Sunday, June 2, 2024

ಯಕ್ಷ ಪ್ರಶ್ನೆ 92 (Yaksha prashne 92)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 91 ಮೋಹ ಎಂದರೆ ಯಾವುದು?

ಉತ್ತರ - ಧರ್ಮದ ವಿಷಯದಲ್ಲಿ ಸರಿಯಾದ ಅರಿವು ಇಲ್ಲದಿರುವುದು.  

ಮೋಹ ಎಂಬುದು ಮನಸ್ಸಿನ ಅಂಧಕಾರ. ಯಾವುದನ್ನು ಮನಸ್ಸು ಸರಿಯಾಗಿ ತಿಳಿದುಕೊಳ್ಳಬೇಕಿತ್ತೋ ಅದನ್ನು ಹಾಗೆ ತಿಳಿಯದೇ ವಿಪರೀತವಾಗಿ ತಿಳಿಯುವುದು. ಸಾಮಾನ್ಯವಾಗಿ ಪುತ್ರಮೋಹ, ಧನಮೋಹ, ಅಧಿಕಾರದ ಮೋಹ ಎಂದೆಲ್ಲಾ ನಾವುಕೇಳಿದ್ದೇವೆ. ಆದರೆ ಇಲ್ಲಿ ಯಕ್ಷನ ಪ್ರಶ್ನೆಯ ಆಶಯ ಇದಕ್ಕೂ ಮೂಲವಾದುದು. ಮತ್ತು ಇಂಥ ಮೋಹದ ಆವಿರ್ಭಾವಕ್ಕೆ ಕಾರಣೀಭೂತವಾದು ಯಾವುದು ? ಎಂಬುದು. ಧರ್ಮದ ವಿಷಯದಲ್ಲಿ ಅರಿವಿನ ಕೊರತೆ ಅಥವಾ ಅರಿವೇ ಇಲ್ಲದಿರುವುದು ಅಥವಾ ವಿರುದ್ಧವಾದ ಅವಿವೇಕದ ಅರಿವು. ತುಂಬಾ ಜನರಿಗೆ ಧರ್ಮದ ಎಂದರೇನು? ಎಂಬುದಕ್ಕೆ ತುಂಬಾ ಗೊಂದಲವಿದೆ. ಈ ಗೊಂದಲವೂ ಸರಿಯಾದ ಧರ್ಮದ ಅರಿವಿಗೆ ತೊಡಕಾಗಿದೆ. ಅದನ್ನು ಬಿಡಿಸಲು ಧರ್ಮರಾಜನಿಗೆ ಈ ಪ್ರಶ್ನೆಯನ್ನು ಕೇಳಿರಬಹುದು. ಅದಕ್ಕೆ ಧರ್ಮಜನ ಉತ್ತರ ನಿಜಕ್ಕೂ ಹೆಮ್ಮೆ ಪಡುವಂತಹದ್ದು. ಗೊಂದಲದ ನಿವಾರಣೆಗೆ ಅದರ ಮೂಲಕಾರಣವನ್ನು ಉತ್ಪಾಟನೆ ಮಾಡುವುದೇ ಶ್ರೇಷ್ಠವಾದ ವಿಧಾನ. ಅದನ್ನೇ ಇಲ್ಲಿ ಧರ್ಮಜನು ಹೇಳಿದ್ದು. ಹಾಗಾಗಿ ನಾವಿಲ್ಲಿ ಧರ್ಮದ ನಿಜವಾದ ಅರಿವನ್ನು ಪಡೆದರೆ ಅದು ಯಾವ ರೀತಿ ಮೋಹನಾಶಕ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು. 

