Sunday, March 31, 2024

ಯಕ್ಷ ಪ್ರಶ್ನೆ 83(Yaksha prashne 83)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 82 'ಕ್ಷಮೆ' ಎಂದರೇನು ?

ಉತ್ತರ - ದ್ವಂದ್ವಸಹಿಷ್ಣುತೆ.  

ಈ ಹಿಂದಿನ ಪ್ರಶ್ನೆಗೂ ಈ ಪ್ರಶ್ನೆಗೂ ಒಂದು ಕಾರ್ಯಕಾರಣಭಾವಸಂಬಂಧವಿದೆ. ಮನಸ್ಸಿನ ನಿಗ್ರಹದಿಂದ ಉಂಟಾಗುವ ಪರಿಣಾಮವೇ 'ಕ್ಷಮೆ'. ಕ್ಷಮೆ ಎಂಬ ಪದಕ್ಕೆ ಅರ್ಥ ಏನು ? ಎಂಬ ಸಾಮಾನ್ಯ ಜಿಜ್ಞಾಸೆಯನ್ನು ಇಲ್ಲಿ ಯಕ್ಷನು ಧರ್ಮರಾಜನ ಮುಂದಿಡುತ್ತಾನೆ. ಅದಕ್ಕೆ 'ದ್ವಂದ್ವ ಸಂಹಿಷ್ಣುತೆ' ಎಂಬ ಉತ್ತರವನ್ನು ನೀಡುತ್ತಾನೆ ಧರ್ಮಜ. ದ್ವಂದ್ವ ಎಂದ ಎರಡು ಬಗೆ - ಎರಡು ಪ್ರಕಾರ. ಪರಸ್ಪರ ವಿರುದ್ಧಧರ್ಮಗಳು ಎಂಬುದು ಇಲ್ಲಿನ ಅರ್ಥ. ಉದಾಹರಣೆಗೆ ಶೀತ-ಉಷ್ಣ, ಸುಖ-ದುಃಖ, ಲಾಭ- ಅಲಾಭ, ಜಯ-ಅಪಜಯ ಮುಂತಾದವುಗಳು. ಒಂದೇ ವ್ಯಕ್ತಿಯು ಇಂತಹ ವಿರುದ್ಧವಾದ ಸಂದರ್ಭವನ್ನು ಅನುಭವಿಸುವಂತಾದರೆ ಅದರ ಅನುಭವವನ್ನು ಪಡೆಯುವಂತಹ ಸಾಮರ್ಥ್ಯವನ್ನು ದ್ವಂದ್ವಸಹಿಷ್ಣುತೆ ಎಂದು ಕರೆಯುತ್ತಾರೆ. ಈ ಎರಡು ವಿರುದ್ಧವಾದ ಅನುಭವಗಳನ್ನು ಅನುಭವಿಸುವುದು ಏಕಕಾಲದಲ್ಲಿ ಅಲ್ಲ. ಭಿನ್ನಕಾಲದಲ್ಲಿ. ಆದರೆ ಅವೆರಡನ್ನೂ ಒಂದೆ ಸ್ಥಾನದಲ್ಲಿ ಕಾಣುವುದು ಕಷ್ಟಸಾಧ್ಯ. ಇದು ಮನೋನಿಗ್ರಹದಿಂದ ಮಾತ್ರ ಸಾಧ್ಯ. ಅಂದರೆ ಎರಡನ್ನು ಅನುಭವಿಸುವಾಗಲೂ ಆ ವ್ಯಕ್ತಿಯಲ್ಲಿ ಯಾವುದೇ ವಿಕಾರವನ್ನು ಕಾಣಲು ಸಾಧ್ಯವಿಲ್ಲ ಎಂದು ತಾತ್ಪರ್ಯ. ಸುಖವು ಬಂದಾಗ ಹಿಗ್ಗುವುದು, ದುಃಖವು ಬಂದಾಗ ಕುಗ್ಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಜೀವನದಲ್ಲಿ ಯಾವಾಗಲಾದರೂ ಕಷ್ಟ ಬಂದರೆ ಅದನ್ನೇ ಶಾಶ್ವತ ಎಂದು ಭಾವಿಸಿ 'ಈ ಕಷ್ಟ ನನಗೆ ಎಂದೂ ತಪ್ಪದು' ಎಂಬುದಾಗಿ ಜೀವಿಕೆಯ ಭರವಸೆಯನ್ನೇ ಕಳೆದುಕೊಳ್ಳುವ ಸಂದರ್ಭವನ್ನು ನಾವು ಕಾಣಬಹುದು. ಇನ್ನು ಕೆಲವೊಮ್ಮೆ ಸುಖ ಬಂತೆಂದರೆ 'ನಾನೇ ಇಂದ್ರ, ನಾನೇ ದೇವೇಂದ್ರ, ನನಗೆ ಬಂದ ಸುಖ ಎಂದೂ ಕಳೆಯದು' ಎಂದು ಭ್ರಮಿಸಿ ದುರಹಂಕಾರ, ದುಷ್ಟತನವೆಲ್ಲ ಮೈಗುಡುವ ಸಾಧ್ಯತೆಗಳು ಕಂಡುಬರುತ್ತವೆ. ಆದರೆ ಯಾವನು ಈ ದ್ವಂದ್ವ ಸಂಹಿಷ್ಣುತೆ ಎಂಬ ಗುಣವನ್ನು ಕರಗತ ಮಾಡಿಕೊಳ್ಳುತ್ತಾನೋ ಅವನು ಎರಡು ಸಂದರ್ಭವನ್ನು ಬಹಳ ವ್ಯವಸ್ಥಿತವಾಗಿ ನಿಭಾಯಿಸುತ್ತಾನೆ. ಇದಕ್ಕೆ ಶ್ರೀರಾಮನಲ್ಲಿರುವ ಈ ಗುಣವನ್ನು ಮಾದರಿಯಾಗಿ ನೋಡಬಹುದು.

ದಶರಥನು ಒಂದು ಶುಭಮುಹೂರ್ತದಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿರುತ್ತಾನೆ. ಅದಕ್ಕಾಗಿ ಶ್ರೀರಾಮನಿಗೂ ತಿಳಿಸಿ, ಶ್ರೀರಾಮನು ಒಪ್ಪಿಗಿ ಸೂಚಿಸುತ್ತಾನೆ. ತನ್ನ ಪಟ್ಟಾಭಿಷೇಕ ವಿಷಯವನ್ನು ತಿಳಿದು ಅತಿಯಾದ ಸಂತಸಪಡಲಿಲ್ಲ ಆತ. ಅದೇ ಕೆಲವು ಸಮಯದ ಅನಂತರ ವಿರುದ್ಧವಾದ ವಾರ್ತೆಯನ್ನು ಶ್ರೀರಾಮನು ಕೇಳುವ ಪ್ರಸಂಗ ಬರುತ್ತದೆ. ಕೈಕೇಯಿ ಮತ್ತು ಮಂಥರೆಯ ಕಾರಣದಿಂದ ದಶರಥ ಮಹಾರಾಜನು ಶ್ರೀರಾಮನನ್ನು ಕಾನನಕ್ಕೆ ತೆರಳುವಂತೆ ಆಜ್ಞಾಪಿಸುತ್ತಾನೆ. ಈ ಸಂದರ್ಭದಲ್ಲೂ ಶ್ರೀರಾಮನ ಭಾವ ಭಂಗಿಗಳಲ್ಲಿ ಯಾವುದೇ ವಿಕಾರವನ್ನು ಕಾಣಲಿಲ್ಲ. ಇದಕ್ಕೆ ಕಾರಣ ಶ್ರೀರಾಮನ ಕ್ಷಮಾಗುಣ. ಅತ್ಯಂತ ವಿರುದ್ಧವಾದ ಎರಡು ಸಂದರ್ಭಗಳನ್ನೂ ಯಾವ ರೀತಿಯಾಗಿ ವಿಕಾರವಿಲ್ಲದೆ ಎದುರಿಸಬೇಕು? ಎಂಬುದನ್ನು ಶ್ರೀರಾಮನು ಚೆನ್ನಾಗಿ ಅರಿತಿದ್ದ. ಅದು ಅವನ ತನುಮನಗಳಲ್ಲಿ ಸಾತ್ಮ್ಯವಾದ ಗುಣವಾಗಿತ್ತು. ಇಂತಹ ಅನೇಕ ಸಂದರ್ಭಗಳನ್ನು ನಾವು ನಮ್ಮ ಜೀವನದಲ್ಲಿ ಕಾಣುವ ಪರಿಸ್ಥಿತಿ ಬರಬಹುದು. ಆಗ ಶ್ರೀರಾಮನಂತೆ ಪರಿಸ್ಥಿತಿಯನ್ನು ಅತ್ಯಂತ ಸಹನೆಯಿಂದ ಎದುರಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಗುಣವನ್ನೇ ದ್ವಂದ್ವಸಹಿಷ್ಣುತೆ ಎನ್ನುವುದು.   

ಸೂಚನೆ : 31/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 81 ಕರ್ಣನ ವಿಧಿವಾದ- ದ್ರೋಣರ ನಿಷ್ಠುರವಚನ (Vyaasa Vikshita - 81 Karnana Vidhivada - Dronara Nishthuravachana)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಆರ್ಥಿಕವಾದ ಕ್ಲೇಶವುಂಟಾದಾಗ, ಶ್ರೇಯಸ್ಸನ್ನೋ ಅಶ್ರೇಯಸ್ಸನ್ನೋ ಮಿತ್ರರು ಮಾಡಿಬಿಡಬಲ್ಲರೇ? ಯಾರಿಗೇ ಆಗಲಿ ದುಃಖವಾದರೂ ಸರಿಯೇ, ಸುಖವಾದರೂ ಸರಿಯೇ ವಿಧ್ಯನುಸಾರವಾಗಿಯೇ ಅದು ಆಗುವಂತಹುದು (ವಿಧಿಪೂರ್ವಂ ಹಿ ಸರ್ವಸ್ಯ ದುಃಖಂ ವಾ ಯದಿ ವಾ ಸುಖಮ್). ಮನುಷ್ಯನು ಬುದ್ಧಿಶಾಲಿಯೇ ಆಗಿರಲಿ, ಪೆದ್ದನೇ ಆಗಿರಲಿ; ಹಾಗೆಯೇ ಬಾಲಕನೇ ಆಗಿರಲಿ, ವೃದ್ಧನೇ ಆಗಿರಲಿ; ಜೊತೆಗಾರರುಳ್ಳವನೇ ಆಗಿರಲಿ, ಒಂಟಿಯೇ ಆಗಿರಲಿ - ದೈವಯೋಗದ ಅನುಸಾರವಾಗಿ ಎಲ್ಲವನ್ನೂ ಎಲ್ಲೆಡೆ ಹೊಂದುವನು.

ಹಿಂದೆ ರಾಜಗೃಹ ಎಂಬ(ನಗರದ)ಲ್ಲಿ ಅಂಬುವೀಚ ಎಂಬ ರಾಜನಿದ್ದನಷ್ಟೆ. ಮಾಗಧರಾಜರಲ್ಲೊಬ್ಬ ಆತ. ಆತನ ಇಂದ್ರಿಯಗಳು ದುರ್ಬಲವಾಗಿದ್ದವು; ಶ್ವಾಸರೋಗಪೀಡಿತನೂ ಆಗಿದ್ದ, ಆತ: ರಾಜಕಾರ್ಯಗಳಲ್ಲೆಲ್ಲ ಮಂತ್ರಿಗೇ ಅಧೀನನಾಗಿದ್ದ. ಮಂತ್ರಿಯ ಹೆಸರು ಮಹಾಕರ್ಣಿ. ಆಗಿನ ಕಾಲಕ್ಕೆ ಅಲ್ಲೆಲ್ಲಾ ಆತನೊಬ್ಬನೇ ರಾಜ. ರಾಜಸೈನ್ಯವೆಲ್ಲವೂ ತನ್ನ ವಶಕ್ಕೆ ಬಂದಿತಾಗಿ ರಾಜನನ್ನೇ ತಿರಸ್ಕಾರವಾಗಿ ಕಾಣಲಾರಂಭಿಸಿದ. ರಾಜಭೋಗ್ಯರಾದ ಸ್ತ್ರೀಯರನ್ನೂ (ಎಂದರೆ ರಾಜನ ಮಡದಿಯರನ್ನೂ) ರತ್ನಗಳನ್ನೂ ಸಂಪತ್ತುಗಳನ್ನೂ ಎಲ್ಲೆಡೆಗಳಿಂದ ತಾನೇ ಸ್ವೀಕರಿಸಿ ಭೋಗಿಸಲಾರಂಭಿಸಿದ, ಆ ಮೂಢ.

ಒಂದೊಂದಾಗಿ ಇವನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಿದ್ದ ಆ ಲೋಭಿಗೆ ಲೋಭದಿಂದ ಲೋಭವು ಬೆಳೆಯುವಂತಾಯಿತು. ಕೊನೆಗೆ ಅದು ಎಲ್ಲಿಯ ತನಕ ಬಂದಿತೆಂದರೆ, ರಾಜನ ರಾಜ್ಯವನ್ನೇ ಬಾಚಿಕೊಳ್ಳುವ ಆಸೆಯೇ ಉಂಟಾಯಿತು. ಮೊದಲೇ ಹೇಳಿದಂತೆ, ರಾಜನು ಇಂದ್ರಿಯಹೀನನಾಗಿದ್ದರೂ, ಶ್ವಾಸರೋಗಪೀಡಿತನಾಗಿದ್ದರೂ, ಅದೆಷ್ಟು ಯತ್ನಪಟ್ಟರೂ ಆ ಮಂತ್ರಿಗೆ ಆ ರಾಜ್ಯವನ್ನು ವಶಕ್ಕೆ ಪಡೆಯಲಾಗಲಿಲ್ಲ - ಎಂದು ನಾವು ಕೇಳಿದ್ದೇವೆ.

ಹೀಗಾಗಿ ಆ ರಾಜನ ರಾಜತ್ವವೆಂಬುದು ಉಳಿದುದು ಭಾಗ್ಯವಷ್ಟರಿಂದಲೇ, ಮತ್ತಾವುದರಿಂದಲೂ ಅಲ್ಲ. ರಾಜನೇ, ಈ ರಾಜ್ಯವು ನಿನಗೆಂದು ನಿಶ್ಚಿತವಾಗಿದ್ದಲ್ಲಿ, ಎಲ್ಲರೂ ನೋಡುತ್ತಿದ್ದರೂ, ಅದು ನಿನ್ನಲ್ಲಿಯೇ ಉಳಿದುಕೊಳ್ಳುತ್ತದೆ. ಅಷ್ಟೇ ಅಲ್ಲ; ಒಂದು ವೇಳೆ ನಿನ್ನ ಭಾಗ್ಯದಲ್ಲಿ ಅದಿಲ್ಲವೆಂದಾಗಿದ್ದಲ್ಲಿ, ನೀನು ಪ್ರಯತ್ನಪಟ್ಟರೂ ಅದು ದೊರೆಯಲಾಗದು.

ಆದುದರಿಂದ, ಕುಶಲನಾದ ರಾಜನೇ, ಮಂತ್ರಿಗಳಲ್ಲಿ ಯಾರು ಸಾಧು, ಯಾರು ಅಸಾಧು? - ಎಂಬುದನ್ನು ವಿಮರ್ಶಿಸಿ ನಿಶ್ಚಯಿಸಿಕೋ. ದುಷ್ಟಹೃದಯದವರ ಮಾತು ಯಾವುದು, ದುಷ್ಟರಲ್ಲದವರ ಮಾತು ಯಾವುದು? - ಎಂಬುದನ್ನು ನೀನು ಅರಿತುಕೊಳ್ಳಬೇಕು - ಎಂದು ಹೇಳಿ, ತನ್ನ ಮಾತನ್ನು ಮುಗಿಸಿದ, ಕರ್ಣ.

ಆಗ ದ್ರೋಣನು ಹೇಳಿದನು:

"ದುಷ್ಟನಾದ ಕರ್ಣನೇ, ಈ ಮಾತನ್ನು ನೀನು ಏಕೆ ಹೇಳುತ್ತಿರುವೆ - ಎಂಬುದು ಗೊತ್ತಾಗುತ್ತದೆ. ಪಾಂಡವರನ್ನು ಕುರಿತಾಗಿ ದ್ವೇಷಭಾವ ನಿನಗುಂಟು. ಎಂದೇ ನನ್ನ ಮಾತಿನಲ್ಲಿ ದೋಷಗಳನ್ನು ಹೇಳುತ್ತಿರುವೆ.

ಕುರುಕುಲವೃದ್ಧಿಗೆ ಕಾರಣವಾಗತಕ್ಕ ಪರಮಹಿತವನ್ನು ಹೇಳುತ್ತೇನೆ, ಕರ್ಣ. ಅದನ್ನೇ ನೀನು ದೋಷಯುಕ್ತವೆನ್ನುವುದಾದರೆ, ಪರಮಹಿತವು ಯಾವುದೆಂದು ನೀನೇ ಹೇಳು. ಯಾವುದು ಅತ್ಯಂತಹಿತವೋ ಅದನ್ನು ಬಿಟ್ಟು ಬೇರೆಯ ಬಗೆಯಲ್ಲೇನಾದರೂ ಮಾಡುವುದಾದಲ್ಲಿ ಅನತಿಕಾಲದಲ್ಲೇ ಕೌರವರು ನಶಿಸುವರು - ಎಂಬುದರಲ್ಲಿ ಸಂಶಯವಿಲ್ಲ."

ಬಳಿಕ ವಿದುರನು ಮಾತನಾಡಿದನು.

