Thursday, May 30, 2024

ಶ್ರೀಕೃಷ್ಣನ ತೂಕ ಎಷ್ಟು? (Śrikrsnana Tuka Estu?)

ಲೇಖಕರು:ವಾದಿರಾಜ್ ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in) 




ಜಗದೊಡೆಯನಾದ ಶ್ರೀಕೃಷ್ಣನನ್ನು ಅಳೆಯಲು ಸಾಧ್ಯವೇ ? ಅವನು ಎಲ್ಲರಲ್ಲಿಯೂ, ಎಲ್ಲದರಲ್ಲಿಯೂ ಸದಾ ಇರುವವನು.(ಸರ್ವಾಂತರ್ಯಾಮಿ)  ಅಂತಹವನ ತೂಕ ಎಷ್ಟು? ಎನ್ನುವ ಪ್ರಶ್ನೆಯೇ ಸರಿಯಿಲ್ಲ ಎನ್ನಿಸುವುದು. ಆದರೂ ಶ್ರೀಕೃಷ್ಣನನ್ನು ತೂಕಹಾಕಿದ ಮಹಾಭಾರತದ ರಸಮಯವಾದ ಪ್ರಸಂಗವನ್ನು ಗಮನಿಸೋಣ.   

ಒಮ್ಮೆ ಸತ್ಯಭಾಮೆಯ ಮನಸ್ಸಿನಲ್ಲಿ ತನ್ನ ಪತಿಯಾದ ಶ್ರೀಕೃಷ್ಣನು ಸದಾಕಾಲ ತನ್ನ ಬಳಿಯೇ ಇರಬೇಕು ಮತ್ತು ಬೇರೆ ಹೆಂಡತಿಯರ ಒಡನೆಯಾಗಲೀ, ಸಖಿಯರೊಂದಿಗೂ ಇರಬಾರದೆಂಬ ಭಾವವು ಮೂಡುತ್ತದೆ. 


ಆ ಯೋಚನೆಯಲ್ಲಿದ್ದಾಗ ಸತ್ಯಭಾಮೆಯ ಮುಂದೆ 'ನಾರಾಯಣ, ನಾರಾಯಣ' ಎನ್ನುತ್ತಾ ನಾರದರು  ಬರುತ್ತಾರೆ. ಆಗ ಅವರಲ್ಲಿ ತನ್ನ ಮನದಾಳದ ವಿಷಯವನ್ನು ಅರಿಕೆ ಮಾಡಿಕೊಳ್ಳುತ್ತಾಳೆ. ನಾರದರು, "ಐದು ದಿನಗಳ ಶ್ರೀಮಹಾಲಕ್ಷ್ಮಿ ವ್ರತವನ್ನು ಮಾಡು ಹಾಗೂ ಕಡೆಯದಿನ ನಿನ್ನ ಗಂಡನಾದ ಶ್ರೀಕೃಷ್ಣನನ್ನು ಒಬ್ಬ ಯೋಗ್ಯ ಬ್ರಾಹ್ಮಣನಿಗೆ ದಾನವಾಗಿ ಕೊಡು". ಎಂದು ಉಪಾಯವನ್ನು ತಿಳಿಸುತ್ತಾರೆ.


ನಾರದರು ಹೀಗೆ ಹೇಳಿದಾಗ ಸತ್ಯಭಾಮೆಗೆ ಕಸಿವಿಸಿಯಾಗುತ್ತದೆ. ' ಅಲ್ಲ ನಾರದರೇ, ನನ್ನ ಗಂಡ ನನ್ನ ಬಳಿಯೇ ಇರಬೇಕೆಂದು ಕೇಳಿಕೊಂಡರೆ, ವ್ರತಾಂತ್ಯದಲ್ಲಿ ದಾನಕೊಡುವುದೇ? ನೀವು ಕಲಹಪ್ರಿಯರೆಂದು ಮತ್ತೊಮ್ಮೆ ಸಾಬೀತು ಪಡಿಸಿದಿರಿ!'  ಎಂದು ಹೇಳುತ್ತಾಳೆ.  ಅದಕ್ಕೆ ನಾರದರು 'ಸ್ವಲ್ಪತಾಳು, ಪೂರ್ತಿಕೇಳು. ಕೊಟ್ಟ ದಾನಕ್ಕೆ ಸಮನಾದ ತೂಕದ ವಸ್ತುವನ್ನು ಕೊಟ್ಟು ಆ ಬ್ರಾಹ್ಮಣನಿಂದ ನಿನ್ನ ಕೃಷ್ಣನನ್ನು ಹಿಂಪಡೆ.  ಹೀಗೆ ಈ ವ್ರತಾಚರಣೆ ಮಾಡಿದರೆ ನಿನ್ನ ಕೃಷ್ಣ ಯಾರ ಬಳಿಯೂ ಹೋಗುವುದಿಲ್ಲ, ನಿನ್ನ ಬಳಿಯೇ ಸದಾ  ಇರುವನು' ಎಂದು ಹೇಳುತ್ತಾರೆ.  


ಇದಕ್ಕೆ ಸಮ್ಮತಿಸಿದ ಸತ್ಯಭಾಮೆಯು ಐದು ದಿನಗಳ ಆ ಮಹಾಲಕ್ಷ್ಮಿ ವ್ರತವನ್ನು ಆಚರಿಸಿ ಕಡೆಯ ದಿನದಂದು ದಾನವನ್ನು ಕೊಡಲು ಉತ್ತಮ ಬ್ರಾಹ್ಮಣನನ್ನು ಹುಡುಕುತ್ತಿರಲು, ಹರಿನಾಮ ಸ್ಮರಣೆ ಮಾಡುತ್ತಾ ನಾರದರು ಅಲ್ಲಿಗೆ ಬರುತ್ತಾರೆ . 


ಸಂತೋಷದಿಂದ ಸತ್ಯಭಾಮೆಯು 'ನೀವೇ ದಾನವನ್ನು ಸ್ವೀಕರಿಸಲು ಶ್ರೇಷ್ಠರು. ನೀವೇ  ಶ್ರೀಕೃಷ್ಣನನ್ನು ದಾನವಾಗಿ ಸ್ವೀಕರಿಸಿ' ಎಂದಳು. ನಾರದರು ಮನಸ್ಸಿನಲ್ಲಿಯೇ "ಕೃಷ್ಣ ಯಾರಿಗೆ ತಾನೇ ಬೇಡ ? ಅದೂ ದಾನವಾಗಿ ಕೊಟ್ಟರೆ !" ಎಂದು ಯೋಚಿಸಿ ಪರಮಸಂತೋಷದಿಂದ ಹಸನ್ಮುಖರಾಗಿ ದಾನವನ್ನು ಪಡೆಯುತ್ತಾರೆ. ನಂತರ ತಕ್ಷಣ, ಕೃಷ್ಣನ ನವಿಲುಗರಿಯ ಪೇಟವನ್ನು ತೆಗೆದು  ನಾರದರು ತನ್ನ ರುಮಾಲನ್ನು ಸುತ್ತುತ್ತಾರೆ.  ಅವನ ಕೈಗೆ ಮಹತಿಯನ್ನು (ನಾರದರ ತಂಬೂರಿ) ಕೊಟ್ಟು 'ಕೃಷ್ಣಾ ! ಇನ್ನು ನೀನು ನನ್ನ ದಾಸ, ನನ್ನ ಹಿಂದೆ ನಡೆ ' ಎಂದು ಹೇಳಿ ನಾರಾಯಣ ನಾಮಸ್ಮರಣೆ ಮಾಡುತ್ತಾ ಹೊರಡಲು ಸಿದ್ದರಾಗುತ್ತಾರೆ. ಆಗ ಗಾಬರಿಗೊಂಡ ಸತ್ಯಭಾಮೆಯು,  'ನಿಲ್ಲಿ 

ನಾರದರೆ, ಈ ವ್ರತದ ವಿಷಯವನ್ನು ತಿಳಿಸುವಾಗ ದಾನವನ್ನು ಕೊಟ್ಟು ಅದಕ್ಕೆ ಸಮಾನವಾದ ವಸ್ತು ಕೊಡಬಹುದು ಎಂದು ಹೇಳಿದ್ದಿರಿ; ಈಗ ಅದನ್ನು ನಡೆಸಿಕೊಡಿ' ಎನ್ನುತ್ತಾಳೆ. ಅದಕ್ಕೆ ನಾರದರು 'ಸಮಾನ ತೂಕದ ವಿಷಯ ಪ್ರಸ್ತಾಪಿಸಿಲ್ಲ; ಹಾಗಾಗಿ ನಾವು ಹೊರಟೆವು. ಈಗಲೂ ಇನ್ನೂ ಕಾಲ ಮಿಂಚಿಲ್ಲ. ಶ್ರೀಕೃಷ್ಣನ ಸಮಾನ ತೂಕದ ವಸ್ತುವನ್ನು ಕೊಟ್ಟರೆ ಅದನ್ನೇ ಸ್ವೀಕರಿಸುವೆ ನೀನು ಕೃಷ್ಣನನ್ನು ಹಿಂಪಡೆಯಬಹುದು' ಎಂದು ಹೇಳುತ್ತಾರೆ.


ಆಗ ಸತ್ಯಭಾಮೆ ದೊಡ್ಡ ತಕ್ಕಡಿಯ ಎಡಭಾಗದಲ್ಲಿ ಶ್ರೀ ಕೃಷ್ಣನನ್ನು ಕೂರಿಸುತ್ತಾಳೆ; ಬಲಭಾಗಕ್ಕೆ ತನ್ನ ಬಳಿ ಇದ್ದ ಚಿನ್ನದ ಸರಗಳು, ಬಳೆಗಳು, ಇತ್ಯಾದಿ  ಅನೇಕ ಆಭರಣಗಳ ರಾಶಿ ತುಂಬುತ್ತಾಳೆ. ಆದರೂ ತಕ್ಕಡಿಯು ಮೇಲೆ ಏಳುವುದಿಲ್ಲ. ತನ್ನ ಸಖಿಯರ ಹಾಗೂ ಸ್ನೇಹಿತೆಯರ ಚಿನ್ನದ ಒಡವೆಗಳನ್ನೆಲ್ಲಾ ಹಾಕಿದಾಗಲೂ, ಆ ತಕ್ಕಡಿಯು ಪೂರ್ಣ ತುಂಬಿದ್ದರೂ, ಸ್ವಲ್ಪವೂ ಕೃಷ್ಣನು ಕುಳಿತಿದ್ದ ತಕ್ಕಡಿಯ ಭಾಗವು ಮೇಲೆ ಏಳುವುದಿಲ್ಲ.


ಈಗ ಸತ್ಯಭಾಮೆಗೆ ಗಾಬರಿಯಾಗುತ್ತದೆ. ಸತ್ಯಭಾಮೆಯು ರುಕ್ಮಿಣಿಯನ್ನು ಕಂಡು ಈ ವಿಚಾರವನ್ನು ತಿಳಿಸಿದಾಗ ರುಕ್ಮಿಣಿಯು ಅಲ್ಲಿಗೆ ಬಂದು ಸತ್ಯಭಾಮೆ ಹಾಕಿದ್ದ ಒಡವೆಗಳ ರಾಶಿಯನ್ನು ತೆಗೆಸುವಳು. ಅಲ್ಲಿದ್ದ ತುಳಸಿ ಬೃಂದಾವನಕ್ಕೆ ನಮಸ್ಕರಿಸಿ ನಾಲ್ಕು ದಳದ ತುಳಸಿ ಕುಡಿಯೊಂದನ್ನು ಬಲ ಭಾಗದ ಖಾಲಿ ತಕ್ಕಡಿಯಲ್ಲಿ ಭಕ್ತಿಯಿಂದ ಹಾಕುತ್ತಾಳೆ  ಮತ್ತು ತಕ್ಕಡಿಗೆ ಭಕ್ತಿಯಿಂದ ಪ್ರದಕ್ಷಣೆ ಮಾಡಿ ನಮಸ್ಕಾರ ಮಾಡುತ್ತಿದ್ದಂತೆಯೇ ಕೃಷ್ಣನು ಕುಳಿತಿದ್ದ ತಕ್ಕಡಿಯ ಭಾಗವು ಮೇಲೆದ್ದು ಒಂದೇ ತುಳಸಿಯ ಕುಡಿಯ ಭಾಗದ ತಕ್ಕಡಿಯು ನೆಲವನ್ನು ಮುಟ್ಟುತ್ತದೆ. ಆಗ ಅಲ್ಲಿದ್ದ ಸತ್ಯಭಾಮೆ  ಮತ್ತು ಅವರ ಸಖಿಯರುಗಳಿಗೆಲ್ಲಾ ಆಶ್ಚರ್ಯವಾಗುವುದು. ನಾರದರು ಸಂತೋಷದಿಂದ ಆ ತುಳಸಿಯನ್ನು ದಾನವಾಗಿ ಪಡೆದು ಹೊರಡುವರು.  ಇದು ರುಕ್ಮಿಣಿ ಸತ್ಯಭಾಮೆಯರನ್ನೊಳಗೊಂಡ ಪ್ರಸಿದ್ಧವಾದ ಪ್ರಸಂಗ.


ಈ ಕಥೆಯು ಇಂದಿಗೂ ಪ್ರಸ್ತುತವಾಗಿದ್ದು, ಈ ಕಥೆಯಿಂದ ಕಲಿಯಬೇಕಾದ ಅಂಶಗಳು ಬಹಳಷ್ಟು ಇವೆ. ನಾರದರು ಎಂದರೆ ಜಗಳ ತಂದಿಡುವವರು ಎಂಬ ಮಾತಿದೆ. ಆದರೆ ಅವರು ಮೋಕ್ಷಮಾರ್ಗದ ಪಾಠವನ್ನೇ ಕಲಿಸುವವರು. ಸತ್ಯಭಾಮೆಗೆ ಶಿಕ್ಷಣ ಕೊಡಲೆಂದೇ  ಸಕಾಲದಲ್ಲಿ ಬಂದಿದ್ದು. ಸತ್ಯಭಾಮೆಯು ಕೃಷ್ಣನ ಭಕ್ತೆಯಾಗಿ ಪರಮಪ್ರೇಮವನ್ನು ಹೊಂದಿದವಳಾಗಿದ್ದಳು. ಆದರೂ ಸಹ ಕೃಷ್ಣನು ತನ್ನ ವಶದಲ್ಲಿರಬೇಕೆಂಬ ಸ್ವಾರ್ಥ ಮನೋಭಾವ ಉಳ್ಳವಳಾಗಿದ್ದಳು. ತಾನೇ  ಕೃಷ್ಣನಿಗೆ ಅತ್ಯಂತ ಪ್ರಿಯಳಾದವಳು ಎಂಬ ಗರ್ವವೂ ಇರುತ್ತದೆ. ಆ ಗರ್ವ ಮನೋಭಾವದಿಂದಲೇ ಚಿನ್ನದ ಆಭರಣಗಳಿಂದ ಕೃಷ್ಣನನ್ನು ಅಳೆದು ವಿಫಲಳಾದಳು. ಭಕ್ತ ಪರಾಧೀನ ಭಗವಂತ ಎಂಬುದನ್ನು ಮರೆತಳು. 


ಸರ್ವಾಂತರ್ಯಾಮಿಯಾದ ಕೃಷ್ಣನು ತನ್ನ ಅಧೀನದಲ್ಲಿಯೇ ಇರಬೇಕೆಂಬ  ಮನೋಭಾವದಿಂದ ಕೂಡಿದ್ದಳು. ಹೊಟ್ಟೆಕಿಚ್ಚಿನಿಂದ ಬೇರೆಯವರ ಬಳಿ ಅವನು ಇರಬಾರದೆಂದು ಇಚ್ಛಿಸಿದ್ದಳು.  ಕೃಷ್ಣನನ್ನು ತನ್ನ ಅಧೀನದಲ್ಲಿರಿಸಿಕೊಳ್ಳಲು ಆ ವ್ರತವನ್ನಾಚರಿಸಿದಳು. ಆದರೆ ಕೃಷ್ಣಪರಮಾತ್ಮ ಯಾರ ಅಧೀನಕ್ಕೂ ಒಳಪಡುವುದಿಲ್ಲ. ಆದುದರಿಂದ ಶ್ರೀಕೃಷ್ಣನು, ತನ್ನ ಪ್ರೀತಿಯ ಮಡದಿಯೇ ಆದರೂ ಸತ್ಯಭಾಮೆಯ ಗರ್ವ ಪಡುವ ಬುದ್ಧಿಯನ್ನು ಒಪ್ಪಿರಲಿಲ್ಲ. ಹಾಗಾಗಿ ಪಾಠವನ್ನು ಕಲಿಸಲು ಪರೋಕ್ಷವಾಗಿ ನಾರದರನ್ನು ಅನುಮೋದಿಸಿರುತ್ತಾನೆ.  ಅಧರ್ಮಿಗಳಾದ ದುರ್ಯೋಧನ, ಶಿಶುಪಾಲರಂತಹವರಿಗೆ ಸಾವೇ ಶಿಕ್ಷೆ. ಭಕ್ತಳಾದ ಸತ್ಯಭಾಮೆಯ ಗರ್ವಭಂಗಕ್ಕೆ ಸೋಲಿನ ಶಿಕ್ಷೆ.


ಸತ್ಯಭಾಮೆಗೆ ಮೊದಲು ಆಡಿದ ಭಾವವು ನಮ್ಮಲ್ಲೂ ಸಹ ಆಡಬಹುದು. ಭಗವಂತ ನಮಗೆ ಹತ್ತಿರವೆನಿಸಿದಾಗ ಗರ್ವಪಡುವ ಸಾಧ್ಯತೆಯುಂಟು. ಈ ಪ್ರಸಂಗ ನಮಗೆ ಎಚ್ಚರಿಕೆಯ ಘಂಟೆಯನ್ನು ಬಾರಿಸುತ್ತದೆ.  ಎಷ್ಟೋ ವೇಳೆ ದೇವಾಲಯಗಳಲ್ಲಿ ದಾನವಾಗಿ ಕೊಟ್ಟ ವಸ್ತುವಿನ ಮೇಲೆ ತಮ್ಮ ಹೆಸರುಗಳನ್ನು ಬರಿಸುವುದನ್ನು ನೋಡುತ್ತೇವೆ.   ಅದು ಭಗವಂತನಿಗೆ ಸಮರ್ಪಣಾ ಭಾವವಿಲ್ಲದೆ, ತೋರಿಕೆಯ ಮನೋಭಾವದಿಂದ ಕೂಡಿರುತ್ತದೆ.  


