Monday, July 31, 2023

ಸತ್ಸಹವಾಸದ ಪರಮಫಲ (Satsahavasada Paramaphala)

 ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)


ಭಕ್ತರಲ್ಲಿ ಅಗ್ರಗಣ್ಯನಾದಂತಹ ಪ್ರಹ್ಲಾದ  ಬಾಲ್ಯದಿಂದಲೇ ಸದಾ ವಿಷ್ಣುವನ್ನು ಹೃದಯದಲ್ಲಿ ಧರಿಸಿ ಹರಿನಾಮ ಸ್ಮರಣೆಯಲ್ಲಿಯೇ ಪ್ರತಿ ಕ್ಷಣವನ್ನೂ ಕಳೆಯುತ್ತಿದ್ದಂತಹವನು. ಅವನ ತಂದೆ ಹಿರಣ್ಯಕಶಿಪು ಹರಿದ್ವೇಷಿ. ಅವನು ತನ್ನನ್ನೇ ಸರ್ವೋತ್ತಮ ಎಂದು ಭಾವಿಸಿ, ಇಂದ್ರ, ವರುಣ ಮುಂತಾದ ದೇವತೆಗಳನ್ನು ತಪಸ್ಸಿನ ಬಲದಿಂದ ತನ್ನ ಅಧೀನದಲ್ಲಿರಿಸಿಕೊಂಡು, ರಾಜ್ಯದಲ್ಲಿ ಎಲ್ಲೆಡೆಯಲ್ಲಿಯೂ ತನ್ನ ನಾಮ ಸ್ಮರಣೆಯೇ ಮೊಳಗಬೇಕು, ತನಗೆ ಮಾತ್ರ ಪೂಜೆ ಸಲ್ಲಬೇಕು ಎಂಬ ಕಟ್ಟಪ್ಪಣೆಯನ್ನು ಜಾರಿಗೆ ತರುತ್ತಾನೆ. ಪರಿಣಾಮ, ಎಲ್ಲಾ ದೇಗುಲಗಳಲ್ಲಿ, ಗುರುಕುಲಗಳಲ್ಲಿ ಅವನದೇ ಪೂಜೆ ಅವನದೇ ನಾಮ ಜಪ ನಡೆಯುತ್ತಿರುತ್ತದೆ. ಪುತ್ರನಾದ ಪ್ರಹ್ಲಾದ ಹುಟ್ಟುವಾಗಲೇ ಹರಿಭಕ್ತ.  ಅದರಿಂದ ಚಿಂತಾಕ್ರಾಂತನಾದ ಹಿರಣ್ಯಕಶಿಪು, ಮಗನನ್ನು ಶುಕ್ರಚಾರ್ಯರ ಗುರುಕುಲಕ್ಕೆ ಸೇರಿಸಿ ಇವನು ಸದಾ ನನ್ನ ಗುಣಗಾನವನ್ನೇ ಕೇಳುವಂತೆ  ಹಾಗೂ ಹೇಳುವಂತೆ ಇವನನ್ನು ತಯಾರುಮಾಡಬೇಕು ಎಂದು ಆದೇಶಿಸುತ್ತಾನೆ. ಆ ಕೆಲಸ ಶಂಡ ಹಾಗೂ ಅಮರ್ಕ ಎಂಬ ಅಧ್ಯಾಪಕರ ಪಾಲಿಗೆ ಬರುತ್ತದೆ. ಅವರು ಹಿರಣ್ಯಕಶಿಪುವಿನ ಭಯದಿಂದ ತಮ್ಮ ಶಕ್ತಿ ಮೀರಿ ಪ್ರಯತ್ನವನ್ನು ಮಾಡಿದರೂ ಪ್ರಹ್ಲಾದನ ಬಾಯಿಯಿಂದ ಹರಿನಾಮ ಸ್ಮರಣೆ ಹಾಗೂ ಹರಿಯ ಗುಣಗಾನವನ್ನು ಬಿಟ್ಟು ಬೇರೆಯ ವಿಷಯವನ್ನು ಹೊರತರಲು ಸಾಧ್ಯವೇ ಆಗುವುದಿಲ್ಲ.

ಅಷ್ಟೇ ಅಲ್ಲದೇ ಆ ಗುರುಕುಲದಲ್ಲಿ ಬೆಳೆಯುತ್ತಿರುವ, ಅತ್ಯಂತ ದುಷ್ಟತನವನ್ನು ತುಂಬಿ ಕೊಂಡಿರುವ, ಸದಾ ಪರಸ್ಪರ ಹಿಂಸೆ, ಕಲಹಗಳಲ್ಲೇ ನಿರತರಾದ ಇತರ ರಾಕ್ಷಸ ಪುತ್ರರೂ ಪ್ರಹ್ಲಾದನ ಸಹವಾಸದಿಂದ ದಿನೇ ದಿನೇ ಬದಲಾಗುತ್ತಿರುತ್ತಾರೆ. ಪ್ರಹ್ಲಾದನ ಸಹವಾಸದಿಂದ ಹಾಗೂ ಅವನ ಮುಖಾರವಿಂದದಿಂದ ಹೊರಹೊಮ್ಮುತ್ತಿದ್ದ ಶ್ರೀಹರಿಯ ಕೀರ್ತನೆಯ ಶ್ರವಣದ ಪರಿಣಾಮ, ಅವರಲ್ಲಿದ್ದ ದುರ್ಗುಣಗಳೆಲ್ಲವೂ ಮರೆಯಾಗಿ ಅವರೂ ಕೂಡ ಪ್ರಹ್ಲಾದನಂತೆಯೇ ಶ್ರೀಹರಿಯನ್ನೇ ಧ್ಯಾನಿಸಲು ಪ್ರಾರಂಭಿಸುತ್ತಾರೆ. ಭಗವಂತನ ಸಂಕೀರ್ತನೆಯಲ್ಲಿಯೇ ಕಾಲವನ್ನು ಕಳೆಯುತ್ತಿರುತ್ತಾರೆ. ಹೀಗೆ, ಪ್ರಹ್ಲಾದನ ಸಹವಾಸದ ಪರಿಣಾಮ, ಅವರ ಜೀವನವೂ ಭಗವನ್ಮಯವೇ ಆಗುತ್ತದೆ.


 ಪ್ರತಿಯೊಬ್ಬರ ಜೀವನದಲ್ಲಿಯೂ ಸಹವಾಸ ಅನ್ನುವುದು ಅವರ ಜೀವನದ ಉನ್ನತಿಗೂ ಅಥವಾ ಅಧೋಗತಿಗೂ ಪ್ರಮುಖ ಕಾರಣವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಸತ್ಸಹವಾಸವು ಸನ್ಮಾರ್ಗದಲ್ಲಿ ಪ್ರವೃತ್ತಿ ಹೊಂದಲು ಅನುಕೂಲ ಮಾಡಿದರೆ ದುಷ್ಟ ಸಹವಾಸವು ದುರ್ಮಾರ್ಗದಲ್ಲಿ ಪ್ರವೃತ್ತಿ ಹೊಂದಲು ಪ್ರೆರೇಪಿಸುತ್ತದೆ ಎಂಬುದಕ್ಕೆ ನಮ್ಮ ಸುತ್ತ ಮುತ್ತ ಅನೇಕ ಉದಾಹರಣೆಗಳು ಸಿಗುತ್ತವೆ.


ಮಹಾಭಾರತದ ವಿದುರ ನೀತಿಯಲ್ಲಿ ಒಂದು ನುಡಿ ಇದೆ; ದಾರಕ್ಕೆ ಯಾವ ಬಣ್ಣ ಹಾಕಲಾಗುವುದೋ, ಬಟ್ಟೆಯೂ ಅದೇ ಬಣ್ಣದ್ದಾಗಿರುತ್ತದೆ. ಅದರಂತೆಯೇ ಸತ್ಪುರುಷ ದುರ್ಜನ, ತಪಸ್ವಿ, ಕಳ್ಳ ಇವರನ್ನು ಯಾರು ಸೇವಿಸುತ್ತಾರೋ ಅವರು ಸೇವಿಸಲ್ಪಟ್ಟವರಂತೆಯೇ ಆಗುತ್ತಾರೆ, ಅಂದರೆ ಅವರ ಪ್ರಭಾವಕ್ಕೆ ಒಳಗಾಗುತ್ತಾರೆ. ನಾವು ಯಾರ ಸೇವೆಯನ್ನು ಮಾಡುತ್ತೇವೆಯೋ, ಯಾರ ಸಹವಾಸದಲ್ಲಿರುತ್ತೇವೆಯೋ ಅವರ ಗುಣಗಳೆಲ್ಲವೂ  ನೋಡ ನೋಡುತ್ತಿದ್ದಂತೆಯೇ  ನಮ್ಮಲ್ಲೂ ನೆಲೆಗೊಳ್ಳುತ್ತವೆ.


"ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ" ಎಂಬ ಪ್ರಸಿದ್ಧ ನಾಣ್ಣುಡಿ ಇದೆ. ಸಜ್ಜನರು ಎಂದರೆ ತುಂಬಾ ಒಳ್ಳೆಯವರು, ಯಾರ ತಂಟೆಗೂ ಹೋಗದೇ ತಮ್ಮಷ್ಟಕ್ಕೇ ತಾವು ಇರುವವರು ಎಂಬ ಅರ್ಥದಲ್ಲಿ ಈ ಪದವನ್ನು ಬಳಸುತ್ತಾರೆ. ವಾಸ್ತವವಾಗಿ ಸತ್ ರೂಪಿಯಾದ ಪರಮಾತ್ಮವಸ್ತುವನ್ನು ಸದಾ ಹೃದಯದಲ್ಲಿ ಧರಿಸಿ ಧನ್ಯತೆ ಹೊಂದಿರುವವರೇ ಸಜ್ಜನರು. ಅಂತಹವರಿಗೆ ಭಗವಂತನ ಕಲ್ಯಾಣ ಗುಣಗಳೆಲ್ಲವೂ ದಯಪಾಲಿಸಲ್ಪಡುತ್ತದೆ, ಅದೇ ದೈವೀ ಸಂಪತ್ತು. ಪ್ರಹ್ಲಾದ ನಿಜವಾದ ಅರ್ಥದಲ್ಲಿ ಸಜ್ಜನ, ಸದ್ವಸ್ತುವನ್ನು  ತನ್ನ ಹೃದಯದಲ್ಲಿ ಧರಿಸಿ ಸದಾ ಅದರ ಜೊತೆಯಲ್ಲಿಯೇ ರಮಿಸುತ್ತಾ ವಾಸವನ್ನು ಮಾಡುತ್ತಿದ್ದoತಹವನು, ಅವನ ಸಹವಾಸದ ಪರಿಣಾಮ ಜೊತೆಗಾರರಿಗೂ ಉದ್ಧಾರದ ಮಾರ್ಗ ತೆರೆಯಿತು." ಸತ್ಪ್ರವೃತ್ತಿ - ದುಷ್ಟವೃತ್ತಿಗಳೆರಡೂ ಲೋಕದಲ್ಲಿ ನಡೆಯುತ್ತಾ ಬೆಳೆಯುತ್ತಲೇ ಇರುವುದರಿಂದ ಸದ್ರೂಪವಾದ ಆತ್ಮವಸ್ತುವಿಗೆ ಜಾಗಕೊಟ್ಟರೆ ಅದೂ ತನ್ನ ಸ್ವಭಾವದಂತೆ ಬೆಳೆಯುತ್ತಲೇ ಹೋಗುತ್ತದೆ. ಜಾಗವು ಸಿಗದ ಕಾರಣ ಅದು ಹಿಂದೇಟು ಹಾಕುತ್ತದೆ. ಅದಕ್ಕೂ ಜಾಗಕೊಟ್ಟು ಬೆಳೆಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ."ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಹಾಗಾಗಿ ಸತ್ ಪ್ರವೃತ್ತಿಯನ್ನು ನಮ್ಮಲ್ಲಿ ಉಂಟುಮಾಡಿ ಐಹಿಕ ಹಾಗೂ ಪಾರಮಾರ್ಥಿಕ ಜೀವನದ ಉನ್ನತಿಗೆ ಕಾರಣವಾಗುವಂತಹ ಸತ್ಸಹವಾಸವನ್ನೇ ಬಯಸೋಣ; ಸಜ್ಜನರನರಿಂದ 'ಸತ್ಸಹವಾಸದ ಪರಮಫಲ' ಪಡೆಯೋಣ.


ಸೂಚನೆ: 20/07/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.


Monday, July 24, 2023

ವ್ಯಾಸ ವೀಕ್ಷಿತ - 47 ಅರ್ಜುನನಿಗೆ ಸಂದ ಜಯಮಾಲೆ (Vyaasa Vikshita - 47 Arjunanige Sanda Jayamale)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 

ಬ್ರಾಹ್ಮಣರ ವಾದ ಮುಂದುವರೆಯಿತು: ದುರ್ಬಲರೆನಿಸಿದರೂ ತಮ್ಮ ತೇಜಸ್ಸಿನಿಂದಾಗಿ ವಿಪ್ರರು ಬಲಶಾಲಿಗಳಾಗರೇ? ಹೀಗಿರುವಾಗ ಅವರನ್ನು ಸುಮ್ಮನೆ ಅವಮಾನಿಸುವುದಲ್ಲ. ಪರಶುರಾಮನು ಕ್ಷತ್ರಿಯರನ್ನು ಸೋಲಿಸಿದ ನಿದರ್ಶನವಿಲ್ಲವೇ? ಆದ್ದರಿಂದ, "ಈ ಮಹಾವಟುವು ಬೇಗನೆ ಧನುರಾರೋಪಣ ಮಾಡಲಿ" (ಎಂದರೆ, ಹೆದೆಯೇರಿಸಲಿ) - ಎಂಬುದಾಗಿ ಎಲ್ಲರೂ (ಆಶೀರ್ವಾದೋಕ್ತಿಯನ್ನು) ಹೇಳಿರಿ – ಎಂದರು, ಕೆಲವರು. ಎಲ್ಲರೂ "ತಥಾಸ್ತು" ಎಂದರು.

ಇವರೆಲ್ಲರೂ ಹೀಗೆ ಮಾತನಾಡಿಕೊಳ್ಳುತ್ತಿರಲು, ಅರ್ಜುನನು ಬಿಲ್ಲಿನತ್ತ ಸಾರಿದನು. ದಿಟ್ಟನಾಗಿ ಬೆಟ್ಟದಂತೆ ನಿಂತನು. ಧನುಸ್ಸಿಗೆ ಪ್ರದಕ್ಷಿಣೆ ಮಾಡಿದನು. ವರಪ್ರದನಾದ ಈಶ್ವರನಿಗೆ ಶಿರಸಾ (ಎಂದರೆ ತಲೆಯಿಂದ, ತಲೆಬಾಗಿ) ವಂದಿಸಿದನು. ಕೃಷ್ಣನನ್ನು ಮನಸಾ ನಮಸ್ಕರಿಸಿದನು. ಬಿಲ್ಲನ್ನು ಹಿಡಿದನು.

ಕರ್ಣ, ದುರ್ಯೋಧನ, ಶಲ್ಯ, ಶಾಲ್ವ ಮುಂತಾದ ಧನುರ್ವೇದ-ಪಾರಂಗತರೇ ಕಷ್ಟಪಟ್ಟೂ ಅದನ್ನು ಹೆದೆಯೇರಿಸಲಾಗಿರಲಿಲ್ಲ. ಆದರೆ ಅರ್ಜುನನು ವೀರ್ಯಸಂಪನ್ನರಲ್ಲಿ ಅಗ್ರಗಣ್ಯನೆನಿಸುವ ಇಂದ್ರಪುತ್ರ:  ಕ್ಷಣಮಾತ್ರದಲ್ಲದನ್ನು ಹೆದೆಕಟ್ಟಿದನು, ಪಂಚಬಾಣಗಳನ್ನು ಹೂಡಿದನು. ಇಂದ್ರನಿಗೆ ತಮ್ಮನಾಗಿ ಜನಿಸಿ ಉಪೇಂದ್ರ ಎನಿಸಿಕೊಂಡಿದ್ದನಲ್ಲವೇ ವಿಷ್ಣು? ಆ ವಿಷ್ಣುವಿನ ಶಕ್ತಿಯೆಂತೋ ಅಂತಹುದೇ ಶಕ್ತಿ ಅರ್ಜುನನದೂ, ಆಹಾ!

ಅಂತೂ ಅರ್ಜುನನು ಲಕ್ಷ್ಯವನ್ನು ಭೇದಿಸಿಯೇ ಬಿಟ್ಟನು; ಆ ಲಕ್ಷ್ಯವಾದರೂ ಅತಿವಿದ್ಧವಾಗಿ (ಎಂದರೆ ಛೇದ-ಭೇದಗಳಿಗೊಳಪಟ್ಟು) ನೆಲದ ಮೇಲೆ ಬಿದ್ದಿತು. ಅಂತರಿಕ್ಷದಲ್ಲಿ ಆಗ ನಾದವುಂಟಾಯಿತು; ಅಲ್ಲಿ ನೆರೆದಿದ್ದ ಸಮಾಜದಲ್ಲಿ ದೊಡ್ಡ ಸದ್ದೇ ಆಯಿತು ಕೂಡ!

ದೇವತೆಗಳು ಹೂಮಳೆಯನ್ನು ಕರೆದರು. ಸಾವಿರಾರು ಬ್ರಾಹ್ಮಣರು ತಮ್ಮ ಉತ್ತರೀಯಗಳನ್ನು (ಅದು ತಮ್ಮ ವಿಜಯಧ್ವಜವೆಂಬಂತೆ) ಶತ್ರುಹಂತಕನಾದ ಅರ್ಜುನನ ತಲೆಯ ಮೇಲೆ ಹಾರಾಡಿಸಿದರು!

ಇತ್ತ ಸೋತು ಲಜ್ಜೆಗೊಂಡಿದ್ದ ರಾಜಕುಮಾರರು ಹಾಹಾಕಾರ ಮಾಡಿದರು. ಅತ್ತ ಪುಷ್ಪವೃಷ್ಟಿಯಾಗುತ್ತಿದ್ದರೆ ಇತ್ತ ವಾದಕರು ನಾನಾವಾದ್ಯಗಳನ್ನು ಮೊಳಗಿಸಿದರು. ಸೂತ-ಮಾಗಧಗಣಗಳು (ಎಂದರೆ ಹೊಗಳುಭಟರು) ಸುಸ್ವರದಲ್ಲಿ ಅರ್ಜುನನ್ನು ಸ್ತುತಿಸಿದರು.

ಆತನನ್ನು ಕಂಡ ದ್ರುಪದನು ಸುಪ್ರೀತನಾದನು. ಅಲ್ಲಿಯ ಕೋಲಾಹಲವು ತೀವ್ರವಾಗುತ್ತಿರಲು, ಅರ್ಜುನನಿಗೆ ಸೈನ್ಯದ ಜೊತೆಗಾರಿಕೆ ಬೇಕಾದೀತೆಂದು ಭಾವಿಸಿದನು.

ಸಭೆಯಲ್ಲಿ ಶಬ್ದವು ತೀವ್ರವಾಯಿತು. ಧರ್ಮಿಷ್ಠರಲ್ಲಿ ಶ್ರೇಷ್ಠನೆನಿಸಿದ ಯುಧಿಷ್ಠಿರನು ನಕುಲ-ಸಹದೇವರೊಂದಿಗೆ ತನ್ನ ಡೇರೆಗೇ ಹಿಂದಿರುಗಿಬಿಟ್ಟನು.

ಲಕ್ಷ್ಯಭೇದನವಾಯಿತಷ್ಟೆ. ಅದನ್ನೂ, ಇಂದ್ರನಂತಿದ್ದ ಅರ್ಜುನನನ್ನೂ, ಕೃಷ್ಣೆಯೊಮ್ಮೆ ನೋಡಿದಳು. ಬಿಳಿಯ ಹೂಗಳಿಂದಾದ ವರಮಾಲೆಯನ್ನು ಹಿಡಿದು ಮುಗುಳ್ನಗೆಯೊಂದಿಗೆ ಅರ್ಜುನನತ್ತ ಸಾಗಿದಳು.

