Saturday, June 29, 2024

ಭಗವಂತ ಕರುಣಾಮಯನೇ? ... (Bhagavanta Karunamayane? ...)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)




ಭಗವಂತನನ್ನು ಕರುಣಾಮಯ, ಕನಿಕರ ಮೂರ್ತಿ, ಕರುಣೆಯ ಕಡಲು ಹೀಗೆಲ್ಲಾ ಕರೆಯುತ್ತಾರೆ. ವಾಸ್ತವವಾಗಿ ಭಗವಂತನಿಗೆ ಕರುಣೆ ಇದೆಯೇ? ಎಂಬ ಪ್ರಶ್ನೆ ಪಕ್ಕದಲ್ಲೇ ಇದೆ. ನಾವು ಜೀವಿಸುವ ಜಗತ್ತನ್ನೊಮ್ಮೆ ನೋಡಿ. ಎಷ್ಟೊಂದು ದುಃಖ ದೈನ್ಯಗಳು! ಹೊಟ್ಟೆಗಿಲ್ಲದೇ ಸಾಯುವವರು, ಜೀವನದ ಪ್ರಾಥಮಿಕ ಅವಶ್ಯಕತೆಗಳೇ ಪೂರೈಕೆಯಾಗದೇ ಗುಳಿಬಿದ್ದ ಕಣ್ಣುಗಳೆಷ್ಟು! ನೆರಿಗೆಯಾದ ಮುಖಗಳೆಷ್ಟು! ಒಂದೆಡೆ ಬಡಜೀವಿಗಳ ತಲೆಯೊಡೆದು ಐಷಾರಾಮದ ಜೀವನ ನಡೆಸುತ್ತಾ ಯಾವ ಭಯವೂ ಇಲ್ಲದೇ ಸ್ವಚ್ಚಂದವಾಗಿ ಬದುಕುವವರ ಅಟ್ಟಹಾಸ! ಇನ್ನೊಂದೆಡೆ ಇವರೆಲ್ಲರ ಕಾಲ್ತುಳಿತಕ್ಕೆ ಒಳಗಾಗಿ ನಳುಗಿಹೊದವರ ಆಕ್ರಂದನ! ಭರ್ತೃಹರಿಯ ಮಾತೊಂದು ಹೀಗಿದೆ- ಕ್ವಚಿದ್ ವಿದ್ವದ್ಗೋಷ್ಠಿ ಕ್ವಚಿದಪಿ ಸುರಾಮತ್ತ ಕಲಹ: ಕ್ವಚಿದ್ ವೀಣಾ ನಾದಃ ಕ್ವಚಿದಪಿ ಹಾಹೇತಿ ರುದಿತಂ| ಕ್ವಚಿದ್ ರಮ್ಯಾರಾಮಾ ಕ್ವಚಿದಪಿ ಜರಾ ಜರ್ಝರ ತನು: | ನ ಜಾನೇ ಸಂಸಾರಃ ಕಿಮಮೃತಮಯಃ ಕಿಂ ವಿಷಮಯಃ||- ಒಂದೆಡೆ ವಿದ್ವಾಂಸರ ಸಭೆ.ಇನ್ನೊಂದೆಡೆ ಹೆಂಡ ಕುಡುಕರ ಜಗಳ. ಒಂದೆಡೆ ಸುಶ್ರಾವ್ಯವಾದ ವೀಣಾನಾದ. ಇನ್ನೊಂದೆಡೆ ಹಾ ಹಾ ಎಂಬ ನೋವಿನ ಚೀತ್ಕಾರ. ಒಂದೆಡೆ ಸುಂದರಿಯಾದ ತರುಣಿ. 

ಇನ್ನೊಂದೆಡೆ ಮುಪ್ಪಿನಿಂದ ಜರ್ಝರಿತವಾದ ಶರೀರ. 


ಇದರಿಂದ ಈ ಸಂಸಾರವು ಅಮೃತಮಯವೇ, ವಿಷಮಯವೇ ಎಂಬುದೇ ತಿಳಿಯದು ಎನ್ನುತ್ತಾನೆ. ಏನಿದು ವಿಪರ್ಯಾಸ? ಇಷ್ಟಲ್ಲದೇ ಒಬ್ಬ ವ್ಯಕ್ತಿಯ ಬದುಕಲ್ಲೇ ಎಷ್ಟು ವೈಪರೀತ್ಯಗಳು! ಇವತ್ತು ಚೆನ್ನಾಗಿದ್ದವನು ನಾಳೆ ಖಾಯಿಲೆಯಿಂದ ಬಳಲುತ್ತಾನೆ. ಬದುಕೆಲ್ಲವೂ ಬವಣೆಯಲ್ಲೆ ಕಳೆದುಹೋಗುತ್ತಿದೆ. ಜೊತೆಗೇ ರೋಗ, ಮುಪ್ಪು,ಸಾವು, ನೋವುಗಳು..ಇಷ್ಟೇ ಅಲ್ಲದೇ ಪ್ರಳಯಕಾಲದಲ್ಲಿ ಎಲ್ಲಾ ಜೀವಿಗಳನ್ನೂ ಒಳ್ಳೆಯ ಕೆಟ್ಟವರೆಂದಲ್ಲದೇ ಸಂಹಾರ ಮಾಡುತ್ತಾನೆ. ನಿತ್ಯದಲ್ಲೂ ಜೀವಿಗಳ ಮರಣಕ್ಕೂ ಅವನೇ ಕಾರಣ. ಹೀಗೆ ಇನ್ನಿಲ್ಲದ ದುಃಖ ಸಾಗರದಲ್ಲಿ ಮುಳುಗಿದ ಜಗತ್ತನ್ನು ನೋಡಿಯೂ ಈ ಜಗದ ಒಡೆಯನನ್ನು ಕರುಣಾಮಯ ಎನ್ನುವುದೇ? ದಾಸಶ್ರೇಷ್ಠರಾದ ಪುರಂದರ ದಾಸರೇ ಒಂದೆಡೆ -ಕರುಣಾಮಯ ನೀನೆಂಬುವುದ್ಯಾತಕೋ ಭರವಸವಿಲ್ಲೆನಗೆ" ಎಂದಿದ್ದಾರಲ್ಲಾ ಕರುಣಾಮಯ ಎಂಬ ಈ ವಿಶೇಷಣ ಅವನಿಗೆ ಸಲ್ಲದು ಎಂದೇ ಅನ್ನಿಸಿಬಿಡುತ್ತದೆ. ಹಾಗಾದರೆ ಜ್ಞಾನಿಗಳು, ಭಕ್ತರು ಎಲ್ಲಾ ಏಕೆ ಅವನನ್ನು ಹೀಗೆನ್ನುತ್ತಾರೆ? ವಿಚಾರ ಮಾಡಬೇಕಾದ ವಿಷಯ. ಕೆಲವು ಉದಾಹರಣೆಗಳನ್ನು ಗಮನಿಸೋಣ.

 

ಕರುಣೆಯ ಸ್ವರೂಪವೇನು?:   

 

ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-ಮಗುವಿನ ಜಾತಕರ್ಮಕ್ಕಾಗಿ ಲಾಡು ಮಾಡಿಸಿರುತ್ತಾರೆ. ಬಂದವರೆಲ್ಲರಿಗೂ ಲಾಡು ಬಡಿಸಿ ಸಂತೋಷಪಡಿಸಿದ್ದರೂ ಆ ಮಗುವಿಗೇ ಸ್ವಲ್ಪವೂ ಲಾಡು ಕೊಡದಿರುವ ತಾಯಿ ಎಷ್ಟು ನಿಷ್ಕರುಣಿ ಅಲ್ಲವೇ ? ಎಂದರೆ ಏನೆನ್ನಬೇಕು? ಆ ತಾಯಿ ಏನಾದರೂ ಮಗುವಿನ ಬಾಯಿಗೆ ಲಾಡನ್ನು ಹಾಕಿದರೆ ಮಗುವಿನ ಪರಿಸ್ಥಿತಿ ಏನಾಗಬಹುದು? ಆಗ ಅವಳನ್ನು ಕರುಣಾಮಯಿ ಎನ್ನಲಾದೀತೇ?

 

 ಒಬ್ಬ ಚಿಕ್ಕ ಹುಡುಗನಿಗೆ ತಂದೆ ಹೆದರಿಸಿ, ಹೊಡೆದು, ಪಾಠ ಓದಿಸಿದರೆ ಆ ಸನ್ನಿವೇಶದಲ್ಲಿ ಹುಡುಗನಿಗೆ ತಂದೆ ನಿಷ್ಕರುಣಿ, ತನಗೆ ಶತ್ರುವಿನಂತೆ ಇದ್ದಾನೆ ಎನ್ನಿಸಿದರೆ ಆಶ್ಚರ್ಯವಿಲ್ಲ. ಆದರೆ ಮಗನ ಮೇಲಿನ ಕರುಣೆಯೇ ಈಗ ತಂದೆಯಿಂದ ಇಂತಹ ಕೆಲಸ ಮಾಡಿಸುತ್ತಿದೆಯಲ್ಲವೇ? ಆದರೆ ತಂದೆಯ ಕರುಣೆ ಆ ಮಗುವಿಗೆ ಅರ್ಥವಾಗುವುದು ಮುಂದೆ ಅವನು ಚೆನ್ನಾಗಿ ಓದಿ ದೊಡ್ಡವನಾದಾಗ. ತಂದೆ ಅಂದು ಹಾಗೆ ಮಾಡದಿದ್ದರೆ ಇಂದು ತಾನು ಇಷ್ಟು ಒಳ್ಳೆಯ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಎಂದು ಗದ್ಗದಿತನಾಗಿ ಅವನು ತಂದೆಯನ್ನು ನೆನಪಿಸಿಕೊಳ್ಳುತ್ತಾನೆ. ನಮಗೆ ಭಗವಂತನ ಕರುಣೆಯ ಸ್ವರೂಪ ತಿಳಿಯದಿದ್ದಾಗ ಹುಡುಗ ಆರಂಭದಲ್ಲಿ ತಂದೆಯನ್ನು ಭಾವಿಸಿದಂತೆ ನಾವೂ ಅವನನ್ನು ನಿಷ್ಕರುಣಿ ಎಂದುಕೊಳ್ಳುತ್ತೇವೆ.

 

ಅಪರಾಧಿಗೆ ನ್ಯಾಯಾಧೀಶರು ಶಿಕ್ಷೆ ಕೊಡಬಹುದೇ:

 

 ಕಳ್ಳತನ ಮಾಡಿದವನಿಗೆ ನ್ಯಾಯಾಧೀಶರು ಜೈಲು ಶಿಕ್ಷೆ ವಿಧಿಸುತ್ತಾರೆ. ಹಾಗಾದರೆ ನ್ಯಾಯಾಧೀಶರು ನಿಷ್ಕರುಣಿಯೇ? ಶಿಕ್ಷೆ ಕೊಡದೇ ಹಾಗೇ ಬಿಟ್ಟರೆ ನಮಗೆ ಅದು ಒಪ್ಪಿಗೆಯಾಗುತ್ತದೆಯೇ? ಶಿಕ್ಷೆ ಎನ್ನುವುದೇ ಒಬ್ಬನನ್ನು ಸರಿದಾರಿಗೆ ತರಲು ಇರುವ ವ್ಯವಸ್ಥೆ. ಅವನನ್ನು ಸರಿದಾರಿಗೆ ತರಬೇಕೆನ್ನುವ ಮಾನಸಿಕ ಸ್ಥಿತಿ ಕರುಣೆಯೇ ಅಲ್ಲವೇ? ಹೀಗೆ ಸರಿದಾರಿಗೆ ತರುವ ಕ್ರಮ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿರುತ್ತದೆ. ಅವರವರ ಪೂರ್ವ ಸಂಸ್ಕಾರದ ಮೇಲೆ ಯಾವ ಯಾವ ಉಪಾಯಗಳನ್ನು ಮಾಡಿದರೆ ಒಬ್ಬನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಸರಿದಾರಿಗೆ ಬರುತ್ತಾನೆ ಎಂದು ವಿಚಾರ ಮಾಡಿ ಸಜ್ಜನರು ಅಂತಹ ನಿಯಮಗಳನ್ನು ಮಾಡಿರುತ್ತಾರೆ.

 

ಭಗವಂತನ ಸೃಷ್ಟಿಯೆಲ್ಲವೂ ಕರುಣೆಯಿಂದಲೇ ಆದುದು:

 

ಹಾಗೆಯೇ ಭಗವಂತನೂ ಜೀವಲೋಕದ ಮೇಲಿನ ಕರುಣೆಯಿಂದಲೇ ಜೀವಕ್ಕೆ ಬೇಕಾದುದೆಲ್ಲವನ್ನೂ ಕೊಟ್ಟು ಸೃಷ್ಟಿಸಿದ್ದಾನೆ. ದಿವಿಯ ಆನಂದದಿಂದ ಭುವಿಯ ಸಂತೋಷಗಳ ವರೆಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಈ ಬ್ರಹ್ಮಾಂಡದ ಸೊಬಗನ್ನೊಮ್ಮೆ ನೋಡಿ- ಅಕ್ಷಯ ಸಂಪದ್ಭರಿತಳಾದಈ ನಮ್ಮ ಭೂಮಿ ತಾಯಿ, ನಯನ ಮನೋಹರ ಗಿರಿ ಪರ್ವತಗಳು,ತಂಪಾದ ನದಿಗಳು, ವಿಶಾಲ ಸಮುದ್ರ,ಅಸಂಖ್ಯ ನಕ್ಷತ್ರನಿಬಿಡವಾದ ನೀಲಾಕಾಶ, ಇನ್ನು ನಮ್ಮ ಈ ಪಿಂಡಾಂಡದಅದ್ಭುತವನ್ನು ಏನೆಂದು ಹೇಳೋಣ..ನಮ್ಮೊಳಗೇ ಬ್ರಹ್ಮಾಂಡದ ಸೋಬಗನ್ನೆಲ್ಲ ಅನುಭವಿಸುವುದಕ್ಕೆ ಬೇಕಾದ ಜ್ಞಾನ ಕರ್ಮೇಂದ್ರಿಯಗಳ ವೈಭವ. ಇಂದ್ರಿಯ ಸುಖಗಳ ಜೊತೆಗೇ ಅದನ್ನೂ ಮೀರಿದ ಆತ್ಮನ ಸುಖವನ್ನೂ ಅನುಭವಿಸಲು ಸಮರ್ಥವಾಗಿರುವ ಅದ್ಭುತವಾದ ಮಾನವ ದೇಹ. ಇವೆಲ್ಲವನ್ನೂ ಜೀವಲೋಕದ ಮೇಲಿನ ಕರುಣೆಯಿಂದಲ್ಲವೇ ಅವನು ಅನುಗ್ರಹಿಸಿರುವುದು? ಹಾಗಾದರೆ ಮೇಲೆ ಹೇಳಿದ ದುಃಖ ದೈನ್ಯಗಳಿಗೆ ಯಾರು ಜವಾಬ್ದಾರರು? ಮುಂದಿನ ಸಂಚಿಕೆಯಲ್ಲಿ ನೋಡೋಣ

 

ಮುಂದುವರೆಯುವುದು 


ಸೂಚನೆ : 29/6/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 20 ರಂಗವೇರಿದ ರಂಗ ಎಂತೆಂತು ಕಂಡ? (Krishnakarnamrta -20 Rangaverida Ranga Ententu Kanda?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕಪಟಪ್ರೇಮವನ್ನು ತೋರಿ ಕಂಸನು ಅಕ್ರೂರನ ಮೂಲಕ ಕೃಷ್ಣ-ಬಲರಾಮರನ್ನು ನಂದ-ಗೋಕುಲದಿಂದ ಮಥುರೆಗೆ ಬರಮಾಡಿಕೊಂಡನಷ್ಟೆ. ಕೃಷ್ಣ-ಸಂಹಾರಕ್ಕಾಗಿ ಕುವಲಯಾಪೀಡವೆಂಬ ಆನೆಯನ್ನೂ ಪ್ರಯೋಗಿಸಿದನಷ್ಟೆ. ಅದರ ಸಂಹಾರವನ್ನು ಮಾಡಿ ಬಂದ ಕೃಷ್ಣ-ಬಲರಾಮರು, ಇನ್ನು ಇಬ್ಬರು ಮಲ್ಲರನ್ನು ಮಲ್ಲರಂಗದ ಮೇಲೆ ನ್ನು ಎದುರಿಸುವುದಾಯಿತು. ಆ ಇಬ್ಬರೇ ಚಾಣೂರ-ಮುಷ್ಟಿಕರು. ಕಂಸ-ಸಂಹಾರವಾಗುವುದು ಇವರಿಬ್ಬರನ್ನು ಸಂಹರಿಸಿದ ಮೇಲೇ.

ರಂಗಮಂಚವನ್ನೇರುತ್ತಿದ್ದ ಆ ಕೃಷ್ಣ-ಬಲರಾಮರನ್ನು ನೋಡುತ್ತಿದ್ದವರಾರು? ನೋಡಿದವರಿಗೆ ಹೇಗೆ ಹೇಗೆ ಕಾಣುತ್ತಿದ್ದರು, ಈ ಗೋಕುಲದ ಸೋದರರು? ಎಂಬೀ ಪ್ರಶ್ನೆಗೆ ಸುಂದರವಾದ ಉತ್ತರವನ್ನು ಕೊಡುತ್ತಾನೆ, ಲೀಲಾಶುಕ.

