Sunday, September 6, 2026

(Vyaasa Vikshita 204) ಶಿಶುಪಾಲನ ಪ್ರಶ್ನೆಗಳಿಗೆ ಭೀಷ್ಮರಿತ್ತ ಮರುತ್ತರ (Vyaasa Vikshita 204)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಶ್ರೀಕೃಷ್ಣನಿಗೆ ಅಗ್ರ-ಪೂಜೆಯನ್ನು ಸಲ್ಲಿಸಿದುದನ್ನು ಶಿಶುಪಾಲನು ತೀವ್ರವಾಗಿ ವಿರೋಧಿಸಿದನಷ್ಟೆ. ಅದಕ್ಕೆ ಪ್ರತ್ಯುತ್ತರವನ್ನು ಭೀಷ್ಮರು ಸ್ಪಷ್ಟವಾಗಿಯೂ ಸಮರ್ಥವಾಗಿಯೂ ಕೊಡುತ್ತಾ ಹೀಗೆ ಹೇಳಿದರು:

“ಅಯ್ಯಾ ಶಿಶುಪಾಲ, ಶ್ರೀಕೃಷ್ಣನಿಂದಲೇ ಈ ಜಗತ್ತು ಪೂರ್ಣವಾಗಿ ಪ್ರತಿಷ್ಠಿತವಾಗಿರುವಂತಹುದು. ಎಂದೇ, ಹಿರಿಯರನೇಕರಿದ್ದರೂ ಸಹ ನಾವು ಅರ್ಚಿಸುವುದು ಕೃಷ್ಣನನ್ನೇ ವಿನಾ ಇತರರನ್ನಲ್ಲ.

ಶಿಶುಪಾಲ-ರಾಜನೇ, ಕೃಷ್ಣನನ್ನು ಕುರಿತಾಗಿ ನೀನು ಈಗ ಹೇಳಿರುವಂತೆಲ್ಲಾ ಮಾತನಾಡುವುದು ನಿನಗೆ ತರವಲ್ಲ. ನಿನಗಿಂತಹ ಬುದ್ಧಿಯು ಬರಬಾರದು.

ನಾನು ಅನೇಕ ಜ್ಞಾನ-ವೃದ್ಧರನ್ನು ಸೇವಿಸಿದ್ದೇನೆ. ಇಲ್ಲಿಗೆ ಆಗಮಿಸಿದ ಅಂತಹವರ ಬಾಯಲ್ಲಿ ಕೃಷ್ಣನ ಬಹುಗುಣಗಳನ್ನು ನಾನು ಕೇಳಿರುವೆ. ಬಹುಮಂದಿಗೆ ಆತನೇ ಆದರಣೀಯನು.

ಆ ಧೀಮಂತನ ಕರ್ಮಗಳು ಜನ್ಮದಾರಭ್ಯ ಏನೇನುಂಟೋ ಅವುಗಳನ್ನು ಅನೇಕರು ಹೇಳಿರುವುದನ್ನು ಮತ್ತೆ ಮತ್ತೆ ಕೇಳಿರುವೆನು.

ಅಯ್ಯಾ ಚೇದಿರಾಜನೇ, ಯಾವುದೋ ಕಾಮನೆಗಳನ್ನಿಟ್ಟುಕೊಂಡು ನಾವು ಜನಾರ್ದನನನ್ನು ಅರ್ಚಿಸುತ್ತಿಲ್ಲ. ಅಥವಾ ಯಾವುದೇ ಸಂಬಂಧವನ್ನು ಮುಂದಿಟ್ಟುಕೊಂಡಾಗಲಿ, ಆತನು ಹಿಂದೆ ಮಾಡಿರುವ ಉಪಕಾರವನ್ನಾಗಲಿ, ಎಂತೂ ಅಲ್ಲ.

ಭೂಮಿಯ ಮೇಲಿರುವ ಸಮಸ್ತ ಭೂತಗಳಿಗೂ, ಎಂದರೆ ಸರ್ವಜೀವಿಗಳಿಗೂ, ಸುಖವನ್ನುಂಟುಮಾಡುವವನೂ ಸಜ್ಜನರಿಂದ ಅರ್ಚಿಸಲ್ಪಡುವವನೂ ಆದವನನ್ನೇ ನಾವು ಅರ್ಚಿಸುವುದು. ಈತನ ಯಶಸ್ಸು, ಶೌರ್ಯ, ಜಯ - ಇವುಗಳನ್ನು ಅರಿತೇ ಈತನಿಗೆ ಅರ್ಚನೆಯನ್ನು ನಾವು ಸಲ್ಲಿಸುತ್ತಿರುವುದು. ಯಾರ ಗುಣಗಳನ್ನು ನಾವು ಪರೀಕ್ಷಿಸಿಲ್ಲವೋ ಅಂತಹ ಒಬ್ಬ ಬಾಲಕನು ಸಹ ಇಲ್ಲಿಲ್ಲ.

ಬರೀ ವಯಸ್ಸಿನ ಲೆಕ್ಕದಲ್ಲಷ್ಟೇ ವೃದ್ಧರೆನಿಸುವವರನ್ನು ಬಿಟ್ಟು, ಗುಣಗಳನ್ನು ಲೆಕ್ಕಕ್ಕೆ ತೆಗೆದುಕೊಂಡೇ ಹರಿಯನ್ನು ಅರ್ಚ್ಯತಮ - ಎಂದರೆ, ಅರ್ಚನೀಯರಾದವರಲ್ಲೆಲ್ಲ ಶ್ರೇಷ್ಠ - ಎಂಬುದಾಗಿ ಭಾವಿಸಲಾಗಿರುವುದು.

ಬ್ರಾಹ್ಮಣರಲ್ಲಿ ಜ್ಞಾನ-ವೃದ್ಧರಿಗೇ ಪೂಜ್ಯತೆ. ಕ್ಷತ್ರಿಯರಲ್ಲಿ ಬಲದಲ್ಲಿ ಅಧಿಕರಾದವರಿಗೇ ಪೂಜ್ಯತೆ. ಧನ-ಧಾನ್ಯಗಳಲ್ಲಿ ಹೆಚ್ಚುಗಾರಿಕೆಯುಳ್ಳವರಿಗೇ ವೈಶ್ಯರಲ್ಲಿ ಪೂಜ್ಯತೆ. ಕೇವಲ ಶೂದ್ರರಲ್ಲೇ ಹುಟ್ಟಿನಿಂದ, ಎಂದರೆ ಜನನದ ದಿನದಿಂದ, ಅರ್ಥಾತ್ ವಯೋಮಾತ್ರದಿಂದ, ಶ್ರೇಷ್ಠತೆಯ ಲೆಕ್ಕ.

ಶ್ರೀಕೃಷ್ಣನ ಪೂಜ್ಯತೆಯಲ್ಲಾದರೆ ಎರಡೂ ಕಾರಣಗಳೂ ಇಲ್ಲಿ ಉಪಸ್ಥಿತವಾಗಿವೆ. ಇತ್ತ ವೇದ-ವೇದಾಂಗಗಳ ವಿಜ್ಞಾನವೂ ಆತನಲ್ಲಿವೆ; ಬಲವೂ ಅಭ್ಯಧಿಕವಾಗಿದೆ.

ಈ ಲೋಕದಲ್ಲಿ ಕೇಶವನಲ್ಲದೆ ಮತ್ತಾರು ನರರಲ್ಲಿ ವಿಶಿಷ್ಟರಾಗಿದ್ದಾರೆ? ದಾನ-ದಕ್ಷತೆಗಳು, ಶ್ರುತ(ಎಂದರೆ ಶಾಸ್ತ್ರಜ್ಞಾನ)-ಶೌರ್ಯಗಳು, ಹ್ರೀ-ಕೀರ್ತಿಗಳು, ಉತ್ತಮವಾದ ಬುದ್ಧಿ, ವಿನಯ-ಶ್ರೀ-ಧೃತಿಗಳು ಹಾಗೂ ತುಷ್ಟಿ-ಪುಷ್ಟಿಗಳು – ಇವೆಲ್ಲವೂ ಅಚ್ಯುತನಲ್ಲಿಯೇ ನಿತ್ಯವಾಗಿ ನೆಲೆಗೊಂಡಿರತಕ್ಕವು.

ಈ ರೀತಿಯಾಗಿ ಗುಣ-ಸಂಪನ್ನನೂ ಆರ್ಯನೂ ತಂದೆ-ಗುರುಗಳಂತಿರುವವನೂ ಪೂಜೆಗೆ ಯೋಗ್ಯನೂ ಆದ ಕೃಷ್ಣನು ಪೂಜಿಸಲ್ಪಟ್ಟಿದ್ದಾನೆಂದರೆ, ಅದನ್ನು ಎಲ್ಲರೂ ಕ್ಷಮಿಸತಕ್ಕದ್ದೇ. ನಮ್ಮ ಪಾಲಿಗೆ ಕೃಷ್ಣನೇ ಋತ್ವಿಕ್ಕು, ಗುರು, ಆಚಾರ್ಯ, ಸ್ನಾತಕ, ರಾಜ ಹಾಗೂ ಪ್ರಿಯಮಿತ್ರ - ಎಲ್ಲವೂ. ಎಂದೇ ಆತನಿಗೆ ಅಗ್ರಪೂಜೆಯು ಸಂದಿರುವುದು.

ಕೃಷ್ಣನೇ ಲೋಕಗಳೆಲ್ಲದರ ಉತ್ಪತ್ತಿ-ಅಪ್ಯಯಗಳು - ಎಂದರೆ ಜನನ-ವಿಲಯಗಳಿಗೆ ಕಾರಣನಾದವನು. ಚರಾಚರಾತ್ಮಕವಾದ ಸಮಸ್ತವಿಶ್ವವೂ ಕೃಷ್ಣನಿಗಾಗಿಯೇ ಆಗಿರುವುದು. ಅವ್ಯಕ್ತ-ಪ್ರಕೃತಿಯೆಂದರೂ ಈತನೇ, ಸನಾತನ-ಕರ್ತಾ ಎಂದರೂ ಈತನೇ, ಸಮಸ್ತ-ಭೂತಗಳಿಗೂ ಮಿಗಿಲಾದವನೆಂದರೂ ಈತನೇ. ಎಂದೇ ಅಚ್ಯುತನು ಪೂಜ್ಯತಮನಾಗಿರುವುದು.

ಬುದ್ಧಿ-ಮನಸ್ಸು-ಮಹತ್ತುಗಳೂ, ವಾಯು-ಅಗ್ನಿ-ಜಲ-ಆಕಾಶ-ಭೂಮಿಗಳೂ, ಕೃಷ್ಣನಲ್ಲೇ ಪ್ರತಿಷ್ಠಿತವಾಗಿರತಕ್ಕವು.

ನಾಲ್ಕುವಿಧಗಳಾದ ಭೂತಗಳು (ಜೀವಗಳು) ಯಾವುವುಂಟೋ - ಎಂದರೆ ಜರಾಯುಜ, ಸ್ವೇದಜ, ಅಂಡಜ, ಉದ್ಭಿಜ್ಜ ಎಂದು ಕರೆಯಲ್ಪಡತಕ್ಕವು - ಇವೆಲ್ಲವೂ ಕೃಷ್ಣನಲ್ಲೇ ಪ್ರತಿಷ್ಠಿತವಾಗಿರತಕ್ಕವು.

ಸೂಚನೆ :  6/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಪ್ರಶ್ನೋತ್ತರ ರತ್ನಮಾಲಿಕೆ 82 (Prasnottara Ratnamalike 82)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ 82- ಯಾವುದು ರಕ್ಷಿಸಿಕೊಳ್ಳಬೇಕಾದುದು?

ಉತ್ತರ- ಕೀರ್ತಿ, ಪತಿವ್ರತಾ, ತನ್ನ ಬುದ್ಧಿ.

ಹೃದಯ ಬಹಳ ಬೆಲೆಬಾಳುವಂತಹದ್ದು. ಏಕೆಂದರೆ ಕಳೆದುಕೊಂಡರೆ ಮತ್ತೆ ಪಡೆಯಲಾಗದು. ಹಾಳಾದರೆ ಜೀವಕ್ಕೇ ಅಪಾಯ ಬರಬಹುದು.  ಹಾಗಾಗಿ ಅದನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಲೇಬೇಕು. ಅಂತೆಯೇ ಯಾವುದು ರಕ್ಷಿಸಿಕೊಳ್ಳಬೇಕಾದುದೋ ಅದು ಅತ್ಯಂತ ಮೌಲ್ಯಯುತವಾಗಿರಲೇಬೇಕು. ಅಥವಾ ಅದು ಬೇಗ ಹಾಳಾಗುವಂಥದ್ದಾಗಿರಬೇಕು. ಈ ಎರಡು ಗುಣಗಳಿಂದ ಕೂಡಿರುವುದನ್ನು ನಾವು ರಕ್ಷಿಸಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯ. ಯಾವುದು ಬೆಲೆ ಬಾಳುತ್ತದೆಯೋ ಅದನ್ನು ಕಳೆದುಕೊಂಡರೆ ಅದು ನಮಗೆ ನಷ್ಟವನ್ನು ಉಂಟುಮಾಡುತ್ತದೆ. ಮತ್ತೆ ಅದನ್ನು ಪಡೆಯಲು ಅಷ್ಟೇ ಬೆಲೆಯನ್ನು ತೆರಬೇಕಾಗುತ್ತದೆ. ಕೆಲವೊಮ್ಮೆ ಆ ವಸ್ತು ಮತ್ತೊಮ್ಮೆ ಸಿಗದೆಯೂ ಇರಬಹುದು. ಹಾಗಾಗಿ ಅದು ರಕ್ಷಿಸಿಕೊಳ್ಳಬೇಕಾದುದು. ಇನ್ನು ಕೆಲವೊಂದು ಪದಾರ್ಥ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಒಮ್ಮೆ ಹಾಳಾದರೆ ಮತ್ತೆ ಪಡೆಯಲು ಆಗದೇ ಇರಬಹುದು ಅಥವಾ ಅದನ್ನು ಪಡೆಯಲು ಇನ್ನೆಷ್ಟು ಪರಿಶ್ರಮವನ್ನು ಹಾಕಬೇಕಾಗುತ್ತದೆಯೋ? ಅಂತಹ ಉತ್ಕೃಷ್ಟವಾದ ಪದಾರ್ಥ ಆಗಿರಬಹುದು. ಅಂತಹ ರಕ್ಷಿಸಿಕೊಳ್ಳಬೇಕಾದ ವಿಷಯ ಯಾವುದು? ಎಂಬುದು ಈ ಪ್ರಶ್ನೋತ್ತರದಲ್ಲಿ ಇದೆ.


