ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಯಾರಿಗೆ ಅಗ್ರಪೂಜೆ? ಭೀಷ್ಮರ ಸಲಹೆ
ರಾಜಸೂಯವು ಮುಗಿದಿದೆ. ಸಾಧಾರಣವಾಗಿಯಷ್ಟೆ ತೋರುವ ಕೃಷ್ಣನ ವಿಷಯದಲ್ಲಿ ನಾರದರು ಅಚ್ಚರಿಪಡುತ್ತಿದ್ದಾರೆ:
ಇಂದ್ರಾದಿದೇವತೆಗಳೂ ಸಹ ಯಾವನ ಬಾಹುಬಲವನ್ನು ಉಪಾಸಿಸುತ್ತಾರೋ ಅಂತಹ ಶತ್ರು-ಮರ್ದಕನಾದ ಹರಿಯು ಮನುಷ್ಯನೊಬ್ಬನಂತೆ ಇಲ್ಲಿ ಕುಳಿತಿದ್ದಾನೆ. ಏನಿದಾಶ್ಚರ್ಯ! ಸ್ವಯಂಭುವಾದ ಈ ಮಹದ್ಭೂತವೆನಿಸುವ ವಿಷ್ಣುವು ಈ ಪರಿಯಲ್ಲಿ ಬಲ-ಸಮೃದ್ಧವಾದ ಕ್ಷತ್ರಿಯ-ಸಮೂಹವನ್ನು ತಾನೇ ನಿಗ್ರಹಿಸುವವನಿರುವನಲ್ಲ!”
ಸ್ವತಃ ಧರ್ಮಜ್ಞರಲ್ಲಿ ಶ್ರೇಷ್ಠರಾದ ನಾರದರು ಹರಿಧ್ಯಾನವನ್ನು ಮಾಡುತ್ತಾ ಈ ಪರಿಯಾಗಿ ಚಿಂತಿಸುತ್ತಿದ್ದರು, ಧರ್ಮರಾಜನ ಈ ಮಹಾಯಜ್ಞದ ಸಂದರ್ಭದಲ್ಲಿ.
ಅಷ್ಟರಲ್ಲಿ ಭೀಷ್ಮರು ಧರ್ಮರಾಜನಾದ ಯುಧಿಷ್ಠಿರನಿಗೆ ಈ ರೀತಿಯಾಗಿ ಹೇಳಿದರು - "ರಾಜನೇ, ಇಲ್ಲಿ ನೆರೆದಿರುವ ರಾಜರುಗಳಿಗೆ ಯಥೋಚಿತವಾದ ಅರ್ಹಣವನ್ನು, ಎಂದರೆ ಸತ್ಕಾರವನ್ನು, ಮಾಡಪ್ಪಾ - ಎಂದು.
ಆರು ಮಂದಿಯನ್ನು ಅರ್ಘ್ಯಾರ್ಹರೆನ್ನುತ್ತಾರೆ. ಅರ್ಘ್ಯಾರ್ಹರೆಂದರೆ ಅರ್ಘ್ಯಕ್ಕೆ ಯೋಗ್ಯರು. ಅವರು ಯಾರೆಂದರೆ: ಆಚಾರ್ಯ, ಋತ್ವಿಕ್, ಸಂಬಂಧಿ, ಸ್ನಾತಕ, ಪ್ರಿಯಮಿತ್ರ ಹಾಗೂ ರಾಜ. ಇವರುಗಳು ಒಂದು ವರ್ಷ ಕಳೆದ ನಂತರ ಬಂದವರಾದಲ್ಲಿ, ಇವರಿಗೆ ಅರ್ಘ್ಯವನ್ನು ತರತಕ್ಕದ್ದು - ಎಂಬುದಾಗಿ ಹಿರಿಯರ ಮಾತಿದೆ.
“ಇದೋ ಇಲ್ಲಿರುವ ಅರಸರೂ ದೀರ್ಘಸಮಯದ ಬಳಿಕವೇ ಇಲ್ಲಿಗೆ ಬಂದಿರುವರು. ರಾಜನೇ, ಇಲ್ಲಿರುವ ಒಬ್ಬೊಬ್ಬರಿಗೂ ಅರ್ಘ್ಯವನ್ನು ನೀಡುವುದಾಗಲಿ. ಮತ್ತು ಅವರಲ್ಲಿ ವರಿಷ್ಠರಾದವರಿಗೆ ಎಂದರೆ ಅತ್ಯಂತ ಶ್ರೇಷ್ಠರಾದವರಿಗೆ ಹಾಗೂ ಸಮರ್ಥರೆನಿಸಿಕೊಳ್ಳುವವರಿಗೆ ಮೊದಲು ಅರ್ಘ್ಯವನ್ನು ನೀಡೋಣವಾಗಲಿ" ಎಂದರು.
ಭೀಷ್ಮರು ಹಾಗೆ ಹೇಳಲು, ಯುಧಿಷ್ಠಿರನು ಅವರನ್ನೇ ಕೇಳಿದನು: "ಇಲ್ಲಿ ನೆರೆದಿರುವ ಅರಸರಲ್ಲಿ ಯಾರಿಗೆ ಪ್ರಥಮವಾದ ಅರ್ಘ್ಯವನ್ನು ಸಲ್ಲಿಸಬಹುದು? - ಎಂಬುದನ್ನು ತಾವೇ ಹೇಳಬೇಕು".