"ರಾಜ ಧೃತರಾಷ್ಟ್ರನೇ, ನಿನಗೆ ಯಾವುದು ನಿಃಸಂಶಯವಾಗಿಯೂ ಶ್ರೇಯಸ್ಸೋ ಅದನ್ನು ಬಂಧುಗಳಾದವರು ನಿನಗೆ ಹೇಳಬೇಕಾದದ್ದಿದೆ. ಆದರೆ ಕೇಳಿಸಿಕೊಳ್ಳಲೇ ಮನಸ್ಸಿಲ್ಲದಿರುವವರಿಗೆ ಆ ಮಾತು ಅಂತರಂಗದಲ್ಲಿ ಉಳಿಯುವುದಾದರೂ ಹೇಗೆ? (ನ ತ್ವಶುಶ್ರೂಷಮಾಣೇ ವೈ ವಾಕ್ಯಂ ಸಂಪ್ರತಿತಿಷ್ಠತಿ).

ಸೂಚನೆ : 31/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಸುಖಭೋಗಗಳು ನಿಜವಾಗಿ ಭೋಗ್ಯವಾಗುವುದು ಯಾವಾಗ? (Sukhabhogagalu Nijavagi Bhogyavaguvudu Yavaga?)


ಡಾ. ಹೆಚ್. ಆರ್. ಮೀರಾ

ಪ್ರತಿಕ್ರಿಯಿಸಿರಿ (lekhana@ayvm.in)


ಸುಖಾಪೇಕ್ಷೆಯು ಎಲ್ಲರಿಗೂ ಸಹಜ. ಅಕ್ಕಪಕ್ಕದವರೊಂದಿಗೆ ಹೋಲಿಕೆಗಳು ಬರುವುದೂ ಸಹಜ. ಆ ಹೋಲಿಕೆಗಳಿಂದಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ನಡೆ ಇವೆಲ್ಲ ಪ್ರಭಾವಿತವಾಗುವ ಸಾಧ್ಯತೆಗಳು ಹೆಚ್ಚು. ಎಷ್ಟೋ ಬಾರಿ ನಾವು ಆ ಹೋಲಿಕೆಯ ಚಕ್ರಕ್ಕೆ ಸಿಲುಕಿ ಅನಗತ್ಯವಾದ ಸ್ಪರ್ಧೆಗಳಲ್ಲಿ ಭಾಗಿಗಳಾಗಿಬಿಡುತ್ತೇವೆ. ಯಾವುದೋ ಸುಖಭೋಗಗಳ ಲಾಲಸೆಯಿಂದ ಅನವರತ ದುಡಿಯುತ್ತೇವೆ. ಅವುಗಳನ್ನು ಭೋಗಿಸುತ್ತಾ ನೋಡನೋಡುತ್ತಿದ್ದಂತೆಯೇ ವಾರಗಳೂ ವರ್ಷಗಳೂ ಉರುಳಿಹೋಗುತ್ತವೆ. ಎಷ್ಟೋ ವೇಳೆ ನಮಗೆ ಆ ಭೋಗಗಳು ಬೇಕೇ ಆಗಿತ್ತೆಂದೂ ಇರುವುದಿಲ್ಲ. ಬೇರೆಯವರು ಭೋಗಿಸುವುದನ್ನು ಕಂಡು ಅದರಿಂದ ಆಸೆ ಅಂಕುರಿತವಾಗಿ, ನಮಗೆ ನಿಜವಾಗಿಯೂ ಬೇಕೋ ಬೇಡವೋ ಎನ್ನುವುದನ್ನೂ ಲೆಕ್ಕಿಸದೆ, ಅದಕ್ಕಾಗಿ ಹಾತೊರೆಯುವುದಾಗಿರುತ್ತದೆ. ಕೊನೆಗೊಂದು ದಿನ ಇದ್ದಕ್ಕಿದ್ದಂತೆ "ನನ್ನ ಸಮಯವೆಲ್ಲ ಹೇಗೆ ಕಳೆಯಿತು? ನಾನು ಜೀವನದಲ್ಲಿ ಏನನ್ನು ಸಾಧಿಸಿದೆ?" ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಅದಕ್ಕೆ ತಕ್ಕ ಉತ್ತರ ಸಿಕ್ಕದಿದ್ದಾಗ ಏನೋ ಒಂದು ಬಾಧೆ ಪ್ರಾರಂಭವಾಗುತ್ತದೆ. ನಾವು ಆ ಸುಖಗಳನ್ನು ಅನುಭವಿಸಿದೆವೋ, ಅವೇ ನಮ್ಮನ್ನು ಸೇವಿಸಿಬಿಟ್ಟವೋ ಎಂಬ ಸಂಶಯವೂ ತಕ್ಕುದೇ.


ಭರ್ತೃಹರಿಯು ತನ್ನ ವೈರಾಗ್ಯಶತಕದಲ್ಲಿ ಇದನ್ನು ಬಹಳ ಚೆನ್ನಾಗಿ ವರ್ಣಿಸುತ್ತಾನೆ. ಅವನು ಹೇಳುವುದು:


ಕಾಲೋ ನ ಯಾತೋ, ವಯಮೇವ ಯಾತಾಃ

  ತಪೋ ನ ತಪ್ತಂ, ವಯಮೇವ ತಪ್ತಾಃ |

ಭೋಗಾ ನ ಭುಕ್ತಾ, ವಯಮೇವ ಭುಕ್ತಾಃ

  ತೃಷ್ಣಾ ನ ಜೀರ್ಣಾ, ವಯಮೇವ ಜೀರ್ಣಾಃ ||


ಕಾಲವು ಕಳೆದುಹೋಗಲಿಲ್ಲ; ಕಳೆದುಹೋದದ್ದು ನಾವೇ. ತಪಸ್ಸು ಆಚರಿಸಲಾಯಿತೆಂದಲ್ಲ; ನಾವೇ ಬೆಂದುಹೋದೆವು (ತಪ್ತವೆಂದರೆ ಬೆಂದಿರುವುದು, ಸುಟ್ಟದ್ದು ಎಂದೂ ಅರ್ಥ; ತಪಸ್ ಕೂಡ ಬಂದಿರುವುದು ಅದೇ ಮೂಲದಿಂದಲೇ, ತಾಪವೆಂದೇ ಅದಕ್ಕೂ ಅರ್ಥ). ಭೋಗವು ಭೋಗಿಸಲ್ಪಡಲಿಲ್ಲ; ಭೋಗಿಸಲ್ಪಟ್ಟವರು (ಎಂದರೆ ತಿನ್ನಲ್ಪಟ್ಟವರು) ನಾವೇ.

ಆಸೆ ಬತ್ತಲಿಲ್ಲ; ಬತ್ತಿಹೋದದ್ದು ನಾವೇ.


ಹಾಗಾದರೆ, ಜೀವನದಲ್ಲಿ ಭೋಗವೆಂಬುದೇ ಇರಬಾರದೇ? - ಎಂದರೆ, ಖಂಡಿತ ಇರಬೇಕಾದದ್ದೇ. ಆದರೆ ಅದರ ಉದ್ದೇಶ ಹಾಗೂ ಅದು ಎಲ್ಲಿ ಪರ್ಯವಸಾನ(ಎಂದರೆ ಕೊನೆ)ಹೊಂದುತ್ತದೆ ಎನ್ನುವುದು ಮುಖ್ಯ. ಉದಾಹರಣೆಗೆ, ಆಹಾರವೆಂಬುದು ಜೀವನದ ಒಂದು ಅಗತ್ಯ. ಬರಿಯ ಅಗತ್ಯವಾಗಿ ಅದನ್ನು ನಾವು ಕಂಡಿದ್ದೆವಾದರೆ ಆಹಾರದಲ್ಲಿ ಇಷ್ಟು ವೈವಿಧ್ಯ, ರುಚಿಗಳು ನಮಗೆ ಬೇಕಿರಲಿಲ್ಲ. ಬೇರೆ ಜೀವಜಂತುಗಳ ಹಾಗೆ ನಮ್ಮ ದೇಹಕ್ಕೆ ಪುಷ್ಟಿ ಕೊಡುವಂಥದ್ದನ್ನು ಹಾಗೇ ತಿನ್ನುತ್ತಿದ್ದೆವು, ಅದರ ರುಚಿಯನ್ನು ಲೆಕ್ಕಿಸದೆ. ಆದರೆ, ಭಾರತೀಯಪಾಕಪದ್ಧತಿ ತೆಗೆದುಕೊಂಡರೆ ಭಕ್ಷ್ಯ-ಭೋಜ್ಯ-ಲೇಹ್ಯ-ಚೋಷ್ಯ-ಪಾನೀಯಗಳೆಂಬ ವರ್ಗಗಳಲ್ಲಿ ಷಡ್ರಸೋಪೇತವಾದ ಆಹಾರಗಳಿವೆ. ಆದ್ದರಿಂದ ಆಹಾರವು ಭೋಗವೂ ಕೂಡ.


ಬಹಳ ಹಸಿದಿದ್ದಾಗ ಗಬಗಬ ತಿಂದಾಗ, ಆಹಾರದಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ದಕ್ಕಬಹುದು (ಪೂರ್ಣ ದಕ್ಕದೆಯೂ ಇರಬಹುದು, ಆದರೆ ಅದರ ವಿಷಯ ಇಲ್ಲಿ ಬೇಡ) ಅದರ ಒಂದು ಆಯಾಮವಾದ ರುಚಿಯನ್ನು ನಾವು ಕಳೆದುಕೊಂಡಂತಾಗುತ್ತದೆ. ಒಂದೊಂದು ತುತ್ತನ್ನೂ ಸರಿಯಾಗಿ ಗಮನವಿಟ್ಟು ಆಸ್ವಾದಿಸಿಕೊಂಡು ತಿಂದಾಗ, ನಮಗೆ ಆಹಾರದ ಪೋಷಣೆಯೊಂದಿಗೆ ಮನಕ್ಕೂ ಒಂದು ತೋಷಣೆ ದೊರಕುವುದು. ಅದರಿಂದ ದೇಹೇಂದ್ರಿಯಗಳಿಗೂ ಒಂದು ತೃಪ್ತಿ ಒದಗಿಬರುವುದು. ಆದರೆ ನಾವು ಇಲ್ಲಿಗೇ ಇದನ್ನು ನಿಲ್ಲಿಸಿಬಿಟ್ಟಾಗ ಆಹಾರದಿಂದ ದೊರಕುವ ಭೋಗವು ಕೇವಲ ಐಂದ್ರಿಯಿಕ(ಎಂದರೆ ಇಂದ್ರಿಯಗಳಿಗೆ ಮಾತ್ರ ಸಂಬಂಧಪಟ್ಟದ್ದು)-ಭೋಗವಾಗಿಬಿಡುತ್ತದೆ. ಇದು ತಪ್ಪಲ್ಲದಿದ್ದರೂ ಇದಕ್ಕೂ ಮಿಗಿಲಾದ ಒಂದು ಆಯಾಮವಿದೆ.


ನಾವು ಸೇವಿಸುವ ಆಹಾರವನ್ನೆಲ್ಲ ಭಗವಂತನಿಗೆ ಮೊದಲು ಸಮರ್ಪಿಸಿ ನಂತರ ಪ್ರಸಾದವಾಗಿ ಅದನ್ನು ಸ್ವೀಕರಿಸುವುದು ನಮ್ಮಲ್ಲಿ ಬಂದಿರುವ ಪದ್ಧತಿ. ಅಂತಹ ಪ್ರಸಾದವು ನಾಲಗೆಗೆ ಮುದ ಕೊಟ್ಟಾಗ, "ಪರಮಾತ್ಮನಿಗೆ ಭೋಗ್ಯವಾಗಿತ್ತು" ಎಂದು ಹೇಳುತ್ತಿದ್ದುದು ಸಂಪ್ರದಾಯ. ಶ್ರೀರಂಗಮಹಾಗುರುಗಳ ಅವಿಸ್ಮರಣೀಯವಚನಗಳನ್ನು ನೆನೆಸಿಕೊಳ್ಳುವುದಾದರೆ:

"ಎಂತಹ ಒಳ್ಳೆಯ ಸುಖವನ್ನೇ ಅನುಭವಿಸಿದ್ದರೂ, ಅದರ ಜೊತೆಯಲ್ಲೆಲ್ಲಾ ಅವನ(ಭಗವಂತನ) ಜ್ಞಾಪಕವಿಟ್ಟುಕೊಂಡು ಎಲ್ಲವನ್ನೂ ಅವನಿಗೆ ಸೋಂಕಿಸಿಕೊಂಡು ಜೀವನವನ್ನು ಸಾಗಿಸುವುದು ಎಷ್ಟು ರಮಣೀಯವಾಗಿದೆ!...ಮಾಡುವ ಕೆಲಸವೆಲ್ಲವೂ ಅವನನ್ನು ಮರೆಯದೇ, ಅವನನ್ನು ಮೆರೆಯಿಸುವಂತೆ  ನಡೆದರೆ, ಎಲ್ಲವನ್ನೂ ಅವನ ಪಕ್ಕದಲ್ಲೇ ಸೇರಿಕೊಂಡಂತೆ ಇಟ್ಟರೆ ಭವ್ಯವಾಗುತ್ತದೆ".


ಆದ್ದರಿಂದ ಭಗವಂತನು ನಮ್ಮ ಅರ್ಹತೆ-ಆವಶ್ಯಕತೆಗಳಿಗೆ ತಕ್ಕಂತೆ ಕೊಟ್ಟಿರುವ ಭೋಗವನ್ನು ಅವನ ಪ್ರಸಾದವಾಗಿ ತಿಳಿದು, ಅವನನ್ನು ಮನಸ್ಸಿನಲ್ಲಿಟ್ಟುಕೊಂಡು ಭೋಗಿಸಿದರೆ, ಅದನ್ನು ಅವನಿಗೇ ಸಮರ್ಪಿಸಿದಂತೆ, ಆಹುತಿ ಮಾಡಿದಂತೆ. ಹೀಗೇ ಮಾಡಿದ್ದಲ್ಲಿ ಪುಷ್ಟಿ-ತುಷ್ಟಿಗಳೊಂದಿಗೆ ನಮಗೆ ಇಷ್ಟಿ(ಎಂದರೆ ಯಜ್ಞ)ಯೂ ಫಲಿಸಿದಂತಾಗುವುದು.


ಸೂಚನೆ: 31/03/2024 ರಂದು ಈ ಲೇಖನ ವಿಜಯವಾಣಿಯ ಸತ್ಸಂಗ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 8 ವೇಣುಗಾನದ ನವಪರಿಣಾಮಗಳು ( Krsnakarnamrta - 8 Venuganada Navaparinamagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕೊಳಲು ಹಿಡಿದಿರುವ ಕೃಷ್ಣನನ್ನು ಲೀಲಾಶುಕನು ಬಯಸಿದನಲ್ಲವೆ? ಏನು ಈ ಕೊಳಲಿನ ವೈಶಿಷ್ಟ್ಯ? ಅದೇನು ಬರೀ ಕೊಳಲಿಗಾಗಿ ಕೃಷ್ಣನನ್ನು ಬಯಸಿರುವುದೆ? ಕಾಸು ಕೊಟ್ಟರೆ ಕೊಳಲು ಕೊಳ್ಳಲಾಗದೇ? ಹಾಗಾದರೆ ಬರೀ ಕೊಳಲಿನಲ್ಲೇ ಎಲ್ಲ ವಿಶೇಷವಿರುವುದೆಂದಲ್ಲ; ಕೊಳಲಿನಿಂದಾಗುವ ಗಾನದಲ್ಲಿದೆ - ಎಂಬುದು ವೇದ್ಯವಾಗುತ್ತದೆ. ಮತ್ತೂ ಮುಖ್ಯವಾಗಿ, ಕೃಷ್ಣನ ಕೊಳಲಿನ ಗಾನವೆಂಬುದೇ ವಿಶಿಷ್ಟವಾದದ್ದು. ಆದುದರಿಂದ ಗಾನ/ಗಾಯಕರ ಕಡೆಗೆ ಗಮನ ಕೊಡಬೇಕೇ ವಿನಾ ಬರೀ ವಾದ್ಯದ ಮೇಲಲ್ಲ - ಎಂದೆನಿಸುವುದು ಸಹಜವೇ. ವಾದ್ಯವಾದಕರಾರು, ಅವರ ಗಾನದ ಉದ್ದೇಶವೇನಿರಬಹುದು? - ಎಂಬಿವೂ ಯುಕ್ತವಾದ ಪ್ರಶ್ನೆಗಳೇ.

ಭಗವಂತನ ಕೈಗೆ ಸಿಕ್ಕ ಕೊಳಲೆಂದಾದರೆ, ಅದರಿಂದ ಆಗುವ ಪ್ರಭಾವವು ವಿಶಿಷ್ಟವೇ ಸರಿ. ಲೀಲಾಶುಕನು ಅದನ್ನು ಬಹಳ ರಮಣೀಯವಾಗಿ ಪ್ರತಿಪಾದಿಸುತ್ತಾನೆ. ಮನುಷ್ಯರ ಮೇಲೂ, ಪ್ರಶು-ಪ್ರಾಣಿಗಳ ಮೇಲೂ, ಕೊನೆಗೆ ಗಿಡ-ಮರಗಳ ಮೇಲೂ ಆಗಿದೆ. ಎಲ್ಲೆಲ್ಲಿ ಏನೇನು ಎಂಬುದರ ಆತನ ಚಿತ್ರಣವನ್ನು ಅನುಸರಿಸೋಣ.

