Sunday, October 30, 2022

ಯಕ್ಷಪ್ರಶ್ನೆ - 10 (Yaksha Prashne - 10)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – ೯ ಬ್ರಾಹ್ಮಣರಿಗೆ ದೇವತ್ವವು ಯಾವುದು ?

ಉತ್ತರ - 

ಈ ಪ್ರಶ್ನೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಮೂರು. ಬ್ರಾಹ್ಮಣ ಯಾರು ? ದೇವತ್ವ ಎಂದರೇನು ? ದೇವತ್ವವನ್ನು ಸಾಧಿಸಲು ಬೇಕಾದ ಸಾಧನ ಯಾವುದು? ಬ್ರಹ್ಮ ಶಬ್ದದ ವಿಸ್ತಾರವೇ ಬ್ರಾಹ್ಮಣ. ಯಾರು ಬ್ರಹ್ಮಜ್ಞಾನವನ್ನು ಸಂಪಾದನೆ ಮಾಡಿದ್ದಾರೋ? ಅಥವಾ ಬ್ರಹ್ಮಜ್ಞಾನವನ್ನು ಸಂಪಾದನೆ ಮಾಡಲು ಪ್ರಯತ್ನಶೀಲರೋ ಅವರು ಬ್ರಾಹ್ಮಣರು. ಮತ್ತು ಈ ಸೃಷ್ಟಿಯಲ್ಲಿ ಇರುವ ನಾಲ್ಕು ವರ್ಣಗಳಲ್ಲಿ ಮೊದಲಿಗನು ಬ್ರಾಹ್ಮಣ. ಸೃಷ್ಟಿಯು ವಿಕಾಸವಾಗಬೇಕಾದರೆ ಸತ್ತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಮೂರು ಗುಣಗಳು ಬೇಕು. ಅವುಗಳಲ್ಲಿ ಸತ್ತ್ವಗುಣ ಪ್ರಧಾನವಾಗಿ ಇರುವ ಸೃಷ್ಟಿಯನ್ನು ಬ್ರಾಹ್ಮಣ ಎನ್ನುತ್ತಾರೆ. ಹಾಗೆಯೆ ರಜಸ್ಸು ಮತ್ತು ತಮಸ್ಸಿನ ಗುಣಗಳ ಪ್ರಾಧಾನ್ಯಕ್ಕೆ  ಅನುಗುಣವಾಗಿ ಮುಂದಿನ ವರ್ಣಗಳ ಸೃಷ್ಟಿಯಾಗುತ್ತದೆ. ಈ ವರ್ಣಗಳ ವಿಭಾಗವು ಸೃಷ್ಟಿಸಹಜವಾದವುಗಳು. ದೇವತೆಗಳು ಸಾತ್ತ್ವಿಕ ವಿಭಾಗಕ್ಕೆ ಸೇರಿದರೆ, ಮನುಷ್ಯ ರಾಜಸಿಕ ಸೃಷ್ಟಿ. ಸಾತ್ತ್ವಿಕವಾದ ಸೃಷ್ಟಿಯನ್ನು ಉತ್ತಮವೆಂದು ಪರಿಗಣಿಸಲಾಗಿದೆ. ಮಾನವನು ದೇವತ್ವವನ್ನು ಪಡೆದಾಗ ಆತನ ಜನ್ಮ ಸಾರ್ಥಕವಾಗುತ್ತದೆ. ಅದೇ ಮಾನವನಾಗಿ ಕುಕಾರ್ಯದಲ್ಲಿ ತೊಡಗಿದಾಗ ನೀಚಜನ್ಮವಾದ ರಾಕ್ಷಸತ್ವವು ಪ್ರಾಪ್ತವಾಗುವುದು. ಈ ಪ್ರಶ್ನೆಯ ಆಶಯವಿಷ್ಟೆ, ಮಾನವನು ದೇವತ್ವವನ್ನು ಪಡೆಯುವುದು ಹೇಗೆ? ಎಂಬುದು. ಮಾನವನ ಸೃಷ್ಟಿಯಲ್ಲೂ ಬ್ರಾಹ್ಮಣ-ಸೃಷ್ಟಿಯನ್ನು ಸಾತ್ತ್ವಿಕವಾದ್ದರಿಂದ ಬ್ರಾಹ್ಮಣತ್ವವನ್ನು ಪಡೆಯಲು ಪ್ರಯತ್ನಿಸಬೇಕಾಗುತ್ತದೆ. ಬ್ರಾಹ್ಮಣನಾದರೆ ದೇವತ್ವವನ್ನು ಪಡೆಯಬೇಕಾಗುತ್ತದೆ. ದೇವತ್ವವು ಬೆಳಕಿನ ಲೋಕ. ಅಲ್ಲಿ ಕತ್ತಲಿಲ್ಲ. ಅಜ್ಞಾನವಿಲ್ಲ. ಜ್ಞಾನವೇ ತುಂಬಿದೆ. ಜಾಡ್ಯವಿಲ್ಲ, ಚೈತನ್ಯವೇ ಇದೆ. ಇಂತಹ ದೇವತ್ವವನ್ನು ಪಡೆಯುವ ಸಾಧನವಾವುದು? ಎಂದರೆ ಸ್ವಾಧ್ಯಾಯ.

ಸ್ವಾಧ್ಯಾಯವೆಂದರೆ ವೇದಗಳನ್ನು ಆವೃತ್ತಿರೂಪದಲ್ಲಿ ತಿಳಿದುಕೊಳ್ಳುವುದು. ಸ್ವ ಎಂದರೆ ಆತ್ಮಾ, ಅದನ್ನು ತಿಳಿದುಕೊಳ್ಳುವುದೂ ಸ್ವಾಧ್ಯಾಯವೇ ಆಗಿದೆ. ಪವಿತ್ರಗೊಳಿಸುವ ಓಂಕಾರ ಮೊದಲಾದ ನಾಮಜಪ ಅಥವಾ ಮೋಕ್ಷಶಾಸ್ತ್ರದ ಅಧ್ಯಯನವನ್ನು 'ಸ್ವಾಧ್ಯಾಯ' ಎಂದು ಯೋಗಾಶಾಸ್ತ್ರವು ಹೇಳಿದೆ. ವೇದಗಳೆಲ್ಲವೂ ಆತ್ಮಾನುಸಂಧಾನಕ್ಕಾಗಿಯೇ ಇರುವಂತಹ ಜ್ಞಾನಭಂಡಾರ. ಈ ಪ್ರಪಂಚವು ಪರಬ್ರಹ್ಮದ ವಿಸ್ತಾರವಾದರೆ, ವೇದ ಮೊದಲಾದ ಸಾಹಿತ್ಯಗಳು ಶಬ್ದಬ್ರಹ್ಮವಾದ ಪ್ರಣವದ ವಿಸ್ತಾರವಾಗಿದೆ. ಪ್ರಣವವು ಪರಮಾತ್ಮನನ್ನು ಸೂಚಿಸುವ ಪದವಾಗಿದೆ. ಪರಬ್ರಹ್ಮವನ್ನು ತಿಳಿಯುವ ಸಾಧನವೇ ಸ್ವಾಧ್ಯಾಯ. ಆದ್ದರಿಂದ ವೇದಾಧ್ಯಯನವನ್ನು ಸ್ವಾಧ್ಯಾಯವೆಂದಿದ್ದಾರೆ. ವೇದವನ್ನು ಅರಿಯಬೇಕಾದರೆ ಗುರುವಿನ ಅನುಗ್ರಹದಿಂದ ಸಾಧ್ಯ. ಗುರುವು ತಾನು ತಿಳಿದ ಜ್ಞಾನವನ್ನು ಶಿಷ್ಯನಿಗೆ ಅರುಹುತ್ತಾನೆ. ಅದನ್ನು ತಿಳಿಯಲು ಶಿಷ್ಯನಾದವನು ಗುರುವಿನ ಬಳಿಯಲ್ಲಿ ಇದ್ದು ಗುರು ಶುಶ್ರೂಷೆ ಮಾಡಿ ಪಡೆಯಬೇಕು. ಇದರಿಂದ ಅರ್ಥಸಹಿತವಾಗಿ ವೇದಗಳ ಜ್ಞಾನವನ್ನು ಆತ ಪಡೆಯಬೇಕು. ಹೀಗೆ ಮಾಡುತ್ತಾ ಸಾಗಿದಾಗ ವೇದಗಳ ಪರಮ ಉದ್ದೇಶ್ಯವಾದ ಆತ್ಮಸಾಧನೆ ಸಿದ್ಧಿಸುವುದು. ಈ ವೇದಗಳ ಅಧ್ಯಯನವೇ ದೇವತ್ವದ ಸಾಧನ ಮತ್ತು ಆಗಲೇ ಬ್ರಾಹ್ಮಣನು ದೇವತ್ವವನ್ನು ಪಡೆದಂತೆ. ಕರ್ಮವೇ ಜನ್ಮಕ್ಕೆ ಕಾರಣ. ದೇವತ್ವದಿಂದ ಜಾರಿದ ಜೀವವು ಸತ್ಕರ್ಮವನ್ನು ಮಾಡಿಯೇ ದೇವತ್ವವನ್ನು ಪಡೆಯಬೇಕು. ದೇವನಾಗಬೇಕು. ಕುಕಾರ್ಯವನ್ನು ಮಾಡಿದರೆ ನೀಚಜನ್ಮವು ಪ್ರಾಪ್ತವಾಗುತ್ತಾ ಹೋಗುತ್ತದೆ. ಒಟ್ಟಾರೆ ಹೇಳುವುದಾದರೆ ಸತ್ಕಾರ್ಯ, ಸ್ವಾಧ್ಯಾಯದಿಂದಲೇ ಬ್ರಾಹ್ಮಣ್ಯ ಸಿದ್ಧವಾಗುವುದು. ಅಂತಹ ಬ್ರಾಹ್ಮಣನಿಂದಲೇ ದೇವತ್ವವನ್ನು ಪಡೆಯುವಂತಹದ್ದು.

ಸೂಚನೆ : 30/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಜೀವನದಲ್ಲಿ ಧರ್ಮರಕ್ಷಣೆಗೇ ಪ್ರಾಧಾನ್ಯವಿರಲಿ (Jivanadalli Dharmaraksanege Pradhanyavirali)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀಕೃಷ್ಣ, ಅರ್ಜುನ ಮತ್ತು ಧರ್ಮರಾಯನ ನಡುವೆ ಘಟಿಸಿದ ಅದ್ಭುತ ಪ್ರಸಂಗವೊಂದನ್ನು ಮಹಾಭಾರತದ ಕರ್ಣಪರ್ವದಲ್ಲಿ ವರ್ಣಿಸಲಾಗಿದೆ.  

ಕುರುಕ್ಷೇತ್ರಯುದ್ಧದ ಸನ್ನಿವೇಶ. ಕರ್ಣ-ಧರ್ಮರಾಯನ ನಡುವೆ ಮಹಾಕಾಳಗ ನಡೆಯುತ್ತದೆ. ಕರ್ಣನ ಬಾಣಗಳಿಂದ ಧರ್ಮರಾಯನು  ಬಹಳವಾಗಿ ಬಳಲಿ ಅವಮಾನದಿಂದಲೂ, ದೇಹಯಾತನೆಯಿಂದಲೂ ನೊಂದು ಬಿಡಾರಕ್ಕೆ ಹಿಂದಿರುಗುತ್ತಾನೆ. 

 

ಈ ವಿಷಯ ತಿಳಿದು ಕೃಷ್ಣಾರ್ಜುನರು ಅಲ್ಲಿಗೆ ಬರುತ್ತಾರೆ. ಅರ್ಜುನನು ಕರ್ಣನನ್ನು ವಧಿಸಿಯೇ ಬರುವನೆಂದು ನಂಬಿದ್ದ ಧರ್ಮರಾಯನು ಆ ಕಾರ್ಯ ನೆರೆವೇರಲಿಲ್ಲವೆಂದರಿತು 'ನೀನು ಗಾಂಡೀವವನ್ನು ಏಕೆ ಇಟ್ಟುಕೊಂಡಿದ್ದೀಯೇ? ಯಾರಾದರು ಹೆಂಗಸರ ಕೈಗೆ ಕೊಡು' ಎಂದು ಅರ್ಜುನನನ್ನು ನಿಂದಿಸುತ್ತಾನೆ.

 

ಅತ್ಯಂತ ಕುಪಿತನಾದ ಅರ್ಜುನನು ''ನನ್ನ ಗಾಂಡೀವವನ್ನು ನಿಂದಿಸಿದವರ ತಲೆಯನ್ನು ತೆಗೆಯುತ್ತೇನೆ" ಎಂದು ತಾನು ಈ ಹಿಂದೆಯೇ ಮಾಡಿದ್ದ ಪ್ರತಿಜ್ಞೆಯಂತೆ ಅಣ್ಣನನ್ನು ಕೊಲ್ಲಲು ಧಾವಿಸುತ್ತಾನೆ. ಶ್ರೀಕೃಷ್ಣನು ಅವನನ್ನು  ತಡೆದಾಗ ಅರ್ಜುನನು ತನ್ನ ಪ್ರತಿಜ್ಞೆಯನ್ನು ತಿಳಿಸಿ ತಾನು ವಿವಶನೆಂದು ವಾದಿಸುತ್ತಾನೆ. "ಅಣ್ಣನು ತಂದೆಗೆ ಸಮಾನನು. ಆತನ ವಧೆ ಘೋರಪಾತಕದ ಕಾರ್ಯ" ಎಂದು ಎಚ್ಚರಿಸುತ್ತಾನೆ ಕೃಷ್ಣ. 

 

ತನ್ನ ಪ್ರತಿಜ್ಞಾಪಾಲನೆಯೇ ಮುಖ್ಯವೋ ಅಥವಾ ಅಣ್ಣನ ಉಳಿವೇ ಮು ಖ್ಯವೋ ಎಂಬ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷ್ಣನನ್ನೇ ಶರಣುಹೊಂದುತ್ತಾನೆ ಅರ್ಜುನ. 

  

ಶ್ರೀಕೃಷ್ಣನು ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತಾನೆ. "ಗುರು-ಹಿರಿಯರನ್ನು ಅವಮಾನಕರವಾಗಿ  ನಿಂದಿಸಿದರೆ ಅವರನ್ನು ವಧಿಸಿದಂತೆಯೇ ಸರಿ. ಆದ್ದರಿಂದ ಈಗ ಧರ್ಮರಾಯನನ್ನು  ಚೆನ್ನಾಗಿ ನಿಂದಿಸು" ಎನ್ನುತ್ತಾನೆ. ಅರ್ಜುನನು ಕೃಷ್ಣನ ಆದೇಶದಂತೆ ಯುಧಿಷ್ಠಿರನನ್ನು  ಚೆನ್ನಾಗಿ ಹೀಯಾಳಿಸುತ್ತಾನೆ. ಇದರಿಂದಾಗಿ ಧರ್ಮರಾಯನು ಅತ್ಯಂತ ದು:ಖಿತನಾಗುತ್ತಾನೆ. 

 

ಆದರೆ "ಪೂಜ್ಯನಾದ  ಅಣ್ಣನನ್ನು ಹೀಯಾಳಿಸಿದ ಮೇಲೆ ನಾನು ಬದುಕಿರಬಾರದು!" ಎನ್ನುತ್ತಾ ಆತ್ಮಹತ್ಯೆಮಾಡಿಕೊಳ್ಳಲು ಯತ್ನಿಸುತ್ತಾನೆ ಅರ್ಜುನ. ಆಗ ಶ್ರೀಕೃಷ್ಣನು "ಆತ್ಮಹತ್ಯೆ ಘೋರಪಾಪ! ಅದನ್ನು ತಪ್ಪಿಸುವ ಉಪಾಯವನ್ನು ಹೇಳುವೆನು ಕೇಳು" ಎನ್ನುತ್ತಾ  "ಆತ್ಮಶ್ಲಾಘನೆಯು ಆತ್ಮಹತ್ಯೆಗೆ ಸಮಾನ" ಎಂಬುದನ್ನು ನೆನಪಿಸುತ್ತಾನೆ. ಅರ್ಜುನನೂ ಅದರಂತೆಯೇ ತನ್ನ ಆತ್ಮಪ್ರಶಂಸೆಯನ್ನು ಬಹಳವಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಸಮಸ್ಯೆಯು ಪರಿಹಾರವಾಯಿತು. 

