Monday, June 28, 2021

ಆರ್ಯಸಂಸ್ಕೃತಿ ದರ್ಶನ - 48 ಭಾಗವತ ಧರ್ಮ (Arya Samskruti Darshana - 48 Bhagavatha Dharma)

ಲೇಖಕರು : ಚಾಮುಗಳು



ಲೋಕದಲ್ಲಿ ಜನರು ಹುಟ್ಟಿನಿಂದಲೇ ಆಸ್ತಿಕ ಅಥವಾ ನಾಸ್ತಿಕ ಮನೋಧರ್ಮದಿಂದ ಕೂಡಿ ಜನ್ಮವೆತ್ತುತ್ತಾರೆ. ಆದುದರಿಂದಲೇ ಉಪದೇಶದಿಂದ ನಾಸ್ತಿಕನನ್ನು ಆಸ್ತಿಕನನ್ನಾಗಿ ಮಾಡಲಾಗುವುದಿಲ್ಲ ಅಥವಾ ಆಸ್ತಿಕನನ್ನು ನಾಸ್ತಿಕನನ್ನಾಗಿ ಮಾಡಲಾಗುವುದಿಲ್ಲ. ಈ ಸತ್ಯವನ್ನೆ ನಮ್ಮ ಪೂರ್ವಿಕರು

ಜನ್ಮಾಂತರಸಹಸ್ರೇಷು ಯಾ ಬುದ್ದಿಃ ಭಾವಿತಾಪುರಾ । 

ತಾಮೇವ ಭಜತೇ ಜಂತುಃ ಉಪದೇಶೋ ನಿರರ್ಥಕಃ ॥

ಎಂಬ ಶ್ಲೋಕದಲ್ಲಿ ಉಕ್ತಿಸಿರುತ್ತಾರೆ.

ನಮ್ಮ ಪುರಾಣೇತಿಹಾಸಗಳು ಅಂತಹ ಆಸ್ತಿಕ ಅಥವಾ ನಾಸ್ತಿಕರ ಹಲವಾರು ಕಥೆಗಳನ್ನು ಒಳಗೊಂಡಿವೆ. ಪ್ರಹ್ಲಾದ ಮತ್ತು ಹಿರಣ್ಯಕಶಿಪುಗಳ ಕಥೆಯು ಇದಕ್ಕೆ ಒಂದು ನಿದರ್ಶನ. ಅಹಂಕಾರದಿಂದ ತುಂಬಿದ ಹಿರಣ್ಯಕಶಿಪುವು ಭಗವದ್ದ್ವೇಷಿ. ತ್ರಿವರ್ಗಗಳೇ ಎಲ್ಲವೂ ಎಂದು ತಿಳಿದಿದ್ದ ಅಲ್ಪದೃಷ್ಟಿಯಿದ್ದ ಅವನು ತನ್ನ ಪ್ರೀತಿಯ ಪುತ್ರನಾದ ಪ್ರಹ್ಲಾದನೂ ತನ್ನಂತೆಯೇ ಇರಬೇಕೆಂದು ಬಯಸುತ್ತಾನೆ. ಆದರೆ ಪ್ರಹ್ಲಾದನು ಜನ್ಮದಿಂದಲೇ ಅತಿಶಯವಾದ ರೀತಿಯಲ್ಲಿ ಆಸ್ತಿಕ ಮನೋಧರ್ಮದಿಂದ ಕೂಡಿದ ಮಹಾಭಾಗವತ. ಆದುದರಿಂದ ಹಿರಣ್ಯಕಶಿಪುವು ಪ್ರಹ್ಲಾದನ ಮನಸ್ಸನ್ನು ಪರಿವರ್ತಿಸಲು ಮಾಡುವ ಪ್ರಯತ್ನಗಳೆಲ್ಲವೂ ವಿಫಲವಾಗುತ್ತವೆ. ರೋಚ್ಚಿಗೆದ್ದು ಅವನು ಮಗನನ್ನು ಕ್ರೂರವಾದ ಶಿಕ್ಷೆಗಳಿಂದ ದಂಡಿಸುತ್ತಾನೆ. ಆದರೆ ಶಿಕ್ಷೆಗಳಾವುವೂ ಪ್ರಹ್ಲಾದನ ಮನಸ್ಸನ್ನು ಬದಲಾಯಿಸಲು ಸಮರ್ಥವಾಗುವುದಿಲ್ಲ. ಪ್ರತಿಯಾಗಿ ಅವನು ತಾನು ಎಲ್ಲೆಲ್ಲಿಯೂ ಕಂಡ ಭಗವಂತನನ್ನೇ ಇನ್ನೂ ಅಧಿಕವಾಗಿ ಆಶ್ರಯಿಸುತ್ತಾನೆ. ಭಗವದೈಕಾತ್ಮ್ಯದಿಂದ ಶಿಕ್ಷೆಗಳಾವುವೂ ಅವನ ಮೇಲೆ ಸ್ವಲ್ಪವೂ ಕೆಂದುವುದಿಲ್ಲ. ಅವನ ಹೃದಯದಲ್ಲಿ ಗೋಚರನಾದ ಸರ್ವವ್ಯಾಪಿಯಾದ ಭಗವಂತನೇ ಒಂದು ಕಂಬದಲ್ಲಿ ಉದ್ಭವಿಸಿ ಹಿರಣ್ಯಕಶಿಪುವನ್ನು ಕೊಂದು ಪ್ರಹ್ಲಾದನನ್ನು ರಕ್ಷಿಸುತ್ತಾನೆ.

ಧರ್ಮಾತ್ಮನಾದ ಅಂಗರಾಜನಿಂದ ಹುಟ್ಟಿದ ವೇನನು ಜನ್ಮತಃ ನಾಸ್ತಿಕತೆಯ ಪ್ರತೀಕ. ನಾಸ್ತಿಕವಾದಪ್ರವರ್ತಕರಲ್ಲೊಬ್ಬ. ಚರಕಾಚಾರ್ಯನು, "ಪಾತಕೇಭ್ಯಃ ಪರಂ ಚೈತತ್ ಪಾತಕಂ ನಾಸ್ತಿಕಗ್ರಹಃ" (ನಾಸ್ತಿಕತೆಯೆಂಬ ಪಾಪವು ಎಲ್ಲ ಪಾಪಗಳಿಗಿಂತಲೂ ಮಿಗಿಲಾದುದು) ಎಂದು ನುಡಿಯುತ್ತಾನೆ. ವೇನನಲ್ಲಿ ಅಂತಹ ಪಾಪ ಪುರುಷನನ್ನು ನೋಡುತ್ತೇವೆ.

ಆಸ್ತಿಕಜನರೆಲ್ಲರಲ್ಲಿಯೂ ಆಸ್ತಿಕತೆಯು ಒಂದೇ ವಿಧವಾಗಿರುವುದಿಲ್ಲ. ಬಹು ಜನರಲ್ಲಿ ಅದು ಸಾಮಾನ್ಯವಾದ ರೀತಿಗಳಲ್ಲಿ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತದೆ. ಒಂದು ದೇವಸ್ಥಾನದ ಮುಂದೆ ನಡೆಯುವಾಗ ನಿಂತು ದೂರದಿಂದಲೇ ದೇವರಿಗೆ ಕೈಮುಗಿದು ಮುಂದೆ ಹೋಗುವುದು, ಗುಡಿಗೋಪುರಗಳಲ್ಲಿ ನಡೆಯುವ ಉತ್ಸವಾದಿಗಳಲ್ಲಿ ಪಾಲ್ಗೊಳ್ಳುವುದು, ತೀರ್ಥಯಾತ್ರೆ ಇತ್ಯಾದಿಗಳನ್ನು ಕೈಗೊಳ್ಳುವುದು, ಶ್ರಾದ್ಧಾದಿ ಕರ್ಮಗಳನ್ನು ಮಾಡುವುದು ಇತ್ಯಾದಿಗಳು ಅದಕ್ಕೆ ನಿದರ್ಶನ. ಬಹುಮಂದಿಗಳಲ್ಲಿ ಇವು ಗಾಢವಾದ ಶ್ರದ್ಧೆ, ವಿಚಾರ, ಭಾವನೆಗಳಿಲ್ಲದೆ ಯಾಂತ್ರಿಕವಾಗಿರುತ್ತವೆ. ನಮ್ಮ ಕಾಲದಲ್ಲಿ ಜನರು ತೀರ್ಥ, ಉತ್ಸವಾದಿಗಳಿಗೆ ದಂಡೆದಂಡೆಯಾಗಿ ಹೋಗುವವುದನ್ನು ನೋಡುತ್ತೇವೆ. ಜನರಲ್ಲಿ ತುಂಬ ದುಡ್ಡಿರುತ್ತದೆ. ಅದನ್ನು ಖರ್ಚು ಮಾಡಲು ಹೋಗುತ್ತಾರೆ. ಮನೋವಿನೋದಕ್ಕೋಸ್ಕರ ಹೋಗುತ್ತಾರೆ. ಆದರೆ ಅದರಿಂದ ಯಾವ ವಿಧವಾದ ಆಧ್ಯಾತ್ಮಿಕ ಸಂಸ್ಕಾರವನ್ನು ಪಡೆಯಬೇಕೋ ಅದನ್ನು ಪಡೆಯದೆಯೇ ಅವರು ತಮ್ಮ ತಮ್ಮ ಲೌಕಿಕ ಜೀವನದ ವ್ಯಾಪಾರಗಳಿಗೆ ಹಿಂದಿರುಗುತ್ತಾರೆ. ನಾಸ್ತಿಕತೆಗಿಂತ ಆಸ್ತಿಕತೆಯು ಉತ್ತಮವೆಂದು ಹೇಳಬಹುದಾದರೂ ಸರಿಯಾದ ಲಕ್ಷ್ಯ ಮತ್ತು ಪ್ರಯತ್ನಗಳಿಲ್ಲದ ಆಸ್ತಿಕತೆಯು ಮನುಷ್ಯನ ಆತ್ಮೋದ್ಧಾರಕ್ಕೆ ದಾರಿ ಮಾಡಿಕೊಡುವುದಿಲ್ಲ. ಮನುಷ್ಯರ ಇತರ ವ್ಯಾಪಾರಗಳಂತೆ ಅದೂ ಪರಂಪರೆ, ಅಭ್ಯಾಸ ಇತ್ಯಾದಿಗಳಿಗೆ ವಶರಾಗಿ ಜನರು ಮಾಡುವ ಒಂದು ವ್ಯಾಪಾರವಾಗಿ ಉಳಿಯುತ್ತದೆ. ಭಗವಂತನು ಒಳ್ಳೆಯ ಮನಸ್ಸನ್ನು ಕೊಟ್ಟಿರುವುದರಿಂದ ಅದನ್ನು ಬಳಸಿಕೊಂಡು ಆಧ್ಯಾತ್ಮಿಕಮಾರ್ಗದಲ್ಲಿ ಚೆನ್ನಾಗಿ ಬೆಳೆಯುವುದು ಆಸ್ತಿಕ ಮನೋಧರ್ಮವುಳ್ಳವರೆಲ್ಲರ ಕರ್ತವ್ಯ. ಅದು ಶ್ರದ್ಧೆ ಮತ್ತು ವಿಚಾರಪೂರ್ವಕವಾದ ಪ್ರಯತ್ನಗಳಿಂದ ಆಗುವ ಕೆಲಸ. ವಿಶೇಷವಾಗಿ ಆಸ್ತಿಕತೆಯ ಉನ್ನತೋನ್ನತವಾದ ಗುರಿಯನ್ನು ಮುಟ್ಟಿದ ಮಹಾನುಭಾವರ ಮೇಲ್ಪಂಕ್ತಿಯನ್ನು, ಅವರ ಆದರ್ಶಗಳನ್ನು ಎಡೆಬಿಡದೆ ಮನಸ್ಸಿನಲ್ಲಿಟ್ಟುಕೊಂಡು ಸಾಧಿಸಬೇಕಾದ ಪರಿಪೂರ್ಣತೆ.

