Tuesday, June 9, 2026

ವ್ಯಾಸ ವೀಕ್ಷಿತ 191 ನಗರಗಳನ್ನು ಜಯಿಸಿ ತುರಗ-ರತ್ನಗಳನ್ನೂ ತಂದ ರಣಧೀರ(Vyaasa Vikshita191)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png



ಆಗ ತನ್ನ ಚತುರಂಗಬಲದೊಂದಿಗೆ ತ್ವರಿತವಾಗಿ ತನ್ನ ನಗರದಿಂದಾಚೆ ಬಂದ ಬೃಹಂತನು ಫಾಲ್ಗುನನನ್ನು, ಎಂದರೆ ಅರ್ಜುನನನ್ನು, ಕಾಳಗದಲ್ಲಿ ಎದುರಿಸಿದನು.

ಹೀಗಾಗಿ ಧನಂಜಯ-ಬೃಹಂತರ ನಡುವೆ ಮಹತ್ತಾದ ಸಂಗರ(ಯುದ್ಧ)ವೇ ಆಯಿತು. ಈ ಪಾಂಡವನ ವಿಕ್ರಮವನ್ನು ಆ ಬೃಹಂತನಾದರೂ ಅದೆಂತು ತಡೆದಾನು?

ಅರ್ಜುನನನ್ನು ಸೋಲಿಸಲಾಗದೆಂಬುದನ್ನು ಮನಗಂಡವನೇ, ಆ ವೀರನಾದ ಪರ್ವತ-ರಾಜನಾದ ಬೃಹಂತನು ಯುದ್ಧವನ್ನು ತೊರೆದು ರತ್ನಗಳೊಂದಿಗೆ ಆಗಮಿಸಿದನು.

ಇತ್ತ ಅರ್ಜುನನೂ ಆ ರಾಜ್ಯವನ್ನು ಆತನಿಗೇ ಒಪ್ಪಿಸಿ, ಮತ್ತೆ ಉಲೂಕ-ರಾಜನನ್ನು ಜೊತೆಮಾಡಿಕೊಂಡು  ಸೇನಾಬಿಂದು ಎಂಬ ರಾಜನ ಮೇಲೆ ದಂಡೆತ್ತಿ ಹೋದನು. ಆತನನ್ನು ರಾಜ್ಯದಿಂದ ಚ್ಯುತಿಗೊಳಿಸಲು ಅರ್ಜುನನಿಗೆ ಹೆಚ್ಚು ಸಮಯವು ಬೇಕಾಗಲಿಲ್ಲ. ಆಮೇಲೆ ಮೋದಾಪುರ ಮೊದಲಾದ ಹಲವು ರಾಜ್ಯಗಳನ್ನು ಗೆದ್ದನು.

ಬಳಿಕ ಸೇನಾಬಿಂದುವಿನ ರಾಜಧಾನಿಗೇ ಬಂದು, ಚತುರಂಗಬಲವನ್ನು ಮತ್ತೆ ಜೋಡಿಸಿಕೊಂಡು, ಪೌರವ-ರಾಜನಾದ ವಿಷ್ವಗಶ್ವನ ಮೇಲೆ ದಂಡೆತ್ತಿದನು. ಅಲ್ಲಿನ ಪರ್ವತಪ್ರದೇಶದ ರಾಜರುಗಳನ್ನು ಸೋಲಿಸಿ ಅವರನ್ನು ವಶಪಡಿಸಿಕೊಂಡನು.

ಆ ಪರ್ವತ-ಪ್ರಾಂತಗಳಲ್ಲಿ ಉತ್ಸವ-ಸಂಕೇತ ಎಂಬ ಹೆಸರಿನ ಏಳು ದಸ್ಯುಗಳು, ಎಂದರೆ ಧರ್ಮದ್ವೇಷಿಗಳಾದ ಚೋರರು, ಇದ್ದರು. ಅವರನ್ನು ಜಯಿಸಿದ್ದೂ ಆಯಿತು. ಆಮೇಲೆ ಕಾಶ್ಮೀರದಲ್ಲಿ ಹತ್ತು ಮಂಡಲಗಳನ್ನು ಮಾಡಿಕೊಂಡಿದ್ದ ಕ್ಷತ್ರಿಯ-ವೀರರನ್ನೂ ಲೋಹಿತ-ರಾಜನನ್ನೂ ಅರ್ಜುನನು ಜಯಿಸಿದನು.

ಆಮೇಲೆ ತ್ರಿಗರ್ತರು, ದಾರ್ವರು, ಕೋಕನದರು ಮುಂತಾದ ಅನೇಕ ಕ್ಷತ್ರಿಯರು ಎಲ್ಲೆಡೆಯಿಂದಲೂ ಬಂದು ತಾವೇ ಶರಣಾದರು.

ರಮ್ಯವಾದ ಅಭಿಸಾರಿಯೆಂಬ ಪುರಿಯನ್ನು ಅರ್ಜುನನು ಗೆದ್ದನು. ಉರಗವೆಂಬ ರಾಜ್ಯದ ಒಡೆಯನಾದ ರೋಚಮಾನ ಎಂಬಾತನನ್ನು ಅರ್ಜುನನು ಜಯಿಸಿದನು. ಚಿತ್ರಾಯುಧನೆಂಬ ರಾಜನಿಂದ ರಕ್ಷಿತವಾಗಿದ ಸಿಂಹಪುರವನ್ನು ಸೈನ್ಯಬಲದಿಂದ ಯುದ್ಧದಲ್ಲಿ ಮೆಟ್ಟಿದನು. ಆಮೇಲೆ ಸುಹ್ಮದೇಶ-ಚೋಲದೇಶಗಳನ್ನು ಸೈನ್ಯಸಹಿತನಾಗಿ ಅರ್ಜುನನು ಮಥನ ಮಾಡಿಬಿಟ್ಟನು. ಹಾಗೆಯೇ ಬಾಹ್ಲೀಕ-ದರದ-ಕಾಂಭೋಜಗಳ ರಾಜರನ್ನು ಸೋಲಿಸಿದನು. ಈಶಾನ್ಯದಲ್ಲಿ ಕೆಲವು ಪಾಳೆಯಗಾರರಿದ್ದರು; ಅವರನ್ನೂ ಗೆದ್ದನು. ಆಮೇಲೆ ಲೋಹರು-ಪರಮಕಾಂಬೋಜರು-ಉತ್ತರ ಋಷಿಕರು - ಇವರುಗಳನ್ನೆಲ್ಲ ಸೋಲಿಸಿದನು.

ಇವುಗಳಲ್ಲಿ ಬಹಳ ಭಯಂಕರವಾಗಿದ್ದದ್ದೆಂದರೆ ಋಷಿಕರೊಂದಿಗಿನ ಯುದ್ಧ. ಅವರನ್ನು ಅಡಗಿಸಿ, ಗಿಳಿಗಳ ಹೊಟ್ಟೆಯ ಬಣ್ಣವನ್ನು ಹೊಂದಿದ್ದ ಎಂಟು ಕುದುರೆಗಳನ್ನು ಅಲ್ಲಿಂದ ತಂದನು. ಹಾಗೆಯೇ ಕರಕ್ಕೋಸ್ಕರವಾಗಿ ಅನೇಕ ವೇಗಶಾಲಿ ಕುದುರೆಗಳನ್ನು ಪಡೆದನು. ಅವು ನವಿಲಿನ ಬಣ್ಣವನ್ನು ಹೊಂದಿದ್ದವು, ಉತ್ತಮವಾದವು.

ಆಮೇಲೆ ಹಿಮವಂತ-ನಿಷ್ಕುಟಗಳ ರಾಜರುಗಳನ್ನು ಗೆದ್ದನು. ಬಳಿಕ ಶ್ವೇತ-ಪರ್ವತಕ್ಕೆ ಹೋಗಿ ಬಿಡಾರ ಹೂಡಿದನು. ಶ್ವೇತ-ಪರ್ವತವನ್ನು ಜಯಿಸಿದ ಬಳಿಕ, ದ್ರುಮಪುತ್ರನೆಂಬ ರಾಜನ ದೇಶವಾದ ಕಿಂಪುರುಷವನ್ನು ಜಯಿಸಿದನು. ಅಲ್ಲಾದ ಯುದ್ಧವು ಘೋರವೇ ಆಗಿತ್ತು. ಕರ ತೆರಬೇಕೆಂಬ ನಿಬಂಧನೆಯ ಮೇಲೆ ಆ ರಾಜ್ಯವನ್ನು ಅವನಿಗೇ ಬಿಟ್ಟುಕೊಟ್ಟನು.

ಆಮೇಲೆ ಗುಹ್ಯಕರಿಂದ ರಕ್ಷಿತವಾಗಿದ್ದ ಹಾಟಕ-ದೇಶವನ್ನು ಗೆದ್ದನು. ಅಲ್ಲಿ ಯುದ್ಧವು ಬೇಕಾಗಿರಲಿಲ್ಲ. ಸಾಮ-ಮಾರ್ಗದಲ್ಲಿಯೇ ಅವರನ್ನು ವಶಪಡಿಸಿಕೊಂಡನು.

ಅಲ್ಲಿಂದ ಮುಂದಕ್ಕೆ ಹೋದಾಗ ಸಿಕ್ಕದ್ದು ಶ್ರೇಷ್ಠವಾದ ಮಾನಸ-ಸರೋವರ. ಅದಲ್ಲದೆ, ಅಲ್ಲಿ ಅನೇಕ ಋಷಿ-ಕುಲ್ಯೆಗಳೂ ಇದ್ದವು. ಎಂದರೆ ಋಷಿಗಳ ಹೆಸರುಗಳಿಂದ ಪ್ರಸಿದ್ಧವಾದ ನಾಲೆಗಳು. ಅಲ್ಲೂ ಗಂಧರ್ವರಕ್ಷಿತ-ಪ್ರದೇಶಗಳನ್ನು ಗೆದ್ದು, ಅವರಿಂದ ತಿತ್ತಿರ, ಕಲ್ಮಾಷ, ಹಾಗೂ ಮಂಡೂಕ ಎಂಬ ಹೆಸರಿನ ಶ್ರೇಷ್ಠವಾದ ಕುದುರೆಗಳನ್ನು ಕರರೂಪದಲ್ಲಿ ಪಡೆದನು.


ಸೂಚನೆ : 7/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 69 (Prasnottara Ratnamalike 69)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

Screenshot 2026-06-09 195055.png

ಪ್ರಶ್ನೆ - ೬೯. ಮನುಷ್ಯ ಯಾವಾಗ ಶೋಕಿಸಬೇಕಿಲ್ಲ?

ವಿನೀತಳಾದ ಪತ್ನಿ ಇರುವಾಗ ಮತ್ತು ಸನ್ಮಾರ್ಗದಲ್ಲಿ ವೈಭವವಿದ್ದಾಗ.

ಈ ಪ್ರಶ್ನೋತ್ತರದಲ್ಲಿ ಕಾರ್ಯಕಾರಣಭಾವವಿದೆ. ಲಕ್ಷ್ಮಿಯು ಕಾರ್ಯವಾದರೆ ವಿನೀತಳಾದ ಪತ್ನಿ ಮತ್ತು ಸಂಪತ್ತು ಕಾರಣವಾಗಿದೆ. ಈ ಪ್ರಶ್ನೋತ್ತರದಲ್ಲಿ ಗೃಹಸ್ಥನಿಗೆ ನೆಮ್ಮದಿ ಯಾವಾಗ ಸಿಗುತ್ತದೆ? ಎಂಬ ವಿಷಯ ಇಲ್ಲಿ ಪ್ರಸ್ತಾಪಿತಗೊಂಡಿದೆ. ಅಂದರೆ ಗೃಹಸ್ಥನಿಗೆ ತಾನೇ ಪತ್ನಿ ಇರಬೇಕಾದದ್ದು! ಮತ್ತು ಆತನು ತಾನೇ ವೈಭವವನ್ನು - ಸಂಪತ್ತನ್ನು ಪಡೆದು, ಅದನ್ನು ವಿನಿಯೋಗಿಸುವವ. ಗೃಹಸ್ಥನು ವಿನಯದಿಂದ ಕೂಡಿರುವ ಪತ್ನಿ ಮತ್ತು ತಾನು ಸಂಪಾದಿಸಿದ ಸಂಪತ್ತು ಸನ್ಮಾರ್ಗದಲ್ಲಿ ಬಳಕೆಯಾದಾಗ ಅವನು ಶೋಕಿಸುವ ಅವಶ್ಯಕತೆ ಇಲ್ಲ ಎಂಬುದು ಇದರ ತಾತ್ಪರ್ಯ. ಅಂದರೆ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ಇದ್ದರೆ ಅದು ದುಃಖಕ್ಕೆ ಕಾರಣ ಎಂಬುದು ಅರ್ಥ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬುದಾಗಿ ನಾಲ್ಕು ಬಗೆಯ ಆಶ್ರಮ ಜೀವನಗಳಲ್ಲಿ ಗೃಹಸ್ಥನು ಮಾತ್ರ ಸಂಪತ್ತನ್ನು ಸಂಪಾದಿಸಬೇಕು; ಅದನ್ನು ಬ್ರಹ್ಮಚಾರಿ ಮತ್ತು ಸನ್ಯಾಸಿ ಆಶ್ರಮಗಳನ್ನು ಪರಿಪಾಲಿಸಬೇಕಾದದ್ದು ಅವನ ಕರ್ತವ್ಯವಾಗಿದೆ. ಗೃಹಸ್ಥಾಶ್ರಮವೇ ಸಂಪತ್ತನ್ನು ಸಂಪಾದಿಸಲು ಮತ್ತು ಅದನ್ನು ವಿನಿಯೋಗಿಸಲೂ ಕೂಡ ಅರ್ಹತೆಯಿಂದ ಕೂಡಿರುತ್ತದೆ. ಆದರೆ ಇದನ್ನು ವಿನಯೋಗಿಸಬೇಕಾದರೆ ಗೃಹಸ್ಥನ ಜೊತೆಗೂಡಿದ ಗೃಹಿಣಿಯ ಪಾತ್ರವೂ ಅತ್ಯಂತ ಪ್ರಮುಖವಾದದ್ದು. “ಗೃಹಿಣೀ ಗೃಹಮುಚ್ಚ್ಯತೇ” ಗೃಹಿಣಿಯನ್ನು ‘ಗೃಹ’ ಎಂಬ ಮಾತನ್ನು ಕೇಳುತ್ತೇವೆ. ಗೃಹಿಣಿಯನ್ನು ಮಂತ್ರಿ ಎಂಬುದಾಗಿಯೂ ಹೇಳಿದ್ದುಂಟು. ಒಬ್ಬ ರಾಜನಾದವನಿಗೆ ಸರಿಯಾದ ಮಂತ್ರಿ ಇದ್ದರೆ ಅವನ ರಾಜ್ಯ ಹೇಗೆ ಸುಂದರವಾಗಿ ಇರುತ್ತದೆಯೋ, ಅಂತೆಯೇ ಮಂತ್ರಿಸ್ಥಾನದಲ್ಲಿರುವ ಗೃಹಿಣಿಯು ಗೃಹಸ್ಥನ ಎಲ್ಲ ರೀತಿಯ ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ನಾಲ್ಕು ಪುರುಷಾರ್ಥಗಳಲ್ಲಿ ಪರಿಪೂರ್ಣವಾಗಿ ತನ್ನ ಸಹಯೋಗಿತ್ವವನ್ನು ಮತ್ತು ಸಹಭಾಗಿತ್ವವನ್ನು ನೀಡಬೇಕಾಗುತ್ತದೆ. ಹಾಗೆ ನೀಡಿದಾಗ ಮಾತ್ರ ಆ ಗೃಹಸ್ಥಜೀವನವು ಧನ್ಯ ಎಂಬುದಾಗಿ ಪರಿಗಣಿತವಾಗುತ್ತದೆ. ಆದ್ದರಿಂದಲೇ ಗಂಡನಾದವನು ತನ್ನ ಜೀವನದಲ್ಲಿ ಯಾವುದನ್ನು ಪರಮಪುರುಷಾರ್ಥಕ್ಕೆ ಅನುಗುಣವಾಗಿ ಮಾಡಬೇಕು ಎಂಬುದಾಗಿ ಅಂದುಕೊಂಡಿರುತ್ತಾನೋ, ಅದಕ್ಕೆ ಸ್ವಲ್ಪವೂ ಚ್ಯುತಿ ಬಾರದ ರೀತಿಯಲ್ಲಿ ಪತ್ನಿಯಾದವಳು ಹೆಜ್ಜೆಗೆ ಗೆಜ್ಜೆಯಂತೆ ಅವನ ಪೂರ್ಣಜೀವನಕ್ಕೆ ಸಹಕರಿಸಬೇಕಾಗುತ್ತದೆ. ಆಗ ಅವಳು ತನ್ನ ಪತಿಗೆ ವಿನೀತಳು ಎಂದರ್ಥ. ಮತ್ತೊಂದು ಅರ್ಥವೆಂದರೆ ಒಬ್ಬ ದುರ್ಮಾರ್ಗಗಾಮಿಯಾದ ಪತಿಯನ್ನು ಕೂಡ ಸನ್ಮಾರ್ಗದಲ್ಲಿ ನಡೆಸಿಕೊಂಡು ಬರುವ ಸಾಮರ್ಥ್ಯ ಮತ್ತು ಕರ್ತವ್ಯ ಇವೆರಡು ಕೂಡ ಗೃಹಿಣಿಯಾದವಳಿಗೆ ಇರುತ್ತದೆ ಎಂಬ ವಿಷಯ ಇಲ್ಲಿ ಧ್ವನಿತವಾಗುತ್ತದೆ. ಈ ನೇರದಲ್ಲಿ ಗೃಹಣಿಯಾದವಳು ಗೃಹಸ್ಥನಿಗೆ ಪರಿಪೂರ್ಣ ಸಹಕಾರವನ್ನು ನೀಡಬೇಕಾಗುತ್ತದೆ. ಆಗ ಆ ಗೃಹಸ್ಥನ ಜೀವನ ಸುಖಮಯ.


