Monday, July 13, 2026

ಪ್ರಶ್ನೋತ್ತರ ರತ್ನಮಾಲಿಕೆ 74 (Prasnottara Ratnamalike 74)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ - ೭೪. ಪಂಗು ಎಂದರೆ ಯಾರು?

ಉತ್ತರ- ವೃದ್ಧನಾದರೂ ಕಾಶೀ ಮೊದಲಾದ ತೀರ್ಥಯಾತ್ರೆಗೆ ಹೋಗದವ ಅಥವಾ ಸಂತರ ಸಂಗವನ್ನು ಮಾಡದವ.

ಪಂಗು ಎಂದರೆ ಕಾಲಿಲ್ಲದವ, ಹೇಳವ ಎಂದರ್ಥ. ಕಾಲು ಇರುವುದೇ ಗತಿಗಾಗಿ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಲು. ಅಂದರೆ ನಮ್ಮ ಜೀವನ ವ್ಯಾಪಾರಕ್ಕೆ ಬೇಕಾದ ಅನುಕೂಲತೆಗಳನ್ನು ಪಡೆಯಲು ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಬೇಕಾಗುತ್ತದೆ. ಆಗ ಇರುವ ಅತ್ಯಂತ ಮುಖ್ಯವಾದ ಸಾಧನವೇ ಕಾಲು. ಇದು ನಮಗೆ ಬೇಕಾದದ್ದನ್ನು ಒದಗಿಸಲು ಸಹಕರಿಸುತ್ತದೆ. ಇದರಿಂದ ನಮಗೆ ಜೀವನ ಪರಿಪೂರ್ಣವಾದಂತೆ ಆಗುತ್ತದೆ. ಹಾಗಾಗಿ ಕಾಲು ಅತ್ಯಂತ ಪ್ರಧಾನವಾದ ಅಂಗ ಎಂಬುದಾಗಿ ಪರಿಗಣಿತವಾಗಿದೆ.

ಇಲ್ಲಿ ಬರುವ ಪ್ರಶ್ನೆ ಎಂದರೆ ಕಾಲಿದ್ದರೂ ಅವನನ್ನು ಪಂಗು ಎಂದು ಕರೆಯಲು ಕಾರಣ ಏನು? ಎಂಬುದಾಗಿ. ಯಾವಾಗ ಇರುವ ಕಾಲನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಆ ಕಾಲು ಇದ್ದರೂ ಇಲ್ಲದಂತೆಯೇ ಎಂಬುದು ತಾತ್ಪರ್ಯ. ಹೇಳುವ ವಿಷಯ ಹೀಗಿದೆ. ಒಬ್ಬ ಮಾನವ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಆಗ ಆ ಜೀವನಪಥಕ್ಕೆ ಬೇಕಾದ ಪಾಥೇಯವನ್ನು ಸಿದ್ಧಪಡಿಸಿಕೊಳ್ಳಬೇಕು. ಅದಕ್ಕೆ ಬೇಕು ಯಾತ್ರೆ ಅಥವಾ ತೀರ್ಥಯಾತ್ರೆ. “ಕಾಶೀಗೆ ಹೋಗಬೇಕು, ರಾಮೇಶ್ವರ ನೋಡಬೇಕು, ವಿಶ್ವನಾಥನ ದರುಶನ ಮಾಡ್ಬೇಕು” ಎಂದು ನಮ್ಮ ಸಂಪ್ರದಾಯದಲ್ಲಿ ಈ ತೀರ್ಥಯಾತ್ರೆಗೆ ವಿಶೇಷತೆ ಇದೆ. ಏಕೆಂದರೆ ಅದು ನಮ್ಮ ಜೀವನ ಯಾತ್ರೆಗೆ ಅನುಕೂಲಿಸುವ ವಿಶೇಷ ತಾಣಗಳು. ಅವುಗಳಿಂದ ನಮ್ಮ ಜೀವನಕ್ಕೆ ಬೇಕಾದ ಬುತ್ತಿಯನ್ನು ಕಟ್ಟಿಕೊಳ್ಳಲು ಸಾಧ್ಯ. ಆದುದರಿಂದ ಜೀವನ ಯಾತ್ರೆಯಲ್ಲಿ ತೀರ್ಥಯಾತ್ರೆಗೆ ಅಷ್ಟೊಂದು ವಿಶೇಷತೆಯನ್ನು ಕೊಟ್ಟಿದ್ದು ಕಂಡುಬರುತ್ತದೆ. 


