Tuesday, March 17, 2020

ಶ್ರೀಯುತ ಛಾಯಾಪತಿಗಳು (Sriyuta Chayapatigalu)

ಸಂಗ್ರಹ : ಶ್ರೀ ಮಹಾಬಲ ಭಟ್ಟ
(ಪ್ರತಿಕ್ರಿಯಿಸಿರಿ : lekhana@ayvm.in)

ಶ್ರೀಯುತ ವಿದ್ವಾನ್ ಶ್ರೀ ಛಾಯಾಪತಿ. ಎಂ.ಎ . (Sriyutha Vidvan Sri Chayapathi. M.A.)

ಶ್ರೀ ಶ್ರೀರಂಗಮಹಾಗುರುಗಳ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬರಾದ ಮಂದಿರದ ಉಪಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ ಕೀರ್ತಿಶೇಷರಾಗಿರುವ ಶ್ರೀ ಛಾಯಾಪತಿ ಅವರ ಕಿರುಪರಿಚಯ.

ಹಾಸನ ಜಿಲ್ಲೆ ಹಳ್ಳಿ ಮೈಸೂರು ಗ್ರಾಮದ ಶ್ರೀ ಅನಂತರಾಮಯ್ಯ ಮತ್ತು ಶ್ರೀಮತಿ ಕಾಮಾಕ್ಷಮ್ಮ ದಂಪತಿಗಳ ದ್ವಿತೀಯ ಪುತ್ರರು. ಈಶ್ವರನಾಮ ಸಂವತ್ಸರದ ಮಾಘ-ಕೃಷ್ಣ- ಪಂಚಮಿ ಶನಿವಾರದಂದು (19.2.1938) ವರ ಮಾತಾಮಹರ ಸಾಲಿಗ್ರಾಮದ ಗೃಹದಲ್ಲಿ ಜನಿಸಿದರು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ತಂದೆಯ ವಿಯೋಗ ಆದ ಕಾರಣ ಅವರ ವಿದ್ಯಾಭ್ಯಾಸ ಪ್ರೌಡಶಾಲೆಯವರೆಗೂ (SSLC) ಸಾಲಿಗ್ರಾಮದಲ್ಲಿ ನೆರವೇರಿತು. ಮುಂದಿನ ಓದಿಗಾಗಿ ಮೈಸೂರಿಗೆ ಬಂದರು. ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ತರ್ಕಶಾಸ್ತ್ರದಲ್ಲಿ ವಿದ್ವತ್ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪೂರ್ವವಿದ್ವತ್ ಮುಗಿಸಿದರು. ಜೊತೆಗೆ ಕನ್ನಡ ಪಂಡಿತ ಪರೀಕ್ಷೆ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ. ಎರಡನ್ನೂ ಸ್ವರ್ಣಪದಕಗಳೊಂದಿಗೆ ಮುಗಿಸಿದರು. ಓದಿನಲ್ಲಿ ತುಂಬ ಚುರುಕುಬುದ್ಧಿ ಮತ್ತು ಪ್ರತಿಭಾಶಾಲಿಗಳಾಗಿದ್ದರು. ಆಗಲೇ 50 ಕ್ಕೂ ಹೆಚ್ಚು ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹಳಷ್ಟು ಬಹುಮಾನಗಳನ್ನು ಸಂಪಾದಿಸಿದ್ದರು. ಆಗಿನಿಂದಲೇ ಅವರು ವಿಚಾರ-ವಿಮರ್ಶೆ ಮಾತುಗಾರಿಕೆಯನ್ನು ರೂಢಿಸಿಕೊಂಡವರು. ಇದಕ್ಕೆ ಪುಟವಿಟ್ಟಂತೆ ಸಂಸ್ಕೃತಕಾಲೇಜಿನಲ್ಲಿ ಅಧ್ಯಾಪಕರಾದ ಪೂಜ್ಯ ರಾಮಭದ್ರಾಚಾರ್ಯರಿಂದ ನಿರಂತರವಾಗಿ ಜೊತೆಗೆ ಆಗಾಗ ಪೂಜ್ಯ ದೊರೆಸ್ವಾಮಿಗಳಿಂದ ಆರ್ಷವಿಚಾರಗಳ ಬಗ್ಗೆ ಅಂತೆಯೇ ಶ್ರೀರಂಗಸದ್ಗುರುವಿನ ವಿಚಾರಸರಣಿಯ ಬಗ್ಗೆ ವಿಶೇಷವಾದ ಪರಿಚಯ ಲಭ್ಯವಾಯಿತು. ಭಾಗ್ಯದಿಂದ ಶ್ರೀಗುರುವಿನ ಅನುಗ್ರಹವೂ ದೊರೆತು ಆಧ್ಯಾತ್ಮ ಸಾಧಕರಾದರು. 

