Showing posts with label paper_vijayavani. Show all posts
Showing posts with label paper_vijayavani. Show all posts

Saturday, January 4, 2025

ಅಷ್ಟಾಕ್ಷರೀ 73 ಪುನಾತಿ ಭುವನಂ ಪುಣ್ಯಾ (Astaksari 73 Punati Bhuvanam Punya)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅನ್ಯ-ಸಂಸ್ಕೃತಿಗಳಿಗೂ ಭಾರತೀಯ-ಸಂಸ್ಕೃತಿಗೂ ಇರುವ ಭೇದವೇನು? ಎಂಬೀ ಪ್ರಶ್ನೆಯು ಹಲವೊಮ್ಮೆ ಹಲವರಿಗೆ ಬಂದಿರುವಂತಹುದೇ, ಬರುತ್ತಿರುವಂತಹುದೇ. ಹಲವರಿಗೇನು, ನಮಗೇ ಬರಬಹುದಾದುದೇ, ಪ್ರಾಯಃ ಬಂದಿರುವಂತಹುದೇ.


ಭಾರತದ ಆರಂಭವೆಂದರೆ ಸಿಂಧೂಕಣಿವೆಯ ನಾಗರಿಕತೆಯಿಂದ - ಎನ್ನುವುದುಂಟು. ವೇದಗಳಲ್ಲಂತೂ ಸರಸ್ವತೀ-ನದಿಯ ಕೊಂಡಾಟವು ಸಾಕಷ್ಟೇ ಉಂಟು. ಹಾಗೆ ನೋಡಿದರೆ ಯಾವುದೇ ನಾಗರಿಕತೆಯಾದರೂ ನದೀ-ತೀರಗಳಲ್ಲೇ ತಲೆಯೆತ್ತುವುದು. ಈಜಿಪ್ಟನ್ನು ಸಹ ನೈಲ್-ನದಿಯ ದತ್ತಿ (ಗಿಫ್ಟ್ ಆಫ್ ದಿ ನೈಲ್) ಎನ್ನುವರಲ್ಲವೇ? ನಿತ್ಯ-ಜೀವನವು ನಡೆಯಬೇಕೆಂದರೆ ನೀರು ಸಮೃದ್ಧಿಯಾಗಿಯೇ ಬೇಕಲ್ಲವೇ?


ಸರಸ್ವತೀ-ನದಿಯು ಯಾವ ಕಾರಣಕ್ಕೆ ಅದರ್ಶನವನ್ನು ಹೊಂದಿತೋ, ಮುಂದಂತೂ ಗಂಗೆಯೇ ಮುಖ್ಯ-ನದಿಯಾಯಿತು. ನಿತ್ಯವೂ ಸ್ನಾನ ಮಾಡುವಾಗ "ಗಂಗೇ ಚ ಯಮುನೇ ಚೈವ" ಎಂದು, ಸರಸ್ವತಿಯನ್ನೂ ಮರೆಯದೆ, ಸಪ್ತ-ನದಿಗಳನ್ನು ಸ್ಮರಿಸಿಕೊಳ್ಳುತ್ತೇವಲ್ಲವೇ? ಆದರೆ ಅಮೆರಿಕದಲ್ಲೇನೂ "ಮಿಸ್ಸಿಸ್ಸಿಪ್ಪೀ ಚ ಮಸ್ಸೂರೀ ಟೆನ್ನೆಸ್ಸೀ ಕೊಲೊರಾಡೊ ಚ" ಎಂದು ನದೀ-ಸ್ಮರಣ ಮಾಡುವುದಿಲ್ಲ! ಬ್ರಿಟಿಷರು "ಥೇಮ್ಸ್-ನದೀ ಟ್ರೆಂಟ್-ನದೀ ಚೈವ" ಎಂದು ಹೇಳಿಕೊಳ್ಳುವುದಿಲ್ಲ. ವೋಲ್ಗಾ ಅಮೆಜ಼ಾನ್ ನದಿಗಳನ್ನು ರಷ್ಯನ್ನರೋ ದಕ್ಷಿಣ ಅಮೆರಿಕದವರೋ ಭಕ್ತಿ-ಪೂರ್ವಕವಾಗಿ ಸ್ಮರಿಸುವುದಿಲ್ಲ. ಅವರ ಪಾಲಿಗೆ ಅದೊಂದು ಭೌತಿಕ-ಪದಾರ್ಥವಷ್ಟೇ. 


ವೈದಿಕ-ದೇವತೆಗಳನ್ನು ಕುರಿತು ಪಾಶ್ಚಾತ್ತ್ಯರು ಮಾಡುವ ಅವಹೇಳನ ಗೊತ್ತಿರುವಂತಹುದೇ: "ಮಾನವ-ನಾಗರಿಕತೆಯ ಆರಂಭಾವಸ್ಥೆಯಲ್ಲಿ ಪ್ರಕೃತಿಯ ಶಕ್ತಿಗಳನ್ನು ಕಂಡರೆ ಭಯವೇ ಭಯ; ಎಂದೇ ನೀರಿಗೊಂದು ದೇವತೆ, ಬೆಂಕಿಗೊಂದು ದೇವತೆ, ಗಾಳಿಗೊಂದು ದೇವತೆ, ಮಳೆಗೊಂದು ದೇವತೆಯಾಗಿರುವುದು. ಪ್ರಕೃತಿಯ ಶಕ್ತಿಗಳಿಗೆ ಹೆದರಿಕೊಂಡು ಅವಕ್ಕೆಲ್ಲಾ ಒಂದೊಂದು ದೇವತೆಗಳನ್ನು ಕಲ್ಪಿಸಿಬಿಟ್ಟಿರುವರು, ಭಾರತೀಯರು" - ಎಂದು. 


ಹಾಗಿದ್ದರೆ, 'ಏಕಂ ಸತ್', 'ಏಕೋ ದೇವಃ' - ಎಂದು ಏಕ-ತತ್ತ್ವದ ವಿಸ್ತಾರವಾಗಿಯೇ ನಾನಾ-ದೇವತೆಗಳನ್ನು ಕಂಡುಕೊಂಡಿರುವುದರ ಅರ್ಥವೇನು? ಸರ್ವ-ಶಕ್ತವಾದ ಮೂಲ-ಶಕ್ತಿಯ ನಾನಾಂಶಗಳೇ ಈ ದೇವತೆಗಳೆಲ್ಲಾ - ಎಂಬುದನ್ನು ಮನಗಂಡಿಲ್ಲವೇ? ಅಪವ್ಯಾಖ್ಯಾನಕ್ಕೆ ಎಡೆ(ಲ್ಲೆ)ಯೆಲ್ಲಿ? 


ಭಾರತದ ಸರ್ವ-ನದಿಗಳ ವಿಷಯದಲ್ಲೂ ನಮ್ಮವರಿಗೆ ಪೂಜ್ಯ-ಭಾವನೆಯೇ. ಇದಾದರೂ, ಬರೀ ಹೊಟ್ಟೇಪಾಡಿನ ಬೆಳೆ-ಅಡಿಗೆಗಳಿಗೆ ಅಡಿಗಡಿಗೆ ಬೇಕಾದ ನೀರಿದು - ಎಂಬ ಭಾವನೆಯಿಂದಲ್ಲ, ಬಂದಿರುವುದು. ಪಾಶ್ಚಾತ್ತ್ಯರ ಲೆಕ್ಕಾಚಾರ ಅಷ್ಟಕ್ಕೇ ಸೀಮಿತವಾಗಬಹುದು. ಅದನ್ನು ಮೀರಿದ ಲೆಕ್ಕಾಚಾರವುಂಟು. ಅದು ದೈವಿಕವಾದ ಲೆಕ್ಕಾಚಾರ. ಅದಿರುವುದರಿಂದಲೇ ನದಿಗಳ ದಿವ್ಯ-ಸಾಂನಿಧ್ಯವನ್ನು ಸ್ನಾನ-ಸಮಯದಲ್ಲಿ ನಿತ್ಯವೂ ಬಯಸುವುದು. ನದಿಗಳೆಲ್ಲ ದೇವಿಯರು. ದೇವ-ಸಾಂನಿಧ್ಯವನ್ನು ಪೂಜಾ-ಘಟ್ಟದಲ್ಲಿ ಬೇಡುವಂತೆ, ದೇವೀ-ಸಾಂನಿಧ್ಯವನ್ನು ಮೊದಲೇ, ಸ್ನಾನ-ಘಟ್ಟದಲ್ಲೇ, ಬಯಸುವುದಾಗಿದೆ.


ನದಿಗಳು ಜನಿಸುವುದು ಪರ್ವತಗಳಲ್ಲಿ. ಪರ್ವತಗಳು ಭೂ-ದೇವಿಯ ಕುಚಗಳಂತೆ. ಭೂ-ಮಾತೆಯ ಸ್ತನಗಳಿಂದ ಸ್ರವಿಸುವ ಅಮೃತವೇ ಈ ನದಿಗಳು. ಜೀವ-ಪೋಷಣೆಯೆಂಬುದು ಇವಿಂದಲೇ ಸಾಧ್ಯ. 


ಕೆಲವು ನದಿಗಳು ಸಣ್ಣನದಿಗಳು. ಇಂತಹವು ಅಲ್ಲಿಲ್ಲಿ ಹರಿದು ಕೊನೆಗೆ ದೊಡ್ಡನದಿಗೆ ಸೇರಿಕೊಳ್ಳುತ್ತವೆ: ಉಪ-ನದಿಗಳು ಮಹಾ-ನದಿಗೆ ಸೇರಿಕೊಳ್ಳುವ ಬಗೆಯಿದು. ಮಹಾ-ನದಿಯು ಮಾತ್ರ ಸಮುದ್ರವನ್ನೇ ಸೇರುವುದು.


ನಮ್ಮ ಕವಿಗಳು ರೂಪಕ-ಪ್ರಿಯರು. ರಾಮಾಯಣವನ್ನೇ ಒಂದು ಮಹಾ-ನದಿಯಾಗಿ ಕಂಡಿದ್ದಾರೆ. ಹಾಗಾದರೆ ಈ ನದಿಯು ಜನಿಸುವುದೆಲ್ಲಿ? ಕೊನೆಗದು ಸೇರುವ ಸಾಗರವಾವುದು? - ಎಂಬ ಈ ಎರಡು ಪ್ರಶ್ನೆಗಳಿಗೂ ಸಿದ್ಧವಾದ ಉತ್ತರಗಳಿವೆ. ವಾಲ್ಮೀಕಿಯೇ ಗಿರಿ. ಅಲ್ಲಿಂದ ಹೊರಟ ರಾಮಾಯಣ-ಮಹಾನದಿಯು ಸೇರುವ ಸಾಗರವಾವುದು? ರಾಮನೇ ಆ ಸಾಗರ. ಹಾಗೆ ಸಾಗುತ್ತ ಅದು ಮಾಡುವುದೇನು? ದಾರಿಯುದ್ದಕ್ಕೂ ಎಲ್ಲರನ್ನೂ - ಜಗತ್ತನ್ನೇ - ಪವಿತ್ರವಾಗಿಸುವುದು (ಪುನಾತಿ ಭುವನಂ ಪುಣ್ಯಾ)!


ಗಂಗಾ-ಮಹಾನದಿಯನ್ನೂ ರಾಮಾಯಣ-ಮಹಾನದಿಯನ್ನೂ ಹೋಲಿಸಿ ಶ್ರೀರಂಗಮಹಾಗುರುಗಳು ಹೇಳಿರುವ ಮಾತು ಅತ್ಯಂತ-ಸ್ಮರಣೀಯವಾಗಿದೆ: "ಉತ್ತುಂಗ-ಶಿಖರದಿಂದ ಹರಿದ ಗಂಗೆಯು ಧಿಮಿಧಿಮಿ-ತಾಳದಿಂದ ನಲಿದು ಸಪ್ತ-ಶಾಖೆಯಾಗಿ ಹರಿದು, ಲೋಕಕ್ಕೆ ತಂಪನ್ನುಂಟುಮಾಡುತ್ತಾ, ದಾರಿಯುದ್ದಕ್ಕೂ ಬೆಳವಣಿಗೆಗೆ ಬೇಕಾದ ಕೃಷಿಗೆ ನೀರೊದಗಿಸುತ್ತಾ, ಸಮುದ್ರವನ್ನು ಸೇರುವುದಲ್ಲವೇ? ಹಾಗೆಯೇ ವಾಲ್ಮೀಕಿ-ಗಿರಿಯಿಂದ ಜೀವ-ಲೋಕಕ್ಕೆ ಜ್ಞಾನ-ಧಾರೆಯನ್ನು ಹರಿಸಿ ಋಷಿಗಳನ್ನಾಗಿ ಮಾಡಲು ರಾಮಾಯಣ-ಮಹಾನದಿ ಹರಿದುಬಂದಿತು."


ಹೀಗಾಗಿ, ಗಂಗೆಯೂ ರಾಮಾಯಣವೂ ತಂಪನ್ನೊದಗಿಸುವುವು ಮಾತ್ರವಲ್ಲ; ಎರಡೂ ಪಾಪ-ಹರವೇ. ಸಪ್ತ-ಶಾಖೆಗಳುಳ್ಳ ಗಂಗೆಯಿಂದ ಕೃಷಿ-ಕಾರ್ಯಕ್ಕೆ ಪೋಷಣೆಯೆಂದುಕೊಂಡರೆ, ಸಪ್ತ-ಕಾಂಡಗಳುಳ್ಳ ರಾಮಾಯಣದಿಂದ ಋಷಿ-ಕಾರ್ಯಕ್ಕೆ ಪೋಷಣೆ! ವಾಸ್ತವವಾಗಿ ಗಂಗೆಯಿಂದಲೂ ಉಭಯ-ಪೋಷಣೆಯೂ ಉಂಟು.


ಋಷಿಗಳು ಶ್ರಮಿಸಿದುದು ಧರ್ಮ-ರಕ್ಷಣೆಗಾಗಿ ತಾನೆ? ಪರಮ-ಶಾಂತವಾದ ವಾಲ್ಮೀಕಿಋಷಿ-ಹೃದಯದಿಂದ ಹೊಮ್ಮಿದ, ಧರ್ಮವೇ ಮೈತಾಳಿಬಂದ ಶ್ರೀರಾಮನನ್ನೇ ಸೇರುವ, ಜೊತೆಗೆ ರಾಮನಲ್ಲಿಗೆ ಎಲ್ಲರನ್ನೂ ಒಯ್ಯಬಲ್ಲ, ವಾಹಕವಾದ ಮಹಾ-ವಾಹಿನಿಯೇ ರಾಮಾಯಣ!


ಹೀಗಿರುವಲ್ಲಿ, ರಾಮಾಯಣ-ಮಹಾನದಿಯು ಲೋಕ-ಪಾವನಿಯೆಂಬುದರಲ್ಲಿ ಆಶ್ಚರ್ಯವೇನು?


ಸೂಚನೆ: 4/1/2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Sunday, December 22, 2024

ಯುವರಾಜನಾಗುವವನಿಗೆ ದಶರಥನ ಉಪದೇಶ (Yuvarajanaguvavanige Dasarathana Upadesa)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ದಶರಥ ಮಹಾರಾಜನು ತನ್ನ ಹಿರಿಯ ಮಗನಾದ ಶ್ರೀರಾಮನಿಗೆ ಯೌವರಾಜ್ಯಾಭಿಷೇಕ ಮಾಡಬೇಕೆಂದು ನಿಶ್ಚಯಿಸಿ ಜನಪ್ರತಿನಿಧಿಗಳು, ಪ್ರಜಾಮುಖ್ಯರು ಮುಂತಾದವರನ್ನು ಕರೆಸಿದನು. ಅವರ ಮುಂದೆ ತನ್ನ ಅಭಿಲಾಷೆಯನ್ನಿಟ್ಟು, ಧರ್ಮದೃಷ್ಟಿಯಿಂದ ಅವರ ಅಭಿಪ್ರಾಯವನ್ನೂ ಕೇಳಿದನು. ಶ್ರೀರಾಮನಂತಹವನು ತಮ್ಮ ಮುಂದಿನ ರಾಜನಾಗುವುದನ್ನು ಅವರು ಸಂತೋಷದಿಂದ ಸ್ವಾಗತಿಸಿದರು. ಅದನ್ನು ಕೇಳಿದ ದಶರಥನ ಆನಂದಕ್ಕೇ ಪಾರವೇ ಇಲ್ಲದಾಯಿತು. ಇನ್ನೇನು? ಪಟ್ಟಾಭಿಷೇಕಕ್ಕೆ ತಯಾರಿ ಸಾಗಿತು. ತನ್ನ ಸಾರಥಿಯಾದ ಸುಮಂತ್ರನ ಮೂಲಕ ಹೇಳಿಕಳುಹಿಸಿ, ರಾಮನನ್ನು ಸಭೆಗೆ ದಶರಥನು ಬರಮಾಡಿಕೊಂಡನು - ಈ ಯೌವರಾಜ್ಯಾಭಿಷೇಕದ ಸುದ್ದಿಯನ್ನು ಅವನಿಗೆ ತಿಳಿಸಲು. ಅವನಿಗೆ ದಶರಥನು ಈ ಸುಖವಾರ್ತೆಯನ್ನು ಕೊಡುವುದರೊಂದಿಗೇ, ಸಭೆಯಲ್ಲೇ ಹಲವು ಬುದ್ಧಿಮಾತುಗಳನ್ನೂ ಹೇಳಿದನು. ಹೇಳಿದ ಕೆಲವು ಬುದ್ಧಿಮಾತುಗಳೆಂದರೆ: "ವ್ಯಸನಗಳಿಂದ ದೂರವಿರು; ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಆಳ್ವಿಕೆಯ ಎಲ್ಲ ವಿಷಯಗಳತ್ತಲೂ ಗಮನ ಕೊಡು; ಆಯುಧಶಾಲೆಯನ್ನೂ ಭಂಡಾರವನ್ನೂ ತುಂಬಿರು; ಪ್ರಜೆಗಳ ಪ್ರೀತಿಯನ್ನು ಗಳಿಸು; ಮನಸ್ಸನ್ನು ನಿಗ್ರಹಿಸಿ ವ್ಯವಹಾರ ಮಾಡು" ಎಂದು.

