Sunday, May 3, 2026

ಪ್ರಶ್ನೋತ್ತರ ರತ್ನಮಾಲಿಕೆ 64 (Prasnottara Ratnamalike 64)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ - ೬೪. ವಿದ್ವಾಂಸರನ್ನು ಆಕರ್ಷಿಸುವುದು ಯಾವುದು?

ಒಳ್ಳೆಯ ಕವಿತೆ ಮತ್ತು ವಿದ್ಯೆಯೆಂಬ ಸ್ತ್ರೀ.


ಈ ಪ್ರಶ್ನೋತ್ತರದಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು - ವಿದ್ವಾಂಸ ಎಂದರೆ ಯಾರು? ಒಳ್ಳೆಯ ಕವಿತೆ. ವಿದ್ಯೆ ಎಂದರೇನು? ಎಂದು. ವಿದ್ವಾಂಸ ಎಂದರೆ ತಿಳಿದವನು, ಓದಿದವನು, ಪದವಿಯನ್ನು ಗಳಿಸಿದವನು ಇತ್ಯಾದಿಯಾಗಿ ಹೇಳುವುದುಂಟು. ಆದರೆ ಯಾವನು ವಿದ್ಯೆಯನ್ನು ಉಳ್ಳವನೋ ಅವನು ‘ವಿದ್ವಾನ್’ ಎಂಬುದಾಗಿ ಕರೆಯುತ್ತಾರೆ. ವಿದ್ಯೆ ಎಂದರೆ ಯಾವುದು? ಇಂದು ನಾವು ಯಾವ ಶಿಕ್ಷಣ ಅಥವಾ ಎಜುಕೇಶನ್ ಎಂಬುದಾಗಿ ಹೇಳುತ್ತೇವೋ ಅದನ್ನು ವಿದ್ಯೆ ಎಂಬುದಾಗಿ ಕರೆದು, ಅದನ್ನು ಉಳ್ಳವನು ವಿದ್ವಾನ್ ಎಂದು ಕರೆಯುವ ಅಭ್ಯಾಸ ಬಂದಿದೆ. ಆದರೆ ಯಾವುದು ಮುಕ್ತಿಗೆ ಸಾಧನವೋ ಅದನ್ನೇ ವಿದ್ಯೆ ಎಂಬುದಾಗಿ ಕರೆಯಬೇಕು. “ಸಾ ವಿದ್ಯಾ ಯಾ ವಿಮುಕ್ತಯೇ” ಎಂಬುದಾಗಿ ಉಪನಿಷತ್ತು ವಿದ್ಯೆಯ ವಿವರಣೆಯನ್ನು ಹೀಗೆ ಕೊಡುತ್ತದೆ. ಅಂದರೆ ವೇದಾದಿ ವಿದ್ಯೆಗಳನ್ನು ವಿದ್ಯೆ ಎಂದು ಕರೆದು, ಇವುಗಳನ್ನು ಮುಕ್ತಿಗೆ ಸಾಧನ ಎಂದು ಕರೆಯಲಾಗುತ್ತದೆ. 

