ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೪. ವಿದ್ವಾಂಸರನ್ನು ಆಕರ್ಷಿಸುವುದು ಯಾವುದು?
ಒಳ್ಳೆಯ ಕವಿತೆ ಮತ್ತು ವಿದ್ಯೆಯೆಂಬ ಸ್ತ್ರೀ.
ಸೂಚನೆ : 3/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೪. ವಿದ್ವಾಂಸರನ್ನು ಆಕರ್ಷಿಸುವುದು ಯಾವುದು?
ಒಳ್ಳೆಯ ಕವಿತೆ ಮತ್ತು ವಿದ್ಯೆಯೆಂಬ ಸ್ತ್ರೀ.
ಸೂಚನೆ : 3/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ
ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಯಾವ ರಾಜರೂ ಆ ರಥವನ್ನು, ಎಂದರೆ ಆ ರಥದಲ್ಲಿ ಆಸೀನರಾಗಿರುವವರನ್ನು, ಜಯಿಸುವುದು ಸಾಧ್ಯವೇ ಇರಲಿಲ್ಲ. ಹೀಗಿರುವಂತಹುದಾಗಿ ಆ ರಥವು ಕಂಗೊಳಿಸಿತು. ಎಂತಹ ರಥವದು! ಹಿಂದೆ ಆ ರಥದಲ್ಲಿ ಕುಳಿತೇ ಇಂದ್ರನೂ ವಿಷ್ಣುವೂ ಸಂಗ್ರಾಮದಲ್ಲಿ ತಾರಕಾಸುರನನ್ನು ಸಂಹಾರ ಮಾಡಿದುದು.
ಅದೇ ರಥದ ಮೇಲೆ ಕುಳಿತೇ ಕೃಷ್ಣನೀಗ ಹೊರಟಿರುವುದು. ಕಾದ ಸುವರ್ಣದ ಕಾಂತಿ ಆ ರಥಕ್ಕಿತ್ತು. ಕಿಂಕಿಣಿಗಳ ಜಾಲವನ್ನೇ (ಬಲೆಯನ್ನೇ) ಅದು ಹೊಂದಿತ್ತು. ಮೋಡಗಳ ಗುಡುಗಿನ ನಾದವನ್ನೂ ಹೊಂದಿತ್ತು. ಶತ್ರುಘಾತಕವಾಗಿದ್ದ ಅದು ಜಯವನ್ನು ತಂದುಕೊಡುವಂತಹುದೂ ಆಗಿತ್ತು. ತೊಂಭತ್ತೊಂಭತ್ತು ದಾನವರನ್ನು ಇಂದ್ರನು ಸಂಹರಿಸಿದುದು ಆ ರಥದಲ್ಲಿ ಕುಳಿತು ಹೋಗಿದ್ದಾಗಲೇ. ಅಂತಹ ಅದ್ಭುತ-ರಥವನ್ನು ಹೊಂದಿದ್ದರಿಂದಾಗಿ ಆ ಮೂವರು ಪುರುಷ-ಶ್ರೇಷ್ಠರೂ ಪರಮ-ಹರ್ಷಗೊಂಡರು.
ಮಹಾಬಾಹುವಾದ ಕೃಷ್ಣನು ಈ ಸಹೋದರರಿಬ್ಬರೊಡಗೂಡಿ ರಥದಲ್ಲಿ ಬರುತ್ತಿರುವುದನ್ನು ಕಂಡು ಮಗಧದೇಶದ ಪ್ರಜೆಗಳೆಲ್ಲರೂ ವಿಸ್ಮಿತರಾದರು. ದಿವ್ಯವಾದ ಹಯಗಳನ್ನು, ಎಂದರೆ ಕುದುರೆಗಳನ್ನು, ಹೊಂದಿದ್ದ ಆ ರಥವು ವಾಯುವೇಗವುಳ್ಳದ್ದು. ಅಂತಹ ರಥವು ಈಗ ಕೃಷ್ಣನಿಂದ ಅಧಿಷ್ಠಿತವಾಗಿದ್ದು ಅಧಿಕವಾಗಿ ಕಂಗೊಳಿಸಿತು.
ಆ ಶ್ರೇಷ್ಠವಾದ ರಥದ ಮೇಲಿನ ಧ್ವಜವು ದೇವವಿಹಿತವಾಗಿದ್ದು, ಅದು ಒಂದು ಯೋಜನದಷ್ಟು ದೂರಕ್ಕೂ, ಎಂದರೆ ಸುಮಾರು ಎಂಟು ಮೈಲಿ ದೂರಕ್ಕೂ, ಕಾಣಿಸುವುದಾಗಿದ್ದರೂ, ಅದನ್ನು ರಥಕ್ಕೆ ಎಲ್ಲಿ ಸಿಕ್ಕಿಸಿರುವರೆಂಬುದೇ ಗೋಚರವಾಗುತ್ತಿರಲಿಲ್ಲ! ಅದು ಇಂದ್ರಾಯುಧದಂತೆ, ಎಂದರೆ ಕಾಮನಬಿಲ್ಲಿನ ಹಾಗೆ, ಶೋಭಿಸುತ್ತಿತ್ತು.
ಆ ಸಮಯದಲ್ಲಿ ಕೃಷ್ಣನು ಗರುತ್ಮಂತನನ್ನು, ಎಂದರೆ ಗರುಡನನ್ನು, ಸ್ಮರಿಸಿದನು. ಅದೇ ಕ್ಷಣಕ್ಕೇ ಆತನೂ ಅಲ್ಲಿಗೆ ಆಗಮಿಸಿದನು. ಮೇಲೆದ್ದ ಒಂದು ಚೈತ್ಯವೃಕ್ಷದ ಹಾಗೆ ಗರುಡನು ತೋರಿದನು. ಬಾಯ್ದೆರೆದು ಮಹಾನಾದವನ್ನು ಮಾಡುತ್ತಿದ್ದ, ಹಾಗೂ ಧ್ವಜವನ್ನು ಆಶ್ರಯಿಸಿದ್ದ, ಭೂತಗಳೊಂದಿಗೆ, ಸರ್ಪಭಕ್ಷಕನೆನಿಸಿದ ಗರುಡನು ಆ ಶ್ರೇಷ್ಠರಥದ ಮೇಲೆ ಕುಳಿತುಕೊಂಡನು. ಆಗ ಹೇಗೆ ಕಂಡಿತು ಆ ಧ್ವಜ? ಭೂತಗಳಿಗೆ, ಎಂದರೆ ಯಾವುದೇ ಪ್ರಾಣಿಗಳಿಗೆ, ದಿಟ್ಟಿಸಿನೋಡಲಾಗದ ಹಾಗೆ ಅಧಿಕವಾದ ತೇಜಸ್ಸಿನಿಂದಾಗಿ ಕೂಡಿದ್ದಾಗಿ ಕಂಡಿತು. ಮಧ್ಯಾಹ್ನದ ಹೊತ್ತಿನಲ್ಲಿ ತನ್ನ ಸಹಸ್ರ-ಕಿರಣಗಳಿಂದಲೂ ಕೂಡಿದ ಆದಿತ್ಯನು ಕಣ್ಣು ಕೋರೈಸುವಂತಿರುವನಲ್ಲವೇ? ಹಾಗೆ.
ಆ ಶ್ರೇಷ್ಠಧ್ವಜದ ಮತ್ತೊಂದು ಆಶ್ಚರ್ಯವೆಂದರೆ ಅದು ಮರಗಳಿಗೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಶಸ್ತ್ರಗಳಿಂದ ಘಾಸಿಕೊಳ್ಳುತ್ತಿರಲಿಲ್ಲ. ಆ ದಿವ್ಯವಾದ ಧ್ವಜವು ಮನುಷ್ಯರಿಗೆ ಗೋಚರವಾಗಿರುತ್ತಿತ್ತು.
ಮಳೆಯ ಹಾಗೆ ಶಬ್ದ ಮಾಡುತ್ತಿದ್ದ ಆ ದಿವ್ಯ-ರಥದಲ್ಲಿ ಆಸೀನನಾಗಿ ಭೀಮಾರ್ಜುನರೊಡನೆ ಕೃಷ್ಣನು ಆ ಊರಿನಿಂದ ನಿರ್ಗಮಿಸಿದನು. ಇಂದ್ರನಿಂದ ವಸುವಿಗೂ ಆತನಿಂದ ಬೃಹದ್ರಥನಿಗೂ ಅಲ್ಲಿಂದ ಕ್ರಮ-ಪ್ರಾಪ್ತವಾಗಿ ಜರಾಸಂಧನಿಗೂ ಬಂದ ರಥವದು.
ಗಿರಿವ್ರಜದಿಂದ ಹೊರಹೊರಟು ಈಗ ಸಮತಟ್ಟಾದ ಎಡೆಗೆ ಕೃಷ್ಣನು ಬಂದು ಸೇರಿದನು. ಬಂಧನದಿಂದ ಬಿಡುಗಡೆಯನ್ನು ಹೊಂದಿದ ರಾಜರುಗಳು ಕೃಷ್ಣನನ್ನು ಅರ್ಚಿಸಿ ಹೀಗೆ ಸ್ತುತಿಸಿದರು:
"ಮಹಾಬಾಹುವಾದ ಕೃಷ್ಣನೇ, ದೇವಕಿಗೆ ಆನಂದ ತಂದವನೇ, ಭೀಮಾರ್ಜುನ ಬಲದೊಂದಿಗೆ ಕೂಡಿರುವ ನೀನು ಧರ್ಮರಕ್ಷಣೆಯನ್ನು ಮಾಡುವೆಯೆಂಬುದರಲ್ಲಿ ಆಶ್ಚರ್ಯವೇ ಇಲ್ಲ. ದುಃಖವೆಂಬ ಕೆಸರಿನ ರಾಶಿಯೇ ಆಗಿದ್ದುದು ಜರಾಸಂಧವೆಂಬ ಮಡು. ಅದರೊಳಗೆ ಸಿಲುಕಿದ್ದೆವು ನಾವು ರಾಜರುಗಳು. ಅಂತಹ ನಮ್ಮಗಳ ಉದ್ಧಾರವನ್ನು ನೀನು ಈಗ ಎಸಗಿರುವೆ. ಬೆಟ್ಟವೆಂಬ ಭಯಂಕರವಾದ ಕೋಟೆಯೊಳಗೆ ಸಿಲುಕಿ ನಲುಗಿಹೋಗಿದ್ದ ನಮಗೆ, ಅದೃಷ್ಟವಶಾತ್ ಮೋಕ್ಷವನ್ನು ದಯಪಾಲಿಸಿರುವೆ, ಓ ವಿಷ್ಣುವೇ!
ಸೂಚನೆ : 3/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ವಿದುಷಿ ; ಸೌಮ್ಯಾ ಪ್ರದೀಪ್ ಎ. ಜೆ.
ಪ್ರತಿಕ್ರಿಯಿಸಿರಿ (lekhana@ayvm.in)
ಶಿಶುಪಾಲವಧೆ ಎಂಬ ಮಹಾಕಾವ್ಯದಲ್ಲಿ ಬರುವಂತಹ ಪ್ರಸಂಗ, ಪರಮಾತ್ಮನು ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗಾಗಿ ಶ್ರೀಕೃಷ್ಣನ ರೂಪದಲ್ಲಿ ಭುವಿಯಲ್ಲಿ ಅವತರಿಸಿ ದ್ವಾರಕೆಯಲ್ಲಿರುತ್ತಾನೆ. ದೇವತೆಗಳ ಆಶಯದಂತೆ ಒಮ್ಮೆ ದೇವರ್ಷಿ ನಾರದರು , ಶಿಶುಪಾಲ ಎಂಬ ದುಷ್ಟನ ವಧೆ ಸನ್ನಿಹಿತವಾಗಿದೆ ಎಂದು ವಿಜ್ಞಾಪಿಸಿಕೊಳ್ಳಲು ಶ್ರೀಕೃಷ್ಣನ ಬಳಿಗೆ ಬರುತ್ತಾರೆ. ನಾರದರ ಆಗಮನದಿಂದ ಶ್ರೀಕೃಷ್ಣ ಪರಮಾತ್ಮನಿಗೆ ಅತ್ಯಂತ ಸಂತೋಷ ಉಂಟಾಗುತ್ತದೆ, ನಾರದರು ಅರಮನೆಗೆ ಬಂದು ಭೂ ಸ್ಪರ್ಶ ಮಾಡುವುದರೊಳಗಾಗಿ ಕೃಷ್ಣನು ತನ್ನ ಸಿಂಹಾಸನದಿಂದ ಕೆಳಗಿಳಿದು ಅವರಿಗೆ ಸ್ವಾಗತವನ್ನು ನೀಡುತ್ತಾನೆ. ನಾರದರಿಗೆ ಅರ್ಘ್ಯ, ಪಾದ್ಯ ಮೋದಲಾದವುಗಳನ್ನು ನೀಡಿ ಆದರಪೂರ್ವಕವಾಗಿ ಸತ್ಕರಿಸುತ್ತಾನೆ. ತಮ್ಮಂತಹ ಮಹಾತ್ಮರ ದರ್ಶನವು ಜೀವಿಗಳಿಗೆ ಭೂತ, ಭವಿಷ್ಯತ್ ಮತ್ತು ವರ್ತಮಾನವೆಂಬ ಮೂರು ಕಾಲಗಳ ಪಾಪವನ್ನು ಪರಿಹರಿಸಿ ಮಂಗಳವನ್ನುಂಟುಮಾಡುತ್ತದೆ ಎಂಬುದಾಗಿ ನಾರದರನ್ನು ಕುರಿತು ಹೇಳುತ್ತಾನೆ. ನಾರದರ ಆಗಮನದಿಂದ ಶ್ರೀಕೃಷ್ಣನಿಗೆ ಉಂಟಾದ ಆನಂದವನ್ನು ಕವಿಗಳು ಹೀಗೆ ವರ್ಣಿಸುತ್ತಾರೆ, 'ಪ್ರಳಯ ಕಾಲದಲ್ಲಿ ಸಮಸ್ತ ಜಗತ್ತನ್ನು ತನ್ನಲ್ಲಿ ಅಡಗಿಸಿಟ್ಟುಕೊಳ್ಳುವ ಪರಮಾತ್ಮನಿಗೆ ನಾರದರ ಆಗಮನದಿಂದ ಉಂಟಾದ ಆನಂದವನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳಲಾಗಲಿಲ್ಲ ಅದು ತುಂಬಿ ಹರಿದು ಪ್ರಕಟವಾಯಿತು' ಎಂಬುದಾಗಿ. ಭಗವಂತನು ತನ್ನ ಭಕ್ತರ ವಿಷಯದಲ್ಲಿ ಯಾವ ರೀತಿ ಆನಂದವನ್ನು ಹೊಂದಿರುತ್ತಾನೆ, ಅದನ್ನು ಯಾವ ರೀತಿ ಪ್ರಕಟಪಡಿಸುತ್ತಾನೆ ಎಂಬುದನ್ನು ಇಲ್ಲಿ ಕಾಣಬಹುದು.
