Tuesday, April 23, 2024

ಯಕ್ಷ ಪ್ರಶ್ನೆ 86 (Yaksha prashne 86)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 85 ಶಮ ಎಂದರೆ ಯಾವುದು ?

ಉತ್ತರ - ಮನಃಶಾಂತಿ  

ಪ್ರತಿಯೊಬ್ಬರೂ ಬಯಸುವುದು ಸುಖವನ್ನು. ದುಃಖವು ಯಾವುದೇ ಕಾರಣಕ್ಕೂ ಬೇಡವೇ ಬೇಡ ಎಂಬುದು ನಿಶ್ಚಯ. ಅದಕ್ಕಾಗಿ ನಿರಂತರಪ್ರಯತ್ನವೂ ಕಂಡುಬರುತ್ತದೆ. ಇದನ್ನೇ 'ಮನಃಶಾಂತಿ' ಎಂದು ಕರೆಯುತ್ತಾರೆ. ಏಕೆಂದರೆ ಮನಸ್ಸೇ ' ಇದು ಸುಖ, ಇದು ದುಃಖ' ಎಂದು ತಿಳಿಸುವ ಸಾಧನವಾಗಿದೆ. ಅಥವಾ ' ಇದು ಸುಖಕ್ಕೆ ಕಾರಣ, ಇದು ದುಃಖಕ್ಕೆ ಕಾರಣ' ಎಂದು ಗುರುತಿಸುವುದು ಕೂಡಾ ಮನಸ್ಸೇ ಆಗಿದೆ. ಏಕೆಂದರೆ ಮನಸ್ಸು ಒಂದು ಇಂದ್ರಿಯವಾಗಿದೆ. ಇಂದ್ರಿಯವು ವಸ್ತುವನ್ನೂ ಮತ್ತು ವಸ್ತುವಿನ ಜ್ಞಾನವನ್ನೂ ತಿಳಿಸಲು ಸಾಧನವಾಗಿದೆಯಷ್ಟೇ. ಹಾಗಾಗಿ ಮನಸ್ಸು ಸರಿಯಾಗಿದ್ದಾಗ ಮಾತ್ರವೇ ಸುಖಕ್ಕೆ ಕಾರಣವನ್ನಾಗಲಿ ಅಥವಾ ಸುಖವನ್ನಾಗಲಿ ತಿಳಿಯಲು ಸಾಧ್ಯ. ಸುಖವನ್ನು ಅಪೇಕ್ಷೆ ಪಡುವುದು ಇದೇ ಮನಸ್ಸಿನಿಂದ. ಮತ್ತು ದುಃಖವನ್ನು ದೂರೀಕರಿಸುವುದೂ ಇದೇ ಮನಸ್ಸಿನಿಂದ. ಈ ಸಾಮರ್ಥ್ಯವನ್ನೇ 'ಮನಃಶಾಂತಿ' ಎನ್ನಬಹುದು. ಈ ಮನಃಶಾಂತಿಯನ್ನೇ 'ಶಮ' ಎನ್ನಬಹುದು ಎಂಬುದು ಇಲ್ಲಿನ ಪ್ರಶ್ನೋತ್ತರದ ಸಾರವಾಗಿದೆ. 

'ಶಮ' ಎಂದರೇನು? ಇದನ್ನು ಸಾಧಿಸುವ ಬಗೆ ಹೇಗೆ? ಎಂಬ ಎರಡು ವಿಷಯವನ್ನು ತಿಳಿದುಕೊಂಡಾಗ ಮಾತ್ರ ಮನಃಶಾಂತಿಯು ಅರ್ಥವಾಗುತ್ತದೆ. ಶಮ ಎಂಬದಕ್ಕೆ ಶಾಂತಿ ಎಂದರ್ಥ. 'ಚಿತ್ತ' ಎಂಬ ಸಮುದ್ರವನ್ನು 'ವಿರಾಗ' ಎಂಬ ಪರ್ವತದಿಂದ ಕಡೆದಾಗ 'ಪ್ರಕೋಪ' ಎಂಬ ಕಾಲಕೂಟ ಉದಿಸಿದ ಅನಂತರ ಬರುವುದೇ 'ಶಮ' ಎಂಬ ಅಮೃತ ಲಭಿಸುತ್ತದೆ ಎಂಬುದಾಗಿ ರಾಜತರಂಗಿಣಿ ಎಂಬ ಗ್ರಂಥಕಾರ ಕಲ್ಹಣ ಶಮದ ವಿವರಣೆಯನ್ನು ಕಾವ್ಯಮಯವಾಗಿ ನೀಡಿದ್ದನ್ನು ಕಾಣಬಹುದು. ಶಮಕ್ಕೆ ಮೋಕ್ಷ, ಅಂತರಿಂದ್ರಿಯನಿಗ್ರಹ ಎಂಬೆಲ್ಲಾ ಅರ್ಥಗಳಿವೆ. ಭಗವದ್ಗೀತೆಯಲ್ಲಿ "ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ"- ಎಲ್ಲಾ ಬಗೆಯ ಕರ್ಮಗಳಿಂದ ನಿವೃತ್ತವಾಗುವುದೇ 'ಶಮ' ಎಂಬುದಾಗಿ ಹೇಳಲಾಗಿದೆ. 'ಶಮ' ಎಂಬುದು ನವರಸಗಳಲ್ಲಿ ಒಂದಾದ ಮತ್ತು ಅದೇ ಅಂತಿಮ ರಸವಾದ 'ಶಾಂತ' ಎಂಬ ರಸಕ್ಕೆ ಸ್ಥಾಯೀಭಾವ ಎಂಬುದಾಗಿ ನಾಟ್ಯಶಾಸ್ತ್ರ, ಅಲಂಕಾರ ಮೊದಲಾದ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಒಟ್ಟಾರೆ ಶಮವೇ ಶಾಂತಿ ಎಂಬುದು.  

ಇಂತಹ ಶಮವನ್ನು ಅಥವಾ ಶಾಂತಿಯನ್ನು ಸಾಧಿಸುವ ಬಗೆಯನ್ನು ಗೀತೆಯಲ್ಲಿ ಶ್ರೀಕೃಷ್ಣನು ಸಾರುವ ಮಾತಿನಿಂದ ತಿಳಿಯಬಹುದು. ಎಲ್ಲಾ ಬಗೆಯ ಕರ್ಮಗಳಿಂದ ನಿವೃತ್ತಿಯನ್ನು ಪಡೆಯುವುದು ಶಮ. ಅಂದರೆ ಯಾವುದೇ ಕರ್ಮವನ್ನು ಮಾಡದ ಸ್ಥಿತಿ. ಅದನ್ನೇ 'ಅಕರ್ಮಸ್ಥಿತಿ' ಎನ್ನಲಾಗಿದೆ. ಅಲ್ಲೇ 'ಸುಕರ್ಮ' ಮತ್ತು 'ವಿಕರ್ಮ' ಎಂಬ ಇನ್ನೆರಡು ಬಗೆಯ ಕರ್ಮವನ್ನು ಹೇಳಲಾಗಿದೆ. ಯಾವುದು ಅಕರ್ಮಸ್ಥಿತಿಗೆ ಕಾರಣವಾಗಿದೆಯೋ ಅದನ್ನು 'ಸುಕರ್ಮ' ಎನ್ನುವುದಾದರೆ; ಯಾವುದು ಅಂತಹ ಸ್ಥಿತಿಗೆ ವಿರೋಧವಾಗುವುದೋ ಅದನ್ನು 'ವಿಕರ್ಮ' - ವಿರುದ್ಧಕರ್ಮ ಎನ್ನಬಹುದು. ಸುಕರ್ಮವನ್ನು ಮಾಡಬೇಕು. ವಿರುದ್ಧಕರ್ಮವನ್ನು ಬಿಡಬೇಕು ಎಂಬುದೇ ಶಮಕ್ಕೆ ಅಥವಾ ಶಾಂತಿಗೆ ಕಾರಣ. ಶಾಸ್ತ್ರ ಅಥವಾ ವೇದವಿಹಿತವಾದ ಕರ್ಮಾನುಷ್ಠಾನವನ್ನು ಮಾಡುತ್ತಾ ಹೋದರೆ ಅದು ನಮ್ಮನ್ನು ಅಕರ್ಮಸ್ಥಿತಿಗೇ ಕೊಂಡೊಯ್ಯುತ್ತದೆ. ಅದರಿಂದ ವೈರಾಗ್ಯವೂ ಸಿದ್ಧವಾಗುತ್ತದೆ. ರಾಗದಿಂದ ಮಾನವನು ಸಹಜವಾಗಿಯೇ ವಿರುದ್ಧಕರ್ಮವನ್ನು ಆಚರಿಸುತ್ತಾ ಹೋಗುತ್ತಾನೆ. ವಿರಾಗದಿಂದಲೇ ಸುಕರ್ಮವನ್ನು ಆಚರಿಸುತ್ತಾ ಹೋಗುತ್ತಾನೆ. ಕರ್ಮವನ್ನು ಮಾಡದ ರೀತಿಯಲ್ಲಿ, ಕುಶಲತೆಯಿಂದ ಕರ್ಮವನ್ನು ಮಾಡುತ್ತಾ, ಕೊನೆಗೆ ಕರ್ಮವನ್ನು ಬಿಡುವ ಸ್ಥಿತಿಗೆ ಬರುತ್ತಾನೆ.  ಇದೇ ಮನಃಶಾಂತಿ, ಇದೇ ಶಮ.  

ಸೂಚನೆ : 21/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 22, 2024

ವ್ಯಾಸ ವೀಕ್ಷಿತ - 84 ವಿದುರನು ದ್ರುಪದನಲ್ಲಿಗೆ ಹೋದದ್ದು( Vyaasa Vikshita - 84 Viduranu Drupadanallige Hodaddu)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಆದ್ದರಿಂದ ಸೂತನೇ (ಎಂದರೆ ವಿದುರನೇ), ಹೋಗು, ನೀನೇ ಪಾಂಡವರನ್ನು ಕರೆತಾ. ಸರ್ವಸತ್ಕಾರಗಳೊಂದಿಗೆ ಅವರನ್ನು ತಾಯಿಕುಂತಿಯೊಂದಿಗೆ ಹಾಗೂ ದೇವರೂಪಿಣಿಯಾದ ಕೃಷ್ಣೆ(ಎಂದರೆ ದ್ರೌಪದಿ)ಯೊಂದಿಗೆ ಕರೆತಾ.

ಪಾಂಡವರು ಜೀವಿಸಿರುವರೆಂಬುದೇ ಒಂದು ಸೌಭಾಗ್ಯ. ಕುಂತಿಯೂ ಬದುಕಿರುವಳೆಂಬುದೇ ಒಂದು ಸೌಭಾಗ್ಯ. ಹಾಗೆಯೇ ಇದಲ್ಲದೆ ಆ ಮಹಾರಥರಿಗೆ ದ್ರೌಪದಿಯು ದೊರೆತಿರುವಳು - ಎಂಬುದು ಸಹ ಸೌಭಾಗ್ಯವೇ ಸರಿ. ಮಹಾದ್ಯುತಿಸಂಪನ್ನನೇ (ಎಂದರೆ ಮಹಾತೇಜಶ್ಶಾಲಿಯಾದ ವಿದುರನೇ) ನಮ್ಮಗಳ ವೃದ್ಧಿಯಾಗುತ್ತಿದೆಯೆಂಬುದೂ ಸೌಭಾಗ್ಯದ ಮಾತೇ. ಪುರೋಚನನು ಮುಗಿದುಹೋದನೆಂಬುದೂ ಸೌಭಾಗ್ಯವೇ. ನನ್ನ ಮಹಾದುಃಖವೂ ತೊಲಗಿತೆಂಬುದೂ ಸೌಭಾಗ್ಯವೇ ಸರಿ." ಎಂದು ಹೇಳಿದನು.

ಧೃತರಾಷ್ಟ್ರನ ಅಪ್ಪಣೆಯಂತೆ ವಿದುರನು ಹೊರಟನು. ರತ್ನಗಳು, ವಿಧವಿಧವಾದ ಐಶ್ವರ್ಯಗಳು - ಇವನ್ನೆಲ್ಲಾ ತೆಗೆದುಕೊಂಡು ದ್ರೌಪದೀ, ಪಾಂಡವರು, ಹಾಗೂ ಯಜ್ಞಸೇನ (ದ್ರುಪದ) - ಇವರಿರುವಲ್ಲಿಗೆ ಹೋದನು. ಧರ್ಮಜ್ಞನೂ ಧರ್ಮಶಾಸ್ತ್ರವಿಶಾರದನೂ ಆದ ಆತನು ನ್ಯಾಯವಾದ ಪರಿಯಲ್ಲಿ ದ್ರುಪದ ಮುಂತಾದವರನ್ನು ಸಮೀಪಿಸಿದನು. ದ್ರುಪದನಾದರೂ ವಿದುರನನ್ನು ಧರ್ಮಾನುಸಾರ ಬರಮಾಡಿಕೊಂಡನು. ಇಬ್ಬರೂ ಪರಸ್ಪರ ಕುಶಲವಾರ್ತೆಯನ್ನು ಮಾಡಿಕೊಂಡರು.

ಅಲ್ಲಿ ಪಾಂಡದವರನ್ನು ಕಂಡ ವಿದುರನು ಜೊತೆಗೇ ಕೃಷ್ಣನನ್ನೂಕಂಡನು; ಸ್ನೇಹಭಾವದಿಂದ ಅವರನ್ನು ಆಲಿಂಗಿಸಿಕೊಂಡನು. ಬಳಿಕ ಅವರ ಅನಾಮಯವನ್ನು ಕೇಳಿದನು. (ಆಮಯ ಎಂದರೆ ರೋಗ; ಅದಿಲ್ಲದಿರುವಿಕೆಯೇ ಅನಾಮಯ. ಬ್ರಾಹ್ಮಣರಲ್ಲಿ ಕುಶಲಪ್ರಶ್ನೆಯು ಹೇಗೆ ವಾಡಿಕೆಯೋ ಹಾಗೆ ಕ್ಷತ್ರಿಯರಲ್ಲಿ ಅನಾಮಯಪ್ರಶ್ನೆಯು ವಾಡಿಕೆ: ಆರೋಗ್ಯವೇ? – ಎಂದು ವಿಚಾರಿಸುವುದು.)

ಯಥಾಕ್ರಮವಾಗಿ - ಎಂದರೆ ಹಿರಿಯರು ಮೊದಲು, ಚಿಕ್ಕವರು ಆಮೇಲೆ ಎಂಬ ಕ್ರಮದಲ್ಲಿ - ಅವರುಗಳೂ ಆ ವಿದುರನನ್ನು ಆದರಿಸಿದರು. ಧೃತರಾಷ್ಟ್ರನ ವಚನದಂತೆ ಸ್ನೇಹಪೂರ್ವಕವಾಗಿ ಮತ್ತೆ ಮತ್ತೆ ಎಲ್ಲರ ಅನಾಮಯಪ್ರಶ್ನವನ್ನು ಮಾಡಿದನು, ವಿದುರ. ರತ್ನಗಳನ್ನೂ ವಿವಿಧವಾದ ವಸುಗಳನ್ನೂ (ಎಂದರೆ ಸಂಪತ್ತುಗಳನ್ನೂ) ಕೊಟ್ಟನು: ಅವು ಪಾಂಡವರಿಗೂ ಕುಂತಿಗೂ ದ್ರೌಪದಿಗೂ ಹಾಗೂ ದ್ರುಪದನಿಗೂ ಮತ್ತು ಆತನ ಮಕ್ಕಳಿಗೂ ಕೌರವರು ಇತ್ತಿರುವಂತಹವು.

ನಮ್ರತೆಯಿಂದ ಬಗ್ಗಿದವನಾಗಿ, ಅಮಿತ-ಮತಿಯಾದ ವಿದುರನು ಕೇಶವ ಪಾಂಡವರುಗಳ ಸಂನಿಧಿಯಲ್ಲಿ ದ್ರುಪದನನ್ನು ಸಂಬೋಧಿಸಿ ಹೀಗೆಂಬುದಾಗಿ ಹೇಳಿದನು:

"ರಾಜನೇ, ಮಂತ್ರಿಗಳೊಂದಿಗೆ ಹಾಗೂ ಪುತ್ರನೊಂದಿಗೆ ನನ್ನೀ ಮಾತನ್ನು ಕೇಳು. ಧೃತರಾಷ್ಟ್ರನು ತನ್ನ ಪುತ್ರರು-ಮಂತ್ರಿಗಳು-ಬಂಧುಗಳೊಂದಿಗೆ ಸಂತೋಷದಿಂದ ನಿಮ್ಮೆಲ್ಲರ ಕುಶಲಪ್ರಶ್ನೆಯನ್ನು ಮತ್ತೆ ಮತ್ತೆ ಮಾಡಿರುವನು. ತಮ್ಮೊಂದಿಗೆ ಯಾವ ಸಂಬಂಧವು ಉಂಟಾಗಿದೆಯೋ, ಅದರಿಂದ ಬಹುವಾಗಿ ನಿನ್ನ ವಿಷಯದಲ್ಲಿ ಸಂತೋಷಗೊಂಡಿದ್ದಾನೆ. ಹಾಗೆಯೇ ಮಹಾಪ್ರಾಜ್ಞನಾದ ಭೀಷ್ಮನೂ ಸಹ ಕೌರವರೆಲ್ಲರೊಂದಿಗೆ ನಿನ್ನ ಕುಶಲವನ್ನು ಕೇಳುತ್ತಿದ್ದಾನೆ. ಹಾಗೆಯೇ ನಿನ್ನ ಪ್ರಿಯಸ್ನೇಹಿತನಾದ ಮಹಾಪ್ರಾಜ್ಞನಾದ ದ್ರೋಣನೂ ಸಹ ಆಲಿಂಗಿಸಿಕೊಂಡು ನಿನ್ನ ಕುಶಲವನ್ನು ವಿಚಾರಿಸಿದ್ದಾನೆ.

