Monday, July 5, 2021

ಆರ್ಯಸಂಸ್ಕೃತಿ ದರ್ಶನ - 49 ಸಜ್ಜನರೆಂದರಾರು? (Arya Samskruti Darshana - 49 Sajjanarendararu?)

ಲೇಖಕರು : ವಿಜಯಾನಂದಕಂದರು






"ತಮ್ಮ ಮಕ್ಕಳು ಸಜ್ಜನರಾಗಬೇಕು. ಆದ್ದರಿಂದಲೇ ಸತ್ಪುರುಷರ ಸಹವಾಸದಲ್ಲಿ ಅವರು ಬೆಳೆಯಬೇಕು" ಎಂಬುದು ಲೋಕದಲ್ಲಿ ಎಲ್ಲಾ ತಾಯಿತಂದೆಗಳ ಸಹಜವಾದ ಬಯಕೆ. "ಸಜ್ಜನರ ಸಂಗವದು ಹೆಜ್ಜೇನಸವಿದಂತೆ' ಎಂಬ ಸರ್ವಜ್ಞ ಕವಿಯ ಸೂಕ್ತಿಯೊಂದನ್ನು ತಿಳಿಯ ಹೇಳಿ ಮಕ್ಕಳಿಗೆ ಸಜ್ಜನರ ಸಹವಾಸದಲ್ಲಿರುವಂತೆ ಉಪದೇಶ ಮಾಡುತ್ತಿರುವುದನ್ನೂ ನಾವು ಕೇಳಿದ್ದೇವೆ. ಇಂತಹ ದುಷ್ಕಾಲದಲ್ಲಿಯೂ ಸಹ ಜನರು ಸತ್ಪುರುಷರನ್ನು ಪ್ರಶಂಸೆ ಮಾಡುವುದು ಮತ್ತು ತಮ್ಮ ಮಕ್ಕಳೂ ಸಜ್ಜನರಾಗಬೇಕೆಂದು ಅಪೇಕ್ಷಿಸುವುದು - ಇವುಗಳನ್ನು ನಮ್ಮ ದೇಶದಲ್ಲಿ ಎಲ್ಲಾ ವರ್ಗದ ಜನರಲ್ಲಿಯೂ ನಾವು ಕಾಣಬಹುದಾಗಿದೆ. ತಮ್ಮ ಮಕ್ಕಳು ದುರ್ಜನರಾಗಬೇಕೆಂದು ಯಾರೂ ಬಯಸುವುದಿಲ್ಲವಷ್ಟೆ. "ಅವರು ಸಜ್ಜನರು; ಯಾರ ತಂಟೆಗೂ ಹೋಗುವುದಿಲ್ಲ" - ಇತ್ಯಾದಿ ಮಾತುಗಳನ್ನೂ ನಾವು ಕೇಳುತ್ತಿದ್ದೇವೆ. ಆದರೆ ಇಲ್ಲಿ ಸಜ್ಜನರೆಂದರಾರು?  ಸತ್ಪುರುಷರ ಲಕ್ಷಣವೇನು? ಎಂಬುದಾಗಿ ಪ್ರಶ್ನೆ ಮಾಡಿದಲ್ಲಿ ಯಾವ ಒಂದು ಸ್ಪಷ್ಟವಾದ ಮತ್ತು ನಿರ್ದಿಷ್ಟವಾದ ಉತ್ತರವನ್ನೂ ನಾವು ನಿರೀಕ್ಷಿಸಲು ಸಾಧ್ಯವಿಲ್ಲ. 'ಸಜ್ಜನರು'-ಎಂದಾಗ "ಒಳ್ಳೆಯವರು, ಹಸುವಿನಂತೆ ಸಾಧುವಾದ ಪ್ರಾಣಿ, ಬಹಳ ಮೃದುಸ್ವಭಾವದವರು, ಯಾರು ಏನೆಂದರೂ ಪ್ರತಿಮಾತನಾಡದೆ ಸಹಿಸಿಕೊಳ್ಳುವವರು. ಕಪಟ - ಕುಹಕಗಳನ್ನು ಅರಿಯದವರು" -ಇತ್ಯಾದಿ ವಿವರಣೆಗಳೇ ಜನರಿಂದ ಬರುವುದನ್ನು  ಕಾಣುತ್ತೇವೆ. 


