Showing posts with label author_ksrajagopalan. Show all posts
Showing posts with label author_ksrajagopalan. Show all posts

Saturday, August 19, 2023

ಭಕ್ತಿ ಶರಣಾಗತಿಗಳ ಸೆಲೆ- ಮುಕುಂದಮಾಲೆ (Bhakti Saranagatigala Sele- Mukundamale)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)




ನಮ್ಮ ದೇಶದ ಸ್ತೋತ್ರಸಾಹಿತ್ಯದಲ್ಲಿ ಒಂದು ಅಪೂರ್ವವೂ ಜನಪ್ರಿಯವೂ ಆದ ಸಾಹಿತ್ಯ, ಕುಲಶೇಖರ ಆಳ್ವಾರ್ ವಿರಚಿತ "ಮುಕುಂದಮಾಲೆ".


ಆದರ್ಶವಾದ ಸ್ತೋತ್ರಸಾಹಿತ್ಯವು  ಜನಸಾಮಾನ್ಯರಿಗೆಲ್ಲ ಬೇಕೇ ಬೇಕು.  ಸ್ತೋತ್ರಸಾಹಿತ್ಯದ ಅವಶ್ಯಕತೆಯ ಬಗ್ಗೆ ಶ್ರೀರಂಗಮಹಾಗುರುಗಳು ಹೀಗೆ ಹೇಳುತ್ತಿದ್ದರು-" ಭಗವದನುಭವದಲ್ಲೇ ಇದ್ದಾಗ ಅಲ್ಲಿ ಯಾವ ಸಾಹಿತ್ಯವೂ ಇಲ್ಲಪ್ಪ. ಭಗವಂತನಲ್ಲಿರಬೇಕು ಎಂದ ಮಾತ್ರಕ್ಕೆ ಇಪ್ಪತ್ತನಾಲ್ಕು ಘಂಟೆಯೂ ಇರಲಾಗುವುದಿಲ್ಲ. ಭಗವಂತನನ್ನು ಅನುಭವಿಸುತ್ತಾ ಅದರ ರಸವನ್ನೇ ತುಂಬಿಕೊಂಡಿರುವ ಸಾಹಿತ್ಯವು ಬೇಕು. ಅದು ಜೀವನವನ್ನು ಭಗವಂತನ ಕಡೆಗೆ ತಿರುಗಿಸುತ್ತದೆ".


ಆಳ್ವಾರುಗಳು ಭಕ್ತಿರಸದಲ್ಲಿ ಆಳವಾಗಿ ಮುಳುಗಿದ್ದವರು; ಭಕ್ತಿಸಾಮ್ರಾಜ್ಯವನ್ನು ಆಳಿದವರು. ಇವರಲ್ಲಿ ಅಗ್ರಗಣ್ಯರು, ಮುಕುಂದಮಾಲೆಯನ್ನು ರಚಿಸಿದ ಕುಲಶೇಖರಾಳ್ವರರು.  ಇವರು ತಿರುವಾಂಕೂರಿನ ರಾಜರಾಗಿದ್ದರೆಂದು ಐತಿಹ್ಯವು ಹೇಳುತ್ತದೆ.


ಮುಕುಂದಮಾಲೆಯು  ನಲವತ್ತು ಶ್ಲೋಕಪುಷ್ಪಗಳಿಂದ ಪೋಣಿಸಲ್ಪಟ್ಟು ಭಗವದರ್ಪಿತವಾದ ಸುಂದರ ಹಾರ. ಈ ಸ್ತೋತ್ರದಲ್ಲಿ ಭಕ್ತಿಯಿದೆ; ಶರಣಾಗತಿಯಿದೆ; ಆದರ್ಶವಾದ ಪ್ರಾರ್ಥನೆಯಿದೆ; ಜೀವನಕ್ಕೆ ಬೇಕಾದ ಪಾಠವಿದೆ. ಇದು ಶ್ರೀವೈಷ್ಣವಸಂತರಿಂದ ರಚಿತವಾಗಿದ್ದರೂ ಎಲ್ಲರ ಗೌರವಾದರಗಳಿಗೆ ಹಿಂದಿನಿಂದಲೂ ಪಾತ್ರವಾಗಿದೆ. 


ಜನಗಳು ಭಗವಂತನಿಂದ ವಿಮುಖವಾಗಿರುವುದನ್ನು ಮನಗಂಡು, ಅವರನ್ನು ಭಗವಂತನತ್ತ ತಿರುಗಿಸಲು ಇಂದ್ರಿಯಸುಖಗಳನ್ನು ಜರೆದವರಿದ್ದಾರೆ. ಆದರೆ ಇಂದ್ರಿಯಜೀವನದಿಂದ ವಿಮುಖರಾಗುವುದು ಪ್ರಕೃತಿಸಹಜವಲ್ಲ. ಈ ಬಗ್ಗೆ  ಶ್ರೀರಂಗಮಹಾಗುರುಗಳ ಈ ಮಾತು ಸ್ಮರಣೀಯ. "ಜೀವವನ್ನು ಐಹಿಕಾಪೇಕ್ಷೆ ಬಿಡು ಎಂದರೆ ಒಪ್ಪುವುದಿಲ್ಲ. ಆದುದರಿಂದ ಅದನ್ನೂ ಕೊಟ್ಟುಕೊಂಡು ಅದರ ಜೊತೆಯಲ್ಲಿಯೇ ಭಗವಂತನ ಸಾನ್ನಿಧ್ಯದಲ್ಲಿರು, ಎಂದರೆ ಅಲ್ಲಿ ತೊಡಕಿಲ್ಲ. ಇಂದ್ರಿಯಗಳಿಗೆ ಬೇಕಾದ ಆಹಾರವನ್ನು ಕೊಟ್ಟುಬಿಟ್ಟರೆ, ಅವುಗಳಿಗೆ ಕಟ್ಟುವ ಕಂದಾಯ ಕಟ್ಟಿಬಿಟ್ಟರೆ, ಗಲಾಟೆಯಿಲ್ಲ. ಇಂದ್ರಿಯಗಳನ್ನು ಸೃಷ್ಟಿ ಮಾಡಿ , ಅವುಗಳಿಗೆ ವಿಷಯವೇ ಬೇಡ ಎಂದರೆ ಅವುಗಳ ಬೆಲೆಯಾದರೂ ಏನು? ಆದ್ದರಿಂದ  ಇಂದ್ರಿಯಗಳಿಗೆ ವಿಷಯವನ್ನು ಕೊಡಬೇಕು. ಹಾಗೆ ಕೊಟ್ಟರೂ, ಅವು ನಮ್ಮ ಜೀವನಕ್ಕೆ ಅಡ್ಡಿಯನ್ನು ತರದಂತೆ ಕೊಡಬೇಕು".


ಕುಲಶೇಖರಾಳ್ವರರು ತಮ್ಮ "ಜಿಹ್ವೇ ಕೀರ್ತಯ ಕೇಶವಂ……" ಎಂಬ ಶ್ಲೋಕದಲ್ಲಿ ನಾನಾ ಇಂದ್ರಿಯಗಳಿಗೆ ಭಗವದ್ವಿಷಯವನ್ನು ಕೊಟ್ಟಿದ್ದಾರೆ."ಎಲೈ ನಾಲಗೆಯೇ ಕೇಶವನನ್ನು ಕೀರ್ತಿಸು; ಮನಸ್ಸೇ ಮುರರಿಪುವನ್ನು ಭಜಿಸು; ಕೈಗಳಿರಾ, ಶ್ರೀಧರನನ್ನು ಅರ್ಚಿಸಿರಿ; ಕಣ್ಣುಗಳೇ, ಕೃಷ್ಣನನ್ನು ನೋಡಿರಿ; ಕಾಲುಗಳಿರಾ, ಹರಿಯ ಆಲಯಕ್ಕೆ ಹೋಗಿರಿ; ಎಲೈ ನಾಸಿಕವೇ, ಮುಕುಂದಪಾದತುಲಸಿಯನ್ನು ಆಘ್ರಾಣಿಸು; ತಲೆಯೇ, ಪರಮಾತ್ಮನಲ್ಲಿ ಬಾಗು" ಎನ್ನುತ್ತಾರೆ. ಹೀಗೆ ಜೀವನವನ್ನು ದೇವನ ಕಡೆಗೆ ತಿರುಗಿಸುವ ತಂತ್ರವಿದಾಗಿದೆ. "ನಾಹಂ ವಂದೇ……." ಎಂಬ ಶ್ಲೋಕದಲ್ಲಿ ಅವರ ನಿಃಸ್ವಾರ್ಥಭಾವವು ಎದ್ದು ತೋರುತ್ತದೆ. "ಭಗವಂತ, ನಿನ್ನನ್ನು ಯಾವುದೋ ಸುಖದ ಅಪೇಕ್ಷೆಯಿಂದಾಗಲಿ, ಕಷ್ಟನಿವಾರಣೆಗಾಗಿಯಾಗಲಿ, ನಾನು ನಮಸ್ಕರಿಸುವುದಿಲ್ಲ. ಹೃದಯಭವನದಲ್ಲಿ, ಎಲ್ಲ ಭಾವಗಳಲ್ಲಿಯೂ ನಿನ್ನನ್ನು ತಾನೇ ಭಾವಿಸಬೇಕು; ಅದಕ್ಕಾಗಿ, ನಿನ್ನನ್ನು ನಮಸ್ಕರಿಸುತ್ತೇನೆ" ಎನ್ನುತ್ತಾರೆ. ಪರಮಭಕ್ತನಾದವನು ತಾನು ಸ್ನಾನ ಮಾಡಿದರೂ, ಇದು ಭಗವಂತನಿಗೆ ಅಭಿಷೇಕವೆಂದೇ ಭಾವಿಸುತ್ತಾನೆ. ಮಾಡಿದ ಅಡಿಗೆಯನ್ನು ಭಗವಂತನಿಗೆ ನಿವೇದಿಸಿ, ಅವನ ಪ್ರಸಾದವನ್ನೇ ಸೇವಿಸುತ್ತಿರುವುದಾಗಿ ಭಾವಿಸುತ್ತಾನೆ. …ಹೀಗೆ ಎಲ್ಲ ಭಾವಗಳಲ್ಲಿಯೂ ಭಗವಂತನನ್ನು ಒಬ್ಬನು ಭಾವಿಸುತ್ತಿದ್ದರೆ ಅವನ ಜೀವನ ಸಾರ್ಥಕವಾಗುವುದರಲ್ಲಿ ಸಂದೇಹವೇನು!

ತಮ್ಮ "ನಾಸ್ಥಾ ಧರ್ಮೇ…….." ಎಂಬ ಶ್ಲೋಕದಲ್ಲಿ "ಪೂರ್ವಕರ್ಮಾನುರೂಪವಾಗಿ ಆಗಬೇಕಾದ್ದೆಲ್ಲ ಆಗಲಿ. ನಿನ್ನ ಚರಣಕಮಲಗಳಲ್ಲಿ ನಿಶ್ಚಲವಾದ ಭಕ್ತಿಯಿರಲಿ" ಎನ್ನುತ್ತಾರೆ. ಜೀವನದ ಕಷ್ಟಗಳಿಗೆ ಧೃತಿಗೆಡದೆ ದೇವರ ಸ್ಮರಣೆಯೊಡನೆ ಜೀವನವನ್ನು ಎದುರಿಸುವ ಪಾಠ ನಮಗಿಲ್ಲಿ ಆಗುತ್ತದೆ. "ಬಂದದ್ದೆಲ್ಲ ಬರಲಿ; ಗೋವಿಂದನ ದಯೆಯಿರಲಿ" ಎಂಬ ದಾಸವಾಣಿಯು ಇದನ್ನೇ ನೆನಪಿಗೆ ತರುತ್ತದೆ.  ಜೀವನದಲ್ಲಿ ವೃತ್ತಿಯಿಂದ ನಿವೃತ್ತರಾದ ಮೇಲೆ ಭಗವಂತನನ್ನು ಭಾವಿಸಿದರಾಯಿತು ಎನ್ನುವವರುಂಟು. ಆದರೆ "ಪ್ರಾಣಪ್ರಯಾಣ ಸಮಯದಲ್ಲಿ ಕಫ, ವಾತ, ಪಿತ್ತಗಳ ತೊಂದರೆಯಿಂದ ಗಂಟಲೇ ಕಟ್ಟಿಬಿಟ್ಟರೆ, ನಿನ್ನ ಸ್ಮರಣೆಯೇ ಆಗದಿರಬಹುದು. ಆದ್ದರಿಂದ ನನ್ನ ಮನಸ್ಸು ಈಗಲೇ ನಿನ್ನಲ್ಲಿ ಪ್ರವೇಶಿಸಲಿ" ಎನ್ನುತ್ತಾರೆ ಇವರು. ಇಂದ್ರಿಯಗಳು ಸುಸ್ಥಿತಿಯಲ್ಲಿರುವಾಗಲೇ ಭಗವಂತನನ್ನು ಸೇರಿಸಿಕೊಂಡು ಜೀವನ ಮಾಡಬೇಕೆಂಬ ಪಾಠವಿಲ್ಲಿದೆ.


ಸರಿಯಾದುದನ್ನು (positive) ಸಾಧಿಸಬೇಕೆಂದಿದ್ದರೆ, ತಪ್ಪಾದ(negative) ದಿಕ್ಕಿನಿಂದ ದೂರವಿರಬೇಕಾದುದು ಅನಿವಾರ್ಯವೇ. "ಮಾ ದ್ರಾಕ್ಷಂ….." ಎಂಬ ಶ್ಲೋಕದಲ್ಲಿ "ನಿನ್ನ ಪಾದಕಮಲದಲ್ಲಿ ಭಕ್ತಿಯಿಲ್ಲದೆ ಇರುವ ಕ್ಷೀಣಪುಣ್ಯರನ್ನು ನಾನು ನೋಡುವಂತಾಗುವುದು ಬೇಡ; ನಿನ್ನ ಶ್ರಾವ್ಯವಾದ ಕಥೆಗಳ ಹೊರತು ಮತ್ತಾವ ಕಥೆಗಳನ್ನೂ ನಾನು ಕೇಳುವಂತಾಗುವುದು ಬೇಡ; ನಿನ್ನ ಅಸ್ತಿತ್ವವನ್ನೇ ನಿರಾಕರಿಸುವವರನ್ನು ನಾನು ಮನಸ್ಸಿನಲ್ಲೂ ಸ್ಮರಿಸುವುದೂ ಬೇಡ; ಯಾವುದೇ ಜನ್ಮದಲ್ಲಾಗಲಿ, ನಿನ್ನ ಸೇವೆಯ ಸಂಬಂಧವನ್ನು ನಾನು ಬಿಟ್ಟಿರದಂತಾಗಲಿ" ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ. "ಭಗವಂತನ ನಾಮಗಳನ್ನು ಹೇಳಲು ಸಮರ್ಥರಾಗಿದ್ದರೂ ವ್ಯಸನಾಭಿಮುಖರಾದ ಜನರು ಹೇಳುತ್ತಿಲ್ಲವಲ್ಲ" ಎಂಬ ಕಳಕಳಿಯಿಂದ ಜನರನ್ನು ಎಚ್ಚರಿಸುತ್ತಾರೆ. ಭಗವಂತನ ಮಹಿಮೆಯ  ಮುಂದೆ ನಾವು ದೊಡ್ಡದೆಂದು ಭಾವಿಸುವುದೆಲ್ಲವೂ ಅತಿ ಸಣ್ಣದೆಂದು ತಿಳಿ ಹೇಳುತ್ತಾರೆ.


ತಾವು ಪರಂಜ್ಯೋತಿಯನ್ನು ದರ್ಶನ ಮಾಡಿದಾಗ ತಮ್ಮ ದೇಹ ಮನಸ್ಸುಗಳಲ್ಲಿ ಉಂಟಾದ ದಿವ್ಯಸ್ಥಿತಿಯನ್ನು ತಮ್ಮ "ಬದ್ಧೇನಾಂಜಲಿನಾ…." ಎಂಬ ಶ್ಲೋಕದಲ್ಲಿ ಸ್ಮರಿಸುತ್ತಾ "ಇಂತಹ ರೀತಿಯಲ್ಲಿ ತಮ್ಮ ಜೀವನವನ್ನು ಕಳೆಯುವಂತಾಗಲಿ" ಎಂದು ಭಗವದನುಭವದ ಒಂದು ನೋಟವನ್ನು ಜನರಿಗೆ ಮನಗಾಣಿಸಿದ್ದಾರೆ. ಭಗವಂತನನ್ನು ಭಕ್ತಪ್ರಿಯನಾದ (ಭಕ್ತರೆಂದರೆ ಅವನಿಗೆ ಪ್ರಿಯ; ಭಕ್ತರಿಗೆ ಅವನು ಪ್ರಿಯನೂ ಹೌದು) ಆಶ್ರಯಿಸಬೇಕೆಂಬ ಭಾವ ಜನರಲ್ಲಿ ಮೂಡಲೆಂದು, ಭಗವಂತನು ಭವರೋಗಕ್ಕೆ ಔಷಧ, ಭವದ ಮರುಭೂಮಿಗೆ ಜಲದ ಸ್ರೋತಸ್ಸು; ಭವಸಾಗರಕ್ಕೆ ನಾವೆ– ಎಂದು ವಿವಿಧವಾಗಿ ಬಣ್ಣಿಸಿ, "ಕೃಷ್ಣಮಂತ್ರ ಎಂಬ ಜನ್ಮಸಾಫಲ್ಯಮಂತ್ರವನ್ನು ಜಪಿಸಿ" ಎಂದು ಜನರಿಗೆ ತಿಳಿಸಿಕೊಡುತ್ತಾರೆ.


ಭಗವಂತನನ್ನು ಸಮಾಹಿತಮನಸ್ಕರಾಗಿ ಧ್ಯಾನಿಸುವವರಿಗೆ, ಭಗವಂತ ಅಭಯ ಕೊಟ್ಟೇ ಕೊಡುತ್ತಾನೆ ಎಂಬ ಫಲಶ್ರುತಿಯನ್ನು ಕೊನೆಗೆ ಹೇಳುತ್ತಾರೆ. "ಯೋಗಶಾಯಿಯಾಗಿ ಕ್ಷೀರಾಬ್ಧಿಯಲ್ಲಿ ಪವಡಿಸಿರುವ ನಾರಾಯಣನಲ್ಲಿ ನಮ್ಮ ಜೀವನವನ್ನು ತೆಗೆದುಕೊಂಡುಹೋಗಿ ನಿಲ್ಲಿಸುವಂತಿರಬೇಕು" ಎಂದು ಶ್ರೀರಂಗಮಹಾಗುರುಗಳು ಕರ್ಮಯೋಗದ ಸಾರವನ್ನು ತಿಳಿಸುತ್ತಿದ್ದರು. ಅಂತಹ ಕ್ಷೀರಸಾಗರಶಾಯಿಯ ಸುಂದರ ವರ್ಣನೆಯಲ್ಲಿ ನೆಲೆ ನಿಲ್ಲುತ್ತದೆ, ಮುಕುಂದಮಾಲೆ.


