Sunday, September 24, 2023

ಯಕ್ಷ ಪ್ರಶ್ನೆ 56 Yaksha prashne 56

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 55 ಅತ್ಯಂತ ಸುಖದಾಯಕವಾದುದು ಯಾವುದು  ?

ಉತ್ತರ - ತುಷ್ಟಿ- ಸಂತೃಪ್ತಿ

ಲೋಕವು ಸುಖವನ್ನು ಬಯಸುತ್ತದೆ. ಎಂದೂ ದುಃಖ ಬರಲೇಬಾರದು ಎಂಬುದನ್ನೂ ಬಯಸುತ್ತದೆ. ಸುಖಪ್ರಾಪ್ತಿಗಾಗಿ ತನ್ನ ಪ್ರವೃತ್ತಿಯನ್ನೂ ಇಟ್ಟುಕೊಳ್ಳುತ್ತದೆ. ದುಃಖನಿವೃತ್ತಿಗಾಗಿಯೂ ವ್ಯಾಪಾರಕಂಡುಬರುತ್ತದೆ. ಆದರೆ ಯಾವುದು ಸುಖವನ್ನು ಕೊಡುತ್ತದೆ? ಮತ್ತು ಯಾವುದು ದುಃಖವನ್ನು ಕೊಡುತ್ತದೆ? ಸುಖದಾಯಕವಾದುದು ಯಾವುದು? ದುಃಖಕಾರಕವಾದುದು ಯಾವುದು? ಎಂಬ ಆಯ್ಕೆಯ ಲೆಕ್ಕಾಚಾರದಲ್ಲಿ ಲೋಕ ಸೋತಿಗೆ. ತಿಳಿವಳಿಕೆಯೇ ಇಲ್ಲದೇ ಸುಖ ಕೊಡುವುದುದನ್ನು ಕಷ್ಟ ಎಂಬುದಾಗಿಯೂ, ದುಃಖ ಕೊಡುವುದನ್ನು ಇಷ್ಟ ಎಂದೂ ಭ್ರಮಿತವಾಗಿದೆ ಈ ಲೋಕ. ನಿಜವಾಗಿಯೂ ಸುಖವು ಹೇಗಿದ್ದಾಗ ಮಾತ್ರ ಲಭಿಸುತ್ತದೆ? ಎಂಬುದನ್ನು ಇಂತಹ ಭ್ರಾಂತಲೋಕಕ್ಕೆ ತಿಳಿಸಲು ಯಕ್ಷನು ಈ ಪ್ರಶ್ನೆಯನ್ನು ಮುಂದಿಡುತ್ತಾನೆ. ಧರ್ಮರಾಜನು ಸುಖವೆಂಬುದು ತೃಪ್ತಿಯಿಂದ ಸಿಗುತ್ತದೆ ಎಂಬ ಉತ್ತರವನ್ನು ಕೊಡುತ್ತಾನೆ.

