Sunday, April 30, 2023

ಯಕ್ಷ ಪ್ರಶ್ನೆ 36 (Yaksha prashne 36)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 35 ಮರಣಕಾಲದಲ್ಲಿ ಮಿತ್ರನಾರು ?

ಉತ್ತರ - ಧರ್ಮ

ಸಾಯುವ ಕಾಲಕ್ಕೆ ಯಾರು ಸಹಾಯ ಮಾಡುವರೋ ಅವರು ತಾನೆ ಬಂಧು! ಅವನು ತಾನೆ ಮಿತ್ರ! ಇತ್ಯಾದಿಯಾಗಿ ಲೋಕದಲ್ಲಿ ಮಾತುಗಳಿವೆ. ಸಾಯುವಕಾಲಕ್ಕೆ ಬೇಕಾಗುತ್ತದೆ ಅಂತ ಹಣವನ್ನು ಸಂಗ್ರಹ ಮಾಡಿಡುತ್ತೇವೆ. ಕೆಲವರು ನಾಲ್ಕು ಜನರನ್ನಾದರೂ ಗಳಿಸಿಟ್ಟುಕೊಳ್ಳಬೇಕು, ಚಟ್ಟವನ್ನಾದರೂ ಹೊರಲು ಸಹಾಯವಾದೀತು ಎಂದು ಯೋಚಿಸುವವರು ಇಲ್ಲದಿಲ್ಲ. ಹಾಗಾದರೆ ಇವರಾರಾದರೂ ಮರಣಕಾಲಕ್ಕೆ ಸನ್ನಿಹಿತರಾಗುವರೇ? ಎಂದರೆ ಕಷ್ಟ. ಸತ್ಯವಾಗಿಯೂ ಹೇಳುವುದಾದರೆ ಧರ್ಮವೊಂದೇ ನಮ್ಮ ಮರಣಕಾಲಕ್ಕೆ ನಮ್ಮ ಜೊತೆ ಇದ್ದು ಸಹಕಾರವನ್ನು ನೀಡಬಲ್ಲದು. ಅದು ಹೇಗೆ?

ಪ್ರತಿಯೊಬ್ಬ ಜೀವಿಗೂ ಹುಟ್ಟಿದ ಮೇಲೆ ಮರಣವು ಖಚಿತ. ಆದರೆ ಆ ಮರಣವನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂಬುದಕ್ಕೆ ನಮಗೆ ಅನೇಕ ಪುರಾಣಕಥೆಗಳು ಲಭ್ಯವಿವೆ. ಪ್ರತಿಯೊಂದು ಅನುಭವವೂ ನಾವು ಮಾಡಿದ ಹಿಂದಿನ ಕರ್ಮಾಧಾರಿತವೇ ಆಗಿರುತ್ತದೆ. ಅದಕ್ಕೂ ಹೊರತಾದುದನ್ನು ನಾವೆಂದೂ ನಿರೀಕ್ಷಿಸಲು ಸಾಧ್ಯವಿಲ್ಲ. ಸತ್ಕರ್ಮವನ್ನು ಮಾಡಿದರೆ ಅದು ಸತ್ಫಲವನ್ನು ನೀಡುತ್ತದೆ. ಕುಕರ್ಮವನ್ನು ಮಾಡಿದರೆ ಕುಫಲವನ್ನು ನೀಡುತ್ತದೆ. ಕರ್ಮವು ಎಂದು ವ್ಯರ್ಥವಾಗುವುದಿಲ್ಲ. ವಿರುದ್ಧವಾದ ಫಲವನ್ನೂ ನೀಡುವುದಿಲ್ಲ. ಈ ನೇರದಲ್ಲೇ ನಮ್ಮಲ್ಲಿ ಒಂದು ಮಾತು ಜನಜನಿತವಾಗಿದೆ. 'ಅನಾಯಾಸೇನ ಮರಣಂ' ಎಂದು. ಅನಾಯಾಸವೆಂದರೆ ಮಾಡಬೇಕಾದ ಕಾರ್ಯವನ್ನು ಬಹಳ ನಾಜೂಕಾಗಿ ಮಾಡುವುದರ ಮೂಲಕ ಶಾರೀರಕವಾಗಲಿ, ಮಾನಸಿಕವಾಗಲಿ ಮೀತಿ ಮೀರಿದ ಬಳಲಿಕೆ ಆಗದ ರೀತಿಯಲ್ಲಿ ಸಮಾಪ್ತಿಗೊಳಿಸುವುದು. ಮರಣಕಾಲದಲ್ಲಿ ಯಾವುದೇ ಬಗೆಯ ಪರದಾಟವಾಗಲಿ, ನರಳಾಟವಾಗಲಿ ಆಗದೇ ಸುಖವಾಗಿ ಸಾವು ಬರುವಂತಾಗಬೇಕು ಎಂದು ಪ್ರತಿಯೊಬ್ಬರೂ ಬಯಸುವುದುಂಟು. ಬಯಕೆ ಏನೂ ನಿಜ. ಆದರೆ ನಮ್ಮಲ್ಲಿ ಅಂತಹ ಸಾವು ಬರುವ ರೀತಿಯಲ್ಲಿ ನಾವು ಹೇಗೆ ಜೀವನವನ್ನು ಮಾಡಬೇಕೆಂಬ ಬಗ್ಗೆ ಅರಿವಿಲ್ಲ. ಈ ಅರಿವನ್ನು ಮೂಡಿಸಲು ಯಕ್ಷನು ಈ ಬಗೆಯ ಪ್ರಶ್ನೆಯನ್ನು ಧರ್ಮರಾಜನಿಗೆ ಮಾಡುತ್ತಾನೆ. 

ಧರ್ಮದಿಂದ ಮಾತ್ರವೇ ಅಂತಹ ಅನಾಯಾಸವಾದ, ನರಳಾಟವಿಲ್ಲದ ಸಾವು ಬರಲು ಸಾಧ್ಯ. ಅಂದ ಹಾಗೆ ಧರ್ಮವು ಮಾತ್ರ ಆತನ ಸಾವಿನ ಸಮಯದಲ್ಲಿ ಜೊತೆಯಾಗಿ ನಿಲ್ಲುತ್ತದೆ. ಅದು ಮಾತ್ರವೇ ಸಾವಿನ ಅನಂತರ ಮುಂದೇನು? ಎಂಬುದನ್ನೂ ತೀರ್ಮಾನಿಸುತ್ತದೆ. ಹಾಗಾಗಿ ನಮ್ಮಲ್ಲಿ 'ಧರ್ಮಮಯವಾದ ಬಾಳಾಟ ಮಾಡು' ಎಂಬ ಮಾತು ಬಂದಿದೆ. ಸತ್ಕರ್ಮದ ಫಲವೇ ಧರ್ಮ. ಹೇಗೆ ಬೀಜವನ್ನು ಬಿತ್ತಿ ಕಾಲಕಾಲಕ್ಕೆ ಅದರ ಬೆಳವಣಿಗೆಗೆ ಬೇಕಾದ ಎಲ್ಲ ಕಾರ್ಯವನ್ನು ಸೂಕ್ತವಾಗಿ ಮಾಡಿದಾಗ ಸುಫಲವೆಂಬುದು ನಿರೀಕ್ಷಿತವೋ, ಅಂತೆಯೇ ಈ ಬಾಳೆಂಬ ಬೀಜಕ್ಕೆ ಸಕಾಲದ ಸತ್ಕರ್ಮವು ಧರ್ಮವನ್ನು ಜಾಗೃತಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾವಿನ ಮುಂದಿನ ಗತಿ ಯಾವುದೆಂದರೆ ಮತ್ತೆ ಹುಟ್ಟಿಲ್ಲದಿರುವುದು. ಅಂದರೆ ಅದೇ ಮುಕ್ತಿ. ಮುಕ್ತನಾಗಬೇಕಾದರೆ ಕರ್ಮಬಂಧನದಿಂದ ವಿಮುಕ್ತನಾಗಬೇಕು. 'ಮುಕ್ತಸಂಗಃ ಸಮಾಚರ' ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವಂತೆ ಕರ್ಮವನ್ನು ಮಾಡುವಾಗ ಫಲದ ಮೇಲೆ ಅಪೇಕ್ಷೆಯನ್ನು ತೋರದೆ ಕರ್ತವ್ಯಬುದ್ಧಿಯಿಂದ ಮಾತ್ರವೇ ಕರ್ಮವನ್ನು ಮಾಡುತ್ತಾ ಸಾಗುವುದು. ಅದು ಧರ್ಮಸಂಪಾದನೆಯ ದಾರಿ. ಅದುವೇ ನಾಜೂಕಾದ ಕರ್ಮ. ಆಗ ತಾನೇ ಅನಾಯಾಸವಾದ ಮರಣ ಸಂಭವಿಸಲು ಸಾಧ್ಯ. ಆದ್ದರಿಂದ ಧರ್ಮಜನ ಉತ್ತರ ಮರಣಕಾಲಕ್ಕೆ ಧರ್ಮವೇ ಮಿತ್ರ ಎಂಬುದು.

ಸೂಚನೆ : 30/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 36 ಪ್ರಾಣದಾನವಿತ್ತುದಕ್ಕೆ ಗಂಧರ್ವನ ಪ್ರತಿದಾನ (Vyaasa Vikshita - 36 Pranadanavittudakke Gandharvana Pratidana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ರಥವನ್ನು ಕಳೆದುಕೊಂಡು ತತ್ತರಿಸಿಹೋಗಿದ್ದ, ಆ ಗಂಧರ್ವನು ಕಂಗಾಲಾಗಿ ಕೆಳಮುಖವಾಗಿ ಬಿದ್ದನು! ಆತನು ಬೀಳುತ್ತಿರುವಷ್ಟರಲ್ಲೇ ಧನಂಜಯನು (=ಅರ್ಜುನನು) ಹೋಗಿ, ಹೂಮಾಲೆಗಳ ಅಲಂಕಾರಗಳಿದ್ದ ಆತನ ಜುಟ್ಟನ್ನು ಹಿಡಿದುಕೊಂಡನು. ತನ್ನ ಅಸ್ತ್ರಪ್ರಹಾರದಿಂದಾಗಿ ಪ್ರಜ್ಞಾಶೂನ್ಯನಾಗಿದ್ದ ಆತನನ್ನು ತನ್ನ ಸೋದರರ ಬಳಿಗೆ ದರದರನೆ ಎಳೆದುಕೊಂಡುಹೋದನು. ಆಗ ಆ ಗಂಧರ್ವನ ಪತ್ನಿಯಾದ ಕುಂಭೀನಸಿಯು ಯುಧಿಷ್ಠಿರನಿಗೆ ಶರಣಾದಳು. ಪತಿಪ್ರಾಣವನ್ನು ಉಳಿಸಿಕೊಳ್ಳಲು ಕೇಳಿಕೊಂಡಳು: ಮಹಾತ್ಮನೇ, ನನ್ನ ಕಾಪಾಡು, ನನ್ನೀ ಪತಿಯನ್ನು ಬಿಟ್ಟುಬಿಡು. ಪ್ರಭುವೇ, ನಾನು ಈ ಗಂಧರ್ವನ ಪತ್ನಿ, ನಿನ್ನನ್ನು ಮೊರೆಹೊಕ್ಕಿದ್ದೇನೆ" ಎಂದಳು.

ಅದಕ್ಕೆ ಯುಧಿಷ್ಠಿರನು ಹೇಳಿದನು: "ಶತ್ರುಸಂಹಾರಕ ಅರ್ಜುನ, ಯುದ್ಧದಲ್ಲಿ ಸೋತವನನ್ನೂ ಕೀರ್ತಿರಹಿತನನ್ನೂ, ನಾರಿಯಿಂದ ಕಾಪಾಡಲ್ಪಡಬೇಕಾದವನನ್ನೂ, ಪರಾಕ್ರಮರಹಿತನನ್ನೂ ಯಾರು ತಾನೆ ಕೊಂದಾರು? ಆದ್ದರಿಂದ ಈತನನ್ನು ಬಿಟ್ಟುಬಿಡು" ಎಂದನು. ಅದಕ್ಕೆ ಅರ್ಜುನನು, "ಬದುಕಿಕೋ ಗಂಧರ್ವ, ಹೋಗು. ದುಃಖಿಸಬೇಡ. ಕುರುರಾಜನಾದ ಯುಧಿಷ್ಠಿರನು ನಿನಗೆ ಅಭಯವನ್ನು ಅಪ್ಪಣೆಕೊಡಿಸಿದ್ದಾನೆ" ಎಂದನು.

ಆಗ ಗಂಧರ್ವನು ಹೇಳಿದನು: "ನಾನೀಗ ಸೋತಿದ್ದೇನೆ; ಎಂದೇ ಅಂಗಾರಪರ್ಣ ಎಂಬ ಹಿಂದಿನ ಹೆಸರನ್ನು ತೊರೆಯುತ್ತೇನೆ. ಇನ್ನು ಮುಂದೆ ನಾನು ನನ್ನ ಬಲದ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ; ಹಾಗೂ ಜನಸಮೂಹದಲ್ಲಿ ನನ್ನ ಆ ಹೆಸರನ್ನೂ ಹೇಳಿಕೊಳ್ಳುವುದಿಲ್ಲ. ಇದೋ ನನಗೊಂದು ಒಳ್ಳೆಯ ಲಾಭವೇ ಆಯಿತು. ಏಕೆಂದರೆ ಈ ಅರ್ಜುನನು ದಿವ್ಯಾಸ್ತ್ರಧಾರಿ. ಈತನಿಗೆ ಗಾಂಧರ್ವೀಮಾಯೆಯನ್ನು ಉಪದೇಶಿಸಲು ಇಚ್ಛಿಸುತ್ತೇನೆ. ನನ್ನ ರಥ ಉತ್ತಮವಾದದ್ದು. ವಿಚಿತ್ರವಾದದ್ದು; ಅಂತಹದು ಈತನ ಅಸ್ತ್ರದ ಅಗ್ನಿಯಿಂದ ಸುಟ್ಟುಹೋಗಿದೆ. ಹೀಗಾಗಿ ನಾನು "ಚಿತ್ರರಥ"ನೆನಿಸಿಕೊಂಡಿದ್ದವನು ಈಗ "ದಗ್ಧರಥ" (ಸುಟ್ಟುಹೋದ ರಥದವ)ನಾಗಿಬಿಟ್ಟಿದ್ದೇನೆ! ನಾನು ಹಿಂದೆ ತಪಸ್ಸಿನಿಂದ ಸಂಪಾದಿಸಿದ ವಿದ್ಯೆಯಿದು. ನನಗೆ ಪ್ರಾಣದಾನವನ್ನು ಮಾಡಿರುವ ಮಹಾತ್ಮನಿಗೆ (ಎಂದರೆ ಅರ್ಜುನನಿಗೆ) ಆ ವಿದ್ಯೆಯನ್ನು ಕೊಡುವೆ.

ತನ್ನ ಬಲದಿಂದ ಶತ್ರುವನ್ನು ಸ್ತಂಭನಗೊಳಿಸಿದ ಮೇಲೆ, ಸೋತು ಶರಣಾದ ರಿಪುವಿಗೆ ಯಾವನು ಪ್ರಾಣದಾನಮಾಡುತ್ತಾನೋ ಆತನು ಯಾವ ಕಲ್ಯಾಣಕ್ಕೆ (ಮಂಗಳಕ್ಕೆ) ಅನರ್ಹನಾದಾನು? ಎಲ್ಲ ಒಳ್ಳೆಯದಕ್ಕೂ ಆತನು ಅರ್ಹನೇ ಸರಿ. ಇದೋ "ಚಾಕ್ಷುಷೀ" ಎಂಬ ವಿದ್ಯೆಯಿದು. ಇದನ್ನು ಮನುವು ಸೋಮನಿಗಿತ್ತನು; ಅದನ್ನಾತನು ವಿಶ್ವಾವಸುವಿಗಿತ್ತನು; ವಿಶ್ವಾವಸುವು ನನಗಿತ್ತನು. ಗುರುವೇ ಕೊಟ್ಟಿದ್ದರೂ ಹೇಡಿಯ ಕೈ ಸೇರಿದರೆ ಈ ವಿದ್ಯೆಯು ನಷ್ಟವಾಗಿಬಿಡುವುದು! ಇದು ನನಗೆ ಬಂದುದು ಹೇಗೆಂಬುದನ್ನು ಹೇಳಿದೆನಲ್ಲವೆ? ಅದರ ಶಕ್ತಿಯೆಂತಹುದೆಂಬುದನ್ನು ಹೇಳುವೆ, ಕೇಳು.