ಹಾಗಾಗಿ ಇಂತಹ ವಿದ್ಯೆ ಉಳ್ಳವನನ್ನು ವಿದ್ವಾನ್ ಎಂದು ಕರೆಯುವುದು ಸಾಧು. ಇಂತಹ ವಿದ್ವಾಂಸನಿಗೆ ಅತ್ಯಂತ ಪ್ರೀತಿಕರವಾದದ್ದು, ಆಕರ್ಷಕವಾಗಿದ್ದು ಯಾವುದು? ಎಂಬುದಕ್ಕೆ ಉತ್ತರವಾಗಿ, ಒಳ್ಳೆಯ ಕವಿತೆ ಅಥವಾ ವಿದ್ಯೆ ಎಂಬ ಸ್ತ್ರೀ ಎಂಬುದಾಗಿ ನೀಡಲಾಗಿದೆ. ವಿದ್ವಾಂಸನೇ ವಿದ್ಯೆಯ ಕಾರಣದಿಂದ ಆದವನು. ಆದ್ದರಿಂದ ಅವನು ವಿದ್ಯೆಯನ್ನು ತಾನೇ ಪ್ರೀತಿಸುತ್ತಾನೆ! ಅವನಿಗೆ ವಿದ್ಯೆ ತಾನೇ ಅತ್ಯಂತ ಆಕರ್ಷಕ ವಾಗುತ್ತದೆ! ಒಳ್ಳೆಯ ಕವಿತೆ ಅವನಿಗೆ ಹೇಗೆ ಆಕರ್ಷಿತವಾಗುವುದು ಎಂಬುದನ್ನು ತಿಳಿಯಬೇಕಾಗಿದೆ. ಒಳ್ಳೆಯ ಕವಿತೆ ಎಂದರೆ ತೋಚಿದ್ದನ್ನು, ಗೀಚಿದ್ದನ್ನು ಕವಿತೆ ಎಂದು ಕರೆಯಬಹುದೇ? ಶ್ರೀರಂಗ ಮಹಾಗುರುಗಳು ಹೇಳಿದಂತೆ “ಮಹಾಕವಿ ಎಂದರೆ ಮಹತ್ತಿನಿಂದ ಆರಂಭಿಸಿ ಮಹತ್ತತ್ತ್ವವನ್ನು ದಾಟಿದ ಪರಮಾತ್ಮನಲ್ಲಿ ತೆಗೆದುಕೊಂಡು ಹೋಗಿ ಯಾವನು ನಿಲ್ಲಿಸಿಸುವನೋ ಅವನು” ಎಂದು. ‘ನಾನೃಷಿಃ ಕುರುತೇ ಕಾವ್ಯಂ’  ಜ್ಞಾನಿಯಲ್ಲದವನು ಕಾವ್ಯವನ್ನು ಬರೆಯಲು ಸಾಧ್ಯವಿಲ್ಲ. ಅಂದರೆ ಮಹಾಕವಿಯಾದವನು ಮಾತ್ರ ಒಳ್ಳೆಯ ಕಾವ್ಯವನ್ನು ಬರೆಯಬಲ್ಲ. ಅಂತಹ ಕಾವ್ಯ ವಿದ್ವಾಂಸನಿಗಲ್ಲದೆ ಇನ್ನಾರಿಗೆ ಇಷ್ಟವಾದೀತು?! 

ಹಾಗಾಗಿ ಅಂತಹ ಕಾವ್ಯವನ್ನು ತಿಳಿಯಲು ವಿದ್ವಾಂಸನು ಮಾತ್ರ ಇಷ್ಟಪಡುತ್ತಾನೆ. ಆದರೆ ಕವಿಯಿಂದ ಬರೆಯಲ್ಪಟ್ಟಿದ್ದಲ್ಲವೂ ಕಾವ್ಯವೇ. ಅಂದರೆ ಶ್ರೀರಂಗ ಮಹಾಗುರುಗಳು ಹೇಳಿದಂತೆ “ಮಹಾಕವಿ ಎಂದರೆ ಮಹತ್ತಿನಿಂದ ಆರಂಭಿಸಿ ಮಹತ್ತತ್ತ್ವವನ್ನು ದಾಟಿದ ಪರಮಾತ್ಮನಲ್ಲಿ ತೆಗೆದುಕೊಂಡು ಹೋಗಿ ಯಾವನು ನಿಲ್ಲಿಸಿಸುವನೋ ಅವನು” ಎಂದು. ಯಾರು ಮಹಾಕವಿಯಾಗಿ, ಆತ್ಮಜ್ಞಾನಿಯಾಗಿ ಈ ಸೃಷ್ಟಿಯ ಮರ್ಮವನ್ನು ಅರಿತು, ಅದನ್ನು ತನ್ನ ತಪೋಬಲದಿಂದ, ಜ್ಞಾನಬಲದಿಂದ, ಮೇಧಾಬಲದಿಂದ, ಶಬ್ದರೂಪವಾಗಿ ಹಾಗೆ ಹೊರತಂದರೆ ಅದನ್ನೇ ಕಾವ್ಯ ಎಂಬುದಾಗಿ ಕರೆಯಬೇಕು. .

