Sunday, January 29, 2023

ಯಕ್ಷಪ್ರಶ್ನೆ - 23 (Yaksha Prashne - 23)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 22 ಸಂತತಿಯನ್ನು ಇಚ್ಛಿಸುವವರಿಗೆ ಉತ್ತಮ ಫಲ ಯಾವುದು? 

ಉತ್ತರ -  ಪುತ್ರ

ಈ ಸೃಷ್ಟಿಯು ಮುಂದುವರಿಯಬೇಕಾದರೆ ಸಂತತಿಯಾಗಬೇಕು. ಸಂತತಿಯಾಗಬೇಕಾದರೆ ಗಂಡು ಸಂತತಿ ಮುಖ್ಯವೋ? ಅಥವಾ ಹೆಣ್ಣು ಸಂತತಿ ಮುಖ್ಯವೋ? ಎಂದು ಪ್ರಶ್ನೆ ಬಂದರೆ ಅಲ್ಲಿ ಎರಡೂ ಮುಖ್ಯವೇ. ಯಾವುದು ಒಂದು ಇಲ್ಲದಿದ್ದರೂ ಸಂತತಿಯು ಮುಂದುವರಿಯಲಾರದು. 'ಸಂತತಿ' ಎಂಬ ಶಬ್ದಕ್ಕೆ ಅರ್ಥವೇ ವಿಸ್ತಾರವಾಗುವುದು ಎಂದು. ಸೃಷ್ಟಿ ಮುಂದುವರಿಯಲು ಗಂಡು ಎಷ್ಟು ಮುಖ್ಯವೋ ಹೆಣ್ಣೂ ಅಷ್ಟೇ ಮುಖ್ಯ. ಅದರಲ್ಲಿ ಯಾವುದು ಉತ್ತಮವಾದುದು? ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲವಲ್ಲವೇ? ಇದೊಂದು ಪ್ರಶ್ನೆಯೇ ಅಲ್ಲ. ಅಥವಾ ಉತ್ತರವೇ ಇಲ್ಲದ ಪ್ರಶ್ನೆಯೊಂದನ್ನು ಯಕ್ಷನು ಧರ್ಮರಾಜನಿಗೆ ಕೇಳುತ್ತಿರುವುದು ಅನುಚಿತವೇ? ಹಾಗಾದರೆ ಈ ಪ್ರಶ್ನೆಯ ಹಿಂದಿರುವ ತಾತ್ಪರ್ಯವಾದರೂ ಏನು? ಹಾಗಾದರೆ ಗಂಡಿಗೆ ಸಂತತಿಯಲ್ಲಿ ಪ್ರಾಧಾನ್ಯ ಬರಲು ಕಾರಣವಾದರೂ ಏನು ಎಂಬುದು ಈ ಉತ್ತರದಲ್ಲಿ ಅಡಕವಾಗಿದೆ. 