ಮೊದಲನೆಯದಾಗಿ ಲೋಕದ ಮೇಲೆ ಆಗಿರುವ ಒಟ್ಟಾರೆ ಪ್ರಭಾವ. ಲೋಕಗಳೆಲ್ಲ ಉನ್ಮಾದಕ್ಕೆ ಒಳಗಾಗಿವೆ. ಉನ್ಮಾದವೆಂಬ ಪದಕ್ಕೆ ಒಂದೆರಡು ಕೆಟ್ಟ ಅರ್ಥಗಳೂ ಇವೆ, ಬಹಳ ಉತ್ಕೃಷ್ಟವಾದ ಒಳ್ಳೆಯ ಅರ್ಥವೂ ಇದೆ. ಉನ್ಮಾದವೆಂಬುದು ಮಾನಸಿಕ ರೋಗ; ಅದೊಂದು ಬಗೆಯ ಹುಚ್ಚಿನ ಸ್ಥಿತಿಯೆಂದು ಹೇಳಿದರೂ ತಪ್ಪಿಲ್ಲ. ಆದರೆ ಈ ಪದಕ್ಕೆ ಒಂದು ಉತ್ಕೃಷ್ಟವಾದ ಅರ್ಥವೂ ಇದೆ. ಅದು ಯೋಗಶಾಸ್ತ್ರಕ್ಕೆ ಸಂಬಂಧಪಟ್ಟದ್ದು. ಅದು ಮನಸ್ಸಿನ ಒಂದು ಪರಮೋತ್ಕೃಷ್ಟ ಸ್ಥಿತಿ. ಯೋಗದ ಉನ್ನತಾವಸ್ಥೆಯಲ್ಲಿ ಉಂಟಾಗುವ ಸ್ಸ್ಥಿತಿ. ಆ ಸ್ಥಿತಿಗೆ ಉನ್ಮನೀ ಎಂದು ಹೆಸರು. ಉನ್ಮನಿಯನ್ನೇ ಮನೋನ್ಮನಿಯೆಂದೂ ಕರೆಯುವರು. ಮನೋನ್ಮನಿಯೆಂಬುದು ದೇವತೆಯ ಹೆಸರೂ ಹೌದು. ಶೈವ ದೇವಾಲಯಗಳಲ್ಲಿ ಪ್ರವೇಶ ಮಾಡುತ್ತಿದ್ದಂತೆಯೇ ಮೊದಲು ಮನೋನ್ಮನಿಗೆ ನಮಸ್ಕಾರ ಸಲ್ಲಿಸಿ ಆಮೇಲೆ ಒಳಗೆ ಹೋಗುವ ಕ್ರಮವಿದೆ.

ಆಂತರಂಗಿಕವಾಗಿ ಆಧ್ಯಾತ್ಮಿಕ ಪ್ರಯಾಣದಲ್ಲಿ ಸಾಗುತ್ತಿರುವಾಗ ಮನೋನ್ಮನೀ - ಎಂಬ ಅವಸ್ಥೆಯು ಉಂಟಾದ ಮೇಲೆಯೇ ಭಗವತ್ಸಾಕ್ಷಾತ್ಕಾರವಾಗುವುದು - ಎಂಬುದನ್ನು ಸೂಚಿಸುವುದಕ್ಕಾಗಿಯೇ ಮನೋನ್ಮನಿಯನ್ನೇ ದೇವತೆಯನ್ನಾಗಿ ತೋರಿಸಿ, ಮೊದಲು ಅವಳಿಗೆ ಪ್ರಣಾಮವೆಂದು ವಿಹಿತಮಾಡಿರುವುದು. ಮನಸ್ಸು ಏಕಾಗ್ರವಾದಾಗಲೇ ಈ ಅವಸ್ಥೆಯು ಸಿದ್ಧಿಸುವುದು. ಆಗ ಉಂಟಾಗುವ ಭಗವದ್-ಅಭಿಮುಖತೆಯೇನೂಂಟೋ ಅದೇ ಮನೋನ್ಮನೀ. ಈ ಶಬ್ದದ ಪುಲ್ಲಿಂಗರೂಪವೇ ಮನೋನ್ಮನ. ಮನೋನ್ಮನ ಎಂಬುದು ಸಾಕ್ಷಾತ್ ಶಿವನ ಹೆಸರು. ಮತ್ತು ಆ ಹೆಸರಾದರೂ ವೇದದಲ್ಲಿಯೇ ಬರುವಂತಹುದು ಹೀಗೆ ಮನೋನ್ಮನ-ಮನೋನ್ಮನಿಯರು ಪತಿ-ಪತ್ನಿಯರು, ಶಿವ-ಪಾರ್ವತಿಯರು. ಪ್ರಕೃತಿಮಾತೆಯ ಅನುಗ್ರಹವಾದ ಬಳಿಕವೇ ಪರಮಪುರುಷನ ಅನುಗ್ರಹವಾಗುವುದು. ಪ್ರಕೃತಿಮಾತೆಯನ್ನು ಒಲಿಸಿಕೊಂಡೇ ಭಗವಂತನನ್ನು ಒಲಿಸಿಕೊಳ್ಳಲಾಗುವುದು. ಹೀಗೆ ಇಂತಹ ಒಂದು ಉದಾತ್ತವಾದ ಸ್ಥಿತಿಗೆ ಮನಸ್ಸನ್ನು ಒಯ್ಯಬಲ್ಲ ಸಾಮರ್ಥ್ಯ ಈ ಕೊಳಲಿನಿಂದ ಬರುವ ನಾದಕ್ಕಿದೆ. ಇಲ್ಲಿ ವಂಶೀನಿನಾದವೆಂದರೆ ಕೊಳಲಿನ ನಾದವೇ. ಇದನ್ನು ಮಾಡುತ್ತಿರುವನು ಇನ್ನೂ 'ಶಿಶು'ವೆನಿಸಿರುವ ಶ್ರೀಕೃಷ್ಣ. ಎಂದರೆ ಶ್ರೀಕೃಷ್ಣನು ತನ್ನ ಚಿಕ್ಕಂದಿನಲ್ಲಿ ಸಹ ನುಡಿಸುವ ಕೊಳಲಿಗೆ ಇಷ್ಟು ಪ್ರಭಾವವಿತ್ತು - ಎಂದರ್ಥ. ಮೇಲ್ನೋಟಕ್ಕೆ ಲೋಕವೇ ಮೈಮರೆಯುವಂತೆ ಮಾಡುವಂತಹುದು - ಎಂಬರ್ಥವು ತೋರಿದರೂ, ವಾಸ್ತವವಾಗಿ ಅದನ್ನೂ ಉಂಟುಮಾಡಿ, ಅದಕ್ಕಿಂತಲೂ ಉನ್ನತವಾದ ಸ್ಥಿತಿಯನ್ನು ಉಂಟುಮಾಡುವುದು ಈ ಕೊಳಲಿನ ನಾದ.

ಎರಡನೆಯದಾಗಿ ವೇದಗಳು ಹೊಮ್ಮುವಂತೆ, ಧ್ವನಿತವಾಗುವಂತೆ, ಮಾಡುವ ನಾದವಿದು. ಎಂದರೆ, ವೇದಗಳಲ್ಲಿ ತೋರುವ ಕೆಲ ಸಂಚಾರಗಳು ಇಲ್ಲಿ ಈ ವೇಣುವಾದನದಲ್ಲಿ ತೋರುತ್ತಿದೆ - ಎಂಬಷ್ಟು ಮಾತ್ರವಲ್ಲದೆ, ಇನ್ನೂ ವಿಶೇಷವಾದ ಅರ್ಥವನ್ನೂ ಇದು ಹೊಂದಿದೆ. ಅದೇನೆಂಬುದನ್ನು ಕೊನೆಯಲ್ಲಿ ಹೇಳೋಣ.

ಮೂರನೆಯದಾಗಿ ವೃಕ್ಷಗಳಿಗೆಲ್ಲಾ ಹರ್ಷವುಂಟುಮಾಡುವ ಧ್ವನಿಯಿದು. ಗಿಡ-ಮರಗಳಿಗೂ ಶ್ರವಣಶಕ್ತಿಯೆಂಬುದುಂಟು. ಗಿಡಮರಗಳಿಗೆ ಸಹ ಶ್ರವಣೇಂದ್ರಿಯವುಂಟೆಂದು ಮಹಾಭಾರತವೇ ಹೇಳುತ್ತದೆ. ಸಂಗೀತದಿಂದಲೇ ಸಸ್ಯರಾಶಿಗೆ ಚಿಕಿತ್ಸೆಯನ್ನು ಮಾಡಬಹುದೆಂಬುದನ್ನು ವಿಜ್ಞಾನಿಗಳು ಸಾಧಿಸಿದ್ದಾರೆ. ಹೀಗಾಗಿ ತರು-ಗುಲ್ಮಗಳಿಗೂ ವೃಕ್ಷವನಸ್ಪತಿಗಳಿಗೂ ಸಂತೋಷವನ್ನುಂಟುಮಾಡುತ್ತಿದೆ, ಈ ವೇಣುಗಾನ. ಸಸ್ಯ-ವೃಕ್ಷಗಳಿಗೂ ಸುಖದುಃಖಗಳು ಉಂಟೆಂಬುದನ್ನು ಮನುಸ್ಮೃತಿಯು ತೋರಿಸಿಕೊಟ್ಟಿದೆ.

ನಾಲ್ಕನೆಯ ಪರಿಣಾಮವಾಗಿ ಬೆಟ್ಟಗಳನ್ನು ಕರಗಿಸುವ ಗಾನವಿದು. ಬೆಟ್ಟವು ಅದೆಷ್ಟು ಗಟ್ಟಿ! ಅದನ್ನು ಕರಗಿಸುವುದುಂಟೆ? - ಎಂದು ಕೇಳಬಹುದು. ಗಂಧರ್ವಗಾನಪ್ರಕಾರದಲ್ಲಿ ಹಾಗೆ ಆಗಲು ಶಕ್ಯವಿದೆ -ಎಂಬುದಾಗಿ ಶ್ರೀರಂಗಮಹಾಗುರುಗಳು ವಿವರಿಸಿದ್ದರು. ಎಂತಹ ಕಲ್ಲೆದೆಯವರ ಮನಸ್ಸನ್ನು ಕರಗಿಸಿಬಿಡಬಹುದೆಂಬ ತಾತ್ಪರ್ಯ ಇದಕ್ಕೆ - ಎಂಬುದಾಗಿ ಕೆಲವರು ತೆಗೆದುಕೊಳ್ಳಬಹುದಾದರೂ, ನಾರದ-ಹನುಮಂತ ಇವರ ಕಥೆಯಲ್ಲಿ ಗಾನದ ವಿಷಯದಲ್ಲಿ ಸ್ಪರ್ಧೆಯೇರ್ಪಟ್ಟು, ಬಂಡೆಯು ಕರಗುವ ಹಾಗೂ ತಂಬೂರಿಯು ಅದಕ್ಕೆ ಅಂಟಿಕೊಂಡುಬಿಡುವ ಪ್ರಸಂಗವು ನಿರೂಪಿತವಾಗಿರುವುದನ್ನು ಸ್ಮರಿಸಿಕೊಳ್ಳಬಹುದು.

ಐದನೆಯ ಪರಿಣಾಮ ಗೋವೃಂದದ ಮೇಲೆ. ತರುಲತೆಗಳಿಗೆ ಹರ್ಷವುಂಟಾದರೆ, ಗೋಸಮೂಹಕ್ಕೆ ಆನಂದವೇ ಉಂಟಾಗುತ್ತದೆ. ನಾದವು ಎತ್ತಣಿಂದ (ಎಂದರೆ ಯಾವ ಕಡೆಯಿಂದ) ಬರುತ್ತಿರುವುದೋ, ಅತ್ತ ಕಡೆಗೆ ತಮ್ಮ ಕಿವಿಯನ್ನು ನಿಮಿರಿಸಿ ತಿರುಗಿಸಿಕೊಂಡಿರುವ ಚಿತ್ರಣವನ್ನೂ ನೋಡುತ್ತೇವೆ.

ಆರನೆಯ ಪರಿಣಾಮ ಗೋವಳರ ಮೇಲೆ. ಗೋಪಾಲಕರಿಗೆ ಅದೇನೋ ಸಂಭ್ರಮ. ದನಕಾಯುವವರಲ್ಲಿ ಒಬ್ಬಾನೊಬ್ಬ ಕೊಳಲನೂದುತ್ತಿರುವ ಸಂನಿವೇಶವು ಎಷ್ಟೋ ಸಂದರ್ಭಗಳಲ್ಲಿ ಆಗಿರಬಹುದು. ಆದರೆ ಎಂದೂ ಆಗಿಲ್ಲದ ಸಂತೋಷ ಇಂದಾಗುತ್ತಿದೆ.

ಏಳನೆಯ ಪ್ರಭಾವ ಮುನಿಗಳ ಮೇಲೆ. ಧ್ಯಾನಸ್ಥಿತಿಯಲ್ಲಿ ಮುನಿಗಳು ನಾನಾನಾದಗಳನ್ನು ಕೇಳುವರೆಂದು ಯೋಗಶಾಸ್ತ್ರಗಳು ತಿಳಿಸುತ್ತವೆ. ಶ್ರೀಕೃಷ್ಣನ ವೇಣುನಾದವು ಆ ಧ್ವನಿಗಳನ್ನೇ ಒಳಗೊಂಡಿರುವುದು. ಹೀಗಾಗಿ ಅವರ ಮನಸ್ಸು ಮುಕುಳಿತವಾಗುತ್ತಿದೆ. ಮುಕುಲವೆಂದರೆ ಮೊಗ್ಗು. ಅವರ ಮನಸ್ಸು ಅರಳಿದರೂ ಒಳಮುಖವಾಗಿ ಹರಿಯುವುದರಿಂದಾಗಿ ಈ ಯೋಗಸ್ಥಿತಿಯು ಅವರಲ್ಲೇರ್ಪಟ್ಟಿದೆ.

ಎಂಟನೆಯದಾಗಿ ಏಳೂ ಸ್ವರಗಳೂ ಕೊಳಲಿನಿಂದ ಹೊರಬರುತ್ತಿವೆ. ಸ-ರಿ-ಗ-ಮ-ಪ-ಧ-ನಿಗಳು ಸಪ್ತಸ್ವರಗಳು. ಒಳ್ಳೆಯ ಕೊಳಲಿನಲ್ಲಿ ಇವೆಲ್ಲ ಸ್ಫುಟವಾಗಿ ಬರುವುವು.

ಒಂಭತ್ತನೆಯದಾಗಿ ಓಂಕಾರದ ಅರ್ಥವೇನೋ ಅದೇ ಹೊಮ್ಮುತ್ತಿದೆ, ಈ ವೇಣುವಿನಲ್ಲಿ. ಓಂಕಾರವು ಸರ್ವವೇದಗಳ ಮೂಲ. ಅಲ್ಲದೆ, ಇಡೀ ಜಗತ್ತಿಗೆ ಮೂಲ. ಅದುವೇ ಸಮಸ್ತ ವಾಙ್ಮಯಕ್ಕೂ ಮೂಲ. ಹೀಗೆ ಸೃಷ್ಟಿಮೂಲವನ್ನೇ ಮುಟ್ಟಿ ಬರುತ್ತಿದೆ, ಈ ವೇಣುಗಾನ. ಎಂದೇ ಅದು ಉತ್ಕೃಷ್ಟವಾದದ್ದು, ಎನ್ನುತ್ತಾನೆ ಕವಿ ಲೀಲಾಶುಕ.

ಈಗ ಶ್ಲೋಕವನ್ನು ನೋಡಿ.

ಲೋಕಾನ್ ಉನ್ಮದಯನ್, ಶ್ರುತೀರ್ ಮುಖರಯನ್, ಕ್ಷೋಣೀರುಹಾನ್ ಹರ್ಷಯನ್ /

ಶೈಲಾನ್ ವಿದ್ರವಯನ್, ಮೃಗಾನ್ ವಿವಶಯನ್, ಗೋವೃಂದಮ್ ಆನಂದಯನ್ |

ಗೋಪಾನ್ ಸಂಭ್ರಮಯನ್, ಮುನೀನ್ ಮುಕುಲಯನ್, ಸಪ್ತಸ್ವರಾನ್ ಜೃಂಭಯನ್ /

ಓಂಕಾರಾರ್ಥಮ್ ಉದೀರಯನ್ ವಿಜಯತೇ ವಂಶೀ-ನಿನಾದಃ ಶಿಶೋಃ ||

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ30/3/2024 ರಂದು ಪ್ರಕವಾಗಿದೆ.

Saturday, March 30, 2024

ಅಷ್ಟಪಾಶ ಮೀರಿದ ಪ್ರಹ್ಲಾದ (Astapasha Mirida Prahlada)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)



ಭಕ್ತ ಪ್ರಹ್ಲಾದನ ಬಗ್ಗೆ ನಮ್ಮ ಭಾರತ ದೇಶದಲ್ಲಿ ಕೇಳದವರು ಇರಲಾರರು. ಭಾಗವತ ಮಹಾಪುರಾಣದ ಏಳನೇ ಸ್ಕಂದದಲ್ಲಿ ವಿಸ್ತಾರವಾಗಿ ಕಥಾ ಪ್ರಸಂಗ  ಉಲ್ಲೇಖವಾಗಿದೆ. ಪ್ರಹ್ಲಾದನು ಶ್ರೇಷ್ಟ ಭಕ್ತನೆಂದು ಆಚಾರ್ಯ ಶಂಕರರು ತಮ್ಮ  ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರದಲ್ಲಿ ಉಲ್ಲೇಖಿಸಿದ್ದಾರೆ. ಸೃಷ್ಟಿಯ ಶ್ರೇಷ್ಠತೆಯಲ್ಲಿ ಭಗವದಂಶವಿದೆಯಂದು ಭಗವಾನ್ ಕೃಷ್ಣನು ಭಗವದ್ಗೀತೆಯ ವಿಭೂತಿಯೋಗದಲ್ಲಿ ಸಾರಿ, ಅಸುರರಲ್ಲಿ  ತಾನೇ ಪ್ರಹ್ಲಾದನೆಂದಿದ್ದಾನೆ.