ಸಕಲಸದ್ಗುಣೋಪೇತನಾದ ಶ್ರೀರಾಮನಂತಹ ರಾಜಕುಮಾರನಿಗೆ ದಶರಥನು ಹೀಗೆಲ್ಲಾ ಬೋಧನೆ ಮಾಡಬೇಕಿತ್ತೇ ಎಂಬ ಪ್ರಶ್ನೆ ಬರುತ್ತದೆ. ಒಂದು ಮಟ್ಟಿಗೆ ದಶರಥನೇ ಅದನ್ನು ಅಲ್ಲಿ ಉತ್ತರಿಸಿದ್ದಾನೆ. "ಈ ಪ್ರಜೆಗಳೆಲ್ಲರೂ ನಿನ್ನ ಗುಣಗಳಿಂದ ಸಂತುಷ್ಟರಾಗಿದ್ದಾರೆ. ನೀನು ಸ್ವಭಾವತಃ ಗುಣಶಾಲಿಯೂ ವಿನಯವಂತನೂ ಆಗಿದ್ದೀಯೆ. ಈ ಗುಣಗಳೆಲ್ಲ ನಿನ್ನಲ್ಲಿದ್ದರೂ ಪುತ್ರನೆಂಬ ಸ್ನೇಹದಿಂದ ನಿನಗೆ ಹಿತವಾದದ್ದನ್ನು ಹೇಳುತ್ತಿದ್ದೇನೆ" ಎಂದು ಹೇಳಿಯೇ ಅವನು ಬುದ್ಧಿಮಾತುಗಳನ್ನಾಡಿರುವುದು. ಶ್ರೀರಂಗಮಹಾಗುರುಗಳು ಹೇಳಿದಂತೆ " ಜ್ಞಾನವೃದ್ಧತೆ ವಯೋವೃದ್ಧತೆ ಎರಡೂ ಒಂದೇ ಜಾಗದಲ್ಲಿದ್ದರೆ ವಿಶೇಷ ಲಾಭ... ಬಾಲ್ಯ, ಯೌವನ, ವಾರ್ಧಕ್ಯ ಮೂರು ಅವಸ್ಥೆಗಳಲ್ಲಿರುವ ಸುಖ, ದುಃಖ, ಚಿಂತೆ, ಮೋಹ, ಸಂತೋಷಗಳ್ಳೆಲ್ಲದರ ಅನುಭವವಿರುವುದರಿಂದ, ಅವನ ಉಪದೇಶವು ಕಾರ್ಯಶಾಲಿಯೂ, ಸಾಧನಾಪರನೂ ಆದವನಿಗೆ ಉಪಯುಕ್ತವಾಗುತ್ತದೆ. "

ಸರಿ, ಬುದ್ಧಿಮಾತುಗಳನ್ನು ಏಕಾಂತದಲ್ಲಿ ಆಡಿದಲ್ಲಿ(ಯೇ) ಮನಸ್ಸಿಗೆ ಅವು ಚೆನ್ನಾಗಿ ನಾಟುವುವಲ್ಲವೇ? ದಶರಥನು ಸಭೆಯಲ್ಲೇಕೆ ಹೀಗೆ ಮಾಡಿದನು? ಒಬ್ಬ ಸಾಮಾನ್ಯ ಯುವಕನಿಗೆ ಹೀಗೆ ಹೇಳಿದ್ದರೆ ಸಾಧಾರಣವಾಗಿ ಬರುವ ಪ್ರತಿಕ್ರಿಯೆಯೇನಿರಬಹುದು? "ನಾನೇನು ತಪ್ಪನ್ನು ಮಾಡಿರುವೆನೇ ಅಥವಾ ಮಾಡಹೊರಟಿರುವೆನೇ? ಮತ್ತೆ ಯಾಕಿಷ್ಟು ಬೋಧನೆ?" ಎಂದೋ, "ಅಯ್ಯೋ, ತಿಳಿದದ್ದನ್ನೇ ಇವರೆಲ್ಲರ ಮುಂದೆ ಮತ್ತೆ ಹೇಳುತ್ತಿದ್ದಾರಲ್ಲಾ!" ಎಂದೋ ಇರಬಹುದು. ವಿವೇಕವಿದ್ದವನಾದರೂ, " ಇದೆಲ್ಲ ಹೇಳಿದ್ದು ಸರಿಯಾದರೂ, ಏಕಾಂತದಲ್ಲಿ ಹೇಳಬಹುದಿತ್ತಲ್ಲಾ" ಎಂದೆನಿಸಬಹುದು. ರಾಮನಂತೂ ಎಲ್ಲವನ್ನೂ ಸಮಾಧಾನಚಿತ್ತದಿಂದಲೇ ಕೇಳಿಸಿಕೊಂಡನು.

ಎಷ್ಟೋ ಬಾರಿ ನಾವು ಸರಿಯಾದ ಕೆಲಸವನ್ನೇ ಮಾಡಿರಬಹುದು, ಆದರೆ ಸರಿಯಾದ ಕೆಲಸ ಮಾಡುತ್ತಿದ್ದೇವೆಂದು ಬೇರೆಯವರಿಗೆ ತೋರುವುದೂ ಮುಖ್ಯವಾಗುತ್ತದೆ. ಅದೂ ರಾಜನಂತಹ ಸ್ಥಾನದಲ್ಲಿದ್ದು, ಪ್ರಜೆಗಳಿಗೆ ತಾನು ಮಾದರಿಯಾಗಿರಬೇಕಿದ್ದರಂತೂ, ಇದು ಬಹುಮುಖ್ಯವೇ. ಎಲ್ಲರಿಗೂ ತಿಳಿದಂತೆಯೇ ರಾಮನು ಪ್ರಜೆಗಳಿಗೆ ಪ್ರಿಯನಾದವನು, ಧರ್ಮಿಷ್ಠ. ದಶರಥನೂ ಧರ್ಮಿಷ್ಠ. ಆದರೂ ತಂದೆಯಾದವನು ಮಕ್ಕಳನ್ನು ಸರಿಯಾದ ದಾರಿಯಲ್ಲಿಡುವ ಬುದ್ಧಿವಾದ ಆಗಾಗ್ಗೆ ಹೇಳುವುದು ಕರ್ತವ್ಯವೇ ಸರಿ. ಧರ್ಮದಿಂದ ನಡೆಯುವವರಿಗೂ ಈ ರೀತಿಯ ಸಂದರ್ಭಗಳಲ್ಲಿ ಹೇಳಿದ ಮಾತುಗಳು ಕೆಲವೊಮ್ಮೆ ಸಂದಿಗ್ಧಪರಿಸ್ಥಿತಿಗಳಲ್ಲಿ  ದಾರಿದೀಪವಾಗುವುವು, ಅಲ್ಲವೇ?

ಸೂಚನೆ: 21/12/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Saturday, December 21, 2024

Astaksari 72 ತಸ್ಮಾತ್ ಸ ಮಾನುಷಾದ್ ವಧ್ಯಃ Tasmat Sa Manushad Vadhyah

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ರಾಮಾಯಣವನ್ನು ಓದುವವರಿಗೆ ಸಮಸ್ಯೆಯೊಂದು ತೋರುವುದುಂಟು. ಭಗವಂತನು ಸರ್ವ-ಶಕ್ತನಲ್ಲವೇ? ಆತನು ರಾವಣನನ್ನು ಸಂಹರಿಸಲು ಅಷ್ಟೊಂದು ಹೆಣಗಾಡಬೇಕಿತ್ತೇ? ರಣಾಂಗಣದಲ್ಲಿ ಏಟುತಿಂದು, ಮೂರ್ಛೆಹೋಗಿ, ಬವಣೆಪಟ್ಟು, ಪರಿಶ್ರಾಂತನೂ ಚಿಂತಾಕುಲನೂ ಆಗಿ, ಕೊನೆಗೆ ಅಗಸ್ತ್ಯ-ಮಹರ್ಷಿಗಳಿಂದ ಆದಿತ್ಯ-ಹೃದಯದ ಉಪದೇಶವಾದಮೇಲೆಯೇ, ರಾವಣ-ಸಂಹಾರ ಮಾಡಲು ಸಮರ್ಥನಾದದ್ದು! - ಎಂದಾಗಿಹೋಯಿತಲ್ಲಾ!

"ರಾವಣಾ, ಇದೋ ನೀನು ಈ ಕ್ಷಣದಲ್ಲಿ ಇಲ್ಲವಾದೆ!" ಎಂದೊಮ್ಮೆ ಘೋಷಿಸಿದ್ದರೆ ಸಾಕಾಗಿತ್ತು - ಆತನು ಭಗವಂತನೇ ಆಗಿದ್ದರೆ. ಘೋಷಿಸುವುದೇನು, ಮನಸ್ಸಿನಲ್ಲಿ ಸಂಕಲ್ಪಿಸಿದ್ದರೇ ಸಾಕಾಗಬೇಕಿತ್ತು!

ರಾಮಾಯಣದ ಪ್ರಥಮಸರ್ಗದಲ್ಲೇ, ಹದಿನಾರು ಗುಣಗಳನ್ನು ಪಟ್ಟಿಮಾಡಿ, "ಇವೆಲ್ಲವನ್ನೂ ಹೊಂದಿರುವ ನರನುಂಟೇ?" - ಎಂದು ವಾಲ್ಮೀಕಿಗಳು ನಾರದರನ್ನು ಕೇಳುತ್ತಾರೆ. ನಾರದರೂ, "ಆ ಗುಣಗಳಿಂದ ಕೂಡಿರುವ ನರನನ್ನು ಅರಿತು ಹೇಳುತ್ತಿದ್ದೇನೆ" - ಎಂದೇ ಆರಂಭಿಸುತ್ತಾರೆ. ಹೀಗೆ ಕೇಳುಗನೂ ಹೇಳುಗನೂ - ನರನನ್ನು - ಎಂದರೆ ಮನುಷ್ಯನನ್ನು ಕುರಿತೇ ಮಾತನಾಡುತ್ತಿರುವುದು. ಹಾಗೆಂದ ಮೇಲೆ ರಾಮನನ್ನು ದೇವನೆನ್ನಬೇಕೇ?

ಆದರೆ ನಮ್ಮ ಪರಂಪರೆಯು ಸಾವಿರಾರು ವರ್ಷಗಳಿಂದ ರಾಮನನ್ನು ದೇವನೆಂದೇ ಪೂಜಿಸುತ್ತಿದೆಯಷ್ಟೆ. ಅದಕ್ಕೂ ರಾಮಾಯಣದಲ್ಲೇ ಆಧಾರಗಳಿವೆಯೆಂಬುದನ್ನೂ ಮನಗಾಣಬೇಕು. ಎಲ್ಲಿ? ಶರಭಂಗ-ಸುತೀಕ್ಷ್ಣರಿಗೆ ಉತ್ತಮಲೋಕವನ್ನೂ, ಜಟಾಯುವಿಗೆ ಸದ್ಗತಿಯನ್ನೂ, ಶಬರಿಗೆ ಮೋಕ್ಷವನ್ನೂ ಕೊಡುವಲ್ಲಿ; ಯುದ್ಧಸಂದರ್ಭದಲ್ಲಿ ಗರುಡನೇ ಬಂದು ಸೇವೆ ಮಾಡುವಲ್ಲಿ; ಸೀತೆಯ ಅಗ್ನಿಪ್ರವೇಶ-ಸಂದರ್ಭದಲ್ಲಿ ದೇವತೆಗಳೇ ಬಂದು ರಾಮನ ದೇವ-ದೇವತ್ವವನ್ನು ಘೋಷಿಸುವಲ್ಲಿ - ಇತ್ಯಾದಿಗಳಲ್ಲಿ.

ಹಾಗಾದರೆ ಏತಕ್ಕಾಗಿ ದೇವತ್ವ-ಮಾನವತ್ವಗಳು ಹೀಗೆ ಬೆರಕೆಯಾಗಿಹೋಗಿವೆ? - ಎಂಬ ಪ್ರಶ್ನೆಯು ಬರುವುದಲ್ಲವೇ?

ದೀರ್ಘವಾದ ತಪಸ್ಸನ್ನು ಮಾಡಿ, ರಾವಣನು ಬ್ರಹ್ಮನಿಂದ ಪಡೆದುಕೊಂಡ ವರವೇ ಹೀಗಿದೆ: "ನಾಗ-ಯಕ್ಷ-ದೈತ್ಯ-ದಾನವ-ರಾಕ್ಷಸ-ದೇವತೆಗಳಿಂದ ನನಗೆ ಸಾವು ಬರಬಾರದು. ಮನುಷ್ಯರು ನನಗೆ ಹುಲ್ಲಿಗೆ ಸಮ!"

ಈ ಅದ್ಭುತ-ವರದಿಂದ ಕೊಬ್ಬಿಹೋದ ರಾವಣ ಲೋಕ-ಕಂಟಕನಾದ. ಆತನ ಉಪಟಳ ದೇವತೆಗಳಿಗೇ ತಡೆಯಲಾರದಾಯಿತು. ಅವರೆಲ್ಲರೂ ಬ್ರಹ್ಮನಲ್ಲಿ ಮೊರೆಯಿಟ್ಟರು. ಆಗ ಬ್ರಹ್ಮನು, "ಮನುಷ್ಯರ ಮೇಲಿನ ತಿರಸ್ಕಾರದಿಂದಾಗಿ, ಅವರಿಂದ ಅವಧ್ಯತ್ವವನ್ನು, ಎಂದರೆ ಸಂಹಾರವಾಗದಿರುವಿಕೆಯನ್ನು, ಈತ ವರವಾಗಿ ಕೇಳಿಕೊಂಡಿಲ್ಲ. ಆದ್ದರಿಂದ ಆತನು ಮನುಷ್ಯರಿಂದ ಮಾತ್ರವೇ ವಧ್ಯನಾಗಿದ್ದಾನೆ (ತಸ್ಮಾತ್ ಸ ಮಾನುಷಾದ್ ವಧ್ಯಃ)" - ಎಂದನು.

ಅಷ್ಟರಲ್ಲಿ ಅಲ್ಲಿಗೆ ವಿಷ್ಣುವೇ ಆಗಮಿಸಿದನು. ಲೋಕ-ಕಂಟಕನಾದ ರಾವಣನನ್ನು ಸಂಹರಿಸುವೆ, ಮತ್ತು ಅದಕ್ಕಾಗಿ,   ಮನುಷ್ಯನಾಗಿಯೇ ದಶರಥ-ಪುತ್ರನಾಗಿ ಜನಿಸುವೆ - ಎಂದು ಮಾತುಕೊಟ್ಟನು. ಅಂತೆಯೇ ಅದನ್ನು ನೆರವೇರಿಸಿದನು.

ಭಗವಂತನು ಮನುಷ್ಯನಾಗಿ ಭುವಿಗಿಳಿದುಬಂದ ಪರಿಯನ್ನು, ಮತ್ತು ಮನುಷ್ಯನಾಗಿ ನಡೆದ ನಡೆಯನ್ನು, ಶ್ರೀರಂಗಮಹಾಗುರುಗಳು ಹೀಗೆ ವಿವರಿಸಿರುವರು: "ದೇವ-ದತ್ತವಾದ ಹಿರಣ್ಮಯ-ಪಾತ್ರದಲ್ಲಿ ಪಾಯಸ-ರೂಪವಾಗಿ ಬಂದು ಇಳಿದಿದ್ದಾನೆ. ಮನುಷ್ಯ-ರೂಪನಾಗಿ ಬಂದು, ಪರಮ-ಶಾಂತಿಮಯವಾದ ಜೀವನವನ್ನು ನಡೆಸುತ್ತಿರುವ ತಪಸ್ವಿ-ಸಮೂಹಕ್ಕೆ ಕಂಟಕನಾದ ರಾವಣನನ್ನು ಸಂಹರಿಸಿದ್ದಾನೆ." 

ಅಷ್ಟೇ ಅಲ್ಲದೆ, ಬೀಜ-ವೃಕ್ಷನ್ಯಾಯದಿಂದಲೂ ಒಂದು ಒಟ್ಟಾರೆ ಚಿತ್ರವನ್ನು ಹೀಗೆ ಕೊಟ್ಟಿರುವರು: "ಹೇಗೆ ಒಂದು ಬೀಜವು ಭೂಮಿಗೆ ಇಳಿದು ಬಂದು ಶಾಖೋಪಶಾಖವಾಗಿ ಬೆಳೆದು, ಎಂದರೆ ರೆಂಬೆಕೊಂಬೆಗಳಾಗಿ ಹರಡಿ, ಮತ್ತೆ ಮೇಲೆ ದಿವಿಯಲ್ಲಿ ಬೀಜರೂಪವಾಗಿಯೇ ನಿಂತುಬಿಡುವುದೋ, ಹಾಗೆಯೇ ಇವನು ಮತ್ತೆ ಸ್ವಧಾಮದಲ್ಲೇ ಹೋಗಿ ನಿಂತುಬಿಡುತ್ತಾನೆ" – ಎಂದು.