ಕೀರ್ತಿ, ಪತಿವ್ರತೆ ಮತ್ತು ತಮ್ಮ ಬುದ್ಧಿ ಈ ಮೂರೂ ಯಾವಾಗಲೂ ರಕ್ಷಿಸಿಕೊಳ್ಳಬೇಕಾದವು. ಕೀರ್ತಿಯನ್ನು ಪಡೆಯುವುದು ಅತ್ಯಂತ ಕಷ್ಟಸಾಧ್ಯ. ಅದಕ್ಕೆ ಬಹಳ ಪರಿಶ್ರಮ ಬೇಕು. ಉತ್ಕೃಷ್ಟನಾದ ವ್ಯಕ್ತಿಯಲ್ಲಿರುವ ಅನೇಕ ಒಳ್ಳೆಯ ಗುಣಗಳಿಂದ ಆ ವ್ಯಕ್ತಿ ಕೀರ್ತಿಯನ್ನು ಸಂಪಾದನೆ ಮಾಡುತ್ತಾನೆ. ಉದಾಹರಣೆಗೆ ದಾನವನ್ನು ಮಾಡುವುದರಿಂದ ಅವನು ದಾನಶೂರ ಎಂದೂ, ವಿದ್ಯೆಯ ಸಂಪಾದನೆಯಿಂದ ಒಳ್ಳೆಯ ವಿದ್ಯಾವಂತ ಎಂದೂ, ಬೇರೆಯವರಿಗೆ ಉಪಕಾರ ಮಾಡುವುದರಿಂದ ಪರೋಪಕಾರಿ ಎಂಬಿತ್ಯಾದಿ ಅನೇಕ ಒಳ್ಳೆಯ ಕೆಲಸವನ್ನು ಮಾಡಿದಾಗ ಆ ವ್ಯಕ್ತಿಗೆ ಕೀರ್ತಿ ಬರುತ್ತದೆ . ಕೀರ್ತಿಯನ್ನು ಸಂಪಾದನೆ ಮಾಡುವುದು ಬಹಳ ಕಷ್ಟ. ಅಪಕೀರ್ತಿ ಬರುವುದು ತುಂಬಾ ಸುಲಭ. ಅದಕ್ಕೆ ತುಂಬಾ ಕಾಲದ ಪರಿಶ್ರಮದ ಅವಶ್ಯಕತೆ ಇಲ್ಲ. ಹಾಗಾಗಿ ಬಂದ ಕೀರ್ತಿಯನ್ನು ರಕ್ಷಿಸಿಕೊಳ್ಳಬೇಕು.

ಪತಿವ್ರತೆ ಎಂದರೆ ತನ್ನ ಪತಿಯನ್ನು ಮಾತ್ರ ಮನಸ್ಸಿನಲ್ಲಿ ಭಾವಿಸುವವಳು. ಯಾವ ಕಾರಣಕ್ಕೂ, ಯಾವ ಕಾಲದಲ್ಲೂ ತನ್ನ ಮನಸ್ಸಿನಲ್ಲಿ ಇನ್ನಾವುದೇ ಪುರುಷನಿಗೆ ಸ್ಥಾನವನ್ನು ಕೊಡದಿರುವವಳು. ಪತಿಯ ಸರ್ವವಿಧವಾದ ಕಾರ್ಯದಲ್ಲೂ ಸಹಧರ್ಮಣಿಯಾಗಿ ಇರುವವಳು. ಹೀಗೆ ಇರಬೇಕಾದರೆ ಅದು ಅತ್ಯಂತ ಕಷ್ಟ ಸಾಧ್ಯ. ಇದೊಂದು ತಪಸ್ಸು. ಅದೇ ಒಬ್ಬ ವ್ಯಭಿಚಾರಿಣೀ ಎಂಬ ಹೆಸರನ್ನು ಪಡೆಯಬೇಕಾದರೆ ಅದಕ್ಕೆ ತುಂಬಾ ಶ್ರಮ ಬೇಕಿಲ್ಲ. ಆದ್ದರಿಂದ ಪತಿವ್ರತೆಯೆಂಬ ಪಡೆದ ಹೆಸರನ್ನು ಉಳಿಸಿಕೊಳ್ಳಲೂ ತಪಸ್ಸನ್ನು ಮಾಡಬೇಕು. ಆದ್ದರಿಂದ ಪಡೆದ ಆ ಹೆಸರನ್ನು ಕಾಪಿಟ್ಟುಕೊಳ್ಳಬೇಕು.


 ಬುದ್ಧಿಯು ಶುದ್ಧವಾದ ಕಲ್ಯಾಣಿಯಂತೆ. ಅದನ್ನು ಹಾಗೆಯೇ ಇಟ್ಟುಕೊಳ್ಳುವುದು ತುಂಬಾ ಕಷ್ಟ ಸಾಧ್ಯ. ಹೇಗೆ ಶುದ್ಧವಾದ ಕಲ್ಯಾಣಿಯನ್ನು ಕೆಡಿಸಿಕೊಳ್ಳಲು ಕೆಲವೇ ಕ್ಷಣಗಳು ಸಾಕೋ, ಅಂತಯೇ ಬುದ್ಧಿಯನ್ನು ಕಲುಷಿತಗೊಳಿಸಿಕೊಳ್ಳುವುದೂ ಕೂಡ ಅಷ್ಟೇನು ಶ್ರಮದಾಯಕವಲ್ಲ. ಆದ್ದರಿಂದ ಕೀರ್ತಿ, ಪತಿವ್ರತೆ ಮತ್ತು ಬುದ್ಧಿ ಈ ಮೂರು ಸಂಪಾದನೆಮಾಡಿದ ಅತ್ಯಮೂಲ್ಯವಾದ ಸಂಪತ್ತುಗಳು. ಅವುಗಳನ್ನು ಸಂಪಾದಿಸಲು ಪಟ್ಟ ಶ್ರಮವನ್ನು ಕೆಡಿಸಿಕೊಳ್ಳಲು ಮಾಡಬೇಕಿಲ್ಲ. ಆದ್ದರಿಂದ ಕೆಡಿಸಿಕೊಳ್ಳದೆ ಅದನ್ನು ಅಂತಯೇ ಇಟ್ಟುಕೊಳ್ಳಲು ನಾವು ಪರಿಶ್ರಮವನ್ನು ಪಡಬೇಕಾಗುತ್ತದೆ ಎಂದು ಈ ಪ್ರಶ್ನೋತ್ತರ ಸಾರುತ್ತದೆ.


ಸೂಚನೆ :  6/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

Wednesday, September 2, 2026

ಪ್ರಶ್ನೋತ್ತರ ರತ್ನಮಾಲಿಕೆ 81 (Prasnottara Ratnamalike 81)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೮೧. ಪ್ರಾಣಕ್ಕಿಂತಲೂ ರಮ್ಯವಾದುದು ಯಾವುದು?

ಉತ್ತರ- ಕುಲದ ಧರ್ಮ ಮತ್ತು ಸಜ್ಜನಸಂಗ.


ಕುಲ ಎಂದರೆ ವಂಶ. ಆ ವಂಶದಲ್ಲಿ ಇರುವ ಒಳ್ಳೆಯ ಆಚಾರ ವಿಚಾರ ನಡವಳಿಕೆ ಇವೆಲ್ಲವನ್ನೂ ಒಟ್ಟಾಗಿ ಸೇರಿಸಿ ‘ಕುಲಧರ್ಮ’ ಎಂಬುದಾಗಿ ಕರೆಯಲಾಗಿದೆ. ನಮ್ಮ ಹಿಂದಿನವರು ಕುಲದ ಧರ್ಮಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ, ಅದನ್ನು ಉಳಿಸಲು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸುತ್ತಿರಲಿಲ್ಲ. ಕುಲಧರ್ಮವು ಹಾಳಾಗದಂತೆ ಅದನ್ನು ರಕ್ಷಿಸುವಲ್ಲಿ ಸರ್ವವಿಧವಾದ ಪ್ರಯತ್ನವನ್ನೂ ಮಾಡುತ್ತಿದ್ದರು. ಅದೇ ಅರ್ಥವನ್ನು ವಿವರಿಸುವ ಪ್ರಶ್ನೋತ್ತರ ಇದು. 


ಪ್ರಾಣಕ್ಕಿಂತಲೂ ಉತ್ತಮವಾದದ್ದು, ರಮಣೀಯವಾದದ್ದು ಯಾವುದು? ಎಂಬುದು. ಪ್ರಾಣಕ್ಕಿಂತಲೂ ಉತ್ಕೃಷ್ಟವಾದ ಸಂಗತಿಯು ಇರಲು ಸಾಧ್ಯವೇ? ಎಂದೆನಿಸಬಹುದು. ಪ್ರಾಣಕ್ಕಿಂತಲೂ ಉತ್ತಮವಾಗಬೇಕಾದರೆ ಅದು ಎಂತಹದ್ದಾಗಿರಬೇಕು! ಎಂದರೆ ಯಾವುದಕ್ಕೋಸ್ಕರ ಯಾವುದನ್ನು ನಾವು ತ್ಯಾಗ ಮಾಡಲು ಬಯಸುತ್ತೇವೋ, ತ್ಯಾಗ ಮಾಡುವ ವಿಷಯಕ್ಕಿಂತಲೂ ಉಳಿಸಿಕೊಳ್ಳಬೇಕಾದ ವಿಷಯ ಅದಕ್ಕಿಂತ ಉತ್ತಮವಾಗಿರಬೇಕಷ್ಟೆ! ಆಗ ಮಾತ್ರ ನಾವು ಉತ್ತಮವಾದದ್ದನ್ನು ರಕ್ಷಿಸಲು - ಉಳಿಸಲು ಅಲ್ಪವಾದದ್ದನ್ನು ಬಿಡುತ್ತೇವೆ. ಅಲ್ಪವಾದುದ್ದಕ್ಕೆ ಶ್ರೇಷ್ಠವಾದದ್ದನ್ನು ಎಂದೂ ಕೂಡ ನಾವು ಕಳೆದುಕೊಳ್ಳುವುದಿಲ್ಲವಷ್ಟೆ! “ಅಲ್ಪಸ್ಯ ಹೇತೋಃ ಬಹುಹಾತುಮಿಚ್ಛನ್ ವಿಚಾರಮೂಢಃ ಪ್ರತಿಭಾಸಿ ಮೇ ತ್ವಂ” ಕಾಳಿದಾಸನ ರಘುವಂಶ ಮಹಾಕಾವ್ಯದಲ್ಲಿ ಬರುವ ಒಂದು ಮಾತು. ಅಲ್ಪಕ್ಕೋಸ್ಕರ ಉತ್ತಮವಾದುದನ್ನು ಬಿಡುವವ ಮೂಢನಷ್ಟೇ! ಎಂಬುದು ಈ ಮಾತಿನ ಅರ್ಥ. ಅಧಿಕವಾದ ಬೆಲೆಯುಳ್ಳ ವಿಷಯವನ್ನು ಉಳಿಸಲು ಅಲ್ಪವಾದ ಬೆಲೆಯ ಉಳ್ಳ ವಸ್ತುವನ್ನು ಕಳೆದುಕೊಳ್ಳುವುದು ಸಹಜ. ಆದರೆ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ. ರಘುವಂಶದವರ ಮಾತನ್ನು ಮತ್ತು ಅವರ ನಡೆಯನ್ನು ನೋಡಿದಾಗ ಅವರ ಕುಲಧರ್ಮ ಹೇಗಿತ್ತು? ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ರಾಮನೂ ಕೂಡ ಸೀತಾ ಪರಿತ್ಯಾಗವನ್ನು ಮಾಡುವ ಸಂದರ್ಭದಲ್ಲಿ ಇದೇ ಮಾತನ್ನು ಹೇಳುತ್ತಾನೆ. “ಸೂರ್ಯವಂಶಕ್ಕೆ ಕಳಂಕ ನನ್ನಿಂದ ಬರುತ್ತದೆ ಎಂದಾದರೆ ನಾನು ಎಂತಹ ಕಾರ್ಯಕ್ಕೂ ಸಿದ್ಧ. ಏಕೆಂದರೆ ನನ್ನ ಹಿರಿಯರು ಪ್ರಾಣವನ್ನು ಕೊಟ್ಟು ಕುಲಧರ್ಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಹಾಗಾಗಿ ಆ ಕುಲಧರ್ಮವು ಹಾಳಾಗುವುದನ್ನು ಸಹಿಸುವುದಿಲ್ಲ, ಅದನ್ನು ಕಾಪಾಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ” ಎಂಬ ಮಾತನ್ನು ಹೇಳುತ್ತಾನೆ. ಭಗವದ್ಗೀತೆಯಲ್ಲಿ ಅರ್ಜುನನು ಭಗವಾನ್ ಶ್ರೀ ಕೃಷ್ಣನಿಗೆ ಹೇಳುವ ಮಾತು ” ಉತ್ಸನ್ನಕುಲಧರ್ಮಾಣಾಂ ನರಕೇ ನಿಯತಂ ವಾಸಃ” ಕುಲಧರ್ಮಗಳು ನಾಶವಾದರೆ ನರಕವಾಸವೇ ಗತಿ ಎಂದು. ಅಲ್ಲಿ ಅರ್ಜುನ ಹೇಳುವ ಮಾತುಗಳು “ಒಂದು ವೇಳೆ ಕುಲ ನಾಶವಾದರೆ ಕುಲಧರ್ಮಗಳು ಕುಲಾಚಾರಾರಗಳೂ ನಷ್ಟವಾಗುತ್ತವೆ, ಆದ್ದರಿಂದ ನಾನು, ಬಂಧುಬಾಂಧವರು ಅಣ್ಣತಮ್ಮಂದಿರು ಕುಲಗುರುಗಳು ಇವರಿಂದ ಕೂಡಿದ ಶತ್ರುಪಾಳಯವನ್ನು ನಾಶಮಾಡಲು ಇಷ್ಟಪಡುವುದಿಲ್ಲ” ಎಂದು. ಅಂದರೆ ಕೆಲವೊಮ್ಮೆ ಪ್ರಾಣ ಕೊಟ್ಟು, ಕೆಲವೊಮ್ಮೆ ಬೇರೆಯವರ ಪಾಣ ಉಳಿಸಿ ಕುಲಧರ್ಮವನ್ನು ಉಳಿಸಬೇಕಾಗುತ್ತದೆ ಎಂಬ ವಿಷಯವನ್ನು ಇತಿಹಾಸ ಪುಟಗಳಿಂದ ನಾವು ಅರ್ಥ ಮಾಡಿಕೊಳ್ಳಬೇಕು. ಪ್ರಾಣವನ್ನೂ ಕೊಟ್ಟಾದರೂ ಉಳಿಸಬೇಕಾದ ಇನ್ನೊಂದು ವಿಷಯವೇನೆಂದರೆ ಸಜ್ಜನರ ಸಂಗ ಎಂಬುದು. 


ಪ್ರಾಣ ಹೋದರೂ ಸಜ್ಜನರ ಸಂಗವನ್ನು ಮಾತ್ರ ನಾವು ಬಿಡಬಾರದು. ಅವರು ಯಾವ ಮಟ್ಟದಲ್ಲಿ ಜೀವನವನ್ನು ನಡೆಸಿರುತ್ತಾರೋ ಅಂತಹ ಜೀವನವನ್ನು ನಾವು ಮಾಡಬೇಕಾದರೆ ಅಂತಹ ಸಜ್ಜನರ ಸಂಗವನ್ನು ನಾವು ಬಿಡಬಾರದು ಎಂಬ ಮಾರ್ಮಿಕವಾದ ವಿಷಯ ನಮಗಿಲ್ಲಿ ಕಾಣಸಿಗುತ್ತದೆ.

ಸೂಚನೆ :30/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

(Vyaasa Vikshita 203) ಶಿಶುಪಾಲನ ಪ್ರತಿಭಟನೆ, ಯುಧಿಷ್ಠಿರನ ಸಾಂತ್ವನ (Vyaasa Vikshita 203)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ರಾಜಸೂಯವು ಮುಗಿಯಲು, ಅರ್ಹ-ಕ್ಷತ್ರಿಯರಿಗೆ ಸಂಮಾನನವೆಂಬ ಕಾರ್ಯವು ಜರುಗಬೇಕಿತ್ತು. ತದಂಗವಾಗಿ ಅಗ್ರಪೂಜೆಯು ಕೃಷ್ಣನಿಗೆ ಸಂದಿತೆಂದು, ಶಿಶುಪಾಲನು ಪ್ರತಿಭಟಿಸಿ ಯುಧಿಷ್ಠಿರನನ್ನು ಆಕ್ಷೇಪಿಸಿದನು.

