Friday, July 31, 2026

ಪ್ರಶ್ನೋತ್ತರ ರತ್ನಮಾಲಿಕೆ 76 (Prasnottara Ratnamalike 76)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೭೬. ಯಾರ ಸ್ಮರಣೆಯನ್ನು ಮಾಡಿಕೊಳ್ಳಬಾರದು?

ಉತ್ತರ- ಬೇರೆಯವರ ದೋಷವನ್ನು ಮತ್ತು ಸುಳ್ಳನ್ನು.


ಈ ಹಿಂದಿನ ಲೇಖನದಲ್ಲಿ, ಸ್ಮರಣೆ ಎಂದರೇನು? ಯಾವುದನ್ನು ಸ್ಮರಿಸಿಕೊಳ್ಳಬೇಕು? ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಲಾಗಿತ್ತು. ಈಗ ಅದರ ಮುಂದುವರಿಕೆಯಾಗಿ ಯಾವುದನ್ನು ಮರೆಸಿಕೊಳ್ಳಬಾರದು? ಎಂಬ ವಿಷಯವಾಗಿ ಸ್ವಲ್ಪ ಅವಲೋಕನ ಮಾಡೋಣ. ಸ್ಮರಣೆಯನ್ನು ಏಕೆ ಮಾಡಿಕೊಳ್ಳಬೇಕು? ಅದರಿಂದ ಆಗುವ ಪ್ರಯೋಜನವೇನು? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಯಾವುದನ್ನು ಸ್ಮರಿಸಿಕೊಳ್ಳುತ್ತೇವೆಯೋ ಆ ವಿಷಯ ನಮಗೆ ಅರಿವಾಗುತ್ತದೆ ಮತ್ತು ಆ ವಿಷಯದಿಂದ ಆಗುವ ಪ್ರಯೋಜನ ನಮಗೆ ಲಭ್ಯವಾದಂತೆ ಆಗುತ್ತದೆ. ಆದ್ದರಿಂದ ವಿಷಯದ ಸ್ಮರಣೆ ಅತ್ಯಂತ ಮುಖ್ಯವಾದದ್ದು ಎಂಬುದು ಇದರ ತಾತ್ಪರ್ಯ.


ನಾವು ಮಾಡುವ ಸ್ಮರಣೆಯು ಯಾವುದಿರುತ್ತದೆಯೋ, ಅದರಂತೆ ನಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳೆಲ್ಲವೂ ಅದಕ್ಕೆ ಪೂರಕವಾಗಿ ಕೆಲಸವನ್ನು ಮಾಡುತ್ತವೆ. ಆಗ ನಮ್ಮ ನಡೆ ನುಡಿಗಳಲ್ಲಿ ಅದರ ಛಾಯೆಯು ಒಡಮೂಡುತ್ತದೆ. ಅಂದರೆ ಯಾವಾಗ ನಾವು ಸತ್ಯ, ಪ್ರಾಮಾಣಿಕತೆ, ದಯೆ ಮೊದಲಾದ ಸದ್ಗುಣಗಳನ್ನು ಅಳವಡಿಸಿಕೊಳ್ಳುತ್ತೇವೋ, ಆಗ ನಮ್ಮ ನಡೆನುಡಿಗಳು ಅದಕ್ಕೆ ತಕ್ಕಂತೆ ಇರುತ್ತವೆ. ಆಗ ನಾವು ಮಾತನಾಡುವುದು ಸತ್ಯವಾಗಿರುತ್ತದೆ; ನಮ್ಮ ನಡೆಯು ಸತ್ಯಕ್ಕೆ ಅವಿರೋಧವಾಗಿ ಇರುತ್ತದೆ. ಅದೇ ನಮ್ಮ ಸ್ಮರಣೆಯು ಇದಕ್ಕೆ ವಿರುದ್ಧವಾಗಿದ್ದರೆ ಆಗ ನಡೆನುಡಿಗಳು ವಿರುದ್ಧವಾಗಿಯೇ ಇರುತ್ತವೆ. ಹಾಗಾಗಿ ಈ ಸ್ಮರಣೆಯು ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಅದು ಎಷ್ಟು ನಮಗೆ ಪೂರಕವಾಗುತ್ತದೆ ಎಂಬುದು ಕೂಡ ಅಷ್ಟೇ ಗಮನಾರ್ಹ. ನಾವು ಯಾವುದನ್ನು ಸ್ಮರಿಸಿಕೊಳ್ಳಬೇಕು? ಯಾವುದನ್ನು ಮರೆಯಬಾರದು? ಎಂಬುದನ್ನೂ ಕೂಡ ನಾವು ಯೋಚಿಸಬೇಕು.


