Monday, May 10, 2021

ಆರ್ಯಸಂಸ್ಕೃತಿ ದರ್ಶನ-42 (Arya Samskruti Darshana-42)

 ಮುನಿ

ಲೇಖಕರು: ಡಾ||ಶ್ರೀ ಎಸ್.ವಿ.ಚಾಮು


ಬಹಳ ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಬೇರೆ ಬೇರೆ ಪಂಥಗಳಿಗೆ ಸೇರಿದ ಸನ್ಯಾಸಿಗಳು ಇದ್ದಿರುವರು. ಸಾಮಾನ್ಯವಾಗಿ ಹೇಳುವುದಾದರೆ ಅವರು ಎಲ್ಲೆಲ್ಲಿಯೂ  ಜನರ ಭಕ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಿರುತ್ತಾರೆ. ಲೋಕ ವೆಲ್ಲವೂ ಕಾಮಕ್ರೋಧಾದಿಗಳಿಗೆ ವಶವಾಗಿ ಹೋಗುತ್ತಿರುವಾಗ, ಅವುಗಳಿಂದ ಬಿಡಿಸಿಕೊಂಡು ನಿರ್ಮಮನಾಗಿಯೂ  ನಿರ್ಲಿಪ್ತನಾಗಿಯೂ ಇರುವವನು ಉತ್ತಮಪುರುಷನೆಂದು ಪರಿಗಣಿತವಾಗುವುದು ಸಹಜವಾಗಿಯೇ ಇರುತ್ತದೆ. ಅದೇ ಜನತೆಯು ಅವರಿಗೆ ಗೌರವ ತೋರಿಸಲು ಕಾರಣ.

ಮುನಿ, ಮೌನಿ, ಜ್ಞಾನಿ, ತ್ಯಾಗಿ, ಯೋಗಿ ಮುಂತಾದ ಪದಗಳೆಲ್ಲವೂ ಸನ್ಯಾಸಿ ಎಂಬ ಪದದ ಪರ್ಯಾಯ ಪದಗಳಾಗಿರುತ್ತವೆ. ಅವೆಲ್ಲವೂ ಒಬ್ಬ ಮನುಷ್ಯನು ಸಾಧಿಸಬಹುದಾದ ಒಳಪೂರ್ಣತೆಯ ಬೇರೆ ಬೇರೆ ಪಾರ್ಶ್ವಗಳನ್ನು ಸೂಚಿಸುತ್ತವೆ. ತಮ್ಮಲ್ಲಿ ಆಳವಾದ ಒಳ ಅರ್ಥವನ್ನು ಇರಿಸಿಕೊಂಡಿರುತ್ತವೆ. ಸಾಮಾನ್ಯವಾಗಿ ಮೌನ, ಕಾಷಾಯವಸ್ತ್ರ, ದಂಡ, ಕಮಂಡಲು, ಅರಣ್ಯವಾಸ ಇತ್ಮಾದಿಗಳು ಸನ್ಯಾಸಿಯ ಹೊರಲಕ್ಷಣಗಳು. ಆದರೆ ಹೊರಲಕ್ಷಣಗಳಿಂದ ಒಬ್ಬನು ಸನ್ಯಾಸಿಯಾಗುವುದಿಲ್ಲ, ಒಳಲಕ್ಷಣಗಳಿಂದ ಆಗುತ್ತಾನೆ. ಅವನ ಒಳ ಲಕ್ಷಣಗಳೇನು, ಏನಾಗಿರಬೇಕು ಎಂಬುದನ್ನು ಭಾರತವು ಈ ರೀತಿ ವರ್ಣಿಸುತ್ತದೆ:

ಮೌನಾನ್ನಸ  ಮುನಿರ್ಭವತಿ ನಾರಣ್ಯವಸನಾನ್ಮುನಿ:   । 
ಸ್ವಲಕ್ಷಣoತುಯೋ  ವೇದ ಸಮುನಿ:   ಶ್ರೇಷ್ಠ ಉಚ್ಯತೇ ।। 

ಸರ್ವಾರ್ಥಾನಾಂ ವ್ಯಾಕರಣಾತ್ ವೈಯ್ಯಾಕರಣ ಉಚ್ಯತೇ । 
ತನ್ಮೂಲತೋವ್ಯಾಕರಣಂ ವ್ಯಾಕರೋತೀತಿ  ತತ್ ತಥಾ ।। 

