Monday, April 13, 2026

ವ್ಯಾಸ ವೀಕ್ಷಿತ 183 ಭೀಮ-ಜರಾಸಂಧ – ದ್ವಂದ್ವ-ಯುದ್ಧಾರಂಭ​ (Vyaasa Vikshita 183)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png

ಸೈನ್ಯಸಮೇತನಾಗಿಯಾಗಲಿ, ಒಬ್ಬನೊಂದಿಗಾಗಲಿ, ಇಬ್ಬಿಬ್ಬರೊಂದಿಗಾಗಲಿ, ಮೂವರೊಂದಿಗೂ

ಆಗಲಿ - ಯುದ್ಧ ಮಾಡಲು ತಾನು ಸಿದ್ಧನೆಂದು ಜರಾಸಂಧನು  ಕೃಷ್ಣಭೀಮಾರ್ಜುನರ ಮುಂದೆ

ಘೋಷಿಸಿಕೊಂಡನಷ್ಟೆ?


ಹಾಗೆ ಹೇಳಿದ್ದೇ ಅಲ್ಲದೆ, ಭಯಂಕರವಾದ ಕಾರ್ಯವನ್ನು ಮಾಡಹೊರಟಿದ್ದ

ಈ ಮೂವರೊಂದಿಗೆ ಸೆಣಸಲು ಸಿದ್ಧನೂ ಆದನು. "ನನ್ನ ಪುತ್ರನಾದ ಸಹದೇವನಿಗೆ

ಪಟ್ಟಾಭಿಷೇಕವನ್ನು ನೆರವೇರಿಸಿ" ಎಂಬುದಾಗಿ ತನ್ನ ಕಡೆಯವರಿಗೆ ಆಜ್ಞೆಯಿತ್ತನು.

ಹಾಗೆ ಹೇಳಿದವನೇ ತನ್ನ ಹಿಂದಿನ ಸೇನಾಪತಿಗಳಾದ ಕೌಶಿಕ ಹಾಗೂ ಚಿತ್ರಸೇನ - ಇವರಿಬ್ಬರನ್ನೂ

ಸ್ಮರಿಸಿಕೊಂಡನು. ಅವರಿಬ್ಬರೇ ಹಿಂದೆ ಹಂಸ-ಡಿಂಭಕ ಎಂದು ಹೆಸರಾಗಿದ್ದವರು. ಅವರಿಬ್ಬರೂ

ಬದುಕಿದ್ದಾಗ ಪುರುಷರೆಲ್ಲರೂ ಅವರನ್ನು ಆದರಿಸುತ್ತಿದ್ದರು, ಕೊಂಡಾಡುತ್ತಿದ್ದರು.

ಜರಾಸಂಧನು ಬಲಶಾಲಿಗಳಲ್ಲಿ ಶ್ರೇಷ್ಠನಾದ ರಾಜನು. ಆತನ ಪರಾಕ್ರಮ ಭೀಕರವಾದದ್ದು.

“ಯದುವಂಶದವರಾರಿಂದಲೂ ಆತನು ನಾಶಹೊಂದಬಾರದು” - ಎಂಬುದು ಬ್ರಹ್ಮನ ಆಜ್ಞೆಯಾಗಿತ್ತು.

ಶ್ರೀಕೃಷ್ಣನಾದರೂ ಪುರುಷಶಾರ್ದೂಲ, ಎಂದರೆ ನರಶ್ರೇಷ್ಠ ಹಾಗೂ ಸತ್ಯಸಂಧ. ಎಂದೇ ತಾನೇ

ಕೊಲ್ಲಲು ಸಮರ್ಥನಾಗಿದ್ದರೂ ಹಾಗೆ ಮಾಡಲಿಲ್ಲ. ಜರಾಸಂಧನಂತೂ ಯುದ್ಧ ಮಾಡುವುದೆಂದು

ನಿಶ್ಚಯಿಸಿಕೊಂಡಿದ್ದನಷ್ಟೆ. ಆತನನ್ನು ಕುರಿತು ಯದುನಂದನನಾದ ಶ್ರೀಕೃಷ್ಣನು ಹೀಗೆ ಹೇಳಿದನು:

"ರಾಜನೇ, ನಮ್ಮೀ ಮೂವರಲ್ಲಿ ಯಾರೊಂದಿಗೆ ಯುದ್ಧಮಾಡಲು ನಿನಗೆ ಮನಸ್ಸಿದೆ? ನಮ್ಮಲ್ಲಿ

ಯಾರು ನಿನ್ನೊಡನೆ ಯುದ್ಧ ಮಾಡಲು ಸಿದ್ಧರಾಗಬೇಕು?" ಕೃಷ್ಣನು ಹೀಗೆ ಹೇಳಲಾಗಿ, ಆ

ಮಹಾತೇಜಸ್ವಿಯಾದ ಜರಾಸಂಧನು ಭೀಮಸೇನನೊಡನೆ ಸೆಣಸಲು ಬಯಸಿದನು.

ಒಡನೆಯೇ ಜರಾಸಂಧನ ಪುರೋಹಿತನು ಹೆಲವು ಮಂಗಲಕಾರ್ಯಗಳನ್ನು ನೆರವೇರಿಸಿದನು:

ಗೋರೋಚನ-ಮಾಲೆಗಳು, ಇನ್ನಿತರ  ಮಂಗಲದ್ರವ್ಯಗಳು, ಹಾಗೂ ಕೆಲವು

ಔಷಧಿಗಳು - ತುಂಬ ನೋವಾದಾಗ ಅದನ್ನು ನಿವಾರಿಸತಕ್ಕವು, ಹಾಗೂ ಮೂರ್ಛಿತನಾದಾಗ

ಎಚ್ಚರವಾಗಿಸುವಂತಹವು - ಇವುಗಳನ್ನೂ ತಂದನು. ಯುಯುತ್ಸುರಾಜನ ಮುಂದೆ, ಎಂದರೆ ಯುದ್ಧ

ಮಾಡಲು ಬಯಸಿರುವ ಜರಾಸಂಧನ ಮುಂದೆ, ಇವುಗಳೊಡನೆ ಉಪಸ್ಥಿತನಾದನು.

ಹೀಗೆ ಬ್ರಾಹ್ಮಣನಿಂದ ಸ್ವಸ್ತಿವಾಚನವಾದ ಬಳಿಕ, ಕ್ಷತ್ರಧರ್ಮವನ್ನು ಸ್ಮರಿಸಿದ ಜರಾಸಂಧನು

ಯುದ್ಧಕ್ಕೆ ಸನ್ನಧನಾದನು. ಕಿರೀಟವನ್ನು ತೆಗೆದನು. ಕೇಶಗಳನ್ನು ಕಟ್ಟಿದನು. ಹಾಗೆ ಸಿದ್ಧನಾದ

ಜರಾಸಂಧನು, ತನ್ನ ದಡವನ್ನೇ ಮೀರಿ ಬರುವ ಸಮುದ್ರದ ಹಾಗೆ ತೋರಿದನು!

ಭಯಂಕರವಾದ ಪರಾಕ್ರಮವುಳ್ಳ ಆ ಧೀಮಂತ ಜರಾಸಂಧನು ಭೀಮನನ್ನು ಕುರಿತು, "ಭೀಮನೇ,

ನಿನ್ನೊಡನೆ ನಾನು ಯುದ್ಧಮಾಡುವೆ. ಏಕೆಂದರೆ ಶ್ರೇಷ್ಠರೊಡನೆ ಹೋರಾಡಿ ಸೋಲುವುದು ಸಹ

ಶ್ರೇಷ್ಠವಾದದ್ದೇ!" ಎಂದನು.

ಹೀಗೆ ಹೇಳಿ ಅವನು ಭೀಮಸೇನನನ್ನು ಎದುರ್ಗೊಂಡನು. ಬಲ ಎಂಬ ಅಸುರನು ಇಂದ್ರನನ್ನು ಹೇಗೆ

ಎದುರ್ಗೊಂಡನೋ ಹಾಗೆಯೇ ಇದಿತ್ತು.

ಅಷ್ಟರಲ್ಲಿ ಶ್ರೀಕೃಷ್ಣನಿಂದ ಸ್ವಸ್ತ್ಯಯನವನ್ನು ಪಡೆದು, ಭೀಮಸೇನನೂ ಸಹ ಇತ್ತ ಸಿದ್ಧನಾದನು,

ಜರಾಸಂಧನನ್ನು ಸಮೀಪಿಸಿದನು. ಆಗ ಇಬ್ಬರೂ ವೀರರು ಮಹಾ-ಹರ್ಷದಿಂದ ಕೂಡಿದವರಾಗಿ

ಪರಸ್ಪರ-ಜಯಾಕಾಂಕ್ಷಿಗಳಾಗಿ, ತಮ್ಮ ಬಾಹುಗಳನ್ನೇ ಶಸ್ತ್ರಗಳನ್ನಾಗಿಸಿಕೊಂಡು ಸೆಣಸಿದರು.

ಮೊದಲು ಕೈಕೈ ಹಿಡಿದರು. ಪರಸ್ಪರ ಪಾದಾಭಿವಂದನ ಮಾಡಿದರು. ಕಂಕುಳಿನಿಂದ ಕಂಕುಳನ್ನು

ತಳ್ಳಿದರು. ಮಹಾಶಬ್ದಸಹಿತವಾಗಿ ತಮ್ಮ ತೋಳುಗಳನ್ನು ತಟ್ಟಿಕೊಂಡರು. ಒಬ್ಬರು ಮತ್ತೊಬ್ಬರ

ಕತ್ತಿಗೆ ಇಕ್ಕಿದರು, ಮತ್ತೆ ಮತ್ತೆ ಹೊಡೆತವಿತ್ತರು. ಒಬ್ಬರ ಅಂಗವನ್ನು ಮತ್ತೊಬ್ಬರು ಅದುಮಿ ಹಿಡಿದರು.

ಪರಸ್ಪರ ಆಸ್ಫಾಲನ ಮಾಡಿದರು, ಎಂದರೆ ಅಪ್ಪಳಿಸಿದರು. ಚಿತ್ರಹಸ್ತ, ಕಕ್ಷಾಬಂಧ ಮುಂತಾದ

ಪಟ್ಟುಗಳನ್ನು ಹಾಕಿದರು. ಒಬ್ಬರ ಕತ್ತು-ತಲೆಗಳಿಗೊಬ್ಬರು ಇಡಿದರು: ಆ ಏಟುಗಳು ಎಷ್ಟು

ತೀವ್ರವಾಗಿದ್ದವೆಂದರೆ ಕಿಡಿಗಳು ಬಂದಂತಾಯಿತು; ಸಿಡಿಲು ಬಡಿದಂತಾಯಿತು!

ಸೂಚನೆ : 12/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 60 (Prasnottara Ratnamalike 60)

 ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೬೦ - ಪ್ರಶಂಸೆ ಮಾಡಲು ಯೋಗ್ಯವಾದುದು ಯಾವುದು ?

ಉ. ಉದಾರತಾ.


ಔದಾರ್ಯ ಅಥವಾ ಉದಾರತಾ ಎಂಬ ಗುಣವು ಅತ್ಯಂತ ಶ್ರೇಷ್ಠವಾದದ್ದು. ಇದು ಯಾರಲ್ಲಿ ಇರುತ್ತದೆಯೋ

ಆ ವ್ಯಕ್ತಿಯನ್ನು ಪ್ರಶಂಸೆ ಮಾಡುವುದರಲ್ಲಿ ಯಾವುದೇ ಅಂಜಿಕೆ ಇರಬಾರದು. ಏಕೆಂದರೆ ಆ ವ್ಯಕ್ತಿ

ಈ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ. ಹಾಗಾದರೆ ಈ 'ಉದಾರತಾ' ಎಂಬ ಗುಣವು ಏಕೆ ಅಷ್ಟು ಶ್ರೇಷ್ಠವಾಗಿದೆ?

ಎಂಬುದನ್ನು ತಿಳಿಯಬೇಕಾಗಿದೆ.

'ಔದಾರ್ಯ' ಎಂಬುದು ಒಂದು ಕೊಡುವ ಮನೋಧರ್ಮ. ಈ ಹಿಂದಿನ ಪ್ರಶ್ನೋತ್ತದಲ್ಲಿ ಒಂದು ವಿಷಯವನ್ನು

ಗಮನಿಸಿದ್ದೆವು. ಆ ವಿಷಯವನ್ನು ಇಲ್ಲಿ ನೆನಪಿಸಿಕೊಂಡು ಈ ಉತ್ತರವನ್ನು ಅರ್ಥ ಮಾಡಿಕೊಳ್ಳಬೇಕು.

ಈ ಹಿಂದಿನ ಪ್ರಶ್ನೆಯಲ್ಲಿ ವೈಭವಿದ್ದರೂ ಮತ್ತೊಬ್ಬರಿಗೆ ಕೊಡದಿರುವ ಅತಿಹೇಯವಾದ ಕೃಪಣತಾ ಎಂಬ

ದೋಷವನ್ನು ವಿವರಿಸಿದ್ದಾಗಿತ್ತು. ಇದಕ್ಕೆ ವಿರುದ್ಧವಾದ ಗುಣವೇ ಉದಾರತಾ ಎಂಬುದು. ಅಂದರೆ ತನ್ನಲ್ಲಿ ಏನಿದೆಯೋ

ಅದರಲ್ಲಿ ಕೊಟ್ಟು ಸಂತೋಷಪಡುವ, ತೃಪ್ತಿಪಡುವ ಮನಸ್ಸು. ಈ ಔದಾರ್ಯವೆಂಬ ಗುಣವಿಲ್ಲದಿದ್ದರೆ ದಾನ

ಮಾಡುವ ಸ್ವಾಭಾವ ಹೇಗೆ ಬರಲು ಸಾಧ್ಯ. ಇದ್ದು ಕೊಟ್ಟರೆ ಅದು ಔದಾರ್ಯವೆನಿಸತದು. ತನ್ನಲ್ಲಿ ಇರುವಷ್ಟನ್ನು

ದೀನದರಿದ್ರರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಸ್ಪಂದಿಸುವ ವಿಶೇಷ ಗುಣವೇ ಉದಾತಾ.