ಹಾಗೆಯೇ, ಪಾಂಚಾಲದೇಶರಾಜನೇ, ನಿನ್ನೊಡನೆ ಸಂಬಂಧವನ್ನು ಪಡೆದವನಾಗಿ, ಕೌರವನೂ (ಎಂದರೆ ಧೃತರಾಷ್ಟ್ರನೂ) ತನ್ನನ್ನು ಧನ್ಯನಾದವನನ್ನಾಗಿ ಭಾವಿಸುತ್ತಾನೆ. ಹಾಗೆಯೇ ಇತರ ಕೌರವರೂ ಸಹ ಭಾವಿಸುತ್ತಾರೆ. ನಿನ್ನೊಂದಿಗೆ ಸಂಬಂಧವನ್ನು ಹೊಂದಿರುವಂತಹುದು ಅದೆಷ್ಟು ಸಂತೋಷವನ್ನುಂಟುಮಾಡಿದೆಯೋ ಅಷ್ಟು ಸಂತೋಷವನ್ನು ರಾಜ್ಯಪ್ರಾಪ್ತಿಯು ಸಹ ಅವರಿಗೆ ಉಂಟುಮಾಡಿಲ್ಲ. ಇದನ್ನರಿತವನಾಗಿ ನೀನು ಪಾಂಡವರನ್ನು ಹಸ್ತಿನಾಪುರಕ್ಕೆ ಹೊರಡಿಸು: ಪಾಂಡವರನ್ನು ಕಾಣಲು ಕೌರವರೂ ಬಹಳವೇ ತ್ವರೆಪಡುತ್ತಿದ್ದಾರೆ – ಎಂಬುದಾಗಿ ಹೇಳಿದನು. 

ಸೂಚನೆ : 21/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 11 ವಂದನ-ವಿಧಾನ – ವೇಣುವಾದನ-ವೈಖರಿ ( Krsnakarnamrta - 11 Vandana-Vidhana – Venuvadana-Vaikhari)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಲೀಲಾಶುಕನಿಗೆ ಶ್ರೀಕೃಷ್ಣನಲ್ಲಿ ಅಚಲವಾದ ಭಕ್ತಿ. ಭಗವಂತನಲ್ಲಿ ಭಕ್ತಿಯೆಂಬುದು ಸುಲಭವಾಗಿ ಬಂದುಬಿಡುವುದೂ ಅಲ್ಲ; ಬಂದದ್ದು ತಾನಾಗಿಯೇ ಸ್ಥಿರವಾಗಿ ನಿಂತುಬಿಡುವುದೆಂಬುದೂ ಅಲ್ಲ.

ಕೆಲವಂಶಗಳಲ್ಲಿ ಮನುಷ್ಯರಲ್ಲಿಯ ಪರಸ್ಪರ ಪ್ರೀತಿಯ ಪರಿಯೆಂತೋ ಅಂತೆಯೇ ಭಗವದ್ಭಕ್ತಿಯೂ. ಮಕ್ಕಳ ವಿಷಯವನ್ನೇ ತೆಗೆದುಕೊಳ್ಳಿ. ಒಂದು ಮಗುವಿನೊಡನೆ ಚೆನ್ನಾಗಿ ಆಟವಾಡುವ ಸಂನಿವೇಶವು ಒದಗಿತೆನ್ನಿ. ಚೆನ್ನಾಗಿ ಆಡಿಸುವವರೊಂದಿಗೆ ಮಗುವಿನ ಪ್ರೀತಿಯೂ ಗಾಢವಾಗುವುದೇ ಸರಿ. ಅದರೆ ಒಮ್ಮೆ ಮಗುವಿಗೆ ಅಷ್ಟು ಇಷ್ಟವಾಗುವಂತೆ ಆಡಿ(ಸಿ), ಆಮೇಲೆ ಬಹಳಕಾಲ ಮಗುವಿನೊಂದಿಗೆ ಆಡಲೇ ಇಲ್ಲವೆನ್ನಿ. ಆಮೇಲೆ ಅದೇ ಮಗುವು ಎದುರಿಗೆ ಬಂದರೂ ಹಿಂದೆ ಉಕ್ಕಿದ್ದ ಭಾವವು ಅಷ್ಟೇ ತೀವ್ರವಾಗಿ ಉಳಿದಿರುವುದಿಲ್ಲ. ಭಕ್ತಿಯ ಬಗೆಯೂ ಹೀಗೆಯೇ: ಒಮ್ಮೆ ಉಕ್ಕಿದ ಉತ್ಕಟ ಭಾವ ಮತ್ತೊಮ್ಮೆ ಅಥವಾ ಮರುದಿನವೇ ಕೂಡ ಅಷ್ಟೇ ತೀವ್ರವಾಗಿ ಇಲ್ಲದಿರುವುದೂ ಉಂಟು!

ಎಂದೇ ಕೃಷ್ಣನಲ್ಲಿ ಭಕ್ತಿಯು ನನಗುಂಟಾಗಲಿ - ಎಂಬುದು ಲೀಲಾಶುಕನ ಕೋರಿಕೆಯಾಗಿದೆ. ಅದೆಷ್ಟು ತೀವ್ರವಾದ ಕೋರಿಕೆಯೆಂದರೆ ಆ ಬಗ್ಗೆ ದೇವತೆಗಳನ್ನು ಬೇಡಲೂ ಸಿದ್ಧ, ಲೀಲಾಶುಕ. ಬರೀ ದೇವತೆಗಳೇನು? ದೇವೇಂದ್ರ-ನಿಕರಗಳನ್ನೇ - ಎಂದರೆ ಶ್ರೇಷ್ಠದೇವ-ಸಮೂಹಗಳನ್ನೇ - ಬೇಡಿಕೊಳ್ಳುತ್ತಾನೆ. ಅದೂ ಸುಮ್ಮನೆ ಕೇಳಿಕೊಳ್ಳುವುದಲ್ಲ: ಅವರೆಲ್ಲರಿಗೂ ಸಾಷ್ಟಾಂಗ-ನಮಸ್ಕಾರವನ್ನು ಮಾಡಿ ಕೇಳಿಕೊಳ್ಳುವುದು; ಸರ್ವ-ಭಾವಗಳಿಂದಲೂ ಸಮಸ್ತ-ಪ್ರಕಾರಗಳಿಂದಲೂ ಕೇಳಿಕೊಳ್ಳುವುದು.

ಏನು ಸಾಷ್ಟಾಂಗ-ನಮಸ್ಕಾರವೆಂದರೆ? ಎಂಟು ಅಂಗಗಳಿಂದ ಮಾಡುವ ನಮಸ್ಕಾರ. ಯಾವ ಎಂಟು? ಇವು: ತೋಳುಗಳು, ಪಾದಗಳು, ಜಾನು(ಮಂಡಿ)ಗಳು, ಉರಸ್ಸು ಮತ್ತು ಶಿರಸ್ಸು (ಎಂದರೆ ಎದೆ, ತಲೆ), ನೇತ್ರಗಳು, ಮನಸ್ಸು ಮತ್ತು ವಚಸ್ಸು (ಎಂದರೆ ಚಿತ್ತ, ಮತ್ತು ವಾಕ್ಕು; ವಾಕ್ಕೆಂದರೆ ಮಾತು). (ಕೆಲವರು "ಶಿರಸಾಷ್ಟಾಂಗ ನಮಸ್ಕಾರ" ಎನ್ನುತ್ತಾರೆ; ಅದು ತಪ್ಪಾದ ಬಳಕೆ. ಅಷ್ಟಾಂಗ-ನಮಸ್ಕಾರದೊಳಗೇ ಶಿರಸ್ಸೂ ಸೇರಿದೆಯಲ್ಲವೇ? ಅದನ್ನು ಬೇರೆ ಹೇಳುವುದೇನು? ಬರೀ "ಶಿರಸಾ" ಹೇಳುವುದು ಬೇರೆ). ಅಲ್ಲದೆ, ಸಾಷ್ಟಾಂಗ-ಪಾತ, ಸಾಷ್ಟಾಂಗ-ಪ್ರಣಿಪಾತ ಎಂದರೂ ಸಾಷ್ಟಾಂಗ-ಪ್ರಣಾಮವೆಂದೇ. ಪ್ರಕೃತ-ಶ್ಲೋಕದಲ್ಲಿ ಮೊದಲನೆಯ ಪದವನ್ನು ಬಳಸಿದೆ.

ಕೃಷ್ಣನಲ್ಲಿ ನನಗೆ ಭಕ್ತಿ ಬರಲಿ - ಎಂದೇ ಕೇಳಿಕೊಳ್ಳುವುದಾದರೂ, ಬರೀ "ಕೃಷ್ಣನಲ್ಲಿ" ಎಂದುಬಿಟ್ಟರೆ ಸಾಕೇ? ಎಂತಹ ಕೃಷ್ಣ ಆತ? ಎರಡು ಮುಖ್ಯ-ವಿಶೇಷಣಗಳು ಲೀಲಾಶುಕನಿಗೆ ತೋರಿವೆ. ಒಂದು ರೂಪವನ್ನೂ ಮತ್ತೊಂದು ಸ್ವರೂಪವನ್ನೂ ಹೇಳುವಂತಹುದು.

ಮೊದಲನೆಯದು, ತನ್ನ ಕಣ್ಣ ಮುಂದೆ ತೋರುವ ಚೆಲುವ ಮೊಗದ ಕೃಷ್ಣ. ಆತನ ಆನನ (ಎಂದರೆ ಮುಖವು) ಚಂದ್ರ-ಬಿಂಬವನ್ನು ಹೋಲುವಂತಹುದು: ದುಂಡನೆಯ ಮೊಗ, ಚಂದ್ರನಂತೆ ಕಾಂತಿ-ಭರಿತವಾದದ್ದು. ಜೊತೆಗೆ ಮಧುರವಾದ ವದನವದು. ಅದರ ಮಧುರತೆಯು ಬಂದಿರುವುದಾದರೂ ಹೇಗೆ? ಮೊಗದ ಮೇಲೆ ಮೂಡುವ ಮುಗುಳ್ನಗೆ (ಅಥವಾ ಮಂದ-ಸ್ಮಿತ) ಏನುಂಟೋ ಅದರಿಂದಾಗಿ ಬಂದುದದು: ಹೀಗೆ ಸರಸವಾಗಿರುವುದು ಶ್ರೀಕೃಷ್ಣನ ಮುಖ.

ಎರಡನೆಯ ವಿಶೇಷಣವೆಂದರೆ ಕೃಷ್ಣನು ನಂದಗೋಪನ ಪುಣ್ಯರಾಶಿಯೆಂಬುದು. ವಾಸ್ತವವಾಗಿ ಶ್ರೀಕೃಷ್ಣನೇ ಪುಣ್ಯವಲ್ಲ; ಆತ ಪುಣ್ಯದ ಫಲ. ಇನ್ನೂ ಸರಿಯಾಗಿ ಹೇಳುವುದೆಂದರೆ "ಪುಣ್ಯರಾಶಿಯ ಫಲ". ಆದರೆ ಪುಣ್ಯರಾಶಿಯ ಫಲ - ಎಂಬುದಾಗಿ ಅಷ್ಟುದ್ದವಾಗಿ ಹೇಳುವುದು ಲೀಲಾಶುಕನಿಗೆ ಬೇಕಿಲ್ಲ. ಪುಣ್ಯಪುಂಜವೆಂದರೇ ಶ್ರೀಕೃಷ್ಣ; ಶ್ರೀಕೃಷ್ಣನೆಂದರೆ ಪುಣ್ಯರಾಶಿಯೆಂದೇ.

ಇಲ್ಲೊಂದು ಕಾರ್ಯ-ಕಾರಣ-ವ್ಯವಸ್ಥೆಯಿದೆ. ನಂದನ ಪುಣ್ಯವೆಂಬುದು ಕಾರಣ. ಆ ಪುಣ್ಯದ ಫಲವು ಕೃಷ್ಣ. ತರ್ಕದ ಭಾಷೆಯಲ್ಲಿ ಹೇಳುವಾಗ/ಕೇಳುವಾಗ, "ಇಲ್ಲಿ ಕಾರಣ ಯಾವುದು, ಕಾರ್ಯ ಯಾವುದು?" - ಎಂದು ಕೇಳುತ್ತಾರೆ, ಅಲ್ಲವೇ? ಎರಡನ್ನೂ ಬಿಡಿಸಿ ಹೇಳುವುದು ಸಹಜ.

ಆದರೆ ಕೆಲವೊಮ್ಮೆ ಕಾರಣ-ಕಾರ್ಯಗಳನ್ನು ಒಂದೇ ಎಂಬಂತೆ ಮಾಡಿಬಿಡುತ್ತೇವೆ: ಇದನ್ನು "ಕಾರ್ಯ-ಕಾರಣಗಳ ಅಭೇದೋಪಚಾರ" - ಎನ್ನುತ್ತಾರೆ. ಭೇದವಿದೆಯೆಂದು ಗೊತ್ತು; ಆದರೆ ಅದನ್ನು ಹೇಳುವುದು ಬೇಕಿಲ್ಲ. ಎರಡನ್ನು ಒಂದಾಗಿ ಹೇಳಲಾಗುತ್ತಿದೆ.

ಕಾವ್ಯದಲ್ಲಿರಲಿ, ಲೋಕರೂಢಿಯಲ್ಲೇ ಉಂಟು - ಈ ಬಗೆಯ ವ್ಯವಹಾರ. ನಮ್ಮ ಪ್ರೀತಿಯ ಮಗುವನ್ನು "ನನ್ನ ಚಿನ್ನ" ಎನ್ನುತ್ತೇವೆ. ಮಗುವೇನು ಚಿನ್ನವೇ? ಇಲ್ಲಾಗಿರುವುದೂ ಅಭೇದೋಪಚಾರ: ಎಂದರೆ, ಎರಡಾಗಿರುವುದನ್ನು ಒಂದೇ ಎಂಬಂತೆ ಹೇಳುವುದು. ಭೇದವಿದ್ದರೂ ಇಲ್ಲವೆಂಬಂತೆ ಹೇಳುವುದು. ನಾರಿಯನ್ನು ಸುಂದರಿ ಎನ್ನುವ ಬದಲು, "ಸೌಂದರ್ಯವೆಂದರೆ ಅವಳೇ" ಎಂದುಬಿಡುವಂತೆ. ಅವಳಲ್ಲಿ ಸೌಂದರ್ಯವಿರುವುದೇ ವಿನಾ ಅವಳೇ ಸೌಂದರ್ಯವೇ? ಆದರೂ ಸೌಂದರ್ಯವು ಅತಿಶಯವಾಗಿದ್ದರೆ ಹಾಗೆಂದುಬಿಡೋಣವೆನ್ನಿಸಿಬಿಡುತ್ತದೆ ಅಲ್ಲವೇ? ಇದೂ ಅಭೇದೋಪಚಾರವೇ.

ಅಂತೂ ನಂದನ ಪುಣ್ಯಸ್ತೋಮ(ದ ಫಲ)ವೇ ಈ ಮೋಹಕ ಶ್ರೀಕೃಷ್ಣ. ಒಟ್ಟಿನಲ್ಲಿ, ಮಹಾಪುಣ್ಯ-ಮಹಾಮಾಧುರ್ಯಗಳ ಮಧುರ-ಮಿಲನವೇ ಮುದ್ದುಕೃಷ್ಣ. ಅಂತಹ ಅದ್ಭುತದೈವದಲ್ಲಿ ನನ್ನ ಭಕ್ತಿಯಿರಲೆಂದು (ಆಶೀರ್ವದಿಸಿರೆಂದು) ಎಲ್ಲ(ದೇವ)ರಲ್ಲಿಯೂ ಸವಿನಯ-ಪ್ರಾರ್ಥನೆಯನ್ನು ಮಾಡುತ್ತಾನೆ, ಲೀಲಾಶುಕ.

ಈಗ ಈ ಭಾವದ ಶ್ಲೋಕವನ್ನು ಆಸ್ವಾದಿಸಿ:

ಸಾಷ್ಟಾಂಗ-ಪಾತಮ್ ಅಭಿವಂದ್ಯ ಸಮಸ್ತಭಾವೈಃ /

ಸರ್ವಾನ್ ಸುರೇಂದ್ರ-ನಿಕರಾನ್ ಇದಮ್ ಏವ ಯಾಚೇ |

ಮಂದಸ್ಮಿತಾರ್ದ್ರ-ಮಧುರಾನನ-ಚಂದ್ರಬಿಂಬೇ /

ನಂದಸ್ಯ ಪುಣ್ಯನಿಚಯೇ ಮಮ ಭಕ್ತಿರಸ್ತು ||

ಮಾಧವನ ಮಧುರವೇಣುಗಾನವನ್ನು ಚಿತ್ರಿಸುವ ಮತ್ತೊಂದು ಶ್ಲೋಕವನ್ನು ಗಮನಿಸಬಹುದು. ಕೊಳಲಿಗೆ ವಂಶ-ವಂಶೀ-ವೇಣು-ಮುರಲೀ-ವಂಶನಾಳ - ಎಂದೆಲ್ಲಾ ಪದಗಳುಂಟು. ವಂಶನಾಳವನ್ನು ತನ್ನ ಅಧರದ ಮೇಲೆ ಇಟ್ಟುಕೊಂಡಿದ್ದಾನೆ, ಶ್ರೀಕೃಷ್ಣ.

ಕೊಳಲನ್ನೂದುವುದೆಂದರೇನು? ಸುಮ್ಮನೆ ಗಾಳಿಯನ್ನು ತುಂಬಿದರಾಯಿತೇ? ಸಪ್ತಸ್ವರಗಳನ್ನು ಹೊಮ್ಮಿಸಿ ತಾನೇ ಅದು ಗಾನವಾಗುವುದು? ತಾನು ನುಡಿಸಬೇಕಾದ ಗಾನದ ಭಾವಗಳೇನು? ಅದಕ್ಕೆ ಒಪ್ಪುವ ರಾಗ-ತಾಳಗಳೇನು? - ಇವೂ ಚಿಂತನೀಯವಾದವೇ, ಯೋಜನೀಯವಾದವೇ.