ಸೂಚನೆ:  19/8/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Saturday, July 22, 2023

ನಿರ್ಲಿಪ್ತ ದೇಶಸೇವೆ (Nirlipta Deshaseve)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆಗಳೂ ನಡೆಯುತ್ತಿರುವಾಗ, ತಂದೆಯ ಮಾತನ್ನು ಪರಿಪಾಲಿಸುವುದಕ್ಕಾಗಿ ಶ್ರೀರಾಮನು ಕಾಡಿಗೇ ಹೋಗಬೇಕಾಗಿ ಬಂದಿತು. ಆದರೆ ಅವನ ಮನಸ್ಸಿನಲ್ಲಿ ಯಾವ ವಿಕಾರವೂ ಉಂಟಾಗಲಿಲ್ಲ. ಶ್ರೀರಾಮ ಅಧಿಕಾರಕ್ಕೆ ಅಂಟಿದವನೇ ಅಲ್ಲ. ಅವನಿಗಿದ್ದುದು ಒಂದೇ ಲಕ್ಷ್ಯ- ಧರ್ಮಪರಿಪಾಲನೆ.  ಭರತನಾದರೋ ಅಪ್ರಯತ್ನವಾಗಿ ರಾಜ್ಯವು ಕೈಗೆ ಬಂದರೂ ರಾಮನಂತಹವನಿಗೆ ರಾಜ್ಯ ಕೈತಪ್ಪಿ ಹೋಯಿತಲ್ಲ ಎಂದು  ಪರಿತಪಿಸುತ್ತಾನೆ. ಆತ ಕಿಂಚಿತ್ತೂ  ಅಧಿಕಾರಕ್ಕೆ ಅಂಟಿಕೊಂಡವನಲ್ಲ. ರಾಜ್ಯವನ್ನು ವಹಿಸಿಕೊಳ್ಳುವಂತೆ ರಾಮನಿರುವ ಕಾಡಿಗೇ ಹೋಗಿ ಬೇಡಿಕೊಳ್ಳುತ್ತಾನೆ. ಅವನ ಇಚ್ಛೆಯು ಕೈಗೂಡದಿರಲು ರಾಮನ ಪ್ರತಿನಿಧಿಯಾಗಿ ರಾಮನ ಪಾದುಕೆಗಳನ್ನು ತೆಗೆದುಕೊಂಡು ಅಯೋಧ್ಯೆಯ ಸಿಂಹಾಸನದಲ್ಲಿ ಇಟ್ಟು ತಾಪಸವೃತ್ತಿಯಲ್ಲಿ ಇದ್ದುಕೊಂಡೇ ರಾಜ್ಯವಾಳುತ್ತಾನೆ. 


ವನವಾಸ ಪೂರಯಿಸಿದ ಶ್ರೀರಾಮ, ಭರತ ಹೇಗಿದ್ದಾನೋ ಎಂಬ ಚಿಂತೆಯಿಂದಲೇ ಅಯೋಧ್ಯೆಗೆ ಹಿಂತಿರುಗಲು ತ್ವರೆ ಮಾಡುತ್ತಾನೆ. ಹನುಮಂತನಿಗೆ, ಮುಂದಾಗಿ ಹೋಗಿ, ಭರತನಿಗೆ ತಾನು ಬರುತ್ತಿರುವ ಸುದ್ದಿ ಮುಟ್ಟಿಸಲು ಹೇಳುತ್ತಾನೆ. ಇಲ್ಲಿ ರಾಮನಿಗಿದ್ದ ಮನಃಶಾಸ್ತ್ರದ ಜ್ಞಾನ ಬೆರಗು ಮೂಡಿಸುತ್ತದೆ. ಹನುಮಂತನನ್ನು ಕುರಿತು "ಭರತನಿಗೆ, ನಾನು ಬರುತ್ತಿರುವೆನು ಎಂದು ಹೇಳುವಾಗ ಅವನ ಮನದ ಇಂಗಿತವನ್ನು ತಿಳಿದುಕೊಳ್ಳಲು ಪ್ರಯತ್ನಿಸು. ಇಷ್ಟು ದೀರ್ಘಕಾಲ ರಾಜ್ಯವನ್ನು ಆಳಿದುದರ ಪರಿಣಾಮವಾಗಿ ತಾನೇ ರಾಜ್ಯಾಡಳಿತವನ್ನು ಮುಂದುವರೆಸುವ ಇಚ್ಛೆಯಿಂದ ಕೂಡಿದ್ದಾನೆಯೇ ಎಂದು ಅರಿತುಕೊಳ್ಳಲು ಪ್ರಯತ್ನಿಸು. ನಿನಗೆ ಹಾಗೇನಾದರೂ ಅನ್ನಿಸಿದರೆ ನನಗೆ ಬಂದು ಹೇಳು. ರಾಜ್ಯವನ್ನು ಭರತನಿಗೇ ಬಿಟ್ಟುಕೊಟ್ಟು ನಾನು ಕಾಡಿಗೆ ಹಿಂದಿರುಗಿ ತಪಶ್ಚರ್ಯೆಯಿಂದ ಕಾಲ ಕಳೆಯುವೆನು" ಎನ್ನುತ್ತಾನೆ. ಭರತನಾದರೋ ರಾಮ ಬರುವುದನ್ನೇ ನಿರೀಕ್ಷಿಸುತ್ತಾ ಅವನು ಬಂದೊಡನೆಯೇ "ರಾಮ , ನೀನು ನನ್ನ ಬಳಿ ನ್ಯಾಸವಾಗಿಟ್ಟಿದ್ದ ರಾಜ್ಯವನ್ನು ಹಿಂದಿರುಗಿಸಿದ್ದೇನೆ" ಎನ್ನುತ್ತಾನೆ. ಅಧಿಕಾರಕ್ಕೆ ಕಿಂಚಿತ್ತೂ ಅಂಟಿಕೊಳ್ಳದೆ  ಧರ್ಮವನ್ನು ಸಂರಕ್ಷಿಸುವ ವಿಷಯದಲ್ಲಿ ತಮ್ಮನನ್ನು ಮೀರಿಸಿದ ಅಣ್ಣ! ಅಣ್ಣನನ್ನು ಮೀರಿಸಿದ ತಮ್ಮ!


ಮಹಾಭಾರತದಲ್ಲಿಯೂ ಧರ್ಮಕ್ಕಾಗಿಯೇ ರಾಜ್ಯಾಪೇಕ್ಷೆಯಿಂದಿದ್ದವರ ಚಿತ್ರಣವನ್ನು ನೋಡಬಹುದು. ವನವಾಸ ಮತ್ತು ಅಜ್ಞಾತವಾಸಗಳನ್ನು ಪೂರಯಿಸಿದ ನಂತರ, ಮೊದಲಿನ ಒಪ್ಪಂದದಂತೆ, ಧರ್ಮರಾಜನಿಗೆ ರಾಜ್ಯವು ದಕ್ಕಬೇಕಾಗಿತ್ತು. ಆದರೂ ಯುದ್ಧವನ್ನು ತಪ್ಪಿಸುವ ಉದ್ದೇಶ ಅವನಿಗಿತ್ತು. ಹೀಗಾಗಿ ದುರ್ಯೋಧನನು ಕಡೆಯ ಪಕ್ಷ ಐದು ಗ್ರಾಮಗಳನ್ನು ಕೊಟ್ಟರೂ ಸಾಕೆಂದು ಧೃತರಾಷ್ಟ್ರನ ದೂತನಾಗಿ ಬಂದ ಸಂಜಯನಿಗೆ ಧರ್ಮರಾಜನು ಹೇಳುತ್ತಾನೆ. ನ್ಯಾಯವಾಗಿ ತನಗೆ ಬರಬೇಕಾಗಿದ್ದ ರಾಜ್ಯದ ಪಾಲಿನ ಸಂಕೇತವಾಗಿ ಐದು ಗ್ರಾಮಗಳನ್ನು ಕೇಳುವುದು ತನಗಿರುವ ರಾಜ್ಯದ ಹಕ್ಕನ್ನು ಸ್ಥಾಪಿಸುವುದು ಧರ್ಮವೇ ಆಗಿದೆ ಎಂಬ ಕಾರಣಕ್ಕಾಗಿಯೇ; ರಾಜ್ಯಲೋಭದಿಂದಲ್ಲ.  


ಶ್ರೀಕೃಷ್ಣನು ಯುದ್ಧಭೂಮಿಯಲ್ಲಿ ಅರ್ಜುನನಿಗೆ ಧರ್ಮಕ್ಕಾಗಿ ಯುದ್ಧ ಮಾಡುವುದು ಯುಕ್ತವೇ ಆಗಿದೆ ಎಂದು ಮನವರಿಕೆ ಮಾಡಿಕೊಡುತ್ತಾನೆ. 

ಹೀಗೆ ಸನಾತನಭಾರತದ ಮಹಾತ್ಮರ ವ್ಯವಹಾರದಲ್ಲಿ ಧರ್ಮವೇ ಕೇಂದ್ರವಾಗಿತ್ತು.


ಇಂದಿನ ರಾಜಕೀಯ ನಾಯಕರಿಗೆ ಇಂತಹ ಪ್ರಸಂಗಗಳನ್ನು ನಿತ್ಯ ಪಾರಾಯಣ ಮಾಡಬೇಕೆಂದು ವಿಧಿಸಬೇಕು. ದೇಶಸೇವೆಯೇ ನಮ್ಮ ಗುರಿ ಎನ್ನುತ್ತಾ ಕೈಮುಗಿದು ಪೋಸ್ ಕೊಡುವ (ವೇಷ ಕಟ್ಟುವ) ರಾಜಕೀಯ ಧುರೀಣರು  ಇಂತಹ ಪ್ರಸಂಗಗಳನ್ನು ಓದಿ ರಕ್ತಗತ ಮಾಡಿಕೊಳ್ಳಬೇಕು. ಅವರು ವರ್ಷಗಟ್ಟಲೇ ಪಕ್ಷದಲ್ಲಿರುವುದೂ ಅಧಿಕಾರಕ್ಕಾಗಿಯೇ. ಅದು ಪ್ರಾಪ್ತವಾದಾಗ ಪಕ್ಷಕ್ಕೆ ಅಂಟಿಕೊಂಡಿರುತ್ತಾರೆ. ಒಂದೊಮ್ಮೆ "ನೇಪಥ್ಯಕ್ಕೆ ಸರಿದು ದೇಶಸೇವೆ ಮಾಡಿ, ಪಕ್ಷದ ಇತರರಿಗೆ ಸ್ಥಾನ ಬಿಟ್ಟುಕೊಡಿ" ಎಂದು ಪಕ್ಷದ ವರಿಷ್ಠರು ಹೇಳಿಬಿಟ್ಟರೆ, ಅವರ ಗೋಳು ಹೇಳತೀರದು. ಪಕ್ಷನಿಷ್ಠೆ, ದೇಶಸೇವೆಯ ಪ್ರತಿಜ್ಞೆ -ಎಲ್ಲವನ್ನೂ ಗಾಳಿಗೆ ತೂರಿ, ಇಷ್ಟುಕಾಲ ತಾವು ನಿಂದಿಸುತ್ತಿದ್ದ ಪಕ್ಷಕ್ಕೇ ಹಾರಿಬಿಡುತ್ತಾರೆ. ಇವರಿಗಿರುವ ಒಂದೇ ಗುರಿ-ಸ್ವಾರ್ಥಸಾಧನೆ.


"ಕಣ್ಣಿನಲ್ಲಿ ಒಂದು ತೊಟ್ಟು ರಕ್ತ ಇರುವವರೆಗೂ ಬಿಡದೇ ಭಗವಂತನ ಸೇವೆ ಮಾಡಬೇಕು. ಗಂಧ ತೇಯುವಂತೆ ಅವನಿಗಾಗಿ ದೇಹವನ್ನು ತೇಯ್ದುಬಿಡಬೇಕು" ಎಂದು ಶ್ರೀರಂಗಮಹಾಗುರುಗಳು ಭಗವಂತನ ಸೇವೆಯನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಹೇಳುತ್ತಿದ್ದರು. ಭಗವಂತನ ಧರ್ಮವನ್ನು ದೇಶದಲ್ಲಿ ನೆಲೆಗೊಳಿಸಿದರೆ ಅದು ಈಶನ ಸೇವೆಯೂ ಹೌದು; ದೇಶಸೇವೆಯೂ ಹೌದು. ಇಂತಹ ದೇಶಸೇವೆ ಮಾಡಲು ಸುಭದ್ರ ಸಮಾಜ ಬೇಕು. ಅಂತಹ ಸಮಾಜರಚನೆಯಲ್ಲಿ ಪ್ರತಿ ನಾಗರಿಕನ ಕರ್ತವ್ಯವೂ ಇದೆ. 


ನಮ್ಮ ದೇಶದಲ್ಲಿ ಧರ್ಮದ ಬಗ್ಗೆ ಋಷಿಗಳಿಗಿದ್ದ ನಿಲುವು ಕಾಲಕ್ರಮದಲ್ಲಿ ಜಾರಿದ್ದರಿಂದಲೇ ದೇಶವು ಧರ್ಮಭ್ರಷ್ಟರ ಆಳ್ವಿಕೆಗೆ ಒಳಗಾಯಿತು. ದೇಶದಲ್ಲಿ ಧರ್ಮವನ್ನು ಉಳಿಸುವುದಕ್ಕಾಗಿ ನಿರ್ಲಿಪ್ತವಾಗಿದ್ದುಕೊಂಡೇ ದೇಶಸೇವೆಯನ್ನು ಮಾಡಬೇಕೆಂಬ ಸ್ಫೂರ್ತಿಯು ನಮಗೆ ಒದಗಿ ಬರಲಿ.


ಸೂಚನೆ : 22/7/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.


ದೊಡ್ಡ ಧರ್ಮದ ರಕ್ಷಣೆ (Dodda Dharmada Raksane)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)



ಇದೊಂದು ಮಹಾಭಾರತದ ಸ್ವಾರಸ್ಯ ಪ್ರಸಂಗ. ಪಾಂಡವರು ಅರಣ್ಯವಾಸದ ಸಮಯದಲ್ಲಿ ಕೆಲಕಾಲ ದ್ವೈತವನದಲ್ಲಿ ಇರುವುದನ್ನು ಅರಿತ ದುರ್ಯೋಧನಾದಿಗಳು ಪಾಂಡವರ ಹೊಟ್ಟೆ ಉರಿಸಲೆಂದೇ ಅವರಿರುವ ಎಡೆಗೆ ಸಕಲ ವೈಭವಗಳೊಡನೆ ಆಗಮಿಸುತ್ತಾರೆ. ಕೌರವರ ಕಡೆಯವರು ಅಲ್ಲೊಂದು ಕ್ರೀಡಾಸ್ಥಾನವನ್ನು ಸಿದ್ಧಪಡಿಸುವುದಕ್ಕೆ ಹೋದಾಗ, ಈ ಮೊದಲೇ ಅಲ್ಲಿ ಬೀಡುಬಿಟ್ಟಿದ್ದ ಗಂಧರ್ವರು ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಗಂಧರ್ವರಿಗೂ ಕೌರವರಿಗೂ ನಡೆದ ಯುದ್ಧದಲ್ಲಿ ದುರ್ಯೋಧನಾದಿಗಳು ಬಂಧಿತರಾಗುತ್ತಾರೆ. ಆಗ ಕೌರವರ ಕಡೆಯವರು ಧರ್ಮರಾಜನಲ್ಲಿಗೆ ಬಂದು ತಮ್ಮ ರಾಜನನ್ನು ಬಿಡಿಸಿಕೊಡಬೇಕೆಂದು ಆರ್ತರಾಗಿ ಬೇಡುತ್ತಾರೆ. ಆಗ ಭೀಮನು, "ಬಿಸಿಲು, ಮಳೆ ಗಾಳಿಗಳಿಗೆ ಸಿಕ್ಕು ನವೆಯುತ್ತಿದ್ದ ನಮ್ಮನ್ನು ಆ ಕೌರವನು ನೋಡಿ ಹೊಟ್ಟೆ ತಣ್ಣಗೆ ಮಾಡಿಕೊಳ್ಳಬೇಕೆಂದು ಬಂದ; ಅವನಿಗೆ ತಕ್ಕ ಶಾಸ್ತಿಯಾಯಿತು" ಎನ್ನುತ್ತಾನೆ. ಧರ್ಮರಾಜನಾದರೋ "ದಾಯಾದಿಗಳಿಗೆ ಜಗಳ ಬರುವುದೂ ಹೋಗುವುದೂ ಸಹಜವೇ. ಆದರೆ ಬಾಂಧವ್ಯ ಹೋಗುತ್ತದೆಯೇ? ದಾಯಾದಿಗಳಾದ ನಮ್ಮಲ್ಲಿ ಪರಸ್ಪರ ವಿರೋಧ ಬಂದಾಗ ನಾವೈವರೇ ಒಂದು; ಅವರು ನೂರು ಮಂದಿಯೇ ಎನ್ನುವುದು ಸರಿ. ಆದರೆ ಶತ್ರುಗಳು ನಮ್ಮೆಲ್ಲರನ್ನೂ ಆಕ್ರಮಿಸಿದಾಗ, ನಾವೆಲ್ಲ ನೂರೈವರು ಮಂದಿಯೂ ಒಂದೇ" ಎನ್ನುತ್ತಾನೆ. ಭೀಮಾರ್ಜುನಾದಿಗಳು ಗಂಧರ್ವರೊಡನೆ ಸೆಣಸಿ ಮೇಲ್ಗೈ ಸಾಧಿಸುತ್ತಾರೆ. ಮೇಲೂ ಗಂಧರ್ವರಾಜ ಚಿತ್ರಸೇನನು ಅರ್ಜುನನ ಮಿತ್ರನೂ ಹೌದು. ಹೀಗಾಗಿ ಗಂಧರ್ವರಿಂದ ದುರ್ಯೋಧನಾದಿಗಳು ಬಿಡುಗಡೆಗೊಂಡು ಎಲ್ಲರೂ ಧರ್ಮರಾಜನ ಬಳಿಗೆ ಬರುತ್ತಾರೆ. ಧರ್ಮರಾಜನು ಗಂಧರ್ವರನ್ನು ಉಪಚರಿಸಿ, ದುರ್ಯೋಧನನನ್ನು ಕುರಿತು "ಇಂತಹ ಸಾಹಸಕ್ಕೆ ಕೈ ಹಾಕಬೇಡಪ್ಪ; ಮನಸ್ಸನ್ನು ಕಹಿ ಮಾಡಿಕೊಳ್ಳದೆ ಹಿಂತಿರುಗಿ ಹೋಗಪ್ಪ" ಎನ್ನುತ್ತಾನೆ.


"ಯಾರಾದರೂ ಬಂಧುಗಳು ಕಷ್ಟದಲ್ಲಿದ್ದಾಗ ಅವರು ನಮಗೆ ತೊಂದರೆ ಕೊಟ್ಟವರೇ ಆಗಿದ್ದರೂ ದ್ವೇಷ ಸಾಧಿಸಬಾರದು. ಕೈಲಾದ ಸಹಾಯ ಮಾಡಬೇಕು. ಅವರವರ ಕರ್ಮ ಅವರವರಿಗೆ ಎಂದು ಬಿಟ್ಟುಬಿಡಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. (ಸಹಾಯ ಮಾಡುವುದರಿಂದ ಆಪತ್ಕಾಲವೇ ಎದುರಾಗುವುದಾದಲ್ಲಿ ಎಚ್ಚರಿಕೆ ಅಗತ್ಯ)


ಭಾರತದ ಮೇಲೆ ವಿದೇಶೀ ಆಕ್ರಮಣಗಳೆಷ್ಟೋ ಆದವು. ಕೆಲವೊಮ್ಮೆ ವಿಷ್ಣು ದೇವಾಲಯಗಳನ್ನು ಧ್ವಂಸಗೊಳಿಸಲು  ಆಕ್ರಮಣಕಾರರು ಬಂದಾಗ ಶಿವ ಭಕ್ತರು ಪ್ರತಿಭಟಿಸದೆ ಸುಮ್ಮನಿದ್ದುಬಿಟ್ಟಿರುವುದೂ ಉಂಟು. ಶಿವ ದೇವಾಲಯಗಳು  ಆಕ್ರಮಣಕ್ಕೊಳಗಾದಾಗ 'ವೀರ' ವಿಷ್ಣುಭಕ್ತರು ಸಹಾಯಹಸ್ತವನ್ನು ನೀಡದೆ ಕೈಕಟ್ಟಿ ಕುಳಿತದ್ದೂ ಉಂಟು. ಇಂತಹ ವರ್ತನೆಯಿಂದಾಗಿ ದೇಶಕ್ಕೆ ಆದ ಆಘಾತಕಾರಿ ಪರಿಣಾಮ ಸರ್ವ ವಿದಿತವೇ. ನಮ್ಮಲ್ಲಿ  ಮತಭೇದಗಳೇನೇ ಇದ್ದರೂ, ವಿದೇಶೀ ಆಕ್ರಮಣಕಾರರು ಬಂದಾಗ ಮತಭೇದವನ್ನು ಬದಿಗೊತ್ತಿ  ಒಗ್ಗಟ್ಟಾಗಿ ಹೋರಾಡಿದ್ದರೆ ನಮ್ಮ ದೇಶ ಇಂದಿನ ದುಃಸ್ಥಿತಿಗೆ ತಲುಪುತ್ತಿರಲಿಲ್ಲ. ವಿದೇಶೀ ಆಕ್ರಮಣಕಾರರ ಬಗ್ಗೆಯೂ ಹಾಗೂ ನಮ್ಮ ದೇಶದಲ್ಲಿಯೇ ಇರುವ ಅವರ ಮಾನಸ ಪುತ್ರರ ಬಗ್ಗೆಯೂ ನಾವು ಎಚ್ಚರಿಕೆ ವಹಿಸದಿದ್ದಲ್ಲಿ ನಮ್ಮ ದೇಶ ಇನ್ನೂ ಹೀನಾಯ ಸ್ಥಿತಿಯನ್ನು ತಲುಪುವುದು ಶತಸ್ಸಿದ್ಧವೇ ಸರಿ. ಅನ್ನ ನೀಡುವ ದಣಿಗೆ  ಋಣಿಯಾಗಿರಬೇಕೆಂಬ ಏಕಮಾತ್ರ ಸಣ್ಣ  ಧರ್ಮಕ್ಕೆ ಕಟ್ಟುಬಿದ್ದು, ಹೊಟ್ಟೆಪಾಡಿಗಾಗಿ ವಿದೇಶೀ ಆಕ್ರಮಣಕಾರರ ಸೈನಿಕರಾಗಿದ್ದ ನಮ್ಮವರು ದೇಶಹಿತವೆಂಬ ದೊಡ್ಡಧರ್ಮವನ್ನು ಅಲಕ್ಷಿಸಿದ್ದರಿಂದ ನಮ್ಮ ಸಂಸ್ಕೃತಿಗೆ ಬಿದ್ದ ಏಟು ಅಷ್ಟಿಷ್ಟಲ್ಲ. ಎರಡು ಧರ್ಮಗಳ ಮಧ್ಯೆ ರಕ್ಷಣೀಯವಾದದ್ದು ದೊಡ್ಡಧರ್ಮವೇ. ಅದನ್ನು ಸಾಧಿಸಲು ಸಣ್ಣ ಧರ್ಮವನ್ನು ಬಲಿ ಕೊಟ್ಟರೂ ಅದು ಧರ್ಮಲೋಪವಾಗದು.