ಆ ಕಾವ್ಯವು ಈ ಸೃಷ್ಟಿಯ ಮರ್ಮದ ಪುಸ್ತಕವಾಗಿರುತ್ತದೆ. ಅಂತಹ ಕಾವ್ಯವು ವಿದ್ವಾಂಸನಿಗಲ್ಲದೆ ಎಲ್ಲರೂ ಇಷ್ಟಪಡುವ ಸಾಹಿತ್ಯವಾಗುವುದು. ಕವಿಗಳು ಯಾರು? ಎಂದು ಕವಿಗಳನ್ನು ಎಣಿಸುವಾಗ ವಾಲ್ಮೀಕಿ, ವ್ಯಾಸ, ಕಾಳಿದಾಸ ಇಂತಹ ಮೂರು ನಾಲ್ಕು ಕವಿಗಳನ್ನು ಮಾತ್ರ ಈ ಗುಂಪಿನಲ್ಲಿ ಹೆಸರಿಸಬಹುದು ಎಂದು ಒಬ್ಬ ಪ್ರಸಿದ್ಧಕವಿಯ ಮಾತು. ಅವರು ಬರೆದ ರಾಮಾಯಣ ಮಹಾಭಾರತ ಇತ್ಯಾದಿ ಸಾಹಿತ್ಯಗಳು ಕಾವ್ಯ ಎಂಬುದಾಗಿ ಕರೆಯಲ್ಪಡುತ್ತವೆ. ಆದ್ದರಿಂದ ಇಂತಹ ಕಾವ್ಯಗಳು ಎಂದೆಂದೂ ಎಲ್ಲಾ ವಿದ್ವಾಂಸನಿಗೂ ಅತ್ಯಂತ ಆಕರ್ಷಕ. ಇಂತಹ ಕವಿತೆಯನ್ನು ವಿದ್ವಾಂಸನು ಇಷ್ಟಪಡುತ್ತಾನೆ ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ.

ಸೂಚನೆ : 3/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ

ವ್ಯಾಸ ವೀಕ್ಷಿತ 186 ಅಚ್ಚರಿಯ ತೇರಿಗೆ ಮೆರುಗಿತ್ತ ಗರುಡ (Vyaasa Vikshita186)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


image.png



ಯಾವ ರಾಜರೂ ಆ ರಥವನ್ನು, ಎಂದರೆ ಆ ರಥದಲ್ಲಿ ಆಸೀನರಾಗಿರುವವರನ್ನು, ಜಯಿಸುವುದು ಸಾಧ್ಯವೇ ಇರಲಿಲ್ಲ. ಹೀಗಿರುವಂತಹುದಾಗಿ ಆ ರಥವು ಕಂಗೊಳಿಸಿತು. ಎಂತಹ ರಥವದು! ಹಿಂದೆ ಆ ರಥದಲ್ಲಿ ಕುಳಿತೇ ಇಂದ್ರನೂ ವಿಷ್ಣುವೂ ಸಂಗ್ರಾಮದಲ್ಲಿ ತಾರಕಾಸುರನನ್ನು ಸಂಹಾರ ಮಾಡಿದುದು.

ಅದೇ ರಥದ ಮೇಲೆ ಕುಳಿತೇ ಕೃಷ್ಣನೀಗ ಹೊರಟಿರುವುದು. ಕಾದ ಸುವರ್ಣದ ಕಾಂತಿ ಆ ರಥಕ್ಕಿತ್ತು. ಕಿಂಕಿಣಿಗಳ ಜಾಲವನ್ನೇ (ಬಲೆಯನ್ನೇ) ಅದು ಹೊಂದಿತ್ತು. ಮೋಡಗಳ ಗುಡುಗಿನ ನಾದವನ್ನೂ ಹೊಂದಿತ್ತು. ಶತ್ರುಘಾತಕವಾಗಿದ್ದ ಅದು ಜಯವನ್ನು ತಂದುಕೊಡುವಂತಹುದೂ ಆಗಿತ್ತು. ತೊಂಭತ್ತೊಂಭತ್ತು ದಾನವರನ್ನು ಇಂದ್ರನು ಸಂಹರಿಸಿದುದು ಆ ರಥದಲ್ಲಿ ಕುಳಿತು ಹೋಗಿದ್ದಾಗಲೇ. ಅಂತಹ ಅದ್ಭುತ-ರಥವನ್ನು ಹೊಂದಿದ್ದರಿಂದಾಗಿ ಆ ಮೂವರು ಪುರುಷ-ಶ್ರೇಷ್ಠರೂ ಪರಮ-ಹರ್ಷಗೊಂಡರು.

