ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಆಧ್ಯಾತ್ಮಿಕಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗವಿಜ್ಞಾನಮಂದಿರಂ
ಶಿಶುಪಾಲನ ಆಕ್ರೋಶ: ರಾಜಮಂಡಲದಲ್ಲಿ ಕ್ಷೋಭೆ
ಕೃಷ್ಣನಿಗಾದ ಅಗ್ರಪೂಜೆಯನ್ನು ಸಮರ್ಥಿಸಿ ನಾರದರು ಮಾತನಾಡಲಾರಂಭಿಸಿದರು. ಆ ನಾರದರೋ ಭವಿಷ್ಯತ್ತನ್ನೂ ಭೂತವನ್ನೂ ಬಲ್ಲವರು. ಸರ್ವಸಂಶಯಗಳನ್ನೂ ಹೋಗಲಾಡಿಸಬಲ್ಲವರು. ಎಲ್ಲ ಲೋಕಗಳನ್ನೂ ಅರಿತವರು.
ಆ ಸಭೆಯಲ್ಲಿದ್ದ ಸರ್ವರ ನಡುವೆ ಈ ಮಾತುಗಳನ್ನು ಅವರು ಹೇಳಿದರು: "ಕಮಲನಯನನಾದ ಶ್ರೀಕೃಷ್ಣನನ್ನು ಯಾರು ಅರ್ಚಿಸುವುದಿಲ್ಲವೋ, ಅಂತಹವರನ್ನು ಜೀವನ್-ಮೃತರೆಂದೇ ಭಾವಿಸತಕ್ಕದ್ದು. ಅಂತಹವರು ಸಂಭಾಷಣೆಗೇ ಅರ್ಹರಲ್ಲ".
ಆ ಬಳಿಕ, ಪೂಜಾರ್ಹರಾದ ಬ್ರಾಹ್ಮಣರಲ್ಲಿ ಹಾಗೂ ಕ್ಷತ್ರಿಯರಲ್ಲಿ ಮತ್ತಾರು ಉಳಿದಿದ್ದರೋ, ಅವರುಗಳೆಲ್ಲರನ್ನೂ ಸಹದೇವನು ಅರ್ಚಿಸಿ ತನ್ನ ಆ ಕಾರ್ಯವನ್ನು ಸಮಾಪ್ತಿಗೊಳಿಸಿದನು.
ಕೃಷ್ಣನಿಗೆ ಹೀಗೆ ಪೂಜೆಯು ಸಂದಿರಲು, ಅನೇಕ-ಶತ್ರು-ವಿಜಯಿಯಾದ ಶಿಶುಪಾಲನು ಕ್ರೋಧದಿಂದ ಅತಿಯಾಗಿ ಕೆಂಪಡರಿದ ಕಣ್ಣುಗಳುಳ್ಳವನಾಗಿ, ಅಲ್ಲಿದ್ದ ನೃಪರನ್ನು ಕುರಿತು ಈ ರೀತಿಯಲ್ಲಿ ಮಾತನಾಡಿದನು:
"ರಾಜರುಗಳೇ, ನಾನಿದೋ ಸೇನಾಪತಿಯಾಗಿ ನಿಂತಿದ್ದೇನೆ. ಈಗ ಇನ್ನೇನು ಯೋಚನೆಯನ್ನು ನೀವು ಮಾಡುತ್ತಿರುವಿರಿ? ನಾವು ಯುದ್ಧ-ಸನ್ನದ್ಧರಾಗಿ ನಿಲ್ಲೋಣ. ವೃಷ್ಣಿಗಳೂ ಪಾಂಡವರೂ ಸೇರಿಕೊಂಡಿರುವ ಈ ಸ್ತೋಮವನ್ನು ಎದುರಿಸೋಣ, ಬನ್ನಿರಿ."
ಈ ರೀತಿಯಾಗಿ ಚೇದಿ-ಪುಂಗವನು, ಎಂದರೆ ಶಿಶುಪಾಲನು, ಅಲ್ಲಿದ್ದ ನೃಪ-ಸಮೂಹವನ್ನು ಉತ್ಸಾಹಗೊಳಿಸಿದನು. ಯುಧಿಷ್ಠಿರನ ಯಜ್ಞಕ್ಕೆ ಉಪಘಾತವಾಗಬೇಕು, ಎಂದರೆ ಭಂಗವಾಗಬೇಕು - ಎಂಬುದೇ ಆತನ ಆಶಯವಾಗಿತ್ತು. ಅದಕ್ಕಾಗಿ ಮಿಕ್ಕ ಅರಸರೊಂದಿಗೆ ಮಂತ್ರಾಲೋಚನೆ ಮಾಡಿದನು.
ಶಿಶುಪಾಲನು ಹೀಗೆ ಕರೆಕೊಡಲು, ಸುನೀಥ ಎಂಬ ಹೆಸರಿನವನು, ಹಾಗೂ ಕೆಲವು ರಾಜರ ಗುಂಪುಗಳು ಬಹಳವೇ ಕೋಪಗೊಂಡವರಂತೆ ಕಂಡರು. ಅವರ ವದನಗಳು ವಿಚ್ಛಾಯವಾಗಿದ್ದವು, ಹಾಗೆಂದರೆ ಛಾಯೆಯನ್ನು, ಅರ್ಥಾತ್ ಕಾಂತಿಯನ್ನು ಕಳೆದುಕೊಂಡಂತೆ ಕಂಡವು.