ರುಕ್ಮಿಣಿಯು ಸಂಪೂರ್ಣ ಭಕ್ತಿ ಮತ್ತು ಸಮರ್ಪಣಾಭಾವದಿಂದ ಕೂಡಿದ ಪ್ರೇಮಾನುರಾಗದಿಂದ ತನ್ನನ್ನು ಭಗವಂತನಿಗೆ ಸಮರ್ಪಿಸಿಕೊಂಡಿದ್ದವಳು. ಸತ್ಯಭಾಮೆಯ ತದ್ವಿರುದ್ಧವಾದ ನಡೆ ರುಕ್ಮಿಣಿಯದು! ಅವಳು  ಕೃಷ್ಣನ ತೂಕ ಎಷ್ಟು? ಎಂದರೆ 'ಅಣೋರಣೀಯಾನ್' ಅಣುವಿಗಿಂತಲೂ ಸಣ್ಣ ಅಣು. ಹಾಗೂ 'ಮಹತೋ ಮಹೀಯಾನ್' ಎಲ್ಲಕ್ಕಿಂತಲೂ ಬೃಹತ್ತಾದವನು  ಎಂಬ ವಿಷಯವನ್ನು ಬಲ್ಲವಳಾಗಿದ್ದಳು.


ಕೃಷ್ಣನಿಗೆ ಪ್ರಿಯವಾದ ತುಳಸಿಪತ್ರೆಯ  ಶ್ರೇಷ್ಠತೆಯನ್ನು ತಿಳಿದಿದ್ದಳು. 'ತುಳಸಿ' ಎಂದರೆ  ತುಲ-ಸ್ಯಾಮ್ ಇದಕ್ಕೆ ಸಮಾನದ ತೂಕದ ವಸ್ತು ಈ ಲೋಕದಲ್ಲಿ ಇನ್ನೊಂದಿಲ್ಲವೆಂದು ತಿಳಿದಿದ್ದಳು. ಅವಳಲ್ಲಿ  ಭಕ್ತಿ-ಸಮರ್ಪಣಾಭಾವವು ತುಂಬಿತ್ತು. ಇದರ ಜೊತೆಗೇ ಸತ್ಯಭಾಮೆಯ ಗರ್ವಭಂಗವು ಆಗಿದೆ. ಇದಕ್ಕೆ ಕಾರಣ ಸತ್ಯಭಾಮೆಯು ತನಗೆ ಯಾವುದು ಪ್ರಿಯವೋ ಅದರಿಂದ ಕೃಷ್ಣನನ್ನು ಅಳೆದಳು. ಆದರೆ ರುಕ್ಮಿಣಿಯು ಕೃಷ್ಣನಿಗೆ ಪ್ರಿಯವಾದುದನ್ನು ಅರ್ಪಿಸಿದಳು. ಈ ಘಟನೆಯಲ್ಲಿ  ತುಳಸಿಯ ಹಿರಿಮೆಯು ಪ್ರಕಟವಾಗಿದೆ. 'ತೇನ ವಿನಾ ತೃಣಮಪಿ  ನ ಚಲತಿ' ಎಂದರೆ ಭಗವಂತನ ಅನುಮತಿ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸುವುದಿಲ್ಲ ಹಾಗೂ ಅವನು ಭಕ್ತ ಪರಾಧೀನ ಎಂಬುದು ಸಿದ್ಧವಾಗುತ್ತದೆ.  

ಶ್ರೀರಂಗಮಹಾಗುರುಗಳು ಭಕ್ತಿ ಮತ್ತು ಸಮರ್ಪಣೆಗೆ ಮರದ ಹಣ್ಣಿನ ಉದಾಹರಣೆಯೊಂದನ್ನು ಹೀಗೆ ತಿಳಿಸಿದ್ದರು. "ಹಣ್ಣು ಪರಿಪಕ್ವವಾಗಿಬಿಟ್ಟಾಗ ಅದರ ತೊಟ್ಟು ಇದು ನನಗಲ್ಲ ಭೂಮಾತೆಗೆ ಎಂದು ಹೇಗೆ ಹಗುರವಾಗಿ ಮತ್ತು ಸಹಜವಾಗಿ ಅದನ್ನು ಬಿಟ್ಟು ಕೊಡುತ್ತದೆಯೋ ಹಾಗೆ ಹಗುರವಾದ ಮನಸ್ಸಿನಿಂದ ಭಗವಂತನಿಗೆ ಕೃಷ್ಣಾರ್ಪಣ ಬುದ್ಧಿಯಿಂದ ಸಮರ್ಪಣೆ ಮಾಡಬೇಕು" 

ಆದುದರಿಂದ  ನಾವುಗಳೆಲ್ಲ ಶ್ರೀ ಕೃಷ್ಣನ ಒಲುಮೆಗೆ ಪಾತ್ರರಾಗಬೇಕೆಂದರೆ ಗರ್ವ ಪಡಬಾರದು, ಭಗವಂತನ ಆಶಯಕ್ಕೆ ತಕ್ಕಂತೆ ನಡೆಯಬೇಕು. ಭಕ್ತಿ ಶ್ರದ್ಧೆಗಳಿಂದ ಸಮರ್ಪಣೆ ಭಾವದಿಂದ ನ ಮಮ-ನ ಮಮ (ನನ್ನದಲ್ಲ ನನ್ನದಲ್ಲ) ಎಂದು ಅರ್ಪಿಸೋಣ. ಜಗದೊಡೆಯನಾದ ಶ್ರೀಕೃಷ್ಣನ ಒಲುಮೆಗೆ ಪಾತ್ರರಾಗೋಣ.


ಸೂಚನೆ: 30/05/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

ಹುಟ್ಟು - ಒಂದು ಅವಲೋಕನ (Huttu - Ondu avalokana

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಭಾರತೀಯರ ವಿವಾಹಪದ್ಧತಿಯು ಅತ್ಯಂತ ವಿಶಿಷ್ಟವೂ, ಅತ್ಯಂತ ಶ್ರೇಷ್ಠವೂ ಆಗಿದೆ. ಇದಕ್ಕೆ ಕಾರಣ ಹಲವಾರು. ಅವುಗಳಲ್ಲಿ ಮುಖ್ಯವಾದ ಕಾರಣ ಸತ್ಪ್ರಜಾ - ಸಂತತಿ ಪ್ರಾಪ್ತಿ. 'ಸಂತತಿ' ಎಂಬ ಶಬ್ದದ ಅರ್ಥವೇ ಹೀಗಿದೆ - ಸಮ್- ಚೆನ್ನಾಗಿ, ತತಿ- ವಿಸ್ತಾರವಾದುದು ಎನ್ನುವುದಾಗಿ. ಹಾಗಾದರೆ ಚೆನ್ನಾಗಿ ವಿಸ್ತಾರ ಆಗುವುದು ಎಂದರೇನು? ಇದನ್ನು ನಾವು ಅರ್ಥವನ್ನು ಮಾಡಿಕೊಂಡರೆ ಭಾರತೀಯ ವಿವಾಹಪದ್ಧತಿಗೆ ಒಂದು ಮೆರಗು ಸಿಕ್ಕಂತಾಗುವುದು. 


ಹಾಗಾಗಿ ಅದನ್ನು ಸ್ವಲ್ಪ ವಿವರಿಸುವುದಕ್ಕೆ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಂದು ಮಾವಿನ ಬೀಜದಿಂದ ಮೊಳಕೆಯನ್ನು ಬರಿಸಿ, ಮರವನ್ನು ಮಾಡುತ್ತೇವೆ. ಮರದಿಂದ ಹಣ್ಣನ್ನು ಪಡೆಯುತ್ತೇವೆ. ಎಂತಹ ಹಣ್ಣನ್ನು ಅಪೇಕ್ಷೆ ಪಟ್ಟು ಅ ಬೀಜವನ್ನು ನೀಡುತ್ತೇವೆ ಎಂದರೆ ಒಳ್ಳೆಯ ಬೀಜವನ್ನು ತಾನೇ!. ಅಂದರೆ ನಮಗೆ ಮಾವಿನ ಬೀಜದಿಂದ ಒಳ್ಳೆಯ ಮಾವಿನಹಣ್ಣು ಬೇಕು; ಹುಳಿ ಮಾವಿನ ಹಣ್ಣು ಅಥವಾ ಕೆಟ್ಟು ಹೋಗುವಂತಹ ಮಾವಿನ ಹಣ್ಣು ಬೇಡ ಅಲ್ಲವೇ? ಹಾಗೆ ಮಾನವನು ಕೂಡ ಇದೇ ರೀತಿಯಾಗಿ ಆಸೆ ಪಡುವುದು ಸಹಜವಲ್ಲವೇ? ನಿರ್ವಿಕಾರವಾದ ಸಂತತಿ ಬೇಕೆನ್ನುವುದಾದರೆ ನಮ್ಮ ಮುಂಜಾಗ್ರತೆಯ ಕ್ರಮ ಹೇಗಿರಬೇಕು? ಅನ್ನುವುದನ್ನು ಕೂಡ ನಾವು ತಿಳಿದುಕೊಳ್ಳಬೇಕು. ಅದಕ್ಕಾಗಿ ಒಳ್ಳೆಯ ಬೀಜವನ್ನು ಆಯ್ದುಕೊಳ್ಳುತ್ತೇವೆ; ಆ ಒಳ್ಳೆಯ ಬೀಜವನ್ನು ಒಳ್ಳೆಯ ಕ್ಷೇತ್ರದಲ್ಲಿ ನೆಡುತ್ತೇವೆ; ಆದ್ದರಿಂದ ಒಳ್ಳೆಯ ವೃಕ್ಷ ಆಗಬೇಕು ಎನ್ನುವುದಾದರೆ, ಒಳ್ಳೆಯ ಬೀಜ ಬೇಕು ಮತ್ತು ಒಳ್ಳೆಯ ಕ್ಷೇತ್ರ ಬೇಕು, ಈ ಎರಡರ ಸಂಗಮದಿಂದ ತಾನೇ ನಾವು ಒಳ್ಳೆಯ ಮರವನ್ನು ಪಡೆಯಲು ಸಾಧ್ಯ!. ಅಂತ ಒಳ್ಳೆಯ ಮರದಿಂದ ತಾನೇ ನಾವು ಒಳ್ಳೆಯ ಹಣ್ಣನ್ನು ಪಡೆಯಲು ಸಾಧ್ಯ!. ಇದು ಸೃಷ್ಟಿ ಸಹಜವಾದದ್ದಲ್ಲವೇ. 


ಕಾಳಿದಾಸನು ರಘುವಂಶ ಎಂಬ ತನ್ನ ಮಹಾಕಾವ್ಯದಲ್ಲಿ ಹೀಗೆ ಹೇಳುತ್ತಾನೆ :- "ಪ್ರವರ್ತಿತೋ ದೀಪ ಇವ ಪ್ರದೀಪಾದ್" ಎಂದು. ರಘುಮಹಾರಾಜನು ಪುತ್ರರೂಪವಾದ ಸಂತತಿಯನ್ನು ಪಡೆದನು. ಅದು ಹೇಗಿತ್ತು? ಎಂದರೆ 'ದೀಪದಿಂದ ದೀಪವನ್ನು ಹಚ್ಚಿದಂತೆ' ಎಂದು. ದೀಪದಿಂದ ಮತ್ತೊಂದು ದೀಪವನ್ನು ಬೆಳಗಿಸಿದರೆ ಪ್ರಕಾಶದಲ್ಲಿ ಯಾವ ವಿಕಾರವನ್ನು ಕಾಣಲಾಗದು. ಎಷ್ಟೇ ದೀಪವನ್ನು ಬೆಳಗಿಸಿದರೂ ಆ ಎಲ್ಲಾ ದೀಪಗಳ ಬೆಳಕಿನಲ್ಲಿ ಯಾವುದೇ ದೋಷವನ್ನು ಕಾಣಲಾಗದು. 'ಆತ್ಮಾ ವೈ ಪುತ್ರ ನಾಮಾಸಿ' - ತನ್ನಂತೆ ಮಗ ಎಂದರ್ಥ. ತಾನು ದೋಷರಹಿತನಾಗಿದ್ದರೆ ಹುಟ್ಟುವ ಮಗುವೂ ದೋಷರಹಿತವಾಗುತ್ತದೆ. ಇದನ್ನೇ ಸಂ-ತತಿ - ಒಳ್ಳೆಯ ಸೃಷ್ಟಿ ಎನ್ನಬಹುದು. ಅಂತಹ ನಿರ್ದುಷ್ಟವಾದ ಸಂತತಿಯನ್ನು ಪಡೆಯುವುದೇ ವಿವಾಹದ ಮುಖ್ಯವಾದ ಧ್ಯೇಯವಾಗಿದೆ.  ಈ ವ್ಯವಸ್ಥೆ ಸಮಸ್ತ ಜಂತುಗಳಲ್ಲಿ ತಾನಾಗಿಯೇ ನಡೆದುಕೊಂಡು ಬರುತ್ತಿದೆ. ಆದರೆ ಎಲ್ಲ ಶ್ರೇಷ್ಠತೆಗಳು ನೆಲೆಸಿರುವ, ಪ್ರಾಣಿ ಸಂಕುಲಗಳಲ್ಲಿ ಅತ್ಯಂತ ಶ್ರೇಷ್ಠನಾದ, ಜಗತ್ತಿನ ಮೇಲೆ ತನ್ನ ಆಧಿಪತ್ಯವನ್ನು ಹೊಂದಿರುವಂತಹ ಮನುಷ್ಯನ ಸೃಷ್ಟಿ ಹೇಗಾಗಿದೆ!! ಮನುಷ್ಯನ ಸಂತತಿ ಪ್ರಾಣಿಗಳು ಅಥವಾ ಸಸ್ಯಗಳಂತೆ ಅಲ್ಲವೇ ಅಲ್ವಾ! ಇಷ್ಟೊಂದು ಮಹತ್ತ್ವಪೂರ್ಣವಾದ ವಿಷಯವನ್ನು ನಾವಿಂದು ಎಷ್ಟು ಹಗುರವಾಗಿ ತೆಗೆದುಕೊಂಡಿದ್ದೇವೆ!? ಗಂಡು ಹೆಣ್ಣು ಎರಡು ಕೂಡಿ ಬಾಳಲು ಇರುವ ವ್ಯವಸ್ಥೆ, ಅಥವಾ  ಒಂದು ಗಂಡು ಮತ್ತು ಹೆಣ್ಣು ಇಬ್ಬರೂ ಒಟ್ಟಿಗೆ ಇರಲು ಸಮಾಜದಿಂದ ಅನುಮತಿಯನ್ನು ಪಡೆಯಲು ಏರ್ಪಡಿಸುವ ಕಾರ್ಯಕ್ರಮವೇ 'ವಿವಾಹ' ಎನ್ನುವಂತಾಗಿದೆ. ಇಂದಿನ ವಿವಾಹ ಮಹೋತ್ಸದಲ್ಲಿ ನೂರಾರು ಸಾವಿರಾರು ಜನರಿಗೆ ಭೋಜವನ್ನು ಉಣಿಸುವುದಷ್ಟೇ ಉದ್ದೇಶವಾಗಿದೆ. 


ಅದರಲ್ಲೂ ಕೂಡ ಈ ವಿವಾಹದಲ್ಲಿ 'ನಾನು ಎಷ್ಟು ಭೂರಿಯಾದ ಭೋಜನವನ್ನ ಮಾಡಿಸಿದೆ; ಎಷ್ಟು ಜನರಿಗೆ ಊಟವನ್ನು ಮಾಡಿಸಿದೆ; ಎಷ್ಟು ಜನರಿಗೆ ಬೆಲೆಬಾಳುವ ದ್ರವ್ಯವನ್ನು ಕೊಟ್ಟೆ; ಎಂತೆಂಥ ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿಸಿದೆ; ಎಷ್ಟು ಜನ ಬಂದಿದ್ದರು; ಯಾವ ಯಾವ ತರದ ಜನ ಬಂದಿದ್ದರು; ಹೀಗೆ ವೈಭವದ ಪ್ರದರ್ಶಿನಿಯಾಗಿದೆ ಈ ವಿವಾಹ.  ಪ್ರಸ್ತುತ ನಾವು ವಿವಾಹದಲ್ಲಿರುವಂತಹ ವೈಜ್ಞಾನಿಕತೆಯನ್ನು ಮತ್ತು ಋಷಿ ಹೃದಯವನ್ನು ಮರೆತಿದ್ದೇವೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಇಷ್ಟು ವಿಷಯಗಳನ್ನು ಮಾತ್ರ ನಿರೂಪಿಸಿ ಹೆಚ್ಚಿನ ವಿಷಯಗಳನ್ನು ಅಂದರೆ ವಿವಾಹ ಎಂದರೇನು? ವಿವಾಹದಲ್ಲಿ ಬರುವಂತಹ ಘಟ್ಟಗಳೇನು? ಅದರ ವೈಜ್ಞಾನಿಕವಾದ ಹಿನ್ನೆಲೆ ಏನು? ಇನ್ನಿತರ ವಿಷಯಗಳನ್ನು ಮುಂದೆ ನೋಡೋಣ.


