Sunday, September 17, 2023

ಯಕ್ಷ ಪ್ರಶ್ನೆ 55 Yaksha prashne 55

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 54 ಲಾಭಗಳಲ್ಲಿ ಶ್ರೇಷ್ಠವಾದ ಲಾಭ ಯಾವುದು  ?

ಉತ್ತರ - ಆರೋಗ್ಯ

ಮಾನವನು ತನ್ನ ಜೀವನದಲ್ಲಿ ಪಡೆಯಬೇಕಾದುದು ಯಾವುದು? ಎಂದರೆ ಜ್ಞಾನ. ವಸ್ತುತಃ ಜ್ಞಾನಕ್ಕಿಂತ ಶ್ರೇಷ್ಠವಾದ ಲಾಭ ಇನ್ನೊಂದಿಲ್ಲ. ಮನುಷ್ಯನು ಮುಕ್ತನಾಗಬೇಕಾದರೆ ಜ್ಞಾನದಿಂದ ಮಾತ್ರ ಸಾಧ್ಯ ಎಂಬುದನ್ನು ' ಜ್ಞಾನಾದೇವ ತು ಕೈವಲ್ಯಮ್' ಎಂಬ ಮಾತು ದೃಢೀಕರಿಸುತ್ತದೆ. ಆದರೆ ಇಲ್ಲಿ ಯಕ್ಷನು ಆರೋಗ್ಯವನ್ನೇ ಎಲ್ಲಾ ಲಾಭಕ್ಕಿಂತಲೂ ಶ್ರೇಷ್ಠವಾದುದು ಎಂಬ ಉತ್ತರವನ್ನು ಧರ್ಮರಾಜನಿಂದ ಪಡೆಯುತ್ತಾನೆ .ಹಾಗಾದರೆ ಜ್ಞಾನಕ್ಕಿಂತಲೂ ಆರೋಗ್ಯವೇ? ಎಂಬ ಸಂಶಯ ಬರಬಹುದು. ಶ್ರೀರಂಗಮಹಾಗುರುಗಳು ಆಯುರ್ವೇದಶಾಸ್ತ್ರವು ಮಾನವನಿಗೆ ಎಷ್ಟು ಮುಖ್ಯ ಎಂಬುದನ್ನು ಹೇಳುವಾಗ ಆರೋಗ್ಯದ ಮಹತ್ತ್ವವನ್ನೂ ತಿಳಿಸುತ್ತಾ "ಲೋಕದಲ್ಲಿ ಕೆಲವು ವಿಷಯಗಳು ಕಾಲ ದೇಶಭೇದಗಳಿಂದ ಬೇಕು-ಬೇಡವಾಗಿರಬಹುದು. ಆದರೆ 'ಶರೀರಮ್ ಆದ್ಯಂ ಖಲು ಧರ್ಮಸಾಧನಮ್' ಎಂಬಂತೆ ಯಾವ ಕಾರ್ಯಕ್ಕೂ ಶರೀರವು ಮೂಲವಾಗಿರುವುದರಿಂದ ಎಲ್ಲಾ ಭೂತವರ್ಗಗಳೂ ತಮ್ಮ ಆರೋಗ್ಯ ಆಯುಸ್ಸು ಇವುಗಳನ್ನು ಸದಾ ಬಯಸುವುದರಿಂದ ಇಂತಹ ಬಯಕೆಗಳನ್ನು ಸಲ್ಲಿಸುವುದಕ್ಕಿರುವ ಅನಾದಿಸಿದ್ಧವೂ ಪ್ರತ್ಯಕ್ಷವೂ ಆದ ಶಾಸ್ತ್ರವನ್ನು ಯಾರು ತಾನೇ ಬೇಡವೆನ್ನುವರು?" ಎಂಬುದಾಗಿ ಆರೋಗ್ಯದ ಅನಿವಾರ್ಯವನ್ನು ಹೀಗೆ ಹೇಳಿದ್ದಾರೆ. ಹಾಗಾಗಿ ಆರೋಗ್ಯವೇ ಎಲ್ಲಾ ಲಾಭಗಳಿಗಿಂತಲೂ ಶ್ರೇಷ್ಠ ಎನ್ನಲಾಗಿದೆ.

ಮನುಷ್ಯನಿಗೆ ಆರೋಗ್ಯವಿಲ್ಲದಿದ್ದರೆ ಏನೊಂದೂ ಸಾಧ್ಯವಿಲ್ಲ. ಮಗುವಿನಿಂದ ಹಿಡಿದು ಮುದುಕನವರೆಗೂ ಎಲ್ಲರಿಗೂ ಆರೋಗ್ಯ ಬೇಕು. 'ಆರೋಗ್ಯವೇ ಭಾಗ್ಯ' ಎಂಬ ಗಾದೆ ಮಾತೂ ಈ ಹಿನ್ನೆಲೆಯಲ್ಲೇ ಹುಟ್ಟಿದ್ದು. ಯಾರಾದರೂ ಬಂಧುಬಂಧವರನ್ನು ಅಥವಾ ಪರಿಚಿತರನ್ನು ಭೇಟಿ ಮಾಡಿದಾಗ ನಾವು ಮೊದಲು ವಿಚಾರಿಸುವುದು 'ಆರೋಗ್ಯವಾಗಿದ್ದೀರಾ?' ಎಂದು ತಾನೆ. ಅಂದರೆ ಇರಬೇಕಾದುದು ಆರೋಗ್ಯ. ಅದೇ ಸಹಜವಾದ ಪರಿಸ್ಥಿತಿ. ಆರೋಗ್ಯ ಹದಗೆಟ್ಟಾಗ ಮತ್ತೆ ಅದನ್ನು ಸರಿಪಡಿಸಿ ಆರೋಗ್ಯವನ್ನೇ ಪಡೆಯುತ್ತೇವೆ. ಯಾರೇ ಸಿಕ್ಕಿದರೂ ನಾವು 'ಅನಾರೋಗ್ಯವೇ?' ಎಂದು ಕೇಳುತ್ತೇವೋ? ಇಲ್ಲ. ಏಕೆಂದರೆ ಅನಾರೋಗ್ಯ ಸಹಜಸ್ಥಿತಿಯಲ್ಲ. ಆರೋಗ್ಯವೇ ಇರಬೇಕಾದ ಸ್ಥಿತಿ. ಅಂತಹವನನ್ನೇ ಆಯುರ್ವೇದವು 'ಸ್ವಸ್ಥ' ಎಂದು ಕರೆಯುತ್ತದೆ. ಅಂದರೆ ತನ್ನ ತನ್ನ ಸಹಜವಾದ ಸ್ಥಿತಿಯಲ್ಲಿರುವುದು ಎಂದರ್ಥ. ಆಯುರ್ವೇದವು ಸ್ವಸ್ಥನ ಲಕ್ಷಣವನ್ನು ಈ ರೀತಿಯಾಗಿ ಹೇಳಿದೆ " ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ। ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ॥" ಎಂದು. ಆರೋಗ್ಯಶಾಸ್ತ್ರವು ಆರೋಗ್ಯವನ್ನು ಎರಡಾಗಿ ವಿಭಾಗಿಸುತ್ತದೆ ಶಾರೀರಿಕ ಮತ್ತು ಮಾನಸಿಕ ಎಂಬುದಾಗಿ. ನಮ್ಮ ಶರೀರದಲ್ಲಿರುವ ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳು, ದೇಹದ ಜಾಠರಾಗ್ನಿಯ ವ್ಯವಸ್ಥಿತವಾದ ರೀತಿ, ರಸ, ರಕ್ತ, ಮಾಂಸ, ಕೊಬ್ಬು, ಮೂಳೆ, ಮಜ್ಜ, ಶುಕ್ರ ಎಂಬ ಸಪ್ತಧಾತುಗಳು, ಮಲ ಮೂತ್ರ ಸ್ವೇದಗಳೆಂಬ ಮೂರು ಮಲಗಳು ಸರಿಯಾಗಿ ದೇಹದಿಂದ ಹೊರಹೋಗುವಿಕೆ, ಇಂದ್ರಿಯ, ಮನಸ್ಸು ಮತ್ತು ಆತ್ಮ ಇವೆಲ್ಲವೂ ನೆಮ್ಮದಿಯಾಗಿರುವುದು, ಹೀಗೆ ಎಲ್ಲಾ ಅಂಗಗಳೂ ಅದರದರ ಕಾರ್ಯವನ್ನು ಸರಿಯಾಗಿ ಮಾಡುವಂತಿರಬೇಕು. ಹಾಗಿದ್ದರೆ ಬಾಹ್ಯ ಅಂಗಗಳನ್ನು ಸಾಧನವಾಗಿಸಿಕೊಂಡ ಅಂತರಂಗದ ಅಂಗಗಳು ಸಾಂಗವಾಗಿ ಕಾರ್ಯವನ್ನು ಮಾಡಲು ಸಾಧ್ಯ. ಆದ್ದರಿಂದ ಮಾನವನ ಜೀವಿತದ ಪ್ರತಿಯೊಂದು ಕಾರ್ಯವೂ ಆರೋಗ್ಯವನ್ನು ಅವಲಂಬಿಸಿಯೇ ಇರುವುದರಿಂದ ಆರೋಗ್ಯಕ್ಕಿಂತ ಮತ್ತೊಂದು ಮುಗಿಲಾದ ಭಾಗ್ಯ ಇರಲು ಹೇಗೆ ಸಾಧ್ಯ!. 

ಸೂಚನೆ : 17/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಾತಃ ಸ್ಮರಣೀಯರಾದ ಪಂಚಕನ್ಯೆಯರು (Pratah Smaraniyarada Panncakanyeyaru Pratah Smaraniyarada Pancakanyeyaru)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)





ಪೀಠಿಕೆ

ನಾವು ಪ್ರತಿನಿತ್ಯವೂ ಪಠಣ ಮಾಡುವಂತಹ ಶ್ಲೋಕಗಳಲ್ಲಿ ಪ್ರಸಿದ್ಧವಾದ ಶ್ಲೋಕ-

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾl
ಪಂಚಕನ್ಯಾ: ಸ್ಮರೇ ನಿತ್ಯಂ ಮಹಾಪಾತಕ ನಾಶನಮ್ ll

ಅಹಲ್ಯಾ, ದ್ರೌಪದೀ, ಸೀತಾ, ತಾರಾ ಹಾಗೆಯೇ ಮಂಡೋದರೀ , ಈ ಐದು ಮಂದಿ ಕನ್ಯೆಯರನ್ನು ನಿತ್ಯವೂ ಸ್ಮರಣೆ ಮಾಡಿಕೊಂಡರೆ ಮಹಾಪಾತಕಗಳು (ಪಾಪಗಳು) ನಾಶವಾಗುತ್ತವೆ, ಎಂದು. ಈ ಐವರ ಬಗ್ಗೆ ಒಂದು ಸಂಕ್ಷಿಪ್ತವಾದ ಪರಿಚಯ ಮಾಡಿಕೊಳ್ಳುವುದಾದರೆ, ಅಹಲ್ಯಾ, ಗೌತಮ ಮಹರ್ಷಿಗಳ ಪತ್ನೀ, ದ್ರೌಪದೀ ದೃಪದರಾಜನ ಮಗಳು, ಯಜ್ಞಕುಂಡದಿಂದ ಜನಿಸಿ ಬಂದವಳು, ಪಂಚಪಾಂಡವರ ಪತ್ನೀ. ಸೀತಾ, ಜನಕ ಮಹಾರಾಜನ ಪುತ್ರಿ, ಜನಕ ಮಹಾರಾಜನು ಯಾಗ ಭೂಮಿಯನ್ನು ನೇಗಿಲಿನಿಂದ ಉಳುತ್ತಿದ್ದಾಗ ಆ ಭೂಮಿಯಲ್ಲಿ ಅವನಿಗೆ ದೊರಕಿದವಳು. ಜಾನಕಿ, ಮೈಥಿಲೀ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವವಳು, ಶ್ರೀರಾಮಚಂದ್ರನ ಅರ್ಧಾoಗಿನಿ. ತಾರಾ, ವಾನರ ರಾಜನಾಗಿದ್ದ ವಾಲಿಯ ಹೆಂಡತಿ ಮತ್ತು ಮಂಡೋದರೀ ರಾಕ್ಷಸರಾಜನಾದ ರಾವಣನ ಪತ್ನೀ.

ಈ ಶ್ಲೋಕದ ಬಗ್ಗೆ ಕೆಲವೊಂದು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಮೊದಲನೆಯದು, ಕನ್ಯೆ ಎಂದರೆ ಸಾಮಾನ್ಯವಾಗಿ ಮದುವೆ ಆಗದ ಹೆಣ್ಣು ಮಗಳು ಎನ್ನುವ ರೂಡಿ ಇದೆ. ಆದರೆ ಈ ಐದು ಮಂದಿಯರಿಗೂ ವಿವಾಹವಾಗಿದೆ, ಗೃಹಿಣಿಯರು, ಇವರನ್ನು ಹೇಗೆ ಕನ್ಯೆಯರು ಎಂಬ ಶಬ್ಧದಿಂದ ಕರೆಯಬಹುದು ? ಹಾಗಾಗಿ ಈ ಶ್ಲೋಕಕ್ಕೆ, ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ l ಪಂಚಕo ನಾ ಸ್ಮರೇ ನಿತ್ಯಂ ಮಹಾಪಾತಕ ನಾಶನಮ್ ll

ಎಂಬ ಬದಲಾವಣೆಯನ್ನು ಮಾಡಿಕೊಂಡು ಪಠಣ ಮಾಡುವ ರೂಢಿಯೂ ಬಂದಿದೆ. ಈ ಐದು ಮಂದಿಯರನ್ನು ನಾ ಅಂದರೆ ಮನುಷ್ಯನಾದವನು ಸ್ಮರಣೆ ಮಾಡಿಕೊಂಡರೆ ಪಾಪಗಳು ನಾಶವಾಗುತ್ತವೆ,ಎಂಬುದಾಗಿ. ಇಲ್ಲಿ ಕನ್ಯಾ ಎಂಬ ಪದವನ್ನೇ ಉಪಯೋಗಿಸಿಲ್ಲ. ಹಾಗೆಯೇ ಮೇಲ್ನೋಟಕ್ಕೆ ನೋಡಿದಾಗ ಸೀತೆ ಮತ್ತು ಮಂಡೋದರಿಯನ್ನು ಹೊರತುಪಡಿಸಿ ಉಳಿದವರ ನಡೆ ಲೋಕದ ದೃಷ್ಟಿಯಿಂದ ಅಷ್ಟು ಆದರ್ಶವಾಗಿದ್ದಂತೆ ತೋರುವುದಿಲ್ಲ, ಕೆಲವೊಂದು ದೋಷವನ್ನು ಹೊತ್ತುಕೊಂಡಂತೆ ಭಾಸವಾಗುತ್ತದೆ, ಇವರ ಸ್ಮರಣೆಯಿಂದ ನಮ್ಮ ಪಾಪಗಳು ಹೇಗೆ ದೂರವಾಗುತ್ತವೆ ? ಉದಾಹರಣೆಗೆ ಅಹಲ್ಯೆ ತನ್ನ ಪತಿಯಾದಂತಹ ಗೌತಮರು ಆಶ್ರಮಲ್ಲಿ ಇಲ್ಲದಿರುವ ಸಮಯದಲ್ಲಿ ಪತಿ ವೇಷಧಾರಿಯಾದಂತಹ ಇಂದ್ರನ ಕಾಮಕ್ಕೆ ವಶವಾದಳು, ದ್ರೌಪದಿಗೆ ಐದು ಮಂದಿ ಪತಿಯರು ಇದು ಲೋಕದ ನಡೆಗಿಂತ ವಿಭಿನ್ನವಾಗಿದೆ, ಹಾಗೆಯೇ ವಾಲಿಯ ಪತ್ನಿಯಾದಂತಹ ತಾರಾ ವಾಲಿಯ ನಿಧನದ ನಂತರ ಸುಗ್ರೀವನ ಜೊತೆಗೆ ಅವನ ಅಂತ:ಪುರದಲ್ಲಿಯೇ ಇರುತ್ತಾಳೆ, ಇವರುಗಳ ಚರಿತ್ರೆ ಈ ರೀತಿಯ ಕೆಲವೊಂದು ವೈಚಿತ್ರ್ಯದಿಂದ ಕೂಡಿದೆ. ಸೀತೆಯಂತೂ ಪರಮ ಪಾವನೆ, ಜಗನ್ಮಾತೆ. ಅವಳ ಸ್ಮರಣಮಾತ್ರದಿಂದಲೇ ನಮ್ಮಲ್ಲಿ ಪಾವನತ್ವ ಉಂಟಾಗುವುದು ನಿಶ್ಚಿತ. ಹಾಗಾಗಿ ಸೀತೆಯನ್ನು ಇವರ ಗುಂಪಿಗೆ ಸೇರಿಸಿರುವುದು ಸರಿಯೇ? ಮತ್ತು ಮಂಡೋದರಿಗೆ ರಾವಣನ ಪತ್ನಿ ಎಂಬುದೊಂದು ಕಪ್ಪುಚುಕ್ಕೆ ಬಿಟ್ಟರೆ ಉಳಿದೆಲ್ಲಾ ವಿಷಯಗಳಲ್ಲಿ ಸೀತೆಯಂತೆಯೇ ಪವಿತ್ರಳು, ಮಹಾಪತಿವ್ರತೆ. ಪತಿಯನ್ನು ಸನ್ಮಾರ್ಗಕ್ಕೆ ತರಲು ಪ್ರಾಮಾಣಿಕವಾದ ಪ್ರಯತ್ನವನ್ನೇ ಪಟ್ಟಿದ್ದಾಳೆ. ಅವಳನ್ನೂ ಸಹ ಇವರ ಗುಂಪಿಗೆ ಸೇರಿಸಿ, ಇವರೊಂದಿಗೆ ಸ್ಮರಣೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಹೊಂದುತ್ತದೆ? ಇತ್ಯಾದಿಯಾಗಿ ಸಂದೇಹ ಮೂಡುವುದು ಸಹಜ. ಇವರುಗಳ ಜೀವನದ ಬಗ್ಗೆ ಪರಿಪೂರ್ಣವಾದ ನೋಟ ಇಲ್ಲದೇ ಇರುವಾಗ ಇಂತಹ ಪ್ರಶ್ನೆಗಳು ಮೂಡುತ್ತವೆ.

