Saturday, September 30, 2023

ಪರಮ ಪಾವನೆಯಾದ ಅಹಲ್ಯಾ (Parama Pavaneyada Ahalya)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)




ಪಂಚಕನ್ಯೆಯರಲ್ಲಿ ಮೊದಲಿಗೆ ನಾವು ಸ್ಮರಣೆ ಮಾಡಬೇಕಾದವಳು ಅಹಲ್ಯಾ. ಅವಳು ಗೌತಮ ಮಹರ್ಷಿಗಳ ಪತ್ನೀ. ಗೌತಮರು ಸಪ್ತರ್ಷಿಗಳಲ್ಲಿ ಒಬ್ಬರು. ಅಹಲ್ಯೆಯು ಅಂತರಂಗ ಹಾಗೂ ಬಾಹ್ಯ ಸೌಂದರ್ಯಕ್ಕೆ ಪ್ರಸಿದ್ಧಳಾಗಿದ್ದವಳು. ಇಂದ್ರನು ಅವಳನ್ನು ವರಿಸಬೇಕು ಎಂದು ಇಚ್ಛಿಸಿದ್ದ, ಆದರೆ ಬ್ರಹ್ಮದೇವರ ಆಶಯಂತೆ ಮಹರ್ಷಿ ಗೌತಮರನ್ನು ವಿವಾಹವಾಗಿ ಅವರ ಸಹಧರ್ಮಿಣಿ ಆಗುತ್ತಾಳೆ. ಸುಕುಮಾರಿಯಾಗಿ ಬೆಳೆದರೂ ಪತಿಯ ತಪೋಮಯವಾದ ಜೀವನಕ್ಕೆ ಹೊಂದಿಕೊಂಡು ಅವರ ಪ್ರೀತಿಗೆ ಪಾತ್ರಳಾಗಿದ್ದಳು. ಇಂದ್ರ ಅವಳನ್ನು ಮೊದಲಿನಿಂದಲೂ ಬಯಸುತ್ತಿದ್ದ. ಒಮ್ಮೆ ಗೌತಮರು ಆಶ್ರಮದಲ್ಲಿ ಇಲ್ಲದ ಸಮಯವನ್ನು ನೋಡಿ ತಾನೇ ಗೌತಮ ಋಷಿಗಳ ರೂಪವನ್ನು ಧರಿಸಿ ಅಹಲ್ಯೆಯ ಮುಂದೆ ಬಂದು, ಸರಸೋಕ್ತಿಗಳನ್ನಾಡಿ ಅಹಲ್ಯೆಯ ಮನಸ್ಸನ್ನು ಸೂರೆಗೊಂಡ. ಅಹಲ್ಯೆಗೆ ಇವನು ತನ್ನ ಪತಿ ಅಲ್ಲ, ದೇವೇಂದ್ರನೇ ತನ್ನ ಪತಿಯ ರೂಪವನ್ನು ಧರಿಸಿ ಬಂದಿದ್ದಾನೆ ಎಂಬುದಾಗಿ ಅನುಮಾನ ಬಂದರೂ, ಕ್ಷಣಕಾಲ ತನ್ನ ಮನಸ್ಸಿನ ಸ್ಥಿರತೆಯನ್ನು ಕಳೆದುಕೊಂಡು ತನ್ನ ಪಾತಿವ್ರತ್ಯಕ್ಕೆ ಭಂಗ ತಂದುಕೊಂಡಳು. ಆ ಸಮಯದಲ್ಲಿ ಆಶ್ರಮಕ್ಕೆ ಆಗಮಿಸಿದ ಗೌತಮರಿಗೆ ಅಲ್ಲಿ ನಡೆದ ಅಧರ್ಮದ ಅರಿವಾಗಿ ಇಂದ್ರ ಹಾಗೂ ಅಹಲ್ಯೆ ಇಬ್ಬರಿಗೂ ಶಾಪವನ್ನು ಕೊಟ್ಟರು. ಇಂದ್ರನಿಗೆ ಅವನ ತಪ್ಪಿಗೆ ಅನುಗುಣವಾಗಿ ಅಂಗಹೀನನಾಗು ಎಂಬ ಶಾಪವಾದರೆ, ಅಹಲ್ಯೆಗೆ ಅವಳಿಂದ ಆದ ಪಾಪ ಕೃತ್ಯಕ್ಕೆ ಅನೇಕ ಸಾವಿರ ವರ್ಷಗಳ ಕಾಲ ಅದೃಶ್ಯಳಾಗಿ ಆಶ್ರಮದ ಪರಿಸರದಲ್ಲಿ ತಪಸ್ಯೆಯನ್ನು ಆಚರಿಸು ಎಂಬುದಾಗಿ. ಅವಳ ತಪಸ್ಯೆಯು ಪರಿಪಕ್ವವಾಗಿ ದೋಷಗಳೆಲ್ಲವೂ ತೊಳೆದು ಹೋದಾಗ ಈ ಜಾಗಕ್ಕೆ ಶ್ರೀರಾಮಚಂದ್ರನ ಪಾದಸ್ಪರ್ಶವಾಗುತ್ತದೆ ಅಂದಿಗೆ ಅವಳ ಶಾಪದ ಅವಧಿ ಮುಗಿಯುತ್ತದೆ. ಶ್ರೀರಾಮಚಂದ್ರನ ದೃಷ್ಟಿಪ್ರಸಾದದಿಂದ ಪವಿತ್ರಳಾಗಿ ನೀನು ಪುನಃ ನನ್ನನ್ನು ಸೇರುವೆ, ಎಂಬುದಾಗಿ. ಕಲ್ಲಾಗಿ ಹೋಗು ಎಂಬುದಾಗಿಯೂ ಶಪಿಸಿರುವುದರ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ತ್ರಿಕಾಲ ಜ್ಞಾನಿಗಳಾಗಿದ್ದ ಪತಿಯ ಶಾಪದಂತೆಯೇ ಅಹಲ್ಯೆಯು ಯಾರ ಕಣ್ಣಿಗೂ ಕಾಣಿಸಿಕೊಳ್ಳದೇ, ಅದೃಶ್ಯಳಾಗಿ ಅಪವಿತ್ರಳಾದ ತನ್ನನ್ನು ಶುದ್ಧಿ ಪಡಿಸಿಕೊಂಡು ಪುನಃ ಮೊದಲಿನಂತೆಯೇ ಪರಿಶುದ್ಧಳಾಗಲು ತಪಸ್ಯೆಯಲ್ಲಿ ನಿರತಳಾಗುತ್ತಾಳೆ. ತಪಸ್ಸು ಎಂದರೆ ಸುಡುವುದು ಎಂದೇ ಅರ್ಥ. ಯಾವ ಕಾರ್ಯದಿಂದ ತನ್ನ ದೋಷಗಳೆಲ್ಲವೂ ಸುಟ್ಟು ಪಾಪಗಳೆಲ್ಲವೂ ನಾಶವಾಗುತ್ತದೆಯೋ ಅಂತಹ ಕಾರ್ಯವೇ ತಪಸ್ಸು. ಅಹಲ್ಯೆಯು ಅಂತಹ ತಪಸ್ಸನ್ನು ಅನೇಕ ಸಾವಿರ ವರ್ಷಗಳವರೆಗೆ ಆಚರಿಸಿದ ಪರಿಣಾಮ ಅವಳಿಂದ ಆದ ಪಾಪವೆಲ್ಲವೂ ದಹಿಸಲ್ಪಟ್ಟು ಶ್ರೀರಾಮಚಂದ್ರನ ದರ್ಶನಕ್ಕೆ ಯೋಗ್ಯತೆಯನ್ನು ಪಡೆದುಕೊಳ್ಳುತ್ತಾಳೆ. ಶ್ರೀರಾಮನು ಲಕ್ಷ್ಮಣ ಸಮೇತನಾಗಿ ವಿಶ್ವಾಮಿತ್ರರ ಜೊತೆಗೆ ಗೌತಮ ಮಹರ್ಷಿಗಳ ಆಶ್ರಮವನ್ನು ಪ್ರವೇಶಿಸಿದೊಡನೆಯೇ, ಅವನ ಪಾದ ಸ್ಪರ್ಶದಿಂದ  ಅದೃಶ್ಯಳಾಗಿದ್ದ ಅಹಲ್ಯೆಯು ದಿವ್ಯವಾದ ತೇಜಸ್ಸಿನಿಂದ ಲೋಕದ ಕಣ್ಣಿಗೆ ಕಾಣಿಸಿಕೊಳ್ಳುತ್ತಾಳೆ. 

ಶ್ರೀರಾಮ ಹಾಗೂ ಲಕ್ಷ್ಮಣರು ಅಹಲ್ಯೆಯ ಪಾದಗಳಿಗೆ ನಮಸ್ಕರಿಸುತ್ತಾರೆ. ಯಾರ ನಾಮ ಸ್ಮರಣೆಯಿಂದ ಸಮಸ್ತ ಪಾಪಗಳೂ ಭಸ್ಮವಾಗುತ್ತವೆಯೋ ಅಂತಹ ಶ್ರೀರಾಮಚಂದ್ರಪ್ರಭುವೇ ಅವಳಿಗೆ ನಮಸ್ಕರಿಸಿದ ಅಂದ ಮೇಲೆ ಅವಳ ತಪಸ್ಸಿನ ಪ್ರಭಾವ ಅದರಿಂದಾದ ಪಾವಿತ್ರ್ಯ  ಎಷ್ಟು ಎಂಬುದು ಊಹೆಗೂ ನಿಲುಕದ ವಿಷಯ. ಅವಳು ತನ್ನಿಂದ ಆದ ಪಾಪಕ್ಕೆ ಪ್ರಾಯಶ್ಚಿತ್ತ ಹೊಂದಿ ತಪಸ್ಯೆಯ ಮೂಲಕ ಅತ್ಯಂತ ಪರಿಶುದ್ಧಳಾಗಿ ಶ್ರೀರಾಮಚಂದ್ರನ ಗೌರವಕ್ಕೆಪಾತ್ರಳಾಗುತ್ತಾಳೆ. ಆ ಸಮಯಕ್ಕೆ ಸರಿಯಾಗಿ ಗೌತಮ ಮಹರ್ಷಿಗಳೂ  ಅಲ್ಲಿಗೆ ಬರುತ್ತಾರೆ. ಅಹಲ್ಯೆಯೊಂದಿಗೆ ಯಥಾವಿಧಿಯಾಗಿ ಶ್ರೀರಾಮ ಲಕ್ಷ್ಮಣರ ಸತ್ಕಾರ ಮಾಡುತ್ತಾರೆ. ಅಹಲ್ಯೆಯು ಪುನಃ ಗೌತಮ ಮಹರ್ಷಿಗಳೊಂದಿಗೆ ಪರಿಶುದ್ಧವಾದ ಜೀವನವನ್ನು ಪ್ರಾರಂಭಿಸಿ  ಪರಮ ಪತಿವ್ರತೆಯಾಗಿ ಬೆಳಗುತ್ತಾಳೆ. ಅವಳ ಕಠಿಣವಾದ ತಪಸ್ಯೆ ಹಾಗೂ ಶ್ರೀರಾಮಚಂದ್ರನ ಸಂದರ್ಶನದ ಫಲವಾಗಿ ಅವಳಲ್ಲಿದ್ದ ಕೊಳೆಯೆಲ್ಲವೂ ತೊಳೆದು ಹೋಗಿ ಅವಳು ಒಂದು ನೂತನ, ಪವಿತ್ರತಮವಾದ ಜನ್ಮವನ್ನೇ ಪಡೆದು ಲೋಕದಲ್ಲಿ ಪ್ರಸಿದ್ಧಿಯನ್ನು ಹೊಂದುತ್ತಾಳೆ. ಅಹಲ್ಯೆಯ ಮನಸ್ಸು ಒಂದು ಕ್ಷಣ ಸ್ಥಿರತೆಯನ್ನು ಕಳೆದುಕೊಂಡ ಪರಿಣಾಮ ಅವಳಿಂದ ಪತಿದ್ರೋಹದಂತಹ ಮಹಾಪಾತಕವೇ ನಡೆಯಿತು. ಆದರೆ ಪತಿಯೂ , ಬ್ರಹ್ಮರ್ಷಿಯೂ ಆದ ಗೌತಮರು ಅವಳಿಗೆ ನೀಡಿದ ಶಾಪ ಅವಳಿಗೆ ವರವಾಗಿಯೇ ಪರಿಣಮಿಸಿತು. ಮಹಾತ್ಮರ ಶಾಪವೂ ಅನುಗ್ರಹದಂತೆಯೇ ಕೆಲಸ ಮಾಡಿ ಪತಿತರಾದ ಜೀವಿಗಳ ಉದ್ಧಾರಕ್ಕೆ ಕಾರಣವಾಗುತ್ತದೆ. ಅವರು ನೀಡಿದ ಶಿಕ್ಷೆ ಕೇವಲ punishment ಅಲ್ಲ. ನೀನು ನಾಶವಾಗಿ ಹೋಗು ಎಂಬುದಾಗಿಯೋ ಅಥವಾ ಅವಳಿಗೆ ಅಧೋಗತಿಯನ್ನು ಉಂಟುಮಾಡುವ ಇನ್ಯಾವುದೇ ಶಾಪವನ್ನು ಅವರು ನೀಡಲಿಲ್ಲ. ವಿವಾಹವೆಂದರೆ ಪತಿ ಪತ್ನಿಕೇವಲ ಭೌತಿಕವಾಗಿ ಜೊತೆಗೆ ಬಾಳುವುದಷ್ಟೇ ಅಲ್ಲ. ಅವರಿಬ್ಬರ ಮನಸ್ಸುಗಳು ಹೃದಯಗಳು ಒಂದಾಗಿ ದೈವಿಕ ಹಾಗೂ ಅಧ್ಯಾತ್ಮಿಕ ಜೀವನದಲ್ಲಿಯೂ ಒಟ್ಟಿಗೆ ಹೆಜ್ಜೆಯನ್ನು ಇಡಬೇಕಾದ ಸಂಸ್ಕಾರ. ಪತಿಯಾದವನು ಪತ್ನಿಯನ್ನು ಎಲ್ಲ ರೀತಿಯಿಂದಲೂ ಉದ್ಧಾರ ಮಾಡಬೇಕು. ತಾನು ಭಗವನ್ಮಾರ್ಗದಲ್ಲಿ ನಡೆದು ಅವಳನ್ನೂ ನಡೆಸಿ ಮೂಲಸ್ಥಾನವಾದ ಭಗವಂತನ ನೆಲೆಗೆ ಕೊಂಡೊಯ್ಯುವ ಕರ್ತವ್ಯ ಪತಿಯದ್ದೇ ಆಗಿರುತ್ತದೆ. ಹಾಗಾಗಿ ಗೌತಮರು ಅಹಲ್ಯೆಗೆ ಗುರುವಿನ ಸ್ಥಾನದಲ್ಲಿದ್ದುಕೊಂಡು ಅವಳಿಗೆ ನೀಡಿದ ಶಿಕ್ಷೆ ಅಥವಾ ಶಾಪ, ಶಿಕ್ಷಾ - ವಿದ್ಯೋಪಾದಾನೇ ಎಂಬಂತೆ ಅವಳಿಗೆ ನೀಡಿದ ಶಿಕ್ಷಣವೇ ಆಗಿದೆ. ಬಾಹ್ಯ ದರ್ಶನದ ಯೋಗ್ಯತೆಯನ್ನು ಕಳೆದುಕೊಂಡಿದ್ದ ಅವಳು ಪತಿಯ ಶಾಪದಂತೆ ಅದೃಶ್ಯಳಾಗುತ್ತಾಳೆ.

ತಪಸ್ಯೆಯಿಂದ ಅತ್ಯಂತ ಪರಿಶುದ್ಧಳಾದ ಅಹಲ್ಯೆಯನ್ನು ಶ್ರೀರಾಮಚಂದ್ರನೇ ಮೊದಲು ಸಂದರ್ಶಿಸಿ ಅವಳಿಗೆ ಪರಮ ಪಾವನತ್ವವನ್ನು ತಂದು ಕೊಡುತ್ತಾನೆ. ಪಾಪ ಕಳೆದ ಮೇಲೂ ಅಂತಹವರನ್ನು ಹಿಂದಿನ ಪಾಪದ ದೃಷ್ಟಿಯಿಂದಲೇ ನೋಡಿದರೆ ಹಾಗೆ ನೋಡಿದವರಿಗೆ ಪಾಪ ಬರುತ್ತದೆ ಎಂದು ಶ್ರೀರಂಗಪ್ರಿಯ ಸ್ವಾಮಿಗಳು ಹೇಳಿದ್ದು ಇಲ್ಲಿ ಸ್ಮರಣೀಯ. ಪರಮ ಪಾವನೆಯಾದ ಅಂತಹ ಅಹಲ್ಯೆಯ ಸ್ಮರಣೆಯಿಂದ ನಮ್ಮ ಪಾತಕಗಳೂ ನಾಶವಾಗಿ ನಮಗೂ ಪಾವಿತ್ರ್ಯ  ಉಂಟಾಗುವುದರಲ್ಲಿ ಸಂಶಯವಿಲ್ಲ.

ಸೂಚನೆ : 30/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Sunday, September 24, 2023

ವ್ಯಾಸ ವೀಕ್ಷಿತ - 55 ದ್ರೌಪದಿಯನ್ನು ಒಯ್ದವರಾರು?(Vyaasa Vikshita - 55 Draupadiyannu Oydavararu?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ದ್ರೌಪದಿಯನ್ನು ಒಯ್ದವರು ಪಾಂಡವರು - ಎಂಬ ಅರಿವು ಈವರೆಗೆ ಮೂಡಲಿಲ್ಲ, ದ್ರುಪದರಾಜನಿಗೆ. ಎಂದೇ ಅತ್ಯಂತ ಚಿಂತಿತನಾಗಿದ್ದ ಆತನು, ಈಗ ಹಿಂತಿರುಗಿದ ಧೃಷ್ಟದ್ಯುಮ್ನನನ್ನು ಕಾತರನಾಗಿ ಕೇಳಿದನು:

ಮಗನೇ, ಕೃಷ್ಣೆಯು ಎಲ್ಲಿಗೆ ಹೋದಳು? ಅವರನ್ನು ಕರೆದೊಯ್ದವರಾರು?: ಅವಳು ಯಾರೋ ಹೀನಜಾತಿಯವರ ಕೈಸೇರಲಿಲ್ಲ ತಾನೆ? ಕೆಸರು ಮೆತ್ತಿದ ಕಾಲನ್ನು ನನ್ನ ತಲೆಯ ಮೇಲೆ ಇಟ್ಟಂತಾಗಿಲ್ಲ ತಾನೆ? ಮಾಲೆಯು ಹೋಗಿ ಶ್ಮಶಾನದಲ್ಲಿ ಬೀಳಲಿಲ್ಲ ತಾನೆ? ಸಮಾನವರ್ಣನಾದ ಕ್ಷತ್ರಿಯಶ್ರೇಷ್ಠರಲ್ಲೊಬ್ಬನೋ ಅಥವಾ ನಮಗಿಂತಲೂ ಶ್ರೇಷ್ಠವರ್ಣವೆನಿಸುವ ಬ್ರಾಹ್ಮಣರಲ್ಲೊಬ್ಬನೋ ಅವಳ ಕೈಹಿಡಿದಿರುವನಷ್ಟೆ? ನಿಮ್ನವರ್ಣದವನಾರೋ ಅವಳನ್ನು ಸ್ಪರ್ಶಿಸಿದ್ದಾಗಿ, ನನ್ನ ತಲೆಯ ಮೇಲೆ ಆತ ತನ್ನ ಎಡಗಾಲಿಟ್ಟಂತಾಗಿಲ್ಲವಷ್ಟೆ? 'ಪುರುಷಶ್ರೇಷ್ಠನಾದ ಅರ್ಜುನನೊಂದಿಗೇ ಅವಳ ಸಂಯೋಗವಾಗಿರುವುದು' - ಎಂದು ಕೇಳಿದೆನಾದರೆ ಬಹಳವೇ ಸಂತೋಷಪಡುವೆ, ಎಂದೆಂದೂ ದುಃಖಿಸೆ! ಆ ಕಾರಣಕ್ಕಾಗಿಯೇ, ಪುತ್ರನೇ, ನನ್ನ ಮಗಳನ್ನು ಗೆದ್ದಿರುವಾತನು ಯಾರೆಂದು ಯಥಾರ್ಥವಾಗಿ ಹೇಳು. ಕುರುಶ್ರೇಷ್ಠನೆನಿಸಿದವನು ವಿಚಿತ್ರವೀರ್ಯ; ಆತನ ಮೊಮ್ಮಕ್ಕಳು (ಎಂದರೆ ಪಾಂಡವರು) ಇನ್ನೂ ಬದುಕಿರುವರಷ್ಟೆ? ಬಿಲ್ಲನ್ನು ಹೆದೆಯೇರಿಸಿ ಲಕ್ಷ್ಯವನ್ನು ಭೇದಿಸಿದವನು ಕುಂತಿಯ ಮಕ್ಕಳಲ್ಲಿ ಕೊನೆಯನಾದವ(ಅರ್ಜುನ)ನೇ ಹೌದಷ್ಟೆ?"

ಅಪ್ಪನು ಹೀಗೆ ಕೇಳಲಾಗಿ, ಧೃಷ್ಟದ್ಯುಮ್ನನು ಈವರೆಗೆ ನಡೆದದ್ದನ್ನೂ, ಕೃಷ್ಣೆಯನ್ನು ಯಾರೊಯ್ದರೆಂಬುದನ್ನೂ ಮಹಾಸಂತೋಷದಿಂದಲೇ ತಿಳಿಸಿದನು.

