Monday, June 26, 2023

ಯಕ್ಷ ಪ್ರಶ್ನೆ 39 Yaksha prashne 39

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



 ಪ್ರಶ್ನೆ – 38 ಅಮೃತವು ಯಾವುದು ?

ಉತ್ತರ - ಗೋಕ್ಷೀರ

ಯಕ್ಷನು ಕೇಳುವ ಈ ಪ್ರಶ್ನೆಯು ಈ ಹಿಂದೆ ಕೇಳಿದ ಪ್ರಶ್ನೆಗಳಿಗೆ ಸಂಬಂಧಿಸಿದ್ದೇ ಆಗಿದೆ. ಪ್ರತಿಯೊಬ್ಬ ಮಾನವನು ತನ್ನ ಜೀವಿತಕಾಲದಲ್ಲಿ ಸಂಪಾದಿಸಲೆ ಬೇಕಾದುದು ಧರ್ಮ. ಈ ಧರ್ಮವು ಅಮೃತತ್ವವನ್ನು ಪಡೆಯಲು ಬೇಕಾದ ಸಾಧನವಾಗಿದೆ. ಅಂದರೆ ಅಮೃತತ್ವ- ಮೋಕ್ಷವನ್ನು ಪಡೆಯಲು ಬೇಕಾದುದು ಧರ್ಮವಾದರೆ, ಅಂತಹ ಧರ್ಮವನ್ನು ಸಾಧಿಸಲು ಮುಖ್ಯವಾದ ಸಾಧನ ಯಾವುದು? ಎಂಬುದು ಯಕ್ಷ ಕೇಳುವ ಪ್ರಶ್ನೆಯಾಗಿದೆ. ಗೋವಿನ ಹಾಲು ಅಂತಹ ಧರ್ಮವನ್ನು ಸಾಧಿಸಲು ಬೇಕಾದ ಪರಮೋತ್ಕೃಷ್ಟ ಸಾಧನವಾಗಿದೆ ಎಂಬುದು ಧರ್ಮರಾಜನ ಉತ್ತರದಲ್ಲಿರುವ ಅಂಶವಾಗಿದೆ.

ಹುಟ್ಟಿದ ಪ್ರತಿಯೊಂದು ಜೀವವೂ ಹಾಲಿನಿಂದಲೇ ಬದುಕುತ್ತದೆ. ತಾಯಿಯ ಹಾಲೇ ಮರಿಗೆ ಜೀವಾತು. ಆ ತಾಯಿಯ ಮರಿಗಷ್ಟೇ ಆ ಹಾಲು ಜೀವಾತುವಾಗಬಲ್ಲದು. ಆದರೆ ಕೆಲವು ಪ್ರಾಣಿಗಳ ಹಾಲು ತನ್ನ ಸಂತಾನಕ್ಕೆ ಮಾತ್ರ ಜೀವನೌಷಧವಾಗದೇ ಅನೇಕ ಪ್ರಾಣಿಗಳ ಪ್ರಾಣಧಾರಣೆಗೆ ಕಾರಣವಾಗಬಲ್ಲದು. ಅವುಗಳಲ್ಲಿ ಗೋವು ಮೊದಲಸ್ಥಾನದಲ್ಲಿ ನಿಲ್ಲುತ್ತದೆ. ಅದಕ್ಕೆ ಕಾರಣವಿಷ್ಟೇ ಆ ಹಾಲಿನಲ್ಲಿರುವ ಸಾರ. ಬದುಕಲು ಬೇಕು ಹಾಲು. ಮಗುವಾದ ಕೆಲವು ತಿಂಗಳವರೆಗೆ ಮಾತ್ರ ತಾಯಿಯ ಹಾಲು ಬೇಕಾಗುತ್ತದೆ. ಅನಂತರ ತಾಯಿಯ ಹಾಲು ಮಗುವಿನ ಬೆಳವಣಿಗೆಗೆ ಸಾಲದು. ಆದರೆ ಗೋವಿನ ಹಾಲು ಜೀವನ ಪರ್ಯಂತವೂ ಪ್ರಾಣಧಾರಣೆಗೆ ಬೇಕಾದ ಪೌಷ್ಟಿಕಾಂಶವನ್ನು ನೀಡಬಲ್ಲದು. ಆದ್ದರಿಂದಲೇ ಗೋವಿನ ಹಾಲನ್ನು ಆಯುರ್ವೇದದಲ್ಲಿ ಪೂರ್ಣಾಹಾರವೆಂದು ಪರಿಗಣಿತವಾಗಿದೆ. ಕ್ಷಿಪ್ರಬಲವನ್ನು ಕೊಡುವ ಪದಾರ್ಥಗಳಲ್ಲಿ ಗೋವಿನ ಹಾಲೂ ಕೂಡ ಒಂದು. ಹಸಿದವನಿಗೆ ತುಂಬಾ ಬಳಲಿಕೆ ಉಂಟಾಗಿದ್ದರೆ ಹಾಲುನ್ನು ಕೊಟ್ಟರೆ ಆತನಿಗೆ ಬಹಳ ಬೇಗ ಚೇತರಿಕೆ ಉಂಟಾಗುತ್ತದೆ. ರಾತ್ರಿಯಲ್ಲಿ ಕೇವಲ ಕ್ಷೀರಾನ್ನ ಭೋಜನವು ಪ್ರಶಸ್ತವಾದು ಎಂದು ಆಯುರ್ವೇದದಲ್ಲಿ ಅದರ ಪೂರ್ಣಾಹಾರವನ್ನು ಈ ರೀತಿಯಲ್ಲಿ ತಿಳಿಸಲಾಗಿದೆ. ಅಂದರೆ ಆಹಾರವು ಪ್ರಾಣಿಗಳ ಜೀವನಕ್ಕೆ ಬೇಕೇಬೇಕು. ಅದು ಹಾಲಿನ ರೂಪದಲ್ಲಿ.

ಮಾನವನ ಜೀವನ ಕೇವಲ ಪ್ರಾಣಧಾರಣಕ್ಕೆ ಮಾತ್ರ ಸೀಮಿತವಾದುದಲ್ಲ. 'ಪ್ರಾಣಾಃ ರಕ್ಷ್ಯಾಃ ತತ್ತ್ವಜಿಜ್ಞಾಸನಾರ್ಥಂ' ಎಂಬ ಮಾತಿನಂತೆ ಪ್ರಾಣರಕ್ಷಣೆಯ ಉದ್ದೇಶವೇ ತತ್ತ್ವವನ್ನು ತಿಳಿಯುವುದು. ಅಂದರೆ ಮತ್ತೆ ಮತ್ತೆ ದುಃಖವನ್ನು ಪಡೆಯದಿರುವ ಸ್ಥಿತಿಯನ್ನು ಪಡೆಯುವುದು ಎಂದರ್ಥ. ಇಹ ಜೀವನದಲ್ಲಿ ಪಡೆಯುವ ಸುಖವು ಶಾಶ್ವತವಲ್ಲ. ಶಾಶ್ವತಸುಖಕ್ಕಾಗಿ ಪ್ರಾಣಧಾರಣ ಮಾಡಬೇಕು ಎಂಬುದೇ ನಮ್ಮ ಪೂರ್ವಜರು ಹೇಳಿಕೊಟ್ಟ ಜೀವಿಕೆಯ ಉಪದೇಶ. ಅಂತಹ ಜೀವಿಕೆಗೆ ಗೋವಿನ ಹಾಲು ಶ್ರೇಷ್ಠವಾಗಿದೆ.

ಮೋಕ್ಷವನ್ನು ಅಥವಾ ಅಮೃತತ್ವವನ್ನು ಪಡೆಯಲು ಅದಕ್ಕೆ ಪೂರಕವಾದ ಆಹಾರಪದ್ಧತಿ ಆವಶ್ಯಕವಾದುದು. ನಮ್ಮ ಜೀವನದಲ್ಲಿ ಸಾತ್ತ್ವಿಕತೆಯನ್ನು ಬೆಳೆಸಿಕೊಂಡು ಹೋಗುವಂತಾಗಲು ಅಂತಹ ಸಾತ್ತ್ವಿಕವಾದ ಆಹಾರವೆ ಬೇಕಾಗುತ್ತದೆ. ಹಾಗಾಗಿ ಸಾತ್ತ್ವಿಕವಾದ ಆಹಾರದ ಪಟ್ಟಿಯನ್ನು ಮಾಡುವಾಗ ಆಯುರ್ವೇದವು ಗೋವಿನ ಹಾಲಿಗೆ ಪ್ರಥಮಸ್ಥಾನವನ್ನು ಕೊಡುತ್ತದೆ. ಅಂತಹ ಪರಮಸಾತ್ತ್ವಿಕವಾದ ಆಹಾರಪದಾರ್ಥ ಗೋವಿನ ಹಾಲು. ಕ್ಷೀರಕ್ಕೆ ಸಂಸ್ಕೃತದಲ್ಲಿ ನೀರು ಎಂಬ ಪರ್ಯಾಯಪದವೂ ಇದೆ. ನೀರಿನ ಪರ್ಯಾಯಪದವನ್ನು ಹೇಳುವಾಗ ಅಮರಕೋಶದಲ್ಲಿ 'ನೀರಕ್ಷೀರಾಂಬುಶಂಬರಮ್ । ಪಯಃ ಕೀಲಾಲಮ್ ಅಮೃತಮ್' ಅಮೃತ, ಕ್ಷೀರ, ನೀರು ಈ ಎಲ್ಲಾ ಪದಗಳು ಆ ಪದಾರ್ಥದಲ್ಲಿರುವ ಗುಣಧರ್ಮವನ್ನು ಪ್ರತೀಕಿಸುವುದಷ್ಟೇ! ಈ ಕಾರಣಕ್ಕೆ ಧರ್ಮರಾಜನ ಉತ್ತರ 'ಗೋಕ್ಷೀರವು ಯಾವರೀತಿಯಾಗಿ ಅಮೃತತ್ವದಾಯಕ' ಎಂಬುದನ್ನು ಜಗತ್ತಿಗೆ ತೋರಿಸುತ್ತದೆ.

ಸೂಚನೆ : 28/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Peace and jubilation amidst a dreadful ocean

 Original in Kannada by: Mythily Raghavan

English rendering by: Padmini Shrinivasan

Respond to (lekhana@ayvm.in)

A gargantuan pile of water, torrential waves to top it, cavernous with an invisible floor, wild aquatic creatures residing within – all of this portrays an ocean as a fearful place. Isn't it? Very many realized souls (jnaanis) profess that – life too is such a frightful ocean. 


In the ocean of life, 'Desire' is that vast pool of water with roaring waves of 'attachment' dashing over it. 'Lust' is like the gusty winds perturbing these waves further. Relationships with spouse, son etc., engulf like monstrous crocodiles. All these views are no doubt a cent percent correct! Similar to successive waves, constant wandering and scrambling to fulfill the desires arise in the mind. Hurdles encountered through difficulties and deep distress in the three domains viz. material, divine and spiritual; sufferings arising from wife and children, inundate a householder's life. He would not even find time to find a way out to attain peace. Living thus, when would a householder surmount all these, to attain the Lord and become peaceful? How is it possible at all? 


But despite all these troubleshooters, stories narrate that a good number of Bharateeya sages led a householder's life, yet living in peace, having attained the Lord's vision. Attaining the rank of a Brahmajnaani/ Brahmarshi, through intense penance, many householders still enjoyed all the pleasures of a worldly life, begetting progeny as well. Sages like Chyavana-Soubhari-Vasishta bear testimony to this fact. Newlywed couples are blessed as - 'May you live happily adapting the ideals of Vasishta and Arundati'. Many kings and emperors ruling over big empires, nurtured and protected, not only their own small family, but all the subjects in the kingdom, considering them as their own children. While shouldering this much of responsibility laden with attachment, along with accountability, they would easily renounce everything in their old age, after passing it on to their sons and with total detachment, engage themselves in penance, to reach the Lord. 


Was their life unlike a frightful ocean?  How is it that it was free from formidable turmoils? How did they manage to create an island of tranquility, along with the comforts of mundane existence? Oblivious of how rough or frightful the ocean is, if the travel is enjoyed within the confines of a secure ship, one can even reach the other bank, continuing to be in that state of enjoyment. Isn't it? Hooray! What elegance! What happiness! Following these ideals, while enjoying the worldly pursuits, in order to sail across to the opposite bank, the sages of Bhaarata guided us to undertake the voyage in a secure ship viz. a purushaartha based lifestyle – following the four cardinal principles dharma (righteousness), artha (material means and purpose), kaama (lust) and moksha (emancipation from rebirth/ ultimate oneness with the Lord) – to sail through, as well as reach a dwelling of undiminishing comfort and eternal happiness. The education necessary to lead a householder's life was being imparted right from childhood and the permission to enter a householder's life  was accorded only upon mastering these principles. This is a unique feature of the education system ordained by maharshis. Even though the target for leading a righteous life is salvation, while leading such a life, material wealth and ambitions follow naturally, as by-products. If the primary goal is disregarded and an ambitious life is pursued with a desire to accumulate wealth, then it is like jumping, struggling and drowning ourselves in an ocean.


At this juncture it is appropriate to recollect the aphorism of Sriranga Mahaaguru –"wealth and desire are like a naughty cow. If you try milking it, it kicks you back. But, if you tie its legs onto poles called dharma and moksha, then it would milk, divine ambrosia".


If lust is not constrained this way, it ceases to be one among the four cardinal principles and becomes one among the six enemies (arishadvargas). In Bhagavadgeeta, Sri Krishna says thus "kaama esha krodha esha rajoguna samudbhavaha---vidyainamiha vairinam". These drown us in an ocean. When wife and children are protected and nurtured, considering them as a treasure entrusted by the Lord, then a mutual affection grows, together with a sense of detachment. This directive of maharshis should serve as our yard-stick.


Kulashekhara azhvaar speaks about yet another simple method to tide over the ocean called 'mundane life'. A ship called 'unstinted devotion to the Lord' is an amazing means to help us cross over. Association with pious people and the Lord's devotees strengthens this devotion. "Association with pious people is as pleasant as savoring the choicest honey." Having said all this, we cannot conclude that such people will never have any trials or tribulations in their lifetime. When difficulties do confront them, reminiscing on God they develop the courage necessary to face the challenges.


This was all about a palatable and nectarine tool which made the lives of rajarshis-maharshis comfortable and paved way to enjoy the ultimate state of peace-contentment-jubilation. Their lifestyles based on the purushaartha principles and their constant association with noble people should serve as a model for all of us.


Note: The Kannada version of this article can be viewed at AYVM blogs.

Sunday, June 25, 2023

ಯಕ್ಷ ಪ್ರಶ್ನೆ 43 Yaksha prashne 43

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 42 ಶೀತಕ್ಕೆ ಔಷಧ ಯಾವುದು ?

ಉತ್ತರ - ಅಗ್ನಿ

ಯಕ್ಷನ ಪ್ರಶ್ನೆಗಳಲ್ಲಿ ಒಂದು ವಿಶೇಷವನ್ನು ಗಮನಿಸಬೇಕು. ಈ ಪ್ರಪಂಚದಲ್ಲಿ ಸಿಗುವ ಸಾಮಾನ್ಯವಾದ ವಿಷಯದಿಂದ ಅಧ್ಯಾತ್ಮದ ಶಿಖರವನ್ನು ಏರುವ ವಿಧಾನ. ಈ ಹಿಂದಿನ ಎರಡು ಪ್ರಶ್ನೋತ್ತರಗಳನ್ನು ಗಮನಿಸಿದರೆ ಈ ವಿಷಯ ತಿಳಿಯುತ್ತದೆ. ಸೂರ್ಯ ಮತ್ತು ಚಂದ್ರರನ್ನು ಇಟ್ಟುಕೊಂಡು ಸೃಷ್ಟಿಯ ಮೂಲ ಮತ್ತು ಅದರ ವಿಕಾಸವನ್ನು ಯಾವ ರೀತಿಯಾಗಿ ವಿವರಿಸಲಾಗಿದೆ ಎಂದು ತಿಳಿಯುತ್ತದೆ. ಈ ಪ್ರಶ್ನೆಯಿಂದಲೂ ಅಂತಹದ್ದೇ ಒಂದು ಪ್ರಯತ್ನ ನಡೆದಿದೆ 'ಶೀತಕ್ಕೆ ಔಷಧ ಯಾವುದು?' ಎಂದು. ಉತ್ತರ ಅಗ್ನಿ ಎಂಬುದಾಗಿ.