ನಾರದರು ಭಕ್ತ ಶ್ರೇಷ್ಠರಲ್ಲಿ ಅಗ್ರಗಣ್ಯರು, ಸದಾ ಶ್ರೀಮನ್ನಾರಾಯಣನನ್ನು ಮನಸ್ಸಿನಲ್ಲಿ ತುಂಬಿಕೊಂಡು ಅವನ ಸ್ಮರಣೆ ಮಾಡುತ್ತಾ ಮೂರು ಲೋಕದಲ್ಲಿಯೂ ಸಂಚಾರ ಮಾಡುವವರು. ತಾವು ಭಕ್ತಿ ಮಾರ್ಗದಲ್ಲಿ ನಡೆಯುವುದು ಮಾತ್ರವಲ್ಲದೇ ಲೋಕವೆಲ್ಲವನ್ನು ಆ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಣೆ ನೀಡಿದವರು. ಪ್ರಹ್ಲಾದ, ಧ್ರುವ ಮುಂತಾದ ಭಾಗವತೋತ್ತಮರಿಗೆ ಭಕ್ತಿಮಾರ್ಗವನ್ನು ಉಪದೇಶಿಸಿ ಅವರ ಉದ್ಧಾರಕ್ಕೆ ಕಾರಣ ರಾದವರು, ದುಷ್ಟವ್ಯಾಧನಾದಂತಹ ರತ್ನಾಕರನನ್ನು ವಾಲ್ಮೀಕಿ ಮಹರ್ಷಿಗಳನ್ನಾಗಿ ಪರಿವರ್ತಿಸಿ ಪರಮಪಾವನಕರವಾದ ಶ್ರೀಮದ್ ರಾಮಾಯಣವನ್ನು ರಚಿಸಲು ಪ್ರೇರಣೆಯನ್ನು ನೀಡಿದವರು. ಹೀಗೆ ಸದಾ ಕಾಲ ತಮ್ಮನ್ನು ಭಗವತ್ ಕಾರ್ಯದಲ್ಲಿ, ಭಗವತ್ ಸೇವೆಯಲ್ಲಿ ತೊಡಗಿಸಿಕೊಂಡವರು. ಅಂತಹ ನಾರದರ ವಿಷಯದಲ್ಲಿ ಭಗವಂತನು ಸಂತೋಷಗೊಳ್ಳುವುದು ಸಹಜವೇ ಆಗಿದೆ.
ನಾರದ ಮಹರ್ಷಿಗಳು ದೇವತೆ, ರಾಕ್ಷಸ ಮನುಷ್ಯ ಎಂಬ ಭೇದವಿಲ್ಲದೆ ಎಲ್ಲರನ್ನೂ ಭಗವಂತನಿಗೆ ಅಭಿಮುಖವಾದ ದೈವೀಮಾರ್ಗದಲ್ಲಿ ನಡೆಯುವಂತೆ ಪ್ರಚೋದನೆಯನ್ನು ನೀಡಿದವರು. ಏಕೆಂದರೆ ಪರಮ ಕರುಣಾಮಯರಾದ ಅವರು ನೋಡುತ್ತಿದ್ದದು ಹೊರರೂಪವನ್ನಲ್ಲ, ಶರೀರದ ಒಳಗಿರುವ ಆತ್ಮವನ್ನು ಹಾಗೂ ಅದರ ಉದ್ಧಾರವನ್ನು.
ಏಕೆಂದರೆ ಈ ಶರೀರ ಅನ್ನುವುದು ಯಾವುದೋ ಒಂದು ಪೂರ್ವಜನ್ಮಕೃತ ಪುಣ್ಯ-ಪಾಪಕ್ಕೆ ಅನುಗುಣವಾಗಿ ಬಂದಿರುವಂತಹದು. ರಾಕ್ಷಸರಾಗಿ ಹುಟ್ಟಿದವರ ಪೂರ್ವವೃತ್ತಾಂತವನ್ನು ನಾವು ಇತಿಹಾಸ ಪುರಾಣಗಳಲ್ಲಿ ಕೇಳಿದ್ದೇವೆ. ನಮ್ಮ ಪುಣ್ಯ ಪಾಪಗಳನ್ನು ಕಡೆದುಕೊಂಡು ಭಗವಂತನ ಸಾನಿಧ್ಯವನ್ನು ಹೊಂದುವುದಕ್ಕೆ ಅವನ ಸ್ಮರಣೆಯ ಜೊತೆ ಜೊತೆಗೆ ಅವನಿಗೆ ಅಭಿಮುಖವಾಗಿ ನಡೆಯುವುದೊಂದೆಯೊಂದೇ ದಿವ್ಯವಾದ ಔಷಧ. ಅಂತಹ ಔಷಧವು ಪ್ರತಿಯೊಂದು ಜೀವಿಗೂ ಬೇಕು. ನಾರದರು ಹಾಗೂ ಅವರಂತೆಯೇ ಕರುಣಾಮಯರಾದ ಅನೇಕ ಮಹರ್ಷಿಗಳು ಪ್ರತಿಯೊಂದು ಜೀವದ ಉದ್ಧಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಗವಂತನಿಗೆ ಅಭಿಮುಖವಾಗಿ ನಡೆಯುವಂತಹ ಭಾರತೀಯ ಸಂಸ್ಕೃತಿಯನ್ನು ರೂಪಿಸಿಕೊಟ್ಟಿದ್ದಾರೆ. ನಮ್ಮ ನಡೆ, ನುಡಿ ವ್ಯವಹಾರದಲ್ಲಿ ಆ ರೀತಿಯ ಜೀವನ ಶೈಲಿಯನ್ನು ರೂಪಿಸಿ ಕೊಳ್ಳುವಂತೆ ದಾರಿಯನ್ನು ಮಾಡಿಕೊಟ್ಟಿದ್ದಾರೆ. ಏಕೆಂದರೆ ಭಗವಂತನಿಗೆ ಅಭಿಮುಖವಾಗಿ ನಮ್ಮ ಮನಸ್ಸನ್ನು ಕರೆದುಕೊಂಡು ಹೋಗುತ್ತಾ ಇದ್ದಾಗ ಮನಸ್ಸಿನಲ್ಲಿ ಪಾಪರೂಪದಲ್ಲಿ ಅಡಕವಾಗಿರುವ ಕಲ್ಮಶವೆಲ್ಲವೂ ನಾಶವಾಗುತ್ತದೆ ಹಾಗೂ ಮನೋಬುದ್ಧಿಗಳಲ್ಲಿ ತುಂಬಿರುವ ಅಂಧಕಾರ ತೊಲಗಿ ಜ್ಞಾನ ರೂಪದಲ್ಲಿರುವ ಭಗವಂತನ ದರ್ಶನ ಸನ್ನಿಹಿತವಾಗುತ್ತದೆ. ತಾವೂ ಭಗವನ್ಮಾರ್ಗದಲ್ಲಿ ನಡೆದು ತಮ್ಮ ಸುತ್ತಲಿರುವವರನ್ನು ಆ ಮಾರ್ಗದಲ್ಲಿ ನಡೆಯುವಂತೆ ಯಾರು ಪ್ರೇರೇಪಿಸುತ್ತಾರೋ ಅವರು ಮಾಡುವುದೇ ನಿಜವಾದ ಭಗವತ್ಕಾರ್ಯ ಹಾಗೂ ಭಗವಂತನಿಗೆ ಅತ್ಯಂತ ಸಂತೋಷವನ್ನುಂಟು ಮಾಡುವ ಸೇವೆ. ಅಂತಹ ಕಾರ್ಯವನ್ನು ಮಾಡುವವರ ವಿಷಯದಲ್ಲಿ ತಾನೇ ಭಗವಂತ ಅತ್ಯಂತ ಸಂತುಷ್ಟನಾಗುತ್ತಾನೆ! ಏಕೆಂದರೆ ಅಂತಹ ಮಾರ್ಗದಲ್ಲಿ ನಡೆದಾಗ ಮಾತ್ರ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣ ಇವೆರಡೂ ಸಾಧ್ಯ. "ಹುಟ್ಟಿದ ಮೇಲೆ ಹೇಗೆ ಹೇಗೆಯೋ ಬಾಳುವ ಬದಲು ದೈವೀ ಮಾರ್ಗ ಹಿಡಿಯಿರೀಪ್ಪ!" ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ನಮ್ಮ ಮನಸ್ಸು ಬುದ್ಧಿ ,ಆತ್ಮ ಎಲ್ಲವನ್ನು ಶುದ್ಧಗೊಳಿಸುವ ದೈವೀ ಮಾರ್ಗವನ್ನು ಹಿಡಿದು ಮಹರ್ಷಿಗಳ ಆಶಯದಂತೆ ಸುಕೃತವಾದ ಜೀವನವನ್ನು ನಡೆಸೋಣ. ಭಗವದಾನಂದಕ್ಕೆ ಪಾತ್ರರಾಗೋಣ.
ಸೂಚನೆ : 2/04/2029 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೩. ಈ ಜಗತ್ತು ಯಾರ ವಶದಲ್ಲಿದೆ?
ಧರ್ಮದಲ್ಲಿ ಪ್ರೀತಿ ಮತ್ತು ಪ್ರಿಯವೂ ಹಿತವೂ ಆದ ಮಾತನ್ನು ಆಡುವವನ.
ಈ ಪ್ರಶ್ನೆಯನ್ನು ಕೇಳಿದ ಆ ಕ್ಷಣದಲ್ಲಿ ಅನೇಕ ಉತ್ತರಗಳು ತಮ್ಮ ಮನಸ್ಸಿನಲ್ಲಿ ಗೋಚರವಾಗುತ್ತವೆ. ಈ ಜಗತ್ತು ಭಗವಂತನ ವಶದಲ್ಲಿ ಇದೆ. ಅಥವಾ ಈ ಜಗತ್ತು ಮಾನವನ ವಶದಲ್ಲಿ ಇದೆ. ಅಥವಾ ಈ ಜಗತ್ತು ಒಬ್ಬ ಪರಾಕ್ರಮಿ ಆದ ರಾಜನ ವಶದಲ್ಲಿದೆ ಎಂಬುದಾಗಿ. ಆದರೆ ಇಲ್ಲಿ ಹೇಳುವ ಉತ್ತರ ಇದಾವುದೂ ಅಲ್ಲ. ಏಕೆಂದರೆ ಈ ಜಗತ್ತು ಇವರಾರಿಂದಲೂ ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯವಾದುದಲ್ಲ. ಅಂದರೆ ಒಬ್ಬ ಪರಾಕ್ರಮಿ, ಬಲಾಢ್ಯನಾಗಿರುವಂತಹ ವ್ಯಕ್ತಿ ಜಗತ್ತನ್ನು ವಶದಲ್ಲಿ ಇಟ್ಟುಕೊಳ್ಳಲು ಅಸಾಧ್ಯ. ಆದರೆ ಭಗವಂತ ಅಂದರೆ ಈ ಪ್ರಪಂಚದ ಮೂಲ ಶಕ್ತಿ. ಇದು ತಾನೇ ತನ್ನ ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯ? ಎಂಬುದಾಗಿ ಅನ್ನಿಸಬಹುದು. ಹೌದು. ಒಂದರ್ಥದಲ್ಲಿ ಇದು ಉತ್ತರವಾಗಿ ಅನ್ನಿಸಲು ಅವಕಾಶ ಇದೆ. ಭಗವಂತನ ಮೂರು ಚೈತನ್ಯಗಳು ಬ್ರಹ್ಮ, ವಿಷ್ಣು, ಮಹೇಶ್ವರ. ಇವರಿಂದ ಸೃಷ್ಟಿ, ಸ್ಥಿತಿ ಮತ್ತು ಲಯವೆಂಬ ಮೂರು ವ್ಯಾಪಾರಗಳು ನಡೆಯುತ್ತವೆ. ಇವರೇ ಈ ಸೃಷ್ಟಿಯ ನಿಯಾಮಕರು ಎಂಬುದಾಗಿ ತಿಳಿಯಬಹುದು. ಆದರೆ ಇಲ್ಲಿ ಬರುವ ಉತ್ತರ ಇವೆಲ್ಲಕ್ಕೂ ಮೂಲವಾದದ್ದು. ಹಾಗಾದರೆ ಈ ಉತ್ತರ ಅದು ಹೇಗೆ ಸಮರ್ಪಕ? ಅಂದರೆ ಧರ್ಮದಲ್ಲಿ ಪ್ರೀತಿ ಇದ್ದು, ಅದನ್ನು ಮಾತಿನಲ್ಲಿ ಆಡುವವನು ಈ ಜಗತ್ತನ್ನು ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂಬ ಉತ್ತರ.
