ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಅತ್ತ ನಕುಲನು ಉತ್ಸಾಹಿಗಳಾದ ಯೋಧರೊಂದಿಗೆ ಪಶ್ಚಿಮದಿಕ್ಕಿಗೆ ಹೊರಟನು. ಆತನು ಮೊಟ್ಟಮೊದಲು ರೋಹೀತಕ-ಪರ್ವತದತ್ತ ಹೆಜ್ಜೆಯಿಟ್ಟನು. ಬಳಿಕ ಮರು-ಭೂಮಿ (ಎಂದರೆ ಮಾರವಾಡ) ಮತ್ತು ಸುತ್ತಮುತ್ತಲಿನ ಅರಸರನ್ನು ವಶಪಡಿಸಿಕೊಂಡನು.
ಧನಧಾನ್ಯಗಳಿಂದ ತುಂಬಿದ್ದ ಶೈರೀಷಕವೆಂಬ ರಾಜ್ಯವನ್ನು ವಶಪಡಿಸಿಕೊಂಡನು. ಮಹೋತ್ಥವೆಂಬ ದೇಶದ ಅರಸನಾದ ಆಕ್ರೋಶನನ್ನೂ ಗೆದ್ದನು. ಇದಕ್ಕಾಗಿ ಭಾರೀ ಯುದ್ಧವೇ ನಡೆಯಬೇಕಾಯಿತು.
ಆಮೇಲೆ ನಕುಲನು ಶಿಬಿ-ತ್ರಿಗರ್ತ-ಅಂಬಷ್ಠ-ಮಾಳವ ದೇಶಗಳನ್ನು ಜಯಿಸಿದನು. ಬಳಿಕ ಪುಷ್ಕರಾರಣ್ಯವೆಂಬ ಭೂಮಿಯಲ್ಲಿ ವಾಸವಿದ್ದ ಉತ್ಸವಸಂಕೇತ ಎಂಬ ಜನಸ್ತೋಮವನ್ನು ಗೆದ್ದನು. ಸಮುದ್ರದಡದಲ್ಲಿದ ಗ್ರಾಮಣೀಯರೆಂಬ ಕ್ಷತ್ರಿಯರೂ, ಸರಸ್ವತೀನದಿಯನ್ನು ಆಶ್ರಯಿಸಿದ್ದ ಶೂದ್ರ ಆಭೀರಗಣಗಳೂ, ಪರ್ವತವಾಸಿಗಳೂ ಮತ್ಸ್ಯಜೀವಿಗಳೂ ಆದ ಜನಗಣಗಳು - ಇವರೆಲ್ಲರನ್ನೂ ಸೋಲಿಸಿದನು.
ಅಲ್ಲದೆ ರಾಮಠ, ಹಾರ, ಹೂಣ ಮುಂತಾದ ಪಶ್ಚಿಮದ ರಾಜರು - ಇವರುಗಳನ್ನು ತನ್ನ ಆಜ್ಞಾಮಾತ್ರದಿಂದಲೇ ವಶಪಡಿಸಿಕೊಂಡನು. ಅಲ್ಲದೆ, ಅಲ್ಲಿದ್ದುಕೊಂಡೇ ದೂತನೊಬ್ಬನನ್ನು ಶ್ರೀಕೃಷ್ಣನಲ್ಲಿಗೆ ಕಳುಹಿಸಿಕೊಟ್ಟನು. ಕೃಷ್ಣನಾದರೂ ಪ್ರೀತಿಯಿಂದಲೇ ನಕುಲನ ಶಾಸನವನ್ನು ಒಪ್ಪಿಕೊಂಡನು. ಆಮೇಲೆ ಶಾಕಲದೇಶವನ್ನು ಗೆದ್ದು, ಮದ್ರದೇಶದ ಅರಸನನ್ನು - ಎಂದರೆ ತನ್ನ ಸೋದರಮಾವನನ್ನು - ಪ್ರೀತಿಯಿಂದಲೇ ವಶಪಡಿಸಿಕೊಂಡನು.
ಮದ್ರರಾಜನಾದ ಶಲ್ಯನಂತೂ ಆತನನ್ನು ಸಂತೋಷದಿಂದ ಸ್ವೀಕರಿಸಿ ಸತ್ಕರಿಸಿದನು. ಭೂರಿರತ್ನಗಳನ್ನೂ ಕೊಟ್ಟನು. ಆ ಬಳಿಕ ಅತ್ಯಂತ ಭಯಂಕರರೆನಿಸುವ ಮ್ಲೇಚ್ಛರನ್ನು ನಕುಲನು ಸದೆಬಡಿದನು. ಸಾಗರದ ಬಳಿಯಿದ್ದ ಪಹ್ಲವ, ಬರ್ಬರ, ಕಿರಾತ, ಯವನ, ಶಕ - ಇವರುಗಳೆಲ್ಲರನ್ನೂ ಸೋಲಿಸಿದನ; ಅವರಲ್ಲಿದ್ದ ರತ್ನಗಳನ್ನೆಲ್ಲಾ ತನ್ನ ವಶಕ್ಕೆ ಪಡೆದುಕೊಂಡನು.
ಹೀಗೆ ನಾನೋಪಾಯ-ಸಮರ್ಥನಾದ ನಕುಲನು ಕೊನೆಗೆ ತನ್ನ ಸ್ಥಾನವಾದ ಇಂದ್ರಪ್ರಸ್ಥದೆಡೆಗೆ ಸಾಗಿದನು. ನಕುಲನು ಸಂಪಾದಿಸಿದ ಮಹಾಧನವನ್ನು ಹಲವು ಸಾವಿರ ಆನೆಗಳು ಬಹುಶ್ರಮದಿಂದಲೇ ಹೊತ್ತು ಸಾಗಿಸುವದಾಯಿತು.
