Wednesday, September 2, 2026

ಪ್ರಶ್ನೋತ್ತರ ರತ್ನಮಾಲಿಕೆ 81 (Prasnottara Ratnamalike 81)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೮೧. ಪ್ರಾಣಕ್ಕಿಂತಲೂ ರಮ್ಯವಾದುದು ಯಾವುದು?

ಉತ್ತರ- ಕುಲದ ಧರ್ಮ ಮತ್ತು ಸಜ್ಜನಸಂಗ.


ಕುಲ ಎಂದರೆ ವಂಶ. ಆ ವಂಶದಲ್ಲಿ ಇರುವ ಒಳ್ಳೆಯ ಆಚಾರ ವಿಚಾರ ನಡವಳಿಕೆ ಇವೆಲ್ಲವನ್ನೂ ಒಟ್ಟಾಗಿ ಸೇರಿಸಿ ‘ಕುಲಧರ್ಮ’ ಎಂಬುದಾಗಿ ಕರೆಯಲಾಗಿದೆ. ನಮ್ಮ ಹಿಂದಿನವರು ಕುಲದ ಧರ್ಮಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ, ಅದನ್ನು ಉಳಿಸಲು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸುತ್ತಿರಲಿಲ್ಲ. ಕುಲಧರ್ಮವು ಹಾಳಾಗದಂತೆ ಅದನ್ನು ರಕ್ಷಿಸುವಲ್ಲಿ ಸರ್ವವಿಧವಾದ ಪ್ರಯತ್ನವನ್ನೂ ಮಾಡುತ್ತಿದ್ದರು. ಅದೇ ಅರ್ಥವನ್ನು ವಿವರಿಸುವ ಪ್ರಶ್ನೋತ್ತರ ಇದು. 