ನಮ್ಮ ದೇಶದ ರಾಮಾಯಣ,  ಮಹಾಭಾರತ, ಪುರಾಣಗಳಲ್ಲಿ  ದೊಡ್ಡ ಧರ್ಮವನ್ನು ಉಳಿಸಿಕೊಳ್ಳುವುದಕ್ಕಾಗಿ ಸಣ್ಣ ಧರ್ಮವನ್ನು ತ್ಯಾಗ ಮಾಡಿದ್ದರ ದೃಷ್ಟಾಂತಗಳು ಕಾಣಸಿಗುತ್ತವೆ. ರಾಷ್ಟ್ರದ ಹಿತಕ್ಕಾಗಿ ದುರ್ಯೋಧನನನ್ನು ತ್ಯಜಿಸುವುದೇ ಸೂಕ್ತವೆಂದು ಧೃತರಾಷ್ಟ್ರನಿಗೆ ವಿದುರನು ತಿಳಿಹೇಳುತ್ತಾನೆ. "ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಜಿಸಬೇಕಾದಲ್ಲಿ ಅದು ಸರಿಯಾದದ್ದೇ; ಗ್ರಾಮದ ಒಳಿತಿಗಾಗಿ ಒಂದು ಕುಲವನ್ನೇ ತ್ಯಜಿಸಬೇಕಾಗಿ ಬಂದರೆ ಅದೂ ಸರಿಯೇ. ಒಂದು ಜನಪದದ ಹಿತದೃಷ್ಟಿಯಿಂದ ಒಂದು ಗ್ರಾಮವನ್ನೇ ತ್ಯಜಿಸಬೇಕಾಗಿ ಬಂದಲ್ಲಿ ಅದೂ ಸರಿಯಾದ ಕ್ರಮವೇ. ಪರಮಾತ್ಮ ಸಾಕ್ಷಾತ್ಕಾರಕ್ಕಾಗಿ ಅಖಂಡ ಭೂಮಂಡಲವನ್ನೇ (ಒಬ್ಬ ರಾಜನಾದವನು) ತ್ಯಜಿಸಬೇಕಾಗಿ ಬಂದಲ್ಲಿ  ಅದೂ ಸೂಕ್ತವೇ" ಎನ್ನುತ್ತಾನೆ ವಿದುರ (ತ್ಯಜೇದೇಕಂ ಕುಲಸ್ಯಾರ್ಥೇ, ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ I ಗ್ರಾಮಂ ಜನಪದಸ್ಯಾರ್ಥೇ ಹ್ಯಾತ್ಮಾರ್ಥೇ ಪೃಥಿವೀಂ ತ್ಯಜೇತ್II)


ಸೂರ್ಯವಂಶದ ಸಗರಚಕ್ರವರ್ತಿಗೆ ಮಗನಾದ ಅಸಮಂಜಸನು ಆಟವಾಡುತ್ತಿದ್ದ ಬಾಲಕರನ್ನು ಸರಯೂ ನದಿಗೆ ತಳ್ಳುತ್ತಿದ್ದನು. ಪ್ರಜೆಗಳ ಗೋಳನ್ನು ನೋಡಿ ಸಗರನು ಅಸಮಂಜಸನನ್ನು ರಾಜ್ಯಬಾಹಿರನನ್ನಾಗಿ ಮಾಡುವನೆಂಬ ವೃತ್ತಾಂತವು ರಾಮಾಯಣದಲ್ಲಿ ಬರುತ್ತದೆ.


ಧರ್ಮಸೂಕ್ಷ್ಮಗಳನ್ನು ಬಿಡಿಸಿಕೊಟ್ಟ ಋಷಿಗಳ ಹಾದಿಯಲ್ಲಿ ಸಾಗುತ್ತಾ ದೇಶದ ಹಿತವೆಂಬ ದೊಡ್ಡ ಧರ್ಮವನ್ನು ಉಳಿಸಿಕೊಳ್ಳೋಣ. ಅದಕ್ಕೆ ಅಡ್ಡಿಬರುವ ಸಣ್ಣ ಧರ್ಮಗಳನ್ನು ಪಕ್ಕಕ್ಕಿಡೋಣ.


ಸೂಚನೆ: 22/7/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Friday, June 16, 2023

ವಿದ್ಯೆಯ ಗುರಿ (Vidyeya guri)


ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)




ಒಂದೂರಿನಲ್ಲಿ ಗುರುಗಳೊಬ್ಬರಿದ್ದರು. ವ್ಯಾಕರಣ, ಜ್ಯೋತಿಷ, ವೇದಾಂತ ಹಾಗೂ ತರ್ಕಗಳಲ್ಲಿ ಅವರಿಗೆ ಪಾಂಡಿತ್ಯವಿತ್ತು. ಪ್ರತಿಶಾಸ್ತ್ರಾಧ್ಯಯನಕ್ಕೂ ಒಬ್ಬೊಬ್ಬ ವಿದ್ಯಾರ್ಥಿಯು ಬರುತ್ತಿದ್ದ. ಗುರುಗಳು ಶ್ರದ್ಧೆಯಿಂದಲೇ ಪಾಠ ಹೇಳುವವರಾದರೂ, ತರ್ಕದ ವಿದ್ಯಾರ್ಥಿಗೆ ವಿಶೇಷವಾದ ಆಸ್ಥೆಯಿಂದ ಪಾಠ ಹೇಳುತ್ತಿದ್ದಾರೆಂದು  ನಿತ್ಯವೂ ಗುರುಗಳ ಪಾಠದ ವೈಖರಿಯನ್ನು ಗಮನಿಸುತ್ತಿದ್ದ ಅವರ ಮಗಳಿಗೆ ಅನ್ನಿಸಿತು. ತಡೆಯಲಾರದೆ ಒಮ್ಮೆ ತಂದೆಯನ್ನು ಈ ಬಗ್ಗೆ ಪ್ರಶ್ನಿಸಿಯೇ ಬಿಟ್ಟಳು. ಗುರುಗಳು ಮಂದಸ್ಮಿತರಾಗಿ, "ನಾಳೆ ಒಂದು ಸಣ್ಣ ಪ್ರಯೋಗವನ್ನು ಮಾಡೋಣ. ಉತ್ತರವು ನಿನಗೇ ತಿಳಿಯುತ್ತದೆ" ಎಂದರು. 


ಮರುದಿನ ತನ್ನ ಮಗಳನ್ನು ಕರೆದು, "ನಾನು ಮನೆಯ ಒಳಗಿರುತ್ತೇನೆ. ಒಬ್ಬೊಬ್ಬ ಶಿಷ್ಯನೂ ಒಂದೊಂದು ಕಾಲಾವಧಿಯಲ್ಲಿ ಪಾಠಕ್ಕೆ ಬರುತ್ತಾನೆ. ಬಂದೊಡನೆಯೇ ನನ್ನನ್ನು ಕಾಣದೆ "ಇಂದು ಪಾಠವಿಲ್ಲವೇ? ಗುರುಗಳು ಕಾಣಿಸುತ್ತಿಲ್ಲವಲ್ಲ?" ಎಂದು ನನ್ನ ಬಗ್ಗೆ ಪ್ರಶ್ನಿಸುತ್ತಾನೆ."ಗುರುಗಳ ಹೊಟ್ಟೆಗೆ ಒಂದು ಗೋಸುಂಬೆ ಹೊಕ್ಕಿದೆ" ಎಂದಷ್ಟೇ ಹೇಳು. ಮುಂದಿನದು ನಿನಗೇ ತಿಳಿಯುತ್ತದೆ" ಎಂದರು. ಎಂದಿನಂತೆ ಪಾಠಕ್ಕೆ ಮೊದಲು ಬಂದವ, ವ್ಯಾಕರಣದ ವಿದ್ಯಾರ್ಥಿ. ಗುರುಗಳ ಬಗ್ಗೆ ಪ್ರಶ್ನಿಸಿದ. ಕೂಡಲೇ ಗುರುಪುತ್ರಿಯು, ತಂದೆ ಹೇಳಿಕೊಟ್ಟಂತೆಯೇ ಹೇಳುತ್ತಾಳೆ. ವ್ಯಾಕರಣದ ವಿದ್ಯಾರ್ಥಿ "ಈ ವಾಕ್ಯ ವ್ಯಾಕರಣಶುದ್ಧವಾಗಿದೆ" ಎಂದು ಹೇಳಿ ಗುರುಗಳ ಬಗ್ಗೆ ಮತ್ತೇನನ್ನೂ ವಿಚಾರಿಸದೆ ಹಿಂತಿರುಗುತ್ತಾನೆ. ನಂತರ ಬಂದ ಶಿಷ್ಯ, ಜ್ಯೋತಿಶ್ಶಾಸ್ತ್ರದವನು. ಅವನು ಗುರುಗಳ ಹೊಟ್ಟೆಗೆ ಗೋಸುಂಬೆ ಹೊಕ್ಕಿರಬೇಕೆಂದರೆ ಅವರ ಗ್ರಹಚಾರ ಸರಿಯಿಲ್ಲವೆಂದೆನಿಸುತ್ತದೆ;  ಇದನ್ನು ಪರಿಹರಿಸಲು ದಾನ, ಜಪ, ಹೋಮ, ದೇವತಾರ್ಚನೆ - ಇವುಗಳಲ್ಲಿ ಏನನ್ನು ಮಾಡಬಹುದು? ಎಂದು ಚಿಂತಿಸುತ್ತಾ ನಿರ್ಗಮಿಸುತ್ತಾನೆ. ನಂತರ ಬಂದವನು ವೇದಾಂತದ ವಿದ್ಯಾರ್ಥಿ. ಅವನು ಗುರುಪುತ್ರಿಯ ಮಾತನ್ನು ಕೇಳಿ, ಗುರುವಿನ ಶರೀರವು ಪೃಥಿವೀ ತತ್ತ್ವದಿಂದಲೇ ಆದದ್ದು; ಗೋಸುಂಬೆಯದೂ ಅಷ್ಟೇ. ಒಂದು ತತ್ತ್ವದ ಒಳಗೆ ಅದೇ ತತ್ತ್ವದ ಮತ್ತೊಂದು ಹೊಕ್ಕಿದೆ. ಸರಿಯಾಗಿಯೇ ಇದೆ ಎನ್ನುತ್ತಾ ಹೊರಟುಬರುತ್ತಾನೆ. ನಂತರ ಬಂದವನು ತರ್ಕದ ವಿದ್ಯಾರ್ಥಿ. ಅವನು ಮಾತ್ರ  ಗುರುಪುತ್ರಿಯ ಮಾತನ್ನು ಕೇಳುತ್ತಲೇ ಗೋಸುಂಬೆಯಂತಹ ಪ್ರಾಣಿ, ಒಬ್ಬ ಮನುಷ್ಯನ ಹೊಟ್ಟೆಯೊಳಗೆ ಹೊಗುವುದು ಹೇಗೆ ಸಾಧ್ಯ? ಒಂದು ಪಕ್ಷ ಹೊಕ್ಕಿತೆಂದರೆ, ಗುರುಗಳು ಜೀವದಿಂದಿರಲು ಸಾಧ್ಯವೇ? ಹಾಗೊಮ್ಮೆ ಗುರುಗಳು ಪ್ರಾಣಬಿಟ್ಟಿದ್ದರೆ, ಮಗಳು ಹೀಗೆ ಲವಲವಿಕೆಯಿಂದ ಓಡಾಡಿಕೊಂಡಿರಲು ಹೇಗೆ ತಾನೇ ಸಾಧ್ಯವಾದೀತು? ಈ ಮಾತಿನಲ್ಲೇನೋ ಮೋಸವಿದೆ ಎಂದು ಊಹಿಸಿ, ಗುರುವಿನ ಮಗಳ ಮುಂದೆ ತನ್ನ ಸಂದೇಹವನ್ನು ವ್ಯಕ್ತಪಡಿಸುತ್ತಾನೆ. ಗುರುಪುತ್ರಿಗೆ ಆಗ, ನಾಲ್ಕು ಶಿಷ್ಯರಲ್ಲಿ ತಾನು ಕಲಿತ ವಿದ್ಯೆಯನ್ನು ತಾರ್ಕಿಕ ಒರೆಗಲ್ಲಿಗೆ ಹಚ್ಚಿ, ಚಿಂತಿಸಬಲ್ಲವ ಇವನೊಬ್ಬನೇ; ಆದ್ದರಿಂದಲೇ ತಂದೆಯು ಇವನಲ್ಲಿ ವಿಶೇಷ ಆಸ್ಥೆ ವಹಿಸುತ್ತಿದ್ದಾರೆ ಎಂಬ ಸತ್ಯ ಗೋಚರವಾಗುತ್ತದೆ.


ಯಾವುದೇ ವಿದ್ಯೆಯನ್ನು ಕಲಿತರೂ ಅದನ್ನು ನಮ್ಮ ಜೀವನಕ್ಕೆ ಬಳಸಿಕೊಳ್ಳುವ ಬಗೆ ಹೇಗೆ ಎಂಬುದರ ಬಗ್ಗೆ ಒಂದು ಸಾಮಾನ್ಯಜ್ಞಾನ (common sense) ಅಗತ್ಯ. ಕೆಲವು ವಿದ್ಯೆಗಳು ಪ್ರತ್ಯಕ್ಷವಾಗಿ ನಮಗೆ ಸಹಕಾರಿ; ಕೆಲವು ಪರೋಕ್ಷವಾಗಿ ಉಪಯುಕ್ತ. ಉದಾಹರಣೆಗೆ ಗಣಿತದಂತಹ ವಿಷಯಗಳು ಬುದ್ಧಿಯ ತಾರ್ಕಿಕ ಚಿಂತನಾಶಕ್ತಿಯನ್ನು ಹರಿತಗೊಳಿಸಿ ನಮಗೆ ಸಹಕಾರಿಯಾಗಬಲ್ಲವು. ಹೀಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವಿದ್ಯಾಭ್ಯಾಸವು ನಮಗೆ ಉಪಯುಕ್ತವಾಗಿರಬೇಕು.


ಇಂದು ಆಧುನಿಕ ವಿದ್ಯೆಗಳು ಪ್ರಚಲಿತವಾಗಿರುವಂತೆ, ನಮ್ಮ ದೇಶದಲ್ಲಿ ಋಷಿಗಳು ತಂದ ವಿದ್ಯೆ ಹಾಗೂ ಕಲೆಗಳೂ ಇವೆ. ಆದರೆ ಅವು ಋಷಿಗಳು ಉದ್ದೇಶಿಸಿದ ಫಲಗಳನ್ನು ಇಂದು ಎಷ್ಟೋ ನೇರಗಳಲ್ಲಿ ನೀಡುತ್ತಿಲ್ಲ. ಹಾಗಾಗಲು ಕಾರಣವೇನೆಂಬುದರ ಬಗ್ಗೆ ಜಿಜ್ಞಾಸೆಯೂ ಬೇಕಾಗಿದೆ. ಮೊದಲಿಗೆ ಆರ್ಷವಿದ್ಯೆಗಳ ಬಗ್ಗೆ ಒಂದು ಮೂಲಭೂತವಾದ ನೋಟ ಬೇಕು.


ವಿದ್ಯೆಯ ಬಗ್ಗೆ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. "ವಿದ್ಯೆ ಎನ್ನುವ ಪದ ಏನು ಹೇಳುತ್ತೆ? 'ವಿದ್' ಎಂದರೆ ಜ್ಞಾನ. 'ಯಾ' ಎಂದರೆ ಹೊಂದಿಸುವುದು. ಜ್ಞಾನದ ಕಡೆಗೆ ಒಯ್ಯುವ ವಿಚಾರವೇ ವಿದ್ಯೆ". ಇಲ್ಲಿ ಜ್ಞಾನವೆನ್ನುವ ಪದವು ಆತ್ಮಜ್ಞಾನ  ಎಂಬರ್ಥದಲ್ಲಿಯೇ ಬಳಸಲ್ಪಟ್ಟಿದೆ. 

ಗಂಗಾನದಿಯು ಮೂಲದಿಂದ ಶುದ್ಧವಾಗಿಯೇ ಹೊರಟರೂ, ಅದು ಹರಿಯುವಾಗ ಆಯಾ ಕ್ಷೇತ್ರಧರ್ಮವನ್ನೂ ಸೇರಿಸಿಕೊಂಡು ಹರಿಯುವಂತೆ, ಶುದ್ಧವಾಗಿ ಹೊರಟ ಋಷಿಪ್ರಣೀತ ವಿದ್ಯೆಗಳು ಅಲ್ಲಲ್ಲಿ ಕಲುಷಿತವಾಗಿವೆ. ಎಷ್ಟೋ ವಿದ್ಯೆಗಳು ಆತ್ಮಜ್ಞಾನದೆಡೆಗೆ ನಮ್ಮನ್ನು ಒಯ್ಯುತ್ತಿಲ್ಲ. ಆದ್ದರಿಂದ ನಮ್ಮನ್ನು ಭಾರತೀಯ ವಿದ್ಯೆ, ಕಲೆಗಳು ಪರಮಾತ್ಮನಲ್ಲಿ ನೆಲೆ ನಿಲ್ಲಿಸುವಂತೆ ಮಾರ್ಗದರ್ಶನ ಮಾಡಬಲ್ಲವರಿಗಾಗಿ ಎದುರುನೋಡೋಣ. 


ಸೂಚನೆ: 15/06/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.



