್ಟೂರು ಬಸರೀಕಟ್ಟೆಯಿಂದ 10-12 ಕಿ. ಮಿ. ದೂರದ ಗುಡ್ಡೇತೋಟ ಎಂಬ ಹಳ್ಳಿ. ಅವರು ವಿದ್ಯಾಶಾಲೆಗೆ ಬಂದು ಸೇರಿದುದು ಯಾವುದೋ ಋಣಾನುಬಂಧದಿಂದ ಎನಿಸುತ್ತದೆ. ಅವರು ನಮ್ಮ ತಂದೆಗೆ ಬಸರೀಕಟ್ಟೆಗೆ ಬರುವ ಮೊದಲು ಬರೆದಿದ್ದ ಪತ್ರವನ್ನು ಓದಿದ ನೆನಪಾಗುತ್ತದೆ. ವಿಷಯವೇನೆಂದರೆ ಅವರು ಆ ಕಾಲದಲ್ಲೇ ಪದವೀಧರರಾಗಿದ್ದು ಅದಕ್ಕೆ ತಕ್ಕುದಾದ ಸರ್ಕಾರಿ ಕೆಲಸವು ದೊರೆಯುವ ಅವಕಾಶವಿದ್ದರೂ ಅವರಿಗೆ ಅದರಲ್ಲಿ ಆಕರ್ಷಣೆ ಇರದಿದ್ದುದು. ಅವರ ಮಾತಿನಲ್ಲೇ ಬರೆಯುವುದಾದರೆ 'ಸ್ವಾಮಿ, ನಾನು ನಿಮ್ಮಲ್ಲಿಗೆ ಬಂದು ವಿದ್ಯಾಶಾಲೆಯಲ್ಲಿ ಸೇವೆ ಸಲ್ಲಿಸಬೇಕೆಂದು ನನ್ನ ಮನಸ್ಸು ಕಾತರಿಸುತ್ತಿದೆ. ಇದಲ್ಲದೆ ನನಗಿನ್ನಾವುದರಲ್ಲೂ ಮನಸ್ಸು ಹತ್ತುತ್ತಿಲ್ಲ. ನಿಮ್ಮಲ್ಲಿಗೆ ಬಂದು ಸೇರಬೇಕೆಂದು ನಾನು ದಿನವೂ ನಮ್ಮ ಮನೆಯ ಬಳಿ ಇರುವ ಬೆಟ್ಟದಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದೇನೆ...' —ಇತ್ಯಾದಿ. 

ನಮ್ಮ ಹಾಗೂ ಶಂಕ್ರಣ್ಣಯ್ಯನವರ ಕುಟುಂಬದ ಒಡನಾಟ ತುಂಬಾ ಅನ್ಯೋನ್ಯವಾಗಿತ್ತು. ಅವರ ಮಗ ಶ್ರೀನಿವಾಸ, ನಾನು ಸಮವಯಸ್ಕರು. ನಾವಿಬ್ಬರೂ ಒಂದೇ ಶಾಲೆಯಲ್ಲಿ ಬಾಲ್ಯದಿಂದಲೂ ಓದಿದವರು. ದಿನವೂ ಆಟಪಾಟಗಳನ್ನಾಡುತ್ತಿದ್ದೆವು. ಅವನಿಗೇನಾದರೂ ಆಟದ ಸಾಮಾನು ತಂದರೆ ನನಗೂ ಅದೇ ರೀತಿಯದು ಸಿಗುತ್ತಿತ್ತು. ನಮ್ಮ ತಂದೆಯವರು ಮಿತಭಾಷಿಗಳು. ಅವರು ಲೌಕಿಕ ವ್ಯವಹಾರದಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಆದುದರಿಂದ ಶಾಲೆಯ ಆಡಳಿತದ ಜವಾಬ್ದಾರಿಯನ್ನು ಶಂಕ್ರಣ್ಣಯ್ಯನವರೇ ವಹಿಸಿದ್ದರು. ನನ್ನನ್ನು ಮೈಸೂರಿನಲ್ಲಿ ಕಾಲೇಜಿಗೆ ಸೇರಿಸಲು ಅವರೇ ಬಂದಿದ್ದರು. ಹಾಗಾಗಿ ಅವರಲ್ಲಿ ತುಂಬಾ ಸಲುಗೆ ಇದ್ದು ನಮಗೆ ಚಿಕ್ಕಪ್ಪನಂತೆ ಇದ್ದರು.  ಲಕ್ಷ್ಮ್ಮಣನು ರಾಮನ ನೆರಳಾಗಿ ಹೇಗೆ ಸೂಚನೆಯನ್ನು ಅನುಸರಿಸುತ್ತಿದ್ದನೋ ಹಾಗೆಯೇ ಇವರು ನಮ್ಮ ತಂದೆಯ ಬಲಗೈಯ್ಯಂತಿದ್ದರು' ಎನ್ನುತ್ತಾರೆ.

ವಿದ್ಯಾಶಾಲೆಯ ಪ್ರಾಧ್ಯಾಪಕರಾಗಿದ್ದ ಶ್ರೀಯುತ ಚೆನ್ನಕೇಶವರವರು- 'ಯೋಗೈಶ್ವರ್ಯಸಂಪನ್ನರಾದ ಪರಮಪೂಜ್ಯ ಶ್ರೀರಂಗಸದ್ಗುರುಗಳ ಆಶಯದಂತೆ ಬಸರೀಕಟ್ಟೆಯ ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇವಾಲಯದ ಆವರಣದಲ್ಲಿ ಪೂಜ್ಯ ಗುರುದಾಸರು 1952ರಲ್ಲಿ ಸ್ಥಾಪಿಸಿದ್ದ, ಗುರುಕುಲ ಪದ್ಧತಿಯಂತೆ ನಡೆಯುತ್ತಿದ್ದ ಸಂಸ್ಥೆಯಾದ ಬಸರೀಕಟ್ಟೆಯ ಶ್ರೀಸದ್ಗುರುವಿದ್ಯಾಶಾಲೆಯು  ಶಂಕ್ರಣ್ಣಯ್ಯನವರನ್ನು ಸೆಳೆಯುತ್ತಿತ್ತು. ಈ ಸಂಸ್ಥೆಯು ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಪರಿಚಯಕೊಟ್ಟು ಅದರ ಬಗ್ಗೆ ಶಿಕ್ಷಣ ಹೊಂದಿಸುವುದೇ ಅದರ ಮುಖ್ಯ ಉದ್ದೇಶವಾಗಿತ್ತು. ಜೊತೆಗೆ ಆಧುನಿಕ ವಿದ್ಯಾಭ್ಯಾಸದ ಶಿಕ್ಷಣವನ್ನೂ ಕೊಡಲಾಗುತ್ತಿತ್ತು. ಅವರ ಬಹುಮುಖ ಪ್ರತಿಭೆಗೆ ಅಲ್ಲಿ ಒಳ್ಳೆಯ ಅವಕಾಶ ಸಿಕ್ಕಿತು. 

ಸಂಸ್ಕೃತ ಮತ್ತು ಸಂಗೀತದಲ್ಲಿ ವಿದ್ವಾಂಸರಾಗಿ ಈ ಊರಿನವರೇ ಆಗಿದ್ದ ಶ್ರೀರಾಮಕೃಷ್ಣ ಗುರುದಾಸರು ಈ ಶಾಲೆಯ ಪ್ರಧಾನಾಚಾರ್ಯರು. ಶ್ರೀಗುರುದಾಸರ ಧರ್ಮಪತ್ನಿ ಶ್ರೀಮತಿ ಕಲ್ಯಾಣೀ ಗುರುದಾಸರು ಮತ್ತು ಶ್ರೀ ಜಿ.ಕೆ.ಶಂಕರರಾಯರು ಖಾಯಂ ಶಿಕ್ಷಕರು. ಶಂಕರರಾಯರು ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಲು ಗುರುದಾಸರ ಪ್ರಯತ್ನಕ್ಕೆ ಹೆಗಲು ಕೊಟ್ಟರು. ಮುಖ್ಯವಾಗಿ ವಿದ್ಯಾಶಾಲೆಯ ವ್ಯವಸ್ಥಾಪಕರಾಗಿ ಮತ್ತು ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೆ ಪಾಠಮಾಡುವುದು ಅವರ ಕೆಲಸವಾಗಿತ್ತು' ಎಂದು ನೆನೆಪಿಸಿಕೊಳ್ಳುತ್ತಾರೆ.

     1956ನೇ ಇಸವಿಯಲ್ಲಿ ಅವರು ಅಷ್ಟಾಂಗ ಯೋಗ ವಿಜ್ಞಾನಮಂದಿರದ ಶ್ರೀರಂಗಮಹಾಗುರುಗಳ ಸಂಪರ್ಕಕ್ಕೆ ಬಂದರು. "ಸ್ವಾಧ್ಯಾಯ ಪ್ರವಚನಾಭ್ಯಾಂ ನ ಪ್ರಮದಿತವ್ಯಮ್" ಎಂಬುದು ಹಿಂದಿನ ಗುರುಕುಲದಲ್ಲಿ ಶಿಷ್ಯರಿಗೆ ಗುರುಗಳು ಬೋಧಿಸುತ್ತಿದ್ದ ಹಿತನುಡಿ. ಅದರಂತೆ ಅಷ್ಟಾಂಗಯೋಗ ವಿಜ್ಞಾನಮಂದಿರದ ಶ್ರೀರಂಗಮಹಾಗುರುಗಳ ಶಿಷ್ಯರಾದ ಪೂಜ್ಯ ಶಂಕರರಾಯರು ಗುರುವಿನಿಂದ ಉಪದೇಶಿಸಲ್ಪಟ್ಟ ಜ್ಞಾನವಿಜ್ಞಾನಗಳ ಸಾಧನೆಯ ಜೊತೆಗೆ ಅದಕ್ಕೆ ಪೋಷಕವಾದ ಸಂಸ್ಕೃತ ಮತ್ತು ಹಿಂದೀ ಭಾಷೆಯನ್ನು ಕಲಿಯುತ್ತಾ, ಅಧ್ಯಾಪಕ ವೃತ್ತಿಯ ಜೊತೆಗೆ ಈ ಎರಡೂ ಭಾಷೆಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಶ್ರೀ ಗುರುದಾಸರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಾ, ವೇಣುವಾದನವನ್ನು ತಮ್ಮ ಹವ್ಯಾಸವನ್ನಾಗಿ ಇಟ್ಟುಕೊಂಡಿದ್ದರು.