"ಅಪ್ಪ, ಆ ಯುವಕನಿದ್ದನಲ್ಲಾ! ವಿಶಾಲವಾದ ಹಾಗೂ ಕೆಂಪಾದ ಕಣ್ಣುಗಳಿಂದ ಕೂಡಿದ್ದವನು; ಕೃಷ್ಣಾಜಿನವನ್ನು ಧರಿಸಿದ್ದವನು; ದೇವತೆಗಳಿಗೆ ಸಮಾನವೆನಿಸುವ ರೂಪವನ್ನು ಹೊಂದಿದ್ದವನು; ಶ್ರೇಷ್ಠವಾದ ನಮ್ಮ ಬಿಲ್ಲಿಗೆ ಹಗ್ಗವನ್ನು ಕಟ್ಟಿದವನು; ಲಕ್ಷ್ಯವನ್ನು ಭೂಮಿಯ ಮೇಲೆ ಉರುಳಿಸಿದವನು; ಚುರುಕಾಗಿದ್ದವನು. ಆತನು ಅದೆಂತು ಕಾದಾಡಿದನು!

ದೈತ್ಯರ ನಡುವೆ (ದಿತಿಯ ಮಕ್ಕಳು ದೈತ್ಯರು; ಅವರ ನಡುವೆ ಎಂದರೆ ರಾಕ್ಷಸರ ನಡುವೆ) ಇಂದ್ರನು (ಧೀರಗಂಭೀರವಾಗಿ) ನಡೆದಾಡುವನಲ್ಲವೇ? ಹಾಗೂ (ತತ್ಕಾರಣ) ಇತರ ದೇವತೆಗಳಿಂದಲೂ ಋಷಿಗಳಿಂದಲೂ ಸೇವಿಸಲ್ಪಡುವನಷ್ಟೆ? ಹಾಗೆ ಇಲ್ಲಿ ಶತ್ರುರಾಜರ ನಡುವೆ ಕಾದಾಡಿ, ವಿಪ್ರವರ್ಯರಿಂದ ಸುತ್ತುವರಿಯಲ್ಪಟ್ಟು ಪೂಜಿತನಾದವನನ್ನು ಕಂಡಿರುವೆಯಲ್ಲವೇ? ಆತನ ಅಜಿನವನ್ನು ಹಿಡಿದುಕೊಂಡು ಆತನನ್ನೇ ಅನುಸರಿಸಿ ಹೋದಳು, ನಮ್ಮ ಕೃಷ್ಣೆ. ಅದಂತೂ, ಗಂಡಾನೆಯನ್ನು ಹೆಣ್ಣಾನೆಯು ಪರಮಸಂತೋಷದಿಂದ ಅನುಸರಿಸುವ ಹಾಗಿತ್ತು!

ಆದರೆ ಆಗ ಅಲ್ಲಿದ್ದ ರಾಜರುಗಳು ಇದನ್ನು ಸಹಿಸದಾದರು. ಕೋಪಗೊಂಡ ಅವರು ಆತನ ಮೇಲೆ ಬಿದ್ದರು. ಆಗ ಆದದ್ದೇನು? ಚೆನ್ನಾಗಿ ಬೆಳೆದಿದ್ದ ಮರವೊಂದನ್ನು ಕೈಗೆತ್ತಿಕೊಂಡವನಾಗಿ ಒಬ್ಬನು ಬಂದು ಆ ರಾಜಸ್ತೋಮವನ್ನು ಸದೆಬಡಿದನಲ್ಲವೆ? - ಕ್ರುದ್ಧನಾದ (ಎಂದರೆ ಕೋಪಗೊಂಡ) ಯಮನು ಪ್ರಾಣಿಗಳನ್ನು ಸಂಹಾರಮಾಡಿಬಿಡುವ ಹಾಗೆ!

ಆ ರಾಜರುಗಳೆಲ್ಲ ನೋಡುತ್ತಿರುವಂತೆಯೇ ಆ ಇಬ್ಬರು ನರಶ್ರೇಷ್ಠರು (ಎಂದರೆ, ವಾಸ್ತವವಾಗಿ ಭೀಮಾರ್ಜುನರು) - ಚಂದ್ರಸೂರ್ಯರ ಹಾಗೆ ಕಂಗೊಳಿಸುತ್ತಿದ್ದವರು! - ಕೃಷ್ಣೆಯನ್ನು ಕರೆದುಕೊಂಡು ಹೊರಟರು. ಅವರು ಹೋದದ್ದು ಊರಾಚೆಯಿದ್ದ ಕುಂಬಾರನ ಕರ್ಮಶಾಲೆಗೆ.

ನಾನವರನ್ನು ಅನುಸರಿಸಿಹೋದೆ. ಅಲ್ಲೊಬ್ಬಳು ನಾರಿಯು ಕುಳಿತಿದ್ದಳು. ಅನಲದ ಶಿಖೆಯಂತೆ (ಎಂದರೆ ಬೆಂಕಿಯ ಜ್ವಾಲೆಯ ಹಾಗೆ) ಅವಳೂ ತೋರುತ್ತಿದ್ದಳು. ಅವಳು ಅವರುಗಳ ತಾಯಿಯಿರಬೇಕು - ಎಂದು ನನ್ನ ಊಹೆ - ಎಂದನು. 

ಸೂಚನೆ : 24/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 56 Yaksha prashne 56

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 55 ಅತ್ಯಂತ ಸುಖದಾಯಕವಾದುದು ಯಾವುದು  ?

ಉತ್ತರ - ತುಷ್ಟಿ- ಸಂತೃಪ್ತಿ

ಲೋಕವು ಸುಖವನ್ನು ಬಯಸುತ್ತದೆ. ಎಂದೂ ದುಃಖ ಬರಲೇಬಾರದು ಎಂಬುದನ್ನೂ ಬಯಸುತ್ತದೆ. ಸುಖಪ್ರಾಪ್ತಿಗಾಗಿ ತನ್ನ ಪ್ರವೃತ್ತಿಯನ್ನೂ ಇಟ್ಟುಕೊಳ್ಳುತ್ತದೆ. ದುಃಖನಿವೃತ್ತಿಗಾಗಿಯೂ ವ್ಯಾಪಾರಕಂಡುಬರುತ್ತದೆ. ಆದರೆ ಯಾವುದು ಸುಖವನ್ನು ಕೊಡುತ್ತದೆ? ಮತ್ತು ಯಾವುದು ದುಃಖವನ್ನು ಕೊಡುತ್ತದೆ? ಸುಖದಾಯಕವಾದುದು ಯಾವುದು? ದುಃಖಕಾರಕವಾದುದು ಯಾವುದು? ಎಂಬ ಆಯ್ಕೆಯ ಲೆಕ್ಕಾಚಾರದಲ್ಲಿ ಲೋಕ ಸೋತಿಗೆ. ತಿಳಿವಳಿಕೆಯೇ ಇಲ್ಲದೇ ಸುಖ ಕೊಡುವುದುದನ್ನು ಕಷ್ಟ ಎಂಬುದಾಗಿಯೂ, ದುಃಖ ಕೊಡುವುದನ್ನು ಇಷ್ಟ ಎಂದೂ ಭ್ರಮಿತವಾಗಿದೆ ಈ ಲೋಕ. ನಿಜವಾಗಿಯೂ ಸುಖವು ಹೇಗಿದ್ದಾಗ ಮಾತ್ರ ಲಭಿಸುತ್ತದೆ? ಎಂಬುದನ್ನು ಇಂತಹ ಭ್ರಾಂತಲೋಕಕ್ಕೆ ತಿಳಿಸಲು ಯಕ್ಷನು ಈ ಪ್ರಶ್ನೆಯನ್ನು ಮುಂದಿಡುತ್ತಾನೆ. ಧರ್ಮರಾಜನು ಸುಖವೆಂಬುದು ತೃಪ್ತಿಯಿಂದ ಸಿಗುತ್ತದೆ ಎಂಬ ಉತ್ತರವನ್ನು ಕೊಡುತ್ತಾನೆ.

ತೃಪ್ತಿ ಎಂದರೆ ಸಮಾಧಾನ. ಸಾಕು ಎಂಬ ಭಾವ. ಸಾಕು ಎಂಬುದು ಕೆಲವೊಮ್ಮೆ ಆಲಸ್ಯದಿಂದಲೂ ಅನ್ನಿಸಬಹುದು. ಇನ್ನು ಕೆಲವೊಮ್ಮೆ ಸಿಗದಿದ್ದಾಗಲೂ ಅನ್ನಿಸಲು ಸಾಧ್ಯ. ಆದರದು ಸಂತೃಪ್ತಿಯೆನಿಸಲಾದರು. ಯಾವುದರಿಂದಲಾದರೂ ತೃಪ್ತಿಯನ್ನು ಪಡೆಯಬೇಕಾದರೆ ಆ ವಸ್ತುವಿನ ವ್ಯಾಪ್ತಿಯನ್ನು ಮತ್ತು ಅದರ ಕಾರ್ಯಕ್ಷಮತೆಯನ್ನು ತಿಳಿದಿರಬೇಕಾಗುತ್ತದೆ. ಹಾಗಿಲ್ಲದಿದ್ದರೆ ಆ ಅದರಿಂದ ಎಷ್ಟೇ ಫಲ ಪ್ರಾಪ್ತವಾದರೂ ನೆಮ್ಮದಿ ಇರದು. ಮಕ್ಕಳು ಎಷ್ಟು ಓದಿದರೂ ಸಾಕು ಎನಿಸದು. ಇನ್ನಷ್ಟು ಮತ್ತಷ್ಟು ಪ್ರಯತ್ನಪಡಬೇಕಿತ್ತು ಎಂದು ಅನಿಸುವುದುಂಟು. ಸಾಮಾನ್ಯವಾಗಿ ಯಾವುದೇ ಪ್ರತಿಬಂಧವಿಲ್ಲದಿದ್ದಾಗ ಪ್ರಯತ್ನಕ್ಕೆ ತಕ್ಕ ಪ್ರತಿಫಲವು ಪ್ರಾಪ್ತವಾಗುವುದು. ನೂರಕ್ಕೆ ನೂರು ಪ್ರತಿಶತ ಅಂಕವನ್ನು ಮಗು ಪಡೆದಿದ್ದರೂ ಅವನು ಎಲ್ಲಾರೀತಿಯಿಂದಲೂ ಪರಿಪೂರ್ಣ ಎಂದು ಹೇಳಲು ಸಾಧ್ಯವೇ? ಎಲ್ಲೋ ಒಂದು ಕಡೆ ಕೊರತೆ ಕಾಣುತ್ತದೆ. ಒಬ್ಬ ಒಂದು ಕೋಟಿ ಹಣಸಂಪಾದನೆಯನ್ನು ಮಾಡಿದರೂ, ಸಾಲದೆ ಎರಡು ಕೋಟಿ, ಮೂರು ಕೋಟಿ, ಇನ್ನಷ್ಟು, ಮತ್ತಷ್ಟು ಎಂಬ ಆಶೆ ಬೆಳೆಯುತ್ತಾ ಹೋಗುತ್ತದೆ. ಅಲ್ಲಿ ತೃಪ್ತಿ ಸಾಧ್ಯವೇ. ಒಬ್ಬ ರೈತನಾದವನು ಒಮ್ಮೆ ಎಲ್ಲಾ ಪ್ರಯತ್ನಗಳನ್ನು ಹಾಕಿ ಅಧಿಕ ಇಳುವರಿಯನ್ನು ಪಡೆದನೆಂತಾದರೆ ಅಷ್ಟರಲ್ಲೇ ತೃಪ್ತಿ ಸಾಧ್ಯವೇ? ಇನ್ನಷ್ಟು ಮತ್ತಷ್ಟು ಬೆಳೆಯನ್ನು ಪಡೆಯಬೇಕೆಂಬ ಪ್ರಯತ್ನ ಹಾಗಾದರೆ ತಪ್ಪೇ? ಒಂದು ಪುಸ್ತಕವನ್ನು ಬರೆದವನಿಗೆ ಇನ್ನೊಂದು ಪುಸ್ತಕವನ್ನು ಬರೆಯಬೇಕೆಂಬ ಆಶೆ. ಹಾಗಾದರೆ ಇಲ್ಲೆಲ್ಲಾ ತೃಪ್ತಿ ಸಾಧ್ಯವೇ? ಅಥವಾ ಸರಿಯೇ? ಒಂದು ವೇಳೆ ಭಗವಂತನೇ ಈ ಸೃಷ್ಟಿಯ ಕಾರ್ಯದಲ್ಲಿ ತೃಪ್ತನಾಗಿ ಸೃಷ್ಟಿಯನ್ನು ಮಾಡದಿದ್ದರೆ?! ಅಂದರೆ ತಾತ್ಪರ್ಯವಿಷ್ಟೇ. ಪ್ರಪಂಚದಲ್ಲಿ ಕಾಣುವ ಎಲ್ಲಾ ವಿಷಯಗಳಿಂದ ಎಷ್ಟು ಪಡೆದರೂ ತೃಪ್ತಿ ಎಂಬುದು ಅಸಾಧ್ಯವಷ್ಟೆ. ಅಂದರೆ ತೃಪ್ತಿ ಹೇಗೆ ಸಾಧ್ಯ? ಅದಕ್ಕೆ ಒಂದು ಸುಭಾಷಿತವು ತೃಪ್ತಿಯ ಅರ್ಥವನ್ನು ಹೀಗೆ ಹೇಳುತ್ತದೆ. ಬಾಹ್ಯವಾದ ವಸ್ತುಗಳಿಂದ ತೃಪ್ತಿ ಸಾಧ್ಯವಿಲ್ಲ. ಮನಸ್ಸು ಪರಿತುಷ್ಟವಾಗಿದ್ದರೆ ಬಡವ ಶ್ರೀಮಂತ ಎಂಬ ಅಂತರವೇ ಇರುವುದಿಲ್ಲ. ನಾರು ಬಟ್ಟೆಯಿಂದಾಗಲಿ ಅಥವಾ ರೇಷ್ಮೆವಸ್ತ್ರದಿಂದಾಗಲಿ ಸಂತೋಷವು ಸಿಗುವಂತಾದರೆ ಎಲ್ಲರೂ ಅಂತಹ ವಸ್ತ್ರವನ್ನು ಹೆಚ್ಚೆಚ್ಚು ಸಂಗ್ರಹ ಮಾಡಿ ಅದರಿಂದ ತೃಪ್ತಿಪಡುತ್ತಿದ್ದರು. ಫಲಾಪೇಕೇಯಿಲ್ಲದೇ ಮಾಡುವ ಕರ್ಮವೇ ಸುಖಸಾಧನ ಎನ್ನುತ್ತದೆ ಭಗವದ್ಗೀತೆ. ಸಿಕ್ಕದ್ದರಲ್ಲೇ ಸಮಾಧಾನಪಡಬೇಕು. ತೃಪ್ತಿ ಮತ್ತು ಸಂತೋಷ ಸೃಷ್ಟಿಕರ್ತಾ ಬ್ರಹ್ಮನಿಂದಲೇ ಸೃಷ್ಟರಾದ ಪತಿಪತ್ನಿಯರು. ಹಾಗಾಗಿ ಇವೆರಡೂ ಒಟ್ಟಿಗೆ ಇದ್ದರೆ ಮಾತ್ರ ಒಳ್ಳೆಯದು.

ಸೂಚನೆ : 24/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ​ - 44 ಏಷ ಧರ್ಮಃ ಸನಾತನಃ (Astakshara Darshana 44 Esha Dharmah Sanatanah

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

ಪ್ರತಿಕ್ರಿಯಿಸಿರಿ (lekhana@ayvm.in)



"ಇದು ಸನಾತನಧರ್ಮ" ಎಂಬ ಮಾತು ಹಲವೆಡೆ ಬರುತ್ತದೆ. ಏನು ಹಾಗೆಂದರೆ? - ಎಂಬುದು ಜಿಜ್ಞಾಸ್ಯವಾದ ವಿಷಯ. ಏತಕ್ಕೆ ಇದು ಜಿಜ್ಞಾಸ್ಯವಾಗಿದೆ? - ಎಂಬುದನ್ನು ಬಾಯಿಬಿಟ್ಟೇ ಹೇಳಬೇಕಿಲ್ಲ. ಈಗಿದು ಎಲ್ಲೆಡೆ ಚರ್ಚಿತವಾಗುತ್ತಿದೆ.   ಕೆಲವರಿಗೆ ಮಾಡಲು ಕೆಲಸವಿರುವುದಿಲ್ಲ; ಸಾಲದೆಂಬಂತೆ, ಅನರ್ಥವೆಸಗಲು ಬೇಕಾದ ನಾಲ್ಕು ಅಂಶಗಳು ಅವರಲ್ಲಿರುತ್ತವೆ.

ಅವಾವುವೆಂಬುದನ್ನು ಪಂಚತಂತ್ರವು ಆರಂಭದಲ್ಲೇ ಪಟ್ಟಿಮಾಡುತ್ತದೆ: ಯೌವನ, ಹಣ, ಅಧಿಕಾರ, ಮತ್ತು ಅವಿವೇಕ. ರಾಜಕಾರಣಿಗಳಲ್ಲಿ ಇವು ನಾಲ್ಕೂ ಮೇಳೈಸಿದಾಗ ಅವರ ನಡೆ-ನುಡಿಗಳ ಬಗೆಯನ್ನು ಬಣ್ಣಿಸಲಾಗದು! ಕಾರಣವೇ ಇಲ್ಲದೆ, ಒಂದು ಕುಂಟುನೆಪವೂ ಇಲ್ಲದೆ, ಸನಾತನಧರ್ಮವನ್ನು ದೂಷಿಸಲಾಗುತ್ತಿದೆಯಲ್ಲವೇ? ಯೋಚಿಸಿ ಮಾತನಾಡುವುದು ಜಾಣತನ; ಆದರೆ ಮತ್ತೊಬ್ಬರ ಮತವನ್ನೋ ಆಚರಣೆಯನ್ನೋ ಅವಹೇಳನಮಾಡಲೆಂದೇ ಹೊರಟವರಿಗೆ, ಜವಾಬ್ದಾರಿಯಿಂದ ಮಾತನಾಡಬೇಕೆಂಬ ಉದ್ದೇಶವೇ ಇರದಷ್ಟೆ?

ಪ್ರಸ್ತುತ-ವಿಷಯ, ಸನಾತನಧರ್ಮ. "ಇದು ಸನಾತನಧರ್ಮ" ಎಂಬ ಮಾತು ಮನುಸ್ಮೃತಿಯಲ್ಲಿ(ಲ್ಲೂ) ಬರುತ್ತದೆ. ಮನುವು ಹೇಳಿರುವ ಮಾತು ಅಚ್ಚುಕಟ್ಟಾಗಿದೆ: "ಸತ್ಯವನ್ನು ನುಡಿಯಬೇಕು, ಪ್ರಿಯವಾದುದನ್ನು ನುಡಿಯಬೇಕು; ಸತ್ಯವನ್ನು ಅಪ್ರಿಯವಾದ ರೀತಿಯಲ್ಲಿ ಹೇಳಬಾರದು; ಪ್ರಿಯವೆಂದು ಅಸತ್ಯವಾಗಿ ನುಡಿಯಬಾರದು. ಇದುವೇ ಸನಾತನ ಧರ್ಮ" - ಎಂದು. ಮನುವಿನ ಹಲವು ನುಡಿಮುತ್ತುಗಳಲ್ಲಿ ಇದೂ ಒಂದು. ಪಿಳ್ಳೆನೆವಕ್ಕಾದರೂ ಮನುವನ್ನು ಬೈಯುತ್ತಲೇ ಇರಬೇಕೆನ್ನುವ ವ್ರತವುಳ್ಳವರಿಗೆ ಯಾರೂ ತಿಳಿವಳಿಕೆ ಕೊಡಲಾಗದಷ್ಟೆ?

"ಮನುವಲ್ಲ, ನಮಗೆ ಬೇಕಾದುದು; ನಮಗೆ ಬೇಕಾದುದು ಬುದ್ಧ!" – ಎನ್ನುವವರಿರಬಹುದು. ಅವರಿಗೊಂದು ಆಶ್ಚರ್ಯವು ಕಾದಿದೆ. ಏಕೆಂದರೆ ಬುದ್ಧನೂ ಅದೇ ಮಾತನ್ನೇ (ಪಾಳಿಯಲ್ಲಿ) ಆಡಿರುವನು! "ಏಸ ಧಮ್ಮೋ ಸನಂತನೋ" – ಎಂದು. ಅವನು ಹೇಳುವ ಮಾತಿದು: ವೈರದಿಂದ ವೈರವು ಎಂದೂ ಶಮನಗೊಳ್ಳುವುದಿಲ್ಲ; ಬದಲಾಗಿ, ಅವೈರದಿಂದ ವೈರವು ಶಮನಗೊಳ್ಳುವುದು; ಇದುವೇ ಸನಾತನಧರ್ಮ - ಎಂದು. (ಮನುವಿನ ಮಾತು ಮಾತನ್ನು ಕುರಿತಾದುದು; ಬುದ್ಧನ  ಮಾತು ಮನಸ್ಸನ್ನು ಕುರಿತಾದುದು. ಒಳ್ಳೆಯ ಮಾತಿನಿಂದಾಗಿ ಒಳ್ಳೆಯ ಮನಸ್ಸು; ಒಳ್ಳೆಯ ಮನಸ್ಸಿನಿಂದಾಗಿ ಒಳ್ಳೆಯ ಮಾತು.) ಅಲ್ಲಿಗೆ, "ಸನಾತನಧರ್ಮವನ್ನು ಚೆನ್ನಾಗಿ ಬೈದೆ"ನೆಂದುಕೊಂಡವರು ಬೌದ್ಧಮತವನ್ನೂ ಜೊತೆಗೇ ಬೈದಿರುವರೆಂದೇ!