ಮೂರು ಲೋಕಗಳಲ್ಲಿ ಯಾವುದನ್ನಾದರೂ ನೋಡಲು ಬಯಸಿದಲ್ಲಿ ಈ ವಿದ್ಯೆಯಿಂದಾಗಿ ಅದನ್ನು ಕಾಣಬಹುದು -  ಅದನ್ನು ಹೇಗೆ ನೋಡಲು ಬಯಸುವನೋ ಹಾಗೆ (ಎಂದರೆ ಸ್ಥೂಲವಾಗಿಯಾದರೂ/ಸೂಕ್ಷ್ಮವಾಗಿಯಾದರೂ.) ಈ ವಿದ್ಯೆಯನ್ನು ಪಡೆಯುವುದೂ ಸುಲಭವೇನಲ್ಲ: ಆರು ತಿಂಗಳು ಒಂಟಿಕಾಲಿನ ಮೇಲೆ ನಿಂತು ತಪಸ್ಸು ಮಾಡಬೇಕಾಗುತ್ತದೆ. ನೀನು ಈ ಯಾವ ತಪಸ್ಸನ್ನು ಮಾಡದಿದ್ದರೂ ನಾನಿದನ್ನು ನಿನಗೆ ಸ್ವತಃ ಉಪದೇಶಿಸುವೆ. ಈ ವಿದ್ಯೆಯಿಂದಾಗಿಯೇ ಓ ರಾಜನೇ, ಮನುಷ್ಯರಿಗಿಂತಲೂ ನಾವು (ಎಂದರೆ ಗಂಧರ್ವರು) ಶ್ರೇಷ್ಠರಾಗಿರುವೆವು. ಹಾಗೂ ದೇವತೆಗಳಿಗೆ ಸರಿಸಮವೆನಿಸುವ ಪ್ರಭಾವವನ್ನು ತೋರಿಸಬಲ್ಲೆವು.

ಸೂಚನೆ : 30/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 24, 2023

ವ್ಯಾಸ ವೀಕ್ಷಿತ - 35 ಗಂಧರ್ವನ ಮೇಲೆ ಅರ್ಜುನನ ಅಸ್ತ್ರ-ಪ್ರಯೋಗ (Vyaasa Vikshita - 35 Gandharvana Mele Arjunana Astra-prayoga)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಗಂಧರ್ವನ ಮೂದಲಿಕೆಯ ಮಾತುಗಳಿಂದ ಅರ್ಜುನನು ಕೆರಳಿದನು. ಮತ್ತು ಹೇಳಿದನು:


ಸಮುದ್ರ, ಹಿಮಾಲಯ, ಈ ಗಂಗಾನದಿ - ಇವುಗಳ ಮೇಲೆ, ರಾತ್ರಿಯಾಗಲಿ ಹಗಲಾಗಲಿ ಸಂಧ್ಯಾಕಾಲದಲ್ಲಾಗಲಿ, ಯಾರ ಅಧಿಕಾರ ಸುರಕ್ಷಿತವಾಗಿದೆ? ನದಿಗಳಲ್ಲಿ ಶ್ರೇಷ್ಠವೆನಿಸಿದ ಈ ಗಂಗೆಗೆ ಬರಲು ಕಾಲನಿಯಮವಿರದು; ಉಂಡವನೋ ಹಸಿದವನೋ, ರಾತ್ರಿಯೋ ಹಗಲೋ, ಯಾವಾಗಲಾದರೂ ಬರಬಹುದು. ನಾವು ಶಕ್ತಿಸಂಪನ್ನರು. ಅಕಾಲದಲ್ಲಿಯೇ ನಿನ್ನನ್ನು ಕೆಣಕುತ್ತಿದ್ದೇವೆಂದುಕೋ. ಕ್ರೂರನೇ! ನಿಮ್ಮೊಂದಿಗೆ ಯುದ್ಧ ಮಾಡಲು ಅಶಕ್ತರಾದ ಮಾನವರಷ್ಟೇ ನಿಮ್ಮನ್ನು ಅರ್ಚಿಸುವುದು!


ಅಷ್ಟೇ ಅಲ್ಲ. ಈ ಗಂಗೆಯೇನು ಸಾಮಾನ್ಯಳೇ?: ಈಕೆಯು ಹುಟ್ಟಿದುದು ಹಿಮಾಲಯದ ಹೇಮಶೃಂಗದಿಂದ (ಎಂದರೆ ಚಿನ್ನದ ಶಿಖರದಿಂದ). ಸಮುದ್ರವನ್ನು ಸೇರುವ ಗಂಗೆಯು ಏಳಾಗಿ ವಿಭಾಗವಾದಳು - ಗಂಗೆ, ಯಮುನೆ, ಪ್ಲಕ್ಷಜೆ (=ಸರಸ್ವತೀ), ರಥಸ್ಥಾ, ಸರಯೂ, ಗೋಮತೀ, ಮತ್ತು ಗಂಡಕೀ - ಎಂಬುದಾಗಿ. ಈ ಏಳು ನದಿಗಳ ಜಲವನ್ನು ಪಾನಮಾಡಿದವರಿಗೆ ಪಾಪವೆಂಬುದುಳಿಯದು. ಶುದ್ಧಳಾದ ಈ ಗಂಗೆಯು ಆಕಾಶದಲ್ಲಿ ಪ್ರವಹಿಸುತ್ತಾ "ಅಲಕನಂದಾ" ಎಂಬ ಹೆಸರನ್ನು ಪಡೆಯುತ್ತಾಳೆ; ಹಾಗೆಯೇ ಪಿತೃಲೋಕದಲ್ಲಿ "ವೈತರಣೀ" ಎಂಬ ಹೆಸರನ್ನು ಹೊಂದುತ್ತಾಳೆ. ಪಾಪಕರ್ಮಗಳುಳ್ಳವರಿಗೆ ದುಸ್ತರವಾದ (ಎಂದರೆ ದಾಟಲು ಅಸಾಧ್ಯವಾದ) ನದಿಯಿದು; ಕಲ್ಯಾಣಮಯವಾದ ದೇವನದಿಯಿದು; ಶುಭವಾದದ್ದು. ಎಂದೇ ಸ್ವರ್ಗವನ್ನೂ ಸಂಪಾದಿಸಿಕೊಡತಕ್ಕದ್ದು. ಅಂತಹ ನದಿಯನ್ನು ಪ್ರತಿಬಂಧಿಸಲು ನೀನು ಅದೆಂತು ಇಚ್ಛಿಸುವೆ? ಹೀಗೆ ಮಾಡುವುದು ಸನಾತನವಾದ ಧರ್ಮವಲ್ಲ. ಯಾರಿಂದಲೂ ನಿರ್ಬಂಧಪಡಿಸಲು ಸಾಧ್ಯವಾಗದಂತಹುದು ಈ ಪುಣ್ಯಗಂಗಾಜಲವೆಂಬುದು. ನೀನು ಹೇಳಿಬಿಟ್ಟೆಯೆಂಬಷ್ಟೇ ಕಾರಣಕ್ಕೆ ನಾವು ಮುಟ್ಟದಿರುವುದೆಂತು? ಯಥೇಷ್ಟವಾಗಿ ಮುಟ್ಟುವೆವು - ಎಂದನು.


ಅದನ್ನು ಕೇಳಿ ಕೋಪಗೊಂಡ  ಆ ಗಂಧರ್ವನಾದ ಅಂಗಾರಪರ್ಣನು ತನ್ನ ಬಿಲ್ಲನ್ನು ಬಗ್ಗಿಸಿದನು. ಚೂಪಾದವೂ ವಿಷಸರ್ಪಗಳಂತಿದ್ದವೂ ಆದ ಬಾಣಗಳನ್ನು ಅರ್ಜುನನ ಮೇಲೆ ಬಿಟ್ಟನು. ಅರ್ಜುನನು ತನ್ನ ಕೈಯಲ್ಲಿದ್ದ ಪಂಜನ್ನೇ ವರಸೆವರಸೆಯಾಗಿ ಬಿರುಸಿನಿಂದ ತಿರುಗಿಸುತ್ತಾ, ತನ್ನ ಉತ್ತರೀಯವನ್ನೂ ಆಡಿಸುತ್ತಾ ಆತನ ಎಲ್ಲಾ ಬಾಣಗಳನ್ನೂ ನಿವಾರಿಸಿಕೊಂಡನು. ಮತ್ತು ಹೇಳಿದನು:


"ಗಂಧರ್ವನೇ, ನಿನ್ನ ಬೆದರಿಕೆಯು ಅಸ್ತ್ರಜ್ಞರ ಮೇಲೆ ನಡೆಯದು. ಅಸ್ತ್ರಜ್ಞರ ಮೇಲೆ ಪ್ರಯೋಗಿಸಲ್ಪಟ್ಟರೆ ಅದು ನೊರೆಯ ಹಾಗೆ ಕರಗಿಹೋಗುತ್ತದೆ, ಅಷ್ಟೆ. ಗಂಧರ್ವರೆಲ್ಲರೂ ಮನುಷ್ಯರನ್ನು ಮೀರಿಸಿರುವವರು - ಎಂಬುದನ್ನು ನಾನು ಬಲ್ಲೆ. ಎಂದೇ ನಾನು ದಿವ್ಯಾಸ್ತ್ರದಿಂದ ನಿನ್ನೊಂದಿಗೆ ಹೋರಾಡುವೆ, ಮಾಯಾಯುದ್ಧದಿಂದಲ್ಲ. ಇದೋ ಈ ಆಗ್ನೇಯಾಸ್ತ್ರ: ಇದನ್ನು ಹಿಂದೆ ಬೃಹಸ್ಪತಿಯು ಭರದ್ವಾಜರಿಗೆ ಕೊಟ್ಟನು (ಬೃಹಸ್ಪತಿಯಂತೂ ಶತಕ್ರತುವಿಗೆ (ಅಂದರೆ ಇಂದ್ರನಿಗೆ) ಆಚಾರ್ಯನೆನಿಸಿದವನು). ಭರದ್ವಾಜರು ಅಗ್ನಿವೇಶರಿಗೂ, ಅವರು ನನ್ನ ಗುರುಗಳಾದ ದ್ರೋಣರಿಗೂ ಇದನ್ನು ಕೊಟ್ಟರು. ಬ್ರಾಹ್ಮಣರಲ್ಲಿ ಶ್ರೇಷ್ಠರೆನಿಸುವ ದ್ರೋಣರು ಇದನ್ನು ನನಗೆ ಚೆನ್ನಾಗಿಯೇ ಉಪದೇಶಿಸಿರುವರು" ಎಂದನು.


ಹೀಗೆಂಬುದಾಗಿ ಹೇಳಿ, ಕೋಪಗೊಂಡಿದ್ದ ಆ ಅರ್ಜುನನು ಚೆನ್ನಾಗಿ ಜ್ವಲಿಸುವ ಆಗ್ನೇಯಾಸ್ತ್ರವನ್ನು ಆ ಗಂಧರ್ವನ ಮೇಲೆ ಪ್ರಯೋಗಿಸಿದನು. ಆದಾದರೂ ಆ ಗಂಧರ್ವನ ರಥವನ್ನು ಸುಟ್ಟಿಹಾಕಿತು. ರಥವನ್ನು ಕಳೆದುಕೊಂಡು ತತ್ತರಿಸಿಹೋದನು, ಆ ಗಂಧರ್ವ. ಅರ್ಜುನನ ಅಸ್ತ್ರದ ತೇಜಸ್ಸಿನಿಂದಾಗಿ ಕಂಗಾಲಾಗಿ ಕೆಳಮುಖವಾಗಿ ಬಿದ್ದನು!


ಸೂಚನೆ : 23/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 35 (Yaksha prashne 35)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 34 ರೋಗಿಯಾದವನಿಗೆ ಮಿತ್ರನಾರು ?

ಉತ್ತರ - ವೈದ್ಯ

ಇಲ್ಲಿ ಯಕ್ಷನು ಕೇಳುವ ಪ್ರಶ್ನೆಯು ನಿಜವಾಗಿಯೂ ಅತ್ಯಂತ ಸರಳವಾದುದು. ಚಿಕ್ಕ ಮಕ್ಕಳನ್ನು ಕೇಳಿದರೂ ಈ ಪ್ರಶ್ನೆಗೆ ವೈದ್ಯ ಎಂಬ ಉತ್ತರವನ್ನೇ ಕೊಡುತ್ತಾರೆ. ರೋಗಿಯಾದವನಿಗೆ ವೈದ್ಯ ಮಿತ್ರನು ಹೌದು. ಆದರೆ ಆ ವೈದ್ಯನು ಎಂತವನಾಗಿರಬೇಕು ಎಂಬುದೂ ಅಷ್ಟೇ ಗಹನವಾದ ವಿಚಾರ. ಅಂತಹ ವೈದ್ಯನೇನಾದರೂ ಸಿಕ್ಕರೆ ಅವನು ಈ ಲೋಕದಲ್ಲಿ ಮಾತ್ರ ಅಲ್ಲ, ಮೂರು ಲೋಕದಲ್ಲೂ ಮಿತ್ರನಾಗಬಲ್ಲ. 

ರೋಗವನ್ನು ಹೇಳುವಾಗ ಸಾಮಾನ್ಯವಾಗಿ ಆಧಿ ಮತ್ತು ವ್ಯಾಧಿ ಎಂಬುದಾಗಿ ಎರಡಾಗಿ ಆಯುರ್ವೇದವು ಹೇಳುತ್ತದೆ. ಈ ಎರಡೂ ಬಗೆಯ ರೋಗವೂ ಈ ಮಾನವಜನ್ಮವು ಪ್ರಾಪ್ತವಾದ ಮೇಲೆ ಬರುವಂತದ್ದು. ಅಲ್ಲದೆ ಈ ಜನ್ಮವನ್ನೇ ಒಂದು ರೋಗ - ಭವರೋಗ ಎಂದು ಕರೆದಿದ್ದಾರೆ. ಲೋಕಕ್ಕೆ ಮತ್ತೆ ಮತ್ತೆ ಬರದಂತೆ ಮಾಡುವುದೂ ಒಂದು ವೈದ್ಯನ ವಿಶೇಷ ಪರಿಣತಿ ಎಂಬುದೂ ಇಲ್ಲಿನ ಪ್ರಶ್ನೆಯಲ್ಲಿರುವ ಗಹನಾವ ವಿಚಾರ ಎಂಬುದು ನನ್ನ ಭಾವನೆ. 

ವ್ಯಾಧಿ ಎಂದರೆ ಶರೀರಕ್ಕೆ ಬರುವ ರೋಗವಾದರೆ, ಆಧಿ ಎಂದರೆ ಮನಸ್ಸಿಗೆ ಬರುವ ರೋಗವಾಗಿದೆ. ಒಬ್ಬ ವ್ಯಕ್ತಿ ಸ್ವಸ್ಥನಾಗಿ ಬದುಕಬೇಕಾದರೆ ಈ ಎರಡು ಬಗೆಯ ರೋಗಕ್ಕೆ ಚಿಕೆತ್ಸೆ ಬೇಕಾಗುತ್ತದೆ. ಯಾರು ಸ್ವಸ್ಥ? ಎನ್ನುವಾಗ ಆಯುರ್ವೇದವು ಅವನ ಲಕ್ಷಣವನ್ನು ಈ ರೀತಿ ಹೇಳುತ್ತದೆ. "ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ । ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ" ಎಂದು. ವಾತ ಪಿತ್ತ ಕಫಗಳೆಂಬ ಮೂರುದೋಷಗಳು, ದೇಹದಲ್ಲಿ ಅಗ್ನಿಯ ಸಮತೋಲನತೆ,  ಸಪ್ತಧಾತುಗಳೂ ಈ ಶರೀರದಲ್ಲಿ ಒಂದು ಬಗೆಯ ಸಮಸಮಭಾವದಲ್ಲಿ ಇರುವುದು, ಶರೀರದಿಂದ ಹೊರಹೋಗುವ ಮೂರು ಬಗೆಯ ಮಲಗಳು, ಶಾಂತವಾದ ಉದ್ವಿಗ್ನಗೊಳ್ಳದ ಪಂಚೇಂದ್ರಿಯಗಳು ಮತ್ತು ಮನಸ್ಸು, ಮತ್ತು ಕೊನೆಯಲ್ಲಿ ಆತ್ಮದ ಪ್ರಸನ್ನತೆ ಇವು ಆರೋಗ್ಯವಂತನ ಲಕ್ಷಣ. ಇವುಗಳಲ್ಲಿ ಯಾವುದೊಂದು ಕೆಟ್ಟರೂ ಆತ ರೋಗಿಯಾಗುತ್ತಾನೆ. ಆ ರೋಗ ನಿವಾರಣೆಗೆ ಇವುಗಳನ್ನು ಬಲ್ಲ ತಜ್ಞವೈದ್ಯನಿದ್ದರೆ ಆ ರೋಗಿಯು ಮತ್ತೆ ಆ ಸ್ವಸ್ಥವಾದ ಸ್ಥಿತಿಗೆ ಹೋಗಲು ಸಾಧ್ಯ. ನಿಜವಾಗಿಯೂ ಆರೋಗ್ಯವೇ ಇರಬೇಕಾದ ಅವಸ್ಥೆ. ಅದನ್ನು ಕಾಪಾಡಿಕೊಂಡು ಹೋಗುವುದಕ್ಕೆ ವೈದ್ಯನ ಸಲಹೆ ಸಹಕಾರವಿದ್ದಾಗ ಮಾತ್ರ ಸಾಧ್ಯ.

