Thursday, May 27, 2021

ನಮ್ಮ ದೇಶದ ತಾಯಿ-ತಂದೆಯರೇ ನಮಗೆ ಆದರ್ಶ (Namma Desada Tayi-Tandeyare Namage Adarsa)

ಡಾ. ರಾಮಮೂರ್ತಿ ಟಿ.ವಿ

(ಪ್ರತಿಕ್ರಿಯಿಸಿರಿ lekhana@ayvm.in)


ಲೋಕದಲ್ಲಿ ಸಂತಾನಪಾಲನೆ ಎಲ್ಲಾ ಪ್ರಾಣಿಗಳಲ್ಲಿಯೂ ಇರುವಾಗ, ಭಾರತೀಯರು ತಾಯಿತಂದೆಯರನ್ನುಮಾತೃದೇವೋ ಭವ, ಪಿತೃದೇವೋಭವ (ತೈತ್ತಿರೀಯ ಉಪನಿಷದ್ವಾಣಿ) ಹೀಗೆಲ್ಲಾ ಹೇಳುವುದು ಅತಿಶಯೋಕ್ತಿಯಲ್ಲವೆ? ಎನ್ನಿಸುವುದುಂಟು. ಈ ಋಷಿವಾಣಿಯು ವಿವೇಚನಾರ್ಹ.ಪ್ರಾಣಿಗಳಲ್ಲಿ ದುರ್ಲಭವಾದ ಮತ್ತು ಆತ್ಮಸಾಧನೆಗೆ ಬೇಕಾದಶರೀರವನ್ನು ಕೊಟ್ಟ ಮತ್ತು ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ, ಮಕ್ಕಳನ್ನು ಬೆಳೆಸುವ ತಾಯಿತಂದೆಯರು ಪೂಜನೀಯರಾಗುತ್ತಾರೆ ಎಂಬುದು ಭಾರತೀಯರಚಿಂತನೆ. ತಾಯಿಯಾದವಳು ಗರ್ಭಸ್ಥ ಶಿಶುವಿನ ದೆಸೆಯಿಂದ ಪಡುವ ಕಷ್ಟವನ್ನು ಶಂಕರಭಗವತ್ಪಾದರು 'ಮಾತೃಪಂಚಕ"ದಲ್ಲಿ ಸ್ತೋತ್ರಮಾಡುತ್ತಾರೆ. ಶ್ರೀರಂಗಮಹಾಗುರುಗಳ ಮಾತಿನಂತೆ-"ಭಗವಂತ-ಭಗವತಿಯರಿಂದ ಜೀವದ ಕಡೆಗೆಏನು ಹರಿದು ಬರುತ್ತದೆಯೋ ಅದನ್ನರಿತು ತರುವವನೇ ತಂದೆ. ತಂದೆ, ಏನು ತಂದೆ? ಎಂದರೆ, ಜ್ಞಾನವನ್ನು ತಂದೆ-ಎನ್ನುವವನೇ ತಂದೆ. ಅವನ ಜ್ಞಾನವು ತಾನಾಗಿಯೇ ಬೆಳೆದು ವಿಸ್ತಾರಗೊಳ್ಳಲು ಬಯಸಿದಾಗ ಅದನ್ನು ಹೊತ್ತುಬೆಳೆಸುವವಳೇ ತಾಯಿ". ಜ್ಞಾನಬೀಜವನ್ನೇ ಮುಂದೆ ನೀಡುವ ತಂದೆಯಾಗಬೇಕು ಎಂಬುದೇ ಸಹಜವಾದ ಅಪೇಕ್ಷೆ.ತಾಯಿಯು ಅಂತಹ ಬೀಜವನ್ನು ತನ್ನ ಗರ್ಭದಲ್ಲಿ ಪೋಷಿಸಿ ಸತ್ಸಂತಾನವನ್ನು ಬೆಳೆಸುವ ಪರಾ ಪ್ರಕೃತಿಯಪ್ರತಿನಿಧಿಯಾಗಬೇಕು. ತಾಯಿ-ತಂದೆಯರು ಅಜ್ಞಾನವೆಂಬ ಕತ್ತಲೆಯನ್ನು ನಿವಾರಿಸುವಂತಹ ಹರಿಸದೃಶ ಗುರುವನ್ನುತೋರಿಸುವಂತಹವರಾಗಬೇಕು. ಅದಕ್ಕೇ ಮಾತೃದೇವೋ ಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬಸಂಸ್ಕಾರ ಗುರುಕುಲದಲ್ಲೇ ಆಗುತ್ತಿತ್ತು.