ಮಲ್ಲರು, ಸಾಧಾರಣಜನರು, ಅಂಗನೆಯರು, ಗೋಪಾಲಕರು, ಅತ್ತ ಇಂದ್ರ, ಸಾಕ್ಷಾತ್ ಕಂಸ, ಕೊನೆಗೆ ಯೋಗಿಗಳು - ಈ ಏಳು ಮಂದಿಗೆ ಕೃಷ್ಣನು ತೋರಿದುದೆಂತು? - ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ, ಈ ಕೃಷ್ಣಕವಿ.

ರಂಗಾವತಾರ ಸಂದರ್ಭದಲ್ಲಿ, ಎಂದರೆ ಮಲ್ಲರಂಗವನ್ನೇರಿಬಂದ ಸಂದರ್ಭದಲ್ಲಿ, ಮಲ್ಲರಿಗೆ ಶ್ರೀಕೃಷ್ಣನು ಶೈಲೇಂದ್ರನಂತೆ ಕಂಡನಂತೆ. ಶೈಲವೆಂದರೆ ಬೆಟ್ಟ. ಶೈಲೇಂದ್ರನೆಂದರೆ ಮತ್ತಾರು, ಗಿರಿರಾಜನಾದ ಹಿಮವಂತನೇ. ಅಂತೂ ಮಲ್ಲರಿಗೆ ಹಿಮಾಲಯದಂತೆ ಕಂಡಿದ್ದಾನೆ, ಕೃಷ್ಣ. ಎಂತಹ ಮಲ್ಲನಾದರೂ ಹಿಮವತ್ಪರ್ವತವನ್ನು ಎದುರಿಸಿ ಮಣಿಸಲಾದೀತೇ? ಹೀಗೆ ಕೃಷ್ಣನನ್ನು ಕೊಲ್ಲಲೆಂದು ಬಂದಿದ್ದ ಮಲ್ಲರಿಗೆ ಮಲ್ಲಯುದ್ಧವಾರಂಭವಾಗುವ ಮೊದಲೇ ಎದುರಾಳಿಯನ್ನು ಕಂಡು ಬೆದರುವಂತಾಯಿತು! ಅಲ್ಲಿನ್ನೂ ಹಲವು ಮಲ್ಲರು ಜಮಾಯಿಸಿದ್ದರಲ್ಲವೆ? ಅವರಿಗೂ ಕೃಷ್ಣನು ಅಜಯ್ಯನಾಗಿ ಕಂಡಿದ್ದಾನೆ. ಎಂದರೆ ಜಯಿಸಲಾಗದವನಾಗಿ ತೋರಿದ್ದಾನೆ.

ಎರಡನೆಯದಾಗಿ, ಇತರರಿಗೆ ಎಂದರೆ ಮಲ್ಲರನ್ನುಳಿದ ಸಾಧಾರಣಮಂದಿಗೆ ಕೃಷ್ಣನು ಶಿಶುವಿನಂತೆ - ಎಂದರೆ ಇನ್ನೂ ಸರಿಯಾಗಿ ಬೆಳೆದೇ ಇಲ್ಲದವನಂತೆ, ದೊಡ್ಡವನೇ ಆಗಿಲ್ಲದವನಂತೆ, ತೋರಿದ್ದಾನೆ. ಪ್ರಸಿದ್ಧಮಲ್ಲರೊಂದಿಗೆ ಸೆಣಸಬೇಕಾದರೆ ತಾನೂ ಪ್ರೌಢನಾಗಿ ಪಳಗಿದವನಾಗಿರಬೇಕಲ್ಲವೇ? ಬದಲಾಗಿ, ಇನ್ನೂ ಎಳೆಯವನಂತೆಯೇ, ಬಾಲತರುಣನಂತೆಯೇ ಕಂಡಿದ್ದಾನೆ, ಕೃಷ್ಣ.

ಸಾರ್ವಜನಿಕವಾದ ಕ್ರೀಡೆಗಳೆಂದರೆ ಜನಸ್ತೋಮವೇ ಸೇರುವುದಲ್ಲವೇ? ಹಾಗೆಯೇ, ನಾರಿಯರೂ ಕುತೂಹಲದಿಂದ ನೆರೆದಿದ್ದಾರೆ, ಮಲ್ಲಯುದ್ಧ ಮೊದಲಾದ ವಿನೋದಗಳ ಪ್ರದರ್ಶನವಿದೆಂಬ ಭಾವನೆಯಿಂದ. ಅವರ ಕಣ್ಣಿಗೆ ಕೃಷ್ಣನು ಕಂಡದ್ದೇ ಬೇರೆಯ ಬಗೆಯಲ್ಲಿ. ಅವರಿಗೆ ಆತನು ತೋರಿದುದು ಪುಷ್ಪ-ಚಾಪನಾಗಿ. ಹೂವನ್ನೇ ತನ್ನ ಬಿಲ್ಲನ್ನಾಗಿ ಹೊಂದಿರತಕ್ಕ ಮನ್ಮಥನನ್ನೇ ಪುಷ್ಪ-ಚಾಪನೆನ್ನುವುದು. ಮದನನು ಘಾಸಿಮಾಡುವುದು ಶರೀರವನ್ನಲ್ಲ, ಮನಸ್ಸನ್ನು. ಎಂದೇ ಆತನ ಬಾಣಗಳು ಲೋಹಮಯವಲ್ಲ, ತೀಕ್ಷ್ಣವಲ್ಲ. ಆತನ ಬಿಲ್ಲೂ ಬಾಣಗಳೂ ಹೂವೇ. ಆದರೆ ಘಾತವು ತೀವ್ರ, ಮನಸ್ಸಿನಾಳಕ್ಕೆ. ಅಂತೂ ಅಂತಹ ಮನ್ಮಥನಾಗಿ ಕಂಡಿದ್ದಾನೆ, ಕೃಷ್ಣ. ಕಾಮದೇವನ ಹಾಗೆ ಯಾರಾದರೂ ಕಂಡನೆಂದರೆ, ಅಂತಹವನ ವಿಷಯದಲ್ಲಿ ಸ್ತ್ರೀಯರಿಗೆ ಕಾಮವುಕ್ಕಿತೆಂದು ಬೇರೆಯಾಗಿ ಹೇಳಬೇಕಿಲ್ಲ. ಹೀಗಾಗಿ ಅಲ್ಲಿದ್ದ ನಾರಿಯರ ಚಿತ್ತವು ಸೂರೆಗೊಂಡಿತು, ಈತನಿಂದಾಗಿ.

ಇನ್ನು ನಾಲ್ಕನೆಯವರಾಗಿ ಅಲ್ಲಿದ್ದ ಗೋಪಾಲಕರು ಆತನನ್ನು ಕಂಡದ್ದು ಮತ್ತೊಂದು ಬಗೆಯಲ್ಲೇ. ಇಷ್ಟುದಿನ ತಮ್ಮೊಂದಿಗೋ ತಮ್ಮಂತಹವರೊಂದಿಗೋ ಆಡುತ್ತಿದ್ದವನಲ್ಲವೇ ಈತ? ಎಂದೇ ಒಬ್ಬ ಪ್ರಾಕೃತನಂತೆ ಕಂಡಿದ್ದಾನೆ, ಕೃಷ್ಣ. ಪ್ರಾಕೃತನೆಂದರೆ ಸಾಧಾರಣ ಮನುಷ್ಯ. ಯಾವ ವಿಶೇಷವಾದ ಸಾಧನೆಯೂ ಇಲ್ಲದ ಸಾಮಾನ್ಯ ವ್ಯಕ್ತಿ. ತಮ್ಮಂತೆಯೇ ಈತನೂ - ಎಂದವರು ಭಾವಿಸುವಂತಾಗಿದೆ.  

ಕೃಷ್ಣನನ್ನು ಕಂಸ-ಚಾಣೂರ-ಮರ್ದನನೆಂದೇ ಸ್ತುತಿಸುವರಲ್ಲವೇ? ಕಂಸವಧೆಯು ಕೃಷ್ಣನ ಜೀವನದಲ್ಲಿ ಒಂದು ಮುಖ್ಯವಾದ ಘಟ್ಟ. ಏಕೆ? ಕಂಸನು ಸಾಧಾರಣನಲ್ಲ. ಆತ ಕಾಲನೇಮಿಯೆಂಬ ರಾಕ್ಷಸನಿಂದ ಜನಿಸಿದವ. ಹೀಗಗಿ, ಕೃಷ್ಣ-ಕಂಸರ ಯುದ್ಧವೆಂದರೆ ದೇವಾಸುರಯುದ್ಧವೇ ಸರಿ.

ಎಂದೇ, ಈ ಬಗ್ಗೆ ಕಳವಳ-ಕಾಳಜಿಗಳು ಮನುಷ್ಯರಿಗೆ ಮಾತ್ರವಲ್ಲದೆ ದೇವತೆಗಳಿಗೂ ಇದ್ದವು. ಎಂದೇ ದೇವತೆಗಳಿಗೆಲ್ಲ ಒಡೆಯನಾದ ಇಂದ್ರನೇ ಆಕಾಶದಲ್ಲಿ ನಿಂತು ನೋಡುತ್ತಿದ್ದಾನೆ. ಇಂದ್ರನ ಪ್ರಮುಖಶಸ್ತ್ರವೆಂದರೆ ವಜ್ರಾಯುಧವೇ. ಅದಕ್ಕೆ ಕುಲಿಶವೆಂದೂ ಪವಿಯೆಂದೂ ನಾಮಾಂತರಗಳಿವೆ. ನಾಮಾಂತರವೆಂದರೆ ಬೇರೆ ಹೆಸರು. ಅಂತೂ ಕುಲಿಶ-ಧಾರಿಯಾಗಿ ಸಾಕ್ಷಾದ್ ಇಂದ್ರನೇ ದಿವಿಯಿಂದ ನೋಡುತ್ತಿದ್ದಾನೆ, ಭುವಿಯಲ್ಲಾಗುವ ಈ ಘಟನೆಯನ್ನು.

ಈ ಕ್ಷಣದಲ್ಲಿ ಕೃಷ್ಣನು ಆತನಿಗೆ ಹೇಗೆ ಕಂಡ? ವಿಶ್ವ-ಕಾಯನಾಗಿ ಕಾಣಿಸಿದ, ಕೃಷ್ಣ! ಹಾಗೆಂದರೇನು? ವಿಶ್ವವೆಲ್ಲ ಕೃಷ್ಣನ ಶರೀರವೆಂಬಂತೆ ತೋರಿದೆ. ಹೀಗೆ ಜಗಚ್ಛರೀರಿಯಾಗಿ ಕಾಣಿಸಿದ ಕೃಷ್ಣ! ಹಾಗೆಂದರೆ ಹೇಗಿರಬಹುದೆಂದು ಊಹಿಸುವುದೇ ನಮಗೆ ಕಷ್ಟವಲ್ಲವೇ? ನಮಗೇನು, ಇಂದ್ರನಿಗೇ ಅದು ಅರ್ಥವಾಗದಂತಿತ್ತು!

ಏಕೆ? ಯಾವುದಾದರೂ ಒಂದು ವಸ್ತುವನ್ನು ನಾವು ಅರ್ಥಮಾಡಿಕೊಂಡಿದ್ದೇವೆಂದರೆ ಅದರ ಅಳತೆಗೆ ಏನೋ ಒಂದು ಲೆಕ್ಕ ಸಿಕ್ಕಿದೆಯೆಂದೇ. ಮಾನವೆಂದರೆ ಅಳತೆ. ಯಾವುದನ್ನು ಅಳೆಯಲಾಗುವುದೋ ಅದು ಮೇಯ. ಪ್ರಮೇಯವೆಂದರೂ ಅದೇ - ಚೆನ್ನಾಗಿ ಅಥವಾ ಸ್ಫುಟವಾಗಿ ಅಳತೆಗೆ ಸಿಕ್ಕುವಂತಹುದು. ಅ-ಪ್ರಮೇಯವೆಂದರೆ ಸುತರಾಂ ಅಳತೆಗೇ ನಿಲುಕದಂತಹುದು! ಹಾಗೆ ಅಪ್ರಮೇಯನಾದ ವಿಶ್ವಕಾಯನಾಗಿ ಕಂಡನಂತೆ ಇಂದ್ರನಿಗೆ, ಕಂಸಸಂಹಾರಕ್ಕೆ ಸಂನದ್ಧನಾಗುತ್ತಿದ್ದ ಕೃಷ್ಣ!

ದೇವೇಂದ್ರನಿಗೆ ಹಾಗೆ ಕಂಡ ಕೃಷ್ಣನು, ಇನ್ನು ಸ್ವರೂಪತಃ ಅಸಾಮಾನ್ಯ-ರಾಕ್ಷಸನೇ ಆದ ಕಂಸನಿಗೆ ಹೇಗೆ ಕಂಡನಂತೆ? - ಎಂಬ ಪ್ರಶ್ನೆ ಬರುವುದಲ್ಲವೇ? ಅನಾಚಾರ-ದುರಾಚಾರಗಳಿಗೆ ನೆಲೆಯಾದ ಕಂಸನು ತನ್ನ ಸೋದರಮಾವನೇ ಆಗಿದ್ದರೂ, ಕಡುಕೋಪ ಕೃಷ್ಣನಿಗೆ, ಕಂಸನನ್ನು ಕಂಡರೆ. ಪ್ರಕೃಷ್ಟ-ಶಕ್ತಿಯುಳ್ಳ ದುಷ್ಟ-ಕಂಸ ಒಂದು ಕಡೆಯಾದರೆ, ಉತ್ಕೃಷ್ಟ-ಶಕ್ತಿಯುಳ್ಳ ಗೋಪ-ರೂಪಿ ಕೃಷ್ಣನೊಂದು ಕಡೆ. ತಮಸ್ಸಿನೊಂದಿಗೆ ಸೇರಿರುವ ಪ್ರಬಲ-ರಜಸ್ಸು ಕಂಸ. ಸತ್ತ್ವದೊಂದಿಗೆ ಸೇರಿರುವ ಪ್ರಬಲ-ರಜಸ್ಸು ಕೃಷ್ಣ.

ಅಂತಹ ಕಂಸನಿಗೆ ಇಂತಹ ಕೃಷ್ಣನು ಕಂಡದ್ದು ಕೆರಳಿದ ಯಮನಂತೆ. ಯಮನೆಂದರೇ ಸಾಕು. ಇನ್ನು ಕ್ರುದ್ಧ-ಯಮನೆಂದರೆ? ತನ್ನ ಕಾಲವಿನ್ನು ಮುಗಿಯಿತೆನ್ನಿಸಿಬಿಡುವ ಕಾಲಪುರುಷನ ಹಾಗೆ ತೋರಿದ್ದಾನೆ, ಕೃಷ್ಣ. ಹಾಗೆ ಕಾಣುತ್ತಲೇ ಭಯವಾವರಿಸಿದೆ ಕಂಸನಿಗೆ.

ನಮ್ಮ ಯಾವುದೇ ಭಾವನೆಗಳೂ ಮೊದಲು ಕಾಣಿಸಿಕೊಳ್ಳುವುದು ಕಣ್ಣಲ್ಲಲ್ಲವೇ? ಅದರಲ್ಲೂ ತೀವ್ರ-ಭಯವಂತೂ ಸ್ಪಷ್ಟವಾಗಿಯೇ ತೋರುವುದು. ಕಂಸನ ಕಣ್ಣುಗಳು ಭಯ-ಚಕಿತವಾಗಿವೆ, ಎಂದರೆ ಭೀತಿಯಿಂದ ಚಂಚಲವಾಗಿವೆ! ಹೀಗೆ ಭೀತ-ಕಂಸನಿಗೆ ಕರಾಳ-ಯಮನಾಗಿ ಕಂಡಿದ್ದಾನೆ, ಶ್ರೀಕೃಷ್ಣ!

ಇವರಿಗೆಲ್ಲ ಹೀಗೆಲ್ಲ ತೋರಿದರೆ, ಯೋಗಿಗಳಿಗೆ ಮಾತ್ರ ಧ್ಯೇಯ-ಮೂರ್ತಿಯಾಗಿ ತೋರಿದ್ದಾನೆ, ಕೃಷ್ಣ. ಧ್ಯಾನಕ್ಕೆ ಒಂದು ಆಲಂಬನ ಬೇಕು. ಯಾವುದನ್ನು ಧ್ಯಾನಿಸಬೇಕೋ ಅದು ಧ್ಯೇಯ. ಅಂತಹ ಧ್ಯಾನಾರ್ಹವಾದ ರೂಪ ಕೃಷ್ಣನದು - ಈ ರಣರಂಗದಲ್ಲೂ! ಹಾಗಿರುವ ಕೃಷ್ಣನ ಧ್ಯಾನವು ನಮ್ಮೊಳಗಣ ತಮಸ್ಸನ್ನು ತೊಡೆಯಬಲ್ಲುದಲ್ಲವೇ?

ಅಂತೂ ದೇವ-ಸಮೂಹಕ್ಕೆಲ್ಲ, ಅಮರ-ಗಣಕ್ಕೆಲ್ಲ, ಆನಂದವುಂಟುಮಾಡುವವನಾಗಿ ರಂಗಾವತಾರದಲ್ಲಿ ಕಂಡ, ಶ್ರೀಕೃಷ್ಣ. ಭಗವದವತಾರವೇ ಆದ ಆತನೆಮ್ಮನು ಪೊರೆಯಲಿ - ಎನ್ನುತ್ತಾನೆ ಲೀಲಾಶುಕ.