ಕಾಳಿದಾಸನು ಹೇಳುವಂತೆ “ಯೌವನೇ ವಿಷಯೈಷಿಣಾಂ” ಯೌವನದಲ್ಲಿ ಮಾತ್ರ ಸಂಪಾದಿಸಬೇಕು. ಆ ಸಂಪಾದನೆಯು ಬ್ರಹ್ಮಚರ್ಯ ಆಶ್ರಮದಲ್ಲಿ ಸಂಪಾದಿಸಿದ ವಿದ್ಯೆಯ ಬಲದಿಂದ ಆಗಿರಬೇಕು. ಯಾವಾಗ ಸಂಪಾದನೆಯು ವಿದ್ಯೆಯಿಂದ ಬರುತ್ತದೆಯೋ, ಆ ಸಂಪಾದನೆಯು ಧರ್ಮಕಾರ್ಯದಲ್ಲಿ ವಿನಿಯೋಗವಾಗುತ್ತದೆ ಎಂಬ ಅರ್ಥದಲ್ಲಿ ಒಂದು ಸುಭಾಷಿತ ಹೀಗೆ ಹೇಳುತ್ತದೆ - “ವಿದ್ಯಾ ದದಾತಿ ವಿನಯಂ ವಿನಯಾತ್ ಯಾತಿ ಪಾತ್ರತಾಮ್। ಪಾತ್ರತ್ವಾತ್ ಧನಮಾಪ್ನೋತಿ ಧನಾತ್ ಧರ್ಮಃ ತತಃ ಸುಖಮ್” ಎಂಬುದಾಗಿ. ಅಂದರೆ ವಿದ್ಯೆಯು ಧನವನ್ನು ಕೊಡುವುದರ ಮೂಲಕ ಧರ್ಮವನ್ನು ಕೊಟ್ಟು ಕೊನೆಗೆ ಆತ್ಯಂತಿಕವಾದ ಸುಖವನ್ನು ಕೊಡಲು ಸಮರ್ಥವಾದದ್ದು. ವಿವೇಕದಿಂದ ಕೂಡಿದ ವಿದ್ಯೆಯು ಸರ್ವಸ್ವವನ್ನೂ ಕೊಡುವುದಾದ್ದರಿಂದ ಇದರ ಬಲದಿಂದ ಬಂದ ಸಂಪತ್ತು ಸನ್ಮಾರ್ಗಗಾಮಿಯಾಗಿಯೇ ಇರುತ್ತದೆ. ಅಲ್ಲಿ ಯಾವುದೇ ರೀತಿಯಾದ ಧರ್ಮಚ್ಯುತಿಗೆ ಅವಕಾಶವಿಲ್ಲ ಎಂಬುದು ಇದರ ತಾತ್ಪರ್ಯ.


ಸೂಚನೆ :  7/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Sunday, June 7, 2026

ಶ್ರೀರಾಮನಿಗೆ ಅಗಸ್ತ್ಯಮುನಿಗಳ ಮಾರ್ಮಿಕ ಸಂಕೇತ (Śriramanige Agastyamunigala Marmika Sanketa)

  
ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)
image.png

ರಾಮಾಯಣದಲ್ಲಿ ಅಗಸ್ತ್ಯಮುನಿಗಳು ಮುಖ್ಯವಾಗಿ ಎರಡು ಪ್ರಸಂಗಗಳಲ್ಲಿ ಕಾಣಿಸಿಕೊಳ್ಳುತ್ತಾರೆ: ಅರಣ್ಯಕಾಂಡದಲ್ಲೊಮ್ಮೆ ಯುದ್ಧಕಾಂಡದಲ್ಲೊಮ್ಮೆ. ಅಗಸ್ತ್ಯರ ಮಾಹಾತ್ಮ್ಯವು ನಮಗೆ ವಾತಾಪಿ-ಇಲ್ವಲರ ಕಥೆಯ ಮೂಲಕ ರಾಮಾಯಣದಲ್ಲೇ ತಿಳಿದುಬರುತ್ತದೆ. ಅಗಸ್ತ್ಯಮುನಿಗಳ ಆಶ್ರಮಕ್ಕೆ ಶ್ರೀರಾಮ-ಸೀತೆ-ಲಕ್ಷ್ಮಣರು ಹೋಗುವುದನ್ನು ನಾವು ಅರಣ್ಯಕಾಂಡದಲ್ಲಿ ನೋಡುತ್ತೇವೆ.

ಅಗಸ್ತ್ಯರೊಂದಿಗೆ ಭೇಟಿ

ವಿರಾಧನೆಂಬ ರಾಕ್ಷಸನ ಸಂಹಾರವಾದ ಬಳಿಕ, ಶ್ರೀರಾಮಾದಿಗಳು ಆ ಸ್ಥಾನವನ್ನು ಬಿಟ್ಟು ಬೇರೆಲ್ಲಿಗಾದರೂ ಹೊರಡೋಣವೆಂದು ನಿಶ್ಚಯಿಸಿದರು. ಹಾಗೇ ಮುಂದೆ ಸಾಗುತ್ತಾ ಅವರು ಅಗಸ್ತ್ಯರ ಆಶ್ರಮಕ್ಕೆ ಭೇಟಿ ನೀಡಿದರು. ಆ ಮಹಾತ್ಮರ ತಪಸ್ಸಿನ ತೇಜಸ್ಸು-ಬಲಗಳೆಂತಹುದು ಎಂದರೆ ಅವರು ಅಲ್ಲಿ ಕಾಲಿಟ್ಟ ಮೇಲೆ ರಾಕ್ಷಸರು ಅತ್ತ ಕಣ್ಣೆತ್ತಿ ನೋಡಲೂ ಅಂಜುತ್ತಿದ್ದರು. ವೈರಕ್ಕೆ ಅಲ್ಲಿ ಸ್ಥಾನವಿಲ್ಲ. ಕ್ರೂರಕರ್ಮಿಗಳು ಅಲ್ಲಿರಲಾರರು. ಸಜ್ಜನರು ಸಂದರ್ಶಿಸುವ ಸ್ಥಾನವಿದಾಗಿದ್ದು, ಶರಣ್ಯರನ್ನು ರಕ್ಷಿಸುವುದೆಂಬ ಖ್ಯಾತಿಯನ್ನು ದಕ್ಷಿಣದಿಕ್ಕಿಗೇ ತಂದುಕೊಟ್ಟಿತು. ಅವರನ್ನು ಭೇಟಿಯಾಗಬೇಕೆಂಬ ತಮ್ಮ ಉದ್ದೇಶವನ್ನು ಲಕ್ಷ್ಮಣನು ಅವರ ಶಿಷ್ಯರಿಗೆ ತಿಳಿಸಿದನು. ಅದನ್ನು ಕೇಳಿ ಅಗಸ್ತ್ಯರಿಗೆ ಬಹಳ ಆನಂದವಾಯಿತು. ರಾಮನ ಬರುವಿಕೆಯನ್ನು ಕಾದಿದ್ದ ತಾಪಸರಲ್ಲಿ ಇವರೂ ಒಬ್ಬರು.

ಮುನಿಗಳ ಆತಿಥ್ಯ

ಅವರ ಅಪ್ಪಣೆಯಂತೆ ರಾಮಾದಿಗಳನ್ನು ಶಿಷ್ಯರು ಒಳಗೆ ಕರೆತರುತ್ತಿದ್ದಂತೆಯೇ ಅಗಸ್ತ್ಯರು ಅವರನ್ನು ಎದುರ್ಗೊಂಡರು. ತಪಸ್ಸಿನ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಮುನಿಗಳಿಗೆ ಆ ಮೂವರೂ ನಮಸ್ಕರಿಸಿದರು. ಆಗ ಅಗಸ್ತ್ಯರು ರಾಮಾದಿಗಳಿಗೆ ಆದರದ ಸತ್ಕಾರವನ್ನು ಮಾಡಿದರು. ರಾಮನು ಪೂಜ್ಯನೂ ಮಾನ್ಯನೂ ಆದ ಪ್ರಿಯ ಅತಿಥಿಯೆಂದರು. ಹಾಗೆಂದು ಹೇಳಿ, ವಿಶ್ವಕರ್ಮನು ನಿರ್ಮಿಸಿದ್ದ ವಿಷ್ಣುವಿನ ಧನುಸ್ಸನ್ನೂ ಎರಡು ಅಕ್ಷಯತೂಣೀರಗಳನ್ನೂ, ಎಂದರೆ ಮಿತಿಯಿಲ್ಲದಷ್ಟು ಬಾಣಗಳನ್ನು ಕೊಡುವ ಬತ್ತಳಿಕೆಗಳನ್ನೂ, ವೈಷ್ಣವವಾದ ಚಿನ್ನದ ಖಡ್ಗವನ್ನೂ ಕೊಟ್ಟರು. ಪತಿಪ್ರೇಮದಿಂದ ರಾಮನನ್ನು ಹಿಂಬಾಲಿಸಿ ಕಾಡಿಗೆ ಬಂದಿರುವ ಸೀತೆಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ತಾವು ಮೂವರೂ ಆಶ್ರಮವನ್ನು ಕಟ್ಟಿಕೊಂಡು ಇರಲು ಅನುಕೂಲವಾದ ಸ್ಥಳವೊಂದನ್ನು ಸೂಚಿಸಬೇಕೆಂಬುದಾಗಿ, ರಾಘವನು ಮುನಿಗಳಲ್ಲಿ ಕೋರಿಕೆಯನ್ನು ಇಟ್ಟನು. ಆಗ ಅಗಸ್ತ್ಯರು ಸೂಚಿಸಿದ ಜಾಗವೇ ಪಂಚವಟಿ.

ಅವರು ಅಲ್ಲಿ ಹೇಳುವ ಮಾತುಗಳು ಸೂಕ್ಷ್ಮವೂ ಮಾರ್ಮಿಕವೂ ಆಗಿವೆ. ಗೆಡ್ಡೆ-ಗೆಣಸುಗಳೂ, ಮೃಗಗಳೂ ತುಂಬಿರುವ ಸ್ಥಳವದು. ಗೋದಾವರೀ ನದಿಯೂ ಹತ್ತಿರದಲ್ಲೇ ಇದೆ. ರಮ್ಯವಾಗಿರುವ ಆ ಸ್ಥಾನದಲ್ಲಿ ಸೀತೆಯು ಸುಖವಾಗಿರುತ್ತಾಳೆಂದು ಅವರು ತಿಳಿಸಿದರು. ಜೊತೆಗೇ ಅಲ್ಲಿ ಜನಸಂಚಾರವಿಲ್ಲವೆಂದೂ ಆದರೆ ಸೀತೆಯನ್ನು ರಕ್ಷಿಸುವ ಸಾಮರ್ಥ್ಯ ರಾಘವನಿಗಿದೆಯೆಂದೂ ಅವರು ಹೇಳಿದರು. ತದನಂತರ ರಾಮ-ಲಕ್ಷ್ಮಣ-ಸೀತೆಯರು ಮುನಿಗಳ ಪಾದಕ್ಕೆ ವಂದಿಸಿ ಪಂಚವಟಿಗೆ ತೆರಳಿದರು.

ಪಂಚವಟಿಯೇಕೆ ಮುಖ್ಯ?

ಈ ಮಿಲನದಲ್ಲಿ ಎರಡು ಪ್ರಮುಖವಾದ ವಿಷಯಗಳನ್ನು ಗಮನಿಸುವುದಿದೆ. ಅಗಸ್ತ್ಯಮುನಿಗಳನ್ನು ಭೇಟಿಯಾಗುವ ಹೊತ್ತಿಗೆ ರಾಮಾದಿಗಳು ಹಲವರ್ಷಗಳು ವನವಾಸದಲ್ಲಿ ಕಳೆದಿದ್ದರು. ಈವರೆಗೆ ಈ ಮೂವರ ಕಾಲ ಬಹುಶಃ ಶಾಂತಿಯುತವಾಗಿಯೇ ಕಳೆದಿತ್ತು. ತಾಪಸರನ್ನು ಭೇಟಿಯಾಗುವುದು, ಅವರಿಂದ ಆಖ್ಯಾನಗಳನ್ನು ಕೇಳುವುದು, ಆಗೊಮ್ಮೆ ಈಗೊಮ್ಮೆ ದುಷ್ಟಸಂಹಾರಕಾರ್ಯ ಮಾಡುವುದು - ಹೀಗೆ ಸಾಗಿತ್ತು. ಆದರೆ ಈ ಕಾಲಘಟ್ಟವಾದ ಮೇಲೇ ಘಟನಾವಳಿಗಳು ಒಂದರ ಬೆನ್ನಲ್ಲೇ ಮತ್ತೊಂದು ಎಂಬಂತೆ ನಡೆಯುತ್ತಾ ಹೋಗುತ್ತve?ದೆ. ಶೂರ್ಪಣಖೆ-ಖರ-ದೂಷಣರಿಗೆ ಸಂಬಂಧಿಸಿದ ಘಟನೆಗಳು, ಮಾಯಾಮೃಗ ಕಾಣಿಸಿಕೊಳ್ಳುವುದು, ಸೀತಾಪಹರಣ - ಈ ಎಲ್ಲವೂ ಪಂಚವಟಿಗೆ ಹೋದ ನಂತರವೇ ಘಟಿಸುವುದು.

ಮುಂಬರುವ ಘಟನೆಗಳ ಹಿನ್ನೆಲೆಯಲ್ಲೇ ರಾಮ-ಲಕ್ಷ್ಮಣರಿಗೆ ಸಹಾಯವಾಗಲೋ ಎಂಬಂತೆ, ಅಗಸ್ತ್ಯರು ಮೊದಲೇ ರಾಮನಿಗೆ ವೈಷ್ಣವವಾದ ಶಸ್ತ್ರಗಳನ್ನು ಕೊಟ್ಟಿದ್ದಾರೆ. ದೇವರಾಜನಾದ ಇಂದ್ರನೇ ಮುನಿಗಳಿಗೆ ಕೊಟ್ಟಿರುವ ಶಸ್ತ್ರಗಳಿವು. ವಿಷ್ಣುವೇ ಹಿಂದೆ ದೈತ್ಯಸಂಹಾರಕ್ಕೆ ಉಪಯೋಗಿಸಿರುವ ಆಯುಧಗಳು. ಮುಂದಾಗಬೇಕಾಗಿರುವ ದುಷ್ಟಸಂಹಾರಕಾರ್ಯಕ್ಕೆ ಇದೊಂದು ನಾಂದಿಯಿದ್ದಂತೆ ಎಂದು ತಿಳಿಯಬಹುದು. "ಅಪಿ ಚಾತ್ರ ವಸನ್ ರಾಮ ತಾಪಸಾನ್ ಪಾಲಯಿಷ್ಯಸಿ", ಎಂದರೆ "ನೀನು ಪಂಚವಟಿಯಲ್ಲಿದ್ದರೆ ತಪಸ್ವಿಗಳ ಪಾಲನೆಯ ಕಾರ್ಯವು ನಡೆಯುವುದು", ಎಂದೂ ಅಗಸ್ತ್ಯರು ಹೇಳುತ್ತಾರೆ. ಈ ಹಿಂದೆ ತಾನೆ ಶ್ರೀರಾಮನು ದಂಡಕಾರಣ್ಯದಲ್ಲಿ ತಪೋನಿರತರಾದ ಋಷಿಗಳಿಗೆ ಸಹಾಯ ಮಾಡುವುದಾಗಿ ಮಾತು ಕೊಟ್ಟಿದ್ದನು. ಏನದು ಅವರು ಕೇಳಿದ ಸಹಾಯ?

ತಾಪಸರ ಪಾಲನೆ ಎಂದರೇನು?

ತಾವು ತಪಸ್ಸನ್ನು ನಿರ್ವಿಘ್ನವಾಗಿ ನಡೆಸಲು ರಾಮನು ಅನುಕೂಲ ಮಾಡಿಕೊಡುವುದೇ ಅದು. ಏನು ಆ ಅನುಕೂಲ? ಋಷಿಗಳೆಂದರೆ ತಪಸ್ಸು-ಯಜ್ಞಕರ್ಮಗಳಲ್ಲಿ ನಿರತರಾದವರು. ಆದರೆ ಅವರ ಆ ಲೋಕಕಲ್ಯಾಣಕರವಾದ ಕೆಲಸಕ್ಕೆ ನಿಷ್ಕಾರಣವಾಗಿ ವಿಘ್ನಗಳನ್ನೊಡ್ಡುವವರು ರಾಕ್ಷಸರು. ಅಂತಹವರು ಹಲವರು ದಂಡಕಾರಣ್ಯದಲ್ಲಿದ್ದು, ಅಲ್ಲಿದ್ದ ಋಷಿ-ಮುನಿಗಳಿಗೆ ತೊಂದರೆ ಕೊಡುತ್ತಲೇ ಇದ್ದರು. ಶ್ರೀರಾಮನು ತನ್ನ ವನವಾಸಕ್ಕೆ ಆ ಘೋರಾರಣ್ಯಕ್ಕೆ ಬಂದಾಗ ಸಹಜವಾಗಿಯೇ ಅಲ್ಲಿನ ತಪಸ್ವಿಗಳು ರಾಮನ ಮೊರೆಹೊಕ್ಕರು. ಸ್ವಭಾವಸಹಜವಾಗಿ ಶರಣಾಗತರಕ್ಷಕನಾದ ರಾಘವನು ಅವರಿಗೆ ಅಭಯವಿತ್ತನು. ಇದೇ ರಾಮನು ತಾನು ಮಾಡುವುದಾಗಿ ಪ್ರತಿಜ್ಞೆ ಮಾಡಿರುವ ತಾಪಸ-ಪಾಲನ-ಕಾರ್ಯ. ಶ್ರೀರಂಗಮಹಾಗುರುಗಳು ಈ ಬಗ್ಗೆ ಹೇಳುವುದಿಂತು: "ಶಿಷ್ಟರಕ್ಷಣ ದುಷ್ಟಶಿಕ್ಷಣ, ಇದೇ ಕ್ಷತ್ರಿಯ ಧರ್ಮ...ಕಳೆಯನ್ನು ನಿರ್ಮೂಲ ಮಾಡದೇ ಬೆಳೆಯಿಲ್ಲ...ಆಗಬೇಕಾದುದು ಅಧರ್ಮ ನಿರ್ಮೂಲನ, ಧರ್ಮರಕ್ಷಣೆಗಾಗಿ ಯುದ್ಧ." ಈ ರಾಕ್ಷಸಸಂಹರಣಕ್ಕೆ ಸಹಾಯವಾಗಲೆಂದೇ ಅಗಸ್ತ್ಯರು ಆಯುಧಗಳನ್ನಿತ್ತದ್ದು.