ಆಗವಳು ಹೇಗೆ ಕಂಡಳು ? : ಎಷ್ಟೋ ಬಾರಿ ಕಂಡಿದ್ದವರಿಗೂ ಹೊಸಬಳಂತೆ; ನಗುತ್ತಲೇನಿಲ್ಲದಿದ್ದರೂ ನಗುತ್ತಿರುವವಳಂತೆ; ಮದಿಸಿಲ್ಲದಿದ್ದರೂ ತನ್ನೊಳಗಣ ಭಾವಗಳಿಂದಾಗಿ ಹೆಜೆತಪ್ಪುತ್ತಿದ್ದವಳಂತೆ; ಮಾತಾಡುತ್ತಿಲ್ಲದಿದ್ದರೂ ತನ್ನ ಕಣ್ಗಳಿಂದಲೇ ಮಾತನಾಡುತ್ತಿದ್ದವಳಂತೆ! ಹೀಗಿದ್ದವಳು ಅರ್ಜುನನಲ್ಲಿಗೆ ಬಂದಳು. ರಾಜರೆಲ್ಲರೂ ನೋಡುತ್ತಿದಂತೆಯೇ ಅರ್ಜುನನ ಕೊರಳಿಗೆ ಮಾಲೆಯನ್ನು ಹಾಕಿದಳು.

ಅದು ಹೇಗಿತ್ತು?: ಶಚಿಯು ಇಂದ್ರನಿಗೆ ಮಾಲೆಯನ್ನು ಹಾಕಿದಂತೆ; ಸ್ವಾಹಾದೇವಿಯು ಅಗ್ನಿದೇವನಿಗೆ; ಲಕ್ಷ್ಮಿಯು ಮುಕುಂದನಿಗೆ; ಉಷೆಯು ಸೂರ್ಯನಿಗೆ; ರತಿಯು ಮದನನಿಗೆ; ಪಾರ್ವತಿಯು ಮಹೇಶ್ವರನಿಗೆ; ಹಾಗೂ ಭೈಮಿಯು (ಎಂದರೆ ದಮಯಂತಿಯು) ನಳನಿಗೆ ಜಯಮಾಲೆಯನ್ನು ಹಾಕಿದಂತೆ!

ಹೀಗೆ ಗೆದ್ದ ಅರ್ಜುನನನ್ನು ಅಲ್ಲಿಯೇ ವಿಪ್ರರೆಲ್ಲ ಆದರಿಸಿದರು. ಅದ್ಭುತಕರ್ಮನಾದ ಅರ್ಜುನನು ಆ ರಂಗದಿಂದ ಹೊರಹೊರಟನು. ಪತ್ನಿಯಾದ ಕೃಷ್ಣೆಯೂ ಆತನನ್ನು ಹಿಂಬಾಲಿಸಿದಳು.


ಸೂಚನೆ : 23
/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ46 Yaksha prashne 46

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 46  ಸ್ವರ್ಗಕ್ಕೆ ಕಾರಣವಾದುದು ಯಾವುದು ?

ಉತ್ತರ - ಸತ್ಯ. 

ಸತ್ಯವನ್ನೇ ಹೇಳಬೇಕು. ಸತ್ಯಕ್ಕಾಗಿಯೇ ಜೀವಿಸಬೇಕು. ಸತ್ಯವೇ ನಮ್ಮ ತಾಯಿ-ತಂದೆ. ಹೀಗೆಲ್ಲಾ ಸತ್ಯದ ಬಗ್ಗೆ ಅನೇಕ ಮಾತುಗಳಿವೆ. ಈ ಮಾತುಗಳು ಜೀವನಕ್ಕೆ ಸತ್ಯ ಎಷ್ಟು ಅಗತ್ಯ ಎಂಬುದನ್ನು ತಿಳಿಸುತ್ತದೆ. ಆದರೆ ಸತ್ಯದ ಬಗ್ಗೆ ನಮ್ಮ ಅರಿವು ಬಹಳ ಮೊಟಕಾಗಿದೆ. ಸತ್ಯ ಎಂಬುದು ಕೇವಲ ಮಾತಿನ ರೂಪ ಎಂಬುದನ್ನು ಮಾತ್ರ ತಿಳಿದಿದ್ದೇವೆ. ಆದರೆ ಈ ಮಾತು ಯಾವ ಮೂಲದ್ದು? ಮಾತಿಗೂ ಒಂದು ಮೂಲ ಬೇಕಲ್ಲವೇ? ಅದೂ ಸತ್ಯವೇ ಆಗಿರಬೇಕಲ್ಲವೇ? ಆ ಸತ್ಯದ ಬಗ್ಗೆ ನಮಗೆ ಸರಿಯಾದ ಅರಿವನ್ನು ನೀಡಿ ನಿಜವಾದ ಸತ್ಯದ ಮಹಿಮೆಯನ್ನು ಅರುಹಿದವರು ಶ್ರೀರಂಗ ಮಹಾಗುರುಗಳು. ಅವರು ಆಡಿದ ಮಾತನ್ನೇ ಯಥಾವತ್ತಾಗಿ ಇಲ್ಲಿ ಹೇಳುತ್ತೇನೆ. 

"ಒ೦ದು ಉದಾಹರಣೆಯನ್ನು ಕೊಡಬಯಸುತ್ತೇನೆ. ಒಂದು ಬೀಜವನ್ನು ತೆಗೆದುಕೊಂಡರೆ ಆ ಬೀಜದಲ್ಲಿ ತನ್ನ ಬೆಳೆಯುವ ಅಭಿಪ್ರಾಯವನ್ನು ಕ್ರೋಡೀಕರಿಸಿಕೊಂಡು ತಿರುಳುರೂಪವಾಗಿರುವ ಭಾಗವೇ 'ಋತ' ಎಂದು ತಿಳಿಯಬೇಕು. 'ಸತ್ಯ' ಎನ್ನುವ ಪದ ಸಂಸ್ಕೃತ ಪದ. ಕನ್ನಡದ್ದಲ್ಲ. ಆ ಪದವನ್ನು ಸ ತಿ-ಯಂ' - ಎಂದು ವ್ಯವಹರಿಸುತ್ತಾರೆ. ಆ ಬೀಜದಲ್ಲಿರುವ ಆಶಯವು ಎಂದರೆ ಋತವು ಸ್ಥೂಲರೂಪವಾಗಿ ನಮ್ಮ ಕಣ್ಮುಂದೆ ನಿಲ್ಲುವ ರೀತಿಯಲ್ಲಿ ವೃಕ್ಷರೂಪವಾಗಿ ಬೆಳೆದರೆ ಅದು 'ಸತ್ಯ'. ಋತಕ್ಕೆ ವಿರೋಧವಿಲ್ಲದ ರೀತಿಯಲ್ಲಿ, ಮರೆಯಾಗಿರುವ ಋತದ ಕಡೆಗೆ ಒಯ್ಯಲು ತಿರುಗಿ ಬೀಜರೂಪಕ್ಕೆ ಹೋಗಲು ಅನುಕೂಲವಾದ ವೃಕ್ಷದ ಸ್ಥಾನದಲ್ಲಿರುವುದು 'ಸತ್ಯ', 'ಸ' ಎಂದರೆ ಅಮರವಾದದ್ದು. 'ತಿ' ಎಂದರೆ ಮರವಾದದ್ದು, ಎಂದರೆ ನಾಶವುಳ್ಳದ್ದು. ಇವೆರಡಕ್ಕೂ ವಿರೋಧವಿಲ್ಲದ ಸೇತುವೆಯಂತಿರುವುದು 'ಯಂ' ವ್ಯವಹಾರದಲ್ಲಿ ಅದೇ (ಮರ- ಅಮರಗಳ ಸಾಮರಸ್ಯವೇ) ಸತ್ಯ. ಇಂತಹ ವಿಷಯವನ್ನೇ ಮಾತಿನ ರೂಪದಲ್ಲಿ ಹೇಳುವುದನ್ನೇ ಸತ್ಯ ಎಂತಲೂ ಹೇಳುವುದು. ಅಂದರೆ ಸೃಷ್ಟಿಗೆ ವಿರೋಧವಾಗದ ರೀತಿಯಲ್ಲಿ ನಮ್ಮ ನಡೆಗಳಿರಬಹುದು, ಅಥವಾ ನುಡಿಗಳಿರಬಹುದು, ಅಥವಾ ಇನ್ನಾವುದೇ ವ್ಯವಹಾರಗಳಿರಬಹುದು ಅವೆಲ್ಲವನ್ನೂ ಸತ್ಯವೆಂಬ ಪದದಿಂದಲೇ ಕರೆಯುತ್ತೇವೆ. 

ಇಂತಹ ಸತ್ಯವೇ ಸ್ವರ್ಗಕ್ಕೆ ಕಾರಣವಾದುದು. ಸ್ವರ್ಗವೆಂದರೆ ನಾವು ಕಾಣುವ ರೀತಿಯಲ್ಲಿರುವ ಲೋಕವಲ್ಲ. ಅಂತರಂಗದಲ್ಲಿ ಸಾಧಕರಿಗೆ ಗೋಚರವಾಗುವ ಬೆಳಕಿನ ಲೋಕ. ಲೋಕವೆಂಬ ಪದಕ್ಕೂ ಅದೇ ಅರ್ಥ. 'ಲೋಕೃ-ದರ್ಶನೇ' ಎಂಬ ಧಾತುವಿನಿಂದ ಉತ್ಪನ್ನವಾದ ಲೋಕ ಎಂವ ಪದವು ದರ್ಶನಕ್ಕೆ ಅಥವಾ ಅನುಭವಕ್ಕೆ ಬರುವ ವಿಷಯ ಎನ್ನಬಹುದು. ಆನಂದದ ಒಂದು ಉನ್ನತವಾದ ಸ್ತರ. ಈ ಸೃಷ್ಟಿಯು ವಿಸ್ತಾರವಾದದ್ದೇ ಆ ಸತ್ಯವೆಂಬ ಪರಬ್ರಹ್ಮನಿಂದ. ಸ್ವರ್ಗವೂ ಅವನ ವಿಸ್ತಾರದ ಒಂದು ಸ್ತರವೇ ಆಗಿದೆ. ಬೀಜದಿಂದ ವಿಕಾಸವಾದ ವೃಕ್ಷವು ಹೇಗೆ ನಾನಾ ಸ್ತರಗಳನ್ನು ಹೊಂದಿ ಆ ರೂಪಕ್ಕೆ ಬಂದಿರುತ್ತದೆಯೋ, ಆ ವೃಕ್ಷದ ಪ್ರತಿಯೊಂದು ಭಾಗವೂ ಅದೇ ಬೀಜದ ನಾನಾ ರೂಪವಲ್ಲವೇ. ಹಾಗೆಯೇ ಸ್ವರ್ಗವೂ ಸತ್ಯದ ಒಂದು ರೂಪವಾದ್ದರಿಂದ ಈ ಸೃಷ್ಟಿಯ ಅರಿವೇ ಸತ್ಯದ ಅರಿವಾದ್ದರಿಂದ ಈ ಸೃಷ್ಟಿಯ ಅರಿವನ್ನು ಪಡೆಯುತ್ತಾ ಸಾಗಿದಾಗ ಯಾವುದೋ ಒಂದು ಕಾಲಘಟ್ಟದಲ್ಲಿ ಆ ಸ್ವರ್ಗದ ಅರಿವೂ ಆಗಲೇಬೇಕಲ್ಲವೇ. ಇದೇ ಆಶಯವನ್ನು ವ್ಯಕ್ತಪಡಿಸುವಂತಿದೆ ಧರ್ಮಜನಿಗೆ ಯಕ್ಷನು ಕೇಳಿದ ಪ್ರಶ್ನೆ.

ಸೂಚನೆ : 23/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, July 22, 2023

ನಿರ್ಲಿಪ್ತ ದೇಶಸೇವೆ (Nirlipta Deshaseve)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆಗಳೂ ನಡೆಯುತ್ತಿರುವಾಗ, ತಂದೆಯ ಮಾತನ್ನು ಪರಿಪಾಲಿಸುವುದಕ್ಕಾಗಿ ಶ್ರೀರಾಮನು ಕಾಡಿಗೇ ಹೋಗಬೇಕಾಗಿ ಬಂದಿತು. ಆದರೆ ಅವನ ಮನಸ್ಸಿನಲ್ಲಿ ಯಾವ ವಿಕಾರವೂ ಉಂಟಾಗಲಿಲ್ಲ. ಶ್ರೀರಾಮ ಅಧಿಕಾರಕ್ಕೆ ಅಂಟಿದವನೇ ಅಲ್ಲ. ಅವನಿಗಿದ್ದುದು ಒಂದೇ ಲಕ್ಷ್ಯ- ಧರ್ಮಪರಿಪಾಲನೆ.  ಭರತನಾದರೋ ಅಪ್ರಯತ್ನವಾಗಿ ರಾಜ್ಯವು ಕೈಗೆ ಬಂದರೂ ರಾಮನಂತಹವನಿಗೆ ರಾಜ್ಯ ಕೈತಪ್ಪಿ ಹೋಯಿತಲ್ಲ ಎಂದು  ಪರಿತಪಿಸುತ್ತಾನೆ. ಆತ ಕಿಂಚಿತ್ತೂ  ಅಧಿಕಾರಕ್ಕೆ ಅಂಟಿಕೊಂಡವನಲ್ಲ. ರಾಜ್ಯವನ್ನು ವಹಿಸಿಕೊಳ್ಳುವಂತೆ ರಾಮನಿರುವ ಕಾಡಿಗೇ ಹೋಗಿ ಬೇಡಿಕೊಳ್ಳುತ್ತಾನೆ. ಅವನ ಇಚ್ಛೆಯು ಕೈಗೂಡದಿರಲು ರಾಮನ ಪ್ರತಿನಿಧಿಯಾಗಿ ರಾಮನ ಪಾದುಕೆಗಳನ್ನು ತೆಗೆದುಕೊಂಡು ಅಯೋಧ್ಯೆಯ ಸಿಂಹಾಸನದಲ್ಲಿ ಇಟ್ಟು ತಾಪಸವೃತ್ತಿಯಲ್ಲಿ ಇದ್ದುಕೊಂಡೇ ರಾಜ್ಯವಾಳುತ್ತಾನೆ. 


ವನವಾಸ ಪೂರಯಿಸಿದ ಶ್ರೀರಾಮ, ಭರತ ಹೇಗಿದ್ದಾನೋ ಎಂಬ ಚಿಂತೆಯಿಂದಲೇ ಅಯೋಧ್ಯೆಗೆ ಹಿಂತಿರುಗಲು ತ್ವರೆ ಮಾಡುತ್ತಾನೆ. ಹನುಮಂತನಿಗೆ, ಮುಂದಾಗಿ ಹೋಗಿ, ಭರತನಿಗೆ ತಾನು ಬರುತ್ತಿರುವ ಸುದ್ದಿ ಮುಟ್ಟಿಸಲು ಹೇಳುತ್ತಾನೆ. ಇಲ್ಲಿ ರಾಮನಿಗಿದ್ದ ಮನಃಶಾಸ್ತ್ರದ ಜ್ಞಾನ ಬೆರಗು ಮೂಡಿಸುತ್ತದೆ. ಹನುಮಂತನನ್ನು ಕುರಿತು "ಭರತನಿಗೆ, ನಾನು ಬರುತ್ತಿರುವೆನು ಎಂದು ಹೇಳುವಾಗ ಅವನ ಮನದ ಇಂಗಿತವನ್ನು ತಿಳಿದುಕೊಳ್ಳಲು ಪ್ರಯತ್ನಿಸು. ಇಷ್ಟು ದೀರ್ಘಕಾಲ ರಾಜ್ಯವನ್ನು ಆಳಿದುದರ ಪರಿಣಾಮವಾಗಿ ತಾನೇ ರಾಜ್ಯಾಡಳಿತವನ್ನು ಮುಂದುವರೆಸುವ ಇಚ್ಛೆಯಿಂದ ಕೂಡಿದ್ದಾನೆಯೇ ಎಂದು ಅರಿತುಕೊಳ್ಳಲು ಪ್ರಯತ್ನಿಸು. ನಿನಗೆ ಹಾಗೇನಾದರೂ ಅನ್ನಿಸಿದರೆ ನನಗೆ ಬಂದು ಹೇಳು. ರಾಜ್ಯವನ್ನು ಭರತನಿಗೇ ಬಿಟ್ಟುಕೊಟ್ಟು ನಾನು ಕಾಡಿಗೆ ಹಿಂದಿರುಗಿ ತಪಶ್ಚರ್ಯೆಯಿಂದ ಕಾಲ ಕಳೆಯುವೆನು" ಎನ್ನುತ್ತಾನೆ. ಭರತನಾದರೋ ರಾಮ ಬರುವುದನ್ನೇ ನಿರೀಕ್ಷಿಸುತ್ತಾ ಅವನು ಬಂದೊಡನೆಯೇ "ರಾಮ , ನೀನು ನನ್ನ ಬಳಿ ನ್ಯಾಸವಾಗಿಟ್ಟಿದ್ದ ರಾಜ್ಯವನ್ನು ಹಿಂದಿರುಗಿಸಿದ್ದೇನೆ" ಎನ್ನುತ್ತಾನೆ. ಅಧಿಕಾರಕ್ಕೆ ಕಿಂಚಿತ್ತೂ ಅಂಟಿಕೊಳ್ಳದೆ  ಧರ್ಮವನ್ನು ಸಂರಕ್ಷಿಸುವ ವಿಷಯದಲ್ಲಿ ತಮ್ಮನನ್ನು ಮೀರಿಸಿದ ಅಣ್ಣ! ಅಣ್ಣನನ್ನು ಮೀರಿಸಿದ ತಮ್ಮ!


ಮಹಾಭಾರತದಲ್ಲಿಯೂ ಧರ್ಮಕ್ಕಾಗಿಯೇ ರಾಜ್ಯಾಪೇಕ್ಷೆಯಿಂದಿದ್ದವರ ಚಿತ್ರಣವನ್ನು ನೋಡಬಹುದು. ವನವಾಸ ಮತ್ತು ಅಜ್ಞಾತವಾಸಗಳನ್ನು ಪೂರಯಿಸಿದ ನಂತರ, ಮೊದಲಿನ ಒಪ್ಪಂದದಂತೆ, ಧರ್ಮರಾಜನಿಗೆ ರಾಜ್ಯವು ದಕ್ಕಬೇಕಾಗಿತ್ತು. ಆದರೂ ಯುದ್ಧವನ್ನು ತಪ್ಪಿಸುವ ಉದ್ದೇಶ ಅವನಿಗಿತ್ತು. ಹೀಗಾಗಿ ದುರ್ಯೋಧನನು ಕಡೆಯ ಪಕ್ಷ ಐದು ಗ್ರಾಮಗಳನ್ನು ಕೊಟ್ಟರೂ ಸಾಕೆಂದು ಧೃತರಾಷ್ಟ್ರನ ದೂತನಾಗಿ ಬಂದ ಸಂಜಯನಿಗೆ ಧರ್ಮರಾಜನು ಹೇಳುತ್ತಾನೆ. ನ್ಯಾಯವಾಗಿ ತನಗೆ ಬರಬೇಕಾಗಿದ್ದ ರಾಜ್ಯದ ಪಾಲಿನ ಸಂಕೇತವಾಗಿ ಐದು ಗ್ರಾಮಗಳನ್ನು ಕೇಳುವುದು ತನಗಿರುವ ರಾಜ್ಯದ ಹಕ್ಕನ್ನು ಸ್ಥಾಪಿಸುವುದು ಧರ್ಮವೇ ಆಗಿದೆ ಎಂಬ ಕಾರಣಕ್ಕಾಗಿಯೇ; ರಾಜ್ಯಲೋಭದಿಂದಲ್ಲ.  


ಶ್ರೀಕೃಷ್ಣನು ಯುದ್ಧಭೂಮಿಯಲ್ಲಿ ಅರ್ಜುನನಿಗೆ ಧರ್ಮಕ್ಕಾಗಿ ಯುದ್ಧ ಮಾಡುವುದು ಯುಕ್ತವೇ ಆಗಿದೆ ಎಂದು ಮನವರಿಕೆ ಮಾಡಿಕೊಡುತ್ತಾನೆ. 

ಹೀಗೆ ಸನಾತನಭಾರತದ ಮಹಾತ್ಮರ ವ್ಯವಹಾರದಲ್ಲಿ ಧರ್ಮವೇ ಕೇಂದ್ರವಾಗಿತ್ತು.