 

ತನ್ನ ಪ್ರತಿಜ್ಞಾಪಾಲನೆ ಮಾಡುವ ಭರದಲ್ಲಿ, ಅರ್ಜುನನು ಧರ್ಮರಕ್ಷಣೆಗಾಗಿ ಯುದ್ಧವನ್ನು ಮಾಡುತ್ತಿದ್ದ ಧರ್ಮರಾಯನನ್ನೇ ವಧಿಸಿಬಿಡುತ್ತಿದ್ದ!  ಧರ್ಮರಕ್ಷಣೆಯ ಮಹಾಧ್ಯೇಯವನ್ನು ಮರೆತು, ಆ ಸಮಯದಲ್ಲಿ  ಕಿರಿಯ ಧರ್ಮವಾದ  ಪ್ರತಿಜ್ಞಾಪಾಲನೆಯೇ ಪ್ರಧಾನವೆನ್ನುವಂತೆ ವರ್ತಿಸಲೆಸಗಿದ. ಸದಾ ಧರ್ಮಿಷ್ಠರಾದ ಪಾಂಡವರನ್ನು ರಕ್ಷಿಸುತ್ತಿದ್ದ ಭಗವಂತ, ಈ ಪ್ರಸಂಗದಲ್ಲೂ ಅರ್ಜುನನನ್ನು ಸರಿಯಾದ ದಾರಿಯಲ್ಲಿ ಯೋಜಿಸಿದ. ಧರ್ಮರಕ್ಷಣೆಯ ಜೊತೆಗೆ ಅರ್ಜುನನನ್ನು ಘೋರಪಾಪದಿಂದ ದೂರಮಾಡಿ ಅನುಗ್ರಹಿಸಿದ. ಪ್ರತಿಜ್ಞೆಯನ್ನು ಪಾಲಿಸುವುದೂ ಧರ್ಮವೇ ಆದ್ದರಿಂದ ಅದಕ್ಕೂ ಚ್ಯುತಿಬಾರದಂತೆ ಸನ್ಮಾರ್ಗವನ್ನು ಸೂಚಿಸಿದ. 

 

'ಕಣ್ಣಲ್ಲಿ ಒಂದು ತೊಟ್ಟು ರಕ್ತವಿರುವವರೆಗೂ ಧರ್ಮಕ್ಕಾಗಿ ಹೋರಾಡಬೇಕು' ಎನ್ನುವ ಶ್ರೀರಂಗಮಹಾಗುರುಗಳ ನಿಲುವು ಇಲ್ಲಿ ಸ್ಮರಣೀಯ.  ಮಹಾಧ್ಯೇಯಕ್ಕೆ ಪೋಷಕವಾಗಿಯೇ ನಮ್ಮ ಉಳಿದೆಲ್ಲಾ ಕಾರ್ಯಗಳೂ ಇರಬೇಕು; ದೊಡ್ಡ ಧರ್ಮದ ಸಾಧನೆಗಾಗಿ ಸಣ್ಣಧರ್ಮಗಳನ್ನು ತ್ಯಜಿಸಬೇಕಾಗಿ ಬಂದರೂ ಚಿಂತೆಯಿಲ್ಲ ಎಂಬ ವಿವೇಕವು ಜೀವನದಲ್ಲಿ ಅತ್ಯಗತ್ಯ ಎಂಬ ಜ್ಞಾನಿಗಳ ಆದೇಶವನ್ನು  ನೆನೆಪಿಡಬೇಕಾಗಿದೆ. ಧರ್ಮಮಯ ಜೀವನಕ್ಕಾಗಿ ಶ್ರಮಿಸಿದರೆ ಭಗವಂತನೆಂದಿಗೂ ನಮ್ಮ ಜೊತೆಗಾರನಾಗಿದ್ದು ರಕ್ಷಿಸುವನು ಎಂದು ತಿಳಿಸುವ ರೋಚಕ  ಪ್ರಸಂಗವಿದು.


ಸೂಚನೆ: 29/10/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ - 10 ಹಿಡಿಂಬ-ಸಂಹಾರ (Vyaasa Vikshita 10 Hidimba-Samhara)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕುಂತಿಯನ್ನು ಕುರಿತು ಹಿಡಿಂಬೆಯು ಹೀಗೆಂದಳು: " ಈ ಕಾರ್ಮೋಡದಂತಿರುವ ಕಾಡು ಹಿಡಿಂಬನ ಹಾಗೂ ನನ್ನ ವಾಸಸ್ಥಾನ. ನಾನಾತನ ತಂಗಿ. ನಿಮ್ಮೆಲ್ಲರನ್ನೂ ಕೊಲ್ಲುವ ಉದ್ದೇಶದಿಂದ ನನ್ನನ್ನಾತನಿಲ್ಲಿಗೆ ಕಳುಹಿರುವನು. ಆದರೆ ನಾನಿಲ್ಲಿ ಮಹಾಬಲಶಾಲಿಯಾದ ನಿಮ್ಮ ಪುತ್ರನನ್ನು ಕಂಡೆ; ಕಂಡೊಡನೆ ಆತನನ್ನೇ ನನ್ನ ಪತಿಯೆಂದು ವರಿಸಿರುವೆ. ಈ ಮಧ್ಯೆ, ನಾನು ವಿಳಂಬ ಮಾಡುತ್ತಿದ್ದೇನೆಂದು ಬಗೆದು, ಇದೋ ನನ್ನಣ್ಣನೇ ಬಂದಿರುವನು - ನಮ್ಮೆಲ್ಲರನ್ನೂ ಕೊನೆಗೊಳಿಸಲೆಂದು! ಅವನನ್ನು ನಿಮ್ಮ ಪುತ್ರನು – ಹಾಗೂ ನನ್ನ ಕಾಂತನು - ಅಪ್ಪಚ್ಚಿಮಾಡಿ ಎಳೆದುಕೊಂಡುಹೋಗಿರುವುದನ್ನು ನೋಡಿ! ಪರಸ್ಪರ-ಗರ್ಜನ-ಕರ್ಷಣಗಳಲ್ಲಿ ತೊಡಗಿರುವ ಈ ನರ-ರಾಕ್ಷಸರ ಯುದ್ಧವನ್ನು ನೋಡಿ!" ಎಂದಳು.

ಅವಳ ಮಾತನ್ನು ಕೇಳುತ್ತಿದ್ದಂತೆಯೇ ಸೆಟೆದೆದ್ದು ನಿಂತರು ಯುಧಿಷ್ಠಿರ-ಅರ್ಜುನರು, ನಕುಲ-ಸಹದೇವರು. ಬಲಶಾಲಿ ಸಿಂಹಗಳಂತೆ ಜಯಾರ್ಥಿಗಳಾಗಿ ಹೋರುತ್ತಿರುವ ಭೀಮ-ಹಿಡಿಂಬರನ್ನೆಲ್ಲರೂ ಕಂಡರು. ಆಗೆದ್ದ ಧೂಳು ಕಾಳ್ಗಿಚ್ಚಿನ ಹೊಗೆಯ ಹಾಗಿತ್ತು! ಭೂಮಿಯ ಧೂಳು ಅವರಿಬ್ಬರನ್ನೂ ಆವರಿಸಿತ್ತು. ಹಿಮಾಚ್ಛಾದಿತಪರ್ವತಗಳಂತೆ  ಅವರೀಗ ಕಂಡರು.

ಆಗ ಅರ್ಜುನನು ಭೀಮನಿಗೆಂದನು: " ಈ ಭಯಂಕರರಾಕ್ಷಸನು ನಿನ್ನನ್ನು ಕೆಣಕಿರುವುದು ನಮಗೀವರೆಗೆ ಗೊತ್ತೇ ಆಗಲಿಲ್ಲ. ಈ ರಾಕ್ಷಸನನ್ನು ನಾನು ಬೀಳಿಸುವೆ. ನಕುಲ-ಸಹದೇವರು ಅಮ್ಮನನ್ನು ಕಾಪಾಡಿಕೊಳ್ಳುವರು."  ಆಗ ಭೀಮನೆಂದನು: "ಅರ್ಜುನಾ, ತಟಸ್ಥನಾಗಿ ಸುಮ್ಮನೆ ನೋಡುತ್ತಿರು. ನನ್ನ ತೋಳ್ಗಳ ಸೆರೆಯಲ್ಲಿ ಸಿಕ್ಕ ಈತನೇನಿನ್ನುಳಿಯುವನೇ?"

ಅದಕ್ಕೆ ಅರ್ಜುನನು, "ಈ ರಾಕ್ಷಸನನ್ನು ಹೆಚ್ಚು ಕಾಲ ಉಳಿಸಿ ಏನು ಬಂದೀತು? ನಾವು ಮುಂದೆ ಸಾಗಬೇಕಾದಿದೆಯಲ್ಲವೇ? ಹೆಚ್ಚು ಕಾಲ ಇಲ್ಲುಳಿಯುವಂತಿಲ್ಲ. ಇದೋ ಪೂರ್ವದಿಕ್ಕು ಕೆಂಪಡರುತ್ತಿದೆ, ಸಂಧ್ಯಾಕಾಲ ಸಮೀಪಿಸುತ್ತಿದೆ. "ರೌದ್ರೇ ಮುಹೂರ್ತೇ ರಕ್ಷಾಂಸಿ ಪ್ರಬಲಾನಿ ಭವಂತ್ಯುತ!"- ರೌದ್ರಮುಹೂರ್ತದಲ್ಲಿ ರಾಕ್ಷಸರ ಬಲ ಹೆಚ್ಚುತ್ತದೆ, ಭೀಮ! ಮುಗಿಸೀ ಭೀಕರ-ರಾಕ್ಷಸನನ್ನು. ಸ್ವಮಾಯೆಯನ್ನು ಆತನು ಚಲಾಯಿಸುವುದರೊಳಗೆ ನಿನ್ನ ತೋಳ್ಬಲವನ್ನು ತೋರ್ಪಡಿಸು!"

ಪ್ರಳಯಕಾಲದ ವಾಯುವಿನ ಬಲವನ್ನು ಆವಾಹನೆ ಮಾಡಿಕೊಂಡು, ರೋಷದಿಂದ ಜ್ವಲಿಸುತ್ತಾ, ಭೀಮನು ಆ ರಕ್ಕಸನ ಮೈಯನ್ನು ಮೇಲೆತ್ತಿ ಬಿರುಸಾಗಿ ನೂರು ಬಾರಿ ತಿರುಗಿಸಿದನು! ಮತ್ತು ಹೀಗೆಂದನು: "ವ್ಯರ್ಥವಾದ ಮಾಂಸದಿಂದ ವ್ಯರ್ಥವಾಗಿ ಬೆಳೆದಿರುವೆ, ಓ ಹಿಡಿಂಬ! ನಿನ್ನ ಮತಿಯೂ ವ್ಯರ್ಥ, ಇನ್ನು ನಿನ್ನ ಸಾವೂ ವ್ಯರ್ಥವೇ (ಅರ್ಥಾತ್, ನಿನಗೆ ಕೀರ್ತಿ-ಸ್ವರ್ಗಗಳೂ ದೊರೆಯವು). ನೀನಿನ್ನು ಮುಂದೆ ನರರನ್ನು ಭಕ್ಷಿಸಲಾರೆ, ರಾಕ್ಷಸಾ! ಈ ಕಾಡಿನ್ನು ನಿಷ್ಕಂಟಕವಾಯಿತು (ಮುಳ್ಳಿಲ್ಲದಂತಾಯಿತು)".

ಆಗ ಅರ್ಜುನನು, "ಈತನ ಸಂಹಾರವು ಕಷ್ಟವಾದೀತೋ ಹೇಳು, ಭೀಮಾ. ಸಹಾಯಮಾಡುತ್ತೇನೆ. ಸುಸ್ತಾಗಿದ್ದರೆ ಹೇಳು, ನಾನೇ ಆತನನ್ನು ಸಾಯಿಸಿಬಿಡುವೆ!" ಎಂದನು.

ಈ ಮಾತನ್ನು ಕೇಳಿ ಕೆರಳಿಹೋದ, ಭೀಮ. ಹಿಡಿಂಬನನ್ನು ನೆಲದ ಮೇಲೆ ಜಜ್ಜಿ, ಪಶುವನ್ನು ಸಾಯಿಸುವಂತೆ ಸಾಯಿಸಿದ. ಸಾವನ್ನಪ್ಪುತ್ತಿದ್ದ ಹಿಡಿಂಬ ಕಿರಿಚಿಕೊಂಡ. ಅರಚುತ್ತಿದ್ದ ಆತನನ್ನು ತನ್ನ ತೋಳ್ಗಳಿಂದ ಅಪ್ಪಳಿಸಿ, ಆತನ ಸೊಂಟವನ್ನೇ ಮುರಿದುಹಾಕಿದ,ಭೀಮ!

ಪಾಂಡವರು ತುಷ್ಟರಾದರು. ಅರ್ಜುನ ಹೇಳಿದ: "ಇಲ್ಲಿಂದ ಊರೇನೂ ದೂರವಿದ್ದಂತಿಲ್ಲ. ಬೇಗ ಹೊರಟುಬಿಡೋಣ. ಸುಯೋಧನನಿಗೆ ಸುಳಿವು ಸಿಗಬಾರದಷ್ಟೆ!"

ಹಿಡಿಂಬೆಯನ್ನೂ ಸೇರಿಸಿಕೊಂಡು ಎಲ್ಲರೂ ಮುಂದೆ ಸಾಗಿದರು.

ಸೂಚನೆ : 30/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, October 27, 2022

ஶ்ரீகுருவின் கண்ணோட்டம் – 31 இறைவனின் படைப்பு எவ்வாறு (லீலை)விளையாட்டாகும்? (Iraivanin padaippu evvaaru {lilai}vilaiyaattaagum?)

 மூலம்: வரததேசிகாசார்யார்

தமிழாக்கம்: வனஜா

மின்னஞ்சல் : (lekhana@ayvm.in)  

               



ஆசார்யபாதராயணர் பிரம்ம ஞானிகளில் முதன்மையானவர். சிறந்த பக்தர். மற்றும் மேதாவியான சிறந்த ஆசான். அவருடைய  சமயோசிதமான உபதேசங்களால் சீடர்களில் சிறந்தவரான ஜைமினி முனிவரின் உள்ளத்திருந்த அநேக ஐயங்கள் நீங்கியிருந்தன. அதிலும் 'இறைவன் எல்லோரிடத்தும் சமமானவன், பாகுபாடற்றவன், கருணையே  உருவானவன்' என்பது குறித்த ஐயம் நீங்கி மிகவும் அமைதி பெற்றார். இறைவன் உயிர்களுக்கு உடலை அளித்து அவைகளை காத்து முடிவில்  தன்னுடன் ஐக்கியப்படுத்தி கொள்வதும்கூட அவனின் கருணையின் விரிவாக்கமே என்பதை அவர் நன்கு உணர்ந்திருந்தார். ஆயின் படைப்பை பற்றிய ஒரு பெரிய வினா அவரது மனதை அரித்துக்கொண்டிருந்தது. அதனை அவர் தம் குருவின் முன்னிட்டார்.

 

ஜைமினி: படைத்தல், காத்தல், அழித்தல் என்பது இறைவனின் பொம்மையாட்டம் போன்றது  என கற்றறிந்த சிலர் கூறுகின்றனர். இதுசரியா? சரியென்றால் "பூனைக்கு கொண்டாட்டம், எலிக்கு திண்டாட்டம்" என்பது போன்ற  இத்தகைய விளையாட்டை அவன் ஏன் ஆட வேண்டும்? இவ்வாறு செய்பவன் இரக்கமற்றவன் மட்டுமன்றி அச்சமூட்டும் ப்ரபுவுமல்லவா? இத்தகையவனை கருணை உள்ளவன் என்று எவ்வாறு  அழைப்பது?

 

பாதராயணர்: படைப்பு முதலானவை அவனது விளையாட்டு என்று சான்றோர் உரைக்கின்றனர். இங்கு விளையாட்டென்றால் அனைவரையும் துன்புறுத்தும் விளையாட்டல்ல. எல்லாம் அடைந்துள்ள இறைவனுக்கு விளையாடும் ஒரு ஆசை மட்டும் மீதமுள்ளதோ? அவ்வாறு ஆடுவதாயினும்  உயிரினங்களை  துன்புறுத்தும் விளையாட்டையா இரக்கம்மிக்க  இறைவன் ஆடுவான்? 


அவ்வாறெனில் அவன் விளையாட்டென்பது என்ன? உலகில் விளையாட்டென்பது கடினமானதல்ல. மிகுந்த மகிழ்ச்சியுடன் சிரமமின்றி மக்கள் உலகில் விளையாடுகின்றனர். அவ்வாறே படைப்பு முதலியவற்றை  அவன் எந்த சிரமமுமின்றி  எளிதாக,  தான் நினைத்த மாத்திரத்தில்  நிறைவேற்றுகிறான்.  இதுவே அவன் இயல்பாகவும் உள்ளது. இதையே அவன் (லீலை)விளையாட்டென்று அழைக்கிறோம்.

