Sunday, December 25, 2022

ವ್ಯಾಸ ವೀಕ್ಷಿತ - 18 ಬ್ರಾಹ್ಮಣ-ಕುಂತೀ-ಸಂವಾದ (Vyaasa Vikshita - 18 Brahmana-Kunti-Samvada)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಕುಂತಿಯು ಕೇಳಿದ ಪ್ರಶ್ನೆಗೆ ಬ್ರಾಹ್ಮಣನು ತನ್ನ ಉತ್ತರವನ್ನು ಮುಂದುವರೆಸುತ್ತಾ ಹೇಳುತ್ತಿದ್ದಾನೆ : "ಕೆಟ್ಟರಾಜನನ್ನು ಆಶ್ರಯಿಸಿದ್ದೇವಲ್ಲವೇ? ಅನುಭವಿಸಲೇಬೇಕು ಇದನ್ನೆಲ್ಲಾ, ಆತನ ರಾಜ್ಯದಲ್ಲಿದ್ದ ಮೇಲೆ. ಬ್ರಾಹ್ಮಣನಾದವನು ಯಾರ ಅಧೀನದಲ್ಲಿ ಬಾಳಬೇಕು? ಯಾರ ಅಧಿಕ್ಷೇಪಕ್ಕೆ ತುತ್ತಾಗಬೇಕು? (ಯಾರದ್ದಕ್ಕೂಇಲ್ಲ.) ಮನಸ್ಸು ಬಂದತ್ತ ಸಾಗುವ ಪಕ್ಷಿಗಳಂತೆ, ಬ್ರಾಹ್ಮಣರು. ಗುಣಶಾಲಿಯಾದ ರಾಜನು ಕಂಡನೋ, ಅವನ ರಾಜ್ಯದಲ್ಲಿ ವಾಸಿಸತಕ್ಕವರು.(ಇಲ್ಲವೋ ಅನ್ಯತ್ರ ಸಾಗತಕ್ಕವರು).

ನಾನು ಮಾಡಿದುದು ತಪ್ಪಾಯಿತು. ಏಕೆ ಗೊತ್ತೇ? ಮೊದಲು ಕಂಡುಕೊಳ್ಳಬೇಕಾದದ್ದು ಒಳ್ಳೆಯ ನೆಲೆ, ಎಂದರೆ ಸರಿಯಾದ ರಾಜನಿರುವ ಎಡೆ; ಆ ಬಳಿಕವೇ ವಿವಾಹವಾಗತಕ್ಕದ್ದು; ಮುಂದಿನ ಹೆಜ್ಜೆಯೇ ಧನಸಂಪಾದನೆ. ಹೀಗೆ, ರಾಜ-ಭಾರ್ಯೆ-ವಿತ್ತ - ಈ ಮೂರೂ (ಈ ಕ್ರಮದಲ್ಲೇ) ಸಿಕ್ಕಮೇಲೆಯೇ ಮಕ್ಕಳು-ಮರಿಗಳನ್ನೂ ಬಂಧುಗಳನ್ನೂ ದಾಟಿಸಬಹುದು. ನಾನು ಹಾಗೆ ಮಾಡಲಿಲ್ಲವಲ್ಲಾ! ಎಂದೇ ಬಂದಿತು ನನಗೀ ಆಪತ್ತು. ಈಗ ತಾಪಪಡುವುದು ಕಟ್ಟಿಟ್ಟದ್ದೇ ಸರಿ.

ಅಂತೂ, ಈ ರಾಕ್ಷಸನಿಗೆ ತೃಪ್ತಿಯುಂಟುಮಾಡುವ ಸರದಿ ನಮಗೀಗ ಬಂದಿದೆ. ನಮ್ಮ ಕುಲಕ್ಕೇ ವಿನಾಶಕಾರಿಯಿದು. ಆ ರಕ್ಕಸನಿಗೆ ಕಳುಹಿಸಬೇಕಾದ ಬಂಡಿ ಅನ್ನ, ಹಾಗೂ ಒಬ್ಬ ಪುರುಷ - ಎಂಬೀ ಸಂಬಳವನ್ನು ಅವನಿಗೀಗ ಕಳುಹಿಸಬೇಕಾಗಿದೆ. ಹೋಗಲಿ, ಯಾರಾದರೂ ಆಳೊಬ್ಬನನ್ನು ಕೊಂಡು ಕಳುಹಿಸೋಣವೆಂದರೆ, ಅದಕ್ಕೆ ಬೇಕಾದ ಹಣವು ನನ್ನಲ್ಲಿಲ್ಲವೆಲ್ಲಾ! ಯಾವನಾದರೂ ಮಿತ್ರನನ್ನು ಕಳುಹಿಸಿಬಿಡೋಣವೆನ್ನುವಂತಹ ವಿಷಯವೇ ಇದು? ಅಂತೂ, ಈ ರಕ್ಕಸನಿಂದ ಬಿಡುಗಡೆ ಪಡೆಯುವ ಸಾಧ್ಯತೆಯೇ ಇಲ್ಲ. ಹೀಗೆ ದುಃಖಸಮುದ್ರದಲ್ಲಿ ನಾನು ಮುಳುಗಿದ್ದೇನೆ. ಎಂದೇ ಇಂದು ಇವರೆಲ್ಲರೊಂದಿಗೆ ನಾನು ಈ ರಾಕ್ಷಸನ ಬಳಿ ಸಾರುವೆ. ಆ ಕ್ಷುದ್ರನು ನಮ್ಮೆಲ್ಲರನ್ನೂ ತಿಂದುಬಿಡತಕ್ಕವನೇ ಸರಿ.

ಆಗ ಕುಂತಿಯು ಹೇಳಿದಳು: " ಈ ಭಯದ ನಿಮಿತ್ತ ನೀನು ವಿಷಾದ ಪಡಲೇಬೇಕಾಗಿಲ್ಲ. ಆ ರಾಕ್ಷಸನ ದೆಸೆಯಿಂದ ಬಿಡುಗಡೆ ಪಡೆಯಲು ಉಪಾಯವೊಂದು ನನಗೆ ಕಂಡಿದೆ. ನಿನಗಿರುವ ಈ ಒಬ್ಬ ಚಿಕ್ಕಮಗ, ಬಡಪಾಯಿ ಮಗಳು – ಇವರುಗಳಾಗಲಿ; ನಿನ್ನ ಹೆಂಡತಿಯಾಗಲಿ, ನೀನೇ ಆಗಲಿ - ಹೋಗುವುದು ನನಗೆ ರುಚಿಸದು. ನನಗೆ ಐದು ಜನ ಗಂಡು ಮಕ್ಕಳಿದ್ದಾರೆ, ಬ್ರಾಹ್ಮಣನೇ. ನಿನಗೋಸ್ಕರವಾಗಿ (ಎಂದರೆ ನಿನ್ನ, ನಿಮ್ಮ, ಪ್ರಾಣವುಳಿಸಲಿಕ್ಕಾಗಿ) ಅವರಲ್ಲೊಬ್ಬನು ಆ ಪಾಪಿ ರಾಕ್ಷಸನಿಗೆ ಆಹಾರವನ್ನು ಹೊತ್ತುಕೊಂಡು ಹೋಗುವನು; ಆಯಿತಲ್ಲವೇ?" – ಎಂದಳು.

ಆಗ ಬ್ರಾಹ್ಮಣನು ಹೇಳಿದನು: "ನನ್ನ ಪ್ರಾಣವನ್ನುಳಿಸಿಕೊಳ್ಳಲು ಇದನ್ನು ನಾನು ಸರ್ವಥಾ ಮಾಡೆ. ಅತಿಥಿಯಾಗಿ ಬಂದಿರುವ ಬ್ರಾಹ್ಮಣನ ಪ್ರಾಣವನ್ನು ನನ್ನ ಸ್ವಾರ್ಥಕ್ಕಾಗಿ ಬಲಿಗೊಟ್ಟೇನೆಯೇ? (ಇಲ್ಲಿ ಗಮನಿಸಬೇಕಾದದ್ದೆಂದರೆ, ಕುಂತಿಯನ್ನೂ, ಅವಳ ಮಕ್ಕಳನ್ನೂ ಬ್ರಾಹ್ಮಣರೆಂದೇ ಈ ಗೃಹಸ್ಥ ಭಾವಿಸಿದ್ದಾನೆ. ದುರ್ಯೋಧನಾದಿಗಳಿಗೆ ತಾವು ಗೋಚರವಾಗಬಾರದೆಂದು ವೇಷಮರೆಸಿಕೊಂಡಿರಲು ಕುಂತ್ಯಾದಿಗಳೂ ತಮ್ಮ ಬಗ್ಗೆ ಇತರರಿಗೆ ಈ ಚಿತ್ರವನ್ನೇ ಕೊಟ್ಟುಕೊಂಡಿದ್ದಾರೆ. ಪ್ರಾಣಾಪತ್ತೇ ಬಂದಾಗ ಇವೆಲ್ಲಾ ಮಾಡಬೇಕಾದವೇ ಸರಿ.)

ಬ್ರಾಹ್ಮಣನೊಬ್ಬನನ್ನುಳಿಸಲಿಕ್ಕಾಗಿ ತನ್ನನ್ನೂ ತನ್ನ ಪುತ್ರನನ್ನೂ ತ್ಯಾಗಮಾಡಿಬಿಡುವುದೆಂಬುದು ಕುಲೀನೆಯಲ್ಲದವರಲ್ಲಿ ಕೂಡ ಇರಲಾರದು, ಧರ್ಮಿಷ್ಠೆಯಲ್ಲದವರಲ್ಲಿ ಕೂಡ ಇರಲಾರದು. (ಹಾಗಿರಲು, ನನ್ನನ್ನುಳಿಸಲೆಂದು ನಿನ್ನಂತಹ ಉತ್ಕೃಷ್ಟ ನಾರಿಯು ತನ್ನ ಮಗನನ್ನೇ ಬಲಿಗೊಡಲು ಸಂಕಲ್ಪಿಸುವುದು ಸಮಂಜಸವೇ? ಎಂದೂ ಇಲ್ಲ– ಎಂಬ ಭಾವ ಆತನದು.)

ಸೂಚನೆ : 25/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷಪ್ರಶ್ನೆ - 17(Yaksha Prashne - 17)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – ೧೭ ಯಜ್ಞದಲ್ಲಿ ಹೇಳುವ ಅತಿಮುಖ್ಯವಾದ ಸಾಮ ಯಾವುದು ?

ಉತ್ತರ - ಪ್ರಾಣ.

ಇಲ್ಲಿ ಕೇಳುವ ಪ್ರಶ್ನೆಯು ಅತಿಗಹನವೂ ಮತ್ತು ಇಂದು ನಮಗೆ ಅತಿ ಅಪರಿಚಿತವೂ ಆದದ್ದಾಗಿದೆ. 'ಯಜ್ಞ' ಎಂಬ ಶಬ್ದವನ್ನು ಹೋಮ, ಹವನ ಇತ್ಯಾದಿ ಪದಗಳಿಂದ ಕೇಳಿದ್ದೇವೆ. ಆದರೆ 'ಯಜ್ಞ' ಎಂಬುದಕ್ಕೆ ಸರಿಯಾದ ರೀತಿಯಲ್ಲಿ ಪರಿಚಯ ಇಲ್ಲದಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಅಂತಹ ಯಜ್ಞದಲ್ಲಿ ಮುಖ್ಯವಾದ ಸಾಮ ಯಾವುದು? ಎಂಬ ಪ್ರಶ್ನೆಗೆ 'ಪ್ರಾಣ' ಎಂಬ ಉತ್ತರವು ನಮಗೆ ಎಷ್ಟರ ಮಟ್ಟಿಗೆ ಅರ್ಥವಾದೀತು? ಆದರೂ ಅದನ್ನು ತಿಳಿಯುವ ಮತ್ತು ತಿಳಿಸುವ ಪ್ರಯತ್ನ ಮಾಡುತ್ತೇನೆ. 

ದೇವತೆಗಳನ್ನು ಉದ್ದೇಶವಾಗಿಟ್ಟುಕೊಂಡು ಹವಿಸ್ಸನ್ನು ಕೊಡುವ ಪ್ರಕ್ರಿಯೆಗೆ 'ಯಜ್ಞ' ಎಂಬುದಾಗಿ ಸಾಮಾನ್ಯವಾಗಿ ಕರೆದಿದ್ದಾರೆ. ಈ ಯಜ್ಞ ಎಂಬ ಶಬ್ದವು 'ಯಜ ದೇವತಾಪೂಜಾ-ಸಂಗತಿ -ಕರಣ- ದಾನೇಷು' ಎಂಬಂತೆ ದೇವತೆಗಳನ್ನು ಪೂಜಿಸುವುದು, ಸಂಗತಿ, ಕಾರ್ಯಕ್ಕೆ ಸಾಧನ, ದಾನ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ನಾವಿಂದು ಹೋಮ, ಹವನ ಎಂಬ ಅರ್ಥದಲ್ಲಿ ಮಾತ್ರ ಬಳಸುತ್ತಿದ್ದೇವೆ. ಭಗವದ್ಗೀತೆಯಲ್ಲಿ ದ್ರವ್ಯಯಜ್ಞ, ತಪೋಯಜ್ಞ, ಯೋಗಯಜ್ಞ, ಸ್ವಾಧ್ಯಾಯ, ಜ್ಞಾನಯಜ್ಞ ಎಂದು ಐದು ಬಗೆಯ ಯಜ್ಞವನ್ನು ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ. ಈ ಎಲ್ಲಾ ಯಜ್ಞಗಳನ್ನು ಗಮನದಲ್ಲಿ ಇಟ್ಟುಕೊಂಡು ಯಕ್ಷನು ಧರ್ಮರಾಜನಿಗೆ ಈ ಪ್ರಶ್ನೆಯನ್ನು ಕೇಳಿರಬಹುದು ಎಂದು ಅನಿಸುತ್ತದೆ. 

ಇನ್ನು 'ಸಾಮ' ಎಂದರೆ ಋಕ್, ಯಜುಸ್ಸು ಸಾಮ ಮತ್ತು ಅಥರ್ವ ಎಂಬ ನಾಲ್ಕು ವೇದಗಳಲ್ಲಿ ಒಂದು ಸಾಮ. ಒಂದು ಯಜ್ಞವನ್ನು ಮಾಡಲು ಈ ನಾಲ್ಕನ್ನೂ ಪ್ರತಿನಿಧಿಸಲು ಹೋತಾ, ಅಧ್ವರ್ಯು, ಉದ್ಗಾತಾ, ಬ್ರಹ್ಮ ಎಂಬ ನಾಲ್ಕು ಋತ್ವಿಜರನ್ನು ಆಮಂತ್ರಿಸಲಾಗುತ್ತದೆ. ಯಜ್ಞದಲ್ಲಿ ದೇವತೆಗಳನ್ನು ಆವಾಹನೆ ಮಾಡಲು  ಮಂತ್ರಗಳನ್ನು ಬಳಸಲಾಗುತ್ತದೆ. ಆಗ ಋಕ್ ಮಂತ್ರಗಳನ್ನು ಉದ್ಗಾತೃವು ರಾಗವಾಗಿ ಹಾಡುತ್ತಾನೆ. ಇದಕ್ಕೆ 'ಸಾಮ' ಎನ್ನುತ್ತಾರೆ. ನಾವಿಂದು ಈ ವೇದಗಳನ್ನು ಕೇವಲ ಒಂದು ಶಬ್ದರಾಶಿ ಎಂದು ಮಾತ್ರ ಭಾವಿಸಿದ್ದೇವೆ. ಇದು ಕೇವಲ ಶಬ್ದರಾಶಿಯಲ್ಲ. ಅದೊಂದು ಜೀವನದ ಕ್ರಮವೂ ಹೌದು.  ಹಾಗಾಗಿ ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ಭೌತಿಕವಾದ ಹವನಕ್ಕೆ ಸಂಬಂಧಿಸಿದ್ದಲ್ಲ. ಮಂತ್ರಗಳಲ್ಲಿ ಯಾವುದು ಮುಖ್ಯ? ಯಾವುದು ಗೌಣ? ಎಂದು ವಿಭಾಗಿಸುವುದು ಸಾಧ್ಯವಿಲ್ಲ. ಎಲ್ಲಾ ಮಂತ್ರಗಳೂ ದಿವ್ಯವಾದವುಗಳೇ ಆಗಿವೆ. ಭಗವದ್ಗೀತೆಯಲ್ಲಿ ಹೇಳುವಂತೆ ಜ್ಞಾನಯಜ್ಞವನ್ನು ತಿಳಿಸುವ ಪ್ರಶ್ನೆ ಇದಾಗಿದೆ. ಬಹಳ ತಾತ್ತ್ವಿಕವಾದ ವಿಷಯದಿಂದ ಕೂಡಿದ ಪ್ರಶ್ನೆ. ಇಲ್ಲಿ ಆತ್ಮಯಜ್ಞಕ್ಕೆ ಮುಖ್ಯವಾದ ಸಾಮ ಪ್ರಾಣ. ಮುಖ್ಯವಾದ ಯಜುಸ್ಸು ಮನಸ್ಸು. "ಋಕ್ಕು ಮತ್ತು ವಾಕ್ಕು ಎರಡೂ ಆತ್ಮಸಾಧನೆಗೆ ಅತಿಮುಖ್ಯವಾದ ಅಂಗ" ಎಂಬ ವಿವರಣೆಯನ್ನು ಶ್ರೀರಂಗಪ್ರಿಯ ಸ್ವಾಮಿಗಳು ಕೊಟ್ಟಿರುವುದನ್ನು ನಾನಿಲ್ಲಿ ಉದ್ಧರಿಸಿದ್ದೇನೆ.  ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬೇಕಾದರೆ ಪ್ರಾಣದ ಮೇಲಿನ ನಿಯಂತ್ರಣದಿಂದ ಮಾತ್ರ ಸಾಧ್ಯ. ಮತ್ತು ಆತ್ಮಸಾಧನೆಯನ್ನು ಸಾಧಿಸಲು ಅತಿಮುಖ್ಯವಾದ ಮಂತ್ರಗಳೆಂದರೆ ಉಪನಿಷತ್ತಿನ ಮಂತ್ರಗಳು. ಯಕ್ಷನ ಪ್ರಶ್ನೆಗೆ ಸಂವಾದಿಯಾದ ಉಪನಿಷತ್ತಿನ ಮಂತ್ರವೊಂದು ಹೀಗಿದೆ " ವಾಗೇವರ್ಗ್ವೇದೋ ಮನೋ ಯಜುರ್ವೇದಃ ಪ್ರಾಣಃ ಸಾಮವೇದಃ" ಎಂದು. ಹೇಗೆ ನಮ್ಮ ನಿತ್ಯಜೀವನದಲ್ಲಿ ಪ್ರಾಣ ಮತ್ತು ಮನಸ್ಸಿನ ವ್ಯಾಪಾರವು ಅತಿಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಬಹಳ ಮಾರ್ಮಿಕವಾಗಿ ಮತ್ತು ತತ್ತ್ವಿಕವಾಗಿ ಇಲ್ಲಿ ಯಕ್ಷನ ಪ್ರಶ್ನೆಗೆ ಧರ್ಮರಾಜನು ಉತ್ತರಿಸಿದ್ದಾನೆ.     