ಪಂಚವಟೀಕ್ಷೇತ್ರಕ್ಕೆ ಶ್ರೀರಾಮನ ಗಮನವನ್ನು ಸೆಳೆದದ್ದೂ ಬಹಳ ಮಹತ್ವದ ಸಂಕೇತವೇ. ರಾಕ್ಷಸರನ್ನು ಒಂದು ಸ್ಥಾನಕ್ಕೆ ಸೆಳೆದು ಅವರ ಸಂಹಾರ ಮಾಡಲು ಬೀಸಿದ ಒಂದು ಬಲೆಯೋ ಎಂಬಂತಿದೆ ಅದು. ರಾಮಾಯಣದ ನಿರ್ಣಾಯಕವಾದ ತಿರುವು - ಎಂದರೆ ಸೀತಾಪಹರಣ - ಆಗಲು ಅಗಸ್ತ್ಯರು ಕೊಟ್ಟ ಈ ಸೂಚನೆಯೇ ಕೀಲಿಯೆನ್ನಬಹುದೇನೋ. ದೇವತಾಕಾರ್ಯವೂ ಲೋಕಕಲ್ಯಾಣಕಾರ್ಯವೂ ಆಗಬೇಕಾದಾಗ ಪೂರ್ವಗಾಮಿಘಟನೆಗಳು ಕೆಲವು ಆಗಬೇಕಾಗುತ್ತವೆ. ಅಲ್ಪಕಾಲಿಕವಾಗಿಯೇ ಆದರೂ ವ್ಯಕ್ತಿತ್ವವೊಂದು ಸಕಾಲಕ್ಕೆ ಪ್ರಕಟವಾಗಿ, ಘಟನಾವಳಿಯ ದಿಕ್ಕನ್ನು ನಿರ್ಧರಿಸುವಂತಾಗಬೇಕು. ಆ ಕಾರ್ಯವನ್ನು ಅಗಸ್ತ್ಯಮುನಿಗಳು ಈ ಸಂದರ್ಭದಲ್ಲಿ ಮಾಡಿರುವರು.

ರಾಮಾಯಣ ನಡೆಯಲು ಅಗಸ್ತ್ಯರೂ ಒಂದು ಕಾರಣವಾಗಿದ್ದಾರೆ, ಅಲ್ಲವೇ?

ಸೂಚನೆ: 6/06/2024 ರಂದು ಈ ಲೇಖನ ವಿಜಯ ಕರ್ನಾಟಕದ ಭೋದಿವೃಕ್ಷದಲ್ಲಿ ಪ್ರಕಟವಾಗಿದೆ.

ನಮ್ಮ ಗುಪ್ತನಿಧಿ ಯಾವುದು ? (Namma Guptanidhi Yavudu?)

ಲೇಖಕರು:ವಾದಿರಾಜ್ ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


image.png


ಗುಪ್ತನಿಧಿ ಎಂದೊಡನೆ ನಮಗೆ ಬಚ್ಚಿಟ್ಟ ಹಣ, ಬ್ಯಾಂಕಿನ ಲಾಕರ್ ನಲ್ಲಿ ಇಟ್ಟ ಸಂಪತ್ತು, ಇತ್ಯಾದಿಗಳೆಲ್ಲ ನೆನಪಾಗುತ್ತವೆ.

ನಮ್ಮ ನಿತ್ಯಜೀವನಕ್ಕೆ ಬೇಕಾದ ಆಹಾರ, ವಸ್ತ್ರ ಇತ್ಯಾದಿ ಖರೀದಿಸಲು ಹಣದಿಂದಲೇ ಸಾಧ್ಯ. ಹಾಗಾಗಿ ನಾವೆಲ್ಲಾ ಸದಾ ದುಡಿಯುತ್ತಿರುವುದು ಹಣ ಸಂಪಾದನೆಗಾಗಿಯೇ. ನಮ್ಮ ಸಂಸಾರ ಚಕ್ರವು ಸುಗಮವಾಗಿ ನಡೆಸಲು ಹಣದ  ಪಾತ್ರ ದೊಡ್ಡದು. ಇನ್ನು, ನಾವು ಕೂಡಿಟ್ಟಿದ್ದ ಹಣದಲ್ಲಿ ಒಡವೆ, ವಸ್ತು-ವಾಹನ, ಮನೆ ಇತ್ಯಾದಿ ಖರೀದಿಸುವುದು ಉಂಟು. ಇನ್ನು ಕೆಲವರಿಗೆ ಪರ‍್ವಜರು ಸಂಪಾದಿಸಿದ ಸ್ಥಿರ ಚರ ಆಸ್ಥಿಗಳು ದೊರಕಿರಬಹುದು. ಇವೆಲ್ಲವೂ ಒಂರ‍್ಥದಲ್ಲಿ ನಿಧಿ ! ಇದನ್ನು ಸುಭದ್ರವಾಗಿ ಕಾಪಾಡಿಟ್ಟುಕೊಳ್ಳುವುದು ಮತ್ತು ವೃದ್ಧಿಮಾಡುವುದು ನಮ್ಮ ರ‍್ತವ್ಯವಾಗಿದೆ.  ನಮ್ಮ ಸ್ಥಿರ-ಚರ ಆಸ್ಥಿಗಳು ಅಥವಾ ಹಣವು ಬಂದರೆ ಸಂತೋಷವಾಗುತ್ತದೆ. ಅದನ್ನು ಕಳೆದುಕೊಂಡರೆ ಅತೀವವಾದ ದುಃಖವಾಗುತ್ತದೆ. ಮತ್ತು ಈ ನಿಧಿಯಿಂದ ಲಾಭ ನಷ್ಟಗಳರೆಡೂ ಉಂಟು.

ಹಣ, ಆಸ್ತಿ, ಮನೆ, ಚಿನ್ನ ಇವುಗಳನ್ನೆಲ್ಲ ಬಿಟ್ಟು ಇನ್ನೇನಾದರೂ ನಿಧಿ ಇದೆಯೇ? ಈ ದೇಶದ ಮರ‍್ಷಿಗಳು ಯಾವುದನ್ನು ದೊಡ್ಡ ನಿಧಿ ಎಂದಿದ್ದಾರೆ ಎಂಬುದನ್ನು ಗಮನಿಸೋಣ.

ಸುಖಕ್ಕಾಗಿ ನಿಧಿ :

ನಿಜಕ್ಕೂ ಮೇಲಿನ ನಿಧಿಗಳನ್ನೆಲ್ಲಾ ನಾವು ಕೂಡಿ ಇಡುವುದು ನಮ್ಮ ಇಂದಿನ, ಮುಂದಿನ ಸುಖದ ಬದುಕಿಗಾಗಿ. ಅದರಿಂದ ಸುಖ ಸಿಗುತ್ತದೆ ಎಂಬುದೇ ನಿಧಿ ಸಂಗ್ರಹಣೆಯ ಹಿಂದಿನ ಸ್ಫರ‍್ತಿ. ನಮ್ಮ  ಮರ‍್ಷಿಗಳು ಸಹ ಸುಖದ ಅನ್ವೇಷನೆಯಲ್ಲೇ ಸಾಗಿದವರು. ಅವರು ಈ ಬಗೆಯ ನಿಧಿಗಳಿಂದ ಸಿಗುವ ಸುಖ ಸಂತೋಷಗಳಿಗೆ ಅಪರಿಚಿತರೇನೂ ಅಲ್ಲ.

ಶಾಶ್ವತ ಸುಖದ ನಿಧಿ :

ಆದರೆ ಆತ್ಯಂತಿಕವಾಗಿ ಎಂದೆಂದಿಗೂ ಶಾಶ್ವತವಾಗಿ ಉಳಿಯುವ ಸುಖವೇನಾದರೂ ಇದೆಯೇ ಎಂಬುದು ಅವರ ಅನ್ವೇಷಣೆಯಾಗಿತ್ತು. ಹಾಗೆಂದೇ  ಕಣ್ಣಿಗೆ ಕಾಣುವ ನಿಧಿಗೆ ಮಾತ್ರ ಸೀಮಿತವಾಗದೆ, ತಮ್ಮ ತಪಸ್ಸಿನ ಶಕ್ತಿಯಿಂದ  ಅತ್ಯಂತ ದೊಡ್ಡದಾದ ಪರಮಾನಂದ ನಿಧಿ ಇದೆ ಎಂಬುದನ್ನು ಕಂಡುಕೊಂಡುದೇ ಅವರ ಸಾಧನೆ. ಆ ನಿಧಿ ಇನ್ನೆಲ್ಲೂ ಇಲ್ಲದೇ ನಮ್ಮೊಳಗೇ ಇದೆ, ಅದನ್ನು ಮಾನವರೆಲ್ಲರೂ ಪಡೆಯಬಹುದಾದ ಮಾತ್ರವಲ್ಲ, ಪಡೆಯಲೇ ಬೇಕಾದ ನಿಧಿ ಎಂದು ಘೋಷಿಸಿದರು. ಪ್ರತಿಯೊಬ್ಬ ಜೀವಿಯ ಅಂತರಂಗದಲ್ಲಿ ಬೆಳಗುವ ಪರಮಾತ್ಮ ಜ್ಯೋತಿಯೇ ಆ ನಿಧಿ. ಅದರ ಅರಿವು ಉಂಟಾದಾಗ ಇನ್ನಿಲ್ಲದ ನೆಮ್ಮದಿ, ಶಾಂತಿ ,ಆನಂದ. ಒಮ್ಮೆ ಅದರ ಅನುಭವವಾಗಿಬಿಟ್ಟರೆ ಆ ಆನಂದ ಶಾಶ್ವತ. ಮೇಲಿನ ನಿಧಿಗಳೆಲ್ಲ ಅದರ ಎದುರು ಕ್ಷುದ್ರ ಎಂಬುದು ಅವರ ಅನುಭವಿಕ ಸತ್ಯ. ಮಾನವ ದೇಹದಲ್ಲಿ ಆ ನಿಧಿಯನ್ನು ಪಡೆಯುವ ಎಲ್ಲಾ ಅನುಕೂಲತೆಗಳು ಇವೆ ಎಂಬುದನ್ನು ಅವರು ಕಂಡುಕೊಂಡರು.

ಪರಮಾತ್ಮ ಜ್ಯೋತಿಯೇ ನಮ್ಮ ಗುಪ್ತನಿಧಿ :

ಆ ಪರಮಾತ್ಮ ಜ್ಯೋತಿಯನ್ನೇ ಬಹಳ ದೊಡ್ಡನಿಧಿ ಎಂದು ಅವರು ಕೊಂಡಾಡಿದ್ದು. ಅದು ನಮ್ಮೊಳಗೇ ಇರುವುದರಿಂದ, ಹೃದಯ ಗುಹೆಯಲ್ಲಿ ಅನುಭವಕ್ಕೆ ಬರುವುದರಿಂದ ಅದು ಗುಪ್ತ ನಿಧಿಯೂ ಹೌದು. ಅದನ್ನು ಪಡೆಯದ ಮಾನವ ಜನ್ಮ ವ್ರ‍್ಥ.  ಆ ನಿಧಿಯನ್ನು ಪಡೆಯಲು ನಮ್ಮೆಲ್ಲ ಸಾಧನೆಗಳು, ಪೂಜೆ ಧ್ಯಾನ ಎಲ್ಲವೂ. ಅದನ್ನು ಪಡೆಯಲು ಮರ‍್ಷಿಗಳು  ಹಲವಾರು ಮರ‍್ಗಗಳನ್ನು, ವಿಧಿ-ನಿಷೇಧಗಳನ್ನು ತಂದಿದ್ದಾರೆ. ಮಾನವ ಶರೀರದಲ್ಲಿ ಮಾತ್ರವೇ ಈ ಪರಮೋನ್ನತ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದಿದ್ದಾರೆ. ಅಂದರೆ, ಪ್ರತಿ ಮಾನವದೇಹವೂ ಒಂದು ಗುಪ್ತ ನಿಧಿಯ ಭಂಡಾರವಾಗಿದೆ. ಆ ನಿಧಿಯನ್ನು ಕುಂಡಲಿರೂಪವಾದ ರ‍್ಪವು ಕಾಯುತ್ತಿದೆಯಂತೆ . ತೀವ್ರವಾದ ತಪಸ್ಸಿನಿಂದ ಅದರ ಅನ್ವೇಷಣೆಗೆ ತೊಡಗಿ ಅದಕ್ಕೆ ಬೇಕಾದ ವಿಧಿ, ವಿಧಾನಗಳನ್ನು ಅನುಸರಿಸಿ ಪ್ರಾಮಾಣಿಕ ಪ್ರಯತ್ನ ನಡೆಸಿದಲ್ಲಿ ಆ ಕುಂಡಲಿನಿ ದೇವಿಯು ನಮ್ಮನ್ನು ಒಳಗೆ ಸಾಗಲು ಅವಕಾಶ ಕೊಡುತ್ತಾಳಂತೆ. ಅದಿಲ್ಲದೇ ಕೇವಲ ಭೌತಿಕ ಜೀವನದಲ್ಲಿ ಮಾತ್ರ ಆಸಕ್ತರಾಗಿ ಆ ನಿಧಿಯ ಗೋಜಿಗೇ ಹೋಗದ ಬಡಜೀವಿಗಳಿಗೆ ಅದು ಎಂದೆಂದಿಗೂ ಅನುಭವಕ್ಕೆ ಬಾರದ ಗುಪ್ತ ನಿಧಿಯೇ. ಆ ನಿಧಿಯನ್ನು ಪತ್ತೆ ಹಚ್ಚಿ ಕೈವಶ ಮಾಡಿ ಕೊಂಡವರೇ ನಮ್ಮ ಭಾರತೀಯ ಮರ‍್ಷಿಗಳು.

ಶ್ರೀರಂಗ ವಾಣಿ :

ಮರ‍್ಷಿಗಳ ಈ ಸಾಧನೆಯನ್ನುಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳು; “ಪರಮಾತ್ಮಜ್ಯೋತಿಯನ್ನು ಪಡೆಯುವುದು ಭಾರತ ಋಷಿಗಳ ದೃಷ್ಟಿಯಿಂದ ಜೀವನದ ಪರಮಧ್ಯೇಯ. ಅದೇ  ಪರಮಾನಂದಸಾಧನೆ. ಅದೇ ಮುಕ್ತಿ. ನದಿಯು ಸಮುದ್ರದೊಡನೆ ಒಂದಾಗಿಬಿಡುವಂತೆ ಆ ಆತ್ಮ-ದೀಪದೊಡನೆ ಐಕ್ಯ ಭಾವವನ್ನು ಹೊಂದುವುದಕ್ಕೆ “ಜ್ಞಾನ” ಎಂದು ಹೆಸರು.” ಎಂದು ನುಡಿದಿದ್ದರು.

ಆ ಗುಪ್ತನಿಧಿಗಾಗಿ ನಮ್ಮ ಪ್ರಯತ್ನವಿರಲಿ :

ಹಾಗಾಗಿ ನಾವು ಋಷಿಪ್ರಣೀತವಾದ ಸಾಧನಾಮರ‍್ಗವನ್ನು ಅನುಸರಿಸೋಣ.  ಲೌಕಿಕವಾದ ನಿಧಿಯ ಜೊತೆಯಲ್ಲೇ ಮರ‍್ಷಿಗಳು ತಮ್ಮ ತಪಸ್ಯೆಯಿಂದ ಅರುಹಿದ  ಪಾರಮರ‍್ಥಿಕ ಸುಖವನ್ನು, ಶಾಶ್ವತವಾದ ಆನಂದವನ್ನು ಕರುಣಿಸುವ ಆ ಪರಮಾತ್ಮ ನಿಧಿಯನ್ನು ಕಂಡುಕೊಳ್ಳುವ ಮರ‍್ಗದಲ್ಲಿ ಹೆಜ್ಜೆ ಹಾಕೋಣ.

ಅತ್ಯಂತ ದೊಡ್ಡದಾದ, ನಮ್ಮಲ್ಲೇ ಇರುವ ಆ ಗುಪ್ತನಿಧಿಯ ಪರಮಾನಂದವನ್ನು ಪಡೆಯುವಂತಾಗಲಿ ಎಂದು ಭಗವಂತನಲ್ಲಿ ಪ್ರರ‍್ಥಿಸೋಣ.

ಸೂಚನೆ: 6/06/2024 ರಂದು ಈ ಲೇಖನ ವಿಜಯ ಕರ್ನಾಟಕದ ಭೋದಿವೃಕ್ಷದಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 107 ಆಚಾರ್ಯಾತ್ ಪಾದಮಾದತ್ತೇ (Astakshara 107)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಆಚಾರ್ಯನಿಂದ ಬರುವ ವಿದ್ಯೆಯು ಕೇವಲ ಕಾಲುಭಾಗವಷ್ಟೇ!


ವಿದ್ಯೆಯನ್ನು ಕಲಿಯಲಿ - ಎಂದು ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ಅಲ್ಲಿ ಬೋಧಕರು ಪಾಠ ಮಾಡುತ್ತಾರೆ. ಇದರಿಂದಾಗಿ ತಾನೆ ಮಕ್ಕಳು ಕಲಿಯುವಂತಾಗುವುದು? - ಎಂಬುದೇ ನಮ್ಮೆಲ್ಲರ ಲೆಕ್ಕಾಚಾರವಲ್ಲವೇ?

ಇಂದಂತೂ ತಂದೆತಾಯಿಗಳಿಗೆ ಬಹಳವೇ ಆಕುಲತೆ: ಯಾವ ಶಾಲೆಗೆ ಮಕ್ಕಳನ್ನು ಕಳುಹಿಸುವುದಪ್ಪಾ?  - ಎಂಬ ಪ್ರಶ್ನೆ. ಎಷ್ಟೋ ವೇಳೆ ಬಗೆಹರಿಯದ ಪ್ರಶ್ನೆ. ಏಕೆ? ಈ ಶಾಲೆಗಿಂತ ಆ ಶಾಲೆಯಲ್ಲಿ ಒಳ್ಳೆಯ ಅಧ್ಯಾಪಕರಿದ್ದಾರೆ ಎಂದು ಯಾರೋ ಹೇಳಿಬಿಡುತ್ತಾರೆ. ಸರಿ, ಆ ಶಾಲೆಗೇ ತಮ್ಮ ಮಕ್ಕಳನ್ನು ಸೇರಿಸಬೇಕೆಂಬ ಆಗ್ರಹ ತಂದೆತಾಯಿಗಳಿಗೆ; ಮತ್ತು ಅದಕ್ಕಾಗಿ ಅದೆಷ್ಟು ಪರದಾಟ!