ವಿದ್ಯಾಶಾಲೆಯಲ್ಲಿ ವಿದ್ಯಾರ್ಥಿನಿಯಾಗಿದ್ದು ಅಲ್ಲೇ ಉಪಾಧ್ಯಾಯಿನಿಯಾಗಿದ್ದ ಶ್ರೀಮತಿ ಕಾತ್ಯಾಯನಿದತ್ತರವರು 'ಯೋಗೇಶ್ವರರಾದ ಅಷ್ಟಾಂಗಯೋಗ ವಿಜ್ಞಾನಮಂದಿರದ ಶ್ರೀರಂಗಮಹಾಗುರುಗಳು ಬಸರೀಕಟ್ಟೆ ಕ್ಷೇತ್ರಕ್ಕೆ ದಯಮಾಡಿಸಿ ಹಲವಾರು ಪ್ರವಚನಗಳನ್ನು ದಯಪಾಲಿಸಿದರು. ವಿದ್ಯಾಶಾಲೆಯನ್ನು ಅಷ್ಟಾಂಗಯೋಗ ವಿಜ್ಞಾನಮಂದಿರದ ಶಾಖೆಯನ್ನಾಗಿ ಘೋಷಿಸಿದರು. ಅದರ ಕಾರ್ಯದರ್ಶಿಗಳಾಗಿ ಪೂಜ್ಯ ಗುರುದಾಸರನ್ನೂ, ಶಂಕ್ರಣ್ಣಯ್ಯನವರನ್ನು ಉಪಕಾರ್ಯದರ್ಶಿಗಳನ್ನಾಗಿಯೂ ನಿಯೋಜಿಸಿದರು. ಅವರಿಬ್ಬರೂ ಆಜೀವಪರ್ಯಂತ ಇದೇ ಸೇವೆಯಲ್ಲಿದ್ದರು. ಅಲ್ಲಿಯೂ ಶಂಕ್ರಣ್ಣಯ್ಯನವರು ಅವರ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಉತ್ತಮ ಸಲಹೆಗಳನ್ನು ಕೊಡುತ್ತಿದ್ದರು. ಮಂದಿರದ ಈ ಶಾಖೆಯ ಹಣಕಾಸಿನ ಜವಾಬ್ದಾರಿಯನ್ನು ಶ್ರೀ ಶಂಕ್ರಣ್ಣಯ್ಯನವರೇ ನಿರ್ವಹಿಸುತ್ತಿದ್ದರು. ಯಾರಾದರೂ ಅಭಿನಂದಿಸಿದರೆ 'ಪರೋಪಕಾರಾರ್ಥಂ ಇದಂ ಶರೀರಂ' ಎಂಬಂತೆ 'ತಾನು ಇರುವುದೇ ಇತರಿಗಾಗಿ, ಭಗವಂತ ಭಾಗವತರ ಸೇವೆಗಾಗಿ' ಎಂಬುದನ್ನು ಆಚರಣೆಯಿಂದಲೇ ಮನಸ್ಸಿಗೆ ತರುತ್ತಿದ್ದರು.


ಶ್ರೀರಂಗಸದ್ಗುರು ದಂಪತಿಗಳು ಬಸರೀಕಟ್ಟೆಗೆ ಆಗಮಿಸಿದಾಗ ಅವರ ಸೇವಾನುಕೂಲಗಳನ್ನು ಶ್ರೀ ಗುರುದಾಸರು ಮತ್ತು ಕಲ್ಯಾಣಮ್ಮನವರು ನಿರ್ವಹಿಸುತ್ತಿದ್ದರು. ಅದರಲ್ಲಿ ಶಂಕ್ರಣ್ಣಯ್ಯನವರ ಪಾತ್ರವೂ ಹಿರಿದಾಗಿರುತ್ತಿದ್ದಿತು. ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ ಕೆಲವು ಕೆಲಸಗಳನ್ನು ಹಂಚುತ್ತಿದ್ದರು. ಅವುಗಳೆಲ್ಲದರ ಮೇಲ್ವಿಚಾರಣೆ ಶಂಕ್ರಣ್ಣಯ್ಯನವರದೇ ಆಗಿರುತ್ತಿದ್ದಿತು. ಯಾವ ಕೆಲಸವನ್ನಾದರೂ ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಶಂಕ್ರಣ್ಣಯ್ಯನವರ ಮನೆ, ಹರಿದಾಸರ ಮನೆ ಹಾಗೂ ಜನಾರ್ದನಸ್ವಾಮಿ ದೇವಸ್ಥಾನದ ಮಧ್ಯದಲ್ಲಿ ಇತ್ತು. ಅವರ ಧರ್ಮಪತ್ನಿ ಸರಸ್ವತಕ್ಕ ಅವರೂ ಕೂಡಾ ತುಂಬಾ ಆತ್ಮೀಯರು. ಅವರು ನಿಜವಾದ ಅರ್ಥದಲ್ಲಿ ಸಹಧರ್ಮಿಣಿಯಾಗಿದ್ದರು. ಮಿತ ಭಾಷಿಣಿಯಾದ ಅವರಿಗೆ ನಮ್ಮನ್ನೆಲ್ಲಾ ಕಂಡರೆ ತುಂಬಾ ಪ್ರೀತಿ. ಅವರ ಮಕ್ಕಳು  ಶ್ರೀನಿವಾಸ ಹಾಗೂ ಕಲ್ಯಾಣಿ, ಅವರ ತಂದೆತಾಯಿಯರಂತೆ ಸರಳ ವ್ಯಕ್ತಿಗಳು. 

ಶ್ರೀಗುರುದಂಪತಿಗಳು ಬಸರೀಕಟ್ಟೆಗೆ 1962 ರಿಂದ 1967 ರವರೆಗೆ ಅನೇಕ ಸಲ ದಯಮಾಡಿಸಿದ್ದರು. ಆಗ ಅವರು ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅನೇಕ ಪ್ರವಚನಗಳನ್ನು ದಯಪಾಲಿಸಿ ಅದರ ಬಗ್ಗೆ ತಿಳಿವಳಿಕೆಯನ್ನು ಎಲ್ಲರಿಗೂ ಕೊಟ್ಟರು. ಆ ಸಮಯದಲ್ಲಿ ಕಾರ್ಯಕ್ರಮಕ್ಕೆ ಮೈಸೂರು, ಬೆಂಗಳೂರಿನಿಂದ ಮತ್ತು ಬಸರೀಕಟ್ಟೆಯ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಜನರು ಸೇರುತ್ತಿದ್ದರು. ಇದಲ್ಲದೆ, ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಆಗ ನಮಗೆಲ್ಲಾ ಹಬ್ಬದ ಸಂಭ್ರಮವಾಗಿರುತ್ತಿತ್ತು. ಆ ಸಮಯದಲ್ಲಿ ಶಂಕ್ರಣ್ಣಯ್ಯನವರ ಪಾತ್ರ ತುಂಬಾ ದೊಡ್ಡದಾಗಿರುತ್ತಿತ್ತು. ಬಂದವರಿಗೆ ಊಟದ ವ್ಯವಸ್ಥೆ, ಮಲಗಲು ಹಾಸಿಗೆ ವ್ಯವಸ್ಥೆ, ಸ್ನಾನದ ವ್ಯವಸ್ಥೆ ಇತ್ಯಾದಿಗಳನ್ನು ಮಾಡಬೇಕಾಗಿದ್ದಿತು. ಆ ಸಮಯದಲ್ಲಿ ಅವರು ಶ್ರೀಯುತರಾದ ಬಿ.ವಿ.ಶ್ರೀನಿವಾಸ ಮೇಷ್ಟ್ರು, ಬಿ.ಆರ್.ಚೆನ್ನಕೇಶವ ಮೇಷ್ಟ್ರು, ಬಿ.ಎ.ಶ್ರೀನಿವಾಸ ಮೇಷ್ಟ್ರು ಮುಂತಾದ ಹಿರಿಯರನ್ನು ಮುಂದಿಟ್ಟುಕೊಂಡು ಇವೆಲ್ಲದರ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದರು. ಅಂತೆಯೇ ಶ್ರೀಗುರು ದಂಪತಿಗಳ ಯೋಗಕ್ಷೇಮದ ಜವಾಬ್ದಾರಿಯೂ ತುಂಬಾ ಇರುತ್ತಿತ್ತು. ಅದೆಲ್ಲವನ್ನೂ ಶಂಕ್ರಣ್ಣಯ್ಯನವರೇ ವಹಿಸಿಕೊಂಡು ಗುರುದಂಪತಿಗಳ ಸೇವೆಯನ್ನು ಚೆನ್ನಾಗಿ ಮಾಡುತ್ತಿದ್ದರು. 'ಸೇವೆ' ಎಂಬ ಪದದ ಅರ್ಥ ಗೊತ್ತಾಗಿದ್ದುದೇ ಶಂಕ್ರಣ್ಣಯ್ಯನವರಿಂದ. ಅವರು 'ಪಾದಸೇವೆ'ಎಂಬ ವಿಷಯದ ಬಗ್ಗೆ ಪ್ರವಚನವನ್ನೇ ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ವಿಷಯಗಳು ಅವರಿಗೆ ಗೊತ್ತಿತ್ತು ಎಂದು ಆ ಸಂದರ್ಭದಲ್ಲಿ ನಮ್ಮ ಅರಿವಿಗೇ ಬಂದಿರಲಿಲ್ಲ. ಈಗ ಯೋಚಿಸಿದಾಗ ಆಶ್ಚರ್ಯವಾಗುತ್ತದೆ. ಎಷ್ಟೊಂದು ಆಧ್ಯಾತ್ಮಿಕ ವಿಷಯ ತಿಳಿದಿದ್ದರೂ, ಎಷ್ಟೊಂದು ಸಾಧನೆ ಮಾಡುತ್ತಿದ್ದರೂ ಯಾವುದನ್ನೂ ತೋರಿಸಿಕೊಳ್ಳದೇ, ಎಲೆಮರೆಯ ಹಣ್ಣಿನಂತೆ ಇದ್ದರಲ್ಲಾ ಎಂದು! ಅವರಿಗೆ ಅನೇಕಾನೇಕ ನಮಸ್ಕಾರಗಳು.' ಎಂದು ನೆನಪಿಸಿಕೊಳ್ಳುತ್ತಾರೆ.

ಶ್ರೀ ಸದ್ಗುರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀಯುತ ಬಿ.ವಿ.ಶ್ರೀನಿವಾಸರು 'ಆಗಿನ್ನೂ ಅಧಿಕೃತವಾಗಿ ಹೈಸ್ಕೂಲ್ ಆರಂಭವಾಗಿರಲಿಲ್ಲ. ಆದರೆ ಅವರು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾಶಾಲೆಯ ಪ್ರತಿಯೊಂದು ಕೆಲಸದಲ್ಲೂ ಜವಾಬ್ದಾರಿ ಹೊತ್ತು ನಡೆಸಿದರು. ವಸತಿ ಶಾಲೆಗೆ ಬೇಕಾಗುವ ತರಕಾರಿಗಳನ್ನು ಹಿತ್ತಲಲ್ಲಿ ಬೆಳೆಯುವುದು, ಪೂಜೆಗೆ ಹೂಗಿಡ ಬೆಳೆಸುವುದು, ಅಡುಗೆಗೆ-ಸ್ನಾನಕ್ಕೆ ಬೇಕಾದ ಕಟ್ಟಿಗೆ ಸಂಗ್ರಹಿಸುವುದು, ಇವೆಲ್ಲದರಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು.' ಎಂದು ನೆನೆಪಿಸಿಕೊಳ್ಳುತ್ತಾರೆ. 