ಹಾಗಾಗಿ ಇಂತಹ ವಿಶೇಷ ಗುಣವನ್ನು ಪ್ರಶಂಸಿಸಬೇಕಾದುದು ಅತ್ಯಂತ ಅವಶ್ಯಕ. ಈ ಗುಣವು ಬರಲು ಹೇಗ

ಸಾಧ್ಯ? ಎಂಬುದಕ್ಕೆ ಭಗವದ್ಗೀತೆಯಲ್ಲಿ ಯಾರು ಉದಾರರು ಎಂಬುದನ್ನು ಹೀಗೆ ಹೇಳಲಾಗಿದೆ. ಆರ್ತ, ಜಿಜ್ಞಾಸು

ಅರ್ಥಾರ್ಥೀ ಮತ್ತು ಜ್ಞಾನಿ ಈ ನಾಲ್ವರನ್ನು ಉದಾರರು ಎಂಬುದಾಗಿ ಕರೆಯಬೇಕು. ಈ ನಾಲ್ವರಲ್ಲಿ

ಜ್ಞಾನಿಯಾದವನು ಅತ್ಯಂತ ಶ್ರೇಷ್ಠ ಉದಾರಿ ಎಂಬುದಾಗಿ ತಿಳಿಯಬೇಕು. ಅಂದರೆ ಅಂತಹ ಜ್ಞಾನಿಗೆ ಮಾತ್ರ ಈ

ವಿಶೇಷಗುಣ ಬರಲು ಸಾಧ್ಯ ಎಂಬುದು ಇದರ ತಾತ್ಪರ್ಯ. ಸಾಮಾನ್ಯ ಮಾನವನಿಗೆ ಅಲ್ಪಸಲ್ಪ ಔದಾರ್ಯದ ಗುಣ

ಬರಬಹುದು. ಆದರೆ ಜ್ಞಾನಿಗೆ ಪರಿಪೂರ್ಣ ಔದಾರ್ಯ ಗುಣವು ಬರುತ್ತದೆ. ಏಕೆಂದರೆ ಜ್ಞಾನಿಯಾದವನಿಗೆ ತ್ಯಾಗ

ಎಂಬ ಗುಣವುವಿಶೇಷವಾಗಿರುತ್ತದೆ.


ತ್ಯಾಗದಿಂದಲೇ ಅವನು ಅಮೃತತ್ವವನ್ನು ಪಡೆಯಬಹುದು ಎಂಬುದನ್ನು ಬಲವಾಗಿ ನಂಬಿದವನಾಗಿರುತ್ತಾನೆ.

ಕೇವಲ ಸಂಪತ್ತನ್ನು ಮಾತ್ರವಲ್ಲದೆ ಈ ಜನ್ಮಕ್ಕೆ ಕಾರಣವಾದ ಶರೀರವು ಕೂಡ ತ್ಯಾಜ್ಯವಾದದ್ದು ಎಂಬ ಎಂಬ

ತ್ಯಾಗ ಮನೋಧರ್ಮ ಅವನಿಗೆ ಇರುತ್ತದೆ. ಔದಾರ್ಯ ಇರುವವನು ಎಲ್ಲಾ ಕಾಲದಲ್ಲೂ ಶುದ್ಧನಾಗಿ ಇರುತ್ತಾನೆ.

ಕಾರಣ ಇಷ್ಟೇ - ಔದಾರ್ಯ ಎಂಬ ಗುಣ ಇರುವುದರಿಂದಲೇ ಅವನು ಜ್ಞಾನಿಯಾದ, ಯೋಗಿಯಾದ, ಶೋಭಾ

ವಿಲಾಸೋ ಮಾಧುರ್ಯಂ ಗಾಂಭೀರ್ಯಂ ಧೈರ್ಯತೇಜಸೀ। ಲಲಿತಾ ಔದಾರ್ಯಂ ಇತಿ ಅಷ್ಟ ಸತ್ತ್ವಜಾಃ ಪುರುಷಾಃ

ಗುಣಾಃ॥ " ಎಂದು ಸಾಹಿತ್ಯದರ್ಪಣ ಎಂಬ ಗ್ರಂಥದಲ್ಲಿ ಸಜ್ಜನಪುರುಷರ ಎಂಟು ಲಕ್ಷಣಗಳನ್ನು ಹೇಳಲಾಗಿದೆ.

ಅದರಲ್ಲಿ ಔದಾರ್ಯ ಎಂಬ ಗುಣವನ್ನು ಎತ್ತಿ ಹೇಳಲಾಗಿದೆ. ಅಂದರೆ ಈ ಗುಣವು ಸತ್ತ್ವಗುಣದ ಪ್ರತೀಕವಾದದ್ದು.

ಯಾರಲ್ಲಿ ಸತ್ತ್ವಗಣ ಇರುತ್ತದೆಯೋ, ಅವರಲ್ಲಿ ಉದಾರತೆ ಇರುತ್ತದೆ. ಅಥವಾ ಉದಾರತೆ ಎಂಬುದು

ಸತ್ತ್ವಗುಣದಿಂದಲೇ ಜಾಗೃತವಾಗುತ್ತದೆ ಎಂಬ ಅರ್ಥವೂ ಸತ್ಯವಾದದ್ದು. ಒಟ್ಟರೆ ಇಂತಹ ಸತ್ಪುರುಷನು

ಉದಾರತಾ ಎಂಬ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ.


ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 61 (Prasnottara Ratnamalike 61)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



image.png


ಪ್ರಶ್ನೆ - ೬೧ - ವಿದ್ವಾಂಸರನ್ನು ಪೂಜಿಸಲು ಯೋಗ್ಯರಾದವರು ಯಾರು?

ಉ. ಸ್ವಭಾವದಿಂದ ಯಾವಾಗಲೂ ವಿನಯವುಳ್ಳವನು.

‘ವಿದ್ವಾನ್ ಸರ್ವತ್ರ ಪೂಜ್ಯತೇ’ - ವಿದ್ವಾಂಸರಿಗೆ ಎಲ್ಲ ಕಡೆ, ಯಾವಾಗಲೂ ಗೌರವ ಇದೆ ಎಂದರ್ಥ. ವಿದ್ವಾಂಸನಿಗೆ ಗೌರವ ಬರಲು ಕಾರಣ, ಅವನು ಸಂಪಾದಿಸಿದ ವಿದ್ಯೆಯೇ ಆಗಿದೆ. ಈ ವಿದ್ಯೆ ಇರುವುದರಿಂದ ಅವನಿಗೆ ‘ವಿದ್ವಾನ್’ ಎಂಬುದಾಗಿ ಕರೆಯಲಾಗುತ್ತದೆ. ವಸ್ತುತಃ ‘ವಿದ್ಯೆ ಯಾವುದು?’ ಎಂಬುದರ ಬಗ್ಗೆ ಇಂದು ಸ್ಪಷ್ಟವಾದ ಅರಿವು ಇಲ್ಲವಾಗಿದೆ. ಈ ವಿಷಯದಲ್ಲಿ ಶ್ರೀರಂಗ ಮಹಾಗುರುಗಳ ವಿದ್ಯೆಗೆ ಸಂಬಂಧಿಸಿದ ಮಾತು ನಿಜವಾದ ವಿದ್ಯೆ ಯಾವುದು? ಎಂಬುದನ್ನು ತಿಳಿಸುತ್ತದೆ. ವಿದ್ಯೆ ಎಂದರೆ ವಿದ್- ಜ್ಞಾನ, ಯಾ - ಪ್ರಾಪಣ. ಯಾವುದು ಜ್ಞಾನದ ಕಡೆ ನಮ್ಮನ್ನು ಕರೆದುಕೊಂಡು ಹೊಗುತ್ತದೆಯೋ ಅದಕ್ಕೆ ವಿದ್ಯೆ ಎಂಬುದಾಗಿ ಕರೆಯಬೇಕು ಎಂದು. ಇಂತಹ ವಿದ್ಯೆ ಉಳ್ಳವನು ವಿದ್ವಾಂಸ ಎಂಬುದಾಗಿ ಕರೆಸಿಕೊಳ್ಳುತ್ತಾನೆ. ಪ್ರಣವದಿಂದ ವಿಕಾಸವಾದ ಗಾಯತ್ರೀ, ವೇದಗಳು, ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೊದಲಾದವುಗಳನ್ನು ಈ ನೇರದಲ್ಲಿ ‘ವಿದ್ಯೆ’ ಎಂಬುದಾಗಿ ಕರೆಯಲಾಗುತ್ತದೆ. ಇವುಗಳ ತಾತ್ತ್ವಿಕಜ್ಞಾನ ಉಳ್ಳವನನ್ನು ‘ವಿದ್ವಾನ್’ ಎಂಬುದಾಗಿ ಕರೆಯಬಹುದು. ಇಂತಹ ವಿದ್ವಾಂಸನಿಗೆ ಮನ್ನಣೆ ಎಲ್ಲ ಕಾಲದಲ್ಲೂ, ಎಲ್ಲ ದೇಶದಲ್ಲೂ ಸಿಗುವುದು ಅತ್ಯಂತ ಸಹಜ. ಈ ಬಗೆಯ ವಿದ್ವಾಂಸನಿಗೆ ಮನ್ನಣೆ ಬರಬೇಕು ಎಂಬುದಾದರೆ ಏನು ಬೇಕು? ಎಂಬ ಪ್ರಶ್ನೆ ಇಲ್ಲಿದೆ. ಅಂದರೆ ಇಂತಹ ಗುಣವಿಶಿಷ್ಟನಾದ ಒಬ್ಬ ವ್ಯಕ್ತಿಗೆ ಶೋಭಿಸುವಂತೆ ಮಾಡುವ ಇನ್ನೊಂದು ಗುಣ ಬೇಕೆ? ಎಂಬುದಾಗಿ ಸಂಶಯ ಬರಬಹುದು. ಅದಕ್ಕೆ ಪರಿಹಾರವನ್ನು ಈ ಉತ್ತರದಲ್ಲಿ ಕಾಣಬಹುದು. ಇದನ್ನೇ ಸಾರುವ ಸುಭಾಷಿತ ಹೀಗಿದೆ - “ವಿದ್ಯಾ ವಿನಯೇನ ಶೋಭತೇ”, “ವಿದ್ಯಾ ದದಾತಿ ವಿನಯಂ” ಎಂದು. ಅಂದರೆ ವಿದ್ಯೆ ಮತ್ತು ವಿನಯ ಈ ಎರಡು ಅನ್ಯೋನ್ಯವಾಗಿ ಇರುವಂಥವುಗಳು. ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ತಿತ್ವವಿಲ್ಲ, ಮೌಲ್ಯವಿಲ್ಲ ಎಂಬುದು ಇದರ ತಾತ್ಪರ್ಯ. ಎಲ್ಲಿ ವಿದ್ಯೆ ಇದೆಯೋ ಅಲ್ಲಿ ವಿನಯ ಇರಬೇಕು ಎಂಬುದೇ ಅರ್ಥ. ಹಾಗಿಲ್ಲದಿದ್ದರೆ ಆ ವಿದ್ಯೆಯು ಅಪರಿಪೂರ್ಣ ಎಂದರ್ಥ. ಆಗ ಕೇವಲ ವಿದ್ಯೆ ಉಳ್ಳವರಿಗೆ ಗೌರವವೂ ಸಿಗದು. ಸಿಕ್ಕಿದ ಗೌರವೂ ಉಳಿಯದು. ಹಾಗಾಗಿ ವಿದ್ಯೆಯಿಂದ ಬರುವ ಗೌರವವು ಉಳಿಯಬೇಕಾದರೆ ವಿನಯ ಅತ್ಯಂತ ಮುಖ್ಯ ಎಂಬುದು ಸಾರಾಂಶ.

ಹಾಗಾದರೆ ವಿದ್ಯೆಯಿದ್ದವರಿಗೆ ವಿನಯ ಅಷ್ಟು ಮುಖ್ಯ ಏಕೆ? ಎಂದರೆ, ಸಾಮಾನ್ಯವಾಗಿ ವಿದ್ಯೆ ಇರುವವನು ಗರ್ವಕ್ಕೆ ಅಥವಾ ಮದಕ್ಕೆ ಈಡಾಗುತ್ತಾನೆ. ವಿದ್ಯೆಯು ಸರಿಯಾದ ಮಾರ್ಗದಲ್ಲಿ ಬರೆದಿದ್ದರೆ ಅದು ಅಹಂಕಾರಕ್ಕೆ ಕಾರಣವಾಗುತ್ತದೆ. ಹಾಗಾಗಿ ವಿದ್ಯೆಯ ಜೊತೆ ಎಲ್ಲಿ ವಿನಯ ಬಂದಿರುತ್ತದೆಯೋ, ಅಲ್ಲಿ ಬಂದ ವಿದ್ಯೆಯು ಸನ್ಮಾರ್ಗದಲ್ಲಿ ಬಂದಿದೆ ಎಂದರ್ಥ. ಆದ್ದರಿಂದ ವಿದ್ಯೆ ಮತ್ತು ವಿನಯಗಳಿಗೆ ಪರಸ್ಪರ ಸಂಬಂಧವಿರುವುದನ್ನು ಕಾಣಬಹುದು. ವಿದ್ಯೆಯಿಂದ ಬರುವ ವಿನಯವು ಪಾತ್ರತ್ವವನ್ನು ಅಂದರೆ ಮನ್ನಣೆಯನ್ನು ಕೊಡುತ್ತದೆ; ಆ ಮನ್ನಣೆಯು ಅವನಿಗೆ ಭದ್ರತೆಯನ್ನು ಉಂಟುಮಾಡುತ್ತದೆ. ಈ ಭದ್ರತೆಯು ಅವನಿಗೆ ಧರ್ಮ ಮತ್ತು ಶಾಶ್ವತವಾದ ಸುಖವನ್ನು ಕೊಡುತ್ತದೆ ಎಂಬುದಾಗಿ ಒಂದು ಸುಭಾಷಿತ ಸಾರುತ್ತದೆ. ಇವೆಲ್ಲವನ್ನು ಗಮನಿಸಿದಾಗ ವಿದ್ಯೆ ಮತ್ತು ವಿನಯಗಳಿಗೆ ಇರುವ ಸಂಬಂಧ ತಿಳಿಯುತ್ತದೆ. ಹಾಗಾಗಿ ವಿದ್ಯಾವಂತನಿಗೆ ಗೌರವ ಸಿಗಬೇಕಾದರೆ ಅವನು ವಿನಯ ಸ್ವಭಾವ ಉಳ್ಳವನಾಗಿರಬೇಕು ಎಂಬುದು ಪರಮ ಸತ್ಯವಾದ ವಿಷಯ.

