Sunday, October 11, 2020

ಆರ್ಯಸಂಸ್ಕೃತಿ ದರ್ಶನ - 14 (Arya Samskruti Darshana - 14)

ತೀರ್ಥಯಾತ್ರೆ

ಲೇಖಕರು : ವಿದ್ವಾನ್ ಶ್ರೀ ಶೇಷಾಚಲ ಶರ್ಮಾ


  

"ಗುಡಿಯಿಲ್ಲದ ಹಳ್ಳಿಯಿಲ್ಲ", "ದೇವಾಲಯವಿಲ್ಲದ ಊರು ಇಲ್ಲ", ದೇವಾಲಯವಿಲ್ಲದೆಡೆ ಮನುಷ್ಯನು ವಾಸಮಾಡಬಾರದು'' ಎಂದು ಮುಂತಾದ ನಾಡುನುಡಿ ಗಳು ಪ್ರಸಿದ್ಧವಾಗಿವೆ. ನಮ್ಮ ಭಾರತ ಭೂಮಿಯಲ್ಲಿ ಸನಾತನ ಸಂಪ್ರದಾಯವನ್ನು ಅನುಸರಿಸಿ ಸಾಮಾನ್ಯವಾಗಿ ಜನರು ತೀರ್ಥಯಾತ್ರೆ, ಕ್ಷೇತ್ರದರ್ಶನವನ್ನು ಮಾಡುವುದು
ವಾಡಿಕೆಯಲ್ಲಿದೆ. ಭವ್ಯವೂ, ದಿವ್ಯವೂ ಆದ ಭಾರತಭೂಮಿಯಲ್ಲಿನ ತೀರ್ಥಕ್ಷೇತ್ರಗಳ ರಹಸ್ಯ ಮತ್ತು ಹಿನ್ನೆಲೆಗಳು ಪ್ರಾಚೀನ ಮಹರ್ಷಿಗಳ ಹೃನ್ಮೂಲದಿಂದ ಹೊರಹೊಮ್ಮಿ ದವು. ತೀರ್ಥವೆಂದರೆ ಸಾಮಾನ್ಯವಾಗಿ ಪವಿತ್ರ ಜಲವುಳ್ಳ ಪೂಜ್ಯವಾದ ಸ್ಥಾನ ಎಂಬ ಅಭಿಪ್ರಾಯವಿದೆ. ಅಂತೆಯೇ ದೇವತಾದಿ ಸಂಬಂಧದಿಂದ ಪವಿತ್ರವೂ ಪೂಜ್ಯವೂ ಆದ ಪ್ರದೇಶ ಕ್ಷೇತ್ರವೆನಿಸುತ್ತದೆ. ಪವಿತ್ರವಾದ ಭಾವನೆಯ ಹಿನ್ನೆಲೆಯಲ್ಲಿ ತೀರ್ಥವೂ ಪವಿತ್ರವಾದ ಕ್ಷೇತ್ರವೇ ಆಗುತ್ತದೆ. ಕ್ಷೇತ್ರವೂ ಪವಿತ್ರವಾದ ತೀರ್ಥವೇ ಆಗುತ್ತದೆ, 

ತೀರ್ಥಕರ ಎಂಬುದು ಭಗವಂತನ ಪವಿತ್ರ ನಾಮಗಳಲ್ಲಿ ಒಂದಾಗಿದೆ. ಬ್ರಹ್ಮ ಜ್ಞಾನಿಯಾದ ಬ್ರಾಹ್ಮಣನ ಚರಣಗಳು ಪವಿತ್ರವಾದ ತೀರ್ಥ. ಬ್ರಾಹ್ಮಣನ ಬಲಕಿವಿ ಯನ್ನು ತೀರ್ಥವೆಂದು ಕರೆಯುತ್ತಾರೆ. ವೇದಜ್ಞನಾದ ಬ್ರಾಹ್ಮಣನ ಕೈಯಲ್ಲಿ ದೇವ ತೀರ್ಥ, ಋಷಿತೀರ್ಥ, ಬ್ರಹ್ಮತೀರ್ಥ, ಪಿತೃತೀರ್ಥ ಎಂಬ ನಾಲ್ಕು ತೀರ್ಥಗಳಿವೆ. ಮತ್ತೊಂದು ದೃಷ್ಟಿಯಿಂದ ತೀರ್ಥವನ್ನು ಜಂಗಮತೀರ್ಥ, ಮಾನಸತೀರ್ಥ, ಸ್ಥಾವರ ತೀರ್ಥ ಎಂದು ಮೂರುವಿಧವಾಗಿ ಕರೆಯುತ್ತಾರೆ.  ಹ್ಮಜ್ಞಾನಸಂಪನ್ನನಾದ ಬ್ರಾಹ್ಮಣನೇ ಜಂಗಮತೀರ್ಥ. ಸತ್ಯ, ಕ್ಷಮಾ, ಇಂದ್ರಿಯ ನಿಗ್ರಹ, ದಯೆ, ಆರ್ಜವ, ದಾನ, ದಮ, ಸಂತೋಷ, ಬ್ರಹ್ಮಚರ್ಯ, ಪ್ರಿಯವಾದಿತಾ, ಜ್ಞಾನ, ಧೃತಿ, ಪುಣ್ಯ-ಇವೇ ಮಾನಸ ತೀರ್ಥ. ಮನಶ್ಶುದ್ಧಿಯೇ ಶ್ರೇಷ್ಠತಮವಾದ ತೀರ್ಥವೆನಿಸುತ್ತದೆ. ಸ್ಥಾವರತೀರ್ಥವನ್ನು ಭೌಮತೀರ್ಥವೆಂದೂ ಕರೆಯುತ್ತಾರೆ. ಯೋಗಾಯತನವಾದ ಶರೀರದಲ್ಲಿ ಪವಿತ್ರವಾದ ಭಾಗಗಳಿರುವಂತೆ ಪೃಥ್ವಿಯಮೇಲೂ ಕೆಲವು ಪವಿತ್ರ ಪ್ರದೇಶಗಳು ಇವೆ. ಅವೇ ಭೌಮ (ಸ್ಥಾವರ) ತೀರ್ಥಗಳು. ತೀರ್ಥದ ಪುಣ್ಯತ್ವಕ್ಕೆ ಕಾರಣವನ್ನು ಹೀಗೆ ಹೇಳುತ್ತಾರೆ:-