 

                        


Sunday, October 23, 2022

ಅಷ್ಟಾಕ್ಷರೀ​ - 21 ಅವಜಾನಂತಿ ಮಾಂ ಮೂಢಾಃ (Astakshara Darshana 21 Avajinanti Mam Mudhah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಜೀವನದಲ್ಲಿ ನಮಗೆ ಅರ್ಥವಾಗಬೇಕಾದ ವಿಷಯಗಳು ಹಲವಿವೆ. ಅವುಗಳಲ್ಲಿ ಹಲವು ಅರ್ಥವಾಗುತ್ತವೆ. ಕೆಲವಂತೂ ಅರ್ಥವಾಗುವುದೇ ಇಲ್ಲ. ಯಾವುದು ಅರ್ಥವಾಗುತ್ತದೆ, ಯಾವುದು ಅರ್ಥವಾಗುವುದಿಲ್ಲ? ಮತ್ತು ಏಕೆ? - ಎಂಬ ಪ್ರಶ್ನೆಗಳಂತಿರಲಿ; ಯಾವುದು ಅರ್ಥವಾಗದೋ ಅದರ ಬಗ್ಗೆ ಜನರ ಪ್ರತಿಕ್ರಿಯೆಗಳು ಹೇಗಿರುತ್ತವೆಂಬುದನ್ನು ಗಮನಿಸುವುದು ಒಂದು ಸೋಜಿಗವೇ ಸರಿ. ಅರ್ಥವಾಗದ ವಿಷಯದ ಬಗ್ಗೆ ಅಪಾರಗೌರವವನ್ನೇ ಹೊಂದಿರುವ ಮಂದಿ ಅನೇಕರಿರುತ್ತಾರೆ. ಉದಾಹರಣೆಗೆ, ಸಂಸ್ಕೃತ ಬರದ ಮಂದಿ, ಹೀಗಂದುಕೊಳ್ಳುವುದುಂಟು: "ಸಂಸ್ಕೃತದಲ್ಲಿ ಅದೆಷ್ಟು ಉತ್ಕೃಷ್ಟಗ್ರಂಥರಾಶಿಯಿದೆ! ಅಯ್ಯೋ ನಾನು ಸಂಸ್ಕೃತವನ್ನು ಕಲಿಯಲಿಲ್ಲವಲ್ಲಾ! ಎಂತಹ ತಪ್ಪು ಮಾಡಿದೆ! ಸಂಸ್ಕೃತದಲ್ಲಿ ಎಲ್ಲವೂ ಇದೆಯಂತೆ! ನಾನು ಮುಂದಿನ ಜನ್ಮದಲ್ಲಾದರೂ ಸಂಸ್ಕೃತವನ್ನು ಕಲಿಯುವೆ. ಸಂಸ್ಕೃತಜ್ಞರನ್ನು ಆದರಿಸಿ ಅನುಗ್ರಹ ಪಡೆದರೆ, ಬರುವ ಜನ್ಮಕ್ಕಾದರೂ ಆ ಭಾಗ್ಯ ಬಂದೀತು!"

ಇದೊಂದು ಕೋಟಿಯಾದರೆ (ಕೋಟಿಯೆಂದರೆ ತುದಿ), ಮತ್ತೊಂದು ತದ್ವಿರುದ್ಧ: "ಸಂಸ್ಕೃತದಲ್ಲೇ ಎಲ್ಲವೂ ಉಂಟೋ? ಎಲ್ಲವೂ ಅಲ್ಲೇ ಇದ್ದರೆ ಮತ್ತೇನಾದರೂ ಬೇಕೇಕೆ? ಸಂಸ್ಕೃತವೆಂಬ ಭಾಷೆಯೊಂದಿದೆಯೆಂದು ಕೂಡ ಅರಿಯದವರು ಸಾವಿರಾರು ಮಂದಿಯಿಲ್ಲವೆ? ಅವರೆಲ್ಲ ಹಾಯಾಗಿಲ್ಲವೆ? ಸಂಸ್ಕೃತದಲ್ಲಿ ಏನು ಮಹಾ ಇದ್ದೀತು? ಅದಿಲ್ಲದಿದ್ದರೂ ಜೀವನವು ನಡೆಯುವುದಾದರೆ, ಅದರಿಂದೇನು?" - ಹೀಗಿರುತ್ತದೆ, ಅವರ ವಾದವೈಖರಿ.

ಸಂಸ್ಕೃತವನ್ನು ತಿಳಿಯುವುದರಿಂದ ಅಥವಾ ತಿಳಿಯದಿರುವುದರಿಂದ ಆಗುವ ಲಾಭ-ನಷ್ಟಗಳನ್ನು ಕುರಿತು ಚಿಂತನ ಮಾಡುವುದು ಪ್ರಕೃತದ ಉದ್ದೇಶವಾಗಿಲ್ಲ. ಒಂದು ವಿಷಯವನ್ನು ಅರಿಯದವರು ಅದರ ಬಗ್ಗೆ ಅತಿಗೌರವವನ್ನೋ, ಅತಿತಿರಸ್ಕಾರವನ್ನೋ ಇಟ್ಟುಕೊಂಡಿಬಿಡುವುದು ಅಪರೂಪವೇನಲ್ಲ - ಎಂಬುದನ್ನು ಜ್ಞಾಪಿಸುವುದಷ್ಟೆ ಇಲ್ಲಿ ಉದ್ದಿಷ್ಟವಾದದ್ದು. ಅಜ್ಞಾನಜನ್ಯವಾದ ಅತ್ಯಾದರಕ್ಕಾಗಲಿ, ಅಜ್ಞಾನಜನ್ಯವಾದ ಅವಜ್ಞಾನ(ತಿರಸ್ಕಾರ)ಕ್ಕಾಗಲಿ ಬಹಳ ಹೆಚ್ಚಿನ ಬೆಲೆಯೇನಿಲ್ಲ - ಎಂಬುದೂ ಮನದಟ್ಟಾಗಬೇಕಾದ ವಿಷಯವೇ.

ವಾಸ್ತವವಾಗಿ, ಸಂಸ್ಕೃತವೂ ಒಂದು ಭಾಷೆ; ಅದನ್ನು ಯಾರು ಬೇಕಾದರೂ ಕಲಿಯಬಹುದು; ಈಗಂತೂ ಸಾವಿರಾರು ಮಂದಿ ಪಾಶ್ಚಾತ್ತ್ಯರೇ ಕಲಿತಿದ್ದಾರೆ. ಹೀಗೆ ಇದು ಎಲ್ಲರಿಗೂ ಎಟುಕುವಂತಹುದೇ. ಯಾವುದೇ ಭಾಷೆಯನ್ನು ಕಲಿಯಲೂ ಶ್ರಮವೆಂಬುದು ಬೇಕಷ್ಟೆ; ಸಂಸ್ಕೃತಕ್ಕೆ ಒಂದಿಷ್ಟು ಅಧಿಕಶ್ರಮ ಬೇಕಾದೀತು, ಅಷ್ಟೆ. ಆದರೂ ಅದೆಷ್ಟು ಮಂದಿ ಕಲಿಯಲು ಕಿಂಚಿತ್ತಾದ ಯತ್ನವನ್ನೂ ಮಾಡದೆ, ಬರೀ ಹೊಗಳುವುದನ್ನೂ ತೆಗಳುವುದನ್ನೂ ನೋಡುವೆವಲ್ಲವೆ? ಇರಲಿ. ಭಗವಂತನನ್ನು ಅರಿಯುವುದು ಸುಲಭವೆಂದು ಯಾರೂ ಹೇಳಲಾರರಷ್ಟೆ. ಪ್ರಯತ್ನಪಟ್ಟರೂ ಸುಲಭವಾಗಿ ದೊರೆತುಬಿಡುವನೇ ಭಗವಂತ? "ಬಹೂನಾಂ ಜನ್ಮನಾಮ್ ಅಂತೇ", "ಅನೇಕ-ಜನ್ಮ-ಸಂಸಿದ್ಧಃ" - ಎಂಬುದಾಗಿ ಗೀತಾಚಾರ್ಯನೇ ಸ್ಪಷ್ಟವಾಗಿ ಕಷ್ಟವೆಂದು ಹೇಳಿರುವನಲ್ಲವೇ? ಹಾಗಿದ್ದರೂ, ಗೊತ್ತಿಲ್ಲದ ಅಥವಾ ಗೊತ್ತಾಗದ ವಿಷಯದ ಬಗ್ಗೆ ಜನರು ಸುಮ್ಮನಿರ(ಲಾರ)ರು!: ಆಳಿಗೊಂದು ಮಾತು! ಗೊತ್ತಿಲ್ಲದ್ದನ್ನು ಕುರಿತು ಮಾತನಾಡದಿದ್ದರೆ ಯಾರಿಗೂ ನಷ್ಟವಿಲ್ಲ; ಬದಲಾಗಿ, ಸುಮ್ಮನಿರಲಾರದೆ, ಕೆಟ್ಟಬಾಯಿ ಹಾಕುವ ಮಂದಮತಿಗಳ ಮಂದೆ ಚಿಕ್ಕದ್ದೇನಲ್ಲ!

ಭಗವಂತನ ಹಿರಿತನದ ಸುಳಿವೊಂದಿಷ್ಟು ಸಿಕ್ಕಿ ಆತನನ್ನು ಆದರಿಸುವವರುಂಟು, ಸರಿಯೇ. ಆದರೆ ಆ ಕುರಿತು ಇನಿತೂ ಅರಿವೇ ಇಲ್ಲದೆ, ಅಗೌರವತೋರಿಸುವ ಮಂದಿಗೇನೋ ಕಡಿಮೆಯಿಲ್ಲ. "ಮಾನುಷೀ-ತನು"(ಮನುಷ್ಯ-ದೇಹ)ವನ್ನು ಧರಿಸಿ, ಸರ್ವಗೋಚರನಾಗಬೇಕೆಂದೇ ಬಂದಾಗಲೂ, ಅಥವಾ ಬಂದಾಗಲೇ, ಆತನನ್ನು ಅಪಾರವಾಗಿ ಅಪಮಾನಿಸುವವರುಂಟು! ಇದನ್ನೇ ಗೀತೆಯಲ್ಲಿ ಶ್ರೀಕೃಷ್ಣನು ಹೇಳುವುದು "ಅವಜಾನಂತಿ ಮಾಂ ಮೂಢಾಃ": "ಮೂಢರು ನನ್ನನ್ನು ತಿರಸ್ಕರಿಸುವರು." ಅವಜ್ಞೆಯೆಂದರೆ ಅನಾದರ. ಆತನ ಮೂಲಸ್ವರೂಪವಾದರೂ ಎಂತಹುದು? ಅದು 'ಭೂತ-ಮಹೇಶ್ವರ' ಅರ್ಥಾತ್ ಸರ್ವಜೀವಿಗಳಿಗೂ ಪ್ರಭುವಾದದ್ದು.

ಭೂತ-ಮಹೇಶ್ವರ-ಸ್ಥಿತಿಯು ಅವ್ಯಕ್ತವಾದದ್ದು; ಆತನ ಪರಭಾವವದು. ಆ ಅವ್ಯಕ್ತವಿಲ್ಲಿ ವ್ಯಕ್ತವಾಗಿ ಬಂದಿದೆ: ನಾರಾಯಣನು ನರರೂಪಿಯಾಗಿ ಬಂದಿದ್ದಾನೆ. ಪರಭಾವವನ್ನು ಹೊತ್ತೇ ಬಂದಿದ್ದರೂ, ಅದನ್ನು ಗ್ರಹಿಸಲಾಗದವರು ನರಭಾವವನ್ನಷ್ಟೇ ಕಾಣುವರು. ಸಾಧಾರಣರು ಹೇಗೋ ಹಾಗೆಯೇ ಈತನೂ - ಎಂದುಕೊಳ್ಳುವರು. ಈ ಬಗ್ಗೆ, "ಕಣ್ಣಿನಲ್ಲಿ ವಿಕಾರವೇರ್ಪಟ್ಟಾಗ, ವಸ್ತುವಿನ ಸ್ವರೂಪವನ್ನು ಗ್ರಹಿಸಿಕೊಳ್ಳಲು ಆಗುವುದಿಲ್ಲ" - ಎಂಬ ಶ್ರೀರಂಗಮಹಾಗುರುಗಳ ವಚನವು ಕಣ್ತೆರೆಸುವಂತಹುದು. ದೈವೀಪ್ರಕೃತಿಯುಳ್ಳವರ ದೃಷ್ಟಿ ನಿರ್ವಿಕಾರವಾದದ್ದು.ಆದರೆ ರಾಕ್ಷಸೀಪ್ರಕೃತಿಯು ತಾಮಸವಾದುದು; ಆಸುರೀಪ್ರಕೃತಿಯು ರಾಜಸವಾದುದು; ಅವನ್ನುಳ್ಳವರು ಅಬುದ್ಧಿಗಳು: ವಿವೇಕವೆಂಬ ನೇತ್ರದಲ್ಲಿ ವಿಕಾರವುಳ್ಳವರು, ಮೋಹಕ್ಕೊಳಪಟ್ಟವರು.  

ವ್ಯಕ್ತವನ್ನು ಹಿಡಿದು ಅವ್ಯಕ್ತದತ್ತ ಸಾಗಲರಿಯದ ಇಂತಹ ಬೆಪ್ಪರು ತೆಪ್ಪಗಿರುವ ಬದಲು ಅವಹೇಳನದಲ್ಲಿ ತೊಡಗಿದಲ್ಲಿ ಮೂಢರೆನಿಸಿಕೊಳ್ಳರೇ?


ಸೂಚನೆ: 23/10/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಯಕ್ಷಪ್ರಶ್ನೆ - 9 (Yaksha Prashne - 9)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ- ೮. ಯಾವುದರಿಂದ 'ಬುದ್ಧಿಮಾನ್ ' ಎನಿಸಿಕೊಳ್ಳುತ್ತಾನೆ ?  

ಉತ್ತರ - ವೃದ್ಧರ ಸೇವೆಯಿಂದ.  

 

ಇಲ್ಲಿ ಯಕ್ಷ ಕೇಳುವ ಪ್ರಶ್ನೆ ಯಾವುದೆಂದರೆ ಬುದ್ಧಿಮಂತ ಎಂದು ಎನಿಸಿಕೊಳ್ಳುವುದು ಹೇಗೆ ? ಎಂದು. ಅದಕ್ಕೆ ಉತ್ತರ ವೃದ್ಧರ ಸೇವೆಯಿಂದ; ಎಂಬುದಾಗಿ. ವೃದ್ಧರ ಸೇವೆಯಿಂದ ಬುದ್ಧಿಯು ಹೇಗೆ ಬರುವುದು? ವೃದ್ಧರ ಸೇವೆಗೂ ಬುದ್ಧಿಗೂ ಏನು ಸಂಬಂಧ? ಸೇವೆಯಿಂದ ಬುದ್ಧಿ ಬರಲು ಹೇಗೆ ಸಾಧ್ಯ? ಎಂಬುದು ಪ್ರಶ್ನೆಯ ಆಶಯ. 


ಬುದ್ಧಿ ಎಂದರೇನು? ಅದರ ಸ್ಥಾನ ಯಾವುದು? ಅದರ ಸ್ವರೂಪ ಎನು? ಎಂಬುದರ ಬಗ್ಗೆ ಶಾಸ್ತ್ರಗಳಲ್ಲಿ ಬಹಳ ಚರ್ಚೆಯಾಗಿದೆ. ಪದದ ಬಳಕೆಯು ಯಾವ ಸಂದರ್ಭದಲ್ಲಿ ಆಗಿದೆ ಎಂಬುದರ ಮೇಲೆ ಅದರ ಅರ್ಥದ ವ್ಯಾಪ್ತಿಯು ನಿರ್ಣಯವಾಗುತ್ತದೆ. ಅಮರಕೋಷದಲ್ಲಿ ಬುದ್ಧಿಗೆ ಮನೀಷಾ, ಧಿಷಣಾ, ಧೀ, ಪ್ರಜ್ಞಾ, ಶೇಮುಷೀ, ಮತಿ, ಪ್ರೇಕ್ಷಾ, ಉಪಲಬ್ಧಿ, ಚಿತ್, ಸಂವಿತ್ ಎಂಬುದಾಗಿ ಪರ್ಯಾಯಪದಗಳನ್ನು ಕೊಟ್ಟಿದೆ. ಶಾಸ್ತ್ರಗಳಲ್ಲಿ ಮನಸ್ಸು, ಜ್ಞಾನ, ಬೋಧ ಮುಂತಾದ ಅರ್ಥಗಳಲ್ಲಿ ಬಳಕೆಯಾಗಿರುವುದು ಕಂಡುಬರುತ್ತದೆ. ಪದಗಳು ಅನೇಕ ಇದ್ದರೂ ಅವುಗಳು ಒಂದೇ ಸಂದರ್ಭವನ್ನು ತಿಳಿಸಲು ಬಂದ ಪದಗಳಲ್ಲ ಎಂಬುದನ್ನು ತಿಳಿಯಬೇಕು. ಇಲ್ಲಿ ಬುದ್ಧಿ ಎಂಬ ಪದವು ಯಾವ ಆಶಯದಲ್ಲಿ  ಬಳಕೆಯಾಗಿದೆ ? ಎಂಬುದನ್ನು ತಿಳಿಯುವ ಪ್ರಯತ್ನವಿದೆ. 