ಸೂಚನೆ: 30/05/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Monday, May 27, 2024

ಸಂಸ್ಕೃತ ಭಾಷೆಯೇ ಎಲ್ಲವೂ ಅಲ್ಲ, ಸಂಸ್ಕೃತ ಭಾಷೆಯಲ್ಲಿ ಎಲ್ಲವೂ. (Sanskrta Bhaseye Ellavu Alla, Sanskrta Bhaseyalli Ellavu.)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಸಂಸ್ಕೃತಭಾಷೆ ಅತ್ಯಂತ ಪ್ರಾಚೀನವಾದ ಭಾಷೆ. ಇದರಲ್ಲಿ ಎಲ್ಲ ರೀತಿಯಾಗಿರುವ ಸೌಲಭ್ಯ ಇದೆ. ಈ ಭಾಷೆಯ ವ್ಯಾಕರಣ ಅತ್ಯಂತ ಅಚ್ಚು ಕಟ್ಟು. ಇಲ್ಲಿರುವ ಶಬ್ದ ಭಂಡಾರ ಅಸೀಮವಾದದ್ದು. ಒಂದು ಶಬ್ದಕ್ಕೆ ಅನೇಕ ಅರ್ಥಗಳು; ಅನೇಕ ಅರ್ಥವನ್ನು ಹೇಳುವ ಒಂದು ಶಬ್ದ; ಹೀಗೆ ಅನೇಕ ವೈಶಿಷ್ಟ್ಯದಿಂದ ಕೂಡಿರುವ ಭಾಷೆ ಇದಾಗಿದೆ. ಇದು ಯಾವುದೋ ಒಂದು ಪ್ರದೇಶಕ್ಕೋ ಅಥವಾ ಯಾವುದೋ ಒಂದು ದೇಶಕ್ಕೋ ಸೀಮಿತವಾದ ಭಾಷೆಯಲ್ಲ. ಅದಕ್ಕಾಗಿ ಈ ಭಾಷೆಗೆ ಸಂಸ್ಕೃತಭಾಷೆ ಎಂದು ಮಾತ್ರ ಹೇಳಲಾಗಿದೆ. ಉಳಿದ ಭಾಷೆಗಳಿಗಾದರೋ ಪ್ರಾದೇಶಿಕವಾದ ಹೆಸರನ್ನೇ ಆ ಭಾಷೆಗೆ ಇಡಲಾಗಿದೆ. ಕರ್ನಾಟಕದಲ್ಲಿ ಆಡುವ ಭಾಷೆ ಕನ್ನಡ; ತಮಿಳುನಾಡಿನಲ್ಲಿ ಆಡುವ ಭಾಷೆ ತಮಿಳು; ಮಹಾರಾಷ್ಟ್ರದಲ್ಲಿ ಆಡುವ ಭಾಷೆ ಮರಾಠಿ, ಹಿಂದುಸ್ತಾನದಲ್ಲಿ ಮಾತನಾಡುವ ಭಾಷೆ ಹಿಂದಿ; ಫ್ರಾನ್ಸ್ ಅಲ್ಲಿ ಮಾತನಾಡುವ ಭಾಷೆ ಫ್ರೆಂಚ್; ಇಂಗ್ಲೆಂಡ್ನಲ್ಲಿ ಮಾತನಾಡುವ ಭಾಷೆ ಇಂಗ್ಲಿಷ್; ಇತ್ಯಾದಿಯಾಗಿ ಎಲ್ಲ ಭಾಷೆಗಳಿಗೂ ಆ ಆ ದೇಶದ ನಂಟು ಇರುವುದು ಕಂಡುಬರುತ್ತದೆ.

ಆದರೆ ಈ ಭಾಷೆಗೆ ಸಂಸ್ಕೃತಭಾಷೆ ಎಂದಿಷ್ಟೇ ಇದೆ. ಹಾಗಾದರೆ ಇದು ಯಾವ ದೇಶದ ಭಾಷೆಯು ಅಲ್ಲವೋ? ಅಥವಾ ಇದು ಒಂದು ಭಾಷೆಯೇ ಅಲ್ಲವೋ? ಮಾತನಾಡುವ ಭಾಷೆಯೇ ಅಲ್ಲವೋ? ಅಥವಾ ಯಾವುದೇ ದೇಶದಲ್ಲೂ ಈ ಭಾಷೆ ಬಳಕೆಯೇ ಇಲ್ಲವೋ? ಎಂಬ ಅನೇಕ ಸಂದೇಹಗಳು ಬರುವುದುಂಟು. ಆದರೆ ಈ ಸಂದೇಶಕ್ಕೆಲ್ಲ ಪರಿಹಾರ ಇಷ್ಟೇ ಇದು 'ಸಂಸ್ಕೃತಭಾಷೆ' ಎಂಬುದಾಗಿ. ಅಂದರೆ ಇದಕ್ಕೆ ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಹೊಂದುವಂತಹ ಭಾಷೆ. ಆದ್ದರಿಂದ ಇದಕ್ಕೆ ಸಂಸ್ಕೃತಭಾಷೆ ಎಂದಿಷ್ಟು ಮಾತ್ರ ಹೇಳಲು ಸಾಧ್ಯ. 'ಸಂಸ್ಕೃತ' ಎಂದರೆ ಚೆನ್ನಾಗಿ ಮಾಡಿದ್ದು ಎಂದರ್ಥ. ಭಾಷೆಯನ್ನು ನಾವು ಭಾವದ ಅಭಿವ್ಯಕ್ತಿಗೆ ಬಳಸುವುದುಂಟು. ಭಾವಾಭಿವ್ಯಕ್ತಿಗೆ ಅತ್ಯಂತ ಸ್ಪಷ್ಟವಾದ ಸಾಧನ ಭಾಷೆ. ಆದ್ದರಿಂದ ಇದಕ್ಕೆ 'ಸಂಸ್ಕೃತಭಾಷೆ' ಎಂಬುದಾಗಿ ಕರೆಯಲಾಗಿದೆ. 

ಯಾವುದೇ ಭಾಷೆಯಾದರೂ ಅದರ ಹುಟ್ಟಿನ ಹಿಂದೆ, ಅದರ ಮಹತ್ತ್ವವು ಅಡಗಿದೆ. ಈ ಭಾಷೆಯ ಹುಟ್ಟು ಎಲ್ಲಿಂದ ಇದೆ? ಎಂದರೆ ಇದು ಹುಟ್ಟಿದ್ದಲ್ಲ. ಹಾಗಾಗಿ ಇದಕ್ಕೆ ಸಾವು ಇಲ್ಲ. ಯಾವಾಗ ಸೃಷ್ಟಿಯಾಯಿತೋ ಅಂದಿನಿಂದಲೇ ಈ ಭಾಷೆಯೂ ಕೂಡ ಬಂದಿತು. ಭಗವಂತ ಯಾವಾಗ ಸೃಷ್ಟಿಯನ್ನು ಮಾಡಿದನೋ, ಈ ಸೃಷ್ಟಿ ಎಲ್ಲಿಯವರೆಗೆ ಮುಂದುವರೆದುಕೊಂಡು ಹೋಗುವುದೋ ಈ ವಿಷಯವನ್ನು ಆಧರಿಸಿ ಈ ಭಾಷೆ ನಿಂತಿದೆ. ಸೃಷ್ಟಿ ನಿರಂತರ ಪ್ರಕ್ರಿಯೆ. ಹಾಗಾಗಿ ಈ ಭಾಷೆಯು ಕೂಡ. ಈ ಭಾಷೆಗೆ ಅಷ್ಟು ವಿಸ್ತಾರವಾದ ವ್ಯಾಪ್ತಿ ಇದೆ. ಇದು ಕೇವಲ ಭೌತಿಕವಾದ ವಿಷಯವನ್ನು ಮಾತ್ರ ತಿಳಿಸಲು ಬಂದಿದ್ದಲ್ಲ. ಇದು ದೈವಿಕಪ್ರಪಂಚದ ಮತ್ತು ಆಧ್ಯಾತ್ಮಿಕ ಪ್ರಪಂಚವನ್ನು ಕೂಡ ತಿಳಿಸುವ ಸಾಧನವಾಗಿದೆ. ಈ ಭಾಷೆಯು ಎಲ್ಲವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಸಂಸ್ಕೃತ ಭಾಷೆ ತಿಳಿದರೆ ಎಲ್ಲವೂ ತಿಳಿದಂತೆ ಎಂಬುದಾಗಿ ಒಂದು ಭ್ರಮೆ ಇದೆ. ಇಲ್ಲ ಸಂಸ್ಕೃತ ಭಾಷೆಯು ಎಲ್ಲವೂ ಅಲ್ಲ. ಅಲ್ಲೇ ಎಲ್ಲವೂ ಇದೆ. ಅಂದರೆ ಸಂಸ್ಕೃತ ಭಾಷೆ ಬಂದರೆ ಎಲ್ಲವೂ ತಿಳಿದಂತೆ ಎಂದು ಅಂದುಕೊಳ್ಳುವಂತಿಲ್ಲ. ಸಂಸ್ಕೃತಭಾಷೆಯಲ್ಲಿ ಎಲ್ಲವೂ ಇದೆ ಎಂದರ್ಥ. ಈ ಪ್ರಪಂಚವನ್ನು ತಿಳಿದುಕೊಳ್ಳಲು ಸಂಸ್ಕೃತಭಾಷೆ ಅತ್ಯಂತ ಉತ್ತಮವಾದ ಮಾಧ್ಯಮ ಅಷ್ಟೇ. ಇದರಲ್ಲಿ ನಾವು ಹೊರಗಡೆ ಕಾಡುವಂತಹ ಎಲ್ಲ ವಿಷಯಗಳನ್ನು ಕೂಡ ನೋಡಬಹುದು. ಶಾಲಾ-ಕಾಲೇಜುಗಳಲ್ಲಿ ಕಾಡುವಂತಹ ವಿಜ್ಞಾನ, ಗಣಿತ, ಸಮಾಜ, ಖಗೋಲ, ಭೂಗೋಲ, ರಸಾಯನಶಾಸ್ತ್ರ, ಜೀವವಿಜ್ಞಾನ, ಭೂಗರ್ಭಶಾಸ್ತ್ರ, ವಿಮಾನಶಾಸ್ತ್ರ, ಲೋಹ ಹೀಗೆ ಒಂದೋ ಎರಡೋ ಯಾವುದೇ ವಿಷಯವನ್ನು ತೆಗೆದುಕೊಂಡರು ಕೂಡ ಈ ಭಾಷೆಯಲ್ಲಿ ಇದೆಯೋ! ಎಂದರೆ ಎಲ್ಲವೂ ಇದೆ. 

ಆದರೆ ಅದನ್ನು ತಿಳಿಯಲು ಮುಖ್ಯವಾಗಿ ಸಂಸ್ಕೃತ ಭಾಷೆ ಬೇಕು ಅಷ್ಟೇ. ಸಂಸ್ಕೃತವನ್ನು ತಿಳಿಯುವುದರಿಂದ ಇದರಲ್ಲಿ ಅಡಕವಾಗಿರುವಂತ ಎಲ್ಲ ವಿಷಯವನ್ನು ತಿಳಿಯಲು ಸಾಧ್ಯ. ಈ ಪ್ರಪಂಚದ ಮೊಟ್ಟ ಮೊದಲ ಸಾಹಿತ್ಯ ಎಂದರೆ ವೇದ ಇರುವುದು ಸಂಸ್ಕೃತದಲ್ಲೇ. ಯಾವುದನ್ನು ಅತ್ಯಂತ ಪ್ರಾಚೀನವಾದ ವೈದ್ಯವಿಜ್ಞಾನ ಎಂಬುದಾಗಿ ಹೇಳುತ್ತೇವೋ, ಅಂತಹ ಆಯುರ್ವೇದ ಇರುವುದು ಸಂಸ್ಕೃತಭಾಷೆಯಲ್ಲಿ. ಅತ್ಯಂತ ಪ್ರಾಚೀನವಾಗಿರುವ ಖಗೋಳವಿಜ್ಞಾನವನ್ನು ತಿಳಿಸುವ ಜ್ಯೋತಿಷ್ಯ ಶಾಸ್ತ್ರವು ಇರುವುದು ಈ ಸಂಸ್ಕೃತ ಭಾಷೆಯಲ್ಲಿ. ಹೀಗೆ ಸಮಸ್ತ ಪ್ರಪಂಚದ ಸಮಸ್ತ ವಿಷಯವನ್ನು ತಿಳಿಸುವ ವಿಷಯ ಈ ಸಂಸ್ಕೃತ ಭಾಷೆಯಲ್ಲಿ ಇದೆ. ಆದ್ದರಿಂದ ಸಂಸ್ಕೃತದ ಭಾಷೆ ಪರಿಚಯವಾದ ಮಾತ್ರಕ್ಕೆ ಎಲ್ಲವೂ ತಿಳಿದಂತಾಗದು. ಸಂಸ್ಕೃತಭಾಷೆಯಲ್ಲಿ ಎಲ್ಲವೂ ಇದೆ. ಎಲ್ಲವನ್ನೂ ತಿಳಿಯಬೇಕಾದರೆ ಈ ಭಾಷೆಯಿಂದ ಸಾಧ್ಯ. ಹಾಗಾಗಿ ಸಂಸ್ಕೃತವೇ ಎಲ್ಲವೂ ಅಲ್ಲ; ಸಂಸ್ಕೃತದಲ್ಲಿ ಎಲ್ಲವೂ.

ಸೂಚನೆ: 26/05/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.  

Sunday, May 26, 2024

ಯಕ್ಷ ಪ್ರಶ್ನೆ 91 (Yaksha prashne 91 )

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 90 ಸಾಧು ಎಂದರೆ ಯಾರು?

ಉತ್ತರ - ಸರ್ವಪ್ರಾಣಿಗಳಿಗೂ ಹಿತವನ್ನು ಬಯಸುವವ.  

ನಿಜವಾದ ಸಜ್ಜನ ಯಾರು ? ಎಂಬ ಪ್ರಶ್ನೆಯನ್ನು ಯಕ್ಷನು ಕೇಳುತ್ತಾನೆ. ಯಾರು ಎಲ್ಲರಿಗೂ ಒಳ್ಳೆಯದು ಆಗಬೇಕು ಎಂದು ಬಯಸುತ್ತಾರೋ ಅವರನ್ನು 'ಸಾಧು' ಎನ್ನಬಹುದು. ಸಾಮಾನ್ಯ ಪ್ರಾಣಿಗಳ ಬಯಕೆ ಏನೆಂದರೆ ತಾನು ಬದುಕಬೇಕು. ಅದಕ್ಕೆ ಬೇಕಾದ ರೀತಿಯಲ್ಲಿ ಆ ಪ್ರಾಣಿಗಳ ಬದುಕು ಸಾಗುತ್ತಿರುತ್ತದೆ. ಬೆಳಗಾಯಿತೆಂದರೆ ಅವುಗಳಿಗೆ ಜೀವಿಕೆಯ ಹುಡುಕಾಟ ಶುರುವಾಗುತ್ತದೆ. ಅವುಗಳ ಜೀವಿಕೆಯೆಂದರೆ ಇನ್ನೊಂದು ಜೀವಿಯನ್ನು ತಿಂದು ಬದುಕುವುದು. ಅದು ಸಸ್ಯವನ್ನು ತಿನ್ನು ಜೀವಿಸುವಿದಿರಲಿ ಅಥವಾ ಪ್ರಾಣಿಯನ್ನು ತಿಂದು ಜೀವಿಸುವುದಿರಲಿ. ಆದರೆ ಅವರ ಜೀವಿಕೆಯೇ ಇನ್ನೊಂದು ಜೀವಿಯ ಮೇಲೆ ನಿಂತಿದೆ. ಇದು ಸಮಸ್ತ ಜೀವಜಾತಗಳ ನಡೆ. ಇದು ನಿಸರ್ಗ ಸಹಜ. ಆದರೆ ಇದನ್ನು ಬಿಟ್ಟು ಉಳಿದ ಪ್ರಾಣಿಗಳಿಗೆ ಬೇರೊಂದು ಜೀವವ್ಯಾಪಾರವೇ ಇರಲಾರದು. ಇದನ್ನು 'ಹಿಂಸೆ' ಎಂದು ಕರೆಯಲಾಗದು. ಆದರೆ ಮಾನವ ಮಾತ್ರ ಇದಕ್ಕೆ ಭಿನ್ನ. ಅವನು ತನ್ನ ಸುತ್ತಮುತ್ತಲಿನ ಪ್ರಾಣಿಸಂಕುಲದ ಮೇಲೆ ಸ್ವಾಮಿತ್ವವನ್ನು ಹೊಂದಬಲ್ಲ. ಅದನ್ನು ತನ್ನ ಬದುಕಿಗಾಗಿ ಹೇಗೆಲ್ಲಾ ಬಳಸಿಕೊಳ್ಳಬಲ್ಲ. ಆದರೆ ಅದನ್ನೂ ತಪ್ಪು ಎನ್ನಲು ಸಾಧ್ಯವಿಲ್ಲ. ಏಕೆಂದರೆ ಅವನ ಬದುಕೇ ಈ ಸಂಕುಲವನ್ನು ಅವಲಂಬಿಸಿಕೊಂಡಿರುತ್ತದೆ. ಆದರೆ ಇದರಲ್ಲೂ ಆತ ದಯೆ ಎಂಬ ಅತಿ ಉತ್ಕೃಷ್ಟವಾದ ಆತ್ಮಗುಣವನ್ನು ತೋರಿಸಲು ಸಾಧ್ಯ. ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಸಹಜವಾಗಿ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ; ಕಸಿದುಕೊಳ್ಳಲೂಬಾರದು. ಬಲಾತ್ಕಾರವಾಗಿ ಅವುಗಳ ಜೀವಿಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕೆಲಸಕ್ಕೆ ಕೈಹಾಕಿದರೆ ಅದುವೇ ಹಿಂಸೆ ಎನಿಸಿಕೊಳ್ಳುವುದು.  ಆದ್ದರಿಂದ ಆತನ ಜೀವಿಕೆಯ ಉದ್ದೇಶಕ್ಕನುಗುಣವಾಗಿ ಹಿಂಸೆ ಮತ್ತು ಅಹಿಂಸೆ ಎಂಬುದರ ವಿಷಯ ನಿಂತಿರುತ್ತದೆ. 