ಬಳಿಕ ಈಗ ಕೃಷ್ಣನನ್ನೇ ಸಂಬೋಧಿಸಿ ಆಕ್ರೋಶದಿಂದ ಹೇಳುತ್ತಿದ್ದಾನೆ, ಶಿಶುಪಾಲ:

“ಮಾಧವನೇ, ಕುಂತಿಯ ಮಕ್ಕಳು ಪುಕ್ಕಲರು, ದಯನೀಯರು, ಬಡಪಾಯಿಗಳು. ನೀನಾದರೂ ಅದನ್ನರಿಯಬೇಡವೆ - ಎಂತಹ ಪೂಜೆಗೆ ನೀನು ಅಧಿಕಾರಿಯೆಂಬುದನ್ನು? ಈ ಬಡಪಾಯಿಗಳು ನಿನಗರ್ಪಿಸಿದ ಅಗ್ರಪೂಜೆಗೆ ಅನರ್ಹನಾದ ನೀನು ಅದನ್ನು ಅದೇನೋ ದೊಡ್ಡದೆಂಬಂತೆ ಸ್ವೀಕರಿಸಿರುವೆ. ಇದು ಹೇಗೆಂದರೆ, ಹವಿಸ್ಸಿನ ಪಾತ್ರೆಯನ್ನು ನಿರ್ಜನಪ್ರದೇಶಕ್ಕೊಯ್ದು ಅದಕ್ಕಂಟಿದ್ದ ಹವಿರ್ಧಾರೆಯನ್ನು ನಾಯಿ ನೆಕ್ಕುವಂತೆ!

ಒಂದರ್ಥದಲ್ಲಿ, ಇಲ್ಲಿ ನೆರೆದಿರುವ ಅರಸರಿಗೆ ಇದು ಅಪಮಾನವೆಂದಲ್ಲ; ಬದಲಾಗಿ ಈ ಕುರುವಂಶಜರೇ (ಎಂದರೆ ಪಾಂಡವರೇ) ನಿನಗೆ ವಂಚನೆ ಮಾಡಿರುವಂತಿದೆ. ಷಂಡನಿಗೆ ಮದುವೆಮಾಡಿಕೊಟ್ಟರೆ ಹೇಗೋ ಹಾಗೆ, ಕುರುಡನಿಗೆ ರೂಪವನ್ನು ತೋರಿಸಿದರೆ ಹೇಗೋ ಹಾಗೆ, ರಾಜನಲ್ಲದ ನಿನಗೆ ರಾಜನಿಗೆಂಬಂತೆ ಪೂಜೆಯನ್ನು ಸಲ್ಲಿಸುವುದಾಗಿದೆ, ಕೃಷ್ಣ!

ಇಂದು ಕಂಡಂತಾಯಿತು ಯುಧಿಷ್ಠಿರನನ್ನು - ಎಂದರೆ ಆತನ ಯೋಗ್ಯತೆಯನ್ನು. ಅಂತೆಯೇ ಭೀಷ್ಮರನ್ನು. ಅದೇ ರೀತಿಯಲ್ಲಿ ವಾಸುದೇವನನ್ನೂ ಕಂಡಂತಾಯಿತು. ಎಲ್ಲವನ್ನೂ ಯಥಾಯಥವಾಗಿ ತಿಳಿದದ್ದಾಯಿತು!”

ಹೀಗೆಂಬುದಾಗಿ ಹೇಳಿದವನೇ, ತನ್ನ ಉತ್ತಮವಾದ ಆಸನದಿಂದ ಮೇಲೆದ್ದವನಾಗಿ, ಕೆಲ ರಾಜರೊಡಗೂಡಿ ಆ ಸಭೆಯಿಂದ ಹೊರಟುಬಿಟ್ಟನು. ಒಡನೆಯೇ ಯುಧಿಷ್ಠಿರನು ಶಿಶುಪಾಲನಲ್ಲಿಗೆ ಧಾವಿಸಿದನು. ಹಾಗೂ ಈ ಸಾಂತ್ವನದ ಮಾತುಗಳನ್ನು ಮಧುರವಾಗಿ ನುಡಿದನು:

ರಾಜನೇ, ಎಂತಹ ಮಾತುಗಳನ್ನು ನೀನಾಡಿಬಿಟ್ಟೆ! ಅವು ಯುಕ್ತವಲ್ಲ. ಯಾರ ವಿಷಯದಲ್ಲೇ ಆಗಲಿ ನಿರರ್ಥಕವಾದ ಇಂತಹ ಮಾತನ್ನು ಪಾರುಷ್ಯದಿಂದ (ಎಂದರೆ ಒರಟಾಗಿ) ನುಡಿಯುವುದು ಅಧರ್ಮವೇ ಸರಿ.

ಶಾಂತನವ-ಭೀಷ್ಮನು (ಎಂದರೆ ಶಂತನುಪುತ್ರನಾದ ಭೀಷ್ಮನು) ಶ್ರೇಷ್ಠವಾದ ಧರ್ಮವನ್ನು ಅರಿಯಲಾಗದವನೆಂಬುದು ಎಂದಿಗೂ ಇಲ್ಲ. ಆತನನ್ನು ನೀನು ಅನ್ಯಥಾ ಭಾವಿಸಬೇಡ.

ಇಲ್ಲಿರುವ ರಾಜರನ್ನು ನೋಡು. ಇವರಲ್ಲನೇಕರು ನಿನಗಿಂತಲೂ ಹಿರಿಯರಾದವರು. ಕೃಷ್ಣನಿಗೆ ಸಲ್ಲಿಸಿದ ಪೂಜೆಯನ್ನು ಅವರುಗಳೇ ಸಹಿಸಿಕೊಂಡಿರುವರಲ್ಲವೇ? ಹಾಗೆಯೇ ನೀನೂ ಕ್ಷಮಿಸಲು ಅರ್ಹನಾಗಿದ್ದೀಯೆ. ಓ ಚೇದಿ-ರಾಜನೇ, ಎಂದರೆ ಚೇದಿದೇಶದ ಒಡೆಯನೇ, ಕೃಷ್ಣನೇನೆಂಬುದನ್ನು ತತ್ತ್ವದೃಷ್ಟಿಯಿಂದ ಭೀಷ್ಮರು ಬಲ್ಲರು. ಯಾವ ರೀತಿ ಭೀಷ್ಮರು ಬಲ್ಲರೋ ಆ ರೀತಿ ನೀನು ಕೃಷ್ಣನನ್ನರಿತವನಲ್ಲ" ಎಂದನು.

ಆಗ ಭೀಷ್ಮರು ನುಡಿದರು:

“ಕೃಷ್ಣನು ಲೋಕ-ವೃದ್ಧತಮ ಎಂದರೆ ಎಲ್ಲರಿಗಿಂತಲೂ ಉತ್ಕೃಷ್ಟನಾದವನು. ಅದನ್ನು ಯಾರು ಆದರಿಸರೋ ಅಂತಹವರನ್ನು ಕುರಿತಾಗಿ ಯಾವುದೇ ಅನುನಯವೂ ಬೇಕಿಲ್ಲ, ಸಾಂತ್ವನವೂ ಬೇಕಿಲ್ಲ.

ಯಾವ ಕ್ಷತ್ರಿಯನೊಬ್ಬನು ಮತ್ತಿತರ ಕ್ಷತ್ರಿಯರನ್ನು ರಣದಲ್ಲಿ ಜಯಿಸಿ ವಶಪಡಿಸಿಕೊಂಡು, ನಂತರ ಅವರನ್ನು ಬಿಡುಗಡೆ ಮಾಡುವನೋ, ಅಂತಹವನು ಸೋತವರಿಗೆ ಗುರುವೆನಿಸುವನು. ಅರ್ಥಾತ್, ಪೂಜ್ಯನಾಗುವನು.

ಕೃಷ್ಣನ ತೇಜಸ್ಸಿನಿಂದ ಪರಾಭವಕ್ಕೊಳಗಾಗದ ಯಾವೊಬ್ಬ ರಾಜನೂ ಈ ಸಭೆಯಲ್ಲಿಲ್ಲವೆಂದು ನಾನು ಭಾವಿಸುತ್ತೇನೆ. ಈ ಅಚ್ಯುತನು ನಮಗಷ್ಟೇ ಅರ್ಚ್ಯತಮ, ಎಂದರೆ ಅರ್ಚನೆಗೆ ಅತ್ಯಂತ ಯೋಗ್ಯನಾದವನು - ಎಂದಷ್ಟು ಮಾತ್ರವಲ್ಲ. ತ್ರಿಲೋಕ-ವಂದ್ಯನಾದವನು, ಈ ಮಹಾಬಾಹುವಾದ ಕೃಷ್ಣ. ಅನೇಕ ಮಂದಿ ಕ್ಷತ್ರಿಯಶ್ರೇಷ್ಠರನ್ನು ಕೃಷ್ಣನು ಯುದ್ಧದಲ್ಲೇ ಗೆದ್ದಿದ್ದಾನೆ” ಎಂದನು.

ಸೂಚನೆ :30/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, August 23, 2026

(Vyaasa Vikshita 202) ರಾಜಸಭೆಯಲ್ಲಿ ಶಿಶುಪಾಲನ ಆಕ್ರೋಶ (Vyaasa Vikshita 202)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png

ಕೃಷ್ಣನಿಗೆ ಅಗ್ರಪೂಜೆಯೆಂಬುದನ್ನು ಪ್ರತಿಭಟಿಸಿ ಶಿಶುಪಾಲನು ಭೀಷ್ಮ-ಯುಧಿಷ್ಠಿರರನ್ನು ಮೂದಲಿಸಿ ಹೇಳುತ್ತಿದ್ದಾನೆ:

“ಭೀಷ್ಮನೇ, ನಿನ್ನಂತಹ ಧರ್ಮಾತ್ಮನಾದವನೂ ಸಹ ಯಾರಿಗೋ ಪ್ರಿಯವಾದುದನ್ನು ಮಾಡಬೇಕೆಂಬ ಬಯಕೆಯಿಂದ ಅತಿಯಾದ ವರ್ತನೆಯನ್ನು ತೋರಿದರೆ, ಲೋಕದಲ್ಲಿ ಸಜ್ಜನರಿಂದ ಅವಮಾನಕ್ಕೆ ಪಾತ್ರನಾಗಬೇಕಾದೀತು.

ಈ ಕೃಷ್ಣನಾದರೂ ರಾಜನೇ ಅಲ್ಲ. ಹಾಗಿರಲು ಸಮಸ್ತ ರಾಜರುಗಳ ನಡುವೆ ನೀವುಗಳು ತೋರಿಸಿರುವ ಆದರಕ್ಕೆ ಅವನು ಅದೆಂತು ಪಾತ್ರನಾದಾನು? ಒಂದು ವೇಳೆ ಕೃಷ್ಣನನ್ನು ಸಾಕಷ್ಟು ವಯಸ್ಸಾದವನೆಂದು ನೀನು ಭಾವಿಸುವೆಯಾದರೆ, ಆತನ ತಂದೆಯೂ ವೃದ್ಧನೂ ಆದ ವಸುದೇವನೇ ಇಲ್ಲಿರಲಾಗಿ, ಆತನ ಮಗನು ಇದಕ್ಕೆ ಹೇಗೆ ತಾನೆ ಅರ್ಹನಾದಾನು?

ಒಂದು ವೇಳೆ ವಾಸುದೇವನು ನಿಮ್ಮಗಳಿಗೆ ಪ್ರಿಯವಾದುದನ್ನು ಮಾಡತಕ್ಕವನು, ಹಾಗೂ ನಿಮ್ಮನ್ನು ಅನುಸರಿಸತಕ್ಕವನು - ಎಂಬುದೇ ಲೆಕ್ಕವಾದರೆ, ದ್ರುಪದನಿಲ್ಲಿರುವಾಗ ಮಾಧವನಿಗೆಂತು ಪೂಜೆಯು ಸಂದೀತು?

ಅಯ್ಯಾ ಕುರುನಂದನ, ಒಂದು ವೇಳೆ ಕೃಷ್ಣನನ್ನು ನೀನು ಆಚಾರ್ಯನೆಂಬುದಾಗಿ ಭಾವಿಸುವೆಯಾದರೆ, ದ್ರೋಣರೇ ಇಲ್ಲಿರಲು ಅದೆಂತು ಕೃಷ್ಣನ ಅರ್ಚನೆಯನ್ನು ಮಾಡಿರುವೆ?

ಅಲ್ಲಯ್ಯಾ, ಒಂದು ವೇಳೆ ನೀನು ಕೃಷ್ಣನನ್ನು ಋತ್ವಿಕ್ಕು ಎಂದು ಭಾವಿಸುವುದಾದರೆ, ವೃದ್ಧರಾದ ದ್ವೈಪಾಯನರೇ ಇಲ್ಲಿರಲಾಗಿ ಕೃಷ್ಣನಿಗೆ ನೀನು ಅರ್ಚನೆಯನ್ನು ಮಾಡಿದ್ದಾದರೂ ಹೇಗೆ?

ಇನ್ನು ಭೀಷ್ಮರು: ಅವರು ಪುರುಷಶ್ರೇಷ್ಠರು. ಸ್ವಚ್ಛಂದ-ಮೃತ್ಯುಗಳು - ಎಂದರೆ ಬೇಕೆನಿಸಿದಾಗ ಪ್ರಾಣಬಿಡಲು ಸಮರ್ಥರಾಗಿರತಕ್ಕವರು. ಅವರಿರುವಾಗ ಕೃಷ್ಣನ ಅರ್ಚನೆಯೇ?

ಸರ್ವಶಾಸ್ತ್ರವಿಶಾರದನಾದ ವೀರ ಅಶ್ವತ್ಥಾಮನು ಇರುವಾಗ ಕೃಷ್ಣನಿಗೆ ಅರ್ಚನೆಯೆಂಬುದು ಸಂದಿತೆಂತು? ಅಲ್ಲದೆ, ರಾಜರಾಜನಾದ ದುರ್ಯೋಧನನಿಲ್ಲವೇ, ಪುರುಷಶ್ರೇಷ್ಠನಾಗಿ? ಅಥವಾ ಭರತವಂಶಕ್ಕೇ ಆಚಾರ್ಯರೆನಿಸುವ ಕೃಪಾಚಾರ್ಯರಿಲ್ಲವೇ? ಅವರಿರುವಾಗ ಕೃಷ್ಣಾರ್ಚನೆಯೇ? ಕಿಂಪುರುಷರ ಆಚಾರ್ಯನಾದ ದ್ರುಮ, ಇವರಲ್ಲದೆ ಸುಲಕ್ಷಣನಾದ ಭೀಷ್ಮಕ, ರುಕ್ಮಿ, ಏಕಲವ್ಯ, ಶಲ್ಯ - ಇವರೆಲ್ಲ ಇಲ್ಲವೇ?