ಬುದ್ಧಿ ಎಂದರೆ ಸಾಮಾನ್ಯಜ್ಞಾನ. ಇದು ಕಲಿಕೆಯಿಂದ ಬರುವಂತಹದ್ದಲ್ಲ. ಕನ್ನಡದಲ್ಲಿ "ಓದು ಒಕ್ಕಾಲು ಬುದ್ಧಿ ಮುಕ್ಕಾಲು" ಎಂಬ ಗಾದೆ ಇದೆ. "ಅಭ್ಯಾಸಾನುಸಾರಿಣೀ ವಿದ್ಯಾ ಬುದ್ಧಿಃ ಕರ್ಮಾನುಸಾರಿಣೀ" ಎಂಬುದಾಗಿ ಸಂಸ್ಕೃತದಲ್ಲಿ ಒಂದು ಮಾತಿದೆ. ಆದ್ದರಿಂದ ವಿಶೇಷ ಪ್ರಯತ್ನದಿಂದ ಸಂಪಾದನೆ ಮಾಡುವುದನ್ನು ವಿದ್ಯೆ ಅಥವಾ ಜ್ಞಾನ ಎನ್ನುವುದಾದರೆ, ನಾವು ಮಾಡುವಂತಹ ಕರ್ಮದಿಂದ ಬರುವ ಪಕ್ವತೆಯನ್ನು 'ಬುದ್ಧಿ' ಎನ್ನಬಹುದು. ಹಾಗಾಗಿ ಜ್ಞಾನಕ್ಕಿಂತಲೂ ಬುದ್ಧಿಗೆ ಮಹತ್ತ್ವವನ್ನು ಕೊಟ್ಟಿರುವುದು ಕಂಡುಬರುತ್ತದೆ. ನೋಡುತ್ತಾ ನೋಡುತ್ತಾ ಕಲಿಯಬೇಕು. ಮಾಡುತ್ತಾ ಮಾಡುತ್ತಾ ತಿಳಿಯಬೇಕು. ಸ್ವತಃ ಅನುಷ್ಠಾನ ಮಾಡುವುದರಿಂದ ಬರುವಂತಹದ್ದು ಬುದ್ಧಿ. 


ಇಂತಹ ಬುದ್ಧಿಯು ವೃದ್ದರ ಸೇವೆಯಿಂದ ಬರುತ್ತದೆ. ಯಾರು ಜ್ಞಾನದಿಂದ ಮತ್ತು ವಯಸ್ಸಿನಿಂದಲೂ ವೃದ್ಧರಾಗಿರುವರೋ ಅಂತಹವರ ಸೇವೆಯಿಂದ ಬುದ್ಧಿಯು ಬರುತ್ತದೆ. ವೃದ್ಧರು ತಮ್ಮ ಜೀವಿತಾವಧಿಯಲ್ಲಿ ಜ್ಞಾನವನ್ನು ಸಂಪಾದನೆ ಮಾಡಿದ್ದಲ್ಲದೆ, ಅವರ ಸಂಪೂರ್ಣ ಆಯುಷ್ಯವು ಈ ಜ್ಞಾನಾಧಾರಿತವಾದ ಕರ್ಮದಲ್ಲಿ ಪರ್ಯವಸಾನವಾಗಿರುತ್ತದೆ. ಅವರ ಸೇವೆ ಮಾಡುತ್ತಾ ಅವರ ಮಾರ್ಗದರ್ಶನವನ್ನೂ ಜೊತೆ ಜೊತೆಗೆ ಪಡೆದಂತಾಗುತ್ತದೆ. ಹೀಗೆ ತಿಳಿದು ಮಾಡಿದ ಕಾರ್ಯಕ್ಕೆ ಹೆಚ್ಚಿನ ಬಲವಿದೆ. "ಕರ್ಮವನ್ನು ಮರ್ಮವರಿತು ಆಚರಿಸಿ" ಎಂಬ ಶ್ರೀರಂಗ ಮಹಾಗುರುಗಳು ಹೇಳುವ ಮಾತು ಇಲ್ಲಿ ಸ್ಮರಣೀಯ. ಅಂದರೆ ಯಾವ ಕರ್ಮವು ಜ್ಞಾನದಿಂದ ಬಂದಿರುತ್ತದೆಯೋ ಅದು ಜ್ಞಾನರೂಪೀ ಭಗವಂತನನ್ನು ತಲುಪಲು ಸಾಧ್ಯ. ಬುದ್ಧಿಯು ಮಾತ್ರವಲ್ಲ, ನಿತ್ಯವೂ ಹಿರಿಯರಿಗೆ ನಮಸ್ಕಾರ ಮಾಡುವವರು, ನಿತ್ಯವೂ ವೃದ್ಧರ ಸೇವೆಯನ್ನು ಮಾಡುವವರು ಆಯುಷ್ಯ ವಿದ್ಯೆ ಯಶಸ್ಸು ಮತ್ತು ಬಲವನ್ನೂ ಪಡೆಯುತ್ತಾರೆ ಎಂಬ ಸುಭಾಷಿತವೂ ಇದೆ.          


ಸೂಚನೆ : 23
/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 9 ಭೀಮ-ಹಿಡಿಂಬರ ಕಾಳಗ (Vyaasa Vikshita-6 Bhima-Hidimbara Kalaga)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


(ಸಾಂದರ್ಭಿಕ ಚಿತ್ರ) 

ರೊಚ್ಚಿಗೆದ್ದ ಹಿಡಿಂಬನ ಆಗಮನದಿಂದ ಆತಂಕಗೊಂಡ ಹಿಡಿಂಬೆಗೆ ಧೈರ್ಯಹೇಳುತ್ತಾ ಭೀಮನೆಂದ: "ಹೆದರಬೇಡ ಹಿಡಿಂಬೆ, ನೀನು ನೋಡುತ್ತಿರುವಂತೆಯೇ ಈ ಹಿಡಿಂಬನನ್ನು ಸಂಹರಿಸಿಬಿಡುವೆ. ನನಗಿವನಾವ ಲೆಕ್ಕ! ನೋಡು ನನ್ನ ತೋಳುಗಳನ್ನು - ಆನೆಯ ಸೊಂಡಿಲಿನಂತಿರುವುದನ್ನು! ಮನುಷ್ಯನೆಂದೇನೂ ನನ್ನನ್ನು ಕಡೆಗಾಣಿಸಬೇಡ". ಅದಕ್ಕುತ್ತರವಾಗಿ ಹಿಡಿಂಬೆಯೂ, "ದೇವರೂಪಿಯಾದ ನಿನ್ನನ್ನು ಕಡಿಮೆಯೆಂದು ನಾ ಭಾವಿಸುತ್ತಿಲ್ಲ. ಆದರೆ ಮನುಷ್ಯರ ಮೇಲೆ ಈ ರಾಕ್ಷಸನ ಬಲವೆಂತಹುದೆಂಬುದನ್ನು ಬಲ್ಲೆನಾಗಿ ಹಾಗೆ ಹೇಳಿದೆ" ಎಂದಳು.

ಬಳಿಬಂದ ಹಿಡಿಂಬನಿಗೆ ಇವಳೀ ಮಾತುಗಳು ಕೇಳಿಸದೆ ಇರಲಿಲ್ಲ. ಕ್ರೋಧದಿಂದ ಅವಳತ್ತ ನೋಡಿದ. ಆದರದೆಂತಹ ರೂಪವನ್ನವಳೀಗ ಧರಿಸಿದ್ದಳು!: ತಲೆಯ ಮೇಲೆ ಹೂಮಾಲೆಯೇನು, ಚಂದ್ರನಂತಿರುವ ವದನವೇನು, ಕೋಮಲವಾದ ಚರ್ಮ-ಉಗುರುಗಳೇನು, ಪೇರಿಸಿಕೊಂಡ ಆಭರಣಗಳೇನು, ನವಿರಾದ ಆ ಸೂಕ್ಷ್ಮವಸ್ತ್ರವೇನು! ಮಾನುಷರೂಪಧಾರಿಣಿಯಾದ ಈಕೆ ಪುಂಸ್ಕಾಮೆಯಾಗಿದ್ದಾಳೆ (ಎಂದರೆ ಪುರುಷನನ್ನು ಬಯಸುತ್ತಿರುವವಳಾಗಿದ್ದಾಳೆ) - ಎಂಬುದು ಸ್ಫುಟವಾಗಿಹೋಯಿತು! ಕೋಪವುಕ್ಕಿತು.  ಸಿಟ್ಟಿನಿಂದ ಅವಳನ್ನು ದಿಟ್ಟಿಸಿ ನೋಡುತ್ತಾ, "ನನ್ನನ್ನಕ್ಕೇ ಕಲ್ಲು  ಹಾಕುವೆಯಾ, ದುರ್ಮತಿ! ನನ್ನ ಕೋಪಕ್ಕೂ ಹೆದರೆಯಾ, ಅಸತಿ! ಸರ್ವಪೂರ್ವರಾಕ್ಷಸಶ್ರೇಷ್ಠರಿಗೂ ತಂದಿರುವೆ ನೀನಪಕೀರ್ತಿ. ಇಲ್ಲಿರುವ ಇವರೆಲ್ಲರನ್ನೂ ಕೊಲ್ಲುವೆ - ನಿನ್ನೊಂದಿಗೇ" ಎಂದಬ್ಬರಿಸಿದ.

ಕೆಂಗಣ್ಣಿನಿಂದ ನೋಡುತ್ತಾ, ಹಲ್ಲುಕಡಿಯುತ್ತಾ, ಕೊಲ್ಲಲೆಂದು ಅವಳತ್ತ ನುಗ್ಗಿಬರುತ್ತಿದ್ದ ಹಿಡಿಂಬನನ್ನು ಕಂಡು ನಿಲ್ಲುನಿಲ್ಲೆನ್ನುತ್ತಾ ಭೀಮನೆಂದ: "ಏಯ್! ನನ್ನನ್ನು ಬಯಸಿರುವ ಇವಳು ನಿನಗಾವ ಅಪಚಾರ ಮಾಡಿದ್ದಾಳೆ? ದುಷ್ಟನೇ! ನಾನಿಲ್ಲಿರಲು ಸ್ತ್ರೀವಧೆಯನ್ನು ನೀ ಮಾಡಲಾರೆ (ನ ಸ್ತ್ರಿಯಂ ಹಂತುಮರ್ಹಸಿ). ನನ್ನೊಂದಿಗೆ ಸೆಣಸು: ನಿನ್ನನ್ನಿಂದು ಯಮಲೋಕಕ್ಕಟ್ಟುವೆ! ನಿನ್ನ ತಲೆಯಿಂದು ಜಜ್ಜಿಹೋಗುತ್ತದೆ - ಆನೆಯ ತುಳಿತಕ್ಕೊಳಗಾದಂತೆ. ನಿನ್ನ ಶರೀರವನ್ನಿಂದು ಗೃಧ್ರ-ಗೋಮಾಯುಗಳು (ಗಿಡುಗಗಳು, ನರಿಗಳು) ಎಳೆದಾಡುವುವು. ಈ ಕಾಡಿನಲ್ಲಿನ್ನು ರಾಕ್ಷಸರೇ ಇಲ್ಲದಂತೆ ಮಾಡಿಹಾಕುವೆ!  ಆನೆಯನ್ನು ಸಿಂಹವು ಮತ್ತೆ ಮತ್ತೆ ಎಳೆದಾಡುವಂತೆ ನಿನ್ನನ್ನು ನಾನೆಳೆದಾಡುವುದನ್ನು ನಿನ್ನ ತಂಗಿಯೀಗ ಕಾಣುವಳು."

ಅದಕ್ಕೆ ಹಿಡಿಂಬನೆಂದ: " ನಿನ್ನ ಗರ್ಜನೆಯಿಂದೇನು, ಕೊಚ್ಚಿಕೊಳ್ಳುವುದರಿಂದೇನು? ಸಾಧಿಸಿ ತೋರಿಸಿ ಕೊಚ್ಚಿಕೋ, ವಿಳಂಬಬೇಡ. ಯಾರ ಬಲ ಅಧಿಕವೆಂಬುದನ್ನೀಗ ನೀನರಿಯುವೆ. ಮಲಗಿರುವ ಇವರನ್ನು ಈಗ ಹಿಂಸಿಸುವುದಿಲ್ಲ. ನಿನ್ನನ್ನು ಮೊದಲು ಕೊಂದು, ನಿನ್ನ ರಕ್ತ ಕುಡಿದು, ಆ ಬಳಿಕ ಇವರನ್ನೂ, ಜೊತೆಗೆ ಇವಳನ್ನೂ, ಸಂಹರಿಸುವೆ!"

ಹೀಗೆ ಹೇಳಿದವನೇ, ಭೀಮನ ಮೇಲೇರಿ ಬಂದ. ಬಿರುಸಾಗಿ ಬಂದ ಆತನ ತೋಳಿಗೆ  ಪಟ್ಟು ಹಾಕಿ ಒಂದಿಪ್ಪತ್ತು ಅಡಿ ಆತನನ್ನು ಎಳೆದಾಡಿದ, ಭೀಮ - ಕ್ಷುದ್ರಮೃಗವೊಂದನ್ನು ಸಿಂಹವು ಎಳೆದಾಡುವಂತೆ. ಭೀಮನನ್ನು ಬರಸೆಳೆದು ಭೀಕರಧ್ವನಿಯನ್ನು ಹಿಡಿಂಬನು ಮಾಡಿದ ("ಭೈರವಂ ರವಂ"). ಅವರ ಸೆಣಸಾಟಕ್ಕೆ ಭಗ್ನವಾದ ಮರಗಳೆಷ್ಟೋ, ಎಳೆದಾಟಕ್ಕೆ ಸಿಕ್ಕ ಲತೆಗಳೆಷ್ಟೋ! ಆನೆಗಳೆರಡರ ಹೋರಾಟದಂತಾಗಿತ್ತು, ಅವರ ಕಾಳಗ. ಅವರ ದಾರುಣಯುದ್ಧಕ್ಕೆ ಸುತ್ತಲಿನ ಮೃಗಪಕ್ಷಿಗಳು ಬೆದರಿಹೋದವು! ಅವರ ಗರ್ಜನ-ಪ್ರತಿಗರ್ಜನಗಳ ಗುಲ್ಲಿಗೆ, ಹೊಡೆತ-ಬಡಿತಗಳ ಸದ್ದಿಗೆ, ಮಲಗಿದ್ದವರೆಲ್ಲರೂ ಎದ್ದರು!

ನಿದ್ದೆಯಿಂದೆದ್ದ ಕುಂತಿಯು ಬಳಿಯಿದ್ದ ಹಿಡಿಂಬೆಯ ಅಲೌಕಿಕರೂಪರಾಶಿಯನ್ನು ಕಂಡು, "ದೇವಕನ್ಯೆಯಂತಿರುವ ನೀನಾರು, ಸುಂದರಿ? ನೀನೇನು ವನದೇವತೆಯೋ ಅಪ್ಸರಸ್ತ್ರೀಯೋ? ಇಲ್ಲಿ ಬಂದು ನಿಂತಿರುವುದೇಕೆಂಬುದನ್ನು ಹೇಳುವೆಯಾ?" ಎಂದು ಕೇಳಿದಳು.

(ಮುಂದುವರೆಯುವುದು)

ಸೂಚನೆ : 23/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯೋಗ-ಭೋಗದ ದೀಪಾವಳಿ ಹಬ್ಬ(Yoga-Bhogada Dipavali Habba)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


 


ಹಬ್ಬಕ್ಕೊಂದು ನೋಟ 

ಭಾರತದಾದ್ಯಂತ ದೀಪಾವಳಿ ಹಬ್ಬವು ಬಂತೆಂದರೆ ಎಲ್ಲಿಲ್ಲದ ಸಂತೋಷ, ಸಂಭ್ರಮ-ಸಡಗರ. ಪ್ರಾತಃಕಾಲದಲ್ಲಿ ಅಭ್ಯಂಗ ಮಾಡಿಕೊಂಡು, ಹಿರಿಯರಿಂದ ಆರತಿ ಎತ್ತಿಸಿಕೊಂಡು, ಸ್ನಾನವನ್ನು ಮಾಡಿ, ಹೊಸ ವಸ್ತ್ರವನ್ನು ಧರಿಸಿ ಸಂಭ್ರಮಿಸುವುದು, ವಿವಿಧ ಬಗೆಯ ತಿಂಡಿತಿನಿಸುಗಳನ್ನು ಆಸ್ವಾದಿಸುವುದು-ಇವುಗಳಿಂದಾಗಿ  ಈ ಹಬ್ಬ ಬಂತೆಂದರೆ ಅದೆಷ್ಟು ಸಂತೋಷ! ಪಟಾಕಿಯಂತೂ ಅತಿ ಉತ್ಸಾಹವನ್ನು ಕೊಡುತ್ತದೆ. ಅನೇಕ ಬಗೆಯ ಪಟಾಕಿಗಳು -ಶಬ್ದರಹಿತ, ಬಗೆಬಗೆಯ ಬೆಳಕಿನ ಬಣ್ಣದ್ದು, ಶಬ್ದ ಬರುವಂಥದ್ದು, ಗಾಳಿಯಲ್ಲಿ ತೇಲಿಹೋಗಿ ಆಕಾಶದಲ್ಲಿ ಚಿತ್ತಾರದೊಂದಿಗೆ ಶಬ್ದದೊಡನೆ ವಿಜೃಂಭಿಸುವುದು- ಇತ್ಯಾದಿ ಎಲ್ಲ ವಯಸ್ಸಿನವರಿಗೂ ಖುಷಿತರುವಂತಹದ್ದೇ. ಇವೆಲ್ಲವೂ ನಮ್ಮ ಇಂದ್ರಿಯತೃಪ್ತಿಯ ವಿಷಯಗಳಾದವು. ಇದರ ಹಿಂಬದಿಯಲ್ಲೇನಾದರೂ ತಾತ್ತ್ವಿಕ ದೃಷ್ಟಿ ಇದೆಯೇ ಎಂದು ಆಲೋಚಿಸಬೇಕು.