ಇಂದಿನ ರಾಜಕೀಯ ನಾಯಕರಿಗೆ ಇಂತಹ ಪ್ರಸಂಗಗಳನ್ನು ನಿತ್ಯ ಪಾರಾಯಣ ಮಾಡಬೇಕೆಂದು ವಿಧಿಸಬೇಕು. ದೇಶಸೇವೆಯೇ ನಮ್ಮ ಗುರಿ ಎನ್ನುತ್ತಾ ಕೈಮುಗಿದು ಪೋಸ್ ಕೊಡುವ (ವೇಷ ಕಟ್ಟುವ) ರಾಜಕೀಯ ಧುರೀಣರು  ಇಂತಹ ಪ್ರಸಂಗಗಳನ್ನು ಓದಿ ರಕ್ತಗತ ಮಾಡಿಕೊಳ್ಳಬೇಕು. ಅವರು ವರ್ಷಗಟ್ಟಲೇ ಪಕ್ಷದಲ್ಲಿರುವುದೂ ಅಧಿಕಾರಕ್ಕಾಗಿಯೇ. ಅದು ಪ್ರಾಪ್ತವಾದಾಗ ಪಕ್ಷಕ್ಕೆ ಅಂಟಿಕೊಂಡಿರುತ್ತಾರೆ. ಒಂದೊಮ್ಮೆ "ನೇಪಥ್ಯಕ್ಕೆ ಸರಿದು ದೇಶಸೇವೆ ಮಾಡಿ, ಪಕ್ಷದ ಇತರರಿಗೆ ಸ್ಥಾನ ಬಿಟ್ಟುಕೊಡಿ" ಎಂದು ಪಕ್ಷದ ವರಿಷ್ಠರು ಹೇಳಿಬಿಟ್ಟರೆ, ಅವರ ಗೋಳು ಹೇಳತೀರದು. ಪಕ್ಷನಿಷ್ಠೆ, ದೇಶಸೇವೆಯ ಪ್ರತಿಜ್ಞೆ -ಎಲ್ಲವನ್ನೂ ಗಾಳಿಗೆ ತೂರಿ, ಇಷ್ಟುಕಾಲ ತಾವು ನಿಂದಿಸುತ್ತಿದ್ದ ಪಕ್ಷಕ್ಕೇ ಹಾರಿಬಿಡುತ್ತಾರೆ. ಇವರಿಗಿರುವ ಒಂದೇ ಗುರಿ-ಸ್ವಾರ್ಥಸಾಧನೆ.


"ಕಣ್ಣಿನಲ್ಲಿ ಒಂದು ತೊಟ್ಟು ರಕ್ತ ಇರುವವರೆಗೂ ಬಿಡದೇ ಭಗವಂತನ ಸೇವೆ ಮಾಡಬೇಕು. ಗಂಧ ತೇಯುವಂತೆ ಅವನಿಗಾಗಿ ದೇಹವನ್ನು ತೇಯ್ದುಬಿಡಬೇಕು" ಎಂದು ಶ್ರೀರಂಗಮಹಾಗುರುಗಳು ಭಗವಂತನ ಸೇವೆಯನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಹೇಳುತ್ತಿದ್ದರು. ಭಗವಂತನ ಧರ್ಮವನ್ನು ದೇಶದಲ್ಲಿ ನೆಲೆಗೊಳಿಸಿದರೆ ಅದು ಈಶನ ಸೇವೆಯೂ ಹೌದು; ದೇಶಸೇವೆಯೂ ಹೌದು. ಇಂತಹ ದೇಶಸೇವೆ ಮಾಡಲು ಸುಭದ್ರ ಸಮಾಜ ಬೇಕು. ಅಂತಹ ಸಮಾಜರಚನೆಯಲ್ಲಿ ಪ್ರತಿ ನಾಗರಿಕನ ಕರ್ತವ್ಯವೂ ಇದೆ. 


ನಮ್ಮ ದೇಶದಲ್ಲಿ ಧರ್ಮದ ಬಗ್ಗೆ ಋಷಿಗಳಿಗಿದ್ದ ನಿಲುವು ಕಾಲಕ್ರಮದಲ್ಲಿ ಜಾರಿದ್ದರಿಂದಲೇ ದೇಶವು ಧರ್ಮಭ್ರಷ್ಟರ ಆಳ್ವಿಕೆಗೆ ಒಳಗಾಯಿತು. ದೇಶದಲ್ಲಿ ಧರ್ಮವನ್ನು ಉಳಿಸುವುದಕ್ಕಾಗಿ ನಿರ್ಲಿಪ್ತವಾಗಿದ್ದುಕೊಂಡೇ ದೇಶಸೇವೆಯನ್ನು ಮಾಡಬೇಕೆಂಬ ಸ್ಫೂರ್ತಿಯು ನಮಗೆ ಒದಗಿ ಬರಲಿ.


ಸೂಚನೆ : 22/7/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.


ದೊಡ್ಡ ಧರ್ಮದ ರಕ್ಷಣೆ (Dodda Dharmada Raksane)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)



ಇದೊಂದು ಮಹಾಭಾರತದ ಸ್ವಾರಸ್ಯ ಪ್ರಸಂಗ. ಪಾಂಡವರು ಅರಣ್ಯವಾಸದ ಸಮಯದಲ್ಲಿ ಕೆಲಕಾಲ ದ್ವೈತವನದಲ್ಲಿ ಇರುವುದನ್ನು ಅರಿತ ದುರ್ಯೋಧನಾದಿಗಳು ಪಾಂಡವರ ಹೊಟ್ಟೆ ಉರಿಸಲೆಂದೇ ಅವರಿರುವ ಎಡೆಗೆ ಸಕಲ ವೈಭವಗಳೊಡನೆ ಆಗಮಿಸುತ್ತಾರೆ. ಕೌರವರ ಕಡೆಯವರು ಅಲ್ಲೊಂದು ಕ್ರೀಡಾಸ್ಥಾನವನ್ನು ಸಿದ್ಧಪಡಿಸುವುದಕ್ಕೆ ಹೋದಾಗ, ಈ ಮೊದಲೇ ಅಲ್ಲಿ ಬೀಡುಬಿಟ್ಟಿದ್ದ ಗಂಧರ್ವರು ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಗಂಧರ್ವರಿಗೂ ಕೌರವರಿಗೂ ನಡೆದ ಯುದ್ಧದಲ್ಲಿ ದುರ್ಯೋಧನಾದಿಗಳು ಬಂಧಿತರಾಗುತ್ತಾರೆ. ಆಗ ಕೌರವರ ಕಡೆಯವರು ಧರ್ಮರಾಜನಲ್ಲಿಗೆ ಬಂದು ತಮ್ಮ ರಾಜನನ್ನು ಬಿಡಿಸಿಕೊಡಬೇಕೆಂದು ಆರ್ತರಾಗಿ ಬೇಡುತ್ತಾರೆ. ಆಗ ಭೀಮನು, "ಬಿಸಿಲು, ಮಳೆ ಗಾಳಿಗಳಿಗೆ ಸಿಕ್ಕು ನವೆಯುತ್ತಿದ್ದ ನಮ್ಮನ್ನು ಆ ಕೌರವನು ನೋಡಿ ಹೊಟ್ಟೆ ತಣ್ಣಗೆ ಮಾಡಿಕೊಳ್ಳಬೇಕೆಂದು ಬಂದ; ಅವನಿಗೆ ತಕ್ಕ ಶಾಸ್ತಿಯಾಯಿತು" ಎನ್ನುತ್ತಾನೆ. ಧರ್ಮರಾಜನಾದರೋ "ದಾಯಾದಿಗಳಿಗೆ ಜಗಳ ಬರುವುದೂ ಹೋಗುವುದೂ ಸಹಜವೇ. ಆದರೆ ಬಾಂಧವ್ಯ ಹೋಗುತ್ತದೆಯೇ? ದಾಯಾದಿಗಳಾದ ನಮ್ಮಲ್ಲಿ ಪರಸ್ಪರ ವಿರೋಧ ಬಂದಾಗ ನಾವೈವರೇ ಒಂದು; ಅವರು ನೂರು ಮಂದಿಯೇ ಎನ್ನುವುದು ಸರಿ. ಆದರೆ ಶತ್ರುಗಳು ನಮ್ಮೆಲ್ಲರನ್ನೂ ಆಕ್ರಮಿಸಿದಾಗ, ನಾವೆಲ್ಲ ನೂರೈವರು ಮಂದಿಯೂ ಒಂದೇ" ಎನ್ನುತ್ತಾನೆ. ಭೀಮಾರ್ಜುನಾದಿಗಳು ಗಂಧರ್ವರೊಡನೆ ಸೆಣಸಿ ಮೇಲ್ಗೈ ಸಾಧಿಸುತ್ತಾರೆ. ಮೇಲೂ ಗಂಧರ್ವರಾಜ ಚಿತ್ರಸೇನನು ಅರ್ಜುನನ ಮಿತ್ರನೂ ಹೌದು. ಹೀಗಾಗಿ ಗಂಧರ್ವರಿಂದ ದುರ್ಯೋಧನಾದಿಗಳು ಬಿಡುಗಡೆಗೊಂಡು ಎಲ್ಲರೂ ಧರ್ಮರಾಜನ ಬಳಿಗೆ ಬರುತ್ತಾರೆ. ಧರ್ಮರಾಜನು ಗಂಧರ್ವರನ್ನು ಉಪಚರಿಸಿ, ದುರ್ಯೋಧನನನ್ನು ಕುರಿತು "ಇಂತಹ ಸಾಹಸಕ್ಕೆ ಕೈ ಹಾಕಬೇಡಪ್ಪ; ಮನಸ್ಸನ್ನು ಕಹಿ ಮಾಡಿಕೊಳ್ಳದೆ ಹಿಂತಿರುಗಿ ಹೋಗಪ್ಪ" ಎನ್ನುತ್ತಾನೆ.


"ಯಾರಾದರೂ ಬಂಧುಗಳು ಕಷ್ಟದಲ್ಲಿದ್ದಾಗ ಅವರು ನಮಗೆ ತೊಂದರೆ ಕೊಟ್ಟವರೇ ಆಗಿದ್ದರೂ ದ್ವೇಷ ಸಾಧಿಸಬಾರದು. ಕೈಲಾದ ಸಹಾಯ ಮಾಡಬೇಕು. ಅವರವರ ಕರ್ಮ ಅವರವರಿಗೆ ಎಂದು ಬಿಟ್ಟುಬಿಡಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. (ಸಹಾಯ ಮಾಡುವುದರಿಂದ ಆಪತ್ಕಾಲವೇ ಎದುರಾಗುವುದಾದಲ್ಲಿ ಎಚ್ಚರಿಕೆ ಅಗತ್ಯ)


ಭಾರತದ ಮೇಲೆ ವಿದೇಶೀ ಆಕ್ರಮಣಗಳೆಷ್ಟೋ ಆದವು. ಕೆಲವೊಮ್ಮೆ ವಿಷ್ಣು ದೇವಾಲಯಗಳನ್ನು ಧ್ವಂಸಗೊಳಿಸಲು  ಆಕ್ರಮಣಕಾರರು ಬಂದಾಗ ಶಿವ ಭಕ್ತರು ಪ್ರತಿಭಟಿಸದೆ ಸುಮ್ಮನಿದ್ದುಬಿಟ್ಟಿರುವುದೂ ಉಂಟು. ಶಿವ ದೇವಾಲಯಗಳು  ಆಕ್ರಮಣಕ್ಕೊಳಗಾದಾಗ 'ವೀರ' ವಿಷ್ಣುಭಕ್ತರು ಸಹಾಯಹಸ್ತವನ್ನು ನೀಡದೆ ಕೈಕಟ್ಟಿ ಕುಳಿತದ್ದೂ ಉಂಟು. ಇಂತಹ ವರ್ತನೆಯಿಂದಾಗಿ ದೇಶಕ್ಕೆ ಆದ ಆಘಾತಕಾರಿ ಪರಿಣಾಮ ಸರ್ವ ವಿದಿತವೇ. ನಮ್ಮಲ್ಲಿ  ಮತಭೇದಗಳೇನೇ ಇದ್ದರೂ, ವಿದೇಶೀ ಆಕ್ರಮಣಕಾರರು ಬಂದಾಗ ಮತಭೇದವನ್ನು ಬದಿಗೊತ್ತಿ  ಒಗ್ಗಟ್ಟಾಗಿ ಹೋರಾಡಿದ್ದರೆ ನಮ್ಮ ದೇಶ ಇಂದಿನ ದುಃಸ್ಥಿತಿಗೆ ತಲುಪುತ್ತಿರಲಿಲ್ಲ. ವಿದೇಶೀ ಆಕ್ರಮಣಕಾರರ ಬಗ್ಗೆಯೂ ಹಾಗೂ ನಮ್ಮ ದೇಶದಲ್ಲಿಯೇ ಇರುವ ಅವರ ಮಾನಸ ಪುತ್ರರ ಬಗ್ಗೆಯೂ ನಾವು ಎಚ್ಚರಿಕೆ ವಹಿಸದಿದ್ದಲ್ಲಿ ನಮ್ಮ ದೇಶ ಇನ್ನೂ ಹೀನಾಯ ಸ್ಥಿತಿಯನ್ನು ತಲುಪುವುದು ಶತಸ್ಸಿದ್ಧವೇ ಸರಿ. ಅನ್ನ ನೀಡುವ ದಣಿಗೆ  ಋಣಿಯಾಗಿರಬೇಕೆಂಬ ಏಕಮಾತ್ರ ಸಣ್ಣ  ಧರ್ಮಕ್ಕೆ ಕಟ್ಟುಬಿದ್ದು, ಹೊಟ್ಟೆಪಾಡಿಗಾಗಿ ವಿದೇಶೀ ಆಕ್ರಮಣಕಾರರ ಸೈನಿಕರಾಗಿದ್ದ ನಮ್ಮವರು ದೇಶಹಿತವೆಂಬ ದೊಡ್ಡಧರ್ಮವನ್ನು ಅಲಕ್ಷಿಸಿದ್ದರಿಂದ ನಮ್ಮ ಸಂಸ್ಕೃತಿಗೆ ಬಿದ್ದ ಏಟು ಅಷ್ಟಿಷ್ಟಲ್ಲ. ಎರಡು ಧರ್ಮಗಳ ಮಧ್ಯೆ ರಕ್ಷಣೀಯವಾದದ್ದು ದೊಡ್ಡಧರ್ಮವೇ. ಅದನ್ನು ಸಾಧಿಸಲು ಸಣ್ಣ ಧರ್ಮವನ್ನು ಬಲಿ ಕೊಟ್ಟರೂ ಅದು ಧರ್ಮಲೋಪವಾಗದು.


ನಮ್ಮ ದೇಶದ ರಾಮಾಯಣ,  ಮಹಾಭಾರತ, ಪುರಾಣಗಳಲ್ಲಿ  ದೊಡ್ಡ ಧರ್ಮವನ್ನು ಉಳಿಸಿಕೊಳ್ಳುವುದಕ್ಕಾಗಿ ಸಣ್ಣ ಧರ್ಮವನ್ನು ತ್ಯಾಗ ಮಾಡಿದ್ದರ ದೃಷ್ಟಾಂತಗಳು ಕಾಣಸಿಗುತ್ತವೆ. ರಾಷ್ಟ್ರದ ಹಿತಕ್ಕಾಗಿ ದುರ್ಯೋಧನನನ್ನು ತ್ಯಜಿಸುವುದೇ ಸೂಕ್ತವೆಂದು ಧೃತರಾಷ್ಟ್ರನಿಗೆ ವಿದುರನು ತಿಳಿಹೇಳುತ್ತಾನೆ. "ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಜಿಸಬೇಕಾದಲ್ಲಿ ಅದು ಸರಿಯಾದದ್ದೇ; ಗ್ರಾಮದ ಒಳಿತಿಗಾಗಿ ಒಂದು ಕುಲವನ್ನೇ ತ್ಯಜಿಸಬೇಕಾಗಿ ಬಂದರೆ ಅದೂ ಸರಿಯೇ. ಒಂದು ಜನಪದದ ಹಿತದೃಷ್ಟಿಯಿಂದ ಒಂದು ಗ್ರಾಮವನ್ನೇ ತ್ಯಜಿಸಬೇಕಾಗಿ ಬಂದಲ್ಲಿ ಅದೂ ಸರಿಯಾದ ಕ್ರಮವೇ. ಪರಮಾತ್ಮ ಸಾಕ್ಷಾತ್ಕಾರಕ್ಕಾಗಿ ಅಖಂಡ ಭೂಮಂಡಲವನ್ನೇ (ಒಬ್ಬ ರಾಜನಾದವನು) ತ್ಯಜಿಸಬೇಕಾಗಿ ಬಂದಲ್ಲಿ  ಅದೂ ಸೂಕ್ತವೇ" ಎನ್ನುತ್ತಾನೆ ವಿದುರ (ತ್ಯಜೇದೇಕಂ ಕುಲಸ್ಯಾರ್ಥೇ, ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ I ಗ್ರಾಮಂ ಜನಪದಸ್ಯಾರ್ಥೇ ಹ್ಯಾತ್ಮಾರ್ಥೇ ಪೃಥಿವೀಂ ತ್ಯಜೇತ್II)


ಸೂರ್ಯವಂಶದ ಸಗರಚಕ್ರವರ್ತಿಗೆ ಮಗನಾದ ಅಸಮಂಜಸನು ಆಟವಾಡುತ್ತಿದ್ದ ಬಾಲಕರನ್ನು ಸರಯೂ ನದಿಗೆ ತಳ್ಳುತ್ತಿದ್ದನು. ಪ್ರಜೆಗಳ ಗೋಳನ್ನು ನೋಡಿ ಸಗರನು ಅಸಮಂಜಸನನ್ನು ರಾಜ್ಯಬಾಹಿರನನ್ನಾಗಿ ಮಾಡುವನೆಂಬ ವೃತ್ತಾಂತವು ರಾಮಾಯಣದಲ್ಲಿ ಬರುತ್ತದೆ.


ಧರ್ಮಸೂಕ್ಷ್ಮಗಳನ್ನು ಬಿಡಿಸಿಕೊಟ್ಟ ಋಷಿಗಳ ಹಾದಿಯಲ್ಲಿ ಸಾಗುತ್ತಾ ದೇಶದ ಹಿತವೆಂಬ ದೊಡ್ಡ ಧರ್ಮವನ್ನು ಉಳಿಸಿಕೊಳ್ಳೋಣ. ಅದಕ್ಕೆ ಅಡ್ಡಿಬರುವ ಸಣ್ಣ ಧರ್ಮಗಳನ್ನು ಪಕ್ಕಕ್ಕಿಡೋಣ.


ಸೂಚನೆ: 22/7/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Thursday, July 20, 2023

ವೈರಾಗ್ಯದಂತಹ ಸಂಪತ್ತನ್ನು ಬೆಳೆಸಿಕೊಳ್ಳುವುದು ಹೇಗೆ? (Vairagyadantaha Sampattannu Belesikolluvudu Hege?)

ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)



 ಪ್ರಭು ಶ್ರೀರಾಮಚಂದ್ರನ ಪೂರ್ವಜರಲ್ಲಿ ನಡೆದಂತಹ ಒಂದು ಕಥೆ, ಶ್ರೀರಂಗ ಮಹಾಗುರುಗಳು ಭಾರತೀಯ ಸಂಸ್ಕೃತಿಯಲ್ಲಿ ಇರುವಂತಹ ವೈರಾಗ್ಯ ಮತ್ತು ನಿ:ಸ್ಪೃಹತೆಯ ವಿಷಯದಲ್ಲಿ ಈ ಪ್ರಸಂಗವನ್ನು ಎತ್ತಿ ಹೇಳುತ್ತಿದ್ದರು.

