Sunday, January 31, 2021

ಆರ್ಯಸಂಸ್ಕೃತಿ ದರ್ಶನ - 28 (Arya Samskruti Darshana - 28)

ಓಂ ಶ್ರೀಃ
ಗುಪ್ತನಿಧಿ
ಲೇಖಕರು : ವಿದ್ವಾನ್|| ಶ್ರೀ ಛಾಯಾಪತಿ



ಅಳಿಯದ ಮೌಲ್ಯಗಳುಳ್ಳ ಚಿನ್ನ-ಬೆಳ್ಳಿ-ರತ್ನಗಳು ಮೊದಲಾದವುಗಳನ್ನು, ರಕ್ಷಣೆ, ಅಪಾಯಭೀತಿ, ಮುಂದಿನ ಪೀಳಿಗೆಗಾಗಿ ಆಸ್ತಿಯಾಗಿಡುವ ಬಯಕೆ, ಇತ್ಯಾದಿ ಕಾರಣಗಳಿಂದ ಬಚ್ಚಿಡುವುದು—ಹಾಗೆ ಬಚ್ಚಿಟ್ಟ ಸಂಪತ್ತು ಕಾಲಕ್ರಮದಲ್ಲಿ ಗುಪ್ತನಿಧಿಯಾಗುವುದು ಎಲ್ಲ ದೇಶಗಳಲ್ಲಿಯೂ ನಡೆಯುವ ಸಂಗತಿ. ಸಂಪದ್ಭರಿತ ರಾಷ್ಟ್ರವೊಂದು ನೈಸರ್ಗಿಕ ಪ್ರಕೋಪ, ಯುದ್ಧಾದಿ ವಿಪತ್ತುಗಳಿಗೆ ಗುರಿಯಾದಾಗಲೂ ಭೂಗರ್ಭದಲ್ಲಿ ಸಂಪತ್ತು ಹುದುಗಿ ನಿಧಿಯಾಗುವುದುಂಟು. ಸಮುದ್ರತಳ, ಭೂಗರ್ಭ, ನೆಲಮಾಳಿಗೆಗಳು, ವಿಶಾಲಮಹಲುಗಳು, ಇವುಗಳಲ್ಲಿ ನಿಧಿಯಡಗಿರುವ ಸುದ್ದಿಗಳೇ ಅವುಗಳ ಶೋಧಕ್ಕೆ ಪ್ರೇರಕವಾದ ಸನ್ನಿವೇಶಗಳು ವಿರಳವೇನೂ ಅಲ್ಲ. ಒಮ್ಮೆಗೇ ಅಪಾರವಾದ ಸಂಪತ್ತಿನ ಒಡೆಯನಾಗುವ ಕನಸು ಯಾರನ್ನು ತಾನೇ ಪ್ರೇರಿಸದು? ಅಂತಹ ಮಹದಾಶೆಯಿಂದ ಪ್ರಾಣವನ್ನೇ ಪಣವಾಗಿಟ್ಟು ನಿಧಿ ಶೋಧ ನಡೆಸಿದ ಅಸಂಖ್ಯಾತ ಸಾಹಸಿಗಳ ಕಥೆ ಜನಜನಿತವೂ ಹೌದು. ಗುಪ್ತನಿಧಿಗಳನ್ನು ಸರ್ಪಗಳು ಕಾಯುವುವೆಂಬ ಸುದ್ದಿಯೂ ಜನಜನಿತವಾಗಿವೆ.

ನಿಧಿಲಾಭಕ್ಕಾಗಿ  ನಿಧಿದರ್ಶನಮಾಡಿಸುವ ಸಿದ್ಧಾಂಜನಗಳನ್ನು ಬಳಸಿಕೊಳ್ಳುವುದರಿಂದ ಹಿಡಿದು ವೈಜ್ಞಾನಿಕ  ಉಪಕರಣಗಳ ಬಳಕೆಯವರೆಗೂ ಹರಡಿದೆ ಶೋಧಯತ್ನ. ನಿಧಿಲಾಭದ ಮೂಲಕ ಕಡುಬಡತನದಿಂದ-ಸಮೃದ್ಧಿಯ ಮುಗಿಲಿಗೆ ಏರಿದವರ ಕತೆಯೂ ಅಲ್ಲಲ್ಲಿ ಕೇಳಿಬರುತ್ತಿದೆ. ಇದರ ನಿಜ-ಸುಳ್ಳುಗಳೇನೇ ಇರಲಿ ಗುಪ್ತನಿಧಿ ಶೋಧಕಾರ್ಯವಂತೂ ಅವಿರತವಾಗಿ ಒಂದಲ್ಲ ಒಂದೆಡೆ ನಡೆಯುತ್ತಲೇ ಇದೆ. ಕೌತುಕ ಪೂರ್ಣವಾದ ಗುಪ್ತನಿಧಿಗಳ ಸುದ್ಧಿಗಂತೂ ಕೊರತೆಯಿಲ್ಲ. ರಷ್ಯಾ-ಬ್ರಿಟನ್‌ಗಳಂತಹ ದೇಶಗಳೆರಡು ಯುದ್ಧಕಾಲದಲ್ಲಿ ಸಮುದ್ರತಲದಲ್ಲಿ ಹುದುಗಿದ ಚಿನ್ನಕ್ಕಾಗಿ ಶೋಧವನ್ನಾರಂಭಿಸಿವೆಯೆಂಬ ಸುದ್ಧಿ ಇತ್ತೀಚಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

ಆದರೆ ಪ್ರತಿ ಮಾನವದೇಹವೂ ಒಂದು ಗುಪ್ತನಿಧಿಯ ಭಂಡಾರವಾಗಿದೆ ಎಂಬುದನ್ನು ಬಲ್ಲವರು ಅತಿವಿರಳ. ಆ ನಿಧಿಯನ್ನು ಪತ್ತೆ ಹಚ್ಚಿ ಕೈವಶ ಮಾಡಿಕೊಂಡವರಂತೂ ಮಹಾಧೀರರೇ ಸರಿ. ಆ ನಿಧಿಯನ್ನು ಪತ್ತೆ ಹಚ್ಚಿ ಅದನ್ನು ಅನುಭವಿಸಿ, ಅದರತ್ತ ತೋರಬಲ್ಲ ಗುರುವಿನ ಕೃಪೆಯೇ ಆ ನಿಧಿ ಲಾಭಕ್ಕೆ ಅಗತ್ಯವಾದ ಸಿದ್ದಾಂಜನ. ಪ್ರಕೃತಿಗರ್ಭದಲ್ಲಿ ನಿಗೂಢವಾದ ಜ್ಞಾನಧನವೇ ಆ ನಿಧಿ. ಅದು ಪರಮಾನಂದ ನಿಧಿ. ಅಕ್ಷಯ ನಿಧಿ. ಆ ನಿಧಿಯನ್ನು ಕುಂಡಲೀರೂಪವಾದ ಸರ್ಪವು ಕಾಯುತ್ತಿರುವುದು.

ಭೌತಿಕವಾದ ನಿಧಿಯ ಕಥೆಯೇ ಪೊಳ್ಳಾಗಿ ಶೋಧ ವ್ಯರ್ಥವಾಗಬಹುದು. ಆದರೆ ಈ ನಿಧಿಯಾದರೋ ಶತಾಂಶ ಸತ್ಯವಾದ ನಿಧಿ. ಆದ್ದರಿಂದ ಶೋಧವ್ಯರ್ಥವಾಗುವ ಪ್ರಶ್ನೆಯಿಲ್ಲ. ಭೌತಕನಿಧಿ ದೊರೆಯುವ ಮೊದಲೂ ನಂತರವೂ ಸುಖ-ದುಃಖ, ಹಾನಿ-ಲಾಭಗಳೆರಡನ್ನೂ ತರಬಹುದು. ಆದರೆ ಈ ಅಕ್ಷಯನಿಧಿಯಾದರೋ ಪರಮಾನಂದವನ್ನು ಬಿಟ್ಟರೆ ಮತ್ತೇನನ್ನೂ ತರದು. ಭೌತಿಕನಿಧಿಯ ಅನ್ವೇಷಣೆಗೆ ಬೇಕಾಗುವ  ಹೊರ ಉಪಕರಣಗಳು ವಿಪುಲ. ಆದರೆ ಒಳ ನಿಧಿಯ ಶೋಧಕ್ಕೆ ದೈವದತ್ತವಾದ ದೇಹೇಂದ್ರಿಯ-ಮನೋ-ಬುದ್ಧಿಗಳೇ ಸಾಕು. ಹೊರಬಡತನವನ್ನು ಮಾತ್ರ  ಭೌತಿಕನಿಧಿಯು ನೀಗುವುದು. ಆದರೆ ಈ ಒಳನಿಧಿಯಾದರೋ ಆತ್ಮೈಶ್ವರ್ಯಸಂಪತ್ತನ್ನುಂಟುಮಾಡಿ, ಹೊರಸಂಪತ್ತಿನ ಅಲ್ಪತೆಯನ್ನು ತೋರಿಕೊಡುವುದು.  ಹೊರನಿಧಿ ಗಳಿಸಿದಷ್ಟೂ ಮತ್ತೆ ಧನತೃಷ್ಣತೆಯನ್ನು  ಬೆಳೆಸುವುದು. ಈ ಒಳನಿಧಿಯಾದರೋ ತೃಷ್ಣೆಯನ್ನು ಕಳೆದು, ಪಡೆದ ಜೀವಿಯನ್ನು ಧನ್ಯನನ್ನಾಗಿ ಮಾಡುವುದು. ಚಿನ್ನ-ಬೆಳ್ಳಿ-ರತ್ನಗಳ ಬೆಲೆ ಮಿತವಾದುದು-ಇಂತಹ ಒಳನಿಧಿಯ ರಹಸ್ಯವನ್ನು ಬಲ್ಲ ಶ್ರೀ ಶ್ರೀರಂಗ ಮಹಾಗುರುವಿಗೆ ನಮಿಸಿ ಆ ಆನಂದ ನಿಧಿಗೆ, ಗುಪ್ತನಿಧಿಗೆ ಈ ಬರಹವನ್ನರ್ಪಿಸುವೆನು.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ : ೦೧ ಸಂಪುಟ: ೦೪ ಸಂಚಿಕೆ: ನವೆಂಬರ್೧೯೮೧ ತಿಂಗಳಲ್ಲಿ ಪ್ರಕಟವಾಗಿದೆ.   

Saturday, January 30, 2021

ಸಂಸ್ಕೃತಿಯಲ್ಲಿ ಪ್ರಾಣಾಯಾಮದ ಪಾತ್ರ (Sanskrtiyalli Pranayamada Patra)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)




ಪ್ರಾಣಾಯಾಮದ ಮುಖ್ಯಾಂಗಗಳು ರೇಚಕ (ಉಸಿರು ಬಿಡುವುದು), ಪೂರಕ (ಉಸಿರು ತೆಗೆದುಕೊಳ್ಳುವುದು) ಮತ್ತು ಕುಂಭಕ (ಉಸಿರು ಕಟ್ಟುವುದು). ಬಲಹೊಳ್ಳೆಯಲ್ಲಿ ಪೂರಕ, ನಂತರ ಕುಂಭಕ, ತದನಂತರ ಎಡಹೊಳ್ಳೆಯಲ್ಲಿ ರೇಚಕ ಮಾಡುವುದನ್ನು ಸೂರ್ಯಭೇದನ ಪ್ರಾಣಾಯಾಮವೆನ್ನುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಎಡಹೊಳ್ಳೆಯಲ್ಲಿ ಪೂರಕ, ನಂತರ ಕುಂಭಕ, ತದನಂತರ ಬಲಹೊಳ್ಳೆಯಲ್ಲಿ ರೇಚಕ ಮಾಡುವುದನ್ನು ಚಂದ್ರಭೇದನ ಪ್ರಾಣಾಯಾಮವೆನ್ನುತ್ತಾರೆ. ಇದಲ್ಲದೇ ಭಸ್ತ್ರಿಕಾ, ಶೀತಲೀ, ಸೀತ್ಕಾರಿ ಮುಂತಾದ ಬೇರೆ ಪ್ರಾಣಾಯಾಮಗಳೂ ರೂಢಿಯಲ್ಲಿವೆ.

ಚಂದ್ರಭೇದನ, ಸೂರ್ಯಭೇದನ ಮುಂತಾದ ಹೆಸರುಗಳು ಬರುವುದಕ್ಕೆ ಕಾರಣವುಂಟು. ಶರೀರದಲ್ಲಿ ಪ್ರಾಣಶಕ್ತಿಯು ಹರಿಯುವ ಮಾರ್ಗಗಳನ್ನು ನಾಡೀ ಎನ್ನುತ್ತಾರೆ. ಇವುಗಳಲ್ಲಿ ಮೂರು ನಾಡಿಗಳು ಮುಖ್ಯವಾದವು - ಚಂದ್ರನಾಡಿ, ಸೂರ್ಯನಾಡಿ ಹಾಗೂ ಸುಷುಮ್ನಾ ನಾಡಿ. ಎಡಹೊಳ್ಳೆಯಲ್ಲಿ ಹೆಚ್ಚು ಉಸಿರಾಟ ನಡೆಯುವಾಗ ಚಂದ್ರನಾಡಿಯಲ್ಲಿ ಪ್ರಾಣಸಂಚಾರವಿದ್ದು ಮನಸ್ಸು ಶಾಂತವಾಗಿದ್ದು ಶರೀರದಲ್ಲಿ ತಂಪಿರುತ್ತದೆ. ಬಲಹೊಳ್ಳೆಯಲ್ಲಿ ಹೆಚ್ಚು ಉಸಿರಾಟ ನಡೆಯುವಾಗ ಸೂರ್ಯನಾಡಿಯಲ್ಲಿ ಪ್ರಾಣಸಂಚಾರವಿದ್ದು ಶರೀರದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ಮನಸ್ಸು ಹೆಚ್ಚು ಕಾರ್ಯಪ್ರವೃತ್ತವಾಗಿರುತ್ತದೆ. ಎರಡೂ ಹೊಳ್ಳೆಯಲ್ಲಿ ಸಮ ಪ್ರಮಾಣದಲ್ಲಿ ಉಸಿರಾಟವಿದ್ದಾಗ ಪ್ರಾಣಸಂಚಾರವು ಸುಷುಮ್ನಾ ಮಾರ್ಗದಲ್ಲಿ ನಡೆಯುತ್ತಿದ್ದು ಶರೀರ ಮನಸ್ಸುಗಳಲ್ಲಿ ಧ್ಯಾನಕ್ಕೆ ಪೋಷಕವಾದ ಸ್ಥಿತಿಯುಂಟಾಗುತ್ತದೆ.

ಯಾವ ನಾಡಿಯಲ್ಲಿ ಆಗುವ ಪ್ರಾಣಸಂಚಾರ ಯಾವ ಕ್ರಿಯೆ ಅಥವಾ ಸ್ಥಿತಿಗೆ ಪೋಷಕ ಎನ್ನುವ ವಿಜ್ಞಾನವನ್ನು ಆಧರಿಸಿ ಭಾರತೀಯ ಸಂಸ್ಕೃತಿಯ ಅನೇಕ ಆಚರಣೆಗಳು ರೂಪಿತವಾಗಿವೆ. ಉದಾಹರಣೆಗೆ, ಪರಂಪರೆಯಲ್ಲಿ ಬಂದಿರುವ ನಿದ್ರಿಸುವಾಗ ಎಡಮಗ್ಗುಲಲ್ಲಿ ಮಲಗಬೇಕು ಮತ್ತು ಬಲಮಗ್ಗುಲಿನಿಂದ ಏಳಬೇಕು ಎನ್ನುವ ರೂಢಿಯಲ್ಲಿಯೂ ಸಹ ಪ್ರಾಣವಿದ್ಯೆಯ ಹಿನ್ನೆಲೆಯುಂಟು. ಎಡಮಗ್ಗುಲಲ್ಲಿ ಮಲಗಿದ್ದಾಗ ಬಲಹೊಳ್ಳೆಯಲ್ಲಿ ಪ್ರಮುಖ ಉಸಿರಾಟ ಮತ್ತು ಸೂರ್ಯನಾಡಿಯಲ್ಲಿ ಪ್ರಾಣಸಂಚಾರವಿದ್ದು ಜೀರ್ಣಪ್ರಕ್ರಿಯೆಗೆ ಪೋಷಕವಾಗಿರುತ್ತದೆ. ಏಳಬೇಕಾದರೆ ಬಲ ಮಗ್ಗುಲಲ್ಲಿ ಮಲಗಿ ನಂತರ ಎದ್ದರೆ ಪ್ರಮುಖ ಉಸಿರಾಟ ಎಡಹೊಳ್ಳೆಯಲ್ಲಿದ್ದು, ಪ್ರಾಣಸಂಚಾರ ಚಂದ್ರನಾಡಿಯಲ್ಲಿದ್ದು ಮನಸ್ಸು ಶಾಂತವಾಗಿರುತ್ತದೆ. ಶಾಂತಮನಸ್ಸಿನಿಂದ ದಿನಚರಿಯು ಆರಂಭವಾಗಬೇಕೆಂಬುದು ಈ ರೂಢಿಯ ಆಶಯ. ಇದೇ ರೀತಿ, ಗೃಹಪ್ರವೇಶ ಮಾಡಬೇಕಾದರೆ ಬಲಗಾಲನ್ನು ಮೊದಲು ಇಟ್ಟು ಪ್ರವೇಶ ಮಾಡುವುದು, ಯುದ್ಧರಂಗವನ್ನು ಪ್ರವೇಶ ಮಾಡಬೇಕಾದರೆ ಎಡಗಾಲನ್ನು ಮೊದಲಿಟ್ಟು ಪ್ರವೇಶ ಮಾಡುವುದು, ಯಜ್ಞದಲ್ಲಿ ಎರಡೂ ಕೈಗಳನ್ನು ಬಳಸಿ ಕ್ರಿಯೆಗಳನ್ನು ಮಾಡುವುದು ಮುಂತಾದ ಎಲ್ಲ ಆಚರಣೆಗಳಲ್ಲೂ ಪ್ರಾಣವಿದ್ಯೆಯ ಮರ್ಮವು ಹಿನ್ನೆಲೆಯಲ್ಲಿರುತ್ತದೆ. ಹೀಗೆ ಪ್ರಾಣಾಯಾಮದ ವಿಜ್ಞಾನವನ್ನು ಮಹರ್ಷಿಗಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಅಳವಡಿಸಿದ್ದಾರೆ. 

ಸೂಚನೆ : 30/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  

Thursday, January 28, 2021

ಸಾಮರಸ್ಯಕ್ಕೊಂದು ಸರಳ ಸೂತ್ರ (Samarasyakkondu Sarala Sutra)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್  
(ಪ್ರತಿಕ್ರಿಯಿಸಿರಿ lekhana@ayvm.in)


ಮಹಾಭಾರತದಲ್ಲಿ ಹೀಗೊಂದು ಉದ್ಬೋಧಕ ಪ್ರಸಂಗವಿದೆ-

ವನವಾಸದ ಅವಧಿಯಲ್ಲಿ ಪಾಂಡವರೊಮ್ಮೆ ದ್ವೈತವನದಲ್ಲಿದ್ದರು. ಅವರ ಹೊಟ್ಟೆ ಉರಿಸಬೇಕೆಂಬ ಉದ್ದೇಶದಿಂದ, ಬಂಧು-ಮಿತ್ರರೊಡಗೂಡಿ ವೈಭವೋಪೇತವಾದ ಸಜ್ಜುಗಳೊಡನೆ ದುರ್ಯೋಧನನು ದ್ವೈತವನದಲ್ಲಿದ್ದ ಸರೋವರದ ಬಳಿಗೆ ಹೋದನು. ದುರ್ಯೋಧನನ ಅಪ್ಪಣೆಯಂತೆ ಅಲ್ಲಿ ಕ್ರೀಡಾಸ್ಥಾನವನ್ನು ಸಿದ್ಧಪಡಿಸುವುದಕ್ಕೆ, ಅವನ ಸೇವಕರು ಆ ಸರೋವರದ ಬಳಿ ಹೋದಾಗ, ಆ ವೇಳೆಗೆ ಅಲ್ಲಿ ಬೀಡುಬಿಟ್ಟಿದ್ದ ಗಂಧರ್ವರು, ಇವರನ್ನು ತಡೆದರು. ದುರ್ಯೋಧನಾದಿಗಳೇ ಗಂಧರ್ವರನ್ನು ಎದುರಿಸಲು ಬಂದು, ಕಡೆಗೆ ಅವರಿಂದ ಬಂಧಿತರಾದರು. ಕೌರವರ ಕಡೆಯವರು ಧರ್ಮರಾಜನನ್ನು ಕಂಡು ತಮ್ಮ ರಾಜನನ್ನು ಬಿಡಿಸಿಕೊಡಬೇಕೆಂದು ಆರ್ತರಾಗಿ ಬೇಡಿಕೊಂಡರು. ಅದನ್ನು ಕೇಳಿ ಭೀಮನು, "ನಾವು ಮಾಡಬೇಕಾದದ್ದನ್ನು ಗಂಧರ್ವರೇ ಮಾಡಿದರು; ಅಧರ್ಮಾಚರಣೆಗೆ ತಕ್ಕ ಶಾಸ್ತಿಯಾಯಿತು" ಎಂದನು. ಧರ್ಮರಾಜನು ಅವನನ್ನು ತಡೆದು, 


"ಪರಸ್ಪರ ವಿರೋಧೇ ತು ವಯಂ ಪಂಚ ಚ ತೇ ಶತಮ್I

 ಅನ್ಯೇಭ್ಯಶ್ಚ ವಿರೋಧೇ ತು ವಯಂ ಪಂಚಾಧಿಕಂ ಶತಮ್II


(ನಮ್ಮ ನಮ್ಮಲ್ಲಿ {ಪಾಂಡವ ಕೌರವರಲ್ಲಿ ವಿರೋಧವಿದ್ದಾಗ ನಾವೈದು ಮಂದಿ; ಅವರು ನೂರು. ಇತರರೊಡನೆ ವಿರೋಧ ಬಂದಲ್ಲಿ ನಾವು ನೂರೈದು ಮಂದಿ}). "ಜ್ಞಾತಿಗಳಲ್ಲಿ ಅಭಿಪ್ರಾಯಭೇದಗಳು ಇರುತ್ತವೆ. ಆದರೆ, ಹೊರಗಿನವರು ಬಂದು ಮೇಲೆ ಬಿದ್ದಾಗ, ಅದನ್ನು ನೋಡಿಕೊಂಡು ಸುಮ್ಮನಿರುವುದೇ? ಶರಣಾಗತರಿಗೆ ಸಹಾಯ ಮಾಡಬೇಕು. ದುರ್ಯೋಧನನಿಗೆ ಆಗಿರುವ ಅವಮಾನವು ನಮಗೂ ಆದಂತೆಯೇ ಸರಿ" ಎಂದು ಹೇಳುತ್ತಾನೆ. ಧರ್ಮರಾಜನ ತಮ್ಮಂದಿರು ಗಂಧರ್ವರೊಡನೆ ಹೋರಾಡಿ, ದುರ್ಯೋಧನಾದಿಗಳನ್ನು ಗಂಧರ್ವರ ಸೆರೆಯಿಂದ ಬಿಡಿಸುತ್ತಾರೆ.