ಶೀತ ಅಂದರೆ ತಂಪು. ಅದಕ್ಕೆ ತಾಪವನ್ನು ಸೇರಿಸಿದಾಗ ಶೈತ್ಯದ ಗುಣ ಕಡಿಮೆಯಾಗುತ್ತದೆ. ಇದು ಸಾಮಾನ್ಯನಿಗೂ ತಿಳಿದದ್ದೇ. ನೀರನ್ನು ಕಾಯಿಸಬೇಕಾದರೆ ಬೆಂಕಿಯನ್ನು ಹಾಕಬೇಕು. ಇದನ್ನು ಆಯುರ್ವೇದದ ದೃಷ್ಟಿಯಿಂದಲೂ ನೋಡಬಹುದು. ನೀರು ಔಷಧವೇ. ಶೀತವಾದಾಗಲೂ ಅಥವಾ ಉಷ್ಣವಾದಾಗಲೂ ನೀರಿನಿಂದ ಉಪಶಮನ ಮಾಡಬಹುದು. ದೇಹದಲ್ಲಿ ಉಷ್ಣವಾದಾಗ ಸಹಜವಾಗಿ ತಂಪಾದ ನೀರನ್ನು ಕೊಟ್ಟರೆ ದೇಹದ ತಾಪ ಕಡಿಮೆಯಾಗುತ್ತದೆ. ಬಾಯಾರಿದಾಗ ತಣ್ಣಿರು ಹಿತವೆನಿಸುವುದಲ್ಲವೇ? ಅಂತೆಯೇ ಮೈಯ್ಯಲ್ಲಿ ಶೀತಬಾಧೆಯುಂಟಾದಾಗ ಕಾಯಿಸಿದ ನೀರನ್ನು ಕೊಟ್ಟಾಗ ಆ ಶೀತಬಾಧೆ ನಿವಾರಣೆಯಾಗುತ್ತದೆ. ಹೀಗೆ ಶೀತಕ್ಕೆ ಅಗ್ನಿಯಿಂದ ಉಪಶಮನವಾಗುವುದಂತೂ ನಿಜವೇ. ಆದರೆ ಯಕ್ಷನಪ್ರಶ್ನೆಯ ಆಶಯ ಇಷ್ಟೇನಾ?

ಸಾಮಾನ್ಯದಿಂದ ಅಸಾಮಾನ್ಯದ ಕಡೆಗೆ, ಭೌತಿಕದಿಂದ ಅಧ್ಯಾತ್ಮದ ಕಡೆಗೆ ಕರೆದುಕೊಂಡುಹೋಗುವ ಪ್ರಯತ್ನವಿದೇ ತಾನೆ. ಮಕ್ಕಳಿಗೆ ಕಥೆಯನ್ನು ಹೇಳಿ ಊಟಮಾಡಿಸಿದಂತೆ. ಪರ್ಯವಸಾನದಲ್ಲಿ ಅಧ್ಯಾತ್ಮವೇ. ಅದಕ್ಕೆ ಸಾಧನ ನಮ್ಮ ಕಣ್ಣಿಗೆ ಕಾಣುವ ವಿಷಯ. ಇಲ್ಲಿ ಶೀತದ ಗುಣ - ಚಲಿಸದಿರುವುದು, ಜಾಡ್ಯ. ಅದಕ್ಕೆ ಚಾಲನೆ ಕೊಡುವ ಪದಾರ್ಥವೇ ಅಗ್ನಿ. ಅಗ್ನಿಯ ಸಂಯೋಗದಿಂದ ನೀರು ಆವಿಯಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತದೆ. ಸಮುದ್ರದ ನೀರು ಆವಿಯಾಗಿ ಮೋಡವಾಗಿ ಬೇಕಾದ ಕಡೆ ಮಳೆಯಾಗಿ ಸುರಿಯುತ್ತದಷ್ಟೇ. ಶೀತವು ಜಾಡ್ಯ, ಅಜ್ಞಾನ, ಅಂಧಕಾರದ ಸಂಕೇತ. ಅಗ್ನಿಯು ಉತ್ಸಾಹ, ಜ್ಞಾನ, ಪ್ರಕಾಶದ ಸಂಕೇತ. ಭೌತಿಕ, ದೈವಿಕ ಮತ್ತು ಅಧ್ಯಾತ್ಮ ಎಂಬ ಮೂರು ಪರದೆಯನ್ನು ತೆರೆದು ಒಳಹೊಗಬೇಕು ಎಂಬುದು ನಮ್ಮೆಲ್ಲರ ಆಕಾಂಕ್ಷೆ. ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕವಾದ ಮೂರು ಸ್ತರಗಳಲ್ಲಿ ಇರುವ ಜಾಡ್ಯ ಅಥವಾ ಅಂಧಕಾರವನ್ನು ಇಲ್ಲವಾಗಿಸಬೇಕು. ಇದಕ್ಕೆ ಬೇಕು ಉತ್ಸಾಹ. ನಾವು ಮಾಡುವ ದಿನನಿತ್ಯದ ಕಾರ್ಯಗಳಲ್ಲಿ ಉತ್ಸಾಹವನ್ನು ತೋರಬೇಕು. ಆಗ ಆ ಕಾರ್ಯವು ಸತ್ಫಲವನ್ನು ನೀಡಲು ಸಾಧ್ಯ. ಮಾಡುವ ಕಾರ್ಯವು ನಿರುತ್ಸಾಹದಿಂದ ಕೂಡಿದ್ದರೆ ಕಾರ್ಯ ಹೇಗೆ ಸಮರ್ಪಕವಾಗಲು ಸಾಧ್ಯವಾದೀತು ಅಲ್ಲವೇ? ಆದ್ದರಿಂದ ಶೀತವೆಂಬ ಸ್ವಭಾವವನ್ನು ತೆಗೆಯಲು ಅಗ್ನಿಯು ಯಾವರೀತಿಯಾಗಿ ಸಹಾಯವನ್ನು ಮಾಡುತ್ತದೆಯೋ ಜ್ಞಾನವು ಅಜ್ಞಾನವನ್ನು ನಿವಾರಿಸುತ್ತದೆ. ವಿದ್ಯೆಯು ಅವಿದ್ಯೆಯನ್ನು ದೂರಮಾಡುತ್ತದೆ. ವಿವೇಕವು ಅವಿವೇಕವನ್ನು ನಾಶಮಾಡುತ್ತದೆ ಎಂಬ ತತ್ತ್ವಿಕವಾದ ವಿಷಯವನ್ನು ವಿವರಿಸಲು ಈ ಸಾಮಾನ್ಯವಾದ ಪ್ರಶ್ನೆಯನ್ನು ಇಲ್ಲಿ ಯಕ್ಷನು ಕೇಳಿದ್ದಾನೆ.

ಸೂಚನೆ : 25/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 43 Vyaasa Vikshita - 43 (ವ್ಯಾಸರ ಆಶೀರ್ವಾದ – ದ್ರುಪದನ ಸಂಕಲ್ಪVyasara Ashirvvda – Drupadana Sankalpa)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




 

ಪಾಂಚಾಲದತ್ತ ಸಾಗುತ್ತಿದ್ದ ವಿಪ್ರರು ಪಾಂಡವರಿಗೆ ಇನ್ನಿಷ್ಟು ಹೀಗೆ ತಿಳಿಯಹೇಳಿದರು.

ಒಬ್ಬನೆಂದನು: ಪಾಂಚಾಲಕ್ಕೆ ಹಲವು ಮಂದಿ ರಾಜರೂ ರಾಜಪುತ್ರರೂ ನಾನಾದೇಶಗಳಿಂದ ಬರುವರು. ಅವರುಗಳೆಲ್ಲಾ ಯಜ್ಞಮಾಡತಕ್ಕವರು, ಯಜ್ಞಗಳಲ್ಲಿ ಭೂರಿಯಾದ (ಎಂದರೆ ಬಹಳವಾದ) ದಕ್ಷಿಣೆಯನ್ನು ಕೊಡತಕ್ಕವರು (ಅರ್ಥಾತ್, ಬಹಳ ಉದಾರಿಗಳು); ಸ್ವಾಧ್ಯಾಯಸಂಪನ್ನರು, ವ್ರತಶೀಲರು - ಎಂದೇ ಶುಚಿಯಾದವರು; ತರುಣರು, ರೂಪಸಂಪನ್ನರು; ಮಹಾರಥರು, ಅಸ್ತ್ರವಿದ್ಯಾನಿಪುಣರು. "ನಾವು ವಿಜಯಶಾಲಿಗಳಾಗಬೇಕು" ಎಂಬ ಮಹಾಕಾಂಕ್ಷೆಯಿಂದ ಅವರುಗಳು ನಾನಾದಾನಗಳನ್ನು ಮಾಡುವವರು. ಅಲ್ಲಿ ಸ್ವಯಂವರದರ್ಶನ, ಉತ್ಸವಾನಂದ - ಇವುಗಳನ್ನೂ ಅನುಭವಿಸಿ, ಬಳಿಕ ನಾವು ಮುಂದೆ ಸಾಗುವೆವು.

ಇನ್ನೊಬ್ಬನು ಹೀಗೆಂದನು: ಅಷ್ಟೇ ಅಲ್ಲ. ನಟರು ನರ್ತಕರು, ಮಲ್ಲರು, ಇವರುಗಳೂ ನಾನಾದೇಶಗಳಿಂದ ಬರುವರು. ನಮ್ಮೊಂದಿಗೆ ನೀವೂ ಈ ಕುತುಕಗಳನ್ನು ಕಾಣಬಹುದು. ಅವರು ಕೊಡುವ ದಾನಗಳನ್ನು ಸ್ವೀಕರಿಸಬಹುದು. ಬಳಿಕ ಹಿಂದಿರುಗಬಹುದು.

ಮತ್ತೊಬ್ಬನು ಹೀಗೆಂದನು: "ನೀವುಗಳೆಲ್ಲರೂ ದರ್ಶನೀಯರು, ದೇವತೆಗಳಂತೆಯೇ ಇರುವಿರಿ. ನಿಮ್ಮನ್ನು ಕಂಡ ಕೃಷ್ಣೆಯು (=ದ್ರೌಪದಿಯು) ನಿಮ್ಮಲ್ಲೊಬ್ಬರನ್ನು ವರನನ್ನಾಗಿ ವರಿಸಲೂ ಬಹುದು!"

ಭೀಮನತ್ತ ನೋಡುತ್ತಾ ಮತ್ತೊಬ್ಬನು, "ಈ ನಿಮ್ಮ ಸಹೋದರ ಆಕರ್ಷಕನಾಗಿದ್ದಾನೆ. ಹೇಗಿವೆ ಆ ಭುಜಗಳು! ಮಲ್ಲಯುದ್ಧಕ್ಕೆ ನಿಂತರೆ ಗೆಲುವನ್ನು ಸಾಧಿಸುವುದಷ್ಟೇ ಅಲ್ಲ, ಭೂರಿಯಾದ ಹಣವನ್ನು ಸಹ ಸಂಪಾದಿಸತಕ್ಕವನೇ. ಎಂದೇ ನಿಮ್ಮಗಳ ಸಂತೋಷವನ್ನು ಹೆಚ್ಚಿಸತಕ್ಕವನೇ" - ಎಂದನು.

ಅವರ ಮಾತುಗಳಿಗೆ ಪ್ರತಿಯಾಗಿ ಯುಧಿಷ್ಠಿರನು ಹೇಳಿದನು: ಈ ಪರಮಮಹೋತ್ಸವಕ್ಕೆ ನಿಮ್ಮಗಳೊಂದಿಗೇ ನಾವೂ ಬರುತ್ತೇವೆ - ಆ ಕನ್ಯೆಯ ಸ್ವಯಂವರವನ್ನೂ ನೋಡಲಿಕ್ಕಾಗಿಯೇ.

ಪಾಂಡವರು ಅವರೊಂದಿಗೆ ಪ್ರಯಾಣವನ್ನು ಬೆಳೆಸಿದರು. ದಾರಿಯಲ್ಲಿ ಮಹಾತ್ಮರಾದ ಶ್ರೀಕೃಷ್ಣದ್ವೈಪಾಯನರ (ಎಂದರೆ ವ್ಯಾಸಮಹರ್ಷಿಗಳ) ಸಂದರ್ಶನವಾಯಿತು. ಅವರಿಗೆ ವಂದಿಸಿ, ಅವರ ಆಶೀರ್ವಾದವನ್ನು ಪಡೆದು, ಮುಂದೆ ನಡೆದರು. ದಾರಿಯಲ್ಲಿ ರಮ್ಯವಾದ ಹಲವು ಕಾಡುಗಳನ್ನೂ ಸರಸ್ಸುಗಳನ್ನೂ ಕಂಡರು. ಅಲ್ಲಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ಮೆಲ್ಲನೆ ಸಾಗಿದರು. ಸ್ವಾಧ್ಯಾಯನಿರತರೂ ಶುಚಿಗಳೂ ಪ್ರಿಯವಾದಿಗಳೂ ಆದ ಪಾಂಡವರು ಪಾಂಚಾಲದೇಶವನ್ನು ಕೊನೆಗೆ ಸೇರಿದರು.

ಊರನ್ನೂ ಸ್ಕಂಧಾವಾರವನ್ನೂ ನೋಡಿದರು. ಒಬ್ಬ ಕುಂಬಾರನ ಮನೆಯಲ್ಲಿ ತಂಗಿದರು. ಹಿಂದಿನಂತೆ ಬ್ರಾಹ್ಮಣರ ವೇಷದಲ್ಲಿದ್ದುಕೊಂಡು ಭಿಕ್ಷೆಯಿಂದಲೇ ಜೀವನ ನಡೆಸಿದರು. ಹಾಗಾಗಿ, ಯಾರೊಬ್ಬರೂ ಅವರನ್ನು ಗುರುತಿಸದಾದರು.

ದ್ರೌಪದಿಯನ್ನು ಅರ್ಜುನನಿಗೇ ಕೊಡಬೇಕೆಂಬ ಆಸೆ ದ್ರುಪದನಿಗೆ. ಅದರೆ ಅದನ್ನು ಬಾಯಿಬಿಟ್ಟು ಯಾರಿಗೂ ಹೇಳಲಾರ. ಅರ್ಜುನನನ್ನು ಹುಡುಕಿಸಲೆಂದೇ,  ಮತ್ತಾರೂ ಬಗ್ಗಿಸಲಾಗದ ಬಿಲ್ಲೊಂದನ್ನು ದ್ರುಪದ ಮಾಡಿಸಿದ; ಒಂದು ಕೃತ್ರಿಮವಾದ ಆಕಾಶಯಂತ್ರವೊಂದನ್ನು ಸಹ ನಿರ್ಮಿಸಿದ; ಅದರೊಂದಿಗೆ ಒಂದು ಲಕ್ಷ್ಯವನ್ನೂ ಅದರಲ್ಲಿ ಸಿದ್ಧಪಡಿಸಿದ; ಮತ್ತು ಹೀಗೊಂದು ಘೋಷಣೆಯನ್ನೂ ಮಾಡಿಸಿದ: ಇದೋ ಇಲ್ಲಿ ಬಿಲ್ಲಿದೆ, ಇಲ್ಲಿ ಬಾಣಗಳಿವೆ; ಈ ಬಿಲ್ಲಿಗೆ ಹೆದೆಯೇರಿಸಿ ಈ ಬಾಣಗಳಿಂದ ಲಕ್ಷ್ಯವನ್ನು ಯಾವನು ಭೇದಿಸುವನೋ ಅವನು ನನ್ನ ಮಗಳನ್ನು ವಿವಾಹವಾಗುವನು - ಎಂದು.