ಅವುಗಳಿಗನುಗುಣವಾಗಿ ನಾನಾವಿವರ(ರಂಧ್ರ)ಗಳ ಮೇಲೆ ಬೆರಳಾಡಿಸಬೇಕು: ಅವುಗಳನ್ನು ಆಗಾಗ ಸ್ವಲ್ಪವಾಗಿಯೋ ಪೂರ್ಣವಾಗಿಯೋ ತೆರೆಯಬೇಕು, ಮುಚ್ಚಬೇಕು. ಚೆನ್ನಾಗಿ ಪಳಗಿದ ವಾದಕನಾದರೆ ಅಂಗುಲಿಗಳ (ಎಂದರೆ ಬೆರಳುಗಳ) ಚಲನದಲ್ಲಿ ಒಂದು ಅನಾಯಾಸತೆಯೂ ಲಾಲಿತ್ಯವೂ ಗೋಚರವಾಗುತ್ತವೆ: ಲೀಲಾಜಾಲವಾಗಿ ನುಡಿಸುತ್ತಿದ್ದರೂ ಮಾಧುರ್ಯಕ್ಕೆ ಭಂಗಬರದಿರುವುದು ಪಳಗಿದ ಕೈಯನ್ನು ಸೂಚಿಸುತ್ತದೆ. ದಿವ್ಯವಾದ ಗಾನವು ಹೊಮ್ಮುವಾಗ ಕಿವಿಗೆ ರಸಾಯನವಾಗುವುದಲ್ಲದೆ ಮನಸ್ಸಿಗೆ ತಂಪೂ ಸಹಜವಾಗಿ ಹರಿದು ಬರುತ್ತದೆ. ಮತ್ತು ಕಿವಿ-ಮನಸ್ಸುಗಳಿಗಾಗುವ ಮುದವನ್ನು ಮೀರಿದ ಒಂದು ಆತ್ಮೋನ್ನತಿಯೂ ಉಂಟಾಗುತ್ತದೆ.

ಅಂತೂ ವನಾಂತದಲ್ಲಿ, ಎಂದರೆ ಕಾಡಿನ ನಡುವೆ - ಪ್ರಕೃತದಲ್ಲಂತೂ ವೃಂದಾವನಾಂತದಲ್ಲಿ - ಮಧುರವಾಗಿ ವೇಣುವನ್ನು ನುಡಿಸುವ ಶ್ರೀಕೃಷ್ಣನ ಗಾನದ ಪರಿ ಹೃದ್ಯವಾದದ್ದೇ ಸರಿ. ಇದನ್ನು ಚಿತ್ರಿಸುವ ಶ್ಲೋಕ ಹೀಗಿದೆ:

ಅಧರೇ ವಿನಿವೇಶ್ಯ ವಂಶನಾಲಂ /

ವಿವರಾಣ್ಯಸ್ಯ ಸಲೀಲಮ್ ಅಂಗುಲೀಭಿಃ |

ಮುಹುರ್ ಅಂತರಯನ್ ಮುಹುರ್ ವಿವೃಣ್ವನ್ /

ಮಧುರಂ ಗಾಯತಿ ಮಾಧವೋ ವನಾಂತೇ ||

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 14/4/2024 ರಂದು ಪ್ರಕವಾಗಿದೆ.

Monday, April 15, 2024

ವ್ಯಾಸ ವೀಕ್ಷಿತ - 83 ಧೃತರಾಷ್ಟ್ರನ ಮೇಲೆ ವಿದುರೋಕ್ತಿಯ ಪರಿಣಾಮ (Vyaasa Vikshita - 83 Dhritarashtrana Mele Viduroktiya Parinama)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಇನ್ನು ಧೃತಿ (ಎಂದರೆ ಧೈರ್ಯ), ಅನುಕ್ರೋಶ (ಎಂದರೆ ದಯೆ), ಕ್ಷಮೆ (ಎಂದರೆ ಸಹನೆ), ಸತ್ಯ, ಹಾಗೂ ಪರಾಕ್ರಮಗಳು ಯಾವನಲ್ಲಿ ನಿತ್ಯವಾಗಿ ನೆಲೆಗೊಂಡಿವೆಯೋ ಅಂತಹ ಪಾಂಡವಶ್ರೇಷ್ಠನನ್ನು, ಎಂದರೆ ಯುಧಿಷ್ಠಿರನನ್ನು, ಯುದ್ಧದಲ್ಲಿ ಗೆಲ್ಲುವುದಾದರೂ ಹೇಗೆ? ಯಾರ ಪಕ್ಷವನ್ನು ರಾಮನು (ಎಂದರೆ ಬಲರಾಮನು) ವಹಿಸಿದ್ದಾನೋ, ಯಾರಿಗೆ ಮಂತ್ರಿಯಾಗಿ ಜನಾರ್ದನನಿದ್ದಾನೋ, ಯಾರ ಪಕ್ಷದಲ್ಲಿ ಸಾತ್ಯಕಿಯಿದ್ದಾನೋ - ಅಂತಹ ಪಾಂಡವರಿಗೆ ಯುದ್ಧದಲ್ಲಿ ಗೆಲ್ಲಲಾಗದು ಯಾವುದು? ಯಾರಿಗೆ ದ್ರುಪದನು (ಹೆಣ್ಣುಕೊಟ್ಟ) ಮಾವನೋ, ಯಾರಿಗೆ ಶ್ಯಾಲಕರಾಗಿ (ಎಂದರೆ ಪತ್ನಿಯ ಸಹೋದರರಾಗಿ) ಧೃಷ್ಟದ್ಯುಮ್ನಾದಿ ಪಾರ್ಷತರಿರುವರೋ (ಎಂದರೆ ಪೃಷತವಂಶಕ್ಕೆ ಸೇರಿದವರು, ದ್ರುಪದನ ಮಕ್ಕಳು, ವೀರಭ್ರಾತೃಗಳು) - ಅಂತಹವರನ್ನು  ಜಯಿಸಲಾಗದು ಎಂಬುದನ್ನು ಅರ್ಥಮಾಡಿಕೋ. ಅವರು ದಾಯಾದ್ಯರು (ಎಂದರೆ ತಂದೆಯ ರಾಜ್ಯದ ಉತ್ತರಾಧಿಕಾರಿಗಳು) - ಇದೆಲ್ಲವನ್ನೂ ಮನಗಂಡು ಧರ್ಮದಿಂದ ಅವರೊಂದಿಗೆ ನಡೆದುಕೋ.

ಪುರೋಚನನಿಂದಾದ ಕಾರ್ಯದಿಂದಾಗಿ ಮಹತ್ತಾದ ಅಪಕೀರ್ತಿಯೇ ನಿನಗುಂಟಾಗಿದೆ, ಧೃತರಾಷ್ಟ್ರ! ಪಾಂಡವರ ವಿಷಯದಲ್ಲಿ ನೀನು ಅನುಗ್ರಹವನ್ನು ತೋರಿ, ಇನ್ನು ಆ ಅಪಯಶಸ್ಸನ್ನು ತೊಳೆದುಕೋ. ಪಾಂಡವರಿಗೆ ಈಗ ಮಾಡುವ ಅನುಗ್ರಹವು ನಮ್ಮ ವಂಶದ ಎಲ್ಲರಿಗೂ ಜೀವನ-ಪ್ರದವಾದದ್ದು ಹಾಗೂ ಪರ-ಶ್ರೇಯಸ್ಸಾದದ್ದು (ಎಂದರೆ ಉತ್ತಮ-ಶ್ರೇಯಸ್ಸನ್ನು ಕೊಡುವಂತಹುದು); ಹಾಗೂ (ಇಡೀ)ಕ್ಷತ್ರಿಯ-ಕುಲಕ್ಕೆ ವೃದ್ಧಿಯನ್ನುಂಟುಮಾಡುವಂತಹುದು.

ರಾಜನೇ, ದ್ರುಪದನೊಬ್ಬ ದೊಡ್ಡರಾಜನೇ; ಆತನೊಂದಿಗೆ ಈ ಹಿಂದೆ ವೈರವನ್ನು ಕಟ್ಟಿಕೊಂಡಿದ್ದಾಗಿದೆ; ಆತನನ್ನು ನಮ್ಮತ್ತ ಒಲಿಸಿಕೊಂಡಲ್ಲಿ, ಅರ್ಥಾತ್ ಮಿತ್ರತ್ವದೊಂದಿಗೆ  ಸೇರಿಸಿಕೊಂಡಲ್ಲಿ, ಅದು [ನಮಗೆ] ಸ್ವಪಕ್ಷವೃದ್ಧಿಗೇ ಕಾರಣವಾಗುತ್ತದೆ. ಇನ್ನು ದಾಶಾರ್ಹರು - ಎಂದರೆ ಯದುವಂಶೀಯರು, ಬಲಶಾಲಿಗಳು ಮತ್ತು ಅವರ ಸಂಖ್ಯೆಯು ಸಹ ಹೆಚ್ಚೇ (ಕೃಷ್ಣನು ಅವರ ಕಡೆಯಲ್ಲಿ ಒಬ್ಬನೇ): ಕೃಷ್ಣನು ಎಲ್ಲೋ ಅವರೆಲ್ಲರೂ ಅತ್ತಲೇ; ಮತ್ತು ಕೃಷ್ಣನೆಲ್ಲಿರುವನೋ ಅಲ್ಲಿಯೇ ಜಯವಾದರೂ ಇರುವುದು (ಯತಃ ಕೃಷ್ಣಃ ತತೋ ಜಯಃ)!

ಅಷ್ಟೇ ಅಲ್ಲ ರಾಜನೇ, ಯಾವ ಕಾರ್ಯವನ್ನು ಸಾಮಮಾರ್ಗದಿಂದಲೇ ಸಾಧಿಸಲಾದೀತೋ, ಅಂತಹದನ್ನು ಯುದ್ಧದಿಂದ ಸಾಧಿಸಿಹೊರಡುವವನು ದೈವ-ಶಪ್ತನೇ ಸರಿ (ಎಂದರೆ ದೇವಶಾಪಕ್ಕೆ ಒಳಗಾದವನೇ ಸರಿ). ಪಾಂಡವರಿನ್ನೂ ಜೀವಿಸಿರುವರು - ಎಂಬುದನ್ನು ಕೇಳಿಯೇ ಪೌರರೂ ಜಾನಪದರೂ ಅವರ ದರ್ಶನದ ವಿಷಯದಲ್ಲಿ ಅತ್ಯಂತ ಉತ್ಸುಕರಾಗಿರುತ್ತಾರೆ. ಅವರಿಗೆಲ್ಲ ಸಂತೋಷವನ್ನುಂಟುಮಾಡು, ರಾಜನೇ.

ದುರ್ಯೋಧನನೂ ಕರ್ಣನೂ ಶಕುನಿಯೂ ಅಧರ್ಮದಲ್ಲಿ ಸೇರಿಕೊಂಡವರು; ದುಷ್ಟವಾದ ಪ್ರಜ್ಞೆ ಅವರದು; ಜೊತೆಗೆ ಮೂರ್ಖರು ಸಹ: ಅವರ ಮಾತಿಗೆ ಕಿವಿಗೊಡಬೇಡ. ರಾಜನೇ, ಗುಣಶಾಲಿಯಾದ ನಿನಗೆ ಇದನ್ನು ಹಿಂದೆಯೇ ಹೇಳಿದ್ದಾಗಿದೆ. ದುರ್ಯೋಧನ(ನೊಬ್ಬ)ನ ಅಪರಾಧದಿಂದಾಗಿ ಈ ಪ್ರಜಾಸ್ತೋಮವು ವಿನಾಶಹೊಂದೀತು (ದುರ್ಯೋಧನಾಪರಾಧೇನ ಪ್ರಜೇಯಂ ವೈ ವಿನಂಕ್ಷ್ಯತಿ)!

ಆಗ ಧೃತರಾಷ್ಟ್ರನು ಹೇಳಿದನು:

ಶಂತನುಪುತ್ರನಾದ ಭೀಷ್ಮನು ಜ್ಞಾನಿಯು; ಪೂಜ್ಯದ್ರೋಣನಂತೂ ಋಷಿಯೇ: ಆದ್ದರಿಂದ ಅವರುಗಳಾಡುವ ಮಾತು ಪರಮಹಿತವಾದದ್ದೇ ಸರಿ. ನೀನಾದರೂ ಸತ್ಯವನ್ನೇ ನುಡಿಯುತ್ತೀಯೆ. ವೀರರೂ ಮಹಾರಥಿಗಳೂ ಆದ ಕುಂತೀಪುತ್ರರು ಹೇಗೆ ಪಾಂಡುವಿಗೂ ಮಕ್ಕಳೋ, ಧರ್ಮದೃಷ್ಟಿಯಿಂದ ನೋಡಿದರೆ ಹಾಗೆಯೇ ನನಗೂ ಮಕ್ಕಳೇ ಸರಿ. ಅದರಲ್ಲಿ ಸಂಶಯವಿಲ್ಲ. ಈ ರಾಜ್ಯವು ನನ್ನ ಮಕ್ಕಳಿಗೆ ಸೇರತಕ್ಕದ್ದು ಎಂಬುದೆಂತೋ ಅಂತೆಯೇ ಪಾಂಡುಪುತ್ರರಿಗೂ ಸೇರತಕ್ಕದ್ದು - ಎಂಬುದರಲ್ಲೂ ಸಂಶಯವೇ ಇಲ್ಲ.

ಸೂಚನೆ : 14/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 10 ಬಾಲಕೃಷ್ಣನ ಪ್ರಾಸಮಯ ವರ್ಣನೆ ( Krsnakarnamrta - 10 Balakrishnana Prasamaya Varnane)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಕೃಷ್ಣನ ಬಾಲಲೀಲೆಗಳು ಯೌವನಲೀಲೆಗಳು - ಇವುಗಳನ್ನೆಲ್ಲವನ್ನೂ ಚಿತ್ರಿಸಿದ್ದಾನೆ ಲೀಲಾಶುಕ, ತನ್ನೀ ಕೃತಿಯಲ್ಲಿ. ಹೀಗಾಗಿ, ಶೃಂಗಾರರಸಭರಿತವಾದ ಪದ್ಯಗಳೂ ಹಲವುಂಟು, ಕೃಷ್ಣಕರ್ಣಾಮೃತದಲ್ಲಿ. ಆ ದೃಷ್ಟಿಯಿಂದ ಕೃಷ್ಣಕರ್ಣಾಮೃತಕಾವ್ಯವು ಭಕ್ತಿಕಾವ್ಯವಾದರೂ ಕೇವಲ ಚಿಕ್ಕವರಿಗಾಗಿಯೇ ಬರೆದ ಕಾವ್ಯವೆಂದೇನೂ ಅಲ್ಲ.

ಕರುಣಾಮಯನಾದ ಬಾಲಕೃಷ್ಣನನ್ನು ಆದರಿಸುವ ಈ ಶ್ಲೋಕವೂ ಕೃಷ್ಣಕರ್ಣಾಮೃತದಲ್ಲಿಯ ಅನೇಕಶ್ಲೋಕಗಳಂತೆ ಅನುಪ್ರಾಸಮಯವಾಗಿದೆ. ಪ್ರಾಸ ಅಥವಾ ಅನುಪ್ರಾಸವೆಂದರೆ ಒಂದೇ ತೆರನಾದ ವರ್ಣಗಳು ಮತ್ತೆ ಮತ್ತೆ ಬರುತ್ತಿರುವುದು. ಇಂತಹ ವಾಗ್ಭಂಗಿಗಳಿಗೆ - ಎಂದರೆ ಮಾತಿನ ಪ್ರಕಾರವಿಶೇಷಗಳಿಗೆ - ನಿರ್ದಿಷ್ಟವಾದ ಅಭಿಧಾನವೂ ಲಕ್ಷಣವೂ ಇರುತ್ತದೆ. ಏನು ಹಾಗೆಂದರೆ?

ಅಭಿಧಾನವೆಂದರೆ ವಿಶಿಷ್ಟವಾದ ಹೆಸರು. ಲಕ್ಷಣವೆಂದರೆ "ಇದು ಹೀಗಿರತಕ್ಕದ್ದು (ಅಥವಾ ಹಾಗಿರತಕ್ಕದ್ದಲ್ಲ)" - ಎಂದು ತಿಳಿಸುವ ಬಗೆ. ಮೇಲೆ ಹೇಳಿದಂತೆ, ಒಂದೇ ತೆರನಾಗಿ ತೋರುವ ವರ್ಣಗಳು ಬರುತ್ತಿದ್ದರೆ ಅದಕ್ಕೆ ಅನುಪ್ರಾಸಾಲಂಕಾರವೆನ್ನುವರು. ಅನುಪ್ರಾಸವೆನ್ನುವುದು ಅದರ ಅಭಿಧಾನವಾಯಿತು. "ವರ್ಣಸಾಮ್ಯಮ್ ಅನುಪ್ರಾಸಃ" ಎನ್ನುವುದು ಅದರ ಲಕ್ಷಣವೆನಿಸುತ್ತದೆ. "ವರ್ಣಗಳಲ್ಲಿಯ ಸಾಮ್ಯವು ಅನುಪ್ರಾಸ ಎಂದು ಕರೆಸಿಕೊಳ್ಳುತ್ತದೆ" – ಎಂಬುದು ಇದರ ಅರ್ಥ. ಸಾಮ್ಯವೆಂದರೂ ಸಮತೆ ಅಥವಾ ಸಮತ್ವವೆಂದರೂ ಒಂದೇ. ಉಚ್ಚಾರಣೆಯ ಬಗೆಯಲ್ಲೋ ಉತ್ಪತ್ತಿಸ್ಥಾನದಲ್ಲೋ ಹತ್ತಿರಹತ್ತಿರವಿರುವ ವರ್ಣಗಳಿಂದಾಗಿ ಅನುಪ್ರಾಸವೇರ್ಪಡುತ್ತದೆ.

ಎಷ್ಟು ಸ್ಪಷ್ಟವಾದ ಲಕ್ಷಣವನ್ನೇ ಕೊಟ್ಟರೂ, ಅದು ಚೆನ್ನಾಗಿ ಮನದಟ್ಟಾಗುವುದು ಉದಾಹರಣೆಗಳ ಅನ್ವಯದ ಮೂಲಕವೇ. ಅದನ್ನು ಮುಂದೆ ನೋಡಬಹುದು.

ಪುಟ್ಟಮಕ್ಕಳ ಕೆಂದುಟಿಯ ಸೊಬಗನ್ನು ಕಣ್ತುಂಬ ನೋಡಿ ಆಸ್ವಾದಿಸಬಹುದಷ್ಟೆ? ಅರುಣವರ್ಣದ ತುಟಿ ಈ ಪುಟ್ಟಕೃಷ್ಣನದು. ಹೊಳೆಯುವ ತುಟಿಯ ಮೇಲೆ ಮಂದಹಾಸ ಮಿಂಚಿದಾಗ ತೋರುವ ಸೊಗಸೇ ಬೇರೆ. ಮಗು ಕೃಷ್ಣನ ಈ ಅರುಣಾಧರವೇ ಒಂದು ಅಮೃತ. ಅಧರವೆಂದರೆ ಕೆಳದುಟಿ. ಈ ಅಮೃತವು ಮುಗ್ಧಸ್ಮಿತಕ್ಕೆ ಮೆರುಗನ್ನಿತ್ತಿದೆ.

