Friday, March 31, 2023

ಭಾವತರಂಗಗಳು ಬೀರುವ ಪ್ರಭಾವ (Bhavatarangagalu Biruva Prabhava)

ಲೇಖಕಿ ; ವಿದುಷಿ ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)  




ಪಾಂಡವರ ಅಜ್ಞಾತವಾಸವು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯುವ ಸಂದರ್ಭ.  ಕೌರವರ ಆಸ್ಥಾನದಲ್ಲಿ ಸಭೆ ನಡೆಸಲಾಗುತ್ತದೆ. ಆ ಸಭೆಯಲ್ಲಿ ಪಾಂಡವರನ್ನು ಹುಡುಕುವ ಸಲುವಾಗಿ, ದುರ್ಯೋಧನನಿಂದ ಕಳುಹಿಸಲ್ಪಟ್ಟ ಗುಪ್ತಚರ ತಂಡವು ವಿಫಲವಾಗಿ ಬಂದು, ಪಾಂಡವರನ್ನು ಕಾಡು, ಪರ್ವತ, ಹಳ್ಳಿ, ನಗರ, ಎಲ್ಲೆಡೆಯಲ್ಲಿಯೂ ಹುಡುಕಿದ್ದೇವೆ; ಅವರ ಸುಳಿವೇ ಇಲ್ಲ. ಬಹುಶಃ ಅವರು ಯಾವುದಾದರೂ ಪ್ರಾಣಿಗಳಿಗೆ ಆಹಾರವಾಗಿ ಪ್ರಾಣವನ್ನು ಕಳೆದುಕೊಂಡಿರಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಆದರೆ ಅಲ್ಲಿರುವ ಕೃಪಾಚಾರ್ಯರು ಮತ್ತು ದ್ರೋಣಾಚಾರ್ಯರು ಹಾಗಾಗಲು ಸಾಧ್ಯವೇ ಇಲ್ಲ; ಅಂತಹ ಧರ್ಮಿಷ್ಠರೂ, ಶೂರರೂ ಆಗಿರುವ ಅವರು ಪ್ರಾಣಿಗಳ ಬಾಯಿಗೆ ಸಿಕ್ಕಿ ಸಾಯುವುದು ಅಸಂಭವವೇ ಸರಿ!  ಇನ್ನೂ ಸೂಕ್ಷ್ಮನಡೆಯ ಗುಪ್ತಚರರನ್ನು ಕಳುಹಿಸಿ ಅವರನ್ನು ಹುಡುಕಿಸುವ ಪ್ರಯತ್ನ ಮಾಡಬಹುದು ಎಂಬ ತಮ್ಮ ಸಲಹೆಯನ್ನು ದುರ್ಯೋಧನನಿಗೆ ನೀಡುತ್ತಾರೆ. ಭೀಷ್ಮಾಚಾರ್ಯರೂ ಕೂಡ ಅವರ ಮಾತನ್ನು ಪುಷ್ಟೀಕರಿಸಿ, ಪಾಂಡವರನ್ನು ಎಲ್ಲಿ  ಹುಡುಕಬೇಕೆಂಬ  ಉಪಾಯವನ್ನು ಕೊಡುತ್ತಾರೆ. ಎಲ್ಲಿ ಧರ್ಮರಾಯನು ಇರುತ್ತಾನೆಯೋ ಆ ಪ್ರದೇಶದಲ್ಲಿ ಪ್ರಕೃತಿಯಲ್ಲಿ ಕೆಲವು ಉತ್ತಮ ಬದಲಾವಣೆಗಳು ಸಂಭವಿಸುತ್ತವೆ; ಮಳೆ-ಬೆಳೆ ಉತ್ತಮವಾಗಿರುತ್ತದೆ; ಜನರಲ್ಲಿ ಸನ್ನಡತೆ ಉಂಟಾಗುತ್ತದೆ. ಅಂತಹ ಪ್ರದೇಶಗಳಲ್ಲಿ ಅವರನ್ನು ಹುಡುಕುವ ಪ್ರಯತ್ನ ಮಾಡಿಸಬಹುದು ಎಂದು ತಾನು ಸಲಹೆಯನ್ನು ಕೊಡುತ್ತಾನೆ. ಇಲ್ಲಿ ಮಹಾಪುರುಷನಾದ ಧರ್ಮರಾಯನ ವ್ಯಕ್ತಿತ್ವವನ್ನು ಅಳೆಯಲು ಮಹಾಪುರುಷರಾದಂತಹ ಭೀಷ್ಮರಂತಹವರೇ ಸಮರ್ಥರು ಎಂಬುದು ನಮಗೆ ತಿಳಿಯುತ್ತದೆ.


 ಧರ್ಮರಾಯನು ಎಂತಹ ಉದ್ವೇಗಕ್ಕೊಳಗಾಗುವ ಸಂದರ್ಭ ಬಂದರೂ ಮನಸ್ಸಿನ ಸ್ಥಿರತೆ, ಶಾಂತಿ - ಸಮಾಧಾನವನ್ನು ಕಳೆದುಕೊಳ್ಳದೇ, ಜೀವನದ ಹಿನ್ನೋಟ ಮುನ್ನೋಟಗಳನ್ನು, ಕರ್ಮದ ಗತಾಗತಿಯನ್ನು ಚೆನ್ನಾಗಿ ಅರಿತ ,ಧರ್ಮದ ನಡೆಯಿಂದ ಸ್ವಲ್ಪವೂ ವಿಚಲಿತನಾಗದ ಧರ್ಮಾತ್ಮ.


 ಮಹಾತ್ಮರು ವಾಸಿಸುವ ಸುತ್ತಲಿನ ಪರಿಸರವೂ ಅವರ ಮನಸ್ಸಿಗೆ ತಕ್ಕಂತೆ ಉತ್ತಮವಾಗಿರುತ್ತದೆ ಎಂಬುದಾಗಿ ರಾಮಾಯಣ,ಮಹಾಭಾರತಾದಿ ಗ್ರಂಥಗಳಲ್ಲಿ ಉಲ್ಲೇಖವಿದೆ. ಉದಾಹರಣೆಗೆ ರಾಮನಂತಹ ಮಹಾಪುರುಷರು ರಾಜರಾಗಿ ಆಡಳಿತ ಮಾಡುವಾಗ ಪ್ರಕೃತಿಮಾತೆಯು ಪ್ರಸನ್ನಳಾಗಿದ್ದಳು, ಯಾವುದೇ ವಿಕೋಪ ಸಂಭವಿಸುತ್ತಿರಲಿಲ್ಲ, ಪ್ರಜೆಗಳೂ ಕೂಡ ಅತ್ಯಂತ ಸಮಾಧಾನಚಿತ್ತರಾಗಿ ಜೀವನ ನಡೆಸುತ್ತಿದ್ದರು. ಕಣ್ವರಂತಹ ಮಹರ್ಷಿಗಳ ಆಶ್ರಮದ ಪರಿಸರದಲ್ಲಿ ಪ್ರಾಣಿಗಳೂ ಸಹ ತಮ್ಮ ಸ್ವಾಭಾವಿಕ ವೈರತ್ವವನ್ನು ತ್ಯಜಿಸಿ ಸಹಬಾಳ್ವೆಯನ್ನು ಮಾಡುತ್ತಿದ್ದವು. ಹೀಗೆ ಮಹಾತ್ಮರು ಆತ್ಮಸಾಧನೆಯಲ್ಲಿ ತೊಡಗಿ, ಆತ್ಮಗುಣಗಳನ್ನು ಮೈಗೂಡಿಸಿಕೊಂಡು,ಸದಾಕಾಲದಲ್ಲಿಯೂ ಮನಸ್ಸಿನ ಶುದ್ಧತೆ ಹಾಗೂ ಸಮಾಧಾನವನ್ನು ಕಾಪಾಡಿಕೊಳ್ಳುತ್ತಿದ್ದ ಪರಿಣಾಮ ಹೊರಗಿನ ಪರಿಸರದ ಮೇಲೆ ಉತ್ಕೃಷ್ಟವಾದ ಪ್ರಭಾವ ಬೀರುತಿತ್ತು. ನಮ್ಮ ಭಾರತ ಭೂಮಿಯಲ್ಲಿ ಅಂತಹ ಅನೇಕ ಮಹಾತ್ಮರು ಅವತರಿಸಿ ಈ ನೆಲದಲ್ಲೆಲ್ಲಾ ಓಡಾಡಿರುವ ಪರಿಣಾಮ, ಈ ಭೂಮಿಯು ಪುಣ್ಯಭೂಮಿಯಾಗಿದೆ; ತೀರ್ಥಕ್ಷೇತ್ರಗಳ ನೆಲೆವೀಡಾಗಿದೆ. "ಜ್ಞಾನಿಗಳು ತಾವು ಕಾಲಿಟ್ಟೆಡೆಗಳನ್ನೆಲ್ಲಾ ತೀರ್ಥರೂಪವಾಗಿ ಮಾಡುವರು. ತೀರ್ಥರೂಪರಾದ ಮಹಾತ್ಮರು ಪಾದವಿನ್ಯಾಸ ಮಾಡಿದೆಡೆಯೆಲ್ಲಾ, ಅದು ಕಾಡಾಗಲೀ ಮೇಡಾಗಲೀ, ತೀರ್ಥವೇ ಆಗುತ್ತದೆ. ಪರಮಗುರು ಮೆಟ್ಟಿದ ಜಾಗ ತೀರ್ಥವಾಗುತ್ತದೆ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ.


 ಸಾಮಾನ್ಯ ಜೀವನದಲ್ಲಿಯೇ ಮನಸ್ಸಿನ ಭಾವತರಂಗಗಳು ಹೇಗೆ ನಮ್ಮ ಸುತ್ತ ಮುತ್ತ ಪ್ರಭಾವ ಬೀರುತ್ತವೆ ಎಂಬುದು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ ಅನುಭವಕ್ಕೆ ಬರುತ್ತದೆ. ಯಾವುದೇ ಒಬ್ಬ ವ್ಯಕ್ತಿ ಅತ್ಯಂತ ಸಂತೋಷವನ್ನು ಅನುಭವಿಸುತ್ತಿದ್ದರೆ ಅವನ ಸುತ್ತಲಿರುವವರ ಮೇಲೂ ಕೂಡ ಆ ಸಂತಸದ ಭಾವ ಸ್ವಲ್ಪಮಟ್ಟಿಗೆ ಮೂಡುತ್ತದೆ. ಹಾಗೆಯೇ ಅತ್ಯಂತ ದುಃಖದಲ್ಲಿರುವ ಅಥವಾ ಕೋಪದಲ್ಲಿರುವವರ ಬಳಿ ಇರುವವರಲ್ಲಿಯೂ ಕೂಡ ಆ ಭಾವವೇ ಉಂಟಾಗುತ್ತದೆ ಹಾಗೂ ಮನಸ್ಸಿನ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪುಟ್ಟ ಮಕ್ಕಳನ್ನು ದೇವರಿಗೆ ಸಮಾನ ಎಂದು ಕರೆಯುವುದುಂಟು.  ಅವುಗಳ ಮನಸ್ಸು ನಿರ್ಮಲವಾಗಿರುತ್ತದೆ.  ಮಕ್ಕಳು ಆನಂದದಿಂದ ಓಡಾಡಿಕೊಂಡಿರುವೆಡೆಯಲ್ಲಿ ಆನಂದದ ವಾತಾವರಣವೇ ಮನೆಮಾಡಿರುತ್ತದೆ. ಹಾಗಾಗಿ, ನಮ್ಮ ಭಾವ ತರಂಗಗಳು ಸುತ್ತಲಿನ ಪರಿಸರದಲ್ಲಿ, ಪದಾರ್ಥಗಳಲ್ಲಿ ಸಹಜವಾಗಿಯೇ ಪ್ರಭಾವ ಬೀರುತ್ತವೆ. 


ಆತ್ಮಸಾಧನೆಯಲ್ಲಿ ತೊಡಗಿ ಆ ಮಾರ್ಗದಲ್ಲಿ ಸಾಗುವಾಗ ಸಿಗುವ ಸಂಪತ್ತಾದ ಸದ್ಗುಣಗಳನ್ನು ಮೈಗೂಡಿಸಿಕೊಂಡು,ಮ ನಸ್ಸನ್ನು ಶಾಂತವಾಗಿ, ಸಂತೋಷವಾಗಿ ಇಟ್ಟುಕೊಂಡು ಧನಾತ್ಮಕ ಚಿಂತನೆಯಿಂದಿದ್ದರೆ ನಮ್ಮ ಜೀವನವೂ ಸುಂದರವಾಗಿರುವುದರ ಜೊತೆಗೆ ಸುತ್ತಲಿನ ಪರಿಸರವೂ ಉತ್ತಮವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಸೂಚನೆ: 30/3/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

ಬೈದರೆ ಏನು ಮಾಡಬೇಕು?(Baidare Enu Madabeku?)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)




ಪರಮಭಾಗವತ ವಾಗ್ಗೇಯಕಾರ  ತ್ಯಾಗರಾಜರನ್ನು ಕುರಿತು ಅವರ ಗುರುಗಳಾದ ಶುಂಠಿ ವೆಂಕಟರಮಣರು ಒಮ್ಮೆ ಒಂದು ಉದ್ಬೋಧಕ ಪ್ರಶ್ನೆ ಕೇಳುತ್ತಾರೆ- "ನಿನ್ನನ್ನು ಯಾರಾದರೂ ಹೊಗಳಿದರೆ ಏನು ಮಾಡುತ್ತೀಯೆ? ಯಾರಾದರೂ ಬೈದರೆ ಏನು ಮಾಡುತ್ತೀಯೆ?" ಎಂದು. ತ್ಯಾಗರಾಜರು ಒಡನೆಯೇ "ನನ್ನನ್ನು ಯಾರಾದರೂ ಹೊಗಳಿದರೆ ಅದನ್ನು ಭಗವಂತನಿಗೆ ಕೊಟ್ಟುಬಿಡುತ್ತೇನೆ. ನನ್ನನ್ನು ಬೈದರೆ ಅವರು ನನ್ನ ಪ್ರಕೃತಿಯನ್ನು ನೋಡಿ ಅಂದದ್ದು ಇದು ಎಂದು ಸುಮ್ಮನಿದ್ದುಬಿಡುತ್ತೇನೆ" ಎನ್ನುತ್ತಾರೆ. ಎಂತಹ ವೇದಾನ್ತಸಾರವನ್ನು ಒಳಗೊಂಡ ಉತ್ತರವಿದು! ತ್ಯಾಗರಾಜರಂತಹ ಪರಿಪಕ್ವ ಚೇತನರಿಗೆ ಸುಲಭಸಾಧ್ಯ. ಇತರರಿಗೆ ಶ್ರಮಿಸಿ ಸಂಪಾದಿಸಬೇಕಾದ ಮನಃಸ್ಥಿತಿ! 


ಇತರರು ನಮ್ಮನ್ನು ಪ್ರಶಂಸೆ ಮಾಡಿದೊಡನೆ, ಅದಕ್ಕೆ ಈಡಾಗುವವರೇ  ಹೆಚ್ಚು. ಯಾರಾದರೂ ಹೊಗಳಿದರೆ ಕೂಡಲೇ ಅಭಿಮಾನದಿಂದ ಅದನ್ನು ಜನ ಜೇಬಿಗಿಳಿಸಿಕೊಂಡು ಬಿಡುತ್ತಾರೆ. ಆದರೆ ಮಹಾತ್ಮರು "ಸೃಷ್ಟಿಯಲ್ಲಿ ಒಳ್ಳೆಯದೆಲ್ಲ ಭಗವಂತನದೇ" ಎಂಬ ಭಾವನೆಯಿಂದ ಕೂಡಿದವರಾಗಿ ಯಾರಾದರೂ ತಮ್ಮಲ್ಲಿನ  ಒಳ್ಳೆಯದನ್ನು ಹೊಗಳಿದರೆ ಅದನ್ನು ಸಹಜವಾಗಿಯೇ ಭಗವಂತನಿಗೆ ತಲುಪಿಸಿಬಿಡುತ್ತಾರೆ. ಹೀಗಾಗಿ, ಅವರಿಗೆ ಲೌಕಿಕದ ಅಂಟು ಇರುವುದೇ ಇಲ್ಲ. ನಿರ್ಲಿಪ್ತರಾಗಿರುವುದೆಂದರೆ ಇದೇ.


ಮಹಾಗುರುಗಳೊಬ್ಬರ ಬಳಿ ಅವರ ಪ್ರಾಮಾಣಿಕ ಶಿಷ್ಯರೊಬ್ಬರು " ನನ್ನಲ್ಲಿ ಏನೇನು ಒಳ್ಳೆಯ ಗುಣಗಳಿವೆ? ಹೇಳಿ" ಎಂದರಂತೆ. ಗುರುಗಳ ಬಾಯಿಂದ ಅವುಗಳನ್ನು ಕೇಳಿ ಸಂತೋಷ ಪಡುವಾಸೆ ಇವರಲ್ಲಿ ಹುಟ್ಟಿತೋ ಏನೋ! ಗುರುಗಳು, ನಿರ್ವಿಕಾರವಾಗಿ "ನಿನ್ನಲ್ಲಿ ಯಾವ ಒಳ್ಳೆಯ ಗುಣಗಳೂ ಇಲ್ಲಾಪ್ಪಾ" ಎಂದುಬಿಟ್ಟರಂತೆ. ಶಿಷ್ಯರಿಗೆ ಗಾಬರಿ! ತನ್ನಲ್ಲಿದ್ದ ಕೆಲವು ಸದ್ಗುಣಗಳ ಪಟ್ಟಿಯನ್ನು ಗುರುಗಳ ಮುಂದೆ ಒಪ್ಪಿಸಿ, ಇವೆಲ್ಲಾ ನನ್ನಲ್ಲಿ ಇಲ್ಲವೇ?" ಎಂದು ಕೇಳಿದರಂತೆ. ಶಾಂತಚಿತ್ತರಾಗಿ "ಇವೆಲ್ಲಾ ಪರಮಾತ್ಮನ ಗುಣಗಳಪ್ಪಾ" ಎಂದುಬಿಟ್ಟರಂತೆ. ಶಿಷ್ಯರಿಗೆ ತಮ್ಮ ತಪ್ಪಿನ ಅರಿವಾಗಿ "ಒಳ್ಳೆಯದೆಲ್ಲಾ ಭಗವಂತನಿಗೆ ಸೇರಿದ್ದು" ಎಂಬ ಭಾವ ನನ್ನಲ್ಲಿರಲಿ ಎಂದು ಮನಸ್ಸಿನಲ್ಲಿಯೇ ಗುರುವನ್ನು ಪ್ರಾರ್ಥಿಸಿದರಂತೆ. 