 ನಮ್ಮ ಮಹರ್ಷಿಗಳು ತಂದುಕೊಟ್ಟ ಹಬ್ಬದ ಹಿನ್ನೆಲೆಯನ್ನು ಅರ್ಥಮಾಡಿಕೊಂಡು, ಆಚರಿಸಿದಾಗ ಭೋಗ- ಯೋಗ ಎರಡನ್ನೂ ಅನುಭವಿಸಿ ಆನಂದಿಸಬಹುದಾಗಿದೆ.

 


ದೀಪಾವಳಿ ಹಬ್ಬದ ಮಹತ್ತ್ವ 

ಈ ಹಬ್ಬವನ್ನು ಚಾಂದ್ರಮಾನದ ಪ್ರಕಾರ ಆಚರಣೆ ಮಾಡುವ ಅಭ್ಯಾಸ ಬಂದಿದೆ. ಶರದೃತುವಿನಲ್ಲಿ, ಆಶ್ವಯುಜ ಮತ್ತು ಕಾರ್ತಿಕ ಎಂಬ ಎರಡು ಮಾಸಗಳು ಬರುತ್ತವೆ. ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಿಂದ ಪ್ರಾರಂಭಿಸಿ ಕಾರ್ತಿಕ ಮಾಸದ ಶುಕ್ಲ ಪ್ರತಿಪತ್, ಈ ಮೂರುದಿನಗಳ ಕಾಲವನ್ನು 'ದೀಪಾವಳಿ' ಎಂದು ಆಚರಿಸಲಾಗುತ್ತಿದೆ. ಇನ್ನು ಕೆಲವರಲ್ಲಿ, ಸೌರಮಾನದ ಪ್ರಕಾರ 'ತುಲಾವೃಶ್ಚಿಕಯೋಃ ಶರತ್' ಎಂಬ ವಾಕ್ಯದಂತೆ ತುಲಾಮಾಸದ ಶುಕ್ಲ ಪಾಡ್ಯದಿಂದ ದರ್ಶದವರೆಗಿನ(ಅಮಾವಾಸ್ಯೆ) ಕಾಲವನ್ನು ಒಂದು ಮಾಸ ಎಂದು ಪರಿಗಣಿಸಿ ಕೃಷ್ಣಪಕ್ಷದ ಚತುರ್ದಶಿಯಿಂದ ಮೂರು ದಿನಗಳನ್ನು ದೀಪಾವಳಿಯ ಹಬ್ಬವಾಗಿ ಆಚರಿಸುವ ಪದ್ಧತಿ ಇದೆ. ಇನ್ನು ತುಲಾಮಾಸ ಅಥವಾ ಕಾರ್ತಿಕ ಮಾಸದ ಸಮಯದಲ್ಲಿ ಆಚರಿಸುವ ಈ ಹಬ್ಬವು ಸತ್ಫಲವನ್ನು, ಸಂತೋಷವನ್ನು ಕೊಡುವುದು.

 

ಕಾರ್ತಿಕಸ್ನಾನ ಮತ್ತು ತುಲಾಸ್ನಾನ ಎಂಬ ಎರಡು ವಿಧಿಯೂ ಸಮಂಜಸವಾಗಿದೆ. ದೀಪಾವಳಿ (ದೀಪಗಳ ಸಾಲು) ಎಂದು ದೀಪದ ಹಬ್ಬವನ್ನು ಕಾರ್ತಿಕ ಮಾಸದ ರೀತ್ಯಾ ಅಚರಿಸುವಲ್ಲಿ ಔಚಿತ್ಯವನ್ನು ಕಾಣಬಹುದು. ಯಾವ ಮಾಸದ ಪೂರ್ಣಿಮೆಯಂದು ಕೃತ್ತಿಕಾನಕ್ಷತ್ರವು ಘಟಿಸುವುದೋ ಆ ಮಾಸಕ್ಕೆ ಕಾರ್ತಿಕಮಾಸ ಎಂದು ಕರೆಯುತ್ತಾರೆ. "ಕೃತ್ತಿಕಾನಕ್ಷತ್ರಮಗ್ನಿರ್ದೇವತಾ" ಎಂದು ವೇದವು ಹೇಳುವಂತೆ ಕೃತ್ತಿಕಾನಕ್ಷತ್ರವನ್ನು ಅಗ್ನಿದೇವತಾತ್ಮಕವಾದ ನಕ್ಷತ್ರವೆಂದು ಕರೆಯಲಾಗಿದೆ. ಎಂದೇ ಈ ಮಾಸದಲ್ಲಿ  ದೀಪವನ್ನು ಬೆಳಗಿಸುವುದೇ ಔಚಿತ್ಯ. ಲಕ್ಷದೀಪೋತ್ಸವ, ವಿಷ್ಣುದೀಪೋತ್ಸವ, ಶಿವದೀಪೋತ್ಸವ ಎಂದೆಲ್ಲ ದೀಪಾರಾಧನೆಯೇ ಪ್ರಧಾನವಾಗಿರುವುದು ಇಲ್ಲಿನ ವಿಶೇಷತೆ. ಯಾವುದೇ ಬಗೆಯಲ್ಲಿ ದೀಪವನ್ನು ಆರಾಧಿಸಿದರೂ, ಅದು ದೀಪರೂಪೀ ಪರಮಾತ್ಮನ ಆರಾಧನೆಯಾಗಿ ಪರ್ಯವಸಾನವಾಗುತ್ತದೆ ಎಂಬುದು ಜ್ಞಾನಿಗಳ ಮಾತು. 

 

ಹಬ್ಬದ ಮುನ್ನ, ಸಕಲ ಸೌಭಾಗ್ಯಗಳನ್ನೂ ಕರುಣಿಸುವ  ಮಹಾಲಕ್ಷ್ಮಿಯನ್ನು ಸ್ವಾಗತಿಸಲು ಇಡೀ ಮನೆಯನ್ನು ಸ್ವಚ್ಛಗೊಳಿಸಿ ಸಿಂಗರಿಸುವ ಸಂಭ್ರಮ. ಉತ್ತರಭಾರತದಲ್ಲಿ 'ಧನ್ತೇರಸ್' ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಹೊಸ ಮನೆ, ಆಭರಣ, ವಾಹನ ಮೊದಲಾದವುಗಳನ್ನು ಕೊಂಡು ಸಂಗ್ರಹ ಮಾಡುವ ಕಾಲವಿದಾಗಿದೆ. ದೀಪಾವಳಿ ಮಹೋತ್ಸವವು ವಿವಿಧ ಹಬ್ಬಗಳನ್ನೊಳಗೊಂಡು, ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ಬಲಿಪಾಡ್ಯಮೀ, ನರಕಚತುರ್ದಶೀ, ವೀರಪ್ರತಿಪದಾ, ಭಗಿನಿದ್ವಿತೀಯಾ, ಸೋದರಬಿದಿಗೆ ಇತ್ಯಾದಿ ನಾಮಗಳಿಂದ ಪ್ರಸಿದ್ಧವಾಗಿದೆ. ಇದನ್ನು ಕೇವಲ ವೈದಿಕಸಂಪ್ರದಾಯದಲ್ಲಿ ಮಾತ್ರವಲ್ಲ, ಬೌದ್ಧ, ಜೈನ ಸಂಪ್ರದಾಯಗಳಲ್ಲೂ ಆಚರಿಸುವ ರೂಢಿಯಿದೆ. ಅಲ್ಲದೇ, ಈ ಹಬ್ಬವನ್ನು  ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡು ಆಂಧ್ರ, ಮಹಾರಾಷ್ಟ್ರ ಹೀಗೆ ಭಾರತದ ಪ್ರತಿಯೊಂದು ಭಾಗದಲ್ಲೂ ಅತ್ಯಂತ ವಿಜೃಂಭಣೆಯಿಂದ ಆಚರಿಸುವಂತಹದ್ದಾಗಿದೆ.

ದೀಪಾವಳಿಯಲ್ಲಿ ನಾವು ಮನೆಯಲ್ಲಿ  ಬೆಳಗುವ ದೀಪಗಳು, ನಮಗೆ, ನಮ್ಮೊಳಗಿನ  ಅಧ್ಯಾತ್ಮದೀಪದ ನೆನಪನ್ನುಂಟುಮಾಡುವ  ಪ್ರತೀಕಗಳು.  ಆ ಆಧ್ಯಾತ್ಮ ದೀಪವೇ ದೀಪಾವಳಿಯ ಕೇಂದ್ರ ಬಿಂದು, ಉಗಮಸ್ಥಾನ. ಇಂದ್ರಿಯಸೌಖ್ಯ ಹಾಗೂ ಮೋಕ್ಷ ಸಾಧನೆಗೆ ಸಹಾಯಕವಾದ ಮಹಾಪರ್ವಕಾಲ. 

 

 

ಗೋಪೂಜಾ

"ಪ್ರತಿಪದ್ದರ್ಶಸಂಯೋಗೇ ಕ್ರೀಡನಂ ತು ಗವಾಂ ಮತಮ್" (ನಿರ್ಣಯಾಮೃತ). ಈ ದಿನ ಗೋವುಗಳನ್ನು ಸ್ನಾನ ಮಾಡಿಸಿ, ಅಲಂಕಾರ ಮಾಡಿ " ಲಕ್ಷ್ಮೀರ್ಯಾ ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾ | ಘೃತಂ ವಹತಿ ಯಜ್ಞಾರ್ಥೇ ಮಮ ಪಾಪಂ ವ್ಯಪೋಹತು" ಎಂಬ ಮಂತ್ರದಿಂದ ಪೂಜಿಸಿ ಅವುಗಳಿಗೆ ತೃಪ್ತಿಯಾಗುವಷ್ಟು ಗ್ರಾಸವನ್ನು  ನೀಡಬೇಕು. ಗೋವರ್ಧನಪರ್ವತವನ್ನು "ಗೋವರ್ಧನ ಧರಾಧಾರ ಗೋಕುಲತ್ರಾಣಕಾರಣ | ಬಹುಬಾಹುಕೃತಚ್ಛಾಯ ಗವಾಂ ಕೋಟಿಪ್ರದೋ ಭವ" ಎಂಬ ಮಂತ್ರದಿಂದ ಪ್ರದಕ್ಷಿಣೆ ಮಾಡಿ ಗೋಪಾಲಕೃಷ್ಣನನ್ನು ಆರಾಧಿಸಬೇಕು. ಈ ದಿನ ಮಧ್ಯಾಹ್ನ, ಹಸುಗಳನ್ನು ರಾಸುಗಳನ್ನು ಮೈದಾನಕ್ಕೆ ಕರೆದೊಯ್ದು, ಅವುಗಳನ್ನು ಓಡಿಸಿ ಆಟವಾಡುವ ಪದ್ಧತಿಯಿದೆ. ಅಲ್ಲದೆ ರಾತ್ರಿಯಲ್ಲಿ ಅವುಗಳಿಗೆ 'ಕಿಚ್ಚಾಯಿಸಿ' ಅವುಗಳಿಗಿರುವ ದೃಷ್ಟಿದೋಷವನ್ನು ತೆಗೆಯುವ ಪದ್ಧತಿಯೂ ಇದೆ. ಈ ದಿನ ಗೋಪಾಲಕೃಷ್ಣನು ಗೋವರ್ಧನ ಪರ್ವತವನ್ನು ಕಿರುಬೆರಳಿನಿಂದ ಎತ್ತಿ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಿ ಇಂದ್ರನ ಗರ್ವಭಂಗ ಮಾಡಿದನೆಂಬ ಪುರಾಣ ಕಥೆ ಈ ಹಬ್ಬಕ್ಕಿದೆ. 

 


ದೀಪದ ವಿಶೇಷತೆ  

ನರಕ ಚತುರ್ದಶಿಯಿಂದ ಆರಂಭಿಸಿ ಕಾರ್ತಿಕಮಾಸದ ಪರ್ಯಂತ ಎಲ್ಲೆಲ್ಲೂ ದೀಪಗಳನ್ನು ಲಕ್ಶಲಕ್ಷಸಂಖ್ಯೆಯಲ್ಲಿ ಬೆಳಗಿಸುವುದು ಪದ್ಧತಿ. ದೀಪವು ಭಗವಂತನ ಪ್ರತೀಕ. ದೀಪದ ಜ್ವಾಲೆ ಭಗವಂತನ ವರ್ಣವನ್ನು ಹೋಲುತ್ತದೆ. ತಿಲತೈಲ ಅಥವಾ ತುಪ್ಪದ ದೀಪವನ್ನು ಬೆಳಗಿಸಬೇಕು. ಏಕೆಂದರೆ ಈ ದೀಪದಿಂದ ಬರುವ ಬೆಳಕು ಮಾತ್ರ ಭಗವಂತನ ಬಣ್ಣವನ್ನು ಬಹುವಾಗಿ ನೆನಪಿಸುವಂತಹದ್ದು. ವಿಷ್ಣುದೀಪೋತ್ಸವ, ಶಿವದೀಪೋತ್ಸವ, ಕಾರ್ತಿಕಸೋಮವಾರ, ಲಕ್ಷದೀಪೋತ್ಸವ, ಆಕಾಶದೀಪ ಹೀಗೆ ಪ್ರತಿನಿತ್ಯವೂ ದೀಪವನ್ನು ಆರಾಧಿಸುವ ವಿಶೇಷವಾದ ಹಬ್ಬವೇ ದೀಪಾವಳಿ. ಭಗವಂತನನ್ನು ಬೇರೆಬೇರೆ ರೂಪದಲ್ಲಿ ಆರಾಧಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ನಮ್ಮ ಭಾರತೀಯ ಮಹರ್ಷಿಗಳು ಕಂಡು ಅರುಹಿದ ಪವಿತ್ರಕಾಲ. 

 

ಅಭ್ಯಂಗದ ಮಹತ್ತ್ವ

ಕಾರ್ತಿಕ ಮಾಸದ ಪ್ರಾತಃಕಾಲದಲ್ಲಿ ಮಾಡುವ ಅಭ್ಯಂಗಸ್ನಾನ ಅತ್ಯಂತ ಶ್ರೇಷ್ಠ ಎನ್ನಲಾಗಿದೆ. ಅಥವಾ ತುಲಾಸ್ನಾನ ಎಂದೇ ಪ್ರಸಿದ್ಧವಾದ ನದಿ, ಸಮುದ್ರಗಳಲ್ಲಿ ಮಾಡುವ ಸ್ನಾನವೂ ಮಹಾಪಾತಕನಾಶಕ  ಎಂದು ಅದರ ಮಹತ್ತ್ವವನ್ನು ಸಾರಲಾಗಿದೆ. ಆಶ್ವಯುಜ ಮಾಸದ ಶುಕ್ಲಪಕ್ಷದ ಏಕಾದಶಿಯಿಂದ ಪ್ರಾರಂಭಿಸಿ ಕಾರ್ತಿಕಮಾಸದ ಪೂರ್ತಿ, ಪ್ರಾತಃಕಾಲದಲ್ಲಿ ಮಾಡುವ ಅಭ್ಯಂಗವು ವಿಶೇಷಫಲದಾಯಕವಾಗಿದೆ ಎಂದು ಭಾರ್ಗವ ವಚನವಿದೆ. ಯಾರು ಪ್ರತಿನಿತ್ಯ ಅಭ್ಯಂಗ ಅಥವಾ ತೀರ್ಥಸ್ನಾನಮಾಡುತ್ತಾರೋ ಮತ್ತು ಶಾಂತನಾಗಿ ಜಪಧ್ಯಾನಗಳಲ್ಲಿ ಮುಳುಗಿ ಯಜ್ಞಪ್ರಸಾದರೂಪವಾದ ಹವಿಷ್ಯಾನ್ನವನ್ನು ಸ್ವೀಕರಿಸುತ್ತಾರೋ ಅಂತಹವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆಂಬ ಮಾತಿದೆ. ಈ ಕಾಲದಲ್ಲಿ ಕುರುಕ್ಷೇತ್ರ, ಗಂಗಾನದೀ, ಪುಷ್ಕರ, ದ್ವಾರಾವತೀ, ಮಥುರಾ ಹೀಗೆ ಪುಣ್ಯಕ್ಷೇತ್ರಗಳಲ್ಲಿ ಮಾಡುವ ಸ್ನಾನವು ಶ್ರೇಷ್ಠ ಫಲಗಳನ್ನು ನೀಡುತ್ತದೆ ಎಂಬುದು ಹಿರಿಯರ ಅನುಭವದ ಮಾತು.