ವಿದ್ಯಾಶಾಲೆಯ ವಿದ್ಯಾರ್ಥಿನಿಯಾಗಿದ್ದ ಶ್ರೀಮತಿ ಶೃಂಗೇರಿ ಉಷಾರವರು, 'ಅವರು ಗುದ್ದಲಿ ಹಿಡಿದು ನೆಲ ಅಗೆಯುತ್ತಿದ್ದರು; ಗರಗಸ ಹಿಡಿದು ಮರ ಕೊಯ್ಯುತ್ತಿದ್ದರು; ಕೊಡಲಿ ಹಿಡಿದು ಕಟ್ಟಿಗೆ  ಒಡೆಯುತ್ತಿದ್ದರು. ಶಾಲೆಯ ಮಕ್ಕಳಿಂದ ವಸತಿಗೃಹ, ಪಶುಪಾಲನೆ, ಹಾಸ್ಟೆಲ್ ಗೆ  ಕಟ್ಟಿಗೆ ಸರಬರಾಜು ಮುಂತಾದ ಕಾರ್ಯಗಳನ್ನು ನಿರ್ದೇಶಿಸುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರು ಮಾಡಿದರು. ಯಾವ ಕೆಲಸ ಮಾಡಿದರೂ ಅದು ಭಗವಂತನ ಸೇವೆಯೇ ಎಂಬುದನ್ನು ಮೈಗೂಡಿಸಿದರು.' ಎಂದು ನೆನೆಯುತ್ತಾರೆ. 

ಶ್ರೀಯುತ ಬಿ.ವಿ.ಶ್ರೀನಿವಾಸರು 'ಶ್ರೀಸದ್ಗುರು ವಿದ್ಯಾಶಾಲೆಯಲ್ಲಿ ಪ್ರತಿವರ್ಷ ಭಾದ್ರಪದಮಾಸದಲ್ಲಿ 21 ದಿನದ ಪರ್ಯಂತ ಶ್ರೀ ಗುರುಗಣಪತಿ ಮಹೋತ್ಸವವು ಬಹಳ ವೈಭವದಿಂದ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಶ್ರೀ ಗಣಪತಿ ಮಂಟಪದ ತಯಾರಿ ಅವರದ್ದೇ ಆಗಿರುತ್ತಿತ್ತು. ಅವರ ನೇತೃತ್ವದಲ್ಲಿ ಬಣ್ಣದ ಕಾಗದದಿಂದ ಬಹಳ ಸುಂದರವಾಗಿ ಮಂಟಪದ ನಿರ್ಮಾಣವಾಗುತ್ತಿತ್ತು. ಹಿಡಿದ ಕೆಲಸವನ್ನು ಹಗಲು ರಾತ್ರಿ ಎನ್ನದೆ ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಅವರ ಸ್ವಭಾವ. ಒಂದು ವರ್ಷ ಶ್ರೀಗಣೇಶ ಉತ್ಸವಕ್ಕಾಗಿ ಬೃಹದ್ಗಾತ್ರದ ಗಣಪತಿ ವಿಗ್ರಹವನ್ನು ಅವರೇ ತಯಾರಿಸಿದ್ದರು. ಸುಮಾರು ಒಂದು ತಿಂಗಳ ಕಾಲದಲ್ಲಿ ತಯಾರಿಸಿದ ಆ ವಿಗ್ರಹವು ಬಹು ಸುಂದರವಾಗಿತ್ತು. ಪೇಟೆಯಲ್ಲಿ ತಯಾರಾಗುತ್ತಿದ್ದ ವಿಗ್ರಹಗಳ ಸೌಂದರ್ಯವನ್ನು ಮೀರಿಸುವಂತಿತ್ತು.'

ಇದನ್ನು ಮುಂದುವರಿಸುತ್ತಾ ಶ್ರೀಮತಿ ಕಾತ್ಯಾಯನಿದತ್ತರವರು 'ಶ್ರೀಸದ್ಗುರು ವಿದ್ಯಾಶಾಲೆಯಲ್ಲಿ ಪ್ರತಿವರ್ಷ 21 ದಿನಗಳ ಪರ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶೋತ್ಸವದಲ್ಲಿ ಬೆಳಗಿನ ವೇಳೆ ಪೂಜೆಯನ್ನು ಷೋಡಶೋಪಚಾರಪೂರ್ವಕ ಮಂತ್ರೋಕ್ತವಾಗಿ ಪೂಜ್ಯ ಗುರುದಾಸರು ನೆರವೇರಿಸುತ್ತಿದ್ದರು. ಪೂಜ್ಯ ಶ್ರೀ ರಂಗಪ್ರಿಯ ಶ್ರೀ ಶ್ರೀಗಳು ರಚನೆಮಾಡಿರುವ 'ಶ್ರೀಗಣೇಶ ಮಾನಸ ಪೂಜಾಸ್ತೋತ್ರ'ಕ್ಕೆ ಶ್ರೀ ಗುರುದಾಸರು ರಾಗಸಂಯೋಜನೆ ಮಾಡಿದ್ದರು. ಅದರಂತೆ ಗುರುದಾಸ ದಂಪತಿಗಳು ಸಂಜೆ ವೇಳೆಯಲ್ಲಿ ಸ್ತೋತ್ರರೂಪದಿಂದ ಗುರುಗಣಪತಿಯನ್ನು ಪೂಜಿಸುತ್ತಿದ್ದರು. ನಾವುಗಳೂ ಅವರ ಜೊತೆ ಸೇರಿ ಸ್ತೋತ್ರಪೂಜೆಯನ್ನು ಮಾಡುತ್ತಿದ್ದೆವು. ಪೂಜಾನಂತರ ಅಷ್ಟಾವಧಾನ ಸೇವೆ ಸಂಪನ್ನವಾಗುತ್ತಿತ್ತು. ಆ ಸಮಯದಲ್ಲಿ ಗೀತಾಶಾಸ್ತ್ರಸೇವೆಯನ್ನು ಮಾಡಲು ಪೂಜ್ಯ ಗುರುದಾಸರು ನನಗೆ ಹೇಳುತ್ತಿದ್ದರು. ಭಗವದ್ಗೀತೆಯಲ್ಲಿರುವ ಭಕ್ತಿಯೋಗದ ಎರಡು ಸ್ತೋತ್ರಗಳನ್ನು ಪ್ರತಿದಿನವೂ ಅರ್ಥಸಹಿತ ಹೇಳಬೇಕಾಗಿದ್ದಿತು. ಶ್ರೀ ಶಂಕ್ರಣ್ಣಯ್ಯನವರು ಅದನ್ನು ನನಗೆ ಹೇಳಿಕೊಟ್ಟು ಅಭ್ಯಾಸ ಮಾಡಿಸುತ್ತಿದ್ದರು. ಅವರು ನನಗೆ ಅದರ ಬಗ್ಗೆ ಎಷ್ಟು ಚೆನ್ನಾಗಿ ತರಬೇತಿ ಕೊಡುತ್ತಿದ್ದರೆಂದರೆ, ಆ ಸೇವೆಯನ್ನು ನಾನು ಮಾಡಿದನಂತರ ಎಲ್ಲರೂ ಮುಕ್ತಕಂಠದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. 21 ದಿನಗಳು ಪೂಜೆ ಸಂಪನ್ನವಾದ ನಂತರ ಕವಲುಕುಡಿಗೆ ಕೆರೆಯಲ್ಲಿ ಅದನ್ನು ವಿಸರ್ಜಿಸುತ್ತಿದ್ದರು.

ಪ್ರತಿ ವರ್ಷವೂ ಗಣಪತಿಯನ್ನು ಮಾಡಿಸಿ ಪೂಜೆಗೆ ತರುತ್ತಿದ್ದರು. ಒಂದು ವರ್ಷ ಶಂಕ್ರಣ್ಣಯನವರೇ ಗಣಪತಿ ವಿಗ್ರಹವನ್ನು ಮಣ್ಣಿನಲ್ಲಿ ಮಾಡಿದರು. ದೇವಸ್ಥಾನದ ಮಹಡಿಯಲ್ಲಿ ಪೂಜ್ಯ ಕಲ್ಯಾಣಮ್ಮನವರು ನಡೆಸುತ್ತಿದ್ದ ಕ್ಲಾಸ್ ರೂಮಿನಲ್ಲಿದ್ದ ಒಂದು ಟೇಬಲ್ ಮೇಲೆ ಗಣಪತಿಯನ್ನು ಮಾಡುತ್ತಿದ್ದರು. ಹಾಗೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಪೂಜ್ಯ ಗುರುದಾಸರು ಕಣ್ಣುಮುಚ್ಚಿ ಅಂತರಂಗದಲ್ಲಿ ಗಣಪತಿಯನ್ನು ನೋಡಿಕೊಂಡು, 'ಸೊಂಡಿಲು ಹೀಗೆ ಬರಬೇಕು; ಕಿವಿ ಹೀಗೆ ಇರಬೇಕು'ಎಂದು ಮಾರ್ಗದರ್ಶನ ಮಾಡುತ್ತಿದ್ದರು. ಶಂಕ್ರಣ್ಣಯ್ಯನವರು ಅವರು ಹೇಳಿದಂತೆಯೇ ಮಾಡುತ್ತಿದ್ದರು. ಅದು ಈಗ ನನಗೆ ಹಿಂದಿನ ಮಹರ್ಷಿಗಳ ಕಾಲವನ್ನು ನೆನಪಿಸುತ್ತದೆ. ಆ ವಿಗ್ರಹ ತುಂಬಾ ಸುಂದರವಾಗಿ ಮೂಡಿಬಂದಿತ್ತು. ಇದು ಅವರ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿದೆ.'

ಶ್ರೀಮತಿ ವಿಜಯವಲ್ಲೀ 'ಸದ್ಗುರು ವಿದ್ಯಾಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ಉತ್ಸವದಲ್ಲಂತೂ ಪೂರ್ವಭಾವಿಯಾಗಿ ಮಂಟಪಗಳ ಸಿಂಗಾರ ತಯಾರಿಯನ್ನು ಉಳಿದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಂಕ್ರಣ್ಣಯ್ಯನವರೇ ಮಾಡುತ್ತಿದ್ದರು. ಅವರ ಕೊನೆಯ ವರ್ಷದ ಗಣಪತಿಯನ್ನು ತಮ್ಮ ಕೈಯಿಂದಲೇ  ರಚಿಸಿ ಕೃತಕೃತ್ಯರಾಗಿದ್ದರು. ಆ ಗಣಪತಿ ಹಬ್ಬದ ವೈಭವ ಅದರಲ್ಲಿ ಭಾಗಿಯಾದವರ ಮನಸ್ಸಿನಲ್ಲಿರುವುದಂತು ನಿಜ.