ಮಲ್ಲೈಃ ಶೈಲೇಂದ್ರಕಲ್ಪಃ, ಶಿಶುರಿತರಜನೈಃ, ಪುಷ್ಪ-ಚಾಪೋಂಽಗನಾಭಿಃ,/

ಗೋಪೈಸ್ತು ಪ್ರಾಕೃತಾತ್ಮಾ, ದಿವಿ ಕುಲಿಶಭೃತಾ ವಿಶ್ವಕಾಯೋಽಪ್ರಮೇಯಃ, |

ಕ್ರುದ್ಧಃ ಕಂಸೇನ ಕಾಲೋ ಭಯ-ಚಕಿತ-ದೃಶಾ, ಯೋಗಿಭಿರ್ಧ್ಯೇಯ-ಮೂರ್ತಿಃ -

ದೃಷ್ಟೋ ರಂಗಾವತಾರೇ ಹರಿರಮರಜನಾನಂದಕೃತ್ ಪಾತು ಯುಷ್ಮಾನ್ ||

ಸೂಚನೆ : 29/6/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, June 27, 2024

ಸದಾ ಲೋಕಹಿತ ಚಿಂತನೆ ಮಹಾತ್ಮರ ಲಕ್ಷಣ(Sada Lokahita Cintane Mahatmara Laksana)

Sunday, June 23, 2024

ವ್ಯಾಸ ವೀಕ್ಷಿತ 93 ಸುಂದೋಪಸುಂದರು ಮುನಿಜನರಿಗಿತ್ತ ಕಿರುಕುಳ (Vyasa Vikshita 93 Sundopasundaru Munijanarigitta Kirukula)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಸುಂದೋಪಸುಂದರು ಬಂದುದು ದೇವತೆಗಳಿಗೆ ತಿಳಿಯಿತು. ಪ್ರಭುವು ಅವರಿಗೆ ಕೊಟ್ಟಿರುವ ವರದಾನವೂ ತಿಳಿದಿತ್ತು. ಆ ಕಾರಣದಿಂದಾಗಿ ತ್ರಿವಿಷ್ಟಪವನ್ನೇ, ಎಂದರೆ ಸ್ವರ್ಗವನ್ನೇ, ತೊರೆದು ದೇವತೆಗಳು ಬ್ರಹ್ಮಲೋಕಕ್ಕೆ ಹೊರಟುಹೋದರು!

ಇಂದ್ರಲೋಕವನ್ನು ಗೆದ್ದ ಬಳಿಕ,  ಯಕ್ಷಗಣ-ರಾಕ್ಷಸಗಣಗಳನ್ನೂ, ಖೇಚರರಾದ ಎಂದರೆ ಆಕಾಶ-ಸಂಚಾರಿಗಳಾದ, ಭೂತ-ಗಣಗಳನ್ನೂ- ತೀವ್ರಪರಾಕ್ರಮಿಗಳಾದ ಅವರಿಬ್ಬರೂ ಬಡಿದು ಹಾಕಿದರು. ಭೂಮಿಯೊಳಗಣ ನಾಗರನ್ನು ಸೋಲಿಸಿದರು, ಆ ಮಹಾರಥರು. ಮತ್ತು ಸಮುದ್ರ-ತಟದಲ್ಲಿ ವಾಸಮಾಡುತ್ತಿದ್ದ ಮ್ಲೇಚ್ಛ-ಜಾತಿಯವರನ್ನೆಲ್ಲಾ ಸೋಲಿಸಿದರು.

ಉಗ್ರ-ಶಾಸನರಾಗಿ, ಎಂದರೆ ಕ್ರೂರವಾಗಿ ಆಳುವವರಾಗಿ, ಭೂಮಿಯನ್ನೆಲ್ಲವನ್ನೂ ಆ ಬಳಿಕ ಗೆದ್ದರು; ಮತ್ತು ಸೈನಿಕರನ್ನು ಕರೆದು ಅವರಿಗೆ ಸುತೀಕ್ಷ್ಣವಾದ ಮಾತುಗಳನ್ನು ಹೇಳಿದರು: "ಮಹಾ-ಯಜ್ಞಗಳನ್ನು ಆಚರಿಸುವುದರಿಂದ ರಾಜರ್ಷಿಗಳು ದೇವತೆಗಳಿಗೆ ಉಪಕರಿಸುತ್ತಾರೆ; ಹಾಗೆಯೇ, ಹವ್ಯ-ಕವ್ಯಗಳನ್ನು - ಎಂದರೆ ದೇವತೆಗಳಿಗೂ ಪಿತೃ-ದೇವತೆಗಳಿಗೂ ಸಲ್ಲುವ ಅರ್ಪಣಗಳನ್ನು - ಕೊಡುವುದರಿಂದ ಬ್ರಾಹ್ಮಣರೂ ದೇವತೆಗಳಿಗೆ ಉಪಕರಿಸುತ್ತಾರೆ. ದೇವತೆಗಳ ತೇಜಸ್ಸು-ಬಲ-ಶ್ರೀಗಳನ್ನುಇವರಿಬ್ಬರೂ ಹೀಗೆ ವೃದ್ಧಿಪಡಿಸುತ್ತಾರೆ. ಅದುದರಿಂದ ಯಜ್ಞವೇ ಮೊದಲಾದ ಕರ್ಮಗಳಲ್ಲಿ ತೊಡಗಿರುವವರೆಲ್ಲರೂ ಅಸುರ-ದ್ವೇಷಿಗಳೆಂದೇ; ನಾವೆಲ್ಲರೂ ಒಗ್ಗಟ್ಟಾಗಿ ಅವರೆಲ್ಲರ ವಧೆಯನ್ನು ಸರ್ವಾತ್ಮನಾ, ಎಂದರೆ ಸರ್ವ-ಪ್ರಕಾರದಿಂದಲೂ, ಮಾಡತಕ್ಕದ್ದು" ಎಂದರು.

ಈ ರೀತಿಯಾಗಿ ಅವರಿಗೆ ಅಪ್ಪಣೆಯಿತ್ತು, ಕ್ರೂರ-ಬುದ್ಧಿಯನ್ನಿಟ್ಟುಕೊಂಡು, ಮಹೋದಧಿಯ ದಡಕ್ಕೂ, ಎಂದರೆ ಸಮುದ್ರದ ಪೂರ್ವತೀರಕ್ಕೂ, ಮತ್ತು ಎಲ್ಲ ದಿಕ್ಕುಗಳಿಗೂ ಆಕ್ರಮಣ ಮಾಡುತ್ತಾ ನಡೆದರು. ಯಾರು ಯಾರು ಯಜ್ಞ ಮಾಡುತ್ತಿದ್ದರೋ ಅವರೆಲ್ಲರನ್ನೂ ಬಲ-ಪ್ರಯೋಗದಿಂದ ಕೊಂದು, ಆ ಇಬ್ಬರೂ ಬಲ-ಶಾಲಿಗಳು ಮುಂದೆ ಸಾಗಿದರು.

ಶುದ್ಧಾತ್ಮರಾದ ಮುನಿಗಳು ಆಶ್ರಮಗಳಲ್ಲಿ ಸಿದ್ಧಪಡಿಸಿಕೊಂಡಿರುವ ಅಗ್ನಿಹೋತ್ರ-ಸಾಮಗ್ರಿಗಳನ್ನು ತೆಗೆದೆತ್ತಿ, ಯಾವುದೇ ಭಯವಿಲ್ಲದೆ, ಅವರಿಬ್ಬರ ಸೈನಿಕರು ನೀರಿನೊಳಗೆ ಬಿಸಾಡಿದರು.

ತಪಸ್ಸನ್ನೇ ಧನವಾಗಿ ಹೊಂದಿರುವ, ಎಂದರೆ ಅಪಾರವಾದ ತಪೋಬಲವನ್ನು ಸಂಪಾದಿಸಿರುವ, ಕೆಲ ಮಹಾತ್ಮರು ಕ್ರುದ್ಧರಾಗಿ ಇವರಿಬ್ಬರಿಗೆ ಶಾಪವಿತ್ತರು; ಆದರೇನು, ಆ ಶಾಪಗಳು ಏನೂ ಕೆಲಸಮಾಡದಾದವು, ಏಕೆಂದರೆ ಅವರಿಗೆ ಈ ಮೊದಲೇ ಕೊಡಲಾಗಿದ್ದ ವರಗಳ ಪ್ರಭಾವದಿಂದ ಅವು ಪ್ರತಿಹತವಾಗುತ್ತಿದ್ದವು: ಎಂದರೆ, ತಾವಿತ್ತ ಶಾಪಗಳು ಕಲ್ಲಿನ ಮೇಲೆ ಬಿಟ್ಟ ಬಾಣಗಳಂತಾಗುತ್ತಿದ್ದವು; ಯಾವಾಗ ತಮ್ಮ ಶಾಪಗಳು ಯಾವ ಬಾಧವನ್ನೂ ಅವರ ಮೇಲೆ ಉಂಟು ಮಾಡಲಿಲ್ಲವೋ, ಆಗ ಆ ಬ್ರಾಹ್ಮಣರು ತಮ್ಮ ನಿಯಮಗಳನ್ನೆಲ್ಲ ತೊರೆದು ಅಲ್ಲಿಂದ ಕಾಲ್ಕಿತ್ತರು!

ಭೂಮಿಯ ಮೇಲಿದ್ದ ತಪಃಸಿದ್ಧರು ಶಮ-ದಮ-ಸಂಪನ್ನರು -ಇವರುಗಳೆಲ್ಲಾ, ಅವರಿಬ್ಬರ ಭಯದಿಂದಾಗಿ ಓಡಿಹೋದರು - ಗರುಡನ ಭಯದಿಂದ ಸರ್ಪಗಳು ಓಡಿಹೋಗುವಂತೆ! ಆಶ್ರಮಗಳು ಮಥನಗೊಂಡವು. ಕಲಶಗಳೂ ಸ್ರುವಗಳೂ ಒಡೆದು ಚೆಲ್ಲಾಪಿಲ್ಲಿಯಾದವು. ಕಾಲನ ಹೊಡೆತಕ್ಕೆ ಸಿಲುಕಿಯೋ ಎಂಬಂತೆ, ಜಗತ್ತೆಲ್ಲವೂ ಶೂನ್ಯವಾಗಿ ಹೋಯಿತು.

ಋಷಿಗಳೆಲ್ಲ ಹೀಗೆ ಅದೃಶ್ಯರಾಗಿಹೋಗಿಬಿಡಲು, ಸುಂದೋಪಸುಂದರು ಒಂದು ನಿಶ್ಚಯವನ್ನು ಮಾಡಿಕೊಂಡರು: ತಮ್ಮ ರೂಪವನ್ನೇ ಬದಲಾಯಿಸಿಕೊಂಡರು - ವಧಕಾರ್ಯವನ್ನು ಮುಂದುವರೆಸಲೆಂದು!

ಮದಿಸಿದ ಆನೆಯ ರೂಪವನ್ನು ತಾಳಿ, ದುರ್ಗಮಸ್ಥಾನಗಳಲ್ಲಿ ಅಡಗಿಕುಳಿತಿದ್ದ ಋಷಿಗಳನ್ನು ಯಮನ ಮನೆಗೆ ಕಳುಹಿಸಿದರು. ಈಗ ಎರಡು ಸಿಂಹಗಳಾಗುವುದು, ಈಗ ಎರಡು ಹುಲಿಗಳಾಗುವುದು, ಮತ್ತೆ ಅಂತರ್ಧಾನ ಹೊಂದುವುದು - ಹೀಗೆ ನಾನಾ ಉಪಾಯಗಳನ್ನು ಮಾಡಿ ಋಷಿಗಳನ್ನು ಹುಡುಕಿ ಹುಡುಕಿ ಕೊಂದರು, ಆ ಕ್ರೂರದೈತ್ಯರು!

ಸೂಚನೆ : 23/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ95 (Yaksha prashne 95)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 94 ಯಾವುದು ಶೋಕ ?

ಉತ್ತರ - ಅಜ್ಞಾನವೇ ಶೋಕ. 

ಶೋಕಕ್ಕೆ ಕಾರಣ ಏನು ? ಎಂಬುದೇ ಈ ಪ್ರಶ್ನೆಯಲ್ಲಿನ ಉತ್ತರವಾಗಿದೆ. ಅಜ್ಞಾನದಿಂದಲೇ ಶೋಕವೆಂಬುದು ಉಂಟಾಗುತ್ತದೆ. ಹಾಗಾಗಿ ಇಲ್ಲಿ ನಾವು ಅಜ್ಞಾನ ಮತ್ತು ಶೋಕ ಎಂಬ ಎರಡು ಅಂಶಗಳನ್ನು ವಿಚಾರಮಾಡಬೇಕಾಗಿದೆ. ಆಗ ಅಜ್ಞಾನ ಹೇಗೆ ಶೋಕಕ್ಕೆ ಕಾರಣ ಎಂಬುದು ಸ್ಪಷ್ಟವಾಗುತ್ತದೆ.  ಜ್ಞಾನಕ್ಕೆ ವಿರುದ್ಧವಾದ ಪದವೇ ಅಜ್ಞಾನ. ಜ್ಞಾನವೆಂದರೆ ವಸ್ತು ಅಥವಾ ವಿಷಯದ ಅರಿವು. ಮತ್ತು ಇವೆಲ್ಲದರ ಸಮಷ್ಟಿಯಾದ ಈ ಪ್ರಪಂಚದ ಬಗೆಗಿನ ಅರಿವೂ ಕೂಡ. ಅಂದರೆ ಈ ಸೃಷ್ಟಿಯಲ್ಲಿನ ತತ್ತ್ವಗಳನ್ನು ತಿಳಿದಾಗ ಮಾತ್ರ ಅವುಗಳ ಉಪಯೋಗ ತಿಳಿಯಲು ಸಾಧ್ಯ. ಆಯಾ ಪದಾರ್ಥಗಳ ಸರಿಯಾದ ಬಳಕೆಯಿಂದ ಆ ಪದಾರ್ಥವೂ ಸಾರ್ಥಕವಾಗುತ್ತದೆ. ಮತ್ತು ಆಯಾ ಪದಾರ್ಥದಿಂದ ನಮಗೂ ಉಪಯೋಗವಾದಂತಾಗುತ್ತದೆ. ಇದನ್ನು ಪಡೆದುಕೊಳ್ಳುವ ವಿಧಾನವೇ ಅರಿವು ಅಥವಾ ಜ್ಞಾನ.  ಇದು ಇಲ್ಲದಿರುವುದನ್ನೇ ಅಜ್ಞಾನ ಎಂಬ ಪದದಿಂದ ಕರೆಯಬಹುದು. ಇಂತಹ ಅಜ್ಞಾನವೇ ಶೋಕ ಮತ್ತು ಮೋಹಕ್ಕೂ ಕಾರಣವಾಗಬಹುದು ಎಂಬುದು ಈ ಪ್ರಶ್ನೋತ್ತರದ ಆಶಯ.   

ಶ್ರೀರಂಗ ಮಹಾಗುರುಗಳು ಭಗವದ್ಗೀತೆಯ "ನಷ್ಟೋ ಮೋಹಃ ಸ್ಮತಿರ್ಲಬ್ಧಾ ತ್ವತ್ಪ್ರಸಾದಾತ್ ಮಹೇಶ್ವರ- ಮೋಹ ಕಳೆಯಿತು ನಿನ್ನ ಪ್ರಸಾದದಿಂದ ಸ್ಮೃತಿಯು ಪ್ರಾಪ್ತವಾಯಿತು" ಎಂಬ  ಶ್ಲೋಕವನ್ನು ಅವರ ಪಾಠಪ್ರವಚನಗಳಲ್ಲಿ ಉದಾಹರಿಸುತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಭಗವದ್ಗೀತೆಯ ಮೊದಲ ಅಧ್ಯಾಯ ವಿಷಾದಯೋಗವಾದರೆ ಅಂತಿಮ ಅಧ್ಯಾಯ ಪ್ರಸಾದಯೋಗವಾಗಿದೆ. ಅಂದರೆ ಯುದ್ಧದ ಆರಂಭದಲ್ಲಿ ಅರ್ಜುನನಿಗೆ ಶೋಕ ಆವರಿಸಿತ್ತು. ಇದರ ಪರಿಣಾಮವಾಗಿ ಆತ ಯುದ್ಧವೇ ಬೇಡ ಎಂಬ ನಿರ್ಣಯಕ್ಕೆ ಬಂದಿದ್ದ. ಆಗ ಶ್ರೀಕೃಷ್ಣನು ಅರ್ಜುನನಿಗೆ ಯುದ್ಧದ ವಿಷಯದಲ್ಲಿ ಇದ್ದ ಅಜ್ಞಾನವನ್ನು ಹೋಗಲಾಡಿಸುವ ಕಾರ್ಯವನ್ನು ಮಾಡಿದ. ಯುದ್ಧವೆಂದರೇನು? ಯುದ್ಧದ ಪರಿಣಾಮವೇನು? ಯುದ್ಧ ಹೇಗೆ ಧರ್ಮಕಾರ್ಯವಾಗುತ್ತದೆ? ಎಂಬೆಲ್ಲಾ ವಿಷಯಗಳನ್ನು ವಿವರವಾಗಿ ಮನಮುಟ್ಟುವಂತೆ ಮಾಡಿದ. ಇದರ ಪರಿಣಾಮವಾಗಿ ಅರ್ಜುನನಿಗೆ ಯುದ್ಧದ ಬಗೆಗೆ ಇದ್ದ ಅಜ್ಞಾನ ನಿವೃತ್ತಿಯಾಯಿತು.  ವಿಷಾದ ಹೋಗಿ ಪ್ರಸಾದ ಉಂಟಾಯಿತು.  