ಸೂಚನೆ : 25/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, December 24, 2022

ಸನ್ಮಾರ್ಗದ ನಡೆಗೆ ವಿದುರನೀತಿಯೂ ದಾರಿದೀಪ (Sanmargada Nadege Viduranitiyu Daridipa)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)



 

ಪಂಚಮ ವೇದ ಎಂದೇ ಪ್ರಸಿದ್ಧವಾದ ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸುವ, ಪುರುಷಾರ್ಥ ಪ್ರಾಪ್ತಿಗೆ ದಿಗ್ದರ್ಶಕವಾಗಿರುವ ಆರ್ಷ ಗ್ರಂಥ, ಭಗವಾನ್ ವೇದವ್ಯಾಸ ವಿರಚಿತ ಶ್ರೀ ಮನ್ಮಹಾಭಾರತ.  ಈ ಗ್ರಂಥದಲ್ಲಿ ಬರುವ ಪ್ರತಿಯೊಂದು ಪಾತ್ರದಲ್ಲೂ  ವಿಶೇಷತೆ ಇದೆ. ಪ್ರತಿಯೊಬ್ಬರೂ ಕೂಡ, ತಮ್ಮ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸಿ ಅದರಲ್ಲಿ ಅನುಪ್ರವಿಷ್ಟರಾಗಬೇಕಾಗುತ್ತದೆ; ಅನೇಕ ಪಾತ್ರಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಯಾವ ಸಂದರ್ಭದಲ್ಲಿ ಎಂತಹ ಪಾತ್ರವನ್ನು ಧರಿಸಬೇಕು, ಸೇವಿಸಬೇಕು, ಯಾವುದನ್ನು ವರ್ಜಿಸಬೇಕು, ಎಂಬುದನ್ನು ಈ ಗ್ರಂಥವು ತನ್ನಲ್ಲಿರುವ ಪಾತ್ರಗಳ ಮೂಲಕ ಲೋಕಕ್ಕೆ ಸಾರುತ್ತಿದೆ. ಧರ್ಮ-ಅಧರ್ಮಗಳ ಸ್ವರೂಪ ಹಾಗೂ ಅವುಗಳ ಹಾದಿಯಲ್ಲಿ ನಡೆದಾಗ ಸಿಗುವ ಫಲಿತಾಂಶವನ್ನು ಈ ಗ್ರಂಥದಲ್ಲಿನ ಪಾತ್ರಗಳು ಯಥಾವತ್ತಾಗಿ ಸೂಚಿಸುತ್ತಿವೆ ಎಂಬ ಕಾರಣದಿಂದ ಇಂದು ನಿತ್ಯಾನುಸಂಧಾನ ಯೋಗ್ಯವಾಗಿದೆ ಎಂಬುದು ಧರ್ಮಜ್ಞರ ಅಭಿಮತ. ಇದರಲ್ಲಿ ಭಗವಾನ್ ವೇದವ್ಯಾಸರು ಅನೇಕ ಪಾತ್ರಗಳ ಮೂಲಕ ಲೋಕಕ್ಕೆ ನೀತಿಯನ್ನು ಬೋಧಿಸಿದ್ದಾರೆ.  ಅಂತಹ ಪಾತ್ರಗಳಲ್ಲಿ ವಿದುರನ ಪಾತ್ರವೂ ಉತ್ಕೃಷ್ಟವಾಗಿದೆ.  ಪುತ್ರ ವ್ಯಾಮೋಹಕ್ಕೊಳಗಾಗಿ, ಅಧರ್ಮಿಯಾದ ಪುತ್ರ ದುರ್ಯೋಧನನನ್ನು ಅವನ ಮಾರ್ಗದಿಂದ ಚ್ಯುತಿಗೊಳಿಸಲು, ಪ್ರಯತ್ನ ಶೂನ್ಯನಾದ;  ಧರ್ಮಮೂರ್ತಿಯಾದ ಯುಧಿಷ್ಠಿರನನ್ನು ಶುದ್ಧವಾದ ಮನಸ್ಸಿನಿಂದ ಆದರಿಸಲು ಅಸಮರ್ಥನಾದ.  ಬಾಹ್ಯ ಅಂಧತ್ವದ ಜೊತೆಗೆ ಅಂತರಂಗದಲ್ಲಿಯೂ ಕುರುಡಾಗಿ ಸರ್ವದಾ ಚಿಂತೆಯನ್ನು ಅನುಭವಿಸುತ್ತಿದ್ದ.  ಆ ಚಿಂತಾ ಶಮನಕ್ಕಾಗಿ  ಧೃತರಾಷ್ಟ್ರನನ್ನು ನೆಪವಾಗಿಟ್ಟುಕೊಂಡು, ಲೋಕಕ್ಕೆ ಸಾರ್ವಕಾಲಿಕ ಸತ್ಯಗಳನ್ನೊಳಗೊಂಡ ನೀತಿಯನ್ನು ಮಹಾಪ್ರಾಜ್ಞನಾದ ವಿದುರನು ಬೋಧಿಸುತ್ತಾನೆ.


ಕಣ್ಣು ಉತ್ತಮ ರೂಪವನ್ನೂ, ಮೂಗು ಸುವಾಸನೆಯನ್ನೂ, ನಾಲಿಗೆ ಉತ್ತಮ ರುಚಿಯನ್ನೂ ಹೇಗೆ ಬಯಸುತ್ತವೆಯೋ, ಅಂತೆಯೇ ಮನಸ್ಸು, ಶಾಂತಿ ಸಮಾಧಾನಗಳನ್ನು ಬಯಸುತ್ತದೆ.  ಶಾಂತಿ ಸಮಾಧಾನಗಳಿಂದ ಕೂಡಿದ ಮನಸ್ಸಿನಿಂದ, ಐಹಿಕ ಹಾಗೂ ಪಾರಮಾರ್ಥಿಕ ಜೀವನಗಳೆರಡನ್ನೂ ಸಮರ್ಥವಾಗಿ ನಡೆಸಿ ಏಳಿಗೆಯನ್ನು ಹೊಂದಬಹುದು. ಅಂತಹ ಮನಸ್ಸನ್ನು ಹೊಂದಲು ಬುದ್ಧಿಗೆ  ತಿಳಿವಳಿಕೆ ಅತ್ಯವಶ್ಯಕ.  ಅಂತಹ ತಿಳಿವಳಿಕೆಯನ್ನು ಈ ನೀತಿಯು ಬೋಧಿಸುವುದರ ಮೂಲಕ ಸಮಾಜದ ಎಲ್ಲಾ ವರ್ಗದವರಿಗೂ ಕೈ ದೀವಿಗೆಯಾಗಿದೆ. ಅದರಲ್ಲಿರುವ ಕೆಲವೊಂದಷ್ಟು ಅಂಶಗಳನ್ನು ಗಮನಿಸುವುದಾದರೆ,


ಷಣ್ಣಾಮಾತ್ಮನಿ ನಿತ್ಯಾನಾಮೈಶ್ವರ್ಯಂ ಯೋsಧಿಗಚ್ಛತಿ l

ನ ಸ ಪಾಪೈ: ಕುತೋsನರ್ಥೈರ್ಯುಜ್ಯತೇ ವಿಜಿತೇಂದ್ರಿಯ: ll


ತನ್ನಲ್ಲಿಯೇ ಹುದುಗಿಕೊಂಡಿರುವ ಆರು ನಿತ್ಯಶತ್ರುಗಳ ಮೇಲೆ (ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ) ಯಾವನು ಪ್ರಭುತ್ವವನ್ನು ಇಟ್ಟುಕೊಂಡಿರುತ್ತಾನೆಯೋ ಅಂತಹ ಜಿತೇಂದ್ರಿಯನಾದ ಮಹಾಪುರುಷನು ಯಾವ ವಿಧವಾದ ಪಾಪಗಳಿಂದಲೂ ಲಿಪ್ತನಾಗುವುದಿಲ್ಲ; ಯಾವ ವಿಧವಾದ ಅನರ್ಥಗಳಿಂದಲೂ ಯುಕ್ತನಾಗುವುದಿಲ್ಲ.


ಕಾಮ ಕ್ರೋಧಾದಿಗಳನ್ನು ಅರಿಷಡ್ವರ್ಗಗಳು ಎಂಬುದಾಗಿ ಕರೆದಿದ್ದಾರೆ.  ಇವು ನಮ್ಮ ಅಂತಶ್ಶತ್ರುಗಳು. ಇವು ನಮ್ಮ ಮನಸ್ಸನ್ನು ಕ್ಷೋಭೆಗೊಳಿಸಿ, ಭೌತಿಕ, ದೈವಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳ ಏಳಿಗೆಯನ್ನು ಕುಂಠಿತಗೊಳಿಸುತ್ತವೆ.  ಹಾಗಾಗಿ, ಅಭಿವೃದ್ಧಿಯನ್ನು ಬಯಸುವವನು ಇವುಗಳನ್ನು ಮೊದಲು ಜಯಿಸಬೇಕು.  ಅರಿಷಡ್ವರ್ಗಗಳನ್ನು ಪೂರ್ಣವಾಗಿ ತ್ಯಜಿಸಲು ಸಾಮಾನ್ಯರಿಂದ ಕಷ್ಟಸಾಧ್ಯ ,ಆದರೆ  ಅವುಗಳಿಗೆ ವಶರಾಗದೇ ನಮ್ಮ ಅಧೀನದಲ್ಲಿ ಅವುಗಳನ್ನು ಇರಿಸಿಕೊಂಡಾಗ ಅನರ್ಥಗಳನ್ನು ತಪ್ಪಿಸಬಹುದು. ಚತುರ್ವಿಧ ಪುರುಷಾರ್ಥಗಳಲ್ಲಿ ಒಂದಾದ ಧರ್ಮಕ್ಕೆ ಅವಿರೋಧವಾದ ಕಾಮವು ಸೇವ್ಯ. ಭಗವದ್ಧರ್ಮಕ್ಕೆ ವಿರೋಧ ಬಂದಾಗ, ಅದನ್ನೆದುರಿಸಲು ಶ್ರೀರಾಮನಂತೆ ಸಾತ್ತ್ವಿಕವಾದ ಕೋಪವನ್ನು ಬರಮಾಡಿಕೊಂಡು, ಆ ಕಾರ್ಯ ಮುಗಿದ ತಕ್ಷಣವೇ, ಅದನ್ನು ಉಪಸಂಹರಿಸಿಕೊಳ್ಳುವ ಜಾಣ್ಮೆಯನ್ನೂ ಕಲಿಯಬೇಕಾಗುತ್ತದೆ. ಮೋಹವನ್ನೂ ಸಹ  ಅಶಾಶ್ವತ ವಸ್ತುಗಳ ಮೇಲಿರಿಸಿದರೆ, ದುಃಖ ಕಟ್ಟಿಟ್ಟ ಬುತ್ತಿ.  ಅದೇ ಮೋಹವನ್ನು ಭಗವಂತನೆಡೆಗೆ ತಿರುಗಿಸಿದಾಗ ಭಕ್ತಿಯಾಗಿ ಪರಿಣಮಿಸಿ ಶಾಶ್ವತವಾದ ಆನಂದವನ್ನು ಹೊಂದುವುದಕ್ಕೆ ಸಾಧ್ಯ ಎಂಬುದಕ್ಕೆ ಅನೇಕ ಭಾಗವತೋತ್ತಮರು ಉದಾಹರಣೆಯಾಗಿದ್ದಾರೆ. ಹೀಗೆ ಅರಿಷಡ್ವರ್ಗಗಳನ್ನು ಪೂರ್ಣವಾಗಿ ತ್ಯಜಿಸಲಾಗದ ಪಕ್ಷದಲ್ಲಿ, ಅವುಗಳ ಮೇಲೆ ನಮ್ಮ ಹಿಡಿತವನ್ನು ಇಟ್ಟುಕೊಳ್ಳಲು ಸದಾ ಪ್ರಯತ್ನಶೀಲರಾದಾಗ, ಪಾಪಕಾರ್ಯಗಳಿಂದ ಒದಗಬಹುದಾದ ದುಃಖದಿಂದ ಪಾರಾಗಬಹುದು.


"ಕಳೆಯನ್ನು ಕಿತ್ತು ಬಿಸಾಡುವ ಬದಲು ಅದನ್ನೇ ಗೊಬ್ಬರವನ್ನಾಗಿ ಉಪಯೋಗಿಸಿಕೊಂಡು ಗಿಡ ಬೆಳೆಸುವವನು ಕುಶಲನಾದ ವ್ಯವಸಾಯಗಾರ.  ಅಂತೆಯೇ ಕಾಮ  ಲೋಭಾದಿಗಳನ್ನು ಬಿಡಲಾಗದಿದ್ದರೆ ಭಗವತ್ಕಾಮ ಭಗವಲ್ಲೋಭವಾಗುವಂತೆ ಮಾಡಿಕೊಳ್ಳುವುದು ಜಾಣತನದ ಕೆಲಸ " ಎಂಬ ಶ್ರೀರಂಗ ಮಹಾಗುರುಗಳ ವಾಣಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ.


ಅಪ್ಯುನ್ಮತ್ತಾತ್ ಪ್ರಲಪತೋ ಬಾಲಾಚ್ಚ ಪರಿಜಲ್ಪತ: l

ಸರ್ವತ: ಸಾರಮಾದದ್ಯಾದಶ್ಮಭ್ಯ ಇವ ಕಾಂಚನಮ್ ll


ಅಸಂಗತವಾಗಿ ಮಾತನಾಡುವ ಹುಚ್ಚನಿಂದಾಗಲೀ ಅಥವಾ ತೊದಲು ನುಡಿಯುವ ಮಗುವಿನಿಂದಾಗಲೀ ಎಲ್ಲೆಡೆಯಿಂದಲೂ ಗುಣವನ್ನು ಗ್ರಹಿಸಬೇಕು. ಕಲ್ಲಿನಿಂದ ಚಿನ್ನವನ್ನು ಪಡೆಯುವಂತೆ ಎಲ್ಲರಿಂದಲೂ ಸಾರಭೂತವಾದ ಸದ್ಗುಣಗಳನ್ನು ಪಡೆಯಬೇಕು.


ಇಲ್ಲಿ ಗುಣಗ್ರಾಹಿತ್ವದ ಬಗ್ಗೆ ವಿದುರನು ಅತ್ಯಂತ ಮನೋಜ್ಞವಾಗಿ ತಿಳಿಸಿದ್ದಾನೆ. ಗುಣ ಗ್ರಾಹಿತ್ವವೆಂಬುದು ಎಲ್ಲರೂ ಅಳವಡಿಸಿಕೊಳ್ಳಲೇಬೇಕಾದಂತಹ ಒಂದು ಗುಣ. ಪ್ರತಿಯೊಂದು ಜೀವಿಯಲ್ಲಿಯೂ ಅನುಸರಿಸಲು ಯೋಗ್ಯವಾದಂತಹ ಒಂದಲ್ಲ ಒಂದು ಗುಣ ಇದ್ದೇ ಇರುತ್ತದೆ. ಎಷ್ಟೇ ಕೆಟ್ಟವರಾದರೂ, ಅವರಲ್ಲಿ ಒಂದಾದರೂ ಒಳ್ಳೆಯ ಗುಣ ಅಥವಾ ಅದರ ಛಾಯೆ ಇದ್ದೇ ಇರುತ್ತದೆ.  ಅಂತಹ ಗುಣವನ್ನು ಗ್ರಹಿಸಿ, ಗುರುತಿಸಿ, ಸಾಧ್ಯವಾದಲ್ಲಿ, ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡಾಗ ಶ್ರೇಯಸ್ಕರ ಎಂಬುದರಲ್ಲಿ ಸಂಶಯವೇನಿಲ್ಲ.  ಶ್ರೀಮದ್ಭಾಗವತವು ಒಬ್ಬ ಅವಧೂತನು ಯಾವ ಯಾವ ಜೀವಿಯಿಂದ ಎಂತೆಂತಹ ಗುಣವನ್ನು ಗ್ರಹಿಸಿ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಂಡ ಎಂಬುದನ್ನು ವಿಸ್ತಾರವಾಗಿ ತಿಳಿಸಿದೆ.


ಪೂರ್ವೇ ವಯಸಿ ತತ್ ಕುರ್ಯಾತ್ ಯೇನ ವೃದ್ಧ: ಸುಖo ವಸೇತ್ l

ಯಾವಜ್ಜೀವಂ ತತ್ ಕುರ್ಯಾತ್ ಯೇನ ಪ್ರೇತ್ಯ ಸುಖo ವಸೇತ್ ll


 ಯಾವ ಕಾರ್ಯವನ್ನು ಮಾಡುವುದರಿಂದ ವೃದ್ಧಾಪ್ಯದಲ್ಲಿ ಸುಖವಾಗಿರಲು ಸಾಧ್ಯವಾಗುವುದೋ ಅಂತಹ ಕಾರ್ಯಗಳನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು. ಅವಸಾನಾನಂತರದಲ್ಲಿ ಸಗ್ಗತಿಯನ್ನು ಪಡೆಯಲು ಯಾವ ಸತ್ಕಾರ್ಯಗಳನ್ನು ಮಾಡಬೇಕೋ ಅವನ್ನು ಜೀವಮಾನಪೂರ್ತಿ ಮಾಡಬೇಕು.


ಹೀಗೆ ಕರ್ಮಾಧಾರಿತವಾದ ಜೀವನದ ಪ್ರತಿಯೊಂದು ಹೆಜ್ಜೆಯನ್ನೂ ಪೂರ್ವಾಪರಗಳ ಬಗ್ಗೆ ನಿಗಾ ವಹಿಸಿ ಸತ್ಕರ್ಮಗಳನ್ನು ಆಚರಿಸಿದರೆ ಇಹ ಪರಗಳ ಸೌಖ್ಯ ಎಂಬುದನ್ನು ಸೂಚಿಸುತ್ತದೆ ವಿದುರನ ಈ ನುಡಿ. ಹೀಗೆ ಅನೇಕ ಸದ್ವಿಚಾರಗಳನ್ನೊಳಗೊಂಡ ವಿದುರ ನೀತಿಯು ಸನ್ಮಾರ್ಗದ ನಡೆಗೆ ದಾರಿದೀಪವಾಗಿದೆ.


ಸೂಚನೆ : 24/12/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ. 

Friday, December 23, 2022

ಜೀವನದ ಮರ್ಮವನ್ನು ಸಾರುವ ಭಾರತೀಯ ಆಟಗಳು (Jivanada Marmavannu Saruva Bharatiya Atagalu)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)




ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಕ್ರಿಯೆ ಆಟ. ಆಟಗಳಿಂದ ದೈಹಿಕ ಹಾಗೂ ಮಾನಸಿಕವಾದ ತುಷ್ಟಿ ಪುಷ್ಟಿಗಳು ಉಂಟಾಗುತ್ತವೆ ಎಂಬುದು ಎಲ್ಲರ ಅನುಭವ. ಆಟಗಳಲ್ಲಿ ಅನೇಕ ವಿಧಗಳು. ಬಯಲಿನಲ್ಲಿ ಆಡುವ ಚಿನ್ನಿದಾoಡು, ಲಗೋರಿ, ಕಬಡ್ಡಿ  ಇತ್ಯಾದಿ  ಆಟಗಳು ದೈಹಿಕ ಸದೃಢತೆಯನ್ನು ತಂದುಕೊಟ್ಟರೆ, ಒಳಾoಗಣ ಕ್ರೀಡೆಗಳಾದ ಚದುರಂಗ, ಪಗಡೆ, ಚೆನ್ನೆಮಣೆ ಇತ್ಯಾದಿಗಳು ಮನಸ್ಸಿಗೆ ಮುದವನ್ನು ನೀಡುವುದರ ಜೊತೆಗೆ  ಬುದ್ಧಿಯ ಚುರುಕುತನವನ್ನು ಹೆಚ್ಚಿಸುತ್ತವೆ ಎಂಬುದು ಸಾಮಾನ್ಯವಾದ ನೋಟವಾಗಿದೆ.