ದ್ವೇಷ, ನಾಚಿಕೆ, ಭಯ, ಶಂಕೆ, ಜುಗುಪ್ಸೆ, ಕುಲ, ಜಾತಿ, ಶೀಲ ಎಂಬ ಅಷ್ಟಪಾಶಗಳು ಆಸುರೀ ಶಕ್ತಿಗಳಾಗಿದ್ದು ಅವು ಮಾನವರಿಗೆ ಪ್ರಾಪಂಚಿಕ ಬಂಧನವನ್ನುಂಟುಮಾಡುತ್ತದೆಯೆಂದು ಶಾಸ್ತ್ರವು ತಿಳಿಸುತ್ತದೆ. ಇದರಿಂದಾಗಿ ಹುಟ್ಟು-ಸಾವಿನ ಚಕ್ರದಲ್ಲಿ ಮನುಜನು ಸಿಲುಕಿಕೊಂಡು, ಪಾಪ-ಪುಣ್ಯದ ಫಲ, ಸಂಕಷ್ಟಗಳನ್ನು ಅನುಭವಿಸುತ್ತಾ, ಜೀವನದ ಮೂಲವನ್ನೇ ಮರೆಯುತ್ತಾನೆ. ಗೋವಿಂದನನ್ನು ಭಜಿಸುವುದರಿಂದ ಮತ್ತು ಗುರುಚರಣದ ನಿರ್ಭರ ಭಕ್ತಿಯಿಂದ ಈ ಸಂಸಾರದ ಪಾಶದ ಕೊಂಡಿಯಿಂದ ತಪ್ಪಿಸಿಕೊಂಡು ಮುಕ್ತರಾಗಿ ಎಂದು ಆಚಾರ್ಯ ಶಂಕರರು ಆದೇಶಿಸುತ್ತಾರೆ.

ಅಷ್ಟಪಾಶಗಳ ಆಸುರೀ ಸಂಪತ್ತಿರುವ ರಾಕ್ಷಸಸಮೂಹದ ಮಧ್ಯದಲ್ಲಿ ದೈವೀಸಂಪತ್ತಿನ ಪ್ರಹ್ಲಾದನು ತನ್ನ ಬಾಲ್ಯ ಜೀವನವನ್ನು ಕಳೆಯುತ್ತಾನೆ.   ತಂದೆಯಾದ ಹಿರಣ್ಯಕಶಿಪುವಿನಿಂದ ದ್ವೇಷ,  ಜೀವಕ್ಕೇ ತೊಂದರೆಯಾಗುವ ಭಯಾನಕ ಸನ್ನಿವೇಶಗಳು, ಅಸಹನೆ, ಅಪಶಬ್ದಗಳು ಎದುರಿಸಬೇಕಾಗುತ್ತದೆ. ಆದರೂ  ಅವನ ಒಲವು ದೈವದ ಕಡೆಗೇ ಇರುತ್ತದೆ. "ಗುರು-ಶಿಷ್ಯ-ಭಗವಂತ ಇವರುಗಳ ಯೋಗವಾದರೆ, ಗುರುವಿನ ಹಿಂದಿರುವ ದೈವೀಶಕ್ತಿಯ ಮಹಿಮೆಯ ಅರಿವಾಗುತ್ತದೆ" ಎಂಬರ್ಥದಲ್ಲಿ ಬರುವ ಶ್ರೀರಂಗಮಹಾಗುರುಗಳ ಮನಮುಟ್ಟುವ ಮಾತು ಸ್ಮರಣೀಯ.  ಪ್ರಹ್ಲಾದ-ಗುರುನಾರದರ-ಶ್ರೀಹರಿಯಕೃಪೆಯ ಯೋಗವನ್ನು ಭಾಗವತ ಪುರಾಣದ ಕಥೆಯಲ್ಲಿ ಗಮನಿಸಬಹುದು. ಈ ಯೋಗದಿಂದ ತರಳ ಪ್ರಹ್ಲಾದ ಅಷ್ಟಪಾಶಗಳನ್ನು ಮೀರಿದವನಾಗಿದ್ದ. ಯೋಗದ ಪರಿಭಾಷೆಯಲ್ಲಿ ಹೇಳುವದಾದರೆ, ಆಜ್ಞಾ ಚಕ್ರ ದಾಟಿದವರಿಗೆ ಅಷ್ಟಪಾಶಗಳು ಏನೂ ಮಾಡಲಾರವು. ಆದ್ದರಿಂದ ಅವನಿಗೆ ಹಿರಣ್ಯಕಶಿಪು ಕೊಟ್ಟ ಉಪದ್ರವಗಳು ಏನೂ ಮಾಡಲಿಲ್ಲ. ಕಾಲವು ಕೂಡಿಬಂದಾಗ ಸ್ವಯಂ ಭಗವಂತನೇ ಶಿಷ್ಟ ರಕ್ಷಣೆ ದುಷ್ಟ ಶಿಕ್ಷಣೆ ಎಂಬಂತೆ ತಾನೇ ಪ್ರಕಟಗೊಂಡು ಪ್ರಹ್ಲಾದನನ್ನು ಕಾಪಾಡಿದ ಎಂದು  ಭಾಗವತ ಪುರಾಣ ತಿಳಿಸುತ್ತದೆ.

 ಇದೆಲ್ಲವೂ ಕೃತಯುಗದಲ್ಲಿ ನಡೆದ ಕಥೆ, ಇದರ ಪ್ರಸಕ್ತತೆ ಇಂದಿಗೂ ಇದೆಯೇ ಎಂಬ ಪ್ರಶ್ನೆ ಸಹಜ.  ಪ್ರಸಕ್ತ ಕಾಲಮಾನದಲ್ಲಿ ಮಾನವರು ಅಷ್ಟಪಾಶಗಳ ಸಂಕಷ್ಟಗಳನ್ನು ಕಾಲಧರ್ಮಕ್ಕನುಗುಣವಾಗಿ ಭೌತಿಕ ಮತ್ತು ಮಾನಸಿಕ ಕ್ಷೇತ್ರಗಳಲ್ಲಿ ಎದುರಿಸಬೇಕಾಗುತ್ತದೆ. ದೈವದಾನವರ ಕಲಹ ಎಂದೆಂದಿಗೂ ನಡೆಯುತ್ತಿರುವ ಸಂಗತಿಯೆನ್ನುವುದನ್ನು ಗಮನಿಸಬಹುದು.  ಸಜ್ಜನರು  ಗುರುಕೃಪೆ  ಹಾಗೂ  ಪ್ರಹ್ಲಾದನು ಭೋದಿಸಿದ ಪರಮಾತ್ಮನ ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ  ಮತ್ತು ಆತ್ಮನಿವೇದನೆಯೆಂಬ ಸಾಧನೆಯಿಂದ, ಅಷ್ಟಪಾಶಗಳಿಂದ ಮುಕ್ತರಾಗಬಹುದು. ಆಗ ಯಾವ ಪಾಶಗಳಾಗಲೀ ಸಂಕಷ್ಟಗಳಾಗಲೀ ತಾವರೆ ಎಲೆಯಮೇಲಿನ ನೀರಿನಂತೆ ಅಂಟಲಾರದು. "ಭಕ್ತಾನುರಕ್ತ ಪರಿಪಾಲನ ಪಾರಿಜಾತ ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ" ಎಂದು ಪ್ರಾರ್ಥಿಸಿ ಕೃತಾರ್ಥರಾಗೋಣ.

ಸೂಚನೆ: 30/3/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Monday, March 25, 2024

ವ್ಯಾಸ ವೀಕ್ಷಿತ - 78 ಕರ್ಣನ ಯುದ್ಧೋಪದೇಶ (Vyaasa Vikshita - 78 Karnana Yuddhopadesha)

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕೃಷ್ಣೆಯನ್ನು ಅವರಿಂದ ಬೇರ್ಪಡಿಸುದೆನ್ನುವುದೂ ಸಹ ಯಾರಿಂದಲೂ ಆಗದ ಮಾತು. ಅವರು ಹೀನದೀನರಾಗಿರುವಾಗಲೇ ಅವರನ್ನು ದ್ರೌಪದಿಯು ವರಿಸಿರುವಳು; ಹಾಗಿರಲು, ಈಗಂತೂ ಸೊಗಯಿಸುತ್ತಿರುವ ಅವರ ಬಗ್ಗೆ ಹೇಳುವುದೇನಿದೆ? ಒಬ್ಬಳಿಗೇ ಹಲವು ಪತಿಯರೆಂಬುದು ಸ್ತ್ರೀಯರು ಬಯಸುವ ಗುಣವೇ ಆಗಿರಬಹುದು. ಅದನ್ನು ಕೃಷ್ಣೆಯು ಪಡೆದೇ ಇದ್ದಾಳೆ; ಹೀಗಿರುವವಳಲ್ಲಿ ಭೇದವನ್ನುಂಟುಮಾಡಿಬಿಡುವುದು - ಎನ್ನುವುದು ಸಾಧ್ಯವಾಗುವ ಮಾತಲ್ಲ.

ಇನ್ನು ದ್ರುಪದನ ವಿಷಯವನ್ನು ಹೇಳುವುದಾದರೆ, ಅತನು ಆರ್ಯವ್ರತ: ಶ್ರೇಷ್ಠವಾದ ವ್ರತವನ್ನು ಪಾಲಿಸತಕ್ಕವನು. ಅತನೇನೂ ಧನಲೋಭಿಯಲ್ಲ. ರಾಜ್ಯದಾನವನ್ನೇ ಮಾಡಿದರೂ ಸಹ, ಅತನು ಪಾಂಡವರನ್ನು ಬಿಟ್ಟುಕೊಡುವವನೇನಲ್ಲ. ಆತನ ಪುತ್ರ(ಧೃಷ್ಟದ್ಯುಮ್ನ)ನೂ ಅಷ್ಟೆ: ಗುಣಶಾಲಿ, ಹಾಗೂ ಪಾಂಡವರಲ್ಲಿ ಪ್ರೀತಿಯುಳ್ಳವನು.

ಹೀಗಾಗಿ ನೀ ಹೇಳಿದ ಉಪಾಯಗಳಿಂದ ಪಾಂಡವರನ್ನು ವಶಪಡಿಸಿಕೊಳ್ಳುವುದೆನ್ನುವುದು ಯಾವ ರೀತಿಯೂ ಸಾಧ್ಯವಾಗತಕ್ಕದ್ದಲ್ಲ.

ನರಶ್ರೇಷ್ಠನೇ, ನಮಗೆ ಮಾಡಲಾಗುವಂತಹುದೆಂದರೆ ಇದೋ ಇದು: ಪಾಂಡವರು ಇನ್ನೂ ಬೇರೂರಿಲ್ಲವೆಂದಿರುವಾಗಲೇ ಅವರನ್ನು ಪ್ರಹರಿಸತಕ್ಕದ್ದು. ಅದು ನಿನಗೆ ಇಷ್ಟವಾಗುವುದಾದರೆ ಚೆನ್ನು.

ಎಲ್ಲಿಯವರೆಗೆ ನಮ್ಮ ಪಕ್ಷವು ಮಹತ್ತಾಗಿರುವುದೋ ಎಲ್ಲಿಯವರೆಗೆ ದ್ರುಪದನಿನ್ನೂ ಲಘುವಾಗಿಯೇ ಇರುವನೋ ಅಷ್ಟರಲ್ಲೇ ಅವರ ಮೇಲೇರಿಹೋಗುವುದನ್ನು ಮಾಡುವುದಾಗಲಿ, ಬೇರೆ ವಿಚಾರ ಬೇಡ. ಎಲ್ಲಿಯ ತನಕ ಪಾಂಡವರಲ್ಲಿ ಹೇರಳವಾದ ವಾಹನಗಳು, ಮಿತ್ರರು, ಕುಲಗಳು - ಇವೆಲ್ಲ ಸೇರಿಕೊಳ್ಳವೋ, ಅಷ್ಟರಲ್ಲೇ ಓ ಗಾಂಧಾರೀಪುತ್ರನೇ, ಅವರ ಮೇಲೆ ನಿನ್ನ ಪರಾಕ್ರಮವನ್ನು ತೋರು! ಎಲ್ಲಿಯವರೆಗೆ ರಾಜಾ ದ್ರುಪದನು ತನ್ನ ಮಹಾಪರಾಕ್ರಮಶಾಲಿಗಳಾದ ಮಕ್ಕಳ ಸಮೇತನಾಗಿ ನಮ್ಮ ಮೇಲೇರಿಬರುವ ಸಂಕಲ್ಪವನ್ನು ಮಾಡನೋ ಅಷ್ಟರಲ್ಲೇ ಇದಾಗಲಿ! ಯಾದವಸೈನ್ಯವನ್ನು ತೆಗೆದುಕೊಂಡು ದ್ರುಪದನ ಅರಮನೆಯತ್ತ ಕೃಷ್ಣನು ಪಾಂಡವರಾಜ್ಯಾರ್ಥವಾಗಿ ಬಂದುಬಿಟ್ಟಾನು; ಅಷ್ಟರೊಳಗೇ ತೋರಿಸು ನಿನ್ನ ಪರಾಕ್ರಮವನ್ನು!

ಐಶ್ವರ್ಯವೇನು, ಬಗೆಬಗೆಯ ಭೋಗಗಳೇನು, ಇಡೀ ರಾಜ್ಯವೇನು - ಪಾಂಡವರಿಗೆ ಏನನ್ನೂ ಕೊಡಲೂ ಸಿದ್ಧನಿರುವನು, ಆ ಕೃಷ್ಣನು! ಇಂತಹುದನ್ನು ಕೊಡಬಾರದೆಂಬುದೇ ಇಲ್ಲ, ಆತನಿಗೆ! ಮಹಾತ್ಮನಾದ ಭರತನು ಭೂಮಿಯನ್ನು ಪಡೆದುಕೊಂಡದ್ದು ಹೇಗೆ? ವಿಕ್ರಮದಿಂದ! ಇಂದ್ರನು ಮೂರು ಲೋಕಗಳನ್ನೂ ಗೆದ್ದದ್ದು ಹೇಗೆ? ವಿಕ್ರಮದಿಂದಲೇ! ರಾಜನೇ, ಕ್ಷತ್ರಿಯನನ್ನು ಹೊಗಳುವುದು ಆತನ ಪರಾಕ್ರಮದ ಮೇರೆಗೇ. ಶೂರರ ಸ್ವಧರ್ಮವೆಂದರೆ ಪರಾಕ್ರಮವೇ ಸರಿ! ಮಹತ್ತಾದ ಚತುರಂಗಸಮೇತವಾದ ಸೈನ್ಯದೊಂದಿಗೆ ದ್ರುಪದನನ್ನು ಮಥನಮಾಡಿ ಪಾಂಡವರನ್ನಿಲ್ಲಿಗೆ ಸೆರೆಹಿಡಿದು ತರೋಣ! ಸಾಮದಿಂದಾಗಲಿ, ದಾನದಿಂದಾಗಲಿ, ಭೇದದಿಂದಾಗಲಿ ಪಾಂಡವರನ್ನು ವಶಕ್ಕೆ ತೆಗೆದುಕೊಳ್ಳಲಾಗದು! ಎಂದೇ ಪರಾಕ್ರಮದಿಂದಲೇ ಅವರನ್ನು ಪರಾಕ್ರಮದಿಂದಲೇ ಗೆದ್ದು ಇಡೀ ಭೂಮಿಯನ್ನು ಭೋಗಿಸು. ಇದಕ್ಕೆ ಭಿನ್ನವಾಗಿರುವ ಅದೆಂತಹುದೇ ಕಾರ್ಯಕ್ರಮವನ್ನು ನಾ ಕಾಣೆ - ಎಂದನು.

ರಾಧೇಯ(ಕರ್ಣ)ನ ಮಾತುಗಳನ್ನು ಕೇಳಿದ ಧೃತರಾಷ್ಟ್ರನು "ಕರ್ಣ, ನೀನು ಮಹಾಪ್ರಾಜ್ಞ ಮತ್ತು ಕೃತಾಸ್ತ್ರ (ಅಸ್ತ್ರವಿದ್ಯೆಯನ್ನು ಬಲ್ಲವನು). ಸೂತವಂಶಕ್ಕೇ ಆನಂದವುಂಟುಮಾಡುವವನು. ಪರಾಕ್ರಮಯುಕ್ತವಾದ ಈ ಮಾತು ನಿನಗೆ ಶೋಭಿಸುತ್ತದೆ. ನೀವಿಬ್ಬರೂ ಭೀಷ್ಮ-ದ್ರೋಣ-ವಿದುರರೊಂದಿಗೆ ಕಲೆತು ಒಂದು ನಿಶ್ಚಯಕ್ಕೆ ಬನ್ನಿ. ಹೇಗೆ ಮಾಡಿದರೆ ಮುಂದೆ ನಮಗೆ ಸುಖವಾದೀತೋ ಹಾಗೆ ತೀರ್ಮಾನಿಸಿ. ಹಾಗೆ ಹೇಳಿದವನೇ, ಭೀಷ್ಮದ್ರೋಣರನ್ನೂ ಸರ್ವಮಂತ್ರಿಗಳನ್ನೂ ಬರಮಾಡಿಸಿ, ಅವರೊಂದಿಗೆ ಮಂತ್ರಾಲೋಚನೆ ಮಾಡಿದನು.

ಸೂಚನೆ : 3/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.    

Sunday, March 24, 2024

ವ್ಯಾಸ ವೀಕ್ಷಿತ - 80 ದ್ರೋಣರ ಖಚಿತವಾದ ನುಡಿ (Vyaasa Vikshita - 80 Dronara Khachitavada Nudi)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಭೀಷ್ಮರು ಮಾತನಾಡಿದ ಬಳಿಕ ದ್ರೋಣರು ನುಡಿದರು:

ರಾಜಾ ಧೃತರಾಷ್ಟ್ರನೇ, ಮಂತ್ರಾಲೋಚನೆಗೆಂದು ಯಾರನ್ನಾದರೂ ಬರಮಾಡಿಕೊಂಡಿದ್ದರೆ, ಅಂತಹವರು ಹೇಳಬೇಕಾದದ್ದಾದರೂ ಏನನ್ನು? ಧರ್ಮಪ್ರಾಪ್ತಿಗೂ, ಅರ್ಥಪ್ರಾಪ್ತಿಗೂ, ಯಶಃಪ್ರಾಪ್ತಿಗೂ (ಎಂದರೆ ಕೀರ್ತಿಯನ್ನು ಗಳಿಸುವುದಕ್ಕೂ) – ಇವೆಲ್ಲಕ್ಕೂ ಅನುಗುಣವಾದದ್ದು ಯಾವುದೋ ಅದನ್ನು. ಹಿಂದಿನಿಂದಲೂ ನಾವು ಕೇಳಿಕೊಂಡು ಬಂದಿರುವುದಾದರೂ ಈ ಬಗೆಯೇ.