ಇಂದ್ರಪ್ರಸ್ಥದಲ್ಲಿದ್ದ ವೀರರಾಜನಾದ ಯುಧಿಷ್ಠಿರನಲ್ಲಿಗೆ ಹೋಗಿ, ಧನವನ್ನೆಲ್ಲವನ್ನೂ ಆತನಿಗೇ ಸಮರ್ಪಿಸಿದನು, ನಕುಲ. ಅಂತೂ
ಹೀಗೆ ವರುಣನ ದಿಕ್ಕಾದ ಪಶ್ಚಿಮವನ್ನು ನಕುಲನು ಗೆದ್ದು ಬಂದನು.
ಈ ರೀತಿಯಲ್ಲಿ ನಾಲ್ಕೂ ದಿಕ್ಕುಗಳ ಜಯವನ್ನು ಸಾಧಿಸಿದ ಮೇಲೆ, ತನ್ನ ಭ್ರಾತೃಗಳೊಂದಿಗೆ ರಾಜನಾದ ಯುಧಿಷ್ಠಿರನು ಭೂಮಿಯನ್ನು ಧರ್ಮದಿಂದ ಆಳಿದನು. ಪ್ರಜೆಗಳು ಅವನ ವಿಷಯದಲ್ಲಿ ಅತ್ಯಂತ ಅನುರಕ್ತರಾದರು. ಮಕ್ಕಳು ತಂದೆಯ ಬಗ್ಗೆ ಯಾವ ಪ್ರೀತಿಯುಳ್ಳವರಾಗುತ್ತಾರೋ ಅಂತಹ ಪ್ರೀತಿಯನ್ನು ಹೊಂದಿದರು. ಆತನನ್ನು ದ್ವೇಷಿಸುವವರೇ ಇಲ್ಲದಾದರು. ಈ ಕಾರಣಕ್ಕಾಗಿಯೇ ಆತನಿಗೆ ಅಜಾತಶತ್ರುವೆಂಬ ಬಿರುದು ಬಂದುದು.
ಧರ್ಮರಾಜನು ರಕ್ಷಣೆಕೊಡುತ್ತಿದ್ದನೆಂಬ ಕಾರಣದಿಂದಲೂ, ಸತ್ಯವನ್ನು ಪರಿಪಾಲಿಸುತ್ತಿದ್ದನೆಂಬ ಕಾರಣದಿಂದಲೂ, ಶತ್ರುಗಳನ್ನು ಧ್ವಂಸಮಾಡುತ್ತಿದ್ದುದರಿಂದಲೂ ಪ್ರಜೆಗಳು ಸ್ವಕರ್ಮ-ನಿರತರಾಗಿಯೇ ಇರುತ್ತಿದ್ದರು. ಸಮೀಚೀನವಾದ ಬಗೆಯಲ್ಲಿ ಯುಧಿಷ್ಠಿರನು ಕರವನ್ನು ತೆಗೆದುಕೊಳ್ಳುತ್ತಿದ್ದುದರಿಂದಲೂ, ಜತಗೆ ಧರ್ಮಾನುಸಾರವಾಗಿಯೇ ಅನುಶಾಸನಮಾಡುತ್ತಿದ್ದುದರಿಂದಲೂ ಯಥೇಚ್ಛವಾಗಿ ಮಳೆಯಾಗುತ್ತಿತ್ತು. ಜನತೆಯೂ ಸಮೃದ್ಧಿಯನ್ನು ಕಂಡಿತು.
ಗೋರಕ್ಷೆಯಾಗಲಿ, ಉಳುಮೆಯಾಗಲಿ ವಾಣಿಜ್ಯವಾಗಲಿ - ಎಲ್ಲಾ ಉದ್ಯಮಗಳೂ ಸರಿಯಾದ ರೀತಿಯಲ್ಲಿ ನಡೆಯುತ್ತಿದ್ದವು. ರಾಜನು ಮಾಡಿದ ಸುವ್ಯವಸ್ಥೆಯಿಂದಾಗಿ ಈ ಕಾರ್ಯಗಳೆಲ್ಲವೂ ಚೆನ್ನಾಗಿ ನೆರವೇರುತ್ತಿದ್ದು್ವು. ಕಳ್ಳರು, ವಂಚಕರು ಮಾತ್ರವಲ್ಲ; ರಾಜವಲ್ಲಭರು (ಎಂದರೆ ರಾಜನಿಗೆ ಪ್ರಿಯರಾಗಿದ್ದವರು) - ಇವರಾರ ಬಾಯಲ್ಲೂ ಸುಳ್ಳು ಮಾತುಗಳು ಬರುತ್ತಿರಲಿಲ್ಲ. ಅತಿವೃಷ್ಟಿ-ಅನಾವೃಷ್ಟಿಗಳಾಗುತ್ತಿರಲಿಲ್ಲ. ವ್ಯಾಧಿಗಳಿಂದ ಬೆಂಕಿಯ ಅವಘಡಗಳು ಸಂಭವಿಸುತ್ತಿರಲಿಲ್ಲ. ಅನ್ಯರಾಜರು ಯುಧಿಷ್ಠಿರನ ಬಳಿ ಬಂದರೆಂದರೆ, ಅದು ಆತನಿಗೆ ಏನೋ ಪ್ರಿಯವನ್ನು ಉಂಟುಮಾಡಲೆಂದು, ಅಥವಾ ತಮ್ಮ ಕಾಣಿಕೆಗಳನ್ನು ಒಪ್ಪಿಸಲೆಂದು; ಅಷ್ಟೇ ವಿನಾ ಯುದ್ಧಮಾಡಲೆಂದಲ್ಲ.
ಸೂಚನೆ : 5/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Sunday, July 5, 2026
ವ್ಯಾಸ ವೀಕ್ಷಿತ 195 ನಕುಲನ ದಿಗ್ವಿಜಯ; ಧರ್ಮರಾಜನ ಧರ್ಮರಾಜ್ಯ (Vyaasa Vikshita195)
ಪ್ರಶ್ನೋತ್ತರ ರತ್ನಮಾಲಿಕೆ 73 (Prasnottara Ratnamalike 73)
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೭೩. ಕಣ್ಣಿದ್ದೂ ಕುರುಡರು ಯಾರು?
ಉತ್ತರ- ನಾಸ್ತಿಕ ಮನುಷ್ಯ.