ಭಾರತೀಯ ಮಹರ್ಷಿಗಳಿಂದ ಲೋಕಕ್ಕೆ ಕರುಣಿಸಲ್ಪಟ್ಟ ಸಂಸ್ಕೃತಿ ಪರಂಪರೆಯಲ್ಲಿಯೂ ಕೂಡ ಅನೇಕ ಆಟಗಳು ಸ್ಥಾನ ಪಡೆದುಕೊಂಡಿರುವುದನ್ನೂ ಹಾಗೂ ಅವುಗಳು ಹಬ್ಬ ಹರಿದಿನಗಳ ಸಂದರ್ಭದಲ್ಲಿ, ವಿವಾಹಾದಿ ಸಂಸ್ಕಾರಗಳ ಸಂದರ್ಭದಲ್ಲಿ ಯೋಜಿಸಲ್ಪಟ್ಟಿರುವುದನ್ನು ಕಾಣಬಹುದು.

 ಅವುಗಳು ಕೇವಲ ದೈಹಿಕ ಹಾಗೂ ಮಾನಸಿಕ ತುಷ್ಟಿ - ಪುಷ್ಟಿಗಳ ಜೊತೆಗೆ ಇನ್ನೂ ಆಳವಾದ ಅರ್ಥವನ್ನು ಹೊತ್ತುಕೊಂಡು ಬಂದಿರುವುದನ್ನು ಗಮನಿಸಬಹುದಾಗಿದೆ.


"ಭಾರತೀಯರ ಆಹಾರ - ವಿಹಾರ, ಉಡುಗೆ - ತೊಡಿಗೆ, ವಿದ್ಯೆ - ಕಲೆ ಎಲ್ಲವೂ ಅಷ್ಟಾoಗಯೋಗದಲ್ಲಿ ಹಾಸು ಹೊಕ್ಕಾಗಿದೆ " ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ, ಜೀವನದ ಮೂಲವನ್ನೂ, ಅದರ ಫಲವನ್ನೂ ಚೆನ್ನಾಗಿ ಅರಿತ ಮಹರ್ಷಿಗಳು ಅದನ್ನು ಲೋಕಕ್ಕೆ ಅರ್ಥೈಸಲು ಮನುಕುಲದ ಉದ್ಧಾರಕ್ಕಾಗಿ ದಯಪಾಲಿಸಿದ ಕೊಡುಗೆಗಳಲ್ಲಿ ಭಾರತೀಯ ಸಾಂಪ್ರದಾಯಿಕ ಆಟಗಳೂ ಒಂದಾಗಿದೆ.

ಅವುಗಳಲ್ಲಿ ಕೆಲವೊಂದನ್ನು ವಿಮರ್ಶಿಸುವ ಪ್ರಯತ್ನವನ್ನು ಮಾಡುವುದಾದರೆ-


ಉಯ್ಯಾಲೆ ಆಟ - ಯುಗಾದಿ ಹಬ್ಬದಂದು ಉಯ್ಯಾಲೆಯನ್ನು ಕಟ್ಟಿ ಆಡುವ ಸಂಪ್ರದಾಯ ಬಂದಿದೆ. ಹೊಸ ವರ್ಷದ ಆರಂಭದ ದಿನದಂದು ಯೋಗ ಭೋಗಮಯವಾದ ಜೀವನವನ್ನು ಹೊಂದಲು ಯತ್ನಿಸಬೇಕು ಎಂಬುದನ್ನು ಜ್ಞಾಪಿಸುತ್ತದೆ ಈ ಆಟ. ಜೀವನವು ತೂಗುಯ್ಯಾಲೆಯಂತೆ ಎಂಬುದು ತಿಳಿದಿರುವ ನಾಣ್ಣುಡಿಯೇ ಆಗಿದೆ. ಶರೀರದಲ್ಲಿ ಪ್ರಾಣ ಹಾಗೂ ಅಪಾನಗಳು ಮೇಲಕ್ಕೂ ಕೆಳಕ್ಕೂ ಆಡುವಂತೆ ಉಯ್ಯಾಲೆಯು ಮುಂದಕ್ಕೂ ಹಿಂದಕ್ಕೂ ಆಡುತ್ತದೆ.  ಜೀವನದಲ್ಲಿ ಪ್ರವೃತ್ತಿ ಹಾಗೂ ನಿವೃತ್ತಿಗಳು ಎರಡೂ ಇರಬೇಕು ಎಂಬ ಮರ್ಮವನ್ನು ತಿಳಿಸುತ್ತದೆ. ಪ್ರಾಣಾಪಾನಗಳು ಹಾಗೂ ಮನಸ್ಸು ಇಂದ್ರಿಯಗಳ ಮೂಲಕ ಬಹಿರ್ಮುಖವಾಗಿ ಹರಿದಾಗ ಪ್ರವೃತ್ತಿಮಾರ್ಗ; ಅಂದರೆ ಭೋಗಮಯವಾದ ಜೀವನ . ಅವೇ ಹಿಮ್ಮುಖವಾಗಿ ಸಾಗಿದಾಗ  ನಿವೃತ್ತಿ ಮಾರ್ಗ ಅಥವಾ ಯೋಗಮಯವಾದ ಜೀವನ. ಪ್ರಾಣಾಪಾನಗಳನ್ನು ಸಮಸ್ಥಿತಿಯಲ್ಲಿಟ್ಟುಕೊಂಡು ಜೀವನದಲ್ಲಿ ಯೋಗ ಭೋಗಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವುದೇ ಪ್ರತಿಯೊಬ್ಬ  ಮನುಷ್ಯನೂ ಮಾಡಬೇಕಾದಂತಹ ಆದರ್ಶ ಜೀವನ. ಯೋಗಭೋಗಗಳು ಒಂದಕ್ಕೊಂದು ವಿರೋಧವಿಲ್ಲದೆ ಇರುವಂತೆ ಇಟ್ಟುಕೊಳ್ಳಬೇಕೆಂಬುದನ್ನು ಸೂಚಿಸುವುದೇ ಈ ಆಟದ ಮರ್ಮವಾಗಿದೆ..


ಗಾಳಿಪಟ - ಸೂತ್ರಧಾರನ ಅಧೀನಕ್ಕೆ ಒಳಪಟ್ಟ ಗಾಳಿಪಟವು ಮೇಲಕ್ಕೆ ಹಾರುತ್ತದೆ; ಭೂಮಿಯಿಂದ ಆಕಾಶದೆಡೆಗೆ ಹಾರುತ್ತದೆ. ಸೂತ್ರವನ್ನು ಸರಿಯಾಗಿ ಹಾಕಿದ್ದರೆ ಅದು ನೆತ್ತಿಯ ಮೇಲೆ ದೂರದಲ್ಲಿ ನಿಶ್ಚಲವಾಗಿರುತ್ತದೆ;  ಸೂತ್ರವನ್ನು ಚೆನ್ನಾಗಿ ಹಾಕಿಲ್ಲದಿದ್ದರೆ ನೆಲಕ್ಕೆ ಪತನವಾಗುತ್ತದೆ. ಅಂತೆಯೇ ನಮ್ಮಗಳ ಜೀವನವೂ ಭಗವಂತನ ಸತ್ಯ ಸೂತ್ರಕ್ಕೆ ಒಳಪಟ್ಟಾಗ ಏರಿಳಿತಗಳಿಂದ ಕೂಡಿದ ಈ ಜೀವನದಲ್ಲಿಯೂ ಭಗವಂತನ ಸ್ಮರಣೆಯೊಂದಿದ್ದರೆ ಮನೋ ನಿಶ್ಚಲತೆಯನ್ನು ಸಾಧಿಸಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ಅದೇ ಭಗವಂತನ ಸತ್ಯ ಸೂತ್ರದಿಂದ ಬೇರ್ಪಟ್ಟರೆ ಸೂತ್ರಧಾರನಿಂದ ಬೇರ್ಪಟ್ಟ ಗಾಳಿಪಟದಂತೆ ನಮ್ಮ ಜೀವನಕ್ಕೂ ಅಧಃ ಪತನವೇ ಗತಿ ಎಂಬುದು ಈ ಆಟದ ಮಾರ್ಮಿಕ ನೋಟ.


ಪರಮಪದ ಸೋಪಾನ - ಇದು ಹಾವು ಏಣಿ ಆಟ ಎಂದು ಪ್ರಸಿದ್ಧ. ಪಟವೊಂದರ ಮೇಲ್ಭಾಗದ ತುತ್ತ ತುದಿಯಲ್ಲಿ ಪರಮಪದದ ಸ್ಥಾನ. ಕೆಳಗಿನಿಂದ ಮೇಲಿನವರೆಗೂ ಹಲವು ಮನೆಗಳಿವೆ. ಮಧ್ಯ ಮಧ್ಯದಲ್ಲಿ ಚಿಕ್ಕ ದೊಡ್ಡ ಏಣಿಗಳುಂಟು. ನೇರವಾಗಿ ಹಾರಿ, ಮೇಲೆ ಹೋಗುವ ಸಾಧನಗಳು. ಅಲ್ಲಲ್ಲೇ ಬಾಯಿ ತೆರೆದ ಸರ್ಪಗಳೂ ಉಂಟು. ಸರ್ಪದ ಬಾಯಿಗೆ ಸಿಕ್ಕಿದರೆ ಒಮ್ಮೆಲೆ ಪತನ. ಹಾಗಾಗಿ, ಅತ್ಯಂತ ಜಾಗರೂಕವಾಗಿ ಮುನ್ನಡೆಸಬೇಕಾದ ಹೊಣೆಗಾರಿಕೆ ಇದೆ. ಇವು ಜೀವಿಯು ಜೀವನ ಯಾತ್ರೆಯನ್ನು ಮಾಡುವಾಗ ಕಂಡು ಅನುಭವಿಸುವ ಸುಖ ದುಃಖದ ಸ್ಮರಣೆಗೆ ಸಹಾಯವಾದವುಗಳು. ಜೀವನವೇ ಒಂದು ಆಟ; ಪರಮ ಪದದ ಪ್ರಾಪ್ತಿಯೇ ಅದರ ಗುರಿ. ಆಟ ಎಂದರೆ ಅದೊಂದು ಪುರುಷ ಪ್ರಯತ್ನ. ಪುರುಷ ಪ್ರಯತ್ನವಿಲ್ಲದೆ ಬದುಕು ಸಾಧ್ಯವಿಲ್ಲ. ಅದನ್ನು ಪ್ರತಿಯೊಬ್ಬನೂ ಜೀವನದಲ್ಲಿ ಇಟ್ಟುಕೊಳ್ಳಲೇಬೇಕು. ಮುಂದೆ ಹೋಗಬೇಕಾದರೆ ದಾಳ ಹಾಕಲೇಬೇಕು.  ಪುರುಷ ಪ್ರಯತ್ನ ಅವರವರ  ಕೈಯಲ್ಲಿದೆ.  ಆದರೆ ಫಲ ದೈವಾಧೀನ.  ಎಂದರೆ ಅವರ ಪೂರ್ವ ಕರ್ಮದ ಫಲ. ಎಷ್ಟೇ ಶ್ರದ್ಧೆಯಿಂದ ದಾಳ ಹಾಕಿದರೂ ಏನೇನು ಮನದಲ್ಲಿ ಅಂದುಕೊಂಡರೂ ನಡೆಯುವುದು ದಾಳಗಳ ಪ್ರಕಾರವೇ. ದೈವಬಲ ಹಾಗೂ ಪುರುಷ ಪ್ರಯತ್ನದಿಂದಲೇ ಜೀವನ ಸಾಗಬೇಕು. ಹೀಗೆ ಸಮಗ್ರ ಜೀವನವನ್ನು ಪರಿಚಯಿಸುವ ಆಟ ಇದಾಗಿದೆ. ಮನೋರಂಜನೆಯ ಜೊತೆ ಜೊತೆಗೆ ಆತ್ಮಾವಲೋಕನಕ್ಕೂ ಇಂತಹ ಭಾರತೀಯ ಆಟಗಳನ್ನು ಮಕ್ಕಳ ಜೊತೆಗೆ ಆಡಿ ನಲಿಯುತ್ತಾ ಜೀವನದ ಪಾಠ ಕಲಿಯೋಣ.


ಸೂಚನೆ: 22/12/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

ಉಪವಾಸವು ಆಹಾರದ ನಿಯಮನವೇ? (Upavasavu Aharada Niyamanave?)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


 'ಉಪವಾಸ' ಎಂಬ ಶಬ್ದವನ್ನು ನಾವು ನಿತ್ಯದಲ್ಲೂ ಕೇಳುತ್ತೇವೆ. ಆಷಾಢ ಮಾಸದ ಏಕಾದಶೀ ಬಂದಿತೆಂದರೆ ನಮಗೆ ನೆನಪಾಗುವುದು 'ಉಪವಾಸ' ಎಂದು. ಪ್ರತಿಪಕ್ಷದಲ್ಲೂ ಒಂದು ಏಕಾದಶೀ ಬರುತ್ತದೆ. ಆಗಲೂ ಉಪವಾಸವನ್ನು ಮಾಡುತ್ತೇವೆ. ಅಂದರೆ ಈ ಉಪವಾಸದಂದು ನಾವು ಏನು ಮಾಡುತ್ತೇವೆ? ಉಪವಾಸದ ಅರ್ಥವೇನು? ಉಪವಾಸದ ಹಿನ್ನೆಲೆ ಏನು? ಅದನ್ನು ಆಚರಣೆ ಮಾಡುವುದರಿಂದ ನಮಗಾಗುವ ಪ್ರಯೋಜನವಾದರೂ ಏನು? ಎಂಬ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.  


'ಉಪ' ಎಂದರೆ ಸಂಸ್ಕೃತದಲ್ಲಿ ಸಮೀಪ ಎಂದರ್ಥ. 'ವಾಸ' ಎಂದರೆ ವಾಸ ಮಾಡುವುದು ಎಂದರ್ಥ. ಎರಡನ್ನೂ ಸೇರಿಸಿದರೆ ಉಪವಾಸ ಎಂದಾಗುತ್ತದೆ. ಅದರ ಅರ್ಥವು ಸಮೀಪದಲ್ಲಿ ವಾಸ ಮಾಡುವುದು ಎಂಬ ಸಹಜವಾದ ಅರ್ಥವು ಬರುತ್ತದೆ. ಆದರೆ ಇಲ್ಲಿ ಬರುವ ಅರ್ಥಕ್ಕೂ ನಾವು ಮಾಡುವ ಉಪವಾಸಕ್ಕೂ ಯಾವ ಬಗೆಯ ಸಂಬಂಧವೂ ತೋರುವುದಿಲ್ಲವಲ್ಲ? ಎಂಬ ಜಿಜ್ಞಾಸೆಯೂ ಬರುವುದು ಸರಿಯೇ! ನಾವಿಂದು 'ಉಪವಾಸ' ಎಂದೊಡನೆ - ಒಂದು ಸೂರ್ಯೋದಯದಿಂದ ಇನ್ನೊಂದು ಸೂರ್ಯೋದಯದವರೆಗೆ ಯಾವುದೇ ಆಹಾರವನ್ನು ಸೇವಿಸದೇ ಇರುವುದು, ಅಥವಾ ಯಾರಿಂದ ಯಾವ ಆಹಾರವನ್ನೂ ಸೇವಿಸದೇ ಇರಲು ಅಸಾಧ್ಯವೋ ಅಂತವರು ಉಪಾಹಾರ ಅಥವಾ ಫಲಾಹಾರವನ್ನಾದರೂ ತೆಗೆದುಕೊಳ್ಳುವುದು. ಇನ್ನೂ ಕೆಲವು ಕಡೇ ಇದನ್ನೂ ಮಾಡದೆ ಕೇವಲ ದ್ರವಾಹಾರವನ್ನು ಮಾಡಿ ಉಪವಾಸವನ್ನು ಮಾಡುತ್ತಾರೆ. ಇನ್ನು ಕೆಲವರು ದೇವರ ತೀರ್ಥದಲ್ಲೇ ಉಪವಾಸವ್ರತವನ್ನು ಆಚರಿಸುವವರೂ ಇದ್ದಾರೆ. ಒಟ್ಟಾರೆ ಹೇಳುವುದಾದರೆ ಇದೊಂದು ಆಹಾರನಿಯಮ ಎಂಬ ಅರ್ಥವನ್ನು ಮಾತ್ರ ಇಂದಿನ ದಿನ ನೋಡುವಂತಾಗಿದೆ. ಆದರೆ ಇದೇ ನಿಜವಾದದ್ದೇ? ಈ ಉಪವಾಸವನ್ನು ನಾವು ಮಾಡುವ ಉದ್ದೇಶವಾದರೂ ಏನು? ಊಟವನ್ನೋ ಅಥವಾ ಯಾವುದೇ ಬಗೆಯ ಆಹಾರಾದಿಗಳನ್ನೋ ತೆಗೆದುಕೊಳ್ಳದೇ ಇರುವುದು ಮಾತ್ರವೇ ಉಪವಾಸವೋ? ಅಥವಾ ಇದಕ್ಕೆ ಇನ್ನೇನಾದರೂ  ವಿಶೇಷತೆ ಇದೆಯೇ? ವಿಮರ್ಶೆ ಮಾಡೋಣ.