ಶಾಲಾ ವಾರ್ಷಿಕೋತ್ಸವದಲ್ಲಿ ನಮ್ಮ ತಂದೆ ಗುರುದಾಸರು ಪೌರಾಣಿಕ ನಾಟಕಗಳನ್ನು ಮಕ್ಕಳಿಂದ ಮಾಡಿಸುತ್ತಿದ್ದರು. 'ಭಕ್ತಪ್ರಹ್ಲಾದ' ನಾಟಕದಲ್ಲಿ ನಾನು ಪ್ರಹ್ಲಾದನಾದರೆ ಶಂಕ್ರಣ್ಣಯ್ಯ ಉಗ್ರನರಸಿಂಹನ ಪಾತ್ರ ವಹಿಸಿದ್ದರು. ಈ ರೀತಿ ಎಲ್ಲ ಕಲೆಗಳಲ್ಲಿ ಪಾರಂಗತರಾದ ಪರೋಪಕಾರಿ ಶಂಕ್ರಣ್ಣಯ್ಯ ದೀರ್ಘಾಯುಷಿಯಾಗಿ ಇರಬೇಕಾಗಿತ್ತೆಂದು ನಮ್ಮ ಆಸೆ. ಭಗವಂತನ ಸಂಕಲ್ಪ ಯಾರು ಮೀರಲಾಗುತ್ತದೆ. ನಮ್ಮ ಬಾಲ್ಯದ ಫೋಟೋಗಳನ್ನೆಲ್ಲಾ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಅವರ ಸ್ಮರಣೆ ಚಿರವಾಗಿರಿಸಿದ ಶಂಕ್ರಣ್ಣಯ್ಯನವರಿಗೆ ಈ ನುಡಿನಮನ,' ಎಂದು ಸ್ಮರಿಸುತ್ತಾರೆ.    

     'ಶ್ರೀಸದ್ಗುರು ವಿದ್ಯಾಶಾಲೆಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ವಾರ್ಷಿಕೋತ್ಸವದಲ್ಲಿ ಆಗ ನೃತ್ಯ ನಾಟಕ ಇತ್ಯಾದಿ ಕಾರ್ಯಕ್ರಮಗಳು ಇರುತ್ತಿದ್ದವು. ಆಗ ಪ್ರತಿಭಾವಂತ ಮಕ್ಕಳಿಗೆ ಬಹುಮಾನವೂ ಇರುತ್ತಿದ್ದವು. ನಾಟಕವನ್ನು ಪೂಜ್ಯ ಗುರುದಾಸರೊಂದಿಗೆ ಶಂಕ್ರಣ್ಣಯ್ಯನವರೂ ಅಭ್ಯಾಸ ಮಾಡಿಸುತ್ತಿದ್ದರು. ಭಕ್ತಪ್ರಹ್ಲಾದ, ರಾಸಕ್ರೀಡೆ, ಶ್ರೀರಾಮ ಪಟ್ಟಾಭಿಷೇಕ, ಸೀತಾಪರಿತ್ಯಾಗ ಇತ್ಯಾದಿ ಅನೇಕ ನಾಟಕಗಳನ್ನು ಆಡಿಸಿದ್ದರು. ಅವರು ಎಲ್ಲೂ ತಪ್ಪಾಗದಂತೆ, ಯಾರ ಮನಸ್ಸಿಗೂ ನೋವಾಗದಂತೆ ತಿದ್ದುತ್ತಿದ್ದರು' ಎನ್ನುತ್ತಾರೆ ಶ್ರೀಮತಿ ಕಾತ್ಯಾಯನಿದತ್ತ.

ಶ್ರೀಯುತ ಬಿ.ವಿ.ಶ್ರೀನಿವಾಸರು ಮುಂದುವರಿಸುತ್ತಾ, 'ಶ್ರೀಸದ್ಗುರು ವಿದ್ಯಾಶಾಲೆಯ ವಾರ್ಷಿಕೋತ್ಸವದಲ್ಲಿ ಶಂಕ್ರಣ್ಣಯ್ಯನವರದ್ದು ಪ್ರಧಾನಪಾತ್ರ. ಶ್ರೀಗುರುದಾಸರ ನಿರ್ದೇಶನದಂತೆ ನಡೆಯುತ್ತಿದ್ದ ಈ ಕಾರ್ಯಕ್ರಮದ ಬಹುಪಾಲು ಜವಾಬ್ದಾರಿ ಇವರದ್ದೆ!  ನಾಟಕ, ನೃತ್ಯಗಳ ನಿರ್ದೇಶನ ಮತ್ತು ಪಾತ್ರಧಾರಿಗಳ ಮೇಕಪ್ಪು ಇವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಹಿಂದಿ ಅಧ್ಯಾಪಕರಾದ ಶ್ರೀ ಸುಬ್ರಹ್ಮಣ್ಯ ಆಚಾರ್ಯರ ಜೊತೆ 'ಇಂಚಾಂಡ ಎಂಚ' ಎಂಬ ತುಳುನಾಟಕದಲ್ಲಿ 'ಪಿಜುಣಎಂಬ ಹಾಸ್ಯ ಪಾತ್ರದಲ್ಲಿ ನಟಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಿತು. 

ಈ ಶಾಲೆಯಲ್ಲಿ ಸಾಗರ, ಬೆಂಗಳೂರು, ಮೈಸೂರು ಮೊದಲಾದ ದೂರದ ಊರಿನಿಂದ ವಿದ್ಯಾರ್ಥಿಗಳು ಬಂದು ಸೇರಿದ್ದರು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ 85ಕ್ಕೆ ಏರಿತು. ಶಾಲಾ ಸಮಯದ ನಂತರ ವಿದ್ಯಾರ್ಥಿಗಳನ್ನು ಪಕ್ಕದ ಹೊನ್ನಗುಂಡಿಯ ಗದ್ದೆಯೊಂದರಲ್ಲಿ ತರಕಾರಿ ಬೆಳೆಸಲು ಕರೆದುಕೊಂಡು ಹೋಗುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಶಾಲೆಯ ಹಾಗೂ ದೇವಸ್ಥಾನದ ಆವರಣವನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಚ್ಛವಾಗಿಟ್ಟುಕೊಂಡಿರುತ್ತಿದ್ದರು. ಪೂಜ್ಯ ಶಂಕ್ರಣ್ಣಯ್ಯನವರಿಗೆ ಎಲ್ಲಾ ವಿಷಯಗಳಲ್ಲೂ ಪ್ರಾವೀಣ್ಯವಿದ್ದು ಸಕಲ ಕಲಾ ಪ್ರವೀಣರಾಗಿದ್ದರು.' ಎಂದು ನೆನೆಯುತ್ತಾರೆ.    

ಶ್ರೀಮತಿ ಶೃಂಗೇರಿ ಉಷಾರವರು, 'ಶಂಕ್ರಣ್ಣಯ್ಯನವರ ದೈವಭಕ್ತಿ, ಶ್ರದ್ಧೆ, ಅವರು ಪೂಜಾಕಾಲದಲ್ಲಿ ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಗೊತ್ತಾಗುತ್ತಿತ್ತು. ಧ್ಯಾನಕ್ಕೆ ಕುಳಿತರೆ ವಿಗ್ರಹದಂತೆ ಕುಳಿತಿರುತ್ತಿದ್ದರು. ಯಾರಾದರೂ ನಮಸ್ಕಾರ ಮಾಡಿದರೆ ಒಂದೆರಡು ಕ್ಷಣವಾದರೂ ಕಣ್ಣುಮುಚ್ಚಿ, ಪ್ರತಿನಮಸ್ಕಾರ ಮಾಡಿ, ಕಣ್ಣುಬಿಟ್ಟಾಗ ಅವರ ಕಣ್ಣುಗಳು ಒಳಗೆ ಸೇರಿಕೊಂಡಂತೆ ಚಿಕ್ಕದಾಗಿರುತ್ತಿದ್ದವು. 'ಸಾಧಕನು ಧ್ಯಾನ ಮಾಡಿ ಕಣ್ಣು ಬಿಟ್ಟಾಗ ಅವನ ಕಣ್ಣುಗಳು ಇರುವೆ ಕಡಿದಂತೆ ಸಣ್ಣಗಾಗಿರುತ್ತವೆ' ಎಂದು ಪರಮಹಂಸರು ಹೇಳಿದುದನ್ನು ಓದಿದಾಗ ನೆನೆಪಿಗೆ ಬರುವುದು ಶಂಕ್ರಣ್ಣಯ್ಯನವರ ಕಣ್ಣುಗಳು.     

ಶ್ರೀಸದ್ಗುರು ಪ್ರೌಢಶಾಲೆ ಆರಂಭಗೊಂಡ ಮೇಲೆ ಅವರು ಶಿಕ್ಷಕರಾಗಿ ತರಗತಿಯಲ್ಲಿ ಹೇಗೆ ಪಾಠ ಆರಂಭಿಸುತ್ತಿದ್ದರೆಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆ.

ಶಂಕರರಾವ್: ನೆನ್ನೆ ಏನು ಪಾಠಮಾಡಿದ್ದೆ?

ವಿದ್ಯಾರ್ಥಿಗಳು: ಗ್ರಹಣಗಳು ಸಾರ್.

ಶಂಕರರಾವ್: ಸೂರ್ಯಗ್ರಹಣ ಆಯ್ತಾ?

ವಿದ್ಯಾರ್ಥಿಗಳು: ಆಯ್ತು ಸಾರ್.

ಶಂಕರರಾವ್: ಚಂದ್ರಗ್ರಹಣ ಆಗಿದೆಯಾ?

ವಿದ್ಯಾರ್ಥಿಗಳು: ಆಗಿದೆ ಸಾರ್.

ಶಂಕರರಾವ್: ಖಂಡಗ್ರಹಣ?

ವಿದ್ಯಾರ್ಥಿಗಳು: (ಉತ್ಸಾಹದಿಂದ)ಆಯ್ತು ಸಾರ್.

ಶಂಕರರಾವ್: ಪಾಣಿಗ್ರಹಣ.

ವಿದ್ಯಾರ್ಥಿಗಳು: (ಇನ್ನೂಉತ್ಸಾಹದಿಂದ)ಆಯ್ತು ಸಾರ್.

ಶಂಕರರಾವ್: ಹೌದಾ? ಯಾರಿಗೆಲ್ಲಾ ಪಾಣಿಗ್ರಹಣ ಆಗಿದೆ?

ಎಂದು ಜೋರಾಗಿ ನಗುತ್ತಿದ್ದರು. ವಿದ್ಯಾರ್ಥಿಗಳಿಗೂ ಆ ತಮಾಷೆ ಅರ್ಥವಾಗಿ ಜೋರಾಗಿ ನಗುತ್ತಿದ್ದರು. 'ಸರಿ-ಸರಿ. ಪಾಣಿಗ್ರಹಣದ ಬಗ್ಗೆ ಮುಂದೆ ನೋಡಿಕೊಳ್ಳೋಣ. ಈಗ ಪಾಠ ಮುಂದುವರಿಸೋಣ' ಎಂದು ಸೀರಿಯಸ್ಸಾಗಿ ಪಾಠ ಮುಂದುವರಿಸುತ್ತಿದ್ದರು.

'ಯೋಗಃ ಕರ್ಮಸು ಕೌಶಲಂ'ಎಂಬಂತೆ ಏನೇ ಕೆಲಸ ಮಾಡಲಿ, ಅದರಲ್ಲಿ ಅಚ್ಚುಕಟ್ಟು; ಅದನ್ನು ಸಮರ್ಪಕವಾಗಿ ಮುಗಿಸುತ್ತಿದ್ದ ರೀತಿ ಅನನ್ಯವಾದುದು. ಇಷ್ಟೆಲ್ಲಾ ಮಾಡಿದರೂ 'ನಾನು ಮಾಡಿದೆ' ಎಂಬ 'ಅಹಂ' ಅವರಲ್ಲಿರಲಿಲ್ಲ. ಯಾವುದೇ ಸನ್ನಿವೇಶದಲ್ಲೂ ಭಾವೋದ್ವೇಗವನ್ನು ಪ್ರದರ್ಶಿಸುತ್ತಿರಲಿಲ್ಲ. ಸುಖದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಆತ್ಮೋನ್ನತಿಯನ್ನು ಅವರು ಸಾಧಿಸಿಕೊಂಡಿದ್ದರು'ಎಂದು ಸ್ಮರಿಸುತ್ತಾರೆ.    