ಮಹಾತ್ಮನಾದ ಭೀಷ್ಮನ ಮತಿಯೇನೋ ನನ್ನ ಮತಿಯೂ ಅದೇ (ಎಂದರೆ ಭೀಷ್ಮನ ಮಾತೂ, ಧರ್ಮ-ಅರ್ಥ-ಕೀರ್ತಿಗಳನ್ನು ನೀವು ಹೊಂದಲು ಅನುಗುಣವಾಗಿರುವುದೇ). ಕುಂತಿಯ ಮಕ್ಕಳಿಗೂ ಪಾಲು ದೊರೆಯಬೇಕಾದದ್ದೇ; ಹೀಗೆ ಮಾಡಿದರಷ್ಟೆ ಅದು ಸನಾತನಧರ್ಮವಾಗುವುದು.

ಅದಕ್ಕಾಗಿ, ಪ್ರಿಯವಾಗಿ ಮಾತನಾಡತಕ್ಕ ಯಾರನ್ನಾದರೂ ಈಗ ದ್ರುಪದನ ಬಳಿಗೆ ಶೀಘ್ರವಾಗಿ ಕಳಿಸೋಣವಾಗಲಿ; ಹಾಗೂ ಪಾಂಡವರಿಗೆಂದು ಅನೇಕರತ್ನಗಳನ್ನು ಕೊಂಡೊಯ್ಯುವುದಾಗಬೇಕು. ದ್ರುಪದನು ಹೆಣ್ಣಿನ ಕಡೆಯವನೆಂದಾಯಿತಲ್ಲವೇ? ಆದ್ದರಿಂದ ಗಂಡಿನ ಕಡೆಯವರಾಗಿ ಧನರತ್ನಗಳನ್ನು ಸಮರ್ಪಿಸುವುದಾಗಬೇಕು.

ಅಷ್ಟೇ ಅಲ್ಲ, ತಮ್ಮೊಂದಿಗೆ ಉಂಟಾದ ಸಂಬಂಧದಿಂದಾಗಿ ಧೃತರಾಷ್ಟ್ರ-ದುರ್ಯೋಧನರಿಗೆ ಪರಮವಾದ ವೃದ್ಧಿಯೂ ಪರಮಸಂತೋಷವೂ ಉಂಟಾಗಿರುವುದು - ಎಂಬುದಾಗಿ ದ್ರುಪದ-ಧೃಷ್ಟದ್ಯುಮ್ನರಿಗೆ ಮತ್ತೆ ಮತ್ತೆ ಹೇಳತಕ್ಕದ್ದು. ಈ ಸಂಬಂಧವು ಅದೆಷ್ಟು ಉಚಿತವಾಗಿದೆ (ಎಂದರೆ, ಔಚಿತ್ಯದಿಂದ ಕೂಡಿದೆ)! - ಎಂಬುದನ್ನೂ ವರ್ಣಿಸಬೇಕು. ಮತ್ತೆ ಮತ್ತೆ ಕೌಂತೇಯರನ್ನೂ (ಎಂದರೆ ಕುಂತಿಯ ಪುತ್ರರನ್ನೂ) ಮಾದ್ರೇಯರನ್ನೂ (ಎಂದರೆ ಮಾದ್ರಿಯ ಪುತ್ರರನ್ನೂ) ಸಮಾಧಾನಗೊಳಿಸುತ್ತಾ ಮಾತನಾಡಬೇಕು. ಹೊಳೆಯುವ ಚಿನ್ನದಾಭರಣಗಳನ್ನು ನಿನ್ನ ಮಾತಿನಂತೆಂಬುದಾಗಿ ದ್ರೌಪದಿಗೆ ಕೊಡುವುದಾಗಬೇಕು; ಹಾಗೆಯೇ ದ್ರುಪದನ ಎಲ್ಲ ಮಕ್ಕಳಿಗೂ ಸರ್ವಪಾಂಡವರಿಗೂ, ಕುಂತಿಗೂ ಸಹ ಯಾವುದು ಯುಕ್ತವೋ ಅದನ್ನೆಲ್ಲ ಕೊಡುವುದು.

ಹೀಗೆ ಕೊಡುಗೆಗಳನ್ನು ಕೊಟ್ಟ ಬಳಿಕ, ಪಾಂಡವರೊಂದಿಗೆ  ಇಲ್ಲಿಗೆ ಬರಲೆಂದು ದ್ರುಪದನಿಗೆ ಆಹ್ವಾನವನ್ನು ಕೊಡತಕ್ಕದ್ದು. ಪಾಂಡವರು ಇಲ್ಲಿಗೆ ಬರುವುದರ ಬಗ್ಗೆ ದ್ರುಪದನ ಅನುಮೋದನೆಯು ದೊರೆತ ಬಳಿಕ, ಒಳ್ಳೆಯ ಸೈನ್ಯವನ್ನು ತೆಗೆದುಕೊಂಡು ಹೋಗಿ ದುಃಶಾಸನನೂ ವಿಕರ್ಣನೂ ಪಾಂಡವರನ್ನು ಇಲ್ಲಿಗೆ ಕರೆತರಲಿ (ವಿಕರ್ಣನು ದುರ್ಯೋಧನನ ತಮ್ಮ).

ಆ ಬಳಿಕ ಶ್ರೇಷ್ಠರಾದ ಆ ಪಾಂಡವರನ್ನು ಸದಾ ನೀನು ಗೌರವಿಸುತ್ತಿರುವುದು; ಪಾಂಡವರಾದರೂ ಪ್ರಜೆಗಳ ಇಚ್ಛೆಗೆ ಅನುಸಾರವಾಗಿ ತಮ್ಮ ಪೈತೃಕವಾದ (ಎಂದರೆ ತಂದೆಯಿಂದ ಬಂದ) ರಾಜ್ಯದಲ್ಲಿ ನೆಲೆಸಿರಲಿ. ಮಹಾರಾಜನೇ, ನಿನ್ನ ಮಕ್ಕಳು ಹಾಗೂ ಪಾಂಡವರು - ಇವರಿಬ್ಬರ ವಿಷಯದಲ್ಲಿ ನಿನ್ನ ವ್ಯವಹಾರವು ಹೀಗೆಯೇ ಇರತಕ್ಕದ್ದು - ಎಂಬ ವಿಷಯದಲ್ಲಿ ಭೀಷ್ಮನಿಗೂ ನನಗೂ ಏಕಾಭಿಪ್ರಾಯವುಂಟು – ಎಂದನು.

ಆಗ ಕರ್ಣನು ಹೇಳಿದನು:

ಮಹಾರಾಜ, ತಮ್ಮ ಕಡೆಯಿಂದ ಭೀಷ್ಮರಿಗೂ ದ್ರೋಣರಿಗೂ ಅರ್ಥ-ಮಾನಗಳು (ಎಂದರೆ ಧನ-ಗೌರವಗಳು) ದೊರೆಯುತ್ತಿರುತ್ತವೆ; ಅಲ್ಲದೆ ತಮ್ಮ ಎಲ್ಲ ಕಾರ್ಯಗಳಲ್ಲೂ ಅತ್ಯಂತ ಆತ್ಮೀಯರೆಂಬುದಾಗಿಯೇ ಅವರನ್ನು ತಾವು ಕಾಣುತ್ತಿರುವಿರಿ. ಹೀಗಿದ್ದರೂ ಸಹ ಅವರಿಬ್ಬರೂ ಯಾವುದು ನಿಮಗೆ ಶ್ರೇಯಸ್ಸೋ  ಅದನ್ನು ಮಂತ್ರಾಲೋಚನರೂಪವಾದ ಸಲಹೆಯಾಗಿ ಕೊಡುತ್ತಿಲ್ಲ: ಇದಕ್ಕಿಂತಲೂ ಹೆಚ್ಚು ಆಶ್ಚರ್ಯಕರವಾದುದು ಇರುವುದುಂಟೇ?!

ದುಷ್ಟವಾದ ಮನಸ್ಸು; ಮುಚ್ಚಿಟ್ಟ ಅಂತರಾತ್ಮ - ಇವನ್ನುಳ್ಳ ವ್ಯಕ್ತಿಯು ಮತ್ತೊಬ್ಬರಿಗೆ ಪರಮಶ್ರೇಯಸ್ಸಾದುದನ್ನು ಹೇಳಲಾದೀತೇ? ಸತ್ಪುರುಷರಿಗೆ ಮಾನ್ಯವೆನಿಸುವಂತಹುದನ್ನು ಅಂತಹವರು ಹೇಗೆ ತಾನೆ ಮಾಡಿಯಾರು? (ಕಥಂ ಕುರ್ಯಾತ್ ಸತಾಂ ಮತಂ?)

ಸೂಚನೆ : 24/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 82(Yaksha prashne 82)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 81 'ದಮ' ಎಂದರೇನು ?

ಉತ್ತರ - ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು.  

ಇಲ್ಲಿ ಕೇಳಲಾದ ಪ್ರಶ್ನೆಯು ಸಾಮಾನ್ಯವಾಗಿದೆ. ಯಕ್ಷನ ಪ್ರಶ್ನೆಯು ಸಾಮಾನ್ಯವಾಗಿ ನೇರವಾಗಿ ಇರುವುದಿಲ್ಲ. ಸುತ್ತುಬಳಸಿ ಕೇಳಿದಂತೆ ಇರುತ್ತದೆ. ಬುದ್ಧಿಯನ್ನು ಬಳಸಿ, ಯೋಚಿಸಿ ಉತ್ತರಕೊಡಬೇಕಾದ ಪ್ರಶ್ನೆಗಳೆ ಜಾಸ್ತಿ ಇವೆ. ಅತ್ಯಂತ ಪ್ರಚಲಿತವಾದ, ಎಲ್ಲೆಲ್ಲೂ ಕಾಣಸಿಗುವ ವಿಷಯವನ್ನೇ ಆಧರಿಸಿ ಈ ಪ್ರಶ್ ಅತಿವಿರಳ. ಆದರೆ ಈ ಪ್ರಶ್ನೆಯು ಯಕ್ಷಪ್ರಶ್ನೆಯೋ? ಎಂದೇ ಸಂದೇಹಿಸುವಷ್ಟು ಸುಲಭದ್ದಾಗಿದೆ. ಆದ್ದರಿಂದ ಧರ್ಮರಾಜನ ಉತ್ತರವೂ ಅಷ್ಟೇ ಸಹಜವಾಗಿ ಬಂದಿದೆ. 

ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದನ್ನೇ 'ದಮ' ಎಂದು ಕರೆಯಲಾಗಿದೆ. ಕೆಲವು ಕಡೆ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಎಂಬ ಅರ್ಥವೂ ಉಂಟು. ಅವೆರಡೂ ಒಂದೇ. ಏಕೆಂದರೆ ಮನಸ್ಸೂ ಒಂದು ಇಂದ್ರಿಯವೇ. ಮತ್ತು ಬಾಹ್ಯವಾದ ವಿಷಯದ ಅರಿವು ಯಾವುದರಿಂದ ಉಂಟಾಗುವುದೋ ಅದನ್ನೂ 'ಇಂದ್ರಿಯ' ಎಂಬ ಪದದಿಂದ ಬಳಸಿ; ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಇವುಗಳನ್ನು ಪ್ರಧಾನವಾಗಿ 'ಇಂದ್ರಿಯ' ಎಂದು ಕರೆಯುವುದು ರೂಢಿ. ಏನೇ ಇದ್ದರೂ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಡಲು ಮಾನಸ್ಸಿನ ನಿಯಂತ್ರಣ ಅತಿಮುಖ್ಯ ಎಂಬ ವಿಷಯವೂ ಅಷ್ಟೇ ಮುಖ್ಯವಾದುದು. ಈ ಕಾರಣದಿಂದ 'ದಮ' ಎಂದರೆ ಇಂದ್ರಿಯ ನಿಯಂತ್ರಣ ಎಂಬ ಅರ್ಥವನ್ನು ಮಾಡಿದರೂ ಯಾವ ಅಪರಾಧವೂ ಆಗುವುದಿಲ್ಲ. 

'ದಮ' ಎಂಬುದಕ್ಕೆ ನಿಯಂತ್ರಣ ಎಂಬರ್ಥವಿದೆ. 'ಇದು ಭೂಮಿ, ಇದು ಗಾಳಿ' ಇತ್ಯಾದಿಯಾದ ಅರಿವು ಬರಬೇಕಾದರೆ ಇವೇ ಐದು ಇಂದ್ರಿಯಗಳು ಬೇಕಲ್ಲವೇ? ಆ ಅರಿವು ಬರಬೇಕಾದರೆ ಮನಸ್ಸಿನ ಸಹಕಾರವೂ ಅಷ್ಟೇ ಅಗತ್ಯವಲ್ಲವೇ? ಇವೆರಡನ್ನು ನಿಯಂತ್ರಣ ಮಾಡುವುದು ಎಂದರೆ ಏನರ್ಥ? ಸಂಪೂರ್ಣ ತಡೆಗಟ್ಟುವುದು ಎಂಬರ್ಥವೇ? ಹಾಗಾದರೆ ಅರಿವು ಹೇಗೆ ಸಾಧ್ಯ ? ಎಂಬ ಸಂದೇಹವೂ ಬಾರದಿರದು. ಅರಿವು ಬಾರದಂತೆ ತಡೆಯುವುದು ಎಂಬರ್ಥವಲ್ಲ. ಅವುಗಳು ಅನರ್ಥವನ್ನು ಮಾಡದಂತೆ ತಡೆಯುವುದು ಎಂಬ ಅರ್ಥವಷ್ಟೆ. ಇದೇ ಮನಸ್ಸು ಸಾಧಕವೂ ಬಾಧಕವೂ ಆಗಬಹುದು. ಸಾಧಕವಾಗುವಂತೆ ಬಳಸಿ; ಬಾಧಕವಾಗದಂತೆ ತಡೆಯುವುದೇ ಸಂಯಮನ. ನಮ್ಮ ನಮ್ಮ ಉದ್ದೇಶಕ್ಕೆ ಅನುಗುಣವಾಗಿ ಮನಸ್ಸನ್ನು ಪಳಗಿಸಿ ಬಳಸುವುದು. ಮನಸ್ಸಿಗೆ ಬಾಹ್ಯ ಮತ್ತು ಆಂತರ ಎಂಬ ಎರಡು ಮುಖಗಳು ಉಂಟು. ಮನಸ್ಸು ಬಾಹ್ಯವಾಗಿ ಹರಿದರೂ ಅವುಗಳನ್ನು ನಿಯತವಾಗಿ ಬಳಸಿಕೊಳ್ಳುವುದನ್ನೂ ಮನೋನಿಯಂತ್ರಣ ಎಂದೇ ಕರೆಯಬಹುದು. ಮನಸ್ಸನ್ನು ಕಣ್ಣು ಕಿವಿ ಮೊದಲಾದ ಇಂದ್ರಿಯಗಳ ಮೂಲಕ ಹೊರ ಅರಿವನ್ನು ಪಡೆದುಕೊಂಡು, ಅದೇ ಅರಿವಿನಿಂದ ಅಂತರಂಗದ ಅರಿವನ್ನು ದೃಢಪಡಿಸಿಕೊಂಡರೆ ಅದನ್ನೇ ಮನೋನಿಗ್ರಹ ಎನ್ನಬಹುದು. ಇಂತಹ ನಿಗ್ರಹದಿಂದ ಮಾತ್ರ ಮನಸ್ಸನ್ನು ಅಂತರಂಗದಲ್ಲಿ ಹರಿಸಬಹುದು. ಮನಸ್ಸಿನಿಂದ ಅಂತರಂಗದಲ್ಲಿ ಬೆಳಗುವ ಪರಮಾತ್ಮಸ್ವರೂಪವಾದ ಬೆಳಕನ್ನು ಕಾಣುವುದು ಮುಖ್ಯ ಧ್ಯೇಯವಾಗಿದೆ. ಇದಕ್ಕೆ ಅನುಗುಣವಾಗಿ ಮನಸ್ಸನ್ನು ಬಳಸಿಕೊಳ್ಳುವುದೇ ಮನಸ್ಸಿನ ನಿಯಂತ್ರಣವಾಗಿದೆ. ಮನಸ್ಸಿನ ಸ್ವಭಾವವೇ ಚಂಚಲವಾದುದು. ಅದನ್ನು ನಿಲ್ಲಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದನ್ನು ಗೀತಾಚಾರ್ಯನಾದ ಶ್ರೀಕೃಷ್ಣನೇ ಹೇಳುತ್ತಾನೆ. ಹಾಗಾದರೆ ಮನಸ್ಸನ್ನು ನಿಲ್ಲಿಸುವುದು ಹೇಗೆ ಎಂಬ ಉಪಾಯವನ್ನೂ ಅಲ್ಲೇ ಶ್ರೀಕೃಷ್ಣನು 'ಅಭ್ಯಾಸ ಮತ್ತು ವೈರಾಗ್ಯದಿಂದ' ಎಂದು ಹೇಳಿದ್ದಾನೆ. ಅನಿಷ್ಟವನ್ನು ದೂರಮಾಡಿ ಇಷ್ಟವನ್ನು ಬರಮಾಡಿಕೊಳ್ಳುವುದೇ ನಿಜವಾದ ಮನಸ್ಸಿನ ದಮ. 