ಉಪವಾಸವೆಂದರೆ ಸಮೀಪ ವಾಸಮಾಡುವುದು ಅಥವಾ ಇರುವುದು ಎಂದರ್ಥ. ನಮಗೆ ಯಾರ ಸಾಮೀಪ್ಯ ಬೇಕಾಗಿದೆಯೋ ಅವರ ಬಳಿ ಇರುವುದಕ್ಕೆ 'ಉಪವಾಸ' ಎಂದು ಹೇಳಬಹುದು. ನಮಗೆ ತಿಂಡಿ ಬೇಕಾಗಿದೆ. ಅಂದರೆ ತಿಂಡಿಯ ಬಳಿ ಇರುವುದು, ನೀರು ಬೇಕಾಗಿದೆ, ನೀರಿನ ಬಳಿ ಇರುವುದು ಎಂಬ ಅರ್ಥವೋ! ಇದೂ ಹೌದು. ಇದರ ಜೊತೆಗೆ ಇನ್ನೂ ಅರ್ಥವಿದೆ. ನಮಗೆ ವಿದ್ಯೆ ಬೇಕಾಗಿದೆ ಎಂದರೆ ಗುರುವಿನ ಬಳಿ ನಿಕಟ ಸಾಮೀಪ್ಯ ಬೇಕು. ಅದೇ ವಿದ್ಯೆ ಬೇಕಾದರೆ ಪುಸ್ತಕದ ಸಮೀಪಸಂಬಂಧ ಬೇಕು. ಅಂತೆಯೇ ನಮಗೆ ನಮ್ಮ ಜೀವನದಲ್ಲಿ ಸಾಧಿಸಲೇಬೇಕಾದ ಸಾಮೀಪ್ಯ ಎಂದರೆ ಅದು ದೇವರು.  ದೇವರ ಬಳಿ ಇರುವುದಕ್ಕೇ 'ಉಪವಾಸ' ಎಂಬ ಶಬ್ದ ಪ್ರಯೋಗ ಬಂದಿರುವುದು. ಕೇವಲ ಶಾರೀರಕ ಸಂಬಂಧವನ್ನು ಮಾತ್ರ ಹೊಂದಿದರೆ ಸಾಕೇ? ಅಂದರೆ ದೇವರ ಬಳಿ ಹೋಗಿ ಕುಳಿತರೆ ಉಪವಾಸವಾಗುತ್ತದೆಯೋ? ಗುರುವಿನ ಬಳಿ ಹೋಗಿ ಕುಳಿತರೆ ವಿದ್ಯೆ ನಮದಾಗುತ್ತದೆಯೋ? ಇಲ್ಲ. ಕೇವಲ ಶರೀರದ ಸಂಬಂಧಮಾತ್ರವಿದ್ದರೆ ಸಾಲದು. ನಾವು ಯಾವುದನ್ನು ಬಯಸಿದ್ದೇವೋ ಅಲ್ಲಿ ನಮ್ಮ ಶರೀರ, ಮನಸ್ಸು, ಇಂದ್ರಿಯ, ಆತ್ಮ ಇವೆಲ್ಲದರ ನಿಕಟ ಸಂಬಂಧವಿದ್ದಾಗ ಮಾತ್ರ ಅದು 'ಉಪವಾಸ'ವಾಗುತ್ತದೆ. 


ಕೆಲವೊಮ್ಮೆ ನಮ್ಮ ಮಾತಿಗೂ ಕೃತಿಗೂ ಮನಸ್ಸಿಗೂ ಯಾವ ಸಂಬಂಧವೂ ಇರುವುದಿಲ್ಲ. ಇವೆಲ್ಲವೂ ಒಂದೇ ಸರಳರೇಖೆಯಲ್ಲಿ ಬಂದಾಗ ಮಾತ್ರ, ಬೇಕಾದವಸ್ತು ನಮಗೆ ಲಭ್ಯವಾಗುತ್ತದೆ. ಅದಕ್ಕೆ ಮಹಾತ್ಮರ ಲಕ್ಷಣವನ್ನು ಹೇಳುವಾಗ ಯಾರ ಮಾತು, ಕೃತಿ, ಮನಸ್ಸು ಒಂದಾಗಿರುತ್ತದೋ ಅವರು ಮಹಾತ್ಮರು, ಯಾರ ಮನಸ್ಸು, ಮಾತು, ಕೃತಿ ಎಲ್ಲವೂ ಭಿನ್ನವಾಗಿರುತ್ತದೋ ಅವರು ದುರಾತ್ಮರು ಎಂಬುದಾಗಿ ಸಜ್ಜನರ ಮತ್ತು ದುರ್ಜನರ ವ್ಯತ್ಯಾಸವನ್ನು ಸುಭಾಷಿತದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಕೆಲವೊಮ್ಮೆ ನಾವು ಮಾತಿನಲ್ಲಿ ಹೇಳುವುದುಂಟು. 'ಒಳಗೊಂದು, ಹೊರಗೊಂದು' ಅಂತ. ಆದರೆ ಅದು ಅದು 'ಒಳಗೂ ಹೊರಗೂ ಒಂದೇ ಆಗಬೇಕು'. ಹೀಗೆ ಎಲ್ಲೆಲ್ಲೂ ಎಲ್ಲವೂ ಒಂದಾಗಿ ಸೇರಿಕೊಂಡಾಗ ಅದು ಉಪವಾಸವಾಗುತ್ತದೆ. ಅಂದರೆ ನಾವು ನಮಗೆ ಅಪೇಕ್ಷಿತವಾದ ವಿಷಯದ ಜೊತೆ ಇದ್ದೇವೆ ಎಂದರ್ಥ. ಆಗ ಮಾತ್ರ ನಮಗದು ಸಿದ್ಧಿಸುತ್ತದೆ. ಈ ನೇರದಲ್ಲಿ ಉಪವಾಸವ್ರತದ ಆಚರಣೆ ನಮ್ಮ ಭಾರತೀಯರ ಒಂದು ಸಂಸ್ಕೃತಿಯ ಅಂಗವಾಗಿ ಬಂದಿದೆ. 


ನಾವು ಉಪವಾಸವನ್ನು ಮಾಡುವುದು ಭಗವಂತನ ಸಾಮೀಪ್ಯವನ್ನು ಸಂಪಾದಿಸಲು. ಅಂದು ನಮ್ಮ ಮೈ ಮನಸ್ಸೆಲ್ಲಾ ಅಲ್ಲೇ ಇರಬೇಕು. ಇನ್ನೆಲ್ಲೋ ಅಲೇದಾಡುತ್ತಿದ್ದಾಗ ಭಗವಂತನ ಪೂಜೆಯೋ, ಧ್ಯಾನವೋ, ಆರಾಧನೆಯೋ ಆಗಲು ಹೇಗೆ ಸಾಧ್ಯ?. ಅದಕ್ಕಾಗಿ 'ಉಪವಾಸವನ್ನು ಮಾಡಿ' ಎಂದು ನಮ್ಮ ಹಿಂದಿನವರು ಈ ಉಪವಾಸ ವ್ರತಾಚರಣೆಯನ್ನು ತಂದುಕೊಟ್ಟರು. ಇದು ಪ್ರಧಾನವಾಗಿ ಆಹಾರದ ನಿಯಮವಾಗಿದೆ. ಈ ನಿಯಮವೇ ಇಂದು ಉಪವಾಸವಾಗಿಬಿಟ್ಟಿದೆ. ಆಹಾರದ ನಿಯಮನದಿಂದ ಭಗವಂತನ ಅಥವಾ ನಮ್ಮ ಇಷ್ಟಾರ್ಥದ ಸಂಬಂಧವನ್ನು ಸಾಧಿಸಲು ಸಾಧ್ಯ ಎಂಬುದು ನಮ್ಮವರ ಸ್ಪಷ್ಟವಾದ ಅಭಿಪ್ರಾಯವಾಗಿದೆ. ಆಹಾರಕ್ಕೂ ಮನಸ್ಸು ಮತ್ತು ಇಂದ್ರಿಯ ಸಂಯಮನಕ್ಕೂ ಸಂಬಂಧವಿದೆ. ಆಹಾರಸ್ವೀಕಾರದಿಂದ ಶರೀರದಲ್ಲಿ ಜಾಡ್ಯವು ಆವರಿಸುತ್ತದೆ. ಶರೀರವು ಆಹಾರದ ಪಚನಕ್ಕಾಗಿ ಸಕ್ರಿಯವಾದಾಗ ಮನಸ್ಸೂ ಅದಕ್ಕೆ ಸಹಕರಿಸಬೇಕಾಗುತ್ತದೆ. ಆಗ ಭವಂತನ ಧ್ಯಾನದಲ್ಲಿ ಅಥವಾ ಪೂಜೆಯಲ್ಲಿ ಮನಸ್ಸನ್ನು ಇಡುವುದು ಹೇಗೆ ಸಾಧ್ಯ? ಮನಸ್ಸು ಈ ಶರೀರದ ಸಂಬಂಧವನ್ನು ಬಿಟ್ಟರೆ ಅಪೇಕ್ಷಿತವಾದುದರ ಸಂಬಂಧವನ್ನು ಪಡೆಯಲು ಸಾಧ್ಯ. ಇದು ಆಹಾರದ ಕಟ್ಟುನಿಟ್ಟಾದ ನಿಯಮನದಿಂದ ಮಾತ್ರವೇ ಸಾಧ್ಯ. ಈ ನೇರದಲ್ಲಿ ಆಹಾರಕ್ಕೂ ಮೈಮನಸ್ಸುಗಳು ಭಗವಂತನ ಬಳಿ ಇರುವುದಕ್ಕೂ ನೇರ ಸಂಬಂಧವಿದ್ದ ಕಾರಣ ಆಹಾರ ನಿಯಮವನ್ನೇ 'ಉಪವಾಸ' ಎಂದು ಕರೆದರು. ಅದರಿಂದ ಆಗಬೇಕಾದುದು ಭಗವಂತನ ಸಾಮೀಪ್ಯ ಎನ್ನುವ ಅತಿ ಮುಖ್ಯವಾದ ವಿಷಯವನ್ನು ಮರೆಯದಿರೋಣ.


ಸೂಚನೆ: 22/12/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Tuesday, December 20, 2022

ವ್ಯಾಸ ವೀಕ್ಷಿತ - 14 ಬ್ರಾಹ್ಮಣನ ಖೇದ (Vyaasa Vikshita 14 Brahmanana Kheda)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಪಕ್ಕದ ಮನೆಗೆ ಪ್ರವೇಶ ಮಾಡಿದ ಕುಂತಿಯು, ಅಲ್ಲಿ ತನ್ನ ಪತ್ನಿಯೊಂದಿಗೆ ದುಃಖ ಹೇಳಿಕೊಳ್ಳುತ್ತಿದ್ದ ಬ್ರಾಹ್ಮಣನನ್ನು ಕಂಡಳು. ಆತನ ಮಾತಿನ ವರಸೆ ಹೀಗಿದೆ:

 

"ಅಯ್ಯೋ ಈ ಜೀವನವೇ! ಇದು ಸಾರಹೀನ, ಅರ್ಥಹೀನ, ದುಃಖಮೂಲ, ಪರಾಧೀನ, ಹಾಗೂ ಅಪ್ರಿಯಭರಿತ. ಬದುಕಿರುವುದೆಂದರೆ ದುಃಖಗಳೊದಗುವುದು ನಿಶ್ಚಿತವಾದದ್ದೇ (ದುಃಖಾನಾಮ್ ಆಗಮೋ ಧ್ರುವಃ)! ಧರ್ಮಾರ್ಥಕಾಮಗಳನ್ನು ಸೇವಿಸುವಾಗ, ಅವುಗಳಿಂದ ವಿಯೋಗವಾಯಿತೆಂದರೆ ಕೊನೆಯಿಲ್ಲದ ದುಃಖವೇ. ಕೆಲವರೆನೋ ಮೋಕ್ಷವು ಮಿಗಿಲಾದುದೆನ್ನುವರು; ಅದು ಹಾಗಿರಲಾರದು.

 

ಹಣದ ಬಯಕೆಯೆಂದರೆ ದೊಡ್ಡ ದುಃಖವೇ; ಅದು ದೊರಕಿತೋ ಇನ್ನೂ ಹೆಚ್ಚು ದುಃಖ; ಪ್ರಾಪ್ತವಾದ ಅರ್ಥದೊಂದಿಗೆ ಅಂಟುಂಟಾದರಂತೂ ಭಾರಿ ದುಃಖವೇ. ಅಂತೂ ಈಗ ಬಂದೊದಗಿರುವ ಆಪತ್ತಿನಿಂದ ಬಿಡುಗಡೆಯೆಂತೋ ಕಾಣೆನೇ! ಹೆಂಡಿರುಮಕ್ಕಳೊಂದಿಗೆಲ್ಲಿಗಾದರೂ ಓಡಿಹೋಗಿಬಿಡಲೇ?

 

ಹಿಂದೆಯೂ ಅದಕ್ಕಾಗಿ ಯತ್ನಿಸಿದ್ದನ್ನು ನೀ ಬಲ್ಲೆಯಲ್ಲವೇ? ಹಲವು ಬಾರಿ ನಾ ಹೇಳಿದರೂ ನೀ ಕೇಳಲೇ ಇಲ್ಲವಲ್ಲ! 'ನಾ ಹುಟ್ಟಿಬೆಳೆದದ್ದಿಲ್ಲೇ; ಅಪ್ಪ-ಅಮ್ಮ ಇಲ್ಲೇ ಇರುವರು' ಎಂದೆಲ್ಲಾ ಉಸುರಿದೆಯಲ್ಲಾ, ದುರ್ಮೇಧೆ (ಬುದ್ಧಿಗೆಟ್ಟವಳೇ)! ಅವರೆಲ್ಲ ಹೋದಮೇಲೂ ನೀ ಬಿಡದಾದೆ. ಈಗಿದೋ ಬಂಧುನಾಶವೇ ಬಂದೊದಗಿದೆ! ನನ್ನ ಕೊನೆಗಾಲವೇ ಬಂದಾಯಿತು. ನನ್ನವರನ್ನೇ ಬಲಿಗೊಟ್ಟು ನಾ ಬದುಕಿರಲೇ?"

 

ಈ ಮಾತುಗಳನ್ನು ಹೇಳುತ್ತಾ, "ದುರ್ಮೇಧೆ"ಯೆಂದು ಯಾವಳನ್ನು ಈಗಷ್ಟೆ ಬೈದಿದ್ದನೋ ಅಂತಹ ಹೆಂಡತಿಯನ್ನೇ ತಾನೇಕೆ ಪರಿತ್ಯಜಿಸಲಾರೆ? - ಎಂಬುದನ್ನೂ ಹೇಳಿಕೊಳ್ಳುತ್ತಾನೆ: ತಾಯಿಯಂತೆಯೂ ಸಲಹುವ ಇವಳು ನನ್ನ ಸಹಧರ್ಮಚರಿ: ದೇವತೆಗಳೇ ಇವಳನ್ನು ನನ್ನ ಗೆಳತಿಯನ್ನಾಗಿ ಮಾಡಿಕೊಟ್ಟಿದ್ದಾರೆ. ತಂದೆತಾಯಿಗಳು ಈಕೆಯನ್ನು ವಿಧ್ಯುಕ್ತವಾಗಿ ಸಲ್ಲಿಸಿದ್ದಾರೆ. ತಾನೂ ಮಂತ್ರಪೂರ್ವಕವಾಗಿ ಇವಳನ್ನು ವರಿಸಿದ್ದಾಗಿದೆ. ಸತ್ಕುಲಜಾತೆ, ಸುಶೀಲೆ, ಬಂಜೆಯಲ್ಲ, ಸಾಧ್ವಿ, ಎಂದೂ ಅಪಕಾರ ಮಾಡಿದವಳಲ್ಲ; ಹಾಗೂ ಸದಾ ಅನುವ್ರತೆ; ಕರ್ಮಗಳಲ್ಲಿ ಸಹಭಾಗಿನಿಯಾದವಳು. ಇವಳನ್ನೆಂತು ತ್ಯಜಿಸಲಿ?

 

ಇನ್ನು ಮಗನೋ ಅಪ್ರಾಪ್ತವಯಸ್ಕ; ವ್ಯಂಜನಗಳು (ಎಂದರೆ ಗಡ್ಡಮೀಸೆಗಳು) ಸಹ ಬಂದಿಲ್ಲದವ. ಇನ್ನು ಮಗಳೋ?: ವಿವಾಹವಾಗಿ ಅವಳಾರ ಮನೆಸೇರಬೇಕೋ? ಅವಳ ಪುತ್ರನಿಂದಾಗಿ ತನಗೇ ಸದ್ಗತಿಯಾದೀತು! ಇಂತಹವಳಿಗೆ ತಾನೇ ಜನ್ಮವಿತ್ತು ಈಗ ತಾನೇ ತ್ಯಜಿಸುವುದೇ?

 

"ತಂದೆಗೆ ಮಗನ ಮೇಲೆ ಹೆಚ್ಚು ಸ್ನೇಹ" - ಎನ್ನುವುದುಂಟು; "ಅಲ್ಲ, ಮಗಳ ಮೇಲೇ" - ಎಂದು ಇನ್ನು ಕೆಲವರು ಹೇಳುತ್ತಾರೆ. ಆದರೆ ನನಗೋ ಇಬ್ಬರೂ ಸಮಾನರು. (ಸ್ತ್ರೀವಾದಿಗಳೀ ಮಾತನ್ನು ಗಮನಿಸಬಹುದು.) ಪಾಪರಹಿತಳಾದ ಈ ಬಾಲೆಯನ್ನು ತ್ಯಜಿಸುವುದೆಂತು?

 

ಇನ್ನು (ಎಲ್ಲರ ಬದಲಾಗಿ) ನಾನೇ ಬಲಿಯಾದಲ್ಲಿ, ಪರಲೋಕದಲ್ಲಿ ಪಶ್ಚಾತ್ತಾಪ ಪಡಬೇಕಾದೀತು, ಅಷ್ಟೆ. ನನ್ನನ್ನು ಬಿಟ್ಟು ಇವರುಗಳು ಬದುಕುಳಿಯಲಾರರು. ಇತ್ತ ಇವರನ್ನು ತ್ಯಜಿಸುವುದು ತಪ್ಪು; ಅತ್ತ ನಾನೇ ಬಲಿಯಾದರೆ ಇವರೆಲ್ಲ ಸಾಯತಕ್ಕವರೇ.

 

ಇದೆಂತಹ ಗತಿ ಬಂದಿತೆನಗೆ! ಎಲ್ಲರೊಂದಿಗೆ ಸಾಯುವುದೊಂದೇ ಮಾರ್ಗವೆಂಬಂತಿದೆಯಲ್ಲಾ!"


ಸೂಚನೆ : 27/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

 

ಹಾಗೆ ಖೇದಿಸುತ್ತಿದ್ದ ಆತನನ್ನು ಸಂತೈಸುತ್ತಾ, ಅವನ ಕೈ ಹಿಡಿದವಳು ಹೇಳಿದಳು: ಯಾರೋ ಪ್ರಾಕೃತನಂತೆ (=ಸಾಧಾರಣಮನುಷ್ಯನಂತೆ) ಸಂತಾಪಪಡುವುದೇ?! ತಿಳಿದವ ನೀನು, ಸಂತಾಪಪಡುವ ಕಾಲವಲ್ಲ ಇದು! ಎಲ್ಲರಿಗೂ ಸಾವು ನಿಶ್ಚಿತವೇ; ಯಾವುದು ಘಟಿಸಿಯೇ ತೀರುವುದೋ ಅದಕ್ಕೆ ಸಂತಾಪವೇ?!

ಯಕ್ಷಪ್ರಶ್ನೆ - 13(Yaksha Prashne - 13)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – ೧೨ ದುಷ್ಟರ ಸ್ವಭಾವ ಯಾವುದು ?

ಉತ್ತರ -  ಪರರ ಪರಿವಾದ-ನಿಂದೆ.