" ಪ್ರಭಾವಾದಧ್ಬುತಾಧ್ಬೂಮೇಃ ಸಲಿಲಸ್ಯ ಚ ತೇಜಸಾ|
ಪರಿಗ್ರಹಾನ್ಮುನೀನಾಂ ಚ ತೀರ್ಥಾನಾಂ ಪುಣ್ಯತಾ ಸ್ಮೃತಾ|| "

(ಭೂಮಿಯ ಅಧ್ಬುತವಾದ ಪ್ರಭಾವದಿಂದಲೂ, ನೀರಿನ ವಿಶೇಷ ತೇಜಸ್ಸಿ(ಶಕ್ತಿ) ನಿಂದಲೂ, ಜ್ಞಾನಿಗಳ ಸ್ವೀಕಾರ ಸಂಬಂಧದಿಂದಲೂ ತೀರ್ಥಗಳಗೆ ಪುಣ್ಯತ್ವ ಉಂಟಾಗುತ್ತದೆ.) ಈ ಮೂರು ವಿಧವಾದ ತೀರ್ಥಗಳಲ್ಲಿ ಪವಿತ್ರ ಭಾವನೆಯಿಂದ ಸ್ನಾನ ಮಾಡಿ ಶುದ್ಧಾತ್ಮನಾದವನು ಉತ್ತಮ ಶ್ರೇಯಸ್ಸನ್ನು ಪಡೆಯುತ್ತಾನೆ.

"ತಸ್ಮಾತ್ ಭೌಮೇಷು ತೀರ್ಥೇಷು ಮಾನಸೇಷು ಚ ನಿತ್ಯಶಃ|
ಉಭಯೇಷ್ವಪಿ ಯಃ ಸ್ನಾತಿ ಸ ಯಾತಿ ಪರಮಾಂ ಗತಿಂ||
ಧ್ಯಾನಪೂತೇ ಜ್ಞಾನಜಲೇ ರಾಗದ್ವೇಷಮಲಾಪಹೇ|
ಯಃ ಸ್ನಾತಿ ಮಾನಸೇ ತೀರ್ಥೇ ಸ ಯಾತಿ ಪರಮಾಂ ಗತಿಂ||"

(ಆದ್ದರಿಂದ ಭೌಮ ತೀರ್ಥಗಳು ಮತ್ತು ಮಾನಸತೀರ್ಥಗಳು- ಇವೆರಡರಲ್ಲಿಯೂ ಯಾವಾಗಲೂ ಸ್ನಾನಮಾಡುವವನು ಪರಮಶ್ರೇಯಸ್ಸನ್ನು ಪಡೆಯುತ್ತಾನೆ. ರಾಗ ದ್ವೇಷಗಳೆಂಬ ಮಲವನ್ನು ತೊಡೆದುಹಾಕುವ ಮತ್ತು ಧ್ಯಾನದಿಂದ ಪವಿತ್ರವಾದ ಜ್ಞಾನಜಲರೂಪವಾದ ಮಾನಸ ತೀರ್ಥದಲ್ಲಿ ಸ್ನಾನಮಾಡುವವನು ಪರಮಶ್ರೇಯಸ್ಸನ್ನು ಹೊಂದುತ್ತಾನೆ) . ತೀರ್ಥಫಲಕ್ಕೆ ಅಧಿಕಾರಿಗಳು ಯಾರೆಂಬುದನ್ನು  ಹೀಗೆ ಹೇಳುತ್ತಾರೆ:-

"ಯಸ್ಯ ಹಸ್ತೌ ಚ ಪಾದೌ ಚ ಮನಶ್ಚೈವ ಸುಸಂಯತಂ|
ವಿದ್ಯಾ ತಪಶ್ಚ ಕೀರ್ತಿಶ್ಚ ಸ ತೀರ್ಥಫಲಮಶ್ನುತೇ||
ಅಕೋಪನೋsಮಲಮತಿಃ ಸತ್ಯವಾದೀ ಧೃಢವ್ರತಃ|
ಆತ್ಮೋಪಮಶ್ಚ ಭೂತೇಷು ಸ ತೀರ್ಥಫಲಮಶ್ನುತೇ||"

