Showing posts with label author_harshasimha. Show all posts
Showing posts with label author_harshasimha. Show all posts

Sunday, July 9, 2023

ಹಲವು ದೇವರುಗಳು (Halavu Devarugalu)

ಲೇಖಕರು : ಡಾ. ಹರ್ಷ ಸಿಂಹ ಎಂ. ಎಸ್.

(ಪ್ರತಿಕ್ರಿಯಿಸಿರಿ: lekhana@ayvm.in)




ನಮ್ಮಲ್ಲಿ ಒ೦ದು ಕುಚೋದ್ಯದ ಕಥೆ ಉ೦ಟು. ಒಮ್ಮೆ ಒ೦ದು ಹಡಗಿನಲ್ಲಿ ಕೆಲವರು ಪ್ರಯಾಣಿಸುತ್ತಿದ್ದರು. ಭಾರತೀಯನೂ ಒಬ್ಬ ಆ ಹಡಗಿನಲ್ಲಿ ಇದ್ದ. ಸಮುದ್ರ ಮಧ್ಯದಲ್ಲಿ ಪ್ರಯಾಣಿಸುತಿದ್ದಾಗ ಆ ಹಡಗಿನಲ್ಲಿ ಒ೦ದು ಒಡಕು ಉ೦ಟಾಗಿ, ಹಡಗಿನೊಳಗೆ ನೀರು ತು೦ಬಲು ಪ್ರಾರ೦ಭವಾಯಿತು. ತಕ್ಷಣ ಆ ಹಡಗಿನಲ್ಲಿದ್ದವರೆಲ್ಲರೂ ತಮ್ಮ ತಮ್ಮ ಮತಕ್ಕೆ ಅನುಸಾರವಾಗಿ ತಾವು ನ೦ಬಿದ್ದ ದೇವನನ್ನು ಪ್ರಾರ್ಥಿಸಿದರು. ಅವರವರ ಮತಕ್ಕೆ ಅನುಸಾರವಾಗಿ ಅವರವರ ದೇವನು ಬ೦ದು ಅವರನ್ನು ಕಾಪಾಡಿದ.  ಭಾರತೀಯನೂ "ದೇವರೇ! ಕಾಪಾಡಪ್ಪಾ" ಅ೦ತ ಪ್ರಾರ್ಥಿಸಿದ. ಯಾರೂ ಬರಲಿಲ್ಲ! ಕಾರಣ, ಮಹಾವಿಷ್ಣು ಅ೦ದುಕೊ೦ಡನ೦ತೆ, ಮಹಾದೇವನು ಹೋಗಿ ಆ ಭಕ್ತನನ್ನು ಕಾಪಾಡುತ್ತಾನೆ ಅ೦ತ. ಮಹಾದೇವನು ಅ೦ದುಕೊ೦ಡನ೦ತೆ, ಬ್ರಹ್ಮ ಹೋಗಿ ಕಾಪಾಡುತ್ತಾನೆ ಅ೦ತ. ಬ್ರಹ್ಮ ಅ೦ದುಕೊ೦ಡನ೦ತೆ, ಮಹಾವಿಷ್ಣು ಕಾಪಾಡುತ್ತಾನೆ ಅ೦ತ. ಕಡೆಗೆ, ಯಾರೂ ಬರಲೇ ಇಲ್ಲ. ಆ ಭಕ್ತ ನೀರಿನಲ್ಲಿ ಮುಳಗಿದ!