ಆದರೆ "ಸಜ್ಜನ", "ಸತ್ಪುರುಷ", "ಸತ್ಸಂಗ"- ಇತ್ಯಾದಿ ಪದಗಳನ್ನು ಮೂಲತಃ ತಂದ ನಮ್ಮ ಪ್ರಾಚೀನ ಮಹರ್ಷಿಗಳ ದೃಷ್ಟಿಯಿಂದ ಈ ಪದಗಳು ಯಾವ ಅರ್ಥವನ್ನು ಕೊಡುತ್ತವೆ? ಎಂಬುದನ್ನು ವಿಚಾರಮಾಡಿನೋಡೋಣ. ಈ ಪದಗಳನ್ನು ಬಿಡಿಸಿ ನೋಡಿದಾಗ "ಸತ್+ಜನ", "ಸತ್+ಪುರುಷ", "ಸತ್+ಸಂಗ", "ಸತ್+ವಿದ್ಯೆ"- ಹೀಗೆ ಎರಡೆರಡು ಪದಗಳನ್ನು ನಾವು ಕಾಣಬಹುದು. ಇಲ್ಲಿ ಸತ್ ಎಂಬುದು ಸರ್ವ ಸಾಮಾನ್ಯವಾಗಿದ್ದು ನಾವು ಅದರ ಬಗ್ಗೆ ವಿಚಾರ ಮಾಡಬೇಕಾಗಿದೆ. ನಮ್ಮ ಆರ್ಷ ಸಂಸ್ಕೃತಿಯಲ್ಲಿ "ಸತ್"- ಎಂಬ ಈ ಪದಕ್ಕೆ ಎಂದೆಂದಿಗೂ ಒಂದೇ ರೀತಿಯಲ್ಲಿ ವಿಕಾರವಿಲ್ಲದೆ ಇರುವ 'ಸತ್ಯ ನಿತ್ಯವಾದ ವಸ್ತು'-ಎಂಬ ವಿವರಣೆ ಇರುವುದನ್ನು ಅರ್ಷಸಾಹಿತ್ಯವನ್ನು ಅಧ್ಯಯನ ಮಾಡಿದವರೆಲ್ಲರೂ ಕಂಡಿರುವ ಅಂಶ.


"ಸತ್" ಎಂದರೆ ಇರುವುದು. ಇರುವುದು ಆ ವಸ್ತುವೊಂದೇ. ಉಳಿದುದೆಲ್ಲವೂ ವಿಕಾರಗೊಳ್ಳುವುದರಿಂದ, ಬರಿಯ ತೋರಿಕೆಯಾದ್ದರಿಂದ "ಅಸತ್" ಎನಿಸುತ್ತದೆ. ಹೀಗೆ ಸದಸದ್ವಿವೇಚನೆಯನ್ನು ಮಾಡಿದ್ದಾರೆ ನಮ್ಮ ಹಿರಿಯರು. ಈ ಸದ್ವಸ್ತುವೊಂದೇ ಎಂದೆಂದಿಗೂ ಯಾವ ಬದಲಾವಣೆಯನ್ನೂ, ನಾಶವನ್ನೂ ಹೊಂದದೇ ಇರುವ ವಸ್ತು. ನಮ್ಮ  ಕಣ್ಣಿಗೆ ಕಾಣುವ ಇತರ ಎಲ್ಲಾ ವಸ್ತುಗಳೂ ಬದಲಾವಣೆ ಹೊಂದುತ್ತಿರುವುದೂ, ನಾಶವಾಗುತ್ತಿರುವುದೂ ನಮ್ಮ ಅನುಭವಕ್ಕೆ ಬಂದಿರುವ ವಿಷಯವೇ ಆಗಿದೆ. ನಮ್ಮದೇ ಆದ ದೇಹ, ಇಂದ್ರಿಯ, ಮನಸ್ಸು, ಬುದ್ಧಿ - ಇವುಗಳೇ ಕಾಲ-ದೇಶ-ಸನ್ನಿವೇಶಗಳಿಗನುಗುಣವಾಗಿ ವಿಕಾರಹೊಂದುತ್ತಿರುವುದು ಸ್ವಾನುಭವ ವೇದ್ಯವೇ ಆಗಿದೆ. ಇವುಗಳೆಲ್ಲದರ ಹಿಂದೆ ನಾವು ಕಾಣುತ್ತಿರುವ ಬಾಹ್ಯ ಜಗತ್ತೆಲ್ಲಕ್ಕೂ ಚೈತನ್ಯ ನೀಡುತ್ತಿರುವ ಆತ್ಮವಸ್ತುವೊಂದುಂಟೆಂದು, ಅದನ್ನು ಸಾಕ್ಷಾತ್ತಾಗಿ ಅನುಭವಿಸಿ ಹೇಳಿರುವ ಜ್ಞಾನ ವಿಜ್ಞಾನ ತೃಪ್ತಾತ್ಮರಾದ ಮಹಾಪುರುಷರನೇಕರನ್ನು ನಮ್ಮ ನಾಡು ನೀಡಿದೆ. "ಸತ್ತುಹೋದನು" ಎಂಬುದಾಗಿ ಸಾಮಾನ್ಯ ಜನರೂ ಮಾಡುವ ವ್ಯವಹಾರವು ಎಲ್ಲರಿಗೂ ತಿಳಿದಿರುವ ವಿಷಯ. ಅಂತೆಯೇ ನಮ್ಮ ಈ ದೇಹದಲ್ಲಿಯೇ ಇರುವ ಆ ಸದ್ವಸ್ತುವನ್ನೂ, ಅದು ದೇಹದಿಂದ ಹೊರಕ್ಕೆ ಹೊರಡುವುದನ್ನು ಸಾಮಾನ್ಯ ಜನರು  ಕಂಡಿಲ್ಲವೆಂಬುದು ದಿಟವಾದರೂ, ಆ ವಸ್ತುವನ್ನು ಕಂಡು ಅನುಭವಿಸಿದ ಮಹಾಪುರುಷರಿಂದಲೇ "ಸತ್ತುಹೋದನು"-ಎಂಬ  ವ್ಯವಹಾರವು ಬಂದಿದೆ ಎಂಬುದು ಸುಸ್ಪಷ್ಟ. 

