Sunday, August 2, 2026

ಅಷ್ಟಾಕ್ಷರೀ 111 ಸಂಕಲ್ಪಾಃ ಕಲ್ಪತರವಃ (Astakshara 111)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png



 ಬಯಸಿದುದೆಲ್ಲಾ ಬಂದೇಬಿಟ್ಟೀತು, ಜೋಕೆ!

ಎಷ್ಟೋ ಬಾರಿ ನಮಗೆ ಒಂದು ಪ್ರಶ್ನೆಯುಂಟಾಗುತ್ತದೆ - ಜೀವನದಲ್ಲಿ ತೃಪ್ತಿಯಿರಬೇಕೋ? ಇರಬಾರದೋ? - ಎಂದು.

ಏಕೆ? ತೃಪ್ತಿಯೂ ಒಳ್ಳೆಯದಲ್ಲ, ಅತೃಪ್ತಿಯೂ ಒಳ್ಳೆಯದಲ್ಲ! ಹೇಗೆ? ಅಲ್ಪತೃಪ್ತಿಯೇ ಇದ್ದುಬಿಟ್ಟರೆ ಮುಂದೆ ಮತ್ತಾವುದಕ್ಕೂ ಶ್ರಮಿಸಬೇಕೆನಿಸುವುದಿಲ್ಲ.

"ಹಾಸಿಗೆಯಿದ್ದಷ್ಟು ಕಾಲು ಚಾಚು" ಎಂಬ ಗಾದೆಯಿದೆ. ಹಾಗೆಂದರೇನು? ನಮ್ಮ ಮಿತಿಯನ್ನರಿತು ಬಾಳಬೇಕು; ಮಿತಿಮೀರಿದ ಅಭಿಲಾಷೆ ಬೇಡ - ಎಂದು.

ಒಂದು ಗಾದೆಯ ಮಾತನ್ನೇ ಅಷ್ಟೊಂದನುಸರಿಸುವುದೇ? - ಎಂದರೆ ಅದಕ್ಕೂ ಸಮರ್ಥಕವಾಗಿ ಮತ್ತೂ ಒಂದು ಗಾದೆಯೇ ಇದೆಯಲ್ಲವೇ: "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂದು!

ಆದರಿದೋ, ಪರಸ್ಪರ-ವಿರುದ್ಧವಾದ ಗಾದೆಗಳೂ ಇರುತ್ತವಲ್ಲವೇ? ಹಾಗಾದರೆ, ಮತ್ತೆ ನಮ್ಮ ವಿವೇಚನೆಗೆ ಕೆಲಸವಿದ್ದೇ ಇದೆಯೆಂದಾಯಿತು.

ಇನ್ನು ತೃಪ್ತಿಯ ಬದಲು ಅತೃಪ್ತಿಯೇ ಮನಸ್ಸಿನಲ್ಲಿ ಉಳಿದರಂತೂ ನೆಮ್ಮದಿಯೇ ಇರದಷ್ಟೆ. ಇವಿಷ್ಟರ ಮಥಿತಾರ್ಥವಿದು: ಅತೃಪ್ತಿಯಿರಬೇಕು: ಅದಿದ್ದರಲ್ಲವೇ ಮನುಷ್ಯನು ಮುಂದುಮುಂದಕ್ಕೆ ದೊಡ್ಡದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯವಾಗುವುದು? ಹಾಗೆಂದು ಅತೃಪ್ತಿಯೇ ಸದಾ ಇರುವುದಾದರೂ ಕಷ್ಟವೇ: ಏನೆಲ್ಲಾ ಸಾಧಿಸಿದರೂ ಹಂಬಲಗಳಿಗೊಂದು ನಿಲುಗಡೆಯೆಂಬುದೇ ಇಲ್ಲವಾಗಿ, ಸದಾ ಕೆರಳಿರುವಂತೆಯೇ ಆಗಿಬಿಡುವುದು. ಅಲ್ಲಿಗೆ ತೃಪ್ತಿ-ಅತೃಪ್ತಿಗಳಲ್ಲಿ ಏನೋ ಒಂದು ತೋಲನವಿರಬೇಕಾಗುತ್ತದೆ. 

