Monday, February 26, 2024

ವ್ಯಾಸ ವೀಕ್ಷಿತ - 77 ದುರುಳರ ದುರುಪಾಯಗಳು (Vyaasa Vikshita - 77 Durulara Durupayagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಕೌರವರನ್ನು ಹೇಗಾದರೂ ಮುಗಿಸಿಬಿಡಬೇಕೆನ್ನುವ ನಾನಾಸಂಚುಗಳನ್ನು ಹೇಳುತ್ತಾ, ಮತ್ತಿನ್ನಷ್ಟು ವಧೋಪಾಯಗಳನ್ನು ದುರ್ಯೋಧನನು ಧೃತರಾಷ್ಟ್ರನಿಗೆ ಸೂಚಿಸುತ್ತಿದ್ದಾನೆ!

(೮) ಪಾಂಡವರು ಅದು ಹೇಗೋ ಬೆಂಕಿಯಿಂದ ಬಚಾವಾದರಲ್ಲದೆ, ದ್ರೌಪದಿಯನ್ನೂ ವಿವಾಹವಾಗಿಬಿಟ್ಟರು!

ಆದರೆ, ಭೀಮಸೇನನ ವಧೆಯೊಂದಾಗಿಬಿಟ್ಟರೆ, ಪಾಂಡವರುಗಳು ಇನ್ನು ರಾಜ್ಯಕ್ಕೆ ಹಂಬಲಿಸಲೇ ಆರರು! ಅವನೇ ಅವರಿಗೆ ದೊಡ್ಡ ಆಶ್ರಯ. ರಣಾಂಗಣದಲ್ಲಿ ಹಿಂದಿನಿಂದ ಭೀಮಸೇನನು ರಕ್ಷಿಸುತ್ತಿದ್ದರೆ (ಮಾತ್ರವೇ) ಅರ್ಜುನನು ಅಜೇಯನಾಗಿರುವವನೇ ಸರಿ; ಆತನನ್ನು ಬಿಟ್ಟರೆ ಯುದ್ಧದಲ್ಲಿ ಆ ಅರ್ಜುನನು ಕರ್ಣನಿಗೆ ಕಾಲುಭಾಗಕ್ಕೂ ಸರಿದೂಗಲಾರನು! ಭೀಮಸೇನನಿಲ್ಲದೇ ಹೋದಲ್ಲಿ ತಮ್ಮ ದುರ್ಬಲತೆಯು ತೀವ್ರವೇ ಸರಿ – ಎಂದು ಅವರೂ ಅರಿತುಕೊಳ್ಳುವರು; ನಾವು ಅವರಿಗಿಂತಲೂ ಬಲಶಾಲಿಗಳೆಂಬುದನ್ನು ತಿಳಿಯುವರು; ಅದು ತಿಳಿದ ಬಳಿಕ ಇನ್ನು ಯುದ್ಧಮಾಡಲೇ ಯತ್ನಿಸರು!  

(೯) ಅಥವಾ ಅವರುಗಳು ಇಲ್ಲಿಗೆ ಬಂದವರಾಗಿ, ನಮ್ಮ ಆಜ್ಞೆಗನುಸಾರವಾಗಿ ಬಾಳಲಿ; ಆಗ ನೀತಿಶಾಸ್ತ್ರಾನುಗುಣವಾಗಿಯೇ ಅವರನ್ನು ಕೊಲ್ಲಿಸೋಣವಂತೆ;

(೧೦) ಇಲ್ಲದಿದ್ದಲ್ಲಿ ಸುಂದರಯುವತಿಯರ ಮೂಲಕ ಅವರಲ್ಲಿ ಪ್ರಲೋಭನೆಯುಂಟುಮಾಡಬಹುದು. ಕೌಂತೇಯರಲ್ಲಿ ಒಬ್ಬೊಬ್ಬರನ್ನಾಗಿ ಹಾಗೆ ಕಾಡಿಸಿ, ಕೊನೆಗೆ ಕೃಷ್ಣೆಗೇ ಅವರನ್ನು ಕಂಡರೆ ವಿಮುಖತೆಯುಂಟಾಗುವಂತೆ ಅವರು ಮಾಡಲಿ;

(೧೧) ಅಥವಾ ಇಲ್ಲಿಗೆ ಪಾಂಡವರ ಆಗಮನಕ್ಕಾಗಿ ರಾಧೇಯನನ್ನೇ ಕಳುಹಿಸೋಣ.  ನಾನಾಪ್ರಕಾರಗಳಿಂದ ಅವರನ್ನು ಇಲ್ಲಿಗೆ ಬರಮಾಡಿ, ನೆಚ್ಚಬಹುದಾದ ಮಂದಿಯಿಂದ ಅವರನ್ನು ಹೊಡೆಸಿ ಉರುಳಿಸಿಬಿಡೋಣ.

ಇಷ್ಟು ಉಪಾಯಗಳಲ್ಲಿ ಯಾವುದು ದೋಷರಹಿತವೆಂಬುದಾಗಿ ನಿನಗೆ ತೋರುವುದೋ ಅದರ ಪ್ರಯೋಗವನ್ನು ಮಾಡಿಬಿಡು. ಏಕೆಂದರೆ ಕಾಲವು ಮೀರಿಹೋಗುತ್ತಿದೆ. ಎಲ್ಲಿಯವರೆಗೆ ಅವರು ರಾಜಶ್ರೇಷ್ಠನೆನಿಸುವ ದ್ರುಪದನಲ್ಲಿ ವಿಶ್ವಾಸವನ್ನು ಇನ್ನೂ ಬೆಳೆಸಿಕೊಂಡಿಲ್ಲವೋ ಅಷ್ಟರೊಳಗೇ ಅವರನ್ನು ಮುಗಿಸಲು ಶಕ್ಯ; ಆ ಬಳಿಕ ಅಶಕ್ಯ!

ಅವರನ್ನು ನಿಗ್ರಹಿಸುವಲ್ಲಿ ನನಗಿಷ್ಟು ಹೊಳೆಯುತ್ತದೆ. ಇವುಗಳಲ್ಲಿ ಯಾವುದು ಚೆನ್ನು ಯಾವುದು ಅಲ್ಲ?  ಕರ್ಣ, ಈ ಬಗ್ಗೆ ನಿನ್ನ ಅಭಿಪ್ರಾಯವೇನು? – ಎಂದನು.

ಆಗ ಕರ್ಣನು ಹೇಳಿದನು:

ದುರ್ಯೋಧನಾ, ನಿನ್ನೀ ಚಿಂತನೆಯು ಚೆನ್ನಾಗಿದೆಯೆಂದು ನನಗೆ ತೋರುತ್ತಿಲ್ಲ. ಯಾವುದೇ ಉಪಾಯದಿಂದ ಆ ಪಾಂಡವರನ್ನು ಜಯಿಸುವುದು ಶಕ್ಯವಾಗಲಾರದು, ಕುರುವರ್ಧನ! ಸೂಕ್ಷ್ಮವಾದ ಉಪಾಯಗಳಿಂದ ಅವರನ್ನು ನಿಗ್ರಹಿಸಲು ಹಿಂದೆಯೇ ನೀನು ಯತ್ನಿಸಿದ್ದೆಯಲ್ಲವೇ? ಆದರೆ ಅದಾವುದೂ ಆಗಲಿಲ್ಲವಷ್ಟೆ?

ರಾಜನೇ, ಅವರುಗಳು ಹಿಂದೆ ಇಲ್ಲಿಯೇ ಇದ್ದರು - ಇನ್ನೂ ರೆಕ್ಕೆಗಳೇ ಹುಟ್ಟಿಲ್ಲದ ಮರಿಗಳಂತೆ (ಅಜಾತಪಕ್ಷಾಃ ಶಿಶವಃ); ಆಗಲೇ ಅವರನ್ನು ಬಾಧಿಸಲು ನೀನು ಸಮರ್ಥನಾಗಲಿಲ್ಲ - ಅಲ್ಲವೇ? ಈಗ ಅವರು ಹೇಗಿದ್ದಾರೆ! ರೆಕ್ಕೆ ಬಂದವರು (ತಮ್ಮ ಪಕ್ಷದವರಾಗಿರುವ ಅನೇಕಮಂದಿಯನ್ನೀಗ ಉಳ್ಳವರು); ವಿದೇಶದಲ್ಲಿರತಕ್ಕವರು; ಎಲ್ಲ ಪ್ರಕಾರಗಳಲ್ಲೂ ಚೆನ್ನಾಗಿ ಬೆಳೆದಿರುವವರು! ಉಪಾಯಗಳನ್ನು ಬಳಸಿ ಅವರನ್ನು ಮುಗಿಸುವುದು ಸಾಧ್ಯವಿಲ್ಲದ್ದಯ್ಯಾ!

ಅವರನ್ನು ಯಾವುದೇ ಸಂಕಟಗಳಲ್ಲಿ ಸಿಕ್ಕಿಹಾಕಿಸುವುದೂ ಸಾಧ್ಯವಾಗದ ಮಾತು. ದೈವವೇ ಅವರನ್ನು ಬಲಶಾಲಿಗಳನ್ನಾಗಿಸಿದೆ. ಈಗಂತೂ ಅವರು ಪಿತೃಪೈತಾಮಹವಾದ - ಎಂದರೆ ತಂದೆ-ಅಜ್ಜರಿಗೆ ಸೇರಿದ - ರಾಜ್ಯವನ್ನು ಪಡೆದುಕೊಳ್ಳುವ ಹಂಬಲವನ್ನು ಹೊಂದಿದ್ದಾರೆ.

ಅವರೊಳಗೆ ಪರಸ್ಪರವಾದ ಒಡಕನ್ನು ತಂದು ಹಾಕುವುದೂ ಶಕ್ಯವಾಗದು. ಒಬ್ಬಳೇ ಪತ್ನಿಯಲ್ಲಿ ಯಾರು ಅನುರಕ್ತರಾಗಿರುವರೋ ಅಂತಹವರನ್ನು ಪರಸ್ಪರವಾಗಿ ಒಡೆಯಲು ಸಾಧ್ಯವಾಗದು.

ಸೂಚನೆ : 25/2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ78 (Yaksha prashne 78)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in) 

 

ಪ್ರಶ್ನೆ – 77 ಅನ್ನ ಯಾವುದು ?

ಉತ್ತರ - ಗೋವು  

ಅನ್ನವೆಂದರೆ ಶರೀರದ ಬೆಳವಣಿಗೆಗೆ ಬೇಕಾದ ಪದಾರ್ಥ. ವಿಶೇಷವಾಗಿ ಇಲ್ಲಿ ಹೇಳುತ್ತಿರುವುದು ಮಾನವನ ಆಹಾರದ ಬಗ್ಗೆ. ಮಾನವನ ಹುಟ್ಟಿನಿಂದ ಹಿಡಿದು ಅವನ ಬದುಕಿನ ಉದ್ದಕ್ಕೂ ಶರೀರದ ಪೋಷಣೆಗೆ ಅತಿಮುಖ್ಯವಾದ ಆಹಾರ ಯಾವುದು? ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಗೋವು. ಹಸುವೆಂಬುದು ಮಾನವನ ಶರೀರಕ್ಕೆ ಬೇಕಾದ ಆಹಾರವನ್ನು ಒದಗಿಸಿಕೊಡುವುದು. ಹಾಗಾಗಿ ಹಸುವು ಅನ್ನವಾಗಿದೆ. ಆದರೆ ಇಲ್ಲಿ ಒಂದು ಪ್ರಶ್ನೆಯು ಬಾರದಿರದು. "ಎಷ್ಟೋ ಕಡೆ ಹಸುವಿನ ಯಾವುದೇ ಉತ್ಪನ್ನವನ್ನು ಬಳಸದೇ ಜೀವನವನ್ನು ನಡೆಸುತ್ತಿರುತ್ತಾರೆ. ಅವರಿಗೆ ಅದು ಅನ್ನವಾಗುವುದಿಲ್ಲ. ಆದ್ದರಿಂದ ಈ ಉತ್ತರ ಯಾರೋ ಕೆಲವರನ್ನು ಉದ್ದೇಶವಾಗಿ ಇಟ್ಟುಕೊಂಡು ಕೇಳಿರುವ ಪ್ರಶ್ನೆಯಾಗಿದೆ. ಇದು ಮಾನವ ಜನಾಂಗವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೇಳಿರುವ ಉತ್ತರವೂ ಅಲ್ಲ. ಎಲ್ಲರಿಗೂ ಅವಶ್ಯವೂ ಅಲ್ಲ. ಆದ್ದರಿಂದ ಹಸುವು ಅನ್ನವಾಗಲೂ ಹೇಗೆ ಸಾಧ್ಯ?" ಎಂದು. ಹೌದು; ಇದು ಕೆಲವರನ್ನೇ ಮನಸ್ಸಿನಲ್ಲಿ ಭಾವಿಸಿ ಕೇಳಿದ ಪ್ರಶ್ನೆಯಾಗಿದೆ. ಅಂದರೆ ಭೌತಿಕ ಜೀವನವನ್ನು ಮಾತ್ರ ಗುರಿಯಾಗಿಸಿಕೊಂಡು, ಒಂದು ಜನನ ಮತ್ತು ಮರಣದ ನಡುವಿನ ಬದುಕೇ ಜೀವನ ಎಂದು ತಿಳಿದ ಮಂದಿಗೆ ಈ ಉತ್ತರ ಹಾಸ್ಯಾಸ್ಪದವಾಗಿ ತೋರಬಹುದು. ಯಾರ ಜೀವನ ಭೌತಿಕದಿಂದ ಹಿಡಿದು, ದೈವಿಕ ಮತ್ತು ಅಧ್ಯಾತ್ಮಪ್ರಪಂಚದವರೆಗೆ ವಿಸ್ತಾರವಾಗಿದೆಯೋ ಅಂತಹ ಮನುಜರ ಜೀವನಕ್ಕೆ ಯಾವುದು ಆಹಾರ ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಆಗ ಹಸುವೆಂಬ ಉತ್ತರ ಸಮಂಜಸವಾಗಿದೆ. 

ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕವೆಂಬ ಮೂರು ಹಂತದಲ್ಲಿ ಪೂರ್ಣತೆಯನ್ನು ಸಂಪಾದಿಸಲು ಸಾತ್ತ್ವಿಕವಾದ ಆಹಾರದ ವಿಧಾನವೇ ಬೇಕು. ಹಸುವಿನಿಂದ ಸಿಗುವ ದ್ರವ್ಯಗಳು ಇಂತಹ ಸಾತ್ತ್ವಿಕವಾದ ಆಹಾರ ಎಂದು ಪರಿಗಣಿಸಲ್ಪಟ್ಟಿದೆ. ಹಾಲು, ಮೊಸರು, ತುಪ್ಪ ಇವು ಶರೀರದ ಬೆಳವಣಿಗೆಗೆ ಸಹಕಾರ ಮಾಡಿಕೊಡುತ್ತವೆ. ಗೋಮಯ ಮತ್ತು ಗೋಮೂತ್ರ ನಮಗೆ ಬೇಕಾದ ಸಾತ್ತ್ವಿಕವಾದ ಆಹಾರವನ್ನು ಬೆಳೆಯಲು ಗೊಬ್ಬರವಾಗಿ ಉಪಯೋಗವಾಗುತ್ತದೆ. ಇಂದು ಸಿಗುವ ಗೋವು ಎಂದು ಕರೆಸಿಕೊಳ್ಳುವ, ದಿನಕ್ಕೆ ಬೇಕಾದಷ್ಟು ಹಾಲನ್ನು ಕೊಡುವ ಯಂತ್ರದಂತಿರುವ ಮಿಶ್ರತಳಿಯ ಗವ್ಯೋತ್ಪನ್ನಗಳು ಸಾತ್ತ್ವಿಕ ಆಹಾರ ಎಂದು ಪರಿಗಣಿತವಾಗಿಲ್ಲ. ಶುದ್ಧವಾದ ಭಾರತೀಯ ಗೋ ತಳಿಯ ಉತ್ಪನ್ನಗಳು ಮಾತ್ರವೇ ಇಂತಹ ಸಾತ್ತ್ವಿಕ ಆಹಾರ ಎಂದು ಪರಿಗಣಿಸಲ್ಪಟ್ಟಿವೆ. ಯಾವುದು ನಿಜವಾದ ಭಾರತೀಯ ಗೋವು ಎಂಬುದಕ್ಕೆ ಶಾಸ್ತ್ರದಲ್ಲಿ ಚರ್ಚೆಯಾಗಿದೆ. ಯಾವ ಗೋವಿಗೆ ಗಂಗೆತೊಗಲು ಅಂದರೆ ಗೋವಿನ ಕುತ್ತಿಗೆಯ ಕೆಳಗೆ ಇಳಿಬಿಟ್ಟ, ಜೋಲುವ ಚರ್ಮ ಕಾಣಸಿಗುವುದೋ ಅದು. ಅಂತಹ ಗೋವನ್ನು ನಿಜವಾದ ಗೋವು ಎನ್ನಲಾಗಿದೆ. ಅವುಗಳಲ್ಲೂ ನೂರಾರು ಜಾತಿಗಳಿವೆ. ಇಂದು ಉಳಿದಿರುವ ಗೋಜಾತಿಗಳು ಕೆಲವಾರು. ಅಂತಹ ಜಾತಿಗಳಲ್ಲೂ ಪರಸ್ಪರ ಮಿಶ್ರವಾಗದ ಅದದೇ ಜಾತಿಯ ಗೋವಿನ ಸಂತತಿಯಾದ ಗೋವುಗಳೇ ಶುದ್ಧ ಗೋವುಗಳು. ಅಂತಹ ಹಸುಗಳಿಂದ ಉತ್ಪನ್ನವಾದ ಎಲ್ಲಾ ಪದಾರ್ಥಗಳೂ ಮಾನವನ ಇಹ-ಪರ ಜೀವನಕ್ಕೆ ಸಾಧಕಗಳು. ಇವುಗಳನ್ನೇ 'ಅನ್ನ' ಎಂಬುದಾಗಿ ಯಕ್ಷನ ಪ್ರಶ್ನೆಗೆ ಧರ್ಮರಾಜನು ಉತ್ತರವಾಗಿ ನೀಡಿದ್ದಾನೆ ಎಂದು ಭಾವಿಸಬೇಕು. 