ಇಲ್ಲೊಂದು ಚಕ್ರಾಕಾರವಾದ ಗತಿಯನ್ನೂ ಕಾಣುತ್ತೇವೆ. ನೆಲದೊಳಗೆ ಬೀಜವನ್ನು ಬಿತ್ತುತ್ತೇವೆ; ಅದು ಹೊರಗೆ ವೃಕ್ಷವಾಗಿ ವಿಸ್ತಾರವಾಗಿ ಮುಂದುವರೆಯುತ್ತದೆ; ಇದು ಪ್ರವೃತ್ತಿ-ಮಾರ್ಗವಷ್ಟೆ. ಆದರೆ ಹೀಗೆ ಮುಂದುವರೆಯುತ್ತಲೂ, ಜೊತೆಗೇ  ಅದು ಹಿಂದುವರೆಯುತ್ತಲೂ ಇದೆ - ಎಂಬ ಅದ್ಭುತವನ್ನು ಮನಗಾಣಬೇಕು. ಏನದು? ಜೊತೆಜೊತೆಗೇ ಅದು ಮತ್ತೆ ತನ್ನ ಮೂಲ-ರೂಪದತ್ತಲೇ, ಎಂದರೆ ಬೀಜರೂಪದತ್ತಲೇ, ಸಾಗುತ್ತಲೂ ಇದೆಯಲ್ಲವೇ? ಹೀಗೆ ಹಿಂದಿರುಗುವಿಕೆಯೇ ನಿವೃತ್ತಿ-ಮಾರ್ಗ.  ಹೀಗೆ ಪ್ರವೃತ್ತಿ-ನಿವೃತ್ತಿಗಳೆರಡೂ ಒಟ್ಟಿಗೇ ಸಾಗುತ್ತಿರುವುದೇ ಆಶ್ಚರ್ಯಕರವೂ ಆದರ್ಶಭೂತವೂ ಆದ ನಡೆ.

ಆಕಾಶದಿಂದ ಭೂಮಿಗಿಳಿದದ್ದು ಮತ್ತೆ ಆಕಾಶದಲ್ಲೇ ನಿಂತಿದೆ: ಮರಗಳಲ್ಲಿ ಬಿಡುವ ಹಣ್ಣು ಎತ್ತರದಲ್ಲಿರುತ್ತದೆ. ಆಕಾಶವು ಎತ್ತರದ ಆ ದಿವಿಯೇ. ದಿವಿಯ ಪುರುಷನು - ಎಂದರೆ ವಿಷ್ಣುವು, ಭುವಿಗೆ - ಎಂದರೆ ಪ್ರಕೃತಿಗೆ, ಮನುಷ್ಯನಾಗಿ ಇಳಿದುಬಂದು,  ಧರ್ಮಿಷ್ಠನಾಗಿ ಬೆಳೆದು ವಿಸ್ತಾರಗೊಂಡು, ಅಧರ್ಮವನ್ನಳಿಸಿ, ಕೊನೆಗೆ ತನ್ನ ಮೂಲ-ಸ್ಥಾನವನ್ನೇ ಸೇರಿದ್ದಾನೆ.

ಒಂದರ್ಥದಲ್ಲಿ ನಾವಿರಬೇಕಾದುದೂ ಹೀಗೆಯೇ. ನಮಗೂ "ಅಲ್ಲಿದೆ ನಮ್ಮನೆ!" ಅಲ್ಲವೇ? ಭೂಮಿಗೆ ನಾವು ಬಂದಿರುವುದು ಇಲ್ಲಿಯೇ ಇದ್ದುಬಿಡಲಲ್ಲವಷ್ಟೆ? ಕೊನೆಗೆ ಆ ಸ್ವಧಾಮಕ್ಕೆ ಸೇರಿಕೊಳ್ಳಲೆಂದೇ ತಾನೆ?  

ಹಾಗಿದ್ದರೆ, ಅದಕ್ಕೊಪ್ಪುವಂತೆ, ನಾವೂ ಅಂತೆಯೇ ಅಧರ್ಮವನ್ನಳಿಸಿಕೊಂಡು ಸ್ವಧರ್ಮ-ಸ್ವಕರ್ಮಗಳಲ್ಲಿ ನಿರತರಾಗಿದ್ದುಕೊಂಡು, ವಿಷ್ಣುಪದವೆಂಬ ಮೂಲ-ಧಾಮವನ್ನು ಸೇರಿಕೊಳ್ಳಲೆಳಸು(ತ್ತಿರು)ವುದೇ ವಿವೇಕವೆನಿಸುವುದಲ್ಲವೇ?

ಸೂಚನೆ: 21/12/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.


Sunday, December 1, 2024

ಅಷ್ಟಾಕ್ಷರೀ 71 ತಪಃಶ್ಲಾಘ್ಯೈಃ ಮಹರ್ಷಿಭಿಃ (Ashtakshari 71)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ತಮ್ಮನ್ನು ಕುರಿತು ಯಾರಾದರೂ ಒಳ್ಳೆಯ ಮಾತನ್ನಾಡಿದರೆ ಯಾರಿಗೆ ಸಂತೋಷವಾಗದು?

ತಾನು ಬರೆದ ಪದ್ಯವನ್ನೋ ಪುಸ್ತಕವನ್ನೋ ಹೆಚ್ಚು ಹೆಚ್ಚು ಜನ ಮೆಚ್ಚಬೇಕು, ತಾನಳಿದ ಮೇಲೂ ತನ್ನ ಕೃತಿಯುಳಿಯಬೇಕು - ಎನ್ನುವ ಆಸೆ ಲೋಕ-ಸಾಮಾನ್ಯ.


ವಾಲ್ಮೀಕಿಗಳ ಕಥೆಯೇ ಬೇರೆಯಷ್ಟೆ? ಬ್ರಹ್ಮನು ಅವರಿಗೆ ವರವಿತ್ತನಲ್ಲವೇ? ಎಲ್ಲಿಯ ತನಕ ಭೂತಲದಲ್ಲಿ ಗಿರಿಗಳಿರುವುವೋ ನದಿಗಳಿರುವುವೋ ಅಲ್ಲಿಯ ತನಕ ರಾಮಾಯಣ-ಕಥೆಯು ಲೋಕದಲ್ಲಿ ಪ್ರಚಾರವನ್ನು ಹೊಂದಿರುವುದು! - ಎಂದು.


ಇಲ್ಲೊಂದು ವಿಶೇಷವನ್ನೂ ಗಮನಿಸಬೇಕು. ರಾಮಾಯಣವನ್ನು ಬರೆದು ಮುಗಿಸಿದ ಮೇಲಲ್ಲ, ಬ್ರಹ್ಮನು ಈ ವರವಿತ್ತದ್ದು. ಬರೆಯುವ ಮುಂಚೆಯೇ! "ಏನೋ ಒಂದೆರಡು ಕಾಂಡಗಳಷ್ಟಾದರೂ ಸ್ಯಾಂಪಲ್ ಕಳಿಸಯ್ಯಾ, ಆಮೇಲೆ ಕಮಿಟಿಯ ಮುಂದೆ ಇಟ್ಟು ನೋಡೋಣ" - ಎನ್ನಲಿಲ್ಲ, ಬ್ರಹ್ಮ. ಒಂದೇ ಶ್ಲೋಕದ ಸ್ಯಾಂಪಲ್ ಸಾಕಾಯಿತು, ಬ್ರಹ್ಮನಿಗೆ: "ಮಾ ನಿಷಾದ …".


ಅದನ್ನಾದರೂ ವಾಲ್ಮೀಕಿಗಳು ಕುಳಿತು ಬರೆದದ್ದೇ? ಇಲ್ಲ. ಕಾಮಕೇಳಿಯಲ್ಲಿದ್ದ ಹಕ್ಕಿಯನ್ನು ಬೇಡನೊಬ್ಬನು ಹೊಡೆಯಲು, ಅದು ವಿಲವಿಲನೆ ಒದ್ದಾಡಿ ಸತ್ತಿತಲ್ಲವೇ? ಅದರ ಸಂಗಾತಿಯು ಅತ್ತಿತಲ್ಲವೇ? ಆ ಆರ್ತತೆ ಅವರಲ್ಲಿ ಶೋಕವುಕ್ಕಿಸಿತು. ಅವರ ಬಾಯಿಂದ ಆ ಪದ್ಯವನ್ನು ಹೊರಡಿಸಿತು.


ತನ್ನ ಬಾಯಿಂದ ಹೊಮ್ಮಿದ್ದೇನೆಂದು ಅವರಿನ್ನೂ ಆಶ್ಚರ್ಯಪಡುತ್ತಿರುವಷ್ಟರಲ್ಲಿಯೇ ಬ್ರಹ್ಮನೇ ಆವಿರ್ಭವಿಸಿದ. ನಸುನಕ್ಕು, "ನಿನ್ನ ಬಾಯಿಂದ ಬಂದದ್ದು ಶ್ಲೋಕವೇ. ಅದು ಬಂದದ್ದು ನನ್ನ ಪ್ರೇರಣೆಯಿಂದಲೇ. ನಾರದನಿಂದ ರಾಮನ ಕಥೆಯನ್ನು ಕೇಳಿರುವೆಯಲ್ಲಾ, ಅದನ್ನೇ ಬರೆ. ನಿನಗೆಲ್ಲವೂ ಗೋಚರವಾಗುವುದು - ಎಂದು ಹೇಳಿಯೇ, ಈ ವರವಿತ್ತದ್ದು!


ವಾಲ್ಮೀಕಿಗಳು ಅದೆಷ್ಟನೇ ಇಸವಿಯಲ್ಲಿ ಆ ಆದಿ-ಕಾವ್ಯವನ್ನು ರಚಿಸಿದರೋ ಬಲ್ಲವರಾರು? ಎಷ್ಟೋ ಸಹಸ್ರ-ವರ್ಷಗಳೇ ಕಳೆದಿರಬೇಕು. ಈವರೆಗಂತೂ ಬ್ರಹ್ಮನ ವರ ಸುಳ್ಳಾಗಿಲ್ಲ. ಸುಳ್ಳಾಗುವುದೇನು? "ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ" ಎಂದಿರುವಂತೆ, ಅದೆಷ್ಟು ಕವಿಗಳು ಅದೇ ಕಥೆಯನ್ನೇ ಅದೆಷ್ಟು ಪ್ರಕಾರಗಳಲ್ಲಿ ಮತ್ತೆ ಮತ್ತೆ ಚಿತ್ರಿಸಿದ್ದಾರೆಂದು ಎಣಿಸಿಟ್ಟವರಾರು? ಅವಲ್ಲೂ ಲಬ್ಧ-ಕೃತಿಗಳೆಷ್ಟೋ, ನಷ್ಟ-ಕೃತಿಗಳೆಷ್ಟೋ! ಅದೂ ಏನು ಒಂದೆರಡು ಭಾಷೆಗಳಲ್ಲೇ?


ಅಷ್ಟೊಂದು ಮಂದಿ ಕವಿಗಳಿಗೇ ಉಪಜೀವ್ಯವೂ ಅನುಕಾರ್ಯವೂ ಆಯಿತು, ಈ ಕೃತಿ - ಎಂದರೆ, ಅಷ್ಟೇ ಸಾಕು, ಅದರ ಹಿರಿಮೆ-ಗರಿಮೆಗಳನ್ನು ಹೇಳಲು!


ಏನು ಉಪಜೀವ್ಯವೆಂದರೆ? ತಮ್ಮ ಬದುಕಿಗೇ ಆಸರೆಯಾಗಬಲ್ಲದ್ದು ಯಾವುದೋ, ಅದು ಉಪಜೀವ್ಯ. ರಾಮಾಯಣ-ಮಹಾಭಾರತ ಕಥೆಗಳು ಎಷ್ಟೊಂದು ಕವಿ-ಮುಖ್ಯರಿಗೂ ಉಪಜೀವ್ಯವಾಗಿರುವುವಲ್ಲವೇ? ಕಾಳಿದಾಸನಿಗಿಂತಲೂ ಕವಿಯೇ? ಆತನ ಕೃತಿಗಳನ್ನುಪಜೀವಿಸಿಯೇ ಹಲವು ಕವಿಗಳು ಬೆಳಗಿದರಲ್ಲವೇ? ಕಾಳಿದಾಸನೇ ವಾಲ್ಮೀಕಿಗಳನ್ನು "ಪೂರ್ವ-ಸೂರಿ"ಯೆಂದು ಆದರಿಸಿದನಲ್ಲವೇ? ಅವರ ಕಥಾ-ವಸ್ತುವನ್ನೇ ಆಧರಿಸಿದನಲ್ಲವೇ?


ಏನು ಅನುಕಾರ್ಯವೆಂದರೆ? ಯಾವುದನ್ನು ಅನುಕರಿಸಲು ಇಷ್ಟವಾಗುವುದೋ ಅದು ಅನುಕಾರ್ಯ. ವೈದಿಕ-ಕವಿಯಾದ ಕಾಳಿದಾಸನೂ, ಬಳಿಕ ಬಂದ ಬೌದ್ಧ-ಕವಿಯಾದ ಅಶ್ವಘೋಷನೂ, ವಾಲ್ಮೀಕಿಗಳು ಬರೆದಂತೆಯೇ ತಾವೂ ಬರೆಯಬೇಕೆಂದು ಹಂಬಲಿಸಿದರಲ್ಲವೇ? "ಆಹಾ! ಬರೆದರೆ ಹಾಗೆ ಬರೆಯಬೇಕು!" - ಎಂದು ಆಸೆಪಡಲು ಯೋಗ್ಯವಾದದ್ದೇ ಅನುಕಾರ್ಯ.


ವಾಲ್ಮೀಕಿ-ರಚಿತವನ್ನು ಕೊಂಡಾಡಿರುವ ಪಾಶ್ಚಾತ್ತ್ಯ-ಕವಿಗಳೋ ವಿಮರ್ಶಕರೋ ಹಲವರಿರಬಹುದು. ಅದು ನಮಗೆ ಪ್ರಕೃತವಲ್ಲ. ಆಂದಿನಿಂದ ಇಂದಿನವರೆಗೆ ಕೋಟಿ ಕೋಟಿ ಮಂದಿಗೆ ರಾಮಾಯಣವು ಆಸ್ವಾದ್ಯವಾಗುಳಿದಿದೆ. ಈಗ ನವಮಾಧ್ಯಮಗಳಲ್ಲೂ ಮೂಡಿದೆ. ಜನರಿಗೆಂದಿಗೂ ದಾರಿದೀಪವಾಗಿದೆ. ಅವೆಲ್ಲವೂ ವಾಲ್ಮೀಕಿ-ಕೃತಿಯ ಹೆಗ್ಗಳಿಕೆಗಳೇ.


ಆದರೆ ಇವೆಲ್ಲಕ್ಕಿಂತಲೂ ಮಿಗಿಲಾದ ಅಳತೆಗೋಲೊಂದಿದೆ. ಯಾವುದದು?


ರಾಮಾಯಣ-ರಚನೆಯನ್ನು ಪೂರೈಸುತ್ತಿದ್ದಂತೆಯೇ ವಾಲ್ಮೀಕಿಗಳು ಚಿಂತಿಸಿದುದು, "ಇದನ್ನಾರು ಪ್ರಯೋಗ ಮಾಡುವವರು?" ಎಂಬುದು. ಪ್ರಯೋಗವೆಂದರೆ, ಗಾನವಾಗಿಯೋ ಅಭಿನಯವಾಗಿಯೋ ಪ್ರಜೆಗಳ ಮುಂದಿರಿಸುವುದು. ಅವರು ಹಾಗೆಂದುಕೊಳ್ಳುತ್ತಿರುವಾಗಲೇ ಅವರಲ್ಲಿಗೆ ಬಂದು ಅವರ ಪಾದಗಳನ್ನು ಹಿಡಿದವರು, ಪುಟ್ಟವರಾದ ಲವ-ಕುಶರು. ರಾಮಾಯಣದ ಮೊಟ್ಟಮೊದಲ ಅನುಗ್ರಹವಾದದ್ದು ಅವರಿಗೇ!


ಪೂರ್ಣ-ಕೃತಿಯನ್ನು ವಾಚೋವಿಧೇಯವಾಗಿಸಿಕೊಂಡು ಅವರಿಬ್ಬರೂ ಹಾಡಿದರು. ಎಲ್ಲಿ? ಋಷಿಗಳು, ವಿಪ್ರರು, ಸಾಧುಗಳು ಸೇರುವೆಡೆಯಲ್ಲಿ. ಅವರೆಲ್ಲರೇನೆಂದರು? ಎನ್ನುವುದೇನು, ಅವರು ಮೆಚ್ಚಿ ಹರಿಸಿದ ಕಣ್ಣೀರಿಗಿಂತಲೂ ಪ್ರಶಂಸೆಯೇ? ಆದರೂ ಸಾಧು ಸಾಧು ಎಂದರು! ಅಹೋ ಎಂದರು! ಅವರ ಮೆಚ್ಚುಗೆ, ಈ ಜೋಡಿಗಾಗಿ: ಧರ್ಮ-ತತ್ತ್ವಕ್ಕೆ ಕನ್ನಡಿ ಹಿಡಿದ ಮಧುರ-ಮೂಲಕೃತಿಗಾಗಿ; ಅದಕ್ಕೆ ಮೆರುಗು ತರುವಂತೆ ಗಾನಮಾಡಿದ ಲವ-ಕುಶರ ಬಂಧುರ-ನಿರೂಪಣೆಗಾಗಿ.


