Sunday, September 6, 2026

ಪ್ರಶ್ನೋತ್ತರ ರತ್ನಮಾಲಿಕೆ 82 (Prasnottara Ratnamalike 82)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ 82- ಯಾವುದು ರಕ್ಷಿಸಿಕೊಳ್ಳಬೇಕಾದುದು?

ಉತ್ತರ- ಕೀರ್ತಿ, ಪತಿವ್ರತಾ, ತನ್ನ ಬುದ್ಧಿ.

ಹೃದಯ ಬಹಳ ಬೆಲೆಬಾಳುವಂತಹದ್ದು. ಏಕೆಂದರೆ ಕಳೆದುಕೊಂಡರೆ ಮತ್ತೆ ಪಡೆಯಲಾಗದು. ಹಾಳಾದರೆ ಜೀವಕ್ಕೇ ಅಪಾಯ ಬರಬಹುದು.  ಹಾಗಾಗಿ ಅದನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಲೇಬೇಕು. ಅಂತೆಯೇ ಯಾವುದು ರಕ್ಷಿಸಿಕೊಳ್ಳಬೇಕಾದುದೋ ಅದು ಅತ್ಯಂತ ಮೌಲ್ಯಯುತವಾಗಿರಲೇಬೇಕು. ಅಥವಾ ಅದು ಬೇಗ ಹಾಳಾಗುವಂಥದ್ದಾಗಿರಬೇಕು. ಈ ಎರಡು ಗುಣಗಳಿಂದ ಕೂಡಿರುವುದನ್ನು ನಾವು ರಕ್ಷಿಸಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯ. ಯಾವುದು ಬೆಲೆ ಬಾಳುತ್ತದೆಯೋ ಅದನ್ನು ಕಳೆದುಕೊಂಡರೆ ಅದು ನಮಗೆ ನಷ್ಟವನ್ನು ಉಂಟುಮಾಡುತ್ತದೆ. ಮತ್ತೆ ಅದನ್ನು ಪಡೆಯಲು ಅಷ್ಟೇ ಬೆಲೆಯನ್ನು ತೆರಬೇಕಾಗುತ್ತದೆ. ಕೆಲವೊಮ್ಮೆ ಆ ವಸ್ತು ಮತ್ತೊಮ್ಮೆ ಸಿಗದೆಯೂ ಇರಬಹುದು. ಹಾಗಾಗಿ ಅದು ರಕ್ಷಿಸಿಕೊಳ್ಳಬೇಕಾದುದು. ಇನ್ನು ಕೆಲವೊಂದು ಪದಾರ್ಥ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಒಮ್ಮೆ ಹಾಳಾದರೆ ಮತ್ತೆ ಪಡೆಯಲು ಆಗದೇ ಇರಬಹುದು ಅಥವಾ ಅದನ್ನು ಪಡೆಯಲು ಇನ್ನೆಷ್ಟು ಪರಿಶ್ರಮವನ್ನು ಹಾಕಬೇಕಾಗುತ್ತದೆಯೋ? ಅಂತಹ ಉತ್ಕೃಷ್ಟವಾದ ಪದಾರ್ಥ ಆಗಿರಬಹುದು. ಅಂತಹ ರಕ್ಷಿಸಿಕೊಳ್ಳಬೇಕಾದ ವಿಷಯ ಯಾವುದು? ಎಂಬುದು ಈ ಪ್ರಶ್ನೋತ್ತರದಲ್ಲಿ ಇದೆ.


ಕೀರ್ತಿ, ಪತಿವ್ರತೆ ಮತ್ತು ತಮ್ಮ ಬುದ್ಧಿ ಈ ಮೂರೂ ಯಾವಾಗಲೂ ರಕ್ಷಿಸಿಕೊಳ್ಳಬೇಕಾದವು. ಕೀರ್ತಿಯನ್ನು ಪಡೆಯುವುದು ಅತ್ಯಂತ ಕಷ್ಟಸಾಧ್ಯ. ಅದಕ್ಕೆ ಬಹಳ ಪರಿಶ್ರಮ ಬೇಕು. ಉತ್ಕೃಷ್ಟನಾದ ವ್ಯಕ್ತಿಯಲ್ಲಿರುವ ಅನೇಕ ಒಳ್ಳೆಯ ಗುಣಗಳಿಂದ ಆ ವ್ಯಕ್ತಿ ಕೀರ್ತಿಯನ್ನು ಸಂಪಾದನೆ ಮಾಡುತ್ತಾನೆ. ಉದಾಹರಣೆಗೆ ದಾನವನ್ನು ಮಾಡುವುದರಿಂದ ಅವನು ದಾನಶೂರ ಎಂದೂ, ವಿದ್ಯೆಯ ಸಂಪಾದನೆಯಿಂದ ಒಳ್ಳೆಯ ವಿದ್ಯಾವಂತ ಎಂದೂ, ಬೇರೆಯವರಿಗೆ ಉಪಕಾರ ಮಾಡುವುದರಿಂದ ಪರೋಪಕಾರಿ ಎಂಬಿತ್ಯಾದಿ ಅನೇಕ ಒಳ್ಳೆಯ ಕೆಲಸವನ್ನು ಮಾಡಿದಾಗ ಆ ವ್ಯಕ್ತಿಗೆ ಕೀರ್ತಿ ಬರುತ್ತದೆ . ಕೀರ್ತಿಯನ್ನು ಸಂಪಾದನೆ ಮಾಡುವುದು ಬಹಳ ಕಷ್ಟ. ಅಪಕೀರ್ತಿ ಬರುವುದು ತುಂಬಾ ಸುಲಭ. ಅದಕ್ಕೆ ತುಂಬಾ ಕಾಲದ ಪರಿಶ್ರಮದ ಅವಶ್ಯಕತೆ ಇಲ್ಲ. ಹಾಗಾಗಿ ಬಂದ ಕೀರ್ತಿಯನ್ನು ರಕ್ಷಿಸಿಕೊಳ್ಳಬೇಕು.