ಸೂಚನೆ : 12/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, April 12, 2026

ಕೃಷ್ಣಕರ್ಣಾಮೃತ 100 ಎಳೆಯನ ಕೊಳಲಿನ ಇನಿದನಿಯ ಮೆರುಗು (Krishakarnamrta 100)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಲೀಲಾಶುಕನ ಶ್ರೀಕೃಷ್ಣಕರ್ಣಾಮೃತವು ರಸದ ಒಂದು ಬುಗ್ಗೆಯೇ ಸರಿ. ಬಹುಜನ-ಪ್ರಿಯವಾದ ಬೋಧಿವೃಕ್ಷ-ಪತ್ರಿಕೆಯಲ್ಲಿ ೨೦೨೪ರಲ್ಲಿ ಆರಂಭವಾಯಿತು ಇದನ್ನು ಕುರಿತಾದ ಲೇಖನಮಾಲೆ. ಅಲ್ಲಿಯ ಶ್ಲೋಕಗಳ ಆಸ್ವಾದನೆಯು ಅನುಸ್ಯೂತವಾಗಿ ಇಲ್ಲಿಯವರೆಗೆ ೯೯ ಕಂತುಗಳಾಗಿ ಸಾಗಿ ಬಂದಿದೆ. ಈಗಿದು ನೂರನೆಯ ಕಂತು. ಈ ಸರಣಿಯಲ್ಲಿ ಕೊನೆಯದು. ಅಲ್ಲಿಯ ಒಟ್ಟು ೩೧೦ ಶ್ಲೋಕಗಳಲ್ಲಿ ಇದು ೧೭೦ನೆಯದು. ಲೇಖನಮಾಲೆಗೆ ಆಗಾಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ವಾಚಕರಿಗೆ ಕೃತಜ್ಞತೆಗಳು.

ಶ್ರೀಕೃಷ್ಣನು ಮಧುರವಾಗಿ ವೇಣುಗಾನ ಮಾಡುವ ವಿಷಯವು ಹಲವೆಡೆ ಬಂದಿದೆ. ಅದರೆ ಒಂದು ಅತ್ಯಂತ ಸೊಬಗಿನ ಪದ್ಯವೊಂದನ್ನಿಲ್ಲಿ ತೆಗೆದುಕೊಂಡಿದೆ. ಅದು ಕೃಷ್ಣನ ವೇಣು-ವಾದನದ ಬಹುಮುಖ-ಅತಿಶಯತೆಗಳನ್ನು ಒಟ್ಟಿಗೇ ಸಂಗ್ರಹಿಸಿದೆ.  ಕೊಳಲುಲಿಯ ದಶವಿಧಪರಿಣಾಮಗಳನ್ನು ಕವಿಯು ಸುಭಗವಾಗಿ ಚಿತ್ರಿಸಿದ್ದಾನೆ. ಮೊಟ್ಟಮೊದಲನೆಯದಾಗಿ ಅದು ಇಡೀ ಲೋಕದ ಮೇಲೆ ಪರಿಣಾಮ ಬೀರಿದೆ. ಪುಟ್ಟ ಹುಡುಗನೊಬ್ಬನು ನುಡಿಸಿದ ಕೊಳಲಿನ ದನಿಯು ಎಷ್ಟುದೂರ ಹೋದೀತು? - ಎಂಬ ಪ್ರಶ್ನೆ ಬರಬೇಕಿಲ್ಲ. ಏಕೆ? ದಿವ್ಯಪುರುಷನೊಬ್ಬನ ವೇಣುಗಾನವಿದು! ಲೋಕಸಾಮಾನ್ಯರ ಪರಿಯ ಗಾನವಲ್ಲ. ಎಂದೇ ಕವಿಯು ಲೋಕಾನ್ ಎಂದು ಬಹುವಚನವನ್ನೇ ಬಳಸಿದ್ದಾನೆ. ಲೋಕಗಳೆಲ್ಲದರ ಮೇಲೂ ಪರಿಣಾಮ ಬೀರುವ ಪರಿಯಿದು.

ಯಾವ ಪರಿಣಾಮ? ಉನ್ಮಾದದ ಪರಿಣಾಮ. ಹಾಗೆಂದರೆ ಏನೋ ಹುಚ್ಚುಹಿಡಿಸುವ ಪರಿಣಾಮವೆಂದೇ? ಒಂದರ್ಥದಲ್ಲಿ ಹುಚ್ಚೇ; ಮತ್ತೊಂದರ್ಥದಲ್ಲಿ ಅದಕ್ಕೆ ವಿರುದ್ಧವಾದದ್ದೇ. ಹೇಗೆ? ಇದು ಯೋಗಶಾಸ್ತ್ರದ ವಿಷಯ. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇದನ್ನು ವಿಶದಪಡಿಸಿರುವರು. ಉನ್ಮನೀ ಮನೋನ್ಮನೀ - ಎಂಬ ಎರಡು ಅವಸ್ಥೆಗಳನ್ನು  ಯೋಗವಿದ್ಯೆಯು ಬೋಧಿಸುವುದು. ಯೋಗಿಗಳು ಧ್ಯಾನಸ್ಥರಾಗಿದ್ದಾಗ ಅನಾಹತವೆಂಬ ನಾದವು ಒಳಗೇ ಕೇಳಿಬರುವುದು. ಈ ಅಂತರ್ನಾದಶ್ರವಣದ ಸ್ಥಿತಿಯಲ್ಲೇ ಉನ್ಮನ್ಯವಸ್ಥೆಯು ಉಂಟಾಗುವುದು.

ಇಲ್ಲಿ ಕೃಷ್ಣನು ಕೊಳಲಿನಿಂದ ನುಡಿಸುತ್ತಿರುವುದು ಬಾಹ್ಯನಾದ. ಅದು ಆಹತನಾದ. ಹಾಗಿದ್ದರೂ ಸಹ ಒಳಗಣ ನಾದವು ಕೇಳಿಬರುವಾಗ ಚಿತ್ತಕ್ಕೆ ಯಾವ ಅವಸ್ಥೆಯು ಉಂಟಾಗುವುದೋ ಅದನ್ನೇ ಉಂಟುಮಾಡುತ್ತಿದೆ! ಇಂದ್ರಿಯದ ಹೊರಗಣ ನಡೆಗಳೆಲ್ಲವೂ ಕೆಲಕಾಲ ಸ್ತಬ್ಧವಾಗಿಬಿಟ್ಟು, ದಿವ್ಯಭಾವದೊಂದಿಗೆ ಹೊಮ್ಮಿದ ಈ ಮಧುರಧ್ವನಿಯ ಆಸ್ವಾದನೆಯಲ್ಲಿ ಮುಳುಗುವಂತಾಗುತ್ತದೆ. ಹೀಗೆ ಅನಾಹತನಾದದ ಪರಿಣಾಮವನ್ನು ಅನಾಯಾಸವಾಗಿ ಸಾಧಿಸಿಕೊಡುವ ನಾದವಿದು - ಅತ್ತ ಚಿತ್ತವಿತ್ತವರಿಗೆಲ್ಲಾ!

ಎರಡನೆಯದಾಗಿ, ಈ ನಾದವು ಶ್ರುತಿಗಳನ್ನೇ ಪ್ರತಿಧ್ವನಿಸುವಂತಹುದು. ಶ್ರುತಿಗಳೆಂದರೆ ವೇದಗಳು. ವೇದಧ್ವನಿಗೂ ಈ ಧ್ವನಿಗೂ ಸಾಮ್ಯವೆಂತು? – ಎಂಬುದನ್ನು ಒಂದು ಉದಾಹರಣೆಯ ಮೂಲಕ ನೋಡಬಹುದು. ಒಂದೇ ಶ್ರುತಿಗೆ ಜೋಡಿಸಿಟ್ಟ ನಾಲ್ಕು ತಂಬೂರಿಗಳಿದ್ದಾಗ, ಒಂದನ್ನು ಮೀಟುತ್ತಲೇ ಮಿಕ್ಕವೂ ಅದೇ ಧ್ವನಿಯನ್ನೇ ಹೊಮ್ಮಿಸುವುವು! ಹೀಗಾಗಿ ಈ ವೇಣುನಾದವಾಗುತ್ತಲೇ ವೇದಗಳೆಲ್ಲವೂ ಇದು ತಮ್ಮದೇ ದನಿಯೆಂದು ಗುರುತಿಸಿ, ಒಡನೆಯೇ ಅಪ್ರಯತ್ನವಾಗಿ ಮಾರ್ದನಿಗೊಳ್ಳುವಂತಗುವುದು!

ಅಂತೂ, ಇತ್ತ ಈ ದಿವ್ಯಶಿಶುವು ಲೀಲೆಗಾಗಿ ಹೊರತಂದ ನಾದವು, ಅತ್ತ ಮಹರ್ಷಿಗಳಿಗೆ ತಪೋಲಭ್ಯವಾದ ಸುಸ್ವರದಿಂದ ಹೊಮ್ಮುವ ಸಾಹಿತ್ಯದ ಸಾರವೇ ಆಗಿದೆ! ಅಲ್ಲಿಯ ಉದಾತ್ತಭಾವದ ಸಾರವನ್ನೇ ಬಿಂಬಿಸಿದೆ. ಮೂರನೆಯದಾಗಿ ಮರಗಳಿಗೆ ಸಹ ಹರ್ಷವುಂಟಾಗಿದೆ! ಮರಗಳೂ ಜೀವಿಗಳೇ. ಸಸ್ಯಜಾತಿಗೂ ಇಂದ್ರಿಯಗಳುಂಟು - ಎಂಬುದನ್ನು ಮಹಾಭಾರತವು ಪ್ರತಿಪಾದಿಸಿದೆ. ಈಚಿನ ವೈಜ್ಞಾನಿಕ-ಪ್ರಯೋಗ-ಫಲಿತಾಂಶಗಳೂ ಇದಕ್ಕೆ ಸಂವಾದಿಯಾಗಿವೆ. ಭಗವಂತನ ನಡೆನುಡಿಗಳೂ ಕೊನೆಗೆ ಶ್ವಾಸೋಚ್ಛ್ವಾಸಗಳೂ ಜೀವಹಿತಕ್ಕಾಗಿಯೇ ಇರುವುವಾಗಿ, ಅಂತಸ್ಸಂಜ್ಞವೆನಿಸುವ ಗಿಡಮರಗಳೆಂಬ ಜೀವಗಳಿಗೂ ಇಲ್ಲಿಯ ಆಪ್ಯಾಯಕತೆಯು ಗೋಚರವಾಗಿ, ಹರ್ಷೋಲ್ಲಾಸಗಳೇ ಹರಿದಿವೆ!

ನಾಲ್ಕನೆಯದಾಗಿ ಪರ್ವತಗಳನ್ನೂ ಕರಗಿಸುವ ಧ್ವನಿಯಿದು.”ಕಗ್ಗಲ್ಲಿನಂತೆ ಕಠಿಣವಾದ ಎಂತಹ ಕಲ್ಲೆದೆಯಾದರೂ ಆ ಮಹಾ ವೇಣುಗಾನಲೋಲನಾದ ಕೃಷ್ಣರೂಪಿಯಾದ ಭಗವಂತನ ನಾದದಿಂದ ಜಿನುಗಿ ಕರಗಿ ಆ ನಾದದಲ್ಲಿ ಲೀನವಾಗಿಬಿಡುತ್ತದೆ” - ಎಂಬುದು ಶ್ರೀರಂಗಮಹಾಗುರುಗಳ ವಾಣಿ.   ಬೆಟ್ಟಗಳೂ ಕರಗುವುದನ್ನು ನಾರದ-ಹನುಮತ್-ಸಂವಾದ-ರೂಪದ ಪುರಾಣಕಥೆಗಳು ತೋರಿಸುತ್ತವೆ. ಐದನೆಯದಾಗಿ ಮೃಗಗಳ ಮೇಲಾದ ಪರಿಣಾಮ. ಮೃಗಗಳೆಂದರೆ ವಿಶೇಷವಾಗಿ ಜಿಂಕೆಗಳೇ. ಅವುಗಳಲ್ಲಿ ಒಂದು ವಿವಶತೆಯುಂಟಾಗಿದೆ. ಗಿಡಮರಗಳ ಮೇಲೇ ಅಷ್ಟು ಪರಿಣಾಮವುಂಟೆಂದಮೇಲೆ, ಪ್ರಾಣಿಗಳ ಮೇಲೆ ಮತ್ತೂ ವಿಶೇಷವಾದ ಪರಿಣಾಮವು ನಿರೀಕ್ಷ್ಯವೇ. ಸಸ್ಯಜಾತಿಗಿಂತಲೂ ಅಧಿಕವಾದ ಇಂದ್ರಿಯಪಾಟವ ಮೃಗಗಳದ್ದು. ಎಂದೇ, ಅವುಗಳ ಆಸ್ವಾದನ-ಸಾಮರ್ಥ್ಯವೂ ಅಧಿಕವೇ. ಹೀಗಾಗಿ ಪ್ರಾಣಿಗಳು ಪರವಶವಾಗಿವೆ. ಕೆಲವು ರಾಗಗಳನ್ನು ನುಡಿಸಿ, ಜಿಂಕೆಗಳಿರಲಿ, ಆನೆಗಳ ಮನಸ್ಸನ್ನೂ ಮುಗ್ಧವಾಗಿಸಲು ಶಕ್ಯವೆಂಬುದನ್ನು ನಮ್ಮ ಪ್ರಾಚೀನಸಾಹಿತ್ಯವು ತಿಳಿಸುತ್ತದೆಯಷ್ಟೆ. ಶ್ರೀರಂಗಮಹಾಗುರುಗಳು ಹೇಳುವಂತೆ “ಮೃಗಗಳೆಲ್ಲವೂ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಮ್ಮನ್ನು ವೇಣುಗಾನಕ್ಕೆ ಕೊಟ್ಟುಕೊಂಡು ಮೈಮರೆತು ಆನಂದದಿಂದ ಆ ನಾದವನ್ನು ಕೇಳುತ್ತಿವೆ. ನಿಂತಲ್ಲಿ ಚಿತ್ರಪ್ರತಿಮೆಗಳಂತೆ ಹಾಗೆಯೇ ನಿಂತು, ನಾದದಿಂದ ಮೈಮರೆತಿವೆ.”