Friday, March 31, 2023

ಬೈದರೆ ಏನು ಮಾಡಬೇಕು?(Baidare Enu Madabeku?)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)




ಪರಮಭಾಗವತ ವಾಗ್ಗೇಯಕಾರ  ತ್ಯಾಗರಾಜರನ್ನು ಕುರಿತು ಅವರ ಗುರುಗಳಾದ ಶುಂಠಿ ವೆಂಕಟರಮಣರು ಒಮ್ಮೆ ಒಂದು ಉದ್ಬೋಧಕ ಪ್ರಶ್ನೆ ಕೇಳುತ್ತಾರೆ- "ನಿನ್ನನ್ನು ಯಾರಾದರೂ ಹೊಗಳಿದರೆ ಏನು ಮಾಡುತ್ತೀಯೆ? ಯಾರಾದರೂ ಬೈದರೆ ಏನು ಮಾಡುತ್ತೀಯೆ?" ಎಂದು. ತ್ಯಾಗರಾಜರು ಒಡನೆಯೇ "ನನ್ನನ್ನು ಯಾರಾದರೂ ಹೊಗಳಿದರೆ ಅದನ್ನು ಭಗವಂತನಿಗೆ ಕೊಟ್ಟುಬಿಡುತ್ತೇನೆ. ನನ್ನನ್ನು ಬೈದರೆ ಅವರು ನನ್ನ ಪ್ರಕೃತಿಯನ್ನು ನೋಡಿ ಅಂದದ್ದು ಇದು ಎಂದು ಸುಮ್ಮನಿದ್ದುಬಿಡುತ್ತೇನೆ" ಎನ್ನುತ್ತಾರೆ. ಎಂತಹ ವೇದಾನ್ತಸಾರವನ್ನು ಒಳಗೊಂಡ ಉತ್ತರವಿದು! ತ್ಯಾಗರಾಜರಂತಹ ಪರಿಪಕ್ವ ಚೇತನರಿಗೆ ಸುಲಭಸಾಧ್ಯ. ಇತರರಿಗೆ ಶ್ರಮಿಸಿ ಸಂಪಾದಿಸಬೇಕಾದ ಮನಃಸ್ಥಿತಿ! 


ಇತರರು ನಮ್ಮನ್ನು ಪ್ರಶಂಸೆ ಮಾಡಿದೊಡನೆ, ಅದಕ್ಕೆ ಈಡಾಗುವವರೇ  ಹೆಚ್ಚು. ಯಾರಾದರೂ ಹೊಗಳಿದರೆ ಕೂಡಲೇ ಅಭಿಮಾನದಿಂದ ಅದನ್ನು ಜನ ಜೇಬಿಗಿಳಿಸಿಕೊಂಡು ಬಿಡುತ್ತಾರೆ. ಆದರೆ ಮಹಾತ್ಮರು "ಸೃಷ್ಟಿಯಲ್ಲಿ ಒಳ್ಳೆಯದೆಲ್ಲ ಭಗವಂತನದೇ" ಎಂಬ ಭಾವನೆಯಿಂದ ಕೂಡಿದವರಾಗಿ ಯಾರಾದರೂ ತಮ್ಮಲ್ಲಿನ  ಒಳ್ಳೆಯದನ್ನು ಹೊಗಳಿದರೆ ಅದನ್ನು ಸಹಜವಾಗಿಯೇ ಭಗವಂತನಿಗೆ ತಲುಪಿಸಿಬಿಡುತ್ತಾರೆ. ಹೀಗಾಗಿ, ಅವರಿಗೆ ಲೌಕಿಕದ ಅಂಟು ಇರುವುದೇ ಇಲ್ಲ. ನಿರ್ಲಿಪ್ತರಾಗಿರುವುದೆಂದರೆ ಇದೇ.


ಮಹಾಗುರುಗಳೊಬ್ಬರ ಬಳಿ ಅವರ ಪ್ರಾಮಾಣಿಕ ಶಿಷ್ಯರೊಬ್ಬರು " ನನ್ನಲ್ಲಿ ಏನೇನು ಒಳ್ಳೆಯ ಗುಣಗಳಿವೆ? ಹೇಳಿ" ಎಂದರಂತೆ. ಗುರುಗಳ ಬಾಯಿಂದ ಅವುಗಳನ್ನು ಕೇಳಿ ಸಂತೋಷ ಪಡುವಾಸೆ ಇವರಲ್ಲಿ ಹುಟ್ಟಿತೋ ಏನೋ! ಗುರುಗಳು, ನಿರ್ವಿಕಾರವಾಗಿ "ನಿನ್ನಲ್ಲಿ ಯಾವ ಒಳ್ಳೆಯ ಗುಣಗಳೂ ಇಲ್ಲಾಪ್ಪಾ" ಎಂದುಬಿಟ್ಟರಂತೆ. ಶಿಷ್ಯರಿಗೆ ಗಾಬರಿ! ತನ್ನಲ್ಲಿದ್ದ ಕೆಲವು ಸದ್ಗುಣಗಳ ಪಟ್ಟಿಯನ್ನು ಗುರುಗಳ ಮುಂದೆ ಒಪ್ಪಿಸಿ, ಇವೆಲ್ಲಾ ನನ್ನಲ್ಲಿ ಇಲ್ಲವೇ?" ಎಂದು ಕೇಳಿದರಂತೆ. ಶಾಂತಚಿತ್ತರಾಗಿ "ಇವೆಲ್ಲಾ ಪರಮಾತ್ಮನ ಗುಣಗಳಪ್ಪಾ" ಎಂದುಬಿಟ್ಟರಂತೆ. ಶಿಷ್ಯರಿಗೆ ತಮ್ಮ ತಪ್ಪಿನ ಅರಿವಾಗಿ "ಒಳ್ಳೆಯದೆಲ್ಲಾ ಭಗವಂತನಿಗೆ ಸೇರಿದ್ದು" ಎಂಬ ಭಾವ ನನ್ನಲ್ಲಿರಲಿ ಎಂದು ಮನಸ್ಸಿನಲ್ಲಿಯೇ ಗುರುವನ್ನು ಪ್ರಾರ್ಥಿಸಿದರಂತೆ. 


ಇತರರು ನಮ್ಮನ್ನು ಅಜ್ಞಾನದಿಂದ ಬೈದರೆ ನಾವು ಯಾವಾಗಲೂ ಸುಮ್ಮನಿರಬೇಕೆಂದೇನಿಲ್ಲ. ಆತ್ಮ / ಧರ್ಮ ರಕ್ಷಣೆಗೆ ಏನು ಬೇಕೋ ಅದನ್ನು ಮಾಡಿಕೊಳ್ಳಬಹುದು. ಬೈದ ವ್ಯಕ್ತಿಗೆ ತಿಳಿಹೇಳುವುದರಿಂದ ಉಪಯೋಗವಿರುವುದಾದರೆ ಸೂಕ್ತಕಾಲದೇಶಗಳಲ್ಲಿ ಅದನ್ನು ಯಥೋಚಿತವಾಗಿ ಮಾಡಬಹುದು. ಇದು ವ್ಯಾವಹಾರಿಕ ಪ್ರತಿಕ್ರಿಯೆ. ಆದರೆ ನಮ್ಮ ಮನಸ್ಸಿನಲ್ಲಿ ನಿರ್ಲಿಪ್ತರಾಗಿರಬೇಕೆಂದರೆ "ಅಜ್ಞಾನದಿಂದ ಒಬ್ಬ ಜೀವಿಯು ನನ್ನ ಪ್ರಕೃತಿಯನ್ನು ನಿಂದಿಸುತ್ತಿದ್ದಾನೆ. ಹೇ ಭಗವಂತ! ಅವನಿಗೆ ಒಳ್ಳೆಯ ಬುದ್ಧಿಯನ್ನು ಕೊಡಪ್ಪ!" ಎಂಬ ಭಾವವಿರಬೇಕು. ಮತ್ತೊಬ್ಬರು ಬೈದಿರುವುದರಲ್ಲಿ ಸತ್ಯಾಂಶವೇ ಇದ್ದರೆ, ನಮ್ಮನ್ನು ತಿದ್ದಿಕೊಳ್ಳಲು ಮಾಡಬೇಕಾದದ್ದೇನು ಎಂಬ ಬಗ್ಗೆ ನಿಗಾ ಹರಿಸಬೇಕು.


ಇತರರು ನಮ್ಮನ್ನು ಹೊಗಳಿದಾಗ, ನಮಗೆ ಅದನ್ನು ಅಂಟಿಸಿಕೊಂಡರೆ ಹೇಗೆ ನಾವು ಪತಿತರಾಗುತ್ತೇವೆಯೋ, ನಮ್ಮನ್ನು ಇತರರು ತೆಗಳಿದಾಗ, ಅದನ್ನು ನಮಗೆ ಅಂಟಿಸಿಕೊಂಡರೆ ದುಃಖವೋ, ಅಸಮಾಧಾನವೋ ಕಟ್ಟಿಟ್ಟ ಸಂಗತಿಯೇ ಹೌದು. ಸಂತ ತ್ಯಾಗರಾಜರ ಉತ್ತರದಲ್ಲಿ ನನ್ನ ಪ್ರಕೃತಿಯನ್ನು ಒಬ್ಬ ಜರೆಯುತ್ತಿದ್ದಾನೆ ಎಂಬ ಭಾವವಿದೆಯಷ್ಟೆ. ಅಂತಹ ಸಾಕ್ಷೀಭಾವವು, ನಮ್ಮನ್ನು ಪ್ರಕೃತಿಗಂಟಿಕೊಳ್ಳದೇ ಜೀವನದ ಎಲ್ಲ ಆಗುಹೋಗುಗಳನ್ನು ಗಮನಿಸಿಕೊಳ್ಳುವ ಉದಾತ್ತ ಮನೋಭಾವವನ್ನು ಉಂಟು ಮಾಡುತ್ತದೆ. ಇಂತಹ ಆದರ್ಶ ಮನಃಸ್ಥಿತಿಯನ್ನು ಸಾಧಿಸಲು ಯತ್ನಿಸೋಣ.

ಸೂಚನೆ: 30/3/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ. 

Thursday, February 16, 2023

ದೇವತೆಗಳಲ್ಲಿ ಯಾರು ಹೆಚ್ಚು? (Devategalalli Yaru Heccu?)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in



ಘಂಟಾಕರ್ಣನೆಂಬ ರಾಕ್ಷಸನಿದ್ದ. ಅಪ್ಪಟ ಶಿವಭಕ್ತನಾತ. ಆದರೆ 'ನಾರಾಯಣ' ಎಂಬ ಶಬ್ದವು ತನ್ನ ಕಿವಿಗೆ ಬೀಳಕೂಡದೆಂದು ಕಿವಿಗಳಿಗೆ ಘಂಟೆಗಳನ್ನು ಕಟ್ಟಿಕೊಂಡು ಅವನ್ನು ಅಲ್ಲಾಡಿಸುತ್ತಲೇ ಇದ್ದ. ಒಮ್ಮೆ ಈಶ್ವರನು ಪ್ರತ್ಯಕ್ಷನಾಗಿ, ವರವನ್ನು ಬೇಡೆಂದನು. ಘಂಟಾಕರ್ಣ, ತನಗೆ ಮೋಕ್ಷವನ್ನು ದಯಪಾಲಿಸಬೇಕೆಂದ. ಆಗ ಈಶ್ವರನು, 'ನಿನ್ನ ಭಕ್ತಿಯನ್ನು ಮೆಚ್ಚಿರುವೆ; ಆದರೆ, ನೀನು ವಿಷ್ಣುವನ್ನು ದ್ವೇಷಿಸುತ್ತಿರುವೆ. ಅವನ ಕ್ಷಮೆಯನ್ನು ಬೇಡಿಕೊಂಡು ಬಂದರೆ ನಿನಗೆ ಮೋಕ್ಷವನ್ನು ಕೊಡುವೆ; ಅಜ್ಞಾನಿಗಳು ವಿಷ್ಣುವಿಗೂ ನನಗೂ ಭೇದವನ್ನು ಕಲ್ಪಿಸುತ್ತಾರೆ; ಇದು ತಪ್ಪು' ಎಂದು ಹೇಳಿ ಮಾಯವಾದನು. ಒಡನೆಯೇ ಘಂಟಾಕರ್ಣನು ವಿಷ್ಣುವಿನಲ್ಲಿ ತನಗಿದ್ದ ವೈರವನ್ನು ಬಿಟ್ಟು, ಅವನನ್ನು ಕುರಿತು ತಪಸ್ಸನ್ನಾಚರಿಸಿದ. ವಿಷ್ಣುವು ಪ್ರತ್ಯಕ್ಷನಾದಾಗ, ಘಂಟಾಕರ್ಣ, 'ನಾನು ತಿಳಿಯದೆ, ತಮ್ಮನ್ನು ದ್ವೇಷಿಸಿದೆ. ಈಶ್ವರನು ತಿಳಿವಳಿಕೆಯನ್ನು ಕೊಟ್ಟನು. ನನ್ನ ತಪ್ಪಿಗಾಗಿ ತಮ್ಮಲ್ಲಿ ಕ್ಷಮೆಯನ್ನು ಬೇಡಿಕೊಳ್ಳುವೆ" ಎಂದನು. ವಿಷ್ಣುವು ಇವನ ಪ್ರಾರ್ಥನೆಗೆ ಓಗೊಟ್ಟು ಇವನ ತಪ್ಪನ್ನು ಕ್ಷಮಿಸಿದನು. ಘಂಟಾಕರ್ಣನಿಗೆ ಮೋಕ್ಷ ಪ್ರಾಪ್ತಿಯಾಯಿತು.


ನಮ್ಮ ಪುರಾಣಗಳಲ್ಲಿ ಯಾವುದೋ ಒಂದು ದೇವತೆಯ ಮಹಿಮೆಯನ್ನು ಹೇಳುತ್ತಿರುವಾಗ, ಮನಸ್ಸು ಆ ದೇವತೆಯಲ್ಲೇ ನೆಡಲಿ ಎಂಬ ಉದ್ದೇಶದಿಂದ ಆ ದೇವತೆಯನ್ನು ಹಾಡಿ ಹೊಗಳಿ, ಉಳಿದೆಲ್ಲ ದೇವತೆಗಳ ಮಹಿಮೆಯನ್ನು ಕೆಳಕ್ಕೆ ತಳ್ಳಿರುವುದುಂಟು. ಒಬ್ಬರೇ ವ್ಯಾಸರು ಒಂದೊಂದು ಪುರಾಣದಲ್ಲಿ ಒಬ್ಬೊಬ್ಬ ದೇವತೆಯ ಪಾರಮ್ಯವನ್ನು ಎತ್ತಿಹಿಡಿದಿದ್ದಾರೆ. ದೇವತೆಗಳಲ್ಲಿ ಭೇದವನ್ನೆಣಿಸಬಾರದು ಎಂಬ ನೀತಿಯನ್ನು ಸಾರುವ ಕಥೆಗಳೂ ಇವೆ. ಸರಿಯಾದ ಮಾರ್ಗದರ್ಶನವಿಲ್ಲದಿದ್ದರೆ ಇದೊಂದು ಗೊಂದಲವಾಗುವುದು ಸಹಜ.


ಶ್ರೀರಂಗಮಹಾಗುರುಗಳು, ಶಿವ ದೊಡ್ಡವನೋ? ವಿಷ್ಣು ದೊಡ್ಡವನೋ? ಎಂಬ ಪ್ರಶ್ನೆ ಬಂದಾಗ, ಪರಬ್ರಹ್ಮವೇ ತ್ರಿಮೂರ್ತಿಗಳಾಗಿ ಕೆಲಸ ನಿರ್ವಹಿಸುವ ಬಗ್ಗೆ ಹೀಗೊಂದು ಸುಂದರ ಉಪಮಾನವನ್ನು ಕೊಟ್ಟಿದ್ದಾರೆ. "ಒಬ್ಬನೇ ನಾಟಕದಲ್ಲಿ ಮೂರು ಪಾರ್ಟು ಹಾಕುತ್ತಾನೆ. ಬೇರೆ ಬೇರೆ ಪಾರ್ಟುಗಳಲ್ಲಿ ಬೇರೆ ಬೇರೆ ಬಣ್ಣಗಳು, ಬೇರೆ ಬೇರೆ ವೇಷ-ಉಡಿಗೆ ತೊಡಿಗೆಗಳು, ಕಾರ್ಯಗಳೂ ಬೇರೆ ಬೇರೆ".

ಆಹಾರ ಸೇವನೆ ಮಾಡುವಾಗ, ಒಬ್ಬೊಬ್ಬರಿಗೆ ಒಂದೊಂದು ರಸ ರುಚಿಸುತ್ತದೆ. ಒಂದು ರಸವನ್ನು ಹೆಚ್ಚು ಇಷ್ಟಪಟ್ಟು ತಿಂದರೂ  ಉಳಿದ ರಸಗಳನ್ನು ಕಡೆಗಣಿಸುವಂತಿಲ್ಲ. ಒಳ್ಳೆಯ ಸ್ವಾಸ್ಥ್ಯಕ್ಕೆ ಷಡ್ರಸಗಳೂ ಬೇಕು ಎನ್ನುತ್ತಾರೆ ಆಹಾರಶಾಸ್ತ್ರಜ್ಞರು.


ರಾಷ್ಟ್ರಕವಿ ಕಾಳಿದಾಸನು "ಒಂದೇ ಪರಬ್ರಹ್ತವಸ್ತುವೇ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೆಂಬ ಮೂರು ಪ್ರಕಾರದ ಭೇದಗಳನ್ನು ತಾಳಿತು. ಒಂದೊಂದು ಸನ್ನಿವೇಶದಲ್ಲಿ ಒಬ್ಬೊಬ್ಬರು ಮುಖ್ಯ; ಮತ್ತೊಬ್ಬರು ಅಮುಖ್ಯರಾಗುತ್ತಾರೆ" ಎನ್ನುತ್ತಾನೆ.(ಏಕೈವ ಮೂರ್ತಿಃ ಬಿಭಿದೇ  ತ್ರಿಧಾ ಸಾ, ಸಾಮಾನ್ಯಮೇಷಾಂ ಪ್ರಥಮಾವರತ್ವಂ") ಯುದ್ಧ ಮಾಡಬೇಕಾದಾಗ, ವೈದ್ಯ ಅಮುಖ್ಯ. ಯೋಧನೇ ಮುಖ್ಯ. ಆದರೆ, ರೋಗ ಚಿಕಿತ್ಸೆ ಮಾಡಬೇಕಾದಾಗ, ವೈದ್ಯನೇ ಮುಖ್ಯನಾಗುತ್ತಾನಷ್ಟೆ.


ನಮ್ಮ ಕುಲಾಚಾರದಂತೆಯೋ, ನಮ್ಮ ಅಭಿರುಚಿಯಂತೆಯೋ, ಯಾವ ದೇವತೆಯನ್ನಾದರೂ ವಿಶೇಷವಾಗಿ ಪೂಜಿಸೋಣ. ಆದರೆ, ಒಂದೇ ಮಹಾಶಕ್ತಿಯೇ ವಿವಿಧ ಕಾರ್ಯಗಳಿಗಾಗಿ, ವಿವಿಧ ರೂಪಗಳನ್ನು ಧರಿಸಿದೆ ಎಂಬುದನ್ನು ಮರೆಯದಿರೋಣ. 

