Sunday, April 28, 2024

ಯಕ್ಷ ಪ್ರಶ್ನೆ 87 (Yaksha prashne 87)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 86 ಶ್ರೇಷ್ಠವಾದ ದಯೆ ಯಾವುದು ?

ಉತ್ತರ - ಎಲ್ಲರ ಸುಖವನ್ನು ಬಯಸುವುದು.  

ಈ ಹಿಂದಿನ ಪ್ರಶ್ನೆಯ ಮುಂದುವರಿದ ಪ್ರಶ್ನೆ ಇದಾಗಿದೆ. ಸುಖ ಅಥವಾ ಶಾಂತಿ ಎಲ್ಲರ ಸಹಜವಾದ ಬಯಕೆ. ಪ್ರತಿಯೊಬ್ಬರೂ ಅವರವರ ಸುಖವನ್ನು ಬಯಸುವಿಕೆ ಈ ಹಿಂದಿನ ಪ್ರಶ್ನೆಯ ಆಶಯವಾಗಿದೆ. ಆದರೆ ಪ್ರಸ್ತುತ ಪ್ರಶ್ನೆಯು ಪ್ರತಿಯೊಬ್ಬರೂ ಮತ್ತೊಬ್ಬರ ಸುಖವನ್ನು ಬಯಸುವ ವಿಧಾನವನ್ನು ತಿಳಿಸುವುದಾಗಿದೆ. ಅವರವರ ನೆಮ್ಮದಿಯನ್ನು ಬಯಸುವುದು ದೊಡ್ದ ವಿಷಯವಲ್ಲ. ಅದನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳುವ ಅವಶ್ಯಕತೆ ಇಲ್ಲ. ಈಗ ತಾನೇ ಹುಟ್ಟಿದ ಮಗುವಿರಲಿ ಅಥವಾ ಪಶು, ಪಕ್ಷಿ, ಕೀಟ ಯಾವುದೇ ಇರಲಿ ಅದರ ಬಯಕೆ ಸುಖ, ಅದರ ನೆಮ್ಮದಿ, ಅದರ ಜೀವಿಕೆ. ಆದರೆ ಮತ್ತೊಬ್ಬರೂ ಸುಖವನ್ನು ಪಡೆಯಬೇಕು, ಶಾಂತಿಯನ್ನು ಹೊಂದಬೇಕು, ನೆಮ್ಮದಿಯನ್ನು ಕಾಣಬೇಕು ಎಂದು ಬಯಸುವುದು ಅಷ್ಟು ಸುಲಭವಲ್ಲ. ಇಂತಹ ಗುಣವನ್ನು ಪ್ರತಿಯೊಬ್ಬರೂ ಪ್ರಯತ್ನಪೂರ್ವಕವಾವಾದರೂ ಪಡೆಯಲೇಬೇಕು. ಅದನ್ನೇ 'ದಯಾ' ಎಂದು ಕರೆಯಬೇಕು. ಇದೇ ವಿಷಯವನ್ನು ಯಕ್ಷನು ಧರ್ಮರಾಜನಿಗೆ ಕೇಳಿದ್ದು. 

ನಿಸರ್ಗದಲ್ಲಿ ಪ್ರತಿಯೊಂದು ಜೀವಕ್ಕೂ ಬದುಕುವ ಆಸೆ ಮತ್ತು ಹಕ್ಕು ಎರಡೂ ಇದೆ. ಅದನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲವೇ ಇಲ್ಲ. ಒಂದು ವೇಳೆ ಕಸಿದುಕೊಂಡರೆ ಅದು ಹಿಂಸೆ. ಆ ಹಕ್ಕನ್ನು ಉಳಿಸುವಂತೆ ಮಾಡುವುದು; ಅಥವಾ ಯಾರಿಂದಲಾದರೂ ಅಂತಹ ಹಕ್ಕಿಗೆ ತೊಂದರೆ ಬರುವಂತಿದ್ದರೆ ಅದನ್ನು ನಿಗ್ರಹಿಸುವುದೂ ಕೂಡಾ ದಯೆ ಎಂದೇ ಕರೆಯಪಲ್ಪಡುತ್ತದೆ. "ನಿಗ್ರಹವೂ ಭಗವಂತನ ಅನುಗ್ರಹವೇಪ್ಪ" ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ನಿಗ್ರಹದಲ್ಲಿ ಒಂದು ಮಟ್ಟಿನ ಹಿಂಸೆ ಇರುತ್ತದೆ ಆದರೆ ಅದು ಹಿಂಸೆ ಎಂದು ಪರಿಗಣಿಸಲ್ಪಡುವುದಿಲ. ನಿಸರ್ಗದಲ್ಲಿ ತನ್ನಂತೆ ಮತ್ತೊಂದು ಜೀವಿಯ ಬದುಕುವ ಹಕ್ಕನ್ನು ಉಳಿಸುವುದೇ ನಿಗ್ರಹ. ಅವರವರ ನಿಸರ್ಗಸಹಜವಾದ ಬದುಕಿಗೆ ಅವಕಾಶ ಮಾಡಿಕೊಡುವುದು ಒಂದು ಬಗೆಯ ದಯೆ ಆದರೆ; ಅವುಗಳ ಬದುಕಿಗೆ ಉಂಟಾಗುತ್ತಿರುವ ಬಾಧೆಯನ್ನು ನಿವಾರಿಸಿ ಮತ್ತೆ ಅವುಗಳ ಬದುಕಿಗೆ ಆಸರೆಯಾಗುವುದೂ ಕೂಡಾ ದಯೆಯಾಗಿದೆ. 'ಜೀವೋ ಜೀವಸ್ಯ ಜೀವನಮ್' ಎಂಬ ಮಾತಿನಂತೆ ಒಂದು ಜೀವವು ಬದುಕಬೇಕಾದರೆ ಮತ್ತೊಂದು ಜೀವವಿರುವ ಜೀವಿಯನ್ನು ಆಹಾರವಾಗಿ ಸ್ವೀಕರಿಸಬೇಕಾಗುತ್ತದೆ. ಇದು ಆ ಆ ಜೀವದ ಜೀವಿಕೆಗಾಗಿ ನಿಸರ್ಗವೇ ಕಲ್ಪಿಸಿದ ವ್ಯವಸ್ಥೆ. ಇದನ್ನು ನಿಗ್ರಹಿಸುವುದು ದಯೆ ಎಂದು ಕರೆಸಿಕೊಳ್ಳುವುದಿಲ್ಲ. ವೃಥಾ ಮತ್ತೊಬ್ಬರ ಬದುಕಿಗೆ ಹಾನಿಯನ್ನು ಉಂಟುಮಾಡುವುದೇ ಹಿಂಸೆ ಎನಿಸಿಕೊಳ್ಳುತ್ತದೆ.

ದಯೆಯನ್ನು ಎಂಟು ವಿಧವಾದ ಆತ್ಮಗುಣಗಳಲ್ಲಿ ಮೊದಲನೆಯ ಗುಣವಾಗಿ ಪರಿಗಣಿಸಲಾಗಿದೆ. ಇದು ಮುಂದಿನ ಎಲ್ಲಾ ಗುಣಗಳಿಗೂ ಆಧಾರವಾಗಿದೆ. ಈ ಗುಣವಿಲ್ಲದಿದ್ದರೆ ಕ್ಷಮೆ, ಅನಸೂಯಾ, ಮೊದಲಾದ ಯಾವ ಗುಣಗಳೂ ಬೆಳಯಲಾರವು. ಮತ್ಸ್ಯಪುರಾಣದಲ್ಲಿ ಈ ಮಾತು ಬರುತ್ತದೆ "ಪ್ರಯತ್ನಪೂರ್ವಕವಾದರೂ ಬೇರೆಯವರ ಕ್ಲೇಶವನ್ನು ಪರಿಹರಿಸುವ ಯಾವ ಗುಣವಿದೆಯೋ ಅದನ್ನು 'ದಯಾ' ಎಂದು ಕರೆಯಬೇಕು ಎಂದು. ಅಧರ್ಮಿಯಾದವರನ್ನು ಉಪದೇಶ ಅಥವಾ ಸಾಮ, ದಾನ, ಮೊದಲಾದ ಉಪಾಯಗಳಿಂದ ಧರ್ಮಮಾರ್ಗದಲ್ಲಿ ನಡೆಯುವಂತೆ ಮಾಡಬೇಕು, ಇಲ್ಲವಾದರೆ ಅಂತವರನ್ನು ನಿಗ್ರಹಿಸಬೇಕು. ಹೀಗೆ ಪ್ರಪಂಚವು ಕ್ಷೇಮವಾಗಿ ಉಳಿಯಲು ದಯೆ ಎಂಬ ಗುಣದಿಂದ ಮಾತ್ರ ಸಾಧ್ಯ. 

ಸೂಚನೆ : 28/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 85 ಪಾಂಡವರು ಹಸ್ತಿನಾವತಿಗೆ ತೆರಳುವರೆ? (Vyaasa Vikshita - 85 Pandavaru Hastinavatige Teraluvare?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಧೃತರಾಷ್ಟ್ರನ ಸೂಚನೆಯಂತೆ ವಿದುರನು ದ್ರುಪದನಲ್ಲಿಗೆ ಬಂದು, ಮಾತೃ-ಪತ್ನೀಸಮೇತರಾಗಿ ಪಾಂಡವರು  ಹಸ್ತಿನಾವತಿಗೆ ಬರಬೇಕೆಂಬ ಪ್ರಾರ್ಥನೆಯನ್ನು ಸಲ್ಲಿಸುತ್ತಾ ಹೀಗೆಂದನು:

"ಈ ನರಶ್ರೇಷ್ಠರೂ (ಎಂದರೆ ಪಾಂಡವರೂ) ಸಹ ದೀರ್ಘಕಾಲವೇ ಪರದೇಶವಾಸವನ್ನು ಹೊಂದಿರುವುದಾಗಿದೆ: ನಗರವನ್ನು ಕಾಣಲು ಅವರೂ ಉತ್ಸುಕರಾಗಿಯೇ ಇರುವರಲ್ಲವೆ? ಅಂತೆಯೇ ದ್ರೌಪದಿಯೂ ಸಹ. ಅತ್ತ, ಪಾಂಚಾಲರಾಜಕುಮಾರಿಯಾದ ಕೃಷ್ಣೆಯನ್ನು ಕಾಣಲು ಕುರುವಂಶದ ನಾರಿಯರೆಲ್ಲರೂ ಕುತುಕವುಳ್ಳವರಾಗಿದ್ದಾರೆ. ನಮ್ಮ ನಗರ ಹಾಗೂ ರಾಷ್ಟ್ರದ ಸಮಸ್ತಜನರೂ ಇವರೆಲ್ಲರ ಆಗಮನವನ್ನು ಎದುರುನೋಡುತ್ತಿದ್ದಾರೆ.

ಆದ್ದರಿಂದ ನೀನು ಪಾಂಡುಪುತ್ರರಿಗೆ ಆದೇಶವನ್ನು ಕೊಡು – ಸಪತ್ನೀಕರಾಗಿ ಅವರು ಹಸ್ತಿನೆಗೆ ಹೊರಟುಬರುವುದಾಗಲಿ; ವಿಳಂಬ ಬೇಡ. ಈ ವಿಷಯದಲ್ಲಿ ನನಗೆ ಹೀಗೆ ತೋರುತ್ತದೆ. ಮಹಾತ್ಮರಾದ ಪಾಂಡವರಿಗೆ ಹೊರಟುಬರಲು ಆಜ್ಞೆಯನ್ನು ನೀನು ಯಾವಾಗ ಕೊಡುವೆಯೋ, ಆಗಲೇ ಶೀಘ್ರಗಾಮಿಗಳಾದ ದೂತರನ್ನು ಧೃತರಾಷ್ಟ್ರನಲ್ಲಿಗೆ ನಾನು ಕಳುಹಿಸುವೆ: ಕುಂತಿಯೂ ಕೌಂತೇಯರೂ ಕೃಷ್ಣೆಯೂ, ಹಸ್ತಿನಾಪುರಕ್ಕೆ ಆಗಮಿಸುತ್ತಿದ್ದಾರೆಂಬ ಸಂದೇಶವನ್ನು ಕಳುಹಿಸಿಕೊಡುವೆ" – ಹೀಗೆ ಹೇಳಿದನು, ವಿದುರ.

ಆಗ ದ್ರುಪದನು ಹೇಳಿದನು: ಮಹಾಪ್ರಾಜ್ಞನಾದ ವಿದುರನೇ, ನೀನು ಹೇಳಿದುದೆಲ್ಲವೂ ಯುಕ್ತವೇ ಆಗಿದೆ. ಈ ಸಂಬಂಧವು ನೆರವೇರಿರುವುದು ನನಗೂ ಮಹಾಹರ್ಷವನ್ನೇ ಒದಗಿಸಿರುವುದು. ಮಹಾತ್ಮರಾದ ಈ ಪಾಂಡವರೂ ತಮ್ಮ ನಗರಕ್ಕೆ ಹಿಂದಿರುಗುವುದೂ ಯುಕ್ತವೇ ಆಗಿರುವಂತಹುದು. ಆದರೂ ಸಹ ನಾನು ನನ್ನ ಬಾಯಿಂದ ಹೊರಡಿರೆಂದು ಸೂಚಿಸುವುದು ಯುಕ್ತವಲ್ಲವಷ್ಟೆ. ಕುಂತೀಪುತ್ರನಾದ ವೀರಯುಧಿಷ್ಠಿರ, ಭೀಮಾರ್ಜುನರು, ಹಾಗೂ ನರಶ್ರೇಷ್ಠರಾದ ಅವಳಿಜವಳಿಗಳು (ನಕುಲ-ಸಹದೇವರು), ಹಾಗೂ ಧರ್ಮಜ್ಞರಾದ ರಾಮ-ಕೃಷ್ಣರು - ಇವರುಗಳಿಗೆ ತೋರಿದಾಗ ಹೊರಟುಬರಲಿ. ಪುರುಷವ್ಯಾಘ್ರರಾದ ಬಲರಾಮ-ಕೃಷ್ಣರಂತೂ ಪಾಂಡವರ ಪ್ರಿಯಹಿತಗಳಲ್ಲೇ ಸದಾ ತೊಡಗಿರುವವರು, ಎಷ್ಟಾದರೂ! - ಎಂದನು.

ಆಗ ಯುಧಿಷ್ಠಿರನು ಹೇಳಿದನು - "ನಾವೂ ನಮ್ಮ ಸಹಚರರೂ ತಮಗೇ ಅಧೀನರಾಗಿದ್ದೇವೆ." ಆಗ ವಾಸುದೇವನು, "ಇವರುಗಳು ಹೊರಡುವುದೇ ನನಗೆ ಸರಿದೋರುತ್ತದೆ. ಸರ್ವಧರ್ಮಗಳನ್ನೂ ಬಲ್ಲವನಾದ ದ್ರುಪದನು ಹೇಗೆ ಭಾವಿಸುತ್ತಾನೋ ಹಾಗೂ ಆಗಬಹುದು" – ಎಂದು ಹೇಳಿದನು.

ಅದಕ್ಕೆ ದ್ರುಪದನು ಹೇಳಿದನು - ವೀರವರನೂ ಪುರುಷೋತ್ತಮನೂ ಆದ ಶ್ರೀಕೃಷ್ಣನು ಏನನ್ನು ಮಾಡುವುದೀಗ ಯೋಗ್ಯವೆಂದು ಭಾವಿಸುತ್ತಾನೋ ನನಗೂ ಅದು ಸಂಮತವಾಗಿರುವುದೆಂಬುದರಲ್ಲಿ ಸಂಶಯವಿಲ್ಲ. ಆದರಣೀಯರಾದ ಪಾಂಡವರು ನನಗೀಗ ಯಾವ ರೀತಿ ಆತ್ಮೀಯರೋ,  ಅದೇ ರೀತಿಯಲ್ಲಿಯೇ ಕೃಷ್ಣನಿಗೂ ಆತ್ಮೀಯರೆಂಬುದರಲ್ಲಿ ಸಂಶಯವಿಲ್ಲ. ಪಾಂಡವರ ವಿಷಯದಲ್ಲಿ ಅವರಿಗೆ ಶ್ರೇಯಸ್ಸು ಯಾವುದು ಎಂಬುದಾಗಿ ನರಶ್ರೇಷ್ಠನಾದ ಕೇಶವನು ಹೇಗೆ ಚಿಂತಿಸುತಾನೋ ಅಷ್ಟರಮಟ್ಟಿಗೆ ಪಾಂಡುಪುತ್ರನಾದ ಯುಧಿಷ್ಠಿರನೇ ಚಿಂತಿಸಲಾರ! (ಶ್ರೇಯೋ ಧ್ಯಾಯತಿ ಕೇಶವಃ) - ಎಂದನು.

ಬಳಿಕ ವಿದುರನು ಕುಂತೀಸದನವನ್ನು ಪ್ರವೇಶಿಸಿದನು ಅವಳ ಪದವನ್ನು ಸ್ಪರ್ಶಿಸಿದನು. ಶಿರಸಾ ಬಾಗಿದನು. ಕುಂತಿಗೆ ದುಃಖವುಕ್ಕಿತು. ಆಕೆ ಹೇಳಿದಳು: ವಿದುರಾ, ಪಾಂಡವರು ನಿನ್ನ ಮಕ್ಕಳೇ ಸರಿ. ನಿನ್ನ ಅನುಗ್ರಹದಿಂದಲ್ಲವೆ, ಅರಗಿನ ಮನೆಯಲ್ಲಿದ್ದ ಅವರು ಬದುಕಿಬಂದಿರುವುದು? ದೂರದಲ್ಲಿರುವ ತನ್ನ ಮರಿಗಳನ್ನು ಕುರಿತಾಗಿ ಆಮೆಯು ಚಿಂತಿಸುವುದಂತೆ; ಅಷ್ಟರಿಂದಲೇ ಅವು ಬೆಳೆದುಕೊಳ್ಳುವುವಂತೆ, ಕೂಡ! ಇಲ್ಲಾದದ್ದೂ ಹಾಗೆಯೇ. ಪ್ರಾಣಾಂತಿಕವಾದ (ಎಂದರೆ ಜೀವವನ್ನೇ ಕೊನೆಗಾಣಿಸುವ) ಹಲವು ದುಃಖಗಳು ಬಂದೊದದಿದವು. ಅದರೂ ನನ್ನ ಮಕ್ಕಳು ಸುರಕ್ಷಿತರಾಗಿಯೇ ಇದ್ದಾರೆ - ಎಂದು ಮುಂತಾಗಿ ಹಲುಬಿದಳು.