ಪ್ರತಿಯೊಬ್ಬ ಮಾನವನೂ ಕೂಡ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಎಂಬ ಐದು ಇಂದ್ರಿಯಗಳನ್ನು ಪಡೆದು, ಅವುಗಳ ಮೂಲಕ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಎಂಬ ಐದು ವಿಷಯಗಳನ್ನು ಮತ್ತು ಈ ಐದು ಇಂದ್ರಿಯಗಳಿಂದಲೇ ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಐದು ಭೂತಗಳನ್ನೂ ಅನುಭವಿಸುತ್ತಿದ್ದಾನೆ. ಇವುಗಳನ್ನೇ ‘ಐಂದ್ರಿಯಕ ಪ್ರಪಂಚ’ ಎಂಬುದಾಗಿ ಕರೆಯಲಾಗುತ್ತದೆ. ಒಟ್ಟಾರೆ ನಮ್ಮ ಇಂದ್ರಿಯಗಳಿಂದ ಈ ಬಾಹ್ಯ ಪ್ರಪಂಚವನ್ನುಅರ್ಥಮಾಡಿಕೊಳ್ಳುತ್ತಿದ್ದೇವೆ. ಆದರೆ ಈ ಇಂದ್ರಿಯಗಳಿಂದ ಮಾತ್ರ ಕಾಣುವ ವಿಷಯ ಸತ್ಯ; ಉಳಿದವು ಮಿಥ್ಯ ಎಂಬುದಾಗಿ ಹೇಳುವುದನ್ನು ನೋಡುತ್ತೇವೆ. ಇದನ್ನೇ ‘ನಾಸ್ತಿಕತೆ’ ಎಂಬುದಾಗಿ ಕರೆಯುತ್ತೇವೆ. ಹಾಗಾದರೆ ನಾವು ಇಂದ್ರಿಯಕ್ಕೆ ಕಾಣುವುದನ್ನು ಮಾತ್ರ ಸತ್ಯ ಎಂದು ಒಪ್ಪಿ, ಇಂದ್ರಿಯಕ್ಕೆ ಕಾಣದಿರುವ ಇನ್ನೊಂದು ಪ್ರಪಂಚವನ್ನು ಒಪ್ಪದಿದ್ದರೆ ಆಗುವ ಅನುಕೂಲ ಅಥವಾ ಪ್ರತಿಕೂಲತೆ ಏನು? ಎಂಬುದನ್ನು ನಾವು ಚಿಂತಿಸಬೇಕಲ್ಲವೇ?.
ಯಾವುದೇ ಒಂದು ವಸ್ತುವನ್ನು ತೆಗೆದುಕೊಂಡಾಗ ಅದರ ಒಂದು ಭಾಗ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತದೆ. ಅದರ ಇನ್ನೊಂದು ಭಾಗ ಕಾಣದೆ ಹಾಗೆಯೇ ಉಳಿದುಕೊಳ್ಳುತ್ತದೆ. ಇದು ಸತ್ಯ. ಇಷ್ಟು ಎದುರಿಗೆ ಕಾಣುವ ವಸ್ತುವೇ ನಮಗೆ ಕೆಲವೊಮ್ಮೆ ಕಾಣುತ್ತದೆ; ಕೆಲವೊಮ್ಮೆ ಕಾಣುವುದಿಲ್ಲ ಎಂಬ ಪರಿಸ್ಥಿತಿ ಇದೆ ಎಂದಾದರೆ ಇನ್ನು ಕಣ್ಣಿಗೇ ಕಾಣದಿರುವ ವಸ್ತುವಿನ ವಿಷಯದ ಬಗ್ಗೆ ನಾವು ಮಾತನಾಡುವುದು ಹೇಗೆ? ಎಂಬುದು ಕೂಡ ಅಷ್ಟೇ ವಿಮರ್ಶಿಸಬೇಕಾದ ವಿಷಯವಲ್ಲವೇ!? ಅಥವಾ ಒಪ್ಪಿಕೊಳ್ಳಬೇಕಲ್ಲವೇ?
ಇಲ್ಲಿ ‘ಇಲ್ಲ’ ಎಂಬುವವನು ‘ನಾಸ್ತಿಕ’, ‘ಇದೆ’ ಎಂಬುವನು ಆಸ್ತಿಕ. ಅಂದರೆ ಧರ್ಮ ಎಂಬುದಿದೆ; ಆ ಧರ್ಮಕ್ಕೆ ಕಾರಣವಾದ ಕರ್ಮ ಇದೆ; ಕರ್ಮದಿಂದ ಕಾಣದ ಧರ್ಮವು ಸಿದ್ಧವಾಗುತ್ತದೆ. ನಮಗೆ ಕಾಣುವ ಕರ್ಮವೇ ಧರ್ಮರೂಪವಾಗಿ ಆದಾಗ, ಹೊಟ್ಟೆ ನೋವಿಗೆ ಆಹಾರ ತಿನ್ನಿದಿದ್ದರೂ ತಿಂದ ಆಹಾರದಿಂದಲೇ ಕಾಣದ ಹೊಟ್ಟೆನೋವನ್ನು ಹೇಗೆ ಅನುಭವಿಸುತ್ತೇವೋ, ಅಂತಹ ಧರ್ಮವನ್ನು ಸಾಧಿಸುವ ರೀತಿಯಲ್ಲಿ ಕರ್ಮವಿದ್ದಾಗ ಅದು ನಮಗೆ ಕಾಣದಿದ್ದರೂ ‘ಇದೆ’ ಎಂದು ಒಪ್ಪಬೇಕಾಗುತ್ತದೆ. ಅದು ಅನುಭವಸತ್ಯ ಎಂದು ಪರಿಗಣಿತವಾಗಬೇಕಾಗುತ್ತದೆ. ಹತ್ತಾರು ಜನ, ಹತ್ತಾರು ಬಾರಿ, ಹತ್ತು ಹಲವು ಕಡೆ ಒಂದೇ ಸತ್ಯವನ್ನು ಅಹುದೆಂದಾಗ ಮಾತ್ರ ಅದು ಸತ್ಯವಾಗುತ್ತದೆ ತಾನೆ? ಈ ಹಿನ್ನೆಲೆಯಲ್ಲಿ ಚಿಂತಿಸಿದಾಗ ನಮಗೆ ತಿಳಿಯುವ ಅಂಶ ಇಷ್ಟೇ - ಒಬ್ಬ ವ್ಯಕ್ತಯ ಪರಿವಿತವಾದ ಬುದ್ಧಿಯಿಂದ ಒಂದು ವಿಷಯ ಇತ್ಯರ್ಥಕ್ಕೆ ಬರದು ಎಂದು. ಅದರ ಬಗ್ಗೆ ಪರಿಪೂರ್ಣ ಪರಿಚಯ ಬರಬೇಕಾದರೆ ಅದಕ್ಕೆ ಹಲವರ ಸಾಕ್ಷೀತ್ವ ಅತ್ಯಂತ ಮುಖ್ಯ. ಹಾಗಾಗಿ ಯಾವುದನ್ನು ತಿಳಿಯಬೇಕಾಗಿದೆಯೋ, ಯಾವುದನ್ನು ತಿಳಿಯುವುದಕ್ಕೋಸ್ಕರವೇ ನಮಗೆ ಭಗವಂತನು ಒಂದು ಸಾಧನವನ್ನು ಕೊಟ್ಟಿದ್ದಾನೋ, ಅದನ್ನು ಬಳಸಿಕೊಳ್ಳದಿದ್ದರೆ ಆಗ ಅದು ಇಲ್ಲದಂತೆಯೇ ಸರಿ. ಅಂದರೆ ಕಣ್ಣು ಕಿವಿ ಇತ್ಯಾದಿ ಇಂದ್ರಿಯಗಳನ್ನು ಕೇವಲ ಭೌತಿಕ ಪ್ರಪಂಚವನ್ನು ಮಾತ್ರ ಅರ್ಥಮಾಡಿಕೊಳ್ಳಲು ಬಳಸಿಕೊಳ್ಳದೆಯೇ ಈ ಇಂದ್ರಿಯಗಳಿಂದಲೇ ದೈವಿಕ ಪ್ರಪಂಚವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಯೋಗಶಾಸ್ತ್ರವೂ ಸಾರುತ್ತದೆ. ಹಾಗಾಗಿ ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಎಂಬುದಾಗಿ ಪರಿಗಣಿಸದೇ ಕಣ್ಣಿನ ಇನ್ನೊಂದು ಪಾರ್ಶ್ವದ ಭಾಗವು ನಮಗೆ ಕಾಣಿಸದಿದ್ದರೂ ಸತ್ಯ ಎಂದು ಹೇಗೆ ಒಪ್ಪಿಕೊಳ್ಳುತ್ತೇವೋ, ಹಾಗೆಯೇ ಸ್ಥೂಲ, ಸೂಕ್ಷ್ಮ, ಪರ ಎಂಬ ಮೂರು ಹಂತಗಳಿಂದ ಕೂಡಿದ ಅರ್ಥಪ್ರಪಂಚವಿದೆ ಎಂಬುದನ್ನು ಒಪ್ಪಬೇಕು. ಕಾಣುವ ಕಣ್ಣನ್ನು ಪಡೆದು ಕೊಂಡಾಗ ಮಾತ್ರ ಅವನು ಪುರುಷನಾಗುತ್ತಾನೆ. ಇಲ್ಲವಾದರೆ ಕಣ್ಣಿದ್ದು ಕುರುಡನಾಗಿ ಅವನೇ ನಾಸ್ತಿಕಪುರುಷನಾಗುತ್ತಾನೆ ಅಷ್ಟೇ.
ಸೂಚನೆ : 5/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಅಷ್ಟಾಕ್ಷರೀ 109 ಸಂತಮೇನಂ ತತೋ ವಿದುಃ (Astakshara 109)
ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಸಂತನೆಂದರೆ ಯಾರು? - ಎಂಬ ಪ್ರಶ್ನೆಗೆ ಉತ್ತರವೇನು ಸುಲಭವೇ? ನಮ್ಮ ದೇಶದಲ್ಲಿ ಅನೇಕ ಸಾಧು-ಸಂತರಿದ್ದರೆನ್ನುತ್ತೇವಲ್ಲವೇ? ವಿದೇಶಗಳಲ್ಲೂ ಕೆಲವರನ್ನು ಸಂತರೆಂದು ಕರೆದಿದ್ದಾರೆ – ಎಂದೆಲ್ಲಾ ತೋರಬಹುದು. ಆದರೆ ಗೀತೆ-ಉಪನಿಷತ್ತು ಮುಂತಾದ ನಮ್ಮ ಪ್ರಾಚೀನ-ಗ್ರಂಥಗಳಲ್ಲಿ ಯಾರನ್ನು ಸಂತನೆಂಬುದಾಗಿ ಹೇಳಿದ್ದಾರೆ? – ಎಂದೊಮ್ಮೆ ನೋಡಬೇಕಲ್ಲವೇ?
ಈ ಬಗ್ಗೆ ತೈತ್ತಿರೀಯೋಪನಿಷತ್ತಿನಲ್ಲಿ ಸ್ಪಷ್ಟವಾದ ವಿವರಣೆಯೇ ಇದೆ. ಅಲ್ಲಿ ಅಸಂತನೆಂದರೇನೆಂಬುದನ್ನು ಮೊದಲು ವಿವರಿಸಿ, ಆಮೇಲೆ ಸಂತನೆಂದರೆ ಯಾರೆಂಬುದನ್ನು ತಿಳಿಸಿದೆ.
ಸಂತನೆಂಬ ಪದ ಕನ್ನಡದ್ದು. ಅದರೆ ಅದರ ಮೂಲ ಸಂಸ್ಕೃತದ ’ಸತ್’ ಎಂಬುದು.
ಹಾಗಾದರೆ ’ಸತ್’ ಎಂದರೇನು? ಅದಕ್ಕೆ ಗೀತೆಯಿತ್ತಿರುವ ಉತ್ತರವನ್ನೇ ಮೊದಲು ನೋಡುವುದು ಒಳಿತು.