ಬೇರೆಯವರನ್ನು ನಿಂದಿಸುವುದು ದುಷ್ಟರ ಸ್ವಭಾವವಾಗಿದೆ. ನೀಚಪುರುಷರು ಯಾವಾಗಲೂ ಮತ್ತೊಬ್ಬರನ್ನು ಹೀಯಾಳಿಸುವುದು, ಅಪಮಾನಿಸುವುದು, ಬೇರೆಯವರಲ್ಲಿ ಅಪವಾದವನ್ನು ಹೊರಿಸುವ ಕೆಲಸದಲ್ಲೇ ಮಗ್ನರಾಗಿರುತ್ತಾರೆ. ಸ್ತುತಿಗೆ ವಿರುದ್ಧವಾದ ಪದ ನಿಂದೆ. ಗುಣವಂತರಲ್ಲಿ ಇರುವ ಗುಣವನ್ನು ಎತ್ತಿ ಆಡುವುದು ಸ್ತುತಿಯೆನಿಸಿಕೊಳ್ಳುತ್ತದೆ. ಬೇರೆಯವರಲ್ಲಿನ ಗುಣವನ್ನು ಆಡುತ್ತಾ ಆಡುತ್ತಾ ಹೋದಾಗ ಆ ಗುಣಗಳು ನಮ್ಮಲ್ಲೂ ಜಾಗೃತವಾಗಲು ಆರಂಭವಾಗುತ್ತವೆ. ಕ್ರಮೇಣ ನಾವೂ ಕೂಡ ಗುಣವಂತರಾಗುತ್ತೇವೆ. ಇದು ಸ್ತುತಿಯ ಮಹಿಮೆಯಾದರೆ ಪರಿವಾದದ ಗುಣವು ಇದಕ್ಕೆ ವಿರುದ್ಧವಾದುದು. ಅಂದರೆ ಬೇರೆಯವರಲ್ಲಿದ್ದ - ಸಜ್ಜನರಲ್ಲಿದ್ದ ಗುಣವನ್ನು ಎತ್ತಿ ಹೇಳದಿರುವುದು ಅಥವಾ ದುಷ್ಟಜನರಲ್ಲಿದ್ದ ದೋಷವನ್ನು ಹೇಳದೆ, ಸದ್ಗುಣವನ್ನು ಅವರಲ್ಲಿಲ್ಲದಿದ್ದರೂ ಹೇಳುವುದು ಪರಿವಾದ ಅಥವಾ ನಿಂದಾ ಎನಿಸಿಕೊಳ್ಳುತ್ತದೆ. ಗುಣವನ್ನು ಹೇಳಿದರೆ ನಾವೂ ಗುಣವಂತರಾಗುವಂತೆ; ಗುಣವನ್ನು ಹೇಳದೆ ಇದ್ದರೆ ನಾವು ಆ ಗುಣಗಳಿಂದ ವಂಚಿತರಾಗುತ್ತಾ ಹೋಗುತ್ತೇವೆ. ಮತ್ತು ದುಷ್ಟರ ದೋಷೋತ್ಕೀರ್ತನದಿಂದ ನಮ್ಮಲ್ಲಿ ಆ ದೋಷಗಳು ಮೈಯಲ್ಲಿ ಆಡಲು ಆರಂಭವಾಗುತ್ತವೆ. ಇದೇ ನಿಂದೆಗೂ ಸ್ತುತಿಗೂ ಇರುವ ಅಂತರವಾಗಿದೆ. 

ಸಜ್ಜನರು ಬೇರೆಯವರಲ್ಲಿರುವ ಸಣ್ಣ ಪರಮಾಣು ಗುಣವನ್ನೂ  ಪರ್ವತದಷ್ಟು ಮಾಡಿ ಹೇಳುತ್ತಾರೆ. ಅದರಿಂದ ತಾವು ಹಿಗ್ಗುತ್ತಾರೆ. ಆದರೆ ಪರರ ನಿಂದೆ ಮಹಾಪಾಪ ಎಂದು ಪರಿಗಣಿತವಾಗಿದೆ. ದೊಡ್ದವರಲ್ಲಿರುವ ದೊಡ್ದತನವನ್ನು ಗೌರವಿಸದೆ ಇರುವುದು ನಿಂದೆಯೇ ಸರಿ. ಮತ್ತು ನೀಚರಲ್ಲಿರುವ ಸಣ್ಣತನವನ್ನು ಹಿರಿದಾಗಿ ಭಾವಿಸುವುದೂ ನಿಂದೆಯೇ. ನಮ್ಮ ಜೀವನವನ್ನು ಪಾವನವನ್ನಾಗಿಸುವ ಯಾವೆಲ್ಲಾ ವಿಷಯಗಳಿವೆಯೋ ಅವುಗಳನ್ನು ಗೌರವಿಸಬೇಕು. ಯಾರು ಗುರು, ದೇವ, ವೇದ ಮತ್ತು ಅದರ ವಿಸ್ತಾರವಾದ ಶಾಸ್ತ್ರಾದಿಗಳನ್ನು ಮತ್ತು ಪಂಡಿತರನ್ನು ನಿಂದಿಸುವರೋ ಅವರು ರೌರವನರಕವನ್ನು ಪಡೆಯುತ್ತಾನೆ ಎಂದು ನಿಂದೆಯಿಂದ ಆಗುವ ಪರಿಣಾಮವನ್ನು ಶಾಸ್ತ್ರದಲ್ಲಿ ಹೇಳಿದ್ದಾರೆ. ಪರರ ನಿಂದೆಯಿಂದ ಅವರ ಸ್ವಭಾವವೂ ಕೆಡುತ್ತಾ ಹೋಗುತ್ತದೆ ಮತ್ತು ದುಷ್ಟರಾದವರು ಯಾವಾಗಲೂ ಪರರ ಬಗ್ಗೆ ನಿಂದೆಯಲ್ಲೇ ಸದಾ ಪ್ರವೃತ್ತತಾಗಿರುತ್ತಾರೆ. ಈ ಎರಡೂ ಬಗೆಯಿಂದ ಅವರನ್ನು ದುಷ್ಟರು ಎನ್ನಬಹುದು. 

"ನೀಚಸಂಸರ್ಗನಿರತಾಃ ಪರವಿತ್ತಾಪಹಾರಕಾಃ । ಪರನಿಂದಾ-ಪರದ್ರೋಹ-ಪರಿವಾದಪರಾಃ ಖಲಾಃ॥" ಯಾವಾಗ ಬೇರೆಯವರನ್ನು ನಿಂದಿಸುತ್ತಾ ಹೋಗುವರೋ ಅಂತವರ ಮನಸ್ಸು ಕೂಡ ಇಲ್ಲಸಲ್ಲದ ದೋಷಗಳಿಂದ ಕೂಡುತ್ತಾ ಹೋಗಿ, ಅದರ ಪರಿಣಾಮವಾಗಿ ಅವರು ಕ್ರಮೇಣ ತಮ್ಮಂತವರ ಸಂಸರ್ಗವನ್ನೇ ಮಾಡುತ್ತಾ ಹೋಗುತ್ತಾರೆ. ಬೇರೆಯವರಿಗೆ ದ್ರೋಹವನ್ನು ಬಗೆಯುವಲ್ಲೇ ಅವರ ಕಾಲವು ಕಳೆಯುತ್ತದೆ. ಹೇಗೆ ಮತ್ತೊಬ್ಬರಿಗೆ ಮೋಸವನ್ನೋ, ವಂಚನೆಯನ್ನೋ ಮಾಡಬಹುದು ? ಎಂದು ಆಲೋಚಿಸುತ್ತಾರೆ. ಅಲ್ಲಸಲ್ಲದ ಕೆಟ್ಟವ್ಯಸನಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸ್ವತಃ ಶ್ರಮವಹಿಸಿ ದುಡಿದು ಅದರಿಂದ ಬಂದ ಸಂಪತ್ತಿನಿಂದಲೇ ಬದುಕಬೇಕೆಂಬ ವಿಚಾರ ಮಾಯವಾಗುತ್ತದೆ. ಎರಡುಹೊತ್ತಿನ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ ಉದ್ಭವಿಸುತ್ತದೆ. ಆಗ ಅನಿವಾರ್ಯವಾಗಿ ಬೇರಯವರ ಸಂಪತ್ತನ್ನೇ ಲೂಟಿ ಮಾಡುವ ಪ್ರವೃತ್ತಿ ಬರುತ್ತದೆ. ವ್ಯಕ್ತಿಯ ಸಹಜ ಪ್ರವೃತ್ತಿಂದ ತಾನೆ ವ್ಯಕ್ತಿತ್ವವು ನಿರ್ಮಾಣವಾಗುವುದು! ಒಟ್ಟಾರೆ ಬೇರೆಯವನ್ನು ನಿಂದಿಸುತ್ತಾ ಹೋದಾಗ ಅವರು ದುಷ್ಟರಾಗುವರು ಎಂಬುದು ಧರ್ಮರಾಜನ ಉತ್ತರದಲ್ಲಿರುವ ಆಶಯ.  

ಸೂಚನೆ : 20/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೋಪ ಮಾಡಿಕೊಳ್ಳಬಾರದು- ಕೃತಜ್ಞರಾಗಿರಬೇಕು (Kopa Madikollabaradu- Krtajnaragirabeku)

 ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)



ಮಹಾಭಾರತದಲ್ಲಿನ ಒಂದು ಕಥೆ. ಧರ್ಮಶೀಲನೂ, ತಪಸ್ವಿಯೂ ಆದ ಕೌಶಿಕನೆಂಬ ಬ್ರಾಹ್ಮಣ ಇದ್ದನು. ಇವನು ಪ್ರತಿನಿತ್ಯ ಮರದ ಕೆಳಗೆ ವೇದಾಧ್ಯಯನವನ್ನು ಮಾಡುತ್ತಿದ್ದನು. ಒಂದು ದಿನ ಇವನು ವೇದಾಧ್ಯಯನವನ್ನು ಮಾಡುತ್ತಿದ್ದಾಗ, ಆ ಮರದ ಮೇಲಿದ್ದ ಹಕ್ಕಿಯೊಂದು ಇವನ ಮೇಲೆ ಮಲವಿಸರ್ಜನೆಮಾಡಿತು. ಇದರಿಂದ ಕೋಪಗೊಂಡ ಕೌಶಿಕನು ಕೆಂಗಣ್ಣಿನಿಂದ ಆ ಹಕ್ಕಿಯನ್ನು ದಿಟ್ಟಿಸಿ ನೋಡಿದನು. ತಕ್ಷಣವೇ ಆ ಹಕ್ಕಿಯು ಸತ್ತು ಕೆಳಕ್ಕೆ ಬಿತ್ತು. ಇದನ್ನು ನೋಡಿದ ಕೌಶಿಕನಿಗೇ ಬೇಸರವಾಯಿತು," ನನ್ನ ಕ್ಷಣಕಾಲದ ಕೋಪಕ್ಕೆ ಒಂದು ಪಕ್ಷಿಯ ಜೀವವೇ ಹೋಯಿತು" ಎಂದು ಪಶ್ಚಾತ್ತಾಪಪಟ್ಟನು. 


ಅಲ್ಲಿಂದ ಎದ್ದು, ಅವನು ಭಿಕ್ಷೆಗಾಗಿ ಊರೊಳಗೆ ಹೋದನು. ಒಂದು ಮನೆಯ ಮುಂದೆ ಬಂದನು.  'ಭವತಿ ಭಿಕ್ಷಾಂ ದೇಹಿ' ಎಂದು ಕೇಳುವನು. ಆಗ ಆ ಮನೆಯೊಳಗಿಂದ 'ಸ್ವಲ್ಪ ತಾಳಿ ಬರುವೆ' ಎಂದು ಹೆಣ್ಣಿನ ಧ್ವನಿ ಬಂದಿತು. ಆ ಗೃಹಿಣಿಯು ಹೊಟ್ಟೆಹಸಿದು ಬಂದಿದ್ದ ತನ್ನ ಗಂಡನಿಗೆ ಊಟ-ಉಪಚಾರವನ್ನು ಮಾಡುತ್ತಾ ಬ್ರಾಹ್ಮಣನನ್ನು  ಮರೆತುಬಿಟ್ಟಳು. ಸ್ವಲ್ಪ ಸಮಯದ ನಂತರ ಜ್ಞಾಪಕಕ್ಕೆ ಬಂದು, ಭಿಕ್ಷೆಯನ್ನು ತಂದಳು. ಕೌಶಿಕನು ಕೋಪದಿಂದ, "ಯಾಕೆ ತಡ ಮಾಡಿದೆ" ?  ಎಂದು ಕೇಳುವನು. ಅದಕ್ಕೆ ಆ ಗೃಹಿಣಿಯು "ನನ್ನನು ಕ್ಷಮಿಸಿ, ನನ್ನ ಪತಿಯ ಸೇವೆಯಲ್ಲಿದ್ದೆ" ಎನ್ನುವಳು. ಕೌಶಿಕ ಹೇಳುವನು- "ಭೂಲೋಕವನ್ನೇ ಸುಡಬಲ್ಲವರು ಬ್ರಾಹ್ಮಣರು.  ನನ್ನನ್ನೇ ನಿರ್ಲಕ್ಷಿಸಿದ್ದೀಯೇ ;  ನನಗಿಂತ ನಿನ್ನ ಗಂಡ ದೊಡ್ಡವನೇನು?" ಎನ್ನುತ್ತಾನೆ.


ಆಗ ಆಕೆಯು "ನೀವು ಮರದಮೇಲಿನ ಪಕ್ಷಿಯನ್ನು ನಿಮ್ಮ ಕೋಪದ ದೃಷ್ಟಿಯಿಂದ ಕೊಂದಿರಿ ಎಂದು ನನಗೆ ಗೊತ್ತು.  ಬ್ರಾಹ್ಮಣರಾದ ತಾವು ದೇವತಾ ಸಮಾನರು. ನನ್ನ ತಪ್ಪನ್ನು ಮನ್ನಿಸಬೇಕು. ನನ್ನ ಗಂಡನನ್ನೇ ಪ್ರತ್ಯಕ್ಷ ದೇವರೆಂದು ಸೇವೆಯನ್ನು ಮಾಡುತ್ತಿರುವವಳು ನಾನು. ತಾವು ಕೋಪವನ್ನು ಮಾಡಿಕೊಳ್ಳಬಾರದು, ಹಿಂಸಿಸಬಾರದು, ನಾನು ಮಾಡಿದ್ದು ಸರಿಯಲ್ಲದಿದ್ದರೆ ಕ್ಷಮಿಸಿಬಿಡಿ; ಸ್ತ್ರೀ ಜೀವವನ್ನು ತೆಗೆಯಬಾರದು. ತಾವು ನನ್ನನ್ನು ಸುಡಬಲ್ಲ ಶಕ್ತಿಯುಳ್ಳವರು. ತಾವು ವೇದಾಧ್ಯಯನ ಸಂಪನ್ನರು; ಧರ್ಮದ ಬಗ್ಗೆ ಇನ್ನೂ ತಿಳಿದು ಕೊಳ್ಳಬೇಕೆಂದರೆ 'ಮಿಥಿಲೆಯಲ್ಲಿನ ವ್ಯಾಧನ ಬಳಿ ಚರ್ಚಿಸಿ" ಎಂದು ತಿಳಿಸುವಳು. ಈ ಮಾತುಗಳನ್ನು ಕೇಳಿದ ಕೌಶಿಕನು ಶಾಂತನಾಗುವನು. 


ಅವಳ ಸಲಹೆಯಂತೆ ಮಿಥಿಲೆಗೆ ಹೊರಡುವನು. ಧರ್ಮವ್ಯಾಧನ ಸ್ಥಳಕ್ಕೆ ಬಂದನು. ಅದೋ, ಜಿಂಕೆ, ಕೋಣಗಳ ಮಾಂಸಮಾರುವ ಅಂಗಡಿ. ಅಲ್ಲಿದ್ದ ಜನರು ಹೋದ ಮೇಲೆ ವ್ಯಾಧನು  ಕೌಶಿಕನನ್ನು ನೋಡಿ ನಮಸ್ಕರಿಸುವನು. ವ್ಯಾಧನು ಹೇಳುವನು-  "ನಿನ್ನನ್ನು ಒಬ್ಬ ಗೃಹಿಣಿಯೇ ಕಳಿಸಿದ್ದಾಳೆ ಹಾಗೂ ನೀವು ಇಲ್ಲಿಗೆ ಬಂದಿರುವ ಉದ್ದೇಶ ನನಗೆ ಗೊತ್ತು" ಎಂದನು. ಕೌಶಿಕನಿಗೆ ಪರಮಾಶ್ಚರ್ಯ!  ವ್ಯಾಧನು, "ಮಾತನಾಡಲು ಇದು ಸೂಕ್ತ ಸ್ಥಳವಲ್ಲ; ಬನ್ನಿ ನಮ್ಮ ಮನೆಗೆ ಹೋಗೋಣ" ಎಂದು ಕೌಶಿಕನನ್ನು ತನ್ನ ಮನೆಗೆ ಕರೆದುಕೊಂಡು ಹೋಗುವನು.


ಕೌಶಿಕನು ವ್ಯಾಧನಿಗೆ, "ನೀನು ಮಾಡುತ್ತಿರುವ ಮಾಂಸ ಕಡಿಯುವ ಘೋರ ಕೆಲಸ ನಿನಗೆ ತಕ್ಕದ್ದಲ್ಲ" ಎನ್ನುತ್ತಾನೆ.  ಅದಕ್ಕೆ ವ್ಯಾಧನು, "ಇದು ಪಾರಂಪರಿಕವಾಗಿ ಬಂದ ವೃತ್ತಿ ; ನಾನು ಮಾಂಸವನ್ನು ಮಾರುತ್ತೇನೆ, ನನ್ನ ಹೊಟ್ಟೆಪಾಡಿಗಾಗಿ ; ನಾನು ಪ್ರಾಣಿಯನ್ನು ಕೊಲ್ಲುವುದಿಲ್ಲ;  ಮಾಂಸವನ್ನು ತಿನ್ನುವುದಿಲ್ಲ ! ಬಂದ ಹಣದಲ್ಲಿ ಸ್ವಲ್ಪಭಾಗ ದಾನವನ್ನು ಮಾಡುತ್ತೇನೆ. ಯಾರಮೇಲೂ ಅಸೂಯೆಪಡುವುದಿಲ್ಲ. ತಂದೆತಾಯಿಯರ ಸೇವೆ ಮಾಡುತ್ತೇನೆ. ಪ್ರಾಣಿ ಹಿಂಸೆ ಮಾಡದವರು ಯಾರಿದ್ದಾರೆ?"- ಇತ್ಯಾದಿ ಹಲವು ಧರ್ಮ- ಅಧರ್ಮದ ವಿಷಯಗಳನ್ನು ಚರ್ಚಿಸುವನು. ಅದಕ್ಕೆ ಕೌಶಿಕನು "ನೀನು ಹೇಳುತ್ತಿರುವುದು ಸರಿ" ಎಂದು ಒಪ್ಪಿಕೊಳ್ಳುವನು. "ಈ ಸಿದ್ಧಿಯು ನಿನಗೆ ಹೇಗೆ ಲಭಿಸಿತು?" ಎಂದು  ಕೇಳಲು, ವ್ಯಾಧನು ಕೌಶಿಕನನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋಗುವನು. ಅಲ್ಲಿ ಅವರ ತಂದೆತಾಯಿಗಳು ಸಂತೋಷವಾಗಿರುವರು. "ನಾನು ಇವರನ್ನೇ ಸಾಕ್ಷಾತ್ ದೇವರೆಂದೇ ತಿಳಿದಿರುವೆ. ಅವರ ಸೇವೆಯೇ ನನ್ನ ತಪಸ್ಸು. ಹಾಗೆಯೇ ಆ ಗೃಹಿಣಿಯು ತನ್ನ ಗಂಡನನ್ನೇ ದೇವರೆಂದೇ ಸೇವೆಯನ್ನು ಮಾಡುತ್ತಿರುವಳು. ಅವಳು ಮಾಡುತ್ತಿರುವುದು ಕೂಡ ಇದೇ ತಪಸ್ಸು. ಹಾಗಾಗಿ ನಾನು ನಿಮಗೆ ಸಲಹೆ ಕೊಡುವುದು ಏನೆಂದರೆ ನೀವು ನಿಮ್ಮ ತಂದೆತಾಯಿಗಳನ್ನು ತೊರೆದು ವೇದಾಧ್ಯಯನ, ತಪಸ್ಸು ಮಾಡುತ್ತಿರುವುದು ಆ ವೃದ್ಧರಿಗೆ ಬಹಳ ಬೇಸರವಾಗಿದೆ. ತಾವು ನಿಮ್ಮ ಮನೆಗೆ ಹೋಗಿ ಅವರನ್ನು ಸಂತೋಷಪಡಿಸಿ; ಅದಕ್ಕಿಂತ ಬೇರೆ ಧರ್ಮವಿಲ್ಲ" ಎಂದು ತಿಳಿವಳಿಕೆ ನೀಡಿ ಆ ಬ್ರಾಹ್ಮಣನನ್ನು  ಕಳುಹಿಸಿಕೊಡುತ್ತಾನೆ. ಈ ಕಥೆಯನ್ನು  ಮಹಾಭಾರತದ ಅರಣ್ಯ ಪರ್ವವು ವಿವರಿಸುತ್ತದೆ. 