ಮೊದಲನೆಯದಾಗಿ ಕನ್ಯೆ ಎಂಬ ಪದದ ಅರ್ಥ ಏನು ಎಂಬುದನ್ನು ನೋಡೋಣ. ಕನ್ಯಾ ಎಂಬ ಪದ ಸಂಸ್ಕೃತ ಭಾಷೆಯ ಪದ, ಕನಿ ದೀಪ್ತೌ ಎಂಬುದು ಇದರ ಮೂಲರೂಪ. ವಿಶೇಷ ದೀಪ್ತಿ ಹೊಂದಿರುವವರು, ಎಂಬುದಾಗಿ ಅರ್ಥ. ದೀಪ್ತಿ ಎಂದರೆ ಪ್ರಕಾಶ, ಬೆಳಕು ಎಂಬುದಾಗಿ. ವಿಶೇಷವಾದ ಪ್ರಕಾಶವನ್ನು ಹೊಂದಿರುವವರೇ ಕನ್ಯೆಯರು. ಯಾವುದದು ವಿಶೇಷ ಪ್ರಕಾಶ ಎಂದರೆ ಎಲ್ಲೆಲ್ಲೂ ಬೆಳಗುತ್ತಿರುವ, ಜ್ಞಾನಿಗಳಿಗೆ ಅಂತರಂಗದ ಸಾಧನೆಯಿಂದ ಗೋಚರವಾಗುವ ಆಧ್ಯಾತ್ಮ ಪ್ರಕಾಶ. ಸೂರ್ಯ, ಚಂದ್ರಾದಿ ಎಲ್ಲಾ ಪ್ರಕಾಶಗಳಿಗೂ ಬೆಳಕನ್ನು ಹರಿಸುವ ಪರಮಾತ್ಮ ಪ್ರಕಾಶ. ಅಂತಹ ಪ್ರಕಾಶವನ್ನು ತನ್ನಲ್ಲಿ ಹೊಂದಿ ಬೆಳಗುವಳೇ ಕನ್ಯಾ. "ಸ್ತ್ರೀಯರಿಗೆ ವಿವಾಹವಾದ ಮೇಲೆ ಸಂಸಾರ ಜೀವನದಿಂದ ವಿಶಿಷ್ಟ ದೀಪ್ತಿಯು ಮರೆಯಾಗುತ್ತದೆ. ಈ ಅಹಲ್ಯಾದಿಗಳು ವಿವಾಹಿತರಾದರೂ ಇತರರಂತೆ ಅವರಿಗೆ ವಿಶೇಷವಾದ ದೀಪ್ತಿ-ಪ್ರಕಾಶವು ಉಳಿದೇ ಇತ್ತು. ಇದೇ ಅವರ ಹಿರಿಮೆ ಎಂದು ಭಾವಿಸಿದಾಗ, ಅವರ ಆತ್ಮದೀಪ್ತಿಯ ಕಡೆಗೆ ಗಮನ ಸೆಳೆಯುವಂತಾದರೆ ಪಂಚಕನ್ಯೆಯರು ಸದಾ ಸ್ಮರಣೀಯರೇ ಆಗುವವರು" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ. ಮಹರ್ಷಿಗಳಿಂದ ಲೋಕಕ್ಕೆ ಕೊಡಲ್ಪಟ್ಟ ಈ ಶ್ಲೋಕದ ಒಳ ಅರ್ಥ ಹಾಗೂ ಈ ಐದು ಮಂದಿ ಸ್ತ್ರೀರತ್ನರ ಮಹಿಮೆಯನ್ನು ಜ್ಞಾನಿಗಳಿಂದ ತಿಳಿಯಲ್ಪಟ್ಟಾಗ ಸಂಶಯಕ್ಕೆ ಆಸ್ಪದವಿರುವುದಿಲ್ಲ. ಈ ಅಹಲ್ಯಾ ಮುಂತಾದವರಲ್ಲಿ ಹೇಗೆ ಆ ವಿಶೇಷವಾದ ಆತ್ಮಪ್ರಕಾಶ, ವಿಶಿಷ್ಟವಾದ ಕಾಂತಿಯನ್ನು ನೀಡಿತ್ತು? ಹೇಗೆ ಅವರು ಪ್ರಾತಃ ಸ್ಮರಣೀಯರಾಗಿದ್ದಾರೆ? ಅವರನ್ನು ಹೇಗೆ ಸ್ಮರಣೆ ಮಾಡಿಕೊಂಡರೆ ನಮ್ಮ ಪಾಪಗಳು ನಾಶವಾಗುತ್ತವೆ? ಎಂಬುದನ್ನು ಒಬ್ಬೊಬ್ಬರ ಜೀವನದ ವಿಶೇಷತೆಗಳ ಮೇಲೂ ನಮ್ಮ ನೋಟವನ್ನು ಹರಿಸಿ ಮುಂದಿನ ಸಂಚಿಕೆಗಳಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಸೂಚನೆ : 17/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Saturday, September 16, 2023

ಜೀವನದಲ್ಲಿ ನಿಜವಾದ ನಿಧಿ ಯಾವುದು? (Jīvanadalli nijavāda nidhi yāvudu?)


ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)



ಒಂದು ಪಟ್ಟಣದಲ್ಲಿ, ಹಳೆಯ ಕಬ್ಬಿಣ ಮತ್ತು ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುವ ಒಬ್ಬ ಬಡ ವ್ಯಕ್ತಿ ವಾಸಿಸುತ್ತಿದ್ದನು. ಅದೇ ಊರಿನ ಸಮೀಪದಲ್ಲಿ ಒಬ್ಬ ಮಹರ್ಷಿಯು ಮರದ ಕೆಳಗೆ ಧ್ಯಾನಸ್ಥರಾಗಿರುತ್ತಿದ್ದರು. ಈ ಮಹರ್ಷಿಗಳು ಈತನನ್ನು ಗಮನಿಸಿ ಒಮ್ಮೆ ಅವರ ಬಳಿ ಕರೆದು - "ಏನಪ್ಪಾ! ನಿನ್ನ ಜೀವನ ಹೇಗೆ ನಡಿಯುತ್ತಿದೆ? ನೀನು ಕಷ್ಟ ಪಟ್ಟು ಹಳೆಯ ಸಾಮಾನುಗಳ ಮಾರಾಟ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಿನ್ನ ಮನೆಯಲ್ಲಿ ಸೌಖ್ಯವೇ? ನಿನ್ನ ಕುಟುಂಬದ ಹೊಟ್ಟೆ ಬಟ್ಟೆಗಾಗುವಷ್ಟು ಸಂಪಾದನೆ ಆಗುತ್ತಿದ್ದೀಯಾ?" ಎಂದು ಪ್ರಶ್ನಿಸುತ್ತಾರೆ. 

ಅದಕ್ಕೆ ಅವನು ಬಹಳ ಬೇಸರದಿಂದ ಅವನ ಕಷ್ಟಗಳನ್ನು ಹೇಳಿಕೊಳ್ಳುತ್ತಾನೆ. ಅವನ ಸಂಪಾದನೆ ಊಟ ಮಾಡುವುದಕ್ಕೂ ಸಾಲುತ್ತಿಲ್ಲ, ಮತ್ತು ಒಂದು ಮನೆಯು ಇಲ್ಲದೆ ಒಂದು ಸಣ್ಣ ಗುಡಿಸಲಿನಲ್ಲಿ ಅವನ ಹೆಂಡತಿ ಮಕ್ಕಳರೊಡನೆ ವಾಸ ಮಾಡುತ್ತಿದ್ದೇನೆ ಎಂದು ಪೇಚಾಡಿಕೊಳ್ಳುತ್ತಾನೆ. ತಾವೇ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾನೆ. 


ಇದನ್ನು ಕೇಳಿ ಆ ಮಹರ್ಷಿಗಳು ಅವನಿಗೆ ಒಂದು ತಾಮ್ರದ ನಿಧಿಯ ಜಾಗವನ್ನು ತಿಳಿಸುತ್ತಾರೆ. ಆ ತಾಮ್ರವನ್ನು ಮಾರಾಟ ಮಾಡಿದರೆ ಸಾಕಷ್ಟು ದುಡ್ಡು ಬರತ್ತದೆ ಅದರಿಂದ ನಿನ್ನ ಜೀವನ ಚೆನ್ನಾಗುತ್ತದೆ ಎಂದು ಆಶೀರ್ವದಿಸಿ ಕಳುಹಿಸುತ್ತಾರೆ. ಈತ ಬಹಳ ಸಂತೋಷದಿಂದ ಈ ತಾಮ್ರದ ನಿಧಿಯನ್ನು ಪಡೆದು, ಅವರು ಹೇಳಿದಂತೆ ಇದರ ಮಾರಾಟ ಮಾಡಿ ಹೊಸದಾಗಿ ಜೀವನ ಮಾಡವುದಕ್ಕೆ ಶುರು ಮಾಡುತ್ತಾನೆ. 


ಸ್ವಲ್ಪ ಕಾಲದ ನಂತರ, ಮತ್ತೆ ಈತ ಮಹರ್ಷಿಗಳನ್ನು ಭೇಟಿಯಾಗುತ್ತಾನೆ. ಈಗ ಮತ್ತೆ ಆ ಮಹಾತ್ಮರು ಈತನ ಸೌಖ್ಯವನ್ನು ವಿಚಾರಿಸುತ್ತಾರೆ. ಅದಕ್ಕೆ ಈತ "ಹೆಂಡತಿ ಮಕ್ಕಳಿಗೆಲ್ಲ ಊಟ, ಬಟ್ಟೆಗೆ ಬೇಕಾದಷ್ಟು ಸಂಪಾದನೆ ಆಗುತ್ತಿದೆ ಸ್ವಾಮಿ, ಆದರೆ, ಒಂದು ಒಳ್ಳೆ ಮನೆಯನ್ನು ಕಟ್ಟುವ ಸಾಮರ್ಥ್ಯ ಒದಗುವಂತೆ ತಾವು ಅನುಗ್ರಹಿಸಬೇಕು ಎಂದು ಪ್ರಾರ್ಥಿಸುತ್ತಾನೆ. ಇದನ್ನು ಕೇಳಿ ಮಹರ್ಷಿಗಳು ಈ ಬಾರಿ ಅವನಿಗೆ ಒಂದು ಬೆಳ್ಳಿಯ ನಿಧಿಯ ದಿಕ್ಕನ್ನು ತೋರಿ ಆಶೀರ್ವದಿಸುತ್ತಾರೆ. ಬಹಳ ಸಂತೋಷದಿಂದ ಇವನು ಅದೇ ದಿಕ್ಕಿನಲ್ಲಿ ಹೋದಾಗ ಸಿಕ್ಕ ಬೆಳ್ಳಿಯ ನಿಧಿಯನ್ನು ನೋಡಿ ಬಹಳ ಸಂತಸ ಪಡುತ್ತಾನೆ. 


ಈ ನಿಧಿಯನ್ನು ಪಡೆದ ಮೇಲೆ ಬೆಳ್ಳಿಯ ಮಾರಾಟದಿಂದ ತುಂಬಾ ಶ್ರೀಮಂತನೇ ಆಗಿಬಿಡುತ್ತಾನೆ. ಒಂದು ಒಳ್ಳೆಯ ಮನೆ ಕಟ್ಟಿ ಸುಖವಾಗಿ ಜೀವನ ಮಾಡುವುದಕ್ಕೆ ಶುರು ಮಾಡುತ್ತಾನೆ. ಸ್ವಲ್ಪ ಕಾಲ ಹೀಗೆ ಕಳೆಯತ್ತದೆ. ಎಲ್ಲ ಸುಖಗಳಿದ್ದರೂ, ಅವನಿಗಿಂತ ಶ್ರೀಮಂತರಾದ ಜನರನ್ನು ನೋಡಿ, ಅವನು ಮತ್ತೊಮ್ಮೆ ಅದೇ ಮಹರ್ಷಿಗಳ ಬಳಿ ಹೋಗುತ್ತಾನೆ. ಅವರನ್ನು ನಮಸ್ಕರಿಸಿ, ಅವರ ಕೃಪೆಯಿಂದ ಎಲ್ಲ ತುಂಬಾ ಚೆನ್ನಾಗಿದೆ, ಎಂದು ಕೃತಜ್ಞತೆಯನ್ನು ಸಲ್ಲಿಸಿ ಕೃತಜ್ಞತೆಯ ಜೊತೆಯಲ್ಲೇ ಅವರಲ್ಲಿ ಇನ್ನೊಂದು ಪ್ರಾರ್ಥನೆಯನ್ನು ಮಾಡುತ್ತಾನೆ: "ತಮಗೆ ಇನ್ನು ಯಾವುದಾದರೂ ಧನದ ಬಗ್ಗೆ ತಿಳಿದಿದ್ದರೆ, ಅದನ್ನು ತಿಳಿಸಬಹುದೇ? ಇನ್ನು ಧನ ಸಿಕ್ಕಿದರೆ ಆಗ ಎಲ್ಲ ಅಕ್ಕ ಪಕ್ಕದ ಊರಿನಲ್ಲೂ ನಾನೇ ಎಲ್ಲರಿಗಿಂತ ಶ್ರೀಮಂತನಾಗುತ್ತೇನೆ. ಆಗ ಇನ್ನೂ ಸುಖವಾಗಿ ಜೀವನ ಮಾಡಬಹುದು" ಎಂದು ಬೇಡುತ್ತಾನೆ. ಇದಕ್ಕೆ ಈ ಬಾರಿ ಮಹರ್ಷಿಗಳು ಅವನಿಗೆ ಒಂದು ದೊಡ್ಡ ಚಿನ್ನದ ನಿಧಿಯ ಬಳಿ ಕಳುಹಿಸುತ್ತಾರೆ. ಇವನು ಚಿನ್ನದ ನಿಧಿಯೂ ಇರಬಹುದಾ ಎಂದು ಆಶ್ಚರ್ಯದಿಂದ, ಮತ್ತು ಅಷ್ಟೇ ಉತ್ಸಾಹದಿಂದ ಅವರು ಕೊಟ್ಟ ಮಾರ್ಗವನ್ನನುಸರಿಸಿ ಬರುತ್ತಾನೆ. ಅಲ್ಲಿ ಆ ಹೊಳೆಯುತ್ತಿರುವ ಚಿನ್ನದ ರಾಶಿಯನ್ನು ನೋಡಿ ಆಶ್ಚರ್ಯದಿಂದ ಒಂದು ಕ್ಷಣ ಮೈ ಮರೆಯುತ್ತಾನೆ. ಇದನ್ನು ಮಾರಾಟ ಮಾಡಿದರೆ ಎಂತಹ ಅದ್ಭುತವಾದ ಜೀವನವನ್ನು ಮಾಡಬಹುದು ಎಂದು ಯೋಚಿಸಿ ಅವನ ಭವ್ಯವಾದ ಭವಿಷ್ಯದ ಯೋಚನೆಗಳಲ್ಲಿ ಮುಳುಗುತ್ತಾನೆ. ಹೀಗೆ ಯೋಚಿಸುತ್ತಿರುವಾಗ ಅವನಿಗೆ ಇಲ್ಲಿಯವರೆವಿಗೂ ಬರದಿದ್ದ ಒಂದು ಪ್ರಶ್ನೆ ಹುಟ್ಟುತ್ತದೆ. ಈ ಮಹರ್ಷಿಗಳಿಗೆ ಇದೆಲ್ಲ ನಿಧಿಗಳ ಬಗ್ಗೆ ಗೊತ್ತಿದ್ದರೂ ಅವರು ಮಾತ್ರ ಆ ಸಣ್ಣ ಗುಡಿಸಲಿನಲ್ಲಿ ವಾಸ ಮಾಡಿಕೊಂಡು, ಭಿಕ್ಷಾಟನದಿಂದ ಬಂದ ಆಹಾರವನ್ನೇ ಸ್ವೀಕರಿಸುತ್ತ ಇದ್ದಾರಲ್ಲ!  ಇದು ಯಾಕೆ ಎಂದು ಯೋಚಿಸಿ, ಆ ಚಿನ್ನವನ್ನು ಮುಟ್ಟಲ್ಲು ಮನಸ್ಸಾಗದೇ ಮೊದಲು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂದು ಹಿಂದಿರುಗೆ ಮಹರ್ಷಿಗಳ ಬಳಿ ಓಡಿಹೋಗುತ್ತಾನೆ. 


"ಮಹರ್ಷಿಗಳೇ! ನಿಮಗೆ ಇಷ್ಟೆಲ್ಲಾ ನಿಧಿಗಳ ಬಗ್ಗೆ ಗೊತ್ತಿದ್ದರೂ ನೀವು ಯಾಕೆ ಇಂತಹ ಸಣ್ಣ ಗುಡಿಸಲಿನಲ್ಲಿ ವಾಸ ಮಾಡಿಕೊಂಡು ಬಡವರ ತರಹ ಬಾಳುತ್ತಿದ್ದೀರಾ?" ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಮಹರ್ಷಿಗಳು, ಹಸನ್ಮುಖರಾಗಿ, " ಅಪ್ಪ, ಈ ನಿಧಿಗಳೆಲ್ಲ ನನ್ನ ಬಳಿ ಇರುವ ನಿಧಿಗೆ ಹೋಲಿಸಿದರೆ ತುಂಬಾ ಚಿಕ್ಕದು. ನನ್ನ ಹತ್ತಿರ ವಜ್ರದ ನಿಧಿಯೇ ಇದೆ, ಅದು, ಎಂದಿಗೂ ಕ್ಷಯವೇ ಆಗದಂತಹ ಅಕ್ಷಯ ನಿಧಿ. ಇದು ಇರುವಾಗ ಯಾವ ಬೆಳ್ಳಿ ನಿಧಿ, ಯಾವ ಚಿನ್ನದ ನಿಧಿ ಬೇಕು" ಎಂದು ಹೇಳುತ್ತಾರೆ. 


ಇದನ್ನು ಕೇಳಿ "ಅಕ್ಷಯವಾದ ವಜ್ರದ ನಿಧಿಯೇ? ಎಲ್ಲಿದೆ? ನನಗೂ ಅದು ಬೇಕಲ್ಲ. ತಾವು ಅನುಗ್ರಹಿಸಬಹುದೇ?" ಎಂದು ಬೇಡುತ್ತಾನೆ. ಆಗ ಮಹರ್ಷಿಗಳು "ಆಗಬಹುದು, ಆದರೆ, ಅದು ಅಷ್ಟು  ಸುಲಭವಲ್ಲ. ನಾನು ಹೇಳಿದ ಹಾಗೆ ನೀನು ಮಾಡಬೇಕಾಗತ್ತದೆ, ಮತ್ತು ಸ್ವಲ್ಪ ಕಾಲ ಹಿಡಿಯತ್ತದೆ, ಸ್ವಲ್ಪ ಕಷ್ಟಗಳನ್ನು ಎದುರಿಸಬೇಕಾಗತ್ತದೆ, ಇದಕ್ಕೆಲ್ಲಾ ನೀನು  ಸಿದ್ಧವೇ? " ಎಂದು ಪ್ರಶ್ನಿಸುತ್ತಾರೆ. ಈತ ಇದಕ್ಕೆ ಬಹಳ ಉತ್ಸಾಹದಿಂದ "ನೀವು ಏನು ಹೇಳಿದರೂ ನಾನು ಮಾಡಲು ಸಿದ್ಧ" ಎಂದು ಒಪ್ಪಿಕೊಳ್ಳುತ್ತಾನೆ. 


ಇದಾದ ನಂತರ ಆ ಮಹರ್ಷಿಗಳು ಇವನನ್ನು ಶಿಷ್ಯನಾಗಿ ಸ್ವೀಕರಿಸಿ, ಸಾಧನ ಮಾರ್ಗವನ್ನು ಹೇಳಿಕೊಡುತ್ತಾರೆ. ಈ ಮಾರ್ಗವನ್ನು ಅನುಸರಿಸಿ ಅವರು ಹೇಳಿದಂತೆ ಮಾಡುತ್ತ, ಸ್ವಲ್ಪ ವರ್ಷಗಳು ಕಳೆಯುತ್ತವೆ. ಹೀಗೆ ಒಂದು ದಿನ ಇವನಿಗೆ ಆತ್ಮ ಸಾಕ್ಷಾತ್ಕಾರವೇ ಆಗಿಬಿಡುತ್ತದೆ. ಆತ್ಮ ಸಾಕ್ಷಾತ್ಕಾರವೆಂದರೆ ಅವನ ಒಳಗಡೆ ಇರುವ ಅಂಗುಷ್ಠಾಕಾರವಾಗಿರುವ ಜ್ಯೋತಿಯ ದರ್ಶನ ಆಗತ್ತದೆ. ಆ ಕ್ಷಣದಲ್ಲಿ ಅವನು ಎಂದೂ ಅನುಭವಿಸಿರದ ಪರಮಾನಂದವನ್ನು ಅನುಭವಿಸುತ್ತಾನೆ. ಅವನ ಕಣ್ಣುಗಳಲ್ಲಿ ಧಾರಾಕಾರವಾಗಿ ಆನಂದ ಭಾಷ್ಪವು ಹರಿಯುತ್ತದೆ.  


