Monday, July 22, 2024

ವ್ಯಾಸ ವೀಕ್ಷಿತ 97 ಸುಂದೋಪಸುಂದ-ಕಥೆಯಿಂದ ಪಾಂಡವರಿಗಾದ ಪಾಠ (Vyasa Vikshita 97 Sundopasunda-katheyinda Pandavarigada Patha}

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



 


ಅಂತೂ ಸರ್ವ-ಲೋಕ-ಕಂಟಕರಾಗಿದ್ದ ಸುಂದೋಪಸುಂದರ ಸಂಹಾರವಾಯಿತು! ಇದಕ್ಕೆ ಕಾರಣೀಭೂತಳಾದ ತಿಲೋತ್ತಮೆಯ ವಿಷಯದಲ್ಲಿ ಬ್ರಹ್ಮನಿಗೆ ಸಂತೋಷವಾಯಿತು. ಅವಳಿಗೆ ವರವನ್ನು ಕೊಡಬೇಕೆಂಬ ಅಪೇಕ್ಷೆಯುಂಟಾಯಿತು. ಅವಳನ್ನು ಕುರಿತು ಹೀಗೆ ಹೇಳಿದನು, ಬ್ರಹ್ಮನು:


"ಸುಂದರಿ, ಎಲ್ಲೆಲ್ಲಿ ಸೂರ್ಯನ ಸಂಚಾರವೆಂಬುದುಂಟೋ ಅಲ್ಲಲ್ಲೆಲ್ಲ, ನೀನೂ ಸ್ವೇಚ್ಛೆಯಾಗಿ ವಿಹರಿಸುವಂತಾಗಲಿ. ನಿನ್ನ ತೇಜಸ್ಸು ಎಷ್ಟು ತೀಕ್ಷ್ಣವಾಗುವುದೆಂದರೆ ನಿನ್ನನ್ನು ಯಾರೂ ದಿಟ್ಟಿಸಿ ನೋಡಲೂ ಆರರು!"


ಈ ರೀತಿಯಾಗಿ ಅವಳಿಗೆ ವರವಿತ್ತು, ಸರ್ವ-ಲೋಕಗಳಿಗೂ ಪಿತಾಮಹನೆನಿಸಿದ ಬ್ರಹ್ಮನು ತ್ರೈಲೋಕ್ಯವನ್ನೂ ಇಂದ್ರನಿಗೊಪ್ಪಿಸಿ, ಸ್ವ-ಲೋಕಕ್ಕೆ ತೆರಳಿದನು.


ಹೀಗೆ ಸುಂದೋಪಸುಂದರ ವೃತ್ತಾಂತವನ್ನು ಪಾಂಡವರಿಗೆ ತಿಳಿಸಿದ ನಾರದರು ನಮ್ಮ ಮಾತನ್ನು ಮುಂದುವರೆಸಿದರು: "ನೋಡಿದಿರಾ, ಎಲ್ಲ ವಿಷಯಗಳಲ್ಲೂ ಏಕ-ನಿಶ್ಚಯವನ್ನು ಹೊಂದಿರುತ್ತಾ ಸದಾ ಜೊತೆಗಿರುತ್ತಿದ್ದ ಆ ದೈತ್ಯರಿಬ್ಬರು, ತಿಲೋತ್ತಮೆಯೊಬ್ಬಳಿಗೋಸ್ಕರವಾಗಿ ಕೆರಳಿದವರಾಗಿ, ಪರಸ್ಪರ ಬಡಿದಾಡಿ ಇಬ್ಬರೂ ಸತ್ತರು.


ಆದ್ದರಿಂದಲೇ, ನಿಮ್ಮ ಮೇಲಣ ಸ್ನೇಹದಿಂದ, ನಿಮ್ಮೆಲ್ಲರನ್ನೂ ಕುರಿತು ಹೇಳುತಿದ್ದೇನೆ, ಭರತ-ಶ್ರೇಷ್ಠರೇ! ದ್ರೌಪದಿಯ ಸಲುವಾಗಿ ನಿಮ್ಮೊಳಗೇ ಒಡಕುಂಟಾಗಬಾರದು - ಎನ್ನುವ ಬಗೆಯಲ್ಲಿ ನೀವು ವರ್ತಿಸಬೇಕು - ನನಗೆ ಪ್ರಿಯವಾದುದನ್ನು ತಾವು ಬಯಸುವುದಾದರೆ! ಆಯಿತು; ನಿಮಗೆ ಒಳ್ಳೆಯದಾಗಲಿ" - ಎಂದು ಮಾತು ಮುಗಿಸಿದರು.


ನಾರದ ಮಹರ್ಷಿಗಳು ಮಹಾತ್ಮರಾದ ಆ ಪಾಂಡವರಿಗೆ ಹೀಗೆ ಹೇಳಲಾಗಿ, ದೇವರ್ಷಿ-ನಾರದರೆದುರಿಗೇ ಆ ಮಹಾ-ತೇಜಸ್ವಿಗಳು ಪರಸ್ಪರಾಧೀನರಾದರು. ಎಂದರೆ, ಒಂದು ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾದರು. ಅವರ ಒಪ್ಪಂದ ಹೀಗಿತ್ತು:


ಪಾಪ-ರಹಿತಳಾದ ದ್ರೌಪದಿಯು ಒಂದೊಂದು ವರ್ಷ ಒಬ್ಬೊಬ್ಬರ ಮನೆಯಲ್ಲಿ ವಾಸಿಸತಕ್ಕದ್ದು. ದ್ರೌಪದಿಯೊಂದಿಗೆ ಒಬ್ಬನು ಇರುವಲ್ಲಿ, ಮತ್ತೊಬ್ಬನು ಅವರನ್ನು ನೋಡಲಾಗದು; ಹಾಗೇನಾದರೂ ನೋಡಿಬಿಟ್ಟಲ್ಲಿ, ನೋಡಿದಾತನು ಹನ್ನೆರಡು ವರ್ಷಗಳ ಕಾಲ ಬ್ರಹ್ಮಚಾರಿಯಾಗಿ ವನವಾಸಮಾಡತಕ್ಕದ್ದು – ಎಂಬುದಾಗಿ.


ಧರ್ಮಚಾರಿಗಳಾದ ಪಾಂಡವರು ಈ ರೀತಿಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲು, ತೃಪ್ತರಾದರು ಮಹಾಮುನಿಗಳಾದ ನಾರದರು. ಮತ್ತು ಅಲ್ಲಿಂದ ತಮಗೆ ಬೇಕಾದಲ್ಲಿಗೆ ಹೊರಟುಬಂದರು.


ಈ ಪ್ರಕಾರವಾಗಿ ನಾರದರಿಂದ ಪ್ರೇರಿತರಾಗಿ, ಪಾರಸ್ಪರಿಕವಾದ ಸಮಯವನ್ನು, ಎಂದರೆ ಒಪ್ಪಂದವನ್ನು, ಮಾಡಿಕೊಂಡ ಪಾಂಡವರು, ಪರಸ್ಪರ ಒಡಕನ್ನು ಎಂದೂ ಹೊಂದಲಿಲ್ಲ.


ಹೀಗೆ ತಮ್ಮ ಶಿಸ್ತು-ಸಂಯಮಗಳನ್ನು ಕಾಪಾಡಿಕೊಂಡ ಪಾಂಡವರು ತಮ್ಮ ಶಸ್ತ್ರ-ಪ್ರತಾಪದಿಂದಾಗಿ ಇತರ ರಾಜರುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ಅಮಿತ-ತೇಜಸ್-ಸಂಪನ್ನರಾದ ಪಾಂಡವರೈವರೂ ಮನುಜ-ಸಿಂಹರು. ಆ ಎಲ್ಲ ಪಾರ್ಥರಿಗೂ ವಶ-ವರ್ತಿನಿಯಾಗಿ, ಎಂದರೆ ಅವರ ಆಶಯವನ್ನು ಅನುಸರಿಸುವವಳಾಗಿ, ದ್ರೌಪದಿಯೂ ಅವರೊಂದಿಗಿದ್ದಳು. ಅವಳೊಂದಿಗೆ ಆ ಐವರೂ, ಆ ಐವರೊಂದಿಗೆ ದ್ರೌಪದಿಯೂ ಪರಮ-ಸಂತೋಷದಿಂದ ಇರುವುದಾಯಿತು.


ಇವೆಲ್ಲದರಿಂದಾಗಿ ಈ ನಗರಿಯೂ ಸುಶೋಭಿತವಾಯಿತು - ಭೋಗವತೀ-ನಗರಿಯು ನಾಗರಿಂದಾಗಿ ಹೇಗೆ ಸುಶೋಭಿತವಾಗಿರುವುದೋ ಹಾಗೆ.


ಮಹಾತ್ಮರಾದ ಪಾಂಡವರು ಹೀಗೆ ಧರ್ಮಾನುಸಾರವಾಗಿ ರಾಜ್ಯಭಾರವನ್ನು ಮಾಡುತ್ತಿರಲಾಗಿ, ಕುರುವಂಶದವರೆಲ್ಲರೂ ದೋಷ-ಹೀನರೂ ಗುಣಶಾಲಿಗಳೂ ಆಗಿ ವರ್ಧಿಸಿದರು.

 

ಹೀಗೆ ಸಾಕಷ್ಟು ಕಾಲವೇ ಕಳೆಯಿತು. ಒಮ್ಮೆ ಯಾರೋ ಕಳ್ಳರು ಬ್ರಾಹ್ಮಣನೊಬ್ಬನ ಗೋವುಗಳನ್ನು ಕದ್ದುಬಿಟ್ಟರು. ಆ ಬ್ರಾಹ್ಮಣನಿಗಾದರೋ ಗೋವುಗಳೇ ಧನವಾಗಿದ್ದಿತು. ಅದರ ಕಳ್ಳತನವಾಗಿಹೋಗಲು ಆತನು ಅತ್ಯಂತ ಕ್ರೋಧಗೊಂಡನು; ಖಾಂಡವ-ಪ್ರಸ್ಥಕ್ಕೆ ಬಂದನು; ಪಾಂಡವರನ್ನು ಕುರಿತು ಉತ್ಕ್ರೋಶಮಾಡಿದನು; ಎಂದರೆ ಎತ್ತರದ ಧ್ವನಿಯಲ್ಲಿ ಹೇಳಿದನು.


ಸೂಚನೆ : 21/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 99(Yaksha prashne 99)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  98 ಯಾವುದು ದಾನ ?

ಉತ್ತರ - ಭೂತರಕ್ಷಣವೇ ದಾನ 

ದಾನವೆಂದರೆ ಕೊಡುವುದು. ತನ್ನ ಸ್ವಾಮಿತ್ವಕ್ಕೆ ಸಂಬಂಧಿಸಿದ ವಸ್ತು ಅಥವಾ ಪದಾರ್ಥವನ್ನು ಭಾವಸಮೇತ ಸರಿಯಾದ ವ್ಯಕ್ತಿಗೆ ಕೊಟ್ಟು ತನ್ನ ಸ್ವಾಮಿತ್ವವನ್ನು ಕಳೆದುಕೊಳ್ಳಲು ಇರುವ ಒಂದು ಬಗೆಯ ವಿಧಾನ. 'ಕೊಡುತ್ತಿರುವ ವಸ್ತು ನನ್ನದಲ್ಲ- ಇದಂ ನ ಮಮ' ಎಂದು ಕಾಯೇನ ವಾಚಾ ಮನಸಾ ತ್ರಿಕರಣಪೂರ್ವಕವಾಗಿ ಬಿಡುವುದನ್ನು ದಾನ ಎಂದು ಕರೆಯುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಇಲ್ಲಿ ಯಕ್ಷನ ಪ್ರಶ್ನೆಗೆ ದಾನದ ವಿವರಣೆಯನ್ನು ವಿಭಿನ್ನವಾಗಿ ಧರ್ಮರಾಜನು ಕೊಟ್ಟಿದ್ದನ್ನು ಕಾಣಬಹುದು. 'ಭೂತಗಳ ರಕ್ಷಣೆ ಮಾಡುವುದನ್ನೇ ದಾನ' ಎಂದು ಕರೆಸಿಕೊಳ್ಳುತ್ತದೆ ಎಂಬ ಉತ್ತರ ಇಲ್ಲಿದೆ. ನಮಗೆ ಬರುವ ಸಂಶಯವಿಷ್ಟೆ - ರಕ್ಷಣೆ ಹೇಗೆ ದಾನವಾಗುತ್ತದೆ? ಎಂಬುದಾಗಿ. ಹಾಗಾಗಿ ನಾವು ಇಲ್ಲಿ ರಕ್ಷಣೆ ಎಂದರೇನು? ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. 

ಭೂತ ಎಂದ ಕಣ್ಣಿಗೆ ಕಾಣುವ ವಿಷಯ. ಪೃಥಿವೀ ಅಪ್ ತೇಜಸ್ಸು ವಾಯು ಮತ್ತು ಆಕಾಶ ಎಂಬುದಾಗಿ ಪಂಚಭೂತಗಳು. ಈ ಸಮಗ್ರವಾದ ಸೃಷ್ಟಿಯು ಇವೇ ಪಂಚಭೂತಗಳಿಂದಲೇ ನಿರ್ಮಿತವಾದದ್ದು. ಈ ಐದರ ಸಮಾಯೋಗ ಬೇಕೇಬೇಕು. ಅವುಗಳ ಸಹಯೋಗದಲ್ಲಿ ತಾರತಮ್ಯ ತೋರಬಹುದು. ಆದರೆ ಇವು ಇರಲೇಬೇಕು. ಪೃಥಿವಿಯ ಭಾಗ ಹೆಚ್ಚಾಗಿ ಇದ್ದರೆ ಅಂದು 'ಪಾರ್ಥಿವ' ಸೃಷ್ಟಿಯಾಗುತ್ತದೆ. ಕೆಲವು ಜೀವಿಗಳು ಭೂಮಿಯಲ್ಲೇ ಜೀವಿಸುತ್ತವೆ. ಜಲದ ಭಾಗ ಅತಿಶಯವಾಗಿ ತೋರಿದರೆ, ಅದನ್ನು 'ವರುಣಲೋಕ' ಎನ್ನುತ್ತಾರೆ. ಅಲ್ಲಿ ಜಲೀಯ ಜೀವಿಗಳು ಇರುತ್ತವೆ. ಅಂತೆಯೇ ತೇಜಸ್ಸು ಅಧಿಕವಾಗಿ ತೋರಿದರೆ ಅದು 'ತೈಜಸ'ಲೋಕವಾಗಿರುತ್ತದೆ. ವಾಯುವಿನ ಅಂಶ ವಿಶೇಷವಾಗಿದ್ದರೆ 'ವಾಯುಲೋಕ' ಎಂದೂ, ಉಳಿದ ಭೂತಗಳ ಭಾಗ ಅತ್ಯಲ್ಪವಾಗಿ ತೋರಿ ಆಕಾಶ ಅಥವಾ ಅವಕಾಶ ಮಾತ್ರವೇ ಇದ್ದರೆ ಅದು 'ಅಂತರಿಕ್ಷ'ಲೋಕವಾಗಿ ತೋರುತ್ತದೆ. ಈ ಎಲ್ಲಾ ಲೋಕಗಳಲ್ಲೂ ಜೀವದ ವಾಸ ಇದ್ದೇ ಇರುತ್ತದೆ. ಅಲ್ಲಲ್ಲಿಯ ಜೀವಿಗೆ ಜೀವಿಕೆಗೆ ಅಗತ್ಯವಾದ ಪದಾರ್ಥವೂ ಅಲ್ಲಲ್ಲೇ ಲಭ್ಯವಾಗಿರುತ್ತದೆ. ಇದು ಜಗದ ನಿಯಮ. ಅಲ್ಲಿಲ್ಲದ ಜೀವಿಕೆಗೆ ಪದಾರ್ಥವನ್ನು ಬೇರೆಲೋಕದಿಂದ ಸರಬರಾಜು ಮಾಡಬೇಕಾಗುತ್ತದೆ. ಇಂತಹ ವಿಶಿಷ್ಟ ಸೃಷ್ಟಿಯಲ್ಲಿ ಮಾನವನ ಸೃಷ್ಟಿ ಉಳಿದೆಲ್ಲಾ ಜೀವಿಗಿಂತಲೂ ವಿಭಿನ್ನ. ಏಕೆಂದರೆ ಉಳಿದ ಜೀವಿಗಳಿಗೆ ಬೇರೆ ಜೀವಿಗಳನ್ನು ನಿಯಂತ್ರಿಸುವ ಅಥವಾ ಸಂರಕ್ಷಿಸುವ ಸಾಮರ್ಥ್ಯವಿರುವುದಿಲ್ಲ. ಅದೇನಾದರೂ ಇದ್ದರೆ ಮಾನವನಿಗೆ ಮಾತ್ರವೇ. ಇಂತಹ ವಿಶೇಷ ಸಾಮರ್ಥ್ಯವನ್ನು ಬಳಸಿಕೊಂಡು ಮಾನವನು ಜೀವಿಗಳಿಗೆ ಬಂದೊದಗಿದ ಆತಂಕವನ್ನು ನಿವಾರಿಸಬಹುದು. ಜೀವಿಕೆಗೆ ಬೇಕಾದ ಸವಲತ್ತುಗಳನ್ನೂ ಒದಗಿಸಬಹುದು. ಇದನ್ನೇ ಭೂತರಕ್ಷಣೆ ಎನ್ನಬಹುದು. 