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಹುಟ್ಟಿತೆಂದರೆ ಅವಳನ್ನು ಬೇರೊಂದು  ಕುಟುಂಬಕ್ಕೆ ದಾನಮಾಡಿ ಕೊಡುತ್ತೇವೆ. ಅಂದರೆ ಅ ಹೆಣ್ಣು ಮಗುವು ಬೇರೊಂದು ಕುಟುಂಬವನ್ನು ಬೆಳೆಸಲು ಕಾರಣವಾಗುವುದು. ಅದೇ ಗಂಡು ಮಗು ಹುಟ್ಟಿತೆಂದರೆ ಆ ಮಗುವಿನಿಂದ ಅದೇ ಕುಟುಂಬದ ವಿಸ್ತಾರವು ಆಗುತ್ತದೆ. ಅಲ್ಲಿ ಹುಟ್ಟುವ ಪ್ರತಿಯೊಂದು ಗಂಡಸಿಗೂ ಆ ಮನೆಯ ಸಂತತಿಯನ್ನು ಬೆಳೆಸುವ ಅವಕಾಶವಿರುತ್ತದೆ. ಇದನ್ನೇ 'ಗೋತ್ರಾಭಿವೃದ್ಧಿ' ಎಂದೂ  ಹೇಳುತ್ತಾರೆ. ನಾವೆಲ್ಲರೂ  ವಸಿಷ್ಠ, ಭಾರದ್ವಾಜ ಮೊದಲಾದ  ಋಷಿಕುಲದಲ್ಲಿ ಹುಟ್ಟಿದವರಾಗಿರುತ್ತೇವೆ. ಆ ಕುಲದಲ್ಲಿ ಹುಟ್ಟಿದ ಪ್ರತಿಯೊಂದು ಗಂಡು ಮಗುವಿನಿಂದಲೂ ಆ ಗೋತ್ರವೇ ಬೆಳೆಯುತ್ತದೆ. ಅದೇ ಹೆಣ್ಣುಮಗು ಹುಟ್ಟಿದರೆ ಇನ್ನೊಂದು ಕುಲಕ್ಕೆ ಕೊಡುವ ಸಂಪ್ರದಾಯವಿರುತ್ತದೆ. ಯಾವ ಗೋತ್ರದಲ್ಲಿ ಹುಟ್ಟಿರುತ್ತಾಳೋ ಆ ಗೋತ್ರವು ಪರಿವರ್ತನೆಗೊಂಡು, ಕೊಟ್ಟ ಕುಲದ ಗೋತ್ರವು ಆ ಹೆಣ್ಣಿಗೆ ಬರುತ್ತದೆ. ಈ ನೇರದಲ್ಲಿ ಸಂತತಿ ಬೆಳೆಯಲು ಗಂಡು ಮಗು ಬೇಕು ಎನ್ನುವ ಮಾತು ಬಂದಿದೆ. ಆದರೆ ಅಲ್ಲಿ ಹೆಣ್ಣಿಗೆ ಪ್ರಾಧಾನ್ಯವಿಲ್ಲವೆಂದಲ್ಲ. ಹೆಣ್ಣು ಇಲ್ಲದಿದ್ದರೆ ಈ ಕುಲದ ಮಗನಿಗೆ ಎಲ್ಲಿಯ ಹೆಣ್ಣು ಸಿಗುತ್ತದೆ? ಆದ್ದರಿಂದ ಹೆಣ್ಣೂ ಬೇಕು. ಗಂಡು ಸಂತತಿಯವೃದ್ಧಿಗೆ ಬೇಕೇ ಬೇಕು. ಎಂಬುದು ಇದರ ತಾತ್ಪರ್ಯವಾಗಿದೆ. 

'ಪುತ್ರ' ಎಂಬ ಶಬ್ದಕ್ಕೆ 'ಪುತ್' ಎಂಬ ನರಕದಿಂದ ಪಾರುಮಾಡುವವನು ಎಂಬ ಅರ್ಥವನ್ನು ಹೇಳುತ್ತಾರೆ. ಪ್ರತಿಯೊಬ್ಬ ಮಾನವನೂ ತನ್ನ ಮೇಲಿನ ಸ್ತರಗಳನ್ನು  ಪಡೆಯಬೇಕು. ಅವುಗಳಲ್ಲಿ  ಒಂದು ಪಿತೃಲೋಕ. ಯಾರು ಪುತ್ರನನ್ನು ಪಡೆಯುವುದಿಲ್ಲವೋ ಅಂತಹವನಿಗೆ ಮರಣಾನಂತರ ಶ್ರಾದ್ಧ, ತರ್ಪಣ ಮೊದಲಾದ ವಿಧಾನಗಳು ಯಾವುದೂ ನಡೆಯುವುದಿಲ್ಲ. ಮನುಷ್ಯಲೋಕದಲ್ಲಿ ಕೊಡುವ ಶ್ರಾದ್ಧ-ತರ್ಪಣಾದಿಗಳಿಂದ ತೀರಿಕೊಂಡ ಪಿತೃಗಳಿಗೆ ಪಿತೃಲೋಕವು ಪ್ರಾಪ್ತವಾಗುತ್ತದೆ. ಗಂಡು ಸಂತತಿಯೇ ಇಲ್ಲದಿದ್ದರೆ ಈ ಕಾರ್ಯವು ಅನ್ಯಗೋತ್ರದವಳಾದ ಮಗಳಿಂದ ಅಸಂಭವವೆಂಬದು ನಮ್ಮ ಧರ್ಮಶಾಸ್ತ್ರದ ನಿರ್ಣಯವಾಗಿದ್ದರಿಂದ ಗಂಡು ಸಂತತಿಗೆ ಹೆಚ್ಚಿನ ಪ್ರಾಶಸ್ತ್ಯ ದೊರಕಿದೆ ಎಂಬುದು ಇಲ್ಲಿನ ರಹಸ್ಯ. 