ಮಹಾಭಾರತದ ಈ ಕಥೆ ಎಲ್ಲಾ ಕಾಲಕ್ಕೂ ಪ್ರಸ್ತುತವೇ. ಇಂದು ಎಲ್ಲ ಕ್ಷೇತ್ರಗಳಲ್ಲೂ ದ್ವೇಷಾಸೂಯೆಗಳಿಂದ ಸಂಘರ್ಷಕ್ಕೆ ಇಳಿಯುವವರು ಬಹು ಮಂದಿ. ಭಾರತ ದೇಶದಲ್ಲಿ ಈ ಹಿಂದೆ ಪೃಥ್ವೀರಾಜ-ಜಯಚಂದ್ರರ ನಡುವಿನ ವೈರ, ಅಧರ್ಮಿಗಳಾದ ಪರಕೀಯರ ದಾಳಿಗೆ ಎಡೆ ಮಾಡಿಕೊಟ್ಟಿತು. ಭಾರತ ಪರಾಕ್ರಾಂತವಾಗಿ ಅತ್ಯಾಚಾರ, ಅನಾಚಾರಗಳು ಯಥೇಚ್ಛವಾಗಿ ನಡೆದವು. 


ಇಂದೂ ಕೋಮುಗಲಭೆಗಳು ನಿಂತಿಲ್ಲ. ಇತ್ತೀಚಿನ ದಿನಗಳಲ್ಲೂ ಎಷ್ಟೋ ದೇವಾಲಯಗಳು ನಾಶವಾಗುತ್ತಿರುವುದಕ್ಕೆ ನಾವು ಮೂಕಪ್ರೇಕ್ಷಕರಾಗುತ್ತಿದ್ದೇವೆ. ಅಚ್ಚರಿಯ ಸಂಗತಿಯೆಂದರೆ, ಧರ್ಮವನ್ನು ಬೋಧಿಸ ಹೊರಡುವ ಆಚಾರ್ಯರು ತಮ್ಮ ಮತವೇ ಸರ್ವೊತ್ಕೃಷ್ಟವೆಂದು ಪ್ರತಿಪಾದಿಸುವ ಭರಾಟೆಯಲ್ಲಿ ಮಾಡುವ ಇತರ ಮತಗಳ ಖಂಡನೆ ತಾರಕಕ್ಕೇರಿ, ವಿಷಾಗ್ನಿ ಜ್ವಲಿಸಿ ಎಲ್ಲರನ್ನೂ ಸುಡುತ್ತಿದೆ. 


ಮತಭೇದಗಳೇನೇ ಇರಲಿ; ಸಮಾನವಾದ ಅಭಿಪ್ರಾಯಗಳೂ ಸಾಕಷ್ಟಿವೆಯಷ್ಟೆ. ಭಾರತದ ಎಲ್ಲ ಆಸ್ತಿಕ ಗುರುಗಳೂ, ಭಗವತ್ಸ್ಮರಣೆ, ಪೂಜೆ, ಸರ್ವಭೂತಹಿತರೂಪವಾದ ಧರ್ಮಾಚರಣೆಗಳನ್ನು ಬೋಧಿಸಿಯೇ ಇದ್ದಾರೆ. ತಮ್ಮ ತಮ್ಮ ಮನೆಗಳಲ್ಲಿ, ತಮ್ಮ ಮತಾಚಾರ್ಯರ ಮಾತುಗಳನ್ನು ಆಚರಿಸಬಹುದು; ಆದರೆ ಮನೆಯಿಂದ ಕಾಲನ್ನು ಹೊರಗಿಟ್ಟ ಕೂಡಲೇ "ಭಾರತವಿಡೀ ಸರ್ವಹಿತಪರರಾದ ಋಷಿಮುನಿಗಳ ನಾಡು; ಧರ್ಮಾತ್ಮರಾಗಿ ರಾಜ್ಯವಾಳಿದ ಅರಸರ ನೆಲೆವೀಡು" ಎಂಬ ಪ್ರಜ್ಞೆ ಮೂಡಿಬಿಟ್ಟರೆ ನಮಗಿಂತಲೂ ಸುಖಿಗಳು ಯಾರಿದ್ದಾರೆ? ದೇಶಪ್ರೇಮ ಜಾಗೃತವಾಗಲು ಭೌಗೋಳಿಕ ಪ್ರಜ್ಞೆಯಷ್ಟೇ ಸಾಲದು; ಸಾಂಸ್ಕೃತಿಕವಾಗಿ ಸಮಾನಧರ್ಮಗಳೇನೆಂಬುದನ್ನು ಹುಡುಕಬೇಕು. "ಹುಟ್ಟುವಾಗ ಅಣ್ಣತಮ್ಮಂದಿರು; ಬೆಳೆಯುವಾಗ ದಾಯಾದಿಗಳು" ಎಂದು ಹೇಳುವುದುಂಟು. ಇದು ಲೋಕವನ್ನು ಗಮನಿಸಿ ಆಡಿರುವ ಅನುಭವದ ಮಾತೇ ಸರಿ. ಆದರೆ ದಾಯಾದಿಗಳಾಗಿದ್ದರೂ ಸರಿ; ಸಮಾಜ, ದೇಶಗಳ ರಕ್ಷಣೆಯ ವಿಷಯ ಬಂದಾಗ ನಾವು ಅಣ್ಣ-ತಮ್ಮಂದಿರು ಎಂದು ಭಾವಿಸುವುದು ವಿವೇಕಯುತವಾದ ನಡೆ. ಇಂತಹ ನಡೆ ಭಾರತೀಯರಿಗೆ ಅಸಾಧ್ಯವೇನೂ ಅಲ್ಲ. ಬಹುಶಃ ಉದಾರಗುಣಗಳನ್ನು ಮೆರೆದವರ ವೃತ್ತಾಂತಗಳ ಇತಿಹಾಸದ ಪುಟಗಳನ್ನು ನೋಡಿದಾಗ, ಭಾರತಕ್ಕೆ ಸರಿಸಮಾನ ರಾಷ್ಟ್ರ ಮತ್ತೊಂದಿರಲಾರದು. 


"ಇತಿಹಾಸದಲ್ಲಿ ಎಲ್ಲಾ ದೇಶಗಳ ಜೀವನ ನಾವೆಗಳೂ ಆಗಿಂದಾಗ್ಗೆ ಬದಲಾಗುತ್ತಿದ್ದರೂ, ಭಾರತದಲ್ಲಿ ಈವರೆವಿಗೂ ಅನೇಕ ದಾಳಿಗಳು ನಡೆದಿದ್ದರೂ, ಒಂದೇ ರೀತಿಯಾದ ನಾವೆಯಲ್ಲಿ ಭಾರತವು ಪ್ರಯಾಣ ಮಾಡುತ್ತಿದೆ. ಈ ತರಹದ ಜೀವನದ ಧ್ಯೇಯನಿಷ್ಕರ್ಷೆ ಮತ್ತು ಅದರ ಸಾಧನಾವಿಧಾನ ಇವುಗಳನ್ನು ಮತ್ತಾವ ದೇಶದ ಇತಿಹಾಸದಲ್ಲೂ ನಾವು ಕಾಣಲಾಗುವುದಿಲ್ಲ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.


ಭ್ರಾತೃಪ್ರೇಮವನ್ನು ಬಿಂಬಿಸುವ ರಾಮಾಯಣದಂತಹ ಆರ್ಷಕಾವ್ಯಗಳು, ಭರತ-ಬಾಹುಬಲಿಗಳ ಸಹೋದರ ಸೌಹಾರ್ದದ ಇತಿಹಾಸ- ಮುಂತಾದ ನಿದರ್ಶನಗಳು ಅನೇಕ. ಮಹಾಭಾರತವು ಜ್ಞಾತಿಕಲಹದ ವೈಭವೀಕರಣದಂತೆ ಕಂಡರೂ, ಮೂಲತಃ ಧರ್ಮಕ್ಕೆ ಜಯವಾಗಬೇಕೆಂದು ಹೋರಾಡಿದವರ ಕಥೆಯೇ ಆಗಿದೆ. ಮೂಲಮಹಾಭಾರತದಲ್ಲಿ ಅನೇಕ ಕಥೆಗಳು ಬಂದಿದ್ದರೂ, ವಿಷಯದ ದೃಷ್ಟಿಯಿಂದ ಧರ್ಮಕ್ಕೆ ಹಾಗೂ ತತ್ತ್ವಕ್ಕೇ ಪ್ರಾಧಾನ್ಯ. ಇಂದಾದರೂ ನಮ್ಮ ಪೂರ್ವಜರ ಮಾತುಗಳಲ್ಲಿ ಕಂಡುಬರುವ ಸಮಾನಧರ್ಮಗಳನ್ನು ಹುಡುಕಿ ಸೌಮನಸ್ಯದಿಂದ ಒಗ್ಗಟ್ಟಾದರೆ, ನಾವು ಮೊದಲಿಗೆ ಭಾರತೀಯರು; ನಂತರ ಇಂತಹ ಒಳಪಂಗಡದವರು ಎನ್ನುವಂತಾದರೆ, ಭಾರತದಲ್ಲಿ ಸುವರ್ಣಯುಗ ಪ್ರಾರಂಭವಾಗುವ ದಿನಗಳು ದೂರವಿಲ್ಲ. 


ಸೂಚನೆ: 28/01/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.   

Wednesday, January 27, 2021

ಬೇಸರವಿಲ್ಲದ ಜೀವನ ಉಂಟೆ? (Besaravillada Jivana Unte?)

ಲೇಖಕಿ: ಪದ್ಮಿನಿ ಶ್ರೀನಿವಾಸನ್

(ಪ್ರತಿಕ್ರಿಯಿಸಿರಿ lekhana@ayvm.in)


 

 

ಬೇಸರವೆಂಬುದು ಜೀವನದಲ್ಲಿ ನಾವೆಲ್ಲರೂ ಅನುಭವಿಸಿರುವ ಒಂದು ಸಹಜವಾದ ಭಾವನೆ. ಕಾರಣಗಳು ಹಲವಾರು - ಆಪ್ತರ ಅಗಲಿಕೆ, ಧನವ್ಯಯ, ಅನಾರೋಗ್ಯ, ವೃತ್ತಿ/ಸಂಸಾರಗಳ ಒತ್ತಡ ಇತ್ಯಾದಿ. ನಮ್ಮ ಉತ್ಸಾಹ/ಉತ್ತೇಜನಗಳನ್ನು ಕುಂದಿಸುವ ಸ್ಥಿತಿಯನ್ನು ಬೇಸರವೆಂದು ಕರೆದು, ಆಧುನಿಕ ಸಂಶೋಧಕರು ಹಲವಾರು ಪರಿಹಾರಗಳನ್ನು ಹೇಳಿದ್ದಾರೆ. ನಿಮ್ಮ ಗುರಿ/ಆಸೆ/ಆಕಾಂಕ್ಷೆಗಳನ್ನು ಗುರುತಿಸಿ, ಸವಾಲು ಹಾಕಿಕೊಳ್ಳಿ, ಸಮಾಜದಲ್ಲಿ ಬೆರೆಯಿರಿ, ದಿನಚರಿಯಲ್ಲಿ ಏನಾದರೂ ಹೊಸತನ್ನು ಅಳವಡಿಸಿಕೊಳ್ಳಿ, ವಿಶ್ವ ಪರ್ಯಟನ ಮಾಡಿ, ಹೊಸ ರುಚಿಯನ್ನು ಆಸ್ವಾದಿಸಿ, ಹೊಸ ದೃಶ್ಯಗಳನ್ನು ನೋಡಿ/ಟೀವಿ /ಚಲನ ಚಿತ್ರ ವೀಕ್ಷಿಸಿ, ಹವ್ಯಾಸಗಳು/ಕ್ರೀಡೆ/ಕಲೆಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳಿ, ಸಂತೋಷದ ಸನ್ನಿವೇಶಗಳನ್ನು ಮೆಲುಕು ಹಾಕುತ್ತಿರಿ ಇತ್ಯಾದಿ ನಾನಾ ರೀತಿಯ ಸಲಹೆಗಳು ಬರುತ್ತವೆ. ಮನಸ್ಸಿನ ಸಾತ್ತ್ವಿಕ ಪ್ರಚೋದನೆಗಳನ್ನು ಪುಷ್ಟೀಕರಿಸಿ, ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವುದರ ಮೂಲಕ, ಬೇಸರವನ್ನು ಹೋಗಲಾಡಿಸಿಕೊಳ್ಳಿ ಎನ್ನುವುದು ಮನೋವಿಜ್ಞಾನಿಗಳ  ಅಭಿಪ್ರಾಯ.


ಸಂತೋಷವನ್ನು  ಕೊಡುವುದಾಗಿ ನಾವು ಭಾವಿಸುವ ಸಂಗತಿಗಳು ನಮ್ಮಲ್ಲಿನ ಸಂತೋಷದ ಬಲ್ಬಿನ  'ಸ್ವಿಚ್ ಆನ್' ಮಾಡುತ್ತವೆ ಅಷ್ಟೇ. ಕಾಲವು ಉರುಳುತ್ತಾ, ಸ್ವಿಚ್ಚುಗಳ ಹಿಂದಿನ ತಂತಿಗಳು ಹಳತಾಗಿ ಕೆಟ್ಟು ಹೋಗುವುದು ಸಹಜ. ಆದರೆ ವಸ್ತುಸ್ಥಿತಿ ಅರಿಯದೆ ನಾವು ಹೊಸ ಹೊಸ ಆಸೆಗಳನ್ನು ಮನದುಂಬಿಕೊಂಡು 'ಸ್ವಿಚ್-ಆನ್' ಮಾಡುವ ವ್ಯರ್ಥಪ್ರಯತ್ನ ಮಾಡುತ್ತೇವೆ.  ಕಾಲವು ಆಡುತ್ತಿದೆ; ಆಯುಸ್ಸು ಕಳೆಯುತ್ತಿದೆ; ಆದರೆ ಆಶಾವಾಯುವು ಮಾತ್ರ ಬಿಟ್ಟುಹೋಗದಲ್ಲ!" ಎಂದು ಶಂಕರಭಗವತ್ಪಾದರು ಹೇಳಿರುವಂತೆ, ಜೀವನವೆಲ್ಲ  ತೀರದ  ಆಸೆ, ಬಾರದ ತೃಪ್ತಿ. ಆದರೆ ಸಂತೋಷದ 'ಬಲ್ಬಿ'ಗೆ ಗುಪ್ತವಾದ ಮತ್ತೊಂದು 'ಸ್ವಿಚ್' ಉಂಟು.    


ಯೋಗೇಶ್ವರ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು :"ಭಗವಂತನ ಸಮೀಪದಲ್ಲಿದ್ದ ಚೇತನನು ಭಗವತ್ಸನ್ನಿಧಿಯಿಂದ ಬಹುದೂರ ಬಂದಿದ್ದಾನೇಪ್ಪಾ". ನಮ್ಮೆಲ್ಲ ಚಟುವಟಿಕೆಗಳ ಹಿಂದೆ ಚೈತನ್ಯ ಶಕ್ತಿಯಾಗಿರುವ ಆತ್ಮನು, ಸೃಷ್ಟಿಗಿಳಿದು,  ಅವನ ಸ್ವಧಾಮವಾದ ಭಗವಂತನ ಮಡಿಲಿಗೆ ಹಿಂತಿರುಗಲಾಗದ ಬೇಸರದಿಂದ ಕೂಡಿದ್ದಾನೆಂಬ ಅರಿವು ಅವನಿಗಾಗುತ್ತಿಲ್ಲ. ಅಮೋಘವಾದ ಸಂಶೋಧನೆಯಿಂದ, ನಮ್ಮ ಮಹರ್ಷಿಗಳು ಅಂತರಂಗದಲ್ಲಿ  ಅಡಗಿರುವ 'ಸ್ವಿಚ್'ನ್ನು ಕಂಡು, ಆತ್ಮ-ಪರಮಾತ್ಮರನ್ನು ನಿತ್ಯವೂ ಒಂದಾಗಿಸಿ ನಿತ್ಯಾನಂದ ಸ್ವರೂಪಿಯಾದ ಆ ಪರಮಾತ್ಮನ ಮೂಲದಿಂದ ಉಕ್ಕುವ ಬ್ರಹ್ಮಾನಂದವನ್ನು ಅನುಭವಿಸಿದರು. ಯೋಗ ಪ್ರಕ್ರಿಯೆಯಿಂದ ಪಡೆದ ಪರಮಾನಂದದ ಗುಟುಕುಗಳನ್ನು ಭೋಗ ಜೀವನಕ್ಕೂ ತಂದುಕೊಂಡು, ಸಮರಸ ಜೀವನ ಮಾಡಿದರು.  ಮನುಷ್ಯನ ಉದ್ಧಾರಕ್ಕಾಗಿ, ಭವ್ಯವಾದ ಸಂಸ್ಕೃತಿಯನ್ನು ಜನ ಜೀವನದಲ್ಲಿ ಹಾಸು ಹೊಕ್ಕಾಗಿ ಹೆಣೆದು ಕೊಟ್ಟು, ಆತ್ಮರಂಜನೆಯವರೆಗೆ ಮುಟ್ಟುವ ಮನೋರಂಜನೆಗಳನ್ನೂ ಕೃಪೆಯಿಂದ ತಂದುಕೊಟ್ಟರು. ಸದ್ಗುರುವಿನ ಆಶ್ರಯ ಪಡೆದು, ನಮ್ಮ ಚಿತ್ತವೃತ್ತಿಗಳನ್ನು ಶುದ್ಧಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದರೆ, ಕ್ರಮೇಣ ಆತ್ಮಾನಂದವನ್ನು  ನಾವು ಅನುಭವಿಸಬಹುದು.ಇತರ ಸುಖಗಳಿಗಿಂತ ಕೋಟಿ ಕೋಟಿ ಪಾಲು ಮಿಗಿಲಾದ ನಿರಂತರ ಆನಂದದ ಅರಿವು ನಮಗೆ ಬಂದಂತೆ, ಬೇಸರವೆನ್ನಲು ಸಮಯವೇ ಇರಲಾರದು.


ಸೂಚನೆ: 27/1/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Sunday, January 24, 2021

ಪ್ರಾಣಾಯಾಮ (Pranayama)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)

ಉಸಿರಾಟದ ನಿಯಂತ್ರಣದ ಮೂಲಕ ಪ್ರಾಣಶಕ್ತಿಗಳನ್ನು ನಿಯಂತ್ರಿಸುವುದು ಅಷ್ಟಾಂಗಯೋಗದ ನಾಲ್ಕನೇ ಮೆಟ್ಟಿಲಾದ ಪ್ರಾಣಾಯಾಮ. ನಮ್ಮ ಶ್ವಾಸಕೋಶವು ತಿದಿಯಂತೆ ಹಿಗ್ಗುವುದು, ಕುಗ್ಗುವುದು ಆಗುತ್ತಾ ಇರುವುದರಿಂದ ನಾವು ಗಾಳಿಯನ್ನು ಒಳಗೆ ತೆಗೆದುಕೊಳ್ಳುವ, ಪುನಃ ಹೊರಗೆ ಬಿಡುವ ರೂಪದಲ್ಲಿ ಉಸಿರಾಟ ಮಾಡುತ್ತಾ ಇರುತ್ತೇವೆ. ಶ್ವಾಸಕೋಶವು ಹೀಗೆ ಕೆಲಸ ಮಾಡಲು ಅದರ ಹಿಂದೆ ಒಂದು ಶಕ್ತಿ ಇದ್ದಾಗ ಮಾತ್ರ ಸಾಧ್ಯ. ಈ ಶಕ್ತಿಯೇ ಪ್ರಾಣಶಕ್ತಿ. ಪ್ರಾಣಶಕ್ತಿಯು ಎರಡು ವಿಭಾಗವಾಗಿ ಅಂದರೆ ಪ್ರಾಣ ಮತ್ತು ಅಪಾನ ಎಂಬ ಎರಡು ವಾಯುಗಳಾಗಿ ಒಂದು ಮೇಲ್ಮುಖವಾಗಿ ಮತ್ತೊಂದು ಕೆಳಮುಖವಾಗಿ ಕೆಲಸ ಮಾಡುವುದರಿಂದ ಶ್ವಾಸಕೋಶದ ಮೇಲೆಯೂ ಒತ್ತಡವುಂಟಾಗಿ ಅದು ಹಿಗ್ಗುವುದು-ಕುಗ್ಗುವುದು ಆಗಿ ಉಸಿರಾಟ ನಡೆಯುತ್ತಿರುತ್ತದೆ. ಸುಲಭವಾಗಿ ಅರ್ಥ ಮಾಡಿಕೊಳ್ಳಲು ಪ್ರಾಣವಾಯುವನ್ನು ಒಂದು ಶಕ್ತಿ(force) ಎಂದೂ ಕರೆಯಬಹುದು. ಆಳವಾಗಿ ಉಸಿರಾಡುತ್ತಾ ನಮ್ಮ ಶರೀರವನ್ನು ಗಮನಿಸಿದರೆ ಈ ವಾಯುಗಳ ಪರಿಚಯವನ್ನು ಪಡೆಯಬಹುದು. ಉಸಿರನ್ನು ತೆಗೆದುಕೊಂಡಾಗ ಕ್ರಮೇಣ ಎದೆಯಭಾಗವು ಹಿಗ್ಗುತ್ತಾ ಕೊನೆಗೆ ಹೊಟ್ಟೆಯೂ ಹಿಗ್ಗುತ್ತದೆ. ಮತ್ತು ದೀರ್ಘವಾಗಿ ಉಸಿರನ್ನು ಬಿಡುತ್ತಾ ಬಂದರೆ ಹೊಟ್ಟೆಯು ಒಳಗೆ ಹೋಗುತ್ತದೆ. ಶರೀರ ರಚನೆಯಲ್ಲಿ ಮೂಗಿನ ಹೊಳ್ಳೆಗಳು ಸಂಪರ್ಕ ಹೊಂದಿರುವುದು ಎದೆಯ ಭಾಗದಲ್ಲಿರುವ ಶ್ವಾಸಕೋಶಗಳ ಜೊತೆ. ಆದರೂ ಹೊಟ್ಟೆಯು ಏಕೆ ಹಿಗ್ಗುವುದು ಕುಗ್ಗುವುದು ಆಗುತ್ತದೆಯೆಂದರೆ ಇಲ್ಲಿ ಒಂದು ಶಕ್ತಿ ಕೆಲಸ ಮಾಡುತ್ತದಾದುದರಿಂದ. ಈ ಮೇಲ್ಮುಖ ಹಾಗೂ ಕೆಳಮುಖವಾಗಿ ಕೆಲಸ ಮಾಡುವ ಶಕ್ತಿಗಳನ್ನೇ ಪ್ರಾಣವಾಯು, ಅಪಾನವಾಯು ಎನ್ನುವುದು. ಉಸಿರಾಟವನ್ನು ನಿಯಂತ್ರಿಸಿದರೆ ಪ್ರಾಣಶಕ್ತಿಯೂ ನಿಯಂತ್ರಣಕ್ಕೆ ಬರುತ್ತದೆ. ಪ್ರಾಣವು ನಿಯಂತ್ರಣಗೊಂಡರೆ ಅದು ಅನೇಕ ವಿಧವಾದ ರೋಗಗಳಿಗೆ ಪರಿಹಾರವನ್ನುಂಟು ಮಾಡಿ ಆರೋಗ್ಯ ಸಿದ್ಧಿಯಾಗುವುದಷ್ಟೇ ಅಲ್ಲದೇ ಮನಸ್ಸೂ ಸಹ ನಿಯಂತ್ರಣಗೊಂಡು ಏಕಾಗ್ರವಾಗುತ್ತದೆ.