ವೈದ್ಯನಾದವನ ಪಾತ್ರನಿರ್ವಹಣೆ ಇಲ್ಲಿ ಅತಿಮುಖ್ಯವಾದುದು. ಒಬ್ಬ ವ್ಯಕ್ತಿಯ ಪ್ರಾಣವನ್ನು ಪಣವಾಗಿಸಿ ಕಾರ್ಯವನ್ನು ನಿರ್ವಹಿಸಬೇಕಾದುದು ಆತನ ಕರ್ತವ್ಯ. ಮಾನವ ಜನ್ಮವು ದುರ್ಲಭವಾದು. ಇದರಿಂದ ಮಾತ್ರ ಈ ಭವರೋಗವನ್ನು ದಾಟಲು ಸಾಧ್ಯ. ಅದಕ್ಕೆ ನೀರೋಗ ದೃಢಕಾಯದ ಅವಶ್ಯಕತೆ ಇದೆ. ಧರ್ಮಸಾಧನೆಗೆ ಶರೀರವೇ ಅತಿಮುಖ್ಯಸಾಧವಷ್ಟೇ. ಹಾಗಾಗಿ ಅಂತಹ ದುರ್ಲಭವಾದ ಆ ಶರೀರವೆಂಬ ಸಂಪತ್ತನ್ನು ಅಂತೆಯೇ ರಕ್ಷಿಸಲು ವೈದ್ಯನ ಸಹಕಾರವಿದ್ದರೆ ಮಾತ್ರ ಸಾಧ್ಯವಾಗುವುದು. ಹಾಗಾದಾಗ ಮಾತ್ರವೇ ಆತ ಲೋಕದಲ್ಲಿ ಹೆಮ್ಮೆ ಪಡುವ ವೈದ್ಯನಾಗುತ್ತಾನೆ. ಇಂತಹ ವೈದ್ಯನೇ ರೋಗಿಯ ನಿಜವಾದ ಮಿತ್ರನಾಗಬಲ್ಲ.   

ಸೂಚನೆ : 23/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ​ - 33 ಅಯಂ ತು ಪರಮೋ ಧರ್ಮಃ (Astakshara Darshana 33 Ayam Tu Paramo Dharmaḥ)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೋಸ್ಕರ ನಾವು ಭಾಷೆಯನ್ನು ಬಳಸುತ್ತೇವಷ್ಟೆ. ಆದರೆ ಅದೆಷ್ಟೋ ವೇಳೆ ಸರಿಯಾದ ಪದವು ಹೊಳೆಯುವುದಿಲ್ಲ. ಅದಿರಲಿ, ಕೆಲವೊಮ್ಮೆ ಸರಿಯಾದ ಪದವೇ ಇರುವುದಿಲ್ಲ! ಭಾಷೆಯೆಂಬುದು ಸಂಸ್ಕೃತಿಬಿಂಬಕವೂ ಹೌದಾದ್ದರಿಂದ, ಒಂದು ದೇಶದ ಸಂಸ್ಕೃತಿಯಲ್ಲಿರುವ ಭಾವಗಳಿಗೆ ಮತ್ತೊಂದು ದೇಶದ ಭಾಷೆಯಲ್ಲಿ ಪದಗಳೇ ಇಲ್ಲದಿರುವುದು ಅಸಂಭವವೇನಲ್ಲ. (ಈ  ಬಗ್ಗೆ ೧೯-೨೦ನೇ ಶತಮಾನಗಳ ಎಡ್ವರ್ಡ್ ಸಪೀರ್(Edward Sapir), ಬೆಂಜಮಿನ್ ವೋರ್ಫ಼್(Benjamin Whorf) ಮುಂತಾದ ಭಾಷಾವಿಜ್ಞಾನಿಗಳು ಸಾಕಷ್ಟು ಬರೆದಿದ್ದಾರೆ.) ಹಾಗಾದಾಗ, ಅಪೇಕ್ಷಿತಭಾವಕ್ಕೆ ಸುಮಾರಾಗಿ ಹತ್ತಿರದ ಅರ್ಥವುಳ್ಳ ಇಲ್ಲಿಯ ಪದವೊಂದನ್ನು ಅದಕ್ಕಾಗಿ ಬಳಸಿಕೊಳ್ಳುವುದಾಗಿಬಿಡುತ್ತದೆ. ಕೆಲವೊಮ್ಮೆ, ಬರಬರುತ್ತಾ ಮೊದಲಿದ್ದ ಅರ್ಥವೇ ಮಾಸಿದಂತಾಗಿ, ಈ ಹೊಸ ಅರ್ಥವೇ ಆ ಪದಕ್ಕೆ ಬಂದೂರಿಬಿಡುವುದೂ ಉಂಟು!

ನಮಗೆ ಅತಿಮುಖ್ಯವೆನಿಸುವ ಪದವೊಂದಕ್ಕೆ ಈ ಗತಿ – ವಸ್ತುತಃ ದುರ್ಗತಿ – ಬಂದಿದೆ. ಇಂದಿನ ಬಹುಮಟ್ಟಿನ ಅವಾಂತರಗಳಿಗೆ ಕಾರಣವಾದ "ಧರ್ಮ" ಎಂಬುದೇ ಆ ಪದ! ಋಗ್ವೇದದ ಕಾಲದಿಂದಲೂ ಬಳಕೆಯಲ್ಲಿರುವ ಇದರ ಮೂಲಾರ್ಥವು ಮಾಯವಾಗಿ, 'ರಿಲಿಜನ್' ಎಂಬುದರ ಅರ್ಥವೇ ಅದಕ್ಕಿಂದು ಬಂದುಕೂತಿದೆ. ಎಂದರೆ, ಐದುಸಾವಿರ ವರ್ಷಗಳ ಕಾಲ ನೆಲೆಗೊಂಡಿದ್ದ ಅದರ ಅರ್ಥವಳಿದು, ಕಳೆದೊಂದೆರಡು ಶತಮಾನಗಳಲ್ಲಿ ಪರಿಚಿತವಾಗಿರುವ ವಿದೇಶೀಪದವೊಂದಕ್ಕದು ಸಮೀಕೃತವಾಗಿಬಿಟ್ಟಿದೆ! ಬೌದ್ಧ-ಜೈನ-ಸಿಕ್ಖ - ಇವೆಲ್ಲವೂ ಒಂದೇ ಹಿಂದೂಸಂಸ್ಕೃತಿಯ ನಾನಾಂಗಗಳು; ಇವೆಲ್ಲವೂ "ಧಾರ್ಮಿಕ ಸಂಸ್ಕೃತಿ"ಗಳೇ: ಅರ್ಥಾತ್, ಧರ್ಮವೇ ಇವುಗಳ ಜೀವಾಳ. ಆದರಿಂದು, ಇವೆಲ್ಲವನ್ನೂ ಕ್ರೈಸ್ತ-ಇಸ್ಲಾಮೀಯ-ಮತಗಳಂತೆಯೇ ಒಂದೆಂದು ಭಾವಿಸಿಬಿಡುವ ದುರ್ಘಟನೆಯು ಆಗಿಹೋಗಿದೆ! ಮೂಲದ ಸೊಗಡು ತೊಡೆದುಹೋಗಿದೆ! ಒಂದು ಭಾಷೆಯ ಅಥವಾ ಸಂಸ್ಕೃತಿಯ ವಿಷಯದಲ್ಲಿ ಇಂತಹ ವಿರೂಪವೆಂಬುದು ಒಂದು ಭಾರೀ ದುರಂತವೇ ಸರಿ.

ಧರ್ಮ-ಶಬ್ದದ ಸತ್ಯಾರ್ಥವಾದ ವ್ಯಾಖ್ಯೆಯನ್ನು ಶ್ರೀರಂಗಮಹಾಗುರುಗಳು ಬಹಳ ಸರಳವಾಗಿ ಮಂಡಿಸಿದ್ದರು. ಧರ್ಮವೆಂಬುದು ಮೂಲಸ್ವಭಾವ/ಶುದ್ಧಸ್ವರೂಪವನ್ನು ಹೇಳುವಂತಹುದು. ಉನ್ನತವಾದ ಮೂಲಸ್ಥಿತಿಯಿಂದ ಜಾರಿರುವ ನಾವು, ಮತ್ತೆ ಅದನ್ನು ಸಂಪಾದಿಸಿಕೊಳ್ಳಲು ಬೇಕಾದ ಕ್ರಿಯಾಸಮೂಹಕ್ಕೂ ಧರ್ಮವೆಂಬ ಹೆಸರೇ ಸಲ್ಲುತ್ತದೆ.  "ಧರ್ಮಂ ಚರ" ಎಂಬ ಉಪನಿಷದುಕ್ತಿಯು ನಮ್ಮ ಕರ್ತವ್ಯಗಳಾದ ಆ ಕ್ರಿಯೆಗಳತ್ತಲೇ ಬೊಟ್ಟುಮಾಡುತ್ತದೆ. ಜೀವನದ ಹಿರಿದಾದ ಗುರಿಯತ್ತ ನಮ್ಮನ್ನೊಯ್ಯುವ ಇಂತಹ ಕರ್ಮ/ಧರ್ಮಗಳು ಏಳೆಂದೂ, ಇವೇಳರಲ್ಲಿ ಒಂದಂತೂ ಪರಮವೆಂದೂ ಯಾಜ್ಞವಲ್ಕ್ಯಸ್ಮೃತಿಯು ಹೇಳುತ್ತದೆ. ಈ ಬಗ್ಗೆ ಸ್ಥೂಲವಾದೊಂದು ನೋಟವಿಲ್ಲಿದೆ.

ಇಜ್ಯೆಯೆಂಬುದು ಮೊದಲನೆಯದು. ಇಜ್ಯೆಯೆಂದರೆ ಯಾಗವೇ. ಯಜ್ಞಯಾಗಾದಿಗಳಿಂದಾಗಿ ಪುಣ್ಯಸಂಪಾದನೆಯಾಗುವುದೆಂಬುದನ್ನು ಕೇಳಿಯೇ ಇದ್ದೇವೆ. ನೂರು ಯಾಗಗಳನ್ನು ಮಾಡಿದುದರಿಂದಲೇ ಇಂದ್ರನು ಶತಕ್ರತುವೆನಿಸಿ ದೇವರಾಜನಾದನೆಂಬುದು ಪುರಾಣಪ್ರಸಿದ್ಧ. ಎರಡನೆಯದು ಆಚಾರ. ಯುಕ್ತವಾದ ಆಚಾರವು ದೇಹ-ಇಂದ್ರಿಯ-ಮನಸ್ಸು-ಬುದ್ಧಿಗಳ ಧರ್ಮಗಳನ್ನು ಕಾಪಾಡಬಲ್ಲುದು; ಇವೆಲ್ಲದರಿಂದಾಗಿಯೇ ಆತ್ಮಧರ್ಮವು ವಿಕಸಿಸುವುದೂ. ಮೂರನೆಯದು ದಮ: ಬಾಹ್ಯವೃತ್ತಿಗಳ ನಿಗ್ರಹ, ಇಂದ್ರಿಯಗಳ ಮೇಲಿನ ಹತೋಟಿ. ಅಹಿಂಸೆಯು ನಾಲ್ಕನೆಯದು: ಯಾರಿಗೂ ಹಿಂಸೆಯಾಗದಂತಿರುವುದು. ಭೋಗಗಳಲ್ಲೆಲ್ಲಾ ಹಿಂಸೆಯೆಂಬುದು ಸೇರಿಕೊಂಡೇ ಇ(ಬ)ರುವುದಾದ್ದರಿಂದ, ಅತಿಭೋಗಲಾಲಸೆಯನ್ನಿಟ್ಟುಕೊಳ್ಳದೆ, "ಇತರ ಜೀವಿಗಳಿಗೆ ನನ್ನಿಂದೆಲ್ಲಿ ಹಿಂಸೆಯಾದೀತೋ!" - ಎಂಬ ಎಚ್ಚರದೊಂದಿಗಿನ ವರ್ತನೆಯದು. ನಾನು ಗೌರವಿಸುವ ವ್ಯಕ್ತಿಯನ್ನೋ ದೇವನನ್ನೋ ಯಾರು ಆದರಿಸರೋ ಅವರನ್ನೆಲ್ಲಾ ಕಡಿ-ಕೊಲ್ಲು - ಎಂದು ಹೊರಡುವುದಂತೂ ಹಿಂಸೆಯ ಪರಮಾವಧಿಯೇ ಸರಿ. ಇನ್ನು ಐದನೆಯದು ದಾನ. ಅದಂತೂ ಬಹಳ ಹಿರಿದಾದುದು. ಅನ್ನದಾನವಾಗಲಿ ವಿದ್ಯಾದಾನವಾಗಲಿ, ದಾನವಿತ್ತವನಲ್ಲೇ ಒಂದು ಉದಾತ್ತತೆಯು ಮೂಡುತ್ತದೆ. ಆರನೆಯದು ಸ್ವಾಧ್ಯಾಯ: ತತ್ತ್ವದರ್ಶನಕ್ಕಾಗಿ ಸಲ್ಲುವ ವೇದಾಧ್ಯಯನವು ಅತ್ಯಂತಶ್ರೇಯಸ್ಕರವೇ. ಹೀಗೆ ಇವೆಲ್ಲವೂ ಧರ್ಮಗಳೇ. ಅರ್ಥಾತ್, ಮೂಲಸ್ಥಿತಿಯತ್ತ ಒಯ್ಯುವವೇ.

ಆದರೆ ಇವೆಲ್ಲಕ್ಕಿಂತಲೂ ಮಿಗಿಲಾದುದು ಏಳನೆಯದಾದುದು: ಆತ್ಮದರ್ಶನವೆಂಬ ಧರ್ಮವದು; ಅದನ್ನು ಯೋಗದಿಂದ ಸಾಧಿಸುವುದೆಂಬುದೇ ಪರಮಧರ್ಮ- ಎಂಬುದು ಯೋಗಿಯಾಜ್ಞವಲ್ಕ್ಯರ ಮಾತು. ಸ್ವಸ್ವರೂಪವನ್ನು ಅರಿತುಕೊಳ್ಳುವುದನ್ನೇ ಆತ್ಮಸಾಕ್ಷಾತ್ಕಾರ, ಪರಮಾತ್ಮಸಾಕ್ಷಾತ್ಕಾರ, ಸಮಾಧಿಸ್ಥಿತಿ ಎನ್ನುತ್ತಾರೆ. ಆತ್ಮಲಾಭಕ್ಕಿಂತಲೂ ಮಿಗಿಲಾದ ಲಾಭವಿಲ್ಲ - ಎಂದು ಆಪಸ್ತಂಬಮಹರ್ಷಿಗಳು ಹೇಳುತ್ತಾರೆ. ವಿದ್ಯೆಗಳಲ್ಲೆಲ್ಲ ಅಧ್ಯಾತ್ಮವಿದ್ಯೆಯೇ ಶ್ರೇಷ್ಠವೆಂದು ಗೀತೆಯೂ ಸಾರುವುದಲ್ಲವೇ?

ಯೋಗಿಪುಂಗವರಾದ ಶ್ರೀರಂಗಮಹಾಗುರುಗಳು ಯಾಜ್ಞವಲ್ಕ್ಯಸ್ಮೃತಿಯ ಈ ಮಾತನ್ನು ಒತ್ತಿ ಹೇಳುತ್ತಿದ್ದರು. ಯೋಗವಿದ್ಯೆಯ ಮರ್ಮವನ್ನು ಸ್ವತಃ ಅರಿತವರಾಗಿ, ಅನುಭವಕ್ಕದು ದಕ್ಕುವಂತೆ ಬೋಧಿಸುವವರಾಗಿದ್ದರು. ಯೋಗವೆಂಬುದೊಂದೇ ಜೀವನದ ಪರಮಲಕ್ಷ್ಯವನ್ನು ಮುಟ್ಟಿಸಬಲ್ಲುದು: ಪರಮಧರ್ಮವೆಂದರೆ ಅದುವೇ.

ಸೂಚನೆ: 24/04/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

Thursday, April 20, 2023

ಬಂಗಾರದ ಪ್ರಾಮುಖ್ಯ (Baṅgarada Pramukhya)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)



ರಾಮಾಯಣದ ಒಂದು ಪ್ರಸಂಗ.  ಶ್ರೀರಾಮಚಂದ್ರ ಪ್ರಭುವು ಲೋಕ ಕಲ್ಯಾಣಾರ್ಥವಾಗಿ ಅಶ್ವಮೇಧಯಾಗವನ್ನು ಮಾಡಬೇಕೆಂದು ಸಂಕಲ್ಪಿಸಿ ವಸಿಷ್ಠಾದಿಗಳೊಂದಿಗೆ ಚರ್ಚಿಸುತ್ತಾನೆ.  ಆಗ ಅಶ್ವಮೇಧಯಾಗವನ್ನು  ಪತ್ನೀ ಸಹಿತನಾಗಿ ಆಚರಿಸಬೇಕೆಂಬ ಶಾಸ್ತ್ರವಿಧಿ ತಿಳಿಯುತ್ತದೆ. ಆ ಸಮಯದಲ್ಲಿ ಸೀತಾಮಾತೆಯು ಭೌತಿಕವಾಗಿ ಅವನ ಬಳಿ ಇರುವುದಿಲ್ಲ;  ಶ್ರೀರಾಮನಿಂದ ಪರಿತ್ಯಕ್ತಳಾಗಿ ವಾಲ್ಮೀಕಿಗಳ ಆಶ್ರಮದಲ್ಲಿರುತ್ತಾಳೆ. ಅಶ್ವಮೇಧಯಾಗ ಮಾಡುವ ಬಗೆ ಹೇಗೆ ಎಂಬುದಾಗಿ ವಿಮರ್ಶಿಸಿದಾಗ ಬಂಗಾರದಿಂದ ಮಾಡಲ್ಪಟ್ಟ ಸೀತೆಯ ಪ್ರತಿಮೆಯೊಂದಿಗೆ ಯಾಗವನ್ನು ನೆರವೇರಿಸಬಹುದು ಎಂಬ ಶಾಸ್ತ್ರಪರಿಹಾರವು ಸೂಚಿಸಲ್ಪಡುತ್ತದೆ. ಇದು ಶ್ರೀರಾಮನ ಏಕಪತ್ನೀ ವ್ರತದ ಮಹತ್ವವನ್ನು ಒಂದೆಡೆ ತಿಳಿಸಿದರೆ ಇನ್ನೊಂದೆಡೆ ಬಂಗಾರದ ಮಹತ್ವವನ್ನೂ ತಿಳಿಸುತ್ತದೆ.  