ಸೂಚನೆ : 28/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮರ್ಯಾದೆ ನಿಜಕ್ಕೂ ಯಾರಿಗೆ? (Maryade Nijakku Yarige?)


ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
 (ಪ್ರತಿಕ್ರಿಯಿಸಿರಿ lekhana@ayvm.in)


 ಪಂಡರಾಪುರದಲ್ಲೊಬ್ಬ ಭಕ್ತ. ಅವನಿಗೆ ವಿಠಲನನ್ನು ಊರ ಬೀದಿಯಲ್ಲೆಲ್ಲ ಬಿಜಯಮಾಡಿಸುವ ಆಸೆ. ಇವನು ಬಡವ. ರಥ ಎಲ್ಲಿಂದ ತರುವುದು? ಅಲ್ಲೊಂದು ಅಗಸನ ಕತ್ತೆ. ಸ್ವತಂತ್ರವಾಗಿ ಓಡಾಡುತ್ತಿತ್ತು. ಈ ಭಕ್ತ ಆ ಕತ್ತೆಯನ್ನು ತಂದ. ಅದನ್ನು ಸ್ನಾನ ಮಾಡಿಸಿ ಶುಚಿಗೊಳಿಸಿದ. ಅದರ ಬೆನ್ನಮೇಲೆ ವಿಠಲನ ವಿಗ್ರಹವನ್ನಿಟ್ಟ. ಹೊರಟಿತು ಉತ್ಸವ. ಪಾಂಡುರಂಗನಿಗೆ ಜಯವಾಗಲಿ ಘೋಷಣೆ ಮೊಳಗಿತು. ಇನ್ನೂ ಅನೇಕಜನ ಭಕ್ತರು ಜೊತೆಗೂಡಿದರು. ಮನೆಮನೆಯಲ್ಲಿ ವಿಠಲನಿಗೆ ತಿಲಕವಿಟ್ಟರು. ಹೂಮಾಲೆ ಹಾಕಿದರು. ಅದು ದೊಡ್ಡವನ ಚಿಕ್ಕವಿಗ್ರಹ. ಹೂಮಾಲೆಗಿನ್ನು ಜಾಗವಿಲ್ಲದಾಯಿತು. ಜನ ವಿಠಲನನ್ನು ಹೊತ್ತ ಕತ್ತೆಯ ಕೊರಳಿಗೆ ಮಾಲೆ ಹಾಕಿದರು. ಕತ್ತೆಗೆ ಸಂಭ್ರಮ. ತನಗೆ ಇಷ್ಟು ಗೌರವ ಯಾವತ್ತೂ ಯಾರೂ ತೋರಿಸಿಲ್ಲ. ತನ್ನ ಯಜಮಾನ ಅಗಸ ಕೇವಲ ಏಟು ಕೊಟ್ಟಿದ್ದಾನೆ. ಭಾರ ಹೊರಿಸಿದ್ದಾನೆ.ತನ್ನ ಕೆಲಸ ಆದೊಡನೆ ನನ್ನನ್ನು ಮೇಯಲು ಅಟ್ಟಿದ್ದಾನೆ. ನನ್ನ ಯೋಗ್ಯತೆ ಇಷ್ಟು ದೊಡ್ಡದು ಎಂದುಕೊಂಡಿರಲಿಲ್ಲ. ಹಾರ ತುರಾಯಿಗಳೇನು! ಆರತಿಯೇನು! ತಿಲಕವೇನು! ಬಾಳೆಹಣ್ಣನ್ನು ಕೊಡುವವರೇನು! ಹೀಗೆ ಯೋಚಿಸುತ್ತಾ ಕತ್ತೆ ಹಿಗ್ಗಿಹೋಯಿತು. ಸಂಜೆ ಉತ್ಸವ ಮುಗಿಯಿತು. ವಿಠಲನ ವಿಗ್ರಹವನ್ನು ಇಳಿಸಿ ಕತ್ತೆಯನ್ನು ಮುಕ್ತಗೊಳಿಸಿದರು. ಮಾರನೇ ದಿನ ಕತ್ತೆ ಅಗಸನ ಹತ್ತಿರ ಹೋಗಲಿಲ್ಲ. ರಾಜ ಬೀದಿಯಲ್ಲೆಲ್ಲಾ ಓಡಾಡಿತು. ಯಾರೂ ಹಾರ ಹಾಕಲಿಲ್ಲ. ಆರತಿ ಇಲ್ಲ. ಅಷ್ಟೇ ಅಲ್ಲ. ರಸ್ತೆಯಲ್ಲಿ ತೊಂದರೆಯಾಗುತ್ತಿದೆ ಎಂದು ಏಟು ಕೊಟ್ಟರು. ಕತ್ತೆ ವಿಧಿಯಿಲ್ಲದೇ ಮತ್ತೆ ಅಗಸನ ಹತ್ತಿರ ಹೋಯಿತು. ಅಲ್ಲೂ ಪೆಟ್ಟು ತಿಂದಿತು.

ವಿಠಲನಿಗೆ ಕೊಡುತ್ತಿರುವ ಮರ್ಯಾದೆ

ಏಕೆ ಹೀಗಾಯಿತು? ಮೇಲಿದ್ದ ವಿಠಲನ ಮೂರ್ತಿಗೆ ಎಲ್ಲಾ ಮರ್ಯಾದೆ ಸಲ್ಲುತ್ತಿದೆ ಎಂದು ಕತ್ತೆಗೆ ಅರಿವಾಗಲಿಲ್ಲ. ತನಗೇ ಎಂದುಕೊಂಡಿತು.  ಈ ಕಥೆ ಆಳವಾದ ತತ್ತ್ವದತ್ತ ಕೈದೊರುತ್ತದೆ.  ನಮ್ಮೊಳಗೇ ಬೆಳಗುವ ಚೈತನ್ಯ ಒಂದುಂಟು. ಅದಿರುವುದರಿಂದ ನಮ್ಮ ಇಂದ್ರಿಯಗಳೆಲ್ಲ ಕೆಲಸ ಮಾಡುತ್ತಿವೆ. ನಮ್ಮ ಬುದ್ಧಿ ಮನಸ್ಸುಗಳು ಅದರ ಬಲದಿಂದಲೇ ಅನೇಕ ಸಾಧನೆಗಳನ್ನು ಮಾಡುತ್ತವೆ. ಎಂಬುದು ಈ ದೇಶದ ಮಹರ್ಷಿಗಳ ಸಮಗ್ರ ಜೀವನ ದೃಷ್ಟಿ. ಆದರೆ ನಮ್ಮ ಸಾಧನೆಗಳಿಂದ ಬರುವ ಕೀರ್ತಿಯನ್ನೆಲ್ಲ ಒಳಗಿರುವ ದೇವನಿಗೆ ನಾವು ಸಮರ್ಪಿಸುವುದಿಲ್ಲ. ಎಲ್ಲವೂ ನನ್ನದೇ ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ. ಆ ಕತ್ತೆಯಂತೆ.ಆದರೆ ಇಲ್ಲೊಂದು ವ್ಯತ್ಯಾಸ. ಗೌರವ ಕೊಡುವವರಿಗೂ ಯಾರಿಗೆ ಕೊಡುತ್ತಿದ್ದೇವೆ ಎಂಬ ಅರಿವಿಲ್ಲ. ತೆಗೆದುಕೊಂಡ ನಮಗೂ ಅದು ಎಲ್ಲಿಗೆ ಸಲ್ಲಬೇಕೆಂಬ ನಿಗವಿಲ್ಲ.

ಒಳ ಬೆಳಗುವ ಆತ್ಮ ವಸ್ತುವಿನ ಭಿಕ್ಷೆಯಿಂದ ನಮ್ಮ ಬದುಕು. ಯಾಜ್ಞವಲ್ಕ್ಯರು ಮೈತ್ರೇಯಿಗೆ ಹೇಳುತ್ತಾರೆ- ಒಳಗೆ ಬೆಳಗುವ ಆತ್ಮವಸ್ತುವಿಂದಲೇ ಪತ್ನಿ,ಪುತ್ರರು,ಎಲ್ಲರೂ ಪ್ರಿಯವಾಗುತ್ತಾರೆ. ಅದರಿಂದ ಆತ್ಮವೇ ನೋಡಬೇಕಾದುದು,ಕೇಳಬೇಕಾದುದು, ಮನನ ಮಾಡಬೇಕಾದುದು, ಏಕಾಗ್ರತೆಯಿಂದ ಧ್ಯಾನ ಮಾಡಬೇಕಾದುದು ಎಂಬುದಾಗಿ. ಒಳಗಿರುವ ದೇವ ಈ ದೇಹದ ಯಜಮಾನ. ನಮ್ಮ ಲಕ್ಷ್ಯ ಯಜಮಾನನ ಕಡೆಗೆ ಇರಬೇಕಾಗಿತ್ತು. ಯಜಮಾನನ ಶಕ್ತಿಯಿಂದಲೇ ನಾವು ಎಲ್ಲಾ ಸುಖಗಳನ್ನೂ ಪಡೆಯುತ್ತಿದ್ದೇವೆ. ಯಜಮಾನನನ್ನು ಮರೆತಿದ್ದೇವೆ. ಭಾರತೀಯ ಜೀವನದ ಸಂಸ್ಕಾರ, ಅನುಷ್ಠಾನ, ಪೂಜೆ, ಪುರಸ್ಕಾರಗಳೆಲ್ಲವೂ ನಮ್ಮೆಲ್ಲರ ಮೂಲನಾದ ಯಜಮಾನನನ್ನು ನೆನಪಿಸುವುದಾಗಿದೆ. ನಾವು ವೃಕ್ಷದ ಬೇರಿಗೆ ನೀರೆರೆಯುತ್ತೇವೆ. ಮೇಲಿನ ಎಲೆ, ಕೊಂಬೆಗಳಿಗಲ್ಲ. ನಮಗೆ ಎಲೆ ಕೊಂಬೆಗಳ ಮೇಲೆ ದ್ವೇಷವಲ್ಲ. ಅವು ಬೇಡವೆಂದೂ ಅಲ್ಲ. ಅವುಗಳು ಸೊಂಪಾಗಿ ಬೆಳೆಯಬೇಕಾದರೆ ಬೇರಿಗೇ ನೀರೆರೆಯಬೇಕು. "ಜೀವನವೆಂದರೇನು?ಎನ್ನುವುದನ್ನರಿತು ಜೀವನವನ್ನೂ ಅದರ ವಿಕಾಸಾವಸ್ಥೆಯನ್ನೂ ನೋಡದಿದ್ದರೆ ಬೇರನ್ನು ಮರೆತು ಮರದ ತುದಿಯಲ್ಲಿರುವ ಹಣ್ಣುಗಳನ್ನು ನೋಡುವವನಂತೆ ಆಗುತ್ತದೆ ನಮ್ಮ ಸ್ಥಿತಿ.ಆದ್ದರಿಂದ ಮೂಲವರಿತು ನೋಡುವ ಶ್ರದ್ಧೆ ನಮಗೆ ಬೇಕಾಗಿದೆ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಹಾಗೆಯೇ ಈ ಜೀವನ ವೃಕ್ಷದ ಬೇರು ಒಳಗಿರುವ ಚೈತನ್ಯ. ಅದರ ಆಶಯದಂತೆ ಧರ್ಮ,ಅರ್ಥ ಕಾಮಗಳನ್ನು ಅನುಭವಿಸಬೇಕು ಎಂಬುದು ಈ ವೃಕ್ಷದ ಪರಿಚಯವಿರುವ ಋಷಿಗಳ ಮಾತು. ಬೇರನ್ನೇ ಕಡೆಗಣಿಸಿ ಆರೈಕೆ ಎಲ್ಲವನ್ನೂ ಮೇಲು ಮೇಲೆ ಕಾಣುವುದಕ್ಕೆ ಮಾತ್ರ ಮಾಡತೊಡಗಿದರೆ ಆ ವೃಕ್ಷ ಸರ್ವಾಂಗ ಸುಂದರವಾಗಿ ಬೆಳೆಯದು. ಈ ಸತ್ಯಾರ್ಥವನ್ನು ಅರ್ಥ ಮಾಡಿಕೊಂಡು ನಮ್ಮ ಹಿರಿಯರು ಹಾಕಿದ ಮಾರ್ಗದಲ್ಲಿ ಆತ್ಮ ನಿಷ್ಠರಾಗಿ ಬದುಕಲು ಪ್ರಯತ್ನಿಸೋಣ.

ಸೂಚನೆ: 27/04/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ​ - 57 ಏಕಂ ದುಃಖಂ ಸುಖಂ ಚ ನೌ (Astaksari 57 Ekam Duhkham Sukham Ca Nau)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)



ತಾಳಿಕಟ್ಟಿದ ಮಾತ್ರಕ್ಕೆ ಅದನ್ನು ವಿವಾಹವೆಂದು ಪರಿಗಣಿಸಲಾಗದೆಂಬುದನ್ನು ಆಗಾಗ್ಗೆ ನ್ಯಾಯಾಲಯಗಳು ಸ್ಪಷ್ಟಪಡಿಸುತ್ತಿದ್ದರೂ ಜನಸಾಮಾನ್ಯರಲ್ಲಿ ಕೆಲವರಿಗದು ಮನವರಿಕೆಯಾಗುವುದೇ ಇಲ್ಲ. ಸಪ್ತಪದಿಯೆಂಬುದೇ ವಾಸ್ತವವಾಗಿ ನಿರ್ಣಾಯಕವಾಗುವಂತಹುದು: ವಿವಾಹವು ಅಗ್ನಿಸಾಕ್ಷಿಕವಾಗಿ ನೆರವೇರಬೇಕು; ವಧೂವರರು ಪಾಣಿಗ್ರಹಣದೊಂದಿಗೆ ಅಗ್ನಿಗೆ ಪ್ರದಕ್ಷಿಣವಾಗಿ ಬಂದ ಮೇಲೆಯೇ ವಿವಾಹವು ಸಂಪನ್ನವಾಯಿತೆಂಬ ಲೆಕ್ಕವು ಬರುವುದು. ಅದನ್ನು ಬಿಟ್ಟು ಉಳಿದೆಲ್ಲ ಕಲಾಪಗಳು ನಡೆದಿದ್ದರೂ ಅದು ವಿವಾಹವೆನಿಸಿಕೊಳ್ಳದು.

ಈ ಸಪ್ತಪದಿಯ ಕೊನೆಯಲ್ಲಿ ಬರುವ ಮಾತೇ "ಸಖಾ ಸಪ್ತಪದೀ ಭವ" ಎಂಬುದಾಗಿ. ಪತಿಪತ್ನಿಯರಲ್ಲಿ ಸ್ಥಾಯಿಯಾಗಿ ಉಳಿಯಬೇಕಾದ ಭಾವವೇ ಸಖ್ಯ. ಅಗ್ನಿಸಾಕ್ಷಿಯಾಗಿ ಘಟಿಸಬೇಕಾದುದು ಈ ಜೀವಸಖ್ಯ. ಸಾಕ್ಷಾತ್ತಾಗಿ ಕಾಣತಕ್ಕವನೇ ಸಾಕ್ಷಿಯೆನಿಸುತ್ತಾನೆ. ಸೂರ್ಯಚಂದ್ರರು ಲೋಕನೇತ್ರಗಳು,  ಸರ್ವಸಾಕ್ಷಿಗಳು. ಅಗ್ನಿಯಂತೂ ಮೂರನೆಯ ಕಣ್ಣಾಗಿ ವೀಕ್ಷಿಸತಕ್ಕವನೇ ಸರಿ. ಸೂರ್ಯಚಂದ್ರರಿಗಾದರೂ ಕಾಲನಿಬಂಧನಗಳುಂಟು; ಅಗ್ನಿಯು ಸರ್ವದಾ ಆವಾಹ್ಯನೇ ಸರಿ. ಪಂಚಭೂತಗಳಲ್ಲಿ ಮಧ್ಯಸ್ಥನಾದ ಈ ಅಗ್ನಿಯು ಇತ್ತ ದೇವದೂತನೂ ಹೌದು, ಅತ್ತ ದೇವನೂ ಹೌದು.

ವಿವಾಹಮಾತ್ರವನ್ನಲ್ಲದೆ, ಮಿತ್ರತ್ವವನ್ನೂ ಅಗ್ನಿಸಾಕ್ಷಿಕವಾಗಿ ಸ್ಥಾಪಿಸುವ ನಡೆಯೂ ಒಂದುಂಟು. ಅದನ್ನು ರಾಮಾಯಣದಲ್ಲಿ ನೋಡಬಹುದು.