ಸೂಚನೆ : 29/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ​ - 27 ಧೈರ್ಯಧನಾ ಹಿ ಸಾಧವಃ (Astakshara Darshana 27 Dhairyadhana Hi Sadhavah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕನ್ನಡದ ಸಾಹಿತ್ಯಪ್ರಕಾರವೊಂದೆನಿಸುವ 'ಕಾದಂಬರಿ'ಯ ಮೂಲ, ಒಂದು ಸಂಸ್ಕೃತ ಕೃತಿ: ಬಾಣಭಟ್ಟನೆಂಬ ಸಂಸ್ಕೃತಕವಿಯ ಪ್ರಸಿದ್ಧ ಗದ್ಯಕಾವ್ಯವಾದ 'ಕಾದಂಬರೀ'. ಆ ಕೃತಿಯಲ್ಲಿಯದೇ ಮೇಲಿನ ಮಾತು. ಪುಂಡರೀಕನೆಂಬ ತಪಸ್ವಿಯು ಕಾಮಪರವಶನಾದಾಗ ಆತನನ್ನು ಸರಿದಾರಿಗೆ ತರಲೆಂದು ಪ್ರಯತ್ನಿಸುತ್ತಾ ಆತನ ಮಿತ್ರನಾಡಿದ ನುಡಿಯಿದು. "ಧೈರ್ಯವೇ ಸಾಧುಗಳ ಸಂಪತ್ತು" ಎಂಬ ಎಚ್ಚರಿಕೆಯ ಮಾತನ್ನು ಇಲ್ಲಿ ಹೇಳಿದೆ.

ಏನು ಈ ಮಾತಿನ ಅರ್ಥ? ಯಾರಾದರೂ ಪುಕ್ಕಲರಾಗಿದ್ದರೆ ಅಂತಹವರಿಗೆ "ಧೈರ್ಯ ಬೇಕಯ್ಯಾ, ಹೆದರಬಾರದಯ್ಯಾ" ಎನ್ನುವುದು ಸರಿ. ಕಾಡಿನಲ್ಲಿ ತಪಸ್ಸುಮಾಡಿಕೊಂಡಿರುವವರಿಗೆ ಈ ಮಾತೇ? ಭಯವೆಂದೊಡನೆ ಜೀವಕ್ಕೆ ಕುತ್ತೋ ಆಸ್ತಿಗೆ ಸಂಚಕಾರವೋ ಬಂದಿರಬೇಕೆಂದಂದುಕೊಳ್ಳುವೆವಲ್ಲವೇ? ಎಂದೇ 'ವ್ಯಾಘ್ರಭಯ', 'ಚೋರಭಯ' ಎಂಬ ವ್ಯಾಕರಣದ ಪ್ರಸಿದ್ಧೋದಾಹರಣೆಗಳೇ ಕಣ್ಣ ಮುಂದೆ ಬರತಕ್ಕವು.

