ಲೇಖಕರು: ಪ್ರಮೋದ್ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
ಒಂದು ದಟ್ಟವಾದ ಕಾಡಿನಲ್ಲಿ ಒಂದು ವಿಶಾಲವಾದ ಮರವಿದೆ. ಆ ಮರವು ಅನೇಕ ಶಾಖೋಪಶಾಖೆಗಳಿಂದ ಕೂಡಿದೆ. ಹಾಗೂ ಆ ಶಾಖೆಗಳು ಫಲ ಪುಷ್ಪ ಭರಿತವಾಗಿವೆ. ಫಲಗಳು ಕೂಡ ಅತ್ಯಂತ ಸಿಹಿಯಾಗಿವೆ. ಅಂತಹ ಒಂದು ಕಾಡಿನಲ್ಲಿ, ಕೋಗಿಲೆಯೊಂದು ಬುಡದಿಂದ ಶಾಖೆಗೆ ಹಾರಿ, ಒಂದು ಶಾಖೆಯ ಮೇಲೆ ಕುಳಿತು, ಅದರಲ್ಲಿರುವ ರಸವತ್ತಾದ ಫಲವನ್ನು ಆಸ್ವಾದನೆ ಮಾಡ ತೊಡಗಿತು. ಫಲದ ರಸ ಚಪ್ಪರಿಸುತ್ತಿದ್ದಂತೆ ತೃಪ್ತಿಯಾಗಿ ಸುಮಧುರವಾಗಿ ಕುಹೂ ಕುಹೂ ಎಂದು ಹಾಡುತ್ತಿದೆ. ಆ ಮರವು ಅತ್ಯಂತ ಪ್ರಾಚೀನವಾಗಿದ್ದರೂ ನಿತ್ಯನೂತನವಾಗಿದೆ. ಆ ಕೋಗಿಲೆಯ ಗಾನವು ಭಾರತ ದೇಶದಲ್ಲಿ ಅಲ್ಲದೆ ಇಡೀ ವಿಶ್ವದಲ್ಲಿ ಪ್ರಖ್ಯಾತವಾಗಿದೆ. ಯಾರು ಈ ಕೋಗಿಲೆ ಎಂದು ತಿಳಿಯಲು ಈ ಶ್ಲೋಕವನ್ನು ಗಮನಿಸೋಣ.
ಕೂಜನ್ತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ ।
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ।।
ಮಾವಿನಹಣ್ಣನ್ನು ತಿಂದವನಿಗೇ ಮಾವಿನ ಅನುಭವ. ಅಂತೆಯೇ ರಾಮಾಯಣ ಮಹಾಕಾವ್ಯ, ಶ್ರೀರಾಮನ ವ್ಯಕ್ತಿತ್ವ ಧರ್ಮಗಳನ್ನು ಆಸ್ವಾದಿಸುವನು ಉಪನಿಷತ್ತುಗಳು ಹೇಳುವ ಬ್ರಹ್ಮಾನುಭವವನ್ನೇ ಪಡೆಯುತ್ತಾನೆ. ರಾಮಾಯಣದ ಕಥೆಯ ಗುರುಮುಖೇನ ಅನುಸಂಧಾನವು ಯೋಗಾನುಭವಕ್ಕೆ ಸುಲಭವಾದ ಮಾರ್ಗವಾಗಿದೆ. ಮಹಾನಾಯಕನಾದ ಶ್ರೀ ರಾಮಚಂದ್ರ ಪ್ರಭುವು 'ಸ್ಥೂಲ ದೃಷ್ಟಿಗೆ ನರ, ಸೂಕ್ಷ್ಮ ದೃಷ್ಟಿಗೆ ದೇವತೆ ಪರಾ ದೃಷ್ಟಿಗೆ ಪರಂಜ್ಯೋತಿ' ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ವಾಲ್ಮೀಕಿಎಂಬ ಕೋಗಿಲೆಯನ್ನು ಸ್ಮರಿಸಿಕೊಂಡು ನಾವೂ ರಾಮಾಯಣವೆಂಬ ಮಹಾಫಲವನ್ನು ಆಸ್ವಾದಿಸುವಂತೆ ಭಗವಂತನನ್ನು ಪ್ರಾರ್ಥಿಸೋಣ.
To know more about Astanga Yoga Vijnana Mandiram (AYVM) please visit our Official Website, Facebook and Twitter pages