( ಕೈಗಳನ್ನೂ, ಕಾಲುಗಳನ್ನೂ, ಮನಸ್ಸನ್ನೂ, ಯಾವನು ಸಂಯಮಗೊಳಿಸಿದ್ದಾನೆಯೋ ಅಂದರೆ ಯಾವನು ಬಹಿರಿಂದ್ರಿಯ ಮತ್ತು ಅಂತರಿಂದ್ರಿಯಗಳ ಸಂಯಮವನ್ನು ಮಾಡಿದ್ದಾನೆಯೋ, ಯಾವನಲ್ಲಿ ವಿದ್ಯೆ, ತಪಸ್ಸು, ಕೀರ್ತಿಗಳು ಇರುತ್ತವೆಯೋ ಅಂತಹವನು ತೀರ್ಥಫಲವನ್ನು ಹೊಂದುತ್ತಾನೆ. ಕೋಪರಹಿತನೂ, ಶುದ್ಧ ಬುದ್ಧಿಯುಳ್ಳವನೂ, ಸತ್ಯವಾದಿಯೂ, ದೃಢವ್ರತನೂ, ಸಕಲಪ್ರಾಣಿಗಳನ್ನೂ ತನ್ನಂತಯೇ ಭಾವಿಸುವವನೂ ಆದವನೇ ತೀರ್ಥಫಲವನ್ನು ಪಡೆಯುತ್ತಾನೆ.) ಯಾರಿಗೆ ತೀರ್ಥಫಲವಿಲ್ಲವೆಂಬುದನ್ನೂ ಹೀಗೆ ವರ್ಣಿಸುತ್ತಾರೆ :-

"ಅಶ್ರದ್ಧಧಾನಃ ಪಾಪಾತ್ಮಾ ನಾಸ್ತಿಕೋಚ್ಛಿನ್ನ ಸಂಶಯಃ |
ಹೇತುನಿಷ್ಠಶ್ಚ ಪಂಚೈತೇ ನ ತೀರ್ಥಫಲಭಾಗಿನಃ ||"

(ಶ್ರದ್ದೆಯಿಲ್ಲದವನು, ಪಾಪಾತ್ಮನು, ನಾಸ್ತಿಕನು, ಸಂಶಯ ಪರಿಹಾರವಾಗದವನು, ಹೇತುವಾದದಲ್ಲಿಯೇ ಆಸಕ್ತನಾದವನು-ಈ ಐದು ಮಂದಿಯ ತೀರ್ಥಫಲಕ್ಕೆ ಭಾಗಿಗಳಾಗುವುದಿಲ್ಲ.)

'ಯೇವೈಕಾದಶಸಂಖ್ಯಾನಿ ಯಂತ್ರಿತಾನೀಂದ್ರಿಯಾಣಿ ವೈ|
ಸ ತೀರ್ಥ ಫಲಮಾಪ್ನೋತಿ ನರೋನ್ಯಃ ಕ್ಷೇಶಭಾಗ್ ಭವೇತ್ ||"

(ಹನ್ನೊಂದು ಇಂದ್ರಿಯಗಳನ್ನೂ ಸಂಯಮ ಮಾಡಿರುವವನೇ ತೀರ್ಥಫಲವನ್ನು ಪಡೆಯುತ್ತಾನೆ. ಬೇರೆ ಮನುಷ್ಯನು (ತೀರ್ಥಯಾತ್ರೆಯನ್ನು ಮಾಡಿ) ಕೇವಲ ಕ್ಲೇಶ ವನ್ನು ಹೊಂದುತ್ತಾನೆ.)
ಋಷಿಗಳು ಅತೀಂದ್ರಿಯವೂ, ಅವ್ಯಕ್ತವೂ ಆದ ತತ್ತ್ವವನ್ನು ತಮ್ಮ ಅಂತರ್ಹೃದಯದಲ್ಲಿ ಅನುಭವಿಸಿಕೊಂಡು ಕೆಲವು ಸಾಧನಗಳ ಮೂಲಕ ಲೋಕಕಲ್ಯಾಣ ಕ್ಕಾಗಿ ಹೊರತಂದರು. ಸಾಧನವಿಲ್ಲದಿದ್ದರೆ ಉತ್ತಮವಾದ ವೈಜ್ಞಾನಿಕ ಯಂತ್ರವೇ ಆದರೂ ವ್ಯರ್ಥವಾಗುತ್ತದೆ. ವೀಣಾವಾದನದ ಪ್ರಯೋಗವನ್ನು ತಿಳಿಯದೆ ಕೇವಲ ಮೂಢಭಾವನೆಯಿಂದ ವೀಣಾವಾದ್ಯಕ್ಕೆ ಪೂಜೆ ಮಾಡುತ್ತಿದ್ದರೆ ಎಷ್ಟರಮಟ್ಟಿನ ಫಲ ದೊರಕೀತು? ವೀಣೆಯು ಗೆದ್ದಲು ಹಿಡಿದು ಹಾಳಾಗಿಹೋಗುತ್ತಿದ್ದರೂ ಮೂಢ ಭಕ್ತಿಯಿಂದ "ಇದು ನಮ್ಮ ವಂಶಪರಂಪರೆಯಿಂದ ಬಂದ ವೀಣೆ'' ಎಂದು ಆಡಂಬರದಿಂದ ಪೂಜೆ ಮಾಡುತ್ತಿದ್ದರೆ, ಅಂತಹ ವೀಣೆಯಿಂದ ಏನು ಫಲವನ್ನು ಪಡೆಯಲು ಸಾಧ್ಯ? ಋಷಿ ಸಂಸ್ಕೃತಿಯ ರಹಸ್ಯ ಮತ್ತು ಹಿನ್ನೆಲೆಗಳನ್ನು ಅರಿಯದ ವಿದೇಶೀಯರು ಅಜ್ಞತೆಯಿಂದ ನಮ್ಮ ಪ್ರಾಚೀನ ಸಂಪ್ರದಾಯಗಳನ್ನೂ, ತೀರ್ಥಕ್ಷೇತ್ರಗಳನ್ನೂ ಅವಹೇಳನ ಮಾಡುವುದನ್ನು ಕಾಣುತ್ತೇವೆ. ಆದರೆ ಮತ್ತೊಂದು ಕಡೆ ಭಾರತೀಯರೆನಿಸಿದವರೇ ಕೆಲವರು ನಮ್ಮ ಪವಿತ್ರವಾದ ಪ್ರಾಚೀನ ಸಂಪ್ರದಾಯಗಳ ಮಹತ್ವವನ್ನು ಅವಿವೇಕದಿಂ ದಲೂ, ಅವಜ್ಞತೆಯಿಂದಲೂ ನಿಂದಿಸುತ್ತಾರೆ. ಮತ್ತೆ ಕೆಲವರು ಅಂಧಶ್ರದ್ಧೆ,-ಅತಿಶ್ರದ್ಧೆಗಳನ್ನು ಹೊಂದಿ ತತ್ತ್ವದಿಂದ ದೂರವಾಗುತ್ತಾರೆ. ಭಾರತಭೂಮಿಯು ಋಷಿಗಳ ಪವಿತ್ರವಾದ ಮನೋಧರ್ಮದ ಅಭಿವ್ಯಕ್ತಿಗೆ ಒಂದು ಉತ್ತಮವಾದ ಸಾಧನವಾಗಿದೆ. ಆದ್ದರಿಂದಲೇ,