ಓದನ್ನು ಮುಗಿಸುತ್ತಿದ್ದಂತೆ ಶ್ರೀ ಛಾಯಾಪತಿಗಳ ಜೀವನ ಮತ್ತೊಂದು ಒಳ್ಳೆಯ ತಿರುವನ್ನು ಕಂಡಿತು. ಉಚ್ಛಶ್ರೇಣಿಯಲ್ಲಿ ಓದನ್ನು ಮುಗಿಸಿದ ಅವರಿಗೆ ಶಿಕ್ಷಣವೃತ್ತಿ ದೊರೆಯಲು ಯಾವ ತೊಂದರೆಯೂ ಇರಲಿಲ್ಲ. ಆದರೆ ಕೂಡಲೆ ಒಂದು ವೃತ್ತಿಯನ್ನು ಸಂಪಾದಿಸಿ ವಿವಾಹ ಸಂಸಾರಜೀವನ ಎಂದು ಬಿಡುವಿಲ್ಲದ ಜೀವನದಲ್ಲಿ ಸಿಲುಕಿಸಿಕೊಳ್ಳಲು ಮನಸ್ಸಾಗಲಿಲ್ಲ. ಮುಂದೆ ಅದು ಇದ್ದದ್ದೇ. ಆದರೆ ಅದಕ್ಕೂ ಮೊದಲು 1-2 ವರ್ಷಗಳು ಶ್ರೀರಂಗಸದ್ಗುರುವಿನ ಅಂತೇವಾಸಿಯಾಗುಳಿದು ಅವರಿಂದ ಸಾಧ್ಯವಾದಷ್ಟು ದೈವೀವಿಚಾರ ಸದ್ವಿಚಾರಗಳನ್ನು ಕೇಳಿ ಆಸ್ವಾದಿಸಿಕೊಂಡಿರುವುದು ತುಂಬ ಉತ್ತಮವಾದದ್ದೆನಿಸಿತು. ಹೀಗಾಗಿ ಉದ್ಯೋಗದ ವಿಚಾರವನ್ನು ಮುಂದಕ್ಕೆ ಹಾಕಿ ಶ್ರೀಗುರುವಿನ ಬಳಿಯಲ್ಲಿಯೇ ಇರಬೇಕೆಂದು ಬಯಸಿದರು.

1962 ರಲ್ಲಿ ವಿದ್ಯಾರಣ್ಯಪುರಂನಲ್ಲಿ ಶ್ರೀ ಛಾಯಾಪತಿಗಳು ನಡೆದು ಬರುತ್ತಿರುವಾಗ ದಾರಿಯಲ್ಲಿ ಸಿಕ್ಕಿದ ಶ್ರೀ ಬಿ.ಟಿ ಶ್ರೀನಿವಾಸ ಐಯಂಗಾರ್ ಸಾರ್ವಜನಿಕ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರು “ಛಾಯಾಪತಿಗಳೇ, ನಾಳೆಯಿಂದ ನಮ್ಮ ಶಾಲೆಗೆ ಕನ್ನಡ ಅಧ್ಯಾಪಕರಾಗಿ ಬನ್ನಿ” ಎಂದು ಕರೆದರು. ಆಗ ಅವರು “ನಾನು ಕನ್ನಡ ಪಂಡಿತ ಪರೀಕ್ಷೆಗೆ ಕಟ್ಟಿದ್ದೇನೆ. ಇನ್ನೂ Result ಬಂದಿಲ್ಲ” ಎಂದಾಗ, ಮುಖ್ಯೋಪಾಧ್ಯಾಯರು “ನೀವು ಈ ದಿನದ ಪೇಪರ್ ನೋಡಿಲ್ಲವೇ? ನಿಮಗೆ ಖಚಿಟಿಞ ಬಂದಿದೆ. ನಾಳೆಯಿಂದ ಬನ್ನಿ” ಎಂದು ಆಹ್ವಾನ ನೀಡಿದರು. 