ಹಾಗೆ ತಲೆದೂಗಿದವರು, ತಮ್ಮ ತಪಸ್ಸಿನಿಂದಾಗಿ ಪ್ರಶಂಸನೀಯರೆನಿಸಿದ್ದ ಮಹರ್ಷಿಗಳು! (ತಪಃಶ್ಲಾಘ್ಯೈಃ ಮಹರ್ಷಿಭಿಃ). ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ, "ಪ್ರಶಂಸೆಯು ದೊರೆತುದು ಋಷಿಗಳ ಸದಸ್ಸಿನಲ್ಲಿ, ಅತೀಂದ್ರಿಯವಾದ ಬ್ರಹ್ಮಾನಂದವನ್ನು ಅನುಭವಿಸುತ್ತಿರುವ ಮುನಿಗಳ ಸದಸ್ಸಿನಲ್ಲಿ!" ಸದಸ್ಸೆಂದರೆ ಸಭೆ.


ಮಹಾತ್ಮರು ಬೆಲೆಗೊಟ್ಟರೇ ಬೆಲೆ. ಸಾವಿರಮಂದಿ ಸಾಧಾರಣರು ಇತ್ತರೆ ಅಲ್ಲ, ಅಲ್ಲವೇ?


ಸೂಚನೆ: 30/11/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Monday, November 18, 2024

ಅಷ್ಟಾಕ್ಷರೀ 70 ಏತಿ ಜೀವಂತಮಾನಂದಃ (Ashtakshari 70 Atmahatyege Svatantryavirabeke?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ನಮ್ಮ ಸಂಪ್ರದಾಯದಂತೆ, ಯಾರೇ ಹಿರಿಯರಿಗೆ ನಾವು ವಂದಿಸಿದರೂ, ಅವರು ಸಾಧಾರಣವಾಗಿ ಆಶೀರ್ವಾದ ಮಾಡುವುದು "ದೀರ್ಘಾಯುಷ್ಮಾನ್ ಭವ" ಎಂದೇ. ಹೆಣ್ಣುಮಕ್ಕಳಿಗೆ ಮಾಡುವ ಆಶೀರ್ವಚನದಲ್ಲೂ ಈ ದೀರ್ಘಾಂಶವಿರುತ್ತದೆ. ಸಾವು ಸಮೀಪಿಸಿದೆಯೆಂದು ರೋಗಿಗೆ ಹೇಳಲು ವೈದ್ಯರೂ ಜ್ಯೋತಿಷಿಗಳೂ ಇಷ್ಟಪಡರಷ್ಟೆ. ಯಾರಿಗೆ ಸಾವಿಷ್ಟ?

ಇಷ್ಟಪಡುವವರೂ ಉಂಟು! ಸಾವು ಬಂದುಬಿಡಲಿ - ಎಂದು ಬಯಸುವ ಪ್ರಸಂಗಗಳೇ ಬರಬಹುದು. ಅವರಿವರೇನು, ಸಾಕ್ಷಾದ್ ವಸಿಷ್ಠರೇ ಆತ್ಮಹತ್ಯೆಗೊಮ್ಮೆ ಯತ್ನಿಸಿದ್ದರಂತೆ! ರಾಮಾಯಣದ ಸೀತೆ ಸಹ ತನ್ನ ಜೀವಿತವನ್ನು ಕೊನೆಗೊಳಿಸಬೇಕೆಂದು ಸಂಕಲ್ಪಿಸಿದ್ದಳಂತೆ!

ದೇಹಬಲವೋ ಬುದ್ಧಿಬಲವೋ ಕಡಿಮೆಯಿರುವವರಿಗೆ ಮಾತ್ರ ಹಾಗಾಗಬಹುದೆನ್ನಬೇಡಿ. ಏಕೆ? ಬುದ್ಧಿ-ಬಲಗಳಿಗೇ, ಧೈರ್ಯ-ನಿರ್ಭಯತೆಗಳಿಗೇ ಪ್ರಸಿದ್ಧನಾದ ಹನುಮಂತನೇ ಆತ್ಮಹತ್ಯೆಯ ಚಿಂತೆಮಾಡಿದ್ದನಂತೆ!

ಎಲ್ಲಿ? ರಾಮಾಯಣದ ಸುಂದರಕಾಂಡದಲ್ಲೀ ವಿಷಯವಿದೆ. ಹನುಮಂತನು ಸೀತೆಯನ್ನು ಎಲ್ಲೆಡೆ ಹುಡುಕಿ ಬವಣೆಪಟ್ಟನೇ ವಿನಾ, ಸೀತೆಯನ್ನು ಕಾಣದಾದನು. ಪಾನ-ಶಾಲೆ, ಪುಷ್ಪ-ಗೃಹ, ಚಿತ್ರ-ಶಾಲೆ, ಕ್ರೀಡಾ-ಗೃಹ, ಉದ್ಯಾನ-ವೀಥಿ - ಮುಂತಾದ ಹತ್ತಾರೆಡೆ ಹುಡುಕಾಡಿದನು. ವಿಕಾರಗಳುಳ್ಳ ರಾಕ್ಷಸಿಯರಷ್ಟೆ  ಕಂಡದ್ದು. ವೈಫಲ್ಯದಿಂದಾಗಿ ಖೇದ-ಚಿಂತೆಗಳಿಗೊಳಗಾದನು: 

"ರಾವಣನ ಹಿಂಸೆ ತಾಳಲಾರದೆ ಸೀತೆಯು ಆತನಿಗೆ ವಶಳಾಗಿಬಿಟ್ಟಿರಬಹುದೇ? ಅಥವಾ ರಾವಣನು ಹೊತ್ತೊಯ್ಯುತ್ತಿರುವಾಗ ಜಾರಿ ಬಿದ್ದುಹೋಗಿರಬಹುದೇ? ರಾವಣನೇನಾದರೂ ಆಕೆಯನ್ನು ತಿಂದುಹಾಕಿರಬಹುದೇ? ಅಯ್ಯೋ, ಅವಳು ದೊರೆಯಲಿಲ್ಲವೆಂದು ರಾಮನಿಗೆಂತು ಹೇಳಲಿ? ಹೇಳಿದರೆ ರಾಮನಂತೂ ಪ್ರಾಣಬಿಡುವವನೇ. ಲಕ್ಷ್ಮಣನು ಅಣ್ಣನನ್ನು ಅನುಸರಿಸುವವನೇ. ಇನ್ನು ಭರತನುಳಿಯುವನೇ? ಶತ್ರುಘ್ನ-ಕೌಸಲ್ಯಾದಿಗಳೂ, ಕೊನೆಗೆ ಸುಗ್ರೀವನೂ, ಇತರ ವಾನರರೂ ಅಷ್ಟೇ. ಇವೆಲ್ಲದರ ಬದಲಾಗಿ ಇತ್ತ ನಾನೇ ಅಗ್ನಿಪ್ರವೇಶಮಾಡಿಬಿಡಲೇ? "

ಇಷ್ಟು ಯೋಚಿಸಿದ ಬಳಿಕ ಆತನ ಚಿಂತನ-ಸರಣಿ ಬದಲಾಯಿತು. ಆತ್ಮಹತ್ಯೆ ಸರಿಯಲ್ಲ. ಬದುಕಿದ್ದರೇನೇ ಒಳ್ಳೆಯದನ್ನು ಕಾಣಲಾಗುವುದು. ಸೀತೆ ದೊರೆಯದಿದ್ದರೆ ರಾವಣ-ಸಂಹಾರವನ್ನಾದರೂ ಮಾಡಿಯೇ ಹಿಂದಿರುಗುತ್ತೇನೆ - ಎಂದಂದುಕೊಳ್ಳುತ್ತಾನೆ. 

ಅಷ್ಟರಲ್ಲಿ ಅಶೋಕವನವು ಕಂಡು, ಅಲ್ಲಿ ಹುಡುಕಿಲ್ಲವೆಂಬುದು ಹೊಳೆಯಿತು. ರಾಮ-ಲಕ್ಷ್ಮಣ-ಸೀತೆಯರಿಗೂ ನಾನಾದೇವತೆಗಳಿಗೂ ವಂದಿಸಿ, ಅಲ್ಲಿಯ ಎತ್ತರದ ಶಿಂಶಪಾ-ವೃಕ್ಷವನ್ನೇರಿದನು. ಸೀತೆಯೀಗ ಕಂಡಳು.ಅಂತೂ ಪ್ರಾಣಬಿಡುವ ಸಂಕಲ್ಪವು ಹನುಮಂತನಿಗುಂಟಾಗಿತ್ತು.

ಇತ್ತ ಸೀತೆಯತ್ತ ಬಂದ ರಾವಣನು ನಾನಾ-ಪ್ರಲೋಭನೆಗಳನ್ನೊಡ್ಡಿದನು. ಸೀತೆಯೂ ಕಟುವಾಕ್ಯಗಳನ್ನಾಡಿದಳು. ಅವಳಿಗೆ ಕಡುಭಯವೊಡ್ಡಿ ಹಿಂದಿರುಗಿದನು, ರಾವಣ. ಸುತ್ತಲಿನ ರಾಕ್ಷಸಿಯರು ಸೀತೆಗುಪದೇಶ ಮಾಡಲೆಳಸಿ, ವಿಫಲರಾಗಿ,  ಮತ್ತಷ್ಟು ಹೆದರಿಸಿದರು.

ಇವೆಲ್ಲದರಿಂದ ಖಿನ್ನಳಾದ ಸೀತೆಯು ಕಣ್ಣೀರು ಹರಿಸುತ್ತಾ, ರಾಮಲಕ್ಷ್ಮಣಾದಿಗಳನ್ನು ಸ್ಮರಿಸುತ್ತಾ, ತಾನಿನ್ನು ಬದುಕಿರಬಾರದೆಂದುಕೊಂಡಳು. ನೆಲದ ಮೇಲೆ ಹೊರಳಾಡುತ್ತಾ ಗೋಳಿಟ್ಟಳು. "ಅಯ್ಯೋ ಇಲ್ಲಿ ವಿಷವಾಗಲೀ, ಚೂಪಾದ ಶಸ್ತ್ರವಾಗಲೀ ದೊರೆಯುತ್ತಿಲ್ಲವಲ್ಲಾ, ಆತ್ಮಹತ್ಯೆ ಮಾಡಿಕೊಳ್ಳಲು!" - ಎಂದುಕೊಂಡಳು. ಅಷ್ಟರಲ್ಲಿ ತನಗೆ ಉದ್ದವಾದ ವೇಣಿ(ಜಡೆ)ಯಿರುವುದು ಹೊಳೆಯಿತು. ಶಿಂಶಪಾ-ವೃಕ್ಷಕ್ಕೆ ಇದನ್ನು ಕಟ್ಟಿಕೊಂಡು ನೇಣುಹಾಕಿಕೊಳ್ಳಬೇಕೆಂದುಕೊಂಡಳು.

ಅಷ್ಟರಲ್ಲಿ ಕೆಲವು ಶುಭ-ಶಕುನಗಳಾಗಿ, ಖೇದವು ಕಡಿಮೆಯಾಯಿತು. ಇದೇ ಸರಿಯಾದ ಸಮಯವೆಂದು ಚಿಂತಿಸಿ ಹನುಮಂತನು ಅವಳಿಗೆ ಕೇಳಿಸುವಂತೆ ರಾಮ-ಗುಣ-ಗಾನವನ್ನು ಮಾಡಿದನು. ಮೊದಲೇ ಭಯವಾವರಿಸಿದ್ದ ಸೀತೆಗೆ, ಇದೆಲ್ಲವನ್ನೂ ಕನಸಿನಲ್ಲಿ ಕಾಣುತ್ತಿದ್ದೇನೆಂಬ ಭ್ರಾಂತಿಯಾಯಿತು. ತನ್ನ ಒಳ ಆಸೆಗಳೇ ಹೀಗೆ ತೋರಿಕೊಳ್ಳುತ್ತಿವೆ - ಎಂದುಕೊಂಡಳು! ಅಷ್ಟರಲ್ಲಿ ಹನುಮಂತನು ಅವಳಿಗೆ ನಂಬುಗೆ ಬರಿಸುವ ಮಾತುಗಳನ್ನಾಡಿದನು. ಆಗಂದುಕೊಳ್ಳುತ್ತಾಳೆ ಸೀತೆ: ಬದುಕಿದ್ದರಲ್ಲವೇ ಆನಂದವು ಸಾಧ್ಯ? (ಏತಿ ಜೀವಂತಮಾನಂದಃ) 

ರಾವಣನೇ ವೇಷಾಂತರದಲ್ಲಿ ಬಂದಿರಬಹುದೆಂದು ಸೀತೆಗೀಗಲೂ ಭಯವಾಯಿತಾದರೂ, ಹನುಮಂತನು ರಾಮ-ವೃತ್ತಾಂತವನ್ನು ಯಥಾವತ್ತಾಗಿ ಚಿತ್ರಿಸಿ ಅವಳಿಗೆ ಮತ್ತೂ ವಿಶ್ವಾಸವನ್ನುಂಟುಮಾಡಿದನು. ಮುಂದಿನದ್ದೆಲ್ಲಾ ಪ್ರಸಿದ್ಧವಾದ ಕಥೆಯೇ.

ಹೀಗೆ ಇವರಿಬ್ಬರಿಗೂ ಪ್ರಾಣತ್ಯಾಗಮಾಡಬೇಕೆನಿಸಿದುದುಂಟು. ದುಃಖಾತಿರೇಕವೂ, ದುಃಖಕ್ಕೆ ಕೊನೆಯೆಂಬುದೇ ಕಾಣದುದೂ ಉಂಟಾದಾಗ, ಆತ್ಮಹತ್ಯೆಯತ್ತ ಮನಸ್ಸು ಒಮ್ಮೊಮ್ಮೆ ಹರಿದುಬಿಡುವುದುಂಟು. ಕೆಲಕಾಲ ಹಾಗೆನ್ನಿಸಿದರೂ, ಬೇಗನೆ ಸಮಾಧಾನವನ್ನು ತಂದುಕೊಂಡು ಸರಿಯಾದ ಹಾದಿಯಲ್ಲಿ ಹೆಜ್ಜೆಯಿಡಬೇಕು. ಆತ್ಮಹತ್ಯೆಯು ತಪ್ಪೇಕೆಂದು ಶ್ರೀರಂಗಮಹಾಗುರುಗಳನ್ನೊಮ್ಮೆ ಪ್ರಶ್ನಿಸಿದಾಗ ಅವರಿತ್ತ ಉತ್ತರವು ಕಣ್ತೆರೆಸುವಂತಹುದು:

"ತಪ್ಪು ಮಾಡಿದವರನ್ನು ಜೈಲಿಗೆ ಹಾಕುತ್ತಾರಲ್ಲವೆ? ಆದರೆ ಅಲ್ಲಿಯ ಕಷ್ಟವನ್ನು ತಾಳಲಾರೆನೆಂದು ಜೈಲಿನಿಂದಲೇ ತಪ್ಪಿಸಿಕೊಂಡು ಓಡಿಹೋಗುವವನನ್ನು ಹಿಡಿದು ಹಾಕಿ, ಮೊದಲಿಗಿಂತಲೂ ಉಗ್ರವಾದ ಶಿಕ್ಷೆಯನ್ನು ಕೊಡುವರಲ್ಲವೇ?

ಆತ್ಮಹತ್ಯೆಗೂ ಇದನ್ವಯಿಸುತ್ತದೆ. ನಮ್ಮ ಕರ್ಮಗಳಿಂದಾಗಿಯೇ ಈ ಶರೀರದಲ್ಲಿ ನಮಗೆ ಬಂಧವುಂಟಾಗಿರುವುದು. ಹೇಗೆ ಜೈಲುಪಾಲಾದವನು ಸದ್ವೃತ್ತದಿಂದಾಗಿ, ಎಂದರೆ ತನ್ನ ಒಳ್ಳೆಯ ನಡತೆಯಿಂದಾಗಿ, ಬೇಗನೆ ಬಿಡುಗಡೆಪಡೆಯಲು ಆಸ್ಪದವುಂಟೋ, ಇಲ್ಲೂ ಹಾಗೆಯೇ.

ಆತ್ಮಹತ್ಯೆಯನ್ನು ಮಾಡಿಕೊಂಡವನು ದುಃಖದಿಂದ ಪಾರಾಗುವುದಿಲ್ಲ, ಮತ್ತೂ ಹೆಚ್ಚಿನ ಕ್ಲೇಶಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಾನೆ. ಎಂದೇ ಅದು ಮಹಾಪಾಪ. ಮನುಷ್ಯ-ಜನ್ಮವು ದೊರಕಿರುವುದನ್ನು ಭಾಗ್ಯವೆಂದೆಣಿಸಿ, ಧರ್ಮ-ಮಾರ್ಗದಲ್ಲಿ ಸಾಗಿ, ಭಗವಂತನನ್ನು ಪಡೆಯುವತ್ತ ಸತತ-ಪ್ರಯತ್ನವಿರಬೇಕು. ಅದುವೇ ಜನ್ಮ-ಸಾರ್ಥಕ್ಯ!"