ಇನ್ನು ಕೃಷ್ಣನ ಮೈಬಣ್ಣವೂ ವಿಶೇಷವೇ. ಆರ್ಯರು ಹೊರಗಿನಿಂದ ಬಂದವರೆಂದು ವಾದಿಸುವವರಿಗೆ ಇಲ್ಲೇ ಒಂದು ಸುಲಭವಾದ ಪ್ರತ್ಯುತ್ತರವಿದೆ. ರಾಮನೂ ಕೃಷ್ಣನೂ ಬಿಳಿ ಚರ್ಮದವರೇನಲ್ಲ! ಇಬ್ಬರನ್ನೂ ನೀಲಮೇಘಕ್ಕೇ ಹೋಲಿಸಿದೆ. ಕೃಷ್ಣನೆಂಬ ಪದಕ್ಕೇ "ಕರಿಯ" ಎಂಬ ಅರ್ಥವಿದೆಯಲ್ಲವೆ? ಪ್ರಕೃತಶ್ಲೋಕದಲ್ಲಿ, "ವರುಣಾಲಯನು ಕೃಷ್ಣನ ವರ್ಣವೈಭವವನ್ನು ಅನುಸರಿಸಿದ್ದಾನೆ" - ಎಂದಿದೆ. ಏನು ಹಾಗೆಂದರೆ? ವರುಣನಿಗೆ ಆಲಯ ಅಥವಾ ಮನೆಯೆಂದರೆ ಸಮುದ್ರ. ಸಮುದ್ರದ ಬಣ್ಣವೂ ಆಕಾಶನೀಲಿಯೇ. ಕೃಷ್ಣನ ಮೈಬಣ್ಣದ ವೈಭವ ಸಮುದ್ರರಾಜನಿಗೆ ಆಕರ್ಷಕವಾಗಿ ಕಂಡಿದೆ. ಎಂದೇ ತನ್ನ ಮೈಬಣ್ಣವನ್ನೂ ಅದಕ್ಕೆ ಹೊಂದಿಸಿಕೊಂಡಿದ್ದಾನೆ!

ಇಲ್ಲಿ ಹೇಳುತ್ತಿರುವುದು ಆಲಂಕಾರಿಕ-ಭಾಷೆಯೆಂಬುದು ಯಾರಿಗಾದರೂ ಸುಲಭವಾಗಿ ಗೋಚರವಾಗುವುದೇ. ಏಕೆಂದರೆ ಕೃಷ್ಣಾವತಾರಕ್ಕೆ ಹಿಂದೆಯೂ ಸಮುದ್ರವಿತ್ತಲ್ಲವೇ? ಮೊದಲ ಅವತಾರವೆನಿಸುವ ಮತ್ಸ್ಯಾವತಾರವಾದುದೇ ಸಮುದ್ರದಲ್ಲಲ್ಲವೇ? ಹಾಗಿರುವಲ್ಲಿ, "ಸಮುದ್ರದ ಬಣ್ಣವನ್ನು ಕೃಷ್ಣನು ಹೊತ್ತನು" - ಎಂದು ಹೇಳುವಲ್ಲಿ ಹೆಚ್ಚು ಔಚಿತ್ಯವಿದ್ದೀತೇ ವಿನಾ, ಇದನ್ನೇ ವ್ಯುತ್ಕ್ರಮವಾಗಿ ಹೇಳುವುದರಲ್ಲಲ್ಲ. (ವ್ಯುತ್ಕ್ರಮವೆಂದರೆ ವಿರುದ್ಧವಾದ ಕ್ರಮ. ಉದಾಹರಣೆಗೆ, ಮೊದಲು ಬಂದದ್ದನ್ನು ಮೊದಲೆಂದು ಹೇಳಿದರೆ ಅದು ಕ್ರಮ; ಇದಕ್ಕೆ ಬದಲಾಗಿ, ಆಮೇಲೆ ಬಂದದ್ದನ್ನೇ ಮೊದಲು ಹೇಳಿಬಿಟ್ಟು, ಮೊದಲು ಬಂದದ್ದನ್ನು ಆಮೇಲೆ ಹೇಳಿದರೆ ಅದು ವ್ಯುತ್ಕ್ರಮ). ಹೀಗಾಗಿ ಸಮುದ್ರವು ಕೃಷ್ಣನ ಬಣ್ಣವನ್ನು ಅನುಸರಿಸಿತು - ಎನ್ನುವುದು ಒಪ್ಪಲಾಗದ ಮಾತೇ.

ಆದರೆ ಕಾವ್ಯಮಯವಾಗಿ ಹೇಳುವಾಗ ವ್ಯುತ್ಕ್ರಮದಲ್ಲೂ ಸೊಬಗನ್ನು ಕಾಣಬಹುದು. ಕೃಷ್ಣನ ಮೈಬಣ್ಣವು ಕವಿಯ ಕಣ್ಣು-ಮನಸ್ಸುಗಳಲ್ಲಿ ಹೇಗೆ ಮತ್ತು ಎಷ್ಟು ನಾಟಿದೆಯೆಂದರೆ, "ಸಮುದ್ರರಾಯನ ಬಣ್ಣಕ್ಕೆ ಈ ಕೃಷ್ಣನ ಬಣ್ಣವೇ ಆದರ್ಶ"ವೆಂಬಂತೆ ಹೇಳಿರುವುದು ಆಗಿದೆ.

ಮತ್ತು ಹೀಗೆ ಹೇಳುವುದರ ಬಗ್ಗೆ ಬಹಳವಾದ ಆಶ್ಚರ್ಯಪಡಲೂ ಬೇಕಿಲ್ಲ. ಏಕೆಂದರೆ, ಪ್ರಿಯೆಯ ಮುಖವನ್ನು ಚಂದ್ರನಂತಿದೆಯೆಂದು ಹೇಳುವುದು ಲೋಕರೂಢಿಯಲ್ಲವೇ? ಆದರೆ ಕವಿಯೊಬ್ಬನು ಚಂದ್ರನನ್ನು ಕುರಿತು, "ತನ್ನ ಪ್ರೇಯಸಿಯ ಮುಖವನ್ನು ಹೋಲುತ್ತಾನೆ, ಈ ಚಂದ್ರ" - ಎಂದು ಹೇಳಿದರೆ ಹೇಗೋ ಹಾಗೆ. ಸಾಮ್ಯವಿಶೇಷವನ್ನು ಮನಗಾಣಿಸುವ ಸಲುವಾಗಿ ಹೀಗೆ ವ್ಯುತ್ಕ್ರಮದಿಂದ ಹೇಳುವ ಕಾವ್ಯಪರಿಪಾಟಿಯೂ ಉಂಟು. (ಪರಿಪಾಟಿ - ಎಂಬುದೇ ಸರಿಯಾದ ಪದ, ಪರಿಪಾಠಿ ಎನ್ನಬಾರದು).

ಕೃಷ್ಣನ ಸ್ಮಿತ ಅಥವಾ ಮುಗುಳ್ನಗೆಯನ್ನು ಹೇಳಿದ್ದಾಯಿತು. ಮೈಬಣ್ಣವನ್ನು ಹೇಳಿದ್ದಾಯಿತು. ಆತನ ಕಣ್ಣುಗಳನ್ನು ಕುರಿತು ಒಂದು ಮಾತು ಬೇಕಲ್ಲವೆ? ಕೃಷ್ಣನ ಕಣ್ಣುಗಳು ದೀರ್ಘವಾಗಿವೆ. ಯಾವುದರಂತೆ? ಅರವಿಂದ-ದಳದಂತೆ, ಅರ್ಥಾತ್ ಕಮಲ-ಪತ್ರದಂತೆ. ಅದೂ ಎಂಥಾ ಕಮಲ? ಬಾಡುತ್ತಿರುವ ಕಮಲವಲ್ಲ, ಅಥವಾ ಇನ್ನೂ ಮೊಗ್ಗಾಗಿರುವ ಪದ್ಮವೂ ಅಲ್ಲ. ಬದಲಾಗಿ ಅದು ತರುಣಾರವಿಂದ. ತರುಣವೆಂದರೆ ಎಳಸಿನ್ನೂ ಮಾಸಿಲ್ಲದಿರುವುದು. ಅರ್ಥಾತ್, ಮೈಹೊಳಪುಳ್ಳದ್ದು, ಕಾಂತಿಸಂಪನ್ನವಾಗಿರುವುದು.

ಕೃಷ್ಣನ ಬಣ್ಣವಾಯಿತು, ಕಣ್ಣಾಯಿತು, ಸ್ಮಿತವಾಯಿತು. ಆತನ ಮನಸ್ಸಿನ ಬಗ್ಗೆ ಒಂದು ಮಾತು ಬೇಡವೇ? ಹೌದು, ಬೇಕು. ಕರುಣಾಮಯ, ನಮ್ಮ ಬಾಲಕೃಷ್ಣ. ದಯಾಮಯನಾದ ಈ ದಿವ್ಯಬಾಲಕನನ್ನು ಆಶ್ರಯಿಸುತ್ತೇನೆ, ಎನ್ನುತ್ತದೆ ಶ್ಲೋಕ. ಶ್ಲೋಕದ ಪ್ರತಿಪಾದದ ಆರಂಭದಲ್ಲಿ ಬರುವ ಮೊದಲ ಮೂರು ಅಕ್ಷರಗಳಲ್ಲಿಯ ಅನುಪ್ರಾಸವನ್ನು ಗಮನಿಸಿ: ಅರುಣಾ-ವರುಣಾ-ತರುಣಾ-ಕರುಣಾ. 

ಪೂರ್ಣಶ್ಲೋಕವಿದು:

ಅರುಣಾಧರಾಮೃತ-ವಿಶೇಷಿತ-ಸ್ಮಿತಂ

ವರುಣಾಲಯಾನುಗತ-ವರ್ಣ-ವೈಭವಮ್ |

ತರುಣಾರವಿಂದ-ದಲ-ದೀರ್ಘ-ಲೋಚನಂ

ಕರುಣಾಮಯಂ ಕಮಪಿ ಬಾಲಮಾಶ್ರಯೇ ||

ಕೃಷ್ಣನನ್ನು ಇಷ್ಟು ಚಿತ್ರಿಸಿದರೂ ಆತನ ಬಗೆ ಏನನ್ನೂ ವಿಶೇಷವಾಗಿ ಅಥವಾ ಚೆನ್ನಾಗಿ ಹೇಳಲಾಗಿಲ್ಲವೆಂಬ ಭಾವನೆ, ಕವಿಗೆ. ಭಗವಂತನನ್ನು ನಾವು ಅದೆಷ್ಟೇ ವರ್ಣಿಸಬಹುದು. ಆದರೂ, ಕೊನೆಗೆ ಆತನು ವಾಚಾಮಗೋಚರನೇ. ಏನು ಹಾಗೆಂದರೆ? ಮಾತುಗಳಿಗೆ ಗೋಚರನಾಗದವನು. ಅದು ಹೇಗೆ? ಶ್ಲೋಕಪೂರ್ತಿ ಆತನನ್ನು ಚಿತ್ರಿಸಿಯೂ ಆತನನ್ನು ವಾಚಾಮಗೋಚರನೆನ್ನುವುದೇ? - ಎಂಬ ಪ್ರಶ್ನೆ ಬರಬಹುದು. ಹೌದು, ಎಷ್ಟು ಬಣ್ಣಿಸಿದರೂ ಆತನ ಅಂಶದ ಒಂದು ಅಂಶವನ್ನೂ ಹೇಳಿದಂತಾಗದು - ಎನ್ನುವುದೇ ಕವಿಯ ಕೊರಗು. ಒಂದು ದೊಡ್ಡ ಬೆಟ್ಟವನ್ನು ಪುಟ್ಟ ಮಾತುಗಳಲ್ಲಿ ಚಿತ್ರಿಸು – ಎಂದಾರಾದರೂ ಹೇಳಿದರೆ, ಅದರ ಅಸಾಧ್ಯತೆಯು ನಮಗೆ ಆಗ ಒಡನೆಯೇ ಗೋಚರವಾಗುತ್ತದೆ.

ಹಾಗಿರಲು ಹಿರಿದಾದ ವ್ಯಕ್ತಿಯನ್ನು ಕಿರಿದಾದ ಮಾತು ಬಣ್ಣಿಸಲಳವೇ? ಇನ್ನೂ, ಅನಂತವೇ ಆದ ಶಕ್ತಿಯನ್ನು ಸಣ್ಣದಾದ ಮಾತು ಅಭಿವ್ಯಕ್ತಿಗೊಳಿಸೀತೇ? - ಅದನ್ನೇ "ಕಮಪಿ" ಎಂಬ ಮಾತುಗಳಿಂದ ಕವಿಯು ತೋರ್ಪಡಿಸಿದ್ದಾನೆ. "ಇದಾರೋ ಬಾಲಕ!" ಎಂದರೆ, ಆ ತೆರನು ಹಿಂದೆ ಬಂದುದಿಲ್ಲ, ಮುಂದೆ ಬರುವ ಸಂಭವವಿಲ್ಲ - ಎಂಬ ಭಾವ. ಹೀಗೆ, "ನ ಭೂತೋ ನ ಭವಿಷ್ಯತಿ" - ಎನಿಸಿಕೊಳ್ಳಬಹುದಾದ ದಿವ್ಯಶಕ್ತಿಯ ಬಾಲರೂಪವನ್ನು ಅದೆಂತು ಬಣ್ಣಿಸಲಿ? - ಎಂಬುದು ಇಲ್ಲಿಯ ಭಾವ. 

ಈ ಅಪೂರ್ವಬಾಲಕನನ್ನು ನಾನು ಸೇವಿಸುತ್ತೇನೆ - ಎಂಬುದು ಕವಿಯ ಉಕ್ತಿ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 14/4/2024 ರಂದು ಪ್ರಕವಾಗಿದೆ.    

ಯಕ್ಷ ಪ್ರಶ್ನೆ 85 (Yaksha prashne 85)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 84 ಯಾವುದನ್ನು 'ಜ್ಞಾನ' ಎಂದು ಕರೆಯುತ್ತಾರೆ ?

ಉತ್ತರ - ತತ್ತ್ವಾರ್ಥದ ಅರಿವನ್ನು  

ಜ್ಞಾನ ಎಂದರೆ ಅರಿವು. ಈ ಅರಿವು ಪದಾರ್ಥಗಳ ಸಂಬಂಧದಿಂದ ಬರುತ್ತದೆ. ಸಮಸ್ತ ಪ್ರಪಂಚವನ್ನು ಎರಡಾಗಿ ವಿಭಾಗಿಸಲಾಗಿದೆ; ಅರ್ಥ ಪ್ರಪಂಚ ಮತ್ತು ಶಬ್ದ ಪ್ರಪಂಚ ಎಂಬುದಾಗಿ. ಅರ್ಥಪ್ರಪಂಚವು ಒಂದು ಬಿಂದುವಿನಿಂದ ಆರಂಭವಾಗಿದೆ ಎಂದು ವೇದಾದಿ ಸಾಹಿತ್ಯಗಳು ಹೇಳುತ್ತವೆ. ಅಂತಯೇ ಶಬ್ದಪ್ರಪಂಚವು ಕೂಡ ಅದೇ ರೀತಿಯಾಗಿ ಪ್ರಣವ ಎಂಬ ಶಬ್ದಮೂಲದಿಂದ ವಿಸ್ತಾರವಾಗಿದೆ ಎಂಬುದಾಗಿ ಅದೇ ಸಾಹಿತ್ಯಗಳು ಸಾರುತ್ತವೆ. ಅರ್ಥಪ್ರಪಂಚದ ಮೂಲವನ್ನು ಪರಬ್ರಹ್ಮ ಎನ್ನುತ್ತಾರೆ. ಅದೇ ಪರಬ್ರಹ್ಮ ವಾಚಕವಾದ ಶಬ್ದವನ್ನು ಪ್ರಣವ ಎನ್ನುತ್ತಾರೆ. ನಾವು ಈ ಪ್ರಪಂಚದ ಅರಿವನ್ನು ಪಡೆಯುವುದು ಎಂದರೆ ಶಬ್ದ ಪ್ರಪಂಚ ಮತ್ತು ಅರ್ಥ ಪ್ರಪಂಚ ಈ ಎರಡರ ಅರಿವನ್ನು ಪಡೆದಾಗ ಮಾತ್ರ. ಅರ್ಥಪ್ರಪಂಚ ಮತ್ತು ಶಬ್ದಪ್ರಪಂಚವನ್ನು ಸ್ಥೂಲ, ಸೂಕ್ಷ್ಮ, ಪರಾ ಎಂದು ಮೂರಾಗಿ ವಿಭಾಗಿಸಬಹುದು. ಸ್ಥೂಲವಾದುದು ಎಂದರೆ ನಮ್ಮ ಬಾಹ್ಯ ಇಂದ್ರಿಯಗಳಿಗೆ ಗೋಚರವಾಗುವಂಥವುಗಳು. ಸೂಕ್ಷ್ಮ ಎಂದರೆ ಮನಸ್ಸಿಗೆ ಗೋಚರವಾಗುವಂಥವುಗಳು. ಪರಾ ಎಂದರೆ ಮನಸ್ಸಿಗಿಂತಲೂ ಮೀರಿದ ವಿಷಯ. ಇಲ್ಲಿ ತತ್ತ್ವಜ್ಞಾನ ಎಂದರೆ ಈ ಮೂರರ ಸಮಗ್ರವಾದ ಅರಿವು. ಈ ಮೂರರ ಅರಿವು ಕೂಡ ಯಥಾರ್ಥವಾಗಿ ಆದಾಗ ಅದನ್ನೇ 'ತತ್ತ್ವಜ್ಞಾನ' ಎಂದು ಹೇಳಬಹುದು. ಇಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬ ಮೂರು ಹಂತಗಳಲ್ಲಿ ಬರುವ ಜ್ಞಾನವು ಒಂದಕ್ಕೊಂದು ಸಂಬಂಧವಿರುವಂತದ್ದು. ಪರಾರೂಪವಾದ ಜ್ಞಾನವು ಯಥಾರ್ಥವಾಗಿ ಆದಾಗ ಅದು ಸೂಕ್ಷ್ಮರೂಪವಾದ ಜ್ಞಾನಕ್ಕೆ ಸಹಕಾರಿಯಾಗುತ್ತದೆ. ಅಂತಯೇ ಸ್ಥೂಲ ಮತ್ತು ಸೂಕ್ಷ್ಮ ರೂಪವಾದ ಜ್ಞಾನವು ಯಥಾರ್ಥವಾಗಿ ಆದಾಗ ಅದು ಪರಾರೂಪವಾಗಿರುವ ಜ್ಞಾನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ಮೂರರ ಯಥಾರ್ಥವಾದ ಜ್ಞಾನವನ್ನೇ ತತ್ತ್ವಜ್ಞಾನ ಎಂಬುದಾಗಿ ಕರೆಯಲಾಗುತ್ತದೆ. ಇದರಲ್ಲೂ ಪರಾರೂಪವಾದ ಜ್ಞಾನವೇ ಮೂಲತಃ ತತ್ತ್ವ ಎಂಬುದಾಗಿ ಕರೆಯಲಾಗಿದೆ. ಅದನ್ನು 'ಪರಬ್ರಹ್ಮ' ಎಂದು ಕರೆದು ಅದರ ಭಾವವನ್ನು 'ತತ್ತ್ವ' ಎಂಬುದಾಗಿ ಹೇಳಿ, ಪರೋಕ್ಷವಾಗಿ, ಸಹಜವಾಗಿ, ಅನುಭವಕ್ಕೆ ಗೋಚರವಾಗುವ ಯಾವ ವಿಷಯವಿದೆಯೋ ಅದನ್ನೇ ತತ್ತ್ವ ಎಂಬುದಾಗಿ ಕರೆದು ಅದರ ಅರಿವನ್ನು ತತ್ತ್ವಜ್ಞಾನ ಎಂಬುದಾಗಿ ಹೇಳಲಾಗಿದೆ ಈ ತತ್ತ್ವಜ್ಞಾನವನ್ನೇ ಯಕ್ಷನು ಧರ್ಮರಾಜನ ಮುಖೇನ ಪ್ರಪಂಚಕ್ಕೆ ಅರಹುತ್ತಾನೆ. 