        

ಆದ್ದರಿಂದಲೇ "ಆ ಸದ್ವಸ್ತುವನ್ನು ಕಂಡುಕೊಳ್ಳುವುದು ಮಾನವರೆಲ್ಲರ ಹಕ್ಕು" ಎಂಬುದಾಗಿ ಘೋಷಿಸಿದ್ದಾರೆ ಅಂತಹ ಸಂತರು. ತಾವು ತಮ್ಮೊಳಗೇ ಸಾಕ್ಷಾತ್ಕರಿಸಿಕೊಂಡು ಅನುಭವಿಸಿದ ಆ "ಸದ್ವಸ್ತುವನ್ನೇ ಆತ್ಮ- ಪರಮಾತ್ಮ- ಬ್ರಹ್ಮ ಎಂಬುದಾಗಿ ಕರೆದಿದ್ದಾರೆ. ಹೀಗೆ ನಮ್ಮೊಳಗೇ ಬೆಳಗುತ್ತಿರವ ಆ ನಿತ್ಯಸತ್ಯವಾದ ಸದ್ವಸ್ತುವನ್ನು ಸಾಕ್ಷಾತ್ಕರಿಸಿಕೊಂಡ ಜ್ಞಾನಿಗಳೇ ನಿಜವಾದ ಸಜ್ಜನರು, ಸತ್ಪುರುಷರು. ಅಂತಹವರ  ಸಹವಾಸದಲ್ಲಿರುವುದೇ ಸತ್ಸಂಗ. ಅದೇ ಜೀವನವನ್ನು ಪಾವನಮಾಡುವ ಅಂಶ. ಅಂತಹವರ ನಡೆ ನುಡಿಗಳೆಲ್ಲವೂ ನಿಸ್ವಾರ್ಥವಾಗಿದ್ದು ಜಗತ್ತಿಗೆ  ಹಿತವನ್ನುಂಟು ಮಾಡುವುದಾಗಿರುತ್ತದೆ. ಆದ್ದರಿಂದ ಅವರ ನಡೆ-ನುಡಿಗಳೇ ನಮಗೆ ಆದರ್ಶವಾಗಿರಬೇಕು. ಅದರಿಂದಲೇ ಲೋಕದ ಉದ್ಧಾರ. ಇಂತಹ ಆದರ್ಶವನ್ನು ನಮ್ಮ ಮನಸ್ಸಿನಲ್ಲಿ ಮೂಡಿಸಿದ ಸತ್ಪುರುಷನೂ, ಮಹಾಪುರುಷನೂ ಆದ ಶ್ರೀರಂಗಮಾಹಾಗುರುವಿನ ಮಧುರ  ಸ್ಮರಣೆಯೊಡನೆ ಮೌನವಹಿಸುವೆ.


ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೬ ಸಂಚಿಕೆ:೭,  ಏಪ್ರಿಲ್  ೧೯೮೪ ತಿಂಗಳಲ್ಲಿ  ಪ್ರಕಟವಾಗಿದೆ.