ವಿದ್ಯಾಶಾಲೆಯ ವಿದ್ಯಾರ್ಥಿನಿಯಾಗಿದ್ದ ಶ್ರೀಮತಿ ಸುನಂದಾರವರು 'ಬಸರೀಕಟ್ಟೆಯ ಶ್ರೀಸದ್ಗುರು ವಿದ್ಯಾಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವಾಗ ಶಂಕ್ರಣ್ಣಯ್ಯ ಮೇಲ್ಗಡೆ ತೊಲೆಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಪಾಠಮಾಡುತ್ತಿದ್ದರು. ಅದಕ್ಕೆ, ಮಕ್ಕಳೆಲ್ಲ ಅನ್ವರ್ಥವಾಗಿ 'ಶಂಕ್ರಣ್ಣಯ್ಯ ಶಾಲೆಯ ಆಧಾರಸ್ತಂಭ' ಎಂದೇ ಕರೆಯುತ್ತಿದ್ದರು. ಅವರು ಅಲ್ಲಿನ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಜೀವನಾಧಾರಸ್ತಂಭವೂ ಆಗಿದ್ದರು. ಹಣದ ತೊಂದರೆಯಿಂದ ಓದು ಮುಂದುವರಿಸಲಾಗದವರಿಗೆ ಶಾಲೆಯ ಫೀಸ್ ಮತ್ತು ಪುಸ್ತಕದ ಖರ್ಚನ್ನು ಇವರೇ ವಹಿಸಿಕೊಳ್ಳುತ್ತಿದ್ದರು. ಬಡ ವಿದ್ಯಾರ್ಥಿಗಳಿಗೆ ವಸತಿ ಗೃಹದಲ್ಲಿ ವಾಸಿಸಲು ಅವಕಾಶ ಕಲ್ಪಿಸಿ ಊಟೋಪಚಾರಗಳ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದರು. ಶಾಲೆಯ ಸಮವಸ್ತ್ರವನ್ನು ಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆಢ್ಯರಾದ ಪೋಷಕರಿಂದ ವಂತಿಗೆ ವಸೂಲಿಮಾಡಿ ಸಮವಸ್ತ್ರ ಕೊಡಿಸುತ್ತಿದ್ದರು. ಜೀವನಾಧಾರವಿಲ್ಲದ ವಿದ್ಯಾರ್ಥಿಗಳಿಗೆ ಓದು ಮುಗಿದ ನಂತರ ಅದೇ ಶಾಲೆಯಲ್ಲೇ ಯಾವುದಾದರೂ ಯೋಗ್ಯತೆಗೆ ತಕ್ಕಂತೆ ಉದ್ಯೋಗ ಕೊಡಿಸುತ್ತಿದ್ದರು. ನೆಲೆ ಇಲ್ಲದವರಿಗೆ ಸ್ವಂತ ಮನೆಮಾಡಿಕೊಳ್ಳಲು ಸಹಕಾರ ಕೊಡುತ್ತಿದ್ದರು. ಹೀಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. ಇವರಿಂದ ಸಹಾಯ ಪಡೆದವರಲ್ಲಿ ನಾನೂ ಒಬ್ಬಳು. ಇಂದಿಗೂ ಅವರು ವಿದ್ಯಾರ್ಥಿಗಳ ಹೃದಯದಲ್ಲಿ ಅಚ್ಚಳಿಯದ ನೆನೆಪಾಗಿ ಉಳಿದಿದ್ದಾರೆ. ಅವರ ಸಂಪರ್ಕಕ್ಕೆ ಬಂದವರೆಲ್ಲರೂ ಅವರನ್ನು ಮರೆಯುವಂತೆಯೇ ಇಲ್ಲ'ಎಂದು ಆರ್ದ್ರವಾಗಿ ಸ್ಮರಿಸುತ್ತಾರೆ.

ಶ್ರೀಮತಿ ಕಾತ್ಯಾಯನಿದತ್ತರವರು 'ಶ್ರೀಗುರುದಂಪತಿಗಳು ಬಸರೀಕಟ್ಟೆಗೆ ಬಂದಾಗ ನಮಗೂ ಅವರಿಗೂ ಮಧ್ಯೆ ಶಂಕ್ರಣ್ಣಯ್ಯನವರೇ ವಾಹಕರಾಗಿದ್ದರು. ಶಂಕ್ರಣ್ಣಯ್ಯನವರ ಮನೆಯೇ ಶ್ರೀಗುರುದಂಪತಿಗಳ ಪಾಕಗೃಹವಾಗಿತ್ತು. ಪ್ರತಿ ದಿವಸ ಗುರುದೇವರು ಕೆಲವರನ್ನು ಸಹಭೋಜನಕ್ಕೆ ಕರೆಯುತ್ತಿದ್ದರು. ತುಂಬಾ ಜನರನ್ನು ಕರೆಯಲು ಸ್ಥಳಾವಕಾಶವಿರುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಶಂಕ್ರಣ್ಣಯ್ಯನವರು ಬಂದು 'ಕಾತ್ಯಾಯನಿ, ಗುರುದೇವರ ಜೊತೆ ಭೋಜನಕ್ಕೆ ನೀನು ಬರಬೇಕಂತೆ' ಎಂದು ಹೇಳಿದರು. ಅದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಜೊತೆಗೆ ಸಂಕೋಚವೂ ಆಯಿತು. 'ಹೇಗೆ ಅಷ್ಟು ದೊಡ್ಡವರ ಜೊತೆ ಕುಳಿತು ಊಟಮಾಡುವುದು' ಎಂದು. ಅಂದು ನಾನು ಗುರುದೇವರ ಎದುರಿನ ಸಾಲಿನಲ್ಲೇ ಕುಳಿತಿದ್ದೆ. ನನ್ನನ್ನು ಕಂಡು ಗುರುದೇವರು 'ಕಾತ್ಯಾಯನಿ, ಸಂಕೋಚ ಮಾಡಿಕೊಳ್ಳಬೇಡಮ್ಮ' ಎಂದು ಉಪಚಾರವನ್ನು ಹೇಳುತ್ತಾ ಪಾಯಸವನ್ನು ಬಲವಂತವಾಗಿ ಬಡಿಸಿಸಿದರು. ಈ ರೀತಿ ಗುರುದೇವರ ಅನುಗ್ರಹ ಮತ್ತು ಕೃಪಾದೃಷ್ಟಿ ಹರಿಯುವಂತೆ ಮಾಡಿದ ಶಂಕ್ರಣ್ಣಯ್ಯನವರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇನೆ.'   

ಶ್ರೀಯುತ ಬಿ.ವಿ.ಶ್ರೀನಿವಾಸರು, 'ಮುಂದೆ ವಿದ್ಯಾಶಾಲೆಯು ಪ್ರವೃದ್ಧಮಾನಕ್ಕೆ ಬಂದು 1965 ರಲ್ಲಿ ಶ್ರೀಸದ್ಗುರು ಪ್ರೌಢಶಾಲೆಯಾಗಿ ವಿಸ್ತಾರಗೊಂಡಿತು. ಅದರ ಪ್ರಥಮ ಮುಖ್ಯೋಪಾಧ್ಯಾಯರಾಗಿ ಶ್ರೀಯುತ ಶಂಕರರಾಯರು 1967ರವರೆಗೆ ಕಾರ್ಯವನ್ನು ನಿರ್ವಹಿಸಿದರು. ಇಲಾಖಾ ನಿಯಮದಂತೆ ಮುಖ್ಯೋಪಾಧ್ಯಾಯರಾಗಲು ಬಿ.ಎಡ್  

 ಪದವಿ ಅನಿವಾರ್ಯವಾದುದರಿಂದ ಶ್ರೀ ಎಮ್. ವಾಸುದೇವಭಟ್ವರು ಮುಖ್ಯೋಪಾಧ್ಯಾಯರಾಗಿ, ಶ್ರೀ ಶಂಕ್ರಣ್ಣಯ್ಯನವರು ಹಿರಿಯ ಸಹಾಯಕ ಅಧ್ಯಾಪಕರಾದರು. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಶಿಕ್ಷಕರ ಸಂಖ್ಯೆಯೂ ಬೆಳೆಯಿತು. ಶ್ರೀ ಶಂಕ್ರಣ್ಣಯ್ಯನವರು ಎಲ್ಲಾ ಅಧ್ಯಾಪಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ಕುಟುಂಬದ ಹಿರಿಯ ಅಣ್ಣನಂತೆ ಮಾರ್ಗದರ್ಶನ ಮಾಡುತ್ತಿದ್ದರು. ಶ್ರೀ ಸದ್ಗುರು ವಿದ್ಯಾಸಮಿತಿಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು. ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಅವರ ಬೋಧನಾ ವಿಷಯವಾಗಿದ್ದಿತು. ಬೋಧನಾ ಶೈಲಿಯಿಂದ ಅವರು ಎಲ್ಲಾ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿಕೊಂಡಿದ್ದಲ್ಲದೆ ಶಾಲೆಗೆ ಭೇಟಿ ನೀಡಿದ ತನಿಖಾಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರೌಢಶಾಲೆಯ ವಾರ್ಷಿಕೋತ್ಸವದ ತಯಾರಿ ಅವರ ಮುಂದಾಳುತನದಲ್ಲಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಪೌರಾಣಿಕ ನಾಟಕಗಳನ್ನು ಅಭಿನಯಿಸುತ್ತಿದ್ದರು. ಅವರು ತಮ್ಮ ಸೇವಾ ಅವಧಿಯಲ್ಲಿ ಶಾಲೆಗೆ ರಜಾ ಹಾಕಿ ಬಿ.ಎಡ್ ಕಾಲೇಜಿಗೆ ಸೇರಿ ಪದವಿ ಪಡೆದರು. ಅವರ ಪರೋಪಕಾರ ಗುಣದಿಂದಾಗಿ ಅನೇಕರು ಉಪಕೃತರಾಗಿದ್ದಾರೆ. ಅದರಲ್ಲಿ ನಾನೂ ಒಬ್ಬ. ನನಗೆ ಶ್ರೀಸದ್ಗುರು ಪ್ರೌಢಶಾಲೆಯಲ್ಲಿ ನೌಕರಿಗೆ ಸೇರಲು ಅವಕಾಶ ಮಾಡಿಕೊಟ್ಟ ಅವರ ಉಪಕಾರವನ್ನು ಇಂದೂ ಸ್ಮರಿಸಿಕೊಳ್ಳುತ್ತೇನೆ' ಎಂದು ಸ್ಮರಿಸುತ್ತಾರೆ.