ತಪಸ್ವಿಗಳು ನಿಃಸ್ವರು - ಎಂದರೆ ಸ್ವತ್ತು ಎಂಬುದೇ ಇಲ್ಲದವರು. ತಪೋವನದಲ್ಲಿ ಗುಡಿಸಿಲಿನಲ್ಲಿ ವಾಸಮಾಡುವವರಿಗೆ ಯಾವ ಆಸ್ತಿ? ತಪಸ್ವಿಗಳ ದರ್ಭೆ-ಕಮಂಡಲುಗಳ ಮೇಲೆ ಕಣ್ಣುಹಾಕುವ ಕಳ್ಳರುಂಟೇ? ಕಾಡುಗಳಲ್ಲೇನು ಕಳ್ಳಕಾಕರ ಭಯವೇ? ಕಳ್ಳರಿಗೆ ಬೇಕಾಗುವ ಬೇರಾವುದಾದರೂ ವಸ್ತು ಇವರಲ್ಲುಂಟೇ? ಯಾವುದೂ ಇಲ್ಲ. ಇನ್ನು ಕ್ರೂರಪ್ರಾಣಿಗಳೋ, ಅವುಗಳಿಂದ ಭಯವಿರಲಾರದ ಎಡೆಗಳಲ್ಲೇ ತಪೋವನಗಳು ತಲೆಯೆತ್ತುವುದು. ಹಾಗಿರಲು ಆ ಭಯವೂ ಅವರಿಗಿರದು. ಹಾಗಿದ್ದರೆ ಏನಿದು ಧೈರ್ಯೋಪದೇಶ?

ಯಾರಿಗೆ ಜ್ಞಾನವೇ ಧನವೋ ಅವರನ್ನು ಜ್ಞಾನಧನರೆನ್ನುತ್ತೇವೆ. ಹಾಗೆಯೇ ವಿದ್ಯೆ, ತಪಸ್ಸು, ಧರ್ಮಗಳನ್ನೇ ಹಣವನ್ನಾಗಿ ಕಾಣುವವರನ್ನು ವಿದ್ಯಾಧನ, ತಪೋಧನ, ಧರ್ಮಧನ - ಎಂಬ ಪದಗಳಿಂದ ಕರೆಯುವುದುಂಟು. ಇಲ್ಲಿ ತಪಸ್ವಿಗಳನ್ನು ಧೈರ್ಯಧನರೆಂದು ಕರೆದಿದೆ. ಏನು ಹಾಗೆಂದರೆ?

ಶೂರ-ಧೀರ-ವೀರರುಗಳಲ್ಲಿಯ ಭಾವವೇ ಶೌರ್ಯ-ಧೈರ್ಯ-ವೀರ್ಯಗಳೆನಿಸತಕ್ಕವು. ಅಲ್ಲಿಗೆ, ಧೀರರಲ್ಲಿರುವುದೇ ಧೈರ್ಯವಾದರೆ, ಧೀರನಾರು? - ಎಂಬ ಪ್ರಶ್ನೆ ತಲೆದೋರುವುದೇ ಸರಿ. ಈ ಪ್ರಶ್ನೆಗೆ ಕವಿಯೂ ಜ್ಞಾನಿಯೂ ಆದ ಕಾಳಿದಾಸನ ಅದ್ಭುತವಾದ ಉತ್ತರವಿದೆ. ಅಲ್ಲಿಯ ಪ್ರಸಂಗವೂ ತೀರ ಬೇರೆಯೇನಲ್ಲ: ಶಿವ ತಪಸ್ಸಿಗೆ ಕುಳಿತುಕೊಳ್ಳುವ ಸಂನಿವೇಶ; ಆತನ ಸೇವೆಗೆಂದು ಇನ್ನೂ ಕನ್ಯೆಯಾದ ಪಾರ್ವತಿಯು ಬಂದಿದ್ದಾಳೆ. ತಪಸ್ಸಿಗೆಂದು ಹೊರಟವರಿಗೆ/ಕುಳಿತವರಿಗೆ ನಾರಿಯರಿಂದಾಗಬಹುದಾದ ವಿಘ್ನಕ್ಕೆ ವಿಶ್ವಾಮಿತ್ರಾದಿಗಳ ಕಥೆಗಳ ಸಾಕ್ಷಿಯೇ ಉಂಟಲ್ಲವೇ? ಹೀಗಿದ್ದರೂ ಸಹ  ಅವಳ ಸೇವೆಯನ್ನು ಶಿವನು ನಿಷೇಧಿಸಲಿಲ್ಲ. ಏಕೆಂದರೆ ಆತನು ಧೀರ - ಎನ್ನುತ್ತಾನೆ ಕಾಳಿದಾಸ. ಸಂದರ್ಭದಲ್ಲೇ ಧೀರನಾರು? - ಎಂಬುದರ ಸೊಗಸಾದ ವ್ಯಾಪಕವಾದ ಲಕ್ಷಣ(definition)ವನ್ನೂ ಕೊಡುತ್ತಾನೆ.