ಭಾರತೀಯರಲ್ಲಿ ಹಲವು ದೇವರುಗಳು, ಅವರುಗಳಲ್ಲೇ ಕಿತ್ತಾಟ ಉ೦ಟು ಅನ್ನೋದು ಈ ಕುಚೋದ್ಯದ ಹಿ೦ದಿನ ಅಭಿಪ್ರಾಯ. ಶ್ರೀರ೦ಗಮಹಾಗುರುಗಳು ಒ೦ದು ಸು೦ದರ ಉದಾಹರಣೆಯ ಮೂಲಕ ಇದಕ್ಕೆ ಉತ್ತರಿಸಿದ್ದಾರೆ.  ಒ೦ದು ತೆ೦ಗಿನ ಮರವನ್ನ ನೋಡಿದರೆ, ಅದರಲ್ಲಿ ನಾವು ತೆ೦ಗಿನ ಕಾಯಿ, ತೆ೦ಗಿನ ಸೋಗೆ, ತೆ೦ಗಿನ ಕಾ೦ಡ, ತೆ೦ಗಿನ ಗರಟ - ಹೀಗೆ ಹಲವು ಅ೦ಶಗಳನ್ನು ಗಮನಿಸಬಹುದು. ಆದರೂ, ಇವೆಲ್ಲವೂ 'ತೆ೦ಗು' ಎ೦ಬುದರ ಪ್ರಾಕಾರಗಳೇ, ಅದರ ವಿಕಾಸಗಳೇ, ಅದರ ವಿವಿಧ ರೂಪಗಳೇ ಆಗಿವೆ. ಇವುಗಳ್ಳೆಲ್ಲದರಲ್ಲೂ   ಸಾಧಾರಣವಾಗಿರೋದು 'ತೆ೦ಗು' ಎನ್ನುವ ಒ೦ದು ವಿಷಯ. ಹಾಗೆಯೇ ಬ್ರಹ್ಮ, ವಿಷ್ಣು, ರುದ್ರ ಮೂವರೂ ಪರಬ್ರಹ್ಮದ ಪ್ರಕಾರಗಳೇ, ಆ ಪರಬ್ರಹ್ಮದ ವಿವಿಧ ರೂಪಗಳೇ, ಅದರ ವಿಕಾಸಗಳೇ ಆಗಿದ್ದಾರೆ. ಮೂವರಲ್ಲಿ ಸಾಧಾರಣವಾಗಿರುವುದು ಪರಬ್ರಹ್ಮಚೈತನ್ಯವೇ. ಒಬ್ಬನೇ ಮೂರು ರೂಪಗಳಿಂದ ಕೆಲಸ ಮಾಡುತ್ತಾನೆ. ಆ ಮೂವರೂ ಸಮರೂ ಹೌದು. ಕಾಲವಿಶೇಷದಲ್ಲಿ ಪರಸ್ಪರವಾಗಿ ಮುಖ್ಯರಾಗುವುದೂ ಉಂಟು, ಭೃತ್ಯರಾಗುವುದೂ ಉಂಟು. ಪ್ರಭುಗಳಾಗುವುದೂ ಉಂಟು. "ಮುಖ್ಯ" ಮತ್ತು "ಅಮುಖ್ಯ" ಎ೦ಬ ಪದವಿ ಮೂವರಿಗೂ ಉ೦ಟು.  ಒಂದೇ ಮೂರ್ತಿಯೇ ಹಾಗೆ ಬ್ರಹ್ಮ, ವಿಷ್ಣು, ಶಿವ ಎಂದು ಮೂರು ಪ್ರಕಾರದ ಭೇದಗಳನ್ನು ತಾಳಿತು. ಆದ್ದರಿಂದ ಮುಖ್ಯವಾಗಿರುವಿಕೆ ಮತ್ತು ಅಮುಖ್ಯವಾಗಿರುವಿಕೆ ಎಂಬುದು ಮೂವರಿಗೂ ಸಾಧಾರಣವಾಗಿದೆ. 


ಇನ್ನು ನಮ್ಮ ಪುರಾಣದ ಕಥೆಗಳಲ್ಲಿ ಈ ತ್ರಿಮೂರ್ತಿಗಳ ಮಧ್ಯದಲ್ಲಿಯೇ ಒಮ್ಮೊಮ್ಮೆ ವೈರವನ್ನೋ ಕಿತ್ತಾಟವನ್ನೋ ನೋಡುತ್ತೀವಲ್ಲ ಅ೦ತ ಕೇಳಿದರೆ, ಅದಕ್ಕೂ ಉತ್ತರವನ್ನು ಶ್ರೀರ೦ಗಮಹಾಗುರುಗಳ ಒ೦ದು ಉದಾಹರಣೆಯ ಮೂಲಕ ನೋಡಬಹುದು.  ಈ ತ್ರಿಮೂರ್ತಿಗಳ ಕಲಹ - ಹಾಲಿನ ಕಥೆಯಂತೆ. ಹಾಲು ತನ್ನ ಜಾಗದಲ್ಲಿರುವಾಗ ಮೊಸರು ಅದನ್ನು ಬಂದು ಸೇರಿತು. "ನೀನು ಸೇರಿದರೆ ನನ್ನ ಸ್ವರೂಪವೇ ನಾಶವಾಗುತ್ತದೆ' ಎಂದು ಮೊಸರಿನೊಡನೆ ಜಗಳ, ಎರಡಕ್ಕೂ ಭಯಂಕರವಾದ ಯುದ್ದ ನಡೆಯಿತು. ಕೊನೆಗೆ ಮೊಸರಿನ ರೂಪಕ್ಕೆ ಎಲ್ಲಾ ಬಂದಿಳಿಯಿತು. ಈಗ ಮೊಸರಿನ ಜಯವಾಯಿತು. ಕಡೆಗೋಲು ಅದರೊಡನೆ ಜಗಳವಾಡಿ ಬೆಣ್ಣೆಯನ್ನು ಬೇರೆ ಮಾಡಿತು. ಈಗ ಬೆಣ್ಣೆಗೆ ಜಯ. ಮತ್ತೆ ಬೆಣ್ಣೆಗೂ ಶಾಖಕ್ಕೂ ಕಲಹ. ಕೊನೆಗೆ ಶಾಖದ ಜಯದಿಂದ ಬೆಣ್ಣೆಯ ರೂಪವು ಹೋಗಿ ತುಪ್ಪದ ರೂಪ. ಆ ತುಪ್ಪವೇನಾದರೂ ಮೊಸರಿನ ಬಳಿ ಬಂದರೆ, ಹತ್ತಿರ ಸೇರಿಸುವುದಿಲ್ಲ, ಮೊಸರು ಅದನ್ನು ನೀನು ಸೇರಿದರೆ ನನ್ನ ಸ್ವರೂಪವೇ ನಾಶ' ಎಂದು ಹೇಳಿ ಕಲಹವಾಗುತ್ತದೆ. ಇದು ಹೇಗೆ ರೂಪಕವೋ ಹಾಗೆಯೇ ತ್ರಿಮೂರ್ತಿಗಳ ಕಲಹ ಪ್ರಸಂಗವೂ ಇರುವುದು. ಅವರ ಸೃಷ್ಟಿ ಸ್ಥಿತಿ ಲಯ ವ್ಯಾಪಾರಗಳನ್ನು ರೂಪಕವಾಗಿ ಹೇಳುವಾಗ ಅದು ಕಲಹ ಪ್ರಸಂಗದಂತೆ ಕಾಣುವುದು.