ಸೂಚನೆ: 16/02/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Thursday, February 9, 2023

ಸಜ್ಜನರನ್ನು ನೋಯಿಸದಿರೋಣ (Sajjanarannu Noyisadirona)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in


ಶಕ್ತಿಶಾಲಿಯಾದ ಹುಡುಗನೊಬ್ಬನಿದ್ದ. ಆತ ತನ್ನ ಸಹಪಾಠಿಗಳಿಗೆ ನಿಷ್ಕಾರಣವಾಗಿ ಹೊಡೆಯುತ್ತಿದ್ದ.  ಇವನ ದೌರ್ಜನ್ಯವನ್ನು ಗಮನಿಸಿದ ಅಧ್ಯಾಪಕರೊಬ್ಬರು, ಅವನನ್ನು ತಮ್ಮ ಕೊಠಡಿಗೆ ಕರೆಯಿಸಿಕೊಂಡರು;. ಸುಮ್ಮನೆ ನಗತೊಡಗಿದರು. ಹುಡುಗನಿಗೆ, ಇದೇನೋ ಮೋಜೆನಿಸಿ ತಾನೂ ನಗತೊಡಗಿದ. ಇದ್ದಕ್ಕಿದ್ದಂತೆ  ಅವನನ್ನು ಬೈಯ್ಯಲಾರಂಭಿಸಿದರು. ಹುಡುಗ ಬಹಳ ನೊಂದುಕೊಂಡ. ಮುಂದುವರೆದು, ಅಧ್ಯಾಪಕರು ಹುಡುಗನಿಗೆ ಒಂದು ಬಲವಾದ ಏಟು ಕೊಟ್ಟರು.  ನಿಷ್ಕಾರಣವಾಗಿ ತನಗೇಕೆ ಇವರು ಹೊಡೆದರೆಂದು ತಿಳಿಯದೆ ಹುಡುಗ ಕಸಿವಿಸಿಗೊಂಡ. ಕಣ್ಣಂಚಿನಲ್ಲಿ  ನೀರು ಬಳಬಳನೆ ಹರಿಯಿತು. ಧೈರ್ಯ ಮಾಡಿ, 'ಸುಮ್ಮ ಸುಮ್ಮನೆ ನನ್ನನ್ನೇಕೆ ಹೊಡೆದಿರಿ?' ಎಂದು ಅಧ್ಯಾಪಕರನ್ನು ಕೇಳಿಯೇಬಿಟ್ಟ. 'ನಾನು ಬೈದಾಗ ನಿನ್ನ ಮನಸ್ಸಿಗೆ ನೋವಾಯಿತು; ನಾನು ಹೊಡೆದಾಗ ನಿನ್ನ ಶರೀರಕ್ಕೆ ನೋವಾಯಿತು. ನಮ್ಮಂತೆಯೇ ಇತರರೂ ಅಲ್ಲವೇ? ನಿನ್ನ ಸಹಪಾಠಿಗಳಿಗೆ ನೀನು ವಿನಾಕಾರಣ ನೋವುಂಟು ಮಾಡುವುದು ತರವೇ?' ಎಂದು ಅಧ್ಯಾಪಕರು ಪ್ರಶ್ನಿಸಿದರು. ಹುಡುಗನಿಗೆ ತನ್ನ ತಪ್ಪಿನ ಅರಿವಾಯಿತು. ತನ್ನನ್ನು ತಿದ್ದಿಕೊಂಡ. 


"ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್" ಎಂಬ ಆರ್ಯೋಕ್ತಿಯನ್ನು ಶ್ರೀರಂಗಮಹಾಗುರುಗಳು ಉದ್ಧರಿಸುತ್ತಿದ್ದರು. ನಮಗೆ ಯಾವುದು ಪ್ರತಿಕೂಲವೋ ಅದನ್ನು ಇತರರಿಗೂ ಮಾಡಬಾರದು ಎಂಬುದೇ ಈ ಮಾತಿನ ಅಭಿಪ್ರಾಯ. 

 

ಪುರಾಣದ ಕಥೆಗಳಲ್ಲಿ ನಮಗೆ ಆಗಾಗ ಕಾಣಸಿಗುವ ಪ್ರಸಂಗಗಳೆಂದರೆ, ಋಷಿಮುನಿಗಳ ವಿಷಯದಲ್ಲಿ ಯಾರೋ ಒಬ್ಬರು ಅಪಚಾರ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಂತಹವರನ್ನು ಋಷಿಗಳು ಕೋಪದಿಂದ ಶಪಿಸುತ್ತಾರೆ. ಇದೊಂದು ಬಗೆ. ಕೆಲವು ಸಜ್ಜನರಿರುತ್ತಾರೆ. ದುರ್ಜನರಿಂದ ತಮಗಾದ ತೊಂದರೆಯನ್ನು ನುಂಗಿಕೊಂಡು ಸುಮ್ಮನೇ ಹೋಗಿಬಿಡುತ್ತಾರೆ. ಅಂತಹ ಸಂದರ್ಭಗಳಲ್ಲಿ ತೊಂದರೆ ಕೊಟ್ಟವರಿಗೆ ಅಪಾಯವಿಲ್ಲವೇ? ಎಂಬ ಪ್ರಶ್ನೆ ಕೆಲವರಿಗೆ ಉಂಟಾಗಬಹುದು.


ಸುಭಾಷಿತವೊಂದು ಹೀಗೆ ಹೇಳುತ್ತದೆ-"ಸಜ್ಜನರಿಗೆ ತಾಪವನ್ನು ಕೊಟ್ಟ ಬಳಿಕ 'ಶಾಪವನ್ನು ಕೊಡಿ' ಎಂದು ಕೇಳಲೇಬೇಕಿಲ್ಲ; ಸತ್ಪುರುಷರಿಗೆ ಸಂತೋಷವನ್ನು ಉಂಟುಮಾಡಿ 'ಆಶೀರ್ವದಿಸಿ' ಎಂದು ಕೇಳಲೇಬೇಕಿಲ್ಲ"(ಸತಾಂ ತು ಕೃತ್ವಾ ಸಂತಾಪಂ, ಶಾಪಂ ದೇಹೀತಿ ನೋ ವದೇತ್I  ಕೃತ್ವಾ ಸತಾಂ ತು ಸಂತೋಷಂ ಆಶಿಷಂ ನೈವ ಯಾಚಯೇತ್II) ಶಾಪ / ವರಗಳು ತಂತಾನೇ ಜರುಗಿಬಿಡುತ್ತವೆ!


ಸಜ್ಜನರು ಶಪಿಸದಿದ್ದರೂ ಅವರ ಸಂತಾಪ, ತೊಂದರೆ ಕೊಟ್ಟವರ ಮನಸ್ಸಿಗೆ  ಮಂಕು ಕವಿದಂತೆ ಮಾಡಿಬಿಡುತ್ತದೆ. ಅದಕ್ಕಿಂತ ತೊಂದರೆ ಇನ್ನೇನಿರಲು ಸಾಧ್ಯ? 'ವಿನಾಶಕಾಲೇ ವಿಪರೀತ ಬುದ್ಧಿಃ' ಎಂಬ ನಾಣ್ಣುಡಿ ಪ್ರಸಿದ್ಧವೇ. ಇಲ್ಲಿ'ವಿಪರೀತ' ವೆಂದರೆ 'ಹೆಚ್ಚು' ಎಂದರ್ಥವಲ್ಲ. 'ಪ್ರತಿಕೂಲವಾದದ್ದು, ವಿರುದ್ಧವಾದದ್ದು' ಎಂದು. ಬುದ್ಧಿಗೆಟ್ಟವನು ತನ್ನ ವಿನಾಶಕ್ಕೆ ತಾನೇ ದಾರಿ ಮಾಡಿಕೊಳ್ಳುತ್ತಾನೆ. ಸೀತಾಪಹರಣ ಸಮುಚಿತವಲ್ಲವೆಂದು ಮಾರೀಚ ರಾವಣನಿಗೆ ತಿಳಿಹೇಳುತ್ತಾನೆ. ಆದರೆ ರಾವಣನಿಗೆ ವಿನಾಶಕಾಲ ಸನ್ನಿಹಿತವಾದುದರಿಂದಲೇ ವಿಪರೀತಬುದ್ಧಿಯುಂಟಾಗಿ   ಮಾರೀಚನ ಮಾತು ಹಿತವೆನಿಸುವುದಿಲ್ಲ.


ಇತರರನ್ನು ನೋಯಿಸುವುದೇ ತಪ್ಪು ಎಂದಲ್ಲ. ಮಕ್ಕಳಿಗೆ, ಶಿಷ್ಯರಿಗೆ, ಅಪರಾಧಿಗಳಿಗೆ ಯಥಾಯೋಗ್ಯ ನೋಯಿಸುವುದೇ ಸಚ್ಛಿಕ್ಷಣವಾಗುವುದಾದಲ್ಲಿ, ಅಂತಹ ನೋವು ಸ್ವಾಗತಾರ್ಹವೇ. ಆದರೆ ದುಡುಕುವ ಸ್ವಭಾವದಿಂದಲೋ, ಅಧಿಕಾರದ ಮದದಿಂದಲೋ , ಹಿಂಸಾಪ್ರವೃತ್ತಿಯಿಂದಲೋ ಇತರರನ್ನು ನೋಯಿಸದಿರೋಣ. ಸಜ್ಜನರಿಗೆ ಸಂತೋಷವನ್ನು ಉಂಟುಮಾಡಿ ಅವರಿಂದ ಅಯಾಚಿತವಾಗಿ ಬರುವ ಆಶೀರ್ವಾದಕ್ಕೆ ಭಾಜನರಾಗೋಣ.   


ಸೂಚನೆ: 09/02/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Saturday, May 14, 2022

ಪಶ್ಚಾತ್ತಾಪ ಎಲ್ಲಿಯವರೆಗೆ? Paschattapa elliyavarege?

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in


ಇತ್ತೀಚೆಗೆ ರಾಮಜನ್ಮಭೂಮಿ ವಿವಾದದ ಕುರಿತು ಸುಪ್ರೀಂ ಕೋರ್ಟಿನಲ್ಲಿ ಸಾಕ್ಷಿಯನ್ನು ಮಂಡಿಸಿದ ಶ್ರೀರಾಮಭದ್ರಾಚಾರ್ಯರೆಂಬುವರ ಬಗ್ಗೆ ನಾವೆಲ್ಲಾ ಓದಿ, ಕೇಳಿ, ತಿಳಿದೇ ಇದ್ದೇವೆ. ಬಾಲ್ಯದಿಂದಲೇ ಅಂಧರಾಗಿದ್ದ ಇವರು ತಿಳಿದಿರುವ ಭಾಷೆಗಳೆಷ್ಟು! ಅಭ್ಯಾಸ ಮಾಡಿರುವ ವೇದ ಶಾಸ್ತ್ರಗಳೆಷ್ಟು! ಅವರ ಸಾಧನೆಗಳ ಬಗ್ಗೆ, ಅವರಿಗೆ ಸಂದ ಪುರಸ್ಕಾರಗಳ ಬಗ್ಗೆ ಬರೆಯಹೊರಟರೆ ಒಂದು ಪುಟವೇ ಬೇಕಾದೀತು! ತೊಂದರೆಯನ್ನು ಮೀರಿ ಎತ್ತರಕ್ಕೆ ಏರಬಹುದು ಎಂಬುದಕ್ಕೆ ಇವರದೊಂದು ಉಜ್ಜ್ವಲ ನಿದರ್ಶನ.


ಹುಟ್ಟಿನಿಂದಲೇ  ಒದಗುವ ತೊಂದರೆಗಳಿಂದ ಹತಾಶರಾಗುವವರು ಕೆಲವರಾದರೆ, ಆಕಸ್ಮಿಕವಾಗಿ, ತಾವೆಸಗಿದ ತಪ್ಪುಗಳಿಂದಾದ ಪರಿಣಾಮಗಳಿಂದ ಎಲ್ಲವೂ ಮುಗಿದೇ ಹೋದುವೆಂದು ಕೈಚೆಲ್ಲಿ ಕುಳಿತುಕೊಳ್ಳುವವರು ಎಷ್ಟೋ ಮಂದಿ! ತಮ್ಮ ಕೃತ್ಯಗಳಿಂದ ಪಶ್ಚಾತ್ತಾಪಪಟ್ಟು ಅದರ ಬೇಗೆಯಲ್ಲಿ ಬೆಂದೇ ಹೋಗುತ್ತಾರೆ. 


ಬೆಂಕಿಯಲ್ಲಿ ಕೈಯಿಟ್ಟೊಡನೆಯೇ ಸುಡುತ್ತದೆ; ನೋವಾಗುತ್ತದೆ. ಹಾಗೊಮ್ಮೆ ನೋವಾಗದಿದ್ದರೆ ನಾವು ಗಾಢನಿದ್ರೆಯಲ್ಲಿದ್ದಾಗ ಮೈಯೆಲ್ಲಾ ಸುಟ್ಟೇಹೋದರೂ ಅದರ ಅರಿವೇ ಆಗದಿರಬಹುದು. ಆದುದರಿಂದ ಬಿಸಿ ತಗುಲಿದಾಗ ನೋವಾಗುವ ಪ್ರಕೃತಿನಿಯಮಕ್ಕೆ ನಾವು ಋಣಿಗಳಾಗಿರಬೇಕು. ಹೀಗೆಯೇ ತಪ್ಪೆಸಗಿದಾಗ ಸುಸಂಸ್ಕಾರಿಗೆ ಸಹಜವಾಗಿ ಆಗುವ ಪಶ್ಚಾತ್ತಾಪ ಇನ್ನೊಮ್ಮೆ ತಪ್ಪು ಮಾಡದಂತೆ ಎಚ್ಚರಿಸುವಲ್ಲಿ ಸಹಾಯಕವೇ ಹೌದು. 


ಆದರೆ ಕೆಲವರು ಪಶ್ಚಾತ್ತಾಪವನ್ನು ಎಷ್ಟರ ಮಟ್ಟಿಗೆ ಮಾಡಿಕೊಳ್ಳುತ್ತಾರೆ ಎಂದರೆ ಅವರು ಇಡೀ ಜೀವನ ಅದರಿಂದ ಹೊರಬರುವುದೇ ಇಲ್ಲ. ಪಾಪ ಮಾಡಿದ ಮೇಲೆ ಅದರೊಡನೆಯೇ, ಪಾಪದ ಪ್ರಮಾಣಕ್ಕನುಗುಣವಾಗಿ ತಾಪ, ಸಂಸ್ಕಾರಿಯ ಅರಿವಿಗೆ ಬಂದೇ ಬರುತ್ತದೆ. ಆದರೆ ಮಾಡಿದ ತಪ್ಪಿನ ಬಗ್ಗೆ ನಾವು ಹೇಗೆ ವರ್ತಿಸಬೇಕೆಂಬ ಬಗ್ಗೆ ಶ್ರೀರಂಗಮಹಾಗುರುಗಳ ಮಾತು ಗಮನೀಯ.

"ಜೀವನ ಇಂದಿಗೆ ತಪ್ಪು; ನಾಳೆಗೆ ಸರಿ. ಸಣ್ಣ ಮಗು ನಡೆಯುವಾಗ ಎಡವಿ ಬೀಳುವುದು ಸಹಜ. ಮತ್ತೆ ಹಾಗೆಯೇ ಏಳುತ್ತಾ ಬೀಳುತ್ತಾ ನಡೆಯುವುದನ್ನು ಕಲಿಯುತ್ತೆ. ತಪ್ಪು ಸಹಜವಾಗಿದೆ. ಆದರೆ ತಪ್ಪು ಸಹಜ ಎಂದು ಅದನ್ನು ಮುಂದುವರಿಸಿಕೊಂಡು ಹೋಗಬೇಕಾಗಿಲ್ಲ. ತಪ್ಪನ್ನು ಸರಿಮಾಡಿಕೊಂಡು ಹೋಗಬೇಕಾಗಿದೆ".


ತಪ್ಪು ಮಾಡಿದ ಮೇಲೆ ಮುಂದೆಯೂ ಅದೇ ತರಹದ ತಪ್ಪನ್ನು ಮಾಡದಿರುವಂತೆ ಎಚ್ಚರಿಕೆ ವಹಿಸಲೆತ್ನಿಸುವುದು ಶ್ರೇಯಸ್ಕರ. ಕೆಲವೊಮ್ಮೆ ತಪ್ಪಿನಿಂದುಂಟಾಗುವ ತೊಂದರೆಗಳನ್ನು ಪೂರ್ಣವಾಗಿ ಪರಿಹರಿಸಿಕೊಳ್ಳಲು ಮಾರ್ಗಗಳುಂಟು. ಕೆಲವು ಬಾರಿ ಸ್ವಲ್ಪಮಟ್ಟಿಗಷ್ಟೇ ಪರಿಹರಿಸಿಕೊಳ್ಳಲು ಸಾಧ್ಯ. ಈ ಬಗ್ಗೆ ಶ್ರೀರಂಗಮಹಾಗುರುಗಳು ಹೇಳಿರುವ ಹಿತೋಕ್ತಿ ಗಮನೀಯ. "ಯಾರೇ ಆಗಲಿ, ಕೊರಗುತ್ತಾ ಇರಬಾರದು. ಆ ದೋಷ ಕಳೆಯಲು ಯತ್ನ ಮಾಡಬೇಕು. ಕ್ರಮೇಣ ದೋಷವು ದೂರವಾಗುತ್ತೆ. ಅಕಸ್ಮಾತ್ತಾಗಿ ಆ ದೋಷವು ದೂರವೇ ಆಗುವುದಿಲ್ಲ ಎನ್ನುವ ಸ್ಥಿತಿಯಿದ್ದರೆ ಅದನ್ನು ಅನುಭವಿಸಿ. ಕೊರಗುವುದರಿಂದ ಲಾಭವೇನೂ ಇಲ್ಲ".

ಒಬ್ಬ ತನ್ನ ಅಸಾವಧಾನತೆಯಿಂದ ಅಪಘಾತ ಮಾಡಿಕೊಂಡು ಕಾಲನ್ನೇ ಕಳೆದುಕೊಂಡುಬಿಟ್ಟರೆ, ಕಾಲಿಲ್ಲದಿದ್ದರೂ ಜೀವನ ನಡೆಸುವ ಬಗೆ ಹೇಗೆ ಎಂಬತ್ತ ಗಮನ ಕೊಟ್ಟರೆ ಅವನ ಉಳಿದ ಬಾಳು ಗೋಳಾಗದು. ಜೀವಮಾನವಿಡೀ ದುಃಖಪಟ್ಟರೂ ಹೋದ ಕಾಲೇನೂ ಮರಳಿ ಬಾರದಷ್ಟೆ! ಕಾಲಿಲ್ಲದಿದ್ದರೂ ಜೀವನದಲ್ಲಿ ಎತ್ತರಕ್ಕೇರಿ ವಿಶ್ವಮಾನ್ಯರಾಗಿರುವವರೂ ಇದ್ದಾರಲ್ಲ! ಪಶ್ಚಾತ್ತಾಪ ಬಾಳಿನಲ್ಲಿ ಮುಂದೆ ತಪ್ಪೆಸಗದಂತಿರಲು ಒಂದು ಕರೆಗಂಟೆಯಾಗಬೇಕು; ಮತ್ತೇನೂ ಕೇಳಿಸದಂತೆ ಮಾಡುವ ರಣಕಹಳೆಯಾಗಬಾರದು. 

ಸೂಚನೆ: 14/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

Thursday, February 24, 2022

ವಿಶ್ವಶಾಂತಿಗಾಗಿ ನಾವು ಬದಲಾಗೋಣ (Vishvashaanthigaagi naavu badalaagona)


ಲೇಖಕರು : ಶ್ರೀ ರಾಜಗೋಪಾಲನ್. 
ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in




ಮನುಷ್ಯ ಕೆಲವು ಶತಮಾನಗಳ ಹಿಂದೆ ಇದ್ದಂತೆ ಈಗ ಜೀವನ ನಡೆಸುತ್ತಿಲ್ಲ. ಎಷ್ಟೋ ಸುಸಂಸ್ಕೃತನಾಗಿದ್ದಾನೆ. ಆದರೆ ಹೀಗಾದದ್ದು ಏಕಾಏಕಿ ಅಲ್ಲ. ಜೀವನದ ಸಾಕಷ್ಟು ಅನುಭವಗಳು ಕಾಲಕ್ರಮೇಣ ಅವನನ್ನು ಮಾರ್ಪಡಿಸಿವೆ. ಸಮಾಜ ತನ್ನದೇ ಆದ ಕಟ್ಟಳೆಗಳನ್ನು ನಿರ್ಮಿಸಿಕೊಂಡಿದೆ. ಇವುಗಳ ಹಿಂದಿನ ಉದ್ದೇಶ ಎಲ್ಲರೂ ಶಾಂತಿಯುತವಾಗಿ ಬದುಕಬೇಕೆಂಬುದೇ ಆಗಿದೆ. ನಾವು ಚೆನ್ನಾಗಿರಬೇಕಾದರೆ, ಹೇಗಿರಬೇಕು ಎಂಬುದನ್ನು ನಾನಾ ಧರ್ಮಗುರುಗಳು ತಮ್ಮ ಸಂದೇಶಗಳ ಮೂಲಕ ಸಾರಿ ಹೋಗಿದ್ದಾರೆ. ಕೆಲವರು ಧರ್ಮಸಂದೇಶಗಳನ್ನು ಸಾರುವ ಕಥೆಗಳನ್ನೂ ಹೇಳಿ ಹೋಗಿದ್ದಾರೆ.