ಈಗಂತೂ ಶಾಲೆಗಳನ್ನು ನಡೆಸುವವರಿಗೆ ಶಾಲೆಗಳೆಂದರೆ ಧನಾರ್ಜನೆಯ ಕೇಂದ್ರವೆಂಬಂತೆಯೇ ಆಗಿಬಿಟ್ಟಿದೆ! ಶಾಲೆಗೆ ಒಳ್ಳೆಯ ಹೆಸರು ಬಂದುಬಿಟ್ಟಿದ್ದರಂತೂ ದುಡ್ಡು ಕೀಳಲು ಸುಸಂದರ್ಭವೆಂದೇ ಅವರ ಲೆಕ್ಕ. ಒಂದನೆಯ ತರಗತಿಯಿಂದ ಆರಂಭಿಸಿ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯನ್ನು ಗಳಿಸಲು ತಮಗೆ ಅದೆಷ್ಟು ಹಣವು ಹಿಂದೆ ವ್ಯಯವಾಗುತ್ತಿತ್ತೋ ಅದಕ್ಕೆ ಹತ್ತರಷ್ಟೋ ನೂರರಷ್ಟೋ, ತಮ್ಮ ಮಕ್ಕಳ ಕೇವಲ ಪ್ರೈಮರಿ ತರಗತಿಯ ವಿದ್ಯಾಭ್ಯಾಸಕ್ಕಾಗಿಯೇ ವ್ಯಯಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ, ತಂದೆತಾಯಿಗಳಿಗೆ!

ಹಿಂದೆಲ್ಲಾ, ಎಂದರೆ ಈಗೊಂದು ಐವತ್ತು ವರ್ಷದ ಹಿಂದೆ ಕೂಡ, ಪರಿಸ್ಥಿತಿಯೆಂದರೆ ಹೇಗಿತ್ತೆಂಬುದು ಕೆಲವರಿಗಾದರೂ ಗೊತ್ತಿರಬಹುದು. ತಮ್ಮ ಮಕ್ಕಳು ಮಂಕಾಗಿದ್ದರೋ, ಶಾಲೆಯಲ್ಲಿ ಅಧ್ಯಾಪಕರು ಪಾಠವನ್ನು ಚೆನ್ನಾಗಿ ಮಾಡುತ್ತಿಲ್ಲವೆಂದಾದರೋ, ಮಕ್ಕಳನ್ನು "ಮನೆಪಾಠ"ಕ್ಕೂ ಕಳುಹಿಸುತ್ತಿದ್ದರು. ಚೆನ್ನಾಗಿ ಪಾಠಮಾಡುವವರೆಂದು ಹೆಸರು ಮಾಡಿರುವವರನ್ನು ಅರಸಿ, ಅವರಲ್ಲಿಗೆ ತಮ್ಮ ಮಕ್ಕಳನ್ನು ಪಾಠಕ್ಕೆ ಕಳುಹಿಸುವ ತವಕ, ಹೆತ್ತವರಿಗೆ.

ಅದಕ್ಕೆ ಇನ್ನೊಂದು ಮುಖವೂ ಇತ್ತು. ಹಾಗೆ ಶಾಲೆಯಲ್ಲದೆ ಮತ್ತೊಬ್ಬರ ಬಳಿಯೂ ಪಾಠಕ್ಕಾಗಿ ಯಾರಾದರೂ ಹೋಗುವರೆಂದರೆ, ಹಿಂದೆ ಅದು ನಾಚಿಕೆಯ ವಿಷಯವೇ ಆಗಿರುತ್ತಿತ್ತು: ಮಕ್ಕಳಿಗೂ, ಅಪ್ಪ-ಅಮ್ಮಂದಿರಿಗೂ! ಬೆಳಗಿನ ಜಾವವೇ ಬೇರೆ ಯಾರಿಗೂ ತಿಳಿಯದಂತೆ ಪಾಠಕ್ಕೆ ಹೋಗಿಬರುವ ಸನ್ನಿವೇಶವಿತ್ತು. ಈಗ ಬಿಡಿ, ಅದು ರಾಜಾರೋಷವಾಗಿಯೇ ಆಗುತ್ತಿದೆ. ನಾಚಿಕೆಯ ಬದಲು ಜಂಭದ ಮಾತೂ ಆಗಿದೆ! ಅಲ್ಲದೆ, ಎಳಸಿನಿಂದಲೇ ಹೀಗೆ ಪಾಠಕ್ಕೆ ಹಾಕುವುದೂ ಇಂದಿನ ಪರಿಪಾಟಿಯಾಗಿಬಿಟ್ಟಿದೆ; ಅತ್ತ, ಶಾಲೆಗಳಲ್ಲಿ ಪಾಠವೂ ಚೆನ್ನಾಗಿ ನಡೆಯುತ್ತಿಲ್ಲ.

ಹಾಗೆ ಪಾಠಗಳನ್ನು ನಡೆಸುವವರೂ ತಮ್ಮದೇ ಕೂಟಗಳನ್ನೂ ಮಾಡಿಕೊಂಡು, ಹೇಗಾದರೂ ಹೆಚ್ಚು ಹಣ ಮಾಡಿಕೊಳ್ಳಲೇ ಹೊಂಚು ಹಾಕುವುದೂ ನಡೆಯುತ್ತಿದೆ. ಈಗಂತೂ ಎಂತಹ ದುಷ್ಟವಾದ ವರ್ತನೆಯಾಗುತ್ತಿದೆಯೆಂದರೆ ಹೇಗಾದರೂ ಮಾಡಿ ಪ್ರಶ್ನಪತ್ರಿಕೆಯನ್ನೇ ಕಳ್ಳತನದಲ್ಲಿ ಅರಿತುಕೊಂಡು, ವಿದ್ಯಾರ್ಥಿಗಳಿಗೆ ಮೊದಲೇ ಪ್ರಶ್ನೆಗಳ ಸುಳಿವಿತ್ತು, ಅದರಿಂದಲೂ ಹಣಮಾಡುವ ಪರಿಯಾಗಿದೆ!

ಪರಿಸ್ಥಿತಿಯು ಇಂದು ಅದೆಷ್ಟು ವಿಷಮಿಸಿದೆಯೆಂದರೆ, ಇತ್ತ ವಿದ್ಯಾರ್ಥಿಗಳೂ ಸಮಗ್ರವಾಗಿ ಮತ್ತು ಆಳವಾಗಿ ಜ್ಞಾನವನ್ನು ಸಂಪಾದಿಸಿಕೊಳ್ಳುವುದರ ಬದಲು, ಮೇಲೆ ಹೇಳಿದ ದುರ್ಮಾರ್ಗದಿಂದಲೇ ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನಗಳ ಊಹೆ, ಅವುಗಳಿಗೆ ಮಾತ್ರವಷ್ಟೆ ಉತ್ತರಕ್ಕೆ ಸಿದ್ಧತೆ - ಇವುಗಳಲ್ಲಿ ತೊಡಗುವುದೇ ಸುಲಭವೆಂದೆಣಿಸುವಂತಾಗಿದೆ. ಹೀಗಿದೆ ಇಂದಿನ ಅಧ್ಯಾಪಕ-ವಿದ್ಯಾರ್ಥಿಗಳ ನಡುವಣದ ಶಿಕ್ಷಣ-ವೈಖರಿ!

ಆದರೆ, ನಮ್ಮ ದೇಶದಲ್ಲಿ ಸಹಸ್ರಾರು ವರ್ಷಗಳಿಂದಲೂ ವಿದ್ಯಾಭ್ಯಾಸವು ನಡೆಯುತ್ತಿತ್ತಲ್ಲವೇ? ಹಾಗಾದರೆ ಅಲ್ಲಿದ್ದ ಕ್ರಮವೇನು? - ಎಂಬ ಕುತೂಹಲವು ಮೂಡುವುದಷ್ಟೆ? ಅದರ ಕೆಲವಂಶಗಳನ್ನು ಸೂಚಿಸುವ ಸುಂದರವಾದ ಪದ್ಯವೊಂದಿದೆ. ಕ್ರಿಸ್ತಪೂರ್ವಕಾಲದ ಆಪಸ್ತಂಬ-ಧರ್ಮಸೂತ್ರ ಎಂಬ ಗ್ರಂಥಕ್ಕೆ, ಸುಮಾರು ಹದಿಮೂರನೆಯ ಶತಮಾನದ ಹರದತ್ತ ಎಂಬುವನು ವ್ಯಾಖ್ಯಾನ ಮಾಡುತ್ತಾ ಈ ಶ್ಲೋಕವನ್ನು ಉಲ್ಲೇಖಿಸಿದ್ದಾನೆ.

ಅದರ ಸಾರವೇನು? ವಿದ್ಯಾರ್ಥಿಯು ತನ್ನ ಆಚಾರ್ಯನಿಂದ ಪಡೆಯುವುದು ವಿದ್ಯೆಯ ಕಾಲುಭಾಗ ಮಾತ್ರ (ಆಚಾರ್ಯಾತ್ ಪಾದಂ ಆದತ್ತೇ). ಇನ್ನು ಕಾಲುಭಾಗವು ಶಿಷ್ಯನು ಸ್ವ-ಮೇಧೆಯಿಂದಲೇ ಸಂಪಾದಿಸತಕ್ಕದ್ದು. ಇನ್ನು ಕಾಲುಭಾಗವು ಬರುವುದು ಸಹಪಾಠಿಗಳೊಂದಿಗೆ ಪಾಠಗಳ ಬಗ್ಗೆ ಚರ್ಚಿಸುತ್ತಿರುವುದರಿಂದ. ಇನ್ನುಳಿದ ಕಾಲುಭಾಗವು ಕಾಲಕ್ರಮದಲ್ಲಿ ಪಾಕಹೊಂದುತ್ತದೆ.

"ಮೂಲಭೂತವಾದ ಜ್ಞಾನವುಳ್ಳ ಗುರುವೇ ಕೊಟ್ಟರೂ ವಿದ್ಯೆಯು ಸ್ಥಿರವಾಗಿ ನಿಲ್ಲಲು ಬೇಕಾದ ಅಂಶಗಳು ಇಲ್ಲಿವೆ" ಎಂದು ಹೇಳಿ, ಹರದತ್ತನು ಸೂಚಿಸಿರುವ ಈ ಪದ್ಯವನ್ನು ಶ್ರೀರಂಗಮಹಾಗುರುಗಳು ತಮ್ಮ ಆಯುರ್ವೇದ-ಪ್ರವಚನದಲ್ಲಿ ಉಲ್ಲೇಖಿಸಿದ್ದಾರೆ. ಸಾಕ್ಷಾದ್ ಆಯುರ್ವೇದಾಚಾರ್ಯನೇ ಬಂದು ಉಪದೇಶಿಸಿದರೂ ವಿದ್ಯೆಯು ಬೆಳೆಯುವುದೇ ಹೀಗೆ - ಎಂದು ತಿಳಿಸಿ, ಕೇವಲ ಪುಸ್ತಕ-ವಿದ್ಯೆಯೇ ವಿದ್ಯೆಯಲ್ಲವೆನ್ನುವುದನ್ನೂ ಅರುಹಿದ್ದಾರೆ.

ಹೀಗೆ ಗುರು-ಶಿಷ್ಯರಿಬ್ಬರ ಮೇಲೂ ಜವಾಬ್ದಾರಿಯಿರುವುದನ್ನೂ, ಶಿಷ್ಯನ ಮನನದ ಮೇಲೇ ಹೆಚ್ಚಿರುವುದನ್ನೂ ಮನಗಾಣಲು ಈ ಶ್ಲೋಕವು ಒಳ್ಳೆಯ ಸೂಚಕವಾಗಿದೆಯಲ್ಲವೇ?

ಸೂಚನೆ: 6/6//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ

ಅಷ್ಟಾಕ್ಷರೀ 106 ಸುವರ್ಣಂ ಅಜರಾಮರಂ (Astakshara 106)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಈಚೆಗಂತೂ ಚಿನ್ನ ಸುದ್ದಿಯಲ್ಲಿದೆ.

ಈ ಒಂದು ವರ್ಷ ಚಿನ್ನಕ್ಕೆ ಹಣ ಸುರಿಯಬೇಡಿರೆಂದು ದೇಶದ ಪ್ರಧಾನಿಗಳು ಜನತೆಗೆ ಕರೆ ಕೊಟ್ಟಿರುವರಷ್ಟೆ. ಯುದ್ಧ-ಸನ್ನಿವೇಶದಲ್ಲಿ ದೇಶದ ಆರ್ಥಿಕ-ಕ್ಷೇಮಕ್ಕಾಗಿ ಈ ಹಿತೋಕ್ತಿ. ಎಲ್ಲ ದೇವಾಲಯಗಳ ಚಿನ್ನವನ್ನೂ ಸರ್ಕಾರವು ವಶಪಡಿಸಿಕೊಳ್ಳಲಿದೆಯೆಂಬ ಸುಳ್ಳು ವದಂತಿಯನ್ನೂ ಈಚೆಗೆ ಹಬ್ಬಿಸಲಾಯಿತಷ್ಟೆ.

ಚಿನ್ನಕ್ಕೇಕೆ ಇಷ್ಟು ಪ್ರಾಮುಖ್ಯ? ಅದೆಷ್ಟು ಬೆಲೆ ಬಾಳುವಂತಹುದು! ಒಂದು ಗ್ರಾಂಗೆ ಹದಿನಾರು ಸಾವಿರ ರೂಪಾಯಿಯ ಹತ್ತಿರದ ಬೆಲೆ, ಇಂದು - ಶೇ ೯೯ರಷ್ಟು ಶುದ್ಧವಾದ ಚಿನ್ನಕ್ಕೆ (೨೪ ಕ್ಯಾರಟ್)!  ಶೇ. ೯೨ರಷ್ಟರದ್ದಕ್ಕೆ (೨೨ ಕ್ಯಾರಟ್) ಇನ್ನೊಂದು ಸಾವಿರ ಕಡಿಮೆಯೆಂದುಕೊಳ್ಳಿ. ಚಿನ್ನದ ಒಂದು ಕಿರು-ಸರವೆಂದರೆ ಇಪ್ಪತ್ತುಸಾವಿರದಿಂದ ಆರಂಭಿಸಿ ಐದು ಲಕ್ಷದವರೆವಿಗೂ ಆದೀತು!

ಚಿನ್ನವು ಅತ್ಯಂತ ನಮ್ಯವಾದ ಪದಾರ್ಥ. ಒಂದು ಔನ್ಸ್ (೩೦ ಗ್ರಾಂಗಳಿಗಿಂತ ಕೊಂಚ ಕಡಿಮೆ) ಚಿನ್ನವನ್ನು ತೆಳು-ತಂತಿಯನ್ನಾಗಿಸಿ ೫೦ ಮೈಲುಗಳಷ್ಟುದ್ದ ಎಳೆಯಬಹುದೆನ್ನುತ್ತಾರೆ! ಅಥವಾ ಅದನ್ನೇ ತೆಳು ಚಪ್ಪಟೆಯಾಗಿಸಿ ೯ ಮೀಟರುಗಳ ಚದರವಾಗಿಸಬಹುದೆನ್ನುತ್ತಾರೆ!

ಚಿನ್ನವು ಕರಗುವುದು ೧೦೦೦ ಡಿಗ್ರಿಗೆ; ಕುದಿಯುವುದು ೨೮೦೦ ಡಿಗ್ರಿಗೆ. ಮನುಷ್ಯದೇಹದ ತಾಪಮಾನವಾದ ೩೭ ಡಿಗ್ರಿಗೆ ಚಿನ್ನವು ಬೇಗನೇ ಹೊಂದಿಕೊಳ್ಳುವುದೆಂದೇ ಆಭರಣಗಳನ್ನು ಚಿನ್ನದಿಂದ ಮಾಡಿಸುವುದು ಪ್ರಚುರ. ಜಗತ್ತಿನಲ್ಲಿ ಲಭ್ಯವಾಗಿರುವ ಚಿನ್ನದ ಅರ್ಧಭಾಗದಷ್ಟು ಆಭರಣಕ್ಕೇ ಬಳಕೆಯಾಗಿದೆಯೆನ್ನುತ್ತಾರೆ.

ಕಳ್ಳರಿಗೆ ಅತ್ಯಂತ-ಪ್ರಿಯವಾದ ವಸ್ತುವೆಂದರೆ ಇದೇ. ಏಕೆ? ಲಕ್ಷಾಂತರರೂಪಾಯಿಯ ವಸ್ತುವನ್ನು ಕಿರುಕಿಸೆಯಲ್ಲಿ ತುರುಕಿಕೊಂಡು ಓಡಬಹುದು!

ಚಿನ್ನದ ಪ್ರಕಾಶವೆಂತಹುದು! ಬಂಗಾರದ ಬಣ್ಣವೆಂದರೆ ಹಳದಿಯ ಹೊಳಪು! ಅದಕ್ಕೇ ಅಲ್ಲವೇ, ಅದು ಸು-ವರ್ಣ, “ಒಳ್ಳೆಯ ಬಣ್ಣವುಳ್ಳದ್ದು”! ಸ್ವರ್ಣವೆಂದರೂ ಅದೇ.  ಸ್ವರ್ಣದಿಂದಲೇ ಪೊನ್ನು-ಹೊನ್ನುಗಳು ಬಂದಿರುವುವೆನ್ನುವರು. ಸಂಸ್ಕೃತದ ಭೃಂಗಾರವೇ ಬಂಗಾರವಾಗಿದೆ. ಕಾಂಚನ-ರುಕ್ಮಗಳೆಂದರೂ ಹೊಳೆಯುವುದೇ. ಮೈಬಣ್ಣ ಯಾವುದೇ ಇರಲಿ ಎಲ್ಲರಿಗೂ ಮೆರಗು ತರುವುದೇ ಸುವರ್ಣ.

ಚಿನ್ನಕ್ಕೂ ಭಾರತಕ್ಕೂ ಅನಾದಿಕಾಲದ ಸಂಬಂಧ. ಭಾರತದಲ್ಲಿ ಭಾರೀಪ್ರಮಾಣದಲ್ಲಿ ಬಂಗಾರವಿದ್ದುದನ್ನು ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ್ದ ಮೆಗಾಸ್ತನೀಸ್ ಹೇಳಿದ್ದಾನೆ.