ಇನ್ನು ಆರನೆಯದಾಗಿ, ಗೋಸಮೂಹದ ಮೇಲಿನ ಪರಿಣಾಮ. ಅದನ್ನಂತೂ ಹೇಳಲೇಬೇಕಿಲ್ಲ. ಅವಕ್ಕೆಲ್ಲ ಆನಂದವಾಗಿದೆಯೆಂದು ಹೇಳಿದರೆ ಸಾಕು! ಏಳನೆಯ ಪರಿಣಾಮ ಗೋಪರ ಮೇಲೆ. ಗೊಲ್ಲರಿಗೆ ಗೊತ್ತಾಗದೇ, ವೇಣುಗಾನದ ಇನಿದನಿ? ಅವರಿಗೆಲ್ಲ ಉಂಟಾದುದು ಏನೋ ಸಂಭ್ರಮ. ಆ ಧ್ವನಿವಿಶೇಷದ ಏನು-ಎತ್ತಗಳು ಗೊತ್ತಾಗದಿದ್ದರೂ ಏನೋ ಉಕ್ಕುವ ಉಲ್ಲಾಸದ ಅನುಭವ! ಎಂಟನೆಯ ಪರಿಣಾಮ ಮುನಿಗಳ ಮೇಲಾದುದು. ಗೋಪರ ಸಂಭ್ರಮ ಹೊರಗೆ ಗೋಚರವಾಗಬಹುದು. ಆದರೆ ಮುನಿಗಳು ಮತ್ತೂ ಮುಕುಳಿತರಾಗುತ್ತಿದ್ದಾರೆ. ಮುಕುಳವೆಂದರೆ ಮೊಗ್ಗು. ಮೊಗ್ಗು ಅರಳಿದಾಗ ಬಹಿರ್ಮುಖ. ಮುನಿಗಳು ಶ್ರಮಪಡುವುದೇ ಮನಸ್ಸನ್ನು ಅಂತರ್ಮುಖವಾಗಿಸಲು. ಆದರಿದೋ, ಈಗದು ಸುಲಭವಾಗುತ್ತಿದೆ, ಅಥವಾ ತಾನಾಗಿಯೇ ಉಂಟಾಗುತ್ತಿದೆ! ಭಗವದನುಭವವಾಗುವುದು ಮನಸ್ಸಿನ ಮುಕುಳೀಭಾವದಿಂದಲೇ. ಹೀಗೆ ಮುನಿಗಳಿಗೆ ಯೋಗಮಾರ್ಗದಲ್ಲಿ ಪ್ರಗತಿಯಾಗುತ್ತಿದೆ. ಒಂಭತ್ತನೆಯದಾಗಿ ಇಲ್ಲಿ ಸಪ್ತಸ್ವರಗಳೂ ಜೃಂಭಿಸುತ್ತಿವೆ. ನಾನಾಸ್ವರಾಲಾಪಗಳಿಂದಾಗಿ ನಾನಾರಸಗಳನ್ನು ಉದ್ಬೋಧಗೊಳಿಸಬಹುದು - ಎಂಬುದಾಗಿ ಸಂಗೀತಶಾಸ್ತ್ರವು ಹೇಳುವುದಲ್ಲವೇ? ಆದರಿಲ್ಲಿ, ಆತ್ಮಭಾವವನ್ನು ಸ್ಥಿರಗೊಳಿಸಲೂ ಸಪ್ತಸ್ವರಗಳ ವಿನ್ಯಾಸ-ವಿಶೇಷವಾಗಿದೆ! ಅಮಾನುಷವಾದ ಗಾನವಲ್ಲವೇ ಇದು?

ಹತ್ತನೆಯ ಪರಿಣಾಮವಾಗಿ ಓಂಕಾರವನ್ನೇ ಹೊಮ್ಮಿಸುತ್ತಿದೆ, ಈ ವೇಣುಗಾನ. ಎಲ್ಲ ವೇದಗಳೂ ಯಾವ ಪದ ಅಥವಾ ಸ್ಥಾನವನ್ನು ನಿರ್ದೇಶಿಸಿ ಹೇಳುತ್ತವೆಯೋ ಅದನ್ನೇ ಸಂಗ್ರಹವಾಗಿ ಹೇಳುವುದಾದರೆ ಅದು ಓಂಕಾರ - ಎಂದು ಕಠೋಪನಿಷತ್ತು ಹೇಳುವುದು. ಓಂಕಾರವೆಂದರೂ ಪ್ರಣವವೆಂದರೂ ಒಂದೇ. ಭಗವಂತನ ವಾಚಕವೇ ಪ್ರಣವವೆಂದು ಯೋಗಶಾಸ್ತ್ರವು ಹೇಳುತ್ತದೆ.

ಛಂದಸ್ಸುಗಳಿಗೆಲ್ಲ ಆದಿಯಾದುದು ಪ್ರಣವ. ಎಲ್ಲ ಧ್ವನಿಗಳಿಗೂ ಮೂಲವೆನಿಸುವ ಏಕಾಕ್ಷರವು ಯಾವುದೋ ಅದುವೇ ನಾನು – ಎನ್ನುತ್ತಾನೆ,  ಗೀತೆಯಲ್ಲಿ ಶ್ರೀಕೃಷ್ಣ. ಓಂ - ಎಂಬುದು ಏಕಾಕ್ಷರಬ್ರಹ್ಮ. ಇದರ ಉಪಾಸನೆಯಿಂದಲೇ ಛಾಂದೋಗ್ಯೋಪನಿಷತ್ತಿನ ಆರಂಭವಾಗುವುದು! ಎಂದೇ ಓಂ ಎಂಬುದು ಬರೀ ಗಾನವಲ್ಲ, ಉದ್ಗಾನ! ಓಂ ಎಂಬುದೇ ಬ್ರಹ್ಮವೆನ್ನುತ್ತದೆ, ತೈತ್ತಿರೀಯ-ಶ್ರುತಿ. ನಾನಾ-ಪ್ರಕಾರಗಳಲ್ಲಿ ಓಂಕಾರದ ಆವಿರ್ಭಾವವನ್ನು ಮಾಂಡೂಕ್ಯೋಪನಿಷತ್ತು ತಿಳಿಸುತ್ತದೆ. ವೇದರಾಶಿಯನ್ನು ಓಂಕಾರ-ಸಂಪುಟಿತವಾಗಿಯೇ ಹೇಳುವುದು. ಸಾರಾಂಶವಾಗಿ ಓಂಕಾರದ ವಿಸ್ತಾರವೇ ತ್ರ್ಯಕ್ಷರವೂ ತ್ರಿಪಾದಾಗಾಯತ್ರಿಯೂ ವೇದತ್ರಯವೂ ಆಗಿರುವುದು. ಹೀಗೆ ಸೃಷ್ಟಿ-ಸರ್ವಸ್ವವನ್ನೂ ಸೃಷ್ಟಿಯ ಸಾರ-ಸರ್ವಸ್ವವನ್ನೂ ಹೇಳುವುದೇ ಓಂಕಾರ. ಅದನ್ನೇ ನುಡಿಸುತ್ತಿರುವುದು ಇದೋ ಈ ಬಾಲಕೃಷ್ಣನ ಕೊಳಲು! ಇಷ್ಟೆಲ್ಲ ಅಸಾಧಾರಣವೂ ಅದ್ಭುತವೂ ಲೋಕೋತ್ತರವೂ ತಾರಕವೂ ಆದ ಪರಿಣಾಮಗಳ ಪರಂಪರೆಯನ್ನೇ ಉಂಟುಮಾಡಿರುವುದು ಮತ್ತಾವುದಿದ್ದೀತು? ಶಿಶುವಿನ ವಂಶೀನಿನಾದ - ಅರ್ಥಾತ್ ಬಾಲಕೃಷ್ಣನ ವೇಣುನಾದವೊಂದೇ! ಎಂದೇ ಅದಕ್ಕೇ ಜಯಕಾರವನ್ನು ವಿಜಯತೇ - ಎಂದು ಹೇಳಿರುವುದು. ಅದು ಸರ್ವೋತ್ಕೃಷ್ಟವಾಗಿದೆ - ಎಂಬ ಅರ್ಥವೇ ಆ ಪದಕ್ಕಿರುವುದು. “ಒಂದೇ ನಾದವಾದರೂ ಅಧಿಕಾರಿಭೇದೇನ ಪರಿಣಾಮವನ್ನುಂಟುಮಾಡುತ್ತಿದೆ” -ಎಂಬ ಶ್ರೀಗುರುವಾಣಿಯು ಗಮನೀಯ.

ಜಗದ್ವೃಕ್ಷಕ್ಕೆ ಸರ್ವೋತ್ಕೃಷ್ಟವಾದ ಊರ್ಧ್ವಮೂಲವೇ ಪರಮಪುರುಷನಾದ  ಭಗವಂತ. ಆ ಭಗವದ್ಭಾವವು ಇತ್ತ ಭಕ್ತರಲ್ಲಿ ತುಂಬುವಂತೆ ಮಾಡುವವರೇ ವರ-ಕವಿಗಳು! ಆರ್ಷಸಾಹಿತ್ಯಕ್ಕೆ ಸರಿಸಮನೆನಿಸುವ ಇಂತಹ ಸತ್-ಕಾವ್ಯಸಾಹಿತ್ಯವನ್ನೊದಗಿಸಿದ ವರಕವಿಯಾದ ಲೀಲಾಶುಕನಿಗೆ ನಮ್ಮ ನಮನಗಳು.  ಶ್ಲೋಕ ಹೀಗಿದೆ:

ಲೋಕಾನ್ ಉನ್ಮದಯನ್, ಶ್ರುತೀರ್ಮುಖರಯನ್, ಕ್ಷೋಣೀರುಹಾನ್ ಹರ್ಷಯನ್, /

ಶೈಲಾನ್ ವಿದ್ರವಯನ್, ಮೃಗಾನ್ ವಿವಶಯನ್, ಗೋವೃಂದಮ್ ಆನಂದಯನ್, |

ಗೋಪಾನ್‌ ಸಂಭ್ರಮಯನ್, ಮುನೀನ್ ಮುಕುಳಯನ್, ಸಪ್ತಸ್ವರಾನ್ ಜೃಂಭಯನ್, /

ಓಂಕಾರಾರ್ಥಮ್ ಉದೀರಯನ್ - ವಿಜಯತೇ ವಂಶೀನಿನಾದಃ ಶಿಶೋಃ! ||

ಸೂಚನೆ : 11/4/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಅಷ್ಟಾಕ್ಷರೀ103 ಏತದ್ರಾಜ್ಯಂ ನಾನ್ಯದಸ್ತಿ (Astakshara 103)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png



ಈಗಂತೂ ನಿತ್ರ್ಯವೂ ಪತ್ರಿಕೆಗಳಲ್ಲಿ ಯುದ್ಧದ ಸಮಾಚಾರವೇ. ಗೀತೋಪದೇಶವಾದುದೂ ಒಂದು ಯುದ್ಧಸಂದರ್ಭದಲ್ಲೇ. ಅಣ್ಣತಮ್ಮಂದಿರ ಮಕ್ಕಳು ರಾಜ್ಯನಿಮಿತ್ತವಾಗಿ ಹೊಡೆದಾಡುವ ಸಂದರ್ಭವದು. ಏಕೆ ಬೇಕು ರಾಜ್ಯ? ಏಕೆ ಬೇಡ ರಾಜ್ಯ? - ಈ ಜಿಜ್ಞಾಸೆಯು ಗೀತೆಯ ಆದಿ-ಅಂತಗಳಲ್ಲೂ, ಅಲ್ಲಲ್ಲಿ ಮಧ್ಯದಲ್ಲಿಯೂ, ಕಂಡುವಂತಹುದೇ.

ನಮಗೇ ಅದೇಕೋ ಅರ್ಜುನನ ಮಾತೇ ಒಮ್ಮೊಮ್ಮೆ ಹತ್ತಿರವಾಗುತ್ತದೆ. ಕೃಷ್ಣನ ತರ್ಕವೂ ಸಿದ್ಧಾಂತವೂ ಗಹನವೆಂದೇ ತೋರುತ್ತದೆ. ಆದರೂ ಕೃಷ್ಣನ ಮಾತನ್ನು ಎತ್ತಿಹಾಕಲು ಮನಸ್ಸೂ ಬರುವುದಿಲ್ಲ: ಎಷ್ಟಾದರೂ ದೇವನಲ್ಲವೆ, ಅವನು? ದೇವರೇ ತಪ್ಪು ಮಾಡುವನೇ? ಮಾಡಿಸುವನೇ? ಈ ಭರವಸೆಯೇ ನಮಗೆ ಕೃಷ್ಣನ ಮಾತನ್ನು ಒಪ್ಪಲು ಆಧಾರವಾಗಿಬಿಡುತ್ತದೆ. 

ಏಕೆ ಹೀಗೆ?

ಮೊದಲು ಕೃಷ್ಣನ ಒಂದೆರಡು ಮಾತುಗಳನ್ನು ಗಮನಿಸೋಣ. ಅದೂ ಯುದ್ಧವನ್ನೇ ಕುರಿತು. ಅರ್ಜುನಾ, ನೀನು ಯುದ್ಧವನ್ನು ಮಾಡುವುದಿಲ್ಲವೆನ್ನುವೆಯಾ? ಅಲ್ಲಿಗೆ ನೀನು ಸ್ವಧರ್ಮವನ್ನೂ ಬಿಟ್ಟು, ಕೀರ್ತಿಯನ್ನು ಕಳೆದುಕೊಂಡಂತೆ! ಪಾಪವನ್ನೂ ಸಂಪಾದಿಸಿಕೊಂಡಂತೆ! 

ಮುಂದೇನು? ಜನರು ನಿನ್ನ ಅಪಕೀರ್ತಿಯನ್ನು ಸಾರುವರು. ಸಂಭಾವಿತರಾದವರಿಗೆ ಅಕೀರ್ತಿಯೆಂಬುದು ಮರಣಕ್ಕಿಂತಲೂ ಹೀನವಲ್ಲವೇ? ಹೆದರಿಕೆಯಿಂದ ರಣಾಂಗಣದಿಂದ ಓಡಿಹೋದ ಹೇಡಿಯೆನ್ನುತ್ತಾರೆ, ಮಹಾರಥರು! ಬದಲಾಗಿ ನೀನು ಯುದ್ಧ ಮಾಡಿದಲ್ಲಿ, ಸತ್ತೆಯೋ ಸ್ವರ್ಗವನ್ನು ಪಡೆಯುವೆ. ಗೆದ್ದೆಯೋ ಭೂಮಂಡಲವನ್ನು ಭೋಗಿಸುವೆ! 

ಅಷ್ಟೇಕೆ? ನಾನೇ ಎಲ್ಲರನ್ನೂ ಕೊಂದಾಗಿದೆ, ನೀನು ನಿಮಿತ್ತಮಾತ್ರ - ಎಂದೂ ಉದ್ಗರಿಸಿದ!