 ಹಿಂದೊಮ್ಮೆ ವರತಂತು ಎನ್ನುವಂತಹ ಆಚಾರ್ಯರ ಗುರುಕುಲದಲ್ಲಿ ಕೌತ್ಸ ಎನ್ನುವ ಶಿಷ್ಯ ತನ್ನ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿ ಆಚಾರ್ಯರ ಪರಮ ಪ್ರೀತಿಗೆ ಕಾರಣನಾಗಿರುತ್ತಾನೆ. ಗುರುಗಳ ಬಳಿ ನನ್ನ ವಿದ್ಯಾಭ್ಯಾಸವೆಲ್ಲಾ ಮುಗಿಯಿತು ನಾನು ತಮಗೆ ಗುರುದಕ್ಷಿಣೆಯನ್ನು ಕೊಡಬೇಕೆಂದು ಅಪೇಕ್ಷಿಸುತ್ತಿದ್ದೇನೆ ಏನನ್ನು ಕೊಡಲಿ ಎಂದು ಕೇಳುತ್ತಾನೆ. ಆಗ ಅವನ ಬಗ್ಗೆ ಅತ್ಯಂತ ಸಂಪ್ರೀತರಾಗಿದ್ದಂತಹ ಗುರುಗಳು ಏನೂ ಬೇಡಪ್ಪ ಇದುವರೆಗೂ ನೀನು ನನ್ನ ಸೇವೆಯನ್ನು ತುಂಬಾ ಚೆನ್ನಾಗಿ ಮಾಡಿದ್ದೀಯ, ವಿದ್ಯೆಯನ್ನು ತುಂಬಾ ಚೆನ್ನಾಗಿ ಗ್ರಹಣ ಮಾಡಿದ್ದೀಯ ಹಾಗಾಗಿ ನನಗೆ ನಿನ್ನ ಬಗ್ಗೆ ಸಂತೋಷ ಉಂಟಾಗಿದೆ ಇನ್ನೇನೂ ಬೇಡ ಎಂದು ಹೇಳುತ್ತಾರೆ. ಅವರು ಹಾಗೆ ಹೇಳಿದ ಮೇಲೆಯೂ ಕೂಡ ಕೌತ್ಸ ಪದೇ ಪದೇ ಅವರನ್ನು ಪೀಡಿಸುತ್ತಾನೆ, ಇಲ್ಲ ಗುರುಗಳೇ ನಾನು ಏನಾದರೂ ಒಂದು ಗುರುದಕ್ಷಿಣೆ ಕೊಡಲೇಬೇಕು ನಿಮಗೆ ಏನನ್ನು ಕೊಡಲಿ ಹೇಳಿ ಹೇಳಿ ಎಂದು. ಆಗ ವರತಂತುಗಳಿಗೆ ನಾನು ಇಷ್ಟು ಬೇಡ ಎಂದರೂ ಇವನು ಪೀಡಿಸುತ್ತಿದ್ದಾನಲ್ಲ ಎಂದು ಒಂದು ಸಾತ್ವಿಕವಾದ ಕೋಪ ಉಂಟಾಗುತ್ತದೆ. ಆಗ ಅವನನ್ನು ಕುರಿತು ನೋಡು ನೀನು 14 ವಿದ್ಯೆಗಳನ್ನು ನನ್ನಿಂದ ಕಲಿತಿದ್ದೀಯಾ ಹಾಗಾಗಿ 14 ಮಣ ಚಿನ್ನವನ್ನು ತೆಗೆದುಕೊಂಡು ಬಾ ಎಂದು ಹೇಳುತ್ತಾರೆ. ಕೌತ್ಸ ಒಬ್ಬ ಬಡ ಬ್ರಾಹ್ಮ; ಬಡವರ ಮನೆಯಿಂದ ಬಂದಂತಹ ವಿದ್ಯಾರ್ಥಿ,ಅವನು 14 ಮಣ ಚಿನ್ನವನ್ನು ಎಲ್ಲಿಂದ ತರುವುದು? ಆದರೆ ಅವನು ವಿದ್ಯಾವಂತನೂ ಆದುದರಿಂದ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾನೆ. ಆಗ ಶ್ರೀರಾಮಚಂದ್ರನ ಪೂರ್ವಜನಾದ ರಘು ಮಹಾರಾಜ ಭೂಮಿಯನ್ನು ಆಳುತ್ತಿರುತ್ತಾನೆ. ಅವನ ಹತ್ತಿರ ಹೋಗಿ ಚಿನ್ನವನ್ನು ಕೇಳೋಣ ಎಂದು ಕೌತ್ಸನು ಯೋಚಿಸಿ ಅವನ ಬಳಿಗೆ ಹೋಗುತ್ತಾನೆ. ಅಲ್ಲಿ ಹೋಗಿ ನೋಡಿದರೆ ರಘುವಿನ ಆಸ್ಥಾನದಲ್ಲಿ ರಘು ಆಗತಾನೆ ಒಂದು ದೊಡ್ಡ ಯಾಗವನ್ನು ಮಾಡಿ ಅನೇಕ ವಿಧವಾದ ದಾನದಕ್ಷಿಣೆಗಳನ್ನೆಲ್ಲಾ ಕೊಟ್ಟು ಬರಿಗೈಯಲ್ಲಿ ಇರುತ್ತಾನೆ. ಕೌತ್ಸ ಹೋದಾಗ ಅವನಿಗೆ ಚಿನ್ನದ ಪಾತ್ರೆಯಲ್ಲಿ ಸತ್ಕಾರ ಮಾಡುವ ಬದಲು ಮಣ್ಣಿನ ಪಾತ್ರೆಯಲ್ಲಿ ನೀರನ್ನು ತಂದು ಅದರಲ್ಲಿ ಕೌತ್ಸನಿಗೆ ಕಾಲು ತೊಳೆದು ಉಪಚಾರವನ್ನು ಮಾಡಿ,ಏನು ಬಂದಿದ್ದೀರಿ ?ಎಂದು ಕೇಳುತ್ತಾನೆ. ಆಗ ಕೌತ್ಸ ಇವನ ಹತ್ತಿರವೇ ಮಣ್ಣಿನ ಪಾತ್ರೆ ಇದೆ ಇನ್ನು ನನಗೆ ಚಿನ್ನ ಎಲ್ಲಿಂದ ಕೊಡುತ್ತಾನೆ ಎಂದು ಯೋಚಿಸಿ ಏನಿಲ್ಲ ಸುಮ್ಮನೆ ನಿನ್ನನ್ನು ನೋಡೋಣ ಎಂದು ಬಂದೆ ಎಂದು ಹೇಳಿ ಹೋಗಿ ಬರುತ್ತೇನೆ ಎಂದು ಅಲ್ಲಿಂದ ಹೊರಡಲು ಸಿದ್ಧವಾಗುತ್ತಾನೆ. ಆದರೆ ರಘು ಮಹಾರಾಜ ಇಂಗಿತಜ್ಞ, ಕೌತ್ಸನ ಮುಖವನ್ನು ನೋಡಿದಾಗಲೇ ಇವನು ಸುಮ್ಮನೆ ಬಂದಿಲ್ಲ ನಿರ್ನಿಮಿತ್ತವಾಗಿ ಬಂದಿಲ್ಲ ಏನೋ ಒಂದು ಉದ್ದೇಶವನ್ನು ಇಟ್ಟುಕೊಂಡು ಬಂದಿದ್ದಾನೆ ಎಂದು ಅವನಿಗೆ ಗೊತ್ತಾಗುತ್ತದೆ. ಹೀಗಾಗಿ ರಘು ಮಹಾರಾಜ  ಅವನನ್ನು ಒತ್ತಾಯ ಮಾಡಿ ಕೇಳುತ್ತಾನೆ ಏತಕ್ಕಾಗಿ ಬಂದಿದ್ದೀಯಾ  ಹೇಳು ಎಂದು. ಆಗ ಕೌತ್ಸ ನಡೆದ ಪ್ರಸಂಗವನ್ನು ವಿವರಿಸಿ ಗುರುಗಳು ಕೋಪಿಸಿಕೊಂಡು 64 ಮಣ ಚಿನ್ನವನ್ನು ಕೊಡು  ಎಂದರು ಅದಕ್ಕಾಗಿ ನಿನ್ನ ಬಳಿ ಬಂದೆ ಎಂದಾಗ  ಮಹಾರಾಜ, ಅಷ್ಟೇ ತಾನೇ ನಾನು ಅದಕ್ಕೆ ವ್ಯವಸ್ಥೆ ಮಾಡುತ್ತೇನೆ ನೀನು ಇಲ್ಲಿಯೇ ಉಳಿದುಕೋ ಎಂದು ಹೇಳುತ್ತಾನೆ.

 ಅಂದು ರಾತ್ರಿ ರಘು ಮಹಾರಾಜ ಮನಸ್ಸಿನಲ್ಲಿ ನಾಳೆ ಬೆಳಿಗ್ಗೆ ಕುಬೇರನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೋಲಿಸಿ ಚಿನ್ನವನ್ನು ತೆಗೆದುಕೊಂಡು ಬಂದು ಕೌತ್ಸನಿಗೆ ಕೊಡಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳುತ್ತಾನೆ.

ಕುಬೇರ ಯಕ್ಷರ ರಾಜ, ಅವನು ಕೂಡ ಇಂಗಿತಜ್ಞ; ರಘುವಿನ ಮನಸ್ಸಿನಲ್ಲಿ ಈ ರೀತಿಯ ಒಂದು ಆಲೋಚನೆ ಬಂದ ತಕ್ಷಣವೇ ಅವನಿಗೆ ಗೊತ್ತಾಗುತ್ತದೆ. ಹಾಗೆಯೇ ರಘು ಮಹಾರಾಜನನ್ನು ತಡೆಯುವ ಸಾಮರ್ಥ್ಯವೂ ಅವನಿಗೆ ಇರುವುದಿಲ್ಲ; ಜೊತೆಗೆ ರಘುವಿನ ಯೋಚನೆ ಸಾಧುವಾಗಿಯೇ ಇದೆ, ಒಬ್ಬ ಗುರುವಿಗೆ ಗುರುದಕ್ಷಿಣೆಯನ್ನು ಕೊಡುವುದಕ್ಕಾಗಿ ಬಂದಂತಹವನ ಸಹಾಯಕ್ಕಾಗಿ, ತಾನು ಧನ ಸಂಪಾದನೆ ಮಾಡಲು  ದಂಡೆತ್ತಿ ಬರುತ್ತಿದ್ದಾನೆ, ಅವನ ಯೋಚನೆ ಸಾಧುವಾಗಿಯೇ ಇದೆ ಹಾಗಾಗಿ ಅವನಿಗೆ ಅನುಗ್ರಹವನ್ನು ಮಾಡುವುದೇ ಸರಿ ಎಂದು ಕುಬೇರನು ಯೋಚಿಸಿ ಅಂದು ರಾತ್ರಿಯೇ ರಘುವಿನ ಖಜಾನೆಯನ್ನು ಪೂರ್ತಿಯಾಗಿ ಚಿನ್ನದಿಂದ ತುಂಬಿಸಿಬಿಡುತ್ತಾನೆ. ರಘು ಮಹಾರಾಜ ಮಾರನೆಯ ದಿನ ಬೆಳಿಗ್ಗೆ ಎದ್ದು ನೋಡುತ್ತಾನೆ  ಅವನ ಖಜಾನೆ ಪೂರ್ತಿಯಾಗಿ ತುಂಬಿರುತ್ತದೆ. ಆಗ ಕೌತ್ಸನಿಗೆ ಬೇಕಾದಂತಹ 14 ಗಾಡಿಗಳಲ್ಲಿ ಚಿನ್ನವನ್ನು ತುಂಬಿಸಿ ನೀನು ಇದನ್ನು ನಿನ್ನ ಗುರುವಿಗೆ ತೆಗೆದುಕೊಂಡು ಹೋಗಿ ಕೊಡಬಹುದು ಎಂದು ಹೇಳುತ್ತಾನೆ, ಖಜಾನೆಯಲ್ಲಿ ಇನ್ನಷ್ಟು ಚಿನ್ನ ಹಾಗೆಯೇ ಉಳಿದಿರುತ್ತದೆ, ಇದನ್ನೂ ಗಾಡಿಗೆ ಹಾಕಿಸುತ್ತೇನೆ ಇದನ್ನು ಕೂಡ ನೀನೆ ತೆಗೆದುಕೊಂಡು ಹೋಗು ಎಂದು ಹೇಳುತ್ತಾನೆ. ಆಗ ಕೌತ್ಸ ಇಲ್ಲ ಹಾಗೆ ಮಾಡಲು ಸಾಧ್ಯವಿಲ್ಲ ನಾನು ಗುರುದಕ್ಷಿಣೆ ಕೊಡುವ ಸಲುವಾಗಿ ನಿನ್ನನ್ನು ಕೇಳಿದ್ದು, ಅದನ್ನು ಹೊರತು ಪಡಿಸಿ ಒಂದೇ ಒಂದು ಬಿಡಿಗಾಸನ್ನೂ ಕೂಡ ಹೆಚ್ಚಿಗೆ ನಾನು ತೆಗೆದುಕೊಂಡು ಹೋಗುವುದಿಲ್ಲ ಎನ್ನುತ್ತಾನೆ. ಆಗ ರಘು ಮಹಾರಾಜ, ನೋಡು ಕುಬೇರ ಇಲ್ಲಿ ಧನವನ್ನು ವರ್ಷಿಸಿರುವುದು ನಿನಗೋಸ್ಕರ, ನಿನಗೋಸ್ಕರ ನಾನು ದಂಡೆತ್ತಿ ಹೋಗಬೇಕು ಎಂದಿದ್ದೆ, ನಿನಗೋಸ್ಕರ ಅವನು ಕೊಟ್ಟಿದ್ದಾನೆ, ಆದ್ದರಿಂದ ಇದರಲ್ಲಿ ಒಂದೇ ಒಂದು ಬಿಡಿಗಾಸನ್ನೂ ನಾನು ಇಟ್ಟುಕೊಳ್ಳುವುದಕ್ಕೆ ತಯಾರಾಗಿಲ್ಲ, ಅದು ನನಗೆ ಸೇರಿದ್ದಲ್ಲ ನಿನಗೇ ಸೇರಿದ್ದು ನೀನೇ ತೆಗೆದುಕೊಂಡು ಹೋಗಬೇಕು ಎಂದು ವಾದ ಮಾಡುತ್ತಾನೆ. ಹೀಗೆ ಒಬ್ಬರಿಗೊಬ್ಬರಿಗೆ ಎಷ್ಟು ತೀವ್ರವಾಗಿ ವಾದ ಆಗುತ್ತದೆ ಎಂದರೆ ಇದು ನನಗೆ ಸೇರಿದ್ದಲ್ಲ ಇದು ನನಗೆ ಸೇರಿದ್ದಲ್ಲ ಎಂದು ಇನ್ನೊಬ್ಬರ ವಸ್ತುವನ್ನು ತಮ್ಮದಾಗಿ ಮಾಡಿಕೊಳ್ಳದೇ ಇರುವುದರ ಬಗ್ಗೆ ಅವರು ವಾದ ಮಾಡುತ್ತಿರುತ್ತಾರೆ. ಅಂದರೆ ಅವರಿಗೆ ಇದ್ದಂತಹ ಉತ್ತಮ ಮಟ್ಟದ ವೈರಾಗ್ಯ ಮತ್ತು ನಿ:ಸ್ಪೃಹತೆಯಲ್ಲಿ ಎದ್ದು ಕಾಣುತ್ತದೆ. ನಿ:ಸ್ಪೃಹತೆಯ ಎಂದರೆ, ನಮ್ಮದಲ್ಲದ ವಸ್ತುವಿನ ಜೊತೆ ಮನಸ್ಸು ಸ್ವಲ್ಪವೂ ಅಂಟಿಕೊಳ್ಳದಿರುವಿಕೆ. ವೈರಾಗ್ಯ ಹಾಗೂ  ನಿ:ಸ್ಪೃಹತೆಯಗಳು ಒಂದಕ್ಕೊಂದು ಸಂಬಂಧ ಪಟ್ಟದ್ದು ಹಾಗೂ ವೈರಾಗ್ಯ ಅನ್ನುವುದು ಒಂದು ದೊಡ್ಡ ಸಂಪತ್ತು ಅನ್ನುವ ಕಾರಣದಿಂದ ನಾವು ಆಹಾರ ಸೇವನೆ ಮಾಡಬೇಕಾದರೆ 'ಜ್ಞಾನ ವೈರಾಗ್ಯ ಸಿ ದ್ಧ್ಯರ್ಥಮ್ ಭಿಕ್ಷಾಂ ದೇಹಿ ಚ ಪಾರ್ವತಿ' ಎಂದು ಅನ್ನಪೂರ್ಣಾ ದೇವಿಯನ್ನು ಸ್ತುತಿ ಮಾಡುತ್ತೇವೆ. ಹೀಗಾಗಿ ವೈರಾಗ್ಯದಂತಹ ಸಂಪತ್ತನ್ನು ನಾವು ಬೆಳೆಸಿಕೊಳ್ಳೋಣ, ಜೀವನದಲ್ಲಿ ಉದ್ಧಾರವಾಗೋಣ.  


ಸೂಚನೆ: 20/07/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Sunday, July 16, 2023

ವ್ಯಾಸ ವೀಕ್ಷಿತ - 46 ವಿಪ್ರರ ಮಧ್ಯದಿಂದೆದ್ದ ಅರ್ಜುನ (Vyaasa Vikshita - 46 Viprara Madhyadindedda Arjuna)

ಲೇಖಕರು : ಡಾ|| ಕೆ. ಎಸ್. ಕಣ್ಣನ್
 (ಪ್ರತಿಕ್ರಿಯಿಸಿರಿ lekhana@ayvm.in)



ದ್ರೌಪದೀ-ಸ್ವಯಂವರಕ್ಕೆ ನಾನಾದೇಶಾಧಿಪತಿಗಳು ನೆರೆದಿದ್ದರಷ್ಟೆ. ಅವರಲ್ಲಿ, ದ್ರೌಪದಿಯ ವಿಷಯದಲ್ಲಿ ರಾಗವುಳ್ಳವನಾಗಿ ಕರ್ಣನು ಪ್ರತಿಜ್ಞೆಮಾಡುತ್ತಾ ಎದ್ದನು; ಆತನು ಏಳುತ್ತಿರುವಂತೆಯೇ ಪಾಂಡವರು ಆತನೇ ಲಕ್ಷ್ಯವನ್ನು ಭೇದಿಸಿಬಿಡುವನೆಂದು ಭಾವಿಸಿದರು.

ಆದರೆ ಆತನನ್ನು ಕಾಣುತ್ತಲೇ ದ್ರೌಪದಿಯು ಉಚ್ಚಸ್ವರದಲ್ಲಿ ಹೇಳಿದಳು - ನಾನು ಸೂತನನ್ನು ವರಿಸೆ - ಎಂದು. ಇದನ್ನು ಕೇಳಿ, ರೋಷದ ನಗೆಯನ್ನು ನಕ್ಕು, ಬೆಳಗುತ್ತಿದ್ದ ಆ ಧನುಸ್ಸನ್ನು ನೆಲದ ಮೇಲೆಸೆದುಹೋದನು.

ಹೀಗಾಗಿ, ಸುತ್ತ ನೆರೆದಿದ್ದ ಕ್ಷತ್ರಿಯರು ಪರಾಙ್ಮುಖರಾದರು (ಎಂದರೆ, ಹಿಂದಕ್ಕೆ ಸರಿದರು). ಆದರೆ ಯಮನಿಗೆ ಸಮನಾಗಿ ಬಲಶಾಲಿಯಾಗಿದ್ದ ಶಿಶುಪಾಲನ ನಡೆ ಬೇರೆಯದಾಗಿತ್ತು. ಆತನೋ ಚೇದಿದೇಶದ ರಾಜ; ದಮಘೋಷನ ಪುತ್ರ; ಧೀರ ಹಾಗೂ ಮಹಾಮತಿ: ಆದರೂ ಧನುಸ್ಸನ್ನೆತ್ತುತ್ತಲೇ ಮಂಡಿಯೂರಿ ಧರೆಗುರುಳಿದನು!

ಆಮೇಲೆ ಬಂದವನು ಜರಾಸಂಧ. ಆತನೂ ಅಷ್ಟೆ. ಮಹಾಬಲ, ಮಹಾವೀರ್ಯ; ಬಿಲ್ಲಿನ ಬಳಿ ಬಂದು ಅಚಲವಾದ ಗಿರಿಯಂತೆ ನಿಂತ. ಆದರೆ ಧನುಸ್ಸಿನ ಆಘಾತಕ್ಕೆ ತತ್ತರಿಸಿ ಭೂಮಿಗೆ ಮಂಡಿಯಿಟ್ಟು ಬಿದ್ದ. ಬಿದ್ದವನೇ ಎದ್ದು ಸಾಗಿ ತನ್ನ ರಾಜ್ಯವನ್ನೇ ಸೇರಿಕೊಂಡ.

ಆಮೇಲೆ ಬಲಶಾಲಿಯಾದ ಮದ್ರರಾಜನಾದ ಶಲ್ಯನ ಸರದಿ. ಹೆದೆಯೇರಿಸಲಾರದೇ ಮಂಡಿಯಿಕ್ಕಿ ನೆಲಕಚ್ಚಿದ. (ದುರ್ಯೋಧನನೂ ಬಿಲ್ಲನೆತ್ತಲು ಹೋಗಿ ಅಂಗಾತನಾಗಿ ಬಿದ್ದನೆಂದು ಕೆಲವು ಪಾಠಗಳಲ್ಲಿದೆ).

ಧನುಸ್ಸನ್ನು ಹೆದೆಯೇರಿಸುವಲ್ಲಿ ವಿಫಲರಾಗಿ ಯಾವಾಗ ಹಿಂದಿರುಗಿದರೋ, ಆಗ ವಿಪ್ರರ ಮಧ್ಯದಿಂದ ಉದಾರಮತಿಯಾದ ಜಿಷ್ಣುವು (ಜಿಷ್ಣುವೆಂಬುದು ಅರ್ಜುನನ ಮತ್ತೊಂದು ಹೆಸರು) ಎದ್ದುನಿಂತನು. ಇಂದ್ರಧ್ವಜದಂತೆ ಕಂಗೊಳಿಸುತಿದ್ದ ಅರ್ಜುನನು ಹೊರಟುನಿಂತಿದ್ದನ್ನು ಕಂಡ ಕೆಲ ವಿಪ್ರಮುಖ್ಯರು ಆಕ್ರೋಶಗೊಂಡರು, ಅಸಮಾಧಾನಸೂಚಕವಾಗಿ ತಮ್ಮ ಅಜಿನಗಳನ್ನೇ ಇತ್ತಿಂದತ್ತ ಅತ್ತಿಂದಿತ್ತ ಬೀಸಿದರು. ಹೀಗೆ ಕೆಲವರಿಗೆ ಅರ್ಜುನನು ಮಾಡಿದುದು ಸರಿದೋರಲಿಲ್ಲ.