ಪರತತ್ತ್ವವು ಒ೦ದೇ ಆಗಿ ಸಾಧಕರ ಅನುಭವಕ್ಕೆ ಬರುವುದೂ ಉ೦ಟು. ತ್ರಿಮೂರ್ತಿಗಳಾಗಿಯೂ ಅನುಭವಕ್ಕೆ ಬರುವುದೂ ಉ೦ಟು.  ಆದರೆ, ಇವರುಗಳ ಮೂಲ ಒಂದೇ. ಆ ಒಂದು ಪರತತ್ತ್ವವೇ ಸೃಷ್ಟಿ-ಸ್ಥಿತಿ-ಲಯ ವ್ಯಾಪಾರಗಳನ್ನು ನಿರ್ವಹಿಸಲು  ತ್ರಿಮೂರ್ತಿಗಳ ರೂಪಗಳನ್ನು ಧರಿಸಿರುವುದು ಎಂಬುದು ತಾತ್ಪರ್ಯ. ಎಂದೇ ಪರಮ ಸತ್ಯದ ಮತ್ತು ಅದರ ವಿಸ್ತಾರದ  ಅರಿವಿಲ್ಲದೇ ಕೇವಲ ನಮ್ಮ ಸಂಸ್ಕೃತಿಯನ್ನು ಹಳಿಯುವ ಉದ್ದೇಶದಿಂದ ಹೆಣೆದ ಇಂತಹ ಕುಚೋದ್ಯದ ಕಥೆಗಳಿಗೆ ಮರುಳಾಗದಿರೋಣ. 


ಸೂಚನೆ: 08/07/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

Monday, November 23, 2020

ಭಯ ನಿವಾರಣೆ ಹೇಗೆ? (Bhaya Nivarane Hege?)

ಲೇಖಕರು : ಡಾII ಹರ್ಷ ಸಿಂಹ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಕೃಷ್ಣದೇವರಾಯನು ಒಮ್ಮೆ ತನ್ನ ಆಸ್ಥಾನದ ವಿದ್ವಾಂಸರನ್ನು ಪರೀಕ್ಷಿಸಲು ಒಂದು ಸವಾಲನ್ನು ಒಡ್ಡಿದನು. ಸಭೆಯಲ್ಲಿ ಗಣ್ಯರೆಲ್ಲರೂ ಉಪಸ್ಥಿತರಾಗಿದ್ದಾಗ, ಒಂದು ಕರಿ ಫಲಕವನ್ನು ತರೆಸಿ ಅದರಲ್ಲಿ ಸುಣ್ಣದಿಂದ ಒಂದು ಲಂಬರೇಖೆಯನ್ನು ಎಳೆದನು. ನಂತರ, ಸಭಾಸದರನ್ನು ಉದ್ದೇಶಿಸಿ "ಮಹನೀಯರೆ! ಇಲ್ಲಿ ಒಂದು ಲಂಬರೇಖೆಯನ್ನು ನೀವೆಲ್ಲರೂ ಕಾಣುತ್ತಿದ್ದೀರಿ. ಈ ರೇಖೆಯನ್ನು ಅಳಿಸದೆಯೇ, ರೇಖೆಯನ್ನು ಗಿಡ್ಡವಾಗಿಸಬೇಕು" ಎಂದನು. ಮೊದಲನೋಟಕ್ಕೆ ಪ್ರಶ್ನೆ ಸಾಮಾನ್ಯದ್ದು ಎಂದೆನಿಸಿದರೂ, ಸಭಾಸದರಲ್ಲಿ ಯಾರಿಗೂ ಆ ಲಂಬರೇಖೆಯನ್ನು ಗಿಡ್ಡವಾಗಿಸುವ ಬಗೆ ತೋಚದಾಯಿತು.

ಆ ಸಭೆಯ ಮಧ್ಯದಲ್ಲಿ ಇದ್ದ ಕುಶಲಮತಿಯಾದ ತೆನಾಲಿ ರಾಮಕೃಷ್ಣನು ರಾಜನ ಅನುಮತಿಯನ್ನು ಪಡೆದು, ಸುಣ್ಣದಿಂದ, ಆ ಲಂಬ ರೇಖೆಯ ಪಕ್ಕದಲ್ಲಿಯೇ ಇನ್ನೂ ಉದ್ದವಾದ ಮತ್ತೊಂದು ಲಂಬ ರೇಖೆಯನ್ನು ಎಳೆದೆನು. ಸಭಾಸದರ ಮನಸ್ಸು ತೆನಾಲಿಯ ಉದ್ದವಾದ ರೇಖೆಯೆಡೆಗೆ ಹರಿದೊಡನೆ, ಪಕ್ಕದಲ್ಲಿದ್ದ ರಾಜನ ಲಂಬರೇಖೆಯು ಗಿಡ್ಡವೆನಿಸಿತು! ತೆನಾಲಿಯ ಉತ್ತರದಲ್ಲಿ ಇದ್ದ ಚಮತ್ಕಾರವನ್ನು ಕಂಡು ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇಂದು, ಕರೋನದಿಂದಾಗಿ ಒಂದು ಭಯದ ವಾತಾವರಣದಲ್ಲಿ ಜೀವನವನ್ನು ಸಾಗಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳೂ, ಸುದ್ದಿ ಮಾಧ್ಯಮಗಳೂ ಸದಾಕಾಲದಲ್ಲಿಯೂ ಕರೋನಾ ಬಗೆಗಿನ ವಿಷಯಗಳನ್ನು ನಮ್ಮ ಮನಸ್ಸಿಗೆ ಒದಗಿಸುತ್ತಲೇ ಇವೆ. ನಮ್ಮ ಮನಸ್ಸು ಅನುಭವಿಸುತ್ತಿರುವ ಭಯಾನಕ ರಸವನ್ನು ಉತ್ತೇಜಿಸುವ  ಸಾಮಗ್ರಿಗಳಾಗಿ ಇವು ಪರಿಣಮಿಸಿವೆ. ಇಂತಹ ಹತ್ತು ಹಲವು ಭಯಜನಕ ವಿಷಯಗಳಿಂದ ಸುತ್ತುವರೆದ ನಮ್ಮಗಳ ಜೀವನದಲ್ಲಿ ಭಯವು ಸ್ಥಾಯೀಭಾವವಾಗಿಬಿಟ್ಟಿದೆ!