"ಭಾತಿ ಸರ್ವೇಷು  ವೇದೇಷು ರತಿಃ ಸರ್ವೇಷು ಜಂತುಷು |
ತರಣಂ ಸರ್ವತೀರ್ಥಾನಾಂ ತೇನ ಭಾರತಮುಚ್ಯತೇ||"

ಎಂಬ ಋಷಿವಚನವು ಭಾರತಭೂಮಿಗೂ ಅನ್ವಯಿಸುತ್ತದೆ. ಋಷಿಗಳು ಶರೀರವನ್ನು ಯೋಗಾಯತನವನ್ನಾಗಿಯೂ, ಪುರುಷಾರ್ಥ ಸಾಧನವನ್ನಾಗಿಯೂ ಮಾಡಿಕೊಂಡಂತೆ, ತಮ್ಮ ಜನ್ಮಕ್ಕೆಡೆಯಾದ ಪವಿತ್ರ ಭಾರತ ಭೂಮಿಯನ್ನೂ ಪುರುಷಾರ್ಥ ಸಾಧನವನ್ನಾಗಿ ಮಾಡಿ ಬೆಳಗಿಸಿದರು. ಅವರ ಆಂತರ್ದರ್ಶನ ಮತ್ತು ಮನೋಧರ್ಮಗಳ ಮಹತ್ವದಿಂದ ಈ ಭಾರತಭೂಮಿ ಪುಣ್ಯತೀರ್ಥವೂ, ಪವಿತ್ರಕ್ಷೇತ್ರವೂ ಆಗಿವೆ.
ಆತ್ಮಜ್ಞಾನಿಯಾದವನು ಇರುವ ಜಾಗವೇ ಪವಿತ್ರ ತೀರ್ಥ. ಅವನ ಮಾತು ದರ್ಶನ, ಸ್ಪರ್ಶನ - ಎಲ್ಲವೂ ಪವಿತ್ರತೀರ್ಥವೇ: -

"ತತ್ರೈವ ಗಂಗಾ ಯಮುನಾ ಚ ವೇಣೀ ಗೋದಾವರೀ ಸಿಂಧು ಸರಸ್ವತೀ ಚ|
ಸರ್ವಾಣಿ ತೀರ್ಥಾನಿ ವಸಂತಿ ತತ್ರ ಯತ್ರಾಚ್ಯುತೋದಾರಕಥಾಪ್ರಸಂಗಃ ||
ನಿಗೃಹೀತೇಂದ್ರಿಯಗ್ರಾಮಃ ಯತ್ರ ಕುತ್ರಾಶ್ರಮೇ ವಸವ್ |
ತತ್ರ ತತ್ರ ಕುರುಕ್ಷೇತ್ರಂ ನೈಮಿಷಂ ಪುಷ್ಕರಂ ಗಯಾ ||