ಒಬ್ಬ ಸಾಧುವಾದವನ ಜೀವಿಕೆಯು ಧರ್ಮಮಯವಾಗಿರುತ್ತದೆ. ಧರ್ಮದ ಚೌಕಟ್ಟಿನಲ್ಲಿರುತ್ತದೆ. ಅವನ ಜೀವಿಕೆಯ ಉದ್ದೇಶ ಚರಮಪುರುಷಾರ್ಥವಾದ ಮೋಕ್ಷಪ್ರಾಪ್ತಿಯೇ ಆಗಿರುತ್ತದೆ. ಯಾರಿಗೆ ಇಂತಹ ಮಾಹಾಧ್ಯೇಯವಿರುತ್ತದೆಯೋ ಅವನ ಬದುಕಿನಲ್ಲಿ ಹಪಿಹಪಿತನ ಇರುವುದಿಲ್ಲ. ಮಿತವಾದ ಪದಾರ್ಥಸಂಗ್ರಹ ಅವನದ್ದಾಗಿರುತ್ತದೆ. ಆಗ ಇಲ್ಲಸಲ್ಲದ ಆಸೆಯು ಅವನನ್ನು ಕಾಡುವುದಿಲ್ಲ. ತನ್ನ ಧರ್ಮಮಯವಾದ ಜೀವಿಕೆಗೆ ಅಗತ್ಯವಿರುವಷ್ಟು ಮಾತ್ರವೇ ಅವನಿಂದ ಅರ್ಥ ಮತ್ತು ಕಾಮಗಳ ಬಳಕೆ ಇರುತ್ತದೆ. ಸದಾ ಭವಂತನ ಚಿಂತನೆಯೆಲ್ಲೇ ಕಾಲ ಕಳೆಯುವ ವ್ಯಕ್ತಿಗೆ ಶರೀರವ್ಯಾಪಾರವೂ ಕಡಿಯಾಗುತ್ತದೆ. ಅದರ ಪರಿಣಾಮವಾಗಿ ಆತನಿಗೆ ಹಸಿವು ಬಾಯಾರಿಕೆ ಎಂಬ ಅತ್ಯಗತ್ಯವಾದ ಶರೀರವ್ಯಾಪಾರವನ್ನು ಬಾಧಿಸುವುದಿಲ್ಲ. ಯಾವಾಗ ಮನಸ್ಸು ಬಾಹ್ಯವಾದ ವ್ಯಾಪಾರದಲ್ಲಿ ತೊಡಗಿಕೊಳ್ಳುವುದೋ ಆಗತಾನೆ ಹಸಿವು ಬಾಯಾರಿಕೆಗೆ ಅವಕಾಶ. ಸಾಮಾನ್ಯ ಜೀವನನಿರ್ವಹಣೆಗೇ ಬೇಕಾದ ಪದಾರ್ಥದ ಬಯಕೆ ಕ್ಷೀಣಿಸುತ್ತಾ ಕ್ಷೀಣೀಸುತ್ತಾ ಕೊನೆಯಲ್ಲಿ ಉಸಿರಾಟವೇ ಜೀವನದ ಬಯಕೆಯಾಗುತ್ತದೆ. ಅದೂ ಕೂಡ ಬೇಡದ ಅವಸ್ಥೆಗೆ ಹೋಗುವಂತಹ ಸಂದರ್ಭ ಬರುತ್ತದೆ. ಕೊನೆಯಲ್ಲಿ ಈ ಉಸಿರಾಟವೂ ಸ್ತಬ್ಧವಾಗಿ ಸಮಾಧಿಯಲ್ಲೇ ನಿಲ್ಲುವವನು ನಿಜವಾದ ಸಾಧು. ಇಂತಹವನು ಮಾತ್ರ ಸರ್ವರ ಹಿತವನ್ನು ಬಯಸಲು ಸಾಧ್ಯ. ಇವನೇ ನಿಜವಾದ ಸಾಧು ಎನಿಸುವನು. ಇದೇ ನಿಜವಾದ ಭೂತದಯೆಯೆಂಬ ಆತ್ಮಗುಣವನ್ನು ಮೈಗೂಡಿಸಿಕೊಳ್ಳುವ ಪರಿ. ಇದಕ್ಕೆ ವಿರುದ್ಧವಾದ ಸ್ವಭಾವ ಉಳ್ಳವನು ಅಸಾಧು.

ಸೂಚನೆ : 26
/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 89 ಖಾಂಡವದಲ್ಲಾಯಿತು ವೈಭವದ ತಾಂಡವ (Vyasa Vikshita 89 Khandavadallayitu Vaibhavada Tandava)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕಾಡಾಗಿದ್ದ ಖಾಂಡವವನ್ನು ಸೊಬಗಿನ ಸೆಲೆಯಾಗಿಸಿದರು, ಪಾಂಡವರು.  ಅದರಿಂದಾಗಿ, ಅಲ್ಲಿಗೆ ಎಲ್ಲ ಬಗೆಯ ಜನರೂ ಬಂದು ನೆಲೆಸಲು ಇಷ್ಟಪಡುವಂತಾಯಿತು.

ಸರ್ವವೇದಗಳನ್ನು ಬಲ್ಲವರಲ್ಲಿ ಶ್ರೇಷ್ಠರೆನಿಸಿದವರು, ಸರ್ವಭಾಷೆಗಳನ್ನು ಬಲ್ಲವರು, ವರ್ತಕರು - ಇವರುಗಳೆಲ್ಲರೂ ಧನಾರ್ಥಿಗಳಾಗಿ (ಎಂದರೆ ಸಂಪತ್ತನ್ನು ಬಯಸುವವರಾಗಿ) ನಾನಾ ದಿಕ್ಕುಗಳಿಂದ ಬಂದರು. ಹಾಗೆಯೇ ನಾನಾ ಶಿಲ್ಪಜ್ಞರೂ (ಎಂದರೆ ನಾನಾ ಕಲಾವಿದರೂ), ಅಲ್ಲಿಗೆ ವಾಸಕ್ಕಾಗಿ ಬಂದರು.

ಅಲ್ಲಿ ಸಜ್ಜುಗೊಂಡ ಉದ್ಯಾನವನಗಳು ಎಷ್ಟು ಸೊಗಸಾಗಿದ್ದವು! ಅಲ್ಲಿಯ ಸಸ್ಯಸಮೃದ್ಧಿ ಹೀಗಿತ್ತು: ಆಮ್ರ (ಮಾವು), ಅಶೋಕ, ಚಂಪಕ (ಸಂಪಿಗೆ), ಪುಂನಾಗ, ನಾಗಪುಷ್ಪ, ಪನಸ (ಹಲಸು), ತಾಲ, ತಮಾಲ, ಕೇತಕ (ಕೇದಗೆ) - ಮುಂತಾದವುಗಳ ಫಲಪುಷ್ಪಗಳಿಂದಾಗಿ ಆ ಮರಗಳು ಬಗ್ಗಿದ್ದವು. ಇವಲ್ಲದೆ ಅಂಕೋಲ, ಜಂಬೂ (ನೇರಳೆ), ಪಾಟಲ, ಕರವೀರ, ಪಾರಿಜಾತ ಮುಂತಾದ ಇನ್ನೂ ಹತ್ತು ಹಲವು ಮರಗಳಿದ್ದವು. (ಒಂದಲ್ಲ ಒಂದು ಮರದಲ್ಲಿ ಹೂಹಣ್ಣುಗಳು ಬಿಡುತ್ತಲೇ ಇದ್ದುದರಿಂದ) ಆ ಮರಗಳು ನಿತ್ಯ-ಪುಷ್ಪಫಲ-ಸಹಿತವಾಗಿದ್ದವು. ಅಷ್ಟೊಂದು ವೃಕ್ಷಸಂಪತ್ತಿದ್ದ ಮೇಲೆ ಪಕ್ಷಿಸಂಪತ್ತಿಗೇನು ಕಡಿಮೆಯೇ? ಮದಿಸಿದ ಬರ್ಹಿಣಗಳು (ಎಂದರೆ ನವಿಲುಗಳು) ಮಾಡುವ ಕೇಕಾಧ್ವನಿ, ಹಾಗೆಯೇ ಮತ್ತು ಬಂದಿದ್ದ ಕೋಗಿಲಗಳ ಇಂಪಾದ ಇಂಚರ - ಇವೆಲ್ಲ ತುಂಬಿದ್ದವು.

ಮನೆಗಳು ಕನ್ನಡಿಯಂತೆ ನಿರ್ಮಲವಾಗಿದ್ದವು. ಅಲ್ಲಿ ಅನೇಕ ಲತಾಗೃಹಗಳಿದ್ದವು. ಮನೋಹರವಾದ ಚಿತ್ರಶಾಲೆಗಳಿದ್ದವು. ಕೃತಕವಾದ ಪರ್ವತಗಳಿದ್ದವು. ಬಗೆಬಗೆಯ ವಾಪಿಗಳು (ಕೊಳಗಳು) ಇದ್ದವು. ಅವಾದರೂ ಉತ್ತಮವಾದ ಜಲದಿಂದ ಕೂಡಿದ್ದವಾಗಿದ್ದವು. ಅತಿರಮ್ಯವಾದ ಸರಸ್ಸುಗಳಿದ್ದವು. ಪದ್ಮಗಳಿಂದಲೂ ಉತ್ಪಲಗಳಿಂದಲೂ ಅವು ಸುಗಂಧಭರಿತವಾಗಿದ್ದವು. ಅಲ್ಲಿಯ ಪಕ್ಷಿಸ್ತೋಮವೂ ಅತಿಶಯವಾಗಿದ್ದಿತು. ಹಂಸಗಳು, ಕಾರಂಡವಗಳು, ಚಕ್ರವಾಕಗಳು - ಇವೆಲ್ಲ ಇದ್ದು ಅವು ಕಳೆಕಟ್ಟಿದ್ದವು. ಸುತ್ತಲಲ್ಲಿ ವನಸಂನಿವೇಶವಿರುವ ಪುಷ್ಕರಿಣಿಗಳೂ ಹಲವಿದ್ದವು. ದೊಡ್ಡದಾದ ಹಾಗೂ ರಮಣೀಯವಾದ ತಟಾಕಗಳೂ ಹಲವಿದ್ದವು.

ಅನೇಕ ಪುಣ್ಯಾತ್ಮರು ಆ ರಾಷ್ಟ್ರದಲ್ಲಿ ನೆಲೆಸಿದ್ದರಾಗಿ ಪಾಂಡವರ ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಅಂತೂ ಭೀಷ್ಮ-ಧೃತರಾಷ್ಟ್ರರು ಧರ್ಮಾನುಸಾರ ವ್ಯವಸ್ಥೆಮಾಡಲಾಗಿ, ಪಾಂಡವರಂತೂ ಖಾಂಡವಪ್ರಸ್ಥದಲ್ಲಿಯೇ ನೆಲೆಗೊಂಡರು.

ಪಾಂಡವರೊಬ್ಬೊಬ್ಬರೂ ಮಹಾಧನುರ್ಧಾರಿಗಳು, ಒಬ್ಬೊಬ್ಬರೂ ಇಂದ್ರನಂತಿದ್ದವರು. ಅವರುಗಳಿಂದಾಗಿ ಆ ಶ್ರೇಷ್ಠನಗರವು ಶೋಭಿಸಿತು - ನಾಗಗಳಿಂದ ಕೂಡಿದ ಭೋಗವತೀನಗರಿಯು ಹೇಗೆ ಶೋಭಿಸುವುದೋ ಹಾಗೆ. ಎಲ್ಲವೂ ವ್ಯವಸ್ಥೆಗೊಂಡಿರಲು ಪಾಂಡವರ ಅನುಮತಿಯನ್ನು ಪಡೆದವನಾಗಿ, ಕೃಷ್ಣನು ಬಲರಾಮನೊಂದಿಗೆ ದ್ವಾರವತಿಗೆ ತೆರಳಿದನು.

ಜನಮೇಜಯ-ವೈಶಂಪಾಯನರ ಸಂಭಾಷಣೆಯಾಗಿ ಮಹಾಭಾರತ ಕಥೆಯು ನಿರೂಪಣೆಗೊಳ್ಳುತ್ತಿದೆಯಷ್ಟೆ. ಜನಮೇಜಯನು ಪ್ರಚ್ಛಕ. ವೈಶಂಪಾಯನರು ಭಾರತವೃತ್ತಾಂತವನ್ನು ಬಲ್ಲವರು. ಜನಮೇಜಯನ ಪ್ರಶ್ನೆ ಈ ಸಂದರ್ಭದಲ್ಲಿ ಹೀಗೆ ಬರುತ್ತದೆ: ಇಂದ್ರಪಸ್ಥದಲ್ಲಿ ನೆಲೆಸಿದ ಪಾಂಡವರು ಮುಂದೇನು ಮಾಡಿದರು? ಧರ್ಮಪತ್ನಿಯೆನಿಸಿದ ದ್ರೌಪದಿಯು ಅವರೆಲ್ಲರನ್ನೂ ಹೇಗೆ ಅನುಸರಿಸಿದಳು? ಒಬ್ಬಳಲ್ಲೇ ಅನುರಕ್ತರಾದ ಈ ಐವರಾದರೂ ಹೇಗೆ ಒಡಕಿಲ್ಲದೆ ಇದ್ದರು? ಅವರಲ್ಲೇ ಪರಸ್ಪರವರ್ತನೆಯೆಂಬುದು ಹೇಗಿದ್ದಿತು?

ಕಥೆಯನ್ನು ಮುಂದುವರೆಸಿದ ವೈಶಂಪಾಯನರು ಹೇಳಿದರು: ಖಾಂಡವಪ್ರಸ್ಥರಾಜ್ಯವನ್ನು ಧೃತರಾಷ್ಟ್ರನಿಂದ ಪಡೆದ ಪಾಂಡವರು ಕೃಷ್ಣೆಯೊಂದಿಗೆ ಸಂತೋಷದಿಂದಿದ್ದರು. ಸತ್ಯಸಂಧನಾದ ಯುಧಿಷ್ಠಿರನು ತನ್ನ ಭ್ರಾತೃಗಳೊಂದಿಗೆ ಭೂಮಿಯನ್ನು ಧರ್ಮದಿಂದಲೇ ಪಾಲಿಸಿದನು. ಸತ್ಯಧರ್ಮಗಳೇ ಪಾಂಡವರ ಜೀವನಸೂತ್ರವಾಗಿದ್ದಿತು.

ಸೂಚನೆ : 26/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 15 ಕೃಷ್ಣನ ಕಡುಕಪ್ಪು ಕಾಂತಿ ಕಾಡಿದ ಪರಿಗಳು (Krsnakarnamrta -15 Krishnana Kadukappu Kanti Kadida Parigalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಚಿಕ್ಕಂದಿನಲ್ಲೇ ನಮಗೆ ಸತ್ಸಂಸ್ಕಾರಗಳು ದೊರೆಯಬೇಕು. ಆಗಷ್ಟೆ ನಾವು ದೊಡ್ಡವರಾದ ಮೇಲೆ ಸತ್ಪ್ರಜೆಗಳಾಗಲು ಸಾಧ್ಯ. ಆದರೆ ಚಿಕ್ಕಮಕ್ಕಳಾಗಿದ್ದಾಗಲೇ ಸದುಪದೇಶಗಳಾಗುವುದರ ಬದಲು ದುರ್ಬೋಧೆಗಳಾಗಿಬಿಟ್ಟರೆ, ನಮ್ಮ ಚಿಂತನೆಯಲ್ಲಿ ಆ ತಪ್ಪು ಜಾಡೇ ಊರಿಬಿಡುತ್ತದೆ. ನಾವು ದೊಡ್ಡವರಾದ ಮೇಲೂ ನಮ್ಮ ಮನೋಬುದ್ಧಿಗಳು ಆ ಜಾಡನ್ನು ಬಿಡುವುದಿಲ್ಲ. ಗಿಡವಾಗಿದ್ದಾಗ ಬಗ್ಗಿಸದೆ ಮರವಾದ ಮೇಲೆ ಬಗ್ಗಿಸಹೋದರೆ ಶ್ರಮವೂ ಹೆಚ್ಚು, ಸಫಲತೆಯೂ ಕಡಿಮೆ. ಅದು ತಪ್ಪೆಂದು ತಿಳಿದರೂ ತೊರೆಯುವುದು ಕಷ್ಟ. "ಆರ್ಯರು ಹೊರದೇಶದಿಂದ ಬಂದರು" – ಎಂಬುದಾಗಿ ಪಾಠ ಕೇಳಿದ ಮೇಲೆ, ಅದು ವಾಸ್ತವವಲ್ಲವೆಂದು ಯಾರಾದರೂ ತಿಳಿಸಿದರೂ, ಮನಸ್ಸದೇಕೋ ಒಪ್ಪದು. ಬಿಳೀಚರ್ಮದ ಆರ್ಯರು ತಮ್ಮನ್ನೇ ದೇವತೆಗಳೆಂದು ಕರೆದುಕೊಂಡರು – ಎಂದೆಲ್ಲಾ ಬೋಧಿಸಿದ್ದರು! ಆದರೆ ದೇವರೆಂದು ನಾವರ್ಚಿಸುವ ರಾಮನನ್ನಾಗಲಿ ಕೃಷ್ಣನನ್ನಾಗಲಿ ಅವರು ಬೆಳ್ಳಗಿದ್ದರೆಂದು ರಾಮಾಯಣ-ಮಹಾಭಾರತಗಳಲ್ಲಿ ಎಲ್ಲಿಯೂ ಹೇಳಿಲ್ಲ. ಹಾಗೇ ನೋಡಿದರೆ ಶಿವನೇ ಬಿಳಿ! ದ್ರಾವಿಡದೇವ ಕರಿಯನಾಗಿರಬೇಕಾಗಿತ್ತಲ್ಲವೇ? ಹೊರದೇಶದವರ ಬಿಳಿಚರ್ಮ ಇಲ್ಲಿಯವರದು ಕರಿಚರ್ಮ – ಎಂದೆಲ್ಲಾ ಪಾಶ್ಚಾತ್ತ್ಯರು ಹುಟ್ಟಿಸಿದ್ದು ತಮ್ಮ ರಾಜಕೀಯಕ್ಕಾಗಿ – ಎಂಬುದು ಭಾರತೀಯರಿಗೆ ಗೋಚರವಾಗುತ್ತಿರುವುದು ಇತ್ತೀಚೆಗಷ್ಟೆ – ಎಂಬುದನ್ನು ಗಮನಿಸಬೇಕು.