ಪ್ರಾಣಾಯಾಮಗಳಲ್ಲಿರುವ ಸಾಮಾನ್ಯ ಅಂಶಗಳೆಂದರೆ ಪೂರಕ, ರೇಚಕ, ಕುಂಭಕಗಳು. ಪೂರಕವೆಂದರೆ ಉಸಿರನ್ನು ಒಳಗೆ ತೆಗೆದುಕೊಳ್ಳುವುದು, ರೇಚಕವೆಂದರೆ ಉಸಿರನ್ನು ಹೊರಗೆ ಬಿಡುವುದು ಮತ್ತು ಕುಂಭಕವೆಂದರೆ ಉಸಿರನ್ನು ಕಟ್ಟುವುದು. ಮೂಗಿನ ಯಾವ ಹೊಳ್ಳೆಯಲ್ಲಿ ಪೂರಕ, ಯಾವ ಹೊಳ್ಳೆಯಲ್ಲಿ ರೇಚಕ ಮತ್ತು ಯಾವಾಗ ಕುಂಭಕವೆಂಬ ವಿಭಿನ್ನತೆಯು ಪ್ರಾಣಾಯಾಮದ ನಾನಾ ವಿಧಗಳನ್ನು ರೂಪಿಸುತ್ತದೆ.

ಚಿತ್ತ ಹಾಗೂ ಪ್ರಾಣಗಳ ಪರಸ್ಪರ ಸಂಬಂಧವಿರುವುದರಿಂದ ಒಂದನ್ನು ತಡೆಗಟ್ಟಿದರೆ ಮತ್ತೊಂದರ ಸ್ಪಂದನಿರೋಧವಾಗುತ್ತದೆಯೆಂಬ ಅಂಶ ಶ್ರೀರಂಗಮಹಾಗುರುಗಳ ಪಾಠಗಳಲ್ಲಿ, ಎತ್ತಿ ಹೇಳಲ್ಪಟ್ಟಿದೆ.

ಸೂಚನೆ : 24/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.   

ಆರ್ಯಸಂಸ್ಕೃತಿ ದರ್ಶನ - 27 (Arya Samskruti Darshana - 27 )

ಓಂ ಶ್ರೀಃ
ಭಾರತೀಯ ಸ್ತ್ರೀಯರ ಮಂಗಳಾಭರಣಗಳು
ಲೇಖಕರು: ಡಾ||ಶ್ರೀ. ಎಸ್.ವಿ. ಚಾಮು



ಸ್ತ್ರೀಯರು ಜನ್ಮತಃ ಆಭರಣ ಪ್ರಿಯರು. ತಮ್ಮ ದೈವದತ್ತವಾದ ಸೌದರ್ಯವನ್ನು ವೃದ್ಧಿ ಮಾಡಿಕೊಳ್ಳಲು ಅವರು ಎಲ್ಲ ದೇಶಗಳಲ್ಲಿಯೂ ಮತ್ತು ಎಲ್ಲ ಕಾಲಗಳಲ್ಲಿಯೂ ಆಭರಣಗಳ ಸಹಕಾರವನ್ನೇ ಕೋರಿರುತ್ತಾರೆ. ಅವರ ಸಂತೋಷಾರ್ಥವಾಗಿಯೇ ಪ್ರತಿಯೊಂದು ದೇಶದಲ್ಲಿಯೂ ಚಿತ್ರವಿಚಿತ್ರವಾದ ಆಭರಣಗಳು ರಚಿತವಾಗಿರುತ್ತವೆ.
ಅನಾದಿಕಾಲದಿಂದ ಸಂಸ್ಕೃತಿಯ "ನೆಲೆವೀಡಾದ ಭಾರತದೇಶವೂ ಸಹ ತನ್ನ ಸಂಸ್ಕೃತಿ, ಕಲೆ ಇತ್ಯಾದಿಗಳ ಗಾಂಭೀರ್ಯಕ್ಕೆ ಅನುಗುಣವಾಗಿ ಆಭರಣಗಳ ಪರಂಪರೆಯನ್ನು ನಿರ್ಮಿಸಿಕೊಂಡಿರುತ್ತದೆ. ಈ ಆಭರಣಗಳ ಹಿಂದೆ ದೀರ್ಘಕಾಲದ ಚರಿತ್ರೆ ಇದೆ ಎಂಬುವುದನ್ನು ನಮ್ಮ ದೇಶದ ಸಾಹಿತ್ಯ ಹಾಗೂ ಶಿಲ್ಪಗಳು ನಮಗೆ ತಿಳಿಯಗೊಡುತ್ತವೆ. ಅವುಗಳಲ್ಲಿ ಅಲ್ಲಲ್ಲಿ ವ್ಯತ್ಯಾಸಗಳುಂಟಾಗಿದ್ದರೂ, ಅವು ಬಹಳ ಪುರಾತನ ಕಾಲದಿಂದ ನಮ್ಮವರೆಗೆ ಅನುಸ್ಯೂತವಾಗಿ ಬಂದಿರುತ್ತವೆಂಬುದು ಗಮನಾರ್ಹವಾದ ವಿಷಯ.

ಈ ಆಭರಣಗಳಿಗೆ ತಲೆ, ಕಿವಿ, ಮೂಗು, ಕತ್ತು, ತೋಳು, ಮಣಿಕಟ್ಟು, ನಡು, ಕಾಲಿನ ಹರಡು ಮತ್ತು ಕಾಲಿನ ಬೆರಳುಗಳು ಸ್ಥಾನಗಳು. ಈ ಅವಯವಗಳ ಸೌಂದರ್ಯವನ್ನು ವೃದ್ಧಿಮಾಡಲು ಆಭರಣ ನಿರ್ಮಾಪಕರು ನಿರ್ಮಿಸಿರುವ  ಆಭರಣಗಳ ಹೆಸರುಗಳನ್ನೂ ಮತ್ತು ಬಗೆಗಳನ್ನೂ ವರ್ಣಿಸಲು ಬಹಳ ಸ್ಥಳಾವಕಾಶಬೇಕು.  ಆದರೆ ಎಲ್ಲ ಅಂಗಗಳನ್ನೂ ಎಲ್ಲರೂ ಅಲಂಕರಿಸಿಕೊಳ್ಳವುದು ಅಸಂಭವ. ಅದು ಕೇವಲ ಸಿರಿವಂತರು ಮಾಡಬಹುದಾದ ಕೆಲಸ. ಆದರೆ ನಮ್ಮ ಸಂಸ್ಕೃತಿಯು ಸಿರಿ ಇರಲಿ ಅಥವಾ ಇಲ್ಲದಿರಲಿ ಪ್ರತಿಯೊಬ್ಬ ಸ್ತ್ರೀಯೂ ಅವಳ ಸೌಮಂಗಲ್ಯದ  ಕುರುಹಾಗಿ ಹಲವು ಆಭರಣಗಳನ್ನು ಕಡ್ಡಾಯವಾಗಿ ಧರಿಸಬೇಕೆಂದು ವಿಧಿಸಿರುತ್ತದೆ. ಓಲೆ, ಮೂಗುತಿ, ಬಳೆ, ಮಾಂಗಲ್ಯ, ಕಾಲಂದಿಗೆ ಮತ್ತು ಕಾಲುಂಗುರ (ಉರುಟು) ಗಳು ಆ ಮಂಗಳಾಭರಣಗಳು. ಅದರಂತೆ ನಮ್ಮ ದೇಶದ ಸ್ತ್ರೀಯರು ಜಾತಿ, ಮತ ವ್ಯತ್ಯಾಸಗಳೆನ್ನದೆ ಈ ಮಂಗಳಾಭರಣಗಳನ್ನು ಧರಿಸಿ ತನ್ಮೂಲಕ ತಮ್ಮ ಸೌಂದರ್ಯ ಹಾಗೂ ಸೌಭಾಗ್ಯಗಳನ್ನು ಲೋಕಕ್ಕೆ ಪ್ರಕಟಿಸಿರುತ್ತಾರೆ.

ಇಂದೂ ಸಹ ಅಧಿಕಾಂಶ ಜನ ಸ್ತ್ರೀಯರು ಈ ಮಂಗಳಾಭರಣಗಳನ್ನು ಶ್ರದ್ಧೆಯಿಂದ ಧರಿಸುತ್ತಾರೆ. ಆದರೆ ಈಚೆಗೆ ಹಲವು ವರ್ಷಗಳಿಂದ ಗಮನಾರ್ಹವಾದ ಸಂಖ್ಯೆಯಲ್ಲಿ ಅವುಗಳ ಬಗ್ಗೆ ಅಲಕ್ಷ್ಯ ಭಾವವನ್ನು ತೋರಿಸತ್ತಿರುವುದನ್ನು ನೋಡುತ್ತೇವೆ. ಹಿಂದೆ ಇರುತ್ತಿದ್ದ ಪವಿತ್ರ ಭಾವನೆಯು ಈಗ ಬಹಳ ಸಡಿಲವಾಗಿರುತ್ತದೆ. ಹೇಗೆ ಸ್ತ್ರೀಯರಲ್ಲಿ ಕುಂಕುಮವಿಲ್ಲದ ಮುಖಗಳು ಹೆಚ್ಚುತ್ತಿವೆಯೋ, ಹಾಗೆಯೇ ಬಳೆಯಿಲ್ಲದ ಕೈಗಳೂ, ಚುಚ್ಚಿದ್ದರೂ ಓಲೆ ಮತ್ತು ಮೂಗುಬೊಟ್ಟುಗಳಿಲ್ಲದ ಕಿವಿ ಮೂಗುಗಳೂ ದಿನದಿನಕ್ಕೆ ಹೆಚ್ಚುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ ಇತರ ಉಡಿಗೆತೊಡಿಗೆಗಳಲ್ಲಿ ವ್ಯತ್ಯಾಸಗಳುಂಟಾಗುತ್ತಿರುವಂತೆ ಈ ಮಂಗಳಾಭರಣಗಳನ್ನು ಧರಿಸುವುದರಲ್ಲಿ ವ್ಯತ್ಯಾಸವುಂಟಾಗುತ್ತಿದೆ.

ಇದಕ್ಕೆ ಕಾರಣಗಳನ್ನು "ಕುಂಕುಮ"ದ ಪ್ರಕರಣದಲ್ಲಿ ನಾವು ಈಗಾಗಲೇ ಸೂಚಿಸಿರುತ್ತೇವೆ. ವಿಶೇಷವಾಗಿ ಈ  ಮಂಗಳಾಭರಣಗಳು ಸ್ತ್ರೀಯರ ದಾಸ್ಯದ ಕುರುಹುಗಳು ,ಅವು ಪುರುಷರು ಸ್ತ್ರೀಯರನ್ನು ವಶದಲ್ಲಿಟ್ಟುಕೊಳ್ಳಲು ಕೊಡಿಸಿರುವ ಶೃಂಖಲೆ ಎಂಬುದಾಗಿ ಹಲವು ವಲಯಗಳು ಪ್ರಚಾರಮಾಡಿರುತ್ತವೆ. ಅವರ ಪ್ರಾಪಗ್ಯಾಂಡಾದ ಕಾರಣದಿಂದಲೇ ಈ ಮಂಗಳಾಭರಣಗಳ ವಿಷಯದಲ್ಲಿ ಹಲವು ಸ್ತ್ರೀಯರು ಅಲಕ್ಷ್ಯಭಾವವನ್ನು ತಾಳಿರುತ್ತಾರೆಂದು ಹೇಳಬಹುದು. (ಆಧುನಿಕ ವಿದ್ವಾಂಸರು  ಶಿಲ್ಪ ಮತ್ತು ಸಾಹಿತ್ಯಗಳ ಆಧಾರದ ಮೇಲೆ ಮೂಗುತಿಯು ಪ್ರಾಚೀನ ಕಾಲದಲ್ಲಿ ನಮ್ಮ ದೇಶದವರಿಗೆ ತಿಳಿದಿರುವುದಿಲ್ಲವೆಂದೂ, ಅದು ವಿದೇಶೀ ಆಭರಣವೆಂದೂ ಮತ್ತು ೧೪ನೇ  ಶತಮಾನದ ನಂತರ ವ್ಯಾಪಕವಾಗಿ ಬಳಕೆಗೆ ಬಂದು ಮಂಗಳಾಭರಣವಾಗಿ ಪರಿಣಮಿಸಿತೆಂದೂ ಹೇಳುತ್ತಾರೆ. ಅಂತಹ ಪ್ರಾಪಗ್ಯಾಂಡಾಗೆ ಸಿಕ್ಕಿ ಬಹಳ ಕಾಲ ಬಳೆಯನ್ನು ಧರಿಸಿದ್ಧ ವಯಸ್ಸಾದ ಮಹಿಳೆಯೊಬ್ಬರು "ಬಳೆಯನ್ನು ಕಂಡರೆ  ನನಗೆ ಮೈ ಉರಿಯುತ್ತದೆ" ಎಂಬುದಾಗಿ ಅದಕ್ಕೆ ತಮ್ಮ ಉಗ್ರವಾದ ಪ್ರತಿಭಟನೆಯನ್ನು ಪ್ರಕಟಿಸಿದುದು ನಮ್ಮ ಕಣ್ಣಿಗೆ ಬಿದ್ದಿತು.) ಆದರೆ ಆ ಪ್ರಚಾರದ ಹಿಂದಿರುವ ವಿಚಾರಗಳು ಸರಿಯೇ, ಅವು  ವಾಸ್ತವಿಕವೇ ಎಂಬುದನ್ನು ವಿಮರ್ಶಿಸುವುದು ಅವಶ್ಯಕವಾಗುತ್ತದೆ. ಅವಕ್ಕೆ ಎಡೆಕೊಟ್ಟಿರುವ ನಾಗರೀಕತೆಯು ಸರಿಯಾದ ಮಾರ್ಗದಲ್ಲಿ ಹೋಗುತ್ತಿದೆಯೋ ಎಂಬ ಪ್ರಶ್ನೆಯನ್ನೂ ಸಹ ತೆಗೆದುಕೊಂಡು ವಿಚಾರಮಾಡಬೇಕಾಗುತ್ತದೆ. ಆದರೆ ಅದು ಇಲ್ಲಿ ಮಾಡುವ ಕೆಲಸವಲ್ಲ. ಈ ಮಂಗಳಾಭರಣಗಳ ಹಿಂಬದಿಯಲ್ಲಿರುವ ಸಾಂಸ್ಕೃತಿಕ ದೃಷ್ಟಿಯನ್ನು ವಾಚಕರ ಮುಂದಿರಿಸಿ ನಾವು ತೃಪ್ತರಾಗುತ್ತೇವೆ. ಈ ಆಭರಣಗಳನ್ನು ವಿರೋಧಿಸುವವರಿಗೆ ಆ ವಿವವರಣೆಗಳಲ್ಲೇ ಒಂದು ಉತ್ತರವಿದೆಯೆಂದು ನಮ್ಮ ನಂಬಿಕೆ.

ಒಂದು ಮರದ ಬೇರು, ಕಾಂಡ, ಕೊಂಬೆ, ತೊಗಟೆ, ಎಲೆ, ಹೂವು, ಹಣ್ಣು ಇತ್ಯಾದಿ ಯಾವ ಭಾಗವನ್ನು ನಾವು ಮೂಸಿ ನೋಡಿದರೂ ಎಲ್ಲದರಲ್ಲಿಯೂ ಒಂದೇ ವಾಸನೆ ಇರುವುದನ್ನು ನೋಡುತ್ತೇವೆ. ಹಾಗೆಯೇ ನಮ್ಮ ದೇಶದ ಸಂಸ್ಕೃತಿಯು ಯಾವ ಅಂಶವನ್ನು ತೆಗೆದುಕೊಂಡು ನೋಡಿದರೂ, ಆ ಸಂಸ್ಕೃತಿಯ ಮೂಲದಲ್ಲಿರುವ ದೃಷ್ಟಿ,
ವಿಜ್ಞಾನ, ವಿಚಾರ ಮತ್ತು ಆದರ್ಶಗಳೆಲ್ಲವೂ ಅದರಲ್ಲಿರುವುದು ಕಂಡುಬರುತ್ತದೆ. ಇದಕ್ಕೆ ನಮ್ಮ ದೇಶದ ಸ್ತ್ರೀಯರು ತೊಡುವ ಮಂಗಳಾಭರಣಗಳು ಒಳ್ಳೆಯ ನಿದರ್ಶನಗಳೆಂದು ಹೇಳಬಹುದು. ಅವು ಒಂದು ಕಡೆ ಅಲಂಕಾರ ಸಾಮಗ್ರಿಗಳು, ಮತ್ತೊಂದು ಕಡೆ ಅವುಗಳನ್ನು ನಿರ್ಮಿಸುವ ದ್ರವ್ಯಗಳ ಕಾರಣದಿಂದ ಶರೀರದ ಮೇಲೆ ಸತ್ಪರಿಣಾಮವನ್ನುಂಟು ಮಾಡುವ, ಶರೀರ ದೋಷಗಳನ್ನು ನಿವಾರಿಸುವ, ಯುಕ್ತಿಯುಕ್ತವಾದ ತೊಡಿಗೆಗಳು. ಜೊತೆಗೆ ಅವು ಆಳವಾದ ಆಧ್ಯಾತ್ಮಿಕ ಅರ್ಥದಿಂದ ಕೂಡಿರುವ ಭೂಷಣಗಳೂ ಸಹ ಆಗಿರುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ ಅವುಗಳಲ್ಲಿ ಸೌಂದರ್ಯ, ಆರೋಗ್ಯ ಮತ್ತು ಜ್ಞಾನ ಈ ಮೂರೂ ಒಂದೆಡೆ ಸೇರಿವೆಯೆಂದು ಹೇಳಬಹುದು.

ಅವುಗಳ ಪೈಕಿ ಮೊದಲನೆಯದನ್ನು ಕುರಿತು ನಾವು ಇಲ್ಲಿ ಹೇಳಬೇಕಾಗಿಲ್ಲ. ನಮ್ಮ ದೇಶದ ಕವಿಗಳು ಅದನ್ನು ತಮ್ಮ ಕಾವ್ಯಗಳಲ್ಲಿ ಮನಮುಟ್ಟುವಂತೆ ವರ್ಣಿಸಿರುತ್ತಾರೆ. ಎರಡನೆಯ ಹಾಗೂ ಮೂರನೆಯ ಅಂಶಗಳನ್ನು ಕುರಿತು ವಿಚಾರಿಸಿದರೆ ನಮ್ಮ ಉದ್ದೇಶಪೂರ್ತಿಯಾದಂತೆ.

ಪ್ರಪಂಚದ ಪ್ರತಿಯೊಂದು ದೇಶದಲ್ಲಿಯೂ ಜನರು ಚಿನ್ನ, ರತ್ನ, ಶಿಲೆ ಮುಂತಾದವುಗಳು ಮನುಷ್ಯರ ಮೇಲೆ ಯಾವ ರೀತಿಯಾದ ಪರಿಣಾಮಗಳನ್ನುಂಟುಮಾಡುತ್ತವೆ ಎಂಬ ವಿಷಯದಲ್ಲಿ ಕುತೂಹಲಿಗಳಾಗಿರುತ್ತಾರೆ. ಉದಾಹರಣೆಗೆ ನಮ್ಮ ದೇಶದಲ್ಲಿ ಹಸಿರು ಬಣ್ಣದ ಜೇಡ್( Jade) ಶಿಲೆಯು ಮನುಷ್ಯನನ್ನು ಹೃದಯಾಘಾತದಿಂದ ತಪ್ಪಿಸುತ್ತದೆ ಎಂಬ ನಂಬಿಕೆಯು ಇರುತ್ತದೆ. ಕಾರ್ನೀಲಿಯನ್ ಎಂಬ ಶ್ವೇತ ರಕ್ತ ವರ್ಣದ ಮಣಿಯು ಮನುಷ್ಯರನ್ನು ಶತ್ರುಗಳ ಕೆಡಕು ನೋಟದಿಂದ ಕಾಪಾಡುತ್ತದೆ ಎಂಬ ನಂಬಿಕೆಯು ವ್ಯಾಪಕವಾಗಿದ್ದಿರುತ್ತದೆ. ನೀಲಮಣಿಯು ಉಬ್ಬಸವನ್ನು ಗುಣಪಡಿಸುತ್ತದೆ ಮತ್ತು ಮರಕತವು (ಪಚ್ಚೆಯು) ಮನೋರೋಗವನ್ನು ವಾಸಿಮಾಡುತ್ತದೆ ಎಂಬುದಾಗಿ ಜನರು ಬಹಳ ಕಾಲದಿಂದ ನಂಬಿರುತ್ತಾರೆ. ಹಾಗೆಯೇ ಲೋಹಗಳ ಪೈಕಿ ಚಿನ್ನವು ಬಹಳ ಹಿಂದಿನಿಂದ ತನ್ನದೇ ಆದ ವೈಶಿಷ್ಟ್ಯವನ್ನು  ಇರಿಸಿಕೊಂಡಿರುತ್ತದೆ. ಯೂರೋಪ್, ಅಮೆರಿಕಾ ಮುಂತಾದ ದೇಶಗಳಲ್ಲಿ ಅದನ್ನು ವಸ್ತು(ಶರೀರ)ಗಳ ಮೇಲೆ ಬಹಳ ಪರಿಣಾಮಕಾರಿಯಾದ ಲೋಹವಾಗಿ (catalytic agent) ಬಳಸುವುದು ಕಂಡುಬರುತ್ತದೆ. ಈ ಹಳದಿ ಬಣ್ಣದ, ಪ್ರಕಾಶಮಾನವಾದ, ಯಾವ ಕಾರಣದಿಂದಲೂ ಬದಲಾವಣೆ ಹೊಂದದ, ಅತ್ಯಂತ ಆಕರ್ಷಕವಾದ ಲೋಹವು ನಮ್ಮ ದೇಶದಲ್ಲಿಯೂ ಸಹ ಬಹಳ ಪ್ರಶಸ್ತವಾಗಿ ಗಣಿಸಲ್ಪಟ್ಟಿರುತ್ತದೆ. ಉರುಟನ್ನು ಬಿಟ್ಟರೆ ಇತರ ಮಂಗಳಾಭರಣಗಳೆಲ್ಲವೂ ಚಿನ್ನದಿಂದಲೇ ನಿರ್ಮಿಸಲ್ಪಡುತ್ತವೆ. ಆದುದರಿಂದ ಈ ಮಂಗಳಾಭರಣಗಳ ಒಂದು ಅರ್ಥವನ್ನು ನಾವು ಚಿನ್ನದಲ್ಲಿ ಮತ್ತು ಅದು ಸ್ತ್ರೀಯರ ಶರೀರ ಧರ್ಮದ ಮೇಲೆ ಉಂಟುಮಾಡುವ ಸತ್ಪರಿಣಾಮಗಳಲ್ಲಿ ಹುಡುಕಬೇಕಾಗುತ್ತದೆ.