ರಾಮಸುಗ್ರೀವರ ಸಖ್ಯವು ಸಿದ್ಧವಾಗುವ ಸಂನಿವೇಶದಲ್ಲಿ ಇದು ಕಾಣಸಿಗುತ್ತದೆ. ಕಿಷ್ಕಿಂಧಾಕಾಂಡದಲ್ಲಿ ಮೊದಲು ರಾಮಲಕ್ಷ್ಮಣರೊಂದಿಗೆ ಹನುಮಂತನ ಭೇಟಿಯಾಗುತ್ತದೆ. ಹನುಮಂತನು ಅವರಿಬ್ಬರ ಲೋಕೋತ್ತರತ್ವವನ್ನು ಬಹುಬೇಗನೆ ಕಂಡುಕೊಳ್ಳುತ್ತಾನೆ. ಹನುಮಂತನಲ್ಲಿದ್ದ ದೌತ್ಯ-ಸಾಮರ್ಥ್ಯ (ಎಂದರೆ ದೂತನ ಕಾರ್ಯವನ್ನು ಚೆನ್ನಾಗಿ ನಿರ್ವಹಿಸುವಿಕೆ) ಮೊದಲಾದ ಅನೇಕಗುಣಗಳನ್ನು ರಾಮನೂ ಗುರುತಿಸಿಕೊಳ್ಳುತ್ತಾನೆ.

ಸುಗ್ರೀವ-ಸಖ್ಯವು ತಮಗೂ ಬೇಕಾಗಿರುವುದನ್ನು ಲಕ್ಷ್ಮಣನು ಹನುಮಂತನಿಗೆ ಹೇಳುತ್ತಾನೆ. ಹನುಮಂತನೂ ಸಹ, ಸುಗ್ರೀವನಿಗಾಗಿರುವ ರಾಜ್ಯಾಪಹಾರ-ಭಾರ್ಯಾಪಹಾರಗಳ ವಿಷಯಗಳನ್ನು ತಿಳಿಸಿ, ಅವರಿಬ್ಬರನ್ನೂ ಸುಗ್ರೀವನಲ್ಲಿಗೆ ಒಯ್ಯುತ್ತಾನೆ. ತನ್ನೊಂದಿಗೆ ಅವರ ಸ್ನೇಹಾಪೇಕ್ಷೆಯನ್ನರಿತುಕೊಂಡ ಸುಗ್ರೀವನು ತನ್ನ ಸ್ನೇಹ-ಹಸ್ತವನ್ನು ನೀಡುತ್ತಾನೆ.

ಆಗ ಹನುಮಂತನು ಎರಡು ಕಟ್ಟಿಗೆಗಳನ್ನು ಕಡೆದು ಅಗ್ನಿಯನ್ನು ಉತ್ಪತ್ತಿಮಾಡುತ್ತಾನೆ. ಜ್ವಲಿಸುವ ಅಗ್ನಿಗೆ ಪುಷ್ಪಾರ್ಚನೆಯಾಗುತ್ತದೆ. ರಾಮ-ಸುಗ್ರೀವರ ನಡುವೆ ಸ್ಥಾಪಿಸಲಾದ ಆ ಅಗ್ನಿಯನ್ನು ಅವರಿಬ್ಬರೂ ಪ್ರದಕ್ಷಿಣೆ ಮಾಡುತ್ತಾರೆ: ಇದರಿಂದಾಗಿ ಇವರಿಬ್ಬರ ಪರಸ್ಪರ-ಮಿತ್ರನಿಷ್ಠೆಯು ಸ್ಥಾಪಿತವಾಗುತ್ತದೆ.

ಅತ್ಯಂತ ಸಂತೋಷಗೊಂಡ ಆ ಹರಿ-ರಾಘವರು (ಎಂದರೆ, ಸುಗ್ರೀವ-ರಾಮಚಂದ್ರರು) ಪರಸ್ಪರ ಅಭಿವೀಕ್ಷಿಸುತ್ತಾರೆ (ಎಂದರೆ, ಸಂತೋಷದಿಂದ ದಿಟ್ಟಿಸಿ ನೋಡುತ್ತಾರೆ). ಎಷ್ಟು ಹೊತ್ತು ಹಾಗೆ ಅಭಿವೀಕ್ಷಿಸಿದರೂ ಅವರಿಗೆ ತೃಪ್ತಿಯೇ ಆಗದು!

ಆಗ ರಾಮನು ಹೇಳುತ್ತಾನೆ: ಇಗೋ ಈಗ ನೀನು ನನಗೆ ಹೃದ್ಯ-ವಯಸ್ಯನಾಗಿದ್ದೀಯೆ. (ಹೃದ್ಯನೆಂದರೆ ಹೃದಯಕ್ಕೆ ಪ್ರಿಯನಾದವನು, ಮನಸ್ಸಿಗೆ ಆಹ್ಲಾದವನ್ನುಂಟುಮಾಡುವವನು; ವಯಸ್ಯನೆಂದರೆ ಮಿತ್ರ.) ನಮ್ಮಿಬ್ಬರ ದುಃಖವೂ ಸುಖವೂ ಒಂದೇ (ಏಕಂ ದುಃಖಂ ಸುಖಂ ಚ ನೌ). ಇದು ಸಾರಭೂತವಾದ ಮಾತು.

ಆ ಬಳಿಕ ಎಲ್ಲರೂ ಕುಳಿತು ಮಾತನಾಡುತ್ತಾರೆ. ಆನಂದಬಾಷ್ಪಭರಿತನಾಗಿ ಸುಗ್ರೀವನು ಸಂಭಾಷಣೆಯನ್ನು ರಾಮನೊಂದಿಗೆ ಆರಂಭಿಸುತ್ತಾನೆ: ತನ್ನ ಕ್ಲಿಷ್ಟ-ಪರಿಸ್ಥಿತಿಯನ್ನು ನಿವೇದಿಸಿಕೊಳ್ಳುತ್ತಾನೆ; ಅಭಯವನ್ನು ಯಾಚಿಸುತ್ತಾನೆ. ರಾಮನೂ ಅಭಯವಿತ್ತು ಧೈರ್ಯತುಂಬುತ್ತಾನೆ. ಆಮೇಲಿನ ವಾಲಿಸಂಹಾರದಲ್ಲಿ ರಾಮನ ಪಾತ್ರ, ಹಾಗೂ ರಾವಣಸಂಹಾರದಲ್ಲಿ ಸುಗ್ರೀವನ ಪಾತ್ರ – ಇವುಗಳಲ್ಲಿ ಮೇಲಿನ ಸಾರಭೂತವಾದ ಮಾತಿನ ಸತ್ಯತ್ವವು ಸಾಧಿತವಾಗುತ್ತದಲ್ಲವೇ?

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಮ-ಸುಗ್ರೀವರ ಸಖ್ಯವೂ ಅಗ್ನಿ-ಸಾಕ್ಷಿಕವಾದ ಪಾಣಿ-ಗ್ರಹಣ ಹಾಗೂ ಅಗ್ನಿ-ಪ್ರದಕ್ಷಿಣಗಳೊಂದಿಗೆ ನೆರವೇರುವುದು; ಬಳಿಕ, ಒಬ್ಬರ ದುಃಖವನ್ನು ಮತ್ತೊಬ್ಬರು ಪರಿಭಾವಿಸುವುದು, ಯುಕ್ತ-ಸಹಾಯವೊದಗಿಸುವುದು; ಒಬ್ಬರ ಸಂತೋಷವು ಮತ್ತೊಬ್ಬರ ಹರ್ಷಕ್ಕೆ ಕಾರಣವಾಗುವುದು - ಎಂಬುದು.

ವಾಸ್ತವವಾಗಿ ಇವೆಲ್ಲವೂ ಒಂದರ್ಥದಲ್ಲಿ ಸುದಾಂಪತ್ಯದ ಲಕ್ಷಣಗಳೇ. ಕಳ್ಳಕಾಕರಲ್ಲೂ ಸ್ನೇಹಬೆಳೆದರೂ ಅಲ್ಲಿ ಧರ್ಮಬುದ್ಧಿಯು ನೆಲೆಸಿರುವುದಿಲ್ಲ; ಎಂದೇ ಕೆಲಕಾಲದಲ್ಲೇ ಅದು ಮುರಿದುಬೀಳುವುದೂ. ಸುಗ್ರೀವ-ರಾಮಚಂದ್ರರಿಗೆ ಒದಗಿದ್ದ ಕ್ಲೇಶಗಳಿಗೆ ವಾಲಿ-ರಾವಣರ ಅಧರ್ಮದ ನಡೆಯೇ ಕಾರಣವಾಗಿತ್ತು. "ಧರ್ಮವುಳಿಯಬೇಕಾದರೆ ಅದರ ವಿರೋಧಿಗಳು ಅಳಿಯಲೇಬೇಕು: ಬೆಳೆಯುಳಿಯಬೇಕಾದರೆ ಕಳೆಯಳಿಯಲೇಬೇಕಲ್ಲವೇ?" ಎಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಹೀಗೆ ಅಧರ್ಮದ ಉತ್ಪಾಟನವೇ (ಎಂದರೆ ಕಿತ್ತುಹಾಕುವಿಕೆಯೇ) ಇಬ್ಬರಿಗೂ ಸಮಾನಧ್ಯೇಯವಾಗಿತ್ತು. ಎಂದೇ ಈ ಮೈತ್ರಿಯು ಉಳಿಯಿತು, ಬೆಳೆಯಿತು, ಲೋಕೋಪಕಾರಿಯಾಯಿತು.

ಏಕಂ ದುಃಖಂ ಸುಖಂ ಚ ನೌ – ಎಂಬ ಮಾತನ್ನು ಸುಗ್ರೀವನೇ ರಾಮನಿಗೆ ಹೇಳಿದನೆಂದು ರಾಮಾಯಣದ ಕೆಲವು ಪ್ರತಿಗಳಲ್ಲಿದೆ. ಹಾಗೂ ಸೊಗಸೇ ಅಲ್ಲವೇ? ಮಿತ್ರತ್ವವು ಎಷ್ಟಾದರೂ ಪಾರಸ್ಪರಿಕವೇ ಸರಿ.

ಸೂಚನೆ: 27/04/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 12 ಹೊಳೆಯುವ ಈ ಮಣಿ ಯಾರಿಗೆ ಬೇಡ? (Krsnakarnamrta - 12 Holeyuva I Mani Yarige Beda?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಸಣ್ಣಮಗುವೊಂದು ಏನಾದರೂ ತಪ್ಪನ್ನು ಮಾಡಿತೆಂದರೆ, ಕೆಲವರು ಅದರ ಮೇಲೆ ರೇಗಿಬಿಡುತ್ತಾರೆ. ಗದರಿಸಿದ್ದು ತಾಯಿಯೇ ಆದರೂ, ಮಿಕ್ಕವರೇ ಧಾವಿಸಿ ಬಂದು, "ಅಯ್ಯೋ, ಅದು ಏನೂ ಅರಿಯದ ಮಗು. ಅದನ್ನು ಸಿಡುಕುವೆಯಾ?" ಎಂದು ತಡೆಯುವುದೂ ಉಂಟು.

ಸುಲಕ್ಷಣಗಳಿಂದ ಕೂಡಿರುವ ಕೂಸನ್ನು 'ಮುದ್ದು' ಎನ್ನುತ್ತೇವೆಲ್ಲವೆ? ಮಗುವಿನಲ್ಲಿಯ ಎಳಸು, ಆ ಎಳೆತನದಲ್ಲಿಯ ಆಕರ್ಷಣೆಗಳಿಂದಾಗಿ ಮುದ್ದುತನವನ್ನು ನಾವಲ್ಲಿ ಕಾಣುತ್ತೇವೆ. ಅರಿಯದ ಕಂದನನ್ನು ಮುಗ್ಧಶಿಶುವೆನ್ನುತ್ತೇವಲ್ಲವೆ? ಮುದ್ದುಕೃಷ್ಣ, ಕಡುಮುದ್ದುರಂಗ - ಎಂದೆಲ್ಲ ಕೊಂಡಾಡುವುದಿಲ್ಲವೆ? ಇಂತಹ ಮುಗ್ಧತೆಯ ಚರಮಸೀಮೆಯೇ ಕೃಷ್ಣ.

ಚರಮಸೀಮೆಯೆಂದರೆ ಯಾವುದಕ್ಕಿಂತಲೂ ಆಚೆ ಏನೂ ಇಲ್ಲವೋ ಅದು; ಯಾವುದಕ್ಕೆ ಮಿಗಿಲಾದುದು ಇಲ್ಲವೋ ಅದು. ಎಂದರೆ ಸರ್ವಭೂಮಿಯನ್ನೂ ಯಾವುದು ಆಕ್ರಮಿಸಿರುವುದೋ ಅದು: ಅದನ್ನೇ ಸಾರ್ವಭೌಮವೆನ್ನುವುದೂ.

ಹೀಗೆ ಮೌಗ್ಧ್ಯದ (ಎಂದರೆ ಮುಗ್ಧತೆಯ) ವಿಷಯದಲ್ಲಿ ಸಾರ್ವಭೌಮನೆಂದರೆ ಕೃಷ್ಣನೇ.

ಹಾಗೆಂದು ಕೃಷ್ಣನು ಏನೂ ಅರಿಯದವನೇ? ಎಲ್ಲವನ್ನೂ ಬಲ್ಲವನೇ ಅವನು. ಎಲ್ಲಿ ಬೇಕೋ ಅಲ್ಲಷ್ಟೆ ತನ್ನ ಜ್ಞಾನವನ್ನು ತೋರಿಸಿಕೊಳ್ಳುವವನು. ಹೀಗೆ ಈತನಲ್ಲಿ ಸರ್ವಜ್ಞತ್ವವೂ ಇದೆ. ಅದರಲ್ಲೂ ಚರಮಸೀಮೆಯೇ.

ಸರ್ವಜ್ಞತ್ವ-ಮೌಗ್ಧ್ಯಗಳು ಎರಡು ಪರಸ್ಪರ-ವಿರುದ್ಧವಾದ ಕೋಟಿಗಳು (ಕೋಟಿ ಎಂದರೆ ತುದಿ). ಎಂದರೆ ಸರ್ವಜ್ಞನು ಮುಗ್ಧನಾಗಿರಲಾರ; ಮುಗ್ಧನು ಸರ್ವಜ್ಞನಾಗಿರಲಾರ. ಸರ್ವಜ್ಞನಾಗಿದ್ದೂ ಏನೂ ಅರಿಯದವನಂತಿರುವುದೂ ಮುಗ್ಧತ್ವದ ಒಂದು ಲಕ್ಷಣವೇ.

ಮುಗ್ಧತ್ವದಲ್ಲೆಂತೋ ಅಂತೆಯೇ ಸರ್ವಜ್ಞತ್ವದಲ್ಲೂ ಸಾರ್ವಭೌಮನೆಂದರೆ ಕೃಷ್ಣನೇ ಸರಿ. ತನ್ನ ಲೀಲೆಯಂತೆ, ಔಚಿತ್ಯಕ್ಕೆ ತಕ್ಕಂತೆ, ಹಾಗೂ ಹೀಗೂ ಇರಬಲ್ಲವನವನು.

ಕೃಷ್ಣನನ್ನು ಕೃಷ್ಣನೆಂಬ ಹೆಸರಿನಿಂದ ಸೂಚಿಸದೆ, "ಮಹಃ" ಎಂದು ಕರೆದಿದೆ, ಈ ಶ್ಲೋಕದಲ್ಲಿ. ಮಹಸ್ ಎಂದರೆ ಉಜ್ಜ್ವಲವಾದ ತೇಜಸ್ಸು. ಹೀಗಾಗಿ ಮುಗ್ಧತೆ-ಸರ್ವಜ್ಞತೆಗಳೆರಡರಲ್ಲೂ ಸಾರ್ವಭೌಮವೆನಿಸಿರುವುದು, ಈ ಕೃಷ್ಣನೆಂಬ ಮಹಸ್ಸು.

ನನ್ನ ಕಣ್ಣು ಆ ತೇಜಸ್ಸನ್ನು ತುಂಬಿಕೊಂಡಿದೆ. ಹಾಗೆ ಮಾಡುತ್ತಲೇ ಅದು ನಿರ್ವಾಣ-ಪದವನ್ನು ಹೊಂದಿದೆ, ಆಹಾ! ಎನ್ನುತ್ತಾನೆ, ಲೀಲಾಶುಕ.

ಸಾಧಾರಣವಾಗಿ ನಿರ್ವಾಣಪದ ಅಥವಾ ಸಮಾಧಿಸ್ಥಾನವನ್ನು ಪಡೆಯುವುದಕ್ಕೆ ಅತ್ಯಂತ-ವಿಶಿಷ್ಟವಾದ ಸಾಧನೆಯು ಬೇಕು. ಆದರೆ "ಎಲ್ಲ ಬಲ್ಲುದಾದರೂ ಏನೂ ಅರಿಯದ" ಈ ತೇಜಸ್ಸನ್ನು ಕಂಡ ನನ್ನ ಕಣ್ಣು ನಿರ್ವಾಣವನ್ನೇ ಹೊಂದುತ್ತಿದೆ.

ನಿರ್ವಾಣವೆನ್ನುವುದು ಪರಮಾನಂದದ ಸ್ಥಿತಿ; ಅದು ಸಿಕ್ಕಮೇಲಿನ್ನೇನು ಬೇಕು? ಆನಂದದ ಪರಾಕಾಷ್ಠೆಯೇ ಅದು. ಅದು ದೊರಕಿದಾಗ ಉಕ್ಕುವ ಉದ್ಗಾರವೇ "ಹಂತ!"