ಕೃಷ್ಣ – ಎಂಬ ಪದಕ್ಕೇ 'ಕಪ್ಪನೆಯ' ಎಂಬರ್ಥವಿದೆಯಷ್ಟೆ. ಕೃಷ್ಣಪಕ್ಷದ ರಾತ್ರಿಯಲ್ಲೇ ಕೃಷ್ಣನು ಹುಟ್ಟಿದ್ದು. ಕೆಲ(ಳ) ಜಾತಿಗಳಲ್ಲಿ 'ಕರಿಯ' 'ಕರಿಯಪ್ಪ' 'ಕರಿಯಣ್ಣ' – ಎಂದೆಲ್ಲಾ ಹೆಸರಿಟ್ಟುಕೊಳ್ಳುವುದುಂಟಷ್ಟೆ? ಅವೆಲ್ಲಕ್ಕೂ ' ಕೃಷ್ಣ' ಎಂದೇ ಆರ್ಥ. ಹೀಗಾಗಿ 'ಕರಿಯ' ಎಂಬ ಹೆಸರು ಮೆಚ್ಚಬೇಕಾದದ್ದೇ ವಿನಾ, ಅದರ ಬಗ್ಗೆ ಕೀಳರಿಮೆ ಪಡಬೇಕಾದದ್ದಿಲ್ಲ. ಕೃಷ್ಣಾರ್ಜುನರು - ಎಂದು ಹೇಳುವಾಗಲೂ ಅರ್ಜುನ - ಎಂಬ ಪದಕ್ಕೆ ಬಿಳಿಯ ಬಣ್ಣವೆಂಬ ಅರ್ಥವಿದೆಯಾದರೂ, ಅರ್ಜುನನ ಬಣ್ಣವೂ ವಾಸ್ತವವಾಗಿ ಕಪ್ಪೇ. "ನನ್ನ ಕರ್ಮವು ಶುಭ್ರವಾದುದರಿಂದ ನಾನು ಅರ್ಜುನ" – ಎಂಬುದು ಆತನದೇ ಮಾತು ಮಹಾಭಾರತದಲ್ಲಿ. ಕೃಷ್ಣ ಎಂಬುದು ಅರ್ಜುನನ ದಶನಾಮಗಳಲ್ಲಿ (ಹತ್ತು ಹೆಸರುಗಳಲ್ಲಿ) ಒಂದು ಕೂಡ. ಹೀಗೆ ಕೃಷ್ಣಾರ್ಜುನರೆಂದರೆ ಇಬ್ಬರು ಕೃಷ್ಣರೆಂದೇ. ವ್ಯಾಸರನ್ನೂ ಸೇರಿಸಿಕೊಂಡರೆ ಮೂರು ಮಂದಿ ಕೃಷ್ಣರಾದರು! ವ್ಯಾಸರಿಗೆ ಕೃಷ್ಣದ್ವೈಪಾಯನರೆಂದೇ ಹೆಸರು. ಮಹಾಭಾರತಕ್ಕೆ ಕಾರ್ಷ್ಣವೇದವೆಂದೇ ಹೆಸರು. ಕರಿಯ(ರಾದ ವ್ಯಾಸರು) ತಂದ ವೇದ - ಎಂದದರ ಅರ್ಥ. ದ್ರೌಪದಿಯ ವರ್ಣವೂ ಕಪ್ಪೇ. ಎಂದೇ ಅವಳ ಮತ್ತೊಂದು ಹೆಸರೇ ಕೃಷ್ಣೆ.

ಕೃಷ್ಣಾದಿಗಳ ಕರಿಯ ಬಣ್ಣವನ್ನು ಕುರಿತು ಇಷ್ಟೊಂದು ಮಾತೇಕೆ? - ಎಂಬ ಪ್ರಶ್ನೆ ಬರಬಹುದು. ಕವಿ ಲೀಲಾಶುಕನು ಒಂದು ಶ್ಲೋಕ ಪೂರ್ತಿ ಕೃಷ್ಣನ ಕಪ್ಪು ಬಣ್ಣವನ್ನೇ ಬಣ್ಣಿಸಿದ್ದಾನೆ! ಅದಕ್ಕಾಗಿಯೇ ಈ ನಿರೂಪಣೆ. ಕೃಷ್ಣನ ಕಪ್ಪು ಬಣ್ಣಕ್ಕೆ ಸರಿಹೋಲುವ ಮೂರು ವಸ್ತುಗಳನ್ನು ಕವಿಯು ತನ್ನ ಕವಿತ್ವದ ಛಾಪಿನೊಡನೆ ನಮ್ಮ ಮುಂದಿಡುತ್ತಾನೆ.

ಆ ಮೂರೆಂದರೆ ಯಮುನೆ-ಮೇಘ-ತಮಾಲಗಳು. ಯಮುನೆಯನ್ನೇ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದವನು ಕಾಳಿಯಸರ್ಪ. ಯಮುನೆಯನ್ನು ವಿಷಮಯವನ್ನಾಗಿಸಿ ಎಲ್ಲರಿಗೂ ಭಯವನ್ನೂ ಕ್ಲೇಶವನ್ನೂ ಉಂಟುಮಾಡಿದವನವನು. ಆತನಿಗೆ ತಕ್ಕ ಶಾಸ್ತಿ ಮಾಡಿದವನು ಶ್ರೀಕೃಷ್ಣ. ಶಾಸ್ತಿ ಮಾಡುವುದೆಂದರೂ ಶಾಸನ ಮಾಡುವುದೆಂದರೂ ಒಂದೇ. ಎಂದೇ ಕೃಷ್ಣನನ್ನು "ಕಾಳಿಯಶಾಸನಃ" ಎಂದು ಕರೆಯುವುದು. ಕರಿಯ ಕಾಳಿಯನಿಗೆ ಶಿಕ್ಷೆಯಿತ್ತ ಕೃಷ್ಣನೂ ಕರಿಯನೇ.

ನಮ್ಮೀ ಕಾಳಿಯಶಾಸನನ ಕಪ್ಪು ಬರೀ ಇಜ್ಜಲಗಪ್ಪಲ್ಲ. ಅದು ಹೊಳಪಿನ ಕಪ್ಪು. ಕಪ್ಪು ಬಣ್ಣವನ್ನು ಕಂಡವರಿಗೆ ಕಪ್ಪುಬಣ್ಣವುಳ್ಳ ವಸ್ತುವೂ ಮನಸ್ಸಿಗೆ ಸ್ಫುರಿಸುವುದು. ಈ ಕರಿಯನ ಕಪ್ಪನ್ನು ಕಂಡವರಿಗೆ ತಮಗೆ ಇಷ್ಟವೆನಿಸುವ ಕಪ್ಪಾದ ವಸ್ತುಗಳೇ ಜ್ಞಾಪಕಬರುತ್ತವೆ. ಜ್ಞಾಪಕ ಬರುವುದೇನು, ಒಂದು ಭ್ರಮೆಯೇ ಉಂಟಾಗುತ್ತದೆ, ಎನ್ನುತ್ತಾನೆ ನಮ್ಮ ಕವಿ.

ಕಂಡವರಾರು, ಅವರಿಗಾದ ಭ್ರಮೆಗಳೇನು? - ಎಂಬುದನ್ನು ಕವಿ ಚಿತ್ರಿಸುತ್ತಾನೆ. ಗೋಸಮೂಹವು ಕೃಷ್ಣನನ್ನು ಕಂಡಿತಂತೆ. ಅವುಗಳಿಗೆ ಯಮುನೆಯ ನೀರನ್ನು ಕಂಡಂತಾಯಿತಂತೆ. ಯಮುನೆಯ ನೀರು ಕಪ್ಪಗಿರುವುದು. ಇಂದೂ ಗಂಗಾ-ಯಮುನಾ-ಸಂಗಮದಲ್ಲಿ ಗಂಗೆಯ ಬಿಳಿಬಣ್ಣ ಯಮುನೆಯ ಕರಿಬಣ್ಣಗಳು ಸೇರುವುದನ್ನು ಕಾಣಬಹುದು. ವೇದದಲ್ಲಿ ಕೂಡ ಈ ನದಿಗಳನ್ನು ಸಿತ-ಅಸಿತ-ಸರಿತ್ತುಗಳೆಂದು ಕರೆದಿದೆ. ಸಿತವೆಂದರೆ ಬಿಳಿ. ಅಸಿತವೆಂದರೆ ಕಪ್ಪು. ಹಾಗಿವೆ ಈ ಎರಡು ಸರಿತ್ತುಗಳು,ಅರ್ಥಾತ್ ನದಿಗಳು. ಅಂತೂ ಬಾಯಾರಿದ ಗೋ-ಸ್ತೋಮ (ಎಂದರೆ ಗೋಸಮೂಹ) ಆತನ ಕಪ್ಪನೆಯ ಕಾಂತಿಯನ್ನು ಕಂಡೊಡನೆ ಯಮುನೆಯನ್ನು ಕಂಡಂತಾಗಿ ನೀರಡಿಕೆಯನ್ನು ತೀರಿಸಿಕೊಳ್ಳಲು ಮುಂದಾಯಿತಂತೆ!

ಗೋಸಮೂಹಕ್ಕೆ ಹಾಗಾದರೆ, ಮಯೂರಸಮೂಹಕ್ಕೆ ಮತ್ತೊಂದು ಬಗೆಯ ಭ್ರಮೆಯುಂಟಾಯಿತಂತೆ. ನವಿಲುಗಳಿಗೆಲ್ಲ ತುಂಬ ಇಷ್ಟವಾದ ಕಾಲವೆಂದರೆ ಮಳೆಗಾಲವೇ ಸರಿ. ನವಿಲುಗಳಿಗೆ ತಾಪವು ತಾಳದು. ಅವುಗಳಿಗೆ ತಂಪೇ ಪ್ರಿಯವಾದದ್ದು. ಆಕಾಶದಲ್ಲಿ ಮೋಡಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಅವುಗಳಿಗೆ ಖುಷಿಯೋ ಖುಷಿ. ಬಿಳೀಮೋಡಗಳು ಅವಕ್ಕೆ ಖುಷಿ ಕೊಡವು. ಕಾರ್ಮೋಡಗಳೇ ಅವುಗಳಿಗೆ ಸಂತೋಷವುಕ್ಕಿಸುವುದು. ಆಗಲೇ ಅವುಗಳು ಧ್ವನಿಗೈಯುವುದು, ಗರಿಗೆದರಿ ಕುಣಿಯುವುದು. ಹೀಗಾಗಿ ನೀರುಂಡಮೋಡಗಳ ಸ್ಮರಣೆಯನ್ನು ತರುವ ಕೃಷ್ಣನ ವರ್ಣ ಅವುಗಳ ಮೇಲೆ ಪ್ರಭಾವ ಬೀರುವುದು. ಅದನ್ನು ಮತ್ತೆ ಮತ್ತೆ ನೋಡಬೇಕೆಂಬ ಬಯಕೆಯನ್ನುಕ್ಕಿಸುವುದು. ನವಿಲು ಅದೆಷ್ಟು ಬಣ್ಣಗಳ ಪಕ್ಷಿ! ಅದರ ಕತ್ತಿನ ನೀಲವರ್ಣ ಮೋಹಕವಾದದ್ದೇ ಸರಿ. ಎಂದೇ ನೀಲಕಂಠ - ಎಂಬ ಪದಕ್ಕೆ ನವಿಲೆಂಬ ಅರ್ಥ. ಕೃಷ್ಣನ ಮೈಕಾಂತಿಯನ್ನು ನೀಲಕಂಠಗಳು ಮತ್ತೆ ಮತ್ತೆ ನೋಡಬಯಸುತ್ತವೆ. ಅದುವೇ ನೀಲಮೇಘವೋ - ಎಂಬ ಭ್ರಾಂತಿಯಿಂದಾಗಿ.

ಮೂರನೆಯದಾಗಿ. ಗೋಪಿಕೆಯರ ಮೇಲಾಗುವ ಪ್ರಭಾವ. ತಮಾಲದ ಚಿಗುರು ಗೋಪಿಕೆಯರ ಮುಡಿಯನ್ನೋ ಕಿವಿಯನ್ನೋ ಅಲಂಕರಿಸುವುದು. ತಮಾಲವೆಂದರೆ ಹೊಂಗೆ. ಹೀಗಾಗಿ, ಕೃಷ್ಣನ ಕಪ್ಪು ಕಾಂತಿಯನ್ನು ಕಂಡ ಗೋಪಿಕಾನಾರಿಯರು, ಅದು ತಮಾಲವೆಂದು ಭ್ರಮೆಗೊಂಡು, ಅದರ ಚಿಗುರನ್ನು ಕೀಳಲು ಮುಂದಾಗುವರಂತೆ!

ಹೀಗೆ ಗೋ-ಮಯೂರ-ಗೋಪಿಕೆಗಳೆಂಬ ಮೂರು ಸ್ತೋಮಗಳ ಮೇಲ ಕೃಷ್ಣವರ್ಣಪ್ರಭಾವವಿದೆ. ಕೃಷ್ಣನ ಕಾಂತಿ ಕಮನೀಯವಾದುದು. ಅದು ಎಲ್ಲ ಜೀವಿಗಳನ್ನೂ ತನ್ನತ್ತ ಆಕರ್ಷಿಸುವಂತಹುದು. ಇಲ್ಲಿ ಮೂರರ ಉಲ್ಲೇಖವಿದೆ. ಗೋ-ಮಯೂರಗಳೂ ಗೋಪಿಕೆಯರೂ ಮುಗ್ಧತೆಗೆ ಹೆಸರಾದವರು.

ಪವಿತ್ರವಾದ ಕೃಷ್ಣನ ಕಾಂತಿ ಎಲ್ಲರ ಮೇಲೂ ಪ್ರಭಾವಬೀರುವಂತಹುದು. ಅದು ನಮ್ಮನ್ನು ಪೊರೆಯಲಿ, ಎನ್ನುತ್ತಾನೆ. ಕವಿ. ಶ್ಲೋಕ ಹೀಗಿದೆ:

ಯಾಂ ದೃಷ್ಟ್ವಾ ಯಮುನಾಂ ಪಿಪಾಸುರನಿಶಂ ವ್ಯೂಹೋ ಗವಾಂ ಗಾಹತೇ /
ವಿದ್ಯುತ್ತ್ವಾನಿತಿ ನೀಲಕಂಠನಿವಹೋ ಯಾಂ ದ್ರಷ್ಟುಮುತ್ಕಂಠತೇ |
ಉತ್ತಂಸಾಯ ತಮಾಲಪಲ್ಲವಮಿತಿ ಚ್ಛಿಂದಂತಿ ಯಾಂ ಗೋಪಿಕಾಃ /

ಕಾಂತಿಃ ಕಾಲಿಯಶಾಸನಸ್ಯ ವಪುಷಃ ಸಾ ಪಾವನೀ ಪಾತು ನಃ ||

.ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 25/5/2024 ರಂದು ಪ್ರಕಟವಾಗಿದೆ.

Tuesday, May 21, 2024

ವ್ಯಾಸ ವೀಕ್ಷಿತ 88 ಖಾಂಡವವು ಇಂದ್ರಪ್ರಸ್ಥವಾಯಿತು: ಕಾಡು ನಾಡಾಯಿತು! (Vyasa Vikshita 88 Khandavavu Indraprasthavayitu: Kadu Nadayitu!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
(ಪ್ರತಿಕ್ರಿಯಿಸಿರಿ lekhana@ayvm.in)



ಪಾಂಡವರಿಗೆ ಖಾಂಡವವನವನ್ನು ರಾಜ್ಯವೆಂದಿತ್ತು ಕಳುಹಿಸಿಕೊಡುತ್ತಾ, ಧೃತರಾಷ್ಟ್ರನು ಯುಧಿಷ್ಠಿರನಿಗೆ ಈ ಮಾತನ್ನು ಕೊನೆಗೆ ಹೇಳಿದನು:

ಈ ಪುರವೂ ರಾಷ್ಟ್ರವೂ ಧನಧಾನ್ಯಗಳಿಂದ ತುಂಬಿತುಳುಕಿ ಸಮೃದ್ಧವಾಗಲಿ. ಸೋದರರಿಂದ ಸಹಿತನಾಗಿ ನೀನು ಹೊರಡುವವನಾಗು, ಶುದ್ಧಾತ್ಮನಾದ ಯುಧಿಷ್ಠಿರನೇ" ಎಂದು.

ಆತನ ಆ ಮಾತನ್ನು ಸ್ವೀಕರಿಸಿದ್ದಾಯಿತು. ಎಲ್ಲರೂ ರಾಜಾ ಧೃತರಾಷ್ಟ್ರನಿಗೆ ನಮಸ್ಕಾರವನ್ನು ಮಾಡಿದರು. "ಅರ್ಧರಾಜ್ಯ"ವೆನಿಸಿದ್ದ ಆ ಖಾಂಡವಪ್ರಸ್ಥವು ವಾಸ್ತವವಾಗಿ ಘೋರವಾದ ಕಾಡಾಗಿತ್ತು! ಅದನ್ನೇ ಪಡೆದವರಾಗಿ ಆ ನರಶ್ರೇಷ್ಠರೆಲ್ಲಾ ಖಾಂಡವಕ್ಕೆ ಪ್ರವೇಶಮಾಡಿದರು. ಶ್ರೀಕೃಷ್ಣನನ್ನು ಮುಂದಿಟ್ಟುಕೊಂಡು ಆ ನಗರವನ್ನು ಸ್ವರ್ಗವೆಂಬಂತೆ ಅಲಂಕರಿಸಿದರು.

ಜಗನ್ನಾಥನಾದ ವಾಸುದೇವನು ಆಗ ಇಂದ್ರನನ್ನು ಸ್ಮರಿಸಿದನು. ಹಾಗಾಗುತ್ತಲೇ ಇಂದ್ರನು ವಿಶ್ವಕರ್ಮನಿಗೆ ಹೀಗೆಂದು ಅಪ್ಪಣೆಯಿತ್ತನು: "ಮಹಾಪ್ರಾಜ್ಞನಾದ ವಿಶ್ವಕರ್ಮನೇ, ಇನ್ನು ಮುಂದಕ್ಕೆ ಆ ಪುರವು ದಿವ್ಯವೂ ರಮ್ಯವೂ ಆಗಬೇಕು: ಹಾಗೆ ನೀ ಮಾಡು."

ಇಂದ್ರನ ಆಜ್ಞೆಯಂತೆ ವಿಶ್ವಕರ್ಮನು ಕೇಶವನಲ್ಲಿಗೆ ಹೋದನು. ವಂದನೀಯನಾದ ಆತನಿಗೆ ನಮಸ್ಕರಿಸಿ, "ನಾನೇನು ಮಾಡಬೇಕು?" - ಎಂಬುದಾಗಿ ಕೇಳಿಕೊಂಡನು. ಅದಕ್ಕೆ ಕೃಷ್ಣನು, " ಮಹೇಂದ್ರನ ಪುರವನ್ನು (ಎಂದರೆ ಅಮರಾವತಿಯನ್ನು) ಹೋಲುವಂತಹ ಮಹಾಪುರವನ್ನು ಕುರುರಾಜನಾದ ಯುಧಿಷ್ಠಿರನಿಗಾಗಿ ನಿರ್ಮಿಸಿಕೊಡು. ಇಂದ್ರಪ್ರಸ್ಥವೆಂಬುದಾಗಿ ಅದಕ್ಕೆ ಇಂದ್ರನೇ ನಾಮಕರಣವನ್ನು ಮಾಡಿದ್ದಾನೆ" ಎಂದನು.