ಭಗವದ್ಗೀತೆಯಲ್ಲಿ ಶೋಕವನ್ನು ಬಿಡಬೇಕಾದರೆ ಏನು ಮಾಡಬೇಕೆಂಬುದನ್ನು ಭಗವಾನ್ ಶ್ರೀಕೃಷ್ಣ ಹಿಗೇ ಹೇಳುತ್ತಾನೆ. ಯಾವುದು ನಿತ್ಯವಾದುದು? ಯಾವುದು ಅನಿತ್ಯವಾದುದು? ಯಾವುದು ಅವ್ಯಕ್ತವಾದುದು? ಯಾವುದು ವ್ಯಕ್ತವಾದುದು? ಯಾವುದು ಕಾರ್ಯ ?  ಯಾವುದು ಅಕಾರ್ಯ? ಯಾವುದು ಮರಣಶೀಲವಾದುದು? ಯಾವುದು ಅಲ್ಲ? ಹುಟ್ಟಿದವನು ಸಾಯಿಲೇಬೇಕು. ಮೃತನಾದವನು ಮತ್ತೆ ಹುಟ್ಟಲೇಬೇಕು ಎಂಬಿವೇ ಮೊದಲಾದವುಗಳ ಪರಿಜ್ಞಾನವಿದ್ದರೆ ಆತನಿಗೆ ಶೋಕವೆಂಬುದಿಲ್ಲ ಎಂದು. ಈ ಸೃಷ್ಟಿಗೆ ಕಾರಣವಾದ ಯಾವ ಪರಬ್ರಹ್ಮ ಎಂಬ ವಿಷಯವುಂಟೋ ಅದನ್ನು ಹೊರತುಪಡಿಸಿ ಉಳಿದೆಲ್ಲವೂ ಅನಿತ್ಯ, ವ್ಯಕ್ತ, ಮರಣಶೀಲವಾದವುಗಳು. ಇದರ ಬಗ್ಗೆ ಯಾರಿಗೆ ಅಂಟು ಅಥವಾ ಮೋಹವೆಂಬುದಿರುವುದೋ ಆತ ಮಾತ್ರ ಶೋಕಕ್ಕೆ ಈಡಾಗುತ್ತಾನೆ. ಭಗವಂತ ಮಾತ್ರ ನಿತ್ಯ, ಸತ್ಯ,  ಅವ್ಯಕ್ತ ಎಂದು ತಿಳಿದವನಿಗೆ ಕಾರ್ಯ ಅಕಾರ್ಯದ ಬಗ್ಗೆ ವಿವೇಕ ಹುಟ್ಟುತ್ತದೆ. ಈ ವಿವೇಕವಿಲ್ಲದಿರುವಿಕೆಯೇ ಅಜ್ಞಾನ ಎನ್ನಬಹುದು. ಅವಿವೇಕವೇ ಶೋಕ ಮೋಹಗಳಿಗೆ ಕಾರಣವಾಗುತ್ತದೆ ಎಂಬುದು ಈ ಪ್ರಶ್ನೋತ್ತ ರದ ಆಶಯವಾಗಿದೆ.    

ಸೂಚನೆ : 23/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 19 ಆಡುವ ಗೋಪನು ತೋರುವ ತಡೆಯಿಲ್ಲದ ಹಾದಿ (Krishnakarnamrta - 19 Aduva Gopanu Toruva Tadeyillada Hadi)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ದಾರಿ ಯಾವುದಯ್ಯಾ ವೈಕುಂಠಕೆ? - ಎಂಬ ಪ್ರಶ್ನೆಯು ಆಗೊಮ್ಮೆ ಈಗೊಮ್ಮೆಯಾದರೂ ನಮಗೆ ಬರುವಂತಹುದೇ. ಈಗ ನಾವಿರುವ ಎಡೆಗೂ ನಮ್ಮ ಗಮ್ಯಕ್ಕೂ ಬಹಳವೇ ದೂರವೆಂದಾಗಿ, ಜೊತೆಗೆ ತೀರಾ ಸುತ್ತುಬಳಸಿನ ದಾರಿಯೆಂದೋ ಕಲ್ಲುಮುಳ್ಳುಗಳ ದಾರಿಯೆಂದೋ ಆಗಿಬಿಟ್ಟರೆ, ಪ್ರಯಾಣವು ಪ್ರಯಾಸವೆನಿಸಿ, "ನನ್ನ ಕೈಲಿದಾಗದು" - ಎಂದು ಕೈಚೆಲ್ಲಿ ಕುಳಿತುಕೊಳ್ಳುವಂತಾದೀತಲ್ಲವೇ?

ಆದ್ದರಿಂದ ರಾಜಮಾರ್ಗವನ್ನು ತೋರತಕ್ಕವರೇ ಸಿಕ್ಕರೆ ನಮ್ಮ ಕೆಲಸವಾದಂತೆಯೇ ಅಲ್ಲವೇ? ಮಿಕ್ಕೆಲ್ಲದ್ದಕ್ಕೂ ಸಲ್ಲುವ ಗೂಗಲ್ಲಿನ ಭೂಪಟವು (ಮ್ಯಾಪು) ಇಲ್ಲಿ ಸಲ್ಲದಲ್ಲವೇ? ಹಾಗಾದರೆ ದಾರಿತೋರುವವರಾರಾದರೂ ಉಂಟೇ? - ಎಂಬುದೇ ಪ್ರಶ್ನೆ.

ಉಂಟೆಂಬ ಉತ್ತರವನ್ನೇ ಲೀಲಾಜಾಲವಾಗಿ ಕೊಡುತ್ತಾನೆ, ನಮ್ಮ ಲೀಲಾಶುಕ. ಆ ಮಾರ್ಗ-ದರ್ಶಕನೆಲ್ಲಿದ್ದಾನೆಂದೂ ತಿಳಿಸುತ್ತಾನೆ. ಯಾರವನು? ಎಲ್ಲಿಹನು? - ಎಂಬ ಪ್ರಶ್ನೆಗಳನ್ನು ನೀವು ಕೇಳುವ ಮೊದಲೇ ತಾನೇ ಹೇಳಿದ್ದಾನೆ. 

ಉತ್ತರಹೇಳುವವರು ಬಿಡಿಸಿ ಹೇಳಬೇಕು. ಪ್ರೀತಿಯಿಂದ ಹೇಳಬೇಕು, ಅಲ್ಲವೆ? ನಮ್ಮಲ್ಲಿ ಅನೇಕರಿಗೆ ಗಣಿತ-ಭಯ! ಏಕೆ? ಗಣಿತದ ಪಾಠವನ್ನು ಮಾಡುವ ಅಧ್ಯಾಪಕರು ಚೆನ್ನಾಗಿ ಬಿಡಿಸಿ ಹೇಳದಿದ್ದರೆ ಗಣಿತದ ಬಗ್ಗೆಯೇ ದ್ವೇಷ ಬಂದುಬಿಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಪ್ರೀತಿಯಿಂದ ಹೇಳಿಕೊಡುವುದರ ಬದಲು ಸಿಡುಕಿ ಹೇಳಿಕೊಡುವುದಾದರೆ ಇನ್ನೂ ಹೆಚ್ಚಿನ ದ್ವೇಷವೇ ಬಂದೀತೇನೋ ಗಣಿತದ ಬಗೆಗೆ!

ಮೊದಲನೆಯದಾಗಿ, ಬಿಡಿಸಿ ಹೇಳಿಕೊಡುವುದೆಂದರೇನು? ನಮಗೆ ಗೊತ್ತಿರುವ ಅಂಶವೇನೆಂಬುದನ್ನು ಮೊದಲು ಪತ್ತೆ ಮಾಡಿಕೊಂಡು, ಗೊತ್ತಿಲ್ಲದ ಅಂಶವು ಯಾವುದೋ ಅದರತ್ತ ಹೆಜ್ಜೆಹೆಜ್ಜೆಯಾಗಿ ಕರೆದುಕೊಂಡು ಹೋಗುವುದೇ ಅದು. ಅಲ್ಲವೆ?

ಎರಡನೆಯದಾಗಿ, ಪ್ರೀತಿಯಿಂದ ಎಂದರೆ ಹೇಗೆ? ಸ್ನೇಹಿತನೊಡನೆ ಮಾತನಾಡುವಂತೆ ಮಾತನ್ನಾಡಬೇಕು. ಇದನ್ನೇ ಲೀಲಾಶುಕನು ಮಾಡಿರುವುದು. ಎಂದೇ "ಸಖೇ!" ಎಂದೇ ನಮ್ಮನ್ನು ಸಂಬೋಧಿಸುವುದು. ಅದಕ್ಕೆ "ಮಿತ್ರನೇ!" ಎಂದು ಅರ್ಥ. ಹೀಗೆ ಪ್ರೀತಿ-ವಿಶ್ವಾಸಗಳಿಂದಲೇ ಮಾತನಾಡಿಸಿ, ನಮಗೆ ಹಾದಿತೋರಬೇಕು.

ಅಂತಹವನು ಯಾರು? ಎಲ್ಲಿದ್ದಾನೆ? ಆತನನ್ನು ಗುರುತು ಹಿಡಿಯುವುದು ಹೇಗೆ? ಆತ ಏನನ್ನು ಮಾಡು(ತ್ತಿರು)ತ್ತಾನೆ? - ಎಂಬೆಲ್ಲ ಪ್ರಶ್ನೆಗಳಿಗೂ ಹೆಜ್ಜೆಹೆಜ್ಜೆಯಾಗಿ ಉತ್ತರ ಕೊಡುತ್ತಾನೆ, ಲೀಲಾಶುಕ.

ಅದೋ ಅಲ್ಲಿ ಕಾಣಿಸುತ್ತಿದೆಯಲ್ಲವೇ ಎತ್ತರದ ಅರ್ಜುನ-ವೃಕ್ಷ? - ಎಂದು ಆರಂಭಿಸುತ್ತಾನೆ. ದೂರದ ವಸ್ತುವಾದರೆ ಸುಲಭಕ್ಕೆ ಕಾಣದು. ಎಂದೇ ಎತ್ತರವಾದ ಒಂದು ವಸ್ತುವಿನತ್ತ ಮೊದಲು ನಿರ್ದೇಶಮಾಡುತ್ತಾನೆ. ಎತ್ತರವಾದದ್ದು ಬಲು ದೂರದವರೆಗೂ ಕಾಣುತ್ತದಲ್ಲವೇ?

ಅರ್ಜುನ-ವೃಕ್ಷವೆಂದರೆ ಕೆಂಪುಮತ್ತಿಮರ. ಅದು ಎಷ್ಟೆತ್ತರ? ಅದು ೩೫ ಮೀಟರ್ ಗಳವರೆಗೆ ಬೆಳೆಯುತ್ತದಂತೆ. ಅಂದರೆ ಸುಮರು ೧೧೪ ಅಡಿಗಳು! ಎಂದರೆ ಒಂದು ತೆಂಗಿನ ಮರಕ್ಕಿಂತಲೂ ಸುಮಾರು ೨೦-೩೦ ಅಡಿ ಹೆಚ್ಚು ಎತ್ತರ! ಅಷ್ಟು ಮಹೋನ್ನತವಾದ ಮರವನ್ನು ಯಾರಾದರೂ "ಅದು ಕಾಣಿಸುತ್ತಿಲ್ಲ" ಎನ್ನಲಾದೀತೇ?

ಎಂದೇ ಲೀಲಾಶುಕನು ನಿರ್ದೇಶಿಸುತ್ತಿರುವ ಮೊದಲ ಸ್ಥಾನವೇ ಈ ಮುಗಿಲುಮುಟ್ಟುವ ಮರ. ಅದರ ಎತ್ತರವನ್ನು ಜ್ಞಾಪಿಸಲೆಂದೇ 'ದೀರ್ಘ-ವೃಕ್ಷ' ಎಂದಷ್ಟು ಮಾತ್ರ ಹೇಳದೆ "ದೀರ್ಘತರವಾದ ಅರ್ಜುನ-ತರು" ಎನ್ನುತ್ತಿದ್ದಾನೆ. ಅದೂ ಎದುರಿಗೇ ಇರುವಂತಹುದು. ಹಾಗಾಗಿ ಆರಂಭ-ಸ್ಥಾನ ಜ್ಞಾತವಾಯಿತು. ಅಲ್ಲಿಂದ ಇನ್ನು ಅಜ್ಞಾತದೆಡೆಗೆ ಸಾಗಬೇಕು. ಹಾದಿಯಲ್ಲಿ ಅಲ್ಲಲ್ಲಿ ಗುರುತಿಸಬಹುದಾದ ಅಂಶಗಳನ್ನು ಹೇಳಬೇಕು.

ಅದರ ಮುಂದೆಯೇ ಇದೆ, ಒಂದು ವರ್ತನೀ. ವರ್ತನಿಯೆಂದರೆ ಹಾದಿ. ಆ ಹಾದಿ ಎಲ್ಲಿಗೆ ಹೋಗುತ್ತದೆ? ಒಂದು ಘೋಷಕ್ಕೆ. ಘೋಷವೆಂದರೆ ಆಭೀರ-ಪಲ್ಲಿ - ಅರ್ಥಾತ್ - ಗೋವಳರ ಹಳ್ಳಿ, ಅದುವೇ ನಮ್ಮ ನಂದ-ವ್ರಜ, ನಂದ-ಗೋಕುಲ.

ಆ ಘೋಷದ ಬಳಿಯೇ ಆ ಪರಿಸರದಲ್ಲಿಯೇ ಹರಿಯುತ್ತಿದ್ದಾಳೆ, ಯಮುನೆ. ಕಳಿಂದನ ಪುತ್ರಿಯೆನಿಸುವುದರಿಂದ ಯಮುನೆಗೆ ಕಳಿಂದ-ಪುತ್ರಿ, ಕಳಿಂದಾತ್ಮಜಾ - ಎಂಬ ಹೆಸರುಗಳು.

ಆ ಯಮುನೆಯ ತೀರದಲ್ಲಿ ತಮಾಲ-ಕಾನನ, ಅರ್ಥಾತ್, ಹೊಂಗೇಮರಗಳ ಕಾಡುಂಟು. ಆ ಪ್ರದೇಶಕ್ಕೆ ಹೋಗಬೇಕು. ಅಲ್ಲೊಬ್ಬ ಗೊಲ್ಲನಿದ್ದಾನೆ. ಆತನನ್ನು ಗೊಲ್ಲ ಎನ್ನುವುದಕ್ಕಿಂತ ಗೊಲ್ಲರ ವೇಷದಲ್ಲಿ ಇರುವವನೆನ್ನಬೇಕು. ಆತನನ್ನು ಗೋಪನೆಂದರೂ ಗೋಪವೇಷ-ಧಾರಿಯೆಂದೇ ಅರ್ಥ.

ಆತನು ಅಲ್ಲೇನು ಮಾಡುತ್ತಿದ್ದಾನೆ? ಗೊಲ್ಲರೇನು ಮಾಡುತ್ತಾರೆ? ಹಸುಗಳನ್ನು ಮೇಯಿಸುತ್ತಾರೆ. ಅದನ್ನೇ "ಗೋ-ಚಕ್ರವನ್ನು ಮೇಯಿಸುತ್ತಿರುವನು ಅವನು" - ಎಂದು ಇಲ್ಲಿ ಹೇಳಿರುವುದು.

ದನಕಾಯುವುದೆಂದರೆ ಬಹಳ ಎಚ್ಚರವಾಗಿ ಮಾಡುವ ಕೆಲಸವೆಂದೇನಲ್ಲ. ಕ್ರೂರ-ಪ್ರಾಣಿಗಳ ಸಂಭವವಿರದ ಗೋಮಾಳವಾದರೆ, ಗೋಗಳು ತಮ್ಮ ಪಾಡಿಗೆ ಮೇಯ್ದುಕೊಳ್ಳುತ್ತಿರುತ್ತವೆ. ಅಗ ಆ ಗೋಪನಿಗೇನು ಕೆಲಸ? ಎಂದೇ, ಗೊಲ್ಲರೊಡನೆ ಆಟವಾಡುತ್ತಿದ್ದಾನೆ ಆತ - ಎಂದಿರುವುದು.

ಆತ ಬಲ್ಲ, ಪರಂಧಾಮಕ್ಕೆ ಹಾದಿಯನ್ನು! ಆತನು ತೋರುವ ದಾರಿಯೂ ಸಾಧಾರಣವಾದದ್ದಲ್ಲ. ಅದು ಅವ್ಯಾಹತವಾದ ಮಾರ್ಗ, ಎನ್ನುತ್ತಾನೆ ಕವಿ. ಎಂದರೆ ಅಡೆತಡೆಗಳಿಲ್ಲದ ದಾರಿಯದು.