ಸತ್ ಎಂಬುದು ಆರು ಅರ್ಥಗಳಲ್ಲಿ (ಲೋಕದಲ್ಲಿಯೂ ವೇದದಲ್ಲಿಯೂ) ಬಳಕೆಯಾಗಿದೆಯೆಂದು ಭಗವದ್ಗೀತೆಯು ಪಟ್ಟಿಮಾಡುತ್ತದೆ! ಮೊಟ್ಟಮೊದಲನೆಯದಾಗಿ ಸತ್ ಎನ್ನುವುದು ಬ್ರಹ್ಮದ ಹೆಸರೇ. ಅಲ್ಲದೆ, ಸದ್ಭಾವ ಹಾಗೂ ಸಾಧುಭಾವಗಳೆಂಬ ಅರ್ಥಗಳಲ್ಲೂ ಸತ್ ಎಂಬುದನ್ನು ಬಳಸಲಾಗುತ್ತದೆ.
ಈ ಮೂರಲ್ಲದೆ, ಯಾವುದೇ ಪ್ರಶಸ್ತ-ಕರ್ಮವೂ ಸತ್ ಎನಿಸಿಕೊಳ್ಳುತ್ತದೆ. ಯಜ್ಞ-ದಾನ-ತಪಸ್ಸುಗಳಲ್ಲಿ ತೊಡಗುವಿಕೆಯೂ, ಜೊತೆಗೆ ಅವಕ್ಕಾಗಿ ಮಾಡುವ ಕರ್ಮವೂ ಸತ್ ಎನಿಸಿಕೊಳ್ಳತಕ್ಕವೇ – ಎನ್ನುತ್ತದೆ ಗೀತೆ. (ಯಜ್ಞ-ದಾನ-ತಪಸ್ಸುಗಳನ್ನೇ ಅಶ್ರದ್ಧೆಯಿಂದ ಮಾಡಿದಲ್ಲಿ ಅವೆಲ್ಲವೂ ಅಸತ್ ಎನಿಸಿಕೊಳ್ಳುತ್ತವೆ).
ಇವಿಷ್ಟರಲ್ಲಿ ಮೊದಲನೆಯ ಮೂರು ಅರ್ಥಗಳು ನಮಗಿಲ್ಲಿ ಪ್ರಕೃತ. “ಸತ್” ಎಂದರೆ ಇರುವಂತಹುದು. ಮೂರು ಕಾಲಗಳಲ್ಲೂ, ಎಂದರೆ ಹಿಂದೂ ಇಂದೂ ಮುಂದೂ, ಎಂದೆಂದೂ ಇರುವಂತಹುದು; ಅದೇ ಬ್ರಹ್ಮ. ಎಂದೇ ಅದೇ ಪ್ರಥಮಾರ್ಥ.
ಇನ್ನು ಸದ್-ಭಾವವೆಂದರೆ ಇರುವುದೆಂದೆನಿಸಿಕೊಳ್ಳುವಿಕೆ; ಸಾಧು-ಭಾವವೆಂದರೆ ಒಳ್ಳೆಯದಾಗಿರುವಿಕೆ. ವಾಸ್ತವವಾಗಿ ’ಅಸ್ತಿ’ ಎಂಬುದರ ಧಾತುವಿನಿಂದಲೇ ಸತ್ ಎಂಬುದು ಬಂದಿರುವುದು. ಅಸ್ತಿ ಎಂದರೆ “ಇದೆ” ಎಂದರ್ಥ.
ನಾವು ಕಾಣುವ ಎಲ್ಲ ವಸ್ತುಗಳೂ/ವ್ಯಕ್ತಿಗಳೂ ಇಂದಲ್ಲ ನಾಳೆ ಬದಲಾಗುವಂತಹವೇ/ಮರೆಯಾಗುವಂತಹರೇ. (ನಾವೂ ಅಷ್ಟೇ). ಕೆಲವೇ ವಸ್ತುಗಳೇ ದೀರ್ಘಕಾಲ ಉಳಿಯುವಂತಹುವು. ಈಗಿದ್ದು ಮರುಕ್ಷಣಕ್ಕೆ ಮರೆಯಾಗುವುದನ್ನು ನಂಬುವುದೆಂತು? ಇಂದು ನಂಬಿಸಿ ನಾಳೆ ಮಾಯವಾಗುವವರನ್ನು ನೆಚ್ಚಲಾದೀತೇ, ಮೆಚ್ಚಲಾದೀತೇ? ಪ್ರೀತಿ-ವಿಶ್ವಾಸಗಳಾದರೂ ಚಿರಕಾಲ ಉಳಿಯುವಂತಾದಾಗಲೇ ಅವಲ್ಲಿ ನಂಬಿಕೆಯಿಡುವಂತಹುದು.
ಯಾವುದನ್ನು ನೆಚ್ಚಬಲ್ಲೆವೋ ಅದುವೇ ಒಳ್ಳೆಯದನ್ನಾಗಿಸುವುದು: ಯಾವುದು ಉಳಿಯುವುದೋ ಅದುವೇ ಒಳ್ಳೆಯದೂ ಆಗುವುದು. ಹೀಗಾಗಿ “ಉಳಿಯುವುದು”, ’’ಒಳ್ಳೆಯದು” ಎಂಬೆರಡಕ್ಕೂ ಅಂಟುಂಟು.
ಅಲ್ಲಿಗೆ, ಸಂಸ್ಕೃತದ ಸತ್ ಎಂಬುದರ ಅರ್ಥಗಳಾದ ಸದ್ಭಾವ-ಸಾಧುಭಾವಗಳಲ್ಲಿಯ ಅಂಟು-ನಂಟುಗಳೇ ಕನ್ನಡದ ಕನ್ನಡಿಯಲ್ಲಿ ಹೀಗೆ ಪ್ರತಿಫಲಿತವಾಗಿವೆಯೆಂದಾಯಿತು!