ನಮ್ಮ ದೇಶದ ಚರಿತ್ರೆಯಲ್ಲಿ ಆಸ್ತಿಕ ಮನೋಧರ್ಮವು ಪುಷ್ಟವಾಗಿ ಬೆಳೆಯಲು ಆಶ್ರಯವನ್ನಿತ್ತಿರುವ ಶೈವ, ವೈಷ್ಣವ, ಶಾಕ್ತ ಮುಂತಾದ ಸಾಧನಾಪಂಥಗಳು ಬಹಳ ಹಿಂದಿನಿಂದ ಇರುತ್ತವೆ.ಅವುಗಳನ್ನು ಅವಲಂಬಿಸಿ ತಮ್ಮ ಆತ್ಮೋದ್ಧಾರದ ಮಾರ್ಗವನ್ನು ವಿರಚಿಸಿಕೊಂಡಿರುವ ಅನೇಕ ಜನ ಮಹನೀಯರುಗಳು ಇರುತ್ತಾರೆ. ಉದಾಹರಣೆಗೆ ಪಾಶುಪತ ಮಾರ್ಗದಲ್ಲಿ ನಡೆದು ಪರಿಪೂರ್ಣತೆಯನ್ನು ಸಾಧಿಸಿದವರ ಹೆಸರುಗಳನ್ನು ಉಲ್ಲೇಖಿಸುವ ಶ್ಲೋಕವೊಂದು ಈ ರೀತಿ ಇದೆ

ದುರ್ವಾಸ ಕೌಶಿಕ ಸುರೇಶ ಮೃಕಂಡುಪುತ್ರ ದೇವೇಜ್ಯ

ಬಾಣ ವಿಧಿಶಕ್ತಿ ದಧೀಚಿ ರಾಮಾನ್ ।

ವಾಮದೇವ ಕವಿ ಕುಂಭಜ ಗೌತಮಾದೀನ್ 

ಪುಣ್ಯಾನಿಮಾನ್ ಪರಮ ಪಾಶುಪತಾನ್ ಸ್ಮರಾಮಿ ॥ 

ಅದೇ ರೀತಿ ವೈಷ್ಣವಧರ್ಮದಲ್ಲಿ ಅಗ್ರೇಸರರಾದ ಮಹಾನುಭಾವರ ಹೆಸರುಗಳನ್ನು ನಿರ್ದೇಶಿಸುವ ಶ್ಲೋಕವೊಂದು ಈ ರೀತಿ ಇದೆ -

ಪ್ರಹ್ಲಾದನಾರದ ಪರಾಶರ ಪುಂಡರೀಕ 

ವ್ಯಾಸಾಂಬರೀಶ ಶುಕ ಶೌನಕ ಭೀಷ್ಮ ದಾಲ್ಭ್ಯಾನ್ ।

ರುಕ್ಮಾಂಗದಾರ್ಜುನ ಬಲೀಂದ್ರ ವಿಭೀಷಣಾದೀನ್ 

ಪುಣ್ಯಾನಿಮಾನ್ ಪರಮಭಾಗವತಾನ್ ಸ್ಮರಾಮಿ ॥

ವಾಸ್ತವದಲ್ಲಿ ಈ ಸಾಧನಾ ಪಂಥಗಳನ್ನು ಅನುಸರಿಸಿ ಅಧ್ಯಾತ್ಮ ಮಾರ್ಗದ ಕೊನೆ ಮುಟ್ಟಿದವರು ಅಸಂಖ್ಯಾತವಾಗಿರುತ್ತಾರೆ. ಶ್ಲೋಕಗಳು ಅವರಲ್ಲಿ ಗಣ್ಯರಾದವರ ಹೆಸರುಗಳನ್ನು ಮಾತ್ರ ಉಲ್ಲೇಖಿಸುತ್ತವೆ.

ಪ್ರಸಕ್ತ ಲೇಖನದಲ್ಲಿ ಆ ಸಾಧನಾಪಂಥಗಳ ಪೈಕಿ ಪ್ರಮುಖವಾದ ವೈಷ್ಣವ ಅಥವಾ ಭಾಗವತಧರ್ಮದ ಮೂಲದೃಷ್ಟಿಗಳನ್ನು ಕುರಿತು ಒಂದು ಸಂಗ್ರಹವಾದ ಪರಿಚಯವನ್ನು ಕೊಡಲು ಯತ್ನಿಸುತ್ತೇವೆ.

ನಮ್ಮ ದೇಶದ ಪ್ರಾಚೀನ ಋಷಿಗಳು ಜಟಿಲವಾದ ಯಜ್ಞಯಾಗಾದಿಗಳ ಮೂಲಕ ಮೂವತ್ತಮೂರು ದೇವತೆಗಳನ್ನು ಪೂಜಿಸಿದರು. ಆ ದೇವತೆಗಳ ಬಹುಮುಖವಾದ ಮಹಿಮೆಗಳನ್ನು ಹೊಗಳಿರುವುದೇ ವೇದಗಳು ಮಾಡಿರುವ ಕೆಲಸ. ಅನೇಕ ಚಾರಿತ್ರಿಕವಾದ ಮತ್ತು ಬೌದ್ಧಿಕವಾದ ಕಾರಣಗಳಿಂದ ಕಾಲಕ್ರಮದಲ್ಲಿ ವೇದದರ್ಮದ ಅನೇಕ ಪಾರ್ಶ್ವಗಳು ಲುಪ್ತವಾದುವು. ಕೆಲವು ಪಾರ್ಶ್ವಗಳು ಲುಪ್ತವಾಗದೆ ಉಳಿದು ನಮ್ಮ ಕಾಲದವರೆಗೆ ಮುಂದುವರಿದುಕೊಂಡು ಬಂದಿರುತ್ತವೆ ಮತ್ತು ಇಂದಿಗೂ ನಮ್ಮ ಜೀವನದ ಅಮೂಲ್ಯವಾದ ಅಂಗಗಳಾಗಿರುತ್ತವೆ. ಅದೇ ಸಮಯದಲ್ಲಿ ವೇದಗಳ ಹಲವು ದೇವತೆಗಳನ್ನು ಕೇಂದ್ರೀಕರಿಸಿಕೊಂಡು ಹಲವಾರು ಆರಾಧನಾ ಪಂಥಗಳು ಬಹುಮುಖವಾಗಿ ಬೆಳೆದು ನಮ್ಮ ಜನರಿಗೆ ಆಧ್ಯಾತ್ಮಿಕ ಅವಲಂಬನೆಯನ್ನು ಒದಗಿಸಿದುವು. ವಿಶೇಷವಾಗಿ ವಿಷ್ಣು, ಶಿವ, ಶಕ್ತಿ, ಸೂರ್ಯ, ಗಣಪತಿ ಮತ್ತು ಸ್ಕಂಧರು ಬಹಳ ಪ್ರಭಾವಶಾಲಿಯಾದ ಪಂಥಗಳಿಗೆ ಆರಾಧ್ಯ ದೇವತೆಗಳಾದರು.

ಅವರಲ್ಲಿ ಶಿವ ಮತ್ತು ವಿಷ್ಣುಗಳಿಗೆ ಅಗ್ರಸ್ಥಾನ. ಅವರಿಬ್ಬರ ಪೈಕಿ ನಮ್ಮ ಲೇಖನಕ್ಕೆ ವಿಷಯವಾದ ವಿಷ್ಣುವಿಗೆ ಸಂಬಂಧಿಸಿದಂತೆ ವಿರಚಿತವಾದ ಭಾರತ, ಭಗವದ್ಗೀತೆ, ರಾಮಾಯಣ ಮತ್ತು ಭಾಗವತಗಳಂತಹ ಮಹಾಗ್ರಂಥಗಳು ಅವನ ಆರಾಧನಾ ಪಂಥಕ್ಕೆ ಶಾಶ್ವತವಾದ ತಳಹದಿಯನ್ನು ಒದಗಿಸಿದುವು. ಅವು ಮತ್ತು ಮುಂದಿನ ಕಾಲಗಳಲ್ಲಿ ಅವುಗಳ ಸ್ಫೂರ್ತಿಯಿಂದ ವಿರಿಚಿತವಾದ ಆಗಮಾದಿ ಶಾಸ್ತ್ರ ಸಂಹಿತೆಗಳು ದೇಶದ ಎಲ್ಲ ಭಾಗಗಳನ್ನು ವ್ಯಾಪಿಸಿದ ವೈಷ್ಣವಧರ್ಮದ ಉಸಿರಾದುವು. ಅವು ಕೊಂಡಾಡುವ ಧರ್ಮವೇ ಭಾಗವತ(ವೈಷ್ಣವ) ಧರ್ಮ. ಈ ಧರ್ಮವು ವೇದ, ಉಪನಿಷತ್ತು, ಯೋಗ ಮತ್ತು ಸಾಂಖ್ಯಾದಿ ಶಾಸ್ತ್ರಗಳ ಸಾರವೆಲ್ಲವನ್ನೂ ತನ್ನಲ್ಲಿ ಒಳಗೊಂಡು ಮನುಷ್ಯರ ಆತ್ಯಂತಿಕ ಹಿತವನ್ನು ಸಂಪಾದಿಸಿಕೊಡಲು ಸರ್ವಥಾ ಸಮರ್ಥವಾಗಿ ಮುಂದುವರಿದಿದೆ. ಅದನ್ನಾಶ್ರಯಿಸಿ ತಮಿಳುು  ಮುಂತಾದ ದೇಶಭಾಷೆಗಳಲ್ಲಿ ವಿರಚಿತವಾಗಿರುವ ಸಾಹಿತ್ಯಗಳು ಪಂಡಿತ ಪಾಮರರಿಬ್ಬರ ಮನಸ್ಸನ್ನೂ ಅಪಹರಿಸಿರುತ್ತವೆ. ಅದರ ಅವಲಂಬನೆಯ ಮೇಲೆ ಬೆಳೆದ ಸಂಸ್ಥೆಗಳು ಸಾಮಾಜಿಕವಾದ ಏರುಪೇರುಗಳನ್ನು ಸರಿಪಡಿಸಿ ವಿವಿಧ ವರ್ಗಗಳಲ್ಲಿ ಸಾಮರಸ್ಯವನ್ನುಂಟುಮಾಡಲು ಬಹುದೂರದವರೆಗೆ ಸಫಲವಾಗಿರುತ್ತವೆ. ಅದರಿಂದ ವಾಸ್ತುಶಿಲ್ಪ, ನಾಟ್ಯ ಮುಂತಾದ ಅನೇಕ ಕಲೆಗಳು ಸ್ಫೂರ್ತಿ ಪಡೆದು ಜೀವನವನ್ನು ಸುಂದರವಾಗಿಸಿರುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ, ಭಾಗವತಧರ್ಮವು ಅನೇಕ ಸಾವಿರ ವರ್ಷಗಳ ಕಾಲದಲ್ಲಿ ಬೌದ್ಧಿಕವಾಗಿ ಹಾಗು ಭಾವನಾತ್ಮಕವಾಗಿ ಉಂಟಾದ ಸುಚಾರುರೂಪವಾದ ಬೆಳವಣಿಗೆಯ ಶ್ರೇಷ್ಠವಾದ ಪ್ರತೀಕವಾಗಿರುತ್ತದೆ. ಅದೆಲ್ಲವನ್ನೂ ಸ್ಮರಿಸಿಕೊಳ್ಳ ಬೇಕಾದರೆ ಬಹಳ ಕಾಲ ಮತ್ತು ಸ್ಥಳಗಳು ಅವಶ್ಯಕವಾಗುತ್ತವೆ. ಅದು ಇಲ್ಲಿ ಕೈಗೊಳ್ಳುವ ಕೆಲಸವಲ್ಲ. ಇಲ್ಲಿ ಪವಿತ್ರವಾದ ಭಾಗವತಧರ್ಮದ ಮೂಲ ದೃಷ್ಟಿಗಳನ್ನು ಕುರಿತು ಕೆಲವಂಶಗಳನ್ನು ವಾಚಕರ ಮುಂದಿರಿಸುತ್ತೇವೆ.

