Wednesday, April 29, 2020

ಪರಿಶ್ರಮದ ಬೆಲೆ (Parisramada Bele)

ಲೇಖಕಿ ; ಶ್ರೀಮತಿ ರತ್ನಾವತಿ ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in) 
  

ಗುರುಕುಲದಲ್ಲಿ ದಡ್ಡಶಿಖಾಮಣಿ ಬಾಲಕನೊಬ್ಬ ಅಧ್ಯಯನ ಮಾಡುತ್ತಿದ್ದ. ಒಮ್ಮೆ ಪಾಠದಲ್ಲಿ ತಪ್ಪುಮಾಡಿದ್ದಕ್ಕೆ ಗುರುಗಳು ಬೆತ್ತಪ್ರಹಾರಕ್ಕಾಗಿ ಕೈಚಾಚಲು ಹೇಳುತ್ತಾರೆ. ಅದು ಹಿಂದಿನಕಾಲದ ಪದ್ದತಿ. ಬಾಲಕನ ಕೈನೋಡಿ ತಕ್ಷಣ ಗುರುಗಳು ತಮ್ಮ ಕೈಯನ್ನು ಹಿಂದಕ್ಕೆಳೆದು ಕೊಳ್ಳುತ್ತಾರೆ. ಬಾಲಕನ ಕೈಯಲ್ಲಿ ವಿದ್ಯಾರೇಖೆಯೇ ಇರಲಿಲ್ಲ! ಗುರುಗಳು "ನಿನ್ನಕೈಯಲ್ಲಿ ವಿದ್ಯಾರೇಖೆಯೇ ಇಲ್ಲ, ನಿನ್ನನ್ನು ದಂಡಿಸಿಯೂ ಪ್ರಯೋಜನವಿಲ್ಲ. ಮನೆಗೆ ಹೋಗು" ಎನ್ನುತ್ತಾರೆ.
ಬಾಲಕ ಅತ್ಯಂತ ದುಃಖತಪ್ತನಾಗಿ ಮನೆಗೆ ಬರುತ್ತಿರುವಾಗ ಕೆಲವು ಹೆಂಗಳೆಯರು ಬಾವಿಕಟ್ಟೆಯಲ್ಲಿ ನೀರು ಸೇದುತ್ತಿದ್ದರು. ಹೆಂಗಸರು ನೀರುಸೇದಿ ಕೊಡ ಇಡುವ ಜಾಗದಲ್ಲಿ ಮಾತ್ರ ಹೊಂಡವೇರ್ಪಟ್ಟಿತ್ತು. ಅದನ್ನು ಕಂಡ ಬಾಲಕ "ಬಾವಿಕಟ್ಟೆ ಕಟ್ಟುವಾಗಲೇ ಹೀಗೆ ಕೊರೆದುಕಟ್ಟಿದ್ದಾರೆಯೇ?" ಎಂದ. ಅವರು "ಇಲ್ಲ, ಕಟ್ಟುವಾಗ ಸರಿಯಾಗಿಯೇಕಟ್ಟಿದ್ದರು, ದಿನವೂ ಕೊಡ ಇಟ್ಟುಇಟ್ಟು ಹೀಗಾಗಿದೆ" ಎಂದರು. ಬಾಲಕನು ಕಲ್ಲೇ ಹೀಗಾದರೆ 'ನಾನು ಪ್ರಯತ್ನಪಟ್ಟರೆ ವಿದ್ಯೆ ಬಾರದೇಕೆ? ಆದರೆ ವಿದ್ಯಾರೇಖೆಯೇ ಇಲ್ಲವಲ್ಲ' ಎಂದು ಯೋಚಿಸಿ, ಹರಿತವಾದ ಕತ್ತಿಯೊಂದರಿಂದ ವಿದ್ಯಾರೇಖೆ ಇರಬೇಕಾದಲ್ಲಿ ರೇಖೆಯನ್ನು ಕೊರೆದುಕೊಂಡು ಗುರುಕುಲಕ್ಕೆ ಪ್ರವೇಶಿಸುತ್ತಾನೆ.

ಕೋಪಗೊಂಡ ಗುರುಗಳು "ನಿನಗೆ ವಿದ್ಯಾರೇಖೆಯೇ ಇಲ್ಲ, ಇಲ್ಲಿಗೆ ಬರಬೇಡವೆಂದಿದ್ದನಲ್ಲ" ಎಂದರು. ಆತನು "ಗುರುಗಳೇ, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದಿದ್ದೇನೆ" ಎಂದನು. ಗುರುಗಳು "ಏನು, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದೆಯಾ?" ಎಂದು ಬಾಲಕನ ಕೈಯನ್ನು ನೋಡುತ್ತಾರೆ. ವಿದ್ಯಾರೇಖೆಯಿರುವಲ್ಲಿ ಕೈಸಿಗಿದಿರುವುದನ್ನು ಕಂಡು ಅವರ ಕಣ್ತುಂಬಿ ಬಂದು  ಪ್ರೀತಿಯಿಂದ "ಮಗು, ಸಹಜವಾಗಿ ಇರೆಬೇಕಾದ ವಿದ್ಯಾರೇಖೆ ಇಲ್ಲವಾದ್ದರಿಂದ ಶಿವನನ್ನು ಮೊರೆಹೋಗು" ಎಂದು ಅವನನ್ನು ತಪಸ್ಸಿಗೆ ಹಚ್ಚುತ್ತಾರೆ. ಬಾಲಕನ ಕಠೋರತಪಸ್ಸಿಗೆ ಶಿವ ಪ್ರತ್ಯಕ್ಷನಾದನು. ಆದರೆ ಒಂದಕ್ಷರವನ್ನೂ ಮಾತನಾಡದೆ ತನ್ನ ಢಮರುಗವನ್ನು ೧೪-ಸಾರಿ ಬಾರಿಸುತ್ತಾನೆ. ೧೪-ನಾದಗಳು ಹೊರಹೊಮ್ಮಿತು, 'ನೃತ್ತಾವಸಾನೆ ನಟರಾಜರಾಜಃ' ಇದನ್ನಾಧರಿಸಿ ಸಂಸ್ಕೃತ-ವ್ಯಾಕರಣಶಾಸ್ತ್ರ ರಚನೆಮಾಡಿದ ಆ ಬಾಲಕನೇ ಪಾಣಿನಿಮಹರ್ಷಿಗಳು.

ಶ್ರಮದ ಅರಿವು ಇಲ್ಲದಿದ್ದರೆ, ವಿದ್ಯೆಯ ಬೆಲೆ ತಿಳಿಯುವುದಿಲ್ಲ ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ವಿದ್ಯಾರ್ಜನೆಗಿರಬೇಕಾದ ಅರ್ಹತೆಗಳಲ್ಲಿ ಇದೊಂದು ಮುಖ್ಯವಾದ ಅಂಶವಾಗಿದೆ. ಪುರುಷಪ್ರಯತ್ನ-ದೈವಾನುಗ್ರಹಗಳೆರಡೂ ಕೂಡಿದಾಗ ಕಾರ್ಯಸಿದ್ಧಿ ಖಚಿತವೆಂಬುದನ್ನು ಸ್ಪಷ್ಟಪಡಿಸುತ್ತದೆ ಮೇಲಿನ ಘಟನೆ. ಭಗವಂತನನ್ನು ಪ್ರಾರ್ಥಿಸಿ ಪುರುಷಪ್ರಯತ್ನ ಮಾಡೋಣ. ವಿದ್ಯಾವಂತರಾಗೋಣ.

ಸೂಚನೆ: 29/04/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.