ಮಹಾಬಾಹುವಾದ ಕೃಷ್ಣನು ಈ ಸಹೋದರರಿಬ್ಬರೊಡಗೂಡಿ ರಥದಲ್ಲಿ ಬರುತ್ತಿರುವುದನ್ನು ಕಂಡು ಮಗಧದೇಶದ ಪ್ರಜೆಗಳೆಲ್ಲರೂ ವಿಸ್ಮಿತರಾದರು. ದಿವ್ಯವಾದ ಹಯಗಳನ್ನು, ಎಂದರೆ ಕುದುರೆಗಳನ್ನು, ಹೊಂದಿದ್ದ ಆ ರಥವು ವಾಯುವೇಗವುಳ್ಳದ್ದು. ಅಂತಹ ರಥವು ಈಗ ಕೃಷ್ಣನಿಂದ ಅಧಿಷ್ಠಿತವಾಗಿದ್ದು ಅಧಿಕವಾಗಿ ಕಂಗೊಳಿಸಿತು.

ಆ ಶ್ರೇಷ್ಠವಾದ ರಥದ ಮೇಲಿನ ಧ್ವಜವು ದೇವವಿಹಿತವಾಗಿದ್ದು, ಅದು ಒಂದು ಯೋಜನದಷ್ಟು ದೂರಕ್ಕೂ, ಎಂದರೆ ಸುಮಾರು ಎಂಟು ಮೈಲಿ ದೂರಕ್ಕೂ, ಕಾಣಿಸುವುದಾಗಿದ್ದರೂ, ಅದನ್ನು ರಥಕ್ಕೆ ಎಲ್ಲಿ ಸಿಕ್ಕಿಸಿರುವರೆಂಬುದೇ ಗೋಚರವಾಗುತ್ತಿರಲಿಲ್ಲ! ಅದು ಇಂದ್ರಾಯುಧದಂತೆ, ಎಂದರೆ ಕಾಮನಬಿಲ್ಲಿನ ಹಾಗೆ, ಶೋಭಿಸುತ್ತಿತ್ತು.

ಆ ಸಮಯದಲ್ಲಿ ಕೃಷ್ಣನು ಗರುತ್ಮಂತನನ್ನು, ಎಂದರೆ ಗರುಡನನ್ನು, ಸ್ಮರಿಸಿದನು. ಅದೇ ಕ್ಷಣಕ್ಕೇ ಆತನೂ ಅಲ್ಲಿಗೆ ಆಗಮಿಸಿದನು. ಮೇಲೆದ್ದ ಒಂದು ಚೈತ್ಯವೃಕ್ಷದ ಹಾಗೆ ಗರುಡನು ತೋರಿದನು. ಬಾಯ್ದೆರೆದು ಮಹಾನಾದವನ್ನು ಮಾಡುತ್ತಿದ್ದ, ಹಾಗೂ ಧ್ವಜವನ್ನು ಆಶ್ರಯಿಸಿದ್ದ, ಭೂತಗಳೊಂದಿಗೆ, ಸರ್ಪಭಕ್ಷಕನೆನಿಸಿದ ಗರುಡನು ಆ ಶ್ರೇಷ್ಠರಥದ ಮೇಲೆ ಕುಳಿತುಕೊಂಡನು. ಆಗ ಹೇಗೆ ಕಂಡಿತು ಆ ಧ್ವಜ? ಭೂತಗಳಿಗೆ, ಎಂದರೆ ಯಾವುದೇ ಪ್ರಾಣಿಗಳಿಗೆ, ದಿಟ್ಟಿಸಿನೋಡಲಾಗದ ಹಾಗೆ ಅಧಿಕವಾದ ತೇಜಸ್ಸಿನಿಂದಾಗಿ ಕೂಡಿದ್ದಾಗಿ  ಕಂಡಿತು. ಮಧ್ಯಾಹ್ನದ ಹೊತ್ತಿನಲ್ಲಿ ತನ್ನ ಸಹಸ್ರ-ಕಿರಣಗಳಿಂದಲೂ ಕೂಡಿದ ಆದಿತ್ಯನು ಕಣ್ಣು ಕೋರೈಸುವಂತಿರುವನಲ್ಲವೇ? ಹಾಗೆ.