ಮಾನವ, ಕೇವಲ ತಾನಿರುವ ಲೋಕ ಅಥವಾ ಪ್ರದೇಶದ ರಕ್ಷಣೆಯನ್ನು ನೋಡಿಕೊಳ್ಳುವುದರ ಜೊತೆ ಇನ್ನುಳಿದ ಲೋಕಗಳ ರಕ್ಷಣೆಯನ್ನೂ ಮಾಡುವ ಸಾಮರ್ಥ್ಯ ಮತ್ತು ಅವಕಾಶವನ್ನು ಪಡೆದಿರುತ್ತಾನೆ. ಇದನ್ನೇ ಭೂತರಕ್ಷಣೆ ಎನ್ನುತ್ತಾರೆ. ಆದರೆ ಲೋಕವು ಭಿನ್ನ ಭಿನ್ನವಾದಂತೆ ರಕ್ಷಣೆಯ ವಿಧಾನವೂ ಭಿನ್ನವಾಗಬಹುದು. ಆದರೆ ಅಲ್ಲಿನ ರಕ್ಷಣೆಗೆ ಬೇಕಾದ ಸಾಮಗ್ರಿಯನ್ನು ಒದಗಿಸಿ 'ಕೊಡುವುದು' ದಾನವಲ್ಲದೆ ಮತ್ತೇನು! ಇಲ್ಲಿನ ಕೊಡುವಿಕೆಯಲ್ಲೂ ಉಳಿದ ದಾನದಂತೆ ನ ಮಮ ಬುದ್ಧಿಯೇ ಇರಬೇಕಾಗುತ್ತದೆ. ಅಲ್ಲಿ ಭೂತರಕ್ಷಣೆಯನ್ನು ಮಾಡಬೇಕಾದರೆ ಅವುಗಳಿಗೆ ಬೇಕಾದುದನ್ನು ನಮ್ಮಲ್ಲಿರುವ ಪದಾರ್ಥದಿಂದ ಮಾಡುವಂತಹದ್ದು. ಆಗ ಅದು ಒಂದು ಬಗೆಯ ದಾನವೇ ಆಗುತ್ತದೆ.     

ಸೂಚನೆ : 21/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 23 ವೇಣು-ಗಾನ-ಲೋಲನ ಪಾಣಿ-ಪಾದಗಳ ಸೊಬಗು (Krishnakarnamrta -23 Venu-gaana-lolana Paani-paadagala Sobagu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕೊಳಲನ್ನು ನುಡಿಸುತ್ತಿರುವ ಕೃಷ್ಣನು ಹೇಗಿರುವನು? - ಎಂಬುದರ ಚಿತ್ರವೊಂದನ್ನು ಕವಿ ಲೀಲಾಶುಕನು ಈ ಶ್ಲೋಕದಲ್ಲಿ ಮೂಡಿಸಿದ್ದಾನೆ. ಈ ಶ್ಲೋಕದಲ್ಲಿಯ ಲಯವೇ ವಿಶಿಷ್ಟವಾದದ್ದು. ತಾಳ-ಬದ್ಧವಾಗಿ ಹಾಡಲು ಅತ್ಯಂತ ಅನುಕೂಲವಾದ ವೃತ್ತದಲ್ಲಿ ಈ ಶ್ಲೋಕವು ರಚಿತವಾಗಿದೆ. ಅವನ ಪಾಣಿ-ಪಾದಗಳನ್ನೂ ಮುಖ-ವಕ್ಷಸ್ಸುಗಳನ್ನೂ ಚಿತ್ರಿಸಿ ಕೃಷ್ಣನ ರೂಪವನ್ನೇ ನಮ್ಮ ಕಣ್ಣ ಮುಂದೆ ತಂದಿದೆ, ಈ ಶ್ಲೋಕ.

ಕೃಷ್ಣನು ವೇಣು-ವಾದನವನ್ನು ಮಾಡುತ್ತಾ ಅದರ ರವದಲ್ಲೇ ಆಕುಲನಾಗಿದ್ದಾನೆ, ಎಂದರೆ ಅದರ ಧ್ವನಿಯಲ್ಲೇ ಮುಳುಗಿಹೋಗಿದ್ದಾನೆ, ಕಳೆದುಹೋಗಿದ್ದಾನೆ. ಭಾವಾವಿಷ್ಟನಾಗಿ ನುಡಿಸುವುದೆಂದರೆ ಹೀಗೆ ತಾನೆ?

ರವವೆಂದರೆ ದನಿ, ಗಾನವಾಗಿ ಮೂಡುವ ಸ್ವರೋಲ್ಲಾಸ. ವಾದ್ಯ ನುಡಿಸುವಾಗಲೂ ಗಾನ ಮಾಡುವಾಗಲೂ ಧ್ಯಾನ ಮಾಡುವಾಗಲೂ ತನ್ಮಯತೆಯು ಇರಬೇಕಲ್ಲವೇ?

ವೇಣು-ರವದಲ್ಲಿ ಮಗ್ನನಾಗಿರುವ ಕೃಷ್ಣನನ್ನು ಕಾಣುತ್ತಲೇ ವೇಣುವನ್ನು ಹಿಡಿದಿರುವ ಕೈಯತ್ತ ಗಮನ ಹೋಗುವುದಲ್ಲವೇ? ಕೃಷ್ಣನ ಹಸ್ತವು ಕಮಲದಂತಿದೆ. ಇಂತಹ ಪಾಣಿ-ಪಂಕಜದ ಸಂಗ ಆ ವೇಣುವಿಗೆ ದೊರೆತಿದೆ. ಕಮಲವೆಂದರೆ ಕೆಂಬಣ್ಣ, ಸುಗಂಧಗಳು ಇರುವುವಲ್ಲವೇ? ಹೌದು ಈತನ ಕರವೂ ಪಲ್ಲವಾರುಣವಾಗಿದೆ. ಎಂದರೆ ಪಲ್ಲವಗಳಂತೆ ಅರುಣವಾಗಿದೆ. ಅರ್ಥಾತ್ ಚಿಗುರುಗಳಂತೆ ಅರುಣ-ವರ್ಣದಿಂದ ಕೂಡಿದೆ. ಚಿಗುರುಗಳ ಹೊಳಪಿನ ಕೆಂಪೇ ಸೊಗಸು.

ಅರುಣ-ವರ್ಣವೆಂದರೆ ಅರುಣೋದಯ-ಸಮಯದ ಬಣ್ಣ. ಅರುಣೋದಯವೆಂದರೆ ಸೂರ್ಯೋದಯಕ್ಕೆ ಸ್ವಲ್ಪ ಮುಂಚಿನದು. ಸೂರ್ಯನ ಸಾರಥಿ ಅರುಣ. ಮೊದಲು ಸಾರಥಿಯ ದರ್ಶನ, ಆಮೇಲೆ ರಥಿಯ ದರ್ಶನ. ಪೂರ್ವದಲ್ಲಿ ಸೂರ್ಯೋದಯಕ್ಕೆ ಪೂರ್ವವಾಗಿ ಮೊದಲು ಕಾಣುವುದು ಕೆಂಬಣ್ಣ. ಆಪ್ಯಾಯಕವಾದ ಬಣ್ಣವದು.

ಹೀಗೆ ಚಿಗುರುಗಳಲ್ಲಿ ತೋರುವ ಅರುಣ-ವರ್ಣವೇನುಂಟೋ ಅದುವೇ ಪಲ್ಲವಾರುಣ. ಆ ಬಣ್ಣವಿದೆ, ಶ್ರೀಕೃಷ್ಣನ ಹಸ್ತಕ್ಕೆ.

ಆರೋಗ್ಯವಾಗಿರುವವರ ಮೈಯಲ್ಲಿ ರಕ್ತವು ಚೆನ್ನಾಗಿರುತ್ತದೆ. ರಕ್ತವು ಚೆನ್ನಾಗಿರುವವರ ಹಸ್ತದಲ್ಲಿ ಕೆಂಪು ಎದ್ದು ಕಾಣುತ್ತದೆ. ಕೃಷ್ಣನ ಮೈಬಣ್ಣವು ಕಪ್ಪಾದರೂ, ಅದರ ನಡುವಿನಲ್ಲೂ ಹಸ್ತದ ಕೆಂಪು ಎದ್ದು ಕಾಣುವಂತಿದೆ.

ಎಂದೇ ಪಲ್ಲವಾರುಣವೆಂದರೆ ಪಲ್ಲವದಂತೆ ಅರುಣವೆಂದು ತಿಳಿಯಬೇಡಿ, ಪಲ್ಲವಗಳಿಗಿಂತಲೂ ಅರುಣವೆಂದು ಅರಿಯಿರಿ! "ಪಲ್ಲವವತ್ ಅರುಣಃ" ಎಂದೂ ವಿಗ್ರಹವಾಕ್ಯವನ್ನು ಮಾಡಬಹುದು; "ಪಲ್ಲವಾದ್ ಅಪಿ ಅರುಣಃ" ಎಂದೂ ಮಾಡಬಹುದು. ವ್ಯಾಕರಣದಲ್ಲಿ ಎರಡು ಬಗೆಯಲ್ಲೂ ಸಮಾಸವನ್ನು ಬಿಡಿಸುವುದು ಶಕ್ಯವಿದೆ. ಅಂತೂ ಕೊಳಲಿಗೆ ಕೃಷ್ಣನ ಅಂಗೈ-ಸಂಗವಿದೆಯೆನ್ನುವುದಾದರೂ ಕೆಂಗೈ-ಸಂಗವನ್ನು ಇಲ್ಲಿ ಹೇಳಿದೆಯೆಂದುಕೊಳ್ಳಬಹುದು.

ಪಾಣಿ-ಪಂಕಜವಾಯಿತು, ಇನ್ನು ಪಾದ-ಪಂಕಜದತ್ತ ಗಮನ ಸಹಜವಲ್ಲವೇ? ಹೇಗಿದೆ ಆತನ ಪಾದ-ಸರೋಜ? ಆ ಚರಣ-ಸರೋರುಹವು ಪರಿವದಿಸುವುದಂತೆ. ಪರಿವದಿಸುವುದೆಂದರೆ ನಿಂದಿಸುವುದು. ಎಂದರೆ, "ನೀವೇನು ಮಹಾ?" ಎನ್ನುವುದು.

ನಮ್ಮೊಂದಿಗೆ ಯಾರಾದರೂ ಪೈಪೋಟಿಗೆ ನಿಂತರೆ, ಅವರು ನಮಗೆ ಸರಿಸಾಟಿಯಾಗುವಂತಿದ್ದರೆ, ಆಗ ನಾವು ಹೇಳುವುದು, ಅಥವಾ ಕೇಳುವುದು, "ನೀನೇನು ಮಹಾ?" ಎಂದು. ಹಾಗಿದ್ದರೆ ಈ ಪಾದ-ಪದ್ಮಗಳಿಗೆ ಪ್ರತಿದ್ವಂದ್ವಿ (ಎಂದರೆ ಪೈಪೋಟಿಗೆ ನಿಂತವರು) ಯಾರು? - ಎಂದರೆ, ಫುಲ್ಲ-ಪಾಟಲ-ಪಾಟಲಿಯೇ ಪ್ರತಿಸ್ಪರ್ಧಿ.

ಏನು ಹಾಗೆಂದರೆ? ಫುಲ್ಲ/ಪ್ರಫುಲ್ಲವೆಂದರೆ ಅರಳಿರುವುದಲ್ಲವೇ? ಪಾಟಲವೆಂಬುದೊಂದು ಕುಸುಮ. ಪಾಟಲಿಯೆಂದರೆ ಸಮೂಹ. ಹೀಗೆ ವಿಕಸಿತವಾದ ಪಾಟಲಗಳ ರಾಶಿಯು ಏನುಂಟೋ ಅದನ್ನು ಮೀರಿಸುವಂತಹ ಚರಣ-ಪದ್ಮ ಕೃಷ್ಣನದು.

ಪಾಟಲವೆಂಬ ಕುಸುಮವು ಒಳ್ಳೆಯ ಕೆಂಪು-ಬಣ್ಣಕ್ಕೇ ಎಷ್ಟು ಪ್ರಸಿದ್ಧವೆಂದರೆ, "ಪಾಟಲವೆಂದರೆ ಕೆಂಪು" ಎಂದೇ ಅರ್ಥಹೇಳುವುದೂ ಉಂಟು! ಪಾಟಲ-ಪುಷ್ಪವೆನ್ನುವುದಕ್ಕೆ ಕನ್ನಡದಲ್ಲಿ ಪಾದರಿಗಿಡ ಪಾದರಿಹೂವು ಎನ್ನುತ್ತಾರೆ. ಮತ್ತು ಅದರಲ್ಲಿನ ಕೆಂಬಣ್ಣವನ್ನು ಶ್ವೇತ-ರಕ್ತವೆನ್ನುವರು. ಎಂದರೆ ಕಿಂಚಿತ್ ಶ್ವೇತ, ಕಿಂಚಿತ್ ರಕ್ತ: ಅದರಲ್ಲಿ ಕೊಂಚ ಬಿಳಿಯೂ ಇದೆ, ಕೊಂಚಕೆಂಪೂ ಇದೆ. ಅಚ್ಚಗೆಂಪಲ್ಲ, ಬಿಳಿಸೇರಿದ ಕೆಂಪದು. ಎಂದೇ ಕಣ್ಣಿಗೆ ಹಿತವಾದದ್ದು.

ಅದನ್ನೇ ಹೀಗಳಿಯುವಷ್ಟು ಸೊಗಸಿನ ಬಣ್ಣವಿದೆ, ಈ ಶ್ರೀಕೃಷ್ಣ-ಪಾದಾಂಬುಜಕ್ಕೆ. ಅಂತೂ ಕಣ್ಣಿಗೆ ಇಂಪೆನಿಪ ಬಣ್ಣವಿದೆ,  ಕೃಷ್ಣ-ಪಾದ-ಸರೋರುಹಕ್ಕೆ.

ಭಗವಂತನೇ ರಸ. "ರಸೋ ವೈ ಸಃ" ಎನ್ನುತ್ತದಲ್ಲವೇ ಉಪನಿಷತ್ತು? ರಸಮಯನಾದ ಭಗವಂತನ ಮೈ-ಮನಸ್ಸುಗಳೂ ರಸ-ಭರಿತವೇ. ಹಾಗಿರಲು ಆತನ ಆನನವೂ, ಎಂದರೆ ಮುಖವೂ, ಸರಸವೆಂದು ಬೇರೆಯಾಗಿ ಹೇಳಬೇಕಿಲ್ಲವಷ್ಟೆ?

ವದನಕ್ಕೆ ಈ ಸರಸತೆ ಬಂದುದು ಹೇಗೆ? ಅದಕ್ಕೆ ಕಾರಣವಿಲ್ಲದಿಲ್ಲ. ಕೃಷ್ಣನ ಕೆಳದುಟಿಯಿದೆಯಲ್ಲಾ, ಅದುವೇ ಕಾರಣ, ಅದಕ್ಕೆ – ಎನ್ನುತ್ತಾನೆ, ನಮ್ಮ ಕವಿ. ಏಕೆ? ಅಲ್ಲಿಂದ ಹೊಮ್ಮುವುವು ಮಧುರವಾದ ದ್ಯುತಿಗಳು, ಎಂದರೆ ನಯನಗಳಿಗೆ ರುಚಿಸುವ ಕಿರಣಗಳು!