ಪುಣ್ಯಕರ್ಮ-ಪಾಪಕರ್ಮಗಳನ್ನು ಮಾಡಿ ಮಾಡಿ ಅವುಗಳ ಫಲವನ್ನು ಭುಜಿಸಲು ಮತ್ತೆ ಮತ್ತೆ ಹಿಂದಿರುಗುತ್ತಿರುತ್ತೇವೆ. ಪುಣ್ಯ-ಪಾಪಗಳನ್ನು ಮೀರಿದ ಎಡೆಗೊಯ್ಯುವವನು ಶ್ರೀಕೃಷ್ಣ. ಎಲ್ಲಿಗೆ ಹೋದ ಮೇಲೆ ಮತ್ತೆ ಹಿಂದಿರುಗಿ ಬಂದು ಕರ್ಮಫಲಗಳನ್ನನುಭವಿಸಬೇಕಿಲ್ಲವೋ ಅಂತಹ ತನ್ನ ಸ್ಥಾನಕ್ಕೆ ದಾರಿತೋರುವವನು ಕೃಷ್ಣ.

ಆತನನ್ನು ಆಶ್ರಯಿಸು, ಮಿತ್ರನೇ - ಎಂಬ ಪ್ರೀತಿಯ ಹಿತೋಪದೇಶವನ್ನು ಕೊಡುತ್ತಿದ್ದಾನೆ, ಕವಿ.

ಶ್ಲೋಕವಿಂತಿದೆ:

ಅಗ್ರೇ ದೀರ್ಘತರೋಽಯಂ ಅರ್ಜುನ-ತರುಃ ತಸ್ಯಾಗ್ರತೋ ವರ್ತನೀ/

ಸಾ ಘೋಷಂ ಸಮುಪೈತಿ ತತ್ ಪರಿಸರೇ ದೇಶೇ ಕಲಿಂದಾತ್ಮಜಾ |

ತಸ್ಯಾಃ ತೀರ-ತಮಾಲ-ಕಾನನ-ತಲೇ ಚಕ್ರಂ ಗವಾಂ ಚಾರಯನ್/

ಗೋಪಃ ಕ್ರೀಡತಿ ದರ್ಶಯಿಷ್ಯತಿ ಸಖೇ ಪಂಥಾನಂ ಅವ್ಯಾಹತಂ ||

ಕೃಷ್ಣಕರ್ಣಾಮೃತದಲ್ಲೇ ಮತ್ತೊಂದೆಡೆ ಬರುವ ಒಂದು ಕಿರುಚಿತ್ರಣವನ್ನು ನೋಡಿ.

ಲೀಲಾಶುಕನಿಗೆ ಬಾಲಕೃಷ್ಣನನ್ನು ಕಾಣುವಾಸೆ. ಅದಿನ್ನೂ ದಕ್ಕಿಲ್ಲವೆಂಬ ದುಃಖ.

ಅಂಬುಜ-ದಲವೆಂದರೆ ಕಮಲದ ದಳ. ಅದರಂತೆ ಲಲಿತವಾಗಿದೆ, ಅರ್ಥಾತ್ ಸೊಬಗಿನಿಂದ ಕೂಡಿದೆ, ಬಾಲಕೃಷ್ಣನ ಲೋಚನ. ಅದನ್ನು ಕಣ್ತುಂಬ ತುಂಬಿಸಿಕೊಳ್ಳಬೇಕು – ಎಂಬ ಹಂಬಲ. ಅದನ್ನೇ ಕವಿಯು ಬಣ್ಣಿಸುವ ಬಗೆಯೇ ವಿಶಿಷ್ಟ. "ನನ್ನೆರಡೂ ನೇತ್ರಗಳಿಂದ ಆತನನ್ನು ಆಲಿಂಗಿಸಿಕೊಳ್ಳುವ ಆಸೆಯೆನ್ನದು" – ಎನ್ನುತ್ತಾನೆ! ಕಣ್ಣುಗಳಿಂದ ಆಲಿಂಗಿಸಿಕೊಳ್ಳಬೇಕು! ಆಹಾ!

ಒಂದು ಕೆಲಸ ಮಾಡಲು ಏನೇನು ಬೇಕೋ ಅದೆಲ್ಲವನ್ನೂ ಸಮಗ್ರವಾಗಿ ಹೇಳಿದರೆ ಅದು ಸಾಮಗ್ರಿಯೆನಿಸಿಕೊಳ್ಳುತ್ತದೆ. ಅಡುಗೆ(ಅನ್ನ) ಮಾಡಲು ಬೇಕಾದ ಅಕ್ಕಿ, ನೀರು, ಪಾತ್ರೆ, ಒಲೆ, ಇಂಧನಗಳು ಪಾಕ-ಸಾಮಗ್ರಿ.

ನನ್ನ ಕಣ್ಣುಗಳಿಗೆ ಎಲ್ಲವೂ ಕಾಣಿಸುತ್ತವೆ, ಆದರೆ ಕೃಷ್ಣನು ಕಾಣಿಸ. ಆತ ಕಾಣಿಸಬೇಕೆಂದರೆ ಅದೃಷ್ಟವೂ ಬೇಕಲ್ಲವೇ? ಆ ದೈವ-ಸಾಮಗ್ರಿಯು ಇನ್ನೂ ದೂರದಲ್ಲಿದೆಯೆಲ್ಲಾ, ಅಯ್ಯೋ! – ಎಂಬ ಕೊರಗು ಕವಿಯದು.

ಆಭ್ಯಾಂ ವಿಲೋಚನಾಭ್ಯಾಂ/ಅಂಬುಜ-ದಲ-ಲಲಿತ-ಲೋಚನಂ ಬಾಲಂ| ದ್ವಾಭ್ಯಾಂ ಅಪಿ ಪರಿರಬ್ಧುಂ/ ದೂರೇ ಮಮ ಹಂತ ದೈವಸಾಮಗ್ರೀ||

ಸೂಚನೆ : 23/6/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 61 ಗುಣೈರ್ ದಾಸ್ಯಮ್ ಉಪಾಗತಃ (Ashtakshari 61 Gunair Dasyam Upagatah)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಭಾರತವು  ಸರ್ವರೀತಿಗಳಿಂದಲೂ ಸಮೃದ್ಧವಾದ ದೇಶವಾಗಿದ್ದುದೇ ಮೊಘಲರ ಹಾಗೂ ಯೂರೊಪೀಯರ ಕಣ್ಣನ್ನು ಕುಕ್ಕಿದ್ದು; ಅವರ ಹೊಟ್ಟೆಕಿಚ್ಚನ್ನು ಕೆರಳಿಸಿದ್ದು. ನಮ್ಮ ಮೃದುಧೋರಣೆಯೇ ಅವರು ನಮ್ಮನ್ನು ಲೂಟಿಮಾಡಲು ಇಂಬುಕೊಟ್ಟದ್ದು. 


ವೇದಗಳಲ್ಲೂ ರಾಮಾಯಣ-ಮಹಾಭಾರತಗಳಲ್ಲೂ ಪುರಾಣಕಥೆಗಳಲ್ಲೂ ಚಿತ್ರಿಸಿರುವುದೇನನ್ನು? ಬಿಡಿಸಿ ಹೇಳಿರುವುದೇನನ್ನು? ಆಸುರಸ್ವಭಾವವನ್ನು ಬಿಡದೇ ಧ್ವಂಸಮಾಡುವುದನ್ನೇ ಅಲ್ಲವೆ? ಅದನ್ನು ಮರೆತಂದೇ ನಮ್ಮ ಅವನತಿ ಆರಂಭವಾಯಿತು. ಹೊರಗಿನಿಂದ ಬಂದ ಈ ನೀಚರು ನಮ್ಮನ್ನು ಕೊನೆಗೆ ದಾಸ್ಯಕ್ಕೆ ತಳ್ಳಿದರು. ಇಲ್ಲಿಯ ಮಂದಿಯನ್ನು ಕ್ರೂರವಾಗಿ ಅಮಾನುಷವಾಗಿ ನಡೆಸಿಕೊಂಡರು. ಕಾಫಿರರೆಂದು ಹೀದನ್-ಗಳೆಂದು ನಮ್ಮನ್ನು ತುಚ್ಛೀಕರಿಸುವ ಅವರ ಮತೀಯ ಭಾವನೆಗಳೂ ಇಲ್ಲಿ ಕಡಿಮೆ ಪಾತ್ರ ವಹಿಸಿಲ್ಲ.


ಏನೇ ಆದರೂ, ಮತ್ತೊಬ್ಬರಿಗೆ ದಾಸರಾಗಿರುವುದನ್ನು ಯಾರು ತಾನೆ ಇಷ್ಟಪಟ್ಟಾರು? ದಾಸ್ಯವು ಮಾತ್ರ ಬೇಡವೇ ಬೇಡ - ಎಂದುಕೊಳ್ಳುತ್ತೇವೆ. ಸ್ವತಂತ್ರರಾಗಿರುವುದೇ ಎಲ್ಲರ ಸಹಜ ಅಪೇಕ್ಷೆ.


ಆದರೊಂದು ಪ್ರಶ್ನೆ. ನಮ್ಮಲ್ಲಿ ಶರಣಪರಂಪರೆ, ದಾಸಪರಂಪರೆ - ಇವುಗಳು ಬಂದದ್ದು ಹೇಗೆ? ಹೆಸರಿನಲ್ಲೂ ದಾಸ ಎಂದು ಸೇರಿಸಿಕೊಳ್ಳಬೇಕೇ? ಪುರಂದರದಾಸ, ಕನಕದಾಸ - ಇವರುಗಳಿಗೆ ದಾಸ್ಯವೇ ರುಚಿಸಿತೇ? - ಎಂಬ ಪ್ರಶ್ನೆ ಬರುವುದುಂಟು.


ತನ್ನನ್ನು ದಾಸನೆಂದು ಗುರುತಿಸಿಕೊಳ್ಳುವ ಈ ಗುಲಾಮಗಿರಿ ಬಂದದ್ದೇಕೆ? ಅಪ್ಪ-ಅಮ್ಮಂದಿರೇ ಹಾಗೆ ಹೆಸರಿಟ್ಟುಬಿಟ್ಟಿದ್ದರೆ ಅದಕ್ಕಿನ್ನೇನೂ ಮಾಡಲಾಗದ್ದು ಇದ್ದೀತು. ಆದರೆ ನವ-ನಾಮಕರಣವನ್ನು ಮಾಡಿಕೊಂಡು ದಾಸ ಎಂದು ಕರೆದುಕೊಳ್ಳುವುದು ಯಾವ ತೆರನ ದಾಸ್ಯ?! - ಎಂದೆನಿಸುವುದಿಲ್ಲವೇ? 


ಮುಸ್ಲಿಮರು ನಮ್ಮ ದೇಶದ ಮೇಲೆ ದಾಳಿ ಮಾಡಿದ ನಂತರವೇ ಆರಂಭವಾದದ್ದು, ನಮ್ಮ ದಾಸ್ಯವನ್ನೇ ಹೆಚ್ಚಿಸುವಂತೆ ಹೇಳಿಕೊಳ್ಳುವ ಈ ಹೀನಪದ್ಧತಿ. ಅದನ್ನೇ ಭಗವಂತನನ್ನು ಕುರಿತಾಗಿ ಹೇಳಲೂ ಆರಂಭಿಸಿದವು ನಮ್ಮ ಭಕ್ತಿಪಂಥಗಳು. "ತವ ದಾಸೋsಹಂ" - ಎಂದು ಹಾಡುಕಟ್ಟುವುದು, "ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ" ಎನ್ನುವುದು. ಈ ಪ್ರವೃತ್ತಿಗಳು ಬೆಳೆದದ್ದೇ ಮುಸ್ಲಿಮರ ಆಕ್ರಮಣವಾದ ಬಳಿಕ - ಎನ್ನುವ ಇತಿಹಾಸಕಾರರೂ ಇಲ್ಲದಿಲ್ಲ. 


ಆದರೆ ಇವೆಲ್ಲ ಅರ್ಥವಿಲ್ಲದ ಮಾತುಗಳು, ವಾಸ್ತವವಾಗಿ. ಏಕೆ? ರಾಮಯಣದಲ್ಲೇ ಹನುಮಂತನೇ ತನ್ನನ್ನು ರಾಮನ ದಾಸನೆಂದು ಘೋಷಿಸಿಕೊಂಡೇ ಲಂಕಾ-ಧ್ವಂಸ-ಕಾರ್ಯವನ್ನು ಮುಂದುವರೆಸಿದನಲ್ಲವೇ?


ಹನುಮಂತನಿರಲಿ, ಲಕ್ಷ್ಮಣನೇ ತಾನು ರಾಮನ ದಾಸನೆಂದು ಪರಿಚಯ ಮಾಡಿಕೊಳ್ಳುತ್ತಾನೆ. ಆದರೆ ರಾಮನೇ ಲಕ್ಷ್ಮಣನನ್ನು ಎಂದಾದರೂ ನೀನು ನನ್ನ ದಾಸನೆಂದು ಮೂದಲಿಸಿದ್ದನೇ, ಜಬರದಸ್ತು ಮಾಡಿದ್ದನೇ? - ಎಂಬ ಪ್ರಶ್ನೆಗಳೂ ಬರುವುವಲ್ಲವೇ? ರಾಮನೇ ಹಾಗೆ ವರ್ತಿಸಿಲ್ಲವೆಂದ ಮೇಲೆ ಲಕ್ಷ್ಮಣನೇ ಹಾಗೇಕೆ ಹೇಳಿಕೊಂಡ, ಹನುಮಂತನೊಂದಿಗೆ ಪ್ರಥಮ–ಪರಿಚಯವಾದಾಗ? - ಎಂಬ ಪ್ರಶ್ನೆ ಯುಕ್ತವಾದುದೇ.


ವಾಸ್ತವವಾಗಿ, ದಾಸ-ದಾಸ್ಯ ಎಂಬ ಪದಗಳು ನಮ್ಮ ಪರಂಪರೆಯಲ್ಲಿ ಬಂದ ಬಗೆಯೇ ಬೇರೆ. ಅದನ್ನು ಇಂಗ್ಲೀಷಿನ ಸ್ಲೇವ್ (slave) ಎಂಬ ಪದಕ್ಕೆ ಸಮಾನಾರ್ಥಕವೆಂದು ಭಾವಿಸಿರುವುದರಲ್ಲೇ ಮಹಾದೋಷವಾಗಿರುವುದು. ಗ್ರೀಕರ ಪುರಾತನ ದಾಖಲೆಗಳಲ್ಲೇ ಭಾರತದಲ್ಲಿ slavery ಎಂಬುದೇ ಇದ್ದಂತಿಲ್ಲವೆಂಬ ಮಾತಿದೆ. ದಾಸೀ-ಪುತ್ರನಿಗೆ ಸಲ್ಲುವ ಆಸ್ತಿಯ ಪಾಲಿನ ವಿಷಯ ಮನುಸ್ಮೃತಿಯಲ್ಲಿದೆ! ಈ ವಿಷಯವತ್ತ ಇರಲಿ.


ಲಕ್ಷ್ಮಣನು ಕಾರಣವನ್ನು ಕೊಡದೆ ಈ ಮಾತನ್ನು ಹೇಳಿಲ್ಲ. "(ರಾಮನ) ಗುಣಗಳಿಂದಾಗಿ (ಆತನಲ್ಲಿ) ದಾಸ್ಯವನ್ನು ಹೊಂದಿದ್ದೇನೆ" ಎಂದಾತ ಹೇಳಿಕೊಳ್ಳುತ್ತಾನೆ. (ಗುಣೈರ್ ದಾಸ್ಯಮ್ ಉಪಾಗತಃ). ಅಲ್ಲಿಗೆ ಹಿರಿಯಣ್ಣನಾದ ರಾಮ ತನ್ನ ತಮ್ಮನೆಂದು ಲಘುವಾಗಿ ನೋಡುತ್ತಿಲ್ಲ. ಅಹಾ ರಾಮನ ಗುಣಗಳು ಎಂತಹವು! ಎಂದು ಅಚ್ಚರಿಗೊಂಡು, ಅವಕ್ಕೆ ಮಾರುಹೋಗಿ, ಲಕ್ಷ್ಮಣನು ಸ್ವತಃ  ದಾಸ್ಯವನ್ನು ಸ್ವೀಕರಿಸಿದ್ದಾನೆ! ರಾಮನು ಕೃತಜ್ಞ, ಬಹುಜ್ಞ, ಸರ್ವಭೂತಹಿತೈಷಿ - ಎಂದೇ ಆತನಲ್ಲಿ ನನಗೆ ಸಂತೋಷ-ಪೂರ್ವವಾದ ಕಿಂಕರ-ಭಾವ, ಕೈಂಕರ್ಯದ ಧನ್ಯತೆ - ಎನ್ನುತ್ತಾನೆ, ಲಕ್ಷ್ಮಣ.