ಸೂಚನೆ : 24/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, March 23, 2024

ಅಷ್ಟಾಕ್ಷರೀ​ - 55 ತತ್ಸರ್ವಂ ಯೋಗಮಾಸ್ಥಿತಃ (Astaksari 55 –Tatsarvam Yogamasthitah

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಒಂದು ಕಾವ್ಯವನ್ನು ಬರೆಯುವುದೆಂದರೆ ಸುಲಭವಾದ ಮಾತಾದೀತೇ? ಕವಿಯಾಗಲು ಮೊದಲು ಬೇಕಾದುದು ಪ್ರತಿಭೆ. ಏನು ಪ್ರತಿಭೆಯೆಂದರೆ? ಇದು ಬಹಳ ವಿಸ್ತರಿಸಿ ಹೇಳಬೇಕಾದ ವಿಷಯ. ಸಂಕ್ಷೇಪವಾಗಿ ಹೇಳುವುದಾದರೆ, ನವನವವಾಗಿ ಈ ಜಗತ್ತನ್ನು ಕಾಣಬಲ್ಲ ಪ್ರಜ್ಞೆಯನ್ನೇ ಪ್ರತಿಭೆಯೆನ್ನುವುದು. ಕವಿಯ ಕಾರ್ಯವೆಂದರೆ ವರ್ಣನೆ, ಚಿತ್ರಣ. ಏನೇನನ್ನೋ ವರ್ಣಿಸುವುದು, ಹೇಗೆ ಹೇಗೋ ರೂಪಿಸುವುದಲ್ಲ; ವರ್ಣನೆಯ ಹಿಂದೆ ಪ್ರತಿಭೆಯ ಪ್ರಾಣಶಕ್ತಿಯು ಜೀವಕಳೆಯನ್ನು ತುಂಬಬೇಕು. ಈ ತೆರನಾದ ಮಾತುಗಳನ್ನು ನಾವು ಸಂಸ್ಕೃತದಲ್ಲಿರುವ ಭಾರತೀಯಸಾಹಿತ್ಯಮೀಮಾಂಸೆಯಲ್ಲಿ ಕಾಣುತ್ತೇವೆ.

ಕಾವ್ಯರಚನೆಯ ಸಂಕಲ್ಪವುಳ್ಳ ಕವಿಯ ಮನಸ್ಸು ಸಮಾಧಾನವಾಗಿರಬೇಕು: ಏನನ್ನು ಹೇಳಬೇಕೆಂದೆನಿಸಿರುವುದೋ ಅದು ಪರಿಪರಿಯಾಗಿ ಸ್ಫುರಿಸುವುದು ಆಗಲೇ; ಮತ್ತು ಅಂದುಕೊಂಡದ್ದನ್ನು ಸಮರ್ಥವಾಗಿ ತಿಳಿಸಲಾಗುವಂತೆ ಅದಕ್ಕೊಪ್ಪುವ ಪದಗಳು ಹೊಳೆಯುವುದೂ ಆಗಲೇ. ಇಲ್ಲೊಂದು ಎಚ್ಚರವೂ ಬೇಕು. ಏನೆಂದರೆ ಪ್ರತಿಭೆಯಷ್ಟೇ ಸಾಲದು; ಅದರ ಜೊತೆಗೆ ವ್ಯುತ್ಪತ್ತಿ-ಅಭ್ಯಾಸಗಳೂ ಬೇಕು. ಬಹುಜ್ಞತೆಯೇ ವ್ಯುತ್ಪತ್ತಿ. ಹಾಗೆಂದರೇನು?  ಲೋಕದ ನಡೆ ಹೇಗಿದೆ, ಬೇರೆ ಬೇರೆ ಶಾಸ್ತ್ರಗಳಲ್ಲಿಯ ವಿವರಣ-ವಿಶ್ಲೇಷಣಗಳೇನು, ಸತ್ಕವಿಗಳ ನಿರೂಪಣೆಯ ಬಗೆಗಳೇನು - ಇವನ್ನೆಲ್ಲ ಗಮನಿಸಿಕೊಳ್ಳುವುದು ವ್ಯುತ್ಪತ್ತಿ. ಅಲ್ಲದೆ, ವಿದ್ವಜ್ಜನರ ಸಂಪರ್ಕ, ಬಹುಶ್ರುತತೆ, ಕವಿಗಳೊಂದಿಗೆ ಸಹವಾಸ, ಮಹಾಕಾವ್ಯಗಳ ಅರ್ಥವನ್ನು ಆಗಾಗ್ಗೆ ಆಸ್ವಾದಿಸುವುದು, ಇತಿಹಾಸ-ಪುರಾಣಗಳ ಅವಲೋಕನ, ನಾನಾಕಲಾದರ್ಶನ - ಮುಂತಾದ ವಿಭಿನ್ನಪ್ರಕಾರಗಳಿಂದ ವ್ಯುತ್ಪತ್ತಿಯನ್ನು ಬೆಳೆಸಿಕೊಳ್ಳುವುದನ್ನು ಹೇಳಲಾಗಿದೆ. ಇವೆಲ್ಲ ಕಣ್ತೆರೆದು ನೋಡಿ, ಕಣ್ಣಲ್ಲಿ ಕಣ್ಣಿಟ್ಟು ನೋಡಿ ಆಗಬೇಕಾದವು.

ಆದರೆ ಕಣ್ಣುಮುಚ್ಚಿ ಯಾರಾದರೂ ಕಾವ್ಯವನ್ನು ಬರೆಯಲಾದೀತೆ? ಆದರೆ ವಾಲ್ಮೀಕಿಗಳು ರಾಮಾಯಣವನ್ನು ಹಾಗೆ ಬರೆದಿರುವರೆಂದು ಶ್ರೀರಂಗಮಹಾಗುರುಗಳು ನಿರೂಪಿಸಿದ್ದಾರೆ.  ಏನು ಹಾಗೆಂದರೆ? ಇದರ ಮರ್ಮವರಿಯಲು ರಾಮಾಯಣದ ಮೊದಲನೆಯ ಸರ್ಗಗಳನ್ನೊಮ್ಮೆ ಅವಲೋಕಿಸಬೇಕು.

ಆರಂಭದಲ್ಲಿ ವಾಲ್ಮೀಕಿಗಳು ನಾರದರನ್ನು ಪ್ರಶ್ನಿಸುತ್ತಾರೆ. ಈ ಸದ್ಗುಣಗಳಿಂದ ಕೂಡಿರುವ ಮನುಷ್ಯನು ಲೋಕದಲ್ಲಿರುವನೆ? - ಎಂದು ಪಟ್ಟಿಮಾಡುತ್ತಾರೆ: ಆತನು ಗುಣಶಾಲಿಯಾಗಿರಬೇಕು; ಜೊತೆಗೆ, ವೀರ್ಯಸಂಪನ್ನ, ಧರ್ಮಜ್ಞ, ವಿದ್ವಾಂಸ, ಕೋಪವನ್ನು ಗೆದ್ದವ, ಇತ್ಯಾದಿಗಳಾಗಿರಬೇಕು - ಎಂದು. ಅದಕ್ಕೆ ನಾರದರು, ಇಕ್ಷ್ವಾಕುವಂಶದಲ್ಲಿ ಜನಿಸಿದ ರಾಮನು ಇಂತಹವನು ಎಂದು ಹೇಳಿ ಅವನ ಜೀವನದ ಕಿರುಚಿತ್ರಣವನ್ನು ಕೊಡುತ್ತಾರೆ.

ನಾರದರನ್ನು ಬೀಳ್ಕೊಟ್ಟು, ವಾಲ್ಮೀಕಿಗಳು ಶಿಷ್ಯನೊಡನೆ ತಮಸಾ ನದಿಯಲ್ಲಿಗೆ ಬರುತ್ತಾರೆ. ಅದರ ನೀರದೆಷ್ಟು ತಿಳಿಯಾಗಿದೆ! - ಸಜ್ಜನರ ಮನಸ್ಸಿನಂತೆ! - ಎಂದುಕೊಳ್ಳುತ್ತಾರೆ. ಕೆಲವೇ ಕ್ಷಣಗಳಲ್ಲಿ ಕ್ರೌಂಚವಧೆಯಾಗಿ ಅವರ ಬಾಯಿಂದ ಶಾಪೋಕ್ತಿಯೇ ಬಂದುಬಿಡುತ್ತದೆ. ಸ್ನಾನಾನಂತರ  ಹಿಂದಿರುಗಿದಾಗ ಅವರಿದ್ದೆಡೆಗೆ ಬ್ರಹ್ಮನೇ ಆಗಮಿಸಿ, ಅವರ ಬಾಯಲ್ಲಿ ಶಾಪವಾಗಿ ಹೊಮ್ಮಿದ ಶ್ಲೋಕವು ತನ್ನ ಪ್ರೇರಣೆಯಿಂದಲೇ ಎಂದು ಹೇಳಿ, ಸಂಪೂರ್ಣರಾಮಚರಿತವನ್ನು ಚಿತ್ರಿಸುವ ಆದೇಶವನ್ನಿತ್ತು ಹೋಗುತ್ತಾನೆ. ಋಷಿಯೀಗ ಕವಿಯಾಗುತ್ತಾನೆ: ಆತನ ಉಕ್ತಿಯೇ ಆದಿಕಾವ್ಯವಾಗುತ್ತದೆ!

ಧರ್ಮಪುರುಷನಾದವನನ್ನು ಕುರಿತಾದ ಕಾವ್ಯವಾಯಿತಲ್ಲವೆ? ಆಚಮನ ಮಾಡಿ, ದರ್ಭಾಸನವನ್ನು ಹಾಸಿ ಕುಳಿತು, ರಾಮಾಯಣಕಥೆಯ ನಡೆಯನ್ನು ಧರ್ಮದಿಂದಲೇ ಅವೇಕ್ಷಿಸುತ್ತಾರೆ. ರಾಮಾದಿಗಳು ಮಾಡಿದುದನ್ನೆಲ್ಲವನ್ನೂ "ಧರ್ಮವೀರ್ಯದಿಂದ ಯಥಾವತ್ತಾಗಿ ಕಂಡುಕೊಂಡರು." "ಯೋಗದ ನೆಲೆಯಲ್ಲಿ ನಿಂತು" ಪರೋಕ್ಷದಲ್ಲಿ ನಡೆದುದೆಲ್ಲವನ್ನೂ ಅಂಗೈನೆಲ್ಲಿಯಂತೆ ಸ್ಫುಟವಾಗರಿತರು. "ಎಲ್ಲವನ್ನೂ ತತ್ತ್ವತಃ ಕಂಡುಕೊಂಡು" ಶ್ರೀರಾಮಚರಿತವನ್ನು ರಚಿಸಿದರು - ಎನ್ನುತ್ತದೆ, ರಾಮಾಯಣ.

ರಾಮನು ನಕ್ಕದ್ದು ನುಡಿದದ್ದು ನಡೆದದ್ದು – ಇವನ್ನೆಲ್ಲಾ ಹೋಗಿ ನೇರ ಕಂಡು ಬರೆದದ್ದಲ್ಲ; ಹಾಗೆಂದು, ಊಹಿಸಿ ಬರೆದದ್ದೂ ಅಲ್ಲ; ತಾತ್ತ್ವಿಕವಾಗಿ ಕಂಡು, ಎಂದರೆ ಯೋಗದೃಷ್ಟಿಯಿಂದ ಸಾಕ್ಷಾತ್ಕರಿಸಿಕೊಂಡು, ಯಥಾವತ್ತಾಗಿ ರಚಿಸಿರುವುದು. ಎಂದೇ "ತತ್ಸರ್ವಂ ಯೋಗಮಾಸ್ಥಿತಃ", "ತತ್ತ್ವತೋ ದೃಷ್ಟ್ವಾ" "ಧರ್ಮವೀರ್ಯೇಣ"  ಎಂಬ ಮಾತುಗಳನ್ನು ಮೂಲರಾಮಾಯಣದಲ್ಲಿವೆ. ಪಾರಂಪರಿಕ ವ್ಯಾಖ್ಯಾನಗಳೂ ಯೋಗದ ಬಲದಿಂದೆಂದೇ ವಿವರಿಸಿವೆ.

ಯೋಗದಿಂದ ಕಂಡುಕೊಳ್ಳುವುದೆಂದರೆ ಕಣ್ಣಗಲಿಸಿ ಕಂಡುಕೊಳ್ಳುವುದಲ್ಲ; ಅಂತರ್ದೃಷ್ಟಿಯಿಂದ ಅರಿತುಕೊಂಡು - ಎಂದರ್ಥ. ಭಾರತೀಯಪರಂಪರೆಯ ನುಡಿಯಿದು: ವಸ್ತುತಃ ಋಷಿಯಾದವನೇ ಕಾವ್ಯವನ್ನು ಬರೆಯಲಾಗುವುದು; ತತ್ತ್ವಸಾಕ್ಷಾತ್ಕಾರ ಮಾಡಿಕೊಂಡವನೇ ಋಷಿಯಾಗುವುದು.

ಈ ಮಾತುಗಳೆಲ್ಲವೂ ಆದಿಕಾವ್ಯವೆನಿಸಿದ ರಾಮಾಯಣವನ್ನು ಬರೆದ ಆದಿಕವಿ ಮಹರ್ಷಿ ವಾಲ್ಮೀಕಿಯ ವಿಷಯದಲ್ಲಿ ಯಥಾವತ್ತಾಗಿ ಅನ್ವಿತವಾಗಿವೆ. ಈ ಹಿನ್ನೆಲೆಯಲ್ಲೇ ರಾಮಾಯಣವು "ಕಣ್ಣುಮುಚ್ಚಿಕೊಂಡು ಬರೆದ ಕಾವ್ಯ"ವೆನ್ನುವ ಮಾತಿನಲ್ಲಿ ಸಾಂಗತ್ಯವಿರುವುದು. ಇಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ; ಒಗಟೆಯ ಮಾತಿನಂತೆ ತೋರಿದರೂ (ವಸ್ತುತಃ ಹಾಗೆ ತೋರುವುದರಿಂದಲೇ) ಸತ್ಯಾರ್ಥವನ್ನು ಒತ್ತಿಹೇಳುವ ಮಾತೇ ಆಗಿದೆ, ಶ್ರೀರಂಗಮಹಾಗುರುಗಳ ಈ ನುಡಿ. ಋಷಿಯೊಬ್ಬನ ಅಂತರಂಗವನ್ನು ಮತ್ತೊಬ್ಬ ಋಷಿಯೇ ಹಿಡಿಯಬಲ್ಲನೆಂಬುದೂ ಸತ್ಯವಲ್ಲವೇ?

ಸೂಚನೆ: 23/03/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 7 ಪ್ರೇಮೋದ್ದೀಪನ – ಕೋದಂಡರಾಮ-ವೇಣುಗೋಪಾಲ (Krsnakarnamrta - 6 Premoddipana – Kodandarama-Venugopala)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರೇಮಭಾವವನ್ನು ಯಾವುದು ಉಕ್ಕಿಸುವುದೋ, ಅರ್ಥಾತ್ ಉದ್ದೀಪನಗೊಳಿಸುವುದೋ ಅದು ಉದ್ದೀಪನವಿಭಾವ. ದೀಪನವೆಂದರೆ ಬೆಳಗಿಸುವುದು, (ದೀಪವನ್ನು) ಹಚ್ಚುವುದು; ಉದ್ದೀಪನವೆಂದರೆ ಹೆಚ್ಚಿಸುವುದು.

ವಿರಹಾವಸ್ಥೆಯಲ್ಲಿರುವಾಗ, ತನ್ನ ಪ್ರೇಮಿಗೆ ಸಂಬಂಧಪಟ್ಟ ಯಾವೊಂದು ವಸ್ತುವನ್ನು  ಕಂಡರೂ, ಪ್ರೇಮಭಾವವು ಉಕ್ಕುವಂತಾಗುವುದಲ್ಲವೆ? ಉದಾಹರಣೆಗೆ ತನಗೆ ಪ್ರೀತಿಪಾತ್ರರಾದವರ ಒಂದು ಚಿತ್ರವೋ, ಬರಹವೋ, ಪತ್ರವೋ, ಆಭರಣವೋ, ಕೊನೆಗೊಂದು ಕರವಸ್ತ್ರವೋ - ಯಾವುದು ಸಿಕ್ಕಿದರದು ಪ್ರೇಮಿಯಲ್ಲಿಯ ಪ್ರೇಮಭಾವವನ್ನು ಉದ್ದೀಪನಗೊಳಿಸುವುದು.

ಇದಲ್ಲದೆ ಪ್ರಕೃತಿಯಲ್ಲಿಯ ಕೆಲ ಸಂನಿವೇಶಗಳೂ ಪ್ರೇಮೋದ್ದೀಪಕಗಳೆನಿಸುತ್ತವೆ. ಉದಾಹರಣೆಗೆ ಹಂಸಪಕ್ಷಿಗಳ ಜೋಡಿಯೊಂದನ್ನು ಕಂಡಾಗ ಪ್ರೇಮಿಗಳಲ್ಲಿ ಸಹಜವಾಗಿ ಭಾವೋದ್ದೀಪನವಾಗುವುದು. ಹೀಗಾಗಿ ಜೊತೆಯಾಗಿ ನಲಿಯುತ್ತಿರುವ ಪಕ್ಷಿದ್ವಂದ್ವವು ಉದ್ದೀಪಕ.

ಈ ಆಲಂಬನವಿಭಾವ-ಉದ್ದೀಪನವಿಭಾವಗಳೆಂಬುದು ಎಲ್ಲ ರಸಗಳ ವಿಷಯಕ್ಕೂ ಅನ್ವಯಿಸುವಂತಹುದೇ. ಉದಾಹರಣೆಗೆ, ತನ್ನ ಮಗುವು ಸತ್ತು ಕೆಲಕಾಲ ಕಳೆದಿದ್ದರೂ, ಅದರ ನೆಚ್ಚಿನ ಗೊಂಬೆಯೊಂದು ಅಕಸ್ಮಾತ್ ದೊರೆತಲ್ಲಿ, ತಾಯಿಗೆ ದುಃಖವು ಉದ್ದೀಪಿತವಾಗುವುದು. ಇಲ್ಲಿಯ ಕರುಣರಸಕ್ಕೆ ಮಗುವು ಆಲಂಬನವಿಭಾವ, ಆ ಆಟದವಸ್ತುವು ಉದ್ದೀಪನವಿಭಾವ.

