ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಕೃಷ್ಣ-ಭೀಮಾರ್ಜುನರು ಜರಾಸಂಧವಧಾನಂತರ ಹಿಂತಿರುಗಿಬಂದರಷ್ಟೆ. ಅತ್ತ ಕೃಷ್ಣನೂ ಹೊರಟಮೇಲೆ ಪಾಂಡವರಲ್ಲೇ ಮಾತುಕತೆಗಳಾದವು.
ಶ್ರೇಷ್ಠವಾದ ಧನುಸ್ಸನ್ನೂ ಅಕ್ಷಯವಾದ ಬತ್ತಳಿಕೆಗಳನ್ನೂ ದಿವ್ಯವೆನಿಸುವ ರಥ-ಧ್ವಜಗಳನ್ನೂ ಅದ್ಭುತವಾದ ಸಭೆಯನ್ನೂ ಪಡೆದವನಾಗಿದ್ದ ಅರ್ಜುನನು ಯುಧಿಷ್ಠಿರನನ್ನು ಕುರಿತು ಹೀಗೆ ಹೇಳಿದನು: "ರಾಜನೇ ಬಹಳ ವಿಶೇಷವಾದ ಧನುಸ್ಸು, ಅಸ್ತ್ರ, ಬಾಣ, ಪರಾಕ್ರಮ, ಕೃಷ್ಣನಂತಹ ಜೊತೆಗಾರ, ರಾಜ್ಯ ಹಾಗೂ ಇಂದ್ರಪ್ರಸ್ಥಭೂಮಿ, ಯಶಸ್ಸು ಹಾಗೂ ಸೈನ್ಯ - ಹೀಗೆ ನನಗೆ ಏನೇನು ಬಹಳವಾಗಿ ಅಪೇಕ್ಷೆಯಾಗಿತ್ತೋ ಹಾಗೂ ಪಡೆಯಲು ಸುಲಭವಲ್ಲವೋ ಅದೆಲ್ಲವೂ ಈಗ ದೊರೆತಿದೆ.
ನಮ್ಮ ಈಗಿನ ಕರ್ತವ್ಯವೆಂದರೆ ಕೋಶದ ಪರಿವರ್ಧನೆಯೆಂಬುದೇ ನನ್ನ ಅಭಿಪ್ರಾಯ. ಆದ್ದರಿಂದ ರಾಜರೆಲ್ಲರೂ ಕರವನ್ನೊಪ್ಪಿಸುವಂತೆ ಮಾಡಿಬಿಡುವೆ. ಅದಕ್ಕಾಗಿ ನಾನು ಮೊದಲು ಕುಬೇರ-ಪಾಲಿತವಾದ ದಿಕ್ಕಿಗೆ (ಎಂದರೆ ಉತ್ತರಕ್ಕೆ) ಹೊರಡಲಿರುವೆ. ಅದಕ್ಕಾಗಿ ಅಭಿಪೂಜಿತವಾದ ತಿಥಿ-ಮುಹೂರ್ತಗಳಲ್ಲಿ ಹಾಗೂ ಅಭಿಪೂಜಿತವಾದ ನಕ್ಷತ್ರದಲ್ಲಿ ಹೊರಡುವೆ.”
ಇದನ್ನು ಕೇಳಿ ಧರ್ಮರಾಜನು ಸಂತುಷ್ಟನಾದನು. ತಮ್ಮಂದಿರು, ಮಂತ್ರಿಗಳು – ಇವರೊಂದಿಗೆ, ವ್ಯಾಸರನ್ನೂ ಧೌಮ್ಯರನ್ನೂ ಕಾಣಲು ಹೊರಟನು. ಆಗ ಮಹಾ-ಬುದ್ಧಿಶಾಲಿಗಳಾದ ವ್ಯಾಸರು ಅರ್ಜುನನನ್ನು ಕುರಿತು ಹೀಗೆ ಹೇಳಿದರು:
"ಭೇಷ್, ಅರ್ಜುನ, ಭೇಷ್. ನಿನಗೆ ಇಂತಹ ಬುದ್ಧಿ ಬಂದುದೇ ಶ್ಲಾಘ್ಯ. ಏಕೆಂದರೆ ಅಖಂಡ-ಭೂಮಂಡಲವನ್ನೇ ನೀನು ಜಯಿಸಲು ಸಂಕಲ್ಪಿಸಿರುವೆ. ಪಾಂಡು ಮಹಾರಾಜನೇ ಧನ್ಯ. ಏಕೆಂದರೆ ಆತನ ಪುತ್ರನಾದ ನೀನು ಇಂತಹವನಾಗಿರುವೆ! ಯುಧಿಷ್ಠಿರನು ಎಲ್ಲವನ್ನೂ ಹೊಂದತಕ್ಕವನೇ ಸರಿ! ನಿನ್ನ ವೀರ್ಯದಿಂದಾಗಿ ಆ ಧರ್ಮಾತ್ಮನು ಸಾರ್ವಭೌಮ-ಪದವಿಯನ್ನು ಹೊಂದಲಿರುವನು. ನಿನ್ನ ಬಾಹುಬಲವನ್ನು ಆಶ್ರಯಿಸಿ ಆತನು ರಾಜಸೂಯವನ್ನು ನೆರವೇರಿಸುವನು. ಶ್ರೀಕೃಷ್ಣನ ಸು-ನಯ ಅಥವಾ ಒಳ್ಳೆಯ ನೀತಿ, ಭೀಮ-ಅರ್ಜುನರ ಬಲ, ಹಾಗೂ ಯಮಳರಿಬ್ಬರ (ನಕುಲ-ಸಹದೇವರ) ವೀರ್ಯ - ಇವುಗಳಿಂದಾಗಿ ಧರ್ಮರಾಜನು ಎಲ್ಲವನ್ನೂ ಹೊಂದುವನು.
ಆದ್ದರಿಂದ, ಅರ್ಜುನನೇ, ದೇವತೆಗಳು ಕಾಪಾಡಿರುವ ಉತ್ತರ ದಿಕ್ಕಿಗೆ ನೀನು ಹೊರಡು, ಫಾಲ್ಗುನ! ನೀನು ದೇವತೆಗಳನ್ನೂ ಜಯಿಸಿ ಬಲಪ್ರಯೋಗದಿಂದ ರತ್ನಗಳನ್ನು ತರಲು ಸಮರ್ಥನೇ ಸರಿ.
ಬಲವನ್ನು ಮೆಚ್ಚುವ ಭೀಮಸೇನನು ಪೂರ್ವದಿಕ್ಕಿಗೆ ಹೋಗಲಿ: ಮಹಾರಥನಾದ ಸಹದೇವನು ಯಮನ ದಿಕ್ಕಿಗೆ, ಎಂದರೆ ದಕ್ಷಿಣಕ್ಕೆ ಹೋಗಲಿ. ವರುಣರಕ್ಷಿತವಾದ ಪಶ್ಚಿಮಕ್ಕೆ ನಕುಲನು ಹೋಗಲಿ. ನನ್ನ ಬುದ್ಧಿ ಹೀಗೆ ನಿಶ್ಚಯಿಸಿದೆ. ಭರತವಂಶದ ಶ್ರೇಷ್ಠರಾದ ಪಾಂಡವರೇ, ಇದನ್ನು ಕಾರ್ಯಗತಗೊಳಿಸಿರಿ."
ವ್ಯಾಸರ ಈ ಮಾತುಗಳನ್ನು ಕೇಳಿ ಪಾಂಡವರು ಸಂತೋಷಗೊಂಡರು. ಹಾಗೆಯೇ ಆಗಲಿ - ಎಂದು ಅವರಿಗೆ ಹೇಳಿದರು.
ಅರ್ಜುನನು ಮೊದಲಾಡಿದ ಮಾತಿಗೆ ಯುಧಿಷ್ಠಿರನು ಪ್ರತಿಭಾಷಣವನ್ನು ಮಾಡಿದನು. ಆತನ ಮಾತು ಸ್ನಿಗ್ಧವೂ ಗಂಭೀರವೂ ಆಗಿತ್ತು. "ಅರ್ಜುನನೇ, ಸ್ವಸ್ತಿವಾಚನ ಮಾಡತಕ್ಕ ಬ್ರಾಹ್ಮಣರಲ್ಲಿಗೆ ಮೊದಲು ಹೋಗು. ನಿನ್ನ ಜೈತ್ರ-ಯಾತ್ರೆಯೆಂಬುದು ನಮ್ಮ ಬಗ್ಗೆ ದ್ವೇಷವಿರತಕ್ಕವರಿಗೆ ಶೋಕವನ್ನೂ, ನಮ್ಮ ಮಿತ್ರರಿಗೆ ಸಂತೋಷವನ್ನೂ ಉಂಟುಮಾಡಲಿ. ಪಾರ್ಥನೇ, ನಿನಗೆ ವಿಜಯವೆಂಬುದು ಸಿದ್ಧವೇ ಸರಿ. ನಿನಗೆ ಅಭೀಷ್ಟವಾದದ್ದನ್ನು ಪಡೆದೇ ಪಡೆಯುತ್ತೀಯೇ."
ಈ ಮಾತುಗಳನ್ನು ಕೇಳಿದ ಬಳಿಕ, ದೊಡ್ಡ ಸೈನ್ಯದೊಂದಿಗೆ ಅರ್ಜುನನು ಹೊರಟನು. ಆತನ ರಥವು ಅದ್ಭುತವಾದ ಕರ್ಮವನ್ನು ಮಾಡುವುದಾಗಿತ್ತು. ಎಷ್ಟಾದರೂ ಅದು ಅಗ್ನಿದತ್ತವಾದುದಲ್ಲವೇ?
ಅವನು ಮಾತ್ರವಲ್ಲದೆ, ಧರ್ಮರಾಜನಿಂದ ಸಂಮಾನಿತರಾದ ಭೀಮನೂ, ನಕುಲ-ಸಹದೇವರೂ ಸೈನ್ಯಸಮೇತರಾಗಿ ಹೊರಟುಬಂದರು.
ಸೂಚನೆ : 24/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ
Monday, May 25, 2026
ಪಾಂಡವರ ದಿಗ್ವಿಜಯ-ಸಂಕಲ್ಪ:ವ್ಯಾಸಾಶೀರ್ವಾದ
ಪ್ರಶ್ನೋತ್ತರ ರತ್ನಮಾಲಿಕೆ 67 (Prasnottara Ratnamalike 67)
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೭. ಎಲ್ಲಿ ವಾಸ ಮಾಡಬೇಕು?
ಸಜ್ಜನರ ಸನಿಹ ಅಥವಾ ಕಾಶಿಯಲ್ಲಿ.
