Tuesday, April 21, 2020

ಪ್ರತಿನಿಧಿಯ ಪೂಜೆ, ನಿಧಿಯ ಪೂಜೆಯೇ? (Pratinidhiya Pooje Nidhiya Poojeye?)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ಸಂಸ್ಕೃತಿ, ಆಚಾರ, ಸಂಪ್ರದಾಯಗಳಲ್ಲಿ ಗುರು-ಹಿರಿಯರಿಗೆ, ಪೂಜನೀಯರಿಗೆ ಗೌರವ ನೀಡುವ ಪದ್ಧತಿಯಿದೆ. ತುಂಬಾ ಶ್ರೇಷ್ಠರೆಂದು ಪೂಜಿಸುವ ವಿಷಯವೂ ಇದೆ. ವ್ಯಕ್ತಿಪೂಜೆ ಸರಿಯೇ ಎಂಬುದು ಸಮಾಜದಲ್ಲಿ ಪ್ರಶ್ನಾರ್ಹ ವಿಷಯವೂ ಆಗಿದೆ. ಇದನ್ನು ಶ್ರೀರಂಗ ಮಹಾಗುರುಗಳು ಕೊಡುತ್ತಿದ್ದ ಒಂದು ದೃಷ್ಟಾಂತದ ಮೂಲಕ ಅರ್ಥಮಾಡಿಕೊಳ್ಳಬೇಕಿದೆ.

ಒಬ್ಬ ವ್ಯಕ್ತಿಯ ಆತ್ಮೀಯ ಸಂಬಂಧಿಕರ ಮನೆಯಲ್ಲಿ ಶುಭ ಸಮಾರಂಭ. ಅವರು ಪ್ರೀತಿಯಿಂದ ಮತ್ತು ಒತ್ತಾಯ ಪೂರ್ವಕವಾಗಿ ಆಮಂತ್ರಿಸಿರುತ್ತಾರೆ. ಆದರೆ ಈ ವ್ಯಕ್ತಿಗೆ ಅತ್ಯಂತ ಒತ್ತಡದ ಮತ್ತು ಜವಾಬ್ದಾರಿಯುತವಾದ ಕೆಲಸ. ಹಾಗಾಗಿ ಸಮಾರಂಭಕ್ಕೆ ಹೋಗಲಾಗುತ್ತಿಲ್ಲ. ಹೋಗದಿದ್ದರೆ ಆತ್ಮೀಯರಿಗೆ ಬೇಸರವಾಗುತ್ತದೆ ಎಂಬ ಚಿಂತೆ. ಹಾಗಾಗಿ ತನ್ನ ಮಗನನ್ನು, ತನ್ನ ಪ್ರತಿನಿಧಿಯಾಗಿ ಕಳುಹಿಸಿದ. ಸಮಾರಂಭದಲ್ಲಿ ಸಂಬಂಧಿಕರು ವ್ಯಕ್ತಿಯ ಪ್ರತಿನಿಧಿಯಾಗಿ ಬಂದ ಮಗನನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಣ್ಣವನೆಂದು ಪರಿಗಣಿಸದೆ, ಆ ವ್ಯಕ್ತಿಗೆ ಹಾಕುತ್ತಿದ್ದ ಆಸನದಲ್ಲಿಯೇ ಕೂರಿಸಿದರು. ಅಷ್ಟೇ ಗೌರವದಿಂದ ಉಪಚರಿಸಿದರು. ಆ ವ್ಯಕ್ತಿಗೆ ನೀಡಬೇಕಿದ್ದ ಉಡುಗೊರೆಗಳನ್ನೆಲ್ಲಾ, ಇವನಿಗೆ ನೀಡಿದರು. ಕೊನೆಯಲ್ಲಿ ಅಷ್ಟೇ ಪ್ರೀತಿಯಿಂದ ಬೀಳ್ಕೊಟ್ಟರು.

ಎಲ್ಲರ ಜೀವನದಲ್ಲಿಯೂ ನಡೆಯುವ ಸಾಮಾನ್ಯ ಘಟನೆ ಇದು. ಇಲ್ಲಿ ಆಗಮಿಸಿದ ಪ್ರತಿನಿಧಿಗೆ ಎಲ್ಲಾ ರೀತಿಯ ಗೌರವವೂ ದೊರೆಯಿತು. ಹಾಗೆಯೇ ಪೂಜಾ ಸಂಧರ್ಭಗಳಲ್ಲಿ ನಿಧಿಯ ಸ್ಥಾನದಲ್ಲಿ ಭಗವಂತನನ್ನು ನೋಡಬೇಕು. ಯಾರು ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾರೋ ಅಂತಹವರು ಪ್ರತಿನಿಧಿಯ ಸ್ಥಾನದಲ್ಲಿ ಪರಿಗಣಿಸಲು ಯೋಗ್ಯರಾದವರಾಗುತ್ತಾರೆ.