ಇತರರು ನಮ್ಮನ್ನು ಅಜ್ಞಾನದಿಂದ ಬೈದರೆ ನಾವು ಯಾವಾಗಲೂ ಸುಮ್ಮನಿರಬೇಕೆಂದೇನಿಲ್ಲ. ಆತ್ಮ / ಧರ್ಮ ರಕ್ಷಣೆಗೆ ಏನು ಬೇಕೋ ಅದನ್ನು ಮಾಡಿಕೊಳ್ಳಬಹುದು. ಬೈದ ವ್ಯಕ್ತಿಗೆ ತಿಳಿಹೇಳುವುದರಿಂದ ಉಪಯೋಗವಿರುವುದಾದರೆ ಸೂಕ್ತಕಾಲದೇಶಗಳಲ್ಲಿ ಅದನ್ನು ಯಥೋಚಿತವಾಗಿ ಮಾಡಬಹುದು. ಇದು ವ್ಯಾವಹಾರಿಕ ಪ್ರತಿಕ್ರಿಯೆ. ಆದರೆ ನಮ್ಮ ಮನಸ್ಸಿನಲ್ಲಿ ನಿರ್ಲಿಪ್ತರಾಗಿರಬೇಕೆಂದರೆ "ಅಜ್ಞಾನದಿಂದ ಒಬ್ಬ ಜೀವಿಯು ನನ್ನ ಪ್ರಕೃತಿಯನ್ನು ನಿಂದಿಸುತ್ತಿದ್ದಾನೆ. ಹೇ ಭಗವಂತ! ಅವನಿಗೆ ಒಳ್ಳೆಯ ಬುದ್ಧಿಯನ್ನು ಕೊಡಪ್ಪ!" ಎಂಬ ಭಾವವಿರಬೇಕು. ಮತ್ತೊಬ್ಬರು ಬೈದಿರುವುದರಲ್ಲಿ ಸತ್ಯಾಂಶವೇ ಇದ್ದರೆ, ನಮ್ಮನ್ನು ತಿದ್ದಿಕೊಳ್ಳಲು ಮಾಡಬೇಕಾದದ್ದೇನು ಎಂಬ ಬಗ್ಗೆ ನಿಗಾ ಹರಿಸಬೇಕು.


ಇತರರು ನಮ್ಮನ್ನು ಹೊಗಳಿದಾಗ, ನಮಗೆ ಅದನ್ನು ಅಂಟಿಸಿಕೊಂಡರೆ ಹೇಗೆ ನಾವು ಪತಿತರಾಗುತ್ತೇವೆಯೋ, ನಮ್ಮನ್ನು ಇತರರು ತೆಗಳಿದಾಗ, ಅದನ್ನು ನಮಗೆ ಅಂಟಿಸಿಕೊಂಡರೆ ದುಃಖವೋ, ಅಸಮಾಧಾನವೋ ಕಟ್ಟಿಟ್ಟ ಸಂಗತಿಯೇ ಹೌದು. ಸಂತ ತ್ಯಾಗರಾಜರ ಉತ್ತರದಲ್ಲಿ ನನ್ನ ಪ್ರಕೃತಿಯನ್ನು ಒಬ್ಬ ಜರೆಯುತ್ತಿದ್ದಾನೆ ಎಂಬ ಭಾವವಿದೆಯಷ್ಟೆ. ಅಂತಹ ಸಾಕ್ಷೀಭಾವವು, ನಮ್ಮನ್ನು ಪ್ರಕೃತಿಗಂಟಿಕೊಳ್ಳದೇ ಜೀವನದ ಎಲ್ಲ ಆಗುಹೋಗುಗಳನ್ನು ಗಮನಿಸಿಕೊಳ್ಳುವ ಉದಾತ್ತ ಮನೋಭಾವವನ್ನು ಉಂಟು ಮಾಡುತ್ತದೆ. ಇಂತಹ ಆದರ್ಶ ಮನಃಸ್ಥಿತಿಯನ್ನು ಸಾಧಿಸಲು ಯತ್ನಿಸೋಣ.

ಸೂಚನೆ: 30/3/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ. 

Monday, March 27, 2023

ಅಷ್ಟಾಕ್ಷರೀ​ - 31 ನಾಕ್ಷತ್ರಂ ಬ್ರಹ್ಮ ವರ್ಧತೇ (Astakshara Darshana 31 Naakshatram Brahma Vardhate)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು", "ಅಂಬಲಿ ಕುಡಿಯುವವನಿಗೆ ಮೀಸೆ ತಿರುವುವನೊಬ್ಬ" – ಮುಂತಾದ ಗಾದೆಮಾತುಗಳನ್ನು ಯಾರು ಕೇಳಿಲ್ಲ? ಇಲ್ಲೆಲ್ಲ, ಮುಖ್ಯವಾದುದನ್ನು ಬಿಟ್ಟು ಮುಖ್ಯವಲ್ಲದ್ದಕ್ಕೆ ಬೆಲೆಗೊಡುವುದು - ಎಂಬುದನ್ನು ಗೇಲಿಮಾಡುವುದು ಕಾಣುತ್ತದೆ.

ಜೀವನದಲ್ಲಿ ಯಾವುದು ಮುಖ್ಯ, ಯಾವುದಲ್ಲ? – ಎಂಬ ಲೆಕ್ಕಾಚಾರವು ಅವಶ್ಯ.  ಯಾವುದಕ್ಕೆ ಯಾವುದು ತಕ್ಕುದಾದುದು? ಯಾವುದು ಎಲ್ಲಿ ಯಾವಾಗ ಸರಿಹೋಗುವುದು? – ಎಂಬ ಆಲೋಚನೆಗಳು ಸಹಜವಾಗಿಯೇ ಆಗಾಗ್ಗೆ ಬರುತ್ತಿರಬೇಕು.

ಕತ್ತಿಗೆ ಹಾಕುವ ಮುತ್ತಿನ ಹಾರವನ್ನೂ ಕಾಲಿಗೆ ಹಾಕುವ ಗೆಜ್ಜೆಯನ್ನೂ  ಅದಲುಬದಲು ಮಾಡಿದರೆ  ಹಾಸ್ಯಕ್ಕೆ ಆಸ್ಪದ. ನಗೆಪಾಟಲಷ್ಟೇ ಆದರೆ ಪರವಾಗಿಲ್ಲ; ಕೆಲವೊಮ್ಮೆ ಅನರ್ಥವೇ ಸಂಭವಿಸುವುದುಂಟು: ನಮ್ಮ ನಾಲಿಗೆಯನ್ನು ನಾವೇ ಕಚ್ಚಿಕೊಂಡುಬಿಡುವುದುಂಟು – ಹಾಗೆಂದು ಹಲ್ಲನ್ನೇ ಮುರಿದುಬಿಡೋಣವೇ?

ಕಂಪ್ಯೂಟರನ್ನು ಅಂತರ್ಜಾಲದ ಮೂಲಕ ತರಿಸಿಕೊಳ್ಳುವೆವೆನ್ನಿ. ಅದನ್ನೇನು  ಸುಮ್ಮನೆ ಕೈಯಲ್ಲೇಹಿಡಿದುಕೊಂಡು ತಂದುಕೊಟ್ಟುಬಿಡುವರೇನು? ಬಹಳ ಬೆಲೆಬಾಳುವ ಹಾಗೂ ಮೃದುವೂ ಸೂಕ್ಷ್ಮವೂ ಆದ ಅದಕ್ಕೆ ಅದೆಷ್ಟು "ಕವಚಗಳು! ಮೇಲೂ ಕೆಳಗೂ ಅಕ್ಕಪಕ್ಕಗಳಲ್ಲೂ ನಾನಾಕಾರದ ಥರ್ಮೋಕೋಲುಗಳೇನು, ರೊಟ್ಟುಗಳೇನು! ನಾವು ಕೇಳಿದ್ದು ಕಂಪ್ಯೂಟರನ್ನು ಮಾತ್ರ, ಇದೆಲ್ಲ ಏಕೆ ಬೇಕಿತ್ತು? – ಎಂದು ರೇಗುವೆವೇ? ಒಳಗಿರುವ ಬೆಲೆಬಾಳುವ ಸಾಮಾನು ಸುರಕ್ಷಿತವಾಗಿ ನಮ್ಮ ಕೈಸೇರುವ ಪರ್ಯಂತ ಅವೆಲ್ಲ ಬೇಕೇ ಬೇಕು, ಅಲ್ಲವೇ? ಏಕೆ? ಕವಚವಾಗಿರುವವರೆಗೂ ಅವಕ್ಕೆ ಬೆಲೆಯುಂಟೇ ಉಂಟು; ಬರೀ ರೊಟ್ಟಿಗೇ ಬೆಲೆಯೇನು?

ಒಳಗಿರುವ ಪದಾರ್ಥ ಅಮೂಲ್ಯವಾದದ್ದು; ಹೊರಗಣ ಕವಚ ಕಡಿಮೆ ಬೆಲೆಯದ್ದು, ರಕ್ಷಣೆಯನ್ನು ಯಾವುದು ಒದಗಿಸುವುದೋ ಅದು ರಕ್ಷಕ; ಯಾವುದನ್ನು ರಕ್ಷಿಸಬೇಕೋ ಅದು ರಕ್ಷ್ಯ. ರಕ್ಷ್ಯವು ತಾನೆ ಮುಖ್ಯ?

ಇದನ್ನು (ಪದೇ ಪದೇ) ಹೇಳಿಕೊಟ್ಟರೂ ಕಲಿಯದ ಮೂರ್ಖರೂ ಪ್ರಪಂಚದಲ್ಲಿ ಉಂಟು! ತಲೆಗೆ ಹೆಲ್ಮೆಟ್ ಹಾಕಿಕೊಳ್ಳಿ – ಎಂದು ಎಷ್ಟು ಬಾರಿ (ಆ)ರಕ್ಷಕರೂ (ಡಾಕ್ಟರರೂ) ಎಚ್ಚರಿಸುವರು! ಆದರೂ ಹಾಕಿಕೊಳ್ಳದ ಮಂದಿ ಎಷ್ಟೊಂದು! ಶಿರಸ್ಸಿಗೆ ಬೇಕು ಶಿರಸ್ತ್ರಾಣ. ಶಿರಸ್ಸು ರಕ್ಷ್ಯ, ಶಿರಸ್ತ್ರಾಣವು ರಕ್ಷಕ.

ತಲೆಯ ಬಗ್ಗೆ ಅದೇಕೆ ಅಷ್ಟು  ಪಕ್ಷಪಾತ? – ಎಂದು ಕೇಳುವವರಿರಬಹುದು. ನಮ್ಮ ಶರೀರವೆಂಬುದು ಡೆಮಾಕ್ರಸಿಯಂತಲ್ಲವೆಂಬುದನ್ನು ಗಮನಿಸಿಕೊಳ್ಳಬೇಕು: ಎಲ್ಲ ಅಂಗಗಳಿಗೂ ಒಂದೇ ಬೆಲೆಯಲ್ಲ: ಇಲ್ಲಿ ಎಲ್ಲವೂ ಮುಖ್ಯವಾದರೂ ಕೆಲವು ಅತಿಮುಖ್ಯವೇ ಸರಿ: ಅವಘಡವಾದಾಗ ಕಾಲುಮುರಿಯಿತೆಂದರೂ ಕತ್ತುಮುರಿಯಿತೆಂದರೂ ಎರಡೂ ಒಂದೇಯೇ? ಕತ್ತೇ ಮುರಿದವ ಸತ್ತೇಹೋದನೆಂದೇ; ಆದರೆ ಬರೀ ಕಾಲು ಮುರಿದವನಿಗೆ ಒಂದಿಷ್ಟು ಚಿಕಿತ್ಸೆ ಕೊಟ್ಟು ಜೀವನ ನಡೆಸಿಕೊಳ್ಳಲಾಗುವಂತೆ ಮಾಡಲಾದೀತು.

ಎಂದೇ, ಆಯುರ್ವೇದದಲ್ಲಿ ಶಿರಸ್ಸನ್ನು "ಉತ್ತಮಾಂಗ"ವೆಂದೇ ಕರೆದಿದ್ದಾರೆ! ಅದು ಸರ್ವಥಾ ರಕ್ಷ್ಯ. ವಾಸ್ತವವಾಗಿ ಹತ್ತು ವರ್ಷದ ಮಕ್ಕಳಿಗೂ ಗೋಚರವಾಗುವ ಅಂಶವಿದು! ಹೇಗೆ? ಅವರಲ್ಲೇ ಪರಸ್ಪರ ಜಗಳಗಳಾಗುವಾಗ ಕಪಾಳಕ್ಕೆ ಹೊಡೆಯಲು ಬಂದರೆ ತಕ್ಷಣವೇ  ಕೈಯನ್ನು ಅಡ್ಡ ತರುವುದಿಲ್ಲವೇ?

ವಾಸ್ತವವಾಗಿ, ನಮ್ಮ ಕೈಕಾಲುಗಳಿಗೆ ಸಹ ಅದು "ಗೊತ್ತು"!: ಮೇಲಿಂದ ಬಿದ್ದೆವೆನ್ನಿ; ಮೊದಲು ನೆಲಕ್ಕೆ ಕೈ(-ಕಾಲು)ಗಳನ್ನೇ ಕೊಡುವುದು;ತಲೆಯನ್ನಲ್ಲ. ರಕ್ಷ್ಯವಾದ ತಲೆಯ ರಕ್ಷಣೆಗಾಗಿ ಕೈಗಳೋಡಿಬರುವುವು!

ಶ್ರೀರಂಗಮಹಾಗುರುಗಳು ಸೃಷ್ಟಿಯೇ ರಕ್ಷ್ಯ-ರಕ್ಷಕ-ವ್ಯವಸ್ಥೆಯನ್ನು ಹೇಗೆ ಮಾಡಿಟ್ಟಿದೆ? - ಎಂಬುದನ್ನು ತೋರಿಸಿಕೊಡುತ್ತಿದ್ದರು: "ಮೆದುಳು ಶರೀರದ ಅತ್ಯಂತ ಮುಖ್ಯವಾದ ಭಾಗ. ರಕ್ಷ್ಯವಾದ ಅದಕ್ಕೆ ರಕ್ಷಕವಾಗಿ ಬಂದಿರತಕ್ಕದ್ದು ನಮ್ಮ ಮಂಡೆ, ತಲೆಬುರುಡೆ: ಇಡೀ ಶರೀರದಲ್ಲೇ ಅತ್ಯಂತ ಘಟ್ಟಿಯಾಗಿರುವ ಮೂಳೆಯದು! ಹಾಗೆಯೇ ಹೃದಯವೂ ಬಹುಮುಖ್ಯವಾದ ಅಂಗ; ಎಂದೇ ರಕ್ಷಕವಾಗಿ ಸುತ್ತಲಿರುವ ಪಕ್ಕೆಲುಬುಗಳು ಗಟ್ಟಿಯಾಗಿರತಕ್ಕವು."

ಮುಖವು ಬ್ರಹ್ಮ; ತೋಳು ಕ್ಷತ್ರ. "ಕ್ಷತ್ರವಿಲ್ಲದೇ ಬ್ರಹ್ಮವುಳಿಯದು"! - ಇದನ್ನೇ ಮನುವು "ನಾಕ್ಷತ್ರಂ ಬ್ರಹ್ಮ ವರ್ಧತೇ" ಎಂದಿದ್ದಾನೆ. ಧರ್ಮರಕ್ಷಣೆಗಾಗಿ ಬಂದ ರಾಜ್ಯವ್ಯವಸ್ಥೆಯ ಮರ್ಮವಿದು. ಸಮಾಜಸ್ತರದಲ್ಲಿ ಕ್ಷತ್ರಿಯರು ದುರ್ಬಲರಾದಾಗಲೇ ಹಿಂದುಧರ್ಮದ ಅವನತಿಯಾರಂಭವಾಯಿತು!

ಅದೇ ರೀತಿ ಬ್ರಹ್ಮವೂ ಕ್ಷತ್ರಕ್ಕೆ ರೂಪಾಂತರದಲ್ಲಿ ರಕ್ಷೆಯೇ: ಕಾಲಿಗೆ ಮುಳ್ಳು ಚುಚ್ಚಿದರೆ, ತಲೆಯು ಎಲ್ಲ ಅಂಗಗಳಿಗೂ ಕರ್ತವ್ಯನಿರ್ದೇಶನವನ್ನು ಮಾಡಿ ಕಾಲನ್ನು ರಕ್ಷಿಸುವುದಲ್ಲವೆ? ಹೀಗೆ ಬ್ರಹ್ಮ-ಕ್ಷತ್ರಗಳು ಪರಸ್ಪರ ಒಂದನ್ನೊಂದು ರಕ್ಷಿಸಿಕೊಂಡಾಗಲಲ್ಲವೆ ಧರ್ಮಾಚರಣೆ ಸಾಧ್ಯವಾಗುವುದು?

ಸೂಚನೆ: 26/03/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ -31 (Yaksha prashne -31)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 30 ಹುಟ್ಟಿದ ಮೇಲೆ ಚಲಿಸದಿರುವುದು ಯಾವುದು ?