    'ಶ್ರೀಯುತ ಶಂಕರರಾಯರಿಗೆ ಅಲಂಕಾರಕಲೆ ಒಲಿದುಬಂದಿತ್ತು. ಭಗವಂತನ ವಿಶೇಷ ಪೂಜಾ ಸಂದರ್ಭದಲ್ಲಿ ಪೂಜೆಗೆ ಬೇಕಾದಂತಹ ಸುಂದರ ವಿನ್ಯಾಸವನ್ನೊಳಗೊಂಡ ಮಂಟಪವನ್ನು, ವಿಧವಿಧವಾದ ವಸ್ತ್ರವಿನ್ಯಾಸವನ್ನು ಅತ್ಯಂತ ಶೀಘ್ರಕಾಲದಲ್ಲಿ, ಸುಂದರವಾಗಿ ಲಭ್ಯವಿದ್ದ ಅಲ್ಪ ವಸ್ತುಗಳಿಂದಲೇ ಅದ್ಭುತವಾಗಿ ರಚಿಸುತ್ತಿದ್ದರು. ಆಗಿನ ಕಾಲದಲ್ಲಿ ಅದೂ ಹಳ್ಳಿಗಾಡಿನಲ್ಲಿ, ಈಗಿನಂತೆ ಅಂತಹ ಸೌಲಭ್ಯವೇನೂ ಇರುತ್ತಿರಲಿಲ್ಲ. ರಥೋತ್ಸವ, ಮಹೋತ್ಸವ ಮುಂತಾದ ಬೃಹತ್ಕಾರ್ಯಕ್ರಮದಲ್ಲಿ ಅದರ ಯೋಜನೆ ಮತ್ತು ನಿರ್ವಹಣೆಯ ಶ್ರಮದಾನ ಅವರಿಂದ ಇದ್ದೇ ಇರುತ್ತಿತ್ತು. ಹಳ್ಳಿಗಾಡಿನ ಆ ಬಸರೀಕಟ್ಟೆಯಲ್ಲಿ ನೂರಾರು ಜನ ಸೇರುವಂತಹ ಕಾರ್ಯಕ್ರಮದಲ್ಲಿ, ಸ್ನಾನ, ಭೋಜನ ಇತ್ಯಾದಿ ಸರ್ವವ್ಯವಸ್ಥೆಯ ರೂವಾರಿ ಇವರಾಗಿದ್ದರೂ ಇವರ ಶ್ರಮ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಎಲ್ಲವನ್ನೂ ಅಡಗಿಸಿಟ್ಟುಕೊಳ್ಳುವ ಸ್ವಭಾವ ಅವರಿಗೆ ಅವರ ಗುರುಗಳ ಅನುಗ್ರಹದಿಂದಲೇ ಬಂದಿತ್ತು.

ಶ್ರೀಯುತ ಶಂಕರರಾಯರು ಉತ್ತಮ ಛಾಯಾಗ್ರಾಹಕರಾಗಿದ್ದರು. ಛಾಯಾಗ್ರಹಣವಂತೂ ಅವರ ಎರಡನೇ ಪ್ರವೃತ್ತಿ(Second Nature) ಎನ್ನುವಷ್ಟು ಪ್ರಸಿದ್ಧ. ವಿದ್ಯಾಶಾಲೆಯ, ಮಂದಿರದ, ಗುರುಮನೆಯ ಮತ್ತು ರಥೋತ್ಸವ ಮುಂತಾದ ಮುಖ್ಯ ಕಾರ್ಯಕ್ರಮಗಳ ಚಿತ್ರಗಳು ಅವರ ಕ್ಯಾಮರಾದಿಂದಲೇ ಮೂಡಿ ಬಂದಿರುವುದು. 