(ಎಲ್ಲಿ ಅಚ್ಯುತನ ಉದಾರವಾದ ಕಥಾಪ್ರಸಂಗ ನಡೆಯುತ್ತದೋ ಅಲ್ಲಿಯೇ ಗಂಗಾ ಯಮುನಾ, ತ್ರಿವೇಣೀ, ಗೋದಾವರೀ, ಸಿಂಧು, ಸರಸ್ವತೀ-ಇವುಗಳು ಇರುತ್ತವೆ. ಎಲ್ಲ ತೀರ್ಥಗಳೂ ಅಲ್ಲಿಯೇ ನೆಲೆಸಿರುತ್ತವೆ. ಇಂದ್ರಿಯ ಸಮೂಹವನ್ನು ನಿಗ್ರಹಿಸಿದವನು ಯಾವ ಆಶ್ರಮದಲ್ಲೇ ಇರಲಿ, ಅಲ್ಲಿಯೇ ಕುರುಕ್ಷೇತ್ರ, ನೈಮಿಷ, ಪುಷ್ಕರ, ಗಯಾ-ಇವುಗಳು ಇರುತ್ತವೆ. ತಮ್ಮ ಅಂತರ್ದರ್ಶನ ಮತ್ತು ಮನೋಧರ್ಮಗಳ ಮುದ್ರೆಯನ್ನು ಭಾರತಭೂಮಿಯ ಮೇಲಿನ ತೀರ್ಥಕ್ಷೇತ್ರಗಳಲ್ಲಿಯೂ ಒತ್ತಿ, ಅವುಗಳಿಗೆ ಅದಕ್ಕನುಗುಣವಾದ-"ಗಂಗಾ, ಯಮುನಾ, ಸರಸ್ವತೀ, ಪ್ರಯಾಗ, ಕಾಶೀ, ಗಯಾ, ಹರಿದ್ವಾರ, ಹೃಷೀಕೇಶ, ಪುರುಷೋತ್ತಮ ಕ್ಷೇತ್ರ, ಜ್ಞಾನಾಶ್ವತ್ಥ, ಶ್ರೀರಂಗ, ರಾಮೇಶ್ವರ, ಚಿದಂಬರ ಮುಂತಾದ ಹೆಸರುಗಳನ್ನಿಟ್ಟರು. ಅವರು ತಮ್ಮ ಯೋಗಮಯ ಶರೀರದ ಭೂಮಧ್ಯದೇಶದಲ್ಲಿ ವಾಸ್ತವವಾಗಿ ಪ್ರಕಾಶಿಸುವ ಕಾಶೀಕ್ಷೇತ್ರವನ್ನು ಕಂಡುಕೊಂಡರು; ದಹರಾಯೋಧ್ಯೆಯನ್ನು ಸಂದರ್ಶಿಸಿದರು; ಪ್ರಾಣರೂಪವಾದ ಗಯಾ ಕ್ಷೇತ್ರವನ್ನು ವೀಕ್ಷಿಸಿದರು (ಪ್ರಾಣಾಗಯಾ ಇತಿಪ್ರೋಕ್ತಾಃ) ; ಅವರ ಹೃನ್ಮಧ್ಯ ಚಿದಂಬರದಲ್ಲಿ (ಚಿದಂಬರಂತು  ಹೃನ್ಮಧ್ಯೇ) ನಟರಾಜನು ನರ್ತಿಸಿದನು. ಇಡಾಗಂಗೆ-ಪಿಂಗಳಾಯಮುನೆಯರು  ಸುಷುಮ್ನಾ ಸರಸ್ವತಿಯಲ್ಲಿ  ಸಂಗಮಗೊಳ್ಳಲಾಗಿ ಅಂತಹ ಅಂತರಂಗ ತ್ರಿವೇಣೀ ಸಂಗಮ, ಪ್ರಯಾಗದಲ್ಲಿ ಜ್ಞಾನಸ್ನಾನ ಮಾಡಿ ಅವರು ಪವಿತ್ರಾತ್ಮರಾದರು. ಆದ್ದರಿಂದಲೇ ಸ್ವಯಂ ಹರಿಪದದಲ್ಲಿದ್ದ ಗಂಗಾದಿ ತೀರ್ಥಗಳು ಭಾರತ ಭೂಮಿಯಲ್ಲಿ ನದಿರೂಪಗಳಾಗಿದ್ದು ಕೊನೆಗೆ ನದೀರೂಪವನ್ನು ಬಿಟ್ಟು ಶ್ರೀಹರಿಪದಕ್ಕೆ ಹೋಗಿ ಸೇರುತ್ತವೆಯೆಂದು ಹೇಳುತ್ತಾರೆ:-

"ಕಲೇಃ ಪಂಚಸಹಸ್ರಂ ಚ ವರ್ಷಂ ಸ್ಥಿತ್ವಾ ಚ ಭಾರತೇ|
  ಜಗ್ಮುಸ್ತಾಶ್ಚ ಸರಿದ್ರೂಪಂ ವಿಹಾಯ ಶ್ರೀಹರೇಃ ಪದಂ||
ಅಂತೆಯೇ,
"ಕಾಶೀಕ್ಷೇತ್ರಂ ಶರೀರಂ ತ್ರಿಭುವನಜನನೀ ವ್ಯಾಪಿನೀ ಜ್ಞಾನಗಂಗಾ|
 ಭಕ್ತಿಃ ಶ್ರದ್ಧಾ ಗಯೇಯಂ  ನಿಜಗುರುಚರಣಧ್ಯಾನ ಯೋಗಃ ಪ್ರಯಾಗಃ||
ವಿಶ್ವೇಶೋsಯಂ ತುರೀಯಂ ಸಕಲಜನಮನಃ ಸಾಕ್ಷೀಭೂತೋಂsತರಾತ್ಮಾ|
ದೇಹೇ ಸರ್ವಂ ಮದೀಯೇ ಯದಿ ವಸತಿ ಪುನಸ್ತೀರ್ಥಮನ್ಯತ್ ಕಿಮಸ್ತಿ||
"ಯೋಗ ಶರೀರವೇ ಕಾಶೀಕ್ಷೇತ್ರ. ಜ್ಞಾನವೇ ತ್ರಿಭುವನಜನನಿಯೂ, ವಿಶಾಲವ್ಯಾಪಿನಿಯೂ ಆದ ಗಂಗೆ, ಭಕ್ತಿಶ್ರದ್ಧೆಗಳೇ ಗಯೆ. ನಿಜಗುರು ಚರಣಧ್ಯಾನಯೋಗವೇ ಪ್ರಯಾಗ. ಸಕಲಜನಮನಃಸಾಕ್ಷಿಯೂ, ಅಂತರಾತ್ಮನೂ ಆದ ತುರೀಯ ಬ್ರಹ್ಮ ತತ್ತ್ವವೇ ವಿಶ್ವೇಶ್ವರನು. ಹೀಗೆ (ಯೋಗಮಯ)ದೇಹದಲ್ಲಿ (ತತ್ತ್ವಮಯವಾದ)  ಎಲ್ಲಾ ತೀರ್ಥಗಳೂ ನೆಲೆಸಿರುವಾಗ, ಇನ್ನು ಬೇರೆ ತೀರ್ಥ ಯಾವುದಿದೆ ? " ಎಂಬುದೇ ಜ್ಞಾನಿಗಳ ಪರಮಾರ್ಥ ಸಿದ್ಧಾಂತ. ತೀರ್ಥಕರನಾದ ಸಾಕ್ಷಾತ್ ನಾರಾಯಣನು ಮಹಾತ್ಮರ ಅಂತರ್ಹೃದಯದಲ್ಲಿ  ನೆಲೆಸಿರುವುದರಿಂದ  ಅಂತಹ ಮಹಾತ್ಮರ ಸಂಪರ್ಕದಿಂದ ಬಾಹ್ಯ ತೀರ್ಥಕ್ಷೇತ್ರಗಳು ತೀರ್ಥೀಕೃತವಾಗುತ್ತವೆ:-