ಒಂದು ಮಾತು ಪ್ರಿಯವಾದದ್ದಾಗಿ ಇದ್ದು, ಆ ಮಾತು ಧರ್ಮದಿಂದ ಕೂಡಿದ್ದು, ಧರ್ಮದಲ್ಲಿ ಪ್ರೀತಿ ಉಳ್ಳದ್ದಾಗಿ ಆಗಿದ್ದರೆ, ಅಂತಹ ಮಾತು ಈ ಜಗತ್ತನ್ನು ವಶದಲ್ಲಿ ಇಟ್ಟುಕೊಳ್ಳಬಹುದು ಎಂಬ ಮಾರ್ಮಿಕವಾದ ಉತ್ತರವನ್ನು ಇಲ್ಲಿ ನೀಡಲಾಗಿದೆ. ಅಂದರೆ ಮಾತಿಗೆ ಅದೆಷ್ಟು ಸಾಮರ್ಥ್ಯವಿದೆ! ಎಂದು ಅರ್ಥ. ಮಾತಿಗೆ ಸಾಮರ್ಥ್ಯ ಬರುವುದಕ್ಕೆ ಕಾರಣ ಧರ್ಮವೇ ಆಗಿದೆ. ಹಾಗಾದರೆ ಧರ್ಮದಿಂದ ಮಾತಿಗೆ ಸಾಮರ್ಥ್ಯ ಹೇಗೆ ಬಂತು? ಧರ್ಮ ಎಂದರೇನು? ಶ್ರೀರಂಗ ಮಹಾಗುರುಗಳು ಹೇಳಿದಂತೆ ಈ ಜಗತ್ತನ್ನು ಧರಿಸಿರುವುದೇ ಧರ್ಮ. ಅದು ಒಂದು ಚೈತನ್ಯಶಕ್ತಿ ಆಗಿರಬಹುದು ಅಥವಾ ಆ ಚೈತನ್ಯಶಕ್ತಿಯಿಂದ ವಿಸ್ತರಗೊಂಡ ಅನೇಕ ಚೇತನ್ಯಶಕ್ತಿಗಳಿರಬಹುದು. ಅವೆಲ್ಲವೂ ಧರ್ಮವೇ. ಈ ಶಕ್ತಿಯನ್ನು ಅಂತೆಯೇ ಉಳಿಸುವುದಕ್ಕೆ ಬೇಕಾದ ಯಾವೆಲ್ಲ ಕ್ರಿಯಾ ಕಲಾಪಗಳಿವೆಯೋ ಅವೆಲ್ಲವನ್ನೂ ಧರ್ಮವೆಂದು ಕರೆಯಬಹುದು ಎಂದು. ಮಾತು ಕೂಡ ಧರ್ಮದಿಂದಲೇ, ಧರ್ಮದ ಮೂಲದಿಂದಲೇ ವಿಕಾಸಗೊಂಡದ್ದು. ಮಾತು ಧರ್ಮವನ್ನು ಉಳಿಸುತ್ತದೆ. ಒಂದು ವೇಳೆ ಮಾತು ಸರಿಯಾಗಿಲ್ಲದಿದ್ದರೆ ಧರ್ಮವನ್ನು ಹಾಳು ಮಾಡುತ್ತದೆ. ಅದಕ್ಕೆ ಒಂದು ಸುಭಾಷಿತವು ಹೀಗೆ ಹೇಳುತ್ತದೆ - ಯಾವ ರೀತಿಯಾದ ಮಾತನ್ನು ಹೇಳಬೇಕು? ಎಂದು. ಸತ್ಯವಾದದ್ದನ್ನು ಪ್ರಿಯವಾದದ್ದನ್ನು ಹೇಳಬೇಕು. ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವಾಗುತ್ತದೆಂದು ಸುಳ್ಳನ್ನು ಹೇಳಬಾರದು ಎಂದು. ಇಂತಹ ಮಾತು ಧರ್ಮವನ್ನು ಉಳಿಸುತ್ತದೆ. ಹೇಗೆ ಆಡಿದರೆ ಅದು ಧರ್ಮವನ್ನು ಉಳಿಸುತ್ತದೆ ಎಂಬುದನ್ನು ಅರಿತು ಮಾತನಾಡಬೇಕು. ಹೀಗೆ ಮಾತನಾಡುವ ಒಬ್ಬ ವ್ಯಕ್ತಿ ಧರ್ಮವನ್ನು ಕಾಪಾಡಬಲ್ಲ. ತನ್ಮೂಲಕ ಜಗಚ್ಛಕ್ತಿಯಾದ ಈ ಚೈತನ್ಯವನ್ನು ಈ ಮಾತಿನ ಮೂಲಕ ಬಲಗೊಳಿಸಬಲ್ಲ. ಹಾಗಾಗಿ ಇಂತಹ ಮಾತಿಗೆ ಜಗತ್ತನ್ನು ಆಳುವ, ವಶದಲ್ಲಿ ಇಟ್ಟುಕೊಳ್ಳುವ ಅದ್ಭುತ ಸಾಮರ್ಥ್ಯವಿದೆ ಎಂಬ ವಿಶಿಷ್ಟವಾದ ಪರಿಕಲ್ಪನೆಯ ಉತ್ತರ ಇಲ್ಲಿದೆ.
ಸೂಚನೆ : 26/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಆಗ ಶ್ರೀಕೃಷ್ಣನು ಜರಾಸಂಧವಧೆಯು ಬೇಗನೆ ಆಗಲೆಂದು ಬಯಸಿ, ತ್ವರೆಪಡಿಸುತ್ತಾ ಭೀಮನಿಗೆ ಹೇಳಿದನು:
“ಭೀಮನೇ, ಯಾವ ಪರದೈವದ ಸತ್ತ್ವವು ನಿನ್ನಲ್ಲುಂಟೋ, ಹಾಗೆಯೇ ವಾಯುದೇವನ ಸತ್ತ್ವವೆಂಬುದು ಯಾವುದು ನಿನ್ನಲ್ಲುಂಟೋ, ಅದನ್ನೀಗ ನಮಗೆ ನೀನು ಬೇಗನೆ ತೋರಿಸು. ನಿನ್ನಿಂದಲ್ಲದೆ ಮತ್ತಾರಿಂದಲೂ ಈತನಿಗೆ ಸಾವಿಲ್ಲ. ವಾಯುವನ್ನು ಸ್ಮರಿಸಿ, ಈ ಮಗಧರಾಜನನ್ನು ಕೊಲ್ಲು."
ಕೃಷ್ಣನು ಹೀಗೆ ಹೇಳಲು, ಅರಿಂದಮನಾದ, ಎಂದರೆ ಶತ್ರುಗಳನ್ನು ದಮನಮಾಡುವ, ಭೀಮಸೇನನು ಜರಾಸಂಧನನ್ನು ಮೇಲಕ್ಕೆತ್ತಿ ತಿರುಗಿಸಿದನು. ಆಗ ಕೃಷ್ಣನು, ಜರಾಸಂಧ-ವಧೆಯು ಬೇಗನೆ ನೆರವೇರಲೆಂದು, ಭೀಮಸೇನನತ್ತ ನೋಡುತ್ತಾ ಹುಲ್ಲುಕಡ್ಡಿಯೊಂದನ್ನು ಮುರಿದನು. ಅದಕ್ಕೆ ಸರಿಯಾಗಿ ಭೀಮನು ನೂರುಬಾರಿ ಜರಾಸಂಧನನ್ನು ತಿರುಗಿಸಿ, ಆತನ ಬೆನ್ನನ್ನು ಹಿಸುಕಿ ಮುದ್ದೆ ಮಾಡಿ, ತನ್ನ ಮಂಡಿಗಳ ಮೇಲೆ ಅಪ್ಪಳಿಸಿ, ಆತನ ಬೆನ್ನನ್ನು ಮುರಿದನು, ಹಾಗೂ ಗರ್ಜಿಸಿದನು. ಆತನೊಂದು ಕಾಲನ್ನು ಹಿಡಿದುಕೊಂಡು ಮತ್ತೊಂದನ್ನು ಮೆಟ್ಟಿ ಶರೀರವನ್ನು ಇಬ್ಭಾಗವಾಗಿಸಿದನು.
ಆಗ ಜರಾಸಂಧನ ಆ ಶರೀರಭಾಗಗಳೆರಡು ಮತ್ತೆ ಸೇರಿಕೊಂಡವು, ಹಾಗೂ ಜರಾಸಂಧನು ಮತ್ತೆ ಬಾಹುಯುದ್ಧಕ್ಕೆ ಆರಂಭಮಾಡಿಕೊಂಡನು. ಈಗ ಯುದ್ಧವು ತುಮುಲವೂ ರೋಮಹರ್ಷಣವೂ ಆಗಿದ್ದಿತು. ಅದು ಸರ್ವಲೋಕ-ಕ್ಷಯಕರವೂ ಸರ್ವಜೀವಗಳಿಗೂ ಭಯಾವಹವೂ ಆಗಿತ್ತು.
ಮತ್ತೆ ಕೃಷ್ಣನು ಆ ಕಡ್ಡಿಯನ್ನು ಮುರಿದು ವ್ಯತ್ಯಸ್ತಮಾಡಿ ಬಿಸುಟನು. ಅದರ ಅರ್ಥವನ್ನು ಅರಿತುಕೊಂಡ ಭೀಮಸೇನನು ಜರಾಸಂಧನನ್ನು ಸೀಳಿ, ಶರೀರದ ಆ ಎರಡು ಭಾಗಗಳನ್ನು ಕಾಲಿನಿಂದ ವ್ಯತ್ಯಾಸಮಾಡಿ ಒದ್ದೆಸೆದನು.
ಹಾಗೂ ಗಟ್ಟಿಯಾಗಿ ಗರ್ಜಿಸಿದನು. ಜರಾಸಂಧನು ಆಗ ಶವರೂಪವಾದನು. ಆತನ ಮಾಂಸವೊಣಗಿತು, ಮೂಳೆ ಮುರಿಯಿತು, ಚರ್ಮ ಹರಿಯಿತು, ಮಸ್ತಿಷ್ಕವು ಮುದ್ದೆಯಾಯಿತು. ಆಗ ಜರಾಸಂಧನು ಪಿಂಡೀಭೂತನಾಗಿ ಕಂಡನು.
ಭೀಕರವಾಗಿ ಗರ್ಜಿಸುತ್ತಾ ಭೀಮನು ಜರಾಸಂಧನನ್ನು ಜಜ್ಜಿ ಬಜ್ಜಿ ಮಾಡುತ್ತಿರಲು ಉಂಟಾದ ನಾದವು ತುಮುಲವಾಗಿತ್ತು. ಎಲ್ಲ ಪ್ರಾಣಿಗಳಿಗೂ ಭಯಂಕರವಾಗಿತ್ತು. ಮಗಧದೇಶದ ಪ್ರಜೆಗಳು ಬಹುವಾಗಿಯೇ ತ್ರಾಸಗೊಂಡರು. ಗರ್ಭಿಣಿಯರಿಗೆ ಗರ್ಭಸ್ರಾವವಾಯಿತು. ಏಕೆಂದರೆ ಭೀಮಸೇನ-ಜರಾಸಂಧರ ಗರ್ಜನ-ನಾದಗಳು ಹಾಗಿದ್ದವು.
“ಇದೇನು ಹಿಮಾಲಯವೇ ಒಡೆದುಹೋಯಿತೇ? ಅಥವಾ ಭೂಮಿಯೇ ಸೀಳುತ್ತಿದೆಯೇ?” - ಹೀಗೆಲ್ಲ ಮಾಗಧರು ಯೋಚನೆ ಮಾಡಹತ್ತಿದರು.
ನಿದ್ದೆ ಮಾಡುತ್ತಿರುವಂತೆ ಬಿದ್ದಿದ್ದ ಆ ಸತ್ತ ರಾಜನನ್ನು ಆ ರಾಜದ್ವಾರದಲ್ಲಿಯೇ ಬಿಟ್ಟವರಾಗಿ, ಆ ಮೂರೂ ವೀರರು ಆ ರಾತ್ರಿಯಲ್ಲೇ ಹೊರಹೊರಟರು. ಪತಾಕೆಯಿಂದ ಮಂಡಿತವಾದ ಜರಾಸಂಧ-ರಥವನ್ನೇ ಶ್ರೀಕೃಷ್ಣನು ಸಿದ್ಧಪಡಿಸಿಕೊಂಡನು; ಭ್ರಾತೃಗಳಿಬ್ಬರನ್ನೂ, ಎಂದರೆ ಭೀಮಾರ್ಜುನರನ್ನು, ರಥಕ್ಕೆ ಹತ್ತಿಸಿಕೊಂಡನು. ತಾನೇ ಸಾರಥಿಯಾದನು.