ಈ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆನಾವು ಏಕೆ ಬದುಕಬೇಕು? ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಬದುಕು ಎಂಬುದು ಜನನ ಮತ್ತು ಮರಣದ ನಡುವಿನ ವ್ಯಾಪಾರ ಎಂಬುದಾಗಿ ನಾವು ತಿಳಿದಿದ್ದೇವೆ. ಆದರೆ ಈ ಅರಿವು ಬದಲಾಗಬೇಕಾಗಿದೆ. ಭಾರತೀಯರ ಜೀವನ ಎಂದರೆ ಕೇವಲ ಹುಟ್ಟು ಸಾವುಗಳ ನಡುವಿನ ವ್ಯಾಪಾರ ಅಲ್ಲ. ಜೀವಭಾವ ಎಲ್ಲಿಂದ ಆರಂಭವಾಗುತ್ತದೆಯೋ ಮತ್ತುಆ ಜೀವಭಾವ ಯಾವಾಗ ಮುಕ್ತಾಯವಾಗುತ್ತದೆಯೋ ಅವೆಡರ ನಡುವಿನ ವ್ಯಾಪಾರವನ್ನೇ ‘ಜೀವನ’ ಎಂಬುದಾಗಿ ಕರೆಯಬೇಕು ಎಂಬುದಾಗಿ ಶ್ರೀರಂಗ ಮಹಾಗುರುಗಳ ಆಶಯವಾಗಿತ್ತು. ಹಾಗಾದರೆ ಈ ಜೀವಭಾಗವೂ ಕಳೆಯುವುದು ಎಂದರೇನು? ಜೀವಭಾವವು ಕಳೆಯಲು ಯಾವ ಉಪಾಯವನ್ನು ಮಾಡಬೇಕು? ಎಂಬುದು ಇಲ್ಲಿನ ವಿಷಯವಾಗಿದೆ. ಜೀವಭಾವ ಕಳೆಯುವುದನ್ನೇ ‘ಮೋಕ್ಷ’ ಎಂಬುದಾಗಿ ಕರೆಯಲಾಗಿದೆ. ಸಂಸಾರ ಭಾವವು ಕಳೆಯಬೇಕು. ಸಂಸಾರದಿಂದ ಮುಕ್ತಿಯಾಗಿ ಮತ್ತೆ ಜನ್ಮ ಎಂಬ ಹೊಸತನವನ್ನು ಪಡೆದುಕೊಳ್ಳದೇ ಇರುವಂತಾಗಬೇಕು. ಇದನ್ನೇ ಮಾನವಜೀವನ ಎಂಬುದಾಗಿ ಕರೆದಿದ್ದಾರೆ. ಇಂತಹ ಉತ್ಕೃಷ್ಟವಾದ ಮಾನವಜನ್ಮ ಸಾರ್ಥಕವಾಗಬೇಕಾದರೆ ಅದಕ್ಕೆ ಇರುವ ಅತ್ಯಂತ ಶ್ರೇಷ್ಠವಾದ ಸಾಧನ ಎಂದರೆ ಸಜ್ಜನರ ಸಾನ್ನಿಧ್ಯ. ನಾವು ಎಷ್ಟೆಷ್ಟು ಸುಜನರ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೋ ಅಷ್ಟಷ್ಟು ನಮ್ಮ ಜೀವನ ಸುಲಭವಾಗುತ್ತದೆ. ಏಕೆಂದರೆ ಆ ಸಜ್ಜನರು ಜೀವನದ ಸಾರ್ಥಕ್ಯವನ್ನು ಪಡೆಯುವುದು ಹೇಗೆ? ಎಂಬುದನ್ನು ಅವರು ತಮ್ಮ ಜೀವನದುದ್ದಕ್ಕೂ ಸಾಧಿಸಿ ತೋರಿಸಿದವರು. ಹಾಗಾಗಿ ಅವರು ನಡೆದ ಹಾದಿಯಲ್ಲಿ ನಡೆದರೆ ನಮಗೆ ಗಮ್ಯವೂ ಅತ್ಯಂತ ಸುಲಭವಾಗಿ ಲಭಿಸುತ್ತದೆ ಎಂಬುದು ಇದರ ತಾತ್ಪರ್ಯ. ಹಾಗಾಗಿ ಸಜ್ಜನರ ಸಂಬಂಧ ಅತ್ಯಂತ ಅಗತ್ಯವಾದ್ದು. ಹಾಗಾದರೆ ಸಜ್ಜನರು ಯಾರು? ಯಾವ ನಿತ್ಯವಾದ ಸಚ್ಚಿದಾನಂದ ರೂಪವಾದ ಯಾವ ಪರಬ್ರಹ್ಮ ಇದೆಯೋ, ಅದನ್ನೇ ‘ಸತ್’ ಎಂದು ಕರೆದು ಆ ಸತ್ತಿನಲ್ಲೇ ಯಾವಾಗಲೂ ತಮ್ಮ ಮನಸ್ಸನ್ನು ಇಡುವವರು ಸಜ್ಜನರು. ಅವರ ನಡೆ ನುಡಿ ಯಾವಾಗಲೂ ಆ ಪರಬ್ರಹ್ಮದ ಕಡೆಗೆ ಇರುತ್ತದೆ. ಹಾಗಾಗಿ ಎಲ್ಲೂ ಅವರು ಚ್ಯುತರಾಗುವುದಿಲ್ಲ ಅಂತಹ ಜೀವನಕ್ರಮ ಅವರದ್ದಾಗಿರುತ್ತದೆ.
ಈ ಪ್ರಶ್ನೆಯ ಇನ್ನೊಂದು ಭಾಗ ಕಾಶಿಯಲ್ಲಿ ವಾಸ ಮಾಡಬೇಕು ಎಂಬುದಾಗಿ. ಈಗ ನಾವು ಯಾವ ಭಾರತದ ಭೂಗೋಳದಲ್ಲಿ ಕಾಶಿ ಎಂಬ ನಗರವನ್ನು ನೋಡುತ್ತೇವೋ ಅದರಲ್ಲಿ ವಾಸ ಮಾಡಬೇಕು ಎಂಬ ಅರ್ಥದಲ್ಲಿ ಈ ವಾಕ್ಯ ಬಂದಿದ್ದಲ್ಲ. ಸನಾತನ ಭಾರತದ ಮಹರ್ಷಿಗಳು ಯಾವ ಯಾವ ಭ್ರೂಮಧ್ಯದಲ್ಲಿ ಇರುವ ‘ಕಾಶೀ’ ಎಂಬ ಭಾಗವಿದೆಯೋ, ಅಲ್ಲಿ ಯಾವ ವಿಶ್ವನಾಥನನ್ನು ದರುಶನವನ್ನು ಮಾಡಿದರೋ, ಅಂತಹ ದರ್ಶನಕ್ಕೆ ಯೋಗ್ಯವಾದ ಕ್ಷೇತ್ರ ಯಾವುದೋ, ಅದೂ ಕೂಡ ಭಾರತದ ಉತ್ತರ ಭಾಗದಲ್ಲಿರುವ ಕಾಶಿ ಎಂಬುದಾಗಿ ಅವರು ಉದ್ಘೋಷಿಸಿದರು. “ಕಾಶ್ಯಾಂ ತು ಮರಣಾತ್ ಮುಕ್ತಿಃ” ಎಂಬುದಾಗಿ ಅಂದರೆ ಮುಕ್ತಿ ಪಡೆಯಬೇಕಾದರೆ ಕಾಶಿಯಲ್ಲಿ ಮರಣವನ್ನು ಹೊಂದಬೇಕು. ಅಂದರೆ ಜೀವನದಲ್ಲಿ ತನ್ನ ಪ್ರಾಣವನ್ನು ಅಲ್ಲಿ ಲಯಗೊಳಿಸಿಕೊಂಡರೆ ಆಗ ಜೀವಭಾವವು ನಷ್ಟವಾಗುತ್ತದೆ; ದೇವಭಾವವು ಪ್ರಾಪ್ತವಾಗುತ್ತದೆ. ಇದರಿಂದಲೇ ಅವನ ಜನ್ಮ ಸಾರ್ಥಕ ಎಂಬ ಅರ್ಥದಲ್ಲಿ ಈ ಪ್ರಶ್ನೋತ್ತರವನ್ನು ನಾವು ಗಮನಿಸಬೇಕಾಗಿದೆ.
ಸೂಚನೆ : 24/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ
ಮನಸೇ... ಗೋವಿಂದನ ಭಜಿಸು. (Manase,.. Govindana Bhajisu.)
ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
Sunday, May 17, 2026
ಪ್ರಶ್ನೋತ್ತರ ರತ್ನಮಾಲಿಕೆ 66 (Prasnottara Ratnamalike 66)
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೬. ಲಕ್ಷ್ಮಿಯು ಯಾರನ್ನು ವರಿಸುವಳು?
ಆಲಸ್ಯ ರಹಿತನನ್ನು ಮತ್ತು ನೀತಿಯಿಂದ ಕೂಡಿದವನನ್ನು.
ಈ ಪ್ರಶ್ನೋತ್ತರದಲ್ಲಿ ಕಾರ್ಯಕಾರಣಭಾವವಿದೆ. ಲಕ್ಷ್ಮಿಯು ಕಾರ್ಯವಾದರೆ ಉತ್ಸಾಹ ಅಥವಾ ಆಲಸ್ಯವಿಲ್ಲದಿರುವಿಕೆ ಮತ್ತು ನೀತಿ ಕಾರಣ. ಏಕೆಂದರೆ ಲಕ್ಷ್ಮಿಯು ಒಲಿಯಬೇಕಾದರೆ ಯಾವ ಅರ್ಹತೆ ಇರಬೇಕಾಗುತ್ತದೆ? ಎಂಬ ವಿಷಯ ಇಲ್ಲಿದೆ. ಆ ವ್ಯಕ್ತಿಯಲ್ಲಿ ಆಲಸ್ಯ ಇರಬಾರದು ಮತ್ತು ಆತ ನೀತಿಯಿಂದ ಕೂಡಿರಬೇಕು ಎಂದು. ಈ ಎರಡು ಗುಣಗಳಿರುವವನನ್ನು ಲಕ್ಷ್ಮಿಯೂ ಬಿಡುವುದಿಲ್ಲ ಎಂದರ್ಥ. ಇಲ್ಲಿ ಲಕ್ಷ್ಮಿ ಎಂದರೆ ಮಹಾವಿಷ್ಣುವಿನ ಮನದೆನ್ನೆ ಎಂಬ ಅರ್ಥ ಮಾತ್ರ ಅಲ್ಲ. ಇದಕ್ಕೆ ಸಂಪತ್ತು ಎಂಬ ಅರ್ಥವನ್ನು ತೆಗೆದುಕೊಳ್ಳಬೇಕು. ಸಂಪಾದಿಸಿದ ಸಂಪತ್ತನ್ನು ಸರಿಯಾಗಿ ಬಳಸಿಕೊಂಡಲ್ಲಿ ಮಹಾಲಕ್ಷ್ಮಿಯ ಪತಿಯಾದ ಮಹಾವಿಷ್ಣು ಸಿಗದಿರನು.