ಅನೇಕ ರಾಜರನ್ನು ಯುದ್ಧದಲ್ಲಿ ಜಯಿಸಿರುವವನೂ, ಪರಶುರಾಮನ ಶಿಷ್ಯನೂ ಆಗಿರುವ ಕರ್ಣನೇ ಇಲ್ಲಿರುವಾಗ, ನೀನು ಕೃಷ್ಣನನ್ನು ಅರ್ಚಿಸುವುದೆಂತು? ಇತ್ತ ಋತ್ವಿಕ್ಕಲ್ಲ, ಅಥವಾ ಆಚಾರ್ಯನಲ್ಲ, ಅತ್ತ ರಾಜನಲ್ಲ. ಹೀಗಿರುವಾಗ ಅಂತಹ ಕೃಷ್ಣನಿಗೆ ಅರ್ಚನೆಯೆಂದರೆ ಅದಕ್ಕೆ ಕಾರಣವೇನು? - ನಿನಗಾವುದೋ ಪ್ರಿಯವಾದ ಕಾಮನೆಯು ಪೂರ್ತಿಗೊಳ್ಳಬೇಕಾಗಿದೆಯೆಂಬುದನ್ನು ಬಿಟ್ಟರೆ ಮತ್ತಿನ್ನೇನು?

ಅಥವಾ ನಿಮ್ಮ ಲೆಕ್ಕದಲ್ಲಿ ಈ ಮಧುಸೂದನನೇ ಅರ್ಚನೆಗೆ ಯೋಗ್ಯವೆಂಬುದಾದರೆ, ಇಲ್ಲಿಗೆ ಈ ರಾಜರನ್ನೆಲ್ಲ ಕರೆತಂದು ಅವಮಾನಪಡಿಸುವುದೇತಕ್ಕೆ? ಮಹಾತ್ಮನಾದ ಯುಧಿಷ್ಠರನಿಗೆ ನಾವೆಲ್ಲ ಕರವನ್ನು ಕೊಡುತ್ತಿರುವೆವೆಂದರೆ ಅದೇನೂ ಈತನ ವಿಷಯದಲ್ಲಿಯ ಭಯಕ್ಕಾಗಿಯಲ್ಲ, ಅಥವಾ ಯಾವುದೇ ಲೋಭಕ್ಕಲ್ಲ, ಮತ್ತಾವುದೇ ಆಶ್ವಾಸನೆಗಾಗಿಯೂ ಅಲ್ಲ. ನಾವಂದುಕೊಂಡದ್ದು ಈ ಯುಧಿಷ್ಠಿರನು ಧರ್ಮಿಷ್ಠನೆಂದು. ಸಮ್ರಾಟನಾಗಲು ಬಯಸಿರುವನೆಂದು. ನಾವೇನೋ ಈತನಿಗೆ ಕರವನ್ನು ಕೊಡುತ್ತಿದ್ದೇವೆ. ಆದರೆ ಈತನು ನಮ್ಮನ್ನು ಗಣನೆಗೇ ತೆಗೆದುಕೊಳ್ಳನೇ!

ಛತ್ರ-ಚಾಮರಾದಿಲಕ್ಷಣಗಳನ್ನೇ ಪಡೆದಿಲ್ಲದ ಈ ಕೃಷ್ಣನಿಗೆ ನೀನು ಪೂಜೆಯನ್ನು ಸಲ್ಲಿಸಿರುವೆಯೆಂದರೆ ರಾಜರುಗಳ ಸಭೆಯಲ್ಲಿ ಇದು ಅವಮಾನವಲ್ಲದೆ ಮತ್ತಿನ್ನೇನು? ಧರ್ಮಪುತ್ರನಾದ ಈ ಯುಧಿಷ್ಠಿರನಿಗೆ ಧರ್ಮಾತ್ಮನೆಂಬ ಯಶಸ್ಸೇನೋ ಸಂಪ್ರಾಪ್ತವಾಯಿತು. ಆದರೆ ಧರ್ಮಚ್ಯುತನಾದ ಅದಾವನಿಗೆ ಈ ರೀತಿಯಾಗಿ ಯಾರಾದರೂ ಪೂಜೆಯನ್ನು ಸಲ್ಲಿಸಿಯಾರು? ವೃಷ್ಣಿವಂಶದಲ್ಲಿ ಜನಿಸಿದ ಈ ದುರಾತ್ಮನು ಕೆಲಕಾಲದ ಹಿಂದೆ ಮಹಾತ್ಮನಾದ ಜರಾಸಂಧನನ್ನು ನ್ಯಾಯವಲ್ಲದ ಬಗೆಯಲ್ಲಿ ಕೊಲೆಗೈದಿರುವನು!

ಈಗ ಯುಧಿಷ್ಠಿರನಿಂದ ಧರ್ಮಾತ್ಮತೆಯೆಂಬುದು ದೂರ ಸರಿದಿದೆ; ಕೃಷ್ಣನಿಗೆ ಅರ್ಘ್ಯವೆಂಬುದನ್ನು ಸಲ್ಲಿಸಿರುವುದಾದ್ದರಿಂದ ತನ್ನ ಕೃಪಣತೆಯನ್ನೇ ಆತ ತೋರಿಸಿರುವುದಾಗಿದೆ.”

ಸೂಚನೆ :23/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 80 (Prasnottara Ratnamalike 80)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೮೦. ಯಾವ ಸಭೆಯನ್ನು ತ್ಯಾಗ ಮಾಡಬೇಕು?

ಉತ್ತರ- ವೃದ್ಧ ಸಚಿವರು ಇಲ್ಲದ ಸಭೆಯನ್ನು.


ಯಾವ ಸಭೆಯನ್ನು ತ್ಯಾಗ ಮಾಡಬೇಕು? ಎಂಬುದನ್ನು ತಿಳಿಯಬೇಕಾದರೆ ‘ಸಭೆ’ ಎಂದರೆ ಏನು? ಎಂಬುದನ್ನು ಮೊದಲು ತಿಳಿಯಬೇಕು. ಸಭಾ ಎಂದರೆ ‘ಸಹ ಭಾಂತಿ-ಶೋಭಂತೇ’ ಯಾರು ಇದ್ದರೆ ಅದು ಶೋಭಿಸುತ್ತದೆಯೋ ಅದು. ಭಾ ಎಂದರೆ ಬೆಳಕು, ಬೆಳಗುವುದು ಎಂದರ್ಥ. ಯಾವುದು ಶೋಭಿಸುತ್ತದೆಯೋ ಅದಕ್ಕೆ ‘ಸಭೆ’ ಎಂದು ಹೆಸರು. ಶೋಭಿಸಬೇಕಾದರೆ ಅಲ್ಲಿ ಅತ್ಯಂತ ಮುಖ್ಯವಾದದ್ದು ಯಾವುದು? ಎಂಬುದನ್ನು ಮಹಾಭಾರತದಲ್ಲಿ ವಿದುರ ಹೀಗೆ ಹೇಳುತ್ತಾನೆ - “ನ ಸಾ ಸಭಾ ಯತ್ರ ನ ಸಂತಿ ವೃದ್ಧಾಃ  ನ ತೇ  ವೃದ್ಧಾಃ ಯೇ ನ ವದಂತಿ ಧರ್ಮಮ್”  ಎಲ್ಲಿ ವೃದ್ಧರು ಇರುವುದಿಲ್ಲವೋ ಅದನ್ನು ಸಭೆ ಎಂದು ಹೇಳಲಾಗದು. ಯಾವ ವೃದ್ಧರು ಧರ್ಮವನ್ನು ಹೇಳುವುದಿಲ್ಲವೋ ಅವರನ್ನು ವೃದ್ಧರು ಎಂದೂ ಹೇಳಲು ಸಾಧ್ಯವಾಗದು.


ಅಂದರೆ ಧರ್ಮವನ್ನು ತಿಳಿಯದೆ ಕೇವಲ ವಯಸ್ಸು ಮಾತ್ರ ಹೆಚ್ಚಾದರೆ ಅವರನ್ನು ವೃದ್ಧರು ಎಂದು ಹೇಳಲು ಸಾಧ್ಯವಿಲ್ಲ ಎಂದರ್ಥ. ವೃದ್ಧರಾಗುತ್ತ ವೃದ್ಧರಾಗುತ್ತ ಅವರಲ್ಲಿ ಜ್ಞಾನವೂ ಹೆಚ್ಚಾಗಬೇಕಾಗುತ್ತದೆ. ಬಾಲ್ಯದಲ್ಲಿ ಚೆನ್ನಾಗಿ ಅಧ್ಯಯನ ಮಾಡಿ, ಯೌವನದಲ್ಲಿ ಚೆನ್ನಾಗಿ ಸಂಪಾದನೆ ಮಾಡಿ ಅದರಿಂದ ಬರುವ ಆ ಅನುಭವಪಕ್ವತೆಯನ್ನೇ ನಿಜವಾದ ವೃದ್ಧತ್ವವೆಂದು ಕರೆಯಬೇಕು. ಒಬ್ಬ ವೃದ್ಧನಾದವನು ಕೇವಲ ವಯಸ್ಸಿನಿಂದ ಮಾತ್ರ ವೃದ್ಧನಾಗದೆ ಜ್ಞಾನದಿಂದಲೂ ವೃದ್ಧನಾಗಿರಬೇಕು ಎಂದರ್ಥ. ಇಂತಹ ವೃದ್ಧನಿರುವ ಜಾಗವನ್ನು ‘ಸಭೆ’ ಎಂಬುದಾಗಿ ಕರೆಯಲಾಗಿದೆ.


ಇಂತಹ ಜ್ಞಾನವೃದ್ಧರು, ವಯೋವೃದ್ಧರೂ ಆದ ಸಚಿವರು - ಮಂತ್ರಿಗಳು ಯಾವ ಸಭೆಯಲ್ಲಿ ಇರುತ್ತಾರೋ ಆ ಸಭೆಯು ಅತ್ಯಂತ ಪೂಜ್ಯವಾದದ್ದು ಶ್ರೇಷ್ಠವಾದದ್ದು. ಒಂದು ವೇಳೆ ಇಂತಹ ಸಚಿವರು ಇಲ್ಲದಿದ್ದರೆ ಆ ಸಭೆಯನ್ನು ತ್ಯಾಗ ಮಾಡಬೇಮಾಡಬೇಕು ಎಂದು ಸಭೆಗೆ ವೃದ್ಧರ ಅವಶ್ಯತೆಯನ್ನು ಸಾರಲಾಗಿತ್ತಿದೆ. ಯಾವ ಸಭೆಯನ್ನು ತ್ಯಾಗ ಮಾಡಬೇಕು ಎಂಬುದು ಪ್ರಶ್ನೆಗೆ, ವೃದ್ಧಸಚಿವರು ಇಲ್ಲದಿರುವ ಸಭೆಯನ್ನು ತ್ಯಾಗ ಮಾಡಬೇಕು ಎಂಬುದು ಉತ್ತರವಾಗಿದೆ. ಸಚಿವನಾದವನು ಜ್ಞಾನಿಯಾಗಿರಬೇಕು. ಅವನು ರಾಜ್ಯದ ಎಲ್ಲ ರೀತಿಯ ಯೋಗಕ್ಷೇಮವನ್ನು ನೋಡಿಕೊಳ್ಳುವ ಅತ್ಯಂತ ಗುರುತರವಾದ ಜವಾಬ್ದಾರಿಯುತ ಸ್ಥಾನವನ್ನು ಪಡೆದಿರುತ್ತಾನೆ. ಅಂತಹ ಸಚಿವರನ್ನು ಪಡೆದಂತಹ ರಾಜನು ಧನ್ಯ. ಅಂತಹ ರಾಜ್ಯ ಸಮೃದ್ಧ. ರಾಜನಾದವನು ತನ್ನ ರಾಜ್ಯಕ್ಕಾಗಿ ರಾಜ್ಯದ ಆಗುಹೋಗುಗಳಿಗಾಗಿ ಚರ್ಚೆಯನ್ನು ಮಾಡಿ ಒಂದು ನಿರ್ಣಯವನ್ನು ತೆಗೆದುಕೊಳ್ಳಬೇಕಾದರೆ ಇಂತಹ ಒಬ್ಬ ಜ್ಞಾನವೃದ್ಧನಾದ ಮಂತ್ರಿ ಇರಬೇಕಾಗುತ್ತದೆ. ಏಕೆಂದರೆ ಅವನು ಎಲ್ಲವನ್ನೂ ತಿಳಿದಿರುತ್ತಾನೆ. ಅವನು ಧರ್ಮವನ್ನು ತಿಳಿದಿದ್ದಾನೆ ಎಂದರ್ಥ. ಧರ್ಮವನ್ನು ತಿಳಿದವರು ಮಾತ್ರ ಸಚಿವನಾಗಬಲ್ಲ.


ಧರ್ಮವನ್ನು ತಿಳಿಸುವ ವೇದ, ಶಾಸ್ತ್ರ, ಪುರಾಣ ಮೊದಲಾದ ವಿದ್ಯೆಗಳಲ್ಲಿ ಪರಿಣತರಾಗಿರಬೇಕು. ಆಗ ಮಾತ್ರ ಧರ್ಮವನ್ನು ತಿಳಿಯಲು ಸಾಧ್ಯ. ಇಂತಹ ಒಬ್ಬ ಸಚಿವನು ಸಭೆಯಲ್ಲಿದ್ದರೆ ಆ ಸಭೆ ಶೋಭಿಸುತ್ತದೆ, ಬೆಳಗುತ್ತದೆ. ಹಾಗಿಲ್ಲದಿದ್ದರೆ ಆ ಸಭೆ ಅಜ್ಞಾನದಿಂದ ಕೂಡಿರುತ್ತದೆ. ಅಂತಹ ಸಭೆಯು ತ್ಯಾಗ ಮಾಡಲು ಯೋಗ್ಯ ಎಂಬುದಾಗಿ ಈ ಪ್ರಶ್ನೋತ್ತರ ಹೇಳುತ್ತದೆ.