ಕೊನೆಯಲ್ಲಂತೂ, “ನೀನೇನಾದರೂ ಅಹಂಕಾರಕ್ಕೆ ಪಕ್ಕಾಗಿ ನಾನು ಯುದ್ಧ ಮಾಡುವುದಿಲ್ಲವೆಂದುಕೊಂಡೆಯೋ, ಅಂತಹ ನಿನ್ನ ನಿಶ್ಚಯವೇ ನಿರರ್ಥಕ. ಏಕೆನ್ನುವೆಯೋ? ನಿನ್ನ ಪ್ರಕೃತಿಯೇ ನಿನ್ನನ್ನು ಪ್ರೇರಿಸುವುದು. ಮೋಹದಿಂದ ನೀನು ಒಲ್ಲೆಯೆನ್ನುವುದನ್ನು ನೀನು ಪರವಶನಾಗಿಯೇ ಮಾಡುವೆ!”

ಇವೆಲ್ಲಾ ಯುದ್ಧಪ್ರೇರಕವಾದ ಮಾತುಗಳೇ! 

ಯುದ್ಧವನ್ನು ಬೇಡವೆನ್ನುವ ಅರ್ಜುನನ ಮಾತುಗಳನ್ನೊಮ್ಮೆ ನೋಡುವಾ ಎರಡು ಕಡೆ ಇದ್ದ ಮಂದಿಯನ್ನು ಕಂಡು ಕಂಗಾಲಾದ, ಅರ್ಜುನ. ಎಲ್ಲರೂ ತನ್ನವರೇ: ಪಿತೃ-ಪಿತಾಮಹರು, ಭ್ರಾತೃ-ಪುತ್ರ-ಪೌತ್ರರು, ಮಾತುಲ-ಶ್ವಶುರ-ಆಚಾರ್ಯರುಗಳು! 

ಆತನಿಗೆ ತೀವ್ರದಯೆಯುಕ್ಕಿತು. ನಡುಕವೂ ಜೊತೆಗೇ ಉಂಟಾಯಿತು! ಸ್ವಜನಹನನ ಸರಿಯಲ್ಲವೆಂದ. ನನಗೆ ವಿಜಯ-ರಾಜ್ಯ-ಸುಖಗಳು ಬೇಡವೆಂದ. ಬದುಕಿದ್ದು ತಾನೇ ಪ್ರಯೋಜನವೇನೆಂದ. ಕುಲಕ್ಷಯದ ಪರಿಣಾಮಗಳನ್ನು ಪಟ್ಟಿಮಾಡಿದ. ರಾಜ್ಯಸುಖದ ಲೋಭದಿಂದ ಕೊಲ್ಲುವುದು ಮಹಾಪಾಪವಲ್ಲವೇ? - ಎಂದ. ಕೌರವರೇ ನಮ್ಮನ್ನು ಕೊಲ್ಲುವುದೇ ತೆರನೆಂದೂ ವಾದಿಸಿದ. ಸೆಣಸಲು ನೆರೆದಿರುವವರನ್ನು ರಕ್ತಸಿಕ್ತಭೋಗಕ್ಕಾಗಿ ಕೊಲ್ಲುವುದೇ? ಎಂದ.

ಅರ್ಜುನನ ಮಾತಿನಲ್ಲಿ ಹೆಜ್ಜೆಹೆಜ್ಜೆಗೂ ರಾಜ್ಯ-ಸುಖ-ಲೋಭಗಳ ಮಾತುಗಳೇ! ಎಲ್ಲವೂ ಲೋಭದ ಕೈವಾಡವೆಂದಂತಾಯಿತು! ಎಂದೇ ಕೃಷ್ಣನು ಲೋಭದ ಮೂಲಕ್ಕೇ ಹೋದದ್ದು. 

“ಕಾಮ-ಕ್ರೋಧ-ಲೋಭಗಳೇ ನರಕದ್ವಾರ. ಇವುಗಳನ್ನು ಗೆಲ್ಲಲು ಬೇಕಾದದ್ದು ಇಂದ್ರಿಯ-ನಿಯಮನ. ಲೋಭದ ಸಹಚಾರಿಗಳಾದ ಕಾಮ-ಕ್ರೋಧಗಳೇ, ಅಥವಾ ಕಾಮವೇ, ನಿಜವಾದ ಶತ್ರು.”  ಭಗವದ್ಗೀತೆಯು ಮಹಾಭಾರತದ ಭೀಷ್ಮಪರ್ವದಲ್ಲಿ ಬರುವಂತಹುದು. ಆಶ್ವಮೇಧಿಕಪರ್ವದಲ್ಲಿ ಬರುವ ಅನುಗೀತಾಪರ್ವದಲ್ಲಿಯ ಒಂದು ಪ್ರಸಂಗವನ್ನು ಶ್ರೀರಂಗಮಹಾಗುರುಗಳು ಉಲ್ಲೇಖೀಸುತ್ತಿದ್ದರು. ಇದು ಅಂಬರೀಷಗೀತೆಯೆನಿಸುವುದು.

ಅಂಬರೀಷನು ಬಂದಾಗ ರಾಜ್ಯದಲ್ಲಿ ದುಷ್ಟರು ಹೆಚ್ಚಾಗಿದ್ದರು - ಸಜ್ಜನರಿಗೆ ತೀವ್ರಬಾಧೆಯಾಗಿತ್ತು. ರಾಜ್ಯಸೂತ್ರವನ್ನು ಕೈಗೆತ್ತಿಕೊಂಡ ಅಂಬರೀಷನು ಮೊಟ್ಟಮೊದಲು ಮಾಡಿದುದು ತನ್ನಲ್ಲಿಯ ದೋಷಗಳನ್ನೇ ಮೀರಿ ನಿಂತದ್ದು, ಸಜ್ಜನರನ್ನು ಆದರಿಸಿದ್ದು. ಬಳಿಕವೇ ಸರ್ವಶತ್ರುಗಳನ್ನೂ ಸಂಹರಿಸಿದುದು.

ಅದು ಹೇಗೆ ಸಾಧ್ಯವಾಯಿತೆನ್ನುವುದನ್ನು ವಿವರಿಸುತ್ತಾ ತಾನೇ ಹೇಳುತ್ತಾನೆ: ಮನುಷ್ಯನನ್ನು ದುರ್ಮಾರ್ಗದಲ್ಲಿ ಪ್ರೇರಿಸುವುದು ಲೋಭ. ಅದರ ಒಂದು ಸಮ್ಯಗ್- ಅವೇಕ್ಷಣವು ಬೇಕು. ಎಂದರೆ ಚೆನ್ನಾಗಿ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು. ಧೃತಿಯಿಂದ ಲೋಭವನ್ನು ನಿಗ್ರಹಿಸಿಕೊಳ್ಳಬೇಕು. ಹಾಗೆ ಮಾಡಿಕೊಂಡು ಆತ್ಮನಲ್ಲಿಯ, ಎಂದರೆ ತನ್ನೊಳಗಿನದೇ ಆದ, ರಾಜ್ಯವನ್ನು ಆಳಲು ಬಯಸಬೇಕು. ನಿಜವಾದ ರಾಜ್ಯವೆಂದರೆ ಇದೇ, ಬೇರೆ ರಾಜ್ಯವೆಂಬುದಿಲ್ಲ (ಏತದ್ ರಾಜ್ಯಂ, ನಾನ್ಯದಸ್ತಿ). ಸರಿಯಾಗಿ ಅರಿತುಕೊಂಡರೆ ಜ್ಞಾನಸ್ವರೂಪಿಯಾದ ಆತ್ಮನೇ ರಾಜ.

ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ "ಆತ್ಮರಾಜನು ಈ ಶರೀರವನ್ನು ಹೇಗೆ ಆಳುತ್ತಾನೆಯೋ, ಅಂತೆಯೇ ಆತನ ಪ್ರತೀಕವಾಗಿ ಹೊರಗೆ ರಾಜನು ಆಳುತ್ತಾನೆ." ಕೌಟಲ್ಯನೂ ಸಹ ತನ್ನ ಅರ್ಥಶಾಸ್ತ್ರದಲ್ಲಿ ಅಂಬರೀಷನನ್ನು ಒಬ್ಬ ಆದರ್ಶರಾಜನನ್ನಾಗಿ ಹೇಳಿರುವನು. ಅದೂ ಇಂದ್ರಿಯಸಂಯಮಾಧ್ಯಾಯದಲ್ಲಿಯೇ.

ಮಹಾಭಾರತದಲ್ಲೂ ಕೃಷ್ಣನು ಏತಕ್ಕಾಗಿ ಯುದ್ಧಕ್ಕೆ ಪ್ರಚೋದನೆ ನೀಡಿದುದು? ದುರ್ಯೋಧನನು ಅಮಿತವಾದ ಲೋಭಕ್ಕೆ ವಶನಾಗಿದ್ದನೆಂದೇ. ಒಳಗಣ ಶತ್ರುವನ್ನು ಜಯಿಸದ ಅಧರ್ಮಿಷ್ಠನು ರಾಜ್ಯವನ್ನೆಂತು ಸರೊಯಾಗಿ ಆಳಿಯಾನು? ರಾಜ್ಯಸುಖದ ಲೋಭಕ್ಕಾಗಿ ಅಲ್ಲ ಯುದ್ಧಮಾಡುವುದು, ಧರ್ಮಪ್ರತಿಷ್ಠಾಪನೆಗಾಗಿ. 

ಹೀಗಾಗಿ ಲೋಭಕ್ಕಾಗಿ ಆದರೆ ಯುದ್ಧ ಬೇಡ. ಧರ್ಮಸಂಸ್ಥಾಪನೆಗಾಗೆಂದರೆ ಅದು ಅವಶ್ಯವೇ ಸರಿ.

ಸೂಚನೆ: 11/4//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ. 

Sunday, April 5, 2026

ವ್ಯಾಸ ವೀಕ್ಷಿತ 182 ವಾದದಲ್ಲಿ ಸರಿಸಮನೆನಿಸಿದ ಜರಾಸಂಧ! ( Vyaasa Vikshita 182)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)

 


ಜರಾಸಂಧನನ್ನು ಎದುರಿಸಿ ನಿಂತಿದ್ದಾರೆ, ಪಾಂಡವರಿಬ್ಬರು, ಹಾಗೂ ಕೃಷ್ಣ.  ವೇಷಾಂತರದಲ್ಲಿ ಬಂದಿರುವುದಾದರೂ ತಾವು ವಾಸ್ತವವಾಗಿ ಯಾರೆಂಬುದನ್ನು ತಿಳಿಸಹೊರಟ ಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಿದ್ದಾನೆ.

"ಜರಾಸಂಧನೇ, ಸ್ವರ್ಗಪ್ರಾಪ್ತಿಗೆ ಕಾರಣವಾಗಬಲ್ಲವು ಹಲವು: ಸ್ವರ್ಗವು ದೊರಕುವುದು ವೇದಾಧ್ಯಯನದಿಂದ; ಸ್ವರ್ಗವನ್ನು ಹೊಂದಲು ಕಾರಣವೆನಿಸುವುದು ಮಹಾಯಶಸ್ಸು; ಸ್ವರ್ಗಸಂಪಾದನೆಗೆ ಹೇತುವಾದದ್ದು ತಪಸ್ಸು; ಇವೆಲ್ಲಕ್ಕಿಂತಲೂ ಮಿಗಿಲಾದದ್ದೆಂದರೆ ಹಿಂಜರಿಯದೆಯೇ ಯುದ್ಧದಲ್ಲಿ ಕ್ಷತ್ರಿಯನು ಮೃತ್ಯುವನ್ನು ಹೊಂದುವಂತಹುದು.

ಯುದ್ಧದಲ್ಲಿಯ ಸಾವೆಂದರೆ ಕ್ಷತ್ರಿಯನು ವೈಜಯಂತವನ್ನು ಹೊಂದಿದಂತೆಯೇ – ಅದಂತೂ, ಇಂದ್ರನ ಪ್ರಾಸಾದ, ಎಂದರೆ  ರಾಜಗೃಹವೇ!  ಸರ್ವಗುಣಗಳಿಂದಲೂ ಪರಿಪೂರ್ಣವಾದುದು ಅದು. ಯುದ್ಧವೆಂಬುದನ್ನು ಆಧರಿಸಿಯೇ ಅಸುರರನ್ನು ಪರಾಭವಗೊಳಿಸಿ ಇಂದ್ರನು ಜಗದ್ರಕ್ಷಕನಾಗಿರುವುದು.

ಈಗ ನಮ್ಮೊಂದಿಗೆ ಯುದ್ಧವೆಂಬುದೇನುಂಟೋ ಅದು ನಿನಗೆ ಸ್ವರ್ಗ-ಪ್ರಾಪಕವೇ ಸರಿ. ಈ ಬಗೆಯು ಮತ್ತಾರಿಗೆ ದೊರಕೀತು?

"ಮಾಗಧರ ವಿಪುಲವಾದ ಸೈನ್ಯವೆನಗಿದೆ" ಎಂಬ ಬಾಹುಲ್ಯದ ಬಲದಿಂದ ನೀನು ದರ್ಪಗೊಂಡಿರುವೆ. ಹಾಗೆ ನೀನು ದರ್ಪಗೊಂಡು ಅನ್ಯರನ್ನು ಅವಮಾನಿಸುವುದಲ್ಲ, ತಿಳಿದುಕೋ. ನರ-ನರನಲ್ಲೂ - ಎಂದರೆ ಪ್ರತಿಯೊಬ್ಬ ಮನುಷ್ಯನಲ್ಲೂ - ವೀರ್ಯವಿರುವುದು, ನಿನಗೆ ಸಮಾನವೆನಿಸುವ ತೇಜಸ್ಸಿರುವುದು. ನಿನಗಿಂತಲೂ ಅತಿಶಯವಾದದ್ದೂ ಉಂಟು, ರಾಜನೇ!

ಎಲ್ಲಿಯವರೆಗೆ ಇದೆಲ್ಲಾ ನಿನ್ನ ಅರಿವಿಗೆ ಬರುವುದಿಲ್ಲವೋ, ಅಲ್ಲಿಯವರೆಗಷ್ಟೆ ಇದನ್ನೆಲ್ಲಾ ನಾವು ಸಹಿಸಿಕೊಳ್ಳಬೇಕಾಗಿಬರುವಂತಹುದು! ಎಂದೇ, ರಾಜನೇ, ನಾನು ನಿನಗೆ ಹೇಳುತ್ತಿರುವುದು - ನಿನಗೆ ಯಾರು ಸಮಾನರೋ ಅಂತಹವರ ವಿಷಯದಲ್ಲಿ ನಿನ್ನ ಸ್ವಾಭಿಮಾನವನ್ನೂ ದರ್ಪವನ್ನೂ ಬಿಡು, ಮಾಗಧನೇ!