ಶ್ರೀರಂಗ ಗುರುವು ಕುಟುಂಬಿಗಳು, ಕೃಷಿಕರು. ಆ ವರೆಗೆ ಶ್ರೀಗುರುವಿನ ಬಹಳ ಜನ ಸಾಧಕಭಕ್ತರಿದ್ದರೂ ಅವರೆಲ್ಲ ವಿಶೇಷ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬಂದು ಕಾರ್ಯಕ್ರಮಗಳು ಮುಗಿದೊಡನೆಯೆ ತಮ್ಮ ಮನೆಗಳಿಗೆ ತೆರೆಳುತ್ತಿದ್ದರು. ಇದನ್ನು ಬಿಟ್ಟು ಖಾಯಂ ಆಗಿ ಅಲ್ಲಿಯೇ ಉಳಿಯುವ ಪರಿಪಾಠ ಇರಲಿಲ್ಲ. ಹೀಗಾಗಿ ತಾವೇನು ಮಾಡುವುದು ಎಂದು ಯೋಚಿಸಿ ಶ್ರೀಗುರುವಿನ ಆದ್ಯ ಶಿಷ್ಯರೂ ಆಪ್ತರೂ ಅದೇ ಊರಿನವರೂ ಆದ ಪೂಜ್ಯ ದೊರೆಸ್ವಾಮಿಗಳ ಬಳಿ ತಮ್ಮ ಮನಸ್ಸನ್ನು ತೋಡಿಕೊಂಡರು. ಪೂಜ್ಯ ದೊರೆಸ್ವಾಮಿಗಳು ಶ್ರೀಗುರುವಿನ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದರು. ಅದಕ್ಕೆ ಶ್ರೀಗುರುವು ಯೋಚಿಸಿ ``ಅಪ್ಪಾ ಅವರ ಅಪೇಕ್ಶೆ ಸರಿ. ಆದರೆ ಸಂಸಾರ ಎಂದ ಮೇಲೆ ಪರಿಸ್ಥಿತಿ ಎಲ್ಲಾ ದಿನಗಳಲ್ಲಿಯೂ ಒಂದೇ ತರಹ ಇರುವುದಿಲ್ಲ. ನನ್ನ ಕೃಷಿಕಾರ್ಯಗಳ ಒತ್ತಡಗಳೂ ಕೆಲವು ಇರುತ್ತವೆ. ಅವಕ್ಕೆಲ್ಲಾ ಹೊಂದಿಕೊಂಡು ನಮ್ಮ ಮನೆಯಲ್ಲಿ ಎಲ್ಲರ ಜೊತೆ ಅವರೂ ಒಬ್ಬರಾಗಿ ಇದ್ದುಕೊಳ್ಳುವ ಪಕ್ಷೇ ಆಗಲೀಪ್ಪ ಎಂದರಂತೆ. ಶ್ರೀಛಾಯಾಪತಿಗಳು ಆ ಮನೆಯ (ಶ್ರೀಗುರುಗೃಹದ) ಮತ್ತೊಬ್ಬ ಸದಸ್ಯರಾದರು. ಶ್ರೀಗುರುದಂಪತಿಗಳ ವಾತ್ಸಲ್ಯಧಾರೆಯನ್ನು ವಿಶೇಷವಾಗಿ ಅನುಭವಿಸುವ ಸುಕೃತಿಗಳಾದರು. ಇದೇ ತರಹ ಡಾI ಗಣೇಶರಾಯರನ್ನೂ ಸಹ ಶ್ರೀಸದ್ಗುರುಗಳು ತಮ್ಮ ಮನೆಯಲ್ಲೇ ಕೆಲಕಾಲ ಉಳಿಸಿಕೊಂಡು ನಾಡೀವಿಜ್ಞಾನವನ್ನು ಕುರಿತು ಪಾಠಮಾಡಿದ್ದರು. ಋಷಿಗಳು ಹೇಗೆ ಜ್ಞಾನಪಿಪಾಸುಗಳಾದ ಶಿಷ್ಯರನ್ನು ತಮ್ಮ ಆಶ್ರಮಗಳಲ್ಲೇ ಇಟ್ಟುಕೊಂಡು ವಿದ್ಯಾದಾನ ಅನ್ನದಾನ ಎರಡನ್ನೂ ನೀಡಿ ಬೆಳಸುತ್ತಿದ್ದರೋ ಋಷಿಗಳ ಜ್ಞಾನ-ವಿಜ್ಞಾನ, ವಿದ್ಯೆಕಲೆ ಸಂಸ್ಕೃತಿಗಳನ್ನು ಉಳಿಸಲು ಈ ಲೋಕಕ್ಕೆ ಬಂದಿದ್ದ ಶ್ರೀರಂಗ ಸದ್ಗುರು ದಂಪತಿಗಳು ಆ ಆದರ್ಶವನ್ನೇ ಮುಂದುವರಿಸಿದರು.

ಅಂತೂ ಪುಣ್ಯಶಾಲಿಗಳಾದ ಶ್ರೀಛಾಯಾಪತಿಗಳು ಹೆಡತಲೆಗೆ ಹೋಗಿ ಶ್ರೀಗುರುಗೃಹ ಸೇರಿ ಶ್ರೀಗುರುವಿನ ಅಂತೇವಾಸಿಗಳಾದರು. ಇದನ್ನು ನೆನಸಿಕೊಂಡಾಗಲೆಲ್ಲಾ ಶ್ರೀ ಛಾಯಾಪತಿಗಳು ಶ್ರೀಗುರುದಂಪತಿಗಳ ವಾತ್ಸಲ್ಯ ಕಾರುಣ್ಯಗಳ ಬಗ್ಗೆ ಭಾವುಕರಾಗಿಬಿಡುತ್ತಿದ್ದರು. ಶ್ರೀಗುರುವೂ ಸಹ ಈ ಕಾಲವನ್ನು ಉಪಯೋಗಿಸಿಕೊಂಡು ಶ್ರೀಛಾಯಾಪತಿಗಳ ಹೃದಯ ಬುದ್ಧಿಗಳಲ್ಲಿ ಒಂದು ಶಿಲ್ಪವನ್ನು ಕೆತ್ತಿದರು. ಸಾಮಾನ್ಯವಾಗಿ ಬೆಳಗಿನಿಂದ ರಾತ್ರಿ ವಿಶ್ರಮಿಸುವವರೆಗೂ ಕೆಲವೊಮ್ಮೆ ಕೃಷಿಕಾರ್ಯಗಳಿಗಾಗಿ ಹೊಲ-ಗದ್ದೆಗಳಿಗೆ ಹೋದರೆ ಅಲ್ಲೂ ಹೋಗಿ ಬರುವ ದಾರಿಯಲ್ಲಿಯೂ ಹಂತಹಂತವಾಗಿ ಮೇಲೆ ಸೂಚಿಸಿರುವ ವ್ಯಾಪಕ ವಿಷಯಗಳನ್ನು ಕುರಿತು ತಮ್ಮ ದರ್ಶನವನ್ನೆಲ್ಲ ಬಿತ್ತರಿಸಿ ತಿಳಿಸಿದರು. ಇದರಿಂದ ಶ್ರೀಛಾಯಾಪತಿಗಳಿಗೆ ಉಂಟಾಗುತ್ತಿದ್ದ ಸಂತೋಷ ಆತ್ಮೋಕರ್ಷ ಸ್ಪೂರ್ತಿಗಳು ಅವರು ಆ ಕುರಿತು ಹೇಳುವಾಗಲೇ ಕೇಳಿದವರಿಗೆ ಮನದಟ್ಟಾಗುತ್ತಿದ್ದವು. ಅಂತೂ ಯೋಗೇಶ್ವರಿಯಾದ ಶ್ರೀಮಾತೆಯವರು ದಯಪಾಲಿಸುತ್ತಿದ್ದ ಪ್ರಸಾದಗಳು ಅವರ ಚಿತ್ತ ಪ್ರಸನ್ನತೆ ಧಾತುಪ್ರಸನ್ನತೆಗಳಿಗೆ ಕರಣವಾಗಿದ್ದರೆ ಶ್ರೀಗುರುವಿನ ಸನ್ನಿಧಿ, ವಾಗ್ವ್ಯಾಪಾರಗಳು ಬುದ್ಧಿಗೆ ಪರಿಷ್ಕಾರ, ಪಕ್ವತೆಗಳನ್ನು ನೀಡುತ್ತಿದ್ದವು. 