ಪ್ರಾಣಕ್ಕಿಂತಲೂ ಉತ್ತಮವಾದದ್ದು, ರಮಣೀಯವಾದದ್ದು ಯಾವುದು? ಎಂಬುದು. ಪ್ರಾಣಕ್ಕಿಂತಲೂ ಉತ್ಕೃಷ್ಟವಾದ ಸಂಗತಿಯು ಇರಲು ಸಾಧ್ಯವೇ? ಎಂದೆನಿಸಬಹುದು. ಪ್ರಾಣಕ್ಕಿಂತಲೂ ಉತ್ತಮವಾಗಬೇಕಾದರೆ ಅದು ಎಂತಹದ್ದಾಗಿರಬೇಕು! ಎಂದರೆ ಯಾವುದಕ್ಕೋಸ್ಕರ ಯಾವುದನ್ನು ನಾವು ತ್ಯಾಗ ಮಾಡಲು ಬಯಸುತ್ತೇವೋ, ತ್ಯಾಗ ಮಾಡುವ ವಿಷಯಕ್ಕಿಂತಲೂ ಉಳಿಸಿಕೊಳ್ಳಬೇಕಾದ ವಿಷಯ ಅದಕ್ಕಿಂತ ಉತ್ತಮವಾಗಿರಬೇಕಷ್ಟೆ! ಆಗ ಮಾತ್ರ ನಾವು ಉತ್ತಮವಾದದ್ದನ್ನು ರಕ್ಷಿಸಲು - ಉಳಿಸಲು ಅಲ್ಪವಾದದ್ದನ್ನು ಬಿಡುತ್ತೇವೆ. ಅಲ್ಪವಾದುದ್ದಕ್ಕೆ ಶ್ರೇಷ್ಠವಾದದ್ದನ್ನು ಎಂದೂ ಕೂಡ ನಾವು ಕಳೆದುಕೊಳ್ಳುವುದಿಲ್ಲವಷ್ಟೆ! “ಅಲ್ಪಸ್ಯ ಹೇತೋಃ ಬಹುಹಾತುಮಿಚ್ಛನ್ ವಿಚಾರಮೂಢಃ ಪ್ರತಿಭಾಸಿ ಮೇ ತ್ವಂ” ಕಾಳಿದಾಸನ ರಘುವಂಶ ಮಹಾಕಾವ್ಯದಲ್ಲಿ ಬರುವ ಒಂದು ಮಾತು. ಅಲ್ಪಕ್ಕೋಸ್ಕರ ಉತ್ತಮವಾದುದನ್ನು ಬಿಡುವವ ಮೂಢನಷ್ಟೇ! ಎಂಬುದು ಈ ಮಾತಿನ ಅರ್ಥ. ಅಧಿಕವಾದ ಬೆಲೆಯುಳ್ಳ ವಿಷಯವನ್ನು ಉಳಿಸಲು ಅಲ್ಪವಾದ ಬೆಲೆಯ ಉಳ್ಳ ವಸ್ತುವನ್ನು ಕಳೆದುಕೊಳ್ಳುವುದು ಸಹಜ. ಆದರೆ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ. ರಘುವಂಶದವರ ಮಾತನ್ನು ಮತ್ತು ಅವರ ನಡೆಯನ್ನು ನೋಡಿದಾಗ ಅವರ ಕುಲಧರ್ಮ ಹೇಗಿತ್ತು? ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ರಾಮನೂ ಕೂಡ ಸೀತಾ ಪರಿತ್ಯಾಗವನ್ನು ಮಾಡುವ ಸಂದರ್ಭದಲ್ಲಿ ಇದೇ ಮಾತನ್ನು ಹೇಳುತ್ತಾನೆ. “ಸೂರ್ಯವಂಶಕ್ಕೆ ಕಳಂಕ ನನ್ನಿಂದ ಬರುತ್ತದೆ ಎಂದಾದರೆ ನಾನು ಎಂತಹ ಕಾರ್ಯಕ್ಕೂ ಸಿದ್ಧ. ಏಕೆಂದರೆ ನನ್ನ ಹಿರಿಯರು ಪ್ರಾಣವನ್ನು ಕೊಟ್ಟು ಕುಲಧರ್ಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಹಾಗಾಗಿ ಆ ಕುಲಧರ್ಮವು ಹಾಳಾಗುವುದನ್ನು ಸಹಿಸುವುದಿಲ್ಲ, ಅದನ್ನು ಕಾಪಾಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ” ಎಂಬ ಮಾತನ್ನು ಹೇಳುತ್ತಾನೆ. ಭಗವದ್ಗೀತೆಯಲ್ಲಿ ಅರ್ಜುನನು ಭಗವಾನ್ ಶ್ರೀ ಕೃಷ್ಣನಿಗೆ ಹೇಳುವ ಮಾತು ” ಉತ್ಸನ್ನಕುಲಧರ್ಮಾಣಾಂ ನರಕೇ ನಿಯತಂ ವಾಸಃ” ಕುಲಧರ್ಮಗಳು ನಾಶವಾದರೆ ನರಕವಾಸವೇ ಗತಿ ಎಂದು. ಅಲ್ಲಿ ಅರ್ಜುನ ಹೇಳುವ ಮಾತುಗಳು “ಒಂದು ವೇಳೆ ಕುಲ ನಾಶವಾದರೆ ಕುಲಧರ್ಮಗಳು ಕುಲಾಚಾರಾರಗಳೂ ನಷ್ಟವಾಗುತ್ತವೆ, ಆದ್ದರಿಂದ ನಾನು, ಬಂಧುಬಾಂಧವರು ಅಣ್ಣತಮ್ಮಂದಿರು ಕುಲಗುರುಗಳು ಇವರಿಂದ ಕೂಡಿದ ಶತ್ರುಪಾಳಯವನ್ನು ನಾಶಮಾಡಲು ಇಷ್ಟಪಡುವುದಿಲ್ಲ” ಎಂದು. ಅಂದರೆ ಕೆಲವೊಮ್ಮೆ ಪ್ರಾಣ ಕೊಟ್ಟು, ಕೆಲವೊಮ್ಮೆ ಬೇರೆಯವರ ಪಾಣ ಉಳಿಸಿ ಕುಲಧರ್ಮವನ್ನು ಉಳಿಸಬೇಕಾಗುತ್ತದೆ ಎಂಬ ವಿಷಯವನ್ನು ಇತಿಹಾಸ ಪುಟಗಳಿಂದ ನಾವು ಅರ್ಥ ಮಾಡಿಕೊಳ್ಳಬೇಕು. ಪ್ರಾಣವನ್ನೂ ಕೊಟ್ಟಾದರೂ ಉಳಿಸಬೇಕಾದ ಇನ್ನೊಂದು ವಿಷಯವೇನೆಂದರೆ ಸಜ್ಜನರ ಸಂಗ ಎಂಬುದು. 