ಅದಕ್ಕೆ ಮೊದಲು ಹಾಕಿಕೊಳ್ಳಬಹುದಾದರೂ, ಮಂಗಳಾಭರಣಗಳನ್ನು ವಿಧಿಪೂರ್ವಕವಾಗಿ ಮತ್ತು ನಿಯತವಾಗಿ ಧರಿಸಲಾರಂಭಿಸುವುದು ವಿವಾಹದ ಮಂಗಳ ಸಮಯದಲ್ಲಿ. ವಿವಾಹದಿಂದಲೇ ಸ್ತ್ರೀಯ ನಿಜವಾದ ಜೀವನವು ಆರಂಭಿಸುತ್ತದೆ. ವಿವಾಹದ ಉದ್ದೇಶವು ಸಂತಾನವಾದುದರಿಂದ, ಸಂತಾನಕ್ಕೆ ಬೇಕಾದ ದೇಹಧರ್ಮವನ್ನು ಕಾಪಾಡುವುದು ಮತ್ತು ಅದಕ್ಕೆ ಪೋಷಕವಾದ ವಿಧಿಗಳನ್ನು ಅನುಸರಿಸುವುದು ವಿವಾಹಕರ್ಮದ ಅಂಗಗಳಾಗುತ್ತವೆ. ಅದುದರಿಂದಲೇ ವಿವಾಹದಲ್ಲಿ ಪದೇ ಪದೇ ರೋಗ ಹಾಗೂ ದೋಷಗಳನ್ನು ನಿವಾರಣೆ ಮಾಡುವ ಮಂತ್ರಗಳನೇಕ ಹೇಳಲ್ಪಡುತ್ತವೆ. ಆ ಸಮಯದಲ್ಲಿ ಚಿನ್ನದ ಮಂಗಳಾಭರಣಗಳನ್ನು ಕನ್ಯೆಗೆ ತೊಡಿಸುವುದರ ಉದ್ದೇಶವು ಅದಕ್ಕೆ ನಿಕಟವಾಗಿ ಸಂಬಂಧಿಸಿರುತ್ತದೆ ಎಂದು ಹೇಳಬಹುದು. ಸ್ತ್ರೀಯರ ಶರೀರದಲ್ಲಿ ಋತು ಸಂಬಂಧವಾದ ಆವೃತ್ತಿಗಳು ಯಾವುದೋ ವಯಸ್ಸಿನವರೆಗೆ ಎಡೆಬಿಡದೆ ಆಗುತ್ತಿರುತ್ತವೆ. ಪ್ರಸವಾದಿಕಾರಣಗಳಿಂದ ವಾತಾದಿ ದೋಷಗಳು ಉಲ್ಬಣಿಸುವ ಸನ್ನಿವೇಶ ಬಹಳ ಅಧಿಕ. ಕ್ಷಯ ಮೊದಲಾದ ರೋಗಗಳಿಗೆ ಅವರು ಪುರುಷರಿಗಿಂತ ಅಧಿಕವಾಗಿ ಈಡಾಗುವ ಸಂಭವವಿರುತ್ತದೆ.

ಅವುಗಳನ್ನು ಹಾಕಿಕೊಳ್ಳುವ ಸ್ಥಾನ ( ಕಿವಿ, ಮಣಿಕಟ್ಟು, ಕತ್ತು, ಹರಡು ಮತ್ತು ಕಾಲಿನ ಎರಡನೆಯ ಬೆರಳು)ಗಳ  ಕಾರಣದಿಂದಲೂ  ಮತ್ತು ದ್ರವ್ಯಗುಣದ ಕಾರಣದಿಂದಲೂ ಈ ಮಂಗಳಾಭರಣಗಳು ಶರೀರದ ಧಾತುಗಳಲ್ಲಿ ಉಂಟಾಗುವ ದೋಷಗಳೆಲ್ಲವನ್ನೂ ಹೋಗಲಾಡಿಸಿ ಶರೀರದಲ್ಲಿ ಸಮಸ್ಥಿತಿಯನ್ನುಂಟುಮಾಡುತ್ತವೆ. ಶ್ರೀರಂಗಮಹಾಗುರುವು ನಾಡೀಶಾಸ್ತ್ರದ ಸಹಾಯದಿಂದ ಲೋಹಗಳ ಪೈಕಿ ಚಿನ್ನವು ಶರೀರದಲ್ಲಿ ದೋಷಸಾಮ್ಯವನ್ನುಂಟುಮಾಡುವುದರಲ್ಲಿ  ತೀವ್ರವಾಗಿ ಕೆಲಸ ಮಾಡುತ್ತದೆಂಬುದನ್ನು ನಮ್ಮಗಳಿಗೆ ಅನೇಕ ಬಾರಿ ತಿಳಿಯಗೊಟ್ಟಿದ್ದು ಈ ಸಂದರ್ಭದಲ್ಲಿ ಜ್ಞಾಪಕಕ್ಕೆ ಬರುತ್ತದೆ. "ತ್ರಿದೋಷಗಳಲ್ಲಿ ಎಂದರೆ ವಾತ, ಪಿತ್ತ, ಕಫಗಳಲ್ಲಿ ಸಾಮ್ಯವಿರುವುದೇ ಅರೋಗ್ಯತೆ ಎಂದು ಆಯುರ್ವೇದವು ಹೇಳುತ್ತದೆ. ಅಂತಹ ಸಾಮ್ಯದ ಸ್ಥಿತಿಯನ್ನು ಶರೀರದಲ್ಲಿ ಉಂಟುಮಾಡುವುದರಲ್ಲಿ ಚಿನ್ನಕ್ಕೆ ಸಮಾನವಾದ ಲೋಹವಿಲ್ಲ. (ಅರಿಶಿನವೂ ಸಹ ಚಿನ್ನದಷ್ಟೇ  ಚೆನ್ನಾಗಿ ಕೆಲಸಮಾಡುವುದನ್ನು ಅವರು ಒಮ್ಮೆ ಪ್ರಯೋಗಪೂರ್ವಕವಾಗಿ ತಿಳಿಯಗೊಟ್ಟರು.)" ಆದುದರಿಂದ ಚಿನ್ನದ ಆಭರಣವನ್ನು ಧರಿಸಿದುದರಿಂದಲೇ ಸ್ತ್ರೀಯರು ತಮಗೆ ಬರಬಹುದಾದ ಅನೇಕ ವಿಧವಾದ ರೋಗಗಳಿಂದ ರಕ್ಷಣೆ ಪಡೆಯುತ್ತಾಳೆ. ಆದುದರಿಂದಲೇ ವಿವಾಹದಲ್ಲಿ ಪಿತನಾದವನು "ಕನ್ಯಾಂ ಕನಕ ಸಂಪನ್ನಾಂ ಕನಕಾಭರಣೈರ್ಯುತಾಂ|  ದಾಸ್ಯಾಮಿ ವಿಷ್ಣವೇ ತುಭ್ಯಂ ಬ್ರಹ್ಮಲೋಕ ಜಿಗೀಷಯಾ||" ಎಂಬ ಮಾತನ್ನು ಹೇಳುತ್ತಾ ಕನ್ಯಾದಾನಮಾಡುತ್ತಾನೆ. ಅಲ್ಲಿ ಕನಕಾಭರಣಗಳಿಂದ ಕೂಡಿದ ಕನ್ಯೆಯನ್ನು ದಾನಮಾಡುವುದು ತನ್ನ ಐಶ್ವರ್ಯವನ್ನು ತೋರಿಸುವುದಕ್ಕಲ್ಲ. ಅದರಲ್ಲಿ ಆಳವಾದ ವಿಜ್ಞಾನವಿರುತ್ತದೆ. ಶಾರೀರಕ ಮರ್ಮಗಳ ತಿಳಿವಳಿಕೆ ಇರುತ್ತದೆ. ನಿರ್ದೋಷಿಯಾದ ಹಾಗೂ ನಿರೋಗಳಾದ ಕನ್ಯೆಯನ್ನು ಅವನು ಒಬ್ಬ ವರನಿಗೆ ಮದುವೆ ಮಾಡಿಕೊಡುತ್ತಾನೆ.

ಈ ಮಂಗಳಾಭರಣಗಳು ಕೇವಲ ಶಾರೀರಿಕವಲ್ಲದೆ ಆಳವಾದ ಆಧ್ಯಾತ್ಮಿಕ ಅರ್ಥದಿಂದಲೂ ಸಹ ಕೂಡಿರುತ್ತದೆ. ಆಧ್ಯಾತ್ಮಿಕ ಎಂಬ ಪದವು ಭಾರತೀಯ ಋಷಿಗಳಿಗೆ ಯಾವ ಅರ್ಥವನ್ನು ಕೊಡುತ್ತಿದ್ದಿತು ಎಂದರೆ, ಅವರು ಯೋಗ ಮುಂತಾದ ಸಾಧನಗಳಿಂದ ಹೇಗೆ ಎಲ್ಲರಿಗೂ ಪ್ರಭುವಾದ ಪರಮಾತ್ಮನನ್ನು ತಮ್ಮ ಶರೀರವೆಂಬ
ದೇಗುಲದಲ್ಲಿ ಪ್ರತ್ಯಕ್ಷ ಮಾಡಿಕೊಂಡು, ಅದರ ಸವಿನೆನೆಪಿನಿಂದ ಕೂಡಿ, ಜೀವನ ಮಾಡಲು ಎಳೆಸಿದರು ಎಂಬುದನ್ನು ನಾವು ನಮ್ಮ ಪತ್ರಿಕೆಯಲ್ಲಿ  ಬಗೆ ಬಗೆಯಾಗಿ ವಿವರಿಸಲು ಯತ್ನಿಸುತ್ತೇವೆ. ಅಂತಹ ಜೀವನವನ್ನು ಮಾಡಲು ಸಹಾಯ ಮಾಡುವುದರಲ್ಲಿ ಈ  ಮಂಗಳಾಭರಣಗಳ ಪಾತ್ರ ತುಂಬ. ಅವುಗಳನ್ನು ಹಾಕಿಕೊಳ್ಳುವ ಸ್ಥಾನಗಳೆಲ್ಲವೂ ಶರೀರದ ಮುಖ್ಯವಾದ ಮರ್ಮಸ್ಥಾನಗಳು. ಯೋಗಿಯಾದವನು ಬಂಧ, ಮುದ್ರೆ ಮುಂತಾದ ಯೋಗಕ್ರಿಯೆಗಳಿಂದ ಏನನ್ನು ಸಾಧಿಸುತ್ತಾನೆಯೋ ಅದನ್ನು ಸಾಧ್ವೀಮಣಿಯಾದ ಸ್ತ್ರೀಯು ಆಯಾ ಮರ್ಮಸ್ಥಾನಗಳಲ್ಲಿ ಧರಿಸಿದ ತನ್ನ ಆಭರಣಗಳಿಂದ ಸಾಧಿಸುತ್ತಾಳೆ. " ಪತಿಯೇ ಪರದೈವ" ಎಂಬ ಮಾತನ್ನು ಕೇಳುತ್ತೇವೆ. ತನಗೆ, ತನ್ನ ಪತಿಗೆ ಹಾಗೇ ಎಲ್ಲರಿಗೂ ದೇವನಾದ ಪ್ರಭುವು ತಾನೆ ನಿಜವಾದ ಪರದೈವ. ಪತಿಯನ್ನೇ ಪರದೈವವಾಗಿ ಭಾವಿಸುವುದರ ಮೂಲಕ ಅವಳು ಪರದೈವವನ್ನೇ ಕಡೆಗೆ ಸಾಕ್ಷಾತ್ಕರಿಸಿಕೊಳ್ಲುವ ದಾರಿಯಲ್ಲಿ ಹೋಗುವ ನಾರೀಮಣಿಯಾಗಿರುತ್ತಾಳೆ. ಅವಳು ಧರಿಸುವ ಕುಂಕುಮ, ಅರಿಶಿನ, ತ್ರಿವೇಣಿ, ಬೈತಲೆ, ಮಂಗಳಾಭರಣ ಇತ್ಯಾದಿಗಳೆಲ್ಲವೂ ಆ ದಾರಿಯನ್ನೇ ಸೂಚಿಸುತ್ತವೆ. ಅದರ ಸ್ಮರಣೆಯನ್ನು ಹೊಂದಿರುತ್ತವೆ. ಆ ದಾರಿಯಲ್ಲಿರಬೇಕಾದರೆ ಆವಶ್ಯಕವಾದ ಶಾರೀರಿಕ ಮತ್ತು ಮಾನಸಿಕ ಸ್ಥಿತಿಗತಿಗಳನ್ನು ಉಂಟುಮಾಡುತ್ತವೆ. ಅವಳ ಶರೀರ ಸೌಂದರ್ಯದ ಜೊತೆಗೆ ಅವಳ ಆತ್ಮ ಸೌಂದರ್ಯವನ್ನು ಎತ್ತಿ ಹೇಳುತ್ತವೆ. ಒಟ್ಟಿನಲ್ಲಿ ಅವು ಕೇವಲ ಶರೀರ ಸೌಂದರ್ಯವನ್ನೇ ಇಟ್ಟುಕೊಂಡು ಮಾಡಿಕೊಳ್ಳುವ ಅಲಂಕಾರಗಳಲ್ಲ.

ಇಲ್ಲಿ ಶ್ರೀರಂಗಗುರುವು ಹೇಳಿದ ಒಂದು ಸಂಗತಿ ನಮಗೆ ಜ್ಞಾಪಕಕ್ಕೆ ಬರುತ್ತದೆ. ಶ್ರೀರಂಗ ಗುರುವಿನ ಜೀವನ ಬಡತನದಲ್ಲಿಯೇ ಕಳೆದ ಜೀವನವಾಗಿದ್ದಿತು. ಅವರು ತಮ್ಮ ಪತ್ನಿಗೆ ಆಭರಣಾದಿಗಳನ್ನು ಮಾಡಿಸಿ ಕೊಡುವ ಸ್ಥಿತಿಯಲ್ಲಿರಲಿಲ್ಲ. ಪ್ರತಿಯಾಗಿ ಅನೇಕ ಬಾರಿ ತಂದೆಯ ಮನೆಯಲ್ಲಿ ಅವರಿಗೆ ಹಾಕಿದ್ದ ಬಳೆ ಇತ್ಯಾದಿಗಳನ್ನು ಅಡವಿಟ್ಟು ಸಾಲ ಪಡೆದು ಜೀವನ ಮಾಡಬೇಕಾಗುತ್ತಿದ್ದಿತು. ಯಾವುದೋ ಸಂದರ್ಭದಲ್ಲಿ ಅವರು ತಮ್ಮ ಪತಿಯು ತಮಗೆ ಒಡವೆ ಇತ್ಯಾದಿಗಳನ್ನು ಮಾಡಿಸಿಕೊಡದಿದ್ದ ವಿಷಯವನ್ನು ಹೇಳಿದರು ಎಂದು ಕಾಣುತ್ತೆ. ಶ್ರೀರಂಗಗುರುವು ಯೋಗ ಮಾರ್ಗದ ಕೊನೆಯನ್ನು ಮುಟ್ಟಿದ್ದ ಅವರಿಗೆ "ನಿನ್ನ ಒಳಗೆ ನೋಡಿಕೋ. ಆ ಒಳಆಭರಣಗಳಿರುವಾಗ ಹೊರ ಆಭರಣಗಳೇಕೆ" ಎಂದರಂತೆ. ಅವರು ನಕ್ಕುಬಿಟ್ಟು ಮತ್ತೆ ಆಭರಣಗಳನ್ನು ಕೇಳಲಿಲ್ಲವೆಂದು ಅನೇಕ ವರ್ಷಗಳ ಹಿಂದೆ ಗುರುಭಗವಂತರು ನಮಗೆ ಹೇಳಿದರು.                                      
ಈ ಮಂಗಳಾಭರಣಗಳು ಯೋಗದಿಂದ ಪ್ರಾಪ್ತವಾದ ತಿಳಿವಳಿಕೆಯಿಂದ ಹಾಸು ಹೊಕ್ಕಾಗಿ ಣೆಯಲ್ಪಟ್ಟಿರುತ್ತವೆ. ಅವು ಅತ್ಯಂತ ಶುದ್ಧವಾದ ನೀತಿ ಮತ್ತು ನಡತೆಗಳ ಕುರುಹಾಗಿರುತ್ತವೆ. ಅವುಗಳಲ್ಲಿ ಸಂಯಮಶೀಲತೆ ಇದೆ. ಪತಿ ಪತ್ನಿಯರಲ್ಲಿ ಐಕಮತ್ಯವನ್ನು ಸಾಧಿಸುವ ಮರ್ಮವಿರುತ್ತದೆ.  ಆದುದರಿಂದಲೇ ಸಂಯಮ ಶೀಲರಾದ ನಮ್ಮ ಪೂರ್ವಿಕರು  ಅವಕ್ಕೆ ಅಷ್ಟು ಮಹತ್ವ ಕೊಟ್ಟರು.

ನಮ್ಮದು ಅಸಂಯಮಶೀಲವಾದ ನಾಗರಿಕತೆಯ ಯುಗ. ಆದುದರಿಂದಲೇ ಸಂಯಮಶೀಲರ ಕಡೆಯಿಂದ ನಮಗೆ ದೊರೆತ ಉಡಿಗೆತೊಡಿಗೆಗಳೆಲ್ಲವನ್ನೂ ನಾವು ಒಂದೊಂದಾಗಿ ಕಳೆದುಹಾಕುತ್ತಿದ್ದೇವೆ. 

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೪ ಸಂಚಿಕೆ:೦೮ ಏಪ್ರಿಲ್: ೧೯೮೨  ತಿಂಗಳಲ್ಲಿ  ಪ್ರಕಟವಾಗಿದೆ.  

Sunday, January 17, 2021

ಆರ್ಯಸಂಸ್ಕೃತಿ ದರ್ಶನ - 26 (Arya Samskruti Darshana - 26)

ಓಂ ಶ್ರೀಃ
 " ಐಶ್ವರ್ಯ"-ಒಂದು  ಪದವಿವೇಚನೆ
ಲೇಖಕರು: ವಿದ್ವಾನ್|| ಶ್ರೀ ಛಾಯಾಪತಿ

  

ಪ್ರತಿಪದವೂ ಒಂದು ಅರ್ಥವನ್ನು ಹಿಂದಿಟ್ಟುಕೊಂಡೇ ಹುಟ್ಟುತ್ತದೆ. ಆ ಅರ್ಥವೇ ಪದದ ಜೀವ. ಅಂತೆಯೇ "ಭಾವ ಉಸಿರು: ಭಾಷೆ ಒಡಲು" ಎಂಬ ಮಾತು ಸಿದ್ಧವಾಗಿದೆ. ಪದದ ಹುಟ್ಟಿಗೆ ಕಾರಣವಾದ ಭಾವವು ಆ ಭಾವವನ್ನು ತಳೆದ ಮನಸ್ಸಿನ ಎತ್ತರವನ್ನು ಸೂಚಿಸುತ್ತದೆ. ಉದಾಹರಣೆಗೆ ಊಟಮಾಡು, ಅನ್ನ ತಿನ್ನು, ಎಂಬ ಪದಗಳು ಆಹಾರವನ್ನು ಸ್ವೀಕರಿಸು ಎಂಬ ಅಭಿಪ್ರಾಯವನ್ನು ಮಾತ್ರ ಹೇಳುತ್ತದೆ. ಅದೇ ಪ್ರಸಾದವನ್ನು ಸ್ವೀಕರಿಸು, ದೇವರ ಪೂಜೆಮಾಡು ಎಂಬ ವ್ಯವಹಾರವು ಆಹಾರ ಸ್ವೀಕಾರವು ಕೇವಲ ಹೊಟ್ಟೆ ತುಂಬುವುದಕ್ಕಷ್ಟೇ ಅಲ್ಲ, ಮನಸ್ಸನ್ನೂ ಪ್ರಸನ್ನತೆಯಿಂದ ತುಂಬುವ ಪ್ರಸಾದವೂ ಆಗಿದೆ. ಶರೀರವನ್ನು ಬೆಳೆಸುವುದಷ್ಟೇ ಆಹಾರದ ಗುರಿಯಲ್ಲ, ಶರೀರವನ್ನು ತುಂಬಿ ಆಡಿಸುವ ಚೈತನ್ಯದ ನೆಲೆಯಾದ ದೇವನ ಪ್ರೀತಿಯಲ್ಲಿ ನಿಲ್ಲುವುದು ಆಹಾರ ಸ್ವೀಕಾರದ ಲಕ್ಷ್ಯ ಎಂಬಷ್ಟು ಆಳವಾದ ಭಾವವನ್ನು ಸಾರುತ್ತದೆ. ಆದ್ದರಿಂದಲೇ ಮಾತು ಒಂದು ದೇಶದಲ್ಲಿ ಬೆಳೆದ ಸಂಸ್ಕೃತಿಯ ಕೈಗನ್ನಡಿಯೂ ಆಗಿದೆ ಎಂಬುದನ್ನು ಭಾಷಾತಜ್ಞರು ಸಾರುತ್ತಾರೆ.