ಇದೇ ಸಮಯದಲ್ಲಿ ಶ್ರೀಛಾಯಪತಿಗಳು ಅ ಗುರುದಂಪತಿಗಳನ್ನು ಆಸ್ವಾದಿಸಿ ತಾವಷ್ತೇ ಸಂತಸಪಟ್ಟು ಸುಮ್ಮನಾಗುತ್ತಿರಲಿಲ್ಲ. ಬದಲಿಗೆ ರಾತ್ರಿ ಕುಳಿತು ಆಯಾ ದಿನಗಳ ಮಾತುಗಳನ್ನು ಲೇಖನಗಳನ್ನಾಗಿ ಬರೆದು ಮರುದಿನ ಶ್ರೀಗುರುವಿಗೆ ತೋರಿಸುತ್ತಿದ್ದರು. ಶ್ರೀಗುರುವು ಅವುಗಳನ್ನು ಪರಿಶೀಲಿಸಿ ತಿದ್ದುಪಡಿ ಇದ್ದರೆ ತಿದ್ದಿಸಿ ಊ.ಖಿ.S.ಖ. ಎಂದು ತಮ್ಮ ಹಸ್ತಾಂಕನವನ್ನು ಹಾಕಿಕೊಡುತ್ತಿದ್ದರಂತೆ. ಇದರಿಂದ ಶ್ರೀಗುರುವಿನ ವಾಗ್ವ್ಯಾಪರವು ಕೇವಲ ಗಾಳಿಮಾತಾಗದೆ. ದಾಖಲಾಗಿ ಉಳಿಯಲು ಉಪಕಾರವಾಯಿತು. ಮುಂದೆ ಶ್ರೀಮಂದಿರ ಶ್ರೀಗುರುವಿನ ಮಾತುಗಳನ್ನು ``ಆರ್ಯ ಸಂಸ್ಕೃತಿ ಮಾಸಪತ್ರಿಕೆಯಲ್ಲಿ ``ಶ್ರೀಗುರುವಾಣಿ ಎಂಬ ಶೀರ್ಷಿಕೆಯಲ್ಲಿಯೂ ಆಮೇಲೆ ಅವುಗಳನ್ನೆಲ್ಲ ಸಂಕಲಿಸಿ `ಅಮರವಾಣಿ ಸಂಪುಟಗಳನ್ನಾಗಿ ಪ್ರಕಾಶಪಡಿಸಿತು. ಈ ಪ್ರಕಾಶನಗಳಿಗೆ ಇನ್ನೂ ಹಲವಾರು ಭಕ್ತ-ಭಕ್ತೆಯರ ಕಾಣಿಕೆಗಳಿದ್ದರೂ ಶ್ರೀಛಾಯಾಪತಿಗಳ ಈ ಸೇವೆ ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ಅವರ ಈ ಲಿಪಿ ಸೇವೆ ಶ್ರೀಮಂದಿರಕ್ಕೂ ಭಕ್ತ ಸ್ತೋಮಕ್ಕೂ ಒಂದು ಅಮೂಲ್ಯ ಸಂಪತ್ತಾಯಿತು. 