ಸೂಚನೆ :23/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  


ಗುರುಭಕ್ತಿಯ ಅವಶ್ಯಕತೆ ಆ ಮಹಿಮೆಯು ಅರಿವಾಗುತ್ತದೆ....! (Gurubhaktiya Aashyakate Aa Mahimeyu Arivaguttade....!)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)

image.png
ಇಂದು ಭಕ್ತಿಯೆನ್ನುವುದು ನಮ್ಮ ಕೀಳರಿಮೆ, ದಾಸ್ಯದ ಮನೋಭಾವದಿಂದ ಬಂದಿರುವುದು, ಅದು ನಿರಾಶಾವಾದ ಮತ್ತು  ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆಯೆಂದು ಹೇಳುವ  ಪ್ರಸಿದ್ಧ ವ್ಯಕ್ತಿಗಳು ನಮ್ಮ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಇಲ್ಲದಿಲ್ಲ.   ಜೀವನವನ್ನು ಸಕಾರಾತ್ಮಕ, ಜವಾಬ್ದಾರಿಯುತ ರೀತಿಯಲ್ಲಿ ನಡೆಸಲು ಭಕ್ತಿ, ಪ್ರಾರ್ಥನೆಗಳು ಗಮನಾರ್ಹವಾದ ಬೆಂಬಲವನ್ನು ಕೊಡುತ್ತವೆಯೆಂದು  ಆಧುನಿಕ ವೈದ್ಯಕೀಯ ಮತ್ತು ನರವೈದ್ಯಶಾಸ್ತ್ರವು ಅದರ ವ್ಯಾಪ್ತಿಯಮಿತಿಯ ಲ್ಲಿ ಬರುವ ಸಂಶೋಧನೆಗಳಿಂದ ಪುಷ್ಟಿಕರಿಸುತ್ತವೆ.
ಹಾಗಾದರೆ, ಭಕ್ತಿಯೆಂದರೇನು? ಭಕ್ತಿ ಎನ್ನುವ ಪದ ಭಜ್ — ಸೇವಾಯಾಮ್ ಎಂಬ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಪರಮಮಾತ್ಮನ ಮೇಲಿನ ಪ್ರೀತಿ, ಸೇವೆ, ಸಮರ್ಪಣೆ ಎಂಬ ಅರ್ಥದಲ್ಲಿ ಪ್ರಸಿದ್ಧವಾಗಿದೆ. ಶಾಂಡಿಲ್ಯ ಭಕ್ತಿ ಸೂತ್ರವು "ಸಾ ಪರಾ ಅನುರಕ್ತಿರೀಶ್ವರೇ" ಈಶ್ವರನ ಮೇಲಿರುವ ಪರಮ, ಅವಿಚ್ಛಿನ್ನ ಮತ್ತು ಅನನ್ಯ ಪ್ರೀತಿಯೇ ಭಕ್ತಿ.ಎಂದು ಹೇಳುತ್ತದೆ. ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣನು " ಭಕ್ತಿಯ ಮೂಲಕವೇ ನಾನು ಯಾರು, ನನ್ನ ನಿಜಸ್ವರೂಪವೇನು ಎಂಬುದನ್ನು ಯಥಾರ್ಥವಾಗಿ ತಿಳಿಯಲು ಸಾಧ್ಯವಾಗುತ್ತದೆ. ಹೀಗೆ ನನ್ನನ್ನು ತತ್ತ್ವತಃ ಅರಿತ ಬಳಿಕ, ಭಕ್ತನು ನನ್ನನ್ನು ಹೊಂದಿ ನನ್ನ ದಿವ್ಯಸಾನ್ನಿಧ್ಯವನ್ನು ಪಡೆಯುತ್ತಾನೆ." ಎಂದು ಘೋಷಿಸುತ್ತಾನೆ. ಆದಿ ಶಂಕರರೂ ಅದ್ವೈತ ವೇದಾಂತದಲ್ಲಿ ಭಕ್ತಿ ಮತ್ತು ಜ್ಞಾನವು ಪರಸ್ಪರ ವಿರೋಧತತ್ವಗಳಲ್ಲ ,  ಪೂರಕವಾದ ವಿಷಯಗಳು ; ಆತ್ಮಜ್ಞಾನದತ್ತ ಕೊಂಡೊಯ್ಯುವ ವಿಧಾನಗಳಲ್ಲಿ ಭಕ್ತಿಯೇ ಶ್ರೇಷ್ಟವೆಂಬುದಾಗಿ ಸ್ಪಷ್ಟಪಡಿಸುತ್ತಾರೆ. ಭಾಗವತಪುರಾಣವು, ಪರಮಾತ್ಮನ ದಿವ್ಯ ಲೀಲೆಗಳನ್ನು ಕೇಳದ ಕಿವಿಗಳು ಕೇವಲ ರಂಧ್ರಗಳಂತಿವೆ. ಭಗವಂತನ ಕೀರ್ತನೆಯನ್ನು ಹಾಡದ ನಾಲಿಗೆಯು ಕಪ್ಪೆಯ ನಾಲಿಗೆಯಂತೆ ವ್ಯರ್ಥವೆನ್ನುತ್ತದೆ.

 ಗುರುವೆಂಬ ಪ್ರತಿನಿಧಿಯು ತನ್ನೊಳಗೆ (ಪರಮಾತ್ಮನೆಂಬ)  ನಿಧಿಯನ್ನಿಟ್ಟುಕೊಂಡು ಭಗವದಾಶಯವನ್ನು ಜಾರಿಮಾಡುತ್ತಾನೆ. ಹನುಮಂತನು ಸೀತೆಗೆ ಶ್ರೀರಾಮಚಂದ್ರನ ಸಂದೇಶ ಮತ್ತು ಮುದ್ರಿಕೆಯನ್ನು ನೀಡಿ, ಸೀತಾದೇವಿಗೆ ಭರವಸೆಯನ್ನು ಕೊಟ್ಟು ದುಃಖದಿಂದ ಪಾರುಮಾಡಿದಂತೆ, ಪ್ರತಿಯೊಬ್ಬ ಗುರುವೂ ಭವಬಂಧನದಲ್ಲಿರುವ ಜೀವಾತ್ಮನನ್ನು ಪರಮಾತ್ಮನಿಗೆ ಸೇರಿಸುವ ಜವಾಬ್ದಾರಿಯನ್ನು ಹೊತ್ತುತ್ತಾನೆ-ಎಂಬ ದಾರ್ಶನಿಕ ಭಾವವನ್ನು ವೈಷ್ಣವಸಂತರು, ರಾಮಾಯಣದ ಸುಂದರಖಾಂಡದ ಹಿನ್ನೆಲಿಯಲ್ಲಿ ಅಭಿಪ್ರಾಯಪಡುತ್ತಾರೆ. . “ಸತ್ಯವನ್ನು ನೇರವಾಗಿ ಸಾಕ್ಷಾತ್ಕರಿಸಿಕೊಂಡು, ಇತರರಿಗೂ ಸತ್ಯದರ್ಶನ ಮಾಡಿಸಿಕೊಡುವ ಜ್ಞಾನಿಗಳು ನಿನಗೆ ಆ ಜ್ಞಾನವನ್ನು ಉಪದೇಶಿಸುತ್ತಾರೆ." ಎಂಬುದಾಗಿಯೂ , ಆಧ್ಯಾತ್ಮಿಕ ಮಾರ್ಗಕ್ಕೆ ಗುರುವಿನ ಅಗತ್ಯತೆ, ಶಿಷ್ಯನಿಗಿರಬೇಕಾದ ವಿನಯ,  ಶರಣಾಗತಿ, ವಿವೇಕಯುಕ್ತವಾದ ಪ್ರಶ್ನೆಗಳನ್ನು ಕೇಳುವ ಜಿಜ್ಞಾಸೆ ಮತ್ತು ಗುರುಸೇವಾಸಕ್ತಿಗಳನ್ನು   ಗೀತಾಚಾರ್ಯನು   ಒತ್ತಿಹೇಳುತ್ತಾನೆ. ಭಕ್ತಿಯನ್ನು ಪರಮಾತ್ಮನಲ್ಲೇ ಇಡಬಹುದಲ್ಲ, ಗುರುಭಕ್ತಿಯೇಕೆ? ನಾವು ಪರಮಾತ್ಮನನ್ನು ಕಾಣೆವು, ಎಷ್ಟೋ ಜನ್ಮಗಳಿಂದ ಮರೆತುಬಿಟ್ಟಿದೇವೆ. ಪರಮಾತ್ಮನಿಗೂ ನಮಗೂ ಸೇತುವೆ,ಸಂಬಂಧ ಬೆಳೆಸಲು ಗುರು ಅನುಗ್ರಹಿಸುತ್ತಾನೆ.  ಸಂಪುಟವು ಬೆಲೆಬಾಳುವ ವಜ್ರಾಭರಣವನ್ನು ತನ್ನ  ಒಳಗಿಟ್ಟುಕೊಂಡು ಕಾಪಾಡುವಂತೆ, ಗುರುವು  ಭಗವಂತನನ್ನು ಅಪಾದಮೌಳಿ ತನ್ನೊಳಗೆ ತುಂಬಿಕೊಂಡಿರುತ್ತಾನೆ. ಫ್ರಿಡ್ಜ್-ನಲ್ಲಿ ಪದಾರ್ಥಗಳು ಕೆಡದಂತಿಡುತ್ತಾರೆ. ಗುರು ಎನ್ನುವ ಫ್ರಿಡ್ಜ್ ಕೆಟ್ಟಿರುವ,  ದೈವವನ್ನು ಮರೆತೇಹೋಗಿರುವ ಶಿಷ್ಯರನ್ನು ತನ್ನ ಮಡಿಲಿನಲ್ಲಿ ಹಾಕಿಕೊಂಡು ಕೆಡದಂತೆ ಕಾಪಾಡುತ್ತಾನೆ. ಶಿಷ್ಯನು ಕೇವಲ ಗುರೂಪದೇಶದಂತೆ ನಡೆದುಕೊಳ್ಳುವುದಷ್ಟೇ ಕೆಲಸ. ಯೋಗ ಮಾರ್ಗ ಕತ್ತಿಯ ಅರಗಿನಂತೆ ಎಂದು ಉಪನಿಷದ್ವಾಣಿ ಎಚ್ಚರಿಸುತ್ತದೆ. ಈ ಅಪಾಯಗಳಿಂದಲೂ ಗುರುವು ರಕ್ಷಿಸುತ್ತಾನೆ. ಭಕ್ತರು ಗುರುವಿಗೂ, ಶ್ರೀಹರಿಗೂ ವ್ಯತ್ಯಾಸವನ್ನು ಕಾಣುವುದಿಲ್ಲವೆನ್ನುತ್ತಾರೆ. -ಆದ್ದರಿಂದ, ಗುರುವಲ್ಲಿಡುವ ಪ್ರೀತಿಯು ಪರಮಾತ್ಮನಲ್ಲಿಡುವ ಪ್ರೀತಿಗೆ ಸಮನಾಗುತ್ತೆ.  

 ಗುರುಭಕ್ತಿಸಾರುವದರಲ್ಲಿ ಮಹಾಭಾರತದ ಧೌಮ್ಯ ಮಹರ್ಷಿ ಮತ್ತು ಆರುಣಿಯ ಕಥಾ ಪ್ರಸಂಗ ಉಲ್ಲೇಖಾರ್ಹ.  ಆರುಣಿಯು ತನ್ನ ಗುರುಗಳ ಮೇಲೆ ಭಕ್ತಿ, ವಿಧೇಯತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವವುಳ್ಳವನು. ಒಮ್ಮೆ ಧೌಮ್ಯಮಹರ್ಷಿಗಳ  ಹೊಲದ ಕಟ್ಟೆ ಒಡೆದು ನೀರು ವ್ಯರ್ಥವಾಗಿ ಹರಿದುಹೋಗುತ್ತಿತ್ತು.  ಧೌಮ್ಯರು  ಆರುಣಿಯನ್ನು ಕರೆದು ಅದನ್ನು ಸರಿಪಡಿಸಲು ಆದೇಶಿಸಿದರು.  ಆರುಣಿಯು ತಕ್ಷಣ ಗದ್ದೆಗೆ ಧಾವಿಸಿ ಕಲ್ಲು, ಮಣ್ಣು, ಮರದ ಕೊಂಬೆಗಳನ್ನು ಹಾಕಿ ಕಟ್ಟೆಯನ್ನು ಮುಚ್ಚಲು ಬಹಳ ಪ್ರಯತ್ನಿಸಿದ. ನೀರಿನ ಪ್ರವಾಹವು ತೀವ್ರವಾಗಿದ್ದರಿಂದ,  ಎಲ್ಲವೂ ಕೊಚ್ಚಿಹೋಗುತ್ತಿತ್ತು ಮತ್ತು ಅವನು ಮತ್ತೆ ಮತ್ತೆ ಪ್ರಯತ್ನಿಸಿದರೂ ಕಟ್ಟೆಯನ್ನು ಮುಚ್ಚಲಾಗಲಿಲ್ಲ. ಬೇರೆ ದಾರಿ ಕಾಣದೇ , ಗುರ್ವಾಜ್ಞೆಯನ್ನು ನೆನೆಸಿಕೊಂಡು, ತನ್ನ ದೇಹವನ್ನೇ  ಒಡೆದ ಕಟ್ಟೆಗೆ ಅಡ್ಡವಾಗಿಟ್ಟುಕೊಂಡು ಮಲಗಿದನು. ಹಾಗಾಗಿ,  ನೀರು ಹೊರಹೋಗಲಾರದೆ ಹೊಲದಲ್ಲಿಯೇ ಉಳಿಯಿತು.  ಆರುಣಿಯು ಚಳಿ, ಹಸಿವು ಮತ್ತು ಆಯಾಸವನ್ನೂ ಗಮನಿಸದೆ  ಮಲಗಿದ್ದನು. ಬಹಳ ಹೊತ್ತಾದರೂ  ಆರುಣಿಯ ಹಿಂದಿರುಗಲಿಲ್ಲವಾದ್ದರಿಂದ ಧೌಮ್ಯರಿಗೆ ಕಳವಳವಾಗಿ , ಉಳಿದ ಶಿಷ್ಯರೊಡನೆ ಹೊಲದ ಕಡೆಗೆ ಹೊರಟರು.  ಆರುಣಿಗಾಗಿ ಕೂಗಿದರು. ಹೊಲದಿಂದ  ಆರುಣಿಯು ಗುರುದೇವರನ್ನು ಕರೆದು, ಕಟ್ಟೆಯನ್ನು ಸರಿಪಡಿಸಲಾಗದೇ ತನ್ನ ದೇಹವನ್ನು ನೀರಿಗೆ ಅಡ್ಡವಾಗಿಟ್ಟುಕೊಂಡು ಮಲಗಿದ್ದೇನೆಂದು ತಿಳಿಸಿದ. ಅದನ್ನು ನೋಡಿದ ಧೌಮ್ಯ ಮಹರ್ಷಿಗಳು ಗುರುಭಕ್ತಿ, ಗುರುಸೇವಾ ತತ್ಪರನಾದ  ಆರುಣಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಆಶೀರ್ವದಿಸಿ ಆನಂದಭಾಷ್ಪ ಸುರಿಸಿದರು. ಗುರುಗಳ ಆಶೀರ್ವಾದದಿಂದ ಮುಂದೆ ಅರುಣಿಯು ಮಹಾಜ್ಞಾನಿಯಾಗಿ, ಉದ್ದಾಲಕ ಅರುಣಿಯೆಂದು ಖ್ಯಾತ ಋಷಿಯಾದನು. ಈ ಕಥಾಸಾರದ ಇಂಗಿತವನ್ನು ಅರ್ಥಮಾಡಿಕೊಳ್ಳುತ್ತಾ, “ಬೆಂಕಿಕಡ್ಡಿಯು ಮದ್ದನ್ನಿಟ್ಟುಕೊಂಡಿರುವುದರಿಂದ ಅದಕ್ಕೆ ಮಹಿಮೆ. ಬರೀ  ಕಡ್ಡಿಗಳಿಗಲ್ಲ. ಗುರು ಎನ್ನುವುದು ವ್ಯಕ್ತಿಗಲ್ಲ, ಶಕ್ತಿಗೆ. ಆ ಮಹಿಮೆ ವ್ಯಕ್ತವಾಗಲು ಸೇರುವೆ ಬೇಕು. ಗುರು-ಶಿಷ್ಯ-ಭಗವಂತ ಇವುಗಳ ಯೋಗ ನಡೆದರೆ ಆ ಮಹಿಮೆಯು ಅರಿವಾಗುತ್ತದೆ.” ಎಂಬ ಶ್ರೀರಂಗಮಹಾಗುರುಗಳ ಅಮೃತವಾಣಿಯನ್ನು ನೆನೆಯೋಣ.  

ಸೂಚನೆ : 22/08/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, August 18, 2026

ಅಷ್ಟಾಕ್ಷರೀ 112 ದೇವತಾತ್ಮಾ ಹಿಮಾಲಯಃ (Astakshara 112)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png


 ತಪೋ-ಜ್ಞಾನಗಳ ತಾಣ: ತುಂಗ-ಶೃಂಗದ ತುಹಿನ-ಗಿರಿ 

ಸಮುದ್ರಸ್ತರದಿಂದ ಅಳೆದರೆ, ಜಗತ್ತಿನಲ್ಲೆಲ್ಲಾ ಅತ್ಯಂತ ಉಚ್ಚವೆನಿಸುವ ಪರ್ವತವೇ ಹಿಮಾಲಯ. ಇದು ತುಂಗತಮ-ಗಿರಿಶ್ರೇಣಿಯಾಗಿರುವುದು ಮಾತ್ರವಲ್ಲ, ಈಗಲೂ ವರ್ಧಿಸುತ್ತಿರುವ ವರಪರ್ವತ! ಈಗೊಂದೈದಾರು ವರ್ಷಗಳ ಹಿಂದೆ ಅಳೆದಾಗ ಇದರ ಎತ್ತರ ೮೮೪೮ ಮೀಟರುಗಳು; ಹಾಗೆಂದರೆ ೨೦೦೦೦ ಅಡಿಗಳಿಗಿಂತಲೂ ಹೆಚ್ಚು! ಅಂಬರ-ಚುಂಬಕವೀ ಹಿಮಾಚಲ!