ಪ್ರಾಣ ಹೋದರೂ ಸಜ್ಜನರ ಸಂಗವನ್ನು ಮಾತ್ರ ನಾವು ಬಿಡಬಾರದು. ಅವರು ಯಾವ ಮಟ್ಟದಲ್ಲಿ ಜೀವನವನ್ನು ನಡೆಸಿರುತ್ತಾರೋ ಅಂತಹ ಜೀವನವನ್ನು ನಾವು ಮಾಡಬೇಕಾದರೆ ಅಂತಹ ಸಜ್ಜನರ ಸಂಗವನ್ನು ನಾವು ಬಿಡಬಾರದು ಎಂಬ ಮಾರ್ಮಿಕವಾದ ವಿಷಯ ನಮಗಿಲ್ಲಿ ಕಾಣಸಿಗುತ್ತದೆ.

ಸೂಚನೆ :30/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

(Vyaasa Vikshita 203) ಶಿಶುಪಾಲನ ಪ್ರತಿಭಟನೆ, ಯುಧಿಷ್ಠಿರನ ಸಾಂತ್ವನ (Vyaasa Vikshita 203)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ರಾಜಸೂಯವು ಮುಗಿಯಲು, ಅರ್ಹ-ಕ್ಷತ್ರಿಯರಿಗೆ ಸಂಮಾನನವೆಂಬ ಕಾರ್ಯವು ಜರುಗಬೇಕಿತ್ತು. ತದಂಗವಾಗಿ ಅಗ್ರಪೂಜೆಯು ಕೃಷ್ಣನಿಗೆ ಸಂದಿತೆಂದು, ಶಿಶುಪಾಲನು ಪ್ರತಿಭಟಿಸಿ ಯುಧಿಷ್ಠಿರನನ್ನು ಆಕ್ಷೇಪಿಸಿದನು.

ಬಳಿಕ ಈಗ ಕೃಷ್ಣನನ್ನೇ ಸಂಬೋಧಿಸಿ ಆಕ್ರೋಶದಿಂದ ಹೇಳುತ್ತಿದ್ದಾನೆ, ಶಿಶುಪಾಲ:

“ಮಾಧವನೇ, ಕುಂತಿಯ ಮಕ್ಕಳು ಪುಕ್ಕಲರು, ದಯನೀಯರು, ಬಡಪಾಯಿಗಳು. ನೀನಾದರೂ ಅದನ್ನರಿಯಬೇಡವೆ - ಎಂತಹ ಪೂಜೆಗೆ ನೀನು ಅಧಿಕಾರಿಯೆಂಬುದನ್ನು? ಈ ಬಡಪಾಯಿಗಳು ನಿನಗರ್ಪಿಸಿದ ಅಗ್ರಪೂಜೆಗೆ ಅನರ್ಹನಾದ ನೀನು ಅದನ್ನು ಅದೇನೋ ದೊಡ್ಡದೆಂಬಂತೆ ಸ್ವೀಕರಿಸಿರುವೆ. ಇದು ಹೇಗೆಂದರೆ, ಹವಿಸ್ಸಿನ ಪಾತ್ರೆಯನ್ನು ನಿರ್ಜನಪ್ರದೇಶಕ್ಕೊಯ್ದು ಅದಕ್ಕಂಟಿದ್ದ ಹವಿರ್ಧಾರೆಯನ್ನು ನಾಯಿ ನೆಕ್ಕುವಂತೆ!