ಯಾವುದು ನಮ್ಮನ್ನು ಪವಿತ್ರ ಗೊಳಿಸುತ್ತದೆಯೋ ಅದನ್ನು ‘ತೀರ್ಥ’ ಎಂಬುದಾಗಿ ಕರೆಯಲಾಗುತ್ತದೆ. ಇವುಗಳಲ್ಲಿ ಜಂಗಮ ಮತ್ತು ಸ್ಥಾವರ ಎಂಬುದಾಗಿ ಎರಡು ಬಗೆಯ ತೀರ್ಥಗಳಿವೆ. ನದೀ, ಪರ್ವತ, ಪುಣ್ಯಕ್ಷೇತ್ರಗಳನ್ನು ಸ್ಥಾವರಕ್ಷೇತ್ರಗಳು ಎಂಬುದಾಗಿ ಕರೆದರೆ, ಸತ್ಪುರುಷರು - ಮಹಾತ್ಮರನ್ನು ಜಂಗಮಕ್ಷೇತ್ರಗಳು ಎಂಬುದಾಗಿ ಕರೆಯಲಾಗುತ್ತದೆ. ಅಂದರೆ ಪುಣ್ಯತಾಣಗಳು ಮತ್ತು ಪುಣ್ಯಪುರುಷರು ನಮ್ಮನ್ನು ಪವಿತ್ರಗೊಳಿಸುತ್ತಾರೆ ಎಂದರ್ಥ. ಒಬ್ಬ ವ್ಯಕ್ತಿ ತನ್ನ ಜೀವನವನ್ನು ಪರಿಪೂರ್ಣಗೊಳಿಕೊಳ್ಳಬೇಕು ಎಂಬ ಸಂಕಲ್ಪವಿದ್ದಲ್ಲಿ ಅವನು ಈ ಎರಡು ಬಗೆಯ ತೀರ್ಥಗಳ ಸಾಂಗತ್ಯವನ್ನು ಸಂಪಾದಿಸಿಕೊಳ್ಳಬೇಕು. ಸಕಾಲದಲ್ಲಿ ಆ ತೀರ್ಥಯಾತ್ರೆಗೆ ಮತ್ತು ತೀರ್ಥಭೂತರಾದ ಮಹಾತ್ಮರ ಸನ್ನಿಧಿಗೆ ತೆರಳಬೇಕು. ಅಲ್ಲಿಂದ ಬೇಕಾದ ಸಾಮಗ್ರಿಯನ್ನು ಸಂಗ್ರಹಿಸಿಕೊಳ್ಳಬೇಕು. ಪ್ರಯಾಣ ಮಾಡುವಾಗ ವಾಹನಕ್ಕೆ ಬೇಕಾದ ಇಂಧನವನ್ನು ತುಂಬಿಸಿಕೊಳ್ಳಲು ಹೇಗೆ ಪೆಟ್ರೋಲ್ ಬಂಕ್ ಇತ್ಯಾದಿ ಸ್ಥಾನಕ್ಕೆ ಹೋಗುತ್ತೇವೋ, ಅದೇ ರೀತಿಯಾಗಿ ಜೀವಯಾನಕ್ಕೆ ಬೇಕಾದ ಶಕ್ತಿಯನ್ನು ತುಂಬಿಸಿಕೊಡುವ ರಿಚಾರ್ಜ್ ಮಾಡುವ ಸ್ಥಾನವಾಗಿದೆ. ಶ್ರೀರಂಗ ಮಹಾಗುರುಗಳು ಈ ತೀರ್ಥಕ್ಷೇತ್ರಗಳನ್ನು ಹೀಗೆ ವಿವರಿಸುತ್ತಿದ್ದರು. “ಋಷಿಗಳ ಜ್ಞಾನಭೂಮಿ ಮತ್ತು ಮನೋಭೂಮಿಗಳಲ್ಲಿದ್ದುದನ್ನು ಸೂಚಿಸಲು ಹೊರಗಿನ ತೀರ್ಥ ಮತ್ತು ಕ್ಷೇತ್ರಗಳು, ಶ್ರೀಶಂಕರಾಚಾರರು ಹೇಳಿರುವಂತೆ 'ಅಂತಸ್ತೀರ್ಥ'ವೇ ಲಕ್ಷ್ಯವಾದರೂ, ಅಲ್ಲಿಗೆ ಪಾಮರರನ್ನು ಕೊಂಡೊಯ್ಯಲು ಅದರ ಪ್ರತೀಕವಾಗಿ ಪ್ರಾತಿನಿಧ್ಯ ವಹಿಸಲು ಅಥವಾ ಅಭಿಜ್ಞಾನವಾಗಲು, ಹೊರಗಿನ ತೀರ್ಥಕ್ಷೇತ್ರಗಳು. ಈ ಕ್ಷೇತ್ರದಲ್ಲಿ(ಶರೀರದಲ್ಲಿ) ಕ್ಷೇತ್ರಜ್ಞನಾದವನು ಯಾತ್ರೆ ಮಾಡುವಾಗ ಬೇರೆ ಬೇರೆ ಚಕ್ರಗಳಲ್ಲಿ ಭಗವಂತನ ಬೇರೆ ಬೇರೆ ರೂಪಗಳನ್ನು ನೋಡುವಂತೆ ಹೊರಗಿನ ಕ್ಷೇತ್ರಗಳಲ್ಲಿ ಯಾತ್ರೆ ಮಾಡಲು ಅವುಗಳ 'ಪ್ರತೀಕ', 'ಪ್ರತಿನಿಧಿ', 'ಅಭಿಜ್ಞಾನ'. ನಿಗೂಢವಾದ ಸಂಸ್ಕಾರವನ್ನೆಬ್ಬಿಸಲು ಇವು ಪೋಷಕವಾಗುತ್ತವೆ” ಎಂದು. ಆದ್ದರಿಂದ ಭಗವದ್ಧರ್ಮವನ್ನು ಪ್ರಚೋದಿಸುವಂತಹ ಕ್ಷೇತ್ರಗಳನ್ನು ತನ್ನ ಜೀವಮಾನದಲ್ಲಿ ನೋಡದಿದ್ದರೆ ಅವನ ಜೀವನ ವ್ಯರ್ಥ ಅಥವಾ ಕಾಲಿದ್ದೂ ಇಲ್ಲದಂತೆಯೇ ಎಂಬ ಭಾವ ಇಲ್ಲಿದೆ.


ಸೂಚನೆ : 12
/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.