ವೇದ, ಉಪನಿಷತ್ತು, ಗೀತೆ ಮುಂತಾದ ಪವಿತ್ರ ಗ್ರಂಥಗಳು ತಪಸ್ಸಿನಿಂದ ಅಥವಾ ಅಧ್ಯಾತ್ಮ ಯೋಗದಿಂದ ನಮ್ಮ ದೇಶದ ಖುಷಿಗಳು ಮಾಡಿದ ಸತ್ಯದ ಸ್ವರೂಪದ ಉನ್ನತೋನ್ನತವಾದ ವರ್ಣನೆಗಳನ್ನು ಒಳಗೊಂಡಿವೆ. ಅವೆಲ್ಲವೂ ನಿರಪೇಕ್ಷವಾದ (Absolute) ಸತ್ಯದ ಸ್ವರೂಪವನ್ನು ಯಥಾವಸ್ಥಿತವಾಗಿ ಹೊಗಳುತ್ತವೆ. ಉದಾಹರಣೆಗೆ ಪುರುಷ ಸೂಕ್ತವನ್ನು ಹೇಳಿದ ಋಷಿಯು, 'ಪುರುಷನು ಸಾವಿರ ತಲೆಗಳಿಂದ ಕೂಡಿರುತ್ತಾನೆ. ಅವನಿಗೆ ಸಾವಿರ ಕಣ್ಣುಗಳಿರುತ್ತವೆ, ಸಾವಿರ ಪಾದಗಳಿರುತ್ತವೆ. ಅವನು ಭೂಮಿಯನ್ನು ಎಲ್ಲ ಕಡೆಗಳಿಂದಲೂ ಆವರಿಸಿ ಅದನ್ನು ದಶಾಂಗುಲದಷ್ಟು ಮೀರಿಯೂ ಇರುತ್ತಾನೆ. ವರ್ತಮಾನಕಾಲದಲ್ಲಿರುವುದೆಲ್ಲವೂ ಪುರುಷನೇ. ಹಿಂದೆ ಇದ್ದದ್ದು, ಮುಂದೆ ಬರುವುದೂ ಸಹ ಪುರುಷನೇ. ಮತ್ತು ಅವನು ಅಮೃತತ್ವಕ್ಕೆ ಈಶ್ವರ. ಇದೆಲ್ಲವೂ ಅವನ ಮಹಿಮೆಯೇ. ಆ ಪರಮಪುರುಷನು ಅದಕ್ಕಿಂತಲೂ ದೊಡ್ಡವನು. ಎಲ್ಲ ಭೂತಗಳೂ ಅವನ ಒಂದು ಕಾಲು ಭಾಗ (ಎಂದರೆ ಅವನ ಒಂದು ಸಣ್ಣ ಅಂಶ) ಮಾತ್ರ. ಅವನ ಮುಕ್ಕಾಲು ( ಅಥವಾ ಅಪರಿಮಿತ) ಭಾಗವು ದಿವಿಯಲ್ಲಿ ಅಮೃತವಾಗಿರುತ್ತದೆ. ಅವನು ತಮಸ್ಸಿನ ಆಚೆ ಆದಿತ್ಯನ ವರ್ಣದಿಂದ ಕೂಡಿ ಪ್ರಕಾಶಿಸುತ್ತಾನೆ. ಅಂತಹ ಮಹಾಂತನಾದ ಪುರುಷನನ್ನು ನಾನು ತಿಳಿದಿರುತ್ತೆೇನೆ' ಎಂದು ನುಡಿಯುತ್ತಾನೆ.

ನಾರಾಯಣಸೂಕ್ತವೂ ಸಹ ಆ ಸತ್ಯವಸ್ತುವನ್ನು ನೋಡಿದ ನಾರಾಯಣನೆಂಬ ಋಷಿಯೊಬ್ಬನ ಅಂತರಂಗದರ್ಶನವನ್ನು ಸುಂದರವಾಗಿ ವರ್ಣಿಸುತ್ತದೆ. 'ನಾಭಿಯ ಮೇಲುಗಡೆ ಹೃದಯವು ಇರುತ್ತದೆ. ಅದು ಸಮಸ್ತ ವಿಶ್ವಕ್ಕೂ ನೆಲೆ. ಅದರ ಕೊನೆೆಯಲ್ಲಿ ಒಂದು ಸೂಕ್ಷ್ಮವಾದ ರಂಧ್ರವಿರುತ್ತದೆ. ಅದರಲ್ಲಿಯೇ ಎಲ್ಲವೂ ಪ್ರತಿಷ್ಠಿತವಾಗಿದೆ. ಅದರ ಮಧ್ಯದಲ್ಲಿ ಒಂದು ದೊಡ್ಡ ಅಗ್ನಿಯಿರುತ್ತದೆ. ಅದರ ಜ್ವಾಲೆಗಳು ವಿಶ್ವವೆಲ್ಲವನ್ನೂ ವ್ಯಾಪಿಸಿವೆ. ಅದು ಎಲ್ಲ ದಿಕ್ಕಿಗೂ ಹೋಗಿದೆ. ಅದರ ಮಧ್ಯದಲ್ಲಿ ಮೇಲಕ್ಕೆ ಹೋಗಿರುವ ಒಂದು ಅಗ್ನಿಶಿಖೆಯಿರುತ್ತದೆ. ಅದು ನೀಲಮೇಘದ ಮಧ್ಯದಲ್ಲಿರುವ ವಿದ್ಯುಲ್ಲೇಖೆಯಂತೆ ಅತಿಶಯವಾದ ಪ್ರಕಾಶದಿಂದ ಬೆಳಗುತ್ತದೆ. ಅದು ಬತ್ತದ ಮೊನೆಯಷ್ಟು ಸೂಕ್ಷ್ಮವಾಗಿರುತ್ತದೆ. ಚಿನ್ನದ ಬಣ್ಣ-ಕಾಂತಿಯಿಂದ ಬೆಳಗುತ್ತದೆ. ಅಣುವಿನಂತೆ ಸೂಕ್ಷ್ಮವಾಗಿರುವ ಅದಕ್ಕೆಣೆಯಾದುದು ಯಾವುದೂ ಇರುವುದಿಲ್ಲ. ಆ ಶಿಖೆಯ ಮಧ್ಯದಲ್ಲಿ ಪರಮಾತ್ಮನು ಇರುತ್ತಾನೆ. ಅವನೇ ಬ್ರಹ್ಮ, ಶಿವ, ಇಂದ್ರ. ಅದೆೇ ಅಕ್ಷರ. ಅವನೇ ಎಲ್ಲವನ್ನೂ ಆಳುವ, ಎಲ್ಲವನ್ನೂ ಮೀರಿದ ಸ್ವರಾಟ್' ಎಂದು ಋಷಿಯು ವರ್ಣಿಸುತ್ತಾನೆ.

ಗೀತೆ, ಉಪನಿಷತ್ತು ಮಂತಾದ ಗ್ರಂಥಗಳೂ ಸಹ ಬೆರೆ ಬೇರೆ ಋಷಿಗಳು ಮತ್ತು ಜ್ಞಾನಿಗಳು ತಮ್ಮ ಹೃದಯಗುಹೆಯಲ್ಲಿ ಕಂಡ ಸತ್ಯದ ಸ್ವರರೂಪವನ್ನೆೇ ವಿಸ್ತಾರವಾಗಿ ಹೇಳುತ್ತವೆ.

ವಿಷ್ಣು, ನಾರಾಯಣ, ವಾಸುದೇವ, ಪರಮಾತ್ಮ, ಅಕ್ಷರ ಮುಂತಾದ ಬೇರೆಬೇರೆ ಹೆಸರುಗಳಿಂದ ವ್ಯವಹರಿಸಲ್ಪಡುವ ಭಗವಂತನ ಸಾಕ್ಷಾತ್ಕಾರವೇ ಭಾಗವತಧರ್ಮದ ಅಂತಿಮಲಕ್ಷ್ಯ. ಹಿಂದಿನವರು ಯೋಗ, ತಪಸ್ಸು ಇತ್ಯಾದಿಗಳ ದ್ವಾರಾ ಆ ಪರಿಪೂರ್ಣವಾದ ಅವಸ್ಥೆಯನ್ನು ಸಾಧಿಸಿದರು. ಆದರೆ ಯೋಗಸಾಧನೆಯು ಎಲ್ಲರಿಗೂ ಸಾಧ್ಯವಿಲ್ಲ. ಎಲ್ಲರೂ ಅಷ್ಟಾಂಗಯೋಗದ ಮೆಟ್ಟಲುಗಳನ್ನು ಹತ್ತಿಕೊಂಡು ಹೋಗಿ ಆತ್ಮಸಾಕ್ಷಾತ್ಕಾರ ಮಾಡಲಾರರು. ಆದರೆ ಆ ಪರಿಪೂರ್ಣತೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಭಾಗವತಧರ್ಮವು ಜೀವನವನ್ನೇ ಯೋಗಮಯವಾಗಿ ಮಾಡುವ ಒಂದು ಉಪಾಯವನ್ನು ಉಪದೇಶಿಸುತ್ತದೆ. ಆ ಲಕ್ಷ್ಯವನ್ನು ಮುಟ್ಟಿಸುವಂತಹ ರೀತಿಯಲ್ಲಿ ವ್ಯವಸ್ಥಿತವಾದ ಒಂದು ವಿಶಿಷ್ಟವಾದ ಭಕ್ತಿಯೋಗವನ್ನು ಹೇಳುತ್ತದೆ. ಅದನ್ನು ಭಾಗವತವು ಈ ರೀತಿ ವರ್ಣಿಸುತ್ತದೆ -

ಯೇ ವೈ ಭಗವತಾ ಪ್ರೋಕ್ತಾ ಉಪಾಯಾಹ್ಯಾತ್ಮಲಬ್ಧಯೇ ।

ಅಂಜಃ ಪುಂಸಾಮವಿದುಷಾಂ ವಿದ್ಧಿ ಭಾಗವತಾನ್ ಹಿ ತಾನ್ ॥

(ಭಗವಂತನು ಅಜ್ಞಾನಿಗಳು ತನ್ನನ್ನು ಸುಲಭವಾಗಿ ಪಡೆಯುವಂತೆ ಯಾವ ಉಪಾಯಗಳನ್ನು ಹೇಳಿರುವನೋ ಅದನ್ನೇ ಭಾಗವತಧರ್ಮವೆಂದು ತಿಳಿ)


ಈಶ್ವರನಿಂದ ದೂರವಾಗಿ ಮನುಷ್ಯನು, ನಾನು ದೇವತೆ, ಮನುಷ್ಯ ಇತ್ಯಾದಿ ಭಾವನೆಗಳಿಂದ ಕೂಡಿದ್ದಾಗ ಭಗವಂತನ ಮಾಯೆಯಿಂದ ಭ್ರಮೆ, ವಿಸ್ಮೃತಿ ಇತ್ಯಾದಿಗಳು ಉಂಟಾಗುತ್ತವೆ. ಆ ರೀತಿ ಆಗದಿರುವುದಕ್ಕೋಸ್ಕರ ಬುದ್ಧಿವಂತನಾದವನು ಗುರುವೇ ದೇವತೆ ಎಂಬ ದೃಢಭಾವನೆಯಿಂದ ಕೂಡಿದವನಾಗಿ ಭಗವಂತನನ್ನು ಭಜಿಸಬೇಕು. ಹೇಗೆ ಅವು ನಿಜವಲ್ಲದಿದ್ದರೂ ಧ್ಯಾನಮಾಡುವವನ ಯೋಚನೆಯ ಕಾರಣದಿಂದ ಸ್ವಪ್ನ, ಮನೋರಥ ಇತ್ಯಾದಿಗಳುಂಟಾಗುವುವೋ ಹಾಗೆಯೇ ಮನಸ್ಸಿನಲ್ಲಿ ಜೀವನದ ಕರ್ಮಗಳಿಗೆ ಸಂಬಂಧಿಸಿದ ಸಂಕಲ್ಪ - ವಿಕಲ್ಪಗಳುಂಟಾಗುತ್ತವೆ. ಅವುಗಳನ್ನು ಬುಧನಾದವನು ನಿರೋಧಮಾಡಬೇಕು. ಆಗ ಅಭಯವುಂಟಾಗುವುದು - ಇದು ನೈಚಾರಿಕವಾಗಿ ಭಾಗವತಧರ್ಮದ ತಳಹದಿ.