 ನಮ್ಮ ದೇಶದ ಪುರಾಣೇತಿಹಾಸಗಳು ಧರ್ಮಕ್ಕಾಗಿ ಕಟ್ಟುಬಿದ್ದು ಜೀವನ ನಡೆಸಬೇಕೆಂಬ ಸಂದೇಶವನ್ನು ಸಾರುವಂತೆ ಬಹುಶಃ ವಿಶ್ವದ ಬೇರಾವ ಧರ್ಮಗ್ರಂಥಗಳೂ ಸಾರಿಲ್ಲ. ಆದರೆ ನಮ್ಮ ಗ್ರಂಥಗಳಲ್ಲಿನ ಧರ್ಮಸೂಕ್ಷ್ಮತೆಗಳನ್ನು ಅರಿಯದೆ ಹೋದ ಅಜ್ಞಾನಿಗಳಿಂದಲೂ, ಭಾರತದ ಮೇಲೆ ಆಕ್ರಮಣ ಮಾಡಿದ್ದಲ್ಲದೆ, ಇಲ್ಲಿನ ಸೈದ್ಧಾಂತಿಕ ನಿಲುವುಗಳನ್ನು ಕಪಟದಿಂದ ಕೊನೆಗೊಳಿಸಲೆತ್ನಿಸಿದ ಪರಕೀಯರಿಂದ, ಹಾಗೂ ಅವರ ಮಾನಸಪುತ್ರರಾದ ಸ್ವದೇಶೀಯರಿಂದಲೂ ಅಲ್ಲಲ್ಲಿ ಅಪಪ್ರಚಾರ ನಡೆದಿದೆಯಷ್ಟೆ. 


ದೇವರ/ವೇದಗಳ ಪ್ರಾಮಾಣ್ಯವನ್ನು ಒಪ್ಪದ ಚಾರ್ವಾಕರನ್ನು ರಾಜಾಶ್ರಯವೇ ದೊರಕಿದ್ದರೂ, ಯಾವ ಆಚಾರ್ಯರೂ ಕೊಲ್ಲಿಸಲೆಣಿಸಿಲ್ಲ. ದರ್ಶನಗಳಲ್ಲಿ ಚಾರ್ವಾಕದರ್ಶನಕ್ಕೂ ಒಂದು ಸ್ಥಾನವನ್ನು ಕೊಟ್ಟಿದ್ದಾರೆ. ದೇಶದಲ್ಲೇ ಇರುವ ಮತೀಯ ಸಂಘರ್ಷಗಳಿಂದ ಆಗೊಮ್ಮೆ ಈಗೊಮ್ಮೆ ದೌರ್ಜನ್ಯಗಳು ನಡೆದಿರುವುದು ನಿಜವಾದರೂ, ನಮ್ಮ ಆರ್ಷಗ್ರಂಥಗಳು ಅಂತಹ ಗಲಭೆಗಳಿಗೆ ಪ್ರಚೋದನೆ ನೀಡಿಲ್ಲ. "ರುದ್ರ ಮತ್ತು ನಾರಾಯಣರೆಂಬುದಾಗಿ ಒಂದೇ ತತ್ತ್ವವು ಎರಡಾಗಿ ಇದೆ" ಎಂದೇ ವ್ಯಾಸರು ಉದ್ಘೋಷಿಸುತ್ತಾರೆ. ಋಷಿಹೃದಯವನ್ನರಿಯದ ಅಲ್ಪಮತಿಗಳಷ್ಟೆ ಇಂತಹ ಸಂಘರ್ಷಗಳಿಗೆ ಕಾರಣರಷ್ಟೆ. ವಿಶ್ವದ ಎಷ್ಟೋ ಭಾಗಗಳಲ್ಲಿ, ಹಿಂದಿನಿಂದಲೂ ತಮ್ಮ ಮತವೇ ಶ್ರೇಷ್ಠವೆಂದೂ ಆ ಕಾರಣದಿಂದ ಉಳಿದ ಮತಾವಲಂಬಿಗಳನ್ನು ನಾಶಪಡಿಸಬೇಕೆಂದೂ ಹೊಡೆದಾಡುವವರು ಕಾಣಸಿಗುತ್ತಾರೆ. ಒಂದು ಕಾಲದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಹಿಂದೂಧರ್ಮವು ಅಥವಾ ಅದರ ಶಾಖೆಯಾದ ಬೌದ್ಧಧರ್ಮವು ಯಾರನ್ನೂ ಬೆದರಿಸಿ ಪ್ರಸಾರ ಮಾಡಲಿಲ್ಲವೆಂಬುದು ಭಾರತದ ಹೆಗ್ಗಳಿಕೆ.


ಶಾಂತಿಯುತವಾಗಿ ಜೀವಿಸಬೇಕಾದುದು ಸರಿಯಾದರೂ, ಧರ್ಮರಕ್ಷಣೆಗಾಗಿ ಯುದ್ಧ ಮಾಡುವುದೂ ಯುಕ್ತವೇ ಆಗಿದೆ ಎಂಬುದು ಸನಾತನಿಗಳ ಮತ. ಪ್ರಸಿದ್ಧವಾದ ಮಹಾಭಾರತದ ಕಥೆಯನ್ನು ಇಲ್ಲಿ ಸ್ಮರಿಸಬಹುದು. ಹುಟ್ಟುಕುರುಡನಾದ ಧೃತರಾಷ್ಟ್ರ ತನ್ನ ಮಕ್ಕಳ ವಿಚಾರದಲ್ಲಿ ಕುರುಡುಪ್ರೀತಿಯನ್ನು ಬೆಳೆಸಿಕೊಳ್ಳುತ್ತಾನೆ. ಆನುವಂಶಿಕವಾದ ಧರ್ಮಪ್ರಜ್ಞೆ ಅವನಲ್ಲಿ ಆಗಾಗ ಆಡಿದರೂ ಪುತ್ರವ್ಯಾಮೋಹವೇ ಮುಂಚೂಣಿಗೆ ಬರುತ್ತದೆ. ಪುತ್ರಪ್ರೇಮ ತಪ್ಪಲ್ಲ; ಪುತ್ರವ್ಯಾಮೋಹ ತಪ್ಪು. ಆತ ತನ್ನ ತಮ್ಮ, ಪಾಂಡುವಿನ ಮಕ್ಕಳೇ ಆದ ಪಾಂಡವರನ್ನೂ ತನ್ನ ಮಕ್ಕಳಂತೆಯೇ ಭಾವಿಸಬೇಕಿತ್ತು. ಆದರೆ, ಪಾಂಡವರ ನಾಶದ ಸೋಪಾನಗಳನ್ನು ಹತ್ತಿಕೊಂಡೇ ಕೌರವರು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತಾನೆ. ಕೌರವರೊಡನೆ ಶ್ರೀಕೃಷ್ಣನು ಸಂಧಾನಕ್ಕೆಂದು ಬಂದಾಗ, ಕೊನೆಗೆ, ಪಾಂಡವರಿಗೆ ಐದು ಗ್ರಾಮಗಳನ್ನಾದರೂ ಕೊಡು ಎಂದಾಗ, ದುರ್ಯೋಧನನು ಸಮ್ಮತಿಸಲಿಲ್ಲ. ಧೃತರಾಷ್ಟ್ರನು ದುರ್ಯೋಧನನ ನಡೆಗೆ ಪ್ರತಿರೋಧವನ್ನೇ ವ್ಯಕ್ತಪಡಿಸಲಿಲ್ಲ. "ಕೌರವರ ಈ ನಡೆ  ಅಧರ್ಮ; ಆದ್ದರಿಂದ ಇದನ್ನು ಖಂಡಿಸಬೇಕಾದದ್ದು ಧರ್ಮ; ಇಂತಹ ಧರ್ಮಕ್ಕಾಗಿ ನೀವು ಯುದ್ಧ ಮಾಡಿ" ಎಂದು ಧರ್ಮಪ್ರಭುವಾದ  ಶ್ರೀಕೃಷ್ಣನೇ ಪಾಂಡವರನ್ನು ಪ್ರೋತ್ಸಾಹಿಸುತ್ತಾನೆ.  ಪರಶುರಾಮನು ದುಷ್ಟರಾದ ಕ್ಷತ್ರಿಯರನ್ನು ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಸಂಹರಿಸಿದನೆಂದು ಪುರಾಣದ ಕಥೆ ತಿಳಿಸುತ್ತದೆ. ಇಲ್ಲಿಯೂ ದಶರಥನಂತಹ ಧಾರ್ಮಿಕ ಕ್ಷತ್ರಿಯರ ತಂಟೆಗೆ ಪರಶುರಾಮನು ಹೋದವನಲ್ಲ; ಭೀಷ್ಮರಂತಹ ಸದ್ಧರ್ಮೀ ಕ್ಷತ್ರಿಯರಿಗೆ ಆತ ಗುರುವೇ ಹೌದು. ಹಿಂಸೆಯ ಉದ್ದೇಶ, ಅಧರ್ಮವಾಗಿರಬಾರದೆಂಬುದೇ ಭಾರತೀಯ ಸನಾತನಿಗಳ ಮತ. ಬೇರೆಯವರು ಏನೇ ತಪ್ಪು ಮಾಡಿದರೂ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕೆನ್ನುವುದೇ ಧರ್ಮವೆಂದಾದಲ್ಲಿ ಶರೀರದಲ್ಲಿಯೇ ಸಹಜವಾಗಿ ಉತ್ಪನ್ನವಾಗುವ ರೋಗರುಜಿನಗಳೂ ನಮ್ಮೊಡನೆ ಸಹಬಾಳ್ವೆ ನಡೆಸಲು ಒಪ್ಪಿಕೊಳ್ಳಬೇಕಾದೀತು! 



ಕ್ಷಮೆ, ಅಹಿಂಸೆ ಇವುಗಳು ಉದಾತ್ತಗುಣಗಳೇ ಹೌದಾದರೂ, ಇವುಗಳ ಅಕಾಲಾಚರಣೆಯಿಂದ ಅಧರ್ಮವು ತಲೆಯೆತ್ತುವುದಾದಲ್ಲಿ ಹಿಂಸೆಯೂ ಅನಿವಾರ್ಯವೇ. ನಮ್ಮ ದೇಹದ ಒಂದು ಭಾಗವೇ  ಕೊಳೆತರೆ ಅದು ಇಡಿಯ ಶರೀರವನ್ನೇ ವ್ಯಾಪಿಸಿ ತೊಂದರೆಗೈಯುವ ಭಯವಿದ್ದಾಗ, ಶರೀರದ ಸಮಗ್ರ ಹಿತದೃಷ್ಟಿಯಿಂದ, ಕೊಳೆತ ಅಂಗವನ್ನೇ ನಿರ್ದಾಕ್ಷಿಣ್ಯವಾಗಿ ಕೊಯ್ದು ಹಾಕುವ ಶಸ್ತ್ರಚಿಕಿತ್ಸಕನ ನಡೆಯಂತೆ, ಅಧರ್ಮನಾಶಕ್ಕೆ ಶಸ್ತ್ರಾಸ್ತ್ರಚಿಕಿತ್ಸೆಯೂ ಅನಿವಾರ್ಯವಾಗಬಹುದು. ಹೀಗೆ ಭಾರತೀಯ ಇತಿಹಾಸ ಪುರಾಣಗಳಲ್ಲಿ ಧರ್ಮಕ್ಕಾಗಿ ಹೋರಾಡಿದವರ ನಾನಾ ದೃಷ್ಟಾಂತಗಳು ಕಾಣಸಿಗುತ್ತವೆ.  "ಕಣ್ಣಿನಲ್ಲಿ ಒಂದು ತೊಟ್ಟು ರಕ್ತವಿರುವವರೆಗೂ ಜ್ಞಾನಕ್ಕೆ ಪ್ರತಿಬಂಧಕವಾದುದನ್ನು ಗೆಲ್ಲಲು ಹೋರಾಡಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. 


ಆದರೆ ಹಿಂಸೆಯ ಬಗ್ಗೆ ಸರಿಯಾದ ಅರಿವಿಲ್ಲದಿರುವುದು ಎಷ್ಟೋ ಅನರ್ಥಗಳಿಗೆ ಕಾರಣವಾಯಿತು. ಅಂತಹದೊಂದು ಅನರ್ಥ ಭಾರತದ ಮೇಲಿನ ಪರಾಕ್ರಮಣ.  ಶಾಂತಿಪ್ರಿಯತೆ, ಅಹಿಂಸಾಪಾಲನೆಗಳು ಅತಿರೇಕಕ್ಕೆ ಹೋಗಿ ಹಿಂಸೆಯೇ ಕೂಡದು ಎಂಬ ಮೂರ್ಖತನವೊಂದೆಡೆಯಾದರೆ, ದೇವರು ಹೇಗೋ ನೋಡಿಕೊಳ್ಳುತ್ತಾನೆ ಎಂಬ ಮೌಢ್ಯ ಮತ್ತು ಅನೈಕಮತ್ಯ ಮತ್ತೊಂದೆಡೆ. ಯಾವುದೇ ಕಾರಣಕ್ಕಾದರೂ ಅಹಿಂಸೆಯೇ ಕೂಡದೆಂದಾಗಿದ್ದರೆ ರಾಮನೇಕೆ ರಾವಣಾದಿಗಳನ್ನು ಸಂಹಾರ ಮಾಡಬೇಕಿತ್ತು? ಕೃಷ್ಣನೇಕೆ ಕಂಸಾದಿಗಳನ್ನು ಕೊಲ್ಲಬೇಕಿತ್ತು? ತನ್ನನ್ನೇಕೆ ರಾಮ ಕೊಲ್ಲಲೆಣಿಸಿದ್ದು ಎಂಬ ವಾಲಿಯ ಪ್ರಶ್ನೆಗೆ, ವಾಲಿಯ ನಡೆ  ಅಧರ್ಮಯುಕ್ತವಾಗಿತ್ತೆಂದು ವಿವರಿಸಿ, ಅವನು ವಧಾರ್ಹನಾದನೆಂಬ ರಾಮನ ಮಾತುಗಳನ್ನು ವಾಲಿಯೂ ಒಪ್ಪುತ್ತಾನೆ!


ಇಂದು ವಿಶ್ವದಲ್ಲಿ ಆಗುತ್ತಿರುವ ಎಷ್ಟೋ ಮತೀಯ ಹಿಂಸೆಗಳಿಗೆ ಕಾರಣ ಮತಾನುಯಾಯಿಗಳಲ್ಲ; ಮತಾಂಧರು. ಇಂತಹ ಮತಾಂಧತೆಯನ್ನು ಸುಸಂಸ್ಕೃತರೆಲ್ಲರೂ ಖಂಡಿಸಬೇಕು. ನಿಷ್ಕಾರಣವಾಗಿ ನಮ್ಮ ದೇಶದ ಮೇಲೆ ಆಕ್ರಮಣವನ್ನು ಮಾಡುವ ಶತ್ರುಗಳನ್ನು ನಿಷ್ಕರುಣೆಯಿಂದ ಕೊಲ್ಲುವುದು ನ್ಯಾಯವೇ ಆಗಿದೆ. ಆದರೆ, "ನಮ್ಮ ಮತಧರ್ಮದ ಚಿಂತನೆಗೆ ಅನುಸಾರವಾಗಿಯೇ ನೀವು ಜೀವನಕ್ರಮವನ್ನು ರೂಪಿಸಿಕೊಳ್ಳಬೇಕು; ಇಲ್ಲದಿದ್ದರೆ ನೀವು ವಧಾರ್ಹರು" ಎಂದು ಹೇಳುವುದು ಯಾವ ನ್ಯಾಯ? ಹಾಗೊಮ್ಮೆ ಯಾವುದಾದರೂ ಒಂದು ಮತಧರ್ಮವು ಹೇಳುತ್ತಿದ್ದರೂ, ಇಂದಿನ ಸುಸಂಸ್ಕೃತ ಸಮಾಜ ಅದರ ಬಗ್ಗೆ ಮರುಚಿಂತನೆ ನಡೆಸಿ, ಜನರು ನೆಮ್ಮದಿಯಿಂದ ಸಹಬಾಳ್ವೆ ನಡೆಸಲು ಅನುಕೂಲವಾಗುವಂತೆ ಮತೀಯ ನಿಯಮಗಳನ್ನು ಪರಿಷ್ಕರಿಸಬೇಕು. 


ಎಲ್ಲರೂ ನೆಮ್ಮದಿಯಿಂದ ಬದುಕಬೇಕೆಂಬುದು ನಮ್ಮ ಹಕ್ಕಾಗುವುದಾದಲ್ಲಿ, ನೆಮ್ಮದಿಗೆ ಭಂಗ ತರುವ ಶಿಕ್ಷಣವನ್ನು ಕೊಡುವವರನ್ನು ಶಿಕ್ಷಾರ್ಹರನ್ನಾಗಿ ಮಾಡುವುದು ಕರ್ತವ್ಯವೇ ಆಗುತ್ತದೆ. ಇಂದು ಭಾರತದಲ್ಲಿ ಪ್ರಚಲಿತವಿರುವ ಪ್ರತಿ ಮತಧರ್ಮಗಳ ಪುಸ್ತಕಗಳನ್ನು ಗಮನವಿಟ್ಟು ನೋಡಿ, ರಾಷ್ಟ್ರಪ್ರೇಮಕ್ಕೆ ವಿರೋಧವಾದ, ಸರ್ವಶಾಂತಿಗೆ ಪೂರಕವಲ್ಲದ, ಭಾರತದ ಮುಖ್ಯವಾಹಿನಿಗೆ ಸಲ್ಲದ ಮಾತುಗಳನ್ನು ಹುಡುಕಿ, ಹೆಕ್ಕಿ, ಹೊಸಕಿ, ಹೊರಹಾಕಬೇಕು. ಭಾರತದಲ್ಲಿ ಸಿಗುವ ಸುಖಸವಲತ್ತು ಬೇಕೆನಿಸುವವರಿಗೆ, ಭಾರತೀಯರೆಲ್ಲರ ಶಾಂತಿಗಿಂತ, ಇಲ್ಲಿನ ಸಂವಿಧಾನಕ್ಕಿಂತ ತಮ್ಮ ಮತಧರ್ಮದ ವಕ್ತಾರರ ಆದೇಶ ನಿರ್ದೇಶಗಳು ಸರ್ವೋಚ್ಚವೆನಿಸಿದರೆ ಅದು ಖಂಡನಾರ್ಹ. ನಮ್ಮ ದೇಶದಲ್ಲಿ ಕೆಲವೆಡೆ ಚಾಲ್ತಿಯಲ್ಲಿದ್ದ, ಕೆಲವು ಇವತ್ತಿನ ದೇಶಕಾಲಗಳಿಗೆ ಹೊಂದದ, ಪದ್ಧತಿಗಳನ್ನು ಇಂದು ತೆಗೆದುಹಾಕಲಾಗಿದೆಯಷ್ಟೆ. ಉದಾಹರಣೆಗೆ, ಇಂದು ಸಹಗಮನ ಪದ್ಧತಿ ಸಂಪೂರ್ಣ ಮರೆಯಾಗಿದೆ. ಬಾಲ್ಯವಿವಾಹ ಪದ್ಧತಿ, ಒಂದೊಂದೆಡೆ ಕಂಡುಬಂದರೂ ಕಾನೂನುಬಾಹಿರವಾಗಿದೆ. ಇನ್ನೂ ಎಷ್ಟೋ ಅಮಾನವೀಯ ಪದ್ಧತಿಗಳ ರದ್ದತಿಗೆ ಹೋರಾಟಗಳು ನಡೆಯುತ್ತಿವೆ.