ಮತ್ತೊಂದರ್ಥದಲ್ಲಿ ನಾವೆಲ್ಲರೂ ದಾಸರೇ. ನಮ್ಮ ಇಂದ್ರಿಯಗಳಿಗೇ ನಾವು ದಾಸರಾಗಿಲ್ಲವೇ? ಅಲ್ಲದೆ, ಒಳ್ಳೆಯ ಅರ್ಥದಲ್ಲಿಯೂ ದಾಸ್ಯ-ವೃತ್ತಿಯೆಂಬುದುಂಟು. ಮನಸ್ಸು ಹೇಳಿದಂತೆ ಇಂದ್ರಿಯಗಳು ಆಡುವುದು ದಾಸ್ಯವಲ್ಲವೇ? ಮಿದುಳು ಹೇಳಿದಂತೆ ಇಡೀ ಶರೀರವು ಕೇಳುವುದು ದಾಸ್ಯವಲ್ಲವೇ? "ದೊಡ್ಡ ಬದುಕು ಒಂದಿದ್ದು, ಅದರಂತೆ ಉಳಿದವು ಆಡುವಂತಿದ್ದಲ್ಲಿ, ಅಂತಹ ದಾಸ್ಯವು ಅವಶ್ಯವೇ" - ಎನ್ನುವ ಶ್ರೀರಂಗಮಹಾಗುರುಗಳ ಮಾತು ಮನನೀಯವಾಗಿದೆ.


ಧರ್ಮವೇ ಮೈತಾಳಿಬಂದಂತಿದ್ದ ರಾಮನಿಗೆ ಗುಣಗಳಿಗೆ ಮನಸೋತು, ಸಂತೋಷದಿಂದ ದಾಸ್ಯವನ್ನು ಅಂಗೀಕರಿಸಿರುವ ಲಕ್ಷ್ಮಣನ ಆದರ್ಶವು ಹಿರಿದಾದುದಲ್ಲವೇ? ನಮಗೂ ದಾರಿದೀಪವಲ್ಲವೇ?


ಸೂಚನೆ: 22/06/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ. 

Sunday, June 16, 2024

ಯಕ್ಷ ಪ್ರಶ್ನೆ 94 (Yaksha prashne 94)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 93 ಆಲಸ್ಯ ಎಂದರೆ ಯಾವುದು?

ಉತ್ತರ - ಧರ್ಮಕಾರ್ಯವನ್ನು ಮಾಡದೆ ಇರುವುದು. 

ಮಾನವನು ತನ್ನ ಜೀವಿತಾವಧಿಯಲ್ಲಿ ಮಾಡಲೇಬೇಕಾದ ಕಾರ್ಯ ಯಾವುದುಂಟೋ ಅವೆಲ್ಲವನ್ನು ಧರ್ಮಕಾರ್ಯ ಎನ್ನಬಹುದು. ಅವುಗಳನ್ನು ಮಾಡದಿರುವುದಕ್ಕೆ ಆಲಸ್ಯವೇ ಕಾರಣ ಎನ್ನಬಹುದು ಎಂಬುದಾಗಿ ಧರ್ಮರಾಜನ ಉತ್ತರವಾಗಿದೆ. ಹಾಗಾದರೆ ಮಾನವನಾಗಿ ಮಾಡಲೇಬೇಕಾದ ಕಾರ್ಯಗಳು ಯಾವುವು? ಎಂಬುದನ್ನು ಮೊದಲು ತಿಳಿದಾಗ ಮುಂದಿನ ವಿಷಯ ಸುಗಮವಾಗುತ್ತದೆ. ಈ ಜೀವನ ಎಂಬುದು ಪ್ರಧಾನವಾಗಿ ಹುಟ್ಟನ್ನು ಸಾರ್ಥಪಡಿಸಿಕೊಳ್ಳುವ ಕಾಲಘಟ್ಟ. ಇದರಲ್ಲಿ ಪ್ರಧಾನವಾಗಿ ನಾಲ್ಕು ಘಟ್ಟಗಳು ಮತ್ತು ನಾಲ್ಕು ಅವಸ್ಥೆಗಳು ಬರುತ್ತವೆ. ಜಾಗೃತ್ ಸ್ವಪ್ನ ಸುಷುಪ್ತಿ ಮತ್ತು ತುರೀಯ ಎಂಬ ಆ ನಾಲ್ಕು ಅವಸ್ಥೆಗಳು; ಶೈಶವ, ಯೌವನ, ವಾರ್ಧಕ ಮತ್ತು ಮುಪ್ಪು ಎಂಬ ನಾಲ್ಕು ಘಟ್ಟಗಳು. ಇವುಗಳನ್ನು ಸಾರ್ಥಕಪಡಿಸಿಕೊಳ್ಳಬೇಕು. ಹುಟ್ಟಿನಿಂದ ಆರಂಭಿಸಿ ಅಧ್ಯಯನದ ವರೆಗಿನ ಅವಧಿ ಶೈಶವ, ಅಧ್ಯಯನ ಅವಧಿ ಮುಗಿದ ಬಳಿಕ ವಿವಾಹವಾಗಿ ಗೃಹಸ್ಥನ ಬದುಕನ್ನು ಯೌವನ ಎನ್ನಬಹುದು. ಅರವತ್ತು ವರ್ಷದ ಅನಂತರಕಾಲ ವಾರ್ಧಕ್ಯ ಎನ್ನುವುದಾದರೆ; ಸಾವು ಸಮೀಪಿಸಿದ ಕಾಲವೇ ಮುಪ್ಪು. ಈ ಅವಸ್ಥೆಗಳಲ್ಲಿ ಯಾವುದನ್ನು ಮಾಡಲೇಬೇಕು ಎಂಬುದಕ್ಕೆ ಕಾಳಿದಾಸನು ಸೂತ್ರಪ್ರಾಯವಾದ ಈ ಮಾತನ್ನು ಹೇಳುತ್ತಾನೆ.

 "ಶೈಶವೇ ಅಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಂ । ವಾರ್ಧಕೇ ಮುನಿವೃತ್ತಿನಾಂ ಯೋಗೇನಾಂತೇ ತನುತ್ಯಜಾಮ್ ।

 - ಶೈಶವಾವಸ್ಥೆಯಲ್ಲಿ ವಿದ್ಯೆಯು ನಮ್ಮ ಮೈಮನಗಳಲ್ಲಿ ಬೇರೂರಬೇಕು. ವಿದ್ಯೆಯು ಎಲ್ಲಾ ಬಗೆಯಿಂದ ಗಟ್ಟಿಯಾಗಿ ಕುಳಿತುಕೊಳ್ಳುವ ಅವಧಿಯನ್ನೇ ವಿದ್ಯಾ-ಅಭಿ- ಆಸ =ವಿದ್ಯಾಭ್ಯಾಸ ಎನ್ನಬಹುದು. ಹಾಗೆ ಗಟ್ಟಿಯಾಗಿ ಕುಳಿತುಕೊಳ್ಳುವ ರೀತಿಯಲ್ಲೇ ವಿದ್ಯೆಯನ್ನು ಸಂಪಾದನೆ ಮಾಡಬೇಕು. ವಿದ್ಯೆಯನ್ನು ಬಿಟ್ಟು ಬೇರಾವುದನ್ನೂ ಸಂಪಾದನೆ ಮಾಡಬಾರದು. ಒಂದು ವೇಳೆ ಬೇರೆಯದನ್ನು ಸಂಪಾದನೆ ಮಾಡಲು ಹೊರಟರೆ ವಿದ್ಯಾಧ್ಯಯನ ಅಪೂರ್ಣವಾಗುವುದು. ವಿದ್ಯೆಯು ಪೂರ್ಣವಾಗದಿದ್ದರೆ ಮುಂದಿನ ವ್ಯವಸ್ಥೆಯೂ ಅಪೂರ್ಣವಾದಂತೆಯೇ ಸರಿ. ಬಾಲ್ಯದಲ್ಲಿ ಯಾವ ವಿದ್ಯೆಯನ್ನು ಸಂಪಾದನೆ ಮಾಡಿರುತ್ತಾನೋ ಅದರಿಂದ ಬಂದ ವಿವೇಕ ವಿನಯಾದಿ ಸದ್ಗುಣಗಳಿಂದ ಆತ ಮಾಡುವ ಕರ್ಮಗಳೆಲ್ಲವೂ ಧರ್ಮಪರವಾಗುವುವು. ವಿದ್ಯೆ ಇಲ್ಲದವನ ಕಾರ್ಯವೂ ಅಪೂರ್ಣವೇ. ಹಾಗಾಗಿ ಮಕ್ಕಳಿಗೆ ಆರಂಭದಲ್ಲೇ ಧರ್ಮಬುದ್ಧಿಯನ್ನು ಬೆಳೆಸಬೇಕು. 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ' ಎಂಬ ಗಾದೆಯೂ ಇದೆ. ಫೌಂಡೇಶನ್ ಗಟ್ಟಿಯಾಗಿದ್ದರೆ ತಾನೆ ಭವ್ಯಭವನವನ್ನು ಕಟ್ಟಲು ಸಾಧ್ಯ. ಆದ್ದರಿಂದ ವಿದ್ಯೆ ಸಂಪಾದನೆಯೇ ಬಾಲ್ಯದ ಧರ್ಮಕಾರ್ಯ. ಇದನ್ನು ಮಾಡದಿರುವುದೇ ಆಲಸ್ಯ. ಅಥವಾ ಆಲಸ್ಯದ ಕಾರಣದಿಂದ ವಿದ್ಯೆಯನ್ನು ಸಂಪಾದನೆ ಮಾಡುವುದಿಲ್ಲ. 

ವಿದ್ಯೆಯ ಬಲದಿಂದ ಮುಂದಿನ ಕಾರ್ಯ ಸಾಗಬೇಕು. ವಿದ್ಯಾವಂತನಾದವನಿಗೆ ಮುಂದಿನ ಬೇಕು ಬೇಡಗಳ ಸ್ಪಷ್ಟತೆ ಇರುತ್ತದೆ. ಆತನಿಗೆ ಗೊಂದಲವೇ ಇರುವುದಿಲ್ಲ. ಜೀವನದಲ್ಲಿ ಎಡರುತೊಡರುಗಳ ಸಾಧ್ಯತೆಯೂ ಕಡಿಮೆಯೇ. ನೆಮ್ಮದಿಯ ಯೌವನ ಜಾರುತ್ತದೆ. ಹೀಗೆ ಯೌವನವು ನೆಮ್ಮದಿಂದ ಸಾಗಿದರೆ ಮೈಯ್ಯಲ್ಲಿ ಕಸು ಇಲ್ಲದಿದ್ದಾಗ ಹಾಯಾಗಿ ಕುಳಿತು ಪೂಜೆ ಧ್ಯಾನ ಮೊದಲಾದ ಸತ್ಕಾಲಕ್ಷೇಪವು ಅವನದಾಗಿರುತ್ತದೆ. ಇಲ್ಲೂ ಜೀವಿಕೆಗಾಗಿ ಹುಡುಕಾಟ ಅಲೆದಾಟದ ಗೋಜಿಲಿಲ್ಲ. ಇದು ಮುಂದಿನ ಅನಾಯಾಸವಾದ ಮರಣಕ್ಕೆ ದಾರಿ. ಯೋಗಮಯ ಜೀವನವೆಂದರೆ ಇದುವೇ ಮಹರ್ಷಿಗಳು ಹೇಳಿದ್ದು. ಮತ್ತು ಜಾಗೃಜ್ಜೀವನ ಆತಂಕರಹಿತವಾಗಿ ನಡೆದಾಗ ಸುಖವಾದ ಸ್ವಪ್ನ ನಿದ್ದೆಗಳು ಬರುವವು ಅಷ್ಟೇ. ಇದೇ ಮುಂದಿನ ಸಹಜಾವಸ್ಥೆ - ತುರೀಯಾವಸ್ಥೆ ಅಥವಾ ಸಮಾಧಿಜೀವನಕ್ಕೂ ಪೂರಕವಾಗುತ್ತದೆ. ಇದೇ ನಿಜವಾದ ಧರ್ಮಕಾರ್ಯ. ಇದೇ ಆಲಸ್ಯರಹಿತವಾದ ಜೀವನಪದ್ಧತಿ. 

ಸೂಚನೆ : 16/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ದುರುಳರಿಗೆ ವರಲಾಭ: ಮಿತಿರಹಿತ ಸುಖಲೋಭ Durularige Varalabha: Mitirahita Sukhalobha

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ತಮಗೆ ಅಮರತ್ವವನ್ನು ಕೊಡು – ಎಂದು ಸುಂದೋಪಸುಂದರು ಕೇಳಿಕೊಂಡಾಗ ಬ್ರಹ್ಮನು ಅವರಿಗೆ ತನ್ನ ಕಟ್ಟುಪಾಡನ್ನು ಹೇಳಿದನು: ಮೂರೂ ಲೋಕಗಳ ಪ್ರಭುತ್ವವನ್ನು ಹೊಂದಬೇಕೆಂದಾಶಿಸಿ ನೀವು ತಪಸ್ಸಿನಲ್ಲಿ ತೊಡಗಿಕೊಂಡಿರಿ. ಆ ಕಾರಣಕ್ಕಾಗಿ, ಈಗ ಅದರ ಬದಲಾಗಿ ಅಮರತ್ವವನ್ನು ಕೊಡಲಾಗುವುದಿಲ್ಲ. ತ್ರೈಲೋಕ್ಯವಿಜಯ ಎಂಬುದಕ್ಕಾಗಿಯೇ ತಾವು ತಪಸ್ಸನ್ನು ಕೈಗೊಂಡಿರೆಂಬ ಕಾರಣದಿಂದ, ತಮ್ಮ ಈ (ಅಮರತ್ವದ ಹೊಸ) ಬಯಕೆಯನ್ನು ನಾ ಪೂರೈಸುವುದಿಲ್ಲ - ಎಂದನು.


ಸುಂದೋಪಸುಂದರು ಹೇಳಿದರು: "ಮೂರೂ ಲೋಕಗಳಲ್ಲಿ ಸ್ಥಾವರವೋ ಜಂಗಮವೋ ಆದ ಯಾವುದೇ ಭೂತವಿರಲಿ -ಅರ್ಥಾತ್, ಚಲನರಹಿತವಾದ ವೃಕ್ಷಾದಿಗಳು, ಹಾಗೂ ಓಡಾಡುವ ಪ್ರಾಣಿಗಳು ಎಂಬ ಯಾವುವೇ ಜೀವಿಗಳಿರಲಿ - ಅವಿಂದ ನಮಗೆ ಭಯವು ಬರಬಾರದು; ಕೇವಲ ನಮ್ಮಿಂದ ಪರಸ್ಪರವಾಗಿ ಮಾತ್ರ ಆಗಬಹುದು, ನಮ್ಮ ಸಾವು. ಅಷ್ಟೇ." ಎಂದು.


ಅದಕ್ಕೆ ಪಿತಾಮಹನು, "ನೀವು ಏನೆಂದು ಪ್ರಾರ್ಥಿಸಿಕೊಂಡಿರೋ, ಏನೆಂಬುದಾಗಿ ಹೇಳಿದಿರೋ, ಅದೇ ರೀತಿಯಾಗಿ ವರ ಕೊಡುತ್ತಿದ್ದೇನೆ. ಹಾಗೆಯೇ ನಿಮ್ಮೀರ್ವರ ಸಾವೂ ಅದೇ ಪ್ರಕಾರವಾಗಿಯೇ ಆಗುವುದು" ಎಂದನು.


ಹೀಗೆ ಸುಂದೋಪಸುಂದರಿಗೆ ವರವನ್ನಿತ್ತು ಅವರನ್ನು ತಪಸ್ಸಿನಿಂದ ನಿವೃತ್ತರಾಗುವಂತೆ ಮಾಡಿ, ಬ್ರಹ್ಮಲೋಕಕ್ಕೆ ತೆರಳಿದನು, ಬ್ರಹ್ಮ. ಅವರಿಬ್ಬರೂ "ಸರ್ವರಿಂದಲೂ ಅವಧ್ಯರು" – ಎಂದೆನಿಸಿದವರಾಗಿ, ಸ್ವಭವನಕ್ಕೆ ಹೋದರು.


ಮನಸ್ವಿಗಳಾದ ಅವರಿಬ್ಬರು ಈಗ ವರಪಡೆದು ಪೂರ್ಣಕಾಮರಾದುದನ್ನು ಕಂಡು ಅವರ ಮಿತ್ರವರ್ಗವೆಲ್ಲ ಪ್ರಹರ್ಷವನ್ನು ಹೊಂದಿತು.


ಸುಂದೋಪಸುಂದರು ಈಗ ತಮ್ಮ ಜಟೆಗಳನ್ನು ಕತ್ತರಿಸಿಕೊಂಡರು. ಕಿರೀಟಧರಿಸಿದರು. ಬಹಳ ಬೆಲೆಬಾಳುವ ಆಭರಣಗಳನ್ನು ಧರಿಸಿಕೊಂಡರು, ನಿರ್ಮಲವಾದ ವಸ್ತ್ರಗಳನ್ನು ಉಟ್ಟರು. ಅಕಾಲದಲ್ಲಿ ಬೆಳದಿಂಗಳನ್ನು ತಂದರು! ಸಾರ್ವಕಾಲಿಕವಾದ ಬೆಳದಿಂಗಳೂ ಆದಂತಾಯಿತು! ಎಲ್ಲರೂ, ವಿಶೇಷವಾಗಿ ಅವರ ಸ್ನೇಹಿತರು, ನಿತ್ಯವೂ ಪ್ರಮೋದಗೊಂಡಿರುವಂತಾಯಿತು. ಆಗ ಮನೆಮನೆಯಲ್ಲೂ ಇರುತ್ತಿದ್ದ ಮಾತೆಂದರೆ "ತಿನ್ನಿರಿ, ಭೋಗಪಡಿ, ಲೂಟಿ ಮಾಡಿ, ಮೋಜು ಮಾಡಿ, ಹಾಡಿರಿ, ಕುಡಿಯಿರಿ" ಎಂಬುದಾಗಿ. ಜೋರುಜೋರಾಗಿ ಹಾಕಲಾಗುತಿದ್ದ ತಾಳಧ್ವನಿಗಳೊಂದಿಗಿನ ಮಹಾನಾದಗಳಿಂದ ದೈತ್ಯರ ಪುರವೆಲ್ಲ ತುಂಬಿಹೋಯಿತು. ಕಾಮರೂಪಿಗಳಾದ ಆ ದೈತ್ಯರ ಬಹುವಿಧವಾದ ಆಯಾ ವಿಹಾರಗಳಿಂದಾಗಿ, ಆಡುತ್ತಾಡುತ್ತಾ ವರ್ಷಗಳೇ ದಿನಗಳಂತೆ ಕಳೆದುಹೋದವು, ಅವರಿಗೆ.