ಸೂಚನೆ : 25/2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಉತ್ತಮರ ಲಕ್ಷಣವೇನು ? (Uttamara Laksanavenu?)

ಡಾ. ಹೆಚ್. ಆರ್. ಮೀರಾ

ಪ್ರತಿಕ್ರಿಯಿಸಿರಿ (lekhana@ayvm.in)


 



ನಮ್ಮ ಪುರಾಣ-ಇತಿಹಾಸಗಳನ್ನು ಓದುವಾಗ ನಮಗೆ ಎಲ್ಲ ರೀತಿಯ ಪಾತ್ರಗಳೂ ಎದುರಾಗುತ್ತವೆ. ಅತ್ತ ಯಾವುದೇ ಕಾರಣಕ್ಕೂ ತಮ್ಮ ಇಹಲೋಕದ ಪಯಣ ಕೊನೆಗೊಳ್ಳಲೇಬಾರದೆಂಬ ಉದ್ದೇಶದಿಂದ ಅತಿಕಠೋರವಾದ ತಪಸ್ಸುಗಳನ್ನಾಚರಿಸಿದ್ದ ರಾಕ್ಷಸರೂ ಇದ್ದಾರೆ. ಇತ್ತ ಎಷ್ಟೇ ಕಷ್ಟಗಳು ಬಂದಾಗಲೂ ಎದೆಗುಂದದೆ ಅವನ್ನು ಎದುರಿಸಿ, ತಮ್ಮ ಜೀವದ ಹಂಗನ್ನು ತೊರೆದು ಧರ್ಮವನ್ನು ಆಚರಿಸಿದ ಸತ್ಪುರುಷರೂ ಇದ್ದಾರೆ. ಒಂದು ಕಡೆ ಹಿರಣ್ಯಕಶಿಪು-ರಾವಣರಂತಹವರು ಇದ್ದಾರೆ; ಅವರ ಜೀವನಧ್ಯೇಯಗಳ ಆಯ್ಕೆಗೆ ಕನ್ನಡಿಹಿಡಿಯುವಂತೆಯೋ ಏನೋ ಇನ್ನೊಂದೆಡೆ ಪ್ರಹ್ಲಾದ-ವಿಭೀಷಣರೂ ಇದ್ದಾರೆ.

"ಇವರು ಒಳ್ಳೆಯವರು; ಇವರು ಕೆಟ್ಟವರು" ಎಂದು ಇಬ್ಭಾಗವಾಗಿ ಕಪ್ಪು-ಬಿಳುಪೆಂಬಂತೆ ಪಾತ್ರಗಳು ನಮಗೆ ಹಲವು ಬಾರಿ ದೊರಕುತ್ತವೆ. ಇನ್ನು ಬೇರೆಡೆಗಳಲ್ಲಿ ಆಗೀಗ ಪೂರ್ಣ ಕಪ್ಪೂ ಅಲ್ಲದ ಪೂರ್ಣ ಬಿಳುಪೂ ಅಲ್ಲದ ಪಾತ್ರಗಳೂ ನಮಗೆ ದೊರೆಯುತ್ತವೆ. ಇತಿಹಾಸ-ಪುರಾಣಗಳನ್ನು ನಾವು ಓದುವುದು ನಮ್ಮ ಜೀವನಕ್ಕೆ ಅವುಗಳಿಂದ ಪಾಠಗಳನ್ನು ಕಲಿಯಲು. ಆದ್ದರಿಂದ ಯಾರಿಂದ ಯಾವ ಪಾಠ ಕಲಿಯಬೇಕು ಎನ್ನುವುದನ್ನು ಅರಿಯುವುದು ಮುಖ್ಯ. ಹಾಗಾದರೆ ಉತ್ತಮರು ಯಾರೆಂದು ಅರಿಯಲು ನಮಗೊಂದು ಮಾನ (ಎಂದರೆ ಅಳತೆಗೋಲು) ಬೇಕಲ್ಲವೇ?

ಯಾವುದೇ ವ್ಯಕ್ತಿ ಒಂದು ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಬಿದ್ದಿದ್ದಾಗ, ಧರ್ಮಸಂದಿಗ್ಧತೆಯನ್ನು ಎದುರಿಸುತ್ತಿದ್ದಾಗ ಎತ್ತ ಹೆಜ್ಜೆಯಿಡುತ್ತಾನೆ - ಎನ್ನುವುದು ಈ ವಿಷಯದಲ್ಲಿ ಒಂದು ನಿರ್ಣಾಯಕವಾದ ಅಂಶ. ಪ್ರಾಣಾಂತಕ-ಪರಿಸ್ಥಿತಿಯಲ್ಲೂ ಧರ್ಮವನ್ನೇ ಆಯ್ಕೆಮಾಡುವುದು ಒಬ್ಬ ಉತ್ತಮನ ಲಕ್ಷಣವೇ ಸರಿ - ಎಂಬುದು ನಮ್ಮ ಪರಂಪರೆಯಲ್ಲಿ ಬಂದಿರುವ ಒಂದು ನೋಟ. ಏಕೆಂದರೆ ವ್ಯಕ್ತಿ ಧರ್ಮಿಷ್ಠನಾಗಿದ್ದರೆ (ಎಂದರೆ, ಧರ್ಮದಲ್ಲಿ ನೆಲೆನಿಂತಿದ್ದರೆ) ಮಾತ್ರ ಅಂತಹ ಸನ್ನಿವೇಶದಲ್ಲೂ ಧರ್ಮ್ಯವಾದದ್ದನ್ನೇ (ಎಂದರೆ ಧರ್ಮಕ್ಕೆ ಹೊಂದುವುದನ್ನೇ) ಆತನು ಅನುಸರಿಸುವುದು.

ಉದಾಹರಣೆಗೆ, ವಿಭೀಷಣನೂ ರಾವಣನೊಂದಿಗೇ ತಪಸ್ಸು ಮಾಡಿದ್ದವನು. ಅತ್ತ ರಾವಣನು ತಾನು ಯಾರುಯಾರಿಂದ ಅವಧ್ಯನಾಗಿರಬೇಕೆಂದು ಬ್ರಹ್ಮನಿಂದ ವರ ಕೇಳಿ ಪಡೆದು, ಮೂರ್ಲೋಕಗಳಲ್ಲೂ ಉಪದ್ರವ ಮಾಡಲು ತನ್ನ ಶಕ್ತಿಪ್ರಯೋಗ ಮಾಡುತ್ತಿದ್ದ. ಇತ್ತ ವಿಭೀಷಣನು ಕೇಳಿದುದಾದರೂ ಏನನ್ನು? "ಏನೇ ಆಪತ್ತೊದಗಿದರೂ ನನ್ನ ಮನಸ್ಸು ಯಾವಾಗಲೂ ಧರ್ಮದಲ್ಲೇ ರಮಿಸಲಿ" ಎಂದು! ತನ್ನ ಅಣ್ಣನ ಕ್ರೋಧಕ್ಕೆ ತುತ್ತಾಗುವುದನ್ನೂ ಲೆಕ್ಕಿಸದೆ ಧರ್ಮಕ್ಕೆ ಹೊಂದುವ ಸಲಹೆಗಳನ್ನೇ ವಿಭೀಷಣನು ಮುಂದಿಡುತ್ತಿದ್ದುದು. ಅದೇ ಕಾರಣಕ್ಕೇ ಮುಂದೆ ಅವನು ರಾಮನಿಗೆ ಶರಣಾಗತನಾದದ್ದು ಕೂಡ.

ಇದೇ ವಿಷಯವನ್ನು, ಎಂದರೆ, ಒಬ್ಬ ಉತ್ತಮಪುರುಷನ (ಇಲ್ಲಿ 'ಪುರುಷ' ಎಂದರೆ 'ಮನುಷ್ಯ' ಎಂದರ್ಥ) ಲಕ್ಷಣವನ್ನು ಸಂಸ್ಕೃತದಲ್ಲಿಯ ಒಂದು ಮುದ್ದಾದ ಸುಭಾಷಿತ ಮೂರು ಉದಾಹರಣೆಗಳ ಮೂಲಕ ಬಿಡಿಸಿಟ್ಟಿದೆ:

(೧) ಚಂದನ ಸ್ವಭಾವತಃ ಕಂಪು-ತಂಪುಗಳನ್ನು ಕೊಡುವಂತಹುದು. ಚಂದನದ ಕೊರಡನ್ನು ತೇಯುತ್ತಾ ಹೋದರೆ ಅದರ ಆಕಾರ ಕ್ಷೀಣವಾಗುತ್ತದೆಯಾದರೂ, ಅದರ ಸುವಾಸನೆ ಕಡಿಮೆಯಾಗದು ಅಥವಾ ವಿಕಾರವಾಗದು.

(೨) ಚಿನ್ನದ ಬಣ್ಣ ಯಾರನ್ನು ತಾನೇ ಆಕರ್ಷಿಸದು? ಮತ್ತೆ ಮತ್ತೆ ಬೆಂಕಿಗೆ ಒಡ್ಡಿ ಚಿನ್ನವನ್ನು ಕಾಯಿಸಿದರೆ, ಅದರ ಬಣ್ಣ ಮತ್ತೂ ಹೊಳೆಯುತ್ತದೆ; ಮಂಕಾಗುವುದಿಲ್ಲ.

(೩) ಕಬ್ಬಿನ ಜಲ್ಲೆಯಲ್ಲಿ ಸಿಹಿಯಾದ ರಸ ತುಂಬಿರುತ್ತದೆ. ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡುತ್ತಿದ್ದರೆ ಮತ್ತೂ ಸಿಹಿರಸವೇ ಚಿಮ್ಮುತ್ತದೆ; ಸ್ವಾದ ಕಡಿಮೆಯಾಗುವುದಿಲ್ಲ.
ಈ ಮೂರೂ ವಸ್ತುಗಳನ್ನೂ ತೇಯ್ದು, ಕಾಯಿಸಿ, ಕತ್ತರಿಸಿ ಕ್ಲೇಶಕ್ಕೊಡ್ಡಿದರೂ ಅವು ತಮ್ಮ ಉತ್ತಮಸ್ವಭಾವವನ್ನು ಬಿಟ್ಟು ವಿಕಾರಗೊಳ್ಳವು. ಅಂತೆಯೇ ಉತ್ತಮರೂ ಕೂಡ. ಕೊನೆಗಾಲದಲ್ಲೂ ಅವರ ಪ್ರಕೃತಿಯು (ಎಂದರೆ ಸ್ವಭಾವವು) ವಿಕೃತಿಗೊಳ್ಳದು (ಎಂದರೆ ವಿಕಾರಗೊಳ್ಳದು).

ಮೊದಲ ಮೂರು ಸಾಲುಗಳಲ್ಲಿ ಮೂರು ಉದಾಹರಣೆಗಳನ್ನೂ, ಕೊನೆಯ ಸಾಲಿನಲ್ಲಿ ಉತ್ತಮರಿಗೆ ಅದರ ಅನ್ವಯವನ್ನೂ ಸಾರುವ ಈ ಸೂಕ್ತಿ ಹೀಗಿದೆ.

ಘೃಷ್ಟಂ ಘೃಷ್ಟಂ ಪುನರಪಿ ಪುನಶ್ಚಂದನಂ ಚಾರುಗಂಧಂ
   ದಗ್ಧಂ ದಗ್ಧಂ ಪುನರಪಿ ಪುನಃ ಕಾಂಚನಂ ಕಾಂತವರ್ಣಮ್ |

ಛಿನ್ನಂ ಛಿನ್ನಂ ಪುನರಪಿ ಪುನಃ ಸ್ವಾದು ಚೈವೇಕ್ಷುದಂಡಂ
   ಪ್ರಾಣಾಂತೇಽಪಿ ಪ್ರಕೃತಿ-ವಿಕೃತಿರ್ಜಾಯತೇ ನೋತ್ತಮಾನಾಮ್ ||

ನಾವು ವಿಕೃತಿಯತ್ತ ಓಲದಂತೆ ನಮ್ಮ ಜೀವನದ ನಡೆಯಿರಬೇಕು - ಎಂಬುದು ಉತ್ತಮರಿಂದ ಕಲಿಯಬೇಕಾದ ಪಾಠ. ಈ ಹಾದಿ ಎಂತಹುದಾಗಿರಬೇಕು ಎಂಬುದನ್ನು ಕುರಿತು ಶ್ರೀರಂಗಮಹಾಗುರುಗಳು ಹೇಳಿರುವ ಈ ಮಾತುಗಳು ಮನನೀಯ: "ಆತ್ಮವು ವಿಕಾರಕ್ಕೆಡೆಯಾಗದೆ ವಿಕಾಸಕ್ಕೆ ಬರುವ ಎಡೆಯಿದ್ದರೆ ಅದೇ ಪಂಥ. ಆ ಪಂಥವನ್ನೇ ಹಿಡಿಯಬೇಕು."

ಸೂಚನೆ: 25/02/2024 ರಂದು ಈ ಲೇಖನ ವಿಜಯವಾಣಿಯ 
ಸುದಿನ ಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ​ - 53 ವಕ್ತಾ ಶ್ರೋತಾ ಚ ದುರ್ಲಭಃ (Astaksari 53 Vakta Shrota Cha Durlabhah)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಲೋಕದಲ್ಲಿ ತುಂಬ ಜನರು ಜಾಣರಲ್ಲವೆಂದೇ ಹೇಳಬೇಕಾಗುವುದೋ ಏನೋ! ಏಕೆ? ಏಕೆಂದರೆ ಜಾಣರಾದವರು ಸ್ವಾನುಭವವಿಲ್ಲದೆಯೂ ಎಚ್ಚರಿಕೆಯ ಪಾಠಗಳನ್ನು ಕಲಿಯುತ್ತಾರೆ. ಅದು ಹೇಗೆ? ಹೇಗೆಂದರೆ ಬೇರೆಯವರ ಜೀವನಾನುಭವಗಳನ್ನು ಗಮನಿಸಿಕೊಂಡೇ ಅವರು ಎಚ್ಚರಗೊಂಡುಬಿಡುವರು! ನಮ್ಮ ಇತಿಹಾಸ-ಪುರಾಣಗಳನ್ನೇ ಒಮ್ಮೆ ನೋಡಿ: ಅಲ್ಲೇನು ಬರೀ ರಾಜ-ಮಹಾರಾಜರುಗಳ ಕಥೆಯೇ? ಅಥವಾ ಕೇವಲ ಋಷಿ-ಮುನಿಗಳ ಕಥೆಯೇ? ಅದೆಷ್ಟು ದುಷ್ಟರ ಅನಿಷ್ಟಪ್ರವೃತ್ತಿಗಳ ಕಥನವಿರುವುದು! ದುರ್ಜನರು ಬೀಸುವ ಬಲೆಗೆ ಸಿಲುಕಿ ನರಳುವ ಅದೆಷ್ಟು ಮಂದಿ ಸಜ್ಜನರು! ಸಜ್ಜನರ ಉಪದೇಶ-ಉದಾಹರಣೆಗಳಿಂದ ಉದ್ಧಾರಗೊಂಡ ಅದೆಷ್ಟೊಂದು ದುರ್ಜನರು! ಸನ್ಮಾರ್ಗ-ದುರ್ಮಾರ್ಗಗಳಲ್ಲಿ ಸಂಚರಿಸುವ ಮನುಷ್ಯರ ಮನಸ್ಸುಗಳ ಬಗೆಬಗೆಯ ನಡೆಗಳನ್ನು ಬಿಂಬಿಸಲೆಂದೇ ಕಿರುಗತೆಗಳೂ ನೀಳ್ಗತೆಗಳೂ ಲಕ್ಷಾಧಿಕಶ್ಲೋಕಾತ್ಮಕವಾದ ಪುರಾಣಸಾಹಿತ್ಯದಲ್ಲಿ ತುಂಬಿವೆ.

ಆದರೆ ಒಮ್ಮೆ ಉಪದೇಶವಿತ್ತರೂ ತನ್ನ ತಪ್ಪನ್ನು ತಿದ್ದಿಕೊಳ್ಳದ ಭೂಪರ ಬಗ್ಗೆ ಏನೆಂದು ಹೇಳೋಣ? ಅದರಲ್ಲಿಯೂ ಮತ್ತೊಮ್ಮೆಯೂ ಉಪದಿಷ್ಟರಾದರೂ (ಎಂದರೆ ಉಪದೇಶವನ್ನು ಪಡೆದರೂ) ದುಷ್ಟತನವನ್ನು ಬಿಡದವರಾದರೆ ಏನು ಹೇಳುವುದು? ಇಬ್ಬರು ಬೇರೆಬೇರೆ ವ್ಯಕ್ತಿಗಳು ಬೇರೆಬೇರೆ ಸಂದರ್ಭಗಳಲ್ಲಿ ಒಂದೇ ಹಿತವಚನವನ್ನು ನುಡಿದಲ್ಲಿ ಆಗಲೂ ತಿದ್ದಿಕೊಳ್ಳದಿರುವುದುಂಟೆ?