ಬರೀ ಕಿರಣಗಳೆಂದರೆ ಸಾಲದು, ಅದನ್ನು. ಕಿರಣಗಳ ಮಂಜರಿಯದು. ಮಂಜರಿಯೆಂದರೆ ಗುಚ್ಛ. ಕೆಳದುಟಿಯಿಂದ ಮೇಲ್ಚಿಮ್ಮುವ ಕಿರಣ-ಸ್ತೋಮವದು. ಹೂ-ಗುಚ್ಛಗಳು ಸ-ರಸವಾಗಿರುತ್ತವಲ್ಲವೇ? ಈ ಗುಚ್ಛವೂ ಹಾಗೆಯೇ. ಎಂದೇ ಆತನ ಆನನವೂ ಸರಸವೇ. ಅಂತೂ ಕೆಳದುಟಿಯ ಕಾಂತಿಗಳು ಮುಖವನ್ನು ಮುದ್ದಾಗಿಸಿವೆ.

ನಾನೇ ಗೋಪಿಯೆಂದುಕೊಂಡರೆ ಆತನ ಸುಂದರವಾದ ಎದೆಯತ್ತ ದೃಷ್ಟಿ ಹೋಗದಿರುವೇ? ಓ! ಆತನೆದೆಯ ಮೇಲೂ ಕೆಂಬಣ್ಣದ ಕುರುಹುಗಳಿವೆ! ಹಾಗಾಗಿ, ಕುಂಕುಮ-ಪಂಕಿಲವಾಗಿದೆ, ಆತನೆದೆ. ಪಂಕಿಲವೆಂದರೆ ಸ್ವಲ್ಪ ಒದ್ದೆಯಾಗಿದ್ದಾಗಿನ ಗುರುತು, ಕುಂಕುಮದ ಗುರುತು. ಕುಂಕುಮವು ಹಣೆಯನ್ನಲ್ಲವೆ ಅಲಂಕರಿಸುವುದು? ಅದು ಕೃಷ್ಣನು ತಾನೇ ಇಟ್ಟುಕೊಂಡದ್ದಲ್ಲ. ಗೋಪಿಯರ ಕುಚ-ಕುಂಭದ ಮೇಲಿನ ಕುಂಕುಮ-ಕೇಸರಿಯ ಗುರುತದು.

ನಮ್ಮ ಪೂರ್ವಿಕರು ಅದೆಷ್ಟು ರಸಮಯವಾದ ಬಾಳಾಟವನ್ನು ಕಂಡಿದ್ದರು! ಮೈಗೆ ಲೇಪಿಸಿಕೊಳ್ಳುವುದು ಅದೊಂದನ್ನೇ ಅಲ್ಲ. ಕರ್ಪೂರ, ಅಗುರು, ಕಸ್ತೂರೀ ಇವುಗಳ ರಸವೂ ಸೇರಿರುವ ಕುಂಕುಮ-ಕೇಸರಿಯೆಂದರೆ ಅದರ ವರ್ಣವಿಶೇಷ-ಗಂಧವಿಶೇಷ-ಸ್ಪರ್ಶವಿಶೇಷಗಳನ್ನು ಕೇಳಬೇಕೇ? ಗೋಪಿಯರು ಅದನ್ನು ತಮ್ಮ ಮೈಗೂ, ವಿಶೇಷವಾಗಿ ತಮ್ಮ ಕೊಡಮೊಲೆಗಳಿಗೂ, ಲೇಪಿಸಿಕೊಂಡಿರುವರು. ಅಂತಹ ವಲ್ಲವಿಯರನ್ನು ಆಲಿಂಗಿಸಿಕೊಂಡಿದ್ದ ಕೃಷ್ಣನ ಮೈಗೂ ಅದು ಒಂದಿಷ್ಟು ಅಂಟಿದೆ.

ಎದೆಗೆಂದು ಹೇಳಿದುದು ಸುಮ್ಮನೆ ಉಪಲಕ್ಷಣವಾಗಿ. ಅಂಗನೆಯರ ಅಂಗಸಂಗದಿಂದ ಅಲ್ಲಲ್ಲಿ ಆ ಚಿಹ್ನಗಳಿವೆ, ಶ್ರೀಕೃಷ್ಣನ ಮೈಯಲ್ಲಿ. ಗೋಪಿಕೆಯರ ಆ ಭಾಗ್ಯದ ಬಗ್ಗೆ ಕಿಂಚಿತ್ತಾದ ಅಸೂಯೆಯೇ ಬಂದಿತೋ ಏನೋ ಲೀಲಾಶುಕನಿಗೆ!

ನಾನಾಶ್ರಯಿಸುವುದು ನನ್ನ ಪ್ರಭು-ಕೃಷ್ಣನನ್ನು. ಪ್ರಭು-ಚಿತ್ತದಂತೆ ನನಗೂ ಆತನ ಸನಿಹದ ಭಾಗ್ಯವು ಬಂದೇ ಬರುವುದು. ಕೃಷ್ಣಾನುಗ್ರಹದ ಭಾಗ್ಯ ಎಳೆಯರಿಗೂ ಉಂಟು, ಗೆಳೆಯರಿರೂ ಉಂಟು. ಅತನನ್ನು ಆಶ್ರಯಿಸಿದವರಿಗೆ ಅನುಗ್ರಹವಿಲ್ಲವೆನ್ನುವನೇನು? ಆತನನ್ನೇ ಆಶ್ರಯಿಸುವೆ - ಪ್ರಭುಂ ಆಶ್ರಯೇ - ಎನ್ನುತ್ತಾನೆ ಲೀಲಾಶುಕ.

ಸರ್ವಲೋಕಾಶ್ರಯನೂ ಸರ್ವಜೀವಾಶ್ರಯನೂ ಆದ ಶ್ರೀಕೃಷ್ಣ-ಪ್ರಭುವನ್ನು ನಾವೂ ಆಶ್ರಯಿಸೋಣವಲ್ಲವೇ?

ಕಿವಿಗಳಿಗೆ ಹಿತವಾದ ಲಯಮಯವಾದ ಈ ಚಚ್ಚರೀ-ವೃತ್ತದ ಪದ್ಯವನ್ನು ಆಸ್ವಾದಿಸೋಣವೇ?

ಪ್ರತಿಪಾದದಲ್ಲೂ ೨೬ ಮಾತ್ರೆಗಳುಳ್ಳ ೧೮ ಅಕ್ಷರಗಳ ಪದ್ಯವಿದು. ೭, ೭, ೬, ೬ – ಮಾತ್ರೆಗಳು ಇಲ್ಲಿಯ ಯತಿ-ಸ್ಥಾನಗಳು. ದ್ವಿತೀಯಾಕ್ಷರ-ಪ್ರಾಸವಿರುವುದನ್ನೂ ಗಮನಿಸಿಕೊಳ್ಳಿರಿ.

ಪಲ್ಲವಾರುಣ-ಪಾಣಿ-ಪಂಕಜ-ಸಂಗಿ-ವೇಣು-ರವಾಕುಲಂ

ಫುಲ್ಲ-ಪಾಟಲ-ಪಾಟಲೀ-ಪರಿವಾದಿ-ಪಾದ-ಸರೋರುಹಂ |

ಉಲ್ಲಸನ್-ಮಧುರಾಧರ-ದ್ಯುತಿ-ಮಂಜರೀ-ಸರಸಾನನಂ

ವಲ್ಲವೀ-ಕುಚ-ಕುಂಭ-ಕುಂಕುಮ-ಪಂಕಿಲಂ ಪ್ರಭುಂ ಆಶ್ರಯೇ ||

ಸೂಚನೆ : 22/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, July 15, 2024

ವ್ಯಾಸ ವೀಕ್ಷಿತ 95 ಕೊನೆಗೂ ಆಯಿತು ಸುಂದೋಪಸುಂದ-ಸಂಹಾರ! (Vyasa Vikshita 95 Konegu Ayitu Sundopasunda-Samhara!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಒಮ್ಮೆ ವಿಂಧ್ಯ-ಪರ್ವತದ ಶಿಖರದಲ್ಲಿ ಸಮತಟ್ಟಾದ ಶಿಲಾತಲದಲ್ಲಿ ಸುಂದೋಪಸುಂದರು ವಿಹರಿಸುತ್ತಿದ್ದರು. ಅಲ್ಲಿಯ ಶಾಲ-ವೃಕ್ಷಗಳೆಲ್ಲ ಹೂಗಳಿಂದ ತುಂಬಿತುಳುಕುತ್ತಿದ್ದವು. ದಿವ್ಯ-ಭೋಗಗಳೆಲ್ಲ ಅವರಲ್ಲಿಗೆ ಒದಗಿದ್ದವು. ಶ್ರೇಷ್ಠವಾದ ಆಸನಗಳಲ್ಲಿ ಅವರು ಸುಂದರ-ನಾರಿಯರೊಂದಿಗೆ ಸಂತೋಷದಿಂದ ಆಸೀನರಾಗಿದ್ದರು. ಆಮೇಲೆ ವಾದ್ಯಗಳು ನೃತ್ಯಗಳು - ಇವುಗಳೊಂದಿಗೆ ನಾರಿಯರು ಇವರನ್ನು ಸೇವಿಸಿದರು. ಪ್ರಶಂಸಾ-ಪರವಾದ ಗೀತಗಳೊಂದಿಗೆ ಇವರಿಗೆ ಚಿತ್ತ-ರಂಜನವನ್ನು ಉಂಟುಮಾಡಿದರು.

ಅಷ್ಟರಲ್ಲಿ ಕಾಣಿಸಿಕೊಂಡವಳು ತಿಲೋತ್ತಮೆ. ಅಲ್ಲೇ ಕಾಡಲ್ಲಿ ಕೆಂಪಾದ ಏಕ-ವಸ್ತ್ರವೊಂದನ್ನು ಧರಿಸಿದ್ದಳು. ಅದೂ ಆಗಾಗ ಜಾರುತ್ತಿತ್ತು. ನದೀತೀರಗಳಲ್ಲಿ ಬೆಳೆದಿದ್ದ ಕರ್ಣಿಕಾರ-ಕುಸುಮಗಳನ್ನು, ಎಂದರೆ ಕಣಿಗಲೆ-ಹೂಗಳನ್ನು, ಚಯನ ಮಾಡುತ್ತಾ, ಮಾಡುತ್ತಾ, ಆ ಇಬ್ಬರು ದೈತ್ಯರು ಕುಳಿತಿದ್ದೆಡೆಗೂ ಬಂದಳು.

ಆ ಇಬ್ಬರೋ, ಶ್ರೇಷ್ಠವಾದ ಮಾದಕ-ರಸವನ್ನು ಕುಡಿದಿದ್ದರು. ಅದರ ಮದದಿಂದಾಗಿ ಅವರ ಕಣ್ಣಂಚುಗಳು ಕೆಂಪಡರಿದ್ದವು. ಅ ಸುಂದರಾಂಗಿಯಾದ ತಿಲೋತ್ತಮೆಯನ್ನು ಕಂಡಷ್ಟರಿಂದಲೇ ಕಾಮ-ಬಾಧೆಯಿಂದ ಅವರು ಪೀಡಿತರಾದರು. ತಮ್ಮ ಆಸನವನ್ನು ಬಿಟ್ಟು ಮೇಲೆದ್ದರು. ಅವಳಿದ್ದೆಡೆಗೆ ಹೋದರು. ಇಬ್ಬರೂ ಕಾಮದಿಂದ ಉನ್ಮತ್ತರಾಗಿದ್ದರು. ಇಬ್ಬರೂ ಅವಳಲ್ಲಿ ಪ್ರೇಮ-ಯಾಚನೆಯನ್ನು ಮಾಡಿದರು.

ಸುಂದರವಾದ ಹುಬ್ಬುಳ್ಳ ಆ ತಿಲೋತ್ತಮೆಯ ಬಲಗೈಯನ್ನು ಸುಂದನು ಹಿಡಿದುಕೊಂಡನು. ಅವಳ ಎಡಗೈಯನ್ನು ಉಪಸುಂದನು ಹಿಡಿದನು. ವರ-ಪ್ರದಾನದಿಂದ ಬಂದ ಮದ, ಸ್ವಾಭಾವಿಕವಾದ ಬಲ, ಧನ-ಮದ, ರತ್ನ-ಮದ, ಸುರಾಪಾನ-ಮದ - ಈ ಎಲ್ಲ ಮದಗಳಿಂದಾಗಿ ಅವರೇ ಪರಸ್ಪರ ಹುಬ್ಬುಗಂಟಿಕ್ಕಿ ನೋಡುವಂತಾಯಿತು.

ಅವಳಂತೂ ತನ್ನ ಕಟಾಕ್ಷದಿಂದಲೇ ಆ ಇಬ್ಬರು ದೈತ್ಯರನ್ನೂ ತನ್ನತ್ತ ಆಕರ್ಷಿಸಿದಳು. ಬಲಗಣ್ಣಂಚಿನಿಂದ ಸುಂದನನ್ನೂ ಎಡಗಣ್ಣಂಚಿನಿಂದ ಉಪಸುಂದನನ್ನೂ ಸೆಳೆದಳು. ಅವಳ ದಿವ್ಯ-ಸುಗಂಧ, ಅವಳ ಆಭರಣಗಳು, ಅವಳ ರೂಪ - ಇವುಗಳಿಂದಾಗಿ ಅವರಿಬ್ಬರೂ ಅವಳ ವಿಷಯದಲ್ಲಿ ವ್ಯಾಮೋಹಗೊಂಡರು.

ಮದಾವೇಶ-ಕಾಮಾವೇಶಗಳ ಸಮಾವೇಶದಿಂದ ಕೂಡಿದವರಾಗಿ, ಅವರು ಒಬ್ಬರಿಗೊಬ್ಬರು ಹೀಗೆ ಸಂಭಾಷಿಸಿದರು: "ಇವಳು ನನಗೆ ಭಾರ್ಯೆ, (ಎಂದೇ) ನಿನಗೆ ಗುರು, ಎಂದರೆ ತಾಯಿಗೆ ಸಮಾನ", ಎಂಬುದಾಗಿ ಸುಂದನು ಹೇಳಿದನು; "ಇಲ್ಲ, ಇವಳು ನನಗೆ ಭಾರ್ಯೆ, (ಎಂದೇ) ನಿನಗೆ ಸೊಸೆಯಂತೆ" - ಎಂಬುದಾಗಿ ಉಪಸುಂದನು ಹೇಳಿದನು.

"ಇವಳು ನಿನಗಲ್ಲ, ನನಗೆ" ಎಂಬುದಾಗಿ ಹೇಳುತ್ತಿದ್ದ ಅವರಲ್ಲಿ ಪರಸ್ಪರ ಕ್ರೋಧವು ಹೊಕ್ಕಿತು. ತಮ್ಮ ಸ್ನೇಹ-ಸೌಹಾರ್ದಗಳನ್ನು ಮರೆತವರಾಗಿ ಅವಳ ಸೌಂದರ್ಯಕ್ಕೆ ಇಬ್ಬರೂ ಮದಿಸಿ ಮರುಳಾದರು. ಅವಳಿಗೋಸ್ಕರವಾಗಿ ಭಯಂಕರವಾದ ಗದೆಗಳನ್ನು ಇಬ್ಬರೂ ಕೈಗೆತ್ತಿಕೊಂಡರು. ಅವಳ ವಿಷಯದಲ್ಲಿ ಇಬ್ಬರೂ ಕಾಮ-ಮೋಹಿತರಾಗಿದ್ದರು.

ನಾ ಮೊದಲು ತಾ ಮೊದಲೆಂದು ಹೇಳುತ್ತಾ ಇಬ್ಬರೂ ಪರಸ್ಪರ ಹೊಡೆದಾಡಿದರು. ಗದೆಯ ಹೊಡೆತ ತಿಂದು ಇಬ್ಬರೂ ಭಯಂಕರರೂ ನೆಲದ ಮೇಲೆ ಬಿದ್ದರು. ಇಬ್ಬರ ಮೈಯೂ ರಕ್ತ-ಸಿಕ್ತವಾಗಿತ್ತು. ಆಕಾಶದಿಂದ ಬಿದ್ದ ಎರಡು ಸೂರ್ಯರಂತೆ ಅವರಿದ್ದರು.

ಆಗ ಅಲ್ಲಿದ್ದ ನಾರಿಯರೆಲ್ಲ ಅಲ್ಲಿಂದ ಓಡಿಹೋದರು! ದೈತ್ಯ-ಸ್ತೋಮವೂ ಪಾತಾಳವನ್ನು ಸೇರಿಕೊಂಡಿತು! ಎಲ್ಲರೂ ದುಃಖದಿಂದಲೂ ಭಯದಿಂದಲೂ ನಡುಗಿಹೋದರು.

