ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೭೭. ಮನುಷ್ಯನು ಯಾವುದನ್ನು ಸಂಪಾದಿಸಬೇಕು?
ಉತ್ತರ- ವಿದ್ಯಾ, ಧನ, ಬಲ, ಕೀರ್ತಿ ಮತ್ತು ಪುಣ್ಯ.
ಮನುಷ್ಯನು ಅತ್ಯಂತ ಮುಖ್ಯವಾಗಿ ಬಯಸಬೇಕಾದದ್ದು ಅಥವಾ ಸಂಪಾದಿಸಬೇಕಾದದ್ದು ವಿದ್ಯೆ, ಧನ, ಬಲ, ಕೀರ್ತಿ ಮತ್ತು ಪುಣ್ಯ. ಇವುಗಳನ್ನು ಸಂಪಾದಿಸಿದ್ದರಿಂದ ಆಗುವ ಲಾಭ ಅತ್ಯಂತ ಹಿರಿದಾದದ್ದು. ತನ್ನ ಜೀವನವನ್ನು ಸುಂದರವಾಗಿಸಲು ಮತ್ತು ಸಾರ್ಥಕವಾಗಿಸಲು ಇವು ಅತ್ಯಂತ ಮುಖ್ಯ. ಮನುಷ್ಯನ ಜೀವನದ ಮುಖ್ಯ ಉದ್ದೇಶವೇ ಪುರುಷಾರ್ಥಗಳನ್ನು ಸಾಧಿಸುವುದು ಎಂಬುದನ್ನು ಅರಿತಾಗ ಅದಕ್ಕೆ ಬೇಕಾದ ವಿದ್ಯೆ ಎಂದರೆ ಯಾವುದು? ಎಂಬುದು ಅರ್ಥವಾಗುತ್ತದೆ. ಇದಕ್ಕಾಗಿ ವಿದ್ಯೆ ಅತ್ಯಂತ ಮುಖ್ಯವಾಗಿ ಬೇಕು. ಶ್ರೀರಂಗ ಮಹಾಗುರುಗಳು ಹೇಳುವಂತೆ “ವಿದ್ಯೆ ಎಂದರೆ ‘ವಿದ- ಜ್ಞಾನೇ, ಯಾ-ಪ್ರಾಪಣೇ’ ಎಂಬಂತೆ ಯಾವುದು ಜ್ಞಾನವನ್ನು ಅಂದರೆ ಭಗವಂತನನ್ನು ಪ್ರಾಪ್ತಿಮಾಡಿಸುತ್ತದೆಯೋ ಅದನ್ನು ವಿದ್ಯೆ ಎಂಬುದಾಗಿ ಕರೆಯಬೇಕು” ಎಂದು. ಇಂದಿನ ವಿದ್ಯೆಯೆಂಬುದು ಕೇವಲ ನಮ್ಮ ಭೌತಿಕ ಜೀವನವನ್ನು ನಡೆಸಲು ಮಾತ್ರ ಸಾಧನವಾಗಿದೆ. ಆದರೆ ನಮ್ಮ ಭಾರತೀಯ ಪರಂಪರೆಯು ಯಾವುದನ್ನು ವಿದ್ಯೆ ಎಂಬುದಾಗಿ ಕರೆದಿದೆಯೋ ಅದು ಕೇವಲ ಭೌತಿಕ ಜೀವನಕ್ಕೆ ಅನುಕೂಲ ಮಾಡಿಕೊಡುವುದಲ್ಲದೆ ದೈವಿಕ ಮತ್ತು ಆಧ್ಯಾತ್ಮಿಕ ಜೀವನಕ್ಕೂ ಅನುಕೂಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಮಾನವ ಈ ವಿದ್ಯೆಯನ್ನು ಸಂಪಾದಿಸುವುದು ಅತ್ಯಂತ ಮುಖ್ಯ. ವಿದ್ಯೆಯ ಬಲದಿಂದ ಬರುವ ಧನದಿಂದ ಧರ್ಮವು ಮತ್ತು ಪುಣ್ಯವೂ ಸಂಪಾದನೆಯಾಗುತ್ತದೆ. ಅಂತಹ ಧನವನ್ನು ಸಂಪಾದನೆ ಮಾಡುವುದು ಅತ್ಯಂತ ಅವಶ್ಯಕ. ಅದು ನಾಲ್ಕು ಪುರುಷಾರ್ಥಗಳಲ್ಲಿ ಒಂದು ಎಂಬುದಾಗಿ ಹೇಳಲಾಗಿದೆ. ಅಂತಹ ಅರ್ಥ ಸಂಪಾದನೆಯು ಜೀವನವನ್ನು ಸುಂದರವಾಗಿಸಲು ಅತ್ಯಂತ ಮುಖ್ಯವಾದದು. ಮಹಾಭಾರತದ “ಅರ್ಥಾಃ ಬಹಿಶ್ಚರಾಃ ಪ್ರಾಣಾಃ” ಎಂಬ ಮಾತು ಧನದ ಸಂಪಾದನೆಯನ್ನು ಪುಷ್ಟೀಕರಿಸುತ್ತದೆ. ಒಬ್ಬ ಬದುಕಬೇಕಾದರೆ ಹೇಗೆ ಶರೀರದ ಒಳಗಿನ ಪ್ರಾಣ ಎಷ್ಟು ಮುಖ್ಯವೋ, ಅಂತಯೇ ಬಹಿರಂಗದ ಪ್ರಾಣ ರೂಪವಾದ ಧನವೂ ಅಷ್ಟೇ ಮುಖ್ಯ ಎಂದು ಧನದ ಮಹತ್ವ ಅರಿವಾಗುತ್ತದೆ. ಹಾಗಾಗಿ ಧನ ಸಂಪಾದನೆಯು ಧರ್ಮದ ಚೌಕಟ್ಟಿನಲ್ಲಿ ಇರಬೇಕು.