ಉಂಟು! ಲೋಕಕಂಟಕನಾದ ರಾವಣನಿಗೆ ಎರಡು ಬಾರಿ ಅಪ್ತಜನರಿಂದಲೇ ಸಮಾನವಾದ ವಚನಗಳಲ್ಲೇ ಉಪದೇಶವಾಯಿತು; ಸರಿದಾರಿಗೆ ಎಳೆಯಲು ಯತ್ನಿಸಿರುವುದುಂಟು, ವಾಲ್ಮೀಕಿ ರಾಮಾಯಣದಲ್ಲಿ. ಆ ಇಬ್ಬರು ಯಾರೆಂದರೆ ಮಿತ್ರ ಮಾರೀಚ (ಅರಣ್ಯಕಾಂಡದಲ್ಲಿ) ಹಾಗೂ ತಮ್ಮ ವಿಭೀಷಣ (ಯುದ್ಧಕಾಂಡದಲ್ಲಿ). ರಾವಣನು ಇಡಬೇಕೆಂದಿರುವ ಹೆಜ್ಜೆಯನ್ನು ವಿರೋಧಿಸಿಯೇ ಇಬ್ಬರೂ ಹೇಳುವುದು. ಇಬ್ಬರೂ ಆತನಿಗೆ ಎಚ್ಚರವನ್ನು ಕೊಟ್ಟಿದ್ದರು: ತಾನಾಯ್ದುಕೊಂಡಿರುವ ದಿಕ್ಕು ಯಾವ ದುರ್ಗತಿಗೊಯ್ಯುವುದೆಂದು. ಎಚ್ಚರಗೊಳ್ಳದ ರಾವಣ ಸ್ವವಿನಾಶ-ಸ್ವಜನವಿನಾಶಗಳನ್ನು ತನ್ನ ಕೈಯಾರೆ ತಂದುಕೊಳ್ಳುವಂತಾಯಿತು.

ಏನು ಅವರಿತ್ತ ಹಿತನುಡಿ? ಅದು ರಾಕ್ಷಸರು ರಾಕ್ಷಸರಿಗೆ ಹೇಳಿಕೊಳ್ಳುವ ಹಿತವಚನ ಮಾತ್ರವೇ? ಅಥವಾ ಇಂದಿಗೂ ಏನಾದರೂ ಉಪಯುಕ್ತವೇ? - ಎಂಬುದನ್ನೊಮ್ಮೆ ನೋಡಬೇಕಲ್ಲವೆ? ಹೌದು, ಇಂದಿಗೇ ಹೆಚ್ಚಿನ ಉಪಯೋಗವಿರುವ ಮಾತೆಂದೇ ಅದನ್ನು ಹೇಳಬಹುದು.
ಹಾಗಾದರೆ ಏನದು? ಅವರ ಮಾತಿನ ಅಭಿಪ್ರಾಯ ಹೀಗಿದೆ: "ರಾಜನೇ, ಪ್ರಿಯವಾದ ಮಾತುಗಳನ್ನು ಯಾವಾಗಲೂ ಆಡುವವರು ಲೋಕದಲ್ಲಿ ಸುಲಭವಾಗಿ ದೊರೆಯುವರು; ಅಪ್ರಿಯವಾದರೂ ಪಥ್ಯವಾದ ನುಡಿಯನ್ನು ಹೇಳುವವರು ದೊರಕರು; ಅದನ್ನು ಕೇಳಿಸಿಕೊಳ್ಳುವವರೂ ದೊರಕರು!"

ಒಂದೇ ಮಾತನ್ನು ಸ್ಥಾನದಲ್ಲೂ ಬಲದಲ್ಲೂ ಹಿರಿಯನೆನಿಸಿದ್ದ ರಾವಣನಿಗೆ ಇವರಿಬ್ಬರೂ ಹೇಳುವರು. ಹೇಳಿದರೂ ಹಠಬಿಡದವ ರಾವಣ; ಆತನ ಮಾತನ್ನು ಮೀರಲಾಗದೆ ರಾಮನ ಬಾಣಕ್ಕೆ ತುತ್ತಾಗಿ ಪ್ರಾಣಕಳೆದುಕೊಂಡ, ಮಾರೀಚ; ಹಿತೋಕ್ತಿ ಹೇಳಿದರೂ ಆಸಕ್ತಿ ತಾಳದ ಅಣ್ಣನನ್ನು ತೊರೆದು ಬಂದು ರಾಮನಿಗೆ ಶರಣಾಗಿ ಸ್ವರಕ್ಷೆ-ಸ್ವಜನರಕ್ಷೆಗಳನ್ನು ಸಾಧಿಸಿದ, ವಿಭೀಷಣ.

ಇಬ್ಬರೂ ಹೇಳಿದ ಮಾತಿನ ಸಾರವೇನು? ಇಂದಿಗಿನ ಅನ್ವಯವೇನು? ಲೋಕದಲ್ಲಿ ಸದಾ ಪ್ರಿಯವಾಗಿ ನುಡಿಯುವ ಮಂದಿ ಹಲವರು ದೊರೆಯುವವರು - ಎಂಬುದು ನುಡಿಯ ಮೊದಲ ಭಾಗ. ಐಶ್ವರ್ಯದಲ್ಲೋ ಅಧಿಕಾರದಲ್ಲೋ ಎತ್ತರದಲ್ಲಿರುವವರನ್ನು ಆಶ್ರಯಿಸುವವರು ಅನೇಕರು. ಅವರಲ್ಲಿ ಸ್ವಕಾರ್ಯಸಾಧಕರಾದವರು ಮಾತಾಡುವುದರಲ್ಲಿ ನುರಿತವರಾಗಿರುವರು; ಹೊಗಳಿಗೆಯ ಮಾತುಗಳಿಂದಲೋ, ಪ್ರಿಯವಾದ ನುಡಿಗಳಿಂದಲೋ ಆ ಗರಿಮೆಯುಳ್ಳವರನ್ನು ಮರುಳು ಮಾಡಿ ತಮಗೆ ಬೇಕಾದುದನ್ನು ಪಡೆದುಕೊಂಡುಬಿಡುವರು.

ಉನ್ನತಸ್ಥಾನದಲ್ಲಿರುವರೂ ಅಂತಹ ಮಾತುಗಳಿಗೆ ಮರುಳಾಗುವವರೇ. ಪ್ರಿಯವಾಗಿ ಮಾತನಾಡುತ್ತಿರುವ ವ್ಯಕ್ತಿಯು ಸ್ವಾರ್ಥಸಾಧನೆಗೆಂದೇ ಹಾಗೆ ಮಾತನಾಡುತ್ತಿರಬಹುದೆಂಬ ಶಂಕೆಯೂ ಅವರಿಗೆ ಹುಟ್ಟುವುದಿಲ್ಲ.

ಆದರೆ ಹಿತೈಷಿಗಳ ನಡೆಯೇ ಬೇರೆ; ಅಂತೆಯೇ, ಅವರ ನುಡಿಯೂ ಬೇರೆಯೇ. ಇರುವುದನ್ನು ಇರುವಂತೆಯೇ ಹೇಳುವವರವರು: ಬಣ್ಣಕಟ್ಟಿ ಹೇಳಿ ಕಣ್ಣಿಗೆ ಮಣ್ಣೆರಚುವವರಲ್ಲ. ಅವರು ಹೇಳುವುದು ಪಥ್ಯ: ಹಾಗೆಂದರೆ, ಕೇಳುಗನು ಸಾಗಬೇಕಾದ ಪಥಕ್ಕೆ (ಎಂದರೆ ದಾರಿಗೆ) ಒಳ್ಳೆಯದಾಗುವಂತಹುದು. ಆಯುರ್ವೇದವೈದ್ಯರು 'ಪಥ್ಯ' ಹೇಳುವರಲ್ಲವೆ? ಆರೋಗ್ಯ ಪಡೆಯುವ ಹಾದಿಗೆ ಸುಗಮತೆಯನ್ನು ಉಂಟುಮಾಡುವುದದು. ಇಂತಹ ಹಿತೋಕ್ತಿಯನ್ನು ನುಡಿಯುವವರು ದೊರೆಯುವುದು ಕಷ್ಟವೆಂಬುದಿರಲಿ, ಅದನ್ನು ಕೇಳಿಸಿಕೊಳ್ಳುವವರೂ ದೊರೆಯರು! ವಕ್ತಾರರೂ ಅಲಭ್ಯರು; ಶ್ರೋತಾರರೂ ಅಲಭ್ಯರು - ಒಳ್ಳೆಯ ಮಾತುಗಳಿಗೆ!

ಇದೋ, ಯಾರಾದರೂ ಹೆಚ್ಚು ಹೊಗಳಿದರೆ ಎಚ್ಚರಗೊಳ್ಳೋಣ; ಅಪ್ರಿಯವಾಗಿದ್ದರೂ ಹಿತವಚನವನ್ನು ಯಾರಾದರೂ ಆಡಿದರೆ ಒಮ್ಮೆ ಕಿವಿಗೊಡೋಣ. ಅಲ್ಲವೇ? "ಹಿತ" ವೆಂದರೇನೆಂಬುದನ್ನೂ ಇಲ್ಲೊಮ್ಮೆ ಗಮನಿಸಿಕೊಳ್ಳಬೇಕು. ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ:"ಪುರುಷಾರ್ಥಸಾಧನೆಗೆ ವಿರೋಧವಲ್ಲ ರೀತಿಯಲ್ಲಿ ಯಾವುದು ಕೆಲಸಕ್ಕೆ ಬರುತ್ತದೋ ಅದೇ ಹಿತ; ಇಲ್ಲದ್ದು ಹತ!"

ಸೂಚನೆ: 24/02/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Saturday, February 24, 2024

ಕೃಷ್ಣಕರ್ಣಾಮೃತ - 3 ಕರ್ಣಕ್ಕೆ ಅಮೃತವೇ? ಯಾರಿಗೆ? (Karnakke amrtave ? Yarige)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಲೀಲಾಶುಕನು ತನ್ನ ಕೃತಿಯನ್ನು ನೇರವಾಗಿ ಕೃಷ್ಣಚರಿತವೆಂದೇ ಕರೆಯಬಹುದಿತ್ತಲ್ಲವೇ? ಆತನು ತನ್ನ ಕೃತಿಗೆ ಕೊಟ್ಟಿರುವ ಅಭಿಧಾನ "ಕೃಷ್ಣಕರ್ಣಾಮೃತ"ವೆಂದು. (ಅಭಿಧಾನವೆಂದರೆ ಹೆಸರು). ಹಾಗೇಕೆ ಹೆಸರು?

ಕೃಷ್ಣಕರ್ಣಾಮೃತವು ಗೇಯಗುಣದಿಂದ ತುಂಬಿದೆಯೆಂಬುದಕ್ಕೆ ಇನ್ನೂ ಒಂದು ಕುರುಹನ್ನೂ ಹೇಳಬಹುದು. ತನ್ನ ಹೆಸರಿನಲ್ಲೇ ಆ ಗುಣವನ್ನು ತೋರಿಸಿದೆ, ಈ ಕೃತಿ. ಈ ಕಾವ್ಯವು ಕರ್ಣಾಮೃತ. ಕರ್ಣವೆಂದರೆ ಕಿವಿ. ಆದ್ದರಿಂದ ಒಂದು ಪ್ರಶ್ನೆ. ಇಲ್ಲಿ ಹೇಳುತ್ತಿರುವುದು ಯಾರ ಕರ್ಣದ ಬಗ್ಗೆ? ಕೃಷ್ಣನ ಕರ್ಣವನ್ನು ಕುರಿತೋ, ನಮ್ಮ ಕರ್ಣವನ್ನು ಕುರಿತೋ?

ಅದಕ್ಕೆ ಮೊದಲು ಇನ್ನೊಂದು ಪ್ರಶ್ನೆ.

ಒಳ್ಳೆಯ ಪಾಯಸವನ್ನೋ ಕ್ಷೀರಾನ್ನವನ್ನೋ ಚಪ್ಪರಿಸುತ್ತಾ "ಆಹಾ! ಅಮೃತದ ಹಾಗಿದೆ!" ಎನ್ನುವುದುಂಟು. ಬಿಸಿಬಿಸಿ ಗಸಗಸೆಪಾಯಸವನ್ನು ಪಾನಮಾಡಿದರೆ ಅದು ಆಸ್ವಾದ್ಯವೆನಿಸಬಹುದು; ಜೊತೆಗೆ ಒಂದಿಷ್ಟು ಮತ್ತನ್ನೂ ಬರಿಸಬಹುದು. ಅಂತಹ ಸೊಗಸಾದ ಪಾಯಸವನ್ನು ಕಾಣುತ್ತಲೇ ಬಾಯಿಯಲ್ಲಿ ನೀರೂರಬಹುದು. ಆದರೆ, ಅದನ್ನು ಆಸೆಪಟ್ಟು ನೋಡುವ ಕಣ್ಣುಗಳನ್ನು ಸಂಬೋಧಿಸಿ, "ಕಣ್ಣುಗಳೇ, ಅದೇನು ಹಾಗೆ ಮಿಕಿಮಿಕಿ ನೋಡುತ್ತಿದ್ದೀರಿ? ನೀವೂ ಸ್ವಲ್ಪ ತೆಗೆದುಕೊಳ್ಳಿ!  - ಎಂದು ಹೇಳಿಕೊಂಡು, ಕಣ್ಣಿಗೇ ಒಂದಿಷ್ಟು ಪಾಯಸ ಹಾಕಲಾಗುವುದೇ?" (ಇದು ಬೇರೊಂದು ಸಂದರ್ಭದಲ್ಲಿ – ಒಂದೊಂದು ಇಂದ್ರಿಯದ ಕ್ಷೇತ್ರವೂ ಕಾರ್ಯವೂ ಬೇರೆಬೇರೆಯೆಂದು ಉದಾಹರಣೆಗಾಗಿ ಪ್ರತಿಪಾದಿಸುವ ಸಂದರ್ಭದಲ್ಲಿ - ಶ್ರೀರಂಗಮಹಾಗುರುಗಳು ಆಡಿದ ತಮಾಷೆಯ ಮಾತು).

ಹಾಗಾದರೆ ಕರ್ಣಾಮೃತವೆಂದರೇನು?


ಕಣ್ಣಿನಿಂದ ಕುಡಿಯುವುದೇ ನೆಕ್ಕುವುದೇ?

ನಾಲಿಗೆಗೆ ಅಮೃತವೆಂತು ಆಪ್ಯಾಯಕವೋ, ಅಂತೆಯೇ ಕಿವಿಗಳಿಗೆ ಆಪ್ಯಾಯಕವಾಗಿರುವುದು ಕರ್ಣಾಮೃತ. (ಪದಗಳ ಪರಿಚಯ: ಯಾವುದು ಆಪ್ಯಾಯನವನ್ನು ಉಂಟುಮಾಡುವುದೋ ಅದು ಆಪ್ಯಾಯಕ ಅಥವಾ ಆಪ್ಯಾಯನಕರ. ಆಪ್ಯಾಯನವೆಂದರೆ ಉತ್ಕಟತೃಪ್ತಿ; ಸಂತೋಷದಿಂದ ಉಬ್ಬಿಹೋಗುವುದು. ಆಪ್ಯಾಯಮಾನವೆಂದರೆ ಅಂತಹ ಸ್ಥಿತಿಯನ್ನು ಉಂಟುಮಾಡು(ತ್ತಿರು)ವಂತಹುದು).

ಇಲ್ಲಿ ನಾಲಿಗೆಯಿಂದ ಅನುಭವಿಸುವ ಪರಿಯನ್ನು ಕಿವಿಗೆ "ಆರೋಪಿಸಿದೆ". (ಆರೋಪಿಸುವುದೆಂದರೆ ಒಂದು ವಸ್ತುವಿನಲ್ಲಿ ಇಲ್ಲದ ಧರ್ಮವನ್ನು ಅದರ ಮೇಲೆ ಏರಿಸುವುದು, ಹೊರಿಸುವುದು; ಧರ್ಮವೆಂದರೆ ಗುಣ-ಸ್ವಭಾವಗಳು.) ಒಂದು ಇಂದ್ರಿಯದ ನಡೆಯನ್ನು ಕಾವ್ಯಾತ್ಮಕವಾಗಿ ಮತ್ತೊಂದು ಇಂದ್ರಿಯದ ಮೇಲೆ ಹೀಗೆ ಆರೋಪಿಸುವುದಾದಲ್ಲಿ ಇಂಗ್ಲೀಷಿನಲ್ಲಿ ಅದಕ್ಕೆ ಸೈನೇಸ್ತಟಿಕ್ಸ್ ಎನ್ನುತ್ತಾರೆ. ಏನು ಹಾಗೆಂದರೆ? 'ಏಸ್ತೆಟಿಕ್' ಎಂದರೆ ಇಂದ್ರಿಯಕ್ಕೆ ವಿಷಯವಾಗುವುದು; ಸೈನೇಸ್ತೆಟಿಕ್ ಎಂದರೆ ಒಂದು ಇಂದ್ರಿಯದ ಕೆಲಸವನ್ನು ಮತ್ತೊಂದು ಮಾಡುವಂತೆ ಚಿತ್ರಿಸುವುದು. ಇದಕ್ಕೆ ಪ್ರಸಿದ್ಧಕಾವ್ಯವೊಂದರಿಂದ ಉದಾಹರಣೆಯನ್ನು ಕೊಡಬಹುದು.