ಈಗ ಶ್ಲೋಕ:

ಸರ್ವಜ್ಞತ್ವೇ ಚ ಮೌಗ್ಧ್ಯೇ ಚ

ಸಾರ್ವಭೌಮಮ್ ಇದಂ ಮಹಃ |

ನಿರ್ವಿಶನ್ನಯನಂ ಹಂತ

ನಿರ್ವಾಣಪದಮ್ ಅಶ್ನುತೇ ||


ಕೃಷ್ಣ ಎಂಬ ಪದಕ್ಕೆ ಕಪ್ಪು ಎಂಬ ಒಂದು ಅರ್ಥವೂ ಇದೆ. ಇಂದ್ರನೀಲ ಎಂಬ ಮಣಿಯೊಂದುಂಟು. ಅದೂ ಕಪ್ಪೇ. ಆದ್ದರಿಂದ ಕೃಷ್ಣನನ್ನೇ ಒಂದು ಇಂದ್ರನೀಲಮಣಿಯೆಂದು ಕರೆದು ರೂಪಕವೆಂಬಂತೆ ಮಾಡಿರುವ ಶ್ಲೋಕವೊಂದು ಶ್ರೀಕೃಷ್ಣಕರ್ಣಾಮೃತದಲ್ಲುಂಟು.

ಮಣಿಗಳೆಂದರೆ ಅವುಗಳು ದೊರಕುವುದು ಗಣಿಗಳಲ್ಲಲ್ಲವೆ? ಹಾಗಾದರೆ ಈ ಕೃಷ್ಣನೆಂಬ ಇಂದ್ರನೀಲಮಣಿಯು ದೊರಕಿದುದು ಯಾವ ಗಣಿಯಲ್ಲಿ? ದೇವಕಿಯ ಜಠರವೇ ಆ ಆಕರ. ಆಕರವೆಂದರೆ ಗಣಿ (ಖನಿ). ಶ್ರೀಕೃಷ್ಣನು ದೇವಕೀಗರ್ಭಸಂಭೂತನಲ್ಲವೆ? ಹೀಗೆ ಅವಳ ಜಠರಾಕರವೇ ಈ ಮಣಿಯು ಹುಟ್ಟಿದೆಡೆ.

ಉತ್ತಮವಾದ ಮಣಿಯೆಂದರೆ ಅದಕ್ಕೆ ಉತ್ತಮವಾದ ಬೆಲೆಯನ್ನೇ ತೆತ್ತು ಕೊಂಡುಕೊಳ್ಳುವವರಿರಬಹುದಲ್ಲವೇ? ಹಾಗೆ ಇಲ್ಲಾರಾದರೂ ಕೊಂಡುಕೊಂಡರೇ? ಹೌದು. ಕೊಂಡವನು ಗೋಪಾಲಕನಾದ ನಂದ. ಆತನಿತ್ತ ಬೆಲೆ ಯಾವುದು? ನಿಜಸುತೆಯೇ (ನಿಜ ಎಂದರೆ ತನ್ನ) - ತನ್ನ ಮಗಳೇ - ಆ ಬೆಲೆ!. ಕೊಂಡುಕೊಂಡದ್ದು ಯಾರಿಂದ? ಆನಕದುಂದುಭಿಯಿಂದ. (ವಸುದೇವನ ಇನ್ನೊಂದು ಹೆಸರೇ ಆನಕದುಂದುಭಿ).

ಈ ಕೃಷ್ಣನೆಂಬ ಮಣಿ ಅಸಾಧಾರಣವಾದದ್ದು! ಆದ್ದರಿಂದ ಅದನ್ನು ಪಡೆದವ ಪುಣ್ಯಾತ್ಮನೇ ಸರಿ. ತೆರುವ ಬೆಲೆಗೆ ಪಣ್ಯವೆನ್ನುತ್ತಾರೆ. ಹೀಗಾಗಿ, ಈ ಪುಣ್ಯಾತ್ಮನ ಪಣ್ಯವೆಂದರೆ ತನ್ನ ಹೆಣ್ಣುಮಗಳೇ.

ಮುತ್ತಿನ ಹಾರವನ್ನು ಮಾಡುತ್ತಾರಲ್ಲಾ, ಅದರ ಮಧ್ಯಮಣಿಯು ಎದೆಯ ಮೇಲೆ ಬರುವುದಲ್ಲವೇ? ಅದನ್ನು ನಾಯಕಮಣಿಯೆನ್ನುತ್ತಾರೆ. ಆ ಮಣಿಯು ಸಾಧಾರಣವಾಗಿರದು. ಫಳಫಳ ಹೊಳೆಯುವ ಮಣಿಯದು. ಮುತ್ತಿನ ಹಾರದಲ್ಲಿ ಬೇರೆ ಬೇರೆ ಮುತ್ತುಗಳೆಲ್ಲ ಇರುತ್ತವಲ್ಲವೇ? ನಂದಗೋಕುಲದಲ್ಲಿಯ ಬೇರೆ ಬೇರೆ ಗೋಪಾಲಕರೇ ಆ ಮುತ್ತುಗಳು. ಆ ಮುತ್ತುಗಳ ಸಾಲೇ ಗೋಪಾಲಾವಲಿ. ಅಲ್ಲಿಯ ಮಧ್ಯಮಣಿಯೇ ನಮ್ಮ ತರಳ ಕೃಷ್ಣ. ತರಳನೆಂದರೆ ಹೊಳೆಯುವಂತಹ - ಎಂಬರ್ಥ. ಹೀಗೆ ಗೋವಳರ ನಡುವಿನಲ್ಲಿ ತಾನೂ ಒಬ್ಬನೆಂಬಂತಿದ್ದರೂ, ಶ್ರೀಕೃಷ್ಣನ ಮುದ್ದುತನ-ಮಹಾ ಕಾಂತಿಗಳು ಮತ್ತಾರಲ್ಲಿದ್ದಾವು?

ಅಷ್ಟೊಂದು ಸೊಗಸಾದ ಮಣಿಯೇ ಅದು? ಅದನ್ನು ಅಲಂಕಾರಕ್ಕೆ ಯಾರಾದರೂ ಬಳಸಿಕೊಂಡರೋ ಇಲ್ಲವೋ? ಎಂಬ ಪ್ರಶ್ನೆಯೇ? ಉತ್ತರವಿದೋ ಸಿದ್ಧ: ಗೋಪಿಕೆಯರು ಅದನ್ನು ಅಲಂಕಾರವಾಗಿ ಬಳಸಿಕೊಂಡರು.

ಇದು ಇಂತಹುದು - ಎಂಬುದಾಗಿ ಯಾವುದಾದರ ಬಗ್ಗೆ ಸ್ಪಷ್ಟವಾಗಿ ಹೇಳಲಾಗುವುದಾದರೆ ಅದನ್ನು "ಇದಮ್ ಇತ್ಥಮ್" ಎನ್ನುತ್ತೇವೆ; ಯಾವುದರ ಬಗ್ಗೆ ಹಾಗೆ ಹೇಳಲಾಗದೋ ಅದನ್ನು "ಕೋಽಪಿ" ಎನ್ನುವುದಾಗುತ್ತದೆ; ಅದು ಹೀಗಿದೆಯೆಂದು ಹೇಳಲಾಗದುದು - ಎಂದದರ ಅರ್ಥ. ಅನಿರ್ವಚನೀಯ ಎಂಬ ಪದಕ್ಕೂ ಅದೇ ಅರ್ಥ. ಎಂದರೆ ಅದೊಂದು ಅದ್ಭುತವಾದದ್ದು - ಎಂದೇ ಅರ್ಥ. ಯಾವ ಇಂದ್ರನೀಲಮಣಿಯೂ ಇಷ್ಟೊಂದು ಹಿರಿಮೆಯಿದ್ದುದಿಲ್ಲ, ಅಲ್ಲವೇ? ಅದಕ್ಕೇ ಇದನ್ನು ಕವಿಯು "ಯಾವುದೋ ಇಂದ್ರನೀಲಮಣಿ" ಎನ್ನುತ್ತಾನೆ.

ಆಹಾ ಅಷ್ಟೊಂದು ಸೊಗಸೇ ಈ ವಿಶಿಷ್ಟವಾದ ಇಂದ್ರನೀಲಮಣಿ! ನಮಗೂ ಬೇಕಲ್ಲಾ - ಎಂದು ಆಸೆಯಾಗುವುದಲ್ಲವೆ? ಲೀಲಾಶುಕನಿಗೂ ಆಸೆಯೇ. ನಮಗೆಲ್ಲ ಆ ಆಸೆಯಿರುವುದೆಂದು ಆತನೂ ಬಲ್ಲ. ಅದು ಭೌತಿಕವಾಗಿ ದೊರೆಯುವ ಮಣಿಯಲ್ಲವಲ್ಲವೆ? ಆದ್ದರಿಂದ ಅದು ನಮ್ಮ ಹೃದಯದೊಳಗೇ ಸ್ಥಿರವಾಗಿ ನಿಲ್ಲಲಿ! - ಎಂಬ ಆಶಯವನ್ನು ಕವಿ ವ್ಯಕ್ತಪಡಿಸುತ್ತಾನೆ.

ಅಂತರಂಗದೊಳಗೆ ಧರಿಸುವ ಈ ಮಣಿಯು ಎಂದೆಂದಿಗೂ ನಮ್ಮಲ್ಲಿಯೇ ಇರುವಂತಹುದು - ನಾವು ಪ್ರೀತಿಯಿಂದ ಕಾಪಿಟ್ಟುಕೊಂಡರೆ. ಅತ್ಯಂತ ಇಷ್ಟವಾದುದನ್ನು ಎದೆಗಪ್ಪಿ ಇಟ್ಟುಕೊಳ್ಳುವೆವಲ್ಲವೆ? ಆದರಿದನ್ನು ಎದೆಯೊಳಗೇ ನಮ್ಮ ಹೃದಂತರದಲ್ಲೇ ಸದಾ ಇಟ್ಟುಕೊಳ್ಳಬಹುದು!

ಬನ್ನಿ ಮಣಿಪ್ರಿಯರೇ, ಈ ಶ್ಲೋಕವನ್ನೂ ಹೃದಯದಲ್ಲಿ ಧರಿಸಿರಿ; ಈ ಅದ್ಭುತ ಮಣಿಯ ತಂಪಿನ ಸ್ಪರ್ಶವನ್ನು ಸದಾ ಅನುಭವಿಸಿರಿ.

ದೇವಕ್ಯಾ ಜಠರಾಕರೇ ಸಮುದಿತಃ, ಕ್ರೀತೋ ಗವಾಂ ಪಾಲಿನಾ /

ನಂದೇನಾನಕದುಂದುಭೇಃ ನಿಜಸುತಾ-ಪಣ್ಯೇನ ಪುಣ್ಯಾತ್ಮನಾ |

ಗೋಪಾಲಾವಲಿ-ಮುಗ್ಧಹಾರ-ತರಲೋ ಗೋಪೀಜನಾಲಂಕೃತಿಃ /

ಸ್ಥೇಯಾದ್ ವೋ ಹೃದಿ ಸಂತತಂ ಸ ಮಧುರಃ ಕೋಽಪೀಂದ್ರನೀಲೋ ಮಣಿಃ ||

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 27/4/2024 ರಂದು ಪ್ರಕಟವಾಗಿದೆ.

Tuesday, April 23, 2024

ಯಕ್ಷ ಪ್ರಶ್ನೆ 86 (Yaksha prashne 86)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 85 ಶಮ ಎಂದರೆ ಯಾವುದು ?

ಉತ್ತರ - ಮನಃಶಾಂತಿ  

ಪ್ರತಿಯೊಬ್ಬರೂ ಬಯಸುವುದು ಸುಖವನ್ನು. ದುಃಖವು ಯಾವುದೇ ಕಾರಣಕ್ಕೂ ಬೇಡವೇ ಬೇಡ ಎಂಬುದು ನಿಶ್ಚಯ. ಅದಕ್ಕಾಗಿ ನಿರಂತರಪ್ರಯತ್ನವೂ ಕಂಡುಬರುತ್ತದೆ. ಇದನ್ನೇ 'ಮನಃಶಾಂತಿ' ಎಂದು ಕರೆಯುತ್ತಾರೆ. ಏಕೆಂದರೆ ಮನಸ್ಸೇ ' ಇದು ಸುಖ, ಇದು ದುಃಖ' ಎಂದು ತಿಳಿಸುವ ಸಾಧನವಾಗಿದೆ. ಅಥವಾ ' ಇದು ಸುಖಕ್ಕೆ ಕಾರಣ, ಇದು ದುಃಖಕ್ಕೆ ಕಾರಣ' ಎಂದು ಗುರುತಿಸುವುದು ಕೂಡಾ ಮನಸ್ಸೇ ಆಗಿದೆ. ಏಕೆಂದರೆ ಮನಸ್ಸು ಒಂದು ಇಂದ್ರಿಯವಾಗಿದೆ. ಇಂದ್ರಿಯವು ವಸ್ತುವನ್ನೂ ಮತ್ತು ವಸ್ತುವಿನ ಜ್ಞಾನವನ್ನೂ ತಿಳಿಸಲು ಸಾಧನವಾಗಿದೆಯಷ್ಟೇ. ಹಾಗಾಗಿ ಮನಸ್ಸು ಸರಿಯಾಗಿದ್ದಾಗ ಮಾತ್ರವೇ ಸುಖಕ್ಕೆ ಕಾರಣವನ್ನಾಗಲಿ ಅಥವಾ ಸುಖವನ್ನಾಗಲಿ ತಿಳಿಯಲು ಸಾಧ್ಯ. ಸುಖವನ್ನು ಅಪೇಕ್ಷೆ ಪಡುವುದು ಇದೇ ಮನಸ್ಸಿನಿಂದ. ಮತ್ತು ದುಃಖವನ್ನು ದೂರೀಕರಿಸುವುದೂ ಇದೇ ಮನಸ್ಸಿನಿಂದ. ಈ ಸಾಮರ್ಥ್ಯವನ್ನೇ 'ಮನಃಶಾಂತಿ' ಎನ್ನಬಹುದು. ಈ ಮನಃಶಾಂತಿಯನ್ನೇ 'ಶಮ' ಎನ್ನಬಹುದು ಎಂಬುದು ಇಲ್ಲಿನ ಪ್ರಶ್ನೋತ್ತರದ ಸಾರವಾಗಿದೆ. 

'ಶಮ' ಎಂದರೇನು? ಇದನ್ನು ಸಾಧಿಸುವ ಬಗೆ ಹೇಗೆ? ಎಂಬ ಎರಡು ವಿಷಯವನ್ನು ತಿಳಿದುಕೊಂಡಾಗ ಮಾತ್ರ ಮನಃಶಾಂತಿಯು ಅರ್ಥವಾಗುತ್ತದೆ. ಶಮ ಎಂಬದಕ್ಕೆ ಶಾಂತಿ ಎಂದರ್ಥ. 'ಚಿತ್ತ' ಎಂಬ ಸಮುದ್ರವನ್ನು 'ವಿರಾಗ' ಎಂಬ ಪರ್ವತದಿಂದ ಕಡೆದಾಗ 'ಪ್ರಕೋಪ' ಎಂಬ ಕಾಲಕೂಟ ಉದಿಸಿದ ಅನಂತರ ಬರುವುದೇ 'ಶಮ' ಎಂಬ ಅಮೃತ ಲಭಿಸುತ್ತದೆ ಎಂಬುದಾಗಿ ರಾಜತರಂಗಿಣಿ ಎಂಬ ಗ್ರಂಥಕಾರ ಕಲ್ಹಣ ಶಮದ ವಿವರಣೆಯನ್ನು ಕಾವ್ಯಮಯವಾಗಿ ನೀಡಿದ್ದನ್ನು ಕಾಣಬಹುದು. ಶಮಕ್ಕೆ ಮೋಕ್ಷ, ಅಂತರಿಂದ್ರಿಯನಿಗ್ರಹ ಎಂಬೆಲ್ಲಾ ಅರ್ಥಗಳಿವೆ. ಭಗವದ್ಗೀತೆಯಲ್ಲಿ "ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ"- ಎಲ್ಲಾ ಬಗೆಯ ಕರ್ಮಗಳಿಂದ ನಿವೃತ್ತವಾಗುವುದೇ 'ಶಮ' ಎಂಬುದಾಗಿ ಹೇಳಲಾಗಿದೆ. 'ಶಮ' ಎಂಬುದು ನವರಸಗಳಲ್ಲಿ ಒಂದಾದ ಮತ್ತು ಅದೇ ಅಂತಿಮ ರಸವಾದ 'ಶಾಂತ' ಎಂಬ ರಸಕ್ಕೆ ಸ್ಥಾಯೀಭಾವ ಎಂಬುದಾಗಿ ನಾಟ್ಯಶಾಸ್ತ್ರ, ಅಲಂಕಾರ ಮೊದಲಾದ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಒಟ್ಟಾರೆ ಶಮವೇ ಶಾಂತಿ ಎಂಬುದು.  