ಹಾಗಾದರೆ ಸನಾತನಧರ್ಮವೆಂದರೇನು? ಸನಾತನ ಎಂಬ ಪದವೂ ಅದರ ಭಾವವೂ ಋಗ್ವೇದದಲ್ಲೇ ಉಂಟು, ಅಷ್ಟು ಪ್ರಾಚೀನವದು! ರಾಮಾಯಣ-ಮಹಾಭಾರತಗಳಲ್ಲೂ ಹಲವೊಮ್ಮೆ ಕಾಣಸಿಗುವುದು. 'ಸನಾತನ' ಎಂದರೆ ಬಹಳ ಹಿಂದಿನಿಂದಲೂ, ವಾಸ್ತವವಾಗಿ ಸದಾಕಾಲವೂ, ಇರುವಂತಹುದು. ಎಂದೆಂದೂ ಇರುವುದನ್ನೇ ಸನಾತನವೆನ್ನುವುದು. "ನೀನು ಸನಾತನ ಪುರುಷ!" ಎಂದು ಕೃಷ್ಣನನ್ನು ಕುರಿತು ಹೇಳುತ್ತಾನೆ, ಅರ್ಜುನ - ವಿಶ್ವರೂಪದರ್ಶನ-ಸಂದರ್ಭದಲ್ಲಿ.

'ಧರ್ಮ'ವೆಂದರೇನು? ಇಂದಂದುಕೊಂಡಿರುವಂತೆ ಅದು ಬರೀ "ಮತಾಚಾರಗಳ ಕಂತೆ" ಯಲ್ಲ. ಧರ್ಮವೆಂಬ ಪದವನ್ನು ಎರಡು ಅರ್ಥಗಳಲ್ಲಿ ಸ್ಪಷ್ಟವಾಗಿ ಬಳಸಲಾಗಿರುವುದನ್ನು ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದ್ದರು. ಸಾಧ್ಯ ಹಾಗೂ ಸಾಧನ - ಎಂಬಿವೇ ಅದರ ಎರಡು ಅರ್ಥಗಳು. ಅದಕ್ಕೆ ಅವರೇ ಕೊಟ್ಟ ಸರಳೋದಾಹರಣೆಯೇ ಇದೆ.

ನಂಜನಗೂಡಿಗೆ ಹೊರಟಿರುತ್ತೇವೆನ್ನಿ. ದಾರಿಯಲ್ಲಿ ನಂಜನಗೂಡಿನ ದಿಕ್ಕನ್ನು ತೋರಿಸುವ ಕೈಮರವಿರುತ್ತದೆ. ಅದರ ಮೇಲೆ "ನಂಜನಗೂಡು" ಎಂದು ಬರೆದಿರುತ್ತದೆ. ಹೆಸರನ್ನು ನೋಡಿ, ಅದನ್ನೇ ನಂಜನಗೂಡೆಂದು ಹಿಡಿದು ಕುಳಿತುಬಿಟ್ಟರೆ ನಂಜನಗೂಡು ಸಿಕ್ಕಂತಾಯಿತೇ? ನಾವು ಹೋಗಬೇಕಾದ ಗುರಿ, ಅಥವಾ ಸಾಧ್ಯವು, ನಂಜನಗೂಡು. ಅದಕ್ಕೆ ಸಾಧನವೆಂದರೆ ದಿಗ್ದರ್ಶಿಯಾದ ಈ ಕೈಮರ. ಅದು ತೋರಿಸುವ ದಿಕ್ಕನ್ನು ಹಿಡಿದು, ತದನುಸಾರ ಮುಂದಕ್ಕೆ ನಡೆಯಬೇಕು, ಅಲ್ಲವೇ? ಹೀಗೆ ಇಲ್ಲಿ ಸಾಧ್ಯದ ಹೆಸರೇ ಸಾಧನಕ್ಕೂ ಬಂದಿದೆ!

ಭಗವಂತನಾದ ಕೃಷ್ಣನನ್ನೇ 'ಸನಾತನಧರ್ಮ'ವೆಂದು ಮಹಾಭಾರತದಲ್ಲಿ ಕರೆದಿದೆ. ರಾಮನನ್ನೂ 'ಧರ್ಮವೇ ಮೈತಾಳಿಬಂದವನು' ಎಂಬುದಾಗಿ ರಾಮಾಯಣವು ಚಿತ್ರಿಸಿದೆ. ಭಗವಂತನಲ್ಲಿ ಒಂದಾಗುವುದೇ ನಮ್ಮ ಜೀವನದ ಗುರಿ: ಅದು ಸಾಧ್ಯಧರ್ಮ. ಅದನ್ನು ಸಾಧಿಸಲಿಕ್ಕಾಗಿಯೇ ಶಾಸ್ತ್ರಗಳಲ್ಲಿ ಇದನ್ನು ಮಾಡು, ಇದನ್ನು ಮಾಡಬೇಡ ಎಂದಿರುವುದು: ಅದು ಸಾಧನಧರ್ಮ. 'ಧರ್ಮಂ ಚರ' ಎಂದು ಹೇಳಿರುವುದು ಈ ಸಾಧನಧರ್ಮವನ್ನೇ. ಸಾಧನಧರ್ಮವನ್ನು ಅನುಷ್ಠಿಸಬೇಕು, ಸಾಧ್ಯಧರ್ಮಪ್ರಾಪ್ತಿಗಾಗಿ: ಅಲ್ಲಿಗೆ, ಧರ್ಮವೇ ಮಾರ್ಗವಾಯಿತು, ಧರ್ಮವೇ ಲಕ್ಷ್ಯವಾಯಿತು! ಧರ್ಮಮಾರ್ಗದಲ್ಲಿ ಸಾಗಿ ನಮ್ಮ ಮೂಲಧರ್ಮವಾದ ಭಗವದ್ಯೋಗವನ್ನು ಹೊಂದಬೇಕು.

ಜೀವ-ದೇವರ ಸಂಬಂಧವು ಸನಾತನವಾದುದು. ಭಗವತ್-ಸ್ವರೂಪದಿಂದ ಬೇರಾದಾಗ, ಅದನ್ನು ಮತ್ತೆ ಪಡೆಯಲು ಬಯಸುವುದೂ, ಅದಕ್ಕಾಗಿ ಯತ್ನಮಾಡುವುದೂ ಸನಾತನವಾದುವೇ. ಹೀಗೆ ಮೂಲಧರ್ಮಪ್ರಾಪ್ತಿಗಾಗಿ ಸಾಧನಧರ್ಮವನ್ನಾಚರಿಸುವುದೇ ಈ ಸನಾತನಧರ್ಮ.

ಸನಾತನವಾದುದನ್ನರಿತು ಆಚರಿಸುವುದು ಧರ್ಮ; ಅರಿಯದೆ ದೂಷಿಸುವುದು ಅಧರ್ಮ.

ಸೂಚನೆ: 24/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

ದೇವಾಲಯಕ್ಕೆ ಹೋಗುವುದರಿಂದ ದೊರಕುವ ಲಾಭವೇನು? (Devalayakke Hoguvudarinda Dorakuva Labhavenu?)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)





ಇತ್ತೀಚೆಗೆ ನಡೆದ ಒಂದು ಘಟನೆ, ನಮ್ಮ ನಾಡಿನ ಪ್ರಖ್ಯಾತ ಬಾಹ್ಯಾಕಾಶ ಸಂಸ್ಥೆಯೊಂದು ಅದ್ಭುತವಾದ ಸಾಧನೆಯನ್ನು ಮಾಡಿ ವಿಶ್ವದ ಪ್ರಶಂಸೆಗೆ ಪಾತ್ರವಾಯಿತು. ಆ ಸಂಸ್ಥೆಯ ಪ್ರಮುಖರೊಬ್ಬರು ಆ ಸಾಧನೆಯ ನಂತರ ಒಂದು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆ ಸಂದರ್ಭದಲ್ಲಿ ಅವರ ದೇವಾಲಯದ ಭೇಟಿಯ ಕುರಿತಾದ ಪತ್ರಕರ್ತರೊಬ್ಬರ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರವನ್ನು ನೀಡುತ್ತಾರೆ, ನಾನು ಬಾಹ್ಯವಾದ ವಸ್ತುಗಳ ಬಗ್ಗೆ ಅರಿಯಲು ವಿಜ್ಞಾನವನ್ನು(Science) ಅವಲಂಬಿಸಿದ್ದೇನೆ, ಹಾಗೆಯೇ ಅಂತರಂಗದ ಅರಿವಿಗೆ ದೇವಾಲಯಕ್ಕೆ ಬರುತ್ತೇನೆ.
ಸಾಮಾನ್ಯವಾಗಿ ಜನರು ಯಾವ ಯಾವ ಕಾರಣಕ್ಕಾಗಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂಬುದಾಗಿ ವಿಚಾರಮಾಡುವುದಾದರೆ, ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಜೀವನದಲ್ಲಿ ಯಾವುದಾದರೂ ಕ್ಲೇಶಕ್ಕೆ ಸಿಲುಕಿದಾಗ ಅದನ್ನು ಪರಿಹಾರ ಮಾಡು ಎಂಬುದಾಗಿ ಭಗವಂತನಲ್ಲಿ ಪ್ರಾರ್ಥಿಸಲು ಭೇಟಿ ಕೊಡುವುದಿದೆ, ಇನ್ನು ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ತಾವು ಓದಿದ ವಿಷಯವೇ ಪರೀಕ್ಷೆಯಲ್ಲಿ ಬರಲಿ ಎಂಬುದನ್ನು ಬೇಡುವುದಕ್ಕೋ ಅಥವಾ ಪರೀಕ್ಷಾ ಭಯ ನಿವಾರಣೆಗೋ ಭೇಟಿ ಕೊಡುತ್ತಾರೆ. ಹಾಗೆಯೇ ಕೆಲವರು ತಮ್ಮ ದಿನಚರಿಯಲ್ಲಿ ಹತ್ತಿರದ ದೇವಾಲಯಗಳಿಗೆ ಹೋಗುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ, ಪ್ರವಾಸದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿರುವ ದೇವಾಲಯಗಳಿಗೆ ಹೋಗಿ ಬರುವುದಿದೆ. ಇನ್ನು ಕೆಲವರು ದೇವಾಲಯಗಳ ಕಲಾವಿನ್ಯಾಸವನ್ನು ವೀಕ್ಷಿಸಿ ಆನಂದಿಸಲು ಭೇಟಿ ನೀಡುತ್ತಾರೆ. ಹಾಗೆಯೇ ಮನಸ್ಸಿಗೆ ಶಾಂತಿ ಸಮಾಧಾನವನ್ನರಸಿ ದೇವಸ್ಥಾನಕ್ಕೆ ಹೋಗುವವರ ಸಂಖ್ಯೆಯೂ ಹೇರಳವಾಗಿಯೇ ಇದೆ. ಇತ್ಯಾದಿಯಾಗಿ ಅನೇಕ ಕಾರಣಗಳಿಗಾಗಿ ದೇವಾಲಯಕ್ಕೆ ಭೇಟಿಕೊಡುವುದನ್ನು ನಮ್ಮ ಸುತ್ತ ಮುತ್ತಲೂ ಕಾಣುತ್ತೇವೆ. ದೇವಾಲಯಕ್ಕೆ ಹೋಗುವುದರಿಂದ ಈ ಎಲ್ಲ ಲಾಭಕ್ಕಿಂತ ಮಿಗಿಲಾದ ಇನ್ನೊಂದು ಪರಮ ಲಾಭವನ್ನು ಪಡೆಯಬಹುದು, ಅದೇ ಅಂತರಂಗದ ಅರಿವು ಎಂಬುದನ್ನು ಜ್ಞಾನಿಗಳು ಸಾರಿದ್ದಾರೆ.

ಅಂತರಂಗದ ಅರಿವು ಎಂದರೇನು? ದೇವಾಲಯಗಳಿಗೆ ಹೋಗುವುದರಿಂದ ಅದನ್ನು ಹೇಗೆ ಪಡೆಯಬಹುದು? ದೇವಾಲಯಗಳು ಹೀಗೆಯೇ ಇರಬೇಕು ಎಂದು ನಕ್ಷೆಯನ್ನು ರಚಿಸಿ, ಶಿಲ್ಪಿಗಳ ಮೂಲಕ ಅದನ್ನು ನಿರ್ಮಾಣ ಮಾಡಿಸಿ, ಅಲ್ಲಿಗೆ ಹೋಗಿ ಬರುವ ಪದ್ಧತಿಯನ್ನು ತಂದವರು ಯಾರು? ಎಂದರೆ ನಮ್ಮ ಭಾರತೀಯ ಮಹರ್ಷಿಗಳು. ಮಹರ್ಷಿಗಳು ತಮ್ಮ ತಪಸ್ಯೆಯಿಂದ ಅಂತರಂಗದ ದ್ವಾರವನ್ನು ತೆರೆಸಿಕೊಂಡು, ಮನಸ್ಸನ್ನು ಒಳಮುಖವಾಗಿ ಹರಿಸಿದರು. ತಮ್ಮೊಳಗೇ ಬೆಳಗುತ್ತಿರುವ ಪರಮಾತ್ಮನ ದರ್ಶನವನ್ನು ಮಾಡಿ ಅಪರಿಮಿತವಾದ ಆನಂದವನ್ನು, ಶಾಂತಿಯನ್ನು ಅನುಭವಿಸಿದರು. ಈ ದೇಹವೇ ಒಂದು ದೇವಾಲಯ ಅಂದರೆ ದೇವನಿರುವ ಸ್ಥಾನ ಎಂಬುದನ್ನು ಮನಗಂಡರು. ಅದನ್ನು ಲೋಕಕ್ಕೆ ಅರ್ಥ ಮಾಡಿಸಿ ಎಲ್ಲರೂ ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟು ತಮ್ಮೊಳಗಿರುವ ಭಗವಂತನ ದರ್ಶನ ಮಾಡಿ ಆ ಸೌಖ್ಯವನ್ನು ಅನುಭವಿಸಲೇ ಬೇಕು ಆಗಲೇ ಪ್ರತಿಯೊಬ್ಬರ ಜೀವನಕ್ಕೆ ಸಾರ್ಥಕತೆ ದೊರೆಯುವುದು ಎಂಬುದಾಗಿ ಭಾವಿಸಿದರು. ಲೋಕದ ಮನಸ್ಸನ್ನು ಅತ್ತ ತಿರುಗಿಸಲು ಭಾರತೀಯ ಸಂಸ್ಕೃತಿಯನ್ನು ರೂಪಿಸಿ ಕೊಟ್ಟರು. ಆ ಸಂಸ್ಕೃತಿಯ ಒಂದು ಅಂಗವೇ ನಮ್ಮ ದೇವಾಲಯಗಳು ಹಾಗೂ ಅಲ್ಲಿನ ಶಿಲ್ಪಗಳು.

ಮಹರ್ಷಿಗಳು ತಮ್ಮ ದೇಹದಲ್ಲಿಯೇ ದೇವನನ್ನು ದರ್ಶಿಸಿದ್ದರಿಂದ, ಆ ದೇಹವನ್ನೇ ಹೋಲುವ ಒಂದು ಪ್ರತಿಕೃತಿ ( model) ಯನ್ನು ದೇವಾಲಯದ ರೂಪದಲ್ಲಿ ರಚನೆ ಮಾಡಿಸಿದರು. ನಮ್ಮ ದೇಶದಲ್ಲಿರುವ ಅನೇಕ ಆದರ್ಶವಾದ ದೇವಾಲಯಗಳು ಮಾನವ ದೇಹದ ಪ್ರತೀಕವೇ ಆಗಿವೆ. ಆಗಮಶಾಸ್ತ್ರದ ಆಧಾರದ ಮೇಲೆ ರಚಿತವಾಗಿರುವ ದೇವಾಲಯಗಳಲ್ಲಿ ನಮ್ಮ ದೇಹದಲ್ಲಿರುವ ಅಂಗಗಳನ್ನೇ ಹೋಲುವ ಸ್ಥಾನಗಳಿದ್ದು, ನಾವು ನಮ್ಮ ಮನಸ್ಸನ್ನು ಹಿಮ್ಮುಖವಾಗಿ ತಿರುಗಿಸಿ ಹೇಗೆ ಸಂಚಾರ ಮಾಡಿದಾಗ ದೇವನ ದರ್ಶನ ಪಡೆಯಬಹುದು ಎಂಬುದಕ್ಕೆ ನಕ್ಷೆಯೇ ಆಗಿದೆ ಈ ದೇವಾಲಯಗಳು. ಉದಾಹರಣೆಗೆ ದೇವಾಲಯದಲ್ಲಿ ದೇವತಾಮೂರ್ತಿಯನ್ನು ಜ್ಞಾನಿಗಳಿಂದ ಪ್ರಾಣಪ್ರತಿಷ್ಠೆ ಮಾಡಿಸಿ ಸ್ಥಾಪಿಸಿರುವ ಗರ್ಭಗೃಹವು ದೇವಾಲಯದ ಶಿರ:ಪ್ರದೇಶ ಎಂದು ಕರೆಸಿಕೊಳ್ಳುತ್ತದೆ. ಹಾಗೆಯೇ ಮುಂದಿನ ಭಾಗಗಳು ಕಂಠ, ಹೃದಯ ಮೊದಲಾಗಿ ಮಾನವ ದೇಹದ ಅವಯವಗಳ ಹೆಸರನ್ನೇ ಹೊತ್ತಿವೆ. ನಮ್ಮ ದೇಹದಲ್ಲಿಯೂ ಪರಮಾತ್ಮನು ಬೆಳಗುವುದು ಶಿರಸ್ಸಿನ ಸಹಸ್ರಾರ ಚಕ್ರದಲ್ಲಿ. ಸಾಧಕರು ಮನಸ್ಸನ್ನು ಹಿಮ್ಮುಖವಾಗಿಸಿ ಕ್ರಮ ಕ್ರಮವಾಗಿ ಸಾಗಿ ಅವರವರ ಪ್ರಕೃತಿ ಧರ್ಮಕ್ಕೆ ಅನುಗುಣವಾಗಿ ಅನೇಕ ದೇವತೆಗಳ ದರ್ಶನ ಪಡೆದು ಅಂತಿಮವಾಗಿ ಪರಮಾತ್ಮನ ದರ್ಶನ ಪಡೆಯುತ್ತಾರೆ ಎಂಬುದನ್ನು ಅನುಭವಿಗಳು ಉಲ್ಲೇಖಸಿದ್ದಾರೆ. ಅದರ ಪ್ರತಿಬಿಂಬದಂತೆಯೇ ದೇವಾಲಯಗಳ ರಚನೆಯೂ ಮಾಡಲ್ಪಟ್ಟಿದೆ. ಆ ಹೊರ ದೇವಾಲಯವನ್ನು ಪ್ರವೇಶಿಸಿ ಸಾಗುವಾಗ ಈ ಎಲ್ಲ ಅಂಶಗಳೂ ಮನಸ್ಸಿಗೆ ಬಂದರೆ ನಮ್ಮ ಅಂತರಂಗದ ದ್ವಾರವೂ ತೆರೆಯಲು ಅನುಕೂಲವಾಗುತ್ತದೆ. ಅಂತೆಯೇ ದೇವಾಲಯದ ಗರ್ಭಗೃಹದ ಮುಂದೆ ಬಿಳಿ, ಕೆಂಪು ಮತ್ತು ಕಪ್ಪು ಹೀಗೆ ಮೂರು ಬಣ್ಣಗಳ ತೆರೆಯನ್ನು ಸರಿಸಿ ದೇವನ ದರ್ಶನ ಮಾಡಿಸುತ್ತಾರೆ. ಆ ಮೂರು ಬಣ್ಣಗಳು ನಮ್ಮೊಳಗಿನ ಸತ್ವ, ರಜಸ್ಸು ಮತ್ತು ತಮಸ್ಸುಗಳೆoಬ ಮೂರು ಗುಣಗಳ ಪ್ರತೀಕ, ಆ ಮೂರು ಗುಣಗಳನ್ನು ದಾಟಿದಾಗ, ತ್ರಿಗುಣಾತೀತನಾದ ಪರಮಾತ್ಮನ ದರ್ಶನವಾಗುತ್ತದೆ ಎಂಬುದೇ ಇದರ ಮರ್ಮ. ಸಂಕ್ಷಿಪ್ತವಾಗಿ ಕೆಲವು ಅಂಶಗಳನ್ನು ನೆನಪಿಸಿಕೊಂಡದ್ದಾಗಿದೆ. ಹೀಗೆ ಎಲ್ಲಾ ರೀತಿಯಿಂದಲೂ ಭಾರತೀಯ ದೇವಾಲಯಗಳು ನಮ್ಮ ಅಂತರಂಗವನ್ನೇ ಸ್ಮರಣೆಗೆ ತರುವಂತೆ, ಅಂತರಂಗದ ಅರಿವನ್ನು ಮೂಡಿಸಿ ನಮ್ಮೊಳಗಿರುವ ದೇವನ ದರ್ಶನ ಮಾಡಿಸಲು ಸಹಕಾರಿಯಾಗಿವೆ. ಭೂಮಿಯಲ್ಲಿ ವೈಕುಂಠವನ್ನು ನೆನಪಿಗೆ ತರಲು ಜ್ಞಾನಿಗಳು ಮೆಮೊರಿ ಹಾಲ್ (ಸ್ಮಾರಕ ಮಂದಿರ) ಕಟ್ಟಿದರು. ಆ ಮೆಮೊರಿ ಹಾಲ್ ಗಳೇ ನಮ್ಮ ದೇಶದ ದೇವಾಲಯಗಳು. ನಾವು ಆ ದೇವಾಲಯದಲ್ಲಿ ಪ್ರವೇಶಿಸಿದರೆ ಅದರ ಪ್ಲಾನ್ ನಲ್ಲಿ ಅದು ಒಂದು ಯಾನವಾಗಿ, ವಿಮಾನವಾಗಿ ನಮ್ಮನ್ನು ವೈಕುಂಠದವರಿಗೂ ಏರಿಸುವ ವಿಷಯವಿರುವುದು ತಿಳಿದು ಬರುತ್ತದೆ ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ. ಈ ರೀತಿಯಾಗಿ ಮಹರ್ಷಿಗಳು ಆಮೂಲಾಗ್ರ ದೃಷ್ಟಿಯಿಂದ ರಚಿಸಲ್ಪಟ್ಟ ದೇವಾಲಯಗಳನ್ನು ಆ ಭಾವನೆಯಿಂದ ಸಂದರ್ಶಿಸಿ ಅವುಗಳ ಅಂತಸ್ಸತ್ಯವನ್ನು ಅರಿತು ಪರಮ ಲಾಭವನ್ನು ಪಡೆಯಬೇಕಾಗಿದೆ.