ಕಾಳಿದಾಸನ ರಘುವಂಶದಲ್ಲಿ ಬರುವ ಮಾತಿದು. ದಿಲೀಪನು ನಂದಿನೀಧೇನುವಿನ ಸೇವೆಯನ್ನು ಒಂದಿಷ್ಟುಕಾಲ ಮಾಡಿ ವರವನ್ನು ಪಡೆದು ತನ್ನ ರಾಜಧಾನಿಗೆ ಪತ್ನಿಯೊಂದಿಗೆ ಚಿರಕಾಲವಾದ ಮೇಲೆ ಹಿಂದಿರುಗುತ್ತಿದ್ದಾನೆ. ಪ್ರಜೆಗಳು ಆತನ ಬರುವಿಕೆಗಾಗಿ ಬಹುವಾಗಿ ಹಾತೊರೆಯುತ್ತಿದ್ದರು. ಆತನು ಬಂದೊಡನೆ "ಆತನನ್ನು ಪ್ರಜೆಗಳು 'ಕಣ್ಗಳಿಂದ ಕುಡಿದರು' (ನೇತ್ರೈಃ ಪಪುಃ)" ಎನ್ನುತ್ತಾನೆ, ಕವಿ! "ಕಣ್ತುಂಬ ನೋಡಿದರು" ಎಂದು ಹೇಳುವುದನ್ನು ಮತ್ತೂ ಒತ್ತುಕೊಟ್ಟು ಹೇಳಲು ಹಾಗೆ ಹೇಳಿರುವುದು: ಕಣ್ಣುಗಳು "ಕುಡಿದ"ವಂತೆ!  ಹಾಗೆಯೇ ಮತ್ತೊಬ್ಬ ಕವಿಯು ಒಬ್ಬನನ್ನು, "ಆತನು ಮನ್ಮಥನಂತೆ ಸುಂದರನಾದವನು" ಎಂದು ಹೇಳುವುದಕ್ಕೆ "ರತಿಯ ಕಣ್ಣುಗಳೇ ನೆಕ್ಕಲು ಬಯಸುವಂತಹ ರೂಪ ಆತನದು" ಎಂದು ಚಿತ್ರಿಸಿದ್ದಾನೆ: ಕಣ್ಣುಗಳು "ನೆಕ್ಕುವು"ವಂತೆ!

ಹೀಗೆ ಕಣ್ಣಿನಿಂದಲೋ ಕಿವಿಯಿಂದಲೋ "ಕುಡಿಯುವುದನ್ನು" ಕವಿಗಳು ಹೇಳುವುದುಂಟು.

ಈ ಪ್ರಕಾರವಾಗಿಯೇ, ಕಿವಿಗಳಿಗೆ ಅತ್ಯಂತ ಪ್ರಿಯವಾಗುವಂತಹುದನ್ನು ಕರ್ಣರಸಾಯನ, ಕರ್ಣಾಮೃತ ಮುಂತಾದ ಪದಗಳಿಂದ ಕರೆಯುವರು; ಅಮೃತವನ್ನಾಗಲಿ ರಸಾಯನವನ್ನಾಗಲಿ ಆಸ್ವಾದಿಸತಕ್ಕವು ನಾಲಿಗೆಗಳೇ ಆದರೂ, ಅಮೃತ-ರಸಾಯನಗಳೊದಗಿಸುವ ತೃಪ್ತಿಯು ಕಿವಿಗಳಿಗೆ ಇಲ್ಲಿ ಈಗ ಒದಗಿದೆ - ಎಂಬ ತಾತ್ಪರ್ಯವಿಲ್ಲಿದೆ.


ಶ್ರೋತೃಗಳಿಗೆ ಕರ್ಣಾಮೃತ

ಹೀಗೆ ಕಿವಿಗಳ ಮೇಲೆ ಬಿದ್ದಷ್ಟೂ ಉನ್ನತಸುಖವನ್ನೇ ಕೊಡತಕ್ಕ ಕೃತಿಯಿದು. ಓದುಗರು ಈ ಕಾವ್ಯವನ್ನು ಮನಸ್ಸಿನಲ್ಲಿ ಓದಿಕೊಂಡು ಅಲ್ಲಿಯ ಸುಂದರವಾದ ಭಾವಗಳಿಗೆ ಸಂತೋಷಿಸುವುದು ಮಾತ್ರವಲ್ಲ; ಇದನ್ನು ಗಟ್ಟಿಯಾಗಿ ಓದಿ ಕರ್ಣಾನಂದವನ್ನೂ ಪಡೆಯಬೇಕು: ಭಾಷೆಯ ಸೌಂದರ್ಯ, ನುಡಿಗಟ್ಟಿನ ಸೌಂದರ್ಯ, ಅನುಪ್ರಾಸಾದಿಗಳ ಸೌಂದರ್ಯ, ಅರ್ಥಾಲಂಕಾರಗಳ ಸೌಂದರ್ಯ, ಧ್ವನಿಯ ಸೌಂದರ್ಯ - ಇವುಗಳಿಗೂ ಕಿವಿಗೊಟ್ಟು ಚಪ್ಪರಿಸಬೇಕು.

ಅಷ್ಟೇ ಅಲ್ಲ, ಇಲ್ಲಿಯ ಶ್ಲೋಕಗಳ ಗಾನವನ್ನೂ ಆಸ್ವಾದಿಸಬೇಕು. ಸರಿಯಾದ ಉಚ್ಚಾರಣೆಯನ್ನು ಬಲ್ಲವರು ಹಾಡಿದರೆ ಸೊಗಸು. ಪದಗಳ ಅರ್ಥವನ್ನು ಗಮನಿಸಿಕೊಳ್ಳುತ್ತಾ ಹಾಡುವವರಾದರೆ ಮತ್ತೂ ಚೆನ್ನೇ. ರಸಾನುಭವದೊಂದಿಗೆ ಹಾಡಿದರೆ ಹಾಡಿಗೇ ಕಳೆಕಟ್ಟುತ್ತದೆ. ಶ್ರೀಕೃಷ್ಣನಲ್ಲಿ ಪರಮಭಕ್ತಿಯನ್ನು ಹೊಂದಿ ಹಾಡುವವರಾದರಂತೂ ಅದಿದೋ ಕಳಶಪ್ರಾಯವಾದುದು! ಇವೆಲ್ಲವೂ ಶ್ರೋತ್ರಗಳಿಗೆ, ಎಂದರೆ ಕಿವಿಗಳಿಗೆ, ಗೋಚರ. (ಶ್ರೋತೃವೆಂದರೆ ಕೇಳುಗ; ಶ್ರೋತ್ರವೆಂದರೆ ಕಿವಿ.) ಹೀಗಾಗಿ ಶ್ರೋತೃಗಳ ಶ್ರೋತ್ರಗಳಿಗೆಲ್ಲಾ ಕರ್ಣಾಮೃತವಾದದ್ದು, ಈ ಕೃತಿ.

ಮೇಲಾಗಿ, ನವವಿಧಭಕ್ತಿಗಳಲ್ಲಿ ಶ್ರವಣಭಕ್ತಿಗೇ ಅಗ್ರಸ್ಥಾನವಲ್ಲವೇ? ಹೀಗಾಗಿ ಶ್ರವಣಾನಂದವನ್ನೂ ಭಗವದ್ಭಕ್ತಿಯನ್ನೂ ತುಂಬಿಕೊಂಡು, ಅಂತಹ ಗಾನದ ಶ್ರವಣವನ್ನು ಮಾಡಿದವರ ಭಾಗ್ಯ ಅಸಾಮಾನ್ಯವಾದುದೇ!

ಗೀತಗೋವಿಂದವನ್ನು ಕುರಿತೂ ಹೀಗೆಯೇ ಹೇಳುವುದು: "ಶ್ರುತಿಪುಟ-ಪರಿಪೇಯಂ ಗೀತಗೋವಿಂದ-ಗೇಯಮ್". ಎಂದರೆ, ಕಿವಿದೆರೆಗಳಿಂದ ಕುಡಿಯಬೇಕಾದದ್ದು, ಈ ಗೀತಗೋವಿಂದವೆಂಬ ಗೇಯಕೃತಿ! (ಇಲ್ಲಿಯೂ  "ಗೇಯ"-"ಪೇಯ"ಗಳ ಮನೋಹರವಾದ ಅನುಪ್ರಾಸವು ಕಿವಿಗಳಿಗೆ ಆಪ್ಯಾಯಕವಾಗಿರುವುದಷ್ಟೆ.)


ಕೃಷ್ಣನಿಗೂ ಕರ್ಣಾಮೃತವೇ!

ಈ ಕರ್ಣಾಮೃತವೆಂಬುದು ಶ್ರೋತೃಗಳಾಗಿ ಬರುವ ಸಂಸ್ಕಾರಶಾಲಿ-ಸುಜನರಿಗಾಗಿ ಮಾತ್ರವಲ್ಲ. ಇದು ಸಾಕ್ಷಾತ್ ಶ್ರೀಕೃಷ್ಣನೆಂಬ ಶ್ರೋತೃವಿನ ಕರ್ಣಗಳಿಗೇ ಅಮೃತವಾಗಿರುವಂತಹುದು! ಹಾಗೆಂಬುದು ನಮ್ಮ ಲೆಕ್ಕಾಚಾರವಲ್ಲ, ಊಹೆಯಲ್ಲ. ಅದು ಶ್ರೀಲೀಲಾಶುಕನೇ ಕಂಠೋಕ್ತವಾಗಿ ಹೇಳಿರುವುದು!

ಪೂರ್ಣಶ್ಲೋಕದಲ್ಲಿ ಇನ್ನೂ ಹಲವು ಸೊಗಸುಗಳುಂಟು. ಅದನ್ನು ತೋರುವ ಮೊದಲು ಕನಕದಾಸರ ಉಪಮೆಯೊಂದನ್ನು ಆಸ್ವಾದಿಸಿದರೆ ಇಲ್ಲಿಯ ಸೊಬಗು ಚೆನ್ನಾಗಿ ತೋರುವುದು. ಅವರ ಹರಿಭಕ್ತಿಸಾರವೆಂಬ ಕೃತಿಯಲ್ಲಿಯ ಸುಂದರವಾದ ಈ ಒಂದು ಪದ್ಯವನ್ನು ನೋಡಿ:  

"ಗಿಳಿಯ ಮರಿಯನು ತಂದು, ಪಂಜರದೊಳಗೆ ಪೋಷಿಸಿ, ಕಲಿಸಿ ಮೃದು ನುಡಿಗಳನು, ಲಾಲಿಸಿ, ಕೇಳ್ವ ಪರಿಣತರಂತೆ -ನೀನೆನಗೆ ತಿಳುಹಿ ಮತಿಯನು, ಎನ್ನ ಜಿಹ್ವೆಗೆ ಮೊಳಗುವಂದದಿ ನಿನ್ನ ನಾಮಾವಳಿಯ ಪೊಗಳಿಕೆಯಿತ್ತು, ರಕ್ಷಿಸು ನಮ್ಮನನವರತ! ||"

ನಾವೇ ಸಾಕಿದ ಗಿಳಿಮರಿಯಿರಬಹುದು. ಆದರೆ ಅದು ಮಧುರವಾದ ಧ್ವನಿಗಳನ್ನು ಮಾಡುವುದನ್ನೋ, ನಮ್ಮ ಉಕ್ತಿಗಳನ್ನೇ ಪ್ರತಿಧ್ವನಿಸುವುದನ್ನೋ ಮಾಡಿದಾಗ, ಅದರಲ್ಲಿ ಒಂದಿಷ್ಟು ಅಸ್ಪಷ್ಟತೆಯಿದ್ದರೂ, ಅದರ ರೂಪದ ಮುದ್ದು, ಕಂಠದ ಮುದ್ದುಗಳನ್ನೋ, ಅದಾಡುವ ಮಾತುಗಳ ಒಟ್ಟಿನ ಸವಿಯನ್ನೋ, ಮೆಚ್ಚಿ ಸಂತೋಷಿಸುವುದುಂಟಲ್ಲವೆ? ಪರಿಣತರಿಗೆ ವಾಕ್-ಶುದ್ಧಿಯ ಕಡೆ ವಿಶೇಷ ಗಮನವಿರುತ್ತದೆ; ಆದರೂ ಮಕ್ಕಳ, ಮರಿಗಳ ತೊದಲುನುಡಿಗಳನ್ನೂ ಅವರೂ ಆಸ್ವಾದಿಸುವರೇ ಸರಿ!

ಇದನ್ನೇ "ಮಂಜೂನಿ ಪಂಜರ-ಶಕುಂತ-ವಿಜಲ್ಪಿತಾನಿ" ಎನ್ನುವರು. ಶುಕವೆಂದರೆ ಗಿಣಿ. ಮುದ್ದಿಗಾಗಿ ಪ್ರೀತಿಗಾಗಿ ಸಾಕಿದ ಗಿಳಿಯನ್ನೇ "ಲೀಲಾಶುಕ"ವೆನ್ನುವುದು. ಇದೋ, ನಮ್ಮ ಕವಿಯ ಹೆಸರೂ ಅದೇ! ಆದ್ದರಿಂದ ಕವಿಯು ಈ ಅರ್ಥದಲ್ಲೂ ತನ್ನನ್ನು  ಹಾಗೆಂದು ನಿರ್ದೇಶಿಸಿಕೊಂಡು, "ಓ ಕೃಷ್ಣದೇವನೇ, ಲೀಲಾಶುಕದಂತಿರುವ ಈ ಲೀಲಾಶುಕನಿಂದ ರಚಿತವಾದ ಈ ಕೃತಿಯು ನಿನ್ನ ಕಿವಿಗಳಿಗೆ ಅಮೃತಪ್ರಾಯವಾಗಲಿ" ಎಂದು ಅಂತ್ಯಮಂಗಲಶ್ಲೋಕವೊಂದರಲ್ಲಿ ಬೇಡಿಕೊಳ್ಳುತ್ತಾನೆ! "ಲೀಲಾಶುಕೇನ ರಚಿತಂ ತವ ದೇವ ಕೃಷ್ಣ ಕರ್ಣಾಮೃತಂ"!

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ24/2/2024 ರಂದು ಪ್ರಕವಾಗಿದೆ.

Monday, February 19, 2024

ಫಲಪ್ರಾಪ್ತಿಗೆ ಬೇಕು ಪ್ರಯತ್ನಶೀಲತೆ (Phalapraptige Beku prayatnasilate)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)




 

ಪರಮೇಶ್ವರನ ಪತ್ನಿಯಾದಂತಹ ಸತೀದೇವಿಯು ದಕ್ಷಪ್ರಜಾಪತಿಯ ಮಗಳು. ಪರಶಿವನ ಮಹಿಮೆಯನ್ನು ಅರಿಯದ, ದರ್ಪದಿಂದ ಅಂಧನಾದ ದಕ್ಷ ಪ್ರಜಾಪತಿಯು ಅಳಿಯನಾದ ಪರಶಿವನನ್ನು ಅಗೌರವದಿಂದ ಕಾಣುತ್ತಿರುತ್ತಾನೆ. ಒಮ್ಮೆ ದಕ್ಷಪ್ರಜಾಪತಿಯು ಒಂದು ದೊಡ್ಡ ಯಾಗವನ್ನು ಮಾಡುತ್ತಿರುತ್ತಾನೆ. ತಂದೆಯ ಮನೆಯಿಂದ ಆಹ್ವಾನ ಬಾರದಿದ್ದರೂ ತವರುಮನೆಯ ಮೇಲಿನ ಪ್ರೀತಿಯಿಂದ ಸತೀದೇವಿಯು ಆ ಯಾಗಕ್ಕೆ ಆಗಮಿಸುತ್ತಾಳೆ. ಆಗ ದಕ್ಷಪ್ರಜಾಪತಿಯು ಅವಳ ಮುಂದೆ ಪರಶಿವನನ್ನು ನಿಂದಿಸುವಂತಹ  ಮಾತುಗಳನ್ನು ಆಡುತ್ತಾನೆ. ಪತಿನಿಂದೆಯನ್ನು ಕೇಳಿ ಅತ್ಯಂತವಾಗಿ ದುಃಖಿತಳಾದ ಸತೀದೇವಿಯು ಯೋಗಾಗ್ನಿಯಿಂದ ತನ್ನ ದೇಹವನ್ನು ಭಸ್ಮಗೊಳಿಸಿ ಪ್ರಾಣತ್ಯಾಗ ಮಾಡುತ್ತಾಳೆ.


ಆ ಸತೀದೇವಿಯೇ ಮುಂದಿನ ಜನ್ಮದಲ್ಲಿ ಪರ್ವತರಾಜನ ಮಗಳಾಗಿ ಜನಿಸಿ ಪಾರ್ವತೀ ಎಂಬುದಾಗಿ ಕರೆಯಲ್ಪಡುತ್ತಾಳೆ. ಪಾರ್ವತಿಯು ಬಾಲ್ಯಾವಸ್ಥೆಯಲ್ಲಿರುವಾಗ ಒಮ್ಮೆ ದೇವರ್ಷಿ ನಾರಾದರು ಪರ್ವತರಾಜನ ಮನೆಗೆ  ಆಗಮಿಸುತ್ತಾರೆ. ತ್ರಿಕಾಲ ಜ್ಞಾನಿಗಳಾದ ಅವರು ಪಾರ್ವತಿಯನ್ನು ನೋಡಿ ಇವಳು ಪರಶಿವನ ಪತ್ನಿಯಾಗುತ್ತಾಳೆ ಎಂಬ ಮಾತನ್ನು  ಹೇಳುತ್ತಾರೆ. ಪಾರ್ವತಿಯನ್ನು ವರಿಸುವುದು ಪರಶಿವನೇ ಎಂಬುದು ಸ್ವತಃ ಸಿದ್ಧ, ವಿಧಿಲಿಖಿತ. ಏಕೆಂದರೆ ಅವರಿಬ್ಬರೂ ಜಗದಾದಿ ದಂಪತಿಗಳು, ವಿವಾಹವೆಂಬುದು ಜನ್ಮ ಜನ್ಮದ ಅನುಭಂದ.   ತಾನು ಪರಮೇಶ್ವರನನ್ನು ವಿವಾಹವಾಗುವುದು ನಿಶ್ಚಿತ ಎಂಬುದನ್ನು ಪಾರ್ವತಿಯು ತಿಳಿದಿದ್ದರೂ, ಆ ಫಲ ಕೈಗೂಡಲು ಪರಮೇಶ್ವರನಿಗೆ ಪ್ರಿಯವಾದ ತಪಸ್ಸನ್ನು ಆಚರಿಸಲು ಮುಂದಾಗುತ್ತಾಳೆ, ಆ ನಿಟ್ಟಿನಲ್ಲಿ ಪ್ರಯತ್ನಶೀಲಳಾಗುತ್ತಾಳೆ. ಜಗನ್ಮಾತೆಯ ಈ ನಡೆ ಲೋಕಕ್ಕೆ ಪರಮಾದರ್ಶವಾಗಿದೆ, ಫಲವನ್ನು ಪಡೆಯಲು ಅವಶ್ಯಕವಾಗಿ ಇರಲೇಬೇಕಾದ ಪ್ರಯತ್ನಶೀಲತೆಯನ್ನು ಎತ್ತಿ ಸಾರುತ್ತಿದೆ. ಪ್ರತಿಯೊಂದು ಜೀವಿಯೂ ಜನ್ಮತಾಳುವಾಗಲೇ ಇಂತಿಂತಹ ಫಲಗಳನ್ನು ಹೊಂದಲೇಬೇಕು ಎಂಬುದು ವಿಧಿಲಿಖಿತ, ಹಾಗೆಂದು ಆ ನಿಟ್ಟಿನಲ್ಲಿ ಪ್ರಯತ್ನ ಮಾಡದೇ ಸುಮ್ಮನೆ ಕಾಲಹರಣ ಮಾಡಿದರೆ ಫಲದ ಪ್ರಾಪ್ತಿಯಗುವುದಿಲ್ಲ.