ಈ ಕಥೆ ಇಂದಿಗೂ ನಮಗೆ ಪ್ರಸ್ತುತವೇ. ಕೋಪವನ್ನು ಮಾಡಿಕೊಳ್ಳಬಾರದು, ವೃಕ್ಷ-ವನಸ್ಪತಿ, ನೀರು ಭೂಮಿ ಗಾಳಿ ಮೃಗ-ಪಕ್ಷಿ ಎಲ್ಲ ವಿಷಯದಲ್ಲೂ ಕೃತಜ್ಞರಾಗಿರಬೇಕು. ನಮ್ಮ ಸುತ್ತಮುತ್ತಲಿನ ಜೀವಲೋಕವೆಲ್ಲವನ್ನೂ ಕೃತಜ್ಞತೆಯಿಂದ ಕಾಣಬೇಕು. ಕೋಪದಿಂದ ದುಷ್ಫಲವೇ. ಹೀಗೆ ನಾವು ತೀರಾ ಸಾಮಾನ್ಯರೆಂದು ತಿಳಿದಿರುವ ಜನರೂ ನಮ್ಮ ಜೀವನದ ಮೇಲ್ಮೆಗೆ ಕಾರಣರಾಗಬಹುದು. ಈ ಕಥೆಯಲ್ಲಿ ಬರುವ ಕೌಶಿಕನು ಆ ಗೃಹಿಣಿ, ಮತ್ತು ಧರ್ಮವ್ಯಾಧನಿಗೆ ಎಷ್ಟು ಕೃತಜ್ಞನಾಗಿರಬೇಕಲ್ಲವೇ? ಇಂದು ವರ್ಷಾನುವರ್ಷಕ್ಕೆ ಹೆಚ್ಚುತ್ತಿರುವ ವೃದ್ಧಾಶ್ರಮಗಳಿಗೆ ಕಾರಣವೇನು? ಎಂದರೆ ನಮಗೆ, ಧರ್ಮವ್ಯಾಧನಿಗಿದ್ದ ತಿಳಿವಳಿಕೆಯ ಅಭಾವವೇ. ಮಾತಾಪಿತೃಗಳನ್ನು ಪ್ರತ್ಯಕ್ಷ ದೇವರಂತೆ ಸೇವೆಮಾಡುತ್ತಿದ್ದ ಧರ್ಮವ್ಯಾಧನ ಕರ್ಮಯೋಗವು ಇಂದಿಗೂ-ನಮ್ಮೆಲ್ಲರಿಗೂ ಆದರ್ಶ. "ಸೇವೆ, ಭಗವಂತನ ಭಾವಕ್ಕೆ ಧಕ್ಕೆ ತಗುಲದಂತೆ ಮಾಡುವ ವ್ಯಾಪಾರ[ಕ್ರಿಯೆ]. ಅವನ ಪರವಾಗಿರುವ, ಅವನಿಗೆ ವಿರೋಧವಿಲ್ಲದ, ಅವನನ್ನು ಹೊಂದಿಸುವ ಕಾರ್ಯವ್ಯಾಪಾರಗಳೆಲ್ಲವೂ ಸೇವೆಯೇ." ಎಂಬ ಶ್ರೀರಂಗಮಹಾ ಗುರುಗಳ ಮಾತಿಲ್ಲಿ ಸ್ಮರಣೀಯ.


ಋಗ್ವೇದದ ಮಂತ್ರ ಹೀಗೆ ಹೇಳುತ್ತದೆ 'ಆ ನೋ ಭದ್ರಾ: ಕ್ರತವೋ ಯಂತು ವಿಶ್ವತಃ' ಅಂದರೆ ವಿಶ್ವದ ಎಲ್ಲ ಕಡೆಗಳಿಂದಲೂ ಒಳ್ಳೆಯ ಸಂಗತಿಗಳು ನಮಗೆ ಹರಿದುಬರಲಿ. ಹಾಗೆ ಹರಿದು ಬರುವಾಗ, ಒಳ್ಳೆಯದನ್ನು ಗುರುತಿಸುವ ಮನಸ್ಸನ್ನು, ಆ ಒಳ್ಳೆಯದು ಹರಿದು ಬಂದ ಎಡೆಗೆ ಕೃತಜ್ಞತೆಯನ್ನೂ ಇಟ್ಟುಕೊಂಡರೆ ಇಹ ಪರದಲ್ಲೂ ಪರಮ ಸುಖವನ್ನು ಅನುಭವಿಸಬಹುದು.


ಸೂಚನೆ: 19/11/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ. 

ಅಷ್ಟಾಕ್ಷರೀ​ - 25 ತೇನ ತ್ಯಕ್ತೇನ ಭುಂಜೀಥಾಃ (Astakshara Darshana 25 Tena Tyaktena Bhunjithah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಇದು ಉಪನಿಷತ್ತುಗಳಲ್ಲಿ ಮೊದಲೆನಿಸಿದ ಈಶಾವಾಸ್ಯೋಪನಿಷತ್ತಿನ ಮೊದಲ ಮಂತ್ರದೊಂದು ಪಾದ. (ಶ್ಲೋಕವೊಂದರಲ್ಲಿ ಎರಡು ಅರ್ಧಗಳಿರುತ್ತವೆ; ಒಂದೊಂದು ಅರ್ಧದಲ್ಲಿ ಎರಡು ಪಾದಗಳಿರುತ್ತವೆ. ಎಂದೇ ಪ್ರತಿಯೊಂದು ಶ್ಲೋಕದಲ್ಲೂ ನಾಲ್ಕು ಪಾದಗಳಿರುತ್ತವೆ.)


ನಾವೆಲ್ಲರೂ ಸಾಧಾರಣವಾಗಿ ಭೋಗಪ್ರಿಯರೇ. ಭೋಗವೆಂದರೆ ಸುಖ - ಎಂಬುದೇ ನಮ್ಮಗಳ ಗ್ರಹಿಕೆ. ಆದರೆ ವಾಸ್ತವವಾಗಿ ಸುಖ-ದುಃಖಗಳೆರಡೂ ಭೋಗವೇ. ನಾವು ಮಾಡಿದ ಶುಭಗಳನ್ನೂ ಅಶುಭಗಳನ್ನೂ ಅನುಭೋಗಿಸತಕ್ಕದ್ದೇ - ಎಂದು ಸುಭಾಷಿತವೊಂದು ಉಸುರುವುದು. "ಮಾಡಿದ್ದುಣ್ಣೋ ಮಹರಾಯ" ಎಂಬ ಕನ್ನಡದ ಅಷ್ಟಾಕ್ಷರಿಯಲ್ಲಿ, ನಾವು ಮಾಡುವ ಸತ್ಕರ್ಮ-ದುಷ್ಕರ್ಮಗಳ ಫಲವಾಗಿಯೇ ಸುಖ-ದುಃಖಗಳನ್ನು "ಉಣ್ಣು"ವುವೆಂಬುದನ್ನು ಸೂಚಿಸಿದೆ. "ಬಿತ್ತಿದಂತೆ ಬೆಳೆ" ಎಂಬ ಆರೇ ಅಕ್ಷರದ ಮಾತು ಸಹ ಇದನ್ನೇ ಧ್ವನಿಪೂರ್ಣವಾಗಿ ಹೇಳಿದೆ. ಇದಲ್ಲದೆ "ಬಿತ್ತಿದ್ದು ಬೇವು, ಬಯಸಿದ್ದು ಮಾವು" ಎಂಬ ಕಿರುನುಡಿಯೂ, ದುರ್ಬೀಜವನ್ನು ಬಿತ್ತಿ ಸುಫಲವನ್ನು ಬಯಸಲಾಗದೆಂಬುದನ್ನೂ ತಿಳಿಸಿಕೊಡುತ್ತದೆ. ಮಹಾಭಾರತದಲ್ಲಿ ವ್ಯಾಸೋಕ್ತಿಯೊಂದಿದೆ. "ಪುಣ್ಯದ ಫಲವನ್ನು ಜನರು ಬಯಸುವರು, ಆದರೆ ಪುಣ್ಯಕಾರ್ಯವನ್ನು (ಮಾಡುವುದನ್ನು) ಬಯಸರು; ಹಾಗೆಯೇ, ಪಾಪದ ಫಲವನ್ನು ಬಯಸರಾದರೂ, ಪಾಪವನ್ನು ಮಾತ್ರ ಪ್ರಯತ್ನಪೂರ್ವಕವಾಗಿಯೇ ಮಾಡು(ತ್ತಿರು)ವರಲ್ಲಾ!" ಎಂಬುದವರ ಉದ್ಗಾರ. ಸುಖವೆಂಬ ಫಲವು ಬೇಕೋ, ಸತ್ಕರ್ಮವನ್ನು ಮಾಡಿ; ದುಃಖವೆಂಬ ಫಲವು ಬೇಡವೋ, ದುಷ್ಕರ್ಮದಿಂದ ದೂರವಿರಿ - ಎಂಬುದು ಅವರ ಮಾತಿನ ಸಾರ.


ಸುಖಾನುಭವವು ಬೇಕೆಂದರೆ ಸುಖಕ್ಕೆ ಕಾರಣಭೂತವಾದದ್ದನ್ನು ಮಾಡಬೇಕು. ಸುಭೋಗವು ಬೇಕೆಂದರೆ ಸುದಾನವನ್ನೇ ಮಾಡತಕ್ಕದ್ದೇ ಸರಿ. "ಕೊಟ್ಟದ್ದು ಬರದು" - ಎಂಬ ನಿಯಮ ಸೃಷ್ಟಿಯಲ್ಲಿಲ್ಲ: "ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ" ಎಂಬ ಗಾದೆಯು ಮಹಾಬೋಧವನ್ನು ವಿರೋಧಾಭಾಸ(=ತೋರಿಕೆಯ ವಿರೋಧ)ದ ಲಘೂಕ್ತಿಯಿಂದಲೇ ಉಂಟುಮಾಡುತ್ತದೆ.


ಎಷ್ಟೋ ಮಂದಿಗೆ ದಾನಮಾಡಲೇ ಕೈಬಾರದು. "ಕೊಡುಗೈ ದಾನಿ" ಎಂದೆನಿಸಿಕೊಳ್ಳುವವರು ಎಲ್ಲೋ ಕೆಲವೇ ಮಂದಿ: "ದಾತಾ ಭವತಿ ವಾ ನ ವಾ!". ಎಷ್ಟೋ ಮಂದಿ ತಾವು ಸಂಪಾದಿಸಿದುದರ ದಾನವನ್ನು ಮಾಡರು - ಎಂಬುದಷ್ಟೇ ಅಲ್ಲ, ಸ್ವತಃ ಭೋಗಿಸರು ಕೂಡ! ದಾನಕ್ಕೂ ಭೋಗಕ್ಕೂ ಸಲ್ಲದ ಹಣವು ನಾಶಕ್ಕೇ ಎಡೆ - ಎಂದು ಸುಭಾಷಿತವೊಂದು ಸೂಚಿಸುವುದು. ಪ್ರೀತಿಯ ಲಕ್ಷಣಗಳು ಆರು – ಎನ್ನುವರು; ಅಲ್ಲಿ ಮೊದಲನೆಯದೇ 'ದದಾತಿ', ಕೊಡುವಿಕೆ. ಒಂದರ್ಥದಲ್ಲಿ ಜಿಪುಣನೂ ದಾನಿಯೇ! - ಏಕೆಂದರೆ ಅವನು ಕೂಡಿಡುವುದೆಲ್ಲ ಕೊನೆಗೆ ಪರರ ಪಾಲಾಗಲಿಕ್ಕೇ ಅಲ್ಲವೇ? - ಎಂದು ಸೂಕ್ತಿಯೊಂದು ನಿಪುಣವಾಗಿ ಜಿಪುಣರನ್ನು ಜಿಗುಟುವುದು. "ವಿಶಿಷ್ಟರಾದವರಿಗೆ ಏನನ್ನು ದಾನವಿತ್ತೆಯೋ ಅದು ನಿನ್ನ ಹಣ; ಯಾವುದನ್ನು ನೀನೇ ಪ್ರತಿದಿನ ಭೋಗಿಸುವೆಯೋ ಅದೂ ನಿನ್ನ ಹಣ; ಇವೆರಡಕ್ಕೂ ಆಗದ್ದೆಂದರೆ ಮತ್ತಾರಿಗಾಗಿಯೋ ನೀನದನ್ನು ಬರೀ ಕಾಯುತ್ತಿರುವವನಷ್ಟೆ!" - ಎಂದೊಂದು ಅಚ್ಛೋಕ್ತಿಯು ಎಚ್ಚರಿಸುತ್ತದೆ.  'ದೇಹಿ'ಯೆಂದು ಬಂದವನಿಗೆ 'ನಾಸ್ತಿ'ಯೆನ್ನದಿರು - ಎಂಬ ಮಾತನ್ನಾರು ಕೇಳಿಲ್ಲ? ದಾಸರಂತೂ, "ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು" ಎಂಬ  ಉದಾತ್ತ ಉಪದೇಶವಿತ್ತಿದ್ದಾರೆ!


ವಿವೇಕಿಯಾದವನು ಜೀವನದಲ್ಲಿ ಸಾಧಿಸಬೇಕಾದುದೆಂದರೆ ಯಜ್ಞ-ದಾನ-ತಪಸ್ಸುಗಳು - ಎಂದು ಛಾಂದೋಗ್ಯ-ಬೃಹದಾರಣ್ಯಕಗಳೆಂಬ ಉಪನಿಷತ್ತುಗಳು ಜ್ಞಾಪಿಸುತ್ತವೆ. ಶ್ರದ್ಧೆಯಿಂದ ಕೊಡು, ಅಶ್ರದ್ಧೆಯಿಂದ ಕೊಡಬೇಡ - ಎಂದು ಮುಂತಾಗಿ ತೈತಿರೀಯೋಪನಿಷತ್ತು ಆದೇಶಿಸುತ್ತದೆ. ದುರ್ದಾನವು ಅಪ್ರಶಸ್ತವೆಂಬುದನ್ನು ಕಠೋಪನಿಷತ್ತು ಆರಂಭದಲ್ಲೇ ಧ್ವನಿಸುತ್ತದೆ. ದಾನದಿಂದ ರಿಪುಗಳನ್ನು ತೊಡೆದುಹಾಕಬಹುದೆಂದೂ, ದಾನವಿತ್ತು ಶತ್ರುಗಳನ್ನೂ ಮಿತ್ರರನ್ನಾಗಿಸಬಹುದೆಂದೂ ಮಹಾನಾರಾಯಣೋಪನಿಷತ್ತು ಸೂಚಿಸುತ್ತದೆ. ದಾನದ ವಿವಿಧತೆಗಳನ್ನು ವಿಸ್ತೃತವಾಗಿಯೇ ವರ್ಣಿಸಲಾಗಿದೆ, ಭಗವದ್ಗೀತೆಯಲ್ಲಿ.


ಇವೆಲ್ಲಕ್ಕಿಂತಲೂ ಮಿಗಿಲಾಗಿ, ದಾನವೆಂಬ ತತ್ತ್ವವು ಹೇಗೆ ಸೃಷ್ಟಿಯಲ್ಲೇ ನಿಹಿತವಾಗಿದೆಯೆಂಬುದನ್ನು ಶ್ರೀರಂಗಮಹಾಗುರುಗಳು ಬೀಜ-ವೃಕ್ಷ-ದೃಷ್ಟಾಂತದಿಂದ ತೋರಿಸಿಕೊಟ್ಟಿರುವರು. ಬೀಜವು ತನ್ನನ್ನೇ ಪೂರ್ಣವಾಗಿ ಕೊಟ್ಟುಕೊಂಡಿದ್ದರಿಂದಲೇ ಅಲ್ಲವೆ ಮೊಳಕೆ ಬಂದುದು? ಮೊಳಕೆಯೂ ಹಾಗೆಯೇ ಮಾಡಿದ್ದರಿಂದಲೇ ಅಲ್ಲವೆ, ಮುಂದೆ ಕಾಂಡ-ಚಿಗುರು-ಎಲೆ-ಹೂವು-ಕಾಯಿ-ಹಣ್ಣುಗಳಾದದ್ದು? ನಿಸರ್ಗದ ನಡೆಯ ಹೆಜ್ಜೆಹೆಜ್ಜೆಯೂ ದಾನಮಯವೇ! ತಾಯಿಯ ತಾಯ್ತನವಿರುವುದಾದರೂ ತನ್ನ ಶಿಶುವಿಗೆ ಸ್ತನ್ಯವನ್ನು ಪ್ರೀತಿಯಿಂದಿತ್ತು ಪೋಷಿಸುವುದರಲ್ಲಲ್ಲವೇ?


ಅಷ್ಟೇ ಅಲ್ಲ; ಬಿತ್ತಿದುದು ಒಂದು ಬೀಜವಾದರೂ ಬಂದ ಪ್ರತಿಫಲವೇನು?: ನೂರಾರು ಫಲಗಳು; ಪ್ರತಿ ಫಲದಲ್ಲೂ ಮತ್ತೆ ಬೀಜ(ಗಳು)! ಹೋದದ್ದೊಂದು (ಬೀಜ); ಬಂದದ್ದು ಅನೇಕ: ಫಲವು ಹಲವು! "ಇಷ್ಟಿತ್ತರೆ ಅಷ್ಟಷ್ಟೀವೆ" - ಎಂದು ಸಾರುತ್ತಿದೆ ಸೃಷ್ಟಿ! : ದಾನವೆಂಬುದಿಲ್ಲದೆ ಸೃಷ್ಟಿಚಕ್ರವು ಮುಂದುವರೆದೀತೇ? ಸೃಷ್ಟಿ ಬರಡಲ್ಲ; ಅದರ ಮಧುರನಡೆಗೆ ತಡೆಯಿಕ್ಕುವವನ ಜೀವನವಷ್ಟೆ ಬರಡು.