ತಮ್ಮೀ ಉತ್ಸವವು ಕಳೆಯುತ್ತಲೇ, ಅವರಿಬ್ಬರೂ ಲೋಕತ್ರಯದ ಮೇಲೆ ತಮ್ಮ ಅಧಿಕಾರವನ್ನು ಸ್ಥಾಪಿಸುವ ಮನಸ್ಸಾಯಿತು. ಅದಕ್ಕಾಗಿ ಮಂತ್ರಾಲೋಚನೆಯನ್ನು ನಡೆಸಿ, ಸೇನೆಗೆ ಅಣತಿಯಿತ್ತರು. ತಮ್ಮ ಸ್ನೇಹಿತರಿಂದಲೂ ದೈತ್ಯವೃದ್ಧರಾದ ಮಂತ್ರಿಗಳಿಂದಲೂ ಅನುಮತಿಯನ್ನು ಪಡೆದವರಾಗಿ, ಮಖಾನಕ್ಷತ್ರವಿರುವ ಸಮಯದಲ್ಲಿ ರಾತ್ರಿಯ ಹೊತ್ತಿನಲ್ಲಿ ಪ್ರಾಸ್ಥಾನಿಕವನ್ನು, ಎಂದರೆ ಪ್ರಸ್ಥಾನಮಂಗಳವನ್ನು, ನೆರವೇರಿಸಿ ವಿಜಯಯಾತ್ರೆಯನ್ನು ಆರಂಭಿಸಿದರು. ಮಹಾದೈತ್ಯಸೇನೆಯೊಂದಿಗೆ ಅವರು ಹೊರಟರು. ಆ ಸೈನ್ಯವಾದರೂ ಗದೆ-ಪಟ್ಟಿಶಗಳನ್ನೂ ಶೂಲ-ಮುದ್ಗರಗಳನ್ನೂ ಕೈಯಲ್ಲಿ ಹಿಡಿದಿತ್ತು. ರಕ್ಷಾಕವಚವೂ ಎಲ್ಲರಿಗೂ ಇತ್ತು. ಅವರಿಬ್ಬರನ್ನು ಚಾರಣರೂ ಸ್ತುತಿಸುತ್ತಿದ್ದರು; ಅವರ ಸ್ತುತಿಗಳೂ ಮಂಗಲಮಯವಾಗಿದ್ದವು,


ಅವರಿಗೆ ವಿಜಯವನ್ನು ಸೂಚಿಸುವುದಾಗಿದ್ದವು. ಇದರೊಂದಿಗೆ ಪರಮಸಂತೋಷದಿಂದ ಹೊರಟುಬಂದರು, ಸುಂದೋಪಸುಂದರು.

 

ಇನ್ನೇನು? ಅಂತರಿಕ್ಷಕ್ಕೇ ಜಿಗಿದರು. ಅವರು ಕಾಮ-ಗಮರಾಗಿದ್ದರು - ಎಂದರೆ ಇಚ್ಛೆ ಬಂದಂತೆ ಮತ್ತು ಇಚ್ಛೆ ಬಂದಲ್ಲಿಗೆ ಹೋಗಬಲ್ಲವರು - ಆಗಿದ್ದರು. ಯುದ್ಧದ ವಿಷಯದಲ್ಲಿ ದುರ್ಮದವನ್ನು ಹೊಂದಿದ್ದ ಅವರು ದೇವತೆಗಳ ಭವನಗಳಿಗೇ ನುಗ್ಗಿದರು.


ಸೂಚನೆ : 16/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಸರಿಯಾದ ಗುರು - ತಪ್ಪಿದ ಗುರಿ (Sariyada Guru - Tappida Guri)


ಲೇಖಕರು : 
ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ಯಾರಾದರೂ ತ್ರಿಶಂಕುಸ್ವರ್ಗದಲ್ಲಿದ್ದಾರೆಂದರೆ ಏನರ್ಥ? ಯಾರು ಈ ತ್ರಿಶಂಕು? ಬಹಳ ಧಾರ್ಮಿಕನಾಗಿದ್ದ, ರಘುವಂಶದ ರಾಜ ತ್ರಿಶಂಕು. ಸಶರೀರನಾಗಿ (ಎಂದರೆ ಶರೀರಸಹಿತವಾಗಿ) ಸ್ವರ್ಗಕ್ಕೆ ಹೋಗಬೇಕೆಂಬ ಆಸೆಯಿಂದ ಯಜ್ಞವನ್ನು ಮಾಡಿಸಲು ಕುಲಗುರುವಾಗಿದ್ದ ವಸಿಷ್ಠರನ್ನು ಅವನು ಬೇಡಿಕೊಂಡ. ಅದು ಸಾಧ್ಯವಿಲ್ಲವೆಂದು ಅವರೆಂದಾಗ, ತಪೋನಿಷ್ಠರಾಗಿದ್ದ ಅವರ ಮಕ್ಕಳನ್ನು ಮೊರೆಹೊಕ್ಕ. ತಮ್ಮ ತಂದೆಯೂ, ಬ್ರಹ್ಮರ್ಷಿಯೂ, ರಾಜನ ಕುಲಗುರುವೂ, ಆಗಿದ್ದ ವಸಿಷ್ಠರ ಮಾತನ್ನು ಮೀರಿ ಈತನು ತಮ್ಮನ್ನು ಕೇಳಿದ್ದನ್ನು ಗುರುವಚನಧಿಕ್ಕಾರವಾಗಿ ಅವರು ಕಂಡರು. ಕ್ರೋಧದಿಂದ ಅವನ ಯಾಚನೆಯನ್ನವರು ನಿರಾಕರಿಸಿದರು. ಈ ಅಭಿಲಾಷೆಯನ್ನು ಪೂರೈಸುವ ಬೇರೊಬ್ಬರನ್ನು ಅರಸಿ ಹೋಗುತ್ತೇನೆಂದು ಅವನು ವಿನಯಪೂರ್ವಕವಾಗಿಯೇ ಅವರಿಗೆಂದಾಗ, ಆ ಗುರುಪುತ್ರರು ಸಂಕ್ರುದ್ಧರಾಗಿ ಅವನನ್ನು ಚಂಡಾಲನಾಗೆಂದು ಶಪಿಸಿಬಿಟ್ಟರು. ರಾಜನು ಮರುದಿನವೇ ಚಂಡಾಲರೂಪ ಹೊಂದಿಬಿಟ್ಟನು. ಹೀಗಿದ್ದಾಗ ತಪೋಧನರಾದ, ಮತ್ತು ತಪಶ್ಚರ್ಯೆಯಲ್ಲಿ ಮುಳುಗಿದ್ದ, ವಿಶ್ವಾಮಿತ್ರರನ್ನು ಆತ ಮೊರೆಹೊಕ್ಕ. ನೂರು ಯಜ್ಞಗಳನ್ನು ತಾನು ಮಾಡಿದ್ದಾಗಿಯೂ, ಎಂದೂ ಸತ್ಯವಂತನೂ ಪ್ರಜಾರಕ್ಷಕನೂ ಆಗಿರುವುದಾಗಿಯೂ ಅರುಹಿ, ತನ್ನ ಮನೋಭಿಲಾಷೆಯನ್ನು ತ್ರಿಶಂಕು ತೋಡಿಕೊಂಡ.

ಧರ್ಮಿಷ್ಠನಾದ ಅವನ ದುರ್ಗತಿಗೆ ಮರುಕಪಟ್ಟು, ವಿಶ್ವಾಮಿತ್ರರು ಅವನ ಪ್ರಾರ್ಥನೆಯನ್ನು ಮನ್ನಿಸಿ ಯಜ್ಞ ನಡೆಸಿದರು. ಹವಿಸ್ಸನ್ನು ಸ್ವೀಕರಿಸಲು ದೇವತೆಗಳು ಬರದಿದ್ದಾಗಲೂ ತಮ್ಮ ತಪೋಬಲದಿಂದಲೇ ತ್ರಿಶಂಕುವನ್ನು ಸ್ವರ್ಗಕ್ಕೇರಿಸಿದರು. ಸ್ವರ್ಗದಿಂದ ಅವನನ್ನು ಕೆಳಗೆ ಇಂದ್ರನು ದೂಡಿದಾಗ, ಇನ್ನೊಂದು ಸ್ವರ್ಗವನ್ನೇ ವಿಶ್ವಾಮಿತ್ರರು ಸೃಷ್ಟಿಸಲು ಪ್ರಾರಂಭಿಸಿದರು. ತಲ್ಲಣಿಸಿದ ದೇವತೆಗಳು ಅವರನ್ನು ಪ್ರಾರ್ಥಿಸಲಾಗಿ ಅವರು ಹಾಗಿದ್ದರೆ ತಮ್ಮ ಸೃಷ್ಟಿಯು ಎಂದಿಗೂ ನಿಂತಿರಬೇಕೆಂದೂ, ತ್ರಿಶಂಕುವಿಗೆ ತಾವು ಕೊಟ್ಟ ಮಾತು ಸುಳ್ಳಾಗಬಾರದೆಂದೂ ಕೇಳಿಕೊಂಡರು. ದೇವತೆಗಳು ಅದಕ್ಕೆ ಒಪ್ಪಲು, ಕೌಶಿಕಸೃಷ್ಟವಾದ ಸ್ವರ್ಗದಲ್ಲಿ ತ್ರಿಶಂಕುವು ತಲೆಕೆಳಕಾಗಿ ಶಾಶ್ವತವಾಗಿ ವಿರಾಜಿಸುವಂತಾಯಿತು.


ಹೀಗೆ ತಲೆಕೆಳಕಾಗಿ ನಿಂತ ತ್ರಿಶಂಕುವಿಗೆ ಸಿಕ್ಕದ್ದು ತ್ರಿಶಂಕುಸ್ವರ್ಗವೋ "ತ್ರಿಶಂಕುನರಕ"ವೋ ಎಂಬ ಪ್ರಶ್ನೆಯೇಳಬಹುದು. ಅವನು ಧಾರ್ಮಿಕನಾದ ರಾಜ; ಹಲವು ಯಜ್ಞಗಳನ್ನು ಮಾಡಿದ್ದವನು. ಸಶರೀರನಾಗಿ ಸ್ವರ್ಗಕ್ಕೇರಬೇಕೆಂಬ ಆಸೆಯೊಂದನ್ನು ವ್ಯಕ್ತಪಡಿಸಿದ್ದಕ್ಕೆ ಇಷ್ಟು ದೊಡ್ಡ ಶಾಪವೇ? - ಎನಿಸಬಹುದು. ಬ್ರಹ್ಮರ್ಷಿಗಳಾದ ವಸಿಷ್ಠರು ಮಹಾಜ್ಞಾನಿಗಳು. ಹಾಗೂ ತ್ರಿಶಂಕುವಿನ ಗುರುಗಳು. ಗುರುವಿನ ಸ್ಥಾನ ಬಹುದೊಡ್ಡದು. ಶಿಷ್ಯನ ಶ್ರೇಯಸ್ಸಿನ ಬಗ್ಗೆ ಅವರ ಕಾಳಜಿ ಸದಾ ಇರುತ್ತದೆ. ಅಂತಹವರು ಏನನ್ನಾದರೂ ಸಾಧ್ಯವಿಲ್ಲ ಅಥವಾ ಬೇಡವೆಂದಾಗ, ಅವರ ಮಾತನ್ನು ಶಿರಸಾವಹಿಸುವುದು ಶಿಷ್ಯನ ಧರ್ಮ. ಗುರುವೆಂದರೆ ಯಾರು? ಶ್ರೀರಂಗಮಹಾಗುರುಗಳ ಮಾತಿನಲ್ಲಿ "ಗುರುವು ಕೇವಲ ವ್ಯಕ್ತಿಯಲ್ಲ, ಜ್ಞಾನಕೋಶ. ಆ ಕೋಶವನ್ನು ಒಳಗಿಟ್ಟುಕೊಂಡು ಒಳಗಿರುವುದನ್ನು ಅನುಭವಿಸಬೇಕು. ಅಂಧಕಾರವನ್ನು ನಿವೃತ್ತಿಮಾಡುವ ಜಾಗವೇ ಗುರು."


ತ್ರಿಶಂಕು ಆಸೆಪಟ್ಟದ್ದೇ ತಪ್ಪೆಂದು ಹೇಳಲಾಗುವುದಿಲ್ಲ. ಆದರೆ ಗುರುವು ಹಾಗಾಗುವುದಿಲ್ಲವೆಂದಾಗ, ಅವರ ಮಾತಿನ ಮಹತ್ತ್ವವನ್ನರಿಯದೆ, ಅದೇ ಕಾರ್ಯವನ್ನು ಬೇರೊಬ್ಬರಿಂದ ಮಾಡಿಸಹೊರಟದ್ದು ಅಪರಾಧವಾಯಿತು. ಕೊನೆಗೆ ತ್ರಿಶಂಕುವಿಗಾಗಿ ವಿಶ್ವಾಮಿತ್ರರು ಮತ್ತೊಂದು ಸ್ವರ್ಗವನ್ನೇ ಸೃಷ್ಟಿಸಿದರೂ, ಅದು ನಿಜವಾದ ಸ್ವರ್ಗವಾಗಲಿಲ್ಲ. ಧರ್ಮಿಷ್ಠನಾದ್ದರಿಂದ ಅವನಿಗೊಂದು ಶಾಶ್ವತಸ್ಥಾನ ಸಿಕ್ಕಿತಾದರೂ ಅದು ಇಲ್ಲೂ ಇಲ್ಲ ಅಲ್ಲೂ ಇಲ್ಲವೆಂಬಂತಾಯಿತು. ನಮಗೆ ಶ್ರೇಯಸ್ಸನ್ನು ಬಯಸುವ ಗುರುವಿನ ವಿಷಯದಲ್ಲಿ ನಿಷ್ಠೆಯಿಂದಿರುವುದು ನಮಗೆ ಅವರಲ್ಲಿ ಭಕ್ತಿ-ಗೌರವಗಳಿರುವಷ್ಟೇ ಮುಖ್ಯ.

ಸೂಚನೆ: 15/6/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 18 ಕೃಷ್ಣನ ಕೊಳಲಿಗೊಂದು ಪ್ರಾರ್ಥನೆ Krishnana Kolaligondu Prarthane

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ವಾಲ್ಮೀಕಿಮಹರ್ಷಿಗಳು ನಿರೂಪಿಸಿರುವ ಶ್ರೀರಾಮನೋ ವ್ಯಾಸಮಹರ್ಷಿಗಳು ನಿರೂಪಿಸಿರುವ ಶ್ರೀಕೃಷ್ಣನೋ ಭಗವಂತನ ಸಾಕ್ಷಾದ್ ಅವತಾರಗಳು; ಎಂದೇ ಅವರ ಚಿತ್ರ- ಶಿಲ್ಪಗಳಿಗೆ ಸಹ ನಮಸ್ಕಾರವುಂಟು. ಆದರೆ ನಮ್ಮ ದೇಶದಲ್ಲಿ ಸಂಗೀತವಾದ್ಯಗಳಿಗೆಲ್ಲ ನಮಸ್ಕರಿಸುವರೆಲ್ಲ! ಇದೇನಿದು? ಪಾಶ್ಚಾತ್ತ್ಯರಲ್ಲೂ ಅನೇಕರು ವಾದ್ಯಕುಶಲರಾಗಿರುವುದು ಸುವಿದಿತವೇ. ಅವರಾರೂ ಹಾಗೆಲ್ಲ ಮಾಡುವುದಿಲ್ಲವಲ್ಲಾ? ಎಂದು ಆಶ್ಚರ್ಯಪಡುವವರೂ ಉಂಟು. ವೀಣೆಯು ಬ್ರಹ್ಮಹತ್ಯಾ-ಪಾಪವನ್ನೂ ನೀಗಿಸಬಲ್ಲದು! - ಎಂಬ ಮಾತಿದೆಯಲ್ಲವೇ?