 ಸುವರ್ಣ (ಬಂಗಾರ) ಎನ್ನುವುದು ಉತ್ಕೃಷ್ಟವಾದ ಲೋಹಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿರುವ ಅತ್ಯಮೂಲ್ಯವಾದ ಪದಾರ್ಥವಾಗಿದೆ.  ಇದಕ್ಕೆ ಕಾರಣಗಳು ಹಲವು. ಕಣ್ಮನ ಸೆಳೆಯುವ ಆಕರ್ಷಣೀಯವಾದ ಅದರ ಬಣ್ಣ, ಎಂದೆಂದಿಗೂ ಮಾಸದ ಅದರ ಹೊಳಪು, ಹಾಗೆಯೇ ಮೃದುವಾದ ಲೋಹವಾದ್ದರಿಂದ ವಿಧ ವಿಧವಾದ ವಿನ್ಯಾಸಗಳಿಂದ ಕೂಡಿದ ಆಭರಣಗಳ ತಯಾರಿಕೆಗೆ ಅನುಕೂಲಕರ- ಇವು ಮೇಲ್ನೋಟಕ್ಕೆ ತಿಳಿದು ಬರುವ ಅಂಶಗಳು.  ಸುವರ್ಣಕ್ಕೆ ಹಿರಣ್ಯ, ಕನಕ, ಕಾಂಚನ, ತಪನೀಯ ಇತ್ಯಾದಿ ಪರ್ಯಾಯ ಪದಗಳಿವೆ. 


ದೇವತಾರಾಧನೆಯಲ್ಲಿ ಬಂಗಾರವು ಪ್ರಮುಖ ಪಾತ್ರವನ್ನು ವಹಿಸುವುದನ್ನು ಕಾಣುತ್ತೇವೆ.  ದೇವಸ್ಥಾನಗಳಲ್ಲಿ ದೇವತಾ ಮೂರ್ತಿಗಳಿಗೆ ಸುವರ್ಣದ ಕವಚ ಕುಂಡಲಗಳನ್ನು ತೊಡಿಸಿ ಆನಂದ ಪಡುತ್ತೇವೆ.  ಅಂತೆಯೇ ಭಗವಂತನನ್ನು ಸುವರ್ಣ ವರ್ಣೋ ಹೇಮಾoಗಃ ಎಂಬುದಾಗಿ ಸ್ತುತಿಸಿರುವುದೂ ಉಂಟು. ಆಯುರ್ವೇದ ಶಾಸ್ತ್ರದಲ್ಲಿಯೂ ಕೂಡ ಅನೇಕ ಔಷಧ ದ್ರವ್ಯಗಳ ತಯಾರಿಕೆಯಲ್ಲಿ ನಿರ್ದಿಷ್ಟ ಪ್ರಮಾಣದ ಬಂಗಾರದ ಅಂಶವನ್ನು ಸೇರಿಸುವುದು ಕಂಡುಬರುವ ವಿಷಯವೇ ಆಗಿದೆ. ದಾನಗಳನ್ನು ನೀಡುವಾಗಲೂ ಕೂಡ ಸುವರ್ಣದಾನ ಅತ್ಯಂತ ಶ್ರೇಷ್ಠ ಎಂಬುದಾಗಿ ಹೇಳುತ್ತಾರೆ. ಮಂಗಳ ದ್ರವ್ಯಗಳಲ್ಲಿ ಸುವರ್ಣವು ಸ್ಥಾನವನ್ನು ಪಡೆದುಕೊಂಡಿದೆ. ನವರತ್ನಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.


 ಸಾಮಾನ್ಯ ದೃಷ್ಟಿಗೆ ಸುವರ್ಣದ ಭೌತಿಕ ಅಂಶಗಳು, ಅಂದರೆ ಆಭರಣ ತಯಾರಿಕೆಗೆ ಸಹಕಾರಿ, ಅತ್ಯಂತ ಬೆಲೆ ಬಾಳುವ ಪದಾರ್ಥ ಇತ್ಯಾದಿ ಗುಣಗಳು ಗೋಚರಿಸಲ್ಪಟ್ಟರೂ, ಋಷಿ ದೃಷ್ಟಿಗೆ ಅದರ ವ್ಯಾಪ್ತಿ ದೈವಿಕ, ಆಧ್ಯಾತ್ಮಿಕ ಎಂಬ ಇನ್ನೆರಡು ಕ್ಷೇತ್ರಗಳಿಗೂ ವಿಸ್ತರಿಸಲ್ಪಟ್ಟಿರುವುದು ಅವರ ಅನುಭವ ವೇದ್ಯವಾಗಿದೆ.  ಹಾಗಾಗಿಯೇ ಸುವರ್ಣವು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವನ್ನು ಅಲಂಕರಿಸಿದೆ.


 ಶ್ರೀರಂಗ ಮಹಾಗುರುಗಳು ಸುವರ್ಣದ ವಿಶೇಷತೆಯನ್ನೂ, ಅದರ ಧಾರಣೆಯಿಂದ ನಮ್ಮ ಶರೀರದ ಮೇಲೆ ಉಂಟಾಗುವ ಪ್ರಭಾವವನ್ನೂ ನಾಡೀಗತಿಯ ಮೂಲಕ ಪತ್ತೆಹಚ್ಚಿ ಮೂರೂ(ಭೌತಿಕ, ದೈವಿಕ, ಆಧ್ಯಾತ್ಮಿಕ) ಕ್ಷೇತ್ರಗಳ ಮೇಲೆ ಅದರಿಂದ ಉಂಟಾಗುವ ಪ್ರಯೋಜನಗಳನ್ನು ಪ್ರಯೋಗದ ಮೂಲಕ ತೋರಿಸಿ ಕೊಟ್ಟಿರುವುದು ಇಲ್ಲಿ ಸ್ಮರಣೀಯ ವಿಷಯವಾಗಿದೆ.


ಸುವರ್ಣದಲ್ಲಿ ಅನೇಕ ಪ್ರಭೇದಗಳಿವೆ. ಒಂದೊಂದು ಪ್ರಭೇದಕ್ಕೂ, ಒಂದೊಂದು ದೇವತೆಯನ್ನು ಪ್ರಸನ್ನಗೊಳಿಸುವ ಶಕ್ತಿ ಇದೆ. ಹೀಗೆ ದೇವತಾ ಪ್ರಸನ್ನತೆಗೆ ಸುವರ್ಣವು ಸಹಕಾರಿಯಾಗಿದೆ.


ಸುವರ್ಣದ ಆಧ್ಯಾತ್ಮಿಕ ಪ್ರಯೋಜನದ ಕಡೆ ಗಮನ ಹರಿಸುವುದಾದರೆ, ಯೋಗಸಾಧಕರಿಗೆ ಇದು ಅತ್ಯಂತ ಪೋಷಕವಾದ ಪದಾರ್ಥವಾಗಿದೆ.  "ಯೋಗಿಯು ಸಮಾಧಿಗೆ ಹೋಗುವಾಗ ಯಾವ ನಾಡೀಗತಿ ಆರಂಭವಾಗುತ್ತದೆಯೋ ಅಂತಹ ನಾಡೀಗತಿಯನ್ನು ಸುವರ್ಣವು ಉಂಟುಮಾಡುತ್ತದೆ. ಆದ್ದರಿಂದ, ಸಾಧಕರಿಗೆ ಪೋಷಕವಾದ ವಾತಾವರಣವನ್ನು ಇದು ಒದಗಿಸಿಕೊಡುತ್ತದೆ" ಎಂಬುದನ್ನು ಶ್ರೀರಂಗ ಮಹಾಗುರುಗಳು ತಿಳಿಯಪಡಿಸಿದ್ದರು. ಹಾಗಾಗಿ, ಬಂಗಾರವು ಭೌತಿಕ ಕ್ಷೇತ್ರದಿಂದ ಹಿಡಿದು ಆಧ್ಯಾತ್ಮಿಕ ಕ್ಷೇತ್ರದವರೆಗೂ ಮನುಷ್ಯನಿಗೆ ಪೋಷಕವಾದ ವಾತಾವರಣವನ್ನು ಕಲ್ಪಿಸುತ್ತದೆ ಎಂಬುದು ಅದರ ವಿಶಿಷ್ಟತೆಯೇ ಸರಿ.


ಭಗವಂತನಿಂದ ಸೃಷ್ಟಿಸಲ್ಪಟ್ಟ ಈ ಮಾನವ ಶರೀರವೆಂಬುದು ಯೋಗಾನುಭವವನ್ನು ಪಡೆಯುವುದಕ್ಕೂ, ಭೋಗಾನುಭವವನ್ನು ಪಡೆಯುವುದಕ್ಕೂ ಎಲ್ಲಾ ವಿಧವಾದ ಅನುಕೂಲಗಳಿಂದ ಕೂಡಿದೆ.  ಅಂತಹ ಯೋಗ ಭೋಗಮಯವಾದ ಜೀವನವನ್ನು ಹೊಂದಲು ಸುವರ್ಣಧಾರಣೆಯು ಅತ್ಯಂತ ಪೋಷಕವಾಗಿರುವುದು ಅದರ ಮಹತ್ವ.


ಇಂದ್ರಿಯಗಳನ್ನು ಹಿಮ್ಮುಖವಾಗಿ ತಿರುಗಿಸಿ ಅಂತರ್ಮಾರ್ಗದಲ್ಲಿ ಸಂಚರಿಸಿ ಯೋಗಾನುಭವವನ್ನು ಪಡೆಯುವ ನಿವೃತ್ತಿಮಾರ್ಗವನ್ನು, ಒಳ ಆನಂದವನ್ನು ಮನೋಬುದ್ಧಿಗಳಲ್ಲಿ ತುಂಬಿಕೊಂಡು ಆ ಆನಂದದಿಂದೊಡದಗೂಡಿ ಪ್ರವೃತ್ತಿ ಮಾರ್ಗದಲ್ಲಿ ಸಂಚರಿಸಿ ಬಾಹ್ಯ ಜೀವನವನ್ನು ನಡೆಸಲು, ಯೋಗ ಭೋಗಮಯವಾದ ಜೀವನವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸುವರ್ಣದ ಧಾರಣೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ದೃಷ್ಟಿಯಿಂದ ಮಹರ್ಷಿಗಳು ಅದಕ್ಕೆ ಶ್ರೇಷ್ಠವಾದ ಸ್ಥಾನವನ್ನು ಕೊಟ್ಟಿರುತ್ತಾರೆ.


 ಇಷ್ಟೆಲ್ಲಾ ವಿಶೇಷತೆಗಳನ್ನು ತನ್ನಲ್ಲಿಟ್ಟುಕೊಂಡಿರುವ ಬಂಗಾರವನ್ನು ಇತ್ತೀಚಿನ ದಿನಗಳಲ್ಲಿ ಧರಿಸಿ ಹೊರಗಡೆ ಓಡಾಡುವುದಕ್ಕೂ, ಮನೆಯಲ್ಲಿ  ಇಟ್ಟುಕೊಳ್ಳುವುದಕ್ಕೂ  ಕಳ್ಳ - ಕಾಕರ ದೆಸೆಯಿಂದ, ಭಯದ ವಾತಾವರಣವೇ ನಿರ್ಮಿತವಾಗಿದೆ.  ಸುವರ್ಣಕ್ಕೆ ಬದಲಾಗಿ ನಕಲಿ ಆಭರಣಗಳು ಎಲ್ಲೆಡೆ ವಿಜೃಂಭಿಸುತ್ತಿವೆ. ಆದರೆ ಚಿನ್ನಕ್ಕೆ ಚಿನ್ನವೇ ಸರಿಸಾಟಿ.  ಅದರ ಸ್ಥಾನವನ್ನು ಪೂರ್ಣವಾಗಿ ಬೇರೆ ಆಭರಣಗಳು ತುಂಬಲು ಸಾಧ್ಯವಿಲ್ಲ.  ಹಾಗಾಗಿ ಜಾಗರೂಕತೆಯಿಂದ, ಯಥಾಶಕ್ತಿ ಅದನ್ನು ಧರಿಸಿ ಅದರ ಉಪಯೋಗವನ್ನು ಪಡೆದುಕೊಳ್ಳಲು ಪ್ರಯತ್ನಿಸೋಣ.


ಸೂಚನೆ: 20/04/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.


Monday, April 17, 2023

ಸಜ್ಜನರು ಯಾರು ? (Sajjanaru Yaru?)


ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


"ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ' ಎಂಬ ಸರ್ವಜ್ಞ ಕವಿಯ ಸೂಕ್ತಿಯೊಂದನ್ನು ತಿಳಿಯ ಹೇಳಿ ಮಕ್ಕಳಿಗೆ ಸಜ್ಜನರ ಸಹವಾಸದಲ್ಲಿರುವಂತೆ ಉಪದೇಶ ಮಾಡುತ್ತೇವೆ. ಸತ್ಪುರುಷರನ್ನು ಪ್ರಶಂಸೆ ಮಾಡುವುದು ಮತ್ತು ತಮ್ಮ ಮಕ್ಕಳೂ ಸಜ್ಜನರಾಗಬೇಕೆಂದು ಅಪೇಕ್ಷಿಸುವುದು- ಇವುಗಳನ್ನು ನಮ್ಮ ದೇಶದಲ್ಲಿ ಎಲ್ಲಾ ವರ್ಗದ ಜನರಲ್ಲಿಯೂ ನಾವು ಕಾಣಬಹುದಾಗಿದೆ. ತಮ್ಮ ಮಕ್ಕಳು ದುರ್ಜನರಾಗಬೇಕೆಂದು ಯಾರೂ ಬಯಸುವುದಿಲ್ಲ. "ಅವರು ಸಜ್ಜನರು; ಯಾರ ತಂಟೆಗೂ ಹೋಗುವುದಿಲ್ಲ"-ಇತ್ಯಾದಿ ಮಾತುಗಳಿವೆ. ಆದರೆ ಇಲ್ಲಿ ಸಜ್ಜನರೆಂದರಾರು? ಸತ್ಪುರುಷರ ಲಕ್ಷಣವೇನು ? ಎಂಬುದಾಗಿ ಪ್ರಶ್ನೆ ಮಾಡಿದಲ್ಲಿ, ಯಾವ ಒಂದು ಸ್ಪಷ್ಟವಾದ ಮತ್ತು ನಿರ್ದಿಷ್ಟವಾದ ಉತ್ತರವನ್ನೂ ನಾವು ನಿರೀಕ್ಷಿಸಲು ಸಾಧ್ಯವಿಲ್ಲ.'ಸಜ್ಜನರು'-ಎಂದಾಗ ಒಳ್ಳೆಯವರು, ಹಸುವಿನಂತೆ ಸಾಧುವಾದ ಪ್ರಾಣಿ, ಬಹಳ ಮೃದು ಸ್ವಭಾವದವರು ಯಾರು ಏನೆಂದರೂ ಪ್ರತಿಯಾಗಿ ಮಾತನಾಡದೆ ಸಹಿಸಿಕೊಳ್ಳುವವರು,'ಕಪಟ-ಕುಹಕಗಳನ್ನು ಅರಿಯದವರು'-ಇತ್ಯಾದಿ ಮಾತುಗಳಿವೆ.

ಆದರೆ 'ಸಜ್ಜನ', 'ಸತ್ಪುರುಷ','ಸತ್ಸಂಗ'- ಇತ್ಯಾದಿ ಪದಗಳನ್ನು ಮೂಲತಃ ತಂದ ನಮ್ಮ ಭಾರತೀಯ ಮಹರ್ಷಿಗಳ ದೃಷ್ಟಿಯಿಂದ ಈ ಪದಗಳು ಯಾವ ಅರ್ಥವನ್ನು ಕೊಡುತ್ತವೆ? ಈ ಸಂಸ್ಕೃತ ಪದಗಳನ್ನು ಬಿಡಿಸಿ ನೋಡಿದಾಗ "ಸತ್+ಜನ?', 'ಸತ್ + ಪುರುಷ', 'ಸತ್+ಸಂಗ', 'ಸತ್+ವಿದ್ಯೆ'-ಹೀಗೆ ಎರಡೆರಡು ಪದಗಳನ್ನು ನಾವು ಕಾಣಬಹುದು. ಇಲ್ಲಿ 'ಸತ್' ಎಂಬುದು ಸರ್ವಸಾಮಾನ್ಯವಾಗಿದ್ದು, ನಾವು ಅದರ ಬಗ್ಗೆ ವಿಚಾರ ಮಾಡಬೇಕಾಗಿದೆ. ನಮ್ಮ ಆರ್ಷಸಂಸ್ಕೃತಿಯಲ್ಲಿ 'ಸತ್'-ಎಂಬ ಈ ಪದಕ್ಕೆ ಎಂದೆಂದಿಗೂ ಒಂದೇ ರೀತಿಯಲ್ಲಿ ವಿಕಾರ(ಬದಲಾವಣೆ)ವಿಲ್ಲದೆ ಇರುವ ಸತ್ಯ, ನಿತ್ಯವಾದ ವಸ್ತು'-ಎಂಬ ವಿವರಣೆ ಇದೆ. ಇದು ಮಹರ್ಷಿಗಳು ಅಧ್ಯಯನ ಮಾಡಿ ಕಂಡಿರುವ ಅಂಶ.