ಒಂದರ್ಥದಲ್ಲಿ, ಇಲ್ಲಿ ನೆರೆದಿರುವ ಅರಸರಿಗೆ ಇದು ಅಪಮಾನವೆಂದಲ್ಲ; ಬದಲಾಗಿ ಈ ಕುರುವಂಶಜರೇ (ಎಂದರೆ ಪಾಂಡವರೇ) ನಿನಗೆ ವಂಚನೆ ಮಾಡಿರುವಂತಿದೆ. ಷಂಡನಿಗೆ ಮದುವೆಮಾಡಿಕೊಟ್ಟರೆ ಹೇಗೋ ಹಾಗೆ, ಕುರುಡನಿಗೆ ರೂಪವನ್ನು ತೋರಿಸಿದರೆ ಹೇಗೋ ಹಾಗೆ, ರಾಜನಲ್ಲದ ನಿನಗೆ ರಾಜನಿಗೆಂಬಂತೆ ಪೂಜೆಯನ್ನು ಸಲ್ಲಿಸುವುದಾಗಿದೆ, ಕೃಷ್ಣ!

ಇಂದು ಕಂಡಂತಾಯಿತು ಯುಧಿಷ್ಠಿರನನ್ನು - ಎಂದರೆ ಆತನ ಯೋಗ್ಯತೆಯನ್ನು. ಅಂತೆಯೇ ಭೀಷ್ಮರನ್ನು. ಅದೇ ರೀತಿಯಲ್ಲಿ ವಾಸುದೇವನನ್ನೂ ಕಂಡಂತಾಯಿತು. ಎಲ್ಲವನ್ನೂ ಯಥಾಯಥವಾಗಿ ತಿಳಿದದ್ದಾಯಿತು!”

ಹೀಗೆಂಬುದಾಗಿ ಹೇಳಿದವನೇ, ತನ್ನ ಉತ್ತಮವಾದ ಆಸನದಿಂದ ಮೇಲೆದ್ದವನಾಗಿ, ಕೆಲ ರಾಜರೊಡಗೂಡಿ ಆ ಸಭೆಯಿಂದ ಹೊರಟುಬಿಟ್ಟನು. ಒಡನೆಯೇ ಯುಧಿಷ್ಠಿರನು ಶಿಶುಪಾಲನಲ್ಲಿಗೆ ಧಾವಿಸಿದನು. ಹಾಗೂ ಈ ಸಾಂತ್ವನದ ಮಾತುಗಳನ್ನು ಮಧುರವಾಗಿ ನುಡಿದನು:

ರಾಜನೇ, ಎಂತಹ ಮಾತುಗಳನ್ನು ನೀನಾಡಿಬಿಟ್ಟೆ! ಅವು ಯುಕ್ತವಲ್ಲ. ಯಾರ ವಿಷಯದಲ್ಲೇ ಆಗಲಿ ನಿರರ್ಥಕವಾದ ಇಂತಹ ಮಾತನ್ನು ಪಾರುಷ್ಯದಿಂದ (ಎಂದರೆ ಒರಟಾಗಿ) ನುಡಿಯುವುದು ಅಧರ್ಮವೇ ಸರಿ.

ಶಾಂತನವ-ಭೀಷ್ಮನು (ಎಂದರೆ ಶಂತನುಪುತ್ರನಾದ ಭೀಷ್ಮನು) ಶ್ರೇಷ್ಠವಾದ ಧರ್ಮವನ್ನು ಅರಿಯಲಾಗದವನೆಂಬುದು ಎಂದಿಗೂ ಇಲ್ಲ. ಆತನನ್ನು ನೀನು ಅನ್ಯಥಾ ಭಾವಿಸಬೇಡ.