ಮಲಗಿ ನಿದ್ರಿಸುತ್ತಿರುವ ಸಿಂಹದ ಬಾಯಿಯೊಳಗೆ ಮೃಗಗಳು ತಾವಾಗಿಯೇ ಬಂದು ಬೀಳುವುದಿಲ್ಲ ಎಂಬ ಸುಭಾಷಿತ ಪ್ರಸಿದ್ಧವಾಗಿದೆ. ನಮ್ಮ ಸಂಸ್ಕೃತಿಯಲ್ಲಿ ದೈವಬಲ ಹಾಗೂ ಪುರುಷಪ್ರಯತ್ನ ಎರಡಕ್ಕೂ ಅತ್ಯಂತ ಮಹತ್ವವನ್ನು ನೀಡಿದ್ದಾರೆ." ದೈವಾನುಗ್ರಹ ಪುರುಷಪ್ರಯತ್ನಗಳು ರಥದ ಚಕ್ರಗಳಂತೆ. ಹೇಗೆ ಎರಡು ಚಕ್ರಗಳೂ ಒಟ್ಟಿಗೆ ಉರುಳಿದಾಗ ಮಾತ್ರ ರಥವು ಮುನ್ನಡೆಯುವುದೋ ಅಂತಯೇ ದೈವಾನುಗ್ರಹದ ಜೊತೆಯಾಗಿ ಪುರುಷ ಪ್ರಯತ್ನವೂ ಇದ್ದಾಗ ಮಾತ್ರ ಜೀವನರಥವು ಸುಗಮವಾಗಿ ಸಾಗುವುದು, ಕಾರ್ಯಸಿದ್ಧಿಯಾಗುವುದು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಸ್ಮರಣೀಯವಾಗಿದೆ.


ಪ್ರತಿಯೊಂದು ಜೀವಿಯೂ ಭಗವಂತನಿಂದ ಹೊರಟು ಪ್ರಕೃತಿಗೆ ಇಳಿದು ತಮ್ಮ ತಮ್ಮ ಕರ್ಮಕ್ಕನುಗುಣವಾದ ಐಹಿಕ ಫಲಗಳನ್ನು ಪಡೆದಾಗ ಮಾತ್ರ ಜೀವನ ಪೂರ್ಣವಾಗುವುದಿಲ್ಲ. ತನ್ನ ಮೂಲಸ್ಥಾನವಾದ ಭಗವಂತನನ್ನು ಮತ್ತೆ ಹೋಗಿ ಸೇರುವುದು ಜೀವಿಯ ಪರಮಫಲ. ಆ ಫಲವನ್ನು ಹೊಂದಲು ಭಗವಂತನ ಕೃಪೆ, ಸದ್ಗುರುವಿನ ಅನುಗ್ರಹ ಇವುಗಳನ್ನೆಲ್ಲ ಸಂಪಾಡಿಸಿಕೊಂಡು, ಅದಕ್ಕನುಗುಣವಾಗಿ ಸಾಧನೆ ಮಾಡುವುದು ಪುರುಷಪ್ರಯತ್ನವಾಗಿದೆ. ಹಾಗಾಗಿ ದೈವಬಲದ ಜೊತೆಗೆ ಪುರುಷಪ್ರಯತ್ನವನ್ನೂ ಇಟ್ಟುಕೊಂಡು ಜೀವನದಲ್ಲಿ ಐಹಿಕ ಸುಖ ಹಾಗೂ ಪಾರಮಾರ್ಥಿಕ ಸುಖ ಎರಡನ್ನೂ ಅನುಭವಿಸಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ.


ಸೂಚನೆ: 19/2/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.


ಕೃಷ್ಣಕರ್ಣಾಮೃತ - 2 ಶೈವಕವಿಯ ಗೇಯ ಕೃಷ್ಣಕಾವ್ಯ (Shaiva Kaviya Geya Krishna-kavya)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಲೀಲಾಶುಕನು ಬರೆದ ಶ್ರೀಕೃಷ್ಣಕರ್ಣಾಮೃತವು ಒಂದು ಖಂಡಕಾವ್ಯ. ಖಂಡಕಾವ್ಯವೆಂದರೇನೆಂಬುದನ್ನು ಬಲ್ಲೆವು: ಕಾವ್ಯದ ಏಕದೇಶವನ್ನು ಅನುಸರಿಸುವುದೇ ಖಂಡಕಾವ್ಯ. ಏಕದೇಶವೆಂದರೆ ಒಂದು ಭಾಗ, ಪಾರ್ಶ್ವ, ಅಥವಾ ಅಂಗ. ಹೀಗಾಗಿ ಗಾತ್ರದಲ್ಲೂ ಲಕ್ಷಣಗಳಲ್ಲೂ (ಮಹಾ)ಕಾವ್ಯದ ಒಂದು ಕಿರಿದಾದ ಮೂರ್ತಿಯೇ ಖಂಡಕಾವ್ಯ.


ಕಾವ್ಯವೆಂದರೇನು?

ಹಾಗಾದರೆ ಕಾವ್ಯವೆಂದರೇನು? ಹೀಗೆ ಕೇಳಿದಾಗಲೇ ಗೊತ್ತಾಗುವುದು: ಎಷ್ಟೋ ಪ್ರಶ್ನೆಗಳನ್ನು ಕೇಳುವುದು ಸುಲಭ, ಉತ್ತರಿಸುವುದು ಸುಲಭವಲ್ಲ! - ಎಂಬುದು. ಅಷ್ಟೇ ಅಲ್ಲ. ನಮ್ಮಲ್ಲಿ ಬಹುಮಂದಿ "ಸುಕುಮಾರಮತಿ"ಗಳು. ಎಂದರೆ ಮಕ್ಕಳ ಮನಸ್ಸು ಅವರದು: ಮಕ್ಕಳು ಎಷ್ಟೊಂದು ಪ್ರಶ್ನೆಗಳನ್ನು ಕೇಳುತ್ತವೆ! ಯಾವುದಕ್ಕಾದರೂ ನೀಳವೋ ಆಳವೋ ಆದ ಉತ್ತರ ಕೊಡುವುದಾದರೆ, ಕೇಳಿಸಿಕೊಳ್ಳುವ ಉತ್ಸಾಹವೇ ಮಾಯ!

ಎಂದೇ, ಕಾವ್ಯವೆಂದರೆ ಏನೆಂಬುದನ್ನು ಕಿರಿದಾಗಿ ಉತ್ತರಿಸುವ ಒಂದೆರಡು ಮಾತುಗಳನ್ನಷ್ಟೇ ಆಡಿ ಮೂಲಕೃತಿಯತ್ತ ತಿರುಗೋಣ. ಸರಳವಾಗಿ, ಸಾರಾಂಶವಾಗಿ, ಕಾವ್ಯವೆಂದರೆ ರಮಣೀಯವಾದ ಅರ್ಥವನ್ನು ತಕ್ಕುದಾದ ಪದಗಳಿಂದ ನಿರೂಪಿಸುವುದು. (ರಮಣೀಯ ಎಂದರೇನು? - ಎಂದು ಕೇಳುತ್ತಾ ಜಿಜ್ಞಾಸೆಯನ್ನು ಈಗ ಬೆಳೆಸುವುದು ಬೇಡ: ಆ ಚರ್ಚೆ ನಮ್ಮನ್ನು ಸುದೂರಕ್ಕೆ ಸೆಳೆದೀತು!). ಕಾವ್ಯವೆಂದರೆ ರಸಾತ್ಮಕವಾದ ನುಡಿಯೆಂದರೂ ಆದೀತು. ಮೇಲೆ ಹೇಳಿದುದು ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ದಿಗ್ಗಜಗಳೆನಿಸಿರುವ ಜಗನ್ನಾಥ, ವಿಶ್ವನಾಥ ಎಂಬ ಹೆಸರಿನ ವಿದ್ವನ್ಮಣಿಗಳ ಮಾತಿನ ಸಾರ.

ರಾಬರ್ಟ್ ಫ್ರಾಸ್ಟ್ ಎಂಬ ಕವಿ ಹೇಳಿರುವ ಒಂದು ಕಿರುನುಡಿಯಿದೆ. ಅದೂ ಚೆನ್ನಾಗಿದೆ. "ಯಾವುದನ್ನು ಅನುವಾದ ಮಾಡಿದರೆ ಸ್ವಾರಸ್ಯ ಕೆಡುವುದೋ ಅದೇ ಕಾವ್ಯ" - ಎನ್ನುತ್ತಾನೆ, ಆತ! ಈ ಮುಂದೆ ನಾವು ಶ್ರೀಕೃಷ್ಣಕರ್ಣಾಮೃತಕಾವ್ಯದ ಕೆಲ ಶ್ಲೋಕಗಳ ಅನುವಾದವನ್ನೂ ಕೊಡಲಿದ್ದೇವಲ್ಲವೇ? ಅದಕ್ಕಾಗಿ ಈ ಎಚ್ಚರದ ಮಾತನ್ನು ಹೇಳಬೇಕಾಯಿತು!

ಆದರೆ ಇವೆಲ್ಲದರ ಜೊತೆಗೆ, ಅಥವಾ ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಮತ್ತೊಂದಂಶವಿದೆ. ಅದೆಂದರೆ, ಕಾವ್ಯವೆಂದಾಗ ಎದ್ದುಕಾಣುವ ಒಂದು ದೊಡ್ಡಗುಣ: ಅದೆಂದರೆ ಅದನ್ನು ಹಾಡಲಾಗುವಂತಹುದು. ಶ್ರೀಕೃಷ್ಣಕರ್ಣಾಮೃತದ ಒಂದೊಂದು ಪದ್ಯವೂ ಹಾಡಿಕೊಂಡು ಸಂತೋಷಪಡಲಿಕ್ಕೆ ಯೋಗ್ಯವಾಗಿರುವಂತಹುದು. ಗೇಯತೆಯು ಈ ಕೃತಿಯ ಒಂದು ಕಮನೀಯವಾದ ಗುಣ.


ಕಾವ್ಯದಲ್ಲಿಯ ಗೇಯಗುಣ

ಪದ್ಯವೆಂದು ಹೇಳಿದರೆ ಸಾಕು, ಅದು ಛಂದೋಬದ್ಧವೆಂಬುದು ಗೊತ್ತಾಗುವುದು. (ಇಂದಿನ ಪದ್ಯಗಳ ಕಥೆಯೇ ಬೇರೆ; ಆ ಬಗ್ಗೆ ಇಲ್ಲಿ ಮಾತು ಬೆಳೆಸುವುದು ಅನಾವಶ್ಯಕವೇ ಸರಿ.) ಸಂಸ್ಕೃತದಲ್ಲಿ ಗದ್ಯವನ್ನು ಸಹ ಕಾವ್ಯವೆನ್ನುವರು, ಗೊತ್ತೆ?  ಸಂಸ್ಕೃತಭಾಷೆಯಲ್ಲಿಯ ಶಬ್ದಭಂಡಾರ ಬಹಳ ವಿಪುಲವಾದದ್ದರಿಂದ ಗದ್ಯದಲ್ಲಿ ಗೇಯಾಂಶವನ್ನು ತರುವುದು ಅಸಾಧ್ಯವೂ ಅಲ್ಲ, ಅಪರೂಪವೂ ಅಲ್ಲ! ಉದಾಹರಣೆಗೆ "ರಘುವೀರಗದ್ಯ": ರಾಮನನ್ನು ಕುರಿತಾದ ಒಂದು ರಮ್ಯ ಗದ್ಯಪ್ರಬಂಧವದು.  ಹಲವು ಮಂದಿ ಅದನ್ನು ಹಾಡಿರುವುದುಂಟು!

ಗೀತಗೋವಿಂದವಂತೂ ಗಾನಯೋಗ್ಯತೆಯಲ್ಲಿ ಸಾಟಿಯಿಲ್ಲದ ಪದ್ಯಕಾವ್ಯ! ಅದು ಮಾತ್ರವಲ್ಲ; ಆಶ್ಚರ್ಯದ ಮಾತೆಂದರೆ ಇದು: ಭಗವದ್ಗೀತೆಯೂ ಗೀತವೇ, ವಿಷ್ಣುಸಹಸ್ರನಾಮವೂ ಅಷ್ಟೇ! "ಗೇಯಂ ಗೀತಾ-ನಾಮಸಹಸ್ರಂ" - ಎಂದಿಲ್ಲವೇ? ಹೀಗೆ, ಸಂಸ್ಕೃತದಲ್ಲಿರುವ ತತ್ತ್ವಾತ್ಮಕ ಕೃತಿಗಳೂ, ಭಗವಂತನ ಗುಣಕೀರ್ತನದ ಕೃತಿಗಳೂ ಗೇಯವೇ ಸರಿ. ಇವೇ ಹೀಗೆಂದ ಮೇಲೆ, ಕೃಷ್ಣಕರ್ಣಾಮೃತ-ಗೀತಗೋವಿಂದಗಳ ಬಗ್ಗೆ ಹೇಳಬೇಕಾದುದೇ ಇಲ್ಲ! ಅವಂತೂ ಸಾಕ್ಷಾದ್ ಭಗವಂತನಿಗೇ - ಗಾನಲೋಲನಾದ ಶ್ರೀಕೃಷ್ಣನಿಗೆಂದೇ - ಹೇಳಿಮಾಡಿಸಿಟ್ಟ ಅಪ್ರತಿಮಗೇಯಗಳು!


ಕಲಾರತ್ನ

ಎಷ್ಟಾದರೂ, ಗಾನಕ್ಕೆ ಭಾರತೀಯರು ಕೊಟ್ಟಿರುವ ಸ್ಥಾನ ಬಹಳ ಹಿರಿದಾದದ್ದೇ. ಎಂದೇ ಆ ಬಗ್ಗೆ ಹೇಳುವುದು "ಕಲಾರತ್ನಂ ಗಾನಂ" ಎಂದು! ಹಾಗೆಂದರೇನು? ಕಲೆಗಳಲ್ಲಿ ರತ್ನವೆನಿಸತಕ್ಕದ್ದು ಗಾನ - ಎಂದು. ಏನು ರತ್ನವೆಂದರೆ? ಅದಕ್ಕೂ ಲಕ್ಷಣವುಂಟು: ಒಂದೊಂದು ಜಾತಿಯಲ್ಲೂ ಯಾವುದು ಉತ್ಕೃಷ್ಟವೆನಿಸುವುದೋ ಅದುವೇ ರತ್ನ: "ಜಾತೌ ಜಾತೌ ಯದ್ ಉತ್ಕೃಷ್ಟಂ ತದ್ ರತ್ನಮ್ ಅಭಿಧೀಯತೇ."

ಕಲೆಗಳೆಲ್ಲ ಒಂದು ಜಾತಿ. ಜಾತಿಯೆಂದರೆ ಮೂಲಾರ್ಥ ಹುಟ್ಟೆಂದೇ; ಅಲ್ಲದೆ, ಸಮಾನಧರ್ಮವಿರುವ ವಸ್ತುಗಳ ಗುಂಪನ್ನೂ ಜಾತಿಯೆನ್ನುವರು. ಹೀಗೆ ನಮ್ಮಲ್ಲಿ ಅರವತ್ತನಾಲ್ಕು ಕಲೆಗಳು ಉಂಟಲ್ಲವೇ? ಒಂದೊಂದು ಕಲೆಯಲ್ಲೂ ಒಂದೊಂದು ಹಿರಿಮೆಯುಂಟು. ಆದರೂ, ಗಾನದ ಗುಣಗಾನವನ್ನು ಮಾಡುತ್ತಾ ಹೇಳುವ ಮಾತೇ "ಕಲಾರತ್ನಂ ಗಾನಮ್". 

ಯಾವ ದೇವತೆಯನ್ನು ಕುರಿತು?

ಕುಲದೇವತೆ, ಇಷ್ಟದೇವತೆಗಳೆಂಬ ವಿಭಾಗ ನಮ್ಮಲ್ಲುಂಟು ಅಲ್ಲವೇ? ವಂಶದಲ್ಲೇ ಪರಂಪರೆಯಾಗಿ ಪೂಜಿಸಿಕೊಂಡು ಬಂದಿರುವ ದೇವತೆಯು ಕುಲದೇವತೆ; ನಮ್ಮ ಮನಸ್ಸನ್ನು ವಿಶೇಷವಾಗಿ ಸೆಳೆದಿರುವ ದೇವತೆಯು ಇಷ್ಟದೇವತೆ. ಶ್ರೀಕೃಷ್ಣಕರ್ಣಾಮೃತವನ್ನು ಬರೆದಿರುವ ಲೀಲಾಶುಕನ ಇಷ್ಟದೇವತೆಯೆಂದರೆ ಶ್ರೀಕೃಷ್ಣನೇ!