ಹೀಗೆ ಹೇಳಿ ತನ್ನ ಮಗಳ ಸ್ವಯಂವರವನ್ನು ಘೋಷಿಸಿದ.  ಅದನ್ನು ಕೇಳಿ ರಾಜರೆಲ್ಲರೂ ಅಲ್ಲಿಗೆ ಬಂದು ಸೇರಿದರು. ಸ್ವಯಂವರವನ್ನು ನೋಡಲೆಂದು ಮಹಾತ್ಮರಾದ ಋಷಿಗಳೂ ಆಗಮಿಸಿದರು. ದುರ್ಯೋಧನ ಮೊದಲಾದ ಕುರುವಂಶದವರೂ ಹಾಗೂ ಕರ್ಣನೂ ಬಂದಿದ್ದರು. ಮಹಾತ್ಮನಾದ ದ್ರುಪದನು ರಾಜಗಣಗಳಿಗೆ ಸರ್ವಸತ್ಕಾರವನ್ನೂ ನಡೆಸಿದನು.

ಸೂಚನೆ : 25/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Sunday, June 18, 2023

ಅಷ್ಟಾಕ್ಷರೀ​ - 37 ಯೋಗೇನಾಂತೇ ತನುತ್ಯಜಾಂ (Astakshara Darshana 37 Yogenante Tanutyajam)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಇದೋ ಮತ್ತೆ ಬರುತ್ತಿದೆ, ಅಂತಾರಾಷ್ಟ್ರಿಯ ಯೋಗ ದಿನ - ಈ ತಿಂಗಳ ೨೧ಕ್ಕೆ. ಯೋಗದ ಬಗ್ಗೆ ಮತ್ತೊಮ್ಮೆ ನಮ್ಮ ಚಿಂತನ-ಲಹರಿಯನ್ನು ಹರಿಸಲು ಇದೊಂದು ಸುಸಮಯ.

"ಸಮಸ್ಯೆಯೊಂದು, ಪರಿಹಾರಗಳು ಸಾವಿರಾರು; ಯಾವುದು ಸಮವೋ ಯಾವುದು ಬೆಸವೋ, ಬಲ್ಲವರಾರು?" - ಎಂದು ಭ್ರಾಂತಿಬರಿಸುವ ವಿಷಯವೊಂದಿದ್ದರೆ, ಅದು "ಜೀವನವನ್ನು ಹೇಗೆ ನಡೆಸಬೇಕು?" ಎಂಬುದೇ. ಸಾವಿರಾರು ಮತಿಗಳು, ಸಾವಿರಾರು ಮತಗಳು! ಯಾವ ಗುರಿ ಸರಿಯೋ ಯಾವ ಹಾದಿ ಹದವೋ ? ಭುಕ್ತಿಯು ಯುಕ್ತವೇ? ಮುಕ್ತಿಯು ಶಕ್ಯವೇ? – ಹೇಳಲಾರೆವು! ಬಯಸದೆ(?) ಹುಟ್ಟಿದ್ದಾಯಿತು, ಬಯಸಿ ಸಾಯುವುದು ತಪ್ಪೋ ಒಪ್ಪೋ? : ಗೊಂದಲ ಬಹುಮಂದಿಗೆ.

ಸಾಯುವ ಮಾತು ಬಂದಿತಲ್ಲವೆ? ಪ್ಲೇಟೋವಿನ ಸ್ಮರಣೆ ಬರುತ್ತದೆ. ಪಾಶ್ಚಾತ್ತ್ಯರಲ್ಲಿ ಹಲವು ಪ್ರಸಿದ್ಧಚಿಂತಕರ ಸಾವು ಅದೇನೋ ವಿಭಿನ್ನವಾದದ್ದು: ಸಾಕ್ರೆಟೀಸನು ಹೆಮ್ಲಾಕ್ ಕುಡಿಯುತ್ತ ಸತ್ತದ್ದು, ಹೊಡೆತ ತಿಂದು ಹೈಪಾಷಿಯಾ ಸಾವಿಗೀಡಾದದ್ದು, ಏಸು ಅಸು ನೀಗಿದ್ದು, ಬ್ರೂನೋ ಪ್ರಾಣ ತೆತ್ತದ್ದು, ಗೆಲಿಲಿಯೋ ಕೊನೆಕೊನೆಗೆ ವಿಲವಿಲನೆ ನರಳಿ ಮರಣಿಸಿದುದು – ಎಲ್ಲವೂ ವಿಚಿತ್ರ. ವಿಚಿತ್ರವೇನು, ಎಲ್ಲವೂ ಒಂದೇ ಬಗೆಯೇ: "ನನ್ನ ಮತವನ್ನು ನೀನೊಪ್ಪೆಯಲ್ಲವೇ? ಸಾಯಿ, ಪಾಪಿಬೆಪ್ಪನೇ" – ಎಂಬುದೊಂದೇ ಅಲ್ಲಿಯೆಲ್ಲರ "ಏಕಸೂತ್ರ"!

ಸಾಕ್ರೆಟೀಸನನ್ನು ಕುರಿತಾದ  ಮಾತುಗಳ ನಡುವೆ ಪ್ಲೇಟೋವಿನ ಮಾರ್ಮಿಕವಾದ ಮಾತೊಂದು ಬರುತ್ತದೆ: "ಬದುಕುವ ಕಲೆಯೆಂದರೆ ಅದು ಸಾಯುವ ಕಲೆಯೇ ಸರಿ". ಪ್ಲೇಟೋವಿಗೆ ಆ ಚಿಂತೆಯದೆಂತು ಬಂತೋ, ಸಾವಿಗೊಂದು ಸಿದ್ಧತೆ ಬೇಕೆಂಬುದು ಭಾರತೀಯಚಿಂತನೆಗೆ ಬಹಿರ್ಭೂತವಾದುದಲ್ಲ(= ಹೊರತಾದುದಲ್ಲ).

ಗೀತೆ ಹೇಳುವುದಲ್ಲವೇ?: ಹುಟ್ಟಿದವರೆಲ್ಲ ಸಾಯತಕ್ಕದ್ದೇ; ಸತ್ತವರು ಹುಟ್ಟತಕ್ಕದ್ದೇ. ಈ ಹುಟ್ಟು-ಸಾವುಗಳ ವಿಷವರ್ತುಲಕ್ಕೆ ವಿಲಯವೇ ಇಲ್ಲವೆ? ಇದ್ದರೆ ಹೇಗೆ? - ಎಂಬ ಆಲೋಚನೆ ಅಸಾಧುವೇನಲ್ಲ. ಸದಾ ಸಪ್ಪೆಮೋರೆ ಹಾಕಿಕೊಂಡು ತೆಪ್ಪಗಿರುವುದನ್ನು ನಮ್ಮ ಸಂಸ್ಕೃತಿ ಎಂದೂ ಬೋಧಿಸಿಲ್ಲ."ಸೊಗಸಾಗಿ ಬದುಕು, ಸೊಗಸಾಗಿ ಸಾಯಿ ಕೂಡ"-ಗಳನ್ನೇ ಇಲ್ಲಿ ಹೇಳಿರುವುದು!

ಸೊಗಸಾಗಿ ಬದುಕೆಂಬುದನ್ನು ನಮ್ಮವರು ನಡೆದೇ ತೋರಿಸಿದ್ದಾರೆ: ನಮ್ಮಲ್ಲಿಯ ಹಬ್ಬಗಳಿಗೆ ಕಡಿಮೆಯೋ? ಹಬ್ಬಗಳಲ್ಲಿಯ ಸಡಗರಗಳಿಗೆ ಕಡಿಮೆಯೋ? ನಮ್ಮ ವೇಷಭೂಷಣಗಳಿಗೆ ಮಿತಿಯುಂಟೇ? ಆಹಾರ-ತಿನಿಸುಗಳಿಗೆ ಕೊನೆಯುಂಟೇ? ಉಟ್ಟು ಸುಖಿಸು, ತೊಟ್ಟು ತೋಷಿಸು: ಉಂಡು ಉಣಿಸಿ ತಣಿದು ತಣಿಸುವ ಸೊಗಸು ನಮ್ಮ ದೇಶದ್ದು. ಲೂಟಿಕಾರ ಮೊಘಲರ ದುರಾಕ್ರಮಣದ ಪರ್ಯಂತ ಇಲ್ಲಿದ್ದ ಸುಖ-ಸಮೃದ್ಧಿಗಳು ಆ ದರಿದ್ರಗೃಧ್ರಗಳ ಕಣ್ಗಳನ್ನು ಅದೆಷ್ಟು ಕುಕ್ಕಿದವೋ?

ರಘುವಂಶದ ಅರಸರನ್ನು ಚಿತ್ರಿಸುತ್ತಾ ಕಾಳಿದಾಸನು ಹೇಳುವುದು - ಅವರು ಯೌವನದಲ್ಲಿ ವಿಷಯಸುಖಗಳನ್ನು ಅನುಭವಿಸುತ್ತಿದ್ದರು - ಎಂಬುದನ್ನು. ಮುಪ್ಪಾವರಿಸಿದಾಗ ಮುನಿಜೀವನವನ್ನು ಹಿಡಿದು, ಕೊನೆಗೆ ಯೋಗಕ್ರಮದಿಂದ ದೇಹವನ್ನು ಬಿಟ್ಟುಹೋಗುತ್ತಿದ್ದರು – ಎಂಬುದನ್ನು: ಯೋಗೇನಾಂತೇ ತನುತ್ಯಜಾಂ.

ಬಯಸಿದರೆ ಸಾವು ಬಂದೀತೇ? – ಎನ್ನುತ್ತೇವಲ್ಲವೆ? ಆದರೆ ಯೋಗಸಿದ್ಧರಿಗೆ ಹಾಗಲ್ಲ. ಅವರಿಗೆ ಪ್ರಾಣವೆಂಬುದು ಹತೋಟಿಯಲ್ಲಿರುವುದು. ಎಂದೇ ದಕ್ಕತಕ್ಕದ್ದು, ಪ್ರಾಣತ್ಯಾಗವನ್ನು ಸಂಕಲ್ಪಪೂರ್ವಕವಾಗಿ ಮಾಡುವ ಸಾಮರ್ಥ್ಯ. ಪ್ರಾಣವನ್ನು ಬಿಡುವುದೆಂದರೆ ದೇಹವನ್ನೂ ಬಿಟ್ಟಂತೆಯೇ. ಉತ್ತರಾಯಣಕ್ಕಾಗಿ ಕಾದಿದ್ದು, ಆ ಸಮಯಕ್ಕೆ ಪ್ರಾಣಬಿಟ್ಟ  ಇಚ್ಛಾಮರಣಿಗಳಾದ ಭೀಷ್ಮರ ಬಗ್ಗೆ ಕೇಳಿಲ್ಲವೆ? ಕೊನೆಗಾಲದಲ್ಲಿ ಈ ಪರಿಯಲ್ಲಿ ಪ್ರಾಣತೊರೆದವರು ಜನನ-ಮರಣಗಳ ವಿಷವರ್ತುಲವನ್ನು ಮೀರುವರು.

"ಆರ್ಯಭಾರತೀಯರ ಜೀವನಪದ್ಧತಿಯ ಆದಿ-ಮಧ್ಯ-ಅಂತಗಳೆಂತು? – ಎಂಬುದನ್ನು ಕಾಳಿದಾಸನು ಈ ಶ್ಲೋಕದ ಮೂಲಕ ತಿಳಿಸಿದ್ದಾನೆ." - ಎಂದು ಜ್ಞಾಪಿಸುತ್ತಿದ್ದರು, ಶ್ರೀರಂಗಮಹಾಗುರುಗಳು: ಜೀವನದ ಬಗ್ಗೆ ಸಮಗ್ರವಾದ ನೋಟವೀವ ವಿದ್ಯೆ ಮೊಟ್ಟಮೊದಲು, ಶೈಶವದಲ್ಲಿ;  ವಿಷಯಸುಖ ಯೌವನದಲ್ಲಿ; ಮುನಿವೃತ್ತಿ ವಾರ್ಧಕದಲ್ಲಿ; ಯೋಗದ್ವಾರಾ ಇಚ್ಛಾಪೂರ್ವಕ ದೇಹತ್ಯಾಗ ಕೊನೆಯಲ್ಲಿ, ಕಟ್ಟಕಡೆಯಲ್ಲಿ!

ದಾಕ್ಷಾಯಣಿಯು ಸಹ ಯೋಗದಿಂದಲೇ ತನ್ನ ಶರೀರವನ್ನು ತ್ಯಜಿಸಿ(ಮತ್ತೆ ಪಾರ್ವತಿಯಾಗಿ ಜನಿಸಿ)ದಳು – ಎನ್ನುತ್ತದೆ, ಕುಮಾರಸಂಭವ. ರಘುವಂಶದ ಅರಸರಿಗೂ ಹೀಗೆಮಾಡುವುದು ಸಾಧ್ಯವಾಗಿತ್ತು ಎನ್ನುತ್ತದೆ, ರಘುವಂಶ.

ಅಲ್ಲಿಗೆ, ಅನವರತ ಕಾರ್ಯಭರಿತರಾದ ಅರಸರಿಗೆ ಸಹ ಸಾಧ್ಯವಾಗಿತ್ತು ಈ ವಿದ್ಯೆ! ಇನ್ನು ಇತರರಿಗಾಗದೇ? ಭವ್ಯವಾಗಿ ಬದುಕಿ ಬಾಳಲು ಬೇಕು ಯೋಗ; ಸೊಗಸಾಗಿ ಸಾಯಲಿಕ್ಕೂ ಬೇಕಾದದ್ದೇ ಯೋಗ!

ಆದರ್ಶಕ್ರಮವಿದು: ಅಂತಕಾಲದಲ್ಲಿ ದೇಹವನ್ನು ಯೋಗದ್ವಾರಾ ಬಿಡಬೇಕು; ಅಲ್ಲಿಯ ತನಕ ಯೋಗವನ್ನು ಮಾತ್ರ ಬಿಡಬಾರದು! ಜೀವಿತಕಾಲವಾಗಲಿ, ಮರಣಕಾಲವಾಗಲಿ, ಉತ್ತಮಗತಿಯನ್ನು ಕಾಣಿಸುವ ವಿದ್ಯೆಯೇ ಯೋಗ.


ಸೂಚನೆ: 18/06/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 42 ಧೌಮ್ಯರ ಸ್ವಸ್ತಿವಾಚನ, ಪಾಂಚಾಲದತ್ತ ಪಾಂಡವರ ಪಯಣ (yaasa Vikshita - 42Dhaumyara Svastivacana, Paccaladatta Pandavara payana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಆ ಬಳಿಕ ಆ ಗಂಧರ್ವನೂ ಪಾಂಡವರೂ ಪರಸ್ಪರ ಬೀಳ್ಕೊಟ್ಟರು. ಭಾಗೀರಥೀತೀರವನ್ನು ತೊರೆದ ಪಾಂಡವರು ಉತ್ಕೋಚಕವೆಂಬ ತೀರ್ಥಕ್ಕೆ ಹೋದರು. ಅಲ್ಲಿ ಧೌಮ್ಯರನ್ನು ಕಂಡರು. ನಮ್ಮೆಲ್ಲರಿಗೆ ತಾವೇ ಪುರೋಹಿತರಾಗಬೇಕು" ಎಂದು ಅವರನ್ನು ಪ್ರಾರ್ಥಿಸಿಕೊಂಡರು.

ವೇದಜ್ಞರಾದ ಧೌಮ್ಯರು ಅವರ ಪ್ರಾರ್ಥನೆಗೆ ಒಪ್ಪಿದರು. ಆಗಂತೂ ಪಾಂಡವರ ವಿಶ್ವಾಸ ವರ್ಧಿಸಿತು. ಈ ವಿಪ್ರನನ್ನು ಮುಂದಿರಿಸಿಕೊಂಡು ಹೆಜ್ಜೆ ಹಾಕಿದಲ್ಲಿ ಐಶ್ವರ್ಯವೂ ರಾಜ್ಯವೂ ಲಭಿಸುವುವು; ಅಷ್ಟೇ ಅಲ್ಲ, ಸ್ವಯಂವರದಲ್ಲಿ ಪಾಂಚಾಲಿಯೂ (ಎಂದರೆ ದ್ರೌಪದಿಯೂ) ದೊರಕುವವಳೇ ಸರಿ - ಎಂದವರು  ಭಾವಿಸಿದರು. ಅಂತಹ ಗುರುವೂ ಪುರೋಹಿತರೂ ಆದ ಧೌಮ್ಯರು ದೊರೆತರಾಗಿ ತಾವಿನ್ನು ಸನಾಥರಾದೆವೆಂಬಂತಾಯಿತು, ಪಾಂಡವರಿಗೆ (ಸನಾಥ ಎಂದರೆ ಸಂರಕ್ಷಕನೊಬ್ಬನನ್ನು ಹೊಂದಿರುವವವನು).