ಭಾರತದ ಔನ್ನತ್ಯವನ್ನೂ ಭಾರತೀಯ-ಸಂಸ್ಕೃತಿಯ ಉತ್ತುಂಗತೆಯನ್ನೂ ಸೂಚಿಸಲು ಪ್ರಾಯಶಃ ಇದೊಂದೇ ಸಾಕೇನೋ! ಭಾರತವು ಸಹಜವಾಗಿಯೇ ವಿಶ್ವ-ಗುರುವೆಂಬುದನ್ನು ಇದುವೇ ಮೌನವಾಗಿ ಹೇಳುತ್ತಿರುವಂತಿದೆ: ಕೀಳರಿಮೆಯಿಂದ ತಲೆತಗ್ಗಿಸದೆ, ಹಿಮಗಿರಿಯ ತುಂಗ-ಶೃಂಗದತ್ತ ಧೃತಿಯಿಂದ ಒಮ್ಮೆ ನೋಟಬೀರುವಂತಹವರಿಗೆ, ನಿಜವಾದ ಊರ್ಧ್ವ-ದೃಷ್ಟಿಯುಳ್ಳವರಿಗೆ, ತೋರಿಬರುವ ನಿತ್ಯ-ಸತ್ಯವಿದು!

ಅಲ್ಲಿಂದ ಹರಿದು ಬರುವ ಗಂಗೆಯಾದರೂ ಸಣ್ಣನದಿಯೇನಲ್ಲ. ಗಂಗೆ-ಹಿಮಾದ್ರಿಗಳು ಬಹು ಪ್ರಾಚೀನವೂ ಹೌದು: ಐದು ಕೋಟಿ ವರ್ಷಗಳಿಂದಲಾದರೂ ಹಿಮಾಲಯವು ಅಸ್ತಿತ್ವದಲ್ಲಿದೆ; ಗಂಗೆಯೂ ಏನಿಲ್ಲವೆಂದರೂ ಎರಡು ಕೋಟಿ ವರ್ಷಗಳಿಂದ ಹರಿಯುತ್ತಿದೆಯೆನ್ನುತ್ತಾರೆ, ವಿಜ್ಞಾನಿಗಳು.

ಎತ್ತರ ಮಾತ್ರವಲ್ಲ, ವ್ಯಾಪ್ತಿಯೂ ಕಡಿಮೆಯೇನಲ್ಲ. ಹಿಮವಂತನ ಹರಹು: ೨೫೦೦ ಕಿಲೋ ಮೀಟರ್! ಆಶ್ಚರ್ಯವೇನು?: ಗಂಗೆಯ ಹರಿವು ಸಹ ಅಂತೆಯೇ!

ಹಿಮವತ್ಪರ್ವತದಿಂದ ಹರಿಯುವ ಗಂಗೆಯು ನೀರು ಹೌದೇ: ಆದರದು ಕೇವಲ-ಜಲವಲ್ಲ, ಪವಿತ್ರವಾದ ನದಿಯೆಂಬುದನ್ನು ಸಹಸ್ರಾರು ವರ್ಷಗಳಿಂದಲೂ ನಮ್ಮ ಪರಂಪರೆ ಕಂಡುಕೊಂಡಿದೆ. ಅತ್ಯಪೂರ್ವವಾದ ಔಷಧೀಯ-ಗುಣಗಳನ್ನು ಆಧುನಿಕ-ವಿಜ್ಞಾನಿಗಳು ಅದರಲ್ಲಿ ಕಂಡುಕೊಂಡಿರುವುದೂ ಉಂಟು.

ಅಷ್ಟೇ ಅಲ್ಲ. ಇಲ್ಲಿ ಹರಿಯುವುದು ಜ್ಞಾನಗಂಗೆಯೇ ಸರಿ: ಗಂಗಾತಟದಲ್ಲಿಯ ಕಾಶಿಯು ಜ್ಞಾನ-ನಗರಿಯೆಂದೇ ಪ್ರಸಿದ್ಧ – ವೇದಕಾಲದಿಂದಲೂ! ವೇದವೆಂಬ ಪದದ ಅರ್ಥವಾದರೂ ಜ್ಞಾನವೆಂದೇ ತಾನೆ? ಜ್ಞಾನ-ದಾತನನ್ನೇ ಗುರುವೆನ್ನುವುದಾದರೆ, ಭಾರತವನ್ನು  ವಿಶ್ವಗುರುವೆನ್ನಲು ಅಳುಕೇ ಅಂಜಿಕೆಯೇ?

ಈ ತುಹಿನಗಿರಿ-ತುಂಗತರಂಗೆಗಳ ಗರಿಮೆ-ಹಿರಿಮೆಗಳನ್ನು ಕೃಷ್ಣನೂ ಕೊಂಡಾಡಿರುವನೇ: "ಸ್ಥಾವರಗಳಲ್ಲಿ ನಾನು ಹಿಮಾಲಯ, ಸ್ರೋತಸ್ಸುಗಳಲ್ಲಿ ಜಾಹ್ನವಿ” (ಗೀತೆ). ಯಾವುದು ಸ್ಥಾಯಿಯಾಗಿರುವುದೋ ಅದುವೇ ಸ್ಥಾವರ. ಹೀಗಾಗಿ ಚಿರಕಾಲ ಉಳಿಯುವ ಪರ್ವತವೇ ಅದು. ಹಿಮವಂತನೆಂತೋ ಭಾರತೀಯ-ಸಂಸ್ಕೃತಿಯೂ ಅಂತೆಯೇ: ಚಿರಸ್ಥಾಯಿಯೇ.

ಎಂದೇ ಈ ಸಂಸ್ಕೃತಿಯ ಸಹಜ-ಭವ್ಯತೆಯನ್ನು ಬಿಂಬಿಸಹೊರಟ ಕಾಳಿದಾಸನು ತನ್ನ ಕುಮಾರಸಂಭವ-ಕಾವ್ಯವನ್ನು ಆರಂಭಿಸಿರುವುದು ವರಗಿರಿಯ ವರ್ಣನೆಯಿಂದಲೇ. ಏಕೆ? ಈ ತುಷಾರಾದ್ರಿಯ ತುಂಗತ್ವವು ಬರೀ ಭೌತಿಕವಾದುದಲ್ಲ. ಎಂದೇ, ಅಲ್ಲಿಯ ಪ್ರಥಮಶ್ಲೋಕದಲ್ಲೇ, ಅದನ್ನು ದೇವತಾತ್ಮಾ ಎಂದಿರುವುದು.

ಪರ್ವತವೆಂದರೆ ಶಿಲಾರಾಶಿ ಎಂದುಕೊಂಡು, ಇದೊಂದು ಜಡವಸ್ತುವಷ್ಟೆ - ಎಂದು ಮೂಗುಮುರಿದೀರಿ – ಎಂದೆಚ್ಚರಿಸಲೆಂದೇ ಮೊದಲೇ “ದೇವತಾತ್ಮಾ” ಎಂದು ಕವಿಯು ವಿಶೇಷಿಸಿರುವುದು! ಚೈತನ್ಯ-ಶಕ್ತಿಯಲ್ಲಿ ಸಸ್ಯಗಳಿಗಿಂತ ಪ್ರಾಣಿಗಳೂ, ಪ್ರಾಣಿಗಳಿಗಿಂತ ಮನುಷ್ಯರೂ, ಮನುಷ್ಯರಿಗಿಂತ ದೇವತೆಗಳೂ ಮಿಗಿಲಲ್ಲವೇ? ಹೀಗಾಗಿ, ಹಿಮಾಲಯವೆಂದರೆ ಚೇತನತಮವೆನಿಸುವ ದೇವತಾತ್ಮನೇ! ಜೊತೆಗೇ, ನಾನಾ-ದೇವತೆಗಳ ಬೀಡೂ ಆಗಿರುವ ದೇವಭೂಮಿಯೇ ಹಿಮಾಲಯ.

ಸ್ಥಾವರವಾದುದೆಂದರೆ ಸ್ಥಿರವಾದುದು. ಸ್ಥಿರವಾದುದರಲ್ಲಿ ಸ್ಥೈರ್ಯವಿರುತ್ತದೆ. ಧೈರ್ಯ-ಸ್ಥೈರ್ಯಗಳಲ್ಲಿ ಭಾವದ ನಂಟುಂಟು. ಎಂದೇ ರಾಮಾಯಣದಲ್ಲಿ "ಧೈರ್ಯದಲ್ಲಿ ಹಿಮವಂತನಂತೆ!" ಎಂದು ರಾಮನನ್ನು ಚಿತ್ರಿಸಿರುವುದು. ಕಂಗೆಡಿಸುವ ಪ್ರಸಂಗಗಳಲ್ಲೂ ನಿರ್ವಿಕಾರನಾಗಿರುವವನೇ ಧೀರ – ಎಂದಿದ್ದಾನೆ, ಕಾಳಿದಾಸನೇ.

ಹಿಮವತ್-ಪರ್ವತದ ಈಚಿನ ಭಾಗವನ್ನೇ ಭಾರತದ ಸೀಮೆಯೆಂದು ಭಾವಿಸುವವರುಂಟು – ಪುರಾಣಗಳ ಮಾತನ್ನೋ ಕೌಟಲ್ಯನ ಮಾತನ್ನೋ ತಪ್ಪಾಗಿ ಅರ್ಥೈಸಿಕೊಂಡು. ಭಾರತದ ವ್ಯಾಪ್ತಿಯು ಹಿಮಾಲಯದಾಚೆಗೂ ಇತ್ತು – ಎಂಬುದನ್ನು ಗುರೂಜಿ ಗೋಳ್ವಲ್ಕರರು ಎಚ್ಚರಿಸಿರುವುದು ಅತ್ಯಂತ-ಯುಕ್ತವೇ ಆಗಿದೆ: ಉದಾಹರಣೆಗೆ ಇಂದು ಚೀನದೇಶದೊಳಗೆ ಸೇರಿಹೋಗಿರುವ ಮಾನಸ-ಸರೋವರಕ್ಕೆ ಹೆಸರು ಬಂದಿರುವುದು ಭಾರತದಿಂದಲೇ ಅಲ್ಲವೇ? ಋಷಿಗಳಿತ್ತ ಹೆಸರಲ್ಲವೇ ಅದು?

ಹಿಮಕ್ಕೆ ಆಲಯವೆನಿಸುವ ಹಿಮಾಲಯವು ತಂಪಿನ ತಾಣವೇ.  ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು "ಹಿಮಾಲಯವೆಲ್ಲಾ ನನ್ನ ತಪೋಭೂಮಿಯಪ್ಪಾ!" ಎಂದು ಆದರಾತಿಶಯದಿಂದಲೂ ಪ್ರೀತ್ಯತಿಶಯದಿಂದಲೂ ಉದ್ಗರಿಸಿರುವುದುಂಟು: ತಪಸ್ಸಾಧನೆಗೆಂದೇ ಸೃಷ್ಟವಾದ ಭೂಮಿಯದು! ಗೌರಿಯೂ ಶಂಕರನೂ ಅನೇಕ-ಮಹಾಮುನಿಗಳೂ ಅಲ್ಲಲ್ಲವೇ ತಪಸ್ಸನ್ನಾಚರಿಸಿದುದು? ಮನಸ್ಸು ಸಹಜವಾಗಿಯೇ ಶಾಂತವಾಗಿ ಒಳಮುಖವಾಗಬಲ್ಲ ಎಡೆಯೇ ಅದು. ಅಲ್ಲದೆ, ಅಲ್ಲಿಯ ಶೀತಲತೆಯೂ ಶುಭ್ರತೆಯೂ ತಾಪವನ್ನೂ ತಮಸ್ಸನ್ನೂ ಕಳೆಯುವುದರ ಸೂಚಕಗಳೇ ಸರಿ.

ಆಧುನಿಕ ವಿಜ್ಞಾನ-ನಾಗರಿಕತೆಗಳು ನಾನಾವಿಧವಾದ ಸೌಕರ್ಯಗಳನ್ನು ಒದಗಿಸಿಕೊಡುತ್ತಿರಬಹುದು. ಆದರೆ ಒಳಗೂ ಹೊರಗೂ ತಾಪ-ಕ್ಷೋಭೆಗಳೇ ತುಂಬಿರುವ ಇಂದು, ನೆಮ್ಮದಿಯ ಜೀವನಕ್ಕೆ ಉಪಕಾರಿಯಾದುದೆಂದರೆ ಒಳ ಅರಿವು-ತಂಪುಗಳೇ ಸರಿ.

ಎತ್ತರ-ಬಿತ್ತರಗಳಲ್ಲಿ ಅಸಾಧಾರಣವೆಂದೇ, ಹಿಮಾಲಯವೆಂದರೆ ಭೂಮಿಗೇ ಅಳತೆಗೋಲಿನಂತೆ – ಎಂದು ಕಾಳಿದಾಸನೆಂದಿರುವುದು. ಅದರ ಅರ್ಥವು ಭೌತಿಕಕ್ಕೆ ಸೀಮಿತವಲ್ಲ: ಚಿರ-ಪುರಾತನವಾದರೂ ನಿತ್ಯ-ನೂತನವಾದ ಭಾರತೀಯ-ಸಂಸ್ಕೃತಿಯೇ ಭೂಮಿಯ ಮೇಲಿನೆಲ್ಲ ಸಂಸ್ಕೃತಿಗಳಿಗೆ ಅಳತೆಗೋಲು - ಎಂಬುದನ್ನು ಸೂಚ್ಯವಾಗಿ ಹೇಳಿದ್ದಾನೆ, ವರಕವಿ!

ನೀಲ-ಸಿಂಧು-ಜಲ-ಧೌತ-ಚರಣ-ತಲಳೂ ಹಿಮಾಲಯ-ಕಿರೀಟಿನಿಯೂ ಆದ ಭಾರತಾಂಬೆಗೆ ಜಯವೆನ್ನಿ! ವಂದೇ ಮಾತರಂ!

ಸೂಚನೆ: 15/08//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 112 ಯಾರಿಗೆ ಅಗ್ರಪೂಜೆ? ಭೀಷ್ಮರ ಸಲಹೆ (Astakshara 112)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png


ಯಾರಿಗೆ ಅಗ್ರಪೂಜೆ? ಭೀಷ್ಮರ ಸಲಹೆ

ರಾಜಸೂಯವು ಮುಗಿದಿದೆ. ಸಾಧಾರಣವಾಗಿಯಷ್ಟೆ ತೋರುವ ಕೃಷ್ಣನ ವಿಷಯದಲ್ಲಿ ನಾರದರು ಅಚ್ಚರಿಪಡುತ್ತಿದ್ದಾರೆ:

ಇಂದ್ರಾದಿದೇವತೆಗಳೂ ಸಹ ಯಾವನ ಬಾಹುಬಲವನ್ನು ಉಪಾಸಿಸುತ್ತಾರೋ ಅಂತಹ ಶತ್ರು-ಮರ್ದಕನಾದ ಹರಿಯು ಮನುಷ್ಯನೊಬ್ಬನಂತೆ ಇಲ್ಲಿ ಕುಳಿತಿದ್ದಾನೆ. ಏನಿದಾಶ್ಚರ್ಯ! ಸ್ವಯಂಭುವಾದ ಈ ಮಹದ್ಭೂತವೆನಿಸುವ ವಿಷ್ಣುವು ಈ ಪರಿಯಲ್ಲಿ ಬಲ-ಸಮೃದ್ಧವಾದ ಕ್ಷತ್ರಿಯ-ಸಮೂಹವನ್ನು ತಾನೇ ನಿಗ್ರಹಿಸುವವನಿರುವನಲ್ಲ!”