ಎಷ್ಟೋ ಬಾರಿ ನಾವು ಕೇಳುವ/ಕೇಳಿಕೊಳ್ಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರವು ದೊರಕಿತೆಂದಾದರೂ, ಆ ಉತ್ತರದಲ್ಲೂ ಸ್ಪಷ್ಟತೆಯನ್ನು ಸಾಧಿಸಿಕೊಳ್ಳಬೇಕಾಗಿರುವುದು ಉಳಿದಿರುತ್ತದೆ. ಹೇಗೆ? "ನಾವು ಹೇಗೆ ಬದುಕಬೇಕು?" - ಎಂಬುದು ಪ್ರಶ್ನೆಯಾದರೆ, ಅದಕ್ಕೆ "ತಾನೂ ಇತರರೂ ಚೆನ್ನಾಗಿರುವಂತೆ ಬದುಕಬೇಕು" ಎಂಬುದೊಂದು ಒಳ್ಳೆಯ ಉತ್ತರ. ಆದರೆ ಜೊತೆಗೇ, "ಚೆನ್ನು ಎಂದರೇನು?” - ಎಂಬ ಪ್ರಶ್ನೆ ಬಂದರೆ, ಅದಕ್ಕೆ ಉತ್ತರಕೊಡುವುದು ಸುಲಭವಲ್ಲ, ಅಲ್ಲವೇ?

ನಾವು ಚೆನ್ನಾಗಿ ಬದುಕಬೇಕೆಂದರೆ, ಏನನ್ನಾದರೂ ದೊಡ್ಡದನ್ನು ಸಾಧಿಸಬೇಕು ಎನ್ನುವುದುಂಟು.  ದೊಡ್ಡದಕ್ಕಾಗಿ ತಪಸ್ಸು ಬೇಕು ಎನ್ನುವರಲ್ಲವೇ? "ಯಾವಯಾವುದು ದುರ್ಲಭವೋ, ಯಾವಯಾವುದು ದುಷ್ಕರವೋ, ಅದನ್ನೆಲ್ಲಾ ತಪಸ್ಸಿನಿಂದ ಸಾಧಿಸಬಹುದು: ತಪಸ್ಸಿಗೆ ಎಟುಕದುದುಂಟೇ?” – ಎಂದಿದ್ದಾನೆ, ಮನು.

ಉಕ್ತಿಮಾತ್ರವಲ್ಲ; ಹಾಗೆ ತಪಸ್ಸು ಮಾಡಿ, ಇತರರಿಗೆ ಸಾಧ್ಯವಾಗದುದನ್ನು ಸಾಧಿಸಿದ ಅನೇಕರ ಕಥೆಗಳು ನಮ್ಮ ಇತಿಹಾಸ-ಪುರಾಣಗಳಲ್ಲುಂಟಷ್ಟೆ?

ಹೀಗಾಗಿ, ಬೇಕಾದುದನ್ನೆಲ್ಲ ತಪಸ್ಸಿನಿಂದ ಸಾಧಿಸಿಕೊಳ್ಳಬಹುದೆಂದುಕೊಂಡರೂ, ಎಲ್ಲವೂ ಸ್ಪಷ್ಟವಾಯಿತೆಂದಲ್ಲ. ಏಕೆ? ತಪಸ್ಸು ಮಾಡಿಯೂ ಕಂಗೆಟ್ಟವರಿಲ್ಲವೇ?

ಮತ್ತೆ ಪ್ರಶ್ನೆ: ತಪಸ್ಸನ್ನು ಮಾಡಿದವರಿಗೆಲ್ಲಾ ವರವೀಯುವವನು ಭಗವಂತನೇ ಅಲ್ಲವೇ? ಆದರೂ ಹಾಳಾದವರುಂಟೇ?  

ಉಂಟೇ ಉಂಟು. ಹತ್ತು ತಲೆಯ ರಾವಣನೂ ಸತ್ತುಹೋದನಲ್ಲವೇ? ಭಸ್ಮಾಸುರನು ತಾನೇ ಭಸ್ಮವಾಗಿಬಿಡಲಿಲ್ಲವೇ? ಹಿರಣ್ಯಕಶಿಪುವಿಗೆ ಎಂತಹ ಕ್ರೌರ್ಯದ ಮರಣ ಸಂದಿತಲ್ಲವೇ? ಇವರೆಲ್ಲರೂ ತಪಸ್ಸು ಮಾಡಿದ್ದವರೇ; ಘೋರವಾದ ತಪಸ್ಸನ್ನೇ ಆಚರಿಸಿದ್ದವರೇ!