ಯಾವುದೇ ಕಾರ್ಯದ ಫಲಿತವನ್ನು ಇಲ್ಲಿ ‘ಲಕ್ಷ್ಮಿ’ ಎಂಬುದಾಗಿ ತಿಳಿಯಬೇಕು. ಅಂದರೆ ಒಂದು ಫಲರೂಪವಾದುದರಿಂದ ಲಕ್ಷ್ಮಿಯು ಅನೇಕ ಪ್ರಕಾರವಾಗಿ ಇರುತ್ತಾಳೆ. ಇವುಗಳಲ್ಲಿ ಪ್ರಧಾನವಾಗಿ ಆದಿಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ಧೈರ್ಯಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ ಹೀಗೆ ಅಷ್ಟಲಕ್ಷ್ಮಿಯರ ರೂಪದಲ್ಲಿ ನಾವು ಲಕ್ಷ್ಮಿಯನ್ನು ಭಾವಿಸುತ್ತೇವೆ. ಯಾವುದೇ ವಿಧವಾದ ಲಕ್ಷ್ಮಿ ನಮಗೆ ಲಭಿಸಬೇಕಾದರೆ ಅದಕ್ಕೆ ಬೇಕಾದ ಪೂರಕವಾದ ಸಾಮಗ್ರಿಗಳು ಇರಬೇಕಾಗುತ್ತವೆ. ಸಾಮಾನ್ಯವಾಗಿ ಒಂದು ಕಾರ್ಯವಾಗಬೇಕಾದರೆ ಅಲ್ಲಿ ಕಾರಣವಿರಬೇಕು. ಮತ್ತು ಆ ಕಾರ್ಯಕ್ಕೆ ಪ್ರತಿಬಂಧಕ ಅಥವಾ ವಿಘ್ನ ಇರಬಾರದು. ಮತ್ತು ಪ್ರತಿಬಂಧಕ ಇದ್ದರೂ ಕಾರ್ಯವನ್ನುಂಟುಮಾಡುವ ಉತ್ತೇಜಕವಾದ ಕಾರಣ ಸಾಮಗ್ರಿ ಇದ್ದರೆ ಕಾರ್ಯಸಂಪನ್ನವಾಗುತ್ತದೆ ಎಂಬುದಾಗಿ ಶಾಸ್ತ್ರವು ಕಾರ್ಯಕಾರಣಗಳಿಗಿರುವ ಸಂಬಂಧವನ್ನು ಹೀಗೆ ವಿವರಿಸುತ್ತದೆ. ಅಂದರೆ ಸಂಪತ್ತು ಬರಬೇಕಾದರೆ ಅದಕ್ಕೆ ಇರುವ ಪ್ರತಿಬಂಧಕವೇ ಆಲಸ್ಯ. ಮತ್ತು ಬಂದ ಫಲವು ಉಳಿಯಬೇಕಾದರೆ ಏನು ಮಾಡಬೇಕು? ಎಂಬ ವಿಷಯವೂ ಈ ಉತ್ತರದಲ್ಲಿ ನಿರೂಪಿತವಾಗಿದೆ. ಹಾಗೂ ಹೀಗೂ ಕಷ್ಟಪಟ್ಟು ಲಕ್ಷ್ಮಿಯನ್ನು ಸಂಪಾದಿಸಬಹುದು. ಸಹಜವಾಗಿ ಆಕೆ ಚಂಚಲೆ. ಒಂದು ಕಡೆ ಉಳಿಯಳು ಆಕೆ. ಅವಳನ್ನು ಉಳಿಸಿಕೊಳ್ಳುವುದಕ್ಕೂ ಸಹ ಒಂದು ಜಾಣ್ಮೆಯೇ ಬೇಕು. ಅದಕ್ಕಾಗಿ ಏನು ಬೇಕು? ಎಂಬುದನ್ನು ಇಲ್ಲಿ ಹೇಳಲಾಗಿದೆ. ಅಲ್ಲಿ ಒಂದು ನಿಯತ್ತು ಅಥವಾ ನೀತಿ ಬೇಕು. ಬದ್ಧತೆ ಅಥವಾ ಕ್ಷಮತೆ ಇರಬೇಕಾಗುತ್ತದೆ. ಅವಳು ಉಳಿಯಬೇಕಾದರೆ ನಮ್ಮಲ್ಲಿ ಆ ಅರ್ಹತೆಯು ಸದಾ ಜಾಗೃತವಾಗಿರುವಂತೆ ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದಾಗ ಬಂದ ಸಂಪತ್ತು ಅಲ್ಲಿ ನೆಲೆಗೊಳ್ಳುತ್ತದೆ. ಹಾಗಾಗಿ ಈ ಎರಡು ಲಕ್ಷಣಗಳಿದ್ದರೆ ಮಾತ್ರ ಮಹಾಲಕ್ಷ್ಮಿ ನೆಲೆಗೊಳ್ಳುತ್ತಾಳೆ ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.
ಇದಕ್ಕೆ ಸಂಬಂಧಪಟ್ಟಂತೆ ಮಹಾಭಾರತದ ವಿದುರನೀತಿ ಹೀಗೆ ಹೇಳಿದೆ - ಯಾವನಿಗೆ ಮಹಾಲಕ್ಷ್ಮಿ ಅನಾಯಾಸವಾಗಿ ಒಲಿಯುತ್ತಾಳೆ? ಎಂದು. “ಉತ್ಸಾಹಸಂಪನ್ನಮ್ ಅದೀರ್ಘಸೂತ್ರಂ ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್ | ಶೂರಂ ಕೃತಜ್ಞಂ ದೃಢಸೌಹೃದಂ ಚ ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ || ಎಂದು. ವ್ಯಕ್ತಿಯಲ್ಲಿ ಸಂಕಲ್ಪಿಸಿದ ಕಾರ್ಯ ಸಿದ್ಧಿಸುವತನಕ ನಿರಂತರ ಉತ್ಸಾಹವಿರಬೇಕು, ವಿಳಂಬವಿರಬಾರದು, ಅರಿತು ಕೆಲಸ ಮಾಡುವವನಾಗಿರಬೇಕು, ಚಟಗಳಲ್ಲಿ ಆಸಕ್ತನಾಗಿರಬಾರದು, ಶೂರನಾಗಿರಬೇಕು, ಕೃತಜ್ಞತೆಯ ಭಾವ ಉಳ್ಳವನಾಗಿರಬೇಕು, ಮಾಡುವ ಕಾರ್ಯದಲ್ಲಿ ತಲ್ಲೀನತೆಯಿರಬೇಕು. ಈ ಏಳು ಗುಣವುಳ್ಳವನನ್ನು ಲಕ್ಷ್ಮಿಯು ತಾನಾಗಿಯೇ ಆತನ ಮನೆಯಲ್ಲಿ ವಾಸಿಸಲು ಇಚ್ಛಿಸುತ್ತಾಳೆ ಎಂಬುದಾಗಿ. ಇದೇ ಅರ್ಥವನ್ನೇ ಇನ್ನೊಂದು ರೀತಿಯಲ್ಲಿ ಈ ಪ್ರಶ್ನೋತ್ತರದಲ್ಲೂ ಹೇಳಲಾಗಿದೆ.
ಸೂಚನೆ : 17/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ವ್ಯಾಸ ವೀಕ್ಷಿತ 188 ಯುಧಿಷ್ಠಿರನ ಹರ್ಷ; ಕೃಷ್ಣನ ನಿರ್ಗಮನ(Vyaasa Vikshita188)
ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಅಂತೂ ಜರಾಸಂಧ-ವಧೆಯಾಯಿತು, ಆತನ ಉತ್ತರಕ್ರಿಯೆಯೂ ಆಯಿತು. ಆತನ ಪುತ್ರನ ಪಟ್ಟಾಭಿಷೇಕವೂ ಆಯಿತು. ಸೆರೆಯಾಗಿದ್ದ ರಾಜರುಗಳ ಬಿಡುಗಡೆಯೂ ಆಯಿತು.
ಇತ್ತ, ಕೃಷ್ಣನೂ ಅರಸರು ಅರ್ಪಿಸಿದ ಮಹೈಶ್ವರ್ಯವನ್ನು ಹೊಂದಿದವನಾಗಿ, ಅವರಿತ್ತ ಭೂರಿ-ರತ್ನಗಳನ್ನು ತೆಗೆದುಕೊಂಡು, ಭೀಮಾರ್ಜುನರೊಂದಿಗೆ ಅಲ್ಲಿಂದ ಇಂದ್ರಪ್ರಸ್ಥಕ್ಕೆ ಬಂದವನೇ, ಧರ್ಮರಾಜನಲ್ಲಿಗೆ ಬಂದು ಸಂತೋಷದಿಂದ ನುಡಿದನು:
"ಯುಧಿಷ್ಠಿರಾ, ಭೀಮನು ಜರಾಸಂಧನನ್ನು ಸಂಹರಿಸಿದನು. ಇದು ನಮ್ಮ ಸೌಭಾಗ್ಯ. ಸೆರೆಯಾಗಿದ್ದ ರಾಜರುಗಳನ್ನೆಲ್ಲಾ ಬಿಡಿಸಿದ್ದಾಗಿದೆ. ಭೀಮಾರ್ಜುನರು ಕುಶಲಿಗಳಾಗಿಯೇ ಹಿಂದಿರುಗಿದ್ದಾರೆ. ಅವರಿಗೆ ಯಾವ ಕ್ಷತಿಯೂ, ಎಂದರೆ ಯಾವ ಧಕ್ಕೆ-ದುಃಖಗಳೂ, ಉಂಟಾಗಿಲ್ಲ" ಎಂದು.
ಈ ಮಾತಿಗೆ ಸಂತುಷ್ಟನಾದ ಯುಧಿಷ್ಠಿರನು ಕೃಷ್ಣನನ್ನು ಯಥೋಚಿತವಾಗಿ ಸತ್ಕರಿಸಿದನು. ಹಾಗೂ ಪ್ರಹರ್ಷದಿಂದ ಭೀಮಾರ್ಜುನರನ್ನು ಆಲಿಂಗಿಸಿಕೊಂಡನು. ಜರಾಸಂಧ-ನಾಶ, ಹಾಗೂ ತನ್ನ ಭ್ರಾತೃಗಳು ಸಾಧಿಸಿದ ವಿಜಯ - ಇವುಗಳಿಂದಾಗಿ ಯುಧಿಷ್ಠಿರನಿಗೆ ಅಮಿತ ಸಂತೋಷವಾಯಿತು.
ಕೃಷ್ಣನನ್ನು ಕುರಿತು ಹೀಗೆ ಹೇಳಿದನು: "ನರಶ್ರೇಷ್ಠನೇ, ಪ್ರತಾಪಶಾಲಿಯೂ ಮದೋನ್ಮತ್ತನೂ ಆದ ಜರಾಸಂಧನನ್ನು ಭೀಮನು ಬೀಳಿಸಲಾದುದು ನೀನು ಜೊತೆಗಿದ್ದೆಯಾದ್ದರಿಂದಲೇ. ಈಗ ಇದೋ ಶ್ರೇಷ್ಠ-ಯಜ್ಞವಾದ ರಾಜಸೂಯವನ್ನು ನಾನು ನಿಶ್ಚಿಂತನಾಗಿ ನೆರವೇರಿಸಬಲ್ಲೆ. ನಿನ್ನ ಬುದ್ಧಿ-ಬಲದಿಂದಾಗಿಯೇ ನನಗೆ ಯಾಗವನ್ನು ಮಾಡಲು ಅರ್ಹತೆಯೆಂಬುದು ಬಂದಿರುವುದು. ಜರಾಸಂಧನೊಡನೆ ಮಾಡಿದ ಈ ಯುದ್ಧದಿಂದಾಗಿ, ಭೂಮಿಯ ಮೇಲೆಲ್ಲ ನಿನ್ನ ಕೀರ್ತಿಯು ವ್ಯಾಪಿಸಿರುವುದು. ಜರಾಸಂಧ-ವಧದಿಂದಾಗಿ ವಿಪುಲವಾದ ಸಂಪತ್ತನ್ನೂ ಗಳಿಸಿದಂತಾಯಿತು."