ಶುದ್ಧಾತ್ಮನಾದ ಪಿತಾಮಹನು ಮಹರ್ಷಿಗಳೊಂದಿಗೂ ದೇವತೆಗಳೊಂದಿಗೂ ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದನು. ತಿಲೋತ್ತಮೆಯನ್ನು ಗೌರವಿಸಿದನು. ವರವನ್ನೇನಾದರೂ ಕೇಳಿಕೋ - ಎಂದು ಒಡಂಬಡಿಸಿದನು. ವರಕೊಡುವ ಬಯಕೆಯುಳ್ಳವನಾಗಿ, ಸಂತುಷ್ಟನಾದ ಪಿತಾಮಹನು ಈ ರೀತಿಯಾಗಿ ಹೇಳಿದನು.

ಸೂಚನೆ : 15/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 98(Yaksha prashne 98)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ –  97 ಶ್ರೇಷ್ಠವಾದ ಸ್ನಾನ ಯಾವುದು ?

ಉತ್ತರ - ಮನಸ್ಸಿನ ಕೊಳೆ ತೊಳೆಯುವುದು. 

ಮಾನವನ ಮನಸ್ಸಿಗೆ ಬಹಳ ಸಾಮರ್ಥ್ಯವಿದೆ. ಮನಸ್ಸಿನ ಕಾರಣದಿಂದಲೇ ಮಾನವ ಎಂಬ ಹೆಸರನ್ನು ಪಡೆದದ್ದು.  ಆದರೆ ಅದು ಶುದ್ಧವಾಗಿರಬೇಕು. ಮನಸ್ಸು ಶುದ್ಧವಾಗಿರುವುದು ಎಂದರೇನು? ಯಾವುದೇ ಪದಾರ್ಥದಿಂದಲೂ ಪೂರ್ಣಪ್ರಯೋಜನವಾಗಬೇಕಾದರೆ ಅದು ಶುದ್ಧವಾಗಿಯೇ ಇರಬೇಕಷ್ಟೆ. ಮನಸ್ಸು ಶುದ್ಧವಾಗಿರುವುದು ಎಂದರೇನು? ಇಂತಹ ಶುದ್ಧತೆ ಯಾವುದರಿಂದ ಬರುತ್ತದೆ ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಸ್ನಾನದಿಂದ ಮನಸ್ಸಿನ ಕೊಳೆಯನ್ನು ತೊಳೆಯಬಹುದು ಎಂಬ ಉತ್ತರ ಧರ್ಮರಾಜನದ್ದು.  

ಸ್ನಾನ ಮಾಡುವುದರಿಂದ ಹೇಗೆ ಮನಸ್ಸು ಶುದ್ಧವಾಗುತ್ತದೆ? ಬಾಹ್ಯಸ್ನಾನ ಮತ್ತು  ಬಗೆಯ ಆಂತರಸ್ನಾನ ಎಂಬುದಾಗಿ  ಎರಡು ಬಗೆಯ ಸ್ನಾನಗಳಿವೆ. ಅಷೇ ಅಲ್ಲದೆ ಸಪ್ತವಿಧವಾದ ಸ್ನಾನವನ್ನೂ ಸ್ನಾನವಿಧಿಯಲ್ಲಿ ಹೇಳಲಾಗಿದೆ.  ಎಲ್ಲಾ ಬಗೆಯ ಸ್ನಾನಗಳ ಉದ್ದೇಶ ಮಾನಸಿಕ ಶುದ್ಧಿ. ಇಂದ್ರಿಯಗಳಲ್ಲಿ ಮನಸ್ಸು ಮುಖ್ಯವಾದುದು. ಅದಕ್ಕೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಇಂದ್ರಿಯಾಣಾಂ ಮನಶ್ಚಾಸ್ಮಿ' ಎಂದು ಹೇಳುವಷ್ಟು ಉತ್ಕೃಷ್ಟ. ಹಾಗಾಗಿ ಈ ಎಲ್ಲಾ ಬಗೆಯ ಸ್ನಾನಗಳಿಂದಲೂ ಮಾನಸಿಕವಾದ ಶುದ್ಧಿಯೇ ಅಗತ್ಯವಾಗಿ ಆಗಬೇಕಾದುದು. ಸ್ನಾನಕ್ಕೂ ಮನಸ್ಸಿನ ಶುದ್ಧಿಗೂ ಏನು ಸಂಬಂಧವಿದೆ? ಎಂದರೆ ಮನಸ್ಸನ್ನು ಶುದ್ಧಿಗೊಳಿಸುವ ಸ್ನಾನವೂ ಇದೆ ಮತ್ತು  ಶರೀರದ ಬೇರೆ ಬೇರೆ ಅಂಗಗಳನ್ನು ಶುದ್ಧಿಗೊಳಿಸುವುದರಿಂದಲೂ ಮನಸ್ಸು ಶುದ್ಧಿಗೊಳ್ಳುತ್ತದೆ. ಆದ್ದರಿಂದ ಮಾನಸಿಕವಾದ ಶುದ್ಧಿಯು, ಬಾಹ್ಯ ಮತ್ತು ಅಂತರಂಗದ ಸ್ನಾನದಿಂದಲೂ ಶುದ್ಧವಾಗುತ್ತದೆ ಎಂಬುದರಲ್ಲಿ ವಿವಾದವಿಲ್ಲ. 

ಮಾಂತ್ರ, ಭೌಮ, ಆಗ್ನೇಯ, ವಾಯವ್ಯ, ದಿವ್ಯ, ವಾರುಣ, ಮಾನಸ ಎಂಬುದಾಗಿ ಏಳು ಬಗೆಯ ಸ್ನಾನಗಳಿವೆ. ಶುದ್ಧಿಗೆ ಸಂಬಂಧಿಸಿದ  ಮಂತ್ರಗಳನ್ನು ಉಚ್ಚರಿಸುವುದರಿಂದ ಉಂಟಾಗುವ ಶುದ್ಧಿಗೆ ಮಾಂತ್ರಸ್ನಾನವೆಂದು ಕರೆಯುತ್ತಾರೆ. ಮಣ್ಣು ಮೊದಲಾದ ಭೂಮಿಗೆ ಸಂಬಂಧಪಟ್ಟ ಪದಾರ್ಥಗಳನ್ನು ಬಳಸಿ ಮಾಡುವ ಶುದ್ಧಿಗೆ ಭೌಮಸ್ನಾನ ಎಂದು ಕರೆಯುತ್ತಾರೆ.  ಭಸ್ಮ ಅಥವಾ ಬೆಂಕಿಯ ಶಾಖವನ್ನು ಬಳಸುವ ವಿಧಾನಕ್ಕೆ ಆಗ್ನೇಯಸ್ನಾನವೆಂದು ಕರೆಯುತ್ತಾರೆ. ಗೋವಿನ ಧೂಳಿನ ಕಣಗಳು ಮೈಯ ಬೀಳುವ  ಸ್ನಾನವೇ ವಾಯವ್ಯಸ್ನಾನ. ಗೋವು ಸಂಚರಿಸುವಾಗ ಧೂಳನ್ನು ಎಬ್ಬಿಸುತ್ತದೆ. ಆಗ ಆ ಧೂಳು ಮೈಗೆ ಸೋಕಿದರೆ ಅದೇ ವಾಯವ್ಯಸ್ನಾನವಾಗುತ್ತದೆ. ಸೂರ್ಯನ ಕಿರಣಗಳು ಮೈಗೆ ತಾಕುವಂತೆ ಮಾಡಿಕೊಳ್ಳುವುದು ದಿವ್ಯಸ್ನಾನ ಎನ್ನಬಹುದು. ನೀರಿನಲ್ಲಿ ಮುಳುಗಿ ಮಾಡುವ ಸ್ನಾನಕ್ಕೆ ವಾರುಣಸ್ನಾನ ಎನ್ನುತ್ತಾರೆ. ವಿಷ್ಣು ಅಥವಾ ಅವರವರ ಇಷ್ಟದ ದೇವತೆಗಳನ್ನು ಚಿಂತಿಸುವುದು ಅಥವಾ ಧ್ಯಾನಿಸುವುದು, ಪೂಜಿಸುವುದನ್ನೇ ಮಾನಸಸ್ನಾನ ಎಂದು ಕರೆಯಲಾಗುತ್ತದೆ.  ಈ ಏಳು ವಿಧವಾದ ಸ್ನಾನಗಳಲ್ಲಿ ನೇರವಾಗಿ ಮನಸ್ಸನ್ನು ಶುದ್ಧಿಗೊಳಿಸುವುದು ಧ್ಯಾನ ಪೂಜೆ ಮೊದಲಾದ ಮಾನಸಸ್ನಾನದಿಂದ. ಹಾಗಾಗಿ ಎಲ್ಲಾ ಸ್ನಾನಕ್ಕಿಂತಲೂ ಮಾನಸಸ್ನಾನ ಅತ್ಯಂತ ಶ್ರೇಷ್ಠವಾಗಿದೆ. ಆದರೆ ಉಳಿದ ಸ್ನಾನಗಳು ಶರೀರದ ಬೇರೆ ಬೇರೆ ಅಂಗಗಳನ್ನು ಶುದ್ಧಿಗೊಳಿಸುವ ಮೂಲಕ ಮನಸ್ಸಿನ ಕೊಳೆಯನ್ನು ತೊಳೆಯುತ್ತವೆ. ಬಾಹ್ಯಶುದ್ಧಿಯಿದ್ದವನಿಗೆ ಅಂತಃಶುದ್ಧಿ ತುಂಬಾ ಸುಲಭ. ಬಾಹ್ಯಶುದ್ಧಿ  ಇಲ್ಲದಿದ್ದರೆ ಮನಸ್ಸು ಬೇಗ ಮಲಿನಗೊಳ್ಳುತ್ತದೆ. ಏಕೆಂದರೆ ಬಾಹ್ಯ ಇಂದ್ರಿಯಗಳಿಂದಲೇ ಮನಸ್ಸು ಶುದ್ಧ ಅಥವಾ ಅಶುದ್ಧ ಅರಿವನ್ನು ಪಡೆಯುತ್ತದೆ. ಕೆಟ್ಟದ್ದನ್ನು ನೋಡಿದರೆ ಅದರ ಜ್ಞಾನಕ್ಕೆ ಕೇವಲ ಕಣ್ಣುಮಾತ್ರ ಕಾರಣವಲ್ಲ. ಅಲ್ಲಿ ಮನಸ್ಸೂ ಬೇಕೇಬೇಕು. ನೋಡಿದ್ದರ ಪರಿಣಾಮ ಮನಸ್ಸಿನ ಮೇಲೂ ಬೀಳಲೇಬೇಕು. ಹಾಗಾಗಿ ಈ ಎಲ್ಲಾ ಬಗೆಯ ಸ್ನಾನಗಳೂ ಮಾನಸ್ಸಿನ ಕೊಳೆಯನ್ನು ತೊಳೆಯಲು ಸಾಧ್ಯ. ಇಲ್ಲಿ ಕೊಳೆ ಎಂದರೆ ಸಲ್ಲದ  ಚಿಂತನೆ. ಶುದ್ಧಿ ಎಂದರೆ ಸದ್ವಿಚಾರ ಚಿಂತನೆ. ಯಾವುದರಿಂದ ಸದ್ವಿಚಾರಚಿಂತನೆಯಾಗುತ್ತದೆಯೋ ಅದನ್ನು ಮಾನಸಸ್ನಾನ ಎಂದು ಕರೆಯಬಹುದು. ಅಂತಹ ಚಿಂತನೆಯಿಂದ ಮಾತ್ರವೇ ಮನಸ್ಸಿನ ಮಾಲಿನ್ಯ ದೂರವಾಗುತ್ತದೆ. 

ಸೂಚನೆ : 15
/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, July 13, 2024

ಕೃಷ್ಣಕರ್ಣಾಮೃತ - 22 ಕಿಶೋರ-ಕೃಷ್ಣನ ಚೇತೋಹರ-ಚರಣಗಳೂ ಮೋಹಕ-ಲೋಚನಗಳೂ (Krishnakarnamrta -22 Kishora-Krishnana Chetohara-Charanagalu Mohaka-lochanagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಭಗವಂತನ ಮೂರ್ತಿಯನ್ನು ಆಪಾದಮಸ್ತಕ ನೋಡುವ ಕ್ರಮವನ್ನು ಶಾಸ್ತ್ರಗಳು ವಿಹಿತಮಾಡುತ್ತವೆ. ಏನು ಆ-ಪಾದ-ಮಸ್ತಕವೆಂದರೆ? ಪಾದವೆಂದರೆ ಚರಣ. ಮಸ್ತಕವೆಂದರೆ ಶಿರಸ್ಸು.'ಆ' ಎಂಬುದು ಎಲ್ಲಿಂದ ಆರಂಭವೆಂಬುದನ್ನು ಹೇಳುತ್ತದೆ. ಹೀಗೆ, "ಪಾದದಿಂದ ಆರಂಭಿಸಿ," ಎಂಬ ಅರ್ಥ, 'ಆ-ಪಾದ' ಎಂಬ ಪದಕ್ಕೆ.

ಚರಣದಿಂದ ಶೀರ್ಷದವರೆಗೆ ಭಾವಿಸುವುದನ್ನೇ ಆ-ಪಾದ-ಮಸ್ತಕವೆನ್ನುವುದು. ಅಷ್ಟೇ ಅಲ್ಲದೆ, ದೇವತೆಗಳ ವರ್ಣನೆಯನ್ನು ಮಾಡುವುದಕ್ಕೂ ಮನುಷ್ಯರ ವರ್ಣನೆಯನ್ನು ಮಾಡುವುದಕ್ಕೂ ಕ್ರಮ-ಭೇದವನ್ನು ಹೇಳುವುದುಂಟು: ದೇವರ ವರ್ಣನೆಯನ್ನು ಮಾಡುವಾಗ ಸಾಮಾನ್ಯವಾಗಿ ಪಾದದಿಂದ ಮಸ್ತಕದವರೆಗೆ; ಮನುಷ್ಯರದ್ದು ಮಸ್ತಕದಿಂದ ಪಾದದವರೆಗೆ.

ಕೃಷ್ಣಕರ್ಣಾಮೃತದಲ್ಲಿ ಪಕ್ಕಪಕ್ಕದಲ್ಲೇ ಬರುವ ಎರಡು ಶ್ಲೋಕಗಳಿವೆ. ಎರಡೂ ಒಂದೇ ವೃತ್ತದಲ್ಲಿವೆ. ಒಂದರಲ್ಲಿ ಕೃಷ್ಣನ ಪಾದಗಳನ್ನು ವರ್ಣಿಸಿದೆ. ಮತ್ತೊಂದರಲ್ಲಿ ಕಣ್ಣುಗಳನ್ನು.

ಹೇಗಿವೆ ಆತನ ಪಾದಗಳು? ಕಮಲದಂತಿವೆಯೆಂಬುದು ಸುವಿದಿತವೇ ಸರಿ. "ಅವುಗಳಿಂದಾಗುವ ಸುಖವನ್ನು ನನ್ನ ಮನಸ್ಸು ಧರಿಸಲಿ; ಆ ಸುಖವು ಅನಿರ್ವಚನೀಯವಾದದ್ದು" - ಎನ್ನುತ್ತಾನೆ, ಲೀಲಾಶುಕ.

ಆ ಚರಣ-ಕಮಲಗಳ ವಿಶೇಷವೇನು? ಇಡೀ ಜಗತ್ತಿನಲ್ಲಿರುವ ಶೋಭೆಯೆಂಬುದು ಯಾವುದುಂಟೋ ಅದಕ್ಕೆ ಸದನವಾಗಿವೆ ಅವು. ಜಗತ್ತು ಎರಡು ಬಗೆ - ಪ್ರಾಕೃತ ಹಾಗೂ ಅ-ಪ್ರಾಕೃತ ಎಂದು. ಪ್ರಕೃತಿಯಿಂದ ಆದದ್ದು ಪ್ರಾಕೃತ. ಹಾಗಲ್ಲದ್ದು ಅ-ಪ್ರಾಕೃತ. ಪಂಚ-ಭೂತಗಳೂ ಪ್ರಕೃತಿಯಲ್ಲೇ ಇರತಕ್ಕವು. ಆದ್ದರಿಂದ ಪಾಂಚಭೌತಿಕವಾದದ್ದು ಪ್ರಾಕೃತ. ನಮ್ಮ ಲೋಕ ಪ್ರಾಕೃತ. ವೈಕುಂಠವು ಹಾಗಲ್ಲ; ಅದು ಅ-ಪ್ರಾಕೃತ.