ಸೂ
ಚನೆ: 24/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Sunday, September 17, 2023

ಯಕ್ಷ ಪ್ರಶ್ನೆ 55 Yaksha prashne 55

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 54 ಲಾಭಗಳಲ್ಲಿ ಶ್ರೇಷ್ಠವಾದ ಲಾಭ ಯಾವುದು  ?

ಉತ್ತರ - ಆರೋಗ್ಯ

ಮಾನವನು ತನ್ನ ಜೀವನದಲ್ಲಿ ಪಡೆಯಬೇಕಾದುದು ಯಾವುದು? ಎಂದರೆ ಜ್ಞಾನ. ವಸ್ತುತಃ ಜ್ಞಾನಕ್ಕಿಂತ ಶ್ರೇಷ್ಠವಾದ ಲಾಭ ಇನ್ನೊಂದಿಲ್ಲ. ಮನುಷ್ಯನು ಮುಕ್ತನಾಗಬೇಕಾದರೆ ಜ್ಞಾನದಿಂದ ಮಾತ್ರ ಸಾಧ್ಯ ಎಂಬುದನ್ನು ' ಜ್ಞಾನಾದೇವ ತು ಕೈವಲ್ಯಮ್' ಎಂಬ ಮಾತು ದೃಢೀಕರಿಸುತ್ತದೆ. ಆದರೆ ಇಲ್ಲಿ ಯಕ್ಷನು ಆರೋಗ್ಯವನ್ನೇ ಎಲ್ಲಾ ಲಾಭಕ್ಕಿಂತಲೂ ಶ್ರೇಷ್ಠವಾದುದು ಎಂಬ ಉತ್ತರವನ್ನು ಧರ್ಮರಾಜನಿಂದ ಪಡೆಯುತ್ತಾನೆ .ಹಾಗಾದರೆ ಜ್ಞಾನಕ್ಕಿಂತಲೂ ಆರೋಗ್ಯವೇ? ಎಂಬ ಸಂಶಯ ಬರಬಹುದು. ಶ್ರೀರಂಗಮಹಾಗುರುಗಳು ಆಯುರ್ವೇದಶಾಸ್ತ್ರವು ಮಾನವನಿಗೆ ಎಷ್ಟು ಮುಖ್ಯ ಎಂಬುದನ್ನು ಹೇಳುವಾಗ ಆರೋಗ್ಯದ ಮಹತ್ತ್ವವನ್ನೂ ತಿಳಿಸುತ್ತಾ "ಲೋಕದಲ್ಲಿ ಕೆಲವು ವಿಷಯಗಳು ಕಾಲ ದೇಶಭೇದಗಳಿಂದ ಬೇಕು-ಬೇಡವಾಗಿರಬಹುದು. ಆದರೆ 'ಶರೀರಮ್ ಆದ್ಯಂ ಖಲು ಧರ್ಮಸಾಧನಮ್' ಎಂಬಂತೆ ಯಾವ ಕಾರ್ಯಕ್ಕೂ ಶರೀರವು ಮೂಲವಾಗಿರುವುದರಿಂದ ಎಲ್ಲಾ ಭೂತವರ್ಗಗಳೂ ತಮ್ಮ ಆರೋಗ್ಯ ಆಯುಸ್ಸು ಇವುಗಳನ್ನು ಸದಾ ಬಯಸುವುದರಿಂದ ಇಂತಹ ಬಯಕೆಗಳನ್ನು ಸಲ್ಲಿಸುವುದಕ್ಕಿರುವ ಅನಾದಿಸಿದ್ಧವೂ ಪ್ರತ್ಯಕ್ಷವೂ ಆದ ಶಾಸ್ತ್ರವನ್ನು ಯಾರು ತಾನೇ ಬೇಡವೆನ್ನುವರು?" ಎಂಬುದಾಗಿ ಆರೋಗ್ಯದ ಅನಿವಾರ್ಯವನ್ನು ಹೀಗೆ ಹೇಳಿದ್ದಾರೆ. ಹಾಗಾಗಿ ಆರೋಗ್ಯವೇ ಎಲ್ಲಾ ಲಾಭಗಳಿಗಿಂತಲೂ ಶ್ರೇಷ್ಠ ಎನ್ನಲಾಗಿದೆ.

ಮನುಷ್ಯನಿಗೆ ಆರೋಗ್ಯವಿಲ್ಲದಿದ್ದರೆ ಏನೊಂದೂ ಸಾಧ್ಯವಿಲ್ಲ. ಮಗುವಿನಿಂದ ಹಿಡಿದು ಮುದುಕನವರೆಗೂ ಎಲ್ಲರಿಗೂ ಆರೋಗ್ಯ ಬೇಕು. 'ಆರೋಗ್ಯವೇ ಭಾಗ್ಯ' ಎಂಬ ಗಾದೆ ಮಾತೂ ಈ ಹಿನ್ನೆಲೆಯಲ್ಲೇ ಹುಟ್ಟಿದ್ದು. ಯಾರಾದರೂ ಬಂಧುಬಂಧವರನ್ನು ಅಥವಾ ಪರಿಚಿತರನ್ನು ಭೇಟಿ ಮಾಡಿದಾಗ ನಾವು ಮೊದಲು ವಿಚಾರಿಸುವುದು 'ಆರೋಗ್ಯವಾಗಿದ್ದೀರಾ?' ಎಂದು ತಾನೆ. ಅಂದರೆ ಇರಬೇಕಾದುದು ಆರೋಗ್ಯ. ಅದೇ ಸಹಜವಾದ ಪರಿಸ್ಥಿತಿ. ಆರೋಗ್ಯ ಹದಗೆಟ್ಟಾಗ ಮತ್ತೆ ಅದನ್ನು ಸರಿಪಡಿಸಿ ಆರೋಗ್ಯವನ್ನೇ ಪಡೆಯುತ್ತೇವೆ. ಯಾರೇ ಸಿಕ್ಕಿದರೂ ನಾವು 'ಅನಾರೋಗ್ಯವೇ?' ಎಂದು ಕೇಳುತ್ತೇವೋ? ಇಲ್ಲ. ಏಕೆಂದರೆ ಅನಾರೋಗ್ಯ ಸಹಜಸ್ಥಿತಿಯಲ್ಲ. ಆರೋಗ್ಯವೇ ಇರಬೇಕಾದ ಸ್ಥಿತಿ. ಅಂತಹವನನ್ನೇ ಆಯುರ್ವೇದವು 'ಸ್ವಸ್ಥ' ಎಂದು ಕರೆಯುತ್ತದೆ. ಅಂದರೆ ತನ್ನ ತನ್ನ ಸಹಜವಾದ ಸ್ಥಿತಿಯಲ್ಲಿರುವುದು ಎಂದರ್ಥ. ಆಯುರ್ವೇದವು ಸ್ವಸ್ಥನ ಲಕ್ಷಣವನ್ನು ಈ ರೀತಿಯಾಗಿ ಹೇಳಿದೆ " ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ। ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ॥" ಎಂದು. ಆರೋಗ್ಯಶಾಸ್ತ್ರವು ಆರೋಗ್ಯವನ್ನು ಎರಡಾಗಿ ವಿಭಾಗಿಸುತ್ತದೆ ಶಾರೀರಿಕ ಮತ್ತು ಮಾನಸಿಕ ಎಂಬುದಾಗಿ. ನಮ್ಮ ಶರೀರದಲ್ಲಿರುವ ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳು, ದೇಹದ ಜಾಠರಾಗ್ನಿಯ ವ್ಯವಸ್ಥಿತವಾದ ರೀತಿ, ರಸ, ರಕ್ತ, ಮಾಂಸ, ಕೊಬ್ಬು, ಮೂಳೆ, ಮಜ್ಜ, ಶುಕ್ರ ಎಂಬ ಸಪ್ತಧಾತುಗಳು, ಮಲ ಮೂತ್ರ ಸ್ವೇದಗಳೆಂಬ ಮೂರು ಮಲಗಳು ಸರಿಯಾಗಿ ದೇಹದಿಂದ ಹೊರಹೋಗುವಿಕೆ, ಇಂದ್ರಿಯ, ಮನಸ್ಸು ಮತ್ತು ಆತ್ಮ ಇವೆಲ್ಲವೂ ನೆಮ್ಮದಿಯಾಗಿರುವುದು, ಹೀಗೆ ಎಲ್ಲಾ ಅಂಗಗಳೂ ಅದರದರ ಕಾರ್ಯವನ್ನು ಸರಿಯಾಗಿ ಮಾಡುವಂತಿರಬೇಕು. ಹಾಗಿದ್ದರೆ ಬಾಹ್ಯ ಅಂಗಗಳನ್ನು ಸಾಧನವಾಗಿಸಿಕೊಂಡ ಅಂತರಂಗದ ಅಂಗಗಳು ಸಾಂಗವಾಗಿ ಕಾರ್ಯವನ್ನು ಮಾಡಲು ಸಾಧ್ಯ. ಆದ್ದರಿಂದ ಮಾನವನ ಜೀವಿತದ ಪ್ರತಿಯೊಂದು ಕಾರ್ಯವೂ ಆರೋಗ್ಯವನ್ನು ಅವಲಂಬಿಸಿಯೇ ಇರುವುದರಿಂದ ಆರೋಗ್ಯಕ್ಕಿಂತ ಮತ್ತೊಂದು ಮುಗಿಲಾದ ಭಾಗ್ಯ ಇರಲು ಹೇಗೆ ಸಾಧ್ಯ!. 

ಸೂಚನೆ : 17/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಾತಃ ಸ್ಮರಣೀಯರಾದ ಪಂಚಕನ್ಯೆಯರು (Pratah Smaraniyarada Panncakanyeyaru Pratah Smaraniyarada Pancakanyeyaru)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)





ಪೀಠಿಕೆ

ನಾವು ಪ್ರತಿನಿತ್ಯವೂ ಪಠಣ ಮಾಡುವಂತಹ ಶ್ಲೋಕಗಳಲ್ಲಿ ಪ್ರಸಿದ್ಧವಾದ ಶ್ಲೋಕ-

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾl
ಪಂಚಕನ್ಯಾ: ಸ್ಮರೇ ನಿತ್ಯಂ ಮಹಾಪಾತಕ ನಾಶನಮ್ ll

ಅಹಲ್ಯಾ, ದ್ರೌಪದೀ, ಸೀತಾ, ತಾರಾ ಹಾಗೆಯೇ ಮಂಡೋದರೀ , ಈ ಐದು ಮಂದಿ ಕನ್ಯೆಯರನ್ನು ನಿತ್ಯವೂ ಸ್ಮರಣೆ ಮಾಡಿಕೊಂಡರೆ ಮಹಾಪಾತಕಗಳು (ಪಾಪಗಳು) ನಾಶವಾಗುತ್ತವೆ, ಎಂದು. ಈ ಐವರ ಬಗ್ಗೆ ಒಂದು ಸಂಕ್ಷಿಪ್ತವಾದ ಪರಿಚಯ ಮಾಡಿಕೊಳ್ಳುವುದಾದರೆ, ಅಹಲ್ಯಾ, ಗೌತಮ ಮಹರ್ಷಿಗಳ ಪತ್ನೀ, ದ್ರೌಪದೀ ದೃಪದರಾಜನ ಮಗಳು, ಯಜ್ಞಕುಂಡದಿಂದ ಜನಿಸಿ ಬಂದವಳು, ಪಂಚಪಾಂಡವರ ಪತ್ನೀ. ಸೀತಾ, ಜನಕ ಮಹಾರಾಜನ ಪುತ್ರಿ, ಜನಕ ಮಹಾರಾಜನು ಯಾಗ ಭೂಮಿಯನ್ನು ನೇಗಿಲಿನಿಂದ ಉಳುತ್ತಿದ್ದಾಗ ಆ ಭೂಮಿಯಲ್ಲಿ ಅವನಿಗೆ ದೊರಕಿದವಳು. ಜಾನಕಿ, ಮೈಥಿಲೀ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವವಳು, ಶ್ರೀರಾಮಚಂದ್ರನ ಅರ್ಧಾoಗಿನಿ. ತಾರಾ, ವಾನರ ರಾಜನಾಗಿದ್ದ ವಾಲಿಯ ಹೆಂಡತಿ ಮತ್ತು ಮಂಡೋದರೀ ರಾಕ್ಷಸರಾಜನಾದ ರಾವಣನ ಪತ್ನೀ.

ಈ ಶ್ಲೋಕದ ಬಗ್ಗೆ ಕೆಲವೊಂದು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಮೊದಲನೆಯದು, ಕನ್ಯೆ ಎಂದರೆ ಸಾಮಾನ್ಯವಾಗಿ ಮದುವೆ ಆಗದ ಹೆಣ್ಣು ಮಗಳು ಎನ್ನುವ ರೂಡಿ ಇದೆ. ಆದರೆ ಈ ಐದು ಮಂದಿಯರಿಗೂ ವಿವಾಹವಾಗಿದೆ, ಗೃಹಿಣಿಯರು, ಇವರನ್ನು ಹೇಗೆ ಕನ್ಯೆಯರು ಎಂಬ ಶಬ್ಧದಿಂದ ಕರೆಯಬಹುದು ? ಹಾಗಾಗಿ ಈ ಶ್ಲೋಕಕ್ಕೆ, ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ l ಪಂಚಕo ನಾ ಸ್ಮರೇ ನಿತ್ಯಂ ಮಹಾಪಾತಕ ನಾಶನಮ್ ll

ಎಂಬ ಬದಲಾವಣೆಯನ್ನು ಮಾಡಿಕೊಂಡು ಪಠಣ ಮಾಡುವ ರೂಢಿಯೂ ಬಂದಿದೆ. ಈ ಐದು ಮಂದಿಯರನ್ನು ನಾ ಅಂದರೆ ಮನುಷ್ಯನಾದವನು ಸ್ಮರಣೆ ಮಾಡಿಕೊಂಡರೆ ಪಾಪಗಳು ನಾಶವಾಗುತ್ತವೆ,ಎಂಬುದಾಗಿ. ಇಲ್ಲಿ ಕನ್ಯಾ ಎಂಬ ಪದವನ್ನೇ ಉಪಯೋಗಿಸಿಲ್ಲ. ಹಾಗೆಯೇ ಮೇಲ್ನೋಟಕ್ಕೆ ನೋಡಿದಾಗ ಸೀತೆ ಮತ್ತು ಮಂಡೋದರಿಯನ್ನು ಹೊರತುಪಡಿಸಿ ಉಳಿದವರ ನಡೆ ಲೋಕದ ದೃಷ್ಟಿಯಿಂದ ಅಷ್ಟು ಆದರ್ಶವಾಗಿದ್ದಂತೆ ತೋರುವುದಿಲ್ಲ, ಕೆಲವೊಂದು ದೋಷವನ್ನು ಹೊತ್ತುಕೊಂಡಂತೆ ಭಾಸವಾಗುತ್ತದೆ, ಇವರ ಸ್ಮರಣೆಯಿಂದ ನಮ್ಮ ಪಾಪಗಳು ಹೇಗೆ ದೂರವಾಗುತ್ತವೆ ? ಉದಾಹರಣೆಗೆ ಅಹಲ್ಯೆ ತನ್ನ ಪತಿಯಾದಂತಹ ಗೌತಮರು ಆಶ್ರಮಲ್ಲಿ ಇಲ್ಲದಿರುವ ಸಮಯದಲ್ಲಿ ಪತಿ ವೇಷಧಾರಿಯಾದಂತಹ ಇಂದ್ರನ ಕಾಮಕ್ಕೆ ವಶವಾದಳು, ದ್ರೌಪದಿಗೆ ಐದು ಮಂದಿ ಪತಿಯರು ಇದು ಲೋಕದ ನಡೆಗಿಂತ ವಿಭಿನ್ನವಾಗಿದೆ, ಹಾಗೆಯೇ ವಾಲಿಯ ಪತ್ನಿಯಾದಂತಹ ತಾರಾ ವಾಲಿಯ ನಿಧನದ ನಂತರ ಸುಗ್ರೀವನ ಜೊತೆಗೆ ಅವನ ಅಂತ:ಪುರದಲ್ಲಿಯೇ ಇರುತ್ತಾಳೆ, ಇವರುಗಳ ಚರಿತ್ರೆ ಈ ರೀತಿಯ ಕೆಲವೊಂದು ವೈಚಿತ್ರ್ಯದಿಂದ ಕೂಡಿದೆ. ಸೀತೆಯಂತೂ ಪರಮ ಪಾವನೆ, ಜಗನ್ಮಾತೆ. ಅವಳ ಸ್ಮರಣಮಾತ್ರದಿಂದಲೇ ನಮ್ಮಲ್ಲಿ ಪಾವನತ್ವ ಉಂಟಾಗುವುದು ನಿಶ್ಚಿತ. ಹಾಗಾಗಿ ಸೀತೆಯನ್ನು ಇವರ ಗುಂಪಿಗೆ ಸೇರಿಸಿರುವುದು ಸರಿಯೇ? ಮತ್ತು ಮಂಡೋದರಿಗೆ ರಾವಣನ ಪತ್ನಿ ಎಂಬುದೊಂದು ಕಪ್ಪುಚುಕ್ಕೆ ಬಿಟ್ಟರೆ ಉಳಿದೆಲ್ಲಾ ವಿಷಯಗಳಲ್ಲಿ ಸೀತೆಯಂತೆಯೇ ಪವಿತ್ರಳು, ಮಹಾಪತಿವ್ರತೆ. ಪತಿಯನ್ನು ಸನ್ಮಾರ್ಗಕ್ಕೆ ತರಲು ಪ್ರಾಮಾಣಿಕವಾದ ಪ್ರಯತ್ನವನ್ನೇ ಪಟ್ಟಿದ್ದಾಳೆ. ಅವಳನ್ನೂ ಸಹ ಇವರ ಗುಂಪಿಗೆ ಸೇರಿಸಿ, ಇವರೊಂದಿಗೆ ಸ್ಮರಣೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಹೊಂದುತ್ತದೆ? ಇತ್ಯಾದಿಯಾಗಿ ಸಂದೇಹ ಮೂಡುವುದು ಸಹಜ. ಇವರುಗಳ ಜೀವನದ ಬಗ್ಗೆ ಪರಿಪೂರ್ಣವಾದ ನೋಟ ಇಲ್ಲದೇ ಇರುವಾಗ ಇಂತಹ ಪ್ರಶ್ನೆಗಳು ಮೂಡುತ್ತವೆ.