ಭಾರತರಾದ ಜ್ಞಾನಿಗಳ ಕಡೆಯಿಂದ ಬಳಕೆಗೆ ಬಂದಿರುವ "ಐಶ್ವರ್ಯ" ಎಂಬ ಪದವು ವ್ಯವಹಾರದಲ್ಲಿ ಧನ-ಕನಕ-ವಸ್ತು-ವಾಹನಾದಿ ಸಮೃದ್ಧಿಯನ್ನು  ಹೇಳುವಂತೆ ಉಳಿದಿದ್ದರೂ, ಹುಡುಕಿ ನೋಡಿದಾಗ ಅವರ ಜ್ಞಾನ ಭಾವದ ಔನ್ನತ್ಯದೆಡೆಗೂ ಒಯ್ಯತಕ್ಕದ್ದಾಗಿದೆ. ಸಂಪತ್ತನ್ನು ತಿಳಿಸಲು rich, Wealth, ಹಣ, ಮೊದಲಾದ ಪದಗಳು ಬಳಕೆಯಲ್ಲಿದೆ ನಿಜ. ಆದರೆ ಅವು ಭೌತಿಕವಾದ ಸಮೃದ್ಧಿಯನ್ನು ಮಾತ್ರ ಸೂಚಿಸುತ್ತವೆ.

ಐಶ್ವರ್ಯ ಎನ್ನುವ ಪದದಾದರೋ "ಈಶ್ವರನ ಸಂಬಂಧವಾದುದು-ಈಶ್ವರ ಭಾವವುಳ್ಳದ್ದು" ಎಂಬ ಅರ್ಥವನ್ನೊಳಗೊಂಡಿದೆ. ಈಶ್ವರ ಎನ್ನುವ ಪದವು ವಿಶ್ವವನ್ನಾಳುವ ಶಕ್ತಿ, ವಿಶ್ವವನ್ನು ವಿಸ್ತರಿಸಿದ ಶಕ್ತಿ ಎಂಬ ಅರ್ಥವನ್ನೊಳಗೊಂಡಿದೆ. ನಿಸರ್ಗದಲ್ಲಿ ತುಂಬಿರುವ ಎಲ್ಲ ಸಂಪತ್ತೂ ಈಶ್ವರನದು ಎನ್ನುವ ಭಾವವನ್ನು "ಐಶ್ವರ್ಯ" ಎಂಬುದು ಸಾರುತ್ತದೆ. ಇದನ್ನೇ ಈಶಾವಾಸ್ಯೋಪನಿಷತ್ತಿನ ಮೊದಲನೆಯ ಮಂತ್ರವು ಹೀಗೆ ಸಾರುತ್ತದೆ.

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀಥಾಃ ಮಾಗೃಧಃ ಕಸ್ಯಸ್ವಿದ್ಧನಮ್||

(ಈ ಜಗತ್ತಿನಲ್ಲಿ ಯಾವುದಿದೆಯೋ ಆ ಎಲ್ಲವೂ ಈಶನ ವಾಸದ ಎಡೆ. ಅವನು ಯಾವುದನ್ನು ಕೊಟ್ಟಿದ್ದಾನೆಯೋ ಅದನ್ನು ಅನುಭವಿಸಿ. ಯಾರಧನವನ್ನೂ ಬಯಸ ಬೇಡಿ). ಅಂತೆಯೇ ಸೃಷ್ಟಿಯ ಸಮಸ್ತ ವಸ್ತುಗಳೂ ಯಜ್ಞಕ್ಕಾಗಿ (ಈಶನ ಪೂಜೆಗಾಗಿ) ಸೃಷ್ಟಿಯಾಗಿವೆ ಎಂಬುದು ಜ್ಞಾನಿಗಳ ನೋಟ. ಜ್ಞಾನಿಗಳ ದೃಷ್ಟಿಯಿಂದ ಈಶ್ವರನಿಂದ ಬೆಳೆದ ಸೃಷ್ಟಿಯೆಲ್ಲವೂ ಐಶ್ವರ್ಯವೇ. ಅದು ಕೇವಲ ಭೌತಿಕ ಸಂಪತ್ತಲ್ಲ. ಭೋಗವೂ ಹೇಗೆ ಐಶ್ವರ್ಯವೋ, ಯೋಗವೋ ಅವರ ದೃಷ್ಟಿಯಿಂದ  ಐಶ್ವರ್ಯ. ಅಂತೆಯೇ ಶ್ರೀಕೃಷ್ಣನು ಯೋಗೇಶ್ವರ. ಶಿವನು ಯೋಗೀಶ್ವರ.

ನಿಸರ್ಗವು-ಭೋಗೈಶ್ವರ್ಯ ಮತ್ತು ಯೋಗೈಶ್ವರ್ಯಗಳಿಂದ ತುಂಬಿದ ಭಂಡಾರ. ಅಂತೆಯೇ ಆ ಪ್ರಕೃತಿ ಮಾತೆಯು ಮಹಾಲಕ್ಷ್ಮಿ-- ಸಂಪತ್ತಿನ ಅಧಿದೇವತೆ. ನಿಸರ್ಗದ ಹೊರಮೈ ಮಾತ್ರ ಸಂಪತ್ತಲ್ಲ. ಅದರ ಒಳಮೈಯೂ ಸಂಪದ್ಭರಿತ.  ಪ್ರಕೃತಿಮಾತೆಯ ಬಸಿರಿನಿಂದಲೇ ಮೈತಳೆದ ಜ್ಞಾನಿಗಳು ಜೀವಲೋಕದ ಒಳಗೆ ನಿಗೂಢವಾಗಿ ಆಕೆಯು ಇಟ್ಟಿರುವ ಯೋಗೈಶ್ವರ್ಯದ ಭಂಡಾರದ ಕೀಲಿಕೈಯನ್ನೂ ಹುಡುಕಿ ಪಡೆದರು. ಅಂತೆಯೇ "ಶ್ರೀ" "ಶ್ರಯಣೀಯಳು"-ಆಶ್ರಯಿಸಬೇಕಾದವಳು ಎಂಬರ್ಥದಲ್ಲಿ ಆತ್ಮಶ್ರೀ ಭರಿತಳಾದ ಲಕ್ಷ್ಮಿಯನ್ನು ನರರಿಗೆ ಅಯನನಾಗಿ ನೆಲೆಯಾಗಿರುವ ನಾರಾಯಣನ ಮಡದಿ ಎಂದ ಗುರುತಿಸಿದರು.

ಯೋಗವೂ ಐಶ್ವರ್ಯ-ಭೋಗವೂ ಐಶ್ವರ್ಯ ಎಂದು ಸರಿಯಾಗಿ ಗುರುತಿಸಿದ ಅವರು ಆತ್ಮಕಲ್ಯಾಣ-ಇಂದ್ರಿಯ ಕಲ್ಯಾಣಗಳೆರಡನ್ನೂ ತುಂಬಿ ಯೋಗ –ಭೋಗ ಸಮೃದ್ಧಿಯಿಂದ ಬಾಳಿದರು.
ಹೀಗೆ ಐಶ್ವರ್ಯ ಎಂಬ ಪದವು ಈಶ್ವರನಿಂದ ಅರಳಿದ ನಿಸರ್ಗದಲ್ಲಿ ತುಂಬಿರುವ ಎಲ್ಲ ಬಗೆಯ ಸಂಪತ್ತುಗಳಿಗೂ ಅನ್ವಯಿಸುವ ವ್ಯಾಪಕ ಪದವಾಗಿದೆ. ಪಂಚಭೂತಗಳ ಪ್ರಪಂಚವನ್ನು ಮಾತ್ರ ನೋಡದೇ ಆತ್ಮ ಪ್ರಪಂಚವನ್ನೂ ತುಂಬಿಕೊಂಡು ಹರಿದಿದೆ ಅವರ ಸಂಸ್ಕೃತಿ ಎಂಬುದಕ್ಕೆ "ಐಶ್ವರ್ಯ" ಎಂಬ ಪದವೂ ಸಮರ್ಥವಾದ ಸಾಕ್ಷಿಯಾಗಿದೆ.

ಕೇವಲ ಭೋಗಕ್ಕೆ ಕಾರಣವಾದ ಸಂಪತ್ತನ್ನು ಪಡೆದವನು ಲೌಕಿಕ ದೃಷ್ಟಿಯಿಂದ ಹಣವಂತನಾದರೂ ಜ್ಞಾನಿಗಳ ದೃಷ್ಟಿಯಿಂದ ಐಶ್ವರ್ಯವಂತನಾಗಲಾರ. ಆತ್ಮಶ್ರೀ ದೃಷ್ಟಿಯಿಂದ ಆತ ದರಿದ್ರನೇ. ಆತ್ಮ ಲಾಭವೇ ಜೀವನದ ಪರಮ ಲಾಭವೆಂದು ಎತ್ತಿ ಸಾರುವ  ಜ್ಞಾನಿಗಳ ಮಾತು ಆತ್ಮೈಶ್ವರ್ಯದ ಹಿರಿಮೆಯನ್ನು ಸಾರುತ್ತದೆ. ಆದರೆ ಅದೇ ಆತ್ಮಶ್ರೀಯನ್ನು ಪಡೆದವನು ಹೊರದೃಷ್ಟಿಯಿಂದ ದರಿದ್ರನಾದರೂ, ಜೀವವನ್ನಾಳುವ ಈಶ್ವರ ಭಾವವನ್ನು ಗುರುತಿಸಿದವನಾದ ಕಾರಣ, ಜ್ಞಾನಿಗಳ ದೃಷ್ಟಿಯಿಂದ ಐಶ್ವರ್ಯವಂತನೇ ಸರಿ. " ನಾನೇಕೆ ಬಡವನೋ ನಾನೇಕೆ ಪರದೇಶಿ ಶ್ರೀನಿಧೇ ಹರಿ ಎನಗೆ ನೀನಿರುವ ತನಕ" ಎಂಬ ಪುರಂದರದಾಸರ ಮಾತೂ ಈ ಭಾವವನ್ನೇ ಸಾರುತ್ತದೆ.

ಪರಿಪೂರ್ಣ ಮನೋಗತಿಯುಳ್ಳ ಜ್ಞಾನಿಗಳಿಗೆ ತಮ್ಮ ಎಲ್ಲ ಐಶ್ವರ್ಯದ ಭಂಡಾರ ಅನುಗ್ರಹಿಸಿದ ಮಹಾಲಕ್ಷ್ಮಿಗೂ, ಲಕ್ಷ್ಮೀಪತಿಯಾಗಿ ಐಶ್ವರ್ಯಕ್ಕೆ ಮೂಲನಾದ ನಾರಾಯಣನಿಗೂ ನಮಿಸಿ, ಈ ಬರಹಕ್ಕೆ ಕಾರಣರಾದ, ವಿವೇಕ ಸಂಪತ್ತನ್ನು ಅನುಗ್ರಹಿಸಿದ ಆತ್ಮ ಶ್ರೀನಿವಾಸನಾದ ಶ್ರೀ ರಂಗಮಹಾಗುರುವಿಗೆ, ಅವನೊಳಗಿನ ಈಶ್ವರೀ ಶಕ್ತಿಗೆ ಈ ಬರಹವನ್ನರ್ಪಿಸುತ್ತೇನೆ.  

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ  ಫೆಬ್ರವರಿ ೧೯೮೨ ಸಂಪುಟ :೦೪ ಸಂಚಿಕೆ : ೦೪ ರಲ್ಲಿ ಪ್ರಕಟವಾಗಿದೆ.

Saturday, January 16, 2021

ಆಸನ (Asana)

ಲೇಖಕರು: ಶ್ರೀ ಜಿ ನಾಗರಾಜ

(ಪ್ರತಿಕ್ರಿಯಿಸಿರಿ lekhana@ayvm.in)




ಪತಂಜಲಿಗಳ ಯೋಗಸೂತ್ರವು, ಸ್ಥಿರವೂ ಸುಖಕರವೂ ಆದುದು ಆಸನ ಎಂದು ಹೇಳುತ್ತದೆ. ಅಷ್ಟಾಂಗಯೋಗದ ಅಂತಿಮ ಲಕ್ಷ್ಯವಾದ ಸಮಾಧಿಸ್ಥಿತಿಯು, ಶರೀರವು ದೀರ್ಘಕಾಲ ಒಂದೇ ಸ್ಥಿತಿಯಲ್ಲಿರುವುದನ್ನು ಅಪೇಕ್ಷಿಸುತ್ತದೆ. ಆಸನಾಭ್ಯಾಸವು ಶರೀರಕ್ಕೆ ಬಹಳ ಹೊತ್ತು ಒಂದು ಭಂಗಿಯಲ್ಲಿರುವ ಸಾಮರ್ಥ್ಯವನ್ನು ತಂದುಕೊಡುತ್ತದೆ.

ಸೂರ್ಯನಮಸ್ಕಾರ, ಪಶ್ಚಿಮತಾನಾಸನ, ಪದ್ಮಾಸನ ಮುಂತಾದವು ಇಂದು ಪ್ರಸಿದ್ಧವಾಗಿರುವ ಆಸನಗಳಾಗಿವೆ. ಪ್ರಪಂಚದಲ್ಲಿ ಎಷ್ಟು ಬಗೆಯ ಜೀವಜಾತಿಗಳುಂಟೋ ಅಷ್ಟುಬಗೆಯ ಆಸನಗಳುಂಟೆಂಬ ಶಾಸ್ತ್ರವಾಕ್ಯವನ್ನು ಶ್ರೀರಂಗಮಹಾಗುರುಗಳು ವಿಶೇಷವಾಗಿ ಉಲ್ಲೇಖ ಮಾಡುತ್ತಿದ್ದರು. ಪರಂಪರೆಯಲ್ಲಿ ಜೀವಜಾತಿಗಳು 84 ಲಕ್ಷ ಎಂದು ಪ್ರಸಿದ್ಧವಾಗಿದೆ ಮತ್ತು ಇವುಗಳಲ್ಲಿ 84 ಆಸನಗಳು ಅಭ್ಯಾಸಕ್ಕೆ ಪ್ರಶಸ್ತವಾದ ಆಸನಗಳು ಎಂದು ಯೋಗೋಪನಿಷತ್ತು ಹೇಳುತ್ತದೆ. ಮತ್ತು ಬಾಲಕರಿಗೆ ಸುಲಭಸಾಧ್ಯವೂ, ವಯಸ್ಕರಿಗೆ ಸ್ವಲ್ಪ ಶ್ರಮಸಾಧ್ಯವೂ ಆಗಿರುವ ಆಸನಾಭ್ಯಾಸಕ್ಕೆ ಮತ್ತಾವುದೇ ದ್ರವ್ಯ ಅಥವಾ ಪದಾರ್ಥವನ್ನು ವ್ಯಯ ಮಾಡಬೇಕಾಗಿಲ್ಲದಿರುವುದರಿಂದ ಆಸನಗಳು ಪ್ರತಿಯೊಬ್ಬರೂ ಅಭ್ಯಸಿಸತಕ್ಕುದ್ದಾಗಿದೆ ಎಂದು ಆಸನಗಳನ್ನು ಪ್ರಶಂಸಿಸುತ್ತಿದ್ದರು.

ಮಹರ್ಷಿಗಳು ಯೋಗಾಭ್ಯಾಸದಲ್ಲಷ್ಟೇ ಅಲ್ಲದೇ ನಿತ್ಯಜೀವನದಲ್ಲಿಯೂ ಆಸನ ವಿಜ್ಞಾನದ ಮರ್ಮವನ್ನು ಹಾಸುಹೊಕ್ಕಾಗಿ ಅಳವಡಿಸಿದ್ದಾರೆ. ಯಾವ ಯಾವ ಶರೀರವಿನ್ಯಾಸವು ಯಾವ ಯಾವ ನಾಡಿಗಳಲ್ಲಿ ಪ್ರಾಣಶಕ್ತಿಯು ಹರಿಯುವಂತೆ ಮಾಡುತ್ತದೆ ಎನ್ನುವುದರ ಆಧಾರದ ಮೇಲೆ ಬೇರೆ ಬೇರೆ ಕಾರ್ಯಗಳಿಗೆ ಬೇರೆ ಬೇರೆ ಆಸನಗಳನ್ನು ನಿರ್ದೇಶಿಸಿದ್ದಾರೆ.

ರಾತ್ರಿ ನಿದ್ರಿಸಬೇಕಾದರೆ ಎಡಮಗ್ಗುಲಿಗೆ ತಿರುಗಿ ಮಲಗಬೇಕು, ಮತ್ತು ಏಳಬೇಕಾದರೆ ಬಲಮಗ್ಗುಲಿಗೆ ತಿರುಗಿ ಏಳಬೇಕು ಎನ್ನುವ ಪರಂಪರಾಗತ ರೂಢಿಯು ಆಸನಗಳ ವಿಜ್ಞಾನದ ಆಧಾರದ ಮೇಲೆ ರೂಪಿತವಾಗಿದೆ. ಒಂದೆರಡು ದಶಕಗಳ ಹಿಂದಿನವರೆವಿಗೂ ಹಿರಿಯರು, ಮಕ್ಕಳ ನಿಲುವಿನ ಅಥವಾ ನಡೆಯುವ ಭಂಗಿಗಳನ್ನು ತಿದ್ದುತ್ತಿದ್ದರು. ಯಾರಾದರೂ ಸೊಟ್ಟಗೆ ನಿಂತಿದ್ದರೆ ನೆಟ್ಟಗೆ ನಿಂತುಕೋ ಎಂದೋ ಅಥವಾ ಗೂನಿಕೊಂಡು ನಡೆಯುತ್ತಿದ್ದರೆ ಬೆನ್ನು ನೆಟ್ಟಗಿಟ್ಟುಕೊಂಡು ನಡೆ ಎಂದು ಬೆನ್ನುಮೂಳೆ ನೇರವಾಗಿರುವ ಶರೀರವಿನ್ಯಾಸವನ್ನು ರೂಢಿ ಮಾಡಿಸುತ್ತಿದ್ದರು.

ಇಂದು, ಅಡಿಗೆಯ ಬಹುತೇಕ ಕೆಲಸಗಳನ್ನು ನಿಂತುಕೊಂಡು ಮಾಡುತ್ತಿರುವುದರಿಂದ ಕಾಲುಗಳ ಮತ್ತು ಬೆನ್ನುಮೂಳೆಯ ಕೆಳಭಾಗದ, ಆಧಾರ ವ್ಯವಸ್ಥೆಯ ಹೊರೆ ಜಾಸ್ತಿಯಾಗಿ ಮಧ್ಯವಯಸ್ಕ ಮಹಿಳೆಯರಿಗೆ ಸೊಂಟ ನೋವು, ಬೆನ್ನು ನೋವು ಮತ್ತು ಮಂಡಿ ನೋವುಗಳು ಹೆಚ್ಚಾಗುತ್ತಿವೆಯೆಂದು ಆಧುನಿಕ ವೈದ್ಯರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ ಹಿಂದಿನವರು ಅಡಿಗೆ ಮಾಡಬೇಕಾದರೆ ಕುಳಿತೇ ಬಹುತೇಕ ಕೆಲಸಗಳನ್ನು ಮಾಡುತ್ತಿದ್ದಾಗ ಈ ಸಮಸ್ಯೆಗಳು ಹೆಚ್ಚಿರಲಿಲ್ಲ.

ಹೀಗೆ, ಆಸನ ವಿಜ್ಞಾನವು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಅಳವಡಿಸಲ್ಪಟ್ಟಿವೆ.

ಸೂಚನೆ : 16/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.   

Tuesday, January 12, 2021

Dayaa - Kindness Towards All Beings

Kannada Article By: Vid. Narasimha Bhat

English Rendering By:  MR Bhashyam

Respond to (lekhana@ayvm.in)


  

In Sanskrit the word dayaa has many synonyms like Krupa, Anukampa, Kaarunya, Ghruna etc just as English has kindness, compassion, pity, benevolence, magnanimity etc. Plants and animals, birds and trees etc have a right to live just as we have. They have a right to live as they please. We have no right to snatch this freedom.  And they have to live without fear. Then there will be balance in the ecosystem. The sentiment that there should be conditions conducive for all creation to live harmoniously is termed as dayaa – kindness. When we have this sentiment, there will be no inclination to create trouble, torture or coerce others. When others are in difficulty they should be protected, just as we ourselves would like to be –When this feeling becomes automatic it is termed Anukampa- compassion. Our hearts melt looking at the pain of humans and other beings in the same way when we are tortured by others., Such a condition of mind is described as dayaa.  We aspire to have the compassion of the Lord and the kindness of elders.

The outcome of this sentiment is non-violence. The environs around the people who practice non-violence will be rid of enmity.  "If one is established in non-violence his proximity will be free of enmity (Ahimsaa pratishtaayaam tattsannidhau vairatyaagah)" so says sage Pataanjali. That was how the hermitages of the sages of yore used to be. The worship and practices in and around the hermitages and the presence of the sages themselves resulted in hostility being rid off in even animals which are natural enemies.

 

Punishment- Nigraha – is also an act of Kindness:

Punishing the evil can be termed as "benevolence in punishment".  Graciousness towards evil is not recommended.  Magnanimity towards people who breed sorrow in others should never be practiced. One should never be generous towards people who burn houses and hearths of people, who poison others, who are armed, who occupy one's land, who steal money or women. Killing these types of people even without enquiry has been termed as dayaa by the knowledgeable elderly. Preventing these types from committing criminal deeds is an act of kindness towards the society.  "The Lord's act of destroying evil is also benevolence" so Shri ShriRanga Mahaguru used to say. The poet Kaalidaasa in his Raghuvamsha, has subliminally described the act of Shri Rama Killing the lady-demon Taataka even without considering that she was a female as "Rama launched his arrow together with kindness"

 

The Kindness of Jeemoota Vaahana:

The play Naagaananda of the dramatist Harsha is a great example of the sentiment of kindness – Karunaa Rasa. Jeemoota Vaahana goes to a sea shore for relaxation. There he sees many skeletons of snakes and enquires from his friend MitraaVasu about those. His friend tells him about the agreement between the eagle Garuda and the snakes. As per the agreement, the snakes had to present to Garuda a snake everyday as food. Hearing this, Jeemoota Vaahana, overcome by pity, decides to save the snakes by offering his body itself as food to Garuda. He goes to the sacrificial rock as a substitute for the serpent Shankha Chooda, the only progeny to an old snake. The eagle is wonderstruck by the happy countenance of Jeemota Vaahana even though his body was being devoured. Then goddess Durga appears, sprinkles holy water and brings Jeemoota Vaahana to life again.  Garuda himself brings ambrosia from heavens and rains it on the dead snakes. All the snakes come back to life again. This is a famous story of Kindness of Jeemota Vaahana towards all beings.