ನಿಖಿಲ-ಭುವನವೆಂದರೆ ಈ ಲೋಕ ಆ ಲೋಕಗಳೆರಡೂ ಸೇರುವ ಲೆಕ್ಕ. ಹೀಗೆ ಇವೆರಡರಲ್ಲಿ ಅದೇನೇನು ಶೋಭೆಯುಂಟೋ ಆ ಶೋಭೆಗೆ ಇವೆರಡು, ಎಂದರೆ ಈ ಚರಣಗಳು, ಲೀಲಾ-ಗೃಹ - ಎಂದರೆ ಆಟದ ಮನೆ. ಅಷ್ಟೇ ಅಲ್ಲ, ನಿತ್ಯ-ಲೀಲಾ-ಗೃಹ - ಎಂದರೆ ಸರ್ವದಾ ಕ್ರೀಡಿಸುವ ಎಡೆ. ಅರ್ಥಾತ್, ಸಮಸ್ತ-ಜಗತ್ತಿನಲ್ಲಿರುವ ಲಕ್ಷ್ಮಿಗೆ, ಎಂದರೆ ಕಾಂತಿಗೆ, ಏಕಾಶ್ರಯವೆಂದರೆ ಈ ಚರಣಗಳು. ಲಕ್ಷ್ಮಿಯೆಂದರೆ ವಿಷ್ಣು-ಪತ್ನಿಯೆಂಬುದು ಪ್ರಸಿದ್ಧಾರ್ಥ. ಲಕ್ಷ್ಮಿಯೆಂಬುದಕ್ಕೆ ಕಾಂತಿ, ಶೋಭೆ - ಎಂಬರ್ಥಗಳೂ ಉಂಟು. ಮತ್ತು ಆ ಶೋಭೆಯಾದರೂ ಸದಾ ಇರುವಂತಹುದು: ಅಂತಹ ನಿತ್ಯ-ಲೀಲೆಯಿಲ್ಲಿದೆ! ಇದು ಶ್ರೀಕೃಷ್ಣ-ಪಾದಾಂಬುಜಗಳ ಮೊದಲ ಲಕ್ಷಣ.

ದೊಡ್ಡ ಸರೋವರವೊಂದರಲ್ಲಿ ಸಾವಿರಾರು ಕಮಲಗಳಿರುವ ಎಡೆಯನ್ನು ಕಮಲ-ವನವೆನ್ನುವುದುಂಟು. ಅಂತಹ ಕಮಲ-ವಿಪಿನದ ವೀಥಿ(ಎಂದರೆ ಬೀದಿ)ಗೆ ಗರ್ವವಿರುತ್ತದಂತೆ. ಏಕೆ ಗರ್ವ? ಒಂದೆರಡು ಕಾರಣಗಳು: ಆಹಾ ನಮ್ಮಲ್ಲಿ ಅದೆಷ್ಟು ಸುಗಂಧವಿದೆ! - ಎಂಬುದೊಂದು.  ಸಾಕ್ಷಾಲ್ಲಕ್ಷ್ಮಿಗೆ ನಾವು ವಾಸಸ್ಥಾನವಲ್ಲವೇ! - ಎಂಬುದು ಮತ್ತೊಂದು.

ಆದರೆ ಆ ಗರ್ವವನ್ನು ಸಂಪೂರ್ಣವಾಗಿ ಕೆಡವತಕ್ಕವು ಈ ಕೃಷ್ಣ-ಚರಣ-ಕಮಲಗಳು. ಹೇಗೆ? ನಾಲ್ಕು ಕಾರಣಗಳು: ಇವುಗಳ ಸುಗಂಧ ಅವುಗಳ ಸುಗಂಧವನ್ನು ಮೀರಿಸುತ್ತದೆ. ಹಾಗೆಯೇ ಇವುಗಳ ಕೆಂಬಣ್ಣ, ಮಾರ್ದವ, ಶೈತ್ಯ - ಇವೆಲ್ಲದರಲ್ಲೂ ಆ ಕಮಲಗಳ ಶ್ರೇಣಿಯ (ಸಾಲಿನ) ಗರ್ವಕ್ಕೆ ಸರ್ವಂಕಷವಾದವು ಇವು; ಸರ್ವಂಕಷವೆಂದರೆ ಸಂಪೂರ್ಣವಾಗಿ ಮರ್ದಿಸತಕ್ಕವು. ಇದು ಎರಡನೆಯ ಲಕ್ಷಣ.

ಮೂರನೆಯದಿದು: ಯಾರಾದರೂ ಈ ಶ್ರೀಕೃಷ್ಣ-ಪಾದಾಂಬುಜಗಳಿಗೆ ವಂದಿಸಿದರೆ ಸಾಕು. ಅವರಿಗೆ ಅಭಯ-ದಾನವನ್ನವು ಮಾಡಬಲ್ಲವು, ಇವು. ಅಭಯವೀಯುವುದರಲ್ಲಿ ಇವಕ್ಕೆ ಒಂದು ಪ್ರೌಢಿಯೇ ಬಂದುಬಿಟ್ಟಿದೆ. ಎಂದೇ ಇವನ್ನು ಎಲ್ಲರೂ ನೆಚ್ಚುವರು, ಗಾಢವಾಗಿ ಆದರಿಸುವರು.

ಮತ್ತಿನ್ನಾವ ಕಮಲಗಳಲ್ಲಿ ಇವಿಷ್ಟೂ ಹಿರಿಮೆಗಳಿವೆ? ಇಂತಹ ಅತಿವಿಶಿಷ್ಟವಾದ ಕೃಷ್ಣ-ಪಾದಾಂಬುಜಗಳನ್ನು ನನ್ನ ಮನಸ್ಸು ಧರಿಸಿರಲಿ - ಎನ್ನುತ್ತಾನೆ, ಲೀಲಾಶುಕ.

ಶ್ಲೋಕವಿದು:

ನಿಖಿಲ-ಭುವನ-ಲಕ್ಷ್ಮೀ-ನಿತ್ಯ-ಲೀಲಾಸ್ಪದಾಭ್ಯಾಂ/ಕಮಲ-ವಿಪಿನ-ವೀಥೀ-ಗರ್ವ-ಸರ್ವಂಕಷಾಭ್ಯಾಮ್| ಪ್ರಣಮದ್-ಅಭಯ-ದಾನ-ಪ್ರೌಢಿ-ಗಾಢಾದೃತಾಭ್ಯಾಂ/ಕಿಮಪಿ ವಹತು ಚೇತಃ ಕೃಷ್ಣ-ಪಾದಾಂಬುಜಾಭ್ಯಾಂ||

ಈ ಶ್ಲೋಕದಲ್ಲಿ ನಾಲ್ಕು ಬಾರಿ "-ಭ್ಯಾಂ" ಬಂದಿದೆ; ಮುಂದಿನ ಶ್ಲೋಕದಲ್ಲಿ ಆರು ಬಾರಿ. ಒಟ್ಟು ಹತ್ತು ಬಾರಿ!

ಕಂಗೊಳಿಸುವ ಕಂಗಳುಳ್ಳ ಕೃಷ್ಣನು ನಮ್ಮ ಹೃದಯದೊಳಗೆ ಗೋಚರಿಸಲಿ - ಎಂಬುದು ಮತ್ತೊಂದು ಶ್ಲೋಕ. ಕೃಷ್ಣನನ್ನು ಈ ಶ್ಲೋಕದಲ್ಲಿ ಕರೆದಿರುವುದು "ನಮ್ಮ ಪ್ರಾಣ-ನಾಥನಾದ ಕಿಶೋರ" ಎಂದು! ಕನಕದಾಸರು ಹೇಳುವರಲ್ಲವೇ "ಪ್ರಾಣ-ನಾಯಕ ನಮ್ಮ ಆದಿಕೇಶವರಾಯ!" ಎಂದು? ಎಂದರೆ ನಮ್ಮ ಪ್ರಾಣಗಳಿಗೆ ಆತನೇ ಒಡೆಯನೆಂಬ ಭಾವ. ಎಂದರೆ, ಆತನು ನಮ್ಮ ಪಾಲಿಗಿಲ್ಲವೆಂದೇನಾದರೂ ಆದರೆ ನಾವೇ ಉಳಿಯಲಾರೆವು! - ಎಂಬಷ್ಟು ಗಾಢವಾದ ಪ್ರೀತಿ ಆತನಲ್ಲಿ, ಎಂದರ್ಥ. ಉಪನಿಷತ್ತು ಸಹ ಪರಬ್ರಹ್ಮವನ್ನು "ಪ್ರಾಣಸ್ಯ ಪ್ರಾಣಃ" ಎನ್ನುತ್ತದೆ. "ಉಸಿರಿಗುಸಿರಾಗಿರುವನು" - ಎನ್ನುವ ಪರಿಯಿದು.

ಯಾರ ಬಗ್ಗೆಯಾದರೂ ಉತ್ಕಟವಾದ ಆಕರ್ಷಣೆಯುಂಟಾಗುವುದೆಂದರೆ, ಮುಖ್ಯವಾಗಿ ಅವರ ಕಣ್ಣುಗಳ ಸೆಳೆತವೇ ಮುಖ್ಯವಾಗಿ ಆಗಿರುವುದು. ಪ್ರಣಯಿಗಳ ಪ್ರಣಯವು ಬೆಳೆಯುವುದರಲ್ಲೂ ಮೊಟ್ಟಮೊದಲ ಹೆಜ್ಜೆಯೆಂದರೆ ಈ ಚಕ್ಷುಃ-ಪ್ರೀತಿ. ಎಂದರೆ ಪರಸ್ಪರ ಕಣ್ಣೋಟವೇ ಮುದ-ಪ್ರದವಾಗಿ ತೋರುತ್ತಿರುವುದು; ಮತ್ತೆ ಮತ್ತೆ ನೋಡಬೇಕೆನಿಸುತ್ತಿರುವುದು. ಈ ಬಾಲ-ತರುಣ-ಕೃಷ್ಣನ ಕಣ್ಣುಗಳಲ್ಲಿ ಅದೆಂತಹ ಅಲೌಕಿಕ-ಶಕ್ತಿ ಅಡಗಿದೆ! "ಕಣ್ಗಳಿದ್ಯಾತಕೋ ಕಾವೇರಿ-ರಂಗನ ನೋಡದಾ..." ಎಂದು ದಾಸರು ಕೇಳಿದರಲ್ಲವೇ?

ಹಾಗಾದರೆ ಆ ಕಣ್ಣುಗಳಲ್ಲಿ ಏನಿದೆ ವಿಶೇಷ? ಐದಾರು ವಿಶೇಷಗಳಿವೆ. ಅವು ಪ್ರಣಯ-ಪರಿಣತಗಳು. ಎಂದರೆ ಪ್ರಣಯದಲ್ಲಿ ಪಳಗಿದವುಗಳು. ಏನು ಹಾಗೆಂದರೆ? ಶ್ರೀಕೃಷ್ಣನು ಯಾರತ್ತ ದೃಷ್ಟಿಬೀರಿದರೂ, ಆ ಚೈತನ್ಯಕ್ಕೆ ಒಂದು ಉತ್ಕರ್ಷದ ಆಕರ್ಷಣೆಯುಂಟಾಗುವುದು! ಗೋಪಿಕೆಯರ ವಿಷಯದಲ್ಲಂತೂ ಇದು ಸುಸ್ಪಷ್ಟವೇ: ಅವರು ಆತನ ಬಗ್ಗೆ ಪ್ರೇಮ-ವಿಹ್ವಲರಾಗುವರು! ಜೀವ-ಜೀವಗಳ ಸೆಳೆತಕ್ಕೆ ದೃಷ್ಟಿ-ಪ್ರೀತಿಯು ಕಾರಣವು ಹೇಗೋ, ಜೀವ-ದೇವರ ಸೆಳೆತದ ಆರಂಭವೂ ಈ ನೇತ್ರಾಕರ್ಷಣದಿಂದಲೇ. ಕೃಷ್ಣನ ಕಮಲ-ಕಮ್ರವಾದ ಕಣ್ಗಳನ್ನು ಕಂಡರಷ್ಟೇ ಕರಣ-ಸಾಫಲ್ಯವೆಂಬ ಭಾವವು ಉಕ್ಕುವಂತಾಗುವುದು.

ಎರಡನೆಯದಾಗಿ, ಪ್ರಾಭವಕ್ಕೆ, ಎಂದರೆ ಒಡೆತನಕ್ಕೆ, ಆ ಎರಡು ಕಣ್ಣುಗಳೇ ಆಲಂಬನ. ಆಲಂಬನವೆಂದರೆ ಆಸರೆ. ಆ ಕಣ್ಕಾಂತಿಯತ್ತ ನಮ್ಮ ದೃಷ್ಟಿ ಒಮ್ಮೆ ಹೋದರೆ ಅದಕ್ಕೆ ನಮ್ಮ ದೃಷ್ಟಿ ವಶವಾದಂತೆಯೇ. ನಮ್ಮ ಕಣ್ಣುಗಳನ್ನುಅಲ್ಲಿಂದ ಕೀಳಲೇ ಆಗದು! ಅಲ್ಲಿಗೆ, ಸಾಟಿಯಿಲ್ಲದ ಸೊಬಗಿನ ಸೆಲೆಗಳು ಆ ಮೋಹಕ-ಲೋಚನಗಳು.

ಮೂರನೆಯದಾಗಿ, ಹೆಜ್ಜೆಹೆಜ್ಜೆಗೂ ಆ ಕಣ್ಗಳಲ್ಲಿ ಒಂದು ಲಾಲಿತ್ಯವು ಗೋಚರವಾಗುತ್ತದೆ. ನಾಲ್ಕನೆಯದಾಗಿ ಅವುಗಳಲ್ಲಿ ಒಂದು ನೂತನತೆಯು ಪ್ರತಿದಿನವೂ ಕಾಣುತ್ತದೆ. ಇಂತಹ ನವ-ನವ-ನಾವೀನ್ಯವು ಯಾರ ಕಣ್ಣುಗಳಲ್ಲಿದ್ದೀತು? ಪ್ರತಿದಿನವೇನು, ಪ್ರತಿಕ್ಷಣವೂ ಅವು ಅಧಿಕವಾಗಿ, ಎಂದರೆ ಅಧಿಕ-ಸುಖಕರವಾಗಿ, ತೋರತಕ್ಕವು. ಕೊನೆಯದಾಗಿ ಅವು ಪ್ರಸ್ಫುರಿಸತಕ್ಕವು. ಎಂದರೆ ಕಂಗೊಳಿಸತಕ್ಕವು.

ಹೀಗೆ ನಾನಾ-ಕಾರಣಗಳಿಂದ ಕೃಷ್ಣನೆಂದರೆ ನಮ್ಮ ಚಿತ್ತಕ್ಕೆ ಮೊಟ್ಟಮೊದಲು ತಟ್ಟುವುದೇ, ಎದ್ದು ಕಾಣುವುದೇ, ಆತನ ಕಮನೀಯ-ನಯನಗಳು.

ಹೀಗೆ ಪ್ರೀತಿ-ಪ್ರಭುತ್ವ-ಲಾಲಿತ್ಯ-ನಾವೀನ್ಯ-ಆಧಿಕ್ಯ-ಸ್ಫುರಣಗಳೆಂಬ ಸದ್ಗುಣ-ವಿಶೇಷಗಳ ಸಂಗಮದಿಂದ ಕಂಗೊಳಿಸುವ ನೇತ್ರಗಳಿಂದಲೇ ನಮ್ಮನ್ನು ಪರವಶಗೊಳಿಸಿರುವ, ನಮ್ಮ ಪ್ರಾಣೇಶನಾದ ಈ ಕೃಷ್ಣ-ಕಿಶೋರನು ನಮ್ಮಗಳ ಹೃದಯದಲ್ಲಿ ಸದಾ ಪ್ರಕಟನಾಗಿರಲಿ - ಎನ್ನುತ್ತಾನೆ, ನಮ್ಮ ಮಧುರ-ಕವಿ, ಲೀಲಾಶುಕ!