ಈ ಅದ್ಭುತವಾದ ಅನುಭವವನ್ನು ಅವನ ಗುರುಗಳ ಬಳಿ ತಿಳಿಸುತ್ತಾನೆ. ಇದನ್ನು ಕೇಳಿ, ಆ ಮಹರ್ಷಿಗಳಿಗೂ ತುಂಬಾ ಸಂತೋಷವಾಗುತ್ತದೆ. "ಇದೇನಪ್ಪಾ! ಎಲ್ಲದಕ್ಕಿಂತ ದೊಡ್ಡ ಅಕ್ಷಯವಾದ ವಜ್ರದ ನಿಧಿ. ಇದನ್ನು ಎಲ್ಲ ಮನುಷ್ಯರು ಪಡಿಯಬೇಕು" ಎಂದು ಹೇಳುತ್ತಾರೆ. ಒಳಗೆ ಹೊಳೆಯುವುದು ಬೆಳಕಾಗಿರುವುದರಿಂದ ಮತ್ತು ಅತ್ಯಂತ ದೊಡ್ಡ ಆನಂದ ಅದರಲ್ಲಿರುವುದರಿಂದ, ಮಹರ್ಷಿಗಳು ಹೊಳೆಯುವ ಮತ್ತು ಅತ್ಯಂತ ಬೆಲೆ ಬಾಳುವ ವಜ್ರದ ಉದಾಹರಣೆಯೊಂದಿಗೆ ಆತ್ಮಾನುಭವದ ಬಗ್ಗೆ ಅವನಿಗೆ ತಿಳಿಹೇಳಿದ್ದರು. 


ಈ ವಿಷಯದಲ್ಲಿ ಶ್ರೀರಂಗ ಮಹಾಗುರುಗಳ ವಾಕ್ಯವು ಅತ್ಯಂತ ಸ್ಫೂರ್ತಿದಾಯಕ -  "ಆತ್ಮ ಸಾಕ್ಷಾತ್ಕಾರ ಪ್ರತಿಯೊಬ್ಬ ಮನುಷ್ಯನ ಹಕ್ಕಪ್ಪಾ! ಇದನ್ನು ಎಲ್ಲ ಮಾನವರೂ ಪಡೆಯಬೇಕು" ಎಂದು ಸಾರಿದ್ದಾರೆ. ಇವರ ಮಾತಿನಂತೆಯೇ ನಾವೆಲ್ಲರೂ ನಮ್ಮ ಜೀವನದ ಗುರಿಯೂ, ಮತ್ತು ಹಕ್ಕಾಗಿರುವ ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿ ಸಾಗುವಂತಾಗಲಿ ಮತ್ತು ಈ ಅಕ್ಷಯವಾದ ನಿಧಿಯನ್ನು ಪಡಯುವಂತಾಗಲಿ ಎಂದು ಪ್ರಾರ್ಥನೆ.


ಸೂಚನೆ: 16/09/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.


Sunday, September 10, 2023

ಅಷ್ಟಾಕ್ಷರೀ​ - 43 ಓಂಕಾರಾರ್ಥಮುದೀರಯನ್ (Astakshara Darshana 43 Omkararthamudirayan)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) 



ಎಷ್ಟೋ ಮಂದಿಗೆ ಗೊತ್ತಿಲ್ಲದಿರಬಹುದು. ಏನೆಂದರೆ, ಈಚೆಗೆ ಹುಟ್ಟಿದ ಮತವೊಂದರಲ್ಲಿ ಸಂಗೀತಕ್ಕೇ ನಿಷೇಧವುಂಟು! ಏಕೆಂದರೆ, ಗಾನವೂ ಕಾಡುಹರಟೆಯೂ ಒಂದೇ ತೂಕವಂತೆ! ಅಷ್ಟೇ ಅಲ್ಲ; ಮದ್ಯ-ವ್ಯಭಿಚಾರಗಳೂ ರೇಷ್ಮೆವಸ್ತ್ರ-ಸಂಗೀತವಾದ್ಯಗಳೂ ಏಕರೂಪವಾಗಿ ನಿಷಿದ್ಧವಂತೆ! ಅದೆಂತಹ  'ನುಡಿಮುತ್ತು'ಗಳು!

ಅದು ಹೇಗೇ ಇರಲಿ, ಹಿಂದೂ-ಸಂಸ್ಕೃತಿಯಲ್ಲಿ ಮಾತ್ರ ಸಂಗೀತವೆಂಬುದು ಜೀವನದ ಅವಿಭಾಜ್ಯವಾದ ಅಂಗ. ಭಾರತದ ಅತ್ಯಂತಪ್ರಾಚೀನಸಾಹಿತ್ಯವೆಂದರೆ ವೇದ. (ಜಗತ್ತಿನ ಅತ್ಯಂತ ಪ್ರಾಚೀನಸಾಹಿತ್ಯವೂ ಅದುವೇ). ವೇದಗಳಲ್ಲೇ ಗೇಯತಾ-ಗುಣವಿದೆ. ಗಾನಕ್ಕಾಗಿಯೇ ಇರುವ ಒಂದು ವೇದವೇ ಉಂಟು : ಸಾಮವೇದ. ಭಗವಂತನು 'ಹಾಡಿದ್ದೇ' ಭಗವದ್-"ಗೀತೆ"ಯೆನಿಸುತ್ತದೆ; "ವೇದಗಳಲ್ಲಿ ನಾನು ಸಾಮವೇದ"- ಎಂದು ಶ್ರೀಕೃಷ್ಣನೇ ಅಲ್ಲಿ ಹೇಳಿಕೊಂಡಿದ್ದಾನೆ. ವಾಲ್ಮೀಕಿ-ಕೃತಿಯೂ ಗಾನಕ್ಕೆ ವಿಷಯವಾದದ್ದೇ. ಲವ-ಕುಶರು ರಾಮಾಯಣವನ್ನು "ಮಾರ್ಗ-ವಿಧಾನದಿಂದ" ಹಾಡಿದುದನ್ನು ರಾಮನೇ ಮನಸಾರೆ ಮೆಚ್ಚಿಕೊಂಡನಷ್ಟೆ.

ರಾಮ-ಕೃಷ್ಣರು ಮಾತ್ರವಲ್ಲ, ಶಿವ-ಶಿವೆಯರೂ ಸಂಗೀತಪ್ರಿಯರೇ.   ಪಾರ್ವತಿಯ ನರ್ತನವು ಲಾಸ್ಯವೆನಿಸಿದರೆ, ಶಿವನ ನರ್ತನವು ತಾಂಡವವೆನಿಸುವುದು. ನಮ್ಮ ದೇವತೆಗಳೇ ಹಾಗೆ: "ಜಯ ಸಂಗೀತ-ರಸಿಕೇ" ಎಂಬುದಾಗಿಯೇ ಶ್ಯಾಮಲಾ-ದಂಡಕದಲ್ಲಿ ದೇವಿಯನ್ನು ಸಂಬೋಧಿಸಿದೆ; ಸರಸ್ವತಿಯ ಹಸ್ತವನ್ನು ವೀಣೆಯು ಅಲಂಕರಿಸಿದೆ;  ನಂದಿಯು ಮೃದಂಗಧಾರಿ; ತುಂಬುರುವು ಗಾನಪ್ರವೀಣ. (ಪಟ್ಟಿ ಇನ್ನೂ ದೊಡ್ಡದಿದೆ!) ವಾಸ್ತವವಾಗಿ, ಗೀತ-ವಾದ್ಯ-ನೃತ್ಯಗಳು ಮೂರೂ ಸೇರಿಯೇ ಸಂ-ಗೀತ.

ಭಾರತದ ಆರ್ಷ-ಚಿಂತನೆಯಂತೆ, ಲೋಕದಲ್ಲಿ ಕಾಣುವ ಜೀವಿಗಳು ನಾವೆಲ್ಲರೂ ಮೂಲತಃ ಭಗವಂತನ ಮಡಿಲಲ್ಲಿ ಆಡಿರುವ ಶಿಶುಗಳೇ. ನಮ್ಮಲ್ಲಿ ಜನಿಸಿದ ಪ್ರಾಕೃತಿಕ-ಕಾಮನೆಗಳಿಂದಾಗಿ ಇಲ್ಲಿಗೆ ಚ್ಯುತರಾದವರೇ. (ಚ್ಯುತರೆಂದರೆ ಬಿದ್ದವರು). ಬೀಳದೇ ಇರುವವನೊಬ್ಬನೇ : ಅ-ಚ್ಯುತ. ಬಿದ್ದಿರುವ ಜೀವಿಗಳನ್ನು ಉದ್ಧರಿಸಲೆಂದೇ ಭಗವಂತನು ಕೆಳಗಿಳಿದುಬರುವುದೇ ಅವ-ತರಣ ಅಥವಾ ಅವತಾರ.

ಹಾಗೆ ಇಳಿದು ಬರುವ ಭಗವಂತ, ಯಾರನ್ನು ಉದ್ಧರಿಸಬೇಕೆಂದಿದ್ದಾನೋ, ಅವರ ಸ್ಥಿತಿ-ಗತಿಗಳನ್ನು ಗಮನಿಸಿಕೊಂಡೇ, ರುಚಿ-ಸಾಮರ್ಥ್ಯಗಳನ್ನು ಲೆಕ್ಕಿಸಿಯೇ, ತಾನು ಅವಕ್ಕನುಗುಣವಾದ ಮೈ-ಮನಸ್ಸುಗಳನ್ನೋ ವೇಷ-ಭೂಷಗಳನ್ನೋ ವ್ಯವಹಾರ-ಪ್ರಕಾರಗಳನ್ನೋ ತಾಳುವುದೂ ತಳೆಯುವುದೂ. ತನ್ನ ದೈವತ್ವವನ್ನು ಬಹುತೇಕ ಮುಚ್ಚಿಕೊಂಡೇ ಇದ್ದು, ಆಗೊಮ್ಮೆ ಈಗೊಮ್ಮೆಯಷ್ಟೆ ಅದನ್ನು ತೋರಿಕೊಳ್ಳಬಹುದು - ಶ್ರೀರಾಮನ ಅವತಾರದಲ್ಲಿ ಹೇಗೋ ಹಾಗೆ; ಅಥವಾ, ಎಳಸಿನಲ್ಲಿಯೇ ಅದರ ಸೂಚನೆಯನ್ನು ಆಗಾಗ್ಗೆ ಕೊಡುತ್ತಲೂ ಹೋಗಬಹುದು - ಶ್ರೀಕೃಷ್ಣನ ಅವತಾರದಲ್ಲಿ ಹೇಗೋ ಹಾಗೆ. ಚಿಕ್ಕಂದಿನ ಚೇಷ್ಟೆಗಳನ್ನು ಮಾಡುತ್ತಲೇ ತನ್ನ ಔನ್ನತ್ಯವನ್ನು ತೋರಿಸಿಕೊಡುವುದೂ ಇಲ್ಲದಿಲ್ಲ.

ಧನ್ಯಜೀವಿಗಳನ್ನು ತನ್ನತ್ತ ಸೆಳೆಯುವಂತಹ ಆಟಗಳನ್ನು ಬಾಲ್ಯದಲ್ಲಿಯೇ ಆಡಿ ಅವರಿಗೆ ಮೋದಾತಿಶಯವನ್ನು ಅನುಗ್ರಹಿಸಿದವನೆಂದರೆ ನಮ್ಮ ಕಡುಮುದ್ದುಕೃಷ್ಣನೇ ಸರಿ. ಆತನು ಆಡಿದ ಆಟವೇನು? ಆಟದೊಳಗಿನ ಮಾಟವೇನು? ಒಳಹೊಕ್ಕರೆ ದಕ್ಕುವ ನೋಟವೇನು? – ಎಂಬುದನ್ನಿಲ್ಲೊಂದಿಷ್ಟು ಗಮನಿಸಲಾಗಿದೆ.

ಲೋಕದಲ್ಲಿ ಎಷ್ಟು ಮಂದಿ ಗಾನವನ್ನು ಮಾಡಿಲ್ಲ, ವಾದ್ಯಗಳನ್ನು ನುಡಿಸಿಲ್ಲ? ಆದರೆ ಬಾಲಕೃಷ್ಣನು ನುಡಿಸಿದಂತೆ ವೇಣುವನ್ನು ನುಡಿಸಿದವರುಂಟೆ?: "ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಧರೆ!".

ಮಂಗಳವಾಯಿತೆಂದರೆ ಹೇಗಾಯಿತು? ಹತ್ತು ಬಗೆಗಳಲ್ಲಾದುದನ್ನು ಚಿತ್ರಿಸುತ್ತಾನೆ, ಲೀಲಾಶುಕ. ಶ್ರೀರಂಗಮಹಾಗುರುಗಳ ದೃಷ್ಟಿಗೆ ಬಿದ್ದು ಅವರ ಮಾರ್ಮಿಕ-ವಿವರಣೆಗೆ ಪಾತ್ರವಾಗಿ ಧನ್ಯವಾಯಿತು, ಆತನ ಆ ಚಿತ್ರಣ. ವೇಣುಗಾನ-ಪ್ರಭಾವದ ಆ ಬಗೆಗಳೇನು?: ಲೋಕಗಳನ್ನು ಅದು ಉನ್ಮಾದಗೊಳಿಸಿದೆ. ಏನು ಹಾಗೆಂದರೆ? ಏನೋ ಭಾವವುಕ್ಕಿತೆಂದಷ್ಟು ಮಾತ್ರವಲ್ಲ; ಯೋಗಗಾನವಾದ ಅದು, ಯೋಗಶಾಸ್ತ್ರವು ಹೇಳುವ ಉನ್ಮನೀಭಾವವನ್ನು ಸೂಚಿಸುತ್ತದೆ. ಮನಸ್ಸು ಮೇಲ್ಮುಖವಾಗಿ ಹರಿಯುವುದನ್ನು ಉನ್ಮನೀ-ಮನೋನ್ಮನೀ ಎಂಬ ಪದಗಳಿಂದ ಯೋಗವಿದ್ಯೆಯು ಹೇಳುವುದಷ್ಟೆ? ಅವಾಗುವುದು ಧ್ಯಾನದಲ್ಲಿಯ ಅಂತರ್ನಾದ-ಶ್ರವಣದಿಂದ. ಅವೇ ಫಲ-ಪರಿಣಾಮಗಳು ಇಲ್ಲಿ ಶ್ರೀಕೃಷ್ಣನು ನುಡಿಸಿದ ವೇಣುವಿನ ಬಾಹ್ಯನಾದದ ಶ್ರವಣದಿಂದಲೇ ಆಗುತ್ತಿದೆ! ಓ, ಇಂತಹ ಗಾನವಿನ್ನೆಲ್ಲಿ ದೊರಕೀತು?

ಮನುಷ್ಯರ ಮೇಲೆ ಮಾತ್ರವಲ್ಲದೆ, ಗಿಡ-ಮರಗಳ ಮೇಲೂ ಪಶು-ಪ್ರಾಣಿಗಳ ಮೇಲೂ ಆ ವೇಣುನಾದದ ಪ್ರಭಾವವುಂಟು. ವೃಕ್ಷಗಳಲ್ಲಿ ಹರ್ಷವೂ, ಗೋವೃಂದಗಳಲ್ಲಿ ಒಂದು ಆನಂದವೂ, ಮೃಗಗಳಲ್ಲಿ ವಿಲಕ್ಷಣ-ವಿವಶತೆಯೂ ಉಂಟಾಗಿವೆ. ಮುಗ್ಧಗೋವಳರಲ್ಲೂ ಅನಿರ್ವಾಚ್ಯವಾದ ಸಂಭ್ರಮವು ಮೂಡಿದೆ. ಹೀಗೆ ಜೀವರಾಶಿಗಳ ಮೇಲೆಲ್ಲ ವಿಕಾಸಾಭಿಮುಖವಾದ ಪರಿಣಾಮವನ್ನದು ಬೀರಿದೆ. ಈ ವಿಶಿಷ್ಟಗಾನದಿಂದಾಗಿ ಇತ್ತ ಗಟ್ಟಿಬೆಟ್ಟಗಳೂ ಕರಗುವಂತಿವೆ. ಸಪ್ತಸ್ವರಗಳೂ ಸುಯೋಜಿತವಾಗಿ ಹೊಮ್ಮುತ್ತಿದ್ದು, ಅತ್ತ ವೇದರಾಶಿಗೇ ಮೂಲವೆನಿಸುವ ನಾದವು ಆವಿರ್ಭವಿಸಿದೆ. ವೇದಬೀಜವಾದ ಓಂಕಾರವೇ ಅಲ್ಲಿ ತೋರಿಬಂದಿದೆ: "ಪ್ರಣವಾರ್ಥವಾದ ಪರಬ್ರಹ್ಮವನ್ನೇ ಬಿತ್ತರಿಸುವ ನಾದವದಾಗಿದೆ" – ಎಂಬ ಶ್ರೀರಂಗಮಹಾಗುರುಗಳ ಭವ್ಯೋದ್ಗಾರಕ್ಕದು ಭಾಜನವಾಗಿದೆ!  ಮುನಿಗಳನ್ನು ಮತ್ತೂ ಅಂತರ್ಮುಖರನ್ನಾಗಿಸುವ ಆ ಮಾದಕ-ನಾದಕ್ಕೆ ನಮ್ಮ ನಮ್ರ ನಮನಗಳು!

ಸೂಚನೆ: 10/9/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 


ಯಕ್ಷ ಪ್ರಶ್ನೆ 54 (Yaksha prashne 54)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

 

ಪ್ರಶ್ನೆ – 53 ಉತ್ತಮ ಧನ ಯಾವುದು  ?

