Sunday, August 23, 2026

ಪ್ರಶ್ನೋತ್ತರ ರತ್ನಮಾಲಿಕೆ 80 (Prasnottara Ratnamalike 80)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೮೦. ಯಾವ ಸಭೆಯನ್ನು ತ್ಯಾಗ ಮಾಡಬೇಕು?

ಉತ್ತರ- ವೃದ್ಧ ಸಚಿವರು ಇಲ್ಲದ ಸಭೆಯನ್ನು.


ಯಾವ ಸಭೆಯನ್ನು ತ್ಯಾಗ ಮಾಡಬೇಕು? ಎಂಬುದನ್ನು ತಿಳಿಯಬೇಕಾದರೆ ‘ಸಭೆ’ ಎಂದರೆ ಏನು? ಎಂಬುದನ್ನು ಮೊದಲು ತಿಳಿಯಬೇಕು. ಸಭಾ ಎಂದರೆ ‘ಸಹ ಭಾಂತಿ-ಶೋಭಂತೇ’ ಯಾರು ಇದ್ದರೆ ಅದು ಶೋಭಿಸುತ್ತದೆಯೋ ಅದು. ಭಾ ಎಂದರೆ ಬೆಳಕು, ಬೆಳಗುವುದು ಎಂದರ್ಥ. ಯಾವುದು ಶೋಭಿಸುತ್ತದೆಯೋ ಅದಕ್ಕೆ ‘ಸಭೆ’ ಎಂದು ಹೆಸರು. ಶೋಭಿಸಬೇಕಾದರೆ ಅಲ್ಲಿ ಅತ್ಯಂತ ಮುಖ್ಯವಾದದ್ದು ಯಾವುದು? ಎಂಬುದನ್ನು ಮಹಾಭಾರತದಲ್ಲಿ ವಿದುರ ಹೀಗೆ ಹೇಳುತ್ತಾನೆ - “ನ ಸಾ ಸಭಾ ಯತ್ರ ನ ಸಂತಿ ವೃದ್ಧಾಃ  ನ ತೇ  ವೃದ್ಧಾಃ ಯೇ ನ ವದಂತಿ ಧರ್ಮಮ್”  ಎಲ್ಲಿ ವೃದ್ಧರು ಇರುವುದಿಲ್ಲವೋ ಅದನ್ನು ಸಭೆ ಎಂದು ಹೇಳಲಾಗದು. ಯಾವ ವೃದ್ಧರು ಧರ್ಮವನ್ನು ಹೇಳುವುದಿಲ್ಲವೋ ಅವರನ್ನು ವೃದ್ಧರು ಎಂದೂ ಹೇಳಲು ಸಾಧ್ಯವಾಗದು.


ಅಂದರೆ ಧರ್ಮವನ್ನು ತಿಳಿಯದೆ ಕೇವಲ ವಯಸ್ಸು ಮಾತ್ರ ಹೆಚ್ಚಾದರೆ ಅವರನ್ನು ವೃದ್ಧರು ಎಂದು ಹೇಳಲು ಸಾಧ್ಯವಿಲ್ಲ ಎಂದರ್ಥ. ವೃದ್ಧರಾಗುತ್ತ ವೃದ್ಧರಾಗುತ್ತ ಅವರಲ್ಲಿ ಜ್ಞಾನವೂ ಹೆಚ್ಚಾಗಬೇಕಾಗುತ್ತದೆ. ಬಾಲ್ಯದಲ್ಲಿ ಚೆನ್ನಾಗಿ ಅಧ್ಯಯನ ಮಾಡಿ, ಯೌವನದಲ್ಲಿ ಚೆನ್ನಾಗಿ ಸಂಪಾದನೆ ಮಾಡಿ ಅದರಿಂದ ಬರುವ ಆ ಅನುಭವಪಕ್ವತೆಯನ್ನೇ ನಿಜವಾದ ವೃದ್ಧತ್ವವೆಂದು ಕರೆಯಬೇಕು. ಒಬ್ಬ ವೃದ್ಧನಾದವನು ಕೇವಲ ವಯಸ್ಸಿನಿಂದ ಮಾತ್ರ ವೃದ್ಧನಾಗದೆ ಜ್ಞಾನದಿಂದಲೂ ವೃದ್ಧನಾಗಿರಬೇಕು ಎಂದರ್ಥ. ಇಂತಹ ವೃದ್ಧನಿರುವ ಜಾಗವನ್ನು ‘ಸಭೆ’ ಎಂಬುದಾಗಿ ಕರೆಯಲಾಗಿದೆ.