ನಿನ್ನ ಮಕ್ಕಳು ಮಂತ್ರಿಗಳೊಂದಿಗೆ ಹಾಗೂ ಸೈನ್ಯದೊಂದಿಗೆ ನೀನು ಯಮಲೋಕವನ್ನು ಸೇರಬಾರದಲ್ಲವೇ?

ದಂಭೋದ್ಭವ, ಕಾರ್ತವೀರ್ಯ, ಉತ್ತರ, ಬೃಹದ್ರಥ - ಎಂಬೀ ನಾಲ್ವರು ರಾಜರೂ ನಾಶಹೊಂದಿದರು - ತಮ್ಮ ಸೈನ್ಯಸಮೇತರಾಗಿಯೇ. ಏಕೆ? ತಮಗಿಂತಲೂ ಹಿರಿಯರನ್ನು ಅವಮಾನಗೊಳಿಸಿಯೇ !

ನಿನ್ನೊಡನೆ ಯುದ್ಧಮಾಡಬಯಸುತ್ತಿರುವ ನಾವು ಬ್ರಾಹ್ಮಣರಲ್ಲ. ನಾನು ಶೌರಿಯಾದ ಹೃಷೀಕೇಶ, ಎಂದರೆ ವಸುದೇವಪುತ್ರ. ಹಾಗೂ ಇವರಿಬ್ಬರೂ ಪಾಂಡವರು. ಇವರಿಬ್ಬರಿಗೂ ನಾನು ಮಾತುಲೇಯ, ಎಂದರೆ ಸೋದರಮಾವನ ಮಗನಾದ ಕೃಷ್ಣ, ನಿನ್ನ ಶತ್ರು - ಎಂಬುದಾಗಿ ತಿಳಿ.

ಇದೋ, ಯುದ್ಧಕ್ಕೆ ನಿನ್ನನ್ನು ಆಹ್ವಾನಿಸುತ್ತಿದ್ದೇವೆ, ರಾಜನೇ. ಸ್ಥಿರನಾಗಿ ಯುದ್ಧಮಾಡು, ಮಾಗಧ! ನಿನಗಿರುವುದು ಎರಡೇ ಆಯ್ಕೆಗಳು:ಇಲ್ಲವೇ ಎಲ್ಲ ರಾಜರನ್ನೂ ಬಂಧಮುಕ್ತಗೊಳಿಸು; ಇಲ್ಲವೇ ಯಮಸದನಕ್ಕೆ ಹೋಗು" – ಎಂದನು.

ಕೃಷ್ಣನು ಹೀಗೆ ಹೇಳಲು, ಜರಾಸಂಧನು ನುಡಿದನು: "ಮೊದಲು ನೀನಿದನ್ನು ತಿಳಿದುಕೋ, ಕೃಷ್ಣಾ! ಯಾವ ರಾಜರು ನನ್ನೊಡನೆ ಸೆಣಸಿನಲ್ಲಿ ಸೋತಿಲ್ಲವೋ, ಅಂತಹವರನ್ನೊಬ್ಬರನ್ನೂ ನಾನು ಕೈದಿಯಾಗಿಸಿಲ್ಲ. ನನಗೆ ಪ್ರತಿಭಟಿಸಿಯೂ ನನ್ನಿಂದ ಸೋಲನ್ನು ಕಾಣದ ಯಾವೊಬ್ಬ ವ್ಯಕ್ತಿಯೂ ಇಲ್ಲಿಲ್ಲ.

ಕೃಷ್ಣಾ! ಇದನ್ನೇ ಅಲ್ಲವೆ ಕ್ಷತ್ರಿಯನ ಜೀವಿಕೆಯೆಂಬುದಾಗಿ ಹೇಳುವುದು?: ಏನೆಂದರೆ, ಪರಾಕ್ರಮವನ್ನು ತೋರಿಸಿ, ಶತ್ರುವನ್ನು ವಶಕ್ಕೆ ತೆಗೆದುಕೊಂಡು, ಬಳಿಕ ತನಗೆ ತೋಚಿದಂತೆ ಆಚರಿಸುವುದು - ಎಂಬುದು.

ದೇವತೆಗಳಿಗೆ ಬಲಿಗೊಡಲೆಂದು ಈ ರಾಜರುಗಳನ್ನು ನಾನು, ಕ್ಷತ್ರಿಯ-ವ್ರತವನ್ನು ಮರೆಯದೆ, ಸೆರೆಯಾಗಿಸಿದ್ದೇನೆ. ಈಗೇನು ನಿನಗೆ ಭಯಪಟ್ಟುಕೊಂಡು ಅವರುಗಳನ್ನು ನಾನು ವಿಮುಕ್ತಗೊಳಿಸಬೇಕೇನು?

ನಿನ್ನ ಸೇನಾವ್ಯೂಹದೊಂದಿಗೆ ನನ್ನ ಸೇನಾವ್ಯೂಹವು ಹೋರಲಿ. ಅಥವಾ ಒಂಟಿಯಾಗಿ ಒಂಟಿಯಾದವನ ಮೇಲೆ ಹೋರಾಡುವುದೆಂದರೆ ಹಾಗೂ ಸರಿಯೇ. ಅಥವಾ ಇಬ್ಬರೊಂದಿಗೋ ಮೂವರೊಂದಿಗೋ ಸೆಣಸುವುದೆಂದರೆ ಹಾಗೂ ಸರಿಯೇ! ನಾನು ಯಾವುದಕ್ಕೂ ಸಿದ್ಧ! " ಎಂದನು, ಜರಾಸಂಧ.

ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಮನುಷ್ಯತ್ಮು ಮುಮುಕ್ಷುತ್ವ -ಮಹಾಪುರುಷ ಸಹವಾಸ (Manusyatmu Mumuksutva -Mahapurusa Sahavasa)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)

                            


ದುರ್ಲಭಂ ತ್ರಯಮೇವೈತತ್ ದೇವಾನುಗ್ರಹಹೇತುಕಮ್|

ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ||

ಪಡೆಯಲು ಬಹಳ ಕಷ್ಟವಾಗಿದ್ದು, ಭಗವಂತನ ಅನುಗ್ರಹವೊಂದರಿಂದಲೇ ದೊರಕುವ ಮೂರು ಭಾಗ್ಯಗಳು- ಮನುಷ್ಯತ್ವ, ಮೋಕ್ಷದ ಅಪೇಕ್ಷೆ ಮತ್ತು ಮಹಾಪುರುಷರ ಆಶ್ರಯ. ಇದು ಜ್ಞಾನಿಶ್ರೇಷ್ಠರಾದ ಶಂಕರ ಭಗವತ್ಪಾದರ "ವಿವೇಕ ಚೂಡಾಮಣಿ" ಗ್ರಂಥದ ಮಾತು. ಏಕೆ ಈ ಮೂರು ವಿಷಯಗಳನ್ನು ಇಷ್ಟೊಂದು ದುರ್ಲಭ ಎಂದೂ, ಬಹಳ ಪ್ರಧಾನವೆಂದೂ ಭಾವಿಸಲಾಗಿದೆ?

ಮನುಷ್ಯತ್ವ

ನಾವೆಲ್ಲರೂ ಮನುಷ್ಯರೇ. ಎಂದಮೇಲೆ ಇದರ ಬಗ್ಗೆ ವಿಚಾರ ಮಾಡುವುದೇನಿದೆ ಎನಿಸಬಹುದು. ಮತ್ವಾ ಸೀವ್ಯತೇ ಇತಿ ಮನುಷ್ಯಃ ಎಂಬುದು ಮನುಷ್ಯ ಪದದ ಅರ್ಥ. ಎಲ್ಲಾ ವಿಷಯದಲ್ಲಿಯೂ ಅರಿತು ಹೆಜ್ಜೆ ಇಡುವವನು. ಮನುಷ್ಯ ಎಂದಿದ್ದಾರೆ. ಅರಿವಿನ ವ್ಯಾಪ್ತಿ ಮನುಷ್ಯನಿಗೆ ಇದ್ದಷ್ಟು ಇತರ ಪ್ರಾಣಿಗಳಿಗೆ ಇಲ್ಲ. ಅವು ನಿಸರ್ಗ ನೇಮಿಸಿದಂತೆ ತಮ್ಮ ಇರುವಿಕೆಗೆ ಬೇಕಾದಷ್ಟು ಅರಿವನ್ನು ಮಾತ್ರ ಹೊಂದಿರುತ್ತವೆ. ಆದರೆ ಮನುಷ್ಯ ಹಾಗಲ್ಲ. ಅವನು ತನ್ನ ದೇಹದ ಒಳಿತು ಕೆಡುಕುಗಳ ಬಗ್ಗೆ, ಹೊರಗಿನ ಲೋಕದ ಹಿತ, ಅಹಿತಗಳ ಬಗ್ಗೆ, ವ್ಯಾಪಕವಾಗಿ ಆಲೋಚಿಸಬಲ್ಲ. ಅದರಲ್ಲೇನಾದರೂ ಏರುಪೇರಾದರೆ ಸರಿಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆಯೂ ಚಿಂತನೆ ನಡೆಸಬಲ್ಲ. ಒಂದು ಆಡು, ಅದು ಸೃಷ್ಟಿಯಾದಂದಿನಿಂದ ಹೆಚ್ಚು ವ್ಯತ್ಯಾಸವೇನೂ ಇಲ್ಲದೇ ಹಾಗೆಯೇ ಇದೆ. ಅದೇ ಹುಲ್ಲನ್ನು ತಿನ್ನುತ್ತದೆ,ಅದೇ ರೀತಿಯ ಜೀವನ ಮಾಡುತ್ತದೆ . ಆದರೆ ಮನುಷ್ಯನ ಪ್ರಗತಿಗೆ ಎಣೆಯೇ ಇಲ್ಲ. ಅವನ ವ್ಯಾಪಕವಾದ ನೋಟವೇ ಅವನ ಜೀವನದಲ್ಲಿ ಅನೇಕ ಪರಿಷ್ಕಾರಗಳನ್ನು ತಂದಿದೆ. ಜೀವನಕ್ರಮದಲ್ಲಿ ಪರಿವರ್ತನೆಯನ್ನು ಕಾಣಬಹುದು. ಐವತ್ತು ವರ್ಷಗಳ ಹಿಂದಿದ್ದ ಜೀವನಕ್ರಮ ಈಗಿಲ್ಲ.ಅವನ ಜೀವನ ನಿರ್ವಹಣೆಗೆ ಅನುಕೂಲಕರವಾದ ಅಸಂಖ್ಯ ವಸ್ತುಗಳ, ಉಪಕರಣಗಳ ಆವಿಷ್ಕಾರ ಮನುಷ್ಯನಿಂದ ನಡೆದಿದೆ.ಇವೆಲ್ಲವೂ ಅವನ ಅರಿವಿನ ವ್ಯಾಪ್ತಿಗೆ ಸಾಕ್ಷಿಗಳೇ. ಆದರೆ ಆಚಾರ್ಯರು ಹೇಳುತ್ತಿರುವ ಮನುಷ್ಯತ್ವ ಇಷ್ಟೇ ಅಲ್ಲ. ಅರಿತು ಹೆಜ್ಜೆ ಇಡುವವನು ಎಂದಾಗ ಕೇವಲ ಸ್ಥೂಲ ಪ್ರಪಂಚಕ್ಕೆ ಮಾತ್ರ ಆ ಅರಿವು ಸೀಮಿತವಾಗಿಲ್ಲ. ಸ್ಥೂಲದ ಹಿಂದೆ ಈ ಸ್ಥೂಲ ಪ್ರಪಂಚಕ್ಕೂ ಆಧಾರವಾಗಿರುವ ಸೂಕ್ಷ್ಮ ಪ್ರಪಂಚವೊಂದುಂಟು. ಅಲ್ಲಿಂದಲೇ ಶಕ್ತಿಯು ಹರಿದು ಸ್ಥೂಲ ಪ್ರಪಂಚಕ್ಕೂ ಕಾರಣವಾಗಿರುವುದು. ಅದೊಂದು ಪ್ರಕಾಶಮಯವಾದ ದೇವತೆಗಳ ಸಾಮ್ರಾಜ್ಯ.ಹೊರಗಣ್ಣಿಗೆ ಕಾಣದು. ಅದನ್ನು ಅರಿಯಲು ತಪಸ್ಸಿನ ಕಣ್ಣು ಬೇಕಾಗುತ್ತದೆ. ಅಂತಹ ತಪಸ್ಸನ್ನು ಆಚರಿಸಿ ಆ ಅರಿವನ್ನೂ ಪಡೆಯುವುದು ಮನುಷ್ಯನಿಂದ ಮಾತ್ರ ಸಾಧ್ಯ. ಅಂತಹ ಅರಿವೂ ಇದ್ದಾಗ ಅವನು ಮನುಷ್ಯ. ಈ ಸೂಕ್ಷ್ಮ ಪ್ರಪಂಚಕ್ಕೂ ಹಿಂದೆ ಎಲ್ಲಕ್ಕೂ ಮೂಲವಾಗಿ ಬೆಳಗುತ್ತಿರುವ "ಪರ " ಎನ್ನುವ ಪ್ರಪಂಚವುಂಟು. ಅದೇ ಎಲ್ಲಾ ಆನಂದದ ಮೂಲ. "ಜೀವನ ವೃಕ್ಷಕ್ಕೆ ಮೂಲವುಂಟು. ಆ ಮೂಲವೇ ವಿದ್ಯಾಮೂಲವಾದ ಶರೀರವನ್ನು ಹೊಂದಿರುವ ಆ ಜ್ಯೋತಿಯಾಗಿದೆಯಪ್ಪಾ" ಎಂಬ ಶ್ರೀರಂಗ ಮಹಾಗುರುಗಳ ಮಾತೂ ಇಲ್ಲಿ ಸ್ಮರಣೀಯ. ವಿಶ್ವವೆಲ್ಲವೂ ಆ ಮೂಲ ಶಕ್ತಿಯಿಂದಲೇ ನಡೆಯುತ್ತಿರುವುದು ಎಂಬ ಅರಿವನ್ನೂ ಮನುಷ್ಯನು ಗುರುವಿನ ಅನುಗ್ರಹದಿಂದ , ತನ್ನ ಸಾಧನೆಯಿಂದ ಪಡೆಯಬಹುದು. ಹೀಗೆ ಮೂರೂ ಕ್ಷೇತ್ರಗಳಲ್ಲಿ ಅರಿತು ಹೆಜ್ಜೆಗಳನ್ನು ಇಟ್ಟು ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವುದೇ ಜ್ಞಾನಿಗಳು ಹೇಳಿದ ಮನುಷ್ಯತ್ವ.