ಪತಿವ್ರತೆ ಎಂದರೆ ತನ್ನ ಪತಿಯನ್ನು ಮಾತ್ರ ಮನಸ್ಸಿನಲ್ಲಿ ಭಾವಿಸುವವಳು. ಯಾವ ಕಾರಣಕ್ಕೂ, ಯಾವ ಕಾಲದಲ್ಲೂ ತನ್ನ ಮನಸ್ಸಿನಲ್ಲಿ ಇನ್ನಾವುದೇ ಪುರುಷನಿಗೆ ಸ್ಥಾನವನ್ನು ಕೊಡದಿರುವವಳು. ಪತಿಯ ಸರ್ವವಿಧವಾದ ಕಾರ್ಯದಲ್ಲೂ ಸಹಧರ್ಮಣಿಯಾಗಿ ಇರುವವಳು. ಹೀಗೆ ಇರಬೇಕಾದರೆ ಅದು ಅತ್ಯಂತ ಕಷ್ಟ ಸಾಧ್ಯ. ಇದೊಂದು ತಪಸ್ಸು. ಅದೇ ಒಬ್ಬ ವ್ಯಭಿಚಾರಿಣೀ ಎಂಬ ಹೆಸರನ್ನು ಪಡೆಯಬೇಕಾದರೆ ಅದಕ್ಕೆ ತುಂಬಾ ಶ್ರಮ ಬೇಕಿಲ್ಲ. ಆದ್ದರಿಂದ ಪತಿವ್ರತೆಯೆಂಬ ಪಡೆದ ಹೆಸರನ್ನು ಉಳಿಸಿಕೊಳ್ಳಲೂ ತಪಸ್ಸನ್ನು ಮಾಡಬೇಕು. ಆದ್ದರಿಂದ ಪಡೆದ ಆ ಹೆಸರನ್ನು ಕಾಪಿಟ್ಟುಕೊಳ್ಳಬೇಕು.


 ಬುದ್ಧಿಯು ಶುದ್ಧವಾದ ಕಲ್ಯಾಣಿಯಂತೆ. ಅದನ್ನು ಹಾಗೆಯೇ ಇಟ್ಟುಕೊಳ್ಳುವುದು ತುಂಬಾ ಕಷ್ಟ ಸಾಧ್ಯ. ಹೇಗೆ ಶುದ್ಧವಾದ ಕಲ್ಯಾಣಿಯನ್ನು ಕೆಡಿಸಿಕೊಳ್ಳಲು ಕೆಲವೇ ಕ್ಷಣಗಳು ಸಾಕೋ, ಅಂತಯೇ ಬುದ್ಧಿಯನ್ನು ಕಲುಷಿತಗೊಳಿಸಿಕೊಳ್ಳುವುದೂ ಕೂಡ ಅಷ್ಟೇನು ಶ್ರಮದಾಯಕವಲ್ಲ. ಆದ್ದರಿಂದ ಕೀರ್ತಿ, ಪತಿವ್ರತೆ ಮತ್ತು ಬುದ್ಧಿ ಈ ಮೂರು ಸಂಪಾದನೆಮಾಡಿದ ಅತ್ಯಮೂಲ್ಯವಾದ ಸಂಪತ್ತುಗಳು. ಅವುಗಳನ್ನು ಸಂಪಾದಿಸಲು ಪಟ್ಟ ಶ್ರಮವನ್ನು ಕೆಡಿಸಿಕೊಳ್ಳಲು ಮಾಡಬೇಕಿಲ್ಲ. ಆದ್ದರಿಂದ ಕೆಡಿಸಿಕೊಳ್ಳದೆ ಅದನ್ನು ಅಂತಯೇ ಇಟ್ಟುಕೊಳ್ಳಲು ನಾವು ಪರಿಶ್ರಮವನ್ನು ಪಡಬೇಕಾಗುತ್ತದೆ ಎಂದು ಈ ಪ್ರಶ್ನೋತ್ತರ ಸಾರುತ್ತದೆ.


ಸೂಚನೆ :  6/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.