ಹೀಗೆ ಹೇಳಿದ ಯುಧಿಷ್ಠಿರನು ಪ್ರಭುವಾದ ಶ್ರೀಕೃಷ್ಣನಿಗೆ ಶ್ರೇಷ್ಠವಾದ ರಥವೊಂದನ್ನಿತ್ತನು. ಅದರೊಳಗೆ ಅರ್ಜುನನೊಂದಿಗೆ ಕುಳಿತ ಜನಾರ್ದನನೂ ಯುಧಿಷ್ಠಿರನ ವಿಷಯದಲ್ಲಿ ಬಹುಸಂತುಷ್ಟನೇ ಆದನು.
ಆ ಬಳಿಕ ತನ್ನ ಸಹೋದರರೊಂದಿಗೆ ಯುಧಿಷ್ಠಿರನು ಹೊರಟು, ಎಲ್ಲ ರಾಜರನ್ನೂ ಯಥೋಚಿತವಾಗಿ ಸತ್ಕರಿಸಿ, ಅವರೆಲ್ಲರನ್ನೂ ಬೀಳ್ಕೊಟ್ಟನು. ಬಹುಸಂತೋಷಗೊಂಡ ಆ ರಾಜರುಗಳೂ, ಯುಧಿಷ್ಠಿರನ ಅಪ್ಪಣೆಯನ್ನು ಪಡೆದು, ತಮ್ಮ ತಮ್ಮ ವಾಹನಗಳಲ್ಲಿ ಕುಳಿತು ತಮ್ಮ ತಮ್ಮ ದೇಶಗಳಿಗೆ ಹೊರಟುಬಂದರು.
ನರಶ್ರೇಷ್ಠನೂ ಮಹಾಬುದ್ದಿಶಾಲಿಯೂ ಆದ ಕೃಷ್ಣನು ಹೀಗೆ ಜರಾಸಂಧ-ವಧೆಯನ್ನು ಸಾಧಿಸಿದನಷ್ಟೆ. ಕಾರ್ಯವು ಸಿದ್ಧಿಸಿರಲು, ಇನ್ನೀಗ ಹೊರಟುನಿಂತನು. ಯುಧಿಷ್ಠಿರನನ್ನೇ ಮುಂದಿಟ್ಟುಕೊಂಡು ಆ ಪಾಂಡವರೆಲ್ಲರೂ ಅಕ್ಲಿಷ್ಟ-ಕಾರಿಯಾದ ಕೃಷ್ಣನಿಗೆ ಪ್ರದಕ್ಷಿಣೆ ಮಾಡಿದರು. ಯಾವುದೇ ಕಾರ್ಯವನ್ನು ಅನಾಯಾಸವಾಗಿ, ಎಂದರೆ ಕ್ಲೇಶವಿಲ್ಲದೆ ಮಾಡುವಂತಹವನಿಗೆ ಅಕ್ಲಿಷ್ಟ-ಕಾರಿಯೆನ್ನುವರು.
ಯುಧಿಷ್ಠಿರ ಹಾಗೂ ದ್ರೌಪದಿ ಇವರುಗಳ ಆಜ್ಞೆಯನ್ನು ಕೃಷ್ಣನು ಪಡೆದನು. ಹಾಗೆಯೇ ಸುಭದ್ರೆ, ಭೀಮಸೇನ, ಅರ್ಜುನ, ಯಮಳರಾದ (ಎಂದರೆ ಅವಳಿ-ಜವಳಿಗಳಾದ) ನಕುಲ-ಸಹದೇವರು, ಹಾಗೂ ಧೌಮ್ಯ - ಇವರೆಲ್ಲರ ಅನುಮತಿಯನ್ನು ಪಡೆದು, ಸ್ವ-ನಗರಿಗೆ ಹೊರಟನು.
ಅದಕ್ಕಾಗಿ ಆತನು ಬಳಸಿದ ರಥವು ಆಗಷ್ಟೆ ಯುಧಿಷ್ಠಿರನು ಆತನಿಗೆ ಕೊಟ್ಟುದಾಗಿತ್ತು. ಅದು ಮನೋವೇಗದಲ್ಲಿ ಸಂಚರಿಸುವ ರಥ! ತನ್ನ ದಿವ್ಯನಾದದಿಂದ ದಿಕ್ಕುಗಳಲ್ಲೆಲ್ಲ ಪ್ರತಿಧ್ವನಿಯನ್ನು ಉಂಟುಮಾಡುವಂತಹುದು!
ದೇವಕೀಪುತ್ರನಾದ ಕೃಷ್ಣನು ಹೊರಟುಬರಲು, ದೊಡ್ಡ ಜಯವನ್ನು ಸಾಧಿಸಿದಂತಾಗಿದ್ದ ಯುಧಿಷ್ಠಿರನು, ಅಲ್ಲಿ ನೆರೆದಿದ್ದ ರಾಜರಿಗೆಲ್ಲ ಅಭಯವನ್ನಿತ್ತನು.
ಆ ಕಾರ್ಯದಿಂದಾಗಿ ಆತನ ಕೀರ್ತಿಯು ಮತ್ತೂ ಹೆಚ್ಚಿತು. ಪಾಂಡವರು ದ್ರೌಪದಿಗೂ ಪರಮ-ಸಂತೋಷವನ್ನೇ ತಂದುಕೊಟ್ಟಂತಾಯಿತು. ಹಾಗೂ ಆ ಕಾಲಕ್ಕೆ ಹೇಗೆ ಯುಕ್ತವೋ, ಎಂದರೆ ಧರ್ಮ-ಕಾಮ-ಅರ್ಥಗಳ ಸಂಪಾದನೆಗೆ ಯಾವುದು ಯೋಗ್ಯವೋ, ಅಂತಹ ಪ್ರಜಾಪಾಲನ-ಕಾರ್ಯವನ್ನು ರಾಜಾ ಯುಧಿಷ್ಠಿರನು ಧರ್ಮಾನುಸಾರವಾಗಿ ನೆರವೇರಿಸಿದನು.
ಸೂಚನೆ : 17/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಕರ್ಮಾಚರಣೆಯಿಂದ ಆತ್ಮೋನ್ನತಿ (Karmacaraṇeyinda Atmonnati)
ಕರ್ಮವೆಂಬ ಪದವು ಸಂಸ್ಕೃತದ “ಕೃ” ಮಾಡು ಅಥವಾ ಕಾರ್ಯಮಾಡು ಎಂಬ ಅರ್ಥವುಳ್ಳ ಮೂಲ ಧಾತುವಿನಿಂದ ವ್ಯುತ್ಪತ್ತಿಯಾದದ್ದು. ಇದರ ಅರ್ಥ- ಕ್ರಿಯೆ, ಕೆಲಸ, ಕಾರ್ಯ, ಕೃತ್ಯ, ಕರ್ಮ, ಮಾಡಲ್ಪಟ್ಟದ್ದು ಎಂಬುದಾಗಿದೆ. ಇದು ಕೇವಲ ಕ್ರಿಯೆ ಎಂಬ ಅರ್ಥದ ಜೊತೆಗೆ ಅದರ ಕಾರಣ–ಕಾರ್ಯ ತತ್ವವನ್ನು (principle of Cause-effect) ಸೂಚಿಸುತ್ತದೆ. ಅಂದರೆ, ಒಬ್ಬ ವ್ಯಕ್ತಿಯ ಕ್ರಿಯೆಯ ಹಿಂದಿನ ಉದ್ದೇಶದ ಫಲಿತಾಂಶವನ್ನು ಒಳಗೊಂಡಿರುತ್ತದೆ ಮತ್ತು ವ್ಯಕ್ತಿಯ ಭವಿಷ್ಯದಲ್ಲಿ ಸಂಭವಿಸಬಹುದಾದ ಸಿಹಿ ಅಥವಾ ಕಹಿ ಘಟನೆಗಳನ್ನು ರೂಪಿಸುತ್ತದೆ.
ಸದುದ್ದೇಶದಿಂದ ಕೂಡಿದ ಧಾರ್ಮಿಕ ಕರ್ಮ ಭವಿಷ್ಯದ ಸಂತೋಷಕ್ಕೆ ಕಾರಣವಾಗುತ್ತದೆ. ಈ ತರಹದ ಕರ್ಮವು ಪ್ರತಿಫಲಾಪೇಕ್ಷೆಯಿದ್ದಲ್ಲಿ ಪುಣ್ಯಕರ್ಮವೆನ್ನುತ್ತಾರೆ. ದುರುದ್ದೇಶ ಮತ್ತು ಅಧಾರ್ಮಿಕ ಕರ್ಮ ಭವಿಷ್ಯದ ದುಃಖಕ್ಕೆ ಮೂಲ ಕಾರಣವಾಗುತ್ತವೆ. ಇಂತಹ ಕರ್ಮ ಪಾಪಕರ್ಮವೆನಿಸಿಕೊಳ್ಳುತ್ತದೆ. ಕರ್ಮವು ಜೀವ ಹಾಗೂ ಪುನರ್ಜನ್ಮಕ್ಕೂ ನಂಟನ್ನು ಹೊಂದಿರುತ್ತದೆ. "ಕರ್ಮ " ಹಾಗೂ ಕರ್ಮಫಲ ಅನುಭವಿಸುದಕ್ಕಾಗಿ ಜನ್ಮ-ಮರಣದ ವೃತ್ತದ ಚಿಂತನೆ ವೇದಸಾಹಿತ್ಯಕಾಲದಿಂದಲೂ ಕಂಡುಬರುತ್ತದೆ. ಧರ್ಮ-ಕರ್ಮದ ನಂಟನ್ನು ಬೃಹದಾರಣ್ಯಕೋಪನಿಷತ್ತಿನಲ್ಲಿಯೂ ಕಾಣಬಹುದು. ಬೌದ್ಧ, ಜೈನ ಮತ್ತು ಸಿಖ್ರ ಪಂಥದವರೂ ಇದನ್ನು ನಂಬುತ್ತಾರೆ.