ಆದರೆ ಇಷ್ಟೇ ಅಲ್ಲ. ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬುದಾಗಿ ಮೂರು ವಿಧವಾದ ಈ ಪ್ರಪಂಚವನ್ನು ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಎಂದೂ ಕರೆಯುತ್ತಾರೆ. ಸ್ಥೂಲವಾದುದನ್ನು ಭೌತಿಕ ಎಂದರೆ; ಸೂಕ್ಷ್ಮವಾದುದನ್ನು ದೈವಿಕ ಎಂದೂ; ಅತ್ಯಂತ ಸೂಕ್ಷ್ಮವಾದುದನ್ನು ಪರಾ ಎಂದು ಕರೆಯಬಹುದು. ಇಂತಹ ಸಮಸ್ತವಿಷಯದ ಯಥಾರ್ಥ ಅನುಭವವನ್ನೇ 'ತತ್ತ್ವಜ್ಞಾನ'ಎನ್ನಲಾಗಿದೆ. ಶ್ರೀರಂಗಮಹಾಗುರುಗಳು ಹೇಳುವಂತೆ "ಜಾಗ್ರತ್-ಸ್ವಪ್ನ-ಸುಷುಪ್ತಿಗಳಂತೆಯೇ ತುರೀಯಸ್ಥಿತಿಯೂಮಾನವನ ಸಹಜವಾದಹಕ್ಕು. ಆ ಸ್ಥಿತಿಯಲ್ಲಿ ಅನುಭವಕ್ಕೆಬರುವುದು ಜ್ಞಾನ" ಎಂಬುದಾಗಿ. ಯಾವ ಜ್ಞಾನವನ್ನು ಪಡೆದ ಅನಂತರೈನ್ನಾವಜ್ಞಾನವನ್ನುಪಡೆಯುವ ಅವಶ್ಯಕತೆ ಇರುವುದಿಲ್ಲವೋ ಅದರ ಜ್ಞಾನವನ್ನೇ ತತ್ತ್ವಜ್ಞಾನದ ಅರಿವು ಎಂಬುದಾಗಿ ಹೇಳುವುದು ಇಲ್ಲಿನ ಪ್ರಶ್ನೋತ್ತರದ ಆಶಯವಾಗಿದೆ.   

ಸೂಚನೆ : 14/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, April 7, 2024

ವ್ಯಾಸ ವೀಕ್ಷಿತ - 82 ವಿದುರನ ಹಿತವಚನ (Vyaasa Vikshita - 82 Vidurana Hitavachana)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಭೀಷ್ಮ-ದ್ರೋಣರು ತಮ್ಮ ಸಲಹೆಯನ್ನಿತ್ತ ತರುವಾಯ ವಿದುರನ ಮಾತು ಮುಂದುವರೆಯುತ್ತಿದೆ.

ಪ್ರಿಯವೂ ಹಿತವೂ ಆದಂತಹ ವಾಕ್ಯವನ್ನು ಕುರುಶ್ರೇಷ್ಠನಾದ ಭೀಷ್ಮನು ಹೇಳಿದ್ದಾನೆ; ಆದರೆ ನೀನದನ್ನು ಸ್ವೀಕರಿಸುತ್ತಿಲ್ಲ. ಹಾಗೆಯೇ ದ್ರೋಣನ ಮಾತೂ; ಹಿತವಾದ ಮತ್ತು ಉತ್ತಮವಾದ ಮಾತನ್ನು ಬಹುಪ್ರಕಾರವಾಗಿ ಆತನು ಹೇಳಿದ್ದಾನೆ. ಆದರೆ ರಾಧಾಪುತ್ರನಾದ ಕರ್ಣನು ನಿನಗೆ ಅದು ಹಿತವೆಂದು ಪರಿಗಣಿಸುವುದಿಲ್ಲ.

ರಾಜನೇ, ಎಷ್ಟು ಯೋಚಿಸಿದರೂ ನನಗೆ ಹೊಳೆಯುತ್ತಿಲ್ಲ - ನಿನಗೆ ಪರಮಮಿತ್ರನೆನಿಸುವವನು ಯಾರೆಂದು ನಾ ಕಾಣಲಾರೆ; ಈ ಇಬ್ಬರು ನರಶ್ರೇಷ್ಠರಿಗಿಂತಲೂ ಪ್ರಜ್ಞೆಯಲ್ಲಿ ಅಧಿಕರಾದವರು ಯಾರಿದ್ದಾರೆಂದೂ ಕಾಣಲಾರೆ. ಇವರಿಬ್ಬರೂ ವಯಸ್ಸಿನಿಂದಲೂ ಪ್ರಜ್ಞೆಯಿಂದಲೂ ಶ್ರುತದಿಂದಲೂ (ಎಂದರೆ ವಿದ್ಯೆಯಿಂದಲೂ) ವೃದ್ಧರಾದವರು (ಎಂದರೆ ಹಿರಿಯರು). ರಾಜನೇ, ನಿನ್ನ ವಿಷಯದಲ್ಲೂ ಪಾಂಡುಪುತ್ರರ ವಿಷಯದಲ್ಲೂ ಸಮನಾಗಿರತಕ್ಕವರು. ಧರ್ಮದ ವಿಷಯವೇ ಆಗಿರಲಿ, ಸತ್ಯವಚನದಲ್ಲೇ ಆಗಲಿ ಇವರಿಬ್ಬರೂ ದಾಶರಥಿರಾಮನಿಗೂ ಗಯ(ನೆಂಬ ರಾಜ)ನಿಗೂ ಸಮನಾದವರೇ. ಆ ಬಗ್ಗೆ ಸಂಶಯವಿಲ್ಲ ಈ ಮೊದಲೂ ಎಂದೂ ಅಶ್ರೇಯಸ್ಸಾದುದನ್ನು ಹೇಳಿದವರಲ್ಲ. ಇವರಿಬ್ಬರ ವಿಷಯದಲ್ಲಿ ನೀನೇನಾದರೂ ಅಪಚಾರವೆಸಗಿರುವೆಯೆಂಬುದು ಕಿಂಚಿತ್ತೂ ಕಂಡುಬರುವುದಿಲ್ಲ. ಅವರ ವಿಷಯದಲ್ಲಿ ಯಾವ ಅಪರಾಧವನ್ನೂ ನೀ ಮಾಡಿಲ್ಲದಿರಲು ಆ ಇಬ್ಬರು ನರಶ್ರೇಷ್ಠರು ಸತ್ಯಪರಾಕ್ರಮರಾಗಿದ್ದೂ ನಿನಗೆ ಶ್ರೇಯಸ್ಸಾಗಬಾರದೆಂಬಂತೆ ಅದೆಂತು ಮಂತ್ರಾಲೋಚನೆ ಮಾಡಿಯಾರು? ಈ ಲೋಕದಲ್ಲಿಯ ಪ್ರಜ್ಞಾಸಂಪನ್ನರೂ ನರಪುಂಗವರೂ ಆದ ಇವರಿಬ್ಬರು ನಿನ್ನನ್ನು ಕುರಿತು ಅದಾವ ಕುಟಿಲವಾದ ಮಾತನ್ನೂ ಆಡರು, ರಾಜನೇ.

ನನ್ನ ನಿಶ್ಚಿತವಾದ ಬುದ್ಧಿಯು ಹೀಗಿರುವುದು, ಕುರುರಾಜನೇ!: ಅರ್ಥಕ್ಕಾಗಿ (ಎಂದರೆ ಸಂಪತ್ತಿಗಾಗಿ, ಅರ್ಥಾತ್ ನೀ ಕೊಡಬಹುದಾದ ಸಂಭಾವನೆಗಾಗಿ) ಈ ಧರ್ಮಜ್ಞರು ಈ ಎರಡು ಪಕ್ಷಗಳಲ್ಲಿ ಒಂದಕ್ಕೇ ಅನುಕೂಲಿಸುವಂತಹುದನ್ನು ಹೇಳಲಾರರು.

ರಾಜನೇ, ನಿನಗಿದುವೇ ಪರಮಶ್ರೇಯಸ್ಸೆಂಬುದಾಗಿ ನಾನು ಭಾವಿಸುತ್ತೇನೆ. ದುರ್ಯೋಧನಾದಿಗಳು ಹೇಗೆ ನಿನಗೆ ಮಕ್ಕಳೋ, ಅದೇ ರೀತಿಯಲ್ಲೇ ಪಾಂಡವರೂ ಸಹ - ಇದರಲ್ಲಿ ಸಂಶಯವಿಲ್ಲ. ಇದನ್ನರಿಯದ ಮಂತ್ರಿಗಳು ಅವರ ವಿಷಯದಲ್ಲಿ ಅಹಿತವಾದದ್ದನ್ನೇನಾದರೂ ಚಿಂತಿಸಿದ್ದಲ್ಲಿ, ಅವರು ಶ್ರೇಯಸ್ಸೇನು ಎಂಬುದನ್ನು ವಿಶೇಷವಾಗಿ ಕಾಣರು. ಇನ್ನು ನಿನ್ನ ಅಂತರಂಗದಲ್ಲಿ ಹುದುಗಿರುವ ಭಾವವನ್ನು ಎದುರಿಗೆ ಬಿಡಿಸಿ ತೋರಿಸುವ ಮಂದಿಯು ನಿಶ್ಚಯವಾಗಿಯೂ ನಿನಗೆ ಶ್ರೇಯಸ್ಸನ್ನು ಮಾಡರೇ ಸರಿ. ಆ ಕಾರಣಕ್ಕಾಗಿಯೇ, ಓ ರಾಜನೇ, ಮಹಾತೇಜಶ್ಶಾಲಿಗಳಾದ ಈ ಮಹಾತ್ಮರಿಬ್ಬರೂ ಸ್ವಲ್ಪ ಬಿಡಿಸಿ ಹೇಳದಾದರು; ನೀನಂತೂ ಅವರ ಮಾತನ್ನು ಒಪ್ಪೆ.

ಪಾಂಡವರನ್ನು ಜಯಿಸಲಾಗದು - ಎಂಬುದನ್ನು ಆ ನರಪುಂಗವರು ಹೇಳಿದರಲ್ಲವೇ? – ವಸ್ತುಸ್ಥಿತಿಯಾದರೂ ಹಾಗೇ ಇರುವುದು. ರಾಜನೇ, ನಿನಗೆ ಶುಭವಾಗಲಿ!

ಧನಂಜಯನು (ಎಂದರೆ ಅರ್ಜುನನು) ಸವ್ಯಸಾಚಿ (ಎಂದರೆ ಬಲಗೈಯಿಂದ ಹೇಗೋ ಹಾಗೆಯೇ ಎಡಗೈಯಿಂದಲೂ ಬಾಣಪ್ರಯೋಗ ಮಾಡಬಲ್ಲವನು). ಇಂದ್ರನಿಂದ ಕೂಡ ಆತನನ್ನು ಗೆಲ್ಲಲಾದೀತೇ? ಇನ್ನು ಭೀಮಸೇನ. ಆ ಮಹಾಬಾಹು ಸಾವಿರ ಆನೆಗಳ ಬಲವುಳ್ಳವನು. ಯುದ್ಧದಲ್ಲಿ ಅವನನ್ನು ಸೋಲಿಸಲು ದೇವತೆಗಳಿಂದಲೂ ಸಾಧ್ಯವಾದೀತೇ? ಹಾಗೆಯೇ ಯಮಳರಾದ (ಎಂದರೆ ಅವಳಿ-ಜವಳಿಗಳಾದ) ನಕುಲ-ಸಹದೇವರು. ಅವರಂತೂ ಯಮನ ಪುತ್ರರ ಹಾಗಿರುವವರು. ಬದುಕಲು ಬಯಸುವ ಯಾವನಾದರೂ ಅವರನ್ನು ರಣದಲ್ಲಿ ಸೋಲಿಸಬಲ್ಲನೇ?

ಸೂಚನೆ : 7
/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 84 (Yaksha prashne 84)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 83 'ಲಜ್ಜೆ' ಎಂದರೇನು ?

ಉತ್ತರ - ಕೆಟ್ಟ ಕೆಲಸದಿಂದ ದೂರವಿರುವುದು.  

ಲಜ್ಜೆ ಎಂದರೆ ನಾಚಿಕೆ. ಇದನ್ನು ಅತ್ಯಂತ ಶ್ರೇಷ್ಠಗುಣ ಎಂದು ಗುರುತಿಸಲಾಗಿದೆ. ಯಾವ ವಿಷಯದಲ್ಲಿ ಅಥವಾ ಯಾವ ಸಮಯದಲ್ಲಿ ಇದನ್ನು ಬಳಸಿಕೊಂಡರೆ ನಮಗೆ ಹಿತವಾಗುವುದು? ಎಂಬುದು ಇಲ್ಲಿನ ಪ್ರಶ್ನೋತ್ತರದ ಆಶಯವಾಗಿದೆ. ಕೆಟ್ಟ ಕೆಲಸದಿಂದ ದೂರವಿರುವ ಸ್ವಭಾವವನ್ನು ಲಜ್ಜೆ ಎಂದು ಕರೆಯಲಾಗಿದೆ. ಹಾಗಾದರೆ ಕೆಟ್ಟದ್ದು ಯಾವುದು? ಒಳ್ಳೆಯದು ಯಾವುದು? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಆಗ ಮಾತ್ರ ಕೆಟ್ಟದ್ದರಿಂದ ದೂರವಿರಲು ಸಾಧ್ಯ. ಹಾಗಾದರೆ ಕೆಟ್ಟದ್ದನ್ನು ಗುರುತಿಸುವ ಬಗೆ ಹೇಗೆ?

ಒಂದು ದೃಷ್ಟಿಯಿಂದ ವಿಚಾರ ಮಾಡಿದರೆ ಯಾವುದೂ ಕೆಟ್ಟದ್ದಿಲ್ಲ. ಯಾವುದೂ ಒಳ್ಳೆಯದ್ದು ಇಲ್ಲ ಎನ್ನಬೇಕಾಗುತ್ತದೆ. ಹಾಲು ಒಳ್ಳೆಯದ್ದೋ ಕೆಟ್ಟದ್ದೋ? ಮಜ್ಜಿಗೆ ಒಳ್ಳೆಯದ್ದೋ ಕೆಟ್ಟದ್ದೋ? ಎಂದರೆ ಶರೀರದಲ್ಲಿ ತುಂಬಾ ಕಫ ಆಗಿದೆ ಅಂತಾದರೆ ಡಾಕ್ಟರು ಹಾಲನ್ನು ಕುಡಿಯಬೇಡಿ ಎನ್ನುತ್ತಾರೆ. ಶೀತಕಾಲದಲ್ಲಿ ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದಲ್ಲ; ಬೇಸಿಗೆಯ ಕಾಲದಲ್ಲಿ ಮಜ್ಜಿಗೆ ಕುಡಿದರೆ ಅಮೃತ ಕುಡಿದಂತಾಗುವುದು. ಇದು ಪದಾರ್ಥದ ವಿಚಾರವಾಯಿತು. ಇನ್ನು ಅಮೂರ್ತವಾದ ಕಣ್ಣಿಗೆ ಕಾಣದ ವಿಷಯಕ್ಕೆ ಬಂದಾಗ ಯಾವುದು ಎಲ್ಲಾ ಕಾಲದಲ್ಲೂ ಎಲ್ಲರಿಗೂ ಅಹಿತವನ್ನು ಉಂಟುಮಾಡುವುದೋ ಅದು ತಾನೆ ಕೆಟ್ಟದ್ದು! ಯಾವುದನ್ನು ಹಿಂಜರಿಕೆ ಇಲ್ಲದೇ ಮಾಡುವೆವೋ ಅದನ್ನು ಒಳ್ಳೆಯದು ಎನ್ನಬಹುದು. ಇದಕ್ಕೆ ವಿರುದ್ಧವಾದುದು ಕೆಟ್ಟದ್ದು. ಆದ್ದರಿಂದ ಇಂತಹ ಕೆಟ್ಟ ಕಾರ್ಯದಿಂದ ದೂರವಿರುವುದು. ಹೇಗೆಲ್ಲಾ ಕೆಟ್ಟದ್ದು ಸಂಭವಿಸಬಹುದು? ಎಂಬುದಕ್ಕೆ ಒಂದು ಸುಭಾಷಿತ ಹೀಗೆ ಹೇಳುತ್ತದೆ - ಸ್ವತಃ ಕಾರ್ಯವನ್ನು ಮಾಡುವವನು - ಕರ್ತಾ, ಇನ್ನೊಬ್ಬರಿಂದ ಮಾಡಿಸುವವನು - ಕಾರಯಿತಾ, ಇನ್ನೊಬ್ಬರು ಮಾಡುವಂತೆ ಪ್ರೇರಣೆ ಕೊಡುವವನು- ಪ್ರೇರಕ, ಬೇರೆಯವರು ಮಾಡುವ ಕಾರ್ಯವನ್ನು ಅನುಮೋದಿಸುವವನು - ಅನುಮೋದಕ, ಈ ನಾಲ್ವರೂ ಸುಕೃತದಲ್ಲಿ ಮತ್ತು ದುಷ್ಕೃತದಲ್ಲಿ ಫಲಭಾಗಿಗಳಾಗುತ್ತಾರೆ ಎಂದು. ಈ ನಾಲ್ಕೂ ಬಗೆಯಿಂದಲೂ ಕೆಟ್ಟದ್ದು ಆಗದಂತೆ ಇರುವುದನ್ನೇ ಇಲ್ಲಿ 'ಲಜ್ಜೆ' ಎಂದು ಕರೆಯಲಾಗಿದೆ.  