ಇಂತಹ ಶಮವನ್ನು ಅಥವಾ ಶಾಂತಿಯನ್ನು ಸಾಧಿಸುವ ಬಗೆಯನ್ನು ಗೀತೆಯಲ್ಲಿ ಶ್ರೀಕೃಷ್ಣನು ಸಾರುವ ಮಾತಿನಿಂದ ತಿಳಿಯಬಹುದು. ಎಲ್ಲಾ ಬಗೆಯ ಕರ್ಮಗಳಿಂದ ನಿವೃತ್ತಿಯನ್ನು ಪಡೆಯುವುದು ಶಮ. ಅಂದರೆ ಯಾವುದೇ ಕರ್ಮವನ್ನು ಮಾಡದ ಸ್ಥಿತಿ. ಅದನ್ನೇ 'ಅಕರ್ಮಸ್ಥಿತಿ' ಎನ್ನಲಾಗಿದೆ. ಅಲ್ಲೇ 'ಸುಕರ್ಮ' ಮತ್ತು 'ವಿಕರ್ಮ' ಎಂಬ ಇನ್ನೆರಡು ಬಗೆಯ ಕರ್ಮವನ್ನು ಹೇಳಲಾಗಿದೆ. ಯಾವುದು ಅಕರ್ಮಸ್ಥಿತಿಗೆ ಕಾರಣವಾಗಿದೆಯೋ ಅದನ್ನು 'ಸುಕರ್ಮ' ಎನ್ನುವುದಾದರೆ; ಯಾವುದು ಅಂತಹ ಸ್ಥಿತಿಗೆ ವಿರೋಧವಾಗುವುದೋ ಅದನ್ನು 'ವಿಕರ್ಮ' - ವಿರುದ್ಧಕರ್ಮ ಎನ್ನಬಹುದು. ಸುಕರ್ಮವನ್ನು ಮಾಡಬೇಕು. ವಿರುದ್ಧಕರ್ಮವನ್ನು ಬಿಡಬೇಕು ಎಂಬುದೇ ಶಮಕ್ಕೆ ಅಥವಾ ಶಾಂತಿಗೆ ಕಾರಣ. ಶಾಸ್ತ್ರ ಅಥವಾ ವೇದವಿಹಿತವಾದ ಕರ್ಮಾನುಷ್ಠಾನವನ್ನು ಮಾಡುತ್ತಾ ಹೋದರೆ ಅದು ನಮ್ಮನ್ನು ಅಕರ್ಮಸ್ಥಿತಿಗೇ ಕೊಂಡೊಯ್ಯುತ್ತದೆ. ಅದರಿಂದ ವೈರಾಗ್ಯವೂ ಸಿದ್ಧವಾಗುತ್ತದೆ. ರಾಗದಿಂದ ಮಾನವನು ಸಹಜವಾಗಿಯೇ ವಿರುದ್ಧಕರ್ಮವನ್ನು ಆಚರಿಸುತ್ತಾ ಹೋಗುತ್ತಾನೆ. ವಿರಾಗದಿಂದಲೇ ಸುಕರ್ಮವನ್ನು ಆಚರಿಸುತ್ತಾ ಹೋಗುತ್ತಾನೆ. ಕರ್ಮವನ್ನು ಮಾಡದ ರೀತಿಯಲ್ಲಿ, ಕುಶಲತೆಯಿಂದ ಕರ್ಮವನ್ನು ಮಾಡುತ್ತಾ, ಕೊನೆಗೆ ಕರ್ಮವನ್ನು ಬಿಡುವ ಸ್ಥಿತಿಗೆ ಬರುತ್ತಾನೆ.  ಇದೇ ಮನಃಶಾಂತಿ, ಇದೇ ಶಮ.  

ಸೂಚನೆ : 21/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 22, 2024

ವ್ಯಾಸ ವೀಕ್ಷಿತ - 84 ವಿದುರನು ದ್ರುಪದನಲ್ಲಿಗೆ ಹೋದದ್ದು( Vyaasa Vikshita - 84 Viduranu Drupadanallige Hodaddu)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಆದ್ದರಿಂದ ಸೂತನೇ (ಎಂದರೆ ವಿದುರನೇ), ಹೋಗು, ನೀನೇ ಪಾಂಡವರನ್ನು ಕರೆತಾ. ಸರ್ವಸತ್ಕಾರಗಳೊಂದಿಗೆ ಅವರನ್ನು ತಾಯಿಕುಂತಿಯೊಂದಿಗೆ ಹಾಗೂ ದೇವರೂಪಿಣಿಯಾದ ಕೃಷ್ಣೆ(ಎಂದರೆ ದ್ರೌಪದಿ)ಯೊಂದಿಗೆ ಕರೆತಾ.

ಪಾಂಡವರು ಜೀವಿಸಿರುವರೆಂಬುದೇ ಒಂದು ಸೌಭಾಗ್ಯ. ಕುಂತಿಯೂ ಬದುಕಿರುವಳೆಂಬುದೇ ಒಂದು ಸೌಭಾಗ್ಯ. ಹಾಗೆಯೇ ಇದಲ್ಲದೆ ಆ ಮಹಾರಥರಿಗೆ ದ್ರೌಪದಿಯು ದೊರೆತಿರುವಳು - ಎಂಬುದು ಸಹ ಸೌಭಾಗ್ಯವೇ ಸರಿ. ಮಹಾದ್ಯುತಿಸಂಪನ್ನನೇ (ಎಂದರೆ ಮಹಾತೇಜಶ್ಶಾಲಿಯಾದ ವಿದುರನೇ) ನಮ್ಮಗಳ ವೃದ್ಧಿಯಾಗುತ್ತಿದೆಯೆಂಬುದೂ ಸೌಭಾಗ್ಯದ ಮಾತೇ. ಪುರೋಚನನು ಮುಗಿದುಹೋದನೆಂಬುದೂ ಸೌಭಾಗ್ಯವೇ. ನನ್ನ ಮಹಾದುಃಖವೂ ತೊಲಗಿತೆಂಬುದೂ ಸೌಭಾಗ್ಯವೇ ಸರಿ." ಎಂದು ಹೇಳಿದನು.

ಧೃತರಾಷ್ಟ್ರನ ಅಪ್ಪಣೆಯಂತೆ ವಿದುರನು ಹೊರಟನು. ರತ್ನಗಳು, ವಿಧವಿಧವಾದ ಐಶ್ವರ್ಯಗಳು - ಇವನ್ನೆಲ್ಲಾ ತೆಗೆದುಕೊಂಡು ದ್ರೌಪದೀ, ಪಾಂಡವರು, ಹಾಗೂ ಯಜ್ಞಸೇನ (ದ್ರುಪದ) - ಇವರಿರುವಲ್ಲಿಗೆ ಹೋದನು. ಧರ್ಮಜ್ಞನೂ ಧರ್ಮಶಾಸ್ತ್ರವಿಶಾರದನೂ ಆದ ಆತನು ನ್ಯಾಯವಾದ ಪರಿಯಲ್ಲಿ ದ್ರುಪದ ಮುಂತಾದವರನ್ನು ಸಮೀಪಿಸಿದನು. ದ್ರುಪದನಾದರೂ ವಿದುರನನ್ನು ಧರ್ಮಾನುಸಾರ ಬರಮಾಡಿಕೊಂಡನು. ಇಬ್ಬರೂ ಪರಸ್ಪರ ಕುಶಲವಾರ್ತೆಯನ್ನು ಮಾಡಿಕೊಂಡರು.

ಅಲ್ಲಿ ಪಾಂಡದವರನ್ನು ಕಂಡ ವಿದುರನು ಜೊತೆಗೇ ಕೃಷ್ಣನನ್ನೂಕಂಡನು; ಸ್ನೇಹಭಾವದಿಂದ ಅವರನ್ನು ಆಲಿಂಗಿಸಿಕೊಂಡನು. ಬಳಿಕ ಅವರ ಅನಾಮಯವನ್ನು ಕೇಳಿದನು. (ಆಮಯ ಎಂದರೆ ರೋಗ; ಅದಿಲ್ಲದಿರುವಿಕೆಯೇ ಅನಾಮಯ. ಬ್ರಾಹ್ಮಣರಲ್ಲಿ ಕುಶಲಪ್ರಶ್ನೆಯು ಹೇಗೆ ವಾಡಿಕೆಯೋ ಹಾಗೆ ಕ್ಷತ್ರಿಯರಲ್ಲಿ ಅನಾಮಯಪ್ರಶ್ನೆಯು ವಾಡಿಕೆ: ಆರೋಗ್ಯವೇ? – ಎಂದು ವಿಚಾರಿಸುವುದು.)

ಯಥಾಕ್ರಮವಾಗಿ - ಎಂದರೆ ಹಿರಿಯರು ಮೊದಲು, ಚಿಕ್ಕವರು ಆಮೇಲೆ ಎಂಬ ಕ್ರಮದಲ್ಲಿ - ಅವರುಗಳೂ ಆ ವಿದುರನನ್ನು ಆದರಿಸಿದರು. ಧೃತರಾಷ್ಟ್ರನ ವಚನದಂತೆ ಸ್ನೇಹಪೂರ್ವಕವಾಗಿ ಮತ್ತೆ ಮತ್ತೆ ಎಲ್ಲರ ಅನಾಮಯಪ್ರಶ್ನವನ್ನು ಮಾಡಿದನು, ವಿದುರ. ರತ್ನಗಳನ್ನೂ ವಿವಿಧವಾದ ವಸುಗಳನ್ನೂ (ಎಂದರೆ ಸಂಪತ್ತುಗಳನ್ನೂ) ಕೊಟ್ಟನು: ಅವು ಪಾಂಡವರಿಗೂ ಕುಂತಿಗೂ ದ್ರೌಪದಿಗೂ ಹಾಗೂ ದ್ರುಪದನಿಗೂ ಮತ್ತು ಆತನ ಮಕ್ಕಳಿಗೂ ಕೌರವರು ಇತ್ತಿರುವಂತಹವು.

ನಮ್ರತೆಯಿಂದ ಬಗ್ಗಿದವನಾಗಿ, ಅಮಿತ-ಮತಿಯಾದ ವಿದುರನು ಕೇಶವ ಪಾಂಡವರುಗಳ ಸಂನಿಧಿಯಲ್ಲಿ ದ್ರುಪದನನ್ನು ಸಂಬೋಧಿಸಿ ಹೀಗೆಂಬುದಾಗಿ ಹೇಳಿದನು:

"ರಾಜನೇ, ಮಂತ್ರಿಗಳೊಂದಿಗೆ ಹಾಗೂ ಪುತ್ರನೊಂದಿಗೆ ನನ್ನೀ ಮಾತನ್ನು ಕೇಳು. ಧೃತರಾಷ್ಟ್ರನು ತನ್ನ ಪುತ್ರರು-ಮಂತ್ರಿಗಳು-ಬಂಧುಗಳೊಂದಿಗೆ ಸಂತೋಷದಿಂದ ನಿಮ್ಮೆಲ್ಲರ ಕುಶಲಪ್ರಶ್ನೆಯನ್ನು ಮತ್ತೆ ಮತ್ತೆ ಮಾಡಿರುವನು. ತಮ್ಮೊಂದಿಗೆ ಯಾವ ಸಂಬಂಧವು ಉಂಟಾಗಿದೆಯೋ, ಅದರಿಂದ ಬಹುವಾಗಿ ನಿನ್ನ ವಿಷಯದಲ್ಲಿ ಸಂತೋಷಗೊಂಡಿದ್ದಾನೆ. ಹಾಗೆಯೇ ಮಹಾಪ್ರಾಜ್ಞನಾದ ಭೀಷ್ಮನೂ ಸಹ ಕೌರವರೆಲ್ಲರೊಂದಿಗೆ ನಿನ್ನ ಕುಶಲವನ್ನು ಕೇಳುತ್ತಿದ್ದಾನೆ. ಹಾಗೆಯೇ ನಿನ್ನ ಪ್ರಿಯಸ್ನೇಹಿತನಾದ ಮಹಾಪ್ರಾಜ್ಞನಾದ ದ್ರೋಣನೂ ಸಹ ಆಲಿಂಗಿಸಿಕೊಂಡು ನಿನ್ನ ಕುಶಲವನ್ನು ವಿಚಾರಿಸಿದ್ದಾನೆ.

ಹಾಗೆಯೇ, ಪಾಂಚಾಲದೇಶರಾಜನೇ, ನಿನ್ನೊಡನೆ ಸಂಬಂಧವನ್ನು ಪಡೆದವನಾಗಿ, ಕೌರವನೂ (ಎಂದರೆ ಧೃತರಾಷ್ಟ್ರನೂ) ತನ್ನನ್ನು ಧನ್ಯನಾದವನನ್ನಾಗಿ ಭಾವಿಸುತ್ತಾನೆ. ಹಾಗೆಯೇ ಇತರ ಕೌರವರೂ ಸಹ ಭಾವಿಸುತ್ತಾರೆ. ನಿನ್ನೊಂದಿಗೆ ಸಂಬಂಧವನ್ನು ಹೊಂದಿರುವಂತಹುದು ಅದೆಷ್ಟು ಸಂತೋಷವನ್ನುಂಟುಮಾಡಿದೆಯೋ ಅಷ್ಟು ಸಂತೋಷವನ್ನು ರಾಜ್ಯಪ್ರಾಪ್ತಿಯು ಸಹ ಅವರಿಗೆ ಉಂಟುಮಾಡಿಲ್ಲ. ಇದನ್ನರಿತವನಾಗಿ ನೀನು ಪಾಂಡವರನ್ನು ಹಸ್ತಿನಾಪುರಕ್ಕೆ ಹೊರಡಿಸು: ಪಾಂಡವರನ್ನು ಕಾಣಲು ಕೌರವರೂ ಬಹಳವೇ ತ್ವರೆಪಡುತ್ತಿದ್ದಾರೆ – ಎಂಬುದಾಗಿ ಹೇಳಿದನು. 

ಸೂಚನೆ : 21/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 11 ವಂದನ-ವಿಧಾನ – ವೇಣುವಾದನ-ವೈಖರಿ ( Krsnakarnamrta - 11 Vandana-Vidhana – Venuvadana-Vaikhari)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಲೀಲಾಶುಕನಿಗೆ ಶ್ರೀಕೃಷ್ಣನಲ್ಲಿ ಅಚಲವಾದ ಭಕ್ತಿ. ಭಗವಂತನಲ್ಲಿ ಭಕ್ತಿಯೆಂಬುದು ಸುಲಭವಾಗಿ ಬಂದುಬಿಡುವುದೂ ಅಲ್ಲ; ಬಂದದ್ದು ತಾನಾಗಿಯೇ ಸ್ಥಿರವಾಗಿ ನಿಂತುಬಿಡುವುದೆಂಬುದೂ ಅಲ್ಲ.

ಕೆಲವಂಶಗಳಲ್ಲಿ ಮನುಷ್ಯರಲ್ಲಿಯ ಪರಸ್ಪರ ಪ್ರೀತಿಯ ಪರಿಯೆಂತೋ ಅಂತೆಯೇ ಭಗವದ್ಭಕ್ತಿಯೂ. ಮಕ್ಕಳ ವಿಷಯವನ್ನೇ ತೆಗೆದುಕೊಳ್ಳಿ. ಒಂದು ಮಗುವಿನೊಡನೆ ಚೆನ್ನಾಗಿ ಆಟವಾಡುವ ಸಂನಿವೇಶವು ಒದಗಿತೆನ್ನಿ. ಚೆನ್ನಾಗಿ ಆಡಿಸುವವರೊಂದಿಗೆ ಮಗುವಿನ ಪ್ರೀತಿಯೂ ಗಾಢವಾಗುವುದೇ ಸರಿ. ಅದರೆ ಒಮ್ಮೆ ಮಗುವಿಗೆ ಅಷ್ಟು ಇಷ್ಟವಾಗುವಂತೆ ಆಡಿ(ಸಿ), ಆಮೇಲೆ ಬಹಳಕಾಲ ಮಗುವಿನೊಂದಿಗೆ ಆಡಲೇ ಇಲ್ಲವೆನ್ನಿ. ಆಮೇಲೆ ಅದೇ ಮಗುವು ಎದುರಿಗೆ ಬಂದರೂ ಹಿಂದೆ ಉಕ್ಕಿದ್ದ ಭಾವವು ಅಷ್ಟೇ ತೀವ್ರವಾಗಿ ಉಳಿದಿರುವುದಿಲ್ಲ. ಭಕ್ತಿಯ ಬಗೆಯೂ ಹೀಗೆಯೇ: ಒಮ್ಮೆ ಉಕ್ಕಿದ ಉತ್ಕಟ ಭಾವ ಮತ್ತೊಮ್ಮೆ ಅಥವಾ ಮರುದಿನವೇ ಕೂಡ ಅಷ್ಟೇ ತೀವ್ರವಾಗಿ ಇಲ್ಲದಿರುವುದೂ ಉಂಟು!

ಎಂದೇ ಕೃಷ್ಣನಲ್ಲಿ ಭಕ್ತಿಯು ನನಗುಂಟಾಗಲಿ - ಎಂಬುದು ಲೀಲಾಶುಕನ ಕೋರಿಕೆಯಾಗಿದೆ. ಅದೆಷ್ಟು ತೀವ್ರವಾದ ಕೋರಿಕೆಯೆಂದರೆ ಆ ಬಗ್ಗೆ ದೇವತೆಗಳನ್ನು ಬೇಡಲೂ ಸಿದ್ಧ, ಲೀಲಾಶುಕ. ಬರೀ ದೇವತೆಗಳೇನು? ದೇವೇಂದ್ರ-ನಿಕರಗಳನ್ನೇ - ಎಂದರೆ ಶ್ರೇಷ್ಠದೇವ-ಸಮೂಹಗಳನ್ನೇ - ಬೇಡಿಕೊಳ್ಳುತ್ತಾನೆ. ಅದೂ ಸುಮ್ಮನೆ ಕೇಳಿಕೊಳ್ಳುವುದಲ್ಲ: ಅವರೆಲ್ಲರಿಗೂ ಸಾಷ್ಟಾಂಗ-ನಮಸ್ಕಾರವನ್ನು ಮಾಡಿ ಕೇಳಿಕೊಳ್ಳುವುದು; ಸರ್ವ-ಭಾವಗಳಿಂದಲೂ ಸಮಸ್ತ-ಪ್ರಕಾರಗಳಿಂದಲೂ ಕೇಳಿಕೊಳ್ಳುವುದು.