ಆಮೇಲೆ ಶ್ರೀಛಾಯಾಪತಿಗಳು ವೃತ್ತಿ ಜೀವನಕ್ಕೆ ಅಡ್ಡಿಯಿಟ್ಟರು. ಮೊದಲು ಮೈಸೂರಿನ ‘ಸಾರ್ವಜನಿಕ ಪ್ರೌಡಶಾಲೆಯಲ್ಲಿ ಶಿಕ್ಷಿತರು, ಆಮೇಲೆ ಮೈಸೂರಿನ `ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ನಡೆಸಿದರು. ಆದರೂ ಮಧ್ಯೆ ಮಧ್ಯೆ ಕಾರ್ಯಕ್ರಮಗಳಿಗಾಗಿ ಅಥವಾ ಬಿಡುವು ದೊರೆತಾಗ ಹೆಡತಲೆಯ ಶ್ರೀಗುರುಗೃಹಕ್ಕೆ ಹೋಗಿಬರುತ್ತಲೇ ಇರುತ್ತಿದ್ದರು. ಮುಂದಿನ ದಿನಗಳಲ್ಲಿ ಪೂಜ್ಯ ಹಿರಿಯರಾಗಿದ್ದ ಶ್ರೀ ಓ. ಶ್ರೀಕಂಠರು ಪ್ರಧಾನ ಕಾರ್ಯದರ್ಶಿಗಳಾಗಿಯೂ, ಶ್ರೀಯುತರು ಉಪಕಾರ್ಯದರ್ಶಿಗಳಾಗಿಯೂ ಬಹುಕಾಲ ತಮ್ಮ ಸೇವೆ ಸಲ್ಲಿಸಿದರು. 

ಶ್ರೀಗುರುವು ಪ್ರಕಾಶಪಡಿಸಿರುವ `ಅಷ್ಟಾಂಗಯೋಗವಿಜ್ಞಾನಮಂದಿರಂ ಎಂಬ ಸಂಸ್ಥೆಯಲ್ಲಿ ಗುರುಭಕ್ತರು ಸೇರಿದ ಸಭೆಯಲ್ಲಿ ಅಂತೆಯೇ ಬಹಿರಂಗ ವೇದಿಕೆಯಲ್ಲಿ ಶ್ರೀಗುರುವಿನ ವಿಚಾರ ಸರಣಿಯನ್ನು ಪ್ರಸ್ತುತಪಡಿಸಲು ಶ್ರೀ ಗುರುವು 4-5 ಪ್ರವಚನಕಾರರನ್ನು ನಿಮುಕ್ತಿಗೊಳಿಸಿದ್ದರು. ಅವರಲ್ಲಿ ಆಗಲೇ ಕೆಲವು ಹಿರಿಯರಿದ್ದರು. ಅವರೊಡನೆ ಶ್ರೀ ಛಾಯಾಪತಿಗಳೂ ಆಮೇಲೆ ನಿಯುಕ್ತಿಗೊಂಡರು. ಆ ಪ್ರವಚನಕಾರರಲ್ಲಿ ಎಲ್ಲರೂ ತಮ್ಮಲ್ಲಿರುವ ಒಂದೊಂದು ವಿಶೇಷಾಂಶಗಳಿಂದ ಕೂಡಿ ವಾಕ್ ಸೇವೆ ಸಲ್ಲಿಸುತ್ತಾ ಶ್ರೀಗುರುವಿನ ವಿಚಾರಸರಣಿಯನ್ನು ಮಂದಿರದ ಗುರುಭಕ್ತರಿಗೂ ಆಸಕ್ತರಾದ ಹೊರಗಿನ ಜನರಿಗೂ ತಿಳಿಸಿ ಬೆಳಸುವ ಮಹತ್ವದ ಕಾರ್ಯವನ್ನು ಮಾಡಿರುವರು. ಈ ವಿಷಯದಲ್ಲಿಯೂ ಶ್ರೀ ಛಾಯಾಪತಿಗಳು ನಿಜಕ್ಕೂ ಸ್ಮರಣೀಯರು. ವಿದ್ಯಾರ್ಥಿದೆಸೆಯಿಂದಲೇ ವಿಚಾರ-ವಿಮರ್ಶೆ ಅಭಿವ್ಯಕ್ತಿಗಳ ಪ್ರತಿಭಾನ್ವಿತರಾದ ಶ್ರೀಯುತರು ಹಿರಿಯರಿಂದ ಸಾಕಷ್ಟು ವಿಷಯಗಳನ್ನು ಸಂಪಾದಿಸಿದ್ದಲ್ಲದೇ ನೇರವಾಗಿ ಶ್ರೀಗುರುವಿನಿಂದಲೇ ವಿಸ್ತಾರ ಪಾಠಗಳನ್ನು ಕೇಳಿದ್ದರಿಂದ, ಬರವಣಿಗೆಯನ್ನು ಮಾಡಿದ್ದರಿಂದ ಶ್ರೀಗುರುವಿನ ವಿಚಾರಸರಣಿಯ ಆಳ-ಅಗಲ ವ್ಯಾಪಕತೆಯನ್ನು ಚೆನ್ನಾಗಿ ತಿಳಿದವರಾಗಿದ್ದರು. 

