ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಶ್ರೀಕೃಷ್ಣನಿಗೆ ಅಗ್ರ-ಪೂಜೆಯನ್ನು ಸಲ್ಲಿಸಿದುದನ್ನು ಶಿಶುಪಾಲನು ತೀವ್ರವಾಗಿ ವಿರೋಧಿಸಿದನಷ್ಟೆ. ಅದಕ್ಕೆ ಪ್ರತ್ಯುತ್ತರವನ್ನು ಭೀಷ್ಮರು ಸ್ಪಷ್ಟವಾಗಿಯೂ ಸಮರ್ಥವಾಗಿಯೂ ಕೊಡುತ್ತಾ ಹೀಗೆ ಹೇಳಿದರು:
“ಅಯ್ಯಾ ಶಿಶುಪಾಲ, ಶ್ರೀಕೃಷ್ಣನಿಂದಲೇ ಈ ಜಗತ್ತು ಪೂರ್ಣವಾಗಿ ಪ್ರತಿಷ್ಠಿತವಾಗಿರುವಂತಹುದು. ಎಂದೇ, ಹಿರಿಯರನೇಕರಿದ್ದರೂ ಸಹ ನಾವು ಅರ್ಚಿಸುವುದು ಕೃಷ್ಣನನ್ನೇ ವಿನಾ ಇತರರನ್ನಲ್ಲ.
ಶಿಶುಪಾಲ-ರಾಜನೇ, ಕೃಷ್ಣನನ್ನು ಕುರಿತಾಗಿ ನೀನು ಈಗ ಹೇಳಿರುವಂತೆಲ್ಲಾ ಮಾತನಾಡುವುದು ನಿನಗೆ ತರವಲ್ಲ. ನಿನಗಿಂತಹ ಬುದ್ಧಿಯು ಬರಬಾರದು.
ನಾನು ಅನೇಕ ಜ್ಞಾನ-ವೃದ್ಧರನ್ನು ಸೇವಿಸಿದ್ದೇನೆ. ಇಲ್ಲಿಗೆ ಆಗಮಿಸಿದ ಅಂತಹವರ ಬಾಯಲ್ಲಿ ಕೃಷ್ಣನ ಬಹುಗುಣಗಳನ್ನು ನಾನು ಕೇಳಿರುವೆ. ಬಹುಮಂದಿಗೆ ಆತನೇ ಆದರಣೀಯನು.
ಆ ಧೀಮಂತನ ಕರ್ಮಗಳು ಜನ್ಮದಾರಭ್ಯ ಏನೇನುಂಟೋ ಅವುಗಳನ್ನು ಅನೇಕರು ಹೇಳಿರುವುದನ್ನು ಮತ್ತೆ ಮತ್ತೆ ಕೇಳಿರುವೆನು.
ಅಯ್ಯಾ ಚೇದಿರಾಜನೇ, ಯಾವುದೋ ಕಾಮನೆಗಳನ್ನಿಟ್ಟುಕೊಂಡು ನಾವು ಜನಾರ್ದನನನ್ನು ಅರ್ಚಿಸುತ್ತಿಲ್ಲ. ಅಥವಾ ಯಾವುದೇ ಸಂಬಂಧವನ್ನು ಮುಂದಿಟ್ಟುಕೊಂಡಾಗಲಿ, ಆತನು ಹಿಂದೆ ಮಾಡಿರುವ ಉಪಕಾರವನ್ನಾಗಲಿ, ಎಂತೂ ಅಲ್ಲ.
ಭೂಮಿಯ ಮೇಲಿರುವ ಸಮಸ್ತ ಭೂತಗಳಿಗೂ, ಎಂದರೆ ಸರ್ವಜೀವಿಗಳಿಗೂ, ಸುಖವನ್ನುಂಟುಮಾಡುವವನೂ ಸಜ್ಜನರಿಂದ ಅರ್ಚಿಸಲ್ಪಡುವವನೂ ಆದವನನ್ನೇ ನಾವು ಅರ್ಚಿಸುವುದು. ಈತನ ಯಶಸ್ಸು, ಶೌರ್ಯ, ಜಯ - ಇವುಗಳನ್ನು ಅರಿತೇ ಈತನಿಗೆ ಅರ್ಚನೆಯನ್ನು ನಾವು ಸಲ್ಲಿಸುತ್ತಿರುವುದು. ಯಾರ ಗುಣಗಳನ್ನು ನಾವು ಪರೀಕ್ಷಿಸಿಲ್ಲವೋ ಅಂತಹ ಒಬ್ಬ ಬಾಲಕನು ಸಹ ಇಲ್ಲಿಲ್ಲ.
ಬರೀ ವಯಸ್ಸಿನ ಲೆಕ್ಕದಲ್ಲಷ್ಟೇ ವೃದ್ಧರೆನಿಸುವವರನ್ನು ಬಿಟ್ಟು, ಗುಣಗಳನ್ನು ಲೆಕ್ಕಕ್ಕೆ ತೆಗೆದುಕೊಂಡೇ ಹರಿಯನ್ನು ಅರ್ಚ್ಯತಮ - ಎಂದರೆ, ಅರ್ಚನೀಯರಾದವರಲ್ಲೆಲ್ಲ ಶ್ರೇಷ್ಠ - ಎಂಬುದಾಗಿ ಭಾವಿಸಲಾಗಿರುವುದು.