ಉತ್ತರ - ಶ್ರುತ- ವಿದ್ಯೆ

ಭಾರತದೇಶವು ವಿದ್ಯೆಗೆ ಮಹತ್ತ್ವವನ್ನು ಕೊಟ್ಟಿದೆ. ವಿದ್ಯಾವಂತನಿಗೆ ಎಲ್ಲರಿಗಿಂತಲೂ ಉನ್ನತಸ್ಥಾನ ಮತ್ತು ಮಾನವನ್ನು ಕೊಟ್ಟಿದ್ದೂ ಉಂಟು. ಏಕೆ ಇಂತಹ ಸ್ಥಾನ? ಧನ, ಕನಕ, ವಸ್ತು, ವಾಹನ ಇತ್ಯಾದಿ ಯಾವುದನ್ನು ನಾವು ಸಂಪತ್ತು ಎಂದು ಹೇಳುತ್ತೇವೋ ಅವೆಲ್ಲವೂ ಭೌತಿಕವಾಗಿ ಗೋಚರಿಸುತ್ತವೆ. ಆದರೆ ವಿದ್ಯೆ ಎಂಬ ಸಂಪತ್ತು ಅಗೋಚರವಾದುದು. ಹೊರಗಿನ ಸಂಪತ್ತನ್ನು ಚೋರರು ಅಪಹರಿಸಬಹುದು, ರಾಜರು ಪಡೆಯಬಹುದು, ಅಣ್ಣತಮ್ಮಂದಿರು ವಿಭಾಗಿಸಬಹುದು, ತಲೆಯಮೇಲೆ ಹೊತ್ತುಕೊಂಡರೆ ಭಾರವೆಂದೆನಿಸುವುದು, ವ್ಯಯಿಸಿದಷ್ಟೂ ಉಳಿಯುವುದಿಲ್ಲ, ಕಳೆದುಹೋಗುತ್ತದೆ. ಆದರೆ ವಿದ್ಯೆ ಎಂಬ ಧನವು ಇವೆಲ್ಲಕ್ಕೂ ವಿರುದ್ಧವಾದದ್ದು. ವಿದ್ಯೆಯನ್ನು ತಲೆಯಲ್ಲಿ ತುಂಬಿಗೊಂದರೆ ಭಾರವೆನಿಸದು. ಏಕೆಂದರೆ ವಿದ್ಯೆ ಅಮೂರ್ತವಾದ ವಿಷಯ. ಅದಕ್ಕೆ ತೂಕವಿಲ್ಲ. ಆದ್ದರಿಂದ ವಿದ್ಯೆಯು ಎಲ್ಲಾ ಧನಕ್ಕಿಂತಲೂ ಶ್ರೇಷ್ಠ ಎಂದು ಒಂದು ಸುಭಾಷಿತವೂ ಹೇಳುತ್ತದೆ. ಯಕ್ಷನು ಕೇಳಿದ ಪ್ರಶ್ನೆಗೆ ವಿದ್ಯೆಯ ಪರ್ಯಾಯಪದವಾದ 'ಶ್ರುತ' ಎಂಬ ಪದವನ್ನು ಧರ್ಮರಾಜನು ಹೇಳಿದ್ದು, ವಿದ್ಯೆಯ ವಿಶೇಷತೆಯನ್ನು ಪ್ರಚುರಪಡಿಸುವುದಕ್ಕಾಗಿ. 

ಉಪನಿಷತ್ತು ಹೇಳುವಂತೆ ವಿದ್ಯೆಯನ್ನು ಸಂಪಾದನೆ ಮಾಡುವುದಕ್ಕೆ ಆಚಾರ್ಯನು ಪೂರ್ವರೂಪ. ವಿದ್ಯಾರ್ಥಿಯು ಉತ್ತರರೂಪ. ಅವರಿಬ್ಬರ ಮಧ್ಯೆ ಪ್ರವಚನ ಅಥವಾ ಪಾಠವು ಸಂಧಾನವಾಗುತ್ತದೆ. ಇದರಿಂದ ವಿದ್ಯೆ ಎಂಬುದು ವಿದ್ಯಾರ್ಥಿಯಲ್ಲಿ ಆವಿರ್ಭಾವವಾಗುತ್ತದೆ. ಉಪಾಧ್ಯಾಯರು ಹೇಳುವ ಪಾಠವನ್ನು ಮಾಣವಕನು ಸರಿಯಾಗಿ ಗ್ರಹಣ ಮಾಡಬೇಕಾಗುತ್ತದೆ. ಗ್ರಹಣದ ಆಧಾರದ ಮೇಲೆಯೇ ಅವನ ಮುಂದಿನ ವಿದ್ಯೆಯ ಆಳ ಅಗಲಗಳು ನಿರ್ಣಯವಾಗುವುವು. ಆದ್ದರಿಂದ ವಿದ್ಯಾಗ್ರಹನಕ್ಕೆ ಶ್ರವಣ ಮೊದಲ ಸಾಧನ. ಸಾಧನವು ನೂರಕ್ಕೆ ನೂರು ಪ್ರಮಾಣದಲ್ಲಿರಬೇಕು. ಯಾವುದೇ ವಿಷಯವು ನಮ್ಮ ಆತ್ಮಸಾತ್ ಆಗಬೇಕಾದರೆ ಯಾವೆಲ್ಲಾ ಸಾಧನಗಳು ಬೇಕು ಎಂದು ಹೇಳುವಾಗ 'ಶ್ರವಣ ಮನನ ನಿದಿಧ್ಯಾಸನ' ಇವನ್ನು ಹೇಳುತ್ತಾರೆ. ಶ್ರವಣದ ಭಾಗ ಸಂಪನ್ನವಾದರೆ ಮನನವು ಸಂಪೂರ್ಣವಾಗುವುದು. ಮನನವು ಪರಿಪೂರ್ಣವಾದರೆ ಮುಂದಿನ ನಿದಿಧ್ಯಾಸನ ಅರ್ಥಪೂರ್ಣವಾಗುವುದು. ಆದ್ದರಿಂದ ಶ್ರವಣಕ್ಕೆ ಪ್ರಾಶಸ್ತ್ಯವಿದೆ. ಇಂತಹ ಶ್ರವಣದಿಂದ ಪಡೆದದ್ದನ್ನೆ 'ಶ್ರುತ' ಎಂದು ಕರೆಯಲಾಗಿದೆ. ಇದೇ ನಿಜವಾದ ವಿದ್ಯೆ. 'ಬಹುಧಾ ಶ್ರೋತವ್ಯಂ ಬಹುಭ್ಯಃ ಶ್ರೋತವ್ಯಂ' ಎಂಬ ಮಾತಿದೆ. ಅಂದರೆ ಒಂದೇ ವಿಷಯವನ್ನು ಅನೇಕಬಾರಿ ಅನೇಕರಿಂದ ಕೇಳಬೇಕು. ಇಲ್ಲೂ ಕೇಳುವುದನ್ನು ಒತ್ತಿ ಒತ್ತಿ ಹೇಳಲಾಗಿದೆ. ಕೊಟ್ಟಾಗ ಮಾತ್ರ ಸಿಗುವುದು ಉಳಿದ ಸಂಪತ್ತುಗಳು. ಕೊಡದೇ ಸಿಗದಿರುವುದು ಉಳಿದ ಸಂಪತ್ತುಗಳು. ಈ ವಿದ್ದಯೆ ಎಂಬ ಧನವನ್ನು ಕೊಡದೆಯೂ ಆಚಾರ್ಯರ ಶ್ರದ್ಧೆಯ ಆರಾಧನೆಯಿಂದ ಸಿಗಬಹುದು. ಅದಕ್ಕೆ ನಾವು ಮಹಾಭಾರತದ ಏಕಲವ್ಯನ ಕಥೆಯನ್ನು ನೋಡಬಹುದು. ನೇರವಾಗಿ ದ್ರೋಣರು ವಿದ್ಯೆಯನ್ನು ಕೊಡಲಿಲ್ಲ. ಆದರೂ ಏಕಲವ್ಯ ವಿದ್ಯೆಯನ್ನು ಪಡೆದನಲ್ಲ. ಕೊಟ್ಟಿದ್ದೂ ಉಳಿಯದ ಧವೆಂದರೆ ಇದೇ ವಿದ್ಯೆ. ಇದಕ್ಕೂ ಮಹಾಭಾರತದ ಕರ್ಣನ ವೃತ್ತಾಂತವನ್ನು ನೋಡಬಹುದು. ಪರಶುರಾಮನಿಂದ ವಿಧಿವತ್ತಾಗಿ ಪಡೆದಿದ್ದರೂ ಬೇಕಾದಾಗ ಬಳಸಿಕೊಳ್ಳಲಾಗಲಿಲ್ಲ ಕರ್ಣನಿಗೆ. ಆಚಾರ್ಯಾತ್ ಪಾದಮ್ ಆದತ್ತೇ ಪಾದಂ ಶಿಷ್ಯಂ ಸ್ವಮೇಧಯಾ, ಪಾದಂ ಬ್ರಹ್ಮಚಾರಿಭ್ಯಃ ಪಾದಂ ಕಾಲೇನ ಪಚ್ಯತೇ" - ಆಚಾರ್ಯರಿಂದ ಪಡೆಯುವುದು ಕೇವಲ ಪಾದ ಭಾಗ, ಶಿಷ್ಯನ ಸ್ವಮೇಧೆಯಿಂದ ಸಿದ್ಧವಾಗುವುದು ಕಾಲು ಭಾಗ, ಇನ್ನು ಕಾಲು ಭಾಗ ತನ್ನ ಸಹಪಾಠಿಗಳ ಜೊತೆ ಮಾಡುವು ವಿಚಾರಮಂಥನದಿಂದ ಇನ್ನು ಉಳಿದ ಕಾಲು ಭಾಗವು ಹಿಂದಿನವುಗಳ ಆಧಾರದ ಮೇಲೆ ಬರುವ ಅನುಭವದಿಂದ ಪ್ರಾಪ್ತವಾಗುವುದು.  ಕೊಟ್ಟಿದ್ದರೂ ಬರದೆ ಇರುವಂತಹ, ಕೊಡದಿದ್ದರೂ ಬರುವಂತಹ ಧನವೇನಾದರೂ ಇದ್ದರೆ ಅದು ವಿದ್ಯೆ. ಆದ್ದರಿಂದಲೇ ವಿದ್ಯೆಯು ಎಲ್ಲಕ್ಕಿಂತಲೂ ಉತ್ತಮ.  

ಸೂಚನೆ : 10/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 54 ಧೃಷ್ಟದ್ಯುಮ್ನನು ಗುಟ್ಟಾಗಿ ಕಂಡುಕೊಂಡದ್ದು (Vyaasa Vikshita - 54 Dhrishtadyumnanu Guttagi Kandukondaddu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ನಾವಿಲ್ಲಿರುವುದು ನಿನಗೆ ಗೊತ್ತಾದದ್ದು ಹೇಗೆ? – ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದ ಯುಧಿಷ್ಠಿರನಿಗೆ, ನಸುನಗುತ್ತಾ ಶ್ರೀಕೃಷ್ಣನು ಉತ್ತರವಿತ್ತ:

ಅಗ್ನಿಯು ಗೂಢವಾಗಿದ್ದರೂ ಗೊತ್ತಾಗಿಯೇ ಬಿಡುತ್ತದೆ, ಅಲ್ಲವೆ? ಅಂತಹ ಪರಾಕ್ರಮವೆಂಬುದು ಈ ಪಾಂಡವರನ್ನು ಬಿಟ್ಟು ಮತ್ತಾವ ಮನುಷ್ಯರಲ್ಲಿ ಇರುವುದು? ಸೌಭಾಗ್ಯವಶಾತ್ ನೀವುಗಳೆಲ್ಲರೂ (ಜತುಗೃಹದ) ಘೋರವಾದ ಅಗ್ನಿಯಿಂದ ಪಾರಾದಿರಿ. ನಿಮ್ಮ ಅದೃಷ್ಟದಿಂದಲೇ ಮಂತ್ರಿಸಹಿತನಾದ  ದುರ್ಯೋಧನನ ಆಸೆಗಳು ಫಲಿಸಲಿಲ್ಲ. ನಮ್ಮ ಅಂತರಂಗದಲ್ಲಿರುವ ಎಲ್ಲ ಶುಭಾಶಂಸನೆಗಳೂ ನಿಮಗೆ ಲಭ್ಯವಾಗಲಿ. ಜ್ವಲಿಸುವ ಅಗ್ನಿಯಂತೆ ವರ್ಧಿಸಿರಿ. ನಿಮ್ಮ ಬಗ್ಗೆ ಬೇರೆಯ ರಾಜರಿಗೆ ಏನೂ ಈಗಲೇ ತಿಳಿಯುವುದು ಬೇಡ. ನಾವಿನ್ನು ಸ್ವಶಿಬಿರಕ್ಕೆ ಹೊರಡುತ್ತೇವೆ" ಎಂದನು.

ಹೀಗೆ ನುಡಿದು, ಅಕ್ಷಯವಾದ ಕಾಂತಿಯನ್ನು ಹೊಂದಿದ್ದ ಶ್ರೀಕೃಷ್ಣನು ಬಲರಾಮನೊಂದಿಗೆ ಅಲ್ಲಿಂದ ಹೊರಟುಬಂದನು. ಇತ್ತ ಪಾಂಚಾಲ್ಯನಾದ (ಎಂದರೆ ಪಾಂಚಾಲದೇಶದವನಾದ) ಧೃಷ್ಟದ್ಯುಮ್ನನು ಭೀಮಾರ್ಜುನರನ್ನು ಯಾರಿಗೂ ತಿಳಿಯದಂತೆ ಹಿಂಬಾಲಿಸುತ್ತಿದ್ದು, ಕುಂಬಾರನ ಮನೆಗೆ ಯಾರಿಗೂ ತಿಳಿಯದಂತೆ ಬಂದನು; ಎಲ್ಲ ಕಡೆಗೂ ಗಮನವಿಟ್ಟುಕೊಂಡು ಗುಟ್ಟಾಗಿ ಆತನು ಕುಂಬಾರನ ಮನೆಯಲ್ಲಿ ಅಡಗಿ ನಿಂತನು.

ಸಂಜೆಯ ಹೊತ್ತಿಗೆ ಭೀಮಾರ್ಜುನರೂ ನಕುಲಸಹದೇವರೂ ಭಿಕ್ಷಾಟನೆ ಮಾಡಿ ಲಬ್ಧವಾದ ಭಿಕ್ಷೆಯನ್ನು ಯುಧಿಷ್ಠಿರನಿಗೊಪ್ಪಿಸಿದರು. ಉದಾರಳಾದ ಕುಂತಿಯು ಆ ಸಮಯಕ್ಕೆ ದ್ರೌಪದಿಯನ್ನು ಕುರಿತು ಹೀಗೆ ಹೇಳಿದಳು:

"ಮಂಗಳಕರಳೇ, ಅನ್ನವನ್ನು ತೆಗೆದುಕೋ, ಅದರ ಒಂದು ಭಾಗವನ್ನು ದೇವತೆಗಳಿಗೆ ಬಲಿಯಾಗಿ ಕೊಡು, ಹಾಗೂ ವಿಪ್ರನೊಬ್ಬನಿಗೆ ಭಿಕ್ಷೆಯಾಗಿ ಕೊಡು. ಸುತ್ತಲಿರುವ ಮತ್ತಾರಾದರೂ ಅನ್ನವನ್ನು ಬಯಸುವವರಾಗಿದ್ದರೆ (ಎಂದರೆ ಅತಿಥಿಗಳಿದ್ದರೆ) ಅವರಿಗೂ ಕೊಡು. ಉಳಿದದ್ದನ್ನು ಎರಡಾಗಿ ವಿಭಾಗ ಮಾಡು - ಅರ್ಧಭಾಗವಾಗಿ ಒಂದು, ಹಾಗೂ ನಾಲ್ಕಾಗಿ ಮತ್ತು ನಿನಗಾಗಿ ಮತ್ತೊಂದು. ಗಜರಾಜನಂತಿರುವ ಹಾಗೂ ಒಳ್ಳೆಯ ಮೈಕಟ್ಟುಳ್ಳ ಗೌರವರ್ಣದ ಭೀಮನಿಗೆ ಆ ಅರ್ಧವನ್ನು ಕೊಡು. ಆತನು ಯಾವಾಗಲೂ ಬಹುಭೋಜಿ (ಹೆಚ್ಚಾಗಿ ತಿನ್ನತಕ್ಕವನು)" - ಎಂದಳು.

ಹರ್ಷದಿಂದ ಕೂಡಿದ ರಾಜಕುಮಾರಿ(ದ್ರೌಪದಿ)ಯು, ಕುಂತಿಯ ಮಾತನ್ನು ಚೆನ್ನಾಗಿ ಆಲಿಸಿಕೊಂಡಳು. ಅವಳು ಹೇಳಿದಂತೆಯೇ ಮಾಡಿದಳು ಕೂಡ. ಹೀಗೆ ಎಲ್ಲರ  ಊಟವಾಯಿತು.

ಚುರುಕಾಗಿದ್ದ ಸಹದೇವನು ದರ್ಭೆಗಳಿಂದಾದ ಶಯ್ಯೆಯನ್ನು ನೆಲದ ಮೇಲೆ ಎಲ್ಲರಿಗೂ ಹಾಸಿದನು. ಅದರ ಮೇಲೆ ತಮ್ಮ ತಮ್ಮ ಅಜಿನಗಳನ್ನು (ಕೃಷ್ಣಾಜಿನಗಳನ್ನು) ಹಾಸಿಕೊಂಡು ಎಲ್ಲರೂ ಮಲಗಿದರು. ಅವರೆಲ್ಲರೂ ಅಗಸ್ತ್ಯದಿಕ್ಕಿನತ್ತ, ಎಂದರೆ ದಕ್ಷಿಣಕ್ಕೆ, ತಲೆಮಾಡಿ ಮಲಗಿದರು. ಅವರೆಲ್ಲರ ಶಿರಸ್ಸಿನತ್ತ ಕುಂತಿಯು ಮಲಗಿದ್ದಳು. ದ್ರೌಪದಿಯು ಅವರ ಪಾದಗಳತ್ತ ಮಲಗಿದಳು. ಪಾಂಡವರ ಕಾಲುಗಳ ಬಳಿ ನೆಲದ ಮೇಲೆ ದರ್ಭದ ಹಾಸಿಗೆಯಲ್ಲಿ ಮಲಗಿದರೂ ಸಹ, (ರಾಜಕುಮಾರಿ)ದ್ರೌಪದಿಗೆ ಮನಸ್ಸಿನಲ್ಲಿ ಕಿಂಚಿತ್ತೂ ದುಃಖವಾಗಲಿಲ್ಲ. ಅಷ್ಟೇ ಅಲ್ಲ, ಕುರುಪುಂಗವರಾದ ಪಾಂಡವರ ಬಗೆಗೆ ಒಂದಿಷ್ಟು ತಾತ್ಸಾರಭಾವವೂ ಮೂಡಲಿಲ್ಲ.

ಶಯಿಸಿದ ಪಾಂಡವರು ಆಗ ಮಾತನಾಡಿಕೊಳ್ಳುತ್ತಿದ್ದ ಬಗೆಬಗೆಯ ವಿಷಯಗಳಾದರೂ ಏನು?: ಸೈನ್ಯಗಳು (ಅವನ್ನು ಕಟ್ಟುವುದು ಇತ್ಯಾದಿ), ದಿವ್ಯಾಸ್ತ್ರಗಳು (ಅವುಗಳ ಪ್ರಯೋಗ-ಉಪಸಂಹಾರಗಳು), ರಥಗಳು, ಗಜಗಳು, ಖಡ್ಗ-ಗದೆ-ಗಂಡುಗೊಡಲಿಗಳು - ಇವೇ.

ಇವೆಲ್ಲವನ್ನೂ, ಅಂದಿನ ರಾತ್ರಿಯೂ ಅವರುಗಳೆಲ್ಲರ ನಡೆ-ನುಡಿಗಳನ್ನೂ ಗಮನಿಸಿಕೊಂಡ ಧೃಷ್ಟದ್ಯುಮ್ನನು ಎಲ್ಲವನ್ನೂ ದ್ರುಪದನಿಗರುಹಲೆಂದು (ಬೆಳಗಾಗುತ್ತಲೇ) ಅಲ್ಲಿಂದ ತ್ವರಿತವಾಗಿ ಸಾಗಿದನು.