ಒಂದು ಕಬ್ಬಿಣದ ತುಂಡು ಕೆಂಡದ ಮಧ್ಯದಲ್ಲಿ ಸೇರಿಕೊಂಡಿದೆ ಎಂದುಕೊಳ್ಳೋಣ. ಬಹಳ ಸಮಯದ ನಂತರ, ಕೆಂಡದ ಸಾಂಗತ್ಯದಿಂದ, ಕಬ್ಬಿಣದ ತುಂಡು, ಕೆಂಡದಂತೆಯೇ ಕಾಣುತ್ತದೆ. ಕೆಂಡದ ಮಧ್ಯದಲ್ಲಿ ಕಬ್ಬಿಣದ ತುಂಡು ಸೇರಿಕೊಂಡಿದೆ ಎಂದು ಗುರುತಿಸಲಾಗದ ಮಟ್ಟಿಗೆ, ಕಬ್ಬಿಣದ ತುಂಡಿನಲ್ಲಿ ಮಾರ್ಪಾಡು ಕಂಡುಬರುತ್ತದೆ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡ ಒಬ್ಬ ಜ್ಞಾನಿಯೂ ಹಾಗೆಯೇ ಭಗವದ್ರಸದಲ್ಲಿ ಸದಾ ಕಾಲದಲ್ಲಿಯೂ ಮುಳುಗಿರುತ್ತಾನೆ. ಹಾಗಾಗಿ ಭಗವದ್ರಸವನ್ನು ತನ್ನ ಸಪ್ತ-ಧಾತುಗಳಲ್ಲಿಯೂ, ತ್ರಿಕರಣಗಳಲ್ಲಿಯೂ ತುಂಬಿಕೊಂಡಿರುತ್ತಾನೆ.  ಏಲಕ್ಕಿ ತಿಂದು ಮಾತನಾಡುವವನ ಬಾಯಿಂದ ಮಾತಿನ ಜೊತೆಗೆ, ಏಲಕ್ಕಿಯ ಪರಿಮಳ ಸಹಜವಾಗಿ ಪಸರಿಸುತ್ತದೆ. ಹಾಗೆಯೇ ಅಂತಹ ಜ್ಞಾನಿಯ ಎಲ್ಲಾ ಕೆಲಸಗಳಲ್ಲಿಯೂ, ನಡೆಗಳಲ್ಲಿಯೂ ಭಗವದ್ರಸ ಎದ್ದು ಕಾಣುವಂತಿರುತ್ತದೆ. ಅಂತಹ ಜ್ಞಾನಿಯು ಸಿಕ್ಕರೆ, ಆತನಿಗೆ ಸಮರ್ಪಿಸಿದ ಎಲ್ಲವನ್ನೂ ಭಗವಂತನಿಗೆ ತಲುಪಿಸುವ ಮತ್ತು ಅಲ್ಲಿಂದ ಬಂದ ಪ್ರೇರಣೆಯನ್ನು ನಮ್ಮೆಡೆಗೆ ತಲುಪಿಸುವ ವಾಹಕನಾಗಿ ಕೆಲಸ ಮಾಡುತ್ತಾನೆ. ಅಂತಹವನಿಗೆ ಪೂಜೆ ಮಾಡಿದರೆ, ನೇರವಾಗಿ ಭಗವಂತನಿಗೆ ಪೂಜೆ ಮಾಡಿದಂತೆ. ಅಂತಹವನು ಸರ್ವಾತ್ಮನಾ ಪೂಜ್ಯ.

ಹಾಗಾಗಿ ಜ್ಞಾನಿಗೆ ಪೂಜೆ ಮಾಡುವ ವಿಷಯ ಯಾವುದೊ ಒಂದು ವ್ಯಕ್ತಿಗೆ ಸಲ್ಲಿಸುವ ಪೂಜೆ ಅಥವಾ ಗೌರವ ಎಂದು ಭಾವಿಸಬಾರದು. ಜ್ಞಾನಿ ಎಂಬ ಪ್ರತಿನಿಧಿಯ ಮೂಲಕ, ಇಡೀ ಜಗತ್ತಿಗೇ ನಿಧಿಯಾಗಿರುವ ಪರಮಾತ್ಮನಿಗೆ ಸಲ್ಲಿಸುವ ಪೂಜೆ. ಹಿಂದಿನ ಕಾಲದಲ್ಲಿ ಗುರು-ಹಿರಿಯರು ಇಂತಹ ಜ್ಞಾನಿಗಳಾಗಿರುತ್ತಿದ್ದರು. ಹಾಗಾಗಿ ಅವರನ್ನು ಗೌರವಿಸುವ ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಇಂತಹ ಪದ್ದತಿಗಳನ್ನು ನಮ್ಮ ಸಂಸ್ಕೃತಿಯಲ್ಲಿ ಸೇರಿಸಿದ ಮಹರ್ಷಿಗಳಿಗೆ ನತಮಸ್ತಕರಾಗೋಣ.   

ಸೂಚನೆ: 21/04/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.