ಆ ಶ್ರೇಷ್ಠಧ್ವಜದ ಮತ್ತೊಂದು ಆಶ್ಚರ್ಯವೆಂದರೆ ಅದು ಮರಗಳಿಗೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಶಸ್ತ್ರಗಳಿಂದ ಘಾಸಿಕೊಳ್ಳುತ್ತಿರಲಿಲ್ಲ. ಆ ದಿವ್ಯವಾದ ಧ್ವಜವು ಮನುಷ್ಯರಿಗೆ ಗೋಚರವಾಗಿರುತ್ತಿತ್ತು.

ಮಳೆಯ ಹಾಗೆ ಶಬ್ದ ಮಾಡುತ್ತಿದ್ದ ಆ ದಿವ್ಯ-ರಥದಲ್ಲಿ ಆಸೀನನಾಗಿ ಭೀಮಾರ್ಜುನರೊಡನೆ ಕೃಷ್ಣನು ಆ ಊರಿನಿಂದ ನಿರ್ಗಮಿಸಿದನು. ಇಂದ್ರನಿಂದ ವಸುವಿಗೂ ಆತನಿಂದ ಬೃಹದ್ರಥನಿಗೂ ಅಲ್ಲಿಂದ ಕ್ರಮ-ಪ್ರಾಪ್ತವಾಗಿ ಜರಾಸಂಧನಿಗೂ ಬಂದ ರಥವದು.

ಗಿರಿವ್ರಜದಿಂದ ಹೊರಹೊರಟು ಈಗ ಸಮತಟ್ಟಾದ ಎಡೆಗೆ ಕೃಷ್ಣನು ಬಂದು ಸೇರಿದನು. ಬಂಧನದಿಂದ ಬಿಡುಗಡೆಯನ್ನು ಹೊಂದಿದ ರಾಜರುಗಳು ಕೃಷ್ಣನನ್ನು ಅರ್ಚಿಸಿ ಹೀಗೆ ಸ್ತುತಿಸಿದರು:

"ಮಹಾಬಾಹುವಾದ ಕೃಷ್ಣನೇ, ದೇವಕಿಗೆ ಆನಂದ ತಂದವನೇ, ಭೀಮಾರ್ಜುನ ಬಲದೊಂದಿಗೆ ಕೂಡಿರುವ ನೀನು ಧರ್ಮರಕ್ಷಣೆಯನ್ನು ಮಾಡುವೆಯೆಂಬುದರಲ್ಲಿ ಆಶ್ಚರ್ಯವೇ ಇಲ್ಲ. ದುಃಖವೆಂಬ ಕೆಸರಿನ ರಾಶಿಯೇ ಆಗಿದ್ದುದು ಜರಾಸಂಧವೆಂಬ ಮಡು. ಅದರೊಳಗೆ ಸಿಲುಕಿದ್ದೆವು ನಾವು ರಾಜರುಗಳು. ಅಂತಹ ನಮ್ಮಗಳ ಉದ್ಧಾರವನ್ನು ನೀನು ಈಗ ಎಸಗಿರುವೆ. ಬೆಟ್ಟವೆಂಬ ಭಯಂಕರವಾದ ಕೋಟೆಯೊಳಗೆ ಸಿಲುಕಿ ನಲುಗಿಹೋಗಿದ್ದ ನಮಗೆ, ಅದೃಷ್ಟವಶಾತ್ ಮೋಕ್ಷವನ್ನು ದಯಪಾಲಿಸಿರುವೆ, ಓ ವಿಷ್ಣುವೇ!

ಸೂಚನೆ : 3/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಭಗವದಾನಂದಕ್ಕೆ ಪಾತ್ರರಾಗಲು ಮಾರ್ಗ ಯಾವುದು ? (Bhagavadanandakke Patraragalu Marga Yavudu?)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)