ಸೂಚನೆ : 10/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆನಂದಾಮೃತವನ್ನು ಕರ್ಷಿಸುವ ಅಮೃತವರ್ಷಿಣಿ (Anandamrtavannu Karsisuva Amrstavarsini)

  ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)



ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರಾದ ಮುತ್ತುಸ್ವಾಮಿ ದೀಕ್ಷಿತರ (1776-1835 ಕ್ರಿ.ಶ) ಜೀವನದಲ್ಲಿ ಒಂದು ಕುತೂಹಲಕಾರಿ ಪ್ರಸಂಗ ನಡೆಯಿತು. ಕ್ಷಾಮ ಪೀಡಿತ ಮಾರ್ಗದ ಮೂಲಕವಾಗಿ ಎತ್ತಿನ ಗಾಡಿಯಲ್ಲಿ ಎಟ್ಟಿಯಾಪುರಕ್ಕೆ ಹೋಗುತ್ತಿದ್ದರು. ಅವರ ಧರ್ಮಪತ್ನಿ ತೀವ್ರವಾದ ಬಾಯಾರಿಕೆಯನ್ನು ವ್ಯಕ್ತಪಡಿಸಿದರು. ನೀರನ್ನೆಲ್ಲೂ ಕಾಣದೆ, ದೇವಿ ಉಪಾಸಕರಾದ ದೀಕ್ಷಿತರು, ಒಡನೆಯೇ ಅಮೃತೇಶ್ವರಿ ದೇವಿಯನ್ನು ಸ್ತುತಿಸುತ್ತಾ ಅಮೃತವರ್ಷಿಣಿ ರಾಗದಲ್ಲಿ, "ಆನಂದಾಮೃತ ಕರ್ಷಿಣಿ ಅಮೃತವರ್ಷಿಣಿ…" ಎಂದು ಕೃತಿಯನ್ನು ರಚಿಸಿ, ಅವರ ಶಿಷ್ಯನಾದ ತೇವೂರ್ ಸುಬ್ರಹ್ಮಣ್ಯಅಯ್ಯರ್ ಅನ್ನುವವನಿಗೆ ಕಲಿಸಿ ಹಾಡಿಸುತ್ತಾರೆ. ಹಾಡು ಮುಗಿಯುತ್ತಲೇ, ಮೋಡಕವಿದು, ಜೋರಾಗಿ ಮಳೆ ಸುರಿಯುತ್ತದೆ. ಮೊಣಕಾಲಿನಷ್ಟು ಆಳವಾದ ನೀರಿನಲ್ಲಿ ಪ್ರಯಾಣ ಮುಂದುವರಿಸಿ ಎಟ್ಟಿಯಾಪುರ ತಲುಪುತ್ತಾರೆ. 


ಇದು ಪವಾಡವೇ? ನಿತ್ಯ ಅನುಷ್ಠಾನ, ಮಂತ್ರ ಜಪ, ಹೋಮಾದಿಗಳನ್ನು ಆಚರಿಸುತ್ತಿದ್ದ ದೀಕ್ಷಿತರಂತಹ ಕೆಲವರಿಂದ ಮಾತ್ರ ಸಾಧ್ಯವೇ? ಶಿಷ್ಯ ಪರಂಪರೆಯಲ್ಲಿ ನಮ್ಮವರೆಗೆ ತಲುಪಿರುವ ಇದೇ ಕೃತಿಯನ್ನು ನಾವಿಂದು ಹಾಡಿದಾಗಲೆಲ್ಲಾ ಮಳೆ ಸುರಿಯುತ್ತಿದೆಯೇ?  ಕೇವಲ ಮಳೆ  ಬಾರದಿದ್ದಾಗ ಹಾಡುವ ರಾಗವೆಂದು ಸಂಪ್ರದಾಯವನ್ನು ಮಾತ್ರ ಉಳಿಸಿಕೊಂಡಿದ್ದೇವೆಯೆ? ಇಷ್ಟೆಲ್ಲಾ ಏಕೆ ಕಷ್ಟಪಡಬೇಕು? ಇಂದು ವಿಮಾನಗಳಿಂದ ರಾಸಾಯನಿಕ ವಸ್ತುಗಳನ್ನು ಮೋಡಗಳ ಮೇಲೆ ಬಿತ್ತರಿಸಿ, ಬೇಕಾದ ಸ್ಥಳಗಳಲ್ಲಿ ಮಳೆಯನ್ನು ಬರಿಸಲು ಸಾಧ್ಯವಿದೆಯಲ್ಲ! ಎಂದೂ ಆಧುನಿಕ ವಿಜ್ಞಾನದಿಂದ ಶಿಕ್ಷಿತರಾದ ನಮ್ಮಗಳ ಬುದ್ಧಿಗೆ ಅನ್ನಿಸಬಹುದು. 


ಸಂಗೀತ  ಸಾಹಿತ್ಯಗಳ ಅನ್ಯೋನ್ಯ ಸಂಬಂಧ


 ಜ್ಞಾನ–ವಿಜ್ಞಾನ ತೃಪ್ತಾತ್ಮರಾದ ಶ್ರೀರಂಗಮಹಾಗುರುಗಳು ಸಂಗೀತ-ಸಾಹಿತ್ಯಗಳ ಅನ್ಯೋನ್ಯ ಸಂಬಂಧದ ಬಗ್ಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದರು. ಸಂಗೀತ–ಸಾಹಿತ್ಯಗಳನ್ನು ಭಗವಂತನ ಇಚ್ಛೆಯಂತೆ, ವಿದ್ಯೆಗಳಾಗಿ ಲೋಕಕ್ಕೆ ಅಮೃತ ಧಾರೆಯಾಗಿ ಹರಿಸುತ್ತಿರುವಳು ದೇವಿ. 


"ಕರೆಂಟ್ ಹರಿಸಲು ಕಾಪರ್ ವೈರ್ ಹೇಗೆ ಅವಶ್ಯವೋ ಹಾಗೇ, 'ವಾಕ್ಕು', ವಿದ್ಯೆಯನ್ನು ಹೊರತರಲು ಮಾಧ್ಯಮವಾಗಿದ್ದು, ನಾದ ಮೂಲದಿಂದ ಪರಾ, ಪಶ್ಯಂತೀ, ಮಧ್ಯಮಾ ಹಾಗೂ ವೈಖರೀಗಳೆಂಬ ನಾಲ್ಕು ದಶೆಗಳಲ್ಲಿ ವಿಕಾಸವಾಗುತ್ತೆ. ಶಬ್ದ ರೂಪದಲ್ಲಿ ಗೋಚರವಾಗುವುದು ವೈಖರೀ. ಉಳಿದ ಮೂರು ನಾದರೂಪಗಳು."


 ಪ್ರಣವ ಮೂಲದಿಂದ ಹೊರಟು, ಸಪ್ತಸ್ವರಗಳಾಗಿ ವಿಸ್ತಾರ ಹೊಂದಿ, ಒಂದು ಅಪೇಕ್ಷೆಗೆ ಅನುಗುಣವಾಗಿ ರಾಗಗಳು ಹುಟ್ಟುತ್ತವೆ. ಸಾಹಿತ್ಯದೊಡನೆ ಅದರ ರಸವನ್ನೂ ಹೊರಹೊಮ್ಮಿಸುವಂತಿರಬೇಕು ರಾಗಗಳು. ಸಂಗೀತ ಕಲೆಯನ್ನು ದೈವದ ಗುಣಗಾನಕ್ಕಾಗಿ ಬಳಸಿ,  ಭಗವಂತನನ್ನು ಒಲಿಸಿಕೊಂಡಲ್ಲಿ, ಜೀವನಕ್ಕೆ ಒಂದು ಸ್ನಾನ, ಅದರಿಂದ ನಿತ್ಯವೂ ಅಮೃತಪಾನವೂ ದೊರಕುತ್ತೆ. 


ದೀಕ್ಷಿತರ ಪ್ರಾರ್ಥನೆ


ಸುಬ್ರಹ್ಮಣ್ಯನಿಂದ ಅನುಗೃಹೀತರಾಗಿ, ದೀಕ್ಷಿತರು ದೈವಭಾಷೆಯಾದ ಸಂಸ್ಕೃತ ಹಾಗೂ ಸಂಗೀತಗಳಲ್ಲಿ ಪಾಂಡಿತ್ಯ ಹೊಂದಿದ್ದರಲ್ಲದೆ, ಮಂತ್ರ-ತಂತ್ರ-ಶಾಸ್ತ್ರ-ಜೋತಿಷ್ಯಗಳನ್ನೂ ಬಲ್ಲವರು. ಶ್ರೀವಿದ್ಯಾ ಉಪಾಸಕರು. ಅಷ್ಟಾಂಗ ಯೋಗವನ್ನು ಬಲ್ಲವರು; ನಿತ್ಯವೂ ಸಂಗೀತದಿಂದ ದೇವಿಯನ್ನು ಪೂಜಿಸುತ್ತಿದ್ದರು. ಯೋಗಬಲದಿಂದ ತೋರಬಹುದಾದ ಪವಾಡಗಳಿಂದ ಜನರನ್ನು ಮೆಚ್ಚಿಸುವ ಧ್ಯೇಯ ಅವರದ್ದಲ್ಲ. ಜನರು ಕಷ್ಟಗಳನ್ನು ಅವರಲ್ಲಿ ತೋಡಿಕೊಂಡಾಗ,  ಲೋಕ ಹಿತ ದೃಷ್ಟಿಯಿಂದಲೇ ದೇವಿಯನ್ನು ಪ್ರಾರ್ಥಿಸುತ್ತಿದ್ದರು. "ಆನಂದ(ಧ್ಯಾನಮಗ್ನ  ಶಿವನ ಸ್ಥಿತಿ)ವೆಂಬ ಅಮೃತವನ್ನು ಕರ್ಷಿಸುವವಳೇ, ಅಮೃತವನ್ನು ವರ್ಷಿಸುವವಳೇ, ಸುವೃಷ್ಟಿಯನ್ನು ಸುರಿಸುವವಳೇ, ನಿನ್ನನ್ನು ಸದಾ ಚಿಂತಿಸುತ್ತೇನೆ (ಧ್ಯಾನ ಮಾಡುತ್ತೇನೆ).  ತಾಯೇ ಅಮೃತೇಶ್ವರಿ, ನೀರನ್ನು ವರ್ಷಿಸು"- ಎಂದೇ ಈ ಸಂದರ್ಭದಲ್ಲಿಯೂ ಪ್ರಾರ್ಥಿಸಿದರು.  


ಇಂದೂ ಮಳೆ ಬರಿಸುವುದು ಸಾಧ್ಯವೇ?

ಇದೇ ಕೃತಿಯ ಗಾಯನ, ನಮ್ಮ ಇಂದಿನ ವೈಖರೀ ರೂಪಕ್ಕೆ ಸೀಮಿತವಾಗಿರುವ ಕಲಿಕೆಯಿಂದ, ತಕ್ಷಣದಲ್ಲಿ ಮಳೆ ಸುರಿಸುವುದು ಅಸಂಭವ. ಅದರ ಹಿಂದಿನ ನಾದರೂಪಗಳನ್ನು ಅರಿತು ಕೂಡಿಸಿಕೊಳ್ಳಲು ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯ. 

ಮಹರ್ಷಿ ಸಂಸ್ಕೃತಿಯ ಪರಿಪೂರ್ಣ ನೋಟ- ಅರ್ಥಾತ್ ಪ್ರಕೃತಿಯ ಸಹಜ ನಡೆ, ದೇವತಾ ಪ್ರಕೋಪ ನಿವಾರಣೆ, ದೈವಾನುಗ್ರಹದ ಸನ್ನಿವೇಶಗಳು ಇಂದು ಬಹುಮಟ್ಟಿಗೆ ಲುಪ್ತವಾಗಿವೆ. 


ಇಂದಿಗೂ ಗುರ್ವನುಗ್ರಹವನ್ನು ಹಿಂದಿಟ್ಟುಕೊಂಡು, ಶಿಸ್ತಿನಿಂದ, ಶಾಸ್ತ್ರಬದ್ಧವಾಗಿ, ಗುರುಮುಖೇನ ಕಲಿತಲ್ಲಿ, ಈ ಉತ್ತಮ ರಚನೆಗಳು ಕಾಲಕ್ರಮೇಣ ಅವುಗಳ ಮನೋಭೂಮಿಕೆಗೆ ನಮ್ಮನ್ನು ಸೆಳೆಯುತ್ತಾ, ಸರಿದಾರಿಗೆ ಖಂಡಿತವಾಗಿಯೂ ಕೊಂಡೊಯ್ಯುತ್ತವೆ. ಇಂತಹ ಉತ್ತಮ ವಾಗ್ಗೇಯಕಾರರು,  ರಚಿಸಿದ ಕೃತಿಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಸನ್ಮತಿ, ಸದ್ಬುದ್ಧಿಗಳನ್ನು ದೇವಿಯು ಕರುಣಿಸಲೆಂದು ಪ್ರಾರ್ಥಿಸೋಣ.


ಸೂಚನೆ : 9/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Monday, September 4, 2023

ಸಾಧನೆಗೆ ಈ ಯಂತ್ರವು ಬಹಳ ಸುಲಭ ! (Sadhanege E Yantravu Bahala Sulabha!)

ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)


ಒಂದು ಊರಿನಲ್ಲಿ ಜನರು ವ್ಯವಸಾಯವನ್ನು ಮಾಡಿಕೊಂಡು ಅಲ್ಲಿ ಬರುವ ಬೆಳೆಗಳನ್ನು ಮತ್ತು ತರಕಾರಿಗಳನ್ನೆಲ್ಲ ತೆಗೆದುಕೊಂಡುಹೋಗಿ ಪಕ್ಕದ ಊರಿನಲ್ಲಿ ಮತ್ತು ಸಂತೆಗಳಲ್ಲಿ ವ್ಯಾಪಾರ ಮಾಡಿಕೊಂಡು ತಮ್ಮ ತಮ್ಮ ಜೀವನವನ್ನು ನಡೆಸುತ್ತಾ ಇದ್ದರು. ಇದೇ ಊರಿನಲ್ಲಿ ಒಬ್ಬನ ಹತ್ತಿರ ಅವನು ಬೆಳೆದದ್ದನ್ನು ಮಾರಾಟ ಮಾಡುವುದಕ್ಕೆ ತೆಗೆದುಕೊಂಡು ಹೋಗಲು ಎತ್ತಿನ ಗಾಡಿ ಇತ್ಯಾದಿ ಯಾವ ವ್ಯವಸ್ಥೆಯೂ ಇರಲಿಲ್ಲ . ಆದುದರಿಂದ ಅವನು ಪ್ರತಿ ಸಲವೂ ಬೇರೆಯವರ ಎತ್ತಿನ ಗಾಡಿಯಲ್ಲಿ ತನಗೂ ಸ್ವಲ್ಪ ಜಾಗವನ್ನು ಕೇಳಿ ಅವರ ಜೊತೆಯಲ್ಲಿಯೇ ಹೋಗಿ ಮಾರಾಟ ಮಾಡಿಕೊಂಡು ಬರುತ್ತಾ ಇದ್ದನು. ಈ ವ್ಯಕ್ತಿಗೆ ಬೇರೆ ಜನರಗಿಂತ ಬುದ್ಧಿಮಟ್ಟ ಮತ್ತು ಚಾಕಚಕ್ಯತೆ ಸ್ವಲ್ಪ ಕಡಿಮೆ ಇತ್ತು. ಆದರೆ ಇವನಲ್ಲಿ ಎರಡು ಬಹಳ ದೊಡ್ಡ ಗುಣಗಳಿತ್ತು - ಒಂದು ಶ್ರದ್ಧೆ ಮತ್ತು ಇನ್ನೊಂದು ಭಕ್ತಿ. ಒಮ್ಮೆಈ ಊರಿಗೆ ಒಬ್ಬ ಋಷಿಗಳು ಆಗಮಿಸುತ್ತಾರೆ . ಅವರು ಬಂದಿರುವುದು ಇವನಿಗೆ ತಿಳಿದ ಕೂಡಲೇ ಅವರ ಬಳಿ ಓಡಿ ಹೋಗಿ ಅತ್ಯಂತ ವಿನಯದಿಂದ ತನ್ನ ಆತಿಥ್ಯವನ್ನು ಸ್ವೀಕರಿಸಬೇಕೆಂದು ಅವರಲ್ಲಿ ಬೇಡಿಕೊಳ್ಳುತ್ತಾನೆ. ಇವನ ಭಕ್ತಿಯನ್ನು ನೋಡಿ ಅವರು ಇವನ ಮನೆಗೆ ಬಂದು ಇವನ ಆತಿಥ್ಯವನ್ನು ಸ್ವೀಕರಿಸುತ್ತಾರೆ. ಅವರು ಎಷ್ಟು ಕಾಲ ಆ ಹಳ್ಳಿಯಲ್ಲಿದ್ದರೋ ಅಷ್ಟೂ ದಿನಗಳು ಇವನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಅವರಿಗೆ ಸೇವೆ, ಶುಶ್ರೂಷೆಗಳನ್ನು ಮಾಡಿ ಅವರ ಮನಸ್ಸನ್ನು ಪ್ರಸನ್ನಗೊಳಿಸುತ್ತಾನೆ. ಆದುದರಿಂದ ಅವರು ಹೊರಟು ಬರುವ ಮುನ್ನ ಇವನಿಗೆ ಏನು ವರ ಬೇಕಾದರೂ ಕೇಳಲೆಂದು ಹೇಳುತ್ತಾರೆ. ಅದಕ್ಕೆ ಅವನು ತನ್ನ ಬಳಿ ಯಾವ ವಾಹನವೂ ಇಲ್ಲದೆ ಇರುವುದನ್ನು ಜ್ಞಾಪಿಸಿಕೊಂಡು ಅವರಲ್ಲಿ ಒಂದು ವಾಹನವನ್ನು ದಯಪಾಲಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾನೆ. ಅವರು ಮಹಾ ತಪಸ್ವಿಗಳು, ಏನನ್ನು ಬೇಕಾದರೂ ಕೊಡಬಲ್ಲವರು, ಇವನು ಇಷ್ಟು ಸಣ್ಣ ಪದಾರ್ಥವನ್ನು ಅಪೇಕ್ಷಿಸುತ್ತಾನಲ್ಲಾ ಎಂದುಕೊಂಡರೂ, ಅತ್ಯಂತ  ಕರುಣೆಯಿಂದ ಇವನಿಗೆ ಒಂದು ಅಪೂರ್ವ ಯಂತ್ರವನ್ನೇ ದಯಪಾಲಿಸುತ್ತಾರೆ. ಆ ಯಂತ್ರವು ಭೂಮಿಯಲ್ಲಿ ಅತಿವೇಗದಿಂದ ಚಲಿಸಬಲ್ಲದು, ಬಹಳಷ್ಟು ಸಾಮಾನನ್ನು ಹೊರಬಲ್ಲದು, ಅಷ್ಟೇ ಅಲ್ಲಾ, ಅದರಲ್ಲಿ ಆಕಾಶ ಮಾರ್ಗವಾಗಿಯೂ ಚಲಿಸಬಲ್ಲದಾದಂತಹ ಅದ್ಭುತ ಯಂತ್ರವದು. ಆ ಯಂತ್ರವನ್ನು ಇವನಿಗೆ ಕೊಟ್ಟು, ಅದನ್ನು ಹೇಗೆ ಉಪಯೋಗಿಸುವುದೆಂಬುದನ್ನೂ ತಿಳಿಸಿಕೊಟ್ಟು ಅಲ್ಲಿಂದ ಹೊರಟುಬರುತ್ತಾರೆ. ಆದರೆ ದುರಾದೃಷ್ಟದಿಂದ ಋಷಿಗಳು ಹೊರಟ ಸ್ವಲ್ಪ ಕಾಲಕ್ಕೆ ಅವನು ಆ ಯಂತ್ರವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಮರೆತುಹೋಗುತ್ತಾನೆ. ಋಷಿಗಳು ಸಂಚಾರಿಗಳಾಗಿದ್ದುದರಿಂದ ಅವರನ್ನು ಮತ್ತೆ ಸಂಪರ್ಕಿಸಲು ಆಗುವುದಿಲ್ಲ. ಆದ್ದರಿಂದ ಇವನು ಬೇರೆಯವರ ಎತ್ತಿನ ಗಾಡಿಯನ್ನು  ನೋಡಿ ಅವರಂತೆಯೇ ತನ್ನ ಯಂತ್ರಕ್ಕೂ ಎತ್ತುಗಳನ್ನು ಕಟ್ಟಿ ಅದನ್ನು ಎತ್ತಿನ ಗಾಡಿಯಾಗಿ ಉಪಯೋಗಿಸಲು ಪ್ರಾರಂಭಿಸುತ್ತಾನೆ. ಇವನು ಅಷ್ಟು ದೊಡ್ಡ ಯಂತ್ರವನ್ನು ಎತ್ತಿನ ಗಾಡಿಯಂತೆ ಉಪಯೋಗಿಸುತ್ತಿರುವ ವಿಷಯ ಆ ಋಷಿಗಳಿಗೆ ಕರ್ಣಾಕರ್ಣಿಕೆಯಾಗಿ ತಿಳಿದಾಗ ಅವರಿಗೆ ತುಂಬಾ ಬೇಜಾರಾಗಿ ಅಷ್ಟು ದೊಡ್ಡ ವಸ್ತುವನ್ನು ಇವನು ಇಷ್ಟು ಚಿಕ್ಕದಾಗಿ ಎತ್ತಿನ ಗಾಡಿಯಂತೆ ಉಪಯೋಗಿಸಿಕೊಂಡುಬಿಟ್ಟನಲ್ಲ ಅಂತ ಎಂದು ಬೇಸರಿಸಿಕೊಂಡು ಇವನ ಪ್ರಾಪ್ತಿಯೇ ಇಷ್ಟು ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. 