ಲಜ್ಜೆ ಎಂಬುದನ್ನು ಅಂತಃಕರಣದಲ್ಲಿರುವ ಒಂದು ವಿಶೇಷಗುಣ ಎಂದೂ ಗುರುತಿಸಿದ್ದಾರೆ. ಮಾಡುವ ಕಾರ್ಯ ಒಳ್ಳೆಯದ್ದಾದರೆ ನಮ್ಮ ಶರೀರದ ಎಲ್ಲಾ ಅಂಗಗಳನ್ನು ಪುಷ್ಟಿಗೊಳಿಸುತ್ತದೆ.ಇಂದ್ರಿಯಗಳಿಗೆ ಬಲವನ್ನು ಕೊಡುತ್ತದೆ. ಮನಸ್ಸಿಗೆ ಸಂತೋಷ ಸಿಗುತ್ತದೆ. ಇದರ ಪರಿಣಾಮವಾಗಿ ಶರೀರದಲ್ಲಿರುವ ಸಪ್ತಧಾತುಗಳೂ ಪ್ರಸನ್ನವಾಗುತ್ತವೆ. ಈ ಪ್ರಸನ್ನತೆಯೇ ನಮ್ಮಲ್ಲಿ ಭಗವಂತನನ್ನು ಕಾಣಲು ಸಹಾಯವಾಗುತ್ತದೆ "ಧಾತುಪ್ರಾಸಾದಾತ್ ಮಹಿಮಾನಮೀಶಮ್" ಎಂದು ಉಪನಿಷತ್ತು ಸತ್ಕಾರ್ಯದ ಪರಿಣಾಮವನ್ನು ಹೇಳುತ್ತದೆ. ಯಾವಾಗ ನಾವು ಕೆಟ್ಟ ಆಲೋಚನೆ, ಕೆಟ್ಟ ಬಯಕೆ ಮತ್ತು ಕೆಟ್ಟ ಕಾರ್ಯದಿಂದ ದೂರವಿರುತ್ತೇವೋ ಆಗ  ಸಹಜವಾಗಿಯೇ ಶರೀರವು ಸರ್ವಾಂಗಸುಂದರವಾಗುತ್ತದೆ. ಸಾಧನ ಸರಿಯಾಗಿದ್ದರೆ ಸಾಧ್ಯವನ್ನು ತಲುಪುವುದು ಕಷ್ಟವೇ ಆಗಲಾರದು. ಹಾಗಾಗಿ ಲಜ್ಜೆಯು ಸಾಧನವನ್ನು ಸಜ್ಜುಗೊಳಿಸಲು ಅತಿಮುಖ್ಯವಾದ ಗುಣ. ಭಗವದ್ಗೀತೆಯಲ್ಲಿ ಲಜ್ಜೆಯನ್ನು ದೈವೀಸಂಪತ್ತು ಎಂಬಷ್ಟರಮಟ್ಟಿಗೆ ಈ ಗುಣವನ್ನು ಕೊಂಡಾಡಿದ್ದಾರೆ.    

ಸೂಚನೆ : 7/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಭಕ್ತಿಯ ಹಿಂದಿರುವ ನಾಲ್ಕು ಕಾರಣಗಳು ( Krsnakarnamrta - 8 Bhaktiya Hindiruva Nalku Karanagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಜೀವನದಲ್ಲಿ ನಾನಾ ಬಗೆಯ ಸುಖಗಳ ಹಿಂದೆ ಓಡುವವರುಂಟು. ರುಚಿರುಚಿಯಾದ ಭಕ್ಷ್ಯಭೋಜ್ಯಗಳೆಂದರೆ ಯಾರಿಗೆ ತಾನೆ ಬಾಯಲ್ಲಿ ನೀರೂರದು? ಸುಂದರವಾದ ರೂಪವೋ ದೃಶ್ಯವೋ ಕಣ್ಣಿಗೆ ಹಬ್ಬವಾಗುವುದು. ಒಳ್ಳೆಯ ಸಂಗೀತವೆಂಬುದೂ ಅಷ್ಟೇ : ಕಿವಿಗಳಿಗೆ.

ಆದರೆ ಲೀಲಾಶುಕನ ಚಿಂತನೆಯ ಪರಿಯೇ ಬೇರೆ. ತನಗೆ ಕೃಷ್ಣನ ವಿಷಯದಲ್ಲಿ ಭಕ್ತಿಯು ಉಂಟಾಯಿತಲ್ಲಾ - ಅದಕ್ಕಿಂತಲೂ ಹಿರಿದಾದ ಸುಖ ಮತ್ತಿನ್ನೇನು? - ಎಂಬ ಭಾವನೆ ಆತನದು! ಅನೇಕಯಜ್ಞಗಳನ್ನು ಮಾಡಿದ್ದವರಿಗೇ ಈ ಭಕ್ತಿಯು ಉಂಟಾಗುವುದು! ಹೇರಳವಾಗಿ ದಾನ ಮಾಡಿದ್ದರೆ ಮಾತ್ರವೇ ಕೃಷ್ಣಭಕ್ತಿಯು ಜಾಗರವಾಗುವುದು. ಅದನ್ನೂ ಅಷ್ಟೇ, ಪಾತ್ರರಲ್ಲಿ, ಎಂದರೆ ಸತ್ಪಾತ್ರರಲ್ಲಿ ,ದಾನ ಮಾಡಿದ್ದರೆ ಮಾತ್ರವೇ. ಏಕೆ ಸತ್ಪಾತ್ರನಿಗೇ ದಾನ ಮಾಡಬೇಕು? ಏಕೆಂದರೆ ದಾನಕೊಟ್ಟ ಮಾತ್ರಕ್ಕೆ ಕೆಲಸವು ಮುಗಿದುಬಿಡುವುದೆಂದಲ್ಲ. ದಾನವೆಂಬುದು ಬಹಳ ಜವಾಬ್ದಾರಿಯ ಕೆಲಸ - ಎಂಬುದಾಗಿ ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ಅದಕ್ಕೊಂದುದಾಹರಣೆ . ಗೋದಾನವು ಬಹಳ ಶ್ರೇಷ್ಠವಾದ ದಾನವೇ; ಅಲ್ಲವೆ? ಆದರೆ ಯಾರುಯಾರಿಗೋ ದಾನಕೊಡುವುದಾದರೆ ಅದು ದಾನಕೊಟ್ಟವನಿಗೇ ಕೆಡುಕನ್ನು ಉಂಟುಮಾಡುವುದು. ಅಷ್ಟೇ ಅಲ್ಲ, ದಾನವನ್ನು ಸ್ವೀಕರಿಸಿದವನಿಗೂ ಕೆಟ್ಟಪರಿಣಾಮವೇ ಆಗಬಹುದು.

ಗೋವು ಬಹಳ ಶ್ರೇಷ್ಠವಾದ ಪ್ರಾಣಿ. ಗೋವಿನ ಮುಂದೆ ಮನುಷ್ಯನು ಸಹ ಏನೇನೂ ಇಲ್ಲ - ಎಂದು ತೋರಿಸಿಕೊಡುವ ಮಾತುಗಳಿವೆ. ಉದಾಹರಣೆಗೆ, ಪ್ರತಿಯೊಂದು ಪದ್ಯದ ಕೊನೆಯಲ್ಲಿಯೂ "ನೀನಾರಿಗಾದೆಯೋ ಎಲೆ ಮಾನವ?" ಎಂಬ ಪಲ್ಲವಿಯಿರುವ ಕೃತಿಯಿಲ್ಲವೆ? ಗೋವು ಪರಿತ್ಯಜಿಸುವ ಮಲ-ಮೂತ್ರಗಳು ಸಹ ನಾನಾಜೀವಿಗಳಿಗೆ ಉಪಯೋಗವಾಗುವುದುಂಟು! ಗೋಮೂತ್ರವನ್ನು  ಪವಿತ್ರವೆಂದು ಸ್ವೀಕರಿಸುವುದುಂಟು. "ಪಂಚಗವ್ಯಪ್ರಾಶನ"ವು  ಅನೇಕ ಶುಭಕಾರ್ಯ-ಪುಣ್ಯಕಾರ್ಯಗಳಲ್ಲಿ ಒಂದು ಅಂಗವಾಗುವುದು. ಗೋಮಲವು ಗಿಡಮರಗಳಿಗೆ ಗೊಬ್ಬರವಾಗದೆ?. ಅಂತೂ ಗೋವಿನಿಂದಾಗುವ ಉಪಯೋಗಗಳನ್ನೆಲ್ಲ ದೊಡ್ಡ ಪಟ್ಟಿಮಾಡಿ, ಅದನ್ನು ಹಾಡಾಗಿ ಕಟ್ಟಿ, ಒಂದೊಂದು ಪದ್ಯದ ಕೊನೆಯಲ್ಲೂ ಪಲ್ಲವಿಯಾಗಿ ಮನುಷ್ಯನನ್ನು ತಿವಿದು ಕೇಳುವ ಪದ್ಯಗುಚ್ಛವನ್ನು ಯಾರು ಕೇಳಿಲ್ಲ?. ಗೋದಾನವು ಮಹಾಪುಣ್ಯಕಾರ್ಯವೆಂದಾದರೂ, ಅದಕ್ಕೂ ಇತಿಮಿತಿಯುಂಟು. ಅದನ್ನೇ ಒಂದು ಬಗೆಯಾಗಿ ಮಾಡಿದರೆ ಪುಣ್ಯ; ಮತ್ತೊಂದು ಬಗೆಯಲ್ಲಿ ಮಾಡಿದರೆ ಮಹಾಪಾಪ!

ಹೇಗೆ? ಭಕ್ತಿಶ್ರದ್ಧೆಗಳಿಂದ ಗೋವನ್ನು ಒಬ್ಬ ಗೋಮಾಂಸಭಕ್ಷಕನಿಗೆ ಕೊಟ್ಟೆವೆನ್ನಿ. ಆಗಾಗುವುದೇನು? ಗೋವಧೆ. ಗೋವಧೆಯು ಮಹಾಪಾಪ. ಹೀಗಾಗಿ ಮಹಾಪುಣ್ಯಕಾರ್ಯವೆಂದು ಮಾಡಹೊರಟದ್ದು ಮಹಾಪಾಪವಾಗಿ ಪರಿಣಮಿಸಿತು! ಎಂದೇ ಲೀಲಾಶುಕನು "ಸತ್ಪಾತ್ರರಿಗೆ" ಎಂಬ ಪದವನ್ನು ಎಚ್ಚರಿಕೆಯಿಂದ ಸೇರಿಸಿರುವುದು – ಕೃಷ್ಣಭಕ್ತಿಯು ಹುಟ್ಟಲಿಕ್ಕೆ.

ಮೂರನೆಯ ಕಾರಣವೂ ಉಂಟು – ಆ ಭಕ್ತಿ ಬರಲು. ಅದೆಂದರೆ ವೃದ್ಧರನ್ನು ಸೇವಿಸಿರುವುದು. ವೃದ್ಧರೆಂದರೆ ಮುದುಕರು. ಮುದುಕರನ್ನು ಸೇವಿಸಿದರೇನು ಬಂತು? – ಎನ್ನಬಹುದು. ಅಷ್ಟೇ ಅಲ್ಲ ವೃದ್ಧರನ್ನು ಸೇವಿಸಿದವರಿಗೆಲ್ಲಾ ಕೃಷ್ಣಭಕ್ತಿಬಂದುಬಿಟ್ಟಿದೆಯೇ? - ಎಂದೂ ಕೇಳಬಹುದು. ಅವೆರಡಕ್ಕೂ ಉತ್ತರವುಂಟು.

ಇಂದಂತೂ ಇಂತಹ ಪ್ರಶ್ನೆಗಳಿಗೆ ಆಸ್ಪದ ಹೆಚ್ಚೇ. ಏಕೆಂದರೆ ವೃದ್ಧರನ್ನು ಸೇವಿಸುವುದೆಂದರೆ ಬಹಳ ಮಂದಿಗೆ ಅದು ಬೇಸರದ ವಿಷಯವೇ. ಎಷ್ಟಾದರೂ ವೃದ್ಧರೆಂದರೆ ಪರಾವಲಂಬಿಗಳೇ. ಅವರಿಗೆ ಒಂದೆರಡು ದಿನವೋ ಮೂರು ನಾಲ್ಕು ದಿನವೋ ಸೇವೆ ಮಾಡುವುದೆಂದರೆ ಅದು ಹೇಗೋ ನಡೆದೀತು. ಇನ್ನುಮೇಲೆ "ಸಾಕಪ್ಪಾ ಸಾಕು" ಎನಿಸಿದರೆ ಆಶ್ಚರ್ಯವೇ ಇಲ್ಲ.

ಹಾಗೆ ನೋಡಿದರೆ ಎಳೇ ಮಕ್ಕಳನ್ನು ಸಾಕುವುದೆಂದರೂ ಹಾಗೆಯೇ ಅಲ್ಲವೆ? ಅಲ್ಲೂ ಪರಾವಲಂಬನೆಯೇ ಸರಿ. ಆದರೂ ಮಕ್ಕಳೆಂದರೆ ಎಷ್ಟಾದರೂ ಮುದ್ದೇ. ಮಕ್ಕಳ ಮುಗುಳ್ನಗೆಯೊಂದೇ ಸಾಕು, ಅವುಗಳ ಸೇವೆಗೆ ಪ್ರತಿಫಲವಾಗಿ - ಎನ್ನಿಸಿಬಿಡುವ ಧನ್ಯಕ್ಷಣಗಳು ಎಲ್ಲರಿಗೂ ಅನುಭವಕ್ಕೆ ಬರುವಂತಹವೇ. ಆದರೆ ವೃದ್ಧರು? ಎಷ್ಟು ಸೇವೆ ಮಾಡಿದರೂ ಅವರ ಸಿಡುಕೋ ಅಸಮಾಧಾನವೋ ನಮ್ಮ ಉತ್ಸಾಹಕ್ಕೆ ಭಂಗತರುವಂತಹುದೇ.

ಆದರೆ ಹಿರಿಯರಿಗೆ ಆಗಾಗ್ಗೆ ನಮಸ್ಕರಿಸಿ ಅವರ ಸೇವೆಮಾಡುತ್ತಿರುವವರಿಗೆ ನಾಲ್ಕು ಫಲಗಳು ದೊರೆಯುವುವಂತೆ. ಅವೆಂದರೆ ಆಯುಸ್ಸು, ವಿದ್ಯೆ, ಯಶಸ್ಸು, ಮತ್ತು ಬಲ. ಈ ನಾಲ್ಕು ದೊರೆಯತಕ್ಕವೆಂದು ಹೇಳಿರುವುದು ಮನುಸ್ಮೃತಿ.. ಆದರೆ ಈ ಪಟ್ಟಿಯಲ್ಲಿ ಕೃಷ್ಣಭಕ್ತಿಯೆಂಬುದು ಬಂದಿಲ್ಲವಲ್ಲ? - ಎನ್ನಿಸಬಹುದು. ಇದಕ್ಕೆ ಎರಡು ಉತ್ತರಗಳಿವೆ. ವಿದ್ಯೆಯೆಂದರೆ ಬರೀ ಇಂದಿನ ಡಿಗ್ರೀ ಸರ್ಟಿಫಿಕೇಟುಗಳಿಗಾಗಿನ ವಿದ್ಯೆಯಲ್ಲ; ಇವೆಲ್ಲಾ ಪಾಶ್ಚಾತ್ತ್ಯರು ನಮ್ಮ ಮೇಲೆ ಹೇರಿರುವ ಕ್ರಮಗಳು. ಬದಲಾಗಿ, ಮುಕ್ತಿಯತ್ತ ನಮ್ಮನ್ನು ಒಯ್ಯುವ ತಿಳಿವಳಿಕೆಯು ಯಾವುದೋ ಅದುವೇ ಸರಿಯಾದ ವಿದ್ಯೆ.

ಅಷ್ಟೇ ಅಲ್ಲದೆ ವೃದ್ಧರೆಂದರೆ ವಯೋವೃದ್ಧರೆಂದಷ್ಟೇ ಅಲ್ಲ. ಜ್ಞಾನವೃದ್ಧರು, ತಪೋವೃದ್ಧರು - ಇವರುಗಳೂ ಉಂಟು. ಯಾರು ನಮಗಿಂತಲೂ ಬಹಳ ವಿಶೇಷವಾದ ಜ್ಞಾನವನ್ನು ಹೊಂದಿರುವರೋ ಅವರು ಜ್ಞಾನವೃದ್ಧರು. ಯಾರು ತಪಸ್ಸಿನಲ್ಲಿ ಮುಂದುವರೆದಿರುವರೋ ಅಂತಹವರು ತಪೋವೃದ್ಧರು. ಅಂತಹವರ ಸೇವೆಗೆ ಸತ್ಫಲವೇ ಉಂಟು.

ಆತನು ಕೊಡುವ ನಾಲನೆಯ ಮತ್ತು ಕೊನೆಯದಾದ ಕಾರಣ ಇನ್ನೂ ಪ್ರಬಲವಾದದ್ದು. ಅದೆಂದರೆ ಬೇರೆಯಾವುದೋ ಜನ್ಮದಲ್ಲಿ ನಾವು ದುಶ್ಚರವಾದ ತಪಸ್ಸನ್ನೇ ಮಾಡಿರಬೇಕೆಂಬುದು. ಏನು ದುಶ್ಚರವೆಂದರೆ? ಯಾವುದನ್ನು ಮಾಡಲು ಮಹಾಕಷ್ಟವೋ ಅದು. ಉಗ್ರತಪಸ್ಸೇ ಅದು.