 ಮನೋನಿರೋಧವನ್ನು ಸಾಧಿಸಿ ಭಗವನ್ಮಾಯೆಯಿಂದ ತಪ್ಪಿಸಿಕೊಳ್ಳಬೇಕಾದರೆ ಮನುಷ್ಯನು ಲೋಕದಲ್ಲಿ ತಾನು ಏನೇನು ಕರ್ಮವನ್ನು ಮಾಡುತ್ತಾನೆಯೋ ಅದೆಲ್ಲವನ್ನೂ ಭಗವಂತನಿಗೆ ಅರ್ಪಿಸಬೇಕು. ಅದಾವುದನ್ನೂ ತನ್ನ ಮೇಲೆ ಹಾಕಿಕೊಳ್ಳಬಾರದು.

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಸ್ಸ್ವಭಾವಾತ್ ।

ಕರೋತ್ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯೇತ್ ॥ 

ಎಂಬುದು ಭಾಗವತಧರ್ಮದ ಒಂದು ಅಮೂಲ್ಯವಾದ ಉಪದೇಶ. ಕೃಷ್ಣನು

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।

ಅಹಂ ತ್ವಾ ಸರ್ವ ಪಾಪೇಭ್ಯೋ ಮೊಕ್ಷಯಿಷ್ಯಾಮಿ ಮಾ ಶುಚಃ ॥ 

(ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನ್ನನ್ನು ಏಕಮಾತ್ರ ಶರಣವಾಗಿ ಹೊಂದು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಬಿಡಿಸುತ್ತೇನೆ. ಶೋಕಿಸಬೇಡ.) ಎಂಬ ಶ್ಲೋಕದಲ್ಲಿ ಪರ್ಯಾಯವಾಗಿ ಅದನ್ನೇ ಹೇಳುತ್ತಾನೆ. ಇಂದ್ರಿಯಧರ್ಮ, ಮನೋಧರ್ಮ, ಬುದ್ಧಿಧರ್ಮ ಇತ್ಯಾದಿಗಳೆಲ್ಲವನ್ನೂ ಬಿಟ್ಟು ನನ್ನಲ್ಲಿ ಏಕಮಾತ್ರ ಶರಣುಹೊಂದು. ಅವನ್ನು ಬಿಟ್ಟು ಇರಲಾಗದಿರುವುದರಿಂದ ಅವನ್ನು ನಿನ್ನ ಮೇಲೆ ಹಾಕಿಕೊಳ್ಳದೆೆ ನನಗೆ ಅರ್ಪಣೆ ಮಾಡು ಎಂಬುದು ಅವನ ಅಭಿಪ್ರಾಯ.

ಭಗವಂತನ ಜನ್ಮಕಥೆಗಳನ್ನು ಕುರಿತು ಕೇಳುವುದು, ಭಗವನ್ನಾಮೋಚ್ಚಾರಣೆ, ಅವನ ಕಥೆಗಳನ್ನು ಲಜ್ಜೆಯಿಲ್ಲದೆ ಗಾನಮಾಡುತ್ತಾ ಅಸಂಗನಾಗಿ ಸಂಚರಿಸುವುದು, ಭಗವದ್ಭಕ್ತಿಪರವಶನಾಗಿ ಭಾವಾವಿಷತೆಯಿಂದ ನಗುವುದು, ರೋದಿಸುವುದು, ಲೋಕವನ್ನು ಗಣಿಸದೆ ಉನ್ಮತ್ತನಂತೆ ನರ್ತನ ಮಾಡುವುದು - ಇವು ನಿಜವಾದ ಭಾಗವತನ ಮನೋಧರ್ಮದ ಅಂಶಗಳು. ಚೈತನ್ಯ ಮಹಾಪ್ರಭುವು  ಹೀಗೆ ಮಾಡುತ್ತಿದ್ದನೆಂದು ಕೇಳಿದ್ದೇವೆ.

ಇದನ್ನು ಕುರಿತು ಯೋಚಿಸಿದಾಗ ಸ್ವಭಾವವಾಗಿಯೂ ಭಾವುಕರಾಗಿರುವವರು ಮಾತ್ರ ಈ ಭಾಗವತ ಧರ್ಮವನ್ನು ಅನುಸರಿಸಬಲ್ಲರೆಂಬುದು ಸಿದ್ಧವಾಗುತ್ತೆ. ಆದರೆ ಅವರಲ್ಲಿ ಒಂದು ತಾತ್ವಿಕ ದೃಷ್ಟಿಯೂ ಉಂಟು. ಪುರುಷಸೂಕ್ತವು, 'ಸ ಭೂಮಿಂ ವಿಶ್ವತೋವೃತ್ತ್ವಾ' ಎಂದು ಹೇಳುವ ಮಾತು ಭಾಗವತದಲ್ಲಿ ಅಕ್ಷರಶಃ ನಿಜವಾಗುತ್ತೆ. ಅವನು ಆಕಾಶ, ವಾಯು, ಅಗ್ನಿ, ನೀರು, ಭೂಮಿ, ಜ್ಯೋತಿಸ್ಸುಗಳು, ಸತ್ವಗಳು, ದಿಕ್ಕುಗಳು, ನದಿ ಮತ್ತು ಸಮುದ್ರಗಳೆಲ್ಲವೂ ಭಗವಂತನ ಶರೀರವಂದು ಭಾವಿಸಿ ಅವುಗಳಿಗೆ ನಮಸ್ಕರಿಸುವುದರ ಮೂಲಕ ಭಗವಂತನನ್ನು ಪೂಜಿಸುತ್ತಾನೆ. ಒಂದು ಮಾತಿನಲ್ಲಿ ಹೇಳುವುದಾದರೆ - ಭಕ್ತಿ, ಭಗವದನುಭವ ಮತ್ತು ಇತರ ವಿಷಯಗಳಲ್ಲಿ ವಿರಕ್ತಿ - ಇವು ಮೂರೂ ಅವನಲ್ಲಿ ಏಕಕಾಲದಲ್ಲಿ ವ್ಯಾಪಾರಮಾಡುತ್ತವೆ.

ಈ ದಾರಿಯಲ್ಲಿ ನಡೆದು ಅಚ್ಯುತನ ಪಾದಗಳಲ್ಲಿ ಮನಸ್ಸನ್ನಿರಿಸಿದಾಗ ಭಕ್ತಿ, ವಿರಕ್ತಿ, ಭಗವತ್ಪ್ರಬೋಧಗಳು ಉಂಟಾಗುತ್ತವೆ. ಅದರಿಂದ ಅವನು ಅತುಲವಾದ ಶಾಂತಿಯನ್ನು ಪಡೆಯುತ್ತಾನೆಂದು ಭಾಗವತವು ಘೋಷಿಸುತ್ತದೆ.

ಒಂದು ದೃಷ್ಟಿಯಿಂದ ನೋಡಿದಾಗ ಈ ಥರ್ಮವು ಸುಲಭವೆಂದು ತೋರಬಹುದು. ಆದರೆ ತತ್ತ್ವಜ್ಞಾನವುಂಟಾಗಲು ಯೋಗವು ಯಾವ ವಿಧವಾದ ಏಕಾಂತಮತಿಯನ್ನು ಹೇಳುತ್ತದೆಯೋ ಅದನ್ನೇ ಭಾಗವತ ಧರ್ಮವು ಹೇಳುವುದರಿಂದ ಯೋಗವು ಎಷ್ಟು ಕಷ್ಟವೋ ಈ ಭಾಗವತಧರ್ಮವೂ ಸಾಧಿಸಲು ಅಷ್ಟೇ ಕಷ್ಟವೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಗೀತೆಯ ಅನೇಕ ಶ್ಲೋಕಗಳು ಈ ಧರ್ಮವನ್ನೇ ಸಾರಭೂತವಾಗಿ ಉಪದೇಶಿಸುತ್ತವೆ. 'ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ' ಎಂಬುದು ಅದಕ್ಕೊಂದು ಉದಾಹರಣೆ. ಭಾಗವತದಲ್ಲಿ ಬರುವ ರಾಸಪಂಚಾಧ್ಯಾಯವು ಭಾಗವತಧರ್ಮಾನುಯಾಯಿಗಳ ಕಥೆಯನ್ನು ಸುಂದರವಾಗಿ ವರ್ಣಿಸುತ್ತದೆ. 

ಭಾಗವತ ಧರ್ಮವನ್ನು ಸಕ್ರಿಯವಾಗಿ ಅನುಸರಿಸದ ಭಾಗವೇ ನಮ್ಮ ಉಪಖಂಡದಲ್ಲಿ ಎಲ್ಲಿಯೂ ಇದ್ದಂತೆ ಕಾಣುವುದಿಲ್ಲ. ದ್ರವಿಡದೇಶ, ಮಹಾರಾಷ್ಟ್ರ, ಗುಜರಾತ್ ಮುಂತಾದ ದೇಶಗಳಲ್ಲಂತೂ ಈ ಧರ್ಮದ ಆಚರಣೆಯು ಬಗೆಬಗೆಯಾದ ನೃತ್ಯ, ಉತ್ಸವಾದಿಗಳ ರೂಪವನ್ನು ತೆಗೆದುಕೊಂಡು ಜನರ ಜೀವನವನ್ನು ರಸಮಯವಾಗಿ ಮಾಡಿರುತ್ತದೆ. ಭಾರತೀಯರ ಜೀವನಧಾರೆಯು ಒಂದು ಸುಂದರ ಸ್ವರೂಪವಾಗಿರುತ್ತದೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೪ ಸಂಚಿಕೆ:೫, ಮಾರ್ಚ್ ೧೯೮೫ ತಿಂಗಳಲ್ಲಿ  ಪ್ರಕಟವಾಗಿದೆ. 