ಧೌಮ್ಯರು ಉದಾರಮತಿಗಳು, ವೇದಾರ್ಥಜ್ಞರು. ಪಾಂಡವರನ್ನು ಅವರು ಧರ್ಮಕಾರ್ಯದಲ್ಲಿ ತೊಡಗಿಸಿದರು. ಪಾಂಡವರಾದರೂ ವೀರರು; ಅವರ ಬುದ್ಧಿಯೇನು. ವೀರ್ಯವೇನು, ಬಲವೇನು, ಉತ್ಸಾಹವೇನು! - ಇವೆಲ್ಲವನ್ನುಳ್ಳ ದೇವತೆಗಳೇ ಇವರು! - ಎಂದು ಅತ್ತ ಧೌಮ್ಯರೂ ಭಾವಿಸುವಂತಾಯಿತು; ಸ್ವಧರ್ಮದಿಂದಲೇ ತಮ್ಮ ರಾಜ್ಯವನ್ನು ಪಾಂಡವರು ಮತ್ತೆ ಗಳಿಸಿಕೊಳ್ಳುವವರೇ – ಎಂದನಿಸಿತು ಅವರಿಗೆ.

ಧೌಮ್ಯರು ಪಾಂಡವರಿಗೆ ಸ್ವಸ್ತಿವಾಚನವನ್ನು ಮಾಡಿದರು. ಪಾಂಡವರೂ ಮೊದಲಂದುಕೊಂಡಂತೆ ದ್ರೌಪದೀಸ್ವಯಂವರದತ್ತ ಹೋಗಲು ಮನಸ್ಸು ಮಾಡಿದರು..

ನರಶಾರ್ದೂಲರಾದ (ಎಂದರೆ ನರಶ್ರೇಷ್ಠರಾದ) ಪಂಚಪಾಂಡವರೂ ಆ ಪಾಂಚಾಲದೇಶ ಮತ್ತು ಅಲ್ಲಿ ನಡೆಯುವ ದ್ರೌಪದೀಸ್ವಯಂವರ-ಮಹೋತ್ಸವ - ಇವುಗಳನ್ನು ನೋಡಲಿಕ್ಕಾಗಿ, ಹೊರಟರು. ತಾಯಿಯಾದ ಕುಂತಿಯೊಂದಿಗೆ ಹೋಗುತ್ತಿರುವಾಗ, ಹಲವಾರು ಬ್ರಾಹ್ಮಣರು ಒಟ್ಟಿಗೇ ಹೋಗುತ್ತಿರುವುದನ್ನೂ ಅವರು ಕಂಡರು. ಆಗ ಆ ಬ್ರಾಹ್ಮಣರೇ ಈ ಬ್ರಹ್ಮಚಾರಿಗಳಾದ ಪಾಂಡವರನ್ನು ಮಾತನಾಡಿಸಿದರು. "ನೀವು ಎಲ್ಲಿಗೆ ಹೋಗುತ್ತಿದ್ದೀರಿ? ಎಲ್ಲಿಂದ ಬರುತ್ತಿದ್ದೀರಿ?" ಎಂದರು. ಅದಕ್ಕೆ ಯುಧಿಷ್ಠಿರನು, "ಏಕಚಕ್ರನಗರಿಯಿಂದ ಬರುತ್ತಿದ್ದೇವೆ. ನಾವು ಸೋದರರು; ನಮ್ಮ ತಾಯಿಯೊಂದಿಗೆ ಒಟ್ಟಿಗೇ ಹೋಗುತ್ತಿದ್ದೇವೆ" - ಎಂದನು.

ಆಗ ಆ ಬ್ರಾಹ್ಮಣರು ತಮತಮಗೆ ತಿಳಿದಿದ್ದನ್ನು ಹೇಳಿದರು: ಮಹತ್ತಾದ ಸಿರಿಸಂಪತ್ತಿನ ಮಹಾಸ್ವಯಂವರವೊಂದು ದ್ರುಪದನ ಅರಮನೆಯಲ್ಲಿ ಇನ್ನೇನು ನಡೆಯಲಿರುವುದು. ಅಲ್ಲಿಗೆ ನೀವು ಹೋಗಿ. ಗುಂಪಾಗಿ ಹೋಗುತ್ತಿರುವ ನಾವು ಸಹ ಅತ್ತಲೇ ಹೋಗುತ್ತಿರುವುದು - ಎಂದೊಬ್ಬ. ಅಲ್ಲಾಗಲಿರುವ ಸ್ವಯಂವರವು ದ್ರೌಪದಿಯದು. ಅವಳು ಯಾಜ್ಞಸೇನಿ (ಎಂದರೆ ಯಜ್ಞಸೇನನ ಮಗಳು). ಯಜ್ಞವೇದಿಕೆಯ ಮಧ್ಯದಿಂದ ಜನಿಸಿದವಳು (ವೇದಿಮಧ್ಯಾತ್ ಸಮುತ್ಪನ್ನಾ)! ಕಮಲದ ದಳಗಳಂತಿರುವ ಕಣ್ಣುಗಳುಳ್ಳವಳು. ಅವಳ ಅಂಗಗಳು ಅನವದ್ಯ (ಎಂದರೆ ದೋಷರಹಿತ; ಅವದ್ಯವೆಂದರೆ ದೋಷ). ಆಕೆ ಸುಕುಮಾರಿ, ಆದರೂ ಮನಸ್ವಿನೀ (ಎಂದರೆ ದೃಢಮನಸ್ಕಳು) - ಎಂದಿನ್ನೊಬ್ಬ. 

ಇನ್ನು ಅವಳ ಅಣ್ಣ ಧೃಷ್ಟದ್ಯುಮ್ನನು ದ್ರೋಣನ ಶತ್ರು. ಪ್ರತಾಪಶಾಲಿ. ಹುಟ್ಟುವಾಗಲೇ ಖಡ್ಗ-ಕವಚಗಳನ್ನೂ ಬಿಲ್ಲು ಬಾಣಗಳನ್ನೂ ಧರಿಸಿಯೇ ಜನಿಸಿರುವವನು.ಪ್ರಜ್ವಲಿಸುತ್ತಿದ್ದ ಅಗ್ನಿಯಲ್ಲಿ ಜನಿಸಿದ ಆತನಂತೂ ಬೆಂಕಿಯಂತೆಯೇ ಸರಿ! - ಎಂದು ಮಗದೊಬ್ಬ. ಆತನ ಸೋದರಿಯಾದ ದ್ರೌಪದಿ ಕೃಶವಾದ ನಡುವುಳ್ಳವಳು. ಅವಳ ಶರೀರದಿಂದ ಹೊಮ್ಮುವ ಗಂಧವು ಒಂದು ಕ್ರೋಶದಷ್ಟು ದೂರದವರೆಗೂ ಪಸರಿಸುವುದು! ಅವಳ ಸ್ವಯಂವರವೇ ಈಗಾಗಲಿರುವುದು. ಅವಳನ್ನೂ ಆ ದಿವ್ಯಮಹೋತ್ಸವವನ್ನು ನೋಡಲೆಂದೂ ನಾವು ಹೊರಟಿರುವುದು – ಎಂದು ಇನ್ನೊಬ್ಬ ಹೇಳಿದನು.

ಸೂಚನೆ : 18/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ41(Yaksha prashne 41)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 41 ಹುಟ್ಟಿದವನು ಮತ್ತೆ ಮತ್ತೆ ಹುಟ್ಟುವವನು ಯಾರು ?

ಉತ್ತರ - ಚಂದ್ರ

ಈ ಪ್ರಪಂಚವು ಚರ ಮತ್ತು ಅಚರ ಎಂಬ ಎರಡು ವಿಧವಾದದ್ದು. ಅಚರವಾದುದರಿಂದ ಚರದ ಸೃಷ್ಟಿ. ಇವುಗಳು ಪರಸ್ಪರ ಒಂದು ಇನ್ನೊಂದನ್ನು ಆಶ್ರಯಿಸಿಕೊಂಡೇ ಇರುತ್ತದೆ. ಇಲ್ಲಿ ಚರವಾದದ್ದು ಎಂದರೆ ಅಶಾಶ್ವತವಾದ ಬದುಕು. ಅಚರ ಎಂದರೆ ಶಾಶ್ವತವಾದ ಬದುಕು. ಎರಡೂ ಇದ್ದಾಗ ಮಾತ್ರ ಎರಡಕ್ಕೂ ಬೆಲೆ ಮತ್ತು ಅಸ್ತಿತ್ವ. ಭತ್ತದ ಕಟಾವು ಆದಮೇಲೆ ಅದನ್ನು ಕಣಕ್ಕೆ ತಂದು ಹಾಕುತ್ತೇವೆ. ಅಲ್ಲಿ ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸಬೇಕಾತ್ತದೆ. ಆಗ ಕಣದಲ್ಲಿ ಂದು ಮೇಟಿಕಂಬವನ್ನು ನೆಟ್ಟಿಡುತ್ತಾರೆ. ಅದಕ್ಕೆ ಎತ್ತುಗಳನ್ನು ಕಟ್ಟಿ ತಿರುಗಿಸುತ್ತಾರೆ. ಇಲ್ಲಿ ಎತ್ತುಗಳು ಮಾತ್ರ ತಿರುಗುತ್ತವೆ ಹೊರತು ಮೇಟಿಕಂಬವಲ್ಲ. ಒಂದು ವೇಳೆ ಕಂಬವೂ ತಿರುತ್ತದೆ ಎಂದು ಭಾವಿಸಿದರೆ ಎತ್ತುಗಳು ಯಾವುದನ್ನು ನಂಬಿ ಅಲ್ಲೇ ಸುತ್ತುಹಾಕುತ್ತವೆ! ಅಲ್ಲವೇ? ಮನೆಯೆಂಬುದು ಸ್ಥಿರವಾಗಿದ್ದರಿಂದಲೇ ಎಲ್ಲರೂ ಮನೆಗೆ ಬರಬೇಕೆಂದು ಬಯಸುತ್ತಾರೆ. ಮನೆಯೇ ಮನಬಂದಕಡೆ ಓಡಾಡುವಂತಿದ್ದರೆ!? ಶಾಶ್ವತವಾದ ಬದುಕನ್ನು ನಂಬಿ ಬಾಳಾತಮಾಡುವಂತಿದ್ದರೆ ಮಾತ್ರವೇ ಅದಕ್ಕೊಂದು ಅರ್ಥವಿದೆ ಎಂಬ ವಿಷಯವನ್ನು ಮನಸ್ಸಿಗೆ ತಂದುಕೊಡಲೆಂದೇ ಯಕ್ಷನು ಧರ್ಮರಾಜನಿಂದ ಈ ಉತ್ತರವನ್ನು ನಿರೀಕ್ಷಿಸಿರಬಹುದು. 

ಮತ್ತೆ ಮತ್ತೆ ಹುಟ್ಟುವವರು ಯಾರು? ಎಂಬುದು ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ- ಚಂದ್ರ ಎಂದು. ಇಲ್ಲಿನ ಉತ್ತರವನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಹಿಂದಿನ ಉತ್ತರವನ್ನು ಮನಸ್ಸಿಗೆ ತಂದುಕೊಳ್ಳಬೇಕು. ಸ್ಥಿರವಾದುದು ಸೂರ್ಯ ಅಥವಾ ಆತ್ಮಾ. ಅದು ಒಂದೇ. ಎಂದೂ ಹುಟ್ಟುವುದಿಲ್ಲ. ಆದ್ದರಿಂದ ಕೊನೆಯೆಂಬುದೂ ಇಲ್ಲ. ಅದಕ್ಕೆ ಅದನ್ನು ನಿತ್ಯ ಎನ್ನುತ್ತಾರೆ. ಸೂರ್ಯನೇ ಚಂದ್ರನ ವೃದ್ಧಿಕ್ಷಯಗಳಿಗೆ ಕಾರಣವಲ್ಲವೇ? ಆತ್ಮದಿಂದಲೇ ಮನಸ್ಸು ಹುಟ್ಟಿತು. ಆತ್ಮಸ್ಥಾನದಲ್ಲಿರುವುದು ಸೂರ್ಯನಾದರೆ ಮನಸ್ಸಿನ ಸ್ಥಾನದಲ್ಲಿರುವುದು ಚಂದ್ರ. ಮನಸ್ಸಿನಿಂದ ಎಲ್ಲಾ ತತ್ತ್ವಗಳೂ ಹುಟ್ಟುತ್ತವೆ. ಮತ್ತು ಹುಟ್ಟಿದ ಎಲ್ಲಾತತ್ತ್ವಗಳೂ ಅಲ್ಲೇ ಲಯವಾಗುತ್ತವೆ. ಈ ಸಾರಾಂಶವನ್ನು ಇಲ್ಲಿನ ಉತ್ತರದಲ್ಲಿ ಗಮನಿಸಬಹುದು. 

ಮಾನವನ ಪ್ರತಿಯೊಂದು ವ್ಯವಹಾರವೂ ಮನಸ್ಸಿನ ಕಾರಣದಿಂದಲೇ ಆಗುತ್ತಿರುತ್ತದೆ. ಆಲೋಚನೆಯಾಗಲಿ ವಿಸ್ಮರಣೆಯಾಗಲಿ, ಆನಂದವಾಗಲಿ, ದುಃಖವಾಗಲಿ ಎಲ್ಲವೂ ಮನಸ್ಸಿನ ಕಾರಣದಿಂದಲೇ. ಮನಸ್ಸು ಆತ್ಮದ ಸಂಬಂಧವನ್ನು ಪಡೆದಾಗ ಮಾತ್ರ ಅನುಭವವು ಬರುತ್ತದೆ ಎಂದು ಶಾಸ್ತ್ರಗಳು ಸಾರುತ್ತವೆ. ಆತ್ಮವು ಮನಸ್ಸಿನ ಜೊತೆ ಸಂಪರ್ಕವನ್ನು ಹೊಂದುತ್ತದೆ. ಮನಸ್ಸು ಇಂದ್ರಿಯಗಳ ಜೊತೆ, ಇಂದ್ರಿಯಗಳು ಅರ್ಥದ ಜೊತೆ, ಹೀಗೆ ಆತ್ಮ ಮತ್ತು ಪದಾರ್ಥಗಳ ಸಂಪರ್ಕವು ಮನಸ್ಸಿನ ಮಾಧ್ಯಮದಿಂದಲೇ ಆಗುತ್ತದೆ. ಇದನ್ನೇ ವೇದವೂ " ಚಂದ್ರಮಾ ಮನಸೋ ಜಾತಃ। ಚಂದ್ರಃ ಮನೋ ಭೂತ್ವಾ ।" ಇತ್ಯಾದಿಯಾಗಿ ಹೇಳುತ್ತಿದೆ. ಚಂದ್ರನ ಉದಯಾಸ್ತಗಳೇ ಜೀವಿಯ ಜೀವನನಿರ್ವಹಣೆಗೆ ಮೂಲ. ಸಸ್ಯಗಳು ತಮ್ಮಲ್ಲಿ ಓಷಧೀಯಗುನಗಳನ್ನು ಪಡೆದು ಪೂರ್ಣವಾಗುವುದೂ ಇದೇ ಚಂದ್ರನಿಂದಲೇ. ಚಂದ್ರನಿಲ್ಲದೆ ಸೃಷ್ಟಿಯ ಯಾವ ಕಾರ್ಯವೂ ಅಸಾಧ್ಯ. ಹಾಗಾಗಿ  ಚಂದ್ರನೇ ಸೃಷ್ಟಿಗೆ ಕಾರಣ. ಪುನರುತ್ಪತ್ತಿಗೆ ಮೂಲಕಾರಣ. ಅಂತೆಯೇ ಚಂದ್ರತತ್ತ್ವದಿಂದಲೇ ಹುಟ್ಟಿದ ಮನಸ್ಸಿನಿಂದಲೇ ಪ್ರತಿಯೊಂದು ವ್ಯವಹಾರವೂ ಆರಂಭವಾಗುವುದು, ಮುಂದುವರಿಯುವುದು ಮತ್ತು ಕೊನೆಗೊಳ್ಳುವುದು. ಇದೇ ಉತ್ತರವನ್ನು ಮನಸ್ಸಿನಲ್ಲಿಟ್ಟುಕೊಂಡು ಚಂದ್ರನು ಮಾತ್ರವೇ ಮತ್ತೆ ಹುಟ್ಟನ್ನು ಪಡೆಯುವಂತವನು ಎಂಬ ಉತ್ತರವನ್ನು ಧರ್ಮರಾಜನು ಇಲ್ಲಿ ನೀಡಿದ್ದು ಸೊಗಸಾಗಿ ಕಾಣುತ್ತದೆ. 