ಸ್ವತಃ ಧರ್ಮಜ್ಞರಲ್ಲಿ ಶ್ರೇಷ್ಠರಾದ ನಾರದರು ಹರಿಧ್ಯಾನವನ್ನು ಮಾಡುತ್ತಾ ಈ ಪರಿಯಾಗಿ ಚಿಂತಿಸುತ್ತಿದ್ದರು, ಧರ್ಮರಾಜನ ಈ ಮಹಾಯಜ್ಞದ ಸಂದರ್ಭದಲ್ಲಿ.

ಅಷ್ಟರಲ್ಲಿ ಭೀಷ್ಮರು ಧರ್ಮರಾಜನಾದ ಯುಧಿಷ್ಠಿರನಿಗೆ ಈ ರೀತಿಯಾಗಿ ಹೇಳಿದರು - "ರಾಜನೇ, ಇಲ್ಲಿ ನೆರೆದಿರುವ ರಾಜರುಗಳಿಗೆ ಯಥೋಚಿತವಾದ ಅರ್ಹಣವನ್ನು, ಎಂದರೆ ಸತ್ಕಾರವನ್ನು, ಮಾಡಪ್ಪಾ - ಎಂದು.

ಆರು ಮಂದಿಯನ್ನು ಅರ್ಘ್ಯಾರ್ಹರೆನ್ನುತ್ತಾರೆ. ಅರ್ಘ್ಯಾರ್ಹರೆಂದರೆ ಅರ್ಘ್ಯಕ್ಕೆ ಯೋಗ್ಯರು. ಅವರು ಯಾರೆಂದರೆ: ಆಚಾರ್ಯ, ಋತ್ವಿಕ್, ಸಂಬಂಧಿ, ಸ್ನಾತಕ, ಪ್ರಿಯಮಿತ್ರ ಹಾಗೂ ರಾಜ. ಇವರುಗಳು ಒಂದು ವರ್ಷ ಕಳೆದ ನಂತರ ಬಂದವರಾದಲ್ಲಿ, ಇವರಿಗೆ ಅರ್ಘ್ಯವನ್ನು ತರತಕ್ಕದ್ದು - ಎಂಬುದಾಗಿ ಹಿರಿಯರ ಮಾತಿದೆ.

“ಇದೋ ಇಲ್ಲಿರುವ ಅರಸರೂ ದೀರ್ಘಸಮಯದ ಬಳಿಕವೇ ಇಲ್ಲಿಗೆ ಬಂದಿರುವರು. ರಾಜನೇ, ಇಲ್ಲಿರುವ ಒಬ್ಬೊಬ್ಬರಿಗೂ ಅರ್ಘ್ಯವನ್ನು ನೀಡುವುದಾಗಲಿ. ಮತ್ತು ಅವರಲ್ಲಿ ವರಿಷ್ಠರಾದವರಿಗೆ ಎಂದರೆ ಅತ್ಯಂತ ಶ್ರೇಷ್ಠರಾದವರಿಗೆ ಹಾಗೂ ಸಮರ್ಥರೆನಿಸಿಕೊಳ್ಳುವವರಿಗೆ ಮೊದಲು ಅರ್ಘ್ಯವನ್ನು ನೀಡೋಣವಾಗಲಿ" ಎಂದರು.

ಭೀಷ್ಮರು ಹಾಗೆ ಹೇಳಲು, ಯುಧಿಷ್ಠಿರನು ಅವರನ್ನೇ ಕೇಳಿದನು: "ಇಲ್ಲಿ ನೆರೆದಿರುವ ಅರಸರಲ್ಲಿ ಯಾರಿಗೆ ಪ್ರಥಮವಾದ ಅರ್ಘ್ಯವನ್ನು ಸಲ್ಲಿಸಬಹುದು? - ಎಂಬುದನ್ನು ತಾವೇ ಹೇಳಬೇಕು".

ಮಹಾಪರಾಕ್ರಮಿಯೂ ಶಂತನುಪುತ್ರನೂ ಆದ ಭೀಷ್ಮರು, "ಈ ಭೂಮಂಡಲದಲ್ಲಿ ಪೂಜೆಗೆ ಅತ್ಯಂತ ಯೋಗ್ಯನಾದವನೆಂದರೆ ಶ್ರೀಕೃಷ್ಣನೇ ಸರಿ" ಎಂಬುದಾಗಿ ತೀರ್ಮಾನಿಸಿದರು.

ತೇಜಸ್ಸು, ಬಲ, ಪರಾಕ್ರಮ - ಈ ವಿಷಯಗಳಲ್ಲಿ ಇಲ್ಲಿ ನೆರೆದಿರುವವರೆಲ್ಲರ ನಡುವೆ ಈತನೇ ಬೆಳಗುವನು - ಜ್ಯೋತಿಸ್ಸುಗಳ ನಡುವೆ, ಎಂದರೆ ಗ್ರಹ-ನಕ್ಷತ್ರಗಳ ನಡುವೆ, ಹೇಗೆ ಸೂರ್ಯನು ಪ್ರಕಾಶಿಸುವನೋ ಹಾಗೆ. ಅಂಧಕಾರವಿರುವೆಡೆ ಸೂರ್ಯನು ಬಂದರೆ ಹೇಗೋ ಹಾಗೆ, ಗಾಳಿಯೇ ಆಡದೆಡೆ ವಾಯುವು ಬಂದರೆ ಹೇಗೋ ಹಾಗೆಯೇ, ಶ್ರೀಕೃಷ್ಣನ ಆಗಮನದಿಂದ ಸಭೆಗೆ ಬೆಳಕಾಗಿದೆ, ಜೊತೆಗೇ ಆಹ್ಲಾದವಾಗಿದೆ" ಎಂದರು.

ಹೀಗೆ ಭೀಷ್ಮರು ಅನುಜ್ಞೆಯನ್ನೀಯುತ್ತಲೇ, ಪ್ರತಾಪಶಾಲಿಯಾದ ಸಹದೇವನು, ಶ್ರೀಕೃಷ್ಣನಿಗೆಂದು ಉತ್ತಮವಾದ ಅರ್ಘ್ಯವನ್ನು ತಂದನು; ಮತ್ತು ಕೃಷ್ಣನಾದರೂ ಸಹ ಶಾಸ್ತ್ರಪ್ರೋಕ್ತವಾದ ಕರ್ಮಗಳಿಗನುಸಾರವಾಗಿ ಆ ಪೂಜೆಯನ್ನು ಸ್ವೀಕರಿಸಿದನು.

ಆದರೆ ಶಿಶುಪಾಲನಿಗೆ ಮಾತ್ರ, ವಾಸುದೇವನಿಗೆ ಸಂದ ಆ ಪೂಜೆಯು ಸಹನೆಯಾಗಲಿಲ್ಲ. ಆತನಂತೂ ಭೀಷ್ಮನನ್ನೂ ಧರ್ಮರಾಜನನ್ನೂ ಸಭೆಯಲ್ಲೇ ನಿಂದಿಸಿದನು. ಚೇದಿರಾಜನಾದ ಆತನು ವಾಸುದೇವನ ವಿಷಯದಲ್ಲಿ ತನ್ನ ಆಕ್ಷೇಪಗಳನ್ನು ಎತ್ತಿದನು. ಹೀಗೆ:

“ಮಹಾತ್ಮರಾದ ಭೂಪತಿಗಳು ಇಲ್ಲಿರುವಾಗ, ತಾನೇನೋ ರಾಜನೆಂಬಂತೆ ಇರುವ, ವೃಷ್ಣಿವಂಶದ ಈ ಕೃಷ್ಣನು, ರಾಜೋಚಿತವಾದ ಸತ್ಕಾರಗಳಿಗೆ ಅರ್ಹನಾಗಲಾರನು. ಮಹಾತ್ಮರಾದ ಪಾಂಡವರಿಗೆ ಈ ನಡೆಯು ಯುಕ್ತವಾಗದು. ಅಯ್ಯಾ ಪಾಂಡುಕುಮಾರನೇ, ಅದೇನೋ ಕಾಮನೆಯಿಂದ ನೀನು ಪುಂಡರೀಕಾಕ್ಷನಾದ ಕೃಷ್ಣನನ್ನು ಪೂಜಿಸುತ್ತಿರುವೆ.

ಪಾಂಡುಕುಮಾರರೇ, ನೀವಿನ್ನೂ ಬಾಲಕರು. ಧರ್ಮವು ಸೂಕ್ಷ್ಮವಾದುದು, ನೀವದನ್ನು ಅರಿತಿಲ್ಲ. ಮುದುಕನಾದ ಈ ಭೀಷ್ಮನಿಗೆ ಸ್ಮೃತಿ ಜಾರಿದೆ. ಅವನ ನೋಟವೂ ಅಲ್ಪವಾಗಿದೆ.


ಸೂಚನೆ :  16/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 79 (Prasnottara Ratnamalike 79)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೭೯. ಯಾರು ಶತ್ರು?

ಉತ್ತರ- ಕಾಮ.

ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಗೆಳೆಂಬ ಆಂತರಿಕ ಅರಿಷಡ್ವರ್ಗಗಳಲ್ಲಿ ಮೊದಲನೆಯದೇ ಕಾಮ. ಕಾಮವು ಉಳಿದ ಅಂತಃಶತ್ರುಗಳಿಗೆ ಮೂಲ ಎಂದರ್ಥ. ಕ್ರೋಧ, ಲೋಭ ಮೊದಲಾದವುಗಳು ಉತ್ಪತ್ತಿಯಾಗಬೇಕಾದರೆ ಅದಕ್ಕೆ ಕಾಮವೇ ನಿದಾನ - ಆದಿಕಾರಣ. ಕಾಮದ ಮುಂದಿನ ವಿಕಾರಗಳೇ ಉಳಿದ ಅಂತಃಶತ್ರುಗಳು. ಹಾಗಾಗಿ ಕಾಮವನ್ನು ಮೊದಲನೆಯದಾಗಿ ಹೇಳಲಾಗಿದೆ. ಕಾಮವು ಎರಡು ವಿಧ. ಧರ್ಮ, ಅರ್ಥ.ಕಾಮ, ಮೋಕ್ಷ ಎಂಬ ಪುರುಷಾರ್ಥಗಳಲ್ಲಿ ಬರುವ ಕಾಮ ಒಂದಾದರೆ, ಅರಿಷಡ್ವವರ್ಗಗಳಲ್ಲಿ ಮೊದಲನೆಯದಾಗಿ ಬರುವುದು ಮತ್ತೊಂದು. ಇವೆರಡರಲ್ಲಿ ಪುರುಷಾರ್ಥಕ್ಕೆ ಕಾರಣವಾದ ಕಾಮ ಅತ್ಯಂತ ಅಗತ್ಯ ಎಂಬುದಾಗಿ ಗೀತೆಯಲ್ಲಿ ಶ್ರೀಕೃಷ್ಣನು ಅಪ್ಪಣೆ ಕೊಡಿಸುತ್ತಾನೆ. “ಧರ್ಮಾವಿರುದ್ಧೋ ಭೂತೇಷು ಕಾಮಃ ಅಸ್ಮಿ ಭರತರ್ಷಭ!” ಎಂಬುದಾಗಿ. ಅಂದರೆ ಧರ್ಮದ ಚೌಕಟ್ಟಿನಲ್ಲಿ ಬರುವ ಈ ಕಾಮವು ಅತ್ಯಂತ ಶ್ರೇಯಸ್ಕರವಾದದ್ದು ಎಂದರ್ಥ. ಕಾಮ ಎಂದರೆ ಬಯಕೆ. ಇಂತಹ ಬಯಕೆಯು ಒಳ್ಳೆಯದು. ಏಕೆಂದರೆ ಇದು ಧರ್ಮದ ಹಿನ್ನೆಲೆಯಿಂದ ಬಂದದ್ದು. ಅದರ ಪರಿಣಾಮವೂ ಒಳ್ಳೇಯದೇ ಆಗಿರುತ್ತದೆ. ಯಾವುದು ಪರಿಣಾಮದಲ್ಲಿ ಒಳ್ಳೆಯದೋ ಅದು ಗ್ರಾಹ್ಯವಾದುದು ಎಂದರ್ಥವಷ್ಟೇ!. ಇಂತಹ ಬಯಕೆಗೆ ಬೆಲೆ ಬರಲು ಇರುವ ಅತ್ಯಂತ ಮುಖ್ಯವಾದ ಕಾರಣವೆಂದರೆ ಜ್ಞಾನ. ನಿಜವಾದ ಅರಿವಿನಿಂದ ಬರುವ ಬಯಕೆಗೆ ಬೆಲೆ ಉಂಟು. ಈ ಬಯಕೆಯನ್ನೇ ಧರ್ಮಕ್ಕೆ ಅವಿರುದ್ಧವಾದ, ಮೋಕ್ಷಕ್ಕೆ ಕಾರಣೀಭೂತವಾದ ಕಾಮ ಎಂಬುದಾಗಿ ಕರೆಯಲಾಗಿದೆ. ಆದರೆ ಇಲ್ಲಿ ಕೇಳಿದ ಪ್ರಶ್ನೆ ಈ ಕಾಮದ ವಿಷಯಕವಾಗಿ ಕೇಳಿದ್ದಲ್ಲ. ಶತ್ರು ರೂಪವಾದ ಕಾಮದ ಬಗ್ಗೆ. ಶತ್ರು ಎಂಬುದಾಗಿ ಪರಿಗಣಿತವಾದ ಕಾಮ. ಬಾಹ್ಯ ಮತ್ತು ಆಂತರ ಎಂಬುದಾಗಿ ಎರಡು ವಿಧವಾದ ಶತ್ರುವನ್ನು ಹೇಳಲಾಗುತ್ತದೆ. ಬಾಹ್ಯ ಶತ್ರುಗಳಿಗೂ ಕಾರಣವಾದದ್ದು ಈ ಅಂತಃಶತ್ರುವಾದ ಕಾಮವೇ ಆಗಿದೆ. ‘ಕಾಮಃ ಏಷಃ ಕ್ರೋಧಃ ಏಷಃ ರಜೋಗುಣಸಮುದ್ಭವಃ’ ಎಂಬುದಾಗಿ ಗೀತೆಯಲ್ಲಿ ಹೇಳುವಂತೆ ಈ ಕಾಮವು ರಜೋಗುಣದಿಂದ ಹುಟ್ಟುತ್ತದೆ. ಆದ್ದರಿಂದ ಇದನ್ನು ಕೆಡುಕು ಎನ್ನಲಾಗಿದೆ. ಮೂಲಭೂತವಾಗಿ ಸತ್ತ್ವಗುಣದಿಂದ ಉತ್ಪನ್ನವಾದ ಯಾವ ಜ್ಞಾನ ಉಂಟೋ, ಅದರ ವಿಸ್ತಾರವಾದ ಬಯಕೆ ಯಾವುದುಂಟೋ, ಅದು ಅತ್ಯಂತ ಪೂಜ್ಯ. ರಜೋಗುಣದಿಂದ ಉತ್ಪನ್ನವಾದ ಅಂದರೆ ಅಜ್ಞಾನದಿಂದ ಬರುವ ಯಾವ ಬಯಕೆ ಉಂಟೋ ಅದು ತ್ಯಾಜ್ಯ ಎಂಬುದಾಗಿ ಕರೆಯಬಹುದು. ಹಾಗಾಗಿ ಇಂತಹ ಬಯಕೆಯು ಅಂತಃಶತ್ರುವಾಗಿ ಪರಿಗಣಿತವಾಗುತ್ತದೆ. ಅದು ಹೇಗೆ ಶತ್ರುವಾಗುತ್ತದೆ? ಎಂಬುದು ಇಲ್ಲಿ ವಿಚಾರಣೀಯ.