ಆದರೆ ಕೆಲವರಿಗಂತೂ ಸಂತೋಷವೇ ಆಯಿತು. ಅವರಲ್ಲಿ ಬುದ್ಧಿಜೀವಿಗಳಾದ ಕೆಲವರು ಪರಸ್ಪರ ಮಾತನಾಡಿಕೊಂಡರು; ಕರ್ಣ-ಶಲ್ಯ ಮೊದಲದವರು ಕ್ಷತ್ರಿಯರು, ಲೋಕವಿಶ್ರುತರು; ಧನುರ್ವೇದಪರಾಯಣರು; ಬಲಸಂಪನ್ನರು; ಅಂತಹವರಿಗೇ ಬಗ್ಗಿಸಲಾಗದುದನ್ನು ಈ ಬ್ರಾಹ್ಮಣವಟು ಸಾಧಿಸಿಬಿಡುವನೋ?! ಈತನು ಕೃತಾಸ್ತ್ರನೇನಲ್ಲ, ಜೊತೆಗೆ ಕಡಿಮೆ ಪ್ರಾಣಬಲವುಳ್ಳವ ಕೂಡ: ಈತನೆಂತು ಹೆದೆಯೇರಿಸಿಯಾನು? ಬ್ರಾಹ್ಮಣಸಹಜವಾದ ಚಪಲತೆಯಷ್ಟರಿಂದಲೇ ಈತನು ಹೊರಟಿದ್ದು, ಈ ಕಾರ್ಯದಲ್ಲೇನಾದರೂ ಸಫಲನಾಗದೆ ಹೋದಲ್ಲಿ ರಾಜರುಗಳ ಮಧ್ಯದಲ್ಲಿ ನಾವು ಬ್ರಾಹ್ಮಣರು ಅಪಹಾಸ್ಯಕ್ಕೆ ಈಡಾಗುತ್ತೇವೆ, ಅಷ್ಟೆ. ಈತನನ್ನು ತಡೆಯಬೇಕು - ಎಂದುಕೊಂಡರು.

ಮತ್ತೆ ಕೆಲವರು ಹೀಗೆಂದರು: ನಾವು ಕ್ಷತ್ರಿಯರ ಅಪಹಾಸ್ಯಕ್ಕೆ ಈಡಾಗೆವು, ಅವರ ದ್ವೇಷಕ್ಕೂ ತುತ್ತಾಗೆವು. ಇನ್ನು ಕೆಲವರು ಹೀಗೆಂದರು: ಈತನು ಯುವಕ. ಆತನ ತೋಳುಗಳು ಸಲಗದ ಸೊಂಡಿಲಿನ ಹಾಗಿವೆ. ಅವನ ಹೆಗಲು ತೊಡೆ-ತೋಳುಗಳು ತುಂಬಿಕೊಂಡಿವೆ. ಧೈರ್ಯದಲ್ಲಿ ಹಿಮಾಲಯದಂತಿದ್ದಾನೆ. ನಡೆಯಲ್ಲಿ ಸಿಂಹದಂತೆ, ಪರಾಕ್ರಮದಲ್ಲಿ ಮದಗಜದಂತಿರುವವ. ಈತನು ಇದನ್ನು ಸಾಧಿಸುವನೆಂಬುದನ್ನು ಈತನ ಉತ್ಸಾಹದಿಂದಲೇ ಊಹಿಸಬಹುದು. ಅಶಕ್ತನೇ ಆಗಿದ್ದಲ್ಲಿ ಸ್ವತಃ ಹೋಗಿಬಿಡುವನೇ?

ಇದಲ್ಲದೆ, ಬ್ರಾಹ್ಮಣರಿಗೆ ಅಸಾಧ್ಯವೆಂಬುದು ಏನಿದ್ದೀತು? ಅವರು ಎಷ್ಟು ದೃಢವ್ರತರೆಂದರೆ ಅವರಲ್ಲೆ ಅಬ್ಭಕ್ಷರು, ವಾಯುಭಕ್ಷರು, ಫಲಾಹಾರರೂ ಉಂಟು (ಹಾಗೆಂದರೆ ಕೇವಲ ನೀರನ್ನೇ, ಕೇವಲ ವಾಯುವನ್ನೇ, ಕೇವಲ ಫಲಗಳನ್ನೇ ಸೇವಿಸಿಕೊಂಡು ಇರತಕ್ಕವರು; ಅಪ್ ಎಂದರೆ ನೀರು).

ಸೂಚನೆ : 17
/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ47 Yaksha prashne 47

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 45  ಯಶಸ್ಸಿಗೆ ಕಾರಣವಾದುದು ಯಾವುದು ?

ಉತ್ತರ - ದಾನ. 

ಈ ಸೃಷ್ಟಿಯಲ್ಲಿ ಪ್ರತಿಯೊಂದೂ ಕಾರ್ಯಕಾರಣಭಾವದಿಂದ ಕೂಡಿರುತ್ತದೆ. ಕಾರ್ಯದಿಂದ ಕಾರಣವನ್ನು, ಕಾರಣದಿಂದ ಕಾರ್ಯವನ್ನು ಊಹಿಸುವಂತಿದ್ದರೆ ಆಲ್ಲಿ ಕಾರ್ಯಕಾರಣಗಳ ನಡುವೆ ಅಂತಹ ಅವಿನಾಭಾವ ಸಂಬಂಧವಿದೆ ಎನ್ನಬಹುದು. ಅಂತಹ ಕಾರಣವು ಕಾರ್ಯಸಾಧಕವಾಗುವುದರಲ್ಲಿ ಸಂದೇಹವಿಲ್ಲ. ಇಲ್ಲಿ ಯಕ್ಷನು ಕೇಳುವ ಪ್ರಶ್ನೆಯಲ್ಲಿ ಅಂತಹ ಕಾರ್ಯಕಾರಣಭಾವ ಕಂಡುಬರುತ್ತಿದೆ. ಅದೇ ಆಶಯವನ್ನು ಬಿತ್ತರಿಸುವ ಪ್ರಶ್ನೆ ಇದಾಗಿದೆ - ಯಶಸ್ಸಿಗೆ ಕಾರಣ ಯಾವುದು? ಎಂದು. ದಾನವೇ ಯಶಸ್ಸಿಗೆ ಕಾರಣ. ದಾನವೆಂದರೇನು? ಯಾವ ರೀತಿಯ ದಾನದಿಂದ ಯಶಸ್ಸು ಬರುತ್ತದೆ? ಯಶಸ್ಸಿನ ಲಕ್ಷಣವೇನು? 

ಯಶಸ್ಸು ಅಥವಾ ಕೀರ್ತಿಯನ್ನು ಪ್ರತಿಯೊಬ್ಬನೂ ಬಯಸುತ್ತಾನೆ. ಯಶಸ್ಸಿಗಾಗಿಯೆ ಕೆಲವರು ಕೆಲಸವನ್ನು ಮಾಡುತ್ತಾರೆ. ಮಾಡುವ ಕೆಲಸದಿಂದ ಯಶಸ್ಸು ಬರುವುದುಂಟು. ಇವೆರಡರಲ್ಲಿ ಕೆಲಸದಿಂದ ಬರುವ ಯಶಸ್ಸಿಗೆ ಹೆಚ್ಚಿನ ಬೆಲೆ ಉಂಟು. ಕೀರ್ತಿಕಾಮನೆಯಿಂದ ಮಾಡುವ ಕರ್ಮವು ಕಾಮ್ಯಕರ್ಮವಾಗುತ್ತದೆ. ಫಲಾಪೇಕ್ಷೆಯಿಲ್ಲದೇ ಮಾಡುವ ಕರ್ಮವೇ ನಿಜವಾದ ಕರ್ಮಯೋಗ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಉಪದೇಶಿಸಿದ್ದಾನೆ. ಆದ್ದರಿಂದ ಫಲೋದ್ದೇಶ್ಯಕವಾದ ಕರ್ಮವು ಬಂಧನವನ್ನು ಉಂಟುಮಾಡಿದರೆ ಫಲದಲ್ಲಿ ಅಧಿಕಾರವಿಲ್ಲದೇ ಮಾಡುವ ಕರ್ಮವು ಮುಕ್ತಿಗೆ ಸಾಧನವಾಗುತ್ತದೆ. ಮುಕ್ತಿಗೆ ಸಾಧನವಾದ ಕರ್ಮಗಳು ಅನೇಕ. ಅವುಗಳಲ್ಲಿ ದಾನವು ಅತ್ಯಂತ ಶ್ರೇಷ್ಠವಾದ ಕರ್ಮ ಎಂಬುದಾಗಿ ಪ್ರಶಂಸೆ ಮಾಡಿದ್ದಾರೆ. ನೂರಕ್ಕೆ ಒಬ್ಬ ಶೂರ ಸಿಗಬಹುದು, ಸಾವಿರಕ್ಕೆ ಒಬ್ಬ ಪಂಡಿತ ಸಿಗಬಹುದು, ಲಕ್ಷಕ್ಕೆ ಒಬ್ಬ ವಾಗ್ಮಿ ಸಿಗಬಹುದು, ಆದರೆ ದಾನಿ ಸಿಗಬಹುದೇ? ಎಂಬುದಾಗಿ ಒಂದು ಸುಭಾಷಿತ ದಾನಿಯ ಮಹತ್ತ್ವವನ್ನು ಸಾರಿದೆ. ಆದ್ದರಿಂದ ದಾನಕ್ಕೆ ಅಂತಹ ಮುಖ್ಯವಾದ ಸ್ಥಾನವಿದೆ. ಆದ್ದರಿಂದ ಅದೊಂದು  ಶ್ರೇಷ್ಠವಾದ ಕಾರ್ಯ. 

ದಾನವೆಂಬುದು ಸೃಷ್ಟಿಯ ಸಹಜವಾದ ಕ್ರಿಯೆ ಎಂದು ಶ್ರೀರಂಗಮಹಾಗುರುಗಳು ಹೀಗೊಂದು ಉದಾಹರಣೆಯನ್ನು ಕೊಟ್ಟಿದ್ದರು - "ದಾನ ಪ್ರತಿಗ್ರಹಗಳ ಪ್ರಿನ್ಸಿಪಲ್ ಮೇಲೆಯೇ ಸೃಷ್ಟಿಯು ನಡೆದು ನಿಂತು ಮಂದುವರಿಯುತ್ತಿದೆ. ಸೃಷ್ಟಿಕರ್ತನು ತನ್ನ ಸಂಪತ್ತುಗಳನ್ನು ತನ್ನ ಸಂತಾನಕ್ಕೆ ದಾನ ಮಾಡದಿದ್ದರೆ ಸೃಷ್ಟಿಯು ಹೇಗೆ ಮುಂದುವರಿದೀತು? ತಂದೆತಾಯಿಗಳು ತಮ್ಮ ಶಾರೀರಿಕ, ಮಾನಸಿಕ, ಬೌದ್ಧಿಕ ಆಧ್ಯಾತ್ಮಿಕ ಸ್ವತ್ತುಗಳನ್ನು ತಮ್ಮ ಸಂತಾನಕ್ಕೆ ದಾನ ಮಾಡುತ್ತಾರೆ. ಅವು ತಮ್ಮ ಮುಂದಿನ ಪೀಳಿಗೆಗೆ, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದಾನ ಮಾಡಿದ. ಇದರ ಮೇಲೆಯೇ ಸೃಷ್ಟಿವ್ಯಾಪಾರವೆಲ್ಲವೂ ನಿಂತಿದೆ. ದಾನ ಪ್ರತಿಗ್ರಹಗಳು ಸೃಷ್ಟಿಸಹಜವಾದ ಕ್ರಿಯೆಗಳು" ಎಂಬುದಾಗಿ ದಾನವು ಯಾವ ರೀತಿ ಸೃಷ್ಟಿಸಹಜವಾದದ್ದು ಎಂಬುದನ್ನು ವಿವರಿಸಿದ್ದರು. ಯಾವ ಯಾವುದೋ ಕರ್ಮದಿಂದ ಬಂದ ಯಶಸ್ಸಿಗಿಂತ ದಾನದಿಂದ ಬಂದ ಯಶಸ್ಸಿಗೆ ಅಷ್ಟೊಂದು ಹಿರಿತನವಿದೆ.  ಹಾಗಾಗಿ ಹಿರಿಯರು 'ಯಶಸ್ವೀ ಭವ' ಎಂದು ಆಶೀರ್ವಾದವನ್ನು ಮಾಡುತ್ತಾರೆ. ಆಯುಷ್ಯಕ್ಕೆ ಎಷ್ಟು ಬೆಲೆ ಇದೆಯೋ ಅಷ್ಟೇ ಬೆಲೆಯನ್ನು ಯಶಸ್ಸಿಗೂ ಕೊಟ್ಟಿದ್ದಾರೆ ನಮ್ಮ ಪೂರ್ವಜರು. ಯಶಸ್ಸು ಮತ್ತು ಅದರ ಪ್ರಾಪ್ತಿಯ ಬಗ್ಗೆ ವೇದಗಳಲ್ಲಿ ಹೇರಳವಾದ ಮಂತ್ರಗಳೂ ಸಿಗುತ್ತವೆ. ಆದ್ದರಿಂದ ಸತ್ಕಾರಣದಿಂದ ಸತ್ಕಾರ್ಯವೇ ಆಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ಆಶಯವನ್ನು ಜನಮಾನಸಕ್ಕೆ ತಲುಪಿಸುವ ದೃಷ್ಟಿಯಿಂದ ಯಕ್ಷನು ಧರ್ಮರಾಜನಿಗೆ ಯಶಸ್ಸು ಮತ್ತು ದಾನದ ಮಹತ್ತ್ವವನ್ನು ತಿಳಿಸಲು ಈ ಪ್ರಶ್ನೆಯನ್ನು ಕೇಳಿದ್ದಾನೆ. ಅದಕ್ಕೆ ಧರ್ಮಜನ ಉತ್ತರವೂ ಸಾಂಗತ್ಯವಾದುದು.   

ಸೂಚನೆ : 17/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ​ - 39 ರುಕ್ಮಾಭಂ ಸ್ವಪ್ನಧೀಗಮ್ಯಮ್ (Astakshara Darshana 39 Rukmabham Svapnadhigamyam)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಯೋಗವಿದ್ಯೆಯೆಂಬುದು "ಉತ್ತಮವಾದ ರಹಸ್ಯ"; ಅದರ ಉಪದೇಶವನ್ನು ತಾನು ಮಾಡಿದುದು ವಿವಸ್ವಂತನಿಗೇ ಮೊದಲು - ಎಂಬುದಾಗಿ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ. ವಿವಸ್ವಾನ್ ಎಂದರೆ ಸೂರ್ಯ. ಆ ವಿವಸ್ವಂತನು ಆ ವಿದ್ಯೆಯನ್ನು ಮನುವಿಗೆ ಉಪದೇಶಿಸಿದನೆಂದೂ, ಮನುವು ಇಕ್ಷ್ವಾಕುವಿಗೆ ಹೇಳಿದನೆಂದೂ ಶ್ರೀಕೃಷ್ಣನು ತಿಳಿಸುತ್ತಾನೆ.

ಹೀಗೆ ಅಷ್ಟು ಪ್ರಾಚೀನಕಾಲದಿಂದ ನಡೆದುಬಂದಿರುವುದು, ಯೋಗಪರಂಪರೆ. ಅದು ಸೂಕ್ಷ್ಮವೂ ರಹಸ್ಯವೂ ಆದ ಕಾರಣದಿಂದಲೇ ಅದು ಆಗಾಗ್ಗೆ ಶಿಥಿಲವಾಗುವುದು, ಮರೆಯಾಗುವುದು; ಈಗ ಹಾಗಾಗಿರುವುದರಿಂದಲೇ ಅದನ್ನೇ  ಮತ್ತೆ ಹೇಳುತ್ತಿರುವುದಾಗಿ ಅರ್ಜುನನಿಗೆ ಶ್ರೀಕೃಷ್ಣನು ಹೇಳುತ್ತಾನೆ.

ವಿವಸ್ವಂತ-ಮನು-ಇಕ್ಷ್ವಾಕು - ಇವರುಗಳಿಂದಾಗಿಯೇ ಈ ವಂಶಕ್ಕೆ ವೈವಸ್ವತವಂಶ-ಮನುವಂಶ-ಇಕ್ಷ್ವಾಕುವಂಶ ಎಂದೆಲ್ಲಾ ಹೆಸರುಗಳು ಬಂದಿರುವುದು. ಈ ಸೂರ್ಯವಂಶದಲ್ಲೇ ಮುಂದೆ ಬಂದ ರಘುಮಹಾರಾಜನಿಂದಾಗಿ ಇದುವೇ ರಘುವಂಶವೆಂದೆನಿಸಿದುದೂ.

ಅರಸರಲ್ಲಿ ಮೊದಲನೆಯವನೇ ವೈವಸ್ವತಮನು - ಎನ್ನುತ್ತಾನೆ ಕಾಳಿದಾಸ. ನಾವೆಲ್ಲ ಮನು-ಜರು, ಮನು-ಷ್ಯರು ಎನ್ನುವಾಗ ಮನುವೇ ನಮ್ಮ ಮೂಲಪುರುಷ ಎಂಬ ಭಾವವಿರುವುದನ್ನು ಆ ಪದಗಳೇ ಸ್ಪಷ್ಟಪಡಿಸುತ್ತವೆ.

ಅದಿತಿಯ ಪುತ್ರನು ಆದಿತ್ಯನೆನಿಸಿಕೊಳ್ಳುತ್ತಾನೆಂದಾದರೂ, ಆದಿ-ತ್ಯನೆಂದರೆ ಆದಿಯಲ್ಲಿದ್ದವನೇ ಸರಿ. ಆ ಆದಿಮನಾದ ಒಬ್ಬನೇ ಆದಿತ್ಯ ಹನ್ನೆರಡಾಗಿ ತೋರುತ್ತಾನೆ. ಅದನ್ನೇ ದ್ವಾದಶಾದಿತ್ಯರು ಎಂಬ ಪರಿಯಲ್ಲಿ ಹೇಳುವುದು. ದ್ವಾದಶ ಎಂದರೆ ಹನ್ನೆರಡು. ಸೂರ್ಯನ "ಸಂಚಾರ"ದ ಲೆಕ್ಕದ ಮೇಲೆ ಮಾಡುವ ಕಾಲಮಾನವೇ ಸೌರಮಾನ; ಆ ಲೆಕ್ಕದಲ್ಲಿ ದ್ವಾದಶರಾಶಿಗಳಲ್ಲಿ ಆತನ ನಡೆಯನ್ನು ಅನುಸರಿಸಿ ಒಂದು ಸಂವತ್ಸರದಲ್ಲಿ ದ್ವಾದಶ-ಸೌರಮಾನ-ಮಾಸಗಳಾಗುತ್ತವೆ. ಯೋಗಾಭ್ಯಾಸದಲ್ಲಿ ಸೂರ್ಯನಮಸ್ಕಾರಮಾಡುವಾಗಲೂ ದ್ವಾದಶಮಂತ್ರಗಳ ದ್ವಾದಶ ಆವರ್ತನಗಳನ್ನು ಮಾಡುವೆವಲ್ಲವೇ?