ಆ ಬಳಿಕ ಪವಿತ್ರವೂ ಕಲ್ಯಾಣಮಯವೂ ಆದ ಆ ಪ್ರವೇಶದಲ್ಲಿ ಶಾಂತಿಕರ್ಮವನ್ನು ನೆರವೇರಿಸಿ, ದ್ವೈಪಾಯನರನ್ನು (ಎಂದರೆ ವ್ಯಾಸರನ್ನು) ಮುಂದಿಟ್ಟುಕೊಂಡ ಮಹಾರಥರಾದ ಆ ಪಾಂಡವರು ನಗರದ ಅಳತೆಯನ್ನು ಮಾಡಿಸಿದರು. ಆ ನಗರವು ಆಮೇಲೆ ಹೇಗೆ ಶೋಭಿಸಿತು! ಸಾಗರವನ್ನು ಹೋಲುವಂತಹ ಪರಿಖೆಗಳಿಂದ ಅಲಂಕೃತವಾಗಿತ್ತು. (ಪರಿಖೆಯೆಂದರೆ ಕೋಟೆಕೊತ್ತಲಗಳ ಸುತ್ತ ರಕ್ಷಣೆಗಾಗಿ ನಿರ್ಮಿಸಲಾಗಿರುವ ದೊಡ್ಡ ಹಳ್ಳ). ದೇವಲೋಕವನ್ನೇ ಎಟುಕಿಸಿಕೊಂಡಿದ್ದಂತಹ ಪ್ರಾಕಾರದಿಂದ ಅದು ಬೆಳಗಿತು. ಆ ಪ್ರಾಕಾರವಾದರೂ ಬಿಳಿಯ ಮೋಡದ ಕಾಂತಿಯಿಂದ ಕೂಡಿದ್ದಿತು. ಭೋಗವತೀನಗರಿಯು ಹೋಗೆ ಶೋಭಿಸುವುದೋ ಹಾಗೆ ಶೋಭಿಸುವುದಾಗಿದ್ದಿತು, ಆ ಪ್ರದೇಶ.

ಅಲ್ಲಿಯ ದ್ವಾರಗಳು ಗರುಡನ ರೆಕ್ಕೆಗಳೆರಡು ಬಿಚ್ಚಿದಂತಿದ್ದವು. ಒಳ್ಳೊಳ್ಳೆಯ ಸೌಧಗಳಿಂದ ಕಂಗೊಳಿಸಿತು, ಖಾಂಡವ. ಅಲ್ಲಿಯ ಗೋಪುರಗಳು ಮಂದರಪರ್ವತವನ್ನು ಹೋಲುವಂತಹುವಾಗಿದ್ದವು. ಮೇಘಸ್ತೋಮಗಳಂತಿದ್ದ ಅವುಗಳಿಂದ ನಗರವು ಗುಪ್ತವಾಗಿದ್ದಿತು.

ನಗರದ  ಸುರಕ್ಷೆಗಾಗಿ ಗುಟ್ಟಾದ ಎಡೆಗಳಲ್ಲಿಯ ಶಸ್ತ್ರಾಗಾರಗಳಿದ್ದವು. ಅಲ್ಲಿದ್ದ ಶಕ್ತ್ಯಾಯುಧಗಳು ಎರಡು ನಾಲಿಗೆಗಳಿಂದ ಕೂಡಿದ ಹಾವುಗಳಂತಿದ್ದವು. ಸೈನಿಕರು ಶಸ್ತ್ರಾಭ್ಯಾಸಗಳನ್ನು ಮಾಡಿಕೊಳ್ಳಲು ಯುಕ್ತವಾದ ಎಡೆಗಳಿದ್ದವು. ತೀಕ್ಷ್ಣವಾದ ಅಂಕುಶಗಳು, ಶತಘ್ನಿಗಳು (ಎಂದರೆ ನೂರುಮಂದಿಯನ್ನು ಒಟ್ಟಿಗೆ ಸಂಹರಿಸುವ ಶಸ್ತ್ರವಿನ್ಯಾಸಗಳು), ಯುದ್ಧಕ್ಕೆ ಬಳಸಲಾಗುವ ಯಂತ್ರಗಳು, ಕಬ್ಬಿಣದ ಮಹಾಚಕ್ರಗಳು - ಇವೆಲ್ಲವುಗಳಿಂದಲೂ ಆ ನಗರವು ಶೋಭಿಸಿತು.

ದೊಡ್ಡ ದೊಡ್ಡ ರಥಬೀದಿಗಳಿದ್ದವು; ಅಲ್ಲಿ ಜನಸಂಚಾರವೇ ಮೊದಲಾದುವಕ್ಕಾಗಿ ಬೇರ್ಪಡಿಸಿಟ್ಟಿದ್ದ ಭಾಗಗಳೇ ಇದ್ದವು. ದೈವಿಕವಾದ ಆಪತ್ತುಗಳಿಗೆ ಆಸ್ಪದವಿರಲಿಲ್ಲ. ಶುಭ್ರವಾದ ವಿವಿಧ ಉತ್ತಮಭವನಗಳಿಂದಾಗಿ, ದೇವಲೋಕದಂತೆ ಬೆಳಗಿತು ಆ ಇಂದ್ರಪ್ರಸ್ಥ.

ಆಕಾಶದಲ್ಲಿಯ ಮೇಘರಾಶಿಯ ನಡುವೆ ಮಿಂಚು ಹೇಗೆ ತೋರುವುದೋ ಹಾಗದು ತೋರುತ್ತಿತ್ತು, ಆ ರಮ್ಯವೂ ಶಿವವೂ (ಮಂಗಳವೂ) ಆದ ಪ್ರದೇಶದಲ್ಲಿದ್ದ ಯುಧಿಷ್ಠಿರಭವನ! ಧನಭರಿತವಾದ ಕುಬೇರಗೃಹವು ಹೇಗೆ ಶೋಭಿಸುವುದೋ ಹಾಗೆ ಶೋಭಿಸುವುದಾಗಿತ್ತು, ಅದು.  


ಸೂಚನೆ : 19/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, May 20, 2024

ಯಕ್ಷ ಪ್ರಶ್ನೆ 90 (Yaksha prashne 90)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 89 ಕೊನೆಯಿಲ್ಲದ ವ್ಯಾಧಿ ಯಾವುದು ?

ಉತ್ತರ - ಲೋಭ.  

ಯಾವುದು ಹುಟ್ಟುತ್ತದೆಯೋ ಅದಕ್ಕೆ ಅಂತ್ಯವೆಂಬುದಿದೆ; ಆದರೆ ಇಲ್ಲಿ ಪ್ರಶ್ನೆ ವಿಪರೀತವಾಗಿದೆ. ಇಲ್ಲಿ ವ್ಯಾಧಿ ಹುಟ್ಟಿದೆ; ಆದರೆ ಅದಕ್ಕೆ ಅಂತ್ಯವೆಂಬುದಿಲ್ಲ. ಅಂತಹ ಅಂತ್ಯವಿಲ್ಲದ ವಿಷಯ ಯಾವುದು? ಎಂಬುದು ಇಲ್ಲಿ ಯಕ್ಷಪ್ರಶ್ನೆಯಾಗಿದೆ. ಅದಕ್ಕೆ ಲೋಭವೆಂಬುದು ಎಂತಹ ಮೊದಲಿರುವ, ಕೊನೆಯಿಲ್ಲದ್ದು ಎಂಬುದಾಗಿ ಧರ್ಮಜನ ಉತ್ತರವಾಗಿದೆ. ಲೋಭಕ್ಕೆ ಹುಟ್ಟಿದೆ. ಆದರೆ ಅದಕ್ಕೆ ಅಂತ್ಯವೆಂಬುದಿಲ್ಲ. ಅದಕ್ಕೆ ನಾಶವೆಂಬುದಿಲ್ಲ. ಅದು ಮುಗಿಯಿತು ಎಂಬುದಿಲ್ಲ. ನಮ್ಮ ಮುಂದೆ ಯಾವಾಗಲೂ ಕಾಣಿಸಿಕೊಳ್ಳುತ್ತಿರುತ್ತದೆ. ಅದರ ಅಸ್ತಿತ್ವವನ್ನು ಕಾಣಿಸುತ್ತಿರುತ್ತದೆ. ಅದರಿಂದ ಆಗುವ ಅನಾಹುತಗಳಿಂದ ನಾವು ಪರಿತಪಿಸುವುದಂತೂ ನಿಲ್ಲುವುದೂ ಇಲ್ಲ. ಹಾಗಾಗಿ ಲೋಭವೆಂಬುದು ಅಂತಹ ಕೊನೆಯಿಲ್ಲದ್ದಾಗಿದೆ. 

ಸಾಮಾನ್ಯವಾಗಿ ಎರಡು ಬಗೆಯ ರೊಗಗಳನ್ನು ಹೇಳಲಾಗಿದೆ ಆಧಿ ಮತ್ತು ವ್ಯಾದಿ ಎಂಬುದಾಗಿ. ಶರೀರಕ್ಕೆ ಬರುವ ರೋಗವನ್ನು ವ್ಯಾಧಿ ಎಂತಲೂ, ಮನಸ್ಸಿಗೆ ಬರುವ ರೋಗವನ್ನು ಆಧಿ ಎಂದೂ ಹೇಳುತ್ತಾರೆ. ಇಲ್ಲಿ ಒಂದಕ್ಕೊಂದು ಆಧಾರಿತ. ಶರೀರದ ತೊಂದರೆಯಿಂದ ಮನಸ್ಸಿನ ಮೇಲೆ ಪರಿಣಾಮ, ಅಂತೆಯೇ ಮನಸ್ಸಿನ ತೊಂದರೆಯಿಂದ ಶರೀರದ ಮೇಲೆ ಪರಿಣಾಮ ಉಂಟಾಗುತ್ತದೆ. ಇಲ್ಲಿ ಲೋಭವನ್ನು ವ್ಯಾಧಿ ಎಂದು ಕರೆದು ಶರೀರದಿಂದ ಆಗುವ ಸಮಸ್ಯೆ ಎಂಬುದಾಗಿ ಹೇಳಲಾಗಿದೆಯೋ ಎಂದು ಇಲ್ಲಿನ ಶಬ್ದವ್ಯವಹಾರದ ಮೂಲಕ ಅನಿಸುತ್ತದೆ. ಅಂದರೆ ಲೋಭಕ್ಕೂ ಶರೀರಕ್ಕು ನೇರವಾದ ಸಂಬಂಧವಿದೆ ಎಂದಾಯಿತು. ಶರೀರ ಎಂದಿನಿಂದ ಆರಂಭವಾಯಿತೋ ಆಲಿಂದ ಈ ಲೊಭವೆಂಬ ವ್ಯಾಧಿ ಆರಂಭವಾಗಿ ಈ ಶರೀರ ಮುಕ್ತಾಯವಾಗುವ ತನಕವೂ ಇರುತ್ತದೆ. ಅಷ್ಟೇ ಅಲ್ಲ ಅಲ್ಲೂ ಆಸೆಯೆಂಬುದಕ್ಕೆ ಕಡಿವಾಣ ಹಾಕದಿದ್ದರೆ ಮತ್ತೆ ಶರೀರವನ್ನು ಪಡೆಯಬೇಕಾಗುತ್ತದೆ. ಮತ್ತೆ ಪುನಃ ಆ ಲೋಭದ ಆಟ ಶುರುವಾದಮ್ತೆಯೇ ಸರಿ. ಲೋಭವೆಂದರೆ ಅತಿಯಾದ ಆಶೆ. ಅದಕ್ಕೆ ಶ್ರೀಶಂಕರ ಭಗವತ್ಪಾದರು ತಮ್ಮ 'ಮೋಹಮುದ್ಗರ' ಎಂಬ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ. ಆ ಸ್ತೋತ್ರಕ್ಕೆ ಮೋಹ ಮುದ್ಗರ ಎಂದೆ ಹೆಸರನ್ನೂ ಇಟ್ಟಿರುವುದು ಈ ಲೊಭದ ಕಾರಣವನ್ನು ಮತ್ತು ಅದರ ವೈಶಾಲ್ಯವನ್ನು ಹೇಳಿದ್ದು ಕಂಡುಬರುತ್ತದೆ.  "ಅಂಗಂ ಗಲಿತಂ - ಶರೀರದ ಪ್ರತಿಯೊಂದು ಅಂಗಗಳೂ ಶಿಥಿವಾಗಿವೆ. ಪಲಿತಂ ಮುಂಡಂ - ತಲೆಕೂದಲು ಬೆಳ್ಳಗಾಗಿದೆ. ದಶನವಿಹೀನಂ - ಹಲ್ಲುಗಳು ಉದುರಿವೆ. ಹಲ್ಲಿಲ್ಲದೇ ಬೊಚ್ಚುಬಾಯಿಯಾಗಿದೆ. ವೃದ್ಧೋ ಯಾತಿ ಗೃಹೀತ್ವಾ ದಂಡಂ - ಹಣ್ಣು ಹಣ್ಣು ಮುದುಕ, ಒಡಾಡಲು ತ್ರಾಣವಿಲ್ಲ. ಕೈಯಲ್ಲಿ ಊರುಗೋಲು ಹಿಡಿದುಕೊಂಡಿದ್ದಾನೆ. ಇಂತಹ ವಿಕಟಸಂದರ್ಭದಲ್ಲಿ ಅವನಿಗೆ ಆಶೆಯೆಂಬುದು ಬಿಡದು. ಎಂಬುದಾಗಿ ಶ್ರೀಶಂಕರರು ಆಶೆಯು ಎಂದೆಂದೂ ಬಿಡದ ವ್ಯಾಧಿ. ಶರೀರ ಬಿಡುವ ಸಂದರ್ಭದಲ್ಲೂ ಆಶೆಯೆಂಬುದು ಬಿಡದು. ಇದು ಕೇವಲ ಶರೀರಕ್ಕೆ ಮಾತ್ರ ಸಂಬಂಧಿಸಿದ ರೋಗವಲ್ಲ. ಇದರ ಪರಿಣಾಮ ಮನಸ್ಸಿನ ಮೇಲೂ ಬೀಳುತ್ತದೆ. ಅದಕ್ಕಾಗಿ ಇದನ್ನು ಅರಿಷಡ್ವರ್ಗಗಳಲ್ಲಿ ಒಂದಾಗಿ ಪರಿಗಣಿಸಿದ್ದಾರೆ. ಬೇರೆಯವರಲ್ಲಿರುವ ಹಣ ಮೊದಲಾದ ದ್ರವ್ಯವನ್ನು ನೋಡಿ ತಾನು ಪಡೆಯಬೇಕು ಎಂಬ ಹೃದಯದಲ್ಲಿ ಹಿಟ್ಟುವ ಆಶೆಯನ್ನೇ ಲೋಭ ಎಂಬುದಾಗಿ ಪದ್ಮಪುರಾಣದಲ್ಲಿ ಇದರಲಕ್ಷಣವನ್ನೂ ಹೇಳಲಾಗಿದೆ. ಒಟ್ಟಿನಲ್ಲಿ, ಮನುಷ್ಯನು ದೂರಮಾಡಿಕೊಳ್ಳಲೇಬೇಕಾದ ಅವಗುಣಗಳಲ್ಲಿ ಲೋಭವೂ ಬಹಳ ಮುಖ್ಯವಾಗಿದೆ.  

ಸೂಚನೆ : 19/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 14 ಕಿರಿದಾದ ಚೇತಸ್ಸಿನಲ್ಲಿ ಹಿರಿದಾದ ತೇಜಸ್ಸು Kiridada Chetassinalli Hiridada Tejassu

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ನಮಗೆಲ್ಲ ತಿಳಿದಿರುವಂತೆ ಇಂದ್ರಿಯಗಳು ಐದು: ಕಣ್ಣು, ಕಿವಿ, ಮೂಗು, ನಾಲಿಗೆ, ಮತ್ತು ಚರ್ಮ. ಅವುಗಳ ವಿಷಯಗಳೂ ಐದು: ರೂಪ, ಶಬ್ದ, ಗಂಧ, ರಸ, ಹಾಗೂ ಸ್ಪರ್ಶ. ಈ ಐದನ್ನೂ ಅಮರಕೋಶವು ಒಟ್ಟಿಗೆ ಪಟ್ಟಿಮಾಡುತ್ತದೆ: ರೂಪಂ ಶಬ್ದೋ ಗಂಧರಸೌ ಸ್ಪರ್ಶಶ್ಚ ವಿಷಯಾ ಅಮೀ - ಎಂದು. ನಾವು ಎಚ್ಚರವಾಗಿರುವಾಗೆಲ್ಲ ನಮ್ಮ ಮನಸ್ಸು ಸಾಮಾನ್ಯವಾಗಿ ಈ ಐದರಲ್ಲೇ ಮುಳುಗಿರುತ್ತದೆ. (ಕನಸಿನಲ್ಲಿಯೂ ಇವುಗಳ ಛಾಯೆಗಳೇ).

ಇವು ಕೆಟ್ಟವೆಂದಲ್ಲ; ಆದರೆ ಮನಸ್ಸು ಸದಾ ಇವಲ್ಲೇ ಮಗ್ನವಾಗಿದ್ದರೆ ಒಳಿತಲ್ಲ. ಅತಿಯಾದರೆ ಅಮೃತವೂ ವಿಷವಾದೀತು – ಎನ್ನುವರಲ್ಲವೇ? ಹಾಗಿರಲು, ಈ ಐದು ವಿಷಯಗಳು ಅತಿಯಾದರೆ ತೊಂದರೆಯೇ.