 ಸೂಚನೆ : 18/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, June 16, 2023

ಮಾಂಡವ್ಯ ಋಷಿಯ ಆದರ್ಶ (Mandavya Rsiya Adarsha)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ಮಾಂಡವ್ಯ ಋಷಿಗಳು  ತಮ್ಮ ಆಶ್ರಮದಲ್ಲಿ ಧ್ಯಾನವನ್ನು ಮಾಡುತ್ತಾ ಕುಳಿತಿರುವರು. ಆಗ ಅಲ್ಲಿಗೆ ಕೆಲವು ಕಳ್ಳರು ತಮ್ಮ ಕದ್ದಮಾಲಿನೊಂದಿಗೆ ಓಡೋಡಿ ಬಂದು, ಆಶ್ರಮದ ಒಂದು ಜಾಗದಲ್ಲಿ ಕದ್ದಮಾಲನ್ನು ಬಚ್ಚಿಟ್ಟು, ಮತ್ತೊಂದು ಕಡೆ ಅವಿತುಕೊಳ್ಳುವರು. ಕಳ್ಳರನ್ನು ಹಿಡಿಯಲು ಹಿಂಬಾಲಿಸಿದ್ದ ರಾಜಭಟರು ಆ ಆಶ್ರಮಕ್ಕೂ ಬರುವರು. ಕದ್ದ ಮಾಲನ್ನು ವಶಪಡಿಸಿಕೊಂಡು, ಕಳ್ಳರನ್ನು ಹಿಡಿಯುವರು.  ಈ ವಿಷಯವೇ ತಿಳಿಯದ ಮಾಂಡವ್ಯರನ್ನು ಸಹ ಕಳ್ಳರ ಗುರುವೆಂದು ಭಾವಿಸಿ, ಹಿಡಿದು ರಾಜನ ಬಳಿಗೆ ಕರೆದುಕೊಂಡು ಹೋಗುವರು. 

ಕದ್ದ ಮಾಲಿನ ಸಮೇತ ಸಿಕ್ಕಿದ್ದರಿಂದ ರಾಜನು ಪ್ರತ್ಯೇಕವಾಗಿ ವಿಚಾರಣೆ ಮಾಡದೆ, 'ಅವರನ್ನು ಶೂಲಕ್ಕೆ ಏರಿಸಿ' ಎಂಬ ತೀರ್ಪು ನೀಡುವನು. ಅದರಂತೆ ರಾಜಭಟರು ಎಲ್ಲರನ್ನೂ ಶೂಲಕ್ಕೆ ಏರಿಸುವರು. ಮನುಷ್ಯ ಸಹಜವಾದ ಯಾತನೆಯಿಂದ ಕಳ್ಳರೆಲ್ಲರೂ ಸತ್ತು ಹೋಗುವರು. 

ಆಶ್ಚರ್ಯವೆಂದರೆ ಮಾಂಡವ್ಯರು ಮಾತ್ರ ಯಾತನೆಯಿಂದ ಬಳಲದೆ ಶಾಂತ ಚಿತ್ತರಾಗಿ ಭಗವಂತನ ಸ್ಮರಣೆಯೊಂದಿಗೆ ಇರುವುದನ್ನು ರಾಜಭಟರು ಗಮನಿಸುವರು. ಈ ವಿಷಯವನ್ನು ರಾಜನಿಗೆ ತಿಳಿಸಲು, ರಾಜನೂ ಅಲ್ಲಿಗೆ ಬರುವನು. ಮಾಂಡವ್ಯರನ್ನು ಕಂಡು ಇವರು ಮಹಾತ್ಮರೇ ಇರಬೇಕೆಂದು ನಿಶ್ಚಯಿಸಿ ' ನಾನು ನಿಮ್ಮನ್ನು ವಿಚಾರಣೆ ಮಾಡದೇ ಶಿಕ್ಷೆ ವಿಧಿಸಬಾರದಾಗಿತ್ತು, ನನ್ನದು ತಪ್ಪಾಗಿದೆ ' ಎಂದು ಪಶ್ಚಾತ್ತಾಪದಿಂದ ಕ್ಷಮೆ ಯಾಚಿಸುವನು. 

ಮಾಂಡವ್ಯರು ಸ್ವಲ್ಪವೂ ವಿಕಾರಗೊಳ್ಳದೆ  ಕ್ಷಮಿಸುವರು. ಇನ್ನು ಶೂಲವನ್ನು ದೇಹದಿಂದ ಹೊರಗೆ ತೆಗೆಯಲು ಪ್ರಯತ್ನ ಪಟ್ಟರೂ  ಅದು ಸಂಪೂರ್ಣವಾಗಿ ಬರುವುದಿಲ್ಲ. ಸ್ವಲ್ಪಭಾಗ ತುಂಡಾಗಿ ದೇಹದಲ್ಲೇ ಉಳಿದುಕೊಳ್ಳುವುದು.  ಇದನ್ನು ಬಲವಂತವಾಗಿ ತೆಗೆದರೆ ಅವರ ಜೀವಕ್ಕೆ ತೊಂದರೆ ಆಗಬಹುದೆಂದು ಅಲ್ಲಿಯೇ ಬಿಟ್ಟುಬಿಡುವರು.  ಈ ಕಾರಣದಿಂದಲೇ ಇವರು ಮುಂದೆ ಅಣಿಮಾಂಡವ್ಯ ಮಹರ್ಷಿಎಂದು  ಕರೆಯಲ್ಪಡುತ್ತಾರೆ.

ಈ ಮಧ್ಯೆ ಪಕ್ಷಿಗಳ ರೂಪದಲ್ಲಿ ಬಂದಂತಹ ಋಷಿಗಳು ಇವರನ್ನು ಪ್ರಶ್ನೆ ಮಾಡುತ್ತಾರೆ. "ತಪ್ಪುಗಳನ್ನೇ ಮಾಡದ ನಿಮಗೆ ಈ ಘೋರ ಶಿಕ್ಷೆ ಏಕೆ "? ಎಂದು. "ನನ್ನ ಬಳಿ ಉತ್ತರವಿಲ್ಲ, ಯಮಧರ್ಮನನ್ನೇ ಕೇಳಬೇಕು", ಎನ್ನುವರು ಮಾಂಡವ್ಯರು. ಅವರು ಸಶರೀರರಾಗಿಯೇ ಯಮನ ಲೋಕಕ್ಕೆ ಪ್ರಯಾಣ ಬೆಳೆಸಿ, ಯಮರಾಜನನ್ನು  ಕೇಳುತ್ತಾರೆ " ನನಗೆ ಏಕೆ ಈ ಶೂಲದ ಶಿಕ್ಷೆ?"

ಯಮಧರ್ಮರು, "ನೀವು ಬಾಲಕರಾಗಿದ್ದಾಗ ಚಿಟ್ಟೆಗಳ ಪೃಷ್ಠಭಾಗಕ್ಕೆ ಕಡ್ಡಿಯಿಂದ ಚುಚ್ಚುತ್ತಿದ್ದಿರಿ. ಆ ಪಾಪದ ಫಲವಾಗಿ ಈ ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂದಿತು" ಎನ್ನುತ್ತಾರೆ. ಆಗ ಮಾಂಡವ್ಯರು " ಸಣ್ಣ ವಯಸ್ಸಿನಲ್ಲಿ ಅರಿಯದೆ ಮಾಡಿದ ತಪ್ಪನ್ನು ಅಪರಾಧವೆಂದು ಪರಿಗಣಿಸಬಾರದು; 12ನೇ ವಯಸ್ಸಿನವರೆಗೂ ಬಾಲಕರೆಂದು ಪರಿಗಣಿಸಿ ತಪ್ಪನ್ನು ಕ್ಷಮಿಸಬೇಕಾಗಿತ್ತು.  ಯಮಧರ್ಮರೇ ನೀವು ತಪ್ಪನ್ನು ಮಾಡಿದ್ದೀರಿ! ಆದ್ದರಿಂದ ಭೂಲೋಕದಲ್ಲಿ ಮಾನವ ಜನ್ಮತಾಳಿ" ಎಂದು ಶಾಪವನ್ನು ಕೊಡುವರು.  ಮುಂದೆ ಆ ಶಾಪದ ಫಲವಾಗಿ ಯಮಧರ್ಮರಾಯರೇ 'ವಿದುರ'ನಾಗಿ ಅವತರಿಸುತ್ತಾರೆ  ಎಂದು ಮಹಾಭಾರತದ ಆದಿಪರ್ವವು ವಿವರಿಸುತ್ತದೆ.

 ಈ ಪ್ರಸಂಗದಲ್ಲಿ ಅನೇಕ ಅಂಶಗಳು ಇಂದಿಗೂ ನಮಗೆ ಪ್ರಸ್ತುತ. ಮಾಂಡವ್ಯರು, ಯಾರೋ ಮಾಡಿದ ಕಳ್ಳತನಕ್ಕೆ,  ಶಿಕ್ಷೆಗೆ ಒಳಗಾದರು. ದೇಹಕ್ಕೆ ಯಾತನೆಯಾದರೂ ಭಗವಂತನ ಸ್ಮರಣೆಯಲ್ಲಿದ್ದರು. ಮೇಲ್ನೋಟಕ್ಕೆ ತಮ್ಮದೇನೂ  ತಪ್ಪಿಲ್ಲವೆಂದು ಅನ್ನಿಸಿದ್ದರೂ ಶಾಂತ ಚಿತ್ತರಾಗಿಯೇ ಇದ್ದರು. 

ಇನ್ನು ಮಾಂಡವ್ಯರು ಶಾಪಕೊಡಲು ಶಕ್ತರಾಗಿದ್ದರೂ  ರಾಜಭಟರಿಗಾಗಲಿ, ರಾಜನಿಗಾಗಲಿ ಶಾಪಕೊಡಲಿಲ್ಲ. ಆ ಮೂಲಾಗ್ರವಾಗಿ  ವಿಷಯವನ್ನು ತಿಳಿದುಕೊಂಡು ಯಮರಾಜನಿಗೆ ಶಾಪವನ್ನು ಇತ್ತರು. ತಮ್ಮ ಜೀವನದಲ್ಲಿ ದೇಹಕ್ಕಾದ ನೋವನ್ನು ಲೆಕ್ಕಿಸದೆ ಭಗವತ್ಸ್ಮರಣೆ, ತಪಸ್ಸು , ಅನುಷ್ಠಾನಗಳನ್ನು ಎಂದೂ ಬಿಡದೆ ಸಾಧನೆ ಮಾಡಿ ಉತ್ತಮಲೋಕವನ್ನು  ಪಡೆಯುತ್ತಾರೆ.

ನಮ್ಮ ಜೀವನದಲ್ಲೂ ಅನೇಕ ಕಷ್ಟ ಕಾರ್ಪಣ್ಯಗಳು ಬಂದರೂ, ಭಾರತೀಯ ಮಹರ್ಷಿ ಪ್ರಣೀತವಾದ ಆತ್ಮಸಾಧನೆಯ ಮಾರ್ಗವನ್ನು ಅವಲಂಬಿಸೋಣ.

ಸೂಚನೆ: 15/06/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

ವಿದ್ಯೆಯ ಗುರಿ (Vidyeya guri)


ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)




ಒಂದೂರಿನಲ್ಲಿ ಗುರುಗಳೊಬ್ಬರಿದ್ದರು. ವ್ಯಾಕರಣ, ಜ್ಯೋತಿಷ, ವೇದಾಂತ ಹಾಗೂ ತರ್ಕಗಳಲ್ಲಿ ಅವರಿಗೆ ಪಾಂಡಿತ್ಯವಿತ್ತು. ಪ್ರತಿಶಾಸ್ತ್ರಾಧ್ಯಯನಕ್ಕೂ ಒಬ್ಬೊಬ್ಬ ವಿದ್ಯಾರ್ಥಿಯು ಬರುತ್ತಿದ್ದ. ಗುರುಗಳು ಶ್ರದ್ಧೆಯಿಂದಲೇ ಪಾಠ ಹೇಳುವವರಾದರೂ, ತರ್ಕದ ವಿದ್ಯಾರ್ಥಿಗೆ ವಿಶೇಷವಾದ ಆಸ್ಥೆಯಿಂದ ಪಾಠ ಹೇಳುತ್ತಿದ್ದಾರೆಂದು  ನಿತ್ಯವೂ ಗುರುಗಳ ಪಾಠದ ವೈಖರಿಯನ್ನು ಗಮನಿಸುತ್ತಿದ್ದ ಅವರ ಮಗಳಿಗೆ ಅನ್ನಿಸಿತು. ತಡೆಯಲಾರದೆ ಒಮ್ಮೆ ತಂದೆಯನ್ನು ಈ ಬಗ್ಗೆ ಪ್ರಶ್ನಿಸಿಯೇ ಬಿಟ್ಟಳು. ಗುರುಗಳು ಮಂದಸ್ಮಿತರಾಗಿ, "ನಾಳೆ ಒಂದು ಸಣ್ಣ ಪ್ರಯೋಗವನ್ನು ಮಾಡೋಣ. ಉತ್ತರವು ನಿನಗೇ ತಿಳಿಯುತ್ತದೆ" ಎಂದರು. 