ಮುಮುಕ್ಷುತ್ವ -:

ಮುಮುಕ್ಷುತ್ವ - ಹಾಗೆಂದರೇನು? ಜೀವನದಲ್ಲಿ ಬಿಡುಗಡೆಯನ್ನು ಹೊಂದುವ ಆಸೆ. ಮೋಕ್ಷದ ಅಪೇಕ್ಷೆ. ಬಂಧನದಲ್ಲಿರುವುದನ್ನು ಯಾರೂ ಬಯಸುವುದಿಲ್ಲ. ಬೀಜವು ವೃಕ್ಷವಾಗತೊಡಗಿದಾಗ ಒಂದು ದೃಷ್ಟಿಯಿಂದ ವೃಕ್ಷದಲ್ಲಿ ಬಂಧಿಯಾಗಿರುತ್ತದೆ. ತನ್ನ ಕ್ರಮಬದ್ಧವಾದ ವಿಕಾಸದೊಡನೆ ಪುನಃ ಬೀಜವಾದಾಗಲೇ ಅದಕ್ಕೆ ಮುಕ್ತಿ. ಹಾಗಾಗಲೆಂದೇ ಅದರ ಮುಂದಿನ ನಡೆಯೆಲ್ಲವೂ.ಹಾಗೆಯೇ ನಾವೆಲ್ಲರೂ ಆ ಮಹಾ ಚೈತನ್ಯದ ಕಿಡಿಗಳಾಗಿ, ಜೀವವಾಗಿ ಈ ಶರೀರದೊಳಗೆ ಬಂಧಿಯಾಗಿದ್ದೇವೆ. ನಮ್ಮ ನಡೆಯೆಲ್ಲವೂ ಮತ್ತೆ ಆ ಮಹಾ ಚೈತನ್ಯದಲ್ಲಿ ಒಂದಾಗಿ ಮುಕ್ತರಾಗುವ ಉದ್ದೇಶದಿಂದ ಕೂಡಿದ್ದಾಗ ಅದು ಜೀವದ ಸಹಜ ನಡೆ. ಎಲ್ಲರೂ ಬಯಸಬೇಕಾದ ನಡೆಯೆಂದು ಹಾಗೆ ವ್ಯವಸ್ಥಿತವಾಗಿ ಬದುಕಿದ ಈ ದೇಶದ ಜ್ಞಾನಿಗಳ ಮಾತು. ಮೋಕ್ಷವೆಂದರೆ ಚೇತನನ ತವರುಮನೆ ಎಂದು ಮಾರ್ಮಿಕವಾಗಿ ಪೂಜ್ಯ ರಾಮಭದ್ರಾಚಾರ್ಯರು ತಮ್ಮ " ತತ್ವಾರ್ಥ ಸಾಹಸ್ರೀ ಎಂಬ ಗ್ರಂಥದಲ್ಲಿ ಕೊಂಡಾಡಿದ್ದಾರೆ. ಮಾನವ ದೇಹದ ರಚನೆಯಲ್ಲಿಯೇ ಮುಮುಕ್ಷುತ್ವ ವನ್ನು ಹೊಂದುವ ವ್ಯವಸ್ಥೆ ಇದೆ ಎಂದು ಈ ದೇಹದಲ್ಲಿ ಅದನ್ನು ಅನುಭವಿಸಿ ಸುಖಿಸಿದವರ ಮಾತು. ಇತರ ಪ್ರಾಣಿಗಳ ದೇಹದಲ್ಲಿ ಆ ವ್ಯವಸ್ಥೆ ಇಲ್ಲ. ಅವು ನಿಸರ್ಗವಿಟ್ಟಂತೆ ಇರುತ್ತವೆ ಅಷ್ಟೇ. ಆದರೆ ಮನುಷ್ಯನಿಗೆ ತನ್ನ ಬಿಡುಗಡೆಗಾಗಿ ಪ್ರಯತ್ನಿಸುವ ಅವಕಾಶ ಉಂಟು. ಈ ದೇಹ ರಚನೆಯಲ್ಲಿ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತಗಳೆಂಬ ಅಂತಃಕರಣ ಚತುಷ್ಟಯಗಳುಂಟು. ಅವೆಲ್ಲವೂ ತನ್ನ ಸಹಜವಾದ ಆನಂದದ ಸ್ವರೂಪವನ್ನು ತಪಸ್ಯೆಯಿಂದ ಚಿಂತಿಸಬಲ್ಲವು. ಸಾಧನೆಯಿಂದ ಆ ಒಳ ಅನುಭವವನ್ನು ಗಳಿಸಬಲ್ಲವು. ಅಂತಹ ಅಪೇಕ್ಷೆ ಹುಟ್ಟಬೇಕು ಅಷ್ಟೇ. ಅದನ್ನೇ ಆಚಾರ್ಯರು ಭಗವಂತನ ಅನುಗ್ರಹದಿಂದಲೇ ಸಾಧ್ಯ ಎಂದಿರುವುದು. ಅವನ ಅನುಗ್ರಹಕ್ಕಾಗಿ ಹಾತೊರೆಯುವ ಮನಸ್ಸನ್ನು ಬೆಳೆಸಿಕೊಳ್ಳುವುದೇ ನಮ್ಮ ಸಾಧನೆಯಾಗಬೇಕಿದೆ.

ಮಹಾತ್ಮರ ಸಹವಾಸ

ಇನ್ನೊಂದು ಮಹಾಪುರುಷರ ಸಹವಾಸ. ಇದೊಂದು ಇದ್ದರೆ ಮೇಲಿನ ಎರಡೂ ಭಾಗ್ಯಗಳು ಲಭಿಸಿದಂತೆಯೇ. ಜೀವನದಲ್ಲಿ ಮಹತ್ತಾದುದು ಎಂದರೆ ಈ ಜೀವನ ಮೂಲದಲ್ಲಿ ಬೆಳಗುತ್ತಿರುವ ಭಗವಂತನ ಅರಿವು, ಸಾಕ್ಷಾತ್ಕಾರ. ಅದರಿಂದ ಒದಗುವ ನೆಮ್ಮದಿಗಾಗಿಯೇ ಎಲ್ಲಾ ಸಾಧಕರದ್ದೂ ಸಾಧನೆ. ಅಂತಹ ಮಹತ್ತಾದುದನ್ನು ಪಡೆದುಕೊಂಡವರೇ ಮಹಾತ್ಮರು, ಮಹಾ ಪುರುಷರು. ಕೇವಲ ಭೌತಿಕ ವಿಷಯಗಳನ್ನು ಸಾಧನೆ ಮಾಡಿದವರಲ್ಲ. ಅಂತಹ ಗುರುಜನರ ಮಾರ್ಗದರ್ಶನವೇ ನಮ್ಮನ್ನು ನಿಜವಾದ ಮನುಷ್ಯರನ್ನಾಗಿ ಮಾಡುತ್ತದೆ, ನಮಗೆ ಮುಮುಕ್ಷುತ್ವದ ಅಪೇಕ್ಷೆಯನ್ನೂ ಉಂಟುಮಾಡುತ್ತದೆ. ಹೇಗೆ ನಮಗೆ ಸಂಗೀತ ಜ್ಞಾನವಿಲ್ಲದಿದ್ದರೂ ಒಂದು ಸಂಗೀತ ಕಚೇರಿಯಲ್ಲಿ ಕುಳಿತಾಗ ಅಷ್ಟು ಸಮಯ ನಮಗೆ ಸರಿಯಾಗಿ ತಾಳ ಹಾಕಲು ಬರುವಂತೆ, ಸಹವಾಸವೆನ್ನುವುದು ಅವರಲ್ಲಿನ ಸದ್ವಸ್ತುವನ್ನು ಬಯಸುವ, ಅದಕ್ಕಾಗಿ ಜೀವನದಲ್ಲಿ ಸಾಧನೆಮಾಡುವ ಮನಸ್ಸು ಹುಟ್ಟುವಂತೆ ಮಾಡುತ್ತದೆ.

ಹೀಗೆ ಮನುಷ್ಯತ್ವ, ಮುಮುಕ್ಷುತ್ವ ಮತ್ತು ಮಹಾಪುರುಷರ ಸಹವಾಸಕ್ಕಾಗಿ ಅನವರತವೂ ಆ ಸರ್ವೇಶ್ವರನನ್ನು ಪ್ರಾರ್ಥಿಸೋಣ. ಅವನ ಕರುಣೆ ನಮ್ಮನ್ನು ಕಾಪಾಡಲಿ ಎಂದು ಅವನಲ್ಲಿ ಅಂಗಲಾಚೋಣ.

ಸೂಚನೆ : 4/4/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 99 ಕೊಳಲಿನುಲಿ ಕದಲಿಸಲಿ ಒಳಮುಳುಗಿದ ಚಿತ್ತವನು! (Krishakarnamrta 99)


ಲೇಖಕರು :
 ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಜೀವನದಲ್ಲಿ ಎಷ್ಟೆಷ್ಟೋ ಮಹತ್ತಾದ ಸಾಧನೆಗಳನ್ನು ಮಾಡಿರುವವರ ಬಗ್ಗೆ ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ಎಲ್ಲದಕ್ಕಿಂತಲೂ ಕಷ್ಟವೆನಿಸಬಹುದಾದ ಸಾಧನೆಯೆಂದರೆ ಯಾವುದು, ಹಾಗೂ ಅದನ್ನು ಸಾಧಿಸಿದವರು ಯಾರು? - ಎಂಬ ಪ್ರಶ್ನೆಗಳಿಗೆ ಉತ್ತರವು ಸುಲಭವಲ್ಲ.                        

ಆದರೂ ಒಂದು ರೀತಿಯಲ್ಲಿ ಉತ್ತರವು ಕಷ್ಟವೂ ಅಲ್ಲ. ಏಕೆ? ಎಲ್ಲರಿಗೂ ಕಷ್ಟವೆನಿಸುವ, ಎಂತಹ ಧೀಮಂತರಿಗೂ ಅಸಾಧ್ಯವೆಂದೇ ತೋರುವ, ಒಂದು ಕಾರ್ಯವಿದೆ. ಅಲ್ಲಿ ಎಲ್ಲರೂ ಸೋಲುವವರೇ, ಹೆಚ್ಚು ಕಡಿಮೆ. 

ಯಾವುದು ಅಂತಹ ಘನವಾದ ಕಾರ್ಯ? ಹಿಮಾಲಯದ ಶಿಖರಕ್ಕೇರುವುದೇ? ಕಡಲ ಅಡಿಯನ್ನು ಕೆರೆಯುವುದೇ? ಅನ್ಯ-ಗ್ರಹದಲ್ಲಿ ಅಲೆಯುವುದೇ?

ಇದಾವುದೂ ಅಲ್ಲ. ಇರುವಲ್ಲೇ ಸುಮ್ಮನೆ ಕುಳಿತುಕೊಳ್ಳುವುದು! ಸುಮ್ಮನೆಯೆಂದರೂ ಸುಮ್ಮನೆಯಲ್ಲ: ಹಾಗೆ ಕುಳಿತು ಧ್ಯಾನದಲ್ಲಿ ಆಳವಾಗಿ ಮುಳುಗುವುದು; ಅದರಲ್ಲೇ ಮೈಮರೆತು ಅದರ ತುತ್ತತುದಿಯಾದ ಸಮಾಧಿ-ಸ್ಥಿತಿಯ ಎತ್ತರಕ್ಕೆ ಹತ್ತುವುದು! ಮತ್ತು ಆ ಸಮಾಧಿಗೆ ಭಂಗವಿಲ್ಲದಂತೆ ಅಲ್ಲೇ ಕೆಲಕಾಲ ನೆಲೆಗೊಂಡಿರುವುದು. ಇವನ್ನು ಸುಲಭವೆನ್ನುವವರಾರು?

ವಸ್ತು-ಸ್ಥಿತಿ ಹಾಗಿರಲು, ಲೀಲಾಶುಕನು ವಿಚಿತ್ರವಾದ ವರವೊಂದನ್ನು ಬಯಸುತ್ತಿದ್ದಾನೆ: ದೇವಾ, ನನಗೆಂದು ಸಮಾಧಿ-ಭಂಗವಾದೀತು? - ಎಂದು ಆಶಿಸುತ್ತಿದ್ದಾನೆ! 

ಅಯ್ಯೋ, ಹೀಗೆ ಬಯಸುವುದೇನು ಯುಕ್ತವೇ? ಅಷ್ಟು ಕಷ್ಟಪಟ್ಟು ಸಂಪಾದಿಸಿದುದನ್ನು ಕೆಡಿಸಿಕೊಳ್ಳಲು ವಿವೇಕವುಳ್ಳವರು ಯಾರಾದರೂ ಅಪೇಕ್ಷಿಸಿಯಾರೆ?

ಅಷ್ಟೇ ಅಲ್ಲ. ಸಮಾಧಿ-ವಿಘ್ನವು ಹೇಗಾದರೆ ತನಗಿಷ್ಟವೆಂದು ಸಹ ಸೂಚಿಸುತ್ತಿದ್ದಾನೆ! "ದೇವಾ, ನೀನು ಕಾಣಿಸಿಕೊಳ್ಳಬೇಕು, ನಿನ್ನ ವೇಣು-ಧ್ವನಿಯು ರಣಿಸಬೇಕು, ಹಾಗಾಗಿ ಸಮಾಧಿ-ಭಂಗವಾಗಬೇಕು" - ಎನ್ನುತ್ತಿದ್ದಾನೆ!