ಯುಧಿಷ್ಠಿರನಿಗೆ ಪಟ್ಟಾಭಿಷೇಕ ಹಾಗೂ ಶ್ರಿಕೃಷ್ಣನಿಗೆ ಅಗ್ರಪೂಜೆ - ಇವಾಗದಂತೆ ಮಾಡಬೇಕು - ಎಂಬುದಾಗಿ ಅವರೆಲ್ಲರೂ ಮಾತನಾಡಿಕೊಂಡರು.
ಈ ನಿಷ್ಕರ್ಷ-ನಿಶ್ಚಯಗಳಿಂದಾಗಿ ರಾಜರುಗಳೆಲ್ಲರ ಕ್ರೋಧವು ಉಕ್ಕಿತು. ಅವರುಗಳಿಗೆ ಇಷ್ಟರ ಹೊತ್ತಿಗೆ ಕೆರಳಿದಂತಾಗಿತ್ತು, ಹಾಗೂ ತಮ್ಮ ಬಲದ ಬಗ್ಗೆಯೇ ಒಂದು ಆತ್ಮವಿಶ್ವಾಸವೂ ಉಂಟಾಗಿತ್ತು. ಅವರೊಳಗೇ ಕೆಲ ಸ್ನೇಹಿತರು ಅವರನ್ನು ತಡೆಯುತ್ತಿದ್ದರು; ಹಾಗಿದ್ದೂ ಅವರ ಶರೀರವು ಕಂಗೊಳಿಸುತ್ತಿತ್ತು - ಮಾಂಸದ ಆಸೆಯನ್ನು ತೋರಿಸಿ, ಕೊಡದೆ ವಂಚನೆಯನ್ನೇನಾದರೂ ಮಾಡಿದರೆ ಗರ್ಜಿಸುವ ಸಿಂಹಗಳ ಶರೀರವು ಹೇಗೆ ಕೋಪಾವೇಶದಿಂದ ಹೊಳೆಯುವುದೋ ಹಾಗೆ. ಮಿತಿಕಾಣದ ಸೈನ್ಯಗಳೂ, ರಾಜರ ಸಾಗರವೂ ವರ್ತಿಸುತ್ತಿದ್ದ ಬಗೆಯನ್ನು ಕಂಡ ಕೃಷ್ಣನು ಯುದ್ಧಕ್ಕೇ ಸನ್ನಾಹವೇರ್ಪಡುತ್ತಿದೆಯೆಂದು ಅರಿತುಕೊಂಡನು.
ಸಾಗರದ ಹಾಗಿದ್ದ ಆ ರಾಜಮಂಡಲವನ್ನು ಯುಧಿಷ್ಠಿರನು ಕಂಡನು. ಪ್ರಲಯಕಾಲದಲ್ಲಿ ಸಂವರ್ತ-ವಾತವೆಂಬ ಮಹಾಬಿರುಗಾಳಿಯು ಬೀಸುವುದಲ್ಲವೇ? ಆಗ ಸಮುದ್ರವೆಲ್ಲ ಮಹಾಕ್ಷೋಭೆಗೊಳಗಾಗುವುದು. ಹಾಗೆ ಕ್ಷೋಭೆಗೊಂಡಿತ್ತು, ಆ ರಾಜಸಮೂಹ.
ಭೀಷ್ಮರ ಬಳಿ ಹೋಗಿ ಯುಧಿಷ್ಠಿರನು ಈ ಕುರಿತು ಮಾತನಾಡಿದನು. ಅವರಾದರೂ ಮತಿಸಂಪನ್ನರಾದವರಲ್ಲಿ ಮುಖ್ಯರಾದವರು, ವೃದ್ಧರು, ಕುರುಕುಲ-ಪಿತಾಮಹರೇ ಆದವರು. ಬೃಹತ್ತಾದ ತೇಜಸ್ಸುಳ್ಳವನೂ ಶತ್ರುಸಂಹಾರಕನೂ ಆದ ಇಂದ್ರನು, ಬೃಹಸ್ಪತಿಯ ಬಳಿ ಹೋಗಿ ಮಾತನಾಡುವಂತೆ ಇದು ತೋರುತ್ತಿತ್ತು.
ಯುಧಿಷ್ಠಿರನು ಹೀಗೆಂದನು: "ಭೀಷ್ಮರೇ, ಈ ದೊಡ್ಡ ರಾಜಸಾಗರವು ರೋಷದಿಂದ ಚಂಚಲವಾಗಿದೆ. ಹೀಗಿರುವಲ್ಲಿ ಯಾವ ಉಪಾಯವನ್ನು ನಾವು ಮಾಡಬೇಕು? - ಎಂಬುದನ್ನು ತಾವು ಸೂಚಿಸಬೇಕು, ಪಿತಾಮಹರೇ. ಹೇಗೆ ಮಾಡಿದರೆ ಯಜ್ಞಕ್ಕೆ ವಿಘ್ನವಾಗದು, ಆದರೆ ಪ್ರಜೆಗಳಿಗೆ ಹಿತವಾಗುವುದು, ಹಾಗೂ ಎಲ್ಲೆಡೆ ಶಾಂತಿಯೂರುವುದು - ಎಂಬುದನ್ನು ತಿಳಿಸಿಕೊಡಿ" ಎಂದನು.