ತಪಸ್ಸಿಗಿಂತಲೂ ಉತ್ತಮವಾದ ಸಾಧನವಿಲ್ಲವೆಂದರೂ ಹೀಗೇಕೆ ಈ ತಪಸ್ವಿಗಳಿಗೆಲ್ಲಾ ಘೋರಪತನವಾಯಿತು? ತಪೋಲಬ್ಧವಾದ ಅನುಪಮ-ಬಲವಿದ್ದೂ ಒಬ್ಬೊಬ್ಬನೂ ಲೋಕ-ಕಂಟಕನೂ ಆತ್ಮ-ಘಾತಕನೂ ಆಗಿಬಿಟ್ಟನಲ್ಲಾ? ಹಾಗಿದ್ದರೆ ಇವರೆಲ್ಲಾ ಎಡವಿದ್ದೆಲ್ಲಿ?

ಇದರ ಉತ್ತರವನ್ನು ಭಾವನೋಪನಿಷತ್ತಿನ ಒಂದು ಸುಂದರವಾದ ಕಿರುನುಡಿಯಲ್ಲಿ ಕಂಡುಕೊಳ್ಳಬಹುದು: “ಸಂಕಲ್ಪಾಃ ಕಲ್ಪತರವಃ” (ನಮ್ಮ ಸಂಕಲ್ಪಗಳೇ ಕಲ್ಪವೃಕ್ಷಗಳು!) – ಎಂಬ ಮಾತದು.

ಶ್ರೀರಂಗಮಹಾಗುರುಗಳ ಒಂದು ಮಾತು ಈ ಸಂದರ್ಭದಲ್ಲಿ ಮನನೀಯವಾಗಿದೆ: "ಭಗವಂತನು ಎಲ್ಲರಿಗೂ ಒಂದೇ ಆಶೀರ್ವಾದವನ್ನು ಮಾಡಿದ್ದಾನೆ: ಹೇಗೆ ಮನಸ್ಸಿದ್ದರೆ ಹಾಗೆ ಬಾಳು - ಎಂಬುದಾಗಿ. ಮನಸ್ಸು ಒಂದು ಕಲ್ಪವೃಕ್ಷ: ಏನನ್ನು ಸಂಕಲ್ಪಿಸುತ್ತೇವೆಯೋ  ಅದಕ್ಕನುಗುಣವಾದ ಫಲವನ್ನು ಪಡೆಯುತ್ತೇವೆ"!

ರಾವಣಾದಿಗಳು ಉಗ್ರವಾದ ತಪಸ್ಸನ್ನೇನೋ ಮಾಡಿದರು. ಆದರೆ ತಮ್ಮತಮ್ಮ ಸಂಕಲ್ಪದಂತೆ ಕ್ಷುದ್ರ-ಫಲಗಳನ್ನೇ ಕೇಳಿಕೊಂಡರು - ಅವೇ ನಮಗೆ ಅದ್ಭುತವೆನಿಸುವುದಾದರೂ! 

ಬ್ರಹ್ಮನ ಕೆಲಸವೊಂದೇ: ಎಲ್ಲರಿಗೂ ಅವರವರ ಸಂಕಲ್ಪಕ್ಕೆ “ತಥಾಸ್ತು” ಎನ್ನುವುದು. ಎಂದೇ, ಕೇಳಿಕೊಳ್ಳುವಾಗಲೇ ಸರಿಯಾದ ವರವನ್ನೇ ಹೇಳಿಕೊಳ್ಳಬೇಕು! ಕಾರ್ಯಾರಂಭದಲ್ಲೇ ಸಂಕಲ್ಪವು ಯುಕ್ತವಾಗಿರಬೇಕು! ಇಲ್ಲವೋ, ಸ್ವ(ಕೀಯ)ನಾಶವು ಸಿದ್ಧ!

ಚಿಂತಿಸಿದ್ದನ್ನೆಲ್ಲಾ ಕೊಡುವ ಚಿಂತಾಮಣಿ/ಕಾಮಧೇನು/ಕಲ್ಪವೃಕ್ಷಗಳು ದೇವಲೋಕದಲ್ಲಿವೆಯೆನ್ನುತ್ತಾರೆ. ಅದು ಸುಳ್ಳಲ್ಲ; ಆದರೆ ನಮ್ಮೊಳಗೇ ಇರುವ  ಕಲ್ಪವೃಕ್ಷವೊಂದನ್ನು ನಾವು ಗಮನಿಸುತ್ತಿಲ್ಲ: ನಮ್ಮ ಸಂಕಲ್ಪವೇ ಅದು!