ಉತ್ತರ - ಅಂಡ-ಮೊಟ್ಟೆ

ಈ ಪ್ರಪಂಚದಲ್ಲಿ ಪರಬ್ರಹ್ಮನನ್ನು ಬಿಟ್ಟು ಉಳಿದ ಎಲ್ಲವೂ ಹುಟ್ಟು ಸಾವುಗಳೆಂಬ ಚಕ್ರದಲ್ಲಿ ಸಿಲುಕಿದವುಗಳೇ ಆಗಿವೆ. ಹುಟ್ಟಿದ ಪ್ರತಿಯೊಂದು ಜೀವಿಯೂ ತನ್ನ ಜೀವಿತವನ್ನು ಮುಂದುವರಿಸಲು ಅದರದ್ದೇ ಆದ ಪ್ರಯತ್ನವಿದ್ದೇ ಇರುತ್ತದೆ. ಅದಕ್ಕೆ ಒಂದು ಕಡೆಯಿಂದ ಇನ್ನೊಂದು ಕಡೆ ಸಂಚರಿಸಿಸುವುದು ಅತ್ಯವಶ್ಯವಾದುದೇ ಸರಿ. 'ನ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮೃಗೇ ಯಥಾ - ಎಂತಹಾ ಸಿಂಹವಾದರೂ ಮಲಗಿದ್ದರೆ ಅದರ ಬಾಯಿಗೆ ಬೇಕಾದ ಆಹಾರ ಬಂದುಬೀಳುವುದಿಲವಷ್ಟೇ'. ಅದಕ್ಕಾಗಿ ಪ್ರಯತ್ನವೂ ಬೇಕೇಬೇಕು. ಅದಕ್ಕಾಗಿ ಚಲಿಸಲೇಬೇಕು. ಆದರೆ ಇಲ್ಲೊಂದು ಜೀವವಿದ್ದೂ ಚಲಿಸದಿರುವ ಜೀವವಿದೆ. ಅಲ್ಲಿ ಜೀವಿಸಲು ಪ್ರಯತ್ನವಿಲ್ಲವೇ?  ಅದು ಯಾವುದು ? ಎಂಬುದು ಯಕ್ಷನು ಕೇಳುವ ಪ್ರಶ್ನೆಯಾಗಿದೆ. ಅದಕ್ಕೆ ಧರ್ಮರಾಜನು 'ಅಂಡ ಅಥವಾ ಮೊಟ್ಟೆ' ಎಂದು ಉತ್ತರವನ್ನು ನೀಡುತ್ತಾನೆ. ಇಲ್ಲಿ ಪ್ರಶ್ನೆಯ ಆಶಯವಿಷ್ಟೇನಾ? ಅಥವಾ ಇನ್ನೇನಾದರೂ ನಿಗೂಹಿತವಾದ ಅರ್ಥವಿದೆಯೇ? ಸಾಮಾನ್ಯವಾಗಿ ಯಕ್ಷನು ಕೇಳುವ ಪ್ರಶ್ನೆಯಲ್ಲಿ ಅಂತಹ ತಾತ್ತ್ವಿಕವಾದ ಹಿನ್ನೆಲೆ ಇದ್ದೇ ಇರುತ್ತದೆ. ಹಾಗಾದರೆ ಅದಾವ ಹಿನ್ನೆಲೆ ಇದಕ್ಕಿದೆ?

ಅಂಡವೆಂದರೆ ಇಲ್ಲಿ ಬೃಹದಾಕಾರವಾದ ಬ್ರಹ್ಮಾಂಡ. ಬ್ರಹ್ಮಾಂಡಕ್ಕೆ ಜೀವವಿದೆ ಆದರೆ ಚಲಿಸುವುದಿಲ್ಲ. ಬ್ರಹ್ಮಾಂಡವೆಂದರೆ ಜೀವಿಯ ಸಮಷ್ಟಿರೂಪ. ವ್ಯಷ್ಟಿಯಲ್ಲಿ  ಜೀವವಿರುವ ವಿಷಯವೆಂದರೆ ಈ ಶರೀರವಾಗಿದೆ. ಶರೀರವನ್ನು ಜಡ ಎಂದು ಕರೆಯಲಾಗುತ್ತದೆ. ವಸ್ತುತಃ ಶರೀರವು ಜಡವೇ ಆದರೂ ಅಲ್ಲಿ ಜೀವದ ಗತಾಗತಿಯೆಂಬುದು ಇರುವುದರಿಂದ ಶರೀರವು ಸಂಚರಿಸುವಂತೆ ಭಾಸವಾಗುತ್ತದೆ. ಶರೀರದಲ್ಲಿರುವ ಜೀವವೂ ವಸ್ತುತ ಜಡವೇ. ಆದರೆ ಅದು ಚಲಿಸಿದಂತೆ ಕಾಣುತ್ತದೆ. 'ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಪರಾಣಿ' ಎಂದು ಗೀತೆಯಲ್ಲಿ ಹೇಳುವಂತೆ ಹಳೆಯದಾದ ಬಟ್ಟೆಯನ್ನು ಬಿಸುಟು ಹೊಸ ಬಟ್ಟೆಯನ್ನು ಮಾನವನು ಧರಿಸುತ್ತಾನಷ್ಟೇ. ಅಂತೆಯೇ ಈ ಜೀವವೂ ಕೂಡ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಪಡೆಯುತ್ತದೆ. ಆಗ ಚಲಿಸಿದಂತೆ ಕಾಣುತ್ತದೆ. ಅದು ಭ್ರಾಂತಿ ಎಂದು ಕರೆಯಲಾಗುತ್ತದೆ.

ಈ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವೂ ವಸ್ತುತಃ ಜಡವೇ. ಚಲಿಸುವುದಿಲ್ಲ. ನಾವು ಶರೀರವನ್ನು ಪಡೆದಿರುವುದರಿಂದ ಜೀವಭಾವ ಬಂತು. ಶರೀರ ಜಡವಲ್ಲವೇ. ಈ ಜೀವವೂ ಒಂದೇ. ಅದು ಶರೀರವನ್ನು ಪಡೆದಿರುವುದರಿಂದ ಜೀವ ಚಲಿಸಿದಂತೆ ಕಾಣುತ್ತದೆ. ಜೀವಾದ್ವೈತವು ನಿತ್ಯವಾದುದು. ಜೀವ ಮತ್ತು ದೇವ ಎಂಬ ಭೇದ ಬಂದಾಗ ಜೀವಕ್ಕೆ ಪೃಥಕ್ ಚೈತನ್ಯವಿದ್ದಂತೆ ತೋರುತ್ತದೆ. ಜಗತ್ತಿಗೆಲ್ಲ ಯಾವುದರಿಂದ ಚೈತನ್ಯವೂ ಬರುವುದೋ ಆ ಪರಬ್ರಹ್ಮವು ಸಮಸ್ತ ವಿಶ್ವವನ್ನು ವ್ಯಾಪಿಸಿದೆ. ಅಲ್ಲಿ ಅವಕಾಶವೇ ಇಲ್ಲ. ಎಲ್ಲಕಡೇ ಅದೇ ತುಂಬಿದೆ. ಚಲನವು ಆಗಬೇಕಾದರೆ ಅವಕಾಶ ಬೇಕಷ್ಟೆ. ಮೊದಲ ಸ್ಥಾನದಿಂದ ಬಿಟ್ಟು ಇನ್ನೊಂದು ಸ್ಥಾನವನ್ನು ಪಡೆಯಬೇಕಾಗುತ್ತದೆ. ಬ್ರಹ್ಮಾಂಡವನ್ನು ವ್ಯಾಪಿಸಿರುವ ಚೈತನ್ಯವಸ್ತುವಿಗೆ ಈ ಅವಕಾಶವಿಲ್ಲ. ಆಕಾಶವೆಂಬುದು ಬೇರೆ ಬೇರೆ ಉಪಾಧಿಯನ್ನು ಪಡೆದಾಗ ಪಾತ್ರೆಯಲ್ಲಿರುವ ಆಕಾಶ, ಪೆಟ್ಟಿಗೆಯಲ್ಲಿರುವ ಆಕಾಶ ಎಂಬ ಭೇದವನ್ನು ಪಡೆಯುತ್ತದೆ. ಪಾತ್ರೆ, ಪೆಟ್ಟಿಗೆ ರೂಪಾವಾದ ಉಪಾಧಿಯನ್ನು ತೆಗೆದರೆ ಅಲ್ಲಿರುವುದು ಕೇವಲ ನಿರುಪಾಧಿಕವಾದ ಆಕಾಶ. ಅಂತೆಯೇ ಇಲ್ಲೂ ಬ್ರಹ್ಮಾಂಡಕ್ಕೆ ಚಲನವಿಲ್ಲ. ಅಂತೆಯೇ ಪಿಂಡಾಂಡಕ್ಕೂ ಚಲನೆಯಿಲ್ಲ. ಜೀವದಿಂದ ತುಂಬಿದ ಶರೀರಕ್ಕೂ ಚಲನೆಯಿಲ್ಲ. ಎಲ್ಲ ಚಲನೆಯೂ ಭ್ರಾಂತಿಯೇ. 

ಸೂಚನೆ : 26/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 31 ಧೃಷ್ಟದ್ಯುಮ್ನ-ದ್ರೌಪದಿಯರ ಜನನ (Vyaasa Vikshita - 31 Dhrishtadyuma-Draupadiyara Janana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಯಾಜ-ಉಪಯಾಜರೆಂದರೆ ಅಸಾಮಾನ್ಯರೇ ಸರಿ. "ಹವ್ಯವನ್ನು ಅರ್ಪಿಸಿದವನು ಯಾಜ; ಮಂತ್ರಗಳನ್ನು ಉಚ್ಚರಿಸಿದವನು ಉಪಯಾಜ. ಹಾಗಿರಲು ಫಲಿಸದೇ ಈ ಯಜ್ಞ?" - ಎನ್ನುತ್ತಾ, ಸಂಸ್ಕಾರ-ಯುಕ್ತವಾದ ಹವಿಸ್ಸನ್ನು ಅಗ್ನಿಗೆ ಆಹುತಿಯಾಗಿ ಯಾಜನು ಸಮರ್ಪಿಸಿದ್ದೇ ತಡ, ಆ ಅಗ್ನಿಯಿಂದ ದೇವ-ಸದೃಶನಾದ (ಎಂದರೆ ದೇವತೆಯನ್ನು ಹೋಲುವಂತಹ) ಕುಮಾರನು ಮೇಲೆದ್ದನು. (ಕುಮಾರೋ ದೇವ-ಸಂನಿಭಃ). ಹೇಗಿದ್ದನಾತ?: ಜ್ವಾಲೆಯ ಬಣ್ಣ! ಘೋರವಾದ ರೂಪ! ಹುಟ್ಟುತ್ತಲೇ ಕಿರೀಟ-ಧಾರಿ, ಉತ್ತಮವಾದ ಕವಚವನ್ನೂ ಧಾರಣೆ ಮಾಡಿದ್ದಾನೆ. ಖಡ್ಗವನ್ನೂ ಧನುಸ್-ಶರಗಳನ್ನೂ (ಎಂದರೆ ಬಿಲ್ಲು-ಬಾಣಗಳನ್ನೂ) ಧರಿಸಿದ್ದಾನೆ. ಮತ್ತೆ ಮತ್ತೆ ಗರ್ಜಿಸುತ್ತಾ ಶ್ರೇಷ್ಠವಾದ ರಥವನ್ನು ಹತ್ತಿ ಮುಂದೆ ಸಾಗಹತ್ತಿದನು. ಆಗ ಪಾಂಚಾಲರೆಲ್ಲರೂ ಪ್ರಹೃಷ್ಟರಾದರು (ಎಂದರೆ ತುಂಬಾ ಹರ್ಷಗೊಂಡರು). ಸಾಧು! ಸಾಧು! ("ಭಲೇ ಭಲೇ") - ಎಂದು ಧ್ವನಿಗೈದರು.

ಇವರುಗಳೆಲ್ಲರೂ ಹರ್ಷಾವಿಷ್ಟರಾದುದನ್ನು (ಎಂದರೆ ಹರ್ಷದ ಆವೇಶದಿಂದ ಕೂಡಿರುವುದನ್ನು) - ಅರ್ಥಾತ್ ಉಬ್ಬಿಹೋದ ಅವರ (ಭಾರವ)ನ್ನು ಭೂಮಿಯು ಭರಿಸದಾದಳು. ಅಷ್ಟರಲ್ಲಿ ಖೇಚರವಾದ (ಎಂದರೆ ಆಕಾಶ-ಗಾಮಿಯಾದ) ಮಹಾಭೂತವೊಂದು ಅದೃಶ್ಯವಾಗಿದ್ದುಕೊಂಡು ಹೀಗೆ ನುಡಿಯುತು: "ಈ ರಾಜಕುಮಾರನು ಪಾಂಚಾಲರಿಗೆ ಭಯಾಪಹ (ಎಂದರೆ ಭಯವನ್ನು ಹೋಗಲಾಡಿಸತಕ್ಕವನು) ಹಾಗೂ ಕೀರ್ತಿಕರ; ರಾಜ(ನಾದ ದ್ರುಪದ)ನಿಗೆ ಶೋಕಾಪಹ(ದುಃಖವನ್ನು ಇಲ್ಲವಾಗಿಸುವವನು); ದ್ರೋಣನ ವಧಕ್ಕೆಂದೇ ಜನಿಸಿರತಕ್ಕವನಿವನು!" - ಎಂಬುದಾಗಿ.

ಜೊತೆಗೇ ವೇದೀ-ಮಧ್ಯದಿಂದ (ಎಂದರೆ ಯಜ್ಞವೇದಿಕೆಯ ನಡುವಿನಿಂದ) ಕುಮಾರಿಯಾದ ಪಾಂಚಾಲಿಯೂ ಸಮುತ್ಥಿತಳಾದಳು. ಹೇಗಿದ್ದಳವಳು?: ಸುಂದರಿ; ದರ್ಶನೀಯ ಅಂಗಗಳನ್ನು ಹೊಂದಿದ್ದಳು: ಚೆಂದವಾಗಿರುವ ಕಪ್ಪಾದ ಕಣ್ಣುಗಳು ಅವಳವು. ಕಪ್ಪು ಬಣ್ಣ. ಕಮಲದ ದಳದಂತಿರುವ ಕಣ್ಣುಗಳು. ಕಪ್ಪಾಗಿ ಗುಂಗುರು ಗುಂಗುರಾದ ಕೇಶ ಅವಳದು. ಉಗುರುಗಳು ಕೆಂಪನಾಗಿಯೂ ಉದ್ದವಾಗಿಯೂ ಇದ್ದವು. ಒಳ್ಳೆಯ ಹುಬ್ಬು. ಸುಂದರವೂ ಪೀನವೂ (ಎಂದರೆ ಉಬ್ಬಿದ್ದವೂ) ಆದ ಪಯೋಧರಗಳು. ಮಾನುಷವಾದ ರೂಪವನ್ನು ಧರಿಸಿರುವ ಸಾಕ್ಷಾದ್ ದೇವತೆಯಂತೆಯೇ ಅವಳಿದ್ದಳು. ಅವಳ ಶರೀರದಿಂದ ನೀಲಕಮಲದೆಂಬಂತಿನ ಗಂಧವು ಹೊಮ್ಮಿದ್ದು, ಅದು ಒಂದು ಕ್ರೋಶದಾಚೆಗೂ ಧಾವಿಸುತ್ತಿತ್ತು! (ಕ್ರೋಶವೆಂದರೆ ಸುಮಾರು ಮೂರು ಮೈಲಿಯೆನ್ನಬಹುದು.) ಅವಳ ರೂಪ ಶ್ರೇಷ್ಠವಾದದ್ದು; ಅದಕ್ಕೊಂದು ಹೋಲಿಕೆಯೇ ಭೂಮಿಯಲ್ಲಿರದು. ದೇವತೆಗಳೂ ದಾನವರೂ ಯಕ್ಷರೂ ಬಯಸಬಹುದಾದ ದೇವರೂಪಿಣಿ ಅವಳು.

ಆ ಸುಂದರಾಂಗಿಯು ಜನಿಸಿದಾಗಲೂ ಅಶರೀರವಾದ ವಾಣಿಯು ಹೇಳಿತು: "ಸರ್ವನಾರಿಯರಲ್ಲೂ ಶ್ರೇಷ್ಠಳೆನಿಸುವ ಈಕೆ(ಯ ಹೆಸರು) ಕೃಷ್ಣೆ. ಕ್ಷತ್ರಿಯರ ನಾಶಕ್ಕೆ ಇವಳು ಕಾರಣಳಾಗುವಳು. ಸುಂದರವಾದ ನಡುವುಳ್ಳ ಈಕೆ ಕಾಲ ಬಂದಾಗ ವಾಸ್ತವವಾಗಿ ದೇವಕಾರ್ಯವನ್ನೇ ಮಾಡುವಳು (ಸುರಕಾರ್ಯಂ ಕರಿಷ್ಯತಿ). ಅವಳ ನಿಮಿತ್ತವಾಗಿ ಕೌರವರಿಗೆ ಮಹಾಭಯವು ಹುಟ್ಟಲಿದೆ! - ಎಂಬುದಾಗಿ.

ಅದನ್ನು ಕೇಳಿ ಪಾಂಚಾಲ(ದೇಶದವ)ರೆಲ್ಲರೂ ಸಿಂಹಸ್ತೋಮವು ಮಾಡುವಂತೆ ನಾದ ಮಾಡಿದರು. ಆನಂದ ತುಂಬಿದವರಾದ ಇವರ ಭಾರವನ್ನು ಭೂಮಿಯು ಸಹಿಸಲಾರದಾದಳು.

ಮಕ್ಕಳಿಗಾಗಿ ಹಂಬಲಿಸಿದ್ದ ಪಾರ್ಷತಿಯು (ಎಂದರೆ ದ್ರುಪದನ ಪತ್ನಿಯು) ಇವರಿಬ್ಬರನ್ನೂ ಕಂಡವಳೇ ಯಾಜನ ಬಳಿ ಬಂದು ಕೇಳಿಕೊಂಡಳು: ಇವರಿಬ್ಬರೂ ನನ್ನನ್ನಲ್ಲದೆ ಮತ್ತಾರನ್ನೂ ತಾಯಿಯೆಂದು ಭಾವಿಸದಿರಲಿ" - ಎಂಬುದಾಗಿ. "ಹಾಗೆಯೇ ಆಗಲಿ" ಎಂದು ಯಾಜನು ರಾಜನಿಗೆ ಪ್ರಿಯವಾದುದನ್ನುಂಟುಮಾಡಲೋಸುಗ ಹೇಳಿದನು.