ಈ ನಾಲ್ಕು ಕಾರಣಗಳ ಯೋಗವಾಗಿ ಈ ಫಲ ದೊರೆತಿದೆ. ಏನದು? ಅನನ್ಯಸುಲಭವಾದ ಭಕ್ತಿ. ಅನ್ಯರಿಗೆ ಸುಲಭವಲ್ಲದ್ದು ಅನನ್ಯಸುಲಭ.

ಯಾರಲ್ಲಿ ಭಕ್ತಿ ಸುಲಭವಲ್ಲ? ಮತ್ತಾರು, ನಮ್ಮ ಕೃಷ್ಣನಲ್ಲಿ. ಆತನಾದರೂ ಎಂತಹವನು? ಆತನ ವಿಶಿಷ್ಟತೆಯನ್ನು ನಾಲ್ಕು ವಿಶೇಷಣಗಳು ಹೇಳುತ್ತವೆ. ಆತನು ಚಾಣೂರನ ಸಂಹಾರಕ. ಒಂದರ್ಥದಲ್ಲಿ ನಮ್ಮಲ್ಲಿಯ ದುಷ್ಟಾಂಶಗಳೇ ಕಂಸ-ಚಾಣೂರರು. ದುಷ್ಟರನ್ನು ಧ್ವಂಸಮಾಡುವವನು ಆತ.

ಎರಡನೆಯದಾಗಿ, ಆತನು ಭಕ್ತರ ಕಲ್ಮಷಗಳನ್ನು ಹೋಗಲಾಡಿಸುವವನು. ನಮ್ಮೊಳಗಿರುವ ರಾಗದ್ವೇಷಾದಿದುರ್ಗುಣಗಳೇ ಕಲ್ಮಷಗಳು. ಮೂರನೆಯದಾಗಿ, ನಮ್ಮ ಶ್ರೇಯಸ್ಸನ್ನು ಪೋಷಿಸತಕ್ಕವನು. ಕೊನೆಯದಾಗಿ ಲಕ್ಷ್ಮಿಯೊಂದಿಗಿರುವವನು. ನಮ್ಮಲ್ಲಿಯ ಎಲ್ಲ ದಾರಿದ್ರ್ಯಗಳಿಗೂ ಪ್ರತಿಯಾಗಿರತಕ್ಕವಳು ಲಕ್ಷ್ಮಿ. ಶ್ರೀರಂಗಮಹಾಗುರುಗಳು ಹೇಳುವಂತೆ ಭಗವಂತನ ಲಕ್ಷ್ಮವನ್ನು, ಎಂದರೆ ಲಕ್ಷಣವನ್ನು, ಹೊತ್ತಿರುವವಳು ಆಕೆ.

ಈ ನಾಲ್ಕೂ ಲಕ್ಷಣಗಳನ್ನೂ ಹೊಂದಿರುವ ಭಗವಂತನಲ್ಲಿಯ ಭಕ್ತಿಯು ಭವದ್ವೇಷಿಣಿಯಾಗಿರುವುದು. ಅಂದರೆ ಭವದ ಬವಣೆಯಲ್ಲೇ ಆಗೊಮ್ಮೆ ಈಗೊಮ್ಮೆಯಷ್ಟೇ ಸಿಕ್ಕುವ ಅಲ್ಪವಾದ ಸುಖವನ್ನೇ ದೊಡ್ಡದೆಂದು ಭಾವಿಸಿಬಿಡುವಂತೆ ಆಗದಿರುವುದು.

ಹೀಗೆ ಹಿರಿದಾದ ಸುಖಕ್ಕೆ ದಾರಿ ಶ್ರೀಕೃಷ್ಣಭಕ್ತಿ.

ಈಗ ಈ ಶ್ಲೋಕವನ್ನು ಆಸ್ವಾದಿಸಿ:

ಯಜ್ಞೈರೀಜಿಮಹೇ, ಧನಂ ದದಿಮಹೇ ಪಾತ್ರೇಷು ನೂನಂ ವಯಂ, /

ವೃದ್ಧಾನ್ ಭೇಜಿಮಹೇ, ತಪಶ್ಚಕೃಮಹೇ ಜನ್ಮಾಂತರೇ ದುಶ್ಚರಮ್, |

ಯೇನಾಸ್ಮಾಕಮ್ ಅಭೂದ್ ಅನನ್ಯಸುಲಭಾ ಭಕ್ತಿರ್ಭವದ್ವೇಷಿಣೀ /

ಚಾಣೂರದ್ವಿಷಿ ಭಕ್ತಕಲ್ಮಷಮುಷಿ ಶ್ರೇಯಃಪುಷಿ ಶ್ರೀಜುಷಿ ||

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 6/4/2024 ರಂದು ಪ್ರಕವಾಗಿದೆ.

ಅಷ್ಟಾಕ್ಷರೀ​ - 56 ಉತ್ತಿಷ್ಠ ನರಶಾರ್ದೂಲ (Astaksari 55 Uttistha Narashardula)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


"ಕೌಸಲ್ಯಾ ಸುಪ್ರಜಾ ರಾಮ" ಎಂಬ ಮಾತನ್ನು ಯಾರು ಕೇಳಿಲ್ಲ? ಶನಿವಾರವು ಬಂತೆಂದರೆ ಬೆಳಿಗ್ಗೆಯೇ ಕೇಳಿಸಿಕೊಳುವ ಮಂಗಳಪದ್ಯಗಳಲ್ಲಿ ಇದೊಂದು ಪದ್ಯದ ಪಾದ. ಇದು ವಾಲ್ಮೀಕಿ ರಾಮಾಯಣದಲ್ಲಿ ಬರುವ ಮಾತಾದ್ದರಿಂದ, ವಾಲ್ಮೀಕಿಗಳು ಮಹರ್ಷಿಗಳೆನಿಸುವುದರಿಂದ ಅದನ್ನು ಬಳಸುವುದಾಯಿತು.

ವಾಲ್ಮೀಕಿಗಳಿಗೆ ಯಾವ ಪ್ರಸಂಗವೊದಗಿ ಈ ಮಾತನ್ನು ಹೇಳಿದರು? ರಾಮಲಕ್ಷ್ಮಣರು ಇನ್ನೂ ಚಿಕ್ಕವರು. ತಾಟಕೆಯು ಕೊಡುತ್ತಿದ್ದ ಕಾಟಕ್ಕೆ ಒಂದು ಪರಿಹಾರವು ಬೇಕಿತ್ತು, ಯಜ್ಞಮಾಡುತ್ತಿದ್ದ ವಿಶ್ವಾಮಿತ್ರರಿಗೆ. ಅದಕ್ಕಾಗಿ ರಾಮಲಕ್ಷ್ಮಣರನ್ನು ತಮ್ಮ ತಪೋವನಕ್ಕೆ ಕರೆದೊಯ್ದರು, ವಿಶ್ವಾಮಿತ್ರರು. ದೂರದ ದಾರಿ, ಕಾಲ್ನಡಿಗೆ ಪ್ರಯಾಣ. ಹೀಗಾಗಿ ಮಧ್ಯದಲ್ಲೊಂದು ರಾತ್ರಿ ತಂಗಿ ಪ್ರಯಾಣ ಮುಂದುವರೆಸಬೇಕಿತ್ತು. ನಡೆದು ನಡೆದು ಆಯಾಸವಾಗಿತ್ತೋ ಏನೋ, ಅಂತೂ ಬಾಲಕರಾದ ರಾಮಲಕ್ಷ್ಮಣರು ಇನ್ನೂ ಮಲಗಿಯೇ ಇದ್ದರು; ಅವರನ್ನೆಬ್ಬಿಸಬೇಕಾದಾಗ ಹೇಳಿದ ಶ್ಲೋಕವೇ "ಕೌಸಲ್ಯಾ ಸುಪ್ರಜಾ ರಾಮ". ಏನು ಅದರ ಅರ್ಥ? "ಅಯ್ಯಾ ರಾಮ, ನಿನ್ನಿಂದಾಗಿ ಕೌಸಲ್ಯೆಯು ಸುಪ್ರಜಾಶಾಲಿನಿಯಾಗಿದ್ದಾಳೆ. ಬೆಳಗಿನ ಸಂಧ್ಯಾಕಾಲವಾಗುತ್ತಿದೆ. ಏಳಯ್ಯಾ, ನರಶ್ರೇಷ್ಠನೇ. ದೇವತಾಸಂಬಂಧಿಯಾದ ಕರ್ತವ್ಯವು ನೆರವೇರಬೇಕು, ನಿನ್ನಿಂದ" - ಎಂಬುದಾಗಿ.

ಹೀಗೆ "ಕೌಸಲ್ಯಾ ಸುಪ್ರಜಾ" ಎಂದು ಎರಡು ಪದಗಳಾಗಿ ನೋಡುವುದೂ ಉಂಟು; ಅಥವಾ "ಕೌಸಲ್ಯೆಯ ಸುಪ್ರಜೆಯೇ" ಎಂಬರ್ಥದಂತೆ, "ಕೌಸಲ್ಯಾಸುಪ್ರಜಾ" ಎಂಬುದಾಗಿ ಒಂದೇ ಪದವಾಗಿ ನೋಡುವುದೂ ಉಂಟು; ಆಗ ಅದು ರಾಮನಿಗೇ ಸಂಬೋಧನೆಯಾಗುವುದು. "ನ ಪ್ರಮದಿತವ್ಯಂ" ಎಂಬಂತೆ ಕರ್ತವ್ಯದಲ್ಲಿ ಚ್ಯುತಿಯಾಗದಿರುವಂತೆ ಹೇಳಿರುವ ಎಚ್ಚರದ ಮಾತಿದೆಂದು ಶ್ರೀರಂಗಮಹಾಗುರುಗಳು ಸೂಚಿಸಿದ್ದರು: ಗೀತೆಯಲ್ಲಿ ಕೃಷ್ಣನು ಹೇಳುವಂತೆ, "ಶ್ರೇಷ್ಠರು ಏನೇನನ್ನು ಆಚರಿಸುವರೋ ಅದದನ್ನೇ ಸಾಧಾರಣರೂ ಮಾಡಹತ್ತುವರು". ಹೀಗಾಗಿ ರಾಮನು ಆದರ್ಶಗುಣಸಂಪನ್ನರಾಗಿದ್ದರೆ ಮುಂದೆ ಜನತೆಗೆ ಮಾರ್ಗದರ್ಶಿಯಾಗಬಲ್ಲನು - ಎಂಬ ಋಷಿಸಂದೇಶವು ಇಲ್ಲಿದೆ.

ಇದೆಲ್ಲವೂ ಸರಿಯೇ, ಆದರೆ ರಾಮನನ್ನು "ನರಶಾರ್ದೂಲ" ಎಂದು ಇಲ್ಲಿ ಕರೆದಿದೆಯಲ್ಲವೇ? - ಎಂಬುದು ಪ್ರಶ್ನೆ. ಇಲ್ಲಿ ಮಾತ್ರವಲ್ಲ. ಇನ್ನೂ ಎರಡು ಪ್ರಸಂಗಗಳಲ್ಲಿ "ಉತ್ತಿಷ್ಠ ನರಶಾರ್ದೂಲ" ಎಂಬ ಮಾತಿದೆ. ಮೇಲೆ ಹೇಳಿದುದು ಬಾಲಕಾಂಡದಲ್ಲಿ. ಅಯೋಧ್ಯಾಕಾಂಡದಲ್ಲಿಯೂ ಯುದ್ಧಕಾಂಡದಲ್ಲಿಯೂ ಇವೇ ಮಾತುಗಳೇ ಬರುತ್ತವೆ. ಇವಲ್ಲಿ ಅಯೋಧ್ಯಾಕಾಂಡದ ಮಾತನ್ನು ಬಿಡಬಹುದು. ಏಕೆಂದರೆ ಅದು ಪಾದುಕೆಗಾಗಿ ಬಂದ ಭರತನನ್ನು ಸಂಬೋಧಿಸಿ ರಾಮನಾಡಿದ ಮಾತು. ಅದರ ಬಗ್ಗೆ ಚರ್ಚೆ/ವಿವರಣೆ ನಮಗೆ ಇಲ್ಲಿ ಪ್ರಕೃತವಲ್ಲ.

ಆದರೆ ಮುಂದಿನದು - ಎಂದರೆ ಯುದ್ಧಕಾಂಡದಲ್ಲಿ ಮತ್ತೆ ಬರುವ ಇದೇ ಮಾತನ್ನು ಲಕ್ಷ್ಮಣನು ರಾಮನನ್ನು ಕುರಿತಾಗಿ ಆಡುತ್ತಾನೆ. ರಾಮನು ಶೋಕಾತಿರೇಕದಲ್ಲಿ ಮುಳುಗಿಹೋಗಿದ್ದಾಗ ಹೇಳುವ ಮಾತು. ಶೋಕವು ಧೈರ್ಯ-ಶೌರ್ಯಗಳನ್ನು ಕುಗ್ಗಿಸಿಬಿಡಬಲ್ಲುದು. ಆದ್ದರಿಂದ ವ್ಯಾಕುಲನಾಗಿ ತತ್ತರಿಸಿದ್ದ ರಾಮನನ್ನು ಎಚ್ಚರಿಸಿ ಎಬ್ಬಿಸುವ ಮಾತು ಬೇಕಾಗಿದ್ದಿತು. ಎಂದೇ ಲಕ್ಷ್ಮಣನ ಈ ಮಾತು. "ನೀ ಯಾರೆಂಬುದಾಗಿ ನಿನ್ನನ್ನು ನೀನೇ ಅರಿಯೆಯೇ?" ಎಂದು ಕೇಳುತ್ತಿದ್ದಾನೆ, ಲಕ್ಷ್ಮಣ.

ಗೀತೆಯಲ್ಲಿ, ಅರ್ಜುನನು ಶೋಕಮೋಹಗಳಿಗೆ ತುತ್ತಾಗಿ ತತ್ತರಿಸಿ ಕುಸಿದಿದ್ದಾಗ ಕೃಷ್ಣನು ಅವನನ್ನು ಎಚ್ಚರಗೊಳಿಸಿ ತಿಳಿವಳಿಕೆಯಿತ್ತು ಕೆಲಸ ಮಾಡಿಸುವನಲ್ಲವೇ? ಒಂದರ್ಥದಲ್ಲಿ ಇದೂ ಹಾಗೆಯೇ. ಅಲ್ಲಿಗೆ ಎರಡೂ ಸಂದರ್ಭಗಳಲ್ಲೂ - ಎಂದರೆ ಮೇಲೆ ಹೇಳಿದಂತೆ ಬಾಲಕಾಂಡ-ಯುದ್ಧಕಾಂಡಗಳಲ್ಲಿ - ರಾಮನನ್ನು ಎಚ್ಚರಗೊಳಿಸಿ ಅವನಿಂದ ಆಗಿಸಬೇಕಾದ ಕಾರ್ಯವಿದೆಯೆಂಬುದಾಯಿತು. ಮೊದಲನೆಯದರಲ್ಲಿ ನಿದ್ರಾವಸ್ಥೆಯಲ್ಲಿದ್ದ ರಾಮನನ್ನು ಎಬ್ಬಿಸಬೇಕಾಗಿತ್ತು, ಗುರು ವಿಶ್ವಾಮಿತ್ರರು; ತಾಟಕಾವಧಕ್ಕೂ ಅಪ್ರಮಾದ(ಅಥವಾ ಎಚ್ಚರ)ವು ಬೇಕಲ್ಲವೇ? ಎರಡನೆಯದಲ್ಲಿ, ಶೋಕಾವಸ್ಥೆಯಲ್ಲಿದ್ದ ರಾಮನನ್ನು ಎಚ್ಚರಿಸಬೇಕಾಗಿತ್ತು, ತಮ್ಮ ಲಕ್ಷ್ಮಣ. ಮೊದಲನೆಯದರಲ್ಲಿ ಸದ್ಯಃಕರ್ತವ್ಯವಾಗಿದ್ದುದು ಪ್ರಾತಃಸಂಧ್ಯಾವಂದನೆ, ಎರಡನೆಯದರಲ್ಲಿ ಶೋಕವನ್ನು  ಕೊಡವಿಕೊಂಡು ಮಹಾಪೌರುಷದಿಂದ ರಾವಣಸಂಹಾರಕ್ಕಾಗಿ ಸಂನಾಹಗಳು ನಡೆಯಬೇಕಾಗಿದೆ. ಹೀಗೆ ನರಶಾರ್ದೂಲ – ಎಂದು ಕರೆಸಿಕೊಂಡವನು ತಮಸ್ಸನ್ನು ಕೊಡವಿಕೊಂಡೆದ್ದು, ಸತ್ತ್ವವೃದ್ಧಿಯನ್ನುಂಟುಮಾಡಿಕೊಂಡು ಅಸುರವಧೆಗೆ ಬೇಕಾಗುವ ಹೆಜ್ಜೆಗಳನ್ನಿಡಬೇಕಾಗಿದೆ.

ಏಳಯ್ಯಾ ನರಶಾರ್ದೂಲ - ಎಂಬಲ್ಲಿ ನರಶ್ರೇಷ್ಠ ಎಂಬ ಅರ್ಥವೇ ಇದೆಯಾದರೂ ಅದು ತನ್ನಲ್ಲಿಯ ಪೌರುಷವನ್ನು ಜಾಗರಗೊಳಿಸುವ ಮಾತು. ಶಾರ್ದೂಲವೆಂದರೆ ಹುಲಿ. ಯಾರನ್ನಾದರೂ ಮಹಾಪರಾಕ್ರಮಿಯೆನ್ನಲು "ನರಶ್ರೇಷ್ಠ" ಎನ್ನುವ ಬದಲು ನರವ್ಯಾಘ್ರ, ನರಶಾರ್ದೂಲ - ಎಂದು ಮುಂತಾಗಿ ಸಂಬೋಧಿಸುವುದುಂಟು.

ಯಾರೇ ಆಗಲಿ, ಮಾನಸಿಕಕ್ಲೇಶಕ್ಕೆ ಒಳಗಾಗಿದ್ದಾಗಲೋ ಹಿರಿದಾದ ಸಾಧನೆಗೆಂದು ಹೊರಡಬೇಕಾಗಿದ್ದಾಗಲೋ, ಇಂತಹ ಪ್ರಶಂಸಾವಚನವು ಉತ್ಸಾಹ-ಆತ್ಮವಿಶ್ವಾಸಗಳನ್ನು ಹೆಚ್ಚುಗೊಳಿಸೀತಲ್ಲವೇ?

ಸೂಚನೆ: 6/04/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Sunday, March 31, 2024

ಯಕ್ಷ ಪ್ರಶ್ನೆ 83(Yaksha prashne 83)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 82 'ಕ್ಷಮೆ' ಎಂದರೇನು ?