ಇನ್ನೂ ಹಿಂದಕ್ಕೆ ವೈದಿಕ-ಸಾಹಿತ್ಯಕ್ಕೆ ಹೋದರೆ, ಲಕ್ಷ್ಮೀದೇವಿಯನ್ನು ಹಿರಣ್ಯ-ವರ್ಣಾ ಎಂದಿರುವುದಿದೆ. ಚಿನ್ನವು ಹಿರಣ್ಯ; ಚಿನ್ನದಿಂದಾದುದು ಹಿರಣ್ಮಯ. ವೇದಗಳಲ್ಲಿ ರಥದ ಮುಂಭಾಗಕ್ಕೆ ಚಿನ್ನವನ್ನು ಬಳಸುತ್ತಿದ್ದುದನ್ನು ಹೇಳಿದೆ. ಇನ್ನು ಸೂರ್ಯನ ರಥವೇ ಹಿರಣ್ಮಯ! ಮೇರು/ಸುಮೇರು/ ಮಹಾಮೇರುವೆಂದರೆ ಹೇಮಾದ್ರಿ: ಅರ್ಥಾತ್, ಚಿನ್ನದ ಪರ್ವತ!

ಕಾಲುಗುರಿನಿಂದ ಹಿಡಿದು ತಲೆಗೂದಲಿನವರೆಗೂ ಹಿರಣ್ಮಯನಾದ ಪುರುಷನನ್ನು ಛಾಂದೋಗ್ಯೋಪನಿಷತ್ತು ಚಿತ್ರಿಸುತ್ತದೆ. ಸತ್ಯ-ಮುಖವನ್ನು ಹಿರಣ್ಮಯ-ಪಾತ್ರವು ಮುಚ್ಚಿರುವುದನ್ನು ಈಶೋಪನಿಷತ್ತು ಹೇಳಿದೆ.

ಸೃಷ್ಟಿಯ ಆರಂಭವೇ ಹಿರಣ್ಯಗರ್ಭನಿಂದ. ಅಸುರರಲ್ಲಿ ಪ್ರಸಿದ್ಧರಾದ ಹಿರಣ್ಯಾಕ್ಷ-ಹಿರಣ್ಯಕಶಿಪುಗಳ ಹೆಸರಲ್ಲೂ ಹಿರಣ್ಯವಿದೆ. ಲಂಕೆಯನ್ನು ಸ್ವರ್ಣಮಯೀ ಎಂದಿದೆ. ಸೀತೆಯ ಆಕೃಷ್ಟಳಾದದ್ದು ಹೇಮ-ಮೃಗಕ್ಕೆ. ಅಶ್ವಮೇಧ-ಸಂದರ್ಭದಲ್ಲಿ ಸೀತೆಯ ಸ್ವರ್ಣ-ಪ್ರತಿಮೆಯನ್ನೇ ರಾಮನಿಟ್ಟುಕೊಂಡಿದ್ದುದು. ಕೃಷ್ಣ-ಕಥೆಯಲ್ಲಿಯ ರುಕ್ಮಿ-ರುಕ್ಮಿಣಿಗಳಿಬ್ಬರ ಹೆಸರೂ ರುಕ್ಮದಿಂದಾದುದು. 

ಚಿನ್ನಕ್ಕೆ ಪರ್ಯಾಯಗಳು ಅಮರಕೋಶದಲ್ಲಿ ೨೫. ಉಳಿದವನ್ನೂ ಸೇರಿಸಿಕೊಂಡರೆ ೫೮. ಹೀಗೆ ಭಾರತದಲ್ಲಿಯ ಸ್ವರ್ಣ-ರಾಶಿಯೂ ವಿಪುಲ, ಅದಕ್ಕಿರುವ ಶಬ್ದರಾಶಿಯೂ ವಿಪುಲ!

ಹಿಂದೆ ನಮ್ಮಲ್ಲಿ ಚಿನ್ನದ ನಾಣ್ಯಗಳು ಬಳಕೆಯಲ್ಲಿದ್ದವು: "ಹತ್ತು ಚಿನ್ನಗಳನ್ನು ಕೊಡು" ಎಂಬ ಮೃಚ್ಛಕಟಿಕದಲ್ಲಿಯ ಮಾತಿಗೆ, “ಹತ್ತು ಸುವರ್ಣ-ನಾಣ್ಯಗಳನ್ನು ಕೊಡು” ಎಂದರ್ಥ.

ಚಿನ್ನವು ಆಯುಸ್, ಪ್ರಜ್ಞೆ, ವೀರ್ಯ, ಬಲ, ಸ್ಮೃತಿಗಳನ್ನುಂಟುಮಾಡುತ್ತದೆ – ಎನ್ನುತ್ತದೆ, ಆಯುರ್ವೇದ. ಅಲ್ಲದೆ ವಾಗ್-ವಿಶುದ್ಧಿ, ಕಾಂತಿಗಳಲ್ಲದೆ, ಪಾಪ-ಕ್ಷಯವನ್ನೂ ಸಹ ಮಾಡುವುದೆಂದಿದೆ.

ವಿವಾಹ-ಸಂದರ್ಭದಲ್ಲಿ ಕನ್ಯೆಯನ್ನು ಕನಕ-ಸಂಪನ್ನೆಯಾಗಿಯೇ ಧಾರೆಯೆರೆದುಕೊಡುವುದು: ಕನ್ಯೆ-ಕನಕಗಳೆರಡಕ್ಕೂ ಹೊಳೆಯುವುದೆಂದೇ ಅರ್ಥ. ಎಂಭತ್ತೊಂದು ದಾಟಿದವರಿಗೆ ನಡೆಸುವ ಸಹಸ್ರಚಂದ್ರ-ದರ್ಶನದ ಆಚರಣೆಯಲ್ಲಿ ಸುವರ್ಣಾಭಿಷೇಕವುಂಟು. 

ಹಿತವೂ ರಮಣೀಯವೂ ಆಗಿರುವುದರಿಂದಲೇ ಚಿನ್ನವನ್ನು ಹಿರಣ್ಯವೆನ್ನುವುದು. ಎಂದೇ, ಪಂಚ-ಮಹಾಪಾತಕಗಳಲ್ಲಿ ಹಿರಣ್ಯ-ಸ್ತೇಯ ಅಥವಾ ಚಿನ್ನವನ್ನು ಕದಿಯುವುದನ್ನೇ ಮೊಟ್ಟಮೊದಲನೆಯದನ್ನಾಗಿ ಛಾಂದೋಗ್ಯೋಪನಿಷತ್ತು ಪರಿಗಣಿಸಿದೆ.

ಇವೆಲ್ಲಕ್ಕೂ ಮಿಗಿಲಾಗಿ, ಚಿನ್ನವೆಂಬುದು ಏಕೆ ಅಷ್ಟು ವಿಶಿಷ್ಟ/ಪವಿತ್ರವೆಂಬುದನ್ನು ಶ್ರೀರಂಗಮಹಾಗುರುಗಳು ವಿವರಿಸಿರುವ ನುಡಿಯನ್ನು ಗಮನಿಸಬೇಕು: “ಸಮಾಧಿಸ್ಥಿತಿಗೆ ಏರುವಾಗ ಯೋಗಿಯಲ್ಲಿ ಯಾವ ನಾಡೀ-ಗತಿಯು ಆರಂಭವಾಗುತ್ತದೋ ಅಂತಹ ನಾಡೀ-ಗತಿಯನ್ನು ಸ್ವರ್ಣ-ಧಾರಣವು ಉಂಟುಮಾಡುತ್ತದೆ.” ಸ್ವತಃ ಯೋಗಿಗಳೂ ನಾಡೀವಿಜ್ಞಾನ-ಕುಶಲರೂ ಆದ ಅವರು ಪ್ರಯೋಗ-ಪೂರ್ವಕವಾಗಿ ತಿಳಿಸಿಕೊಟ್ಟಿದ್ದ ವಿಷಯವಿದು.

ಲಕ್ಷವರ್ಷಗಳಾದರೂ ಯಾವುದೇ ಬದಲಾವಣೆಯಿಲ್ಲದೆ ಉಳಿದುಕೊಳ್ಳುವ ಚಿನ್ನವನ್ನು “ಸುವರ್ಣಂ ಅಜರಾಮರಂ” - ಮುಪ್ಪುಸಾವುಗಳಿಲ್ಲದ್ದು ಚಿನ್ನ! - ಎಂದು ನಮ್ಮ ಪೂರ್ವಿಕರು ಕೊಂಡಾಡಿದ್ದರೆ ಆಶ್ಚರ್ಯವೇನು?

ಸೂಚನೆ: 21/5//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.

Tuesday, June 2, 2026

ವ್ಯಾಸ ವೀಕ್ಷಿತ 190 ಉತ್ತರದತ್ತ ಅರ್ಜುನ: ಭಗದತ್ತನಿತ್ತ ಸಂಗರ (Vyaasa Vikshita190)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png



ಧನಪತಿಯಾದ ಕುಬೇರನ ದಿಕ್ಕೆಂದು ಪ್ರಸಿದ್ಧವಾದದ್ದು ಉತ್ತರದಿಕ್ಕು. ಅರ್ಜುನನು ಆ ದಿಕ್ಕನ್ನು, ಹಾಗೆಯೇ ಭೀಮಸೇನನು ಪೂರ್ವದಿಕ್ಕನ್ನು, ಜಯಿಸಿದನು. ಸಹದೇವನು ದಕ್ಷಿಣವನ್ನು, ಮತ್ತು ಅಸ್ತ್ರಜ್ಞನಾದ ನಕುಲನು ಪಶ್ಚಿಮದಿಕ್ಕನ್ನು ಜಯಿಸಿದನು.

ಇತ್ತ ಧರ್ಮರಾಜನಾದ ಯುಧಿಷ್ಠಿರ-ಪ್ರಭುವು ಮಾತ್ರ ಖಾಂಡವಪ್ರಸ್ಥದ ಮಧ್ಯದಲ್ಲಿಯೇ ಇದ್ದುಕೊಂಡು, ಮಿತ್ರರಿಂದ ಸುತ್ತುವರಿಯಲ್ಪಟ್ಟವನಾಗಿ, ಉತ್ತಮವಾದ ರಾಜಲಕ್ಷ್ಮಿಯಿಂದ ಕಂಗೊಳಿಸಿದನು. ಹಾಗೆಂದು ಸಂಕ್ಷೇಪವಾಗಿ ಹೇಳಿದರೇನು ಬಂತು? ವಿಸ್ತೃತವಾಗಿಯೂ ಹೇಳಬೇಕಲ್ಲವೇ?

ಮೊದಲು ಅರ್ಜುನನ ವಿಷಯ. ಕುಲಿಂದದೇಶದ ಅರಸರನ್ನು ಅರ್ಜುನನು ಮೊಟ್ಟಮೊದಲು ಜಯಿಸಿದನು. ಅದಕ್ಕಾಗಿ ತೀವ್ರವಾದ ಶ್ರಮವೇನೂ ಆತನಿಗೆ ಬೇಕಾಗಲಿಲ್ಲ. ಅವರೊಂದಿಗೆ ಆನರ್ತ, ಕಾಲಕೂಟ ಎಂಬ ರಾಜ್ಯಗಳನ್ನು ಗೆದ್ದನು. ಬಳಿಕ ಸುಮಂಡಲನೆಂಬ ರಾಜನನ್ನು ಗೆದ್ದನು. ಆಮೇಲೆ ಶಾಕಲದ್ವೀಪ ಹಾಗೂ ಸಪ್ತದ್ವೀಪಗಳ ಅರಸರೊಂದಿಗೆ ತುಮುಲವಾದ ಯುದ್ಧವೇ ಆಯಿತು. ಅಲ್ಲೆಲ್ಲಾ ಉತ್ತಮ-ಧನುರ್ಧಾರಿಗಳೇ ಇದ್ದರು. 

ಅವರನ್ನು ಸೋಲಿಸಿದ ಬಳಿಗೆ ಪ್ರಾಗ್ಜ್ಯೋತಿಷ-ಪುರದತ್ತ ಧಾವಿಸಿದನು. ಅಲ್ಲಿನ ರಾಜ ಭಗದತ್ತ. ಆತನಿಗೆ ಕಿರಾತರ ಹಾಗೂ ಚೀನದೇಶದವರ ಸಹಕಾರವಿತ್ತು. ಸಾಗರ ಹಾಗೂ ಅದರ ಬಳಿಯ ಅನೂಪ(ಎಂದರೆ ಜೌಗು ಪ್ರದೇಶ)ಗಳ ಮಂದಿಯ ಸಹಕಾರವೂ ಇತ್ತು. ಎಂಟು ದಿನಗಳ ಯುದ್ಧವದು. 

ಅಷ್ಟು ದಿನ ಸೆಣಸಿದ ಭಗದತ್ತನು ನಗುತ್ತಾ ದಣಿವರಿಯದ ಅರ್ಜುನನಿಗೆ ಹೇಳಿದನು: "ಮಹಾಬಾಹೋ ಅರ್ಜುನ, ಸಂಗ್ರಾಮಕ್ಕೆ ಶೋಭೆ ನಿನ್ನ ಪರಾಕ್ರಮ. ಇಂದ್ರಪುತ್ರನೆನಿಸಿದ ನಿನಗೆ ಇದು ಒಪ್ಪುತ್ತದೆ ಬಿಡು! ನಾನು ಸಹ ಇಂದ್ರನ ಮಿತ್ರನೇ. ರಣದಲ್ಲಿ ಶಕ್ರನಿಗೆ ಏನೂ ಕಡಿಮೆಯಿಲ್ಲದವನು. ಆದರೂ ನಿನ್ನ ಮುಂದೆ ನಾ ನಿಲ್ಲಲಾರೆ. ಪಾಂಡುಪುತ್ರನೇ, ನಿನಗೇನು ಬೇಕು ಹೇಳು, ನಿನಗಾಗಿ ನಾನೇನನ್ನು ಮಾಡಲಿ? ವತ್ಸನೇ (ಎಂದರೆ ಪುತ್ರನೇ), ನೀನೇನನ್ನು ಹೇಳುವೆಯೋ ಅದನ್ನು ಮಾಡುವೆ" ಎಂದನು.

ಆಗ ಅರ್ಜುನನು ಹೇಳಿದನು: "ಕುರುವಂಶದ ಅರಸರಲ್ಲಿ ಶ್ರೇಷ್ಠನಾದವನು ಧರ್ಮರಾಜನಾದ ಯುಧಿಷ್ಠಿರ. ಆತನು ಧರ್ಮಜ್ಞ, ಸತ್ಯಸಂಧ. ಆತನು ದೊಡ್ಡಯಜ್ಞವನ್ನು ಮಾಡಿ ವಿಪುಲವಾದ ದಕ್ಷಿಣೆಯನ್ನು ಕೊಡಲಿರುವನು. ಆತನು ಚಕ್ರವರ್ತಿಯಾಗಬೇಕೆಂಬುದು ನನ್ನ ಬಯಕೆ. ಆತನಿಗೆ ನೀನು ಕರವನ್ನೀಯಬೇಕೆಂಬುದೇ ನನ್ನ ಅಪೇಕ್ಷೆ. ನೀನು ನನ್ನ ತಂದೆಯ ಸಖ. ನನ್ನ ವಿಷಯದಲ್ಲೂ ಪ್ರೀತಿಯುಳ್ಳವನು. ಆದ್ದರಿಂದ ನಾನು ನಿನಗೆ ಅಪ್ಪಣೆ ಮಾಡಲಾರೆ. ಆದುದರಿಂದ ಪ್ರೀತಿಪೂರ್ವಕವಾಗಿಯೇ ಕರವನ್ನು ಕೊಡೋಣವಾಗಲಿ" ಎಂದನು.

ಅದಕ್ಕೆ ಭಗದತ್ತನು, "ಕುಂತಿಪುತ್ರನೇ, ನನಗೆ ನೀನೆಂತೊ ಅಂತೆಯೇ ಯುಧಿಷ್ಠಿರನೂ. ಅದೆಲ್ಲವನ್ನೂ ಮಾಡುತ್ತೇನೆ. ಮತ್ತೂ ಏನನ್ನು ಮಾಡಬೇಕು, ಹೇಳು" ಎಂದನು. ಆತನು ಹಾಗೆ ಹೇಳಲು ಅರ್ಜುನನು ಹೀಗೆಂದನು: "ಇಷ್ಟರಿಂದಲೇ ನನಗೆಲ್ಲವನ್ನೂ ನೀ ಮಾಡಿದಂತೆ. ನನಗೆ ಅನುಮತಿಯನ್ನು ಕೊಡು, ನಾನಿನ್ನು ಹೊರಡಬೇಕು" ಎಂದನು. 

ಹೀಗೆ ಅವನನ್ನು ಜಯಿಸಿ ಅರ್ಜುನನು ಉತ್ತರದಿಕ್ಕಿನಲ್ಲಿ ಮತ್ತೂ ಮುಂದುವರೆದನು. ಅಂತರ್ಗಿರಿ, ಬಹಿರ್ಗಿರಿ, ಉಪಗಿರಿ - ಎಂಬ ಭೂಪ್ರದೇಶಗಳನ್ನು ಜಯಿಸಿದನು. ಅಲ್ಲಿದ್ದ ಪರ್ವತಗಳನ್ನೂ, ಪರ್ವತವಾಸಿಗಳನ್ನೂ ತನಗೆ ಅಧೀನರನ್ನಾಗಿ ಮಾಡಿಕೊಂಡು ಅವರಿಂದ ಮಾಡಬೇಕಾದ ವಸೂಲಿಯನ್ನು ಮಾಡಿದನು. 

ಹಾಗೆ ಮಾಡಿಯೂ ಅವರನ್ನು ಪ್ರಸನ್ನಗೊಳಿಸಿ, ಅವರೆಲ್ಲರೊಂದಿಗೆ ಮುಂದಿನ ರಾಜ್ಯವಾದ ಉಲೂಕದ ರಾಜನಾದ ಬೃಹಂತನ ಮೇಲೇರಿಹೋದನು. ಆತನು ಹೋಗುವಾಗ ಮೃದಂಗದ ನಾದವೇನು, ರಥನೇಮಿಯ ನಾದವೇನು, ಗಜಗಳ ಗದ್ದಲಗಳೇನು! ಇವೆಲ್ಲವುಗಳಿಂದ ಭೂಮಿಯೇ ನಡುಗಿತು.

ಸೂಚನೆ : 31/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 68 (Prasnottara Ratnamalike 68)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೬೮. ಯಾವ ದೇಶವನ್ನು ತ್ಯಾಗ ಮಾಡಬೇಕು?

ಚಾಡಿಕೋರ ಮತ್ತು ಜಿಪುಣನಾದ ರಾಜನಿದ್ದ ದೇಶವನ್ನು. 