ಅಲ್ಲಿಂದ ಹೊರಹೊರಟು, ಸೆರೆಯಾಗಿದ್ದ ತನ್ನೆಲ್ಲ ಬಂಧುಗಳನ್ನು ಮೊದಲು ಸೆರೆಯಿಂದ ಬಿಡಿಸಿದನು. ರತ್ನಗಳಿಗೆ ಅರ್ಹರೆನಿಸಿದ್ದ ಆ ರಾಜರುಗಳು, ಜರಾಸಂಧನೆಂಬ ಮಹತ್ತಾದ ಭಯದಿಂದ ಬಿಡುಗಡೆ ಪಡೆದವರಾಗಿ, ಶ್ರೀಕೃಷ್ಣನಿಗೆ ತಮ್ಮ ರತ್ನಗಳನ್ನೇ ಸಮರ್ಪಿಸಿದರು.
ಕೃಷ್ಣನಿಗಂತೂ ಯಾವ ಗಾಯವೂ ಆಗಿರಲಿಲ್ಲ. ಅವನ ಬಳಿ ಶಸ್ತ್ರಗಳೆಲ್ಲವೂ ಇದ್ದವು. ಶತ್ರುವನ್ನಂತೂ ಗೆದ್ದಾಯಿತು. ಈಗ ಆ ರಾಜರುಗಳೊಂದಿಗೆ ಆತನು ಆ ದಿವ್ಯರಥವನ್ನೇರಿ ಗಿರಿವ್ರಜದಿಂದ ಹೊರಹೊರಟನು.
ಆ ರಥದ ಹೆಸರೇ ಸೋದರ್ಯವಾನ್ ಎಂಬುದಾಗಿ. ಅದರಲ್ಲೀಗ ಇಬ್ಬರು ಯೋಧರು, ಎಂದರೆ ಭೀಮಾರ್ಜುನರು, ಕುಳಿತಿದ್ದರು. ಕೃಷ್ಣನೇ ಸಾರಥಿ. ಅನೇಕ ಬಾರಿ ಶತ್ರುಗಳಿಂದ ಆಘಾತಗಳನ್ನು ಎದುರಿಸಿದರೂ ಅದು ಮತ್ತೆ ಮತ್ತೆ ನೋಡಬೇಕೆನ್ನುವಂತೆಯೇ ಇತ್ತು.
ಸೂಚನೆ : 26/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಆರುಣಿ-ಉದ್ಧಾಲಕನಾದುದು. ಆರುಣಿ ಧೌಮ್ಯ ಮಹರ್ಷಿಗಳ ಶಿಷ್ಯರು. ಗುರುನಿಷ್ಠೆ ಅವರ ಉಸಿರು. ಗುರುಗಳು ಹೇಳಿದ್ದನ್ನು ಅನೂಚಾನವಾಗಿ ಪಾಲಿಸುವುದು ಜೀವನವ್ರತವಾಗಿ ಇಟ್ಟುಕೊಂಡವರು. ಒಮ್ಮೆ ಗುರುಗಳಿಂದ ಆಜ್ಞಾಪಿತರಾಗಿ, ಒಡೆದು ಹೋಗಿದ್ದ ಗದ್ದೆಯ ಬದುವನ್ನು ಕಟ್ಟಲು ಹೋದರು. ಕಲ್ಲಿಟ್ಟರು. ಮಣ್ಣಿನ ಗೋಡೆ ಮಾಡಲು ಪ್ರಯತ್ನಿಸಿದರು. ಏನು ಮಾಡಿದರೂ ಪ್ರವಾಹ ನಿಲ್ಲದಾಯಿತು. ಗುರುಗಳ ಆಜ್ಞೆ ಸರ್ವ ಪ್ರಕಾರದಿಂದಲೂ ನಡೆಸಬೇಕಾಗಿದೆ. ಕಡೆಯಲ್ಲಿ ತಾವೇ ಆ ಪ್ರವಾಹಕ್ಕೆ ಅಡ್ಡಲಾಗಿ ಇಡೀ ರಾತ್ರಿ ಮಲಗಿ ಪ್ರವಾಹಕ್ಕೆ ತಡೆ ಒಡ್ಡಿದರು. ಧೌಮ್ಯರು ಶಿಷ್ಯನನ್ನು ಹುಡುಕಿಕೊಂಡು ಬಂದರು. ನೋಡಿದರೆ ಮೈಎಲ್ಲಾ ಕೆಸರು. ಸರಿ ಆರುಣಿ ನಡೆದುದೆಲ್ಲವನ್ನು ಗುರುಗಳಿಗೆ ಹೇಳಿದರು. ಎಂತಹ ಗುರುನಿಷ್ಠೆ ! ಧೌಮ್ಯರ ಹೃದಯ ತುಂಬಿಬಂತು. ಜ್ಞಾನಿಗಳು ಅವರು. ದಯಾಮಯರು ಕೂಡ. ಶಿಷ್ಯನಿಗೆ ಉದ್ಧಾಲಕ ಎಂದು ಹೆಸರಿಟ್ಟರು. ಬದುವಿನಿಂದ ಎದ್ದುಬಂದವನು ಎಂಬುದಾಗಿ ಅವನ ಗುರುನಿಷ್ಠೆಯನ್ನು ಸದಾ ನೆನಪಿಸುವ ಹೆಸರು. ಅಷ್ಟೇ ಅಲ್ಲದೇ ತಮ್ಮ ಸಂಕಲ್ಪಮಾತ್ರದಿಂದ ಸಕಲ ವೇದ ಶಾಸ್ತ್ರಗಳ ಸಾರವೂ ಅವನ ಬುದ್ಧಿಯಲ್ಲಿ ಸ್ಫುರಿಸುವಂತೆ ಅನುಗ್ರಹಿಸಿದರು. ಉದ್ಧಾಲಕರೂ ತಮ್ಮ ಗುರುನಿಷ್ಠೆ ತಪಸ್ಸುಗಳಿಂದ,ಗುರುವಿನ ಪರಮಾನುಗ್ರಹದಿಂದ ಜ್ಞಾನಿಗಳಾದರು.
ವಿದ್ಯೆಯ ಉದ್ದೇಶ ಏನಿರಬೇಕು? ಅವರಿಗೊಬ್ಬ ಮಗ. ಶ್ವೇತಕೇತು. ಅವನು ಹನ್ನೆರಡು ವರ್ಷ ವಯಸ್ಸಾದರೂ ಮನೆಯ ಸಲಿಗೆಯಿಂದ ಉಂಡು, ತಿಂದು ಓಡಾಡಿಕೊಂಡಿದ್ದ. ಉದ್ಧಾಲಕರು ಅವನಿಗೆ ಗುರುಕುಲಕ್ಕೆ ಹೋಗಿ ವೇದ ವೇದಾಂಗಗಳನ್ನೂ, ಜೀವನ ಪದ್ಧತಿಗಳನ್ನೂ ಅಧ್ಯಯನ ಮಾಡಿಬರುವಂತೆ ಹೇಳಿದರು. ಶ್ವೇತಕೇತು ಬಹಳ ದೀರ್ಘಕಾಲ ಗುರುಕುಲದಲ್ಲಿದ್ದು ವೇದ ಶಾಸ್ತ್ರಗಳನ್ನೆಲ್ಲ ಅಧ್ಯಯನ ಮಾಡಿದ. ತಾನು ಕಲಿಯಬೇಕಾದುದು ಇನ್ನು ಏನೂ ಉಳಿದಿಲ್ಲ. ತನಗೆ ಎಲ್ಲವೂ ಗೊತ್ತಿದೆ. ತಾನು ಇನ್ನು ಯಾರಿಗೂ ತಲೆಬಾಗಬೇಕಿಲ್ಲ ಎಂಬ ಅಭಿಮಾನದಿಂದ ಮನೆಗೆ ಬಂದ. ಉದ್ಧಾಲಕರು ಜ್ಞಾನಿಗಳಲ್ಲವೇ.. ಮಗನನ್ನು ಗಮನಿಸಿದರು. ವಿದ್ಯಾ ದದಾತಿ ವಿನಯಂ .. ಇರಬೇಕಿತ್ತು. ಆದರೆ ಇವನಲ್ಲಿ ಅದು ಕಾಣಲಿಲ್ಲ. ಕೇಳಿದರು- ಏನನ್ನು ಕಲಿತೆ ಎಂದು. ಪೂರ್ಣ ಸಿಲಬಸ್ ಹೇಳಿದ. ಉದ್ಧಾಲಕರು –ಯಾವುದನ್ನು ತಿಳಿದರೆ ಇನ್ನೇನನ್ನೂ ತಿಳಿಯಬೇಕಿಲ್ಲವೋ, ಯಾವುದು ಎಲ್ಲದಕ್ಕೂ ಆಧಾರವಾಗಿದೆಯೋ ಅದನ್ನು ಕಲಿತಿದ್ದೀಯಾ? ಎಂದರು. ಶ್ವೇತಕೇತುವಿಗೆ ಅರ್ಥವಾಗಲಿಲ್ಲ. ಅಂತಹ ವಸ್ತು ಯಾವುದು ? ತಾವೇ ತಿಳಿಸಬೇಕು ಎಂದ.
ಉದ್ಧಾಲಕರು ಮಗನಿಗೆ ಪ್ರೀತಿಯಿಂದ ವಿಧ ವಿಧವಾದ ಸರಳ ಉದಾಹರಣೆಗಳಿಂದ ಆತ್ಮ ತತ್ತ್ವವನ್ನು ಉಪದೇಶಿಸುತ್ತಾರೆ.
ಗಂಗೆ-ಯಮುನೆಯರು ಸಾಗರ ಸೇರಿದಂತೆ: ಗಂಗಾದಿ ನದಿಗಳು ಹರಿಯುವಾಗ ಅದಕ್ಕೆ ನಾಮ ರೂಪಗಳು ಇರುತ್ತವೆ. ಆದರೆ ಸಾಗರ ಸೇರಿದಾಗ ಅದು ಸಾಗರವೇ ಆಗುತ್ತದೆ. ಅಲ್ಲಿ ಗಂಗೆ ಎಂಬ ಹೆಸರಿಲ್ಲ. ಹೇಗೆ ಸಮುದ್ರ ಸೇರಿದಮೇಲೆ, ನಾನು ಗಂಗೆ, ಯಮುನೆ ಎಂಬ ವ್ಯವಹಾರವಿಲ್ಲವೋ ಹಾಗೆಯೇ ಸದ್ವಸ್ತುವಿನಿಂದ ವಿಕಾಸವಾದ ಚೇತನರು ಅಂದರೆ ನಾವು ಮತ್ತೆ ಅಲ್ಲಿಗೆ ಸೇರಿದಾಗ ನಮ್ಮ ನಾಮ ರೂಪಗಳನ್ನು ಹೇಳಲಾರೆವು. ಅಲ್ಲಿಂದ ಬಂದೆವೆಂಬುದೂ ನಮ್ಮ ಅರಿವಿಗೆ ಬಾರದು, ಅಲ್ಲಿ ಲಯವಾದುದೂ ಅರಿವಿಗೆ ಬಾರದು. ಆದರೆ ಎಲ್ಲಕ್ಕೂ ಆ ಸದ್ವಸ್ತುವೇ ಆತ್ಮಾ. ಅದೇ ನೀನೂ ಆಗಿದ್ದೀ ಎನ್ನುತ್ತಾರೆ.
ವೃಕ್ಷದ ಆರಂಭ,ಮಧ್ಯ, ಅಂತ್ಯದಲ್ಲಿ ಯಾವ ರಸ ಹರಿಯುತ್ತಿದೆ? ಒಂದು ಮರವನ್ನು ಆರಂಭದಲ್ಲಿ, ಮಧ್ಯದಲ್ಲಿ ಅಂತ್ಯದಲ್ಲಿ ಕೆತ್ತಿದರೂ ರಸವನ್ನು ಸ್ರವಿಸುತ್ತದೆ. ಅದರೊಳಗೆ ಆ ಚೇತನ ಇರುವುದರಿಂದಲೇ ಹೀಗಾಗುತ್ತದೆ. ಆ ಚೇತನ ತನ್ನನ್ನು ಹಿಂತೆಗೆದುಕೊಂಡರೆ ಆ ಕೊಂಬೆ ಒಣಗುತ್ತದೆ. ಮರಣವೆಂಬುದೂ ಹೀಗೇ. ಜೀವನು ಶರೀರವನ್ನು ಬಿಡುವಾಗ ಆಗುವಂತಹದು. ಜೀವನಂತೂ ನಾಶವಾಗುವುದಿಲ್ಲ. ಎಂದೇ ಆತ್ಮ ವಸ್ತುವೇ ಎಲ್ಲದರ ಇರುವಿಕೆಗೆ ಕಾರಣ, ನಿನ್ನೊಳಗೂ ಅದೇ ಇರುವುದು. ನೀನು ಅದೇ ಆಗಿದ್ದೀ ಎನ್ನುತ್ತಾರೆ.