"ತೀರ್ಥೀಕುರ್ವಂತಿ ತೀರ್ಥಾನಿ ಸ್ವಾಂತಸ್ಥೇನ ಗದಾಭೃತಾ|"

ತೀರ್ಥಕ್ಷೇತ್ರಗಳು ಋಷಿಗಳ ಜ್ಞಾನಭೂಮಿ-ಮನೋಭೂಮಿಗಳ ಪ್ರತೀಕಗಳಾಗಿವೆ. ಪರಮ ಪದಕ್ಕೇರುವ ದಿವ್ಯ ಸೋಪಾನಗಳಾಗಿವೆ. ಆತ್ಮಭಾವ-ಬ್ರಹ್ಮಭಾವಗಳನ್ನು ಪ್ರಬೋಧಗೊಳಿಸುವ ಶ್ರೇಷ್ಠತಮವಾದ ಅಭಿಜ್ಞಾನಗಳಾಗಿವೆ. ತೀರ್ಥಕ್ಷೇತ್ರಗಳಲ್ಲಿ ಸನ್ನಿವೇಶ ಮತ್ತು ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ – ಎಲ್ಲವೂ ನಮ್ಮ ಮನಸ್ಸನ್ನು ಪ್ರಕೃತಿಯ ಕಡೆಗೆ ಒಯ್ಯುವ ಮಹಾರಾಜಮಾರ್ಗಗಳಾಗಿವೆ. ತೀರ್ಥಗಳಲ್ಲಿ  ಸ್ನಾನ ಮಾಡುವಾಗ ಮಾಡುವ ಪವಿತ್ರ ಸಂಕಲ್ಪ, ದಿವ್ಯ ಕ್ಷೇತ್ರಗಳ ಹಾಗೂ ದೇವಾಲಯಗಳ ಪ್ರದಕ್ಷಿಣೆ ವಿಧಿ –ಮುಂತಾದ ಆರ್ಷವಿಧಾನಗಳಲ್ಲೆಲ್ಲಾ ಈ ದೈವೀ ಸ್ಫೂರ್ತಿಯು ತುಂಬಿದೆ.

ಸ್ವಯಂ ತೀರ್ಥಪಾದನೂ ಋಷಿಹೃದಯನೂ ಆದ ಶ್ರಿ ಶ್ರೀರಂಗ ಗುರುಭಗವಂತನು ತಾನು ಒಮ್ಮೆ ಒಂದು ದಿವ್ಯಕ್ಷೇತ್ರದಲ್ಲಿ ಯಾತ್ರೆ ಕೈಗೊಂಡಾಗ ತನಗೆ ಸಹಜವಾದ ದೈವೀಭಾವದಿಂದ ಅಲ್ಲಿ ದೇವತಾದರ್ಶನವನ್ನು ಮಾಡಿದ ಬಗೆಯನ್ನು ವರ್ಣಿಸುತ್ತಾ ನಮ್ಮ ಹೃದಯವನ್ನು ತೀರ್ಥೀಕರಿಸಿದ್ದನು. ಅವನ ಅಮೃತವಚನಗಳನ್ನೇ ಇಲ್ಲಿ ಮುಂದಿಟ್ಟು ಈ "ತೀರ್ಥಯಾತ್ರೆ"ಗ ಮಂಗಳನ್ನು ಮಾಡುತ್ತೇನೆ.