'ಸತ್' ಎಂದರೆ ಇರುವುದು. ಇರುವುದು ಆ ವಸ್ತುವೊಂದೇ; ಉಳಿದುದೆಲ್ಲವೂ ವಿಕಾರಗೊಳ್ಳುವುದರಿಂದ, ಬರಿಯ ತೋರಿಕೆಯಾದ್ದರಿಂದ 'ಅಸತ್' ಎನಿಸುತ್ತದೆ. ಹೀಗೆ ಸದಸದ್ವಿವೇಚನೆಯನ್ನು ಮಾಡಿದ್ದಾರೆ ನಮ್ಮ ಹಿರಿಯರು. ಈ ಭಗವಂತನೆಂಬ 'ಸದ್ವಸ್ತು'ವೊಂದೇ ಎಂದೆಂದಿಗೂ ಯಾವ ಬದಲಾವಣೆಯನ್ನೂ, ನಾಶವನ್ನೂ ಹೊಂದದೇ ಇರುವ ವಸ್ತು. ನಮ್ಮ ಕಣ್ಣಿಗೆ ಕಾಣುವ ಇತರ ಎಲ್ಲಾ ವಸ್ತುಗಳೂ ಬದಲಾವಣೆ ಹೊಂದುತ್ತಿರುವುದೂ ನಾಶವಾಗುತ್ತಿರುವುದೂ ನಮ್ಮ ಅನುಭವಕ್ಕೆ ಬಂದಿರುವ ವಿಷಯವೇ. ನಮ್ಮದೇ ಆದ ದೇಹ, ಇಂದ್ರಿಯ, ಮನಸ್ಸು, ಬುದ್ಧಿ-ಇವುಗಳೇ ಕಾಲ-ದೇಶ-ಸನ್ನಿವೇಶಗಳಿಗನುಗುಣವಾಗಿ ವಿಕಾರಹೊಂದುತ್ತಿರುವುದೂ ಎಲ್ಲರಿಗೂ ಅನುಭವ ವೇದ್ಯವೇ. ನಾವು ಕಾಣುತ್ತಿರುವ ಬಾಹ್ಯ ಜಗತ್ತೆಲ್ಲಕ್ಕೂ ಚೈತನ್ಯ ನೀಡುತ್ತಿರುವ ಆತ್ಮವಸ್ತುವೊಂದು ಉಂಟೆಂದು, ಅದನ್ನು ಸಾಕ್ಷಾತ್ತಾಗಿ ಅನುಭವಿಸಿ ಹೇಳಿರುವ ಜ್ಞಾನ-ವಿಜ್ಞಾನ ತೃಪ್ತಾತ್ಮರಾದ ಮಹಾಪುರುಷರನೇಕರನ್ನು ನಮ್ಮ ನಾಡು ನೀಡಿದೆ. "ಸತ್ತುಹೋದನು' ಎಂಬುದಾಗಿ ಸಾಮಾನ್ಯ ಜನರೂ ಮಾಡುವ ವ್ಯವಹಾರವು ಎಲ್ಲರಿಗೂ ತಿಳಿದಿರುವ ವಿಷಯ. ಅಂತೆಯೇ ನಮ್ಮ ಈ ದೇಹದಲ್ಲಿಯೇ ಇರುವ ಆ ಸದ್ವಸ್ತುವನ್ನೂ ಅದು ದೇಹದಿಂದ ಹೊರಕ್ಕೆ ಹೊರಡುವುದನ್ನೂ ಸಾಮಾನ್ಯ ಜನರು ಕಂಡಿಲ್ಲ.  ಆದರೂ, ಆ ವಸ್ತುವನ್ನು ಕಂಡು ಅನುಭವಿಸಿದ ಮಹಾಪುರುಷರಿಂದಲೇ 'ಸತ್ತುಹೋದನು'-ಎಂಬ ರೂಢಿ ಬಂದಿದೆ.

'ಆ ಸದ್ವಸ್ತುವನ್ನು ಕಂಡುಕೊಳ್ಳುವುದು ಮಾನವರೆಲ್ಲರ ಹಕ್ಕು'-ಎಂಬುದಾಗಿ ಮಹರ್ಷಿಗಳು ಘೋಷಿಸಿದ್ದಾರೆ. ತಾವು ತಮ್ಮೊಳಗೇ ಸಾಕ್ಷಾತ್ಕರಿಸಿಕೊಂಡು ಅನುಭವಿಸಿದ ಆ ಸದ್ವಸ್ತುವನ್ನೇ ಆತ್ಮ-ಪರಮಾತ್ಮ- ಬ್ರಹ್ಮ-ಎಂಬುದಾಗಿ ಕರೆದಿದ್ದಾರೆ. ಹೀಗೆ, ನಮ್ಮೊಳಗೇ ಬೆಳಗುತ್ತಿರುವ ಆ ನಿತ್ಯಸತ್ಯವಾದ ಸದ್ವಸ್ತುವನ್ನು ಸಾಕ್ಷಾತ್ಕರಿಸಿಕೊಂಡ ಜ್ಞಾನಿಗಳೇ ನಿಜವಾದ ಸಜ್ಜನರು, ಸತ್ಪುರುಷರು. ಅಂತಹವರ ಸಹವಾಸದಲ್ಲಿರುವುದೇ ಸತ್ಸಂಗ. ಅದೇ, ಜೀವನವನ್ನು ಪಾವನ ಮಾಡುವ ಅಂಶ. ಅಂತಹವರ ನಡೆ-ನುಡಿಗಳೆಲ್ಲವೂ ನಿಸ್ವಾರ್ಥವಾಗಿದ್ದು, ಜಗತ್ತಿಗೆ ಹಿತವನ್ನುಂಟು ಮಾಡುವುದಾಗಿರುತ್ತದೆ. ಆದ್ದರಿಂದ ಅವರ ನಡೆ-ನುಡಿಗಳೇ ನಮಗೆ ಆದರ್ಶವಾಗಿರಬೇಕು. ಅದರಿಂದಲೇ ಲೋಕದ ಉದ್ಧಾರ. ಇಂತಹ ಆದರ್ಶವನ್ನು ನಮ್ಮ ಮನಸ್ಸಿನಲ್ಲಿ ಮೂಡಿಸಿದ ಭಾರತೀಯ ಮಹರ್ಷಿಗಳು, ಸತ್ಪುರುಷರು, ಮಹಾಪುರುಷರು ನಮಗೆ ಆದರ್ಶ. ಇಲ್ಲಿ ಶ್ರೀರಂಗಮಹಾಗುರುಗಳ ಅಭಿಪ್ರಾಯವು ಸ್ಮರಣೀಯ. 'ಮಹಾತ್ಮರ ಸಾಹಿತ್ಯವು, ಸರಿಯಾದ ಶಿಕ್ಷಣ ದೊರೆತು ಅದರ ದಾರಿಯನ್ನು ಅನುಸರಿಸಿ ಹೋದರೆ, ಅದರ ಮನೋಭೂಮಿಕೆಗೆ, ಆತ್ಮ ಭೂಮಿಕೆಗೆ ಕೊಂಡೊಯ್ಯುತ್ತದೆ '.  ಅಂತಹ ಸತ್ಪುರುಷರ ಸಂಗವು ನಮಗೂ ದೊರೆಯಲಿ ; ಇಹ ಪರಗಳಲ್ಲಿ ಸೌಖ್ಯ ಪಡೆಯುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ಸೂಚನೆ: 15/04/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ - 34 ಪಾಂಚಾಲದೇಶದತ್ತ ಪಾಂಡವರ ಪಯಣ ( Vyaasa Vikshita - 34 Panchala Deshadatta Pandavara Payana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ದ್ರೌಪದಿಯ ಹಿನ್ನೆಲೆಯ ವೃತ್ತಾಂತವನ್ನು ಹೀಗೆ ಹೇಳಿ, ಮಹಾತ್ಮರೂ ಮಹಾತಪಸ್ವಿಗಳೂ ಆದ ವ್ಯಾಸಪಿತಾಮಹರು, ಪಾಂಡವರನ್ನೂ ಕುಂತಿಯನ್ನೂ ಬೀಳ್ಕೊಟ್ಟು ಹೊರಟುಬಂದರು.

ವ್ಯಾಸರು ಹೊರಡುತ್ತಲೇ ಪಾಂಡವರ ಮನಸ್ಸಿನಲ್ಲಿ ಹರ್ಷ ತುಂಬಿತು. ತಾಯಿಯನ್ನು ಮುಂದಿಟ್ಟುಕೊಂಡು ಪಾಂಚಾಲದೇಶದತ್ತ ಆ ನರಶ್ರೇಷ್ಠರು ಹೊರಟರು. ತಾವಿಷ್ಟು ದಿನ ಯಾರ ಮನೆಯಲ್ಲಿದ್ದರೋ ಆ ಬ್ರಾಹ್ಮಣನಿಗೆ ಅಭಿವಾದನ ಮಾಡಿ, ಅನುಮತಿ ಪಡೆದು ಹೊರಟರು. ಅವರ ಪಯಣಿಸುತ್ತಿದ್ದುದು ಉತ್ತರದಿಕ್ಕಿನತ್ತ ಸಾಗುವ ಸಮವಾದ ಹಾದಿಗಳಲ್ಲಿ; ಒಂದು ಹಗಲು ಒಂದು ರಾತ್ರಿಗಳ ಪ್ರಯಾಣ. (ಕತ್ತಲಿನಲ್ಲಿ ಸಾಗುವಾಗ) ಅವರೆಲ್ಲರ ಮುಂದೆ ಅರ್ಜುನನು ಪಂಜನ್ನು ಹಿಡಿದು ದಾರಿತೋರುತ್ತಾ ನಡೆದನು.  ಪಯಣಿಸಿ, ಗಂಗಾತಟದಲ್ಲಿದ್ದ "ಸೋಮಾಶ್ರಯಾಯಣ" ಎಂಬ ಹೆಸರಿನ ತೀರ್ಥವನ್ನು ಆ ಪುರುಷಶ್ರೇಷ್ಠರಾದ ಪಾಂಡುಪುತ್ರರು ತಲುಪಿದರು.

ಅಲ್ಲಿ ರಮಣೀಯವಾದ ಒಂದು ಏಕಾಂತಸ್ಥಳ. ಅಲ್ಲಿ ಗಂಗಾಜಲದಲ್ಲಿ ತನ್ನ ಸ್ತ್ರೀಯರೊಂದಿಗೆ ಗಂಧರ್ವನೊಬ್ಬನು ಕ್ರೀಡಿಸುತ್ತಿದ್ದನು. ಆತನೋ ದರ್ಪಿಷ್ಠ. ನದಿಯನ್ನು ಸಮೀಪಿಸುತ್ತಿದ್ದ ಪಾಂಡವರ (ಹೆಜ್ಜೆಯ) ಸದ್ದನ್ನು ಆತನು ಕೇಳಿದನು. ಆ ಶಬ್ದವು ಕೇಳಿಬಂದುದಕ್ಕೇ ಆ ಬಲಶಾಲಿ ಗಂಧರ್ವನಿಗೆ ಉತ್ಕಟವಾದ ಕೋಪವುಕ್ಕಿತು. ಅಲ್ಲಾಗ ಆತನಿಗೆ ಕಂಡದ್ದು ತಾಯಿಯೊಂದಿಗೆ ಬರುತ್ತಿದ್ದ ಈ ಪಾಂಡವರು.  ತನ್ನ ಭಯಂಕರವಾದ ಧನುಸ್ಸನ್ನು ಟಂಕಾರಮಾಡುತ್ತಾ ಆ ಗಂಧರ್ವನು ಈ ಮಾತನ್ನು ಹೇಳಿದನು:

"ರಾತ್ರಿಯು ಆರಂಭವಾಗುವ ವೇಳೆ, ಕೆಂಪಡರಿದ ಸಂಧ್ಯೆಯು ಗೋಚರವಾಗುವುದಲ್ಲವೇ? ಅದರಲ್ಲಿ ಎಂಭತ್ತು 'ಲವ'ಗಳಷ್ಟು ಕಾಲವನ್ನು ಬಿಟ್ಟು ಉಳಿದದ್ದು ಯಕ್ಷರು, ಗಂಧರ್ವರು, ರಾಕ್ಷಸರು – ಇವರುಗಳ ಮುಹೂರ್ತವೆಂದು ನಿಗದಿಯಾಗಿದೆ. (ಸುಮಾರಿಗೆ ಮೂವತ್ತಾರು ಬಾರಿ ರೆಪ್ಪೆ ಬಡಿಯುವಷ್ಟು ಕಾಲಕ್ಕೆ "ಲವ" ಎನ್ನುವರು.) ಅವರೆಲ್ಲರೂ ಕಾಮಚಾರರು (ಎಂದರೆ ಇಷ್ಟ ಬಂದಂತೆ ಸಂಚರಿಸತಕ್ಕವರು). ಅವರ ಕಾಲವನ್ನುಳಿದ ಕಾಲವು ಮನುಷ್ಯರ ಕರ್ಮಚಾರಕ್ಕಾಗಿ (ಎಂದರೆ ಕಾರ್ಯಾರ್ಥವಾದ ಓಡಾಟಕ್ಕಾಗಿ) - ಎಂಬುದಾಗಿ ಹೇಳಲಾಗಿದೆ.

ಹಾಗಿರುವಾಗ ಆ ವೇಳೆಯಲ್ಲಿ ಲೋಭದಿಂದ ಮನುಷ್ಯರೇನಾದರೂ ಸಂಚಾರಮಾಡಲು ಬಂದರೆ, ಅಂತಹ ಬಾಲಿಶರನ್ನು (ಎಂದರೆ ವಿವೇಕಹೀನರನ್ನು) ನಾವೂ (ಎಂದರೆ ಗಂಧರ್ವರೂ) ರಾಕ್ಷಸರೂ ಕೂಡಿ ಹಿಡಿದುಕೊಳ್ಳುತ್ತೇವೆ, ಗೊತ್ತೇ? ಆ ಕಾರಣಕ್ಕಾಗಿಯೇ (ಆ ಹೊತ್ತಿನಲ್ಲಿ) ನೀರಿನ ಬಳಿ ಸುಳಿಯುವವರನ್ನು ವೇದಜ್ಞರು ನಿಂದಿಸುತ್ತಾರೆ – ಹಾಗೆ ಸುಳಿಯುವವರು ಬಲಶಾಲಿಗಳಾದ ರಾಜರುಗಳೇ ಆಗಿದ್ದರೂ ಕೂಡ!

ಆದ್ದರಿಂದ ನಿಲ್ಲಿರಿ, ದೂರದಲ್ಲೇ. ನನ್ನ ಬಳಿ ಬರಬೇಡಿರಿ. ಗಂಗೆಗೆ ಬಂದಿರುವ ನನ್ನನ್ನು ನೀವದೆಂತು ಅರಿಯಲಾರದೆ ಹೋದಿರಿ? ಅಂಗಾರಪರ್ಣ - ಎಂದು ನನ್ನ ಹೆಸರು. ನಾನು ಮಹಾಬಲಶಾಲಿ, ಸ್ವಾಭಿಮಾನಿ., ನನಗೆ ಸಹನೆಯೆಂಬುದಿಲ್ಲ. ನಾನು ಕುಬೇರನ ಪ್ರಿಯಮಿತ್ರ. ನನ್ನ ಈ ಕಾಡಿಗೆ ಸಹ ನನ್ನ ಹೆಸರೇ:  ಅಂಗಾರಪರ್ಣವೆಂದೇ. ಈ ಗಂಗಾತಟದಲ್ಲಿ ಓಡಾಡುತ್ತಾ ಬಗೆಬಗೆಯಾದ ಆಶ್ಚರ್ಯಕರವಾದ ಸುಖಗಳನ್ನು ಪಡುತ್ತಾ ನಾನಿರುವೆನು. ರಾಕ್ಷಸರಾಗಲಿ, ದೇವತೆಗಳಾಗಲಿ, ಮನುಷ್ಯರಾಗಲಿ, ಇತ್ತ ಸುಳಿಯರು. ಹಾಗಿರುವಲ್ಲಿ ನೀವದೆಂತು ಬಂದಿರಿ! - ಎಂದಬ್ಬರಿಸಿದನು.