ಇಲ್ಲಿರುವ ರಾಜರನ್ನು ನೋಡು. ಇವರಲ್ಲನೇಕರು ನಿನಗಿಂತಲೂ ಹಿರಿಯರಾದವರು. ಕೃಷ್ಣನಿಗೆ ಸಲ್ಲಿಸಿದ ಪೂಜೆಯನ್ನು ಅವರುಗಳೇ ಸಹಿಸಿಕೊಂಡಿರುವರಲ್ಲವೇ? ಹಾಗೆಯೇ ನೀನೂ ಕ್ಷಮಿಸಲು ಅರ್ಹನಾಗಿದ್ದೀಯೆ. ಓ ಚೇದಿ-ರಾಜನೇ, ಎಂದರೆ ಚೇದಿದೇಶದ ಒಡೆಯನೇ, ಕೃಷ್ಣನೇನೆಂಬುದನ್ನು ತತ್ತ್ವದೃಷ್ಟಿಯಿಂದ ಭೀಷ್ಮರು ಬಲ್ಲರು. ಯಾವ ರೀತಿ ಭೀಷ್ಮರು ಬಲ್ಲರೋ ಆ ರೀತಿ ನೀನು ಕೃಷ್ಣನನ್ನರಿತವನಲ್ಲ" ಎಂದನು.

ಆಗ ಭೀಷ್ಮರು ನುಡಿದರು:

“ಕೃಷ್ಣನು ಲೋಕ-ವೃದ್ಧತಮ ಎಂದರೆ ಎಲ್ಲರಿಗಿಂತಲೂ ಉತ್ಕೃಷ್ಟನಾದವನು. ಅದನ್ನು ಯಾರು ಆದರಿಸರೋ ಅಂತಹವರನ್ನು ಕುರಿತಾಗಿ ಯಾವುದೇ ಅನುನಯವೂ ಬೇಕಿಲ್ಲ, ಸಾಂತ್ವನವೂ ಬೇಕಿಲ್ಲ.

ಯಾವ ಕ್ಷತ್ರಿಯನೊಬ್ಬನು ಮತ್ತಿತರ ಕ್ಷತ್ರಿಯರನ್ನು ರಣದಲ್ಲಿ ಜಯಿಸಿ ವಶಪಡಿಸಿಕೊಂಡು, ನಂತರ ಅವರನ್ನು ಬಿಡುಗಡೆ ಮಾಡುವನೋ, ಅಂತಹವನು ಸೋತವರಿಗೆ ಗುರುವೆನಿಸುವನು. ಅರ್ಥಾತ್, ಪೂಜ್ಯನಾಗುವನು.

ಕೃಷ್ಣನ ತೇಜಸ್ಸಿನಿಂದ ಪರಾಭವಕ್ಕೊಳಗಾಗದ ಯಾವೊಬ್ಬ ರಾಜನೂ ಈ ಸಭೆಯಲ್ಲಿಲ್ಲವೆಂದು ನಾನು ಭಾವಿಸುತ್ತೇನೆ. ಈ ಅಚ್ಯುತನು ನಮಗಷ್ಟೇ ಅರ್ಚ್ಯತಮ, ಎಂದರೆ ಅರ್ಚನೆಗೆ ಅತ್ಯಂತ ಯೋಗ್ಯನಾದವನು - ಎಂದಷ್ಟು ಮಾತ್ರವಲ್ಲ. ತ್ರಿಲೋಕ-ವಂದ್ಯನಾದವನು, ಈ ಮಹಾಬಾಹುವಾದ ಕೃಷ್ಣ. ಅನೇಕ ಮಂದಿ ಕ್ಷತ್ರಿಯಶ್ರೇಷ್ಠರನ್ನು ಕೃಷ್ಣನು ಯುದ್ಧದಲ್ಲೇ ಗೆದ್ದಿದ್ದಾನೆ” ಎಂದನು.

ಸೂಚನೆ :30/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.