ಮೊದಲನೆಯದಾಗಿ ಕನ್ಯೆ ಎಂಬ ಪದದ ಅರ್ಥ ಏನು ಎಂಬುದನ್ನು ನೋಡೋಣ. ಕನ್ಯಾ ಎಂಬ ಪದ ಸಂಸ್ಕೃತ ಭಾಷೆಯ ಪದ, ಕನಿ ದೀಪ್ತೌ ಎಂಬುದು ಇದರ ಮೂಲರೂಪ. ವಿಶೇಷ ದೀಪ್ತಿ ಹೊಂದಿರುವವರು, ಎಂಬುದಾಗಿ ಅರ್ಥ. ದೀಪ್ತಿ ಎಂದರೆ ಪ್ರಕಾಶ, ಬೆಳಕು ಎಂಬುದಾಗಿ. ವಿಶೇಷವಾದ ಪ್ರಕಾಶವನ್ನು ಹೊಂದಿರುವವರೇ ಕನ್ಯೆಯರು. ಯಾವುದದು ವಿಶೇಷ ಪ್ರಕಾಶ ಎಂದರೆ ಎಲ್ಲೆಲ್ಲೂ ಬೆಳಗುತ್ತಿರುವ, ಜ್ಞಾನಿಗಳಿಗೆ ಅಂತರಂಗದ ಸಾಧನೆಯಿಂದ ಗೋಚರವಾಗುವ ಆಧ್ಯಾತ್ಮ ಪ್ರಕಾಶ. ಸೂರ್ಯ, ಚಂದ್ರಾದಿ ಎಲ್ಲಾ ಪ್ರಕಾಶಗಳಿಗೂ ಬೆಳಕನ್ನು ಹರಿಸುವ ಪರಮಾತ್ಮ ಪ್ರಕಾಶ. ಅಂತಹ ಪ್ರಕಾಶವನ್ನು ತನ್ನಲ್ಲಿ ಹೊಂದಿ ಬೆಳಗುವಳೇ ಕನ್ಯಾ. "ಸ್ತ್ರೀಯರಿಗೆ ವಿವಾಹವಾದ ಮೇಲೆ ಸಂಸಾರ ಜೀವನದಿಂದ ವಿಶಿಷ್ಟ ದೀಪ್ತಿಯು ಮರೆಯಾಗುತ್ತದೆ. ಈ ಅಹಲ್ಯಾದಿಗಳು ವಿವಾಹಿತರಾದರೂ ಇತರರಂತೆ ಅವರಿಗೆ ವಿಶೇಷವಾದ ದೀಪ್ತಿ-ಪ್ರಕಾಶವು ಉಳಿದೇ ಇತ್ತು. ಇದೇ ಅವರ ಹಿರಿಮೆ ಎಂದು ಭಾವಿಸಿದಾಗ, ಅವರ ಆತ್ಮದೀಪ್ತಿಯ ಕಡೆಗೆ ಗಮನ ಸೆಳೆಯುವಂತಾದರೆ ಪಂಚಕನ್ಯೆಯರು ಸದಾ ಸ್ಮರಣೀಯರೇ ಆಗುವವರು" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ. ಮಹರ್ಷಿಗಳಿಂದ ಲೋಕಕ್ಕೆ ಕೊಡಲ್ಪಟ್ಟ ಈ ಶ್ಲೋಕದ ಒಳ ಅರ್ಥ ಹಾಗೂ ಈ ಐದು ಮಂದಿ ಸ್ತ್ರೀರತ್ನರ ಮಹಿಮೆಯನ್ನು ಜ್ಞಾನಿಗಳಿಂದ ತಿಳಿಯಲ್ಪಟ್ಟಾಗ ಸಂಶಯಕ್ಕೆ ಆಸ್ಪದವಿರುವುದಿಲ್ಲ. ಈ ಅಹಲ್ಯಾ ಮುಂತಾದವರಲ್ಲಿ ಹೇಗೆ ಆ ವಿಶೇಷವಾದ ಆತ್ಮಪ್ರಕಾಶ, ವಿಶಿಷ್ಟವಾದ ಕಾಂತಿಯನ್ನು ನೀಡಿತ್ತು? ಹೇಗೆ ಅವರು ಪ್ರಾತಃ ಸ್ಮರಣೀಯರಾಗಿದ್ದಾರೆ? ಅವರನ್ನು ಹೇಗೆ ಸ್ಮರಣೆ ಮಾಡಿಕೊಂಡರೆ ನಮ್ಮ ಪಾಪಗಳು ನಾಶವಾಗುತ್ತವೆ? ಎಂಬುದನ್ನು ಒಬ್ಬೊಬ್ಬರ ಜೀವನದ ವಿಶೇಷತೆಗಳ ಮೇಲೂ ನಮ್ಮ ನೋಟವನ್ನು ಹರಿಸಿ ಮುಂದಿನ ಸಂಚಿಕೆಗಳಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಸೂಚನೆ : 17/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Saturday, September 16, 2023

ಜೀವನದಲ್ಲಿ ನಿಜವಾದ ನಿಧಿ ಯಾವುದು? (Jīvanadalli nijavāda nidhi yāvudu?)


ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)



ಒಂದು ಪಟ್ಟಣದಲ್ಲಿ, ಹಳೆಯ ಕಬ್ಬಿಣ ಮತ್ತು ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುವ ಒಬ್ಬ ಬಡ ವ್ಯಕ್ತಿ ವಾಸಿಸುತ್ತಿದ್ದನು. ಅದೇ ಊರಿನ ಸಮೀಪದಲ್ಲಿ ಒಬ್ಬ ಮಹರ್ಷಿಯು ಮರದ ಕೆಳಗೆ ಧ್ಯಾನಸ್ಥರಾಗಿರುತ್ತಿದ್ದರು. ಈ ಮಹರ್ಷಿಗಳು ಈತನನ್ನು ಗಮನಿಸಿ ಒಮ್ಮೆ ಅವರ ಬಳಿ ಕರೆದು - "ಏನಪ್ಪಾ! ನಿನ್ನ ಜೀವನ ಹೇಗೆ ನಡಿಯುತ್ತಿದೆ? ನೀನು ಕಷ್ಟ ಪಟ್ಟು ಹಳೆಯ ಸಾಮಾನುಗಳ ಮಾರಾಟ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಿನ್ನ ಮನೆಯಲ್ಲಿ ಸೌಖ್ಯವೇ? ನಿನ್ನ ಕುಟುಂಬದ ಹೊಟ್ಟೆ ಬಟ್ಟೆಗಾಗುವಷ್ಟು ಸಂಪಾದನೆ ಆಗುತ್ತಿದ್ದೀಯಾ?" ಎಂದು ಪ್ರಶ್ನಿಸುತ್ತಾರೆ. 

ಅದಕ್ಕೆ ಅವನು ಬಹಳ ಬೇಸರದಿಂದ ಅವನ ಕಷ್ಟಗಳನ್ನು ಹೇಳಿಕೊಳ್ಳುತ್ತಾನೆ. ಅವನ ಸಂಪಾದನೆ ಊಟ ಮಾಡುವುದಕ್ಕೂ ಸಾಲುತ್ತಿಲ್ಲ, ಮತ್ತು ಒಂದು ಮನೆಯು ಇಲ್ಲದೆ ಒಂದು ಸಣ್ಣ ಗುಡಿಸಲಿನಲ್ಲಿ ಅವನ ಹೆಂಡತಿ ಮಕ್ಕಳರೊಡನೆ ವಾಸ ಮಾಡುತ್ತಿದ್ದೇನೆ ಎಂದು ಪೇಚಾಡಿಕೊಳ್ಳುತ್ತಾನೆ. ತಾವೇ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾನೆ. 


ಇದನ್ನು ಕೇಳಿ ಆ ಮಹರ್ಷಿಗಳು ಅವನಿಗೆ ಒಂದು ತಾಮ್ರದ ನಿಧಿಯ ಜಾಗವನ್ನು ತಿಳಿಸುತ್ತಾರೆ. ಆ ತಾಮ್ರವನ್ನು ಮಾರಾಟ ಮಾಡಿದರೆ ಸಾಕಷ್ಟು ದುಡ್ಡು ಬರತ್ತದೆ ಅದರಿಂದ ನಿನ್ನ ಜೀವನ ಚೆನ್ನಾಗುತ್ತದೆ ಎಂದು ಆಶೀರ್ವದಿಸಿ ಕಳುಹಿಸುತ್ತಾರೆ. ಈತ ಬಹಳ ಸಂತೋಷದಿಂದ ಈ ತಾಮ್ರದ ನಿಧಿಯನ್ನು ಪಡೆದು, ಅವರು ಹೇಳಿದಂತೆ ಇದರ ಮಾರಾಟ ಮಾಡಿ ಹೊಸದಾಗಿ ಜೀವನ ಮಾಡವುದಕ್ಕೆ ಶುರು ಮಾಡುತ್ತಾನೆ. 


ಸ್ವಲ್ಪ ಕಾಲದ ನಂತರ, ಮತ್ತೆ ಈತ ಮಹರ್ಷಿಗಳನ್ನು ಭೇಟಿಯಾಗುತ್ತಾನೆ. ಈಗ ಮತ್ತೆ ಆ ಮಹಾತ್ಮರು ಈತನ ಸೌಖ್ಯವನ್ನು ವಿಚಾರಿಸುತ್ತಾರೆ. ಅದಕ್ಕೆ ಈತ "ಹೆಂಡತಿ ಮಕ್ಕಳಿಗೆಲ್ಲ ಊಟ, ಬಟ್ಟೆಗೆ ಬೇಕಾದಷ್ಟು ಸಂಪಾದನೆ ಆಗುತ್ತಿದೆ ಸ್ವಾಮಿ, ಆದರೆ, ಒಂದು ಒಳ್ಳೆ ಮನೆಯನ್ನು ಕಟ್ಟುವ ಸಾಮರ್ಥ್ಯ ಒದಗುವಂತೆ ತಾವು ಅನುಗ್ರಹಿಸಬೇಕು ಎಂದು ಪ್ರಾರ್ಥಿಸುತ್ತಾನೆ. ಇದನ್ನು ಕೇಳಿ ಮಹರ್ಷಿಗಳು ಈ ಬಾರಿ ಅವನಿಗೆ ಒಂದು ಬೆಳ್ಳಿಯ ನಿಧಿಯ ದಿಕ್ಕನ್ನು ತೋರಿ ಆಶೀರ್ವದಿಸುತ್ತಾರೆ. ಬಹಳ ಸಂತೋಷದಿಂದ ಇವನು ಅದೇ ದಿಕ್ಕಿನಲ್ಲಿ ಹೋದಾಗ ಸಿಕ್ಕ ಬೆಳ್ಳಿಯ ನಿಧಿಯನ್ನು ನೋಡಿ ಬಹಳ ಸಂತಸ ಪಡುತ್ತಾನೆ. 


ಈ ನಿಧಿಯನ್ನು ಪಡೆದ ಮೇಲೆ ಬೆಳ್ಳಿಯ ಮಾರಾಟದಿಂದ ತುಂಬಾ ಶ್ರೀಮಂತನೇ ಆಗಿಬಿಡುತ್ತಾನೆ. ಒಂದು ಒಳ್ಳೆಯ ಮನೆ ಕಟ್ಟಿ ಸುಖವಾಗಿ ಜೀವನ ಮಾಡುವುದಕ್ಕೆ ಶುರು ಮಾಡುತ್ತಾನೆ. ಸ್ವಲ್ಪ ಕಾಲ ಹೀಗೆ ಕಳೆಯತ್ತದೆ. ಎಲ್ಲ ಸುಖಗಳಿದ್ದರೂ, ಅವನಿಗಿಂತ ಶ್ರೀಮಂತರಾದ ಜನರನ್ನು ನೋಡಿ, ಅವನು ಮತ್ತೊಮ್ಮೆ ಅದೇ ಮಹರ್ಷಿಗಳ ಬಳಿ ಹೋಗುತ್ತಾನೆ. ಅವರನ್ನು ನಮಸ್ಕರಿಸಿ, ಅವರ ಕೃಪೆಯಿಂದ ಎಲ್ಲ ತುಂಬಾ ಚೆನ್ನಾಗಿದೆ, ಎಂದು ಕೃತಜ್ಞತೆಯನ್ನು ಸಲ್ಲಿಸಿ ಕೃತಜ್ಞತೆಯ ಜೊತೆಯಲ್ಲೇ ಅವರಲ್ಲಿ ಇನ್ನೊಂದು ಪ್ರಾರ್ಥನೆಯನ್ನು ಮಾಡುತ್ತಾನೆ: "ತಮಗೆ ಇನ್ನು ಯಾವುದಾದರೂ ಧನದ ಬಗ್ಗೆ ತಿಳಿದಿದ್ದರೆ, ಅದನ್ನು ತಿಳಿಸಬಹುದೇ? ಇನ್ನು ಧನ ಸಿಕ್ಕಿದರೆ ಆಗ ಎಲ್ಲ ಅಕ್ಕ ಪಕ್ಕದ ಊರಿನಲ್ಲೂ ನಾನೇ ಎಲ್ಲರಿಗಿಂತ ಶ್ರೀಮಂತನಾಗುತ್ತೇನೆ. ಆಗ ಇನ್ನೂ ಸುಖವಾಗಿ ಜೀವನ ಮಾಡಬಹುದು" ಎಂದು ಬೇಡುತ್ತಾನೆ. ಇದಕ್ಕೆ ಈ ಬಾರಿ ಮಹರ್ಷಿಗಳು ಅವನಿಗೆ ಒಂದು ದೊಡ್ಡ ಚಿನ್ನದ ನಿಧಿಯ ಬಳಿ ಕಳುಹಿಸುತ್ತಾರೆ. ಇವನು ಚಿನ್ನದ ನಿಧಿಯೂ ಇರಬಹುದಾ ಎಂದು ಆಶ್ಚರ್ಯದಿಂದ, ಮತ್ತು ಅಷ್ಟೇ ಉತ್ಸಾಹದಿಂದ ಅವರು ಕೊಟ್ಟ ಮಾರ್ಗವನ್ನನುಸರಿಸಿ ಬರುತ್ತಾನೆ. ಅಲ್ಲಿ ಆ ಹೊಳೆಯುತ್ತಿರುವ ಚಿನ್ನದ ರಾಶಿಯನ್ನು ನೋಡಿ ಆಶ್ಚರ್ಯದಿಂದ ಒಂದು ಕ್ಷಣ ಮೈ ಮರೆಯುತ್ತಾನೆ. ಇದನ್ನು ಮಾರಾಟ ಮಾಡಿದರೆ ಎಂತಹ ಅದ್ಭುತವಾದ ಜೀವನವನ್ನು ಮಾಡಬಹುದು ಎಂದು ಯೋಚಿಸಿ ಅವನ ಭವ್ಯವಾದ ಭವಿಷ್ಯದ ಯೋಚನೆಗಳಲ್ಲಿ ಮುಳುಗುತ್ತಾನೆ. ಹೀಗೆ ಯೋಚಿಸುತ್ತಿರುವಾಗ ಅವನಿಗೆ ಇಲ್ಲಿಯವರೆವಿಗೂ ಬರದಿದ್ದ ಒಂದು ಪ್ರಶ್ನೆ ಹುಟ್ಟುತ್ತದೆ. ಈ ಮಹರ್ಷಿಗಳಿಗೆ ಇದೆಲ್ಲ ನಿಧಿಗಳ ಬಗ್ಗೆ ಗೊತ್ತಿದ್ದರೂ ಅವರು ಮಾತ್ರ ಆ ಸಣ್ಣ ಗುಡಿಸಲಿನಲ್ಲಿ ವಾಸ ಮಾಡಿಕೊಂಡು, ಭಿಕ್ಷಾಟನದಿಂದ ಬಂದ ಆಹಾರವನ್ನೇ ಸ್ವೀಕರಿಸುತ್ತ ಇದ್ದಾರಲ್ಲ!  ಇದು ಯಾಕೆ ಎಂದು ಯೋಚಿಸಿ, ಆ ಚಿನ್ನವನ್ನು ಮುಟ್ಟಲ್ಲು ಮನಸ್ಸಾಗದೇ ಮೊದಲು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂದು ಹಿಂದಿರುಗೆ ಮಹರ್ಷಿಗಳ ಬಳಿ ಓಡಿಹೋಗುತ್ತಾನೆ. 


"ಮಹರ್ಷಿಗಳೇ! ನಿಮಗೆ ಇಷ್ಟೆಲ್ಲಾ ನಿಧಿಗಳ ಬಗ್ಗೆ ಗೊತ್ತಿದ್ದರೂ ನೀವು ಯಾಕೆ ಇಂತಹ ಸಣ್ಣ ಗುಡಿಸಲಿನಲ್ಲಿ ವಾಸ ಮಾಡಿಕೊಂಡು ಬಡವರ ತರಹ ಬಾಳುತ್ತಿದ್ದೀರಾ?" ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಮಹರ್ಷಿಗಳು, ಹಸನ್ಮುಖರಾಗಿ, " ಅಪ್ಪ, ಈ ನಿಧಿಗಳೆಲ್ಲ ನನ್ನ ಬಳಿ ಇರುವ ನಿಧಿಗೆ ಹೋಲಿಸಿದರೆ ತುಂಬಾ ಚಿಕ್ಕದು. ನನ್ನ ಹತ್ತಿರ ವಜ್ರದ ನಿಧಿಯೇ ಇದೆ, ಅದು, ಎಂದಿಗೂ ಕ್ಷಯವೇ ಆಗದಂತಹ ಅಕ್ಷಯ ನಿಧಿ. ಇದು ಇರುವಾಗ ಯಾವ ಬೆಳ್ಳಿ ನಿಧಿ, ಯಾವ ಚಿನ್ನದ ನಿಧಿ ಬೇಕು" ಎಂದು ಹೇಳುತ್ತಾರೆ. 


ಇದನ್ನು ಕೇಳಿ "ಅಕ್ಷಯವಾದ ವಜ್ರದ ನಿಧಿಯೇ? ಎಲ್ಲಿದೆ? ನನಗೂ ಅದು ಬೇಕಲ್ಲ. ತಾವು ಅನುಗ್ರಹಿಸಬಹುದೇ?" ಎಂದು ಬೇಡುತ್ತಾನೆ. ಆಗ ಮಹರ್ಷಿಗಳು "ಆಗಬಹುದು, ಆದರೆ, ಅದು ಅಷ್ಟು  ಸುಲಭವಲ್ಲ. ನಾನು ಹೇಳಿದ ಹಾಗೆ ನೀನು ಮಾಡಬೇಕಾಗತ್ತದೆ, ಮತ್ತು ಸ್ವಲ್ಪ ಕಾಲ ಹಿಡಿಯತ್ತದೆ, ಸ್ವಲ್ಪ ಕಷ್ಟಗಳನ್ನು ಎದುರಿಸಬೇಕಾಗತ್ತದೆ, ಇದಕ್ಕೆಲ್ಲಾ ನೀನು  ಸಿದ್ಧವೇ? " ಎಂದು ಪ್ರಶ್ನಿಸುತ್ತಾರೆ. ಈತ ಇದಕ್ಕೆ ಬಹಳ ಉತ್ಸಾಹದಿಂದ "ನೀವು ಏನು ಹೇಳಿದರೂ ನಾನು ಮಾಡಲು ಸಿದ್ಧ" ಎಂದು ಒಪ್ಪಿಕೊಳ್ಳುತ್ತಾನೆ. 


ಇದಾದ ನಂತರ ಆ ಮಹರ್ಷಿಗಳು ಇವನನ್ನು ಶಿಷ್ಯನಾಗಿ ಸ್ವೀಕರಿಸಿ, ಸಾಧನ ಮಾರ್ಗವನ್ನು ಹೇಳಿಕೊಡುತ್ತಾರೆ. ಈ ಮಾರ್ಗವನ್ನು ಅನುಸರಿಸಿ ಅವರು ಹೇಳಿದಂತೆ ಮಾಡುತ್ತ, ಸ್ವಲ್ಪ ವರ್ಷಗಳು ಕಳೆಯುತ್ತವೆ. ಹೀಗೆ ಒಂದು ದಿನ ಇವನಿಗೆ ಆತ್ಮ ಸಾಕ್ಷಾತ್ಕಾರವೇ ಆಗಿಬಿಡುತ್ತದೆ. ಆತ್ಮ ಸಾಕ್ಷಾತ್ಕಾರವೆಂದರೆ ಅವನ ಒಳಗಡೆ ಇರುವ ಅಂಗುಷ್ಠಾಕಾರವಾಗಿರುವ ಜ್ಯೋತಿಯ ದರ್ಶನ ಆಗತ್ತದೆ. ಆ ಕ್ಷಣದಲ್ಲಿ ಅವನು ಎಂದೂ ಅನುಭವಿಸಿರದ ಪರಮಾನಂದವನ್ನು ಅನುಭವಿಸುತ್ತಾನೆ. ಅವನ ಕಣ್ಣುಗಳಲ್ಲಿ ಧಾರಾಕಾರವಾಗಿ ಆನಂದ ಭಾಷ್ಪವು ಹರಿಯುತ್ತದೆ.  


ಈ ಅದ್ಭುತವಾದ ಅನುಭವವನ್ನು ಅವನ ಗುರುಗಳ ಬಳಿ ತಿಳಿಸುತ್ತಾನೆ. ಇದನ್ನು ಕೇಳಿ, ಆ ಮಹರ್ಷಿಗಳಿಗೂ ತುಂಬಾ ಸಂತೋಷವಾಗುತ್ತದೆ. "ಇದೇನಪ್ಪಾ! ಎಲ್ಲದಕ್ಕಿಂತ ದೊಡ್ಡ ಅಕ್ಷಯವಾದ ವಜ್ರದ ನಿಧಿ. ಇದನ್ನು ಎಲ್ಲ ಮನುಷ್ಯರು ಪಡಿಯಬೇಕು" ಎಂದು ಹೇಳುತ್ತಾರೆ. ಒಳಗೆ ಹೊಳೆಯುವುದು ಬೆಳಕಾಗಿರುವುದರಿಂದ ಮತ್ತು ಅತ್ಯಂತ ದೊಡ್ಡ ಆನಂದ ಅದರಲ್ಲಿರುವುದರಿಂದ, ಮಹರ್ಷಿಗಳು ಹೊಳೆಯುವ ಮತ್ತು ಅತ್ಯಂತ ಬೆಲೆ ಬಾಳುವ ವಜ್ರದ ಉದಾಹರಣೆಯೊಂದಿಗೆ ಆತ್ಮಾನುಭವದ ಬಗ್ಗೆ ಅವನಿಗೆ ತಿಳಿಹೇಳಿದ್ದರು. 