ಆಲದ ಬೀಜದಲ್ಲಿ ಆಲದ ಮರವೇ? ಉದ್ಧಾಲಕರು ಶ್ವೇತಕೇತುವಿಗೆ ಒಂದು ಆಲದ ಹಣ್ಣನ್ನು ತರಲು ಹೇಳುತ್ತಾರೆ. ತರುತ್ತಾನೆ. ಅದನ್ನು ತುಂಡುಮಾಡಲು ಹೇಳುತ್ತಾರೆ. ಅದರಲ್ಲಿ ಏನಿದೆ ಎನ್ನುತ್ತಾರೆ. ಬೀಜವಿದೆ ಎನ್ನುತ್ತಾನೆ.ಬೀಜವನ್ನು ಒಡೆಯಲು ಹೇಳುತ್ತಾರೆ. ಅದರಲ್ಲಿ ಏನು ಕಾಣಿಸಿತು ಎಂದು ಕೇಳುತ್ತಾರೆ. ಏನೂ ಇಲ್ಲವೆನ್ನುತ್ತಾನೆ. ಆಗ ಅವರು ಹೇಳುತ್ತಾರೆ. ಏನೂ ಕಾಣದ ಈ ಸೂಕ್ಷ್ಮವಾದ ಬೀಜದಲ್ಲಿ ದೊಡ್ಡ ಆಲದ ಮರವೇ ಇದೆ. ಕಾರ್ಯರೂಪದಲ್ಲಿ ಎದ್ದುನಿಂತಿದೆ. ಹಾಗೆಯೇ ಚರಾಚರ ರೂಪವಾದ ಸೃಷ್ಟಿ .ಎಲ್ಲದಕ್ಕೂ ಕಾರಣವಾಗಿ ಆ ಸದ್ವಸ್ತು ಇದೆ. ಅದು ನಿನ್ನಲ್ಲೂ ಇದೆ. ನೀನು ಅದೇ ಆಗಿದ್ದೀ ಎಂದು ಘೋಷಿಸುತ್ತಾರೆ.
ಶ್ರೀರಂಗವಾಣಿ : “ ಒಂದು ಉಗುರುಕಣ್ಣಿನಲ್ಲಿ ಅಡಗಬಹುದಾದ ಆಲದ ಬೀಜವು ತನ್ನನ್ನು ತಾನು ಬೆಳೆಸಿಕೊಂಡು ಮತ್ತೆ ಬೀಜರೂಪದಲ್ಲಿಯೇಇರುವುದಕ್ಕೆ ಇಷ್ಟಪಟ್ಟು ಉಪಸಂಹರಿಸಿಕೊಳ್ಳುತ್ತದೆ.ಅಂತೆಯೇ ಈ ಜೀವನ ವೃಕ್ಷವೂ ಆಗಿದೆ” ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.
ಉಪ್ಪು ಹೋದುದು ಎಲ್ಲಿಗೆ? ಮುಂದೆ ಒಂದು ಉಪ್ಪಿನ ಕಲ್ಲನ್ನು ರಾತ್ರಿ ನೀರಿನ ಪಾತ್ರೆಯಲ್ಲಿ ಹಾಕಿ ಬೆಳಿಗ್ಗೆ ತರಲು ಹೇಳಿದರು. ಉಪ್ಪಿನ ಕಲ್ಲು ಶ್ವೇತಕೇತುವಿಗೆ ಸಿಗಲಿಲ್ಲ. ಆಗ ಉಪ್ಪು ಎಲ್ಲಿ ಹೋಯಿತು? ನೀರನ್ನು ಮೇಲಿಂದ ಮಧ್ಯದಿಂದ, ತಳದಿಂದ ಸೇವಿಸಲು ಹೇಳಿದರು. ಎಲ್ಲೆಡೆಯಲ್ಲೂ ಉಪ್ಪು. ಕಣ್ಣಿಂದ ಕಾಣಲಾಗದಿದ್ದರೂ ಉಪ್ಪು ಇರುವುದು ನಿಜ. “ಹಾಗೆಯೇ ಎಲ್ಲೆಲ್ಲೂ ವ್ಯಾಪಿಸಿರುವ ಪರಬ್ರಹ್ಮನು ಬರಿ ಕಣ್ಣಿಂದ ನೋಡಲಾಗದಿದ್ದಾರೂ ಅವನೇ ಎಲ್ಲೆಲ್ಲೂ ಇರುವನು. ನಿನ್ನಲ್ಲೂ . ಅದೇ ನೀನಾಗಿದ್ದೀ”. ಹೀಗೆ ಪರಮ ಸತ್ಯದ ಅರಿವನ್ನು ಶ್ವೇತಕೇತುವಿನಲ್ಲಿ ಮೂಡಿಸಿ ಅವನು ಅದರ ಅರಿವಿಗಾಗಿ ತಪಸ್ಸು ಮಾಡುವಂತೆ ಮಾಡಿದರು. ಶ್ವೇತಕೇತುವೂ ಸಹ ತಂದೆಯಂತೆಯೇ ಪರಬ್ರಹ್ಮದ ಅನುಭವವನ್ನು ಪಡೆದು ಜ್ಞಾನಿಯಾದನು. ಇದು ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಕಥೆ.
ಉಪನಿಷತ್ತುಗಳ ಮಹಾ ಧ್ಯೇಯ ಉಪನಿಷತ್ತುಗಳೆಂದರೆ ಬ್ರಹ್ಮ ವಿದ್ಯೆಯನ್ನು ಅರುಹಲು ಬಂದ ವಿದ್ಯೆ. ಅದಕ್ಕೆ ಬೇಕಾದ ಸಾಧನಾ ಮಾರ್ಗವನ್ನು ಹೇಳುವ ವಿದ್ಯೆ. ಜ್ಞಾನಿಯಾದ ಗುರುವಿನ ಸಮೀಪದಲ್ಲಿ ಕುಳಿತು ಉಪದೇಶವನ್ನು ಪಡೆದು ಜೀವನದ ಸಾರ್ಥಕ್ಯವನ್ನು ಪಡೆಯುವುದೇ ಉಪನಿಷತ್ತುಗಳ ಸಾರ. ಜೀವನದಲ್ಲಿ ಸಾಧನೆ-ಶೋಧನೆ-ಬೋಧನೆ ಮುಖ್ಯವಾಗಿ ಇರಬೇಕೆಂಬ ಸೂತ್ರವ್ರಾಯವಾದ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಅಂತಹ ಗುರು-ಶಿಷ್ಯ ಪರಂಪರೆಯಿಂದ ಬೆಳೆದ ಸಂಸ್ಕೃತಿ ನಮ್ಮದು. ನಾವೆಲ್ಲರೂ ಅಂತಹ ಉಪದೇಶದ ಮರ್ಮವನ್ನು ಅರಿತು ಜೀವನ ಮಾಡುವಂತಾಗಲಿ ಎಂದು ಸರ್ವೆಶ್ವರನನ್ನು ಪ್ರಾರ್ಥಿಸೋಣ.
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೨ - ಕುಲರೂಪವಾದ ಕಮಲಕ್ಕೆ ಸೂರ್ಯನಂತೆ ಅರಳಿಸುವ ಸಾಧನ ಯಾವುದು?
ಉತ್ತರ - ವಿದ್ಯಾ, ದಯಾ ಮೊದಲಾದ ದೈವೀಗುಣಗಳಿದ್ದರೂ ನಮ್ರನಾಗಿರುವುದು.
ಈ ಪ್ರಶ್ನೋತ್ತರದಲ್ಲಿ ‘ವಿನಯ’ ಎಂಬ ಗುಣ ಎಷ್ಟು ಶ್ರೇಷ್ಠವಾದದ್ದು? ಎಂಬ ಬಗ್ಗೆ ಕಾವ್ಯಮಯವಾಗಿ ವಿವರಿಸಲಾಗಿದೆ. ಒಬ್ಬ ವ್ಯಕ್ತಿ ಒಂದು ಉತ್ತಮಕುಲದಲ್ಲಿ ಹುಟ್ಟಿದ್ದಾನೆ; ಆತನ ಕುಲವು ಅತ್ಯಂತ ಶ್ರೇಷ್ಠವಾದದ್ದು; ಅಷ್ಟೇ ಅಲ್ಲ, ಅವನಿಗೆ ವಿದ್ಯೆ, ದಯೆ ಮೊದಲಾದ ಅನೇಕ ಉತ್ತಮ ಗುಣಗಳಿವೆ. ಅಷ್ಟೇ ಅಲ್ಲ ಇನ್ನೂ ಅನೇಕ ದೈವದತ್ತ ಶ್ರೇಷ್ಠ ಗುಣಗಳೂ ಕೂಡ ಇವೆ. ಹೀಗಿದ್ದು ಅವನಲ್ಲಿ ಈ ವಿನಯ ಎಂಬ ಗುಣ ಇಲ್ಲದಿದ್ದರೆ ಅವನಿಗೆ ಯಾವುದೇ ರೀತಿಯ ಗೌರವ - ಮನ್ನಣೆ ಸಿಗುವುದಿಲ್ಲ ಎಂಬುದಾಗಿ ಇಲ್ಲಿ ಕಾವ್ಯಮಯವಾಗಿ ವಿವರಣೆ ಇಲ್ಲಿ ಸಿಗುತ್ತದೆ.
ಕುಲ ಎಂಬುದು ಒಂದು ಕಮಲವಿದ್ದಂತೆ. ಕಮಲವು ಅರಳಬೇಕಾದರೆ ಸೂರ್ಯನ ಕಿರಣ ಅತ್ಯಂತ ಅವಶ್ಯಕ. ಇಲ್ಲಿ ನಾವು ತಿಳಿಯಬೇಕಾದ ವಿಷಯ ಬಹಳ ಇದೆ. ಏಕೆಂದರೆ ಕುಲ, ಕಮಲ ಮತ್ತು ಸೂರ್ಯನ ಕಿರಣ ಇವೆಲ್ಲವೂ ಇವೆ. ಆದರೆ ಇವಕ್ಕೊಂದು ಕಿರೀಟ ಪ್ರಾಯವಾದ ಒಂದು ಬೆಳಗಿಸುವ ಸಾಧನ ಇದ್ದಾಗ ಮಾತ್ರ ಇವೆಲ್ಲಕ್ಕೂ ಸಾರ್ಥಕತೆ ಬರುತ್ತದೆ ಎಂದು. ದಯೆ, ವಿದ್ಯೆ, ಸಂಸ್ಕಾರ ಇವೆಲ್ಲವೂ ಅತ್ಯಂತ ಶ್ರೇಷ್ಠವಾದ ಗುಣಗಳೇ. ಇವು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರಬೇಕಾದವುಗಳೇ. ಆದರೆ ಈ ನಮ್ರತೆ ಅಥವಾ ವಿನಯ ಎಂಬ ಗುಣ ಇಲ್ಲದಿದ್ದರೆ ಈ ಹಿಂದೆ ಹೇಳಿದ ಯಾವ ಗುಣಗಳು ಇದ್ದರೂ ಪ್ರಯೋಜನವಿಲ್ಲ. ಹಾಗಾಗಿ ಇದಕ್ಕೆ ಅಷ್ಟೊಂದು ಬೆಲೆಯನ್ನು ಕೊಡಲಾಗಿದೆ. ಹಾಗಾದರೆ ಇದಕ್ಕೆ ಅಷ್ಟು ಬೆಲೆ ಬರಲು ಕಾರಣ ಏನು? ವಿನಯ ಎಂದರೇನು?
ವಿದ್ಯೆ, ಸಂಸ್ಕಾರ, ದಯಾ ಮೊದಲಾದ ಗುಣಗಳಿಂದ ವ್ಯಕ್ತಿ ಮೇಲಕ್ಕೆ ಏರುತ್ತಾನೆ. ಎಷ್ಟೇ ಮೇಲಕ್ಕೆ ಏರಿದರೂ, ವ್ಯಕ್ತಿತ್ವ ಎಷ್ಟೇ ಬೆಳೆದಿದ್ದರೂ, ವ್ಯಕ್ತಿಶಃ ಚಿಕ್ಕವನು ಎಂಬ ಒಂದು ಅರಿವಿದ್ದಾಗ ಮಾತ್ರ ಈ ಎಲ್ಲಕ್ಕೂ ಬೆಲೆ ಬರುತ್ತದೆ. ಹೀಗೆ ಒಬ್ಬ ಕವಿ ಹೇಳುತ್ತಾನೆ - “ಏರಿದವನು ಚಿಕ್ಕವನಿರಬೇಕಲೇ ಎಂಬ ಮಾತನು ಸಾರುವನು” ಎಂದು. ಎಷ್ಟೇ ಮೇಲೆ ಏರಿದರೂ ಅದು ಶಾಶ್ವತವಲ್ಲ, ಒಂದಲ್ಲ ಒಂದು ಕಾಲದಲ್ಲಿ ಮತ್ತೆ ಕೆಳಗಿಳಿಯಬೇಕಾಗುತ್ತದೆ ಎಂಬ ಯಾವ ಅರಿವಿದೆಯೋ ಅದನ್ನೇ ವಿನಯ ಎಂಬುದಾಗಿ ಕರೆಯಬೇಕು. ವಿನಯ ಎಂದರೆ ಬಾಗುವುದು. ದೊಡ್ಡದಕ್ಕೆ ಗೌರವವನ್ನು ಕೊಡುವುದು. ಅದು ನಮಗೆ ಅರಿವಿಗೆ ಬಾರದಿರುವಾಗ ದಂಭಭಾವ, ಅಹಂಕಾರ ಮೊದಲಾದ ದುಷ್ಟಗುಣಗಳು ಆವಿರ್ಭಾವಗೊಳ್ಳುತ್ತವೆ. ಇವುಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತವೆ. ಕೆಲವರು ವಿದ್ಯಾವಂತರಾಗಿರುತ್ತಾರೆ, ಆದರೆ ಅವರಲ್ಲಿ ವಿನಯವೆಂಬುದು ಇರುವುದಿಲ್ಲ. ಇನ್ನು ಕೆಲವರು ಅನೇಕ ದೈವದತ್ತ ಗುಣಗಳಿಂದ ಕೂಡಿರುತ್ತಾರೆ. ಆದರೆ ಅದು ಅವರಿಗೆ ತಲೆಗೆ ಹತ್ತಿ ಕೊನೆಗೆ ಈ ಪ್ರಪಂಚವೇ ಕಾಣದಿರುವಷ್ಟು ಅಂಧತೆ ಆವರಿಸುತ್ತದೆ. ಹಾಗಾಗಿ ಈ ವಿನಯ ಎಂಬ ಗುಣವು ಈ ಮೌಢ್ಯವನ್ನು ಅಹಂಕಾರದ ಅಂಧತ್ವವನ್ನು ತೊಲಗಿಸುವ ಒಂದು ದೀಪದಂತೆ ಎಂಬುದಾಗಿ ಇಲ್ಲಿ ವಿವರಿಸಲಾಗಿದೆ. ಕಮಲವು ಶ್ರೇಷ್ಠವಾದದ್ದು, ಹಾಗೇ ಇದ್ದರೆ ಅದು ಅರಳದು. ಅದಕ್ಕೆ ಸೂರ್ಯಕಿರಣ ಬೇಕಷ್ಟೇ. ಒಳ್ಳೆಯ ಹಸು, ಆದರೆ ಹಾಲೇ ಕೊಡದಿದ್ದರೆ ಹೇಗೇ! ಎಂಬಂತೆ ವಿದ್ಯೆ ಮೊದಲಾದ ಗುಣಗಳು ಅತ್ಯಂತ ಶ್ರೇಷ್ಠವಾದವುಗಳೇ ಆದರೂ ಅವುಗಳು ಪ್ರಕಾಶಕ್ಕೆ ಬರಬೇಕಾದರೆ ದೀಪದಂತಿರುವ ವಿನಯ ಎಂಬುದು ಅತ್ಯಂತ ಮುಖ್ಯ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.