ಹಾಗೆಂದು ತೀರ್ಮಾನಿಸುವುದು ಹೇಗೆ? ತನ್ನ ಬಗ್ಗೆ ಏನನ್ನೂ ಕೇಳಿಕೊಳ್ಳದ  ಕವಿ, ಈ ಒಂದಂಶವನ್ನು ಹೇಳಿಕೊಂಡಿದ್ದಾನೆ. ಹೀಗೆ: "ನಾವು ಹುಟ್ಟಾ ಶೈವರು. ಆ ಬಗ್ಗೆ ಶಂಕೆಯೇ ಬೇಡ. ಪಂಚಾಕ್ಷರೀಮಂತ್ರ-ಜಪದಲ್ಲಿ ನಿರತರಾಗಿರುವವರು. ಹಾಗಿದ್ದರೂ, ನನ್ನ ಮನಸ್ಸು ಮಾತ್ರ ಮುದ್ದುಮುಗುಳ್ನಗೆಯುಳ್ಳ ಗೋಪಿಕಾ-ಕಿಶೋರನಾದ ಶ್ರೀಕೃಷ್ಣನನ್ನು - ಅತಸೀ-ಕುಸುಮದ ಕಾಂತಿಯನ್ನು ಹೊಂದಿರುವ ಕೃಷ್ಣನನ್ನೇ - ಸ್ಮರಿಸುತ್ತದೆ!" - ಎಂಬುದಾಗಿ ಆತನ ಉದ್ಗಾರ. (ಅತಸಿಯೆಂದರೆ ಅಗಸೆ. ಕೃಷ್ಣನನ್ನು ನೀಲವರ್ಣವೆನ್ನುವರಲ್ಲಾ, ಆ ಬಣ್ಣವೇ ಅಗಸೆಹೂವಿಗೂ; ಅಂತೂ ಹಾಗಿರುವ ಕೃಷ್ಣನನ್ನು ನೆನೆಯುತ್ತದೆ, ನನ್ನ ಮನಸ್ಸು - ಎನ್ನುತ್ತಾನೆ, ಲೀಲಾಶುಕ!). 

ಅದನ್ನು ಹೇಳುವ ಪೂರ್ಣಶ್ಲೋಕವಿಂತಿದೆ:

ಶೈವಾ ವಯಂ, ನ ಖಲು ತತ್ರ ವಿಚಾರಣೀಯಂ,

   ಪಂಚಾಕ್ಷರೀ-ಜಪರತಾ ನಿತರಾಂ, ತಥಾಪಿ ।

ಚೇತೋ ಮದೀಯಮ್ ಅತಸೀ-ಕುಸುಮಾವಭಾಸಂ

   ಸ್ಮೇರಾನನಂ ಸ್ಮರತಿ ಗೋಪವಧೂ-ಕಿಶೋರಮ್ ॥


ಪಂಚಾಕ್ಷರಿಯೆಂದರೆ ಐದು ಅಕ್ಷರಗಳ ಒಂದು ಸ್ತೋಮ. ಐದು ಅಕ್ಷರಗಳಿರುವ ಮಂತ್ರಕ್ಕೆ ಪಂಚಾಕ್ಷರೀ-ಮಂತ್ರವೆನ್ನುವರು. "ನಮಃ ಶಿವಾಯ" ಎಂಬುದೇ ಆ ಪಂಚಾಕ್ಷರೀ-ಮಂತ್ರ. ಸಾಮಾನ್ಯವಾಗಿ, ಯಾವ ಮಂತ್ರದ ಜಪವನ್ನು ಗುರೂಪದೇಶದಂತೆ ನಿಯತವಾಗಿ ಮಾಡಿಕೊಂಡುಬರುವೆವೋ ಆ ದೇವತೆಯಲ್ಲೇ ಮನಸ್ಸು ಸಹಜವಾಗಿ ಲಗ್ನವಾಗುವುದು. ಲಗ್ನವಾಗಿರುವುದೆಂದರೆ ಬಿಗಿಯಾಗಿ ಅಂಟಿಕೊಂಡಿರುವುದು. (ಲಗ್ ಎಂಬ ಧಾತುವಿಗೆ ಸಂಗ ಎಂಬ ಅರ್ಥ; ಲಗ್ನ ಎಂದರೆ ಸಕ್ತ). ಹಾಗಿದ್ದರೂ - ಎಂದರೆ ತಾನು ಶೈವಾನುಷ್ಠಾನಪರನಾಗಿದ್ದರೂ - ಶ್ರೀಕೃಷ್ಣನೇ ಲೀಲಾಶುಕನಿಗೆ ಪ್ರಾಣಪ್ರಿಯನಾದ ದೇವ.

ನಮ್ಮ ಕವಿ ಇಷ್ಟು ಆತ್ಮಕಥನ ಮಾಡಿಕೊಂಡಿರುವುದನ್ನೇ ಹೆಚ್ಚೆನ್ನಬೇಕೋ ಏನೋ! ಏಕೆಂದರೆ ಪ್ರಾಚೀನ-ಸಂಸ್ಕೃತ-ಕವಿಗಳಂತೂ ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳುವವರೇ ಅಲ್ಲ! 

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  17/2/2024 ರಂದು ಪ್ರಕವಾಗಿದೆ.

ವ್ಯಾಸ ವೀಕ್ಷಿತ - 76 ಮೇಲೆ ನವಿರು, ಒಳಗೆ ಸಂಚು! (Vyaasa Vikshita - 76Mele Naviru, Olage Sanchu!)

(ಪ್ರತಿಕ್ರಿಯಿಸಿರಿ lekhana@ayvm.in)




ಆ ಬಳಿಕ ದುರ್ಯೋಧನನೂ ರಾಧೇಯನೂ (ಎಂದರೆ ಕರ್ಣನೂ) ಧೃತರಾಷ್ಟ್ರನ ಬಳಿ ಹೋಗಿ ಈ ಮಾತನ್ನು ಹೇಳಿದರು:

"ನೀನು ಹೇಳುತ್ತಿರುವುದು ಸರಿಯಲ್ಲವೆಂಬುದನ್ನು ವಿದುರನು ಎದುರಿಗೇ ಇದ್ದಾಗ ಹೇಳಲು ನಮ್ಮಿಬ್ಬರಿಗೂ ಆಗಲಿಲ್ಲ. ಈಗ ಏಕಾಂತವಿದೆಯೆಂಬ ಕಾರಣಕ್ಕೆ ಹೇಳುತ್ತೇವೆ, ಕೇಳು. ನೀನು ಮಾಡಹೊರಟಿರುವುದೇನು? ಶತ್ರುಗಳಿಗೆ ಉಂಟಾಗಿರುವ ವೃದ್ಧಿಯನ್ನು ನನ್ನ ವೃದ್ಧಿಯೆಂದೇ ಭಾವಿಸಿದ್ದೀಯೆಲ್ಲಾ! ಹಾಗೂ ವಿದುರನೆದುರಿಗೆ ನಮ್ಮ ಶತ್ರುಗಳನ್ನೇ ಹೊಗಳುವೆಯಲ್ಲಾ! ರಾಜನೇ, ಪಾಪರಹಿತನೇ, ಕರ್ತವ್ಯವಾಗಿರುವುದೇ ಬೇರೆ, ನೀನು ಮಾಡುತ್ತಿರುವುದೇ ಬೇರೆ - ಅಲ್ಲವೇ? ಅಪ್ಪಾ, ಅವರ ಬಲ-ವಿಘಾತವನ್ನೇ ನಾವು ಸರ್ವದಾ ಮಾಡುತ್ತಿರಬೇಕಲ್ಲವೇ?

ಸರಿಯಾದ ಸಮಯ ಈಗ ಬಂದಿದೆ. ಸರಿಯಾದ ಕಾರ್ಯವನ್ನು ಕುರಿತು ನಾವೀಗ ಮಂತ್ರಾಲೋಚನೆ ಮಾಡಬೇಕಾಗಿದೆ: ನಮ್ಮ ಮಕ್ಕಳು, ಸೈನ್ಯ, ಬಂಧುಗಳು - ಇವೆಲ್ಲವನ್ನೂ ಅವರು ನುಂಗಿಬಿಡಲಾಗದಂತೆ ನಾವು ಏನು ಮಾಡಬೇಕೆಂಬುದನ್ನು ಚಿಂತಿಸಬೇಕಲ್ಲವೇ?" - ಎಂದು.

ಆಗ ಧೃತರಾಷ್ಟ್ರನು ಹೇಳಿದನು "ನೀವು ಹೇಗೋ ನಾನೂ ಹಾಗೆಯೇ: ನಾನೂ ಇದನ್ನೇ ಮಾಡಲು ಬಯಸುವವ. ಆದರೆ ನಮ್ಮ ಆಶಯವನ್ನು ವಿದುರನ ಮುಂದೆ ಪ್ರಕಟಪಡಿಸಲು ನಾನು ಬಯಸುವುದಿಲ್ಲ. ಆದುದರಿಂದಲೇ ಅವನೆದುರಿನಲ್ಲಿ ವಿಶೇಷವಾಗಿ ಪಾಂಡವರ ಗುಣವನ್ನೇ ನಾನು ಉಲ್ಲೇಖಿಸುವುದು: ನಮ್ಮ ಅಂತರಂಗವನ್ನು ವಿದುರನು ಅರಿತುಕೊಂಡುಬಿಡಬಾರದೆಂದು. ಈ ಸಮಯಕ್ಕೆ ಯೋಗ್ಯವಾದುದೇನೆಂಬುದಾಗಿ ನೀನು ಭಾವಿಸುವೆ, ಹೇಳು ದುರ್ಯೋಧನಾ! ಹಾಗೆಯೇ ಈಗ ಸಮಯೋಚಿತವಾದುದೇನೆಂಬುದನ್ನು ನೀನೂ ಹೇಳು, ಕರ್ಣಾ!" ಎಂದನು.

ಆಗ ದುರ್ಯೋಧನನು ಹೇಳಿದನು: ಕುಶಲರಾದ, ಆಪ್ತರಾಗಿ ವರ್ತಿಸುವ, ಮತ್ತು ಏನನ್ನೂ ತೋರ್ಪಡಿಸಿಕೊಳ್ಳದ, ವಿಪ್ರರನ್ನು ನಾವು ಬಳಸಿಕೊಳ್ಳಬೇಕು; ಬಳಸಿಕೊಂಡು ಹೀಗೇನಾದರೂ ಮಾಡಬೇಕು: 

(೧) ಕುಂತೀಪುತ್ರರಾದ ಪಾಂಡವರಿಗೂ ಮಾದ್ರೀಪುತ್ರರಾದ ಪಾಂಡವರಿಗೂ ಮಧ್ಯದಲ್ಲಿ ಒಡಕನ್ನು ಉಂಟುಮಾಡಬೇಕು; 

(೨) ಅಥವಾ ಹೀಗಾದರೂ ಮಾಡಬೇಕು - ದ್ರುಪದನನ್ನೂ ಆತನ ಪುತ್ರರನ್ನೂ ಆತನ ಮಂತ್ರಿಗಳನ್ನೂ ಹೇರಳವಾಗಿ ಹಣವಿತ್ತು ಪ್ರಲೋಭನೆಗೊಳಪಡಿಸಬೇಕು. ಅದರ ಪರಿಣಾಮವಾಗಿ ಕುಂತೀಪುತ್ರನಾದ ಯುಧಿಷ್ಠಿರನನ್ನು ಆತನು ತ್ಯಜಿಸಿಬಿಡಬೇಕು. 

(೩) ಅಥವಾ ಅಲ್ಲಿಯೇ (ಎಂದರೆ ದ್ರುಪದನ ರಾಜ್ಯದಲ್ಲಿಯೇ) ಈ ಕುಂತೀಪುತ್ರರು ವಾಸವನ್ನು ಇಷ್ಟಪಡುವಂತೆ ಅವರು ಮಾಡಬೇಕು. 

(೪) ಅವರುಗಳು ಬೇರೆಬೇರೆಯಾಗಿ ಪಾಂಡವರಲ್ಲಿಗೆ ಹೋಗಲಿ; ಪಾಂಡವರು ಇಲ್ಲೇ ನೆಲೆಸುವಲ್ಲಿ ತೊಡಕಿದೆಯೆನ್ನಲಿ; ಪಾಂಡವರು ಪಂಚಾಲದೇಶದಲ್ಲಿಯೇ ವಾಸಮಾಡಲು ಮನಸ್ಸಾಗುವಂತೆ ಮಾಡಲಿ; 

(೫) ಅಥವಾ, ಕುಶಲರೂ ಉಪಾಯನಿಪುಣರೂ ಆದ ಕೆಲವರು ಪಾಂಡವರಲ್ಲಿಗೆ ಹೋಗಿ ಪ್ರೀತಿಯ ಮಾತುಗಳನ್ನಾಡಿ, ಪಾರ್ಥರನ್ನು (ಎಂದರೆ ಪಾಂಡವರನ್ನು) ಪರಸ್ಪರ ಒಡಕು ಬಂದಂತಹವರನ್ನಾಗಿಸಿಬಿಡಲಿ; 

(೬) ಅಥವಾ ದ್ರೌಪದಿಯೇ ಅವರ ವಿರುದ್ಧವಾಗಿ ಏಳುವಂತೆ ಮಾಡುವುದಾಗಲಿ: ಪತಿಗಳು ಹಲವರಿರುವಾಗ ಅದು ಸುಕರವಾಗುವುದಲ್ಲವೇ? 

(೭) ಅಥವಾ, ಪಾಂಡವರಿಗೇ ಅವಳಲ್ಲಿ ವಿರಸವಾಗುವಂತೆ ಮಾಡಲಿ; 

(೮) ಅಥವಾ ಹೀಗೂ ಮಾಡಬಹುದು: ಉಪಾಯಕುಶಲರಾದವರು ಮರೆಮಾಚಿಕೊಂಡಿದ್ದು ಭೀಮನನ್ನು ಕೊಂದುಹಾಕಿಬಿಡಲಿ; ಎಷ್ಟಾದರೂ ಅವರಲ್ಲಿ ಎಲ್ಲರಿಗಿಂತಲೂ ಆತನೇ ಬಲಶಾಲಿಯಲ್ಲವೇ? ಆತನನ್ನು ನೆಚ್ಚಿಕೊಂಡೇ ಅಲ್ಲವೆ, ಯುಧಿಷ್ಠಿರನು ನಮ್ಮನ್ನು ಲೆಕ್ಕಿಸದಿರುವುದು? ಆತನೇ ತೀಕ್ಷ್ಣನಾದವನೂ, ಶೂರನಾದವನೂ. ಅವರುಗಳಿಗೆ ಆತನೇ ಆಸರೆ. ಆತನೊಬ್ಬನು ಕೊಲ್ಲಲ್ಪಟ್ಟರೆ, ಓ ರಾಜನೇ, ಪಾಂಡವರ ಉತ್ಸಾಹವು ಧ್ವಂಸವಾಗುವುದು; ಅವರ ಬಲವು ನಷ್ಟವಾಗುವುದು! ಅಲ್ಲವೇ?

ಸೂಚನೆ :18 /2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ77 (Yaksha prashne 77)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 76 ಜಲ ಯಾವುದು ?

ಉತ್ತರ - ಆಕಾಶ 

ಇಲ್ಲಿನ ಯಕ್ಷನ ಪ್ರಶ್ನೆ ಬಹಳ ವಿಚಿತ್ರವಾಗಿದೆ. "ನೀರು ಯಾವುದು?" ಎಂದು. ಅದಕ್ಕೆ ಧರ್ಮರಾಜ ಕೊಟ್ಟ ಉತ್ತರವೂ ಅಷ್ಟೇ ವಿಚಿತ್ರವಾಗಿದೆ. "ಆಕಾಶ" ಎಂದು. ಇಂತಹ ಸಂದರ್ಭಗಳಲ್ಲಿ ಪ್ರಶ್ನೆಗೆ ಎರಡು ರೀತಿಯಲ್ಲಿ ಉತ್ತರವನ್ನು ಕೊಡಬಹುದು. ಪ್ರಶ್ನೆಯಲ್ಲಿ ಬರುವ ಪದಕ್ಕೆ ಅದೇ ಅರ್ಥ ಬರುವ ಇನ್ನೊಂದು ಪದವನ್ನು ಹೇಳುವುದರ ಮೂಲಕ; ಅಥವಾ ಪದಕ್ಕಿರುವ ಅರ್ಥ- ವಸ್ತು ಯಾವುದು? ಎಂದು ಆ ಪದಾರ್ಥವನ್ನು ತೋರಿಸುವುದರ ಮೂಲಕ. ಇಲ್ಲಿ ಯಕ್ಷನ ಜಲ ಯಾವುದು? ಎಂಬ ಪ್ರಶ್ನೆಗೆ, ಆಕಾಶ ಎಂಬ ಉತ್ತರವನ್ನು ನೀಡಿದ್ದಾನೆ ಧರ್ಮರಾಜ. ಜಲ ಎಂಬುದಕ್ಕೆ ಯಾವ ರೀತಿಯಲ್ಲಿ ಆಕಾಶ ಎಂಬ ಉತ್ತರ ಸರಿಯಾಗಬಹುದು! ಎಂಬುದೇ ಸಂದೇಹ. ಏಕೆಂದರೆ ಆಕಾಶ ಎಂಬುದು ಜಲ ಎಂಬ ಪದದ ಪರ್ಯಾಯ ಅಲ್ಲ. ಅಥವಾ ಜಲ ಎಂಬ ಪದವು ಆಕಾಶ ಎಂಬ ಒಂದು ದ್ರವ್ಯವನ್ನೂ ಸೂಚಿಸುವುದಿಲ್ಲ. ಹಾಗಾದರೆ ಆಕಾಶ ಎಂಬ ಉತ್ತರ ಹೇಗೆ ಸರಿ? ಎಂಬ ಸಂದೇಹ ಹಾಗೆಯೇ ಉಳಿಯುತ್ತದೆ. 