ಸರ್ವಶಾಂತಿಯ ಗುರಿಯನ್ನು ಸಾಧಿಸಲು ಭಾರತದ ಋಷಿಗಳ ಘೋಷವಾಕ್ಯಗಳು ಸಾರ್ವಕಾಲಿಕ ಹಿತನುಡಿಗಳೇ ಸರಿ.  " ಸರ್ವೇ ಚ ಸುಖಿನಃ ಸಂತುI ಸರ್ವೇ ಸಂತು ನಿರಾಮಯಾಃI ಸರ್ವೇ ಭದ್ರಾಣಿ ಪಶ್ಯಂತು Iಮಾ ಕಶ್ಚಿತ್ ದುಃಖಭಾಗ್ಭವೇತ್II"(ಎಲ್ಲರೂ ಸುಖಿಗಳಾಗಲಿ, ಎಲ್ಲರೂ ರೋಗರಹಿತರಾಗಿರಲಿ, ಎಲ್ಲರೂ ಮಂಗಳವಾದದ್ದನ್ನೇ ನೋಡುವಂತಾಗಲಿ, ಯಾರೂ ದುಃಖಭಾಗಿಗಳಾಗುವುದು ಬೇಡ) "ಲೋಕಾಃ ಸಮಸ್ತಾಃ ಸುಖಿನೋ ಭವಂತು" (ಎಲ್ಲ ಲೋಕಗಳೂ ಸುಖವಾಗಿರಲಿ) ಎಂಬ ಋಷಿಗಳ ಆಶಂಸನೆಯು ವಿಶ್ವದ ಘೋಷವಾಕ್ಯವಾಗಿ, ಅದರ ಅನುಷ್ಠಾನಕ್ಕಾಗಿ ವಿಶ್ವಮಾನವರೆಲ್ಲರೂ ಶ್ರಮಿಸುವುದಾದಲ್ಲಿ, ಇಡೀ ಜಗತ್ತೇ ಶಾಂತಿ, ನೆಮ್ಮದಿಗಳಿಂದ ನಲಿದೀತು!

ಸೂಚನೆ: 24/02/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ. 


Monday, August 2, 2021

ಜೀವನದಲ್ಲಿ ತೃಪ್ತಿಯಿರಲಿ (Jeevanadalli Trptiyirali)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in


ಪುರೋಹಿತರೊಬ್ಬರಿದ್ದರು. ಮನೆಗೆ ಬಂದು ವೈದಿಕ ಕರ್ಮಗಳನ್ನು ಅವರು ನಡೆಸಿಕೊಟ್ಟ ಬಳಿಕ ಅವರನ್ನು "ತಮಗೆಷ್ಟು ದಕ್ಷಿಣೆ ಕೊಡಬೇಕು" ಎಂದು ಕೇಳಿದರೆ, "ನನಗೆ ದೇವರು ತೃಪ್ತಿಯನ್ನು ಕೊಟ್ಟಿದ್ದಾನೆ; ನಿಮಗೆ ಎಷ್ಟು ಸಂಭಾವನೆ ಕೊಡುವುದು ಸೂಕ್ತವೆಂದು ತೋರುತ್ತದೋ ಅಷ್ಟೇ ಕೊಡಿ ಸಾಕು" ಎನ್ನುತ್ತಿದ್ದರು. ಹಾಗೆಂದು, ಅವರೇನೂ ಆಢ್ಯರಾದ(ಶ್ರೀಮಂತರಾದ) ವ್ಯಕ್ತಿಯಲ್ಲ. "ಒಂದೂರಿನಲ್ಲಿ ಒಬ್ಬ ಬಡಬ್ರಾಹ್ಮಣನಿದ್ದ" ಎನ್ನುವಂತಹ ಕತೆಗಳಿಗೆ ಸರಿಹೊಂದುವ ವ್ಯಕ್ತಿಯೇ ಆಗಿದ್ದರವರು. ಆದರೆ ಒಂದರ್ಥದಲ್ಲಿ ಅವರು ಸಿರಿವಂತರೂ ಹೌದು. ಅವರಿಗಿದ್ದ ಸಂಪತ್ತು, ತೃಪ್ತಿಸಂಪತ್ತು.


ಮನುಷ್ಯ ಸಾಮಾನ್ಯವಾಗಿ ಎಲ್ಲ ಕೆಲಸಗಳನ್ನೂ ಮಾಡುವುದು ತನ್ನ ಸಂತೋಷಕ್ಕಾಗಿಯೇ. ಅಪರೂಪಕ್ಕೆ, ಇತರರ ಸಂತೋಷಕ್ಕಾಗಿಯೇ ಕೆಲಸ ಮಾಡುವವರೂ ಇರುತ್ತಾರೆ. ಆದರೆ ಒಳಹೊಕ್ಕು ನೋಡಿದರೆ, ಇತರರನ್ನು   ಸಂತೋಷಗೊಳಿಸುವುದರಿಂದಲೇ ಅವರಿಗೆ ಸಂತೋಷ! ಜನ ತಮ್ಮ ಸಂತೋಷಕ್ಕಾಗಿ ಕೆಲಸ ಮಾಡುವುದು ತಪ್ಪಲ್ಲ. ಆದರೆ ಸಂತೋಷವನ್ನು ಅಳೆಯಲು ಯಾವ ಮಾನದಂಡವನ್ನು ಬಳಸಬೇಕೆಂಬುದೇ ಜಿಜ್ಞಾಸೆಗೆ ವಿಷಯ.


ಮನುಷ್ಯನಿಗೆ ತಾನಂದುಕೊಂಡಂತೆಯೇ ಕೈಕೊಂಡ ಕೆಲಸಕ್ಕೆ ಪ್ರತಿಫಲ ದೊರೆತರೆ, ತೃಪ್ತಿಯು ಸಹಜವಾಗಿ ಬರುತ್ತದೆ. ಆದರೆ ಕೆಲವರು ತಮಗೆ ಎಷ್ಟು ಪ್ರತಿಫಲ ಸಿಕ್ಕರೂ ತೃಪ್ತಿಯನ್ನೇ ಹೊಂದುವುದಿಲ್ಲ. ಇದಕ್ಕೆ ಕಾರಣವೇನೆಂದು ಅನ್ವೇಷಿಸಿದಾಗ ತಿಳಿಯುತ್ತದೆ-ಅವರು ತಮಗೆ ಇಂತಿಷ್ಟು ಪ್ರತಿಫಲ ದೊರೆತರೆ ಸಾಕೆಂದು ಕಾರ್ಯಾರಂಭದಲ್ಲಿ ಯೋಚಿಸಿಯೇ  ಇರುವುದಿಲ್ಲ. ತಮ್ಮ ಸುಖ ಸಂತೋಷಗಳನ್ನು ಅಳೆದುಕೊಳ್ಳುವಾಗ ತಮ್ಮಲ್ಲಿ ಏನು ಸುಖಸಾಮಗ್ರಿಗಳಿವೆಯೆಂದು ಗಮನಿಸದೆ, ಬೇರೆಯವರಲ್ಲಿರುವ ಎಷ್ಟೋ ಸುಖಸಾಧನಗಳು ತಮ್ಮಲ್ಲಿಲ್ಲವೆಂದೇ ಕೊರಗುತ್ತಾರೆ. ಆದರೆ ವಿವೇಕಿಗಳು ಪ್ರಪಂಚವನ್ನು ನೋಡಿಯಾದರೂ ಪಾಠ ಕಲಿಯುತ್ತಾರೆ. ತನ್ನ ಪಾದಗಳಿಗೆ ಧರಿಸಲು ಶೂ ಇಲ್ಲವೆಂದು ಕೊರಗುತ್ತಿದ್ದ ವ್ಯಕ್ತಿಯೊಬ್ಬ, ಕಾಲೇ ಇಲ್ಲದವನನ್ನು ನೋಡಿ ತಾನೇ ಭಾಗ್ಯಶಾಲಿಯೆಂದು ಅರಿತುಕೊಂಡು, ಕೊರಗುವುದನ್ನು ನಿಲ್ಲಿಸಿದನಂತೆ! "ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು, ಹರುಷಕ್ಕಿದೆ ದಾರಿ" ಎನ್ನುತ್ತಾರೆ ಮಾನ್ಯ ಡಿ ವಿ ಜಿ ಯವರು. ಇತರರಿಗೆ ಹೋಲಿಸಿಕೊಂಡು  ಕೊರಗದೆ, ಹೇಗೆ ತೃಪ್ತನಾಗಿ ಜೀವಿಸಬೇಕೆಂಬುದರ ಬಗ್ಗೆ ಶ್ರೀರಂಗಮಹಾಗುರುಗಳು ನುಡಿದಿರುವ ಈ ಮಾತುಗಳು ಸ್ಮರಣೀಯ- "ಮನುಷ್ಯನು ಯಾವತ್ತೂ ತನಗಿಂತ ಮೇಲ್ಮಟ್ಟದವರನ್ನು ನೋಡಿ ತಾನು ಹಾಗಾಗಿಲ್ಲವೆಂದು  ಆಲೋಚಿಸಿ  ಇದ್ದದ್ದರಲ್ಲೆಲ್ಲಾ ಅತೃಪ್ತಿಪಟ್ಟುಕೊಂಡು ಸುಖಹೀನನಾಗಬಾರದು. ತನಗಿಂತ ಕೆಳದರ್ಜೆಯವರನ್ನು ನೋಡಿ ಅಪ್ಪಾ ನಾನು ಎಷ್ಟು ಅನುಕೂಲವಾಗಿದೇನೆಪ್ಪ! ದೇವರು ಇದನ್ನು ಕಾಪಾಡಿಕೊಟ್ಟರೆ ಇದೇ ಲಕ್ಷ, ಇದೇ ಕೋಟಿ ಎಂದು ಇದ್ದದ್ದರಲ್ಲಿ ಸಂತೋಷಪಟ್ಟುಕೊಂಡು ಸುಖಿಯಾಗಿ ಬಾಳಬೇಕು. ಇದು ವಿವೇಕ"


ಮನುಷ್ಯ ಕೆಲವು ವಿಷಯಗಳಲ್ಲಿ ಅಲ್ಪತೃಪ್ತನಾಗಿರಬಾರದು. "ಅಜರಾಮರವತ್ ಪ್ರಾಜ್ಞಃ ವಿದ್ಯಾಮರ್ಥಂ ಚ ಸಾಧಯೇತ್I

ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್"II(ತಾನು ಮುಪ್ಪಿಲ್ಲದವನು; ಸಾವಿಲ್ಲದವನು ಎಂದು ಭಾವಿಸಿ ವಿದ್ಯೆಯನ್ನೂ ಧನವನ್ನೂ ಸಂಪಾದಿಸಬೇಕು. ಮೃತ್ಯುವು ತನ್ನ ಜುಟ್ಟನ್ನು ಹಿಡಿದುಕೊಂಡಿದೆ ಎಂದು ಭಾವಿಸಿ ಧರ್ಮವನ್ನಾಚರಿಸಬೇಕು) ಎನ್ನುತ್ತದೆ ಆರ್ಯೋಕ್ತಿ.


ನಮ್ಮ ತೃಪ್ತಿಯನ್ನು ಇತರರಿಗೆ ಹೋಲಿಸಿಕೊಳ್ಳುವ ಮಾನದಂಡದಿಂದ ಅಳೆಯದೆ, ಸತ್ಕಾರ್ಯಗಳಲ್ಲಿ ಶಕ್ತಿಯಿದ್ದಷ್ಟೂ ಶ್ರಮಿಸಿ, ಕೊನೆಗೆ ಕೈಗೆ ಬಂದುದನ್ನು ತೃಪ್ತಿಯಿಂದ ಅನುಭವಿಸೋಣ. 


ಸೂಚನೆ: 2/08/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

Sunday, August 1, 2021

ಗುಣಗ್ರಾಹಿಗಳಾಗೋಣ (Gunagraahigalaagona)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in





ಗುರುಗಳೊಬ್ಬರಿದ್ದರು. ಅವರ ಬಳಿ ಒಂದು ವಿಶೇಷ ಕನ್ನಡಿ ಇದ್ದಿತು. ಅದನ್ನು ಯಾರ ಮುಂದಾದರೂ ಹಿಡಿದರೆ, ಆ ವ್ಯಕ್ತಿಯ ದೋಷಗಳೆಲ್ಲ ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಆ ಗುರುಗಳಿಗೆ ಒಬ್ಬ ಶಿಷ್ಯನಿದ್ದ. ಗುರುಗಳ ಬಳಿ ಇದ್ದ ಈ ವಿಶೇಷ ಕನ್ನಡಿಯನ್ನು ಶಿಷ್ಯ ಗಮನಿಸಿದ್ದ. ಅವನಿಗೆ ತಡೆಯದಾಯಿತು. ಆತ ಆ ಕನ್ನಡಿಯನ್ನು ತನಗೇ ಕೊಡಬೇಕೆಂದು ಗುರುಗಳನ್ನು ಒತ್ತಾಯಿಸಲಾರಂಭಿಸಿದ. ಗುರುಗಳ ಹಿತವಚನಗಳು ಶಿಷ್ಯನಿಗೆ ರುಚಿಸದಾದವು. ಗುರುಗಳು ಕನ್ನಡಿಯನ್ನು ಶಿಷ್ಯನಿಗೆ ಕೊಟ್ಟೇಬಿಟ್ಟರು. ಭಸ್ಮಾಸುರ, ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಆ ವ್ಯಕ್ತಿ ಸುಟ್ಟುಹೋಗಬೇಕೆಂಬ ವರವನ್ನು ಪಡೆದು, ಆ ವರವನ್ನಿತ್ತ ಶಿವನ ಮೇಲೆಯೇ ಪ್ರಯೋಗಿಸಹೊರಟಂತೆ, ಈ ಶಿಷ್ಯನೂ ಆ ಕನ್ನಡಿಯನ್ನು ಗುರುಗಳ ಮುಖಕ್ಕೇ ಹಿಡಿದ. ಶಿಷ್ಯನಿಗೆ ಆಶ್ಚರ್ಯ, ಜುಗುಪ್ಸೆ-ಎರಡೂ ಉಂಟಾದವು. ತಾನು ಬಹಳ ಉನ್ನತ ವ್ಯಕ್ತಿಯೆಂದು ಭಾವಿಸಿದ್ದ ಗುರುವಿನಲ್ಲೇ ನಾಲ್ಕಾರು ದೋಷಗಳು! "ಏನು ಗುರುಗಳೇ, ನಿಮ್ಮಲ್ಲಿ ಹೀಗೂ ದೋಷಗಳು ಇರಬಹುದೆಂದು ನಾನೆಣಿಸಿಯೇ ಇರಲಿಲ್ಲವಲ್ಲ?" ಎಂದು ಗುರುಗಳನ್ನು ಕೇಳಿಯೇಬಿಟ್ಟ! ಗುರುಗಳು ಶಾಂತಚಿತ್ತರಾಗಿ ಶಿಷ್ಯನನ್ನು ಕುರಿತು, "ಮಗು, ಒಮ್ಮೆ ನಿನ್ನ ಕಡೆಗೇ ಆ ಕನ್ನಡಿಯನ್ನು ತಿರುಗಿಸಿಕೊಂಡು ನೋಡು" ಎಂದರು. ಶಿಷ್ಯ, ಅಂತೆಯೇ ಮಾಡಿದ. ದಿಗ್ಭ್ರಾಂತನಾದ. ಗುರುಗಳಲ್ಲಿದ್ದುದು ನಾಲ್ಕಾರು ದೋಷಗಳು; ತನ್ನಲ್ಲಿರುವ ದೋಷಗಳನ್ನು ಪಟ್ಟಿ ಮಾಡಿಕೊಳ್ಳುವುದೇ ಕಷ್ಟವಾಯ್ತು, ಅವನಿಗೆ! ವಿವೇಕದಿಂದ ಗುರುಗಳಿಗೆ ಕನ್ನಡಿಯನ್ನು ಮರಳಿಸಿ ಶರಣಾದ. ಗುರುಗಳೆಂದರು- "ನೂರಕ್ಕೆ ನೂರು ಶುದ್ಧಾತ್ಮರು ಸಿಗುವುದು ವಿರಳವೇ ಸರಿ. ಕೆಲವು ಮಹಾತ್ಮರೂ ಒಮ್ಮೊಮ್ಮೆ ಸತ್ಪಥದಿಂದ ಜಾರಿರುವುದುಂಟು. ಆದರೆ, ಅವರು ಭಗವತ್ಕೃಪೆ ಹಾಗೂ ಸಾಧನಾಬಲಗಳಿಂದ ಮತ್ತೆ ಎಲ್ಲವನ್ನೂ ಕೊಡವಿಕೊಂಡು ಮೇಲೇಳಬಲ್ಲರು;  ತಮ್ಮ ದೋಷಗಳನ್ನು ತೊಳೆದುಕೊಳ್ಳಬಲ್ಲರು. ಆದ್ದರಿಂದ, ಪಾಮರರು ತಮ್ಮನ್ನು  ಮಹಾತ್ಮರಿಗೆ ಹೋಲಿಸಿಕೊಳ್ಳಬಾರದು. ಯಾರಲ್ಲಿಯಾದರೂ ಸರಿ, ಗುಣವನ್ನು ಮಾತ್ರ ಗ್ರಹಿಸಿಕೊಂಡು ಮುಂದೆ ಸಾಗುವಂತಿದ್ದರೆ ನಮ್ಮ ಜೀವನ ನೆಮ್ಮದಿಯಿಂದ ಇದ್ದೀತು. ನಿನಗೆ ಅಂತಹ ಪರಿಜ್ಞಾನವಿಲ್ಲದೆ, ಕೇವಲ ಶಾಸ್ತ್ರಪಾಂಡಿತ್ಯದಿಂದ ನಿನ್ನನ್ನು ಒಬ್ಬ ಅಧ್ಯಾತ್ಮಸಾಧಕನೆಂದೆಣಿಸಿದೆ;  ನನ್ನ ಹಿತವಚನಗಳು ನಿನಗೆ ಹಿಡಿಸಲಿಲ್ಲ" ಎಂದು. ಶಿಷ್ಯನಿಗೆ ಅರಿವುಂಟಾಯಿತು.


ಅಧ್ಯಾತ್ಮಮಾರ್ಗವನ್ನು ಅರಸಿ ಬಂದವರಲ್ಲಿ ಎಷ್ಟೋ ಮಂದಿ, ಕೇವಲ ಪುಸ್ತಕ ಜ್ಞಾನದತ್ತಲೇ ಹೆಚ್ಚು ಒಲವನ್ನು ತೋರಿಸುತ್ತಿರುತ್ತಾರೆ. ಹೀಗಾಗಿ, ತಮ್ಮ ಜೀವನಕ್ಕೆ ನಿಜವಾದ ಹಿತವನ್ನುಂಟು ಮಾಡುವ ಜ್ಞಾನದ ಮಾತುಗಳು ಅವರಿಗೆ ರುಚಿಸಲಾರವು. " ವೇಸ್ಟ್ ಪೇಪರ್ ಬ್ಯಾಸ್ಕೆಟ್ಟಿನಲ್ಲಿ ಹಾಕಲ್ಪಡಬೇಕಾಗಿದ್ದ ವಿಷಯಗಳೆಲ್ಲಾ ಮನಸ್ಸಿನಲ್ಲಿ ತುಂಬಿರುವಾಗ, ಜ್ಞಾನದ ಮಾತುಗಳು ಅದಕ್ಕೆ ಹೇಗೆ ತಾನೇ ಹಿಡಿಸಿಯಾವು?" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಪುಸ್ತಕಜ್ಞಾನ ತಪ್ಪೆಂದಲ್ಲ.  ಸದ್ಗುರುವೊಬ್ಬನು ದೊರೆತಾಗ ತನಗೆ ನಿಜಕ್ಕೂ ಜೀವಹಿತವನ್ನುಂಟುಮಾಡುವ ಸಾಹಿತ್ಯವಾವುದೆಂದು ಗುರುಮುಖೇನ ತಿಳಿದುಕೊಂಡು ಅವುಗಳ ಅಧ್ಯಯನದತ್ತ ಮನಸ್ಸನ್ನು ಹರಿಸಬೇಕು. ಇಂದಿನ ಮಾಹಿತಿಯುಗದಲ್ಲಿ ನಮಗೆ ಜೀವಮಾನವಿಡೀ ಓದಿದರೂ ಮುಗಿಯದ ಜ್ಞಾನರಾಶಿಯಿದೆ. ನಮ್ಮ ಮನಸ್ಸು ಕಂಡ ಕಂಡ ಎಲ್ಲ ಮಾಹಿತಿಗಳನ್ನೂ ಬಾಚಿ ತುಂಬಿಕೊಳ್ಳುವ ಕಸದ ಬುಟ್ಟಿಯಂತಾಗದೆ ನಮ್ಮ ಜೀವದ ಉದ್ಧಾರಕ್ಕೆ ಬೇಕಾದ ರಸಗ್ರಾಹಿ ಬುಟ್ಟಿಯಂತಾಗಲಿ.


ಸೂಚನೆ: 29/07/2021 ರಂದು ಈ ಲೇಖನ
ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.   