ಬ್ರಾಹ್ಮಣರಲ್ಲಿ ಜ್ಞಾನ-ವೃದ್ಧರಿಗೇ ಪೂಜ್ಯತೆ. ಕ್ಷತ್ರಿಯರಲ್ಲಿ ಬಲದಲ್ಲಿ ಅಧಿಕರಾದವರಿಗೇ ಪೂಜ್ಯತೆ. ಧನ-ಧಾನ್ಯಗಳಲ್ಲಿ ಹೆಚ್ಚುಗಾರಿಕೆಯುಳ್ಳವರಿಗೇ ವೈಶ್ಯರಲ್ಲಿ ಪೂಜ್ಯತೆ. ಕೇವಲ ಶೂದ್ರರಲ್ಲೇ ಹುಟ್ಟಿನಿಂದ, ಎಂದರೆ ಜನನದ ದಿನದಿಂದ, ಅರ್ಥಾತ್ ವಯೋಮಾತ್ರದಿಂದ, ಶ್ರೇಷ್ಠತೆಯ ಲೆಕ್ಕ.
ಶ್ರೀಕೃಷ್ಣನ ಪೂಜ್ಯತೆಯಲ್ಲಾದರೆ ಎರಡೂ ಕಾರಣಗಳೂ ಇಲ್ಲಿ ಉಪಸ್ಥಿತವಾಗಿವೆ. ಇತ್ತ ವೇದ-ವೇದಾಂಗಗಳ ವಿಜ್ಞಾನವೂ ಆತನಲ್ಲಿವೆ; ಬಲವೂ ಅಭ್ಯಧಿಕವಾಗಿದೆ.
ಈ ಲೋಕದಲ್ಲಿ ಕೇಶವನಲ್ಲದೆ ಮತ್ತಾರು ನರರಲ್ಲಿ ವಿಶಿಷ್ಟರಾಗಿದ್ದಾರೆ? ದಾನ-ದಕ್ಷತೆಗಳು, ಶ್ರುತ(ಎಂದರೆ ಶಾಸ್ತ್ರಜ್ಞಾನ)-ಶೌರ್ಯಗಳು, ಹ್ರೀ-ಕೀರ್ತಿಗಳು, ಉತ್ತಮವಾದ ಬುದ್ಧಿ, ವಿನಯ-ಶ್ರೀ-ಧೃತಿಗಳು ಹಾಗೂ ತುಷ್ಟಿ-ಪುಷ್ಟಿಗಳು – ಇವೆಲ್ಲವೂ ಅಚ್ಯುತನಲ್ಲಿಯೇ ನಿತ್ಯವಾಗಿ ನೆಲೆಗೊಂಡಿರತಕ್ಕವು.
ಈ ರೀತಿಯಾಗಿ ಗುಣ-ಸಂಪನ್ನನೂ ಆರ್ಯನೂ ತಂದೆ-ಗುರುಗಳಂತಿರುವವನೂ ಪೂಜೆಗೆ ಯೋಗ್ಯನೂ ಆದ ಕೃಷ್ಣನು ಪೂಜಿಸಲ್ಪಟ್ಟಿದ್ದಾನೆಂದರೆ, ಅದನ್ನು ಎಲ್ಲರೂ ಕ್ಷಮಿಸತಕ್ಕದ್ದೇ. ನಮ್ಮ ಪಾಲಿಗೆ ಕೃಷ್ಣನೇ ಋತ್ವಿಕ್ಕು, ಗುರು, ಆಚಾರ್ಯ, ಸ್ನಾತಕ, ರಾಜ ಹಾಗೂ ಪ್ರಿಯಮಿತ್ರ - ಎಲ್ಲವೂ. ಎಂದೇ ಆತನಿಗೆ ಅಗ್ರಪೂಜೆಯು ಸಂದಿರುವುದು.
ಕೃಷ್ಣನೇ ಲೋಕಗಳೆಲ್ಲದರ ಉತ್ಪತ್ತಿ-ಅಪ್ಯಯಗಳು - ಎಂದರೆ ಜನನ-ವಿಲಯಗಳಿಗೆ ಕಾರಣನಾದವನು. ಚರಾಚರಾತ್ಮಕವಾದ ಸಮಸ್ತವಿಶ್ವವೂ ಕೃಷ್ಣನಿಗಾಗಿಯೇ ಆಗಿರುವುದು. ಅವ್ಯಕ್ತ-ಪ್ರಕೃತಿಯೆಂದರೂ ಈತನೇ, ಸನಾತನ-ಕರ್ತಾ ಎಂದರೂ ಈತನೇ, ಸಮಸ್ತ-ಭೂತಗಳಿಗೂ ಮಿಗಿಲಾದವನೆಂದರೂ ಈತನೇ. ಎಂದೇ ಅಚ್ಯುತನು ಪೂಜ್ಯತಮನಾಗಿರುವುದು.
ಬುದ್ಧಿ-ಮನಸ್ಸು-ಮಹತ್ತುಗಳೂ, ವಾಯು-ಅಗ್ನಿ-ಜಲ-ಆಕಾಶ-ಭೂಮಿಗಳೂ, ಕೃಷ್ಣನಲ್ಲೇ ಪ್ರತಿಷ್ಠಿತವಾಗಿರತಕ್ಕವು.
ನಾಲ್ಕುವಿಧಗಳಾದ ಭೂತಗಳು (ಜೀವಗಳು) ಯಾವುವುಂಟೋ - ಎಂದರೆ ಜರಾಯುಜ, ಸ್ವೇದಜ, ಅಂಡಜ, ಉದ್ಭಿಜ್ಜ ಎಂದು ಕರೆಯಲ್ಪಡತಕ್ಕವು - ಇವೆಲ್ಲವೂ ಕೃಷ್ಣನಲ್ಲೇ ಪ್ರತಿಷ್ಠಿತವಾಗಿರತಕ್ಕವು.
ಸೂಚನೆ : 6/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.