ಅದಕ್ಕಾಗಿ ಈ ಪ್ರಶ್ನೋತ್ತರದಲ್ಲಿ ಯಾವುದನ್ನು ಸ್ಮರಿಸಿಕೊಳ್ಳಬಾರದು? ಎಂಬ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಬೇರೆಯವರ ದೋಷವನ್ನು ಮತ್ತು ಸುಳ್ಳನ್ನು ಸ್ಮರಿಸಿಕೊಳ್ಳಬಾರದು ಎಂಬುದಾಗಿ ಇಲ್ಲಿ ಹೇಳಲಾಗಿದೆ. ದೋಷವನ್ನು ತಿಳಿದುಕೊಳ್ಳಬೇಕು ಎಂಬುದಾಗಿ ಹೇಳಿದೆ. ತಿಳಿದುಕೊಂಡವನಿಗೆ ದೋಷಜ್ಞ ಅಥವಾ ಪಂಡಿತ ಎಂಬುದಾಗಿಯೂ ಕರೆಯುವುದುಂಟು. “ವಿದ್ವಾನ್ ವಿಪಶ್ಚಿತ್ ದೋಷಜ್ಞಃ” ಎಂಬುದಾಗಿ ‘ದೋಷಜ್ಞ’ ಎಂಬ ಪದಕ್ಕೆ ‘ವಿದ್ವಾನ್’ ಎಂಬ ಪರ್ಯಾಯ ಪದವನ್ನು ಕೊಟ್ಟಿದ್ದನ್ನು ಕಾಣಬಹುದು. ಅಂದರೆ ದೋಷವನ್ನು ತಿಳಿಯಬೇಕಾದದ್ದು ಸರಿಯೇ. ಆದರೆ ತಿಳಿದ ದೋಷವನ್ನು ಕಳೆದುಕೊಳ್ಳುವಷ್ಟು ಮಾತ್ರ ಸ್ಮರಿಸಿಕೊಳ್ಳಬೇಕೇ ವಿನಾ ಮತ್ತೆ ಮತ್ತೆ ಆ ದೋಷವನ್ನು ಸ್ಮರಿಸಿಕೊಂಡಂತೆ ಆ ದೋಷ ನಮ್ಮ ಮೈಮನಗಳಲ್ಲಿ ಆಡಲು ಶುರುವಾಗುತ್ತದೆ. ಹಾಗಾಗಿ ಆ ದೋಷ ನಮ್ಮ ಮೈಮನಗಳಿಗೆ ತಟ್ಟಿದರೆ ಅದರ ಪರಿಣಾಮ ನಮ್ಮ ಮುಂದಿನ ನಡೆನುಡಿಗಳಲ್ಲಿ ಉಂಟಾಗುತ್ತವೆ. ಅಂತೆಯೇ ಸುಳ್ಳನ್ನು ನಾವು ಹೇಳಬಾರದು. ಒಂದು ವೇಳೆ ಯಾವುದೋ ಸತ್ಯದ ಸ್ಥಾನದಲ್ಲಿ ಹೇಳಿರುವ ಸತ್ಯಕ್ಕೆ ಇರುವಷ್ಟೇ ಬೆಲೆಯುಳ್ಳ ಸುಳ್ಳನ್ನು ಹೇಳಿರಬಹುದು. ಆ ಸುಳ್ಳು ಆ ಕಾಲಕ್ಕೆ ಮಾತ್ರವೇ ಸೀಮಿತ. ಅದನ್ನು ಮತ್ತೆ ಮತ್ತೆ ನಾವು ಹೇಳುವುದು ಯೋಗ್ಯವಲ್ಲ, ಅದನ್ನು ಸ್ಮರಿಸಿಕೊಳ್ಳುವುದು ಕೂಡ ಯೋಗ್ಯವಲ್ಲ ಎಂಬ ಅರ್ಥದಲ್ಲಿ ಈ ಪ್ರಶ್ನೋತ್ತರ ಇದೆ. ಹಾಗಾಗಿ ಸುಳ್ಳು ಮತ್ತು ದೋಷ ಸ್ಮರಿಸಿಕೊಂಡಷ್ಟು ಹೆಚ್ಚುತ್ತದೆ. ಅದು ಹಾನಿಯನ್ನು ಉಂಟುಮಾಡುತ್ತದೆ. ಹಾಗಾಗಿ ಅವುಗಳನ್ನು ಸ್ಮರಿಸಿಕೊಳ್ಳದಿರುವುದು ಒಳಿತು ಎಂಬ ನಿರ್ದೇಶನ ಇಲ್ಲಿದೆ.


ಸೂಚನೆ :  26/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.