ಸೂಚನೆ: 14/11/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Saturday, November 2, 2024

ಅಷ್ಟಾಕ್ಷರೀ 69 ಮಾ ನಿಷಾದ ಪ್ರತಿಷ್ಠಾಂ ತ್ವಂ (Astaksari 69 Ma Nishada Pratishtham Tvam)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಚಿಕ್ಕವಯಸ್ಸಿನಲ್ಲೇ ರಾಮಾಯಣದ ಕಥೆಯ ಬಗ್ಗೆ ಒಂದು ಸಣ್ಣ ಬೇಜಾರಿತ್ತು, ನನಗೆ. ದುಃಖದಿಂದ ಶುರುವಾಗಿ ದುಃಖದಿಂದಲೇ ಮುಗಿಯಿತಲ್ಲಾ, ಈ ಕಾವ್ಯ? - ಎಂದು. ಶೋಕ-ಕ್ರೋಧಗಳಿಂದಲಲ್ಲವೇ ವಾಲ್ಮೀಕಿಗಳು ಬೇಡನಿಗೆ ಶಾಪವಿತ್ತದ್ದು? ಕೊನೆಗೆ ಸೀತೆಯು ಭೂಮಿಯೊಳಗೊಂದಾದಾಗ  ರಾಮನಿಗೂ ಶೋಕ-ಕ್ರೋಧಗಳೇ ಉಂಟಾದುವಲ್ಲವೇ?

ಮಧ್ಯದಲ್ಲಿ ಮನನೊಂದರೂ, ಮೊದಲಿನಲ್ಲೂ ಮುಗಿತದಲ್ಲೂ ಮೋದವಿರಬೇಡವೇ ಮಹಿಮೆಯುಳ್ಳವರ ಮಹಾಜೀವನದಲ್ಲಿ?

ಕಥೆಯ ರೂಪರೇಖೆಯನ್ನಷ್ಟೇ ಅರಿಯುವ ಬದಲು ಮೂಲವನ್ನೇ ಹಿಡಿದೋದುವವರಿಗೆ ಸಮಸ್ಯೆಗಳು ಕಡಿಮೆ.

ರಾಮಾಯಣಾರಂಭವಿಂತು: ಸದ್ಗುಣ-ಭರಿತ, ವೀರ್ಯ-ಸಂಪನ್ನ, ಧರ್ಮಜ್ಞ – ಎಂದುಮುಂತಾಗೆನ್ನಿಸಿಕೊಳ್ಳುವ ನರನೊಬ್ಬನು ಈ ಲೋಕದಲ್ಲೀಗ ಉಂಟೇ? - ಎಂದು ತಪಸ್ವಿಗಳಾದ ವಾಲ್ಮೀಕಿಗಳು ನಾರದರನ್ನು ಕೇಳಿದರು. ಅಂತಹ ಬಹುಗುಣ-ಸಂಪನ್ನನೆಂದರೆ ಶ್ರೀರಾಮನೆಂದು ತಿಳಿಸಿ, ಆತನ ಜೀವನದ ಒಟ್ಟಾರೆ ಚಿತ್ರಣವೊಂದನ್ನಿತ್ತು ಹೊರಟುಬಂದರು, ನಾರದರು.

ಇತ್ತ ವಾಲ್ಮೀಕಿಗಳೂ ತಮಸಾ-ನದಿಯತ್ತ ಸ್ನಾನಾರ್ಥವಾಗಿ ಬರಲು, ತಮಸಾ-ತೀರ್ಥದ ಪ್ರಸನ್ನತೆ-ರಮಣೀಯತೆಗಳು ಅವರಿಗೆ ಮೆಚ್ಚುಗೆಯಾಗುತ್ತವೆ.

ಆ ವನದ ಸೌಂದರ್ಯ, ಕ್ರೌಂಚ-ಪಕ್ಷಿಗಳ ಒಂದು ಜೋಡಿಯ ಇಂಪಾದ ಧ್ವನಿ – ಇವನ್ನು ಅವರು ಆಸ್ವಾದಿಸುತ್ತಿರುವಾಗಲೇ ಬೇಡನೊಬ್ಬ ಬಾಣಬಿಟ್ಟ, ಗಂಡು-ಕ್ರೌಂಚಕ್ಕೆ. ರಕ್ತ-ಸಿಕ್ತವಾಗಿ ನೆಲದ ಮೇಲೆ ಬಿದ್ದು ಅದು ಸತ್ತಿತು. ಸಹಚರನ ಸಾವಿಗೆ ಗೋಳಿಟ್ಟ ಕ್ರೌಂಚಿಯ ಸ್ಥಿತಿ ಹೃದಯ-ವಿದ್ರಾವಕವಾಗಿತ್ತು.

"ಆಹಾ! ಎಂತಹ ಅಧರ್ಮವಿದು!"  ಎಂದೆನಿಸಿತು ಧರ್ಮಾತ್ಮರಾದ ಋಷಿಗೆ. ಎಂದೇ ಶಾಪವುಕ್ಕಿತು: "ಏ ಬೇಡ! ಚಿರಕಾಲ ನಿನಗೆ ನೆಲೆ ದೊರೆಯದಿರಲಿ! ಕ್ರೌಂಚ-ಮಿಥುನದಲ್ಲಿ ಕಾಮ-ಮೋಹಿತವಾದದ್ದನ್ನು ನೀನು ಹೊಡೆದು ಸಾಯಿಸಿಬಿಟ್ಟೆಯೆಲ್ಲಾ!"

ಆ ಬಳಿಕ, "ಇದೇನು ನನ್ನ ಬಾಯಿಂದ ಇಂತಹ ಮಾತುಕ್ಕಿತು!" - ಎಂದು ಅವರೇ ಆಶ್ಚರ್ಯಪಡುವಂತಾಯಿತು. ಅದೇ ಗುಂಗಿನಲ್ಲಿರುವಲ್ಲೇ ಬ್ರಹ್ಮಾಗಮನವಾಯಿತು. ಬ್ರಹ್ಮನಿಗೆ ಸ್ವಾಗತ-ಸತ್ಕಾರಗಳನ್ನು ಮಾಡಿದ ಮೇಲೂ, ಆ ಕ್ರೌಂಚದ ಇಂಚರ, ನಿಷ್ಕರುಣನಿಂದ ಅದರ ನಿಷ್ಕಾರಣವಾದ ಹನನ, ಆಗ ಹೊಮ್ಮಿದ ತಮ್ಮ ಛಂದೋಬದ್ಧ-ವಾಣಿ – ಇವು ಅವರ ಚಿತ್ತವನ್ನಾವರಿಸಿದ್ದವು. ಅವನ್ನು ಗಮನಿಸಿದ ಬ್ರಹ್ಮನು, "ನನ್ನ ಸಂಕಲ್ಪದಿಂದಲೇ ನಿನ್ನ ವಾಕ್ಕು ಹೊಮ್ಮಿರುವುದು. ರಾಮ-ಚರಿತವನ್ನು ನೀನು ರಚಿಸು. ಅದು ಚಿರ-ಸ್ಥಾಯಿಯಾಗುವುದು" ಎಂದುಸುರಿ ಹೊರಟನು.

ಇಲ್ಲಿ ಕೆಲವು ಪ್ರಶ್ನೆಗಳಿವೆ. ಬೇಡರ ಕಸುಬೇ ಬೇಟೆ. ಪಶು-ಪ್ರಾಣಿಗಳನ್ನು ಕೊಂದೇ ಅವರ ಜೀವನ. ಎಲ್ಲರಿಗೂ ಬೇಕಾದುದು ಒಂದು ನೆಮ್ಮದಿಯ ಎಡೆ. ನಿನಗದು ದೊರೆಯದಿರಲಿ – ಎಂದು ಬೇಡನಿಗೆ ವಾಲ್ಮೀಕಿಗಳೆಂದುದು ಉಗ್ರ-ಶಾಪವಾಗಲಿಲ್ಲವೇ? ಪಕ್ಷಿಯೊಂದಕ್ಕೆ ಬಾಣ-ಪ್ರಯೋಗ ಮಾಡಿದವನ ಮೇಲೆ ಋಷಿಯೊಬ್ಬನ ಶಾಪ-ಪ್ರಯೋಗವಾದರೂ ಇಷ್ಟು ತೀಕ್ಷ್ಣವಾಗಬೇಕೇ?

ಈ ಪ್ರಶ್ನೆಗಳಿಗೆ ಶ್ರೀರಂಗಮಹಾಗುರುಗಳಿತ್ತ ಉತ್ತರ ದಿಕ್ಸೂಚಿಯಾಗಿದೆ. ಬೇಟೆಯೇ ತಪ್ಪೆಂದಲ್ಲ; ಅಧರ್ಮಮಯವಾದ ಬೇಟೆ ದಂಡನಾರ್ಹ. ಆ ಬೇಡನು ಮತ್ತಾವುದೇ ಪ್ರಾಣಿಯನ್ನೋ ಪಕ್ಷಿಯನ್ನೋ ಕೊಂದಿದ್ದರೆ ತಪ್ಪಿರುತ್ತಿರಲಿಲ್ಲ. ಆದರೆ ಕಾಮ-ಕೇಳಿಯಲ್ಲಿ ತೊಡಗಿರುವ ಹಕ್ಕಿಯನ್ನೇ ಹೊಡೆಯಬೇಕಿತ್ತೆ, ಆತ? ಪ್ರಾಣಿಗಳಿಗೆ ರತಿ-ಕ್ರೀಡೆಗಿಂತಲೂ ಹಿರಿದಾದ ಸುಖವುಂಟೇ? ಆ ನಲಿದಾಟಕ್ಕೆ ಭಂಗ ತಂದ ಬೇಡನಿಗೆ ನೆಲೆದಾಣವೂ ಬೇಡ! ಪರಸುಖ-ದ್ವೇಷಿಯಾಗಿ ಪಾಪಮಯನಾದವನು ಅಕಾರಣ-ವೈರಕ್ಕೆ ಎಡೆ. ಇಂತಹವನಿಗೀ ಶಾಪ ತಕ್ಕುದೇ ಸರಿ.

ಒಂದರ್ಥದಲ್ಲಿ ರಾಜ-ಕರ್ತವ್ಯವೂ ಋಷಿ-ಕರ್ತವ್ಯವೂ ಒಂದೇ. ಅಧರ್ಮವು ಆಳವಾಗಿ ಬೇರೂರಿದ್ದಲ್ಲಿ ತೀಕ್ಷ್ಣವಾದ ದಂಡನೆಯೇ: ರಾಜನಾದರೆ ಶರ-ಪ್ರಯೋಗ;  ಋಷಿಯಾದರೆ ಶಾಪ-ಪ್ರಯೋಗ. ರಾಜನಿಂದಲೇ ಆಗುವುದಿದ್ದಲ್ಲಿ ಆತನಿಂದಲೇ ಅದಾಗಬೇಕು. ಶಾಪ-ಸಾಮರ್ಥ್ಯವಿದ್ದರೂ ರಾಮನ ಮೂಲಕವೇ ರಾಕ್ಷಸ-ಸಂಹಾರವನ್ನು ವಿಶ್ವಾಮಿತ್ರರು ಮಾಡಿಸಿದರಷ್ಟೆ?

ಅತ್ಯಧರ್ಮಕಾರ್ಯವು ಜರುಗಿದಾಗ, ಅದಕ್ಕೆ ಕಾರಣನಾದವನಿಗೆ ತಕ್ಕ ಶಾಸ್ತಿಯಾಗಲೇಬೇಕೆಂಬ ಪಾಠದೊಂದಿಗಾರಂಭವಾಗಿದೆ, ರಾಮಾಯಣ.  ಕೊನೆಗೂ ರಾವಣನಲ್ಲೂ ಅಧರ್ಮವೇ ಬಲಿಷ್ಠವಾಗಿತ್ತೆಂದೇ ಸಾವು ಸಲ್ಲಬೇಕಾಯಿತಲ್ಲವೇ?

ಮೈಥುನದಲ್ಲಿದ್ದ ಜಿಂಕೆಯ ಮರಣಕ್ಕೆ ಕಾರಣನಾದ ಪಾಂಡುವಿಗೆ ಮೈಥುನದಿಂದಲೇ ಸಾವೆಂಬ ಶಾಪವು ತಟ್ಟಲಿಲ್ಲವೇ?

ಇನ್ನು ರಾಮಾಯಣದ ಅಂತ. ಅದು ಪಾತ್ರಧಾರಿಗಳೆಲ್ಲರೂ ಸ್ವ-ಸ್ವ-ಸ್ಥಾನಗಳನ್ನು ಸೇರಿಕೊಳ್ಳುವ ಸಮಯ. ಭೂಮಿ-ಜಾತೆಯಾಗಿ ಬಂದ ಸೀತೆಯು ಭೂಮಿಯಲ್ಲೇ ಸೇರಿಕೊಂಡಳು. ದೇವ-ಲೋಕದಿಂದ ಇಳಿದು ಬಂದ ರಾಮನೂ ತನ್ನ ಉಳಿದ ಪರಿವಾರದೊಂದಿಗೆ ತನ್ನ ಮೂಲ-ಸ್ಥಾನವನ್ನೇ ಸೇರಿಕೊಂಡ.

ಅದಕ್ಕೆ ಕೊಂಚ ಮುಂಚಿನ ರಾಮನ ಶೋಕ-ಕ್ರೋಧಗಳೂ ಸಹಜವೇ. ಬ್ರಹ್ಮನು ರಾಮನ ಪೂರ್ವ-ರೂಪದ ತಿಳಿವಳಿಕೆಯಿತ್ತಮೇಲೆ ರಾಮನ ಮನಸ್ಸೂ ಎಷ್ಟೋ ಪರಿವರ್ತಿತವಾಯಿತು; ಮತ್ತೊಬ್ಬಳನ್ನು ವರಿಸದೆ, ಕಾಂಚನ-ಜಾನಕಿಯೊಂದಿಗೇ ಯಜ್ಞಗಳನ್ನಾತ ನಡೆಸಿದನು; ಕಾಲಪುರುಷನ ಆಗಮನವಾಗಲು, ಕಾಲಾತೀತವಾದ ತನ್ನ ಮೂಲಸ್ಥಾನವನ್ನು ರಾಮನು ಸೇರಿದನು.

ಹೀಗೆ ವಾಲ್ಮೀಕಿಯೇ ಆಗಲಿ, ರಾಮನೇ ಆಗಲಿ, "ಹೆಪ್ಪುಗಟ್ಟಿದ ಅಧರ್ಮದಿಂದ ತಪ್ಪು ಹೆಜ್ಜೆಯನ್ನಿಡುವವರಿಗೆ, ಒಪ್ಪುವ ದಂಡನೆಯನ್ನಿತ್ತಲ್ಲಿಯೇ ಧರ್ಮಸ್ಥಾಪನೆಯು ಸಾಧಿತವಾಗುವುದು" - ಎಂಬ ಮುಖ್ಯ-ಬೋಧವನ್ನುಂಟುಮಾಡಿರುವರು. 

ಇದನ್ನಿಂದು ಮರೆತಿದ್ದೇವಲ್ಲವೇ?

ಸೂಚನೆ: 2/11/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Sunday, October 20, 2024

ಅಷ್ಟಾಕ್ಷರೀ 68 ಅಹಂ ವೇದ್ಮಿ ಮಹಾತ್ಮಾನಂ (Astaksari 68 Aham Vedmi Mahatmanam)

aಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಜೀವನವು ಯಾವಾಗ ಯಾವ ತೆರನ ತಿರುವನ್ನು ಪಡೆಯುವುದೋ ಹೇಳಲಾರೆವು. ಆಡಿದ ಮಾತನ್ನು ಬದಲಿಸಿಕೊಳ್ಳಬೇಕಾಗುವ ಸಂನಿವೇಶವು ಸಜ್ಜನರಿಗೂ ಬಂದುಬಿಡಬಹುದೆಂದು ನಿರೀಕ್ಷಿಸಲಾರೆವು. ಕ್ಲಿಷ್ಟ-ಪದಗಳ ಪ್ರಯೋಗವಿಲ್ಲದ ಮಾತಾದರೂ ಅದರ ಸಾರವನ್ನು ಎಷ್ಟೋ ವೇಳೆ ಗ್ರಹಿಸಲಾರೆವು.

ಇವೆಲ್ಲಕ್ಕೂ ನಿದರ್ಶನವು ರಾಮಾಯಣದ ಬಾಲಕಾಂಡದಲ್ಲಿಯೇ ದೊರೆಯುವುದು.

ತನ್ನ ಉಪಾಧ್ಯಾಯರು, ಬಾಂಧವರು, ಇವರುಗಳೊಂದಿಗೆ ದಶರಥನು ರಾಮಾದಿಗಳ ವಿವಾಹದ ಬಗ್ಗೆ ವಾರ್ತಾಲಾಪ ಮಾಡುತ್ತಿರುವ ಹೊತ್ತಿಗೇ ಅಲ್ಲಿಗೆ ಬಂದರು ವಿಶ್ವಾಮಿತ್ರ-ಮಹರ್ಷಿಗಳು! ತನ್ನ ಯಜ್ಞದ ರಕ್ಷಣೆಗೆ ರಾಮನನ್ನು ಕಳುಹಿಸಿಕೊಡೆಂದು ಅವರು ಕೇಳಿದುದಂತೂ ದಶರಥನಿಗೆ ಅತ್ಯನಿರೀಕ್ಷಿತವೇ ಆಯಿತು: ತಾನೊಂದು ದಿಕ್ಕಿನಲ್ಲಿ ಯೋಚಿಸುತ್ತಿದ್ದರೆ, ವಿಶ್ವಾಮಿತ್ರರ ಕೋರಿಕೆಯ ದಿಕ್ಕೇ ಮತ್ತಾವುದೋ ಆಯಿತು! ಅಂತೂ ಕರೆದುಕೊಂಡೇ ಹೋಗಿಬಿಟ್ಟರಲ್ಲಾ, ವಿಶ್ವಾಮಿತ್ರರು – ಎಂದುಕೊಂಡರೆ, ಆದರಿದೋ, ಕೆಲಕಾಲದಲ್ಲೇ ಧನುರ್ಭಂಗವಾಗಿ, ಸೀತೆಯೊಡನೆ ವಿವಾಹವೇರ್ಪಡುವ ಸುದ್ದಿಯೇ ಮುಟ್ಟಿತು, ದಶರಥನಿಗೆ! ಏನೇನು ತಿರುವುಗಳು!