ಈ ಭಯವನ್ನು ನಿವಾರಿಸಿಕೊಳ್ಳುವ ಬಗೆಯನ್ನು ತೆನಾಲಿಯ ಚಮತ್ಕಾರದ ಉತ್ತರದಲ್ಲಿ ಕಾಣಬಹುದು. ಸಭಾಸದರ ಮನಸ್ಸು ತೆನಾಲಿಯ ಉದ್ದವಾದ ರೇಖೆಯೆಡೆಗೆ ಹರಿದೊಡನೆ, ಪಕ್ಕದಲ್ಲಿದ್ದ ರಾಜನ ಲಂಬರೇಖೆಯು ಗೌಣವೆನಿಸಿತಷ್ಟೇ?! ಅಂತೆಯೇ, ಈ ಭಯಜನಕ ವಸ್ತುಗಳನ್ನು ಗೌಣವಾಗಿಸಬೇಕಾದರೆ, ನಮ್ಮ ಮನಸ್ಸು ಒಂದು ಹಿರಿದಾದ ವಸ್ತುವಿನೆಡೆಗೆ ಹರಿಯಬೇಕಾಗಿದೆ. ಅಂತಹ ವಸ್ತುವು ಶಾಶ್ವತವಾಗಿಲ್ಲದಿದ್ದಲ್ಲಿ, ಆ ವಸ್ತುವು ಕಳೆದುಹೋಗಬಹುದೆಂಬ ಇನ್ನೊಂದು ಭಯವು ಮನಸ್ಸನ್ನು ಆವರಿಸುವುದು! ಆದ್ದರಿಂದ ಅದು ಶಾಶ್ವತವಾದದ್ದೂ ಆಗಿದ್ದು, ಶಾಂತರಸದಾಯಕವೂ ಆಗಿರಬೇಕು. ಆ ಹಿರಿದಾದ, ಶಾಶ್ವತವೂ ಆದ, ಶಾಂತರಸದಾಯಕವೂ ಆದ ವಸ್ತುವೇ ಬ್ರಹ್ಮವಸ್ತು. ಮನಸ್ಸು ಆ ಬ್ರಹ್ಮವಸ್ತುವಿನೆಡೆಗೆ ಹರಿದಾಗ,  ಇತರ ವಿಷಯಗಳು ಗೌಣವಾಗಿ, ಭಯವೇ ಮೊದಲಾದ ಮನಸ್ಸಿನ ತಳಮಳಗಳೆಲ್ಲವೂ ಸಹಜವಾಗಿಯೇ ನೀಗುವುವು.

ಆದರೆ ಇದು ಸುಲಭವೇ? ಆ ಭಗವಂತನಿಗೆ ನಮ್ಮ ಮನಸ್ಸಿನಲ್ಲಿ ಸ್ವಲ್ಪ ಜಾಗವನ್ನು ಕೊಟ್ಟರೂ ಸಾಕು. ನಿತ್ಯವೂ ಸ್ವಲ್ಪಹೊತ್ತು ಅವನೆಡೆಗೆ ನಮ್ಮ ಮನಸ್ಸನ್ನು ಹರಿಸಿದರೂ ಸಾಕು. ಅವನು ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು ಮನಸ್ಸನ್ನು ಪೂರ್ಣವಾಗಿ ಆವರಿಸುವನು. ಮನಸ್ಸು ಶಾಂತಭಾವದಲ್ಲಿ ನೆಲೆ ನಿಲ್ಲುವುದು! ಈ ನಿಟ್ಟಿನಲ್ಲಿ, ಭಾರತೀಯ ಮಹರ್ಷಿಗಳು ತಂದುಕೊಟ್ಟಿರುವ ಜಪ-ಧ್ಯಾನ-ಪೂಜಾಕ್ರಮಗಳೆಲ್ಲವೂ, ನಿತ್ಯದ ಜಂಜಾಟಗಳಿಂದ ನಮ್ಮ ಮನಸ್ಸನ್ನು ಸೆಳೆದು, ಸಚ್ಚಿದಾನಂದಘನದೆಡೆಗೆ ಹರಿಸಿ ಬ್ರಹ್ಮಸ್ವರೂಪವನ್ನು ಅರಿಯುವಂತಾಗಲು ಮಾಡಿರುವ ಉಪಾಯಗಳೇ ಆಗಿವೆ.  "ಸ್ವರೂಪವನ್ನು ಅರಿತರೆ ನಮ್ಮ ಬಾಳಾಟ, ಅರಿಯದಿದ್ದರೆ ಗೋಳಾಟ!" ಎಂಬ ಶ್ರೀರಂಗಮಹಾಗುರುವಿನ ಸೂತ್ರಪ್ರಾಯವಾದ ವಾಣಿಯು ಇಲ್ಲಿ ಸ್ಮರಣೀಯ.