ಇಂತಹ ಜ್ಞಾನವೃದ್ಧರು, ವಯೋವೃದ್ಧರೂ ಆದ ಸಚಿವರು - ಮಂತ್ರಿಗಳು ಯಾವ ಸಭೆಯಲ್ಲಿ ಇರುತ್ತಾರೋ ಆ ಸಭೆಯು ಅತ್ಯಂತ ಪೂಜ್ಯವಾದದ್ದು ಶ್ರೇಷ್ಠವಾದದ್ದು. ಒಂದು ವೇಳೆ ಇಂತಹ ಸಚಿವರು ಇಲ್ಲದಿದ್ದರೆ ಆ ಸಭೆಯನ್ನು ತ್ಯಾಗ ಮಾಡಬೇಮಾಡಬೇಕು ಎಂದು ಸಭೆಗೆ ವೃದ್ಧರ ಅವಶ್ಯತೆಯನ್ನು ಸಾರಲಾಗಿತ್ತಿದೆ. ಯಾವ ಸಭೆಯನ್ನು ತ್ಯಾಗ ಮಾಡಬೇಕು ಎಂಬುದು ಪ್ರಶ್ನೆಗೆ, ವೃದ್ಧಸಚಿವರು ಇಲ್ಲದಿರುವ ಸಭೆಯನ್ನು ತ್ಯಾಗ ಮಾಡಬೇಕು ಎಂಬುದು ಉತ್ತರವಾಗಿದೆ. ಸಚಿವನಾದವನು ಜ್ಞಾನಿಯಾಗಿರಬೇಕು. ಅವನು ರಾಜ್ಯದ ಎಲ್ಲ ರೀತಿಯ ಯೋಗಕ್ಷೇಮವನ್ನು ನೋಡಿಕೊಳ್ಳುವ ಅತ್ಯಂತ ಗುರುತರವಾದ ಜವಾಬ್ದಾರಿಯುತ ಸ್ಥಾನವನ್ನು ಪಡೆದಿರುತ್ತಾನೆ. ಅಂತಹ ಸಚಿವರನ್ನು ಪಡೆದಂತಹ ರಾಜನು ಧನ್ಯ. ಅಂತಹ ರಾಜ್ಯ ಸಮೃದ್ಧ. ರಾಜನಾದವನು ತನ್ನ ರಾಜ್ಯಕ್ಕಾಗಿ ರಾಜ್ಯದ ಆಗುಹೋಗುಗಳಿಗಾಗಿ ಚರ್ಚೆಯನ್ನು ಮಾಡಿ ಒಂದು ನಿರ್ಣಯವನ್ನು ತೆಗೆದುಕೊಳ್ಳಬೇಕಾದರೆ ಇಂತಹ ಒಬ್ಬ ಜ್ಞಾನವೃದ್ಧನಾದ ಮಂತ್ರಿ ಇರಬೇಕಾಗುತ್ತದೆ. ಏಕೆಂದರೆ ಅವನು ಎಲ್ಲವನ್ನೂ ತಿಳಿದಿರುತ್ತಾನೆ. ಅವನು ಧರ್ಮವನ್ನು ತಿಳಿದಿದ್ದಾನೆ ಎಂದರ್ಥ. ಧರ್ಮವನ್ನು ತಿಳಿದವರು ಮಾತ್ರ ಸಚಿವನಾಗಬಲ್ಲ.


ಧರ್ಮವನ್ನು ತಿಳಿಸುವ ವೇದ, ಶಾಸ್ತ್ರ, ಪುರಾಣ ಮೊದಲಾದ ವಿದ್ಯೆಗಳಲ್ಲಿ ಪರಿಣತರಾಗಿರಬೇಕು. ಆಗ ಮಾತ್ರ ಧರ್ಮವನ್ನು ತಿಳಿಯಲು ಸಾಧ್ಯ. ಇಂತಹ ಒಬ್ಬ ಸಚಿವನು ಸಭೆಯಲ್ಲಿದ್ದರೆ ಆ ಸಭೆ ಶೋಭಿಸುತ್ತದೆ, ಬೆಳಗುತ್ತದೆ. ಹಾಗಿಲ್ಲದಿದ್ದರೆ ಆ ಸಭೆ ಅಜ್ಞಾನದಿಂದ ಕೂಡಿರುತ್ತದೆ. ಅಂತಹ ಸಭೆಯು ತ್ಯಾಗ ಮಾಡಲು ಯೋಗ್ಯ ಎಂಬುದಾಗಿ ಈ ಪ್ರಶ್ನೋತ್ತರ ಹೇಳುತ್ತದೆ.


ಸೂಚನೆ :23/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.