ಹಾಗೆಲ್ಲಾ ಹೇಗೆ ಸಾಧ್ಯ? - ಎಂಬ ಪ್ರಶ್ನೆ ಸುಲಭ; ಉತ್ತರವು ಸುಲಭವಲ್ಲ. ನಮ್ಮ ಕೈಯಲ್ಲಿರುವ ಪುಟ್ಟ ಮೊಬೈಲಿನಿಂದ ಸಾವಿರಾರು ಮೈಲಿ ದೂರದಲ್ಲಿರುವವರನ್ನು ಸಂಪರ್ಕಿಸಲೂ ಕಾಣಲೂ ಸಾಧ್ಯವೆಂಬುದನ್ನು ಈಗೊಂದೈವತ್ತು ವರ್ಷಗಳ ಹಿಂದೆ ಊಹಿಸುವುದೂ ಶಕ್ಯವಿರಲಿಲ್ಲವಷ್ಟೆ? ತೀರ ಸರಳವೂ ಸಾರಭೂತವೂ ಅತ್ಯಂತಸಂಕ್ಷಿಪ್ತವೂ ಆದ ಉತ್ತರ ಬೇಕೆ? ಈ ವಿಷಯದಲ್ಲಿ ಶ್ರೀರಂಗಮಹಾಗುರುಗಳಿತ್ತ ಟೆಲಿಗ್ರಾಮಿನ ಉಪಮಾನವನ್ನು ನೆನೆಸಿಕೊಳ್ಳಬಹುದು:  "ಯುಕ್ತ-ತರಂಗಗಳನ್ನು ಬಳಸಿ ಸಂದೇಶಗಳನ್ನು ಕಳುಹಿಸಲಾಗುವುದಲ್ಲವೇ? ಹಾಗೆಯೇ ಅಧ್ಯಾತ್ಮಕ್ಷೇತ್ರದಲ್ಲೂ." ಈ ವಿಷಯಗಳಿಗೆ ವಿಸ್ತೃತವಾದ ವಿವರಣೆಯೇ ಬೇಕು. ಇಲ್ಲದು ಅಪ್ರಸ್ತುತ.

ಪ್ರಕೃತ, ಲೀಲಾಶುಕನ ಈ ಕೃತಿಯಲ್ಲಿ ಶ್ರೀಕೃಷ್ಣನ ಕೊಳಲನ್ನು ಕುರಿತಾದ ಮಾತಿದೆ. ಕೊಳಲನ್ನೇ ಸಂಬೋಧಿಸಿ ಮಾತನ್ನಾಡಿದೆ: ಎಲೈ ಮುರಳಿಯೇ! (ಅಯಿ ಮುರಲಿ!) ಎಂಬುದಾಗಿ. ಯಾರನ್ನಾದರೂ ಕರೆದರೆ ಅವರ ಪ್ರತಿಕ್ರಿಯೆಯೇನು? ಕರೆದವರತ್ತ ಅವರು ನೋಡುತ್ತಾರೆ. ಯಾರನ್ನಾದರೂ ಸಂಬೋಧಿಸಿದಾಗ, ಅವರು ಕರೆದವರತ್ತ ಮುಖ ಮಾಡುವುದನ್ನೇ "ಅಭಿಮುಖೀಭಾವ' ಎನ್ನುವುದು.

ಕೊಳಲನ್ನು ಅಭಿಮುಖಮಾಡಿಕೊಂಡು ಏನನ್ನೋ ಕೇಳಬೇಕಾಗಿದೆ. ಬೇರೆಯವರಿಗೆ ನಮ್ಮಿಂದ ಏನೋ ಕೆಲಸವಾಗಬೇಕಾಗಿದ್ದಲ್ಲಿ ಕೆಲವೊಮ್ಮೆ ದರ್ಪತೋರುತ್ತೇವೋ ಏನೋ; ಬೇರೆಯವರಿಂದ ನಮಗೆ ಕೆಲಸವಾಗಬೇಕಿದ್ದಾಗ ದೈನ್ಯದಿಂದ ಕೇಳುತ್ತೇವೆ. ಇಲ್ಲಂತೂ ಈ ಕೊಳಲನ್ನು ಬೇಡಿಕೊಳ್ಳುವ ಸಂನಿವೇಶ. ಎಂದೇ, "ಕೈಮುಗಿದು ನಿನ್ನನ್ನು ಯಾಚಿಸುತ್ತಿದ್ದೇನೆ" - ಎಂದಿರುವುದು.

ನಾವು ಯಾರನ್ನಾದರೂ ಬೇಡುವುದೆಂದರೆ ಅವರಲ್ಲಿ ಏನೋ ಹಿರಿತನವಿದೆಯೆಂದೇ. ಕೊನೆಯ ಪಕ್ಷ, ಬಹಳ ಹಿರಿದಾದವರೊಂದಿಗೆ ಅವರಿಗೆ ನಿಕಟಸಂಪರ್ಕವಿದೆಯೆಂದೇ. ಯಾರಿಗಾದರೂ ಮಹಾರಾಜರೊಂದಿಗೆ ನೈಕಟ್ಯವಿದೆ (ಸಲಿಗೆಯಿದೆ) - ಎಂದರೆ, ಆಹಾ ಅಂತಹವರೊಡನೆ ಸಂಪರ್ಕ ಬೇಕು, ಏನಾದರೂ ಕೆಲಸಕ್ಕೆ ಬೇಕಾದೀತು - ಎಂದುಕೊಳ್ಳುವವರುಂಟು.

ಹಾಗೆಯೇ ಈ ಕೊಳಲಿಗಿಲ್ಲಿ ಸಲ್ಲುವ ಗೌರವ! ಸಾಕ್ಷಾತ್ ಮುಕುಂದನೊಂದಿಗೇ ನಿಕಟತೆಯುಂಟು, ಈ ಕೊಳಲಿಗೆ. ಎಷ್ಟು? ಆತನ ಸ್ಮೇರ-ವಕ್ತ್ರವಿದೆಯಲ್ಲಾ, ಎಂದರೆ ಮಂದಹಾಸದಿಂದ ಕೂಡಿರುವ ಮುಖವಿದೆಯಲ್ಲಾ, ಅದರ ಬಳಿಯೇ ಸುಳಿಯುವ ಭಾಗ್ಯವಿದಕ್ಕೆ! ಆತನ ಮುಖವಂತೂ ಒಳ್ಳೆಯ ಕಮಲದಂತಿರುವುದಲ್ಲವೇ?

ಪದ್ಮಸದೃಶವಾದ ಆ ಸುಂದರ-ವದನದ ಬಳಿ ಸಾರುವುದಷ್ಟೇ ಇದರ ಸೌಭಾಗ್ಯವಲ್ಲ! ಆತನ ಉಸಿರಿನ ಸಂಪರ್ಕವೇ ಇದಕ್ಕುಂಟು. ಕೊಳಲನ್ನೂದುವುದೆಂದರೆ ತನ್ನುಸಿರನ್ನು ತುಂಬಿಸಿ ತಾನೆ ಊದುವುದು? "ಮಧುರಾಧಿಪತೇರಖಿಲಂ ಮಧುರಂ" ಎನ್ನುವಂತೆ, ಶ್ರೀಕೃಷ್ಣನ ಉಸಿರೂ ಮಧುರವಾದದ್ದೇ.

ಮಧುರವೆಂಬ ಪದ ಬಂದಿರುವುದೇ ಮಧು ಎಂಬುದರಿಂದ. ಮಧುವೆಂದರೆ ಜೇನು. ಜೇನಿಗಿಂತಲೂ ಮಧುರವೇ? ಕೃಷ್ಣನ ಉಸಿರೂ ಮಧುವಿನಂತಿರುವುದು! ಅರವಿಂದವೆಂದಾಗಲೇ ಅದರಲ್ಲಿ ಸೌರಭವು ತುಂಬಿರುವುದೆಂಬುದು ನಮಗೆ ಹೊಳೆಯುತ್ತದೆ. ಹಾಗಿರುವಾಗ, ಅಲ್ಲಿ ಶ್ರೀಕೃಷ್ಣನ ಶ್ವಸನ(ಉಸಿರು) ಎಂದ ಮೇಲೆ ಆ ಮಧುವೆಂತಹುದೆಂದು ಹೇಳಬೇಕೆ? ಜೇನುತುಪ್ಪದ ಬಾಟಲೊಂದನ್ನು ನೋಡಿಯೇ, ಸವಿಗಂಡ ಮಕ್ಕಳ ಬಾಯಲ್ಲಿ ಜೊಲ್ಲು ಸುರಿಯಬಹುದು. ಆದರೆ ಅದರ ರಸವನ್ನೇ ಆಸ್ವಾದಿಸುವವರ ಸಂತೋಷವು ಮತ್ತೂ ಅತಿಶಯವಲ್ಲವೇ?

ನಮ್ಮೀ ಕೊಳಲಂತೂ ಕೃಷ್ಣನ ಉಸಿರೆಂಬ ಮಧುವಿನ ರಸವನ್ನು ಚೆನ್ನಾಗಿಯೇ ಬಲ್ಲುದು. ಓಹ್! ಅದೆಂತಹ ಸಾಮೀಪ್ಯ, ಎಂತಹ ಸಾಂನಿಧ್ಯ! ಎಂತಹ ನೈಕಟ್ಯ! ಅದೆಂತಹ ಪುಣ್ಯವದು, ಕೃಷ್ಣನ ಮುರಲಿಯದು!

ಯಾರಿಂದಲಾದರೂ ನಮಗೆ ಏನಾದರೂ ಕೆಲಸವಾಗಬೇಕಾದರೆ ಅವರಲ್ಲಿರುವ ಉತ್ಕೃಷ್ಟ-ಗುಣವೊಂದನ್ನು ಎತ್ತಿ ಹೇಳಿ ಮಾತಿಗಾರಂಭಿಸುವೆವಲ್ಲವೆ? ಏಕೆ? ಯಾರನ್ನಾದರೂ ಬೈದರೆ ಅಸಮಾಧಾನವೋ ಕೋಪವೋ ಅವರಲ್ಲುಕ್ಕುವಂತೆ, ಅವರಲ್ಲಿರುವ ಗುಣವೊಂದನ್ನು ಎತ್ತಿ ಹೇಳಿದರೆ ಏನೋ ಒಂದು ಪ್ರಸನ್ನತೆಯು ತಾನೇ ತಾನಾಗಿ ಅವರಲ್ಲಿ ಮೂಡುವುದಲ್ಲವೆ? ಯಾರಾದರೂ ಪ್ರಸನ್ನರಾಗಿದ್ದಾಗ ಅವರಲ್ಲಿಟ್ಟ ಪ್ರಾರ್ಥನೆಯು ಬೇಗನೇ ಕೈಗೂಡುವ ಸಂಭವ ಹೆಚ್ಚು.

ಎಂದೇ "ಕೃಷ್ಣ ಉಸಿರಿನ ಸವಿಗಂಡವಳೇ" ಎಂದು ಕೊಳಲನ್ನಿಲ್ಲಿ ಸ್ತುತಿಸಿರುವುದು. ಕೊಳಲು ನಪುಂಸಕಲಿಂಗವೆಂಬುದು ಕನ್ನಡದಲ್ಲಿ. "ಮುರಳೀ" ಎಂಬುದು ಸ್ತ್ರೀಲಿಂಗಶಬ್ದ, ಸಂಸ್ಕೃತದಲ್ಲಿ.

ನಿನ್ನನ್ನು ನಮಸ್ಕರಿಸಿ ಬೇಡುವೆ - ಎಂದದ್ದು ಯಾವುದಕ್ಕಾಗಿ? ಕೃಷ್ಣನು ಕೊಳಲನ್ನೂದುವಾಗ ಆತನ ಕೆಳದುಟಿಯನ್ನು ನೀನು ಸಮೀಪಿಸುವೆಯಲ್ಲವೆ? (ಆಹಾ ಒಬ್ಬಳಿಗೆ ಕೃಷ್ಣನ ಅಧರಮಣಿಯ ಸನಿಹ ದೊರೆಯಿತೆಂದರೆ ಎಂತಹ ಭಾಗ್ಯವದು!) ಆಗ ನನಗೊಂದು ಸಹಾಯ ಬೇಕು. ಏನು ಸಹಾಯ? ಕೃಷ್ಣನ ಕಿವಿಯಲ್ಲಿ ನೀನು ಹೇಳಬೇಕಾದ ವಿಷಯವೊಂದಿದೆ. ನನ್ನ ಅವಸ್ಥೆಯನ್ನು ದಯಮಾಡಿ ಆತನಿಗೆ ಗುಟ್ಟಾಗಿ ತಿಳಿಸು. ಇದನ್ನೇ ಬೇಡುತ್ತಿರುವುದು.

ಗೋಪಿಕೆಯೊಬ್ಬಳ ನುಡಿಯಿದಾದ್ದರಿಂದ ನಾವೇ ಊಹಿಸಿಕೊಳ್ಳಬಹುದು: ಕೃಷ್ಣನ ವಿಷಯದಲ್ಲಿ ತಾನು ಕಾಮಾರ್ತಳು. ನನ್ನ ವಿರಹ-ವೇದನೆಯನ್ನು ಆತನಲ್ಲಿ ನಿವೇದಿಸು. ಅದನ್ನೆಲ್ಲಾ ಗಟ್ಟಿಯಾಗಿ ಹೇಳಲಾದೀತೇ? ಕಿವಿಯಲ್ಲಿ ಗುಟ್ಟಾಗಿ ತಾನೆ ಹೇಳಬೇಕು! ದೂತಿಯೊಬ್ಬಳ ಮೂಲಕ ಪ್ರಿಯನಿಗೊಂದು ಸಂದೇಶವನ್ನು ಕಳುಹಿಸುವುದು ಹೇಗೋ ಹಾಗೇ ಇದು.

ಅಥವಾ, ಮುರಲಿಯೆಂಬುದು ಅಚೇತನವಸ್ತುವಲ್ಲವೇ? – ಎನ್ನುವಿರೋ? ಹಾಗೂ ಸರಿಯೇ! ಕಾಮಾರ್ತರಿಗೆ, ಇದು ಚೇತನ, ಇದು ಅಚೇತನ - ಎಂಬ ವಿವೇಕವು ಹಾರಿಹೋಗಿರುವುದಲ್ಲವೆ? ನನ್ನ ಪ್ರಿಯೆಗೊಂದು ಸಂದೇಶ ತಲುಪಿಸು - ಎಂದು ಮೇಘದೂತದಲ್ಲಿ ಯಕ್ಷನು ಕೇಳಿಕೊಳ್ಳಲಿಲ್ಲವೆ? ಸೀತೆಯ ಅಪಹರಣವಾದಾಗ ಗಿಡಮರಗಳನ್ನೆಲ್ಲ ರಾಮನು ಕೇಳಿಕೊಳ್ಳಲಿಲ್ಲವೆ - ನನ್ನ ಸೀತೆಯನ್ನು ಕಂಡಿರಾ – ಎಂದು? ಹಾಗೆಯೇ ಇದೂ.

ಅಥವಾ ಇಲ್ಲಿ ಗೋಪಿಕೆಯರೂ ಬೇಡ, ಅವರ ನೋವೂ ಬೇಡ; ಏಕೆಂದರೆ ಇದೊಂದು ಗೋಪಿಕೆಯ ಆರ್ತನುಡಿ - ಎಂದೇನೂ ಶ್ಲೋಕದಲ್ಲಿ ಹೇಳಿಲ್ಲವಲ್ಲ? - ಎನ್ನುವುದಾದರೆ, ಭಕ್ತನೊಬ್ಬನ ದೀನವಾದ ಪ್ರಾರ್ಥನೆಯಿದೆಂದುಕೊಳ್ಳಿ. ಅಥವಾ ಲೀಲಾಶುಕನೇ ಭಗವಂತನ ದರ್ಶನವು ತನಗಿನ್ನೂ ಪ್ರಾಪ್ತವಾಗಿಲ್ಲವಲ್ಲಾ! - ಎಂದು ಕಂಗೆಟ್ಟು ತನ್ನ ದುರ್ದಶೆಯನ್ನು ಹೇಳಿಕೊಳ್ಳುತ್ತಿದ್ದಾನೆಂದು ಭಾವಿಸಬಹುದು: ಶೋಚನೀಯವಾದ ಕಷ್ಟಸ್ಥಿತಿಯನ್ನು ಗುಟ್ಟಾಗಿ ತಾನೆ ತಿಳಿಸುವುದು?

ಹೇಗಿಟ್ಟುಕೊಂಡರೂ, ಒಂದು ರಮಣೀಯವಾದ ಭಾವವು ಈ ಶ್ಲೋಕದಲ್ಲಿ ಮೂಡಿಬಂದಿದೆ - ಎನ್ನುವುದರಲ್ಲಿ ಸಂಶಯವೇ ಇಲ್ಲ.

ನಮಗೂ ಅನ್ವಯವಾಗುವ ಇಂತಹ ಮುಗ್ಧ-ಭಾವವೊಂದನ್ನು ಸುಭಗವಾಗಿ ಚಿತ್ರಿಸಿದ್ದಕ್ಕಾಗಿ ನಾವು ಲೀಲಾಶುಕನಿಗೆ ಋಣಿಗಳು.


ಶ್ಲೋಕ ಹೀಗಿದೆ:

ಅಯಿ ಮುರಲಿ! ಮುಕುಂದ-ಸ್ಮೇರ-ವಕ್ತ್ರಾರವಿಂದ-

-ಶ್ವಸನ-ಮಧು-ರಸಜ್ಞೇ ತ್ವಾಂ ಪ್ರಣಮ್ಯಾದ್ಯ ಯಾಚೇ |

ಅಧರ-ಮಣಿ-ಸಮೀಪಂ ಪ್ರಾಪ್ತವತ್ಯಾಂ ಭವತ್ಯಾಂ

ಕಥಯ ರಹಸಿ ಕರ್ಣೇ ಮದ್ದಶಾಂ ನಂದ-ಸೂನೋಃ ||

ಸೂಚನೆ : 17/6/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.