ಕರ್ಮದ ವಿಭಾಗೀಕರಣವನ್ನು ಭಗವದ್ಗೀತೆಯಲ್ಲಿ ಮತ್ತು ಪುರಾಣಗಳಲ್ಲಿ ಕಾಣಬಹುದು. ವಿಭಾಗೀಕರಣ ಪದಗಳಲ್ಲಿ ವ್ಯತ್ಯಾಸಗಳಿವೆ. ಪುರಾಣಸಾಹಿತ್ಯಗಳಲ್ಲಿ ಕರ್ಮವನ್ನು ಕೆಳಕಂಡ ವಿಭಾಗಗಳಾಗಿ ಕಾಣಬಹುದು. (೧) ಸಂಚಿತ ಕರ್ಮ- ನಾವು ಹಿಂದಿನ ಎಲ್ಲಾ ಜನ್ಮಗಳಲ್ಲಿ ಮಾಡಿದ, ಆದರೆ ಇನ್ನೂ ಕರ್ಮಫಲ ನೀಡದ ಕರ್ಮಗಳ ಸಂಗ್ರಹ. ಇದು ಭವಿಷ್ಯದ ಜನ್ಮಗಳಲ್ಲಿ ಅನುಭವಿಸಬೇಕಾದ ಫಲಗಳು. (೨) ಪ್ರಾರಬ್ಧಕರ್ಮ -ಪ್ರಸ್ತುತ ಜನ್ಮದಲ್ಲಿ ಅನುಭವಿಸಬೇಕಾದ ಹಣ್ಣಾಗಿರುವ ಕರ್ಮದಫಲ. ಇದು ಜೀವನದ ಸಮಗ್ರ ಆಗುಹೋಗುಗಳ ಪರಿಸ್ಥಿತಿಯನ್ನು ರೂಪಿಸುತ್ತದೆ. ಉದಾಹರಣೆಗೆ, ಆಯಸ್ಸು, ಅರೋಗ್ಯ, ಶರೀರದ ಸ್ವರೂಪ, ರಕ್ತಸಂಬಂಧಗಳು, ವಿದ್ಯೆ, ಉದ್ಯೋಗ ಇತ್ಯಾದಿ. ಪ್ರಾರಬ್ಧಕರ್ಮ ಪ್ರಸಕ್ತ ಜನ್ಮದಲ್ಲಿ ಫಲ ಕೊಡುತ್ತಿರುವದರಿಂದ, ಇದನ್ನು ಅನುಭವಿಸಲೇ ಬೇಕು. ಪ್ರಾರಬ್ಧಕರ್ಮವೆನ್ನುವುದು ಸಾಮಾನ್ಯವಾಗಿ ಕಷ್ಟದ ಪರಿಸ್ಥಿಯನ್ನೇ ಚಿತ್ರಿಸುತ್ತದೆ. ಕನ್ನಡಗಾದೆ "ಮಾಡಿದ್ದುಣ್ಣೋ ಮಹರಾಯ" ಮತ್ತು ಪುರಂದರದಾಸರ ವಾಣಿ “ನಾ ಮಾಡಿದ ಕರ್ಮ ಬಲವಂತವಾದರೆ, ನೀ ಮಾಡುವುದೇನೊ ದೇವ " ನೆನಪುಮಾಡಿಕೊಳ್ಳಬಹುದು. ಪ್ರಾರಬ್ಧಕರ್ಮ ಅಸಹಾಯಕ ಪರಿಸ್ಥಿತಿಯನ್ನು ಬಿಂಬಿಸುತ್ತದೆ. ಪ್ರಾರಬ್ಧಕರ್ಮ ಸುಖ, ಸಂತೋಷ ಕೊಡಲೂ ಬಹುದು. (೩) ಕ್ರಿಯಮಾಣಕರ್ಮ- ಇದು ಈ ಜನ್ಮದಲ್ಲಿ ಪ್ರಸ್ತುತ ಮಾಡುತ್ತಿರುವ ಕ್ರಿಯೆಗಳು. ಇದನ್ನು ಧಾರ್ಮಿಕದೃಷ್ಟಿಯಿಂದ, ಯಾವ ಪ್ರತಿಫಲಾಪೇಕ್ಷೆಯಿಲ್ಲದೆ, ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಮಾಡುವ ಸ್ವಾತಂತ್ರವಿರುತ್ತದೆ. ಕೆಲವರು ಒಳ್ಳೆಯ ಕಾರ್ಯಗಳನ್ನು ಕೀರ್ತಿಗಾಗಿ ಅಥವಾ ಯಾವುದೋ ಫಲ ಅಪೇಕ್ಷಿಸಿ ಮಾಡಬಹುದು. ಈ ಕರ್ಮ ಕೇವಲ ವಿಧಿಯಾಟವಲ್ಲ, ಇಂದಿನ ಪುರುಷಪ್ರಯತ್ನದ ಮಹತ್ವವನ್ನು ಸೂಚಿಸುತ್ತದೆ. (೪) ಅಗಾಮಿ ಕರ್ಮ- ಮುಂದಿನ ಜನ್ಮಗಳಲ್ಲಿ ಕ್ರಿಯಮಾಣ ಕರ್ಮ ಫಲ ನೀಡುವಾಗ ಆಗಾಮಿಕರ್ಮವಾಗುತ್ತದೆ. ಜ್ಞಾನಪ್ರಾಪ್ತಿಯಾದರೆ, ಪ್ರಾರಬ್ಧಕರ್ಮ ಬಿಟ್ಟು ಉಳಿದೆಲ್ಲಾ ಕರ್ಮಗಳು ಜ್ಞಾನಾಗ್ನಿಯಲ್ಲಿ ಸುಟ್ಟು ಬೂದಿಯಾಗುತ್ತದೆಯೆಂದು ಗೀತಾಚಾರ್ಯನೇ ತಿಳಿಸುತ್ತಾನೆ.
ಕರ್ಮವನ್ನು ಹೇಗೆ ಆಚರಿಸಬೇಕು ? ನಾವು ಜೀವನದಲ್ಲಿ ಮಾಡುವ ಎಲ್ಲಾ ಕರ್ಮಗಳು ಪರಮಾತ್ಮಹರಿಯ ಆರಾಧನೆಯೆಂದು ಮಾಡಬೇಕು ಮತ್ತು ಅವನೇ ನಮ್ಮ ಕ್ರಿಯೆಗಳಿಗೆಲ್ಲಾ ಏಕಮಾತ್ರ ನಿರ್ದೇಶಕನು. "ನಾಹಂ ಕರ್ತಾ ಹರಿಃ ಕರ್ತಾ " , ನಾವು ಮಾಡುವ ಕ್ರಿಯೆ ಭಗವಂತನ ಕೆಲಸವೆಂದು, ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡಬೇಕು. ಕರ್ಮದಿಂದ ಉಂಟಾಗಬೇಕಾದ ಫಲವನ್ನು ಅನುಭವಿಸಬೇಡ ಎಂದು ಹೇಳಿಲ್ಲ, ಫಲವನ್ನು ಕೊಡುವುದೋ, ಬಿಡುವುದೋ ಅದನ್ನು ಭಗವಂತನಿಗೆ ಬಿಡಬೇಕು. ಪುರಂದರೋಪನಿಷತ್ತು "ಕೊಡುವ ಕರ್ತು ಬೇರೆ ಇರುತಿರೆ, ಬಿಡು ಬಿಡು ಚಿಂತೆಯನು " ಎಂದು ಉಪದೇಶಿಸುತ್ತದೆ. ಅನುಕೂಲವಾದರೆ, ಅವನ ಪ್ರಸಾದವಪ್ಪ, ಇಲ್ಲದಿದ್ದಲ್ಲಿ, ದೇವರ ಇಚ್ಚೆ ಎಂದಿರಬೇಕು. ಕರ್ಮಗಳಿಗೆ ಕಾರಣವಾದ ಈ ಶರೀರ, ಜೀವನ, ನನ್ನದಲ್ಲ, ಅವನದು, ಎಂದು ನನ್ನತನವ ತೊರೆದು ಕರ್ಮವನ್ನು ಆಚರಿಸಬೇಕು. “ತನು ನಿನ್ನದು ಜೀವನ ನಿನ್ನದು ಅನುದಿನದಲಿ ಬರುವ ಸುಖದುಃಖ ನಿನ್ನದಯ್ಯ” ಎಂಬ ಕನಕದಾಸರ ಕೃತಿ ಸ್ಮರಣೀಯ. ಹೀಗೆ ಮಾಡಿದ್ದಲ್ಲಿ, ಕರ್ಮವು ಭಗವಂತನಲ್ಲಿಗೆ ಕರೆದೊಯ್ಯುತ್ತದೆ .ಎಂಬುವುದು ಶ್ರೀಕೃಷ್ಣನ ಹಿತನುಡಿ. ಮಾರ್ಕಂಡೇಯಮಹರ್ಷಿಗಳು ಪಾಂಡವರಿಗೆ ಉಪದೇಶ ಮಾಡಿದ ಕೌಶಿಕ ಧರ್ಮವ್ಯಾಧನ ಕಥೆ ಜನಜನಿತವಾದದ್ದು. ಬಸವಣ್ಣನವರ " ಕಾಯಕವೇ ಕೈಲಾಸ " ಮಾತು ಎಷ್ಟು ಅರ್ಥಪೂರ್ಣ, ಈ ಭಾವಕ್ಕೆ ಅಭಾವವಿದ್ದಲ್ಲಿ, ಕಾಯಕವು ಲಾಸ್ (loss) ಆಗುವುದಿಲ್ಲವೇ ? ನಾವು ಮಾಡುವ ಕರ್ಮಗಳಿಗೆ ಆಧಾರ ನಮ್ಮ ಶಾಸ್ತ್ರಗಳು, ಋಷಿಮುನಿಗಳ, ಗುರುಹಿರಿಯರ ಆಪ್ತನುಡಿಗಳು. ಇದನ್ನು ತಿರಸ್ಕರಿಸಿ ನಡೆದರೆ, ನಾವೇ ಜವಾಬ್ದಾರರಾಗುತ್ತೇವೆ. ಈ ಸಂದರ್ಭದಲ್ಲಿ ಶ್ರೀರಂಗಸದ್ಗುರುಗಳ "ಜ್ಞಾನ-ಕರ್ಮ ಈ ಎರಡರ ಸಮ್ಮೇಳನದಿಂದ ಜೀವನ ನಡೆದ ಪಕ್ಷದಲ್ಲಿ ಜೀವನ ಸುವ್ಯವಸ್ಥಿತವಾಗಿರುತ್ತದೆ , "ಕರ್ಮವನ್ನು ಮರ್ಮವರಿತು ಆಚರಿಸೀಪ್ಪ", ಎಂಬ ವಾಣಿ ಎಂದೆಂದೂ ಸ್ಮರಣೀಯ. ಕರ್ಮವು ಧರ್ಮಕ್ಕಾಗಿ, ಫಲವು ಭಗವಂತನಿಗಾಗಿ ಎಂದು ಅರ್ಪಿತವಾದರೆ, ಕರ್ಮವು ಮೋಚಕ, ಇಲ್ಲದಿದ್ದಲ್ಲಿ ಪಾಪ ಅಥವಾ ಪುಣ್ಯ ಕರ್ಮವೂ ಬಂಧಕ. ಹದಿನೆಂಟು ದಿನದ ಮಹಾಭಾರತದ ಯುದ್ಧವೆಂಬ ಕರ್ಮವನ್ನೂ ಯಜ್ಞದಂತಾಗಿಸಿದ ಯೋಗೇಶ್ವರನಾದ ಶ್ರೀಕೃಷ್ಣನ ಕುಶಲತೆಯನ್ನು ಸ್ಮರಿಸಿ ನಾವು ಮಾಡುವ ಕರ್ಮವು ಜ್ಞಾನದಲ್ಲಿ ಪರಿಸಮಾಪ್ತಿ ಹೊಂದಲೆಂದು ಸರ್ವಕರ್ಮಸಮಾರಾಧ್ಯನಾದ ಭಗವಂತನಲ್ಲಿ ಪ್ರಾರ್ಥಿಸೋಣ .