ಎಲ್ಲವನ್ನೂ ನಮಗಿತ್ತ ಭಗವಂತನಿಗೂ ನಾವು "ದಾನ" ಮಾಡಬೇಕಾದದ್ದೇ: ನಿತ್ಯತೃಪ್ತನಾದ ಆತನಿಗೆ ನಾವು ಪತ್ರ-ಪುಷ್ಪ-ಫಲ-ಜಲಗಳನ್ನಾದರೂ, "ಎಲ್ಲವೂ ನೀನಿತ್ತದ್ದೇಪ್ಪಾ!" ಎಂದು ಭಕ್ತಿಯಿಂದಲೇ ಸಮರ್ಪಿಸಬೇಕಾದದ್ದೇ. ಅನ್ಯರಿಗೆ ನಾವು ಕೊಡುವ ದಾನವನ್ನೂ "ಮದರ್ಪಣಂ" ಎಂದೇ, ಎಂದರೆ  ಭಗವದರ್ಪಿತವಾಗಿಯೇ, ಮಾಡೆಂದು ಸೂಚಿಸುತ್ತದೆ, ಗೀತೆ. ಅರ್ಹರಿಗೆ ಕೊಡುವುದರಲ್ಲೇ ಒಂದು ಸಹಜಸಂತೋಷವೂ ಇದೆಯಷ್ಟೆ? 


ಸಾರವಾಗಿ, ದಾನವೇ ಜೀವಸೂತ್ರವಲ್ಲವೇ?


ಸೂಚನೆ: 18/12/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

Monday, December 19, 2022

ವ್ಯಾಸ ವೀಕ್ಷಿತ - 17 ಶಿಶುವಿನ ನುಡಿ, ಕುಂತಿಯ ಪ್ರವೇಶ (Vyaasa Vikshita - 17 Shishuvina Nudi, Kuntiya Pravesha)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಬಕರಾಕ್ಷಸನ ಬಾಯಿಗೆ ತುತ್ತಾಗಬೇಕಾಗುವ ಸಂನಿವೇಶದಲ್ಲಿ, ಬಾಲೆಯ ಬಾಯಲ್ಲಿ ಬಂದ ಮಾತನ್ನು ಅವಳ ಅಪ್ಪನೂ ಅಮ್ಮನೂ ಕೇಳಿಸಿಕೊಂಡರು; ಮೂವರೂ ಚೆನ್ನಾಗಿಯೇ ಅತ್ತರು (ಪ್ರ-ರುರುದುಃ).

ಅವರೆಲ್ಲರ ಅಳುವನ್ನು ಕೇಳಿಸಿಕೊಂಡ ಅವಳ ತಮ್ಮ – ಇನ್ನೂ ಸಣ್ಣ ಶಿಶು - ಸುಮ್ಮನಿರಲಿಲ್ಲ. ಕಣ್ಣರಳಿಸಿಕೊಂಡು ತನ್ನ ಅಸ್ಪಷ್ಟ-ಮಧುರಧ್ವನಿಯಲ್ಲಿ (ಅವರನ್ನು ಸಮಾಧಾನಪಡಿಸುತ್ತಾ) ಮುಗುಳ್ನಗೆಯೊಂದಿಗೆ ಹೇಳಿದ: "ಅಪ್ಪಾ, ನೀ ಅಳಬೇಡ; ಅಮ್ಮಾ, ನೀ ಅಳಬೇಡ; ಅಕ್ಕಾ ನೀನೂ ಅಷ್ಟೆ". ಎಂದವನೇ, ದರ್ಭೆಯೊಂದನ್ನೆತ್ತಿಕೊಂಡು, "ನರಭಕ್ಷಕನಾದ ಆ ರಾಕ್ಷಸನನ್ನು ಇದರಿಂದ ಸಾಯಿಸಿಬಿಡುವೆ!" ಎಂದು ಹೇಳಿದ. ಅಷ್ಟು ದುಃಖ ಉಮ್ಮಳಿಸಿಬರುತ್ತಿದ್ದರೂ ಅವರೆಲ್ಲರಿಗೆ ಆ ಬಾಲಕನ ಅಸ್ಫುಟವಾದರೂ ಮಧುರವಾದ ಮಾತನ್ನು ಕೇಳಿ ಮಹಾಹರ್ಷವೇ ಉಂಟಾಯಿತು!

ಅಷ್ಟರಲ್ಲಿ ಕುಂತಿಯು, ಇದುವೇ ಸರಿಯಾದ ಸಮಯವೆಂದು ಭಾವಿಸಿ, ಅವರ ಬಳಿಗೆ ಸಾರಿದಳು. ಆಗ ಅವಳಾಡಿದ ಮಾತು, ಸತ್ತವರಿಗೆ ಅಮೃತಸೇಚನದ ಹಾಗಿತ್ತು: "ಯಾವ ಕಾರಣಕ್ಕಾಗಿ ನಿಮಗೀ ದುಃಖವೊದಗಿದೆ? - ಎಂಬುದನ್ನು ಯಥಾರ್ಥವಾಗಿ ತಿಳಿದುಕೊಳ್ಳಬಯಸುತ್ತೇನೆ. ತಿಳಿದರೆ, ಒಂದು ವೇಳೆ ಅದನ್ನು ಹೋಗಲಾಡಿಸಲು ಸಾಧ್ಯವಾಗುವುದಾದರೆ, ಹೋಗಲಾಡಿಸುವೆ" - ಎಂದಳು.

ಆಗ ಬ್ರಾಹ್ಮಣನು ನುಡಿದನು: "ಅಮ್ಮಾ, ತಪಸ್ವಿನಿ, ಸಜ್ಜನರಿಗೆ ಸಲ್ಲುವ ಮಾತುಗಳನ್ನೇ ನೀನಾಡಿದ್ದೀಯೇ. ಆದರೆ ನಮಗೊದಗಿರುವ ದುಃಖವು, ಮನುಷ್ಯರಿಂದ ಹೋಗಲಾಡಿಸಲಾಗದು. ಅದೇನೆಂದು ಹೇಳುವೆ, ಕೇಳು.

ಈ ನಗರದ ಸಮೀಪದಲ್ಲಿ ಬಕನೆಂಬ ರಾಕ್ಷಸನಿದ್ದಾನೆ. ಈ ಜನಪದದ ಒಡೆಯ ಆತನೇ: ಮಹಾಬಲಶಾಲಿಯಾತ; ಮನುಷ್ಯರ ಮಾಂಸವನ್ನು ತಿಂದು ಪುಷ್ಟನಾಗಿದ್ದಾನೆ; ಈ ನಗರಿಯನ್ನೇ ಆ ನರಭಕ್ಷಕ ತಿಂದುಹಾಕುತ್ತಿದ್ದಾನೆಂದೂ ಹೇಳಬಹುದು. ಆದರೆ ಈ ಊರು ತಬ್ಬಲಿ; ಕಾಪಾಡುವವರಾರೂ ಇಲ್ಲ. ಈ ಅಸುರರಾಜನೇ ಈ ಊರನ್ನು ಕಾಪಾಡುತ್ತಿರುವನೆಂದೂ ಹೇಳಬಹುದು. ಈ ನಗರ-ದೇಶಗಳನ್ನೂ ತನ್ನ ರಾಕ್ಷಸಸೇನೆಯೊಂದಿಗೆ ರಕ್ಷಿಸುತ್ತಿದ್ದಾನೆ. ಎಂದೇ, ಅನ್ಯರಾಜರುಗಳಿಂದಾಗಲಿ ಭೂತಗಳಿಂದಾಗಲಿ ನಮಗೆ ಭಯವೆಂಬುದಿಲ್ಲವಾಗಿದೆ.

ಅದಕ್ಕಾಗಿ ಆತನಿಗಾಗಿ "ಸಂಬಳ"ವೆಂದೂ ನಿಗದಿ ಮಾಡಲಾಗಿದೆ: ಬಂಡಿ ಅನ್ನ; ಅದನ್ನು ಹೊತ್ತೊಯುವ ಮನುಷ್ಯ; ಜೊತೆಗೆ ಎರಡು ಕೋಣಗಳು – ಇವಿಷ್ಟೂ ಆತನ ದಿನದಿನದ ಆಹಾರ. ಆತನಿಗಿದನ್ನೊದಗಿಸುವ ಸರದಿಯು ಹಲವು ವರ್ಷಗಳಿಗೊಮ್ಮೆ ಒಂದು ಕುಟುಂಬಕ್ಕೆ ಬರುವುದು. ಅದನ್ನು ತಪ್ಪಿಸಿಕೊಳ್ಳಲು ಆ ಮನೆಯವನೇನಾದರೂ ಯತ್ನಿಸಿದಲ್ಲಿ, ಆತನನ್ನೂ ಆತನ ಹೆಂಡತಿ-ಮಕ್ಕಳನ್ನೂ ಆ ರಾಕ್ಷಸನು ಕೊಂದುತಿನ್ನುವನೇ. ವೇತ್ರಕೀಯಗೃಹವೆಂಬ ಪಟ್ಟಣವೊಂದಿದೆ; ನಮ್ಮ ನಿಜವಾದ ರಾಜ ಅಲ್ಲಿದ್ದಾನೆ. ಮಂದಮತಿಯಾದ ಆತನೋ, ಜನರ ಕ್ಷೇಮಕ್ಕಾಗಿ ಯಾವ ಯತ್ನವನ್ನೂ ಮಾಡ!"

ಇಲ್ಲಿ ನಾವು ಗಮನಿಸಬೇಕಾದ ಒಂದೆರಡಂಶಗಳಿವೆ. ಪ್ರಾಣದ ಹಂಗನ್ನು ತೊರೆಯಲು ಒಬ್ಬರಿಗಿಂತ ಮತ್ತೊಬ್ಬರು ಸಿದ್ಧರಾಗಿರುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ; ಶೋಕವು ಮಿತಿಮೀರಿದೆ. ಈ ಮಧ್ಯದಲ್ಲಿ ಮಗುವು ಬಾಯಿಹಾಕಿರುವುದು ಅನಿರೀಕ್ಷಿತವಾದರೂ ಅಸಹಜವೇನಲ್ಲ. ಎಳೆಯ ಮಗುವಿನ ಉಲಿಯಲ್ಲಿನ ಸಾಹಸದ ನುಡಿ ನಗು ಚಿಮ್ಮಿಸಿದೆ (ಓದುಗರಲ್ಲೂ). ಮತ್ತು ಕಾಲಕಾಯುತ್ತಿದ್ದ ಕುಂತಿಗೂ ಎಲ್ಲರೂ ನಗುವ ವೇಳೆಗೆ ಸಮುಚಿತವಾದ ಪ್ರವೇಶವನ್ನು ಒದಗಿಸಿಕೊಟ್ಟಿದೆ. ಕಥೆಯಲ್ಲಿ ಕೆಲಕಾಲಾನಂತರದ, ಕೃತಕವಲ್ಲದ, ರಸಾಂತರವು ಆಸ್ವಾದ್ಯವೇ ಸರಿ.

ಸೂಚನೆ : 18/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷಪ್ರಶ್ನೆ - 17(Yaksha Prashne - 17)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – ೧೬ ಕ್ಷತ್ತ್ರಿಯರಿಗೆ ನಿಂದಿತವಾದುದು ಯಾವುದು ?

ಉತ್ತರ - ಪರಿತ್ಯಾಗ.

ಈ ಹಿಂದಿನ ಲೇಖನದಲ್ಲಿ ಕ್ಷತ್ತ್ರಿಯನ ಕರ್ತವ್ಯವನ್ನು ವಿವರಸಿದೆ. ಪ್ರಜೆಗಳ ಪೋಷಣೆ ಮತ್ತು ರಾಜ್ಯದ ಸಂರಕ್ಷಣೆ ಎಂಬುದಾಗಿ ಸ್ಪಷ್ಟಪಡಿಸಿದೆ. ಇದಕ್ಕೆ ವಿರುದ್ಧವಾದ ಕಾರ್ಯವು ಕ್ಷತ್ತ್ರಿಯನಾದವನಿಗೆ ಶೋಭೆಯನ್ನು ತರುವುದಿಲ್ಲ ಎಂದರ್ಥ. ತನ್ನ ರಾಜ್ಯದಲ್ಲಿರುವ ಜನರನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದ ಕಾರ್ಯವೆಂದರೆ ಶರಣಾಗತರಿಗೆ ರಕ್ಷಣೆಯನ್ನು ಕೊಡುವುದು. ಶರಣಾಗತರನ್ನು ಸ್ವೀಕರಿಸದೇ, ಬಿಡುವುದು ಮೂರ್ಖರಾಜನ ಲಕ್ಷಣವಾಗುತ್ತದೆ. ರಕ್ಷಣೆಯನ್ನು ಬೇಡಿ ಬಂದ ಶತ್ರುರಾಜ್ಯದ ವ್ಯಕ್ತಿಯನ್ನೂ ಆದರಿಸಿದ ಉದಾಹರಣೆಗಳು ನಮ್ಮ ಪುರಾಣ ಇತಿಹಾಸಗಳಲ್ಲಿ ಸಾಕಷ್ಟು ಸಿಗುತ್ತವೆ.

ಕ್ಷತ್ತ್ರಿಯ ಶಬ್ದವೇ 'ಕ್ಷತಾತ್ ಕಿಲ ತ್ರಾಯತೇ- ಯಾರು ಆಘಾತಕ್ಕೊಳಗಾಗಿ ರಕ್ಷಣೆಯನ್ನು ಕೋರಿ ಬರುತ್ತಾರೋ ಅಂತವರಿಗೆ ನೆರವು ಕೊಡುವುದು' ಎಂಬರ್ಥವನ್ನು ತಿಳಿಸುತ್ತದೆ. ಕಷ್ಟಕ್ಕೆ ಸಿಲುಕಿದವನನ್ನು ಪರಿತ್ಯಜಿಸಿದರೆ ಅವನು ಹೇಗೆ ತಾನೆ ಕ್ಷತ್ತ್ರಿಯನಾಗಬಲ್ಲ? ಕ್ಷತ್ತ್ರಿಯಾಧಮನಷ್ಟೆ! 

ಅತ್ಯಂತ ಪ್ರಸಿದ್ಧವಾದ ಉದಾಹರಣೆಯೆಂದರೆ ವಿಭೀಷಣ-ಶರಣಾಗತಿ. ವಿಭೀಷಣನು ರಕ್ಕಸ ರಾವಣನ ಅನುಜ. ರಾವಣನಾದರೋ ರಾಮನ ಪ್ರಬಲ ಶತ್ರು. ಇಂಹತ ರಾವಣ ತಮ್ಮನಾದ ವಿಭೀಷಣನು ಅಣ್ಣನ ಅಸಂಗತ ಕಾರ್ಯವನ್ನು ನೋಡಿ ಬೇಸತ್ತು ರಾಜ್ಯವನ್ನು ಪರಿತ್ಯಾಗ ಮಾಡುವ ನಿರ್ಧಾರಕ್ಕೆ ಬರುತ್ತಾನೆ. ರಾಮನಿದ್ದಲ್ಲಿಗೆ ಬಂದು ತನ್ನ ಶರಣಾಗತಿಯ ಭಾವವನ್ನು ಪ್ರಕಟಪಡಿಸುತ್ತಾನೆ. ರಾಮನ ಪರಿವಾರದಲ್ಲಿ ವಿಭೀಷಣನನ್ನು ಸೇರಿಸಿಕೊಳ್ಳಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತದೆ. ಪರೆಂಗಿತಜ್ಞನಾದ ಶ್ರೀರಾಮನು ವಿಭೀಷಣನ ಆರ್ತಭಾವವನ್ನು - ಅಂತರ್ಭಾವವನ್ನು ಅರಿತು ತನ್ನ ಪಕ್ಷಕ್ಕೆ ಸೇರಿಸಿಕೊಂಡು ಆದರ್ಶ ರಾಜನಾದ ಶ್ರೀರಾಮ. 

ಇದೇ ರೀತಿ ಮಹಾಭಾರತದ ಯುದ್ಧದ ಸಂದರ್ಭದಲ್ಲೂ ಇಂತಹ ಒಂದು ಘಟನೆ ನಡೆಯುತ್ತದೆ. ಯುಯುತ್ಸುವು ಧೃತರಾಷ್ಟ್ರನ ಮಕ್ಕಳಲ್ಲಿ ಒಬ್ಬ. ಆತ ಯುದ್ಧಕ್ಕೂ ಪೂರ್ವದಲ್ಲಿ ಪಾಂಡವಪಕ್ಷಕ್ಕೆ ಬಂದು ಸೇರುತ್ತಾನೆ. ತನ್ನ ಪಿತೃಪಕ್ಷವನ್ನು ಬಿಟ್ಟು ದಾಯಾದಿಯ ಇನ್ನೊಂದು ಪಕ್ಷಕ್ಕೆ ಬಂದಿರುವ ಯುಯುತ್ಸುವನ್ನು ಪಾಂಡವರು ಶ್ರೀಕೃಷ್ಣನ ಅನುಮತಿಯನ್ನು ಪಡೆದು ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುತ್ತಾರೆ. 

ಇಂತಹದ್ದೇ ಒಂದು ಘಟನೆ ನಮ್ಮ ಇತಿಹಾಸದಲ್ಲಿ ಬರುತ್ತದೆ. ಕೆಳದಿ ರಾಜ್ಯದಲ್ಲಿ ರಾಣಿ ಚೆನ್ನಮ್ಮ ತನ ಪತಿಯಾದ ಸೋಮಶೇಖರನ ಮರಣಾನಂತರ ನಿಜಾರ್ಥದಲ್ಲಿ ಪಟ್ಟದರಸಿಯಾಗಿದ್ದಾಳೆ. ಇದೇ ಸಮಯದಲ್ಲಿ ಮೊಗಲರ ದೊರೆ ಔರಂಗಜೇಬನ ಉತ್ತರಭಾರತದಲ್ಲಿ ಆಧಿಪತ್ಯ. ಇತ್ತ ಮಹಾರಾಷ್ಟ್ರದಲ್ಲಿ ಶಿವಾಜಿಯ ಮಗ ರಾಜಾರಾಮನು ತಂದೆಯ ಅನಂತರ ರಾಜ್ಯವನ್ನು ನೋಡಿಕೊಳ್ಳುತ್ತಿದ್ದ. ಔರಂಗಜೇಬನಿಂದ ಸೋಲನ್ನು ಕಂಡ ರಾಜಾರಾಮನು ರಕ್ಷಣೆಯನ್ನು ಕೋರಿ ಚೆನ್ನಮನ ಬಳಿ ಬರುತ್ತಾನೆ. ಮೊಗಲ ಬಾದಷಾನು ರಾಜಾರಾಮನನ್ನು ಕರೆತರಲು ದೂತನನ್ನು ಚೆನ್ನಮ್ಮನ ಬಳಿ ಕಳಿಸಿಕೊಡುತ್ತಾನೆ. ಆಗ ಚೆನ್ನಮ್ಮ ಹೇಳುವ ಮಾತು "ಶರಣಾಗತರನ್ನು ರಕ್ಷಿಸುವುದು ನಮ್ಮ ಧರ್ಮ" ಎಂದು ಹೇಳಿ ರಾಜಾರಾಮನಿಗೆ ರಕ್ಷಣೆಯನ್ನಿತ್ತಳು. ಯಾರು ತಮ್ಮ ಬಳಿ ಹೀಗೆ ಸಹಾಯವನ್ನು ಕೋರಿ ಬರುತ್ತಾರೋ ಅವರಿಗೆ ಆಶ್ರಯವನ್ನು ಕೊಡುವುದು ರಾಜನ ಆದ್ಯ ಕರ್ತವ್ಯವಾಗಿರುತ್ತದೆ. ಅಂತಹ ಯಾರನ್ನೂ ಬಿಟ್ಟುಕೊಡಬಾರದು. ಅಂತಹ ರಾಜನೇ ಉತ್ತಮ ರಾಜನಾಗಬಲ್ಲ ಎಂಬುದು ಈ ಪ್ರಶ್ನೋತ್ತರದ ಆಶಯ.   