ಈ ಕಥೆಯನ್ನು ಕೇಳಿದರೆ ಇದು ಬಹಳ ಸಾಮಾನ್ಯವಾದದ್ದು, ಇದರಲ್ಲಿ ಏನು ವೈಶಿಷ್ಟ್ಯ ಇದೆ? ಎಂದು ಎನ್ನಿಸಬಹುದು. ಯಾರಾದರೂ ಹೀಗೆ ಅಷ್ಟು ದೊಡ್ಡ ಯಂತ್ರವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಮರೆತುಹೋಗಲು ಸಾಧ್ಯವೇ ಎಂದು ಆಶ್ಚರ್ಯವಾಗಬಹುದು. ಆದರೂ ಪರಿಶೀಲಿಸಿ ನೋಡಿದರೆ ನಾವೇ ಅಂತಹ ವ್ಯಕ್ತಿಗಳಾಗಿದ್ದೇವೆ. ಈ ಕಥೆಯಲ್ಲಿರುವ ಆ ಸಾಮಾನ್ಯ ಮನುಷ್ಯ ನಾವೇ ಆಗಿದ್ದೇವೆ ಮತ್ತು ನಮ್ಮ ಮಾನವ ದೇಹವೇ ಆ ಅದ್ಭುತ ಯಂತ್ರವಾಗಿದೆ. ಯೋಗ ಸಾಧನೆಯಿಂದ, ಮನಸ್ಸನು ಒಳಮುಖವಾಗಿಸಿದಲ್ಲಿ, ಅದ್ಭುತ ವೇಗದಲ್ಲಿ ನಮ್ಮ ಮನಸ್ಸು ಬುದ್ಧಿಗಳು ಕೆಲಸ ಮಾಡುವಂತೆ ಮಾಡಿಕೊಳ್ಳಬಹುದು. ನಮ್ಮ ದೇಹದೊಳಗೇ ಇರುವ ಊರ್ಧ್ವಲೋಕಗಳಿಗೂ ಸಂಚರಿಸಿ ಅತ್ಯಂತ ಮೇಲಿರುವ ಪರಮಪದದಲ್ಲಿ ಭಗವಂತನ ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬಹುದು.


ಈ ಮಾತನ್ನು ಶ್ರೀರಂಗ ಮಹಾಗುರುಗಳು ಒಂದು ಉದಾಹರಣೆಯೊಂದಿಗೆ ನಮಗೆ ಹೇಳಿದ್ದಾರೆ. ನಾವು ಸರ್ಕಸ್ಸುಗಳಲ್ಲಿ(circus) ಇರುವ ಸೈಕಲ್ಲನ್ನು (cycle) ನೋಡಿದರೆ ಅದು ಮುಂದೆ pedal ಮಾಡಿದಾಗ ಮುಂದೆ ಹೋಗತ್ತೆ ಹಿಂದೆ pedal ಮಾಡಿದಾಗ ಹಿಂದೆ ಹೋಗುತ್ತದೆ. ಅಂದರೆ ಅದಕ್ಕೆ ಮುಂದೆ ಮತ್ತು ಹಿಂದೆ ಎರಡು ಕಡೆ ಹೋಗುವ ಸಾಮರ್ಥ್ಯವಿದೆ(ಬೇರೆ ಸೈಕಲ್ ಗಳಿಗೆ ಹಿಂದೆ ಹೋಗುವ ಸಾಮರ್ಥ್ಯವಿರುವುದಿಲ್ಲ). ಅದೇ ರೀತಿ ನಮ್ಮ ದೇಹಕ್ಕೂ ಅಷ್ಟೇ ಒಳಜೀವನ ಮತ್ತು ಹೊರಜೀವನ ಎರಡಲ್ಲೂ ಇರುವ ಸಾಮರ್ಥ್ಯ ಇದೆ. ಒಂದು ಯಂತ್ರ ಆಕಾಶಕ್ಕೆ ಹೋದಾಗ ವಿಮಾನವಾಗಿ, ಭೂಮಿಗೆ ಬಂದಾಗ ಬಸ್ ಮತ್ತು ರೈಲ್ ಆಗಬೇಕು. ನೀರಿನ ಮೇಲೆ ಬಂದಾಗ ಹಡಗಾಗಬೇಕು ಮತ್ತು ಮುಳುಗಿದಾಗ ಸಬ್ಮೆರಿನ್ (submarine) ಆಗಬೇಕು. ಒಂದೇ ಯಂತ್ರದಲ್ಲಿ ಇಷ್ಟು ಸೌಲಭ್ಯಗಳಿದ್ದರೆ ಹೇಗೆ ಇರುತ್ತದೆ? ಆ ಯಂತ್ರ ಬೇರೆಯಾವುದೂ ಅಲ್ಲ ನಮ್ಮ ಮಾನವ ದೇಹವೇ ಎಂದು ಶ್ರೀರಂಗ ಮಹಾಗುರುಗಳು ತಿಳಿಸಿಕೊಟ್ಟಿದ್ದಾರೆ. ಅಂತಹ ಯಂತ್ರವನ್ನು ಪಡೆದಿರುವ ನಾವು ಅದನ್ನು ಹೇಗೆ ಉಪಯೋಗಿಸಬೇಕೆಂದು ಮರೆತುಹೋಗಿದ್ದೇವೆ. ನಮಗೆ ಒಬ್ಬ ಸದ್ಗುರುವು ಆಶೀರ್ವಾದ ಮಾಡಿ ಆ ಉಪಯೋಗವನ್ನು ತಿಳಿಸಿಕೊಟ್ಟರೆ ಅವನ ಅನುಗ್ರಹದಿಂದ ಈ ಯಂತ್ರದ ಮೌಲ್ಯವೇನೆಂದು ಈ ಯಂತ್ರವನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿದುಕೊಂಡರೆ ಆಗ ಇದರ ಸಂಪೂರ್ಣ ಉಪಯೋಗವನ್ನು ಪಡೆದು ಸಾರ್ಥಕವಾಗಿರುವ ಜೀವನವನ್ನು ನಾವು ಮಾಡಬಹುದು. ನಮ್ಮೆಲ್ಲರ ಜೀವನವು ಅದೇ ರೀತಿಯಲ್ಲಿ ಸಾರ್ಥಕವಾಗಲೆಂದು ನಾವು ಪ್ರಾರ್ಥಿಸುತ್ತೇವೆ. 


ಸೂಚನೆ: 02/09/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 53 Yaksha prashne 53


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in

ಪ್ರಶ್ನೆ – 52 ಧನ್ಯಪುರುಷರಲ್ಲಿ ಉತ್ತಮ ಗುಣ ಯಾವುದು  ?

ಉತ್ತರ - ದಾಕ್ಷ್ಯ

ಧರ್ಮಕ್ಕೆ ಅವಿರೋಧವಾದ ಪದ ಯಾವುದು? ಎಂಬ ಪ್ರಶ್ನೆಯ ಉತ್ತರರೂಪವಾಗಿ ದಾಕ್ಷ್ಯ ಎಂಬ ವಿಷಯವನ್ನು ಈ ಹಿಂದೆ ವಿವರಿಸಿದ್ದಾಗಿದೆ. ಅಲ್ಲಿ ದಾಕ್ಷ್ಯ ಎಂದರೇನು? ಆ ಪದದ ಅರ್ಥ ಸಂಸ್ಕೃತಭಾಷೆಯ ಆಧಾರದಲ್ಲಿ ಯಾವುದು? ಇತ್ಯಾದಿ ವಿಚಾರಗಳು ಅಲ್ಲಿ ವಿವರಿಸಲ್ಪಟ್ಟಿವೆ. ಇನ್ನೂ ಉಳಿದ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡುತ್ತೇನೆ. ಕೆಲವು ವಿಷಯಗಳು ಪುನರಾವರ್ತನೆಯಾಗಬಹುದು. ಇನ್ನು ಕೆಲವು ಹೊಸವಿಷಯಗಳೂ ಬರಬಹುದು. ಆದರೂ ಈ ವಿಷಯವನ್ನು ವಿವರಿಸುವ ಸಂದರ್ಭದಲ್ಲಿ ಇದು ಅನಿವಾರ್ಯ ಎಂದು ಭಾವಿಸುತ್ತೇನೆ. 

ಮಾನವ ಧನ್ಯತೆಯನ್ನು ಪಡೆಯಬೇಕಾದರೆ ಅನೇಕ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅಂತಹ ಗುಣಗಳಲ್ಲಿ ದಾಕ್ಷ್ಯ ಎನ್ನುವ ಗುಣವು ಬಹಳ ಮುಖ್ಯವಾದದ್ದು. ದಾಕ್ಷ್ಯ ಎಂದರೆ ದಕ್ಷತೆ. ಸಾಮರ್ಥ್ಯ ಅಥವಾ ಯೋಗ್ಯತೆ ಎಂದು. ಈ ಯೋಗ್ಯತೆ ಬರಬೇಕಾದರೆ ಮಾಡುವ ಕಾರ್ಯದಲ್ಲಿ ಕುಶಲತೆ ಬೇಕಾಗುತ್ತದೆ. ಇದನ್ನೇ ಭಗವದ್ಗೀತೆಯಲ್ಲಿ  ಇದಕ್ಕೆ 'ಯೋಗ' ಎಂದು ಕರೆಯಲಾಗಿದೆ. ಯೋಗವೇ ಸಾಮರ್ಥ್ಯವನ್ನು ಕೊಡುತ್ತದೆ. ಯೋಗವೆಂದರೆ ಸಂಯೋಗ-ಸೇರುವಿಕೆ. ಮನುಷ್ಯನು ಧನ್ಯನಾಗಬೇಕಾದರೆ ಅನೇಕ ಮಾನವೀಯ ಗುಣಗಳ ಒಡೆಯನಾಗಬೇಕು. ಅಂದರೆ ಅವನ ಎಲ್ಲಾ ಕಾರ್ಯಗಳಿಗೂ ಸಾಧನೀಭೂತಗಳಾದ ಆತ್ಮಾ, ಮನಸ್ಸು, ಇಂದ್ರಿಯ, ಮತ್ತು ಬಾಹ್ಯದಲ್ಲಿ ಸಿಗುವ ಸಾಧನ ಸಾಮಗ್ರಿಗಳು, ಇವುಗಳ ಮೇಲೆ ಸ್ವಾಮ್ಯ ಇರಬೇಕಾಗುತ್ತದೆ. 'ಇವೆಲ್ಲವೂ ಇಂದು ಸರಳರೇಖೆಯಲ್ಲಿ ಬರಬೇಕಪ್ಪ' ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಅಂದರೆ ಇಲ್ಲಿ ಆತ್ಮನೇ ಅನುಭವೀ. ಆತ್ಮವು ಮನಸ್ಸಿನ ಜೊತೆ, ಮನಸ್ಸು ಇಂದ್ರಿಯದ ಜೊತೆ, ಇಂದ್ರಿಯ ಮುಂದಿನ ವಸ್ತುಗಳ ಜೊತೆ ಸೇರಿದಾಗ ಕಾರ್ಯ ಪೂರ್ಣವಾಗುತ್ತದೆ. ಇವಿಷ್ಟು ಒಂದು ಕಾರ್ಯಕ್ಕೆ ಸೇರುವುದೇ ಒಂದು ಯೋಗ. ಇದೇ ದಕ್ಷತೆ. ಈ ದಕ್ಷತೆಯೇ ಮುನುಷ್ಯನನ್ನು ಉದ್ದೇಶಿತ ಗುರಿಯತ್ತ ಕೊಂಡೊಯ್ಯುತ್ತದೆ.

ಮಾನವ ಮಾನವನಾಗಿ ಇರಬೇಕು. ಹಾಗಿಲ್ಲದಿದ್ದರೆ ದಾನವ-ಅಸುರನಾಗಬಹುದು. ಮಾನವನಾಗಿ ಉಳಿಸಲು ಅವನಲ್ಲಿ ದಕ್ಷತೆ ಇರಬೇಕಾಗುತ್ತದೆ. ಪ್ರತಿಯೊಂದು ವಸ್ತುವೂ ಅದರದ್ದೇ ಆದ ಸ್ವಭಾವದಲ್ಲಿ ಇದ್ದರೆ ಮಾತ್ರ ಅದರಿಂದ ಉಪಯೋಗ. ಹಾಲು ಹಾಲಿನ ಸ್ವಭಾವದಲ್ಲಿ ಇರಬೇಕು. ಸ್ವಲ್ಪ ಹುಳಿಯ ವಾಸನೆ ಬಂದರೆ 'ಹಾಲು ಹಾಳಾಗಿದೆ' ಎನ್ನುತ್ತೇವೆ. ಹಾಲು ಅದರ ಯೋಗ್ಯತೆಯಿಂದ ಕೂಡಿದ್ದರೆ ಮಾತ್ರ ಹಾಲಿನಿಂದ ದೇಹಕ್ಕೆ ಎಲ್ಲಾ ಬಗೆಯ ಆರೋಗ್ಯಕ್ಕೆ ಬೇಕಾದ ಅಂಶ ಸಿಗುತ್ತದೆ. ಅಂತೆಯೇ ಮನುಷ್ಯನು ಇರಬೇಕಾದ ಸ್ವಭಾವದಿಂದ ಕೂಡಿದ್ದರೆ ಅದು ಅವನ ದಕ್ಷತೆ. ಒಂದು ಕಾರ್ಯ ಸಿದ್ಧವಾಗಬೇಕಾದರೆ ಯಾವ ಸಾಮಗ್ರಿ ಅತಿಮುಖ್ಯವಾದು? ಎಂಬುದನ್ನು ಶ್ರೀರಂಗಮಹಾಗುರುಗಳು ಹೀಗೆ ಹೇಳುತ್ತಿದ್ದರು "ಕೇವಲ ಹೊರಗಿನ ಸಾಮಾಗ್ರಿಯನ್ನು ಸಂಪಾದಿಸಿದ ಮಾತ್ರಕ್ಕೆ ಕಾರ್ಯಸಿದ್ಧಿಯಾಗಲಾರದು. ಹಣ, ಕಟ್ಟಡ, ಸಹಕಾರಗಳು, ಸಲಕರಣೆಗಳು ಎಲ್ಲಾ ಬಹಿರಂಗ ಸಾಮಗ್ರಿಗಳು. ಇವೆಲ್ಲಾ ಏಕದೇಶವಾಗುವುದು. ಅಂತರಂಗಸಾಮಗ್ರಿಯು ಸೇರಿ ಪೂರ್ಣದೇಶವಾಗುವುದು" ಎಂದು. ಇಂತಹ ಅಂತರಂಗ ಸಾಮಗ್ರಿಗಳಲ್ಲಿ ದಕ್ಷತೆ ಅತಿಮುಖ್ಯವಾದುದು. ಯಾವೆಲ್ಲಾ ಬಹಿರಂಗ ಸಾಮಗ್ರಿಗಳಿದ್ದರೂ ದಕ್ಷತೆಯೆಂಬ ಅಂತರಂಗದ ಸಾಮಗ್ರಿ ಇಲ್ಲದಿದ್ದರೆ ಆ ಮಾನುಷ್ಯ ಧನ್ಯನಾಗಲಾರ. 

ಸೂಚನೆ : 03/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 53 ದ್ರೌಪದಿ ಯಾರ ಪತ್ನಿ?(Vyaasa Vikshita - 53 Draupadi Yara Patni?)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಹೀಗೆ ಹೇಳಲಾಗಿ, ಆ ಕುರುವೀರನು ಕ್ಷಣಕಾಲ ಯೋಚಿಸಿ, ಕುಂತಿಯನ್ನು ಸಂತೈಸಿ, ಅರ್ಜುನನನ್ನು ಕುರಿತಾಗಿ ಹೀಗೆ ಹೇಳಿದನು:

"ಫಾಲ್ಗುನನೇ (ಎಂದರೆ ಅರ್ಜುನನೇ), ದ್ರೌಪದಿಯನ್ನು ಗೆದ್ದು ತಂದಿರುವವನು ನೀನು. ಆದ್ದರಿಂದ ಈಕೆಯು ನಿನ್ನೊಂದಿಗೆ ಪತ್ನಿಯಾಗಿ ಇರುವುದೇ ಶೋಭಿಸುವುದು. ಎಂದೇ, ಓ ಶತ್ರುಸಂಹಾರಕನೇ, ಅಗ್ನಿಯನ್ನು ಬೆಳಗಿಸು, ಹಾಗೂ (ಆ ಅಗ್ನಿಯನ್ನು ಸಾಕ್ಷಿಯಾಗಿಟ್ಟುಕೊಂಡು) ನೀನು ಇವಳನ್ನು ವಿಧಿವತ್ತಾಗಿ (ಎಂದರೆ ಶಾಸ್ತ್ರಕ್ರಮಾನುಸಾರವಾಗಿ) ವಿವಾಹವಾಗು" ಎಂದನು.