ಈ ವಿಷಯದಲ್ಲಿ ಶ್ರೀರಂಗ ಮಹಾಗುರುಗಳ ವಾಕ್ಯವು ಅತ್ಯಂತ ಸ್ಫೂರ್ತಿದಾಯಕ -  "ಆತ್ಮ ಸಾಕ್ಷಾತ್ಕಾರ ಪ್ರತಿಯೊಬ್ಬ ಮನುಷ್ಯನ ಹಕ್ಕಪ್ಪಾ! ಇದನ್ನು ಎಲ್ಲ ಮಾನವರೂ ಪಡೆಯಬೇಕು" ಎಂದು ಸಾರಿದ್ದಾರೆ. ಇವರ ಮಾತಿನಂತೆಯೇ ನಾವೆಲ್ಲರೂ ನಮ್ಮ ಜೀವನದ ಗುರಿಯೂ, ಮತ್ತು ಹಕ್ಕಾಗಿರುವ ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿ ಸಾಗುವಂತಾಗಲಿ ಮತ್ತು ಈ ಅಕ್ಷಯವಾದ ನಿಧಿಯನ್ನು ಪಡಯುವಂತಾಗಲಿ ಎಂದು ಪ್ರಾರ್ಥನೆ.


ಸೂಚನೆ: 16/09/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.


Sunday, September 10, 2023

ಅಷ್ಟಾಕ್ಷರೀ​ - 43 ಓಂಕಾರಾರ್ಥಮುದೀರಯನ್ (Astakshara Darshana 43 Omkararthamudirayan)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) 



ಎಷ್ಟೋ ಮಂದಿಗೆ ಗೊತ್ತಿಲ್ಲದಿರಬಹುದು. ಏನೆಂದರೆ, ಈಚೆಗೆ ಹುಟ್ಟಿದ ಮತವೊಂದರಲ್ಲಿ ಸಂಗೀತಕ್ಕೇ ನಿಷೇಧವುಂಟು! ಏಕೆಂದರೆ, ಗಾನವೂ ಕಾಡುಹರಟೆಯೂ ಒಂದೇ ತೂಕವಂತೆ! ಅಷ್ಟೇ ಅಲ್ಲ; ಮದ್ಯ-ವ್ಯಭಿಚಾರಗಳೂ ರೇಷ್ಮೆವಸ್ತ್ರ-ಸಂಗೀತವಾದ್ಯಗಳೂ ಏಕರೂಪವಾಗಿ ನಿಷಿದ್ಧವಂತೆ! ಅದೆಂತಹ  'ನುಡಿಮುತ್ತು'ಗಳು!

ಅದು ಹೇಗೇ ಇರಲಿ, ಹಿಂದೂ-ಸಂಸ್ಕೃತಿಯಲ್ಲಿ ಮಾತ್ರ ಸಂಗೀತವೆಂಬುದು ಜೀವನದ ಅವಿಭಾಜ್ಯವಾದ ಅಂಗ. ಭಾರತದ ಅತ್ಯಂತಪ್ರಾಚೀನಸಾಹಿತ್ಯವೆಂದರೆ ವೇದ. (ಜಗತ್ತಿನ ಅತ್ಯಂತ ಪ್ರಾಚೀನಸಾಹಿತ್ಯವೂ ಅದುವೇ). ವೇದಗಳಲ್ಲೇ ಗೇಯತಾ-ಗುಣವಿದೆ. ಗಾನಕ್ಕಾಗಿಯೇ ಇರುವ ಒಂದು ವೇದವೇ ಉಂಟು : ಸಾಮವೇದ. ಭಗವಂತನು 'ಹಾಡಿದ್ದೇ' ಭಗವದ್-"ಗೀತೆ"ಯೆನಿಸುತ್ತದೆ; "ವೇದಗಳಲ್ಲಿ ನಾನು ಸಾಮವೇದ"- ಎಂದು ಶ್ರೀಕೃಷ್ಣನೇ ಅಲ್ಲಿ ಹೇಳಿಕೊಂಡಿದ್ದಾನೆ. ವಾಲ್ಮೀಕಿ-ಕೃತಿಯೂ ಗಾನಕ್ಕೆ ವಿಷಯವಾದದ್ದೇ. ಲವ-ಕುಶರು ರಾಮಾಯಣವನ್ನು "ಮಾರ್ಗ-ವಿಧಾನದಿಂದ" ಹಾಡಿದುದನ್ನು ರಾಮನೇ ಮನಸಾರೆ ಮೆಚ್ಚಿಕೊಂಡನಷ್ಟೆ.

ರಾಮ-ಕೃಷ್ಣರು ಮಾತ್ರವಲ್ಲ, ಶಿವ-ಶಿವೆಯರೂ ಸಂಗೀತಪ್ರಿಯರೇ.   ಪಾರ್ವತಿಯ ನರ್ತನವು ಲಾಸ್ಯವೆನಿಸಿದರೆ, ಶಿವನ ನರ್ತನವು ತಾಂಡವವೆನಿಸುವುದು. ನಮ್ಮ ದೇವತೆಗಳೇ ಹಾಗೆ: "ಜಯ ಸಂಗೀತ-ರಸಿಕೇ" ಎಂಬುದಾಗಿಯೇ ಶ್ಯಾಮಲಾ-ದಂಡಕದಲ್ಲಿ ದೇವಿಯನ್ನು ಸಂಬೋಧಿಸಿದೆ; ಸರಸ್ವತಿಯ ಹಸ್ತವನ್ನು ವೀಣೆಯು ಅಲಂಕರಿಸಿದೆ;  ನಂದಿಯು ಮೃದಂಗಧಾರಿ; ತುಂಬುರುವು ಗಾನಪ್ರವೀಣ. (ಪಟ್ಟಿ ಇನ್ನೂ ದೊಡ್ಡದಿದೆ!) ವಾಸ್ತವವಾಗಿ, ಗೀತ-ವಾದ್ಯ-ನೃತ್ಯಗಳು ಮೂರೂ ಸೇರಿಯೇ ಸಂ-ಗೀತ.

ಭಾರತದ ಆರ್ಷ-ಚಿಂತನೆಯಂತೆ, ಲೋಕದಲ್ಲಿ ಕಾಣುವ ಜೀವಿಗಳು ನಾವೆಲ್ಲರೂ ಮೂಲತಃ ಭಗವಂತನ ಮಡಿಲಲ್ಲಿ ಆಡಿರುವ ಶಿಶುಗಳೇ. ನಮ್ಮಲ್ಲಿ ಜನಿಸಿದ ಪ್ರಾಕೃತಿಕ-ಕಾಮನೆಗಳಿಂದಾಗಿ ಇಲ್ಲಿಗೆ ಚ್ಯುತರಾದವರೇ. (ಚ್ಯುತರೆಂದರೆ ಬಿದ್ದವರು). ಬೀಳದೇ ಇರುವವನೊಬ್ಬನೇ : ಅ-ಚ್ಯುತ. ಬಿದ್ದಿರುವ ಜೀವಿಗಳನ್ನು ಉದ್ಧರಿಸಲೆಂದೇ ಭಗವಂತನು ಕೆಳಗಿಳಿದುಬರುವುದೇ ಅವ-ತರಣ ಅಥವಾ ಅವತಾರ.

ಹಾಗೆ ಇಳಿದು ಬರುವ ಭಗವಂತ, ಯಾರನ್ನು ಉದ್ಧರಿಸಬೇಕೆಂದಿದ್ದಾನೋ, ಅವರ ಸ್ಥಿತಿ-ಗತಿಗಳನ್ನು ಗಮನಿಸಿಕೊಂಡೇ, ರುಚಿ-ಸಾಮರ್ಥ್ಯಗಳನ್ನು ಲೆಕ್ಕಿಸಿಯೇ, ತಾನು ಅವಕ್ಕನುಗುಣವಾದ ಮೈ-ಮನಸ್ಸುಗಳನ್ನೋ ವೇಷ-ಭೂಷಗಳನ್ನೋ ವ್ಯವಹಾರ-ಪ್ರಕಾರಗಳನ್ನೋ ತಾಳುವುದೂ ತಳೆಯುವುದೂ. ತನ್ನ ದೈವತ್ವವನ್ನು ಬಹುತೇಕ ಮುಚ್ಚಿಕೊಂಡೇ ಇದ್ದು, ಆಗೊಮ್ಮೆ ಈಗೊಮ್ಮೆಯಷ್ಟೆ ಅದನ್ನು ತೋರಿಕೊಳ್ಳಬಹುದು - ಶ್ರೀರಾಮನ ಅವತಾರದಲ್ಲಿ ಹೇಗೋ ಹಾಗೆ; ಅಥವಾ, ಎಳಸಿನಲ್ಲಿಯೇ ಅದರ ಸೂಚನೆಯನ್ನು ಆಗಾಗ್ಗೆ ಕೊಡುತ್ತಲೂ ಹೋಗಬಹುದು - ಶ್ರೀಕೃಷ್ಣನ ಅವತಾರದಲ್ಲಿ ಹೇಗೋ ಹಾಗೆ. ಚಿಕ್ಕಂದಿನ ಚೇಷ್ಟೆಗಳನ್ನು ಮಾಡುತ್ತಲೇ ತನ್ನ ಔನ್ನತ್ಯವನ್ನು ತೋರಿಸಿಕೊಡುವುದೂ ಇಲ್ಲದಿಲ್ಲ.

ಧನ್ಯಜೀವಿಗಳನ್ನು ತನ್ನತ್ತ ಸೆಳೆಯುವಂತಹ ಆಟಗಳನ್ನು ಬಾಲ್ಯದಲ್ಲಿಯೇ ಆಡಿ ಅವರಿಗೆ ಮೋದಾತಿಶಯವನ್ನು ಅನುಗ್ರಹಿಸಿದವನೆಂದರೆ ನಮ್ಮ ಕಡುಮುದ್ದುಕೃಷ್ಣನೇ ಸರಿ. ಆತನು ಆಡಿದ ಆಟವೇನು? ಆಟದೊಳಗಿನ ಮಾಟವೇನು? ಒಳಹೊಕ್ಕರೆ ದಕ್ಕುವ ನೋಟವೇನು? – ಎಂಬುದನ್ನಿಲ್ಲೊಂದಿಷ್ಟು ಗಮನಿಸಲಾಗಿದೆ.

ಲೋಕದಲ್ಲಿ ಎಷ್ಟು ಮಂದಿ ಗಾನವನ್ನು ಮಾಡಿಲ್ಲ, ವಾದ್ಯಗಳನ್ನು ನುಡಿಸಿಲ್ಲ? ಆದರೆ ಬಾಲಕೃಷ್ಣನು ನುಡಿಸಿದಂತೆ ವೇಣುವನ್ನು ನುಡಿಸಿದವರುಂಟೆ?: "ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಧರೆ!".

ಮಂಗಳವಾಯಿತೆಂದರೆ ಹೇಗಾಯಿತು? ಹತ್ತು ಬಗೆಗಳಲ್ಲಾದುದನ್ನು ಚಿತ್ರಿಸುತ್ತಾನೆ, ಲೀಲಾಶುಕ. ಶ್ರೀರಂಗಮಹಾಗುರುಗಳ ದೃಷ್ಟಿಗೆ ಬಿದ್ದು ಅವರ ಮಾರ್ಮಿಕ-ವಿವರಣೆಗೆ ಪಾತ್ರವಾಗಿ ಧನ್ಯವಾಯಿತು, ಆತನ ಆ ಚಿತ್ರಣ. ವೇಣುಗಾನ-ಪ್ರಭಾವದ ಆ ಬಗೆಗಳೇನು?: ಲೋಕಗಳನ್ನು ಅದು ಉನ್ಮಾದಗೊಳಿಸಿದೆ. ಏನು ಹಾಗೆಂದರೆ? ಏನೋ ಭಾವವುಕ್ಕಿತೆಂದಷ್ಟು ಮಾತ್ರವಲ್ಲ; ಯೋಗಗಾನವಾದ ಅದು, ಯೋಗಶಾಸ್ತ್ರವು ಹೇಳುವ ಉನ್ಮನೀಭಾವವನ್ನು ಸೂಚಿಸುತ್ತದೆ. ಮನಸ್ಸು ಮೇಲ್ಮುಖವಾಗಿ ಹರಿಯುವುದನ್ನು ಉನ್ಮನೀ-ಮನೋನ್ಮನೀ ಎಂಬ ಪದಗಳಿಂದ ಯೋಗವಿದ್ಯೆಯು ಹೇಳುವುದಷ್ಟೆ? ಅವಾಗುವುದು ಧ್ಯಾನದಲ್ಲಿಯ ಅಂತರ್ನಾದ-ಶ್ರವಣದಿಂದ. ಅವೇ ಫಲ-ಪರಿಣಾಮಗಳು ಇಲ್ಲಿ ಶ್ರೀಕೃಷ್ಣನು ನುಡಿಸಿದ ವೇಣುವಿನ ಬಾಹ್ಯನಾದದ ಶ್ರವಣದಿಂದಲೇ ಆಗುತ್ತಿದೆ! ಓ, ಇಂತಹ ಗಾನವಿನ್ನೆಲ್ಲಿ ದೊರಕೀತು?

ಮನುಷ್ಯರ ಮೇಲೆ ಮಾತ್ರವಲ್ಲದೆ, ಗಿಡ-ಮರಗಳ ಮೇಲೂ ಪಶು-ಪ್ರಾಣಿಗಳ ಮೇಲೂ ಆ ವೇಣುನಾದದ ಪ್ರಭಾವವುಂಟು. ವೃಕ್ಷಗಳಲ್ಲಿ ಹರ್ಷವೂ, ಗೋವೃಂದಗಳಲ್ಲಿ ಒಂದು ಆನಂದವೂ, ಮೃಗಗಳಲ್ಲಿ ವಿಲಕ್ಷಣ-ವಿವಶತೆಯೂ ಉಂಟಾಗಿವೆ. ಮುಗ್ಧಗೋವಳರಲ್ಲೂ ಅನಿರ್ವಾಚ್ಯವಾದ ಸಂಭ್ರಮವು ಮೂಡಿದೆ. ಹೀಗೆ ಜೀವರಾಶಿಗಳ ಮೇಲೆಲ್ಲ ವಿಕಾಸಾಭಿಮುಖವಾದ ಪರಿಣಾಮವನ್ನದು ಬೀರಿದೆ. ಈ ವಿಶಿಷ್ಟಗಾನದಿಂದಾಗಿ ಇತ್ತ ಗಟ್ಟಿಬೆಟ್ಟಗಳೂ ಕರಗುವಂತಿವೆ. ಸಪ್ತಸ್ವರಗಳೂ ಸುಯೋಜಿತವಾಗಿ ಹೊಮ್ಮುತ್ತಿದ್ದು, ಅತ್ತ ವೇದರಾಶಿಗೇ ಮೂಲವೆನಿಸುವ ನಾದವು ಆವಿರ್ಭವಿಸಿದೆ. ವೇದಬೀಜವಾದ ಓಂಕಾರವೇ ಅಲ್ಲಿ ತೋರಿಬಂದಿದೆ: "ಪ್ರಣವಾರ್ಥವಾದ ಪರಬ್ರಹ್ಮವನ್ನೇ ಬಿತ್ತರಿಸುವ ನಾದವದಾಗಿದೆ" – ಎಂಬ ಶ್ರೀರಂಗಮಹಾಗುರುಗಳ ಭವ್ಯೋದ್ಗಾರಕ್ಕದು ಭಾಜನವಾಗಿದೆ!  ಮುನಿಗಳನ್ನು ಮತ್ತೂ ಅಂತರ್ಮುಖರನ್ನಾಗಿಸುವ ಆ ಮಾದಕ-ನಾದಕ್ಕೆ ನಮ್ಮ ನಮ್ರ ನಮನಗಳು!

ಸೂಚನೆ: 10/9/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 


ಯಕ್ಷ ಪ್ರಶ್ನೆ 54 (Yaksha prashne 54)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

 

ಪ್ರಶ್ನೆ – 53 ಉತ್ತಮ ಧನ ಯಾವುದು  ?

ಉತ್ತರ - ಶ್ರುತ- ವಿದ್ಯೆ

ಭಾರತದೇಶವು ವಿದ್ಯೆಗೆ ಮಹತ್ತ್ವವನ್ನು ಕೊಟ್ಟಿದೆ. ವಿದ್ಯಾವಂತನಿಗೆ ಎಲ್ಲರಿಗಿಂತಲೂ ಉನ್ನತಸ್ಥಾನ ಮತ್ತು ಮಾನವನ್ನು ಕೊಟ್ಟಿದ್ದೂ ಉಂಟು. ಏಕೆ ಇಂತಹ ಸ್ಥಾನ? ಧನ, ಕನಕ, ವಸ್ತು, ವಾಹನ ಇತ್ಯಾದಿ ಯಾವುದನ್ನು ನಾವು ಸಂಪತ್ತು ಎಂದು ಹೇಳುತ್ತೇವೋ ಅವೆಲ್ಲವೂ ಭೌತಿಕವಾಗಿ ಗೋಚರಿಸುತ್ತವೆ. ಆದರೆ ವಿದ್ಯೆ ಎಂಬ ಸಂಪತ್ತು ಅಗೋಚರವಾದುದು. ಹೊರಗಿನ ಸಂಪತ್ತನ್ನು ಚೋರರು ಅಪಹರಿಸಬಹುದು, ರಾಜರು ಪಡೆಯಬಹುದು, ಅಣ್ಣತಮ್ಮಂದಿರು ವಿಭಾಗಿಸಬಹುದು, ತಲೆಯಮೇಲೆ ಹೊತ್ತುಕೊಂಡರೆ ಭಾರವೆಂದೆನಿಸುವುದು, ವ್ಯಯಿಸಿದಷ್ಟೂ ಉಳಿಯುವುದಿಲ್ಲ, ಕಳೆದುಹೋಗುತ್ತದೆ. ಆದರೆ ವಿದ್ಯೆ ಎಂಬ ಧನವು ಇವೆಲ್ಲಕ್ಕೂ ವಿರುದ್ಧವಾದದ್ದು. ವಿದ್ಯೆಯನ್ನು ತಲೆಯಲ್ಲಿ ತುಂಬಿಗೊಂದರೆ ಭಾರವೆನಿಸದು. ಏಕೆಂದರೆ ವಿದ್ಯೆ ಅಮೂರ್ತವಾದ ವಿಷಯ. ಅದಕ್ಕೆ ತೂಕವಿಲ್ಲ. ಆದ್ದರಿಂದ ವಿದ್ಯೆಯು ಎಲ್ಲಾ ಧನಕ್ಕಿಂತಲೂ ಶ್ರೇಷ್ಠ ಎಂದು ಒಂದು ಸುಭಾಷಿತವೂ ಹೇಳುತ್ತದೆ. ಯಕ್ಷನು ಕೇಳಿದ ಪ್ರಶ್ನೆಗೆ ವಿದ್ಯೆಯ ಪರ್ಯಾಯಪದವಾದ 'ಶ್ರುತ' ಎಂಬ ಪದವನ್ನು ಧರ್ಮರಾಜನು ಹೇಳಿದ್ದು, ವಿದ್ಯೆಯ ವಿಶೇಷತೆಯನ್ನು ಪ್ರಚುರಪಡಿಸುವುದಕ್ಕಾಗಿ. 