ಏನು ಸಾಷ್ಟಾಂಗ-ನಮಸ್ಕಾರವೆಂದರೆ? ಎಂಟು ಅಂಗಗಳಿಂದ ಮಾಡುವ ನಮಸ್ಕಾರ. ಯಾವ ಎಂಟು? ಇವು: ತೋಳುಗಳು, ಪಾದಗಳು, ಜಾನು(ಮಂಡಿ)ಗಳು, ಉರಸ್ಸು ಮತ್ತು ಶಿರಸ್ಸು (ಎಂದರೆ ಎದೆ, ತಲೆ), ನೇತ್ರಗಳು, ಮನಸ್ಸು ಮತ್ತು ವಚಸ್ಸು (ಎಂದರೆ ಚಿತ್ತ, ಮತ್ತು ವಾಕ್ಕು; ವಾಕ್ಕೆಂದರೆ ಮಾತು). (ಕೆಲವರು "ಶಿರಸಾಷ್ಟಾಂಗ ನಮಸ್ಕಾರ" ಎನ್ನುತ್ತಾರೆ; ಅದು ತಪ್ಪಾದ ಬಳಕೆ. ಅಷ್ಟಾಂಗ-ನಮಸ್ಕಾರದೊಳಗೇ ಶಿರಸ್ಸೂ ಸೇರಿದೆಯಲ್ಲವೇ? ಅದನ್ನು ಬೇರೆ ಹೇಳುವುದೇನು? ಬರೀ "ಶಿರಸಾ" ಹೇಳುವುದು ಬೇರೆ). ಅಲ್ಲದೆ, ಸಾಷ್ಟಾಂಗ-ಪಾತ, ಸಾಷ್ಟಾಂಗ-ಪ್ರಣಿಪಾತ ಎಂದರೂ ಸಾಷ್ಟಾಂಗ-ಪ್ರಣಾಮವೆಂದೇ. ಪ್ರಕೃತ-ಶ್ಲೋಕದಲ್ಲಿ ಮೊದಲನೆಯ ಪದವನ್ನು ಬಳಸಿದೆ.

ಕೃಷ್ಣನಲ್ಲಿ ನನಗೆ ಭಕ್ತಿ ಬರಲಿ - ಎಂದೇ ಕೇಳಿಕೊಳ್ಳುವುದಾದರೂ, ಬರೀ "ಕೃಷ್ಣನಲ್ಲಿ" ಎಂದುಬಿಟ್ಟರೆ ಸಾಕೇ? ಎಂತಹ ಕೃಷ್ಣ ಆತ? ಎರಡು ಮುಖ್ಯ-ವಿಶೇಷಣಗಳು ಲೀಲಾಶುಕನಿಗೆ ತೋರಿವೆ. ಒಂದು ರೂಪವನ್ನೂ ಮತ್ತೊಂದು ಸ್ವರೂಪವನ್ನೂ ಹೇಳುವಂತಹುದು.

ಮೊದಲನೆಯದು, ತನ್ನ ಕಣ್ಣ ಮುಂದೆ ತೋರುವ ಚೆಲುವ ಮೊಗದ ಕೃಷ್ಣ. ಆತನ ಆನನ (ಎಂದರೆ ಮುಖವು) ಚಂದ್ರ-ಬಿಂಬವನ್ನು ಹೋಲುವಂತಹುದು: ದುಂಡನೆಯ ಮೊಗ, ಚಂದ್ರನಂತೆ ಕಾಂತಿ-ಭರಿತವಾದದ್ದು. ಜೊತೆಗೆ ಮಧುರವಾದ ವದನವದು. ಅದರ ಮಧುರತೆಯು ಬಂದಿರುವುದಾದರೂ ಹೇಗೆ? ಮೊಗದ ಮೇಲೆ ಮೂಡುವ ಮುಗುಳ್ನಗೆ (ಅಥವಾ ಮಂದ-ಸ್ಮಿತ) ಏನುಂಟೋ ಅದರಿಂದಾಗಿ ಬಂದುದದು: ಹೀಗೆ ಸರಸವಾಗಿರುವುದು ಶ್ರೀಕೃಷ್ಣನ ಮುಖ.

ಎರಡನೆಯ ವಿಶೇಷಣವೆಂದರೆ ಕೃಷ್ಣನು ನಂದಗೋಪನ ಪುಣ್ಯರಾಶಿಯೆಂಬುದು. ವಾಸ್ತವವಾಗಿ ಶ್ರೀಕೃಷ್ಣನೇ ಪುಣ್ಯವಲ್ಲ; ಆತ ಪುಣ್ಯದ ಫಲ. ಇನ್ನೂ ಸರಿಯಾಗಿ ಹೇಳುವುದೆಂದರೆ "ಪುಣ್ಯರಾಶಿಯ ಫಲ". ಆದರೆ ಪುಣ್ಯರಾಶಿಯ ಫಲ - ಎಂಬುದಾಗಿ ಅಷ್ಟುದ್ದವಾಗಿ ಹೇಳುವುದು ಲೀಲಾಶುಕನಿಗೆ ಬೇಕಿಲ್ಲ. ಪುಣ್ಯಪುಂಜವೆಂದರೇ ಶ್ರೀಕೃಷ್ಣ; ಶ್ರೀಕೃಷ್ಣನೆಂದರೆ ಪುಣ್ಯರಾಶಿಯೆಂದೇ.

ಇಲ್ಲೊಂದು ಕಾರ್ಯ-ಕಾರಣ-ವ್ಯವಸ್ಥೆಯಿದೆ. ನಂದನ ಪುಣ್ಯವೆಂಬುದು ಕಾರಣ. ಆ ಪುಣ್ಯದ ಫಲವು ಕೃಷ್ಣ. ತರ್ಕದ ಭಾಷೆಯಲ್ಲಿ ಹೇಳುವಾಗ/ಕೇಳುವಾಗ, "ಇಲ್ಲಿ ಕಾರಣ ಯಾವುದು, ಕಾರ್ಯ ಯಾವುದು?" - ಎಂದು ಕೇಳುತ್ತಾರೆ, ಅಲ್ಲವೇ? ಎರಡನ್ನೂ ಬಿಡಿಸಿ ಹೇಳುವುದು ಸಹಜ.

ಆದರೆ ಕೆಲವೊಮ್ಮೆ ಕಾರಣ-ಕಾರ್ಯಗಳನ್ನು ಒಂದೇ ಎಂಬಂತೆ ಮಾಡಿಬಿಡುತ್ತೇವೆ: ಇದನ್ನು "ಕಾರ್ಯ-ಕಾರಣಗಳ ಅಭೇದೋಪಚಾರ" - ಎನ್ನುತ್ತಾರೆ. ಭೇದವಿದೆಯೆಂದು ಗೊತ್ತು; ಆದರೆ ಅದನ್ನು ಹೇಳುವುದು ಬೇಕಿಲ್ಲ. ಎರಡನ್ನು ಒಂದಾಗಿ ಹೇಳಲಾಗುತ್ತಿದೆ.

ಕಾವ್ಯದಲ್ಲಿರಲಿ, ಲೋಕರೂಢಿಯಲ್ಲೇ ಉಂಟು - ಈ ಬಗೆಯ ವ್ಯವಹಾರ. ನಮ್ಮ ಪ್ರೀತಿಯ ಮಗುವನ್ನು "ನನ್ನ ಚಿನ್ನ" ಎನ್ನುತ್ತೇವೆ. ಮಗುವೇನು ಚಿನ್ನವೇ? ಇಲ್ಲಾಗಿರುವುದೂ ಅಭೇದೋಪಚಾರ: ಎಂದರೆ, ಎರಡಾಗಿರುವುದನ್ನು ಒಂದೇ ಎಂಬಂತೆ ಹೇಳುವುದು. ಭೇದವಿದ್ದರೂ ಇಲ್ಲವೆಂಬಂತೆ ಹೇಳುವುದು. ನಾರಿಯನ್ನು ಸುಂದರಿ ಎನ್ನುವ ಬದಲು, "ಸೌಂದರ್ಯವೆಂದರೆ ಅವಳೇ" ಎಂದುಬಿಡುವಂತೆ. ಅವಳಲ್ಲಿ ಸೌಂದರ್ಯವಿರುವುದೇ ವಿನಾ ಅವಳೇ ಸೌಂದರ್ಯವೇ? ಆದರೂ ಸೌಂದರ್ಯವು ಅತಿಶಯವಾಗಿದ್ದರೆ ಹಾಗೆಂದುಬಿಡೋಣವೆನ್ನಿಸಿಬಿಡುತ್ತದೆ ಅಲ್ಲವೇ? ಇದೂ ಅಭೇದೋಪಚಾರವೇ.

ಅಂತೂ ನಂದನ ಪುಣ್ಯಸ್ತೋಮ(ದ ಫಲ)ವೇ ಈ ಮೋಹಕ ಶ್ರೀಕೃಷ್ಣ. ಒಟ್ಟಿನಲ್ಲಿ, ಮಹಾಪುಣ್ಯ-ಮಹಾಮಾಧುರ್ಯಗಳ ಮಧುರ-ಮಿಲನವೇ ಮುದ್ದುಕೃಷ್ಣ. ಅಂತಹ ಅದ್ಭುತದೈವದಲ್ಲಿ ನನ್ನ ಭಕ್ತಿಯಿರಲೆಂದು (ಆಶೀರ್ವದಿಸಿರೆಂದು) ಎಲ್ಲ(ದೇವ)ರಲ್ಲಿಯೂ ಸವಿನಯ-ಪ್ರಾರ್ಥನೆಯನ್ನು ಮಾಡುತ್ತಾನೆ, ಲೀಲಾಶುಕ.

ಈಗ ಈ ಭಾವದ ಶ್ಲೋಕವನ್ನು ಆಸ್ವಾದಿಸಿ:

ಸಾಷ್ಟಾಂಗ-ಪಾತಮ್ ಅಭಿವಂದ್ಯ ಸಮಸ್ತಭಾವೈಃ /

ಸರ್ವಾನ್ ಸುರೇಂದ್ರ-ನಿಕರಾನ್ ಇದಮ್ ಏವ ಯಾಚೇ |

ಮಂದಸ್ಮಿತಾರ್ದ್ರ-ಮಧುರಾನನ-ಚಂದ್ರಬಿಂಬೇ /

ನಂದಸ್ಯ ಪುಣ್ಯನಿಚಯೇ ಮಮ ಭಕ್ತಿರಸ್ತು ||

ಮಾಧವನ ಮಧುರವೇಣುಗಾನವನ್ನು ಚಿತ್ರಿಸುವ ಮತ್ತೊಂದು ಶ್ಲೋಕವನ್ನು ಗಮನಿಸಬಹುದು. ಕೊಳಲಿಗೆ ವಂಶ-ವಂಶೀ-ವೇಣು-ಮುರಲೀ-ವಂಶನಾಳ - ಎಂದೆಲ್ಲಾ ಪದಗಳುಂಟು. ವಂಶನಾಳವನ್ನು ತನ್ನ ಅಧರದ ಮೇಲೆ ಇಟ್ಟುಕೊಂಡಿದ್ದಾನೆ, ಶ್ರೀಕೃಷ್ಣ.

ಕೊಳಲನ್ನೂದುವುದೆಂದರೇನು? ಸುಮ್ಮನೆ ಗಾಳಿಯನ್ನು ತುಂಬಿದರಾಯಿತೇ? ಸಪ್ತಸ್ವರಗಳನ್ನು ಹೊಮ್ಮಿಸಿ ತಾನೇ ಅದು ಗಾನವಾಗುವುದು? ತಾನು ನುಡಿಸಬೇಕಾದ ಗಾನದ ಭಾವಗಳೇನು? ಅದಕ್ಕೆ ಒಪ್ಪುವ ರಾಗ-ತಾಳಗಳೇನು? - ಇವೂ ಚಿಂತನೀಯವಾದವೇ, ಯೋಜನೀಯವಾದವೇ.

ಅವುಗಳಿಗನುಗುಣವಾಗಿ ನಾನಾವಿವರ(ರಂಧ್ರ)ಗಳ ಮೇಲೆ ಬೆರಳಾಡಿಸಬೇಕು: ಅವುಗಳನ್ನು ಆಗಾಗ ಸ್ವಲ್ಪವಾಗಿಯೋ ಪೂರ್ಣವಾಗಿಯೋ ತೆರೆಯಬೇಕು, ಮುಚ್ಚಬೇಕು. ಚೆನ್ನಾಗಿ ಪಳಗಿದ ವಾದಕನಾದರೆ ಅಂಗುಲಿಗಳ (ಎಂದರೆ ಬೆರಳುಗಳ) ಚಲನದಲ್ಲಿ ಒಂದು ಅನಾಯಾಸತೆಯೂ ಲಾಲಿತ್ಯವೂ ಗೋಚರವಾಗುತ್ತವೆ: ಲೀಲಾಜಾಲವಾಗಿ ನುಡಿಸುತ್ತಿದ್ದರೂ ಮಾಧುರ್ಯಕ್ಕೆ ಭಂಗಬರದಿರುವುದು ಪಳಗಿದ ಕೈಯನ್ನು ಸೂಚಿಸುತ್ತದೆ. ದಿವ್ಯವಾದ ಗಾನವು ಹೊಮ್ಮುವಾಗ ಕಿವಿಗೆ ರಸಾಯನವಾಗುವುದಲ್ಲದೆ ಮನಸ್ಸಿಗೆ ತಂಪೂ ಸಹಜವಾಗಿ ಹರಿದು ಬರುತ್ತದೆ. ಮತ್ತು ಕಿವಿ-ಮನಸ್ಸುಗಳಿಗಾಗುವ ಮುದವನ್ನು ಮೀರಿದ ಒಂದು ಆತ್ಮೋನ್ನತಿಯೂ ಉಂಟಾಗುತ್ತದೆ.

ಅಂತೂ ವನಾಂತದಲ್ಲಿ, ಎಂದರೆ ಕಾಡಿನ ನಡುವೆ - ಪ್ರಕೃತದಲ್ಲಂತೂ ವೃಂದಾವನಾಂತದಲ್ಲಿ - ಮಧುರವಾಗಿ ವೇಣುವನ್ನು ನುಡಿಸುವ ಶ್ರೀಕೃಷ್ಣನ ಗಾನದ ಪರಿ ಹೃದ್ಯವಾದದ್ದೇ ಸರಿ. ಇದನ್ನು ಚಿತ್ರಿಸುವ ಶ್ಲೋಕ ಹೀಗಿದೆ:

ಅಧರೇ ವಿನಿವೇಶ್ಯ ವಂಶನಾಲಂ /

ವಿವರಾಣ್ಯಸ್ಯ ಸಲೀಲಮ್ ಅಂಗುಲೀಭಿಃ |

ಮುಹುರ್ ಅಂತರಯನ್ ಮುಹುರ್ ವಿವೃಣ್ವನ್ /

ಮಧುರಂ ಗಾಯತಿ ಮಾಧವೋ ವನಾಂತೇ ||

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 14/4/2024 ರಂದು ಪ್ರಕವಾಗಿದೆ.

Monday, April 15, 2024

ವ್ಯಾಸ ವೀಕ್ಷಿತ - 83 ಧೃತರಾಷ್ಟ್ರನ ಮೇಲೆ ವಿದುರೋಕ್ತಿಯ ಪರಿಣಾಮ (Vyaasa Vikshita - 83 Dhritarashtrana Mele Viduroktiya Parinama)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಇನ್ನು ಧೃತಿ (ಎಂದರೆ ಧೈರ್ಯ), ಅನುಕ್ರೋಶ (ಎಂದರೆ ದಯೆ), ಕ್ಷಮೆ (ಎಂದರೆ ಸಹನೆ), ಸತ್ಯ, ಹಾಗೂ ಪರಾಕ್ರಮಗಳು ಯಾವನಲ್ಲಿ ನಿತ್ಯವಾಗಿ ನೆಲೆಗೊಂಡಿವೆಯೋ ಅಂತಹ ಪಾಂಡವಶ್ರೇಷ್ಠನನ್ನು, ಎಂದರೆ ಯುಧಿಷ್ಠಿರನನ್ನು, ಯುದ್ಧದಲ್ಲಿ ಗೆಲ್ಲುವುದಾದರೂ ಹೇಗೆ? ಯಾರ ಪಕ್ಷವನ್ನು ರಾಮನು (ಎಂದರೆ ಬಲರಾಮನು) ವಹಿಸಿದ್ದಾನೋ, ಯಾರಿಗೆ ಮಂತ್ರಿಯಾಗಿ ಜನಾರ್ದನನಿದ್ದಾನೋ, ಯಾರ ಪಕ್ಷದಲ್ಲಿ ಸಾತ್ಯಕಿಯಿದ್ದಾನೋ - ಅಂತಹ ಪಾಂಡವರಿಗೆ ಯುದ್ಧದಲ್ಲಿ ಗೆಲ್ಲಲಾಗದು ಯಾವುದು? ಯಾರಿಗೆ ದ್ರುಪದನು (ಹೆಣ್ಣುಕೊಟ್ಟ) ಮಾವನೋ, ಯಾರಿಗೆ ಶ್ಯಾಲಕರಾಗಿ (ಎಂದರೆ ಪತ್ನಿಯ ಸಹೋದರರಾಗಿ) ಧೃಷ್ಟದ್ಯುಮ್ನಾದಿ ಪಾರ್ಷತರಿರುವರೋ (ಎಂದರೆ ಪೃಷತವಂಶಕ್ಕೆ ಸೇರಿದವರು, ದ್ರುಪದನ ಮಕ್ಕಳು, ವೀರಭ್ರಾತೃಗಳು) - ಅಂತಹವರನ್ನು  ಜಯಿಸಲಾಗದು ಎಂಬುದನ್ನು ಅರ್ಥಮಾಡಿಕೋ. ಅವರು ದಾಯಾದ್ಯರು (ಎಂದರೆ ತಂದೆಯ ರಾಜ್ಯದ ಉತ್ತರಾಧಿಕಾರಿಗಳು) - ಇದೆಲ್ಲವನ್ನೂ ಮನಗಂಡು ಧರ್ಮದಿಂದ ಅವರೊಂದಿಗೆ ನಡೆದುಕೋ.