Sunday, June 27, 2021

ಶ್ರೀರಾಮನ ಗುಣಗಳು - 11 ನೀತಿಮಾನ್- ಶ್ರೀರಾಮ (Sriramana Gunagalu - 11- Nitimaan Shri Rama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)



ನೀತಿ ಎಂಬ ಅರ್ಥದಲ್ಲಿ ನಯ, ವಿನಯ ಮುಂತಾದ ಪದಗಳನ್ನೂ ಉಪಯೋಗಿಸಲಾಗುವುದು. ನೀತಿಶಾಸ್ತ್ರದಲ್ಲಿಒಂದು ಮಾತಿದೆ- 'ವಿನಯವೆಂದರೆ ಶಾಸ್ತ್ರನಿಶ್ಚಯ, ಇಂದ್ರಿಯಜಯ. ಆದ್ದರಿಂದ ವಿನಯ ಉಳ್ಳವನು ಎಲ್ಲವನ್ನುಪಡೆಯುತ್ತಾನೆ' ಎಂದು. ವಿನಯವೆಂಬುದು ಬಾಗುವಿಕೆ. ಬಾಗಿದಾಗ ಮಾತ್ರ ಮೇಲಿರುವ ಮಹತ್ತಾದ ವಿಷಯ ಕೆಳಗೆಇಳಿಯಲು ಸಾಧ್ಯ. ಫಲಬಂದಾಗ ಗಿಡಮರಗಳು ಬಾಗುತ್ತವೆ. ದೂರದಲ್ಲಿರುವ ಮೋಡಗಳು ಸೇರಿ ಭಾರವಾಗಿ ಬಾಗಿದಾಗಮಳೆಯಾಗುತ್ತದೆ. ಮಹಾತ್ಮರಲ್ಲಿರುವ ಯಾವ ಉನ್ನತವಾದ ವಿಷಯವುಂಟೋ ಅದು ಹರಿಯಲು ಈ ನಯ-ವಿನಯವುಸಾಧನವಾಗುತ್ತದೆ. ಆತ್ಮದ ನೀತಿಗೆ ಅನುಗುಣವಾಗಿ ಮನಸ್ಸು ಮತ್ತು ಇಂದ್ರಿಯಗಳ ನೀತಿಯನ್ನು ಇಟ್ಟುಕೊಳ್ಳುವುದೇನೈತಿಕಜೀವನ. ಇದನ್ನು ತಪ್ಪಿದಾಗ ಅದು ಅವನ ಜೀವನದ ಗುರಿಯನ್ನೇ ಮರೆಸುತ್ತದೆ. ಹಾಗಾಗಿ ಜೀವನಕ್ಕೆ ನೀತಿಯುಅತ್ಯಂತ ಆವಶ್ಯಕ ಎಂಬ ಶ್ರೀರಂಗಮಹಾಗುರುಗಳ ಆಶಯವನ್ನು ಗಮನಿಸಬಹುದು.ಶ್ರೀರಾಮನನ್ನು ನೀತಿಮಾನ್, ನೀತಿಜ್ಞ ಎಂದೆಲ್ಲಾ ಹೇಳಲಾಗುತ್ತದೆ. ಆತನ ನೀತಿ ಲೋಕಕ್ಕೆ ಆದರ್ಶವಾದುದು. ಅವನನಯ- ವಿನಯ ಲೋಕಕ್ಕೆ ಮಾನ್ಯವಾದುದು. ಸರ್ವರೂ ಅನುಸರಿಸಲು ಯೋಗ್ಯವಾದುದು. ಸಾರ್ವಕಾಲಿಕವಾದುದು,ಸತ್ಯವಾದುದು. ಆತನಲ್ಲಿ ನೀತಿಜ್ಞತೆ ಇದ್ದುದರಿಂದ ಅವನ ಬಾಳಾಟದಲ್ಲಿ ಅಂಕುಡೊಂಕುಗಳುಕಾಣುವುದಿಲ್ಲ. 'ತಾನು ಏಕೆ ಈ ಭೂಮಿಗೆ ಅವತರಿಸಿದ್ದೇನೆ' ಎಂಬುದನ್ನು ಎಲ್ಲೂ ಮರೆತಿಲ್ಲ. ಅತಿಮಾನುಷವಾದಯಾವ ಪವಾಡವನ್ನೂ ಮಾಡದೇ ಮಾನವನ ರೂಪದಿಂದಲೇ ದಾನವನ ಸಂಹಾರಕ್ಕಾಗಿ ಅವತರಿಸಿದ್ದು ಎಂಬುದನ್ನುತನ್ನ ಜೀವನದ ಉದ್ದಕ್ಕೂ ತೋರಿಸಿದ್ದಾನೆ. ಕೆಲವೊಮ್ಮೆ, ನಾವು ಯಾವುದೋ ಕಾರ್ಯಾರ್ಥವಾಗಿ ಒಂದೆಡೆಗೆ ಬಂದಾಗ, ಬಂದ ಕಾರಣವೇ ನಮಗೆ ಮರೆತು ಹೋಗಿಬಿಡುತ್ತದೆ.

ಆದರೆ ರಾಮನು ತಾನು ಬಂದ ಉದ್ದೇಶವನ್ನು ಎಂದೂ ಮರೆತವನಲ್ಲ. ಶ್ರೀರಾಮನ ಪ್ರತಿಜ್ಞೆಯೇ ವಿಶಿಷ್ಟವಾದುದು. ಆದರ್ಶ ರಾಜ್ಯ ವ್ಯವಸ್ಥೆಯ ದೃಷ್ಟಿಯಿಂದ ಶ್ರೀರಾಮನು ತನ್ನಮಡದಿಯನ್ನೇ ತ್ಯಾಗಮಾಡಿದ ಮಹಾನ್ ಆದರ್ಶಪುರುಷ. ಕೊಟ್ಟ ಮಾತನ್ನು ತಪ್ಪದಿರುವುದು ಅವನ ನೀತಿಮತ್ವಕ್ಕೆಸಾಕ್ಷಿ. ಭರವಸೆಗಳ ಮಹಾಪೂರವನ್ನೇ ಹರಿಸಿ, ಅವುಗಳಲ್ಲಿ ಯಾವುದೊಂದನ್ನೂ ಈಡೇರಿಸದೆ, ಜನರಿಗೆ ಮೋಸಮಾಡುವ ವಿಚಾರ ಶ್ರೀರಾಮನ ಚರಿತೆಯಲ್ಲಿ ಎಲ್ಲೂ ನೋಡಲಾರೆವು. ಈ ದೃಷ್ಟಿಯಿಂದಲೇ ಅವನ ರಾಜ್ಯವು 'ರಾಮರಾಜ್ಯ'ವೆಂದೇಪ್ರಸಿದ್ಧಿ ಪಡೆದಿದೆ.ಗುರುಹಿರಿಯರಲ್ಲಿ ತೋರುವ ವಿನಯವು ಶ್ರೀರಾಮನ ನೀತಿವಂತಿಕೆಗೆ ಉದಾಹರಣೆ. ಕೈಕೇಯಿಯು ಶ್ರೀರಾಮನಿಗೆ ವನಕ್ಕೆತೆರಳಲು ಹೇಳಿದಾಗ ಅದಕ್ಕೆ ಮರುಮಾತಾಡದೆ, ಅದನ್ನು ಹಾಗೆಯೇ ಸ್ವೀಕರಿಸಿ, ತಂದೆತಾಯಿಯರ ಎಲ್ಲಾಮಾತುಗಳನ್ನು ಸಗೌರವವಾಗಿ ಹೇಗೆ ನಡೆಸಿಕೊಡಬೇಕೆಂಬುದನ್ನು ತೋರಿಸಿದ ಶ್ರೀರಾಮ. ತಾನು ಭಗವಂತನ ಅವತಾರ ಎಂದುತಿಳಿದಿದ್ದರೂ, ತನ್ನ ಸ್ಥಾನದ ಮಹತ್ತ್ವವನ್ನು ಎತ್ತಿಹಿಡಿಯಲು ವಸಿಷ್ಠ, ವಿಶ್ವಾಮಿತ್ರ, ಅಗಸ್ತ್ಯಾದಿ ಮಹರ್ಷಿಗಳಆಶೀರ್ವಾದವನ್ನು ಬೇಡಿದ. ಕೊನೆಗೆ ಯುದ್ಧದಲ್ಲಿ ಅಗಸ್ತ್ಯರಿಂದ ಆದಿತ್ಯಹೃದಯ ಮಂತ್ರೋಪದೇಶವನ್ನೂ ಪಡೆದುತಾನೊಬ್ಬ ಸಾಮಾನ್ಯ ಮಾನವನಂತೆ  ವರ್ತಿಸಿದ. ಹೀಗೆ ಅನೇಕ ಕಡೆ ತನ್ನ ಆದರ್ಶವಾದ ನೀತಿಯನ್ನುಪ್ರಕಟಪಡಿಸಿ ಆದರ್ಶನಾದ ಶ್ರೀರಾಮ. 

ಸೂಚನೆ : 27/6/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.

Saturday, June 26, 2021

ಷೋಡಶೋಪಚಾರ - 6 ಅರ್ಘ್ಯ (Shodashopachaara - 6 Arghya)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಷೋಡಶೋಪಚಾರಗಳಲ್ಲಿ ನಾಲ್ಕನೆಯ ಉಪಚಾರ ಅರ್ಘ್ಯ. ಅರ್ಘ್ಯ ಎಂದರೆ ಪೂಜಾಯೋಗ್ಯವಾದುದು.ದೂರ್ವಾ-ಗಂಧ-ಪುಷ್ಪ-ಅಕ್ಷತೆಗಳಿಂದ ಕೂಡಿದ ನೀರು ಎಂಬ ಅರ್ಥವೂ ಉಂಟು. ಭಗವಂತನಿಗೆ ಅಥವಾಬಂದ ಅತಿಥಿಗಳಿಗೆ ಗಂಧಾಕ್ಷತೆಗಳಿಂದ ಮಿಶ್ರವಾದ ಜಲವನ್ನು ಕೈಗೆ ಕೊಡುತ್ತೇವೆ. ಇದನ್ನು 'ಅರ್ಘ್ಯ'ಎಂದು ಕರೆಯುತ್ತಾರೆ. ಪೂಜ್ಯರಿಗೆ ಕೊಡುವ ಗೌರವದ ದ್ಯೋತಕವಾಗಿ ಮಾಡುವ ವಿಧಾನ ಇದಾಗಿದೆ.ನಮಗಿಂತ ಹಿರಿದಾದ ವಿಷಯವನ್ನು ಗೌರವಿಸುವುದನ್ನು ಕಲಿಯಬೇಕು. ನಮಗೆ ಹಿರಿದಾದ ವಿಷಯಯಾವುದೆಂಬ ಅರಿವು ನಮಗೆ ಯಾವಾಗ ಬರುತ್ತದೆಯೋ ಆಗ ಅವರಲ್ಲಿದ್ದ ಗುಣಧರ್ಮಗಳನ್ನುಆದರಿಸುವ ಸ್ವಭಾವ ನಮ್ಮಲ್ಲಿ ಬೆಳೆಯುತ್ತದೆ. ಆ ವಿಷಯಕ್ಕೆ ನಾವು ಬಾಗಿದಾಗ ಆ ಗುಣಗಳುನಮ್ಮಲ್ಲಿಗೆ ಹರಿಯುತ್ತವೆ. ಹರಿಯುವಿಕೆಯು, ತಾನು ಇರುವುದಕ್ಕಿಂತ ಕೆಳಜಾಗಕ್ಕೆ ತಾನೆ!. ಆಗ ತಾನೆ ನಾವು ಮೇಲೇರಲು ಸಾಧ್ಯ!.ಧರ್ಮರಾಜನು ಒಮ್ಮೆ ರಾಜಸೂಯ ಯಾಗವನ್ನು ಮಾಡುತ್ತಾನೆ. ಯಾಗಾಂತ್ಯದಲ್ಲಿಅಗ್ರ(ಅರ್ಘ)ಪೂಜೆಯನ್ನು ಯಾರಿಗೆ ಸಲ್ಲಿಸಬೇಕೆಂಬ ಜಿಜ್ಞಾಸೆ ಉಂಟಾಗುತ್ತದೆ. ಆಗ ಅಲ್ಲಿದ್ದಭೀಷ್ಮಾಚಾರ್ಯರು ಶ್ರೀಕೃಷ್ಣನಿಗೇ ಅಗ್ರಪೂಜೆ ಸಲ್ಲಬೇಕೆಂದು ಅಭಿಪ್ರಾಯವನ್ನು ತಿಳಿಸುತ್ತಾರೆ. ಆಗಶಿಶುಪಾಲನು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಾನೆ. ಕೊನೆಗೆ ಶ್ರೀಕೃಷ್ಣನಿಗೇ ಅಗ್ರರ್ಘಪೂಜೆಸಲ್ಲುತ್ತದೆ. 