ಇಬ್ಬರು ಪ್ರೇಮಿಗಳು ಸಂತೋಷದಿಂದಿರುವುದನ್ನು ಕಂಡು ಕರುಬುವವರೂ ಇರುವುದುಂಟಲ್ಲವೇ? ನಿನ್ನ ಪ್ರಿಯನಿಗೆ ಮತ್ತೊಬ್ಬ ಪ್ರೇಯಸಿಯೂ ಇರುವಳು! - ಎಂದು ಸುಳ್ಳೇ ಹೇಳಿದರೂ ಅದೊಂದು ಕೀಟವನ್ನು ಬಿಟ್ಟಂತೆಯೇ ತಲೆಯೊಳಗೆ. ಯಾರೂ ಹಾಗೆ ಹೇಳದೆಯೂ ಒಮ್ಮೊಮ್ಮೆ ಹಾಗೆ ಸಂಶಯವು ಹುಟ್ಟುವುದೂ ಅಸಂಭವವಲ್ಲ: ಪ್ರೇಮದ ನಡೆಯೇ ಹಾಗೆ; ಮತ್ತೊಬ್ಬರೊಂದಿಗೆ ತನ್ನ ಪ್ರೇಮವಸ್ತುವನ್ನು ಹಂಚಿಕೊಳ್ಳಲಾದೀತೇ?  ಇನ್ನು ನಿದ್ರಾಮಧ್ಯದಲ್ಲಿ ತನ್ನವನು ಮತ್ತೊಬ್ಬಳ ಹೆಸರನ್ನೆತ್ತಿಬಿಟ್ಟರಂತೂ ಕಥೆ ಮುಗಿಯಿತು; ವ್ಯಥೆಯೇ ಶುರುವಾಯಿತು – ಎನ್ನಬಹುದೇನೋ! ಇಲ್ಲೂ, ಕನವರಿಕೆಯಲ್ಲಿಯ ಜಾನಕೀಸ್ಮರಣೆಯು ರಾಮನಿಗಾಗಲು, ರಾಧೆಯ ಮನಸ್ಸಿನಲ್ಲೆದ್ದ ಆತಂಕವೂ ಅದೇ ತೆರನೇ ಅಲ್ಲವೆ?

ವಿರಹಿಗಳಲ್ಲಿಯ ಪ್ರೇಮಭಾವವನ್ನು ಪ್ರಕೃತಿಯಲ್ಲಿಯ ಕೆಲವು ವಸ್ತುಗಳು ಸಹಜವಾಗಿ ಜಾಗರಗೊಳಿಸಬಲ್ಲವು. ಉದಾಹರಣೆಗೆ ಮೋಡವು ಪ್ರೇಮಕಾಮಗಳೆರಡಕ್ಕೂ ಉದ್ದೀಪಕವೆಂಬುದು ಸಾಹಿತ್ಯದಲ್ಲಿ ಸುವಿದಿತವಾದುದೇ. ಅರ್ಥಾತ್ ವಿಪ್ರಲಂಭಶೃಂಗಾರ-ಸಂಭೋಗಶೃಂಗಾರ-- ಇವೆರಡರಲ್ಲೂ ಅದಕ್ಕೆ ಪಾತ್ರವುಂಟು. ಸೀತಾಪಹರಣವಾದ ಬಳಿಕ ರಾಮನಿಗೆ ಬಹುಕ್ಲೇಶವನ್ನು ಕೊಟ್ಟ ಸಮಯವೆಂದರೆ ಮೋಡ-ಮಳೆಗಳ ಕಾಲವೇ; ಅದೋ, ಆಗಲೇ ಅಲ್ಲವೇ ಸುಗ್ರೀವನೂ ರಾಮನಿಗೆ ತಾನಿತ್ತಿದ್ದ ಮಾತನ್ನೂ ಮರೆತು, ತನ್ನ ಪ್ರಿಯೆಯ ಸಂಗದಲ್ಲಿ ಮೈಮರೆತು ವಿಳಂಬಮಾಡಿ, ರಾಮನಿಗೆ ಕೋಪ ಬರಿಸಿದುದು? ಹೀಗೆ ಸುಖಿಗಳ ಮನಸ್ಸಲ್ಲೂ ಅದೇನೋ ಅಲೆಗಳನ್ನು ಎಬ್ಬಿಸುವುದು ಈ ಮೇಘದರ್ಶನ.

ಮೋಡವು ಮಾತ್ರವೇನು, ನಿಸರ್ಗದಲ್ಲಿಯ ಯಾವುದೇ ರಮ್ಯದೃಶ್ಯವೂ ಏನೋ ವ್ಯಾಕುಲತೆಯನ್ನು ಚೋದಿಸಬಲ್ಲುದು. ರಮ್ಯಪ್ರೇಕ್ಷ್ಯಗಳು ಮಾತ್ರವಲ್ಲದೆ, ಮಧುರಗಾನವು ಸಹ ಜನ್ಮಾಂತರಗಳ ಸಂಗಗಳ ಯಾವಯಾವುದೋ ಸುಪ್ತವಾಸನೆಗಳನ್ನು ಚೋದಿಸಬಲ್ಲುದು – ಎನ್ನುತ್ತಾನೆ ಕಾಳಿದಾಸ, ತನ್ನ ಶಾಕುಂತಲನಾಟಕದಲ್ಲಿ.

ಅಂತೂ ನಾವು ಗಮನಿಸಿದ ಕೃಷ್ಣಕರ್ಣಾಮೃತದ ಸೊಗಸಾದ ಶ್ಲೋಕವು, ಹಿಂದೆ ಘಟಿಸಿದ್ದ ಜಾನಕೀವಿರಹವೆಂಬ ಪೂರ್ವಜನ್ಮಚರಿತ-ಘಟಿತಗಳನ್ನು ಹೀಗೊಂದು ಆಸ್ವಾದ್ಯವಾದ ವಾಕ್ಚಿತ್ರವಾಗಿ ನಮ್ಮ ಕಣ್ಣಮುಂದೆ ತಂದಿರಿಸಿದೆ.


ರಾಮನೋ ಕೃಷ್ಣನೋ?

ರಾಮಜನ್ಮಭೂಮಿಯ ಉತ್ಸವವನ್ನು ಕೆಲವೇ ವಾರಗಳ ಹಿಂದಷ್ಟೇ ಭಾರತವೆಲ್ಲವೂ ವೀಕ್ಷಿಸಿತಷ್ಟೆ? ಇದೋ ಇನ್ನೇನು ರಾಮನವಮಿಯೇ ಬಂದಿತು! ರಾಮನ ದೇಶ, ರಾಮನ ಕಾಲ – ಎರಡೂ ನಿಕಟವಾದುವು!  ಹೀಗಿರಲು, ರಾಮನ ಸೌಂದರ್ಯದ ಬಗ್ಗೆ ಈ ಕೃಷ್ಣಕರ್ಣಾಮೃತದ ಕವಿ ಏನೆನ್ನುವನೆಂದು ಒಮ್ಮೆ ನೋಡಬಹುದು.

ಅದಕ್ಕೆ ಮೊದಲು ರಾಮಾವತಾರ-ಕೃಷ್ಣಾವತಾರಗಳಲ್ಲಿಯ ಭೇದಗಳನ್ನೂ ಒಮ್ಮೆ ನೋಡಬಹುದು. ಅವನ್ನು ಅವರಿಬ್ಬರ ಹುಟ್ಟಿನ ಸಂನಿವೇಶಗಳೇ ಚಿತ್ರಿಸುವುವೆಂದರೂ ತಪ್ಪಾಗಲಾರದು.

ರಾಮನಲ್ಲೊಂದು ಸೌಂದರ್ಯ, ಕೃಷ್ಣನಲ್ಲೊಂದು ಸೌಂದರ್ಯ. ರಾಮನ ಹುಟ್ಟುವ ವೇಳೆಗೆ ಚೈತ್ರಮಾಸಾರಂಭವಾದರೂ, ವಸಂತಮಾಸದ ಇನ್ನೂ ಆರಂಭವದಾದ್ದರಿಂದ, ಅಲ್ಲಿ ಕೃಷ್ಣನು ಹುಟ್ಟುವ ಶ್ರಾವಣಮಾಸದ ಸೊಬಗಿನ ಕಳೆಕಟ್ಟಿರುವುದಿಲ್ಲ. ರಾಮ ಹುಟ್ಟುವ ಹೊತ್ತಿಗಾಗಲೇ ಒಂದಿಷ್ಟಾದರೂ ಬಿಸಿಲು ಕಾಯುತ್ತಿರುತ್ತದೆಯಲ್ಲವೇ? ಎಂದೇ ಪಾನಕ-ಕೋಸಂಬರಿಗಳ ವಿನಿಯೋಗಕ್ಕೆ ಆಗ ಬಹಳ ಬೆಲೆ. ಆದರೆ ಕೃಷ್ಣನು ಹುಟ್ಟುವ ವೇಳೆಗೆ ಪ್ರಕೃತಿಯಲ್ಲಿಯ ಸೊಬಗೇ ಸೊಬಗು. ಆಗ ಲಭ್ಯವಾಗುವ ಹಣ್ಣುಗಳೇನು, ಹೂವುಗಳೇನು, ಒಟ್ಟಿನ ಸಮೃದ್ಧಿಯೇನು, ಸಂಭ್ರಮ-ಸಡಗರಗಳೇನು! ಕೃಷ್ಣನಿಗೆ ಸಮರ್ಪಣೆಗೆಂದು ನೂರೆಂಟು ಬಗೆಯ ಭಕ್ಷ್ಯಗಳನ್ನು ಮಾಡುವ ಪರಿಪಾಟಿಯೂ ಉಂಟಲ್ಲವೇ? ರಾಮ-ಕೃಷ್ಣರ ಜನನಗಳಲ್ಲಿಯ ಇತರ ಕೆಲ ವೈಷಮ್ಯಗಳನ್ನೂ ಗಮನಿಸಬಹುದು: ರಾಮನು ಹುಟ್ಟಿದುದು ಹಗಲಲ್ಲಿ, ಕೃಷ್ಣನು ರಾತ್ರಿಯಲ್ಲಿ; ರಾಮನು ಶುಕ್ಲಪಕ್ಷದಲ್ಲಿ, ಕೃಷ್ಣನು ಕೃಷ್ಣಪಕ್ಷದಲ್ಲಿ; ರಾಮನು ಉತ್ತರಾಯಣದಲ್ಲಿ, ಕೃಷ್ಣನು ದಕ್ಷಿಣಾಯನದಲ್ಲಿ!

ಅದೇನೇ ಇರಲಿ, ನಮ್ಮ ಕವಿ ಲೀಲಾಶುಕನಿಗಂತೂ ಸ್ಮೇರಾನನನಾದ, ಎಂದರೆ ಮುಗುಳ್ನಗೆಯಿಂದ ಒಪ್ಪುವ ಗೋಪವಧೂಕಿಶೋರನಾದ ಕೃಷ್ಣನೇ ಅಚ್ಚುಮೆಚ್ಚು: ಇಷ್ಟದೇವತೆ. ಜನ್ಮದಿಂದಲೂ ಉಪಾಸನೆಯಿಂದಲೂ ಈತ ಶೈವನಾದರೂ; ಶಿವನಿಗೆ ರಾಮನೂ ರಾಮನಿಗೆ ಶಿವನೂ ಪೂಜ್ಯರೆಂದಾದರೂ; ರಾಮನೂ ಕೃಷ್ಣನೂ ಬೇರೆಬೇರೆಯೇನಲ್ಲ (ಇಬ್ಬರೂ ವಿಷ್ಣುವಿನ ಅವತಾರಗಳೇ ತಾನೆ?) - ಎಂದೇ ಆದರೂ ಸಹ, ನಮ್ಮ ಲೀಲಾಶುಕನಿಗೆ ಹೃದಯಕ್ಕೆ ಆಪ್ತನಾದವನು ಕೃಷ್ಣನೇ, ರಾಮನಲ್ಲ.

ಎಷ್ಟೆಂಬುದಕ್ಕೆ ನಿದರ್ಶನ, ಕೃಷ್ಣಕರ್ಣಾಮೃತದಲ್ಲಿ ರಾಮನನ್ನು ಸಂಬೋಧಿಸಿರುವ ಒಂದು ಶ್ಲೋಕ: "ಸೀತಾಪತಿಯೇ, ನಿನಗೆ ನಮಸ್ಕಾರ ಮಾಡುವೆ. ನೀನು ನಾ ಹೇಳಿದಂತೆ ಮಾಡುವೆಯಾದರೆ"!  ಏನು ಮಾಡಬೇಕು ರಾಮ? "ರಾಮ, ನಿನ್ನ ಬಿಲ್ಲು-ಬಾಣಗಳನ್ನು ಕ್ಷಣಕಾಲ ತೊರೆ; ಮೃದುವೂ ಮನೋಜ್ಞವೂ ಆದ ಕೊಳಲನ್ನು ಕೈಯಲ್ಲಿ ಹಿಡಿದುಕೋ. ಇಷ್ಟೇ ಸಾಲದು; ತಲೆಯ ಮೇಲೊಂದು ನವಿಲುಗರಿಯನ್ನೂ ಧರಿಸು. ಆಮೇಲಿದೋ, ನಿನಗೆ ನಮಿಸುವೆ, ಓ ಸೀತಾಪತೇ! - ಎನ್ನುತ್ತಾನೆ, ಕವಿ! ಶ್ಲೋಕ ಹೀಗಿದೆ:

ವಿಹಾಯ ಕೋದಂಡ-ಶರೌ ಮುಹೂರ್ತಂ

   ಗೃಹಾಣ ಪಾಣೌ ಮೃದು-ಚಾರು-ವೇಣುಮ್ |

ಮಾಯೂರ-ಬರ್ಹಂ ಚ ನಿಜೋತ್ತಮಾಂಗೇ

   ಸೀತಾಪತೇ ತ್ವಾಂ ಪ್ರಣಮಾಮಿ ಪಶ್ಚಾತ್ ||

ಬಿಲ್ಲು-ಬಾಣಗಳೆಂದರೆ ವೀರರಸ-ರೌದ್ರರಸಗಳಿಗೆ ತಾನೆ ಎಡೆ? ಆದರೆ ಭಗವಂತನ ಅವತಾರಗಳಿಗೆ ಎರಡು ಮುಖಗಳಿರುತ್ತವೆಯಲ್ಲವೆ? ಮೊದಲನೆಯದು ಅಧರ್ಮ-ವಿಧ್ವಂಸನ , ಎರಡನೆಯದು ಧರ್ಮ-ಸ್ಥಾಪನ. ಮೊದಲನೆಯದಕ್ಕಾಗಿ ಆಯುಧಗಳು ಬೇಕು: ಅಧರ್ಮನಿರ್ಮೂಲನಕ್ಕಾಗಿ ಶಸ್ತ್ರಾಸ್ತ್ರಗಳು ಬೇಕಾದವೇ. (ಶಸ್ತ್ರಗಳು ಬೇರೆ, ಅಸ್ತ್ರಗಳು ಬೇರೆ. ಆಯುಧ ಅಥವಾ ಪ್ರಹರಣವೆಂದರೂ ಶಸ್ತ್ರವೇ. ಮಂತ್ರಬಲದೊಂದಿಗೆ ಪ್ರೇಷಿತವಾಗತಕ್ಕವು ಅಸ್ತ್ರಗಳು). ಎಂದೇ ದುರ್ಗೆಯಾಗಲಿ ರಾಮನಾಗಲಿ ಆಯುಧಭೂಷಿತರೇ. ಕೃಷ್ಣನೂ ಆಯುಧಗಳನ್ನು ಹೊಂದಿರತಕ್ಕವನೇ: ಶಾರ್ಙ್ಗವೆಂಬ ಬಿಲ್ಲು, ನಂದಕವೆಂಬ ಖಡ್ಗ, ಸುದರ್ಶನವೆಂಬ ಚಕ್ರ, ಕೌಮೋದಕಿಯೆಂಬ ಗದೆ – ಇವುಗಳೆಲ್ಲ ಕೃಷ್ಣನಿಗೆ ಉಂಟೇ. ಆದರೂ ಯುದ್ಧಪ್ರಸಿದ್ಧಿಗಿಂತಲೂ ಆತನ ಮುರಲೀಮೋಹನರೂಪವೇ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವುದಲ್ಲವೇ? ಲೀಲಾಶುಕನ ಮೆಚ್ಚುಗೆಗೆ ಪಾತ್ರವಾಗಿರುವುದು ಅದುವೇ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ23/3/2024 ರಂದು ಪ್ರಕವಾಗಿದೆ.

Sunday, March 17, 2024

ಯಕ್ಷ ಪ್ರಶ್ನೆ 81(Yaksha prashne 81)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 80 ತಪಸ್ಸಿನ ಲಕ್ಷಣವೇನು ?

ಉತ್ತರ - ತನ್ನ ತನ್ನ ಧರ್ಮದಲ್ಲಿರುವುದು.  

ತನ್ನ ತನ್ನ ಧರ್ಮದಲ್ಲಿರುವುದೇ ತಪಸ್ಸಿನ ಲಕ್ಷಣ ಎಂಬುದಾಗಿ ಯಕ್ಷನ ಪ್ರಶ್ನೆಗೆ ಇಲ್ಲಿ ಧರ್ಮರಾಜನು ಉತ್ತರವನ್ನು ಕೊಟ್ಟಿದ್ದಾನೆ. ಧರ್ಮ ಎಂದರೇನು? ಎಂದು ತಿಳಿದಾಗ ಮಾತ್ರವೇ ತಪಸ್ಸಿನ ಅರ್ಥ ಆಗಬಹುದು. ಆರಂಭಿಸಿರುವ ಕಾರ್ಯವು ಫಲಿಸುವ ಪರ್ಯಂತ ಹಾಕುವ ಶ್ರಮವೇ ತಪಸ್ಸು. ಹಾಗಾಗಿ ಯಾವುದೇ ಕೆಲಸವೂ ಧರ್ಮವನ್ನು ಉಳಿಸಲು ಸಾಧಕವಾಗುವುದು. ಶ್ರಮರೂಪವಾದ ಕಠಿಣ ತಪಸ್ಸು ಧರ್ಮವನ್ನು ಉಳಿಸುವುದು. ಯಾವುದು ಅದರದರ ತನವನ್ನು ಉಳಿಸುವುದೋ, ಅದನ್ನೇ ಇಲ್ಲಿ ತಪಸ್ಸು ಎಂದು ಕರೆಯಲಾಗಿದೆ. 

