Wednesday, July 15, 2020

ಸಾತ್ವಿಕತೆ - ಜೀವನದ ಬೆಳಕು (Satvikate - Jivanada Belaku)

ಲೇಖಕರು: ಡಾ| ಯಶಸ್ವಿನಿ
(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ಜೀವನದಲ್ಲಿ ಕೆಲವು ವಿಚಾರಗಳು ಚಿಂತನೆಗೆ ಸೋಪಾನವಾದರೆ, ಕೆಲವು ಚಿಂತೆಗೊಳಗಾಗಿಸುತ್ತದೆ. ಚಿಂತೆಯು ಚಿತೆಗೆ ಸಮಾನವಂತೆ. ಚಿಂತೆ ಮಾಡದೇ "ಚಿಂತನೆ"ಮಾಡಿ ಬಗೆಹರಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಬೇಕು. ನಕಾರಾತ್ಮಕ ಚಿಂತೆಗಳು ಪೆಡಂಭೂತದಂತೆ ಒಳ್ಳೆಯದನ್ನು ನೋಡಲು ಸಾಧ್ಯವೇ ಇಲ್ಲದಂತೆ ಮಾಡಿಬಿಡುತ್ತವೆ.  ಸಾತ್ತ್ವಿಕ, ರಾಜಸಿಕ, ತಾಮಸಿಕ ಎಂಬುದಾಗಿ ಮೂರು ಬಗೆಯ ಚಿಂತೆಗಳಿರುತ್ತವೆ. ಬಹು ದುಷ್ಟತನದಿಂದ ತನ್ನನ್ನೇ ತಾನು ಹಿಂಸಿಸಿಕೊಳ್ಳುವುದು, ಪರರಿಗೂ ಹಿಂಸೆಯಾಗುವಂತೆ ಚಿಂತಿಸುವ ಪರಿ ತಾಮಸಿಕ ಚಿಂತೆಯ ಫಲ. ಅಳುವುದು-ಗರ್ಜನೆ -ರಂಪಾಟ -ವಾದ -ವಿವಾದಗಳು ರಾಜಸಿಕ ಚಿಂತೆಯ ಫಲ. ಕ್ರಿಯಾಶೀಲತೆಯಿಂದ ಯಾರಿಗೂ ನೋವಾಗದ ರೀತಿಯಲ್ಲಿ ಉಪಾಯವನ್ನು ಚಿಂತಿಸುವುದು ಸಾತ್ತ್ವಿಕ ಚಿಂತನೆಯ ಫಲ.ನಮ್ಮ ಚಿಂತನೆ ಈ ಮೂರರಲ್ಲಿ ಯಾವರೀತಿ ಇದ್ದರೆ ಜೀವನ ಸೊಗಸಾಗಿರುತ್ತದೆ ಎಂಬುದನ್ನು ನಾವೇ ತೀರ್ಮಾನಿಸಬಹುದು. ಗೀತೆಯಲ್ಲಿ ಭಗವಂತನು ಅಪ್ಪಣೆ ಕೊಡಿಸಿದಂತೆ-

ಊರ್ಧ್ವಂ ಗಚ್ಛ೦ತಿ  ಸಾತ್ತ್ವಿಸ್ಥಾ:
ಮಧ್ಯೇ ತಿಷ್ಠ೦ತಿ ರಾಜಸಾ: 
ಜಘನ್ಯ ಗುಣ ವೃತ್ತಿಸ್ಥಾ ಅಧೋ ಗಚ್ಛ೦ತಿ ತಾಮಸಾ : -