ಪೂಜ್ಯರು ಯಾರೆಂಬುದನ್ನು ಭೀಷ್ಮಾಚಾರ್ಯರು ಗುರುತಿಸುತ್ತಾರೆ. ಆದರೆ ಶಿಶುಪಾಲನಿಗೆಕೃಷ್ಣನಲ್ಲಿದ್ದ ಪೂಜ್ಯಭಾವವನ್ನು ಗುರುತಿಸಲಾಗಲಿಲ್ಲ ಎಂಬ ಕಥೆಯನ್ನು ನಾವು ನೋಡಬಹುದು.ಪೂಜನೀಯವಾದುದನ್ನು ಗುರುತಿಸಿ ಸಲ್ಲಿಸಿದ ಪೂಜೆಯು ಪೂಜಿಸಿದವನನ್ನು ಪೂಜ್ಯವಾದುದರಎತ್ತರಕ್ಕೆ-ಅವನ ಭಾವಕ್ಕೆ ಕರೆದುಕೊಂಡು ಹೋಗುತ್ತದೆ.ಲೋಕದಲ್ಲಿ ಎತ್ತರದಲ್ಲಿರುವ ವಿಷಯವೆಂದರೆ ಭಗವಂತನು. ಅವನಿಗೆ ಅಥವಾ ಅವನನ್ನು ಹೊತ್ತುತಂದವರಿಗೆ ಕೊಡುವ ಯಾವ ಉಪಚಾರವಿದೆಯೋ ಅದನ್ನು ಅರ್ಘ್ಯವೆನ್ನುತ್ತಾರೆ. ಹಾಗಾಗಿಭಗವಂತನನ್ನು ಉಪಚರಿಸುವಾಗ ಈ ಭಾವದಿಂದ ಇರಬೇಕು. ಅದಲ್ಲವಾದರೆ ಅದು ಕೇವಲ ಚೇಷ್ಟೆಮಾತ್ರ ಆಗಿರುತ್ತದೆ. ಇಲ್ಲೂ ಕೂಡ ಹಿಂದಿನ ಉಪಚಾರಗಳಂತೆ ದೇವತಾಸಾನ್ನಿಧ್ಯಕ್ಕೆ ತಕ್ಕಂತೆಅವುಗಳಿಗೆ ಹೇಳಿದ ಮಂತ್ರಗಳಿಂದ ದೂರ್ವಾಕ್ಷತಗಂಧಪುಷ್ಪಗಳಿಂದ ಕೂಡಿದ ಜಲದೊಂದಿಗೆಅರ್ಘ್ಯವನ್ನು ಕೊಡಬೇಕು. ಕೆಲವೊಮ್ಮೆ ನೀರು, ಹಾಲು, ದರ್ಭಾಗ್ರ, ಮೊಸರು, ಅಕ್ಷತೆ, ತಿಲ, ಯವ,ಬಿಳಿಸಾಸಿವೆ ಹೀಗೆ ಎಂಟು ದ್ರವ್ಯಗಳಿಂದ ಕೂಡಿದ ಅರ್ಘ್ಯವನ್ನು ಶಂಖದಿಂದ ಕೊಡುವ ವಿಧಾನವೂಉಂಟು. ಇದಾವುದೂ ಸಿಗದಿರುವಾಗ ದೂರ್ವಾ, ಅಕ್ಷತೆ ಮತ್ತು ಜಲದಿಂದಲೂ ಅರ್ಘ್ಯವನ್ನುಕೊಡಬಹುದು ಎಂಬುದಾಗಿ ಹೇಳಲಾಗಿದೆ. ಪದಾರ್ಥ ಸಿಗಲಿಲ್ಲ ಎಂಬ ಕಾರಣಕ್ಕೆ ಕರ್ಮವನ್ನುಲೋಪಮಾಡಬಾರದು. ಪೂಜನೀಯವಾದುದನ್ನು ಗುರುತಿಸುವ ಸಂಕೇತವಾಗಿ ಈ ಅರ್ಘ್ಯವೆಂಬಉಪಚಾರ ಬಂದಿದೆ.

ಸೂಚನೆ : 26/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಭರವಸೆಯಿಂದ ಬದುಕೋಣ (Bharavaseyinda Badukona)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in




ಮಹಾಭಾರತದ ಬಗ್ಗೆ ಒಂದು ಮಾತಿದೆ-"ಇಲ್ಲಿ ಏನು ಇದೆಯೋ ಅದೇ ಬೇರೆಡೆ ಇರುವುದು; ಇಲ್ಲಿ ಏನಿಲ್ಲವೋ ಅದಿನ್ನೆಲ್ಲೂ ಇಲ್ಲ" ಎಂದು. ಹೌದು. ಒಂದು ಲಕ್ಷ ಶ್ಲೋಕಗಳನ್ನೊಳಗೊಂಡ ಮಹಾಭಾರತದಲ್ಲಿನ ಪ್ರಸಂಗಗಳು, ಉಪಕಥೆಗಳು ಹಾಗೂ ತತ್ತ್ವೋಪದೇಶಗಳನ್ನು ನೋಡಿದರೆ ಯಾರಿಗಾದರೂ ಈ ಮಾತು ನಿಜವೆನಿಸದೆ ಇರದು. ಆದ್ದರಿಂದ ಜೀವನದಲ್ಲಿ ನಮಗೆ ಕಷ್ಟ ಬಂದಾಗಲಾದರೂ ಒಮ್ಮೆ ಮಹಾಭಾರತವನ್ನು ಓದಲೇಬೇಕು. ಅದರಲ್ಲಿ ಎಲ್ಲೋ ಒಂದೆಡೆ ನಮಗೆ ಬೇಕಾದ ಸಾಂತ್ವನ, ಸತ್ಕಾರ್ಯಕ್ಕೆ ಬೇಕಾದ ಧೈರ್ಯದ ಆಸರೆ ಸಿಗುತ್ತದೆ. 


ಪಾಂಡವರು ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದು ಪ್ರಸಿದ್ಧ ಕಥೆಯೇ. ಪಾಂಡವರು ಧರ್ಮಿಷ್ಠರಾಗಿದ್ದರೂ, ಜೂಜಾಟದಲ್ಲಿ ತೊಡಗಿ ಜೀವನವೆಲ್ಲ ಜಂಜಾಟಕ್ಕೆ ಸಿಲುಕಿತು. ನಮ್ಮ ಜೀವನದಲ್ಲೂ ಹೀಗೆ ನಾವು ಮಾಡುವ ಯಾವುದೋ ಒಂದು ತಪ್ಪು, ಕಷ್ಟಗಳ ಸರಮಾಲೆಯನ್ನೇ ತಂದೀತು. ಧರ್ಮಕ್ಕೆ ಕಟ್ಟುಬಿದ್ದು ಕಾಡಿಗೆ ತೆರಳಿದರೂ, ಪಾಂಡವರಿಗೂ ಅನ್ನಿಸಿತು- ತಮ್ಮಷ್ಟು ಯಾರೂ ಕಷ್ಟಪಟ್ಟಿಲ್ಲವೆಂದು. ಆಗ ಕಾಡಿನಲ್ಲಿದ್ದ ಋಷಿಗಳು ಬಗೆಬಗೆಯಾಗಿ ಇವರನ್ನು ಸಮಾಧಾನಗೊಳಿಸಿದರು. ನಳಮಹಾರಾಜನ ವೃತ್ತಾಂತ, ಸಾವಿತ್ರಿಯ ಉಪಾಖ್ಯಾನ ಮುಂತಾದುವುಗಳನ್ನು ಹೇಳಿದರು. ಆಗ ಪಾಂಡವರಿಗೆ ಅರಿವಾಯಿತು-ತಮಗಿಂತ ಕಷ್ಟಪಟ್ಟವರೂ ಎಷ್ಟೋ ಮಂದಿ ಇದ್ದರೆಂದು. ಅವರು ಕಾಡಿನಲ್ಲಿದ್ದಾಗಿನ ಸ್ಥಿತಿಯನ್ನು ಯೋಚಿಸಿದರೆ ಅವರ ಭವಿಷ್ಯ ಅಸ್ಪಷ್ಟವಾಗಿಯೇ ಇದ್ದಿತು.  ಒಂದು ವೇಳೆ ಅಜ್ಞಾತವಾಸದಲ್ಲಿ ಅವರು ಪತ್ತೆಯಾಗಿಬಿಟ್ಟಿದ್ದರೆ ಅವರ ಜೀವನ ಮತ್ತೆ ದುಸ್ತರವೇ ಆಗುತ್ತಿದ್ದಿತು. ಆದರೂ ಅವರು ಧೈರ್ಯವನ್ನು ತಂದುಕೊಂಡಿದ್ದರಿಂದಲೇ ದೊಡ್ಡ ಸೇನೆಯನ್ನು ಒಗ್ಗೂಡಿಸಿಕೊಂಡು, ಕೌರವರನ್ನು ನಿರ್ಮೂಲಮಾಡಿ ಧರ್ಮರಾಜ್ಯವನ್ನು ಸ್ಥಾಪಿಸುವಂತಾಯಿತು. ದೈವವು ತನ್ನದೇ ಆದ ಲೆಕ್ಕಾಚಾರದಂತೆ ಕೃಷ್ಣನ ರೂಪದಲ್ಲಿ ತನ್ನ ಸಹಾಯಹಸ್ತವನ್ನು ಅವರಿಗೆ ನೀಡಿತು. ಸಹಜವಾಗಿ ವೀರಕ್ಷತ್ರಿಯರಿಗಿದ್ದ ದೇಹಬಲ, ಮನೋಬಲಗಳಲ್ಲದೆ, ಕೃಷ್ಣನಲ್ಲಿ ಅವರಿಗಿದ್ದ ನಂಬಿಕೆ, ಪಾಂಡವರನ್ನು ಖಿನ್ನತೆಯಿಂದ ಮೇಲೇಳುವಂತೆ ಮಾಡಿತು.


ದೈವವನ್ನು ನಂಬಿದವನು, ತಾನೆಣಿಸಿದಂತೆ ಅದು ಕಾಪಾಡದಿದ್ದರೂ, ಮುಂದೇನೋ ಇನ್ನೂ ಒಳ್ಳೆಯದಾಗುವುದಕ್ಕಾಗಿಯೇ ಕಷ್ಟಗಳು ಇನ್ನೂ ಕರಗಿಲ್ಲವೆಂದು ನಂಬುತ್ತಾನೆ. ದೇವರ ಮೇಲೆ ಭಾರ ಹಾಕಿದವನ ಮನಸ್ಸು, ಮೊದಲು ಹಗುರವಾಗುತ್ತದೆ. ಆಗ ಯಾವುದೇ ಕಾರ್ಯಸಾಧನೆಗೆ ತನ್ನ ಪ್ರಯತ್ನವನ್ನು ಮತ್ತಷ್ಟು ಚೆನ್ನಾಗಿ ಮಾಡಬಲ್ಲ. ದೇವರನ್ನು ನಂಬಿ ಪುರುಷಪ್ರಯತ್ನವನ್ನು ಕೈಬಿಡಬೇಕೆಂದು ನಮ್ಮ ಆರ್ಷಸಾಹಿತ್ಯ ಎಲ್ಲೂ ಹೇಳಿಲ್ಲ. ಆತಂಕಕ್ಕೊಳಗಾದವನು ಭೀಮಬಲವುಳ್ಳವನಾಗಿದ್ದರೂ ಕುಸಿದು ಹೋಗುತ್ತಾನೆ. ಆದ್ದರಿಂದ ಕಷ್ಟದಲ್ಲಿರುವವನ ಬಂಧುಮಿತ್ರರು, ಆತನಿಗೆ ದೈವದ ಮೇಲೆ ಭರವಸೆಯನ್ನಿಡಬೇಕೆಂದು ತಿಳಿಹೇಳಬೇಕು; ಕಷ್ಟಕಾಲಕ್ಕೆ ನಾವಿದ್ದೇವೆ ಎಂಬ ಆಶ್ವಾಸನೆಯನ್ನು ನೀಡಬೇಕು. 