ಸತ್ಸಂಕಲ್ಪಬೀಜಗಳಿಗೆ ಸಂತತ-ಸಾಧನೆಯೆಂಬ ಸಲಿಲ-ಸೇಕವಿದ್ದಲ್ಲಿ ಸ್ವಹಿತ-ಪರಹಿತಗಳೆಂಬ ಸತ್ಫಲಗಳು ಸೊಂಪಾಗಿ ಸಂಪಾದಿತವಾಗುವುವೆಂಬುದರಲ್ಲಿ ಸಂಶಯವೇನು? 

ಯಾವುವು ಸತ್ಸಂಕಲ್ಪಗಳು? ಎರಡೇ: ದೇಶಹಿತ-ಸಾಧನವೆಂಬುದೊಂದು; ಆತ್ಮಜ್ಞಾನ-ಸಾಧನವೆಂಬುದೊಂದು. ಉಳಿದೆಲ್ಲ ಬಯಕೆಗಳೂ ಇವಕ್ಕೆ ಅಂಗಭೂತವಾಗಿರುವುದೇ ತೆರನಾದುದು. 

ದೇಶಸೇವೆ-ಈಶಸೇವೆಗಳಿಗಾಗಿ ಜೀವತೇಯುವವರಿಗಿಂತಲೂ ಧನ್ಯರುಂಟೆ? ಚೆನ್ನಿನ ಜೀವನವೆಂಬುದೊಂದಿದ್ದರೆ ಅವರದೇ! ಇವೆರಡೂ ಸಂಪೂರ್ಣವಾಗಿ ಸಾಧಿತವಾಗುವ ತನಕ ಅತೃಪ್ತಿಯೇ; ಎಷ್ಟೆಷ್ಟು ಸಾಧಿತವಾದರಷ್ಟಷ್ಟು  ತೃಪ್ತಿಯೇ!

ಸೂಚನೆ: 1/08//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.



ಧರ್ಮ- ಶಾಸ್ತ್ರ (Dharma - Shastra)


   
ಲೇಖಕರು: ಎಂ. ಆರ್. ಭಾಷ್ಯಮ್

ಪ್ರತಿಕ್ರಿಯಿಸಿರಿ (lekhana@ayvm.in)

Screenshot 2026-08-02 133835.png

ಸಾಮಾನ್ಯವಾಗಿ  ‘ಧರ್ಮ’ ವೆಂದರೆ ಹಿಂದೂಧರ್ಮ, ಮುಸಲ್ಮಾನಧರ್ಮ, ಕ್ರಿಸ್ತಧರ್ಮ ಎಂದು ಒಂದು ಮತಕ್ಕೆ ಅಥವಾ ಕೋಮಿಗೆ ಪರ್ಯಾಯಪದವಾಗಿ ಉಪಯೋಗಿಸುತ್ತಾರೆ. ಆದರೆ ಆರ್ಯ ಭಾರತಮಹರ್ಷಿಗಳು ಇದನ್ನು ಬೇರೆಯಾಗಿಯೇ ಅರ್ಥೈಸಿದ್ದರು.  ಉದಾಹರಣೆಗೆ ‘ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ,’  ‘ಜಗತಃ ಸ್ಥಿತಿಕಾರಣಂ ಧರ್ಮಃ’;  ವಿಶ್ವವೆಲ್ಲವೂ ಧರ್ಮದಲ್ಲಿ ನೆಲೆಗೊಂಡಿದೆ;  ಜಗತ್ತಿನ ಇರುವಿಕೆಗೆ  ಧರ್ಮವೇ ಕಾರಣ; ಅಂದರೆ ಧರ್ಮ ಒಂದು ಮತಕ್ಕೆ ಅಥವಾ ಕೋಮಿಗೆ ಸಂಭಂದಿಸಿದ್ದಲ್ಲ.  