Screenshot 2026-05-03 165237.png

ಶಿಶುಪಾಲವಧೆ ಎಂಬ ಮಹಾಕಾವ್ಯದಲ್ಲಿ ಬರುವಂತಹ ಪ್ರಸಂಗ, ಪರಮಾತ್ಮನು ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗಾಗಿ ಶ್ರೀಕೃಷ್ಣನ ರೂಪದಲ್ಲಿ ಭುವಿಯಲ್ಲಿ ಅವತರಿಸಿ ದ್ವಾರಕೆಯಲ್ಲಿರುತ್ತಾನೆ. ದೇವತೆಗಳ ಆಶಯದಂತೆ ಒಮ್ಮೆ ದೇವರ್ಷಿ ನಾರದರು , ಶಿಶುಪಾಲ ಎಂಬ ದುಷ್ಟನ ವಧೆ ಸನ್ನಿಹಿತವಾಗಿದೆ ಎಂದು ವಿಜ್ಞಾಪಿಸಿಕೊಳ್ಳಲು ಶ್ರೀಕೃಷ್ಣನ ಬಳಿಗೆ ಬರುತ್ತಾರೆ. ನಾರದರ ಆಗಮನದಿಂದ ಶ್ರೀಕೃಷ್ಣ ಪರಮಾತ್ಮನಿಗೆ ಅತ್ಯಂತ ಸಂತೋಷ ಉಂಟಾಗುತ್ತದೆ, ನಾರದರು ಅರಮನೆಗೆ ಬಂದು ಭೂ ಸ್ಪರ್ಶ ಮಾಡುವುದರೊಳಗಾಗಿ ಕೃಷ್ಣನು ತನ್ನ ಸಿಂಹಾಸನದಿಂದ ಕೆಳಗಿಳಿದು ಅವರಿಗೆ ಸ್ವಾಗತವನ್ನು ನೀಡುತ್ತಾನೆ. ನಾರದರಿಗೆ ಅರ್ಘ್ಯ, ಪಾದ್ಯ ಮೋದಲಾದವುಗಳನ್ನು ನೀಡಿ ಆದರಪೂರ್ವಕವಾಗಿ ಸತ್ಕರಿಸುತ್ತಾನೆ. ತಮ್ಮಂತಹ ಮಹಾತ್ಮರ ದರ್ಶನವು ಜೀವಿಗಳಿಗೆ ಭೂತ, ಭವಿಷ್ಯತ್ ಮತ್ತು ವರ್ತಮಾನವೆಂಬ ಮೂರು ಕಾಲಗಳ  ಪಾಪವನ್ನು ಪರಿಹರಿಸಿ ಮಂಗಳವನ್ನುಂಟುಮಾಡುತ್ತದೆ ಎಂಬುದಾಗಿ ನಾರದರನ್ನು ಕುರಿತು ಹೇಳುತ್ತಾನೆ. ನಾರದರ ಆಗಮನದಿಂದ ಶ್ರೀಕೃಷ್ಣನಿಗೆ ಉಂಟಾದ ಆನಂದವನ್ನು ಕವಿಗಳು ಹೀಗೆ ವರ್ಣಿಸುತ್ತಾರೆ, 'ಪ್ರಳಯ ಕಾಲದಲ್ಲಿ ಸಮಸ್ತ ಜಗತ್ತನ್ನು ತನ್ನಲ್ಲಿ ಅಡಗಿಸಿಟ್ಟುಕೊಳ್ಳುವ ಪರಮಾತ್ಮನಿಗೆ ನಾರದರ ಆಗಮನದಿಂದ ಉಂಟಾದ ಆನಂದವನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳಲಾಗಲಿಲ್ಲ ಅದು ತುಂಬಿ ಹರಿದು ಪ್ರಕಟವಾಯಿತು' ಎಂಬುದಾಗಿ. ಭಗವಂತನು ತನ್ನ ಭಕ್ತರ ವಿಷಯದಲ್ಲಿ ಯಾವ ರೀತಿ ಆನಂದವನ್ನು ಹೊಂದಿರುತ್ತಾನೆ, ಅದನ್ನು ಯಾವ ರೀತಿ ಪ್ರಕಟಪಡಿಸುತ್ತಾನೆ ಎಂಬುದನ್ನು ಇಲ್ಲಿ ಕಾಣಬಹುದು.