ಮರುದಿನ ತನ್ನ ಮಗಳನ್ನು ಕರೆದು, "ನಾನು ಮನೆಯ ಒಳಗಿರುತ್ತೇನೆ. ಒಬ್ಬೊಬ್ಬ ಶಿಷ್ಯನೂ ಒಂದೊಂದು ಕಾಲಾವಧಿಯಲ್ಲಿ ಪಾಠಕ್ಕೆ ಬರುತ್ತಾನೆ. ಬಂದೊಡನೆಯೇ ನನ್ನನ್ನು ಕಾಣದೆ "ಇಂದು ಪಾಠವಿಲ್ಲವೇ? ಗುರುಗಳು ಕಾಣಿಸುತ್ತಿಲ್ಲವಲ್ಲ?" ಎಂದು ನನ್ನ ಬಗ್ಗೆ ಪ್ರಶ್ನಿಸುತ್ತಾನೆ."ಗುರುಗಳ ಹೊಟ್ಟೆಗೆ ಒಂದು ಗೋಸುಂಬೆ ಹೊಕ್ಕಿದೆ" ಎಂದಷ್ಟೇ ಹೇಳು. ಮುಂದಿನದು ನಿನಗೇ ತಿಳಿಯುತ್ತದೆ" ಎಂದರು. ಎಂದಿನಂತೆ ಪಾಠಕ್ಕೆ ಮೊದಲು ಬಂದವ, ವ್ಯಾಕರಣದ ವಿದ್ಯಾರ್ಥಿ. ಗುರುಗಳ ಬಗ್ಗೆ ಪ್ರಶ್ನಿಸಿದ. ಕೂಡಲೇ ಗುರುಪುತ್ರಿಯು, ತಂದೆ ಹೇಳಿಕೊಟ್ಟಂತೆಯೇ ಹೇಳುತ್ತಾಳೆ. ವ್ಯಾಕರಣದ ವಿದ್ಯಾರ್ಥಿ "ಈ ವಾಕ್ಯ ವ್ಯಾಕರಣಶುದ್ಧವಾಗಿದೆ" ಎಂದು ಹೇಳಿ ಗುರುಗಳ ಬಗ್ಗೆ ಮತ್ತೇನನ್ನೂ ವಿಚಾರಿಸದೆ ಹಿಂತಿರುಗುತ್ತಾನೆ. ನಂತರ ಬಂದ ಶಿಷ್ಯ, ಜ್ಯೋತಿಶ್ಶಾಸ್ತ್ರದವನು. ಅವನು ಗುರುಗಳ ಹೊಟ್ಟೆಗೆ ಗೋಸುಂಬೆ ಹೊಕ್ಕಿರಬೇಕೆಂದರೆ ಅವರ ಗ್ರಹಚಾರ ಸರಿಯಿಲ್ಲವೆಂದೆನಿಸುತ್ತದೆ;  ಇದನ್ನು ಪರಿಹರಿಸಲು ದಾನ, ಜಪ, ಹೋಮ, ದೇವತಾರ್ಚನೆ - ಇವುಗಳಲ್ಲಿ ಏನನ್ನು ಮಾಡಬಹುದು? ಎಂದು ಚಿಂತಿಸುತ್ತಾ ನಿರ್ಗಮಿಸುತ್ತಾನೆ. ನಂತರ ಬಂದವನು ವೇದಾಂತದ ವಿದ್ಯಾರ್ಥಿ. ಅವನು ಗುರುಪುತ್ರಿಯ ಮಾತನ್ನು ಕೇಳಿ, ಗುರುವಿನ ಶರೀರವು ಪೃಥಿವೀ ತತ್ತ್ವದಿಂದಲೇ ಆದದ್ದು; ಗೋಸುಂಬೆಯದೂ ಅಷ್ಟೇ. ಒಂದು ತತ್ತ್ವದ ಒಳಗೆ ಅದೇ ತತ್ತ್ವದ ಮತ್ತೊಂದು ಹೊಕ್ಕಿದೆ. ಸರಿಯಾಗಿಯೇ ಇದೆ ಎನ್ನುತ್ತಾ ಹೊರಟುಬರುತ್ತಾನೆ. ನಂತರ ಬಂದವನು ತರ್ಕದ ವಿದ್ಯಾರ್ಥಿ. ಅವನು ಮಾತ್ರ  ಗುರುಪುತ್ರಿಯ ಮಾತನ್ನು ಕೇಳುತ್ತಲೇ ಗೋಸುಂಬೆಯಂತಹ ಪ್ರಾಣಿ, ಒಬ್ಬ ಮನುಷ್ಯನ ಹೊಟ್ಟೆಯೊಳಗೆ ಹೊಗುವುದು ಹೇಗೆ ಸಾಧ್ಯ? ಒಂದು ಪಕ್ಷ ಹೊಕ್ಕಿತೆಂದರೆ, ಗುರುಗಳು ಜೀವದಿಂದಿರಲು ಸಾಧ್ಯವೇ? ಹಾಗೊಮ್ಮೆ ಗುರುಗಳು ಪ್ರಾಣಬಿಟ್ಟಿದ್ದರೆ, ಮಗಳು ಹೀಗೆ ಲವಲವಿಕೆಯಿಂದ ಓಡಾಡಿಕೊಂಡಿರಲು ಹೇಗೆ ತಾನೇ ಸಾಧ್ಯವಾದೀತು? ಈ ಮಾತಿನಲ್ಲೇನೋ ಮೋಸವಿದೆ ಎಂದು ಊಹಿಸಿ, ಗುರುವಿನ ಮಗಳ ಮುಂದೆ ತನ್ನ ಸಂದೇಹವನ್ನು ವ್ಯಕ್ತಪಡಿಸುತ್ತಾನೆ. ಗುರುಪುತ್ರಿಗೆ ಆಗ, ನಾಲ್ಕು ಶಿಷ್ಯರಲ್ಲಿ ತಾನು ಕಲಿತ ವಿದ್ಯೆಯನ್ನು ತಾರ್ಕಿಕ ಒರೆಗಲ್ಲಿಗೆ ಹಚ್ಚಿ, ಚಿಂತಿಸಬಲ್ಲವ ಇವನೊಬ್ಬನೇ; ಆದ್ದರಿಂದಲೇ ತಂದೆಯು ಇವನಲ್ಲಿ ವಿಶೇಷ ಆಸ್ಥೆ ವಹಿಸುತ್ತಿದ್ದಾರೆ ಎಂಬ ಸತ್ಯ ಗೋಚರವಾಗುತ್ತದೆ.


ಯಾವುದೇ ವಿದ್ಯೆಯನ್ನು ಕಲಿತರೂ ಅದನ್ನು ನಮ್ಮ ಜೀವನಕ್ಕೆ ಬಳಸಿಕೊಳ್ಳುವ ಬಗೆ ಹೇಗೆ ಎಂಬುದರ ಬಗ್ಗೆ ಒಂದು ಸಾಮಾನ್ಯಜ್ಞಾನ (common sense) ಅಗತ್ಯ. ಕೆಲವು ವಿದ್ಯೆಗಳು ಪ್ರತ್ಯಕ್ಷವಾಗಿ ನಮಗೆ ಸಹಕಾರಿ; ಕೆಲವು ಪರೋಕ್ಷವಾಗಿ ಉಪಯುಕ್ತ. ಉದಾಹರಣೆಗೆ ಗಣಿತದಂತಹ ವಿಷಯಗಳು ಬುದ್ಧಿಯ ತಾರ್ಕಿಕ ಚಿಂತನಾಶಕ್ತಿಯನ್ನು ಹರಿತಗೊಳಿಸಿ ನಮಗೆ ಸಹಕಾರಿಯಾಗಬಲ್ಲವು. ಹೀಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವಿದ್ಯಾಭ್ಯಾಸವು ನಮಗೆ ಉಪಯುಕ್ತವಾಗಿರಬೇಕು.


ಇಂದು ಆಧುನಿಕ ವಿದ್ಯೆಗಳು ಪ್ರಚಲಿತವಾಗಿರುವಂತೆ, ನಮ್ಮ ದೇಶದಲ್ಲಿ ಋಷಿಗಳು ತಂದ ವಿದ್ಯೆ ಹಾಗೂ ಕಲೆಗಳೂ ಇವೆ. ಆದರೆ ಅವು ಋಷಿಗಳು ಉದ್ದೇಶಿಸಿದ ಫಲಗಳನ್ನು ಇಂದು ಎಷ್ಟೋ ನೇರಗಳಲ್ಲಿ ನೀಡುತ್ತಿಲ್ಲ. ಹಾಗಾಗಲು ಕಾರಣವೇನೆಂಬುದರ ಬಗ್ಗೆ ಜಿಜ್ಞಾಸೆಯೂ ಬೇಕಾಗಿದೆ. ಮೊದಲಿಗೆ ಆರ್ಷವಿದ್ಯೆಗಳ ಬಗ್ಗೆ ಒಂದು ಮೂಲಭೂತವಾದ ನೋಟ ಬೇಕು.


ವಿದ್ಯೆಯ ಬಗ್ಗೆ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. "ವಿದ್ಯೆ ಎನ್ನುವ ಪದ ಏನು ಹೇಳುತ್ತೆ? 'ವಿದ್' ಎಂದರೆ ಜ್ಞಾನ. 'ಯಾ' ಎಂದರೆ ಹೊಂದಿಸುವುದು. ಜ್ಞಾನದ ಕಡೆಗೆ ಒಯ್ಯುವ ವಿಚಾರವೇ ವಿದ್ಯೆ". ಇಲ್ಲಿ ಜ್ಞಾನವೆನ್ನುವ ಪದವು ಆತ್ಮಜ್ಞಾನ  ಎಂಬರ್ಥದಲ್ಲಿಯೇ ಬಳಸಲ್ಪಟ್ಟಿದೆ. 

ಗಂಗಾನದಿಯು ಮೂಲದಿಂದ ಶುದ್ಧವಾಗಿಯೇ ಹೊರಟರೂ, ಅದು ಹರಿಯುವಾಗ ಆಯಾ ಕ್ಷೇತ್ರಧರ್ಮವನ್ನೂ ಸೇರಿಸಿಕೊಂಡು ಹರಿಯುವಂತೆ, ಶುದ್ಧವಾಗಿ ಹೊರಟ ಋಷಿಪ್ರಣೀತ ವಿದ್ಯೆಗಳು ಅಲ್ಲಲ್ಲಿ ಕಲುಷಿತವಾಗಿವೆ. ಎಷ್ಟೋ ವಿದ್ಯೆಗಳು ಆತ್ಮಜ್ಞಾನದೆಡೆಗೆ ನಮ್ಮನ್ನು ಒಯ್ಯುತ್ತಿಲ್ಲ. ಆದ್ದರಿಂದ ನಮ್ಮನ್ನು ಭಾರತೀಯ ವಿದ್ಯೆ, ಕಲೆಗಳು ಪರಮಾತ್ಮನಲ್ಲಿ ನೆಲೆ ನಿಲ್ಲಿಸುವಂತೆ ಮಾರ್ಗದರ್ಶನ ಮಾಡಬಲ್ಲವರಿಗಾಗಿ ಎದುರುನೋಡೋಣ. 


ಸೂಚನೆ: 15/06/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.



ಒಳ್ಳೆಯದನ್ನೇ ಗಮನಿಸೋಣ ....( Olleyadanne Gamanisona....)


ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


ಅವನೊಬ್ಬ ಜಗದ್ವಿಖ್ಯಾತ ಚಿತ್ರಕಾರ. ಅದೊಂದು ದಿನ ಸರ್ವಾಂಗಸುಂದರವಾದ ಚಿತ್ರವೊಂದನ್ನು ಚಿತ್ರಿಸಿದ.  ಜನಾಭಿಪ್ರಾಯವನ್ನು ಪಡೆಯಲೆಂದು ಆ ಚಿತ್ರವನ್ನು ಪ್ರಸಿದ್ಧವಾದ ಚಿತ್ರಪ್ರದರ್ಶಿನಿಯಲ್ಲಿ ಇಟ್ಟು, ಚಿತ್ರದ ಕೆಳಗೆ ಟಿಪ್ಪಣಿಯೊಂದನ್ನು ಅಂಟಿಸಿದ-" ಈ ಚಿತ್ರದಲ್ಲಿ ದೋಷಗಳೇನಾದರೂ ಕಂಡುಬಂದಲ್ಲಿ ಆ ದೋಷಭಾಗವನ್ನು ಗುರುತಿಸಿ ಬರೆಯಿರಿ" ಎಂದು. ಜನರೆಲ್ಲಾ ಬಂದರು. ಕೆಳಗಿನ ಟಿಪ್ಪಣಿಯನ್ನು ನೋಡಿದರು. ಒಬ್ಬೊಬ್ಬರೂ ಅವರವರ ಕಣ್ಣುಗಳಿಗೆ ಯಾವ ಯಾವ ಅಂಗಗಳಲ್ಲಿ ದೋಷ ಎನ್ನಿಸಿದ್ದನ್ನೆಲ್ಲ್ಲಾ ಗೆರೆಯೆಳೆದು ಗುರುತಿಸಿದರು. ಸಂಜೆಯ ವೇಳೆ ಆ ಚಿತ್ರಕಾರ ಬಂದು ನೋಡುತ್ತಾನೆ.ಅವನಿಗೆ ಅತ್ಯಾಶ್ಚರ್ಯ, ದುಃಖ ಕಾದಿತ್ತು. ಆ ಚಿತ್ರದ ಎಲ್ಲಾ ಅಂಗಾಂಗಗಳೂ ದೋಷಪೂರ್ಣವೆಂದು ಗುರುತಾಗಿದೆ! ಸಹಿಸಲಾಗದ ದುಃಖ, ದುಗುಡಗಳಿಂದ ಅವನು-"ನಾನು ಪ್ರಸಿದ್ಧ ಚಿತ್ರಕಾರನೆಂದುಕೊಂಡಿದ್ದೆ. ಆದರೆ ಜನರು ನನ್ನ ಚಿತ್ರದ ಎಲ್ಲಾ ಭಾಗಗಳಲ್ಲೂ ದೋಷಗಳನ್ನು ಗುರುತಿಸಿದ್ದಾರೆ. ನನ್ನ ಅಭಿಮಾನಕ್ಕೆ ಧಿಕ್ಕಾರವಿರಲಿ! ಇನ್ನು ಮುಂದೆ ಯಾವ ಚಿತ್ರವನ್ನೂ ರಚಿಸುವುದಿಲ್ಲ" ಎಂದುಕೊಂಡು ಹತಾಶನಾಗಿ ಮನೆ ಸೇರಿದನು. ಇವನ ಪರಮಾಪ್ತ ಸ್ನೇಹಿತನೊಬ್ಬ, ಈ ಚಿತ್ರಕಾರ ಬಹಳದಿನ ಕಾಣಿಸಿಕೊಳ್ಳದ ಕಾರಣ ಅವನ ಮನೆಗೆ ಹೋದನು. ಅಲ್ಲಿ ನಡೆದುದೆಲ್ಲವನ್ನೂ ಕೇಳಿ, ಮುಂದೆಂದೂ ಚಿತ್ರ ಬರೆಯಲಾರೆನೆಂಬ ಅವನ ನಿಶ್ಚಯವನ್ನೂ ಕೇಳಿದನು. "ಜನರಿಗಾಗಿ ಬೇಡ, ನನಗಾಗಿ ಒಂದು ಚಿತ್ರವನ್ನು ಬರೆದುಕೊಡು ಎಂದು ಒತ್ತಾಯಿಸಿದನು. ಆ ಚಿತ್ರಕಾರನು ಒಲ್ಲದ ಮನಸ್ಸಿನಿಂದ ಸ್ನೇಹಿತನ ಒತ್ತಾಯಕ್ಕೆ ಕಟ್ಟುಬಿದ್ದು ಹೇಗೋ ಒಂದು ಚಿತ್ರ ಬರೆದುಕೊಟ್ಟನು. ಆ ಸ್ನೇಹಿತನು ಆ ಚಿತ್ರವನ್ನು ಅದೇ ಪ್ರದರ್ಶಿನಿಯಲ್ಲಿ ಇಟ್ಟು ಕೆಳಗೆ ಬರೆದ ಟಿಪ್ಪಣಿ ಮಾತ್ರ ಬೇರೆಯಾಗಿತ್ತು-"ಈ ಚಿತ್ರದಲ್ಲಿನ ಒಳ್ಳೆಯ ಅಂಶಗಳನ್ನೆಲ್ಲಾ ಗೆರೆಯೆಳೆದು  ಗುರುತಿಸಿ" ಎಂದು ಬರೆದನು. ಮತ್ತೆ ಜನರೆಲ್ಲಾ ಬಂದರು. ಚಿತ್ರವನ್ನೂ, ಕೆಳಗಿನ ಟಿಪ್ಪಣಿಯನ್ನೂ ನೋಡಿದರು. ಒಬ್ಬರಿಗೆ ಒಂದೊಂದು ಅಂಗಗಳು ಇಷ್ಟವಾದವು. ಹಾಗೆಯೇ ಗುರುತಿಸಿದರು. ಸಂಜೆಯ ವೇಳೆಗೆ ಚಿತ್ರದ ಎಲ್ಲಾ ಭಾಗಗಳೂ ಬಹಳ ಚೆನ್ನಾಗಿವೆ ಎಂದು ಗುರುತಾಗಿದ್ದವು. ವಾಸ್ತವವಾಗಿ ಮೊದಲಿನ ಚಿತ್ರ ಇದಕ್ಕಿಂತ ಚೆನ್ನಾಗಿತ್ತು. ಆದರೆ ದೋಷಗಳನ್ನು ಗುರುತಿಸಿ ಎಂದಾಗ ಮನಸ್ಸು ದೋಷಗಳ ಕಡೆಗೇ ಗಮನ ಹರಿಸಿತ್ತು. ಅದೇ ಒಳ್ಳೆಯದನ್ನು ಗುರುತಿಸಿ ಎಂದಾಗ ಒಳ್ಳೆಯದನ್ನೇ ಹುಡುಕಿತು-ಅದೇ ಪ್ರದರ್ಶಿನಿ! ಅದೇ ಜನ! 