ಪುರೋಚನನಿಂದಾದ ಕಾರ್ಯದಿಂದಾಗಿ ಮಹತ್ತಾದ ಅಪಕೀರ್ತಿಯೇ ನಿನಗುಂಟಾಗಿದೆ, ಧೃತರಾಷ್ಟ್ರ! ಪಾಂಡವರ ವಿಷಯದಲ್ಲಿ ನೀನು ಅನುಗ್ರಹವನ್ನು ತೋರಿ, ಇನ್ನು ಆ ಅಪಯಶಸ್ಸನ್ನು ತೊಳೆದುಕೋ. ಪಾಂಡವರಿಗೆ ಈಗ ಮಾಡುವ ಅನುಗ್ರಹವು ನಮ್ಮ ವಂಶದ ಎಲ್ಲರಿಗೂ ಜೀವನ-ಪ್ರದವಾದದ್ದು ಹಾಗೂ ಪರ-ಶ್ರೇಯಸ್ಸಾದದ್ದು (ಎಂದರೆ ಉತ್ತಮ-ಶ್ರೇಯಸ್ಸನ್ನು ಕೊಡುವಂತಹುದು); ಹಾಗೂ (ಇಡೀ)ಕ್ಷತ್ರಿಯ-ಕುಲಕ್ಕೆ ವೃದ್ಧಿಯನ್ನುಂಟುಮಾಡುವಂತಹುದು.

ರಾಜನೇ, ದ್ರುಪದನೊಬ್ಬ ದೊಡ್ಡರಾಜನೇ; ಆತನೊಂದಿಗೆ ಈ ಹಿಂದೆ ವೈರವನ್ನು ಕಟ್ಟಿಕೊಂಡಿದ್ದಾಗಿದೆ; ಆತನನ್ನು ನಮ್ಮತ್ತ ಒಲಿಸಿಕೊಂಡಲ್ಲಿ, ಅರ್ಥಾತ್ ಮಿತ್ರತ್ವದೊಂದಿಗೆ  ಸೇರಿಸಿಕೊಂಡಲ್ಲಿ, ಅದು [ನಮಗೆ] ಸ್ವಪಕ್ಷವೃದ್ಧಿಗೇ ಕಾರಣವಾಗುತ್ತದೆ. ಇನ್ನು ದಾಶಾರ್ಹರು - ಎಂದರೆ ಯದುವಂಶೀಯರು, ಬಲಶಾಲಿಗಳು ಮತ್ತು ಅವರ ಸಂಖ್ಯೆಯು ಸಹ ಹೆಚ್ಚೇ (ಕೃಷ್ಣನು ಅವರ ಕಡೆಯಲ್ಲಿ ಒಬ್ಬನೇ): ಕೃಷ್ಣನು ಎಲ್ಲೋ ಅವರೆಲ್ಲರೂ ಅತ್ತಲೇ; ಮತ್ತು ಕೃಷ್ಣನೆಲ್ಲಿರುವನೋ ಅಲ್ಲಿಯೇ ಜಯವಾದರೂ ಇರುವುದು (ಯತಃ ಕೃಷ್ಣಃ ತತೋ ಜಯಃ)!

ಅಷ್ಟೇ ಅಲ್ಲ ರಾಜನೇ, ಯಾವ ಕಾರ್ಯವನ್ನು ಸಾಮಮಾರ್ಗದಿಂದಲೇ ಸಾಧಿಸಲಾದೀತೋ, ಅಂತಹದನ್ನು ಯುದ್ಧದಿಂದ ಸಾಧಿಸಿಹೊರಡುವವನು ದೈವ-ಶಪ್ತನೇ ಸರಿ (ಎಂದರೆ ದೇವಶಾಪಕ್ಕೆ ಒಳಗಾದವನೇ ಸರಿ). ಪಾಂಡವರಿನ್ನೂ ಜೀವಿಸಿರುವರು - ಎಂಬುದನ್ನು ಕೇಳಿಯೇ ಪೌರರೂ ಜಾನಪದರೂ ಅವರ ದರ್ಶನದ ವಿಷಯದಲ್ಲಿ ಅತ್ಯಂತ ಉತ್ಸುಕರಾಗಿರುತ್ತಾರೆ. ಅವರಿಗೆಲ್ಲ ಸಂತೋಷವನ್ನುಂಟುಮಾಡು, ರಾಜನೇ.

ದುರ್ಯೋಧನನೂ ಕರ್ಣನೂ ಶಕುನಿಯೂ ಅಧರ್ಮದಲ್ಲಿ ಸೇರಿಕೊಂಡವರು; ದುಷ್ಟವಾದ ಪ್ರಜ್ಞೆ ಅವರದು; ಜೊತೆಗೆ ಮೂರ್ಖರು ಸಹ: ಅವರ ಮಾತಿಗೆ ಕಿವಿಗೊಡಬೇಡ. ರಾಜನೇ, ಗುಣಶಾಲಿಯಾದ ನಿನಗೆ ಇದನ್ನು ಹಿಂದೆಯೇ ಹೇಳಿದ್ದಾಗಿದೆ. ದುರ್ಯೋಧನ(ನೊಬ್ಬ)ನ ಅಪರಾಧದಿಂದಾಗಿ ಈ ಪ್ರಜಾಸ್ತೋಮವು ವಿನಾಶಹೊಂದೀತು (ದುರ್ಯೋಧನಾಪರಾಧೇನ ಪ್ರಜೇಯಂ ವೈ ವಿನಂಕ್ಷ್ಯತಿ)!

ಆಗ ಧೃತರಾಷ್ಟ್ರನು ಹೇಳಿದನು:

ಶಂತನುಪುತ್ರನಾದ ಭೀಷ್ಮನು ಜ್ಞಾನಿಯು; ಪೂಜ್ಯದ್ರೋಣನಂತೂ ಋಷಿಯೇ: ಆದ್ದರಿಂದ ಅವರುಗಳಾಡುವ ಮಾತು ಪರಮಹಿತವಾದದ್ದೇ ಸರಿ. ನೀನಾದರೂ ಸತ್ಯವನ್ನೇ ನುಡಿಯುತ್ತೀಯೆ. ವೀರರೂ ಮಹಾರಥಿಗಳೂ ಆದ ಕುಂತೀಪುತ್ರರು ಹೇಗೆ ಪಾಂಡುವಿಗೂ ಮಕ್ಕಳೋ, ಧರ್ಮದೃಷ್ಟಿಯಿಂದ ನೋಡಿದರೆ ಹಾಗೆಯೇ ನನಗೂ ಮಕ್ಕಳೇ ಸರಿ. ಅದರಲ್ಲಿ ಸಂಶಯವಿಲ್ಲ. ಈ ರಾಜ್ಯವು ನನ್ನ ಮಕ್ಕಳಿಗೆ ಸೇರತಕ್ಕದ್ದು ಎಂಬುದೆಂತೋ ಅಂತೆಯೇ ಪಾಂಡುಪುತ್ರರಿಗೂ ಸೇರತಕ್ಕದ್ದು - ಎಂಬುದರಲ್ಲೂ ಸಂಶಯವೇ ಇಲ್ಲ.

ಸೂಚನೆ : 14/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 10 ಬಾಲಕೃಷ್ಣನ ಪ್ರಾಸಮಯ ವರ್ಣನೆ ( Krsnakarnamrta - 10 Balakrishnana Prasamaya Varnane)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಕೃಷ್ಣನ ಬಾಲಲೀಲೆಗಳು ಯೌವನಲೀಲೆಗಳು - ಇವುಗಳನ್ನೆಲ್ಲವನ್ನೂ ಚಿತ್ರಿಸಿದ್ದಾನೆ ಲೀಲಾಶುಕ, ತನ್ನೀ ಕೃತಿಯಲ್ಲಿ. ಹೀಗಾಗಿ, ಶೃಂಗಾರರಸಭರಿತವಾದ ಪದ್ಯಗಳೂ ಹಲವುಂಟು, ಕೃಷ್ಣಕರ್ಣಾಮೃತದಲ್ಲಿ. ಆ ದೃಷ್ಟಿಯಿಂದ ಕೃಷ್ಣಕರ್ಣಾಮೃತಕಾವ್ಯವು ಭಕ್ತಿಕಾವ್ಯವಾದರೂ ಕೇವಲ ಚಿಕ್ಕವರಿಗಾಗಿಯೇ ಬರೆದ ಕಾವ್ಯವೆಂದೇನೂ ಅಲ್ಲ.

ಕರುಣಾಮಯನಾದ ಬಾಲಕೃಷ್ಣನನ್ನು ಆದರಿಸುವ ಈ ಶ್ಲೋಕವೂ ಕೃಷ್ಣಕರ್ಣಾಮೃತದಲ್ಲಿಯ ಅನೇಕಶ್ಲೋಕಗಳಂತೆ ಅನುಪ್ರಾಸಮಯವಾಗಿದೆ. ಪ್ರಾಸ ಅಥವಾ ಅನುಪ್ರಾಸವೆಂದರೆ ಒಂದೇ ತೆರನಾದ ವರ್ಣಗಳು ಮತ್ತೆ ಮತ್ತೆ ಬರುತ್ತಿರುವುದು. ಇಂತಹ ವಾಗ್ಭಂಗಿಗಳಿಗೆ - ಎಂದರೆ ಮಾತಿನ ಪ್ರಕಾರವಿಶೇಷಗಳಿಗೆ - ನಿರ್ದಿಷ್ಟವಾದ ಅಭಿಧಾನವೂ ಲಕ್ಷಣವೂ ಇರುತ್ತದೆ. ಏನು ಹಾಗೆಂದರೆ?

ಅಭಿಧಾನವೆಂದರೆ ವಿಶಿಷ್ಟವಾದ ಹೆಸರು. ಲಕ್ಷಣವೆಂದರೆ "ಇದು ಹೀಗಿರತಕ್ಕದ್ದು (ಅಥವಾ ಹಾಗಿರತಕ್ಕದ್ದಲ್ಲ)" - ಎಂದು ತಿಳಿಸುವ ಬಗೆ. ಮೇಲೆ ಹೇಳಿದಂತೆ, ಒಂದೇ ತೆರನಾಗಿ ತೋರುವ ವರ್ಣಗಳು ಬರುತ್ತಿದ್ದರೆ ಅದಕ್ಕೆ ಅನುಪ್ರಾಸಾಲಂಕಾರವೆನ್ನುವರು. ಅನುಪ್ರಾಸವೆನ್ನುವುದು ಅದರ ಅಭಿಧಾನವಾಯಿತು. "ವರ್ಣಸಾಮ್ಯಮ್ ಅನುಪ್ರಾಸಃ" ಎನ್ನುವುದು ಅದರ ಲಕ್ಷಣವೆನಿಸುತ್ತದೆ. "ವರ್ಣಗಳಲ್ಲಿಯ ಸಾಮ್ಯವು ಅನುಪ್ರಾಸ ಎಂದು ಕರೆಸಿಕೊಳ್ಳುತ್ತದೆ" – ಎಂಬುದು ಇದರ ಅರ್ಥ. ಸಾಮ್ಯವೆಂದರೂ ಸಮತೆ ಅಥವಾ ಸಮತ್ವವೆಂದರೂ ಒಂದೇ. ಉಚ್ಚಾರಣೆಯ ಬಗೆಯಲ್ಲೋ ಉತ್ಪತ್ತಿಸ್ಥಾನದಲ್ಲೋ ಹತ್ತಿರಹತ್ತಿರವಿರುವ ವರ್ಣಗಳಿಂದಾಗಿ ಅನುಪ್ರಾಸವೇರ್ಪಡುತ್ತದೆ.

ಎಷ್ಟು ಸ್ಪಷ್ಟವಾದ ಲಕ್ಷಣವನ್ನೇ ಕೊಟ್ಟರೂ, ಅದು ಚೆನ್ನಾಗಿ ಮನದಟ್ಟಾಗುವುದು ಉದಾಹರಣೆಗಳ ಅನ್ವಯದ ಮೂಲಕವೇ. ಅದನ್ನು ಮುಂದೆ ನೋಡಬಹುದು.

ಪುಟ್ಟಮಕ್ಕಳ ಕೆಂದುಟಿಯ ಸೊಬಗನ್ನು ಕಣ್ತುಂಬ ನೋಡಿ ಆಸ್ವಾದಿಸಬಹುದಷ್ಟೆ? ಅರುಣವರ್ಣದ ತುಟಿ ಈ ಪುಟ್ಟಕೃಷ್ಣನದು. ಹೊಳೆಯುವ ತುಟಿಯ ಮೇಲೆ ಮಂದಹಾಸ ಮಿಂಚಿದಾಗ ತೋರುವ ಸೊಗಸೇ ಬೇರೆ. ಮಗು ಕೃಷ್ಣನ ಈ ಅರುಣಾಧರವೇ ಒಂದು ಅಮೃತ. ಅಧರವೆಂದರೆ ಕೆಳದುಟಿ. ಈ ಅಮೃತವು ಮುಗ್ಧಸ್ಮಿತಕ್ಕೆ ಮೆರುಗನ್ನಿತ್ತಿದೆ.

ಇನ್ನು ಕೃಷ್ಣನ ಮೈಬಣ್ಣವೂ ವಿಶೇಷವೇ. ಆರ್ಯರು ಹೊರಗಿನಿಂದ ಬಂದವರೆಂದು ವಾದಿಸುವವರಿಗೆ ಇಲ್ಲೇ ಒಂದು ಸುಲಭವಾದ ಪ್ರತ್ಯುತ್ತರವಿದೆ. ರಾಮನೂ ಕೃಷ್ಣನೂ ಬಿಳಿ ಚರ್ಮದವರೇನಲ್ಲ! ಇಬ್ಬರನ್ನೂ ನೀಲಮೇಘಕ್ಕೇ ಹೋಲಿಸಿದೆ. ಕೃಷ್ಣನೆಂಬ ಪದಕ್ಕೇ "ಕರಿಯ" ಎಂಬ ಅರ್ಥವಿದೆಯಲ್ಲವೆ? ಪ್ರಕೃತಶ್ಲೋಕದಲ್ಲಿ, "ವರುಣಾಲಯನು ಕೃಷ್ಣನ ವರ್ಣವೈಭವವನ್ನು ಅನುಸರಿಸಿದ್ದಾನೆ" - ಎಂದಿದೆ. ಏನು ಹಾಗೆಂದರೆ? ವರುಣನಿಗೆ ಆಲಯ ಅಥವಾ ಮನೆಯೆಂದರೆ ಸಮುದ್ರ. ಸಮುದ್ರದ ಬಣ್ಣವೂ ಆಕಾಶನೀಲಿಯೇ. ಕೃಷ್ಣನ ಮೈಬಣ್ಣದ ವೈಭವ ಸಮುದ್ರರಾಜನಿಗೆ ಆಕರ್ಷಕವಾಗಿ ಕಂಡಿದೆ. ಎಂದೇ ತನ್ನ ಮೈಬಣ್ಣವನ್ನೂ ಅದಕ್ಕೆ ಹೊಂದಿಸಿಕೊಂಡಿದ್ದಾನೆ!

ಇಲ್ಲಿ ಹೇಳುತ್ತಿರುವುದು ಆಲಂಕಾರಿಕ-ಭಾಷೆಯೆಂಬುದು ಯಾರಿಗಾದರೂ ಸುಲಭವಾಗಿ ಗೋಚರವಾಗುವುದೇ. ಏಕೆಂದರೆ ಕೃಷ್ಣಾವತಾರಕ್ಕೆ ಹಿಂದೆಯೂ ಸಮುದ್ರವಿತ್ತಲ್ಲವೇ? ಮೊದಲ ಅವತಾರವೆನಿಸುವ ಮತ್ಸ್ಯಾವತಾರವಾದುದೇ ಸಮುದ್ರದಲ್ಲಲ್ಲವೇ? ಹಾಗಿರುವಲ್ಲಿ, "ಸಮುದ್ರದ ಬಣ್ಣವನ್ನು ಕೃಷ್ಣನು ಹೊತ್ತನು" - ಎಂದು ಹೇಳುವಲ್ಲಿ ಹೆಚ್ಚು ಔಚಿತ್ಯವಿದ್ದೀತೇ ವಿನಾ, ಇದನ್ನೇ ವ್ಯುತ್ಕ್ರಮವಾಗಿ ಹೇಳುವುದರಲ್ಲಲ್ಲ. (ವ್ಯುತ್ಕ್ರಮವೆಂದರೆ ವಿರುದ್ಧವಾದ ಕ್ರಮ. ಉದಾಹರಣೆಗೆ, ಮೊದಲು ಬಂದದ್ದನ್ನು ಮೊದಲೆಂದು ಹೇಳಿದರೆ ಅದು ಕ್ರಮ; ಇದಕ್ಕೆ ಬದಲಾಗಿ, ಆಮೇಲೆ ಬಂದದ್ದನ್ನೇ ಮೊದಲು ಹೇಳಿಬಿಟ್ಟು, ಮೊದಲು ಬಂದದ್ದನ್ನು ಆಮೇಲೆ ಹೇಳಿದರೆ ಅದು ವ್ಯುತ್ಕ್ರಮ). ಹೀಗಾಗಿ ಸಮುದ್ರವು ಕೃಷ್ಣನ ಬಣ್ಣವನ್ನು ಅನುಸರಿಸಿತು - ಎನ್ನುವುದು ಒಪ್ಪಲಾಗದ ಮಾತೇ.