Note: The Kannada version of this article can be viewed at AYVM blogs.    

Sunday, January 10, 2021

ನಿಯಮ - ಸ್ವಾಧ್ಯಾಯ, ಈಶ್ವರ ಪ್ರಣಿಧಾನ (Niyama - Svadhyaya, Isvara Pranidhana)

ಲೇಖಕರು: ಶ್ರೀ ಜಿ ನಾಗರಾಜ

(ಪ್ರತಿಕ್ರಿಯಿಸಿರಿ lekhana@ayvm.in)


  

ಪತಂಜಲಿಗಳ ಯೋಗಸೂತ್ರದ ಕೊನೆಯ ಎರಡು ನಿಯಮಗಳು ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ.

ವ್ಯಾಸಭಾಷ್ಯದ ಅನುಸಾರ ಮೋಕ್ಷಶಾಸ್ತ್ರದ ಅಧ್ಯಯನ ಹಾಗೂ ಪ್ರಣವ ಜಪವೇ ಸ್ವಾಧ್ಯಾಯ. ಸ್ವಾಧ್ಯಾಯದ ನೇರವಾದ ಅರ್ಥ ತನ್ನನ್ನೇ ತಾನು ಅಧ್ಯಯನ ಮಾಡಿಕೊಳ್ಳುವುದು, ಆತ್ಮಾವಲೋಕನ ಮಾಡಿಕೊಳ್ಳುವುದು ಎಂದಾಗುತ್ತದೆ. ಮಹರ್ಷಿಗಳ ಅಭಿಮತದಲ್ಲಿ ಮಾನವ ಶರೀರವು ಇಡೀ ಬ್ರಹ್ಮಾಂಡದ ಸಂಗ್ರಹವಾದ ಮಾದರಿಯಾಗಿದ್ದು ಪಿಂಡಾಂಡ ಎನ್ನಿಸಿಕೊಳ್ಳುತ್ತದೆ. ಹೀಗಾಗಿ ಇಡೀ ಸೃಷ್ಟಿಯ ತತ್ತ್ವಗಳನ್ನು ಮಾನವನು ತನ್ನೊಳಗೇ ಅವಲೋಕಿಸಿಕೊಳ್ಳಬಹುದಾಗಿದೆ. ಮಾನವನಲ್ಲಿ ಭೌತಿಕ, ದೈವಿಕ ಹಾಗೂ ಆಧ್ಯಾತ್ಮಿಕ ಸ್ತರಗಳಿದ್ದು ಕೇವಲ ಭೌತಿಕ ಸ್ತರದಲ್ಲಿಯೇ ಅನೇಕ ವೈದ್ಯಕೀಯ ಶಾಸ್ತ್ರಗ್ರಂಥಗಳಿಗೆ ಸಾಕಾಗುವಷ್ಟು ವಿಷಯಗಳಿವೆ. ಇನ್ನು ದೈವೀ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಗಳನ್ನು ಪರಿಗಣಿಸಿದರೆ, ಮಾನವನ ಒಳಪ್ರಪಂಚ ಬಹಳ ವಿಸ್ತಾರವಾಗಿರುತ್ತದೆ. ಈ ಒಳಪ್ರಪಂಚದಲ್ಲಿ ಸಾಗಿ ಮೂಲನಾದ ಭಗವಂತನನ್ನು ತಲಪುವುದೇ ಯೋಗವಾದುದರಿಂದ ಈ ಒಳಪ್ರಪಂಚದ ವಿಜ್ಞಾನದ ಪರಿಚಯವು ಯೋಗ ಸಾಧನೆಗೆ ಬಹಳ ಪೋಷಕವಾಗಿರುತ್ತದೆ.

ನಂತರ ಈ ಸ್ವಾಧ್ಯಾಯವನ್ನು ಮಾಡುವುದು ಹೇಗೆ ಎನ್ನುವ ಪ್ರಶ್ನೆ ಬರುತ್ತದೆ. ತನ್ನೊಳಗಿನ ಪರಿಚಯ ಹೇಗೆ ಉಂಟಾಗುತ್ತದೆಂದರೆ, ಮೋಕ್ಷಶಾಸ್ತ್ರ( ಉಪನಿಷತ್ತುಗಳು ಮತ್ತು ಭಗವದ್ಗೀತೆಗಳ ಅನುಸಂಧಾನ ಮತ್ತು ಓಂಕಾರ ಜಪ)ದಿಂದ ಉಂಟಾಗುತ್ತದೆ ಎಂದು ವ್ಯಾಸಭಾಷ್ಯ ಹೇಳುತ್ತದೆ. ಪರಂಪರೆಯಲ್ಲಿ ಸ್ವಾಧ್ಯಾಯ ಎಂದರೆ, ವೇದದ ಸ್ವಶಾಖೆಯನ್ನು ಅಧ್ಯಯನ ಮಾಡುವುದು ಅಥವಾ ಅದರ ಸ್ಥಾನದಲ್ಲಿ ಪುರಾಣಗಳನ್ನು ಅಧ್ಯಯನ ಮಾಡುವುದು ಎನ್ನುವ ಅಭಿಪ್ರಾಯಗಳಿದ್ದು ಈ ಅಧ್ಯಯನಗಳಿಂದ ತಮ್ಮನ್ನೇ ತಾವು ಅಧ್ಯಯನ ಮಾಡಿಕೊಂಡಂತಾಗುತ್ತದೆಯೆಂಬುದು ಇಲ್ಲಿನ ಸಾರಾಂಶ.

ಈಶ್ವರನಲ್ಲಿ ಸರ್ವಸ್ವಾರ್ಪಣ ಬುದ್ಧಿಯನ್ನಿಟ್ಟುಕೊಳ್ಳುವುದು ಈಶ್ವರ ಪ್ರಣಿಧಾನ. ಈಶ್ವರ ಪ್ರಣಿಧಾನವು ಸಂಪೂರ್ಣವಾಗಿ ಕೂಡಿಬಂದರೆ ಸಮಾಧಿ ಸ್ಥಿತಿಯೇ ಉಂಟಾಗಿಬಿಡುತ್ತದೆ. ಹೀಗಾಗಿ ಭಕ್ತಿಯೋಗದ ಮಾರ್ಗಗಳಲ್ಲಿ ಈಶ್ವರ ಪ್ರಣಿಧಾನವು ಪ್ರಧಾನ ಅಂಗವಾಗಿರುತ್ತದೆ. ನಾನಾವಿಧವಾದ ಯೋಗಮಾರ್ಗಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ಅವು ಸಂಪೂರ್ಣವಾಗಿ ವಿವಿಕ್ತವಾದ ಸಾಧನಗಳಿಂದ ಕೂಡಿರದೇ ಅವುಗಳಲ್ಲಿ ಸಾಮಾನ್ಯವಾದ ಅಂಶಗಳೂ ಇದ್ದು ಕೆಲವು ಪ್ರಮುಖವಾಗಿದ್ದು ಮತ್ತಿತರವು ಗೌಣವಾಗಿರುತ್ತವೆ. ಈ ನೀತಿಯು ಈಶ್ವರ ಪ್ರಣಿಧಾನಕ್ಕೂ ಅನ್ವಯಿಸುತ್ತದೆ. ಆಸನ-ಪ್ರಾಣಾಯಾಮಾದಿ ಮೆಟ್ಟಿಲುಗಳನ್ನೇರಿ ಸಮಾಧಿ ಸ್ಥಿತಿ ತಲುಪಲು ಯಥಾಶಕ್ತಿ ಇಟ್ಟುಕೊಳ್ಳುವ ಈಶ್ವರಾರ್ಪಣ ಬುದ್ಧಿಯು ಪೋಷಕವಾದ ನಿಯಮವಾದರೆ, ಮುಖ್ಯವಾದ ಅಂಗವಾದಾಗ ಈಶ್ವರ ಪ್ರಣಿಧಾನವೇ ಒಂದು ಯೋಗಮಾರ್ಗವಾಗುತ್ತದೆ. ಯೋಗಸೂತ್ರದಲ್ಲಿ "ಈಶ್ವರ ಪ್ರಣಿಧಾನಾದ್ವಾ" ಎಂದು ಸಮಾಧಿ ಸ್ಥಿತಿಯನ್ನು ತಲುಪಲು ಇದೊಂದೇ ಸಾಕು ಎಂದೂ ಪತಂಜಲಿಗಳು ಘೋಷಿಸಿದ್ದಾರೆ. 

ಸೂಚನೆ : 9/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ. 

ಆರ್ಯಸಂಸ್ಕೃತಿ ದರ್ಶನ - 25 (Arya Samskruti Darshana - 25)

ಉಡಿಗೆ
ಲೇಖಕರು : ಡಾII ಶ್ರೀ ಎಸ್.ವಿ.ಚಾಮು

  

ಮಾನವ ಸಮಾಜದಲ್ಲಿ ಉಡಿಗೆಯು ಎಲ್ಲಕ್ಕಿಂತಲೂ ದೊಡ್ಡ ಸಭ್ಯತೆಯ ಕುರುಹು. ಪ್ರಪಂಚದ ಪ್ರತಿಯೊಂದು ಜನಾಂಗವೂ ತನ್ನ ದೇಶದ ಹವಾಗುಣ
ಅಲ್ಲಿ ದೊರಕುವ  ರೇಷ್ಮೆಹತ್ತಿ ಮುಂತಾದ ಪದಾರ್ಥಗಳುಅಲ್ಲಿನ ವಸ್ತ್ರನಿರ್ಮಾಪಕರ ಕುಶಲತೆರೀತಿನೀತಿಸೌಂದರ್ಯದೃಷ್ಟಿಧಾರ್ಮಿಕ ಭಾವನೆ ಮುಂತಾದವುಗಳನ್ನನುಸರಿಸಿ ತನ್ನದೇ ಆದ    ಉಡಿಗೆಯ ಶೈಲಿಯನ್ನು ನಿರ್ಮಿಸಿಕೊಂಡಿರುತ್ತದೆ. ಹೊರ ವಿಷಯವಾದರೂ ಉಡುಪು ಬೇರೆ ಬೇರೆ ಜನರ ಅಂತರಾತ್ಮದಲ್ಲಿ ಆಡಿದ ಭಾವನೆಗಳಿಗೆ ಕನ್ನಡಿ ಹಿಡಿದಿರುತ್ತದೆ. ಅವರ ಮನೋಧರ್ಮವನ್ನು ಹೊರಗೆ ಪ್ರತೀಕಿಸಿರುತ್ತದೆ.

ಈ ಮಾತು ನಿಜವಾದರೆ ಜನರು ತಮ್ಮ ತಮ್ಮ ದೇಶಕ್ಕೆ ಕೂಡಿಬಂದ ಉಡಿಗೆಯಲ್ಲಿ ಅದರ ಪ್ರೀತಿ ಮತ್ತು ಅಭಿಮಾನಗಳಿಂದ ಕೂಡಿರಬೇಕೆಂದು ನಿರೀಕ್ಷಿಸುವುದು ಸಹಜವಾಗಿರುತ್ತದೆ. ಪ್ರತಿಯೊಂದು ದೇಶದ ಸಂಸ್ಕೃತಿ ಮತ್ತು ಉಡಿಗೆಗಳ ಮಧ್ಯೆ ನಿಕಟವಾದ ಸಂಬಂಧವಿರುವುದಾದರೆ ಆ ಸಂಸ್ಕೃತಿಗೆ ಕೂಡಿಬಂದ ಉಡಿಗೆಯನ್ನು ಜೀವನದಲ್ಲಿ ಬಳಕೆಯಲ್ಲಿಟ್ಟುಕೊಳ್ಳುವುದರ ಮೂಲಕ ಈ ಸಂಸ್ಕೃತಿಯು ಪ್ರತೀಕಿಸುವ ವಿಚಾರದೃಷ್ಟಿನೀತಿ ಮತ್ತು ನಡತೆಗಳಿಗೆ ಬದ್ಧರಾಗಿರುವುದನ್ನು ಹೇಳಿದಂತಾಗುತ್ತದೆ. ಆ ಉಡಿಗೆಯನ್ನು ತ್ಯಾಗಮಾಡಿದರೆ ಒಬ್ಬರು ತಮ್ಮ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ ಅಥವಾ ಸರಿದಿರುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.

ನಮ್ಮ ಪುರಾತನ ಸಾಹಿತ್ಯಶಿಲ್ಪಚಿತ್ರ ಮುಂತಾದವುಗಳಿಂದ ನಮ್ಮ ದೇಶವೂ ಸಹ ಅನಾದಿಕಾಲದಿಂದ ಉಡಿಗೆಯಲ್ಲಿ ತನ್ನದೇ ಆದ ಸಭ್ಯ ಸಂಪ್ರದಾಯವನ್ನು ಸೃಷ್ಟಿಸಿ ಕೊಂಡಿರುವುದು ಖ್ಯಾಪಿತವಾಗುತ್ತದೆ. ಉಡಿಗೆಯಲ್ಲಿ ವೈವಿಧ್ಯ ಮತ್ತು ವೈಚಿತ್ರ್ಯಗಳಿರುವುದು ಅನಿವಾರ್ಯ. ಅದರಂತೆ ನಮ್ಮ ದೇಶದಲ್ಲಿಯೂ ಸಹ ಬೇರೆ ಬೇರೆ ಪ್ರದೇಶಗಳುಜಾತಿವೃತ್ತಿಅಭಿರುಚಿ ಸಂಪತ್ತುಗಳಿಗೆ ಅನುಗುಣವಾಗಿ ಉಡಿಗೆಯಲ್ಲಿ ವ್ಯತ್ಯಾಸಗಳು ಅವಶ್ಯವಾಗಿರುತ್ತವೆ. ಆದರೂ ಉಡುಪಿಗೆ ಸಂಬಂಧಿಸಿದಂತೆ  ಹಲವು ಸಭ್ಯ ಸಂಪ್ರದಾಯಗಳು ದೇಶದಾದ್ಯಂತವೂ ನಮ್ಮ ಜನರಿಂದ ಅಂಗೀಕಾರ ಪಡೆದವು. ಗಂಡಸರಿಗೆ ಪಂಚೆಉತ್ತರೀಯಅಂಗಿಪಾಗು ಇತ್ಯಾದಿಗಳೂ ಮತ್ತು ಸ್ತ್ರೀಯರಿಗೆ ಸೀರೆ ಮತ್ತು ಕುಪ್ಪಸಗಳೂ ಕೆಲವು ಸೀಮಾವರ್ತಿಪ್ರದೇಶಗಳನ್ನು ಬಿಟ್ಟರೆ ದೇಶದ ಉಳಿದ ಭಾಗಗಳಲ್ಲಿ ನಾಗರೀಕವಾದ ಉಡುಪಾಗಿ ಸ್ವೀಕಾರ ಪಡೆದವು. ಪುರುಷರಿಗಿಂತ  ಹೆಚ್ಚಾಗಿ ಸ್ತ್ರೀಯರಲ್ಲಿ ಉಡುಪಿನಲ್ಲಿ ಏಕರೂಪತೆಯುಂಟಾದುದು ಗಮನಾರ್ಹವಾದ ವಿಷಯ. ಅನೇಕ ಧಾರ್ಮಿಕ ಪಂಥಗಳು ವಸ್ತ್ರವನ್ನು ಉಡುವ ಶೈಲಿಯಲ್ಲಿ ತಮ್ಮದೇ ಆದ ವೈಶಿಷ್ಟ್ಯವನ್ನು ಪ್ರಕಟವಾಗಿಸಿದುವು. ಮೇಲೆ ಹೇಳಿದಂತೆ ಜಾತಿಧರ್ಮವೃತ್ತಿಅಂತಸ್ತುಗಳಿಗನುಗುಣವಾಗಿ ವ್ಯತ್ಯಾಸಗಳಿದ್ದರೂ ಒಟ್ಟಿನಲ್ಲಿ ಉಡಿಗೆಯ ಮೇಲೆ ಭಾರತೀಯತೆಯ ಅಚ್ಚಿದ್ದಿತು.

ಪ್ರತಿಯೊಂದು ದೇಶದ ಉಡಿಗೆಯೂ ಯಾವಾಗಲೂ ಒಂದೇ ರೀತಿಯಾಗಿ ಇರುವುದು ಅಸಂಭವ. ನಾಗರಿಕತೆಯು ಬೆಳೆದಂತೆ ಉಡಿಗೆಯಲ್ಲಿ ಪರಿವರ್ತನೆಗಳುಂಟಾಗುತ್ತವೆ. ಆ ಪರಿವರ್ತನೆಗಳೇ ಬೇರೆ ಜನರೊಡನೆ ಸಂಪರ್ಕವುಂಟಾದರೆ ಅಧಿಕವಾದ ಪ್ರಮಾಣದಲ್ಲಿ ಆಗತೊಡಗುತ್ತವೆ. ಬೇರೆ ಬೇರೆ ಜನರು ಒಟ್ಟಿಗೆ ಸೇರಿದಾಗ ಭಾಷೆರೀತಿನೀತಿ ಮತ್ತು ವಿಚಾರ ಪ್ರಪಂಚಗಳಲ್ಲಿ ಹೇಗೆ ಸಾಂಕರ್ಯವುಂಟಾಗುತ್ತದೆಯೋ ಅದೇ ರೀತಿ ಉಡಿಗೆ ತೊಡಿಗೆಗಳಲ್ಲಿಯೂ ಸಾಂಕರ್ಯವುಂಟಾಗುತ್ತದೆ.

ಪರಕೀಯರು ನಮ್ಮ ದೇಶವನ್ನು ಪ್ರವೇಶಿಸಿದ ನಂತರ ನಮ್ಮ ಉಡಿಗೆಯಲ್ಲಿ ನಿರಂತರವಾಗಿ ವ್ಯತ್ಯಾಸವುಂಟಾಗಿರುವುದು ನಮ್ಮ ಇತಿಹಾಸದಿಂದ ತಿಳಿದುಬರುತ್ತದೆ. ದೇಶದಲ್ಲಿ ಮುಸಲ್ಮಾನರು ತಮ್ಮ ಅಧಿಕಾರವನ್ನು ಸ್ಥಾಪಿಸಿದಾಗಬಲಾತ್ಕಾರದಿಂದ ಅಥವಾ ಕುತೂಹಲದಿಂದ ಅನೇಕರು ಅವರ ಉಡುಪನ್ನು ಅನುಕರಿಸಲಾರಂಭಿಸಿದರು.
ಇಂಗ್ಲಿಷಿನವರು ಬಂದನಂತರವಂತೂ ಅವರ ಉಡುಪು ಸಮಾಜದ ಅನೇಕ ವಲಯಗಳಲ್ಲಿ ಸ್ವಾಗತ ಪಡೆಯಿತು. ಇಂಗ್ಲಿಷ್ ವಿದ್ಯೆಯನ್ನು ಕಲಿತವರು ಮತ್ತು ಇಂಗ್ಲೀಷಿನವರೊಡನೆ ವ್ಯವಹಾರ ಪಡೆದವರೆಲ್ಲರೂ ಹೆಚ್ಚು ಅಥವಾ ಕಡಿಮೆಯಾಗಿ ಅವರ ಉಡುಪನ್ನು ತಮ್ಮದಾಗಿಸಿಕೊಂಡರು. ಭಾಷೆಸಾಹಿತ್ಯವಿಚಾರವಿಜ್ಞಾನ ಇತ್ಯಾದಿಗಳ ವಿಷಯಗಳಲ್ಲಿ ಹೇಗೋ ಹಾಗೆಯೇ ಉಡುಗೆಯ ವಿಷಯದಲ್ಲಿಯೂ ಅಸಂಖ್ಯಾತ ಜನರು ಪಾಶ್ಚಾತ್ಯರ ಎಂದರೆ ( ಭಾರತದೇಶದ ದೃಷ್ಟಿಯಿಂದ ಹೇಳುವುದಾದರೆ ಇಂಗ್ಲೀಷಿನವರ) ನೇತ್ರೃತ್ವವನ್ನು ಅಂಗೀಕರಿಸಿದರು. ಆದರೂ ನೆಟ್ಟಗೆ ಅವರೊಡನೆ ಸಂಬಂಧವಿಲ್ಲದಿದ್ದವರೂ ಮತ್ತು ತಮ್ಮ ಧರ್ಮ ಮತ್ತು ಸಂಸ್ಕೃತಿಗಳಲ್ಲಿ ವಿಶ್ವಾಸವಿದ್ದವರೂ ಈಗ ಕೆಲವು ದಶಮಾನಗಳ ಹಿಂದಿನವರೆಗೆ ತಮ್ಮ ಪರಂಪರಾಗತವಾದ ಉಡುಪನ್ನೇ ಉಡುತ್ತಿದ್ದರು. ಅವರ ಸಂಖ್ಯೆ ಬಹಳ ಅಧಿಕವಾಗಿಯೇ ಇದ್ದಿತು.