ಉಪನಿಷತ್ತು ಹೇಳುವಂತೆ ವಿದ್ಯೆಯನ್ನು ಸಂಪಾದನೆ ಮಾಡುವುದಕ್ಕೆ ಆಚಾರ್ಯನು ಪೂರ್ವರೂಪ. ವಿದ್ಯಾರ್ಥಿಯು ಉತ್ತರರೂಪ. ಅವರಿಬ್ಬರ ಮಧ್ಯೆ ಪ್ರವಚನ ಅಥವಾ ಪಾಠವು ಸಂಧಾನವಾಗುತ್ತದೆ. ಇದರಿಂದ ವಿದ್ಯೆ ಎಂಬುದು ವಿದ್ಯಾರ್ಥಿಯಲ್ಲಿ ಆವಿರ್ಭಾವವಾಗುತ್ತದೆ. ಉಪಾಧ್ಯಾಯರು ಹೇಳುವ ಪಾಠವನ್ನು ಮಾಣವಕನು ಸರಿಯಾಗಿ ಗ್ರಹಣ ಮಾಡಬೇಕಾಗುತ್ತದೆ. ಗ್ರಹಣದ ಆಧಾರದ ಮೇಲೆಯೇ ಅವನ ಮುಂದಿನ ವಿದ್ಯೆಯ ಆಳ ಅಗಲಗಳು ನಿರ್ಣಯವಾಗುವುವು. ಆದ್ದರಿಂದ ವಿದ್ಯಾಗ್ರಹನಕ್ಕೆ ಶ್ರವಣ ಮೊದಲ ಸಾಧನ. ಸಾಧನವು ನೂರಕ್ಕೆ ನೂರು ಪ್ರಮಾಣದಲ್ಲಿರಬೇಕು. ಯಾವುದೇ ವಿಷಯವು ನಮ್ಮ ಆತ್ಮಸಾತ್ ಆಗಬೇಕಾದರೆ ಯಾವೆಲ್ಲಾ ಸಾಧನಗಳು ಬೇಕು ಎಂದು ಹೇಳುವಾಗ 'ಶ್ರವಣ ಮನನ ನಿದಿಧ್ಯಾಸನ' ಇವನ್ನು ಹೇಳುತ್ತಾರೆ. ಶ್ರವಣದ ಭಾಗ ಸಂಪನ್ನವಾದರೆ ಮನನವು ಸಂಪೂರ್ಣವಾಗುವುದು. ಮನನವು ಪರಿಪೂರ್ಣವಾದರೆ ಮುಂದಿನ ನಿದಿಧ್ಯಾಸನ ಅರ್ಥಪೂರ್ಣವಾಗುವುದು. ಆದ್ದರಿಂದ ಶ್ರವಣಕ್ಕೆ ಪ್ರಾಶಸ್ತ್ಯವಿದೆ. ಇಂತಹ ಶ್ರವಣದಿಂದ ಪಡೆದದ್ದನ್ನೆ 'ಶ್ರುತ' ಎಂದು ಕರೆಯಲಾಗಿದೆ. ಇದೇ ನಿಜವಾದ ವಿದ್ಯೆ. 'ಬಹುಧಾ ಶ್ರೋತವ್ಯಂ ಬಹುಭ್ಯಃ ಶ್ರೋತವ್ಯಂ' ಎಂಬ ಮಾತಿದೆ. ಅಂದರೆ ಒಂದೇ ವಿಷಯವನ್ನು ಅನೇಕಬಾರಿ ಅನೇಕರಿಂದ ಕೇಳಬೇಕು. ಇಲ್ಲೂ ಕೇಳುವುದನ್ನು ಒತ್ತಿ ಒತ್ತಿ ಹೇಳಲಾಗಿದೆ. ಕೊಟ್ಟಾಗ ಮಾತ್ರ ಸಿಗುವುದು ಉಳಿದ ಸಂಪತ್ತುಗಳು. ಕೊಡದೇ ಸಿಗದಿರುವುದು ಉಳಿದ ಸಂಪತ್ತುಗಳು. ಈ ವಿದ್ದಯೆ ಎಂಬ ಧನವನ್ನು ಕೊಡದೆಯೂ ಆಚಾರ್ಯರ ಶ್ರದ್ಧೆಯ ಆರಾಧನೆಯಿಂದ ಸಿಗಬಹುದು. ಅದಕ್ಕೆ ನಾವು ಮಹಾಭಾರತದ ಏಕಲವ್ಯನ ಕಥೆಯನ್ನು ನೋಡಬಹುದು. ನೇರವಾಗಿ ದ್ರೋಣರು ವಿದ್ಯೆಯನ್ನು ಕೊಡಲಿಲ್ಲ. ಆದರೂ ಏಕಲವ್ಯ ವಿದ್ಯೆಯನ್ನು ಪಡೆದನಲ್ಲ. ಕೊಟ್ಟಿದ್ದೂ ಉಳಿಯದ ಧವೆಂದರೆ ಇದೇ ವಿದ್ಯೆ. ಇದಕ್ಕೂ ಮಹಾಭಾರತದ ಕರ್ಣನ ವೃತ್ತಾಂತವನ್ನು ನೋಡಬಹುದು. ಪರಶುರಾಮನಿಂದ ವಿಧಿವತ್ತಾಗಿ ಪಡೆದಿದ್ದರೂ ಬೇಕಾದಾಗ ಬಳಸಿಕೊಳ್ಳಲಾಗಲಿಲ್ಲ ಕರ್ಣನಿಗೆ. ಆಚಾರ್ಯಾತ್ ಪಾದಮ್ ಆದತ್ತೇ ಪಾದಂ ಶಿಷ್ಯಂ ಸ್ವಮೇಧಯಾ, ಪಾದಂ ಬ್ರಹ್ಮಚಾರಿಭ್ಯಃ ಪಾದಂ ಕಾಲೇನ ಪಚ್ಯತೇ" - ಆಚಾರ್ಯರಿಂದ ಪಡೆಯುವುದು ಕೇವಲ ಪಾದ ಭಾಗ, ಶಿಷ್ಯನ ಸ್ವಮೇಧೆಯಿಂದ ಸಿದ್ಧವಾಗುವುದು ಕಾಲು ಭಾಗ, ಇನ್ನು ಕಾಲು ಭಾಗ ತನ್ನ ಸಹಪಾಠಿಗಳ ಜೊತೆ ಮಾಡುವು ವಿಚಾರಮಂಥನದಿಂದ ಇನ್ನು ಉಳಿದ ಕಾಲು ಭಾಗವು ಹಿಂದಿನವುಗಳ ಆಧಾರದ ಮೇಲೆ ಬರುವ ಅನುಭವದಿಂದ ಪ್ರಾಪ್ತವಾಗುವುದು.  ಕೊಟ್ಟಿದ್ದರೂ ಬರದೆ ಇರುವಂತಹ, ಕೊಡದಿದ್ದರೂ ಬರುವಂತಹ ಧನವೇನಾದರೂ ಇದ್ದರೆ ಅದು ವಿದ್ಯೆ. ಆದ್ದರಿಂದಲೇ ವಿದ್ಯೆಯು ಎಲ್ಲಕ್ಕಿಂತಲೂ ಉತ್ತಮ.  

ಸೂಚನೆ : 10/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 54 ಧೃಷ್ಟದ್ಯುಮ್ನನು ಗುಟ್ಟಾಗಿ ಕಂಡುಕೊಂಡದ್ದು (Vyaasa Vikshita - 54 Dhrishtadyumnanu Guttagi Kandukondaddu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ನಾವಿಲ್ಲಿರುವುದು ನಿನಗೆ ಗೊತ್ತಾದದ್ದು ಹೇಗೆ? – ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದ ಯುಧಿಷ್ಠಿರನಿಗೆ, ನಸುನಗುತ್ತಾ ಶ್ರೀಕೃಷ್ಣನು ಉತ್ತರವಿತ್ತ:

ಅಗ್ನಿಯು ಗೂಢವಾಗಿದ್ದರೂ ಗೊತ್ತಾಗಿಯೇ ಬಿಡುತ್ತದೆ, ಅಲ್ಲವೆ? ಅಂತಹ ಪರಾಕ್ರಮವೆಂಬುದು ಈ ಪಾಂಡವರನ್ನು ಬಿಟ್ಟು ಮತ್ತಾವ ಮನುಷ್ಯರಲ್ಲಿ ಇರುವುದು? ಸೌಭಾಗ್ಯವಶಾತ್ ನೀವುಗಳೆಲ್ಲರೂ (ಜತುಗೃಹದ) ಘೋರವಾದ ಅಗ್ನಿಯಿಂದ ಪಾರಾದಿರಿ. ನಿಮ್ಮ ಅದೃಷ್ಟದಿಂದಲೇ ಮಂತ್ರಿಸಹಿತನಾದ  ದುರ್ಯೋಧನನ ಆಸೆಗಳು ಫಲಿಸಲಿಲ್ಲ. ನಮ್ಮ ಅಂತರಂಗದಲ್ಲಿರುವ ಎಲ್ಲ ಶುಭಾಶಂಸನೆಗಳೂ ನಿಮಗೆ ಲಭ್ಯವಾಗಲಿ. ಜ್ವಲಿಸುವ ಅಗ್ನಿಯಂತೆ ವರ್ಧಿಸಿರಿ. ನಿಮ್ಮ ಬಗ್ಗೆ ಬೇರೆಯ ರಾಜರಿಗೆ ಏನೂ ಈಗಲೇ ತಿಳಿಯುವುದು ಬೇಡ. ನಾವಿನ್ನು ಸ್ವಶಿಬಿರಕ್ಕೆ ಹೊರಡುತ್ತೇವೆ" ಎಂದನು.

ಹೀಗೆ ನುಡಿದು, ಅಕ್ಷಯವಾದ ಕಾಂತಿಯನ್ನು ಹೊಂದಿದ್ದ ಶ್ರೀಕೃಷ್ಣನು ಬಲರಾಮನೊಂದಿಗೆ ಅಲ್ಲಿಂದ ಹೊರಟುಬಂದನು. ಇತ್ತ ಪಾಂಚಾಲ್ಯನಾದ (ಎಂದರೆ ಪಾಂಚಾಲದೇಶದವನಾದ) ಧೃಷ್ಟದ್ಯುಮ್ನನು ಭೀಮಾರ್ಜುನರನ್ನು ಯಾರಿಗೂ ತಿಳಿಯದಂತೆ ಹಿಂಬಾಲಿಸುತ್ತಿದ್ದು, ಕುಂಬಾರನ ಮನೆಗೆ ಯಾರಿಗೂ ತಿಳಿಯದಂತೆ ಬಂದನು; ಎಲ್ಲ ಕಡೆಗೂ ಗಮನವಿಟ್ಟುಕೊಂಡು ಗುಟ್ಟಾಗಿ ಆತನು ಕುಂಬಾರನ ಮನೆಯಲ್ಲಿ ಅಡಗಿ ನಿಂತನು.

ಸಂಜೆಯ ಹೊತ್ತಿಗೆ ಭೀಮಾರ್ಜುನರೂ ನಕುಲಸಹದೇವರೂ ಭಿಕ್ಷಾಟನೆ ಮಾಡಿ ಲಬ್ಧವಾದ ಭಿಕ್ಷೆಯನ್ನು ಯುಧಿಷ್ಠಿರನಿಗೊಪ್ಪಿಸಿದರು. ಉದಾರಳಾದ ಕುಂತಿಯು ಆ ಸಮಯಕ್ಕೆ ದ್ರೌಪದಿಯನ್ನು ಕುರಿತು ಹೀಗೆ ಹೇಳಿದಳು:

"ಮಂಗಳಕರಳೇ, ಅನ್ನವನ್ನು ತೆಗೆದುಕೋ, ಅದರ ಒಂದು ಭಾಗವನ್ನು ದೇವತೆಗಳಿಗೆ ಬಲಿಯಾಗಿ ಕೊಡು, ಹಾಗೂ ವಿಪ್ರನೊಬ್ಬನಿಗೆ ಭಿಕ್ಷೆಯಾಗಿ ಕೊಡು. ಸುತ್ತಲಿರುವ ಮತ್ತಾರಾದರೂ ಅನ್ನವನ್ನು ಬಯಸುವವರಾಗಿದ್ದರೆ (ಎಂದರೆ ಅತಿಥಿಗಳಿದ್ದರೆ) ಅವರಿಗೂ ಕೊಡು. ಉಳಿದದ್ದನ್ನು ಎರಡಾಗಿ ವಿಭಾಗ ಮಾಡು - ಅರ್ಧಭಾಗವಾಗಿ ಒಂದು, ಹಾಗೂ ನಾಲ್ಕಾಗಿ ಮತ್ತು ನಿನಗಾಗಿ ಮತ್ತೊಂದು. ಗಜರಾಜನಂತಿರುವ ಹಾಗೂ ಒಳ್ಳೆಯ ಮೈಕಟ್ಟುಳ್ಳ ಗೌರವರ್ಣದ ಭೀಮನಿಗೆ ಆ ಅರ್ಧವನ್ನು ಕೊಡು. ಆತನು ಯಾವಾಗಲೂ ಬಹುಭೋಜಿ (ಹೆಚ್ಚಾಗಿ ತಿನ್ನತಕ್ಕವನು)" - ಎಂದಳು.

ಹರ್ಷದಿಂದ ಕೂಡಿದ ರಾಜಕುಮಾರಿ(ದ್ರೌಪದಿ)ಯು, ಕುಂತಿಯ ಮಾತನ್ನು ಚೆನ್ನಾಗಿ ಆಲಿಸಿಕೊಂಡಳು. ಅವಳು ಹೇಳಿದಂತೆಯೇ ಮಾಡಿದಳು ಕೂಡ. ಹೀಗೆ ಎಲ್ಲರ  ಊಟವಾಯಿತು.

ಚುರುಕಾಗಿದ್ದ ಸಹದೇವನು ದರ್ಭೆಗಳಿಂದಾದ ಶಯ್ಯೆಯನ್ನು ನೆಲದ ಮೇಲೆ ಎಲ್ಲರಿಗೂ ಹಾಸಿದನು. ಅದರ ಮೇಲೆ ತಮ್ಮ ತಮ್ಮ ಅಜಿನಗಳನ್ನು (ಕೃಷ್ಣಾಜಿನಗಳನ್ನು) ಹಾಸಿಕೊಂಡು ಎಲ್ಲರೂ ಮಲಗಿದರು. ಅವರೆಲ್ಲರೂ ಅಗಸ್ತ್ಯದಿಕ್ಕಿನತ್ತ, ಎಂದರೆ ದಕ್ಷಿಣಕ್ಕೆ, ತಲೆಮಾಡಿ ಮಲಗಿದರು. ಅವರೆಲ್ಲರ ಶಿರಸ್ಸಿನತ್ತ ಕುಂತಿಯು ಮಲಗಿದ್ದಳು. ದ್ರೌಪದಿಯು ಅವರ ಪಾದಗಳತ್ತ ಮಲಗಿದಳು. ಪಾಂಡವರ ಕಾಲುಗಳ ಬಳಿ ನೆಲದ ಮೇಲೆ ದರ್ಭದ ಹಾಸಿಗೆಯಲ್ಲಿ ಮಲಗಿದರೂ ಸಹ, (ರಾಜಕುಮಾರಿ)ದ್ರೌಪದಿಗೆ ಮನಸ್ಸಿನಲ್ಲಿ ಕಿಂಚಿತ್ತೂ ದುಃಖವಾಗಲಿಲ್ಲ. ಅಷ್ಟೇ ಅಲ್ಲ, ಕುರುಪುಂಗವರಾದ ಪಾಂಡವರ ಬಗೆಗೆ ಒಂದಿಷ್ಟು ತಾತ್ಸಾರಭಾವವೂ ಮೂಡಲಿಲ್ಲ.

ಶಯಿಸಿದ ಪಾಂಡವರು ಆಗ ಮಾತನಾಡಿಕೊಳ್ಳುತ್ತಿದ್ದ ಬಗೆಬಗೆಯ ವಿಷಯಗಳಾದರೂ ಏನು?: ಸೈನ್ಯಗಳು (ಅವನ್ನು ಕಟ್ಟುವುದು ಇತ್ಯಾದಿ), ದಿವ್ಯಾಸ್ತ್ರಗಳು (ಅವುಗಳ ಪ್ರಯೋಗ-ಉಪಸಂಹಾರಗಳು), ರಥಗಳು, ಗಜಗಳು, ಖಡ್ಗ-ಗದೆ-ಗಂಡುಗೊಡಲಿಗಳು - ಇವೇ.

ಇವೆಲ್ಲವನ್ನೂ, ಅಂದಿನ ರಾತ್ರಿಯೂ ಅವರುಗಳೆಲ್ಲರ ನಡೆ-ನುಡಿಗಳನ್ನೂ ಗಮನಿಸಿಕೊಂಡ ಧೃಷ್ಟದ್ಯುಮ್ನನು ಎಲ್ಲವನ್ನೂ ದ್ರುಪದನಿಗರುಹಲೆಂದು (ಬೆಳಗಾಗುತ್ತಲೇ) ಅಲ್ಲಿಂದ ತ್ವರಿತವಾಗಿ ಸಾಗಿದನು.

ಸೂಚನೆ : 10/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆನಂದಾಮೃತವನ್ನು ಕರ್ಷಿಸುವ ಅಮೃತವರ್ಷಿಣಿ (Anandamrtavannu Karsisuva Amrstavarsini)

  ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)



ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರಾದ ಮುತ್ತುಸ್ವಾಮಿ ದೀಕ್ಷಿತರ (1776-1835 ಕ್ರಿ.ಶ) ಜೀವನದಲ್ಲಿ ಒಂದು ಕುತೂಹಲಕಾರಿ ಪ್ರಸಂಗ ನಡೆಯಿತು. ಕ್ಷಾಮ ಪೀಡಿತ ಮಾರ್ಗದ ಮೂಲಕವಾಗಿ ಎತ್ತಿನ ಗಾಡಿಯಲ್ಲಿ ಎಟ್ಟಿಯಾಪುರಕ್ಕೆ ಹೋಗುತ್ತಿದ್ದರು. ಅವರ ಧರ್ಮಪತ್ನಿ ತೀವ್ರವಾದ ಬಾಯಾರಿಕೆಯನ್ನು ವ್ಯಕ್ತಪಡಿಸಿದರು. ನೀರನ್ನೆಲ್ಲೂ ಕಾಣದೆ, ದೇವಿ ಉಪಾಸಕರಾದ ದೀಕ್ಷಿತರು, ಒಡನೆಯೇ ಅಮೃತೇಶ್ವರಿ ದೇವಿಯನ್ನು ಸ್ತುತಿಸುತ್ತಾ ಅಮೃತವರ್ಷಿಣಿ ರಾಗದಲ್ಲಿ, "ಆನಂದಾಮೃತ ಕರ್ಷಿಣಿ ಅಮೃತವರ್ಷಿಣಿ…" ಎಂದು ಕೃತಿಯನ್ನು ರಚಿಸಿ, ಅವರ ಶಿಷ್ಯನಾದ ತೇವೂರ್ ಸುಬ್ರಹ್ಮಣ್ಯಅಯ್ಯರ್ ಅನ್ನುವವನಿಗೆ ಕಲಿಸಿ ಹಾಡಿಸುತ್ತಾರೆ. ಹಾಡು ಮುಗಿಯುತ್ತಲೇ, ಮೋಡಕವಿದು, ಜೋರಾಗಿ ಮಳೆ ಸುರಿಯುತ್ತದೆ. ಮೊಣಕಾಲಿನಷ್ಟು ಆಳವಾದ ನೀರಿನಲ್ಲಿ ಪ್ರಯಾಣ ಮುಂದುವರಿಸಿ ಎಟ್ಟಿಯಾಪುರ ತಲುಪುತ್ತಾರೆ. 


ಇದು ಪವಾಡವೇ? ನಿತ್ಯ ಅನುಷ್ಠಾನ, ಮಂತ್ರ ಜಪ, ಹೋಮಾದಿಗಳನ್ನು ಆಚರಿಸುತ್ತಿದ್ದ ದೀಕ್ಷಿತರಂತಹ ಕೆಲವರಿಂದ ಮಾತ್ರ ಸಾಧ್ಯವೇ? ಶಿಷ್ಯ ಪರಂಪರೆಯಲ್ಲಿ ನಮ್ಮವರೆಗೆ ತಲುಪಿರುವ ಇದೇ ಕೃತಿಯನ್ನು ನಾವಿಂದು ಹಾಡಿದಾಗಲೆಲ್ಲಾ ಮಳೆ ಸುರಿಯುತ್ತಿದೆಯೇ?  ಕೇವಲ ಮಳೆ  ಬಾರದಿದ್ದಾಗ ಹಾಡುವ ರಾಗವೆಂದು ಸಂಪ್ರದಾಯವನ್ನು ಮಾತ್ರ ಉಳಿಸಿಕೊಂಡಿದ್ದೇವೆಯೆ? ಇಷ್ಟೆಲ್ಲಾ ಏಕೆ ಕಷ್ಟಪಡಬೇಕು? ಇಂದು ವಿಮಾನಗಳಿಂದ ರಾಸಾಯನಿಕ ವಸ್ತುಗಳನ್ನು ಮೋಡಗಳ ಮೇಲೆ ಬಿತ್ತರಿಸಿ, ಬೇಕಾದ ಸ್ಥಳಗಳಲ್ಲಿ ಮಳೆಯನ್ನು ಬರಿಸಲು ಸಾಧ್ಯವಿದೆಯಲ್ಲ! ಎಂದೂ ಆಧುನಿಕ ವಿಜ್ಞಾನದಿಂದ ಶಿಕ್ಷಿತರಾದ ನಮ್ಮಗಳ ಬುದ್ಧಿಗೆ ಅನ್ನಿಸಬಹುದು. 


ಸಂಗೀತ  ಸಾಹಿತ್ಯಗಳ ಅನ್ಯೋನ್ಯ ಸಂಬಂಧ


 ಜ್ಞಾನ–ವಿಜ್ಞಾನ ತೃಪ್ತಾತ್ಮರಾದ ಶ್ರೀರಂಗಮಹಾಗುರುಗಳು ಸಂಗೀತ-ಸಾಹಿತ್ಯಗಳ ಅನ್ಯೋನ್ಯ ಸಂಬಂಧದ ಬಗ್ಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದರು. ಸಂಗೀತ–ಸಾಹಿತ್ಯಗಳನ್ನು ಭಗವಂತನ ಇಚ್ಛೆಯಂತೆ, ವಿದ್ಯೆಗಳಾಗಿ ಲೋಕಕ್ಕೆ ಅಮೃತ ಧಾರೆಯಾಗಿ ಹರಿಸುತ್ತಿರುವಳು ದೇವಿ. 


"ಕರೆಂಟ್ ಹರಿಸಲು ಕಾಪರ್ ವೈರ್ ಹೇಗೆ ಅವಶ್ಯವೋ ಹಾಗೇ, 'ವಾಕ್ಕು', ವಿದ್ಯೆಯನ್ನು ಹೊರತರಲು ಮಾಧ್ಯಮವಾಗಿದ್ದು, ನಾದ ಮೂಲದಿಂದ ಪರಾ, ಪಶ್ಯಂತೀ, ಮಧ್ಯಮಾ ಹಾಗೂ ವೈಖರೀಗಳೆಂಬ ನಾಲ್ಕು ದಶೆಗಳಲ್ಲಿ ವಿಕಾಸವಾಗುತ್ತೆ. ಶಬ್ದ ರೂಪದಲ್ಲಿ ಗೋಚರವಾಗುವುದು ವೈಖರೀ. ಉಳಿದ ಮೂರು ನಾದರೂಪಗಳು."