ಆದರೆ ಕಾವ್ಯಮಯವಾಗಿ ಹೇಳುವಾಗ ವ್ಯುತ್ಕ್ರಮದಲ್ಲೂ ಸೊಬಗನ್ನು ಕಾಣಬಹುದು. ಕೃಷ್ಣನ ಮೈಬಣ್ಣವು ಕವಿಯ ಕಣ್ಣು-ಮನಸ್ಸುಗಳಲ್ಲಿ ಹೇಗೆ ಮತ್ತು ಎಷ್ಟು ನಾಟಿದೆಯೆಂದರೆ, "ಸಮುದ್ರರಾಯನ ಬಣ್ಣಕ್ಕೆ ಈ ಕೃಷ್ಣನ ಬಣ್ಣವೇ ಆದರ್ಶ"ವೆಂಬಂತೆ ಹೇಳಿರುವುದು ಆಗಿದೆ.

ಮತ್ತು ಹೀಗೆ ಹೇಳುವುದರ ಬಗ್ಗೆ ಬಹಳವಾದ ಆಶ್ಚರ್ಯಪಡಲೂ ಬೇಕಿಲ್ಲ. ಏಕೆಂದರೆ, ಪ್ರಿಯೆಯ ಮುಖವನ್ನು ಚಂದ್ರನಂತಿದೆಯೆಂದು ಹೇಳುವುದು ಲೋಕರೂಢಿಯಲ್ಲವೇ? ಆದರೆ ಕವಿಯೊಬ್ಬನು ಚಂದ್ರನನ್ನು ಕುರಿತು, "ತನ್ನ ಪ್ರೇಯಸಿಯ ಮುಖವನ್ನು ಹೋಲುತ್ತಾನೆ, ಈ ಚಂದ್ರ" - ಎಂದು ಹೇಳಿದರೆ ಹೇಗೋ ಹಾಗೆ. ಸಾಮ್ಯವಿಶೇಷವನ್ನು ಮನಗಾಣಿಸುವ ಸಲುವಾಗಿ ಹೀಗೆ ವ್ಯುತ್ಕ್ರಮದಿಂದ ಹೇಳುವ ಕಾವ್ಯಪರಿಪಾಟಿಯೂ ಉಂಟು. (ಪರಿಪಾಟಿ - ಎಂಬುದೇ ಸರಿಯಾದ ಪದ, ಪರಿಪಾಠಿ ಎನ್ನಬಾರದು).

ಕೃಷ್ಣನ ಸ್ಮಿತ ಅಥವಾ ಮುಗುಳ್ನಗೆಯನ್ನು ಹೇಳಿದ್ದಾಯಿತು. ಮೈಬಣ್ಣವನ್ನು ಹೇಳಿದ್ದಾಯಿತು. ಆತನ ಕಣ್ಣುಗಳನ್ನು ಕುರಿತು ಒಂದು ಮಾತು ಬೇಕಲ್ಲವೆ? ಕೃಷ್ಣನ ಕಣ್ಣುಗಳು ದೀರ್ಘವಾಗಿವೆ. ಯಾವುದರಂತೆ? ಅರವಿಂದ-ದಳದಂತೆ, ಅರ್ಥಾತ್ ಕಮಲ-ಪತ್ರದಂತೆ. ಅದೂ ಎಂಥಾ ಕಮಲ? ಬಾಡುತ್ತಿರುವ ಕಮಲವಲ್ಲ, ಅಥವಾ ಇನ್ನೂ ಮೊಗ್ಗಾಗಿರುವ ಪದ್ಮವೂ ಅಲ್ಲ. ಬದಲಾಗಿ ಅದು ತರುಣಾರವಿಂದ. ತರುಣವೆಂದರೆ ಎಳಸಿನ್ನೂ ಮಾಸಿಲ್ಲದಿರುವುದು. ಅರ್ಥಾತ್, ಮೈಹೊಳಪುಳ್ಳದ್ದು, ಕಾಂತಿಸಂಪನ್ನವಾಗಿರುವುದು.

ಕೃಷ್ಣನ ಬಣ್ಣವಾಯಿತು, ಕಣ್ಣಾಯಿತು, ಸ್ಮಿತವಾಯಿತು. ಆತನ ಮನಸ್ಸಿನ ಬಗ್ಗೆ ಒಂದು ಮಾತು ಬೇಡವೇ? ಹೌದು, ಬೇಕು. ಕರುಣಾಮಯ, ನಮ್ಮ ಬಾಲಕೃಷ್ಣ. ದಯಾಮಯನಾದ ಈ ದಿವ್ಯಬಾಲಕನನ್ನು ಆಶ್ರಯಿಸುತ್ತೇನೆ, ಎನ್ನುತ್ತದೆ ಶ್ಲೋಕ. ಶ್ಲೋಕದ ಪ್ರತಿಪಾದದ ಆರಂಭದಲ್ಲಿ ಬರುವ ಮೊದಲ ಮೂರು ಅಕ್ಷರಗಳಲ್ಲಿಯ ಅನುಪ್ರಾಸವನ್ನು ಗಮನಿಸಿ: ಅರುಣಾ-ವರುಣಾ-ತರುಣಾ-ಕರುಣಾ. 

ಪೂರ್ಣಶ್ಲೋಕವಿದು:

ಅರುಣಾಧರಾಮೃತ-ವಿಶೇಷಿತ-ಸ್ಮಿತಂ

ವರುಣಾಲಯಾನುಗತ-ವರ್ಣ-ವೈಭವಮ್ |

ತರುಣಾರವಿಂದ-ದಲ-ದೀರ್ಘ-ಲೋಚನಂ

ಕರುಣಾಮಯಂ ಕಮಪಿ ಬಾಲಮಾಶ್ರಯೇ ||

ಕೃಷ್ಣನನ್ನು ಇಷ್ಟು ಚಿತ್ರಿಸಿದರೂ ಆತನ ಬಗೆ ಏನನ್ನೂ ವಿಶೇಷವಾಗಿ ಅಥವಾ ಚೆನ್ನಾಗಿ ಹೇಳಲಾಗಿಲ್ಲವೆಂಬ ಭಾವನೆ, ಕವಿಗೆ. ಭಗವಂತನನ್ನು ನಾವು ಅದೆಷ್ಟೇ ವರ್ಣಿಸಬಹುದು. ಆದರೂ, ಕೊನೆಗೆ ಆತನು ವಾಚಾಮಗೋಚರನೇ. ಏನು ಹಾಗೆಂದರೆ? ಮಾತುಗಳಿಗೆ ಗೋಚರನಾಗದವನು. ಅದು ಹೇಗೆ? ಶ್ಲೋಕಪೂರ್ತಿ ಆತನನ್ನು ಚಿತ್ರಿಸಿಯೂ ಆತನನ್ನು ವಾಚಾಮಗೋಚರನೆನ್ನುವುದೇ? - ಎಂಬ ಪ್ರಶ್ನೆ ಬರಬಹುದು. ಹೌದು, ಎಷ್ಟು ಬಣ್ಣಿಸಿದರೂ ಆತನ ಅಂಶದ ಒಂದು ಅಂಶವನ್ನೂ ಹೇಳಿದಂತಾಗದು - ಎನ್ನುವುದೇ ಕವಿಯ ಕೊರಗು. ಒಂದು ದೊಡ್ಡ ಬೆಟ್ಟವನ್ನು ಪುಟ್ಟ ಮಾತುಗಳಲ್ಲಿ ಚಿತ್ರಿಸು – ಎಂದಾರಾದರೂ ಹೇಳಿದರೆ, ಅದರ ಅಸಾಧ್ಯತೆಯು ನಮಗೆ ಆಗ ಒಡನೆಯೇ ಗೋಚರವಾಗುತ್ತದೆ.

ಹಾಗಿರಲು ಹಿರಿದಾದ ವ್ಯಕ್ತಿಯನ್ನು ಕಿರಿದಾದ ಮಾತು ಬಣ್ಣಿಸಲಳವೇ? ಇನ್ನೂ, ಅನಂತವೇ ಆದ ಶಕ್ತಿಯನ್ನು ಸಣ್ಣದಾದ ಮಾತು ಅಭಿವ್ಯಕ್ತಿಗೊಳಿಸೀತೇ? - ಅದನ್ನೇ "ಕಮಪಿ" ಎಂಬ ಮಾತುಗಳಿಂದ ಕವಿಯು ತೋರ್ಪಡಿಸಿದ್ದಾನೆ. "ಇದಾರೋ ಬಾಲಕ!" ಎಂದರೆ, ಆ ತೆರನು ಹಿಂದೆ ಬಂದುದಿಲ್ಲ, ಮುಂದೆ ಬರುವ ಸಂಭವವಿಲ್ಲ - ಎಂಬ ಭಾವ. ಹೀಗೆ, "ನ ಭೂತೋ ನ ಭವಿಷ್ಯತಿ" - ಎನಿಸಿಕೊಳ್ಳಬಹುದಾದ ದಿವ್ಯಶಕ್ತಿಯ ಬಾಲರೂಪವನ್ನು ಅದೆಂತು ಬಣ್ಣಿಸಲಿ? - ಎಂಬುದು ಇಲ್ಲಿಯ ಭಾವ. 

ಈ ಅಪೂರ್ವಬಾಲಕನನ್ನು ನಾನು ಸೇವಿಸುತ್ತೇನೆ - ಎಂಬುದು ಕವಿಯ ಉಕ್ತಿ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 14/4/2024 ರಂದು ಪ್ರಕವಾಗಿದೆ.    

ಯಕ್ಷ ಪ್ರಶ್ನೆ 85 (Yaksha prashne 85)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 84 ಯಾವುದನ್ನು 'ಜ್ಞಾನ' ಎಂದು ಕರೆಯುತ್ತಾರೆ ?

ಉತ್ತರ - ತತ್ತ್ವಾರ್ಥದ ಅರಿವನ್ನು  

ಜ್ಞಾನ ಎಂದರೆ ಅರಿವು. ಈ ಅರಿವು ಪದಾರ್ಥಗಳ ಸಂಬಂಧದಿಂದ ಬರುತ್ತದೆ. ಸಮಸ್ತ ಪ್ರಪಂಚವನ್ನು ಎರಡಾಗಿ ವಿಭಾಗಿಸಲಾಗಿದೆ; ಅರ್ಥ ಪ್ರಪಂಚ ಮತ್ತು ಶಬ್ದ ಪ್ರಪಂಚ ಎಂಬುದಾಗಿ. ಅರ್ಥಪ್ರಪಂಚವು ಒಂದು ಬಿಂದುವಿನಿಂದ ಆರಂಭವಾಗಿದೆ ಎಂದು ವೇದಾದಿ ಸಾಹಿತ್ಯಗಳು ಹೇಳುತ್ತವೆ. ಅಂತಯೇ ಶಬ್ದಪ್ರಪಂಚವು ಕೂಡ ಅದೇ ರೀತಿಯಾಗಿ ಪ್ರಣವ ಎಂಬ ಶಬ್ದಮೂಲದಿಂದ ವಿಸ್ತಾರವಾಗಿದೆ ಎಂಬುದಾಗಿ ಅದೇ ಸಾಹಿತ್ಯಗಳು ಸಾರುತ್ತವೆ. ಅರ್ಥಪ್ರಪಂಚದ ಮೂಲವನ್ನು ಪರಬ್ರಹ್ಮ ಎನ್ನುತ್ತಾರೆ. ಅದೇ ಪರಬ್ರಹ್ಮ ವಾಚಕವಾದ ಶಬ್ದವನ್ನು ಪ್ರಣವ ಎನ್ನುತ್ತಾರೆ. ನಾವು ಈ ಪ್ರಪಂಚದ ಅರಿವನ್ನು ಪಡೆಯುವುದು ಎಂದರೆ ಶಬ್ದ ಪ್ರಪಂಚ ಮತ್ತು ಅರ್ಥ ಪ್ರಪಂಚ ಈ ಎರಡರ ಅರಿವನ್ನು ಪಡೆದಾಗ ಮಾತ್ರ. ಅರ್ಥಪ್ರಪಂಚ ಮತ್ತು ಶಬ್ದಪ್ರಪಂಚವನ್ನು ಸ್ಥೂಲ, ಸೂಕ್ಷ್ಮ, ಪರಾ ಎಂದು ಮೂರಾಗಿ ವಿಭಾಗಿಸಬಹುದು. ಸ್ಥೂಲವಾದುದು ಎಂದರೆ ನಮ್ಮ ಬಾಹ್ಯ ಇಂದ್ರಿಯಗಳಿಗೆ ಗೋಚರವಾಗುವಂಥವುಗಳು. ಸೂಕ್ಷ್ಮ ಎಂದರೆ ಮನಸ್ಸಿಗೆ ಗೋಚರವಾಗುವಂಥವುಗಳು. ಪರಾ ಎಂದರೆ ಮನಸ್ಸಿಗಿಂತಲೂ ಮೀರಿದ ವಿಷಯ. ಇಲ್ಲಿ ತತ್ತ್ವಜ್ಞಾನ ಎಂದರೆ ಈ ಮೂರರ ಸಮಗ್ರವಾದ ಅರಿವು. ಈ ಮೂರರ ಅರಿವು ಕೂಡ ಯಥಾರ್ಥವಾಗಿ ಆದಾಗ ಅದನ್ನೇ 'ತತ್ತ್ವಜ್ಞಾನ' ಎಂದು ಹೇಳಬಹುದು. ಇಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬ ಮೂರು ಹಂತಗಳಲ್ಲಿ ಬರುವ ಜ್ಞಾನವು ಒಂದಕ್ಕೊಂದು ಸಂಬಂಧವಿರುವಂತದ್ದು. ಪರಾರೂಪವಾದ ಜ್ಞಾನವು ಯಥಾರ್ಥವಾಗಿ ಆದಾಗ ಅದು ಸೂಕ್ಷ್ಮರೂಪವಾದ ಜ್ಞಾನಕ್ಕೆ ಸಹಕಾರಿಯಾಗುತ್ತದೆ. ಅಂತಯೇ ಸ್ಥೂಲ ಮತ್ತು ಸೂಕ್ಷ್ಮ ರೂಪವಾದ ಜ್ಞಾನವು ಯಥಾರ್ಥವಾಗಿ ಆದಾಗ ಅದು ಪರಾರೂಪವಾಗಿರುವ ಜ್ಞಾನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ಮೂರರ ಯಥಾರ್ಥವಾದ ಜ್ಞಾನವನ್ನೇ ತತ್ತ್ವಜ್ಞಾನ ಎಂಬುದಾಗಿ ಕರೆಯಲಾಗುತ್ತದೆ. ಇದರಲ್ಲೂ ಪರಾರೂಪವಾದ ಜ್ಞಾನವೇ ಮೂಲತಃ ತತ್ತ್ವ ಎಂಬುದಾಗಿ ಕರೆಯಲಾಗಿದೆ. ಅದನ್ನು 'ಪರಬ್ರಹ್ಮ' ಎಂದು ಕರೆದು ಅದರ ಭಾವವನ್ನು 'ತತ್ತ್ವ' ಎಂಬುದಾಗಿ ಹೇಳಿ, ಪರೋಕ್ಷವಾಗಿ, ಸಹಜವಾಗಿ, ಅನುಭವಕ್ಕೆ ಗೋಚರವಾಗುವ ಯಾವ ವಿಷಯವಿದೆಯೋ ಅದನ್ನೇ ತತ್ತ್ವ ಎಂಬುದಾಗಿ ಕರೆದು ಅದರ ಅರಿವನ್ನು ತತ್ತ್ವಜ್ಞಾನ ಎಂಬುದಾಗಿ ಹೇಳಲಾಗಿದೆ ಈ ತತ್ತ್ವಜ್ಞಾನವನ್ನೇ ಯಕ್ಷನು ಧರ್ಮರಾಜನ ಮುಖೇನ ಪ್ರಪಂಚಕ್ಕೆ ಅರಹುತ್ತಾನೆ. 

ಆದರೆ ಇಷ್ಟೇ ಅಲ್ಲ. ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬುದಾಗಿ ಮೂರು ವಿಧವಾದ ಈ ಪ್ರಪಂಚವನ್ನು ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಎಂದೂ ಕರೆಯುತ್ತಾರೆ. ಸ್ಥೂಲವಾದುದನ್ನು ಭೌತಿಕ ಎಂದರೆ; ಸೂಕ್ಷ್ಮವಾದುದನ್ನು ದೈವಿಕ ಎಂದೂ; ಅತ್ಯಂತ ಸೂಕ್ಷ್ಮವಾದುದನ್ನು ಪರಾ ಎಂದು ಕರೆಯಬಹುದು. ಇಂತಹ ಸಮಸ್ತವಿಷಯದ ಯಥಾರ್ಥ ಅನುಭವವನ್ನೇ 'ತತ್ತ್ವಜ್ಞಾನ'ಎನ್ನಲಾಗಿದೆ. ಶ್ರೀರಂಗಮಹಾಗುರುಗಳು ಹೇಳುವಂತೆ "ಜಾಗ್ರತ್-ಸ್ವಪ್ನ-ಸುಷುಪ್ತಿಗಳಂತೆಯೇ ತುರೀಯಸ್ಥಿತಿಯೂಮಾನವನ ಸಹಜವಾದಹಕ್ಕು. ಆ ಸ್ಥಿತಿಯಲ್ಲಿ ಅನುಭವಕ್ಕೆಬರುವುದು ಜ್ಞಾನ" ಎಂಬುದಾಗಿ. ಯಾವ ಜ್ಞಾನವನ್ನು ಪಡೆದ ಅನಂತರೈನ್ನಾವಜ್ಞಾನವನ್ನುಪಡೆಯುವ ಅವಶ್ಯಕತೆ ಇರುವುದಿಲ್ಲವೋ ಅದರ ಜ್ಞಾನವನ್ನೇ ತತ್ತ್ವಜ್ಞಾನದ ಅರಿವು ಎಂಬುದಾಗಿ ಹೇಳುವುದು ಇಲ್ಲಿನ ಪ್ರಶ್ನೋತ್ತರದ ಆಶಯವಾಗಿದೆ.   

ಸೂಚನೆ : 14/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.