ಉತ್ತರ - ದ್ವಂದ್ವಸಹಿಷ್ಣುತೆ.  

ಈ ಹಿಂದಿನ ಪ್ರಶ್ನೆಗೂ ಈ ಪ್ರಶ್ನೆಗೂ ಒಂದು ಕಾರ್ಯಕಾರಣಭಾವಸಂಬಂಧವಿದೆ. ಮನಸ್ಸಿನ ನಿಗ್ರಹದಿಂದ ಉಂಟಾಗುವ ಪರಿಣಾಮವೇ 'ಕ್ಷಮೆ'. ಕ್ಷಮೆ ಎಂಬ ಪದಕ್ಕೆ ಅರ್ಥ ಏನು ? ಎಂಬ ಸಾಮಾನ್ಯ ಜಿಜ್ಞಾಸೆಯನ್ನು ಇಲ್ಲಿ ಯಕ್ಷನು ಧರ್ಮರಾಜನ ಮುಂದಿಡುತ್ತಾನೆ. ಅದಕ್ಕೆ 'ದ್ವಂದ್ವ ಸಂಹಿಷ್ಣುತೆ' ಎಂಬ ಉತ್ತರವನ್ನು ನೀಡುತ್ತಾನೆ ಧರ್ಮಜ. ದ್ವಂದ್ವ ಎಂದ ಎರಡು ಬಗೆ - ಎರಡು ಪ್ರಕಾರ. ಪರಸ್ಪರ ವಿರುದ್ಧಧರ್ಮಗಳು ಎಂಬುದು ಇಲ್ಲಿನ ಅರ್ಥ. ಉದಾಹರಣೆಗೆ ಶೀತ-ಉಷ್ಣ, ಸುಖ-ದುಃಖ, ಲಾಭ- ಅಲಾಭ, ಜಯ-ಅಪಜಯ ಮುಂತಾದವುಗಳು. ಒಂದೇ ವ್ಯಕ್ತಿಯು ಇಂತಹ ವಿರುದ್ಧವಾದ ಸಂದರ್ಭವನ್ನು ಅನುಭವಿಸುವಂತಾದರೆ ಅದರ ಅನುಭವವನ್ನು ಪಡೆಯುವಂತಹ ಸಾಮರ್ಥ್ಯವನ್ನು ದ್ವಂದ್ವಸಹಿಷ್ಣುತೆ ಎಂದು ಕರೆಯುತ್ತಾರೆ. ಈ ಎರಡು ವಿರುದ್ಧವಾದ ಅನುಭವಗಳನ್ನು ಅನುಭವಿಸುವುದು ಏಕಕಾಲದಲ್ಲಿ ಅಲ್ಲ. ಭಿನ್ನಕಾಲದಲ್ಲಿ. ಆದರೆ ಅವೆರಡನ್ನೂ ಒಂದೆ ಸ್ಥಾನದಲ್ಲಿ ಕಾಣುವುದು ಕಷ್ಟಸಾಧ್ಯ. ಇದು ಮನೋನಿಗ್ರಹದಿಂದ ಮಾತ್ರ ಸಾಧ್ಯ. ಅಂದರೆ ಎರಡನ್ನು ಅನುಭವಿಸುವಾಗಲೂ ಆ ವ್ಯಕ್ತಿಯಲ್ಲಿ ಯಾವುದೇ ವಿಕಾರವನ್ನು ಕಾಣಲು ಸಾಧ್ಯವಿಲ್ಲ ಎಂದು ತಾತ್ಪರ್ಯ. ಸುಖವು ಬಂದಾಗ ಹಿಗ್ಗುವುದು, ದುಃಖವು ಬಂದಾಗ ಕುಗ್ಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಜೀವನದಲ್ಲಿ ಯಾವಾಗಲಾದರೂ ಕಷ್ಟ ಬಂದರೆ ಅದನ್ನೇ ಶಾಶ್ವತ ಎಂದು ಭಾವಿಸಿ 'ಈ ಕಷ್ಟ ನನಗೆ ಎಂದೂ ತಪ್ಪದು' ಎಂಬುದಾಗಿ ಜೀವಿಕೆಯ ಭರವಸೆಯನ್ನೇ ಕಳೆದುಕೊಳ್ಳುವ ಸಂದರ್ಭವನ್ನು ನಾವು ಕಾಣಬಹುದು. ಇನ್ನು ಕೆಲವೊಮ್ಮೆ ಸುಖ ಬಂತೆಂದರೆ 'ನಾನೇ ಇಂದ್ರ, ನಾನೇ ದೇವೇಂದ್ರ, ನನಗೆ ಬಂದ ಸುಖ ಎಂದೂ ಕಳೆಯದು' ಎಂದು ಭ್ರಮಿಸಿ ದುರಹಂಕಾರ, ದುಷ್ಟತನವೆಲ್ಲ ಮೈಗುಡುವ ಸಾಧ್ಯತೆಗಳು ಕಂಡುಬರುತ್ತವೆ. ಆದರೆ ಯಾವನು ಈ ದ್ವಂದ್ವ ಸಂಹಿಷ್ಣುತೆ ಎಂಬ ಗುಣವನ್ನು ಕರಗತ ಮಾಡಿಕೊಳ್ಳುತ್ತಾನೋ ಅವನು ಎರಡು ಸಂದರ್ಭವನ್ನು ಬಹಳ ವ್ಯವಸ್ಥಿತವಾಗಿ ನಿಭಾಯಿಸುತ್ತಾನೆ. ಇದಕ್ಕೆ ಶ್ರೀರಾಮನಲ್ಲಿರುವ ಈ ಗುಣವನ್ನು ಮಾದರಿಯಾಗಿ ನೋಡಬಹುದು.

ದಶರಥನು ಒಂದು ಶುಭಮುಹೂರ್ತದಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿರುತ್ತಾನೆ. ಅದಕ್ಕಾಗಿ ಶ್ರೀರಾಮನಿಗೂ ತಿಳಿಸಿ, ಶ್ರೀರಾಮನು ಒಪ್ಪಿಗಿ ಸೂಚಿಸುತ್ತಾನೆ. ತನ್ನ ಪಟ್ಟಾಭಿಷೇಕ ವಿಷಯವನ್ನು ತಿಳಿದು ಅತಿಯಾದ ಸಂತಸಪಡಲಿಲ್ಲ ಆತ. ಅದೇ ಕೆಲವು ಸಮಯದ ಅನಂತರ ವಿರುದ್ಧವಾದ ವಾರ್ತೆಯನ್ನು ಶ್ರೀರಾಮನು ಕೇಳುವ ಪ್ರಸಂಗ ಬರುತ್ತದೆ. ಕೈಕೇಯಿ ಮತ್ತು ಮಂಥರೆಯ ಕಾರಣದಿಂದ ದಶರಥ ಮಹಾರಾಜನು ಶ್ರೀರಾಮನನ್ನು ಕಾನನಕ್ಕೆ ತೆರಳುವಂತೆ ಆಜ್ಞಾಪಿಸುತ್ತಾನೆ. ಈ ಸಂದರ್ಭದಲ್ಲೂ ಶ್ರೀರಾಮನ ಭಾವ ಭಂಗಿಗಳಲ್ಲಿ ಯಾವುದೇ ವಿಕಾರವನ್ನು ಕಾಣಲಿಲ್ಲ. ಇದಕ್ಕೆ ಕಾರಣ ಶ್ರೀರಾಮನ ಕ್ಷಮಾಗುಣ. ಅತ್ಯಂತ ವಿರುದ್ಧವಾದ ಎರಡು ಸಂದರ್ಭಗಳನ್ನೂ ಯಾವ ರೀತಿಯಾಗಿ ವಿಕಾರವಿಲ್ಲದೆ ಎದುರಿಸಬೇಕು? ಎಂಬುದನ್ನು ಶ್ರೀರಾಮನು ಚೆನ್ನಾಗಿ ಅರಿತಿದ್ದ. ಅದು ಅವನ ತನುಮನಗಳಲ್ಲಿ ಸಾತ್ಮ್ಯವಾದ ಗುಣವಾಗಿತ್ತು. ಇಂತಹ ಅನೇಕ ಸಂದರ್ಭಗಳನ್ನು ನಾವು ನಮ್ಮ ಜೀವನದಲ್ಲಿ ಕಾಣುವ ಪರಿಸ್ಥಿತಿ ಬರಬಹುದು. ಆಗ ಶ್ರೀರಾಮನಂತೆ ಪರಿಸ್ಥಿತಿಯನ್ನು ಅತ್ಯಂತ ಸಹನೆಯಿಂದ ಎದುರಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಗುಣವನ್ನೇ ದ್ವಂದ್ವಸಹಿಷ್ಣುತೆ ಎನ್ನುವುದು.   

ಸೂಚನೆ : 31/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 81 ಕರ್ಣನ ವಿಧಿವಾದ- ದ್ರೋಣರ ನಿಷ್ಠುರವಚನ (Vyaasa Vikshita - 81 Karnana Vidhivada - Dronara Nishthuravachana)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಆರ್ಥಿಕವಾದ ಕ್ಲೇಶವುಂಟಾದಾಗ, ಶ್ರೇಯಸ್ಸನ್ನೋ ಅಶ್ರೇಯಸ್ಸನ್ನೋ ಮಿತ್ರರು ಮಾಡಿಬಿಡಬಲ್ಲರೇ? ಯಾರಿಗೇ ಆಗಲಿ ದುಃಖವಾದರೂ ಸರಿಯೇ, ಸುಖವಾದರೂ ಸರಿಯೇ ವಿಧ್ಯನುಸಾರವಾಗಿಯೇ ಅದು ಆಗುವಂತಹುದು (ವಿಧಿಪೂರ್ವಂ ಹಿ ಸರ್ವಸ್ಯ ದುಃಖಂ ವಾ ಯದಿ ವಾ ಸುಖಮ್). ಮನುಷ್ಯನು ಬುದ್ಧಿಶಾಲಿಯೇ ಆಗಿರಲಿ, ಪೆದ್ದನೇ ಆಗಿರಲಿ; ಹಾಗೆಯೇ ಬಾಲಕನೇ ಆಗಿರಲಿ, ವೃದ್ಧನೇ ಆಗಿರಲಿ; ಜೊತೆಗಾರರುಳ್ಳವನೇ ಆಗಿರಲಿ, ಒಂಟಿಯೇ ಆಗಿರಲಿ - ದೈವಯೋಗದ ಅನುಸಾರವಾಗಿ ಎಲ್ಲವನ್ನೂ ಎಲ್ಲೆಡೆ ಹೊಂದುವನು.

ಹಿಂದೆ ರಾಜಗೃಹ ಎಂಬ(ನಗರದ)ಲ್ಲಿ ಅಂಬುವೀಚ ಎಂಬ ರಾಜನಿದ್ದನಷ್ಟೆ. ಮಾಗಧರಾಜರಲ್ಲೊಬ್ಬ ಆತ. ಆತನ ಇಂದ್ರಿಯಗಳು ದುರ್ಬಲವಾಗಿದ್ದವು; ಶ್ವಾಸರೋಗಪೀಡಿತನೂ ಆಗಿದ್ದ, ಆತ: ರಾಜಕಾರ್ಯಗಳಲ್ಲೆಲ್ಲ ಮಂತ್ರಿಗೇ ಅಧೀನನಾಗಿದ್ದ. ಮಂತ್ರಿಯ ಹೆಸರು ಮಹಾಕರ್ಣಿ. ಆಗಿನ ಕಾಲಕ್ಕೆ ಅಲ್ಲೆಲ್ಲಾ ಆತನೊಬ್ಬನೇ ರಾಜ. ರಾಜಸೈನ್ಯವೆಲ್ಲವೂ ತನ್ನ ವಶಕ್ಕೆ ಬಂದಿತಾಗಿ ರಾಜನನ್ನೇ ತಿರಸ್ಕಾರವಾಗಿ ಕಾಣಲಾರಂಭಿಸಿದ. ರಾಜಭೋಗ್ಯರಾದ ಸ್ತ್ರೀಯರನ್ನೂ (ಎಂದರೆ ರಾಜನ ಮಡದಿಯರನ್ನೂ) ರತ್ನಗಳನ್ನೂ ಸಂಪತ್ತುಗಳನ್ನೂ ಎಲ್ಲೆಡೆಗಳಿಂದ ತಾನೇ ಸ್ವೀಕರಿಸಿ ಭೋಗಿಸಲಾರಂಭಿಸಿದ, ಆ ಮೂಢ.

ಒಂದೊಂದಾಗಿ ಇವನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಿದ್ದ ಆ ಲೋಭಿಗೆ ಲೋಭದಿಂದ ಲೋಭವು ಬೆಳೆಯುವಂತಾಯಿತು. ಕೊನೆಗೆ ಅದು ಎಲ್ಲಿಯ ತನಕ ಬಂದಿತೆಂದರೆ, ರಾಜನ ರಾಜ್ಯವನ್ನೇ ಬಾಚಿಕೊಳ್ಳುವ ಆಸೆಯೇ ಉಂಟಾಯಿತು. ಮೊದಲೇ ಹೇಳಿದಂತೆ, ರಾಜನು ಇಂದ್ರಿಯಹೀನನಾಗಿದ್ದರೂ, ಶ್ವಾಸರೋಗಪೀಡಿತನಾಗಿದ್ದರೂ, ಅದೆಷ್ಟು ಯತ್ನಪಟ್ಟರೂ ಆ ಮಂತ್ರಿಗೆ ಆ ರಾಜ್ಯವನ್ನು ವಶಕ್ಕೆ ಪಡೆಯಲಾಗಲಿಲ್ಲ - ಎಂದು ನಾವು ಕೇಳಿದ್ದೇವೆ.

ಹೀಗಾಗಿ ಆ ರಾಜನ ರಾಜತ್ವವೆಂಬುದು ಉಳಿದುದು ಭಾಗ್ಯವಷ್ಟರಿಂದಲೇ, ಮತ್ತಾವುದರಿಂದಲೂ ಅಲ್ಲ. ರಾಜನೇ, ಈ ರಾಜ್ಯವು ನಿನಗೆಂದು ನಿಶ್ಚಿತವಾಗಿದ್ದಲ್ಲಿ, ಎಲ್ಲರೂ ನೋಡುತ್ತಿದ್ದರೂ, ಅದು ನಿನ್ನಲ್ಲಿಯೇ ಉಳಿದುಕೊಳ್ಳುತ್ತದೆ. ಅಷ್ಟೇ ಅಲ್ಲ; ಒಂದು ವೇಳೆ ನಿನ್ನ ಭಾಗ್ಯದಲ್ಲಿ ಅದಿಲ್ಲವೆಂದಾಗಿದ್ದಲ್ಲಿ, ನೀನು ಪ್ರಯತ್ನಪಟ್ಟರೂ ಅದು ದೊರೆಯಲಾಗದು.

ಆದುದರಿಂದ, ಕುಶಲನಾದ ರಾಜನೇ, ಮಂತ್ರಿಗಳಲ್ಲಿ ಯಾರು ಸಾಧು, ಯಾರು ಅಸಾಧು? - ಎಂಬುದನ್ನು ವಿಮರ್ಶಿಸಿ ನಿಶ್ಚಯಿಸಿಕೋ. ದುಷ್ಟಹೃದಯದವರ ಮಾತು ಯಾವುದು, ದುಷ್ಟರಲ್ಲದವರ ಮಾತು ಯಾವುದು? - ಎಂಬುದನ್ನು ನೀನು ಅರಿತುಕೊಳ್ಳಬೇಕು - ಎಂದು ಹೇಳಿ, ತನ್ನ ಮಾತನ್ನು ಮುಗಿಸಿದ, ಕರ್ಣ.

ಆಗ ದ್ರೋಣನು ಹೇಳಿದನು:

"ದುಷ್ಟನಾದ ಕರ್ಣನೇ, ಈ ಮಾತನ್ನು ನೀನು ಏಕೆ ಹೇಳುತ್ತಿರುವೆ - ಎಂಬುದು ಗೊತ್ತಾಗುತ್ತದೆ. ಪಾಂಡವರನ್ನು ಕುರಿತಾಗಿ ದ್ವೇಷಭಾವ ನಿನಗುಂಟು. ಎಂದೇ ನನ್ನ ಮಾತಿನಲ್ಲಿ ದೋಷಗಳನ್ನು ಹೇಳುತ್ತಿರುವೆ.

ಕುರುಕುಲವೃದ್ಧಿಗೆ ಕಾರಣವಾಗತಕ್ಕ ಪರಮಹಿತವನ್ನು ಹೇಳುತ್ತೇನೆ, ಕರ್ಣ. ಅದನ್ನೇ ನೀನು ದೋಷಯುಕ್ತವೆನ್ನುವುದಾದರೆ, ಪರಮಹಿತವು ಯಾವುದೆಂದು ನೀನೇ ಹೇಳು. ಯಾವುದು ಅತ್ಯಂತಹಿತವೋ ಅದನ್ನು ಬಿಟ್ಟು ಬೇರೆಯ ಬಗೆಯಲ್ಲೇನಾದರೂ ಮಾಡುವುದಾದಲ್ಲಿ ಅನತಿಕಾಲದಲ್ಲೇ ಕೌರವರು ನಶಿಸುವರು - ಎಂಬುದರಲ್ಲಿ ಸಂಶಯವಿಲ್ಲ."

ಬಳಿಕ ವಿದುರನು ಮಾತನಾಡಿದನು.

"ರಾಜ ಧೃತರಾಷ್ಟ್ರನೇ, ನಿನಗೆ ಯಾವುದು ನಿಃಸಂಶಯವಾಗಿಯೂ ಶ್ರೇಯಸ್ಸೋ ಅದನ್ನು ಬಂಧುಗಳಾದವರು ನಿನಗೆ ಹೇಳಬೇಕಾದದ್ದಿದೆ. ಆದರೆ ಕೇಳಿಸಿಕೊಳ್ಳಲೇ ಮನಸ್ಸಿಲ್ಲದಿರುವವರಿಗೆ ಆ ಮಾತು ಅಂತರಂಗದಲ್ಲಿ ಉಳಿಯುವುದಾದರೂ ಹೇಗೆ? (ನ ತ್ವಶುಶ್ರೂಷಮಾಣೇ ವೈ ವಾಕ್ಯಂ ಸಂಪ್ರತಿತಿಷ್ಠತಿ).

ಸೂಚನೆ : 31/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.