ಇಂತಹ ತಾಯಿತಂದೆಯರನ್ನು ಪೂಜ್ಯಭಾವದಿಂದ ಆದರಿಸುವುದನ್ನು  ನಮ್ಮ ಸನಾತನ ಸಂಸ್ಕೃತಿಯಲ್ಲಿ ಯಜ್ಞವೆಂದೇಪರಿಗಣಿಸುತ್ತಾರೆ. ಕುಟುಂಬದ ಯಾವುದೇ ಶುಭ ಸಮಾರಂಭವಾಗಲೀ ತಂದೆತಾಯಿಯರ ಪಾದಪೂಜೆ ಮಾಡಿಅನುಮತಿ ಪಡೆದು ಪ್ರಾರಂಭಿಸುವುದು ಸತ್ಸಂಪ್ರದಾಯ. ಮಾತಾಪಿತೃಗಳ ಮತ್ತು ಆಚಾರ್ಯನ ಸೇವೆಯೇ ಪರಮತಪಸ್ಸು ಮತ್ತು ಅವರ ಅನುಮತಿಯಿಲ್ಲದೇ ಬೇರೆ ಯಾವ ಧರ್ಮವನ್ನೂ ಆಚರಿಸಲಾಗದು. ಮಾತಾಪಿತೃಗಳು ಮತ್ತುಅಚಾರ್ಯನು ಮೂರುಲೋಕಗಳನ್ನು ಪಡೆಯಲು ಕಾರಣಭೂತರಾದವರು.ಪುರಾಣಪ್ರಸಿದ್ಧವಾದ ಕಥೆಯೊಂದರಲ್ಲಿ ಗಣೇಶನು ಜನನೀ-ಜನಕರನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿದಾಗ,ಉಮಾಮಹೇಶ್ವರರು ಇದು ತ್ರಿಲೋಕ ಪ್ರದಕ್ಷಿಣೆಗೆ ಸಮ ಎಂಬ ತೀರ್ಮಾನಕ್ಕೆ ಬಂದು ಗಣೇಶನಿಗೆ ಬಹುಮಾನಕೊಡುತ್ತಾರೆ. ಪಂಡರೀನಾಥನು ಪುಂಡರೀಕನ ಮಾತಾಪಿತೃಗಳ ಸೇವೆಯನ್ನು ಮೆಚ್ಚಿ ಇಟ್ಟಿಗೆಯ ಮೇಲೆ ತನ್ನಭಕ್ತನಿಗಾಗಿ ಕಾದಿರುವ ಕಥೆ ಲೋಕಪ್ರಸಿದ್ಧವಲ್ಲವೇ! ಹೀಗಾಗಿ ಪುಂಡರೀಕನು ಭಾಗವತೋತ್ತಮರಲ್ಲಿ ಒಬ್ಬನಾಗಿದ್ದಾನೆ.ಪಿತೃವಾಕ್ಯಪರಿಪಾಲಕ ಶ್ರೀರಾಮ, ತನ್ನ ತಂದೆಯ ಮಾತನ್ನುಳಿಸಲಿಕ್ಕಾಗಿ ೧೪ ವರ್ಷ ವನವಾಸ ಮಾಡುತ್ತಾನೆ.ಮಹಾಭಾರತದ ಪ್ರಖ್ಯಾತ ಪ್ರಸಂಗವಾದ ಯಕ್ಷನ ಪ್ರಶ್ನೆಯೊಂದಕ್ಕೆ ಯುಧಿಷ್ಠಿರನುಕೊಟ್ಟ ಉತ್ತರ- "ತಾಯಿಯು ಭೂಮಿಗಿಂತಲೂ ಭಾರ. ತಂದೆಯು ಆಕಾಶಕ್ಕಿಂತಲೂ ಎತ್ತರ".  ಜ್ಞಾನಕ್ಕೆ ಮಿಗಿಲಾದದ್ದುಮತ್ತು ಜ್ಙಾನಕ್ಕೆ ಸಮಾನ ಹಾಗೂ ಪವಿತ್ರವಾದದ್ದು ಇಲ್ಲ, ತಂದೆಯಾದವನು ಇಂತಹ ಜ್ಞಾನವನ್ನು ಪಡೆಯುವುದಕ್ಕೆದಿಗ್ದರ್ಶನ ಮಾಡುವವನಾದ್ದರಿಂದ ಅವನು ಆಕಾಶಕ್ಕಿಂತಲೂ ಎತ್ತರ. ತಾಯಿಯ ಬಗ್ಗೆ  ಕೃತಜ್ಞತಾಭಾವ ತುಂಬಿದಾಗ  ಅದುಇಳಿಸಲಾರದ ಭಾರವಾಗುತ್ತದೆ. ತಾಯಿಯ ಕೃತಜ್ಞತೆಯನ್ನು ತೀರಿಸುವುದು ಅಸಾಧ್ಯವಾದ್ದರಿಂದ ಅವಳು ಭೂಮಿಗಿಂತ ಭಾರವಾಗುತ್ತಾಳೆ. ಇಂತಹ ಜ್ಞಾನದ ಮಾರ್ಗವನ್ನು ತೋರಿಸುವ ನಮ್ಮ ದೇಶದ ತಾಯಿ-ತಂದೆಯರು ಆದರ್ಶ. ತಾಯಿ-ತಂದೆಯರಲ್ಲಿ ಪೂಜ್ಯ ಭಾವ ಕಾಣಬೇಕಾದುದು ಮಕ್ಕಳ ಆದರ್ಶ. ಭಾರತೀಯರಾಗಿ ಈ ಆದರ್ಶಗಳನ್ನು ಪಾಲಿಸೋಣ.

ಸೂಚನೆ: 27/5/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.