" ಈ ಬೆಟ್ಟವನ್ನು ಮೆಟ್ಟಲು ಮೆಟ್ಟಲಾಗಿ ಹತ್ತುತ್ತಿರುವಾಗ ನನ್ನ ಒಳಗಡೆಯ ಪ್ರಪಂಚದಲ್ಲಿ ಹೀಗೆ ತತ್ತ್ವಗಳ ಸೋಪಾನವನ್ನು ಹತ್ತಿ ಹೋಗುತ್ತಿರುವುದನ್ನು ನೆನೆಯುತ್ತಿದ್ದೆ. ಬೆಟ್ಟದ ಬೇರೆ ಬೇರೆ ಮಟ್ಟದಲ್ಲಿ ಬೇರೆ ಬೇರೆ ದೃಶ್ಯಗಳು ಕಾಣುವಂತೆ ನನ್ನ ಒಳಗಿನ ಆರೋಹಣದಲ್ಲಿಯೂ ಬೇರೆಬೇರೆ ಚಕ್ರಗಳಲ್ಲಿ ಬೇರೆ ಬೇರೆ ಬಗೆಯದರ್ಶನಗಳು ಆಗುತ್ತಿವೆ. ಈ ತತ್ತ್ವಗಳ ಸೋಪಾನಗಳೆಲ್ಲವನ್ನೂ ಹತ್ತಿ ಮೇಲೆ ಉನ್ನತವಾದ ಜಾಗದಲ್ಲಿ ದೇವಾಲಯದೊಳಗೆ ಬಂದೆ. ಅಮ್ಮನವರ ಸನ್ನಿಧಿಯಲ್ಲಿ ದೀರ್ಘದಂಡ ಪ್ರಣಾಮ ಮಾಡಿದೆ. ನನ್ನ ಕೈಗಳೆರಡನ್ನೂ ಇಂದ್ರಿಯಗಳೆಲ್ಲ ಬಂದು ಸೇರುವ ಜಾಗವಾದ ತಲೆಯನ್ನು ದಾಟಿಸಿ ಮುಂದಕ್ಕೆ ಚಾಚಿ, "ಅಮ್ಮಾ ! ತಾಯಿ ! ನೀನು ಇಂದ್ರಿಯ ಪ್ರಪಂಚವನ್ನು ದಾಟಿ ಅವುಗಳಿಗೆ ತುಂಬಾ ಹೊರಗಿರುವವಳು' (ಅವುಗಳಿಗಿಂತಲೂ  ತುಂಬಾ ಒಳೆಗಿರುವವಳು), ಎಂದು ಧ್ಯಾನಿಸುತ್ತಾ ಸಾಷ್ಟಾಂಗ ಪ್ರಣಾಮ ಮಾಡಿದೆ. ಒಳಗೆ ಹೋದರೆ ಜಗನ್ಮಾತೆಯು ಪ್ರಸನ್ನಳಾಗಿ ಕುಳಿತಿದ್ದಾಳೆ. ಅವಳು ಮೇಲುಗಡೆ ಎರಡು ಕೈಗಳಲ್ಲಿ ಮೇಲ್ಮುಖವಾದ ಎರಡು ಪದ್ಮಗಳನ್ನು ಹಿಡಿದಿದ್ದಾಳೆ, ಅವು ಹೃದಯ ಮತ್ತು ಸಹಸ್ರಾರ ಪದ್ಮಗಳು. ನಮ್ಮಲ್ಲಿಯೂ  ಈ ತತ್ತ್ವಗಳಿವೆ, ಆದರೆ ಅವು ಕೆಳಮುಖವಾಗಿ ಅರಳಿವೆ. ಈ ಮಹಾತಾಯಿಯಾದರೋ ಊರ್ಧ್ವರೇತನ ಮಹಾ ಯೋಗೇಶನೂ ಆದ ನಾರಾಯಣನ ಪತ್ನೀ.ಪತಿಗೆ ತಕ್ಕಂತೆ ಪತ್ನಿಯ ಮಾರ್ಗ. ಅದಕ್ಕೇ ಆಕೆಯು ಮೇಲ್ಮುಖವಾಗಿ ಅರಳಿರುವ ಕಮಲಗಳನ್ನು ಎತ್ತಿ ಹಿಡಿದಿರುವಳು—" ಊರ್ಧ್ವಂ ಗಚ್ಛಂತಿ `ಸತ್ಯಸ್ಥಾ!" ಕೆಳಗಡೆ ಕೈಗಳಲ್ಲಿ ಒಂದು ಕೆಳಮುಖವಾಗಿ ಪ್ರವೃತ್ತಿ ಮಾರ್ಗವನ್ನು ಸೂಚಿಸುತ್ತಿದೆ. ಮತ್ತೊಂದನ್ನು ಮೇಲ್ಮುಖವಾಗಿಸಿ ನಿವೃತ್ತಿ ಮಾರ್ಗವನ್ನು ತೋರಿಸುತ್ತಿದ್ದಾಳೆ ಮಹಾ ತಾಯಿ. ಆ ನಿವೃತ್ತಿ ಮಾರ್ಗದಿಂದ ಬಂದ ಜ್ಞಾನದ ಸುಖದ ರೇಖೆಯು ಆಕೆಯ ಮುಖದ ಮುಗುಳ್ನಗೆಯಲ್ಲಿ ಮೂಡಿದೆ, "ಅಮ್ಮಾ ತಾಯಿ ! ನಮ್ಮ ಹೃದಯಪದ್ಮ