ನಾರದರು ಭಕ್ತ ಶ್ರೇಷ್ಠರಲ್ಲಿ ಅಗ್ರಗಣ್ಯರು, ಸದಾ ಶ್ರೀಮನ್ನಾರಾಯಣನನ್ನು ಮನಸ್ಸಿನಲ್ಲಿ ತುಂಬಿಕೊಂಡು ಅವನ ಸ್ಮರಣೆ ಮಾಡುತ್ತಾ ಮೂರು ಲೋಕದಲ್ಲಿಯೂ ಸಂಚಾರ ಮಾಡುವವರು. ತಾವು ಭಕ್ತಿ ಮಾರ್ಗದಲ್ಲಿ ನಡೆಯುವುದು ಮಾತ್ರವಲ್ಲದೇ ಲೋಕವೆಲ್ಲವನ್ನು ಆ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಣೆ ನೀಡಿದವರು. ಪ್ರಹ್ಲಾದ, ಧ್ರುವ ಮುಂತಾದ ಭಾಗವತೋತ್ತಮರಿಗೆ ಭಕ್ತಿಮಾರ್ಗವನ್ನು ಉಪದೇಶಿಸಿ ಅವರ ಉದ್ಧಾರಕ್ಕೆ ಕಾರಣ ರಾದವರು, ದುಷ್ಟವ್ಯಾಧನಾದಂತಹ ರತ್ನಾಕರನನ್ನು ವಾಲ್ಮೀಕಿ ಮಹರ್ಷಿಗಳನ್ನಾಗಿ ಪರಿವರ್ತಿಸಿ ಪರಮಪಾವನಕರವಾದ ಶ್ರೀಮದ್ ರಾಮಾಯಣವನ್ನು ರಚಿಸಲು ಪ್ರೇರಣೆಯನ್ನು ನೀಡಿದವರು. ಹೀಗೆ ಸದಾ ಕಾಲ ತಮ್ಮನ್ನು ಭಗವತ್ ಕಾರ್ಯದಲ್ಲಿ, ಭಗವತ್ ಸೇವೆಯಲ್ಲಿ ತೊಡಗಿಸಿಕೊಂಡವರು. ಅಂತಹ ನಾರದರ ವಿಷಯದಲ್ಲಿ ಭಗವಂತನು ಸಂತೋಷಗೊಳ್ಳುವುದು ಸಹಜವೇ ಆಗಿದೆ.

ನಾರದ ಮಹರ್ಷಿಗಳು ದೇವತೆ, ರಾಕ್ಷಸ ಮನುಷ್ಯ ಎಂಬ ಭೇದವಿಲ್ಲದೆ ಎಲ್ಲರನ್ನೂ ಭಗವಂತನಿಗೆ ಅಭಿಮುಖವಾದ ದೈವೀಮಾರ್ಗದಲ್ಲಿ ನಡೆಯುವಂತೆ ಪ್ರಚೋದನೆಯನ್ನು ನೀಡಿದವರು. ಏಕೆಂದರೆ ಪರಮ ಕರುಣಾಮಯರಾದ ಅವರು ನೋಡುತ್ತಿದ್ದದು ಹೊರರೂಪವನ್ನಲ್ಲ, ಶರೀರದ ಒಳಗಿರುವ ಆತ್ಮವನ್ನು ಹಾಗೂ ಅದರ ಉದ್ಧಾರವನ್ನು.