 ಪ್ರಣವ ಮೂಲದಿಂದ ಹೊರಟು, ಸಪ್ತಸ್ವರಗಳಾಗಿ ವಿಸ್ತಾರ ಹೊಂದಿ, ಒಂದು ಅಪೇಕ್ಷೆಗೆ ಅನುಗುಣವಾಗಿ ರಾಗಗಳು ಹುಟ್ಟುತ್ತವೆ. ಸಾಹಿತ್ಯದೊಡನೆ ಅದರ ರಸವನ್ನೂ ಹೊರಹೊಮ್ಮಿಸುವಂತಿರಬೇಕು ರಾಗಗಳು. ಸಂಗೀತ ಕಲೆಯನ್ನು ದೈವದ ಗುಣಗಾನಕ್ಕಾಗಿ ಬಳಸಿ,  ಭಗವಂತನನ್ನು ಒಲಿಸಿಕೊಂಡಲ್ಲಿ, ಜೀವನಕ್ಕೆ ಒಂದು ಸ್ನಾನ, ಅದರಿಂದ ನಿತ್ಯವೂ ಅಮೃತಪಾನವೂ ದೊರಕುತ್ತೆ. 


ದೀಕ್ಷಿತರ ಪ್ರಾರ್ಥನೆ


ಸುಬ್ರಹ್ಮಣ್ಯನಿಂದ ಅನುಗೃಹೀತರಾಗಿ, ದೀಕ್ಷಿತರು ದೈವಭಾಷೆಯಾದ ಸಂಸ್ಕೃತ ಹಾಗೂ ಸಂಗೀತಗಳಲ್ಲಿ ಪಾಂಡಿತ್ಯ ಹೊಂದಿದ್ದರಲ್ಲದೆ, ಮಂತ್ರ-ತಂತ್ರ-ಶಾಸ್ತ್ರ-ಜೋತಿಷ್ಯಗಳನ್ನೂ ಬಲ್ಲವರು. ಶ್ರೀವಿದ್ಯಾ ಉಪಾಸಕರು. ಅಷ್ಟಾಂಗ ಯೋಗವನ್ನು ಬಲ್ಲವರು; ನಿತ್ಯವೂ ಸಂಗೀತದಿಂದ ದೇವಿಯನ್ನು ಪೂಜಿಸುತ್ತಿದ್ದರು. ಯೋಗಬಲದಿಂದ ತೋರಬಹುದಾದ ಪವಾಡಗಳಿಂದ ಜನರನ್ನು ಮೆಚ್ಚಿಸುವ ಧ್ಯೇಯ ಅವರದ್ದಲ್ಲ. ಜನರು ಕಷ್ಟಗಳನ್ನು ಅವರಲ್ಲಿ ತೋಡಿಕೊಂಡಾಗ,  ಲೋಕ ಹಿತ ದೃಷ್ಟಿಯಿಂದಲೇ ದೇವಿಯನ್ನು ಪ್ರಾರ್ಥಿಸುತ್ತಿದ್ದರು. "ಆನಂದ(ಧ್ಯಾನಮಗ್ನ  ಶಿವನ ಸ್ಥಿತಿ)ವೆಂಬ ಅಮೃತವನ್ನು ಕರ್ಷಿಸುವವಳೇ, ಅಮೃತವನ್ನು ವರ್ಷಿಸುವವಳೇ, ಸುವೃಷ್ಟಿಯನ್ನು ಸುರಿಸುವವಳೇ, ನಿನ್ನನ್ನು ಸದಾ ಚಿಂತಿಸುತ್ತೇನೆ (ಧ್ಯಾನ ಮಾಡುತ್ತೇನೆ).  ತಾಯೇ ಅಮೃತೇಶ್ವರಿ, ನೀರನ್ನು ವರ್ಷಿಸು"- ಎಂದೇ ಈ ಸಂದರ್ಭದಲ್ಲಿಯೂ ಪ್ರಾರ್ಥಿಸಿದರು.  


ಇಂದೂ ಮಳೆ ಬರಿಸುವುದು ಸಾಧ್ಯವೇ?

ಇದೇ ಕೃತಿಯ ಗಾಯನ, ನಮ್ಮ ಇಂದಿನ ವೈಖರೀ ರೂಪಕ್ಕೆ ಸೀಮಿತವಾಗಿರುವ ಕಲಿಕೆಯಿಂದ, ತಕ್ಷಣದಲ್ಲಿ ಮಳೆ ಸುರಿಸುವುದು ಅಸಂಭವ. ಅದರ ಹಿಂದಿನ ನಾದರೂಪಗಳನ್ನು ಅರಿತು ಕೂಡಿಸಿಕೊಳ್ಳಲು ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯ. 

ಮಹರ್ಷಿ ಸಂಸ್ಕೃತಿಯ ಪರಿಪೂರ್ಣ ನೋಟ- ಅರ್ಥಾತ್ ಪ್ರಕೃತಿಯ ಸಹಜ ನಡೆ, ದೇವತಾ ಪ್ರಕೋಪ ನಿವಾರಣೆ, ದೈವಾನುಗ್ರಹದ ಸನ್ನಿವೇಶಗಳು ಇಂದು ಬಹುಮಟ್ಟಿಗೆ ಲುಪ್ತವಾಗಿವೆ. 


ಇಂದಿಗೂ ಗುರ್ವನುಗ್ರಹವನ್ನು ಹಿಂದಿಟ್ಟುಕೊಂಡು, ಶಿಸ್ತಿನಿಂದ, ಶಾಸ್ತ್ರಬದ್ಧವಾಗಿ, ಗುರುಮುಖೇನ ಕಲಿತಲ್ಲಿ, ಈ ಉತ್ತಮ ರಚನೆಗಳು ಕಾಲಕ್ರಮೇಣ ಅವುಗಳ ಮನೋಭೂಮಿಕೆಗೆ ನಮ್ಮನ್ನು ಸೆಳೆಯುತ್ತಾ, ಸರಿದಾರಿಗೆ ಖಂಡಿತವಾಗಿಯೂ ಕೊಂಡೊಯ್ಯುತ್ತವೆ. ಇಂತಹ ಉತ್ತಮ ವಾಗ್ಗೇಯಕಾರರು,  ರಚಿಸಿದ ಕೃತಿಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಸನ್ಮತಿ, ಸದ್ಬುದ್ಧಿಗಳನ್ನು ದೇವಿಯು ಕರುಣಿಸಲೆಂದು ಪ್ರಾರ್ಥಿಸೋಣ.


ಸೂಚನೆ : 9/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Monday, September 4, 2023

ಸಾಧನೆಗೆ ಈ ಯಂತ್ರವು ಬಹಳ ಸುಲಭ ! (Sadhanege E Yantravu Bahala Sulabha!)

ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)


ಒಂದು ಊರಿನಲ್ಲಿ ಜನರು ವ್ಯವಸಾಯವನ್ನು ಮಾಡಿಕೊಂಡು ಅಲ್ಲಿ ಬರುವ ಬೆಳೆಗಳನ್ನು ಮತ್ತು ತರಕಾರಿಗಳನ್ನೆಲ್ಲ ತೆಗೆದುಕೊಂಡುಹೋಗಿ ಪಕ್ಕದ ಊರಿನಲ್ಲಿ ಮತ್ತು ಸಂತೆಗಳಲ್ಲಿ ವ್ಯಾಪಾರ ಮಾಡಿಕೊಂಡು ತಮ್ಮ ತಮ್ಮ ಜೀವನವನ್ನು ನಡೆಸುತ್ತಾ ಇದ್ದರು. ಇದೇ ಊರಿನಲ್ಲಿ ಒಬ್ಬನ ಹತ್ತಿರ ಅವನು ಬೆಳೆದದ್ದನ್ನು ಮಾರಾಟ ಮಾಡುವುದಕ್ಕೆ ತೆಗೆದುಕೊಂಡು ಹೋಗಲು ಎತ್ತಿನ ಗಾಡಿ ಇತ್ಯಾದಿ ಯಾವ ವ್ಯವಸ್ಥೆಯೂ ಇರಲಿಲ್ಲ . ಆದುದರಿಂದ ಅವನು ಪ್ರತಿ ಸಲವೂ ಬೇರೆಯವರ ಎತ್ತಿನ ಗಾಡಿಯಲ್ಲಿ ತನಗೂ ಸ್ವಲ್ಪ ಜಾಗವನ್ನು ಕೇಳಿ ಅವರ ಜೊತೆಯಲ್ಲಿಯೇ ಹೋಗಿ ಮಾರಾಟ ಮಾಡಿಕೊಂಡು ಬರುತ್ತಾ ಇದ್ದನು. ಈ ವ್ಯಕ್ತಿಗೆ ಬೇರೆ ಜನರಗಿಂತ ಬುದ್ಧಿಮಟ್ಟ ಮತ್ತು ಚಾಕಚಕ್ಯತೆ ಸ್ವಲ್ಪ ಕಡಿಮೆ ಇತ್ತು. ಆದರೆ ಇವನಲ್ಲಿ ಎರಡು ಬಹಳ ದೊಡ್ಡ ಗುಣಗಳಿತ್ತು - ಒಂದು ಶ್ರದ್ಧೆ ಮತ್ತು ಇನ್ನೊಂದು ಭಕ್ತಿ. ಒಮ್ಮೆಈ ಊರಿಗೆ ಒಬ್ಬ ಋಷಿಗಳು ಆಗಮಿಸುತ್ತಾರೆ . ಅವರು ಬಂದಿರುವುದು ಇವನಿಗೆ ತಿಳಿದ ಕೂಡಲೇ ಅವರ ಬಳಿ ಓಡಿ ಹೋಗಿ ಅತ್ಯಂತ ವಿನಯದಿಂದ ತನ್ನ ಆತಿಥ್ಯವನ್ನು ಸ್ವೀಕರಿಸಬೇಕೆಂದು ಅವರಲ್ಲಿ ಬೇಡಿಕೊಳ್ಳುತ್ತಾನೆ. ಇವನ ಭಕ್ತಿಯನ್ನು ನೋಡಿ ಅವರು ಇವನ ಮನೆಗೆ ಬಂದು ಇವನ ಆತಿಥ್ಯವನ್ನು ಸ್ವೀಕರಿಸುತ್ತಾರೆ. ಅವರು ಎಷ್ಟು ಕಾಲ ಆ ಹಳ್ಳಿಯಲ್ಲಿದ್ದರೋ ಅಷ್ಟೂ ದಿನಗಳು ಇವನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಅವರಿಗೆ ಸೇವೆ, ಶುಶ್ರೂಷೆಗಳನ್ನು ಮಾಡಿ ಅವರ ಮನಸ್ಸನ್ನು ಪ್ರಸನ್ನಗೊಳಿಸುತ್ತಾನೆ. ಆದುದರಿಂದ ಅವರು ಹೊರಟು ಬರುವ ಮುನ್ನ ಇವನಿಗೆ ಏನು ವರ ಬೇಕಾದರೂ ಕೇಳಲೆಂದು ಹೇಳುತ್ತಾರೆ. ಅದಕ್ಕೆ ಅವನು ತನ್ನ ಬಳಿ ಯಾವ ವಾಹನವೂ ಇಲ್ಲದೆ ಇರುವುದನ್ನು ಜ್ಞಾಪಿಸಿಕೊಂಡು ಅವರಲ್ಲಿ ಒಂದು ವಾಹನವನ್ನು ದಯಪಾಲಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾನೆ. ಅವರು ಮಹಾ ತಪಸ್ವಿಗಳು, ಏನನ್ನು ಬೇಕಾದರೂ ಕೊಡಬಲ್ಲವರು, ಇವನು ಇಷ್ಟು ಸಣ್ಣ ಪದಾರ್ಥವನ್ನು ಅಪೇಕ್ಷಿಸುತ್ತಾನಲ್ಲಾ ಎಂದುಕೊಂಡರೂ, ಅತ್ಯಂತ  ಕರುಣೆಯಿಂದ ಇವನಿಗೆ ಒಂದು ಅಪೂರ್ವ ಯಂತ್ರವನ್ನೇ ದಯಪಾಲಿಸುತ್ತಾರೆ. ಆ ಯಂತ್ರವು ಭೂಮಿಯಲ್ಲಿ ಅತಿವೇಗದಿಂದ ಚಲಿಸಬಲ್ಲದು, ಬಹಳಷ್ಟು ಸಾಮಾನನ್ನು ಹೊರಬಲ್ಲದು, ಅಷ್ಟೇ ಅಲ್ಲಾ, ಅದರಲ್ಲಿ ಆಕಾಶ ಮಾರ್ಗವಾಗಿಯೂ ಚಲಿಸಬಲ್ಲದಾದಂತಹ ಅದ್ಭುತ ಯಂತ್ರವದು. ಆ ಯಂತ್ರವನ್ನು ಇವನಿಗೆ ಕೊಟ್ಟು, ಅದನ್ನು ಹೇಗೆ ಉಪಯೋಗಿಸುವುದೆಂಬುದನ್ನೂ ತಿಳಿಸಿಕೊಟ್ಟು ಅಲ್ಲಿಂದ ಹೊರಟುಬರುತ್ತಾರೆ. ಆದರೆ ದುರಾದೃಷ್ಟದಿಂದ ಋಷಿಗಳು ಹೊರಟ ಸ್ವಲ್ಪ ಕಾಲಕ್ಕೆ ಅವನು ಆ ಯಂತ್ರವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಮರೆತುಹೋಗುತ್ತಾನೆ. ಋಷಿಗಳು ಸಂಚಾರಿಗಳಾಗಿದ್ದುದರಿಂದ ಅವರನ್ನು ಮತ್ತೆ ಸಂಪರ್ಕಿಸಲು ಆಗುವುದಿಲ್ಲ. ಆದ್ದರಿಂದ ಇವನು ಬೇರೆಯವರ ಎತ್ತಿನ ಗಾಡಿಯನ್ನು  ನೋಡಿ ಅವರಂತೆಯೇ ತನ್ನ ಯಂತ್ರಕ್ಕೂ ಎತ್ತುಗಳನ್ನು ಕಟ್ಟಿ ಅದನ್ನು ಎತ್ತಿನ ಗಾಡಿಯಾಗಿ ಉಪಯೋಗಿಸಲು ಪ್ರಾರಂಭಿಸುತ್ತಾನೆ. ಇವನು ಅಷ್ಟು ದೊಡ್ಡ ಯಂತ್ರವನ್ನು ಎತ್ತಿನ ಗಾಡಿಯಂತೆ ಉಪಯೋಗಿಸುತ್ತಿರುವ ವಿಷಯ ಆ ಋಷಿಗಳಿಗೆ ಕರ್ಣಾಕರ್ಣಿಕೆಯಾಗಿ ತಿಳಿದಾಗ ಅವರಿಗೆ ತುಂಬಾ ಬೇಜಾರಾಗಿ ಅಷ್ಟು ದೊಡ್ಡ ವಸ್ತುವನ್ನು ಇವನು ಇಷ್ಟು ಚಿಕ್ಕದಾಗಿ ಎತ್ತಿನ ಗಾಡಿಯಂತೆ ಉಪಯೋಗಿಸಿಕೊಂಡುಬಿಟ್ಟನಲ್ಲ ಅಂತ ಎಂದು ಬೇಸರಿಸಿಕೊಂಡು ಇವನ ಪ್ರಾಪ್ತಿಯೇ ಇಷ್ಟು ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. 


ಈ ಕಥೆಯನ್ನು ಕೇಳಿದರೆ ಇದು ಬಹಳ ಸಾಮಾನ್ಯವಾದದ್ದು, ಇದರಲ್ಲಿ ಏನು ವೈಶಿಷ್ಟ್ಯ ಇದೆ? ಎಂದು ಎನ್ನಿಸಬಹುದು. ಯಾರಾದರೂ ಹೀಗೆ ಅಷ್ಟು ದೊಡ್ಡ ಯಂತ್ರವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಮರೆತುಹೋಗಲು ಸಾಧ್ಯವೇ ಎಂದು ಆಶ್ಚರ್ಯವಾಗಬಹುದು. ಆದರೂ ಪರಿಶೀಲಿಸಿ ನೋಡಿದರೆ ನಾವೇ ಅಂತಹ ವ್ಯಕ್ತಿಗಳಾಗಿದ್ದೇವೆ. ಈ ಕಥೆಯಲ್ಲಿರುವ ಆ ಸಾಮಾನ್ಯ ಮನುಷ್ಯ ನಾವೇ ಆಗಿದ್ದೇವೆ ಮತ್ತು ನಮ್ಮ ಮಾನವ ದೇಹವೇ ಆ ಅದ್ಭುತ ಯಂತ್ರವಾಗಿದೆ. ಯೋಗ ಸಾಧನೆಯಿಂದ, ಮನಸ್ಸನು ಒಳಮುಖವಾಗಿಸಿದಲ್ಲಿ, ಅದ್ಭುತ ವೇಗದಲ್ಲಿ ನಮ್ಮ ಮನಸ್ಸು ಬುದ್ಧಿಗಳು ಕೆಲಸ ಮಾಡುವಂತೆ ಮಾಡಿಕೊಳ್ಳಬಹುದು. ನಮ್ಮ ದೇಹದೊಳಗೇ ಇರುವ ಊರ್ಧ್ವಲೋಕಗಳಿಗೂ ಸಂಚರಿಸಿ ಅತ್ಯಂತ ಮೇಲಿರುವ ಪರಮಪದದಲ್ಲಿ ಭಗವಂತನ ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬಹುದು.


ಈ ಮಾತನ್ನು ಶ್ರೀರಂಗ ಮಹಾಗುರುಗಳು ಒಂದು ಉದಾಹರಣೆಯೊಂದಿಗೆ ನಮಗೆ ಹೇಳಿದ್ದಾರೆ. ನಾವು ಸರ್ಕಸ್ಸುಗಳಲ್ಲಿ(circus) ಇರುವ ಸೈಕಲ್ಲನ್ನು (cycle) ನೋಡಿದರೆ ಅದು ಮುಂದೆ pedal ಮಾಡಿದಾಗ ಮುಂದೆ ಹೋಗತ್ತೆ ಹಿಂದೆ pedal ಮಾಡಿದಾಗ ಹಿಂದೆ ಹೋಗುತ್ತದೆ. ಅಂದರೆ ಅದಕ್ಕೆ ಮುಂದೆ ಮತ್ತು ಹಿಂದೆ ಎರಡು ಕಡೆ ಹೋಗುವ ಸಾಮರ್ಥ್ಯವಿದೆ(ಬೇರೆ ಸೈಕಲ್ ಗಳಿಗೆ ಹಿಂದೆ ಹೋಗುವ ಸಾಮರ್ಥ್ಯವಿರುವುದಿಲ್ಲ). ಅದೇ ರೀತಿ ನಮ್ಮ ದೇಹಕ್ಕೂ ಅಷ್ಟೇ ಒಳಜೀವನ ಮತ್ತು ಹೊರಜೀವನ ಎರಡಲ್ಲೂ ಇರುವ ಸಾಮರ್ಥ್ಯ ಇದೆ. ಒಂದು ಯಂತ್ರ ಆಕಾಶಕ್ಕೆ ಹೋದಾಗ ವಿಮಾನವಾಗಿ, ಭೂಮಿಗೆ ಬಂದಾಗ ಬಸ್ ಮತ್ತು ರೈಲ್ ಆಗಬೇಕು. ನೀರಿನ ಮೇಲೆ ಬಂದಾಗ ಹಡಗಾಗಬೇಕು ಮತ್ತು ಮುಳುಗಿದಾಗ ಸಬ್ಮೆರಿನ್ (submarine) ಆಗಬೇಕು. ಒಂದೇ ಯಂತ್ರದಲ್ಲಿ ಇಷ್ಟು ಸೌಲಭ್ಯಗಳಿದ್ದರೆ ಹೇಗೆ ಇರುತ್ತದೆ? ಆ ಯಂತ್ರ ಬೇರೆಯಾವುದೂ ಅಲ್ಲ ನಮ್ಮ ಮಾನವ ದೇಹವೇ ಎಂದು ಶ್ರೀರಂಗ ಮಹಾಗುರುಗಳು ತಿಳಿಸಿಕೊಟ್ಟಿದ್ದಾರೆ. ಅಂತಹ ಯಂತ್ರವನ್ನು ಪಡೆದಿರುವ ನಾವು ಅದನ್ನು ಹೇಗೆ ಉಪಯೋಗಿಸಬೇಕೆಂದು ಮರೆತುಹೋಗಿದ್ದೇವೆ. ನಮಗೆ ಒಬ್ಬ ಸದ್ಗುರುವು ಆಶೀರ್ವಾದ ಮಾಡಿ ಆ ಉಪಯೋಗವನ್ನು ತಿಳಿಸಿಕೊಟ್ಟರೆ ಅವನ ಅನುಗ್ರಹದಿಂದ ಈ ಯಂತ್ರದ ಮೌಲ್ಯವೇನೆಂದು ಈ ಯಂತ್ರವನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿದುಕೊಂಡರೆ ಆಗ ಇದರ ಸಂಪೂರ್ಣ ಉಪಯೋಗವನ್ನು ಪಡೆದು ಸಾರ್ಥಕವಾಗಿರುವ ಜೀವನವನ್ನು ನಾವು ಮಾಡಬಹುದು. ನಮ್ಮೆಲ್ಲರ ಜೀವನವು ಅದೇ ರೀತಿಯಲ್ಲಿ ಸಾರ್ಥಕವಾಗಲೆಂದು ನಾವು ಪ್ರಾರ್ಥಿಸುತ್ತೇವೆ. 


ಸೂಚನೆ: 02/09/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.