ಸೂಚನೆ: 21/11/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

Friday, February 14, 2020

ಚಿತ್ರ ಕಲೆಯ ಅಂತರಾರ್ಥ (Chitra kaleya Antaraartha)

ಲೇಖಕರು: ಡಾ ।। ಹರ್ಷ ಸಿಂಹ
(ಪ್ರತಿಕ್ರಿಯಿಸಿರಿ: lekhana@ayvm.in)



ಚಿತ್ತವನ್ನು ಯಾವುದು ಸೆಳೆಯುತ್ತದೆಯೋ ಅದು ‘ಚಿತ್ರ’. ಪ್ರಕೃತಿಸೌಂದರ್ಯವನ್ನು ಬಿಂಬಿಸುವ ಒಂದು ಚಿತ್ರವನ್ನು ಸಹೃದಯನೊಬ್ಬನು ನೋಡಿದಾಗ, ಅವನ ಚಿತ್ತವು, ಆ ಸುಂದರ ಸನ್ನಿವೇಶದೆಡೆಗೆ ಸೆಳೆಯಲ್ಪಟ್ಟು, ಆನಂದವನ್ನನುಭವಿಸುತ್ತಾನೆ. ಚಿತ್ರವು ನೋಡುಗನ ಚಿತ್ತವನ್ನು ವಿಷಯವೊಂದರೆಡೆಗೆ ಸೆಳೆದು, ಅವನ ಮನಸ್ಸಿನಲ್ಲಿ ಒಂದು ರಸವನ್ನು ಮೂಡಿಸುವುದರಿಂದ ಅದು ಚಿತ್ರವೆನಿಸಿಕೊಳ್ಳುತ್ತದೆ. ಶಿಲ್ಪವೂ ಈ ಕಾರ್ಯವನ್ನು ಚೆನ್ನಾಗಿ ಸಾಧಿಸಬಲ್ಲದ್ದಾಗಿರುವುದರಿಂದ, ಶಿಲ್ಪವನ್ನೂ ಚಿತ್ರವೆಂದೇ ನಮ್ಮ ಶಿಲ್ಪಶಾಸ್ತ್ರಗಳಲ್ಲಿ ಕರೆದಿದ್ದಾರೆ.

ಚಿತ್ರಕ್ಕೆ ವಿಷಯವೇನು ಎಂದು ಗಮನಿಸಿದರೆ, ಅದು ಚಿತ್ರಕಾರನ ಚಿತ್ತವನ್ನ ಅವಲಂಬಿಸಿದೆ. ಚಿತ್ರಕಾರನ ಇಂದ್ರಿಯ, ಮನೋವೃತ್ತಿಗಳು ಅವನ ಮನ:ಪಟಲದಲ್ಲಿ ಮೂಡಿಸಿದ ಚಿತ್ರವನ್ನೇ ಆತನ ಕುಂಚವೂ ಹಿಂಬಾಲಿಸುತ್ತದೆ. ಚಿತ್ರವನ್ನು ಹಿಂಬಾಲಿಸಿದ ಪ್ರೇಕ್ಷಕರ ಚಿತ್ತವು, ಚಿತ್ರಕಾರನ ಚಿತ್ತವೃತ್ತಿಯಲ್ಲೇ ಹೋಗಿ ನಿಲ್ಲುತ್ತದೆ. ಈ ಗುಟ್ಟನ್ನು ಅರಿತ ಭಾರತೀಯ ಮಹರ್ಷಿಗಳು ತಮ್ಮ ಚಿದಾಕಾಶದಲ್ಲಿ, ಅಂತರಂಗದಾಳದಲ್ಲಿ, ಕಂಡುಕೊಂಡ ಸೃಷ್ಟಿತತ್ತ್ವಗಳನ್ನೂ, ದೇವತಾ ರೂಪಗಳನ್ನೂ ಚಿತ್ರ/ಶಿಲ್ಪಗಳ ಮೂಲಕ ಬಹಿರಂಗಪಡಿಸಿದ್ದಾರೆ. ಆ ಚಿತ್ರಗಳ ರಸದಲ್ಲಿ ಮುಳುಗುವ ದರ್ಶಕರಿಗೆ ದರ್ಶನವೇ ತಪಸ್ಸಿನಂತೆ ಒಂದು ಪವಿತ್ರವಾದ ಸಾಧನೆಯಾಗುತ್ತದೆ. ಅಂತಹ ಚಿತ್ರ-ಶಿಲ್ಪವು ಸಹೃದಯನ ಮನಸ್ಸನ್ನು ಸೃಷ್ಟಿಮೂಲದಲ್ಲಿರುವ ಆನಂದಘನನಾದ ಭಗವಂತನೆಡೆಗೆ ಸೆಳೆದು ಪರಿಪೂರ್ಣಾನ೦ದ ರಸಾನುಭವವನ್ನು ಉ೦ಟುಮಾಡುತ್ತದೆ.  ಶಿಲ್ಪ ಎಂಬ ಪದವೇ ‘ಸಮಾಧೀ’ ಎಂಬ ಅರ್ಥವನ್ನು ಸಾರುತ್ತದೆ. ದೇವತಾ ಮೂರ್ತಿಗಳಲ್ಲಿನ ಭಾವ, ಭಂಗಿ, ನೋಟ, ಸೌಂದರ್ಯ, ಮಂದಹಾಸಗಳು ಇಂದ್ರಿಯಗಳಿಗೆ ತಂಪನ್ನು ತಂದುಕೊಡುತ್ತವೆ. ಜೊತೆಗೆ ಆ ಸೌಂದರ್ಯದ ಮೂಲ ನೆಲೆಯಾದ ಯೋಗಾನುಭವದ ಕಡೆಯೂ ಮನಸ್ಸನು ನಡೆಸುತ್ತದೆ.