ಅವರ ಪ್ರವಚನಗಳಲ್ಲಿ ಒಂದು ವಿಶೇಷತೆಯನ್ನು ಗುರುತಿಸುವಂತಿತ್ತು. ಅದೇನೆಂದರೆ ಮಂದಿರದ ಆಂತರಂಗಿಕ ಸಭೆಯಲ್ಲಿ ಗುರುಭಕ್ತರೇ ಇರುತ್ತಿದ್ದರಿಂದ ಅಲ್ಲಿ ಅತಿಯಾದ ತರ್ಕ ವಿಮರ್ಶೆಗಳು ಇರುತ್ತಿರಲಿಲ್ಲ. ಶ್ರೀಗುರುಭಕ್ತರ ಮತ್ತು ಅವರು ತಮ್ಮ ಭಕ್ತರಿಗೆ ಕರುಣಿಸಿರುವ ಸಾಧನಾಮಾರ್ಗದ ವಿಶೇಷತೆಗಳ ಬಗೆಗೆ ಹೆಚ್ಚು ಒತ್ತು ಇರುತ್ತಿತ್ತು. ಇದರಿಂದಾಗಿ ಅವರ ಆ ಪ್ರವಚನಗಳು ಮಂದಿರದ ಸಾಧಕಭಕ್ತರಿಗೆ ಶ್ರೀಗುರುದಂಪತಿಗಳ ಬಗ್ಗೆ ದೃಡವಾದ ಭಕ್ತಿಯನ್ನು ಹೊಂದಿ ಮಾಡಬೇಕಾಗಿರುವ ಸಾಧನೆಯಲ್ಲಿ ಅಚಲಶ್ರದ್ಧೆ, ಏಕನಿಷ್ಠೆಗಳು ಬೆಳೆಯಲು ಉಪಕಾರವಾಗಿರುತ್ತಿದ್ದವು. ಅವರ ಬಹಿರಂಗ ಪ್ರವಚನಗಳ ನಡೆ ಸ್ವಲ್ಪ ಭಿನ್ನವಾಗಿರುತ್ತಿದ್ದವು. ಅವರು ಅಲ್ಲಿ ಪ್ರವಚನದ ಅಂದಿನ ವಿಷಯ(topic)ವನ್ನು ಕುರಿತು ಇಂದು ಲೋಕದಲ್ಲಿ ಪ್ರಚಲಿತವಿರುವ ವ್ಯಾಪಕನೋಟ ತಪ್ಪದೆ ಇರುತ್ತಿತ್ತು. ಆ ಕುರಿತು ಪ್ರಚಲಿತವಾದ ದಾಖಲೆಮಾಡಿರುವ ಪ್ರಶ್ನೆಗಳಷ್ಟೇ ಅಲ್ಲದೆ ಋಷಿಗಳ (time and level) ಗಳಿಂದ ದೂರಾಗಿ ಇಂದಿನ ಮಟ್ಟಕ್ಕಷ್ಟೇ ಸೀಮಿತವಾಗಿ ಯೋಚಿಸಿಕೊಂಡು ಎಲ್ಲವನ್ನೂ ನಿರ್ಧರಿಸುವಾಗ ಇನ್ನು ಏನೇನು ಪ್ರಸ್ನೆಗಳು ಬುದ್ಧಿಯಲ್ಲಿ ಏಳಲು ಸಾಧ್ಯ ಎಂಬ ಜಿಜ್ಞಾಸೆಗಳಿಂದ ತುಂಬಿರುತ್ತಿದ್ದವು. ಹೀಗಾಗಿ ಬಹಿರಂಗ ಪ್ರವಚನಗಳು ವಿಸ್ತಾರವಾದ ಪೀಠಿಕೆಯನ್ನು ಹೊಂದಿಯೇ ಇರುತ್ತಿದ್ದವು. ಆಮೇಲೆ ಮುಂದುವರಿದು ಈ ಎಲ್ಲ ಪ್ರಶ್ನೆಗಳಿಗೆ ನಮ್ಮ ಆರ್ಷಸಾಹಿತ್ಯಗಳಲ್ಲಿಯೇ ಇರುವ ಉತ್ತರಗಳನ್ನು ಸಮಯೋಚಿತವಾಗಿ ನೀಡಿ ಅಲ್ಲಿಯೂ ಪರಿಹಾರ ಕಾಣದ ಜಿಜ್ಞಾಸುಗಳಿಗೆ ತಮ್ಮ ಅಂತರ್ದಶನದ ಹಿನ್ನೆಲೆಯಿಂದ ಶ್ರೀರಂಗ ಸದ್ಗುರುವು ದಯಪಾಲಿಸಿರುವ ಸಾರ್ವಕಾಲಿಕವಾಗಿ ಸಾರ್ವತ್ರಿಕವಾಗಿ ಎಲ್ಲರೂ ಒಪಲೇ ಬೇಕಾದ ಸಂತ್ಯಾಂಶಗಳನ್ನು ಮುಂದಿರಿಸುತ್ತಾ ಉಪಸಂಹಾರನೀಡುವ ಪರಿ ಎಂತಹ ಬುದ್ಧಿಜೀವಿಗಳನ್ನಾದರೂ ಮಣಿಸಿ ಋಷಿಪ್ರಜ್ಞೆಗಳಿಗೆ ತಲೆಬಾಗುವಂತೆ ಮಾಡುತ್ತಿದ್ದವು. ಹೀಗೆ ಶ್ರೀಮಂದಿರದ ವಿಚಾರಗಳನ್ನು ಬಹಿರಂಗ ಸಭೆಗಳಲ್ಲಿ ಪ್ರಭಾವೀ, ಪರಿಣಾಮಕಾರಿಯಾಗಿ ಇಡುವಲ್ಲಿ ಅವರು ಬಹು ಯಶಸ್ವಿಗಳಾಗಿದ್ದರು.

