Sunday, July 19, 2026

ಪ್ರಶ್ನೋತ್ತರ ರತ್ನಮಾಲಿಕೆ 75 (Prasnottara Ratnamalike 75)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೭೫. ಯಾರನ್ನು ಸ್ಮರಿಸಿಕೊಳ್ಳಬೇಕು?

ಉತ್ತರ- ಹರಿನಾಮವ.

ಯಾವುದೇ ಸ್ಮರಣೆ ಅಥವಾ ಸ್ಮೃತಿಯು ಬರಬೇಕಾದರೆ ಅಲ್ಲಿ ಅದರ ಅನುಭವ ಇರಬೇಕಾಗುತ್ತದೆ. ಅನುಭವವಿಲ್ಲದೇ ಸ್ಮೃತಿಯು ಬರಲು ಸಾಧ್ಯವಿಲ್ಲ. ಹರಿಯನ್ನು ಸ್ಮರಿಸಬೇಕು ಎಂದರೆ ಹರಿಯ ಅನುಭವ ಬೇಕು ಎಂಬುದೂ ಅಷ್ಟೇ ಮುಖ್ಯ. ಹರಿಯ ಅನುಭವವು ಬರಬೇಕಾದರೆ ಅತ್ಯಂತ ಪ್ರಧಾನವಾದ ಸಾಧನವೆಂದರೆ ಹರಿಯ ನಾಮ. “ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವೋ” ಎಂಬುದಾಗಿ ಪುರಂದರದಾಸರು ಹೇಳುತ್ತಾರೆ. ನಾಮದ ಉಚ್ಚಾರಣೆಯಿಂದ ಆ ನಾಮದ ಹಿಂದಿರುವ ಶಕ್ತಿಯ ಅನುಭವ ಸಾಧ್ಯ ಎಂಬುದು ನಮ್ಮ ಶಾಸ್ತ್ರ ಮತ್ತು ಸಂಪ್ರದಾಯಗಳು ಸಾರಿರುವ ಸತ್ಯವಾಗಿದೆ.


ಪ್ರತಿಯೊಂದು ಪದಾರ್ಥಕ್ಕೂ ಒಂದು ಪದ ಅಥವಾ ನಾಮ ಇರುತ್ತದೆ. ಆ ನಾಮದಿಂದ ಅದನ್ನು ಗುರುತಿಸಲು ಸಾಧ್ಯ. ಏಕೆಂದರೆ ಅವೆರಡೂ ಪರಸ್ಪರ ಒಂದಾಗಿ, ಒಂದೇ ಕಾಲದಲ್ಲಿ ಸೃಷ್ಟಿಸಲ್ಪಟ್ಟಿವೆ. ಯಾವಾಗ ಆ ಪದಾರ್ಥವು ಸೃಷ್ಟಿಯಾಯಿತೋ ಅದೇ ಸಮಯದಲ್ಲಿ ಆ ಪದಾರ್ಥಕ್ಕೆ ಒಂದು ಪದವೂ ಸೃಷ್ಟಿಯಾಯಿತು ಎಂಬುದಾಗಿ ಪದಶಾಸ್ತ್ರ ಹೇಳುತ್ತದೆ. ಪದ ಮತ್ತು ಪದಾರ್ಥಗಳಿಗೆ ಅವಿನಾಭಾವ ಸಂಬಂಧವಿದೆ. ಹಾಗಾಗಿ ಪದವು ಪದಾರ್ಥವನ್ನು ಸೂಚಿಸುತ್ತದೆ. ಪದದ ಜ್ಞಾನವು ಪದಾರ್ಥಜ್ಞಾನದಲ್ಲಿ ಪರ್ಯವಸಾನವಾಗುತ್ತದೆ. ಪದವನ್ನು ಚೆನ್ನಾಗಿ ತಿಳಿದರೆ ಪದಾರ್ಥವನ್ನು ತಿಳಿದಂತೆಯೇ. ಅಂದರೆ ಯಾವುದನ್ನು ತಿಳಿಯಬೇಕು? ಯಾವುದನ್ನು ತಿಳಿದರೆ, ತಿಳಿಯದೇ ಇರುವ ಇನ್ನೊಂದು ತಿಳಿದಂತಾಗುತ್ತದೆ? ಎಂಬ ವಿಷಯವನ್ನೂ ಇಲ್ಲಿ ಹೇಳಲಾಗಿದೆ. ಹರಿಯನ್ನು ತಿಳಿಯಬೇಕು ಎಂದಾದರೆ ಹರಿಯ ನಾಮವನ್ನು ನಾವು ತಿಳಿಯಬೇಕು. ಅದಕ್ಕಾಗಿ ಅದನ್ನು ಅನವರತ ಉಚ್ಚರಿಸಬೇಕು, ಚಿಂತಿಸಬೇಕು, ಅನುಸಂಧಾನ ಮಾಡಬೇಕು ಎಂದರ್ಥ. ಹಾಗೆ ಅನುಸಂಧಾನ ಮಾಡುತ್ತಾ ಆ ಪದದ ಮೂಲವಾದ ಪದಾರ್ಥವನ್ನು ನಾವು ತಲುಪಬಹುದು ಎಂಬುದು ಇದರ ಹಿಂದಿರುವ ತಾತ್ಪರ್ಯವಾಗಿದೆ.