ಆದಿಯಲ್ಲಿ "ಪ್ರ"ಕಾರ-ಪ್ರಾಸವನ್ನೂ ಉಳ್ಳ ಈ ಶ್ಲೋಕವನ್ನೀಗ ಓದಿ:

ಪ್ರಣಯ-ಪರಿಣಾತಾಭ್ಯಾಂ ಪ್ರಾಭವಾಲಂಬನಾಭ್ಯಾಂ/ ಪ್ರತಿಪದ-ಲಲಿತಾಭ್ಯಾಂ ಪ್ರತ್ಯಹಂ ನೂತನಾಭ್ಯಾಂ| ಪ್ರತಿಮುಹುರ್ ಅಧಿಕಾಭ್ಯಾಂ ಪ್ರಸ್ಫುರಲ್ಲೋಚನಾಭ್ಯಾಂ / ಪ್ರಭವತು ಹೃದಯೇ ನಃ ಪ್ರಾಣ-ನಾಥಃ ಕಿಶೋರಃ ||

ಸೂಚನೆ : 13/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಭಗವಂತ ಕರುಣಾಮಯನೇ? ಭಾಗ-೩ (Bhagavanta Karunamayane? Bhaga-3)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)





ದ್ರೌಪದಿಯ ಮೇಲಿನ ಕರುಣೆ:

 

"ಗೋವಿನ್ದೇತಿ ಯದಾಕ್ರನ್ದತೇ ಕೃಷ್ಣಾ ಮಾಂ ದೂರತಃಸ್ಥಿತಂ ಋಣಂ ಪ್ರವೃದ್ಧಮೇವ ಮೇ ಹೃದಯಾಂ ಆಪಸರ್ಪತಿ" ..ಎನ್ನುತ್ತಾನೆ ಶ್ರೀಕೃಷ್ಣ. ದ್ರೌಪದಿ ಗೋವಿಂದಾ ಎಂದು ಆರ್ತವಾಗಿ ಕೂಗಿಕೊಂಡಳು. ಹಸ್ತಿನಾವತಿ ಎಲ್ಲಿ? ದ್ವಾರಕೆ ಎಲ್ಲಿ? ಆದರೆ ಆ ಸರ್ವ ವ್ಯಾಪಕನಿಗೆ ದೂರದ ಉಪಾಧಿ ಎಲ್ಲಿಯದು? ಕರುಣೆಯಿಂದ ಅಕ್ಷಯ ವಸ್ತ್ರವನ್ನು ಕೃಷ್ಣನು ದಯಪಾಲಿಸಿದನು. ಆದರೂ ದ್ರೌಪದಿಯ  ಆ "ಗೋವಿಂದಾ" ಎಂದಾಗಿನ ಆರ್ತತೆ , ನೀನೇ ಗತಿ ಎಂಬ ಸರ್ವ ಶರಣಾಗತಿಗೆ ತಾನು ಮಾಡಿದುದು ಏನೂ ಸಾಲದು,ಅವಳಿಂದ ಸಾಲ ತೆಗೆದುಕೊಂಡು ಹಿಂತಿರುಗಿಸಲಾರದವನಂತೆ ನಾನಾಗಿದ್ದೇನೆ ಎಂದು ಕೃಷ್ಣನು ನೋಯುತ್ತಾನಂತೆ. ಅವನ ಕರುಣೆಯ ಅಪಾರತೆಯನ್ನು ಅರಿಯುವುದಾದರೂ ಹೇಗೆ? ನಮಗೆ ಹಾಗೆ ಕರೆಯಲು ಬರಬೇಕು ಅಷ್ಟೇ.

 

ಸಂಹಾರಕಾರ್ಯ, ಮರೆವು  ಕರುಣೆ ಹೇಗಾದೀತು?


ಇದೆಲ್ಲವೂ ಸರಿ ಆದರೆ ಭಗವಂತನ ಸಂಹಾರಕಾರ್ಯ ಕರುಣೆ ಹೇಗಾದೀತು ಎಂಬ ಪ್ರಶ್ನೆ ಏಳುತ್ತದೆ. ಶ್ರೀರಂಗಪ್ರಿಯ ಸ್ವಾಮಿಗಳು ಮರಣ, ಸಂಹಾರ ಕಾರ್ಯವೂ ಅವನ ಕರುಣೆಯೇ ಎನ್ನುತ್ತಿದ್ದರು. ಶಸ್ತ್ರಚಿಕಿತ್ಸೆಯ ನೋವನ್ನು ಅನುಭವಿಸದಿರಲಿ ಎಂದು ಅನಸ್ತೇಶಿಯಾ ಕೊಡುತ್ತಾರೆ. ಎಚ್ಚರ ತಪ್ಪಿಸುತ್ತಾರೆ. ವೈದ್ಯ ಹೀಗೆ ಮಾಡುವುದು ಎಂತಹ ನಿಷ್ಕರುಣೆ ಎನ್ನಲಾದೀತೇ? ಅದು ರೋಗಿಯ ಮೇಲಿನ ಕರುಣೆಯಿಂದಲೇ ಮಾಡಿದ ಕೆಲಸ.  ಇಲ್ಲಿಯೂ ಸಹ  ಜೀವಿಗಳು ಕರ್ಮಗಳ ಭಾರದಿಂದ ಕರ್ಮಫಲವನ್ನು ಅನುಭವಿಸುವ ಶಕ್ತಿಯನ್ನೂ ಕಳೆದುಕೊಂಡು ಬಳಲಿ ಬೆಂಡಾದಾಗ ಅವುಗಳಿಗೆ ದೀರ್ಘಕಾಲದ ವಿಶ್ರಾಂತಿ ಬೇಕಾಗುತ್ತದೆ. ಜೀವಿಗಳ ಇಂತಹ ನೋವಿನ ಪರಿಸ್ಥಿತಿಯನ್ನು ನೋಡಿದ ಕರುಣೆಯಿಂದಲೇ ಅವುಗಳ ದೀರ್ಘ ವಿಶ್ರಾಂತಿಗಾಗಿ ಅವನು ಸಂಹರಿಸುತ್ತಾನೆ. ಅದರಿಂದ ಜೀವಿಗಳು ಮತ್ತೆ ಹೊಸ ಹುರುಪಿನಿಂದ ತಮ್ಮ ಕರ್ಮಫಲಗಳನ್ನು ಅನುಭವಿಸಿ ಮುಕ್ತರಾಗಲಿ ಎಂಬ ಕರುಣೆಯೇ ಅಲ್ಲಿದೆ. ಹುಟ್ಟಿದವರೆಲ್ಲ ಮರಣ ಹೊಂದದೇ ಹಾಗೇ ಇದ್ದುಬಿಟ್ಟಿದ್ದರೆ ಈ ವಿಶ್ವದ ಪರಿಸ್ಥಿತಿ ಏನಾಗುತ್ತಿತ್ತು! ಹುಟ್ಟು ಎಂದು ಇದ್ದಮೇಲೆ ಮರಣವೆಂಬುದೂ ಖಚಿತವೆ ಆಗಿದೆ. ಅಲ್ಲದೇ ಪ್ರಿಯಜನರನ್ನು ಕಳೆದುಕೊಂಡಾಗ ಆಗುವ ದುಃಖ ಎಷ್ಟು ಅಸಹನೀಯ! ಆದರೆ ಕ್ರಮೇಣ ಮರೆಯುತ್ತೇವೆ. ಮರೆವೂ ಅವನ ಅನುಗ್ರಹವೇ.,ಆ ಘಟನೆಯ ದಿನದ ದುಃಖ ಅಷ್ಟೇ ತೀವ್ರವಾಗಿ ನಮ್ಮ ಜೀವಿತಕಾಲದವರೆಗೂ ಇರುವಂತಾಗಿದ್ದರೆ ಜೀವಲೋಕದ ಪರಿಸ್ಥಿತಿ ಏನಾಗುತ್ತಿತ್ತು! ಹಾಗೆಂದೇ ಮರೆವು ಅಂತಹ ದುಃಖವನ್ನೆಲ್ಲ ಕ್ರಮೇಣ ಮರೆಮಾಡುವುದೂ ಅವನ ಕರುಣೆಯೇ.

 

ಜೀವಲೋಕದ ಮೇಲೆ ಅವನ ಕರುಣೆ ಅಪಾರ:

 

ಜೀವಲೋಕದಮೇಲೆ ಅವನ ಕರುಣೆಯೊಂದಿಲ್ಲದಿದ್ದರೆ ಜಗತ್ತು ಅರೆ ಕ್ಷಣವೂ ಉಳಿಯಲಾರದು.ಜೀವಿಗಳು ದುಷ್ಕರ್ಮಗಳನ್ನುಮಾಡಿ ಅವನಿಂದ ದೂರವಾದಾಗ ಕರ್ಮಫಲಗಳನ್ನು ಅನುಭವಿಸಿ ಮತ್ತೆ ಶುದ್ಧರಾಗಿ ಆತ್ಮಮಾರ್ಗವೆಂಬ ರಾಜಮಾರ್ಗಕ್ಕೆ ಬರುವ ವ್ಯವಸ್ಥೆಯನ್ನೂ ಅವನ ಸೃಷ್ಟಿಯಲ್ಲೇ ಇಟ್ಟಿದ್ದಾನೆ. ಹೀಗೆ ಕರ್ಮಫಲಗಳನ್ನು ಅನುಭವಿಸುವುದೂ ಸಹ ಔಷಧವನ್ನು ಸೇವಿಸಿ ಖಾಯಿಲೆ ವಾಸಿಮಾಡಿಕೊಂಡು ಆರೋಗ್ಯವಂತರಾಗುವಂತೆ ನಮ್ಮನ್ನು ಭವಸಾಗರದಿಂದ ದಾಟಿಸುವ ಅವನ ಕರುಣೆಯೇ ಆಗಿದೆ. ಧರ್ಮಗ್ಲಾನಿಯುಂಟಾಗಿ ಜೀವಿಗಳಿಗೆ ಒಳಿತು ಕೆಡಕುಗಳ ಗೊಂದಲವುಂಟಾದಾಗ ತಾನೇ ಅವತರಿಸಿ ಜೀವಲೋಕವನ್ನು ಉದ್ಧರಿಸುವುದು ಅವನ ಕರುಣೆಯ ಕಾರಣದಿಂದಲೇ. ಆಗಾಗ ಋಷಿಗಳು, ಜ್ಞಾನಿಗಳ ಮೂಲಕ ಜೀವನದ ಧ್ಯೇಯವನ್ನು ಜ್ಞಾಪಿಸಿಕೊಟ್ಟು ಜೀವಿಯು ತನ್ನ ತವರುಮನೆಯಾದ ಪರಮ ಆನಂದದ ನೆಲೆಗೆ ಪಯಣಿಸಲು ಸಹಾಯ ಮಾಡುವುದು ಅವನ ಕರುಣೆಯಲ್ಲದೆ ಮತ್ತೇನು? ಜೀವಿಯು ತನ್ನ ನೆಲೆಮನೆಗೆ ಎಂದು ಬಂದು ಸುಖಿಸುತ್ತಾನೆ ಎಂದು ಅವನು ಸದಾ ಕಾಯುತ್ತಿರುತ್ತಾನೆ ಎಂಬುದು ಅವನ ಕರುಣೆಯನ್ನು ಕಂಡವರ ಮಾತು. ಭಗವಂತನು ತನ್ನನ್ನು ಸ್ತುತಿಸುವವರನ್ನು ಕಂಡು ಸಂತೋಷಪಡುತ್ತಾನಂತೆ. ಇದೇನಿದು? ತನ್ನನ್ನು ಹೊಗಳಿದರೆ ಖುಷಿಪಡುತ್ತಾನಲ್ಲ ಎಂದು ನಾವಂದುಕೊಳ್ಳುವ ಸಂತೋಷವಲ್ಲ ಅದು. ಹಾಗೆ ಸ್ತುತಿಸುವುದರಿಂತ ತನ್ನ ಕರ್ಮಕ್ಲೇಶಗಳನ್ನೆಲ್ಲ ಕಳೆದುಕೊಂಡು ಜೀವಿಯು ಮತ್ತೆ ಮೇರೆಯರಿಯದ ಆನಂದವನ್ನು ಹೊಂದುವಂತಾಗುವುದಲ್ಲಾ ಎಂಬ ಜೀವಿಯ ಬಗೆಗಿನ ಕರುಣೆ, ಪ್ರೀತಿ ಆ ಸಂತೋಷಕ್ಕೆ ಕಾರಣ.

 

 

ದಾಸವಾಣಿಯ ಅಂತರಾರ್ಥ:

 

 "ಕರುಣಾಮಯ ನೀ ನೆಂಬುವುದ್ಯಾತಕೋ ಭರವಸವಿಲ್ಲೆನಗೆ" ಎನ್ನುವ ದಾಸರ ಪದವೂ ಸಹ ಅವನ ಕರುಣೆಯನ್ನು ಒಲಿಸಿಕೊಳ್ಳಲು ಮಾಡಿದ ಅವನ ಮೇಲಿನ ಅತ್ಯಂತ ಪ್ರೀತಿಯ, ಸಲಿಗೆಯ ಪ್ರಕಟಣೆ ಆಗಿದೆಯೇ ವಿನಃ ಭಗವಂತನ ಕರುಣೆಯ ಮೇಲಿನ ಅಪನಂಬಿಕೆಯ ಮಾತಲ್ಲ ಅದು. ತಾಯಿಯ ಮೇಲಿನ ಅತಿಶಯವಾದ ಪ್ರೀತಿಯಿಂದ ಮಗು, ತಾಯಿ ಬರಲು ತಡ ಮಾಡಿದರೆ  ಸಿಟ್ಟಾಗುವುದಿಲ್ಲವೇ? ಆಗ ಮಗುವಿನ ಸಿಟ್ಟನ್ನು ತಾಯಿ ತನ್ನ ಮೇಲಿನ ಪ್ರೀತಿ ಎಂದೇ ಅರ್ಥಮಾಡಿಕೊಳ್ಳುತ್ತಾಳೆ. ಹಾಗೆಯೇ ಭಗವಂತನೂ ಸಹ ಭಕ್ತನ ಭಗವದ್ವಿರಹದ ಸಿಟ್ಟು, ತತ್ಪರಿಣಾಮವಾದ ಬೈಗುಳವನ್ನೂ ಪ್ರೀತಿಯಿಂದಲೇ ಸ್ವೀಕರಿಸುತ್ತಾನೆ. ಆದರೆ ಅಲ್ಲಿ ತಾಯಿ ಮಗುವನ್ನು ಬಿಟ್ಟುಹೋಗಿದ್ದರೆ,ಇಲ್ಲಿ ನಾವೇ ಭಗವಂತನನ್ನು ಬಿಟ್ಟುಬಂದಿರುತ್ತೇವೆ.

 

ನಾವು ದೊಡ್ಡವರಾಗಬೇಕು:

 

ಭಗವಂತನ ಕರುಣೆ ಅರ್ಥವಾಗಬೇಕಾದರೆ ನಾವು ದೊಡ್ಡವರಾಗಬೇಕು. ಹುಡುಗನಂತೆ ಇದ್ದರೆ ಜಗದೊಡೆಯನಾದ ನಮ್ಮೆಲ್ಲರ ತಂದೆಯ ಬಗೆಗೂ ಬಾಲಿಶವಾದ ಅಭಿಪ್ರಾಯವನ್ನೇ ಇಟ್ಟುಕೊಂಡಿರುತ್ತೇವೆ. ಹಾಗೆ ದೊಡ್ಡವರಾಗಿ ಭಗವಂತನ ಪಾರವಿಲ್ಲದ ಕರುಣೆಯ ಧರ್ಮವನ್ನು ಅನುಭವಿಸಿ ಕಣ್ಣೀರಿಟ್ಟ ಭಕ್ತರು,ಜ್ಞಾನಿಗಳು ಅವನನ್ನು ಕರುಣಾಸಾಗರ ಎಂದು ಕೊಂಡಾಡಿದ್ದಾರೆ. ಅಂತಹ ಅನುಭವಿಗಳ ಮಾತೇ ನಿಜಕ್ಕೂ ಅವನ ಕರುಣೆಗೆ ಪ್ರಮಾಣ. ಅವರು ತಮ್ಮ ತಪಸ್ಯೆಯಿಂದ ಭವದ ಬೆಂಗಾಡಿನ ಆಚೆಗಿನ ಭಗವಂತನ ನೆಲೆಯನ್ನು ತಲುಪಿ ಅಲ್ಲಿಂದ ಮಾಡಿದ ಗುಣಗಾನವದು.ಹೀಗೆ ಭಗವಂತನ ಕರುಣೆ ಅಪಾರ. ಅದನ್ನು ಅರ್ಥ ಮಾಡಿಕೊಳ್ಳುವ ಹೃದಯವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಅವನ ಕರುಣೆಯ ಅರಿವನ್ನು ಪಡೆದ ಜ್ಞಾನಿಶ್ರೇಷ್ಠರ, ಭಕ್ತಶ್ರೇಷ್ಠರ ಅನುಭವದ ವಚನಗಳು ನಮಗೆಲ್ಲ ದಾರಿದೀಪವಾಗಲಿ. ಅಂತಹ ಭಗವಂತನ ಕರುಣೆಯನ್ನು ಅಪನಂಬಿಕೆಯಿಂದ ನೋಡದಿರೋಣ. ಅವನ ಕೃಪಾ ದೃಷ್ಟಿ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಅನವರತವೂ ಅವನನ್ನು ಪ್ರಾರ್ಥಿಸೋಣ.