ಏಕೆಂದರೆ ಈ ಶರೀರ ಅನ್ನುವುದು ಯಾವುದೋ ಒಂದು ಪೂರ್ವಜನ್ಮಕೃತ ಪುಣ್ಯ-ಪಾಪಕ್ಕೆ ಅನುಗುಣವಾಗಿ ಬಂದಿರುವಂತಹದು. ರಾಕ್ಷಸರಾಗಿ ಹುಟ್ಟಿದವರ ಪೂರ್ವವೃತ್ತಾಂತವನ್ನು ನಾವು ಇತಿಹಾಸ ಪುರಾಣಗಳಲ್ಲಿ ಕೇಳಿದ್ದೇವೆ. ನಮ್ಮ ಪುಣ್ಯ ಪಾಪಗಳನ್ನು ಕಡೆದುಕೊಂಡು ಭಗವಂತನ ಸಾನಿಧ್ಯವನ್ನು ಹೊಂದುವುದಕ್ಕೆ ಅವನ ಸ್ಮರಣೆಯ ಜೊತೆ ಜೊತೆಗೆ ಅವನಿಗೆ ಅಭಿಮುಖವಾಗಿ ನಡೆಯುವುದೊಂದೆಯೊಂದೇ ದಿವ್ಯವಾದ ಔಷಧ. ಅಂತಹ ಔಷಧವು ಪ್ರತಿಯೊಂದು ಜೀವಿಗೂ ಬೇಕು. ನಾರದರು ಹಾಗೂ ಅವರಂತೆಯೇ ಕರುಣಾಮಯರಾದ ಅನೇಕ ಮಹರ್ಷಿಗಳು ಪ್ರತಿಯೊಂದು ಜೀವದ ಉದ್ಧಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು  ಭಗವಂತನಿಗೆ ಅಭಿಮುಖವಾಗಿ ನಡೆಯುವಂತಹ ಭಾರತೀಯ ಸಂಸ್ಕೃತಿಯನ್ನು ರೂಪಿಸಿಕೊಟ್ಟಿದ್ದಾರೆ. ನಮ್ಮ ನಡೆ, ನುಡಿ ವ್ಯವಹಾರದಲ್ಲಿ ಆ ರೀತಿಯ ಜೀವನ ಶೈಲಿಯನ್ನು ರೂಪಿಸಿ ಕೊಳ್ಳುವಂತೆ ದಾರಿಯನ್ನು ಮಾಡಿಕೊಟ್ಟಿದ್ದಾರೆ. ಏಕೆಂದರೆ ಭಗವಂತನಿಗೆ ಅಭಿಮುಖವಾಗಿ ನಮ್ಮ ಮನಸ್ಸನ್ನು ಕರೆದುಕೊಂಡು ಹೋಗುತ್ತಾ ಇದ್ದಾಗ ಮನಸ್ಸಿನಲ್ಲಿ ಪಾಪರೂಪದಲ್ಲಿ ಅಡಕವಾಗಿರುವ ಕಲ್ಮಶವೆಲ್ಲವೂ ನಾಶವಾಗುತ್ತದೆ ಹಾಗೂ ಮನೋಬುದ್ಧಿಗಳಲ್ಲಿ ತುಂಬಿರುವ ಅಂಧಕಾರ ತೊಲಗಿ ಜ್ಞಾನ ರೂಪದಲ್ಲಿರುವ ಭಗವಂತನ ದರ್ಶನ ಸನ್ನಿಹಿತವಾಗುತ್ತದೆ. ತಾವೂ ಭಗವನ್ಮಾರ್ಗದಲ್ಲಿ ನಡೆದು ತಮ್ಮ ಸುತ್ತಲಿರುವವರನ್ನು ಆ ಮಾರ್ಗದಲ್ಲಿ ನಡೆಯುವಂತೆ ಯಾರು ಪ್ರೇರೇಪಿಸುತ್ತಾರೋ ಅವರು ಮಾಡುವುದೇ ನಿಜವಾದ ಭಗವತ್ಕಾರ್ಯ ಹಾಗೂ ಭಗವಂತನಿಗೆ ಅತ್ಯಂತ ಸಂತೋಷವನ್ನುಂಟು ಮಾಡುವ ಸೇವೆ. ಅಂತಹ ಕಾರ್ಯವನ್ನು ಮಾಡುವವರ ವಿಷಯದಲ್ಲಿ ತಾನೇ ಭಗವಂತ ಅತ್ಯಂತ ಸಂತುಷ್ಟನಾಗುತ್ತಾನೆ! ಏಕೆಂದರೆ ಅಂತಹ ಮಾರ್ಗದಲ್ಲಿ ನಡೆದಾಗ ಮಾತ್ರ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣ ಇವೆರಡೂ ಸಾಧ್ಯ. "ಹುಟ್ಟಿದ ಮೇಲೆ ಹೇಗೆ ಹೇಗೆಯೋ ಬಾಳುವ ಬದಲು ದೈವೀ ಮಾರ್ಗ ಹಿಡಿಯಿರೀಪ್ಪ!" ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ನಮ್ಮ ಮನಸ್ಸು ಬುದ್ಧಿ ,ಆತ್ಮ ಎಲ್ಲವನ್ನು ಶುದ್ಧಗೊಳಿಸುವ ದೈವೀ ಮಾರ್ಗವನ್ನು ಹಿಡಿದು  ಮಹರ್ಷಿಗಳ ಆಶಯದಂತೆ ಸುಕೃತವಾದ ಜೀವನವನ್ನು ನಡೆಸೋಣ. ಭಗವದಾನಂದಕ್ಕೆ ಪಾತ್ರರಾಗೋಣ.

ಸೂಚನೆ : 2/04/2029 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.