ಸೂಚನೆ : 16/5/2026 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Monday, May 11, 2026
ಅಷ್ಟಾಕ್ಷರೀ 104 ನ ಶಕ್ಯಃ ಚಕ್ಷುಷಾ ದ್ರಷ್ಟುಂ (Astakshara 104)
ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಬರಿಗಣ್ಣಿನಿಂದ ನೋಡಲಾಗದು
ಜೀವನದಲ್ಲಿ ಏನನ್ನು ನಂಬಬಹುದು, ಏನನ್ನು ನಂಬಬಾರದು? - ಎನ್ನುವುದೇ ದೊಡ್ಡ ಪ್ರಶ್ನೆಯಾಗಿಬಿಡುತ್ತದೆ.
ಯಾರಾದರೂ ಬೇರೆಯವರ ಬಗ್ಗೆ ಏನನ್ನಾದರೂ ಕೆಟ್ಟದ್ದನ್ನು ಹೇಳಿದರೆ, ನಂಬಲು ಮನಸ್ಸು ಬರದಿದ್ದರೂ, “ಬೆಂಕಿಯಿಲ್ಲದೆ ಹೊಗೆ ಬಂದೀತೇ?” - ಎಂಬ ಒಂದೇ ಲೆಕ್ಕವನ್ನು ಹಿಡಿದುಕೊಂಡು, "ಯಾರಿಗೆ ಗೊತ್ತು? ಇದ್ದರೂ ಇರಬಹುದು" ಎಂದುಬಿಡುತ್ತದೆ, ಲೋಕ.
ಹೀಗಾಗಿಯೇ ಅಲ್ಲವೇ, ಸೀತಾಮಾತೆಯ ವಿಷಯಕ್ಕೂ ಜನಗಳು ಸಲ್ಲದ ಮಾತುಗಳನ್ನಾಡಿದುದು? ಅಗ್ನಿಪರೀಕ್ಷೆಯೇ ನಡೆದು ಅದರಲ್ಲಿ ಅಗ್ನಿದೇವನೇ ಪ್ರತ್ಯಕ್ಷನಾಗಿ ಬಂದು, ಸೀತೆಯು ಪರಮಶುದ್ಧಳು ಎಂಬುದನ್ನು ಹೇಳಿದಮೇಲೂ ಅಪವಾದ ತಪ್ಪಿತೇ? ಸಂಶಯಪಡುವವರ ಮುಂದೆಲ್ಲಾ ಮತ್ತೆ ಮತ್ತೆ ಅಗ್ನಿಪರೀಕ್ಷೆಯಾಗುತ್ತಿರುವುದಾದರೂ ಶಕ್ಯವೇ?
ಅದಕ್ಕೇ, “ಕಂಡದ್ದನ್ನು ಮಾತ್ರವೇ ನಂಬತಕ್ಕದ್ದು, ಕೇಳಿದ್ದನ್ನೆಲ್ಲಾ ಅಲ್ಲ” - ಎನ್ನುವವರಿದ್ದಾರೆ. ಪ್ರತ್ಯಕ್ಷವೇ ಪ್ರಮಾಣ: ಸಾಕ್ಷಾತ್ತಾಗಿ ನೋಡಿದ್ದನ್ನಷ್ಟೇ ನಂಬಬಹುದು; ಕಣ್ಣಾರ ಕಂಡದ್ದನ್ನೊಪ್ಪಬಹುದು – ಎಂಬುದು ಅವರ ತರ್ಕ.
ಅಲ್ಲೂ ಕಷ್ಟವಿದೆ. ಕಂಡದ್ದೆಲ್ಲಾ ಸತ್ಯವೇ? “ಕಂಡದ್ದೆಲ್ಲಾ ಸತ್ಯವಾಗಿರಬೇಕಾಗಿಲ್ಲ” - ಎಂದು ಹೇಳಲು ಬಂದಿರುವುದೇ ವಿಜ್ಞಾನ! ಭೂಮಿಯು ಗೋಳಾಕಾರವಾಗಿದೆ - ಎಂಬುದನ್ನು ಕಂಡ ಮೇಲೇ ನಂಬುವುದು ಎನ್ನಲಾದೀತೇ? ಭೂಮಿಯು ತಿರುಗುತ್ತಿದೆ - ಎಂಬುದನ್ನು ಮೊದಲು ತೋರಿಸಿಕೊಡಿ, ಅಲ್ಲಿಯ ತನಕ ಒಪ್ಪೆ - ಎಂದರೆ, “ಹೋಗು ಬೆಪ್ಪೇ!” ಎನ್ನುತ್ತಾರೆ!
ಬದಲಾಗಿ, ಕಣ್ಣಿಗೆ ಕಂಡದ್ದು ಸುಳ್ಳಾಗುವುದೂ ಉಂಟು. ಸೂರ್ಯ-ಚಂದ್ರರೂ, ನಕ್ಷತ್ರಗಳೂ ಭೂಮಿಯ ಸುತ್ತ ತಿರುಗುವಂತೆ ತೋರುತ್ತದೆ. ಕಣ್ಣಾರ ಕಂಡಿದ್ದೇವೆ - ಎಂದುಕೊಂಡರೂ ಅದೇನು ತಥ್ಯವೇ? ಅಷ್ಟು ದೂರದ ವಿಷಯವೇಕೆ? ನೀರಿನಲ್ಲಿ ಕಡ್ಡಿಯನ್ನು ಅದ್ದಿದಾಗ ಕಡ್ಡಿಯು ಮುರಿದಿರುವಂತೆ ತೋರುತ್ತದೆ. ಬೆಂಕಿಯ ಕೊಳ್ಳಿಗೆ ಅಲಾತವೆನ್ನುತ್ತಾರೆ; ಅಲಾತವನ್ನು ವೇಗವಾಗಿ ಚಕ್ರಾಕಾರವಾಗಿ ತಿರುಗಿಸಿದರೆ, ಬೆಂಕಿಯೇ ವೃತ್ತಾಕಾರವಾಗಿರುವಂತೆ ತೋರುತ್ತದೆ! ಹಾಗೆಯೇ, ಮರಳುಗಾಡಿನಲ್ಲಿ ದೂರದಲ್ಲಿ ನೀರಿರುವಂತೆ ತೋರುತ್ತದೆ: ಮರೀಚಿಕೆಯಲ್ಲಿ ನೀರಿರುವುದುಂಟೇ?
ಹೀಗಾಗಿ ಕಂಡದ್ದು ಸತ್ಯವಲ್ಲ, ಸತ್ಯವು ಕಾಣಲಾಗದ್ದು – ಎಂದೆನಿಸಿಬಿಡುವುದೂ ಉಂಟು! ಎಂದೇ, “ಪ್ರತ್ಯಕ್ಷವನ್ನೂ ಪ್ರಮಾಣಿಸಿ ನೋಡು” ಎಂಬ ಗಾದೆಯನ್ನು ಶ್ರೀರಂಗಮಹಾಗುರುಗಳು ಆಗಾಗ್ಗೆ ಉಲ್ಲೇಖಿಸುತ್ತಿದ್ದರು. ಹೋಗಲಿ, ಇರುವುದನ್ನು ಇರುವಂತೆಯೇ ತೋರಿಸುವುದಲ್ಲವೇ, ಕನ್ನಡಿ? “ಚೆನ್ನಾಗಿ ದರ್ಶನ ಮಾಡಿಸುತ್ತದೆ” - ಎಂಬ ಕಾರಣಕ್ಕೇ ಅದನ್ನು ಆ-ದರ್ಶವೆನ್ನುವುದು, ಅಲ್ಲವೇ? ಆದರೆ ಅದಕ್ಕೂ, "ನೋಡಪ್ಪಾ, ನಾವು ಉಪವೀತವನ್ನು ಧರಿಸಿದ್ದರೆ ಕನ್ನಡಿಯು ಪ್ರಾಚೀನಾವೀತವೆಂಬಂತೆ ತೋರಿಸುತ್ತದೆ!” ಎಂದು ಅವರು ಆ ಬಗ್ಗೆ ತಮಾಷೆಯಾಗಿ ಎಚ್ಚರಿಸಿದ್ದಾರೆ! ಉಪವೀತವೆಂದರೆ ಜನಿವಾರವು ಎಡಭುಜದ ಮೇಲೆ ಬಂದಿರುವುದು; ಪ್ರಾಚೀನಾವೀತವೆಂದರೆ ಬಲಭುಜದ ಮೇಲೆ. ಮೊದಲನೆಯದು ದೇವಕಾರ್ಯಕ್ಕೆ; ಎರಡನೆಯದು ಪಿತೃಕಾರ್ಯಕ್ಕೆ!
ಒಂದು ಮನೆಯನ್ನು ನೋಡಿದರೆ ಅದರ ಅಡಿಪಾಯ ನಮಗೆ ತೋರದು. ಒಂದು ಮರವನ್ನು ನೋಡಿದಾಗ ಅದರ ವ್ಯಕ್ತ-ಭಾಗವಾದ ಕಾಂಡ-ಕೊಂಬೆ-ಎಲೆ-ಹಣ್ಣುಗಳೆಲ್ಲ ಕಂಡರೂ, ಅವ್ಯಕ್ತವಾದ ಅದರ ಬೇರು ಮಾತ್ರ, ಗುಪ್ತವಾಗಿ ಆಳವಾಗಿ ವ್ಯಾಪಿಸಿದ್ದರೂ ಗೋಚರವಾಗದು! ಆದರೆ ಅವ್ಯಕ್ತವಾದ ಆ ಬೇರೇ ವ್ಯಕ್ತವಾದ ವೃಕ್ಷಕ್ಕೆ ಧಾರಕವಾದದ್ದು!
ಹಾಗೆಯೇ ನಮ್ಮ ಜೀವನದ ಬೇರೂ. ನಮ್ಮ ಕೈ-ಕಾಲುಗಳು ಕೊಂಬೆಗಳ ಹಾಗೆ; ಇವನ್ನುಳಿದ ಶರೀರಭಾಗವು ಕಾಂಡದಂತೆ. ಜೀವನದ ಬೇರು ಅವ್ಯಕ್ತ. ಇಲ್ಲೂ ಅಷ್ಟೆ: ಅವ್ಯಕ್ತವಾದದ್ದೇ ಹೆಚ್ಚು ಮುಖ್ಯ. ಶರೀರವನ್ನೇ ಅಧ್ಯಯನ ಮಾಡುವ ಆಯುರ್ವೇದವು ಸಹ ಈ ಸತ್ಯವನ್ನು ಚೆನ್ನಾಗಿ ಮನಗಂಡಿದೆ. ಎಂದೇ, ಸುಶ್ರುತ-ಸಂಹಿತೆಯು ಹೇಳುವ ಮಾತು: “(ಬರಿ)ಕಣ್ಣಿನಿಂದ ಕಾಣಲಾಗದು (ನ ಶಕ್ಯಃ ಚಕ್ಷುಷಾ ದ್ರಷ್ಟುಂ), ಸೂಕ್ಷ್ಮತಮನೆನಿಸುವ ಆ ವಿಭುವನ್ನು”, ಎಂದರೆ ಪರಮಾತ್ಮನನ್ನು - ಎಂದು.