ಸೂಚನೆ : 26/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, March 20, 2023

ಲೋಕಹಿತಕ್ಕಾಗಿ ಮಹರ್ಷಿಗಳ ತ್ಯಾಗ (Lokahitakkagi Maharsigala Tyaga)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)



ದೇವತೆಗಳ ಶಕ್ತಿ ಹಾಗೂ ಗುಣಗಳು ಲೋಕಹಿತಕ್ಕೆ ಕಾರಣವಾದುದರಿಂದ,  ಭಗವಂತ, ದೇವತೆಗಳ ಪಕ್ಷಪಾತಿಯಾಗಿರುತ್ತಾನೆ; ದೇವತಾಮಾರ್ಗವನ್ನು ಅನುಸರಿಸಿದರೆ ಶ್ರದ್ಧಾಳುಗಳು ಸತ್ಯಸಾಕ್ಷಾತ್ಕಾರ ಹೊಂದಲು ಸಹಾಯವಾಗುತ್ತದೆ  ಎಂಬುದು  ಹಿರಿಯರ ಮಾತು. ಪುರಾಣಗಳಲ್ಲಿ, ದೇವಾಸುರ ಸಂಗ್ರಾಮಗಳಲ್ಲಿ ದೇವತೆಗಳ ಪರವಾಗಿ ನಿಂತ ಋಷಿಮುನಿಗಳು, ರಾಜಮಹಾರಾಜರು ತ್ಯಾಗಗಳನ್ನು ಮಾಡಿದ್ದಾರೆ.  ದಧೀಚಿಮಹರ್ಷಿಗಳು ಇಂತಹ ತ್ಯಾಗಿಗಳಲ್ಲಿ ಒಬ್ಬರು.  ಇವರ ಬಗ್ಗೆ ಪ್ರಸ್ತಾವನೆ ಋಗ್ವೇದದ ಕಾಲದಿಂದಲೂ ಬಂದಿದೆ. ವಿವಿಧ ಕಥಾರೂಪಗಳೂ  ಇವೆ. ಇವರು ದೇವತೆಗಳ ಸಹಾಯಕ್ಕಾಗಿ ತಮ್ಮ ದೇಹವನ್ನೇ ತ್ಯಾಗಮಾಡಿದಂತಹ ಮಹಾತ್ಮರು. ಲೋಕಹಿತಕ್ಕಾಗಿ ಸೇವೆ ಮಾಡಿದರೆ ಭಗವಂತನ ಸೇವೆಯನ್ನೇ ಮಾಡಿದಂತಾಗುತ್ತದೆ. ಯೋಗಿವರೇಣ್ಯರಾದ ಶ್ರೀರಂಗಸದ್ಗುರುಗಳ ವಾಣೀ ಇಲ್ಲಿ ಸ್ಮರಣೀಯ. "ಕಣ್ಣಿನಲ್ಲಿ ಒಂದು ತೊಟ್ಟು ರಕ್ತ ಇರುವವರೆಗೂ ಬಿಡದೆ ಅವನ ಸೇವೆ ಮಾಡಬೇಕು. ಗಂಧ ತೇಯುವಂತೆ ಅವನಿಗಾಗಿ ದೇಹ ತೇಯ್ದುಬಿಡಬೇಕು".

 ದೇವೇಂದ್ರನು ಒಮ್ಮೆ ವೃತ್ರಾಸುರನೆಂಬ ರಾಕ್ಷಸನ ಕಾರಣದಿಂದ ದೇವಲೋಕದ ಪದವಿಯನ್ನು ಕಳೆದುಕೊಳ್ಳುತ್ತಾನೆ. ವೃತ್ರಾಸುರನಿಗೆ "ಅಲ್ಲಿಯವರೆಗಿದ್ದ ಯಾವ ಶಸ್ತ್ರಗಳಿಂದಲಾಗಲೀ, ಮರ ಅಥವಾ ಲೋಹಗಳಿಂದ  ಮಾಡಿದ  ಶಸ್ತ್ರಗಳಿಂದಾಗಲಿ ಸಂಹರಿಸಲು  ಅಸಾಧ್ಯ" ಎಂಬುದಾಗಿ ವರವಿರುತ್ತದೆ. ದಧೀಚಿ ಮಹರ್ಷಿಗಳ ಮೂಳೆಗಳಿಂದ ತಯಾರಾದ ಶಸ್ತ್ರದಿಂದ ಮಾತ್ರ ವೃತ್ರಾಸುರನನ್ನು ಕೊಲ್ಲಲು ಸಾಧ್ಯವೆಂದು ದೇವತೆಗಳಿಗೆ ಮಹಾವಿಷ್ಣುವಿನಿಂದ ತಿಳಿಯುತ್ತದೆ. ದೇವತೆಗಳು ದಧೀಚಿಗಳ ಬಳಿ ಬಂದು ವೃತ್ರನನ್ನು ಕೊಲ್ಲಲು ಸಹಾಯ ಬೇಡುತ್ತಾರೆ. ದಧೀಚಿಗಳು ಪ್ರಾರ್ಥನೆಗೆ ದಯೆ ತೋರಿ ಒಪ್ಪಿ, ತಾವು ಯೋಗಸಮಾಧಿಯಲ್ಲಿ ದೇಹತ್ಯಾಗ ಮಾಡುವುದಾಗಿಯೂ ನಂತರ ದೇವತೆಗಳು ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಬಹುದೆಂದೂ ತಿಳಿಸುತ್ತಾರೆ.  ಇಂದ್ರನು ಎಲ್ಲ ನದಿಗಳ ಪವಿತ್ರ ತೀರ್ಥವನ್ನು ದಧೀಚಿಗಳ ಹಂಬಲದಂತೆ ಅಲ್ಲಿಯೇ ತರಿಸಲಾಗಿ ದಧೀಚಿಗಳು ತೃಪ್ತರಾಗಿ ಯೋಗಸಮಾಧಿಯಲ್ಲಿ ಮುಳುಗುತ್ತಾರೆ. ನಂತರ, ದೇವತೆಗಳು ದಧೀಚಿಗಳ ಬೆನ್ನುಮೂಳೆಯಿಂದ ವಿಶ್ವಕರ್ಮನ ನೆರವಿನಿಂದ ಪ್ರಖ್ಯಾತವಾದ ವಜ್ರಾಯುಧವನ್ನು ತಯಾರಿಸುತ್ತಾರೆ. ಮುಂದೆ ಇಂದ್ರನು ಆ ವಜ್ರಾಯುಧದಿಂದಲೇ ವೃತ್ರನನ್ನು ಕೊಂದು ಜಯಶಾಲಿಯಾಗುತ್ತಾನೆ. 

ಮೂಳೆಯ ಸಾಂದ್ರತೆಗಿಂತ ಕೆಲವು ಲೋಹಗಳಿಗೆ ಸಾಂದ್ರತೆ ಹೆಚ್ಚು. ಹಾಗಿದ್ದಲ್ಲಿ ದಧೀಚಿಗಳ ಮೂಳೆಯನ್ನು ಸೂಚಿಸಿದ್ದು ಏಕೆ ? ಇದನ್ನು ತಾತ್ತ್ವಿಕ ದೃಷ್ಟಿಯಿಂದಲೂ ಗಮನಿಸಬಹುದು. ಮಾನವನಿಗೆ ಬ್ರಹ್ಮ ಮಾರ್ಗ ತೆರೆಯಬೇಕಾದರೆ, ಕುಂಡಲಿನೀ ಶಕ್ತಿಯು ಅವನ ಬೆನ್ನುಹುರಿಯೊಳಗೆ  ಮೇಲ್ಮುಖವಾಗಿ  ಹರಿಯಬೇಕಾಗುತ್ತದೆ ಎಂದು ಯೋಗಶಾಸ್ತ್ರಗಳು ತಿಳಿಸುತ್ತವೆ. ನಮ್ಮ ಬೆನ್ನುಹುರಿಗೆ ಆಶ್ರಯವಾಗಿರುವ ಬೆನ್ನುಮೂಳೆಗೆ ಯೋಗಶಾಸ್ತ್ರದಲ್ಲಿ ವಜ್ರದಂಡ, ಮೇರುದಂಡ ಎಂದು ಕರೆಯುತ್ತಾರೆ.  ಕುಂಡಲಿನೀ ಶಕ್ತಿಯು ಊರ್ಧ್ವಮುಖವಾಗಿ ಸಂಚರಿಸುವ ಪ್ರಕ್ರಿಯೆಯನ್ನೇ ಅಸುರರ ಸಂಹಾರವು  ವಜ್ರದಂಡದಿಂದಲೇ ಆಗಿ ದೇವತೆಗಳ ವಿಜಯವಾಯಿತೆಂದು ಪುರಾಣವು ರೂಪಿಸುತ್ತದೆ.  ಹಾಗೆಯೇ ಪವಿತ್ರ ನದಿಗಳು ಅವರ ಬಳಿ ಅಷ್ಟು ಶೀಘ್ರವಾಗಿ ಬಂದದ್ದು ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.  ತ್ರಿಭುವನವ್ಯಾಪಿನಿಯಾದ ಜ್ಞಾನಗಂಗೆಯು  ಕಾಶೀಕ್ಷೇತ್ರವಾದ ನಮ್ಮ ಶರೀರದಲ್ಲಿಯೇ ಇದೆಯೆಂದು ತಿಳಿಸುತ್ತಾರೆ ಆಚಾರ್ಯ ಶಂಕರರು.  ನಾವೂ ದಧೀಚಿ  ಮಹರ್ಷಿಗಳಂತೆ ಅಂತರಂಗ ಮಾರ್ಗದಲ್ಲಿ ಸಾಗಿ,  ಭಗವತ್ಕೈಂಕರ್ಯ ಮಾಡುವ ಸದ್ಬುದ್ಧಿಯನ್ನು ದೈವ ಕರುಣಿಸಲಿ  ಎಂದು ಆಶಿಸೋಣ.

ಸೂಚನೆ: 20/03/2023 ರಂದು ಈ ಲೇಖನವು ವಿಜಯ ವಾಣಿ ಯಲ್ಲಿ ಪ್ರಕಟವಾಗಿದೆ.  

ಬೇವು ಬೆಲ್ಲದ ರಸಗವಳ (Bevu Bellada Rasagavala)

ಲೇಖಕರು: ಡಾ|| ಪುನೀತ್ ಕುಮಾರ್. ಪಿ.
ಮಿಂಚಂಚೆ (lekhana@ayvm.in)



ಯುಗಾದಿ ಎಂದರೆ ಬೇವು-ಬೆಲ್ಲದ  ಸ್ಮರಣೆ ನಮ್ಮ ಮನಸ್ಸಿಗೆ ಮೂಡುತ್ತದೆ. ಯುಗಾದಿಯಲ್ಲಿನ  ಆಚರಣೆಗಳು, ಸಂಭ್ರಮ ಸಡಗರಗಳು, ಬೇವುಬೆಲ್ಲಗಳ ಸೇವನೆ  ಹಬ್ಬದ ಆಚರಣೆಯ ಬಹಳ ಮುಖ್ಯವಾದ ಭಾಗಗಳು. ಯುಗಾದಿಯ ದಿನ ನಾವು ಸೇವಿಸುವ ಬೇವು ಬೆಲ್ಲಗಳನ್ನು ಕಷ್ಟ-ಸುಖಗಳು, ದು:ಖ-ಸಂತೋಷಗಳು, ಅನುಕೂಲ-ಪ್ರತಿಕೂಲಗಳಿಗೆ ಹೋಲಿಸಿ ಅರ್ಥೈಸಿಕೊಳ್ಳುವುದು ರೂಢಿ. ಯುಗಾದಿ ಹಬ್ಬದಂದು ಅಭ್ಯಂಗಸ್ನಾನ ಮಾಡಿ, ಮನೆ-ಮಠಗಳನ್ನು ಶುದ್ಧಗೊಳಿಸಿ, ತಳಿರು-ತೋರಣಗಳಿಂದ ಅಲಂಕಾರ ಮಾಡಿ, ಪ್ರತಿಪತ್ತಿನ ಸಂಕಲ್ಪ ಮಾಡಬೇಕು. ನಂತರ ದೇವತಾಪೂಜೆ, ಹೋಮ, ಪಂಚಾಂಗಶ್ರವಣ, ದಾನ,  ಬೇವು-ಬೆಲ್ಲ ಹಾಗು ಸಿಹಿ ಖಾದ್ಯಗಳ ನೈವೇದ್ಯ ಮಾಡಿ ಪ್ರಸಾದಸೇವನೆ ಬಂಧುಮಿತ್ರರೊಡನೆ ಸಂತೋಷದಿಂದ ಮಾಡುವ ಪರ್ವಕಾಲ ಇದು. ನಾವಿಲ್ಲಿ ಯುಗಾದಿಯ ವಿಷೇಶ ನೈವೇದ್ಯ ಬೇವು-ಬೆಲ್ಲದ ವೈಜ್ಞಾನಿಕ ಹಿನ್ನೆಲೆಯನ್ನು ಅರಿಯೋಣ.


ಆಹಾರ ರಸಗಳು

ನಾವು ದಿನನಿತ್ಯ ಸೇವಿಸುವ ಆಹಾರವು ೬ ವಿಧವಾದ ರಸ[ರುಚಿ]ಗಳ ಸಂಯೋಗ . ಇವೇ ಷಡ್ರಸಗಳು. 

೧. ಮಧುರ (ಸಿಹಿ)

೨. ಅಮ್ಲ (ಹುಳಿ)

೩. ಲವಣ (ಉಪ್ಪು)

೪. ತಿಕ್ತ (ಕಹಿ) 

೫. ಕಟು (ಖಾರ)

೬. ಕಷಾಯ (ಒಗಚು)

ಮಾನವನ ದೇಹದ ವಿವಿಧ ಅಂಗಾಂಗಗಳಿಗೆ ಬಗೆಬಗೆಯ ರಸಗಳ ಸಂಯೋಗ ಇರುವ ಆಹಾರ ಪದರ್ಥಗಳಿಂದಲೇ ಪೋಷಣೆ ದೊರೆಯಬೇಕಿದೆ. ಒಂದೇ ರೀತಿಯ, ಒಂದೇ ಬಗೆಯ ದ್ರವ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು  ದೀರ್ಘಕಾಲದಲ್ಲಿ ಬಳಸಿದರೆ ದೇಹ ದುರ್ಬಲವಾಗುವುದು. ಆಯುರ್ವೇದ ಮಹರ್ಷಿ ಚರಕಾಚಾರ್ಯರು ಹೇಗೆ ಹೇಳಿದ್ದಾರೆ-

ಏಕರಸಾಭ್ಯಾಸೋ ದೌರ್ಬಲ್ಯಕರಾಣಾಮ್ ।

ಸರ್ವರಸಾಭ್ಯಾಸೋ ಬಲಕರಾಣಾಮ್ ॥

ನಮ್ಮ ಆಹಾರದಲ್ಲಿ ಎಲ್ಲಾ ರಸಗಳ ರುಚಿಕಟ್ಟಾದ ಮಿಶ್ರಣವಿದ್ದಲ್ಲಿ, ಸಪ್ತಧಾತುಗಳ ಪೋಷಣೆ ಪೂರ್ಣ ರೀತಿಯಲ್ಲಿ ಉಂಟಾಗಿ, ದೇಹಪುಷ್ಟಿಗೆ ಕಾರಣವಾಗುವುದು. ಅಕಸ್ಮಾತ್ತಾಗಿ, ಕೆಲವೇ ರಸಯುಕ್ತ(ರೀತಿಯ) ಆಹಾರಗಳ ಸೇವನೆ ದೇರ್ಘಕಾಲದಲ್ಲಿ ಇಟ್ಟುಕೊಂಡಾಗ ಆಹಾರವೇ ದೇಹದ ಅಂಗಾಂಗಗಳನ್ನು ದುರ್ಬಲಗೊಳಿಸಿ ಹಲವಾರು ರೋಗಗಳಿಗೆ ಅಂಕುರವಾಗುವುದು.


ಬೇವು ಬೆಲ್ಲ ಸೇವನೆಯ ವೈಜ್ಞಾನಿಕ ಹಿನ್ನೆಲೆ:


ಕಹಿರುಚಿಯ ಗುಣ-ದೋಷಗಳು: 

ಕಹಿ ಪದಾರ್ಥಗಳು ಆಸ್ವಾದನೆಗೆ ಇಷ್ಟವಾಗದಿದ್ದರೂ, ರಸನದ(ನಾಲಿಗೆ) ರುಚಿ

ಅನುಭವದ  ಗುಣವರ್ಧನೆ ಮಾಡುತ್ತದೆ. ದೆಹದಲ್ಲಿರಬಹುದಾದ ಕ್ರಿಮಿ ಹಾಗು ವಿಷವನ್ನು ನಿವಾರಿಸುತ್ತದೆ. ಚರ್ಮರೋಗ, ತುರಿಕೆ, ಕಜ್ಜಿ, ಜ್ವರ, ಸ್ತನ್ಯದೋಷ, ಕೀವುದೋಷ, ಪಿತ್ತ ಹಾಗು ಕಫದೋಷ ನಿವಾರಿಸುತ್ತದೆ. 

ನಾವು ಕಹಿಪದಾರ್ಥವನ್ನೇ  ಹೆಚ್ಚಾಗಿ ಸೇವಿಸಿದರೆ, ಚರ್ಮ ಹಾಗು ದೇಹ ಸಾರಹೀನವಾಗಿ, ಒಣಗಿ ಒರಟಾಗುತ್ತದೆ. ದೈಹಿಕಬಲ ಕುಗ್ಗುತ್ತದೆ. ಮನಸ್ಸು ಮೋಹಗೊಳ್ಳುತ್ತದೆ. ಮಂದಬುದ್ಧಿ ತರುತ್ತದೆ ಹಾಗು ಇತರೆ ವಾತರೋಗಗಳಿಗೆ ಅಂಕುರವಾಗುತ್ತದೆ.  


ಬೇವಿನ ವೈಶಿಷ್ಟ್ಯ - ಬೇವು ಎಂದೊಡನೆ ನಮ್ಮ ಮುಖ ಒಣಗುವುದು. ಅದರ ಕಹಿರಸವು ಮರದ ಎಲ್ಲಾಭಾಗಗಳಲ್ಲಿ ವ್ಯಾಪಿಸಿರುತ್ತದೆ.  ಆದರೆ ಬೇವು ಪಿತ್ತ ಹಾಗು ಕಫ ದೋಷಗಳನ್ನು ನಿವಾರಣೆ ಮಾಡುತ್ತದೆ.  ಹೆಚ್ಚಾದ ಸೇವನೆ, ವಾತರೋಗಕ್ಕೆ ಕಾರಣವಾಗುತ್ತದೆ. ಸಾಮಾನ್ಯತರ ಮಧುಮೇಹಿಗಳು ಹೆಚ್ಚು ಬಳಸಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ.

 ಬೇವು ನಾಲಿಗೆಯ ರಸನಾಡಿಯ ಗುಣವರ್ಧನೆ ಮಾಡಿ ಎಲ್ಲಾ ರೀತಿಯ ರಸಗಳ ಆಸ್ವಾದನೆಗೆ ಸಹಾಯಮಾಡುತ್ತದೆ. ಇದೇ ಕಾರಣಕ್ಕೆ ಬೇವಿನ ಕಾಷ್ಟದಿಂದ ಹಲ್ಲುತಿಕ್ಕುವುವ ಸಂಪ್ರದಾಯ ರೂಢಿಯಲ್ಲಿದೆ. 