ಒಂದು ಬೀಜವನ್ನು ತೆಗೆದುಕ್ಕೊಳ್ಳುವ. ಅದನ್ನು ಭೂಮಿಯಲ್ಲಿ  ನೆಟ್ಟು ತನ್ನ ನೈಜತೆಯನ್ನು ಉಳಿಸಿಕೊಂಡು ಬೆಳೆದರೆ  ಮೊಳಕೆ, ಕಾಂಡ, ಕೊಂಬೆ - ರಂಬೆಗಳು, ಎಲೆ - ಹೂವು - ಕಾಯಿ - ಫಲವಾಗಿ ಕೊನೆಗೆ ಬೀಜದಲ್ಲಿಯೇ ಪರ್ವ್ಯಸನಗೊಳ್ಳುತ್ತದೆ. ಅಂದರೆ ಇಡೀ ವೃಕ್ಷದ ರಚನೆ,  ಬೀಜದಲ್ಲಿ ಅಡಗಿದೆ. ಆದರೆ ಬೀಜ ಮೊಳಕೆ ಒಡೆಯಬೇಕಾದರೆ ಅದರಮೇಲಿನ ‘ಮೇಲ್ಪದರ - ಕವಚ’ ಇರಬೇಕು. ಇಲ್ಲದಿದ್ದರೆ ಅದು ಮೊಳಕೆಯೊಡೆಯುವುದಿಲ್ಲ. ಉದಾಹರಣೆಗೆ ಭತ್ತದಮೇಲಿನ ಹೊಟ್ಟುಇಲ್ಲದಿದ್ದರೆ ಭತ್ತ ಮೊಳಕೆ ಒಡೆಯುವುದಲ್ಲ. ಈ ಮೇಲಿನ ಕವಚ (ಹೊಟ್ಟು) ಬೀಜದ ವಿಕಾಸವನ್ನು ಅಸ್ತಿತ್ವದಲ್ಲಿರಿಸಿ ಉಳಿಸುತ್ತದೆ. ಆದ್ದರಿಂದ ಈ  ಕವಚ ಮತ್ತು ಅದರ ಈ ಗುಣವನ್ನು  ‘ಧರ್ಮ’ ವೆಂದು ಕರೆಯುತ್ತಾರೆ. 

‘ಧರ್ಮ’ ವೆಂಬ ಪದದ ವ್ಯುತ್ಪತ್ತಿ   ‘ಧೃ’ ಎಂಬ ಧಾತುವಿನಿಂದ. ‘ಧೃ’ ಎಂದರೆ ‘ಧರಿಸುವುದು’  ಅಥವಾ ‘ಅಸ್ತಿತ್ವದಲ್ಲಿರಿಸುವುದು’. ಮೇಲಿನ ಬೀಜ- ಗಿಡದ ಉದಾಹರಣೆಯಲ್ಲಿ ಮೇಲಿನ ಕವಚ ಧರ್ಮ. ಜೊತೆಗೆ, ಇನ್ನೂವಿಕಾಸವಾಗದ ಬೀಜದ  ಸ್ಥಿತಿಗೆ ‘ಋತ’  ವೆಂದೂ, ವಿಕಸಿತ ಗಿಡದ ಸ್ಥಿತೆಗೆ ‘ಸತ್ಯ’ ವೆಂದೂ  ಕರೆಯುತ್ತಾರೆ. ಅಂದರೆ  ಯಾವುದು ಈ ‘ಋತ- ಸತ್ಯಚಕ್ರ’ಗಳ  ಸಂಯೋಜನೆಯನ್ನು ಮತ್ತು   ಆವರ್ತವನ್ನು ಧರಿಸಿ-ಉಳಿಸುತ್ತದೆಯೋ ಅದು ಧರ್ಮ.  ಈ ಸಂಯೋಜನೆಗೆ ವಿರುದ್ಧವಾಗಿ, ಆವರ್ತವನ್ನು ಕೆಡಿಸುವ ನಡೆಯುಂಟಾದರೆ ಅದು ಧರ್ಮಕ್ಕೆ ವಿರುದ್ಧ, ಅಧರ್ಮ. ಋತ-ಸತ್ಯಚಕ್ರವನ್ನು  ಕಾಪಾಡಿ ಉಳಿಸಿದರೆ, ಆಗ ಈ ವ್ಯವಸ್ಥೆ ಶುದ್ಧರೂಪದಲ್ಲಿ ಉಳಿದು, ನಿರಂತರವಾಗಿ ಮುಂದುವರೆಯುತ್ತದೆ. 