ಈಗ ಎರಡು ಮೂರು ದಶಮಾನದಿಂದ ಈಚೆಗೆ ಈ ಪಾಶ್ಚಾತ್ಯರ ಅನುಕರಣೆಯು ಉಲ್ಬಣವಾದ ರೂಪವನ್ನು ತಾಳಿರುತ್ತದೆ. ಸ್ವಾತಂತ್ರ್ಯ ಪಡೆದ ನಂತರ ರಾಜಕೀಯವಾದ  ಬಲಾತ್ಕಾರವಿಲ್ಲದಿದ್ದರೂ ನಮ್ಮ ಜನರುಸ್ವೇಚ್ಛೆಯಿಂದ ಪಾಶ್ಚಾತ್ಯರ ಉಡಿಗೆಯಲ್ಲಿ ಅಭಿರುಚಿ ಮತ್ತು ಅಭ್ಯಾಸಗಳನ್ನು ಬೆಳೆಸಿಕೊಂಡಿರುವುದನ್ನು ನೋಡುತ್ತೇವೆ. ಈ ಪ್ರವೃ ತ್ತಿಗಳೇ ಬಿಡದೆ ಮುಂದುವರಿದರೆ ನಮ್ಮ ಪರಂಪರಾಗತವಾದ ಉಡುಪು ಪೂರ್ತಿ ಮರೆವಿಗೆ ವಿಷಯವಾಗಬಹುದು. ಆರಂಭದಿಂದ ಈ ಬದಲಾವಣೆಗಳು ಪುರುಷರ ಉಡಿಗೆಗೆ ಮಾತ್ರ ಸೀಮಿತವಾಗಿದ್ದವು. ಸ್ತ್ರೀಯರ ಉಡಿಗೆಯು ಪ್ರಾಯಃ ಸ್ಥಾಯಿಯಾಗಿಯೇ ಇದ್ದಿತು. ಇಂದಿನ ಸಾಂಕರ್ಯದ ವಾತಾವರಣದಲ್ಲಿ ಅದೂ ಸಹ ಶೀಘ್ರಗತಿಯಲ್ಲಿ ವ್ಯತ್ಯಾಸವಾಗುವ ದಾರಿಯನ್ನು ಹಿಡಿದಿರುತ್ತದೆ. Women's Lib ಮುಂತಾದ  ಕ್ರಾಂತಿಕಾರಿಯಾದ ಶಕ್ತಿಗಳು ಅವರಿಗೆ ತಮ್ಮ ಪರಂಪರಾಗತವಾದ ಉಡುಪನ್ನು ಪರಿತ್ಯಜಿಸಿ ಸ್ವೇಚ್ಛೆಯಾಗಿ ಉಡುಪನ್ನುಡಲು ಪ್ರಚೋದನೆ ನೀಡಿವೆ. ಪುರುಷರ ಉಡುಪನ್ನುಡುವುದು ಅದರ ಒಂದು ಅಂಶ.

ಪಾಶ್ಚಾತ್ಯನಾಗರಿಕತೆಯು ಕೊಟ್ಟಿರುವ ಉಡಿಗೆಯ ಶೈಲಿಗಳಿಗೆ ಬಲಿಯಾಗಿರುವವರು ನಾವು ಮಾತ್ರವಲ್ಲ. ಪ್ರಾಯಃ ಪೌರಾಸ್ತ್ಯ ದೇಶಗಳೆಲ್ಲವೂ ತಮ್ಮ ಪರಂಪರಾಗತವಾದಚಿತ್ರವಿಚಿತ್ರವಾದ ಉಡಿಗೆಗಳನ್ನು ಬಿಟ್ಟುಬಿಟ್ಟು  ಪಾಶ್ಚಾತ್ಯರು ತೋರಿಸಿರುವ ಮಾರ್ಗವನ್ನೇ ಅವಲಂಬಿಸಿರುವುದನ್ನು ನೋಡುತ್ತೇವೆ. ಅದರಿಂದ ಬೇಕಾದರೆ
ನಾವು ನಮ್ಮನ್ನು ಸ್ವಲ್ಪ ಸಮಾಧಾನ ಮಾಡಿಕೊಳ್ಳಬಹುದು.

ಈ ಪರಿವರ್ತನೆಗಳ ಹಿಂದೆ ಯಂತ್ರಯುಗದ ವ್ಯಾಪಕವಾದ ಪ್ರಭಾವವು ಇರುತ್ತದೆಂಬುದನ್ನು ಹೇಳಬೇಕಾಗಿಲ್ಲ. ಅದು ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ಬಗೆ ಬಗೆಯಾದ ಮತ್ತು ಆಕರ್ಷಕವಾದ ಬಟ್ಟೆಗಳ ಉತ್ಪಾದನೆಗೆ ದಾರಿಮಾಡಿರುತ್ತದೆ. ಅವುಗಳನ್ನು ಶೀಘ್ರವಾಗಿ ಚಿತ್ರ ವಿಚಿತ್ರವಾಗಿ ಹೊಲಿಯಲು ಹೊಲಿಗೆಯಂತ್ರವನ್ನು ಸೃಷ್ಟಿಸಿಕೊಟ್ಟಿರುತ್ತದೆ. ದೇಶದಲ್ಲಿ ಅದೊಂದು ದೊಡ್ಡ ಉದ್ಯಮವಾಗಿರುತ್ತದೆ. ವ್ಯಾಪಾರಿಗಳುದರ್ಜಿಗಳುವಿಲಾಸಿಗಳುಪತ್ರಿಕೆ ಮುಂತಾದ ಪ್ರಸಾರ ಮಾಧ್ಯಮಗಳುಸಿನೇಮಾ ನಟ ನಟಿಯರು  ಮುಂತಾದವರೆಲ್ಲರೂ ಹೊಸ ಉಡುಪುಗಳನ್ನು ಜನಪ್ರಿಯವಾಗಿಸಲು ತಮ್ಮ ಶಕ್ತಿ ಮತ್ತು ದಕ್ಷತೆಗಳೆಲ್ಲವನ್ನೂಬಳಸುತ್ತಿದ್ದಾರೆ. ಆಧುನಿಕ ಆರ್ಥಿಕ ವ್ಯವಸ್ಥೆಯು ಜನರ ಕೈಯಲ್ಲಿ ಹೇರಳವಾದ ಹಣವನ್ನು ಹಾಕಿರುತ್ತದೆ. ಪ್ರತಿಕ್ಷಣವೂ ಪ್ರತಿಯೊಂದು ವಿಷಯದಲ್ಲಿಯೂ ನವೀನತೆಯನ್ನು ಅರಸುವ ಮನೋಭಾವವು ಜನರಲ್ಲಿ ಮಿತಿ ಮೀರಿ ವ್ಯಾಪಾರಮಾಡುತ್ತಿದೆ.

ಹೊಲಿಗೆಯಂತ್ರ ಮತ್ತು ದರ್ಜಿಗಳು ಸೃಷ್ಟಿಸಿರುವ ಹೊಸ ಉಡಿಗೆಯ ನಾಗರಿಕತೆಯಲ್ಲಿ ಅನುಕೂಲ ಭಾಗಗಳು ಇಲ್ಲದೆ ಇಲ್ಲ. ಆಧುನಿಕ ಯಂತ್ರಯುಗವು ಉಂಟುಮಾಡಿರುವ ಹೊಸ ಜೀವನ ವಿಧಾನಕ್ಕೆ ಅದು ಹೊಂದಿಕೊಂಡಿರುತ್ತದೆ. ಹೊಸ ಉಡಿಗೆಗಳಲ್ಲಿ ಜನರ ಮನಸ್ಸನ್ನು ಸಂತಸಪಡಿಸುವ ವೈವಿಧ್ಯವಿರುತ್ತದೆ. ಅವುಗಳನ್ನು ಹಾಕಿಕೊಳ್ಳುವುದು ಮತ್ತು ತೆಗೆಯುವುದು ಸುಲಭ. ಅವು ಬಾಳಿಕೆ ಬರುತ್ತವೆ. ಅವು ನಾಗರಿಕ ವಲಯಗಳಲ್ಲಿ ಅಂಗಿಕಾರ ಪಡೆದಿವೆ. ಅವು ಸುಂದರವಾಗಿವೆ ಎಂಬ ನಂಬಿಕೆ ಕೂಡ ಅವಕ್ಕೆ ಮಾನ್ಯತೆ ದೊರಕಲು ಕಾರಣವಾಗಿದೆ. ಹೀಗೆ ಆಧುನಿಕ ಉಡಿಗೆಯಲ್ಲಿ ಅನೇಕ ಗುಣಭಾಗಳಿದ್ದರೂ ಸಹಸೌಂದರ್ಯದಲ್ಲಿ  ಅವು ಪರಂಪರಾಗತವಾದ ಉಡುಪನ್ನು ಮೀರಿಸಿವೆಯೆಂಬುದನ್ನು ಸಿದ್ಧಪಡಿಸುವುದು ಸುಲಭವೇನೂ ಅಲ್ಲ. ಏಕೆಂದರೆ ಸೌಂದರ್ಯವೆಂಬುದು ಯಾವಾಗಲೂ ಸಾಪೇಕ್ಷವಾದ(Relative)ವಿಷಯ. ಯಾವುದು ಸುಂದರ  ಮತ್ತು ಯಾವುದು ಅಸುಂದರ ಎಂಬುದು ನಿಶ್ಚಯಿಸಲು ಏಕಮಾತ್ರ ಮಾನದಂಡವಿರುವುದಿಲ್ಲ. ಸೌಂದರ್ಯ  ಮತ್ತು ಅಸೌಂದರ್ಯಗಳ ಕಲ್ಪನೆಯು ಮನಸ್ಸಿನ  ಮೇಲೆ ತಾತ್ಕಾಲಿಕವಾಗಿ ಉಂಟಾದ ಅನೇಕ ವಿಧವಾದ ಪ್ರಭಾವಗಳಿಂದ ನಿರ್ಧಾರಿತವಾಗುತ್ತದೆ. ಉಡಿಗೆಯ ವಿಷಯದಲ್ಲಿ ಹೇಳುವುದಾದರೆ ಸೌಂದರ್ಯವು ತತ್ಕಾಲದಲ್ಲಿ ಜನಪ್ರಿಯತೆ ಪಡೆದಿರುವ ಫ್ಯಾಷನ್ನುಗಳನ್ನು ಅವಲಂಬಸಿರುತ್ತದೆ. ನಾವು ಯಾವ ಉಡುಪನ್ನು ಸುಂದರವಾದುದೆಂದು ಗಣಿಸುತ್ತೇವೆಯೋ ಅದು ನಮ್ಮಲ್ಲಿ ಕೃತಕವಾಗಿ ಉಂಟುಮಾಡಲಟ್ಟ ಭಾವನೆಯಾಗಿರುತ್ತದೆ. ಯಾವುದು ಫ್ಯಾಷನ್ನಿಗೆ ಅನುಗುಣವಾಗಿರುತ್ತದೆಯೋ ಅದು ಸುಂದರ: ಯಾವುದು ಅದರಿಂದ ಬೇರೆಯಾಗಿರುತ್ತದೆಯೋ ಅದು ಆಸುಂದರ. ದೋಷಯುಕ್ತವಾಗಿದ್ದರೂ ಫ್ಯಾಷನ್ನಿನಲ್ಲಿರುವ ಉಡಿಗೆಗಳು ಜನರ ಮೆಚ್ಚುಗೆ ಮತ್ತು ಅನ್ವೇಷಣೆಗೆ ವಿಷಯವಾಗುತ್ತವೆ.

ಸೌಂದರ್ಯದ ವಿಷಯ ಹೇಗಾದರೂ ಇರಲಿನಮ್ಮ ದೇಶದ ಯಾವ ಉಡಿಗೆಗಳು ಸಭ್ಯವಾದುವೆಂದು ಗಣಿಸಲ್ಪಡುತ್ತಿದ್ದುವೊ ಅವುಗಳ ಸ್ಥಾನವನ್ನು ಹೊಸ ಉಡಿಗೆಗಳು ಆಕ್ರಮಿಸಿಕೊಳ್ಳಲಾರಂಭಿಸಿವೆ. ಪರಂಪರಾಗತವಾದ ಉಡುಗೆಗಳು ತ್ಯಾಗಕ್ಕೆ ಮತ್ತು ಅಪಹಾಸ್ಯಕ್ಕೆ ವಿಷಯವಾಗಿರುತ್ತವೆ. ಅದರಲ್ಲಿ ಅಭಿಮಾನವಿರುವವರು ಬಹಳ ಮಂದಿ ಇರುತ್ತಾರೆ. ಆದರೆ ಫ್ಯಾಷನ್ನಿಗೆ ವಿರೋಧವಾಗಿ ಹೋದರೆ ಎಲ್ಲಿ ಜನರು ತಮ್ಮನ್ನು ಹೀಯಾಳಿಸುವರೋ ಎಂಬ ಭಯದಿಂದ ಅವರು ಆಧುನಿಕ ಉಡಿಗೆಗಳನ್ನು ಅನುಕರಿಸುತ್ತಾರೆ. ಆ ರೀತಿ ಮಾಡದಿರಬೇಕಾದರೆ ಸ್ವಾಭಿಮಾನವಿಚಾರಶೀಲತೆತೃಪ್ತಿ ಮತ್ತು ಆತ್ಮ ವಿಶ್ವಾಸಗಳು ಬೇಕು. ಸರಳವಾದ ಜೀವನದಲ್ಲಿ ಆಸಕ್ತಿ ಇರಬೇಕು. ಗಾಂಧಿಯವರಿಗಿದ್ದಂತಹ ವ್ಯಕ್ತಿತ್ವ ಬೇಕು. ಇಂದಿನ ನಾಗರಿಕತೆಯಲ್ಲಿ ಈ ಆತ್ಮಗುಣಗಳಿಗೆ ಸ್ಥಾನವಿಲ್ಲ. ನಮ್ಮ ಒಳಶೂನ್ಯತೆಯನ್ನು ನಾವು ರಮಣೀಯವಾದ ಬಟ್ಟೆಗಳಿಂದ ಮುಚ್ಚಲು ಉದ್ಯುಕ್ತರಾಗುತ್ತೇವೆ. ನಮ್ಮ ಉಡಿಗೆಯ ಶೈಲಿಯಲ್ಲಿ  ದೊಡ್ಡ ಪರಿವರ್ತನೆಗಳುಂಟಾಗುತ್ತಿರುವುದಕ್ಕೆ ಅದೇ ಮುಖ್ಯವಾದ ಕಾರಣ.

ಭಾರತೀಯರ ಉಡಿಗೆಯನ್ನು ತೆಗೆದುಕೊಂಡು ವಿಸ್ತಾರವಾಗಿ ವಿಚಾರಿಸಬೇಕಾದರೆ ಬಹಳ ಸ್ಥಳಾವಕಾಶ ಬೇಕು. ಅದು ವ್ಯಾಪಕವಾದ ರೀತಿಯಲ್ಲಿ ಅನ್ವೇಷಣೆ ಮಾಡಿ ಬರೆಯುವ ವಿಷಯ. ಅದನ್ನು ನಮಗಿರುವ ಐದು ಪುಟಗಳಲ್ಲಿ ಮಾಡಲಾಗುವುದಿಲ್ಲ. ಅದು ಕೇವಲ ಶರೀರವನ್ನು ಮುಚ್ಚುವ ವಿಧಾನಮಾತ್ರವಾಗಿರದೆ ಒಂದು ಆಳವಾದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪ್ರತೀಕಿಸುವ ವಿಷಯವೂ ಆಗಿದ್ದಿತು. ಆ ಅಭಿಪ್ರಾಯವನ್ನು ಶ್ರೀಶ್ರೀರಂಗಗುರುಗಳ  "ಭಾರತೀಯರ ಉಡಿಗೆ ತೊಡಿಗೆ ಇತ್ಯಾದಿಗಳೆಲ್ಲವೂ ಅಷ್ಟಾಂಗಯೋಗದಿಂದ ಹಾಸುಹೊಕ್ಕಾಗಿ ಹೆಣೆಯಲ್ಪಟ್ಟಿರುತ್ತದೆಎಂಬ ಸೂತ್ರವು ವ್ಯಕ್ತಪಡಿಸುತ್ತದೆ. ಆ ಬಗ್ಗೆ ಸಂಗ್ರಹವಾಗಿ ಕೆಲವು ಮಾತುಗಳನ್ನು ಹೇಳಿ ಈ ಲೇಖನವನ್ನು ಮುಕ್ತಾಯ ಮಾಡುತ್ತೇವೆ.

ನಮ್ಮ ಪರಂಪರಾಗತವಾದ ಉಡುಪು ತನ್ನದೇ ಆದ ಸೌಂದರ್ಯ ಮತ್ತು ಗಾಂಭೀರ್ಯಗಳನ್ನಿರಿಸಿಕೊಂಡಿರುತ್ತದೆ ಎಂಬುದನ್ನು ಯಾರೂ ನಿರಾಕರಿಸಲಾಗುವುದಿಲ್ಲ. ಹೊಲಿಯದಿರುವ ಬಟ್ಟೆಯನ್ನು ನಾಜೂಕಾಗಿ ಉಡುವ ಕುಶಲತೆ ಪಂಚೆ ಮತ್ತು ಸೀರೆಗಳನ್ನುಡುವ ಬಗೆಯಲ್ಲಿರುತ್ತದೆ. ಜೊತೆಗೆ ಆ ಉಡುಪಿನಲ್ಲಿ ಸರಳತೆಯಿರುತ್ತದೆ. ಪ್ರಾಯಃ ಇವೆರಡು ಗುಣಗಳನ್ನೂ ಒಂದು ಕಡೆ ಸೇಸಿರಿಕೊಂಡಿರುವ ಉಡಿಗೆಯ ವಿಧಾನವು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರದು.

ಸರಳ ಜೀವನದಲ್ಲಿ ಅಭಿರುಚಿ ಇಲ್ಲದವನಿಗೂ ಸಂಸ್ಕೃತಿಗೂ ಬಹಳ ದೂರ. ಸಂಸ್ಕೃತಿಯು ಯಾವಾಗಲೂ ಮನಸ್ಸಂಯಮಇಂದ್ರಿಯ ಸಂಯಮಸ್ವಚ್ಛತೆ ಮತ್ತು ಶುದ್ಧತೆಗಳನ್ನು ಹೇಳುತ್ತದೆ. ಅದನ್ನು ಉಡಿಗೆಯು ಪ್ರತಿಬಿಂಬಿಸುತ್ತದೆ ಎಂಬುದನ್ನು ನೋಡಿ ತಿಳಿಯಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಜನರ ಉಡಿಗೆಯೇ ಅದನ್ನು ಹೇಳುತ್ತದೆ. ಅದೇ ಜನರ ಹೃದಯದಲ್ಲಿ ಲಂಪಟತನವು ಆಡಿದರೆ ಶರೀರದ ನರ ಮಂಡಲವು ಅದಕ್ಕೆ ಅನುಗುಣವಾದ ಉಡುಪನ್ನೋ ಅಥವಾ ಉಡುಪಿಲ್ಲದಿರುವುದನ್ನೂ
ಅಪೇಕ್ಷಿಸುತ್ತದೆ.

ಭಾರತೀಯರ ಉಡಿಗೆಯಲ್ಲಿ ಮನಸ್ಸ೦ಯಮ ವತ್ತು ಇಂದ್ರಿಯ ಸಂಯಮಗಳ ಆದರ್ಶವು ಕೆಲಸಮಾಡಿದ್ದಿತೆಂಬುದಕ್ಕೆ ಎರಡು ಮೂರು ಉದಾಹರಣೆಗಳನ್ನು ಕೊಡಬಹುದು. ಪಂಚೆ ಮತ್ತು ಸೀರೆಗಳನ್ನು ನಡುವಿನಲ್ಲಿ ಕಟ್ಟುವ ರೀತಿಯೇ ಸಹಜವಾಗಿ ಅದರಲ್ಲಿ ಒಂದು ಬಂಧವನ್ನುಂಟುಮಾಡಿ ಮನಸ್ಸು ಮತ್ತು ಪ್ರಾಣಗಳಿಗೆ ಜಘನ್ಯ (ಕೀಳು) ಗತಿಯುಂಟಾಗದಂತೆ ಮಾಡುತ್ತದೆ. ದೇವರಿಗೆ ನಮಸ್ಕಾರ ಮಾಡುವಾಗ ಉತ್ತರೀಯವನ್ನು ಉದರದಲ್ಲಿ ಬಿಗಿಯಾಗಿ ಕಟ್ಟಿ ಆ ರೀತಿ ಮಾಡುವ ಪದ್ಧತಿಯ ಉದ್ದೇಶವೂ ಅದೇ. ಸಂಪ್ರದಾಯಾನುಗುಣವಾಗಿ ಸೀರೆಯನ್ನುಡುವ ಸ್ತ್ರೀಯರಲ್ಲಿಯೂ ಸಹ ಅಂತಹ ಸಂಯಮ ಪೂರ್ಣವಾದ ಬಂಧವು ತಾನಾಗಿ ಏರ್ಪಟ್ಟು ಅವರಿಗೆ ಮನಸ್ಸು ವಶವಾಗಿರಲು ದಾರಿ ಮಾಡಿಕೊಡುತ್ತದೆ.

ಈಗ ಹಲವು ದಶಮಾನಗಳ ಹಿಂದಿನವರೆಗೆ ನಮ್ಮ ದೇಶದಲ್ಲಿ ಕಚ್ಚೆ ಹಾಕಿಕೊಳ್ಳದೆ ಸ್ತ್ರೀಯರಾಗಲೀ ಪುರುಷರಾಗಲೀ ಪಂಚೆಯನ್ನುಡುವುದು ಕೆಟ್ಟ ನಡತೆಯ ಕುರುಹಾಗಿ ಗಣಿಸಲ್ಪಡುತ್ತಿದ್ದಿತು. ಕಾಲಕ್ರಮೇಣ ಸಂಪ್ರದಾಯದ ಪ್ರಭಾವವು ಕಡಿಮೆಯಾಗಿ ಆ ಪದ್ಧತಿಯು ಬಹಳ ಮಟ್ಟಿಗೆ ಲುಪ್ತವಾಯಿತು. ಅಷ್ಟಾಂಗಯೋಗದಲ್ಲಿ ಬ್ರಹ್ಮಚರ್ಯವನ್ನು ಕುರಿತು ಹೇಳುವಾಗ ನಾವು ಕೌಪೀನಕ್ಕಿರುವ ಆಳವಾದ ಅರ್ಥವನ್ನು ವಿವರಿಸಿದೆವು. ಒಂದು ಕಡೆ ಅದು ಇಂದ್ರಿಯಾವಯವವನ್ನು ಹತೋಟಿಯಲ್ಲಿಟ್ಟುಕೊಂಡಿರಬೇಕು ಎಂಬುದನ್ನು ಸೂಚಿಸಿದರೆ ಮತ್ತೊಂದು ಕಡೆ ಸಂಯಮ ಪೂರ್ಣವಾದ ಸ್ಥಿತಿಯನ್ನು ಸಾಧಿಸಿ ಜೀವನ ಮಾಡಬೇಕೆಂಬುದನ್ನು ಒತ್ತಿ ಹೇಳುತ್ತದೆ. ಜ್ಞಾನಮಾರ್ಗದಲ್ಲಿ ಹೋಗುವ 'ಬ್ರಹ್ಮಚಾರಿಗೆಅದು ಅತ್ಯಾವಶ್ಯಕವಾದರೆಆ ಆದರ್ಶವೇ ಗೃಹಸ್ಥ ಜೀವನಮಾಡುವ ಸ್ತ್ರೀಪುರುಷರಿಗೂ ಅಷ್ಟೇ ಅವಶ್ಯಕ ಎಂಬುದನ್ನು ಕಚ್ಚೆಯು ಹೇಳುತ್ತದೆ. ಮತ್ತು ಅದನ್ನು ಸಂಪಾದಿಸುವ ದಾರಿಯಾಗಿರುತ್ತದೆ. ಹಿಂದೆ ಕಚ್ಚಿ ವಸ್ತ್ರವನ್ನುಡದ ಗೃಹಸ್ಥರ ವಿಷಯದಲ್ಲಿ ಶಿಷ್ಟರು ತೀವ್ರವಾದ ಅಸಮ್ಮತಿಯನ್ನು ಸೂಚಿಸುತ್ತಿದ್ದರು. ಅವರಿಗೆ ಪೂಜೆಕರ್ಮ ಇತ್ಯಾದಿಗಳಲ್ಲಿ ಸ್ಥಾನವಿರುತ್ತಿರಲಿಲ್ಲ. ಕಚ್ಚಿಯು ಶುದ್ದವಾದ ಇಂದ್ರಿಯ ಮತ್ತು ಮನೋಧರ್ಮಗಳ ಪ್ರತೀಕವಾಗಿದ್ದಿತು.