ಸೂಚನೆ : 19/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಭೀಮಸೇನನಿಗೂ ಜರಾಸಂಧನಿಗೂ ತೀವ್ರವಾದ ಯುದ್ಧವು ಆರಂಭವಾಯಿತಷ್ಟೆ? ಅವರಿಬ್ಬರ ಜಟ್ಟಿಕಾಳಗ ಅಲ್ಪಕಾಲದಲ್ಲಿ ಮುಗಿಯುವಂತಹುದಲ್ಲ. ಅವರ ಮಲ್ಲಯುದ್ಧವನ್ನು ಸಾಕಷ್ಟು ದೀರ್ಘವಾಗಿಯೇ ವ್ಯಾಸರು ಚಿತ್ರಿಸಿರುವರು.
ಬಾಹುಪಾಶ-ಚರಣಪಾಶಗಳೆಂಬ ಪಟ್ಟುಗಳನ್ನು ಹಾಕಿ ಒಬ್ಬರ ಪಾದದಿಂದ ಮತ್ತೊಬ್ಬರ ಶಿರಸ್ಸಿಗೆ ಹೊಡೆತವಿತ್ತರು. ಉರೋಹಸ್ತ-ಪೂರ್ಣಕುಂಭಗಳೆಂಬ ವರಸೆಗಳಿಂದಾಗಿ ಎದೆಗಳಿಗೆ ಗುದ್ದಿದರು. ಒಬ್ಬರ ಕೈಯನ್ನು ಮತ್ತೊಬ್ಬರು ಹಿಸುಕಿದರು. ಘೀಳಿಡುವ ಗಜಗಳಂತೆ ಅವರು ತೋರಿದರು.
ಬಹುಪ್ರಹಾರಗಳನ್ನು ಪರಸ್ಪರ ಮಾಡುತ್ತಾ ಗುಡುಗುವ ಮೋಡಗಳಂತೆ ಕಂಡರವರು. ಅಂಗೈಯಿಂದ ಒಬ್ಬರಿಗೊಬ್ಬರು ಚಚ್ಚಿದರು. ಸಿಂಹಗಳ ಹಾಗೆ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಾ ಒಬ್ಬರನ್ನೊಬ್ಬರು ಎಳೆದಾಡಿ ಎಳೆದಾಡಿ ಕಾದಿದರು. ಒಬ್ಬರ ಅಂಗವನ್ನು ಮತ್ತೊಬ್ಬರು ಮರ್ದಿಸಿದರು. ತೋಳುಗಳಿಂದ ಒಬ್ಬರಿಗೊಬ್ಬರು ಬಾಹುಬಂಧವನ್ನು ಮಾಡಿದರು. ಒಬ್ಬರ ಹೊಟ್ಟೆಯನ್ನು ಮತ್ತೊಬ್ಬರು ತೋಳಿನಿಂದ ಬಳಸಿ ಅತ್ತಿಂದಿತ್ತ ತಳ್ಳಿಹಾಕಿದರು. ಒಬ್ಬರ ಸೊಂಟಕ್ಕೆ ಮತ್ತೊಬ್ಬರು ಕೈಹಾಕಿ ದೂರಕ್ಕೆ ಬಿಸಾಡುತ್ತಿದ್ದರು.
ಒಬ್ಬರ ಕೈಗೆ ಮತ್ತೊಬ್ಬರಿಕ್ಕುತ್ತಾ, ಗರ್ಜಿಸುವ ಗಜಗಳ ಹಾಗೆ ಅವರು ಕಂಡರು. ಬಾಹುಗಳೆಂಬ ಆಯುಧಗಳಿಂದ ಒಬ್ಬರಿಗೊಬ್ಬರು ಘಾತಮಾಡುತ್ತಾ ಘನಗಳ ಹಾಗೆ, ಎಂದರೆ ಮೋಡಗಳ ಹಾಗೆ, ಗುಡುಗಿದರು. ಒಬ್ಬರನ್ನೊಬ್ಬರು ಸೆಳೆದೆಳೆದಾಡುತ್ತಾ ಸಿಂಹಗಳ ಹಾಗೆ ಸೆಣಸಿದರು. ಎಲ್ಲ ಎಲ್ಲೆಗಳನ್ನೂ ಮೀರಿ ಪರಸ್ಪರ ಬಡಿದಾಡಿದರು. ಬಗೆ ಬಗೆಯ ಜಟ್ಟಿಪಟ್ಟುಗಳನ್ನು ಕಟ್ಟಿದರು.
ಅವರಿಬ್ಬರು ಹೀಗೆ ಯುದ್ಧ ಮಾಡುತ್ತಿರಲಾಗಿ, ಪುರವಾಸಿಗಳೆಲ್ಲ ಅಲ್ಲಿ ನೆರೆದರು. ಬ್ರಾಹ್ಮಣರು, ವೈಶ್ಯರು, ಕ್ಷತ್ರಿಯರು, ಶೂದ್ರರು, ಸ್ತ್ರೀಯರು, ವೃದ್ಧರು - ಇವರುಗಳೆಲ್ಲ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಸುತ್ತುಗಟ್ಟಿದರು. ಅವರಿಬ್ಬರ ಪಾರಸ್ಪರಿಕವಾದ ಆಘಾತಗಳು ಪರ್ವತ-ವಜ್ರಾಯುಧಗಳ ಢಿಕ್ಕಿಗಳಂತೆ ಕಂಡವು. ಹೋರಾಟದಲ್ಲಿ ಇಬ್ಬರಿಗೂ ಖುಷಿಯಿತ್ತು. ಇಬ್ಬರೂ ಬಲಶಾಲಿಗಳಾಗಿದ್ದು, ಒಬ್ಬರಲ್ಲಿಯ ದೋಷವನ್ನು ಬಳಸಿಕೊಳ್ಳಲು ಮತೊಬ್ಬರು ಎಳಸುತ್ತಿದ್ದರು. ಪರಸ್ಪರ ಜಯಾಪೇಕ್ಷೆ ಇಬ್ಬರಿಗೂ ಇದ್ದಿತು.
ಒಬ್ಬರನ್ನೊಬ್ಬರು ಹೊಡೆದಾಡುತ್ತಿರಲಾಗಿ ಅದು ವೃತ್ರ-ವಾಸವರ ಯುದ್ಧದಂತೆ ಕಂಡುಬಂದಿತು. ಅವರ ಪರಸ್ಪರ ಘರ್ಜನ-ತರ್ಜನಗಳು ಅಸಾಧಾರಣವಾಗಿದ್ದವು. ಬಂಡೆಗಳ ಘಟ್ಟನ-ಕಬ್ಬಿಣದ ಪರಿಘಗಳಿಂದ ಪರಸ್ಪರ ಘರ್ಷಣ ಮುಂತಾದುವು ಅಲ್ಲಿ ಘಟಿಸಿದುವು.
ಎಷ್ಟು ಕಾಲ ನಡೆಯಿತು, ಅವರ ಈ ಯುದ್ಧ? ಕಾರ್ತಿಕಮಾಸದ ಮೊದಲ ದಿನದಂದು ಆರಂಭವಾದ ಈ ಯುದ್ಧಕ್ಕೆ ಬಿಡುವೆಂಬುದೇ ಇರಲಿಲ್ಲ. ಹಗಲಿರುಳೂ ಯುದ್ಧ. ಆಹಾರವಿಲ್ಲದೇ ಯುದ್ಧ. ವಿಶ್ರಾಂತಿಯಿಲ್ಲದೇ ಯುದ್ಧ. ಹೀಗೆ ಮುಂದುವರೆಯಿತು, ಅವರಿಬ್ಬರ ಸಂಗರ.
ಪ್ರಥಮೆಯಂದು ಆರಂಭವಾದದ್ದು ತ್ರಯೋದಶಿಯವರೆಗೂ ಎಡೆಬಿಡದೆ ನಡೆಯಿತು. ಚತುರ್ದಶಿಯ ರಾತ್ರಿಯ ಹೊತ್ತಿಗೆ ಜರಾಸಂಧನು ದಣಿದುಹೋದನು. ಜರಾಸಂಧನು ಹಾಗೆ ದಣಿದಿರಲಾಗಿ, ಅದನ್ನು ಗಮನಿಸಿದ ಕೃಷ್ಣನು ಭೀಮನಿಗೆ ಅರ್ಥವಾಗುವ ಪರಿಯಲ್ಲಿ ಹೀಗೆ ನುಡಿದನು:
"ಶತ್ರುವು ಬಳಲಿಹೋಗಿದ್ದಲ್ಲಿ ಆತನಿಗೆ ಅಧಿಕವಾದ ಪೀಡೆಯುಂಟುಮಾಡುವುದು ತರವಲ್ಲ. ಪೂರ್ಣವಾಗಿ ಪೀಡಿಸಿದಲ್ಲಿ ಆತನ ಪ್ರಾಣವೇ ಹಾರಿಹೋದೀತು. ಆದ್ದರಿಂದ ರಾಜನಿಗೆ ಅತಿಯಾದ ಪೀಡೆಯುಂಟುಮಾಡದೆ ಆತನೊಂದಿಗೆ ಬಾಹುಯುದ್ಧವನ್ನು ಮುಂದುವರೆಸು" - ಎಂದನು.
ಶತ್ರುವೀರನನ್ನು ನಾಶಪಡಿಸಿಯೇ ತೀರುವ ಆ ಭೀಮನು, ಜರಾಸಂಧನು ಇದ್ದ ಆ ಅವಸ್ಥೆಯನ್ನು ಕಂಡು ಆತನನ್ನು ಕೊಲ್ಲುವ ನಿಶ್ಚಯವನ್ನು ಮಾಡಿದನು. ಅಪರಾಜಿತನೆನಿಸಿದ್ದ ಆ ಜರಾಸಂಧನನ್ನು ಜಯಿಸಲೋಸುಗ ಆಗ ಭೀಮನು ಉತ್ಕಟವಾದ ಕ್ರೋಧವನ್ನು ತಾಳಿದನು.
ಜರಾಸಂಧನನ್ನು ವಧಿಸಬೇಕೆಂಬ ಸಂಕಲ್ಪವು ಉಂಟಾದ ಭೀಮಸೇನನು, ಕೃಷ್ಣನನ್ನು ಕುರಿತು ಹೇಳಿದನು: "ಈ ಪಾಪಿ ಜರಾಸಂಧನು ಇಷ್ಟೇಟು ತಿಂದೂ ಇನ್ನೂ ಯುದ್ಧವಸ್ತ್ರವನ್ನು ಧರಿಸಿಯೇ ಯುದ್ಧಮಾಡುತ್ತಿರುವನು! ಇನ್ನು ಅವನನ್ನು ಪ್ರಾಣದೊಂದಿಗೆ ಉಳಿಸುವುದು ತರವಲ್ಲ."
ಸೂಚನೆ : 19/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಸೈನ್ಯಸಮೇತನಾಗಿಯಾಗಲಿ, ಒಬ್ಬನೊಂದಿಗಾಗಲಿ, ಇಬ್ಬಿಬ್ಬರೊಂದಿಗಾಗಲಿ, ಮೂವರೊಂದಿಗೂ
ಆಗಲಿ - ಯುದ್ಧ ಮಾಡಲು ತಾನು ಸಿದ್ಧನೆಂದು ಜರಾಸಂಧನು ಕೃಷ್ಣಭೀಮಾರ್ಜುನರ ಮುಂದೆ
ಘೋಷಿಸಿಕೊಂಡನಷ್ಟೆ?
ಹಾಗೆ ಹೇಳಿದ್ದೇ ಅಲ್ಲದೆ, ಭಯಂಕರವಾದ ಕಾರ್ಯವನ್ನು ಮಾಡಹೊರಟಿದ್ದ
ಈ ಮೂವರೊಂದಿಗೆ ಸೆಣಸಲು ಸಿದ್ಧನೂ ಆದನು. "ನನ್ನ ಪುತ್ರನಾದ ಸಹದೇವನಿಗೆ
ಪಟ್ಟಾಭಿಷೇಕವನ್ನು ನೆರವೇರಿಸಿ" ಎಂಬುದಾಗಿ ತನ್ನ ಕಡೆಯವರಿಗೆ ಆಜ್ಞೆಯಿತ್ತನು.