ಅದಕ್ಕೆ ಅರ್ಜುನನು ಹೇಳಿದನು: "ಅಣ್ಣ! ನನ್ನನ್ನು ಅಧರ್ಮದಲ್ಲಿ ಭಾಗಿಯನ್ನಾಗಿ ಮಾಡಬೇಡ. ಇದು ಶಿಷ್ಟ-ದೃಷ್ಟವಾದ ಧರ್ಮವಲ್ಲ. (ಎಂದರೆ ಶಿಷ್ಟಾಚಾರಸಂಪನ್ನರು ಕಂಡುಕೊಂಡಿರುವಂತಹುದಲ್ಲ). ಮೊದಲು ವಿವಾಹವಾಗಬೇಕಾದದ್ದು ನೀನು (ಅಣ್ಣನಿಗಿಂತ ಮೊದಲು ತಮ್ಮನು ಮದುವೆಯಾಗುವುದು ಧರ್ಮ-ಸಂಮತವಲ್ಲವಾದ್ದರಿಂದ); ಆಮೇಲೆ ಭೀಮನು; ಆ ಬಳಿಕ ನಾನು; ಆ ಬಳಿಕ ನಕುಲ, ಹಾಗೂ ಆ ನಂತರ ಸಹದೇವ. ನಾವು ನಾಲ್ಕೂ ಜನರೂ ಮತ್ತು ದ್ರೌಪದಿಯೂ ನಿನ್ನ ಆಜ್ಞೆಯಂತೆ ವರ್ತಿಸತಕ್ಕವರು. ಹೀಗಿರಲು, ಧರ್ಮ್ಯವೂ (ಧರ್ಮ್ಯವೆಂದರೆ ಧರ್ಮಸಂಮತವಾದದ್ದು) ಕೀರ್ತಿಕರವೂ ಆದ ಕರ್ತವ್ಯವು ಏನಿರಬಹುದೋ ಅದನ್ನು ಚೆನ್ನಾಗಿ ಆಲೋಚಿಸಿ ಮಾಡುವುದು ಸರಿ. ಹಾಗೆಯೇ ಪಾಂಚಾಲರಾಜನಿಗೂ ಯಾವುದು ಹಿತವಾಗಬಹುದೋ ಅದನ್ನು ನಮಗೆ ಅಪ್ಪಣೆ ಮಾಡು. ನಾವುಗಳು ನಿನ್ನ ವಶವರ್ತಿಗಳು (ಎಂದರೆ ನೀ ಹೇಳಿದಂತೆ ಕೇಳತಕ್ಕವರು)" ಎಂದನು.

ಭಕ್ತಿಯಿಂದಲೂ ಸ್ನೇಹದಿಂದಲೂ ಅರ್ಜುನನು ಹೇಳಿದ ಮಾತುಗಳನ್ನು ಕೇಳಿದ ಪಾಂಡವರ ದೃಷ್ಟಿಯು ದ್ರೌಪದಿಯತ್ತ ಚಲಿಸಿತು. ಅವಳೂ ಇವರೆಲ್ಲರತ್ತ ದೃಷ್ಟಿಬೀರಿದುದನ್ನು ಇವರೂ ಗ್ರಹಿಸಿದರು. ಇವರ ಹೃದಯದಲ್ಲಿ ದ್ರೌಪದಿಯು ನೆಲೆಸಿದಳು. ಅಸಾಧಾರಣತೇಜಸ್ವಿಗಳಾದ ಪಾಂಡವರೆಲ್ಲರಲ್ಲಿ ಅವಳನ್ನು ಕುರಿತಾದ ಕಾಮಭಾವವು ಅಂಕುರಿತವಾಯಿತು. ದ್ರೌಪದಿಯ ರೂಪವಾದರೂ ಅತ್ಯಂತ ಕಮನೀಯವಾದದ್ದು. ಮಿಕ್ಕೆಲ್ಲರ ಸೌಂದರ್ಯವನ್ನು ಮೀರಿಸುವಂತೆಯೇ ಬ್ರಹ್ಮನು ಆಕೆಯನ್ನು ಸೃಷ್ಟಿ ಮಾಡಿರುವುದೂ.

ಎಲ್ಲರ ಆಕಾರ-ಭಾವಗಳನ್ನು ಯುಧಿಷ್ಠಿರನು ಗಮನಿಸಿಕೊಂಡನು (ಆಕಾರವೆಂದರೆ ಹೊರಗೆ ತೋರುವ ಲಕ್ಷಣಗಳು; ಭಾವವೆಂದರೆ ಅವಕ್ಕೆ ಕಾರಣವಾದ ಅಂತರಂಗಸ್ಥಿತಿ); ವ್ಯಾಸರ ಮಾತನ್ನೂ ಮನಸ್ಸಿಗೆ ತಂದುಕೊಂಡನು; ದ್ರೌಪದಿಯ ನಿಮಿತ್ತವಾಗಿ ಸೋದರರಲ್ಲಿ ಒಡಕು ಮೂಡಿಬಿಡಬಾರದೆಂಬ ಆಶಯದಿಂದ ಹೀಗೆಂದನು: "ಶುಭಳಾದ ಈ ದ್ರೌಪದಿಯು ನಮಗೆಲ್ಲರಿಗೂ ಭಾರ್ಯೆಯಾಗುವಳು."

ಜ್ಯೇಷ್ಠಭ್ರಾತೃವಿನ ಆ ಮಾತುಗಳನ್ನು ಕೇಳಿ ಎಲ್ಲಾ ಪಾಂಡವರೂ ಆ ಮಾತುಗಳನ್ನೇ ಮನಸ್ಸಿನಲ್ಲಿ ಮೆಲುಕುಹಾಕುತ್ತಾ ಮೌನವಾಗಿ ಕುಳಿತರು.

ಅಷ್ಟರಲ್ಲಿ ಆ ಕುಂಬಾರನ ಮನೆಗೆ ಬಲರಾಮನೊಡಗೂಡಿ ಶ್ರೀಕೃಷ್ಣನು ಆಗಮಿಸಿದನು. ಕೃಷ್ಣನು ವೃಷ್ಣಿವಂಶದ ವೀರ; ಪಾಂಡವರು ಕುರುವಂಶದ ವೀರರು. ಪಾಂಡವರು ಕುಳಿತಿದ್ದ ಎಡೆಗೆ ಆತನು ಬಂದನು. ಅಜಾತಶತ್ರುವೆನಿಸಿದ್ದ ಯುಧಿಷ್ಠಿರನ ಸುತ್ತಲೂ ಈ ಪಾಂಡುವೀರರು ಕುಳಿತಿದ್ದರು.

ಧರ್ಮಾತ್ಮರಲ್ಲಿ ಶ್ರೇಷ್ಠನಾದ ಯುಧಿಷ್ಠಿರನ ಬಳಿ ಶ್ರೀಕೃಷ್ಣನು ಸಾರಿ ಆತನ ಪದಗಳನ್ನು ಮುಟ್ಟಿ, "ನಾನು ಕೃಷ್ಣ" ಎಂದು ಹೇಳಿಕೊಳ್ಳುತ್ತಾ ನಮಸ್ಕರಿಸಿದನು. ಬಲರಾಮನೂ ಸಹ ಅಂತೆಯೇ ಯುಧಿಷ್ಠಿರನಿಗೆ ನಮಸ್ಕರಿಸಿದನು. ಪಾಂಡವರಿಗೆಲ್ಲರಿಗೂ ಸಂತೋಷವಾಯಿತು. ಕೃಷ್ಣ-ಬಲರಾಮರು ತಮ್ಮ ಸೋದರತ್ತೆಯಾದ ಕುಂತಿಗೂ ಪಾದಮುಟ್ಟಿ ನಮಸ್ಕಾರಮಾಡಿದರು.

ಯುಧಿಷ್ಠಿರನು ಕೃಷ್ಣನನ್ನು ಕುರಿತು ಕುಶಲಪ್ರಶ್ನೆಯನ್ನು ಮಾಡಿದನು. ಆಮೇಲೆ, "ನಾವು ನಿಗೂಢವಾಗಿ ವಾಸಿಸುತ್ತಿದ್ದರೂ ನಿನಗದು ಹೇಗೆ ಗೊತ್ತಾಯಿತು ವಾಸುದೇವ?"  - ಎಂದು ಕೇಳಿದನು.

ಸೂಚನೆ : 03/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, August 28, 2023

ಅಷ್ಟಾಕ್ಷರೀ​ - 42 ಆಪ್ತಾಃ ಶಿಷ್ಟಾಃ ವಿಬುದ್ಧಾಸ್ತೇ (Astakshara Darshana 42 Aptah Shishtah Vibuddhaste)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) 



ಯೌವನವು ಯಾರಿಗೆ ಬೇಡ? ಯಯಾತಿಯಿಂದ ಆರಂಭಿಸಿ ಎಲ್ಲರಿಗೂ ಬೇಕಾದದ್ದೇ ಅದು. ಯೌವನವೆಂದರೆ ಉಕ್ಕುವ ಶಕ್ತಿ, ಉಕ್ಕುವ ಉತ್ಸಾಹಗಳು. ದೊಡ್ಡಸಾಧನೆಗಳಿಗೆ ಅದುವೇ ಸರಿಯಾದ ಕಾಲ. ಬಲ-ಉತ್ಸಾಹಗಳಿದ್ದಲ್ಲಿ ಯಾವುದು ತಾನೆ ಅಸಾಧ್ಯ? ಉತ್ಸಾಹಿಗಳಿದ್ದಲ್ಲಿ ನಿರುತ್ಸಾಹಿಗಳಿಗೂ ಒಂದಿಷ್ಟು ಉತ್ಸಾಹ ಅಂಟುವುದೇ!

 ಉತ್ಸಾಹವೇನೋ ತುಂಬ ಉಂಟು, ಆದರೆ ಹೆಚ್ಚು ಶಕ್ತಿಯಿಲ್ಲ– ಎಂದಲ್ಲಿ ಹೆಚ್ಚಿನ ಸಾಧನೆಯಾಗುವ ನಿರೀಕ್ಷೆಯಿಲ್ಲ. ಬದಲಾಗಿ ಬಲವು ಬೇಕಾದಷ್ಟಿದ್ದೂ ಉತ್ಸಾಹವೇ ಇಲ್ಲದಿದ್ದಲ್ಲಿ ಆಗಲೂ ಏನು ತಾನೆ ಸಾಧನೆಯಾದೀತು? ಕುಂಭಕರ್ಣನಿಗೇನು ಕಡಿಮೆ ಬಲವಿತ್ತೇ? ಆದರೆ ಸದಾ ನಿದ್ರಾಳು! ಹಾಗಿದ್ದರೇನು ಬಂತು? ಅತಿನಿದ್ರೆಯೆಂಬುದು ತಮಸ್ಸಿನ ಪ್ರಭಾವ. ಮಹಾಶಕ್ತಿಶಾಲಿಯಾಗಿದ್ದೂ ತಮೋಮಯನಾಗಿದ್ದರೆ ಸಾಧನೆಯು ಸೊನ್ನೆಯೇ.

ಆದರೆ ರಾವಣನ ನಡೆ ಇದಕ್ಕೆ ವಿರುದ್ಧವಾದದ್ದು: ಅದೆಂತೆಂತಹ ಸಾಧನೆಗಳನ್ನು ಮಾಡಿಬಿಟ್ಟ ಅವನು! ವೇದಾಧ್ಯಯನಸಂಪನ್ನ ಹಾಗೂ ಶಿವಭಕ್ತ, ಆತ. ಕೈಲಾಸವನ್ನೇ ಅಲ್ಲಾಡಿಸಿದ! ಅಲ್ಲೇ ನಂದಿಯನ್ನೇ ಕೆಣಕಿದ! ಉಗ್ರತಪಸ್ಸನ್ನು ಮಾಡಿ, ದೇವ-ಗಂಧರ್ವ-ದಾನವರಾರಿಂದಲೂ ಮರಣ ಬರದಂತಹ ವರ ಪಡೆದ. ಇಷ್ಟು ಬಲಶಾಲಿ ಕೊನೆಗೆ ಮಾಡಿದುದೇನು? ವೇದವತಿಯನ್ನು ಬಲಾತ್ಕರಿಸಿದ, ರಂಭೆಯ ಮೇಲೂ  ಬಲಪ್ರಯೋಗ ಮಾಡಿದ! ತಾನು ಕೆಣಕಿದ ನಂದಿ-ರಂಭೆ-ವೇದವತಿಯರಿಂದ ಹಿಡಿಶಾಪಗಳನ್ನು ಪಡೆದ! ಹತ್ತು ತಲೆಗಳಿದ್ದರೇನು? ಒಂದನ್ನೂ ಉಪಯೋಗಿಸದೆ ಸ್ವನಾಶಕ್ಕೆ ದಾರಿಮಾಡಿಕೊಂಡ. ತನ್ನ ಅದಮ್ಯದರ್ಪ-ಪಾರುಷ್ಯಗಳ ಕಹಿಫಲವನ್ನನುಭವಿಸಿದ. ಇವೆಲ್ಲಾ ರಜೋಗುಣಭರಿತರ ಲಕ್ಷಣಗಳೇ.

ಅಲ್ಲಿಗೆ, ಬರೀ ಬಲದಿಂದಲೂ ಪ್ರಯೋಜನವಿಲ್ಲ; ಬರೀ ಉತ್ಸಾಹದಿಂದಲೂ ಅಷ್ಟೆ; ಬಲೋತ್ಸಾಹಗಳೆರಡೂ ಇದ್ದರೂ ಅರಿವು ಬೇಕು: ಜೀವನದಲ್ಲಿ ಸಾಗಬೇಕಾದ ದಿಕ್ಕು ಯಾವುದು? – ಎಂಬುದರರಿವು; ಸಾಧಿಸಬೇಕಾದ ಜೀವನಲಕ್ಷ್ಯವೇನು? - ಎಂಬುದರರಿವು.

ಜೀವನದ ಲಕ್ಷ್ಯ, ಅದಕ್ಕೆ ಸುಮಾರ್ಗ - ಎಂಬಿವನ್ನು ತಿಳಿಸುವ ಪುಸ್ತಕಗಳು ಹಲವಿರಬಹುದು. ಆದರೆ ನಮಗೇನೋ ಸಮಸ್ಯೆ ಬಂದಾಗ ಅವು ಸಾಲದಾಗುವುವು; ಆಗ ನಾವು ಮೊರೆಹೋಗುವುದು ಆಪ್ತೇಷ್ಟರಲ್ಲಿಗೆ. ಆಪ್ತರ ಸಲಹೆ ಉಪಕಾರಕ. "ಇವರು ನಮಗೆ ತುಂಬ ಆಪ್ತರು" ಎಂದು ಯಾರ ಬಗ್ಗೆಯಾದರೂ ಹೇಳಿದರೆ, ಅವರು ನಮಗೆ ಒಳ್ಳೆಯದಾಗುವುದನ್ನೇ ಹೇಳುವರು - ಎಂಬ ಎಣಿಕೆಯಿರುವುದಲ್ಲವೇ?

ನಮಗೆ ಹತ್ತಿರವಾದ ಬಂಧುಗಳನ್ನೋ ಮಿತ್ರರನ್ನೋ ಆಪ್ತರೆನ್ನುವುದುಂಟು. ವಾಸ್ತವವಾಗಿ ಆ ನಿಕಟತೆಯೆಂಬುದಷ್ಟೇ ಸಹ ಸಾಲದೆ ಹೋಗುವುದು. ಹಿತೈಷಿಗಳೆನಿಸಲು ಬೇರೊಂದಂಶವೂ ಬೇಕು. ಏನದು? ಅರಿವು: ಸಮಸ್ಯೆಯ ಹಾಗೂ ಪರಿಹಾರದ ಸ್ಪಷ್ಟ ಅರಿವು. ಅರಿವನ್ನೇ ಬೋಧವೆನ್ನುವರು; ಈ ಬೋಧದ ಜೊತೆಗೆ  ಜಾಗರೂಕತೆಯೂ ಇರುವ ಪ್ರೌಢತೆಯುಳ್ಳವರನ್ನೇ ಪ್ರಬುದ್ಧರೆನ್ನುವುದು. ವಿಬುದ್ಧರೆಂದರೂ ಅದೇ. ಆಪ್ತರು ವಿಬುದ್ಧರಾಗಿರಬೇಕು.

ಒಂದರ್ಥದಲ್ಲಿ ಇದೂ ಸಹ ಸಾಲದೇ! ಏಕೆ? ಅರಿತದ್ದನ್ನು ತಮ್ಮ ಜೀವನದಲ್ಲೇ ಅವರು ನಡೆದು ತೋರಿಸಿದ್ದಾರೋ? - ಎಂಬ ಪ್ರಶ್ನೆಯೂ ತಲೆದೋರುವುದೇ – ಯಾರಾದರೂ ಉದ್ದ ಉಪದೇಶ ಕೊಟ್ಟಾಗ. ಯಾರು ಒಂದು ಒಳ್ಳೆಯ ಶಿಸ್ತಿಗೆ ಒಳಪಟ್ಟಿರುವುದಿಲ್ಲವೋ ಅಂತಹವರು ದೊಡ್ಡ ಸಾಧನೆಯನ್ನೇನೂ ಮಾಡಿರ(ಲಾರ)ರು. ಶಿಸ್ತಿಗೇ  (ಅನು)ಶಾಸನವೆಂದೂ ಹೇಳುವುದುಂಟು. ಶಾಸನಕ್ಕೊಳಪಟ್ಟವರೇ ಶಿಷ್ಟರೆನಿಸಿಕೊಳ್ಳುವುದು. ಹೀಗಾಗಿ ಯುಕ್ತವಾದ ಅರಿವು, ತಕ್ಕುದಾದ ಶಿಸ್ತು - ಇವುಗಳ ಬಲವೂ ಉಳ್ಳವರಾದಲ್ಲಿ, ಅಂತಹ ಆಪ್ತರ ಮಾತಿಗೇ ಬೆಲೆ: "ಆಪ್ತರ ವಾಕ್ಯವು ಪ್ರಮಾಣ" – ಎಂದುಕೊಳ್ಳುವುದು ಹೀಗಾದಾಗಲೇ ಹೊಂದಿಕೊಳ್ಳುವುದು.

ಜೀವನದಲ್ಲಿ ಯಾರ ಮಾರ್ಗದರ್ಶನವು ಯುಕ್ತ? - ಎಂಬ ಪ್ರಶ್ನೆಗೆ ಆರ್ಯುರ್ವೇದವು ಕೊಡುವ ಸೂಚನೆಯೊಂದಿದೆ. "ಆಪ್ತರ ಮಾತಿನಂತೆ ನಡೆಯಿರಿ" - ಎಂದು. ಯಾರು ಆಪ್ತರು? - ಎಂಬುದಕ್ಕೆ ಚರಕಸಂಹಿತೆಯೇ ಹೇಳುವ ಲಕ್ಷಣವನ್ನು ಶ್ರೀರಂಗಮಹಾಗುರುಗಳು ಉದ್ಧರಿಸುತ್ತಿದ್ದರು - "ಆಪ್ತಾಃ ಶಿಷ್ಟಾಃ ವಿಬುದ್ಧಾಸ್ತೇ".  ಶಿಷ್ಟರೂ ವಿಬುದ್ಧರೂ ಆಗಿರುವವರು ಆಪ್ತರು. 

ಅಷ್ಟೇ ಅಲ್ಲ. 'ಆಪ್ತ'ರೆಂಬುದಕ್ಕೆ "ಪಡೆದಿರುವವರು" ಎಂಬುದೇ  ಮುಖ್ಯಾರ್ಥ. ಏನನ್ನು ಪಡೆದಿರುವವರು? "ತಪಸ್ಸಿನಿಂದ ಯಾರು ಅಮಲಜ್ಞಾನವನ್ನು ಪಡೆದಿರುವರೋ ಅವರೇ ಆಪ್ತರು" - ಎಂಬುದು ಶ್ರೀರಂಗಮಹಾಗುರುಗಳ ಸೂತ್ರ. ಅಂತಹ ಜ್ಞಾನವನ್ನು ಯಾರು ಪಡೆಯಲು ಸಾಧ್ಯ? ವಾಸ್ತವವಾಗಿ, ಯಾರು ರಜೋಗುಣ-ತಮೋಗುಣಗಳನ್ನು ಮೀರಿರುವರೋ ಅವರೇ; ಸತ್ಯವನ್ನು ಹೇಳಬಲ್ಲವರೂ ಅವರೇ – ಎಂಬ ಮಾತನ್ನೂ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. 

ಹೀಗಾಗಿ, ಆತ್ಮಜ್ಞಾನಿಗಳೇ ನಿಜವಾದ ಆಪ್ತರು. ಆತ್ಮಜ್ಞರ ಮಾರ್ಗದರ್ಶನವಿದ್ದಲ್ಲಿ ಯಾರ ಜೀವನ ಉನ್ನತಿ ಪಡೆಯದು?.