ಸೂಚನೆ : 13/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, July 7, 2024

ವ್ಯಾಸ ವೀಕ್ಷಿತ 94 ಎಲ್ಲರ ಕಣ್ಮನ ಸೆಳೆದ ತಿಲೋತ್ತಮೆ (Vyasa Vikshita 94 Ellara Kanmana Seleda Tilottame)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಸುಂದೋಪಸುಂದರೆಂಬ ಅಸುರರನ್ನು ನಿಗ್ರಹಿಸಲು ಸನ್ನಾಹವಾಗಿದೆ. ಅದಕ್ಕಾಗಿ ಅತ್ಯಂತಸುಂದರಿಯಾದ ನಾರಿಯನ್ನು ಸೃಷ್ಟಿಸಲಾಯಿತು. ಎಲ್ಲರ ಕಣ್ಣುಗಳನ್ನೂ ಮನಸ್ಸುಗಳನ್ನೂ ಸೆಳೆದಳು ಅವಳು. ರತ್ನಗಳಲ್ಲಿಯ ಎಳ್ಳೆಷ್ಟೆಳ್ಳಷ್ಟು ಅಂಶಗಳನ್ನೂ ಬಿಡದೆ ತೆಗೆದುಕೊಂಡು ಆಕೆಯು ನಿರ್ಮಿತಳಾದಳಲ್ಲವೆ? ಅದೇ ಕಾರಣಕ್ಕಾಗಿ ಬ್ರಹ್ಮನು ಆಕೆಗೆ ತಿಲೋತ್ತಮಾ ಎಂದೇ ಹೆಸರಿಟ್ಟನು. ತಿಲವೆಂದರೆ ಎಳ್ಳು.


ಹೀಗೆ ನಿರ್ಮಿತಳಾದ ಆಕೆಯು ಬ್ರಹ್ಮನಿಗೆ ನಮಸ್ಕಾರವನ್ನು ಮಾಡಿದಳು. ಕೈಜೋಡಿಸಿ, ಹೀಗೆ ಕೇಳಿಕೊಂಡಳು: "ಪ್ರಜಾಪತಿಯೇ, ಯಾವ ಕಾರಣಕ್ಕಾಗಿ ನಾನು ಈಗ ಇಲ್ಲಿ ಸೃಷ್ಟಳಾಗಿದ್ದೇನೆ?"


ಅದಕ್ಕೆ ಪಿತಾಮಹನು, "ಓ ತಿಲೋತ್ತಮೇ! ಸುಂದ ಮತ್ತು ಉಪಸುಂದ - ಎಂಬ ಅಸುರರಿಬ್ಬರು ಇರುವರಲ್ಲವೇ? ಅವರಲ್ಲಿಗೆ ನೀನು ಹೋಗು - ಅತ್ಯಂತ ಕಮನೀಯವಾದ ರೂಪದೊಂದಿಗೆ. ಹಾಗೂ ಅವರಿಗೆ ಪ್ರಲೋಭನವನ್ನುಂಟುಮಾಡಿಬಿಡು" ಎಂದನು.


ಕಥೆಯನ್ನು ಮುಂದುವರೆಸುತ್ತ ನಾರದರು ಹೇಳಿದರು. "ಹಾಗೆಯೇ ಆಗಲಿ" ಎಂದು ಅವಳು ಹೇಳಿದಳು. ಬ್ರಹ್ಮನಿಗೆ ನಮಸ್ಕರಿಸಿದಳು. ದೇವತಾ-ಮಂಡಲಕ್ಕೆ ಪ್ರದಕ್ಷಿಣೆ ಮಾಡಿದಳು. ಬ್ರಹ್ಮನ ದಕ್ಷಿಣ-ಭಾಗಕ್ಕೆ ಪೂರ್ವಾಭಿಮುಖನಾಗಿ ಮಹೇಶ್ವರನು ಕುಳಿತಿದ್ದನು. ಉತ್ತರ-ಭಾಗಕ್ಕೆ ದೇವತೆಗಳು ಇದ್ದರು. ಋಷಿಗಳಂತೂ ಸುತ್ತಲೂ ಇದ್ದರು. ದೇವತಾ-ಮಂಡಲಕ್ಕೆ ಪ್ರದಕ್ಷಿಣೆಯನ್ನು ಅವಳು ಮಾಡುತ್ತಿರಲು, ಇಂದ್ರನೂ ಶಿವನೂ ಸ್ವಸ್ಥಾನದಲ್ಲಿ ಸ್ಥಿರವಾಗಿ ಕುಳಿತಿದ್ದರು. ಆದರೆ ಅವಳು ಯಾವಾಗ ದಕ್ಷಿಣಭಾಗಕ್ಕೆ ಬಂದಳೋ, ಆಗ ಅವಳನ್ನು ನೋಡಲೆಂದು ಶಂಕರನ ದಕ್ಷಿಣ-ಭಾಗದಲ್ಲಿ ಕಮಲದಂತಿರುವ ಕಣ್ಣುಳ್ಳ ಮುಖವೊಂದು ಪ್ರಕಟವಾಯಿತು. ಅವಳು ಹಿಂಭಾಗಕ್ಕೆ ಬರುತ್ತಿದ್ದಂತೆ ಪಶ್ಚಿಮ-ಮುಖವು ಪ್ರಕಟವಾಯಿತು. ಅವಳು ಉತ್ತರಕ್ಕೆ ಬಂದಂತೆ ಉತ್ತರದಲ್ಲೊಂದು ಮುಖವು ಪ್ರಕಟವಾಯಿತು. ಇಂದ್ರನಿಗಂತೂ ಹಿಂದೆ, ಪಕ್ಕಗಳಲ್ಲಿ, ಹಾಗೂ ಎದುರಿಗೆ - ಎಲ್ಲೆಡೆ ಸಾವಿರ ಕಣ್ಣುಗಳು - ಅಂಚಿನಲ್ಲಿ ಕೆಂಪಡರಿದ ಕಣ್ಣುಗಳು ಉಂಟಾಗಿಬಿಟ್ಟವು!  ಶಂಕರನಿಗೆ ನಾಲ್ಕು ಮುಖಗಳೆಂದೂ, ಇಂದ್ರನಿಗೆ ಸಹಸ್ರ-ನೇತ್ರಗಳೆಂದೂ ಆದದ್ದು ಹೀಗೆ. ಎತ್ತೆತ್ತ ತಿಲೋತ್ತಮೆಯು ಹೆಜ್ಜೆಯಿಟ್ಟಳೋ ಅತ್ತತ್ತ ತಿರುಗಿತು ದೇವತೆಗಳ ಹಾಗೂ ಮಹರ್ಷಿಗಳ ಮುಖಗಳು! ಬ್ರಹ್ಮದೇವನೊಬ್ಬನನ್ನು ಬಿಟ್ಟರೆ ಅಲ್ಲಿದ್ದ ಮಹಾನುಭಾವರೆಲ್ಲರ ದೃಷ್ಟಿಯೂ ಅವಳ ಶರೀರದ ಮೇಲೇ ನೆಟ್ಟಿತು - ಅವಳ ರೂಪ-ಸಂಪತ್ತಿನಿಂದಾಗಿ. ಅವಳು ಅತ್ತ ಸಾಗಲು, ಸೃಷ್ಟಿ-ಕರ್ತನಾದ ಬ್ರಹ್ಮನು ಸರ್ವ-ದೇವತೆಗಳನ್ನೂ ಋಷಿ-ಸ್ತೋಮವನ್ನೂ ಸ್ವ-ಸ್ವ-ಧಾಮಗಳಿಗೆ ಕಳುಹಿಸಿಕೊಟ್ಟನು.


ಕಥೆಯನ್ನು ಮುಂದುವರೆಸುತ್ತಾ ನಾರದರು ಹೇಳಿದರು: ಭೂಮಿಯನ್ನು ಗೆದ್ದು, ಶತ್ರುಗಳೇ ಇಲ್ಲವೆಂದಾಗಿರಲು, ವ್ಯಥಾ-ರಹಿತರಾದ ಆ ಇಬ್ಬರು ದೈತ್ಯರು ಮೂರೂ ಲೋಕಗಳನ್ನು ಸಂಪೂರ್ಣವಾಗಿ ವಶಕ್ಕೆ ತಂದುಕೊಂಡವರಾಗಿ ಕೃತ-ಕೃತ್ಯರಾಗಿದ್ದರು. ದೇವತೆಗಳು, ಗಂಧರ್ವರು, ಯಕ್ಷರು, ನಾಗರು, ಮನುಷ್ಯರು, ರಾಕ್ಷಸರು - ಇವರುಗಳ ರತ್ನಗಳನ್ನೆಲ್ಲವನ್ನೂ ಕಿತ್ತುಕೊಂಡು ಮಹಾ-ಹರ್ಷವನ್ನು ಅವರಿಬ್ಬರು ಹೊಂದಿದ್ದರು. ಅವರಿಗೆ ಪ್ರತಿಷೇಧಮಾಡಲು, ಎಂದರೆ ಅಡ್ಡ ಹಾಕಲು, ಎಲ್ಲೂ ಯಾರೂ ಇಲ್ಲವೆಂದಾಗಿಹೋಯಿತಲ್ಲವೇ? ಎಂದೇ ಮಾಡಲಿಕ್ಕೂ ಇನ್ನೇನೂ ಅವರಿಗೆ ಉಳಿದಿರಲಿಲ್ಲವಾಯಿತು. ದೇವತೆಗಳ ಹಾಗೆ ವಿಹರಿಸುತ್ತಿರುವುದೆಷ್ಟೋ ಅಷ್ಟೇ ಉಳಿಯಿತು. ಸುಂದರ-ನಾರಿಯರೇನು, ಮನೋಹರ-ಮಾಲೆಗಳೇನು, ಸುಗಂಧ-ದ್ರವ್ಯಗಳೇನು, ಅತಿ-ಪುಷ್ಕಲವಾದ, ಎಂದರೆ ತುಂಬಿ ತುಂಬಿ ಬಂದ, ಭಕ್ಷ್ಯ-ಭೋಜ್ಯಗಳೇನು, ಬಗೆಬಗೆಯಾದ ಹೃದ್ಯವಾದ ಪೇಯಗಳೇನು - ಇವೆಲ್ಲದರಿಂದಲೂ ಮಹಾ-ಸಂತೋಷವನ್ನೇ ಅವರಿಬ್ಬರೂ ಅನುಭವಿಸಿದರು. ಅಂತಃಪುರಗಳ ಕಾಡುಗಳಲ್ಲೂ ಉದ್ಯಾನಗಳಲ್ಲೂ, ಪರ್ವತಗಳಲ್ಲೂ, ವನಗಳಲ್ಲೂ - ಇಷ್ಟಬಂದೆಡೆಗಳಲ್ಲೆಲ್ಲಾ ಅಮರರ ಹಾಗೆ ವಿಹರಿಸಿದರು.


ಸೂಚನೆ : 7/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 97(Yaksha prashne 97)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ –  96 ಧೈರ್ಯವೆಂದರೆ ಯಾವುದು ?

ಉತ್ತರ - ಇಂದ್ರಿಯನಿಗ್ರಹ. 

ಧೈರ್ಯವು ಹೇಗೆ ಉಂಟಾಗುತ್ತದೆ? ಎಂಬುದು ಇಲ್ಲಿನ ಪ್ರಶ್ನೆಯ ಅಭಿಪ್ರಾಯವಾಗಿದೆ. ಆತ್ಮದ ಸ್ಥಿರತೆಯನ್ನು ಕಾಪಾಡಿಕೊಳ್ಳುವುದೇ ಪ್ರತಿಯೊಬ್ಬ ಮಾನವನ ಮುಖ್ಯ ಉದ್ದೇಶವಾಗಿದೆ. ಆತ್ಮದ ಸ್ಥಿರತೆಯು ಉಳಿದ ಅಂಗಗಳ ಸ್ಥಿರತೆಯಿಂದ ಮಾತ್ರ ಸಾಧ್ಯ. ಕೇವಲ ಆತ್ಮದ ಸ್ಥಿರತೆಯನ್ನು ಮಾತ್ರ ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಮನಸ್ಸು ಇಂದ್ರಿಯಗಳನ್ನು ಪಳಗಿಸಬೇಕು. ಇದನ್ನೇ ಇಂದ್ರಿಯನಿಗ್ರಹ ಎನ್ನುತ್ತಾರೆ. 

ಇಂದ್ರಿಯನಿಗ್ರಹ ಅಥವಾ ಇಂದ್ರಿಯಜಯ ಮುಂತಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಯೋಗಶಾಸ್ತ್ರದ ಮೊರೆಹೊಗಬೇಕು. ಪಾತಂಜಲ ಯೋಗಸೂತ್ರದಲ್ಲಿ ಇಂದ್ರಿಯನಿಗ್ರಹವನ್ನು ಮಾಡುವ ವಿಧಾನವನ್ನು ತಿಳಿಸಲಾಗಿದೆ. ಯೋಗಸೂತ್ರ ಈ ರೀತಿಯಾಗಿದೆ " ಸ್ವವಿಷಯಾಸಂಪ್ರಯೋಗೇ ಚಿತ್ತಸ್ವರೂಪಾನುಕಾರಃ ಇವ ಇಂದ್ರಿಯಾಣಾಂ ಪ್ರತ್ಯಾಹಾರಃ" ಎಂದು.  ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬುದಾಗಿ ಐದು ಜ್ಞಾನೇಂದ್ರಿಯಗಳಿವೆ. ಈ ಇಂದ್ರಿಯಗಳಿಂದ ರೂಪ, ಶಬ್ದ, ಗಂಧ, ರಸ ಮತ್ತು ಸ್ಪರ್ಶ ಎಂಬ ವಿಷಯಗಳ ಜ್ಞಾನವು ಬರುತ್ತದೆ. ಈ ಜ್ಞಾನಗಳು ಬೇಡವೆಂಬ ತಾತ್ಪರ್ಯವಲ್ಲ. ಯಾವ ಜ್ಞಾನವು ಮನಸ್ಸಿನ ಒಳಹರಿವಿಗೆ ಪೂರಕವಾಗುತ್ತದೆಯೋ ಅಂತಹ ಜ್ಞಾನವನ್ನು ಪಡೆಯುವಂತಾಗಬೇಕು. ಉಳಿದವು ಒಳಹರಿವಿಗೆ ಅನುಕೂಲಿಸಲಾರವು. ಈ ಶರೀರವನ್ನು 'ಯೋಗಭೋಗಾಯತನಂ ಶರೀರಂ' ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಶರೀರವನ್ನು ಕೇವಲ ನಿವೃತ್ತಿಮಾರ್ಗಕ್ಕೆ ಮಾತ್ರ ಬಳಸಿಕೊಳ್ಳದೇ ಪ್ರವೃತ್ತಿಮಾರ್ಗಕ್ಕೂ ಬಳಸಿಕೊಳ್ಳಬೇಕು ಎಂಬ  ಮಾತನ್ನೂ ಹೇಳುತ್ತಿದ್ದರು. ಇದೇ ಶರೀರದಲ್ಲೇ ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳೂ ಇವೆ. ಇದಕ್ಕರ್ಥ ಇಷ್ಟೇ ಈ ಶರೀರದಲ್ಲಿರುವ ಇಂದ್ರಿಯಗಳು ಯೋಗಕ್ಕೂ ಭೋಗಕ್ಕೂ ಸಾಧನವೆಂದು. ಇದೇ ವಸ್ತುತಃ ಇಂದ್ರಿಯನಿಗ್ರಹ. ತಿನ್ನಲೇಬಾರದು ಎಂಬ ವಿಷಯವಿಲ್ಲ. ಎಷ್ಟು ತಿನ್ನಬೇಕು? ಯಾವಾಗ ತಿನ್ನಬೇಕು? ಹೇಗೆ ತಿನ್ನಬೇಕು? ಯಾವುದನ್ನು ತಿನ್ನಬೇಕು? ಎಂಬ ನಿಯಮವು ಯಾವ ರೀತಿಯಾಗಿ ನಾಲಗೆಯ ನಿಗ್ರಹವೋ ಅಂತೆಯೇ ಎಲ್ಲಾ ಇಂದ್ರಿಯಗಳಿಗೂ ಇಂತಹದ್ದೇ ನಿಯಮಗಳಿರುತ್ತವೆ. ವಸ್ತುತಃ ನಿಯಮವೇ ನಿಗ್ರಹ.  ಹಿತವೂ ಮಿತವೂ ಆಗಿರುವಂತಹದ್ದೇ ನಿಗ್ರಹ. ಶಬ್ದಾದಿ ವಿಷಯಗಳಲ್ಲಿ ಆಸಕ್ತಿ ಹೊಂದದಿರುವುದು, ರಾಗ ಅಥವಾ ಅಂಟು ಇಲ್ಲದಿರುವುದು. ವೇದವಿಹಿತವಾದ ಅಥವಾ ಶಾಸ್ತ್ರಕ್ಕೆ ಅವಿರೋಧವಾದ ಶಬ್ದಾದಿ ವಿಷಯಾಸಕ್ತಿಯನ್ನೂ ಇಂದ್ರಿಯ ನಿಗ್ರಹ ಎಂದೇ ಕರೆಯುತ್ತಾರೆ. ಯಾವುದು ಮನಸ್ಸಿನ ಏಕಾಗ್ರತೆಗೆ ಕಾರಣಬಾಗ್ಯೇ ವಸ್ತುತಃ ಇಂದ್ರಿಯ ನಿಗ್ರಹ ಎನ್ನಬಹುದು. ಎಲ್ಲಾ ನಿಗ್ರಹಕ್ಕಿಂತಲೂ ಶ್ರೇಷ್ಠನಿಗ್ರಹ ಯಾವುದು ? ಎಂದರೆ ಯೋಗಸೂತ್ರ "ತತಃ ಪರಮವಶ್ಯತಾ ಇಂದ್ರಿಯಾಣಾಮ್" ಎಂದು ಹೇಳಿದೆ. ಶಬ್ದಾದಿ ವಿಷಯಗಳು ಗುಣಗಳು. ಅವು ಯಾವುದೋ ಒಂದು ದ್ರವ್ಯವನ್ನು ಆಶ್ರಯಿಸಿಯೇ ಇರಬೇಕಾಗುತ್ತದೆ. ಅಂದರೆ ಶಬ್ದಾದಿ ವಿಷಯಗಳ ಅಂಟು ಇಲ್ಲದಿದ್ದಾಗ ಅವುಗಳ ಆಶ್ರಿರವಾದ ಪದಾರ್ಥಗಳ ಬಗೆಗಿನ ಅಂತೂ ದೂರವಾಗುತ್ತಾದೆ. ಅದರ ಪರಿಣಾಮವಾಗಿ ಮನಸ್ಸು ಬಾಹ್ಯಮುಖವನ್ನು ಬಿಟ್ಟು ಅಂತರ್ಮುಖವಾಗುತ್ತದೆ. ಬಾಹ್ಯ ಮತ್ತು ಆಂತರ ಎಂಬುದಾಗಿ ಎರಡು ಬಗೆಯ ಇಂದ್ರಿಯಗಳಿವೆ.  ಮನಸ್ಸನ್ನು ಅಂತರಿಂದ್ರಿಯ, ಬಾಹ್ಯ ಇಂದ್ರಿಯಗಳು ಕಣ್ಣು ಕಿವಿ ಇತ್ಯಾದಿ ಐದು. ಇವೆರಡರ ನಿಯಮನವೇ ಇಂದ್ರಿಯನಿಗ್ರಹ. ಇದರಿಂದ ಇಂದ್ರಿಯಗಳು ಮನಸ್ಸಿನಲ್ಲಿ ಲಯಗೊಳ್ಳುತ್ತವೆ. ಮನಸ್ಸು ಮನಸಸ್ಪತಿಯಲ್ಲಿ ಲಯಗೊಳ್ಳುತ್ತದೆ.