ಸೂಚನೆ : 18/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಮೂಲ ಗುರಿಯನ್ನು ಮರೆಯದಿರೋಣ (Mula Guriyannu Mareyadirona)

ಲೇಖಕರು : ಸುಮುಖ ಹೆಬ್ಬಾರ್ 
(ಪ್ರತಿಕ್ರಿಯಿಸಿರಿ lekhana@ayvm.in)


ಒಬ್ಬ ರಾಜನು ತನ್ನ ಪರಿವಾರದೊಡನೆ ಬೇಟೆಯಾಡಲು ದಟ್ಟವಾದ ಅರಣ್ಯವನ್ನು ಪ್ರವೇಶಿಸುತ್ತಾನೆ. ಅಲ್ಲಿ ಅವನಿಗೆ ಒಂದು ಆಕರ್ಷಕವಾದ ತರುಣ ಜಿಂಕೆಯು  ಎದುರಾಗುತ್ತದೆ. ಜಿಂಕೆಯನ್ನು ಬೇಟೆಯಾಡಲು ಉದ್ಯುಕ್ತನಾಗುತ್ತಾನೆ; ಬಾಣವನ್ನು ಪ್ರಯೋಗಿಸುತ್ತಾನೆ. ಜಿಂಕೆಯು  ತಪ್ಪಿಸಿಕೊಂಡು ಮುಂದೆ ಸಾಗುತ್ತದೆ. ಮತ್ತೆ ರಾಜನ ಎದುರು ಹುಲ್ಲನ್ನು ಬಾಯಲ್ಲಿ ಇಟ್ಟುಕೊಂಡು ಜಿಗಿಯುತ್ತಾ ಓಡಾಡುತ್ತದೆ. ಇದನ್ನು ಕಂಡ ರಾಜನು ಜಿಂಕೆಯು ತನ್ನ ಸಾಮರ್ಥ್ಯಕ್ಕೆ ಸವಾಲು ಎಂಬುದಾಗಿ ಭಾವಿಸಿ ಮತ್ತೆ ಬಾಣವನ್ನು ಪ್ರಯೋಗಿಸುತ್ತಾನೆ. ಈ ಬಾರಿ ಜಿಂಕೆಗೆ ಬಾಣವು ತಗುಲಿದರೂ, ಒಂದು ಮರಕ್ಕೆ ಉಜ್ಜುತ್ತಾ ದೇಹದಿಂದ ಉದುರಿಸಿಕೊಳ್ಳುತ್ತದೆ. ಜಿಂಕೆಯನ್ನು ಬೇಟೆಯಾಡಿಯೇ ತೀರಬೇಕೆಂಬ ಛಲದಿಂದ, ಜಿಗಿದೋಡುತ್ತಿರುವ ಜಿಂಕೆಯನ್ನು ಹಿಂಬಾಲಿಸುತ್ತಾ ರಾಜನು ತನ್ನ ಪರಿವಾರದಿಂದ ದೂರವಾಗುತ್ತಾನೆ. ಜಿಂಕೆಯನ್ನು ಬೇಟೆಯಾಡಬೇಕೆಂಬ ಆಸೆಯಿಂದ ರಾಜನು ದಟ್ಟ ಅರಣ್ಯದ ಮಧ್ಯದಲ್ಲಿ ಸಿಲುಕಿಕೊಳ್ಳುತ್ತಾನೆ. ಅತ್ತ ಜಿಂಕೆಯೂ ತಪ್ಪಿಸಿಕೊಂಡು ಹೋಗುತ್ತದೆ; ಇತ್ತ ರಾಜನಿಗೂ ಹೊರಗೆ ಬರುವ ದಾರಿ ಕಾಣದೆ ಒದ್ದಾಡುವ ಸ್ಥಿತಿ ಬಂದೊದಗುತ್ತದೆ.

ಭಾರತದ ಇತಿಹಾಸವನ್ನು ಗಮನಿಸಿದಾಗ ಕೆಲವು  ರಾಜರ ಕಥೆಗಳಲ್ಲಿ ಇದೇ ರೀತಿಯ ಸಂದರ್ಭಗಳು ಕಾಣಸಿಗುತ್ತವೆ. ಸನಾತನಾರ್ಯ ಮಹರ್ಷಿಗಳು ಭಗವಂತನ ಸಾಕ್ಷಾತ್ಕಾರವೇ ಮಾನವ ಜನ್ಮದ ಅಂತಿಮ ಗುರಿ ಎಂಬುದಾಗಿ ಬಗೆ ಬಗೆಯಾಗಿ ಸಾರುತ್ತಾರೆ. ಆದರೆ ಈಗಿನ ಸಮಾಜವು ಕೇವಲ ಅರ್ಥ-ಕಾಮಗಳ ಹಿಂದೆ ಓಡುವುದನ್ನು ಕಾಣುತ್ತೇವೆ.  ಆಕರ್ಷಕವಾದ ಜಿಂಕೆ ಎಂಬುದು, ನಮ್ಮ ಎದುರು ಓಡಾಡಿ, ಮನಸ್ಸನ್ನು ತನ್ನ ಕಡೆ ಸೆಳೆದುಕೊಳ್ಳುವ ಬಯಕೆಗಳು. ಅದರ ಹಿಂದೆ ಬಿದ್ದು, ಅದನ್ನು ಪಡೆಯಬೇಕೆಂಬ ಉತ್ಕಟತೆಯು ಏರ್ಪಟ್ಟಾಗ, ನಮ್ಮ ಜೀವನದ ಪರಮ ಧ್ಯೇಯವನ್ನು ಮರೆತು, ತನ್ನವರಿಂದ ದೂರವಾಗಿ, ಏಕಾಂಗಿಯಾಗಿ, ವಿವೇಚನೆಯಿಲ್ಲದೆ, ಸೆಳೆತದ ಹಿಂದೆ ಹೋಗುವಂತಾಗುತ್ತದೆ. ಹಠಕ್ಕೆ ಬಿದ್ದು ಅದನ್ನು ಪಡೆಯಬೇಕೆಂಬ ಕಾಮದಿಂದ ಆರಂಭವಾಗುವ ಈ ಪ್ರಕ್ರಿಯೆಯು, ಮುಂದುವರಿದು ಕೇವಲ ಇಂದ್ರಿಯಪ್ರಪಂಚದಲ್ಲಿ  ತಂದು ನಿಲ್ಲಿಸಿಬಿಡುತ್ತದೆ.  ಅಷ್ಟೇ ಅಲ್ಲದೆ "ಇದೋ ಸಿಕ್ಕಿತು!" ಎಂಬ ಭ್ರಮೆಯನ್ನು ನೀಡುತ್ತಾ, ಇಂತಹ ವಸ್ತು/ವಿಷಯ ದೊರಕದೆ ಹೋದರೆ!  ಎಂಬ ಆತಂಕವನ್ನು ಉಂಟುಮಾಡುತ್ತದೆ. ಒಟ್ಟಿನಲ್ಲಿ, ಅತೀಂದ್ರಿಯವಾದ ಸುಖವನ್ನು ಅನುಭವಿಸುವ ಯೋಗ್ಯತೆ ಇರುವ ಹಾಗೂ ಅದನ್ನೇ ಗುರಿಯಾಗಿಸಿಕೊಳ್ಳಬೇಕಾದ ನಮ್ಮನ್ನು, ಲೌಕಿಕ ಕ್ಷೇತ್ರದ ಸುಖಗಳಿಗಾಗಿಯೇ ಸೀಮಿತಗೊಳಿಸುತ್ತದೆ.

ಮಹರ್ಷಿಗಳು ಪುರುಷಾರ್ಥಕ್ಕೆ ವಿರೋಧವಲ್ಲದ ಕಾಮನೆಗಳನ್ನು ತಿರಸ್ಕರಿಸಿಲ್ಲ. ಆದರೆ ಸಂಸಾರದ ಸಾಗರದಲ್ಲಿ ನಮ್ಮನ್ನು ಸುತ್ತಿಸುವ ಆಸೆಗಳ ವಿಷಯದಲ್ಲಿ ಎಚ್ಚರಿಸಿದ್ದಾರೆ.  "ಇಂದ್ರಿಯಗಳಿಗೆ ವಿಷಯವನ್ನು ಕೊಡುವಾಗಲೂ ದೇವನವರೆಗೂ ತಟ್ಟುವಂತೆಯೇ ಕೊಟ್ಟರೆ, ಜೀವನವು ಅಂತರ್ಮುಖವಾಗಿ ಹರಿದು ಹೋದರೆ ಸೌಖ್ಯವಿರುತ್ತೆ" ಎಂಬುದು ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿತ್ತು.  ಮಹರ್ಷಿಗಳು ಕೆಲವು ವಿಷಯಗಳನ್ನು ಸಂಸಾರದಲ್ಲಿ ಜಾರುವ ಭಾಗಗಳು ಎಂದು ಸೂಚಿಸಿ, ಅವುಗಳನ್ನು ದಾಟುವ ಬಗೆಯನ್ನೂ ಹೇಳಿದ್ದಾರೆ.  ಇಂತಹ ಮಹರ್ಷಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು, ಮೂಲ ಉದ್ದೇಶವನ್ನು ಮರೆಸುವ ಕಾಮನೆಗಳಿಗೆ ವಶರಾಗದೆ, ಭಗವತ್ಕಾಮ ಹೊಂದಿ ಬದುಕುವವರಾಗೋಣ.  

ಸೂಚನೆ: 15/12/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Sunday, December 11, 2022

ಯಕ್ಷಪ್ರಶ್ನೆ - 16(Yaksha Prashne - 16)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – ೧೫ ಕ್ಷತ್ತ್ರಿಯರಿಗೆ ಮಾನುಷಭಾವ ಯಾವುದು ?

ಉತ್ತರ - ಭಯ.

ಇಲ್ಲಿ ಯಕ್ಷನು ಧರ್ಮರಾಜನಿಗೆ ಕ್ಷತ್ತ್ರಿಯನಿಗೆ ಸಂಬಂಧಿಸಿದ ವಿಷಯದಲ್ಲಿ ಪ್ರಶ್ನಿಸುತ್ತಿದ್ದಾನೆ. ಈ ಹಿಂದಿನ ಎರಡು ಪ್ರಶ್ನೆಗಳೂ ಇದಕ್ಕೆ ಸಂಬಂಧಿಸಿದ್ದೇ ಆಗಿದ್ದವು. ಇದರ ಮುಂದುವರಿಕೆಯಾಗಿ ಈ ಪ್ರಶ್ನೆಯನ್ನು ಕೇಳಿದ್ದಾನೆ. ಕ್ಷತ್ತ್ರಿಯನಾದವನು ರಣರಂಗದಲ್ಲಿ ನಿಂತು, ಹೋರಾಟ ಮಾಡಿ, ವಿಜಯಮಾಲೆಯನ್ನು ಧರಿಸಬೇಕು. ರಾಜ್ಯವನ್ನು ಶತ್ರುಗಳಿಂದ ಸಂರಕ್ಷಿಸಬೇಕು. ಪ್ರಜೆಗಳನ್ನು ಜತನ ಮಾಡುವುದು ಅವನ ಹೊಣೆಗಾರಿಕೆ. ಆದ್ದರಿಂದ ನಿಜವಾದ ಕ್ಷತ್ತ್ರಿಯನ  ಸ್ವಭಾವ ಎಂತಹದ್ದು? ಅವನು ತನ್ನ ಭಾವದಿಂದ ಮೇಲಕ್ಕೇರಲು ಅವನಲ್ಲಿರಬೇಕಾದ ಪ್ರಜ್ಞೆ ಯಾವುದು? ಎಂಬ ಅಂಶ ಕ್ಷತ್ತ್ರಿಯನ ಮಾನುಷಭಾವ ಯಾವುದು? ಎಂಬುದು  ಪ್ರಶ್ನೆಯಲ್ಲಿ ಅಡಕವಾದ ಭಾವವಾಗಿದೆ. ಅದಕ್ಕೆ ಧರ್ಮರಾಜನ ಉತ್ತರ 'ಭಯ' ಎಂಬುದು. ಈ ಭಯವು ಯಾವ ರೀತಿ ಅವನ ಮಾನುಷಭಾವದ ಪ್ರತೀಕವಾಗುತ್ತದೆ. ಅದು ಹೇಗೆ ಮೇಲಿನ ಭಾವವಾದ ದೇವತ್ವಕ್ಕೆ ಹೋಗಲು ಅಡ್ಡಿಯಾಗುತ್ತದೆ? ಎಂಬ ಅಂಶವೂ ಈ ಪ್ರಶೆಯ ಹಿಂದಿದೆ. 

ಭಯ ಎಂದರೆ ಪುಕಲುತನ. ಯುದ್ಧಕ್ಕೆ ಹೆದರಿ ಓಡಿ ಹೋಗುವ ಸ್ವಭಾವ. ಯಾವುದೇ ಕಾರಣಕ್ಕೂ ಒಬ್ಬ ಕ್ಷತ್ತ್ರಿಯನಾದವನು ಯುದ್ಧದಿಂದ ಹಿಂದೆ ಸರಿಯುವುದು ಅವನಿಗೆ ಶೋಭೆಯನ್ನು ತರುವಂತಹ ವಿಷಯವಲ್ಲ. ಎಂತಹ ಕಠಿನಪರಿಸ್ಥಿತಿಯಲ್ಲೂ ಜಗ್ಗದೆ ಕುಗ್ಗದೆ ಎದುರಾಳಿಯನ್ನು ಹಿಮ್ಮೆಟ್ಟಿಸುವುದೇ ಅವನು ಕೈಗೊಳ್ಳಬೇಕಾದ ಕ್ರಮವಾಗಿರುತ್ತದೆ. ಭಯವೆಂಬುದು ಅವನಲ್ಲಿನ ಎಲ್ಲಾ ವೀರ್ಯ ಪರಾಕ್ರಮಾದಿ ಕ್ಷಾತ್ತ್ರಬಲವನ್ನೂ ಕುಗ್ಗಿಸುವಂತಹ ದೋಷ. ಎಷ್ಟೇ ಬಲ, ವೀರ್ಯ, ಪೌರುಷವಿದ್ದರೂ ಆತನಿಗೆ ಯುದ್ಧಭೂಮಿಯಲ್ಲಿ ಭಯವೊಂದಿದ್ದರೆ ಅವೆಲ್ಲವೂ ಕ್ಷೀಣವಾಗುವವು. ಇದರ ಸ್ಪಷ್ಟವಾದ ಉದಾಹರಣೆಯನ್ನು ಅರ್ಜುನನಲ್ಲಿ ನಾವು ಕಾಣಬಹುದು. ಹಸ್ತಿನಾವತಿಯ ಎರಡು ಪ್ರಬಲವಾದ ಕುಟುಂಬಗಳ ಮಧ್ಯೆ ರಾಜ್ಯಕ್ಕಾಗಿ ಯುದ್ಧ ನಿಶ್ಚಯವಾಗಿ ಯುದ್ಧ ಆರಂಭವಾಗಿದೆ. ಎರಡು ಪಕ್ಷಗಳಿಂದಲೂ ಸೇರಿ ಹದಿನೆಂಟು ಅಕ್ಷೌಹಿಣೀಸೈನ್ಯ ಯುದ್ಧಸನ್ನದ್ಧವಾಗಿದೆ. ಅರ್ಜುನನ ಸಾರಥಿಯಾಗಿ ಭಗವಾನ್ ಶ್ರೀಕೃಷ್ಣ ಅಲ್ಲಿ ಉಪಸ್ಥಿತನಿದ್ದಾನೆ. ಆದರೆ ಅರ್ಜುನನಿಗೆ ಭಯ ಬಂತು. ಅರ್ಜುನ, ಸಾಮಾನ್ಯವೀರನಲ್ಲ! ಅವನಂತಹ ಬಿಲ್ಲುಗಾರ ಮತ್ತೊಬ್ಬನಿಲ್ಲ. ಧನುರ್ವೇದದ ಪಾರಂಗತ. ಸವ್ಯಚಾಚೀ- ಒಂದೇ ಕಾಲದಲ್ಲಿ ಎರಡೂ ಕೈಗಳಿಂದ ಬಾಣಗಳನ್ನು ಬಿಡಲು ಸಾಮರ್ಥ್ಯವುಳ್ಳವನು ಆತ. ಅಷ್ಟೇ ಅಲ್ಲ. ಭಗವಾನ್ ಚಕ್ರಪಾಣೀ ಶ್ರೀಕೃಷ್ಣನೇ ಅವನ ಸಾರಥಿ. ಹೀಗಿದ್ದೂ ಆತನಿಗೆ ಭಯ ಬಂತು. ಅದರಿಂದಾಗಿ ವಿದ್ಯಾವಂತನಾದ ಗಾಂಡೀವೀ ತನ್ನ ವಿವೇಕವನ್ನು ಕಳೆದುಕೊಳ್ಳುತ್ತಾನೆ. ಸಾಮಾನ್ಯ ಹುಲುಮಾನವನಂತೆ ಮಾತನಾಡುತ್ತಾನೆ. ತನ್ನಲ್ಲಿರುವ ವೀರಕ್ಷಾತ್ತ್ರಭಾವವನ್ನು ಮರೆಯುತ್ತಾನೆ. ಅಂದರೆ ಈ ಭಯವು ಅವನಲ್ಲಿ 'ನಾರು ಯಾರು? ನನ್ನ ಕರ್ತವ್ಯವೇನು? ಎಂಬ ಭಾವವನ್ನು ಮರೆಸಿಬಿಡುತ್ತದೆ. ಆಗ ಶ್ರೀಕೃಷ್ಣಪರಮಾತ್ಮನು ಅವನಲ್ಲಿನ ಭಯ ನಿವಾರಣೆಗಾಗಿ 'ಭಗವದ್ಗೀತೆ'ಯನ್ನು ಉಪದೇಶಿಸುತ್ತಾನೆ.  ಅನಂತರ ಗೀತೋಪದೇಶವನ್ನು ಪಡೆದ ಅರ್ಜುನ ತನ್ನ ಸಹಜಕ್ಷಾತ್ತ್ರ ತೇಜಸ್ಸನ್ನು ಪಡೆದು ಯೂಧ ಮಾಡಿ ವಿಜಯಮಾಲೆಯನ್ನು ಧರಿಸುತ್ತಾನೆ. ಒಟ್ಟಾರೆ ಹೇಳಬೇಕಾದ ವಿಷಯವಿಷ್ಟೆ - ಭಯವೆಂಬುದು ನಮ್ಮಲ್ಲಿನ ಧೃತಿಯನ್ನು ಕೆಡಿಸುತ್ತದೆ. ಪರಿಣಾಮವಾಗಿ ಮನುಷ್ಯ ಅಧೋಗತಿಗೆ ಹೋಗುತ್ತಾನೆ. ಭಯವನ್ನು ಬಿಟ್ಟರೆ ಮಾತ್ರ ವಿಜಯಿಯಾಗಿ ಊರ್ಧ್ವಲೋಕದ ಕಡೆ ಪಯಣಿಸುತ್ತಾನೆ.    

ಸೂಚನೆ : 11/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.