ಗಂಧರ್ವನ ಈ ಗರ್ವದ ಮಾತುಗಳನ್ನು ಕೇಳಿ ಅಸಾಧಾರಣ-ಪರಾಕ್ರಮಿಯಾದ ಅರ್ಜುನನಿಗೆ ಅನಲ್ಪವಾದ ಕೋಪವೇ ಬಂದಿತು.

ಸೂಚನೆ : 16/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 34 (Yaksha prashne34)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 33 ಮನೆಯಲ್ಲಿ ಇರುವವನಿಗೆ ಮಿತ್ರನಾರು ?

ಉತ್ತರ - ಪತ್ನೀ 

ಭಾರತೀಯವಾದ ಸಂಸ್ಕೃತಿ ಅತ್ಯಂತ ಪ್ರಾಚೀನ ಎಂಬ ಹೆಮ್ಮೆಪಡಲು ಕಾರಣವೇ ಇಲ್ಲಿನ ಕುಟುಂಬ ವ್ಯವಸ್ಥೆ. ಇದರಲ್ಲಿ ಗಂಡ-ಹೆಂಡತಿ ಇವರ ಪಾತ್ರ ಬಹಳ ಮುಖ್ಯವಾದು. ಅದರಲ್ಲೂ ಪತ್ನಿಯ ಸ್ಥಾನ ಇನ್ನೂ ಹಿರಿದು. 'ನಿಮ್ಮ ಕುಟುಂಬ ಚೆನ್ನಾಗಿ ಇದ್ದಾರಾ?' ಎಂದು ಕೇಳುವಾಗ ಇಲ್ಲಿ ಕುಟುಂಬ ಎಂದರೆ ಪತ್ನಿಯೇ. ಅಂದರೆ 'ಕುಟುಂಬ' ಎಂಬುದು  ಪತ್ನಿಗೆ ಇನ್ನುಂದು ಹೆಸರು ಎಂಬಷ್ಟರ ಮಟ್ಟಿಗೆ ಮಹತ್ತ್ವವಿದೆ. ದಾಂಪತ್ಯಜೀವನದಲ್ಲಿ ಸ್ತ್ರೀ ಪುರುಷರ ಇಬ್ಬರ ಪಾತ್ರವೂ ಇದೆ. "ಕುಟುಂಬದ ಹೊಣೆ ಹೊತ್ತು ಗೃಹಿಣಿಯಾಗಿ ಗೃಹವನ್ನು ಬೆಳೆಸುವವಳು, ಬೆಳಗಿಸುವವಳು ಸ್ತ್ರೀ. ಆದ್ದರಿಂದ  'ಗೃಹಿಣೀ ಗೃಹಮುಚ್ಯತೇ' ಎಂಬ ಮಾತು ಬಂದಿದೆ" ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಪತ್ನಿಯಿದ್ದರೆ ಮಾತ್ರ ಗೃಹಕ್ಕೆ ಶೋಭೆ. ಮನೆಯಲ್ಲಿ ಹೆಂಡತಿ ಇಲ್ಲದಿರುವಾಗ ಅತಿಥಿಗಳು ಬರುವುದಕ್ಕೆ ಸಂಕೋಚಪಡುತ್ತಾರೆ ' ನಿಮ್ಮ ಮನೆಯವರು ಮನೆಯಲ್ಲಿ ಇಲ್ಲವಲ್ಲ, ಬಂದರೆ ನಿಮಗೆ ತೊಂದರೆ ಆಗುತ್ತದೆ, ಹಾಗಾಗಿ ಅವರು ಇರುವಾಗ ಬರುತ್ತೇನೆ' ಎಂಬ ಮಾತನ್ನು ಆಡುತ್ತಾರೆ. ಅಂದರೆ ಕುಟುಂಬದ ವ್ಯವಸ್ಥೆಯಲ್ಲಿ ಪತ್ನಿಗೆ ಮುಖ್ಯ ಪಾತ್ರವಿರುವುದು ಸತ್ಯ. ಈ ಅಭಿಪ್ರಾಯವನ್ನು ಲೋಕಕ್ಕೆ ಇನ್ನಷ್ಟು ದೃಢಪಡಿಸಲು ಯಕ್ಷನು ಧರ್ಮರಾಜನಿಗೆ 'ಮನೆಯಲ್ಲಿ ಇರುವವನಿಗೆ ಮಿತ್ರನಾರು?' ಎಂಬ ಪ್ರಶ್ನೆಯನ್ನು ಮುಂದಿಡುತ್ತಾನೆ. 

ಈ ಸೃಷ್ಟಿಯಲ್ಲಿ ಸ್ತ್ರೀಯ ಪಾತ್ರ ಆಕಾಶ ಭೂಮಿಗಳಷ್ಟು ಹಿರಿದು. 'ದ್ಯೌಃ ಪಿತಾ ಪೃಥಿವೀ ಮಾತಾ' ಆಕಾಶ ಮತ್ತು ಭೂಮಿಯನ್ನು ಪ್ರತಿನಿಧಿಸುವ ಎರಡು ವಿಷಯಗಳು. ಭೂಮಿಯಲ್ಲಿ ಹಾಕಿದ ಬೀಜವು ಬೆಳೆಯುತ್ತದೆ. ವೃದ್ಧಿಗೆ ಕಾರಣವಾದು ಭೂಮಿ. ಅಂತೆಯೇ ಸಂತತಿ ಮುಂದುವರಿಯಲು ಸ್ತ್ರೀಯು ಕಾರಣವಷ್ಟೆ.  'ಪತ್ಯುರ್ನೋ ಯಜ್ಞಸಂಯೋಗೇ' ಎಂಬುದಾಗಿ ಪಾಣಿನಿ ಮಹರ್ಷಿಯು ಸಂಸ್ಕೃತ ವ್ಯಾಕರಣದಲ್ಲಿ ಪತ್ನಿ ಪದವನ್ನು ಹೀಗೆ ವಿವರಿಸಿದ್ದಾನೆ 'ಯಜ್ಞದಲ್ಲಿ ಸಹಕರಿಸುವವಳೇ ಪತ್ನೀ' ಎಂದು. ಪತ್ನಿ ಶಬ್ದಕ್ಕೆ ಭಾರ್ಯಾ, ಗೃಹಿಣೀ, ದ್ವಿತೀಯಾ, ಸಹಧರ್ಮಿಣೀ, ಜಾಯಾ, ದಾರಾ ಎಂಬಿತ್ಯಾದಿ ಪದಗಳಿವೆ. ಈ ಪದಗಳು ಪತ್ನಿಯಲ್ಲಿರುವ ಬಹುಮುಖವಾದ ಕಾರ್ಯಕ್ಷಮತೆಯನ್ನು ವಿವರಿಸುತ್ತವೆ. 

ವಿವಾಹದಲ್ಲಿ ಸಪ್ತಪದಿ ಎಂಬ ಭಾಗವುಂಟು. ಇಲ್ಲಿ ಗಂಡನಾದವನು ತನ್ನ ಪತ್ನಿಯನ್ನು ಏಳು ಹೆಜ್ಜೆಗಳನ್ನು ನಡೆಸುತ್ತಾನೆ. ಏಳು ಹೆಜ್ಜೆಗಳಿಂದ ನೀನು ಸಖನಾದೆ, ನಾವಿಬ್ಬರೂ ಈ ದಾಂಪತ್ಯಜೀವನದಲ್ಲಿ ಪರಸ್ಪರ ಅನ್ಯೋನ್ಯಭಾವದಿಂದ ಇರಬೇಕಾದವರು. ನೀನು ಇಂದಿನಿಂದ ನನ್ನ ಮಿತ್ರಳಾಗಿದ್ದೀಯಾ, ನನ್ನ ಇಹ ಮತ್ತು ಪರಗಳೆಂಬ ಎರಡು ವಿಧವಾದ ಬಾಳಾಟದಲ್ಲೂ ನೀನು ಸಹಧರ್ಮಚಾರಿಣೀ ಆಗಿದ್ದೀಯಾ, ಧರ್ಮದಲ್ಲಿ, ಅರ್ಥದಲ್ಲಿ ಮತ್ತು ಕಾಮದಲ್ಲಿ ಈ ಮೂರರಲ್ಲೂ ನಾನು ನಿನ್ನನ್ನು ಬಿಡದೆ ಮುನ್ನಡೆಸುವೆ, ಮೂರು ಲೋಕವಷ್ಟೇ ಅಲ್ಲ, ಸಪ್ತ ಊರ್ಧ್ವಲೋಕಗಳಲ್ಲಿ ಸಂಚರಿಸುವಾಗಲೂ ನೀನೇ ನನ್ನ ಸಹಚಾರೀ ಎಂಬಿತ್ಯಾದಿ ಮಾತುಗಳನ್ನು ಆಡಿ ವರನಾದವನು ವಿವಾಹದ ಆ ಶುಭಗಳಿಗೆಯಲ್ಲಿ ವಧುವಿನ ಸಂಪೂರ್ಣ ಹೊಣೆಗಾರಿಕೆಯನ್ನು ಹೊರುತ್ತಾನೆ. ಆಕೆಯೂ ಅಂತೆಯೇ ಅವನ ಜೀವನದುದ್ದಕ್ಕೂ ಮಿತ್ರಭಾವದಿಂದ ಇರಬೇಕಾಗುತ್ತದೆ. ಹೀಗೆ ಪ್ರಕೃತಿಸ್ವರೂಪಿಣಿಯಾಗಿ ಕುಟುಂಬದ ಸಮಸ್ತ ಭಾರವನ್ನು ವಹಿಸಿ ಜೀವನವನ್ನು ಮುನ್ನಡೆಸುವವಳೇ ಪತ್ನೀ. 

ಸೂಚನೆ : 16/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

Thursday, April 13, 2023

ಭಗವಂತನಲ್ಲಿ ಯಾವ ವರವನ್ನು ಬೇಡಬೇಕು? (Bhagavantanalli Yava Varavannu bedabeku?)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)




ನಾವೆಲ್ಲಾ ಚಿಕ್ಕವರಾಗಿದ್ದಾಗ ಪ್ರತಿರಾತ್ರಿ ಕಥೆ ಕೇಳಿಯೇ ಮಲಗುತ್ತಿದ್ದೆವು. ಆ ದಿನಗಳಲ್ಲಿ ನಮ್ಮ ಅಜ್ಜಿ ಹೇಳಿದ ಕಥೆಯೊಂದು ಹೀಗಿದೆ.  ಒಂದು ಊರಿನಲ್ಲಿ ಒಬ್ಬ ಹುಡುಗನಿದ್ದನು. ಅವನಿಗೆ ದೇವರಲ್ಲಿ ಅಪಾರವಾದ ನಂಬಿಕೆ. ದೃಢಭಕ್ತಿಯಿಂದ ದೇವರ ಪೂಜೆ ಮಾಡುತ್ತಿದ್ದನು. ಅವನಿಗೆ ಒಂದು ದಿನ ದೇವರು ಪ್ರತ್ಯಕ್ಷನಾಗಿ 'ನಿನಗೆ ಏನು ವರ ಬೇಕೋ ಕೇಳಿಕೋ' ಎಂದನು. ಆ ಬಾಲಕನು 'ನಾನು ಹೇಳಿದ್ದು ನಡೆಯಲಿ!' ಎಂದು ಕೇಳಿಕೊಂಡನು. ಭಗವಂತನು "ತಥಾಸ್ತು" ಎಂದನು. 


ಹಲವು ದಿನಗಳ ಕಾಲ ಅವನು ಆ ವರವನ್ನು ಉಪಯೋಗಿಸಲಿಲ್ಲ. ಒಮ್ಮೆ ಇವನು ತಪ್ಪೊಂದನ್ನು ಮಾಡುತ್ತಿದ್ದ. ಅದನ್ನು ನೋಡಿದ ಮೇಷ್ಟ್ರು, ಇವನನ್ನು ಸರಿದಾರಿಗೆ ತರಲು ಹೊಡೆಯುತ್ತಾರೆ. ಕೋಪಗೊಂಡ ಬಾಲಕನಿಗೆ ದೇವರಲ್ಲಿ ಕೇಳಿದ ವರದ ನೆನಪು ಬಂತು. ಮೇಷ್ಟ್ರ ತಲೆ ಸಿಡಿದು ಹೋಗಲಿ ಅಂದನು. ತಕ್ಷಣ ಮೇಷ್ಟ್ರ ತಲೆ ಸಿಡಿದು ಹೋಯಿತು.


ಒಮ್ಮೆ ಇವನು ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ದಾರಿಯಲ್ಲಿ ಎಸೆದಿದ್ದನು. ನಂತರ ಆಟವಾಡುತ್ತಿದ್ದಾಗ ಅವನಿಗೆ ಅರಿವಿಲ್ಲದಂತೆ ಆ ಸಿಪ್ಪೆಯ ಮೇಲೆ ಕಾಲಿಟ್ಟನು; ಜಾರಿಬಿದ್ದನು. ಅಲ್ಲಿದ್ದ ಹುಡುಗರು ನಗಲಾರಂಭಿಸಿದರು. ಅವನಿಗೆ ಅವಮಾನ- ಕೋಪಗಳೆರಡೂ ಬಂದವು. ಹಿಂದೂ ಮುಂದೂ ಯೋಚಿಸದೆ, ಈ ಸಿಪ್ಪೆ ಎಸೆದವರ ತಲೆ ಸಿಡಿದು ಹೋಗಲಿ ಎಂದನಂತೆ. ಮರುಕ್ಷಣದಲ್ಲಿ ಆ ಬಾಲಕನ ತಲೆ ಪುಡಿಪುಡಿಯಾಯಿತು.


ಈ ಕಥೆಯು ಕೇಳಲು ಅಡುಗೂಲಜ್ಜಿ ಕಥೆ ಇದ್ದಂತೆ ತೋರಿದರೂ ನಮ್ಮ ಇತಿಹಾಸ-ಪುರಾಣಗಳಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಮಹಾಶಿವ ಭಕ್ತನಾದ ಭಸ್ಮಾಸುರನ ಕಥೆ, ಹಿರಣ್ಯಕಶಿಪುವಿನ ಕಥೆ, ಮಹಿಷಾಸುರನ ಕಥೆ, ಮೂಕಾಸುರನ ಕಥೆ… ಇತ್ಯಾದಿ, ಅನೇಕ ಚಿತ್ರ ವಿಚಿತ್ರ ವರಗಳಿಂದಲೇ ಅವರ ಅವನತಿಗಳಾಗಿವೆ. 


ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ದೇವರಿಂದ ವರಪಡೆದು ನಮ್ಮ ಉದ್ಧಾರವಾಗಬೇಕೇ ಹೊರತು ಅವನತಿಯಲ್ಲ! ಸರ್ವದಾ ಹರಿ ಭಕ್ತರಾದ ಪ್ರಹ್ಲಾದ, ಧ್ರುವನಂತಹವರ ಪ್ರಾರ್ಥನೆಗಳು ನಮಗೆ ಅನುಕರಣೀಯ. ಭಕ್ತಶಿರೋಮಣಿಗಳ, ಅನೇಕ ದಾಸರುಗಳ ಪಥವು ಅನುಸರಣೀಯವೇ. 

  

ಹಾಗಾಗಿ ನಮ್ಮ ಮಹರ್ಷಿಗಳು ಸಾರ್ವಕಾಲಿಕವಾಗಿ ಸರ್ವಜನಾಂಗದ ಒಳಿತಿಗಾಗಿ ಅನೇಕ ಚತುರ್ಭದ್ರವಿಚಾರಗಳನ್ನು ಆಚರಣೆಗೆ ತಂದಿದ್ದಾರೆ. 'ದೇವರು ನಮಗೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸಲಿ' ಎಂಬ ಆದರ್ಶ ಪ್ರಾರ್ಥನೆಯನ್ನು  ಸೂತ್ರಪ್ರಾಯವಾಗಿ ತಿಳಿಸಿಕೊಟ್ಟಿದ್ದಾರೆ. ಇಂತಹ ಪ್ರಾರ್ಥನೆಯಿಂದ ಲೌಕಿಕ ಸುಖವುಂಟು. ಪಾರಮಾರ್ಥಿಕ ಸುಖವೂ ಉಂಟು."ಹಿನ್ನೋಟ, ಮುನ್ನೋಟ ಎರಡೂ ಮನುಷ್ಯನಿಗೆ ಬೇಕು. ಸ್ವರೂಪ ಜ್ಞಾನ ಬೇಕು. ಇವೆರಡನ್ನೂ ನೆನಪಿನಲ್ಲಿಟ್ಟಿರುವ ಮನುಷ್ಯ ಎಂದಿಗೂ ಮೃತ್ಯು ವಶನಾಗುವುದಿಲ್ಲ. ಅಮೃತತ್ವವನ್ನು ಪಡೆಯುತ್ತಾನೆ." ಎಂಬ ಯೋಗಿವರೇಣ್ಯರಾದ  ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯವಾಗಿದೆ.


ನಮ್ಮ ಬುದ್ಧಿಮಟ್ಟದಿಂದ ಕೇಳಿದ ವರವು ಒಂದೊಮ್ಮೆ ನಮ್ಮನ್ನು  ಕಷ್ಟಕ್ಕೆ ಸಿಲುಕಿಸಬಹುದು. ಹಾಗಾಗಿ ನಮಗೆ "ಯಾವುದು ಒಳಿತೋ ಆ ವರವನ್ನು ಕೊಟ್ಟು ಉದ್ಧರಿಸು" ಎಂದು ದೇವರನ್ನು  ಪ್ರಾರ್ಥಿಸೋಣ. ನಾವೆಲ್ಲಾ ಹೃನ್ಮನಗಳಲ್ಲಿ ನಿಷ್ಕಲ್ಮಷವಾದ  ಭಗವಂತನ ಭಕ್ತಿಗೆ ಪಾತ್ರರಾಗೋಣ.