ಒಂದು ದೇಶ ಸುಭಿಕ್ಷವಾಗಿ ಇದ್ದರೆ ಆ ದೇಶದಲ್ಲಿ ವಾಸಮಾಡುವ ಜನರು ಕೂಡ ಅತ್ಯಂತ ಸಂತೋಷದಿಂದ ಇರುತ್ತಾರೆ. ಇದಕ್ಕೆ ಮುಖ್ಯವಾದ ಕಾರಣ ಆ ವ್ಯವಸ್ಥೆ. ಆ ವ್ಯವಸ್ಥೆಯನ್ನು ನೋಡಿಕೊಳ್ಳಲು ಅನೇಕ ಜನರು ಇರುತ್ತಾರೆ. ಆ ವ್ಯವಸ್ಥೆಗೆ ಒಬ್ಬ ಮುಖ್ಯಸ್ಥ ಎಂಬುವವನು ಇರುತ್ತಾನೆ. ಆ ದೇಶದಲ್ಲಿ ಒಬ್ಬ ರಾಜನಿರುತ್ತಾನೆ. ಅನೇಕ ಮಂತ್ರಿಗಳು, ಅನೇಕ ಸಾಮಂತರು ಹೀಗೆ ಒಂದು ಸುವ್ಯವಸ್ಥಿತವಾಗಿ ನಡೆಸಲು ಬೇಕಾದ ಎಲ್ಲ ರೀತಿಯ ಅನುಕೂಲತೆಗಳು ಇರುತ್ತವೆ. ಹೀಗಿದ್ದಾಗ ಆ ದೇಶದಲ್ಲಿ ವಾಸ ಮಾಡಬೇಕು. ಆದರೆ ಇಲ್ಲಿ ಕೇಳುವ ಪ್ರಶ್ನೆ ಇದಕ್ಕೆ ವಿಪರೀತವಾಗಿತ್ತು. ಇಂತಹ ವ್ಯವಸ್ಥೆಯನ್ನು ಹಾಳುಮಾಡುವ ವ್ಯಕ್ತಿ ಇದ್ದರೆ, ಅಂತಹ ದೇಶದಲ್ಲಿ ವಾಸಮಾಡಬಾರದು ಎಂಬುದಾಗಿ ಹೇಳುತ್ತದೆ. ಅಂದರೆ ಒಬ್ಬ ಚಾಡಿಕೋರ ಅಥವಾ ಜಿಪುಣನಾದ ವ್ಯಕ್ತಿ ಈ ವ್ಯವಸ್ಥೆಯ ಮಧ್ಯದಲ್ಲಿ ಇದ್ದರೆ, ಆಗ ಆ ವ್ಯವಸ್ಥೆಯು ಹಾಳಾಗುತ್ತದೆ. ಮತ್ತುಆ ದೇಶ ಎಷ್ಟು ಸುಭಿಕ್ಷವಾಗಿದ್ದರೂ ಕೂಡ ಅದು ಮುಂದೆ ಯಾವುದೋ ಕಾಲದಲ್ಲಿ ದುರ್ಭಿಕ್ಷೆಗೆ ಈಡಗುತ್ತದೆ. ಹಾಗಾಗಿ ಇಂಥವನು ಇರುವ ದೇಶದಲ್ಲಿ ಇರಬಾರದು; ಅದನ್ನು ತೊರೆಯಬೇಕು ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.

ಹಾಗಾದರೆ ಚಾಡಿಕೋರ ಮತ್ತು ಜಿಪುಣ ಎಂದರೇನು? ಇವರಿಂದ ವ್ಯವಸ್ಥೆ ಹೇಗೆ ಹಾಳಾಗುತ್ತದೆ? ಎಂಬುದನ್ನು ತಿಳಿಯಬೇಕು. ಚಾಡಿಕೋರನು ಒಬ್ಬರ ಮಾತನ್ನು ಇನ್ನೊಬ್ಬರಿಗೆ ಹೇಳುತ್ತಾನೆ ಮತ್ತು ಹೀಗೇ ಮಾಡುವುದರ ಮೂಲಕ ಜಗಳ ತಂದು ಇಡುತ್ತಾನೆ. ಆಗ ಅವರಿಬ್ಬರ ಮಧ್ಯದಲ್ಲಿರುವ ಬಾಂಧವ್ಯ ಕೆಡುತ್ತದೆ. ಇದರ ಕಾರಣವಾಗಿ ಅವರ ಮಧ್ಯೆ ತೊಂದರೆ ಉಂಟಾಗುತ್ತದೆ. ಈ ಚಾಡಿ ಕೋರನಿಗೆ ಕದ್ದು ಕೇಳುವ ಹಾಗು ಸುಳ್ಳುನ್ನು ಸೃಷ್ಟಿಸಿ ಹೇಳುವ ಸ್ವಭಾವವಿರುತ್ತದೆ. ಮತ್ತು ಹೇಳುವ ವಿಷಯಕ್ಕೆ ಸ್ವಲ್ಪ ಖಾರ ಮಸಾಲೆ ಹಾಕಿ ಕೇಳುವವರಿಗೆ ತನ್ನ ಬಗ್ಗೆ ವಿಶೇಷವಾದ ಇನ್ನಷ್ಟು ಕಾಳಜಿ, ಪ್ರೀತಿ ಬರಲಿ ಎಂಬ ರೀತಿಯಲ್ಲಿ  ಅವನ ಮಾತುಕತೆಗಳು ಇರುತ್ತವೆ. ಇದರ ಬಗ್ಗೆ ಒಂದು ಸುಭಾಷಿತ ಹೇಗಿದೆ - “ಪರೋಕ್ಷಂ ಗುಣಹಂತಾರಂ ಪ್ರತ್ಯಕ್ಷಂ ಪ್ರಿಯವಾದಿನಮ್। ವರ್ಜಯೇತ್ ತಾದೃಶಂ ಮಿತ್ರಂ ವಿಷಕುಂಭಂ ಪಯೋಮುಖಮ್॥” ಒಳ್ಳೆಯದು ಆಗದಂತೆ ವ್ಯವಸ್ಥೆಯ ಹಿಂದುಗಡೆ ಕೆಲಸ ಮಾಡುತ್ತಾನೆ; ಎದುರುಗಡೆ ಪ್ರಿಯವಾಗಿ ಮಾತನಾಡುತ್ತಾನೆ. ಅಂದರೆ ‘ಹಾಲಿನ ಮುಖವುಳ್ಳ ಗಡಿಗೆಯಂತೆ’ ಈ ವ್ಯಕ್ತಿಯನ್ನು ಹೋಲಿಸಿ ಹೇಳಿದ್ದುಂಟು.

ಇನ್ನೊಬ್ಬ ವ್ಯಕ್ತಿ ಜಿಪುಣ. ಎಂದರೆ ಕಂಜೂಸ್. ಹಣ ಎಷ್ಟೇ ಇದ್ದರೂ ತನಗಾಗಲಿ ಅಥವಾ ಬೇರೆಯವರಿಗಾಗಲಿ ಒಂದು ಕಾಸನ್ನು ತನ್ನಿಂದ ಬಿಚ್ಚಲು ಇಷ್ಟಪಡುವುದಿಲ್ಲ. ಇವನಿಗೆ ಜಿಪುಣ ಎಂದು ಕರೆಯಬೇಕು. ಅಂದರೆ ಒಂದಷ್ಟನ್ನು ಕೂಡಿಟ್ಟುಕೊಂಡೇ ಖುಷಿಪಡುವಂತಹ ಸ್ವಭಾವ ಈತನದ್ದು. ಇದರಿಂದ ಹಣವನ್ನು ಅಥವಾ ಪದಾರ್ಥವನ್ನು ಹೇಗೆ ಸದ್ವಿನಿಯೋಗ ಮಾಡಬೇಕು? ಎಂಬ ಬಗ್ಗೆ ಇವನಿಗೆ ಸ್ವಲ್ಪವೂ ಆಸಕ್ತಿಯೂ ಇಲ್ಲ. ಹೀಗಾಗಿ ವ್ಯವಸ್ಥೆಯಲ್ಲಿ ಈ ಬಗೆಯ ವ್ಯಕ್ತಿ ಇದ್ದರೆ ವ್ಯವಸ್ಥೆಗೆ ಬೇಕಾದ ಯಾವ ಹಣವೂ ಅಥವಾ ಪದಾರ್ಥವೂ ಅಲ್ಲಿ ಬಳಕೆಯಾಗುವುದಿಲ್ಲ. ‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’ ಎಂಬ ದಾಸ ವಾಣಿಗೆ ಅತ್ಯಂತ ವಿರುದ್ಧವಾದ ವ್ಯಕ್ತಿ ಈತ. ಆದ್ದರಿಂದ ಜಿಪುಣ ಮತ್ತು ಚಾಡಿಕೋರ ಎಂಬ ಎರಡು ವಿಧವಾದ ವ್ಯಕ್ತಿಗಳು ಇದ್ದಲ್ಲಿ ಆ ದೇಶ ಹಾಳಾದಂತೇ ಎಂಬ ಅರ್ಥ. ಹಾಗಾಗಿ ಅಲ್ಲಿ ವಾಸವಾಗಿದ್ದರೂ ಸುಭಿಕ್ಷ ಇರುವುದಿಲ್ಲ. ಅದನ್ನು ತ್ಯಾಗ ಮಾಡಿ ಬೇರೆ ಕಡೆಗೆ  ವಾಸ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಈ ಉತ್ತರ ನೀಡುತ್ತದೆ.


ಸೂಚನೆ : 31/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Monday, May 25, 2026

ಪಾಂಡವರ ದಿಗ್ವಿಜಯ-ಸಂಕಲ್ಪ:ವ್ಯಾಸಾಶೀರ್ವಾದ

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಕೃಷ್ಣ-ಭೀಮಾರ್ಜುನರು ಜರಾಸಂಧವಧಾನಂತರ ಹಿಂತಿರುಗಿಬಂದರಷ್ಟೆ. ಅತ್ತ ಕೃಷ್ಣನೂ ಹೊರಟಮೇಲೆ ಪಾಂಡವರಲ್ಲೇ ಮಾತುಕತೆಗಳಾದವು.

ಶ್ರೇಷ್ಠವಾದ ಧನುಸ್ಸನ್ನೂ ಅಕ್ಷಯವಾದ ಬತ್ತಳಿಕೆಗಳನ್ನೂ ದಿವ್ಯವೆನಿಸುವ ರಥ-ಧ್ವಜಗಳನ್ನೂ ಅದ್ಭುತವಾದ ಸಭೆಯನ್ನೂ ಪಡೆದವನಾಗಿದ್ದ ಅರ್ಜುನನು ಯುಧಿಷ್ಠಿರನನ್ನು ಕುರಿತು ಹೀಗೆ ಹೇಳಿದನು: "ರಾಜನೇ ಬಹಳ ವಿಶೇಷವಾದ ಧನುಸ್ಸು, ಅಸ್ತ್ರ, ಬಾಣ, ಪರಾಕ್ರಮ, ಕೃಷ್ಣನಂತಹ ಜೊತೆಗಾರ, ರಾಜ್ಯ ಹಾಗೂ ಇಂದ್ರಪ್ರಸ್ಥಭೂಮಿ, ಯಶಸ್ಸು ಹಾಗೂ ಸೈನ್ಯ - ಹೀಗೆ ನನಗೆ ಏನೇನು ಬಹಳವಾಗಿ ಅಪೇಕ್ಷೆಯಾಗಿತ್ತೋ ಹಾಗೂ ಪಡೆಯಲು ಸುಲಭವಲ್ಲವೋ ಅದೆಲ್ಲವೂ ಈಗ ದೊರೆತಿದೆ.

ನಮ್ಮ ಈಗಿನ ಕರ್ತವ್ಯವೆಂದರೆ ಕೋಶದ ಪರಿವರ್ಧನೆಯೆಂಬುದೇ ನನ್ನ ಅಭಿಪ್ರಾಯ. ಆದ್ದರಿಂದ ರಾಜರೆಲ್ಲರೂ ಕರವನ್ನೊಪ್ಪಿಸುವಂತೆ ಮಾಡಿಬಿಡುವೆ. ಅದಕ್ಕಾಗಿ ನಾನು ಮೊದಲು ಕುಬೇರ-ಪಾಲಿತವಾದ ದಿಕ್ಕಿಗೆ (ಎಂದರೆ ಉತ್ತರಕ್ಕೆ) ಹೊರಡಲಿರುವೆ. ಅದಕ್ಕಾಗಿ ಅಭಿಪೂಜಿತವಾದ ತಿಥಿ-ಮುಹೂರ್ತಗಳಲ್ಲಿ ಹಾಗೂ ಅಭಿಪೂಜಿತವಾದ ನಕ್ಷತ್ರದಲ್ಲಿ ಹೊರಡುವೆ.”

ಇದನ್ನು ಕೇಳಿ ಧರ್ಮರಾಜನು ಸಂತುಷ್ಟನಾದನು. ತಮ್ಮಂದಿರು, ಮಂತ್ರಿಗಳು – ಇವರೊಂದಿಗೆ, ವ್ಯಾಸರನ್ನೂ ಧೌಮ್ಯರನ್ನೂ ಕಾಣಲು ಹೊರಟನು. ಆಗ ಮಹಾ-ಬುದ್ಧಿಶಾಲಿಗಳಾದ ವ್ಯಾಸರು ಅರ್ಜುನನನ್ನು ಕುರಿತು ಹೀಗೆ ಹೇಳಿದರು:

"ಭೇಷ್, ಅರ್ಜುನ, ಭೇಷ್. ನಿನಗೆ ಇಂತಹ ಬುದ್ಧಿ ಬಂದುದೇ ಶ್ಲಾಘ್ಯ. ಏಕೆಂದರೆ ಅಖಂಡ-ಭೂಮಂಡಲವನ್ನೇ ನೀನು ಜಯಿಸಲು ಸಂಕಲ್ಪಿಸಿರುವೆ. ಪಾಂಡು ಮಹಾರಾಜನೇ ಧನ್ಯ. ಏಕೆಂದರೆ ಆತನ ಪುತ್ರನಾದ ನೀನು ಇಂತಹವನಾಗಿರುವೆ! ಯುಧಿಷ್ಠಿರನು ಎಲ್ಲವನ್ನೂ ಹೊಂದತಕ್ಕವನೇ ಸರಿ! ನಿನ್ನ ವೀರ್ಯದಿಂದಾಗಿ ಆ ಧರ್ಮಾತ್ಮನು ಸಾರ್ವಭೌಮ-ಪದವಿಯನ್ನು ಹೊಂದಲಿರುವನು. ನಿನ್ನ ಬಾಹುಬಲವನ್ನು ಆಶ್ರಯಿಸಿ ಆತನು ರಾಜಸೂಯವನ್ನು ನೆರವೇರಿಸುವನು. ಶ್ರೀಕೃಷ್ಣನ ಸು-ನಯ ಅಥವಾ ಒಳ್ಳೆಯ ನೀತಿ, ಭೀಮ-ಅರ್ಜುನರ ಬಲ, ಹಾಗೂ ಯಮಳರಿಬ್ಬರ (ನಕುಲ-ಸಹದೇವರ) ವೀರ್ಯ - ಇವುಗಳಿಂದಾಗಿ ಧರ್ಮರಾಜನು ಎಲ್ಲವನ್ನೂ ಹೊಂದುವನು.

ಆದ್ದರಿಂದ, ಅರ್ಜುನನೇ, ದೇವತೆಗಳು ಕಾಪಾಡಿರುವ ಉತ್ತರ ದಿಕ್ಕಿಗೆ ನೀನು ಹೊರಡು, ಫಾಲ್ಗುನ! ನೀನು ದೇವತೆಗಳನ್ನೂ ಜಯಿಸಿ ಬಲಪ್ರಯೋಗದಿಂದ ರತ್ನಗಳನ್ನು ತರಲು ಸಮರ್ಥನೇ ಸರಿ.

ಬಲವನ್ನು ಮೆಚ್ಚುವ ಭೀಮಸೇನನು ಪೂರ್ವದಿಕ್ಕಿಗೆ ಹೋಗಲಿ: ಮಹಾರಥನಾದ ಸಹದೇವನು ಯಮನ ದಿಕ್ಕಿಗೆ, ಎಂದರೆ ದಕ್ಷಿಣಕ್ಕೆ ಹೋಗಲಿ. ವರುಣರಕ್ಷಿತವಾದ ಪಶ್ಚಿಮಕ್ಕೆ ನಕುಲನು ಹೋಗಲಿ. ನನ್ನ ಬುದ್ಧಿ ಹೀಗೆ ನಿಶ್ಚಯಿಸಿದೆ. ಭರತವಂಶದ ಶ್ರೇಷ್ಠರಾದ ಪಾಂಡವರೇ, ಇದನ್ನು ಕಾರ್ಯಗತಗೊಳಿಸಿರಿ."

ವ್ಯಾಸರ ಈ ಮಾತುಗಳನ್ನು ಕೇಳಿ ಪಾಂಡವರು ಸಂತೋಷಗೊಂಡರು. ಹಾಗೆಯೇ ಆಗಲಿ - ಎಂದು ಅವರಿಗೆ ಹೇಳಿದರು.

ಅರ್ಜುನನು ಮೊದಲಾಡಿದ ಮಾತಿಗೆ ಯುಧಿಷ್ಠಿರನು ಪ್ರತಿಭಾಷಣವನ್ನು ಮಾಡಿದನು. ಆತನ ಮಾತು ಸ್ನಿಗ್ಧವೂ ಗಂಭೀರವೂ ಆಗಿತ್ತು. "ಅರ್ಜುನನೇ, ಸ್ವಸ್ತಿವಾಚನ ಮಾಡತಕ್ಕ ಬ್ರಾಹ್ಮಣರಲ್ಲಿಗೆ ಮೊದಲು ಹೋಗು. ನಿನ್ನ ಜೈತ್ರ-ಯಾತ್ರೆಯೆಂಬುದು ನಮ್ಮ ಬಗ್ಗೆ ದ್ವೇಷವಿರತಕ್ಕವರಿಗೆ ಶೋಕವನ್ನೂ, ನಮ್ಮ ಮಿತ್ರರಿಗೆ ಸಂತೋಷವನ್ನೂ ಉಂಟುಮಾಡಲಿ. ಪಾರ್ಥನೇ, ನಿನಗೆ ವಿಜಯವೆಂಬುದು ಸಿದ್ಧವೇ ಸರಿ. ನಿನಗೆ ಅಭೀಷ್ಟವಾದದ್ದನ್ನು ಪಡೆದೇ ಪಡೆಯುತ್ತೀಯೇ."