ಮನುಸ್ಮೃತಿಯಲ್ಲೂ ದ್ವಾದಶ ಅಧ್ಯಾಯಗಳಿವೆ. ಗೀತೆಯಲ್ಲಿ ಕೊನೆಯ ಅಧ್ಯಾಯದಲ್ಲಿ ಹೇಗೋ ಹಾಗೆ, ಇಲ್ಲೂ ಕೊನೆಯ ಅಧ್ಯಾಯದಲ್ಲಿ ತ್ರಿಗುಣಗಳ ವಿಚಾರವನ್ನು ನಿರೂಪಿಸಲಾಗಿದೆ. (ಗೀತೆಯಲ್ಲಿ ಅದರ ಹಿಂದಿನ ಕೆಲವು ಅಧ್ಯಾಯಗಳಲ್ಲೂ ತ್ರಿಗುಣಗಳ ವಿಷಯವಿದೆ.) ಸೃಷ್ಟಿಯೆಲ್ಲಾ ತ್ರಿಗುಣಮಯವೇ. ತ್ರಿಗುಣಗಳನ್ನು ಮೀರಿದುದು ಪರಬ್ರಹ್ಮ. ಜೀವನದಲ್ಲಿ ನಾವು ಪಡುವ ಸುಖ-ದುಃಖಗಳೆಲ್ಲಾ ತ್ರಿಗುಣಮಯವಾದುವೇ. ಅವನ್ನೆಲ್ಲಾ ಅನುಭವಿಸುವುದು ಇದ್ದೇ ಇದೆ; ಆದರೆ, ಜೊತೆಗೆ ತ್ರಿಗುಣಗಳನ್ನು ಮೀರಿದುದನ್ನು ಅನುಭವಿಸಬೇಕಾದುದೇ ಜೀವನದ ಪರಮಲಕ್ಷ್ಯ. ಆ ಅನುಭವವೇ ಬ್ರಹ್ಮಭಾವ, "ಬ್ರಹ್ಮಭೂಯ". ಅದನ್ನು ನಮ್ಮಲ್ಲಿ ಉಂಟುಮಾಡಿಕೊಳ್ಳುವುದು ವಿಶುದ್ಧವಾದ ಬುದ್ಧಿಯ ಮೂಲಕವೆಂಬ ವಿಷಯವನ್ನು ಗೀತೆಯು ಕೊನೆಯ ಅಧ್ಯಾಯದಲ್ಲಿ ಹೇಳಿದೆ. ಮನುಸ್ಮೃತಿಯೂ ಸಹ ನಾನಾಧರ್ಮಾಧರ್ಮಗಳ ಆಚರಣಗಳ ಫಲಾಫಲಗಳನ್ನು ಮೊದಲ ಅಧ್ಯಾಯಗಳಲ್ಲಿ ಹೇಳಿ, ಅದೇ ಪರಬ್ರಹ್ಮಪದಪ್ರಾಪ್ತಿಯನ್ನೇ ಕೊನೆಯ ಅಧ್ಯಾಯದಲ್ಲಿ ಹೇಳುತ್ತದೆ.

ಪರಮಪುರುಷನೆನಿಸಿಕೊಳ್ಳುವ ಭಗವಂತನು ಎಲ್ಲವ(ರ)ನ್ನೂ ಆಳುವವನು: ಸಮಸ್ತಜಡ-ಚೇತನಗಳ ಭಾವ-ಕರ್ಮಗಳನ್ನೂ ಪ್ರಶಾಸನ ಮಾಡುವವನು ಆ ಒಬ್ಬನೇ, ಆ ಪರಪುರುಷನೇ. ಸೃಷ್ಟಿಯನ್ನೆಲ್ಲ ನಡೆಸುವ ಆತನು ಅಣುವಿಗಿಂತಲೂ ಅಣು: 'ಅಣೋರಣೀಯಾನ್'. ಜೊತೆಗೇ 'ಮಹತೋ ಮಹೀಯಾನ್': ಎಲ್ಲಕ್ಕಿಂತಲೂ ಬೃಹತ್ತಾದವನು. ಅಣುತಮನಾಗಿದ್ದೂ ಬೃಹತ್ತಮನೇ ಆಗಬಲ್ಲದ್ದೇ ಬ್ರಹ್ಮ. ಬ್ರಹ್ಮವೆಂದರೆ ದೊಡ್ಡದಾಗುವ ಶಕ್ತಿಯೇ.

ಆತನು ಹೇಗೆ ತೋರುತ್ತಾನೆ, ಹಾಗೂ ಆತನನ್ನು ಅರಿಯುವುದು ಹೇಗೆ? - ಎಂಬ ಎರಡು ಪ್ರಶ್ನೆಗಳಿಗೆ ಉತ್ತರಕೊಡುವುದೇ "ರುಕ್ಮಾಭಂ ಸ್ವಪ್ನಧೀಗಮ್ಯಂ" ಎಂಬ ಮನುಸ್ಮೃತಿಯ ಕೊನೆಯ ಶ್ಲೋಕಗಳಲ್ಲಿ ಕಾಣಿಸುವ ಒಂದು ಮಾತು. ರುಕ್ಮವೆಂದರೆ ಚಿನ್ನ; "ಆಭಾ" ಎಂದರೆ ದೀಪ್ತಿ, ಸೊಬಗು. ಆತನು ಶುದ್ಧಸುವರ್ಣದ ಹೊಳಪನ್ನು ಹೊಂದಿರುವವನು. ಆದಿತ್ಯನಲ್ಲಿರುವ ಹಿರಣ್ಮಯಪುರುಷನನ್ನು ಛಾಂದೋಗ್ಯೋಪನಿಷತ್ತು ಹೇಳುತ್ತದಲ್ಲವೇ? ಆತನು ಹಿರಣ್ಯಕೇಶ ಹಿರಣ್ಯಶ್ಮಶ್ರು (ಶ್ಮಶ್ರುವೆಂದರೆ ಗಡ್ಡಮೀಸೆಗಳು). ಉಗುರಿನ ತುತ್ತತುದಿಯವರೆಗೂ ಸ್ವರ್ಣಮಯನೇ. ಆ ಜ್ಯೋತಿರ್ಮಯಪುರುಷನಲ್ಲಿ ತಮ್ಮ ತಾದಾತ್ಮ್ಯವನ್ನು ಶ್ರೀರಂಗಮಹಾಗುರುಗಳು ಪ್ರತಿಪಾದಿಸಿದ್ದರು.

ಇದಲ್ಲದೆ ಆತನು ಸ್ವಪ್ನಧೀ-ಗಮ್ಯನೆಂದಿದೆ. ಆತನನ್ನು ಹೊರಗಣ್ಣಿನಿಂದ ಗ್ರಹಿಸಲಾಗದು, ಉಳಿದ ಇಂದ್ರಿಯಗಳಿಂದಲೂ ಗ್ರಹಿಸಲಾಗದು. ಆದರೆ ಸ್ವಪ್ನಬುದ್ಧಿಸದೃಶವಾದ ಬುದ್ಧಿಯಿಂದ (ಮಾತ್ರ) ಗ್ರಹಿಸಲಾಗುವುದು ಎಂದಿದೆ. ಸ್ವಪ್ನದಲ್ಲಿ ಬಾಹ್ಯೇಂದ್ರಿಯಗಳು ಕೆಲಸ ಮಾಡವು. ಎಂದೇ ಇದಕ್ಕೆ ಹೋಲಿಕೆಯಾಗಬಲ್ಲುದೆಂದರೆ ಕೇವಲ ಧ್ಯಾನಸ್ಥಿತಿಯೊಂದೇ.

ಧ್ಯಾನದಲ್ಲಿ ನೆಲೆಗೊಂಡಾಗ ಮನಸ್ಸು ಪ್ರಸನ್ನವಾಗುತ್ತದೆ, ಬುದ್ಧಿಯು ಸೂಕ್ಷ್ಮವಾಗುತ್ತದೆ, ನೋಟವು ತಿಳಿಯಾಗುತ್ತದೆ. ಆಗಿನ ಬುದ್ಧಿಯೇ ಅಗ್ರ್ಯಾಬುದ್ಧಿ. ಆಗ ಉಂಟಾಗುವ ಜ್ಞಾನಚಕ್ಷುಸ್, ತಪಶ್ಚಕ್ಷುಸ್ಸುಗಳಿಂದಲೇ ಆ ವಿಭುವಿನ ದರ್ಶನವು ಶಕ್ಯವೆನ್ನುವ ಸುಶ್ರುತಸಂಹಿತಾವಾಕ್ಯವನ್ನು ಶ್ರೀರಂಗಮಹಾಗುರುಗಳು ಉಲ್ಲೇಖಿಸುತ್ತಿದ್ದರು. ಶಿಷ್ಯರಲ್ಲಿ ಆ ಸ್ಥಿತಿಯನ್ನು ಅವರು ಉಂಟುಮಾಡಿಸಿರುವ ಪ್ರಸಂಗಗಳೂ ಉಂಟು.

ಸೂಚನೆ: 17/07/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Sunday, July 9, 2023

ಯಕ್ಷ ಪ್ರಶ್ನೆ 45 (Yaksha prashne 45)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)
ಪ್ರಶ್ನೆ– 44  ಧರ್ಮಕ್ಕೆ ಅವಿರೋಧ ಪದ ಯಾವುದು ?

ಉತ್ತರ - ದಾಕ್ಷ್ಯ. 

ಈ ಹಿಂದೆ ವಿವರಿಸಿದ ಧರ್ಮ ಎಂಬ ಪದವನ್ನು ಇಲ್ಲಿ ಅನುಸಂಧಾನ ಮಾಡಿಕೊಂಡು ಈ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಬೇಕು. ಧರ್ಮ ಎಂಬುದು ಒಂದು ಕಂಡೀಶನ್-ಸ್ಥಿತಿ ಎಂಬ ವಿವರಣೆಯನ್ನು ಶ್ರೀರಂಗ ಮಹಾಗುರುಗಳು ನೀಡುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಂಡರೆ ಮಾತ್ರ ಈ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯ. ಧರ್ಮವನ್ನು ಸಾಧಿಸಲು ಬೇಕಾದ ಪದ ಯಾವುದು ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಅದಕ್ಕೆ ಧರ್ಮಜನ ಉತ್ತರ 'ದಾಕ್ಷ್ಯ' ಎಂದು. 

ಸಂಸ್ಕೃತದಲ್ಲಿ ಪದ ಎಂಬ ಶಬ್ದಕ್ಕೆ ಅನೇಕ ಅರ್ಥಗಳಿವೆ. ಪದ ಎಂದರೆ ಸ್ಥಾನ, ವಸ್ತು ಅಥವಾ ಪದಾರ್ಥವನ್ನು ತಿಳಿಸುವ ಶಬ್ದ, ಕಾಲು ಎಂಬೆಲ್ಲಾ ಅರ್ಥಗಳಿವೆ. ಧರ್ಮಕ್ಕೆ ದಾಕ್ಷ್ಯ ಎಂಬುದು ಹೇಗೆ ಪದವಾಗುತ್ತದೆ? ಅಂದರೆ ಧರ್ಮ ಎಂಬುದೇನು? ಇದು ಸ್ಥಾನವೋ? ಅಥವಾ ಶಬ್ದವೋ ? ಅಥವಾ ಪಾದವೋ? ಇಲ್ಲಿ ನಾವು ಸ್ಥಾನ ಮತ್ತು ಕಾಲು ಎಂಬ ಎರಡೂ ಅರ್ಥವನ್ನೂ ಸ್ವೀಕರಿಸಬಹುದು. ಪ್ರತಿಯೊಂದು ವಸ್ತುವೂ ಅದರದರ ಕಂಡೀಶನ್ನಲ್ಲಿ ಇದ್ದರೆ ಮಾತ್ರ ಅದು ಉದ್ದಿಷ್ಟವಾದ ಕಾರ್ಯವನ್ನು ಮಾಡಲು ಸಾಧ್ಯ . ಕಣ್ಣು ನೋಡುವ ಕಂಡೀಶನ್ನಲ್ಲಿದ್ದಾಗ ಮಾತ್ರ ಕಣ್ಣಿನಿಂದ ನೋಡುವ ಕಾರ್ಯ ಸಾಧ್ಯ. ಕಣ್ಣು ತನ್ನ ಸ್ವಭಾವವನ್ನು ಯಾವುದೋ ಅನಾರೋಗ್ಯದಿಂದಲೋ ಅಥವಾ ಯಾವುದೋ ಬಾಧೆಯಿಂದಲೋ ಕಳೆದುಕೊಂಡಿದ್ದರೆ, ಅದು ನೋಡಲು ಸಾಧನವಾಗುವುದಿಲ್ಲ. ಆದ್ದರಿಂದ ಇಲ್ಲಿ ಧರ್ಮ ಎಂಬ ಪದವು ಇದೇ ಅರ್ಥವನ್ನು ಕೊಡುವ ಪದವಾಗಿದೆ. ಶರೀರಧರ್ಮ, ಮನೋಧರ್ಮ, ಇಂದ್ರಿಯಧರ್ಮ ಇವೆಲ್ಲವನ್ನು ಸಂಪಾದಿಸಿಕೊಂಡಾಗ ಈ ಶರೀರದಲ್ಲಿ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ. ಇದೇ ಪ್ರತಿ ಮಾನವನ ಉದ್ದೇಶವೂ ಆಗಿದೆ. ಅಂದರೆ ಇದನ್ನು ಸಂಪಾದಿಸಲು ದಾಕ್ಷ್ಯ ಬೇಕು. ಹಾಗಾದರೆ 'ದಾಕ್ಷ್ಯ' ಎಂದರೇನು? 

ದಕ್ಷ ಎಂದರೆ ಸಮರ್ಥ. ಯೋಗ್ಯತೆ. ಸಾಮರ್ಥ್ಯ ಅಥವಾ ಯೋಗ್ಯತೆಯನ್ನೇ 'ದಾಕ್ಷ್ಯ' ಎಂದು ಕರೆಯುತ್ತಾರೆ. ಧರ್ಮವನ್ನು ಸಾಧಿಸಲು ಪ್ರತಿಯೊಂದಕ್ಕೂ ಸಾಮರ್ಥ್ಯ ಅಥವಾ ಯೋಗ್ಯತೆ ಬೇಕು. ಹಿಂದಿನ ಉದಾಹರಣೆಯನ್ನೇ ತೆಗೆದುಕೊಂಡು ವಿಚಾರ ಮಾಡುವುದಾದರೆ ಕಣ್ಣಿಗೆ ನೋಡುವ ಸಾಮರ್ಥ್ಯ ಬೇಕು. ದಕ್ಷತೆ ಬೇಕು. ಕಣ್ಣು ನೋಡುವ ಧರ್ಮವನ್ನು ಪಡೆದುಕೊಂಡಾಗ ಅದು ನೋಡುವ ದಕ್ಷತೆಯನ್ನು ಸಂಪಾದಿಸುತ್ತದೆ. ಇದನ್ನೇ ಯಕ್ಷನು ಧರ್ಮಕ್ಕೆ ಅವಿರೋಧವಾದುದು ದಾಕ್ಷ್ಯ ಎಂಬ ಉತ್ತರವನ್ನು ಧರ್ಮರಾಜನಿಂದ ಪಡೆದ.    

ದಾಕ್ಷ್ಯ ಎಂಬ ಪದಕ್ಕೆ ಕೌಶಲ ಅಥವಾ ನಿಪುಣತೆ ಎಂಬ ಅರ್ಥವೂ ಇದೆ. ಮಾಡುವ ಕರ್ಮದಲ್ಲಿ ನೈಪುಣ್ಯವಿದ್ದರೇ ಕರ್ಮವು ಸಫಲವಾಗುತ್ತದೆ. 'ಯೋಗಃ ಕರ್ಮಸು ಕೌಶಲಮ್' ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಮಾಡುವ ಕರ್ಮವು ನಿಯತ್ತಿನಿಂದ ಕೂಡಿರಬೇಕು. ಮಾಡುವ ಕರ್ಮವು ಮರ್ಮದಿಂದ ಕೂಡಿದ್ದರೆ ಆ ಕರ್ಮವು ಸಫಲತೆಯ ಲಕ್ಷಣವಾಗಿರುತ್ತದೆ. ಇಂತಹ ಕರ್ಮವೇ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣವಾಗಿ 'ಕರ್ಮಯೋಗ' ಎನಿಸಿಕೊಂಡು ದಾಕ್ಷ್ಯ ಎಂಬ ಪದಕ್ಕೆ ಅರ್ಥವಾಗುತ್ತದೆ.

ಸೂಚನೆ : 9
/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 45 ದ್ರೌಪದೀ-ಸ್ವಯಂವರ : ಸೊಕ್ಕಡಗಿದ ಅರಸರು (Vyaasa Vikshita - 45 Draupadi-Svayanvara: Sokkadagida Arasaru)

ಲೇಖಕರು : ಡಾ|| ಕೆ. ಎಸ್. ಕಣ್ಣನ್

 (ಪ್ರತಿಕ್ರಿಯಿಸಿರಿ lekhana@ayvm.in)


ಇದೋ ಬಲಶಾಲಿಗಳಾದ ಧೃತರಾಷ್ಟ್ರನ ಮಕ್ಕಳು ಬಂದಿರುವರು: ದುರ್ಯೋಧನ, ದುರ್ವಿಷಯ, ದುರ್ಮುಖ, ದುಷ್ಪ್ರಧರ್ಷಣ, ದುಃಶಾಸನ, ವಿವಿಂಶತಿ, ವಿಕರ್ಣ, ವಿರೋಚನ, ವಿಕಟ, ತುಹುಂಡ ಮೊದಲಾದವರು. ಇವರೊಂದಿಗೆ ಕರ್ಣನೂ ಇದ್ದಾನೆ. ಅಲ್ಲದೆ ಇದೋ ಇತ್ತ ಶಕುನಿ, ಬೃಹದ್ಬಲ ಮೊದಲಾದ ಗಾಂಧಾರದೇಶದ ರಾಜಕುಮಾರರಿದ್ದಾರೆ. ಇಲ್ಲಿ ಅಶ್ವತ್ಥಾಮ, ವಿರಾಟಪುತ್ರನಾದ ಉತ್ತರ, ಚೇಕಿತಾನ, ಪೌಂಡ್ರಕವಾಸುದೇವ, ಭಗದತ್ತ, ಮದ್ರದೇಶದ ಶಲ್ಯ ಮತ್ತು ಆತನ ಇಬ್ಬರು ಮಕ್ಕಳು, ಅಲ್ಲದೆ ಸೋಮದತ್ತ, ಭೂರಿಶ್ರವ, ಜೊತೆಗೆ ಕೃಷ್ಣ-ಬಲರಾಮರು, ಅಕ್ರೂರ, ಸಾತ್ಯಕಿ, ಉದ್ಧವರಿರುವರು. ವೃಷ್ಣಿವಂಶದ ಕೃತವರ್ಮ, ಉಶೀನರ, ಝಿಲ್ಲೀಪಿಂಡಾರಕ – ಇವರುಗಳೂ, ಅತ್ತ ಸೈಂಧವ ಜಯದ್ರಥ, ಚಿತ್ರಾಂಗದ, ಶಿಶುಪಾಲ ಹಾಗೂ ಜರಾಸಂಧ - ಮುಂತಾದ ಅನೇಕ ರಾಜಕುಮಾರರೂ ಬಂದಿರುವರು.

ಇವರುಗಳು ಮಾತ್ರವಲ್ಲದೆ, ಮತ್ತೂ ಹಲವು ಜನಪದಪ್ರಭುಗಳು ನಿನಗಾಗಿ ನೆರೆದಿರುವರು, ಭದ್ರೆ! (ಭದ್ರೆ ಎಂದರೆ ಮಂಗಳವನ್ನುಂಟುಮಾಡುವವಳು). ಇವರಲ್ಲಿ ಲಕ್ಷ್ಯವನ್ನು ಯಾವನು ಭೇದಿಸುವನೋ ಆತನನ್ನು ನೀನು ವರಿಸತಕ್ಕದ್ದು - ಎಂದನು.

ಅಲ್ಲಿ ಸೇರಿದ್ದ ಅರಸರು ಹೇಗಿದ್ದರು! ಯುವಕರು, ಅಲಂಕರಿಸಿಕೊಂಡಿದ್ದವರು, ಪರಸ್ಪರಸ್ಪರ್ಧಿಗಳು; ಅಸ್ತ್ರವಾಗಲಿ, ಬಲವಾಗಲಿ ತಮ್ಮಲ್ಲೇ ಹೆಚ್ಚೆಂದು ಭಾವಿಸಿದ್ದವರು; ರೂಪ-ವೀರ್ಯ-ಕುಲ-ಶೀಲ-ಧನ-ಯೌವನಗಳಿಂದಾಗಿ ಉತ್ಕಟವಾದ ದರ್ಪವನ್ನು ಹೊಂದಿದ್ದವರು. ಎಂದೇ ಹಿಮಾಲಯದಲ್ಲಿ ಕಾಣಸಿಗುವ ಮದಗಜಗಳಂತೆ ತೋರುತ್ತಿದ್ದವರು! ಮದಮಾತ್ರವಲ್ಲದೆ ಕಾಮೋನ್ಮಾದವೂ ಅವರಲ್ಲಿ ತುಂಬಿತ್ತು: ಕೃಷ್ಣೆಯು ನನ್ನವ(ಳಾಗತಕ್ಕವ)ಳೇ ಎಂಬ ಅವಳನ್ನು ಕುರಿತಾದ ಅಭಿಮಾನವು ಅವರಲ್ಲೊಬ್ಬೊಬ್ಬರಲ್ಲೂ ತುಂಬಿಹರಿಯುತ್ತಿತ್ತು. ಆ ಭಾವದೊಂದಿಗೆ ರಂಗಮಂಡಪಕ್ಕೆ ಬಂದ ಅವರಿಂದಾಗಿ, ಉಮೆಯನ್ನು ವಿವಾಹವಾಗಲೆಂದು ಬಂದ ದೇವಸ್ತೋಮವೇ ನೆರೆದಂತಿತ್ತು.