ಸೂಚನೆ: 27/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 



ಯಕ್ಷ ಪ್ರಶ್ನೆ 52 (Yaksha prashne 52)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)  



ಪ್ರಶ್ನೆ – 51 ಮನುಷ್ಯನ ಮುಖ್ಯ ಕರ್ತವ್ಯವೇನು  ?

ಉತ್ತರ - ದಾನ

ಮಾಡಲೇ ಬೇಕು. ಮಾಡದಿದ್ದರೆ ಆಗದು ಎಂಬುದಕ್ಕೆ ಕರ್ತವ್ಯ ಎಂದು ಕರೆಯುತ್ತಾರೆ. ಮನುಷ್ಯನು ಮಾಡಲೇಬೇಕು, ಮಾಡದಿದ್ದರೆ ಆಗುವುದಿಲ್ಲ ಎಂಬ ಅದಾವ ವಿಚಾರವುಂಟು? ಎಂದು ಯಕ್ಷನು ಕೇಳುತ್ತಾನೆ. ಅದಕ್ಕೆ ಧರ್ಮರಾಜನು 'ದಾನ' ಎಂಬ ಉತ್ತರವನ್ನು ಕೊಡುತ್ತಾನೆ. ಹಾಗಾದರೆ ದಾನ ಹೇಗೆ ಅಂತಹ ಕರ್ತವ್ಯದ ವಿಚಾರವಾಗಿದೆ. ಇದನ್ನು ಮಾಡದಿದ್ದರೆ ಮನುಷ್ಯನ ಜೀವನವು ನಡೆಯುವುದೇ ಇಲ್ಲವೇ?

ಕೊಟ್ಟು ಬದುಕೇ ಹೊರತು ಇಟ್ಟಲ್ಲ. "ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ" ಎಂಬ ದಾಸರ ವಾಣಿಯನ್ನು ನೋಡಬಹುದು. ಸೃಷ್ಟಿಯಲ್ಲಿ ಎಲ್ಲು ನೋಡಿದರು ಕೊಡುವುದು ಕಂಡುಬರುತ್ತದೆಯೇ ಹೊರತು ಇಟ್ಟಿಕೊಂಡಿದ್ದು ಕಂಡುಬರುವುದಿಲ್ಲ. ಕೊಟ್ಟಾಗ ಬರುತ್ತದೆ. ಇಟ್ಟಾಗ ಕೆಟ್ಟುಹೋಗುತ್ತದೆ. ಹರಿಯುವ ನೀರು ಶುದ್ಧವಾಗಿರುತ್ತದೆ. ಅಲ್ಲಿ ನದಿಯು ಪರೋಪಕ್ಕಾರಕ್ಕಾಗಿ ಹರಿಯುತ್ತದೆ. ಒಂದು ವೇಳೆ ಹರಿಯದಿದ್ದರೆ ನದಿಯ ನೀರು ಕಲ್ಮಷವಾಗಿ ಪಾಚಿಕಟ್ಟಿ ಯಾರಿಗೂ ಉಪಯೋಗವಿಲ್ಲದಂತಾಗುತ್ತದೆ. ಹಸು ಪ್ರತಿದಿನ ಹಾಲನ್ನು ಕೊಡುತ್ತದೆ. ಹಾಲನ್ನು ಕೊಡುವುದಿಲ್ಲವೆಂದು ಹಟಮಾಡಿದರೆ ಕೆಚ್ಚಲಬಾವು ಉಂಟಾಗಬಹುದು. ಕೊಡುವುದರಲ್ಲಿ ಇರುವ ಸುಖ, ಇಟ್ಟುಕೊಳ್ಳುವುದರಲ್ಲಿ ಇಲ್ಲ ಎಂಬುದನ್ನು ನಿಸರ್ಗ ನಮಗೆ ಪಾಠವನ್ನು ಮಾಡುತ್ತದೆ. ಮನುಷ್ಯನು ಮಾತ್ರ ಇದನ್ನು ಮರೆತಂತೆ ಕಾಣುತ್ತದೆ. ಅದನ್ನು ಎಚ್ಚರಿಸಲು ಯಕ್ಷನು ಈ ಪ್ರಶ್ನೆಯನ್ನು ಕೇಳುತ್ತಾನೆ. 

ಮನುಷ್ಯನು ದಾನವನ್ನು ಮಾಡಲೇಬೇಕು. ದಾನವನ್ನು ಮಾಡುವುದು ಅವನ ಕರ್ತವ್ಯ. ಅಂದರೆ ಮಾಡದಿದ್ದರೆ ಸಾಧ್ಯವೇ ಇಲ್ಲ ಎಂಬುದು ಇದರ ಅರ್ಥ. ಮಾಡಲೇಬೇಕಾದುದು ಕರ್ತವ್ಯವಾಗುತ್ತದಷ್ಟೆ. ವಿಕಲ್ಪವಾದದ್ದು ಕರ್ತವ್ಯಕ್ಕೆ ಸೇರುವುದಿಲ್ಲವಷ್ಟೇ. ಅಂದರೆ ಮಾನವನಿಗೆ ದಾನ ಮಾಡದಿದ್ದರೆ ಗತಿಯೇ ಇಲ್ಲ. ದಾನವು ಆತನನ್ನು ಶುದ್ಧಗೊಳಿಸುತ್ತದೆ. ಶುದ್ಧಿಯು ತಾನೆ ಸಹಜತೆ, ವಿಶುದ್ಧಿಯು ವಿಕಾರ. ಆದ್ದರಿಂದ ಶುದ್ಧಿಯನ್ನು ಉಂಟುಮಾಡುವ ಸಾಧನಗಳಲ್ಲಿ ಅತಿಮುಖ್ಯವಾದುದು ದಾನವಾಗಿದೆ. ದಾನವು ಹೇಗಿರಬೇಕು? ಯಾವ ದಾನ ಶ್ರೇಷ್ಠವಾದುದು?  ಎಂಬುದಕ್ಕೆ ಶ್ರೀರಂಗಮಹಾಗುರುಗಳು ಈ ಮಾತನ್ನು ಹೇಳುತ್ತಿದ್ದರು "ಭೂತದಯೆ ಪಶ್ಚಾತ್ತಾಪಗಳಿಂದ ಯಾರಿಗೆ ಬೇಕಾದರೂ ದಾನ ಮಾಡಬಹುದು. ಅದು ಸರಿ. ಆದರೆ ಬ್ರಹ್ಮಾರ್ಪಿತವಾಗಬೇಕಾದರೆ ಜ್ಞಾನಿಗೇ ಕೊಡಬೇಕು. ಮೊದಲನೆಯದಕ್ಕೆ ಒಂದು ರೂಪಾಯಿ ಕೊಡಬಹುದು. ಆದರೆ ಭಗವಂತನು ಅಪೇಕ್ಷಿಸುವುದು ಮನೋಧರ್ಮವನ್ನು" ಎಂದು. ಎಲ್ಲದಕ್ಕಿಂತ ಮನೋಧರ್ಮ ಬೇಳೆಯಬೇಕಾದುದು ಮುಖ್ಯ. ದಾನವು ಅದನ್ನು ಬೆಳೆಸುತ್ತದೆ. ಆದ್ದರಿಂದ ಉಳಿದ ಪ್ರಾಣಿಗಳಿಗಿಂತ ಮನುಷ್ಯನಿಗೆ ದಾನವನ್ನು ಕರ್ತವ್ಯ ಎಂಬುದಾಗಿ ಹೇಳಲಾಗಿದೆ.   

ಎಂತಹ ದಾನ ಇಂತಹ ಮನೋಧರ್ಮವನ್ನು ಬೆಳೆಸಲು ಸಾಧ್ಯ? ದಾನಗಳಲ್ಲಿ ಸಾತ್ತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ಬಗೆಯ ದಾನಗಳಿವೆ. ಇಲ್ಲಿ ಮೂರೂ ಬಗೆಯ ದಾನಗಳಲ್ಲೂ ಕೊಡುವುದುಂಟು. ಕೊಟ್ಟಿದ್ದೆಲ್ಲಾ ದಾನವಾಗುವುದಿಲ್ಲ. ದಾನದ ಹಿಂದಿರುವ ಉದ್ದೇಶ ಅತ್ಯಂತ ಪ್ರಧಾನ. ಉದ್ದೇಶ ಒಳ್ಳೆಯದಾಗಿದ್ದರೆ ಮಾತ್ರ ಆ ದಾನ ಸಾತ್ತ್ವಿಕದಾನವಾಗುತ್ತದೆ. ಫಲಾಪೇಕ್ಷೆಯಿಲ್ಲದೇ ಕೇವಲ ಕರ್ತವ್ಯಬುದ್ಧಿಯಿಂದ ದಾನವನ್ನು ಮಾಡಬೇಕು. ಕೀರ್ತಿಕಾಮನೆ ಅಥವಾ ಇನ್ನಾವುದೋ ಅಪೇಕ್ಷೆ ಆ ದಾನದ ಹಿಂದೆ ಇರಬಾರದು. ಅಂತಹ ದಾನವನ್ನು ನಿಸರ್ಗ ನಮಗೆ ಕಲಿಸಿದೆ. ಇಂತಹ ದಾನದಿಂದ ಮಾತ್ರವೇ ಸನ್ಮಮೋಧರ್ಮ ಬೆಳೆಯಲು ಸಾಧ್ಯ. ಇಂತಹ ದಾನ ಮಾತ್ರ ಭಗವದರ್ಪಿತವಾಗಲು ಸಾಧ್ಯ.

ಸೂಚನೆ : 27/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 52 ಕುಂತಿಯ ಚಿಂತೆ (Vyaasa Vikshita - 52 Kuntiya Chinte)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಯುದ್ಧದಲ್ಲಿ ವೈಶಾರದ್ಯವನ್ನು (ಎಂದರೆ ಪ್ರಾವೀಣ್ಯವನ್ನು) ಹೊಂದಿದ್ದ ಆ ರಾಜರುಗಳು ಯುದ್ಧದಿಂದ ವಿನಿವೃತ್ತರಾದರು (ಎಂದರೆ ಹಿಂದಿರುಗಿದರು); ವಿಸ್ಮಯಗೊಂಡಿದ್ದ ಆ ರಾಜರು ಇನ್ನು ತಮ್ಮ ತಮ್ಮ ಡೇರೆಗಳತ್ತ ಹೊರಡಲು ಅನುವಾದರು.

"ಈ ರಂಗಮಂಚದಲ್ಲಿ ಬ್ರಾಹ್ಮಣರೇ ಶ್ರೇಷ್ಠರೆಂಬುದು ಸಾಬೀತಾಯಿತು! ಪಾಂಚಾಲಿಯು ಬ್ರಾಹ್ಮಣರನ್ನು ವರಿಸಿದಳು!" - ಹೀಗೆಂಬುದಾಗಿ ಹೇಳುತ್ತಾ, ಅಲ್ಲಿಗೆ ಬಂದಿದ್ದವರು ತಮ್ಮ ತಮ್ಮ ಮನೆಗಳತ್ತ ತೆರಳಿದರು. ರುರುಮೃಗದ ಅಜಿನದಿಂದ (ಅಜಿನ ಎಂದರೆ ಚರ್ಮ) ಆವೃತರಾಗಿದ್ದ ಆ ಬ್ರಾಹ್ಮಣರು ಭೀಮಾರ್ಜುನರನ್ನು ಸುತ್ತುಗಟ್ಟಿದರು.

ಜನಸಂಮರ್ದದಿಂದ (ಸಂಮರ್ದವೆಂದರೆ ಭಾರೀ ಗುಂಪು) ಆಚೆ ಬಂದರು, ಭೀಮಾರ್ಜುನರು; ಶತ್ರುಗಳೆಲ್ಲರೂ ಇವರನ್ನೇ ದಿಟ್ಟಿಸಿ ನೋಡುತ್ತಿದ್ದರು. ದ್ರೌಪದಿಯೂ ಅವರನ್ನೇ ಅನುಸರಿಸಿ ಬಂದಿದ್ದಳಾಗಿ ಆ ನರವೀರರಿಬ್ಬರು ಅತಿಶಯವಾಗಿ ವಿರಾಜಿಸಿದರು. ಹುಣ್ಣಿಮೆಯಂದು ಮೋಡಗಳಿಂದ ಬಿಡಿಸಿಕೊಂಡು ಬಂದಿರುವ ಚಂದ್ರ-ಸೂರ್ಯರ ಹಾಗೆ ಅವರು ಕಾಣಿಸುತ್ತಿದರು.

ಆದರೆ ಇತ್ತ, ತನ್ನ ಮಕ್ಕಳಿಗೆ ಅದೇನೋ ಆಪತ್ತು ಬಂದಿರಬೇಕೆಂದು ತಾಯಿ ಕುಂತಿಗೆ ಚಿಂತೆಯು ಮೂಡಿತು: "ಭಿಕ್ಷಾಕಾಲವು ಮೀರುತ್ತಿದೆ. ನನ್ನ ಮಕ್ಕಳು ಇನ್ನೂ ಬರಲಿಲ್ಲ. ಧೃತರಾಷ್ಟ್ರನ ಪುತ್ರರಿಂದ ಇವರುಗಳು ಹತರಾಗಿಲ್ಲವಷ್ಟೆ! ಅಥವಾ ಮಾಯಾಮಯರೂ ಸುಘೋರರೂ ದೃಢವೈರಿಗಳೂ ಆದ ರಾಕ್ಷಸರಿಂದ ಸಾವುಂಟಾಗಿಲ್ಲವಷ್ಟೆ? ಆಹಾ! ಮಹಾತ್ಮರಾದ ವ್ಯಾಸರ ಆಶಂಸೆಯೂ ವಿರುದ್ಧವಾಗಿಹೋಯಿತೇ?" ಎಂದು ವ್ಯಾಕುಲಳಾದಳು.

ಹೀಗೆ ಶಂಕೆಯು ಮನಸನ್ನಾವರಿಸಲು ಸುತಸ್ನೇಹದಿಂದ (ಎಂದರೆ ಮಕ್ಕಳ ಮೇಲಣ ಪ್ರೀತಿಯಿಂದ) ಚಿಂತೆಗೀಡಾದ ಕುಂತಿಯು ಹೀಗೆಲ್ಲಾ ಯೋಚಿಸಿದಳು.

ಮೋಡಗಳಿಂದ ಆಕಾಶವು ಕಿಕ್ಕಿರಿದಿದ್ದ ದುರ್ದಿನದ ಮಹತ್ತಾದ ಅಪರಾಹ್ಣದಲ್ಲಿ, ಜನಗಳು ಇದೇನು ನಿದ್ರಿಸಿರುವರೋ ಎಂಬಂತಿರುವುದಲ್ಲವೇ? ಮೋಡಗಳಿಂದ ಸುತ್ತುವರಿಯಲ್ಪಟ್ಟ ಸೂರ್ಯನು ಹೇಗೋ ಹಾಗೆ, ಬ್ರಾಹ್ಮಣರಿಂದ ಸುತ್ತುವರಿಯಲ್ಪಟ್ಟ ಜಿಷ್ಣುವು (ಅರ್ಜುನನು) ಆ ಕುಂಬಾರನ ಮನೆಗೆ ಅಪರಾಹ್ಣದಲ್ಲಿ ಪ್ರವೇಶಮಾಡಿದನು. ಅರ್ಜುನನೊಂದಿಗೆ ಭೀಮನೂ ಪ್ರವೇಶಿಸಿದನಷ್ಟೆ.

ಅತ್ಯಂತ ಸಂತೋಷದಿಂದ ಕೂಡಿದ್ದ ಅವರಿಬ್ಬರು ದ್ರೌಪದಿಯನ್ನು ಪಡೆದಿರುವುದನ್ನು (ಸೂಚಿಸಲು) "ಭಿಕ್ಷೆಯನ್ನು ತಂದಿದ್ದೇವೆ" - ಎಂಬುದಾಗಿ ತಿಳಿಸಿದರು. ಕುಂತಿಯಾದರೂ ಕುಟಿಯ ಒಳಗಿದ್ದಳು; ಆ ಮಕ್ಕಳಿಬ್ಬರನ್ನು ಗಮನಿಸಲಿಲ್ಲ. "ಎಲ್ಲರೂ ಸೇರಿ ಹಂಚಿಕೊಂಡು ತಿನ್ನಿರಿ, ಭಿಕ್ಷೆಯನ್ನು" (ಸಮೇತ್ಯ ಸರ್ವೇ ಭುಂಕ್ತ) ಎಂದಳು.

ಆಮೇಲೆ ಅಲ್ಲಿಗೇ ಬಂದ ಕುಂತಿಯು ಕೃಷ್ಣೆಯನ್ನು ಕಂಡಳು. "ನಾನದೆಂತಹ ಮಾತನ್ನಾಡಿಬಿಟ್ಟೆ!" ಎಂದುಕೊಂಡಳು. ಅದು ಹಾಗೇ ಘಟಿಸಿದರೆ ಅಧರ್ಮವಾದೀತೋ ಏನೋ ಎಂಬ ಭೀತಿಯು ಮನಸ್ಸಿನಲ್ಲಿ ಬಂದಿತು; ಆಕೆ ಚಿಂತಾಕುಲಳಾದಳು. ಆದರೆ ದ್ರೌಪದಿಯು ಅತ್ಯಂತ ಸಂತುಷ್ಟಳಾಗಿದ್ದಳು: ಎಷ್ಟಾದರೂ ತನಗಿಷ್ಟನಾದ ಪತಿಯೇ ದೊರೆತನಲ್ಲವೇ?

ದ್ರೌಪದಿಯ ಕೈಯನ್ನು ಹಿಡಿದುಕೊಂಡು ಕುಂತಿಯು ಯುಧಿಷ್ಠಿರನಲ್ಲಿಗೆ ಬಂದಳು. ಮತ್ತುಆತನಿಗೆ ಹೇಳಿದಳು: "ಈಕೆ ದ್ರುಪದರಾಜಕುಮಾರಿ. ನಿನ್ನ ತಮ್ಮಂದಿ(ರಿಬ್ಬ)ರು ಇವಳನ್ನು ನನಗೆ ಒಪ್ಪಿಸಿರುವರು. ಯಥೋಚಿತವಾಗಿ ನಾನು ಸಹ "ಎಲ್ಲರೂ ಸೇರಿ ಸೇವಿಸಿರಿ" ಎಂದು ಪ್ರಮಾದದಿಂದ (=ಸರಿಯದ ಅರಿವಿಲ್ಲದೆ) ಹೇಳಿಬಿಟ್ಟೆ! ನಾನು ಇಂದಾಡಿರುವ ಮಾತು ಸುಳ್ಳಾಗಕೂಡದು; ಆದರೆ ಅದು ಹೇಗೆ ಸಾಧ್ಯವಾದೀತೆಂಬುದನ್ನು ನೀನೇ ಹೇಳಬೇಕು, ಕುರುವಂಶದ ವೀರನೇ! ಪಾಂಚಾಲರಾಜಕುಮಾರಿಯಾದ ಇವಳಿಗೂ ಅಧರ್ಮವು ಸೋಂಕಬಾರದು. ಮತ್ತು ಪಾಪಫಲವಾಗಿ ಅವಳು ಮುಂದೆ (ನೀಚಜನ್ಮಗಳನ್ನು ಹೊಂದಿ) ಅಲೆಯುವಂತಾಗಬಾರದು" ಎಂದಳು.

ಸೂಚನೆ : 27/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.