ಸಿಹಿರುಚಿಯ ವಿವರಣೆ 

ಸಿಹಿರಸದ ಪದಾರ್ಥಗಳು ನಿಯಮಿತವಾಗಿ ಬಳಸುವುದರಿಂದ ಸಪ್ತಧಾತುಗಳು ವೃದ್ಧಿಯಾಗಿ, 'ಒಜಸ್ಸು' ಯೆಂಬ ಸಪ್ತಧಾತುಸಾರ ದೇಹದಲ್ಲಿ ಹೆಚ್ಚಾಗಿ ಇಂದ್ರಿಯಶಕ್ತಿ ಅಭಿವೃದ್ಧಿಯಾಗುವುದು. ಸಿಹಿರುಚಿಯು ಆಯುಷ್ಯಕರ, ಷಡಿಂದ್ರಿಯ ಪ್ರಸನ್ನತೆ ತರುವುದು, ದೇಹದ ಬಲ ಹೆಚ್ಚಿಸುವುದು. ಸಿಹಿರಸವು ವಾತಪಿತ್ತನಿವಾರಕ ಹಾಗು ಯುಗಾದಿಯಕಾಲದ ಬಿಸಿಲಿನಿಂದ ಆಗುವ ಬಲಹೀನತೆಯನ್ನು ನಿವಾರಿಸುತ್ತದೆ. ಸಿಹಿರಸವು ತನ್ನೊಳಗೆ ಸೋಮ/ಜಲ ದೇವತೆಯನ್ನು ಅಡಗಿಸಿಕೊಂಡಿರುತ್ತದೆ. ಜಲದೇವತೆಯೇ ಸಿಹಿರಸದ ಅಧಿಪತಿ.

 ಆದರೆ  ನಾವು ಸಿಹಿಪದಾರ್ಥವನ್ನು ಹೆಚ್ಚಾಗಿ ಸೇವಿಸಿದರೆ ಬೊಜ್ಜು, ಆಲಸ್ಯ, ಅತಿಯಾದ ನಿದ್ರೆ, ದೇಹ ಭಾರ, ಅಜೀರ್ಣ, ಮುಂತಾದ ಕಾಯಿಲೆಗಳು ಕಫದೋಷದಿಂದ ಹುಟ್ಟಿಕೊಳ್ಳುತ್ತವೆ.


ಬೆಲ್ಲದ ವೈಶಿಷ್ಟ್ಯ- ಬೆಲ್ಲವು ಸಿಹಿ ಪದಾರ್ಥಗಳಲ್ಲಿ  ಶ್ರೇಷ್ಠ.  ಬೆಲ್ಲವು ಸಿಹಿಯ ಜೊತೆಗೆ ಕ್ಷಾರೀಯ ಗುಣವನ್ನು ಹೊಂದಿದೆ. ಬೆಲ್ಲವು ಉಷ್ಣ ಪದಾರ್ಥ, ಜೀರ್ಣಕ್ಕೆ ಸುಲಭ. ಕಫ ಹಾಗು ವಾತ ದೋಷಗಳನ್ನು ನಿವಾರಿಸುತ್ತದೆ. ಬೆಲ್ಲವನ್ನು ಪಿತ್ತಕಾಲದಲ್ಲಿ, ಪಿತ್ತಸಂಬಂಧೀ ಕಾಯಿಲೆಗಳಲ್ಲಿ, ಕಲುಷಿತ ರಕ್ತ ಇದ್ದಲ್ಲಿ ಉಪಯೋಗಿಸಬಾರದು. ಹಳೆಯದಾದ ಬೆಲ್ಲಕ್ಕೆ 'ಪುರಾಣಗುಡ' ಎಂದು ಹೆಸರು. ಇದು ವಾತ ಹಾಗು ಪಿತ್ತ ಶಮನ ಮಾಡಿ, ಸಪ್ತಧಾತುಗಳ ಪೋಷಣೆಮಾಡುವುದು. ಬೆಲ್ಲದಿಂದ ತಯಾರಾದ ಪದಾರ್ಥಗಳು ಬಿಸಿಲಿನಲ್ಲಿ ಚೇತೋಹಾರಿಯಾಗಿದ್ದು, ಹೋಳಿ/ ಯುಗಾದಿ ಸಮಯದಲ್ಲಿ ಇದರ ಸೇವನೆ ಅವಶ್ಯ ಎಂಬುದು  ವೈಜ್ಞಾನಿಕ. ಬೆಲ್ಲವು ಹೃದ್ರೋಗ, ಜ್ವರ, ಮೂತ್ರಕೋಶದ ತೊಂದರೆಗಳು, ರಕ್ತಹೀನತೆ, ಅತಿಮೂತ್ರ, ಕರುಳಿನ ಕಾಯಿಲೆಯಲ್ಲಿ ಪಥ್ಯ.


ಹೀಗೆ ಸಿಹಿ- ಕಹಿ ರುಚಿಗಳಲ್ಲಿ ನೇರವಾದ ವೈರೋಧ್ಯ ಇಲ್ಲದಿದ್ದರೂ, ಗುಣಾನುಸಾರ ಹಲವು ವಿರೋಧ ಕಾಣಬಹುದು. ರೂಢಿಯಲ್ಲಿ ಸಿಹಿ-ಕಹಿಗಳ ವಿರೋಧಭಾವ ಗ್ರಹಿಸಿಕೊಂಡಿದ್ದೇವೆ. ಜೀವನದ ಕಷ್ಟ-ಸುಖಗಳಿಗೆ ಹೋಲಿಸಿಕೊಳ್ಳುತ್ತೇವೆ. ಜೀವನದ ಕಹಿಯೂ ಅನೇಕ ಬಾರಿ ಪರ್ಯವಸಾನದಲ್ಲಿ ನಮಗೆ ಸಿಹಿಯೆನಿಸುವ ಪಾಠ ಕಲಿಸುವುದುಂಟು. ಯುಗಾದಿಯಂದು ಬೇವಿನ ಸೇವನೆ ತುಂಬಾ ಮುಖ್ಯ. ಬೆಲ್ಲದೊಂದಿಗೆ ಸೇವಿಸುತ್ತೇವೆ.  ಶ್ರೀರಂಗಮಹಾಗುರುಗಳು ಹೇಳಿದಂತೆ  ''ಒಗರೇ ಆಗಲಿ, ಕಹಿಯೇ ಆಗಲಿ, ನೇರವಾಗಿ ಗಂಟಲಲ್ಲಿ ಇಳಿಯುವುದಿಲ್ಲ. ಅದೇ ಮಧುರ ರಸದ ಜೊತೆಯಲ್ಲಿ ತೆಗೆದುಕೊಂಡರೆ ಇಳಿದುಬಿಡುತ್ತೆ''. ಎಲ್ಲಾ ರಸಗಳು ಕೂಡ ಕೊನೆಗೆ ಮಧುರದಲ್ಲಿ, ಆ ಸಕಲಸುಮಧುರನಾದ, ಮಧುರಾಧಿಪತಿಯಾದ ಭಗವಂತನಲ್ಲಿ ಪರ್ಯವಸಾನ ಹೊಂದಿ ಮೋಕ್ಷಕಾರಕವಾಗುವುವು. ಯುಗಾದಿ ವರ್ಷದ ಆರಂಭ. ಇಡೀ ವರ್ಷದಲ್ಲಿ ನಾವು ಸಿಹಿ-ಕಹಿಗಳ ಸಮತೋಲನವನ್ನು ಸಾಧಿಸಿ ಜೀವನ ರಥವನ್ನು ಮಧುರಾಧಿಪನಾದ ಪರಮಾತ್ಮನೆಡೆಗೆ ಎಳೆಯುತ್ತೇವೆ ಎಂಬ ಸಂಕಲ್ಪದ ಜೊತೆಯಲ್ಲಿ  ಬೇವನ್ನು ಬೆಲ್ಲದೊಂದಿಗೆ ಸೇರಿಸಿ ಸೇವಿಸುವುದು. ''ವಿಶೇಷವಾಗಿ ಬೇವಿನ ಚಿಗುರಿನ ಜೊತೆಗೆ ಬೆಲ್ಲ, ಕಲ್ಲುಸಕ್ಕರೆ, ಕಾಳುಮೆಣಸು, ಉಪ್ಪುಕಾಳು, ಜೇರಿಗೆ, ಒಮಕ್ಕಿ ಮಿಶ್ರಣದ ಕಲ್ಕ ತಯಾರಿಸಿ ಸೇವಿಸಬೇಕು, ಇದು ಪ್ರಜಾಪತಿ-ಕಾಲಪುರುಷನ ಅತಿಪ್ರಿಯವಾದ ನೈವೇದ್ಯ. ಅಂದರೆ,  ಈ ಕಲ್ಕವು ವಾತ, ಪಿತ್ತ ಹಾಗು ಕಫಗಳಲ್ಲಿ ಸಮತೋಲನ ತಂದು, ಆ ದೇವತೆಯ ಸುಪ್ರಸನ್ನತೆ,ಸಾಕ್ಷಾತ್ಕಾರಗಳಿಗೆ ಅನುಗುಣವಾದ ಕೇಂದ್ರಗಳು ಒಳಗಿನ ಪ್ರಕೃತಿಯಲ್ಲಿ ವಿಕಾಸಗೊಳ್ಳುವುದಕ್ಕೆ ಸಹಾಯವಾಗುತ್ತದೆ" ಎಂದು ಶ್ರೀರಂಗಪ್ರಿಯಮಹಾದೇಶಿಕರು ಹೇಳುತ್ತಿದ್ದರು. 


ಹೀಗೆ ಯುಗಾದಿಯಂದು ಬೇವು ಬೆಲ್ಲಗಳ ಸೇವನೆ ಸತ್ಸಂಕಲ್ಪದಿಂದ ಮಾಡಿದಾಗ ಅದು ನಮ್ಮ ಐಹಿಕ-ಪಾರಮಾರ್ಥಿಕ ಜೀವನದ ಏಳಿಗೆಗೆ ಕಾರಣವಾಗುತ್ತದೆ.


ಸೂಚನೆ : 18/03/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ -30 (Yaksha prashne -30)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ– 29 ಯಾವುದಕ್ಕೆ ಹೃದಯವಿಲ್ಲ ?

ಉತ್ತರ - ಕಲ್ಲಿಗೆ

ಕಲ್ಲಿಗೆ ಹೃದಯವಿಲ್ಲ ಎಂಬ ಉತ್ತರ ಯಾರಿಗೆ ತಾನೆ ಪೇಲವ ಎನಿಸಬಹುದು! ಪ್ರಾಣಿ, ಪಶು, ಪಕ್ಷಿ, ಗಿಡ, ಮರಗಳಿಗೆ ಹೃದಯವಿದೆ. ಇವುಗಳಲ್ಲಿ ಒಂದು ಬಗೆಯ ಸಂವೇದನೆಯನ್ನು ಕಾಣುತ್ತೇವೆ. ಯಾರ ಹೃದಯ ಯಾವುದೇ ಕಠಿನ ಪರಿಸ್ಥಿತಿಯಲ್ಲೂ ಬದಲಾಗಲು ಅಥವಾ ಆತಂಕಗೊಳ್ಳಲು ಸಾಧ್ಯವೇ ಇಲ್ಲವೋ ಅಂತಹ ಸಂದರ್ಭದಲ್ಲಿ ' ಇವನೆಂತಹ ಕಠಿನ ಹೃದಯಿ!' ಇವನಿಗೆ ಹೃದಯವಿದೆಯೇ?' ಇತ್ಯಾದಿಯಾಗಿ ಮಾತನಾಡಿಕೊಳ್ಳುತ್ತೇವೆ. ಅಂತಹ ವ್ಯಕ್ತಿಯನ್ನು ಕಲ್ಲಿಗೆ ಹೋಲಿಸಿ 'ಇವನ  ಹೃದಯ ಕಲ್ಲು' ಎಂದೂ ಹೇಳುವುದುಂಟು. ಅಂದರೆ 'ಕಲ್ಲಿಗೆ ಹೃದಯವಿಲ್ಲ' ಎಂಬುದು ಸಾಮಾನ್ಯರಲ್ಲಿ ಸಾಮಾನ್ಯನಿಗೂ ತಿಳಿಯುವ ವಿಷಯವಲ್ಲವೇ? ಇಂತಹ ಸಾಮಾನ್ಯ ಪ್ರಶ್ನೆಯೇ ಧರ್ಮಜನಿಗೆ?

ಹೃದಯವು ಸುಖ ದುಃಖಗಳ ಸಂವೇದನೆಯ ಸಂಕೇತವಾಗಿದೆ. ಸಂವೇದನೆಯು ಜೀವಭಾವದ ಸಂಕೇತವೂ ಹೌದು. ಚೈತನ್ಯದ ಸಂಕೇತವೂ ಹೌದು. ಎಲ್ಲಿ ಚೈತನ್ಯದ ಅಂಶವು ಅತಿಶಯವಾಗಿರುತ್ತದೆಯೋ ಅಲ್ಲಿ ಸಂವೇದನೆಯೂ ಅತಿಶಯವಾಗಿ - ಅಧಿಕವಾಗಿ ಗೋಚರವಾಗುತ್ತದೆ. ಹಾಗಾಗಿ ಸಸ್ಯಗಳಿಗಿಂತ ಪ್ರಾಣಿಗಳು ಶ್ರೇಷ್ಠ, ಪ್ರಾಣಿಗಳಿಗಿಂತ ಮನುಷ್ಯ ಶ್ರೇಷ್ಠ ಎಂಬ ವಿಭಾಗವಿದೆ. ಸಸ್ಯಗಳಲ್ಲಿ, ಅದೇ ರೀತಿಯಾಗಿ ಪ್ರಾಣಿಗಳಲ್ಲಿ ಮತ್ತು ಅದೇ ರೀತಿಯಾಗಿ ಮನುಷ್ಯರಲ್ಲೂ ಮತ್ತೇ ತರತಮಭಾವವು ಇಲ್ಲದಿಲ್ಲ. ಭಾರತೀಯರ ಸಿದ್ಧಾಂತದ ಅನ್ವಯ ಚೈತನ್ಯವಿಲ್ಲದಿರುವ ಪದಾರ್ಥವೆಂಬುದೇ ಇಲ್ಲ. ಆದರೂ ಜಡ ಮತ್ತು ಅಜಡ ಎಂಬ ವಿಭಾಗವನ್ನು ಈ ಚೈತನ್ಯದ ಅಲ್ಪಾಧಿಕ್ಯದ ಕಾರಣದಿಂದಲೇ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಮಾಡಿದಾಗ ಕಲ್ಲು ಅತ್ಯಲ್ಪ ಚೈತನ್ಯವಿರುವ ವಸ್ತುವಾದ್ದರಿಂದ ಅತ್ಯಂತ ಜಡ ಎಂದಿದ್ದಾರೆ. ಆ ದೃಷ್ಟಿಯಿಂದ ಕಲ್ಲಿಗೆ ಸಂವೇದನೆ ಇಲ್ಲ ಎಂದೂ ಹೇಳಬಹುದಷ್ಟೆ. 

ಕಲ್ಲಿಗೆ ಸಂಸ್ಕೃತದಲ್ಲಿ 'ಅಶ್ಮ' ಎಂದು ಕರೆಯುತ್ತಾರೆ. ಶ್ಮ ಎಂದರೆ ಜೀರ್ಣವಾಗುವ ಸ್ವಭಾವವುಳ್ಳ ಶರೀರ ಎಂದರ್ಥ. ಇಂತಹ ಶರೀರದ ಮೇಲೆ ಯಾವುದೇ ಬಗೆಯ ಮಮತೆ ಇಲ್ಲದಿರುವವನು ಅಶ್ಮ ಎಂದೂ ವ್ಯಾಖ್ಯಾನಕಾರರು ಈ ಶಬ್ದಕ್ಕೆ ಅರ್ಥವನ್ನು ಮಾಡುತ್ತಾರೆ. ಅಂದರೆ ಶರೀರವ್ಯಾಮೋಹ ಇಲ್ಲದವನು ಜ್ಞಾನಿ. ಜ್ಞಾನದ ತುಟ್ಟತುದಿಗೆ ಏರಿದವನಿಗೆ ಆತ್ಯಂತಿಕ ಸುಖಸಂವೇದನೆಯನ್ನು ಬಿಟ್ಟು ಇನ್ನು ಯಾವ ವಿಧವಾದ ಸುಖ ದುಃಖಗಳ ಸಂವೇದನೆಯೂ ಇರುವುದಿಲ್ಲ. ಅವನ ದೃಷ್ಟಿಯಲ್ಲಿ ಉಳಿದೆಲ್ಲವೂ ಕಲ್ಲಿಗೆ ಸಮಾನ. ಹಾಗಾಗಿ ಹೃದಯವಿಲ್ಲದವನು ಅಶ್ಮ - ಜ್ಞಾನಿ ಎಂಬ ವಿಶಿಷ್ಟವಾದ ಅರ್ಥ ಬರುವಂತೆ ಧರ್ಮರಾಜನು ಉತ್ತರವನ್ನು ಕೊಟ್ಟಿದ್ದಾನೆ ಎಂಬುದಾಗಿ ಶ್ರೀರಂಗಪ್ರಿಯ ಮಹಾಸ್ವಾಮಿಗಳು ಈ ರೀತಿಯಾಗಿ ವಿವರಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. 

ಜ್ಞಾನಿಗಳ ಹೃದಯ ಕಲ್ಲಿನಷ್ಟು ಕಠೋರವೆಂದರ್ಥವಲ್ಲ. ಎಂತಹ ಕಠಿನ ಪರಿಸ್ಥಿತಿಯಲ್ಲೂ ಎದೆಗುಂದದ ಅಚಲತೆ ಅದು. ಸುಖ ಬಂತೆದು ಹಿಗ್ಗುವ, ಕಷ್ಟ ಬಂತೆಂದರೆ ಕುಗ್ಗುವ ಅಸ್ಥಿರತೆಯ ಲಕ್ಷಣವಲ್ಲ. ದುಃಖಿತರನ್ನು ಅಥವಾ ದೀನರನ್ನು ಕಂಡಾಗ ಕರಗುವ ಮತ್ತು ದುಷ್ಟರನ್ನು - ಭ್ರಷ್ಟರನ್ನು ಕಂಡಾಗ ವಜ್ರವಾಗಿ ನಿಲ್ಲುವ ಧೀರರವರು. ಅಂಜುವ ದುರ್ಬಲರಲ್ಲ. ಹೇಗೆ ಮಳೆ ಬಿಸಿಲು ಎನ್ನದೇ ತನ್ನ ಮೈಯ್ಯೊಡ್ಡಿ ಕಲ್ಲು ಭೂಮಿಯನ್ನು ಗಟ್ಟಿಗೊಳಿಸುವುದೋ, ಅಂತೆಯೇ ಸಮಾಜವನ್ನು ಸದೃಢವಾಗಿರಿಸುವ ಸಾಧನವೇ ಕಲ್ಲಿನಂತಹ ಸಾಧು ಸಜ್ಜನರು.   