ಎಲ್ಲವೂ ಪ್ರಕಾರವಾಗಿರುವಾಗ ಕೆಲಸಗಳು ಸುಸೂತ್ರವಾಗಿ ನಡೆಯುವವಷ್ಟೆ. ಆದರೆ ಅಲ್ಲಿ ಬದಲಾವಣೆಯುಂಟಾದರೆ, ಬದಲಾವಣೆಯು ಸ್ವಾಗತಾರ್ಹವಲ್ಲವಾದರೆ - ಎಂದರೆ ಲಕ್ಷ್ಯಸಾಧನೆಗೆ ಪೋಷಕವಲ್ಲವಾದರೆ - ವಿಕಾರವೆಂದೇ ಅದನ್ನು ಕರೆಯಬೇಕು. ನಮ್ಮ ಮನಸ್ಸೇ ಶಾಂತಿ-ಪ್ರಸನ್ನತೆಗಳಿಂದ ಕೂಡಿದ್ದರೆ ಅದು ಪ್ರಕಾರ. ಮನಸ್ಸಿನಲ್ಲಿ ಬಗ್ಗಡಗಳು ತಲೆದೋರಿದರೆ ಅದು ವಿಕಾರ. ಲೋಭ-ಮಾತ್ಸರ್ಯ ಮುಂತಾದುವಿದ್ದಲ್ಲಿ ವಿಕಾರವೇ.

ವಿಕಾರಗಳು ಸುಮ್ಮಸುಮ್ಮನೆ ಆಗಿಬಿಡುವುದಿಲ್ಲ. ಕಾರಣವಿಲ್ಲದೆ ಯಾವ ಕಾರ್ಯವಾದೀತು? ಕಾರಣವೆಂದರೂ ಹೇತುವೆಂದರೂ ಒಂದೇ. ವಿಕಾರಕ್ಕೆ ಕಾರಣಭೂತವಾದದ್ದು ವಿಕಾರಹೇತು. ವಿಕಾರಹೇತುವೇ ಇಲ್ಲದಿದ್ದಾಗ ವಿಕಾರವಾಗಲಿಲ್ಲವೆನ್ನುವುದು ಅತಿಶಯದ ನಡೆಯೇನಲ್ಲ. ಆದರೆ, ವಿಕಾರಹೇತುಗಳಿದ್ದೂ ವಿಕಾರವೇರ್ಪಡಲಿಲ್ಲವೆಂದರೆ ಅದುವೇ ನಿಜವಾದ ಅಚ್ಚರಿಯ ಹೆಚ್ಚುಗಾರಿಕೆ. ಅಂತಹ ನಿರ್ವಿಕಾರತೆಯುಳ್ಳವನನ್ನೇ ಧೀರನೆನ್ನುವುದು - ಎನ್ನುತ್ತಾನೆ ಕಾಳಿದಾಸ.

ಭಯವೂ ಒಂದು ವಿಕಾರವೇ. ಎಂದೇ, ಭಯಕ್ಕೆ ಕಾರಣವಿದ್ದೂ ಭಯಗೊಳ್ಳದವನು ಧೀರ. ಭಯಂಕರನಾದ ಅಂಗುಲಿಮಾಲನು ಎದುರ್ಗೊಂಡಾಗ ಹೆದರದೆ ನಿಂತ ಬುದ್ಧನು ಧೀರ. ಕಾಳಿದಾಸನಿತ್ತ ಲಕ್ಷಣದಂತೆ ನೋಡುವುದಾದರೆ, ಧೀರನೆಂಬುದು ಭಯವಿಲ್ಲದವನಿಗೆ ಮಾತ್ರ ಅನ್ವಯಿಸುವ ಪದವಲ್ಲ. ಯಾವುದೇ ವಿಕಾರವಿರಲಿ, ಅದಕ್ಕೊಳಪಡದವನನ್ನು ಧೀರನೆನ್ನಬಹುದು. ಕಾಮ-ಕ್ರೋಧಗಳೂ ವಿಕಾರಗಳೇ. ಕಾಮವನ್ನೋ ಕ್ರೋಧವನ್ನೋ ಉಕ್ಕಿಸುವ ಸಂನಿವೇಶಗಳಿದ್ದೂ, ಅವುಗಳಿಗೆ ಪಕ್ಕಾಗದವರೂ ಅಂತೆಯೇ ಧೀರರೇ ಸರಿ.