ಅವರಿಗೆ ಪ್ರಕೃತಿಯೊಡನೆ ಒಮ್ಮಿಳಿತವಿತ್ತು. ಅಲ್ಲಿಯ ಪಕ್ಷಿಗಳ ಕೂಗಿಗೆ ಸಾಹಿತ್ಯ ರಚಿಸುವ ವಿನೋದದ ಕಾರ್ಯದಲ್ಲಿ ಶ್ರೀಗುರುಗಳೊಡನೆ ಭಾಗಿಯಾಗಿರುತ್ತಿದ್ದರು. ಅಂತಹ ಒಂದು ಪ್ರಸಂಗ ನೆನೆಪಿಸುವುದಾದರೆ, ಒಮ್ಮೆ ಮಹಾಗುರುಗಳೊಡನೆ ಭಕ್ತರ ಗುಂಪು ಪ್ರಕೃತಿಯ ಸೌಂದರ್ಯ ಸವಿಯಲು ಚಂಕ್ರಮಣ ಮಾಡುತ್ತಿದ್ದಾಗ ಗುರುಗಳು “ಬೀರಬಿಟ್ಟೆ” ಎಂಬ ಹಕ್ಕಿಯ ಕೂಗನ್ನು (ಅದುಟರ್ರಟರ್ರಟರಟರಟರ.... ಎಂದು ದೀರ್ಘವಾಗಿ ಕೂಗುತ್ತದೆ. ಮಲೆನಾಡಿನ ಜನರಿಗೆ ಇದು ಪರಿಚಿತ) ಅನುಕರಿಸುವಂತೆ, ‘ಶಂಕರ್ರಾವ್, ಈ ಹಕ್ಕಿಯ ಕೂಗಿಗೆ ಒಂದು ಸಾಹಿತ್ಯ ಹೇಳಿ’ಎಂದಾಗ ಕೊಂಚವೂ ತಡಮಾಡದೇ ಆ ಕೂಗನ್ನು ಅನುಸರಿಸಿ ‘ಕೌ..ವು...ರ್ರವ! ಪಾಂಡವರ್ಬೀಡ್ಬಿಟ್ಟಿದಾರಿದಾರಿದಾರಿದಾರೆ’ ಎಂದು ಹಕ್ಕಿಯು ಕೂಗಿದ ಧಾಟಿಯಲ್ಲೇ ಹೇಳಿದುದನ್ನು ನೆನೆಸಿಕೊಂಡರೆ ಅವರ ಪ್ರತ್ಯುತ್ಪನ್ನಮತಿ ಮತ್ತು ಅಜ್ಞಾತವಾಸದಲ್ಲಿರುವಾಗ ಪಾಂಡವರನ್ನು ಹುಡುಕುತ್ತಿದ್ದ ಕೌರವನ ಮನಸ್ಸು ಹೇಗಿತ್ತೆಂದು ಹೊಂದಿಸಿ ಹೇಳಿದ್ದು ಆಶ್ಚರ್ಯಕರವೆನ್ನಿಸುತ್ತದೆ. ಶಂಕರರಾಯರು ಪಾದಸೇವೆ ಮಾಡುವುದರಲ್ಲಿ ಪ್ರವೀಣರಾಗಿದ್ದರು. ಅದನ್ನೂ ಮಹಾಗುರುಗಳಿಂದಲೇ ಕಲಿತದ್ದು ಎಂದು ಹೇಳುತ್ತಿದ್ದರು. ಅವರು ಮಾಡುವ ಸೇವೆಯನ್ನು ಗುರುದಂಪತಿಗಳೇ ಮೆಚ್ಚಿಕೊಂಡಿದ್ದರು. ‘ನೀನು ಕಾಲೊತ್ತಿದ ರೀತಿಯಿಂದ ಬಹಳ ದೀರ್ಘಕಾಲದಿಂದಿದ್ದ ಕಾಲುಬೆರಳು ನೋವು ಪೂರ್ತಿ ವಾಸಿಯಾಗಿದೆಯಪ್ಪ.’ ಎಂದು ಗುರುಗಳೇ ಅವರ ಸೇವೆಯನ್ನು ಮೆಚ್ಚಿಕೊಂಡಿದ್ದರು’ ಎಂದು ಶಂಕರರಾಯರ ಸ್ನೇಹದ ಸವಿಯನ್ನು ಸವಿದಿರುವ ಕೃಷ್ಣಮೂರ್ತಿ ಸ್ಮರಿಸುತ್ತಾರೆ. ಶ್ರೀ ಬಿ.ವಿ.ಶ್ರೀನಿವಾಸರು ಮುಂದುವರಿಸುತ್ತಾ ‘ಶ್ರೀ ಗುರುದಾಸರ ಮತ್ತು ಶಂಕ್ರಣ್ಣಯ್ಯನವರ ಪ್ರಾರ್ಥನೆಯಂತೆ ಶ್ರೀಸದ್ಗುರು ದಂಪತಿಗಳು ಬಸರೀಕಟ್ಟೆಯ ಶ್ರೀಸದ್ಗುರು ವಿದ್ಯಾಶಾಲೆಗೆ ದಯಮಾಡಿಸುವಂತಾಯಿತು. ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಮಹಡಿಯ ಮೇಲೆ ಶ್ರೀಸದ್ಗುರು ವಿದ್ಯಾಶಾಲೆಯ ಜ್ಞಾನಮಂಟಪದಲ್ಲಿ ಶ್ರೀಗುರುದಂಪತಿಗಳ ಅಧ್ಯಕ್ಷತೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೆದವು. ಆ ಸಂದರ್ಭದಲ್ಲಿ ಜ್ಞಾನಪ್ರವಚನ, ವಿಜ್ಞಾನಪ್ರವಚನ, ಧರ್ಮಪ್ರವಚನ, ಶ್ರೀ ಭಾರತೀ ಪೂಜಾ ಮಹೋತ್ಸವ ಹಾಗೂ ಇನ್ನಿತರ ವಿಶೇಷ ಕಾರ್ಯಕ್ರಮಗಳು ಸಂಪನ್ನವಾದವು. ಶ್ರೀ ಸದ್ಗುರು ವಿದ್ಯಾಶಾಲೆಯ ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಊರಿನ ಹಾಗೂ ನೆರೆ ಊರುಗಳ ಅನೇಕ ಮಹನೀಯರು, ಮತ್ತು ಮಹಿಳೆಯರು ಶ್ರೀರಂಗಮಹಾಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಶ್ರೀ ಗುರುದಂಪತಿಗಳು ಈ ಕ್ಷೇತ್ರಕ್ಕೆ ತಮ್ಮ ಸಾನ್ನಿಧ್ಯ ದಯಪಾಲಿಸಿದಾಗ ಎಲ್ಲಾ ಕಾರ್ಯಕ್ರಮಗಳ ಜವಾಬ್ದಾರಿಯ ನೇತೃತ್ವವನ್ನು ಶ್ರೀಗುರುದಾಸರ ಮಾರ್ಗದರ್ಶನದಲ್ಲಿ ಶಂಕರರಾಯರು ನಿರ್ವಹಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಶಂಕ್ರಣ್ಣಯ್ಯನವರ ಮನೆ ಮಂದಿಯೆಲ್ಲರೂ ಆಧ್ಯಾತ್ಮಿಕ ಸಾಧನಾಮಾರ್ಗದಲ್ಲಿ ಪರಿಚಿತರಾದರು. ಶ್ರೀ ಶಂಕ್ರಣ್ಣಯ್ಯನವರು ಬಸರೀಕಟ್ಟೆಯಲ್ಲಿ ಇರುವುದನ್ನು ವಿರೋಧಿಸುತ್ತಿದ್ದ ಅವರ ತಂದೆಯವರಾದ ಪೂಜ್ಯ ಶ್ರೀ ಕೃಷ್ಣರಾಯರೂ ಶ್ರೀರಂಗ ಮಹಾಗುರುಗಳ ಅನುಗ್ರಹ ಪಡೆದು ಅವರ ಪ್ರಿಯ ಶಿಷ್ಯರಾದರು. ಶ್ರೀ ಮಹಾಗುರುಗಳು ಅವರನ್ನು ಪ್ರೀತಿಯಿಂದ ‘ತಾತಯ್ಯ’ಎಂದು ಸಂಬೋಧಿಸುತ್ತಿದ್ದರು. ಮುಂದೆ ಅವರ ಕುಟುಂಬದವರೆಲ್ಲಾ ಭಗವದನುಗ್ರಹಕ್ಕೆ ಪಾತ್ರರಾದರು. ಶ್ರೀ ಗುರುದಂಪತಿಗಳು ಶ್ರೀಕೃಷ್ಣರಾಯರು ನೂತನವಾಗಿ ನಿರ್ಮಿಸಿದ ಗೃಹಕ್ಕೆ ತಮ್ಮ ಪಾದ ಬೆಳಸಿ ಗೃಹಪ್ರವೇಶೋತ್ಸವವನ್ನು ನೆರವೇರಿಸಿಕೊಟ್ಟರು’ಎಂದು ಸ್ಮರಿಸುತ್ತಾರೆ. ಶ್ರೀಮತಿ ಕಾತ್ಯಾಯನಿದತ್ತರವರು ‘ಶ್ರೀ ಜನಾರ್ದನಸ್ವಾಮಿಯು ನೆಲೆಸಿರುವ ಬಸರೀಕಟ್ಟೆಯು ಶ್ರೀ ಸದ್ಗುರುದಂಪತಿಗಳ ಸಾನ್ನಿಧ್ಯದಿಂದ ‘ಶ್ರೀ ಕ್ಷೇತ್ರ ಬಸರೀಕಟ್ಟೆ’ ಆಯಿತು. ಅಲ್ಲಿ ಇಂತಹ ಭಾಗವತರು ನೆಲೆಸಿ ಭಗವಂತನ ಸೇವೆಮಾಡಿ ಅದಕ್ಕೆ ಇನ್ನೂ ಮೆರುಗನ್ನು ಕೊಟ್ಟರು. ಶಂಕ್ರಣ್ಣಯ್ಯನವರಿಂದ ಆದ ಮತ್ತೊಂದು ಮಹತ್ಕಾರ್ಯವೆಂದರೆ ಬಸರೀಕಟ್ಟೆಯ ಎಲ್ಲ ಕಾರ್ಯಕ್ರಮಗಳ ಫೋಟೋಗಳನ್ನು ತೆಗೆದಿದ್ದು. ಮೊದಲು ಬಸರೀಕಟ್ಟೆಯಲ್ಲಿ ಫೋಟೋ ತೆಗೆಯುವ ವ್ಯವಸ್ಥೆಯೇ ಇರಲಿಲ್ಲ. ಅದಕ್ಕೆ ಬೇಕಾದ ಕ್ಯಾಮರಗಳೂ ಇರಲಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಕ್ರಮಗಳಲ್ಲಿ ಅನೇಕ ಫೋಟೋಗಳನ್ನು ತೆಗೆದರು. ಹೀಗಾಗಿ ಕಾರ್ಯಕ್ರಮಗಳ ಅನೇಕ ಸನ್ನಿವೇಶಗಳು ಫೋಟೋ ಮೂಲಕ ಉಳಿದು ಮತ್ತೆ ಮತ್ತೆ ಅವುಗಳ ಅನುಸಂಧಾನ ಮಾಡಲು ಅನುಕೂಲವಾಯಿತು. ಶಂಕ್ರಣ್ಣಯ್ಯನವರಿಗೆ ಅನಂತಾನಂತ ಕೃತಜ್ಞತೆಗಳು ಮತ್ತು ಧನ್ಯವಾದಗಳು’ಎಂದು ಸ್ಮರಿಸುತ್ತಾರೆ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ಗೀತಾಚಾರ್ಯನ ಉಪದೇಶದಂತೆ ಪೂಜ್ಯ ಶಂಕ್ರಣ್ಣಯ್ಯನವರು ತಮ್ಮ ಜೀವನದ ವಿಧಾನವನ್ನು ಇಟ್ಟುಕೊಂಡು, ಬಸರೀಕಟ್ಟೆಯ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ನಡೆಸಿದ ಕರ್ಮಯೋಗಿಗಳು. ಶ್ರೀ ಗುರುದಂಪತಿಗಳ ಪಾವನಸ್ಮರಣೆಯೊಡನೆ ಅವರ ಪ್ರಿಯ ಶಿಷ್ಯರಾದ ಶ್ರೀಶಂಕ್ರಣ್ಣಯ್ಯನವರ ಸೇವಾಸಂಸ್ಮರಣೆಯನ್ನೂ ಮಾಡಿಕೊಳ್ಳುತ್ತಿದ್ದೇವೆ’ಎನ್ನುತ್ತಾರೆ ಶ್ರೀನಿವಾಸರು. ಶ್ರೀಮತಿ ಕಾತ್ಯಾಯನಿದತ್ತರವರು ‘ನಾನು ಇನ್ನೊಂದು ವಿಶೇಷತೆ ಅವರಲ್ಲಿ ಕಂಡದ್ದು ಎಂದರೆ ಅಧ್ಯಾತ್ಮ ಜೀವನಕ್ಕಾಗಿ ಅವರು ಮಾಡಿದ ತ್ಯಾಗ. ಅವರು ತುಂಬ ಸ್ಥಿತಿವಂತರಾಗಿದ್ದವರು. ಆಗಿನ ಕಾಲಕ್ಕೆ ಡಿಗ್ರಿಮಾಡುವುದು ಎಂದರೆ ತುಂಬಾ ಓದಿದ ಹಾಗೆ. ಅವರಲ್ಲಿ ಪಾಂಡಿತ್ಯವಿತ್ತು. ಅವರು ಪ್ರಸಿದ್ಧವಾದ ಗುಡ್ಡೇತೋಟದ ಕುಟುಂಬಕ್ಕೆ ಸೇರಿದವರಾಗಿದ್ದರು. ಅಪಾರವಾದ ಆಸ್ತಿ ಇತ್ತು. ಅವರು ಅಷ್ಟು ಸ್ಥಿತಿವಂತರಾದರೂ ಅವೆಲ್ಲವನ್ನೂ ಬಿಟ್ಟು ಗುರುದಾಸರ ಜೊತೆಯಲ್ಲಿಯೇ ಭಗವಂತನಿಗಾಗಿ ಎಂದು ಕೊನೆಯ ತನಕ ಕೆಲಸಮಾಡಿದರು. ಇದು ಅವರ ದೊಡ್ಡತನ. ಅವರು ಸದ್ಗುರು ವಿದ್ಯಾಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿಯೂ ತುಂಬಾ ಉತ್ಸಾಹದಿಂದ ತೊಡಗಿಸಿಕೊಂಡು ತಮ್ಮ ದೇಹಾಯಾಸವನ್ನೂ ಗಮನಿಸದೆ ಕಾರ್ಯ ಪ್ರವೃತ್ತರಾಗಿರುತ್ತಿದ್ದರು. ಉದಾಹರಣೆಗೆ ಗಣೇಶನ ಹಬ್ಬದಲ್ಲಿ ಶಾಲೆಯಲ್ಲಿ 21 ದಿವಸ ಗಣೇಶನನ್ನು ಕೂರಿಸುತ್ತಿದ್ದರು. ಆಗ ಪ್ರತಿದಿನವೂ ಪೂಜಾವ್ಯವಸ್ಥೆ, ನೈವೇದ್ಯ ವ್ಯವಸ್ಥೆ ಪ್ರತಿಯೊಂದನ್ನೂ ಶಂಕ್ರಣ್ಣಯ್ಯನವರೇ ಜವಾಬ್ದಾರಿ ತೆಗೆದುಕೊಂಡು ಮಾಡುತ್ತಿದ್ದರು. ಶ್ರೀಮತಿ ಕಲ್ಯಾಣಮ್ಮನವರು ಹೇಳುತ್ತಿದ್ದರು, ‘ಶಂಕರರಾಯರು ಇದ್ದುಬಿಟ್ಟರೆ ನನಗೆ ಯಾವ ಯೋಚನೆಯೂ ಇರುವುದಿಲ್ಲ. ಎಲ್ಲಾ ಕೆಲಸವನ್ನೂ ಅವರೇ ಮಾಡುತ್ತಾರೆ ಮತ್ತು ಮಾಡಿಸುತ್ತಾರೆ.’ ಗುರುದಾಸರಿಗೆ ಅವರು ಬಲಗೈಯಂತೆ ಬೆಂಬಲವಾಗಿದ್ದರು. ಗುಡ್ಡೇತೋಟ, ತಲವಾನೆ, ಬೆಂಡೆಹೆಕ್ಕಲು, ಕೆರೆಮನೆ, ಹೊನ್ನಗುಂಡಿ, ಹಳುವಳ್ಳಿ, ಎಲೆಮಡಿಲು-- ಹೀಗೆ ಅನೇಕ ಊರಿನ ಜನರು ಗಣೇಶನಿಗೆ ನೈವೇದ್ಯಕ್ಕೆ ಸಿದ್ಧಪಡಿಸಿಕೊಂಡು ತರುತ್ತಿದ್ದರು. ಅವೆಲ್ಲವುಗಳ ಜವಾಬ್ದಾರಿಯನ್ನೂ ಶಂಕ್ರಣ್ಣಯ್ಯನವರೇ ನಿರ್ವಹಿಸುತ್ತಿದ್ದರು. ಇದಲ್ಲದೆ ಶಾಲಾವಾರ್ಷಿಕೋತ್ಸವ, ತ್ಯಾಗರಾಜರ-ಪುರಂದರದಾಸರ ಆರಾಧನೆ ಇತ್ಯಾದಿ ಬೇರೆ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಶಂಕರಣ್ಣಯ್ಯನವರ ಪಾತ್ರ ಅತಿ ದೊಡ್ಡದಾಗಿರುತ್ತಿತ್ತು. ಶ್ರೀ ಗುರುದಂಪತಿಗಳು ಬಸರೀಕಟ್ಟೆಗೆ ದಯಮಾಡಿಸಿದಾಗಲೂ ಕೆಲವು ವಿಶೇಷ ಕಾರ್ಯಕ್ರಮಗಳು ಸಂಪನ್ನವಾದವು. 1964ರಲ್ಲಿ ಅವರ ಸನ್ನಿಧಿಯಲ್ಲಿ ಶ್ರೀ ತ್ಯಾಗರಾಜ-ಪುರಂದರದಾಸರ ಆರಾಧನೆಗಳು ಸಂಪನ್ನವಾದವು. ಅಂದಿನ ಕಾರ್ಯಕ್ರಮಕ್ಕೆ ಸಭಾವೇದಿಕೆಯನ್ನು ಸಿದ್ಧಪಡಿಸುವುದು, ಅಧ್ಯಕ್ಷ ಪೀಠವನ್ನು ಸಿದ್ಧಗೊಳಿಸುವುದು ಇವೆಲ್ಲಾ ಕಾರ್ಯಗಳು ಶಂಕರಣ್ಣಯ್ಯನವರ ನೇತೃತ್ವದಲ್ಲಿ ಆಗಿದ್ದವು. ನಂತರ ಸಾಕ್ಷಾದ್ಗುರುದೇವರೇ ಆಗಮಿಸಿ ಅಧ್ಯಕ್ಷಪೀಠವನ್ನು ಅಲಂಕರಿಸಿದರು. ಅವರ ದಿವ್ಯಾಧ್ಯಕ್ಷತೆಯಲ್ಲಿ ಸಮಾರಂಭವು ತುಂಬಾ ಚೆನ್ನಾಗಿ ನಡೆಯಿತು. ನಾವೆಲ್ಲರೂ ಅದರಲ್ಲಿ ಭಾಗವಹಿಸುವ ಭಾಗ್ಯವನ್ನು ಪಡೆದು ಬಂದಿದ್ದೆವು. ಇದರಂತೆ ನಡೆದ ಇನ್ನೊಂದು ಕಾರ್ಯಕ್ರಮವೆಂದರೆ ಶ್ರೀ ಶಂಕರಜಯಂತೀ ಮಹೋತ್ಸವ. ಇದು ಶ್ರೀಗುರುದಂಪತಿಗಳ ಸನ್ನಿಧಿಯಲ್ಲಿ ನೆರವೇರಿತು. ಆ ದಿನ ನೂರಾರು ಜನರು ದೇವಸ್ಥಾನದ ಕೆಳಗಿನ ಚಂದ್ರಶಾಲೆಯಲ್ಲಿ ಸೇರಿದ್ದರು. ಇದಕ್ಕೆ ಬೇಕಾದ ಅನೇಕ ಏರ್ಪಾಡುಗಳು ಶಂಕರಣ್ಣಯ್ಯನವರ ನೇತೃತ್ವದಲ್ಲೇ ನಡೆದಿದ್ದವು. ಶ್ರೀ ಗುರುದೇವರು ಶಂಕರಜಯಂತೀ ಮಹೋತ್ಸವದ ಪ್ರಾರಂಭವನ್ನು ತಮ್ಮ ಪ್ರಣವ ಘೋಷದಿಂದ ನೆರವೇರಿಸಿ, ಭಜಗೋವಿಂದಂ ಸ್ತೋತ್ರಗಳಲ್ಲಿ ಕೆಲವನ್ನು ಗಾನಮಾಡಿದರು. ಅನಂತರ ವಿದ್ಯಾಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶ್ರೀ ಗುರುದೇವರೇ ರಾಗಸಂಯೋಜನೆ ಮಾಡಿದ್ದ ಭಜಗೋವಿಂದಂ ಸ್ತೋತ್ರಗಳನ್ನೂ ಹಾಡಿ ಅದರ ಅರ್ಥವನ್ನು ಹಾವಭಾವದೊಡನೆ ವಿವರಿಸಿದರು. ಈ ಸ್ತೋತ್ರರೂಪಕವನ್ನು ಸ್ವತಃ ಗುರುದಾಸರೇ ರಚಿಸಿದ್ದರು. ಅದರಲ್ಲಿ ಭಾಗವಹಿಸುವ ಅವಕಾಶ ನನಗೂ ದೊರಕಿತ್ತು. ಅದರಲ್ಲಿ ಪೀಠಿಕೆಯನ್ನು ನಾನು ಹೇಳುವುದು; ಸ್ತೋತ್ರದ ಗಾಯನವನ್ನು ಗುರುದಾಸರು ಅವರ ತಂಡದೊಡನೆ ಹಾಡುವುದು; ನಂತರ ಅರ್ಥವನ್ನು ನಾನು ಹೇಳುವುದು; ಹೀಗಿತ್ತು ಅವರ ಯೋಜನೆ. ಶಂಕರಣ್ಣಯ್ಯನವರು ಅದಕ್ಕೆ ನಮಗೆಲ್ಲಾ ತುಂಬಾ ತರಬೇತಿಯನ್ನು ಕೊಟ್ಟು ನಮ್ಮನ್ನೆಲ್ಲಾ ತಿದ್ದಿ ತುಂಬಾ ಶ್ರಮವಹಿಸಿದ್ದರು. ಚಿಕ್ಕ ಹುಡುಗಿಯಾಗಿದ್ದ ನಾನು ಸ್ತೋತ್ರಕ್ಕೆ ಕೊಟ್ಟ ವಿವರಣೆಯನ್ನೂ, ಅದನ್ನು ಹೇಳಿದ ರೀತಿಯನ್ನೂ ಕೇಳಿ ಗುರುದಂಪತಿಗಳು ತುಂಬಾ ಸಂತೋಷಪಟ್ಟರು. ಗುರುದಂಪತಿಗಳ ಸನ್ನಿಧಿಯಲ್ಲಿ ಇಂತಹ ಅವಕಾಶವನ್ನು ಮಾಡಿಕೊಟ್ಟ ಪೂಜ್ಯರಾದ ಗುರುದಾಸರಿಗೂ ಮತ್ತು ಶಂಕರಣ್ಣಯ್ಯನವರಿಗೂ ಶಿರಸಾ ಸಾಷ್ಟಾಂಗವಂದನೆಗಳೊಂದಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಅದು ಅಲ್ಪವೇ. ಬಸರೀಕಟ್ಟೆ ಮಂದಿರದಲ್ಲಿ ಕಾರ್ಯಕ್ರಮಗಳ ಜವಾಬ್ದಾರಿ ಅವರದ್ದೇ ಆಗಿತ್ತು. ಕೆಲವೊಮ್ಮೆ ಅವರು ಇಲ್ಲದಿರುವಾಗ ನನಗೆ ಆ ಜವಾಬ್ದಾರಿಯನ್ನು ಕೊಡುತ್ತಿದ್ದರು. ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಕೆಲಸವನ್ನು ನೋಡಿ ನಾನು ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿರುವೆ. ಅವರು ತುಂಬಿದ ಕೊಡ; ಆದರ್ಶವ್ಯಕ್ತಿ; ಪ್ರೀತಿಯ ಆಗರ; ಸರಳಜೀವಿ; ಸೇವಾ ಮನೋಭಾವವುಳ್ಳವರು; ಸದಾ ಹಸನ್ಮುಖಿ; ವಿನಯಸಂಪನ್ನರು; ಬಡವ ಬಲ್ಲಿದರೆನ್ನುವ- ಭೇದ ಭಾವವಿಲ್ಲದೆ ಸಮದೃಷ್ಟಿಯಿಂದ ಎಲ್ಲರನ್ನೂ, ನನ್ನಂತೆ ಇದ್ದ ಚಿಕ್ಕ ಮಕ್ಕಳನ್ನೂ ಪ್ರೋತ್ಸಾಹಿಸುತ್ತಿದ್ದರು. ಅವರು ಅನೇಕ ಸದ್ಗುಣಗಳ ಆಗರವಾಗಿದ್ದರು. ಪೂಜ್ಯ ಗುರುದಾಸರೂ ಮತ್ತು ಶಂಕರರಾಯರೂ ಎರಡು ದೇಹ ಒಂದು ಆತ್ಮದಂತೆ ಇದ್ದವರು. ಶ್ರೀ ಸದ್ಗುರು ವಿದ್ಯಾಶಾಲೆಯ ಪ್ರವೃದ್ಧಿಗೆ ಶಂಕರರಾಯರ ಯೋಗದಾನ ಅಗಾಧವಾದುದು. ‘ನನಗೆ ಅಲ್ಪಾಯುಷ್ಯ’ಎಂದು ಶಂಕರರಾಯರು ಅವರ ಅಣ್ಣನ ಮಕ್ಕಳಿಗೆ ಹೇಳುತ್ತಿದ್ದರಂತೆ. ‘ನಮ್ಮ ತಂದೆಯವರು ಅನಿರೀಕ್ಷಿತವಾಗಿ ದೈವಾಧೀನರಾದಾಗ ನಮಗೆಲ್ಲರಿಗೂ ತುಂಬಾ ದಿಗ್ಭ್ರಮೆಯಾಗಿತ್ತು. ಆ ಸಮಯದಲ್ಲಿ ಅವರು ನೀಡಿದ ಧೈರ್ಯ, ಆಸರೆಯನ್ನು ಮರೆಯುವಂತೆಯೇ ಇಲ್ಲ. ನಮ್ಮ ತಂದೆಯವರ ಮರಣವನ್ನು ತುಂಬಾ ಹಚ್ಚಿಕೊಂಡಿದ್ದ ಅವರು ನಮ್ಮ ತಂದೆಯ ಮಿತ್ರರಲ್ಲಿ ‘ಗುರುದಾಸರು ಹೊರಟ ಮೇಲೆ ನನಗೆ ಇಲ್ಲಿರುವ ಆಸಕ್ತಿಯೇ ಹೊರಟುಹೋಗಿದೆ’ ಎಂದು ಹೇಳುತ್ತಿದ್ದರಂತೆ.’ ಎಂದು ಗುರುದಾಸರ ಮಗಳು ಶ್ರೀಮತಿ ವಿಜಯವಲ್ಲೀ ನೆನೆಪಿಸಿಕೊಳುತ್ತಾರೆ. ಶ್ರೀ ಗುರುದಾಸರು 1978 ಮಾರ್ಚ್ ತಿಂಗಳಿನಲ್ಲಿ ಭಗವಂತನ ಪಾದವನ್ನು ಸೇರಿಕೊಂಡರು. ಹಾಗೆಯೇ ಗುರುದಾಸರು ಪರಮಪದಿಸಿದ ಒಂದೇ ತಿಂಗಳಿನಲ್ಲಿ ಶ್ರೀಶಂಕರಣ್ಣಯ್ಯನವರೂ ಕೂಡಾ ಭಗವಂತನ ಪಾದವನ್ನು ಸೇರಿಕೊಂಡುಬಿಟ್ಟರು. ಇರುವಷ್ಟು ದಿನ ಭಗವಂತನಿಗಾಗಿ ಬದುಕಿದರು; ಕೊನೆಗೆ ಅವನಲ್ಲಿಯೇ ಲೀನವಾದರು. ಅವರ ಆದರ್ಶ ಜೀವನವೇ ನಮಗೆ ಜೀವನದಲ್ಲಿ ಸ್ಫೂರ್ತಿಯಾಗಿದೆ. ಅವರಲ್ಲಿದ್ದ ಸದ್ಗುಣಗಳು ನಮ್ಮಲ್ಲಿಯೂ ಬರಲಿ ಎಂದು ಬೇಡುತ್ತಾ, ಅವರಂತೆಯೇ ಭಗವಂತನ ಸೇವೆ ಮಾಡುವ ಮನಸ್ಸು ನಮಗೂ ಉಂಟಾಗಲಿ ಎಂದು ಬೇಡುತ್ತಾ ಭಾಗವತರ ನೆನಪು ದೋಷರಾಶಿಗಳ ಕಳೆಯಲಿ ಎಂದು ಪ್ರಾರ್ಥಿಸುತ್ತಾ ಈ ಸ್ಮೃತಿಪುಷ್ಪವನ್ನು ಭಗವಂತ ಭಗವತಿಯರ ಪಾದಾರವಿಂದಗಳಿಗೆ ಸಮರ್ಪಿಸುತ್ತೇವೆ.