Saturday, June 26, 2021

ಭರವಸೆಯಿಂದ ಬದುಕೋಣ (Bharavaseyinda Badukona)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in




ಮಹಾಭಾರತದ ಬಗ್ಗೆ ಒಂದು ಮಾತಿದೆ-"ಇಲ್ಲಿ ಏನು ಇದೆಯೋ ಅದೇ ಬೇರೆಡೆ ಇರುವುದು; ಇಲ್ಲಿ ಏನಿಲ್ಲವೋ ಅದಿನ್ನೆಲ್ಲೂ ಇಲ್ಲ" ಎಂದು. ಹೌದು. ಒಂದು ಲಕ್ಷ ಶ್ಲೋಕಗಳನ್ನೊಳಗೊಂಡ ಮಹಾಭಾರತದಲ್ಲಿನ ಪ್ರಸಂಗಗಳು, ಉಪಕಥೆಗಳು ಹಾಗೂ ತತ್ತ್ವೋಪದೇಶಗಳನ್ನು ನೋಡಿದರೆ ಯಾರಿಗಾದರೂ ಈ ಮಾತು ನಿಜವೆನಿಸದೆ ಇರದು. ಆದ್ದರಿಂದ ಜೀವನದಲ್ಲಿ ನಮಗೆ ಕಷ್ಟ ಬಂದಾಗಲಾದರೂ ಒಮ್ಮೆ ಮಹಾಭಾರತವನ್ನು ಓದಲೇಬೇಕು. ಅದರಲ್ಲಿ ಎಲ್ಲೋ ಒಂದೆಡೆ ನಮಗೆ ಬೇಕಾದ ಸಾಂತ್ವನ, ಸತ್ಕಾರ್ಯಕ್ಕೆ ಬೇಕಾದ ಧೈರ್ಯದ ಆಸರೆ ಸಿಗುತ್ತದೆ. 


ಪಾಂಡವರು ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದು ಪ್ರಸಿದ್ಧ ಕಥೆಯೇ. ಪಾಂಡವರು ಧರ್ಮಿಷ್ಠರಾಗಿದ್ದರೂ, ಜೂಜಾಟದಲ್ಲಿ ತೊಡಗಿ ಜೀವನವೆಲ್ಲ ಜಂಜಾಟಕ್ಕೆ ಸಿಲುಕಿತು. ನಮ್ಮ ಜೀವನದಲ್ಲೂ ಹೀಗೆ ನಾವು ಮಾಡುವ ಯಾವುದೋ ಒಂದು ತಪ್ಪು, ಕಷ್ಟಗಳ ಸರಮಾಲೆಯನ್ನೇ ತಂದೀತು. ಧರ್ಮಕ್ಕೆ ಕಟ್ಟುಬಿದ್ದು ಕಾಡಿಗೆ ತೆರಳಿದರೂ, ಪಾಂಡವರಿಗೂ ಅನ್ನಿಸಿತು- ತಮ್ಮಷ್ಟು ಯಾರೂ ಕಷ್ಟಪಟ್ಟಿಲ್ಲವೆಂದು. ಆಗ ಕಾಡಿನಲ್ಲಿದ್ದ ಋಷಿಗಳು ಬಗೆಬಗೆಯಾಗಿ ಇವರನ್ನು ಸಮಾಧಾನಗೊಳಿಸಿದರು. ನಳಮಹಾರಾಜನ ವೃತ್ತಾಂತ, ಸಾವಿತ್ರಿಯ ಉಪಾಖ್ಯಾನ ಮುಂತಾದುವುಗಳನ್ನು ಹೇಳಿದರು. ಆಗ ಪಾಂಡವರಿಗೆ ಅರಿವಾಯಿತು-ತಮಗಿಂತ ಕಷ್ಟಪಟ್ಟವರೂ ಎಷ್ಟೋ ಮಂದಿ ಇದ್ದರೆಂದು. ಅವರು ಕಾಡಿನಲ್ಲಿದ್ದಾಗಿನ ಸ್ಥಿತಿಯನ್ನು ಯೋಚಿಸಿದರೆ ಅವರ ಭವಿಷ್ಯ ಅಸ್ಪಷ್ಟವಾಗಿಯೇ ಇದ್ದಿತು.  ಒಂದು ವೇಳೆ ಅಜ್ಞಾತವಾಸದಲ್ಲಿ ಅವರು ಪತ್ತೆಯಾಗಿಬಿಟ್ಟಿದ್ದರೆ ಅವರ ಜೀವನ ಮತ್ತೆ ದುಸ್ತರವೇ ಆಗುತ್ತಿದ್ದಿತು. ಆದರೂ ಅವರು ಧೈರ್ಯವನ್ನು ತಂದುಕೊಂಡಿದ್ದರಿಂದಲೇ ದೊಡ್ಡ ಸೇನೆಯನ್ನು ಒಗ್ಗೂಡಿಸಿಕೊಂಡು, ಕೌರವರನ್ನು ನಿರ್ಮೂಲಮಾಡಿ ಧರ್ಮರಾಜ್ಯವನ್ನು ಸ್ಥಾಪಿಸುವಂತಾಯಿತು. ದೈವವು ತನ್ನದೇ ಆದ ಲೆಕ್ಕಾಚಾರದಂತೆ ಕೃಷ್ಣನ ರೂಪದಲ್ಲಿ ತನ್ನ ಸಹಾಯಹಸ್ತವನ್ನು ಅವರಿಗೆ ನೀಡಿತು. ಸಹಜವಾಗಿ ವೀರಕ್ಷತ್ರಿಯರಿಗಿದ್ದ ದೇಹಬಲ, ಮನೋಬಲಗಳಲ್ಲದೆ, ಕೃಷ್ಣನಲ್ಲಿ ಅವರಿಗಿದ್ದ ನಂಬಿಕೆ, ಪಾಂಡವರನ್ನು ಖಿನ್ನತೆಯಿಂದ ಮೇಲೇಳುವಂತೆ ಮಾಡಿತು.


ದೈವವನ್ನು ನಂಬಿದವನು, ತಾನೆಣಿಸಿದಂತೆ ಅದು ಕಾಪಾಡದಿದ್ದರೂ, ಮುಂದೇನೋ ಇನ್ನೂ ಒಳ್ಳೆಯದಾಗುವುದಕ್ಕಾಗಿಯೇ ಕಷ್ಟಗಳು ಇನ್ನೂ ಕರಗಿಲ್ಲವೆಂದು ನಂಬುತ್ತಾನೆ. ದೇವರ ಮೇಲೆ ಭಾರ ಹಾಕಿದವನ ಮನಸ್ಸು, ಮೊದಲು ಹಗುರವಾಗುತ್ತದೆ. ಆಗ ಯಾವುದೇ ಕಾರ್ಯಸಾಧನೆಗೆ ತನ್ನ ಪ್ರಯತ್ನವನ್ನು ಮತ್ತಷ್ಟು ಚೆನ್ನಾಗಿ ಮಾಡಬಲ್ಲ. ದೇವರನ್ನು ನಂಬಿ ಪುರುಷಪ್ರಯತ್ನವನ್ನು ಕೈಬಿಡಬೇಕೆಂದು ನಮ್ಮ ಆರ್ಷಸಾಹಿತ್ಯ ಎಲ್ಲೂ ಹೇಳಿಲ್ಲ. ಆತಂಕಕ್ಕೊಳಗಾದವನು ಭೀಮಬಲವುಳ್ಳವನಾಗಿದ್ದರೂ ಕುಸಿದು ಹೋಗುತ್ತಾನೆ. ಆದ್ದರಿಂದ ಕಷ್ಟದಲ್ಲಿರುವವನ ಬಂಧುಮಿತ್ರರು, ಆತನಿಗೆ ದೈವದ ಮೇಲೆ ಭರವಸೆಯನ್ನಿಡಬೇಕೆಂದು ತಿಳಿಹೇಳಬೇಕು; ಕಷ್ಟಕಾಲಕ್ಕೆ ನಾವಿದ್ದೇವೆ ಎಂಬ ಆಶ್ವಾಸನೆಯನ್ನು ನೀಡಬೇಕು. 


ಯುದ್ಧಭೂಮಿಯಲ್ಲಿರುವ ಸೈನಿಕನ ಮನಃಸ್ಥಿತಿಯಿಂದ ನಾವು ಪಾಠ ಕಲಿಯಬಹುದು. ಸಾಯುವುದಕ್ಕೆ ಹೆದರದಿರುವುದರಿಂದಲೇ ಆತ ದೇಶಕ್ಕಾಗಿ ಯುದ್ಧಮಾಡಬಲ್ಲ. ರೋಗಿಗೆ ಸಾವು ಸನ್ನಿಹಿತವೆಂದು ತಿಳಿದಿದ್ದರೂ ಸದ್ವೈದ್ಯನು ರೋಗಿಯ ಕೊನೆಯುಸಿರು ಇರುವವರೆಗೂ ಚಿಕಿತ್ಸೆ ನೀಡುತ್ತಲೇ ಇರುತ್ತಾನೆ. ಹಾಗೆ ಕೊನೆ ಗಳಿಗೆಯವರೆಗೂ ನಮಗೆ ತಿಳಿದಷ್ಟೂ ಪ್ರಯತ್ನಗಳನ್ನು ಮಾಡಬೇಕು. ಆತಂಕವಿರುವವನು ಪ್ರತಿಕ್ಷಣದಲ್ಲೂ ಸಾಯುತ್ತಾನೆ. ಧೈರ್ಯವಿರುವವನು ಒಮ್ಮೆ ಮಾತ್ರ ಸಾಯುತ್ತಾನೆ. ಸಾವು ಅನಿವಾರ್ಯವೆಂದು ತಿಳಿದೂ ಕೊನೆಯ ಕ್ಷಣದವರೆಗೆ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಾ ಇದ್ದವರಿದ್ದಾರೆ. ಮನೋಬಲದಿಂದ ಮೃತ್ಯುವನ್ನು ವರ್ಷಗಟ್ಟಲೆ ಮುಂದೂಡಿದವರಿದ್ದಾರೆ. ಇಂತಹ ಮನೋಬಲ ನಮಗೆ ಬರಲೆಂದು ದೇವರನ್ನು ಪ್ರಾರ್ಥಿಸೋಣ. "ಬಂದದ್ದೆಲ್ಲ ಬರಲಿ; ಗೋವಿಂದನ ದಯೆಯಿರಲಿ" ಎನ್ನುವ ಧೈರ್ಯ, ನಂಬಿಕೆ ನಮ್ಮದಾಗಲಿ.


ಸೂಚನೆ : 26/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Saturday, May 29, 2021

ಜೀವಕ್ಕೊಂದು ವಿಮೆ ಇರಲಿ (Jivakkondu Vime Irali)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್
(ಪ್ರತಿಕ್ರಿಯಿಸಿರಿ lekhana@ayvm.in)


ಕೃಷಿಕನೊಬ್ಬನಿದ್ದ. ಅವನ ವ್ಯವಸಾಯದ ಕಾರ್ಯದಲ್ಲಿ ಅವನ ಮಕ್ಕಳಿಗೇನೂ ಆಸಕ್ತಿ ಇರಲಿಲ್ಲ. ಆತ ಅಕಾಲಮೃತ್ಯುವಿಗೀಡಾದ. ಅವನ ಮಕ್ಕಳು ಮನೆಯಲ್ಲಿ ವಿವಿಧ ಬಗೆಯ ಬೀಜಗಳ ಪೊಟ್ಟಣಗಳನ್ನು ಗಮನಿಸಿದರು. ಆ ಬೀಜದ ಪೊಟ್ಟಣಗಳನ್ನು ಮನೆಯ ನಿವೇಶನದಲ್ಲಿ ಅಲ್ಲಲ್ಲಿ ಸುರಿದರು. ತಮಗೆ ತಿಳಿದಷ್ಟು ಅವುಗಳ ಆರೈಕೆ ಮಾಡಿದರು. ಕೆಲವು ಬೀಜಗಳು ಬೆಳೆದವು. ಒಮ್ಮೆ ನಸುಕಿನಲ್ಲಿ ಉತ್ಸಾಹದಿಂದ ಹಣ್ಣುಗಳೇನಾದರೂ ಸಿಗಬಹುದೆಂದು ಗಿಡಗಳ ಮೇಲೆ ಕೈಯಾಡಿಸಿದರು. ಅದೊಂದು ಮುಳ್ಳುಗಿಡ ! ಕೈಗೆ ಮುಳ್ಳುಗಳು ತಗುಲಿ, ನೋವಾಯಿತು. ಈ ಗಿಡಗಳನ್ನು ನಾವು ಆರೈಕೆ ಮಾಡಿದ್ದಕ್ಕೆ ಇಂತಹ ಪ್ರತಿಫಲ ಸಿಗುವುದೇ! ಎಂದು ಕೋಪದಿಂದ ಕೂಗಾಡಿದರು. ಪಕ್ಕದ ಮನೆಯಾತ ನೋಡುತ್ತಿದ್ದ. ಏನಾಯಿತೆಂದು ವಿಚಾರಿಸಿದ. "ನಾವು ಹಣ್ಣಿನ ಗಿಡ ಹಾಕಿದ್ದಕ್ಕೆ ನಮಗೆ ಸಿಕ್ಕಿದ್ದು ಮುಳ್ಳುಗಳು! ಕೈಗೂ ಮನಸ್ಸಿಗೂ ನೋವಾಯಿತು" ಎಂದರು, ಮಕ್ಕಳು. ಅದಕ್ಕೆ ಆತ ಹೀಗೆಂದ-"ನಿಮ್ಮ ತಂದೆ ಬೇಲಿಗಾಗಿ ಇಟ್ಟಿದ್ದ ಮುಳ್ಳಿನ ಬೀಜಗಳವು. ನೀವು ಹಣ್ಣಿನ ಬೀಜಗಳನ್ನು ಹಾಕಿದ್ದರಿಂದ ಮುಳ್ಳಿನ ಗಿಡಗಳು ಬಂದಿಲ್ಲ. ಸ್ವಲ್ಪ ಹಾಗೇ ಕಣ್ಣು ಹಾಯಿಸಿ; ಅಲ್ಲಲ್ಲಿ ಹಣ್ಣಿನ ಗಿಡಗಳೂ ತಲೆಯೆತ್ತಿವೆ; ಕೆಲವು ಈಗಲೇ ಹಣ್ಣನ್ನು ಬಿಡಲಾರಂಭಿಸಿವೆ. ಇನ್ನು ಕೆಲವು ಹಣ್ಣಾಗಲು ವರ್ಷಗಳೇ ಕಾಯಬೇಕು."

ಹೀಗೆಯೇ ನಮ್ಮ ಜನ್ಮ ಜನ್ಮಾಂತರದ ಒಳ್ಳೆಯ ಹಾಗೂ ದುಷ್ಟ ಕರ್ಮಗಳೂ ಅವುಗಳ ಕಾಲ ಬಂದಾಗ ಫಲವನ್ನು ಕೊಟ್ಟೇ ಕೊಡುತ್ತವೆ. ಕೆಲವು ಬೇಗನೆ; ಕೆಲವು ನಿಧಾನವಾಗಿ. ತಿಳಿದೋ ತಿಳಿಯದೆಯೋ ನಾವೇ ಹಾಕಿದ್ದ ಮುಳ್ಳುಗಿಡಗಳೂ ಒಂದಲ್ಲ ಒಂದು ದಿನ ಬೆಳೆದು ನಮ್ಮನ್ನು ನೋಯಿಸುವಂತೆ ನಾವೇ ಹಿಂದೆ ಮಾಡಿದ್ದ ದುಷ್ಕರ್ಮಗಳೂ ಆಗಾಗ ಫಲ ಕೊಡುತ್ತವೆ. ಗಾಳಿಯೇ ಎಲ್ಲಿಂದಲೋ ನಮ್ಮ ನಿವೇಶನಕ್ಕೆ ಹೊತ್ತು ತಂದ ಮುಳ್ಳು ಬೀಜಗಳೂ ಫಲ ಕೊಡಬಹುದು. ಯಾರದೋ ತಪ್ಪಿಗೆ ನಾವು ಶಿಕ್ಷೆಯನ್ನು ಅನುಭವಿಸಿದಂತೆ ತೋರುವ ಪ್ರಸಂಗಗಳಿವು. ನಮ್ಮ ಕೆಲಸವಿಷ್ಟೆ- ನಮಗೆ ತಿಳಿದಷ್ಟು ಎಚ್ಚರಿಕೆಯಿಂದ ಇರಬಹುದು. ಪಾದರಕ್ಷೆ ಧರಿಸಿ ಓಡಾಡಬಹುದು; ಕೈಗವಸು ಹಾಕಿಕೊಂಡು ಕಳೆ, ಮುಳ್ಳುಗಳನ್ನು ಕಿತ್ತುಹಾಕಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ಬರುವ ನೋವುಗಳು ಅನಿವಾರ್ಯ. 


ಅನಂತಕಾಲದವರೆಗೆ ಗಿಡಗಳು ಫಲ ಕೊಡಲಾರವು. ಹಾಗೆಯೇ ನಮ್ಮ ಕಷ್ಟವಾಗಲಿ, ಸುಖವಾಗಲಿ ಶಾಶ್ವತವಾಗಿ ಇರುವುದಿಲ್ಲ. ಹಲಸಿನ ಹಣ್ಣಿನಲ್ಲಿ, ಅದರೊಳಗಿನ ಅಂಟು, ಅದರ ಮೇಲಿನ ಮುಳ್ಳು - ಎಲ್ಲವೂ ಅದರ ಅವಿಭಾಜ್ಯ ಅಂಗಗಳೇ. ಅವುಗಳನ್ನು ಸೈರಿಸಿಕೊಂಡರಷ್ಟೇ ಸ್ವಾದಿಷ್ಠವಾದ ಹಲಸಿನ ಹಣ್ಣನ್ನು ಆಸ್ವಾದಿಸಬಹುದು. ಹಾಗೆಯೇ ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟಗಳ ಮಧ್ಯೆಯೇ ಸುಖವನ್ನರಸಬೇಕು. ಅನಾರೋಗ್ಯ/ಅಕಾಲಮೃತ್ಯು ಮುಂತಾದ ಕಷ್ಟಕಾಲವು ಎಂದಾದರೂ ಬರಬಹುದೆಂಬ ನಿರೀಕ್ಷೆಯಿಂದಲೇ ನಾವು ಜೀವವಿಮೆ ಮಾಡಿಸುತ್ತೇವೆ. ಅಂತೆಯೇ, ನಿಮ್ಮ ಜೀವಕ್ಕೆ ಭಗವಂತನ ಆಶ್ರಯವೇ ಜೀವದೊಡನೆ ಎಂದೆಂದೂ ಬರುವ ವಿಮೆ; ಅದನ್ನು ಪಡೆದುಕೊಳ್ಳಿ ಎಂಬರ್ಥದಲ್ಲಿ ಶ್ರೀರಂಗಮಹಾಗುರುಗಳು ನುಡಿದ ಮಾತುಗಳು ಸರ್ವದಾ ಸ್ಮರಣೀಯ.


ಕಷ್ಟಗಳು ಬಂದಾಗಲೂ ಮನಸ್ಸು ಕುಗ್ಗದಿದ್ದರೆ ಅವನು ಸುಖಿಯೇ. ಸುಖಗಳಿದ್ದಾಗಲೂ, ತನಗೆ ಮತ್ತಷ್ಟು ಸುಖಗಳಿಲ್ಲವಲ್ಲ ಎಂದು ಕೊರಗುವವನು ದುಃಖಿಯೇ. ಜೀವವಿಮೆಯನ್ನು ಮಾಡಿಸಿಕೊಂಡವನು ಧೈರ್ಯವಾಗಿ ಕಷ್ಟಕಾಲವನ್ನು ಎದುರಿಸುವಂತೆ, ಭಗವಂತನನ್ನು ನಂಬಿಕೊಂಡೇ ಜೀವನದ ಕಷ್ಟಕಾಲಗಳನ್ನು ಎದುರಿಸೋಣ. ಕಷ್ಟಪರಿಹಾರಕ್ಕೆ ಕೈಲಾದಷ್ಟು ಯತ್ನಿಸೋಣ.


ಸೂಚನೆ: 29/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.