ಈ ಮಾತುಗಳನ್ನು ಕೇಳಿದ ಬಳಿಕ, ದೊಡ್ಡ ಸೈನ್ಯದೊಂದಿಗೆ ಅರ್ಜುನನು ಹೊರಟನು. ಆತನ ರಥವು ಅದ್ಭುತವಾದ ಕರ್ಮವನ್ನು ಮಾಡುವುದಾಗಿತ್ತು. ಎಷ್ಟಾದರೂ ಅದು ಅಗ್ನಿದತ್ತವಾದುದಲ್ಲವೇ?

ಅವನು ಮಾತ್ರವಲ್ಲದೆ, ಧರ್ಮರಾಜನಿಂದ ಸಂಮಾನಿತರಾದ ಭೀಮನೂ, ನಕುಲ-ಸಹದೇವರೂ ಸೈನ್ಯಸಮೇತರಾಗಿ ಹೊರಟುಬಂದರು.  

ಸೂಚನೆ : 24/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ

ಪ್ರಶ್ನೋತ್ತರ ರತ್ನಮಾಲಿಕೆ 67 (Prasnottara Ratnamalike 67)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೬೭. ಎಲ್ಲಿ ವಾಸ ಮಾಡಬೇಕು?

ಸಜ್ಜನರ ಸನಿಹ ಅಥವಾ ಕಾಶಿಯಲ್ಲಿ.


ಈ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆನಾವು ಏಕೆ ಬದುಕಬೇಕು? ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಬದುಕು ಎಂಬುದು ಜನನ ಮತ್ತು ಮರಣದ ನಡುವಿನ ವ್ಯಾಪಾರ ಎಂಬುದಾಗಿ ನಾವು ತಿಳಿದಿದ್ದೇವೆ. ಆದರೆ ಈ ಅರಿವು ಬದಲಾಗಬೇಕಾಗಿದೆ. ಭಾರತೀಯರ ಜೀವನ ಎಂದರೆ ಕೇವಲ ಹುಟ್ಟು ಸಾವುಗಳ ನಡುವಿನ ವ್ಯಾಪಾರ ಅಲ್ಲ. ಜೀವಭಾವ ಎಲ್ಲಿಂದ ಆರಂಭವಾಗುತ್ತದೆಯೋ ಮತ್ತುಆ ಜೀವಭಾವ ಯಾವಾಗ ಮುಕ್ತಾಯವಾಗುತ್ತದೆಯೋ ಅವೆಡರ ನಡುವಿನ ವ್ಯಾಪಾರವನ್ನೇ ‘ಜೀವನ’ ಎಂಬುದಾಗಿ ಕರೆಯಬೇಕು ಎಂಬುದಾಗಿ ಶ್ರೀರಂಗ ಮಹಾಗುರುಗಳ ಆಶಯವಾಗಿತ್ತು. ಹಾಗಾದರೆ ಈ ಜೀವಭಾಗವೂ ಕಳೆಯುವುದು ಎಂದರೇನು? ಜೀವಭಾವವು ಕಳೆಯಲು ಯಾವ ಉಪಾಯವನ್ನು ಮಾಡಬೇಕು? ಎಂಬುದು ಇಲ್ಲಿನ ವಿಷಯವಾಗಿದೆ. ಜೀವಭಾವ ಕಳೆಯುವುದನ್ನೇ ‘ಮೋಕ್ಷ’ ಎಂಬುದಾಗಿ ಕರೆಯಲಾಗಿದೆ. ಸಂಸಾರ ಭಾವವು ಕಳೆಯಬೇಕು. ಸಂಸಾರದಿಂದ ಮುಕ್ತಿಯಾಗಿ ಮತ್ತೆ ಜನ್ಮ ಎಂಬ ಹೊಸತನವನ್ನು ಪಡೆದುಕೊಳ್ಳದೇ ಇರುವಂತಾಗಬೇಕು. ಇದನ್ನೇ ಮಾನವಜೀವನ ಎಂಬುದಾಗಿ ಕರೆದಿದ್ದಾರೆ. ಇಂತಹ ಉತ್ಕೃಷ್ಟವಾದ ಮಾನವಜನ್ಮ ಸಾರ್ಥಕವಾಗಬೇಕಾದರೆ ಅದಕ್ಕೆ ಇರುವ ಅತ್ಯಂತ ಶ್ರೇಷ್ಠವಾದ ಸಾಧನ ಎಂದರೆ ಸಜ್ಜನರ ಸಾನ್ನಿಧ್ಯ. ನಾವು ಎಷ್ಟೆಷ್ಟು ಸುಜನರ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೋ ಅಷ್ಟಷ್ಟು ನಮ್ಮ ಜೀವನ ಸುಲಭವಾಗುತ್ತದೆ. ಏಕೆಂದರೆ ಆ ಸಜ್ಜನರು ಜೀವನದ ಸಾರ್ಥಕ್ಯವನ್ನು ಪಡೆಯುವುದು ಹೇಗೆ? ಎಂಬುದನ್ನು ಅವರು ತಮ್ಮ ಜೀವನದುದ್ದಕ್ಕೂ ಸಾಧಿಸಿ ತೋರಿಸಿದವರು. ಹಾಗಾಗಿ ಅವರು ನಡೆದ ಹಾದಿಯಲ್ಲಿ ನಡೆದರೆ ನಮಗೆ ಗಮ್ಯವೂ ಅತ್ಯಂತ ಸುಲಭವಾಗಿ ಲಭಿಸುತ್ತದೆ ಎಂಬುದು ಇದರ ತಾತ್ಪರ್ಯ. ಹಾಗಾಗಿ ಸಜ್ಜನರ ಸಂಬಂಧ ಅತ್ಯಂತ ಅಗತ್ಯವಾದ್ದು. ಹಾಗಾದರೆ ಸಜ್ಜನರು ಯಾರು? ಯಾವ ನಿತ್ಯವಾದ ಸಚ್ಚಿದಾನಂದ ರೂಪವಾದ ಯಾವ ಪರಬ್ರಹ್ಮ ಇದೆಯೋ, ಅದನ್ನೇ ‘ಸತ್’  ಎಂದು ಕರೆದು ಆ ಸತ್ತಿನಲ್ಲೇ ಯಾವಾಗಲೂ ತಮ್ಮ ಮನಸ್ಸನ್ನು ಇಡುವವರು ಸಜ್ಜನರು. ಅವರ ನಡೆ ನುಡಿ ಯಾವಾಗಲೂ ಆ ಪರಬ್ರಹ್ಮದ ಕಡೆಗೆ ಇರುತ್ತದೆ. ಹಾಗಾಗಿ ಎಲ್ಲೂ ಅವರು ಚ್ಯುತರಾಗುವುದಿಲ್ಲ ಅಂತಹ ಜೀವನಕ್ರಮ ಅವರದ್ದಾಗಿರುತ್ತದೆ. 

ಈ ಪ್ರಶ್ನೆಯ ಇನ್ನೊಂದು ಭಾಗ ಕಾಶಿಯಲ್ಲಿ ವಾಸ ಮಾಡಬೇಕು ಎಂಬುದಾಗಿ. ಈಗ ನಾವು ಯಾವ ಭಾರತದ ಭೂಗೋಳದಲ್ಲಿ ಕಾಶಿ ಎಂಬ ನಗರವನ್ನು ನೋಡುತ್ತೇವೋ ಅದರಲ್ಲಿ ವಾಸ ಮಾಡಬೇಕು ಎಂಬ ಅರ್ಥದಲ್ಲಿ ಈ ವಾಕ್ಯ ಬಂದಿದ್ದಲ್ಲ. ಸನಾತನ ಭಾರತದ ಮಹರ್ಷಿಗಳು ಯಾವ ಯಾವ ಭ್ರೂಮಧ್ಯದಲ್ಲಿ ಇರುವ ‘ಕಾಶೀ’ ಎಂಬ ಭಾಗವಿದೆಯೋ, ಅಲ್ಲಿ ಯಾವ ವಿಶ್ವನಾಥನನ್ನು ದರುಶನವನ್ನು ಮಾಡಿದರೋ, ಅಂತಹ ದರ್ಶನಕ್ಕೆ ಯೋಗ್ಯವಾದ ಕ್ಷೇತ್ರ ಯಾವುದೋ, ಅದೂ ಕೂಡ ಭಾರತದ ಉತ್ತರ ಭಾಗದಲ್ಲಿರುವ ಕಾಶಿ ಎಂಬುದಾಗಿ ಅವರು ಉದ್ಘೋಷಿಸಿದರು. “ಕಾಶ್ಯಾಂ ತು ಮರಣಾತ್ ಮುಕ್ತಿಃ” ಎಂಬುದಾಗಿ ಅಂದರೆ ಮುಕ್ತಿ ಪಡೆಯಬೇಕಾದರೆ ಕಾಶಿಯಲ್ಲಿ ಮರಣವನ್ನು ಹೊಂದಬೇಕು. ಅಂದರೆ ಜೀವನದಲ್ಲಿ ತನ್ನ ಪ್ರಾಣವನ್ನು ಅಲ್ಲಿ ಲಯಗೊಳಿಸಿಕೊಂಡರೆ ಆಗ ಜೀವಭಾವವು ನಷ್ಟವಾಗುತ್ತದೆ; ದೇವಭಾವವು ಪ್ರಾಪ್ತವಾಗುತ್ತದೆ. ಇದರಿಂದಲೇ ಅವನ ಜನ್ಮ ಸಾರ್ಥಕ ಎಂಬ ಅರ್ಥದಲ್ಲಿ ಈ ಪ್ರಶ್ನೋತ್ತರವನ್ನು ನಾವು ಗಮನಿಸಬೇಕಾಗಿದೆ.


ಸೂಚನೆ : 24/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ


ಮನಸೇ... ಗೋವಿಂದನ ಭಜಿಸು. (Manase,.. Govindana Bhajisu.)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


image.png



ಶಂಕರ ಭಗವತ್ಪಾದರು ಒಮ್ಮೆ ಗಂಗಾಸ್ನಾನಕ್ಕೆಂದು ಶಿಷ್ಯರ ಜೊತೆಯಲ್ಲಿ ಹೋಗುತ್ತಿರುವಾಗ ಒಂದು ಅಶ್ವತ್ಥ ವೃಕ್ಷದ ಕೆಳಗೆ ವೃದ್ಧರೊಬ್ಬರು “ಡುಕೃಂಕರಣೆ “ ಎಂಬ ವ್ಯಾಕರಣ ಸೂತ್ರವನ್ನು ಬಾಯಿಪಾಠ ಮಾಡುತ್ತಾ ಕುಳಿತಿದ್ದರು. ಆಚಾರ್ಯರ ಗಂಗಾ ಸ್ನಾನ ಆಹ್ನೀಕದ ಬಳಿಕವೂ ಅವರ ಸೂತ್ರ ಬಾಯಿಪಾಠ ಮುಂದುವರೆದಿತ್ತು. ಆಚಾರ್ಯರು ಅವರ ಬಳಿಸಾರಿ ಕೇಳಿದರು-

ಶಂ: ಅಯ್ಯಾ ತಾವು ಏನು ಅಭ್ಯಾಸ ಮಾಡುತ್ತಿದ್ದೀರಿ?
ವೃ: ವ್ಯಾಕರಣ ಸೂತ್ರಗಳನ್ನು ಅಭ್ಯಾಸ ಮಾಡುತ್ತಿದ್ದೇನೆ ಸ್ವಾಮೀ

ಶಂ: ಇಷ್ಟು ವರ್ಷಗಳ ಅಧ್ಯಯನ ಸಾಲದೇ,ಈಗ ವ್ಯಾಕರಣವನ್ನು ಕಲಿತು ತಾವೇನು ಸಾಧನೆ ಮಾಡಬೇಕೆಂದಿದ್ದೀರಿ?
ವೃ: ವ್ಯಾಕರಣದಲ್ಲಿ ವಿದ್ವತ್ತನ್ನು ಸಂಪಾದಿಸಬೇಕು ಎಂದು ನನ್ನ ಬಹುದಿನಗಳ ಆಸೆ. ಅದಕ್ಕಾಗಿ ಈ ಅಭ್ಯಾಸ

ಶಂ: ವಿದ್ವತ್ತನ್ನು ಸಂಪಾದಿಸಿದ ನಂತರ?
ವೃ: ರಾಜಾಸ್ಥಾನಕ್ಕೆ ಹೋಗಿ ಈ ವಿದ್ವತ್ತಿನಿಂದ ಧನಾರ್ಜನೆ ಮಾಡಲು ಸಾಧ್ಯವಾಗುತ್ತದೆ.ಜೊತೆಗೆ ಕೀರ್ತಿಯೂ ಲಭಿಸುತ್ತದೆ.

ಶಂ: ತಮಗೆ ಇಷ್ಟು ವಯಸ್ಸಾಗಿದೆ. ಇನ್ನೂ ಮನೆಯ ಜವಾಬ್ದಾರಿ ತೀರಿಲ್ಲವೇ?
ವೃ: ಹೌದು ಸ್ವಾಮೀ, ವೃದ್ಧಾಪ್ಯಕ್ಕೆ ಕಾಲಿಟ್ಟಿದ್ದೇನೆ. ಮಕ್ಕಳು ಎಲ್ಲ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ. ಮಡದಿ ಮಕ್ಕಳ ಬಗ್ಗೆ ಯೋಚನೆ ಮಾಡುವ ಪ್ರಮೇಯವಿಲ್ಲ.

ಶಂ: ಹಾಗಿದ್ದರೆ ಈ ವಿದ್ವತ್ತಿನಿಂದ, ಅದರಿಂದ ಬರುವ ಹಣದಿಂದ ನಿಮಗೆ ಆಗಬೇಕಾದುದೇನಿದೆ? ನಿಮ್ಮ ಆಯಸ್ಸು ಕ್ಷೀಣಿಸುತ್ತಿದೆ. ಈಗಲಾದರೂ ಗೋವಿಂದನ ಧ್ಯಾನ ಮಾಡಬಾರದೆ? ನೀವು ಈಗ ಮಾಡುತ್ತಿರುವುದು ಕೇವಲ ಭುಕ್ತಿಗಾಗಿ. ಮುಕ್ತಿಗಾಗಿ ಅಲ್ಲ. ಕಳೆದ ಆಯಸ್ಸು ಮತ್ತೆ ಬರಲಾರದು. ಈಗಲಾದರೂ ಪರಮಾತ್ಮನ ಧ್ಯಾನಮಾಡಿ ನಿಮ್ಮ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬಾರದೇ?
ವೃ: ನಿಜ ಸ್ವಾಮೀ ನಾನು ಜೀವನವಿಡೀ ಬರಿಯ ಭೌತಿಕ ವಿಷಯಗಳಿಗಾಗಿ ಪ್ರಯತ್ನ ಮಾಡುತ್ತಿದ್ದೆ. ಆಧ್ಯಾತ್ಮಿಕ ವಿಷಯಗಳನ್ನು ಅಧ್ಯಯನ ಮಾಡಲೇ ಇಲ್ಲ. ಈಗ ವಯಸ್ಸು ಮೀರಿದೆ. ಯಾವುದಾದರೂ ಅಧ್ಯಯನದಲ್ಲಿ ತೊಡಗೋಣ ಎಂದು ವ್ಯಾಕರಣ ಸೂತ್ರಗಳ ಅಧ್ಯಯನ ನಡೆಸಿರುವೆ.

ಶಂ: ಈಗಲೂ ಕಾಲ ಮಿಂಚಿಲ್ಲ.ಆಧ್ಯಾತ್ಮ ಚಿಂತನೆಗೆ ವಯಸ್ಸಿನ ಮಿತಿಯಿಲ್ಲ. ಸದಾ ಸರ್ವದಾ ಗೋವಿಂದನನ್ನು ಭಜಿಸಿ ಎಂದು ತಕ್ಷಣವೇ “ ಭಜಗೋವಿಂದಂ ಸ್ತೋತ್ರದ ರಚನೆ ಮಾಡಿ ಅವರಿಗೆ ಉಪದೇಶ ಮಾಡಿದರು.
ವೃ: ಪ್ರಭೋ- ನನ್ನ ಬಾಳಿಗೆ ಬೆಳಕನ್ನು ನೀಡಿದವರು ನೀವು ಇಂದಿನಿಂದ ನನ್ನ ಬಾಳು ಗೋವಿಂದನ ಸ್ಮರಣೆಗೆ ಮೀಸಲು ಎಂದು ಗುರುಗಳಿಗೆ ವಂದಿಸಿ ಹೊರಟರು.

ಇಲ್ಲಿ ವ್ಯಾಕರಣ ಸೂತ್ರದ ಬಗ್ಗೆ ಶಂಕರರಿಗೆ ಅಸಹನೆ ಎಂದುಕೊಳ್ಳಬಾರದು. ಅದನ್ನು ಕಲಿಯುತ್ತಿರುವ ಉದ್ದೇಶ ಆ ವೃದ್ಧನ ಜೀವನಕ್ಕೆ ಬೆಳಕು ತರುವಂತಹದ್ದಾಗಿರಲಿಲ್ಲ. ಮತ್ತು ಯಾವುದನ್ನು ಅವಶ್ಯವಾಗಿ ಎಲ್ಲರೂ ಮಾಡಬೇಕೋ ಅದರ ಬಗ್ಗೆ ಗಮನವಿಲ್ಲ. ಅದನ್ನು ತಿಳಿಸಿ ಅವನನ್ನು ಉದ್ಧರಿಸುವ ಕರುಣೆಯನ್ನೇ ನಾವಿಲ್ಲಿ ಕಾಣಬೇಕಾಗಿರುವುದು. 

ಇದು ಡುಕೃಂಕರಣೆ ಸೂತ್ರಕ್ಕೆ ಮಾತ್ರವೇ ಸಂಬಂಧಿಸಿಲ್ಲ. ನಾವು ದಿನಂಪ್ರತಿ ಮಾಡುವ ಎಲ್ಲಾ ವ್ಯರ್ಥವಾದ ಕೆಲಸಗಳಿಗೂ ಅನ್ವಯಿಸುತ್ತದೆ. ನಾವು ಈ ದೇಶದ ಮಹರ್ಷಿಗಳ ಆಶಯದಂತೆ ಭಾರತರಾಗಿಲ್ಲ. ಧನರತ,ಕೀರ್ತಿರತ,ಕಾಮರತ ಕ್ರೋಧರತ ಇನ್ನೂ ಏನೇನೋ ರತದಾಗಿದ್ದೇವೆ. ಹಾಗಿಲ್ಲದೇ ಎಲ್ಲರೂ ಭಾರತರಾಗಬೇಕು ಎಂಬುದು ಆಚಾರ್ಯರ ಆಶಯ.