ಈ ಅಭ್ಯಂಜನಸ್ನಾನ-ವೈಜ್ಞಾನಿಕವಾಗಿದೆಯೆಂದೂ, ಆರೋಗ್ಯ ಮತ್ತು ದೀರ್ಘಾಯುಸ್ಸನ್ನು ಒದಗಿಸಿ, ಯೋಗ ಮಾರ್ಗದ ವಿಘ್ನಗಳನ್ನು ಪರಿಹಾರಮಾಡುತ್ತದೆಂಬುದೂ ಸಹ  ಮಹರ್ಷಿಗಳ ಮತ. 

 

ನರಕಚತುರ್ದಶೀ ವಿಶೇಷತೆ  

ಈ ದಿನ ಬೆಳಗಿನ ಜಾವ ಮಾಡುವ  ತಿಲತೈಲದ  ಅಭ್ಯಂಗಸ್ನಾನವು ನರಕಭೀತಿಯನ್ನು ದೂರಮಾಡುತ್ತದೆ. ತೈಲದಲ್ಲಿ ಲಕ್ಷ್ಮಿಯು, ಜಲದಲ್ಲಿ ಗಂಗೆಯು ಈ ದಿನ ವಿಶೇಷಸಾನ್ನಿಧ್ಯವನ್ನು ವಹಿಸುವುದರಿಂದ ಈ ದಿನದಲ್ಲಿ ಮಾಡುವ ಸ್ನಾನದಿಂದ ಯಮಲೋಕದ ದರ್ಶನವೂ ಉಂಟಾಗದು ಎಂದು ಪದ್ಮಪುರಾಣದಲ್ಲಿ ಉಲ್ಲೇಖವಿದೆ. ಇದಕ್ಕೊಂದು ಪುರಾಣಕಥೆಯನ್ನೂ ಹೇಳುವುದುಂಟು. ನರಕಾಸುರನು ಹದಿನಾರುಸಾವಿರ ಸ್ತ್ರೀಯರನ್ನು ಬಲಾತ್ಕಾರವಾಗಿ ತನ್ನ ಸೆರೆಮನೆಯಲ್ಲಿ ಇರಿಸಿಕೊಂಡ. ಈತನ ಉಪಟಳ ಹೆಚ್ಚಾಗಿತ್ತು. ಶ್ರೀಕೃಷ್ಣನು ಅಸುರನನ್ನು ಸಂಹಾರ ಮಾಡಿ ಬಂಧಿತರಾದ ಆ ಸ್ತ್ರೀಯರನ್ನು ಬಿಡುಗಡೆಗೊಳಿಸಿ ಅವರಲ್ಲಿ ಆತ್ಮರತಿಯನ್ನು ಉಂಟುಮಾಡುವಂತೆ ಮಾಡಿದ. ನರಕಾಸುರನ ತಾಯಿಯ ಪ್ರಾರ್ಥನೆಯನ್ನು ಒಪ್ಪಿ ಅಂದಿನಿಂದ ಈ ದಿನವನ್ನು ನರಕಚತುರ್ದಶಿಯೆಂದು ಆಚರಿಸಲಾಗುವುದು, ಭಗವಂತ, ಲೋಕಕ್ಕೆ ಅನುಗ್ರಹಿಸಿದ ಪರ್ವಕಾಲ. ಇಲ್ಲಿ ತಾತ್ತ್ವಿಕವಾದ ಅಂಶವೊಂದಿದೆ. ಶ್ರೀಶ್ರೀರಂಗಪ್ರಿಯಸ್ವಾಮಿಗಳು ತಮ್ಮ 'ಭಾರತೀಯರ ಹಬ್ಬಹರಿದಿನಗಳು' ಎಂಬ ಪುಸ್ತಕದಲ್ಲಿ ಹೀಗೆ ವಿವರಿಸಿದ್ದಾರೆ. "ಶ್ರೀಕೃಷ್ಣನು ಪ್ರತ್ಯಕ್ ಜ್ಯೋತಿ-ಒಳಗಿನ ಬೆಳಕಾದ  ಭಗವಂತ. ನರಕಾಸುರನು ಹೊರಗಿನ ಬೆಳಕಿನ-ಅಂದರೆ ಕೇವಲ ಇಂದ್ರಿಯ ಸೌಖ್ಯದ ಹಿಂದೋಡುವ  ಪ್ರಾಗ್ಜ್ಯೋತಿಷಪುರದ ರಾಜ. ಹದಿನಾರುಸಾವಿರ ನಾರಿ ಅಂದರೆ ಹದಿನಾರುಸಾವಿರ ನಾಡಿಗಳು. ಪ್ರಣವಪಕ್ಷಿಯಾದ ಗರುಡನನ್ನು ಏರಿ ವಿಷ್ಣುವು ಪಂಚಭೂತಾತ್ಮಕವಾದ ಆಸುರೀ ಶಕ್ತಿಯನ್ನು ಸಂಹರಿಸಿದ. ಹದಿನಾರುಸಾವಿರ ನಾಡಿಗಳಲ್ಲಿ ತನ್ನ ಶಕ್ತಿಯನ್ನು ಹರಿಸಿ ಆ ಜೀವವನ್ನು ಉದ್ಧರಿಸಿದನೆಂಬುದು ಜ್ಞಾನಿಗಳು ಈ ಪ್ರಸಂಗಕ್ಕೆ  ನೀಡುವ ತಾತ್ತ್ವಿಕ ಹಿನ್ನೆಲೆ. 

 

ಲಕ್ಷ್ಮೀಪೂಜೆಯ ವಿಶೇಷತೆ

ಆಶ್ವಯುಜಮಾಸದ ಅಮಾಮಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ. ನಮ್ಮೊಳಗೇ ಬೆಳಗುತ್ತಿರುವ  ಮಹಾಲಕ್ಷ್ಮೀಯನ್ನು ವಿಗ್ರಹದಲ್ಲೋ, ಕಲಶದಲ್ಲೋ ಆವಾಹನೆಮಾಡಿ ಪೂಜಿಸಬೇಕು. ಲಕ್ಷ್ಮೀಪೂಜೆಗೆ ಪ್ರದೋಷ, ಅತ್ಯಂತಶ್ರೇಷ್ಠವಾದ ಕಾಲ. ಪ್ರದೋಷಕಾಲದಿಂದ ಆರಂಭಿಸಿ ಅರ್ಧರಾತ್ರಿಯವರೆಗೂ ಪೂಜೆ. ಈ ದಿನ ವರ್ತಕರಿಗೆ -ವ್ಯಾಪಾರಿಗಳಿಗೆ ಸಂಜೆ ಮಾಡುವ ಲಕ್ಷ್ಮೀಪೂಜೆ, ಹೊಸ ಆರ್ಥಿಕ ವರ್ಷದ ನಾಂದಿ. ಧನಕ್ಕೆ ಒಡೆಯನಾದ ಕುಬೇರನನ್ನೂ ಅರ್ಚಿಸುವ ವಾಡಿಕೆಯುಂಟು. ಸಾಯಂಕಾಲ ಅಂಗಡಿಯಲ್ಲಿ ತಾವು ಸಂಪಾದಿಸಿದ ಧನವನ್ನೇ ಲಕ್ಷ್ಮಿಯೆಂದು ಭಾವಿಸಿ ಅದು ಇನ್ನಷ್ಟು ವೃದ್ಧಿಯಾಗಲೆಂದು ಸಂಕಲ್ಪಮಾಡಿ, ಪೂಜಿಸಿ ಬಂಧುಬಾಂಧವರು ಇಷ್ಟಮಿತ್ರರಿಗೆ ಸಿಹಿ ವಿತರಿಸಿ ಸಂಭ್ರಮಿಸುತ್ತಾರೆ.  


ಬಲಿಪಾಡ್ಯಮೀ - ವಿಶೇಷಪೂಜೆ 

ಕಾರ್ತಿಕ ಮಾಸದ ಮೊದಲ ದಿನವೇ ಬಲಿಪಾಡ್ಯಮೀ. ಈ ದಿನ ಬಲಿಗೆ ವಿಶೇಷಪೂಜೆ ಸಲ್ಲುತ್ತದೆ.  ಐದು ಬಗೆಯ ಬಣ್ಣಗಳಿಂದ ಬಲಿಯನ್ನು ಭೂಮಿಯ ಮೇಲೆ ಚಿತ್ರಿಸಿ, ಮನೆಯೊಳಗೆ ಬಲಿಯನ್ನು ಕಲಶದಲ್ಲಿ ಆವಾಹಿಸಿ ಅರ್ಚಿಸಬೇಕು. ಸಾಮಾನ್ಯರು ಮಂಚದ ಮೇಲೆ ಬಿಳಿಯ ಅಕ್ಕಿಯಲ್ಲಿ  ಬಲಿಯನ್ನು ಆವಾಹಿಸಿ ಫಲ ಪುಷ್ಪಗಳಿಂದ ಅರ್ಚಿಸಬೇಕು. "ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ | ಇಂದ್ರಶರೋಽಮರಾರಾತೇ ವಿಷ್ಣುಸಾನ್ನಿಧ್ಯದೋ ಭವ" ಎಂಬ ಮಂತ್ರದಿಂದ ಪೂಜಿಸಬೇಕು. ಬಲಿಮಹಾರಾಜನು ದಾನಕ್ಕೆ ಪ್ರಸಿದ್ಧನು. ಈ ದಿನ ಮಾಡುವ ದಾನಕ್ಕೆ ವಿಶೇಷಫಲ. ಅಮಾಯುಕ್ತವಾದ ಪಾಡ್ಯದಂದು ಉಪವಾಸವಿದ್ದು ಬಲಿಯನ್ನು ಪೂಜಿಸಿ ಗೋವನ್ನು ಯಾರು ಪೂಜಿಸುತ್ತಾರೋ ಅಂತಹವರು ಅಭಿವೃದ್ಧಿಯನ್ನು ಹೊಂದುವರು ಎಂಬುದು ಶಾಸ್ತ್ರ ವಚನ. 

 

ಈ ಉತ್ಸವಕ್ಕೆ ಒಂದು ಪುರಾಣ ಮತ್ತು ತಾತ್ತ್ವಿಕವಾದ ಹಿನ್ನೆಲೆಯಿದೆ. ವಿಷ್ಣುವು ವಾಮನನ ರೂಪದಲ್ಲಿ ಅವತರಿಸಿ ಇಂದ್ರನ ರಾಜ್ಯವನ್ನು ಅಪಹರಿಸಿ ಅಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ ಬಲಿಯ ದರ್ಪವನ್ನು ಅಡಗಿಸಿ ಪಾತಾಲಲೋಕಕ್ಕೆ ತಳ್ಳಿ ಇಂದ್ರನ ರಾಜ್ಯವನ್ನು ಮರಳಿಸಿದ ಎಂಬುದು ಪುರಾಣಕಥೆ. ಬಲಿಯ ತಲೆಯ ಮೇಲೆ ತನ್ನ ದಿವ್ಯಪಾದವನ್ನು ಇಟ್ಟು, ಬಲಿಯಲ್ಲಿದ್ದ ಆಸುರಭಾವವನ್ನು ದೂರಮಾಡಿದ ಭಗವಂತ. ಅವನನ್ನು ಪುನೀತನನ್ನಾಗಿ ಮಾಡಿ ಉದ್ಧರಿಸಿದ ವಿಧಾನವಿದು. ಇದರಿಂದ  ಬಲಿಯು ಚಿರಂಜೀವಿ ಪದವಿಯನ್ನು ಪಡೆದ. ಅದು ಭಗವಂತನ ಅನುಗ್ರಹವೆಂದು ತಿಳಿದ ಪರಮಭಾಗವತನೀತ. ಹಾಗಾಗಿ ಭಾಗವತರ ಪೂಜೆಗೆ  ಭಗವಂತನನ್ನು ಪೂಜಿಸಿದಷ್ಟೇ ಫಲ.

 

ಪಗಡೆಯಾಟ ಯಾಕೆ ?

ಈ ದಿನ ಬೆಳಗ್ಗೆ, ಪಗಡೆಯಾಟವನ್ನು ಆಡುವ ರೂಢಿಯಿದೆ. ಪಾರ್ವತೀಪರಮೇಶ್ವರರು ಸೃಷ್ಟಿಯ ವಿನೋದಕ್ಕಾಗಿ ಪಗಡೆಯಾಡಿದರೆಂಬ ಪುರಾಣಕಥೆಯ ಹಿನ್ನೆಲೆಯಲ್ಲಿ ಪಗಡೆಯಾಟ ಬಂದಿದೆ. ಈ ಪಗಡೆಯಾಟದಲ್ಲಿ ತಾತ್ತ್ವಿಕವಾದ ಆಶಯವೂ ಅಡಗಿದೆ ಎಂಬುದಾಗಿ ಶ್ರೀಶ್ರೀರಂಗಪ್ರಿಯಸ್ವಾಮಿಗಳು ಹೀಗೆ ವಿವರಿಸಿದ್ದರು- "ಇದು ಸೃಷ್ಟಿಯಲ್ಲಿ ಬರುವ ತ್ರಿಗುಣಗಳ ಆಟ. ಜೀವಿಗಳು ಇಲ್ಲಿ ಪಗಡೆಕಾಯಿಗಳು. ಪುಣ್ಯಪಾಪರೂಪವಾದ ಜೀವಿಗಳ ಕರ್ಮಗಳು ದಾಳ. ಕೆಲವು ಕಾಯಿಗಳು ಹೊಡೆಯಲ್ಪಡುತ್ತವೆ. ಇನ್ನು ಕೆಲವು ಕಾಯಿಗಳು ಹಣ್ಣಾಗುತ್ತವೆ. ಹೊಡೆಯಲ್ಪಡುವ ಕಾಯಿಗಳು (ಜೀವಿಗಳು) ತಮ್ಮ ಕರ್ಮಾನುಗುಣವಾಗಿ ಪುನರ್ಜನ್ಮವನ್ನು ಪಡೆಯುತ್ತವೆ. ಹಣ್ಣಾದ ಕಾಯಿಗಳು ಮೋಕ್ಷವನ್ನು ಪಡೆಯುತ್ತವೆ. ಕೊನೆಗೊಮ್ಮೆ ಎಲ್ಲಾ ಕಾಯಿಗಳೂ ಹಣ್ಣಾಗುವಂತೆ ಎಲ್ಲಾ ಜೀವಿಗಳೂ ಮೋಕ್ಷವನ್ನು ಪಡೆಯಬೇಕು" ಎಂದು. ಇಂತಹ ಜಗನ್ಮಾತಾಪಿತೃಗಳನ್ನು ಸ್ಮರಿಸಿಕೊಂಡು ಆಡುವ ಆಟವಿದು.

 

ಭಗಿನೀದ್ವಿತೀಯಾ/ ಯಮದ್ವಿತೀಯಾ

ಕಾರ್ತಿಕಶುಕ್ಲಪಕ್ಷದ ಎರಡನೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಯಮನು ತನ್ನ ಸೋದರಿ ಯಮುನೆಯ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದನೆಂಬ ನಂಬಿಕೆಯಿದೆ. ಇದನ್ನೇ ಹಿನ್ನೆಲೆಯಾಗಿಸಿಕೊಂಡು ಅಂದು ಸೋದರಿಯರ ಮನೆಗೆ ಹೋಗಿ ಅವಳಿಂದ ಭೋಜನ ಸ್ವೀಕರಿಸಬೇಕು. ಮತ್ತು ಸೋದರಿಗೆ ಉಡುಗೊರೆ ಕೊಟ್ಟು ಗೌರವಿಸುವ ಪದ್ಧತಿಯಿದೆ. ಯಾವ ನಾರಿಯು ಈ ದಿನ ಅಣ್ಣನನ್ನು ಫಲತಾಂಬೂಲಾದಿಗಳಿಂದ ಸತ್ಕರಿಸುವಳೋ, ಅವಳು ವೈಧವ್ಯವನ್ನು ಹೊಂದಲಾರಳು ಎಂಬ ಶಾಸ್ತ್ರವಚನವಿದೆ. ಈ ಎಲ್ಲಾ ಕಾರಣದಿಂದ ಈ ದಿನಕ್ಕೆ ಅಷ್ಟೊಂದು ವಿಶೇಷತೆ.