ಅವರ ಜೀವನದಲ್ಲಿ ಇನ್ನೊಂದು ವಿಶೇಷವೇನಂದರೆ ಅವರು ಕಾಲವನ್ನು ಬಿಡದೇ ಉಪಯೋಗಿಸಿಕೊಂದವರೇ ವಿನಹ ವ್ಯರ್ಥವಾಗಿ ಕಳೆದವರೇ ಅಲ್ಲ. ವೃಥಾ ಮಾತನ್ನಾಡುವುದು, ವ್ಯರ್ಥವಾದ ಮಾತನ್ನಾಡುವುದು ಅವರಲ್ಲಿರಲಿಲ್ಲ. ಅವರು ಕಾಲೇಜಿಗೆ ಹೋಗುವ ಮುನ್ನ, ಹೋಗಿಬಂದಮೇಲೆ ಯಾವುದಾದರೂ ಹುಡುಗರೊಂದಿಗೆ ವಿಚಾರ-ವಿಮರ್ಶೆ ಅಥವಾ ಓದು-ಬರವಣಿಗೆ ಮಾಡುತ್ತಿದ್ದರು. ಮನೆಯ ಜವಾಬ್ದಾರಿಯನ್ನು ಅವರ ಶ್ರೀಮತಿಯವರೇ ಮಾಡುತ್ತಿದ್ದರು. ಈ ಬಗ್ಗೆ ಶ್ರೀಯವರು ತಲೆ ಹಾಕುವುದು ಕಡಿಮೆ. ಅವರಿಗೆ ಸಂತಾನಭಾಗ್ಯ ಇರಲಿಲ್ಲ. ಆ ಬಗ್ಗೆ ಅವರು ಬೇಸರ ಮಾಡಿಕೊಂಡಿದ್ದಿಲ್ಲ. ಬದಲಿಗೆ ತಮ್ಮ ಬಂಧುವರ್ಗದ ಎಷ್ಟೋ ಹುಡುಗರನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಅವರ ಓದಿಗೆ ನೆರವಾಗಿ ಅವರೆಲ್ಲಾ ಒಂದೊಂದು ದಾರಿ ಸಾಗಲು ಉದ್ದಕ್ಕೂ ಆಸರೆಯಗಿರುತ್ತಿದ್ದರು. ಅವರೆಲ್ಲಾ ಇವರನ್ನ ಇವರ ಶ್ರೀಮತಿಯವರನ್ನು ಸ್ವಂತ ತಂದೆತಾಯಿಗಳಂತೆ ಭಾವಿಸುತ್ತಿದ್ದರು. ಹೀಗಾಗಿ ಇವರ ಮನೆ ಬಂಧುಬಾಂಧವರಿಂದ ಬಂದು ಹೋಗುವ ಜನಗಳಿಂದ ಯಾವಾಗಲೂ ತುಂಬಿರುತಿದ್ದಿತ್ತು. 

ಲಕ್ಶ್ಮೀಪುರಂನಲ್ಲಿರುವ ಶ್ರೀಮಂದಿರದ ಹಿಂದುಗಡೆ ಮಂದಿರದ್ದೇ ಆದ ಎರಡು ಚಿಕ್ಕ ಮನೆ (out-house) ಗಳಿದ್ದವು. ಅವುಗಳಲ್ಲಿ ಒಂದು ಮನೆಯಲ್ಲಿ ಇವರಿದ್ದರು. ಶ್ರೀಮಂದಿರಕ್ಕೆ ಬಂದುಹೋಗುವವರಿಗೆ ಅದು ಆಶ್ರಮವಾಗಿತ್ತು. ಕಾರ್ಯಕ್ರಮಗಳಿಗೂ ದೂರದೂರದಿಂದ ಬರುವ ಗುರುಭಕ್ತರಿಗೂ ವಿಶೇಷವಾಗಿ ಸಿರ್ಸಿ-ಸಾಗರ ಕಡೆಯಿಂದ ಬರುವವರಿಗೆ ಕಾರ್ಯಕ್ರಮಕ್ಕೆ ಮೊದಲೇ ಬಂದು ಆಮೇಲೆಯೂ ಕೆಲದಿನಗಳು ಉಳಿದು ಮಧ್ಯಂತರದಲ್ಲಿ ಜರಗಿದ ಪ್ರವಚನಗಳ, ಗಾನಗಳ ಧ್ವನಿಮುದ್ರಿಕೆಗಳನ್ನೆಲ್ಲಾ ಕೇಳಿಕೊಡು ಹೋಗುವ ಉತ್ಸಾಹ ಇರುತ್ತಿತ್ತು. ಆಗೆಲ್ಲಾ ಛಾಯಾಪತಿಗಳ ಪತ್ನಿ ಶ್ರೀಮತಿ ಸಾವಿತ್ರಮ್ಮ, ಅಕ್ಕ ಶ್ರೀಮತಿ ಜಯಮ್ಮ ಇವರು ಸ್ವಲ್ಪವೂ ಬೇಸರಿಸಿಕೊಳ್ಳದೆ ಅತೀವ ಉತ್ಸಾಹ ಸಡಗರಗಳಿಂದ ಆದರಿಸುವ ಪರಿ ಮರೆಯಲಾರದ್ದು. ಆ ಮಧ್ಯದಲ್ಲಿಯೇ ಅವರಿಗೆ ಶ್ರೀ ಛಾಯಾಪತಿಗಳು ಯಾವುದಾದರೂ ವಿಷಯವನ್ನು ಕುರಿತು ಮಾತುಕತೆಗಳನ್ನಾಡುವುದು ಇರುತ್ತಿತ್ತು. ಹೀಗೆ ಶ್ರೀಛಾಯಾಪತಿಗಳ ಜೀವನ ಶ್ರೀಗುರುವಿಗಾಗಿ, ಶ್ರೀಗುರುಮಂದಿರಕ್ಕಾಗಿ ಸಮರ್ಪಿತ (devoted) ಜೀವನವಾಗಿತ್ತು. ಅವರು ಯಾವಾಗಲೂ ತಮ್ಮ ಗುರುವಿಗೆ ಹೇಳಿ/ಕೇಳಿ ಬರಬೇಕೆಂದು ಆಶಿಸುತ್ತಿದ್ದರು. ಹಾಗೂ ಅವರ ಪ್ರವಚನ/ಲೇಖನಗಳ ಕಡೆಯಲ್ಲಿ ಯಾವಾಗಲೂ ಗುರುಸ್ಮರಣೆ ಮಾಡಿ ಶ್ರೀಗುರುವಿಗೆ ಕೃತಜ್ಞತೆಗಳನ್ನು ಅರ್ಪಿಸುವುದನ್ನು ಮರೆಯುತ್ತಿರಲಿಲ್ಲ. 

