Wednesday, June 24, 2020

ಮಾನವ ಜನ್ಮ ಬಲು ದೊಡ್ಡದು (Manava Janma Balu Doddadu)

ಲೇಖಕರು: ಶ್ರೀಮತಿ ರತ್ನಾಸುರೇಶ
 (ಪ್ರತಿಕ್ರಿಯಿಸಿರಿ lekhana@ayvm.in)



ವೃದ್ಧ ಗೃಹಸ್ಥನೊಬ್ಬ ತನ್ನ ಪರಿವಾರದೊಡನೆ ಸಂತೋಷವಾಗಿದ್ದ. ತಲೆಮಾರಿನವರೆಗೂ ಉಂಡು ತೇಗುವಷ್ಟು ಆಸ್ತಿಯನ್ನೂ ಸಂಪಾದಿಸಿದ್ದ. ಜೀವನ ಸಂಜೆಯಲ್ಲಿ ತನ್ನ ಜೀವನದ ಬಗ್ಗೆ ಪುಣ್ಯವಿಶೇಷದಿಂದ ಅವನಿಗೆ, -ಅಯ್ಯೋ, ಇಷ್ಟು ದಿನ ನನ್ನವರಿಗಾಗಿ ಕಷ್ಟಪಟ್ಟು ಅಸ್ತಿಯನ್ನೇನೋ ಗಳಿಸಿದೆ ಆದರೆ ನನ್ನ ಪರಲೋಕಕ್ಕೆ ಯಾವ ಪುಣ್ಯಸಂಪಾದನೆಯನ್ನೂ ಮಾಡದೇ ವ್ಯರ್ಥಮಾಡಿಕೊಂಡೆ ಎನಿಸಿತು. ಮಲಗುವಾಗ ತನ್ನ ಮಗನನ್ನು ಕರೆದು- "ಜಾತಸ್ಯ ಮರಣಂ ಧ್ರುವ೦" ಹುಟ್ಟಿದವರಿಗೆ ಮರಣ ನಿಶ್ಚಯ, ಮುಂದಿನ ಜನ್ಮದಲ್ಲಿ ನಾನು ಹಂದಿಯಾಗಿ ಹುಟ್ಟಿ ನಿನ್ನೆದುರು ಬರುತ್ತೇನೆ. ನೀನು ಏನೂ ಸಂಕೋಚಪಟ್ಟುಕೊಳ್ಳದೇ ನನ್ನನ್ನು ಕೊಂದುಬಿಡು. ಅದರ ನಂತರ ನನಗೆ ಪುನಃ ಮನುಷ್ಯ ಜನ್ಮ ಬರುತ್ತದೆ ಆಗ ಸಾಧನೆ ಮಾಡಿ ಭಗವಂತನನ್ನು ಸೇರುತ್ತೇನೆ ಎಂದು ಹೇಳಿದ್ದ. ವೃದ್ದ ರಾತ್ರಿ ಚಿರನಿದ್ರೆಗೆ ಜಾರಿದ. ಅತ್ಯಮೂಲ್ಯವಾದ ಮಾನವದೇಹ ವ್ಯರ್ಥವಾಗಿ ಕಾಲವಶವಾಯಿತು. ವರುಷಗಳುರುಳಿದವು. ಒಮ್ಮೆ ಆ ಗೃಹಸ್ಥನ ಮಗನ ಮನೆಯ ಹಿತ್ತಲಲ್ಲಿ ಹಂದಿಗಳ ಹಿಂಡು ಪರಿವಾರ ಸಮೇತ ಬಂದವು. ಕೂಡಲೇ ಗೃಹಸ್ಥನ ಮಗನಿಗೆ ತಂದೆಯ ಮಾತು ಜ್ಞಾಪಕಕ್ಕೆ ಬಂದು ತನ್ನ ಬಂದೂಕನ್ನು ಒತ್ತಿ ಗುಂಡುಹಾರಿಸಲು ಉದ್ಯುಕ್ತನಾದ. ಆಗ ಹಂದಿಯು ಹೇಳಿತು- 'ನಿಲ್ಲು ನನ್ನನ್ನು ಕೊಲ್ಲಬೇಡ. ನಾನು ನಿನಗೆ ಹಿಂದೇನೋ ಹೇಳಿರಬಹುದು, ಆದರೆ ಈಗ ಈ ಹಂದಿ ಜನ್ಮದಲ್ಲಿ ನನ್ನ ಹೆಂಡತಿ ಮಕ್ಕಳೊಡನೆ ಅತ್ಯಂತ ಸಂತೋಷವಾಗಿದ್ದೇನೆ' ಎಂದಿತು. ಆದರೆ ಗೃಹಸ್ಥನ ಮಗನು ತನ್ನ ತಂದೆಯು ಪ್ರಾಜ್ಞನಾಗಿ ಮಾನವ ಜನ್ಮದಲ್ಲಿ ಹೇಳಿದ ಆಜ್ಞೆಯೇ ಅನುಕರಣೀಯ ಎಂದು ಆ ಹಂದಿಯನ್ನು ವಧಿಸಿದ. ಉಳಿದೆಲ್ಲವೂ ಆ ಗೃಹಸ್ಥನು ಬಯಸಿದಂತೆಯೇ ಆಯಿತು.

ಮಾನವ ದೇಹ ಸೃಷ್ಟಿಯ ಅತ್ಯದ್ಭುತವಾದ ಯಂತ್ರ. ಈ ದೇಹದಲ್ಲಿ ಮಾತ್ರ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡು ಪುರುಷಾರ್ಥಮಯವಾದ ಬಾಳಾಟವನ್ನು ಮಾಡುವುದಕ್ಕೆ ಸಾಧ್ಯವಿದೆ. "ಚತುರ್ದಶ ಭುವನಗಳನ್ನು ಕೊಟ್ಟರೂ ಅವು ಈ ಮಾನವ ದೇಹಕ್ಕೆ ಸಮಾನವಲ್ಲ" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. "ಮಹತ್ತಾದ ಪುಣ್ಯವೆಂಬ ಹಣವನ್ನು ಕೊಟ್ಟು ಈ ಮಾನವ ದೇಹವನ್ನು ಪಡೆದಿದ್ದೀಯೇ. ಈ ನೌಕೆ ಮುರಿಯುವ ಮುನ್ನವೇ ಮೋಕ್ಷದ ದಡ ಸೇರಿಕೋ" ಎಂಬ ಋಷಿವಾಣಿಯೂ ಇದನ್ನೇ ಸಾರುತ್ತದೆ. ಮನುಷ್ಯ ಜನ್ಮದ ಬೆಲೆಯರಿತು ಬಾಳೋಣ.

ಸೂಚನೆ: 24/06/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.