ಧರ್ಮದ ನಿಜವಾದ ಅರಿವೇ ಇಲ್ಲದಿದ್ದಾಗ ಏನಾಗುತ್ತದೆ? ಶ್ರೀರಂಗ ಮಹಾಗುರುಗಳು ಧರ್ಮದ ಬಗ್ಗೆ ವಿಷಯವನ್ನು ತಿಳಿಸುವಾಗ ಈ ಕಥೆಯನ್ನು ಉದಾಹರಿಸಿದ್ದರಂತೆ. 'ಹಾಲು ನೆತ್ತಿಗೆ ಏರಿ ಮಗು ಸತ್ತಾಗ, ಕುರುಡಗಂಡನಿಗೆ ಬಿಳ್ಳಗಿರುವ ಹಾಲನ್ನು ಪರಿಚಯಿಸುವಾಗ ಬೆಳ್ಳಗಿರುವ ಕೊಕ್ಕರೆಯಂತೆ' ಎಂದಳಂತೆ. ಆಗ ಗಂಡನು "ಕೊಕ್ಕರೆಯಂತಹ ಹಾಲನು ಕುಡಿದರೆ ಮಗು ಸಾಯಿದೆ ಇರುವುದೇ?" ಎಂದನಂತೆ. ಇದೇ ರೀತಿಯಾಗಿದೆ ಧರ್ಮದ ಬಗೆಗಿನ ಇಂದಿನ ವಿವರಣೆ. ಪ್ರತಿಯೊಂದು ವಸ್ತುವಿನ ಅದರದರ ಸಹಜವಾದ ಸ್ಥಿತಿ ಎಂಬ ಅರ್ಥವನ್ನು ಧರ್ಮ ಎಂಬ ಪದವು ಕೊಡುತ್ತದೆ? ಅದರದರ ಸಹಜವಾದ ಸ್ಥಿತಿಯಿಂದ ಜಾರಿದಾಗ ಧರ್ಮ ಕೆಟ್ಟಿತು ಎಂಬ ಪದವು ಬರುತ್ತದೆ. ಆದ್ದರಿಂದ ಒಂದು ಬಗೆಯ ಕಂಡೀಶನ್ ಅಥವಾ ಒಂದು ಸ್ಥಿತಿಯನ್ನೇ 'ಧರ್ಮ' ಎನ್ನುತ್ತಾರೆ. ಹಾಗಾಗಿ ಈ ನಿಸರ್ಗದಲ್ಲಿರುವ ಪ್ರತಿಯೊಂದು ಪದಾರ್ಥದ ಅದರದರ ತನವನ್ನು ನಾವು ಅರಿತಿರಬೇಕಾಗುತ್ತದೆ. ಅಂದರೆ ಯಾವುದೇ ಪದಾರ್ಥವನ್ನು ಸೃಷ್ಟಿಸುವ ಮೊದಲು ಅದಕ್ಕೆ ಯಾವ ಉದ್ದೇಶವನ್ನು ಈಡಿರಿಸುವಂತೆ ಆ ಸೃಷ್ಟಿಕರ್ತನ ಸಂಕಲ್ಪವಿರುತ್ತದೆಯೋ ಅದನ್ನೇ ಧರ್ಮ ಎನ್ನಬಹುದು. ಮತ್ತು ಅದು ಹಾಗೇ ಉಳಿಸಬೇಕಾದರೆ ಅದಕ್ಕೊಂದು ಕಾರ್ಯ ಅಥವಾ ಆಚರಣೆ ಬೇಕಾಗುತ್ತದೆ. ಅದನ್ನೂ ಧರ್ಮ ಎಂದೇ ಕರೆಯುತ್ತಾರೆ. ಅಂದರೆ ಯಾವ ಸ್ಥಿವಿಶೇಷವನ್ನು ಉಳಿಸಬೇಕಾದರೆ ಯಾವ ಬಗೆಯ ಸಾಧಸಂಪತ್ತಿಗಳು ಯಾವ ಯಾವ ಎಷ್ಟು ? ಹೇಗೆ? ಇತ್ಯಾದಿಯಾದ ಪ್ರಮಾಣಸಮ್ಮತವಾದ ವಿಷಯ ಬರುವುದೋ ಅದನ್ನು ಧರ್ಮ ಎನ್ನಬೇಕಾಗುತ್ತದೆ. ಇಂತಹ ಅರಿವು ಉಳ್ಳವನನ್ನು 'ಧರ್ಮಜ್ಞ' ಎಂದು ಕರೆಯುತ್ತಾರೆ. ಇಂತವರಿಗೆ ಯಾವ ಬಗೆಯ ಮೋಹಕ್ಕೂ ಆಸ್ಪದವಿರುವುದಿಲ್ಲ. ಅವನು ಮಾಡುವ ಪ್ರತಿಯೊಂದು ಕಾರ್ಯವೂ ಕಾರ್ಯಕಾರಣಭಾವ ಸಂಗತವಾಗಿಯೇ ಇರುತ್ತದೆ. ಇಲ್ಲಿ ಯಾವುದೇ ಕಾರಣಕ್ಕೂ ಮೋಹವೆಂಬುದು ಬರಲು ಸಾಧ್ಯವೇ ಇಲ್ಲ ಎಂಬುದು ಧರ್ಮಜ್ಞರ ಮಾತಾಗಿದೆ.  

ಸೂಚನೆ : 2/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.