ದೇವತಾ ಮೂರ್ತಿಗಳನ್ನು ಹೊರತುಪಡಿಸಿ ಪ್ರಕೃತಿಸೌಂದರ್ಯದ ಚಿತ್ರಗಳು, ಪಶು, ಪಕ್ಷಿ, ಲೋಕವ್ಯವಹಾರದ ಅನೇಕ ಚಿತ್ರಶಿಲ್ಪಗಳೂ ಕೂಡ ದೇವಾಲಯಗಳಲ್ಲಿ ಕಂಡುಬರುತ್ತವೆ. ಇದೂ ಸಹಜವೇ. ಜೋಗ ಜಲಪಾತವನ್ನು ನೋಡಲು ಹೊರಟರೂ ಕೂಡ ದಾರಿಯ ಮೋಜು, ಊಟ, ತಿಂಡಿ, ಪಯಣ ಇತ್ಯಾದಿ ಇದ್ದೇ ಇರುತ್ತವೆ. ಇವು ಜಲಪಾತದ ಅಚ್ಚರಿಯ ಸ್ಮರಣೆಯ ಜೊತೆಜೊತೆಗೆ ಬರುವ ಮಧುರಸ್ಮರಣೆಗಳು. ಅಂತೆಯೇ ಸೃಷ್ಟೀಶನ ದರ್ಶನವನ್ನು ಗರ್ಭಗುಡಿಯಲ್ಲಿ ಕಂಡರೂ, ಅತ್ತ ಸಾಗುತ್ತಾ  ಆತನ ಸೃಷ್ಟಿಯ ದರ್ಶನವನ್ನೂ ಮಾಡುತ್ತೇವೆ. ಅದು ಅವನ ವಿಭೂತಿಯೆಂದು ಭಾವಿಸಿ ನೋಡುತ್ತೇವೆ. ಸಹೃದಯನೊಬ್ಬನು ಸುಂದರ ಗಿರಿವನಗಳ ಮಡಿಲಲ್ಲೋ, ಸಾಗರದ ತೀರದಲ್ಲೋ, ನಕ್ಷತ್ರಮಂಡಲದಿಂದ ಕಂಗೊಳಿಸುವ ರಾತ್ರಿಯ ಆಗಸದಡಿಯಲ್ಲೋ ಸಹಜವಾದ ಆನಂದವನ್ನು ಅನುಭವಿಸುತ್ತಾನೆ. ಶ್ರೀರ೦ಗ ಮಹಾಗುರುಗಳ ಮಾತಿನಂತೆ ಭಗವಂತನ ಸೃಷ್ಟಿಯು ಸೃಷ್ಟೀಶನ ಲಕ್ಷಣಗಳಿಂದ ಕೂಡಿರುವುದರಿಂದ, ಇ೦ತಹ ಸನ್ನಿವೇಶಗಳಲ್ಲಿ, ನೋಡುಗನ ಅರಿವಿಗೇ ಬಾರದಂತೆ, ಚಿತ್ತವು, ಸೃಷ್ಟಿಮೂಲದಲ್ಲಿರುವ ಭಗವಂತತನೆಡೆಗೆ ಒಯ್ಯಲ್ಪಡುತ್ತದೆ. ಮನಸ್ಸು ಆಳಕ್ಕೆ ಇಳಿಯುತ್ತದೆ. ಒಳ  ಆನಂದದ ಒಂದು ತುಣುಕನ್ನು ಅವನು ಅನುಭವಿಸುತ್ತಾನೆ. ಈ ದೃಷ್ಟಿಯಲ್ಲಿ, ಸೃಷ್ಟಿಯೇ ಭಗವಂತನ ಒಂದು ಚಿತ್ರವಾಗಿದೆ. ಆ ಭಗವಂತನೇ ಚಿತ್ರಕಾರನಾಗಿ ಎಲ್ಲ ಕಲಾ ಸಾಧಕರಿಗೆ ಆದರ್ಶ. ಆ ವಿಶ್ವಶಿಲ್ಪಿಯೇ ಭಾರತೀಯ ಕಲೆಯ ನೆಲೆ.


ಸೂಚನೆ: 13/02/2020 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ. 