ಅಷ್ಟೇ ಅಲ್ಲ. ಇವುಗಳಲ್ಲೂ ಸೇವ್ಯ-ಅಸೇವ್ಯ ಎಂಬ ವಿಭಾಗವೂ ಬೇಕಾದದ್ದೇ. ದೈಹಿಕ ಆರೋಗ್ಯದ ಬಗ್ಗೆ ನಮ್ಮ ಪ್ರವೃತ್ತಿಯು ಹೇಗೋ, ಹಾಗೆಯೇ ಮಾನಸಿಕ-ಆತ್ಮಿಕ ಆರೋಗ್ಯದ ಬಗ್ಗೆಯೂ: ಯಾವುದು ಕೆಟ್ಟದ್ದೋ ಅದೇ ಕೆಲವೊಮ್ಮೆ ಹೆಚ್ಚು ರುಚಿಯೆನಿಸಿಬಿಡುವುದೂ ಉಂಟು! ಅಷ್ಟೇ ಅಲ್ಲ. ಹೇಗೆ ಚಿಕ್ಕಂದಿನ ಪುಟ್ಟ ಆಸೆಗಳು ತಾರುಣ್ಯದಲ್ಲಿ ರುಚಿಸವೋ, ಹಾಗೆ ಇಲ್ಲೂ ಪಕ್ವತೆಗೆ ಆಸ್ಪದವುಂಟು. ಆದರೂ ನಮ್ಮ ಮನಸ್ಸು ಎಷ್ಟೋ ವೇಳೆ ಕ್ಷುದ್ರವೋ ಸಾಧಾರಣವೋ ಆದುದರಲ್ಲಿ/ಲ್ಲೇ ರುಚಿ ಕಾಣುತ್ತದೆ! ಹಳೆಯ ವಾಸನೆಗಳು ಸುಲಭವಾಗಿ ಬಿಟ್ಟುಬಿಡುವುವೇ?

ಆತ್ಮೋನ್ನತಿಯ ದೃಷ್ಟಿಯಿಂದ ನೋಡಿದಾಗ ನಾವು ಸಾಧಾರಣವಾಗಿ ಬಯಸುವ ಅಥವಾ ಬಳಸುವ ವಿಷಯಸುಖಗಳು ಬಹುತೇಕ ವಿಷಾಮಿಷಗಳೇ ಆಗಿರುತ್ತವೆ. (ಆಮಿಷವೆಂದರೆ ಮಾಂಸ; ಹುಲಿ-ಚಿರತೆ ಮುಂತಾದ ಕಾಡುಪ್ರಾಣಿಗಳನ್ನು ಹಿಡಿಯುವುದಕ್ಕಾಗಿ ಆಮಿಷವನ್ನೊಡ್ಡಿ ಸೆಳೆದು ಅವು ಬೋನಿನಲ್ಲಿ ಸಿಲುಕಿಕೊಳ್ಳುವಂತೆ ಮಾಡುವುದುಂಟು. ಹೀಗೆ ಯಾರಿಗಾದರೂ ಪ್ರಲೋಭನೆಯನ್ನುಂಟುಮಾಡಲು ಬಳಸುವ ವಸ್ತುವನ್ನು ಸಹ ಆಮಿಷವೆನ್ನುವರು. ಹೀಗಾಗಿ ಆಮಿಷವೆಂಬ ಪದಕ್ಕೆ ಎರಡು ಅರ್ಥಗಳು - ಮಾಂಸ ಮತ್ತು ಲೋಭವುಂಟುಮಾಡುವ ವಸ್ತು - ಎಂದು). ಯಾವ ಆಮಿಷಕ್ಕೆ ಒಂದಿಷ್ಟು ವಿಷವನ್ನೂ ಸೇರಿಸಲಾಗಿದೆಯೋ, ಅಥವಾ ಯಾವುದು ಒಟ್ಟಿನಲ್ಲಿ ವಿಷಮಯವೋ, ಅಂತಹ ಆಮಿಷವನ್ನು ವಿಷಾಮಿಷವೆನ್ನುತ್ತಾರೆ.

ಲೀಲಾಶುಕನು ಹೇಳುವುದು ಹೀಗೆ: ಮೇಲೆ ಹೇಳಿದ ಇಂದ್ರಿಯವಿಷಯಗಳೇನುಂಟೋ ಅವು ವಿಷಾಮಿಷಗಳೇ ಸರಿ. ಆದರೆ ನಮ್ಮ ಮನಸ್ಸು ಸ್ತಿಮಿತವಿಲ್ಲದ್ದು (ಸ್ಥಿಮಿತವೆನ್ನುವುದು ತಪ್ಪು; ಸ್ತಿಮಿತವೆಂದು ಅಲ್ಪಪ್ರಾಣವನ್ನೇ ಹೇಳಬೇಕು): ತಿಳಿದೂ ತಿಳಿದೂ ತಪ್ಪೆಸಗುವುದುಂಟು. ವಿಷಯಗಳು ವಿಷಾಮಿಷಗಳೆಂದು ಗೊತ್ತಿದ್ದೂ ಅವುಗಳನ್ನು ಗ್ರಸಿಸುವುದರಲ್ಲಿ ಗೃಧ್ನುವಾಗಿರುತ್ತದೆ, ನಮ್ಮ ಮನಸ್ಸು. ಏನು ಹಾಗೆಂದರೆ? ಗ್ರಸಿಸುವುದು ಎಂದರೆ ಸ್ವೀಕರಿಸುವುದು, ಸೇವಿಸುವುದು; ಅಥವಾ ಇನ್ನೂ ಹೆಚ್ಚಾಗಿ, "ಸಿಕ್ಕೊಡನೆ ಗಬಕ್ಕನೆ ಬಾಯಿಗೆ ಹಾಕಿಕೊಳ್ಳುವುದು". ಇಂತಹ ಗ್ರಸನ-ಕಾರ್ಯದ ವಿಷಯದಲ್ಲಿ ತೀರದ ಬಯಕೆಯುಳ್ಳದ್ದು. ಗೃಧ್ನು ಎಂದರೆ ಆಸೆಬುರುಕ, ಹಪಹಪಿಸುವನು. ನಮ್ಮ ಚೇತಸ್ಸು ಗೃಧ್ನು. ಅಂತೂ, ನಮ್ಮ ಚಿತ್ತವು ಹೀಗೆ ವಿಷಯ-ವಿಷಾಮಿಷ-ಗ್ರಸನ-ಗೃಧ್ನು! ದೊಡ್ಡಪದವೇ ಆಯಿತು!

ಹಾಗಿರುವ ನನ್ನ ಮನಸ್ಸಿನಲ್ಲೂ ಶ್ರೀಕೃಷ್ಣನು ಚಿರಕಾಲ ಸ್ಫುರಿಸಲಿ! - ಎಂಬ ಪ್ರಾರ್ಥನೆ, ಲೀಲಾಶುಕನದು. ಕೆಟ್ಟದ್ದೆಲ್ಲ ಪೂರ್ತಿಯಾಗಿ ಕಳೆಯುವ ತನಕ ಒಳ್ಳೆಯದಕ್ಕೆ ಎಡೆಯೆಲ್ಲಿ? - ಎಂದು ಚಿಂತಿಸುವವರುಂಟು. ಆದರೆ ಶ್ರೀರಂಗಮಹಾಗುರುಗಳ ನಿಲುವು ಹಾಗಿರಲಿಲ್ಲ. ಒಳ್ಳೆಯದರತ್ತ ಮನಸ್ಸನ್ನು ಹೆಚ್ಚುಹೆಚ್ಚಾಗಿ ಹರಿಸುತ್ತಿದ್ದರೆ ಅದುವೇ ಕಾಲಕ್ರಮದಲ್ಲಿ ದೃಢವಾಗಿಕೊಳ್ಳುತ್ತದೆ; ಪರಿಣಾಮವಾಗಿ, ಒಳಿತಲ್ಲದ್ದು ಬರಬರುತ್ತಾ ಶಿಥಿಲವಾಗಿ ತಾನಾಗಿ ಕಳಚಿಹೋಗುವ ಪರಿಯೂ ಒಂದುಂಟು. ಆ ಬಗೆಯ ಸಫಲತೆಯನ್ನೂ ಅವರು ಸೂಚಿಸಿದ್ದುಂಟು. ಇಲ್ಲಿ ಲೀಲಾಶುಕನು ಕೇಳಿಕೊಳ್ಳುತ್ತಿರುವುದೂ ಆ ಪರಿಯೇ. ತನ್ನ ಮನಸ್ಸು ವಿಷಯಗಳಿಂದ ಕಲುಷಿತವಾಗಿದ್ದರೂ, ಕೃಷ್ಣನು ತೋರಿಕೊಳ್ಳಲಿ ಎಂಬ ಪ್ರಾರ್ಥನೆ ಆತನದು.

ಇಲ್ಲಿ ಶ್ರೀಕೃಷ್ಣನನ್ನು ಕೃಷ್ಣನೆಂದೇ ಹೆಸರಿಸದೆ ಧಾಮವೆಂದು ಕರೆದಿದೆ. ಧಾಮವೆಂದರೆ ಸ್ಥಾನ, ಎಡೆ - ಎಂಬುದು ಪ್ರಸಿದ್ಧಾರ್ಥ. ಆದರೆ ಧಾಮವೆಂಬುದಕ್ಕೆ ತೇಜಸ್ಸೆಂಬ ಅರ್ಥವೂ ಇದೆ. (ಬೇರೆ ಇನ್ನೊಂದೆರಡು ಅರ್ಥಗಳೂ ಉಂಟು, ಅವು ಅಷ್ಟು ಪ್ರಸಿದ್ಧವಲ್ಲ). ಇಲ್ಲಿ ತೇಜಸ್ಸೆಂಬ ಅರ್ಥವೇ ಪ್ರಕೃತ.

ಯಾವುದಾದರೂ ವಸ್ತು ಅದ್ಭುತವಾಗಿದ್ದರೆ ಅದನ್ನು 'ಕಿಮಪಿ' ಎನ್ನುವುದುಂಟು: ಅಂದರೆ ಹೀಗೆಂದು ಹೇಳಲಾಗದ್ದು ಎಂದರ್ಥ. ಹೀಗಾಗಿ, ಕೃಷ್ಣನು ಒಂದು ಅದ್ಭುತವಾದ ತೇಜಸ್ಸೇ ಸರಿ. ಒಟ್ಟಿನಲ್ಲಿ ವರ್ಣಿಸಲಾಗದ್ದೆಂದಾದರೂ ಅದರ ಹಿರಿಮೆಯನ್ನು ಕುರಿತು ನಾಲ್ಕು ಮಾತನ್ನಾದರೂ ಆಡಲೇಬೇಕು - ಎಂಬ ಚಾಪಲ್ಯದಿಂದ ಕವಿಯು ಅದಕ್ಕೆ ನಾಲ್ಕು ವಿಶೇಷಣಗಳನ್ನು ಕೊಟ್ಟಿದ್ದಾನೆ.

ಕೃಷ್ಣನೆಂಬ ಆ ತೇಜಸ್ಸು ಸುಂದರವಾದ ಮುಖಕಮಲವನ್ನು ಹೊಂದಿದೆ. ಅಂಬುರುಹವೆಂದರೆ ಕಮಲ (ಅಂಬುವೆಂದರೆ ನೀರು. ಅಲ್ಲೇ ಬೆಳೆಯುವುದು ಅಂಬುರುಹ). ಪದ್ಮಕ್ಕೆ ಕಳೆಕೊಟ್ಟಿರುವುದು ಮುಖದಲ್ಲಿಯ ಸ್ಮಿತ. ಸ್ಮಿತವೆಂದರೆ ಮುಗುಳ್ನಗೆ. ಬಾಯಿಬಿಟ್ಟುಕೊಂಡು ನಗುವುದಕ್ಕೆ ಸ್ಮಿತ ಎನ್ನುವುದಿಲ್ಲ. ಸ್ಮಿತವೆಂಬುದು 'ಅಲಕ್ಷಿತ-ದ್ವಿಜ'ವಾಗಿರುತ್ತದೆ. ಹಾಗೆಂದರೆ ಹಲ್ಲುಗಳು ಕಾಣಿಸದ್ದು. ಅಂತಹ ನಗೆಯದು. ಆ ಮುಗುಳ್ನಗೆಯ ಸಮಯದಲ್ಲಿ ಕಪೋಲಗಳು (ಎಂದರೆ ಕೆನ್ನೆಗಳು) ಕಿಂಚಿತ್ತಾಗಿ ವಿಕಸಿತವಾಗಿರುತ್ತವೆ. ಇಂತಹ ಸ್ಮಿತವು ಅತ್ಯಂತಮಧುರವಾದದ್ದು; ಎಂದೇ ಅದನ್ನು ಸ್ಮಿತಾಮೃತ - ಎನ್ನಲಾಗುತ್ತದೆ. ಅಮೃತದಂತಿರುವ ಸ್ಮಿತವೇ ಸ್ಮಿತಾಮೃತ. ಇದು ಮೊದಲ ವಿಶೇಷಣ.

ಎರಡನೆಯದಾಗಿ ಶ್ರೀಕೃಷ್ಣನ ಕಚಪ್ರಚಯವು ಮನೋಜ್ಞವಾಗಿದೆ. ಕಚ-ಪ್ರಚಯವೆಂದರೆ ಕೇಶರಾಶಿ. ಅದು ಸಹಜವಾಗಿಯೇ ಮನೋಜ್ಞ. ಅದರ ಮನೋಜ್ಞತೆಯು ಎದ್ದು ಕಾಣುವಂತೆ ಮಾಡಿರುವುದು ಅದರ ಮೇಲಿನ ಶಿಖಿ-ಪಿಚ್ಛ - ಎಂದರೆ ನವಿಲುಗರಿ. ನವಿಲುಗಳಿಗೆ ಶಿಖೆಯಿರುವುದರಿಂದ ನವಿಲನ್ನು ಶಿಖಿಯೆಂದು ಕರೆಯುತ್ತಾರೆ. ಗರಿಗೆದರಿ ಕುಣಿಯುವುದು ಗಂಡುನವಿಲೇ ವಿನಾ ಹೆಣ್ಣುನವಿಲಲ್ಲ: ಮಯೂರವೇ ವಿನಾ ಮಯೂರಿಯಲ್ಲ. ಮತ್ತು ಮದವೇರಿದಾಗಲೇ ಮಯೂರದ ನರ್ತನವೂ.

ತುಂಬು ಯೌವನದಲ್ಲಿಯೇ ಪ್ರಾಣಿಗಳಿಗೆ ಮತ್ತೇರುವುದು. ಆ ಅವಸ್ಥೆಯಲ್ಲಿಯೇ ಶರೀರದ ಸರ್ವಾಂಗದಲ್ಲಿಯೂ ಕಾಂತಿಯು ಕಳೆಕಟ್ಟುವುದು. ಮದದಲ್ಲಿರುವ ನವಿಲಿಗೇ ಸೊಂಪಾಗಿ ಗರಿಗಳೇಳುವುದು. ಅದು ಮದಿಸಿ ನರ್ತಿಸುವಾಗ ಉದುರಿದ ಗರಿಯೂ ಕಾಂತಿಭರಿತವಾಗಿರುವುದು. ಕಳಕಳಿಸುವ ಗರಿಯು ಒತ್ತಾದ ಕೇಶಪಾಶಕ್ಕೂ ಒಂದು ಮೆರುಗು ತರುವುದು. (ಕೇಶಪಾಶವೆಂದರೆ ಕೇಶಕಲಾಪ, ಕೇಶರಾಶಿ).

ಇದಲ್ಲದೆ, ಮೂರನೆಯದಾಗಿ, ಆತನ ಕಣ್ಣುಗಳು ಅಗಲವಾಗಿವೆ. ಬೊಗಸೆಗಣ್ಣವನಲ್ಲವೇ ನಮ್ಮ ಕೃಷ್ಣ?

ಒಟ್ಟಿನಲ್ಲಿ ಈ ಶ್ಲೋಕವು ಕೃಷ್ಣನ ಮುಖಪದ್ಮ, ಗರಿಯುಳ್ಳ ಕೇಶರಾಶಿ, ವಿಪುಲನೇತ್ರ – ಎಂಬೀ ಮೂರನ್ನು ವರ್ಣಿಸಿ, ಆತನನ್ನು ಒಂದು ವಿಶಿಷ್ಟ-ತೇಜಸ್ಸೆಂದು ಚಿತ್ರಿಸಿದೆ.

ಒಟ್ಟಿನಲ್ಲಿ, ತನಗೆ ಭೋಗದತ್ತ ಸೆಳೆತವು ಬಿಟ್ಟಿಲ್ಲವಾದರೂ, ಕ್ಷೀಣವಾಗಿಲ್ಲವಾದರೂ - ವಾಸ್ತವವಾಗಿ ಪ್ರಬಲವಾಗಿಯೇ ಇದೆಯೆನಿಸಿದರೂ - ಅತ್ತ ಪರತತ್ತ್ವದತ್ತ ಇರುವ ಸೆಳೆತವೂ ಉತ್ಕಟವಾಗಿಯೇ ಇದೆ, ಎನ್ನುತ್ತಾನೆ ಲೀಲಾಶುಕ.

ಶ್ಲೋಕ ಹೀಗಿದೆ:
ಮಧುರತರ-ಸ್ಮಿತಾಮೃತ-ವಿಮುಗ್ಧ-ಮುಖಾಂಬುರುಹಂ
  ಮದ-ಶಿಖಿ-ಪಿಚ್ಛ-ಲಾಂಛಿತ-ಮನೋಜ್ಞ-ಕಚ-ಪ್ರಚಯಂ |
ವಿಷಯ-ವಿಷಾಽಮಿಷ-ಗ್ರಸನ-ಗೃಧ್ನುನಿ ಚೇತಸಿ ಮೇ
          ವಿಪುಲ-ವಿಲೋಚನಂ ಕಿಮಪಿ ಧಾಮ ಚಕಾಸ್ತು ಚಿರಂ ||

.ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 18/5/2024 ರಂದು ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 13 ಆಶ್ಚರ್ಯದ ಮೂರ್ತಿ - ಎಳಸಿನ ಸೊಗಸು (Krsnakarnamrta - 13 Ashcaryada Murti - Elasina Sogasu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಚಿತ್ರ ಎಂಬ ಪದ ಎಲ್ಲರಿಗೂ ಪರಿಚಿತವೇ. ಆದರೆ ಸಂಸ್ಕೃತದಲ್ಲಿ ಆ ಪದಕ್ಕೆ ಬೇರೊಂದು 

ಅರ್ಥವೂ ಉಂಟು. ಅದಕ್ಕೆ ಆಶ್ಚರ್ಯ - ಎಂಬ ಅರ್ಥವಿದೆ (ಎಂಬುದೇ ಕೆಲವರಿಗೆ ಆಶ್ಚರ್ಯವನ್ನುಂಟುಮಾಡಬಹುದು!)