ಪ್ರಾಪಂಚಿಕ ಚಿಂತೆಗಳನ್ನು ಬದಿಗಿರಿಸಿ ಜೀವನದ ಧ್ಯೇಯವಾದ ಭಗವಂತನ ನೆಲೆಗೆ ತಲುಪುವ ಉರ್ಧ್ವಗತಿಯ ಚಿಂತನೆ ಸಾತ್ತ್ವಿಕರದು. ರಾಜಸ ಪ್ರವೃತ್ತಿಯುಳ್ಳವರು ವಾದ - ವಿವಾದದಲ್ಲಿ ಸಿಲುಕಿ ಕೊನೆಮೊದಲಿಲ್ಲದ ಕ್ರಿಯಾಶೀಲತೆಯಲ್ಲೇ ಜೀವನ ಕಳೆಯುತ್ತಾ ಮಧ್ಯೆ ನಿಲ್ಲುತ್ತಾರೆ. ತಾಮಸಿಕರು ಅತ್ಯಂತ ನೀಚವಾದ ಚಿಂತನೆಯಿಂದ ಸಮಾಜಕ್ಕೂ ಅಹಿತವನ್ನೇ ಮಾಡಿ ತಾವೂ ಅದಃಪತನ ಹೊಂದುತ್ತಾರೆ. ಆದ್ದರಿಂದ ನಮ್ಮನ್ನು ನಾವು ಸಾತ್ತ್ವಿಕರನ್ನಾಗಿಸಿಕೊಳ್ಳಬೇಕು. ಶ್ರೀರಂಗ ಮಹಾಗುರುಗಳು "ನಿಮ್ಮ ಹೃದಯ ಕಮಲವನ್ನು ಸದಾ ಅರಳಿದ ಪುಷ್ಪದಂತೆ ಇರಿಸಿಕೊಳ್ಳಿ ಬಾಡದಂತೆ ನೋಡಿಕೊಳ್ಳಿ'' ಎನ್ನುತ್ತಿದ್ದರು.

ಕೊಳಚೆ ತುಂಬಿದ ಪಾತ್ರೆಯೊಳಕ್ಕೆ ಶುದ್ಧವಾದ ನೀರನ್ನು ತುಂಬುವ ಎರಡು  ಬಗೆಯಿದೆ- ೧] ಕೊಳಚೆಯನ್ನು ಹೊರಕ್ಕೆ ಚೆಲ್ಲಿ ಪಾತ್ರಶುದ್ಧಗೊಳಿಸಿ ಶುದ್ದನೀರನ್ನು ತುಂಬುವುದು.೨] ಶುದ್ಧವಾದ ನೀರನ್ನು ಅತಿ ರಬಸದಿಂದ ಪಾತ್ರೆಯೊಳಕ್ಕೆ ತುಂಬಿ ಕೊಳಚೆಯ ಲವಲೇಶವೂ ಪಾತ್ರೆಯೊಳಗಿರದೇ ಶುದ್ಧವಾದ ಜಲವೇ ಉಳಿಯುವಂತಾಗಬೇಕು. ಅಂತೆಯೇ ಸನ್ನಡತೆ, ಸದ್ವಿಚಾರಗಳನ್ನು ಹೆಚ್ಚು ಹೆಚ್ಚಾಗಿ ನಮ್ಮಲ್ಲಿ ತುಂಬಿಕೊಳ್ಳಬೇಕು. ಸದ್ವಿಚಾರಗಳನ್ನುಕೇಳಿ, ಮನನ ಮಾಡಿ, ಮೆಲುಕುಹಾಕುತ್ತಾ ನಮ್ಮ ಜೀವನಗಳಲ್ಲಿ ರೂಡಿಸಿಕೊಳ್ಳುವಂತಾಗಬೇಕು. ಇವುಗಳಿಂದ ಸಾತ್ತ್ವಿಕತೆಯನ್ನು ಹೆಚ್ಚಿಸಿಕೊಳ್ಳಬೇಕು. ಆತ್ಮಸಂತೃಪ್ತಿಯನ್ನು ಹೊಂದಬೇಕು  ಎಂಬುದು ಈ ದೇಶದ ಋಷಿಗಳ ಆಶಯ. ನಾವೆಲ್ಲರೂ ಅಂತಹ ನೆಮ್ಮದಿಯ ಬದುಕಿಗಾಗಿ ಶ್ರಮಿಸೋಣ.

ಸೂಚನೆ: 15/07/2020 ರಂದು ಈ ಲೇಖನ
ಉದಯವಾಣಿ ಯಲ್ಲಿ ಪ್ರಕಟವಾಗಿದೆ.