ಪರಸ್ಪರಸ್ನೇಹಭಾವವಿದ್ದ ರಾಜರೂ ಈಗ ಪರಸ್ಪರದ್ವೇಷಿಗಳಾದರು! ಸ್ವಯಂವರವನ್ನು ವೀಕ್ಷಿಸಲು ವಿಮಾನಗಳಲ್ಲಿ ದೇವಗಣಗಳೇ ಬಂದವು. ಅಲ್ಲಿ ಆಗಮಿಸಿದ್ದ ವೃಷ್ಣಿ ಹಾಗೂ ಅಂಧಕವಂಶಗಳ ಪ್ರಮುಖವ್ಯಕ್ತಿಗಳು ಶ್ರೀಕೃಷ್ಣನ ಅಭಿಪ್ರಾಯವನ್ನು ಅರ್ಥಮಾಡಿಕೊಂಡು ಕೇವಲ ಪ್ರೇಕ್ಷಕರಾಗಿ ಸುಮ್ಮನೆ ಕುಳಿತಿದ್ದರು.

ಶ್ರೀಕೃಷ್ಣನು ಪಂಚಪಾಂಡವರನ್ನು ಗುರುತಿಸಿದನು; ಲಕ್ಷ್ಮಿಗೆ ಎದುರಾಗಿರುವ ಮತ್ತಗಜಗಳೆಂಬಂತೆಯೂ, ಬೂದಿಮುಚ್ಚಿದ ಕೆಂಡಗಳಂತೆಯೂ ಅವರಿದ್ದರು; ಬಲರಾಮನಿಗೆ ಅವರನ್ನು ತೋರಿಸಿದನು; ಬಲರಾಮನೂ ಸಂತೋಷದಿಂದ ಅವರತ್ತ ಕಣ್ಣು ಹಾಯಿಸಿದನು. ಆದರೆ ಇನ್ನಿತರ ರಾಜರು ಕೃಷ್ಣೆಯಲ್ಲಿಯೇ ನೆಟ್ಟಮನಸ್ಸುಳ್ಳವರೂ ಪರಸ್ಪರ ಸ್ಪರ್ಧಾಳುಗಳೂ ಆಗಿದ್ದ ಕಾರಣ ಈ ಪಾಂಡವರನ್ನು ಗುರುತಿಸಲೇ ಇಲ್ಲ. ಪಂಚಪಾಂಡವರಿಗಂತೂ ದ್ರೌಪದಿಯ ವಿಷಯದಲ್ಲಿ ತೀವ್ರಾಪೇಕ್ಷೆಯೇ ಉಂಟಾಯಿತು.

ಅಲ್ಲಿದ್ದ ರಾಜರಲ್ಲಿ ಬಹುಮಂದಿಗೆ ಆ ಧನುಸ್ಸನ್ನು ಮನಸ್ಸಿನಿಂದಲೂ ಹೆದೆಯೇರಿಸಲು ಸಾಧ್ಯವಾಗಲಿಲ್ಲ. ಇನ್ನು ಅದನ್ನೆತ್ತಲು ಹೋದವರು, ಪ್ರಯತ್ನಿಸಿ, ಸಮರ್ಥರಾಗದೆ, ನೆಲದ ಮೇಲೆ ಬಿದ್ದು ಹೊರಳಾಡಿ, ಕಾಂತಿಹೀನರಾಗಿ, ಹಾರಕಿರೀಟಗಳನ್ನು ಬೀಳಿಸಿಕೊಂಡು ನಿಟ್ಟುಸಿರುಬಿಡುತ್ತಾ ತಣ್ಣಗಾದವರೇ. ಅಂತಗಹವರು ಆರ್ತರಾಗಿ ಹಾಹಾಕಾರ ಮಾಡಿದರು. ದ್ರೌಪದಿಯನ್ನು ಕುರಿತಾದ ಅವರಾಸೆಯು ಕಮರಿತು. ಹೀಗಾಗಿ ಆ ರಾಜಮಂಡಲವು ಖಿನ್ನವಾಯಿತು.

ಧನುರ್ಧಾರಿಗಳಲ್ಲಿ ಶ್ರೇಷ್ಠನಾದ ಕರ್ಣನು ಆ ರಾಜರನ್ನೆಲ್ಲಾ ನೋಡುತ್ತಾ ತಾನು ಮುಂದೆ ಹೋದನು. ಶೀಘ್ರವಾಗಿ ಧನುಸ್ಸನ್ನೆತ್ತಿದನು, ಹೆದೆಯೇರಿಸಿದನು, ಮತ್ತು ಬಾಣ ಹೂಡಿದನು. (ಕರ್ಣನು ಧನುಸ್ಸನ್ನೆತ್ತುವ ಪ್ರಸಂಗವು ಮಹಾಭಾರತದ ದಾಕ್ಷಿಣಾತ್ಯ ಪಾಠದಲ್ಲಿ ಕಂಡುಬರುವುದಿಲ್ಲ. ಧನುರ್ಬಾಣಗಳನ್ನು ಕರ್ಣನಿಗೆ ಹೊಂದಿಸಲಾಗಲಿಲ್ಲವೆಂಬುದಾಗಿ ಸಹ ಮುಂದೆ ಉಲ್ಲೇಖವಿದೆ. ಇದನ್ನು ಗಮನಿಸಬೇಕು).

ಸೂಚನೆ : 9/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಹಲವು ದೇವರುಗಳು (Halavu Devarugalu)

ಲೇಖಕರು : ಡಾ. ಹರ್ಷ ಸಿಂಹ ಎಂ. ಎಸ್.

(ಪ್ರತಿಕ್ರಿಯಿಸಿರಿ: lekhana@ayvm.in)




ನಮ್ಮಲ್ಲಿ ಒ೦ದು ಕುಚೋದ್ಯದ ಕಥೆ ಉ೦ಟು. ಒಮ್ಮೆ ಒ೦ದು ಹಡಗಿನಲ್ಲಿ ಕೆಲವರು ಪ್ರಯಾಣಿಸುತ್ತಿದ್ದರು. ಭಾರತೀಯನೂ ಒಬ್ಬ ಆ ಹಡಗಿನಲ್ಲಿ ಇದ್ದ. ಸಮುದ್ರ ಮಧ್ಯದಲ್ಲಿ ಪ್ರಯಾಣಿಸುತಿದ್ದಾಗ ಆ ಹಡಗಿನಲ್ಲಿ ಒ೦ದು ಒಡಕು ಉ೦ಟಾಗಿ, ಹಡಗಿನೊಳಗೆ ನೀರು ತು೦ಬಲು ಪ್ರಾರ೦ಭವಾಯಿತು. ತಕ್ಷಣ ಆ ಹಡಗಿನಲ್ಲಿದ್ದವರೆಲ್ಲರೂ ತಮ್ಮ ತಮ್ಮ ಮತಕ್ಕೆ ಅನುಸಾರವಾಗಿ ತಾವು ನ೦ಬಿದ್ದ ದೇವನನ್ನು ಪ್ರಾರ್ಥಿಸಿದರು. ಅವರವರ ಮತಕ್ಕೆ ಅನುಸಾರವಾಗಿ ಅವರವರ ದೇವನು ಬ೦ದು ಅವರನ್ನು ಕಾಪಾಡಿದ.  ಭಾರತೀಯನೂ "ದೇವರೇ! ಕಾಪಾಡಪ್ಪಾ" ಅ೦ತ ಪ್ರಾರ್ಥಿಸಿದ. ಯಾರೂ ಬರಲಿಲ್ಲ! ಕಾರಣ, ಮಹಾವಿಷ್ಣು ಅ೦ದುಕೊ೦ಡನ೦ತೆ, ಮಹಾದೇವನು ಹೋಗಿ ಆ ಭಕ್ತನನ್ನು ಕಾಪಾಡುತ್ತಾನೆ ಅ೦ತ. ಮಹಾದೇವನು ಅ೦ದುಕೊ೦ಡನ೦ತೆ, ಬ್ರಹ್ಮ ಹೋಗಿ ಕಾಪಾಡುತ್ತಾನೆ ಅ೦ತ. ಬ್ರಹ್ಮ ಅ೦ದುಕೊ೦ಡನ೦ತೆ, ಮಹಾವಿಷ್ಣು ಕಾಪಾಡುತ್ತಾನೆ ಅ೦ತ. ಕಡೆಗೆ, ಯಾರೂ ಬರಲೇ ಇಲ್ಲ. ಆ ಭಕ್ತ ನೀರಿನಲ್ಲಿ ಮುಳಗಿದ!


ಭಾರತೀಯರಲ್ಲಿ ಹಲವು ದೇವರುಗಳು, ಅವರುಗಳಲ್ಲೇ ಕಿತ್ತಾಟ ಉ೦ಟು ಅನ್ನೋದು ಈ ಕುಚೋದ್ಯದ ಹಿ೦ದಿನ ಅಭಿಪ್ರಾಯ. ಶ್ರೀರ೦ಗಮಹಾಗುರುಗಳು ಒ೦ದು ಸು೦ದರ ಉದಾಹರಣೆಯ ಮೂಲಕ ಇದಕ್ಕೆ ಉತ್ತರಿಸಿದ್ದಾರೆ.  ಒ೦ದು ತೆ೦ಗಿನ ಮರವನ್ನ ನೋಡಿದರೆ, ಅದರಲ್ಲಿ ನಾವು ತೆ೦ಗಿನ ಕಾಯಿ, ತೆ೦ಗಿನ ಸೋಗೆ, ತೆ೦ಗಿನ ಕಾ೦ಡ, ತೆ೦ಗಿನ ಗರಟ - ಹೀಗೆ ಹಲವು ಅ೦ಶಗಳನ್ನು ಗಮನಿಸಬಹುದು. ಆದರೂ, ಇವೆಲ್ಲವೂ 'ತೆ೦ಗು' ಎ೦ಬುದರ ಪ್ರಾಕಾರಗಳೇ, ಅದರ ವಿಕಾಸಗಳೇ, ಅದರ ವಿವಿಧ ರೂಪಗಳೇ ಆಗಿವೆ. ಇವುಗಳ್ಳೆಲ್ಲದರಲ್ಲೂ   ಸಾಧಾರಣವಾಗಿರೋದು 'ತೆ೦ಗು' ಎನ್ನುವ ಒ೦ದು ವಿಷಯ. ಹಾಗೆಯೇ ಬ್ರಹ್ಮ, ವಿಷ್ಣು, ರುದ್ರ ಮೂವರೂ ಪರಬ್ರಹ್ಮದ ಪ್ರಕಾರಗಳೇ, ಆ ಪರಬ್ರಹ್ಮದ ವಿವಿಧ ರೂಪಗಳೇ, ಅದರ ವಿಕಾಸಗಳೇ ಆಗಿದ್ದಾರೆ. ಮೂವರಲ್ಲಿ ಸಾಧಾರಣವಾಗಿರುವುದು ಪರಬ್ರಹ್ಮಚೈತನ್ಯವೇ. ಒಬ್ಬನೇ ಮೂರು ರೂಪಗಳಿಂದ ಕೆಲಸ ಮಾಡುತ್ತಾನೆ. ಆ ಮೂವರೂ ಸಮರೂ ಹೌದು. ಕಾಲವಿಶೇಷದಲ್ಲಿ ಪರಸ್ಪರವಾಗಿ ಮುಖ್ಯರಾಗುವುದೂ ಉಂಟು, ಭೃತ್ಯರಾಗುವುದೂ ಉಂಟು. ಪ್ರಭುಗಳಾಗುವುದೂ ಉಂಟು. "ಮುಖ್ಯ" ಮತ್ತು "ಅಮುಖ್ಯ" ಎ೦ಬ ಪದವಿ ಮೂವರಿಗೂ ಉ೦ಟು.  ಒಂದೇ ಮೂರ್ತಿಯೇ ಹಾಗೆ ಬ್ರಹ್ಮ, ವಿಷ್ಣು, ಶಿವ ಎಂದು ಮೂರು ಪ್ರಕಾರದ ಭೇದಗಳನ್ನು ತಾಳಿತು. ಆದ್ದರಿಂದ ಮುಖ್ಯವಾಗಿರುವಿಕೆ ಮತ್ತು ಅಮುಖ್ಯವಾಗಿರುವಿಕೆ ಎಂಬುದು ಮೂವರಿಗೂ ಸಾಧಾರಣವಾಗಿದೆ. 


ಇನ್ನು ನಮ್ಮ ಪುರಾಣದ ಕಥೆಗಳಲ್ಲಿ ಈ ತ್ರಿಮೂರ್ತಿಗಳ ಮಧ್ಯದಲ್ಲಿಯೇ ಒಮ್ಮೊಮ್ಮೆ ವೈರವನ್ನೋ ಕಿತ್ತಾಟವನ್ನೋ ನೋಡುತ್ತೀವಲ್ಲ ಅ೦ತ ಕೇಳಿದರೆ, ಅದಕ್ಕೂ ಉತ್ತರವನ್ನು ಶ್ರೀರ೦ಗಮಹಾಗುರುಗಳ ಒ೦ದು ಉದಾಹರಣೆಯ ಮೂಲಕ ನೋಡಬಹುದು.  ಈ ತ್ರಿಮೂರ್ತಿಗಳ ಕಲಹ - ಹಾಲಿನ ಕಥೆಯಂತೆ. ಹಾಲು ತನ್ನ ಜಾಗದಲ್ಲಿರುವಾಗ ಮೊಸರು ಅದನ್ನು ಬಂದು ಸೇರಿತು. "ನೀನು ಸೇರಿದರೆ ನನ್ನ ಸ್ವರೂಪವೇ ನಾಶವಾಗುತ್ತದೆ' ಎಂದು ಮೊಸರಿನೊಡನೆ ಜಗಳ, ಎರಡಕ್ಕೂ ಭಯಂಕರವಾದ ಯುದ್ದ ನಡೆಯಿತು. ಕೊನೆಗೆ ಮೊಸರಿನ ರೂಪಕ್ಕೆ ಎಲ್ಲಾ ಬಂದಿಳಿಯಿತು. ಈಗ ಮೊಸರಿನ ಜಯವಾಯಿತು. ಕಡೆಗೋಲು ಅದರೊಡನೆ ಜಗಳವಾಡಿ ಬೆಣ್ಣೆಯನ್ನು ಬೇರೆ ಮಾಡಿತು. ಈಗ ಬೆಣ್ಣೆಗೆ ಜಯ. ಮತ್ತೆ ಬೆಣ್ಣೆಗೂ ಶಾಖಕ್ಕೂ ಕಲಹ. ಕೊನೆಗೆ ಶಾಖದ ಜಯದಿಂದ ಬೆಣ್ಣೆಯ ರೂಪವು ಹೋಗಿ ತುಪ್ಪದ ರೂಪ. ಆ ತುಪ್ಪವೇನಾದರೂ ಮೊಸರಿನ ಬಳಿ ಬಂದರೆ, ಹತ್ತಿರ ಸೇರಿಸುವುದಿಲ್ಲ, ಮೊಸರು ಅದನ್ನು ನೀನು ಸೇರಿದರೆ ನನ್ನ ಸ್ವರೂಪವೇ ನಾಶ' ಎಂದು ಹೇಳಿ ಕಲಹವಾಗುತ್ತದೆ. ಇದು ಹೇಗೆ ರೂಪಕವೋ ಹಾಗೆಯೇ ತ್ರಿಮೂರ್ತಿಗಳ ಕಲಹ ಪ್ರಸಂಗವೂ ಇರುವುದು. ಅವರ ಸೃಷ್ಟಿ ಸ್ಥಿತಿ ಲಯ ವ್ಯಾಪಾರಗಳನ್ನು ರೂಪಕವಾಗಿ ಹೇಳುವಾಗ ಅದು ಕಲಹ ಪ್ರಸಂಗದಂತೆ ಕಾಣುವುದು.


ಪರತತ್ತ್ವವು ಒ೦ದೇ ಆಗಿ ಸಾಧಕರ ಅನುಭವಕ್ಕೆ ಬರುವುದೂ ಉ೦ಟು. ತ್ರಿಮೂರ್ತಿಗಳಾಗಿಯೂ ಅನುಭವಕ್ಕೆ ಬರುವುದೂ ಉ೦ಟು.  ಆದರೆ, ಇವರುಗಳ ಮೂಲ ಒಂದೇ. ಆ ಒಂದು ಪರತತ್ತ್ವವೇ ಸೃಷ್ಟಿ-ಸ್ಥಿತಿ-ಲಯ ವ್ಯಾಪಾರಗಳನ್ನು ನಿರ್ವಹಿಸಲು  ತ್ರಿಮೂರ್ತಿಗಳ ರೂಪಗಳನ್ನು ಧರಿಸಿರುವುದು ಎಂಬುದು ತಾತ್ಪರ್ಯ. ಎಂದೇ ಪರಮ ಸತ್ಯದ ಮತ್ತು ಅದರ ವಿಸ್ತಾರದ  ಅರಿವಿಲ್ಲದೇ ಕೇವಲ ನಮ್ಮ ಸಂಸ್ಕೃತಿಯನ್ನು ಹಳಿಯುವ ಉದ್ದೇಶದಿಂದ ಹೆಣೆದ ಇಂತಹ ಕುಚೋದ್ಯದ ಕಥೆಗಳಿಗೆ ಮರುಳಾಗದಿರೋಣ. 


ಸೂಚನೆ: 08/07/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

Sunday, July 2, 2023

ಯಕ್ಷ ಪ್ರಶ್ನೆ 44 Yaksha prashne 44

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)




ಪ್ರಶ್ನೆ – 43 ಬೀಜವನ್ನು ಬಿತ್ತಲು ಕ್ಷೇತ್ರವು ಯಾವುದು ?

ಉತ್ತರ - ಭೂಮಿ

ಯಕ್ಷನದು ಎಂತಹ ಪೇಲವ ಪ್ರಶ್ನೆ - ಬೀಜವನ್ನು ಬಿತ್ತನೆ ಮಾಡಲು ಆಧಾರವಾದುದು ಯಾವುದು? ಎಂದು. ಈ ಪ್ರಶ್ನೆಯಲ್ಲಿ ಉತ್ತರ ಕೊಡಲು ಏನಿದೆ? ಸಾಮಾನ್ಯನಲ್ಲಿ ಸಾಮಾನ್ಯನಿಗೂ ಬರುವ ಉತ್ತರ ಭೂಮಿ ಎಂದಲ್ಲವೇ? ಉತ್ತರವನ್ನು ಕೊಡಲು ಧರ್ಮರಾಜನಂತಹ ವೇದವೇದಾಂಗ ಪಾರಗ ಬೇಕೆ? ಧರ್ಮರಾಜನೇನು ಅಂತಹ ಊಹಾತೀತವಾದ ಉತ್ತರವನ್ನೇನೂ ನೀಡಲಿಲ್ಲ. ಅದೇ ಭೂಮಿ ಎಂಬ ಉತ್ತರವೇ ಅವನಿಂದಲೂ ಬಂದಿದ್ದು. ಬೀಜವು ಕ್ಷೇತ್ರವಿಲ್ಲದೇ ತನ್ನ ಸಂತತಿಯನ್ನು ಮುಂದುವರಿಸಲು ಸಾಧ್ಯವೇ ಇಲ್ಲ. ಯಾವುದು ಇದ್ದರೆ ಮಾತ್ರವೇ ಬೀಜವು ತನ್ನೊಳಗೆ ಇರುವ  ವೃಕ್ಷವನ್ನು ಹೊರಹಾಕಬಲ್ಲದೋ ಅದನ್ನು ತಾನೇ 'ಕ್ಷೇತ್ರ' ಎಂದು ಕರೆಯುವುದು. ಅಂತಹ ಕ್ಷೇತ್ರ ಇಲ್ಲಿ ಯಾವುದು? ಅದು ಕೇವಲ ಈ ನಮ್ಮ ಭೂಮಿಯೇ? ಮತ್ತು ಅಲ್ಲಿ ಬಿತ್ತನೆ ಮಾಡುವುದು ನಾವು ಅಂದುಕೊಂಡ ಮೊಳಕೆ ಒಡೆಯುವ ಬೀಜ ಮಾತ್ರವೋ? ಎಂದರೆ ಎರಡೂ ಹೌದು. ಆದರೆ ಒಂದೇ ಅಲ್ಲ. ಇಲ್ಲಿ ಎರಡರ ವಿಶ್ಲೇಷಣೆ ಅಗತ್ಯ. 