Sunday, February 9, 2020

ಭಾರತೀಯ ಜೀವನದ ನಕ್ಷೆ - ರ೦ಗವಲ್ಲಿ (ರ೦ಗೋಲಿ) - Bharateeya Jeevanada nakshe - rangavalli (rangoli)

ಲೇಖಕರು: ಡಾ ।। ಹರ್ಷ ಸಿಂಹ ಎಂ. ಎಸ್.Ph.D
(ಪ್ರತಿಕ್ರಿಯಿಸಿರಿ : lekhana@ayvm.in)

ಭಾರತೀಯ ಜೀವನಶೈಲಿಯಲ್ಲಿ ಮನೆಮನೆಯಲ್ಲೂ ರ೦ಗವಲ್ಲಿಯನ್ನು ಚಿತ್ರಿಸುವ ಸ೦ಪ್ರದಾಯವು ಬೆಳೆದು ಬ೦ದಿದೆ. ಗೃಹಾಲ೦ಕಾರವಾಗಿ ಗೃಹಿಣಿಯು ಮನೆಯ ಅ೦ಗಳದಲ್ಲೂ, ದೇವರ ಮನೆಯಲ್ಲೂ ರ೦ಗವಲ್ಲಿಯನ್ನು ಇಡುವುದನ್ನು ಈಗಲೂ ನೋಡಬಹುದು. ಸದ್ಗೃಹಿಣಿಯ ಮನೋರ೦ಗದಲ್ಲಿ ಮೊದಲಿಗೆ ವಿನ್ಯಾಸಗೊ೦ಡು, ಆ ವಿನ್ಯಾಸವು ಹೊರರ೦ಗದಲ್ಲಿ ಒ೦ದು ಕ್ರಮದಲ್ಲಿ ಚಿತ್ರಿತವಾಗುವುದು. ಅ೦ತಹಾ ಸ೦ಪ್ರದಾಯಬದ್ಧವಾದ ರ೦ಗವಲ್ಲಿಯು ಒ೦ದು ಚುಕ್ಕೆಯಿ೦ದ ಪ್ರಾರ೦ಭವಾಗುವುದು. ಕೇ೦ದ್ರದಲ್ಲಿನ ಆ ಚುಕ್ಕೆಯು, ಒ೦ದು ಕ್ರಮದಲ್ಲಿ, ಹಲವು ಚುಕ್ಕೆಗಳಾಗಿ ವಿಸ್ತಾರ ಹೊ೦ದುವುದು. ಅಲ್ಲಿ೦ದ ಮು೦ದೆ ರೇಖೆಗಳಾಗಿ, ಬಳ್ಳಿಗಳಾಗಿ, ಪದ್ಮವೇ ಮು೦ತಾದ ಹೂವುಗಳಾಗಿ, ನವಿಲು, ಹ೦ಸಗಳೇ ಮೊದಲಾದ ಪಕ್ಷಿಗಳಾಗಿ ಒ೦ದು ಸು೦ದರವಾದ ವಿಸ್ತಾರರಚನೆಯಲ್ಲಿ ನಿಲ್ಲುವುದು.


ರ೦ಗವಲ್ಲಿಯನ್ನು ಹೊರದೃಷ್ಟಿಯಿ೦ದ ನೋಡಿದರೆ ಅದು ಕೇವಲ ಗೆರೆಗಳ ರೂಪದಲ್ಲಿ ಕಾಣುವುದೇ ನಿಜವಾದರೂ, ಗೆರೆಯ ರೂಪದಲ್ಲೇ ನಿಲ್ಲುವ ವಿಷಯವಾಗಿಲ್ಲ. ರ೦ಗವಲ್ಲಿ ಎ೦ದು ಕರೆಯಲು ಕಾರಣವೇನು? ರ೦ಗವಲ್ಲಿಯಲ್ಲಿ ಮುಖ್ಯವಾಗಿ ಚಿತ್ರಿತವಾಗುವ ಅ೦ಶಗಳ ಅರ್ಥವೇನು? ರ೦ಗವಲ್ಲಿಯನ್ನು ಇಡಲು ಆರಿಸಿಕೊ೦ಡ ಪ್ರದೇಶದ ವಿಶೇಷತೆ ಏನು? – ಈ ಮೂರು ಪ್ರಶ್ನೆಗಳಿಗೆ ಉತ್ತರವನ್ನು ಕ೦ಡುಕೊ೦ಡರೆ, ಈ ಕಲೆಯ ಒಳಮರ್ಮವನ್ನು ಸ್ವಲ್ಪಮಟ್ಟಿಗೆ ಅರಿಯಬಹುದು. ಹೊರರ೦ಗದಲ್ಲಿ (ಮನೆಯ೦ಗಳದಲ್ಲಿ ಅಥವಾ ದೇವರ ಮು೦ಭಾಗದಲ್ಲಿ) ವಿಶೇಷವಾಗಿ ಬಳ್ಳಿಗಳನ್ನು (ವಲ್ಲಿಗಳನ್ನು) ಚಿತ್ರಿಸಿ ಅಲ೦ಕರಿಸುವುದರಿ೦ದ ಇದು ರ೦ಗವಲ್ಲಿ ಎ೦ದೆನಿಸಿಕೊಳ್ಳುತದೆ. ಯಾವುದು ಈ ಬಳ್ಳಿ? ಎ೦ದರೆ, ಇದು ವಿಶ್ವರ೦ಗದಲ್ಲಿ ವಿಸ್ತಾರವಾಗಿ ಬೆಳೆದಿರುವ ಸೃಷ್ಟಿಯನ್ನೇ ಬಿ೦ಬಿಸುವಒ೦ದು ಬಳ್ಳಿಯಾಗಿದೆ. ಬಳ್ಳಿಯಾದರೋ, ಒ೦ದು ಮರವನ್ನೋ, ಸ್ತ೦ಭವನ್ನೋ ಆಸರೆಯನ್ನಾಗಿ ಪಡೆದು ವಿಸ್ತಾರಹೊ೦ದುವುದು.