ವಿಜ್ಞಾನವು ತೋರಿಸುವ ಬ್ಯಾಕ್ಟೀರಿಯಾಗಳ ವಿಷಯವೂ ಹಾಗೆಯೇ ಅಲ್ಲವೇ? ಬರಿಗಣ್ಣಿನಿಂದ ಒಂದು ದೊಡ್ಡ ಮಡುವಿನಲ್ಲೂ ಒಂದೇಒಂದನ್ನು ಸಹ ಕಾಣೆವು; ಆದರೆ ಬರೀ ಬೊಗಸೆನೀರಿನಲ್ಲಿ ಅವು ಲಕ್ಷಗಟ್ಟಲೆ ಇರುವುದು ಮೈಕ್ರೋಸ್ಕೋಪಿನ ಮೂಲಕ ಗೋಚರವಾಗುತ್ತದೆ! ಹೊರಗಣ್ಣಿಗೆ ಕಾಣದ ಮೈಯೊಳಗಣ ಮೂಳೆಗಳನ್ನು ಎಕ್ಸ್-ರೇ-ಗಳು ನಿಚ್ಚಳವಾಗಿಸುವ ಉದಾಹರಣೆಯನ್ನೂ ಸಹ ಶ್ರೀರಂಗಮಹಾಗುರುಗಳೇ ಇತ್ತಿರುವರು. ಕೇವಲಭೌತಿಕವಸ್ತುಗಳಲ್ಲೇ ಇಷ್ಟೆಲ್ಲ!
ಹಾಗಾದರೆ ಪರಮಾತ್ಮನಿರುವುದು ಯಾರಿಗಾದರೂ ಕಂಡೀತೇ? - ಎಂದು ಕೇಳಿದರೆ, ಅದೇ ಸುಶ್ರುತ-ಸಂಹಿತೆಯ ಉತ್ತರವಿಂತಿದೆ: ಜ್ಞಾನ-ಚಕ್ಷುಸ್ಸು, ತಪಶ್ಚಕ್ಷುಸ್ಸುಗಳನ್ನುಳ್ಳವರಿಗೆ ಅದು ಗೋಚರವಾಗುವುದು - ಎಂದು. ಚಕ್ಷುಸ್ಸೆಂದರೆ ಕಣ್ಣು. ಅರ್ಜುನನಿಗೆ ಕೃಷ್ಣನಾದರೂ ಹೇಳಿದ್ದೇನು? ದಿವ್ಯ -ಚಕ್ಷುಸ್ಸನ್ನು ನಿನಗೆ ಕೊಡುತ್ತೇನೆ, ಇಲ್ಲವೋ ನೋಡಲಾರೆ – ಎಂದು. ಇದು ತಪಸ್ಸಿನಿಂದ ಸಂಪಾದ್ಯ. ತಪಸ್ಸು ಒಳಗಣ್ಣನ್ನು ತೆರೆಸುತ್ತದೆ.
ಇದರ ಸತ್ಯತೆಯನ್ನು ಸ್ವಾನುಭವದಿಂದಲೇ ಕಂಡುದಲ್ಲದೆ, ತಮ್ಮ ಹಲವು ಶಿಷ್ಯರಿಗೂ ಅನುಭವ-ವೇದ್ಯವನ್ನಾಗಿಸಿದ್ದರು, ಶ್ರೀರಂಗಮಹಾಗುರುಗಳು.
ಸೂಚನೆ: 26/4//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.ವ್ಯಾಸ ವೀಕ್ಷಿತ 187 ಅಪ್ಪನಿಗೆ ಉತ್ತರಕ್ರಿಯೆ - ಮಗನಿಗೆ ಪಟ್ಟಾಭಿಷೇಕ (Vyaasa Vikshita187)
ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಕೃಷ್ಣನ ಕೃಪೆಯಿಂದಾಗಿ ಸೆರೆಯಿಂದ ಬಿಡುಗಡೆಹೊಂದಿದ ಅರಸರು ತಮ್ಮ ಕೃತಜ್ಞತೆಯ ನುಡಿಯನ್ನು ಹೀಗೆ ಮುಗಿಸಿದರು:
“ನಮ್ಮಿಷ್ಟು ಮಂದಿಗೆ ನೀ ದಯಪಾಲಿಸಿದ ಈ ಸ್ವಾತಂತ್ರ್ಯದಿಂದಾಗಿ, ದೀಪ್ತವಾದ ಯಶಸ್ಸು - ಎಂದರೆ ಬೆಳಗುವ ಕೀರ್ತಿಯು - ನಿನಗೆ ಲಬ್ಧವಾಯಿತು, ಓ ಯದುನಂದನನೇ! ಕೃತಜ್ಞರಾದ ನಮಗೆ ನಿನ್ನ ಅಪ್ಪಣೆಯಾಗಬಹುದು: ಅದೆಂತಹ ಕಷ್ಟವಾದ ಕಾರ್ಯವೇ ಆದರೂ ರಾಜರುಗಳಾದ ನಾವು ನೆರವೇರಿಸಿಕೊಡುವೆವು."
ಅವರು ಹೀಗೆ ಹೇಳಲಾಗಿ, ಮಹಾಮನಸ್ಕನಾದ ಕೃಷ್ಣನು, ಅವರಿಗೆ ಆಶ್ವಾಸನೆ ಕೊಡುತ್ತಾ ಹೀಗೆ ಹೇಳಿದನು:
"ರಾಜರೇ, ಯುಧಿಷ್ಠಿರನು ರಾಜಸೂಯ-ಯಜ್ಞವನ್ನು ಮಾಡಲು ಇಷ್ಟಪಟ್ಟಿದ್ದಾನೆ. ಆತನ ಪ್ರವೃತ್ತಿಯು ಧರ್ಮಮಯವಾದುದು. ಆತನು ಸಮ್ರಾಟ್ - ಎಂಬ ಪದವಿಯನ್ನು ಸಂಪಾದಿಸಿಕೊಳ್ಳಲು ಬಯಸಿದ್ದಾನೆ. ಇದನ್ನರಿತು ನೀವೆಲ್ಲರೂ ಆತನಿಗೆ ಸಾಹಾಯ್ಯವನ್ನು ಮಾಡಿರಿ".
ಆಗ ಆ ರಾಜರೆಲ್ಲರೂ ತುಂಬ ಸಂತೋಷಗೊಂಡರು. ಆತನ ಮಾತನ್ನೊಪ್ಪಿ, "ಹಾಗೆಯೇ ಆಗಲಿ" ಎಂದು ಒಪ್ಪಿಗೆ ಸೂಚಿಸಿದರು. ಅನೇಕ ರತ್ನಗಳನ್ನು ಕೃಷ್ಣನಿಗೆ ಸಲ್ಲಿಸಿದರು. ಅವರ ಮೇಲಿನ ಕರುಣೆಯಿಂದ, ಮತ್ತು ಅವರ ಒತ್ತಾಯಕ್ಕೆ ಮಣಿದು, ಕೃಷ್ಣನು ಅವನ್ನು ಸ್ವೀಕರಿಸಿದನು.
ಆ ಬಳಿಕ ಜರಾಸಂಧ-ಪುತ್ರನಾದ ಸಹದೇವನು, ತನ್ನ ಪುರೋಹಿತನನ್ನು ಮುಂದಿಟ್ಟುಕೊಂಡು, ಮಂತ್ರಿಗಳೊಂದಿಗೆ ನಗರದಾಚೆಗೆ ಹೊರಟನು. ವಾಸುದೇವನಲ್ಲಿಗೆ ಬಂದು ಅತ್ಯಂತ-ನಮ್ರತೆಯಿಂದ ನಮಸ್ಕರಿಸಿದನು. ಮತ್ತು ಹೇಳಿದನು: "ನರಶ್ರೇಷ್ಠನೇ, ನನ್ನ ತಂದೆ ಮಾಡಿದುದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳಬೇಡ. ನಾನು ನಿನಗೆ ಶರಣನಾಗಿದ್ದೇನೆ. ನನ್ನ ವಿಷಯದಲ್ಲಿ ಪ್ರಸನ್ನನಾಗು. ನನ್ನ ತಂದೆಯ ಸಂಸ್ಕಾರವನ್ನು ನಾನು ಮಾಡಲಿಚ್ಛಿಸುತ್ತೇನೆ. ಅದಕ್ಕಾಗಿ ನಿನ್ನಿಂದಲೂ ಭೀಮಾರ್ಜುನರಿಂದಲೂ ಅನುಮತಿಯನ್ನು ಯಾಚಿಸುತ್ತೇನೆ. ಮುಂದೆ ನಾನು ಯಥೇಚ್ಛವಾಗಿ ಹಾಗೂ ಸುಖವಾಗಿ ಓಡಾಡಿಕೊಂಡಿರಲು ನಿಮ್ಮಿಂದ ಅಭಯವನ್ನು ಯಾಚಿಸುತ್ತಿದ್ದೇನೆ."
ಸಹದೇವನ ಈ ಮಾತುಗಳಿಂದ ಕೃಷ್ಣನೂ ಭೀಮಾರ್ಜುನರೂ ಸಂತೋಷಗೊಂಡರು. ನಿನ್ನ ತಂದೆಗೆ ಸಂಸ್ಕಾರವನ್ನು ನೀ ಮಾಡಪ್ಪಾ - ಎಂದರು. ಆತನೂ ಅಂತೆಯೇ ಒಡನೆಯೇ ನಗರವನ್ನು ಪ್ರವೇಶಿಸಿದನು. ಮಂತ್ರಿಗಳೊಂದಿಗೆ ಸೇರಿ ಚಿತೆಯನ್ನೇರ್ಪಡಿಸಿದನು.
ಚಿತೆಗಾಗಿ ಚಂದನದ ಕಟ್ಟಿಗೆಗಳು, ದೇವದಾರು, ಕಾಲಾಗರು(ಎಂದರೆ ಕಪ್ಪುಬಣ್ಣದ ಅಗರು)ವೆಂಬ ಸುಗಂಧ, ಬಗೆಬಗೆಯ ತೈಲಗಳು, ತುಪ್ಪದ ಧಾರೆ, ಇವುಗಳನ್ನು ಬಳಸಲಾಯಿತು.
ಆಮೇಲೆ ಉರಿಯುತ್ತಿದ್ದ ಆ ಜರಾಸಂಧನ ಕಾಯದ ಸುತ್ತಲೂ ಅಕ್ಷತೆಯ ಕಾಳುಗಳು ಹಾಗೂ ಹೂಗಳ ಮಳೆಯನ್ನೇ ಕರೆಯಲಾಯಿತು.