ಸೂಚನೆ: 13/04/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ. 

Sunday, April 9, 2023

ಅಷ್ಟಾಕ್ಷರೀ​ - 32 ಅಂತರ್ಲಕ್ಷ್ಯಂ ಬರ್ಹಿರ್ದೃಷ್ಟಿಃ 9Astakshara Darshana 32 Antarlakshyam Bahirdrishtih)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಜೀವನವನ್ನು ಅವಲೋಕಿಸಿಕೊಂಡಾಗಲೆಲ್ಲಾ ನಮಗೆ ಚಿಂತನವೊಂದು ತಲೆದೋರುವುದುಂಟು: ಪ್ರಪಂಚದಲ್ಲಿ ಅದೆಷ್ಟು ಮಂದಿ ಅದೆಷ್ಟು ಹಿರಿದಾದ ಸಾಧನೆಗಳನ್ನು ಮಾಡಿದ್ದಾರೆ, ಮತ್ತು ಮಾಡುತ್ತಿದ್ದಾರೆ! - ಎಂಬುದು. ಅಂತಹವರ ಮುಂದೆ ನಮ್ಮ ಸಾಧನೆಯು ಕಿರಿದೆನಿಸಿದಾಗ ನಮಗೆ ಬರುವ ಒಂದು ಪ್ರಶ್ನೆ - ನಮ್ಮಿಂದಾಗದುದನ್ನು ಅವರದೆಂತು ಸಾಧಿಸಿದರು?

ಇದರ ಜೊತೆಗೇ ಬರುವ ಪ್ರಶ್ನೆಗಳು ಹಲವು. ಅವರ ಅದೃಷ್ಟವು ಚೆನ್ನಾಗಿತ್ತೆಂದು ಅವರಿಗೆ ಇದೆಲ್ಲ ಸಾಧ್ಯವಾಯಿತೇ? ಅಥವಾ ಅವರಿಗೆ ತೊಂದರೆ ಕೊಡುವ ಶತ್ರುಗಳಾರೂ ಇರಲಿಲ್ಲವೆಂದೇ? ಅವರಿಗೆ ಅನುಕೂಲವಾಗಿದ್ದ ವಿಶಾಲ ಬಂಧುಸಮೂಹವಿತ್ತೇ? ಅಮಿತವಾದ ಜನಬಲ-ಧನಬಲಗಳಿದ್ದುವೇ? ಅವರಿಗೆ ಸದಾ ಉತ್ತಮಮಾರ್ಗದರ್ಶಕರು ಲಭ್ಯರಾಗಿದ್ದರೇ? ಹೊಟ್ಟೆಪಾಡಿಗಾಗಿ ದುಡಿಯಬೇಕೆನ್ನುವ ಆವಶ್ಯಕತೆಯೆಂಬುದಿಲ್ಲದೆ, ಖುಷಿಬಂದಂತೆ ಸಮಯವನ್ನು ಉಪಯೋಗಿಸಿಕೊಳ್ಳಲು ಸರ್ವವಿಧ-ಸೌಕರ್ಯಗಳಿದ್ದುವೇ? - ಎಂದೆಲ್ಲಾ ಪ್ರಶ್ನಪರಂಪರೆ ತೋರುವುದುಂಟು.

ಮಹಾತ್ಮರ ಜೀವನಚರಿತ್ರೆಗಳ ಪುಟಗಳನ್ನು ತಿರುವಿಹಾಕುತ್ತಾ ಹೋದಂತೆ, ಮೇಲೆ ಉಲ್ಲೇಖಿಸಿದ ಎಷ್ಟೋ ಕೆಲವು ಅಂಶಗಳು ಕೆಲವರಿಗೆ ಅನುಕೂಲವಾಗಿದ್ದುದು ತೋರಿಬರುತ್ತದೆ. ಎಲ್ಲರಿಗೂ ಎಲ್ಲವೂ ಹಾಗಿತ್ತೆಂದೇನಿಲ್ಲ. ಅಷ್ಟೇ ಅಲ್ಲ, ಬಹುಮಂದಿಗೆ ಪರಿಸ್ಥಿತಿಗಳು ಪ್ರತಿಕೂಲವಾಗಿದ್ದುವೆಂಬುದೇ ಗೋಚರವಾಗುತ್ತದೆ. (ಪ್ರತಿಕೂಲ ಎಂದರೆ ವಿರುದ್ಧ). ಯಾವ ಒಳ್ಳೆಯ ಕೆಲಸಕ್ಕೆ ಹೊರಟರೂ ಟೀಕಿಸುವ ಮಂದಿ ಹೇರಳವಾಗಿಯೇ ದೊರೆಯುತ್ತಾರೆ!  ಎಷ್ಟೋ ವೇಳೆ, ಟೀಕೆಮಾಡುವವರನ್ನಾದರೂ ಎದುರಿಸಬಹುದು, ಗೇಲಿ ಮಾಡುವವರನ್ನು ಎದುರಿಸುವುದು ಕಷ್ಟವೇ ಸರಿ.

ಭಾರತದ ಅಧ್ಯಾತ್ಮಸಂಪತ್ತಿನತ್ತ ಜಗತ್ತಿನ ಕಣ್ತೆರೆಸಿದ ಸ್ವಾಮಿವಿವೇಕಾನಂದರ ಕಣ್ಣನ್ನು ತೆರೆಸಿದ ಶ್ರೀರಾಮಕೃಷ್ಣ ಪರಮಹಂಸರಿಗೆ ಹುಚ್ಚನೆಂಬ ಪಟ್ಟೆಯನ್ನೇ ಅವರ ಕೆಲವು ಸಮಕಾಲೀನರು ಕಟ್ಟಿದ್ದುಂಟು. ಇಂದು ಪ್ರಪಂಚದಲ್ಲೇ ಅತಿದೊಡ್ಡಸಂಸ್ಥೆಯೆಂದು ಹೆಸರು ಮಾಡಿರುವ, ಶಿಸ್ತು-ದೇಶಭಕ್ತಿಗಳಿಗೆ ಪರ್ಯಾಯವೆನಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ|| ಹೆಡಗೇವಾರರನ್ನು 'ಗವಾರ'ನೆಂದೇ ಗಣಿಸಿದ್ದವರಿದ್ದರು. ಇವರಿಬ್ಬರಿಗೂ ಬಡತನದ ಭಾಗ್ಯವೂ ಜೊತೆಯಾಗಿಯೇ ಬಂದಿತ್ತು. ಯೋಗವಿದ್ಯೆಯ ಅಂತರಂಗ-ಬಹಿರಂಗಗಳನ್ನು  ಕರತಲಾಮಲಕವಾಗಿ ಕಂಡುಕೊಂಡವರಾಗಿ ಬೌದ್ಧಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಭಾರತೀಯಸಂಸ್ಕೃತಿಯ ಶಾಸ್ತ್ರ-ಪ್ರಯೋಗಗಳಲ್ಲಿ ಪ್ರವೀಣರೆನಿಸಿದ್ದ ಶ್ರೀರಂಗಮಹಾಗುರುಗಳೂ ಬಡತನಕ್ಕೆ ಅಪರಿಚಿತರೇನಾಗಿರಲಿಲ್ಲ. ಇವೆಲ್ಲಾ ಆಧುನಿಕ ಉದಾಹರಣೆಗಳೇ.

ಮೇಲೆ ಉಲ್ಲೇಖೀಸಿದ ಮಂದಿಯಲ್ಲಿಒಂದು ಸಾಮ್ಯವನ್ನಂತೂ ಕಾಣಬಹುದು: ತಮ್ಮ ಜೀವನದ ಗುರಿಯ ಬಗೆಗಿನ ಖಚಿತವಾದ ನೋಟವು ಸಾಕಷ್ಟು ಸಣ್ಣ ವಯಸ್ಸಿನಲ್ಲಿಯೇ ಅವರಿಗೆ ಮೂಡಿತ್ತು. ಸಾಕಷ್ಟು ಕಷ್ಟಗಳನ್ನು ಎದುರಿಸಿಯೇ ತಮ್ಮ ಧ್ಯೇಯವನ್ನು ಅವರು ಸಾಧಿಸುವುದಾಯಿತು. ಅವರೆಲ್ಲರ ಹೃದಯದಲ್ಲಿ ತಮ್ಮ ಜೀವನಲಕ್ಷ್ಯದ ಅರಿವು ಸದಾ ಜ್ವಲಿಸುತ್ತಿತ್ತು.

ಧ್ಯೇಯಸಾಧನೆಗೆ ಅಷ್ಟೇ ಸಾಲದು: ಅದಕ್ಕಾಗಿ ಹೊರಗಡೆಯ ಪ್ರತಿಕೂಲಸಂನಿವೇಶಗಳನ್ನೂ ಅನುಕೂಲವಾಗಿಸಿಕೊಳ್ಳುತ್ತಲೇ ಹೋಗಬೇಕಾಗುವುದು. ಆದುದರಿಂದ ಹೊರಮುಖವಾದ ನೋಟವೂ ಸದಾ ಸ್ಫುರಿಸುತ್ತಿರಬೇಕಾದುದೂ ಮುಖ್ಯವೇ. ಯಾವನು ಜ್ವಲಂತವಾದ ಶ್ರೇಷ್ಠಾದರ್ಶವನ್ನು ಹೃದಯದಲ್ಲಿ ಸದಾ ಧರಿಸಿರುವನೋ, ಹಾಗೂ ಅದಕ್ಕಾಗಿ ಸಲ್ಲುವ ಲೋಕವ್ಯವಹಾರವನ್ನೇ ಜಾಗರೂಕತೆಯಿಂದ ನಡೆಸುವನೋ, ಆತನನ್ನೇ ಪುರುಷನೆನ್ನುವುದು!

ಇಬ್ಬರೇ ಇಂತಹ ಪುರುಷರೆನ್ನುತ್ತದೆ, ಮಹಾಭಾರತ. ಇವರಿಬ್ಬರೂ "ಸೂರ್ಯಮಂಡಲವನ್ನು ಭೇದಿಸಿ ಹೋಗುವರು" - ಎನ್ನುತ್ತದೆ, ವ್ಯಾಸಕೃತಿ. (ಸೂರ್ಯಮಂಡಲವನ್ನು ಭೇದಿಸಿಹೋಗುವರೆಂದರೆ ಸಾಕ್ಷಾನ್ಮೋಕ್ಷವನ್ನು ಪಡೆಯುವವರೆಂದೇ ಅರ್ಥ.) ಯಾರೀ ಇಬ್ಬರು ಪರಮಸಾಧಕರು?: ಯೋಗಯುಕ್ತನಾದ ಪರಿವ್ರಾಜಕನೊಬ್ಬ; ರಣಭೂಮಿಯಲ್ಲಿ ಶತ್ರುವಿಗೆ ಅಭಿಮುಖವಾಗಿ ಸಾವನ್ನಪ್ಪುವ ಸೈನಿಕ ಮತ್ತೊಬ್ಬ.

ರಿಪುವಿನೊಂದಿಗೆ  ರಣಾಂಗಣದಲ್ಲಿ ವೀರಾವೇಶದಿಂದ ಹೋರಾಡುವವನಲ್ಲಿಯ ಹಿರಿಮೆಯೇನು? "ಸಾವು ಬಂದರೂ ನಾ ಹೆದರೆ, ನನ್ನ ದೇಶಕ್ಕಾಗಿ ನನ್ನ ಸರ್ವಸ್ವವನ್ನೂ – ಪ್ರಾಣವನ್ನೂ – ಅವಶ್ಯವಿದ್ದರೆ ತ್ಯಜಿಸುವೆ"- ಎನ್ನುವ ದೃಢಸಂಕಲ್ಪ ಆತನದು. ಯೋಗಸಾಧನೆಗಾಗಿ ಶ್ರಮಿಸುವವನ ಬಗೆಯೂ ಹಾಗೆಯೇ: ಅಂತಃಶತ್ರುಗಳ ವಿರುದ್ಧ ಆತನ ಹೋರಾಟ. ಯೋಧನ ಲಕ್ಷ್ಯವು ಹೃದಯದಲ್ಲಿ: "ನನ್ನದೆಲ್ಲವನ್ನೂ ಬಿಡಬಲ್ಲೆ; ಸಾವನ್ನೇ ಎದುರಿಸಬಲ್ಲೆ, ಶತ್ರುಗಳ ಮೇಲೆ ಸದಾ ಕಣ್ಣಿಟ್ಟೇ ಇರುವೆ" - ಎನ್ನುವ ಜಾಗರೂಕತೆ ಆತನದು.

ಯೋಗವಿದ್ಯೆಯ ಬಗೆಯೂ ತೀರ ಬೇರೆಯೇನಲ್ಲ. ಯೋಗದ ಉನ್ನತ ಸ್ಥಿತಿಯಲ್ಲಿ ಭಗವಂತನಲ್ಲಿ ಪ್ರಾಣಾರ್ಪಣವೇ ಘಟಿಸಿರುವುದು.  ಆ ಸ್ಥಿತಿಯನ್ನು ಶ್ರೀರಂಗಮಹಾಗುರುಗಳು ಪ್ರಯೋಗಪೂರ್ವಕವಾಗಿ ತೋರಿಸಿಕೊಟ್ಟಿದ್ದರು: ಆಗ ಹೊರಕ್ಕೆ ಕಣ್ಣು ಬಿಟ್ಟಿ(ಟ್ಟಂತಿ)ರುವುದು; ಅಂತರ್ಲಕ್ಷ್ಯವಾದ ಸಮಾಧಿಯಲ್ಲಿ ಮನಸ್ಸು ನೆಟ್ಟಿರುವುದು.    

ಜಗತ್ತಿನ ಬಂಧನಗಳನ್ನು ಕೊಡವಿಕೊಂಡು ವಿಶ್ವಾತೀತದಲ್ಲಿ ಒಂದಾಗುವ ಬಗೆಯೇ ಇಬ್ಬರಲ್ಲೂ - ಸರ್ವತ್ಯಾಗಿಯಾದ ಯೋಧ, ಸರ್ವತ್ಯಾಗಿಯಾದ ಯೋಗಿ. 

ಅಂತರ್ಲಕ್ಷ್ಯಂ ಬಹಿರ್ದೃಷ್ಟಿಃ - ಎಂಬ ಯೋಗಶಾಸ್ತ್ರದ ಅದ್ಭುತವಾದ ಉಕ್ತಿಯು ಇವರಿಬ್ಬರಲ್ಲಿಯ ದಿವ್ಯಸಾಮ್ಯವನ್ನೇ ಹೇಳುವಂತಿಲ್ಲವೇ?    


ಸೂಚನೆ: 09/04/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ -33(Yaksha prashne -33)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 32 ಪ್ರಯಾಣ ಮಾಡುವವನಿಗೆ ಮಿತ್ರನಾರು ?

ಉತ್ತರ - ಸಾರ್ಥ

ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುತ್ತಲೇ ಇರುತ್ತೇವೆ. ಕೆಲವೊಮ್ಮೆ ತಿಳಿದ ಊರಿಗೆ, ಇನ್ನು ಕೆಲವೊಮ್ಮೆ ತಿಳಿಯದ ಊರಿಗೆ, ಹೀಗೆ ನಮ್ಮ ಪಯಣವು ಸಾಗುತ್ತಿರುತ್ತದೆ. ಪ್ರಯಾಣ ಮಾಡುವಾಗ ಒಬ್ಬರೇ ಹೋಗುವುದು ಉಂಟು. ಇನ್ನು ಕೆಲವೊಮ್ಮೆ ನಮ್ಮ ಜೊತೆಯಲ್ಲಿ ಕೆಲವರನ್ನು ಕರೆದುಕೊಂಡು ಹೋಗುವುದೂ ಉಂಟು. ಇವರೆಲ್ಲರೂ ಪೂರ್ವ ನಿರ್ಧಾರಿತರಾದ ವ್ಯಕ್ತಿಗಳು. ಇಲ್ಲಿ ಯಕ್ಷನ ಪ್ರಶ್ನೆ ಅದಲ್ಲ, ಒಬ್ಬ ಪ್ರವಾಸಕ್ಕೆ ಹೊರಟನೆಂದಾರೆ ಅವನಿಗೆ ಮಾರ್ಗದಲ್ಲಿ ಯಾರು ಮಿತ್ರರಾಗಿ ಸಹಕರಿಸುತ್ತಾರೆ? ಎಂಬುದು. ಅದಕ್ಕೆ ಧರ್ಮರಾಜನು 'ಸಾರ್ಥ' ಎಂದು ಉತ್ತರವನ್ನು ನೀಡುತ್ತಾನೆ. 