ಅ೦ತೆಯೇ, ಈ ಸೃಷ್ಟಿ ಎ೦ಬ ವಲ್ಲಿಯೂ ಭಗವ೦ತನ ಸ೦ಕಲ್ಪವನ್ನೇ ಆಸರೆಯನ್ನಾಗಿ ಪಡೆದು ವಿಸ್ತಾರಹೊ೦ದಿದೆ. ರ೦ಗವಲ್ಲಿಯಲ್ಲಿ ಚಿತ್ರಿತವಾಗುವ ಫಲಪುಷ್ಪಗಳೂ, ಶುಭ ಲಕ್ಷಣಗಳಿ೦ದ ಕೂಡಿರುವ ಹ೦ಸವೇ ಮೊದಲಾದ ಪಕ್ಷಿಗಳೂ, ಈ ಸೃಷ್ಟಿಯ ವಿಕಾಸ ತತ್ತ್ವವನ್ನೇ ಬಿ೦ಬಿಸುತ್ತವೆ. ಶಾಸ್ತ್ರೀಯವಾದ ರ೦ಗವಲ್ಲಿಗಳೆಲ್ಲವೂ ಒ೦ದು ಚುಕ್ಕೆಯನ್ನೇ ಕೇ೦ದ್ರವನ್ನಾಗಿ ಹೊ೦ದಿರುತ್ತವೆ. ಮತ್ತು, ಆ ಒ೦ದು ಚುಕ್ಕೆಯಿ೦ದ ಉಳಿದೆಲ್ಲಾ ರೂಪಗಳೂ ಹೊರಹೊಮ್ಮುತ್ತಿರುವ೦ತೆ ಚಿತ್ರಿತವಾಗುತ್ತದೆ.ಈ ಸೃಷ್ಟಿಯು ಬಿ೦ದುಸ್ವರೂಪಿಯಾದ ಭಗವ೦ತನನ್ನೇ ಮೂಲವನ್ನಾಗಿ ಹೊ೦ದಿದ್ದು ಅವನಿ೦ದಲೇ ಉಳಿದೆಲ್ಲವೂ ವಿಕಾಸ ಹೊ೦ದಿದೆ ಎನ್ನುವುದನ್ನು ಇದು ಸೂಚಿಸತ್ತದೆ.

ಈ ವಿಸ್ತಾರವಾದ ಸೃಷ್ಟಿಯ ಹಿ೦ದೆ ಭಗವ೦ತನು ಬೆಳಗುತ್ತಿದ್ದಾನೆ ಎ೦ಬುದನ್ನು ನೆನಪಿಸಲು, ರ೦ಗವಲ್ಲಿಯು ದೇವರಮನೆಯಲ್ಲಿ ದೇವರ ಮು೦ದೆಯೋ, ದೇವರಮನೆಯನ್ನು ಹೊ೦ದಿರುವ ಮನೆಯ ಮು೦ಭಾಗವಾದ ಅ೦ಗಳದಲ್ಲೋ ಚಿತ್ರಿಸಲ್ಪಡುತ್ತದೆ. ಮಹರ್ಷಿಗಳು ತಮ್ಮ ಅ೦ತರ೦ಗದಲ್ಲಿ ಕ೦ಡುಕೊ೦ಡ ಪರಮಪುರುಷನನ್ನೂ, ಅವನಿ೦ದ ಹೊರಟ ಸೃಷ್ಟಿವಿಸ್ತಾರದ ರಹಸ್ಯವನ್ನೂತಾತ್ತ್ವಿಕವಾಗಿ ಅರಿಯಲು ರ೦ಗವಲ್ಲಿಯು ಒ೦ದು ನಕ್ಷೆಯಾಗಿದೆ ಎ೦ಬುದು ಶ್ರೀರ೦ಗಮಹಾಗುರುಗಳ ನೋಟ.

ಹೀಗೆ ಸೃಷ್ಟಿಸೌ೦ದರ್ಯದಿ೦ದ ಕೂಡಿದ ರ೦ಗವಲ್ಲಿಯು ನೋಡುಗನ ಮನಸ್ಸನ್ನು ಸೆಳೆದು, ಬಾಳಲಕ್ಷ್ಯವಾದ ಬಿ೦ದುಸ್ವರೂಪೀ ಭಗವ೦ತನೆಡೆಗೆ ಆ ಮನಸ್ಸನ್ನು ಒಯ್ಯುವ ವಿನ್ಯಾಸವನ್ನು ಹೊ೦ದಿರುತ್ತದೆ. ಈ ವಿನ್ಯಾಸದ ಮೂಲಕ ಬಾಳ ಮರ್ಮವನ್ನು ತೋರಿಸಿಕೊಡುವ ಯೋಜನೆ ಜ್ಞಾನಿಗಳದ್ದು.

ಸೂಚನೆ: 08/02/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.