 

ಉಪಸಂಹಾರ 

ಅನೇಕ ಮಹತ್ತ್ವಗಳಿಂದ ಕೂಡಿರುವ ಭಾರತೀಯ ಹಬ್ಬಗಳ ರಾಜ ದೀಪಾವಳಿ. "ಜೀವನವೃಕ್ಷಕ್ಕೆ ಮೂಲವುಂಟು. ಆ ಮೂಲವೇ ವಿದ್ಯಾಮೂಲವಾದ ಶರೀರವನ್ನು ಹೊಂದಿರುವ ಆ ಜ್ಯೋತಿಯಾಗಿದೆಯಪ್ಪ" ಎಂಬ ಶ್ರೀರಂಗ ಮಾಹಾಗುರುಗಳ ಮಾತು ಸ್ಮರಣೀಯವಾಗಿದೆ. ಯೋಗ-ಭೋಗಗಳ ಸಮನ್ವಯವಾಗಿರುವ ಈ ಬೆಳಕಿನ ಹಬ್ಬದ ಪರಿಪೂರ್ಣ ಪ್ರಯೋಜನವನ್ನು ಪಡೆಯೋಣ. ನಮ್ಮ ಭಾರತೀಯ ಮಹರ್ಷಿಗಳು ಕಂಡರುಹಿದ ಸತ್ಯವನ್ನು ನಾವೂ ಸಹ ಅನುಭವಿಸುವಂತಾಗಲೆಂದು ಆಶಿಸೋಣ.


ಸೂಚನೆ:  ಈ ಲೇಖನ ವಿಜಯವಾಣಿಯ 2022 ನೇ ವರ್ಷದ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ. 

Thursday, October 20, 2022

ஶ்ரீகுருவின் கண்ணோட்டம் - 30 திறந்த மனம் இருக்கட்டும் (Tiranda manam irukkattum)


மூலம்: . சாயாபதி

தமிழாக்கம்: வனஜா

மின்னஞ்சல் : (lekhana@ayvm.in)



  இறைவன் இல்லை என்பவன் நாத்திகன். எதற்காக அவ்வாறு கூறுகிறான்? அவனுடைய  அறிவிற்கு புலப்படாமையால் அவ்வாறு கூறுகிறான்.  "அறிவிற்கு புலப்படாத ஒன்றை உள்ளது என்று நம்புவது எவ்வாறு? அவ்வாறு நம்புவதால்தான் என்ன பயன்? புரியாததை உண்மை என்று நம்பி  குழம்புவதைவிடவும்  அறிவிற்கு எட்டியதை மகிழ்ச்சியாக அனுபவிப்போம்."  "உலகில் இன்பம் தரும் கணக்கற்ற பொருட்கள் நிறைந்துள்ளன. அவற்றை அனுபவிக்கும் திறனும் நமக்கு உண்டு. ஆகவே சிந்தனை ஏன்? கடன்வாங்கு, நெய் உண். புதரில் உள்ள இரண்டு பறவைகளைக் காட்டிலும் கையில் உள்ள ஒரு பறவை உயர்ந்ததல்லவா? அறியாத ஒன்றிற்காக ஏங்கி தவித்து அறிந்ததையும்  கைவிட்டால் வாழ்வு வீணாகுமன்றோ?  எனவே நாளைக்காக இன்றைய நாளை வீணாக்க வேண்டாம்."


      இத்தகைய விவாதம் யாரைத்தான் மகிழ்விக்காது? கண்ணிற்கு காண்பதை நம்பி கொண்டாடுவதில் என்ன தவறு? உலக விஷயங்களில் நம் அறிவிற்கு தாமாகவே எட்டும் பாகம் எத்துணை? ஆராய்ந்து அறிய வேண்டியவை  எத்துணை? என ஆராயும்போது ஆய்வினால் அறிவிற்கு எட்டுபவையே  அதிகம் என்பதை அறிவியல் தெளிவாக எடுத்துரைக்கின்றது. இவ்வாறிருக்கையில்  "காண்பது  மட்டுமே உண்மை, காணாதது  இல்லவே இல்லை என்னும் மனநிலை ஆராயும்இயல்பையே தடைசெய்யுமல்லவா? அறிவிற்கு எட்டாத உண்மை வெளிப்படும் போதும் அதனை ஏற்காத எதிர்ப்பு மனப்பான்மை உண்டாகுமல்லவா? இது மனித குலத்திற்கு உரிய இயல்பான மகிழ்ச்சியையும்,, இயற்கையில் மறைந்துள்ள  உண்மைகளை ஆய்ந்தறிவதையும்  தடுக்கும்  செயலல்லவா? எனவே அறிந்ததை மட்டுமே நம்புகிறேன், அவ்வளவிலேயே மகிழ்ச்சி அடைகிறேன் என்பது புதிய பார்வையின் வாயிலை  அடைக்கின்றதல்லவா! இத்தகு மனநிலை சரியன்று.


அவ்வாறின்றி 'அறிந்ததை நம்புவோம், ஆராய்ந்து உணர்ந்ததை மட்டும் வரவேற்போம். திறந்தமனம் இருக்கட்டும். அறிவிற்கு புலப்படாதவைபற்றிய ஐயங்களை வைத்துக்கொள்வோம். அறிந்தபோது ஒப்புக்கொள்வோம்' - என்னும் எண்ணத்தினால் கேடில்லை. உண்மையை அறிய சரியான பாதையில்  முயலும்போது  உண்மை தன் நிலையை தானே வெளிப்படுத்தும். அத்தகைய உண்மையை ஏற்கதயாராகி, ஐயங்களை  போக்கிக்கொள்ளும்  நாத்திகத்தால் தீதில்லை. அதைவிடுத்து புத்தியில்  எதிர்ப்பு தன்மையே இருப்பின்  அங்கு புதிய வளர்ச்சிக்கு இடமில்லை.



Sunday, October 16, 2022

ಯಕ್ಷಪ್ರಶ್ನೆ - 8 (Yaksha Prashne - 8)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ- ೭. ಯಾವುದರಿಂದ 'ದ್ವಿತೀಯವಾನ್ ' ಎನಿಸಿಕೊಳ್ಳುತ್ತಾನೆ ?  

ಉತ್ತರ - ಧೃತಿಯಿಂದ 

ಈ ಪ್ರಶ್ನೋತ್ತರದಲ್ಲಿ ಎರಡು ವಿಷಯಗಳಿವೆ. ದ್ವಿತೀಯವಾನ್ ಎಂದರೇನು? ದ್ವಿತೀಯವಾನ್ ಆಗಲು ಧೃತಿ  ಯಾವ ರೀತಿ ಸಾಧನವಾಗುವುದು? ಎಂಬುದು. ಸುಖ ಉಳ್ಳವನು ಸುಖವಾನ್, ಧನ ಉಳ್ಳವನು ಧನವಾನ್ ಎಂಬಂತೆ ದ್ವಿತೀಯ ಉಳ್ಳವನು ದ್ವಿತೀಯವಾನ್. ದ್ವಿತೀಯ ಎಂದರೆ ಎರಡನೆಯದು. ಅಂದರೆ ಪರಮಾತ್ಮನ ಇನ್ನಿಂದು ರೂಪವೇ ಜೀವ. ಅದೇ ದ್ವಿತೀಯವಾದುದು. ಸೃಷ್ಟಿಯಲ್ಲಿ ಪ್ರಧಾನವಾಗಿ ದೇವ ಮತ್ತು ಜೀವ ಎಂಬ ಎರಡು ತತ್ತ್ವಗಳಿವೆ. ದೇವನಿಂದ ಬೇರ್ಪಟ್ಟಾಗ ಜೀವಭಾವ ಬರುತ್ತದೆ. ಜೀವಭಾವ ಶಾಶ್ವತವಲ್ಲ. ಜೀವಭಾವ ಕಳೆದು ಪುನಃ ದೇವಭಾವವನ್ನು ತಳೆಯಲೇಬೇಕು. ಜೀವಭಾವವೇ ಎರಡನೆಯ ರೂಪ. ಬಂದ ಜೀವಭಾವವು ಕಳೆಯಲು ಬೇಕಾದ ಸಾಧನವೇ ಧೃತಿ.


ಧೃತಿ ಎಂದರೆ ಧೈರ್ಯ ಧಾರಣಾ, ಸುಖ, ತುಷ್ಟಿ ಎಂಬೆಲ್ಲಾ ಅರ್ಥಗಳಿವೆ. ಈ ಎಲ್ಲಾ ಅರ್ಥಗಳನ್ನು ಸ್ವೀಕರಿಸಿದರೂ ಜೀವನು ಪ್ರಮಾತ್ಮನ ರೂಪವಾಗಿ ಗುರುತಿಸಿಕೊಳ್ಳಲು ಯಾವುದೇ ಅಭ್ಯಂತರವೂ ಕಾಣದು. ಆದರೆ ಎಲ್ಲಕಿಂತ ಉತ್ತಮವಾಗಿ ಇಲ್ಲಿ ಹೊಂದಿಕೊಳ್ಳುವ ಅರ್ಥವೆಂದರೆ ಧೈರ್ಯ. ಧೈರ್ಯವಿದ್ದರೆ ಮಾತ್ರ ಯಾವುದನ್ನೂ ಜೀವನದಲ್ಲಿ ಸಾಧಿಸಲು ಸಾಧ್ಯ. ಸಾಧನೆಯನ್ನು ಮಾಡುವಾಗ ಮಧ್ಯೆ ಅನೇಕ ಕಷ್ಟಗಳು ಬರಬಹುದು. ಅವುಗಳನ್ನು ಎಲ್ಲವನ್ನೂ ಮೇಟ್ಟಿ ತನ್ನ ಅಚಲವಾದ ಗುರಿಯನ್ನು ಮುಟ್ಟಲು ಧೈರ್ಯ ಮಾತ್ರ ಸಾಧವಾಗುವುದು ಧೀರ್ಧೈರ್ಯಾತ್ಮಾದಿ ವಿಜ್ಞಾನಂ ಮನೋದೋಷ- ಔಷಧಮ್ ಪರಂ' - ಧೈರ್ಯವು ಎಲ್ಲಾ ದೋಷಗಳನ್ನು ಕಳೆಯುವ ದಿವ್ಯವಾದ ಔಷಧ. ಧೈರ್ಯವು ಬುದ್ಧಿಯ ಗುಣ. ಅಚಲವಾದ  ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ತನ್ನ ಸ್ತಿಮಿತವನ್ನು ಕೆಡಿಸಿಕೊಳ್ಳದಿರುವಿಕೆ. ಸರಿಯಾದುದು ಯಾವುದು? ತಪ್ಪಾದುದು ಯಾವುದು? ಎಂಬ ಬಗೆಗಿನ ವಿವೇಕವೇ ಅದು. ಇಂತಹ ಬುದ್ಧಿಯು  ಉದ್ದೇಶವನ್ನು ಸುಲಭದಲ್ಲಿ ಪಡೆಯಬಲ್ಲ ಸಾಧನವಾಗಿದೆ. ಕಾಲದ  ವಿಳಂಬಕ್ಕೂ ಅಲ್ಲಿ ಅವಕಾಶವಿರುವುದಿಲ್ಲ. ಪ್ರತಿಯೊಬ್ಬ ಮಾನವನ ಉದ್ದೇಶವಿಷ್ಟೇ 'ಭಗಂತನಲ್ಲೆ ಸೇರಬೇಕಾದವನು' ಎಂಬ ಅರಿವು. ಈ ಅರಿವು ಯಾವಾಗ ಬರುವುದೋ ಆಗ ಆತ ಎರಡನೆಯ   (ದ್ವಿತೀಯವಾನ್) ಅಂದರೆ ಪರಮಾತ್ಮನ ಸ್ವರೂಪದ ಅನುಸಂಧಾನಕ್ಕೆ ಬೇಕಾದ ಎಲ್ಲ ಬಗೆಯ ಸಿದ್ಧತೆ ಅವನಲ್ಲಿ ಆದಂತೆಯೇ. ಆದರೆ 'ಇದು ಅಷ್ಟು ಸುಲಭಸಾಧ್ಯವಲ್ಲ, ಅದು ದುರ್ಗಮವಾದ ಮಾರ್ಗ, ಕತ್ತಿ ಅಲಗು ಎಂಬುದು ನಮ್ಮ ಹಿರಿಯರ ಮಾತು.


ಭಗವದ್ಗೀತೆಯಲ್ಲಿ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಮೂರು ಬಗೆಯ ಧೃತಿಯನ್ನು ಶ್ರೀಕೃಷ್ಣನು ಹೇಳುತ್ತಾನೆ. ಯೋಗದ ಅಭ್ಯಾಸದಿಂದ ಪ್ರಾಣ, ಇಂದ್ರಿಯ ಮತ್ತು ಮನಸ್ಸುಗಳನ್ನು ಸಂಯಮ ಮಾಡುವುದು ಸಾತ್ತ್ವಿಕವಾದರೆ, ಧರ್ಮಾರ್ಥ ಕಾಮಗಳನ್ನು ಫಲಾಪೇಕ್ಷೆಯಿಂದ ಸಾಧನೆ ಮಾಡುವುದು ರಾಜಸಿಕವಾದರೆ, ಯಾವುದರಿಂದ ಸ್ವಪ್ನ, ಭಯ, ಶೋಕ, ವಿಷಾದ, ಮದಗಳನ್ನು ಬಿಡುವುದಿಲ್ಲವೋ ಅಂತಹ ಧೈರ್ಯವು ತಾಮಸಿಕವೆಂದು ಹೇಳಲ್ಪಟ್ಟಿದೆ. ಸಾತ್ತ್ವಿಕ ಧೃತಿಯಿಂದ ಜೀವದ ಉನ್ನತಿ, ಉಳಿದ ಧೃತಿಯಿಂದ ಜೀವದ ಅಧೋಗತಿಯೇ ನಿಶ್ಚಿತವಾಗಿ ಆಗುತ್ತದೆ. ಉತ್ತಮ ಧೃತಿಯಿಂದ ಮಾತ್ರವೇ ಜೀವನು ತನ್ನ ತನವನ್ನು ಅರಿಯಬಲ್ಲ. ಆಗ ತಾನೇ ಆತ ಪರಮಾತ್ಮನ ರೂಪವೆಂದು ಭಾವಿಸಲು ಸಾಧ್ಯವಾಗುವುದು.   


ಸೂಚನೆ : 16/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ -8 ಉಗ್ರಹಿಡಿಂಬ - ವ್ಯಗ್ರಹಿಡಿಂಬೆ (Vyaasa Vikshita-8 Ugra Hidimba - Vyagra Hidimbe)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಪಾಂಡವರು ಮಲಗಿರಲು, ಅನತಿದೂರದಲ್ಲಿ ಶಾಲವೃಕ್ಷವನ್ನಾಶ್ರಯಿಸಿದ್ದ ಹಿಡಿಂಬನೆಂಬ ನರಭಕ್ಷಕರಾಕ್ಷಸನಿದ್ದ. ಆತ ಕ್ರೂರಿ, ಪರಾಕ್ರಮಿ; ಕೆಂಗಣ್ಣ, ಅಚ್ಚುಗಪ್ಪಿನ ಭೀಕರರೂಪಿ; ಕೆಂಪನೆಯ ಕೇಶ-ಮೀಶೆಗಳುಳ್ಳವ. ತುಂಬ ಹಸಿದಿದ್ದ ಆತ ಅಕಸ್ಮಾತ್ತಾಗಿ ಪಾಂಡವರನ್ನು ಕಂಡ. ತನ್ನ ಒರಟಾದ ಕೂದಲುಗಳನ್ನು ಕೊಡವಿಕೊಳ್ಳುತ್ತಾ ವಿಕಾರವಾಗಿ ಆಕಳಿಸುತ್ತಾ ಪಾಂಡವರತ್ತ ದಿಟ್ಟಿಸಿನೋಡುತ್ತಾ ತಂಗಿ ಹಿಡಿಂಬೆಗೆ ಹೇಳಿದ.