ಧರ್ಮ ಎಂದರೇನು? ಎಂಬುದಕ್ಕೆ ಈ ಹಿಂದಿನ ಲೇಖನದಲ್ಲಿ ವಿವರಿಸಲಾಗಿದೆ. ಅದನ್ನು ಇಲ್ಲಿ ಅನುಸಂಧಾನ ಮಾಡಿಕೊಂಡು ಈ ಲೇಖನಕ್ಕೆ ಅಡಿಯಿಡಬೇಕು. ಅದಕ್ಕೂ ಪೂರ್ವದಲ್ಲಿ ಶ್ರೀರಂಗ ಮಹಾಗುರುಗಳು ಹೇಳಿದ ಮಾತನ್ನು ಅನುಸಂಧಾನ ಮಾಡಿಕೊಂಡರೆ ಮುಂದಿನ ಕಾರ್ಯ ಸುಗಮವಾಗಬಹುದು. "ಧರ್ಮವು ಬಿದ್ದವನನ್ನೂ ಬೀಳುತ್ತಿರುವವನನ್ನೂ ಬೀಳುವವನನ್ನೂ ಮೇಲಕ್ಕೆ ಎತ್ತಿ ಹಿಡಿದು ಧರಿಸಿ ಕಾಪಾಡಿಕೊಳ್ಳುವುದಾಗಿದೆ. ಜೀವದ ವಿಕಾಸದಿಂದಾರಂಭಿಸಿ ಗರ್ಭದಲ್ಲಿ ಮತ್ತು ಅಲ್ಲಿಂದ ಹೊರಗೆ ಬಂದ ಮೇಲೂ ಇಲ್ಲಿಯವರೆಗೂ ನಮ್ಮನ್ನು ಬೆಳೆಸಿ ಕಾಪಾಡಿಕೊಂಡು ಬಂದಿರುವುದು ಧರ್ಮವೇ. ಧರ್ಮವು ಜಗತ್ತನ್ನು ಕೈಬಿಟ್ಟರೆ ಒಂದು ಕ್ಷಣವೂ ಯಾವುದೂ ಉಳಿಯುವಂತಿಲ್ಲ. ಆದ್ದರಿಂದ ನಮ್ಮನ್ನು ಉಳಿಸುವುದೂ ಧರ್ಮವೇ" ಎಂದು. ಯಾವುದು ಈ ಜಗತ್ತನ್ನು ಹೊತ್ತಿದೆಯೋ, ಯಾವುದು ಈ ಜಗತ್ತನ್ನು ರಕ್ಷಿಸುತ್ತಿದೆಯೋ, ಅದನ್ನೇ 'ಧರ್ಮ' ಎಂದು ಕರೆಯುತ್ತಾರೆ. ಈ ವಿಶ್ವವು ಯಾವುದೋ ಒಂದು ಧಾರಕಶಕ್ತಿಯಿಂದ ಮುನ್ನಡೆದುಕೊಂಡು ಬರುತ್ತಿದೆ. ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳು ಆಕಾಶದಲ್ಲಿ ಹೇಗೆ ಇರಲು ಸಾಧ್ಯ. ಏತಕ್ಕೆ ಅವೆಲ್ಲವೂ ಕೆಳಕ್ಕೆ ಬೀಳುವುದಿಲ್ಲ. ನಾವು ಆರೋ ಏಳೋ ಅಡಿಯ ಎತ್ತರವಿರುತ್ತೇವೆ? ಏಕೆ ಕೆಳಕ್ಕೆ ಬೀಳುವುದಿಲ್ಲ? ಅಂದರೆ ಇದಕ್ಕೆ ಕಾರಣವೇ ಆ ಧಾರಕಶಕ್ತಿಯಾದ ಧರ್ಮ. ಅದರದರ ಸ್ವಸ್ಥವಾದ - ಆರೋಗ್ಯವಾದ ಅವಸ್ಥೆಯನ್ನೇ 'ಧರ್ಮ' ಎಂದು ಕರೆಯುತ್ತೇವೆ. ಅದು ಕೆಟ್ಟಾಗ ಧರ್ಮ ಕೆಟ್ಟಿದೆ ಎನ್ನಲಾಗುತ್ತದೆ. ಇಲ್ಲಿ ಧರ್ಮ ಎಂದರೆ ಯಾವುದೋ ಮತ, ಆಚಾರ, ವಿಚಾರವಲ್ಲ. ಧಾರಕಶಕ್ತಿಯನ್ನು ಉಳಿಸುವಂತೆ ಇದ್ದಾಗ ಮಾತ್ರ ಇವೆಲ್ಲವೂ ಧರ್ಮವಾಗಬಹುದು. ಸಹಜಾವಸ್ಥೆ ಮತ್ತು ಅದನ್ನು ಉಳಿಸುವ ಕಾರಣಸಾಮಗ್ರಿ ಎಲ್ಲವನ್ನೂ ಒಟ್ಟಾಗಿ ಸೇರಿಸಿ 'ಧರ್ಮ' ಎಂದು ಕರೆಯಬಹುದು. ಇವೆಲ್ಲವೂ ಅವುಗಳ ಕಾರ್ಯವನ್ನು ಮಾಡಲು ಸರ್ವಸಮರ್ಥವಾಗಿದ್ದಾಗ ಧರ್ಮ ಸರಿಯಾಗಿದೆ ಎನ್ನುತ್ತೇವೆ. ಇಂತಹ ಅವಸ್ಥೆಯನ್ನು ಉಳಿಸಲು ಕೆಲಸವನ್ನು ಮಾಡಬೇಕಾಗುತ್ತದೆ. ಮತ್ತು ಅಂತಹ ಅವಸ್ಥೆ ಕೆಟ್ಟಾಗಲೂ ಸರಿಪಡಿಸಲು ಕೆಲಸ ಮಾಡಬೇಕಾಗುತ್ತದೆ. ಇದನ್ನೇ 'ತಪಸ್ಸು' ಎಂಬುದಾಗಿ ಯಕ್ಷನ ಪ್ರಶ್ನೆಗೆ ಉತ್ತರವಾಗಿ ಭಾವಿಸಬೇಕು. 

ಉದಾಹರಣೆಗೆ ಶರೀರದ ಪ್ರತಿಯೊಂದು ಅಂಗವೂ ಅದರದರ ಸಹಜತನದಲ್ಲಿ ಇದ್ದರೆ ಮಾತ್ರವೇ ಶರೀರ ಸ್ವಸ್ಥವಾಗಿದೆ ಎನ್ನುತ್ತೇವೆ. ಅಂತಹ ಶರೀರವೇ "ಶರೀರಮಾದ್ಯಂ ಖಲು ಧರ್ಮಸಾಧನಮ್" ಆಗುತ್ತದೆ. ಕೆಲವೊಮ್ಮೆ 'ತಲೆ ಸುತ್ತುತ್ತದೆ' ಎಂದು ಹೇಳುತ್ತೇವೆ. ಆಗ ಉಳಿದೆಲ್ಲ ಅಂಗಗಳು ಸರಿ ಇದ್ದರೂ ಅಲ್ಲಿ ಕೆಲಸಮಾಡಲು ಸಾಧ್ಯವಾಗುವುದಿಲ್ಲ. ಅಗ ತಲೆ ಸುತ್ತು ಆಗದಂತೆ ಮಾಡಬೇಕಾಗುತ್ತದೆ. ಅಥವಾ ತಲೆ ಯಾವಾಗಲೂ ಸುತ್ತದೇ ಇರುವಂತೆ ನೊಡಿಕೊಳ್ಳಬೇಕಾಗುತ್ತದೆ. ಸೃಷ್ಟೀಶನ ಆಶಯಕ್ಕೆ ಅನುಗುಣವಾಗಿ ಆ ಪದಾರ್ಥದಮೂಲಸ್ವರೂಪವನ್ನು ಕೆಡಿಸದಂತೆಉಳಿಸುವುದೇ 'ತಪಸ್ಸು'.  

ಸೂಚನೆ : 17/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 79 ಭೀಷ್ಮರ ಸಲಹೆ (Vyaasa Vikshita - 79 Bhishmara Salahe)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಕರ್ಣ-ದುರ್ಯೋಧನರ ಮಾತಾದಮೇಲೆ, ಮಂತ್ರಾಲೋಚನೆಗೆಂದು ಭೀಷ್ಮ-ದ್ರೋಣ-ವಿದುರರನ್ನು ಬರಮಾಡಿಸಲಾಯಿತಷ್ಟೆ. ಭೀಷ್ಮರು ಹೇಳಿದರು:

"ಯಾವುದೇ ಕಾರಣಕ್ಕೂ ಪಾಂಡವರೊಂದಿಗೆ ವಿರೋಧವೆಂಬುದು ನನಗೆ ರುಚಿಸದು. ಧೃತರಾಷ್ಟ್ರನು ಹೇಗೋ ಪಾಂಡುವು ಸಹ ನನಗೆ ಹಾಗೆಯೇ. ಗಾಂಧಾರಿಯ ಮಕ್ಕಳು ಹೇಗೋ ಕುಂತೀಪುತ್ರರೂ ನನಗೆ ಹಾಗೆಯೇ. ಅವರಿಗೆ ಹೇಗೆ ರಕ್ಷಣೆಯನ್ನು ನಾನು ಕೊಡಬೇಕೋ ಹಾಗೆಯೇ ನೀನೂ ಕೊಡಬೇಕಲ್ಲವೆ? ಎಲ್ಲರೂ ಎಲ್ಲರಿಗೂ ಬೇಕಾದವರೇ. ಹೀಗಿರಲಾಗಿ, ಪಾಂಡವರೊಂದಿಗೆ ಸಂಘರ್ಷವೆಂಬುದನ್ನು ನಾನಿಷ್ಟಪಡಲಾರೆ.

ಆ ವೀರರೊಂದಿಗೆ ಸಂಧಾನವಾಗಬೇಕು. ಅರ್ಧರಾಜ್ಯವನ್ನು ಅವರಿಗೆ ಕೊಟ್ಟುಬಿಡುವುದಾಗಲಿ. ಪಾಂಡವರಿಗೂ ಇದು ಆನುವಂಶಿಕರಾಜ್ಯವೇ! ಅಯ್ಯಾ ದುರ್ಯೋಧನ, ಇದು ನನ್ನ ಪೈತೃಕರಾಜ್ಯ (ಎಂದರೆ ಅಪ್ಪನ ಆಸ್ತಿ) ಎಂಬುದಾಗಿ ನೀನೆಂತು ಭಾವಿಸುವೆಯೋ, ಅಂತೆಯೇ ಪಾಂಡವರೂ ಕಾಣುವರು. ಯಶಸ್ವಿಗಳಾದ ಪಾಂಡವರಿಗೆ ರಾಜ್ಯವು ಪ್ರಾಪ್ತವಾಗತಕ್ಕದ್ದಲ್ಲವೆನ್ನುವುದಾದರೆ, ನಿನಗಾಗಲಿ, ಭರತವಂಶದ ಮತ್ತಾರಿಗಾಗಲಿ ಇದು ಪ್ರಾಪ್ತವಾಗುವುದು ಹೇಗೆ? ಅಧರ್ಮದಿಂದ ನೀನು ಈ ರಾಜ್ಯವನ್ನು ಪಡೆದಿರುವೆ, ದುರ್ಯೋಧನ. ಅದರೆ ಆ ಪಾಂಡವರಾದರೋ ನಿನಗಿಂತಲೂ ಮೊದಲೇ ಇದನ್ನು ಪಡೆದಿರುವರೆಂದೇ ನಾನು ಭಾವಿಸುತ್ತೇನೆ. ಅದ್ಧರಿಂದ, ಅವರಿಗೆ ಅರ್ಧರಾಜ್ಯವನ್ನು ಮಧುರವಾದ ರೀತಿಯಿಂದಲೇ ಕೊಟ್ಟುಬಿಡು. ಇದುವೇ ಸರ್ವಜನರಿಗೂ ಹಿತವಾದುದು. ಇದಕ್ಕೆ ವಿರುದ್ಧವಾಗೇನಾದರೂ ಮಾಡಿದಾದುದಲ್ಲಿ ನಮ್ಮ ಹಿತವು ಸಾಧಿತವಾಗುವುದಿಲ್ಲ; ನಿನಗೂ ಸಹ ಪೂರ್ಣವಾದ ಅಕೀರ್ತಿಯುಂಟಾಗುವುದರಲ್ಲಿ ಸಂಶಯವೇ ಇಲ್ಲ. ಕೀರ್ತಿರಕ್ಷಣೆಯಲ್ಲಿ ತೊಡಗಿರು; ಕೀರ್ತಿಯೇ ಪರಮಬಲ (ಕೀರ್ತಿಃ ಹಿ ಪರಮಂ ಬಲಮ್). ಕೀರ್ತಿನಾಶವಾದ ಮನುಷ್ಯನ ಜೀವಿತವು ನಿಷ್ಫಲವೆಂದೇ. ಕೌರವನೇ, ಎಲ್ಲಿಯ ತನಕ ಕೀರ್ತಿಯೆಂಬುದು ಪ್ರಣಾಶವನ್ನು ಹೊಂದುವುದಿಲ್ಲವೋ, ಅಲ್ಲಿಯ ತನಕವೇ ಒಬ್ಬನು ಬದುಕಿರುವುದು. ಯಾವನ ಕೀರ್ತಿಯು ನಾಶಹೊಂದುವುದೋ ಆತನು ನಾಶಹೊಂದಿದಂತೆಯೇ ಸರಿ (ನಷ್ಟಕೀರ್ತಿಸ್ತು ನಶ್ಯತಿ). ಆದುದರಿಂದ ಕುರುವಂಶಕ್ಕೆ ಉಚಿತವಾದ ಧರ್ಮವು ಯಾವುದೋ ಅದನ್ನೇ ಪರಿಪಾಲಿಸು; ನಿನ್ನ ಪೂರ್ವಜರಿಗೆ ಯಾವುದು ಅನುರೂಪವೋ ಅದನ್ನೇ ಮಾಡು.

ಪಾಂಡವರು ಕುಂತಿಯೂ ಉಳಿದಿರುವುದೇ ಅದೃಷ್ಟವಲ್ಲವೇ? ಆ ಪಾಪಿ ಪುರೋಚನನ ಆಸೆ ಪೂರೈಸದುದೂ, ಆತನು ನಾಶಗೊಂಡನೆಂಬುದೂ ಅದೃಷ್ಟವೇ! ಕುಂತಿಯ ಮಕ್ಕಳು ಸುಟ್ಟುಹೋದರು - ಎಂಬುದಾಗಿ ನಾನದೆಂದು ಕೇಳಿಪಟ್ಟೆನೋ, ಆ ಕ್ಷಣದಿಂದಲೇ, ಓ ಗಾಂಧಾರೀಪುತ್ರನೇ, ನಾನು ಯಾವ ಪ್ರಾಣಿಯ ಮುಖವನ್ನೂ ಕಣ್ಣೆತ್ತಿನೋಡಲಾಗಿಲ್ಲ; ಕುಂತಿಯ ವಿಷಯದಲ್ಲಿಯೂ ಹಾಗೆಯೇ. ಲೋಕವು ಏನೆಂಬುದಾಗಿ ಭಾವಿಸುತ್ತದೆಂಬುದೂ ಗಮನಿಸಬೇಕಾದದ್ದು: ಪಾಂಡವರು ಜೀವಿಸಿರುವರು - ಎಂಬುದು, ಹಾಗೂ ಅವರ ದರ್ಶನವಾಗುವುದು - ಎಂಬುದು ನಿನ್ನ ಮೇಲಿನ ಕಲಂಕವನ್ನು ನಾಶಮಾಡುವಂತಹುದು - ಎಂಬುದಾಗಿ ನೀನರಿಯಬೇಕು, ಮಹಾರಾಜ! ಆ ಪಾಂಡುವೀರರು ಬದುಕಿರುವ ಪರ್ಯಂತವೂ ಅವರ ಪಿತ್ರ್ಯವಾದ ಅಂಶವು (ಎಂದರೆ ಪೈತೃಕವಾಗಿ ಅವರಿಗೆ ಬಂದಿರುವಂತಹುದು) ಯಾವುದುಂಟೋ ಅದನ್ನು ಕಿತ್ತುಕೊಳ್ಳಲು ಇಂದ್ರನಿಂದಲೂ ಶಕ್ಯವಿಲ್ಲ! ಅವರೆಲ್ಲರೂ ಧರ್ಮದಲ್ಲೇ ನೆಲೆನಿಂತವರು. ಅವರೆಲ್ಲರ ಮನಸ್ಸು ಒಂದೇ ಪ್ರಕಾರವಾಗಿದೆ. ರಾಜ್ಯವೆಂಬುದು ಇಬ್ಬರಿಗೂ ಸಮಾನವೆಂಬುದಾಗಿರುವಾಗ, ಅವರನ್ನು ಇಲ್ಲಿಂದ ಓಡಿಸಲಾಗಿರುವುದು ಅಧರ್ಮದಿಂದ.

ಸಾರಾಂಶವಿಷ್ಟು: ನೀನು ಧರ್ಮವನ್ನಾಚರಿಸಬೇಕೆಂದಿದ್ದರೆ, ನನಗೆ ಪ್ರಿಯವಾದುದನ್ನು ನೀ ಮಾಡಬಯಸುವೆಯಾದರೆ, ನಿನಗೆ ಕ್ಷೇಮವೆಂಬುದೇನಾದರೂ ಆಗಬೇಕೆಂದಿದ್ದರೆ - ಪಾಂಡವರಿಗೆ ಅರ್ಧ(ರಾಜ್ಯ)ವನ್ನು ಕೊಡತಕ್ಕದ್ದು. (ತೇಷಾಮ್ ಅರ್ಧಂ ಪ್ರದೀಯತಾಮ್).

ಸೂಚನೆ : 17/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.