ಪ್ರತ್ಯಕ್ಷದರ್ಶೀ ಲೋಕಾನಾಂ  ಸರ್ವದರ್ಶೀ ಭವೇನ್ನರಃ । 
ಸತ್ಯೇ ವೈ ಬ್ರಾಹ್ಮಣಸ್ತಿಷ್ಠನ್  ತದ್ವಿದ್ವಾನ್ ಸರ್ವವಿದ್ಭವೇತ್ ।। 

(ಮೌನವಾಗಿರುವುದರಿಂದಾಗಲಿ ಅಥವಾ ಅರಣ್ಯವಾಸದಿಂದಾಗಲಿ ಒಬ್ಬನು ಮುನಿ ಯಾಗುವುದಿಲ್ಲ. ತನ್ನ ಸ್ವರೂಪವನ್ನು ತಿಳಿದವನೇ ಶ್ರೇಷ್ಠನಾದ ಮುನಿ ಎಂದು ಹೇಳಿಸಿಕೊಳ್ಳುತ್ತಾನೆ. ಎಲ್ಲ ಅರ್ಥಗಳನ್ನೂ ವ್ಯಕ್ತ ಪಡಿಸುವುದರಿಂದ ಅವನನ್ನು ವೈಯ್ಯಾಕರಣ ಎಂದು ಕರೆಯುತ್ತಾರೆ. ಆ ಆತ್ಮಮೂಲದಿಂದಲೇ ಎಲ್ಲ ಅರ್ಥಗಳೂ ಪ್ರಕಾಶಕ್ಕೆ ಬರುತ್ತವೆ. ಅದೇ ಎಲ್ಲವನ್ನೂ ವ್ಯಕ್ತಪಡಿಸುತ್ತದೆ.  ಅದನ್ನು ತಿಳಿದವನು ಲೋಕವೆಲ್ಲವನ್ನೂ ಪ್ರತ್ಯಕ್ಷವಾಗಿ ನೋಡಿದವನಾಗುತ್ತಾನೆ. ಅವನು ಸರ್ವದರ್ಶಿಯಾಗುತ್ತಾನೆ. ಸತ್ಯದಲ್ಲಿರುವ ಬ್ರಾಹ್ಮಣನು ಆತ್ಮನನ್ನು ತಿಳಿಯುವುದರಿಂದ ಎಲ್ಲವನ್ನೂ ತಿಳಿದವನಾಗುತ್ತಾನೆ.) 

ಬೇರೆ ಮಾತುಗಳಲ್ಲಿ ಹೇಳುವುದಾದರೆ ತನ್ನ ಕಾಯ, ವಾಕ್ಕು ಮತ್ತು ಶರೀರಗಳಲ್ಲಿರುವ ಕಿಲ್ಬಿಷಗಳೆಲ್ಲವನ್ನೂ ಸಂಪೂರ್ಣವಾಗಿ ತೊಳೆದುಕೊಂಡು ಪರಮಾತ್ಮಭಾವದಲ್ಲಿ ಒಂದಾಗಿರುವವನೇ ಮನಿ. ಅವನ ಮೌನವು, 'ನಿಶ್ಶಬ್ದo  ಪರಮಂ ಪದಂ' ಎಂಬ ನುಡಿಯು ಹೇಳುವಂತೆ ಪರಮಾತ್ಮ ಭಾವವನ್ನು ಮುಟ್ಟಿದಾಗ ಹೃದಯದಲ್ಲಿ ಉಂಟಾಗುವ ನಿಶ್ಶಬ್ದತೆಯ ಸಂಕೇತ, ಅದರ ಪರಿಣಾಮ.

ಈ ಅರ್ಥದಲ್ಲಿ ಮುನಿ ಎನಿಸಿಕೊಳ್ಳಲು ಎಷ್ಟು ಜನ ಅರ್ಹರಾಗುತ್ತಾರೆ?

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ಸಂಚಿಕೆ: , ಆಗಸ್ಟ್ 1989 ತಿಂಗಳಲ್ಲಿ  ಪ್ರಕಟವಾಗಿದೆ.