ಅವರು ನಿರ್ಯಾಣ ಹೊಂದುವಾಗಲೂ ಅವರ ಆರೋಗ್ಯದ ಸ್ಥಿತಿ ತೀರ ಹದಗೆಟ್ಟಾಗ ಒಂದು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯ ಬೇಕಾಯ್ತು. ವಾಹನ ಮಂದಿರದ ಹಿಂದುಗಡೆಯಿಂದ ಮಂದಿರದ ಮುಂದು ಬಂದೊಡನೆಯೇ ಸ್ವಲ್ಪಕಾಲ ನಿಲ್ಲಿಸಿ ತಾವು ಭಗವಂತ ಸ್ಮರಣೆಯಲ್ಲಿದ್ದು ಭಕ್ತಿಯಿಂದ ಶ್ರೀಮಂದಿರಕ್ಕೆ ಕೈಜೋಡಿಸಿ ನಮಸ್ಕರಿಸಿದ ನಂತರ ವಾಹನ ಮುಂದಕ್ಕೆ ಸಾಗಿತು. ಶ್ರೀಗುರುಸ್ಮರಣೆಯಲ್ಲಿಯೇ ಜೀವನವನ್ನು ಮುಗಿಸಿಕೊಂಡು ಸಾಗಿರುವುದು ಅವರ ಕಳೇಬರವನ್ನು ನೋಡಿದವರಿಗೆಲ್ಲಾ ಸುಸ್ಪಷ್ಟವಾಗಿ ಗೋಚರವಾಗುತ್ತಿತ್ತು. 

ಅವರು 14.9.1987 ಅಂದು ಭಗವಂತನ ಪಾದವನ್ನು ಸೇರಿದರು. ಅಂದು ಮೈಸೂರಿನಲ್ಲಿ ಸಂಜೆ ಪ್ರಕಟವಾಗುವ ಸಾಧ್ವೀ ಪತ್ರಿಕೆಯ ಸಂಪಾದಕರಾದ ಶ್ರೀ ಅಗರಂ ರಂಗೈಯನವರು ತಮ್ಮ ಪತ್ರಿಕೆಯಲ್ಲಿ “ಈ ದಿನ ಶ್ರೀರಂಗಮಹಾಗುರುಗಳ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬರಾದ ಶ್ರೀಛಾಯಾಪತಿಗಳು ದೈವಾಧೀನರಾದರೆಂದು ತಿಳಿಸಲು ವಿಷಾಧಿಸುತ್ತೇವೆ” ಎಂದು ಪ್ರಕಟಿಸಿದ್ದರು. ಇದು ಅವರ ಗುರುಭಕ್ತಿ ಮತ್ತು ಅವರ ಗುರುನಿಷ್ಠೆಯನ್ನು ಸಾರುತ್ತದೆ.

ನಿಷ್ಠಾವಂತ ಗುರುಭಕ್ತರಾಗಿ, ಸ್ಪೂರ್ತಿದಾಯಿ ಪ್ರವಚನಕಾರರಾಗಿ ಸುಪರಿಷ್ಕೃತ ಲೇಖಕರಾಗಿ ಶ್ರೀಛಾಯಾಪತಿಗಳು ಶ್ರೀಮಂದಿರದಲ್ಲಿ ಚಿರಸ್ಮರಣೀಯರು.