ಇದಕ್ಕಿಂತಲೂ ಆಶ್ಚರ್ಯವೆಂದರೆ ದಶರಥನೇ ವಿಶ್ವಾಮಿತ್ರರನ್ನಾದರಿಸಿದ ವೈಖರಿ: "ತಾವು ಬಂದುದು ಬರಗಾಲದಲ್ಲಿ ಮಳೆ ಸುರಿದಂತೆ! ಮಕ್ಕಳಿಲ್ಲದವನಿಗೆ ಪುತ್ರೋತ್ಸವವು ಘಟಿಸಿದಂತೆ! ಇಂದಿಗೆ ನನ್ನ ಜನ್ಮ ಸಫಲವಾಯಿತು. ಮೊದಲು ರಾಜರ್ಷಿಯಾಗಿದ್ದ ತಾವು ಈಗಂತೂ ಬ್ರಹ್ಮರ್ಷಿಯಾಗಿದ್ದೀರಿ! ತಮ್ಮನ್ನದೆಂತು ಆದರಿಸಲಿ! ತಮ್ಮ ಮಾತೆನಗೆ ಅಪ್ಪಣೆಯಂತೆ."

ಯಜ್ಞಾರ್ಥಕ್ಕಾಗಿ ಹತ್ತುದಿನದ ಮಟ್ಟಿಗೆ ರಾಮನನ್ನು ಕಳುಹಿಸಿಕೊಡೆಂದು ವಿಶ್ವಾಮಿತ್ರರು ಕೇಳುತ್ತಿದ್ದಂತೆಯೇ ಬೆಚ್ಚಿದ, ದಶರಥ: "ರಾಮನಿನ್ನೂ ಹದಿನಾರೂ ತುಂಬಿಲ್ಲದ ಎಳೆಯ! ವಿದ್ಯೆಯಿಲ್ಲ, ಅಸ್ತ್ರಬಲವಿಲ್ಲ, ಯುದ್ಧ-ಪರಿಚಯವಿಲ್ಲ. ಆತನೆಂತು ಹೋರುವ? ಆತನನ್ನು ಬಿಟ್ಟು ಕ್ಷಣವೂ ನಾನಿರಲಾರೆ."

ದಶರಥನೇನು ದುರ್ಜನನೇ? ಆದರೂ ಮೊದಲಿತ್ತ ಮಾತೇನು? ಈಗಿತ್ತ ಉತ್ತರವೇನು? ವ್ಯಾಮೋಹವೆಂಬುದೆಂತು ಪ್ರಬಲ!

ವಿಶ್ವಾಮಿತ್ರರು ಹೇಳಿದ್ದೇನು? ಮಾರೀಚ-ಸುಬಾಹುಗಳೆಂಬ ರಾಕ್ಷಸರಿಬ್ಬರು ಯಜ್ಞವೇದಿಕೆಯ ಮೇಲೆ ರಕ್ತ-ಮಾಂಸಗಳನ್ನು ಸುರಿದು ನನ್ನ ಯಜ್ಞಕ್ಕೆ ವಿಘ್ನವೊಡ್ಡುತ್ತಿದ್ದಾರೆ. ವ್ರತಸ್ಥನಾಗಿರುವ ಕಾರಣ ನಾನು ಕ್ರೋಧಗೊಳ್ಳಲಾರೆ, ಶಾಪವೀಯಲಾರೆ. ರಾಮನು ದಿವ್ಯ-ತೇಜಸ್ಸಂಪನ್ನ; ಜೊತೆಗೆ ನನ್ನ ರಕ್ಷಣೆಯಿದ್ದೇ ಇದೆ. ಅವರನ್ನವನು ಕೊಲ್ಲುವವನೇ ಸರಿ. ರಾಮನಲ್ಲದೆ ಮತ್ತಾರೂ ಅವರಿಬ್ಬರನ್ನು ಕೊಲ್ಲಲಾರರು."

ಹೀಗೆ ಹೇಳುತ್ತಿದ್ದ ವಿಶ್ವಾಮಿತ್ರರಿಗೆ ದಶರಥನ ಚಹರೆಯಲ್ಲಿ ಬದಲಾವಣೆಗಳು ಕಂಡುಬಂದಿರಬೇಕು! "ರಾಜನೇ, ಪುತ್ರ-ಸ್ನೇಹವಿಲ್ಲಿ ಬೇಡ. ಆ ರಾಕ್ಷಸರಿಬ್ಬರೂ ಹತರಾದರೆಂದು ತಿಳಿ (ಎಂದರೆ ಅವರ ಸಾವು ನಿಶ್ಚಿತವಾದದ್ದು). ಸತ್ಯ-ಪರಾಕ್ರಮನಾದ ರಾಮನು ಮಹಾತ್ಮನೆಂಬುದನ್ನು ಬಲ್ಲೆ (ಅಹಂ ವೇದ್ಮಿ ಮಹಾತ್ಮಾನಂ). ಮಹಾತೇಜಶ್ಶಾಲಿಗಳಾದ ವಸಿಷ್ಠರೂ ಬಲ್ಲರು. ತಪಸ್ಸಿನಲ್ಲಿ ನೆಲೆಗೊಂಡ ಈ ಇತರರೂ ಬಲ್ಲರು" - ಎಂದರು.

ಕೊನೆಗೆ, "ನಿನ್ನ ಮಂತ್ರಿಗಳು - ವಸಿಷ್ಠಾದಿಗಳು - ಅನುಮತಿಯಿತ್ತಲ್ಲಿ ಕಳುಹಿಸಿಕೊಡು - ಎಂದರು.

ರಾಮನು ಮಹಾತ್ಮನೆಂಬುದನ್ನು ನಾ ಬಲ್ಲೆ, ಮಹಾತೇಜಸ್ವಿಗಳಾದ ವಸಿಷ್ಠರೂ, ಇತರ ತಪೋನಿಷ್ಠರೂ ಅರಿತಿದ್ದಾರೆ - ಎಂಬ ಅವರ ಮಾತಿನಲ್ಲಿ ಏನೂ ಕ್ಲಿಷ್ಟ-ಪದವೇ ಇಲ್ಲ. ಆದರೆ ದಶರಥನಿಗೆ ವಿಶ್ವಾಮಿತ್ರರ ಇಂಗಿತವು ಅರ್ಥವಾಗಲೇ ಇಲ್ಲ! ಶಬ್ದ-ಶಬ್ದಾರ್ಥಗಳು ಗೊತ್ತಾದ ಮಾತ್ರಕ್ಕೆ, ಆಶಯ-ತಾತ್ಪರ್ಯಗಳು ಗೊತ್ತಾಗಿಬಿಡತಕ್ಕವೇ?

ಈ ಮಾತುಗಳನ್ನು ವಿವರಿಸುತ್ತಾ, ವಿಶ್ವಾಮಿತ್ರರು ದಶರಥನಿಗೆ ಇದನ್ನು ಗುಟ್ಟಾಗಿ ಹೇಳಿರುವರೆನ್ನುತ್ತಾ, ಶ್ರೀರಂಗಮಹಾಗುರುಗಳು ಹೀಗೆ ಸೂಚಿಸಿದ್ದಾರೆ: "ರಾಮನು ವಿಷ್ಣುವಿನ ಅವತಾರವೆಂಬುದು ಮರೆಯಲ್ಲಿ ಬೆಳಗುವ ಸತ್ಯ. ಅದನ್ನು ನೇರವಾಗಿ ಹೊರಬಿಡುವುದರಲ್ಲಿ ಲೌಕಿಕವಾದ ತೊಡಕಿದೆ: ಬ್ರಹ್ಮವರಾನುಸಾರ ಮಾನುಷ-ಭಾವಕ್ಕೆ ಅನುಗುಣವಾದ ವ್ಯವಹಾರ ನಡೆಯಬೇಕು. ಕಾರ್ಯವಾಗುವವರೆಗೂ ಗುಟ್ಟೊಡೆಯಬಾರದು" - ಎಂಬ ಅವರೀ ಮಾತುಗಳು ಮಾರ್ಮಿಕವಾದಂತಹವು.

ವಸಿಷ್ಠರೂ ತಿಳಿಹೇಳಿದ ಮೇಲೇ, ತನ್ನ ಮನಸ್ಸನ್ನು ಬದಲಾಯಿಸಿ ರಾಮ-ಲಕ್ಷ್ಮಣರನ್ನು ದಶರಥನು ಕಳುಹಿಸಿಕೊಟ್ಟದ್ದು.

ವಸಿಷ್ಠರು ಹೇಳಿದ್ದೇನು? " ಮೊದಲು ಮಾತನ್ನಿತ್ತು ಈಗಿಲ್ಲವೆನ್ನುವೆಯಾ? ರಘು-ಕುಲಕ್ಕಿದು ಸಲ್ಲದು. ರಾಮನನ್ನೇನೆಂದುಕೊಂಡೆ? ಈತ ಧರ್ಮವೇ ಮೈದಾಳಿದವ. ವೀರ್ಯವಂತರಲ್ಲಿ ಶ್ರೇಷ್ಠ. ಬುದ್ಧಿ-ತಪಸ್ಸುಗಳಲ್ಲಿ ಸಾಟಿಯಿಲ್ಲದವ. ರಾಮನಿಗೆ ತಿಳಿದಿರುವ ಅಸ್ತ್ರಗಳನ್ನು ಇತರರರಿಯರು. ವಿಶ್ವಾಮಿತ್ರನು ನಿನ್ನ ಮಕ್ಕಳ ಹಿತಕ್ಕಾಗಿಯೇ ಬಂದಿರುವನು." ಹೀಗೆಲ್ಲಾ ಅವರು ಹೇಳಿದ ಮೇಲೇ ದಶರಥನೊಪ್ಪಿದ್ದು.

ನಾನು ಬಲ್ಲೆನೆಂದು ವಿಶ್ವಾಮಿತ್ರರು ಹೇಳುವಾಗ, ಅವರ ತಪೋಮಹಿಮೆಯು ದಶರಥನಿಗೆ ಅರ್ಥವಾಗಲಿಲ್ಲ. ರಾಮನು ಸತ್ಯ-ಪರಾಕ್ರಮನೆಂದಾಗ ರಾಮನ ಸತ್ತ್ವ-ಮಹಿಮೆ ಅರ್ಥವಾಗಲಿಲ್ಲ. ವಸಿಷ್ಠ-ವಿಶ್ವಾಮಿತ್ರರಲ್ಲಿ ಕೆಲಕಾಲ ದ್ವೇಷವಿತ್ತಾದರೂ, ವಸಿಷ್ಠರೂ ಬಲ್ಲರೆಂದರೂ, ದಶರಥನಿಗದರ ಸೂಕ್ಷ್ಮ ಅರ್ಥವಾಗಲಿಲ್ಲ. ಇನ್ನಿತರ ತಪೋನಿಷ್ಠರೂ ಬಲ್ಲರೆಂದಾಗಲಾದರೂ "ಓ, ರಾಮನೆಂದರೆ ತಪೋವೇದ್ಯ-ತತ್ತ್ವ!" - ಎಂಬುದು ದಶರಥನಿಗೆ ಸ್ಫುರಿಸಬಹುದಾಗಿತ್ತು. ಆಗಲೂ ಗೊತ್ತಾಗಲಿಲ್ಲ!

ಹೀಗೆ, ತಿಳಿಯಾದ ಮಾತು ಸಹ ತಕ್ಕ ಪೂರ್ವಭಾವಿ ತಿಳಿವಳಿಕೆಯಿಲ್ಲದಿದ್ದಾಗ ತಿಳಿಯುವುದಿಲ್ಲವಲ್ಲವೇ?

ಸೂಚನೆ: 20/10/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.


Monday, October 7, 2024

ಅಷ್ಟಾಕ್ಷರೀ 67 ಅಶ್ವಾನಾಂ ಖಾದನೇನಾರ್ಥೀ (Astaksari 67 Ashvanam Khadanenarthi)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ವಾಲ್ಮೀಕಿರಾಮಾಯಣದ ಒಂದು ಕಿರಿದಾದ ಪ್ರಸಂಗದಲ್ಲೂ ಹಿರಿದಾದ ಪಾಠವೊಂದನ್ನು ನಾವು ಕಲಿಯಬಹುದು.

ಶ್ರೀರಾಮಚಂದ್ರನು ವನವಾಸಕ್ಕೆ ತೆರಳುವಾಗ ದುಃಖಿತ-ಜನತೆಯೂ ಆತನನ್ನು ಹಿಂಬಾಲಿಸಿತಷ್ಟೆ. ಚಿರಕಾಲ ದುಃಖಿಸುವುದು ತರವಲ್ಲವೆಂಬ ತಿಳಿವಳಿಕೆಯಿತ್ತು ಪ್ರಜೆಗಳನ್ನು ಬೀಳ್ಕೊಟ್ಟ  ರಾಮನು, ಶೃಂಗಬೇರಪುರದ ಕಡೆಗೆ ಸಾಗುತ್ತಾ ಗಂಗಾ-ಸೌಂದರ್ಯ-ವೈಭವಗಳನ್ನೂ ಆಸ್ವಾದಿಸಿದನು. ಹೊತ್ತಾಗುತ್ತಾ ಬಂದಿತ್ತಾಗಿ, ಬೃಹತ್ತಾದ ಇಂಗುದೀ-ವೃಕ್ಷವೊಂದನ್ನು ಕಂಡು, "ಇಂದಿಲ್ಲಿಯೇ ತಂಗೋಣ"ವೆಂದು ಸುಮಂತ್ರನಿಗೆ ಸೂಚಿಸಿದನು.

ಶೃಂಗಬೇರಪುರಕ್ಕೆ ಒಡೆಯನೆಂದರೆ ನಿಷಾದ-ರಾಜನಾದ ಗುಹ. ತನ್ನ ರಾಜ್ಯಕ್ಕೆ ಪುರುಷ-ಶ್ರೇಷ್ಠನಾದ ರಾಮನು ಬಂದಿರುವನೆಂಬುದು ಆತನಿಗೆ ತಿಳಿದುಬಂದಿತು.

ಶ್ರೇಷ್ಠರಾದವರು ಬಂದಾಗ ಅವರಿಗೆ ಶ್ರೇಷ್ಠವಾದ ಆದರಾತಿಥ್ಯಗಳೇ ಯುಕ್ತವಷ್ಟೆ. ಎಂದೇ ರಾಜ್ಯದ ವೃದ್ಧರು, ಅಮಾತ್ಯರು ಮುಂತಾದ ಹಿರಿಯರೊಂದಿಗೆ ರಾಮನತ್ತ ನಡೆದ, ಗುಹ. ರಾಮನಿಗವನು ಪ್ರಾಣಸಮ. ಪ್ರಿಯಮಿತ್ರನು ಆಗಮಿಸಿದನೆಂದರೆ ನಾವೂ ಮುಂದೆ ಹೋಗಿ ಆತನನ್ನು ಸ್ವಾಗತಿಸುತ್ತೇವಲ್ಲವೇ? ಎಂದೇ ರಾಮನೂ ತಾನೂ ಮುಂದೆ ಹೋಗಿ ಆತನನ್ನಾದರಿಸಿದನು.

ರಾಮನನ್ನು ಕಂಡ ಗುಹನಿಗೆ ಒಂದಿಷ್ಟು ದುಃಖವೂ ಆಯಿತು. ಏಕೆ? ರಾಮನು ವನವಾಸಿ-ತಪಸ್ವಿಗಳಿಗೆ ಸಲ್ಲತಕ್ಕ ವಲ್ಕಲವನ್ನುಟ್ಟಿದ್ದಾನೆ! ರಾಜಕುಮಾರನೆಂದರೆ ವೇಷ-ಪೋಷಾಕುಗಳು ಹೇಗಿರುತ್ತವೆ! ಏನೋ ಘಟಿಸಿರಬೇಕು - ಎಂಬ ಚಿಂತನವು ಗುಹನ ಮನಸ್ಸಿನಲ್ಲಿ ಕ್ಷಣಕಾಲ ಹಾದುಹೋಗಿರಬಹುದು; ಸೂಕ್ಷ್ಮವಾದ ವಿಷಯವಿದೆಂದುಕೊಂಡು, ಗುಹನು ಆ ಬಗ್ಗೆ ಮಾತನಾಡಹೋಗುವುದಿಲ್ಲ. ಹಾಗಾದರೆ ಏನೆಂದನು? ಏನು ಮಾಡಿದನು? - ಎಂಬುದೇ ಇಲ್ಲಿ ಗಮನಿಸಿಕೊಳ್ಳಬೇಕಾದ ವಿಷಯ.