ಹಾಗೆ ಹೇಳಿದವನೇ ತನ್ನ ಹಿಂದಿನ ಸೇನಾಪತಿಗಳಾದ ಕೌಶಿಕ ಹಾಗೂ ಚಿತ್ರಸೇನ - ಇವರಿಬ್ಬರನ್ನೂ
ಸ್ಮರಿಸಿಕೊಂಡನು. ಅವರಿಬ್ಬರೇ ಹಿಂದೆ ಹಂಸ-ಡಿಂಭಕ ಎಂದು ಹೆಸರಾಗಿದ್ದವರು. ಅವರಿಬ್ಬರೂ
ಬದುಕಿದ್ದಾಗ ಪುರುಷರೆಲ್ಲರೂ ಅವರನ್ನು ಆದರಿಸುತ್ತಿದ್ದರು, ಕೊಂಡಾಡುತ್ತಿದ್ದರು.
ಜರಾಸಂಧನು ಬಲಶಾಲಿಗಳಲ್ಲಿ ಶ್ರೇಷ್ಠನಾದ ರಾಜನು. ಆತನ ಪರಾಕ್ರಮ ಭೀಕರವಾದದ್ದು.
“ಯದುವಂಶದವರಾರಿಂದಲೂ ಆತನು ನಾಶಹೊಂದಬಾರದು” - ಎಂಬುದು ಬ್ರಹ್ಮನ ಆಜ್ಞೆಯಾಗಿತ್ತು.
ಶ್ರೀಕೃಷ್ಣನಾದರೂ ಪುರುಷಶಾರ್ದೂಲ, ಎಂದರೆ ನರಶ್ರೇಷ್ಠ ಹಾಗೂ ಸತ್ಯಸಂಧ. ಎಂದೇ ತಾನೇ
ಕೊಲ್ಲಲು ಸಮರ್ಥನಾಗಿದ್ದರೂ ಹಾಗೆ ಮಾಡಲಿಲ್ಲ. ಜರಾಸಂಧನಂತೂ ಯುದ್ಧ ಮಾಡುವುದೆಂದು
ನಿಶ್ಚಯಿಸಿಕೊಂಡಿದ್ದನಷ್ಟೆ. ಆತನನ್ನು ಕುರಿತು ಯದುನಂದನನಾದ ಶ್ರೀಕೃಷ್ಣನು ಹೀಗೆ ಹೇಳಿದನು:
"ರಾಜನೇ, ನಮ್ಮೀ ಮೂವರಲ್ಲಿ ಯಾರೊಂದಿಗೆ ಯುದ್ಧಮಾಡಲು ನಿನಗೆ ಮನಸ್ಸಿದೆ? ನಮ್ಮಲ್ಲಿ
ಯಾರು ನಿನ್ನೊಡನೆ ಯುದ್ಧ ಮಾಡಲು ಸಿದ್ಧರಾಗಬೇಕು?" ಕೃಷ್ಣನು ಹೀಗೆ ಹೇಳಲಾಗಿ, ಆ
ಮಹಾತೇಜಸ್ವಿಯಾದ ಜರಾಸಂಧನು ಭೀಮಸೇನನೊಡನೆ ಸೆಣಸಲು ಬಯಸಿದನು.
ಒಡನೆಯೇ ಜರಾಸಂಧನ ಪುರೋಹಿತನು ಹೆಲವು ಮಂಗಲಕಾರ್ಯಗಳನ್ನು ನೆರವೇರಿಸಿದನು:
ಗೋರೋಚನ-ಮಾಲೆಗಳು, ಇನ್ನಿತರ ಮಂಗಲದ್ರವ್ಯಗಳು, ಹಾಗೂ ಕೆಲವು
ಔಷಧಿಗಳು - ತುಂಬ ನೋವಾದಾಗ ಅದನ್ನು ನಿವಾರಿಸತಕ್ಕವು, ಹಾಗೂ ಮೂರ್ಛಿತನಾದಾಗ
ಎಚ್ಚರವಾಗಿಸುವಂತಹವು - ಇವುಗಳನ್ನೂ ತಂದನು. ಯುಯುತ್ಸುರಾಜನ ಮುಂದೆ, ಎಂದರೆ ಯುದ್ಧ
ಮಾಡಲು ಬಯಸಿರುವ ಜರಾಸಂಧನ ಮುಂದೆ, ಇವುಗಳೊಡನೆ ಉಪಸ್ಥಿತನಾದನು.
ಹೀಗೆ ಬ್ರಾಹ್ಮಣನಿಂದ ಸ್ವಸ್ತಿವಾಚನವಾದ ಬಳಿಕ, ಕ್ಷತ್ರಧರ್ಮವನ್ನು ಸ್ಮರಿಸಿದ ಜರಾಸಂಧನು
ಯುದ್ಧಕ್ಕೆ ಸನ್ನಧನಾದನು. ಕಿರೀಟವನ್ನು ತೆಗೆದನು. ಕೇಶಗಳನ್ನು ಕಟ್ಟಿದನು. ಹಾಗೆ ಸಿದ್ಧನಾದ
ಜರಾಸಂಧನು, ತನ್ನ ದಡವನ್ನೇ ಮೀರಿ ಬರುವ ಸಮುದ್ರದ ಹಾಗೆ ತೋರಿದನು!
ಭಯಂಕರವಾದ ಪರಾಕ್ರಮವುಳ್ಳ ಆ ಧೀಮಂತ ಜರಾಸಂಧನು ಭೀಮನನ್ನು ಕುರಿತು, "ಭೀಮನೇ,
ನಿನ್ನೊಡನೆ ನಾನು ಯುದ್ಧಮಾಡುವೆ. ಏಕೆಂದರೆ ಶ್ರೇಷ್ಠರೊಡನೆ ಹೋರಾಡಿ ಸೋಲುವುದು ಸಹ
ಶ್ರೇಷ್ಠವಾದದ್ದೇ!" ಎಂದನು.
ಹೀಗೆ ಹೇಳಿ ಅವನು ಭೀಮಸೇನನನ್ನು ಎದುರ್ಗೊಂಡನು. ಬಲ ಎಂಬ ಅಸುರನು ಇಂದ್ರನನ್ನು ಹೇಗೆ
ಎದುರ್ಗೊಂಡನೋ ಹಾಗೆಯೇ ಇದಿತ್ತು.
ಅಷ್ಟರಲ್ಲಿ ಶ್ರೀಕೃಷ್ಣನಿಂದ ಸ್ವಸ್ತ್ಯಯನವನ್ನು ಪಡೆದು, ಭೀಮಸೇನನೂ ಸಹ ಇತ್ತ ಸಿದ್ಧನಾದನು,
ಜರಾಸಂಧನನ್ನು ಸಮೀಪಿಸಿದನು. ಆಗ ಇಬ್ಬರೂ ವೀರರು ಮಹಾ-ಹರ್ಷದಿಂದ ಕೂಡಿದವರಾಗಿ
ಪರಸ್ಪರ-ಜಯಾಕಾಂಕ್ಷಿಗಳಾಗಿ, ತಮ್ಮ ಬಾಹುಗಳನ್ನೇ ಶಸ್ತ್ರಗಳನ್ನಾಗಿಸಿಕೊಂಡು ಸೆಣಸಿದರು.
ಮೊದಲು ಕೈಕೈ ಹಿಡಿದರು. ಪರಸ್ಪರ ಪಾದಾಭಿವಂದನ ಮಾಡಿದರು. ಕಂಕುಳಿನಿಂದ ಕಂಕುಳನ್ನು
ತಳ್ಳಿದರು. ಮಹಾಶಬ್ದಸಹಿತವಾಗಿ ತಮ್ಮ ತೋಳುಗಳನ್ನು ತಟ್ಟಿಕೊಂಡರು. ಒಬ್ಬರು ಮತ್ತೊಬ್ಬರ
ಕತ್ತಿಗೆ ಇಕ್ಕಿದರು, ಮತ್ತೆ ಮತ್ತೆ ಹೊಡೆತವಿತ್ತರು. ಒಬ್ಬರ ಅಂಗವನ್ನು ಮತ್ತೊಬ್ಬರು ಅದುಮಿ ಹಿಡಿದರು.
ಪರಸ್ಪರ ಆಸ್ಫಾಲನ ಮಾಡಿದರು, ಎಂದರೆ ಅಪ್ಪಳಿಸಿದರು. ಚಿತ್ರಹಸ್ತ, ಕಕ್ಷಾಬಂಧ ಮುಂತಾದ
ಪಟ್ಟುಗಳನ್ನು ಹಾಕಿದರು. ಒಬ್ಬರ ಕತ್ತು-ತಲೆಗಳಿಗೊಬ್ಬರು ಇಡಿದರು: ಆ ಏಟುಗಳು ಎಷ್ಟು
ತೀವ್ರವಾಗಿದ್ದವೆಂದರೆ ಕಿಡಿಗಳು ಬಂದಂತಾಯಿತು; ಸಿಡಿಲು ಬಡಿದಂತಾಯಿತು!
ಸೂಚನೆ : 12/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೦ - ಪ್ರಶಂಸೆ ಮಾಡಲು ಯೋಗ್ಯವಾದುದು ಯಾವುದು ?
ಉ. ಉದಾರತಾ.
ಔದಾರ್ಯ ಅಥವಾ ಉದಾರತಾ ಎಂಬ ಗುಣವು ಅತ್ಯಂತ ಶ್ರೇಷ್ಠವಾದದ್ದು. ಇದು ಯಾರಲ್ಲಿ ಇರುತ್ತದೆಯೋ
ಆ ವ್ಯಕ್ತಿಯನ್ನು ಪ್ರಶಂಸೆ ಮಾಡುವುದರಲ್ಲಿ ಯಾವುದೇ ಅಂಜಿಕೆ ಇರಬಾರದು. ಏಕೆಂದರೆ ಆ ವ್ಯಕ್ತಿ
ಈ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ. ಹಾಗಾದರೆ ಈ 'ಉದಾರತಾ' ಎಂಬ ಗುಣವು ಏಕೆ ಅಷ್ಟು ಶ್ರೇಷ್ಠವಾಗಿದೆ?
ಎಂಬುದನ್ನು ತಿಳಿಯಬೇಕಾಗಿದೆ.
'ಔದಾರ್ಯ' ಎಂಬುದು ಒಂದು ಕೊಡುವ ಮನೋಧರ್ಮ. ಈ ಹಿಂದಿನ ಪ್ರಶ್ನೋತ್ತದಲ್ಲಿ ಒಂದು ವಿಷಯವನ್ನು
ಗಮನಿಸಿದ್ದೆವು. ಆ ವಿಷಯವನ್ನು ಇಲ್ಲಿ ನೆನಪಿಸಿಕೊಂಡು ಈ ಉತ್ತರವನ್ನು ಅರ್ಥ ಮಾಡಿಕೊಳ್ಳಬೇಕು.
ಈ ಹಿಂದಿನ ಪ್ರಶ್ನೆಯಲ್ಲಿ ವೈಭವಿದ್ದರೂ ಮತ್ತೊಬ್ಬರಿಗೆ ಕೊಡದಿರುವ ಅತಿಹೇಯವಾದ ಕೃಪಣತಾ ಎಂಬ
ದೋಷವನ್ನು ವಿವರಿಸಿದ್ದಾಗಿತ್ತು. ಇದಕ್ಕೆ ವಿರುದ್ಧವಾದ ಗುಣವೇ ಉದಾರತಾ ಎಂಬುದು. ಅಂದರೆ ತನ್ನಲ್ಲಿ ಏನಿದೆಯೋ
ಅದರಲ್ಲಿ ಕೊಟ್ಟು ಸಂತೋಷಪಡುವ, ತೃಪ್ತಿಪಡುವ ಮನಸ್ಸು. ಈ ಔದಾರ್ಯವೆಂಬ ಗುಣವಿಲ್ಲದಿದ್ದರೆ ದಾನ
ಮಾಡುವ ಸ್ವಾಭಾವ ಹೇಗೆ ಬರಲು ಸಾಧ್ಯ. ಇದ್ದು ಕೊಟ್ಟರೆ ಅದು ಔದಾರ್ಯವೆನಿಸತದು. ತನ್ನಲ್ಲಿ ಇರುವಷ್ಟನ್ನು
ದೀನದರಿದ್ರರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಸ್ಪಂದಿಸುವ ವಿಶೇಷ ಗುಣವೇ ಉದಾರತಾ.