ಗೀತೆಯ ಅವಲೋಕನವಾಯಿತು. ಇನ್ನು ಉಪನಿಷತ್ತು ಏನು ಹೇಳುವುದೆಂಬುದನ್ನು ನೋಡೋಣ. ತ್ರಿಕಾಲ-ಸತ್ಯವು ಯಾವುದೋ, ಎಂದರೆ ಭೂತ-ವರ್ತಮಾನ-ಭವಿಷ್ಯತ್ತುಗಳಲ್ಲಿ ಯಾವುದು ಇರುವುದೋ, ಅದುವೇ ಬ್ರಹ್ಮವಷ್ಟೆ? ಆದ್ದರಿಂದ ’ಸತ್’ ಎನ್ನಿಸಿಕೊಳ್ಳುವ ಪದಾರ್ಥಗಳಲ್ಲೆಲ್ಲಾ ಅದುವೇ ಶ್ರೇಷ್ಠವಾದದ್ದು: ಸತ್ತಮವೇ ಅದು.
ಹಾಗಿರುವ ಅದನ್ನೇ ಯಾರಾದರೂ ಅಸತ್ ಎಂದುಕೊಂಡುಬಿಡುವುದಾದರೆ ಆತನೇ ಅಸತ್/ಅಸಂತನಾಗಿಬಿಡುತ್ತಾನೆ! – ಎನ್ನುತ್ತದೆ ತೈತ್ತಿರೀಯ. ಅರ್ಥಾತ್ ಇಲ್ಲವಾಗಿಬಿಡುತ್ತಾನೆ! ಪರಮ-ಸತ್ಯವನ್ನೇ ಅಲ್ಲಗಳೆಯುವಾತನು ತಾನುಳಿದಾನೇ? ಹಾಗೆಂದ ಮಾತ್ರಕ್ಕೆ ತತ್-ಕ್ಷಣವೇ ಆತನು ಸತ್ತುಹೋಗಿಬಿಡುತ್ತಾನೆಂದಲ್ಲ; ಇದ್ದೂ ಇಲ್ಲವಾಗುತ್ತಾನೆಂದೇ ಅದರ ಅರ್ಥ. “ಆಟಕ್ಕುಂಟು, ಲೆಕ್ಕಕ್ಕಿಲ್ಲ” – ಎಂಬುದರ ಅರ್ಥ ಇದೇ. ಸತ್ ಎಂಬುದು ಹೋದವನನ್ನೇ ಸತ್ತುಹೋದವನು ಎನ್ನುವುದು!
ಇದಕ್ಕೆ ಪ್ರತಿಯಾಗಿ, ಸದಾ ಇರುವ ಸತ್ತನ್ನೇ ’ಅಸ್ತಿ’ ಎಂಬುದಾಗಿ ಯಾವನು ಅರಿತಿರುವನೋ, ಆತನನ್ನೇ ಸಂತನೆನ್ನುವರು (ಸಂತಮೇನಂ ತತೋ ವಿದುಃ) - ಎನ್ನುತ್ತದೆ ಉಪನಿಷತ್ತು.
ಈ ಸಂದರ್ಭದಲ್ಲಿ ಶ್ರೀರಂಗಮಹಾಗುರುಗಳು ಕೊಟ್ಟಿರುವ ಎಚ್ಚರವು ಅವಧೇಯ: "ಬ್ರಹ್ಮನ ಇರುವಿಕೆಯನ್ನು ಕಂಡು ಅರಿತವನನ್ನೇ ಸಂತನೆಂದು ಜ್ಞಾನಿಗಳು ತಿಳಿಯುತ್ತಾರೆ. ಅಂತಹವನೇ ನಿಜವಾದ ಆಸ್ತಿಕ".
ಅರ್ಥಾತ್, ಆ ಅನುಭವವೇ ಉಂಟಾಗದವರು, ಅಸ್ತಿಯೆಂದು ಬಾಯ್ಮಾತಿಗಷ್ಟೇ ಹೇಳುವವರು, ಒಂದರ್ಥದಲ್ಲಿ ನಾಸ್ತಿಕರೇ ಸರಿ; ಔಪಚಾರಿಕವಾಗಿಯಷ್ಟೆ ಅವರು ಆಸ್ತಿಕರು!
ಉಪನಿಷತ್ತು ಹೇಳುವ ಅರ್ಥದಲ್ಲಿ ಸಂತನೆನಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಶ್ರೀರಂಗಮಹಾಗುರುಗಳು ತಿಳಿಸುವ ಲೆಕ್ಕದಲ್ಲಿ ಆಸ್ತಿಕರಾಗಬೇಕಾದರೆ ನಿಜವಾದ ಸಾಧನೆಯೇ ಬೇಕು. ಅಸ್ತಿಯೆಂಬ ಮತಿಯು ವಾಸ್ತವವಾಗಿ ತನ್ನಲ್ಲಿಯೇ ಉಂಟಾದವನೇ ನಿಜವಾದ ಆಸ್ತಿಕ. ಅನುಭವದಿಂದ ಬಲ್ಲವನೇ ನಿಜವಾಗಿ ಬಲ್ಲನಲ್ಲವೇ? ಮತ್ತೊಬ್ಬರ ಹೇಳ್ಕೆ-ಕೇಳ್ಕೆಮಾತ್ರಗಳಿಂದಲ್ಲ.
ಜಗತ್ ಎಂಬ ಪದಕ್ಕೇ “ಸದಾ ಬದಲಾಗುತ್ತಿರುವುದು” ಎಂಬ ಅರ್ಥವಿದೆ. ಇದಕ್ಕೆ ಪ್ರತಿಯಾಗಿ ಎಂದೂ ಬದಲಾಗದೆ ಇರುವುದೇ ಸತ್ ಎನಿಸುವುದು. ಸನಾತನ/ಸದಾತನವೆಂದರೂ ಅದುವೇ.