ಪೃಥಿವೀ, ಜಲ, ಅಗ್ನಿ, ವಾಯು ಮತ್ತು ಆಕಾಶ ಎಂಬ ಪಂಚಭೂತಗಳಲ್ಲಿ ಜಲ ಮತ್ತು ಆಕಾಶಗಳೂ ಇವೆ. ಇವುಗಳ ಗುಣ ಸ್ವಭಾವಗಳೂ ಭಿನ್ನ ಭಿನ್ನವೇ. ಜಲವು ರಸ ಮತ್ತು ಶೀತಸ್ಪರ್ಶ ಎಂಬ ವಿಶೇಷಗುಣಗಳಿಂದ ಕೂಡಿದೆ. ಆದರೆ ಆಕಾಶಕ್ಕೆ ಶಬ್ದ ಎಂಬ ಒಂದು ವಿಶೇಷಗುಣವಿದೆ. ಯಾವುದೇ ಕಾರಣಕ್ಕೂ ಇವುಗಳಲ್ಲಿ ಸಾಮ್ಯ ಎಂಬುದು ತೋರುವುದೇ ಇಲ್ಲ. ಪರಸ್ಪರ ವಿರುದ್ಧವಾದ ಗುಣಗಳಿಂದ ಕೂಡಿವೆ. ಆದರೂ ಇವೆರಡು ಅಭಿನ್ನವಾದವುಗಳು ಎಂಬ ಉತ್ತರವು ಇಲ್ಲಿ ಬಂದಿದೆ. ಇಲ್ಲಿ ಕಾರಣವನ್ನು ಈ ರೀತಿಯಾಗಿ ಪತ್ತೆ ಮಾಡಬಹುದು. ಅಷ್ಟೇ ಅಲ್ಲದೇ ಇದಕ್ಕೆ ಶ್ರುತಿವಾಕ್ಯವೂ ಉಪಷ್ಟಂಬಕವಾಗಿ ಕಂಡುಬರುತ್ತದೆ. ಅದರ ಬಲದ ಮೇಲೆ ಇವೆರಡಕ್ಕೂ ಸಾಮ್ಯವನ್ನು ಹೇಳಬಹುದಾಗಿದೆ. 

ಈ ಪ್ರಪಂಚವು ಸೃಷ್ಟಿಯಾಗಬೇಕಾದರೆ ಆಕಾಶದಿಂದ ವಾಯು ಅಗ್ನಿ ಜಲ ಭೂಮಿ ಸೃಷ್ಟಿಯಾಗಿದೆ. ಒಂದರಿಂದ ಇನ್ನೊಂದು ಸೃಷ್ಟಿಯಾಗುತ್ತದೆ. ಕಾರಣದಲ್ಲಿರುವ ಗುಣಗಳೂ ಕಾರ್ಯದಲ್ಲಿ ಸಂಕ್ರಾಂತವಾಗಲೇಬೇಕು ಎಂಬ ಶಾಸ್ತ್ರದ ನಿಯಮ. ಈ ನಿಯಮದ ಪ್ರಕಾರ ಜಲದ ಉತ್ಪತ್ತಿ ಆಕಾಶದಿಂದಲೇ ಆಗಿದೆ. ಹಾಗಾಗಿ ಅವೆರಡರಲ್ಲಿರುವ ಕೆಲವು ಸಾಮ್ಯ ಗುಣಗಳಿಂದಾಗಿ ಜಲಕ್ಕೆ ಆಕಾಶ ಎಂದು ಅರ್ಥೈಸಲಾಗಿದೆ. ಜಲವು ಆಕಾಶದಷ್ಟೇ ವಿಸ್ತಾರವಾದುದು, ಅಸೀಮವಾದುದು, ದೃಷ್ಟಿ ಹಾಯಿಸಿದಷ್ಟೂ ಕಾಣುವ, ಅಥವಾ ಕಣ್ಣಿಗೆ ಕಂಡು ಮುಗಿಯದಷ್ಟು ವಿಶಾಲವಾದುದು, ಆಕಾಶಕ್ಕಿರುವ ವರ್ಣವೂ ಜಲದ ವರ್ಣಕ್ಕೆ ಸಮಾನವಾದುದು, ಇಂತಹ ಬಾಹ್ಯವಾದ ಅನೇಕ ಗುಣಗಳಿಂದ ಅವೆರಡೂ ಒಂದು ಎನ್ನಬಹುದು. ಮತ್ತು ಜಲ ಎಂದರೆ ಆಚ್ಛಾದನ ಗುಣವುಳ್ಳದ್ದು. ಆಕಾಶಕ್ಕೂ ಇಂತಹದ್ದೇ ಗುಣವಿದೆ. ಜಲಕ್ಕೆ ವ್ಯೋಮ ಎಂದೂ ಕೆಲವು ಕಡೆ ಕರೆಯುತ್ತಾರೆ. 'ಆಪ ಏವ ಸಸರ್ಜಾದೌ' ಎಂಬ ಮಾತಿನಂತೆ ಜಲವೇ ಮೊದಲು ಸೃಷ್ಟಿಯಾಯಿತು. ಹೀಗೆ ಜಲ ಮತ್ತು ಆಕಾಶ ಸೂಕ್ಷ್ಮವಾಗಿ ಮತ್ತು ಆಳವಾಗಿ ವಿಚಾರಿಸಿದಾಗ ಎರಡೂ ಒಂದೇ. 

ಸೂಚನೆ :18 /2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, February 12, 2024

ನಮ್ಮ ಏಕತೆಗೆ ಸಂಸ್ಕೃತದ ಕಾಣ್ಕೆ (Namma Ekatege Sanskrtada kanke)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅಖಂಡಭಾರತವನ್ನು ಒಂದುಗೂಡಿಸುವ ಭಾಷೆ ಸಂಸ್ಕೃತ. ತಮಿಳುಭಾಷೆಯು ಸಾಕಷ್ಟು ಪ್ರಾಚೀನ ಭಾಷೆಯೆಂಬ ಅಭಿಪ್ರಾಯವೇನೋ ಇದೆ; ಆದರೆ ಗುಜರಾತಿನಲ್ಲೋ ಅಸ್ಸಾಮಿನಲ್ಲೋ ಕಾಶ್ಮೀರದಲ್ಲೋ ತಮಿಳುಕವಿಗಳು ಎಷ್ಟು ಮಂದಿಯಿದ್ದರು? - ಎಂದು ಕೇಳಿದರೆ ಬೆರಳೆಣಿಸುವಷ್ಟು ಸಹ ಇಲ್ಲವೆಂದೋ, ಯಾರೂ ಇದ್ದಂತಿಲ್ಲವೆಂದೋ ಉತ್ತರ ಬಂದರೆ ಆಶ್ಚರ್ಯಪಡಬೇಕಿಲ್ಲ. ಇದೇ ವಿಷಯವು ಕಾಶ್ಮೀರಿ-ತೆಲುಗು ಮುಂತಾದ ಭಾಷೆಗಳಿಗೂ ಅನ್ವಯಿಸುವುದು. ಭಾರತದ ಮೂಲೆಮೂಲೆಗಳಲ್ಲೂ ಒಂದೇ ಭಾರತೀಯಭಾಷೆಯಲ್ಲಿ  ಸಾಹಿತ್ಯಸೃಷ್ಟಿಯೆಂದಾಗಿರುವುದೆಂದರೆ ಅದು ಸಂಸ್ಕೃತಭಾಷೆಯೊಂದರಲ್ಲೇ – ಎಂದರೆ ತಪ್ಪಾಗಲಾರದು.

ಇಂದು ಅತ್ಯವಶ್ಯವೆನಿಸುವ ಭಾರತದ ಸಮಗ್ರತೆ-ಏಕತೆಗಳಿಗೆ ಅತ್ಯಂತ ಉಪಕಾರಕವಾದದ್ದು ಸಂಸ್ಕೃತವೇ. ಭಾರತದ ಎಲ್ಲಾ ಭಾಷೆಗಳಿಗೂ ಸಮೃದ್ಧವಾದ ಶಬ್ದಭಂಡಾರವನ್ನಿತ್ತಿರುವ ಭಾಷೆ ಸಂಸ್ಕೃತವೊಂದೇ. ಬರೀ ಶಬ್ದಭಂಡಾರವೇನು? ಅತ್ತ ಕಾಗುಣಿತ-ವ್ಯಾಕರಣಗಳಿಗೆ ಒಂದು ಮಾದರಿಯನ್ನೂ, ಇತ್ತ ಸಾಹಿತ್ಯರಚನೆಗೆ ಅವಶ್ಯವೆನಿಸುವ ಕಥಾಸಾಮಗ್ರಿಯನ್ನೂ, ನಾನಾಶಾಸ್ತ್ರ-ತತ್ತ್ವಚಿಂತನಗಳಿಗೆ ಮೇಲ್ಪಂಕ್ತಿಯನ್ನೂ ಅಸಾಧಾರಣಪ್ರಮಾಣದಲ್ಲಿ ಒದಗಿಸಿರುವ ಭಾರತೀಯಭಾಷೆಯೆಂದರೆ ಸಂಸ್ಕೃತವೇ ಸರಿ. 


ರಾಮ ಮತ್ತು ಕೃಷ್ಣ: ಕಲೆ-ಕಾವ್ಯಗಳಿಗೆ   ಸ್ಫೂರ್ತಿ

ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ "ರಾಮಲಲ್ಲಾ"ನ ಪ್ರಾಣಪ್ರತಿಷ್ಠೆಯಾಯಿತಷ್ಟೆ? ರಾಮನನ್ನು ಕುರಿತಾದ ಕಾವ್ಯಕೃತಿಗಳು ಭಾರತೀಯವಾದ ಯಾವ ಭಾಷೆಯಲ್ಲಿಲ್ಲ? ಬಹುತೇಕ ಭಾಷೆಗಳಲ್ಲಿಯ ಮೊಟ್ಟಮೊದಲ ಕಾವ್ಯಕೃತಿಯೇ ರಾಮಾಯಣ. ಅಯೋಧ್ಯೆಯ ರಾಮಮಂದಿರದ ನಿರ್ಮಾಣವು ಮೂರುಸಾವಿರವರ್ಷಗಳಿಗಿಂತಲೂ ಹೆಚ್ಚಿನದಷ್ಟು ಹಿಂದಿನದೆಂದು ಪುರಾತತ್ತ್ವಶಾಸ್ತ್ರದ (ಆರ್ಕಿಯಾಲಜಿ) ವಿಶೇಷಜ್ಞರು ಈಚೆಗೆ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆಯಷ್ಟೆ? ಅಂದಿನಿಂದಲೂ ಪ್ರತಿಶತಮಾನದಲ್ಲೂ ಭಾರತೀಯಭಾಷೆಗಳಲ್ಲಿ ಒಂದಲ್ಲದಿದ್ದರೆ ಮತ್ತೊಂದರಲ್ಲಿ ರಾಮಾಯಣವನ್ನು ಕುರಿತಾದ ಸಾಹಿತ್ಯದ ರಚನೆಯು ನಡೆಯುತ್ತಲೇ ಬಂದಿದೆ. ಸಂಸ್ಕೃತದಲ್ಲಂತೂ ಅನುಸ್ಯೂತವಾಗಿಯೇ ನಡೆದಿದೆ.

ಕೃಷ್ಣಾವತಾರವು ರಾಮಾವತಾರದ ನಂತರವೇ ಆದುದೆಂದಾದರೂ ಅದನ್ನು ಕುರಿತಾದ ಕಾವ್ಯ ರಚನೆಯೂ  ಪರಿಮಾಣ-ಪರಿಣಾಮಗಳಲ್ಲಿ ಕಡಿಮೆಯೇನಿಲ್ಲ. ಮಹಾಭಾರತ-ಭಾಗವತಕಥೆಗಳನ್ನು ಕುರಿತಾದ ಕಾವ್ಯರಚನಾಪ್ರವಾಹಕ್ಕೆ ಹಲವು ಶತಮಾನಗಳಿಂದ ದೇಶದ ಹಲವು ಮೂಲೆಗಳಿಂದ ಧಾರೆಗಳು ಬಂದೇ ಇವೆ. ಬರೀ ಕಾವ್ಯರಚನೆ ಮಾತ್ರವಲ್ಲದೆ, ಶಿಲ್ಪ-ಗೀತ-ನರ್ತನಗಳೂ ರಾಮ-ಕೃಷ್ಣರ ಕಥೆಗಳನ್ನಾಧರಿಸಿ ವಿಪುಲವಾಗಿಯೇ ಸಂಪನ್ನವಾಗಿವೆ.

ಒಟ್ಟಿನಲ್ಲಿ ಇವರಿಬ್ಬರ  ಕಥೆಯು ಕವಿಗಳಿಗೂ ಜನಸಾಮಾನ್ಯರಿಗೂ ಕಲಾವಂತರಿಗೂ ಅಚ್ಚುಮೆಚ್ಚಾದ ಕಥೆ. ಒಂಭತ್ತನೆಯ ಶತಕವಾದ ಮೇಲೆ ಬಂದಂತಹ ಲೀಲಾಶುಕನೆಂಬ ಭಕ್ತಕವಿಯೊಬ್ಬ ಬರೆದಿರುವ ಕೃಷ್ಣಕರ್ಣಾಮೃತವೆಂಬ  ರಚನೆಯು ಕಿರಿದಾದರೂ ಭವ್ಯವಾದ ಒಂದು ಕೃತಿ.


ಖಂಡಕಾವ್ಯ - ಮುಕ್ತಕಕೃಷ್ಣಕರ್ಣಾಮೃತ - ೧ - ಕೃತಿಪರಿಚಯ

ಕೃಷ್ಣಕರ್ಣಾಮೃತವು ಒಂದು ಖಂಡಕಾವ್ಯ. ಖಂಡಕಾವ್ಯಕ್ಕೆ ಬೇರೆ ಉದಾಹರಣೆಗಳೆಂದರೆ ಕಾಲಿದಾಸನ ಮೇಘದೂತ, ಜಯದೇವನ ಗೀತಗೋವಿಂದ, ವೇದಾಂತದೇಶಿಕರ ಹಂಸಸಂದೇಶ, ಅಮರುಕನ ಅಮರುಶತಕ - ಇವುಗಳು. ಇಂತಹ ಖಂಡಕಾವ್ಯಗಳು ಲೆಕ್ಕವಿಲ್ಲದಷ್ಟಿವೆ! ಮಹಾಕಾವ್ಯದ ಕೆಲ ಅಂಶಗಳನ್ನೊಳಗೊಂಡಿರುವ ಕಾವ್ಯವೇ ಖಂಡಕಾವ್ಯ. ಮೇಘದೂತ-ಗೀತಗೋವಿಂದಗಳ ಪರಿಯೇ ಬೇರೆ;  ಅಮರುಶತಕ-ಕೃಷ್ಣಕರ್ಣಾಮೃತಗಳ ಪರಿಯೇ ಬೇರೆ. ಮೊದಲನೆಯ ಬಗೆಯಲ್ಲಿ ಒಂದು ಕಥಾನಕವಿದೆ. ಎರಡನೆಯದರಲ್ಲಿ ಕೇವಲ ಮುಕ್ತಕಗಳಿವೆ.

ಮುಕ್ತಕವೆಂದರೆ ಬಿಡಿಪದ್ಯ. ಬಿಡಿಪದ್ಯಗಳೆಂದರೆ ಹಿಂದಿನ ಪದ್ಯಕ್ಕೂ ಮುಂದಿನ ಪದ್ಯಕ್ಕೂ ಸಂಬಂಧವಿರಲೇಬೇಕೆಂಬ ನಿಯಮವಿಲ್ಲ; ಅಂತಹ ಪದ್ಯಗಳ ಸ್ತೋಮವಿದು. ಮುಕ್ತಕಗಳಲ್ಲಿಯ ಪ್ರತಿಯೊಂದು ಪದ್ಯವೂ ಹೃದಯಗ್ರಾಹಿಯಾದ ಒಂದು ಭಾವವನ್ನು ಚಿಮ್ಮಿಸುವುದು. ಕೃಷ್ಣಕರ್ಣಾಮೃತದಲ್ಲಿಯ ಅನೇಕ ಪದ್ಯಗಳನ್ನು ರಸದ ಚಿಲುಮೆಗಳೆಂದೇ ಹೇಳಬಹುದು.

ಆನಂದವರ್ಧನನೆಂಬುವನು ಭಾರತೀಯ-ಸಾಹಿತ್ಯವಿಮರ್ಶೆಯ ಪರಂಪರೆಯಲ್ಲಿ ಮೇರುಪುರುಷ (ಎಂದರೆ ಅತ್ಯಂತ ಉನ್ನತನಾದವನು). ಆತನು ಅಮರುಕ-ಕವಿಯ ಅಮರುಶತಕವನ್ನು ಕುರಿತು ಪ್ರಶಂಸೆಯ ಮಾತನ್ನಾಡಿದ್ದಾನೆ. ಆತನು ಹೇಳುವುದು ಹೀಗೆ - ಅಮರುಕಕವಿಯ ಒಂದೊಂದು ಶ್ಲೋಕವೂ ನೂರು ಪ್ರಬಂಧಗಳಿಗೆ ಸಮ! - ಎಂದು. ಕೃಷ್ಣಕರ್ಣಾಮೃತದ ಶ್ಲೋಕಗಳಿಗೂ ಅಮರುಶತಕದ ಶ್ಲೋಕಗಳ ತೂಕವೇ!