ಆ ವೃದ್ಧ ಬ್ರಾಹ್ಮಣನ ನೆಪದಲ್ಲಿ ಇಡೀ ಮಾನವತೆಗೆ ಮಾಡಿದ ಉಪದೇಶವದು.

ಈ ಸ್ತೋತ್ರಸಾಹಿತ್ಯದಲ್ಲಿ ಇಂದು ನಮ್ಮ ಸ್ಥಿತಿ ಹೇಗಿದೆ? ಭೌತಿಕ ಜಗತ್ತಿನ ನಶ್ವರತೆ, ಇವನ್ನು ಒತ್ತಿ ಹೇಳುವ ಶ್ಲೋಕಗಳು ಕೆಲವು. ನಮ್ಮ ಕರ್ತವ್ಯ ಏನಿರಬೇಕು? ಜೀವನದಲ್ಲಿ ಶಾಶ್ವತವಾದ ಭಗವದಾನಂದವನ್ನು ಪಡೆಯಲು ನಾವು ಏನು ಮಾಡಬೇಕು ಎಂಬ ಸ್ಪಷ್ಟವಾದ ತಿಳುವಳಿಕೆ ಕೊಡುವ ಶ್ಲೋಕಗಳ ಸಂಖ್ಯೆ ಹೆಚ್ಚು ಇದೆ. ಹಾಗೆಯೇ ಗೋವಿಂದನನ್ನು ಸದಾಕಾಲವೂ ಭಜಿಸಿದ್ದರಿಂದ ನಮ್ಮಲ್ಲಿ ಉಂಟಾಗುವ ಪರಿಣಾಮ,ಆನಂದ,ನೆಮ್ಮದಿಗಳು ಎಷ್ಟು ಉನ್ನತ ಮಟ್ಟದ್ದು ಎಂಬುದನ್ನು ಮನವರಿಕೆ ಮಾಡಿಕೊಡುವ ಶ್ಲೋಕಗಳೂ ಇವೆ. ಇಡೀ ಜಗತ್ತಿಗೇ ಶಂಕರರು ಸಂದೇಶವನ್ನು ಕೊಟ್ಟಿದ್ದಾರೆ.

ಬಾಲಕನಾಗಿದ್ದಾಗ ಆಟದಲ್ಲಿ ಆಸಕ್ತಿ, ತರುಣನಾಗಿದ್ದಾಗ ತರುಣಿಯಲ್ಲಿ ಆಸಕ್ತಿ, ವೃದ್ಧನಾಗಿದ್ದಾಗ ಸದಾ ಚಿಂತೆ- ಒಟ್ಟಿನಲ್ಲಿ ಪರಬ್ರಹ್ಮದ ಬಗೆಗೆ ಯಾರಿಗೂ ಆಸಕ್ತಿಯಿಲ್ಲ ಎಂಬುದೊಂದು ಶ್ಲೋಕ. ಇದು ಇಂದಿನ ನಮ್ಮ ಸ್ಥಿತಿಯನ್ನು ಹೇಳುತ್ತಿದೆ. ಸತ್ಸಂಗದಿಂದ ನಮಗೆ ಅಂಟಿಲ್ಲದ ಜೀವನ , ಅದರಿಂದ ಮೋಹ ರಹಿತವಾದ ಜೀವನ, ಅದರಿಂದ ಸ್ಥಿರವಾದ ಶಾಶ್ವತವಾದ ತತ್ತ್ವದ ಅರಿವು, ಅಂತಹ ಅರಿವಿನಿಂದ ಸಂಸಾರ ಚಕ್ರದಿಂದ ಬಿಡುಗಡೆ ಎಂಬ ಅರ್ಥ ಬರುವ ಇನ್ನೊಂದು ಶ್ಲೋಕದಲ್ಲಿ , ನಾವು ಏನು ಮಾಡಿದರೆ ಜೀವನ್ಮುಕ್ತಿಯನ್ನು ಪಡೆಯಬಹುದು ಎಂಬ ಉಪಾಯವನ್ನು ಹೇಳಿದ್ದಾರೆ. ಇನ್ನೊಂದು ಶ್ಲೋಕದಲ್ಲಿ ಮತ್ತೆ ಮತ್ತೆ ಹುಟ್ಟುವುದು, ಸಾಯುವುದು,ಮತ್ತೆ ತಾಯಿಯ ಗರ್ಭದಲ್ಲಿ ಮಲಗುವುದು ಹೀಗೆ ಕೊನೆ ಮೊದಲಿಲ್ಲದ ಘೋರವಾದ ಈ ಸಂಸಾರಚಕ್ರದಿಂದ ನಮ್ಮನ್ನು ಪಾರುಮಾಡು ಎಂಬ ಪ್ರಾರ್ಥನೆಯೂ ಇದೆ. 

ಯೋಗರತೋ ವಾ ಭೋಗರತೋ ವಾ ಸಂಗರತೋ ವಾ ಸಂಗ ವಿಹೀನಃ ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ || 
ಎಂಬುದಾಗಿ ಯಾರ ಚಿತ್ತವು ಬ್ರಹ್ಮನಲ್ಲಿ ರಮಿಸುತ್ತದೆಯೋ ಅವರು ಯೋಗ-ಭೋಗ,ಯಾವುದರಲ್ಲಿ ರತರಾಗಿದ್ದರೂ ಆ ಬ್ರಹ್ಮಾನುಭವದಲ್ಲೇ ಆನಂದಿಸುತ್ತಾರೆ. ಎಂದು ಮೊಳಗಿದ್ದಾರೆ.

 ಇದೊಂದು ನಿತ್ಯಜೀವನದ ಕೈಪಿಡಿಯಾಗಿ ನಮ್ಮನ್ನು ಪರಮ ಪದದೆಡೆಗೆ ಕರೆದೊಯ್ಯುವ ಆತ್ಮೀಯ ಸ್ನೇಹಿತನಂತೆ ಇರುವ ಸ್ತೋತ್ರಸಾಹಿತ್ಯವಾಗಿದೆ.

ಶ್ರೀರಂಗ ಮಹಾಗುರುಗಳು ನಮ್ಮ ಮನಸ್ಸನ್ನು ಹೀಗೆ ವಿವರಿಸಿದ್ದಾರೆ. ನದೀ ಸ್ನಾನಕ್ಕೆಂದು ಹೋದಾಗ ನಮ್ಮ ಪಂಚೆಯನ್ನು ದಡದಲ್ಲಿನ ಮುಳ್ಳಿನ ಪೊದೆಗಳಮೇಲೆ ಒಣಗಿಸುತ್ತೇವೆ. ಆದರೆ ತೆಗೆಯುವಾಗ ಎಲ್ಲೆಡೆ ಮುಳ್ಳು ಚುಚ್ಚಿಕೊಂಡು ಹರಿಯದೇ ಅದನ್ನು ತೆಗೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಬಹಳ ಜಾಗರೂಕತೆಯಿಂದ ಅದನ್ನು ತೆಗೆಯಬೇಕಾಗುತ್ತದೆ. ಹಾಗೆಯೇ ನಮ್ಮ ಮನಸ್ಸನ್ನೂ ಇಂದ್ರಿಯಗಳು ಬಯಸಿದಲ್ಲೆಲ್ಲಾ ಹರಡಿಬಿಟ್ಟಿದ್ದೇವೆ. ಅದು ಈಗ ಅಲ್ಲಲ್ಲೇ ಕಚ್ಚಿಕೊಂಡಿದೆ. ಹಾಗೆಯೇ ಎಳೆದರೆ ಹರಿದು ನೋವಾಗುತ್ತದೆ.ನಿಧಾನವಾಗಿ ಮುಳ್ಳನ್ನು ಬಿಡಿಸಿ ಹಿಂತೆಗೆದುಕೊಳ್ಳಬೇಕಪ್ಪಾ ಎಂದಿದ್ದರು. ಹಾಗೆ ಹಿಂತೆಗೆಯಲು ತಪಸ್ಸು, ಗೋವಿಂದನ ಭಜನೆ,ಸ್ಮರಣೆ ನಿರಂತರ ಆಗಬೇಕಾಗಿದೆ.

ಅಂತಹ ಸದ್ಬುದ್ಧಿಯನ್ನು ನಮಗೆ ದಯಪಾಲಿಸು ಎಂದು ಆ ದಯಾಮಯನನ್ನು ಬೇಡೋಣ. ಭವಸಾಗರವನ್ನು ದಾಟುವ ದೊಣಿಯಂತಿರುವ ಈ ಸ್ತೋತ್ರ ಸಾಹಿತ್ಯವನ್ನು ಕರುಣಿಸಿದ ಶಂಕರಭಗವತ್ಪಾದರನ್ನು ತಂಪಾಗಿ ನೆನೆಯೋಣ.

ಸೂಚನೆ : 23/5/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, May 17, 2026

ಪ್ರಶ್ನೋತ್ತರ ರತ್ನಮಾಲಿಕೆ 66 (Prasnottara Ratnamalike 66)

  

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೬೬. ಲಕ್ಷ್ಮಿಯು ಯಾರನ್ನು ವರಿಸುವಳು?

ಆಲಸ್ಯ ರಹಿತನನ್ನು ಮತ್ತು ನೀತಿಯಿಂದ ಕೂಡಿದವನನ್ನು.


ಈ ಪ್ರಶ್ನೋತ್ತರದಲ್ಲಿ ಕಾರ್ಯಕಾರಣಭಾವವಿದೆ. ಲಕ್ಷ್ಮಿಯು ಕಾರ್ಯವಾದರೆ ಉತ್ಸಾಹ ಅಥವಾ ಆಲಸ್ಯವಿಲ್ಲದಿರುವಿಕೆ ಮತ್ತು ನೀತಿ ಕಾರಣ. ಏಕೆಂದರೆ ಲಕ್ಷ್ಮಿಯು ಒಲಿಯಬೇಕಾದರೆ ಯಾವ ಅರ್ಹತೆ ಇರಬೇಕಾಗುತ್ತದೆ? ಎಂಬ ವಿಷಯ ಇಲ್ಲಿದೆ. ಆ ವ್ಯಕ್ತಿಯಲ್ಲಿ ಆಲಸ್ಯ ಇರಬಾರದು ಮತ್ತು ಆತ ನೀತಿಯಿಂದ ಕೂಡಿರಬೇಕು ಎಂದು. ಈ ಎರಡು ಗುಣಗಳಿರುವವನನ್ನು ಲಕ್ಷ್ಮಿಯೂ ಬಿಡುವುದಿಲ್ಲ ಎಂದರ್ಥ. ಇಲ್ಲಿ ಲಕ್ಷ್ಮಿ ಎಂದರೆ ಮಹಾವಿಷ್ಣುವಿನ ಮನದೆನ್ನೆ ಎಂಬ ಅರ್ಥ ಮಾತ್ರ ಅಲ್ಲ. ಇದಕ್ಕೆ ಸಂಪತ್ತು ಎಂಬ ಅರ್ಥವನ್ನು ತೆಗೆದುಕೊಳ್ಳಬೇಕು. ಸಂಪಾದಿಸಿದ ಸಂಪತ್ತನ್ನು ಸರಿಯಾಗಿ ಬಳಸಿಕೊಂಡಲ್ಲಿ ಮಹಾಲಕ್ಷ್ಮಿಯ ಪತಿಯಾದ ಮಹಾವಿಷ್ಣು ಸಿಗದಿರನು.


 ಯಾವುದೇ ಕಾರ್ಯದ ಫಲಿತವನ್ನು ಇಲ್ಲಿ ‘ಲಕ್ಷ್ಮಿ’ ಎಂಬುದಾಗಿ ತಿಳಿಯಬೇಕು. ಅಂದರೆ ಒಂದು ಫಲರೂಪವಾದುದರಿಂದ ಲಕ್ಷ್ಮಿಯು ಅನೇಕ ಪ್ರಕಾರವಾಗಿ ಇರುತ್ತಾಳೆ. ಇವುಗಳಲ್ಲಿ ಪ್ರಧಾನವಾಗಿ ಆದಿಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ಧೈರ್ಯಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ ಹೀಗೆ ಅಷ್ಟಲಕ್ಷ್ಮಿಯರ ರೂಪದಲ್ಲಿ ನಾವು ಲಕ್ಷ್ಮಿಯನ್ನು ಭಾವಿಸುತ್ತೇವೆ. ಯಾವುದೇ ವಿಧವಾದ ಲಕ್ಷ್ಮಿ ನಮಗೆ ಲಭಿಸಬೇಕಾದರೆ ಅದಕ್ಕೆ ಬೇಕಾದ ಪೂರಕವಾದ ಸಾಮಗ್ರಿಗಳು ಇರಬೇಕಾಗುತ್ತವೆ. ಸಾಮಾನ್ಯವಾಗಿ ಒಂದು ಕಾರ್ಯವಾಗಬೇಕಾದರೆ ಅಲ್ಲಿ ಕಾರಣವಿರಬೇಕು. ಮತ್ತು ಆ ಕಾರ್ಯಕ್ಕೆ ಪ್ರತಿಬಂಧಕ ಅಥವಾ ವಿಘ್ನ ಇರಬಾರದು. ಮತ್ತು ಪ್ರತಿಬಂಧಕ ಇದ್ದರೂ ಕಾರ್ಯವನ್ನುಂಟುಮಾಡುವ ಉತ್ತೇಜಕವಾದ ಕಾರಣ ಸಾಮಗ್ರಿ ಇದ್ದರೆ ಕಾರ್ಯಸಂಪನ್ನವಾಗುತ್ತದೆ ಎಂಬುದಾಗಿ ಶಾಸ್ತ್ರವು ಕಾರ್ಯಕಾರಣಗಳಿಗಿರುವ ಸಂಬಂಧವನ್ನು ಹೀಗೆ ವಿವರಿಸುತ್ತದೆ. ಅಂದರೆ ಸಂಪತ್ತು ಬರಬೇಕಾದರೆ ಅದಕ್ಕೆ ಇರುವ ಪ್ರತಿಬಂಧಕವೇ ಆಲಸ್ಯ. ಮತ್ತು ಬಂದ ಫಲವು ಉಳಿಯಬೇಕಾದರೆ ಏನು ಮಾಡಬೇಕು? ಎಂಬ ವಿಷಯವೂ ಈ ಉತ್ತರದಲ್ಲಿ ನಿರೂಪಿತವಾಗಿದೆ. ಹಾಗೂ ಹೀಗೂ ಕಷ್ಟಪಟ್ಟು ಲಕ್ಷ್ಮಿಯನ್ನು ಸಂಪಾದಿಸಬಹುದು. ಸಹಜವಾಗಿ ಆಕೆ ಚಂಚಲೆ. ಒಂದು ಕಡೆ ಉಳಿಯಳು ಆಕೆ. ಅವಳನ್ನು ಉಳಿಸಿಕೊಳ್ಳುವುದಕ್ಕೂ ಸಹ ಒಂದು ಜಾಣ್ಮೆಯೇ ಬೇಕು. ಅದಕ್ಕಾಗಿ ಏನು ಬೇಕು? ಎಂಬುದನ್ನು ಇಲ್ಲಿ ಹೇಳಲಾಗಿದೆ. ಅಲ್ಲಿ ಒಂದು ನಿಯತ್ತು ಅಥವಾ ನೀತಿ ಬೇಕು. ಬದ್ಧತೆ ಅಥವಾ ಕ್ಷಮತೆ ಇರಬೇಕಾಗುತ್ತದೆ. ಅವಳು ಉಳಿಯಬೇಕಾದರೆ ನಮ್ಮಲ್ಲಿ ಆ ಅರ್ಹತೆಯು ಸದಾ ಜಾಗೃತವಾಗಿರುವಂತೆ ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದಾಗ ಬಂದ ಸಂಪತ್ತು ಅಲ್ಲಿ ನೆಲೆಗೊಳ್ಳುತ್ತದೆ. ಹಾಗಾಗಿ ಈ ಎರಡು ಲಕ್ಷಣಗಳಿದ್ದರೆ ಮಾತ್ರ ಮಹಾಲಕ್ಷ್ಮಿ ನೆಲೆಗೊಳ್ಳುತ್ತಾಳೆ ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ. 


 ಇದಕ್ಕೆ ಸಂಬಂಧಪಟ್ಟಂತೆ ಮಹಾಭಾರತದ ವಿದುರನೀತಿ ಹೀಗೆ ಹೇಳಿದೆ - ಯಾವನಿಗೆ ಮಹಾಲಕ್ಷ್ಮಿ ಅನಾಯಾಸವಾಗಿ ಒಲಿಯುತ್ತಾಳೆ? ಎಂದು. “ಉತ್ಸಾಹಸಂಪನ್ನಮ್ ಅದೀರ್ಘಸೂತ್ರಂ ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್ | ಶೂರಂ ಕೃತಜ್ಞಂ ದೃಢಸೌಹೃದಂ ಚ ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ || ಎಂದು. ವ್ಯಕ್ತಿಯಲ್ಲಿ ಸಂಕಲ್ಪಿಸಿದ ಕಾರ್ಯ ಸಿದ್ಧಿಸುವತನಕ ನಿರಂತರ ಉತ್ಸಾಹವಿರಬೇಕು, ವಿಳಂಬವಿರಬಾರದು, ಅರಿತು ಕೆಲಸ ಮಾಡುವವನಾಗಿರಬೇಕು, ಚಟಗಳಲ್ಲಿ ಆಸಕ್ತನಾಗಿರಬಾರದು, ಶೂರನಾಗಿರಬೇಕು, ಕೃತಜ್ಞತೆಯ ಭಾವ ಉಳ್ಳವನಾಗಿರಬೇಕು, ಮಾಡುವ ಕಾರ್ಯದಲ್ಲಿ ತಲ್ಲೀನತೆಯಿರಬೇಕು. ಈ ಏಳು ಗುಣವುಳ್ಳವನನ್ನು ಲಕ್ಷ್ಮಿಯು ತಾನಾಗಿಯೇ ಆತನ ಮನೆಯಲ್ಲಿ ವಾಸಿಸಲು ಇಚ್ಛಿಸುತ್ತಾಳೆ ಎಂಬುದಾಗಿ. ಇದೇ ಅರ್ಥವನ್ನೇ ಇನ್ನೊಂದು ರೀತಿಯಲ್ಲಿ ಈ ಪ್ರಶ್ನೋತ್ತರದಲ್ಲೂ ಹೇಳಲಾಗಿದೆ. 

   

ಸೂಚನೆ : 17/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.