ಕಾಮಗಳ ಹಿಂದೆ ಓಡುವವರನ್ನು 'ಬಾಲ'ರೆಂದೂ, ಅದಕ್ಕೆ ಪ್ರತಿಯಾಗಿ ಪ್ರತ್ಯಗಾತ್ಮನತ್ತ ಸಾಗುವವನನ್ನು 'ಧೀರ'ನೆಂದೂ ಕಠೋಪನಿಷತ್ತು ಚಿತ್ರಿಸುತ್ತದೆ. ಬುದ್ಧನಿಗಿಂತಲೂ ಪ್ರಾಚೀನವೆನಿಸುವ ಉಪನಿಷತ್ಸಾಹಿತ್ಯದಲ್ಲಿಯ ಧೀರಕಿಶೋರನಾದ ನಚಿಕೇತನ ನಡೆ, ಹಾಗೂ ಕಾಳಿದಾಸನಿತ್ತ ಧೀರಲಕ್ಷಣ – ಇವುಗಳ ಉದಾತ್ತತೆಯನ್ನು ಶ್ರೀರಂಗಮಹಾಗುರುಗಳು ಮನಮುಟ್ಟುವಂತೆ ಹೇಳುತ್ತಿದ್ದರು. ಸಾಕ್ಷಾದ್ ಯಮನೇ ಹತ್ತುಹಲವು ಸಂಪತ್ತು-ಸವಲತ್ತುಗಳ ಪ್ರಲೋಭನೆಗಳನ್ನೊಡ್ಡಿದರೂ ಅವಿಚಲಿತ-ಚಿತ್ತನಾದ ಕೆಚ್ಚಿನ ನಚಿಕೇತನು ಮೇಲ್ನೋಟಕ್ಕೆ ಎಳೆಯನಾದರೂ ಒಳನೋಟಕ್ಕೆ ಪ್ರಬುದ್ಧನೇ ಸರಿ!

ಇಂತಹ ಧೈರ್ಯಧನರೇ ನಮಗೆ ಸ್ಫೂರ್ತಿಪ್ರದರಾದರೆ ಚೆನ್ನಲ್ಲವೇ?

ಸೂಚನೆ: 29/1/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.


ವ್ಯಾಸ ವೀಕ್ಷಿತ - 23 ಬಕಾಸುರನನ್ನು ಕಡುಕೆರಳಿಸಿದ ಭೀಮ (Vyaasa Vikshita - 23 Bakasuranannu Kadukeralisida Bhima)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾತ್ರಿ ಕಳೆಯಿತು. ಅನ್ನವನ್ನು ತೆಗೆದುಕೊಂಡು ನರಭಕ್ಷಕನಲ್ಲಿಗೆ ನಡೆದ, ಭೀಮ. ಆ ಬಕನ ಕಾಡನ್ನು ಸೇರಿದವನೇ ಬಲಶಾಲಿಯಾದ ಭೀಮಸೇನನು ರಾಕ್ಷಸನನ್ನು ಹೆಸರುಹಿಡಿದೇ ಕರೆದನು. (ದೊಡ್ಡ ಸ್ಥಾನದಲ್ಲಿರುವವರನ್ನು ಯಾರಾದರೂ ಹೆಸರು ಹಿಡಿದು ಕರೆಯುವುದುಂಟೇ? ಅವರಿಗದು ಕೋಪವನ್ನು ತರದೇ? ಹೌದು, ಇಲ್ಲಿ ಬಕನನ್ನು ಹಾಗೆ ಕೆರಳಿಸಲೆಂದೇ ಭೀಮನು ಹಾಗೆ ಮಾಡಿರುವುದೂ.) ಆ ರಾಕ್ಷಸ ನಿಗೆಂದು ತಂದಿದ್ದ ಅನ್ನವನ್ನು ತಾನೇ ಭಕ್ಷಿಸಲಾರಂಭಿಸಿದನು. (ಏನು? ತನ್ನ ಅನ್ನವನ್ನು ಮತ್ತೊಬ್ಬನು ತಿನ್ನುವುದೇ? ಮುಟ್ಟುವುದೂ ಅಕ್ಷಮ್ಯ – ಎಂಬ ಧೋರಣೆ ರಾಕ್ಷಸನದು. ಚೆನ್ನಾಗಿ ಹಸಿದವ ಶೀಘ್ರಕೋಪಿಯೇ!  ಬಂಡಿ ಅನ್ನವನ್ನು ಬಕಬಕ ತಿನ್ನುವ ಬಕಾಸುರನಿಗೆ ಇದೋ ಮತ್ತೊಂದು ಕೆರಳಿಕೆ!) ಭೀಮನ ಮಾತಿನಿಂದ ರೊಚ್ಚಿಗೆದ್ದ ರಾಕ್ಷಸ, ಭೀಮನಿದ್ದಲ್ಲಿಗೆ ಬಂದ.