ಸೂಚನೆ : 7/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಸ ಶೋಚತಿ ಫಲಾಗಮೇ (Astaksari 62 Sa Shochati Phalagame)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)






ಆಧುನಿಕ ವಿಜ್ಞಾನದ ವಿಷಯದಲ್ಲಿ ಜನರಿಗೆ ವಿಶೇಷವಾದ ನೆಚ್ಚಿಕೆ. ಅದರಲ್ಲಿ ಆಷ್ಟು ನಂಬಿಕೆ ಹುಟ್ಟಿಕೊಳ್ಲಲು ಕಾರಣವೇನು? - ಎಂದರೆ, ಅದರಲ್ಲಿಯ ಕಾರ್ಯ-ಕಾರಣ-ಭಾವದ ಪ್ರಸಿದ್ಧಿಯೇ ಸರಿ.


ಏನು ಕಾರ್ಯ-ಕಾರಣ-ಭಾವವೆಂದರೆ? ಯಾವುದೇ ಕಾರ್ಯದ ಹಿಂದೆಯೂ ಒಂದು ಕಾರಣವಿರಬೇಕು; ಹಾಗೂ ಕಾರಣವೆಂಬುದು ಇದ್ದ ಮೇಲೆ ಕಾರ್ಯವು ಹುಟ್ಟಿಕೊಳ್ಳಲೇಬೇಕು - ಎಂಬ ಲೆಕ್ಕವೇ ಕಾರ್ಯ-ಕಾರಣ-ಭಾವ.


ಹಾಗೆ ಹೇಳಿದ ಮಾತ್ರಕ್ಕೆ ಒಂದು ಕಾರ್ಯಕ್ಕೆ ಒಂದೇ ಕಾರಣವಿರುತ್ತದೆಂದಾಗಲಿ, ಒಂದು ಕಾರಣದಿಂದ ಒಂದೇ ಕಾರ್ಯವು ಘಟಿಸುತ್ತದೆಂದಾಗಲಿ, ಅರ್ಥವಲ್ಲವಷ್ಟೆ. ಮಾವಿನ ಹಣ್ಣು ಕಾರ್ಯವೆಂದರೆ, ಅದಕ್ಕೆ ಮಾವಿನ ಬೀಜವು ಕಾರಣ - ಎನ್ನುವುದು ಸರಿಯೇ. ಆದರೆ ಬೀಜವು ತಾನೇ ಹಣ್ಣಾಗಿಬಿಡುವುದೇ? ಬೀಜದೊಂದಿಗೆ ಮಣ್ಣು, ನೀರು, ಗೊಬ್ಬರ, ಸೂರ್ಯ-ತಾಪ ಇತ್ಯಾದಿಗಳೆಲ್ಲವೂ ಸೇರಿ ತಾನೆ ಕಾರಣ-ಸಾಮಗ್ರಿಯೆನಿಸಿಕೊಳ್ಳುವುದು?


ಮತ್ತು ಈ ಸಮಗ್ರತೆಯಿಂದಾಗಿ ಹಣ್ಣೊಂದೇ ಬಿಡುವುದೆಂದೂ ಅಲ್ಲ; ಕಾಂಡವೇನು, ನೂರಾರು ಎಲೆಗಳೇನು, ಹೂಗಳೇನು - ಇವೆಲ್ಲವೂ ಕಾರ್ಯ-ಸಾಮಗ್ರಿ.


ಫಲಾಪೇಕ್ಷೆಯಿದ್ದಲ್ಲಿ ಮೊದಲು ಹುಟ್ಟಿಕೊಳ್ಳಬೇಕಾದದ್ದು ಬೀಜಾಪೇಕ್ಷೆ. ಯಾವುದೋ ಫಲಕ್ಕೆ ಯಾವುದೋ ಬೀಜವೆಂಬುದು ನಡೆಯುತ್ತದೆಯೇ? ಮಾವಿನ ಹಣ್ಣು ಯಥೇಚ್ಛವಾಗಿ ಬೇಕೆನಿಸಿ, ಬೇವಿನ ಬೀಜವನ್ನು ಬಿತ್ತಿದರಾದೀತೇ?


ಮಾವಿನ ಬೀಜ-ಹಣ್ಣುಗಳು, ಬೇವಿನ ಬೀಜ-ಎಲೆಗಳು - ಇವೆಲ್ಲವೂ ಲೋಕ-ಪ್ರಸಿದ್ಧವಾದವುಗಳು. ಪ್ರತ್ಯಕ್ಷದ ಲೆಕ್ಕಕ್ಕೇ ಸಿಕ್ಕತಕ್ಕವು. ಆದರೆ ಲೋಕ-ವ್ಯವಹಾರದಲ್ಲಿ ಸಹ ಎಲ್ಲೆಡೆ ಬರೀ ಪ್ರತ್ಯಕ್ಷವೇ ನಡೆಯುವುದೇ? ಮಾವಿನ ಬೀಜ, ಮಾವಿನ ಹಣ್ಣುಗಳನ್ನೇ ತೆಗೆದುಕೊಳ್ಳಿ. ಬೀಜವು ವೃಕ್ಷವಾಗುವುದು ಹೇಗೆ? - ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆಂದು ವಿಜ್ಞಾನಿಗಳಾದರೂ ಎದೆತಟ್ಟಿಕೊಂಡು ಹೇಳಬಲ್ಲರೇ?


ಹೀಗೆ ಪ್ರತ್ಯಕ್ಷವಾದ ವಿಷಯಗಳಲ್ಲೂ ನಿಗೂಢತೆಯೆಂಬುದು ಇದ್ದೇ ಇರುತ್ತದೆ. ಸಂಶೋಧನೆ ಮುಂದುವರೆಯುತ್ತಿದ್ದಂತೆ ಹೆಚ್ಚು ಹೆಚ್ಚು ವಿಷಯಗಳು ತಿಳಿದುಬರು(ತ್ತಿರು)ತ್ತವೆಯೆನ್ನುವುದಾದರೂ ಎಲ್ಲವನ್ನೂ ಅರಿತಾಯಿತೆಂಬ ಕಾಲ ಬಂದಿದೆಯೆನ್ನಲಾದೀತೇ? ಅದನ್ನು ವಿಜ್ಞಾನಿಗಳೂ ಇಂದೂ ಮುಂದೂ ಸುಲಭವಾಗಿ ಅಲ್ಲಗಳೆಯಲಾರರಷ್ಟೆ?


ಈ ಕಾರ್ಯ-ಕಾರಣ-ಭಾವವು ಭೌತಿಕ-ಕ್ಷೇತ್ರಕ್ಕೇ ಸೀಮಿತವಾದುದೆಂದೂ ಹೇಳಲಾಗದು. ಅಭೌತವಾದ ಎಡೆಗಳಲ್ಲೂ ಅದಿರುವುದೇ. ಅದಂತೂ ಮತ್ತೂ ಸೂಕ್ಷ್ಮವೇ ಸರಿ. ಯಾವುದು ಆ ಕ್ಷೇತ್ರ? ಧರ್ಮ-ಕರ್ಮಗಳ ಕ್ಷೇತ್ರ. ಕರ್ಮಸಿದ್ಧಾಂತದ ಸಾರಕ್ಕೆ "ಮಾಡಿದ್ದುಣ್ಣೋ ಮಹರಾಯ" ಎಂಬ ಕನ್ನಡದ ನಾಣ್ಣುಡಿಯು ಕನ್ನಡಿ ಹಿಡಿಯುತ್ತದಲ್ಲವೇ? ಸತ್ಕರ್ಮಗಳಿಂದ ಸತ್ಫಲ, ದುಷ್ಕರ್ಮಗಳಿಂದ ದುಷ್ಫಲ - ಎಂಬುದೇ ಕರ್ಮಸಿದ್ಧಾಂತ. ಸತ್ಫಲ-ದುಷ್ಫಲಗಳೆಂದರೆ ಸುಖ- ದುಃಖಗಳೇ.


ಸತ್ಕರ್ಮಗಳೂ ದುಷ್ಕರ್ಮಗಳೂ ಬೀಜದಂತೆ. ಅವುಗಳಿಗೂ ಫಲಬಿಡಲು ಬೇಕಾದ ಸಾಮಗ್ರಿಯು ಒದಗಿ ಬಂದರೆ ಫಲ ಬಿಟ್ಟೇಬಿಡುತ್ತವೆ. ನಾವೆಲ್ಲರೂ ಸುಖವೆಂಬ ಫಲವನ್ನು ಬಯಸುವವರೇ. ಅದಕ್ಕೆ ಅನುಗುಣವಾದ ಕ್ರಿಯೆಯು ನಮ್ಮಲ್ಲಿರಬೇಕಷ್ಟೆ?


ಎಳೆಯ ಮಕ್ಕಳಿಗೂ ಅರ್ಥವಾಗುವ ಈ ಉದಾಹರಣೆಯನ್ನು ಶ್ರೀರಂಗ-ಮಹಾಗುರುಗಳು ಒಮ್ಮೆ ಕೊಟ್ಟಿದ್ದರು: "ಬಾಳೆಯ ಹಣ್ಣು ಬೇಕೆಂಬ ಆಸೆ; ಅದರೆ ಅದರ ವ್ಯವಸಾಯದಲ್ಲಿ ಇಷ್ಟವಿಲ್ಲ - ಎಂಬಂತೆ, ಲೋಕದ ಜೀವ-ಕೋಟಿಗೆ ಧರ್ಮದ ಆಚರಣೆ ಬೇಡವಾಗಿದೆ, ಆದರೆ ಧರ್ಮದ ಫಲ ಬೇಕು" ಎಂದು. ಮತ್ತೊಂದು ಸಂದರ್ಭದಲ್ಲಿ, "ಮರ ಕಡಿದು ಫಲ ಕೇಳಿದರೆ ಸಿಕ್ಕುವುದಿಲ್ಲ. ಧರ್ಮವಿದ್ದರೆ ಉಳಿದದ್ದು" ಎಂದೂ ಎಚ್ಚರಿಸಿದ್ದಾರೆ.


ಕರ್ಮ-ಸಿದ್ಧಾಂತದ ತತ್ತ್ವವನ್ನು ನಿರೂಪಿಸುವಾಗ ಶಾಸ್ತ್ರಕಾರರು ಮಾತ್ರವಲ್ಲ, ಸಾಧಾರಣರ ಸಂಭಾಷಣೆಯಲ್ಲಿಯೂ ಈ ಬೀಜ-ವೃಕ್ಷ-ನ್ಯಾಯವನ್ನು ಬಳಸುವುದಿದೆ. ರಾಮಾಯಣದಲ್ಲಿ ದಶರಥನು ಶೋಕಾತಿರೇಕದಲ್ಲಿ ಮುಳುಗಿರುವಾಗಲೂ ಇದೇ ಉದಾಹರಣೆಯನ್ನೇ ಕೊಡುವುದನ್ನು ನೋಡಬಹುದು.


ದಶರಥನ ಮಾತಿದು: "ಯಾವನಾದರೂ ಮಾವಿನ ತೋಪನ್ನು ಕಡಿದು, ಮುತ್ತುಗದ ಮರಕ್ಕೆ ನೀರೆರೆದು, ಹೂಬಿಟ್ಟಿತಲ್ಲಾ, ಇನ್ನೇನು ಹಣ್ಣುಬಿಡುವುದು! - ಎಂದುಕೊಂಡರೆ ಆದೀತೇ?"


ಮಾತಿನ ಸಂದರ್ಭವಿದು: ರಾಮನು ಸೀತಾ-ಲಕ್ಷ್ಮಣರೊಂದಿಗೆ ಕಾಡಿಗೆ ಹೊರಟು ಆರು ದಿನಗಳು ಕಳೆದಿವೆ. ನಡುರಾತ್ರಿಯೆದ್ದ ದಶರಥನು ಕೌಸಲ್ಯೆಯೊಂದಿಗೆ ತನ್ನ ಹಿಂದಿನ ಕರ್ಮವನ್ನು ತೋಡಿಕೊಳ್ಳುತ್ತಾನೆ: ಹಿಂದೊಮ್ಮೆ ಋಷಿ-ಕುಮಾರನೊಬ್ಬನನ್ನು ಶಬ್ದ-ವೇಧಿ-ಬಾಣದಿಂದ ಕೊಂದು, "ನೀನೂ ಪುತ್ರ-ಶೋಕದಿಂದ ಮರಣ ಹೊಂದು" ಎಂಬ ಶಾಪವನ್ನು ಆತನ ತಂದೆ-ತಾಯಿಗಳಿಂದ ಪಡೆದೆ. ಅದಕ್ಕೇ ಈಗೀ ಶೋಕ! ರಾಮನು ಅಭಿಷಿಕ್ತನಾಗುವುದನ್ನು ಕಣ್ತುಂಬ ನೋಡಿ ಸಂತೋಷಿಸಬೇಕೆಂಬ ಫಲದಿಂದ ವಂಚಿತನಾದೆ. ನನ್ನ ದುಷ್ಕರ್ಮದ ಫಲವಿದು: ವೃಕ್ಷಕ್ಕೆ ಅಪಚಾರವೆಸಗಿದವನು ಫಲಾಗಮ-ಸಮಯದಲ್ಲಿ ಹಲುಬುತ್ತಾನೆ (ಸ ಶೋಚತಿ ಫಲಾಗಮೇ) ಎನ್ನುತ್ತಾನೆ.

ನಮಗಿಲ್ಲಿ ಪಾಠವಿಲ್ಲವೇ?


ಸೂಚನೆ: 06/07/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.