"ನನ್ನೀ ರಾಜ್ಯವು ನಿನಗೆ ಅಯೋಧ್ಯೆಯಂತೆಯೇ. ನಿನಗಾವ ಸೇವೆಯನ್ನು ಮಾಡಲಿ?" ಎಂದು ತನ್ನ ಭಾಗ್ಯವನ್ನು ಚಿತ್ರಿಸುತ್ತಾ, ಪ್ರಶಸ್ತವಾದ ಭಕ್ಷ್ಯ-ಭೋಜ್ಯ-ಪೇಯ-ಲೇಹ್ಯಗಳುಳ್ಳ ಭೋಜನಕ್ಕೆ ವ್ಯವಸ್ಥೆ, ಶಯನ-ವ್ಯವಸ್ಥೆಗಳನ್ನು ಮಾಡಿದನು. ಇವೆಲ್ಲದರ ಜೊತೆಗೆ, ರಾಮನ ವಾಜಿಗಳಿಗೂ, ಎಂದರೆ ಕುದುರೆಗಳಿಗೂ, ಖಾದ್ಯವು ಸಿದ್ಧವಾಗಿರುವುದನ್ನು ಸೂಚಿಸಿದನು.

ತಾನು ವಲ್ಕಲವನ್ನು ಧರಿಸಿರುವುದೂ ಫಲಮೂಲಗಳನ್ನು ಮಾತ್ರ ಸ್ವೀಕರಿಸುವುದೂ ತಾನು ವ್ರತಸ್ಥನಾದ್ದರಿಂದಲೇ - ಎಂದು ಹೇಳಿ, ತನ್ನ ಅಶ್ವಗಳಿಗೆ ಆಹಾರವನ್ನು ಕೊಡೆನ್ನುತ್ತಾನೆ, ರಾಮ (ಅಶ್ವಾನಾಂ ಖಾದನೇನಾರ್ಥೀ). ತನ್ನ ತಂದೆಗೆ ಪ್ರಿಯವಾಗಿದ್ದ ಕುದುರೆಗಳಿವು - ಎಂದು ಹೇಳಿ, ಇವಕ್ಕೆ ತೃಪ್ತಿಯಾದರೆ ತನಗೂ ತೃಪ್ತಿಯೆನ್ನುತ್ತಾನೆ. ಗುಹನೂ ಅಂತೆಯೇ ಮಾಡುತ್ತಾನೆ.

ಇಲ್ಲಿಯ ಈ ಕಿರುಪ್ರಸಂಗವು ಇಡೀ ರಾಮಾಯಣದ ತಂತ್ರಕ್ಕೇ ಕನ್ನಡಿಹಿಡಿಯುತ್ತದೆಯೆನ್ನಬಹುದು. ಕುದುರೆಗೆ ಆಹಾರವೀಯುವುದು ರಾಮಾಯಣದ ರಚನಿಕೆಯನ್ನು ಹೇಗೆ ತೋರಿಸೀತು?

ಶ್ರೀರಂಗಮಹಾಗುರುಗಳಿತ್ತಿರುವ ಸೂತ್ರವೊಂದು ಇಲ್ಲಿ ದಿಗ್ದರ್ಶಕವಾಗಿದೆ: "ಬಂದ ಅತಿಥಿಗೆ ಆಹಾರ, ಆತನ ಕುದುರೆಗಳಿಗೂ ಆಹಾರ - ಎನ್ನುವಂತೆ, ಜೀವಿಗೂ ಆತನ ಇಂದ್ರಿಯಗಳಿಗೂ ಸಲ್ಲುವ ಆಹಾರವನ್ನಿತ್ತಿದ್ದಾರೆ, ವಾಲ್ಮೀಕಿಗಳು." ಏನು ಹಾಗೆಂದರೆ? ಇಲ್ಲಡಗಿರುವ ರೂಪಕವನ್ನು ಗ್ರಹಿಸಿದವರಿಗೆ ತತ್ತ್ವವು ಗೋಚರವಾಗುತ್ತದೆ. ಕಠೋಪನಿಷತ್ತು ತೋರಿಸುವ ರಥ-ರೂಪಕದಂತೆ, ಶರೀರ-ಇಂದ್ರಿಯಗಳೇ ರಥ-ಕುದುರೆಗಳು; ಮನೋ-ಬುದ್ಧಿಗಳು ಲಗಾಮು-ಸಾರಥಿಗಳು; ಆತ್ಮನೇ ರಥಿ.
ಕುದುರೆಗಳು ಸುಮ್ಮನೆ ಕೂರವು. ಅವುಗಳಿಗೆ ಸಂಚಾರ ಬೇಕೇ ಬೇಕು. ಇಲ್ಲದಿದ್ದಲ್ಲಿ ಅವಕ್ಕೆ ಬೇಗನೇ ಮುಪ್ಪು ಆವರಿಸಿಬಿಡುವುದು. ಇಂದ್ರಿಯಗಳೂ ಹಾಗೆಯೇ. ಇಂದ್ರಿಯಗಳನ್ನು ಸುಮ್ಮನೆ ಕುಳಿತುಕೊಳ್ಳಿ - ಎನ್ನಲಾಗುವುದೇ? ನಿದ್ರಾವಸ್ಥೆಯೊಂದನ್ನು ಬಿಟ್ಟರೆ ಸದಾ ಕಾರ್ಯ-ರಾಶಿಯಲ್ಲಿ ಮುಳುಗಿರತಕ್ಕವು, ಅವು. ಅದು ಅವುಗಳ ಸಹಜ-ಪ್ರವೃತ್ತಿ. ಹೋಗಬಾರದೆಡೆಗೆ ಅವುಗಳು ಹೋಗದಿರಲು ಲಗಾಮು ಬೇಕು, ಸರಿಯೇ; ಆದರೆ ಅವನ್ನು ಉಪವಾಸ ಕೆಡವುವಂತಿಲ್ಲ. ಹೊಟ್ಟೆಗೆ ಹಾಕದಿದ್ದರೆ ಹೇಗೆ ನಾವು ವಿಲವಿಲ ಒದ್ದಾಡುವಂತಾಗುತ್ತದೋ ಹಾಗೆಯೇ ಇಲ್ಲೂ. ಚಟುವಟಿಕೆಯಿಂದಿರಲೇ ಸದಾ ಇಷ್ಟಪಡುವಂತಹವರಿಗೆ ಕಷ್ಟದ ಅನಶನವನ್ನು ಹೇರಿ ಚಡಪಡಿಕೆ-ಸಿಡಿಮಿಡಿಗಳಾಗುವಂತೆ ಮಾಡುವಂತಿಲ್ಲ.

ದೇಹ-ಇಂದ್ರಿಯ-ಮನಸ್ಸು-ಬುದ್ಧಿ - ಇವುಗಳಿಗೆ ಆಹಾರ ಕೊಡುವುದು ಸರಿಯೇ; ಹಾಗೆಯೇ ಜೀವಿಗೂ ಆಹಾರವು ಬೇಕು; ಆತ್ಮನಿಗೆ ಸಲ್ಲುವ ಆಹಾರವೇ ಅಧ್ಯಾತ್ಮ. ವಾಲ್ಮೀಕಿ-ರಾಮಾಯಣದಲ್ಲಿ ಇಂದ್ರಿಯ-ತೃಪ್ತಿಯನ್ನುಂಟುಮಾಡುವ ಅಂಶಗಳೂ ಇವೆ. ಕೃತಿಯ ಪಾಠ್ಯ-ಗೇಯಗಳಲ್ಲಿಯ ಮಧುರತೆಯೆಂಬುದು ನಾಲಿಗೆ-ಕಿವಿಗಳಿಗೊದಗುವ ಸಂತೋಷವನ್ನು ಹೇಳುತ್ತದೆ. ಮನೋ-ಹೃದಯಗಳಿಗೆ ಹ್ಲಾದವನ್ನುಂಟುಮಾಡುವ ಪರಿಯಲ್ಲೂ ಕಾವ್ಯ-ರಚನೆಯಾಗಿದೆ. ಶಬ್ದಾಲಂಕಾರ-ಅರ್ಥಾಲಂಕಾರಮಯವಾದ ಭಾಷೆಯೇ ರಂಜಕವಾಗಿದೆ. ಭಾವ-ರಸಗಳ ವಿಲಾಸವಿದೆ. ತತ್ತ್ವಮಯವಾದ ಕಥೆಯು ಮನೋಬುದ್ಧಿಗಳಿಗೆ ಆಳವಾದ ಸ್ತರದಲ್ಲಿ ರೋಚಕವಾಗಿದ್ದು ತುಷ್ಟಿಪ್ರದವಾಗಿದೆ. ಇದಲ್ಲದೆ, ಶಾಂತರಸಕ್ಕೆ ಪೋಷಕವಾದ ಸಂನಿವೇಶ-ವಿಶೇಷಗಳಿಂದ ಆತ್ಮ-ಸಂತೋಷವೂ ಲಭ್ಯವಾಗಿದೆ.

ಹೀಗೆ ರಾಮನಿಗಷ್ಟೇ ಆಹಾರ, ಕುದುರೆಗಳಿಗಿಲ್ಲ - ಎಂದು ಮಾಡದೆ, ಕುದುರೆಗಳಿಗೂ ಆಹಾರ, ಅವುಗಳ ಮೇಲೆ ಬಂದವರಿಗೂ ಆಹಾರ - ಎನ್ನುವಂತೆ, ಇಂದ್ರಿಯ-ಇಂದ್ರಿಯಾತೀತಗಳೆರಡರ ಸಮಾರಾಧನೆಯನ್ನೂ ಮಾಡಿಕೊಡುವ ಕಾವ್ಯವಾಗಿ ಗೋಚರವಾಗುತ್ತದೆ, ರಾಮಾಯಣ.

ಸೂಚನೆ: 31/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ. 

Tuesday, September 24, 2024

ಒಳ್ಳೆಯ ಕೆಲಸಕ್ಕೆ ಬರುವ ವಿಘ್ನಗಳು (Olleya Kelasakke Baruva Vighnagalu)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)

ದಶರಥನು ರಾಮನಿಗೆ ಪಟ್ಟಾಭಿಷೇಕ ಮಾಡಿಬಿಡಬೇಕೆಂದು ಆಸೆಪಟ್ಟನಷ್ಟೆ? ಇದಕ್ಕೆ ಪುರಮುಖ್ಯರೂ, ಗ್ರಾಮಪ್ರಧಾನರೂ, ಬೇರೆ ರಾಜರುಗಳೂ ಇತ್ಯಾದಿಯಾಗಿ ಎಲ್ಲರ ಹಾರ್ದವಾದ ಸಮ್ಮತಿಯೂ ದೊರೆಯಿತು. ಅವರೆಲ್ಲರಿಗೂ ರಾಮನ ವಿಷಯದಲ್ಲಿ ಬಹಳವೇ ಪ್ರೀತಿ-ಗೌರವ-ಅಭಿಮಾನಗಳಿದ್ದವು. ತಾನು ತೆಗೆದುಕೊಂಡಿರುವ ನಿರ್ಧಾರಕ್ಕೆ ಇವರೆಲ್ಲರ ಅನುಮೊದನ ದೊರೆತಿದ್ದರಿಂದ ದಶರಥನಿಗೆ ಬಹಳವೇ ಸಂತೋಷವಾಯಿತು. ಯೌವರಾಜ್ಯಾಭಿಷೇಕ ಮಾಡಿ ಮುಗಿಸಿಬಿಡಬೇಕೆಂದು ಅವನು ನಿರ್ಧರಿಸಿದನು. ರಾಜಗುರುಗಳಾದ ವಸಿಷ್ಠರ ಅನುಮತಿ ಪಡೆದು ಅದಕ್ಕೆ ಸಿದ್ಧತೆಯನ್ನೂ ಮಾಡಿದನು. ಒಮ್ಮೆ ರಾಮನನ್ನು ಸಭೆಗೆ ಕರೆಯಿಸಿ ಪಟ್ಟಾಭಿಷೇಕದ ನಿರ್ಧಾರ ತಿಳಿಸಿದನು. ಮತ್ತೆ ಇನ್ನೊಮ್ಮೆ ರಾಮನನ್ನು ಕರೆತರಲು ಸುಮಂತ್ರನಿಗೆ ಹೇಳಿದಾಗ, ರಾಮನಿಗೆ ಸ್ವಲ್ಪ ಶಂಕಾತಂಕಗಳಾದವು. ಆಗಷ್ಟೇ ತಂದೆಯನ್ನು ಭೇಟಿಯಾಗ ರಾಜ್ಯಾಭಿಷೇಕದ ಸಮಾಚಾರವನ್ನವನು ತಿಳಿದಿದ್ದಾನೆ. ಮತ್ತೆ ಭವನಕ್ಕೆ ಬರಲು ತಂದೆ ಏಕೆ ಹೇಳಿಕಳಿಸಿದ್ದು? - ಎಂದು ಮನಸ್ಸಿನಲ್ಲಿ ಪ್ರಶ್ನೆಯೆದ್ದಿತು. ಲಗುಬಗೆಯಿಂದ ಅಲ್ಲಿಗೆ ಹೋದಾಗ, ದಶರಥನು ಮಾರನೆಯ ದಿನವೇ ಅಭಿಷೇಕವೆಂದು ತಿಳಿಸುತ್ತಾನೆ. ತನ್ನ ಆತಂಕವನ್ನು ಮಗನಲ್ಲಿ ಹೇಳಿಕೊಳ್ಳುತ್ತಾ, ಹೀಗೆನ್ನುತ್ತಾನೆ: ಹಲವು ದಿನಗಳಿಂದ ನನಗೆ ಅಪಶಕುನಗಳು ಕಾಣುತ್ತಿವೆ. ಈ ರೀತಿಯ ಶಕುನಗಳಾಗುತ್ತಿದ್ದರೆ ಮೃತ್ಯುವೋ ಮತ್ತಾವುದಾದರೋ ಘೋರಪ್ರಸಂಗವೋ ಆಗಬಹುದು. ಮನುಷ್ಯರ ಮನಸ್ಸು ಚಂಚಲ. ಆದ್ದರಿಂದ ನಾಳೆ ಒಳ್ಳೆಯ ಮುಹೂರ್ತವಿರುವುದರಿಂದ ನಾಳೆಯೇ ನಿನ್ನ ಅಭಿಷೇಕವಾಗಿಬಿಡಲಿ.

ಹೀಗೆ ತ್ವರೆಯಿಂದ ದಶರಥನು ನಿರ್ಧರಿಸಿದರೂ, ವಿಧಿಯಲ್ಲಿ ಆಗಬೇಕಾದದ್ದು ಬೇರೇನೋ ಇತ್ತು. ಆ ಯೌವರಾಜ್ಯಾಭಿಷೇಕಕ್ಕೆ ಅಡ್ಡಿಯಾಗೇ ಆಯಿತು. ಇರಲಿ, ಈ ಅಡ್ಡಿಯಾದದ್ದರಿಂದಲೇ ರಾಮಾಯಣವೆಲ್ಲ ನಡೆಯಿತೆಂದು ನಾವು ಭಾವಿಸಬಹುದು. ಈ ಸಂದರ್ಭದಲ್ಲಿ ಮನಃಪೂರ್ವಕವಾಗಿ ಆದ ಪ್ರಯತ್ನಗಳ ಬಗ್ಗೆ ನಾವು ಗಮನಹರಿಸೋಣ. ಸಂಕೇತಗಳು ಸಿಕ್ಕಾಗಲೂ ಕೆಲವೊಮ್ಮೆ ಅದರ ಬಗ್ಗೆ ನಾವು ಏನೂ ಕ್ರಮ ತೆಗೆದುಕೊಳ್ಳದೇ ಸುಮ್ಮನಾಗುವುದುಂಟು. ನಿಷ್ಣಾತರಾದ ಜ್ಯೋತಿಷಿಗಳು ಯಾವುದೋ ಗಂಡಾತರವು ಇಷ್ಟರಲ್ಲೇ ಘಟಿಸುವುದೆಂದು ಹೇಳಿದಾಗ, ನಮ್ಮ ಮುಂದೆ ಎರಡು ವಿಕಲ್ಪಗಳಿರುತ್ತವೆ. ಒಂದೇ, ವಿಧಿಯೇ ಬಲಿಷ್ಠವೆಂದು ಕೈಚೆಲ್ಲಿ ಕೂರುವುದು. ಇಲ್ಲವೆಂದರೆ, ನಮ್ಮ ಎಚ್ಚರದಲ್ಲಿ ನಾವಿರುವುದು ಹಾಗೂ ಬರಬಹುದಾದ ಗಂಡಾಂತರಕ್ಕೆ ಏನಾದರೂ ಪರಿಹಾರವಿದೆಯೇ ಎಂದು ನೋಡಿ ಅದನ್ನು ಮಾಡುವುದು. ಎಷ್ಟೋ ಬಾರಿ, ಅದರಿಂದಾಗಿ ದೊಡ್ಡ ಅನಾಹುತವಾಗುವ ಜಾಗದಲ್ಲಿ ಚಿಕ್ಕದೇನೋ ಆಗಿ ಪ್ರಾಣ ಉಳಿಯುವುದುಂಟು. ಇವೆಲ್ಲ ಮಾಡಿಯೂ ತಪ್ಪಿಸಿಕೊಳ್ಳಲಾಗದಿದ್ದಲ್ಲಿ, ನಮ್ಮ ಪ್ರಯತ್ನ ನಾವು ಮಾಡಿದ ಬಗ್ಗೆಯಾದರೂ ಒಂದು ಸಮಾಧಾನವಿರುತ್ತದೆ.