ಮಹಾಪರಾಕ್ರಮಿಯೂ ಶಂತನುಪುತ್ರನೂ ಆದ ಭೀಷ್ಮರು, "ಈ ಭೂಮಂಡಲದಲ್ಲಿ ಪೂಜೆಗೆ ಅತ್ಯಂತ ಯೋಗ್ಯನಾದವನೆಂದರೆ ಶ್ರೀಕೃಷ್ಣನೇ ಸರಿ" ಎಂಬುದಾಗಿ ತೀರ್ಮಾನಿಸಿದರು.
ತೇಜಸ್ಸು, ಬಲ, ಪರಾಕ್ರಮ - ಈ ವಿಷಯಗಳಲ್ಲಿ ಇಲ್ಲಿ ನೆರೆದಿರುವವರೆಲ್ಲರ ನಡುವೆ ಈತನೇ ಬೆಳಗುವನು - ಜ್ಯೋತಿಸ್ಸುಗಳ ನಡುವೆ, ಎಂದರೆ ಗ್ರಹ-ನಕ್ಷತ್ರಗಳ ನಡುವೆ, ಹೇಗೆ ಸೂರ್ಯನು ಪ್ರಕಾಶಿಸುವನೋ ಹಾಗೆ. ಅಂಧಕಾರವಿರುವೆಡೆ ಸೂರ್ಯನು ಬಂದರೆ ಹೇಗೋ ಹಾಗೆ, ಗಾಳಿಯೇ ಆಡದೆಡೆ ವಾಯುವು ಬಂದರೆ ಹೇಗೋ ಹಾಗೆಯೇ, ಶ್ರೀಕೃಷ್ಣನ ಆಗಮನದಿಂದ ಸಭೆಗೆ ಬೆಳಕಾಗಿದೆ, ಜೊತೆಗೇ ಆಹ್ಲಾದವಾಗಿದೆ" ಎಂದರು.
ಹೀಗೆ ಭೀಷ್ಮರು ಅನುಜ್ಞೆಯನ್ನೀಯುತ್ತಲೇ, ಪ್ರತಾಪಶಾಲಿಯಾದ ಸಹದೇವನು, ಶ್ರೀಕೃಷ್ಣನಿಗೆಂದು ಉತ್ತಮವಾದ ಅರ್ಘ್ಯವನ್ನು ತಂದನು; ಮತ್ತು ಕೃಷ್ಣನಾದರೂ ಸಹ ಶಾಸ್ತ್ರಪ್ರೋಕ್ತವಾದ ಕರ್ಮಗಳಿಗನುಸಾರವಾಗಿ ಆ ಪೂಜೆಯನ್ನು ಸ್ವೀಕರಿಸಿದನು.
ಆದರೆ ಶಿಶುಪಾಲನಿಗೆ ಮಾತ್ರ, ವಾಸುದೇವನಿಗೆ ಸಂದ ಆ ಪೂಜೆಯು ಸಹನೆಯಾಗಲಿಲ್ಲ. ಆತನಂತೂ ಭೀಷ್ಮನನ್ನೂ ಧರ್ಮರಾಜನನ್ನೂ ಸಭೆಯಲ್ಲೇ ನಿಂದಿಸಿದನು. ಚೇದಿರಾಜನಾದ ಆತನು ವಾಸುದೇವನ ವಿಷಯದಲ್ಲಿ ತನ್ನ ಆಕ್ಷೇಪಗಳನ್ನು ಎತ್ತಿದನು. ಹೀಗೆ:
“ಮಹಾತ್ಮರಾದ ಭೂಪತಿಗಳು ಇಲ್ಲಿರುವಾಗ, ತಾನೇನೋ ರಾಜನೆಂಬಂತೆ ಇರುವ, ವೃಷ್ಣಿವಂಶದ ಈ ಕೃಷ್ಣನು, ರಾಜೋಚಿತವಾದ ಸತ್ಕಾರಗಳಿಗೆ ಅರ್ಹನಾಗಲಾರನು. ಮಹಾತ್ಮರಾದ ಪಾಂಡವರಿಗೆ ಈ ನಡೆಯು ಯುಕ್ತವಾಗದು. ಅಯ್ಯಾ ಪಾಂಡುಕುಮಾರನೇ, ಅದೇನೋ ಕಾಮನೆಯಿಂದ ನೀನು ಪುಂಡರೀಕಾಕ್ಷನಾದ ಕೃಷ್ಣನನ್ನು ಪೂಜಿಸುತ್ತಿರುವೆ.
ಪಾಂಡುಕುಮಾರರೇ, ನೀವಿನ್ನೂ ಬಾಲಕರು. ಧರ್ಮವು ಸೂಕ್ಷ್ಮವಾದುದು, ನೀವದನ್ನು ಅರಿತಿಲ್ಲ. ಮುದುಕನಾದ ಈ ಭೀಷ್ಮನಿಗೆ ಸ್ಮೃತಿ ಜಾರಿದೆ. ಅವನ ನೋಟವೂ ಅಲ್ಪವಾಗಿದೆ.