ನೋಡುವುದು ಕಣ್ಣಿನಧರ್ಮ. ಆ ನೋಟ ಕೆಟ್ಟರೆ ಕಣ್ಣು ತನ್ನ ‘ಧರ್ಮ’ದಲ್ಲಿ ಉಳಿದಿರುವುದಿಲ್ಲ. ಕೆಡಿಸುವುದು ಯಾವುದೇ ಆಗಿದ್ದರೂ ಅದು ‘ಅಧರ್ಮ’. ಇದನ್ನು ಮಾನವನ ಜೀವನಕ್ಕೆ ಅನ್ವಯಿಸಬಹುದು. ಭಾರತೀಯರ ಜೀವನದ ಉದ್ದೇಶ ಇಹಲೋಕದ ಸಮೃದ್ಧಿ, ಪರಲೋಕದ ಪ್ರಾಪ್ತಿ. ಹೇಗೆ ಜೀವನವನ್ನು ಅಳವಡಿಸಿ ನಡೆಸಿದರೆ ಇವೆರೆಡೂ ದೊರೆಯೆತ್ತದೆಯೋ ಅದೇ ಸರಿಯಾದ ಜೀವನ, ಧಾರ್ಮಿಕ ಜೀವನ. ಅದೇ ಅವರ ಧರ್ಮ. ಶ್ರೀರಂಗಮಹಾಗುರುಗಳು ಮಾನವನ  ಜೀವನಕ್ಕೆ ಅನ್ವಯಿಸುವಂತೆ  ಉಲ್ಲೇಖಿಸುತ್ತಿದ್ದವಾಕ್ಯ  ‘ ಯತೋ ಅಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ - ಯಾವುದು ಇಹಲೋಕದ  ಶ್ರೇಯಸ್ಸಿಗೆ ಮತ್ತು ಪರಲೋಕದ ಸಿದ್ಧಿಗೆ ಕಾರಣವಾಗುತ್ತದೋ ಅದೇ ಧರ್ಮ’

ಇನ್ನು ಶಾಸ್ತ್ರ. ಶಾಸ್ತ್ರ ವೆಂದರೆ ಪ್ರಕೃತಿಯ ಶಾಸನ, ಅಂದರೆ ಮಾಡು - ಬೇಡಗಳು. ಯಾವದನ್ನು ಮಾಡಿದರೆ (ಅಥವಾ ಮಾಡದಿದ್ದರೆ) ಧರ್ಮ ಉಳಿಯುತ್ತದೆಯೋ, ಅದೇ ಶಾಸ್ತ್ರ. ‘ಕಣ್ಣಿನ ತಂಪಿಗೆ ಹರಳೆಣ್ಣೆಯನ್ನು ಹಾಕು,’ ಒಂದು ವಿಧಿ, ಮಾಡಿದರೆ ಧರ್ಮ. ಬದಲು ಮೆಣಸಿನ ಪುಡಿ ನಿಷಿಧ್ಧ, ಬಳಸಿದರೆ ಕಣ್ಣಿನ ‘ಧರ್ಮ’  ಹಾಳು. ಇದೊಂದು ಸರಳ  ಉದಾಹರಣೆ. ಆದರೆ ಮಾನವನ ಜೀವನದಲ್ಲಿ  ಇಹಲೋಕದ  ಶ್ರೇಯಸ್ಸು  ಮತ್ತು ಪರಲೋಕದ ಸಿದ್ಧಿ ಎರಡೂ ದೊರೆಯುವಂತೆ ಮಾಡುವ ಜೀವನದ ನಡೆವಳಿಕೆಯ ಅರಿವು ಬಹಳ ಕಷ್ಟ. ಆದ್ದರಿಂದ  ಋಷಿ-ಮುನಿಗಳು ತಮ್ಮ ತಪಸ್ಸಿನಿಂದ ಅದನ್ನು ಅರಿತು ಸಾಮಾನ್ಯ ಜನತೆಯ ಉಪಯೋಗಕ್ಕೆ ‘ಧರ್ಮಶಾಸ್ತ್ರ’ ಗ್ರಂಥಗಳನ್ನು ರಚಿಸಿದರು. ಈ ಗ್ರಂಥಗಳು ಮಾಡು-ಬೇಡಗಳ ಪಟ್ಟಿ - ನಕಾಶೆಗಳು. ಪಾಲಿಸಿದರೆ ಇಹಲೋಕದ ಸೌಖ್ಯ, ಪರಲೋಕದ ಪ್ರಾಪ್ತಿ. ಇಲ್ಲದಿದ್ದರೆ ಎರಡೂ ಇಲ್ಲ.

ಸೂಚನೆ : 01/07/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.