ಈ ಎರಡನೆಯ ಮಾರ್ಗವನ್ನೇ ದಶರಥನು ಆಯ್ಕೆ ಮಾಡಿಕೊಂಡಿರುವುದು. ಘೋರವಾದದ್ದೇನೋ ಆಗಬಹುದೆಂಬ ಮುನ್ಸೂಚನೆ ಅವನಿಗಿದೆ. ತಾನು ಮಾಡಹೊರಟಿರುವ ಧರ್ಮ್ಯವಾದ ಕೆಲಸಕ್ಕೆ - ಅರ್ಥಾತ್, ಧರ್ಮಿಷ್ಠನಾದ ರಾಮನಿಗೆ ಪಟ್ಟಾಭಿಷೇಕ ಮಾಡುವುದಕ್ಕೆ - ತನ್ನಿಂದಲೇ ಏನಾದರೂ ಘಾತವಾಗಿಬಿಟ್ಟೀತೆಂಬ ಆತಂಕ ಅವನಿಗೆ! ಶ್ರೀರಂಗಮಹಾಗುರುಗಳು ಹೇಳಿದ್ದಂತೆ "ಧರ್ಮವೊಂದು ತಾನೇ ಬೆನ್ನು ಹತ್ತಿ ಬರುತ್ತೆ? ಬುದ್ಧಿಯಾದರೆ ಕ್ಷಣಚಿತ್ತ, ಕ್ಷಣಪಿತ್ತ. ಆದ್ದರಿಂದ ನಂಬಬೇಕಾಗಿದ್ದು ಧರ್ಮವೊಂದನ್ನು ಮಾತ್ರ." ತಾನು ಧರ್ಮದ ಹದ್ದುಬಸ್ತಿನಲ್ಲಿರುವವನೇ ಎಂದು ತಿಳಿದಿದ್ದರೂ, ಮನಸ್ಸಿನ ಚಾಂಚಲ್ಯ ಎಷ್ಟಿರಬಹುದು ಎನ್ನುವುದರ ಸುಳಿವು ಅವನಿಗಿದೆ. ಶ್ರೇಯಾಂಸಿ ಬಹುವಿಘ್ನಾನಿ (ಎಂದರೆ ಒಳ್ಳೆಯ ಕಾರ್ಯಗಳಿಗೆ ವಿಘ್ನಗಳು ಹಲವು) ಎನ್ನುವಂತೆ.

ಸೂಚನೆ: 24/9/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Sunday, September 15, 2024

ಅಷ್ಟಾಕ್ಷರೀ 65 ಅಂಗುಲೀಯಂ ಅಭಿಜ್ಞಾನಂ ( ಅಷ್ಟಾಕ್ಷರೀ 65 Anguliyam Abhijnanam)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕಾಳಿದಾಸನು ಶಾಕುಂತಲ-ನಾಟಕವನ್ನು ಬರೆದನೆಂಬುದನ್ನು ಯಾವ ಭಾರತೀಯನರಿಯ? ನಾಟಕದ ಪೂರ್ಣವಾದ ಹೆಸರೇನೆಂಬುದನ್ನು ಅರಿತಿಲ್ಲದವರಿರಬಹುದು. ಅದು "ಅಭಿಜ್ಞಾನ-ಶಾಕುಂತಲ"ವೆಂದು. 

ಏನು ಹಾಗೆಂದರೆ? ಅಭಿಜ್ಞಾನ(ಅಥವಾ ಪ್ರತ್ಯಭಿಜ್ಞಾನ)ವೆಂದರೆ ಗುರುತಿಸುವುದು. ಎಷ್ಟೋ ವರ್ಷಗಳಿಂದ ಒಬ್ಬರನ್ನು ನೋಡಿಲ್ಲದಿದ್ದಲ್ಲಿ ಗುರುತಿಸುವುದೇ ಕಷ್ಟವಾಗಬಹುದು: ಅವರಲ್ಲಿ ಅಷ್ಟರಲ್ಲಿ ಏನೇನೋ ಬದಲಾವಣೆಗಳಾಗಿರಬಹುದು; ವೇಷಾಂತರದಲ್ಲಿ ಬಂದರಂತೂ ಗುರುತುಹಿಡಿಯುವುದು ಕಷ್ಟವೇ.

ನಮ್ಮಲ್ಲಿ ಬದಲಾಗದಿರುವ ಒಂದೆರಡು ಅಂಶಗಳು ಇರಬಹುದು. ಉದಾಹರಣೆಗೆ ಕಣ್ಣಿನ ಅಚ್ಚು ಬಹುತೇಕ ಹಾಗೇ ಉಳಿದಿರುವುದು. ಕೆಲವೊಮ್ಮೆ ಯಾವುದೋ ವಿಶಿಷ್ಟವಾದ ವೇಷವೋ ಆಭರಣವೋ ಅಲಂಕಾರವೋ ನೆನಪುಕೊಡಬಹುದು. ನೆನಪು ಕೊಡುವ ವಸ್ತು ಅಭಿಜ್ಞಾಪಕ. ಅಭಿಜ್ಞಾನವೆಂದರೂ ಅದೇ. 

ಅಲ್ಲಿಗೆ ಅಭಿಜ್ಞಾನವೆಂದರೆ ಎರಡು ಅರ್ಥಗಳಾದುವು. ಮೊದಲನೆಯದು, ಗುರುತಿಸುವಿಕೆಯೆಂಬ ಕ್ರಿಯೆ. ಎರಡನೆಯದು, ಈ ಗುರುತಿಸುವಿಕೆಗೆ ಸಾಧನವಾಗುವ ವಸ್ತು: ಸ್ಮಾರಕ.

ನಾಟಕದ ಶೀರ್ಷಿಕೆಯಲ್ಲಿ ಬಂದಿರುವ ಅಭಿಜ್ಞಾನವು ಗುರುತಿಗೆ ಸಾಧನವಾದದ್ದೇ. ಕಾಳಿದಾಸನ ಶಾಕುಂತಲ-ಕಥೆಯನ್ನು ಬಲ್ಲವರಿಗಿದು ತಿಳಿದಿರುತ್ತದೆ. ದುರ್ವಾಸ-ಮಹರ್ಷಿಗಳ ಶಾಪದಿಂದಾಗಿ, ಶಕುಂತಲೆಯ ನೆನಪೇ ಮಾಸಿರುತ್ತದೆ, ದುಷ್ಯಂತನಿಗೆ. ಕೊನೆಗೆ ಉಂಗುರವು ಸಿಕ್ಕಾಗ, ನೆನಪು ಹಸಿರಾಗುತ್ತದೆ.  

ದೀರ್ಘಕಾಲ ಎದುರಿಗೆ ಬಂದಿಲ್ಲದ ವ್ಯಕ್ತಿಯನ್ನು ಮರೆತಂತಾಗಿದ್ದರೂ, ಅದೇ ವ್ಯಕ್ತಿ ಎದುರಾದಾಗ  ಗುರುತಿಸಿಬಿಡುವೆವು. ಕೆಲವೊಮ್ಮೆ - ಎಂದರೆ ಮರೆವಿಗೆ ಪ್ರಬಲವಾದ ಕಾರಣವಿದ್ದಾಗ ಮಾತ್ರ - ಎದುರಿಗೆ ಬಂದವರನ್ನೂ ಗುರುತಿಸಲಾಗದೇ ಹೋಗಬಹುದು. ದುಷ್ಯಂತನಿಗಾದುದು ಹಾಗೆಯೇ: ಎದುರಿಗೆ ಬಂದು ನಿಂತವಳು ಪ್ರಾಣ-ಪ್ರಿಯೆಯಾಗಿದ್ದ ಶಕುಂತಲೆ: ಗುರುತಿಸಲಾಯಿತೇ?

ಎದುರಿಗಿಲ್ಲದವರನ್ನೂ ಸ್ಮರಿಸಿಕೊಳ್ಳುವುದೂ ಉಂಟು. ಅವರಿಗೆ ಸೇರಿದ ಯಾವುದಾದರೂ ವಸ್ತುವು ಕಂಡಾಗ ಹಾಗಾಗುವುದು. ಅಂತಹ ವಸ್ತುವೇ ಅಭಿಜ್ಞಾನ. ದುಷ್ಯಂತನು ಶಕುಂತಲೆಗಿತ್ತ ಉಂಗುರವು ಅಭಿಜ್ಞಾನ. ಶಾಕುಂತಲದ ವಿಸ್ಮಯವೆಂದರೆ, ವ್ಯಕ್ತಿಯೇ ಎದುರಿಗೆ ಬಂದಾಗ ಉಂಟಾಗದ ಪ್ರತ್ಯಭಿಜ್ಞಾನವು, ಕಾಲಾಂತರದಲ್ಲಿ ಅಭಿಜ್ಞಾನವೊಂದರಿಂದ ಆದದ್ದು! ಅಭಿಜ್ಞಾನವೊಂದರಿಂದ ಶಕುಂತಲೆಯ ಸ್ಮೃತಿಯು ಚಿಮ್ಮುವುದನ್ನೇ ಅಭಿಜ್ಞಾನ-ಶಾಕುಂತಲವೆಂಬ ಹೆಸರು ಹೇಳುತ್ತದೆ.

ಹೀಗೆ ಅಭಿಜ್ಞಾನದಿಂದಾಗಿ ಸ್ಮರಣೆಯುಕ್ಕುವ ತಂತ್ರವು ಶಾಕುಂತಲದಿಂದಲೇ ಆರಂಭವಾದುದಲ್ಲ. ಭಾಸ-ಮಹಾಕವಿಯ ಸ್ವಪ್ನವಾಸವದತ್ತ-ನಾಟಕದಲ್ಲೂ ಇದುಂಟು: ತಾನು ಸತ್ತ ಸುದ್ದಿ ಹಬ್ಬಿಸಿ ವಾಸವದತ್ತೆಯು ದೀರ್ಘ-ಕಾಲ ಕಣ್ಮರೆಯಾಗಿರುತ್ತಾಳೆ; ಪತಿ ಉದಯನನಿಗೆ ಮತ್ತೊಂದು ಮದುವೆಯೂ ಆಗಿಬಿಡುತ್ತದೆ; ಆದರೂ ಆಕಸ್ಮಿಕವಾಗಿ ಆಕೆಯ ಘೋಷವತೀ-ವೀಣೆಯು ದೊರಕಲಾಗಿ, ವಾಸವದತ್ತೆಯ ನೆನಪು ಉದಯನನ ಚಿತ್ತದಲ್ಲಿ ಮರುಕಳಿಸುತ್ತದೆ; ಅವಳೂ ದೊರೆತಾಳೆಂಬ ಆಶೆಯನ್ನದು ಚಿಗುರಿಸುತ್ತದೆ. ಉಂಗುರ ಸಿಕ್ಕಮೇಲೆ ಶಕುಂತಲೆಯೂ ದಕ್ಕಿದಳಲ್ಲವೇ?

ಇದಕ್ಕೂ ಮೊದಲಿನ ಅದಿ-ಕಾವ್ಯವಾದ ರಾಮಾಯಣದಲ್ಲೇ ಅಭಿಜ್ಞಾನದ ಪಾತ್ರವುಂಟು. ಸೀತಾನ್ವೇಷಣೆಗಾಗಿ ಅನೇಕಾನೇಕ-ವಾನರರನ್ನು ನಾನಾ-ದಿಕ್ಕುಗಳಿಗೆ ಸುಗ್ರೀವನು ಕಳುಹಿಸುವನಷ್ಟೆ. ಆದರೂ ನೆಚ್ಚಿಕೆಯಿದ್ದುದು ಹನುಮಂತನ ಮೇಲೆಯೇ. ಅಪ್ಪನ ಮಗನಲ್ಲವೇ ಆತ? ಎಂದೇ ವಾಯುದೇವನ ಗತಿ-ವೇಗ-ತೇಜಸ್ಸು-ಲಾಘವಗಳು ಹನುಮಂತನಲ್ಲಿದ್ದವು. ಆತನೇ "ನಯ-ಪಂಡಿತ": ಆತನಲ್ಲೇ ಬಲ-ಬುದ್ಧಿ-ಪರಾಕ್ರಮಗಳೂ ದೇಶ-ಕಾಲಾನುವೃತ್ತಿಯೂ  (ಎಂದರೆ ದೇಶ-ಕಾಲಗಳನ್ನನುಸರಿಸಿ ತನ್ನ ವರ್ತನೆಯನ್ನು ವ್ಯವಸ್ಥೆಗೊಳಿಸಿಕೊಳ್ಳುವ ಸಾಮರ್ಥ್ಯ; ಔಚಿತ್ಯ-ಪ್ರಜ್ಞೆ) ಇರತಕ್ಕವು. 

ಈತನ ಗುಣ-ಗಾನವನ್ನು ಸುಗ್ರೀವನು ಹೀಗೆ ಮಾಡಿದ ಮೇಲೆ ಶ್ರೀರಾಮನು ಅಭಿಜ್ಞಾನವಾಗುವ ವಸ್ತುವನ್ನು - ತನ್ನ ಹೆಸರಿನ ಅಂಕಿತವುಳ್ಳ ಅಂಗುಲೀಯ(ಉಂಗುರ)ವನ್ನು - ಹನುಮಂತನಿಗೇ ಕೊಡುವುದು. (ಹನುಮಂತನ ಸಾಮರ್ಥ್ಯವೇನೆಂಬುದನ್ನು ಪ್ರಥಮ-ಮಿಲನದಲ್ಲಿಯೇ ರಾಮನೂ ಕಂಡುಕೊಂಡಾಗಿತ್ತಷ್ಟೆ.) ಎಂದೇ ಈ ಸಂದರ್ಭದಲ್ಲಿ ವಾಲ್ಮೀಕಿಗಳ ಮಾತೂ "ಅಂಗುಲೀಯಂ ಅಭಿಜ್ಞಾನಂ" ಎಂಬುದಾಗಿ. ಸೀತೆಯು ಪ್ರತಿಯಾಗಿ ಕೊಡುವ ಚೂಡಾಮಣಿಯೂ ಅಭಿಜ್ಞಾನವೇ.

ಇಂತಹ ಅಭಿಜ್ಞಾನವನ್ನು ಕುರಿತು ಶ್ರೀರಂಗ-ಮಹಾಗುರುಗಳಾಡಿದ ಮಾತು ಸ್ಮರಣೀಯವಾಗಿದೆ: "ಮೂಲ-ವಸ್ತುವಿಗೆ ಪ್ರತೀಕವೂ ಪ್ರತಿನಿಧಿಯೂ ಪ್ರತಿಮೆಯೂ ಆಗಬಲ್ಲುದು,  ಅಭಿಜ್ಞಾನವೆಂಬುದು" ಎಂದು. ಇದು ಭಗವಂತನ ಮೂರ್ತಿಗಳಿಗೂ ಸಲ್ಲತಕ್ಕದ್ದೇ. ಮೂಲ-ವಸ್ತುವಾದ ಭಗವಂತನೇ ನಿಧಿ; ಮೂರ್ತಿಗಳು ಆತನಿಗೆ ಪ್ರತಿನಿಧಿ. ಹಾಗೆಯೇ ಆ ಮೂಲದ ಪ್ರತೀಕವೂ ಹೌದು; ಪ್ರತಿಮೆಯೆಂಬುದಂತೂ ಸುಗೋಚರವೇ. 

ಭಾಸನಿಗೂ ವಾಲ್ಮೀಕಿ-ಮಹರ್ಷಿಗೂ ಕಾಳಿದಾಸನು ಋಣಿ - ಅಭಿಜ್ಞಾನದ ಬಳಕೆಯಲ್ಲಿ. ಆದರೂ, ಇಬ್ಬರಿಗಿಂತಲೂ ಹೆಚ್ಚು ಸಮರ್ಥವಾಗಿ ಅದನ್ನು ಬಳಸಿದ್ದಾನೆನ್ನಬಹುದು. ತಮಗೆ ಅತ್ಯಂತ-ಪ್ರೀತಿ-ಪಾತ್ರನಾದ/ಳಾದ ವ್ಯಕ್ತಿಯನ್ನು ಸೀತೆಯಾಗಲಿ ಉದಯನನಾಗಲಿ ಮರೆತೇ ಇರಲಿಲ್ಲ. ಆದರೆ ಶಕುಂತಲೆಯನ್ನು ಕುರಿತು ಮರೆವೇ ಆವರಿಸಿತ್ತು, ದುಷ್ಯಂತನಿಗೆ: ಆದರಿದೋ ಥಟ್ಟನೆ ಅವಳ ಉತ್ಕಟ-ಸ್ಮೃತಿಯನ್ನೇ ತಂದುಕೊಟ್ಟಿತಲ್ಲವೇ ಅಭಿಜ್ಞಾನ? 

ಕಾಶ್ಮೀರದ ಪ್ರತ್ಯಭಿಜ್ಞಾ-ದರ್ಶನದಂತೆ, ಭಗವತ್-ಸ್ಮೃತಿಗೂ ಈ ಕ್ರಮವು ಅನ್ವಯಿಸುವುದು. ಅಂತೂ ಈ ರಹಸ್ಯವೂ ರಮಣೀಯವೂ ಶ್ರೇಷ್ಠವೂ ಆದ  ತತ್ತ್ವವನ್ನು ಬಳಸಿ, ಅಭಿಜ್ಞಾನದ ಸಾರ್ಥಕ್ಯವನ್ನು ಅದ್ಭುತವಾಗಿಯೇ ಮೆರೆಸಿದ್ದಾನಲ್ಲವೇ, ನಮ್ಮೀ ಲೋಕೋತ್ತರ-ಕವಿ?

ಸೂಚನೆ: 14/09/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.