ಅಂತಹ ಮಹತ್ತಾದ ಸದ್ವಸ್ತುವನ್ನು ಸ್ವಾನುಭವದಿಂದ ತನ್ನ ಸ್ವಾಂತಕ್ಕೆ(ಅಂತಃಕರಣಕ್ಕೆ) ತಂದುಕೊಂಡವನೇ ಸಂತ – ಎನ್ನುವುದೇ ಉಪನಿಷದುಕ್ತಿಯ ಸದಾಶಯವಲ್ಲವೇ?
ಪ್ರಕೃತಿ - ಋತ - ಸತ್ಯ (Prakruti - Ruta - Sathya)
ಲೇಖಕರು: ಎಂ. ಆರ್. ಭಾಷ್ಯಮ್
ಪ್ರತಿಕ್ರಿಯಿಸಿರಿ (lekhana@ayvm.in)
ನಾವು ನಮ್ಮ ಪರಿಸರವನ್ನು ಗಮನಿಸುತ್ತಿರುತ್ತೇವೆ. ಮುಂಜಾವಿನಲ್ಲಿ ಸೂರ್ಯೋದಯ. ನಂತರ ಮಧ್ಯಾಹ್ನ ಸಂಜೆ, ರಾತ್ರಿಗಳು. ಮತ್ತೊಂದು ದಿನದ ಉದಯ. ಇದು ದೈನಿಕ ಚಕ್ರ. ಒಂದು ವರ್ಷ ತೆಗೆದುಕೊಂಡರೆ ವಸಂತ, ಬೇಸೆಗೆ, ವರ್ಷಾ, ಶರದ್, ಹೇಮಂತ, ಶಿಶಿರ ವೆಂಬ 6 ಋತುಗಳು. ಇನ್ನೊಂದು ವರ್ಷ, ಮತ್ತೊಂದು ಆವೃತ್ತ. ಚಂದ್ರಮನ ಕ್ಷಯ-ವೃದ್ಧಿಗಳು, ಸಮುದ್ರದ ಉಬ್ಬರ-ಇಳಿತಗಳು, ಉತ್ತರ-ದಕ್ಷಿಣಾಯನಗಳು, ತಾರೆಗಳ ಹಾಗೂ ತಾರಾಮಂಡಲಗಳ ಚಲನೆ - ಇವೆಲ್ಲವೂ ಬ್ರಹ್ಮಾಂಡದ ರಂಗಮಂಟಪದಲ್ಲಿನ ವಾದ್ಯಗೋಷ್ಠಿಗಳ ಮೇಳನದಂತೆ ಮತ್ತೆ ಮತ್ತೆ ಪುನರಾವರ್ತಿಸುತ್ತವೆ. ಗಮನಿಸಿದರೆ, ಒಂದೊಂದು ಆವರ್ತನೆಯೂ ಅನೇಕ ಒಳ-ಆವರ್ತನೆಗಳನ್ನೊಳಗೊಂಡಿರುವುದು ಕಾಣಬರುತ್ತದೆ.
ನಮ್ಮ ದೈನಂದಿನ, ವಾರ್ಷಿಕ, ಜೀವನದ ಚಟುವಟಿಕೆಗಳನ್ನೂ ಈ ದಿನ- ರಾತ್ರಿ, ಋತುಗಳ ಜೊತೆ ಅಳವಡಿಕೊಳ್ಳುತ್ತೇವೆ. ನಾವೇ ಏಕೆ, ಪಶು - ಪಕ್ಷಿಗಳ ಕಾರ್ಯ ವ್ಯವಸ್ಥೆ ಈ ಚಕ್ರಗಳ ಜೊತೆ ಮೇಳೈಸಿದೆ. ವಲಸೆ ಬರುವುದು, ಗೂಡು ಕಟ್ಟಿ ಮೊಟ್ಟೆ ಇಕ್ಕಿ ತಮ್ಮ ಪೀಳಿಗೆಯನ್ನು ಮುಂದುವರಿಸುವುದು ಎಲ್ಲವೂ ಪ್ರಕೃತಿ ಚಕ್ರಗಳೊಡನೆ ಮೇಳೈಸಿದೆ. ಹಾಗೆಯೇ ಗಿಡಗಳ ಚಿಗುರು, ಹೂಪೂಸುವುದು ಈ ಋತುಗಳೊಡನೆ ಜೋಡಿಸಿಕೊಂಡಿದೆ. ನೀರು ಆವಿಯಾಗಿ ಅಂಬರಕ್ಕೆ ಮತ್ತು ಮೋಡದಿಂದ ಮಳೆ ಭೂಮಿಗೆ. ಹಾಗೆಯೇ ನದಿಗಳು ಉಕ್ಕಿ ಹರಿದು ಶಾಂತಗೊಳ್ಳುತ್ತವೆ. ಎಲ್ಲವೂ ಈ ಪ್ರಕೃತಿಚಕ್ರದ ಮೇಳನದೊಂದಿಗೆ. ಇಡೀ ಪರಿಸರವನ್ನು ಗಮನಿಸಿದಾಗ, ತೈಲವೆರದ ಯಂತ್ರದಂತೆ, ಒಂದೇ ನಮೂನೆಯ ಅನಂತ-ನಿರಂತರ- ಪುನರಾವರ್ತನೆಯ ಒಂದು ಉತ್ಕೃಷ್ಟರಚನೆ ಕಂಡುಬರುತ್ತದೆ.