ತೃಪ್ತಿ ಎಂದರೆ ಸಮಾಧಾನ. ಸಾಕು ಎಂಬ ಭಾವ. ಸಾಕು ಎಂಬುದು ಕೆಲವೊಮ್ಮೆ ಆಲಸ್ಯದಿಂದಲೂ ಅನ್ನಿಸಬಹುದು. ಇನ್ನು ಕೆಲವೊಮ್ಮೆ ಸಿಗದಿದ್ದಾಗಲೂ ಅನ್ನಿಸಲು ಸಾಧ್ಯ. ಆದರದು ಸಂತೃಪ್ತಿಯೆನಿಸಲಾದರು. ಯಾವುದರಿಂದಲಾದರೂ ತೃಪ್ತಿಯನ್ನು ಪಡೆಯಬೇಕಾದರೆ ಆ ವಸ್ತುವಿನ ವ್ಯಾಪ್ತಿಯನ್ನು ಮತ್ತು ಅದರ ಕಾರ್ಯಕ್ಷಮತೆಯನ್ನು ತಿಳಿದಿರಬೇಕಾಗುತ್ತದೆ. ಹಾಗಿಲ್ಲದಿದ್ದರೆ ಆ ಅದರಿಂದ ಎಷ್ಟೇ ಫಲ ಪ್ರಾಪ್ತವಾದರೂ ನೆಮ್ಮದಿ ಇರದು. ಮಕ್ಕಳು ಎಷ್ಟು ಓದಿದರೂ ಸಾಕು ಎನಿಸದು. ಇನ್ನಷ್ಟು ಮತ್ತಷ್ಟು ಪ್ರಯತ್ನಪಡಬೇಕಿತ್ತು ಎಂದು ಅನಿಸುವುದುಂಟು. ಸಾಮಾನ್ಯವಾಗಿ ಯಾವುದೇ ಪ್ರತಿಬಂಧವಿಲ್ಲದಿದ್ದಾಗ ಪ್ರಯತ್ನಕ್ಕೆ ತಕ್ಕ ಪ್ರತಿಫಲವು ಪ್ರಾಪ್ತವಾಗುವುದು. ನೂರಕ್ಕೆ ನೂರು ಪ್ರತಿಶತ ಅಂಕವನ್ನು ಮಗು ಪಡೆದಿದ್ದರೂ ಅವನು ಎಲ್ಲಾರೀತಿಯಿಂದಲೂ ಪರಿಪೂರ್ಣ ಎಂದು ಹೇಳಲು ಸಾಧ್ಯವೇ? ಎಲ್ಲೋ ಒಂದು ಕಡೆ ಕೊರತೆ ಕಾಣುತ್ತದೆ. ಒಬ್ಬ ಒಂದು ಕೋಟಿ ಹಣಸಂಪಾದನೆಯನ್ನು ಮಾಡಿದರೂ, ಸಾಲದೆ ಎರಡು ಕೋಟಿ, ಮೂರು ಕೋಟಿ, ಇನ್ನಷ್ಟು, ಮತ್ತಷ್ಟು ಎಂಬ ಆಶೆ ಬೆಳೆಯುತ್ತಾ ಹೋಗುತ್ತದೆ. ಅಲ್ಲಿ ತೃಪ್ತಿ ಸಾಧ್ಯವೇ. ಒಬ್ಬ ರೈತನಾದವನು ಒಮ್ಮೆ ಎಲ್ಲಾ ಪ್ರಯತ್ನಗಳನ್ನು ಹಾಕಿ ಅಧಿಕ ಇಳುವರಿಯನ್ನು ಪಡೆದನೆಂತಾದರೆ ಅಷ್ಟರಲ್ಲೇ ತೃಪ್ತಿ ಸಾಧ್ಯವೇ? ಇನ್ನಷ್ಟು ಮತ್ತಷ್ಟು ಬೆಳೆಯನ್ನು ಪಡೆಯಬೇಕೆಂಬ ಪ್ರಯತ್ನ ಹಾಗಾದರೆ ತಪ್ಪೇ? ಒಂದು ಪುಸ್ತಕವನ್ನು ಬರೆದವನಿಗೆ ಇನ್ನೊಂದು ಪುಸ್ತಕವನ್ನು ಬರೆಯಬೇಕೆಂಬ ಆಶೆ. ಹಾಗಾದರೆ ಇಲ್ಲೆಲ್ಲಾ ತೃಪ್ತಿ ಸಾಧ್ಯವೇ? ಅಥವಾ ಸರಿಯೇ? ಒಂದು ವೇಳೆ ಭಗವಂತನೇ ಈ ಸೃಷ್ಟಿಯ ಕಾರ್ಯದಲ್ಲಿ ತೃಪ್ತನಾಗಿ ಸೃಷ್ಟಿಯನ್ನು ಮಾಡದಿದ್ದರೆ?! ಅಂದರೆ ತಾತ್ಪರ್ಯವಿಷ್ಟೇ. ಪ್ರಪಂಚದಲ್ಲಿ ಕಾಣುವ ಎಲ್ಲಾ ವಿಷಯಗಳಿಂದ ಎಷ್ಟು ಪಡೆದರೂ ತೃಪ್ತಿ ಎಂಬುದು ಅಸಾಧ್ಯವಷ್ಟೆ. ಅಂದರೆ ತೃಪ್ತಿ ಹೇಗೆ ಸಾಧ್ಯ? ಅದಕ್ಕೆ ಒಂದು ಸುಭಾಷಿತವು ತೃಪ್ತಿಯ ಅರ್ಥವನ್ನು ಹೀಗೆ ಹೇಳುತ್ತದೆ. ಬಾಹ್ಯವಾದ ವಸ್ತುಗಳಿಂದ ತೃಪ್ತಿ ಸಾಧ್ಯವಿಲ್ಲ. ಮನಸ್ಸು ಪರಿತುಷ್ಟವಾಗಿದ್ದರೆ ಬಡವ ಶ್ರೀಮಂತ ಎಂಬ ಅಂತರವೇ ಇರುವುದಿಲ್ಲ. ನಾರು ಬಟ್ಟೆಯಿಂದಾಗಲಿ ಅಥವಾ ರೇಷ್ಮೆವಸ್ತ್ರದಿಂದಾಗಲಿ ಸಂತೋಷವು ಸಿಗುವಂತಾದರೆ ಎಲ್ಲರೂ ಅಂತಹ ವಸ್ತ್ರವನ್ನು ಹೆಚ್ಚೆಚ್ಚು ಸಂಗ್ರಹ ಮಾಡಿ ಅದರಿಂದ ತೃಪ್ತಿಪಡುತ್ತಿದ್ದರು. ಫಲಾಪೇಕೇಯಿಲ್ಲದೇ ಮಾಡುವ ಕರ್ಮವೇ ಸುಖಸಾಧನ ಎನ್ನುತ್ತದೆ ಭಗವದ್ಗೀತೆ. ಸಿಕ್ಕದ್ದರಲ್ಲೇ ಸಮಾಧಾನಪಡಬೇಕು. ತೃಪ್ತಿ ಮತ್ತು ಸಂತೋಷ ಸೃಷ್ಟಿಕರ್ತಾ ಬ್ರಹ್ಮನಿಂದಲೇ ಸೃಷ್ಟರಾದ ಪತಿಪತ್ನಿಯರು. ಹಾಗಾಗಿ ಇವೆರಡೂ ಒಟ್ಟಿಗೆ ಇದ್ದರೆ ಮಾತ್ರ ಒಳ್ಳೆಯದು.

ಸೂಚನೆ : 24/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.