ನಮ್ಮ ನಿತ್ಯಜೀವನದ ಕಥೆ ಇದು. ಜೀವನ, ದೋಷಗಳ ಚೀಲವಲ್ಲ.  ಜೀವನದಲ್ಲಿ ಆನಂದ, ನೆಮ್ಮದಿಯೇ ಮೊದಲಾದ ಸದ್ವಿಚಾರಗಳನ್ನು ಕಂಡು ಕರುಣಿಸಿದ ಋಷಿಗಳ ಭೂಮಿಯಲ್ಲಿ ಬದುಕುತ್ತಿದ್ದೇವೆ. "ಜೀವನಕ್ಕೆ ಅರ್ಥ ಇದೆಯಪ್ಪಾ, ಅರ್ಥ ಅಷ್ಟೇ ಅಲ್ಲ ,ಪರಮಾರ್ಥ ಇದೆ" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಜೀವನದಲ್ಲಿ ದೋಷಗಳನ್ನು ಹುಡುಕತೊಡಗಿದರೆ ಜಗತ್ತೆಲ್ಲವೂ ದೋಷಪೂರ್ಣ ಎನಿಸುತ್ತದೆ. ಅದೇ ಗುಣಗಳನ್ನು ಹುಡುಕುವ ಅಭ್ಯಾಸ ಮಾಡಿಕೊಂಡರೆ ಸೃಷ್ಟಿಯೆಲ್ಲವೂ ಸರ್ವಾಂಗ ಸುಂದರ. ಮನಸ್ಸಿಗೆ ಯಾವ ಟಿಪ್ಪಣಿ ಅಂಟಿಸುತ್ತೇವೋ ಅದರಂತೆ ತಯಾರಾಗುತ್ತದೆ.  ಧರ್ಮರಾಜ-ದುರ್ಯೋಧನರಿಗೆ ಒಡ್ಡಿದ ಪರೀಕ್ಷೆ ಪ್ರಸಿದ್ಧವಾಗಿದೆ. ದುರ್ಯೋಧನನಿಗೆ ವಿಶ್ವದಲ್ಲಿ ಒಳ್ಳೆಯದನ್ನೂ, ಧರ್ಮಜನಿಗೆ ಕೆಟ್ಟದ್ದನ್ನೂ ಗುರುತಿಸುವ ಪರೀಕ್ಷೆ. ಇಬ್ಬರೂ ಅನುತ್ತೀರ್ಣರಾದರು. ದುರ್ಯೋಧನನಿಗೆ ಒಳ್ಳೆಯದೇ ಕಾಣದು. ಧರ್ಮಜನಿಗೆ ಕೆಟ್ಟದ್ದೇ ಕಾಣದು. ಧರ್ಮಜನ ಮಾನಸಿಕತೆ ನಮ್ಮೆಲ್ಲರ ಆದರ್ಶವಾಗಲಿ ಎಂದು ಪ್ರಾರ್ಥಿಸೋಣ.

ಸೂಚನೆ: 15/06/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Monday, June 12, 2023

ವ್ಯಾಸ ವೀಕ್ಷಿತ - 41 ವಸಿಷ್ಠ-ವಿಶ್ವಾಮಿತ್ರ ವೃತ್ತಾಂತ (Vyaasa Vikshita - 41 Vasishtha-Vishvamitra Vrittanta)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ವಿಶ್ವಾಮಿತ್ರನು ಒಮ್ಮೆ ವಸಿಷ್ಠರ ವಿಷಯದಲ್ಲಿ ತೀವ್ರವಾದ ಅಪಚಾರವನ್ನು ಮಾಡಿದನು. ಅವನ ವಂಶವನ್ನೇ ಅವರು ಅಡಗಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ತಮ್ಮ ಕೋಪವನ್ನೇ ಅಡಗಿಸಿಕೊಂಡರು. ತಮ್ಮ ನೂರು ಮಕ್ಕಳು ಅವನಿಂದಾಗಿ ಸಾವಿಗೀಡಾಗುವಂತಾಯಿತು. ಆದರೂ ದಾರುಣಕೃತ್ಯವನ್ನು ಅವರೆಸಗಲಿಲ್ಲ. ಮೃತರಾದ ಪುತ್ರರನ್ನು ಮತ್ತೆ ಜೀವಿಸುವಂತೆ ಮಾಡಲು ಸಾಮರ್ಥ್ಯವಿತ್ತಾದರೂ ವಿಧಿಯನ್ನು ಮೀರಿಹೋಗಲಿಲ್ಲ.

ಇಷ್ಟು ಸಂಯಮಸಂಪನ್ನರಾಗಿದ್ದ ಋಷಿಯನ್ನು ಪುರೋಹಿತನನ್ನಾಗಿ ಹೊಂದಿ, ಕುರುವಂಶದ ಅರಸರು ಅನೇಕ ಯಾಗಗಳನ್ನು ಪೂರೈಸಿ ಸಫಲರಾದರು. ತಮಗೂ ಅಂತಹ ಮಾರ್ಗದರ್ಶಕ-ಪುರೋಹಿತನೊಬ್ಬನಿದ್ದರೆ ಒಳ್ಳೆಯ ಏಳ್ಗೆಯುಂಟು.  ಹೀಗೆಂಬುದಾಗಿ ಗಂಧರ್ವನು ಹೇಳಿದನು.

ವಸಿಷ್ಠರಿಗೂ ವಿಶ್ವಾಮಿತ್ರರಿಗೂ ಆದ ವೈರವೇನೆಂಬುದನ್ನು ತಿಳಿಯಲು ಅರ್ಜುನನು ಕುತುಕಪಟ್ಟನು. ಆಗ ಆ ಕಥೆಯನ್ನು ಗಂಧರ್ವನು ಹೇಳಿದನು.

ವಿಶ್ವಾಮಿತ್ರನೊಮ್ಮೆ ವಸಿಷ್ಠರ ಆಶ್ರಮಕ್ಕೆ ಬಂದಾಗ ವಸಿಷ್ಠರು ಆತನನ್ನೂ ಆತನ ಪರಿವಾರವನ್ನೂ ಅದ್ಭುತವಾಗಿ ಸತ್ಕರಿಸಿದರು. ಅದು ಸಾಧ್ಯವಾದುದು ಅವರಲ್ಲಿದ್ದ ನಂದಿನಿಯೆಂಬ ಕಾಮಧೇನುವಿನಿಂದಾಗಿ. ಅದು ಸರ್ವಪ್ರದೆ (ಎಲ್ಲವನ್ನೂ ಕೊಡುವಂತಹುದು). ಅದನ್ನು ಕಂಡು ಆಶ್ಚರ್ಯಪಟ್ಟ ವಿಶ್ವಾಮಿತ್ರನು ತನಗೆ ಆ ಹಸುವು ಬೇಕೆಂದನು. ಅದನ್ನು ಸರ್ವಥಾ ಕೊಡಲಾಗದೆಂದು ವಸಿಷ್ಠರು ಹೇಳಲು, ಬಲಾತ್ಕಾರದಿಂದ ಅದನ್ನು ಒಯ್ಯಲು ವಿಶ್ವಾಮಿತ್ರನು ಉದ್ಯುಕ್ತನಾದನು. ನಂದಿನಿಯಿಂದ ಒಂದು ಸೈನ್ಯವೇ ಸೃಷ್ಟವಾಯಿತು; ಅದು ವಿಶ್ವಾಮಿತ್ರನ ಸೈನ್ಯವನ್ನು ಸದೆಬಡಿಯಿತು.

ತನ್ನ ಕ್ಷಾತ್ರಬಲವು ಏನೂ ಸಮರ್ಥವಾಗಲಿಲ್ಲವೆಂದು ವಿಶ್ವಾಮಿತ್ರನು ಕಂಡುಕೊಂಡನು; ಬ್ರಹ್ಮಬಲವೇ ಬಲವೆಂದು ನಿಶ್ಚಯಿಸಿದನು. ರಾಜ್ಯಕೋಶಗಳನ್ನು ತೊರೆದನು; ಘೋರವಾದ ತಪಸ್ಸನ್ನು ಮಾಡಿದನು. ತಪಸ್ಸಿನಿಂದಲೇ ಬ್ರಾಹ್ಮಣತ್ವವನ್ನು ಪಡೆದನು.

ಆದರೂ ವಸಿಷ್ಠರನ್ನು ಕುರಿತಾಗಿ ದ್ವೇಷಭಾವನೆಯು ಇನ್ನೂ ಹೋಗಿರಲಿಲ್ಲ. ಹಾಗಿದ್ದ ವಿಶ್ವಾಮಿತ್ರನು, ವಸಿಷ್ಠರ ನೂರು ಮಕ್ಕಳ ಸಾವಿಗೆ ಕಾರಣವಾಗುವಂತಾಯಿತು. ವಿಶ್ವಾಮಿತ್ರನ ಮೇಲೆ ಕೋಪಗೊಳ್ಳುವುದರ ಬದಲು ತಾವೇ ಅಸು ನೀಗಲು ವಸಿಷ್ಠರು ಬಹುವಾಗಿ ಯತ್ನಿಸಿದರು. ಆದರೂ ದೈವವು ಅವರನ್ನು ಕಾಪಾಡಿತು.

ಇದೆಲ್ಲವನ್ನೂ ಗಂಧರ್ವನು ಹೇಳಿದನು. ಇದನ್ನೇ ವಿಸ್ತರಪಡಿಸುತ್ತಾ, ಇಕ್ಷ್ವಾಕುವಂಶದ ಕಲ್ಮಾಷಪಾದರಾಜ - ವಸಿಷ್ಠರ ಹಿರಿಯ ಮಗನಾದ ಶಕ್ತಿ - ವಿಶ್ವಾಮಿತ್ರನಿಂದ ಸೃಷ್ಟನಾದ ಕಿಂಕರನೆಂಬ ರಾಕ್ಷಸ - ಶಕ್ತಿಯ ಸಾವು - ವಸಿಷ್ಠರ ಉಳಿದ ಮಕ್ಕಳ ಸಾವು - ಶಕ್ತಿಯ ಧರ್ಮಪತ್ನಿಯಾದ ಅದೃಶ್ಯಂತಿ - ಸೌದಾಸ-ಮದಯಂತಿ-ಅಶ್ಮಕ-ಪರಾಶರ-ಕೃತವೀರ್ಯ-ಔರ್ವ-ಪಿತೃದೇವತೆಗಳು-ಅತ್ರಿ-ಪುಲಸ್ತ್ಯ - ಇವರುಗಳನ್ನು ಒಳಗೊಂಡ ವಿಸ್ತಾರವಾದ ವೃತ್ತಾಂತಗಳು – ಇವೆಲ್ಲವನ್ನೂ ಅರ್ಜುನನಿಗೆ ಗಂಧರ್ವನು ತಿಳಿಸಿದನು.

ಉತ್ಕೃಷ್ಟರಾದ ಪುರೋಹಿತರಿಂದಾಗಿ ಶ್ರೇಯಸ್ಸು ಸಂಪಾದಿತವಾಗುವುದು - ಎಂಬುದು ಅರ್ಜುನನಿಗೆ ಮನದಟ್ಟಾಯಿತು. ಆದರೆ ಅಂತಹ ಪುರೋಹಿತರು ಯಾರಿರುವರು? ಎಂಬ ಪ್ರಶ್ನೆಯೂ ತಲೆದೋರಿತು. ಆ ಬಗ್ಗೆ ಆ ಗಂಧರ್ವನನ್ನೇ ಕೇಳಿದನು. ಆಗ ಧೌಮ್ಯರ ವಿಷಯವನ್ನು ಆ ಗಂಧರ್ವನು ಹೇಳಿದನು. ಅವರು ದೇವಲಮಹರ್ಷಿಯ ಕೊನೆಯ ತಮ್ಮ. ಉತ್ಕೋಚಕ-ತೀರ್ಥದ ಬಳಿಯಿರುವ ಆಶ್ರಮದಲ್ಲಿ ತಪೋನಿರತರಾಗಿರುವರು. ಅವರು ನಿಮ್ಮ ಪುರೋಹಿತರಾಗಲು ಯೋಗ್ಯರು – ಎಂದನು, ಗಂಧರ್ವ.

ಗಂಧರ್ವನ ಮಾತುಗಳು ಅರ್ಜುನನಿಗೆ ರುಚಿಸಿದವು. ಹಿಂದೆ ಹೇಳಿದ್ದಂತೆ ಆಗ್ನೇಯಾಸ್ತ್ರವನ್ನು ಗಂಧರ್ವನಿಗೆ ಉಪದೇಶಿಸಿದನು. ಆತನು ಕೊಡಬೇಕೆಂದಿದ್ದ ಕುದುರೆಗಳನ್ನು ಮುಂದೆ ಕಾರ್ಯಕಾಲದಲ್ಲಿ ಸ್ವೀಕರಿಸುವುದಾಗಿ ಹೇಳಿದನು.

ಸೂಚನೆ : 11/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 41 (Yaksha prashne 41)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಒಬ್ಬಂಟಿನಗನಾಗಿ ಸಂಚರಿಸುವವನು ಯಾರು ?

ಉತ್ತರ - ಸೂರ್ಯ

ತೈತ್ತಿರೀಯ ಸಂಹಿತೆಯಲ್ಲಿ ಈ ಪ್ರಶ್ನೆಗೆ ಸಂವಾದಿಯಾದ ಪ್ರಶ್ನೆ ಮತ್ತು ಉತ್ತರವನ್ನು ಕಾಣಬಹುದು. "ಕಸ್ವಿದೇಕಾಕೀ ಚರತಿ? ಸೂರ್ಯ ಏಕಾಕೀ ಚರತಿ " ಎಂದು. ಮಹಾಭಾರತವನ್ನು ಪಂಚಮವೇದ ಅಂದು ಹೇಳಿದ್ದು ಕಂಡುಬರುತ್ತದೆ. ಈ ಕಾರಣಕ್ಕೇ ಆ ಮಾತು ಬಂದಿರಬಹುದೇನೋ ಎಂದು ಅನಿಸುತ್ತದೆ. ಯಜುರ್ವೇದದ ಮಂತ್ರಕ್ಕೂ ಇಲ್ಲಿ ಬರುವ ಶ್ಲೋಕಕ್ಕೂ ಸ್ವಲ್ಪವೂ ವ್ಯತ್ಯಾಸವಿಲ್ಲ. ಆ ಮಂತ್ರವನ್ನೇ ಕಾಪಿ ಮಾಡಲಾಗಿದೆಯೋ ಎನ್ನುವಷ್ಟರಮಟ್ಟಿಗೆ ವಿಷಯವನ್ನು ಕಾಣಬಹುದು. ಸೂರ್ಯನು ಒಬ್ಬನೇ ಚೈಲಿಸುತ್ತಾನೆ ಎಂಬ ರೀತಿಯಲ್ಲಿ ಇಲ್ಲಿನ ಪ್ರಶ್ನೋತ್ತರವಿದೆ. ಸೂರ್ಯನು ಚಲಿಸುವುದು ಎಂಬ ವಿಷಯವೇ ಎಲ್ಲರೂ ಒಪ್ಪುವಂತಹದ್ದಲ್ಲ. ಸೂರ್ಯನು ಚಲಿಸುವುದೇ ಇಲ್ಲ ಎಂದು ಆಧುನಿಕ ವಿಜ್ಞಾನದ ಮತವಾಗಿದೆ. ಆದರೆ ಭಾರತೀಯ ಜ್ಯೋತಿಷ್ಯಶಾಸ್ತ್ರವು ಇನ್ನೊಂದು ಬಗೆಯಲ್ಲಿ ಸೂರ್ಯನು ಚಲಿಸುವುದಿಲ್ಲ; ಬದಲಿಗೆ ಅವನು ಚಲಿಸಿದಂತೆ ಕಾಣುತ್ತಾನೆ ಎಂದು ಹೇಳುವುದರ ಮೂಲಕ ಆಧುನಿಕವಿಜ್ಞಾನದ ಮತಕ್ಕೆ ತನ್ನ ಶಮತವನ್ನು ಸೂಚಿಸುತ್ತದೆ ಎಂದು ಹೇಳಬಹುದು. ಅಥವಾ ಆಧಿನ ವಿಜ್ಞಾನವು ಸೂರ್ಯನ ಸ್ಥಿರತ್ವವನ್ನು ಯಾವರೀತಿಯಾಗಿ ಪ್ರತಿಪಾದನೆ ಮಾಡುತ್ತಿದೆಯೋ ಅದು ಭಾರತೀಯ ಆರ್ಷವಿಜ್ಞಾನಕ್ಕೆ ವಿರೋಧವಾಗಿಲ್ಲ ಎನ್ನುವುವನ್ನೂ ಅಷ್ಟೇ ಖಚಿತವಾಗಿ ಹೇಳಬಹುದು. ಹೀಗಿದ್ದರೂ ವೇದ ಅಥವಾ ವೇದಾನುವಾದಿಯಾದ ಮಹಾಭರತದಲ್ಲಿ ಇದಕ್ಕೆ ವಿರುದ್ಧವಾದ ಭಿಪ್ರಯವನ್ನು ಹೇಳುವ ಈ ಪ್ರಶ್ನೋತ್ತರ ಎಷ್ಟು ಸೂಕ್ತ ಎಂಬ ಸಂಶಯವೂ ಬಾರದಿರದು. ಹಾಗಾದರೆ ಈ ವಿರೋಧಕ್ಕೆ ಪರಿಹಾರವೇನು ಎಂಬುದನ್ನು ನಾವಿಲ್ಲ ಚಿಂತಿಸೋಣ. 