ಸೂಚನೆ : 19/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 30 ಸಂಪನ್ನವಾದ ಯಜ್ಞ; ವಿಳಂಬ ಮಾಡಿದ ರಾಣಿ ( Vyaasa Vikshita - 30 Sampannavada Yajna: Vilamba Madida Rani)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ದ್ರೋಣನ ವಿರುದ್ಧವಾಗಿ ಆಭಿಚಾರಿಕಪ್ರಯೊಗವನ್ನು ಮಾಡಲು ದ್ರುಪದನು ಬಯಸಿದ್ದನಷ್ಟೆ. ಆದರೆ ಅದಕ್ಕೆ ಉಪಯಾಜನು ತನ್ನ ಸಹಾಯವನ್ನು ನಿರಾಕರಿಸಿದ ಬಳಿಕ, ಯಾಜನ ಬಳಿಗೆ ಬಂದು ಆತನನ್ನೊಪ್ಪಿಸಲು ದ್ರುಪದನು ದ್ರೋಣನ ಮಹಾಸಾಮರ್ಥ್ಯವನ್ನು ಹೀಗೆ ಚಿತ್ರಿಸುತ್ತಾನೆ:

 

"ದ್ರೋಣನ ಬಾಣಜಾಲಗಳೆಂದರೆ ಜೀವಿಗಳ ಪ್ರಾಣಗಳನ್ನೇ ಅಪಹರಿಸತಕ್ಕವು! ಆರು ಮೊಳಗಳಷ್ಟಿರುವ ಆತನ ಬಿಲ್ಲು ಮಹಾಧನುಸ್ಸೇ ಸರಿ. ಬ್ರಾಹ್ಮಣವೇಷದಲ್ಲಿದ್ದುಕೊಂಡು ಕ್ಷಾತ್ರವೇಗವನ್ನು ನಿಸ್ಸಂಶಯವಾಗಿಯೂ ಧ್ವಂಸಮಾಡುತ್ತಿರುವನು, ಆ ಮಹಾಧನುರ್ಧರ. ಕ್ಷತ್ರಿಯಸಂಹಾರಕ್ಕೆಂದೇ ವಿಹಿತನಾಗಿರುವ ಜಾಮದಗ್ನ್ಯ(ಎಂದರೆ ಪರಶುರಾಮ)ನು ಹೇಗೋ ಹಾಗೆ ಆತನಿರುವನು! ಆತನ ಅಸ್ತ್ರಬಲವು ಘೋರವಾದದ್ದು. ಈ ಭೂಮಿಯ ಮೇಲಿರುವವರಾರೂ ಅದನ್ನು ಸಹಿಸಲಾರರು.

ಬ್ರಾಹ್ಮತೇಜಸ್ಸನ್ನು ಆತ ಧರಿಸಿದ್ದಾನೆ; ಎಂದೇ ಆಹುತಿಯನ್ನು ಹಾಕಿರುವ ಅಗ್ನಿಯು ಹೇಗೋ ಹಾಗೆ ಜ್ವಲಿಸುವವ: ಯುದ್ಧದಲ್ಲಿ ಕ್ಷಾತ್ರಧರ್ಮವನ್ನು ಮುಂದಿಟ್ಟುಕೊಂಡು ಅಗ್ನಿಯಂತೆ ದಹಿಸಿಬಿಡುವವ.

 

ಬ್ರಾಹ್ಮತೇಜಸ್ಸು ಹಾಗು ಕ್ಷಾತ್ರತೇಜಸ್ಸು - ಇವುಗಳೆರಡರ ನಡುವೆ ಬ್ರಾಹ್ಮತೇಜಸ್ಸೇ ಹೆಚ್ಚಾದದ್ದು. ಆದರೆ ನಾನು ಕೇವಲ ಕ್ಷಾತ್ರಬಲವುಳ್ಳವ; ಎಂದೇ ಬಲದಲ್ಲಿ ದ್ರೋಣನಿಗಿಂತಲೂ ಕಡಿಮೆಯೇ. ಅದಕ್ಕಾಗಿಯೇ ಬ್ರಾಹ್ಮತೇಜಸ್ಸನ್ನು ಶರಣುಹೊಂದಿದ್ದೇನೆ: ಆ ವಿಷಯದಲ್ಲಿ ನೀನು ದ್ರೋಣನನ್ನೂ ಮೀರಿಸಿದವ, ಬ್ರಹ್ಮವಿದರಲ್ಲಿ ಅಗ್ರಗಣ್ಯ. ದ್ರೋಣನನ್ನು ಮುಗಿಸಿಬಿಡುವಂತಹ ಪುತ್ರ, ಹಾಗೂ ಯುದ್ಧದಲ್ಲಿ ಯಾರೂ ಸೋಲಿಸಲಾಗದಂತಹವನು - ಅಂತಹವನನ್ನು ನಾನು ಹೊಂದಬೇಕು. ಅದ್ದರಿಂದ ಅದಕ್ಕಾಗಿ ಯಾಗಕಾರ್ಯವನ್ನು ಮಾಡಿಕೊಡು, ಯಾಜನೇ. ನಿನಗೆ ಗೋವುಗಳ ಅರ್ಬುದವನ್ನೇ (ಹತ್ತುಕೋಟಿಯನ್ನೇ) ಕೊಡುವೆ!" – ಎಂದನು.


"ಹಾಗೆಯೇ ಆಗಲಿ" ಎಂದು ಹೇಳಿದನು, ಯಾಜ. ಯಾಗಕ್ಕಾಗಿ ಬೇಕಾಗುವ ಉಪಕರಣಗಳನ್ನು ಸಿದ್ಧಪಡಿಸಿಕೊಂಡನು. ಹಿರಿದಾದ ಕಾರ್ಯವಿದು - ಎಂದು ಲೆಕ್ಕಿಸಿ, ನಿಷ್ಕಾಮನಾದ ಉಪಯಾಜನನ್ನೂ ತೊಡಗಿಸಿಕೊಂಡನು; ದ್ರೋಣವಿನಾಶದ ಪ್ರತಿಜ್ಞೆಯನ್ನೂ ಮಾಡಿದನು.

 

ಮಹಾತಪಸ್ವಿಯಾದ ಉಪಯಾಜನಾದರೂ ದ್ರೋಣನಿಗೆ ಪುತ್ರಫಲಪ್ರಾಪ್ತಿಗಾಗಿ ವೈತಾನಕರ್ಮವನ್ನು (ಎಂದರೆ ಯಜ್ಞವಿಧಿಯನ್ನು) ಆತನಿಗೆ ತಿಳಿಸಿಕೊಟ್ಟು, ಹೀಗೆ ಹೇಳಿದನು: "ನೀನು ಎಂತಹ ಪುತ್ರನನ್ನು ಬಯಸುತ್ತಿರುವೆಯೋ ಅಂತಹ ಪುತ್ರನೇ ಜನಿಸುವನು; ಆತನು ಮಹಾವೀರ್ಯನೂ, ಮಹಾತೇಜಸ್ಕನೂ, ಮಹಾಬಲಶಾಲಿಯೂ ಆಗುವನು" ಎಂದನು. ದ್ರೋಣಸಂಹಾರಕಾರಕನನ್ನು ಸಂಕಲ್ಪಿಸಿದ ಆ ದ್ರುಪದರಾಜನು ಕರ್ಮಸಿದ್ಧಿಗಾಗಿ ಅವರು ಸೂಚಿಸಿದ್ದೆಲ್ಲವನ್ನೂ ಒದಗಿಸಿದನು.


ಹವನವು ಮುಗಿಯಿತು. ಕೊನೆಯಲ್ಲಿ ಯಾಜನು ದ್ರುಪದರಾಜನ ಪತ್ನಿಗೆ ಆಜ್ಞೆಯಿತ್ತನು: "ರಾಣಿ, ಬಾ ಇತ್ತ. ಒಬ್ಬ ಪುತ್ರನೂ ಒಬ್ಬಳು ಪುತ್ರಿಯೂ ನಿನ್ನತ್ತ ಬಂದಿರುವರೆಂದುಕೋ!" ಎಂದನು. ಆಗ ರಾಣಿಯು: "ಅಯ್ಯಾ ಬ್ರಾಹ್ಮಣನೇ ನನ್ನ ಬಾಯಿ ತಾಂಬೂಲ-ಲೇಪಿತವಾಗಿದೆ; ದಿವ್ಯಗಂಧಗಳನ್ನು ನನ್ನ ಮೈಗೆ ಪೂಸಿಕೊಂಡಿದ್ದೇನೆ, ಕೂಡ. ಎಂದೇ (ಮುಖವನ್ನೂ ತೊಳೆಯದೆ ಸ್ನಾನವನ್ನೂ ಮಾಡದೆ) ಪುತ್ರಾರ್ಥವಾಗಿ ಹವಿಷ್ಯವನ್ನು ಸ್ವೀಕರಿಸಲು ನಾನು ಯೋಗ್ಯಳಾಗಿಲ್ಲ. ಆದ್ದರಿಂದ, ಯಾಜನೇ, ನನಗೆ ಪ್ರಿಯವಾದ ಇದನ್ನು ನಾನು ಸ್ವೀಕರಿಸಲಿಕ್ಕಾಗಿ ನೀ ಸ್ವಲ್ಪ ತಾಳು! " ಎಂದಳು.

 

ಆಗ ಯಾಜನು ಸ್ವಲ್ಪ ಬಿರುಸಾಗಿಯೇ ಹೇಳಿದನು:" ಈ ಹವ್ಯವು ಎಂತಹುದೆಂದುಕೊಂಡಿದ್ದೀಯೆ?: ಇದನ್ನು ಸಿದ್ದಪಡಿಸಿರುವವನು ಯಾಜ!  ಅಭಿಮಂತ್ರಿಸಿರುವವನು ಉಪಯಾಜ! ಹಾಗಿರಲು ಇದೆಂತು ಅಪೇಕ್ಷಿತಫಲವನ್ನೀಯದು? ಆದ್ದರಿಂದ ಒಡನೆಯೇ ಬಂದು ಸ್ವೀಕರಿಸುವುದಾದರೆ ಸ್ವೀಕರಿಸು; ಇಲ್ಲವೇ ಬಿಡು!" ಎಂದುಬಿಟ್ಟನು!


ಸೂಚನೆ : 19/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, March 18, 2023

ಎಲ್ಲವನ್ನೂ ಅನುಭವಿಸಿಯೇ ಒಪ್ಪಬೇಕಾ? (Ellavannu Anubhavisiye Oppabeka?)

 ಲೇಖಕರು : ವಿದ್ವಾನ್ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)  



ಸಾಮಾನ್ಯವಾಗಿ ನಾವು ಈ ಮಾತನ್ನು ಹೇಳುವುದನ್ನು ಕೇಳಿದ್ದೇವೆ."ನನ್ನ ಮನಸ್ಸಿಗೆ ಬಂದರೆ ಮಾತ್ರ ಒಪ್ಪುತ್ತೇನೆ. ಇಲ್ಲ ಅಂದರೆ ಜಪ್ಪಯ್ಯ ಅಂದರೂ ಒಪ್ಪಲ್ಲ' ಅಂತ. ಇನ್ನೊಂದು ಮಾತಿದೆ 'ಕೆಲವೊಂದನ್ನು ನೋಡಿ ತಿಳಿಯಬೇಕು, ಕೆಲವೊಂದನ್ನು ಬಲ್ಲವರಿಂದ ಕೇಳಿ ತಿಳಿಯಬೇಕು' ಎಂದು. ಹಾಗಾದರೆ ಏನು ಮಾಡಬೇಕು? ಎಲ್ಲವನ್ನೂ ನಮ್ಮ ಅನುಭವಕ್ಕೆ ಬಂದೇ ಒಪ್ಪಬೇಕಾ? ಅಥವಾ ಅದಕ್ಕೆ ಬೇರೆ ಏನಾದರೂ ಉಪಾಯವಿದೆಯೋ? ಎಲ್ಲವೂ ಈಗಲೇ ಅನುಭವಕ್ಕೆ ಬರಬೇಕೆಂಬ ನಿಯಮವಿದೆಯೋ? ಮುಂದೆ ಏನಾದರೂ ಬರಬಹುದು, ಅಲ್ಲವೇ? ಗಿಡ ನೆಟ್ಟ ಕೂಡಲೇ ಫಲ ಬರುತ್ತದೆಯೋ? ಅದಕ್ಕೆ ಎಷ್ಟೋ ದಿನಗಳು ಬೇಕಾಗುತ್ತವೆ ಅಲ್ಲವೆ. ಒಂದೊಂದು ಅನುಭವ ಬರಲು ಭಿನ್ನ ಭಿನ್ನವಾದ ಕಾಲವೇ ಬೇಕಾಗಬಹುದು. ಸರಿಯಾಗಿ ನೀರು, ಗಾಳಿ, ಗೊಬ್ಬರ, ಬೆಳಕು ಎಲ್ಲವೂ ಕಾಲಕಾಲಕ್ಕೆ ಸಿಕ್ಕಾಗ ಅದರದ್ದೇ ಆದ ಸಮಯವನ್ನು ತೆಗೆದುಕೊಂಡು ಫಲವನ್ನು ಕೊಡುತ್ತದೆ. 


ಕೊತ್ತಂಬರಿ ಬೀಜವನ್ನು ನೆಟ್ಟರೆ ನಾಳೆಯೇ ಉಪಯೋಗವಾದೀತು. ನಾಳೆಗೇ ಅದರ ಸೊಪ್ಪನ್ನು ಕೊಯ್ದು ಸಾರಿಗೆ ಬಳಸಬಹುದು. ಅದೇ ತೆಂಗಿನ ಕಾಯನ್ನು ನೆಟ್ಟರೆ ಮೊಳಕೆ ಬರಲು ಒಂದು ವರ್ಷವೇ ಬೇಕಾಗಬಹುದು. ಬೀಜವನ್ನು ನೆಟ್ಟು ಮೊಳಕೆ ಒಡೆದು ಹೆಮ್ಮರವಾಗಿ ಹೂವು, ಕಾಯಿ ಬಿಟ್ಟು ಫಲಿಸಲು ಅನೇಕ ವರ್ಷಗಳನ್ನು ಕಾಯಬೇಕಾಗುತ್ತದೆ. ಕಾಯಿಗೆ ಕಾಯಲೇಬೇಕು.  ಆರಂಭವಾದ ಮೇಲೆ ಅನೇಕ ತಲೆಮಾರಿಗೆ ಸಾಕಾಗುವಷ್ಟು ಫಲವನ್ನು ಕೊಡುತ್ತದೆ. ಹೀಗೆ ಕೆಲವು ಶೀಘ್ರವಾಗಿ ಬರುತ್ತದೆ, ಇನ್ನು ಕೆಲವು ವಿಳಂಬವಾಗಿ ಬರುತ್ತದೆ. ಹಾಗಾಗಿ ನಾವು ಮಾಡಿದ ಕರ್ಮಕ್ಕೆ ಫಲವು ಕೆಲವೊಮ್ಮೆ ಸಾವಧಾನವಾಗಿ ಬರಬಹುದು, ಇನ್ನು ಕೆಲವೊಮ್ಮೆ ಬಹಳ ಬೇಗ ಬರಬಹುದು. ಹಾಗಾಗಿ ಎಲ್ಲವನ್ನೂ ನಮ್ಮ ಅನುಭವದಿಂದಲೇ ನಾವು ತಿಳಿದುಕೊಳ್ಳುತ್ತೇವೆ ಎಂದು ಹೊರಟರೆ ಸಾಧ್ಯವೇ? ಕೆಲವು ವಿಷಯವನ್ನು ನಮ್ಮ ಅನುಭವಕ್ಕೆ ಬಂದರೆ ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದು ನಿರ್ಣಯಿಸಬಹುದು. ಆದರೆ ಎಲ್ಲ ಕಡೆ ಅನುಭವ ಬರುವ ತನ ಕಾಯಬೇಕೇ? ಅನುಭವಿಸಿದವರ ಅನುಭವವನ್ನು ಆಧಾರವಾಗಿ ಇಟ್ಟುಕೊಂಟು ನಡೆದರೆ ಸಾಕಲ್ಲವೇ? ಚೆನ್ನಾಗಿ ಓದಿದರೆ ಮಾರ್ಕ್ಸ್ ಬರತ್ತದೆ ಅಂತ ನಮಗೆ ಗೊತ್ತಿದ್ದೆಯಾ? ಹೇಗೆ ಗೊತ್ತು? ಮತ್ತೊಬ್ಬರು ಚೆನ್ನಾಗಿ ಓದಿ ಉತ್ತಮ ಅಂಕವನ್ನು ಪಡೆದಿದ್ದರಿಂದ ಓದಿದರೆ ಅಂಕ ಬರುತ್ತದೆ. ಹತ್ತನೆಯ ತರಗತಿಯಲ್ಲಿ ಚೆನ್ನಾಗಿ ಓದಿದರೆ ಅಂಕ ಚೆನ್ನಾಗಿ ಬರುತ್ತದೆ ಅಂತ ಯಾರಿಗೆ ಗೊತ್ತು? ಓದಿದವರಿಗೆ ಮಾತ್ರ ಗೊತ್ತು. ಒಂಭತ್ತನೆಯ ತರಗತಿಯಲ್ಲಿ ಓದುವವನು ಅವನ ಹಿಂದಿನವರ ಅನುಭವವನ್ನು ಕೇಳಿಕೊಂಡು ಚೆನ್ನಾಗಿ ಓದುತ್ತಾನೆ. ಏಕೆಂದರೆ ನಂಬಿಕೆ ಇದೆ ಚೆನ್ನಾಗಿ ಓದಿದರೆ ಒಳ್ಳೆಯ ಅಂಕವನ್ನು ಪಡೆಯಬಹುದು ಎಂದು. ಅದಕ್ಕೆ ಅವನೇ ಅನುಭವವನ್ನು ಪಡೆಯಬೇಕೆಂದಿಲ್ಲ. ಚೆನ್ನಾಗಿ ಓದಿ ಅನುಭವವನ್ನು ಪಡೆದವನ ಅನಿಸೆಕೆ, ಅಭಿಪ್ರಾಯವನ್ನು ಪಡೆದರೆ ಸಾಕು. ನಮ್ಮ ಕೆಲಸ ಹಗುರವಾಗುತ್ತದೆ ಅಲ್ಲವೇ? ಅಷ್ಟು ಶ್ರಮ, ಅಷ್ಟು ಕಾಲ ಉಳಿತಾಯವಾಯಿತಲ್ಲ! 