ಒಬ್ಬ ವ್ಯಕ್ತಿಗೆ ಒಂದು ಹೆಸರನ್ನು ಇಡುತ್ತೇವೆ; ಆ ಹೆಸರನ್ನು ಕರೆದಾಗ ಆ ವ್ಯಕ್ತಿ ಓಗುಡುತ್ತಾನೆ. ಅಂದರೆ ಆ ವ್ಯಕ್ತಿಗೆ ಅದು ಅಭಿಧಾನ ಅಥವಾ ಸಂಕೇತ. ಸಂಕೇತವಾದ ಆ ಪದವನ್ನು ಸರಿಯಾಗಿ ಉಚ್ಛರಿಸಿದಾಗ ಮಾತ್ರ ಆ ವ್ಯಕ್ತಿ ಸ್ಪಂದಿಸುತ್ತಾನೆ. ಅಂತೆಯೇ ಹರಿಯ ಕೇವಲ ನಾಮೋಚ್ಚಾರಣೆಯಿಂದ ಅವನು ಸ್ಪಂದಿಸುವುದಿಲ್ಲ. ನಾಮೋಚ್ಚಾರಣೆಗೆ ಬೇಕಾದ ಎಲ್ಲಾ ಎಲ್ಲಾ ಸಿದ್ಧತೆಯ ಜೊತೆಯಲ್ಲಿ ಉಚ್ಚರಿಸಿದಾಗ ಮಾತ್ರ ಆ ಹರಿಯು ನಮ್ಮ ಕಡೆಗೆ ಹರಿಯಬಲ್ಲ. ಇತ್ತ ಧಾವಿಸಬಲ್ಲ, ನಮ್ಮ ಅಹವಾಲನ್ನು ಆಲಿಸಬಲ್ಲ. ಪದವನ್ನು ಶ್ರದ್ಧೆ ಭಕ್ತಿಯಿಂದ ಉಚ್ಚರಿಸಬೇಕು. ನಾಮವನ್ನು ಉಚ್ಚರಿಸುವಾಗ ಆ ಪದಮೂಲವಾದ ಅರ್ಥವನ್ನು ಅಥವಾ ವಿಷಯವನ್ನು ಅನುಸಂಧಾನ ಮಾಡುತ್ತಾ ಉಚ್ಚರಿಸಬೇಕು. ಆದರೆ ಆ ವಸ್ತುವೇ ನಮಗೆ ಸಿಗದಿದ್ದಾಗ ಅದನ್ನು ಅನುಸಂಧಾನ ಮಾಡುವುದು ಹೇಗೆ? ಎಂಬ ಸಂದೇಹ ಬರಬಹುದು. ಆ ವಸ್ತುವನ್ನು ಪ್ರತೀಕಿಸುವ ಮೂರ್ತಿ, ವಿಗ್ರಹ  ಚಿತ್ರ ಮೊದಲಾದವುಗಳನ್ನು ನಮ್ಮ ಋಷಿ ಮಹರ್ಷಿಗಳು ಕಂಡುಂಡು ನಮಗೆ ಅನುಗ್ರಹಿಸಿದ್ದಾರೆ. ಋಷಿಮುನಿಗಳ ಅನುಗ್ರಹ ರೂಪವಾದ ಚಿತ್ರ, ವಿಗ್ರಹ ಮೊದಲಾದವುಗಳನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ, ಚಿಂತಿಸುತ್ತಾ ನಾಮವನ್ನು ಉಚ್ಚರಿಸುತ್ತಾ ಉಚ್ಚರಿಸುತ್ತಾ ಹೋದರೆ ವಿಗ್ರಹದ ಅಂತರ್ಯಾಮಿಯಾದ ಆ ಭಗವಂತನ ಅನುಗ್ರಹ - ಸಾಕ್ಷಾತ್ಕಾರ ಉಂಟಾಗುತ್ತದೆ ಎಂಬುದು ನಮ್ಮ ಸಂಪ್ರದಾಯದ ಹಿಂದಿರುವ ಆಶಯವಾಗಿದೆ. ಹಾಗಾಗಿ ನಾವು ಸ್ಮರಿಸಬೇಕು ಎಂತಾದರೆ ಹರಿನಾಮವನ್ನು ಮಾತ್ರ ಸ್ಮರಿಸಬೇಕು. ಅದು ನಮಗೆ ಇಷ್ಟಾರ್ಥವನ್ನು ಕೊಡುವ ಶಕ್ತಿಯಿಂದ ಕೂಡಿದ ಮಂತ್ರವಾಗಿದೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 19
/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.