ಯಾವುದಾದರೂ ವಸ್ತು ಸುಂದರವಾಗಿದ್ದರೆ ನಮ್ಮ ಕವಿಗಳಿಗೆ ಮೊಟ್ಟಮೊದಲು ಕಣ್ಮುಂದೆ ಬರುವುದೇ ಕಮಲದ ಸೌಂದರ್ಯ. ಪಾದವಿರಬಹುದು, ಹಸ್ತವಿರಬಹುದು, ಮುಖವಿರಬಹುದು, ಕಣ್ಣಿರಬಹುದು - ಎಲ್ಲಕ್ಕೂ ಕಮಲದ ಹೋಲಿಕೆಯೇ. ಕಮಲವೆಂಬುದು ವೈದಿಕ-ಸಾಹಿತ್ಯದ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವಂತಹುದೇ. ಭಾರತದ ಪುಷ್ಪವೆಂದರೆ ಕಮಲವೇ ಸರಿ! ಅದರ ವರ್ಣವೇನು, ಹೊಳಪೇನು, ಮಾರ್ದವವೇನು!

ಭಗವಂತನನ್ನು ಒಲಿಸಿಕೊಳ್ಳಲು ನಾನಾಮಾರ್ಗಗಳಿವೆ: ಯಜ್ಞ-ಯಾಗಾದಿಗಳಿಂದಲೂ, ಮಂತ್ರ-ತಂತ್ರಗಳಿಂದಲೂ, ಜ್ಞಾನಯೋಗ-ಧ್ಯಾನಯೋಗಗಳಿಂದಲೂ ಸಾಧನೆಮಾಡುವವರುಂಟಷ್ಟೆ. ಆದರೆ ಭಗವಂತನನ್ನು ಒಲಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ಭಕ್ತಿಯೇ.

ಭಕ್ತರಿಗೊಲಿವ ಪರಿಯಲ್ಲಿ ಯಜ್ಞ-ಯಾಗಾದಿಗಳಿಗೇ ಒಲಿಯನೋ ಏನೋ, ಭಗವಂತ! ಎಂದೇ, ತನಗೆ ತನ್ನ ಕಣ್ಣುಗಳಿಗೇ ಗೋಚರವಾಗುತ್ತಿರುವ ಕೃಷ್ಣನ ರೂಪ-ಆಕಾರಗಳನ್ನು ಕಂಡು ತನ್ನ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾನೆ, ಲೀಲಾಶುಕ. ಅವರಿಗೆ ಗೋಚರವಾಗದೆ ದೂರ ಉಳಿದದ್ದು ತನ್ನೆದುರಿಗೇ ಇದೆ: ದೂರದಲ್ಲಿರುವುದು "ತತ್" (ಅದು); ಬಳಿಯಲ್ಲೇ ಇರುವುದು 'ಏತತ್' (ಇದು).

ಕೃಷ್ಣನ ಚರಣಾರವಿಂದ-ನಯನಾರವಿಂದ-ವದನಾರವಿಂದಗಳೆಲ್ಲವೂ ಆಶ್ಚರ್ಯಕರವಾಗಿರತಕ್ಕವೇ! ಆತನ ಚರಣಗಳಲ್ಲಿ ಧ್ವಜರೇಖೆ-ವಜ್ರರೇಖೆ- ಅಂಕುರರೇಖೆ - ಇವುಗಳೆಲ್ಲ ಉಂಟಲ್ಲವೇ? ಇವೆಲ್ಲ ಭಗವಂತನ ಪದದಲ್ಲಿ ಮಾತ್ರವೇ ಲಭ್ಯ. ಅನುಗ್ರಹಮಾಡಲೆಂದೇ ಅದಾದರೂ ಇಲ್ಲಿ ಎದುರಿಗೇ ತೋರಿರುವುದು!

ಆತನ ನಯನದ ಸೊಬಗೆಂತಹುದು! ಅಲ್ಲಿಯ ಹಾವ-ಭಾವಗಳ ಸೊಗಸೇ ವಿಶಿಷ್ಟವಾದದ್ದು! ಇನ್ನು ಆತನ ಮುಖವೋ? ಎಂತಹ ಸೌಂದರ್ಯ-ಮಾಧುರ್ಯ-ಲಾವಣ್ಯಗಳ ನೆಲೆಯದು!

ಒಂದೊಂದಾಗಿ ಇವುಗಳ ಚೆಲುವನ್ನು ಕಂಡು ಆಶ್ಚರ್ಯಪಟ್ಟಾದ ಬಳಿಕ, ಇಡೀ ರೂಪದ ಸೊಬಗನ್ನು ಮತ್ತೆ ಕಂಡು ಮತ್ತೊಮ್ಮೆ "ಆಶ್ಚರ್ಯ, ಆಹಾ ಆಶ್ಚರ್ಯ!" - ಎಂದು ಉದ್ಗರಿಸುತ್ತಾನೆ, ಕವಿ:

ಚಿತ್ರಂ ತದೇತತ್ ಚರಣಾರವಿಂದಂ!
  ಚಿತ್ರಂ ತದೇತತ್ ನಯನಾರವಿಂದಂ! |
ಚಿತ್ರಂ ತದೇತತ್ ವದನಾರವಿಂದಂ!
  ಚಿತ್ರಂ ತದೇತತ್ ಪುನರಂಬ ಚಿತ್ರಂ !!||


ಎಳೆಯ ಕೃಷ್ಣನ ಮುದ್ದಿನ ಚಿತ್ರಣ ಮತ್ತೊಂದು ಪದ್ಯದಲ್ಲಿ ಹೀಗೆ ಚಿತ್ರಿತವಾಗಿದೆ.

ಜೀವನದಲ್ಲಿ ಸುಳ್ಳು ಹೇಳಬಹುದೇ? - ಎಂದು ಯಾರಾದರೂ ಕೇಳಿದರೆ ಅದಕ್ಕೇನು ಉತ್ತರ ಹೇಳುವುದೆಂದೇ ಥಟ್ಟನೆ ಹೊಳೆಯುವುದಿಲ್ಲ. ನಾವು ಏನೆಂದು ಹೇಳಿದರೆ ಅದಕ್ಕೆ ಪ್ರತಿಯಾಗಿ ಎದುರಿಗಿರುವವರು ಮತ್ತೇನನ್ನು ಕೇಳಿಯಾರೋ? - ಎಂಬ ಸಂಶಯವು ಬೇರೆ ಮೂಡಿ ಕ್ಷಣಕಾಲ ಏನೂ ಹೊಳೆಯದಂತಾಗುತ್ತದೆ. ಆದರೆ ತಾಯಂದಿರನ್ನು ಕೇಳಿ - ಒಂದು ಮಗುವನ್ನು ಬೆಳೆಸಲು ಅದೆಷ್ಟು ಸುಳ್ಳುಗಳನ್ನು ಹೇಳಬೇಕಾಗುತ್ತದೆ - ಎಂದು! ಚೇಷ್ಟೆಮಕ್ಕಳನ್ನು ಬೆಳೆಸುವುದೆಂದರಂತೂ ಕಡಿಮೆ ಜಾಣ್ಮೆಯಲ್ಲ ಬೇಕಾಗುವುದು! ಅದರಲ್ಲೂ ಚೇಷ್ಟೆ-ಹಠಗಳನ್ನು ಮಾಡುವುದರಲ್ಲಿ ಪೈಪೋಟಿಮಾಡುವ ಅಣ್ಣತಮ್ಮಂದಿರಂತಾದರೋ, ಕೊನೆಗೆ ಇಬ್ಬರಲ್ಲೊಬ್ಬರು ತಂಟೆ ಮಾಡುವವರಂತಾಗಿಬಿಟ್ಟರು ಸಹ, ತನ್ನ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗುತ್ತದೆ, ತಾಯಿಯಾದವಳು! ಹೇಳುತ್ತಿರುವುದು ಮತ್ತಾರ ವಿಷಯವೂ ಅಲ್ಲ, ಕೃಷ್ಣ-ಬಲರಾಮರ ವಿಷಯ. 

ಎಷ್ಟೋ ಸಂದರ್ಭಗಳಲ್ಲಿ ನೇರಾಗಿ ಹೇಳಿದ ಒಳ್ಳೆಯ ಮಾತಿಗೆ ಸೊಪ್ಪನ್ನೇ ಹಾಕವು, ಚೇಷ್ಟೆಯ ಮಕ್ಕಳು. ಅವುಗಳಿಗೆ ಏನೋ ಆಸೆ ತೋರಿಸಬೇಕಾಗುವುದು, ಸಣ್ಣ ಪುಟ್ಟ ಕೆಲಸಮಾಡಿಸಲೂ. ಕೆಲವೊಮ್ಮೆ ಇರದ ಅಥವಾ ಇಲ್ಲದ ಪೈಪೋಟಿಯ ಭಾವವನ್ನು ಕೆರಳಿಸಿಯಾದರೂ ಕೆಲಸಮಾಡಿಸಬೇಕಾಗಿ ಬರುವುದು! ಏನೂ ಭಾರೀ ಕೆಲಸವೇನಲ್ಲ; ಕೃಷ್ಣನು ಹಾಲು ಕುಡಿದರೆ ಸಾಕೆನಿಸಿದೆ, ಯಶೋದೆಗೆ. ಅದಕ್ಕೇನು ಮಾಡುವುದು? ಏನೋ ಒಂದು ಉಪಾಯ ಮಾಡಬೇಕು. "ನೋಡು, ನಿನ್ನಣ್ಣನಿಗಿಂತ ನೀನೇ ವಾಸಿ" ಎಂದಾಗುವಂತೆ ಏನಾದರೂ ಮಾಡಬೇಕೆಂಬುದು ಆಕೆಯ ಸಂಕಲ್ಪ. ಅದಕ್ಕೇ ಒಂದು ಸುಳ್ಳನ್ನು ಥಟ್ಟನೆ ಪೋಣಿಸಿದಳು. 

ಬಲರಾಮನು ಆಟಕ್ಕೆ ಹೋಗಿದ್ದಾನೆ. ಎಲ್ಲಿಗೆ? ಮತ್ತೆಲ್ಲಿಗೆ? ಯಮುನಾನದಿಯ ಪುಳಿನಪ್ರದೇಶಕ್ಕೆ. ಪುಲಿನವೆಂದರೆ ಮರಳುಪ್ರದೇಶ. ಮಕ್ಕಳಿಗೆ ಮಣ್ಣಾಟ-ಮರಳಾಟಕ್ಕಿಂತಲೂ ಮಿಗಿಲಾದ ಕ್ರೀಡೆಯುಂಟೇ? ನದೀದಡದ ಮರಳಿನ ಮಧ್ಯದಲ್ಲಿ ಆಡುತ್ತಿದ್ದರೆ, ಕಾಲಕಳೆಯುವುದಾದರೂ ಮಕ್ಕಳ ಅರಿವಿಗೆ ಬಂದುಬಿಡುತ್ತದೆಯೇ? ಅದಕ್ಕೇ ಯಶೋದೆಯೊಂದು ಉಪಾಯವನ್ನು ಹೂಡಿದಳು. 

ನಿನ್ನಣ್ಣ ಮುಸಲಿಯಿದ್ದಾನಲ್ಲಾ, ಆತನು ಯಮುನಾಪುಳಿನಕ್ಕೆ ಆಟವಾಡಲು ಹೋಗಿದ್ದಾನೆ. (ಮುಸಲಿಯೆಂದರೆ ಬಲರಾಮ. ಆತನ ಆಯುಧವಾಗಿ ಹಲ-ಮುಸಲಗಳಿರುವುದುಂಟಷ್ಟೆ?) ಅಷ್ಟರಲ್ಲಿ, ಎಂದರೆ ಆತನು ಬರುವಷ್ಟರಲ್ಲಿ ನೀನೊಂದು ಕೆಲಸವನ್ನು ಮಾಡಿಬಿಡು - ಎನ್ನುತ್ತಿದ್ದಾಳೆ. ಏನು ಕೆಲಸ? ಮತ್ತೇನು? ಹಾಲುಕುಡಿಯುವುದು. ಅದು ಎಂತಹ ಹಾಲು? "ಕರ್ಬುರಿಕಾ-ಪಯಃ" ಎಂದರೆ ಬಣ್ಣವಾಗಿರುವ ಹಾಲು. ಒಳ್ಳೆಯ ಗೋಕ್ಷೀರವು - ಎಂದರೆ ಹಸುವಿನ ಹಾಲು - ಸ್ವಲ್ಪ ಹಳದೀ ಬಣ್ಣದ ಮೇಲಿರುತ್ತದೆಯಲ್ಲವೆ? ಅದರ ಕೆನೆಯಂತೂ ಚಿನ್ನದ ಬಣ್ಣ. ಅದಕ್ಕೊಂದಿಷ್ಟು ಬೆಲ್ಲ ಕೇಸರಿಗಳನ್ನೂ ಹಾಕಿದ್ದಾಳೋ ಏನೋ? ಅಂತೂ ಬಣ್ಣದ ಹಾಲೇ ಅದು. ಅದನ್ನು ಕುಡಿದುಬಿಡು - ಎನ್ನುತ್ತಿದ್ದಾಳೆ. 

ಸಣ್ಣ ವಯಸ್ಸಿಗೇ ಮಕ್ಕಳಿಗೆ ವ್ಯಾಪಾರಿ-ಭಾವ ಬಂದುಬಿಡುತ್ತದೆ (ಅಥವಾ ಕಲಿಸಿಬಿಡುತ್ತಾರೆ) ಅಲ್ಲವೆ? ಯಾತಕ್ಕೆ ಕುಡಿಯಬೇಕು? - ಎಂದೋ, ನನಗೇನು ಲಾಭ? - ಎಂದೋ ಆತನು ಕೇಳುವ ಮುಂಚೆಯೇ ಆತನಿಗೆ ಪ್ರಲೋಭನೆಯೊಂದನ್ನು ಒಡ್ಡಿಬಿಡಬೇಕು - ಎಂಬುದು ಅವಳ ಆಶಯ (ಪ್ರಲೋಭನೆಯೆಂದರೆ ಆಸೆ ತೋರಿಸುವುದು). ಏನದು? "ನೋಡು, ನಿನ್ನ ಜುಟ್ಟು ಚೆನ್ನಾಗಿ ಬೆಳೆಯುತ್ತದೆ" ಎಂದಳು. ಬಲರಾಮನು ಕೃಷ್ಣನಿಗಿಂತ ಸ್ವಲ್ಪ ದೊಡ್ಡವನಲ್ಲವೇ? ಎಂದೇ ಆತನ ಕೇಶರಾಶಿ ಒಂದಿಷ್ಟು ಹೆಚ್ಚೇ ಇದ್ದೀತು, ಕೃಷ್ಣನಿಗೆ ಹೋಲಿಸಿದರೆ. ಅದಕ್ಕೇ ಈ ಪ್ರಲೋಭನೆ. 

ಆಯಿತೆಂದು ಹಾಲು ಕುಡಿಯಲಾರಂಭಿಸಿದ ನಮ್ಮ ಪುಟ್ಟ ಕೃಷ್ಣ, ಸಂತೋಷದಿಂದಲೇ! ಅಣ್ಣನು ಹಿಂದಿರುಗುವ ಮುಂಚೆ ಅವನನ್ನು ಮೀರಿಸಿದಂತಾಗಬೇಕಲ್ಲವೇ? ಆದರೆ ಅರ್ಧಬಟ್ಟಲಷ್ಟೂ ಇನ್ನೂ ಕುಡಿದಿಲ್ಲ, ಆಗಲೇ ತನ್ನ ಶಿಖೆಯನ್ನು - ಎಂದರೆ ಜುಟ್ಟನ್ನು - ಮುಟ್ಟಿನೋಡಿಕೊಳ್ಳುತ್ತಿದ್ದಾನಂತೆ, ಈ ಬಾಲಕೃಷ್ಣ. ಹೀಗೆ ಯಶೋದೆಯ ಮೋಸದ ಮಾತಿಗೆ ಪ್ರತಿಯಾಗಿ ಅರ್ಧಕುಡಿಯುತ್ತಿದಂತೆಯೇ ಶಿಖಾಸ್ಪರ್ಶಮಾಡಿನೋಡಿಕೊಳ್ಳುತ್ತಾ, ಕೇಶವೃದ್ಧಿಯಾಗುತ್ತಿದೆ ತಾನೆ? - ಎಂದು ಖಾತ್ರಿಪಡಿಸಿಕೊಳ್ಳುತ್ತಿದ್ದಾನಂತೆ, ಶ್ರೀಕೃಷ್ಣ!

ಇಂತಿರುವ ಪುಟ್ಟಕೃಷ್ಣನು ನಮ್ಮನ್ನು ಕಾಪಾಡಲಿ - ಎಂದು ಕೃಷ್ಣನ ಒಂದೊಂದು ಲೀಲೆಯನ್ನೂ ಚಪ್ಪರಿಸಿಕೊಳ್ಳುತ್ತಾ ಕವಿ ಲೀಲಾಶುಕನು ನಮ್ಮ ಕಣ್ಣ ಮುಂದೆ ದೇವನ ಲೀಲಾ-ವಿನೋದಗಳನ್ನು ಚಿತ್ರಿಸುತ್ತಾನೆ. ಪೂರ್ಣಶ್ಲೋಕವಿಂತಿದೆ:

ಕಾಲಿಂದೀ-ಪುಲಿನೋದರೇಷು ಮುಸಲೀ ಯಾವದ್ಗತಃ ಖೇಲಿತುಂ

ತಾವತ್ ಕರ್ಬುರಿಕಾ-ಪಯಃ ಪಿಬ ಹರೇ, ವರ್ಧಿಷ್ಯತೇ ತೇ ಶಿಖಾ |

ಇತ್ಥಂ ಬಾಲತಯಾ ಪ್ರತಾರಣ-ಪರಾಃ ಶ್ರುತ್ವಾ ಯಶೋದಾ-ಗಿರಃ

ಪಾಯಾನ್ನಃ ಸ್ವ-ಶಿಖಾಂ ಸ್ಪೃಶನ್ ಪ್ರಮುದಿತಃ ಕ್ಷೀರೇಽರ್ಧಪೀತೇ ಹರಿಃ! ||

.ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 4/5/2024 ರಂದು ಪ್ರಕಟವಾಗಿದೆ.