ಅನೇಕ ವೈದಿಕ ಕರ್ಮಗಳಲ್ಲಿ ಬಟ್ಟೆಯನ್ನುಡುವ ವಿಧಾನದಿಂದ ಆಳವಾದ ಆಧ್ಯಾತ್ಮಿಕ ತತ್ವಗಳನ್ನು ಪ್ರಕಟಿಸುವ ಕೌಶಲ್ಯವು ಇರುತ್ತದೆ.  ಉತ್ತರೀಯವನ್ನು ಎಡಬಲ ಭುಜಗಳ ಮೇಲೆ ಹಾಕಿಕೊಳ್ಳುವುದರ ಹಿಂದೆ ಗಾಢವಾದ ಯೋಗತತ್ವಗಳು ಅಡಗಿರುತ್ತವೆ. ಅವುಗಳಲ್ಲಿ ಬಟ್ಟೆಯು ಕರ್ಮ ಮಾಡುವವನ ಮನೋಧಾರೆಯನ್ನು ಪ್ರತೀಕಿಸುವ ಸಾಧನವಾಗಿರುತ್ತದೆ.
(ಉಣ್ಣೆಯಿಂದ ಮಾಡಿದ್ದೇರೇಷ್ಮೆಯದೇಹತ್ತಿಯದೇ ಮುಂತಾಗಿ) ಬಟ್ಟೆಯ ಗುಣ ಅದರ ಆಯ್ಕೆಯಲ್ಲಿ ಪಾತ್ರ ವಹಿಸಿದ್ದರೆಅದರ ಬಣ್ಣವೂ ಸಹ ಅದನ್ನಾರಿಸುವುದರಲ್ಲಿ ಪ್ರಮುಖವಾದ ಪಾತ್ರವಹಿಸಿದ್ದಿತು. ಮನಸ್ಸಿನ ಬಣ್ಣವನ್ನು ನಿಶ್ಚಯಿಸುವುದರಲ್ಲಿ ಬಟ್ಟೆಯ ಬಣ್ಣದ ಪ್ರಭಾವವು ಬಹಳವಿರುತ್ತದೆ ಎಂಬ ಅಂಶವು ನಮ್ಮ ಪೂರ್ವಿಕರಿಗೆ ಚೆನ್ನಾಗಿ ತಿಳಿದಿದ್ದ ವಿಷಯವಾಗಿದ್ದಿತು. ಸ್ಥಳಾವಕಾಶವಿಲ್ಲವಿರುವುದರಿಂದ ಇಲ್ಲಿ ನಾವು ಉದಾಹರಣೆ ಕೊಡುತ್ತಿಲ್ಲ. ಇಂದು ನಮ್ಮ ಬಟ್ಟೆಗಳು ನಮ್ಮ ಮನಸ್ಸು ಒಂದು ಬಣ್ಣವಾಗಿರದೆ ಬಹು ವರ್ಣವಾಗಿರುವುದನ್ನು ಹೊರಗೆ ವ್ಯಕ್ತಪಡಿಸುತ್ತದೆ.

ಪ್ರಾಯಃ ನಾವು ಪುನಃ ನಮ್ಮ ಹಿಂದಿನವರ ಉಡಿಗೆಯ ಶೈಲಿಗೆ ಹಿಂದಿರುಗುವುದು ಕಠಿಣವಾದ ಕೆಲಸವೇ ಸರಿ. ಆದರೆ ನಮ್ಮ ಪರಂಪರಾಗತವಾದ ಉಡಿಗೆಯು ನಮ್ಮ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪ್ರತೀಕಿಸುವುದರಿಂದನಮ್ಮ ಧಾರ್ಮಿಕ ಜೀವನದ ಸಮಯದಲ್ಲಿ ಅದನ್ನು ನಿಷ್ಠೆಯಿಂದ ಅನುಸರಿಸಿದರೆ ಆಗ ಪರಂಪರೆಯು ಲುಪ್ತವಾಗುವುದಿಲ್ಲ. ಹಿಂದೆ ಅದು ಸರ್ವಕಾಲದ ಉಡುಪಾಗಿದ್ದಿತು. ಈಗ ಹೊಸ ಸನ್ನಿವೇಶಗಳಿಂದ ಅದನ್ನು ಸರ್ವದಾ ಅನುಸರಿಸಲಾಗದಿದ್ದರೂ ನಮ್ಮ ಧಾರ್ಮಿಕ ಜೀವನದಲ್ಲಿ ಅದಕ್ಕೆ ಸಲ್ಲುವ ಗೌರವವನ್ನು ಅನುಸರಣೆಯ ಮೂಲಕ ಸಲ್ಲಿಸಿದರೆ ಆಗ ಅದು ನಾವು ನಮ್ಮ ಸಂಸ್ಕೃತಿಯಿಂದ ಬೇರ್ಪಡದಿರುವ ದಿಕ್ಕಿನಲ್ಲಿ ಮಾಡಿದ ಒಂದು ಪ್ರಯತ್ನವಾಗುತ್ತದೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಮೇ 1982 ಸಂಪುಟ :4 ಸಂಚಿಕೆ:7 ರಲ್ಲಿ ಪ್ರಕಟವಾಗಿದೆ.  

Thursday, January 7, 2021

ಶಿವನ ಅಂತರಂಗ ದರ್ಶನ (Shivana Antaranga Darshana)

ಲೇಖಕರು:ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)


ದಕ್ಷಯಜ್ಞಕ್ಕೆ ದಾಕ್ಷಾಯಣಿ ಬಂದಿದ್ದಾಳೆ. ಪತಿ ಪರಮೇಶ್ವರನು ಹೋಗುವುದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ್ದಾನೆ. ಆದರೂ ಸ್ತ್ರೀ ಸಹಜ ತವರಿನ ಸೆಳೆತ ಅವಳನ್ನು ಬರುವಂತೆ ಮಾಡಿದೆ. ಅಲ್ಲಿ ತಂದೆಯಾದ ದಕ್ಷನಾಗಲೀ ಹತ್ತಿರದ ಇತರ ಬಂಧುಗಳಾಗಲೀ ಇವಳನ್ನು ಆದರದಿಂದ ಬರಮಾಡಿಕೊಂಡಿಲ್ಲ. ಯಜ್ಞದ ಯಶಸ್ಸಿಗೆ ಕಾರಣನಾಗಬೇಕಾದ ಪರಶಿವನಿಗೆ ಆಹ್ವಾನವಿಲ್ಲ. ಒಟ್ಟು ವಾತಾವರಣದಲ್ಲಿ ಶಿವನ ಬಗ್ಗೆ ತಾತ್ಸಾರ ಎದ್ದು ಕಾಣುತ್ತಿದೆ. ಸತೀ-ದಾಕ್ಷಾಯಣಿಗೆ ಇದನ್ನು ಸಹಿಸಿಕೊಳ್ಳಲಾಗಿಲ್ಲ. ತನಗೇ ಆದ ಅವಮಾನಕ್ಕಿಂತ ಜಗತ್ತಿಗೇ ಒಡೆಯನಾದ ಶಿವನಿಗೆ ಆದ ಅವಮಾನ ಅವಳನ್ನು ಹೆಚ್ಚು ಕ್ರುದ್ಧಳನ್ನಾಗಿಸಿತ್ತು. ಈ ಹಿಂದೆ ದಕ್ಷನು ಶಿವನನ್ನು ಸ್ಮಶಾನವಾಸಿ, ಬೂದಿಬಡುಕ, ಜುಗುಪ್ಸಿತವಾದ ವೇಷವುಳ್ಳವನು, ಕುಲ-ಗೋತ್ರ ಇಲ್ಲದವನು ಎಂದೆಲ್ಲ ಮೂದಲಿಸಿರುತ್ತಾನೆ. ತನ್ನ ಅವಮಾನದ ಬೆಂಕಿಯಲ್ಲಿ ಅದನ್ನೆಲ್ಲಾ ನೆನೆದು ತಂದೆಯಾದ ದಕ್ಷನಿಗೆ ಸತಿಯು ಹೇಳುವ ಮಾತುಗಳು ನಮಗೆಲ್ಲರಿಗೂ ಆದರ್ಶ.

" ಜಗದೀಶ್ವರನಾದ ಶಂಕರನ ಮಹಿಮೆಯನ್ನು ನೀನೇನು ಬಲ್ಲೆ? ಎಲ್ಲಾ ದೇಹಿಗಳ ಅಂತರಂಗದಲ್ಲಿ ಬೆಳಗುವ ಆತ್ಮಸ್ವರೂಪನವನು. ಸಮದರ್ಶನನಾದ ಅವನಿಗೆ ಯಾರೂ ಪ್ರಿಯರೂ, ಅಪ್ರಿಯರೂ ಅಲ್ಲ. ಯಾವ ಪ್ರಾಣಿಗಳಲ್ಲೂ ವೈರವಿಲ್ಲದ ಶಾಂತಮೂರ್ತಿ ಅವನು. ಜಗತ್ತಿಗೇ ಮೂಲನಾದ, ತಂದೆಯಾದ ಅವನಿಗೆ ಕುಲ-ಗೋತ್ರಗಳು ಎಲ್ಲಿಂದ ಬರಬೇಕು?  ಬ್ರಹ್ಮಾದಿ ದೇವತೆಗಳು ಸ್ಮಶಾನವಾಸಿಯಾದ, ಚಿತಾಭಸ್ಮಗಳನ್ನು ಧರಿಸಿದ ಭಗವಂತನಾದ ಪರಶಿವನ ಪಾದಗಳಿಂದ ಉದುರಿದ ನಿರ್ಮಾಲ್ಯವನ್ನು ತಮ್ಮ ತಲೆಯಲ್ಲಿ ಧರಿಸಿಕೊಳ್ಳುತ್ತಾರೆ. ಇದನ್ನೇ ಮಹಾಕವಿ ಕಾಳಿದಾಸನು ಹೀಗೆ ಹೇಳುತ್ತಾನೆ- 'ಅವನ ಅಂಗದ ಸಂಪರ್ಕವನ್ನು ಹೊಂದಿದ ಚಿತಾಭಸ್ಮದ ಧೂಳು ಸಹ ಪರಮಶುದ್ಧಿಯನ್ನು ಪಡೆಯುತ್ತದೆ.' ಅವನ ನೃತ್ಯಾಭಿನಯದಿಂದ ಅವನ ಮೈಮೇಲಿನ ಚಿತಾಭಸ್ಮವು ಕೆಳಗೆ ಬಿದ್ದಾಗ, ದೇವತೆಗಳೆಲ್ಲ ಅದನ್ನು ಪ್ರಸಾದರೂಪವಾಗಿ ತಮ್ಮ ತಲೆಯಮೇಲೆ ಹಚ್ಚಿಕೊಳ್ಳುತ್ತಾರೆ."

ನಮ್ಮ ಕಣ್ಣುಗಳು ದಕ್ಷನಂತೆಯೇ ಹೊರ ಜುಗುಪ್ಸಿತವಾದ ರೂಪವನ್ನು ಮಾತ್ರವೇ ಗ್ರಹಿಸುತ್ತವೆ. ನಮಗೆ ಯಾವುದು ಭಯಂಕರವೋ, ಅವೆಲ್ಲ ಅವನಿಗೆ ಅಲಂಕಾರ. ಸೃಷ್ಟಿಯನ್ನು ಲಯಗೊಳಿಸುವ ಅವನ ಕಾರ್ಯದ ಸಂಕೇತಗಳು/ಚಿಹ್ನೆಗಳು ಅವು. ಆ ರೂಪದ ಹಿಂಬದಿಯ ಅವನ ಪರವಾದ, ಜಗತ್ತಿನ ಚೇತನವಾದ ಬೆಳಕಿನ ರೂಪವನ್ನು ಗ್ರಹಿಸಲು ಸತಿಗಿದ್ದಂತೆ ತಪಸ್ಸಿನ ಕಣ್ಣುಗಳು ಬೇಕು. ಮಹಾದೇವನ ನಿಂದೆಯನ್ನು ಸಹಿಸದೇ, ಯಾವ ದೇಹಾಭಿಮಾನಿಯಾದ ತಂದೆಯಿಂದ ತನ್ನ ಶರೀರವು ಉಂಟಾಯಿತೋ ಆ ಶರೀರವನ್ನೇ ಮೈಲಿಗೆಯಾಗಿ ಭಾವಿಸಿ ಯೋಗದಿಂದ ತನ್ನ ಶರೀರವನ್ನು ಅಗ್ನಿಗಾಹುತಿಗೈಯುತ್ತಾಳೆ.

ಶಿವಸ್ವರೂಪದ ಬಗ್ಗೆ ಶ್ರೀರಂಗಮಹಾಗುರುಗಳು ಎತ್ತಿ ಹೇಳುತ್ತಿದ್ದ ಕಾಳಿದಾಸನ ಕುಮಾರ ಸಂಭವದ ಮಾತು ಇಲ್ಲಿ ಸ್ಮರಣೀಯ. "ಮನೋ ನವದ್ವಾರ ನಿಷಿದ್ಧ ವೃತ್ತಿ: ಹೃದಿ ವ್ಯವಸ್ಥಾಪ್ಯ ಸಮಾಧಿ ವಶ್ಯಂ | ಯಮಕ್ಷರಂ ಕ್ಷೇತ್ರವಿದೋ ವಿದುಸ್ತಂ, ಆತ್ಮಾನಮಾತ್ಮನ್ಯವಲೋಕಯನ್ತಮ್"- ಇಂದ್ರನ ಆದೇಶದಂತೆ ಶಿವನ ತಪಸ್ಸನ್ನು ಭಂಗಗೊಳಿಸಲು ಬಂದ ಮನ್ಮಥನು ಶಿವನನ್ನು ನೋಡಿದಾಗ ಅವನನ್ನು ಭಾವಿಸಿದ ಪರಿ ಇದು.  "ಶಿವನ ಮನಸ್ಸು ನವದ್ವಾರಗಳಲ್ಲೂ ವೃತ್ತಿರಹಿತವಾಗಿದೆ. ಸಮಾಧಿವಶನಾಗಿ, ಮನಸ್ಸನ್ನು ಹೃದಯದ ಅನಾಹತವೆಂಬ ಚಕ್ರದಲ್ಲಿ ಬೆಳಗುವ ಪರಮಾತ್ಮನಲ್ಲಿ ನೆಲೆಗೊಳಿಸಿದ್ದಾನೆ. ಯಾವ ಅಕ್ಷರನಾದ ಪರಮಾತ್ಮನನ್ನು ಈ ದೇಹಯಂತ್ರದ ಮರ್ಮವನ್ನರಿತವರು-ಕ್ಷೇತ್ರಜ್ಞರು ತಿಳಿಯುತ್ತಾರೋ ಅಂತಹ ಶಿವನು ತನ್ನಲ್ಲಿಯೇ ತನ್ನನ್ನು ನೋಡಿಕೊಳ್ಳುತ್ತಿದ್ದಾನೆ" ಎಂತಹ ಅದ್ಭುತವಾದ ಶಿವನ ನಿಜರೂಪ ವರ್ಣನೆ!

ಅಂತಹ ಶಿವಸ್ವರೂಪದ ಚಿಂತನೆ, ಸ್ಮರಣೆ ಸದಾ ನಮ್ಮೆಲ್ಲರಿಗೂ ಆಗಲಿ ಎಂದು ಆಶಿಸೋಣ.


ಸೂಚನೆ: 7/1/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.   

ಮಹತ್ಕಾರ್ಯದ ಸಾಧನೆಗೆ ಉಪಾಯದ ಅವಲಂಬನೆ (Mahatkaryada Sadhanege Upayada Avalambane)

ಲೇಖಕರು: ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)




ಕೆಲವೊಮ್ಮೆ ದೊಡ್ಡ ವಿಷಯವನ್ನು ಕೊಡಬೇಕಾದಾಗ ಉಪಾಯವನ್ನು ಅವಲಂಬಿಸಬೇಕಾಗುತ್ತದೆ ಎಂಬುದಕ್ಕೆ ಶ್ರೀರಂಗಮಹಾಗುರುಗಳು ಒಂದು ಕಥೆಯನ್ನು ಹೇಳುತ್ತಿದ್ದರು. ಹಿಂದೆ ನಾಥಮುನಿಗಳು ಎಂಬ ಯೋಗಿಗಳ ಶಿಷ್ಯರ ಪೈಕಿ ಮಣಕ್ಕಾಲ್ ನಂಬಿ ಎಂಬುವವರಿದ್ದರು, ಅವರ ಕಾಲದಲ್ಲಿ ಮೊಮ್ಮಕ್ಕಳಾದ ಯಾಮುನರು ಇನ್ನೂ ಚಿಕ್ಕವರಾಗಿದ್ದರು. ಆಗ ಅವರು ಜ್ಞಾನವನ್ನು ಮುಂದುವರೆಸುವ ಜವಾಬ್ದಾರಿಯನ್ನು  ಮಣಕ್ಕಾಲ್ ನಂಬಿ ಎಂಬ ಶಿಷ್ಯನಿಗೆ ವಹಿಸಿದರು.  ಯಾಮುನರು ವಾದದಲ್ಲಿ ಗೆದ್ದು ರಾಜ್ಯಾಧಿಪತಿಗಳಾಗಿದ್ದರು. ರಾಜ್ಯಾಧಿಪತಿಗಳಾದ ಅವರಲ್ಲಿಗೆ ಮಣಕ್ಕಾಲ್ ನಂಬಿಗಳು ಹೋಗುವುದಾದರೂ ಹೇಗೆ? ಆದರೆ ಗುರುಗಳು ತಮ್ಮ ಜ್ಞಾನಸಂಪತ್ತನ್ನು ಅವರಿಗೆ ಕೊಡುವಂತೆ ವಹಿಸಿದ ಜವಾಬ್ದಾರಿಯಿದೆ, ಅದನ್ನು ಹೇಗೆ ನಿರ್ವಹಿಸುವುದು?  ಕೊನೆಗೆ ಪ್ರತಿದಿನವೂ ಒಂದು ತರಹದ ಸೊಪ್ಪನ್ನು ರಾಜನಿಗೆ ಅಡಿಗೆ ಮಾಡಿ ಬಡಿಸಲು ತರಕಾರಿಯಾಗಿ ಕೊಂಡೊಯ್ಯುತ್ತಿದ್ದರು. ರಾಜನಿಗೆ ಅದೊಂದು ಹೊಸತಿಂಡಿಯಾಗಿತ್ತು. 


ಹೀಗೆ ಪ್ರತಿದಿನವೂ ತಪ್ಪದೇ ಈ ಸೊಪ್ಪಿನ ಪದಾರ್ಥ ರಾಜನಿಗೆ ತಲುಪಿ ಅದು ಚೆನ್ನಾಗಿ ಅವನಿಗೆ ಹಿಡಿಸಿತು. ಒಂದು ದಿನ ಅವರು ಈ ಸೊಪ್ಪನ್ನು ತರಲಿಲ್ಲ, ಆಗ ರಾಜನು ಸೊಪ್ಪು ಏಕೆ ಇಲ್ಲ ಎಂದು ಕೇಳಿದ, ಯಾರೋ ಒಬ್ಬರು ಯಾವ ಪ್ರತಿಧನವನ್ನೂ ತೆಗೆದುಕೊಳ್ಳದೆ ತಂದು ಕೊಡುತ್ತಿದ್ದಾರೆ, ಇಂದು ಅವರು ಬರಲಿಲ್ಲ ಎಂದು ಅಡುಗೆಯವರು ಹೇಳಿದರು. ನಂತರ ಮತ್ತೊಮ್ಮೆ ಅವರು ಬಂದಾಗ ಆಸ್ಥಾನಕ್ಕೆ ಕರೆಸಿದರು. ಆ ಸಮಯಕ್ಕೆ ಸರಿಯಾಗಿ ರಾಜ್ಯಕ್ಕೆ ಧನದ ಅಗತ್ಯವಿತ್ತು.  ಆ ಸಂದರ್ಭಕ್ಕೆ ಸರಿಯಾಗಿ ಇವರು ಹೋಗಿ ನಿಮ್ಮ ತಾತನವರು ನನ್ನಲ್ಲಿ ಯಾವುದೋ ಒಂದು ದೊಡ್ಡ ನಿಧಿಯನ್ನು ಇಟ್ಟಿದ್ದಾರೆ; ನನ್ನ ಜೊತೆ ಬಂದರೆ ಅದನ್ನು ಕೊಡುತ್ತೇನೆ ಎಂದು ಹೇಳಿ ರಾಜನನ್ನು ಶ್ರೀರಂಗಕ್ಕೆ ಜೊತೆಯಲ್ಲಿ ಕರೆದೊಯ್ದು, ಶ್ರೀ ರಂಗನಾಥನನ್ನು ತೋರಿಸಿ ಇದೇ ಆ ನಿಧಿಯೆಂದು ಹೇಳಿ ಅದರ ಮರ್ಮದೊಡನೆ ಇತ್ತರು. ಅವರ ತಾತನ ಆಸ್ತಿಯನ್ನು ಅವರಿಗೇ ಕೊಟ್ಟರು; ಅವರ ಜ್ಞಾನಭಂಡಾರವನ್ನೂ ಅವರಿಗೇ ತುಂಬಿಕೊಟ್ಟರು. ಹೀಗೆ, ಇಲ್ಲಿ ಅಪೂರ್ವವಾದ ಜ್ಞಾನಭಂಡಾರವನ್ನು ಧಾರೆಯೆರೆದು ಕೊಡಲು ಈ ರೀತಿಯ ಉಪಾಯವನ್ನು ಮಾಡಿದಾಗ ರಾಜನ ಉದ್ಧಾರವೂ ಆಗಿ ರಾಜ್ಯಕ್ಕೂ ಕ್ಷೇಮವುಂಟಾಯಿತು.


ಸೂಚನೆ: 6/1/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.