ಸಹಸ್ರಾರ ಪದ್ಮಗಳು ಮೇಲ್ಮುಖವಾಗಿ ಅರಳಿ, ನಮ್ಮ ಪ್ರಕೃತಿಯು ನಿನ್ನಂತೆಯೇ ಶುದ್ದವಾಗಿ ನಾರಾಯಣನ ದರ್ಶನ ಮಾಡಲು ಅನುಗುಣವಾದ ಪ್ರಕೃತಿಯಾಗಲಿ ಎಂದು ಆಕೆಯನ್ನು ಪ್ರಾರ್ಥಿಸಿಕೊಂಡು, ಆಕೆಯ ಅನುಮತಿಯಿಂದ ಭಗವಂತನ ಸನ್ನಿಧಿಗೆ ಬಂದೆ. ಅಲ್ಲಿ ಜಯ ವಿಜಯರು ದ್ವಾರಪಾಲಕರಾಗಿ ನಿಂತಿದ್ದಾರೆ. ಭಗವಂತನ ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶಿಸದಂತೆ ಕಾವಲು ಕಾಯುತ್ತಿದ್ದಾರೆ. ಒಳಗೆ ಹೋದರೆ ಭಗವಂತನು ನಿಂತಿದ್ದಾನೆ. ಮಾನವರ ಅಳತೆಯನ್ನು ಮೀರಿದ, ಮಹಾ ಪುರುಷ ಹತ್ತು ತಾಳ ಪ್ರಮಾಣದಲ್ಲಿ ನಿಂತಿದ್ದಾನೆ, ಅವನಿಗೆ ನಾಲ್ಕು ಕೈಗಳು, ಎಲ್ಲ ಮನುಷ್ಯರಿಗೆ ಇರುವಂತೆ ಎರಡು ಕೈಗಳಿದ್ದು ಜೊತೆಗೆ ಇನ್ನೆರಡು ಕೈಗಳು ಹೆಚ್ಚಾಗಿವೆ. ಹೊರಗಿನಿಂದ ನೋಡಿದರೆ ಅವನು ಮನುಷ್ಯರಂತೆ ಕಾಣುತ್ತಾನೆ. ಆದರೆ ಅವನಲ್ಲಿ ಇನ್ನೂ ಏನೋ ಹೆಚ್ಚಿನದು ಇದೆ. ಬಲಗಡೆ ಮೇಲ್ಭಾಗದ ಕೈಯಲ್ಲಿ ಚಕ್ರವಿದೆ, ಎಡಗಡೆ ಮೇಲ್ಭಾಗದ ಕೈಯಲ್ಲಿ ಶಂಖವಿದೆ. ಎರಡೂ ಮೇಲ್ಮುಖವಾಗಿವೆ.  ಒಂದು ಬುದ್ಧಿ ತತ್ತ್ವ ಮತ್ತೊಂದು ಮನಸ್ತತ್ತ್ವ, 'ಮಾನವರಲ್ಲಿ ಮನಸ್ಸು-ಬುದ್ಧಿಗಳು ಅಧೋ ಮುಖವಾಗಿ ಪ್ರವೃತ್ತಿ ಮಾರ್ಗದಲ್ಲಿಪ್ರವರ್ತಿಸಿದರೆ, ಮಹಾಪುರುಷನಾದ ನಿನ್ನಲ್ಲಿ ಅವು ಊರ್ಧ್ವಮುಖವಾಗಿ ಹತ್ತಿವೆ." ಜ್ಞಾನಿನಾಮೂರ್ಧ್ವಗೋ ಭವತಿ|". ಆ ಯೋಗದ ಸ್ಥಿತಿಯನ್ನು ತಲುಪಿದ ಮೇಲೆ  ಈ ಭೌತಿಕ ಜಗತ್ತು " ಪಾದೋsಸ್ಯ ವಿಶ್ವಾ ಭೂತಾನಿ " ಎಂಬಂತೆ ಕೇವಲ ಕಾಲು ಅಂಶಕ್ಕೆ ಇಳಿಯುತ್ತದೆ. ಆಗ ತ್ರಿಪಾದ್ವಿಭೂತಿಯ ಪರಿಚಯವಾಗತ್ತದೆ. " ಅಮೃತ ಸ್ವರೂಪವು ಈ ಜಗತ್ತಿಗಿಂತಲೂ ಬಹು ವಿಶಾಲವಾದುದು. ಅದನ್ನರಿಯಿರಿ" ಎಂದು ಸೂಚಿಸುತ್ತಾ ತನ್ನ ಕೆಳಗಡೆ ಎಡಗೈಯನ್ನು ತನ್ನ ಮೊಳಕಾಲಿನ ಮೇಲಿಟ್ಟಿದ್ದಾನೆ ಭಗವಂತ. ಕೆಳಭಾಗದ ಬಲಗೈಯಿಂದ ಭಕ್ತರಿಗೆ ಅಭಯವನ್ನು ನೀಡುತ್ತಾ  " ನನ್ನ ತ್ರಿಪಾದ್ವಿಭೂತಿಯನ್ನು ಆಶ್ರಯಿಸಿರಿ" ಎಂದು ಉಪದೇಶಿಸುತ್ತಿದ್ದಾನೆ. ಇಂತಹ ಭಗವಂತನಿಗೆ ದಿವ್ಯ ಘಂಟಾನಾದದೊಡನೆ " ತದ್ವಿಷ್ಣೋಃ ಪರಮಂ ಪದಂ" ಎಂಬ ಮಂತ್ರದೊಡನೆ ಅವನ ಪರಂಜ್ಯೋತಿಯ ಪ್ರತೀಕವಾಗಿ ಹೊರಗೆ ಕರ್ಪೂರದ ದೀಪದಿಂದ ಆರತಿ ಮಾಡುತ್ತಿದ್ದಾರೆ. ಹೀಗೆ ನಾನು ಪಾದಾದಿ ಕಿರೀಟಾಗ್ರದವರೆಗೆ ಮಹಾಪುರುಷನ ದರ್ಶನವನ್ನು ಮಾಡಿದೆ."
"ತೀರ್ಥೀಕುರ್ವಂತಿ ತೀರ್ಥಾನಿ ಸ್ವಾಂತಸ್ಥೇನ ಗದಾಭೃತಾ|"

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ : 03 ಸಂಚಿಕೆ:11 ಡಿಸೆಂಬರ್ :1981 ರಲ್ಲಿ ಪ್ರಕಟವಾಗಿದೆ.