ಇಂತಹ ವಿಷಯವನ್ನು ಯಾರು ಹೇಳಿದರೆ ಒಪ್ಪಿಕೊಳ್ಳುತ್ತೇವೆ. ನಮ್ಮವರು, ನಮ್ಮ ಸಂಬಂಧಿಕರು, ಅಣ್ಣ, ಅಕ್ಕ, ಅಪ್ಪ, ಅಮ್ಮ ಹೀಗೆ ನಮ್ಮ ಅಪ್ತೇಷ್ಟರು ಹೇಳಿದ್ದನ್ನು ಒಪ್ಪುತ್ತೇವೆ. ಅವರ ಅನುಭವವೇ ನಮ್ಮ ಕಾರ್ಯಕ್ಕೆ ಸ್ಫೂರ್ತಿಯಾಗುತ್ತದೆ. ನಾವೇ ಅನುಭವಿಸಿ ಕಾರ್ಯವನ್ನು ಆರಂಭ ಮಾಡಬೇಕೆಂಬ ನಿಯಮವೇನೂ ಇಲ್ಲ. ಕೆಲವು ವಿಷಯಗಳನ್ನು ಯಾರೋ ಹೇಳಿರುತ್ತಾರೆ, ಅವರು ಅನುಭವಿಸಿರುತ್ತಾರೆ,  ಅದನ್ನು ಅನುಭವಿಸಲು ಎಷ್ಟೋ ವರ್ಷಗಳನ್ನು ತೆಗೆದುಕೊಂಡಿರುತ್ತಾರೆ. ಅಂತಹ ಅನುಭವದಿಂದ ಹೇಳಿರುತ್ತಾರೆ. ಅವರ ಅನುಭವವನ್ನು ನಾವು ತೆಗೆದುಕೊಂಡರೆ ನಮ್ಮ ಆಯುಷ್ಯ ವ್ಯರ್ಥವಾಗುವುದಿಲ್ಲ. ಅಷ್ಟು ವರ್ಷ ನಮಗೆ ಉಳಿಯುತ್ತದೆ. ಅಪೇಕ್ಷಿತವಾದ ಕಾರ್ಯವನ್ನು ಮಾಡಲು ನಮಗೆ ಅಷ್ಟು ಕಾಲ ಸಿಕ್ಕಿತು ಎಂದರ್ಥ. 'ಬೆಂಕಿ ಮುಟ್ಟಿದರೆ ಕೈ ಸುಡುತ್ತದೆ' ಎಂದು ಅನುಭವಿಸಿಯೇ ಬೆಂಕಿಯಿಂದ ದೂರ ಇರಬೇಕೆ? ಬೆಂಕಿ ಸುಟ್ಟುಕೊಂಡವರು ಹೇಳಿದ್ದಾರೆ ' ಬೆಂಕಿ ಮುಟ್ಟಿದರೆ ಸುಡುತ್ತದೆ' ಎಂದು, ಅದನ್ನು ಒಪ್ಪಿಕೊಂಡು ನಾವು ಹೇಗೆ ಬೆಂಕಿಯನ್ನು ಮುಟ್ಟಲು ಹೋಗುವುದಿಲ್ಲವೋ, ಅಂತೆಯೇ ಎಲ್ಲವೂ ನಮ್ಮ ಅನುಭವಕ್ಕೆ ಬಂದ ಮೇಲೆ ಒಪ್ಪಿಕೊಳ್ಳಬೇಕೆಂಬ ಹಠ ಸಲ್ಲದು. ಇಂತಹ ಅನುಭವದ ಮೂಟೆಯನ್ನು ನಮ್ಮ ಭಾರತೀಯ ಮಹರ್ಷಿಗಳು ಕಠಿನ ತಪಸ್ಸು ಮಾಡಿ ಕಂಡುಹಿದ್ದಾರೆ. ಹಾಗಾಗಿ ಅವರು ಹೇಳಿದ್ದನ್ನು ಒಪ್ಪಿಕೊಂಡು ನಾವು ಆಚರಿಸಿದರೆ ನಮ್ಮ ಆಧ್ಯಾತ್ಮಕ ಪ್ರಯಾಣ ಸುಲಭ. 


ಸೂಚನೆ: 16/3/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Sunday, March 12, 2023

ಅಷ್ಟಾಕ್ಷರೀ​ - 30 ಮತಂ ಯಸ್ಯ ನ ವೇದ ಸಃ (Astakshara Darshana 30 Mataṁ Yasya Na Veda Sah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಪಂಚತಂತ್ರದ ಆರಂಭದಲ್ಲಿಯೇ ಬರುವ ಮಾತೊಂದಿದೆ: ಶಾಸ್ತ್ರಗಳು ಅನಂತ; ತಿಳಿಯಬೇಕಾದದ್ದು ಬಹಳಷ್ಟಿದೆ. ನಮಗೆ ದೊರೆಯುವ ಕಾಲವು ಅಲ್ಪ; ವಿಘ್ನಗಳು ಹಲವಾರು! ಆದ್ದರಿಂದ, ಯಾವುದು ಸಾರಭೂತವೋ ಅದನ್ನು ಉಪಾಸಿಸಬೇಕು. ನೀರಿನಲ್ಲಿ ಹಾಲು ಬೆರೆತಿದ್ದಾಗ ಹಂಸವು ಹೇಗೆ ಮಾಡುವುದೋ ಹಾಗೆ. (ಇದರ ಅಭಿಪ್ರಾಯವಿದು: ಹಾಲು-ನೀರುಗಳಲ್ಲಿ ಹಾಲು ಸಾರ, ನೀರು ಅಸಾರ. ಹಂಸವು ನೀರನ್ನು ತೊರೆದು ಹಾಲನ್ನಷ್ಟೆ ಸೇವಿಸುತ್ತದೆ. ಇದನ್ನೇ ಹಂಸ-ಕ್ಷೀರನ್ಯಾಯವೆನ್ನುವುದು. ಅಸಾರವನ್ನು ವರ್ಜಿಸಿ, ಸಾರಮಾತ್ರವನ್ನು ಗ್ರಹಿಸುವುದಕ್ಕೆ ನೀರ-ಕ್ಷೀರ-ವಿವೇಕವೆಂದೂ ಹೇಳುತ್ತಾರೆ. ವಿವೇಕವೆಂದರೆ ವಿಂಗಡಣೆ.)

ಎಷ್ಟೋ ಮಂದಿ ತುಂಬಾ ಓದಬೇಕೆಂದುಕೊಳ್ಳುತ್ತಾರೆ. ಒಬ್ಬನೆಷ್ಟು ಓದಿಯಾನು? : ಇತ್ತ, ಜ್ಞಾನದ ಹೊಸಹೊಸ ಶಾಖೆಗಳು ಅದೆಷ್ಟೋ ಹುಟ್ಟಿಕೊಳ್ಳುತ್ತಲೇ ಇರುತ್ತವೆ; ಅತ್ತ, ಹಿಂದೆ ಇದ್ದ ಎಷ್ಟೋ ವಿದ್ಯೆಗಳು ನಶಿಸುತ್ತಲೂ ಇರುತ್ತವೆ. ಕಂಡಕಂಡದ್ದನ್ನೆಲ್ಲ ಗೊತ್ತುಗುರಿಯಿಲ್ಲದೆ ಓದುತ್ತ ಹೋಗುವುದು ಹುಚ್ಚೆಂದೇ ತೋರುವುದು. ಅಥವಾ ಹುಚ್ಚಿಗೇ ತಿರುಗುವುದು. "ಓದಿಗಾಗಿ ಓದು", "ಜ್ಞಾನಕ್ಕಾಗಿ ಜ್ಞಾನ" ಎಂದು ಕೊನೆ-ಮೊದಲಿಲ್ಲದಂತೆ ಓದುವುದು ಬುದ್ಧಿಭ್ರಮಣೆಗೆ ಹೇಳಿಮಾಡಿಸಿದ ದಾರಿಯೇ ಸರಿ.

ಏನೇನನ್ನೋ ಪಠಿಸುತ್ತಿದ್ದರೆ ಒಳ್ಳೆಯ ಗುರಿ, ಒಳ್ಳೆಯ ದಾರಿಗಳೂ ಕೆಲವೊಮ್ಮೆ ಗೋಚರವಾಗಬಹುದು; ಇಲ್ಲವೆಂದಲ್ಲ. ಅದೇ ಕಾರಣಕ್ಕಾಗಿಯೇ, ಕೆಟ್ಟಗುರಿ ತಪ್ಪುದಾರಿಗಳಿಗೂ ಬೀಳುವುದೂ ಅಸಂಭವವೇನಲ್ಲವಲ್ಲ? ನಾನಾದಿಕ್ಕುಗಳು ಗಮನಕ್ಕೆ ಬಂದು ಒಳ್ಳೆಯ ದಿಕ್ಕನ್ನು ಹಿಡಿಯುವುದೆಂತೋ, ಅಂತೆಯೇ ಕೆಟ್ಟದಿಕ್ಕನ್ನು ಹಿಡಿಯುವುದೂ ಸಾಧ್ಯ! ಯಾವ ದಿಕ್ಕು ಸರಿಯೋ? - ಎಂದು ನಿಶ್ಚಯಿಸಲಾಗದೆ ದಿಗ್ಭ್ರಾಂತಿಯಾಗುವುದೂ ಅಶಕ್ಯವೇನಲ್ಲ.

ಕುತೂಹಲವನ್ನು ಕಳೆದುಕೊಳ್ಳಬೇಡಿ ಎಂದು ಉಪದೇಶಿಸುವವರಲ್ಲಿ ವಿಜ್ಞಾನಿಗಳು ಮುಂದೇ. ಯಾವುದರ ಬಗೆಗೂ ಕುತೂಹಲವಿಲ್ಲದ ಜೀವನವೂ ಒಂದು ಜೀವನವೇ? ಬಾಲ್ಯದಲ್ಲಿಯ ಕುತೂಹಲ ಅನಿವಾರ್ಯವಷ್ಟೇ ಅಲ್ಲ ಅತ್ಯಪೇಕ್ಷ್ಯವೇ ಆದದ್ದು. ಆದರೂ ಎಷ್ಟೋ ವೇಳೆ ಕೆಲಸಕ್ಕೆ ಬಾರದ ಕೊನೆಮೊದಲಿಲ್ಲದ ಕುತೂಹಲಗಳು ಯಾವುದೋ ಅಡ್ಡದಾರಿಗೊಯ್ಯುವುದೂ ಉಂಟು, ಕಾಲವನ್ನು ವ್ಯರ್ಥಗೊಳಿಸುವುದೂ ಉಂಟು.

"ಕಸದ ಬುಟ್ಟಿಗೆ ಹಾಕಬೇಕಾದ ವಿಷಯಗಳನ್ನೆಲ್ಲಾ ತಲೆಗೆ ತುಂಬಿಕೊಳ್ಳುವುದಾಗುತ್ತಿದೆಯೆಲ್ಲಾ!" - ಎಂದು ಇಂದಿನ ಪರಿಸ್ಥಿತಿಗೆ ಶ್ರೀರಂಗಮಹಾಗುರುಗಳು ಮರುಗಿದ್ದರು.

ಇತ್ತ ವಿಶ್ವಕುತೂಹಲಿಯಾಗಿರಬೇಕಾದುದೂ ಸರಿಯೇ (ಸಂಸ್ಕೃತದಲ್ಲಿ 'ವಿಶ್ವ' ಎಂಬುದಕ್ಕೆ 'ಸರ್ವ' ಎಂಬರ್ಥವೂ ಇದೆ. ಇಲ್ಲಿ ಆ ಅರ್ಥ.) ಸರ್ವಜ್ಞನೆನಿಸಿಕೊಳ್ಳಬೇಕೆಂಬ ಹುಚ್ಚು ಹಂಬಲ ಹಿಡಿಯದಂತೆ ಅಧ್ಯಯನವು ಸಾಗಬೇಕು. ಓದರಿತು, ಕೇಳರಿತು, ಕಂಡರಿತುಕೊಂಡದ್ದನ್ನೆಲ್ಲಾ ಆಗಾಗ್ಗೆ ಮನನಮಾಡಿಕೊಳ್ಳುತ್ತಾ, ಸಾರಭೂತವಾದುದನ್ನು ಜೀವನಕ್ಕೆ ಅನ್ವಯ ಮಾಡಿಕೊಳ್ಳಲು ಮನೋವ್ಯವಧಾನವಿರಬೇಕು.

ಒಂದು ಕಡೆ ಜೀವಿಕೆಗೆ (ಹೊಟ್ಟೆಹೊರೆಯಲಿಕ್ಕೆ) ತೊಂದರೆಯೂ ಆಗಬಾರದು; ಇದು ಇಹದ ಜವಾಬ್ದಾರಿ. ಜೊತೆಗೆ 'ಪರ'ದ ಜವಾಬ್ದಾರಿಯೂ ಬೇಕಾದದ್ದೇ: ಸತ್ತ ಮೇಲೆ ಸದ್ಗತಿಯತ್ತ ಸಾಗಲೊಂದು ಸಾಧನೆ ಬೇಡವೇ? ಅದಕ್ಕೂ ಆಗಲೆಂದೇ ಹೇಳಿಮಾಡಿಸಿಟ್ಟವು ಆರ್ಷಗ್ರಂಥಗಳು (ಆರ್ಷವೆಂದರೆ ಋಷಿಗಳಿಂದ ಬಂದದ್ದು): ಗೀತೆ-ವೇದ-ಉಪನಿಷತ್ತುಗಳು. ಅತ್ತಲೂ ಒಂದಿಷ್ಟು ಶ್ರಮ ಬೇಕೇಬೇಕು.

ಆದರೆ ಅಲ್ಲೂ ಓದಿನಲ್ಲೇ ನಿಂತೆವೋ ಆಗಲೂ ಅಪಾಯವೇ. ಎಲ್ಲವನ್ನೂ ಓದಿಬಿಟ್ಟಿದ್ದೇನೆಂದುಕೊಂಡವನಿಗೇ ಉಪನಿಷತ್ತು ಎಚ್ಚರಿಸುವುದು: "ಯಾವನು ಗೊತ್ತಾಗಿದೆಯೆಂದುಕೊಂಡಿದ್ದಾನೋ ಅವನರಿತಿಲ್ಲ" – ಎಂದು! ಕೇನೋಪನಿಷತ್ತಿನ ಮಾತಿದು.

ಇವನ್ನೆಲ್ಲಾ ಪಠಿಸುವುದು ಶ್ರೇಷ್ಠವೇ; ಮತ್ತೂ ಶ್ರೇಷ್ಠವಾದುದು ಅವುಗಳ ಅರ್ಥ-ತಾತ್ಪರ್ಯಗಳ ಅನುಸಂಧಾನ. ಅತಿಮುಖ್ಯವೆಂದರೆ ಅಲ್ಲಿಯ ನಿರೂಪಣೆಗಳು ನಮ್ಮ ಜೀವನಕ್ಕೆ ಎಲ್ಲಿ ಹೇಗೆ ಅನ್ವಯವಾಗಬಲ್ಲುವು? - ಎಂಬುದರತ್ತ ನಿರಂತರಚಿಂತನಗಳು.

ಒಂದರ್ಥದಲ್ಲಿ ಪುಸ್ತಕದಲ್ಲೇ ಎಲ್ಲವೂ ಇದೆ; ಮತ್ತೊಂದರ್ಥದಲ್ಲಿ ಏನೂ ಇಲ್ಲ. ಮಹಾಭಾರತದ ಒಂದು ಒಗಟೆಯ ಉಕ್ತಿಯನ್ನು ಶ್ರೀರಂಗಮಹಾಗುರುಗಳು ಉಲ್ಲೇಖಿಸುತ್ತಿದ್ದರು: "ವೇದವನ್ನು ವೇದವೆನ್ನುವುದಿಲ್ಲ. ವೇದದಲ್ಲಿ ವೇದವಿಲ್ಲ. ಯಾವುದರಿಂದ ಪರಮಾತ್ಮನನ್ನು ಪಡೆಯುವುದಾಗುವುದೋ ಅದುವೇ ವೇದ!".

ವೇದವೆನ್ನುವುದು ಮೂಲತಃ ಜ್ಞಾನವೇ (ವಿದ ಜ್ಞಾನೇ). ಜ್ಞಾನವನ್ನು ಕೊಡುವ ಅಕ್ಷರರಾಶಿಗೂ ವೇದವೆಂಬ ಹೆಸರು ಸಲ್ಲುತ್ತದೆ. ಆ ಅಕ್ಷರರಾಶಿಯನ್ನೇ ಪುಸ್ತಕಮಾಡಿಕೊಟ್ಟರೆ ಆ ಪುಸ್ತಕಕ್ಕೂ ವೇದವೆಂಬ ಹೆಸರೇ. ಆದರೂ ವೇದಪುಸ್ತಕಪಾಠವು ಕಂಠಪಾಠವಾಗಿದೆಯೆಂದರೆ ಸಾಲದು. ಪರಾತ್ಮನ ಪ್ರಾಪ್ತಿಯೆಂಬುದೇ ನಿಜವಾದ ಜ್ಞಾನ, ಅದುವೇ ವೇದದ ಲಕ್ಷ್ಯ. ಜ್ಞಾನವು ಪುಸ್ತಕದಲ್ಲಿಲ್ಲ. ಜ್ಞಾನವನ್ನು ಪಡೆದವನೇ ನಿಜವಾದ ವೇದಜ್ಞ.

ಹೀಗೆ ಲೌಕಿಕಜ್ಞಾನಾರ್ಜನೆಯು ಹೊಟ್ಟೆಪಾಡಿಗಾಗಿ ಆದರೂ ಪರಾತ್ಮಜ್ಞಾನಾರ್ಜನೆಗೂ ಬಲ್ಲವರ ಮಾರ್ಗದರ್ಶನದಲ್ಲಿ ಶ್ರಮಿಸುವಂತಾದಲ್ಲಿ ಜೀವನವು ಸಫಲತೆಯನ್ನು ಕಂಡೀತು.