ಹಾಗಾಗಿ ಇಂತಹ ವಿಶೇಷ ಗುಣವನ್ನು ಪ್ರಶಂಸಿಸಬೇಕಾದುದು ಅತ್ಯಂತ ಅವಶ್ಯಕ. ಈ ಗುಣವು ಬರಲು ಹೇಗ
ಸಾಧ್ಯ? ಎಂಬುದಕ್ಕೆ ಭಗವದ್ಗೀತೆಯಲ್ಲಿ ಯಾರು ಉದಾರರು ಎಂಬುದನ್ನು ಹೀಗೆ ಹೇಳಲಾಗಿದೆ. ಆರ್ತ, ಜಿಜ್ಞಾಸು
ಅರ್ಥಾರ್ಥೀ ಮತ್ತು ಜ್ಞಾನಿ ಈ ನಾಲ್ವರನ್ನು ಉದಾರರು ಎಂಬುದಾಗಿ ಕರೆಯಬೇಕು. ಈ ನಾಲ್ವರಲ್ಲಿ
ಜ್ಞಾನಿಯಾದವನು ಅತ್ಯಂತ ಶ್ರೇಷ್ಠ ಉದಾರಿ ಎಂಬುದಾಗಿ ತಿಳಿಯಬೇಕು. ಅಂದರೆ ಅಂತಹ ಜ್ಞಾನಿಗೆ ಮಾತ್ರ ಈ
ವಿಶೇಷಗುಣ ಬರಲು ಸಾಧ್ಯ ಎಂಬುದು ಇದರ ತಾತ್ಪರ್ಯ. ಸಾಮಾನ್ಯ ಮಾನವನಿಗೆ ಅಲ್ಪಸಲ್ಪ ಔದಾರ್ಯದ ಗುಣ
ಬರಬಹುದು. ಆದರೆ ಜ್ಞಾನಿಗೆ ಪರಿಪೂರ್ಣ ಔದಾರ್ಯ ಗುಣವು ಬರುತ್ತದೆ. ಏಕೆಂದರೆ ಜ್ಞಾನಿಯಾದವನಿಗೆ ತ್ಯಾಗ
ಎಂಬ ಗುಣವುವಿಶೇಷವಾಗಿರುತ್ತದೆ.
ತ್ಯಾಗದಿಂದಲೇ ಅವನು ಅಮೃತತ್ವವನ್ನು ಪಡೆಯಬಹುದು ಎಂಬುದನ್ನು ಬಲವಾಗಿ ನಂಬಿದವನಾಗಿರುತ್ತಾನೆ.
ಕೇವಲ ಸಂಪತ್ತನ್ನು ಮಾತ್ರವಲ್ಲದೆ ಈ ಜನ್ಮಕ್ಕೆ ಕಾರಣವಾದ ಶರೀರವು ಕೂಡ ತ್ಯಾಜ್ಯವಾದದ್ದು ಎಂಬ ಎಂಬ
ತ್ಯಾಗ ಮನೋಧರ್ಮ ಅವನಿಗೆ ಇರುತ್ತದೆ. ಔದಾರ್ಯ ಇರುವವನು ಎಲ್ಲಾ ಕಾಲದಲ್ಲೂ ಶುದ್ಧನಾಗಿ ಇರುತ್ತಾನೆ.
ಕಾರಣ ಇಷ್ಟೇ - ಔದಾರ್ಯ ಎಂಬ ಗುಣ ಇರುವುದರಿಂದಲೇ ಅವನು ಜ್ಞಾನಿಯಾದ, ಯೋಗಿಯಾದ, ಶೋಭಾ
ವಿಲಾಸೋ ಮಾಧುರ್ಯಂ ಗಾಂಭೀರ್ಯಂ ಧೈರ್ಯತೇಜಸೀ। ಲಲಿತಾ ಔದಾರ್ಯಂ ಇತಿ ಅಷ್ಟ ಸತ್ತ್ವಜಾಃ ಪುರುಷಾಃ
ಗುಣಾಃ॥ " ಎಂದು ಸಾಹಿತ್ಯದರ್ಪಣ ಎಂಬ ಗ್ರಂಥದಲ್ಲಿ ಸಜ್ಜನಪುರುಷರ ಎಂಟು ಲಕ್ಷಣಗಳನ್ನು ಹೇಳಲಾಗಿದೆ.
ಅದರಲ್ಲಿ ಔದಾರ್ಯ ಎಂಬ ಗುಣವನ್ನು ಎತ್ತಿ ಹೇಳಲಾಗಿದೆ. ಅಂದರೆ ಈ ಗುಣವು ಸತ್ತ್ವಗುಣದ ಪ್ರತೀಕವಾದದ್ದು.
ಯಾರಲ್ಲಿ ಸತ್ತ್ವಗಣ ಇರುತ್ತದೆಯೋ, ಅವರಲ್ಲಿ ಉದಾರತೆ ಇರುತ್ತದೆ. ಅಥವಾ ಉದಾರತೆ ಎಂಬುದು
ಸತ್ತ್ವಗುಣದಿಂದಲೇ ಜಾಗೃತವಾಗುತ್ತದೆ ಎಂಬ ಅರ್ಥವೂ ಸತ್ಯವಾದದ್ದು. ಒಟ್ಟರೆ ಇಂತಹ ಸತ್ಪುರುಷನು
ಉದಾರತಾ ಎಂಬ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ.
ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೧ - ವಿದ್ವಾಂಸರನ್ನು ಪೂಜಿಸಲು ಯೋಗ್ಯರಾದವರು ಯಾರು?
ಉ. ಸ್ವಭಾವದಿಂದ ಯಾವಾಗಲೂ ವಿನಯವುಳ್ಳವನು.
‘ವಿದ್ವಾನ್ ಸರ್ವತ್ರ ಪೂಜ್ಯತೇ’ - ವಿದ್ವಾಂಸರಿಗೆ ಎಲ್ಲ ಕಡೆ, ಯಾವಾಗಲೂ ಗೌರವ ಇದೆ ಎಂದರ್ಥ. ವಿದ್ವಾಂಸನಿಗೆ ಗೌರವ ಬರಲು ಕಾರಣ, ಅವನು ಸಂಪಾದಿಸಿದ ವಿದ್ಯೆಯೇ ಆಗಿದೆ. ಈ ವಿದ್ಯೆ ಇರುವುದರಿಂದ ಅವನಿಗೆ ‘ವಿದ್ವಾನ್’ ಎಂಬುದಾಗಿ ಕರೆಯಲಾಗುತ್ತದೆ. ವಸ್ತುತಃ ‘ವಿದ್ಯೆ ಯಾವುದು?’ ಎಂಬುದರ ಬಗ್ಗೆ ಇಂದು ಸ್ಪಷ್ಟವಾದ ಅರಿವು ಇಲ್ಲವಾಗಿದೆ. ಈ ವಿಷಯದಲ್ಲಿ ಶ್ರೀರಂಗ ಮಹಾಗುರುಗಳ ವಿದ್ಯೆಗೆ ಸಂಬಂಧಿಸಿದ ಮಾತು ನಿಜವಾದ ವಿದ್ಯೆ ಯಾವುದು? ಎಂಬುದನ್ನು ತಿಳಿಸುತ್ತದೆ. ವಿದ್ಯೆ ಎಂದರೆ ವಿದ್- ಜ್ಞಾನ, ಯಾ - ಪ್ರಾಪಣ. ಯಾವುದು ಜ್ಞಾನದ ಕಡೆ ನಮ್ಮನ್ನು ಕರೆದುಕೊಂಡು ಹೊಗುತ್ತದೆಯೋ ಅದಕ್ಕೆ ವಿದ್ಯೆ ಎಂಬುದಾಗಿ ಕರೆಯಬೇಕು ಎಂದು. ಇಂತಹ ವಿದ್ಯೆ ಉಳ್ಳವನು ವಿದ್ವಾಂಸ ಎಂಬುದಾಗಿ ಕರೆಸಿಕೊಳ್ಳುತ್ತಾನೆ. ಪ್ರಣವದಿಂದ ವಿಕಾಸವಾದ ಗಾಯತ್ರೀ, ವೇದಗಳು, ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೊದಲಾದವುಗಳನ್ನು ಈ ನೇರದಲ್ಲಿ ‘ವಿದ್ಯೆ’ ಎಂಬುದಾಗಿ ಕರೆಯಲಾಗುತ್ತದೆ. ಇವುಗಳ ತಾತ್ತ್ವಿಕಜ್ಞಾನ ಉಳ್ಳವನನ್ನು ‘ವಿದ್ವಾನ್’ ಎಂಬುದಾಗಿ ಕರೆಯಬಹುದು. ಇಂತಹ ವಿದ್ವಾಂಸನಿಗೆ ಮನ್ನಣೆ ಎಲ್ಲ ಕಾಲದಲ್ಲೂ, ಎಲ್ಲ ದೇಶದಲ್ಲೂ ಸಿಗುವುದು ಅತ್ಯಂತ ಸಹಜ. ಈ ಬಗೆಯ ವಿದ್ವಾಂಸನಿಗೆ ಮನ್ನಣೆ ಬರಬೇಕು ಎಂಬುದಾದರೆ ಏನು ಬೇಕು? ಎಂಬ ಪ್ರಶ್ನೆ ಇಲ್ಲಿದೆ. ಅಂದರೆ ಇಂತಹ ಗುಣವಿಶಿಷ್ಟನಾದ ಒಬ್ಬ ವ್ಯಕ್ತಿಗೆ ಶೋಭಿಸುವಂತೆ ಮಾಡುವ ಇನ್ನೊಂದು ಗುಣ ಬೇಕೆ? ಎಂಬುದಾಗಿ ಸಂಶಯ ಬರಬಹುದು. ಅದಕ್ಕೆ ಪರಿಹಾರವನ್ನು ಈ ಉತ್ತರದಲ್ಲಿ ಕಾಣಬಹುದು. ಇದನ್ನೇ ಸಾರುವ ಸುಭಾಷಿತ ಹೀಗಿದೆ - “ವಿದ್ಯಾ ವಿನಯೇನ ಶೋಭತೇ”, “ವಿದ್ಯಾ ದದಾತಿ ವಿನಯಂ” ಎಂದು. ಅಂದರೆ ವಿದ್ಯೆ ಮತ್ತು ವಿನಯ ಈ ಎರಡು ಅನ್ಯೋನ್ಯವಾಗಿ ಇರುವಂಥವುಗಳು. ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ತಿತ್ವವಿಲ್ಲ, ಮೌಲ್ಯವಿಲ್ಲ ಎಂಬುದು ಇದರ ತಾತ್ಪರ್ಯ. ಎಲ್ಲಿ ವಿದ್ಯೆ ಇದೆಯೋ ಅಲ್ಲಿ ವಿನಯ ಇರಬೇಕು ಎಂಬುದೇ ಅರ್ಥ. ಹಾಗಿಲ್ಲದಿದ್ದರೆ ಆ ವಿದ್ಯೆಯು ಅಪರಿಪೂರ್ಣ ಎಂದರ್ಥ. ಆಗ ಕೇವಲ ವಿದ್ಯೆ ಉಳ್ಳವರಿಗೆ ಗೌರವವೂ ಸಿಗದು. ಸಿಕ್ಕಿದ ಗೌರವೂ ಉಳಿಯದು. ಹಾಗಾಗಿ ವಿದ್ಯೆಯಿಂದ ಬರುವ ಗೌರವವು ಉಳಿಯಬೇಕಾದರೆ ವಿನಯ ಅತ್ಯಂತ ಮುಖ್ಯ ಎಂಬುದು ಸಾರಾಂಶ.
ಹಾಗಾದರೆ ವಿದ್ಯೆಯಿದ್ದವರಿಗೆ ವಿನಯ ಅಷ್ಟು ಮುಖ್ಯ ಏಕೆ? ಎಂದರೆ, ಸಾಮಾನ್ಯವಾಗಿ ವಿದ್ಯೆ ಇರುವವನು ಗರ್ವಕ್ಕೆ ಅಥವಾ ಮದಕ್ಕೆ ಈಡಾಗುತ್ತಾನೆ. ವಿದ್ಯೆಯು ಸರಿಯಾದ ಮಾರ್ಗದಲ್ಲಿ ಬರೆದಿದ್ದರೆ ಅದು ಅಹಂಕಾರಕ್ಕೆ ಕಾರಣವಾಗುತ್ತದೆ. ಹಾಗಾಗಿ ವಿದ್ಯೆಯ ಜೊತೆ ಎಲ್ಲಿ ವಿನಯ ಬಂದಿರುತ್ತದೆಯೋ, ಅಲ್ಲಿ ಬಂದ ವಿದ್ಯೆಯು ಸನ್ಮಾರ್ಗದಲ್ಲಿ ಬಂದಿದೆ ಎಂದರ್ಥ. ಆದ್ದರಿಂದ ವಿದ್ಯೆ ಮತ್ತು ವಿನಯಗಳಿಗೆ ಪರಸ್ಪರ ಸಂಬಂಧವಿರುವುದನ್ನು ಕಾಣಬಹುದು. ವಿದ್ಯೆಯಿಂದ ಬರುವ ವಿನಯವು ಪಾತ್ರತ್ವವನ್ನು ಅಂದರೆ ಮನ್ನಣೆಯನ್ನು ಕೊಡುತ್ತದೆ; ಆ ಮನ್ನಣೆಯು ಅವನಿಗೆ ಭದ್ರತೆಯನ್ನು ಉಂಟುಮಾಡುತ್ತದೆ. ಈ ಭದ್ರತೆಯು ಅವನಿಗೆ ಧರ್ಮ ಮತ್ತು ಶಾಶ್ವತವಾದ ಸುಖವನ್ನು ಕೊಡುತ್ತದೆ ಎಂಬುದಾಗಿ ಒಂದು ಸುಭಾಷಿತ ಸಾರುತ್ತದೆ. ಇವೆಲ್ಲವನ್ನು ಗಮನಿಸಿದಾಗ ವಿದ್ಯೆ ಮತ್ತು ವಿನಯಗಳಿಗೆ ಇರುವ ಸಂಬಂಧ ತಿಳಿಯುತ್ತದೆ. ಹಾಗಾಗಿ ವಿದ್ಯಾವಂತನಿಗೆ ಗೌರವ ಸಿಗಬೇಕಾದರೆ ಅವನು ವಿನಯ ಸ್ವಭಾವ ಉಳ್ಳವನಾಗಿರಬೇಕು ಎಂಬುದು ಪರಮ ಸತ್ಯವಾದ ವಿಷಯ.
ಸೂಚನೆ : 12/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.