ಹೇಗಿದ್ದ ಆತ? ಮಹಾಕಾಯ, ಕೆಂಗಣ್ಣ. ಕಣ್ಣು ಮಾತ್ರವೇನು? ಆತನ ಗಡ್ಡ ಮೀಸೆಗಳೂ ತಲೆಗೂದಲೂ ಕೆಂಬಣ್ಣದವೇ! ಎಂದೇ ಭಯಂಕರ! ಶಂಕುವಿನಂತಿರುವ ಕಿವಿಗಳು; ಕಿವಿಗಳ ಪರ್ಯಂತದ ಬಾಯಿ! ಗಂಟಿಕ್ಕಿದ ಹುಬ್ಬುಗಳು. ತುಟಿ ಕಚ್ಚಿಕೊಂಡು ವೇಗವಾಗಿ ಬಂದ ಆತನಾದರೂ ಭೂಮಿಯನ್ನೇ ಸೀಳಿಬಿಡುವವನಂತೆ ತೋರುತ್ತಿದ್ದ! ಭೀಮಸೇನನೋ ಆತನಿಗೆ ಮೀಸಲಾದ ಅನ್ನವನ್ನು ತಾನೇ ತಿನ್ನುತ್ತಿದ್ದನಷ್ಟೆ? ಅದನ್ನು ಕಂಡು ರೊಚ್ಚಿಗೆದ್ದ ರಕ್ಕಸ ಕಣ್ಣಗಲಿಸಿ ಹೀಗೆಂದ: ನನಗಾಗಿ ವ್ಯವಸ್ಥೆ ಮಾಡಿಡಲಾದ ಅನ್ನವನ್ನು ನಾನು ನೋಡುತ್ತಿರುವಂತೆಯೇ ತಿನ್ನುತ್ತಿರುವ ಈತನಾವನು? ಯಮನ ಮನೆಗೆ ಹೋಗಬಯಸುತ್ತಿರುವ ದುರ್ಬುದ್ಧಿಯವ ಯಾವನಿವ?


ಅದನ್ನು ಕೇಳಿದ ಭೀಮಸೇನ ನಗುನಗುತ್ತಲೇ ರಾಕ್ಷಸನತ್ತ ಮುಖವನ್ನು ಸಹ ಮಾಡದೆ (ಅರ್ಥಾತ್, ಅವನನ್ನು ಕಡೆಗಣಿಸಿ) ಭಕ್ಷಿಸುವುದನು ಮುಂದುವರಿಸುತ್ತಲೇ ಇದ್ದ! ಭಯಂಕರವಾದ ಧ್ವನಿಯನ್ನು ಮಾಡುತ್ತಾ ತನ್ನೆರಡೂ ಕೈಗಳನ್ನೂ ಮೇಲೆತ್ತಿಕೊಂಡು, ಭೀಮಸೇನನತ್ತ ಆ ನರಭಕ್ಷಕ ಆತನನ್ನು ಕೊಲ್ಲಲೆಂದು ಧಾವಿಸಿದ. ಆದರೂ ರಕ್ಕಸನನ್ನು ಲೆಕ್ಕಿಸದೇ, ತಿರಸ್ಕಾರದೊಂದಿಗೇ ಆತನನ್ನು ಗಮನಿಸಿಕೊಳ್ಳುತ್ತಾ, ಶತ್ರುವೀರಸಂಹಾರಿಯಾದ ಭೀಮ ಆತನ ಅನ್ನವನ್ನು ತಿನ್ನುತ್ತಲೇ ಇದ್ದ. ರಾಕ್ಷಸನಿಗೋ ಅಮರ್ಷ! ತನ್ನೆರಡೂ ಕೈಗಳಿಂದ ಭೀಮಸೇನನ ಬೆನ್ನಿಗೆ ಹಿಂದಿನಿಂದ ಗುದ್ದಿದ.