ಭಾರತೀಯರ ವಿಜ್ಞಾನವು ಅಂತರಂಗದ ಸಾಕ್ಷಾತ್ಕಾರದ ಹಿನ್ನೆಲೆಯಿಂದ ಬೆಳೆದಿದ್ದು ಎಂಬುದನ್ನು ನಾವು ಮೊತ್ತಮೊದಲು ಅಂಗೀಕರಿಸಿಕೊಂಡು ಈ ವಿಷಯವನ್ನು ವಿಮರ್ಶಿಸಬೇಕು. ಅದಿಲ್ಲದೇ ಕೇವಲ ಹೊರಗಣ್ಣಿಗೆ ಕಾಣುವ ಸೂರ್ಯನನ್ನುಮಾತ್ರ ನೋಡಿಕೊಂಡರೆ ಈ ವಿಷಯ ತಪ್ಪಾಗಿ ಕಾಣುವ ಸಾಧ್ಯತೆ ದಟ್ಟವಾಗಿದೆ. ಹೊರಗಿನ ಸೂರ್ಯನಿಗೂ ಮೂಲ ಒಳಗಿನ ಆತ್ಮಸೂರ್ಯ.


ಸೃಷ್ಟಿಯ ಮೊದಲು ಇರುವಂತಹದ್ದು ಈ ಆತ್ಮಸೂರ್ಯನೇ. ಅವನೇ ವಿಕಾಸವಾದಾಗ ಈ ಪ್ರಪಂಚದ ಬೆಳವಣಿಗೆ ಆಯಿತು. ಮತ್ತೆ ಈ ಸೃಷ್ಟಿಯು ಅವನಲ್ಲೇ ಲಯಹೊಂದಿ ಪ್ರಪಂಚದ ಪೂರ್ಣವೃತ್ತವು ಘಟಿಸುವುದು. ಈ ವಿಕಾಸ ವಿಲಯಗಲನ್ನೇ ಸೂರ್ಯನ ಚಲನೆ ಎಂದು ಕರೆದಿದ್ದಾರೆ. ಆ ಆತ್ಮಸೂರ್ಯನಲ್ಲೇ ಮೊದಲ ಕಂಪನ ಅಂದರೆ ಚಲನೆ ಅಥವಾ ಸ್ಪಂದ ಉಂಟಾಗುತ್ತದೆ. ಅದರ ಪರಿಣಾಮವೇ ಈ ಜಗತ್ತಿನ ವ್ಯಾಪಾರ. ಹಾಗಾಗಿ ಸಮಸ್ತಪ್ರಪಂಚದ ವ್ಯಾಪಾರಕ್ಕೆ ಮೂಲ ಆ ಸೂರ್ಯನಾರಾಯಣನ ಆ ಚಲನೆಯೇ ಕಾರಣ. ಅದಕ್ಕೆ ಸೂರ್ಯನಿಗೆ 'ಸವಿತಾ' ಎಂಬ ಹೆಸರು(ಸವಿತೃ- ಪ್ರಸವಿತೃ) ಬಂದಿದೆ ಎಂಬ ಅಭಿಪ್ರಾಯವನ್ನು ಶ್ರೀರಂಗಮಹಾಗುರುಗಳು ಹೇಳಿದ್ದರಂತೆ. ಇದನ್ನೇ ವೇದವು ' ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ' ಎಂಬ ಮಂತ್ರದಿಂದ ಅಂತರಂಗದ ವಿಷಯವನ್ನು ಸಾರುತ್ತಿದೆ. ಈ ಹಿಂದೆ ಯಕ್ಷನ ಮೊದಲ ಪ್ರಶ್ನೆಯ ಆಶಯವೂ ಇದೇ ಆಗಿತ್ತು. ಸೂರ್ಯನ ಉದಯಾಸ್ತಗಳಿಗೆ ಕಾರಣವನ್ನು ಆ ಪ್ರಶ್ನೆಯಲ್ಲಿ ವಿಅವರವಾಗಿ ವಿವರಿಸಿದ್ದಾಗಿದೆ. ಅದನ್ನೊಮ್ಮೆ ಇಲ್ಲಿ ಸ್ಮರಣೆಗೆ ತಂದುಕೊಳ್ಳಬೇಕು ಎಂದು ಜ್ಞಾಪಿಸಿಕೊಳ್ಳುತ್ತೇನೆ. 


ಸೂಚನೆ : 11/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Monday, June 5, 2023

ವ್ಯಾಸ ವೀಕ್ಷಿತ - 40 ತಪತೀ-ಸಂವರಣ-ವೃತ್ತಾಂತ (Vyaasa Vikshita - 40 Tapati-Samvarana-Vrittanta)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಅದೇ ಸಮಯಕ್ಕೆ ಸಂವರಣನೆಂಬ ರಾಜಕುಮಾರನು ಸೂರ್ಯನ ಆರಾಧನೆಯನ್ನು ಮಾಡುತ್ತಿದ್ದನು. ಋಕ್ಷನೆಂಬವನ ಪುತ್ರನಾದ ಆತನು ಕುರುಕುಲಕ್ಕೆ ಪುಂಗವನಿದ್ದಂತೆ. (ಪುಂಗವ ಎಂದರೆ ಗಂಡುಗೂಳಿ, ಅರ್ಥಾತ್, ಮಹಾಬಲಶಾಲಿ). ಅಲ್ಲದೆ, ನಾನಾವಿಧವಾದ ನಿಯಮ-ಉಪವಾಸ-ತಪಸ್ಸುಗಳಲ್ಲಿ ತೊಡಗುತ್ತಿದ್ದನು. ಧರ್ಮಜ್ಞನೂ, ರೂಪದಲ್ಲಿ ನಿಸ್ಸಮನೂ ಆದ ಸಂವರಣನೇ ತಪತಿಗೆ ತಕ್ಕ ಪತಿಯೆಂಬುದಾಗಿ ಸೂರ್ಯನು ಭಾವಿಸಿದನು.


ಹೀಗಿರಲು, ಸಂವರಣನೊಮ್ಮೆ ಬೇಟೆಗೆ ಹೊರಟನು. ಆತನ ಕುದುರೆಯು ಹಸಿವು ಬಾಯಾರಿಕೆಗಳಿಂದಾಗಿ ಆ ಪರ್ವತಭೂಮಿಯಲ್ಲಿ ಕುಸಿದು ಸಾವನ್ನಪ್ಪಿತು. ಕಾಲ್ನಡಿಗೆಯಿಂದಲೇ ಆತನು ಮುನ್ನಡೆಯುತ್ತಿರಲು ಸುಂದರಿಯಾದ ಕನ್ಯೆಯೊಬ್ಬಳನ್ನು ಕಂಡು ಅವಳಿಗೆ ಮನಸೋತನು. ಆಕೆಯು ಲಕ್ಷ್ಮಿಯೋ ಸೂರ್ಯನ ಪ್ರಭೆಯೋ ಆಗಿರಬೇಕೆಂದೂ ತರ್ಕಿಸಿದನು. ಅವಳನ್ನು ಕಂಡು ತನ್ನ ಕಣ್ಣುಗಳು ಸಫಲವಾದವೆಂದು ಭಾವಿಸಿದನು.

ತನ್ನ ಗುಣಮಯವಾದ ಪಾಶಗಳಿಂದ ಆತನ ಮನಸ್ಸನ್ನೂ ಚಕ್ಷುಸ್ಸನ್ನೂ(=ನೇತ್ರವನ್ನೂ) ಕಟ್ಟಿಹಾಕಿಬಿಟ್ಟಳು.

 "ಸುಂದರಿ, ಯಾರು ನೀನು? ಯಾರ ಮಗಳು? ಇಲ್ಲೇಕೆ ನಿಂತಿರುವೆ? ನಿನ್ನ ಮುಖವನ್ನು ಕಂಡಷ್ಟಕ್ಕೇ ನನ್ನ ಮನಸ್ಸು ಕ್ಷೋಭೆಗೊಂಡಿದೆ." ಎಂದನು.

ಆದರೆ ಏನನ್ನೂ ಹೇಳದ ಅವಳು ಅಲ್ಲೇ ಮಾಯವಾದಳು. ಉನ್ಮತ್ತನಂತೆ ಅವಳಿಗಾಗಿ ಹುಡುಕಾಡಿ, ಆಯಾಸಗೊಂಡು ಮೂರ್ಛಿತನಾಗಿ ಕ್ಷಣಕಾಲ ನಿಶ್ಚೇಷ್ಟನಾದನು, ಸಂವರಣ.

ಮುಗ್ಧವಾದ ನಗೆಯುಳ್ಳ ಆ ಸುಂದರಿಯು ಆ ರಾಜನಿಗೆ ಮತ್ತೆ ಕಾಣಿಸಿಕೊಂಡು ಮಧುರವಾದ ಮಾತನ್ನು ಆಡಿದಳು.

  

ನಿನಗೆ ನನ್ನಲ್ಲಿ ಪ್ರೀತಿಯಿರುವುದಾದಲ್ಲಿ, ನನ್ನ ತಂದೆಯ ಬಳಿ ಪ್ರಾರ್ಥಿಸಿಕೋ. ನಾನು ತಪತಿ, ಸಾವಿತ್ರಿಯ ತಂಗಿ" ಎಂದಳು.

ಇತ್ತ ರಾಜನನ್ನು ಹುಡುಕಿಕೊಂಡು ಬಂದ ಮಂತ್ರಿಯು ರಾಜನಿದ್ದಲ್ಲಿಗೆ ಬಂದನು. ಬೇಟೆಯ ಬಳಲಿಕೆಯಿಂದ ಬಿದ್ದಿರುವನೆಂದು ಭಾವಿಸಿದನು. ಅರಸನ ಮೇಲೆ ತಣ್ಣೀರನ್ನು ಸಿಂಪಡಿಸಿದನು. ಆಗ ಎಚ್ಚರಗೊಂಡ ಸಂವರಣನು, ತಪತಿಗಾಗಿ ಸೂರ್ಯನನ್ನು ಕುರಿತು ಪ್ರಾರ್ಥನೆಯನ್ನು ಆರಂಭಿಸಿದನು. ಹಾಗೆ ಪ್ರಾರ್ಥಿಸುತ್ತಿರುವಾಗ, ಮಧ್ಯದಲ್ಲಿ ಕುಲಪುರೋಹಿತರಾದ ವಸಿಷ್ಠರನ್ನು ಸ್ಮರಿಸಿಕೊಂಡನು.

 

ಹನ್ನೆರಡನೆಯ ದಿನಕ್ಕೆ ಆಗಮಿಸಿದ ವಸಿಷ್ಠರು ತಮ್ಮ ದಿವ್ಯದೃಷ್ಟಿಯಿಂದಲೇ ಅರಸನ ಇಂಗಿತವನ್ನರಿತರು. ಆತನಿಗಾಗಿ ತಪತಿಯನ್ನು ಯಾಚಿಸಲೆಂದು ಸೂರ್ಯನ ಬಳಿ ತಾವೇ ಸಾಗಿದರು. ಸ್ವಾಗತೋಪಚಾರಗಳಾದ ಬಳಿಕ, ಬಂದ ಉದ್ದೇಶವನ್ನು ತಿಳಿಸಿದರು. ಸಂತುಷ್ಟನಾದ ಸೂರ್ಯನು ತನ್ನ ಮಗಳನ್ನು ಸಂವರಣನಿಗಾಗಿ ಅವರೊಂದಿಗೆ ಕಳುಹಿಸಿಕೊಟ್ಟನು. ತಪತೀ-ಸಂವರಣರ ವಿವಾಹವೂ ನೆರವೇರಿತು.

ಪತ್ನಿಯೊಂದಿಗೆ ವಿಹರಿಸಿಕೊಂಡಿರಲು ಬಯಸಿದ ರಾಜನು ರಾಜ್ಯರಕ್ಷಣೆಯನ್ನು ಮಂತ್ರಿಗೇ ವಹಿಸಿದನು. ಹನ್ನೆರಡು ವರ್ಷಗಳು ಕಳೆದುಹೋದವು. ಯಜ್ಞಯಾಗಾದಿಗಳಿಲ್ಲದೆ, ಮಳೆಯೂ ಬರದೆ ರಾಜ್ಯದಲ್ಲಿ ಕ್ಷಾಮವು ತಲೆದೋರಿತು. ಪ್ರಜೆಗಳಿಗೆ ದುರವಸ್ಥೆಯಾಗಿತು. ತಮ್ಮ ತಪೋಬಲದಿಂದ ಮಳೆಬರುವಂತೆ ಮಾಡಿದರು, ವಸಿಷ್ಠರು. ಜೊತೆಗೆ, ತಪತೀ-ಸಂವರಣರೂ ರಾಜಧಾನಿಗೆ ಬರುವಂತೆ ಮಾಡಿದರು. ಪ್ರಜೆಗಳು ಸಂತುಷ್ಟರಾದರು. ಹನ್ನೆರಡು ವರ್ಷಗಳ ಕಾಲ ಯಜ್ಞಯಾಗಾದಿಗಳನ್ನು ಸಂವರಣನು ಮಾಡಲು ಎಲ್ಲವೂ ಸುಸಮೃದ್ಧವಾಯಿತು. ಓ ಅರ್ಜುನ, ನಿನ್ನ ಪೂರ್ವಜನಾದ ಕುರುವು ತಪತೀ-ಸಂವರಣರ ಮಗ. ಎಂದೇ ನಿನ್ನನ್ನು ತಾಪತ್ಯ ಎಂದದ್ದು - ಎಂದನು.

ವಸಿಷ್ಠರ ತಪೋಬಲವನ್ನು  ಕೇಳಿ ತಿಳಿದುಕೊಂಡ ಅರ್ಜುನನು, ಅವರ ಪೂರ್ವವೃತ್ತಾಂತವನ್ನೂ ಕೇಳಬಯಸಿದನು. ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿದ್ದರಿಂದಲೇ ಅವರಿಗೆ ವಸಿಷ್ಠರೆಂದು ಹೆಸರು (ಇಂದ್ರಿಯಾಣಾಂ ವಶಕರೋ ವಸಿಷ್ಠ ಇತಿ ಚೋಚ್ಯತೇ) ಎಂದು ಹೇಳಿ, ವಸಿಷ್ಠಕಥೆಯನ್ನು ಗಂಧರ್ವನು ಆರಂಭಿಸಿದನು.


ಸೂಚನೆ : 04/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.