ಯುದ್ಧಭೂಮಿಯಲ್ಲಿರುವ ಸೈನಿಕನ ಮನಃಸ್ಥಿತಿಯಿಂದ ನಾವು ಪಾಠ ಕಲಿಯಬಹುದು. ಸಾಯುವುದಕ್ಕೆ ಹೆದರದಿರುವುದರಿಂದಲೇ ಆತ ದೇಶಕ್ಕಾಗಿ ಯುದ್ಧಮಾಡಬಲ್ಲ. ರೋಗಿಗೆ ಸಾವು ಸನ್ನಿಹಿತವೆಂದು ತಿಳಿದಿದ್ದರೂ ಸದ್ವೈದ್ಯನು ರೋಗಿಯ ಕೊನೆಯುಸಿರು ಇರುವವರೆಗೂ ಚಿಕಿತ್ಸೆ ನೀಡುತ್ತಲೇ ಇರುತ್ತಾನೆ. ಹಾಗೆ ಕೊನೆ ಗಳಿಗೆಯವರೆಗೂ ನಮಗೆ ತಿಳಿದಷ್ಟೂ ಪ್ರಯತ್ನಗಳನ್ನು ಮಾಡಬೇಕು. ಆತಂಕವಿರುವವನು ಪ್ರತಿಕ್ಷಣದಲ್ಲೂ ಸಾಯುತ್ತಾನೆ. ಧೈರ್ಯವಿರುವವನು ಒಮ್ಮೆ ಮಾತ್ರ ಸಾಯುತ್ತಾನೆ. ಸಾವು ಅನಿವಾರ್ಯವೆಂದು ತಿಳಿದೂ ಕೊನೆಯ ಕ್ಷಣದವರೆಗೆ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಾ ಇದ್ದವರಿದ್ದಾರೆ. ಮನೋಬಲದಿಂದ ಮೃತ್ಯುವನ್ನು ವರ್ಷಗಟ್ಟಲೆ ಮುಂದೂಡಿದವರಿದ್ದಾರೆ. ಇಂತಹ ಮನೋಬಲ ನಮಗೆ ಬರಲೆಂದು ದೇವರನ್ನು ಪ್ರಾರ್ಥಿಸೋಣ. "ಬಂದದ್ದೆಲ್ಲ ಬರಲಿ; ಗೋವಿಂದನ ದಯೆಯಿರಲಿ" ಎನ್ನುವ ಧೈರ್ಯ, ನಂಬಿಕೆ ನಮ್ಮದಾಗಲಿ.


ಸೂಚನೆ : 26/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಯೋಗತಾರಾವಳಿ - 11 ಸೂರ್ಯ-ಚಂದ್ರನಾಡಿಗಳನ್ನು ಬಿಟ್ಟು (Yogataravali - 11 Surya-chandranadigalannu Bittu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ಯೋಗತಾರಾವಳಿ (ಶ್ಲೋಕ ೧೧) 

ತ್ರಿಕೂಟ-ನಾಮ್ನಿ…

ಕನ್ನಡದಲ್ಲಿ 'ತಿಕ' ಎಂಬ ಪದವು ಯಾರಿಗೆ ಗೊತ್ತಿಲ್ಲ? ಗೊತ್ತಿಲ್ಲದಾಗಿರಬಹುದಾದ ವಿಷಯವೆಂದರೆ ಅದು ಸಂಸ್ಕೃತದಿಂದ ಬಂದದ್ದು ಎಂಬುದು. 'ತ್ರಿಕ' ಎಂಬುದು 'ತಿಕ' ಆಗಿದೆ. ಮೂರರ ಗುಂಪಿಗೆ 'ತ್ರಿಕ'ಎಂದು ಹೆಸರು. ಮೂರು ಮೂಳೆಗಳು ಸೇರುವೆಡೆಯು 'ತ್ರಿಕ'.

ಎರಡು ತ್ರಿಕೂಟಗಳು

ಯೋಗಶಾಸ್ತ್ರದ ಸಂದರ್ಭದಲ್ಲಿ ಈ ವಿಷಯವೇಕೆ? ಬೆನ್ನು ಹುರಿಯ ಕೆಳಭಾಗದಲ್ಲಿ ಮೂರು ಮೂಳೆಗಳು ಸೇರುತ್ತವೆ. 'ಗುದ' ಅಥವಾ 'ಪಾಯು' ಎಂದು ಹೆಸರುಳ್ಳ ಈ ಮಲ-ವಿಸರ್ಜನ-ಸ್ಥಾನವು ಮೂರು ಮೂಳೆಗಳ ಸಂಗಮ-ಸ್ಥಾನವಾದ್ದರಿಂದ ಅದು 'ತ್ರಿಕ, ಕನ್ನಡದಲ್ಲಿ 'ತಿಕ'. ಕೂಟವೆಂದರೂ ಸಂಗಮವೇ. ಆದ್ದರಿಂದ ಈ ಸಂಧಿ-ಸ್ಥಾನಕ್ಕೆ 'ತ್ರಿಕೂಟ'ವೆಂದೂ ಹೆಸರಿದೆ. ಇದು ಮೂಲಾಧಾರ-ಚಕ್ರದೆಡೆಯ ಸ್ಥಾನ.

ಬೆನ್ನುಹುರಿಯ ಈ ತುದಿಯಲ್ಲಿ ತ್ರಿಕೂಟವೊಂದಾದರೆ, ಮತ್ತೊಂದು ತುದಿಯಲ್ಲಿಯೂ ಒಂದು ತ್ರಿಕೂಟವಿದೆ. ಎರಡು ಹುಬ್ಬುಗಳ ಸಂಧಿಸ್ಥಾನವೂ ಒಂದು ತ್ರಿಕೂಟವೇ. ನಾಡಿಗಳಲ್ಲಿ ಅತ್ಯಂತ ಮುಖ್ಯವೆನಿಸುವ ಮೂರು ಸೇರುವೆಡೆಯೂ ಒಂದು ತ್ರಿಕೂಟವೇ. ಇದು ಆಜ್ಞಾ-ಚಕ್ರದೆಡೆಯ ಸ್ಥಾನ. ಈ ಮೇಲಿನ ತ್ರಿಕೂಟ-ಸ್ಥಾನವು ಯೋಗ-ಮಾರ್ಗದಲ್ಲಿ ಒಂದು ಉನ್ನತವಾದ ಸ್ಥಾನ.

ರಾಮಾಯಣದ ಲಂಕೆಯು ಕೆಳಗಿನ ತ್ರಿಕೂಟದಲ್ಲಿದೆಯೆಂದೂ, ಮೇಲಿನ ತ್ರಿಕೂಟದಲ್ಲಿ ಗಜೇಂದ್ರಮೋಕ್ಷ-ಪ್ರಸಂಗವೆಂದೂ ಶ್ರೀರಂಗಮಹಾಗುರುಗಳು ರಹಸ್ಯವನ್ನು ವಿವರಿಸಿದ್ದರು. ಎರಡು ಕಡೆಯೂ ಮೂರು ಮುಖ್ಯ-ನಾಡಿಗಳು ಸೇರುತ್ತವೆ.

ಪ್ರಕೃತ, ಯೋಗತಾರಾವಳಿಯು ಈ ಮೇಲಿನ ತ್ರಿಕೂಟವನ್ನೂ, ಅಲ್ಲಿರುವ 'ಖ' ಎಂದರೆ ಆಕಾಶವನ್ನು ಕುರಿತೂ ಹೇಳಿದೆ. ಆಕಾಶವೆಂದರೆ ಏನೂ ಇಲ್ಲದ ಎಡೆ. ಸ್ತಿಮಿತವಾದ ಅಂತರಂಗವು ಆ ಜಾಗದಲ್ಲಿ ಕೇವಲ-ಕುಂಭಕದಿಂದ ಸ್ತಂಭಿತವಾಗುತ್ತದೆ, ಎನ್ನುತ್ತದೆ ಈ ಶ್ಲೋಕ. ಸ್ತಿಮಿತವೆಂದರೆ ಕ್ಷೋಭೆಯಿಲ್ಲದಿರುವುದು. ಯಾವುದೇ ತಳಮಳವಿಲ್ಲದ ಅಂತರಂಗವು (ಅರ್ಥಾತ್ ಮನಸ್ಸು) ಅಲ್ಲಿ ಸ್ತಬ್ಧವಾಗುವುದು. ಚಿತ್ತದಲ್ಲಿ ತರಂಗಗಳಿದ್ದಾಗ ಅದನ್ನು ಸ್ತಂಭನಮಾಡುವುದು ಸುಲಭವಾಗಿ ಆಗದು. ಸ್ತಿಮಿತವಾದ ಚಿತ್ತವು ಒಂದು ಹದ್ದುಬಸ್ತಿನಲ್ಲಿರುತ್ತದೆ. ಹೀಗೆ ಆರ್ಭಟವಿಲ್ಲದ ಚಿತ್ತವನ್ನು ನಿಶ್ಚೇಷ್ಟವನ್ನಾಗಿಸಬೇಕಾದುದಿದೆ.

ಅದನ್ನಾಗಿಸಲು ಬೇಕಾದುದು ಕೇವಲ-ಕುಂಭಕ. ಮನಸ್ಸಿನ ಮೇಲೆ ಸ್ತಂಭನ-ಕ್ರಿಯೆಯನ್ನು ಈ ಕುಂಭಕವು ಸಾಧಿಸಿಯಾದ ಬಳಿಕ ಪ್ರಾಣವಾಯುವಿನ ನಡೆಯು ಹೇಗಾಗುವುದು? -ಎಂಬುದನ್ನು ಈ ಶ್ಲೋಕದ ಉತ್ತರಾರ್ಧದಲ್ಲಿ ತಿಳಿಸಿದೆ. ಇಡಾನಾಡಿ-ಪಿಂಗಳಾನಾಡಿಗಳಿಗೆ ಕ್ರಮವಾಗಿ ಚಂದ್ರನಾಡಿ-ಸೂರ್ಯನಾಡಿಗಳೆಂದು ಹೆಸರು. "ಅವೆರಡನ್ನೂ ತೊರೆದು, ಪ್ರಾಣವು ವಿಲಯವನ್ನು ಹೊಂದುವುದು" - ಎಂದು ಈ ಶ್ಲೋಕವು ಹೇಳುತ್ತದೆ.

ಭಾನುನಾಡಿ-ಶಶಾಂಕನಾಡಿ

ಪ್ರಾಣವು ಇಡಾನಾಡಿಯಲ್ಲಿಯೋ ಪಿಂಗಳಾನಾಡಿಯಲ್ಲಿಯೋ ಸಾಧಾರಣವಾಗಿ ಸಂಚರಿಸುತ್ತಿರುವಂತಹುದು. ಈ ಎಡಹೊಳ್ಳೆ-ಬಲಹೊಳ್ಳೆಗಳಲ್ಲಿಯ ಉಸಿರಾಟವೇ "ಚಂದ್ರನಾಡಿ-ಸೂರ್ಯನಾಡಿಗಳಲ್ಲಿಯ ಪ್ರಾಣಸಂಚಾರ"ವೆಂದು ಕರೆಸಿಕೊಳ್ಳುವುದು. ಶಶಾಂಕನಾಡಿಯೆಂದರೆ ಇಡೆ, ಭಾನುನಾಡಿಯೆಂದರೆ ಪಿಂಗಳೆ.