ಒಬ್ಬ ಬಲಿಷ್ಠನಾದರೆ ಮಾತ್ರ ಈ ಪ್ರಪಂಚದಲ್ಲಿ ಜೀವಿಸಲು ಸಾಧ್ಯ. ಈ ಪ್ರಪಂಚದ ಸಹಜ ನಡೆಯೇ ಹಾಗೆ, ಬಲಿಷ್ಠವಾದುದು ಬದುಕುತ್ತದೆ; ದುರ್ಬಲವಾದುದು ಅಳಿಯುತ್ತದೆ. ಹಾಗಾಗಿ ನಾವು ಬದುಕಬೇಕಾದರೆ ಬಲವನ್ನು ಸಂಪಾದನೆ ಮಾಡುವುದು ಅತ್ಯಂತ ಅಗತ್ಯ. ಹೀಗೆ ವಿದ್ಯೆ, ಧನ ಮತ್ತು ಬಲ ಇವುಗಳಿಂದ ಬರುವ ಯಾವ ಕೀರ್ತಿ ಅಥವಾ ಪುಣ್ಯ ಇದೆಯೋ ಅದಕ್ಕೂ ಅಷ್ಟೇ ಬೆಲೆ ಉಂಟು. ಅದು ಹೆಚ್ಚು ಕಾಲ ಉಳಿಯುತ್ತದೆ. ನಾವು ಅಳಿದರೂ, ಕೀರ್ತಿಯು ನಮ್ಮನ್ನು ಉಳಿಸುತ್ತದೆ. ಅಂತಹ ಕೀರ್ತಿಯನ್ನು ಸಂಪಾದನೆ ಮಾಡುವುದು ಅತ್ಯಂತ ಅಗತ್ಯ. ನಾವು ಮಡಿದ ಮೇಲೂ ನಮ್ಮನ್ನು ಸುಂದರವಾಗಿಸುವುದು ಎಂದರೆ ಅದೇ ಪುಣ್ಯ ಅಥವಾ ಧರ್ಮ. ನಾವು ಬದುಕಿದಾಗ ಯಾವ ಒಳ್ಳೆಯ ಕಾರ್ಯವನ್ನು ಮಾಡುತ್ತೇವೋ, ಅದರಿಂದ ನಮಗೆ ಪುಣ್ಯ ಸಂಪಾದನೆ ಆಗುತ್ತದೆ. ಆ ಪುಣ್ಯ ಸಂಪಾದನೆಯ ಕಾರಣದಿಂದಲೇ ನಾವು ಪಡೆದ ಜನುಮದಲ್ಲೇ ನಮ್ಮ ಜೀವನದ ಸಾರ್ಥಕವನ್ನು ಕಾಣಬಹುದು ಅಥವಾ ಮತ್ತೂ ಉತ್ಕೃಷ್ಟ ಜನ್ಮವನ್ನು ಪಡೆದು ನಮ್ಮ ಪುರುಷಾರ್ಥವನ್ನು ಪೂರ್ಣಮಾಡಿಕೊಳ್ಳಲು ಅವಕಾಶವಿದೆ. ಹಾಗಾಗಿ ಪ್ರತಿಯೊಬ್ಬರೂ ಬಯಸಬೇಕಾದದ್ದು ಇಂತಹ ಪುಣ್ಯವನ್ನೇ. ಇಲ್ಲಿ ಹೇಳಿದ ಎಲ್ಲವೂ ಧರ್ಮಮಯ ಜೀವನಕ್ಕೆ ಅನುಕೂಲವಾದ ಸಾಮಗ್ರಿಗಳು. ಆದ್ದರಿಂದ ಇವುಗಳನ್ನು ಮಾನವನಾದವನು ಸಂಪಾದನೆ ಮಾಡಲೇಬೇಕು.
ಸೂಚನೆ : 9/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.