ಈ ಉತ್ಕೃಷ್ಟರಚನೆಯನ್ನು ಭಾರತೀಯಪರಂಪರೆಯ ವಿಚಾರಧಾರೆಯಲ್ಲಿ ‘ಪ್ರಕೃತಿ’ ಎಂದು ಕರೆಯುತ್ತಾರೆ (ಪ್ರ: ಪ್ರಕೃಷ್ಟ-ಉತ್ಕೃಷ್ಟ, ಕೃತಿ: ರಚನೆ. ) ಭಾರತೀಯ ಮಹರ್ಷಿಗಳು ಕಂಡುಕೊಂಡಂತೆ ಇವು ಈ ವಿಶ್ವವನ್ನು ರಚಿಸಿದ ಬೃಹತ್ ಶಕ್ತಿಯಾದ ಬ್ರಹ್ಮವಸ್ತುವಿನ ಯೋಜನೆ. ಅವರ ಅನುಸಾರವಾಗಿ ಬ್ರಹ್ಮವಸ್ತು ತಾನು ತಾನಾಗಿಯೇ ಒಂದೇ ಇದ್ದಿತು. ಅದಕ್ಕೆ, ತನ್ನಲ್ಲಿ ಸುಪ್ತವಾಗಿರುವ ಎಲ್ಲವನ್ನೂ ಪ್ರದರ್ಶಿಸಬೇಕೆಂಬ ಇಚ್ಛೆ ಹುಟ್ಟಿತು. ಆ ಇಚ್ಛೆಯಿಂದ ತನ್ನನ್ನು ತಾನು ಎರಡಾಗಿ ವಿಂಗಡಿಸಿಕೊಂಡಿತು ಒಂದು ‘ಪುರುಷ’, ಮತ್ತೊಂದು ‘ಪ್ರಕೃತಿ’. ‘ಪುರುಷ’ ಈ ಬ್ರಹ್ಮಾಂಡವೆಂಬ ಪುರಿಯಲ್ಲಿ ವಾಸಮಾಡುವವನು ‘ಪುರಿ ಶೇತೇ ಇತಿ ಪುರುಷಃ ‘ ಆಗಲೇ ಹೇಳಿದಂತೆ ‘ಪ್ರಕೃತಿ’ ಎಂದರೆ ‘ಪ್ರಕೃಷ್ಟ ಕೃತಿ’ ಅಥವಾ ‘ಉತ್ಕೃಷ್ಟವಾದ ಕೃತಿ.’ ಆ ಪುರುಷ ಪ್ರಕೃತಿಯಲ್ಲಿ ಪ್ರವೇಶಿಸಿತು, ಬೀಜ -ಭೂಮಿಯಲ್ಲಿ ಹೊಕ್ಕಂತೆ. ಆಗ ನಾವು ಕಾಣುವ ಮತ್ತು ಕಾಣದಿರುವ ಬ್ರಹ್ಮಾಂಡದ ಸೃಷ್ಟಿ ಆಯಿತು. ಆ ಪುರಷ ತಾನೇತಾನಾಗಿ ತನ್ನಲ್ಲಿರುವ ಎಲ್ಲವನ್ನು ಅಡಗಿಸಿಕೊಂಡಿರುವ ಸ್ಥಿತಿಯನ್ನು ‘ಋತ’ ವೆಂದರೆ ಮತ್ತು ಅದರ ವಿಕಸಿತ ಸ್ಥಿತಿ ‘ಸತ್ಯ’. ಇದನ್ನು ನಾವುಕಾಣುವ ಚಕ್ರದ ಎಲ್ಲೆಡೆಯಲ್ಲೂ ಅನ್ವಯಿಸಬಹುದು.
ಉದಾಹರಣೆಗಾಗಿ ಒಂದು ಬೀಜವನ್ನು ತೆಗೆದುಕ್ಕೊಳ್ಳುವ. ಅದನ್ನು ಭೂಮಿಯಲ್ಲಿ ನೆಟ್ಟು, ಅದು ತನ್ನ ನೈಜತೆಯನ್ನು ಉಳಿಸಿಕೊಂಡು ಬೆಳೆದರೆ ಮೊಳಕೆ, ಕಾಂಡ, ಕೊಂಬೆ - ರಂಬೆಗಳು, ಎಲೆ - ಹೂವು - ಕಾಯಿ - ಫಲವಾಗಿ ಕೊನೆಗೆ ಬೀಜದಲ್ಲಿಯೇ ಪರ್ವ್ಯಸನಗೊಳ್ಳುತ್ತದೆ. ಅಂದರೆ ಇಡೀ ವೃಕ್ಷದ ರಚನೆ, ಬೀಜದಲ್ಲಿ ಅಡಗಿದೆ. ಹಾಗೆಯೇ ಇಡೀ ಸೃಷ್ಟಿಯಲ್ಲೂ ಸಹ. ಭಾರತೀಯಪರಂಪರೆಯ ವಿಚಾರಧಾರೆಯಲ್ಲಿ ತನ್ನಲ್ಲಿಯೇ ಸುಪ್ತವಾಗಿರುವ ಶಕ್ತಿಯನ್ನು ಧರಿಸಿರುವ ಈ ನೈಜಸ್ವಭಾವವನ್ನು ‘ಋತ ’ ವೆಂದು ಕರೆದರೆ, ಅದರ ಅಭಿವ್ಯಕ್ತಿ ‘ಸತ್ಯ. ’ ‘ಬೀಜ’ ಋತವಾದರೆ, ಅದರ ಅಭಿವ್ಯಕ್ತಿ ‘ವೃಕ್ಷ’ ಸತ್ಯ. ಇದನ್ನು ಸಮಗ್ರ ಸೃಷ್ಟಿಗೆ ಅನ್ವಯಿಸಬಹುದು. ಶ್ರೀರಂಗಮಹಾಗುರುಗಳು ಹೇಳುವಂತೆ “ಸೃಷ್ಟಿಯು ಕಾಲ-ದೇಶ ರಂಗಗಳಲ್ಲಿ ನಡೆಯುವ ಆವೃತ್ತಗಳ ಅಭೂತಪೂರ್ವ ನೃತ್ಯ. ಅವುಗಳ ಉಗಮಸ್ಥಾನದಲ್ಲಿರುವುವು ಋತ-ಸತ್ಯಗಳು. ಇವೆರಡೂ ಪರಂಬ್ರಹ್ಮ, ‘ಋತಮ್ ಸತ್ಯಂ ಪರಂಬ್ರಹ್ಮ ಪುರುಷಮ್ ಕೃಷ್ಣ ಪಿಂಗಳಂ..’ ಉಪನಿಷದ್ ವಾಣಿ.”
ಸೂಚನೆ: 3/07/2024 ರಂದು ಈ ಲೇಖನ ವಿಜಯ ಕರ್ನಾಟಕದ ಭೋದಿವೃಕ್ಷದಲ್ಲಿ ಪ್ರಕಟವಾಗಿದೆ.