ಸೂಚನೆ: 12/03/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ -29 (Yaksha prashne -29)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 28 ನಿದ್ರಿಸುವಾಗಲೂ ಕಣ್ಣನ್ನು ಮುಚ್ಚದಿರುವುದು ಯಾವುದು?

ಉತ್ತರ - ಮೀನ

ಈ ಸೃಷ್ಟಿಯಲ್ಲಿ ಕಣ್ಣಿರುವ ಎಲ್ಲಾ ಪ್ರಾಣಿಯೂ ಮುಚ್ಚುವುದುಂಟು. ಕಣ್ಣನ್ನು ಮುಚ್ಚುವುದು ಮತ್ತು ಮುಚ್ಚಿದ ಕಣ್ಣನ್ನು ಬಿಚ್ಚುವುದು ಸಹಜವಾದ ಪ್ರಕ್ರಿಯೆ. ಜೀವಿಯ ಅಸ್ತಿತ್ವದ ಕುರುಹೂ ಕೂಡಾ ಕಣ್ಣಿನ ನಿಮಿಷೋನ್ಮೇಷ ಪ್ರಕ್ರಿಯೆಯಿಂದ.  ಆದರೆ ಒಮ್ಮೆ ಬಿಚ್ಚಿದ ಕಣ್ಣನ್ನು ಮುಚ್ಚದಿರುವ ಪ್ರಾಣಿ ಯಾವುದು ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಇದೂ ಒಂದು ಪ್ರಶ್ನೆಯೇ? ಈ ಪ್ರಶ್ನೆಯಲ್ಲಿ ಅದಾವ ವಿಶೇಷತೆ ಅಡಗಿದೆ? ಎಂಬ ಕುತೂಹಲ. ಹಾಗಾದರೆ ಅಷ್ಟು ಪೇಲವವಾದ ಪ್ರಶ್ನೆಯನ್ನು ಯಕ್ಷನು ಯುಧಿಷ್ಠಿರನಂತಹ ಬುದ್ಧಿಮಂತನಿಗೆ ಕೇಳುವುದೇ? ಇಲ್ಲಿ ಯಕ್ಷನು ಕೇಳುವ ಪ್ರಶ್ನೆಯು ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಾದುದಲ್ಲ. ಅದೊಂದು ಮಕ್ಕಳಿಗೆ ಕೇಳುವ ಮಟ್ಟದ ಪ್ರಶ್ನೆಯೂ ಆಗಿಲ್ಲ. ಹಾಗಾದರೆ ಇಲ್ಲಿರುವ ಗಾಢಾರ್ಥ ಅಥವಾ ಗೂಢಾರ್ಥವಾದರೂ ಏನು? ಅದೆಂತಹ ವಿಶೇಷತೆ ಇಲ್ಲಿದೆ? ಎಂಬುದನ್ನು ಸ್ವಲ್ಪ ಗಮನಿಸೋಣ. 

ಇದೊಂದು ಜೀವಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಬೃಹದದಾರಣ್ಯಕೋಪನಿಷತ್ತಿನಲ್ಲಿ ಈ ಬಗ್ಗೆ ಒಂದು ವಿವರಣೆ ಸಿಗುತ್ತದೆ. "ಹೇಗೆ ಮಹಾ ಮೀನೊಂದು ನದಿಯ ಎರಡೂ ತಟಗಳಲ್ಲೂ ಸಂಚರಿಸುತ್ತದೋ, ಅದೇ ರೀತಿಯಾಗಿ ಜೀವವೂ ಕೂಡ ಜಾಗ್ರತ್ತಿನಿಂದ ಸ್ವಪ್ನಕ್ಕೂ, ಸ್ವಪ್ನದಿಂದ ಜಾಗ್ರತ್ತಿಗೂ ಸಂಚರಿಸುತ್ತಿರುತ್ತದೆ" ಎಂದು. ಇಲ್ಲಿ ಮೀನವನ್ನು ಒಂದು ಶರೀರ ಎಂದು ಭಾವಿಸುವುದಾದರೆ ಆ ಮೀನಿನ ಕಣ್ಣು ಅದರ ಜೀವಸ್ಥಾನೀಯವಾದುದು. ಅಂದರೆ ನಿತ್ಯವೂ, ಅವಿಕಾರಿಯೂ, ಜರಾ ಜನ್ಮಾದಿರಹಿತವೂ ಆದ ಆತ್ಮವೊಂದು ತನ್ನ ವಿಸ್ತಾರಕ್ಕಾಗಿ ಅನಿತ್ಯವೂ, ವಿಕಾರವೂ, ಪ್ರಾದುರ್ಭಾವ ವಿನಾಶಾದಿ ಸ್ವಭಾವದಿಂದ ಕೂಡಿದ ಶರೀರವನ್ನು ಪ್ರವೇಶಿಸುತ್ತದೆ. ಶರೀರದಲ್ಲಿ ಇರುವಷ್ಟು ಸಮಯವೂ ಜೀವವು ಈ ಶರೀರದಲ್ಲಿ ತನ್ನ ವ್ಯಾಪಾರವನ್ನು ಇಟ್ಟುಕೊಂಡೇ ಇರುತ್ತದೆ. ಅಲ್ಲಿ ಯಾವುದೇ ರೀತಿಯ ವಿಶ್ರಾಂತಿಯೆಂಬುದು ಇರುವುದೇ ಇಲ್ಲ. ಜಾಗ್ರತ್ತಿನಲ್ಲಂತೂ ಯಾವುದಾದರೊಂದು ಚೇಷ್ಟೇಯಲ್ಲಿ ನಿಯತವಾಗಿ ತನ್ನನ್ನು ತೊಡಗಿಸಿಕೊಂಡೇ ಇರುತ್ತದೆ. ಇನ್ನು ಸ್ವಪ್ನ ಮತ್ತು ನಿದ್ದೆಯ ಅವಸ್ಥೆಯಲ್ಲೂ ಅದರ ಕ್ರಿಯೆ ಇದ್ದೇ ಇರುವುದು. ಮನುಷ್ಯನಾದವನೂ ಸಮಾಧಿ ಎಂಬ ನಾಲ್ಕನೆ ಅವಸ್ಥೆಯನ್ನು ಹೊಂದುತ್ತಾನೆ. ಅಲ್ಲಿಯೂ ಜೀವವ್ಯಾಪಾರವು ಇದ್ದೇ ಇರುತ್ತದೆ ಎಂದು ಯೋಗಶಾಸ್ತ್ರ ಸಾರುತ್ತದೆ. ಭಗವದ್ಗೀತೆಯೂ' ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್' ಒಂದು ಕ್ಷಣವೂ ಕರ್ಮಚೇಷ್ಟೆಯಿಲ್ಲದ ಸಂದರ್ಭವೇ ಇಲ್ಲ ಎಂಬುದನ್ನು ಪುನರುಚ್ಚರಿಸುವುದು. ಸಮಾಧಿಯೆಂಬ ನಾಲ್ಕನೆ- ತುರೀಯವಾದ ಅವಸ್ಥೆಯ ಸ್ವಭಾವನ್ನು ಹೇಳುವಾಗ ಶ್ರೀಶಂಕರ ಭಗವತ್ಪಾದರು ಯೋಗತಾರಾವಳಿ ಗ್ರಂಥದಲ್ಲಿ  " ಅದೊಂದು ವಿಚಿತ್ರವಾದ ಸ್ಥಿತಿ" ಎನ್ನುತ್ತಾರೆ. ಏಕೆಂದರೆ ಜೀವವಿದೆಯೋ? ಎಂದು ಕೇಳಿದರೆ ಮರದ ತುಂಡಿನಂತೆ ಜಡವಾದ ವಸ್ತುವಿನಂತೆ - ಮರಣವಾದಂತೆ ಗೋಚರಿಸುತ್ತದೆ. ಆದರೆ ಅದು ಮರಣಾವಸ್ಥೆಯಲ್ಲ. ಅಥವಾ ಜೀವವಿಲ್ಲವೋ ಎಂದರೆ ಅದೂ ಅಲ್ಲ. ಅಲ್ಲಿ ಸತ್ತಿರುವ ಯಾವ ಲಕ್ಷಣವೂ ಕಾಣುವುದಿಲ್ಲ. ಇಂತಹ ವಿಚಿತ್ರವಾದ ಸ್ಥಿಯು ಅಲ್ಲಿರುತ್ತದೆ. ಆದರೆ ಜೀವದ ವ್ಯಾಪಾರವು ಯಾವ ಕ್ಷಣಕ್ಕೂ ಬಿಟ್ಟಿರುವುದಿಲ್ಲ. ಇಂತಹ ಅಂತರಂಗದ ವಿಷಯವನ್ನು ಅರುಹಲು ಯಕ್ಷನು ಮೀನಿನ ಕಣ್ಣು ಮಿಟುಕದಿರುವ ಉತ್ತರವನ್ನು ಧರ್ಮರಾಜನಿಂದ ನಿರೀಕ್ಷಿಸುತ್ತಾನೆ.


ಸೂಚನೆ : 12
/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 29 ಉಪಯಾಜನು ಸೂಚಿಸಿದ ಉಪಾಯ (Vyaasa Vikshita - 29 Upayajanu Sucisida Upaya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 

ತನಗೆ ಅವಮಾನ ಮಾಡಿದ ದ್ರೋಣನ ವಿರುದ್ಧ ಆಭಿಚಾರಿಕವನ್ನು ದ್ರುಪದನು ಮಾಡಲೆಳಸಿದ್ದನಷ್ಟೆ; ಆತನ ಕೋರಿಕೆಗೆ ಯಾಜನು ನಕಾರವನ್ನೇ ಸೂಚಿಸಿದ್ದನು; ಆದರೂ ಅವನನ್ನು ಹೇಗಾದರೂ ಆರಾಧಿಸಬೇಕೆಂಬ ಸಂಕಲ್ಪ ದ್ರುಪದನದಾಯಿತು. ಆದ್ದರಿಂದ ಆತನ ಪರಿಚರ್ಯೆಯನ್ನು (ಎಂದರೆ ಸೇವೆಯನ್ನು) ದ್ರುಪದನು ಮತ್ತೂ ಮಾಡಿದನು. ಮಾಡುತ್ತಾ ಒಂದು ವರ್ಷವೇ ಕಳೆಯಿತು. ಹಾಗಾಗಿರಲು, ರಾಜನಿಗೊಂದು ಮಧುರವಾದ ನುಡಿಯನ್ನು ಉಪಯಾಜನು ಹೇಳಿದನು.


"ಒಮ್ಮೆ ದಟ್ಟವಾದ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಹಣ್ಣೊಂದು ಬಿತ್ತು. ಅದು ಬಿದ್ದ ಎಡೆ ಶುಚಿಯಾಗಿದೆಯೇ ಇಲ್ಲವೇ ಎಂಬುದೇನೂ ಖಚಿತವಾಗಿ ಗೊತ್ತಿರಲಿಲ್ಲ. ಹಾಗಿದ್ದರೂ ಆ ಹಣ್ಣನ್ನು ನನ್ನಣ್ಣ ಯಾಜನಿದ್ದಾನಲ್ಲ, ಆತನು ಸ್ವೀಕರಿಸಿದನು! ಆತನ ಜೊತೆಯಲ್ಲಿಯೇ ಸಾಗುತ್ತಿದ್ದ ನಾನು ಆತನ ಆ ಅನೌಚಿತ್ಯವನ್ನು ಕಂಡೆ. ಸಂಕರವಾಗಿರುವ (ಎಂದರೆ ಅಶುದ್ಧಿಯು ಸೇರಿಕೊಂಡಿರುವ) ವಸ್ತುವನ್ನು ಸ್ವೀಕರಿಸುವುದರಲ್ಲಿ ಆತನೆಂದೂ ವಿಮರ್ಶೆಯನ್ನೇ ಮಾಡನು! ಹಣ್ಣನ್ನು ಕಂಡನೇ ವಿನಾ, ಪಾಪಾನುಬಂಧಿಯಾದ (ಎಂದರೆ ಪಾಪವು ಅಂಟಿಕೊಂಡು ಬರುವ) ದೋಷಗಳನ್ನು ಆತ ಗಮನಿಸಲಿಲ್ಲ. (ಪ್ರಕೃತ, ಆಭಿಚಾರಿಕವೂ ಪಾಪಾನುಬಂಧಿಯಾದದ್ದೇ – ಎಂಬ ಆತನ ಮಾತಿನ ಧ್ವನಿಯನ್ನು ಇಲ್ಲಿ ಗಮನಿಸಿಕೊಳ್ಳಬೇಕು.) ಯಾವನು ಇಂತಹ ಪ್ರಸಂಗದಲ್ಲಿ ಶೌಚವನ್ನು (ಎಂದರೆ ಶುದ್ಧಿಯನ್ನು) ಗಮನಿಸಿಕೊಳ್ಳನೋ ಆತನು ಬೇರೆಡೆಯಲ್ಲಿಯೂ ಮತ್ತಿನ್ನೆಂತು ಇದ್ದಾನು? (ಶೌಚವನ್ನು ಎಲ್ಲೆಡೆ ಗಮನಿಸತಕ್ಕದ್ದು; ನಾನಂತೂ ನನ್ನಣ್ಣನಂತಲ್ಲ – ಎಂಬ ಅಭಿಪ್ರಾಯ).

 

ಮತ್ತೂ ಒಂದು ನಿದರ್ಶನವಿದೆ. ಗುರುಕುಲವಾಸದಲ್ಲಿ ವೇದಾಧ್ಯಯನವಾಗುತ್ತಿದ್ದ ಸಮಯವದು. ಭಿಕ್ಷಾನ್ನದಲ್ಲಿ ಅನ್ಯರು ತಿಂದು ಮಿಕ್ಕಿದ್ದನ್ನೇ ಆಗೊಮ್ಮೆ ಈಗೊಮ್ಮೆ ಆತ ತಿನ್ನುತ್ತಿದ್ದುದೂ ಉಂಟು! ಘೃಣೆಯಿಲ್ಲದೆ (ಎಂದರೆ ನಾಚಿಕೆಯಿಲ್ಲದೆ) ಅಂತಹ ಅನ್ನದ ಗುಣಗಾನವನ್ನು ಸಹ ಮಾಡಿಬಿಡುತ್ತಿದ್ದನು, ಆತ! ತಾತ್ಪರ್ಯವಿದು: ಆತನು ಫಲಾರ್ಥಿ (ಎಂದರೆ, ಇದು ಬೇಕು, ಅದು ಬೇಕು ಎಂದು ಬಯಸುವಂತಹವನು). ಇದನ್ನು ನಾನು ನನ್ನ "ತರ್ಕವೆಂಬ ಕಣ್ಣಿನಿಂದ" ಕಂಡಿದ್ದೇನೆ. ರಾಜನೇ, ಸಾರಾಂಶವಿಷ್ಟು: ನೀನು ಆತನಲ್ಲಿಗೆ ಹೋಗು; ಆತನು ನಿನಗೆ ಯಾಗವನ್ನು ಮಾಡಿಸಿಕೊಡುವನು" – ಎಂದು ಉಪಯಾಜನು ಹೇಳಿಬಿಟ್ಟನು. (ಅರ್ಥಾತ್, ವಾಂಛೆಗಳುಳ್ಳವರು, ಹಾಗೂ ಪಾಪಾನುಬಂಧಗಳನ್ನು ಲೆಕ್ಕಿಸದವರು, ಇಂತಹ ಕಾರ್ಯಗಳಿಗೆ ಕೈಹಾಕಬಹುದು; ನಾನಲ್ಲ – ಎಂಬ ಅಭಿಪ್ರಾಯ ಉಪಯಾಜನದು).


ಉಪಯಾಜನ ಈ ಮಾತನ್ನು ಕೇಳಿದ ದ್ರುಪದನಿಗೆ ಮನಸ್ಸಿನಲ್ಲಿ ಬೇಜಾರೇ ಆಯಿತು. ಅದನ್ನೇ ಚಿಂತಿಸುತ್ತಾ ಯಾಜನ ಆಶ್ರಮಕ್ಕೆ ಹೋದನು. ಪೂಜಾರ್ಹನಾದ ಯಾಜನನ್ನು ಸತ್ಕರಿಸಿ ಆತನಿಗೆ ಹೇಳಿದನು:

 

"ಅಯ್ಯಾ ಯಾಜನೇ, ನಿನಗೆ ಎಂಟು ಅಯುತ (ಎಂದರೆ ಎಂಭತ್ತು ಸಾವಿರ) ಗೋವುಗಳನ್ನು ಕೊಡುವೆನು. ನನಗಾಗಿ ನೀನೊಂದು ಯಾಗವನ್ನು ಮಾಡಿಸಬೇಕು. ದ್ರೋಣನ ಮೇಲಣ ವೈರ ನನ್ನನ್ನು ಸುಡುತ್ತಿದೆ; ಅಂತಹ ನನಗೆ ಸಂತೋಷವನ್ನುಂಟುಮಾಡುವುದು ನಿನ್ನ ಕೈಯಲ್ಲಿದೆ. ಏಕೆ ಗೊತ್ತೆ? ವೇದವನ್ನು ಬಲ್ಲವರಲ್ಲಿ ದ್ರೋಣನು ಶ್ರೇಷ್ಠನಾದವನು. ಬ್ರಹ್ಮಾಸ್ತ್ರವನ್ನು ಬಲ್ಲವರಾರೂ ಆತನನ್ನು ಮೀರಿಸಲಾರರು. ಆ ಕಾರಣದಿಂದಲೇ (ಹಳೆಯ) ಮಿತ್ರತ್ವವನ್ನೊಪ್ಪಿಕೊಳ್ಳುವ ತಗಾದೆಯಲ್ಲಿ ನನ್ನನ್ನಾತನು ಪರಾಜಯಗೊಳಿಸಿದನು. ಕುರುವಂಶದ ಆಚಾರ್ಯರಲ್ಲಿ ಆತನೀಗ ಮುಖ್ಯನಾಗಿರುವನು. ಧೀಮಂತನಾದ ಅಂತಹ ಭಾರದ್ವಾಜನನ್ನು ಮೀರಿಸಬಲ್ಲ ಕ್ಷತ್ರಿಯರಾರೂ ಈ ಭೂಮಿಯಲ್ಲಿಲ್ಲ.


ಸೂಚನೆ : 12/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.