ರಸ ಮತ್ತು ಆಸ್ವಾದ್ಯತೆ

ಪ್ರಬಂಧವೆಂದರೆ ವಿಸ್ತೃತವಾದ ಕೃತಿ. ಕೃತಿಯು ವಿಸ್ತೃತವಾಗಿದ್ದರೆ ರಸಪರಿಪೋಷಣವು ಸುಶಕವಾಗುವುದು. ಹಾಗೆಂದರೇನು? ಓದುಗರಲ್ಲಿ ರಸವುಕ್ಕಿಸುವುದೆನ್ನುವುದು ಸುಲಭವಾದ ಕೆಲಸವಲ್ಲ. ರಸಭರಿತವಾದ ಕಾವ್ಯವೆನಿಸಬೇಕಾದರೆ ರಸಕ್ಕೆ ಪುಷ್ಟಿಕೊಡುವ ಕಾರಣಸಾಮಗ್ರಿಯತ್ತ ಕವಿಯು ಗಮನಹರಿಸಬೇಕು. ಅದನ್ನು ನಿರೂಪಿಸಲು ಉಚಿತವಾದ (ಎಂದರೆ ಯೋಗ್ಯವಾದ) ಸಂನಿವೇಶಗಳನ್ನು ಕವಿಯು ಚಿತ್ರಿಸಬೇಕು. ಇದನ್ನೆಲ್ಲ ಒಂದೆರಡು ವಾಕ್ಯಗಳಲ್ಲಿ ಮಾಡಲಾದೀತೇ? ಆಗದು. ಎಂದೇ ರಸವತ್ತಾದ ಕಾವ್ಯವೆನಿಸಲು ಬೇಕಾದ ಹರಹಿಗಾಗಿ ಕಾವ್ಯದ ವಿಸ್ತರದ ಆವಶ್ಯಕತೆಯಿರುವುದು.

ಆದರೆ ಅಮರುಕ-ಲೀಲಾಶುಕ-ಕವಿಗಳ ಪ್ರತಿಭೆ ವಿಶೇಷವಾದದ್ದು. ಕಿರಿದಾದ ಗಾತ್ರದಲ್ಲಿ ಹಿರಿದಾದ ಭಾವದ ಹಿಡಿತ – ಎಂಬ ವಿಶೇಷ ಇಲ್ಲಿ ಎದ್ದು ಕಾಣುವಂತಹುದು. ಇದು ಹೇಗಿರುವುದೆಂದರೆ ಬೃಹತ್ತಾದ ಒಂದು ವನಸಂನಿವೇಶನವನ್ನು ಚಿಕ್ಕದೆನಿಸುವ ಫೋಟೋವಿನಲ್ಲಿ ಹಿಡಿಯುವ ಜಾಣ್ಮೆ. ಈಗಂತೂ ವಿಡಿಯೋಗಳೇ ಕಾಸಿಗೊಂದು ಕೊಸರಿಗೆರಡು - ಎನ್ನುವ ಸೌಕರ್ಯವಿದೆ; ಒಂದು ಒಳ್ಳೆಯ ಭಾವವನ್ನು ಉಕ್ಕಿಸುವ ಆಸ್ವಾದ್ಯಪ್ರಸಂಗವನ್ನು ವಿಡಿಯೋ ಮಾಡಿ ಹಂಚಿದರೆ ನೂರಾರೇನು ಸಾವಿರಾರು ಮಂದಿಯೇ ಅದನ್ನು ಆಸ್ವಾದಿಸುವಂತಾಗುತ್ತದೆ. ಎರಡು-ಮೂರು ನಿಮಿಷಗಳಲ್ಲೇ  ಮನಮುಟ್ಟಿ ಕಣ್ಣೀರು ಮಿಡಿಸುವ ವಿಡಿಯೋಗಳಿರವೇ? ಅಷ್ಟೇ ಅಲ್ಲ. ಒಳ್ಳೆಯ ಆಸ್ವಾದವಿದ್ದಾಗ ಅದನ್ನೇ ಮತ್ತೆ ಮತ್ತೆ ಅವಲೋಕಿಸಿ ಚಪ್ಪರಿಸುವಂತಾಗುತ್ತದೆ. ತಾನು ಆಸ್ವಾದಿಸಿದುದಕ್ಕೆ ತೃಪ್ತಿಯಾಗದೆ ಮತ್ತೆ ನಾಲ್ಕಾರು ಮಂದಿಗೆ ಅದರ ಸವಿಯು ಸಿಗಲೆಂಬ ಹಂಬಲವುಂಟಾಗುತ್ತದೆ.

ಇಲ್ಲಿಯ ಶ್ಲೋಕವೊಂದೊಂದರಲ್ಲೂ ಕೃಷ್ಣಜೀವನದ ಸುಂದರ ಭಾವಚಿತ್ರಗಳು. ಅದು ಕೃಷ್ಣನ ಬಾಲ್ಯವೋ ಯೌವನವೋ ಆಗಿರಬಹುದು. ಅಲ್ಲಿಯ ರಸ್ಯಪ್ರಸಂಗಗಳನ್ನು ಅಕ್ಲಿಷ್ಟಶಬ್ದಗಳಲ್ಲಿ ಹೆಣೆಯುವ ಜಾಣ್ಮೆ, ಕವಿ ಲೀಲಾಶುಕನದು.


ಯಾರೀ ಲೀಲಾಶುಕ?

ಇಷ್ಟೆಲ್ಲ ಸ್ತುತಿಗೆ ಪಾತ್ರನಾಗುವ ಲೀಲಾಶುಕನ ದೇಶವಾವುದು, ಕಾಲವಾವುದು? - ಎಂಬ ಕುತೂಹಲ ಸಹಜವೇ. ನಮ್ಮ ದೇಶದ ಕವಿಗಳಾರೂ ತಮ್ಮ ದೇಶ-ಕಾಲಗಳ ಬಗ್ಗೆಯಿರಲಿ, ತಮ್ಮ ಬಗ್ಗೆಯೇ ಹೆಚ್ಚು ಹೇಳಿಕೊಂಡವರಲ್ಲ! ಕವಿವರೇಣ್ಯ-ಕಾಳಿದಾಸನ ಕಾಲವಾವುದು, ಊರಾವುದು - ನಾವೇನು ಬಲ್ಲೆವು? ಅಂತಸ್ಸಾಕ್ಷ್ಯ-ಬಹಿಸ್ಸಾಕ್ಷ್ಯಗಳನ್ನಿಟ್ಟುಕೊಂಡು ಹುಡುಕಿ ಹುಡುಕಿ ಈ ಊರಿರಬಹುದೋ ಆ ಕಾಲವಿರಬಹುದೋ - ಎಂಬ ಊಹೆಯಷ್ಟೆ ಶಕ್ಯ. ಕಾಳಿದಾಸನು ನಮ್ಮೂರವನೆಂದು ದೇಶದ ಬೇರೆಬೇರೆ ಭಾಗಗಳವರು ಹೆಮ್ಮೆಯಿಂದ ಹೇಳಿಕೊಳ್ಳುವರು: ಕಾಶ್ಮೀರ-ಬಂಗಾಳ-ಉಜ್ಜಯಿನೀ - ಎಲ್ಲ ಕಡೆಯವರೂ ತಮ್ಮವನೆನ್ನುವರು.

ಲೀಲಾಶುಕನ ಬಗ್ಗೆಯೂ ಹಾಗೆಯೇ. ಕೇರಳದವರು ತಮ್ಮ ಪ್ರಾಂತದವನೆನ್ನುತ್ತಾರೆ, ಬಂಗಾಳದವರೂ, ಒರಿಸ್ಸಾದವರೂ ತಮ್ಮವನೇ ಈ ಕೃಷ್ಣಭಕ್ತ-ವರಕವಿಯೆನ್ನುತ್ತಾರೆ. ಈತನ ಕಾಲವನ್ನಾದರೂ ಬಹಳ ಸ್ಥೂಲವಾಗಿ ಹೇಳಬಹುದಷ್ಟೆ. ಸುಮಾರಾಗಿ ಒಂಭತ್ತನೆಯ ಶತಮಾನದಿಂದ ಈಚಿನವನು - ಎಂದೆನ್ನಬಹುದು. ಈ ಬಗ್ಗೆ ದೀರ್ಘಚರ್ಚೆಮಾಡುವ ಅಗತ್ಯ ನಮಗೆ ಇಲ್ಲಿಲ್ಲ.

ದಿನಪತ್ರಿಕೆಯೊಂದರಲ್ಲಿ ಜನರು ಬಯಸುವುದು ರಸಮಯಪ್ರಸಂಗಗಳ ಸರಳನಿರೂಪಣೆಯನ್ನು. ಮುಂದಿನ ಸಂಚಿಕೆಯಿಂದ ಕೃಷ್ಣಕರ್ಣಾಮೃತದ ಆಯ್ದ ಕೆಲವು ರಮ್ಯಶ್ಲೋಕಗಳ ಆಸ್ವಾದನೆಯನ್ನು ಮಾಡೋಣವೇ?

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  10/2/2024 ರಂದು ಪ್ರಕವಾಗಿದೆ.

Sunday, February 11, 2024

ಯಕ್ಷ ಪ್ರಶ್ನೆ 76 (Yaksha prashne 76)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)



ದಿಕ್ಕು ಯಾವುದು ?

ಉತ್ತರ - ಸಂತರು 

ದಾರಿತಪ್ಪಿದ ವ್ಯಕ್ತಿಯನ್ನು ಕುರುತು ಹೀಗೆ ಮಾತನಾಡುವ ಅಭ್ಯಾಸವಿದೆ 'ಅವನಿಗೆ ದಿಕ್ಕು- ದಿಶೆ ಇಲ್ಲ' ಎಂದು. ದಿಕ್ಕು ಅಥವಾ ದಿಶೆ ಇವೆರಡೂ ಒಂದೇ ಅರ್ಥವನ್ನು ಕೊಡುವ ಪದಗಳು. ನಿರ್ದಿಷ್ಟವಾದ ಗೊತ್ತು ಗುರಿ ಇರುವಂತಹ ವಿಷಯ ಎಂಬುದು ಇದರ ಅಭಿಪ್ರಾಯ. ಒಬ್ಬ ವ್ಯಕ್ತಿ ತಾನು ಹೇಗೆ ಜೀವನ ಮಾಡಬೇಕು? ಎಲ್ಲಿ ಹೋಗಬೇಕು? ಯಾರನ್ನು ಈ ಕಾರ್ಯಗಳಿಗೆ ಆದರ್ಶವಾಗಿ ಇಟ್ಟುಕೊಳ್ಳಬೇಕು? ಎಂಬ ಸಂದೇಹ ಬಂದಾಗ ಒಬ್ಬರನ್ನು ಆಯ್ದುಕೊಳ್ಳಬೇಕಾಗುತ್ತದೆ. ಆಗ ಆ ವ್ಯಕ್ತಿಗೆ ಅವನೇ ದಿಕ್ಕು ಅಥವಾ ದಿಸೆ ಎಂದರ್ಥ. ಇಲ್ಲಿ ಯಕ್ಷ ಕೇಳುವ ಪ್ರಶ್ನೆಯಲ್ಲೂ ಇದೇ ಆಶಯವಿದೆ. ಮಾನವನಾಗಿ ಹುಟ್ಟಿದ ಬಳಿಕ ತನ್ನ ಜೀವನವನ್ನು ಸಾರ್ತ್ಕಪಡಿಸಿಕೊಳ್ಳಬೇಕಾದರೆ ಯಾರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಅದಕ್ಕೆ ಧರ್ಮರಾಜನ ಉತ್ತರ 'ಸಂತ' ಎಂಬುದಾಗಿ. ಸಂತ- ಸಜ್ಜನ- ಜ್ಞಾನಿ ಆದ ವ್ಯಕ್ತಿಯೇ ಮಾನವತೆಗೆ ಎದುರು ಹಿಡಿದ ಕನ್ನಡಿ- ಆದರ್ಶ. ಆದ್ದರಿಂದ ಇಲ್ಲಿ ನಾವು ಸಂತನ ಲಕ್ಷಣವನ್ನು ನೋಡಿಕೊಂಡರೆ, ಅವನ ಗುಣಗಳೇ ನಮಗೆ ಕತ್ತಲಲ್ಲಿ ನಡೆಯುವವನಿಗೆ ದೀಪದಂತಾಗಬಹುದು. 

ಮಹಾಕವಿ ಕಾಳಿದಾಸ ರಘುವಂಶ ಎಂಬ ತನ್ನ ಕಾವ್ಯದಲ್ಲಿ ಸಂತರ ಲಕ್ಷಣವನ್ನು ಹೀಗೆ ಹೇಳಿದ್ದಾನೆ "ತಂ ಸಂತಃ ಶ್ರೋತುಮರ್ಹಂತಿ ಸದಸದ್ವ್ಯಕ್ತಿಹೇತವಃ। ಹೇಮ್ನಃ ಸಂಲಕ್ಷ್ಯತೇ ಹ್ಯಗ್ನೌ ವಿಶುದ್ಧಿಃ ಶ್ಯಾಮಿಕಾಪಿ ವಾ ॥" ಎಂದು. ಬಂಗಾರದ ಶುದ್ಧಿಯನ್ನು ಪರೀಕ್ಷಿಸಲು ಬೆಂಕಿಯಲ್ಲಿ ಹಾಕುತ್ತೇವೆ. ಆಗ ಬಂಗಾರದಲ್ಲಿನ ಪರಿಶುದ್ಧತೆ ತಿಳಿಯುತ್ತದೆ. ಅದರಲ್ಲಿ ಎಷ್ಟು ಪ್ರಮಾಣ ಶುದ್ಧ ಬಂದರವಿದೆ? ಎಷ್ಟು ಪ್ರಮಾಣ ಮಿಶ್ರಲೋಹದ ಯೋಗವಿದೆ? ಎಂಬುದು ಅರಿವಿಗೆ ಬರುತ್ತದೆ. ಅಂತೆಯೇ ಸಂತರು ಅಗ್ನಿಯಷ್ಟೇ ಪರಿಶುದ್ಧರು. ಪುಟವಿಟ್ಟ ಚಿನ್ನದಂತೆ ಅವರು. ಅವರ ಆಚಾರ, ವಿಚಾರ, ನಡೆ, ನುಡಿ ಪ್ರತಿಯೊಂದರಲ್ಲೂ ಪಾರಿಶುದ್ಧ್ಯವನ್ನು ಕಾಣಬಹುದು. ಯಾವುದೇ ಕಾರಣಕ್ಕೂ ಅವರು ಮಾಡಬಾರದ್ದನ್ನು ಮಾಡುವುದಿಲ್ಲ. ಮಾಡುವಂತಹದ್ದನ್ನು ಬಿಡುವುದಿಲ್ಲ. ಅವರು ವಿಚಾರ ಮಾಡಿದರೆಂದರೆ ಅದರಲ್ಲಿ ಸ್ವಲ್ಪವೂ ಲೋಪವಿರದು. ಅವರು ನಡೆದದ್ದೇ ದಾರಿಯಾಗುತ್ತದೆ. ಸಲ್ಲದ ದಾರಿಯನ್ನು ಹಿಡಿಯುವವರು ಅವರಲ್ಲ. ಶ್ರೀರಂಗಮಹಾಗುರುಗಳು ಈ ಸಂತರ ಲಕ್ಷಣವನ್ನು ಹೇಳುವ ಶ್ಲೋಕವನ್ನು ಯಾವಾಗಲೂ ಹೇಳುತ್ತಿದ್ದರು. " ರಜಸ್ತಮೋಭ್ಯಾಂ ನಿರ್ಮುಕ್ತಾಃ ತಪೋಜ್ಞಾನಬಲೇನ ಯೇ। ತೇಷಾಂ ತ್ರಿಕಾಲಮಮಲಂ ಜ್ಞಾನಂ" ಎಂಬುದಾಗಿ. ರಜಸ್ಸು ಮತ್ತು ತಮಸ್ಸು ಎಂಬ ಎರಡು ಗುಣಗಳಿಂದ ಬೇರ್ಪಟ್ಟ, ಕೇವಲ ಶುದ್ಧಸತ್ತ್ವಗುಣದಿಂದ ಕೂಡಿದವರು. ಆದ್ದರಿಂದಲೇ ಭೂತ ಭವಿಷ್ಯತ್ ವರ್ತಮಾನಗಳೆಂಬ ಮೂರೂ ಕಾಲದಲ್ಲೂ ಅವ್ಯಾಹತವಾದ ಪರಿಶುದ್ಧವಾದ ಜ್ಞಾನವನ್ನು ಪಡೆಯುವಂತವರಾಗಿದ್ದರು ಅವರು. ಇಂತಹ ವಿಶಿಷ್ಟ ಗುಣಗಳಿಂದ ಕೂಡಿರುವುದರಿಂದಲೇ ಅವರು ಎಂದೂ ಸುಳ್ಳನ್ನು ಆಡುತ್ತಿರಲಿಲ್ಲ; ಅಷ್ಟೇ ಅಲ್ಲ, ಅವರು ಹೇಗೆ ತಾನೆ ಸತ್ಯವನ್ನು ಬಿಟ್ಟು ಬೇರೆಯದನ್ನು ಹೇಳಲು ಸಾಧ್ಯ?!. ಅಂತಹ ನಿರ್ಮಲ ಅಂತಃಕರಣ ಉಳ್ಳವರೇ ಸಂತರು. ಅವರು ತಾನೆ ನಮ್ಮ ಜೀವನಕ್ಕೆ ದಿಕ್ಕು ದಿಸೆ!. ಅವರ ನಡೆ ನುಡಿ ಆಹಾರ ವಿಹಾರ ವ್ಯವಹಾರ ಎಲ್ಲವೂ ನಮಗೆ ಆದರ್ಶವೇ.   

ಸೂಚನೆ :  11/02/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.