ನಮಗೆ ಯಾವುದಾದರೂ ಒಂದು ವಸ್ತು ಅಥವಾ ವಿಷಯವು ಬೇಕೇ ಬೇಕು ಎಂದು ಅನಿಸಿದಾಗ ಅದನ್ನು ನಾವು ನಮ್ಮದಾಗಿಸಿಕೊಳ್ಳಲು ಬಯಸುತ್ತೇವೆ. ಅದಕ್ಕಾಗಿ ನಮ್ಮ ಪ್ರಯತ್ನವೂ ಕೂಡ ಸಾಗುತ್ತದೆ. ಯಾವಾಗ ಆ ಬಯಸಿದ ವಸ್ತು ಅಥವಾ ವಿಷಯವು ಸಿಗುವುದಿಲ್ಲವೋ, ಆಗ ಆ ವಸ್ತುವಿನ ಸ್ವಾಮಿಯಲ್ಲಿ ದ್ವೇಷರೂಪವಾಗಿ ಬದಲಾಗುತ್ತದೆ. ಅಲ್ಲಿಂದ ಆ ವಿಷಯದ ಹಿಂದಿರುವ ವ್ಯಕ್ತಿ ಅಥವಾ ಇನ್ನಾವುದೋ ಶಕ್ತಿಯ ಬಗ್ಗೆ ನಮಗೆ ಇಲ್ಲಸಲ್ಲದ ದ್ವೇಷಭಾವ ಆರಂಭವಾಗುತ್ತದೆ. ಅಂದರೆ ಮೊದಲು ಹುಟ್ಟಿದ ಕಾಮವೇ ತದನಂತರದಲ್ಲಿ ಶತ್ರುವಾಗಿ ಬದಲಾದದ್ದು ಹೀಗೆ. ಅದನ್ನೇ ಇಲ್ಲಿ ಕಾಮವು ಶತ್ರು ಎಂಬುದಾಗಿ ಹೇಳಲಾಗಿದೆ. 


ಸೂಚನೆ :  16/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, August 11, 2026

ದಾನಿಯ ಆದರ್ಶ ಮನೋಧರ್ಮ (Daniya Adarsha Manodharma)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)

Screenshot 2026-08-11 080825.png

ವೈದಿಕಕಾಲದ ಕಥೆ.  ಜಾನಶ್ರುತಿ ಎಂಬ ರಾಜನು ಮಹಾದಾನಿಯಾಗಿದ್ದನು. ತನ್ನ ರಾಜ್ಯದಲ್ಲಿ ಎಲ್ಲರಿಗೂ ಆಹಾರವನ್ನು ತಯಾರಿಸಿ ಉಚಿತವಾಗಿ ನೀಡುತ್ತಿದ್ದ ಕಾರಣ , ತಾನು ತನ್ನಂತಹ ಮಹಾದಾನಿ ಯಾರೂ ಇಲ್ಲವೆಂದು ನಂಬಿದ್ದನು. ಹಾಗೂ ಇದರಂದ ಬಂದ ಕೀರ್ತಿಯಷ್ಟೇ ಜೀವನದ ಧ್ಯೇಯವೆಂದು ದೃಢವಾಗಿ ನಂಬಿದ್ದನು.  ಅವನು ಪಕ್ಷಿಗಳ ಮತ್ತು ಪ್ರಾಣಿಗಳ ಭಾಷೆಯನ್ನೂ ಅರಿತಿದ್ದನು.    ಒಂದು ಸಂಜೆ ಅವನು ಪ್ರಕೃತಿಯ ಸೊಗಸಾದ ದೃಶ್ಯವನ್ನು ತನ್ನ ಅರಮನೆಯ ಮೇಲುಮನೆಯಿಂದ ಆಸ್ವಾದಿಸುತ್ತಿದ್ದನು. ಆಗ ಎರಡು ಹಾರುತ್ತಿರುವ ಹಂಸಗಳು ಪರಸ್ಪರ ಮಾತನಾಡುತ್ತಿರುವದನ್ನು ಕಂಡನು. ಅವುಗಳಲ್ಲಿ ಒಂದು ಹಂಸವು ಹೇಳಿತು, “ನೀನು ರಾಜ ಜಾನಶ್ರುತಿಯ ಕೀರ್ತಿಯ ಬೆಳಕಿನ ತೀವ್ರತೆಯನ್ನು ದಾಟುವಾಗ ಜಾಗರೂಕನಾಗಿರು , ಇಲ್ಲವಾದರೆ ಅದರ ಕೀರ್ತಿಯ ಬೆಳಕಿನಿಂದ  ನೀನು ಸುಟ್ಟುಹೋಗುತ್ತೀಯೆ. ಇಂದು ಅವನಂತ ಮಹಾನುಭಾವನು ಯಾರೂ ಇಲ್ಲ, ಅವನು ದಾನಿಗಳಲ್ಲಿ ಶ್ರೇಷ್ಠ.”  ಇದಕ್ಕೆ ಉತ್ತರವಾಗಿ ಮತ್ತೊಂದು ಹಂಸವು ಹೇಳಿತು, “ಓ ಮಿತ್ರ, ರಾಜ ಜಾನಶ್ರುತಿ, ರೈಕ್ವ ಎಂಬ ಆತ್ಮಜ್ಞಾನಿ ಹಾಗೂ ರಥಚಲಿಸುವವನಿಗಿಂತ ದೊಡ್ಡವನಾ? ರಾಜನಿಗೆ ಕೇವಲ ಹೆಸರು ಮತ್ತು ಕೀರ್ತಿ ಮಾತ್ರ  ಜೀವನದ ಪರಮಧ್ಯೇಯ ಹಾಗೂ ಅದಕ್ಕಾಗಿ ತೀವ್ರವಾಗಿ ಹಂಬಲಿಸುತ್ತಾನೆ.  ಮೊದಲ ಹಂಸವು ಆಶ್ಚರ್ಯದಿಂದ ಕೇಳಿತು, “ಈ ರೈಕ್ವ ಯಾರು? ಅವನು ಕೇವಲ ರಥಚಲಿಸುವವ ಆತ್ಮಜ್ಞಾನಿಯಾದರೂ ಹೇಗೆ ಜಾನಶ್ರುತಿಗೆ  ಹೋಲಿಸಿದರೆ ದೊಡ್ಡವನಾಗಿದ್ದಾನೆ?” ಹೀಗೆ ಹೇಳುತ್ತಾ ಆ ಹಂಸಗಳು ಹಾರಿಹೋದವು.   

ಈ ಸಂಭಾಷಣೆಯನ್ನು ಕೇಳಿದ ರಾಜನು ರೈಕ್ವನನ್ನು ಕಂಡು ನಿಜವಾದ ಶಾಂತಿಯನ್ನು ಅನುಭವಿಸಲು ಸಂಕಲ್ಪಿಸಿ,  ತನ್ನ ಸೇವಕನಿಂದ ರೈಕ್ವನನ್ನು ಹುಡಿಕಿಸಿ, ಆತನಿರುವ ಎಡೆಯನ್ನು ತಿಳಿದುಕೊಂಡನು.    ಜಾನಶ್ರುತಿ  ದೊಡ್ಡ ಸಿದ್ಧತೆಯನ್ನು ಮಾಡಿಕೊಂಡು ರೈಕ್ವನ ಬಳಿ ಬಂದು ಆರು ನೂರು ಹಸುಗಳು, ಚಿನ್ನದ ಸರ, ಮತ್ತು ಹೇಸರುಗತ್ತೆ ಎಳೆಯುವ ಗಾಡಿಯನ್ನು ರೈಕ್ವನ ಪಾದಗಳಿಗೆ ಅರ್ಪಿಸಿ,ಆಧ್ಯಾತ್ಮಿಕ ಜ್ಞಾನವನ್ನು ದಯಪಾಲಿಸೆಂದು ಪ್ರಾರ್ಥಿಸಿದನು. ರೈಕ್ವಾ ನಕ್ಕು ಹೇಳಿದನು, “ ಇವೆಲ್ಲವನ್ನೂ ಹಿಂತೆಗೆದುಕೊಳ್ಳಿ! ಆತ್ಮಜ್ಞಾನವು ಮಾರಾಟಕ್ಕಿಲ್ಲ !” ಜಾನಶ್ರುತಿ ಹಿಂತಿರುಗಿ, ಮತ್ತೊಂದು ಸಮಯದಲ್ಲಿ ಸಾವಿರ ಹಸುಗಳು, ಚಿನ್ನದ ಸರ, ಹೇಸರುಗತ್ತೆ ಎಳೆಯುವ ಗಾಡಿ ಮತ್ತು ಅವನ ಸ್ವಂತ ಪುತ್ರಿಯನ್ನು ರೈಕ್ವನಿಗೆ ಪತ್ನಿಯಾಗಿ ನೀಡಲು ಬಂದನು. ಅವನು ಇವುಗಳನ್ನು ಅರ್ಪಿಸಿ, ಆತ್ಮಜ್ಞಾನದ ಗಹನವಾದ ಸತ್ಯಗಳನ್ನು ದಯಪಾಲಿಸಲು ಮತ್ತೇ ಪ್ರಾರ್ಥಿಸಿದನು. ರೈಕ್ವಾ ಈ ದಾನಗಳಿಗೆ ಹಾತೊರೆಯಲಿಲ್ಲ. ಆದರೆ ಜಾನಶ್ರುತಿಯ ಛಲ, ಪ್ರಾಮಾಣಿಕತೆ ಹಾಗೂ ಗುರುವಿನಲ್ಲಿದ್ದ  ಅಚಲವಾದ ಶ್ರದ್ಧೆಯನ್ನು ನೋಡಿ ಈತ ಶಿಷ್ಯನಾಗಲು ಅರ್ಹನೆಂದು  ರೈಕ್ವನು ಆತ್ಮಜ್ಞಾನವನ್ನು ಸಂವರ್ಗವಿದ್ಯೆಯ ಮೂಲಕ ಉಪದೇಶಮಾಡಲು ಉದ್ಯುಕ್ತನಾದನು. ಗೀತಾಚಾರ್ಯನ ವಾಣಿಯಂತೆ (೪.೩೪)ಜ್ಞಾನವನ್ನು, ಗುರುಗಳ ಸೇವೆಯಿಂದ, ಆತ್ಮಸಮರ್ಪಣೆಯ ಭಾವದಿಂದ ಪಡೆಯಬೇಕು.

ಆರ್ಷಸಾಹಿತ್ಯದಲ್ಲಿ ಸಂಪತ್ತನ್ನು ಮತ್ತು ಕೀರ್ತಿಗಳಿಸುವುದು ಅನಾದರ್ಶವೆಂದು ಪರಿಗಣಿಸುವುದಿಲ್ಲ.  ಇವೆರಡನ್ನು ಅರ್ಥ ಹಾಗೂ ಕಾಮವೆಂದು ಪರಿಗಣಿಸುತ್ತಾ,. ಧರ್ಮ ಮತ್ತು ಮೋಕ್ಷಕ್ಕೆ ಪೋಷಕವಾಗಿ ಹಾಗೂ ವಿರೋಧವಿಲ್ಲದ ರೀತಿಯಲ್ಲಿ ಇವೆರಡನ್ನೂ ಗಳಿಸಬೇಕೆಂಬುದೇ ಋಷಿಮುನಿಗಳ ಆಶಯ ಹಾಗಿಲ್ಲದಿದ್ದಾಗ ತ್ಯಾಜ್ಯ   "ಮರಕಡಿದು ಫಲ ಕೇಳಿದರೆ ಸಿಕ್ಕುವುದಿಲ್ಲ. ಧರ್ಮವಿದ್ದರೆ ಉಳಿದದ್ದು . ಜೀವವಿದೆಯೇ ಮೊದಲು ನೋಡು. ಅದಿದ್ದರೆ ಉಡಿಗೆ-ತೊಡಿಗೆಗಳು." ಎಂಬ ಶ್ರೀರಂಗ ಮಹಾಗುರುಗಳ ವಾಣೀ ಇಲ್ಲಿ ಮನನೀಯ.


ಕೇವಲ  ಭೌತಿಕ ಸಂಪತ್ತನ್ನು  ಉಪಯೋಗಿಸಿ ಜನಸಹಾಯ ಮಾಡಿದರೆ  ಜ್ಞಾನವು ಸಿಗುವುದಿಲ್ಲ. ಇದನ್ನೇ ಆಚಾರ್ಯ ಶಂಕರರ  "ಕುರುತೇ ಗಂಗಾಸಾಗರಗಮನಂ,ವ್ರತ-ಪರಿಪಾಲನಮಥವಾ ದಾನಮ್ । ಜ್ಞಾನವಿಹೀನಃ ಸರ್ವಮತೇನ, ಭಜತಿ ನ ಮುಕ್ತಿಂ ಜನ್ಮಶತೇನ ॥  “ ಸ್ತೋತ್ರ ಸ್ಮರಣೀಯ. ನಾನು ಕೇವಲ  " ದೇವರ ಕೈಯಲ್ಲಿರುವ ಸಾಧನ" ಎಂಬ ಮನೋಧರ್ಮವು ಹರಿದಾಗ  ದಾನ ಧರ್ಮಗಳು ಅರ್ಥಪೂರ್ಣವಾಗುತ್ತದೆ.   ಜಾನಶ್ರುತಿರಾಜನ ಮೊದಲಿನ ಮನಸ್ಥಿತಿ ದಾನಧರ್ಮಗಳಿಂದ ಬರುವ ಕೀರ್ತಿಯೇ ಜೀವನದ ಧ್ಯೇಯವೆನ್ನುವುದು ತಪ್ಪಾಗಿತ್ತು. ಆದರೆ ಪ್ರಾಮಾಣಿಕನಾಗಿ,ರೈಕ್ವರೆಂಬ ಗುರುಗಳ ಉಪದೇಶಕ್ಕೆ ಮನಸಾರಿ ಒಪ್ಪಿ ನಡೆದುಕೊಂಡಿದ್ದು ರಾಜನ ಪರಿವರ್ತನೆಗೆ ಕಾರಣವಾಯಿತು. ದೇವನೊಬ್ಬನಿಗೇ ಶರಣಾಗಿ ಅವನ ಪ್ರಸಾದರೂಪವಾದ ಪುರುಷಾರ್ಥಗಳನ್ನು ಸ್ವೀಕರಿಸಿ ಅವನೊಡನೆ ಬಾಳುವ ಸದ್ಬುದ್ಧಿಯು ವೃದ್ಧಿಸಲಿ ಎಂದು ಆಶಿಸೋಣ.


ಸೂಚನೆ : 08/08/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.