ಇಲ್ಲಿ ನಾವು ತಿಳಿಯಬೇಕಾದುದು 'ಸಾರ್ಥ' ಎಂಬ ಪದದ ಅರ್ಥ. ಪ್ರಸ್ತುತ ಅರ್ಥ ಎಂಬ ಶಬ್ದ ಒಂದಾದರೆ ಅದರಿಂದ ಕೂಡಿದ್ದು 'ಸಾರ್ಥ' ಎಂಬ ಇನ್ನೊಂದು ಪದವೂ ನಿಷ್ಪನ್ನವಾಗುತ್ತದೆ. ಅರ್ಥ ಶಬ್ದದ ಅರ್ಥಕ್ಕೂ ಸಾರ್ಥ ಶಬ್ದದ ಅರ್ಥಕ್ಕೂ ದೂರದ ಸಂಬಂಧವಿದೆಯೇ ಹೊರತು ನೇರವಾದ ಸಂಬಂಧ ಕಾಣುವುದಿಲ್ಲ. ಹಾಗಾಗಿ ಒಟ್ಟಾರೆಯಾಗಿ ಸಾರ್ಥ ಎಂಬ ಶಬ್ದಕ್ಕೆ ಇಲ್ಲಿ ಸಹಪ್ರಯಾಣಿಕ ಎಂಬ ಅರ್ಥವನ್ನು ಮಾಡಲಾಗುತ್ತದೆ. ಅರ್ಥ ಶಬ್ದಕ್ಕೆ ಪ್ರಯಾಣಿಕ ಎಂಬ ಅರ್ಥ ಇಲ್ಲ. ಆದರೆ ಸಾರ್ಥ ಎಂಬ ಶಬ್ದಕ್ಕೆ ಈ ಅರ್ಥ ಬರುತ್ತದೆ. ಈ ವಿಶೇಷವಾದ ಅರ್ಥ ಬರಲು ಕಾರಣ ಏನು? ಮತ್ತು ಸಹಪ್ರಯಾಣಿಕ ಎಂಬ ಅರ್ಥ ಸಿದ್ಧವಾಗುವುದು ಹೇಗೆ? ಎಂಬುದು ಯಕ್ಷಪ್ರಶ್ನೆಯಲ್ಲಿರುವ ಆಶಯ ಎಂಬುದು ನನ್ನ ಭಾವನೆ. 

ಅರ್ಥ ಶಬ್ದವು 'ಅರ್ಥೋ ಅಭಿಧಾನ-ರೈ-ವಸ್ತು ಪ್ರಯೋಜನ-ನಿವೃತ್ತಿಷು' ಹೆಸರು, ಹಣ, ವಸ್ತು, ಉದ್ದೇಶ, ನಿವಾರಣೆ  ಎಂಬ ಅರ್ಥಗಳಲ್ಲಿ ಪ್ರಯೋಗವಾಗುತ್ತದೆ. ಅರ್ಥದಿಂದ ಕೂಡಿದ್ದು ಸಾರ್ಥ ಎಂಬುದಾಗಿ ಸಂಸ್ಕೃತದಲ್ಲಿ ಈ ಪದಕ್ಕೆ  ನಿಷ್ಪತ್ತಿಯನ್ನು ಹೇಳುತ್ತಾರೆ. ನಮ್ಮ ಪ್ರಯಾಣ ಆರಂಭವಾದ ಮೇಲೆ ಮಧ್ಯದಲ್ಲಿ ಸೇರಿಕೊಂಡ ಅಪರಿಚಿತ ವ್ಯಕ್ತಿಯನ್ನು ಇಲ್ಲಿ ಸಾರ್ಥ ಎಂಬುದಾಗಿ ಕರೆಯಲಾಗಿದೆ. ಅವನ್ನು ನಮ್ಮಂತೆ ಯಾತ್ರೆಯನ್ನು ಆರಂಭ ಮಾಡಿದ ವ್ಯಕ್ತಿಯಾಗಿರುತ್ತಾನೆ. ಒಬ್ಬನಿಗೆ ಮತ್ತೊಬ್ಬನು ಪರಸ್ಪರ ಸಹಪ್ರಯಾಣಿಕನಾಗಿರುತ್ತಾನೆ. ಇವನಿಗೆ ಅವನು, ಅವನಿಗೆ ಇವನು ಸಾರ್ಥನಾಗಿರುತ್ತಾನೆ. ಹೊರ ಊರಿಗೆ ಹೋಗುವಾಗ ಇಬ್ಬರೂ ಏಕಾಂಗಿಗಳೇ ಆಗಿರುತ್ತಾರೆ. ಯಾತ್ರೆಯ ಮಧ್ಯದಲ್ಲಿ ಘಟಿಸುವ ಎಲ್ಲಾ ಬಗೆಯ ಸಂಗತಿಗಳನ್ನೂ ಜೊತೆಯಲ್ಲಿ ಇದ್ದು ಅನಿಭವಿಸುತ್ತಿರುತ್ತಾರೆ ಅಷ್ಟೇ. 

ಇಲ್ಲೊಂದು ತಾತ್ತ್ವಿಕವಾದ ಭಾವವಿದೆ. ಈ ಪ್ರಪಂಚಕ್ಕೆ ಬರುವ ಪ್ರತಿಯೊಬ್ಬ ಜೀವಿಯೂ ಏಕಾಂಗಿಯಾಗಿಯೇ ಬರಬೇಕಾದುದು ಅನಿವಾರ್ಯ. ಬಂದ ಮೇಲೆ ಇವಳು ತಾಯಿ, ಇವನು ತಂದೆ, ಅಣ್ಣ ಅಕ್ಕ, ಅಜ್ಜ, ಅಜ್ಜಿ ಇತ್ಯಾದಿಯಾಗಿ ಅನಂತ ಸಂಬಂಧಿಗಳು ಈ ಜೀವನ ಯಾತ್ರೆಯಲ್ಲಿ ಲಭಿಸುತ್ತಾರೆ. ರೇಲ್ವೇಯಲ್ಲೋ ಬಸ್ಸಿನಲ್ಲೋ ಪ್ರಯಾಣ ಮಾಡುವವನು ಅವನವನ ನಿರ್ದಿಷ್ಟವಾದ ಸ್ಥಳಕ್ಕೆ ಟಿಕೇಟನ್ನು ಪಡೆದಿರುತ್ತಾನೆ. ಆ ಎರಡು ನಿರ್ದಿಷ್ಟವಾದ ಪ್ರದೇಶಗಳ ನಡುವೆ ಸಿಕ್ಕವರು ನಮ್ಮ ಸಹಪ್ರಯಾಣಿಕರಾಗುತ್ತಾರೆ. ಅಲ್ಲಿ ನಾವು ಅವರ ಜೊತೆ ಲೋಕಾಭಿರಾಮವಾಗಿ ಮಾತುಕತೆಗಳನ್ನು ಆಡಿ ಆ ಸಮಯವನ್ನು ಕಳೆಯುತ್ತೇವೆ. ಅವನು ಇಳಿಯುವ ಜಾಗ ಬಂದರೆ ನಮ್ಮನ್ನು ಬಿಟ್ಟು ಇಳಿದುಹೋಗುತ್ತಾನೆ. ಅಂತೆಯೇ ನಾವು, ಕರ್ಮ ಎಂಬ ಟಿಕೇಟನ್ನು ಪಡೆದು ಈ ಜೀವನಯಾತ್ರೆಯನ್ನು ಆರಂಭಿಸುತ್ತೇವೆ. ಕರ್ಮಫಲವನ್ನು ಅನುಭವಿಸಿ ಒಂದು ದಿನ ಇಹಲೋಕದ ಯಾತ್ರೆಯನ್ನು ಮುಗಿಸುತ್ತೇವೆ. ಈ ಮಧ್ಯದಲ್ಲಿ ನಮಗೆ ಸಿಕ್ಕ ಸಹಪ್ರಯಾಣಿಕರಾದ ನಮ್ಮೆಲ್ಲಾ ಬಂಧುಮಿತ್ರರ ಜೊತೆ ಸುಮಧುರವಾದ ಕಾಲವನ್ನು ಕಳೆದರೆ ನಮ್ಮ  ಈ ಪಯಣ ಸಾರ್ಥಕ.   

ಸೂಚನೆ : 9/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 33 ವ್ಯಾಸಾಗಮನ; ಕಥಾಕಥನ (Vyaasa Vikshita-33 Vyasagamana: Kathakathana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಪಾಂಚಾಲದೇಶಕ್ಕೇ ಎಲ್ಲರೂ ಹೋಗಿಬಿಡೋಣವೆಂದು ಕುಂತಿಯು ಯುಧಿಷ್ಠಿರನಿಗೆ ಸೂಚಿಸಿದಳಷ್ಟೆ. ಅದಕ್ಕೆ ಯುಧಿಷ್ಠಿರನೂ, "ಏನು ಮಾಡುವುದೆಂದು ನಿನ್ನ ಮನಸ್ಸಿಗೆ ಬಂದಿದೆಯೋ ಅದುವೇ ನಮಗೆ ಅತ್ಯಂತ ಹಿತವಾದದ್ದು. ಆದರೆ, ಹೋಗುವುದೋ ಬೇಡವೋ ಎಂಬುದರ ಬಗ್ಗೆ ಅನುಜರ (ಎಂದರೆ ತಮ್ಮಂದಿರ) ಮನಸ್ಸು ಹೇಗಿರುವುದೋ ನಾನರಿಯೆ" ಎಂದನು. ಆಗ ಕುಂತಿಯು ಭೀಮಾರ್ಜುನರಿಗೂ ನಕುಲಸಹದೇವರಿಗೂ, ಪಂಚಾಲಕ್ಕೆ ಹೋಗಬಹುದೆನ್ನುವ ವಿಷಯವನ್ನು ಹೇಳಿದಳು. ಅವರೂ ಸಹ ಆಗಲೆಂದರು.

ಇಲ್ಲಿಯವರೆಗೆ ಆಶ್ರಯಕೊಟ್ಟಿದ್ದ ಆ ಬ್ರಾಹ್ಮಣನನ್ನು ಬೀಳ್ಕೊಟ್ಟು, ಮಹಾತ್ಮನಾದ ದ್ರುಪದನ ರಮಣೀಯವಾದ ನಗರಿಗೆ, ಮಕ್ಕಳೊಂದಿಗೆ ಕುಂತಿಯು ಅಲ್ಲಿಂದ ಹೊರಡುವುದಾಯಿತು.

ಮಹಾತ್ಮರಾದ ಪಾಂಡವರಿನ್ನೂ ಛದ್ಮವೇಷದಲ್ಲಿದ್ದಾಗಲೇ ಅವರನ್ನು ಕಾಣಲೆಂದು ಸತ್ಯವತೀಪುತ್ರರಾದ ವ್ಯಾಸರು ಆಗಮಿಸಿದರು. ಅವರು ಬರುತ್ತಿರುವುದನ್ನು ಕಾಣುತ್ತಲೇ, ಪಾಂಡವರು ಹೋಗಿ ಅವರನ್ನು ಎದುರ್ಗೊಂಡರು. ನಮಸ್ಕಾರ-ಅಭಿವಾದನಗಳನ್ನು ಮಾಡಿದರು. ಬದ್ಧಾಂಜಲಿಗಳಾಗಿ (ಎಂದರೆ ಕೈಜೋಡಿಸಿದವರಾಗಿ) ನಿಂತುಕೊಂಡರು. ವ್ಯಾಸರು ಅವರೆಲ್ಲರಿಗೂ ಕುಳಿತುಕೊಳ್ಳಲು ಅನುಮತಿಯಿತ್ತರು; ರಹಸ್ಯವಾಗಿ ತಮ್ಮನ್ನು ಪೂಜಿಸಿದ ಆ ಪಾಂಡವರನ್ನು ಕುರಿತು, ಪ್ರೀತಿಪೂರ್ವಕವಾಗಿ ಹೀಗೆ ಕೇಳಿದರು: "ವೀರರೇ ನೀವುಗಳು ಧರ್ಮದಿಂದಲೂ ಶಾಸ್ತ್ರಾನುಸಾರಿಯಾಗಿಯೂ ಜೀವನವನ್ನು ನಡೆಸುತ್ತಿದ್ದೀರಲ್ಲವೆ? ಪೂಜಾರ್ಹರಾದ ವಿಪ್ರರ ವಿಷಯದಲ್ಲಿ ತಮ್ಮ ಆದರವು ಕಡಿಮೆಯಾಗಿಲ್ಲ ತಾನೆ?" – ಎಂದು.

ಹೀಗೆ ಧರ್ಮಾರ್ಥವಾದ (ಎಂದರೆ ಧರ್ಮದ ಗುರಿಯನ್ನುಳ್ಳ) ಮಾತುಗಳನ್ನಾಡಿ, ಆ ಪೂಜ್ಯರಾದ ಋಷಿಯು ವಿಚಿತ್ರವಾದ ನಾನಾಕಥೆಗಳನ್ನೂ ಹೇಳುತ್ತಾ ಮತ್ತೆ ಹೀಗೆ ಹೇಳಿದರು:


"ತಪೋವನವೊಂದರಲ್ಲಿ, ಮಹಾತ್ಮನಾದ ಋಷಿಯೊಬ್ಬನ ಕನ್ಯೆಯೊಬ್ಬಳಿದ್ದಳು. ಅವಳು ರೂಪವತಿ, ಗುಣಶಾಲಿನಿ. ಆದರೆ ತಾನು ಮಾಡಿದ ಕರ್ಮಗಳಿಂದಾಗಿ ಆಕೆಯು ದೌರ್ಭಾಗ್ಯವತಿಯಾದಳು: ಎಂದರೆ, ತಾನು ಸುರೂಪಳಾಗಿದ್ದರೂ ಸಹ ಪತಿಯೊಬ್ಬನನ್ನು ಪಡೆಯಲಾಗಲಿಲ್ಲ. ಸುಖವಿಲ್ಲದ ಆಕೆ, ಪತಿಪ್ರಾಪ್ತಿಗಾಗಿ ತಪಸ್ಸನ್ನು ಆರಂಭಿಸಿದಳು. ತನ್ನ ಉಗ್ರವಾದ ತಪಸ್ಸಿನಿಂದ ಶಂಕರನನ್ನು ಮೆಚ್ಚಿಸಿದಳು. ಅವಳ ವಿಷಯದಲ್ಲಿ ಭಗವಂತನು ತುಷ್ಟನಾದನು. ಆ ಯಶಸ್ವಿನಿಯನ್ನು ಕುರಿತು ಹೇಳಿದನು: ನಿನಗೆ ಒಳ್ಳೆಯದಾಗಲಿ. ವರವನ್ನು ಕೇಳಿಕೋ. ವರಪ್ರದನಾದ ಶಂಕರನು ನಾನು - ಎಂದನು.

ಸ್ವಹಿತಕ್ಕಾಗಿ ಆಗ ಆಕೆ ಈಶ್ವರನನ್ನು ಕುರಿತು, "ಸರ್ವಗುಣಗಳಿಂದ ಕೂಡಿದ ಪತಿಯನ್ನು ನಾನು ಬಯಸುವೆ" - ಎಂಬುದಾಗಿ ಮತ್ತೆ ಮತ್ತೆ ಹೇಳಿದಳು. ಅವಳನ್ನು ಕುರಿತು ಈಶಾನನು (ಎಂದರೆ ಶಂಕರನು) "ಭರತವಂಶಸಂಜಾತರಾದ ಐದು ಮಂದಿ ನಿನಗೆ ಗಂಡಂದಿರಾಗುವರು" - ಎಂದನು. ಆಗ ಆ ಕನ್ಯೆಯು, "ದೇವ, ನಿನ್ನ ಪ್ರಸಾದದಿಂದ ಒಬ್ಬ ಪತಿಯನ್ನು ನಾನು ಬಯಸುವೆ" ಎಂದು ವರದನಾದ ದೇವನಿಗೆ ಹೇಳಿದಳು. ಆಗ ದೇವನು ಈ ಉತ್ತಮವಾದ ಮಾತನ್ನು ಹೇಳಿದನು: 'ಪತಿಂ ದೇಹಿ' ಎಂಬುದಾಗಿ ಐದು ಬಾರಿ ನೀನು ಹೇಳಿದೆಯಲ್ಲವೆ? ಇದೋ, ಮತ್ತೊಂದು ದೇಹವನ್ನು ನೀನು ಪಡೆಯುವೆಯಲ್ಲಾ, ಆಗ ಹೇಳಿದಂತೆ ನಡೆಯುತ್ತದೆ."

ಹೀಗೆ ಹೇಳಿ, ದೇವರೂಪಿಣಿಯಾದ ಆ ಕನ್ಯೆಯು ಈಗ ದ್ರುಪದನ ಕುಲದಲ್ಲಿ ಜನಿಸಿದ್ದಾಳೆ. ಆಕೆ ನಿಮ್ಮ ಪತ್ನಿಯಾಗಬೇಕೆಂಬ ವಿಧಿವಿಹಿತವಿಲ್ಲಿದೆ. ಆದ್ದರಿಂದ, ಮಹಾಬಲರೇ, ಪಾಂಚಾಲನಗರದಲ್ಲಿ ವಾಸಮಾಡಿರಿ. ಅವಳನ್ನು ಪಡೆದು ಸುಖಿಗಳಾಗಿರುವಿರಿ, ಇದಕ್ಕೆ ಸಂಶಯವಿಲ್ಲ – ಎಂದು ಹೇಳಿ ಹೊರಟರು.

ಸೂಚನೆ : 9/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.