ಬಳಿಕ, ಸಹದೇವನು ತನ್ನ ತಮ್ಮಂದಿರೊಂದಿಗೆ ಜಲಾಂಜಲಿಯನ್ನಿತ್ತನು. ಹೀಗೆ ತಂದೆಗೆ ಸ್ವರ್ಗ-ಗತಿಗಾಗಿ ಮಾಡಬೇಕಾದುದನ್ನು ಮಾಡಿ, ಮತ್ತೆ ಶ್ರೀಕೃಷ್ಣನೂ ಭೀಮಾರ್ಜುನರೂ ಇರುವೆಡೆಗೆ ಬಂದನು. ಹಾಗೂ ಕೈಜೋಡಿಸಿ ನಮ್ರತೆಯಿಂದ ಕೃಷ್ಣನಲ್ಲಿ ಹೀಗೆ ವಿಜ್ಞಾಪನೆ ಮಾಡಿಕೊಂಡನು:
"ಇದೋ ಭೂರಿಯಾದ ರತ್ನಗಳು ಇವು. ಇದೋ ಗೋವುಗಳು, ಆಡು-ಮೇಕೆಗಳು, ಮಹಿಷಗಳು, ಆನೆಗಳು ಹಾಗೂ ಕುದುರೆಗಳು, ಹಾಗೂ ಬಗೆಬಗೆಯ ವಸ್ತ್ರಗಳು. ಇವೆಲ್ಲವನ್ನೂ ಧರ್ಮರಾಜನಿಗೆ ಕೊಡೋಣವಾಗಲಿ. ಅಥವಾ ನಿನಗೆ ಬೇರೆ ಬಗೆಯು ತೋರಿದರೆ ಹಾಗೂ ಮಾಡಬಹುದು" ಎಂದನು.
ಹೆದರಿಕೆಯಿಂದ ತತ್ತ್ತರಿಸಿದ್ದ ಆತನಿಗೆ ಕೃಷ್ಣನು ಅಭಯವನ್ನಿತ್ತನು. ಆ ಮಹಾರ್ಹವಾದ, ಎಂದರೆ ಬಹುಬೆಲೆಬಾಳುವ, ರತ್ನಗಳನ್ನು ಸ್ವೀಕರಿಸಿದನು. ಹಾಗೂ ಅಲ್ಲಿಯೇ ಸಹದೇವನ ಪಟ್ಟಾಭಿಷೇಕವನ್ನೂ ನೆರವೇರಿಸಿದನು. ಭೀಮಾರ್ಜುನರು ಆತನನ್ನು ಸತ್ಕರಿಸಿದರು. ಸಂತೃಪ್ತನಾದ ಜಾರಾಸಂಧಿಯು, ಎಂದರೆ ಜರಾಸಂಧ-ಪುತ್ರನು, ತನ್ನ ತಂದೆಯ ನಗರವನ್ನು ಮಹಾತ್ಮರೊಂದಿಗೆ ಪ್ರವೇಶಿಸಿದನು.
ಸೂಚನೆ : 9/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಪ್ರಶ್ನೋತ್ತರ ರತ್ನಮಾಲಿಕೆ 65 (Prasnottara Ratnamalike 65)
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೫. ವಿಪತ್ತು ಯಾರನ್ನು ತಟ್ಟುವುದಿಲ್ಲ?
ಜಿತೇಂದ್ರಿಯನನ್ನು ಮತ್ತು ಜ್ಞಾನ ಮತ್ತು ವಯಸ್ಸಿನಿಂದ ಕೂಡಿದ ವೃದ್ಧರ ಮಾತನ್ನು ಕೇಳುವವನನ್ನು.
ವಿಪತ್ತು, ಆಪತ್ತು, ತೊಂದರೆ, ತಾಪತ್ರಯ, ವಿಘ್ನ ಇವುಗಳೆಲ್ಲವೂ ಪರ್ಯಾಯಪದಗಳು. ಇವು ಬರಲು ಏನು ಕಾರಣ? ಮತ್ತುಇವು ಬರದಿರಲು ಏನು ಕಾರಣ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ.
ಒಬ್ಬ ಜಿತೇಂದ್ರಿಯನಾದವನು ಮತ್ತು ಯಾರಲ್ಲಿ ಜ್ಞಾನವಿದೆಯೋ ಮತ್ತು ವಯಸ್ಸಿನಿಂದಲೂ ಶ್ರೇಷ್ಠನಾಗಿದ್ದಾನೋ ಅಂತವರಿಗೆ ಗೌರವವನ್ನು ಕೊಡುವವನು ವಿಪತ್ತಿಗೆ ಒಳಗಾಗುವುದಿಲ್ಲ ಎಂಬುದಾಗಿ ಇಲ್ಲಿ ಹೇಳಲಾಗಿದೆ. ಇವು ಆಪತ್ತನ್ನು ದೂರ ಮಾಡುತ್ತವೆ ಎಂಬುದಾಗಿ ಅರ್ಥ. ಅತ್ಯಂತ ಸುಲಭವಾದ ಉತ್ತರ. ಒಂದು ಮಾತು ಹೀಗಿದೆ -” ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬುದಾಗಿ. ಇದು ಇಂದ್ರಿಯ ಜಯವನ್ನು ಸಾರುವ ಗಾದೆಮಾತಾಗಿದೆ. ಊಟವನ್ನು ಹೇಗೆ ಮಾಡಬೇಕು? ಯಾವಾಗ ಮಾಡಬೇಕು? ಯಾವುದನ್ನು ಮಾಡಬೇಕು? ಎಂಬುದರ ಬಗ್ಗೆ ಇರುವ ಪರಿಜ್ಞಾನ. ಇದು ಊಟವನ್ನು ಉಚಿತವಾಗಿಯೂ ಉತ್ಕೃಷ್ಟವಾಗಿಯೂ ಮಾಡುವ ಬಗೆಗೆ ಇರುವ ಜ್ಞಾನ. ಅಂದರೆ ಆಯುರ್ವೇದ ಊಟದ ಬಗ್ಗೆ ಹೀಗೆ ಹೇಳುತ್ತದೆ - ‘ಹಸಿದಾಗ ಊಟ ಮಾಡು, ದಿನಕ್ಕೆ ಎರಡು ಹೊತ್ತು ಊಟ ಮಾಡು’ ಎಂದು. ಆದರೆ ನಾವಿಂದು ನಮ್ಮ ಇಂದ್ರಿಯ ಚಾಪಲ್ಯದಿಂದ ಅಕಾಲದಲ್ಲಿ ಅಮಿತವಾಗಿ ಊಟವನ್ನು ಮಾಡುತ್ತಿದ್ದೇವೆ. ಅಂದರೆ ನಮ್ಮ ಇಂದ್ರಿಯ ಚಾಪಲ್ಯ ಮಿತಿಮೀರಿದೆ ಎಂಬುದು ಇದರ ತಾತ್ಪರ್ಯ. ಇದರಿಂದಾಗಿ ನಮಗಿಂದು ರೋಗಬಾಹುಲ್ಯ ಉಂಟಾಗಿದೆ.
ಮಾತನಾಡುವಾಗ ಹೇಗೆ ಮಾತನಾಡಬೇಕು? ಎಷ್ಟು ಮಾತನಾಡಬೇಕು? ಯಾವುದನ್ನು ಮಾತನಾಡಬೇಕು? ಯಾವ ಶಬ್ದವನ್ನು ಉಪಯೋಗಿಸಿ ಮಾತನಾಡಿದರೆ ಅದು ಎಷ್ಟು ಉಚಿತವಾಗುತ್ತದೆ? ಎಂಬಿತ್ಯಾದಿ ವಿಷಯವನ್ನು ಅರಿಯುವುದೇ ಮಾತಿನ ಬಗೆಗೆ ಇರುವ ಜಯ ಎಂಬುದಾಗಿ ಭಾವಿಸಬೇಕು. ಹಾಗೆ ಮಾತನಾಡುವವನಿಗೆ ಜಗಳ ಅಸಾಧ್ಯ. ಹಾಗಾಗಿ ಇಲ್ಲಿ ಒಂದು ಕರ್ಮೇಂದ್ರಿಯದ, ಇನ್ನೊಂದು ಜ್ಞಾನೇಂದ್ರಿಯದ ಪರಿಮಿತಿಯನ್ನು ಮತ್ತು ಅದರ ಸಾಧಕತೆಯನ್ನು ವಿವರಿಸಲಾಗಿದೆ. ಹೀಗಿದ್ದಾಗ ಅವನಿಗೆ ರೋಗ ಬರುವುದೆಂತು? ಹೀಗಿದ್ದಾಗ ಅವನಿಗೆ ಜಗಳವಾಗುವುದೆಂತು? ಜಗಳಕ್ಕೂ ರೋಗಕ್ಕೂ ಅವಕಾಶವೇ ಇಲ್ಲವಾದಂತಾಗುತ್ತದೆ. ಇದು ಆಪತ್ತಿನ ನಿವಾರಣೆ ಅಲ್ಲವೇ?
ಇನ್ನೊಂದು ಅತಿ ಮುಖ್ಯವಾದ ವಿಷಯ - ಜ್ಞಾನವೃದ್ಧರಿಗೂ ಮತ್ತು ವಯೋವೃದ್ಧರಿಗೂ ಕೊಡುವಂತಹ ಗೌರವ ಮತ್ತು ಅವರು ಹೇಳುವುದನ್ನು ಕೇಳುವಂಥದ್ದು. ಇದೂ ಕೂಡ ನಮ್ಮ ಆರೋಗ್ಯಕ್ಕೆ ಅನುಕೂಲಕರ ಎಂಬುದಾಗಿ ತಿಳಿಯಬೇಕು. ಎಲ್ಲವನ್ನೂ ನಾವೇ ಮಾಡಿ ತಿಳಿಯಲು ಅಸಾಧ್ಯ. ಹಾಗಾಗಿ ಮಾಡಿ ತಿಳಿದವರಿಂದ ಒಂದಷ್ಟನ್ನು ತಿಳಿಯಬಹುದು. ಅಥವಾ ಓದಿ ಕಲಿತವರಿಂದ ನಾವು ತಿಳಿದರೆ ಅಷ್ಟು ಸಾಧನದ ಸಮಯ ನಮಗೆ ಉಳಿದಂತಾಗುತ್ತದೆ. ಮತ್ತು ಅವರಿಗೆ ಗೌರವವನ್ನು ಸಲ್ಲಿಸಿದಂತಾಗುತ್ತದೆ. ಅಷ್ಟೇ ಅಲ್ಲ ಅದರಿಂದ ನಮಗೆ ಅತ್ಯುಪಯೋಗವೂ ಆದಂತಾಗುತ್ತದೆ. ಹಾಗಾಗಿ ಹಿರಿಯರ ಮಾತನ್ನು ಕೇಳುವುದು ಅತ್ಯಂತ ಸೌಜನ್ಯದ ಸಂಕೇತ ಎಂಬುದಾಗಿ ಎಲ್ಲ ಕಡೆ ಸಾರಲಾಗಿದೆ. ಆಯುಷ್ಯ, ವಿದ್ಯೆ, ಯಶಸ್ಸು ಮತ್ತು ಬಲ ಈ ನಾಲ್ಕೂ ಕೂಡ ವೃದ್ಧರನ್ನು ಗೌರವಿಸುವುದರಿಂದ ಬರುತ್ತದೆ ಎಂಬುದಾಗಿ ಒಂದು ಸುಭಾಷಿತವೂ ಕೂಡ ಸಾರುತ್ತದೆ. ಈ ಬಗೆಯ ವ್ಯಕ್ತಿಗೆ ಯಾವ ಬಗೆಯ ತೊಂದರೆ, ತಾಪತ್ರಯ, ವಿಘ್ನಗಳೂ ಇರುವುದಿಲ್ಲ.
ಸೂಚನೆ : 9/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