ಕೃಷ್ಣನು ಹೇಗೆ ತೋರಬೇಕಂತೆ? ಆತನ ಕೊಳಲಿನ ರವವು ಹೇಗಿರಬೇಕಂತೆ? – ಇವೆರಡನ್ನೂ ಸ್ಪಷ್ಟಪಡಿಸುತ್ತಿದ್ದಾನೆ, ಕವಿ. ನೀನು ನನ್ನೆದುರಿಗೆ ಅವತೀರ್ಣನಾಗಬೇಕು, ಎಂದರೆ ಅವತರಿಸಬೇಕು. ಅರ್ಥಾತ್, ಪ್ರಕಟಿಸಿಕೊಳ್ಳಬೇಕು. ಚಂದ್ರನ ತೇಜಸ್ಸಿನೊಂದಿಗೆ ತೋರಬೇಕು. ಯಾವ ಚಂದ್ರ? ಪ್ರಸನ್ನನಾದ ಚಂದ್ರನಂತಿರುವ ನಿನ್ನ ಮುಖವೇ ತೇಜಸ್ವಿಯಲ್ಲವೇ? ಲೋಕದಲ್ಲಿ ನಾವು ಕಾಣುವ ಚಂದ್ರ ಕಲಂಕಿತ. ಆದರೆ ಕೃಷ್ಣನ ಮುಖ ಪ್ರಸನ್ನವಾದುದು, ಎಂದರೆ ತಿಳಿಯಾದುದು, ಕಳಂಕ-ರಹಿತವಾದುದು. ಚಂದ್ರನನ್ನು ಮೃಗಾಂಕ, ಶಶಾಂಕ - ಎನ್ನುವರಲ್ಲವೇ? ಆ ಕುರುಹುಗಳೇ ಲೌಕಿಕ-ಚಂದ್ರನ ಸೊಬಗಿಗೆ ಒಂದಿಷ್ಟು ಕಳಂಕದಂತೆ. ಆದ್ದರಿಂದ ಹಾಗೆ ಬೇಡ. ನಿನ್ನ ಮುಖವೇ ಇನ್ನೂ ಚೆನ್ನಿರುವ ಚಂದ್ರ.

ಹಿಂದೊಮ್ಮೆ ದರ್ಶನಕೊಟ್ಟಾಗಿತ್ತಲ್ಲವೆ? – ಎಂದರೆ, ಹೌದು, ಆದರೂ ಮತ್ತೆ ಬೇಕು - ಎಂಬ ಬಿನ್ನಹ. ಏಕೆ? ಕೃಷ್ಣನು ಎಷ್ಟಾದರೂ ದಯಾ-ಸಮುದ್ರನಲ್ಲವೇ? ಬರೀ ಸಮುದ್ರವಲ್ಲ, ದಯೆಯ ಮಹಾಂಬುಧಿಯೇ ಅವನು. ಚಂದ್ರನ ತೇಜಸ್ಸಿನೊಂದಿಗೆ ಅವತರಿಸಿ ಬರುವ ಸಮುದ್ರ! 

ಸಮಾಧಿ-ಸ್ಥಿತಿಯಲ್ಲಿ ಕುಳಿತವರು ಕಣ್ಣುಮುಚ್ಚಿರುತ್ತಾರಲ್ಲವೇ? ಅಂತಹವರೆದುರಿಗೆ ತಾ ಬಂದು ನಿಂತರೂ ಅವರಿಗೆ ಗೊತ್ತಾಗುವುದು ಹೇಗೆ? ಅದಕ್ಕೇ ಹೇಳುತ್ತಿರುವುದು - ನಿನ್ನ ಲೀಲಾ-ವೇಣುವಿನೊಂದಿಗೆ ಬಾ. ಅದರ ರವಾಮೃತ ಅಥವಾ ನಾದ-ಪೀಯೂಷವು ನನ್ನ ಸಮಾಧಿಯನ್ನು ತಾನಾಗಿ ಕದಲಿಸುವುದು - ಎಂದು. ಆ ವಿಲಾಸಮಯವಾದ ವೇಣುವೇ ಲೀಲಾ-ಮುರಲಿ. ಅದರ ನಾದವೇ ಅಮೃತ.

ದಯಾ-ಸಮುದ್ರವೆಂಬುದು ಅತ್ಯಂತ ಅಪೇಕ್ಷಿತ. ಮುಖ-ಚಂದ್ರನೋ ಪರಮಾಹ್ಲಾದಕ. ನಾದಾಮೃತವಂತೂ ಅತಿಶಯವಾಗಿ ಆಸ್ವಾದ್ಯ. ಇವೆಲ್ಲ ಎದುರಿಗೆ ತೋರುವುದಾದರೆ, ಆಗ ಸಮಾಧಿಗೆ ಭಂಗವಾದರೆ ಚಿಂತೆಯೇ ಇಲ್ಲ. ಏಕೆ? ಸಮಾಧಿ-ಸ್ಥಿತಿಯನ್ನು ಏರಿದವನಿಗೆ ದೊರೆಯಬೇಕಾದದ್ದೇನು? ಅಮೃತವೇ ಅಲ್ಲವೇ? ಇಲ್ಲಿ ದೊರೆಯುತ್ತಿರುವುದೂ ಅದೇ ಎಂದಾಯಿತಲ್ಲ! ಈ ಬಗೆಯಲ್ಲಿ ಸಮಾಧಿ-ಭಂಗವೆಂಬುದಾಗುವುದಾದರೆ ಒಳ ಅನುಭವಕ್ಕೂ ಹೊರ ಅನುಭವಕ್ಕೂ ಭೇದವೆಲ್ಲಿ ಬಂದೀತು?

ಕಣ್ಣಿಗೂ ಕಿವಿಗೂ ಸುಲಭವಾಗಿ ಹೀಗೆ ಅಮೃತಾನುಭವವಾಗುವುದಾದರೆ, ನಿರಂತರ-ಧ್ಯಾನಕ್ಕಾಗಿ ಆಂತರಂಗಿಕ-ಶ್ರಮವನ್ನು ಪಡುತ್ತಲೇ ಇರುವುದೇತಕ್ಕೆ? ಎಂದೇ ಲೀಲಾಶುಕನು ಹೀಗೆ ಹಾತೊರೆಯುವುದು. ಅಂತಹ ಅನುಭವಕ್ಕಾಗಿಯೇ ಆ ಬಗೆಯ ಸಮಾಧಿ-ಭಂಗವು ನನಗೆ ಅದೆಂದು ದೊರೆಯುವುದೋ - ಎಂದು ಹಂಬಲಿಸುತ್ತಿದ್ದಾನೆ, ಭಕ್ತಕವಿ.

ಪುನಃ ಪ್ರಸನ್ನೇನ ಮುಖೇಂದು-ತೇಜಸಾ/

ಪುರೋವತೀರ್ಣಸ್ಯ ಕೃಪಾ-ಮಹಾಂಬುಧೇಃ |

ತದೇವ ಲೀಲಾ-ಮುರಲೀ-ರವಾಮೃತಂ

ಸಮಾಧಿ-ವಿಘ್ನಾಯ ಕದಾ ನು ಮೇ ಭವೇತ್?! || 

***

ಮತ್ತೊಂದು ಶ್ಲೋಕ.

ಆ ತರುಣನ ಹೆಸರನ್ನು ಹೇಳುತ್ತೇವೆ - ಎನ್ನುತ್ತಾನೆ, ಲೀಲಾಶುಕ. ಆ ತರುಣನು ಮತ್ತಾರು? ಸಾಕ್ಷಾತ್ ಕೃಷ್ಣನೇ. ಅವನ ಹೆಸರನ್ನು ಹೇಳುವುದರಲ್ಲೇ ಲೀಲಾಶುಕನಿಗೆ ಒಂದು ಸಂತೋಷ.

ಎಂತಹ ತರುಣನವನು? ತನ್ನ ಕಿವಿಯಂಚಿನಿಂದ ಏನನ್ನೋ ಕೇಳಿಸಿಕೊಳ್ಳುತ್ತಿರುವವನು. ಏನನ್ನು? ವ್ರಜ-ಸುಂದರಿಯರ ಅನುಲಾಪಗಳನ್ನು. ಅನುಲಾಪವೆಂದರೆ ಮತ್ತೆ ಮತ್ತೆ ಹೇಳುತ್ತಿರುವುದು. ಗೊಲ್ಲತಿಯರು ಪದೇ ಪದೇ ಹೇಳಿಕೊಳ್ಳುತ್ತಿರುವುದನ್ನು ಕೇಳುತ್ತಿದ್ದಾನೆ. ಅದೂ ಅರ್ಧಮರ್ಧವಾಗಿ ಅವರು ಹೇಳುತ್ತಿರುವುದನ್ನು.

ಯಾವುದನ್ನು ಅವರು ಹಾಗೆ ಉಚ್ಚರಿಸುತ್ತಿರುವುದು? ತಮ್ಮದೇ "ಅಕೃತ್ರಿಮವಾದ ಸರಸ್ವತಿ"ಗಳನ್ನು.  ಹಾಗೆಂದರೆ, "ಕಪಟವಿಲ್ಲದ ನುಡಿಗಳನ್ನು" ಎಂದರ್ಥ. ಶುದ್ಧವಾದ ಹೃದಯದಿಂದ ಹೊಮ್ಮಿದ ಮಾತಲ್ಲವೇ ಅದು? ಎಂದೇ ಸದ್ಭಾವನೆಯನ್ನು ಅದು ಹೊತ್ತಿರುತ್ತದೆ. 

ನಿಷ್ಕಪಟವಾದ ನುಡಿಯು ಎಂದಿಗೂ ಸರಲವಾದುದು, ಎಂದೇ ಸೊಗಸಾದುದೂ. ಅದನ್ನು ಮತ್ತೆ ಮತ್ತೆ ನುಡಿದರೂ, ಅರ್ಧಮರ್ಧವಾಗಿ ಹೇಳಿದರೂ ಕೃತ್ರಿಮವಲ್ಲದ ಆ ಪ್ರೀತಿಯ ಮಾತಿಗೆ ಎಂದಿಗೂ ಬೆಲೆಯುಂಟೇ. ಎಳೆಯ ಮಕ್ಕಳ ಮಾತೂ ಹಾಗೆಯೇ ಇರುವುದಲ್ಲವೇ? ಅವುಗಳ ಮಾತು ಅಸ್ಪಷ್ಟವಿರಬಹುದು, ತೊದಲಿರಬಹುದು. ಅಪೂರ್ಣ-ವಾಕ್ಯವೇ ಇರಬಹುದು, ಹೇಳಲೆಳಸಿ ಮಧ್ಯಕ್ಕೇ ನಿಂತು ಅಪೂರ್ಣವೂ ಆಗಿರಬಹುದು. ಏನೇ ಆದರೂ, ಮುಗ್ಧಹೃದಯದ ಮುದ್ದುನುಡಿಗಳಲ್ಲೇ ಸವಿಯಿರುವುದು. 

ಪ್ರೇಮವೇನಾದರೂ ಕಪಟ - ಎಂಬುದು ಗೊತ್ತಾಗಿಹೋದಲ್ಲಿ, ಮಾತಿನಲ್ಲಿ ನವಿರಿದ್ದರೂ ಅದರಲ್ಲಿ ರುಚಿಯುಳಿದೀತೇ? ಬದಲಾಗಿ, ಕಾಪಟ್ಯದಿಂದಾಗಿ ಕೆರಳಿದ ಕೋಪದ ನುಡಿಯೇ ಹೊಮ್ಮೀತು!

ಎಂದೇ ಕೃಷ್ಣನು "ಆರ್ದ್ರಾಶಯದಿಂದ" ಕೇಳಿಸಿಕೊಳ್ಳುತ್ತಾನೆ. ಹಾಗೆಂದರೆ "ಸರಸ-ಹೃದಯದಿಂದ, ಆಸ್ವಾದನೆಯೊಂದಿಗೆ" - ಎಂಬ ಅರ್ಥ. ಎಂದೇ ಅದು ಬರೀ ಕೇಳಿಸಿಕೊಳ್ಳುವುದಲ್ಲ. ಅದನ್ನು ಸಂಭಾವಿಸುತ್ತಿದ್ದಾನೆ, ಎಂದರೆ ಬೆಲೆಗೊಟ್ಟು, ಆದರವಿಟ್ಟು, ಆಲಿಸುತ್ತಿದ್ದಾನೆ - ಎಂದರ್ಥ.

ಈ ಶ್ಲೋಕದ ತಾತ್ಪರ್ಯವೆಂದರೆ, ಭಗವಂತನು ಭಾಷೆಗಿಂತಲೂ ಭಾವಕ್ಕೆ ಹೆಚ್ಚು ಮನಸ್ಸು ಕೊಡುವನು - ಎಂಬುದು. ಇದನ್ನೇ "ಭಾವಗ್ರಾಹೀ ಜನಾರ್ದನಃ" ಎನ್ನುವರು. 

ಆತನ ನಡೆಯನ್ನು ನೋಡಿ: ಹಳ್ಳಿಯ ಹೆಣ್ಣುಗಳೆಂದು ತಿರಸ್ಕಾರವಿಲ್ಲ. ಭಾಷೆಯು ಸುಪರಿಷ್ಕೃತವಲ್ಲವೆಂದು ಕಡೆಗಾಣಿಸುವುದಲ್ಲ. ಪೌನರುಕ್ತ್ಯವಿದೆಯೆಂದು ಅಪಹಸಿಸುವುದಲ್ಲ. ಶುದ್ಧಹೃದಯದಿಂದ ಹೊಮ್ಮಿದ ನುಡಿಗೆ ಒಡನೆಯೇ ಮನ್ನಣೆ ನೀಡುವ ಸಹೃದಯ-ತರುಣನಿವನು. 

ಎಂದೇ, ಹೇಳಿದರೆ ಅಂತಹವನ ಹೆಸರನ್ನೇ ಹೇಳಬೇಕಲ್ಲವೆ? 

ಶ್ಲೋಕದ ಮೊದಲೆರಡು ಪಾದಗಳಲ್ಲಿ ಗೊಲ್ಲತಿಯರ ನುಡಿಯ ಪರಿ; ಮೂರನೆಯದರಲ್ಲಿ ಅದನ್ನು ಕೃಷ್ಣನು ಆಲಿಸುವ ಬಗೆ; ಹಾಗೂ ಕೊನೆಯದರಲ್ಲಿ ಕವಿಯ ಪ್ರತಿಕ್ರಿಯೆಗಳು ಮೂಡಿವೆ. 

ಶ್ಲೋಕ ಹೀಗಿದೆ:

ಅರ್ಧಾನುಲಾಪಾನ್ ವ್ರಜಸುಂದರೀಣಾಂ /

ಅಕೃತ್ರಿಮಾಣಾಂ ಚ ಸರಸ್ವತೀನಾಂ |

ಆರ್ದ್ರಾಶಯೇನ ಶ್ರವಣಾಂಚಲೇನ /

ಸಂಭಾವಯಂತಂ ತರುಣಂ ಗೃಣೀಮ || 

ಸೂಚನೆ :4/4/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.