ಭಗವದ್ಗೀತೆಯಲ್ಲಿ ಯಾವುದು ಕ್ಷೇತ್ರ? ಎಂಬ ಬಗ್ಗೆ ಈ ರೀತಿಯಾಗಿ ಭಗವಾನ್ ಶ್ರೀಕೃಷ್ಣ ಹೇಳುತ್ತಾನೆ " ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ" ಎಂದು. ಯಾವ ಮಾನವನ ಶರೀರ ಉಂಟೋ ಅದನ್ನೇ ಕ್ಷೇತ್ರ ಎಂದು ಪ್ರಧಾನವಾಗಿ ಕರೆಯಲಾಗಿದೆ. ಇದನ್ನು ಯಾರು ತಿಳಿಯುತ್ತಾರೋ ಅವರನ್ನು 'ಕ್ಷೇತ್ರಜ್ಞ' ಎಂದು ಕರೆಯಲಾಗುತ್ತದೆ. ಮತ್ತು ಕ್ಷೇತ್ರ ಎಂಬ ಶಬ್ದಕ್ಕೆ 'ಭೂಮಿ' ಮತ್ತು 'ಭಾರ್ಯಾ' ಎಂಬ ಅರ್ಥವನ್ನೂ ಕೊಡಲಾಗಿದೆ. ತನ್ನೊಳಗೆ ಬಂದಿರುವ ಯಾವುದೇ ಬೆಳೆಯುವಂತಹ ಬೀಜವನ್ನು ರಕ್ಷಿಸಿ ಅದನ್ನು ಪೋಷಿಸುವುದರಿಂದ ಅದಕ್ಕೆ 'ಕ್ಷೇತ್ರ' ಎಂಬ ಅಭಿಧೇಯವಿದೆ. ನಾವು ಯಾವುದೇ ಬೀಜವನ್ನು ಬಿತ್ತಿದರೂ  ಆ ಆ ಬೀಜದ ಸ್ವಭಾವಕ್ಕೆ ಅನುಗುಣವಾಗಿ ಅದು ಬೆಳೆದುಕೊಳ್ಳುತ್ತದೆ. ಅದಕ್ಕೆ ಬೇಕಾದ ಪೋಷಕ ಸಾಮಗ್ರಿಯನ್ನು ಭೂಮಿಯು ಒದಗಿಸಿಕೊಡುತ್ತದೆ. ಅಂತೆಯೇ ಒಬ್ಬ ಸ್ತ್ರೀಯು ತಾನು ಕ್ಷೇತ್ರ ಎನಿಸಿಕೊಂಡು ಪುರುಷನ ಬೀಜರೂಪವಾದ ವೀರ್ಯವನ್ನು ಧರಿಸಿ ಅದನ್ನು ಬೆಳೆಸುತ್ತಾಳೆ. ಅದನ್ನು ತನ್ನೊಳಗಿಟ್ಟು ಜೋಪಾನವಾಗಿ ಪೋಷಿಸುತ್ತಾಳೆ. ಆದ್ದರಿಂದಲೇ ಅವಳಿಗೆ 'ಭಾರ್ಯಾ - ಧರಿಸುವವಳು' ಎಂಬ ಹೆಸರು ಬಂದಿದೆ. ಭೂಮಿಗೂ ಇದೇ ಅರ್ಥವನ್ನು ಕೊಡುವ 'ಧರಿಣಿ' ಎಂಬ ಪದದ ಬಳಕೆ ಇದೆ. ಈ ಸೃಷ್ಟಿಯು ಆಗಬೇಕಾದರೆ ಪರಮಪುರುಷನು ಎರಡಾಗಿ ವಿಭಾಗ ಆದ ಎಂದು ವೇದ ಸಾರುತ್ತದೆ. ಆ ಎರಡರಲ್ಲಿ ಒಂದು ಸ್ತ್ರೀ, ಇನ್ನೊಂದು ಪುರುಷ. ಇವರಿಬ್ಬರ ಸಮಾಯೋಗದಿಂದಲೇ ಮುಂದಿನ ಸಂತತಿಯು ವಿಸ್ತಾರವಾಗುತ್ತದೆ. ಈ ವಿಸ್ತಾರದ ವಿಷಯದಲ್ಲಿ ಸ್ತ್ರೀಯ ಪಾತ್ರ ಬಹುಮುಖ್ಯವಾದುದು. ಪ್ರಕೃತಿಮಾತೆಯು ಯಾವ ರೀತಿ ತನ್ನೊಳಗೆ ಎಲ್ಲಾ ಬಗೆಯ ಪ್ರಾಣಿಗಳಿಗೂ ಆಶ್ರಯವನ್ನು ನೀಡಿದೆಯೋ, ಅದರ ಪ್ರತಿರೂಪವಾದ ಸ್ತ್ರೀಯೂ ಕೂಡಾ ತನ್ನೊಳಗೆ ಪರಮಪುರುಷನ ಹೋಲುವಂತಹ ಪುರುಷನನ್ನು ಧಾರಣೆ ಮಾಡಿ ಲೋಕಕ್ಕೆ ನೀಡುತ್ತಾಳೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಯಕ್ಷನು ಬೀಜಾವಾಪಕ್ಕೆ ಕ್ಷೇತ್ರ ಯಾವುದು ಎಂದು ಕೇಳಿದ್ದು.

ಸೂಚನೆ : 02/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.



ಅಷ್ಟಾಕ್ಷರೀ​ - 38 ಸರ್ವಧರ್ಮಾನ್ ಪರಿತ್ಯಜ್ಯ (Astakshara Darshana 38 Sarvadharmān Parityajya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಣಾಂಗಣದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಮಾಡಿದ ಉಪದೇಶವೇ ಭಗವದ್ಗೀತೆ. ಗೀತೆಗೆ ನಾನಾಭಾಷ್ಯಗಳಿವೆ. ಇವೆಲ್ಲಾ ಇರುವುದೂ ಸಂಸ್ಕೃತದಲ್ಲೇ. ಸಂಸ್ಕೃತವನ್ನು ಕಲಿತು ಇವನ್ನರಿಯುವೆ – ಎಂದಂದುಕೊಳ್ಳಲೂ ಬಹುಮಂದಿಗಿಂದು ಸಮಯವಿಲ್ಲವಾಗಿದೆ.  ಗೀತಾಸಾರಾಂಶವನ್ನು ಯಾರಾದರೂ ಸರಳವಾಗಿ ತಿಳಿಸಿದರೆ ಅದೇ ಮಹೋಪಕಾರವಾದೀತು!

ಹೋಗಲಿ, ಶ್ರೀಕೃಷ್ಣನ ಕಟ್ಟಕಡೆಯ ಮಾತಾದರೂ ಏನು? - ಎಂಬ ಕುತೂಹಲವು ಹುಟ್ಟಬಹುದು. ಆ ಜಿಜ್ಞಾಸೆಯೇ ಇಲ್ಲಿಯ ವಸ್ತು. ಗೀತೆಯ ಕೊನೆಯ ಆರು ಶ್ಲೋಕಗಳು ಅರ್ಜುನ-ಸಂಜಯರ ನುಡಿಗಳು. ಅವಕ್ಕೂ ಹಿಂದಿನ ಆರು, ಕೃಷ್ಣನ ಉಪಸಂಹಾರದ ಉಕ್ತಿಗಳು: ಅರ್ಜುನನೇ, ನನ್ನೀ ಮಾತುಗಳು ರಹಸ್ಯವಾದವು; ರುಚಿ-ಆದರಗಳಿಲ್ಲದವರಿಗೆ ಅದನ್ನು ಹೇಳದಿರು; ನಮ್ಮೀ ಸಂವಾದವೇ ಒಂದು ಜ್ಞಾನಯಜ್ಞ; ಇದರ ಅಧ್ಯಯನವಿರಲಿ, ಶ್ರವಣಮಾತ್ರದಿಂದಲೂ ಸದ್ಗತಿಲಾಭವುಂಟು; ನನ್ನ ಮಾತಿನಿಂದ ನಿನ್ನ ಮೋಹ ಕಳೆಯಿತಷ್ಟೆ? - ಎಂದು ಹೇಳುವ ಕೇಳುವ ಮಾತುಗಳು.

ಈ ಹನ್ನೆರಡು ಶ್ಲೋಕಗಳ ಹಿಂದಿನ ಮಾತೇ ಶ್ರೀಕೃಷ್ಣನ ಉಪದೇಶದ ಕೊನೆಯ ನುಡಿ: ಸರ್ವಧರ್ಮಾನ್ ಪರಿತ್ಯಜ್ಯ - ಎಂದಾರಂಭವಾಗುವ ಶ್ಲೋಕ. ಇದನ್ನು ಚರಮಶ್ಲೋಕವೆಂದು ಜಪಿಸುವುದೂ ಉಂಟು. 'ಚರಮ' ಎಂದರೆ ಕೊನೆಯದು. ಈ ಅಂತಿಮೋಕ್ತಿಯಲ್ಲೇ ಗೀತಾಸಾರವೂ ಇದೆಯೆಂದರೆ ತಪ್ಪಲ್ಲ.

ಏನೆನ್ನುತ್ತದೆ ಈ ಶ್ಲೋಕ? : "ಅಯ್ಯಾ ಅರ್ಜುನನೇ, ಎಲ್ಲಾ ಧರ್ಮಗಳನ್ನೂ ಬಿಡು; ನನ್ನೊಬ್ಬನನ್ನೇ ಶರಣುಹೊಂದು; ಹಾಗೆ ಮಾಡಿದೆಯಾದರೆ ನಿನ್ನನ್ನು ಸರ್ವಪಾಪಗಳಿಂದಲೂ ಬಿಡಿಸುವೆನು, ಶೋಕಿಸಬೇಡ".

ಶ್ಲೋಕವು ಸುಲಭವಾಗಿದೆಯೆಂದು ಮೇಲ್ನೋಟಕ್ಕೆ ತೋರುತ್ತದೆ. ಆದರಿಲ್ಲಿ ಹಲವು ವಿಶೇಷಗಳಿವೆ. ಕೆಲವನ್ನು ವ್ಯಾಖ್ಯಾನಕಾರರು ಗುರುತಿಸಿದ್ದಾರೆ. ಆದರೆ ಮುಖ್ಯವಿಶೇಷವೊಂದನ್ನು ಶ್ರೀರಂಗಮಹಾಗುರುಗಳು ನಿರೂಪಿಸಿದ್ದಾರೆ.

ಮೊದಲನೆಯದಾಗಿ "ಎಲ್ಲ ಧರ್ಮಗಳನ್ನೂ ಬಿಡು" ಎಂದರೇನರ್ಥ? (ಈಚೆಗಂತೂ ಹಿಂದೂಧರ್ಮ, ಇಸ್ಲಾಂಧರ್ಮ, ಕ್ರೈಸ್ತಧರ್ಮ ಎಂದೆಲ್ಲ ಪದಪ್ರಯೋಗಗಳ  ರೂಢಿಯೇರ್ಪಟ್ಟು, ಅಪಾರ್ಥಕ್ಕೆ ದುಪ್ಪಟ್ಟು ಆಸ್ಪದವೇ ಆಗಿಹೋಗಿದೆ. ಗೀತೆಯ ಕಾಲಕ್ಕೆ ಇಸ್ಲಾಂ ಇರಲಿ, ಕ್ರೈಸ್ತವೂ ಹುಟ್ಟಿರಲಿಲ್ಲವಷ್ಟೆ? ಅಲ್ಲದೆ, ಅವನ್ನು ಪಂಥಗಳೆನ್ನಬಹುದು, ಅಷ್ಟೆ; ಧರ್ಮವೆಂದಲ್ಲ.)

ಯುದ್ಧಮಾಡುವುದು ಕ್ಷತ್ರಿಯಧರ್ಮ - ಎಂದು ಕೃಷ್ಣನೇ ಹೇಳಿರುವನಲ್ಲವೇ? ಕ್ಷತ್ರಸಹಜವಾದ ಅದನ್ನು ಅರ್ಜುನನು ಬಿಡಬೇಕೆಂದರ್ಥವೇ? ಅರ್ಜುನನು ಗೃಹಸ್ಥನೂ ಹೌದು; ಗೃಹಸ್ಥಧರ್ಮವನ್ನೂ ತ್ಯಜಿಸಬೇಕೆಂದೇ? 'ಧರ್ಮಂ ಚರ' ಎಂಬ ಉಪನಿಷದುಕ್ತಿಗೆ ಇವೆಲ್ಲ ವಿರುದ್ಧವಲ್ಲವೇ? ಎರಡನೆಯದಾಗಿ, ಧರ್ಮವೆಂಬುದು ಕರ್ತವ್ಯವೆಂದಾದಲ್ಲಿ ಕರ್ತವ್ಯವನ್ನೇ ತೊರೆಯುವುದೇ? ಕರ್ತವ್ಯಗಳೆಲ್ಲವನ್ನೂ ಬಿಟ್ಟುಬಿಟ್ಟು ಭಗವಂತನಲ್ಲಿ "ಶರಣಾಗಿಬಿಟ್ಟೆ"ನೆಂದರಾಯಿತೇ? ಇದು ಬೇಜವಾಬ್ದಾರಿತನವಾಗುವುದಿಲ್ಲವೇ? ಮೂರನೆಯದಾಗಿ, ಅಷ್ಟಕ್ಕೇ ಪಾಪಗಳೆಲ್ಲ ಕಳೆಯುವುದಾದಲ್ಲಿ, ಆಹಾ, ಎಲ್ಲವೂ ಸುಲಭವೇ ಆಗಿಹೋಯಿತು: ಶೋಕಿಸುವುದಕ್ಕೆ ಆಸ್ಪದವಾದರೂ ಇನ್ನೇನಿದೆ? - ಎಂದೆಲ್ಲಾ ಪ್ರಶ್ನೆಗಳು ಏಳುವುದಿಲ್ಲವೇ?

 ಭಗವಂತನಲ್ಲಿ ಶರಣಾಗತಿಯನ್ನು ಈ ಶ್ಲೋಕವು ಹೇಳುತ್ತದೆಂಬುದೇನೋ ಸುಸ್ಪಷ್ಟವೇ. 'ಧರ್ಮ'ವೆಂಬುದಕ್ಕೆ 'ಕರ್ತವ್ಯಕರ್ಮ'ಗಳು ಎಂಬುದಷ್ಟೇ ಅರ್ಥವಲ್ಲ. ಏನೇನನ್ನು ಬಿಟ್ಟಾಗ ಶರಣಾಗತಿಯು ಸಾಧ್ಯವೋ ಅದದನ್ನೆಲ್ಲ ಬಿಡತಕ್ಕದ್ದು; ಅದಕ್ಕಾಗಿ, ಯಾವ 'ಧರ್ಮ'ಗಳನ್ನು ಬಿಟ್ಟಾಗ ಶರಣಾಗತಿಯು ಸಾಧ್ಯ? - ಎಂಬುದನ್ನು ಮೊದಲರಿಯಬೇಕು.

ಕಣ್ಣು ಇಂದ್ರಿಯ; ನೋಡುವುದು ಅದರ "ಧರ್ಮ". ಧರ್ಮವೆಂದರೆ ಸಹಜ(ಪ್ರ)ವೃತ್ತಿ. ಉಳಿದ ಇಂದ್ರಿಯಗಳಿಗೂ ಹಾಗೆಯೇ ತಮ್ಮ ತಮ್ಮ ಧರ್ಮಗಳುಂಟು. ಹಾಗೆಯೇ ಮನೋಬುದ್ಧಿಗಳಿಗೂ: ಇವುಗಳ ಧರ್ಮವೆಂದರೆ ಸಾಧಾರಣವಾಗಿ ಹೊರಮುಖವಾಗಿ ಹರಿಯುವುದೇ. ಚಂಚಲತೆಯು ಚಿತ್ತಧರ್ಮ; ಅದು ಉತ್ಕಟವಾಗಿದ್ದಾಗ ಶರಣಾಗತಿಯೆಂತು ಘಟಿಸೀತು? ಮಾನಸಿಕಚಾಂಚಲ್ಯ-ಪ್ರಾಕೃತಿಕಜಂಜಾಟಗಳ ಗಲಾಟೆ ನಿಂತಾಗಲೇ ಭಗವಂತನಲ್ಲಿ ಶರಣಾಗತಿಯೆಂಬುದು ಶಕ್ಯವಾಗುವುದು .ಇಂದ್ರಿಯಧರ್ಮ-ಮನೋಧರ್ಮ-ಬುದ್ಧಿಧರ್ಮಗಳು ಪ್ರಕೃತಿಧರ್ಮಗಳು; ಪ್ರಕೃತಿಧರ್ಮಗಳನ್ನು ಮೀರಿದಾಗಲೇ ಭಗವಂತನು  ಲಭಿಸುವುದು.

ಭಗವಂತನಲ್ಲಿ ಸೇರಿಕೊಳ್ಳುತ್ತಿದ್ದಂತೆಯೇ ಸರ್ವಪಾಪಗಳೂ ದೂರವಾಗುವುವು. ಪಾಪಗಳೊಂದಿಗೆ ಪುಣ್ಯಗಳೂ ದೂರವಾಗುವುವೇ! ಏಕೆ? ಪುಣ್ಯಪಾಪಗಳೆರಡನ್ನೂ ಮೀರಿದುದಲ್ಲವೇ ಭಗವತ್ಸ್ವರೂಪವೆಂಬುದು? ಅದರಲ್ಲಿ ಒಂದಾಗುವುದೇ ಕರ್ಮಯೋಗ-ಭಕ್ತಿಯೋಗ-ಜ್ಞಾನಯೋಗಗಳೆಲ್ಲದರ ಗುರಿ. ಏಕಪುರುಷನಾದ ಭಗವಂತನೊಂದಿಗೆ ಸೇರ್ಪಡೆಯೆಂದರೆ ಪ್ರಕೃತಿಯಿಂದ ಬೇರ್ಪಡೆಯೇ. ಇಪ್ಪತ್ನಾಲ್ಕುತತ್ತ್ವಗಳಿಂದಾದ ಪ್ರಕೃತಿಯಿಂದ ಬೇರಾಗುವುದೇ ಯೋಗವಿದ್ಯೆಯ ಗುರಿಯಲ್ಲವೇ? ಆನಂದಸ್ವರೂಪನಾದ ಏಕಪುರುಷನಲ್ಲಿ ಏಕೀಭಾವವು ಮೂಡಿದಾಗ ಶೋಕಕ್ಕೆಡೆಯೆಲ್ಲಿ? ಹೀಗಾಗಿ, ಗೀತೆಯ ಆರಂಭವು ಶೋಕದಲ್ಲಿ; ಮುಡಿವು ಶೋಕಾತೀತದಲ್ಲಿ: ದುಃಖಸಂಯೋಗ-ವಿಯೋಗವೇ ಯೋಗವಲ್ಲವೇ? ಅಲ್ಲಿಗೆ, ಯೋಗಶಾಸ್ತ್ರವಾದ ಗೀತೆಯ ಈ ಚರಮಶ್ಲೋಕವು ಯೋಗದ ಚರಮಾವಸ್ಥೆಯನ್ನೇ ಹೇಳುತ್ತದೆಯೆಂದಾಯಿತು! 

ಭಗವಂತನಲ್ಲಿ ತನ್ಮಯತೆಯಿಂದ ಏಕೀಭೂತನಾಗಿದ್ದಾಗ ಇಂದ್ರಿಯವ್ಯಾಪಾರಗಳಿರವು, ಎಂದೇ ಯಾವುದೇ ಕರ್ಮಬಾಧ್ಯತೆಯೂ ಇರದು; ಎಂದೇ, ಕೆಲಕಾಲ ಹಾಗೆ ನೆಮ್ಮದಿ-ನೈಶ್ಚಲ್ಯಗಳಿಂದಿದ್ದು, ಇನ್ನುಳಿದ ಸಮಯದಲ್ಲಿ  ಸರ್ವಧರ್ಮಗಳನ್ನೂ, ಎಂದರೆ ವಿಹಿತವಾದ ಸರ್ವಕರ್ಮಗಳನ್ನೂ, ಅನುಷ್ಠಿಸಬೇಕಾದದ್ದೇ. ಒಟ್ಟಿನಲ್ಲಿ, ಧರ್ಮಪರಿಪಾಲನೆಯೆಂಬುದೆಲ್ಲಿ, ಧರ್ಮಪರಿತ್ಯಾಗವೆಂಬುದೆಲ್ಲಿ? (ಮತ್ತು ಹೇಗೆ?) - ಎಂಬ ವಿಭಾಗವನ್ನರಿತು ಜೀವನಮಾಡಬೇಕು - ಎಂಬ ಮಹೋನ್ನತ-ಮರ್ಮವನ್ನು ಮಹಾಗುರುಗಳು ಮನವರಿಕೆಮಾಡಿಕೊಟ್ಟಿದ್ದರು.

ಸೂಚನೆ: 2/07/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