ಸದಾ ಇವುಗಳಲ್ಲೇ ಸಂಚರಿಸುವ ಪ್ರಾಣವು, ಇದೋ ಈ ಕೇವಲಕುಂಭಕ-ಪ್ರಾಣಾಯಾಮವು ಸಿದ್ಧವಾಗುತ್ತಲೇ ಅವೆರಡೂ ನಾಡಿಗಳನ್ನು ತೊರೆದುಬಿಡುವುದು. ಕೇವಲಕುಂಭಕ-ಸ್ಥಿತಿಯುಂಟಾಗುವುದಕ್ಕೂ, ಈ ಎರಡೂ ನಾಡಿಗಳಲ್ಲಿ ಪ್ರಾಣವು ಸಂಚಾರವನ್ನು ಬಿಡುವುದಕ್ಕೂ ಮಧ್ಯೆ ಕಾಲವಿಲಂಬವೇನಿರದು. ಈ ಕುಂಭಕ-ಸ್ಥಿತಿಯು ಬರುವುದೂ, ಈ ಎಡಬಲನಾಡಿಗಳನ್ನು ತೊರೆಯುವುದೂ ಸಮಕಾಲದಲ್ಲೇ ಸಂಭವಿಸುವುವೋ ಎನ್ನುವಂತಿರುವುದು.

ಈ ಭಾನುನಾಡಿ-ಶಶಾಂಕನಾಡಿಗಳನ್ನು ಬಿಟ್ಟ ಪ್ರಾಣ-ವಾಯುವಿನ ಮುಂದಿನ ಗತಿಯೇನೆಂದರೆ ಲಯ ಹೊಂದುವುದು. ಏನಿದರರ್ಥ? ಎಲ್ಲರಿಗೂ ಪ್ರಿಯವಾದದ್ದೇ ಪ್ರಾಣವಲ್ಲವೇ? ಪ್ರಾಣಕ್ಕಿಂತಲೂ ಪ್ರಿಯವಾದದ್ದುಂಟೇ? ಪ್ರಾಣವೇ ವಿಲಯಗೊಳ್ಳುವುದೆಂದರೇನೋ? - ಎಂದು ಶಂಕಿಸಬೇಕಿಲ್ಲ. ಎಡಗಡೆಯ ನಾಡಿ, ಬಲಗಡೆಯ ನಾಡಿಗಳನ್ನು ಬಿಟ್ಟದ್ದು ನಡುವಿನ ನಾಡಿಯನ್ನು ಸೇರಿಕೊಳ್ಳುವುದನ್ನು ಇಲ್ಲಿ ಹೇಳಿದೆ. ಅದುವೇ ಅದರ ಪಾಲಿನ "ಲಯ".

ಗೀತೆಯಲ್ಲಿ ಸಹ "ಹುಬ್ಬುಗಳ ಮಧ್ಯದಲ್ಲಿ ಪ್ರಾಣವನ್ನು ಚೆನ್ನಾಗಿ ಹೊಕ್ಕಿಸು"ವ ಕ್ರಮವನ್ನು ಹೇಳಿದೆಯಲ್ಲವೇ? (ಗೀತೆ ೮.೧೦: ಭ್ರುವೋರ್ ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್).

ತ್ರಿಕೂಟ-ನಾಮ್ನಿ ಸ್ತಿಮಿತೇಂಽತರಂಗೇ

      ಖೇ ಸ್ತಂಭಿತೇ ಕೇವಲ-ಕುಂಭಕೇನ |

ಪ್ರಾಣಾನಿಲೋ ಭಾನು-ಶಶಾಂಕ-ನಾಡ್ಯೌ

      ವಿಹಾಯ ಸದ್ಯೋ ವಿಲಯಂ ಪ್ರಯಾತಿ ||೧೧||


ಸೂಚನೆ : 26/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Friday, June 25, 2021

Ananda Tandava Of Nataraja - 11




The Naṭarāja Icon : Sources and Descriptions

  There are around a dozen traditional source texts bearing on the iconography of Naṭarāja. Colambur Sivaramamurti lists the following Sanskrit texts:  

Aṁśumad-bhedāgama,

Kūrma-purāṇa,

Caturvarga-cintāmaṇi,

Devatā-mūrti-prakaraṇa,

Matsya-purāṇa,

Viṣṇu-dharmottara-purāṇa,

Śilpa-ratna,

Śrī-tattva-nidhi, and

Sakalādhikāra

(See his Nataraja in Indian Art, Thought, and Literature, p.150).

The Cidambara-māhātmya offers a fairly detailed and charming description of Naṭarāja. The gist of the verses of this book may thus be stated:

Naṭarāja has firmly stamped one foot of His. The other, the "bent one," (kuñcita-pāda) has a charming anklet. The left hand is also "a little bent" (kiñcid-ākuñcita). The No-Fear hand (abhaya-kara) has a serpentine bangle. The moving drum and blazing fire adorn the other two hands. He has the masculine and feminine ear-ornaments adorning the right and the left ears. A not too conspicuous smile beautifies his face. The Ganges, the serpent, and the "young digit" of the Moon bedeck his tawny, matted hair. The whirling matted hair has tinged the various directions with its hue. In the midst of all this, He looks like a thousand Suns arisen together.

 To cite – Cidambara-māhātmya 17.4.43–50:

43  sthāpitaika-padāmbhojaṁ niścalaṁ vag-agocaram |

 ṭiryak-kuñcita-vāmāṅghri-lasan-māṇikya-nūpuram ||

44 kiñcid-ākuñcitodbhāsi-vāma-pāṇi-saroruham |

  dattā'bhaya-karā''baddha-phaṇi-kaṅkaṇa-bhūṣitam ||

45 calaḍ-ḍamaru-dīptāgni-bhūṣitānya-bhuja-dvayam |

46 tāṭaṅka-śaṅkha-bhūṣābhyāṁ vilasat-karṇapāśakam |

anatisphuṭa-sambhūta-manda-smita-śuci-prabham ||

48 gaṅgā-pannaga-mugdhendu-yuta-piṅga-jaṭādharam |

50 calat-piṅga-jaṭā-bhāra-piśaṅgīkṛta-diṅmukham |

  madhye sahasra-bhānūnāṁ bhānu-bimbam ivoditam ||

 

४३ स्थापितैक-पदाम्भोजं निश्चलं वग्-अगोचरम् |

टिर्यक्-कुञ्चित-वामाङ्घ्रि-लसन्-माणिक्य-नूपुरम् ||

४४ किञ्चिद्-आकुञ्चितोद्भासि-वाम-पाणि-सरोरुहम् |

दत्ताऽभय-कराऽऽबद्ध-फणि-कङ्कण-भूषितम् ||

४५ चलड्-डमरु-दीप्ताग्नि-भूषितान्य-भुज-द्वयम् |

४६ ताटङ्क-शङ्ख-भूषाभ्यां विलसत्-कर्णपाशकम् |

अनतिस्फुट-सम्भूत-मन्द-स्मित-शुचि-प्रभम् ||

४८ गङ्गा-पन्नग-मुग्धेन्दु-युत-पिङ्ग-जटाधरम् |

५० चलत्-पिङ्ग-जटा-भार-पिशङ्गीकृत-दिङ्मुखम् |

मध्ये सहस्र-भानूनां भानु-बिम्बम् इवोदितम् ||


Thursday, June 24, 2021

நாமத்தை உச்சரித்தால் மட்டுமே போதுமா? (Naamattai uchcharittaal mattume podumaa?

மூலம்: வாதிராஜ் பிரசன்னா 

தமிழாக்கம்: வனஜா 

மின்னஞ்சல் : (lekhana@ayvm.in)




இறைவனை(முக்தியை) அடைய பக்தி மார்க்கம் எளிதானது என்பது பரவலான நம்பிக்கை.  பக்தி மார்க்கத்தின் முக்கியத்துவத்தை எடுத்து கூறும், விஷ்ணு பக்தர்களின் மனதிற்குகந்த அஜாமிளனின் கதையை காண்போம் 

         

ஒரு காலத்தில் கன்யாகுப்ஜம் எனும் நகரில் நற்பண்புகள் நிறைந்த அஜாமிளன் எனும் அந்தணன்  வாழ்ந்து வந்தான். ஒரு விலைமாதின் மேல் மோகம் கொண்டு அவளுடன்வாழ்ந்து 10 குழந்தைகளை அடைந்தான்.  எல்லோரை காட்டிலும் கடைசி மகனான "நாராயணன்" மேல் அதிக பற்று கொண்டிருந்தான். கன்யாகுப்ஜம் திருட்டு, ஏமாற்று, சூதாட்டம் போன்ற தீய வற்றிற்கு பெயர் போனது. அஜாமிளனும் இவற்றிற்கு அடிமைப்பட்டான். 


இவ்வாறு வாழ்கையில் 85வது வயதில் மரணம் வாயிலை தட்டியது. பயங்கரமான உருவம் கொண்டு கையில் பாசக் கயிற்றுடன் மூன்று யம கிங்கரர்கள் அவன் முன் தோன்றினர். அவர்களை கண்டவுடன் அச்சத்துடன் தன் மகனை "நாராயணா" என்று கூவினான். உடனே தெய்வீக  உருவுடன் விஷ்ணு தூதர்கள் அவன் முன் தோன்றினர். இரு தரப்பினருக்கும் இடையில் சொற்போர் நிகழ இறுதியில் விஷ்ணு தூதர்கள் மற்றவரை விரட்டி அஜாமிளனை வைகுந்தத்திற்கு அழைத்து சென்றனர். இது உலகமறிந்த கதை.


                 ஸ்ரீரங்க மஹாகுரு விளக்கமளித்துள்ள இக்கதையின் கருத்து நினைவுகூறத்தக்கது. "அஜாமிளனின் கதையில் தத்துவார்த்தம் உள்ளது. மூன்று யம தூதர்கள் தோன்றியது அவன் மனம், மெய், வாக்கு எனும் முக்கரணங்களால் செய்த கொடிய பாபத்திற்கான  தண்டனையை குறிக்கிறது. பத்து  குழந்தைகள் பத்து இந்திரியங்களை(புலன்களை) குறிக்கும். அஜாமிளன் பத்தாவது மகனை கூவி அழைத்தது அவன் பத்தாவது இந்திரியத்தின்பால் கொண்டிருந்த அளவற்ற பற்றை குறிக்கிறது."


"தொடர்ந்து, அஜாமிளனின் கதையை முழுமையாக அறிந்து கொள்ளுதல் அவசியம். அவன் நற்பண்புகள் கொண்ட பகவத் பக்தனாக சிறு வயதில் விளங்கினான். மனபூர்வமாக இறை உணர்வோடு "நாராயணா" எனும் நாமத்தை பலமுறை முன்பு உச்சரித்திருக்கின்றான். பின்பு தீய சேர்க்கையால் விலங்கை போன்ற வாழ்க்கை வாழ்ந்தான். மரண படுக்கையில் தன் மகனின் பெயரை கூவி அழைப்பினும் அவனையும் அறியாமல் அவன் உச்சரிப்பு இறைவனின் நாமத்தை கூறுவதுபோல் மாறியது. அது அவன் முன் செய்த நல்வினையின்(ஸம்ஸ்காரத்தின்) பலனேயாகும். அதன் பின்னரே அவனுக்கு விஷ்ணு தூதர்களை தரிசிக்கும் பேறு கிட்டியது. பின்னர் கங்கை கரையில் தன் தவறுகளுக்காக வருந்தி தவம் செய்த பின் வைகுந்தத்தை அடைந்தான்.'


            யாரொருவர் பரம்பொருளின் "நாராயணா" எனும் மந்திரத்தை பக்தியுடன் உச்சரிக்கினறனரோ அவர்கள் நற்பேறடைவது திண்ணம். எவ்வாறேனும் இப்பழக்கத்தை ஏற்படுத்திக்கொண்டால் அதன் உண்மை பொருளை கற்றுணர்ந்து அனுபவித்து ஒருநாள் முக்தியை அடைய இயலும். இதுவே அதன் மகிமையை கொண்டாடி மதிக்க காரணம்.


குறிப்பு: இக்கட்டுரை யின் கன்னட மூலம் 
AYVM blogs ல் காணலாம்.