ಬಲಶಾಲಿಯಾದ ರಕ್ಕಸನು ಸಿಕ್ಕಾಪಟ್ಟೆ ಇಕ್ಕಿದರೂ ರಾಕ್ಷಸನನ್ನು ಕಣ್ಣೆತ್ತಿಯೂ ನೋಡದೆ ತಿನ್ನುತ್ತಲೇ ಇದ್ದ, ಭೀಮ. ಮತ್ತೂ ಹೆಚ್ಚಾಗಿ ಕೋಪಗೊಂಡ ಬಲಿಷ್ಠ ರಾಕ್ಷಸ, ಭೀಮನಿಗೆ ಹೊಡೆಯಲೆಂದು ಮರವೊಂದನ್ನು ತಂದು ಭೀಮನತ್ತ ಧಾವಿಸಿದ. ಮಹಾಬಲನಾದ ಭೀಮನು ಏತನ್ಮಧ್ಯೇ ಸಾವಕಾಶವಾಗಿ ಆತನ ಅನ್ನವನ್ನು ತಿಂದವನಾಗಿ, ಕೈ-ಬಾಯಿಗಳನ್ನು ತೊಳೆದುಕೊಂಡು, ಹರ್ಷಾತಿರೇಕದಿಂದ ಯುದ್ಧಕ್ಕೆ ನಿಂತ! ಕ್ರೋಧದಿಂದ ಆತನೆಸೆದ ಮರವನ್ನು ವೀರ್ಯಶಾಲಿ ಭೀಮನಾದರೂ  ನಸುನಗುತ್ತಲೇ ಎಡಗೈಯಿಂದಲೇ ಹಿಡಿದುಕೊಂಡ. (ಯಾರೇ ಆಗಲಿ, ತಾನು ಒಬ್ಬರನ್ನು ಬೈಯುತ್ತಿರುವಾಗ, ಬೈಸಿಕೊಳ್ಳುತ್ತಿರುವವರು ಮರುಮಾತಾಡದೆ ತಲೆ ತಗ್ಗಿಸಿ ನಿಂತಿರಬೇಕೆಂಬ ನಿರೀಕ್ಷೆಯಿರುವುದು; ಬದಲಾಗಿ, ಬೈಸಿಕೊಂಡವರು ನಗುತ್ತಿದ್ದರೆ ಇನ್ನಷ್ಟು ಕೆರಳುವುದಷ್ಟೇ? ತಾನೇ ಬಲಿಷ್ಠನೆಂದುಕೊಂಡವನಿಗಂತೂ (ಹಾಗೆಂದು ಬೇರೆಯವರಿಂದ ಹೊಗಳಿಸಿಕೊಂಡವನಿಗಂತೂ), ಕೆರಳಿಕೆ ಮತ್ತೂ ಹೆಚ್ಚೇ! ಹಾಗಾಗಲೆಂಬುದೇ ಇಲ್ಲಿ ಭೀಮನ ಆಶಯವೂ).

 

ಅಂತೂ, ಸಿಕ್ಕಾಪಟ್ಟೆ ಸೊಕ್ಕಿದ್ದ ರಕ್ಕಸನನ್ನು ಕೆರಳಿಸಿ ಕೆಂಡವಾಗಿಸಿ ಕೆಡವುವುದೇ ಭೀಮನ ಯೋಜನೆಯಾಗಿತ್ತು.

ಸೂಚನೆ : 29/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.