"ಅದೆಷ್ಟು ಕಾಲವಾಗಿತ್ತೋ, ಇಂದೊದಗಿದೆ ನನಗಿಷ್ಟವಾದ ಭಕ್ಷ್ಯ. ಬಾಯಿ ನೀರೊಡೆಯುತ್ತಿದೆ. ನನ್ನೆಂಟು ಕೋರೆಹಲ್ಲುಗಳನ್ನು ರಸರಸವಾದ ಇವರ ಮೈಗಳೊಳಗೆ ಊರಿಸುವೆ; ಇವರ ಕತ್ತಿಗೆ ಬಾಯಿಹಾಕಿ ನೊರೆನೊರೆಯಾದ ನವರಕ್ತ ಬಿಸಿರಕ್ತಗಳನ್ನು ಕುಡಿಯುವೆ. ಹೋಗಿ ನೋಡು ಯಾರಿಲ್ಲಿ ಮಲಗಿರುವವರೆಂದು. ನರವಾಸನೆ ಬಡಿಯುತ್ತಿದೆ. ಎಲ್ಲರನ್ನೂ ಕೊಂದಿಲ್ಲಿಗೆ ತಾ, ಇಬ್ಬರೂ ಕೂಡಿ ತಿನ್ನೋಣ, ತಾಳ ಹಾಕಿ ಕುಣಿಯೋಣ."


ಲಗುಬಗೆಯಿಂದ ನಡೆದ ಹಿಡಿಂಬೆ ಪೃಥೆಯೊಂದಿಗಿದ್ದ ಪಾಂಡವರನ್ನು ಕಂಡಳು. ಭೀಮನೊಬ್ಬ ಎಚ್ಚರವಾಗಿದ್ದ; ರೂಪದಲ್ಲಿ ಸಾಟಿಯಿಲ್ಲದ ಆತನನ್ನು ಕಾಣುತ್ತಲೇ ಮೋಹಗೊಂಡಳು. ಆತನ ತೋಳುಗಳೇನು, ಕಣ್ಗಳೇನು, ಕಾಂತಿಯೇನು! "ನನಗೀತನೇ ತಕ್ಕ ಗಂಡ; ನನ್ನಣ್ಣನ ಕ್ರೂರವಚನಕ್ಕೆ ನಾ ಬೆಲೆಗೊಡುವುದಿಲ್ಲ. ಗಂಡನೊಂದಿಗಿನ ಅಂಟಿಗಿಂತ ಅಣ್ಣನೊಂದಿಗಿನ ನಂಟು ಹೆಚ್ಚೇ? (ಪತಿಸ್ನೇಹೋಽತಿಬಲವಾನ್, ನ ತಥಾ ಭ್ರಾತೃಸೌಹೃದಮ್). ಇವರನ್ನು ಕೊಂದರೆ ನನಗೂ ಅಣ್ಣನಿಗೂ ಸಿಗಬಹುದಾದ ಸುಖ ಕ್ಷಣಿಕ. ಕೊಲ್ಲದಿದ್ದರೆ ಎಂದೆಂದಿಗೂ ನಾನವನೊಂದಿಗೆ ಆನಂದವಾಗಿರಬಹುದು" ಎಂದುಕೊಂಡಳು. ಎಷ್ಟಾದರೂ ಕಾಮರೂಪಿಣಿ: ಮನಬಂದಂತ ರೂಪ ತಾಳಬಲ್ಲಳು. ಸುಂದರಮನುಷ್ಯಸ್ತ್ರೀರೂಪವನ್ನು ತಳೆದವಳೇ, ಭೀಮನ ಬಳಿ ಸಾರಿ ಮುಗುಳ್ನಗೆಯೊಂದಿಗೆ ಕೇಳಿದಳು:


"ನೀನಾರು ಪುಂಗವ? ಎಲ್ಲಿಂದ ಬಂದಿರುವೆ? ದೇವತೆಗಳಂತಿರುವ ಇವರಾರು? ಈಕೆ ಯಾರು? ಈ ಕಾಡು ಗಹನವಾದದ್ದು, ಇಲ್ಲಿ ಹಿಡಿಂಬನೆಂಬ ದುಷ್ಟರಾಕ್ಷಸನಿರುವನು. ನನ್ನಣ್ಣನಾದ ಅವನೇ ನನ್ನನ್ನಿಲ್ಲಿಗೆ ಕಳುಹಿಸಿರುವುದು. ನಿಮ್ಮ ಮಾಂಸ ತಿನ್ನಲು ಹಪಹಪಿಸುತ್ತಿದ್ದಾನೆ! ಆದರೆ ದೇವತೆಯಂತಿರುವ ನಿನ್ನನ್ನು ಕಂಡೆನಲ್ಲಾ!; ಬೇರೆ ಗಂಡನನ್ನು ಬಯಸೆ. ಕಾಮಾರ್ತೆಯಾದ ನನ್ನನ್ನು ಸೇವಿಸು. ಆ ನರಭಕ್ಷಕನ ದೆಸೆಯಿಂದ ನಿನ್ನನ್ನು ಕಾಪಾಡುವೆ. ನಿನ್ನ ಬಿಟ್ಟಿರಲಾರೆ. ನನಗೆ ಕಾಮಚಾರವುಂಟು: ಎಲ್ಲೆಂದರಲ್ಲಿ, ಅಂತರಿಕ್ಷದಲ್ಲಿ ಸಹ, ಸಂಚರಿಸಬಲ್ಲೆ! ಎಣೆಯಿಲ್ಲದಷ್ಟು ಸುಖಪಡುವೆಯಂತೆ, ಬಾ ನನ್ನೊಂದಿಗೆ" ಎಂದಳು.


ಅದಕ್ಕೆ ಭೀಮನು, "ಸುಖಸುಪ್ತರಾದ ತಾಯಿಯನ್ನೂ ಅಣ್ಣನನ್ನೂ ಬಿಟ್ಟು ಬರುವುದುಂಟೆ? ಎಲ್ಲರನ್ನೂ ರಾಕ್ಷಸನಿಗೆ ತುತ್ತಾಗಿಸಿ, ಕಾಮಾರ್ತನಂತೆ ನಾ ಹೊರಟೇನೇ?" ಎಂದನು. "ಎಲ್ಲರನ್ನೂ ಎಬ್ಬಿಸು: ರಾಕ್ಷಸನ ದೆಸೆಯಿಂದ ಬಿಡಿಸುವೆ" ಎಂದವಳೆಂದಳು. ಅದಕ್ಕೆ ಸೊಪ್ಪುಹಾಕದೆ ಭೀಮನೆಂದ: " ದುರಾತ್ಮನಾದ ನಿನ್ನಣ್ಣನಿಗೆ ಹೆದರಿ ಇವರುಗಳನ್ನು ಎಬ್ಬಿಸಲಾರೆ. ಮನುಷ್ಯರೂ ಯಕ್ಷ-ರಾಕ್ಷಸ-ಗಂಧರ್ವರೂ ನನ್ನ ಪರಾಕ್ರಮವನ್ನು ಎದುರಿಸಲಾರರು! ಇದ್ದರಿರು; ಹೋದರೆ ಹೋಗು; ನರಭಕ್ಷಕನಾದ ನಿನ್ನಣ್ಣನನ್ನೇ ಕಳಿಸಿಲ್ಲಿಗೆ!"


ಹೊತ್ತಾದರೂ ಹಿಡಿಂಬೆ ಹಿಂತಿರುಗಲಿಲ್ಲವೆಂದು ಹಿಡಿಂಬನೇ ಅಲ್ಲಿಗೆ ಬಂದನು: ಕೆಂಪಾದ ಕಣ್ಣು, ಕೆದರಿದ ಕೇಶ, ಮೋಡದಂತಿರುವ ಮೈ, ಚೂಪು ಹಲ್ಲು - ಇವುಗಳಿಂದ ಕೂಡಿದ ಭಾರೀ ತೋಳಿನ ಆಸಾಮಿ!

ಹಿಡಿಂಬೆಯೋ ನಡುಗಿಹೋದಳು! "ಬಂದನೀ ನರಭಕ್ಷಕ! ಆಕಾಶಮಾರ್ಗದಲ್ಲಿ ನಿಮ್ಮೆಲ್ಲರನ್ನೂ ಒಯ್ದುಬಿಡುವೆ, ಬನ್ನಿ: ರಾಕ್ಷಸಬಲವುಂಟೆನಗೆ!" ಎಂದು ಭೀಮನಿಗೆ ಹೇಳಿದಳು.


ಬೆಚ್ಚಿಸುವ ಬಿರುನುಡಿಗಳಿಗೆ ಬಲಭೀಮನೇನು ಬೆದರಿಬಿಡತಕ್ಕವನೇ?


ಸೂಚನೆ : 16/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, October 9, 2022

ಯಕ್ಷಪ್ರಶ್ನೆ - 7 (Yaksha Prashne - 7)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ- ೬. ಯಾವುದರಿಂದ 'ಮಹತ್' ನ್ನು ಪಡೆದುಕೊಳ್ಳುತ್ತಾನೆ ?  

ಉತ್ತರ - ತಪಸ್ಸಿನಿಂದ 


ಇಲ್ಲಿ ಯುಧಿಷ್ಠಿರನಿಗೆ ಯಕ್ಷನು ಕೇಳುವ ಪ್ರಶ್ನೆ ಇದು. 'ಮಹತ್' ಎಂಬ ಪದವಿ ಅಥವಾ ಸ್ಥಾನವನ್ನು ಹೇಗೆ ಪಡೆದುಕೊಳ್ಳುತ್ತಾನೆ? ಎಂದು ಅದಕ್ಕೆ ಉತ್ತರ- ತಪಸ್ಸಿನಿಂದ ಎಂಬುದು. 

ಹಾಗಾದರೆ ತಪಸ್ಸು ಎಂದರೇನು? ಅದರಿಂದ ಯಾವ ರೀತಿ ಮಹತ್ತನ್ನು ಪಡೆಯಲು ಸಾಧ್ಯ? ಇದಕ್ಕೂ ಮುಂಚೆ 'ಮಹತ್' ಎಂಬುದರ ಸ್ವರೂಪವೇನು ? ಅದು ಎಲ್ಲಿ ಇರುವಂತಹದ್ದು? ಇತ್ಯಾದಿ ಪ್ರಶ್ನೆಗಳು ಮೂಲ ಪ್ರಶ್ನೆಯ ಜೊತೆಜೊತೆ ಹುಟ್ಟಿಕೊಳ್ಳುತ್ತವೆ. ಸಾಂಖ್ಯ ಎಂಬುದು ಒಂದು ಶಾಸ್ತ್ರ. ಇದು ಸಮಸ್ತವಿಶ್ವವನ್ನು ತತ್ತ್ವಗಳನ್ನಾಗಿ ವಿಭಾಗಿಸುತ್ತದೆ. ಪ್ರಧಾನವಾಗಿ ಪ್ರಕೃತಿ ಮತ್ತು ಪುರುಷ ಎಂಬ ಎರಡು ತತ್ತ್ವಗಳು. ಅಲ್ಲಿ ಪ್ರಕೃತಿಯಿಂದ ಮತ್ತೆ ಇಪ್ಪತ್ತನಾಲ್ಕು ತತ್ತ್ವಗಳು ವಿಕಾಸವಾಗುತ್ತವೆ, ಅವುಗಳಲ್ಲಿ ಪ್ರಕೃತಿಯ ಮುಂದಿನ ತತ್ತ್ವವೇ 'ಮಹತ್' ಎಂಬುದಾಗಿ ಈ ಸಂಖ್ಯಾಶಾಸ್ತ್ರ ಹೇಳುತ್ತದೆ. ಭಾರತೀಯ ಎಲ್ಲಾ ತತ್ತ್ವಶಾಸ್ತ್ರಗಳ ಗುರಿ ಒಂದೇ; ಅದು ಮೋಕ್ಷ. ಆ ಮೋಕ್ಷವನ್ನು ಪಡೆಯುವ ವಿಧಾನವನ್ನು ಬಗೆಬಗೆಯಲ್ಲಿ ಕಾಣಲಾಗಿದೆ, ಅದನ್ನೇ 'ದರ್ಶನ' ಎಂದು ಕರೆಯಲಾಗುತ್ತದೆ. ಸಾಂಖ್ಯ ದರ್ಶನವು ಪ್ರಕೃತಿ ಮತ್ತು ಪುರುಷ ಎಂಬ ಎರಡರ ವಿವೇಕವನ್ನು ಪಡೆಯುವುದೇ ಮೋಕ್ಷ ಎನ್ನುತ್ತದೆ. ಈ ವಿಷಯವನ್ನು ಅರಿಯುವುದು ಹೇಗೆ? ಎಂದಾಗ ಅದಕ್ಕೆ ತಪಸ್ಸು ಬೇಕು. 


ತಪ್ಪಸ್ಸು ಎಂಬ ಶಬ್ದಕ್ಕೆ ಆಲೋಚನೆ ಮತ್ತು ತಾಪ ಎಂಬ ಎರಡು ಅರ್ಥವಿದೆ. ಈ ಎರಡರ ಅರ್ಥವೂ ಇಲ್ಲಿ ಹೊಂದುತ್ತದೆ. ಪ್ರಕೃತಿ, ಮಹತ್ತು ಮೊದಲಾಗಿ ವಿಕಾಸವಾಗುತ್ತ ಪೃಥಿವಿಯ ತನಕ ಇಪ್ಪತ್ತ ನಾಲ್ಕು ತತ್ತ್ವರೂಪದಲ್ಲಿ ವಿಕಾಸವಾಗಿರುತ್ತದೆ. ನಾವು ಭಗವಂತನೆಂಬ ಮಹಾಪುರುಷತ್ವನ್ನು ಅರಿಯಬೇಕಾದರೆ ಪೃಥಿವಿ ತತ್ತ್ವದಿಂದ ಆರಂಭಿಸಿ ಒಂದೊಂದಾಗಿ ತಿಳಿಯುತ್ತಾ ಹೋದಂತೆ ಅಲ್ಲಿ ಇಪ್ಪತ್ತ ಮೂರನೆಯ ತತ್ತ್ವವಾಗಿ ಮಹತ್ ಎಂಬ ತತ್ತ್ವ ಗೋಚರಿಸುತ್ತದೆ ಎಂಬುದು ಸಾಂಖ್ಯ ಮತ್ತು ಯೋಗಶಾಸ್ತ್ರದ ಪರಿಭಾಷೆಯೂ ಕೂಡ. ಇದನ್ನೇ ಸೋಪಾನ, ಪದ, ಪದವಿ ಎಂಬೆಲ್ಲಾ ಶಬ್ದಗಳಿಂದ ಕರೆಯುತ್ತಾರೆ. ಯಾವಾಗ ಮಹತ್ ಎಂಬ ಪದವಿಯ ಅರಿವಾಗುವುದೋ ಆಗ ಆತನನ್ನು ಮಹಾತ್ಮಾ ಎನ್ನುತ್ತಾರೆ. "ಮಹತ್  ತತ್ತ್ವದವರೆಗೆ ಮುಟ್ಟಿದವರನ್ನೇ ಮಹಾತ್ಮಾ ಎಂದು ಕರೆದಿದ್ದಾರಪ್ಪಾ" ಎಂಬ ವಿವರಣೆಯನ್ನು ಶ್ರೀರಂಗ ಮಹಾಗುರುಗಳು ಕೊಟ್ಟಿದ್ದನ್ನು ವಿಷಯದ ದಾರ್ಢ್ಯಕ್ಕಾಗಿ ನೆನಪಿಸಿಕೊಳ್ಳುತ್ತೇನೆ.   


ಇನ್ನೊಂದು ಬಹಳ ಮುಖ್ಯವಾದ ಅರ್ಥ 'ಬ್ರಹ್ಮ'. ಮಹತ್ತು ಎಂದರೆ ದೊಡ್ಡದು. ಎಲ್ಲದಕ್ಕಿಂತ ಅತಿ ದೊಡ್ಡದು ಪರಬ್ರಹ್ಮನೇ. ಅವನಿಗಿಂತ ದೊಡ್ಡದಾದ ವಸ್ತು ಈ ಪ್ರಪಂಚದಲ್ಲಿ ಇಲ್ಲ. ಇಂತಹ ಪರಬ್ರಹ್ಮವನ್ನು ಪಡೆಯಲು ತಪಸ್ಸು ಬೇಕು. ಕಾಯಿಕ, ಮಾನಸಿಕ ಮತ್ತು ವಾಚಿಕ ಎಂಬುದಾಗಿ ಮೂರೂ ಬಗೆಯ ತಪಸ್ಸುಗಳು ಇವೆ. ಈ ಮೂರನ್ನು ಶುದ್ಧಗೊಳಿಸಿಕೊಳ್ಳುವ ಪ್ರಕ್ರಿಯೆಯೇ ತಪಸ್ಸು. ಇವುಗಳಿಗೆ ಬ್ರಹ್ಮ ಅಥವಾ ಮಹತ್ತನ್ನು ದರ್ಶನ ಮಾಡುವ ಯೋಗ್ಯತೆಯನ್ನು ಪಡೆದುಕೊಳ್ಳುವಿಕೆ. ಇಂತಹ ತಪಸ್ಸಿನಿಂದ ಮಾತ್ರವೇ ಬ್ರಹ್ಮವನ್ನು ಪಡೆಯಲು ಸಾಧ್ಯ ಎಂಬುದು ಈ ಪ್ರಶ್ನೋತ್ತರದ ಅರ್ಥ.   


ಸೂಚನೆ : 10/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.